Saturday, June 27, 2020

ಪಯಣ - 9

'ರೀ..ಇದೇನ್ರಿ ಸಗಣಿ ಗೊಬ್ರ.. ಒಳ್ಳೆ ಸಿಮೆಂಟ್ ಪೀಸ್ ಇದ್ದಂಗೆ ಇದ್ಯಲ್ಲ..' ಎಂದು ತರಾತುರಿಯಲ್ಲಿ ಟ್ರಾಕ್ಟಾರ್ನಲ್ಲಿ ಎಲ್ಲಿಂದಲೋ ಹೊತ್ತು ತಂದ ಒಣಗಿದ ಸಗಣಿಯನ್ನು ನೋಡಿ ಹೇಳಿದ ಲೊಕೇಶ. ಪ್ರತ್ಯುತ್ತರವಾಗಿ ಏನೇಳಬೇಕೆಂದು ತಿಳಿಯದೆ ತಲೆಯನ್ನು ಕೆರೆದುಕೊಂಡು ನಿಂತ ಮೇಸ್ತ್ರಿ,

'ಇಷ್ಟ್ ಬೇಗ ಇಷ್ಟೇ ಅರೆಂಜ್ ಮಾಡೋಕ್ಕೆ ಆಗಿದ್ದು ಸಾರ್.. ' ಎಂದ.

'ತತ್ತ್ .. ಇಸ್ಕಿ.. ' ಎಂದು ತನ್ನ ತೊಡೆಯ ಮೇಲೆ ರಪ್ಪನೆ ಗುದ್ದಿದ ಲೋಕೇಶ, 'ಸರಿ, ಇವಾಗ ಎಷ್ಟ್ ಜನ ಇದ್ದಾರೆ' ಎಂದು ಮೇಸ್ತ್ರಿಯನ್ನು ನೋಡಿದ.

ಸಗಣಿ ಗೊಬ್ಬರ ಎಂದಾಗ ಭಾಗಶಃ ಮಂದಿ ಅಲ್ಲಿಂದ ಕಾಲ್ಕಿತ್ತಿದ್ದರು. ಮೇಸ್ತ್ರಿ ದೂರದಲ್ಲಿದ್ದ ಒಬ್ಬಳೇ ಅಜ್ಜಿಯನ್ನು ನೋಡಿದ.

ವಯಸ್ಸು ಎಪ್ಪತ್ತು ದಾಟಿದರೂ ಅಜ್ಜಿ ಲವಲವಿಕೆಯಿಂದ್ದಿತ್ತು. ಎಲ್ಲರು ಹೋದಮೇಲೆ ಸುಮ್ಮನೆ ಕಾಲಹರಣವೇಕೆಂದು ಯಾರು ಹೇಳದಿದ್ದರೂ ತಾನೇ ಖುದ್ದಾಗಿ ಗದ್ದೆಯ ಕಳೆಯನ್ನು ತೆಗೆಯತೊಡಗಿತು. ಲೋಕೇಶ ಅಜ್ಜಿಯ ಬಳಿಗೊದ.

'ಏನ್ ಶುಂಠಿ ಮಾಡ್ತಾರೋ ಏನೊ .. ಮನ್ಸನ ರಕ್ತಹೀರೊ ಪಿಶಾಚಿ ಈ ಶುಂಠಿ.. ಭೂಮ್ ತಾಯ್ ಸಾರ ಎಲ್ಲ ಹೀರಿ ಹಾಕುತ್ತೆ.. ಯಾರ್ ಹೇಳ್ತಾರೋ ಇವಕ್ಕೆಲ್ಲ' ಎಂದು ಶಪಿಸುತ್ತಾ ಕೆಲಸವನ್ನು ಮುಂದುವರೆಸಿದಳು.

'ಅಜ್ಜಿ .. ಏನ್ ನಿನ್ ಹೆಸ್ರು' ಎಂದ ಲೋಕೇಶ.

'ನನ್ನ್ ಹೆಸ್ರ್ ಕಟ್ಕೊಂಡ್ ಏನ್ ಆಗ್ ಬೇಕ್ಲ ನಿಂಗೆ ..' ಎಂದಳು ಅಜ್ಜಿ. ಕೂಡಲೇ ಮೇಸ್ತ್ರಿ ಮದ್ಯಸ್ಥಿಕೆ ವಹಿಸಿ,

''ಅಜ್ಜಿ .. ಶುಂಠಿ ಗದ್ದೆ ಮಾಡ್ತಿರೋರು ಇವ್ರೆಯ.. ಲೋಕೇಶ್ ಅಂತ’ ಎಂದು ಆತನನ್ನು ಪರಿಚಯಿಸಿದ.

'ಲೋಕೇಶ ಆದ್ರೇನು ಆದಿಶೇಷ ಆದ್ರೇನು .. ಇಲ್ಲಿ ಎಲ್ಲ ಒಬ್ರೇಯ... ಒಳ್ಳೇದು .. ಒಳ್ಳೇದು .. ಹುಡುಗ್ರು ಗದ್ದೆ ಗಿದ್ದೆ ಮಾಡೋದೆಲ್ಲ ಒಳ್ಳೆ ಶಕ್ನ.. ಆದ್ರೆ ಶುಂಠಿ ದುಡ್ಡ್ ಕೊಡಬಹುದು .. ನೆಲನ ಜೊಳ್ ಆಗ್ಸುತ್ತೆ.. '

'ಇರ್ಬಹುದು ಅಜ್ಜಿ .. ಮುಂದಿನ್ ಸಾರಿ ಭತ್ತ ಹಾಕ್ತಿನಿ .. ಈ ಸರಿ ಮಾತ್ರ ಶುಂಠಿ' ಎಂದು ಆತ ಮುಗುಳ್ ನಗುತ್ತಾನೆ .

ಮಾತಾಡುವಾಗಲೂ ತನ್ನ ಸ್ವಂತ ಗದ್ದೆಯೇ ಎಂಬಂತೆ ಕಳೆಯನ್ನು ಕೀಳುತ್ತಾ ಇದ್ದ ಅಜ್ಜಿಯನ್ನು ಕಂಡು ಲೋಕೇಶನಿಗೆ ಏನೋ ಒಂದು ಸಂತೋಷವಾಯಿತು.

'ಅಜ್ಜಿ .. ಸಾಕ್ ಕೆಲ್ಸ ಮಾಡಿದ್ದು.. ನಾನು ಈ ಸಾರಿ ಬರಿ ಸಗಣಿ ಗೊಬ್ಬರ ಹಾಕಣ ಅಂತಿದ್ದೀನಿ, ಹೇಗೆ.' ಎಂದು ವಿಚಾರಿಸುವ ಧಾಟಿಯಲ್ಲಿ ಕೇಳಿದ

ಕೊಂಚ ಹೊತ್ತು ಸುಮ್ಮನಾದ ಅಜ್ಜಿ ಬಗ್ಗಿದ ತನ್ನ ತಲೆಯನ್ನು ಮೇಲೆತ್ತಿದಳು.

'ಏನಪ್ಪಾ ನಿನ್ ಹೆಸ್ರು' ಎಂದು ಪ್ರೀತಿಯಿಂದ ಕೇಳುವಂತೆ ಮಾಡಿದಳು.

'ಲೋಕೇಶ'

'ಇಲ್ಲಿ ಎಲ್ರೂ ಈಶ್ರೆ..' ಎಂದು ನಕ್ಕ ಅಜ್ಜಿ 'ಮಗ .. ಒಂದ್ ಮಾತ್ ದಿಟ .. ಗೋಮಾತೆ ಗೋಬ್ರಾನ ಹಾಕಿ ಗದ್ದೆ ಬೆಳೀತೀನಿ ಅನ್ನೋ ನಿನ್ನ್ ಗುರಿ ಸರಿಯಾಗೇ ಇರುತ್ತೇ ಬಿಡು' ಎಂದು ತುಸು ಸುಮ್ಮನಾಗಿ, 'ಆದ್ರೆ ಆ ಒಣಗಿದ್ ಸಗಣಿ ಹಾಕೋ ಮೊದ್ಲು ಅದನ್ನ ನೀರಲ್ಲಿ ನೆನ್ಸಿ , ಬೇವಿನ್ ಹಿಂಡಿ ಗಂಜಲ ಹಾಕಿ ಸ್ವಲ್ಪ ದಿನ ಬಿಟ್ಟು ಅಮ್ಯಾಗೆ ಹಾಕು..' ಎಂದು ಸಲಹೆ ನೀಡಿದಳು.

ಏಕೋ ಅಜ್ಜಿಯ ಮಾತು ಲೋಕೇಶನಿಗೆ ನಾಟಿತು. ಆಕೆಯ ಉಪದೇಶದಂತೆ ಲೋಕೇಶ ಸಗಣಿಗೊಬ್ಬರವನ್ನು ತಯಾರಿಸಿದ. ಗದ್ದೆಯಲ್ಲಿಯೇ ಗುಂಡಿಯೊಂದನ್ನು ಮಾಡಿ ಅಲ್ಲಿಯೇ ಎಲ್ಲವನ್ನು ಸಿದ್ದಪಡಿಸಿದ. ವಿಪರ್ಯಾಸವೆಂಬಂತೆ ಅಂದು ಸಗಣಿ ಗೊಬ್ಬರವನ್ನು ಸಿಂಪಡಿಸುವಾಗ ಯಾರೊಬ್ಬ ಕಾರ್ಮಿಕನೂ, ಖುದ್ದು ಮೇಸ್ತ್ರಿಯೂ, ಸಹ ಅತ್ತ ಕಡೆ ಸುಳಿಯಲಿಲ್ಲ! ಲೋಕೇಶ ಹಾಗು ಅಜ್ಜಿಯಿಬ್ಬರೇ ಅಷ್ಟೂ ಗದ್ದೆಗೆ ಗೊಬ್ಬರವನ್ನು ಸಿಂಪಡಿಸಿದರು.

ಕೆಲಸದ ಖುಷಿಯಲ್ಲಿ ಲೋಕೇಶ ಊಟವನ್ನು ಮರೆತುಬರುವುದು, ಅಜ್ಜಿಯೊಟ್ಟಿಗೆ ಆಕೆಯ ಗುಡಿಸಿಲಿಗೆ ಹೋಗಿ ಅನ್ನ ಸಾರು ಹಾಗು ರಾಗಿ ಅಂಬಲಿಯನ್ನು ಸವಿಯುವುದು, ಅಲ್ಲಿಯೇ ಮರದ ಕೆಳಗೆ ಅರೆ ಹೊತ್ತು ಅಂಗಾತ ಮಲಗುವುದು ತೀರಾ ಸಾಮಾನ್ಯವಾಯಿತು. ಸಗಣಿ, ವಾಸನೆ, ಕೆಸರು, ಹಿಂಸೆ ಎಂಬ ಯಾವುದೇ ಪೊಳ್ಳು ನಾಟಕಗಳಿಲ್ಲದೆ ಲೋಕೇಶ ಕೆಲಸದಲ್ಲಿ ಮಗ್ನನಾಗಿದ್ದ. ಚಿಗುರೆಲೆಯ ಚಿನ್ನದ ಬಣ್ಣದ ಎಳೆಯ ಶುಂಠಿಯ ಎಲೆಗಳು ಒಂದೊಂದಾಗಿಯೇ ಮೇಲ್ಬರತೊಡಗಿದವು. ಲೊಕೇಶನ ಆನಂದಕ್ಕೆ ಪಾರವೇ ಇಲ್ಲದಂತಾಯಿತು.



****



ರಾತ್ರಿಯ ಆ ನೀರವ ಮೌನದಲ್ಲಿ ಕೆನ್ನೆಗಳ ಮೇಲೆ ಮೂಡಿದ ಸದ್ದು ಕೊಂಚ ಹೆಚ್ಚಾಗಿದ್ದರೂ ಪ್ರತಿಧ್ವನಿಸುವ ಮಟ್ಟಿಗಿದ್ದಿತು. ಪ್ರತಿದಿನ ಸಂಜೆ ಕತ್ತಲಾದ ಮೇಲೆ ಟೆರೇಸ್ನ ಮೇಲೆ ಬಂದು ಖುಷಿಗೆ ಫೋನಾಯಿಸುವ ಮೊದಲು ಹೀಗೆ ತನ್ನ ಕೆನ್ನೆಯ ಮೇಲೊಮ್ಮೆ ಹೊಡೆದುಕೊಂಡು ಜರುಗುತ್ತಿರುವುದೆಲ್ಲ ಕನಸ್ಸಲ್ಲ ಎಂದು ಖಾತ್ರಿಮಾಡಿಕೊಳ್ಳುತ್ತಿದ್ದ ಆಸಾಮಿ! ಕಳೆದ ಮೂರ್ನಾಲ್ಕು ತಿಂಗಳ ಈ ಘಳಿಗೆಯಲ್ಲಿ ಪ್ರತಿದಿನವೂ ಅಮಾಯಕ ಪೆಟ್ಟನ್ನು ತಿನ್ನುತ್ತಿದ್ದ ಆತನ ಕನ್ನೆಯೂ ಇತ್ತೀಚಿನ ಕೆಲದಿನಗಳಿಂದ ಒಂದು ರೀತಿಯಲ್ಲಿ ಒಗ್ಗಿಕೊಂಡಂತಿತ್ತು. ಅದೆಷ್ಟೇ ಜೋರಾಗಿ ಹೊಡೆದರೂ ಸ್ಪರ್ಶಜ್ಞಾನವಿರದ ಕಲ್ಲಿನಂತೆ ತನ್ನ ಪಾಡಿಗೆ ಅದು ತಾನಿರತೊಡಗಿತು. ಆದರೆ ಈ ಸುಮ್ಮನಿರುವಿಕೆ ಅದಕ್ಕೆ ಮತ್ತೊಂದು, ಇನ್ನೂ ಜೋರಾದ ಪೆಟ್ಟನ್ನು ಆದಿಯ ಅಸ್ತಗಳಿಂದ ದಯಪಾಲಿಸುತ್ತಿತ್ತು. ಆಗ ಅನಿವಾರ್ಯವಾಗಿ ಮೆದುಳಿನ ಕೆಲ ಕೋಶಗಳನ್ನು ಜಾಗೃತಗೊಳಿಸಿ ತನ್ನ ಮೇಲಾಗುವ ಶೋಷಣೆಯನ್ನು ತಪ್ಪಿಸಿಕೊಳ್ಳುತ್ತಿತ್ತು.

'ಛಟಾರ್..!' ಇಂದು ಎಂದಿಗಿಂತಲೂ ತುಸು ಜೋರಾಗಿಯೇ ಬಿದ್ದ ಪೆಟ್ಟು ಆದಿಗೆ ತನ್ನ ಕನಸ್ಸೆಂಬ ಸುಳ್ಳನ್ನು ಪ್ರತ್ಯೇಕಿಸುವುದಷ್ಟೇ ಅಲ್ಲದೆ ಕೆನ್ನೆಯ ಮೇಲೆ ಆಗಿನಿಂದಲೂ ಚೀರಾಡುತ್ತಿದ್ದ ಸೊಳ್ಳೆಯೊಂದರ ಕೊನೆಗಾಲವನ್ನೂ ಕರುಣಿಸಿತ್ತು. ಪಕ್ಕದಲ್ಲಿದ್ದ ನಲ್ಲಿಯ ನೀರಿನಿಂದ ಸೊಳ್ಳೆಯ ಅಸ್ತಿಯನ್ನು ಹರಿಯಬಿಟ್ಟು ಆದಿ ತನ್ನಿಷ್ಟದ ಹಾಡೊಂದನ್ನು ಹಾಕಿದ.

'ಸವಿ ಸವಿ ನೆನಪು .. ಸವಿ ಸವಿ ನೆನಪು , ಸಾವಿರ ನೆನಪು..' ಒಂದರೆ ನಿಮಿಷ ತನ್ನ ಕಣ್ಣನ್ನು ಮುಚ್ಚಿ ತನ್ನ ಬಾಲ್ಯದ ದಿನಗಳನ್ನು ನೆನೆಯತೊಡಗಿದ. ತನ್ನ ಬಾಲ್ಯವೆಲ್ಲವೂ ಖುಷಿಯೇ ಆಗಿದ್ದರಿಂದ ಆತನಿಗೆ ಅವಳ ಬಿಟ್ಟು ಬೇರೇನೂ ಅಲ್ಲಿ ನೆನೆಯಲು ಸಾಧ್ಯವಾಗಲಿಲ್ಲ. ಸಾದ್ಯವೂ ಇರಲಿಲ್ಲ! ಕೂಡಲೇ ಮೊಬೈಲ್ನ ಸ್ಪೀಕರ್ 'ಟಣ್..' ಎಂದು ಸದ್ದು ಮಾಡಿತು. ಎಂದಿನಂತೆ 'Hi..' ಎಂಬ ಖುಷಿಯ ಮೆಸ್ಸೇಜು ಸರಿಸಮಯಕ್ಕೆ ಬಂದಿತು. ಇಡೀ ಜಗತ್ತಿನ ಅಷ್ಟೂ ಸುಖ ಸಂತೋಷಗಳು ಆದಿಗೆ ಆಕೆ ಕಳುಹಿಸಿದ ಆ ಎರಡಕ್ಷರದಲ್ಲಿ ಕಾಣತೊಡಗಿದವು. ಮನಸ್ಸು ಪ್ರಸನ್ನವಾಯಿತು. ಈ ಸಂತೋಷ ಎಂದಿಗೂ ಮುಗಿಯದಿರಲಿ ಎಂದು ಬೇಡುತ್ತ ಆತ ಆಕೆಯ ನಂಬರ್ಗೆ ಫೋನಾಯಿಸಿದ. ಉದ್ವೇಗಭರಿತ 'ಹಲೋ..!' ಎಂಬ ಧ್ವನಿ ಅತ್ತಕಡೆಯಿಂದ ಸ್ವಾಗತಿಸಿತು.

ಮತ್ತದೇ ‘ಹಾಯ್, ಹೇಗಿದ್ದೀಯ, ಏನ್ ಊಟಕ್ಕೆ' ಎಂಬ ಟ್ರಡಿಷನಲ್ ಪ್ರೆಶ್ನೆಗಳ ನಂತರ 'ಮತ್ತೆ..?' ಎಂಬ ಉತ್ತರವಿಲ್ಲದ ಪ್ರೆಶ್ನೆಯನ್ನು ಕೇಳುವುದು ಇತ್ತೀಚೆಗೆ ಸಾಮಾನ್ಯವಾಯಿತು. ಹಾಗೆ ಕೇಳಿದಾಗಲೆಲ್ಲ ಆಕಡೆಯಿಂದ ಆಕಳಿಕೆಯ ಸದ್ದೋ ಅಥವಾ ಏನೂ ಇರದ ಸ್ತಬ್ದತೆಯೊಂದು ಮೂಡುತ್ತಿತ್ತು. ಹೇಳುವುದೆಲ್ಲ ಹೇಳಿ, ಕೇಳುವುದೆಲ್ಲ ಕೇಳಿ ಈಗ ಭಾಗಶಃ ತೆರೆದ ಪುಸ್ತಕದಂತಾಗಿರುವ ಇಬ್ಬರ ಜೀವನದಲ್ಲಿ ಹೊಸತೆಂಬ ಏನೂ ಇರದಂತಾಯಿತು. ಸಂಬಂಧಗಳಲ್ಲಿ ಅತಿವೃಷ್ಟಿಯನ್ನಾಗಲಿ ಅಥವಾ ಅನಾವೃಷ್ಟಿಯನ್ನಾಗಲಿ ಸೃಷ್ಟಿಸಿಕೊಳ್ಳದೆ ಸಂಬಾಳಿಸಿಕೊಂಡು ಹೋಗಬೇಕು, ಮಾತು, ಬಯಕೆ, ಫೋನು, ಮೆಸೇಜು, ಸಿಟ್ಟು, ಕೋಪ, ತಾಪ ಎಲ್ಲವೂ ಇತಿಮಿತಿಯಾಗಿ ನಿಯಮಿತವಾಗಿರಬೇಕು, ಆಕೆ Hi .. ಎಂದಾಕ್ಷಣಕ್ಕೆ ತನ್ನ ಇಡೀ ದಿನಚರಿಯನ್ನು ಒಂದು ಕ್ಷಣವೂ ಪುರುಸತ್ತಿರದೆ ಉಸಿರುಗಟ್ಟಿ ಹೇಳಿಬಿಟ್ಟು ಕೊನೆಗೆ 'ಮತ್ತೆ..?' ಎಂದು ಆಕೆಯನ್ನು ಕೇಳಬಾರದು, ದಿನವಿಡಿ ಆಕೆಯ ಜಪವೊಂದೇ ಮಾಡುತ್ತಾ ಊಟ, ತಿಂಡಿ, ಏನ್ ಕುಡಿದೆ, ಯಾವ ಜ್ಯೂಸು, ಅದ್ ಬೇಡ ಇದನ್ನ ಕುಡಿ, ಯಾರೊಟ್ಟಿಗೆ ಇಷ್ಟೊತ್ತು ಮಾತಾಡ್ತಿದ್ದೆ, etc etc ಎಂಬುದನ್ನೆಲ್ಲ ಕೇಳಿ ಆಕೆಯ ತಲೆಗೂ ಮನಸ್ಸಿಗೂ ಒಟ್ಟೊಟ್ಟಿಗೆ ನೋವನ್ನು ನೀಡಬಾರದು ಎಂಬುದೆಲ್ಲ ಆತನಿಗೆ ಎಲ್ಲಿ ತಿಳಿದಿತ್ತು? ಆದರೆ ಜೀವನದ ಅನಂತ ವಸಂತಮಾಸವನ್ನು ಕರುಣಿಸಿರುವ ತನ್ನಾಕೆಯನ್ನು ಮಗುವಿನ ಪ್ರೀತಿಯಂತೆ ಹಠಬಿದ್ದು ಪಡೆಯುವ ಪೆದ್ದನಂತ ಆದಿಯಲ್ಲಿ ಬೇರ್ಯಾವ ಯೋಚನೆಯೂ ಬರುತ್ತಿರಲಿಲ್ಲ. ಆಲ್ಲಿದ್ದದ್ದು ಕೇವಲ ಕಾಳಜಿ. ಅನಿರ್ವಚನೀಯವಾದ, ಎಂದಿಗೂ ಬತ್ತದ ಗೆಳತಿಯೆಂಬ ಮಧುರ ಕಾಳಜಿ. ವಿಪರ್ಯಾಸವೆಂದರೆ ಅದು ಖುಷಿಗೆ ಗೋಚರವಾಗುತ್ತಿದ್ದದ್ದು ಮಾತ್ರ ದಿನದ ನೂರು ಮೆಸೇಜುಗಳ ಕೋಟಾವನ್ನು ಪ್ರತಿದಿನವೂ ಇಂತಹ ಸಮಯ ಹರಣ ಪ್ರೆಶ್ನೋತ್ತರಗಳಿಗೆ ವ್ಯಹಿಸಿ ಸಂಜೆ ಐದಾಗುವಷ್ಟರಲ್ಲಿ ಅಷ್ಟೂ ಖಾಲಿಯಾಗಿ ನಂತರದ ಪ್ರತಿ ಮೆಸೇಜಿಗೆ ಹಣವ್ಯಹಿಸಬೇಕಾದಾಗ ಮೂಡುತ್ತಿದ್ದ ಸಿಟ್ಟಿನ ರೂಪದಲ್ಲಿ. ಆಫ್ ಕೋರ್ಸ್, ಸಾಮಾನ್ಯನಾದವರಿಗೆ ಇಂತಹ ವಿಷಯಗಳ ಮೇಲೆ ಕಿರಿಕಿರಿಯಾಗುಸುವುದು ಸಾಮಾನ್ಯವೇ.

ಅದೇನೋ ಒಂದು ಉದ್ವಿಗ್ನತೆ, ಆತುರ, ಕಾತುರ ಆತನಿಗೆ ಆಕೆಯ ಹೆಸರಿನ ಮೆಸೇಜೊಂದು ಟನ್ಗುಟ್ಟರೆ. ಆಕೆಯೂ ಈತ ಅದೆಷ್ಟೇ ತಲೆತಿಂದರೂ ಪ್ರತಿದಿನ ಒಂದೆರೆಡು ಮೆಸೇಜುಗಳನ್ನು ಕಳಿಸದೆ ಇರುತ್ತಿರಲಿಲ್ಲ. ಖುಷಿಯ ಮರಳುವಿಕೆ ಜೀವನದಲ್ಲಿ ಎಲ್ಲಿಲ್ಲದ ಖುಷಿಯನ್ನು ತಂದಿರುವಾಗ ನಗುವುದು, ನಗಿಸುವುದು ಆದಿಗೆ ತೀರಾ ಕಷ್ಟದ ವಿಷಯವೇನಾಗಿರಲಿಲ್ಲ. ಆದರೆ ಆದಿಶೇಷ ಎಲ್ಲವನ್ನೂ ಸಶೇಶಿಸುವುದರಲ್ಲೇ ಕಾರ್ಯೋನ್ಮುಕನಾಗಿದ್ದ. ಆದರೆ ಇಂದು ಆಕೆಯ ಸೆನ್ಸ್ ಆಫ್ ಹ್ಯುಮರನ್ನು ಪರೀಕ್ಷಿಸಲೋಗಿ ಆಕೆಯ ಕೋಪ ದ ಕಟ್ಟೆಯನ್ನು ಒಡೆಯುವಂತೆ ಮಾಡಿ, ಮಾತಿನ ಮದ್ಯೆಯೇ ಆಕೆ ಫೋನ್ ಕಟ್ ಮಾಡುವಂತೆ ಮಾಡಿದ! ಕೂಡಲೇ ಹತ್ತಾರು ಫೋನುಗಳನ್ನು ಇತ್ತಕಡೆಯಿಂದ ಮಾಡಿದರೂ ಆಕೆ ಒಂದಕ್ಕೂ ಉತ್ತರಿಸಲಿಲ್ಲ. ನಂತರದ ದಿನ ಎಲ್ಲವು ಸರಿಯೋಗಬಹುದು ಎಂದುಕೊಂಡವನಿಗೆ ಮತ್ತದೇ ಬಗೆಯ ಪ್ರತಿಕ್ರಿಯೆ. ಮೆಸೇಜಿಗೆ ಉತ್ತರವಿಲ್ಲ, ಫೋನನ್ನು ಎತ್ತುತ್ತಿಲ್ಲ.

ದಿನಗಳು ಕಳೆದವು.

ಮೋಡ ಕವಿದ ವಾತಾವರಣದಂತೆ ದಿನವೆಲ್ಲ ಆತನ ಮುಖ ಇಳಿಬಿಟ್ಟಿತು. ಯಾರೊಟ್ಟಿಗೂ ಮಾತನಾಡದ ಆತ ಖುಷಿಯ ಮೆಸೇಜಿಗೆ ಬಕಪಕ್ಷಿಯಂತೆ ಕಾಯತೊಡಗಿದ. ಸದ್ದಿಲ್ಲದಂತೆ ಅಡಗಿ ಮರೆಯಾಗಿದ್ದ ದುಗುಡದ ಛಾಯೆ ಒಂದೊಂದಾಗಿಯೇ ಆತನನ್ನು ಪುನ್ಹ ಆವರಿಸತೊಡಗಿದವು.




****



ಬೆಳಗಾದರೆ ಸಾಕು ಈ ಹಕ್ಕಿಗಳೆಲ್ಲವಕ್ಕೂ ಚಿಯ್ ಗುಡುವ ಕೆಲಸವನ್ನು ನೀಡಿದವರ್ಯಾರು? ಕೋಳಿಗಳಿಗೆ ಕೂಗಲು ಹೇಳಿಕೊಟ್ಟವರ್ಯರು? ಕರಾರುವಕ್ಕಾಗಿ ತಮ್ಮ ನಿರ್ಧಿಷ್ಟ ಸಮಯಕ್ಕೆ ಅಲರಾಂ ಬಾರಿಸಿದಂತೆ ಎದ್ವಾ-ತದ್ವಾ ಗೀಳಿಡುವ ಇವುಗಳು ಹೇಳಲು ಪ್ರಯತ್ನಿಸುತ್ತಿರುವುದಾರೂ ಏನು? ಬೆಳಗಾಗಿದೆ ಎದ್ದೇಳಿ ಎಂಬುದನ್ನು ಹೇಳುವುದಾದರೆ ಇವುಗಳ ವಿನ್ಹಾ ಸೂರ್ಯ ಮೇಲೇರುವುದು ಜಗತ್ತಿಗೇನು ತಿಳಿಯುವುದಿಲ್ಲವೇ? ಹಾಗಾದರೆ ಏನಿರಬಹದು ಈ ಹಕ್ಕಿಗಳ ಸದ್ದಿನ ಹಿಂದಿನ ಮೆಸೇಜು? ಅದ್ಯಾವ ಟೆಕ್ನಾಲಜಿ ಈ ಧ್ವನಿಯನ್ನು ಅರ್ಥೈಸಬಹುದು? ತಾವು ಬದುಕುವ ಒಂದೆರೆಡು ವರ್ಷಗಳಲ್ಲಿ ಆವು ಹೀಗೆ ಕೂಗಿ ಸಾಧಿಸುವುದಾದರೂ ಏನು?

ಆದರೆ ಸಮಯ ಎಲ್ಲರಿಗೂ ಒಂದೆಯೇ? ನಾವು ನಮ್ಮಲಿನ ಸಮಯದ ಮೇರೆಗೆ ಕೇವಲ ಒಂದೆರೆಡು ವರ್ಷಗಳೆನ್ನುತ್ತೀವಿ, ಆದರೆ ಅವಕ್ಕೆ ಆ ಒಂದೆರೆಡು ವರ್ಷಗಳೇ ಜೀವನದ ಅಷ್ಟೂ ಹಾದಿ. ಹುಟ್ಟು, ಸಾವು, ಪ್ರೀತಿ, ಮಮತೆ, ಬಾಲ್ಯ ,ಮುಪ್ಪು, ಎಲ್ಲವನ್ನೂ ಮಾನವರಂತೆಯೇ ಸಾಧಿಸುವ ಅವುಗಳ ಕಾಲಚಕ್ರ ನಮಗಿಂತಲೂ ಚಿಕ್ಕದಾದದ್ದು. ಅರ್ಥಾತ್ ನಮ್ಮ ಜೀವನದ ಸಾಧನೆಗೆ ನೂರು ವರ್ಷಗಳು ಬೇಕಾದರೆ ಅವುಗಳ ಸಾಧನೆ ಕೆಲವೇ ವರ್ಷಗಳಲ್ಲಿಯೇ ಸಾಧ್ಯವಿರಬಹುದು. ಲವ್ಕಿಕ ಸಾಧನೆಗಳನ್ನು ಬಿಟ್ಟು ಆದ್ಯಾತ್ಮಿಕ ಸಾಧನೆಯೆನ್ನಾದರೂ ಅವುಗಳು ಕೈಕೊಂಡರೆ ಪರಿಣಾಮವೇನಾಗಬಹುದು? ಸಾಧು ಸಂತರಂತೆ ಸಮಾಧಿ ಅವಸ್ಥೆಗೇರಲು ಇವುಗಳಿಗೆ ನಿಮಿಷಮಾತ್ರದಲ್ಲಿ ಸಾದ್ಯವಾಗಬಹುದೇ? ಇನ್ನು ದಿನ ಮಾತ್ರ ಜೀವನ ನೆಡೆಸುವ ಹೂವು ಹಣ್ಣುಗಳ ಕತೆಯೇನು? ಅಥವಾ ನಮಗಿಂತಲೂ ಹೆಚ್ಚು ಜೀವಿಸುವ ಇತರ ಪ್ರಾಣಿಗಳ ಮರ್ಮವೇನು? ಜೀವನದ ಕಾಲಾವಧಿ ಎಲ್ಲರಿಗು ಏಕೆ ಸಮನಾಗಿಲ್ಲ? ನಿಸರ್ಗ ಇವೆಲ್ಲವನ್ನೂ ನಮ್ಮಿಂದ ಮುಚ್ಚಿಟ್ಟಿದೆಯೇ? ಅಥವಾ ನಾವೇ ಹುಟ್ಟು ಕುರುಡರೇ?

ಅದ್ಯಾಕೋ ಇಂದು ಎಂದಿಗಿಂತ ಮೊದಲೇ ಎಚ್ಚರವಾಯಿತು. ಗರಗನೆ ತಿರುಗುತ್ತಿದ್ದ ಸೀಲಿಂಗ್ ಫ್ಯಾನನ್ನು ಧಿಟ್ಟಿಸುತ್ತಾ ಮಲಗಿದ್ದ ನನಗೆ ಬೆಳಗಿನ ಹಕ್ಕಿಗಳ ಚಿಲಿಪಿಲಿ ಸದ್ದು ವಿಭಿನ್ನವಾದೊಂದು ಯೋಚನೆನ್ನು ಹುಟ್ಟುಹಾಕಿತು. ರಾತ್ರಿಯಿಡೀ ರಾಧಾರ ಯೋಚನೆಯಲ್ಲೇ ಕಳೆದ ನನಗೆ ಒಂದರೆಕ್ಷಣವೂ ಸರಿಯಾಗಿ ನಿದ್ರಿಸಲು ಸಾಧ್ಯವಾಗಿರಲಿಲ್ಲ. ಚಿತ್ರವಿಚಿತ್ರವಾದ ಪ್ರೆಶ್ನೆಗಳು ಹಾಗು ಅಷ್ಟೇ ಘೋರವಾದ ಉತ್ತರಗಳು ನನನ್ನು ಕೊರೆದುಹಾಕಿದ್ದವು. ಇನ್ನು ಹೀಗೆಯೇ ಯೋಚಿಸಿದರೆ ಆಗದು ಎನುತ ಎದ್ದು ಟೆರೇಸಿನ ಮೇಲೆ ಬಂದೆ. ತಂಪಾದ ಗಾಳಿ ಹಿತವಾಗಿ ನನ್ನನು ತಬ್ಬಿಕೊಂಡಿತು. ಕಾಲಿಗೆ ಮೆಟ್ಟಿಕೊಂಡಿದ್ದ ಚಪ್ಪಲಿಯನ್ನು ಅಲ್ಲಿಯೇ ಪಕ್ಕಕ್ಕೆ ಬಿಟ್ಟು ಜಗತ್ತನ್ನು ಬೆಳಗಲು ಅಣಿಯಾಗುತ್ತಿದ್ದ ಜೀವದೀಪದೆಡೆಗೆ ನೋಡುತ್ತಾ ನಿಂತೇ. ಯಾವುದೂ ಮಹತ್ವದ ಕಾರ್ಯಕ್ಕೆ ಸದ್ದಿಲ್ಲದೇ ಹೋಗುತ್ತಿರುವಂತೆ ನಿಧಾನವಾಗಿ ಮುಂದುವರೆಯುತ್ತಿದ್ದ ಹಕ್ಕಿಗಳ ಸಾಲು ನನ್ನ ಮನಸ್ಸನ್ನೂ ತಮ್ಮೊಟ್ಟಿಗೆ ತೇಲಿಸಿಕೊಂಡು ಹೋದವು. ಕೈಗಳು ತಂತಾನೆ ಜೋಡಲ್ಪಟ್ಟವು. ಸೂರ್ಯನಮಸ್ಕಾರದ ಹನ್ನೆರೆಡು ಆಸನಗಳ ನಂತರ ಪದ್ಮಾಸನವಾಗಿ ಕೂತು ಓಂಕಾರವನ್ನು ಗುನುಗತೊಡಗಿದೆ. ಆಹಾ.. ಆ ನಿರ್ಲಿಪ್ತ ವಾತಾವರದಲ್ಲಿ ಅಕ್ಷರಸಹಃ ಹಾರುತ್ತ ದೂರ..ದೂರ.. ಬಹುದೂರ ಸಾಗಿದಂತಹ ಅನುಭವವನ್ನು ಅನುಭವಿಸಿದವನಿಗೇ ಗೊತ್ತು. ಸಿಟ್ಟು, ಕೋಪ, ತಾಪ, ಮಧ, ಮತ್ಸರ, ಕಿಚ್ಚು, ಪ್ರೀತಿ, ನಾನು.. ಎಂಬ ಎಲ್ಲವನ್ನು ಬಿಟ್ಟೂ, ಬಿಡದಂತೆ ಬಲು ದೂರ ಹಿತವಾದೊಂದು ಪ್ರದೇಶಕ್ಕೆ ಸಾಗಿದಂತಹ ಅಮೋಘ ಅನುಭವ.

ಅಂತ್ಯವಿರದ ಗುರಿಯೆಡೆಗೆ ಗುರಿಯ ಪಯಣ…

ಅದೆಷ್ಟೋ ಸಮಯದ ನಂತರ ಕಣ್ಣು ತೆರೆದೆ. ಸೂರ್ಯದೇವ ಅದಾಗಲೇ ತನ್ನ ಕಾರ್ಯವನ್ನು ಕೈಗೆತ್ತಿಕೊಂಡು ಪ್ರಕರವಾಗಿ ಬೆಳಗುತ್ತಿದ್ದಾನೆ. ಕೂಡಲೇ ಕೆಳಗಿಳಿದು ಬಂದು ಘಮಘಮಿಸುವ ಘಾಡ ಕಾಫಿಯನ್ನು ಮಾಡಿಕೊಂಡು ಮೊಬೈಲಿನೊಟ್ಟಿಗೆ ಪುನ್ಹ ಮೇಲೆ ಬಂದೆ. ಬೆಳಗಿನ ಹಿಂದೂಸ್ತಾನಿ ರಾಗವೊಂದನ್ನು ಹಾಕಿ ಕಾಫಿಯನ್ನು ಹೀರುತ್ತಾ ಹೋದಂತೆ ಮನಸ್ಸು ಹಲವಾರು ಆಸೆಗಳನ್ನು ಚುಗುರೊಡೆಸಿತು. ಕೂಡಲೇ ವೀಣೆಯನ್ನು ನುಡಿಸುವ ಮನಸಾಯಿತು. ಆದರೆ ವೀಣೆಯಾಗಲಿ ಅದನ್ನು ನುಡಿಸುವ ಪ್ರವೀಣತೆಯಾಗಲಿ ನನ್ನಲ್ಲಿರಲಿಲ್ಲ.

'ರಾಗ್ ವಿಭಾಸ್ ... ಕಿಶೋರಿ ಅಮೋನ್ಕರ್..?' ಎಂದ ಆದಿ ನನ್ನ ಪಕ್ಕಕ್ಕೆ ಬಂದು ನಿಂತನು. ರಾಗದ ಆಳದಲ್ಲಿ ಮುಳುಗಿದ್ದ ನಾನು ತಲೆಯನ್ನಷ್ಟೇ ಅಲ್ಲಾಡಿಸುತ್ತ ಆತನ ಪ್ರೆಶ್ನೆಗೆ ಹೌದೆಂದೇ. ಇಬ್ಬರು ಬಹಳ ಹೊತ್ತು ಸಂಗೀತವನ್ನು ಆಸ್ವಾದಿಸಿದೆವು. ಗಮಕ ಹಾಗು ಸ್ವರಗಳ ಸಮ್ಮಿಶ್ರಣದ ಆ ಮಧುರ ಹಿನ್ನಲೆಯಲ್ಲಿ ಮೂಡುತ್ತಿದ್ದ ಹಕ್ಕಿಗಳ ಸದ್ದು ಮತ್ತೊಂದು ಬಗೆಯ ಭ್ರಮಾ ಲೋಕವನ್ನೇ ಅಲ್ಲಿ ಸೃಷ್ಟಿಸಿದವು. ಆದಿ ನಾನು ಮಾತಾಡುವರೆಗೂ ಸುಮ್ಮನಿದ್ದ.

'ವಾವ್ .. ಈ ಸಂಗೀತ ಅನ್ನೋ ಭಾವಾತೀತ ಭಾವವನ್ನು ಕಂಡು ಹಿಡಿದ್ದಿದಾದರೂ ಯಾರು ಮಾರಾಯ..' ಮಂದ್ರದಲ್ಲಿ ಕೊನೆಗೊಂಡ ರಾಗಕ್ಕೆ ತಲೆಗೂಗುತ್ತ ನಾನೆಂದೆ.

'ಪರಿಸರ..' ಎಂದ ಆದಿ ಮುಂದುವರೆದ. 'ನಿರ್ಜೀವ ವಸ್ತುಗಳಿಂದ ಮೂಡುವ ಸದ್ದಿಗೇ ನಾವು ಹೀಗೆ ತಲೆದೂಗುತ್ತಿರಬೇಕಾದರೆ ಇನ್ನು ನೈಸರ್ಗಿಕವಾಗಿ ಮೂಡುವ ಆ ಮಧುರ ವಾಣಿಗೆ ಏನೆನ್ನಬೇಕು? ಪರಿಸರ ಪ್ರತಿ ಘಳಿಗೆಗೂ ಒಂದೊಂದು ರಾಗವನ್ನು ಏಕೆ ಹೊರಹೊಮ್ಮಿಸುತ್ತಿರಬಾರದು? ರಾಗ, ಗಮಕ, ಶ್ರುತಿ ಹಾಗು ತಾಳಗಳು ಇದ್ದರೂ ಕೊಂಚ ಭಿನ್ನವಾಗಿರಬಹುದು. ಅವು ಪರಿಸರದ ಸಂಗೀತವಾಗಿರಬಹುದು. ಯಾರಿಗೊತ್ತು? ಹಕ್ಕಿಗಳು ಬೆಳಗಿನ ಜಾವ ಕೂಗುವ ವಾಣಿಗೆ ನಾವು ಯಾವ ರಾಗದ ಹೆಸರಿಡಬೇಕು? ನಾವುಗಳೇಕೆ ಈ ಬಗೆಯಲ್ಲಿ ಯೋಚಿಸಬಾರದು? ಸಂಗೀತದ ಒಂದು ಹೊಸ ಬಗೆಯನ್ನೇ ಇಲ್ಲಿ ಆವಿಷ್ಕರಿಸಬಹುದಲ್ಲವೇ..?' ಎಂದ.

'ನಿಜ .. ಸಾವು ಬದುಕಿನ ಅಂತರ ನಮಗೆ ನೂರು ವರ್ಷವಾದರೆ ಅವಕ್ಕೆ ಕೇವಲ ಒಂದೆರೆಡು ವರ್ಷಗಳು. ನಾವು ನಮ್ಮ ಇಡೀ ಜೀವನದಲ್ಲಿ ಸಾಧಿಸುವುದನ್ನು ಅವು ಕೆಲವೇ ಕೆಲವು ತಿಂಗಳುಗಳಲ್ಲಿ ಸಾಧಿಸಬಲ್ಲವು. ಅದು ಸಂಗೀತವಾಗಲಿ ಅಥವಾ ಮತ್ತೇನೇ ಆಗಲಿ. ನಾವುಗಳು ಆ ರೀತಿನೂ ಯಾಕೆ ಯೋಚ್ನೆ ಮಾಡ್ಬಾರು?'

'ಮಾನವ ಬಂದುಕುತ್ತಿರೋದೇ ಒಂದು ಭ್ರಮ ಲೋಕದಲ್ಲಿ .. ಅಸ್ತಿತ್ವದಲ್ಲಿ ಇರದೇ ಇರೋ ನಕ್ಷತ್ರನೇ ನಿಜ ಅನ್ಕೊಂಡು ಬದುಕುವ ಆತನ ಚಿಂತನೆ ಬಹಳ ಸೀಮಿತವಾದದ್ದು. ಎಲ್ಲಿಯವರೆಗೂ ಆತ ಪರಿಸರಕ್ಕಾಗಿ ನಾವುಗಳೇ ವಿನಃ ನಮಗಾಗಿ ಪರಿಸರ ಅಲ್ಲ ಎಂದು ಅದ್ರೊಟ್ಟಿಗೆ ಏಕವಾಗಿ ಬದುಕಲು ಪ್ರಯತ್ನಿಸುವುದಿಲ್ಲವೋ ಅಲ್ಲಿಯವರೆಗೂ ಅದು ಆತನಿಗೆ ನಿಗೂಢವಾಗಿಯೇ ಇರುತ್ತದೆ. ಈ ಹಕ್ಕಿಗಳ ಸದ್ದಿನ ತರ.' ಎಂದು ಸುಮ್ಮನಾದನು

ಆದಿಯ ಮಾತುಗಳು ನನ್ನ ಆಳವನ್ನು ತಲುಪಿದವು.



****



'Waw! Is it that simple?' ಶಶಿಕಲಾ ಕೂತಿದ್ದ ಬೆಂಚಿನ ಮುಂದೆಯೇ ನಿಂತು ಆಕೆ ಹೇಳಿದ ಥಿಯರಿಯೊಂದನ್ನು ಕೇಳುವಂತೆ ನಟಿಸುತ್ತಾ ಹೇಳಿದ ಲೋಕೇಶ. ಪ್ರತಿ ಕ್ಷಣಕ್ಕೂ ಆತ ಆಕೆಯ ಪಕ್ಕದಲ್ಲಿದ್ದ ಉಷಾಳನ್ನು ತನ್ನ ಕಿರುನೋಟದಲ್ಲಿ ನೋಡುತ್ತಾ ಕಾಟಾಚಾರಕ್ಕೆ ಎಂಬಂತೆ ಶಶಿಕಲಾಳ ಮಾತಿಗೆ ಹುಂಗುಡುತ್ತಿದ್ದ. ಈತನ ಯಾವ ಡೊಂಬರಾಟಗಳಿಗೂ ಕ್ಯಾರೇ ಎನ್ನದೆ ಸಹಜವಾಗಿರುತ್ತಿದ್ದ ಉಷಾಳ ಸ್ವಭಾವ ಆತನಿಗೆ ಪದೇ ಪದೇ ಹಿಂಸಿಸುತ್ತಿತ್ತು. ಮೊದಲೆಲ್ಲ ಕೊಂಚ ಜೆಲಸಿಗಾದರೂ ತನ್ನೊಟ್ಟಿಗೆ ಮಾತನಾಡುವಳು ಎಂದುಕೊಂಡಿದ್ದ ಆತನಿಗೆ ಯಾವಾಗ ಆಕೆ ‘I don’t care.. get off..’ ಎಂಬ ಸ್ವಭಾವವನ್ನು ತೋರತೊಡಗಿದಳೋ ಆಗೆಲ್ಲ ಈತನ ಕಿಚ್ಚು ಕಾಡ್ಗಿಚ್ಚಿನಂತೆ ಹಬ್ಬತೊಡಗಿತು. ಪ್ರತಿ ಕ್ಲಾಸ್ಸಿನ ನಂತರ ಹೀಗೆ ಪ್ರೆಶ್ನೆ ಕೇಳುವಂತೆ ನಟಿಸಿ ಶಶಿಕಲಳ ಬಳಿಗೆ ಬಂದು ಆತ ನಿಲ್ಲುತ್ತಿದ್ದ.

'Yes it is.. could you please repeat it?' ಎಂದ ಶಶಿಯ ಪ್ರೆಶ್ನೆ ಕೂಡಲೇ ಸಿಡಿಲು ಬಡಿದಂತೆ ಬಂದೆರಗಿತು. ಆಕೆ ವಿವರವಾಗಿ ಒಂದನೇ ತರಗತಿಯ ಮಕ್ಕಳೂ ಅರ್ಥೈಸಿಕೊಳ್ಳುವಂತೆ ಹೇಳಿದ ವಿಷಯವನ್ನು ಎಳ್ಳಷ್ಟೂ ಕೇಳದೆ ತನ್ನ ಒಳಕೋಪದಲ್ಲಿ ಮಗ್ನನಾಗಿದ್ದ ಲೋಕೇಶ ಇನ್ನು ಇಲ್ಲಿ ನಿಂತರೆ ಉಷಾಳ ನೋಟದಲ್ಲಿ ತಾನು ಇನ್ನೂ ಬಿದ್ದುಬಿಡಬಹುದೆಂದುಕೊಂಡು ಕೂಡಲೇ,

'ರೀ ಶಶಿ ಬನ್ರಿ ಸಾಕು .. ರಿಪೀಟ್ ಅಂತೆ .. ಎಲ್ಲ ಅರ್ಥ ಆಗಿದೆ .. ಬೈ ದಿ ವೆ, ನಿಮ್ಗೆ ಟ್ರೀಟ್ ಬಾಕಿ ಇತ್ತಲ್ಲ ಇವತ್ತ್ ಕೊಡ್ತೀನಿ ಬನ್ನಿ' ಎಂದ.

ಹುಡುಗನೊಬ್ಬ ಅದರಲ್ಲೂ ಲೋಕೇಶನಂತ ಡೈನಾಮಿಕ್ ಪರ್ಸನಾಲಿಟಿಯ ಯುವಕನೊಬ್ಬ ತನ್ನನ್ನು ಕರೆದದ್ದು ಕೊಂಚ ಅನುಮಾನ ಮೂಡಿಸಿದರೂ ಬ್ಯಾಗನ್ನು ಹೊತ್ತು ಹೊರಟು ನಿಂತಳು ಶಶಿಕಲಾ.



****



'Impressive!! Well done my boy! .. Really proud of you..' ಮಂದವಾಗಿ ಬೀಸುತಿದ್ದ ಗಾಳಿಗೆ ತನ್ನ ಎದೆಯನೋಡ್ಡುತ್ತಾ ನಿಂತಿದ್ದ Mr.ಸಾಲ್ದಾನ ಜೋಸೆಫ್ ಶುಂಠಿಯ ಬೆಳೆಯನ್ನು ನೋಡುತ್ತಾ ಹೇಳಿದರು. ಟಿ ಶರ್ಟನ್ನೇ ಇನ್ ಮಾಡಿ ಬಿಳಿ ಪ್ಯಾಂಟು ಹಾಗು ಬಿಳಿಯ ಶೂ ಅನ್ನು ತೊಟ್ಟು ನಿಂತಿದ್ದ ಅವರು ಒಂತರ ಹಸಿರು ಗದ್ದೆಯಲ್ಲಿ ನಿಂತ ಹಿಮಕರಡಿಯಂತೆ ಕಾಣುತ್ತಿದ್ದರು. ಲೋಕೇಶ ಅವರ ಪಕ್ಕಕ್ಕೆ ತನ್ನ ಕೈಗಳೆರಡನ್ನು ಕಟ್ಟಿಕೊಂಡು ನಿಂತಿದ್ದ. ಹಾಳು ಬಿದ್ದು ಕುಡುಕರ ಅಡ್ಡವಾಗಿದ್ದ ಜಾಗವನ್ನು ಮನಸ್ಸಿಗೆ ಮುದ ನೀಡುವ ಹಸಿರ ಸಿರಿಯನ್ನಾಗಿ ಪರಿವರ್ತಿಸಿರುವ ಅವನ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಲೋಕೇಶ ಅನುಸರಿಸಿದ ಕೃಷಿಯ ಬಗೆಯನ್ನು ಸವಿವರವಾಗಿ ಕೇಳಿದ ಮೇಲಂತೂ ಸಂತೋಷದಿಂದ ತಲೆದೂಗಿದರು.ನಿಮ್ಮಂತ ಯಂಗ್ ಕ್ರಿಯೇಟಿವ್ ಥಿಂಕರ್ಸ್ ನಮ್ಮ ನಾಡಿಗೆ, ದೇಶಕ್ಕೆ ಬೇಕು ಲೋಕೇಶ್ ಎಂದರು.. ಸಾಲ್ದಾನ ಜೋಸೆಫ್ ಮತ್ತೊಮ್ಮೆ ತಮ್ಮ ಗದ್ದೆಯನ್ನು ಸುತ್ತು ಬಂದು ಲೊಕೇಶನ ಹೆಗಲ ಮೇಲೆ ಕೈಯಾಕಿ ‘If you need anything else give me call.. Keep up the good work ’ಎಂದೇಳಿ ತಮ್ಮ ಜೀಪನ್ನೇರಿ ಅಲ್ಲಿಂದ ಹೊರಟರು. ಲೋಕೇಶ ಖುಷಿಯಿಂದ ಪಕ್ಕದಲ್ಲಿದ್ದ ಬೆಟ್ಟವನ್ನು ಏರಿದ. ಒಳದಾರಿಯನ್ನು ಕಂಡುಹಿಡಿದ ಪರಿಣಾಮ ಈಗ ಆ ಭೀಮ ಬೆಟ್ಟ ಬೆಳಗಿನ ಜಾಗಿಂಗ್ ಟ್ರ್ಯಾಕ್ನಂತಾಗಿದೆ. ಮೇಲೇರಿದ ಆತ ನತ್ತಿಯಿಂದ ತಾನು ಬೆಳೆಸಿದ ಗದ್ದೆಯನೊಮ್ಮೆ ನೋಡತೊಡಗಿದ. ಆತನ ಮನಸ್ಸು ಖುಷಿಯಿಂದ ನಲಿಯುತ್ತಿತ್ತು. ಹಲವಾರು ಯೋಚನೆಗಳು ಅಲ್ಲಿ ಹಾದುಹೋಗುತ್ತಿದ್ದವು. ಕೆಲವೊಮ್ಮೆ ತನ್ನ ಸಾಲದ ಹೊರೆಯನ್ನು ತೀರಿಸುವ ಇನ್ವೆಸ್ಟ್ಮೆಂಟ್ನಂತೆ ಅದು ಕಂಡರೆ ಮತ್ತೊಮ್ಮೆ ತಾನೇ ಸ್ವತಃ ಹೆತ್ತು ಹೊತ್ತು ಬೆಳೆಸಿದ ಎಳೆಯ ಮಗುವಂತೆ ಕಾಣಿಸುತ್ತಿತ್ತು. ಆತ ಮೇಲಿಂದ ತನ್ನ ಗದ್ದೆಯನ್ನು ದಿಟ್ಟಿಸುತ್ತಿದ್ದರೆ ಆತ್ತ ಕಡೆಯಿಂದ ಗದ್ದೆಯೂ ಈತನನ್ನು ಮುಗ್ದವಾಗಿ ನೋಡುತ್ತಿರುವಂತೆ ಭಾಸವಾಯಿತು. ಕೂಡಲೇ ಆತನಿಗೆ ವಿಭಿನ್ನ ಆಲೋಚನೆಯೊಂದು ಮೂಡಿತು. ಪರಿಣಾಮ ಮನಸ್ಸು ಗೊಂದಲದಲ್ಲಿ ಮುಳುಗಿತು. ಕಷ್ಟಬಿದ್ದು, ಬಿತ್ತಿ ಬೆಳೆಸಿದ ಸಸಿಗಳು ತನ್ನ ಕರುಳ ಕುಡಿಯೇನೋ ಅನಿಸುತ್ತಿದ್ದ ಆತನಿಗೆ ಅವನ್ನು ಯಾವುದೇ ಕಾರಣಕ್ಕೂ ಕಟಾವು ಮಾಡಬಾರದೆಂಬ ಮಮತೆ ಮೂಡುತ್ತದೆ! ಆತನ ಸ್ಥಿತಿಪ್ರಜ್ಞ ಮನಸ್ಸು ಕಲ್ಪನಾ ಲೋಕದಿಂದ ಹೊರಬರುವಂತೆ ಅರಚುತ್ತಿದ್ದರೂ ಲೊಕೇಶನ ನಿಶ್ಚಯ ಒಮ್ಮೆಲೆ ದೃಢವಾಗುತ್ತದೆ!!

ಅದೇನೇ ಆಗಲಿ, ಅದ್ಯಾರೇ ಅದೇನನ್ನೇ ಅನ್ನಲಿ ಈ ಸಸಿಗಳ ಕುತ್ತಿಗೆಯನ್ನು ನಾ ಕಡಿಯೇನು! ನಾ ಬೆಳೆಸಿದ ಕಂದಮ್ಮಗಳನ್ನು ಅದೇಗೆ ಕೊಲ್ಲಲಿ?!



****



'ಕಿಸ್ ಮಿ, ಪ್ಲೀಸ್..' ಬರೆಯತೊಡಗಿದ ಕತೆಯ ಒಂದು ಕ್ಯಾರೆಕ್ಟ್ರನ್ನು ವಿವರಿಸತೊಡಗಿದ ನನಗೆ ರಾಧಾರ ಮಾತನ್ನು (ಆಸೆಯನ್ನು!) ಕೇಳಿ ಆಕಾಶವೇ ಕಳಚಿ ಬಿದ್ದಂತಹ ಅನುಭವವಾಯಿತು. ಕಣ್ಣುಗಳನ್ನು ಸಣ್ಣಗಾಗಿಸಿ, ಸಿಹಿತಿಂಡಿಗೆ ಹಠಹಿಡಿಯುವ ಮಕ್ಕಳಂತೆ ಮುಖವನ್ನು ಮಾಡಿ, 'ಅಚ್ಚ ಜಿ ಮೈ ಹಾರಿ ಚಲೋ ಮಾನ್ ಜಾಹೂ ನ' ಹಾಡಿನ ಮಧುಬಾಲಳಂತೆ ನನ್ನನ್ನು ನೋಡುತ್ತಾ ಕೇಳಿದ ಅವರ ಆ ಪರಿಗೆ ಒಲ್ಲೆ ಎನ್ನುವ ಗಂಡಸು ಬಹುಷಃ ಇಡೀ ಬ್ರಹ್ಮಾಂಡದಲ್ಲೇ ಇದ್ದಿರಲು ಸಾಧ್ಯವಿಲ್ಲವೇನೋ. ಏನು ಉತ್ತರಿಸಬೇಕೆಂದು ತಿಳಿಯದೆ ನಾನು ತಡವರಿಸಿದೆ.

'ರಿ ರಾಧ .. ಇತ್ತೀಚಿಗೆ ನೀವು ತುಂಬಾನೇ ಹಾಳಾಗಿದ್ದೀರಾ!'

'ಒಹ್, ಇಸ್ ಇಟ್ .. !' ಎಂದು ಸುಮ್ಮನಾಗಿ ಮುಂದೆ ಮತ್ತೇನನ್ನೋ ಹೇಳಲು ಮುಂದಾದ ಅವರು ಅದನ್ನು ಬದಲಿಸಿ 'ವಾಟೆವರ್.. ಕಿಸ್ ಮಿ ನೌ' ಎಂದು ಪುನ್ಹ ಗೋಗರೆಯತೊಡಗಿದರು.

‘Comeon . .ಇದು ಕಾಲೇಜ್ ರೀ . .ನನ್ನ್ ರೂಮ್ ಅಲ್ಲ' ನಾನು ನಗಾಡಿದೆ.

‘Doesn’t make any difference..’ ಎಂದ ಅವರು ನನ್ನ ಟಿಶರ್ಟ್ ಅನ್ನು ಹಿಡಿದು ಹತ್ತಿರಕ್ಕೆ ಎಳೆದುಕೊಂಡರು. ನನ್ನ ಎದೆ ಭಯದಿಂದಲೋ, ಉತ್ಸಾಹದಿಂದಲೋ ಗಡಗಡನೆ ನಡುಗತೊಡಗಿತು.ಟೆರೇಸಿನ ಮೇಲೆ ಸದ್ಯಕಂತು ನಾವಿಬ್ಬರೇ ಇದ್ದರೂ, ಗಂಡು ಮಾನವನ ನನ್ನೀ ಅಸೆ ಆಕಾಂಕ್ಷೆಗಳು ದೇವರಾಣೆಗೂ ಜಾಗೃತಗೊಂಡಿದ್ದರೂ, ಜೀವನದ ಮೊಮ್ಮದಲ ಚುಂಬನದ ಸುವರ್ಣಾವಕಾಶ ಮಗದೊಮ್ಮೆ ಎದುರಾಗಿದ್ದರೂ ನನ್ನ ಮನ ಪುನ್ಹ ತನ್ನ ಅಹಃ ಅನ್ನು ತೋರತೊಡಗಿತು.

ಸೊ, ನಿನ್ನ ಅವರ ಸಂಬಂಧ ಇಂತಹ ಕೆಲವು ಘಳಿಗೆಗಳಿಗೆ ಮಾತ್ರ ಸೀಮಿತವೇ? ಗೆಳೆತನ, ಸಲಿಗೆ ಅಂದ ಮಾತ್ರಕ್ಕೆ .. ಎಂದು ಏನೇನೋ ಗೊಣಗತೊಡಗಿತು.

‘What Happened?!’ ನಯವಾಗಿ ಕೇಳಿದರು ಅವರು.

ಅಗಣಿತ ಯೋಚನೆಯಲ್ಲಿ ಮುಳುಗಿದ ನನಗೆ ಆಕೆಯ ಪ್ರೆಶ್ನೆಗೆ ಉತ್ತರವನ್ನು ಹೇಳಲು ತಡವರಿಸತೊಡಗಿದೆ. ಏನೋ ಒಂದು ಗಟ್ಟಿ ನಿರ್ಧಾರವನ್ನು ಮಾಡಿಕೊಂಡಂತೆ ನಾನು,

ಆಕೆಯ ಕಪೋಲಗಳೆರಡನ್ನೂ ಹಿಡಿದು 'ರಾಧಾ .. Marry me!!' ಎಂದು ಪ್ರಯಾಸಪಟ್ಟು ಕೇಳಿದೆ. ನನ್ನ ಜೀವನದ ಅಷ್ಟೂ ಆಶೋತ್ತರಗಳನ್ನು ಈಡೇರಿಸುವ ಅಕ್ಷಯಪಾತ್ರೆಯಂತೆ ಆಕೆಯ ನುಣುಪಾದ ಮುಖ ನನಗೆ ಭಾಸವಾಯಿತು. ಬಹುಷಃ ನನ್ನ ಜೀವನದ ಗುರಿ ಸ್ಪಷ್ಟವಾಗತೊಡಗಿತು.

ಕೆಲಕ್ಷಣಗಳ ಕಾಲ ವಿಚಿತ್ರ ಭಂಗಿಯಲ್ಲಿ ನನ್ನ ನೋಡಿದ ಆಕೆ,

‘What did you just say?! ನನ್ನ ಕೈಗಳನ್ನು ಆಕೆಯ ಕೆನ್ನೆಗಳಿಂದ ಬೇರ್ಪಡಿಸಿ ದೂರಕ್ಕೆ ತಳ್ಳಿ ‘What’s your age you know by the way?’ ಎಂದು ಕುಪಿಸಿಗೊಂಡು ಕೇಳಿದರು.

'ಟ್ವೆಂಟಿ' ಪೆದ್ದನಂತೆ ನಾನು ಉತ್ತರಿಸಿದೆ.

'ಏನ್ ಕಾಮಿಡಿ ಮಾಡ್ತಿದ್ದೀಯಾ.. You know my age' ಎಂದು ಚಿದಂಬರ ರಹಸ್ಯವನ್ನು ಭೇದಿಸು ಸಾಧ್ಯವಾದರೆ ಎಂಬಂತೆ ನನ್ನ ಕೇಳಿದಳು.

'ಟ್ವೆಂಟಿ ಒನ್ ?'

'ನಿನ್ ತಲೆ .. I’m 25' ಎಂದು ಸುಮ್ಮನಾದರು

'ಸೊ ವಾಟ್ .. I love you and would like to marry you..That's it' ಎಂದು ಸುಮ್ಮನಾಗಿ 'That must be my destination'

'Destination?..What kind of Destination it is? And you love me in what bloody sense?' ಎಂದು ತುಸು ಜೋರಗಿಯೇ ಹೇಳಿದರು. ಈಗ ಕಾಣುತ್ತಿರುವ ಗಂಟಿಕ್ಕಿಕೊಂಡಿದ್ದ ಕೋಪಭರಿತ ಅವರ ಮುಖಕ್ಕೂ ಕೆಲ ಸೆಕೆಂಡುಗಳ ಹಿಂದಷ್ಟೇ ನನ್ನ ಕೈಯ ಮೇಲೆ ಅರಳಿದ ತಾವರೆಯಂತಹ ಆ ಚಹರೆಗೂ ಅಜಗಜಾಂತರ ವ್ಯತ್ಯಾಸವಿದ್ದಿತು.

'Don’t overreact.. ನೀವೂ ನನ್ನ ಇಷ್ಟ ಪಡುತ್ತಿದ್ದೀರಾ ಎನ್ನುವುದು ಗೊತ್ತು .. ನನ್ನ ಡಿಗ್ರಿ ಮುಗಿಯುವವರೆಗೂ ತಾಳಿ .. ನಂತರ ನಾನೇ ಖುದ್ದಾಗಿ ಮನೆಯವರನ್ನ ಒಪ್ಪಿಸ್ತೇನೆ’ ಎಂದು ನಾನು ಆಕೆಯ ಹತ್ತಿರಕ್ಕೆ ತೆರಳಿದೆ. ಆದರೆ ಈ ಬಾರಿ ಕೊಸರಾಡತೊಡಗಿ ತೀಕ್ಷ್ಣವಾಗಿ ನೋಡಿದ ಆಕೆ ನನ್ನ ಕೆನ್ನೆಯ ಮೇಲೊಂದು ಛಟಾರನೆ ಭಾರಿಸಿ ಅಲ್ಲಿಂದ ಬಿರಬಿರನೆ ಹೊರನೆಡೆದರು. ಆ ಹೊಡೆತ ನನಗೆ ಗೊಂದಲದೊಟ್ಟಿಗೆ ವಿಪರೀತ ನೋವನ್ನೂ ಉಂಟುಮಾಡಿತು. ಅಂತಹ ಅನ್ನಬಾರದನ್ನು ನಾನು ಏನಂದೆ ಎಂದು ಯೋಚಿಸುತ್ತಾ ನಿಂತೆ




ಮುಂದುವರೆಯುವುದು......

ಪಯಣ - 8

'ಅವಳಜ್ಜಿ .. ಕೊಬ್ಬ್ ನೋಡು .. ಏನ್ ಇವ್ಳು ಶಕೀರಾನ ತಂಗಿ .. ಅಟ್ಟಿಟ್ಯೂಡ್ ಬೇರೆ ..' ಕೆಂಡದ ಮೇಲಿನ ತುಂಡನ್ನು ತಿನ್ನಲೋಗಿ ಮೂತಿ ಸುಟ್ಟ ನಾಯಿಮರಿಯಂತೆ ನನ್ನ ಪಕ್ಕಕೆ ಕೂತು ಕುಯಿಂಗುಡತೊಡಗಿದ ಲೋಕೇಶ.

ಮದ್ಯಾಹ್ನದ ಆ ಫ್ರೀ ಕ್ಲಾಸ್ಸಿನಲ್ಲಿ ಹೀರೋಗಿರಿಯನ್ನು ತೋರಿಸುವ ಅಮಲಿನಲ್ಲಿ ಶಾರುಖ್ ಖಾನ ನಡಿಗೆಯನ್ನು ನಡೆಯುತ್ತಾ ತನ್ನ ಕ್ರಶ್ ಉಷಾಳ ಮುಂದೋಗಿ ನಿಂತ. ಆಕೆಯ ಮುಂದೆ ನಿಲ್ಲುವ ಧೈರ್ಯಕ್ಕೋ ಅಥವಾ ಸಾಹಸಕ್ಕೋ ಏನೋ ಇಡೀ ಕ್ಲಾಸೇ ಒಮ್ಮೆ ನಿಶಬ್ದವಾಯಿತು, ಆತನನ್ನೇ ಧಿಟ್ಟಿಸತೊಡಗಿತು. ಲೊಕೇಶನ ಆತ್ಮವಿಶ್ವಾಸ ನಾನು ಅಗಿದು ಹೊರಬಿಡುತ್ತಿದ್ದ ಚೀವಿಂಗ್ ಗಮ್ನ ಗುಳ್ಳೆಗಿಂತಲೂ ದೊಡ್ಡದಾಯಿತು.

'ಏ ಉಷಾ.. ನೆನ್ನೆ ಮಾಡಿದ್ ಮ್ಯಾಥಮೆಟಿಕ್ಸ್ ಕ್ಲಾಸ್ಸಿನ ನೋಟ್ಸ್ ಕೊಡೆ..' ಎಂದು ತನ್ನ ಮನೆಯಾಕೆಯನ್ನು ಕೇಳುವಂತೆ ಎದೆಯುಬ್ಬಿಸಿಕೊಂಡು ಕೇಳಿದ.

ಕೆಲಕ್ಷಣ ಆತನ ವಿಚಿತ್ರ ಬಂಗಿಯನ್ನು ಮೇಲಕ್ಕೂ ಕೆಳಕ್ಕೂ ನೋಡಿದ ಆಕೆ,

'ಹೋಗಲೋ ಪೊರ್ಕಿ .. ಮುಖ ನೋಡ್ಕೋ..ನೋಟ್ಸ್ ಕೊಡೆ ಅಂತೇ.. ಥು! ' ಎಂದು ಉಗಿದಳು.

ಆಕೆಯ ಆ ಉತ್ತರವನ್ನು ಕೇಳಿ ಕ್ಷಣಮಾತ್ರದಲ್ಲಿ ಲೊಕೇಶನ ಮುಖ ಕೆಂಪೇರಿತು. ಆಕೆಯ ಪಕ್ಕದಲ್ಲಿದ್ದ ಮೂವರು ಹುಡುಗಿಯರನ್ನು ಬಿಟ್ಟರೆ ಇಡೀ ಕ್ಲಾಸಿಗೆ ಕ್ಲಾಸೇ ಗೊಳ್ಳೆಂದು ನಕ್ಕಿತು. ನಮ್ಮ ಏಕೈಕ ಗೆಳೆಯನಿಗೆ ತುಂಬಿದ ಕ್ಲಾಸ್ ರೂಮಿನಲ್ಲಿ ನೆಡೆದ ಅವಮಾನದಿಂದ ಪಾರುಮಾಡುವುದ ಬಿಟ್ಟು ನಾನು ಹಾಗು ಆದಿ ನಕ್ಕರು ನಗದಂತೆ ನಟಿಸಿದೆವು. ಆ ನಗುವಿನ ತಡೆಯುವಿಕೆಯಲ್ಲಿ ನನ್ನ ಹೊಟ್ಟೆ ತಡೆಯಲಾರದಷ್ಟು ನೋಯತೊಡಗಿತು. ಆದಿ ಸುಸ್ಸು ಎಂದು ನಾಟಕವಾಡಿ ಕಾರಿಡಾರಿನ ಬಳಿಗೋಗಿ ಸಾಧ್ಯವಾದಷ್ಟು ನಗಾಡಿದ ಹಾಗು ಖುಷಿಗೆ 'Hi..' ಎಂಬ ಮೆಸೇಜನ್ನು ಕಳಿಸಿ ತನ್ನದೇ ಬೇರೊಂದು ಲೋಕದೊಳಗೆ ಮುಳುಗಿದ!

'ಬೆಳ್ಳಗೆ, ತೆಳ್ಳಗೆ ಈದ್ಬಿಟ್ರೆ ಏನ್ ಊರವ್ರೆಲ್ಲ ಪುಕ್ಸಾಟೆ ಬಿದ್ದಿರ್ತಾರೆ.. ನನ್ನ್ ಗದ್ದೆ ಒಳಗೆ ತಳ್ಳಿ ಬೆಳಗಿಂದ ಸಂಜೆವರ್ಗು ಗೇಯ್ಸ್ಬೇಕು .. ಲುಕ್ ನೋಡು .. ಅವಳಜ್ಜಿ ಪಿಂಡ.. ಸಿಗ್ಲಿ ತಾಳು..' ಎಂದು ತನ್ನೊಳಗೆ ಏನೇನೋ ಗುನುಗಿಕೊಳ್ಳತ್ತಾ ನನ್ನ ಪಕ್ಕಕ್ಕೆ ಬಂದು ಕುಳಿತ. ಕೆಲವೊಮ್ಮೆ ಎದ್ದು ನಂತರ ಕೂತೂ ಇನ್ನೇನು ಒಂದೇ ಕುಪ್ಪಳದಲ್ಲಿ ಆಕೆಯ ಬಳಿಗೆ ನೆಗೆದು ಆಕೆಯ ಕೆನ್ನೆಯ ಮೇಲೊಂದು ಛಟಾರನೆ ಭಾರಿಸುವವನಂತೆ ಆಡುತ್ತಿದ್ದ. ನಂತರ ಸ್ವಲ್ಪ ಹೊತ್ತು ಸುಮ್ಮನಾಗಿ, 'ಇನ್ಮುಂದೆ ನೋಡ್ತಾ ಇರು .. ಅವಳನ್ನ ಹೆಂಗ್ ಆಟ ಆಡಸ್ತೀನಿ ಅಂತ .. ಲೆಕ್ಚರರ್ ಮಗ್ಳು ಅಂತ ತುಂಬಾನೇ ಇದೆ.. ' ಎಂದು ಎದ್ದು ಕ್ಲಾಸಿನಿಂದ ಬಿರಬಿರನೆ ಹೊರನೆಡೆದ. ಮೊದಲೇ ಹಠಮಾರಿ. ಮುಂದೇನು ಮಾಡುವನೋ ಎಂದು ನನಗೆ ಕೊಂಚ ಭಯಮೂಡತೊಡಗಿತು. ಅದೇನೇ ಆಗಲಿ ತುಂಬಿದ ಕ್ಲಾಸಿನಲ್ಲಿ ಹುಡುಗನೊಬ್ಬನೊಟ್ಟಿಗೆ ಈ ರೀತಿ ವರ್ತಿಸುವುದು ಸುತರಾಂ ಸರಿಯಲ್ಲ ಎಂದೂ ಅನಿಸಿತು.

ಲೋಕೇಶ ಹೇಳುವಂತೆ ಅಂದ ಚೆಂದಗಳಿದ್ದ ಮಾತ್ರಕ್ಕೆ ಆಕೆಯ / ಆತನ ಮಾತುಗಳೆಲ್ಲವೂ ವೇದವಾಕ್ಯಗಳಾಗುತ್ತಾವೆಯೇ? ಇಲ್ಲವಾದರೆ ಅದು ಯಾರಿಗೂ ಬೇಡದ ಕಸವಾಗುತ್ತದೆಯೇ?

ಲೋಕೇಶ ಕ್ಲಾಸ್ ರೂಮಿನಿಂದ ಹೊರಬಂದವನೇ ದೂರದ ದುಡ್ಡವನ್ನು ಧಿಟ್ಟಿಸುತ್ತ ಕಾರಿಡಾರಿನ ಮೂಲೆಯಲ್ಲಿ ನಿಂತ.

'ಏನಾಗಲ್ಲ ಬಿಡು ಮಚಿ.. ನೀನೂ ಸಹ ಆ ತರ ಹುಡ್ಗಿರ್ನ ಏಕವಚನದಲ್ಲಿ ಮಾತಾಡ್ಸೋದು ಸರಿ ಇರ್ಲಿಲ್ಲ' ಕೂಡಲೇ ಆತನನ್ನು ಹಿಂಬಾಲಿಸಿ ಬಂದ ನಾನೆಂದೆ.

ಲೋಕೇಶ ಮಾತನಾಡಲಿಲ್ಲ.

ಆತನ ಹೆಗಲನ್ನು ತಟ್ಟುತ್ತಾ 'ಹೋಗ್ಲಿ ಬಿಡಿ ಬಾಸ್.. ಸಂಜೆ ಬಿಯರ್ ಟ್ರೀಟ್ ನನ್ನ್ ಕಡೆಯಿಂದ.. ತಮ್ಮ್ ಎಲ್ಲ ಫ್ರಸ್ಟ್ರೇಷನ್ ಅವಾಗ ತೆಗಿರಂತೆ..’

ಬಿಯರ್ನ ಹೆಸರೆತ್ತಿದರೆ ಸಾಕು ಮಕ್ಕಳಂತೆ ಕುಣಿದು ಕುಪ್ಪಳಿಸುವ ಆತ ಅದಕ್ಕೂ ಏನನ್ನು ಉತ್ತರಿಸಲ್ಲಿಲ್ಲ. ಕೂಡಲೇ ಕ್ಲಾಸ್ ರೂಮಿನೊಳಗೋಗಿ ತನ್ನ ಬ್ಯಾಗನ್ನು ತೆಗೆದುಕೊಂಡು ರೂಮಿಗೆ ಹೊರಟೇ ಹೋದ. ಆತ ಅಷ್ಟು ಸೀರಿಯಸ್ ಆಗಿದ್ದನ್ನು ನಾನು ಕಂಡಿರುವುದು ಬಹಳ ಕಡಿಮೆಯೇ. ಆಗಾದಾಗಲೆಲ್ಲ ಆತ ತೆಗೆದುಕೊಳ್ಳುವ ನಿರ್ಧಾರಗಳು ಮಾತ್ರ ಸಾಮಾನ್ಯನಾದವನಿಗೆ ಅರಗಿಸಿಕೊಳ್ಳುವುದು ತುಸು ಕಷ್ಟವೇ. ನನಗೆ ಚಿಂತೆ ಕಾಡತೊಡಗಿತು.

ಇಷ್ಟೆಲ್ಲಾ ಆದರೂ ಬಿಸ್ಕಟ್ ಪ್ಯಾಕಿನ ಗಾತ್ರದ ತನ್ನ ಫೋನಿನಲ್ಲಿ ತಲೆಯ ಹೇನನ್ನು ಹುಡುಕುವಂತೆ ಮೆಸ್ಸೇಜುಗಳನ್ನು ಕುಟ್ಟುತ್ತಿದ್ದ ಆದಿಯ ತಲೆಯ ಮೇಲೊಂದು ಜೋರಾಗಿ ತಟ್ಟಿ ಕ್ಲಾಸ್ ರೂಮಿನೊಳಗೆ ಕರೆದುಕೊಂಡು ಓದೆ.




****




ನೀರವ ಮೌನದ ರಾತ್ರಿಯನ್ನು ಒಮ್ಮೆಲೇ ಕದಡಿದಂತೆ ಮಾಡಿತು ಲೊಕೇಶನ ಚೀರುವ ಸದ್ದು.

'ಲೇ ನಿನ್ನಜ್ಜಿ, ಬಾರೆ ಹೊರ್ಗೆ..' ಎಂದು 'ಬಾ' ಅಕ್ಷರವನ್ನು ಎರಡು ಸೆಕೆಂಡುಗಳಿಗೂ ಮಿಗಿಲಾಗಿ ಎಳೆದು ಅರಚಿದ ಸದ್ದು ತೆಪ್ಪಗೆ ತಮ್ಮ ಪಾಡಿಗೆ ಹಾಯಾಗಿ ಮಲಗಿದ್ದ ನಾಯಿಗಳನ್ನೂ ಜಾಗೃತಗೊಳಿಸಿತು. ಕುಡಿದ ಅಮಲಿನಲ್ಲಿ ಮೂಡಿದ ವಿಚಿತ್ರ ಸದ್ದಿಗೆ ಯಾವುದೊ ಮಹಾ ಜೀವಜಂತುವೊಂದು ಆಗಸದಿಂದ ಬಂದು ಬಿದ್ದಿರಬೇಕೆಂಬ ಭಯದಿಂದಲೋ ಏನೋ ಕೂಡಲೇ ಅವುಗಳ ಬೊಗಳುವಿಕೆಯ ಬುದ್ಧಿಯೂ ಕೊಂಚ ಯೋಚಿಸತೊಡಗಿದಂತಿತ್ತು.

'ಏನೇ .. ನಿಮ್ ಅಮ್ಮ ಮಗ್ಳುದು .. ಏನ್ ಕಾಲೇಜ್ ನಿಮ್ಮಪ್ಪಂದ .. ಏನ್ ನಕ್ರ ಗೂರೂ ಇವರ್ದು..'

'ಲೋಕಿ .. ಸುಮ್ನಿರೋ .. ಲೋಫರ್ .. ಗೊತ್ತಾದ್ರೆ ನಾಳೆ ಡಿಬಾರ್ ಆಗ್ತಿವಿ..' ಸ್ಥಿತಪ್ರಜ್ಞನಂತೆ ನಟಿಸುತ್ತಿದ್ದ ಆದಿ ಲೊಕೇಶನನ್ನು ತಡೆಯಲು ಪ್ರಯತ್ನಿಸುತ್ತಿದ್ದರೆ ನಾನು ಅದಾಗಲೇ ಆಕಾಶದ ನಕ್ಷತ್ರವನ್ನು ಎಣಿಸುವಂತೆ ತಲೆಯನ್ನು ಮೇಲೆತ್ತಿ ಅವರಿಬ್ಬರನ್ನು ಹಿಂದಿಕ್ಕಿ ಮುನ್ನೆಡಯತೊಡಗಿದ್ದೆ. ಆದಿ ತಡೆಯುವಂತೆ ನನ್ನ ಕೊರಳ ಪಟ್ಟಿಯನ್ನು ಹಿಡಿದು ಎಳೆದ. ಅದರ ರಭಸಕ್ಕೆ ನಾನು ದೊಪ್ಪನೆ ಆತನ ಮೇಲೆರಗಿ ಬಿದ್ದೆ.

'ಡೋಂಟ್ ವರಿ ಮಚಿ .. ಡಿಬಾರ್ ಆದ್ರೆ ನಾನ್ ನಿಂಗೆ ಕೆಲ್ಸ ಕೊಡ್ತೀನಿ.. ಗದ್ದೇಲಿ..’ ಎಂದು ಕೊಂಚ ಸುಮ್ಮನಾಗಿ ‘ಅಮ್ಮ ಮಗ್ಳು ಇಬ್ರನ್ನೂ ಅಲ್ಲಿ ಕೆಲ್ಸಕ್ಕೆ ಸೇರಿಸ್ಕೊಬೇಕು .. ನೀನೆ ಮೇಸ್ತ್ರಿ..' ಎಂದು ಆತ ಕಿಸಕಿಸನೇ ನಕ್ಕರೆ ಅತ್ತಕಡೆ ಮನೆಯೊಳಗಡೆಯ ಲೈಟುಗಳು ಒಂದೊಂದಾಗಿಯೇ ಹೊತ್ತಿಕೊಂಡವು. ಮನೆಯ ಲೈಟುಗಳ ಹೊಳಪು ಬಾಲಮುದುಡಿ ಕುಯಿಂಗುಡುತ್ತಿದ್ದ ನಾಯಿಗಳಿಗೆ ಎಲ್ಲಿಲ್ಲದ ಬಂಡ ಧೈರ್ಯವನ್ನು ತಂದುಕೊಟ್ಟವು. ಕೂಡಲೇ ಕಿವಿಯ ಟಮಟೆಯೇ ಹರಿದು ಹೋಗುವಂತೆ ಬೊಬ್ಬಿಟ್ಟ ಅವುಗಳ ಸದ್ದು ಇಡೀ ಪ್ರದೇಶದಲ್ಲಿ ಮಾರ್ದನಿಸತೊಡಗಿತು.

'ಆದಿ, ಯಾವ್ ಪ್ರಾಣಿಗಳೂ ಅವು .. ಹುಲಿಗಳ ಆತ್ಮ ಮೈಮೇಲೆ ಬಂದಿರೋ ಹಾಗೆ ಕೂಗ್ತಾ ಇದ್ದವಲ್ಲೋ' ಎಂದ ಲೋಕಿ ಇತ್ತ ತಿರುಗಿದರೆ ಆತನಿಗೆ ನಾವುಗಳು ನೆಲದ ಮೇಲೆ ಬಿದ್ದಿರುವುದು ತಿಳಿಯಲಿಲ್ಲ. ನಾವು ಅಲ್ಲಿಂದ ಓಡಿರಬೇಕೆಂದುಕೊಂಡ ಆತ, 'ಬಡ್ಡಿಮಕ್ಳ, ನಿಲ್ರೋ .. ಓಡ್ಬೇಡಿ' ಎಂದು ಆತನೂ ಓಡಲು ಅಣಿಯಾಗಿ ನನ್ನ ಕಾಲು ಆತನಿಗೆ ತಡೆಯಾಗಿ ಮುಗ್ಗರಿಸಿ ದೊಪ್ಪನೆ ನೆಲದ ಮೇಲೆ ಬಿದ್ದ.

ಅದಾಗಲೇ ಯಾರೋ ಒಳಗಿನಿಂದ ಹೊರಬಂದು ನಿಂತರು. ಬಹುಷಃ ಕಾಂಪೊಂಡಿನ ಗೋಡೆಗಳು ಎತ್ತರವಿದ್ದರಿಂದಲೋ ಏನೋ ನಾವುಗಳು ಕೆಳಗೆ ಬಿದ್ದು ಕೊಸರಾಡುತ್ತಿದ್ದದ್ದು ಅವರಿಗೆ ಕಾಣಲಿಲ್ಲ. ಆದಿ ಲೊಕೇಶನ ಬಾಯಿಯನ್ನು ತನ್ನ ಎರಡೂ ಕೈಗಳಿಂದ ಮುಚ್ಚಿ ಹಿಡಿದ ಸಾಹಸವಂತೂ ಅವರ್ಣನೀಯವಾದದ್ದು. ಒಂದೆರೆಡು ನಿಮಿಷ ಅಲ್ಲಿಯೇ ನಿಂತ ಅವರು ನಂತರ ಮನೆಯೊಳಗೇ ಹೋದರು. ಆದರೆ ಹೋಗುವ ಮುನ್ನ ಹುಚ್ಚು ರಕ್ಕಸರಂತೆ ಆಡುತ್ತಿದ್ದ ನಾಯಿಗಳೆರಡನ್ನೂ ಬಿಟ್ಟು ಏನೋ ವಿಚಿತ್ರವಾಗಿ ಅವುಗಳ ಕಿವಿಯಲ್ಲಿ ಹೇಳಿದರು. ಆ ನಾಯಿಗಳೂ ದೊಡ್ಡ ಗೇಟಿನ ಸರಳುಗಳ ಮದ್ಯೆಯೇ ಪವಾಡಸದೃಶ್ಯ ರೀತಿಯಲ್ಲಿ ನುಗ್ಗಿ ಹೊರಬಂದು ನಮ್ಮೆಡೆಗೆ ಬೌಗುಡತೊಡಗಿದವು. ಅಮಲಿನ ಅರೆಪ್ರಜ್ಞನಾಗಿದ್ದ ನಾನು ಉಳಿದ ಪ್ರಜ್ಞೆಯನ್ನು ಒಟ್ಟುಗೂಡಿಸಿ ನಾಯಿಗಳು ಅದೆಷ್ಟೇ ಕಿರುಚಾಡಿದರೂ ಅಲುಗಾಡಗೆ ಸುಮ್ಮನೆ ಇದ್ದುಬಿಡಬೇಕೆಂದು ಇಬ್ಬರಿಗೂ ಹೇಳಿದೆ. ಆಶ್ಚರ್ಯವೇನೋ ಎಂಬಂತೆ ಲೊಕೇಶನೂ ನನ್ನ ಮಾತನ್ನು ಕೇಳುವವನಂತೆ ಕಂಡ. ಜೀವವಿರದ ಕಲ್ಲಿನ ಬಂಡೆಗಳಂತೆ ಬಿದ್ದಿದ್ದ ನಮ್ಮನ್ನು ಕಂಡು ಅಕ್ಷರ ಸಹ ಕನ್ಫ್ಯೂಸ್ ಆದ ನಾಯಿಗಳು ಏನು ಮಾಡಬೇಕೆಂದು ತೋಚದೆ ಕಕ್ಕಾಬಿಕ್ಕಿಯಾಗಿ ಒಂದರ ಮುಖವನ್ನು ಮತ್ತೊಂದು ನೋಡತೊಡಗಿದವು. ರಾತ್ರಿಯ ನೀರವ ಮೌನ ಮತ್ತೊಮ್ಮೆ ಅಲ್ಲಿ ಆವರಿಸಿ ಇನ್ನೇನು ಅವುಗಳು ತಮ್ಮ ಸ್ವಸ್ಥಾನಕ್ಕೆ ಹೋಗಬೇಕು ಎನ್ನುವಷ್ಟರಲ್ಲಿ ಕಿಸಕ್ಕನೆ ನಕ್ಕ ಲೋಕೇಶ! ಬಲ ತಿರುವಿಕೊಂಡು ರಾಜನೆಡೆಯನ್ನು ಇಡುತ್ತಿದ್ದ ಅವುಗಳಿಗೆ ಲೊಕೇಶನ ನಗುವ ಸದ್ದು ನಮ್ಮ ಇರುವುಕೆಯನ್ನು ಖಾತ್ರಿ ಪಡಿಸಿತ್ತಲ್ಲದೆ ಆ ಸದ್ದು ನಮ್ಮನ್ನು ಮೂದಲಿಸಲು ಮೂಡಿರುವುದೇನೋ ಎಂಬಂತೆ ಕೆಂಡಾಮಂಡಲವಾದ ನಾಯಿಗಳು ನಮ್ಮನ್ನು ನುಂಗೇ ಬಿಡುತ್ತವೆನ್ನುವ ಧಾಟಿಯಲ್ಲಿ ಚೀರುತ್ತಾ ಮುನ್ನುಗ್ಗತೊಡಗಿದವು. ಅವುಗಳ ಆ ರುದ್ರವಾತಾರವನ್ನು ನೋಡಲಾಗದೆ ಎಂಬಂತೆ ನಾನು ಹಾಗು ಆದಿ ಜಾಗವನ್ನು ಒಂದೇ ಕುಪ್ಪಳದಲ್ಲಿ ಖಾಲಿಮಾಡಿದರೆ ಲೋಕೇಶ ಮಾತ್ರ ನೆಲದ ಮೇಲೆಯೇ ಕೂತಿದ್ದ. ನಾವುಗಳು ಅದೇನೇ ಅರಚಿದರೂ ಆತ ಅಲ್ಲಿಂದ ಕದಲಲಿಲ್ಲ. ಎರಡು ನಾಯಿಗಳಲ್ಲಿ ಬಲು ಎತ್ತರದ ಒಂದು ಇನ್ನೇನು ಬಂದು ಲೊಕೇಶನ ಭುಜಕ್ಕೆ ಬಾಯಿಯಾಕಿ ಎಳೆಯಬೇಕು ಎನ್ನುವಷ್ಟರಲ್ಲಿ ಕ್ಷಣಮಾತ್ರದಲಿ ಚಂಗನೆ ಎದ್ದುನಿಂತ ಲೋಕೇಶನ ಬಂಗಿಯನ್ನು ಕಂಡು ತಮ್ಮ ಅರಚುವ ಶಕ್ತಿಯನ್ನೆಲ್ಲ ಕಾಲಿಗೆ ಬ್ರೇಕ್ ಹಾಕುವುದರಲ್ಲಿ ಅವುಗಳು ವ್ಯಯಿಸಿದವು. ಲೋಕೇಶ ಯುದ್ಧಕ್ಕೆ ಅಣಿಯಾಗುವ ಉನ್ಮಾದಭರಿತ ಸೈನಿಕನಂತೆ ನಿಂತರೆ ಅವುಗಳಿಗೆ ಯಾವ ಪ್ರತಿಕ್ರಿಯೆಯನ್ನು ಕೊಡಬೇಕೆಂದು ಬಹುಷಃ ತಿಳಿಯಲಿಲ್ಲ. ಸಾಲದಕ್ಕೆ ಮನೆಯೊಳಗಿನ ಲೈಟುಗಳೂ ಆಗಲೇ ಆಫ್ ಆದವು. ಇಡೀ ಏರಿಯಾದಲ್ಲಿ ಕೇವಲ ಧ್ವನಿಯಿಂದಲೇ ಭಯವನ್ನು ಸೃಷ್ಟಿಸಿದ್ದ ನಾಯಿಗಳಿಂದು ಎಲ್ಲಿ ಇತರ ನಾಯಿಗಳ ಆಗಮವಾಗಿ ಅವುಗಳ ಮುಂದೆ ತಮ್ಮ ಹವಾ ಕಡಿಮೆಯಾಗುವುದೋ ಎಂಬಂತೆ ಕೂಡಲೇ ಅಲ್ಲಿಂದ ಜಾಗವನ್ನು ಕಿತ್ತವು.

ಮರುದಿನ ಬೆಳಗ್ಗೆ ಎದ್ದು ಒಬ್ಬರನೊಬ್ಬರ ಮುಖವನ್ನು ನೋಡಿದರೆ ಕರಿದ ಬೋಂಡಗಳಂತೆ ಅಲ್ಲಲ್ಲಿ ಕೆಂಪಗಿನ ಕಲೆಗಳು ಮೂಡಿದ್ದವು. ಬಟ್ಟೆಗಳೆಲ್ಲ ಹರಿದು ಕೊಳಕು ಮುದ್ದೆಯಾಗಿದ್ದವು. ಲೊಕೇಶನ ಕೈ ತೆರಚಿ ಕೆಂಪಾಗಿದ್ದರೆ ಹಣೆಯಲ್ಲಿ ರಕ್ತ ಹೆಪ್ಪುಗಟ್ಟಿದಂತೆ ಕಾಣುತ್ತಿತ್ತು. ನಾಯಿಗಳು ಅಲ್ಲಿಂದ ಜಾಗ ಕಿತ್ತ ಮೇಲೆ ಹೇಗೆ ರೂಮನ್ನು ತಲುಪಿದೆವು ಎಂದು ಯಾರೊಬ್ಬರಿಗೂ ನೆನಪಿಲ್ಲ. ಮೊದಲಬಾರಿಗೆ ಎಂಬಂತೆ ಬಿಯರ್ ಅನ್ನು ಬಿಟ್ಟು ಬೇರೆ ಬ್ರಾಂಡಿನ ಆಲ್ಕೋಹಾಲ್ ಗಳನ್ನು ಕುಡಿಯಲು ಪ್ರಯತ್ನಿಸಲೋಗಿ ಆದ ವಿಪತ್ತು ನಮ್ಮ ತಲೆಯನ್ನು ತಗ್ಗಿಸುವಂತೆ ಮಾಡಿತು. ಕಾಲೇಜಿನ ನಾಟಕ ಮಂಡಳಿಯ ಅಧ್ಯಕ್ಷನಗಾಗುವ ಅವಕಾಶವಿರುವ ನನಗೆ ಎಲ್ಲಿಯಾದರೂ ಈ ರೀತಿ ಕುಡಿದ ನಶೆಯಲ್ಲಿ ಯಾರಿಗಾದರೂ ಸಿಕ್ಕಿಕೊಂಡರೆ ಏನು ಗತಿ ಎಂದು ಯೋಚಿಸಿಯೇ ಮೈ ಜುಮ್ಮೆನಿಸಿತು. ಉಷಾ ತನಗೆ ಎಲ್ಲರ ಸಮ್ಮುಖದಲ್ಲೇ ಪೊರ್ಕಿ ಎಂದು ಬೈದ ಸಿಟ್ಟಿನ ಅಚಾತುರ್ಯದಲ್ಲಿ ಲೋಕೇಶ ಸಿಕ್ಕ ಸಿಕ್ಕಿದ್ದನ್ನೆಲ್ಲ ಕುಡಿದದ್ದು ನಮ್ಮ ಈ ಗತಿಗೆ ಕಾರಣವಾಯಿತು. ಆತ ತೊಟ್ಟ ಶೂಗಳನ್ನು ಮೊದಲ ಬಾರಿಗೆ ಎಂಬಂತೆ ರೂಮಿನೊಳಗೆ ತಂದು ಹಾಗೆಯೆ ಮಲಗಿದ್ದರೆ, ಆದಿ ಬಹಳ ಪ್ರಯತ್ನ ಮಾಡಿ ಹೊಟ್ಟೆಯೊಳಗೇ ತಡೆದಿದ್ದ ಎಲ್ಲವನ್ನೂ ಮಲಗಿದ್ದ ದಿಂಬಿನ ಮೇಲೆಯೇ ಕಕ್ಕಿಕೊಂಡಿದ್ದ. ಅಮಾಯಕನಂತೆ ಮುದುಡಿ ಮಲಗಿದ್ದ ಅವನನ್ನು ಬಚ್ಚಲುಮನೆಗೆ ತಂದು ಸ್ನಾನ ಮಾಡಿಸಿ ಮಲಗಿಸಿದೆವು. ಲೊಕೇಶನ ಗಾಯಗಳಿಗೆ ಬ್ಯಾಂಡೇಜನ್ನು ಹಾಕಿ ಕಣ್ಣ್ಮುಚ್ಚಿದವನಿಗೆ ಎಚ್ಚವಾದಾಗ ಅದಾಗಲೇ ಸಂಜೆ ಏಳಾಗಿದ್ದಿತು! ಲೋಕಿ ಮೊದಲ ಬಾರಿಗೆ ಎಂಬಂತೆ ತನಗೆ ತಿಳಿದ ಮಟ್ಟಿಗೆ ಮಾಡಿದ ಟೀಯನ್ನು ನಮ್ಮ ಮುಂದೆ ತಂದಿಟ್ಟ. ಮೂವರು ಒಂದಿನಿತು ಮಾತನಾಡದೆ ಕುಡಿದು ಸುಮ್ಮನೆ ಕೂತೆವು.

'This is it!.. ಇನ್ ಮುಂದೆ ಯಾವತ್ತೂ ಆ ಹಾಳದನ್ನ ಕುಡೀಬಾರ್ದು.. ಎನಿ ಟೈಮ್ .. ಎನಿ ವೇರ್ ..' ನಾನಂದೆ.

'ಸಾಯೋವರ್ಗು ನಾನ್ ಯಾವದೇ ಡ್ರಿಂಕ್ಸ್ನ ಮುಟ್ಟಲ್ಲ .. ಬಿಯರ್ ಒಂದನ್ನು ಬಿಟ್ಟು' ಎಂದು ತನ್ನ ತಲೆಯ ಮೇಲೆ ಕೈಯಿಟ್ಟು ಹೇಳಿದ ಲೊಕೇಶನನ್ನು ನಾನು ಹಾಗು ಆದಿ ದುರುಗುಟ್ಟಿ ನೋಡಿದೆವು.

'ಮಕ್ಳ .. ನೆನ್ನೆ ರಾತ್ರಿ ಅದ್ ಯಾರ್ ಮನೆ ಮುಂದೋ ನಾವು ಹಾಗೆ ಅರ್ಚಾಡಿದ್ದು? ಇವ ಅದೇ ಉಷಾಳ ಮನೆ ಅನ್ಕೊಂಡಿದ್ದ. ಅವ್ರ್ ಮನೆ ಇರೋದು ಇಲ್ಲಿಂದ ಮೂರ್ ಕಿಲೋಮೀಟರ್ ದೂರ್ದಲ್ಲಿ.. ಆಕಡೆ .. ನಾವ್ ಬಂದಿದ್ದು ಎಕ್ಸಾಕ್ಟ್ಲಿ ಅಪೋಸಿಟ್ ಕಡೆಯಿಂದ ' ಎಂದು ಆದಿ ಹೇಳಿದ ಕೂಡಲೇ ಜಾಗೃತರರಾದ ನಾನು, 'ಶಿಟ್ .. ನಾವೇನಾದ್ರು..' ಎಂದು ಆತಂಕದಿಂದ ಹೇಳಿದೆ. ಕೂಡಲೇ ದಡಬಡನೆ ಮೂವರು ಎದ್ದು ಒಂದು ಅಂದಾಜಿನ ಮೇಲೆ ನೆನ್ನೆ ರಾತ್ರಿ ಬಿದ್ದು ಒರಳಾಡಿದ ಜಾಗದ ತುಸು ದೂರಕ್ಕೆ ಬಂದು ನಿಂತೆವು. ಹದಿನೇಳನೇ ಶತಮಾನದ ಯಾರು ವಾಸಿಸದ ಹಾಳು ಬಂಗಲೆಯದು. ನಗರದ ಏಕ ಮಾತ್ರ ಹಳೆಯ ಕಟ್ಟಡ. ಗಾಳಿ ನೀರು ಬೆಳಕಿಲ್ಲದ ಅದನ್ನು ಈಗ ಸರ್ಕಾರವೇ ಮುಚ್ಚಿ ಹಾಕಿದೆ. ಎಲ್ಲೆಂದರಲ್ಲಿ ಹುಲ್ಲು ಪೊದೆಗಳು ಬೆಳೆದಿರುವ ಅದರಲ್ಲಿ ನೆನ್ನೆಯ ರಾತ್ರಿ ಲೈಟುಗಳು ಆನ್ ಆದದ್ದಾದರೂ ಹೇಗೆ. ಅದ್ಯಾರು ಅಲ್ಲಿಂದ ಹೊರಬಂದು ನಾವು ಬಿದ್ದಿರುವುದನ್ನೇ ನಿಂತು ಕೆಲ ಕಾಲ ನೋಡಿದರು. ತಮ್ಮ ಗಂಟಲೇ ಬಿರಿಯುವಂತೆ ಅರಚುತ್ತಿದ್ದ ಆ ನಾಯಿಗಳಾದರೂ ಎಂಥವು? ಎಂಬೆಲ್ಲ ನಡುಕಹುಟ್ಟಿಸುವ ಪ್ರೆಶ್ನೆಗಳು ಮೂಡುತ್ತಿರುವಾಗಲೇ ನಮ್ಮ ಪಕ್ಕದಲ್ಲಿದ್ದ ಮರದ ಮೇಲಿಂದ ಏನೋ ಜಾರಿದಂತಹ ಸದ್ದಾಯಿತು. ಇದ್ದೆವೋ ಬಿದ್ದೆವೋ ಎನುತ ಅಲ್ಲಿಂದ ಓಡಹತ್ತಿದವರು ನಿಂತದ್ದು ರೂಮಿಗೆ ಬಂದು ಬಾಗಿಲನ್ನು ಹಾಕಿದ ಮೇಲೆಯೇ!



****



'ನನ್ನ್ ಮಕ್ಳ, ಬಿಟ್ಟ್ ಬಿಡ್ರೋ ಲೇ .. ಪ್ಲೀಸ್..' ಆದಿ ಗೋಗರೆದ.

ದೂರದಿಂದ ನುಣ್ಣಗೆ ಕಾಣುವ ಬೆಟ್ಟವನ್ನು ಕ್ಷಣಮಾತ್ರದಲ್ಲಿ ಹತ್ತಿ ಬೀಗುವೆ ಎಂದು ಮುನ್ನೆಡೆದ ಆತ ಭೀಮಕಾಯದ ಬೆಟ್ಟ ಹತ್ತಿರವಾದಂತೆ ತನ್ನ ಜಂಘಾಬಲವೆಲ್ಲ ಕಮರಿದಂತಾಗಿ ಕೂಡಲೇ ಅಲ್ಲಿಂದ ಜಾಗ ಕೀಳಲು ಅವಣಿಸತೊಡಗಿದ. ಲೋಕೇಶ ಆತನನ್ನು ಅಣಕಿಸುತ್ತಾ 'ಬೆಟ್ಟದ್ ಮೇಲಿಂದ ಒಳ್ಳೆ ಸೀನರಿ ಕಾಣುತ್ತೆ ಮಚಿ, ಅಲ್ಲಿ ಇಯರ್ ಫೋನನ್ನು ಕಿವಿಗೆ ಹಾಕಿ ಹಾಡನ್ನು ಕೇಳುತ್ತಾ ಕೂತರೆ ನಿಂಗೆ ಸ್ವರ್ಗ ಕೈಗೆಟುಕಲು ಮೂರೇ ಮೂರು ಮಿಲಿಮೀಟರ್ ಎಂದು..' ಹೇಳುತ್ತಾನೆ. ಆದರೆ ಅದೆಷ್ಟೇ ಪುಸಲಾಯಿಸಿದರೂ ಕಾಲು ಕಿಲೋಮೀಟರ್ನಷ್ಟು ಅಗಲವಾದ ರುದ್ರರಮಣೀಯ ಬೆಟ್ಟ ಎಂತವರಿಗೂ ಒಮ್ಮೆ ಮೈನಡುಕವನ್ನು ಹುಟ್ಟಿಸು ವುದು ಸುಳ್ಳಲ್ಲ.

ಅದು ಮೆಳೆಗಾಲವಾದದ್ದರಿಂದ ಹಸಿರುಗಟ್ಟಿದ ಪಾಚಿ ಎಲ್ಲೆಂದರಲ್ಲಿ ಬೆಳೆದು ಕಾಲಿಟ್ಟಲ್ಲೆಲ್ಲ ಜಾರುತ್ತಿತ್ತು. ಒಬ್ಬರ ಕೈಯೊಬ್ಬರು ಹಿಡಿದುಕೊಂಡು ಭಯಪಡುತ್ತಲೇ ಬೆಟ್ಟದ ತುದಿಯನ್ನು ಕಷ್ಟಪಟ್ಟು ತಲುಪುವಷ್ಟರಲ್ಲಿ ಆ ಚಳಿಯಲ್ಲೂ ಮೈಯಲ್ಲ ಬೆವತಂತಿತ್ತು. ಆದರೆ ಹತ್ತುವಾಗ ಉಂಟಾದ ಆ ಉದ್ವೇಗ ಬೆಟ್ಟದ ತುದಿಯನ್ನು ತಲುಪಿದಾಗ ಮಾತ್ರ ಮಾಯವಾಯಿತು. ಎಲ್ಲೆಂದರಲ್ಲಿ ಕಾಣುವ ಆ ಹಚ್ಚ ಹಸಿರು, ತುಂತುರು ಮಳೆಯ ಹಾಡು, ಬೆಳ್ಳನೆಯ ಹೊದಿಕೆಯಂತಾವರಿಸಿರುವ ಮೋಡಗಳು, ಹಕ್ಕಿಗಳ ನಾದಮಯ ಪರಿಸರ ಎಲ್ಲವು ಸೇರಿ ಅಂದು ದ್ವಾರಸಮುದ್ರದ ದೇವಾಲಯದ ಒಳಗೆ ಮೂಡಿದ ಶಾಂತತೆಯೇ ಇಲ್ಲಿಯೂ ಮೂಡಿತು. ಮೈಕೊರೆಯುವ ಗಾಳಿಗೂ ನನಗೂ ಅದೇನೋ ಒಂದು ಬಗೆಯ ಅವಿನಾಭಾವ ಸಂಬಂಧವಿರುವಂತೆ ಭಾಸವಾಯಿತು. ಎಳೆಯ ಮುದ್ದಾದ ನಾಯಿಮರಿಗಳು ನಮ್ಮ ಕೈಕಾಲುಗಳನ್ನು ಕಚ್ಚುತ್ತಾ, ಮೈಯನ್ನು ತಿವಿಯುತ್ತಾ ಚಿನ್ನಾಟವಾಡುತ್ತಾ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವಂತೆ ಗಾಳಿಯೂ ನನ್ನೊಟ್ಟಿಗೆ ಆಡಿ ನಲಿಯುತ್ತಿದೆ ಎಂದೆನಿಸಿತು. ಕೂಡಲೇ ಮನದೊಳಗೆ ಮೂಡಿದ ಆ ಅಮೂರ್ತ ಖುಷಿಗೆ ಕಣ್ಣು ತುಂಬಿ ಬಂದಿತು. ಅತ್ತಷ್ಟೂ ಮನಸ್ಸು ನಲಿಯತೊಡಗಿತು. ಆದಿ ಹಾಗು ಲೋಕೇಶ ದೂರದಲ್ಲಿ ಅಸ್ಪಷ್ಟವಾಗಿ ಕಾಣುತ್ತಿದ್ದ ನಮ್ಮ ಕಾಲೇಜನ್ನು ನೋಡಿ ಅದೇನನ್ನೋ ವಾದಿಸುತ್ತಿದ್ದರು. ಕೊಂಚ ಸಮಯದ ನಂತರ ಆದಿ ತನ್ನ ಇಯರ್ ಫೋನನ್ನು ಕಿವಿಯೊಳಕ್ಕೆ ತೂರಿಕೊಂಡು ಕಲ್ಪನಾ ಲೋಕದಲ್ಲಿ ಮರೆಯಾದರೆ 'ಹೂವೆ .. ಹೂವೆ..ನಿನ್ನೀ ನಗುವಿಗೆ ಕಾರಣವೇನೇ' ಹಾಡನ್ನು ತನ್ನ ಲೌಡ್ ಸ್ಪೀಕರ್ನಲ್ಲಿ ಹಾಕಿ ಲೋಕೇಶ ಸಣ್ಣ ಸಣ್ಣ ಜಾತಿಯ ಹೂವುಹಣ್ಣುಗಳ ಫೋಟೋಗಳನ್ನು ತೆಗೆಯತೊಡಗಿದ.

ಸಮಯ ಹೇಗೆ ಜಾರಿತೋ ತಿಳಿಯಲೇ ಇಲ್ಲ. ಹತ್ತುವಾಗ ಮೌಂಟ್ ಎವರೆಸ್ಟ್ ಬೆಟ್ಟವನ್ನು ಏರುವಂತೆ ತಿಣುಕಾಡಿದ ಆದಿ ಇಳಿಯುವಾಗಂತೂ ತನ್ನ ಕಾಲಿನ ಕೀಲಿಗಳೇ ಉದುರಿವೆಯೋ ಎಂಬಂತೆ ಆಡಿದ. ಆದರೂ ತಿಂಗಳಿಗೆ ಕನಿಷ್ಠ ಒಂದೆರಡು ಬಾರಿಯಾದರೂ ಇಲ್ಲಿಗೆ ಬರುವ ಒಪ್ಪಂದವನ್ನು ಎಲ್ಲರೂ ಮಾಡಿಕೊಂಡೆವು.



****



'ನೋಡ್ ಮಚಿ.. ಮಾಥ್ಸ್ ನೋಟ್ ಬುಕ್ಕು..' ಎಂದು ಕಿಂಗ್ ಸೈಜಿನ ಬುಕ್ಕೊಂದನ್ನು ನನಗೆ ತೋರಿಸುತ್ತಾ ವಿಕಾರವಾಗಿ ನಗಾಡಿದ ಲೋಕೇಶ.

ಊರೇ ಮುಳುಗಿದರೂ ತಾನು ಒಂದರೆ ಪದವನ್ನೂ ಆ ಬುಕ್ಕಿನಿಂದ ಓದುವುದಿಲ್ಲವೆಂಬುದು ಗೊತ್ತಿದ್ದರೂ ಅದು ಆತನ ಕೈಯಲ್ಲಿ ರಾರಾಜಿಸುತ್ತಿತ್ತು.. ಆದರೆ ಈ ಬಾರಿ ಅದು ಉಷಾಳ ಬುಕ್ಕಾಗಿರದೆ ಆಕೆಯ BFF ಶಶಿಕಲದಾಗಿದ್ದಿತು.

ಶಶಿಕಲ ಓದಿನಲ್ಲಿ ಹಾಗು ಕ್ಲಾಸ್ ರೂಮಿನ ಬೆಂಚುಗಳಲ್ಲಿ ಎಲ್ಲರಿಗಿಂತ ಮುಂದಿದ್ದರೂ ಯಾವೊಬ್ಬ ಹುಡುಗನೂ ಆಕೆಯನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಕಾರಣ ಆಕೆಯ ಕಪ್ಪುವರ್ಣವಾಗಿರಬಹುದು, ಕರ್ಕಶ ಧ್ವನಿಯಾಗಿರಬಹದು ಅಥವಾ ಒಂದಕ್ಕೊಂದು ಹೋಲಿಕೆಯಿರದ ಡ್ರೆಸ್ ಸೆನ್ಸ್ ಆಗಿರಬಹದು. ಕುರೂಪಿ ಎನ್ನಲಾಗದ ತೀರಾ ಸಾಧಾರಣ ಮೈಕಟ್ಟಿನ ಆಕೆ ಉಷಾಳೊಬ್ಬಳಿಗೆ ಬಿಟ್ಟರೆ ಬೇರ್ಯಾರಿಗೂ ತಿಳಿದೂ ತಿಳಿಯದಂತಿದ್ದಳು. ಲೋಕೇಶ ಅಂದಿನ ತನ್ನ ಅವಮಾನದ ಪ್ರತಿಕಾರವೆಂಬಂತೆ ಶಶಿಕಲಳನ್ನು ಮಾತನಾಡಿಸಿ ಆಕೆಯಿಂದ ನೋಟ್ ಬುಕ್ಕನ್ನು ಕೊಂಡು, ಆಕೆಯ ಈ ಸಹಾಯಕ್ಕಾಗಿ ಒಂದು ಸಣ್ಣ ಟ್ರೀಟನ್ನೂ ಕೊಡುವುದಾಗಿ ಉಷಾಳಿಗೆ ಕೇಳುವಂತೆ ಜೋರಾಗಿ ಹೇಳಿ ನನ್ನಲ್ಲಿಗೆ ಬಂದು ಕುಳಿತ. ಆದರೆ ಆತ ನಗುವಂತೆ ಕಾಣುತ್ತಿದ್ದರೂ ಕಣ್ಣುಗಳು ಮಾತ್ರ ದ್ವೇಷದ ಅಲೆಗಳನ್ನು ತೇಲಿ ಬಿಡುತ್ತಿದ್ದವು. ಪ್ರತಿ ಮಾತಿಗೂ ಉಷಾಳನ್ನು ನೋಡುತ್ತಾ ಆಕೆಯ ಪ್ರತಿಕ್ರಿಯೆಯನ್ನು ನೋಡುತ್ತಿದ್ದ ಆತ. ಆಕೆ ಇದಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಎಂದಿನಂತೆಯೇ ಸಹಜವಾಗಿದ್ದಳು . ಆ ಸಹಜತೆಯೇ ಲೋಕೇಶನ ದ್ವೇಷದ ಬೆಂಕಿಗೆ ಇನ್ನಷ್ಟು ಮತ್ತಷ್ಟು ತುಪ್ಪವನ್ನು ಸುರಿಯುತ್ತಿತ್ತು.

'ನೋಡ್ತಾ ಇರು ಮಚಿ .. ಇನ್ಮುಂದೆ ಉಷಾನ ಹೆಂಗೆ ಆಟ ಆಡಿಸ್ತಿನಿ ಆಂತ..' ಎಂದು ನಾನು ಅಲ್ಲಿಂದ ಎದ್ದೋಗಿರುವುದನ್ನೂ ತಿಳಿಯದೆಯೇ ಆತ ಹೇಳಿದ.

ಕೂಡಲೇ ಆತನ ಫೋನು ರಿಂಗಾಯಿಸಿತು. ಅದು ಆತನ ಗದ್ದೆಯ ಮೇಸ್ತ್ರಿಯ ಫೋನೆಂದು ತಿಳಿದು ಮುಖ ಇಳಿಬಿದ್ದಿತು. ಮೇಸ್ತ್ರಿ ಆಕಡೆಯಿಂದ ಏನೋ ಹೇಳುವುದನ್ನು ಕೇಳಿ ಕಿರಿಕಿರಿಗೊಂಡ ಆತ,

'ಥು .. ರೀ .. ನಿಮ್ಗೆ ಹೇಳಿರ್ಲಿಲ್ವ .. ಯಾವದೇ ಕಾರಣಕ್ಕೂ ಕೆಮಿಕಲ್ಸ್ನ ಹಾಕ್ ಬೇಡಿ ಅಂತ.. ಸಗಣಿ ಮುಟ್ಟೂಕ್ಕೆ ಹೇಸಿಗೆ ಆಗುತ್ತೆ ಅಂದ್ರೆ ಅವ್ರಿಗೆ ಕಿಂಗ್ ಫಿಷರ್ ಕ್ಯಾಲೆಂಡರ್ಗೆ ಪೋಸ್ ಕೊಡೋಕ್ ಹೇಳಿ 'ಎಂದು ಅರಚಿದ. ಬಹುಷಃ ಕಿಂಗ್ ಫಿಷರ್ ಕ್ಯಾಲೆಂಡರ್ ಎಂದರೆ ಏನೆಂದು ತಿಳಿಯದ ಮೇಸ್ತ್ರಿ ಲೋಕೇಶನ ಬೈಗುಳವನ್ನೂ ಲೆಕ್ಕಿಸದೆ 'ದಿನಕ್ಕ್ ಎಷ್ಟ್ ಕೊಡ್ತಾರೆ ಸರ್..' ಎಂದ. ಕೊಡಲೇ ಲೊಕೇಶನ ಕೋಪ ವಿಪರೀತವಾಯಿತು. 'ರೀ .. ಏನ್ ಆಟ ಆಡ್ತಾ ಇದ್ದೀರಾ .. ಇನ್ ಅರ್ದ ಘಂಟೇಲಿ ನಂಗೆ ಸಗಣಿ ಗೊಬ್ಬರ ಬೇಕು..! ನಾನೇ ಬಂದ್ ಹಾಕ್ತಿನಿ .. ಇರೋರ್ ಬೇಕಾದ್ರೆ ಇರ್ಬಹುದು , ಬೇಡದವ್ರು ಹೊರಡಬಹುದು' ಎಂದೇಳಿ ಶರವೇಗದಲ್ಲಿ ಅತ್ತಕಡೆಯಿಂದ ಕ್ಲಾಸ್ ರೂಮಿನ ಒಳಗೆ ಬಂದ ಲೆಕ್ಚರೆರ್ನನ್ನೂ ಲೆಕ್ಕಿಸದೆ ಹೊರನಡೆದ. ಈತನ ವೇಗಕ್ಕೆ ಅವರೂ ದಾರಿ ಸರಿದು ಪಕ್ಕಕೆ ನಿಂತರು.



ಮುಂದುವರೆಯುವುದು...

ಪಯಣ - 7

'ಗುಡ್ ಮಾರ್ನಿಂಗ್ ಸರ್…' ಬೆಳ್ಳನೆ ನರಪಿಳ್ಳೆಯಂತಿದ್ದ ಫ್ರೆಷೆರ್ ಗ್ರೂಪಿನ ಹುಡುಗನೊಬ್ಬ ಲೋಕೇಶನನ್ನು ನೋಡಿ ಸೆಲ್ಯೂಟನ್ನು ಹೊಡೆದ.


ಬಹುಷಃ ಎಲ್ಲೋ ಒಬ್ಬನೇ ಪಾಪದ ಆಸಾಮಿ ಸಿಕ್ಕಾಗ ಸಿಕ್ಕಿದ್ದೇ ಚಾನ್ಸು ಎನುತ ragging ನ ಹೆಸರಿನಲ್ಲಿ ಈತ ಹಾಕಿ ರುಬ್ಬಿರಬೇಕು ಹಾಗಾಗಿ ಆತ ಅಷ್ಟೊಂದು ನಯನಾಜೂಕಿನಲ್ಲಿ 'ಗುಡ್ ಮಾರ್ನಿಂಗ್ ಸರ್..' ಎಂದಿರಬೇಕೆಂದು ಎಂದು ನಾನಂದುಕೊಂಡೆ. ಆದರೆ ತುಸು ದೂರ ನೆಡೆದ ನಂತರ ಒಂದು ಗುಂಪಿನಲ್ಲಿದ್ದ ಹತ್ತಾರು ಹುಡುಗ ಹುಡುಗಿಯರೂ ಒಟ್ಟಾಗಿ ಗುಡ್ ಮಾರ್ನಿಂಗ್ ಸರ್ ಎಂದು ರಾಗವನ್ನು ಎಳೆದರು. ಲೋಕೇಶ ನಸುನಕ್ಕು ಸುಮ್ಮನಾದ.


'ಅದ್ಯಾವಾಗ್ಲೋ , ಅಷ್ಟೂ ಜನಕ್ಕೆ ಒಟ್ಟಿಗೆ ragging ಮಾಡಿದೆ?' ಆಶ್ಚರ್ಯಚಕಿತನಾಗಿ ನಾನು ಕೇಳಿದೆ.


'ಲಾಸ್ಟ್ ವೆಡ್ಸ್ಡೇ .. ಮಾರ್ನಿಂಗ್ ಅವರ್ಸ್ ನಲ್ಲಿ' ನಗುತ್ತಾ ಆತ ಉತ್ತರಿಸಿದ.


'ಮಾರ್ನಿಂಗ್ ಅವರ್ಸ?!'


'ಹೂ ಗುರು .. ಮಾರ್ನಿಂಗ್ ಅವರ್ಸೆ.. ರೆಗ್ಯುಲರ್ ಕ್ಲಾಸ್ ಟೈಮಿಂಗ್ಸ್ ಅಲ್ಲೇ ' ಎಂದು,





**


ಈತ ಅಂದು ಕೆಮಿಸ್ಟ್ರಿ ಲ್ಯಾಬಿನ ಕಾರಿಡಾರ್ನಲ್ಲಿ ನೆಡೆದುಕೊಂಡು ಹೋಗುತ್ತಿರಬೇಕಾದರೆ ಕೆಸರುಗದ್ದೆಯ ಕಪ್ಪೆಗಳಂತೆ ವಟಗುಡುತ್ತಿದ್ದ ಫ್ರೆಷೆರ್ಸ್ ಕ್ಲಾಸ್ಸನ್ನು ನೋಡಿ ಅದೇ ಸುಸಮಯವೆಂದುಕೊಂಡು, 'ಮಕ್ಳ ಇದೆ ನಿಮ್ಗೆ ಹಬ್ಬ' ಎಂದು ತನ್ನ ಮನದಲ್ಲೇ ಅಂದುಕೊಂಡು ಕಾಲರ್ಡ್ ಟಿ-ಶರ್ಟ್ ಅನ್ನು ತನ್ನ ಜೀನ್ಸ್ನೊಳಗೆ ತುಂಬಿ ಟಿಪ್-ಟಾಪಾಗಿ ಕ್ಲಾಸ್ ರೂಮಿನ ಸ್ಟೇಜ್ ಮೇಲೆ ಹೋಗಿ ಸುಮ್ಮನೆ ನಿಂತನಷ್ಟೇ, ಕರೆಂಟು ತಗುಲಿದ ವಾನರರಂತೆ ತಮ್ಮ ತಮ್ಮ ಚಿತ್ರ-ವಿಚಿತ್ರ ಭಂಗಿಯಲ್ಲಿ ಅಂತಂತೆಯೇ ಕಲ್ಲುಗಟ್ಟಿಹೋದರು ಕ್ಲಾಸ್ಸಿನ ಅಷ್ಟೂ ಮಂದಿ ಹೊಸ ಬ್ಯಾಚಿನ ಪೋರ ಪೋರಿಯರು. ಕೆಲವರ ಬಾಯಿ ಊರಗಲದಷ್ಟು ತೆರೆದಿದ್ದರೆ, ಕೆಲವರ ಕೈ ತಲೆಯನ್ನು ಕೆರೆಯುತ್ತಾ ಹಾಗೆಯೆ ಅಂಟಿಕೊಂಡಿತ್ತು. ಕೆಲವರು ಡೆಸ್ಕ್ನ ಮೇಲೆ ವಸ್ತ್ರ ಧರಿಸಿದ ಗೊಮ್ಮಟೇಶ್ವರನಂತೆ ನಿಂತಿದ್ದರೆ, ಕೆಲ ಹುಡುಗರು ಹುಡುಗಿಯರ ಬೆಂಚುಗಳಿಂದ ನಿಧಾನವಾಗಿ ಹೊರಬರತೊಡಗಿದರು..! ತಾನು ಯಾರೆದು ಅವರಿಗೆ ನಯ ಪೈಸೆಯಷ್ಟು ಗೊತ್ತಿಲ್ಲ. ಸ್ಟೇಜಿನ ಮೇಲೆ ಬಂದು ನಿಲ್ಲುವವರೆಲ್ಲ ಶಿಕ್ಷಕರೇ ಅವಕ್ಕೆ! ಸಮಯವನ್ನು ಸದುಪಯೋಗ ಪಡಿಸಿಕೊಂಡ ಲೋಕೇಶ 'I Said, stand up' ಎಂದು ಜೋರಾಗಿ ಅರಚಿದ.. ಸಂತೆ ಮಾರ್ಕೆಟಿನ ವ್ಯಾಪಾರಿಗಳಂತೆ ಅರಚುತಿದ್ದ ಕ್ಲಾಸ್ಸು ಅಕ್ಷರ ಸಹ ಪಾಪದ ಮೂಕ ಪ್ರಾಣಿಗಳಂತಾಗಿ ಎದ್ದು ನಿಂತಿತ್ತು. ಕೊನೆಯ ಬೆಂಚಿನ ಕೆಲ ಹುಡುಗರು ತಾವು ಏನೋ ಮಹಾಪರಾದವನ್ನು ಮಾಡಿರುವಂತೆ ತಲೆಯನ್ನು ತಗ್ಗಿಸಿಕೊಂಡರು.


'ಲಾಸ್ಟ್ ಬೆಂಚ್ ಕಮ್ ಫಸ್ಟ್ .. ಫಸ್ಟ್ ಬೆಂಚ್ ಗೋ ಲಾಸ್ಟ್' ಎಂದು ಅತಿ ಗಡುಸಾಗಿ ಹೇಳಿದ ಲೋಕೇಶ. ಆತ ಹೇಳಿ ಮುಗಿಸುವ ಮೊದಲೇ ವಿನಿಮಯ ಪ್ರಕ್ರಿಯೆ ಶರವೇಗದಲ್ಲಿ ಪೂರ್ಣಗೊಂಡಿತ್ತು. ನಂತರ ಕೆಲಕಾಲ ಮೊದಲಿನ ಬೆಂಚಿನ ವಿದ್ಯಾರ್ಥಿಗಳನ್ನು ದುರುಗುಟ್ಟಿ ನೋಡತೊಡಗಿದ. ಪಾಪ ಅವರು ಅಳುವುದೊಂದೇ ಬಾಕಿ ಏನೋ ಎನ್ನುವಂತೆ ವರ್ತಿಸತೊಡಗಿದರು.


'So, class..' ಎಂದು ಕೊನೆಗೂ ಏನೋ ಹೇಳುವಂತೆ ಶುರು ಮಾಡಿದ. ವಿದ್ಯಾರ್ಥಿಗಳು ಆತ ಹೇಳದಿದ್ದರೂ ಟಕಟಕನೇ ತಮ್ಮ ನೋಟ್ ಬುಕ್ಕು ಹಾಗು ಪೆನ್ನನ್ನು ತೆಗೆದು ಕೂತರು.


'How many of you know how to do coding..?’ ಕೈಗಳನ್ನು ಹಿಂದಕ್ಕೆ ಕಟ್ಟಿ, ಇಲ್ಲದ ಸಣಕಲು ಹೊಟ್ಟೆಯನ್ನು ಸಾಧ್ಯವಾದಷ್ಟು ಮುಂಚಾಚಿ ತಲೆ ಆಕಾಶವನ್ನು ನೋಡುತ್ತಿದ್ದರೂ ಕಣ್ಣುಗಳು ಇಡೀ ಕ್ಲಾಸನ್ನೇ ನೋಡುವಂತೆ ವರ್ತಿಸತೊಡಗಿದ. ಪ್ರಶ್ನೆಯ ಉತ್ತರವಾಗಿ ಭಾಗಶಃ ಕೈಗಳು ಮೇಲ್ಬಂದವು. ಕೆಲವರು ಇಂಪ್ರೆಸ್ ಮಾಡಲು ಎಂಬಂತೆ ಎದ್ದು ನಿಂತು ಉತ್ತರಿಸಲೂ ಮುಂದಾದರು. ಸ್ಕೂಲಿನ ಚಾಳಿ ಎಂದು ಒಳಗೊಳಗೇ ನಗುತ್ತಾ ಸುಮ್ಮನಾದ ಲೋಕೇಶ.


'Then, how many of you how to do farming..?'


ಫಾರ್ಮಿನ್ಗ್ ಎಂದರೆ ಯಾವುದೂ ಕೋಡಿಂಗ್ ಲ್ಯಾಂಗ್ವೇಜ್ ಇರಬೇಕೆಂದು ಈ ಬಾರಿಯೂ ಸಾಕಷ್ಟು ಕೈಗಳು ಮೇಲ್ಬಂದವು. ಕೂಡಲೇ ತಲೆಯೊಳಗಿನ ಗಂಟೆ ಟಣ್ಣನೆ ಬಾರಿಸಿಯೋ ಏನೋ ಹಲವು ಕೈಗಳು ಪುನಃ ಕೆಳಗಿಳಿದವು. ಒಂದೆರಡು ಕೈಗಳಷ್ಟೇ ಲಂಬಕೋನದಲ್ಲಿ ನಿಂತಿದ್ದವು.


'Okay, how many of you like Pizza..?'


ಕ್ಲಾಸಿನ ಅಷ್ಟೂ ಕೈಗಳು ಮೇಲೆದ್ದವು.


'How many of you know how to make Pizza..? ' ವಿಚಿತ್ರವಾಗಿ ಮೂಡಿದ ಪ್ರೆಶ್ನೆಗೆ ಗೊಂದಲಗೊಂಡ ಮುಖಗಳು ಒಂದನೊಂದು ನೋಡಿಕೊಂಡವು. ಮೂರ್ನಾಲ್ಕು ಕೈಗಳಷ್ಟೇ ಅಲ್ಲಿ ಮೇಲ್ಬಂದವು. ಆಶ್ಚರ್ಯವೆಂಬಂತೆ ಆ ನಾಲ್ಕು ಕೈಗಳಲ್ಲಿ ಮೂರು ಕೈಗಳು ಹುಡುಗರದ್ದೇ ಆಗಿದ್ದಿತು!


'So class, what is the lesson you have learnt here?..first bench guys..?!’ ಎಂದಾಗ ಆಪತ್ಕಾಲದಲ್ಲಿ ಮೂಕಪ್ರಾಣಿಗಳು ಗುಂಪುಗಟ್ಟಿಕೊಳ್ಳುವಂತೆ ಆ ಬೆಂಚಿನ ಅಷ್ಟೂ ಹುಡುಗರು ಸಾಧ್ಯವಾದಷ್ಟು ಹತ್ತಿರತ್ತಿರಕ್ಕೆ ಜರುಗತೊಡಗಿದರು. ತಾವುಗಳ ಮದ್ಯೆ ಈಗ ಗಾಳಿಯೂ ಸಹ ನುಸುಳಲು ಸಾಧ್ಯವಿಲ್ಲವೆಂಬುದನ್ನು ಅರಿತ ಅವರು ಉತ್ತರಿಸಲು 'ನೀನು, ನೀನು' ಎಂಬಂತೆ ಒಬ್ಬರನೊಬ್ಬರು ತಿವಿಯತೊಡಗಿದರು. ಅವರ ತಲೆ ಇನ್ನೂ ಸಹ ಕೆಳಮುಖವಾಗಿಯೇ ಅಲುಗಾಡುತ್ತಿತ್ತು. ‘You red shirt..!’ ಅತ್ತಿಬ್ಬರು ಹಾಗು ಇತ್ತಿಬ್ಬರ ಒತ್ತುವಿಕೆಯಿಂದ ಬತ್ತಿದ ನಿಂಬೆಹಣ್ಣಿನಂತಾಗಿದ್ದ ಸಣಕಲು ದೇಹದ ಹುಡುಗನನ್ನು ಕೂಗಿದ ಲೋಕೇಶ. ಚಕ್ಕನೆ ಎದ್ದು ನಿಂತು ಏನೆಳಬೇಕೆಂದು ತೋಚದೆ ಬಡಬಡನೆ ತನ್ನೊಳಗೆ ತಾನೇ ಏನೇನೋ ಉದ್ಗರಿಸತೊಡಗಿದ ಆತ.


‘Sir, pizza is good but not that good.. good is a mom made roti.. pizza, they put sauce but roti is with coconut chutney..pizza no energy but roti full energy..’


ಆತನ ಅವಸ್ಥೆಯನ್ನು ಅರಿತ ಲೋಕೇಶ 'ಗುರು, ಸಾಕು ಕೂರಪ್ಪ..' ಎಂದು ಹೇಳಿದ, ಇಡೀ ಕ್ಲಾಸೇ ಗೊಳ್ಳೆಂದು ನಗತೊಡಗಿತು. ಅದನ್ನು ಕಂಡ ಆತ,


‘Shut up, I said.. Why the hell you people are laughing at him.. Coding doesn’t feed you and make your hunger gone. You cannot eat Money to get rid of hunger. Am I right ?? Life is not only about Studying, Coding & Earning. It’s all about Living... Learning & then Living... Creator has never sent us here with a degree attached. A farmer who invents a new kind of crop & earns few bugs in a year is far better than a person who works for an overseas firm and earns a lakh per month..’


ಈ ಬಾರಿ ಲೋಕೇಶ ತುಸು ಸೀರಿಯಸ್ಸಾಗಿಯೇ ಹೇಳಿದ. ತರಗತಿ ತದೇಕಚಿತ್ತದಿಂದ ಈತನ ಮಾತುಗಳನ್ನೇ ಕೇಳುತ್ತಿದ್ದವು.


ಈಗ ಹೆಚ್ಚು ಕೊರೆಯಲು ಸಮಯವಿಲ್ಲದೆ,


‘Okay, how many of you are having girlfriends here ?’ ಹುಡುಗರನ್ನು ಉದ್ದೇಶಿಸಿ ಆತ ಕೇಳಿದ.


ಭಯದಿಂದಲೋ , ನಾಚಿಕೆಯಿಂದಲೋ ಅಥವಾ ಅದೇ ವಾಸ್ತವವೋ ಏನೋ ಒಂದೂ ಕೈಗಳು ಅಲ್ಲಿ ಮೇಲೇಳಲಿಲ್ಲ.


‘See, this is what I don’t like. Guys know how to do coding but don’t know to have a girlfriend..! if not now then when?’


ಕೋರ್ಟ್ನಲ್ಲಿ ವಾದ ಮಾಡುವ ಲಾಯರುಗಳಂತೆ ಆತ ತನ್ನೆರಡು ಕೈಗಳನ್ನು ಗಾಳಿಯಲ್ಲಿ ತೇಲಿಸುತ್ತಾ ಅರಚತೊಡಗಿದ. ತರಗತಿ ಒಮ್ಮೆ ಜೋರಾಗಿ ನಕ್ಕಿತು. ಲೊಕೇಶನೂ ಈ ಬಾರಿ ಜೊತೆಗೂಡಿದ. ಕಾರಿಡಾರಿನಲ್ಲಿ ಹೋಗುತ್ತಿದ್ದ ಬೇರೆಯ ಡಿಪಾರ್ಟ್ಮೆಂಟಿನ ಶಿಕ್ಷಕರೊಬ್ಬರು ತರಗತಿಗಲ್ಲಿ ಎಂದೂ ಕೇಳದ ಒಕ್ಕೂರಲಿನ ನಗುವನ್ನು ಕೇಳಿ ಬಾಗಿಲಿನಿಂದ ಇಣುಕಿದರು. ಅದೃಷ್ಟವಶಾತ್ ಲೋಕೇಶನ ಮುಖಚಹರೆ ಅಷ್ಟಾಗಿ ತಿಳಿಯದಿದ್ದರಿಂದ ಆತನನ್ನು ನೋಡಿ ಬಹುಷಃ ಯಾರೋ ಹೊಸ ಲೆಕ್ಚರರ್ ಇರಬೇಕೆಂದುಕೊಂಡು ದೊಡ್ಡದಾದ ಮುಗುಳ್ ನಗೆಯನ್ನು ಬೀರಿ ವಾಪಸ್ಸಾದರು. ತಾನು ಇಲ್ಲೇ ಇದ್ದರೆ ಇನ್ನು ಉಳಿಗಾಲವಿಲ್ಲೆಂದು ಅರಿತ ಲೋಕೇಶ ಅಲ್ಲಿಂದ ಜಾಗ ಕೀಳಲು ಅನುವಾದ. ಸ್ಟೇಜಿನ ಮೇಲಿಳಿದು ಬಾಗಿಲಿನ ಹೊರಗೆ ಹೋಗಬೇಕು ಎನ್ನುವಷ್ಟರಲ್ಲಿ ಕೂಡಲೇ ನಿಂತು ಮತ್ತೊಮ್ಮೆ ತರಗತಿಯನ್ನುದ್ದೇಶಿಸಿ ..


'How many of you are ambitious' ಎಂದು ಕೇಳಿದ. ತರಗತಿಯ ಅಷ್ಟೂ ಕೈಗಳು ಆಕಾಶವನ್ನು ಮುಟ್ಟುವಂತೆ ಮೇಲೆದ್ದಿದ್ದವು…


**


ಲೊಕೇಶನ ಮಾತುಗಳನು ಕೇಳಿ ನನಗೆ ನಗುವನ್ನು ತಡೆಯಲಾಗಲಿಲ್ಲ.


'ಅಲ್ವೋ ಮಾರಾಯ .. ನಿನ್ನ ಫಾರ್ಮಿನ್ಗ್ ಬಿಸಿನೆಸ್ ನ ಅಲ್ಲೂ ತೂರ್ಸದ?! ಅಯ್ಯೋ, ಕತೆಯೇ.. ಏನೋ… ಮಾಸ್ ragging ಅಂದ್ರೆ ಇದು ನೋಡಪ್ಪ' ಎಂದು ಆತನ ಬೆನ್ನನ್ನು ತಟ್ಟಿದೆ.


'ಚುರ್ಕುಟ್ಸ್ .. ಅದ್ ಎಷ್ಟ್ ದಿನ ಸೆಲ್ಯೂಟ್ ಹೊಡಿತಾರೋ ಹೊಡಿಲಿ' ಎಂದ ಲೋಕೇಶ 'ಎಲ್ಲಪ್ಪ ನಮ್ಮ ಸ್ಯಾಡ್ ರಾಜೇಶ್ ಖನ್ನಾ..' ಎಂದು ಕೇಳಿದ.



****



ನಾಟಕದ ರಿಹರ್ಸಲ್ಗೆ ಒಬ್ಬೊಬ್ಬರೇ ಹುಡುಗರನ್ನು ಕರೆದು ಸ್ವಾತಂತ್ರ್ಯ ಸಂಗ್ರಾಮದ ಒಂದೆರೆಡು ಡೈಲಾಗ್ ಗಳನ್ನು ಹೇಳುವಂತೆ ಪೀಡಿಸುತ್ತಿದ್ದ ಸಮಾಜ-ವಿಜ್ಞಾನದ ಮೇಷ್ಟು ತಮ್ಮ ಈ ಅರಸುವಿಕೆಯ ಕಾರ್ಯದಲ್ಲಿ ಬೆಳಗಿನಿಂದ ಸುಸ್ತಾಗಿ ಹೈರಾಣಾಗಿದ್ದರು. ಮುಂಬರುವ ಸ್ವಾತಂತ್ರ್ಯ ದಿನಾಚರಣೆಗೆ ಮಕ್ಕಳಿಂದ ನಾಟಕವಾಡಿಸುವ ಹೊಣೆಯನ್ನು ಶಾಲೆಯ ಮ್ಯಾನೇಜ್ಮೆಂಟ್ ಅವರಿಗೆ ವಹಿಸಿದ್ದಿತ್ತು. ಅವರು ಕೆಚ್ಚೆದೆಯ ಬಿಸಿರಕ್ತದ ಭಗತ್ ಸಿಂಗ್ ಒಬ್ಬನನ್ನು ಅಲ್ಲಿ ಅರಸುತ್ತಿದ್ದರು. ಸುಮಾರು ಐವತ್ತು ಹುಡುಗರ ಆಡಿಷನ್ ಪಡೆದುಕೊಂಡ ಮೇಲೆ ಕೊನೆಯದಾಗಿ ಎರಡನೇ ಬೆಂಚಿನ ಕೊನೆಯಲ್ಲಿ ಕೂತಿದ್ದ ಆದಿಯ ಮೇಲೆ ಅವರ ಕಣ್ಣು ಬಿದ್ದಿತು. ತನ್ನ ಕೈಗಳನ್ನು ಗಲ್ಲದ ಮೇಲಿರಿಸಿ ಪಕ್ಕದ ಸಾಲಿನಲ್ಲಿದ್ದ ಹುಡುಗಿಯೊಬ್ಬಳ ಎಣ್ಣೆ ಹಾಕಿ ಬಾಚಿದ ಜೋಡಿ ಜುಟ್ಟುಗಳನ್ನು ನೋಡುತ್ತಾ ಆಸಾಮಿ ಆಕೆ ಖುಷಿಯೇ ಯಾಕಾಗಿರಬಾರದೆಂಬ ಕಲ್ಪನಾ ಲೋಕದಲ್ಲಿ ಕಳೆದುಹೋಗಿದ್ದ. ಮೇಷ್ಟ್ರ ಸದ್ದು ಆತನನ್ನು ಬಡಿದೆಬ್ಬಿಸಿತು.


‘ಏನಯ್ಯ ನಿನ್ ಹೆಸ್ರು..' ಎಳೆಯ ಮಕ್ಕಳದರಾದರೆ ಚಡ್ಡಿ ಒದ್ದೆಯಾಗುವಂತಿತ್ತು ಅವರ ಆ ಧ್ವನಿಯ ಆರ್ಭಟ.


'ಆದಿಶೇಷ ಸರ್..' ಯಾವುದೇ ಅಳುಕಿಲ್ಲದೆ ಉಚ್ಚಸ್ವರದಲ್ಲಿ ಮೂಡಿದ ಆತನ ಸದ್ದನ್ನು ಕೇಳಿ ಮೇಷ್ತ್ರು ಆತನನ್ನು ಹತ್ತಿರಕ್ಕೆ ಕರೆದರು.


‘ಬಾರಯ್ಯ ಇಲ್ಲಿ .. ತಗೋ ಈ ಸಾಲನ್ನು ಓದ್ಕೊಂಡು ಅದನ್ನ ಆಕ್ಟ್ ಮಾಡಿ ತೋರ್ಸು'.


ಒಂದಿನಿತು ಭಯವಿಲ್ಲದೆ ತೀರಾ ಸಾಮನ್ಯವಾಗಿಯೇ ಅವರ ಬಳಿಗೆ ಬಂದ ಆದಿ ಅವರ ಕೈಲಿದ್ದ ಹಾಳೆಯ ಸಾಲನ್ನು ಮನದೊಳಗೆ ಓದಿಕೊಂಡ. ಸ್ವಲ್ಪ ಸಮಯದ ನಂತರ,


'ಯಾರ್ ಸಾರ್ ಇದು..?' ಎಂದು ಅಳುಕಿಲ್ಲದ ಪ್ರೆಶ್ನೆಯನ್ನು ಕೇಳಿದ. ಆದಿಯ ಪ್ರೆಶ್ನೆಗೆ ಮೇಷ್ಟು ಒಮ್ಮೆಲೇ ಚಕಿತರಾದರು. ಅಲ್ಲಿಯವರೆಗೂ ಯಾವೊಬ್ಬ ಹುಡುಗನೂ ಭಯದಿಂದಲೋ ಅಥವಾ ಅಂಜಿಕೆಯಿಂದಲೋ ಗಜಕಾಯದ ಮೇಷ್ಟ್ರಿಗೆ ಮರು ಪ್ರೆಶ್ನೆಯನ್ನು ಮಾಡದೇ ಅವರು ಹೇಳಿದ ವಾಕ್ಯಗಳನ್ನು ಚಾಚೂತಪ್ಪದೆ ಹೇಳಿ ವಾಪಸ್ಸಾಗುತ್ತಿದ್ದರೆ ವಿನಹಃ ಬೇರೇನೂ ಕೇಳುವ ಆತ್ಮಹತ್ಯೆಯಂತಹ ಕಾರ್ಯಕ್ಕೆ ಹೋಗಿರಲಿಲ್ಲ.


ಆದರೂ ಪರೀಕ್ಷೆ ಮಾಡುವ ಎಂದು ಅವರು,


'ಇದನ್ನ್ ಯಾರ್ ಹೇಳಿದ್ದು ಅನ್ನೋದ್ ಗೊತ್ತಿಲ್ವ ನಿಂಗೆ ..?! ಯಾವ್ ಸೀಮೆ ಹುಡ್ಗನೋ ನೀನು?!' ಗದರಿಸುವ ಧ್ವನಿಯಲ್ಲಿ ಅವರು ಕೇಳಿದರು.


'ಸಾರ್.. ನಿಜ್ವಾಗ್ಲೂ ನಂಗೆ ಇದು ಯಾರ್ ಅಂದಿದ್ದು ಅಂತ ಗೊತ್ತಿಲ್ಲ ಸಾರ್' ಎಂದ ಆದಿಶೇಷ.


'ಇಂಡಿಯನ್ ಆಗಿ ಇವ್ನ ಬಗ್ಗೆ ಇಷ್ಟೂ ಗೊತ್ತಿಲ್ಲ ಅಂದ್ರೆ ನೀನ್ ವೇಸ್ಟು..' ಎಂದ ಮೇಷ್ಟ್ರು ಉತ್ತರವನ್ನು ಅಪೇಕ್ಷಿಸುವ ನೆಪದಲ್ಲಿ ಕ್ಲಾಸಿನ ಇತರ ವಿದ್ಯಾರ್ಥಿಗಳೆಡೆಗೆ ತಿರುಗಿದರು. ಅಲ್ಲಿಯವರೆಗೂ ಮುಂದೆ ನೆಡೆಯುತ್ತಿದ್ದ ಘಟನೆಯಲ್ಲಿ ತಾವೂ ಪಾತ್ರಧಾರಿಗಳಾಗುವೆಂಬ ಅರಿವಿಲ್ಲದೆ ತಮ್ಮ ಪಾಡಿಗೆ ತಾವೇ ಗುಸುಗುಸುಗುಡುತ್ತಿದ್ದ ಗುಂಪು ಒಮ್ಮೆಲೇ ಜಾಗೃತಗೊಂಡಿತು. ನಿರಾಯಾಸವಾಗಿ ಅವುಗಳ ತಲೆಗಳು ಕೆಳಕ್ಕೆ ಮಡಚಿಕೊಂಡವು. ಅದರ ಸಂಜ್ಞೆಯನ್ನು ಅರಿತ ಮೇಷ್ಟ್ರು ತಮ್ಮ ಹಣೆಯನ್ನು ಚಚ್ಚಿಕೊಳ್ಳುತ್ತಾ ವೀರ ಯೋಧ ಭಗತ್ ಸಿಂಗ್ನ ಬಗ್ಗೆ ಸವಿವರವಾಗಿ ವಿವರಿಸತೊಡಗಿದರು. ಸಹಜತೆಗೆ ತೀರಾನೇ ಹತ್ತಿರವಾಗಿದ್ದ ಅವರ ವರ್ಣನೆ ಆದಿಗೆ ಗತಕಾಲದ ಭಗತ್ ತನ್ನ ಮುಂದೆಯೇ ಬಂದು ನಿಲ್ಲುವಂತೆ ಮಾಡಿತು. ಆತನ ತುಂಟತನ,ಎಲ್ಲಿರದ ಎದೆಗಾರಿಕೆ, ಬೆಂಬಿಡದ ಛಲ, ಎಂದಿಗೂ ಮುಗಿಯದ ದೇಶಪ್ರೇಮ, ಎಂತಹ ನೋವನ್ನೂ ಸಹಿಸುವ ಧಿಟ್ಟತನ ಎಲ್ಲವೂ ಆದಿಯ ರೋಮು ರೋಮುಗಳನ್ನು ಎದ್ದು ನಿಲ್ಲುವಂತೆ ಮಾಡಿದವು. ಬ್ರಿಟಿಷರಿಗೆ ಸೆರೆಸಿಕ್ಕ ಭಗತ್ ಅಂದು ನಗು ನಗುತ್ತಲೇ 'Inquilab Zindabad' ಎನುತ ನೇಣುಗಂಬವನ್ನೇರಿದ ಎಂಬುದನ್ನು ಕೇಳಿ ಆದಿಗೆ ನಂಬಿಕೆಯೇ ಬರಲಿಲ್ಲ.


'ರಣರಂಗದ ರಣಕಹಳೆಗೆ ಬಾಲಮುದುಡಿ ಜಾಗಕೀಳುವ ಹೇಡಿಗಳಿಗೆ ನಾನೇಕೆ ತಲೆಬಾಗಲಿ..? ನೀವುಗಳು ನನ್ನ ಈ ದೇಹವನ್ನು ಬಂಧಿಸಿರಬಹುದು ಆದರೆ ನನ್ನ ಈ ಮನಸ್ಸನ್ನಾಗಲಿ ಅಥವ ಯೋಚನೆಯನ್ನಾಗಲಿ ಅಲ್ಲ.. ಒಬ್ಬ ಭಾರತೀಯನನ್ನು ನೀವು ತುಳಿಯಬಹುದು ಆದರೆ ಆತನ ಆಲೋಚನೆಗಳನಲ್ಲ.. ಈ ಮದ್ದುಗುಂಡುಗಳಾಗಲಿ, ಗನ್ನುಗಳಾಗಲಿ ದೇಶದಲ್ಲಿ ಕ್ರಾಂತಿಯನ್ನು ಮೂಡಿಸವು ಬದಲಾಗಿ ಆಲೋಚನಾ ಬರಿತ ಮನಸ್ಸುಗಳು ಮಾತ್ರ ಅಂತಹ ಮಹಾಕ್ರಾಂತಿಯ ಹರಿಕಾರರಾಗಬಹುದು.. ನಿಮ್ಮ ಉಳಿಗಾಲ ಮುಗಿದು ಅಳಿವಿನ ದಿನಗಳು ಶುರುವಾಗಿವೆ..Inquilab..' ಎಂದು ಜೋರಾಗಿ ಕೂಗುತ್ತಾನೆ ಆದಿ. ಇಡೀ ತರಗತಿಯಲ್ಲಿ ಆತನ ಧ್ವನಿ ಪ್ರತಿಧ್ವನಿಸುತ್ತದೆ.


'Zindabad..' ಎಂದ ಮೇಷ್ಟ್ರು ಒಮ್ಮೆ ಜೋರಾಗಿ ಚಪ್ಪಾಳೆಯನ್ನು ತಟ್ಟಿದರು.


ಒಂದಿನಿತು ಅಳುಕಿಲ್ಲದೆ ಮೂಡಿದ ಆ ಕಣ್ಣಿನ, ಕಣ್ಣ ಉಬ್ಬಿನ ಮೇಲಿನ ಪ್ರಚಂಡ ಅಭಿವ್ಯಕ್ತಿಯನ್ನು ಕಂಡ ಮೇಷ್ಟು ವಿಸ್ಮಿತರಾದರು.


'ಏನಯ್ಯ .. ಊರಲ್ಲಿ ನಾಟಕ ಕಂಪನಿಯಲ್ಲೇನಾದರೂ ಕೆಲ್ಸ ಮಾಡ್ತಿಯಾ?' ನಗುತ್ತಾ ಅವರು ಕೇಳಿದರು.


'ಇಲ್ಲ ಸಾರ್..' ಎಂದ ಆತ ಕಾಗದವನ್ನು ಅವರಿಗೆ ಹಿಂದುರಿಗಿಸಿ ತನ್ನ ಜಾಗಕ್ಕೆ ಹೋಗಿ ಕುಳಿತ. ಎಣ್ಣೆ ಹಾಕಿ ಬಾಚಿದ ಆ ಹುಡುಗಿಯ ಕೂದಲುಗಳ ಮೇಲೆ ಆತನ ದೃಷ್ಟಿ ಪುನ್ಹ ಕೇಂದ್ರೀಕೃತವಾಯಿತು…


ಅದೆಂತಹ ತುಮುಲ? ಅದೆಂತಹ ಆ ಆಕರ್ಷಣೆ? ನಟನೆ. ಎಲ್ಲೂ ಕಲಿಯದೇ, ಎಲ್ಲಿಯೂ ನೋಡದೆ ತನ್ನೊಳಗೆ ತಾನೇ ಮೂಡಿದ ಆ ಭಾವಲಹರಿಯ ನಟನ ಚತುರತೆ ನನ್ನನು ಶಾಲೆಯ ಹೀರೊ ಮೆಟೀರಿಯಲ್ಲನ್ನಾಗಿ ಮಾಡಿತು. ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ತಾಂತ್ಯಾ ಟೋಪೆ, ಸಾವರ್ಕರ್ ಅಥವಾ ಭಾಷಣ, ಚರ್ಚೆ ಅಥವಾ ಮತ್ಯಾವುದೇ ಕಾರ್ಯಕ್ರಮವಾದರೂ ನನ್ನೆಸರೇ ಮೊದಲು!


**


'Shit ..!!' ಟೆರಸಿನ ಪ್ಯಾರಾಫಿಟ್ ವಾಲ್ನ ಮೇಲೆ ತನ್ನ ಕೈಯನ್ನು ಜೋರಾಗಿ ಬಡಿದ ಆದಿ. ಕಲಾವಿದನಾಗುವ ಕನಸ್ಸನ್ನು ಕಂಡಿದ್ದ ಆತ ಪ್ರಸ್ತುತ ಅರ್ಥವಲ್ಲದ ಕಲಿಕೆ, ಗುರಿಯಿಲ್ಲದ ಜೀವನ, ಖುಷಿಯಿಲ್ಲದ ಮನೆ ಇವೆಲ್ಲದರ ನಡುವೆ ನಲುಗಿ ನರಳುತ್ತಿರುವುದರ ಹತಾಶೆ ಒಮ್ಮೆಲೇ ಉಕ್ಕಿತು. ನನ್ನ ನೋಡಲು, ನನ್ನ ಮಾತನ್ನು ಕೇಳಲು ಸಾಗರೋಪಾದಿಯಲ್ಲಿ ಜನ ಸೇರುವಂತಾಗುವ ಆ ದಿನ ದಾರ ತುಂಡಾದ ಗಾಳಿಪಟದಂತೆ ಗುರಿಯಿರದ ದಿಕ್ಕಿನಲ್ಲಿ ಹಾರಿ ಮರೆಯಾಗತೊಡಗಿತು.


ಆದರೆ ಇಂದು ಕೋಪ ಮೂಡಲು ಕಾರಣ ಮತ್ತೊಂದಿತ್ತಿತು. ಖುಷಿಯ ಮೊಬೈಲ್ ನಂಬರ್ ದೊರೆತ ನಂತರ ನಿಶಾಚರಿ ಪ್ರಾಣಿಯಂತಾಗಿರುವ ಆತ ಮಧ್ಯರಾತ್ರಿಯವರೆಗೂ ಸಾಕು ಸಾಕೆನಿಸುವಷ್ಟು ಮಾತನಾಡುತ್ತಿದ್ದ. ಆ ನಗುವೇನು, ಆ ಮಾತಿನ ವರಸೆಯೇನು? ಇನ್ನು ಪುಣ್ಯಾತ್ಮನ Sense of Humor ಅಂತೂ ಲೊಕೇಶನನ್ನೇ ಮೀರಿಸುವಂತಿತ್ತು. ಹುಡುಗ ಹೊಸ ಉರುಪಿನಲ್ಲಿ ಹೊಳೆಯುತ್ತಿದ್ದ. ಬಹುಷಃ ಆ ಖುಷಿಯಲ್ಲೇ ಅನಿಸುತ್ತೆ ಕಳೆದ ಇಂಟರ್ನಲ್ ನಲ್ಲಿ ಕೊನೆಯ ಒಂದು ಘಂಟೆಯಷ್ಟೇ ಓದಿ ಇಡೀ ಕ್ಲಾಸ್ಸಿಗೆ ಮೊದಲು ಬಂದದ್ದು. ಭಾರತ ಪಾಕಿಸ್ತಾನದ ನೆಲದಲ್ಲಿ ಚೊಚ್ಚಲ ಒಂಡೇ ಸರಣಿಯನ್ನು ಗೆದ್ದು ಬೀಗಿದಾಗ ಯಾರು ಸಹ ಊಹಿಸಿರದಂತೆ ಹಾಸ್ಟೆಲ್ಲಿನ ಟೆರೇಸಿನ ಮೆಲೋಗಿ ತನ್ನ ಅಂಗಿಯನ್ನು ಕಳಚಿ ಗಾಳಿಯಲ್ಲಿ ತೂರುತ್ತಾ ಇಡೀ ಸಿಟಿಗೆ ಕೇಳುವಂತೆ ಅರಚಿದ್ದ. ಆತನ ಆ ಎಕ್ಸೈಟ್ ಮೆಂಟ್ ನನಗಂತೂ ಕಲ್ಪನೆಗೂ ಮೀರಿದ ದೃಶ್ಯವಾಗಿದ್ದಿತು. ಆದಿಯೊಳಗಿದ್ದ ಮತ್ತೊಬ್ಬ ಆದಿಯನ್ನು ಅದು ಪರಿಚಯಿಯಿಸಿತು. ಹಾಗಾಗಿ ಇತ್ತೀಚೆಗೆ ತನ್ನ ಹಳೆಯ ಕನಸ್ಸುಗಳಿಗೆಲ್ಲ ಪುನ್ಹ ಬಣ್ಣವನ್ನು ತುಂಬುವ ಕೆಲಸವನ್ನು ಆತ ಮಾಡುತ್ತಿದ್ದಾನೆ. ವ್ಯರ್ಥ ಮಾಡಿದ ಸಮಯವನ್ನು ನೆನೆದು ಮರುಗುತ್ತಾನೆ. ಈಗ ಪ್ಯಾರಾಫಿಟ್ ವಾಲ್ನ ಮೇಲೆ ತನ್ನ ಕೈಯನ್ನು ಬಡಿದದ್ದೂ ಸಹ ಅಂತಹ ಒಂದು ಕಾರಣಕ್ಕೆ. ಒಟ್ಟಿನಲ್ಲಿ ಖುಷಿ, ಸುಪ್ತವಾಗಿದ್ದ ಆದಿಶೇಷನನ್ನು ಜಾಗೃತಗೊಳಿಸಿದ್ದಾಳೆ.


‘ಜಿಂದಗಿ ... ಕೈಸಿ ಪಹೇಲಿ ಹೈ..’ ಎನ್ನುತ ತನ್ನನ್ನುದ್ದೇಶಿಸಿ ಹಿಂದಿನಿಂದ ಹಾಡುತ್ತಾ ಬಂದ ನಮ್ಮನ್ನು ಕಂಡು ತನ್ನ ಯೋಚನಾಲೋಕದಿಂದ ಇಹಲೋಕಕ್ಕೆ ಬಂದ ಆದಿ.


'ನೀನೋ .. ನಿನ್ ಟೆರೆಸೊ , ಯಾವಾಗ್ ನೋಡಿದ್ರೂ ಇದನ್ನ್ ಬಿಟ್ ಕೆಳಗ್ ಬರೋದೇ ಇಲ್ಲ ಅಂತಿಯಲ್ಲ ಮಾರಾಯ.. ಬೈ ದ ವೆ ನಿನ್ ಅತ್ಗೆನ ಏನಾದ್ರೂ ನೋಡಿದ್ಯಾ…' ತನ್ನ ಸಹಜ ಮೂದಲಿಸುವ ಧ್ವನಿಯಲ್ಲಿ ಲೋಕೇಶ ಕೇಳಿದ.


'ಹುಂ.. ಬಂದಿದ್ರು.. ರಾಕೀ ಹಬ್ಬಕ್ಕೆ ರಾಕಿ ಕಟ್ಬೇಕು .. ಲೋಕೇಶಂಗೆ ಯಾವ ಕಲರ್ ಇಷ್ಟ ಅಂತ ಕೇಳಿದ್ರು' ಎಂದ ಆದಿ.


ಅಚಾನಕ್ಕಾಗಿ ಮೂಡಿದ ಆತ ಉತ್ತರಕ್ಕೆ ನಾನು ಗಹಗಹಿಸಿ ನಗಾಡಿದೆ. ತೀರಾ ಏಕಾಂತದಲ್ಲಿದ್ದಾಗ ಆದಿಯನ್ನು ಕೆಣಕುವುದು ತನಗೇ ತಾನೇ ಸಂಕಷ್ಟವನ್ನು ಆಹ್ವಾನಿಸಿಕೊಂಡ ಹಾಗೆ ಎಂದು ಮನಗಂಡ ಲೋಕೇಶ,


'ನನ್ನ ಗುಡ್ಡ ಎಷ್ಟ್ ಆರಾಮಾಗಿದೆ ಅಲ..' ಎಂದು ಕಾಲೇಜಿನಿಂದ ಸುಮಾರು ನಾಲ್ಕೈದು ಕಿಲೋಮೀಟರ್ ದೂರದಲ್ಲಿದ್ದ ಪಾಚಿಗಟ್ಟಿದ್ದ ಬಂಡೆಯಂತೆ ಕಾಣುತ್ತಿದ್ದ ಗುಡ್ಡವನ್ನು ನೋಡಿದ. ಆ ಗುಡ್ಡದ ಬುಡಕ್ಕೇ ಲೊಕೇಶನ ಗದ್ದೆಗಳು ಚಿಗುರು ಬಿಡುತ್ತಿದ್ದುವು ಹಾಗು ಆತ ಬೆಳ್ಳಂಬೆಳಗ್ಗೆ ಜಾಗಿಂಗೆಂದು ಅಲ್ಲಿಗೆ ಹೋದಾಗಲೆಲ್ಲ ಒಂದು ದಿನ ಗುಡ್ಡದ ತುದಿಯನ್ನು ಹತ್ತೇ ತೀರಬೇಕೆಂದು ಹೇಳಿಕೊಳ್ಳುತ್ತಿದ್ದ.


'ತನ್ನ ಮೇಲೆ ಅದೆಷ್ಟೋ ಮರಗಿಡಗಳು, ಪ್ರಾಣಿ ಪಕ್ಷಿಗಳನ್ನು ಸಾಕಿಕೊಂಡು ಅವುಗಳೆಲ್ಲದರ ಚೆಲ್ಲಾಟ, ತುಂಟಾಟ, ಬಡಿದಾಟಗಳನೆಲ್ಲ ಸಹಿಸಿಕೊಂಡು ದೂರದಿಂದ ಮಾತ್ರ ಶಾಂತವಾಗಿ ನಿಂತಿರುವಂತೆ ಕಾಣುವ ಅದನ್ನು ನೋಡಿದರೆ ಅದಕ್ಕೂ ನಮಗೂ ಏನೂ ವ್ಯತ್ಯಾಸವಿಲ್ಲ ಅನ್ಸಲ್ವಾ..' ಎಂದು ಕೇಳಿದ ಆದಿ.


ಆತನ ಮಾತುಗಳು ನನ್ನಲ್ಲಿ ಏನೋ ಒಂದು ಬಗೆಯ ಹೊಸ ಆಲೋಚನೆಯನ್ನು ಹುಟ್ಟು ಹಾಕಿದವು. ನಂತರದ ಕೆಲ ನಿಮಿಷಗಳ ಕಾಲ ಮೂವರು ಆ ಬೆಟ್ಟವನ್ನೇ ದಿಟ್ಟಿಸುತ್ತಾ ಏಕಾಂತವಾದೆವು. ಅಚಾನಕ್ಕಾಗಿ ಮೂಡಿದ ನಿಶಬ್ದವನ್ನು ಭೇದಿಸಲು ಲೋಕೇಶ, 'ನೆಕ್ಸ್ಟ್ ವೀಕ್, ಟ್ರೆಕ್ ಟು ದಿ ಬೆಟ್ಟ' ಎಂದ.


ಒಂದಿನಿತು ಯೋಚಿಸದೆ ನಾನು ಹಾಗು ಆದಿ ಸಮ್ಮತಿಸುವಂತೆ ತಲೆಯಾಡಿಸಿದೆವು.





****



‘ಏನೋ ಗೊತ್ತಿಲ್ಲ.. ಒಂದೊಂದ್ ಸಾರಿ Intellectuality ಬಗ್ಗೆ ಮಾತಾಡ್ತಾರೆ.. ಒಮ್ಮೊಮ್ಮೆ ಪ್ರೀತಿನೇ ಎಲ್ಲಾ ಅಂತಾರೆ... ನಿನ್ನೊಬ್ಬನೆ ನಾನು ಟ್ರಸ್ಟ್ ಮಾಡೋದು ಅಂತಾರೆ .. ಇವೆಲ್ಲಾವನ್ನ ಸೇರ್ಸಿ ನ್ಯೂಸ್ ಪೇಪರ್ಗೆ ಆರ್ಟಿಕಲ್ ಕೂಡ ಬರೀತಾರೆ.. ಮೊನ್ನೆ ನಾನ್ ಒಬ್ಬ ಹುಡುಗನ್ನ ಜೀವನ ಪೂರ್ತಿ ಲವ್ ಮಾಡ್ಬೇಕು ಆದ್ರೆ ಮದ್ವೆ ಅವನ್ನ ಆಗ್ಬಾರ್ದು, ಮದ್ವೆ ಬೇರೆ ಯಾರ್ನೋ ಆಗಿ ಈ ಹುಡ್ಗನ ಯಾವತ್ತೂ ಪ್ರೀತಿ ಮಾಡ್ತಾ ಇರ್ಬೇಕು ಅಂತಾರೆ.. ನನಗಂತೂ ಮುಂದೆ ಏನ್ ಮಾಡ್ಬೇಕು ಅಂತ ತಿಳಿತಾ ಇಲ್ಲ..' .


ಕೆಲ ತಿಂಗಳುಗಳ ಸಲಿಗೆಯಲ್ಲೇ ರಾಧಾ ನನಗೆ ತೀರಾನೇ ಹತ್ತಿರವಾಗಿದ್ದರು. ನನಗಿಂತ ದೊಡ್ಡವರು. ಜಾತಿ ಕುಲ ಗೋತ್ರವಂತೂ ಇದ್ದರೂ ಗೊತ್ತಿರದವರು.. ಆಕೆಗೆ ನನ್ನ ಮೇಲೆ ಗೆಳೆಯನೆಂಬ ಕಾಳಜಿ ಬಿಟ್ಟು ಬೇರ್ಯಾವ ಬಗೆಯ ಭಾವಗಳು ಇವೆಯೋ, ಇಲ್ಲವೋ? ನಾ ಕಾಣೆ. ಆದಷ್ಟು ಬೇಗ ಈ ಸಲಿಗೆಗೆ ಸಂಬಂಧವೊಂದನ್ನು ಕಟ್ಟಿಬಿಡಬೇಕೆಂಬ ಆಸೆಯಿದ್ದರೂ ಮುಂದಿನ ಕಪ್ಪಾದ ಹಾದಿ ನನ್ನನು ಪ್ರತೀ ಬಾರಿಯೂ ಕಟ್ಟಿ ನಿಲ್ಲಿಸುತ್ತಿತ್ತು. ಈಗ ಸಮುದ್ರದ ಈಜಿನಂತೆ ಮುಂದೆ ಹೋದಷ್ಟೂ ಆಳ ವಿಪರೀತವಾಗತೊಡಗಿದೆ. ಕೆಲವೊಮ್ಮೆ ಭಯವೂ ಆಗುತ್ತದೆ. ಒಂತೊಮ್ಮೆ ಎಲ್ಲರನ್ನೂ ಒಪ್ಪಿಸಿ, ಅದೇನೇ ಆದರೂ ಸರಿಯೇ ಎಂದು ಈಕೆಯೊಟ್ಟಿಗೆ ಮದುವೆಯಾದರೆ? ಆಗ ಮೂಡುವ ನಂತರದ ಪ್ರೆಶ್ನೆಯೇ , ನನ್ನ ಜೀವನದ ಗುರಿ ಅಷ್ಟಕ್ಕೇ ಸೀಮಿತವೇ? ಆಕೆಯನ್ನು ಕೊನೆಯವರೆಗೂ ನಗಿಸುವುದು, ಸುಖಿಸುವುದು, ದುಡಿಯುವುದು, ಮನೆ, ಮಕ್ಕಳು..ನನಗಿದೆಲ್ಲ ಸಾದ್ಯವುಂಟೇ? ಇಲ್ಲ. ಗೊತ್ತಿಲ್ಲ! ಆದರೆ ಆಕೆಯೆಂದರೆ ನನಗೇನೋ ಒಂದು ಮಧುರ ಭಾವ. ಆ ಮಲ್ಲಿಗೆ ಹೊವಿನಂತಹ ಅರಳಿದ ಮುಖವನ್ನು ನೋಡಿದರೆ ದಿನದ ಜಂಜಾಟವೆಲ್ಲ ಮಂಗಮಾಯಾ. ಜೊತೆಗೆ ಅದೇನೋ ಒಂದು ಬಗೆಯ ವಿಪರೀತ ಆಕರ್ಷಣೆ. ಎಂತಹ ಜಾಗದಲ್ಲೂ ಕ್ಷಣಮಾತ್ರದಲ್ಲೇ ಮತ್ತೇರಿಸುವ ಆಕೆಯ ಆ ಮೈಮಾಟ ನಲಿಯುವ ನವಿಲಿಗೆ ಚಿನ್ನದ ಗರಿಗಳಂತೆ. ಅಮೋಘ. ಅನನ್ಯ. ಆದರೆ ನನ್ನ ಹಾಗು ಆಕೆಯ ಸಂಬಂಧ ಕೇವಲ ಸಲುಗೆಯಾಗಿರಬಾರದು. ಆಕರ್ಷಣೆಯಂತೂ ಬಿಲ್ಲಕುಲ್ ಇರಲೇಬಾರದು. ಆದರೆ ನನ್ನ ಹೃದಯ ಸ್ವಚ್ಛಂದವಾದರೂ ಮನಸ್ಸು ಮಾತ್ರ ತದ್ವಿರೋಧಿ. ಎಂದಿಗೂ ಅದು ಹೇಳಿದಂತಯೇ ನೆಡೆಯಬೇಕು! I hate it.




Continue...

ಪಯಣ - 6

...ಆಶ್ಚರ್ಯದಿಂದ ಇಬ್ಬರೂ ರೋಮಿನ ಹೊರಗೆ ನೋಡತೊಡಗಿದೆವು. ಆಕೆಯ ಮಾತಿನ ಸದ್ದನ್ನು ಕೇಳಿ ಓನರ್ ಅಂಕಲ್ ಪರೀಕ್ಷಿಸಲೆಂದು ಮೇಲೆ ಬಂದಿರಬಹುದೇ? ಇದ್ದರೂ ಇರಬಹುದು. ಇಡೀ ಕಟ್ಟಡದ ಸಿಸಿಟಿವಿ ಕ್ಯಾಮೆರಮ್ಯಾನ್ ಆಗಿರುವ ಆತ ರಾಧಾ ಬಂದಿದ್ದನ್ನೂ ನೋಡಿರಬಹುದು. ಕೇಳಿದರೆ ಎಕ್ಸಾಮ್ಸ್ ಗೆ ಪರ್ಸನಲ್ ಟ್ಯೂಷನ್ ತೆಗೊಂತ ಇದ್ದೀನಿ ಎಂದು ಉತ್ತರಿಸಬಹುದು. ಆದರೆ ಆತ ನಂಬನು. ನಂಬದಿದ್ದರೆ ಕತ್ತೆ ಬಾಲ ಎಂದು ಮೇಲೆದ್ದೆ. ಏನೂ ಆಗುವುದಿಲ್ಲವೆಂದು ಆಕೆಯ ಕಿವಿಯ ಬಳಿ ನಿಧಾನವಾಗಿ ಉಸುರಿ ನಾವಿದ್ದ ರೂಮಿನ ಬಾಗಿಲನ್ನು ಎಳೆದುಕೊಂಡು ಹೊರಬಂದೆ. ಮತ್ತೊಮ್ಮೆ ಬೆಲ್ಲು ಬಡಿಯಿತು. ಮೊದಲಬಾರಿಗೆ ಆ ಬಾಗಿಲಿಗೆ ಮೂರು ಲಾಕ್ ಗಳನ್ನು ಹಾಕಿದ್ದೆ. ಒಂದೊಂದನ್ನೇ ನಿಧಾನವಾಗಿ ತೆಗೆಯತೊಡಗಿದೆ. ಓನರ್ ಅಂಕಲ್ನ ಒಟ್ಟಿಗೆ ಅವರ ಮಡದಿಯೂ ಬಂದಿದ್ದರೆ ಏನು ಮಾಡುವುದೆಂದು ಯೋಚಿಸುತ್ತಾ ಬಾಗಿಲನ್ನು ತೆರೆದರೆ ಆಶ್ಚರ್ಯವೊಂದು ಕಾದಿತ್ತು. ಸೆಪ್ಪೆಮೋರೆಯನ್ನು ಹಾಕಿಕೊಂಡು ಆದಿ ತನ್ನ ಲಗೇಜ್ ಬ್ಯಾಗಿನೊಟ್ಟಿಗೆ ಅಲ್ಲಿ ನಿಂತಿದ್ದಾನೆ!

**

'ಏನಾಯಿತೋ ಮಚಿ.. ರಾತ್ರಿನೇ ಯಾಕೋ ಬಂದ್ಬಿಟ್ಟೆ?' ನಾನು ಕೇಳಿದ ಪ್ರೆಶ್ನೆಗೆ ಆದಿ ಕೂಡಲೇ ಉತ್ತರಿಸಲಿಲ್ಲ. ಏನೂ ಆಗಿಲ್ಲವೆಂದು, ನಾಳೆ ಸಾರಿಗೆ ನೌಕರರು ಮುಷ್ಕರ ಊಡಿ ರಸ್ತೆಯನ್ನು ತಡೆಯಿಡಿಯುವ ಸಂಭವವಿರುವುದರಿಂದ ರಿಸ್ಕ್ ಬೇಡವೆಂದು ಬೇಗ ಬಂದನೆನ್ನುತ್ತಾನೆ. ಜೀವನದ ಮೊಮ್ಮೊದಲ ಸುಮಧುರ ಕ್ಷಣಗಳನ್ನು ಅನುಭವಿಸಲು ಅಣಿಯಾಗಿದ್ದ ನನಗೆ ಸಾರಿಗೆ ನೌಕರರರು ಹಾಗು ಮಿಗಿಲಾಗಿ ಆದಿಯ ಮೇಲೆ ಎಲ್ಲಿಲ್ಲದ ಕೋಪ ಮೂಡಿತು. ಹಸಿದ ನಾಯಿಮರಿಗೆ ಟಿವಿಯೊಳಗಿನ ಮಾಂಸದ ತುಂಡನ್ನು ತೋರಿಸಿದಂತ್ತಾಗಿತ್ತು ನನ್ನ ಪರಿಸ್ಥಿತಿ. ಆದಿ ಬಂದ ಕೂಡಲೇ ರಾಧಾ ನಮ್ಮ ಮನೆಯಿಂದ ನೆಡೆದರು.

'By the way, how was your day.. ?' ತನ್ನ ಬಟ್ಟೆಗಳನ್ನು ಜೋಡಿಸುತ್ತಾ ಆದಿ ಕೇಳಿದ. ಶಾಂತ ಕಣ್ಣಿನಿಂದಲೇ ನಾನು ಆತನನ್ನು ಗುರಾಯಿಸತೊಡಗಿದೆ.


****


'ನೋಡ್ರಿ.. ಇವನಿಗೆ ಏನೂ ಗೊತ್ತಿಲ್ಲ, ಕೇಳಿದಷ್ಟು ಕೊಡ್ತಾನೆ ಅಂತೆಲ್ಲಾ ಅನ್ಕೋ ಬೇಡಿ.. ಕೊಟ್ರೆ, ದಿನ ಸಂಬಳ.. ಗಂಡಾಳು ಹೆಣ್ಣಾಳು ಇಬ್ರಿಗೂ ದಿನಕ್ಕೆ 500. ಆಗುತ್ತಾ, ಇಲ್ವಾ? ' ಶುಂಠಿಯ ಬೀಜಗಳಿಗೆ ಮಣ್ಣಿನ ಬೆಡ್ ಗಳನ್ನು ನಿರ್ಮಿಸಲು ತನ್ನೊಟ್ಟಿಗೆ ಜನಗಳನ್ನು ತಂದಿದ್ದ ಮೇಸ್ತ್ರಿಯೊಟ್ಟಿಗೆ ಲೋಕೇಶ ಚರ್ಚಿಸತೊಡಗಿದ. ಅಂದು ಭಾನುವಾರವಾದರಿಂದ ನಾವು ಮೂವರೂ ಲೊಕೇಶನ ಟೆಂಪರರಿ ಗದ್ದೆಯೆಡೆಗೆ ಸವಾರಿಯನ್ನು ಹೂಡಿದ್ದೆವು. ಸಿಟಿಯಿಂದ ಸುಮಾರು ನಾಲ್ಕೈದು ಕಿಲೋಮೀಟರ್ ದೂರದಲ್ಲಿರುವ ಜಾಗ ಬೆಳ್ಳಂಬೆಳೆಗೆ ಸೂರ್ಯ ಉದಯಿಸುವ ಹೊತ್ತಿಗೆ ಬಂದರಂತೂ ಸ್ವರ್ಗಕ್ಕೆ ಮೂರೇ ಗೆಣೇನೋ ಎಂಬಂತಿರುತ್ತದೆ. ಗದ್ದೆಯ ಪಕ್ಕಕ್ಕೇ ಬೆಳೆದುಕೊಂಡಿರುವ ಬೃಹದಾಕಾರದ ಗುಡ್ಡದ ಮೇಲಿದ್ದ ಮರಗಳಿಂದ ಚಿಲಿಪಿಲಿಗುಡುವ ಸಹಸ್ರಾರು ಪಕ್ಷಿಗಳು, ಆ ತಂಪಾದ ಗಾಳಿ, ಮೋಡ ಚದುರಿದ ಶಾಂತ ಆಗಸ ಹಾಗು ಸ್ಪೂರ್ತಿಯ ಚಿಲುಮೆಯಂತೆ ನಿಧಾನವಾಗಿ ಮೇಲೇಳುತ್ತಿರುವ ಸೂರ್ಯದೇವ. ಬಸ್ಸಲ್ಲಿ ಹೋಗೋಣವೆಂದರೂ ಕೇಳದೆ ಅಲ್ಲಿಂದ ಇಲ್ಲಿಯವರೆಗೂ ಜಾಗಿಂಗ್ ಎಂದು ಓಡಿಸಿಕೊಂಡೇ ಬಂದ ಲೊಕೇಶನ ಮೇಲಿದ್ದ ಸಿಟ್ಟೆಲ್ಲವೂ ಈ ಪ್ರಕೃತಿಯ ಸೊಬಗಿನಲ್ಲಿ ಶಮನವಾಗಿದ್ದಿತು.

'ಬ್ಯಾಡಿ ಸರ.. ಸುಮ್ನೆ ನಿಮ್ಗೆ ಲಾಸ್ ಆಗುತ್ತೆ.. ಕಾಂಟ್ರಾಕ್ಟ್ ರೇಟ್ ಮಾತಾಡೋಣ.. ಫೈನಲ್ ಆಗಿ ಒಂದ್ ರೇಟ್ ನೀವೇ ಹೇಳಿ ' ಎಂದ ಮೂರಡಿ ಉದ್ದದ ಉತ್ತರಕರ್ನಾಟಕದೆಡೆಯ ಮೇಸ್ತ್ರಿ. ಲೋಕೇಶ ಕೂಡಲೇ ತನ್ನ ಫೋನಿಂದ ಯಾವುದೊ ನಂಬರ್ ಗೆ ಫೋನ್ ಮಾಡಿ 'ರೀ ಸೋಮಶೇಖರ್, ಕಳ್ಸ್ರಿ ನಿಮ್ ಜನಾನ.. ಇಲ್ ಯಾರೋ ಟೈಮ್ ವೇಸ್ಟ್ ಮಾಡೋಕ್ಕೆ ಅಂತಾನೆ ಬಂದಿದ್ದಾರೆ ಅನ್ಸುತ್ತೆ..' ಎಂದ ಮಾತನ್ನು ಕೇಳಿದ ಕೂಡಲೇ ಕಕ್ಕಾಬಿಕ್ಕಿಯಾದ ಮೂರಡಿಯ ಮೇಸ್ತ್ರಿ 'ಸಾಮಿ.. ಒಂದ್ ನಿಂಷ.. ಸರಿ. ಅದೇನೋ ಕೊಡ್ತಿರೋ ಕೊಡಿ. ಕಾಪಿ ತಿಂಡಿಗೆ ಅಂತ ಒಂದ್ ಐವತ್ ಸೇರ್ಸಿ ಕೊಟ್ರೆ ಆಯಿತು' ಎಂದ. ತನ್ನ ಕೋಪವನ್ನು ನಿಗ್ರಹಿಸುವಂತೆ ವರ್ತಿಸಿದ ಲೋಕೇಶ 'ನೀವಿನ್ನು ನಡಿಬಹುದು.. ಬೇರೆ ಜನ ಬರ್ತಾ ಇದ್ದಾರೆ..' ಎಂದಕೂಡಲೇ. 'ಯಾ.. ಸುಮ್ನಿರಿ ಬುದ್ದಿ.. ನೀವೊಳ್ಳೆ..ಎಷ್ಟಾದ್ರೂ ಕೊಡಿ.. ಕಾಫಿ ಗೀಫಿ ಏನು ಬ್ಯಾಡ.. ಹೇಯ್ ಏನ್ ಮಾಡಕ್ ಹತ್ತಿರ್ಲೆ ನೀವು, ನಡೀರ್ ನಡೀರಿ. ನಾಳಿ ಒಳಿಕ್ಕ ಕೆಲ್ಸ ಮುಗಿಸ್ಬೇಕಂತಿ..' ಎನ್ನುತ ಮೇಸ್ತ್ರಿ ತನ್ನವರನ್ನು ಕೆಲಸಕ್ಕೆ ತೊಡಗಿಸತೊಡಗಿದ. ಲೋಕೇಶ ನಮ್ಮನ್ನು ನೋಡಿ ಒಮ್ಮೆ ಮುಗುಳ್ನಕ್ಕ.

'ಅಲ್ಲ ಮಾರಾಯ.. ಒಂದ್ ಐವತ್ ರೂಪಾಯಿಗೆ ಕಂಜೂಸ್ತನ ಮಾಡ್ತಿಯಲ್ಲ. ಎಲ್ಲೆಲ್ಲೋ ಕೊಡ್ತೀಯ,ಪಾಪ ಅವ್ರಿಗೆ ಕೊಟ್ರೆ ಏನಾಗೋದು ನಿಂಗೆ' ಎಂದ ಆದಿ.

'ಸಾರ್, ಸುಮ್ನಿರಿ ತಾವು. ದುಡ್ಡು ಡೈರೆಕ್ಟ್ ಆಗಿ ಕೆಲ್ಸ ಮಾಡೋರ್ ಕೈಗೇ ಹೋದ್ರೆ ಓಕೆ.. ಆ ಮೂರಡಿ ಮೇಸ್ತ್ರಿ ಫಿಲ್ಟರ್ ಮಾಡಿ ಅವ್ರುಗಳಿಗೆ ಅದರ ಅರ್ದಾನು ಕೊಡಲ್ಲ...ನಾನೇ ಕೊನೆಗೆ ಒಂದಿಷ್ಟು ಅಂತ ಜನಗಳಿಗೆ ಕೊಡ್ತೀನಿ.. ಅದನ್ನ ಈವಾಗಲೇ ಹೇಳಿದ್ರೆ ಸಂಬಳದಲ್ಲೇ ಅದನ್ನೂ ಕಟ್ ಮಾಡ್ಕೊಂಡು ಕೊಡ್ತಾನೆ ಆಸಾಮಿ'

'Good .. ನೀನ್ ಮಾಡೋದೂ ಸರೀನೇ.. ಆದ್ರೂ ಬಾರ್ಗೇನಿಂಗ್ ಮಾಡೋದನ್ನ ನಿನ್ನಿಂದ ಕಲಿಬೇಕು ನೋಡಪ್ಪ' ಎಂದ ಆದಿ.

ಲೋಕೇಶ ನಗಾಡಿದ. ತನ್ನ ಜಾಗಿಂಗ್ ಸೂಟ್ನಲ್ಲಿದ್ದ ಆತ ಅಲ್ಲಿಯೇ ಮೇಲಕ್ಕೂ ಕೆಳಕ್ಕೂ ಬಗ್ಗುತ್ತಾ ಸಣ್ಣದಾಗಿ ವ್ಯಾಯಾಮವನ್ನು ಮಾಡತೊಡಗಿದ.

ವೀಳೇದೆಲೆಗೆ ಅಡಿಕೆ ಕಡಿಪುಡಿ ಹಾಗು ಸುಣ್ಣವನು ಮೆತ್ತಿ ಬಾಯನ್ನು ಭರ್ತಿಮಾಡಿಕೊಳ್ಳುತ್ತಿದ್ದ ಕೂಲಿಯ ಹೆಂಗಸರು ಈತನನ್ನು ನೋಡಿ ನಗುತ್ತಿದ್ದರು.

ಬಾಯ್ತುಂಬ ಎಲೆಯಡಿಕೆಯ ರಸವೇ ತುಂಬಿದ್ದರೂ, ತುಟಿಗಳು ಬಿರಿದು ದಂತಪಂಕ್ತಿಗಳು ಕಾಣದಿದ್ದರೂ ಅವರು ನಕ್ಕರು ಎಂಬ ಖಾತ್ರಿ ನನಗೆಗಾಯಿತು ಎಂದು ನಾನು ಯೋಚಿಸತೊಡಗಿದೆ.

'ಮತ್ತೆ ಅದ್ಯಾರೋ ಸೋಮಶೇಖರ್ ಎಂದಲ್ಲ ಅವ್ರ್ ಜನ ಬಂದ್ರೆ ಏನ್ ಮಾಡ್ತಿಯಾ' ಎಂದ ಆದಿಯ ಪ್ರೆಶ್ನೆಗೆ,

'ನಾನು ಯಾವ್ ನಂಬರಿಗೂ ಫೋನೇ ಮಾಡ್ಲಿಲ್ಲ .. I know how to bargain ' ಎಂದು ಪುನಃ ನಗಾಡಿದ.


****



'ಮಗ್ನೆ, ನಿಂಗೆ ಎರ್ಡ್ ಇಂಟರ್ನಲ್ನಲ್ಲೆ ಫುಲ್ ಮಾರ್ಕ್ಸ್ ಬಂದಿದೆ.. ಮೂರ್ನೆದೇನು ಬರಿಯೋದು..?' ಕಾಲೇಜಿನ ಕಾರಿಡಾರಿನ ಮೂಲೆಯಲ್ಲಿ ನಿಂತು ಲೋಕೇಶ ಹೇಳಿದ.

'ಹಾಗೇನಿಲ್ಲ.. ಆ ನೆಪದಲ್ಲಾದರೂ ರಿವಿಶನ್ ಆಗುತ್ತಲ ಅಂತ..' ಎಂದ ಆದಿಯ ಮಾತಿಗೆ,

'ರಿವಿಶನ್ನು ಬೇಡ ಗಿವಿಷನ್ನು ಬೇಡ.. ಮುಚ್ಕೊಂಡು ನನ್ ಹೆಸ್ರಲ್ಲಿ ಇಂಟರ್ನಲ್ ಬರಿ..'

ಕೊಂಚ ಸುಮ್ಮನಾದ ಆದಿ, 'ಲೋ.. ಸಿಕ್ ಹಾಕೊಂಡ್ರೆ ಇಬ್ರು ಡಿಬಾರ್ ಆಗ್ತಿವಿ.. ಗೊತ್ತಲ್ಲ'

'ಏನೂ ಆಗಲ್ಲ..ನನ್ನ್ ಬ್ಲೂ ಬುಕ್ಕಲ್ಲಿ ತಲೆ ಬಗ್ಗಿಸ್ಕೊಂಡು ಬರಿ ಸಾಕು.. ನಾನು ಒಂದ್ ಡಮ್ಮಿ ಬ್ಲೂ ಬುಕ್ ಇಟ್ಕೊಂಡು ಬರಿತೀನಿ'

'ಲೋಕಿ, ಇನ್ನೂ ಒಂದ್ ವಾರ ಇದೆ ಇಂಟರ್ನಲ್ಸ್ ಗೆ.. ನಾನ್ ಹೇಳ್ಕೊಡ್ತೀನಿ, ಓದೋ...'

'ಇಲ್ಲ ಗುರು.. ಜೀವನಕ್ಕೆ ಉಪಯೋಗ ಆಗ್ದೇ ಇರೋದನ್ನ ಓದಿ ಸಾಧಿಸೋದು ಏನೂ ಇಲ್ಲ.. ಆ ಫಾರ್ಮುಲಾ, ಆ ಥಿಯೋರಂ, ಆ ಔಟ್ಪುಟ್ಟು, ಮಣ್ಣು ಮಸಿ.. I challenge you.. ಇನ್ ಒಂದ್ ಹತ್ ವರ್ಷ ಆದ್ಮೇಲೆ ನಿಂಗೆ ಇವೆಲ್ಲ ದೇವ್ರಾಣೆ ನೆನ್ಪ್ ಇರಲ್ಲ. ಇದ್ರೂ ಯೂಸ್ಗೆ ಬರೋಲ್ಲ..ಬರಿ ಎಕ್ಸೆಲ್ ಅಂಡ್ ಇಮೇಲ್ ಅಲ್ಲೇ ನಿನ್ನ ಇಡೀ ವರ್ಕ್ ಲೈಫ್ ಮುಗ್ದ್ ಹೋಗಿರುತ್ತೆ.. ಹೆಸ್ರಿಗೊಂಡು ಡಿಗ್ರಿ ಇರ್ಲಿ ಅಂತ ಅಷ್ಟೇ.. ಇಲ್ಲ ಅಂದ್ರೆ ಇದಕ್ಕೆಲ್ಲ ಟೈಮ್ ವೇಸ್ಟ್ ಮಾಡೋಕ್ಕೆ ನನ್ನ್ ಹತ್ರ ಅಂತೂ ಟೈಮ್ ಇಲ್ಲ.. Moreover ಈ ಎಕ್ಸಾಮ್ಸ್ ಗಳೆಲ್ಲ ಕೇವಲ ಸ್ಟೂಡೆಂಟ್ಸ್ ಗಳ ಮೆಮೊರಿ ಪವರ್ನ ಟೆಸ್ಟ್ ಮಾಡ್ತಾವೆ ವಿನಃ ಟ್ಯಾಲೆಂಟ್ನ ಅಂತೂ ಅಲ್ವೇ ಅಲ್ಲ..' ಎಂದು ನಗುತ್ತಾನೆ.

'ಹೌದಪ್ಪ.. ನೀನೆ ಒಂದು ಯೂನಿವೆರ್ಸಿಟಿನ ಶುರು ಮಾಡಿ ಅಲ್ಲಿ ನಿನ್ ಇಷ್ಟದಂತೆ ಪಾಠ ಮಾಡ್ಸು.. ಆದ್ರೆ ಅಲ್ಲಿವರೆಗೂ ದಯಮಾಡಿ ಕಾಲಿಗ್ ಬಂದಿದ್ದು ಪಂಚಾಮೃತ ಅಂತ ಸಿಗೋದನ್ನ ಓದ್ತಾ ಇರು..'

'ಏನ್ ಇದ್ಯಪ್ಪಾ ಓದೋಕ್ಕೆ.. ಯಾವ ಫಾರ್ಮುಲಾನೇ ನೋಡು ಯಾವ ಥಿಯೋರಂನೇ ನೋಡು, ಎಲ್ ನೋಡಿದ್ರೂ ಬರಿ ಫಾರಿನರ್ಸ್ ಹೆಸ್ರೇ .. ನಮ್ಮ ಆರ್ಯಭಟ, ಭಾಸ್ಕರಚಾರ್ಯ ಅಂತಾವ್ರೆಲ್ಲ ಇವ್ರಿಗೆ ಲೆಕ್ಕಕ್ಕೆ ಇಲ್ಲ.. ಫಾರಿನರ್ಸ್ಗೆ ಯೂನಿವರ್ಸಿಟಿ, ಟ್ಯೂಷನ್ನು, ಅಂತ ಹತ್ತಾರು ಫೆಸಿಲಿಟಿ ಪಡ್ಕೊಂಡು ಅವ್ರ್ ಕಂಡ್ ಹಿಡಿದಿರೋದನ್ನ ನಮ್ಮವ್ರು ಬರಿ ನೆಲದ ಮೇಲೆ ಕೂತ್ಕೊಂಡು ಅರೆಬೆತ್ತಲೆ ಬಟ್ಟೆಯಲ್ಲೇ ಸಾವಿರಾರು ವರ್ಷಗಳ ಹಿಂದೆನೇ ಕಂಡ್ ಹಿಡ್ದಿದ್ದಾರೆ.. ಇದೇನು ಇವಾಗ ಯಾರಿಗೂ ಗೊತ್ತಿರದೆ ಇರೋ ವಿಷಯ ಅಲ್ಲ ಬಿಡು..'

'So, what’s your point??'

'Nothing.. ನಂಗೆ ನಾನೇ ರಿಸರ್ಚ್ ಮಾಡಿ ಕಲಿ ಬೇಕು.. ಅದನ್ನ ಬರಿಬೇಕು.. ನಮ್ಮವರು 1000 ವರ್ಷಗಳ ಹಿಂದೆ ಕಟ್ಟಿದ್ದ ತಾಂಜಾಊರಿನ ಬೃಹದೇಶ್ವರ ಟೆಂಪಲ್ ತರ ಯಾವುದೇ ಇಂಜಿನಿಯರಿಂಗ್ ಡಿಗ್ರಿಗಳಿಲ್ಲದೆ ನಾನು ಕೂಡ ಅಂತಹ ಒಂದು ಸಾಧನೆಯನ್ನು ಮಾಡ್ಬೇಕು..'

ಆದಿ ನಗತೊಡಗಿದ.

'ಲೋಕಿ.. ಡೋಂಟ್ ವರಿ .. ನಾನ್ ನಿನ್ನ ಇಂಟರ್ನಲ್ಸ್ ಬರೀತಿನಿ.. ನೀನು ಸದ್ಯಕ್ಕೆ ಶುಂಠಿ ಬಿಸಿನೆಸ್ ಮಾಡು ಸಾಕು.. ಟೆಂಪಲ್ನ ಆಮೇಲೆ ಕಟ್ಸ್ವಂತೆ'

'ಲವ್ ಯು ಮಚಿ... ನಿಂಗೆ ಏನ್ ಟ್ರೀಟ್ ಬೇಕು ಕೇಳು .. ನಾನ್ ಕೊಡ್ತೀನಿ'

'ಏನು ಬೇಡಪ್ಪ.. ಬೃಹದೇಶ್ವರ ಟೆಂಪಲ್ ಅಂದ್ಯಲ್ಲ.. ನಂಗೆ ಯಾಕೋ ದ್ವಾರಸಮುದ್ರದ ಟೆಂಪಲ್ ಗೆ ಹೋಗ್ಬೇಕು ಅನ್ನಿಸ್ತಾ ಇದೆ.. ಅದೂ ಕೂಡ ಬೆಳ್ಳಂಬೆಳೆಗೆ..'

'ಅದಕ್ಕೇನಪ್ಪಾ.. ನಂದೇ ಖರ್ಚು.. ನೆಕ್ಸ್ಟ್ ವೀಕೇ ಹೋಗಣ.. ಇಂಟರ್ನಲ್ಸ್ ಮುಗ್ದ ಮೇಲೆ..'

'Done..' ಎಂದ ಆದಿ ಲೊಕೇಶನ ಹೊಸ ಬ್ಲೂ ಬುಕ್ಕಿನ ಮೇಲೆ ಆತನ ಹೆಸರನ್ನು ಬರೆದು ಬ್ಯಾಗಿನೊಳಗೆ ಇರಿಸಿದ.


****



ಮೂರು ಶತಮಾನಗಳ ಸಾಮ್ರಾಜ್ಯವೊಂದು ಕಟ್ಟಿಸಿದ ಒಂದುವರೆಸಾವಿರ ದೇವಾಲಯಗಳಲ್ಲಿ (!) ನಾಲ್ಕು ದಶಕ ಬೆವರು ಹರಿಸಿ ಕಟ್ಟಿಸಿದ ಈ ರಮ್ಯರಮಣೀಯ ದೇವಾಲಯದ ಆಯಸ್ಸೀಗ ಬರೋಬ್ಬರಿ ಒಂಬೈನೂರು ವರ್ಷಗಳು. ಹತ್ತಾರು ಆಕ್ರಮಣಗಳನ್ನು, ಭೂಕಂಪಗಳನ್ನು ಎದುರಿಸಿ ಗತಿಸಿದ ಇತಿಹಾಸಕ್ಕೂ ಹಾಗು ಪ್ರಸ್ತುತ ಪರಿಹಾಸ್ಯಕ್ಕೂ ನಿಂತಿರುವ ಏಕಮಾತ್ರ ಕೊಂಡಿಯಂತೆ ಕಾಣುತ್ತಿದೆ. ಈ ಕಲಾಶಕ್ತಿಕೇಂದ್ರ ಆಸಕ್ತಿದಾಯ ಕಣ್ಣುಗಳನ್ನು ತಮಗರಿಯಂದಂತೆ ಜಿನಿಗಿಸುವುದಂತೂ ಸುಳ್ಳಲ್ಲ. ಆ ಕೆತ್ತನೆ, ಆ ಚತುರತೆ, ಆ ಜೀವಂತಿಗೆ ಹಾಗು ಎಲ್ಲಿಲ್ಲದ ಶಾಂತತೆ. ಉತ್ತರ ದಿಕ್ಕಿನಿಂದ ದೇವಾಲಯದ ದ್ವಾರವನ್ನು ಪ್ರವೇಶಿಸಿದ ನನಗೆ ಗುಬ್ಬಚ್ಚಿಗಳ ಚಿಲಿಪಿಲಿ ನಾದವನ್ನು ಬಿಟ್ಟರೆ ಬೇರೇನೂ ಕೇಳಲಿಲ್ಲ. ತಂಪಾದ AC ಕೋಣೆಯೊಳಗೆ ಓದಂತೆ ತಣ್ಣಗಿನ ಪರಿಸರ ದೇವಾಲಯದೊಳಗೆ. ಮನಸಿನ ಬಾಯನ್ನು ಮುಚ್ಚಿಸುವ ಆ ಶಾಂತತೆಯಲ್ಲಿ ಚಿತ್ತವೂ ತಣ್ಣಗಾಗತೊಡದಿತು. ಹಾಗೆಯೆ ದೇವಾಯಲದ ಒಳಗೆ ಒಮ್ಮೆ ಕಣ್ಣಾಯಿಸಿದೆ. ನೆಲ, ಚಾವಣಿ, ಕಂಬಗಳಿಂದಿಡಿದು ಕಿಟಕಿ ದ್ವಾರಗಳೂ ಸಹ ಬಳಪದ ಕಲ್ಲಿನ ಬೈ ಪ್ರಾಡಕ್ಟುಗಳು. ಚೀವಿಂಗ್ ಗಮ್ಮನ್ನೂ ಬಹುಷಃ ಇಷ್ಟೊಂದು ಸ್ಪಷ್ಟವಾಗಿ ತಿದ್ದೀ ತೀಡಿ ಬಳುಕಿಸಿ ಕೊರೆಯಲು ಸಾಧ್ಯವಿಲ್ಲವೆನೋ. ಅಂತಹ ಚತುರತೆಯನ್ನು ಅಲ್ಲಿನ ಕಲ್ಲುಗಳ ಮೇಲೆ ಮೂಡಿಸಿರುವ ಶಿಲ್ಪಿಗಳ ಬೃಹತ್ವ ವರ್ಣನಾತೀತವಾದುದು. ನಯವಾದ ನುಣುಪಾದ ಮಂಟಪಗಳ ಮೇಲೆ ತನ್ನಿಂತಾನೇ ಕೂತ ನನ್ನ ದೇಹ ಪಕ್ಕದಲ್ಲಿದ್ದ ಕಲ್ಲಿನ ಕಂಬವೊಂದಕ್ಕೆ ಒರಗಿಕೊಂಡಿತು. ಪೂರ್ವದಿಂದ ರಂಗೇರುತ್ತಿದ್ದ ಆಗಸದ ಹೊಳಪು ನಕ್ಷತ್ರಗಳಂತೆ ಕೊರೆದಿರುವ ದೇವಾಲಯದ ಕಿಟಕಿಗಳ ಸಂದುಗಳಿಂದ ಮೋಹಕವಾಗಿ ಮೂಡತೊಡಗಿತ್ತು.ತನಗರಿಯಂದತೆಯೇ ನನ್ನ ಕಣ್ಣುಗಳು ಮುಚ್ಚಿಕೊಂಡವು. ಗುಬ್ಬಿಗಳ ಚಿಲಿಪಿಲಿ ಸದ್ದು ಕ್ರಮೇಣ ಮರೆಯಾಯಿತು. ಇಹಲೋಕದ ಪರಿಜ್ಞಾನವೇ ಕೊನೆಗೆ ಇಲ್ಲದಂತಾಯಿತು.

'ಮಚಿ, ಈ ದೇವಸ್ಥಾನಕ್ಕೆ ಮಾತ್ರ ವಿಮಾನ ಯಾಕಿಲ್ಲ..' ದೂರದಿಂದ ದೇವಾಲಯವನ್ನು ಕೈಕಟ್ಟಿ ನೋಡುತ್ತಿದ್ದ ಲೋಕೇಶ ಆದಿಯನ್ನು ಕೇಳಿದ.

'ವಿಮಾನನ?' ಎಂದು ಗಂಟಿಕ್ಕಿಕೊಂಡ ಆದಿಯ ಉಬ್ಬುಗಳ ಅರ್ಥವನ್ನು ಅರಿತ ಲೋಕೇಶ,

'ಹೌದು, ವಿಮಾನ. ನಮ್ಮ ಬಹಳಷ್ಟು ದೇವಾಲಯಗಳ ದ್ವಾರದಲ್ಲಿ ಅಥವಾ ದೇವಾಲಯದ ಮೇಲೆ ಕಾಣುವ ತ್ರಿಭುಜಾಕೃತಿ ಅಥವಾ ಗೋಪುರಾಕೃತಿಯ ರಚನೆ'

'ಹೌದಲ್ಲ..’ ಎಂದ ಆದಿ , ‘ಆದ್ರೂ ವಿಮಾನ ಇಲ್ದೆನೇ ದೇವಸ್ಥಾನ ಒಂತರ ಚೆನ್ನಾಗಿದೆ..' ಎಂದ. ಕೆಲಹೊತ್ತು ಸುಮ್ಮನಾಗಿ, 'ವಿಮಾನ? ಈತರ ಹೆಸ್ರು ಯಾಕಿರಬಹುದು.. ಏನ್ ಇಲ್ಲಿ ಪ್ಲೈನ್ ಲ್ಯಾಂಡ್ ಮಾಡ್ಬಹುದಾ' ಎಂದು ಕೇಳಿದ.

ಲೋಕೇಶ ನಗುತ್ತಾ, 'ಮಚಿ, ನಮ್ಮ ಹಿರೀಕ್ರು ನಮಗಿಂತ ಅದೆಷ್ಟು ಮುಂದುವರೆದಿದ್ರೂ ಅನ್ನೋದಕ್ಕೆ ಅವಾಗ ವಿಡಿಯೋ ರೆಕಾರ್ಡಿಂಗ್ಸ್ಗಳಿರಲಿಲ್ಲ… ಮಿಗಿಲಾಗಿ ಅವ್ರಿಗೆ ಅದನ್ನ ರೆಕಾರ್ಡ್ ಮಾಡಿ ಸೋಶಿಯಲ್ ನೆಟ್ವರ್ಕ್ಗಳಲ್ಲಿ ಹಾಕ್ಬೇಕು ಅನ್ನೋ ತೆವಲು ಸಹ ಇರ್ಲಿಲ್ಲ.. ಒಂದು ಪಕ್ಷ ಅದು ಇದ್ದಿದ್ರೆ ಅಥವಾ ದೇವಾಲಯದ ಕಲ್ಲುಗಳಿಗೇ ಮಾತು ಬರುವಂತಿದ್ರೆ ನಾವು ಆಗಿನ ಅದೆಷ್ಟು ವಿಸ್ಮಯಗಳನ್ನು ಕಾಣ್ತಿದ್ದೆವೋ ಏನೋ.. 7000 ವರ್ಷಗಳ ಹಿಂದಿನ ರಾಮಾಯಣದ ಕಾಲದಲ್ಲೇ ಪುಷ್ಪಕ ವಿಮಾನ ಎಂಬ ಹೆಸರು ಬಂದಿದೆ ಅಂದ್ರೆ ನಮ್ಮವರಿಗೆ ಇಂತಹ ಆಟೋಮೇಷನ್ಸ್ ಗಳ ಬಗ್ಗೆ ಸಾವಿರಾರು ವರ್ಷಗಳ ಹಿಂದೆಯೇ ಸ್ಪಷ್ಟ ಕಲ್ಪನೆ ಇತ್ತು ಅಂತ ಆಯ್ತು..ವಿಮಾನ means ವಿಮಾನ..ಹಾರುವ ವಸ್ತು.. ಏರೋಡೈನಾಮಿಕ್ಸ್ ಬುಕ್ಸ್ ತಗೊಂಡು ಓದಿದ್ರೆ ಇಂತಹ ತ್ರಿಭುಜಾಕೃತಿಯ ರಚನೆಗಳೇ ಹಾರಲು ಸೂಕ್ತ ಎಂಬುದನ್ನು ಕಾಣ್ತಿವಿ.. ಇವಾಗಿನ ಅದೆಷ್ಟು ವೆಸ್ಟೆರ್ನ್ ಮೂವಿಗಳಲ್ಲಿ ಇಂತಹ ಹಾರೋ ಫ್ಲೈಟ್ ಗಳನ್ನ ನಾವ್ ಕಾಣಲ್ಲ ಹೇಳು.. ವಿಪರ್ಯಾಸ ಅಂದ್ರೆ ನಾವು ಡೀಪ್ ಆಗಿ ನಮ್ಮವರ ಕ್ರಿಯೇಟಿವಿಟಿ ಬಗ್ಗೆ ಸ್ಟಡಿ ಮಾಡಲ್ಲ.. M.S, Mtech, CA, MBA ಇಷ್ಟ್ ಬಿಟ್ರೆ ಕಲೆ ಸಂಸ್ಕೃತಿ ಹಿಸ್ಟರಿಗಳನ್ನೆಲ್ಲ ಆಸ್ಥೆಯಿಂದ ಓದೋರು ಇವತ್ತಿನ ಕಾಲದಲ್ಲಿ ಎಷ್ಟ್ ಜನ ಸಿಗ್ತಾರೆ ಹೇಳು.. ನನ್ನ್ ಪ್ರಕಾರ ಈ ವಿಮಾನಗಳು ಹಾಗು ಬ್ರಹ್ಮಾಂಡಕ್ಕೂ ಏನೋ ಒಂದು ಕನೆಕ್ಷನ್ ಇದೆ.. ಏನು ಅಂತ ಮಾತ್ರ ಕೇಳ್ಬೇಡ.. But ಏನೋ ಒಂದು ಕನೆಕ್ಷನ್ ಇದೆ..' ಎಂದು ಲೋಕೇಶ ಸುಮ್ಮನಾದ.

ದೇವಾಲಯವನ್ನು ಪ್ರವೇಶಿಸುವ ಮೊದಲು ಅದರ ಹೊರಗಿನ ರಚನೆ ಹಾಗು ಆಕೃತಿಯನ್ನೇ ಭಿನ್ನ ವಿಭಿನ್ನವಾಗಿ ನೋಡುತ್ತಾ, ಚರ್ಚಿಸುತ್ತಾ ಇಬ್ಬರು ಮುನ್ನೆಡೆಯುತ್ತಿದ್ದರು. ಈಶ್ವರನಿಗೆ ಸಮರ್ಪಿತವಾಗಿರುವ ಈ ದೇವಾಲಯದ ಕೆತ್ತನೆ ಹಾಗು 'ಭಿತ್ತನೆ'ಯಲ್ಲಿ ಹಲವಾರು ಮಹತ್ವದ ಅಂಶಗಳು ಕಾಣಸಿಗುತ್ತವೆ. ಅದು ಯಾಂತ್ರಿಕಯುಗವಲ್ಲದ ಕಾಲದಲ್ಲಿ ಸುರುಳಿಯಾಕೃತಿಯಲ್ಲಿ ನಯವಾಗಿ ಕೆತ್ತಿರುವ ಕಂಬಗಳಾಗಿರಬಹುದು, ನಿಜ ಬಸವನೇ ಬಂದು ಮಂಡಿಯೂರಿ ಕೂತಿರುವಂತಿರುವ ಕಲ್ಲಿನ ಜೀವಂತಿಕೆಯಾಗಿರಬಹದು ಅಥವಾ ಇಡೀ ರಾಮಾಯಣ, ಮಹಾಭಾರತದ ಕತೆಯನ್ನು ಸೈನಿಕರ, ಕುದುರೆಗಳ, ರಣರಂಗಗಳ, ನೃತ್ಯಗಾರ್ತಿಯರ ಮೂಲಕ ಕೆತ್ತಿರುವ ಭಿತ್ತನೆಯಾಗಿರಬಹದು. ಒಟ್ಟಿನಲ್ಲಿ ಇಂತಹ ಅಗಣಿತ ವಿಸ್ಮಯಗಳ ಮೋಹಕ ಕೃತಿಯಾಗಿ ಹೊಯ್ಸಳರ ವಿಷ್ಣುದೇವರಾಯ ಕಟ್ಟಿಸಿದ ದ್ವಾರಕಾಸಮುದ್ರದ ಈ ದೇವಾಲಯ ಇಂದು ನಮ್ಮ ಮುಂದಿದೆ.

'ಲೋಕಿ, ಬಾ ಇಲ್ಲಿ...' ವಿಸ್ಮಯವನ್ನೇನೋ ಕಂಡಂತೆ ಆದಿ ದೇವಾಲಯದ ಪ್ರಾಂಗಣದಲ್ಲಿದ್ದ ಕಲ್ಲಿನ ಮೂರ್ತಿಯೊಂದನ್ನು ತುಂಬಾ ಹತ್ತಿರದಿಂದ ನೋಡುತ್ತಾ ಕೂಗಿದ. ಕೂಡಲೇ ಲೋಕೇಶ ಅವನ ಬಳಿಗೋಗಿ ನೋಡಿದರೆ ಪ್ರಸ್ತುತ ಕಾಲದಲ್ಲಿ ಅಂತರಿಕ್ಷಯಾನಿಗಳು ತೊಡುವ ದುಂಡಾದ ಹೆಲ್ಮೆಟ್ ಹಾಗು ಕೈಗೆ ಅವರಂತೆಯೇ ಧರಿಸಿರುವ ದಪ್ಪನಾದ ಗ್ಲೋಸ್ಸ್ಗಳನ್ನು ತೊಟ್ಟ ವ್ಯಕ್ತಿಯ ಮೂರ್ತಿಯೊಂದು ಕಾಣುತ್ತದೆ!

'ನಮ್ಮವ್ರಿಗೆ ಆವಾಗಲೇ ಸ್ಪೇಸ್ ಟ್ರಾವೆಲ್ ಬಗ್ಗೆ ಗೊತ್ತಿತ್ತೇನೋ?!' ಆದಿ ಆಶ್ಚರ್ಯಚಕಿತನಾಗಿ ಕೇಳಿದ.

'ಇರ್ಬಹುದು .. ಅಥವಾ ಇಲ್ದೇನೂ ಇರ್ಬಹುದು'

‘What do you mean .. ಇಲ್ಲ ಅಂದ್ರೆ ಅಂತರಿಕ್ಷಯಾನಿಗಳು ಹಾಕೋ ತರ ಮುಖ ಮುಚ್ಚಿದ ಮುಖವಾಡವನ್ನು ಯಾಕೆ ಹಾಕೋಂತರೇ?'

'ಯಾರಿಗೊತ್ತು .. ಯುದ್ಧದ ಟೈಮಲ್ಲಿ ತಲೆಗೆ ರಕ್ಷಣೆಗೆ ಅಂತ ಇರೋ ಗೌರ್ಡ್ ಅದಾಗಿರಬಹುದು ?!' ಎಂದು ತಾರ್ಕಿಕ ಉತ್ತರವನ್ನು ನೀಡಿದ ಲೋಕೇಶ .

'ಹಾಗಾದ್ರೆ ನಮ್ಮವ್ರಿಗೆ ಸ್ಪೇಸ್ ಟೆಕ್ನಾಲಜಿ ಬಗ್ಗೆ ಗೊತ್ತೇ ಇರ್ಲಿಲ್ಲ ಅಂತಾನಾ?'

'ನೋಡು ಆದಿ.. ಇಲ್ಲಿರೋ ಕೆಲ ಆಕೃತಿಗಳನ್ನ ನೋಡಿ ಪ್ರಸ್ತುತ ಟೆಕ್ನಾಲಜಿಗಳಿಗೆ ಅವುಗಳನ್ನು ಕಲ್ಪಿಸಿ ಇದು ಅದೆಯೇ ಅಂತ ಹೇಳೋದು ಮೂರ್ಖತನವಾಗುತ್ತೆ. ಫಸ್ಟ್ ಆಫ್ ಆಲ್ ನಾವು ಆಗಿನ ಕಾಲದವರನ್ನು ಈಗಿನವರೊಟ್ಟಿಗೆ ಕಂಪೇರ್ ಮಾಡೋದೇ ಮೊದಲ ತಪ್ಪು. ಅವ್ರು ಆಗಿನ ಕಾಲಕ್ಕೆ ದಿ ಗ್ರೇಟ್ ಅನ್ನಬಹುದಾದ ಜನಾಂಗ. ಯಾವುದೇ ಮೋಟಾರು, ಕರೆಂಟು, ಡಿಸೇಲು ಮತ್ತೊಂದು ಮಗದೊಂದುಗಳೆಂಬ ಆಧುನಿಕ ಯಂತ್ರೋಪಕರಣಗಳಿಲ್ಲದೆ ಇಷ್ಟೆಲ್ಲಾ ನಿರ್ಮಿಸಿ ತೋರಿಸಿದ್ದಾರೆ ಎಂದರೆ ಅವರ ಅಸಾಧಾರಣ ಕಲೆಗೆ ನಾವು ತಲೆಬಾಗಲೇಬೇಕು. ಪ್ರತಿ ಮೂರ್ತಿಗಳಲ್ಲಿ ಇರೋ ಆ ಡೀಟೇಲ್ ಹಾಗು ಇನ್ಫಾರ್ಮಶನ್ ಗಳೇ ಅದಕ್ಕೆ ಸಾಕ್ಷಿ. ಶ್ರೀಕೃಷ್ಣ ಎತ್ತಿ ಹಿಡಿದಿರುವ ಆ ಪರ್ವತವನ್ನು ನೋಡು. ಮೂರಡಿ ಉದ್ದದ ಆ ಕಲ್ಲಿನಲ್ಲಿ ಹಾವು, ಹುಳ, ಮಾನವ, ಮರ, ಹಕ್ಕಿ, ಹುಲಿ, ಬಾಳೆಯ ಗಿಡ ಹಾಗು ಅದರ ಗೊನೆ ಎಂಬ ಎಲ್ಲವನ್ನು ತೋರಿಸಿ ಪರ್ವತ ಎಂಬವುದರ ಸ್ಪಷ್ಟ ಕಲ್ಪನೆಯನ್ನು ಅದೆಷ್ಟು ಸೊಗಸಾಗಿ ತೋರಿಸಿದ್ದಾರೆ . ಆ ನರಹಹರಿಯ ಮೂರ್ತಿಯನ್ನು ಗಮನಿಸಿದ? ಹಿರಣ್ಯ ಕಶುಪುವಿನ ಕರುಳನ್ನೇ ಬಗೆದು ಸುರುಳಿಯಾಗಿ ಸುತ್ತಿ ತನ್ನ ಕೊರಳಿಗೆ ಹಾರವನ್ನಾಗಿ ಹಾಕಿಕೊಂಡಿರುವುದಾಗಲಿ, ತನ್ನ ಇನ್ನೊಂದು ಕೈಯಲ್ಲಿ ಆತನ ರಕ್ಷಕನ ಮುಖದ ಚರ್ಮವನ್ನು ಸಿಟ್ಟಿನಿಂದ ಎಳೆದಿರುವ ರಭಸಕ್ಕೆ ಆತನ ಕಣ್ಣುಗುಡ್ಡೆಗಳೇ ಕಿತ್ತು ಬಂದಿರುವ ಆ ಕಲ್ಲಿನ ಕೆತ್ತನೆಯನ್ನು ವರ್ಣಿಸಲು ಅಸ್ಸಾಧ್ಯ..ಇಂತಹ ಕಲೆ ಹಾಗು ಕುಶಲತೆಯನ್ನು ಪ್ರಸ್ತುತಕ್ಕೆ ಹೋಲಿಸುವುದು ಸುತರಾಂ ಸರಿಯಲ್ಲ. ಆದರೆ ಆವಾಗಲೇ ಹೇಳಿದಂತೆ ವಿಮಾನ ಹಾಗು ಇತರ ಕಲ್ಪನೆಗಳು ನಮ್ಮವರಿಗೆ ನಿಜವಾಗಿಯೂ ಇದ್ದಿರಲೂ ಬಹುದು. ಕಾರಣಾಂತರಗಳಿಂದ ಆ ತಂತ್ರಗಾರಿಕೆ ಕಾಲಘಟ್ಟದಲ್ಲಿ ಮರೆಯಾಗಿರಲೂಬಹುದು. ಆದರೆ ನನ್ನಂತವರಿಗೆ ಇಂತಹ ದೇವಾಲಯಗಳು ನಾವುಗಳು ಅದೆಷ್ಟೇ ಮುಂದುವರೆದಿದ್ದೀವಿ ಎಂದು ಬೀಗಿದರೂ ಕೈಹಿಡಿದು ನೆಲಕ್ಕೆ ತಂದು ನಿಲ್ಲಿಸುವ ಆತ್ಮಸಾಕ್ಷಿಗಳಂತೆ ಕಾಣುತ್ತವೆ' ಎನ್ನುತ್ತಾನೆ.

ಇಬ್ಬರ ಮದ್ಯೆ ಈ ಭಾರಿ ಚರ್ಚೆ ತುಸು ಧೀರ್ಘವಾಗಿ ಸಾಗಿತು.

'ಓಂ.......' ಕಣ್ಣು ಮುಚ್ಚಿ ಅದೆಷ್ಟೋ ಹೊತ್ತಿನ ನಂತರ ತನ್ನಿಂತಾನೇ ನನ್ನೊಳಗೆ ಮೂಡ ಹತ್ತಿದ ಓಂಕಾರದ ನಾಧ ಬಹಳ ಹೊತ್ತಿನವರೆಗೂ ಹಾಗೆಯೇ ಮುಂದುವರೆಯಿತು. ಲೋಕೇಶ ಹಾಗು ಆದಿಯರಿಬ್ಬರೂ ಅಷ್ಟರಲ್ಲಾಗಲೇ ದೇವಾಲಯದ ಒಳಗೆ ಬಂದು, ನಾನು ಧ್ಯಾನವನ್ನು ಮಾಡುತ್ತಿರುವುದನ್ನು ಕಂಡು ಅದರ ಇನ್ನೊಂದು ದಿಕ್ಕಿಗೆ ಹೋಗಿ ತಮ್ಮ ರಿಸೀರ್ಚನ್ನು ಮುಂದುವರಿಸಿದ್ದರು. ಸ್ಪಷ್ಟವಾಗಿ ಮೂಡಹತ್ತಿದ ಓಂಕಾರ ಕೆಲಹೊತ್ತಿನ ನಂತರ ಒಮ್ಮೆಲೇ ನಿಂತಿತು. ಅರೆಬರೆಯಾಗಿ ನನಗೆ ಇಹಲೋಕದ ಪ್ರಜ್ಞೆ ಬರತೊಡಗಿತು. ಪೂರ್ವದಲ್ಲಿ ಚೇತನಸ್ಫೂರ್ತಿಯಂತೆ ಸೂರ್ಯದೇವ ಕಿರಣಗಳ ಮೂಲಕ ತನ್ನನ್ನು ತಾನು ಪ್ರತಿಷ್ಠಾಪಿಸಿಕೊಂಡಿದ್ದ. ಪಕ್ಷಿಗಳು ಚಿಲಿಪಿಲಿಗುಟ್ಟುತ್ತಿದ್ದವು. ಮನಸ್ಸು ಹಗುರಾಗಿದ್ದಿತು. ಕಣ್ಣೀರ ಧಾರೆ ಹರಿದು ನನ್ನ ಕೆನ್ನೆಗಳು ತೇವವಾಗಿದ್ದವು.

ಕಲೆಯನ್ನೇ ಗೋಡೆಯನ್ನಾಗಿ ನಿರ್ಮಿಸಿರುವ ಅಗಣಿತ ಸಂಖ್ಯೆಯ ಆ ಕೆತ್ತನೆಗಳನ್ನು ನೋಡುತ್ತಾ ಅಕ್ಷರ ಸಹ ಮಾತು ಬಾರದಂತಹ ಅನುಭವ. ಹಿತವಾದ ಪರಿಸರ, ಹಗುರಾದ ಮನಸ್ಸು, ಅಚ್ಚುಗಟ್ಟಾಗಿ ಬಣ್ಣ ಬಳಿದಂತೆ ಹರಡಿಕೊಂಡಿರುವ ಹಸಿರಿನ ಜೊತೆಗೆ ಒಬ್ಬರನ್ನೊಬ್ಬರು ರೇಗಿಸುತ್ತಾ, ನಗುತ್ತ ಹೆಜ್ಜೆಯಾಕುತ್ತಿದ್ದ ನನ್ನವರು.. ಈಶ್ವರ ದೇವರ ಆಶ್ರಿವಾದವನ್ನು ಪಡೆದು ವಾಪಸ್ಸು ಹೊರಡಲು ಯಾಕೋ ಮನಸ್ಸೇ ಕೇಳುತ್ತಿಲ್ಲ. ಆದರೆ ದೇವಸ್ಥಾನಕ್ಕೆ ಆಗಮಿಸುವ ಜನಜಂಗುಳಿಯೂ ಕ್ರಮೇಣ ಹೆಚ್ಚಾಗತೊಡಗಿತು. ಮುಂಜಾವಿನಲ್ಲಿದ್ದ ಆ ತನ್ಮಯತೆ ಹೊತ್ತು ಮೂಡಿದಂತೆ ಮರೆಯಾಗತೊಡಗಿತು. ಒಲ್ಲದ ಮನಸ್ಸಿನಿಂದ ಹಿಂದುರಿಗಿ ನೋಡುತ್ತಲೇ ಅಲ್ಲಿಂದ ಬೀಳ್ಕೊಡಬೇಕಾಯಿತು.



****



'ಹಲೋ..!' ಉದ್ವೇಗಭರಿತ ಸಹಜ ಧ್ವನಿಯಲ್ಲಿ ಮೂಡಿದ ಆಕೆಯ ಆ ಧ್ವನಿಯನ್ನು ಸುಮಾರು ವರ್ಷಗಳ ನಂತರ ಕೇಳಿದ ಆದಿ ಕಣ್ಣನೊಮ್ಮೆ ಗಟ್ಟಿಯಾಗಿ ಮುಚ್ಚಿ ಆಕಾಶದೆಡೆಗೆ ಮುಖವನ್ನು ಮಾಡಿದ. ಸಂಜೆಯ ಹಿತವಾದ ಗಾಳಿ ಟೆರೇಸ್ನ ಮೇಲೆ ಹಾಯಾಗಿ ಬೀಸುತ್ತಿತ್ತು. ಅಗಣಿತ ಕಿಲೋಮೀಟರ್ ದೂರದ ನಕ್ಷತ್ರಗಳೊಟ್ಟಿಗೆ ನಗರದ ಲೈಟುಗಳೂ ಮಿರಿ ಮಿರಿ ಮಿನುಗತೊಡಗಿದ್ದವು. ಅದೆಷ್ಟೋ ದಿನಗಳ ನಂತರ ಅದೇನೋ ಒಂದು ಬಗೆಯ ಖುಷಿಯ ಹಿತಾನುಭಾವ ಆದಿಯ ಮನದೊಳಗೆ. ಮುಂಬರುವ ಪ್ರತಿ ಕ್ಷಣವನ್ನು ತೀವ್ರವಾಗಿ ಕಾತರದಿಂದ ಕಾಯುವಂತೆ ಸಂತೋಷದ ಬುಗ್ಗೆಗಳು ಮೂಡದೇ ಅದೆಷ್ಟೋ ವರ್ಷಗಳಾಗಿದ್ದ ಆದಿಯ ಮನಸ್ಸು ಇಂದು ಹೂವಂತೆ ಅರಳತೊಡಗಿತ್ತು. ಕಳೆದ ಎಂಟತ್ತು ವರ್ಷದ ವರ್ಷದ ಪ್ರತಿ ಘಳಿಗೆಯೂ ಒಂದಿಲ್ಲೊಂದು ಕಾರಣಗಳಿಂದ ನೆನೆಪಿಸಿಕೊಳ್ಳುತ್ತಿದ್ದ ವ್ಯಕ್ತಿಯ ಧ್ವನಿ ಇಂದು ತನ್ನ ಕಿವಿಗಳ ಮೇಲೆ ಬೀಳುತ್ತಿದೆ. ಆತನಿಗೆ ಅದು ನಿಜವೆಂದು ನಂಬಲು ಆಗುತ್ತಿಲ್ಲ. ಆರ್ಕುಟ್ ಎಂಬ ಮಾಯಾಜಿಂಕೆಗೆ ಮೋಹಗೊಂಡಿರುವ ಯುವಪಡೆ ಅದರಲ್ಲಿ ತಮ್ಮದೊಂದು ಪ್ರೊಫೈಲನ್ನು ತೆರೆದು ಮಾಡುವ ಮೊದಲ ಕೆಲಸವೇ ತಮ್ಮ ಹಳೆಯ ಗೆಳಯ ಗೆಳತಿಯರನ್ನು ಅರಸುವುದು. ಅಲ್ಲಿಯವರೆಗೂ ಇಮೇಲು,ಮೊಬೈಲು, ಮೆಸೇಜುಗಳು ಮಾತ್ರವೇ ಸ್ನೇಹದ ಕೊಂಡಿಗಳಾಗಿದ್ದ ಕಾಲದಲ್ಲಿ ಪ್ರಪಂಚದ ಅದ್ಯಾವ ಮೂಲೆಯಲ್ಲೋ ಕೂತು ಒಮ್ಮೆಗೆ ಹತ್ತಾರು ಜನರೊಟ್ಟಿಗೆ ಫ್ರೀಯಾಗಿ ಏಕಕಾಲದಲ್ಲಿ ಸಂಧಿಸಬಹುದಾದ ಒಂದು ವಸ್ತುವಿದ್ದರೆ ಅದಕ್ಕಿಂತ ಮಿಗಿಲಾದ ವರ ಬೇರೊಂದು ಇರಲಿಲ್ಲ. ಅಂತಹ ಆರ್ಕುಟ್ ಎಂಬ ಆಧುನಿಕ ವರದಲ್ಲಿ ತನ್ನದೊಂದು ಪ್ರೊಫೈಲನ್ನು ತೆರೆದು ಆದಿ ಮೊದಲು ಮಾಡಿದ ಕೆಲಸವೇ ಖುಷಿಯೆಂಬ ಹೆಸರಿನ ಪ್ರೊಫೈಲ್ಗಳನ್ನು ಅರಸುವುದು. ಸರಿಸುಮಾರು ಇನ್ನೂರು ಅಂತಹ ಪ್ರೊಫೈಲ್ಗಳನ್ನು ಅರಸಿ ಕೊನೆಗೆ ಸುಮಾರು ಮೂರುಸಾವಿರ ದಿನಗಳ ಹಿಂದೆ ಕಂಡಿದ್ದ ಚಹರೆ ಇದೇ ಎಂದು ಗುರುತಿಸಿ ಆಕೆಯನ್ನು ತನ್ನ ಫ್ರೆಂಡ್ ಲಿಸ್ಟ್ ನಲ್ಲಿ ಹಾಕಿದ. ಆಕೆಯೂ ತಿಳಿದೋ ತಿಳಿಯದೆಯೋ ಎಂಬಂತೆ ಈತನ ರಿಕ್ವೆಸ್ಟ್ ಅನ್ನು accept ಮಾಡಿದ್ದಳು. ಒಂದೆರೆಡು ಹಾಯ್ ಹಲೋ ಎಂಬ ಮೆಸ್ಸೇಜುಗಳ ನಂತರ ತನ್ನನ್ನು ಅವನೆಂದೂ, ಆಕೆಯನ್ನು ಅವಳೇ ಎಂದೂ, ಇಬ್ಬರೂ ಇಬ್ಬರನ್ನು ಗುರುತಿಸಿಕೊಂಡ ಮೇಲೆ ಆಕೆಯ ಮೊಬೈಲ್ ನಂಬರನ್ನು ಕೇಳಿದ ಆದಿ. ಮುಂದೆ ಜೀವಮಾನವಿಡಿ ಮರೆಯಲಾಗದಂತಹ ದೊರೆತ ಆ ನಂಬರನ್ನು ಆದಿ ತನ್ನ ಮಸ್ತಿಷ್ಕದೊಳಗೆ ಕ್ಷಣಮಾತ್ರದಲ್ಲಿಯೇ ಹಚ್ಚೋತ್ತಿಕೊಂಡ. ಅದಾದ ಮರುದಿನವೇ ಎಂದರೆ ಪ್ರಸ್ತುತ ದಿನ ಆಕೆಗೆ ಫೋನಾಯಿಸಿದ. ಹಸುವನ್ನು ಅರಸುತ್ತಿರುವ ಕರುವಿಗೆ ಬೀಳುವ ಘಂಟೆಯ ಸದ್ದಿನಂತೆ ಆಕೆಯ 'ಹಲೋ' ಎಂಬ ಆ ಎರಡಕ್ಷರದ ಧ್ವನಿ. ಆಕೆಯೊಟ್ಟಿಗೆ ಹೇಗೆ ಪ್ರಾರಂಭಿಸಬೇಕು, ಏನು ಮಾತಾಡಬೇಕು ಎಂದೆಲ್ಲ ಯೋಚಿಸಿದ್ದ ಆತನಿಗೆ ಈಗ ಮಾತೆ ಹೊರಬಾರದಂತಹ ಅನುಭವ.

'ಹಾಯ್...' ರಾಗವಾಗಿ ಆದಿ ಉತ್ತರಿಸಿದ.

'ಹಾಯ್...' ಅದೇ ರಾಗದಲ್ಲಿ ಆಕೆಯೂ ಅತ್ತಕೆಡೆಯಿಂದ ಪುನಃ ಉತ್ತರಿಸಿದಳು. ಮೊದಲ 'ಹಲೋ' ವಿನಲಿದ್ದ ಉದ್ವಿಗ್ನತೆ ಈ ಬಾರಿಯ 'ಹಾಯ್' ನಲ್ಲಿ ಇರಲಿಲ್ಲ. ಈ 'ಹಾಯ್' ಇಂಪಾಗಿಯೂ, ಮಧುರವಾಗಿಯೂ ಮೂಡಿದ್ದಿತು.

'Guess me...?' ಆದಿ ಹೇಳಿದ. ನೆನ್ನೆಯಷ್ಟೇ ಆಕೆಯ ನಂಬರನ್ನು ಪಡೆದು, ಇಂದು ಸಂಜೆ ಫೋನನ್ನು ಮಾಡುತ್ತೀನಿ ಎಂದೂ ಸಹ ಹೇಳಿ, ಈಗ 'Guess me...?' ಎಂದ ತನ್ನ ಪೆದ್ದುತನದ ಅರಿವಾಗಿ ತನ್ನ ನಾಲಿಗೆಯನ್ನು ಕಚ್ಚಿಕೊಂಡ. ಆಕೆಯೂ ಈತನ ಪ್ರೆಶ್ನೆಗೆ ಏನೇಳಬೇಕೆಂದು ತಿಳಿಯದೆ ಸುಮ್ಮನಾದಳು. ಜೀವನದ ಮಹತ್ವದ ತಿರುವಿನ ಮೊದಲ ಹೆಜ್ಜೆಯಲ್ಲೇ ಕುಂಟತೊಡಗಿದ ಆದಿ ಹೇಗೋ ಸಂಭಾಷಣೆಯನ್ನು ಮುಂದುವರೆಸಿದ. ಆದಿನ ನೆಡೆದ ಕೆಲವೇ ನಿಮಿಷಗಳ ಸಂಭಾಷಣೆ ಪ್ರಸ್ತುತ ಓದುತ್ತಿರುವ ಕಾಲೇಜು,ತಮ್ಮ ಶಾಲೆ, ಬಾಲ್ಯದ ದಿನಗಳು, ಬೋಧಿಸುತ್ತಿದ್ದ ಶಿಕ್ಷಕವರ್ಗ ಎಲ್ಲವನ್ನೂ ಒಮ್ಮೆ ಸಂಕ್ಷಿಪ್ತವಾಗಿ ಮೆಲುಕುಹಾಕಿತು. 'PT ಸರ್ ಈಗ್ಲೂ ಇದ್ದಾರೆ ಕಣೆ..' ಎಂದ ಆದಿಯ ಮಾತಿಗೆ ಹೌದೆಂದು ಆಕೆ ಉತ್ತರಿಸಿದಳು. ಮಾತಿನ ಹೊಳೆಯಲ್ಲಿ ಮುಳುಗಿ ತನ್ನ ಸುತ್ತಲಿನ ಪ್ರಪಂಚವನ್ನೇ ಮರೆತಿದ್ದ ಆದಿಗೆ ಲೋಕೇಶ ಬಂದು ಊಟಕ್ಕೆ ಕರೆದದ್ದೂ ತಿಳಿಯದಾಯಿತು. ಅಲ್ಲದೆ ಮೊಬೈಲಿನ ಬ್ಯಾಲೆನ್ಸ್ ತನ್ನ ಕೊನೆಯುಸಿರನ್ನು ಎಳೆಯುವ ಮೊದಲು ಫೊನಿಡಬೇಕು ಇಲ್ಲವಾದರೆ ಮೆಸ್ಸೇಜುಗಳನ್ನೂ ಕಳುವಿಸಲು ಬಹುಷಃ ಆಗದು ಎಂಬುದೂ ಸಹ ಅರಿಯದಾಯಿತು. ವಾಸ್ತವವಾಗಿ ಆತನಿಗೆ ಆ ಸಂಭಾಷಣೆ ನಿಜವೆಂದು ಅರಿಯಲೇ ಸಾಧ್ಯವಾಗದಾಯಿತು. ಅಂತಹ ಅದೆಷ್ಟು ಸಂಭಾಷಣೆಗಳನ್ನು ಆತ ಕಳೆದ ಎಂಟು ವರ್ಷಗಳಲ್ಲಿ ಮಾಡಿದ್ದಾನೋ ಆತನಿಗೇ ಲೆಕ್ಕವಿಲ್ಲ. ಆಗೆಲ್ಲ ಈತನೊಬ್ಬನೇ ಮಾತಾಡುವ ವಾಚಕನಾದರೆ ಆಕೆ ಕೇವಲ ಕೇಳುವ ಕಾಲ್ಪನಿಕ ಗೊಂಬೆಯಾಗಿರುತ್ತಿದ್ದಳು. ಅಷ್ಟರಲ್ಲಿ ಆಕೆಯೇ 'ಸರಿ ಕಣೋ, ಇನ್ನೊಂದ್ ದಿನ ಮಾತಾಡೋಣ.. ಟೈಮ್ ಆಯ್ತು' ಎಂದಳು. ಆಕೆಯ ಮಾತನ್ನು ಕೇಳಿದ ಆದಿಗೆ ಸಮಯದ ಮೇಲೆಯೇ ಕೋಪ ಬರತೊಡಗಿತು. ಒಂದರಿಂದೊಂದು ಮೂಡುತ್ತಿದ್ದ ಸಂತೋಷದ ಬುಗ್ಗೆಗಳು ಒಮ್ಮೆಲೇ ಕಾಣೆಯಾಗತೊಡಗಿದವು. ಮತ್ತದೇ ಬಗೆಯ ದುಗುಡದ ಛಾಯೆ ಆತನನ್ನು ಆವರಿಸತೊಡಗಿತು. ಆಕೆಗೆ ಒಂದು ಪದವನ್ನು ಆಡಲೂ ಬಿಡದೆ ತಾನೇ ಪಟಪಟನೆ ಮಾತಾಡತೊಡಗಿದ ಆದಿ ಈಗ ಫೋನನ್ನು ಇಡದಿರಲು ಕಾರಣಗಳನ್ನು ಯೋಚಿಸತೊಡಗಿದ. ಕೊನೆಗೆ ಬೇರೆ ದಾರಿಕಾಣದೆ ಒಲ್ಲದ ಮನಸ್ಸಿನಿಂದ 'ಸರಿ ಕಣೆ.. ಗುಡ್ನೈಟ್, ಸ್ವೀಟ್ ಡ್ರೀಮ್ಸ್, ಟೇಕ್ ಕೇರ್' ಎಂದಾಗ ಆಕೆ ಅದನ್ನೇ ಪುನರಾವರ್ತಿಸಿ ಫೋನನ್ನು ಇಟ್ಟಳು. ಬೆವರಿನಿಂದ ಒದ್ದೆಯ ಮುದ್ದೆಯಾಗಿದ್ದ ಕೈಗಳನ್ನು ತನ್ನ ಎದೆಗೆ ಅದ್ದಿಕೊಳ್ಳುತ್ತಾ ಆದಿ ಟೆರೇಸಿನ ಮೆಟ್ಟಿಲನ್ನು ಇಳಿಯತೊಡಗಿದ..



ಮುಂದುವರೆಯುವುದು...

ಪಯಣ - 5

'ಎಷ್ಟೋತ್ರಿ ನಿಮ್ಗೆ ಬರೋಕ್ಕೆ.. ಮೆಸೇಜ್ ಮಾಡಿ ಅರ್ಧ ಘಂಟೆ ಆಗ್ತಾ ಬಂತು.. ಎಲ್ ಇದ್ರಿ ಇಷ್ಟೊತ್ತು ' ಹೆಸರಿಗೆ ಮಾತ್ರ ಕ್ಯಾಂಟೀನ್ ಎಂದೆನಿಸಿಕೊಂಡಿದ್ದ, ನೀರಿಗೆ ಹಾಲನ್ನು ಬೆರೆಸಿದ್ದ ಐದು ರೂಪಾಯಿಯ ಒಂದು ಕಪ್ ಟೀಯನ್ನು ಕುಡಿಯುವ ನೆಪದಲ್ಲಿ ಘಂಟೆಗಟ್ಟಲೆ ಕಾಲಹರಣ ಮಾಡುವ ಕಾಲೇಜಿನ ಹಲವಾರು ವಿದ್ಯಾರ್ಥಿಗಳ ಅಡ್ಡವಾಗಿದ್ದ ಸ್ಥಳದಲ್ಲಿ ರಾಧಾ ನನಗಾಗಿ ಕಾಯುತ್ತಿದ್ದರು. ಕ್ಯಾಂಟೀನಿನ ಕೊನೆಯ ಬೆಂಚಿನಲ್ಲಿ ಆಕೆ ನನ್ನೆಡೆಗೆ ತಿರುಗಿದ್ದರಿಂದ ನನ್ನ ಮುಂದಿದ್ದ ಹೊಟ್ಟೆಕಿಚ್ಚಿನ ಹುಡುಗರಿಗ್ಯಾರಿಗೂ ಆಕೆಯ ಮುಖದರ್ಶನವಾಗುತ್ತಿರಲಿಲ್ಲ. ಪ್ರಸ್ತುತ ಹಾಗುಹೋಗುಗಳು, ಸಂಗೀತ, ಕಲೆ, ವಿಶ್ವ, ವಿಜ್ಞಾನ, ಸಮಾಜ, ಅಮೀಬಾ ಹಾಗು ಏಲಿಯನ್ಸ್ ನಿಂದಿಡಿದು ಪ್ರೀತಿ, ಪ್ರೇಮ, ಪ್ರಣಯದವರೆಗೂ ಪಾರದರ್ಶಕ ಚರ್ಚೆಗಳು ನೆಡೆಯುತ್ತ ಇತ್ತೀಚೆಗೆ ನಮ್ಮಲ್ಲಿ ಒಂದು ಬಗೆಯ ಸ್ನೇಹಭಾವ ಮೂಡಿದೆ. ತನ್ನ ಸಹೋದ್ಯೋಗಿಗಳನ್ನು ಬಿಟ್ಟರೆ ಹೆಚ್ಚಾಗಿ ಆಕೆ ಕಳೆಯುತ್ತಿದ್ದದ್ದು ನನ್ನೊಡನೆಯೇ. ಆದಿ ಹಾಗು ಲೋಕೇಶ ಹೆದರಿಯೋ ಅಥವಾ ಬೇಕಂತೆಲೇ ಏನೋ ಇವರು ನನ್ನೊಟ್ಟಿಗಿದ್ದಾಗ ಕಾಣಲು ಸಿಗದಂತೆ ಪರಾರಿಯಾಗುತ್ತಾರೆ. ಲಲನೆಯರ ಗಂಧಗಾಳಿಯಿರದ ಆ ಬ್ರಹ್ಮಚಾರಿಗಳ ನಡುವೆ ಪ್ರಕೃತಿಯಿತ್ತ ಪ್ರತಿಭೆಯನ್ನು ನಾನು ಎಲ್ಲಿ ಕಳೆದುಕೊಳ್ಳುವೆನೋ ಎಂಬ ಭಯದಲ್ಲಿ ನಾನು ಆಗಾಗ್ಗೆ ರಾಧಾರನ್ನು ಭೇಟಿಯಾಗಿ ಮಾತಿನ ಮತ್ತಿನಲ್ಲಿ ಕಳೆಯುತ್ತಿದ್ದೆ!. ಯಾವುದೇ ವಿಷಯವನ್ನು ಮುಚ್ಚು ಮರೆಯಿಲ್ಲದೆ ಆಡುವ ಒಬ್ಬ ಶಿಕ್ಷಕಿ ಕಮ್ ಗೆಳತಿ ಸಿಗುತ್ತಾರೆಂಬುದೇ ನನಗೆ ಊಹಿಸಲು ಸಾಧ್ಯವಿರಲಿಲ್ಲ. ಮೊನ್ನೆ ಹೀಗೆಯೇ ಮಾತನಾಡುವಾಗ ನಾನು ಬೇಕಂತಲೇ ನಿಮಗೆ ಕೇಸರಿಬಾತ್ ಮಾಡಲು ಬರುವುದಿಲ್ಲವೆಂದೇಳಿ ಇಂದು ಒಂದು ಭರ್ತಿ ಡಬ್ಬ ಕೇಸರಿಬಾತನ್ನು ಮಾಡಿ ತರುವಂತೆ ಮಾಡಿದ್ದೆ.

'ಗಾಸಿಪ್ ರಿ .. ತುಂಬಾ ದಿನ ಆಗಿತ್ತು ಅವ್ರ್ ಇವ್ರ್ ಬಗ್ಗೆ ಗಾಸಿಪ್ ಮಾಡಿ.. ಅದೇನೋ ಒಂತರ ಮಜಾ ಇರುತ್ತೆ ಈ ಗಾಸಿಪ್ ಮಾಡೋದ್ರಲ್ಲಿ ಯು ನೋ..' ನಗುತ್ತಲೇ ನಾನು ಉತ್ತರಿಸಿದೆ.

'Seriously..?' ಎಂದು ಮುಖವನ್ನು ಕಿವಿಚಿ ಆಕೆ ಕೇಳಿದರು.

'ಹುಂ, ರಿ.. ಈ ಮನುಷ್ಯ ಸರ್ವಭಾವಗಳ ಆಗರ.. ಇಲ್ಲಿ ಗಾಸಿಪ್ ಎಂಬ ಭಾವ ಆತನಿಗೆ ಒಂತರ ನಿಜವಾದ ನೆಮ್ಮದಿಯನ್ನು ನೀಡುತ್ತದೆ. ಒಂಥರ ಕ್ಲೀನ್ ಆಕ್ಸಿಜನ್ ಇದ್ದ ಹಾಗೆ..'

'ಅದು ಭಾವ ಅಲ್ಲ ಸಾರ್ .. ಚಟ .. ಸಿಗರೇಟು ಬಿಯರ್ ಇದ್ದ ಹಾಗೆ..'

'ನಾನೊಟ್ಟಿಗೆ ಒಮ್ಮೆ ಗಾಸಿಪ್ ಮಾಡಿ ನೋಡಿ ರಾಧಾ.. ನೀವೇ ಅಂತೀರಾ ಆಮೇಲೆ ಅದು ಚಟನೋ ಮತ್ತೊಂದೊ ಅಂತ, Its like haven sometimes!'

'ಸರಿ ಸರಿ.. ಆದ್ರೆ ಸದ್ಯಕಂತೂ ಅದ್ ಬೇಡ.. ನಿಮ್ಮ್ ಗಾಸಿಪ್ನ ನಿಮ್ಮೊಳಗೆ ಇಟ್ಕೊಳ್ಳಿ..ಇದನ್ನ ತಗೊಳ್ಳಿ, ನಿಮ್ ಕೇಸರಿಬಾತ್.. ಏನ್ ಮಾಡೋಕ್ ಬರಲ್ಲ ಅಂತಿದ್ರಲ್ಲ. ತಿಂದ್ ನೋಡಿ ಈಗ..' ಎಂದು ಕಾಲು ಕೆಜಿಯಷ್ಟು ನನ್ನಿಷ್ಟದ ತಿಂಡಿಯನ್ನು ನೀಡಿದರು. ಜೊತೆಗೆ ಅದನ್ನು ತಾನೇ ಮಾಡಿದ್ದೇನೆಂದು ದೃಡೀಕರಿಸಲು ಅದನ್ನು ಮಾಡಿದ್ದ ವಿಡಿಯೋವನ್ನೂ ಸಹ ರೆಕಾರ್ಡ್ ಮಾಡಿ ತಂದಿದ್ದರು.

'ಹುಂ ಬಿಡ್ರಿ .. ನೀವೇ ಮಾಡಿದ್ದು ಅಂತ ಪ್ರೂವ್ ಆಯ್ತು.. ಆದ್ರೆ ಕೇಸರಿ ಬಾತ್ ಮಾಡೋರಿಗೆ ಬಿರಿಯಾನಿ ಮಾಡೋಕ್ ಬರಲ್ಲ ಅಲ್ವಾ' ಎಂದೆ.

'ಹೌದು ಸಾರ್.. ನನ್ನ್ ಟ್ಯಾಲೆಂಟ್ ನ ಟೇಕನ್ ಫಾರ್ ಗ್ರಾಂಟೆಡ್ ಅಂದ್ಕೊಂಡಿದ್ದೀರಾ ನೀವು' ಎಂದು ಆಕೆ ನಕ್ಕರು.

ನಾನೂ ಸಹ ನಗಾಡಿದೆ. ಶುದ್ಧ ಜೇನಿನ ಪದರದಂತಿದ್ದ ರಸಭರಿತವಾದ ಅಂತಹ ಕೇಸರಿಬಾತನ್ನು ನಾನು ಹಿಂದೆಂದೂ ತಿಂದಿಲ್ಲವೆನಿಸಿತು.

'ರಿ.. ಅದ್ ಏನ್ ಒಳ್ಳೆ ಮಕ್ಳು ತಿಂದಾಗೆ..ಗಲ್ಲದ್ ಮೇಲೆ ಸ್ವಲ್ಪ ಉಳ್ಕೊಂಡಿದೆ..' ಎಂದು ಮುಂಬಾಗಿ ಆಕೆಯ ಕರ್ಚಿಪಿನಿಂದ ನನ್ನ ಗಲ್ಲವನ್ನು ಒರೆಸಿದ ರು. ಆಕೆಯ ಕೈ ಬೆರಳು ನನ್ನ ತುಟಿಯನ್ನು ತಾಕಿದವು. ಆಕೆಯ ಹಿಂದಿದ್ದ ಗಂಡು ಹಿಂಡಿಗೆ ಕೆಲಕಾಲ ಹೃದಯ ಬಡಿತವೇ ನಿಂತಂತಾಗಿರಬೇಕು. ನಗುತ್ತಿದ್ದ ಮಗುವಿಗೆ ಒಮ್ಮೆಲೇ ಸೂಜಿಯನ್ನು ಚುಚ್ಚಿದಂತಾಯಿತು. ನಾನು ಪುನಃ ತಿನ್ನಲು ಪ್ರಾರಂಭಿಸಿದೆ.

'ನೀವ್ ತಿನ್ನಲ್ವಾ..' ಎಂದು ಕೇಳಿದೆ. ಇಲ್ಲವೆಂಬಂತೆ ಅವರು ತಲೆಯಾಡಿಸಿದರು.

'ಹೇ ..' ಎಂದೇಳಿ ಆಕೆ ನನ್ನನ್ನೇ ನೋಡತೊಡಗಿದರು. ಬಹುಷಃ ಮೊದಲಿಂದಲೂ ಹೀಗೆಯೇ ನೋಡುತಿದ್ದರೆನೊ ತಿಳಿಯದು. ನಾನು ಬರಗೆಟ್ಟ ಪ್ರಾಣಿಯಂತೆ ತಿನ್ನುವುದರಲ್ಲೇ ಮಗ್ನವಾಗಿದ್ದೆ.

'ನನ್ಗೆ ನಿಮ್ಮತ್ರ ಒಂದು ವಿಷಯ ಕೇಳ್ಬೇಕಿತ್ತು.. ಇನ್ಫ್ಯಾಕ್ಟ್ ಇದನ್ನು ನನಗೆ ಪ್ರತಿಯೊಬ್ಬ ಹುಡುಗ್ರನ್ನೂ ಕೇಳ್ಬೇಕು ಅನ್ಸುತ್ತೆ'

'ಕೇಳಿ.. ಸರ್ವಪೋರರ ಪರವಾಗಿ ನಾನು ಉತ್ತರಿಸುತ್ತೇನೆ' ಎಂದು ನಗಾಡಿದೆ.

'ಹುಡ್ಗಿರ್ನ ಹತ್ರದಿಂದ ನೋಡಿದ್ರೆ, ಅಥವಾ ಜಸ್ಟ್ ಟಚ್ ಮಾಡಿದ್ರೆ ಸಾಕು..ಹುಡುಗ್ರಿಗೆ ಅದೇನೋ ಆಗುತ್ತೆ ಅಂತಾರಲ್ಲ.. ಏನದು..?'

ಆಗತಾನೆ ಗಂಟಲಿನೊಳಗೆ ಇಳಿದಿದ್ದ ಕೇಸರಿಬಾತಿನ ತುತ್ತೊಂದು ಪುನ್ಹ ಹೊರಬಂತಾಯಿತು ನನಗೆ. ಸಿಹಿನೀರಿನ ಕೊಳದಲ್ಲಿ ಇಜುತ್ತಿದ್ದವನಿಗೆ ಕೂಡಲೇ ಯಾರೋ ಸಾವಿರ ವ್ಯಾಟ್ಗಳ ಕರೆಂಟ್ ಅನ್ನು ಕೊಟ್ಟಂತೆ. ಪ್ರತ್ಯತ್ತವಾಗಿ ಏನೆನ್ನಬೇಕೆಂದು ನನಗೆ ಖಂಡಿತ ತಿಳಿಯಲಿಲ್ಲ.

'ಹಾಗೆಲ್ಲ ಏನಿಲ್ಲ ರೀ.. ಸುಮ್ನೆ ಗಿಮಿಕ್ಕು.. ಮೂವಿ, ಸೀರಿಯಲ್ಸ್ ಗಳಿಗೆ ಮಾತ್ರ ಅದೆಲ್ಲ' ಎಂದೆ.

'Be practical, ನಿಜ ಹೇಳಿ. ನಂಗೆ ತಿಳ್ಕೊಬೇಕು.. ನಿಜವಾಗಲೂ ನಿಮ್ಗೆ ಏನೂ ಅನ್ಸಲ್ವಾ ?'

'ನಂಗೆ ಮಾತ್ರ ಅಲ್ಲ ರಾಧಾ, ಯಾರಿಗೂ ಏನು ಅನ್ಸಲ್ಲ.. it’s all fake ' ಎಂದು ನಾನು ಪುನಃ ಸುಮ್ಮನಾದೆ.

ಆಕೆ ಕೇವಲ ಕುತೂಹಲಕ್ಕಾಗಿ ಮಾತ್ರ ಈ ಮಾತನ್ನು ಕೇಳುತ್ತಿದ್ದಾಳೆ ಎಂದು ನನಗೆ ತಿಳಿದಿತ್ತು. ಆದರೆ ಭೂಮಿಯ ಮೇಲಿನ ಪ್ರತಿಯೊಂದು ಗಂಡು ಜೀವಿಗೆ ಹೆಣ್ಣೊಂದರ ಪರಮ ಸುಮಧುರ ಸ್ಪರ್ಶ ಯಾವ್ಯಾವ ಅಂಗಗಳಲ್ಲಿ ಏನೇನು ಮಾಡುತ್ತದೆ ಎಂದು ಹೇಗೆ ಬಿಡಿಸಿ ಹೇಳಲಿ. ನಾನು ಬೇರೊಂದು ವಿಷಯವನ್ನು ತೆಗೆಯಲು ಯೋಚಿಸತೊಡಗಿದೆ. ಆದರೆ ಕೂಡಲೇ ಅವರು ಮುಂಬಾಗಿ ಎದೆಯ ಬಾಗ ನನಗೆ ಕಾಣುವಂತೆ ತನ್ನ ಮುಖವನ್ನು ನನ್ನ ಬಳಿಗೆ ತಂದರು. ಆಕೆಯ ಆ ಹಾಲಿನ ಕೆನೆಯಂತಹ ಚರ್ಮವನ್ನು ನಾನು ಮೊದಲ ಬಾರಿಗೆ ಅಷ್ಟು ಹತ್ತಿರದಿಂದ ನೋಡತೊಡಗಿದೆ. ಕಲ್ಲಂಗಡಿ ಹಣ್ಣನ್ನೇ ನಾಚಿಸುವ ಬಣ್ಣದ ಅವರ ತುಟಿಗಳು ನನ್ನ ಇಡೀ ದೇಹವನ್ನು ಬಿಸಿಯಾಗಿಸತೊಡಗಿತು. ಎರಡೇ ಇಂಚುಗಳ ಅಂತರದಲ್ಲಿದ್ದ ಅಪ್ಸರೆಗೆ ಮುತ್ತಿಕ್ಕುವ ಇಂತಹ ಅವಕಾಶ ಸಾವಿರಕ್ಕೊಬ್ಬರಿಗೆ ಮಾತ್ರ ಸಿಗಬಲ್ಲದು.

'Tell me, ನಿಮ್ಗೆ ಎನೂ ಫೀಲ್ ಆಗ್ತಾ ಇಲ್ವಾ..' ಎಂದು ನನ್ನ ಕೈಯನ್ನು ಹಿಡಿದು ಅದುಮಿದರು. ಏನೋ ಹೇಳಲು ತಡವರಿಸಿದೆ. ಮಾತು ಬರಲಿಲ್ಲ.

ಇನ್ನು ಅಲ್ಲಿರಲು ಸಾಧ್ಯವಿಲ್ಲವೆಂದೆನಿಸಿ ಕೂಡಲೇ ಎದ್ದು ಬಿರಬಿರನೆ ಹೊರನೆಡೆದೆ.

ಇಡ್ಲಿಗೆ ಸಾಂಬಾರನ್ನು ಹಾಕಲು ಹೋದ ಮಾಣಿ ನಮ್ಮೆಡೆ ನೋಡುತ್ತಾ ತನ್ನ ಪಂಚೆಯ ಮೇಲೆಯೆ ಒಂದು ಸೌಟು ಸಾರನ್ನು ಸುರಿದುಕೊಂಡ.




*****


'Excuse me..? ಏನಾಯಿತ್ರಿ ನಿಮ್ಗೆ..ಏನ್ ಇವತ್ತ್ ಮೌನ ವ್ರತನ?' ರಾಧಾ ನನ್ನ ಕೇಳಿದರು. ಕಾಲೇಜಿನ ಕಾರಿಡಾರಿನಲ್ಲಿ ನಾನು ಹಾಗು ಅವರು ನಿಂತಿದ್ದೆವು. ಕ್ಯಾಂಟೀನಿನ ‘ಆ ದಿನ’ದಿಂದ ನನ್ನನೊಳಗೆ ಅದೇನೋ ಒಂದು ಬಗೆಯ ನಾಚಿಕೆಯ ಭಾವ ಮೂಡಿದ್ದರೆ ಆಕೆ ಮಾತ್ರ ಏನೂ ಆಗಿಯೇ ಇಲ್ಲವೆಂಬಂತೆ ವರ್ತಿಸುತ್ತಿದ್ದರು.. ಅದೇಕೆ ಅಂದು ಆಕೆ ಕೇಳಿದರೋ ತಿಳಿಯಲಿಲ್ಲ. ಇವರು ಕೆಲ ಪತ್ರಿಕೆಗಳಿಗೆ ಅಂಕಣಗಳನ್ನೂ ಬರೆಯುವುದುಂಟು. ಕೆಲವೊಮ್ಮೆ ಈ ಬರಹಗಾರರಿಗೆ ಮಾನವನ ಅತಿ ಸಹಜ ಗುಣಗಳ ದರ್ಶನವಾಗಬೇಕಿರುತ್ತದೆ. ಆ ಭಾವಘಳಿಗೆಯನ್ನು ಅನುಭವಿಸಲು ಅಥವಾ ತಿಳಿಯಲು ಕೆಲವರು ಯಾವುದೇ ಮುಚ್ಚು ಮರೆಯಿಲ್ಲದೆ ಅದೆಂತಹ ಕೆಲಸವನ್ನೂ ಮಾಡಬಲ್ಲರು. ಮಾಡಿಸಬಲ್ಲರು. ಅದು ಕೇವಲ ಕುತೂಹಲ. ಫ್ಯಾಕ್ಟ್ ಚೆಕ್ಕಿಂಗ್ ಎನ್ನಬಹುದು. ತಾವು ಬರೆಯುವ ಅಥವಾ ಹೇಳುವ ವಿಷಯಗಳು ನೈಜವಾಗಿರಬೇಕು, ಅದು ಕಲ್ಪನಾ ಬರಹಗಳಾಗಿರಬಾರದು ಎಂಬ ಬಯಕೆ. ಬಹುಷಃ ರಾಧಾ ಇಂತಹ ಯಾವುದೊಂದೂ ವಿಷಯವನ್ನು ಬರೆಯುತ್ತಿರಬೇಕು. ಆದರೆ…

ನಾನು ರಾಧಾರ ಮುಖವನ್ನೊಮ್ಮೆ ನೋಡಿದೆ. ಪಶ್ಚಿಮದಿಂದ ಬೀಸುತ್ತಿದ್ದ ತಿಳಿಗಾಳಿ ಅವರ ಮುಂಗೂದಲನ್ನು ಪದೇ ಪದೇ ಕೆಣಕುತ್ತಿತ್ತು. ಅದೆಂಥಹ ಘೋರ ಕಠೋರ ಹೃದಯಿಯೂ ಕರಗಿ ನೀರಾಗಬೇಕು ಅಂತಹ ನೋಟವದು. ನನ್ನ ಮನಸ್ಸು ಮಾತಾಡುವದನ್ನು ಮುಂದುವರೆಸಿತು…

ಆದರೆ, ಅದು ಅಷ್ಟು ಮಾತ್ರವಾಗಿರದೆ ಇದ್ದರೆ? ಅಂದಿನ ಆ ಪ್ರೆಶ್ನೆ ಯಾವೊಂದು ಆರ್ಟಿಕಲ್ನ ವಿಷಯವಾಗಿರದೆ ಇದ್ದರೆ?! ಸುಖಾಸುಮ್ಮನೆ ನನ್ನ ಅತಿ ಸಮೀಪಕ್ಕೆ ಬಂದು ಹಾಗೆ ಕೈಗಳನ್ನು ಅದುಮಿ ನನ್ನ ರೋಮು ರೋಮುಗಳೆಲ್ಲವನ್ನು ಎದ್ದು ನಿಲ್ಲುವಂತೆ ಮಾಡಿ ನೋಡಿದ ಆ ನೋಟ ನನಗೆ ರಣಭಯಂಕರ ಸಿಡಿಲಿನ ಮನಮೋಹಕ ದೃಶ್ಯದಂತೆ ಆನಂದವೂ ಜೊತೆಗೆ ಭಯವೂ ಒಟ್ಟಿಗೆ ಮೂಡುವಂತೆ ಮಾಡಿದ್ದಿತು. ಹಾಗಾದರೆ ಏನಿದರ ಅರ್ಥ? ಆಕೆ ಏನಾದರೂ …ಕೂಡಲೇ ಆಕೆಯ ಪ್ರೆಶ್ನೆಯ ನೆನಪಾಗಿ,

'I’m Sorry, ಅವತ್ತು ನೀವ್ ಕೇಳಿದ್ ಪ್ರೆಶ್ನೆಗೆ ಏನೂ ಉತ್ತರಿಸದೆ ನಾನು ಎದ್ದ್ ಬಂದಿದ್ದಕ್ಕೆ ಇರ್ಬೇಕು' ಎಂದು ಮುಗುಳ್ನಕ್ಕೆ.

'That's okay .. ನೀವ್ ಎದ್ದ್ ಬಂದಾಗ್ಲೇ ನಂಗೆ ನನ್ನ ಆನ್ಸರ್ ಸಿಗ್ತು ಬಿಡಿ, ನೀವ್ ಅಷ್ಟೆಲ್ಲ intellectuality ಬಗ್ಗೆ ಮಾತಾಡೋರು ಅಷ್ಟೊಂದೆಲ್ಲ ನಾಚ್ಕೋಬಾರ್ದು..' ಎಂದು ಹೇಳಿದರು.

ಆಕೆಯ ತುಟಿಯ ಮೇಲಿದ್ದ ಕಳ್ಳ ನಗೆಯನ್ನು ನಾನು ಗಮನಿಸದೇ ಇರಲಿಲ್ಲ.

'What do you mean?’

'Nothing ..ನೀವ್ ಹುಡುಗ್ರಿಗೆ ಜಸ್ಟ್ ಟಚ್ ಮಾಡೋದ್ರಲ್ಲೇ ಕಾಮೋತ್ತೇಜನೆ ಆಗುತ್ತೆ ಅಂದ್ರೆ ಆ ಸೃಷ್ಟಿಕರ್ತ ರಿಯಲಿ ಗ್ರೇಟ್ ಯು ನೋ ..'

'ಹಲೋ, ಒಂದ್ ನಿಂಷ.. ಫಸ್ಟ್ ಆಫ್ ಆಲ್ ನಂಗೆ ಆವತ್ತು Aphrodisiac ಆಗಿತ್ತು ಅಂತ ಯಾರ್ ಹೇಳಿದ್ದು?'

'ಅದ್ ಏನ್ರಿ Aphrodisiac ಅಂದ್ರೆ?' ಗೊಂದಲದ ನೋಡದಲ್ಲಿ ಆಕೆ ಕೇಳಿದರು.

'ನೀವ್ ಅಂದ್ರಲ್ಲ , ಇಂಗ್ಲಿಷ್ ಅಲ್ಲಿ ಅದರ ಅರ್ಥ ಅದೇ'

'Come on .. don’t be so Conservative.. Moreover ನೀವ್ ಕನ್ನಡದಲ್ಲಿ ಹೇಳಿದ್ ಮಾತ್ರಕ್ಕೆ ಅದರ ಅರ್ಥ ಏನ್ ಚೇಂಜ್ ಆಗಲ್ಲ'

'Whatever.. But how could you say that? ನನ್ನೊಳಗೆ ಏನಾಗುತ್ತೆ ಅಂತ ಅಷ್ಟ್ easy ಯಾಗಿ ಅದೇಗ್ ಹೇಳ್ತೀರಾ ನೀವು?' ಕಾಲೇಜಿನ ಕ್ಯಾಂಟಿನಲ್ಲಿ ಹಾಲಿಗೆ ನೀರನ್ನು ಬೆರೆಸುವ ಪ್ರಮಾಣದಲ್ಲಿ ನಿಜಕ್ಕೆ ಸುಳ್ಳನ್ನು ಬೆರೆಸಿ ನಟಿಸಿದೆ.

ಮೊದಲ ಬಾರಿಗೆ ಆಕೆಯೊಟ್ಟಿಗೆ ನಾನು ಮುಚ್ಚುಮರೆಯನ್ನು ಸಾಧಿಸತೊಡಗಿದೆ.

'What do you mean by how could you say that.. You were excited, I know' ಎಂದು ತನ್ನ ತೀಕ್ಷ್ಣ ದೃಷ್ಟಿಯಿಂದ ನನ್ನ ನೋಡತೊಡಗಿದರು.

ನೈಸರ್ಗಿಕವಾಗಿ ಜರುಗುವ ಪ್ರಕ್ರಿಯೆಯನ್ನು ಹೌದೆಂದು ಒಪ್ಪಿಕೊಳ್ಳಲು ನನಗೇಕೆ ಈ ಪರಿಯ ನಾಚಿಕೆ ತಿಳಿಯಲಾಗಲಿಲ್ಲ.

ನಾನು ಸುಳ್ಳನ್ನು ಮುಂದುವರೆಸಿದೆ.

'ಸುಮ್ನೆ ಏನೇನೋ ಕಲ್ಪಿಸಿಕೊಳ್ಳಬೇಡಿ ರಾಧಾ.. ಅಂತಹ ಸಿಲ್ಲಿ ರೀಸನ್ಸ್ ಗೆಲ್ಲ ಅದೆಲ್ಲ ಆಗೋದಾಗಿದ್ರೆ ಅಷ್ಟೇ ಆಮೇಲೆ..'

'What?! So, ನಿಮ್ಗೆ ಅವತ್ತು ಏನೂ ಆಗ್ಲಿಲ್ವಾ.. ಹಾಗಾದ್ರೆ ಯಾಕೆ ಎದ್ದ್ ಹೋದ್ರಿ? You are lying, otherwise prove it now!'

'ಮಗ್ನೆ, ಇವತ್ತ್ ನೀನ್ ಸತ್ತೇ..' ಮನಸ್ಸು ಮಾತಾಡಿತು.

'ರಾಧಾ.. ಇವಾಗ ಅದೆಲ್ಲ ಏಕೆ.. ಬಿಟ್ಬಿಡಿ.. ಲೆಟ್ಸ್ ಟಾಕ್ ಸಂಥಿಂಗ್ ಎಲ್ಸ್'

'Don’t ever dare to lie to me . ನಾನ್ ಇದನ್ನ ಕಾಲೇಜಿನ ಎಲ್ರತ್ರನೂ ಹೋಗಿ ಕೇಳೋದಿಲ್ಲ. ನೀವೊಬ್ಬ matured knowledgeable ಪರ್ಸನ್ ಅಂತ ನಂಗೊತ್ತು.. Moreover a good friend, ಅದಕ್ಕೆ ಕೇಳೋದು, ಚರ್ಚಿಸೋದು'

'ರಾಧಾ That doesn’t mean..' ಎಂದು ಏನನ್ನೋ ಹೇಳಲೊದ ನನ್ನನ್ನು ತಡೆದು,

‘This weekend 10 PM.. I will be there at your home. Tell Adishesh & Lokesh to adjust somewhere else for that one night ' ಎಂದು ಕಟ್ಟಪ್ಪಣೆಯನ್ನು ಮಾಡಿದರು.

ನನ್ನ ಮಸಸ್ಸು ಅದಾಗಲೇ ಸಾವಿರ ಕಿಲೋಮೀಟರ್ ದೂರಕ್ಕೆ ಓಡಿಯಾಗಿದ್ದಿತು! ಕಾರಣ ನಾಚಿಕೆಯಿಂದಲೋ, ಭಯದಿಂದಲೋ ಅಥವಾ ಸಂತೋಷದಿದಲೋ ನನಗೆ ಖಂಡಿತಾ ತಿಳಿಯಲಿಲ್ಲ! ಆಕೆಯ ಪ್ರೆಶ್ನೆಗೆ ಉತ್ತರಿಸಲಾಗದೆ ನಾನು ಮಿಕ ಮಿಕ ಅವರನ್ನು ನೋಡತೊಡಗಿದೆ.



****





ಆ ನಡುರಾತ್ರಿಯ ಘಾಡಕತ್ತಲೆಯಲ್ಲಿ ಮೀಸೆ ಚಿಗುರದ ನಾಲ್ಕು ತಲೆಗಳು ಹಾಸ್ಟೆಲ್ಲಿನ ಹಿಂಬಾಗಿಲಿನಿಂದ ಹೊರಬಿದ್ದವು. ಮಳೆಗಾಲದ ಆರಂಭವಾದುದರಿಂದ ಅದು ಹಲಸಿನ ಹಣ್ಣಿನ ಘಮಘಮಿಸುವ ಕಾಲ. ಖಾಲಿ ಜೇಬು ಹಾಗು ಅರೆ ತುಂಬಿದ ಹೊಟ್ಟೆಯ ಜೊತೆಗೆ ಒಂದಿಷ್ಟು ಸಮಾನ ಮನಸ್ಸಿನ ಗೆಳೆಯರು. ಜಗತ್ತನ್ನು ಅನುಭವಿಸಲು ಇಷ್ಟು ಸಾಕಿತ್ತು ಆ ಗುಂಪಿಗೆ. ಜೇಮ್ಸ್ ಬಾಂಡ್ ಚಿತ್ರಗಳ ಬಾಂಡುಗಳಂತೆ ಒಬ್ಬರಿಂದೊಬ್ಬರು ಗೋಡೆಯನ್ನಿಡಿದುಕೊಂಡು ನೆಡೆದ ಗುಂಪು ಬಂದು ನಿಂತದ್ದು ಪಕ್ಕದ ತೋಟದ ಬಕ್ಕೆ ಹಲಸಿನ ಮರದ ಬುಡಕ್ಕೆ. ಬೆಳಗಿನ ಹೊತ್ತು ಆ ಮರದ ಬುಡದಲ್ಲೇ ನಿಂತು ಯಾವ ಕಾಯಿ ಹಣ್ಣಾಗಿದೆ ಯಾವ ಕಾಯಿ ಬಲಿತಿದೆ ಎಂದು ಅಂದಾಜುಹಾಕಿ ಬಂದಿದ್ದ ಒಂದು ತಲೆ ಕೊಡಲೇ ಮರವನ್ನು ಏರತೊಡಗಿತು. ಉಳಿದ ಮೂರು ತಲೆಗಳು ಕಾವಲು ಕಾಯುವಂತೆ ಅತ್ತಿಂದಿತ್ತ ಇತ್ತಿಂದಂತ್ತ ನೆಡೆಯತೊಡಗಿದವು. ವಾನರರೂ ನಾಚುವಂತೆ ಕುಪ್ಪಳಿಸುತ್ತ ಮರವತ್ತಿದ ಆ ತಲೆ ಕರಾರುವಕ್ಕಾಗಿ ಹಲಸಿನ ಗೊಂಚಲಿನ ಹಣ್ಣಾದ ಹಣ್ಣನ್ನೇ ಹೋಗಿ ಮಿಡಿಯಿತು. ಬಾಡೂಟ ಮಾಡಿದ ಹೊಟ್ಟೆಯನ್ನು ಮಿಡಿದಂತೆ ಸದ್ದು ಮಾಡಿದ ಆ ಹಣ್ಣನು ಒಂದೇ ಎಳೆತದಲ್ಲಿ ತೊಟ್ಟನ್ನು ತುಂಡರಿಸಿ ಕೆಳಗೆಸೆಯಿತು. ಹಣ್ಣು ಬಿದ್ದ ಸದ್ದಿಗೆ ತುಸು ದೂರದಲ್ಲೇ ಇದ್ದ ವಾರ್ಡನ್ನಿನ ಮನೆಯ ನಾಯಿ ಬೌಗುಟ್ಟಿತು. ನಾಯಿಯ ಸದ್ದಿಗೆ ಕೆಲಕ್ಷಣ ನಾಲ್ಕೂ ತಲೆಗಳು ತುಟಿಕ್ ಪಿಟಿಕ್ ಅನ್ನಲ್ಲಿಲ. ಕಲ್ಲಿನ ಮೂರ್ತಿಗಳಂತೆ ನಿಂತಲ್ಲೆಯೇ ಅಜೀವ ವಸ್ತುಗಳಂತಾದವು. ಯಾರು ಗಮನಿಸಲಿಲ್ಲ ಎಂಬುದನ್ನು ಅರಿತ ಆ ಪಡೆ ಕೂಡಲೇ ಕಾರ್ಯಪ್ರವೃತವಾಯಿತು. ಮರದ ಮೇಲಿದ್ದ ತಲೆ ಕ್ಷಣಮಾತ್ರದಲ್ಲಿ ಕೆಳಗಿಳಿದು ಬಂದು ನೋಡುತ್ತದೆ, ಅಷ್ಟರಲ್ಲಾಗಲೇ ಉಳಿದ ಮೂರು ತಲೆಗಳ ನಡುವೆ ವಿಷಯವೊಂದಕ್ಕೆ ವಾಗ್ವಾದ ಬಿರುಸುಗೊಂಡಿರುತ್ತದೆ. ಹಾಸ್ಟೆಲಿನಿಂದ ಹೊರಬರುವಾಗ ಹಣ್ಣನ್ನು ಸುಲಿಯಲು ಚಾಕೊಂದನ್ನು ತರುವ ಕಾಂಟ್ರಾಕ್ಟ್ ನ್ನು ಪಡೆದಿದ್ದ ತಲೆ ಹಲಸಿನ ಹಣ್ಣನ್ನು ಕಾಪುವ ಕನಸಲ್ಲಿ ಅದನ್ನು ಮರೆತಿದ್ದಿತು. ಈಗ ಪುನ್ಹ ವಾಪಸಾಗುವಷ್ಟು ಸಮಯವಾಗಲಿ ಅದಕ್ಕೆ ಬೇಕಾದ ತಾಳ್ಮೆಯಾಗಲಿ ಯಾರೊಬ್ಬರಲ್ಲೂ ಇರಲಿಲ್ಲ. ಹಣ್ಣಿನ ಘಮ ಮತ್ತು ಬರಿಸುವಂತಿತ್ತು. ಮರವತ್ತಿದ ತಲೆಯನ್ನು ಉಳಿದ ಮೂರು ತಲೆಗಳು ತಮ್ಮ ಕರುಣಾಜನಕ ನೋಟದಿಂದ ನೋಡತೊಡಗಿದವು. ಒಂದಿಷ್ಟು ಕೆಟ್ಟ ಪದಗಳನ್ನು ಬೈಯುತ್ತಾ ಕಾರ್ಯಪ್ರವೃತವಾದ ಅದು ಹಲಸಿನ ಹಣ್ಣನು ತನ್ನ ತೊಡೆಯ ಮೇಲೆ ಹಾಕಿಕೊಂಡಿತು. ಅಕ್ಷರ ಸಹ ಉಗ್ರನರಸಿಂಹ ಹಿರಣ್ಯಕಷುಪನನ್ನು ಬಗೆದು ವದೆ ಮಾಡಿದಂತೆ ತನ್ನ ಬರಿಗೈಯಿಂದಲೇ ಅದು ಹಲಸಿನ ಹಣ್ಣನ್ನು ಎರಡು ಓಳಾಗಿಸಿತು! ಕತ್ತಲೆಯಲ್ಲಿಯೂ ಮಿನುಗುತ್ತಿದ್ದ ಕೆಂದಳದಿ ಬಣ್ಣದ ಆ ತೊಳೆಗಳು ನಿಂತವರ ಕಣ್ಣುಗಳನ್ನು ಕುಕ್ಕತೊಡಗಿವು. ನಾಲ್ವರ ಒಳಗಿದ್ದ ರಾಕ್ಷಸಿ ಗುಣ ಕೂಡಲೇ ಜಾಗೃತವಾಯಿತು. ನಿಮಿಷಮಾತ್ರದಲ್ಲಿ ಹಣ್ಣು ತನ್ನ ಅಸ್ತಿತ್ವವನ್ನು ಕಳೆದುಕೊಂಡಿತು! ಉಘೇ ಉಘೇ ಎಂಬ ಜೈಕಾರದೊಟ್ಟಿಗೆ ಮರವತ್ತಿದ ತಲೆಯನ್ನು ಇತರೆ ತಲೆಗಳು ಸದ್ದಾಗದಂತೆ ಕುಣಿಸಿದವು.

'ಮಚಿ.. ಏನ್ ಒಂದ್ ಬಿಯರ್ ಗೇ ಆಫಾ?' ಆದಿಯ ಭುಜವನ್ನು ಅಲುಗಾಡಿಸುತ್ತಾ ಕೇಳಿದ ಲೋಕೇಶ. ನನ್ನ ಕಡೆಯಿಂದ ಅಂದು ಬ್ರಹ್ಮಚಾರಿಗಳಿಬ್ಬರಿಗೂ ಕಂಠ ಪೂರ್ತಿ ಬೀಯರು ಹಾಗು ಒಂದು ಗಡತ್ತಾದ ಬಾಡೂಟದ ಪಾರ್ಟಿ ಕೊಡಲಾಗುತ್ತಿತ್ತು.

ಕೈಲೊಂದು ಬೀಯರಿನ ಬಾಟಲಿಯನ್ನು ಹಿಡಿದು ತನ್ನ ಪದವಿಪೂರ್ವ ಕಾಲೇಜಿನ ದಿನಗಳನ್ನು ನೆನೆಯುತ್ತಾ ಆದಿ ಅಂತರ್ಮುಖಿಯಾಗಿದ್ದನು. ಆಗೆಲ್ಲ ತಾನು ಅದೆಷ್ಟು ಚುರುಕಾಗಿದ್ದೆ. ನಗುವಾಗಲಿ, ಸಿಟ್ಟಾಗಲಿ, ಬೇಸರವಾಗಲಿ ಅಥವಾ ಮತ್ಯಾವುದೇ ಭಾವಗಳಾಗಲಿ ಅದೆಷ್ಟು ಮುಕ್ತವಾಗಿದ್ದವು. ಈಗಿನಂತೆ ಒಳಗೆ ಬೆಂಕಿಯ ಜ್ವಾಲೆಯನ್ನೇ ಹಿಡಿದಿಕೊಂಡಿದ್ದರೂ ಹೊರಗೆ ನಸುನಗುವ ಕಾಲವಂತೂ ಅದಾಗಿರಲಿಲ್ಲ. ನಾನೇಕೆ ಹೀಗಾದೆ? ಆದಿ ಯೋಚಿಸತೊಡಗಿದ್ದ. ಮರವನ್ನು ಏರಿ ಇಡೀ ಹಾಸ್ಟೆಲ್ಲಿಗೆ ಹಲಸಿನ ಹಣ್ಣನ್ನು ತಿನ್ನಿಸುತ್ತಿದ್ದ ತನ್ನ ಪರಾಕ್ರಮವನ್ನು ನೆನೆದು ಆದಿಯ ಮುಖದಲ್ಲಿ ಮಂದಹಾಸವೊಂದು ಮೂಡಿತು. ಸದ್ಯಕ್ಕೆ ಲೊಕೇಶನ ಪ್ರೆಶ್ನೆ ಆತನನ್ನು ಜಾಗೃತಗೊಳಿಸಿತು.

ಇಲ್ಲವೆಂಬಂತೆ ಆತ ತಲೆಯಾಡಿಸಿದ.

'ನೀನೋ..ನಿನ್ ಮೂಡೋ.. ಒಂದೋ ಭಯಾನಕ ಲವ್ ಫೇಲ್ಯೂರು ಇಲ್ಲ ಯಾವ್ದೋ ಫ್ಯಾಮಿಲಿ ಮ್ಯಾಟರು..ಏನ್ ಮಚಿ.. ಹಾಗೇನಿದ್ರೂ ನಮ್ಮೊಟ್ಟಿಗೆ ಹೇಳೋ' ಅದಾಗಲೇ ಮೂರನೇ ಬಿಯರ್ ಬಾಟಲಿಯನ್ನು ಕೈಯಲ್ಲಿಡಿದಿದ್ದ ಲೋಕೇಶ ತನ್ನ ಕೊನೆಯ ಪದವನು ತುಸು ಹೆಚ್ಚಾಗಿಯೇ ಎಳೆದಿದ್ದ. ನಾನು ನಗಾಡಿದೆ.

'ಇವ್ನ್ ನೋಡಪ್ಪ.. ಆಶಿಕ್ಕು.. ನಗಾಡ್ತಾ ಇರೋದು.. ಕಾಲೇಜಲ್ಲಿ ರಾಧಾ ಸಿಕ್ಕಿದಿಂದ ಅದೇನ್ ಮಾತು.. ಅದೇನ್ ಡಿಸ್ಕಶನ್ನು..ಮಗ್ನೆ ನೀನ್ ಏನ್ ಕಿತ್ತಾಕಿದ್ರೂ ಅಷ್ಟೇ, ಅವ್ರ್ ಮಾತ್ರ ನಿಂಗ್ ಸಿಗಲ್ಲ.. ಚಾಲೆಂಜ್ ಕಟ್ತೀನಿ.. ರೆಡಿನಾ?' ಆತನ ಪ್ರತಿ ಪದವೂ ಲಕ್ವಾ ಹೊಡೆದ ಬಾಯಿಂದ ಮೂಡುವ ಪದಗಳಂತೆ ಮುರುಟಿಗೊಂಡಿದ್ದವು. ಆಲ್ಕೋಹಾಲಿನ ಮತ್ತಿನಲ್ಲೂ ನಾನು ಕಷ್ಟಪಟ್ಟು ಅವನ್ನು ಗ್ರಹಿಸತೊಡಗಿದೆ. ಹಾಗು ಅಷ್ಟೇ ನಯವಾಗಿ ನಿರ್ಲಕ್ಷಿಸತೊಡಗಿದೆ.

'ಆಮೇಲೆ ತಾವು..? ಮನೇಲಿ ಓದೋ ಮಾರಾಯ ಅಂತ ಕಳ್ಸಿದ್ರೆ ಆಸಾಮಿ MLM ಬ್ಯುಸಿನೆಸ್ಸಂತೆ, ಕಾಫಿ ಎಕ್ಸ್ಪೋರ್ಟ್ ಅಂತೆ , ಕೋಚಿಂಗ್ ಇನ್ಸ್ಟಿಟ್ಯೂಟು ಇವಾಗ ಅದೂ ಆಗ್ಲಿಲ್ಲ ಅಂತ ಶುಂಠಿ ಬೆಳೀತಾನಂತೆ..' ನಾನೆಂದೆ.

'ಮಕ್ಳ ನಾನದನ್ನ ಇಂಡಿಪೆಂಡೆಂಟ್ ಆಗಿ ಇವತ್ತು ಮಾಡ್ತಾ ಇದ್ದೀನಿ .. ಯಾರ್ ಕ್ಯಾರು ಇಲ್ಲ .. ಮೈ ಓನ್ .. ಮುಂದೊಂದ್ ದಿನ ನೀವು ಅದನ್ನ ಬೇರೆಯವರಿಗೆ ಮಾಡ್ತಾ ಸ್ಯಾಲರಿ ತಗೋಂತಾ ಇರ್ತೀರ ನೋಡಿ.. ಆಗ ಹೇಳಿ ಈ ಮಾತನ್ನು..' ಎಂದು ಸುಮ್ಮನಾದ. ನಾವ್ಯಾಕೆ ಇವನ ಶುಂಠಿ ಗದ್ದೆಯಲ್ಲಿ ಕೆಲಸ ಮಾಡಬೇಕು? ನಾನು ಹಾಗು ಆದಿ ಒಬ್ಬರನ್ನೊಬ್ಬರು ನೋಡಿದೆವು. ಮುಂದೆ ಯೋಚಿಸಿ ಮಾತಾಡುವಷ್ಟು ಪ್ರಜ್ಞೆ ಉಳಿಯದೆ ಇದ್ದರಿಂದ ವಾತಾವರಣ ತುಸು ಶಾಂತವಾಯಿತು. ಆದಿಯ ಲ್ಯಾಪ್ಟಾಪಿನಿಂದ ಲತಾ ಮ್ಯಾಗೇಶ್ಕರರ ಧ್ವನಿಯಲ್ಲಿ ಅಭಿಮಾನ್ ಚಿತ್ರದ 'ಪಿಯಾ ಬಿನ ಬಾಸಿಯ ಬಾಜೇ' ಹಾಡು ಮೋಹಿಸತೊಡಗಿತು. ಏನೋ ಹೇಳಲು ಹೊರಟವನಿಗೆ ನನಗೆ ಕೂಡಲೇ ಮಾತು ನಿಂತು ಹೋಯಿತು. ಕಣ್ಣು ಮುಚ್ಚಿ ಜಯ ಬಾಧುರಿಯನ್ನು ಕಣ್ಣ ಮುಂದೆ ತಂದು ಲತಾರ ಗಾನಸುದೆಯನ್ನು ಆಸ್ವಾದಿಸತೊಡಗಿದೆ. ಮದ್ಯದ ಮತ್ತಿನಲ್ಲಿ ಇಂತಹ ಮನಸ್ಸು ಹಿಂಡುವಂತಹ ಹಾಡುಗಳು ತಂದುಕೊಡುವ ಸುಖ ಕುಡುಕರಾದರೆ ಅದು ನೂರು ಪೆಗ್ಗುಗಳಿಗೆ ಸಮವೆನ್ನಬಹುದು. ಬಹುಷಃ ಇನ್ನೂ ಮಿಗಿಲಿರಬಹುದು.

ಕೆಲ ನಿಮಿಷಗಳಲ್ಲೇ ಹಾಡು ಮುಗಿಯಿತು. ಕುರುಡನಿಗೆ ಮೊದಲಬಾರಿಗೆ ಜಗದರ್ಶನವಾಗುವಂತೆ ನಿಧಾನವಾಗಿ ನಾನು ಕಣ್ಣುಗಳನ್ನು ಬಿಡತೊಡಗಿದೆ. ಬ್ರಹ್ಮಚಾರಿಗಳಿಬ್ಬರೂ ಹಾಡಿನ ಜೊತೆಗೆ ಮೈಮರೆತು ನಾನು ಗುನುಗಿದ ಆಡಿಯೋವನ್ನು ರೆಕಾರ್ಡ್ ಮಾಡುತ್ತ ನಗಹತ್ತಿದ್ದರು. ನಂತರ ಅದನ್ನು ನನಗೆ ಕೇಳಿಸಿದರು. ಆ ಕುಡಿದ ಮತ್ತಿನಲ್ಲೂ ನನಗೆ ನನ್ನ ಧ್ವನಿಯ ಮೇಲೆ ವೈರಾಗ್ಯ ಮೂಡಿತು. ಮತ್ತೆಂದು ಹಾಡಲೇ ಬಾರದೆಂದು ತೀರ್ಮಾನಿಸಬೇಕೆಂದುಕೊಂಡೆ!

ಕೆಲಸಮಯದ ನಂತರ ನಾನು ನನ್ನೊಳಗೆ ಅಡಗಿಸಿಕೊಂಡಿದ್ದ ಸುಪ್ತ ಬುದ್ದಿಯನ್ನು ಜಾಗೃತಗೊಳಿಸಿದೆ. ಅದೇ ಸುಸುಮಯವೆಂದು,

'Guys.. ನಿಮ್ಮ್ ಹತ್ರ ಒಂದ್ ರಿಕ್ವೆಸ್ಟ್..' ನನ್ನ ರೂಮಿಗೆ ರೂಮೆಟುಗಳಾಗಿ ಬಂದರೂ ಔಪಚಾರಿಕ ನೆಲೆಯಲ್ಲಿ ನಾನು ಅವರನ್ನು ಕೇಳಬೇಕಂದುಕೊಂಡು ಕೇಳಿದೆ.

'ಈ ವೀಕ್ ಎಂಡ್ ರಾಧಾ ನಮ್ಮ ರೂಮಿಗೆ ಬರ್ತಾ ಇದ್ದಾರೆ!'

'ಏನ.. ಎಲ್ಲಿಗ್ ಹೋಗ್ತಾ ಇದ್ದಾರೆ..' ಲೋಕೇಶ ನ ಪ್ರತಿ ಪದಗಳ ನಡುವಿನ ಅಂತರ ಚದುರುವ ಮೋಡಗಳಂತೆ ದೂರ ದೂರವಾಗುತ್ತಿದ್ದವು.

'ಹೋಗ್ತಾ ಇಲ್ಲಪ್ಪ ತಂದೆ.. ಬರ್ತಾ ಇದ್ದಾರೆ.. ಇಲ್ಲಿಗೆ..ನಮ್ಮ್ ಪ್ಲಾಟಿಗೆ'

'ಬರ್ಲಿ ಬಿಡು.. ನಿಂಗೇನು ಪ್ರಾಬ್ಲಮ್ಮು.. '

'ಸರಿ ಹಾಗಾದ್ರೆ' ಇನ್ನು ಹೆಚ್ಚು ಮಾತನಾಡಿ ಪ್ರಯೋಜನವಿಲ್ಲವೆಂದು ನಾನು ಸುಮ್ಮನಾದೆ. ನನ್ನನ್ನು ಗಮನಿಸಿದ ಆದಿ,

'ಏನೋ ವಿಷ್ಯ..ಲೆಕ್ಚರರ್ ಒಬ್ರು ಬ್ಯಾಚೊಲೇರ್ ರೂಮಿಗೆಲ್ಲ ಬರೋದು ಸರಿ ಇರುತ್ತಾ?'

'ನಾನೇನ್ ಕರೀಲಿಲ್ಲಪ್ಪ..ಅವ್ರೆ ಬರ್ತೀನಿ ಅಂತ ಬರ್ತಾ ಇರೋದು..' ಎಂದು ನಾನು ಹೇಳಿದೆ.

'ಎಷ್ಟ್ ಹೊತ್ತಿಗೆ ?'

ನಾನು ಆದಿಯ ಕಣ್ಣುಗಳನ್ನೇ ಧಿಟ್ಟಿಸುತ್ತಾ 'ರಾತ್ರಿ ಹತ್ತಕ್ಕೆ..'

ಕುಡಿಯುತ್ತಿದ್ದ ಬಿಯರ್ನ ಗುಟುಕು ಕೂಡಲೇ ನತ್ತಿಗೇರಿ ಒಮ್ಮೆಲೇ ಕೆಮ್ಮತೊಡಗಿದ ಆತ. ನಾನು ತಲೆಯನ್ನು ತಟ್ಟಿಕೊಳ್ಳುವಂತೆ ಸಂಜ್ಞೆ ಮಾಡಿದೆ.

'ಲೋ ಮಹರಾಯ.. ಏನೋ ನಿಮ್ಮಿಬ್ರುದು..ರಾತ್ರಿಹೊತ್ತ್ ಯಾಕೋ ಬರ್ತಾ ಇರೋದು ಅವ್ರು..?' ಬಿಯರನ್ನು ಕುಡಿಸಿದ ಮಾತ್ರಕ್ಕೆ ನಾನು ಹೇಳಿದ್ದಕ್ಕೆಲ್ಲ ತಲೆಯಾಡಿಸುವವರು ಎಂದುಕೊಂಡ ನನ್ನ ಲೆಕ್ಕಾಚಾರ ಸ್ವಲ್ಪ ಉಲ್ಟಾ ಹೊಡೆಯತೊಡಗಿತು. ಲೋಕೇಶ ಕುಡಿತದ ಮತ್ತಿನಲ್ಲಿ ಕಣ್ಣುಮುಚ್ಚಿಕೊಂಡು ಭುಜವನ್ನು ಕುಣಿಸುತ್ತ ತನ್ನದೇ ಯಾವುದೊ ಲೋಕದಲ್ಲಿದ್ದರಿಂದ ಆತನ ಅಭಿಪ್ರಾಯ ಸದ್ಯಕಂತೂ ಮಾನ್ಯವಾಗುತ್ತಿರಲಿಲ್ಲ.

'ಹಾಗೇನಿಲ್ಲ ಮಚಿ.. ನಾನ್ ಎಲ್ಲ explain ಮಾಡ್ತೀನಿ..But ಅವತ್ತೊಂದಿನ ನೀವು ಹಾಸ್ಟೆಲಿನ ಯಾರ್ದಾದ್ರೂ ರೂಮಲ್ಲಿ ಅಡ್ಜಸ್ಟ್ ಮಾಡ್ಕೋಬೇಕು'

'ನಿನ್ ರೂಮು , ನೀನ್ ಥಿಂಕ್ ಮಾಡು.. ಓನರ್ ಬೇರೆ ಕೆಳಗ್ಗೆ ಇರ್ತಾರೆ.. ನಾನು ಈ ವೀಕ್ ಊರಿಗ್ ಹೋಗ್ತಾ ಇದ್ದೀನಿ, ನಂದೇನು ಪ್ರಾಬ್ಲಮ್ ಇಲ್ಲ.. ಇವ್ನ್ ಕೇಳು' ಎಂದು ಆದಿ ಲೊಕೇಶನನ್ನು ನೋಡಿದ.


****


ಸುಡುಬಿಸಿಲಿನ ತಾಪದಿಂದ ಬೆವರುತ್ತ ಬಂದ ಅಪ್ಪ ಸಂತೆಯಿಂದ ತಂದ ಎರಡೂ ದಿನಸಿ ಗಂಟುಗಳನ್ನು ಬಾಗಿಲ ಬಳಿ ಇರಿಸಿದ. ಆಗೆಲ್ಲ ನಾಲ್ಕೈದು ಅಂತಹ ಬ್ಯಾಗುಗಳನ್ನು ಎತ್ತುತ್ತಿದ್ದ ಅಮ್ಮನಿಗೆ ಇಂದು ಒಂದು ಬ್ಯಾಗನ್ನೂ ಎತ್ತಿಡಲು ಆಗುತ್ತಿಲ್ಲ. ಆದಿ ಕೂಡಲೇ ಹೋಗಿ ಎರಡೂ ಬ್ಯಾಗನ್ನು ತನ್ನ ಒಂದೊಂದು ಕೈಯಲ್ಲಿಡಿದು ಅಡುಗೆ ಮನೆಯಲ್ಲಿ ತಂದಿರಿಸಿದ. ಅಮ್ಮ ಬಂದು ಒಂದೊಂದೇ ಸಾಮಾನುಗಳನ್ನು ತೆಗೆದು ಜೋಡಿಸತೊಡಗಿದಳು.

ಭಾರತ ಆಸ್ಟ್ರೇಲಿಯ ತಂಡದ ಮ್ಯಾಚನ್ನು ನೋಡುತಿದ್ದ ಮಗನನ್ನು ನೋಡಿದ ಅಪ್ಪ 'ಓದೋದ್ ಬಿಟ್ ಇದೇ ಮಾಡು..' ಎಂದು ಸಿಡುಕಿದ. ಆದಿ ಅದಕ್ಕೆ ಕ್ಯಾರೇ ಎನ್ನದೆ ಟಿವಿ ನೋಡುವುದರಲ್ಲೇ ಮಗ್ನನಾದ. ಅಪ್ಪ ತನ್ನ ಪ್ಯಾಂಟಿನ ಜೇಬಿನಲ್ಲಿ ತಂದಿರಿಸಿದ ಓಲ್ಡ್ ಮಾಂಕ್ ರಮ್ಮನ್ನು ರಾತ್ರಿಯ ತೀರ್ಥ ಪ್ರಸಾದಕ್ಕೆಂದು ತೆಗೆದಿಟ್ಟ. ಖೈದಿಗಳ ಮುಂದೆ ಪೊಲೀಸರು ತೆಗೆದಿಡುವ ರಿವಾಲ್ವರ್ನಂತೆ ಆ ಕಾಗದದ ಪೊಟ್ಟಣದ ರಮ್ಮು ಆದಿಯ ಮನದೊಳಗೆ ಒಂದು ಬಗೆಯ ಭಯವನ್ನು ಹುಟ್ಟಿಸಿತು.

'ಕಡ್ಲೆ ಹಿಟ್ಟು ಇಲ್ಲ.. ಬೆಲ್ಲ ಒಂದ್ ಕೆಜಿ ತರೋಕ್ ಹೇಳಿದ್ದೆ.. ಅರ್ಧ ಕೆಜಿ ಮಾತ್ರ ಬಂದಿದೆ.. ಕರ್ಮ' ಎಂದು ಅಡುಗೆಮನೆಯಿಂದ ಕೂಗಿದಳು ಅಮ್ಮ. ಆಕೆಯ ಕರ್ಮ ಎಂಬ ಪದದ ಅರ್ಥ ಆ ಸಮಯಕ್ಕೆ ಕೇವಲ ಕರ್ಮವಾಗಿರದೆ ಒಂದು ಬಗೆಯ ಶಾಪವೆಂಬುದಾಗಿದ್ದಿತು.

'ಅಷ್ಟ್ ಹೇಳೋಳು ನೀನೆ ಹೋಗಿ ತರ್ಬೇಕಿತ್ತು..' ಅಪ್ಪ ಅರಚಿದ. ತನ್ನ ಪ್ರತೀ ತಪ್ಪಿಗೂ ಅರಚುವಿಕೆಯ ಗುರಾಣಿಯನ್ನೇ ಬಳಸಿ ಮುಂದಿರುವವರ ಮಾತನ್ನು ನಿಲ್ಲಿಸುವಲ್ಲಿ ನಿಷ್ಣಾತನಾಗಿದ್ದ ಆತ.

'ತಲೆ ಆಕಾಶದ್ ಮೇಲೆ ಇದ್ರೆ ಇನ್ನೇನಾಗುತ್ತೆ.. ಹೇಳೋದು , ಕೇಳ್ದಷ್ಟ್ ಕೊಟ್ಟ್ ತರೋದು..! ಏನ್ ಕೊಡ್ತಾ ಇದ್ದಾರೆ, ಇಲ್ಲ ಅಂತ ನೋಡೋದ್ ಬೇಡ್ವಾ?'

'ನೋಡ್ ಮಾರಾಯ.. ಈ ರಾಕ್ಷಸಿ ಹೆಂಗ್ಸ್ ಅತ್ರ ನಂಗಾಗಲ್ಲ.. ಏನ್ ಸಾಯಿತಾಳೆ' ಅಂದ ಅಪ್ಪ ಕೊಂಚ ಸುಮ್ಮನಾಗಿ ತಾನು ನೀರು ಕುಡಿಯುತ್ತಿದ್ದ ತಾಮ್ರದ ಲೋಟವನ್ನು ಒಮ್ಮೆಲೇ ಜೋರಾಗಿ ನೆಲದ ಮೇಲೆಸೆದ. ಹತ್ತಾರು ಮಗ್ಗುಲಲ್ಲಿ ಬಿದ್ದು ಸದ್ದು ಮಾಡುತ್ತಾ ಲೋಟ ಶಾಂತವಾಯಿತು. ಅದರ ಆ ವಿಪರೀತ ಸದ್ದಿಗೆ ಆದಿಯ ಎದೆ ಒಂದೇ ಸಮನೆ ಬಡಿದುಕೊಳ್ಳತೊಡಗಿತು.

'ಅಮ್ಮ ಸುಮ್ನಿರಮ್ಮ.. ಸಾಯಂಕಾಲ ನಾನೇ ಹೋಗಿ ತರ್ತೀನಿ..' ಎಂದ ಆದಿಯ ಮಾತಿಗೆ,

'ಸರಿ ಬಿಡಪ್ಪ.. ಹೀಗೆ ಆದ್ರೆ ಉದ್ದಾರ ಆದಂಗೆ'. ದಿನನಿತ್ಯದ ಕಚ್ಚಾಟದಲ್ಲಿ ಆಕೆಯ ಉದ್ದಾರ ಎಂಬ ಪದಕ್ಕೆ ಅದ್ಯಾವ ಬಗೆಯ ಸ್ಥಾನವಿದೆಯೋ ಬಲ್ಲವರ್ಯಾರು? ಆಕೆ ಕೂಡಲೇ ಬಟ್ಟೆಯೊಂದನ್ನು ತಂದು ನೆಲದ ಮೇಲೆ ಹರಡಿದ್ದ ನೀರನ್ನು ಒರೆಸತೊಡಗಿದಳು. ಅಪ್ಪನಿಗೆ ಹಿಡಿಶಾಪಗಳ ಸುರಿಮಳೆಗೈಯಲಾಗುತಿತ್ತು. ಕಣ್ಣಲ್ಲೇ ಸುಟ್ಟು ಭಸ್ಮ ಮಾಡುವವರಂತೆ ಆತ ಆಕೆಯನ್ನು ಧಿಟ್ಟಿಸತೊಡಗಿದ.

'ಮನೆ ಬಿಟ್ಟ್ ತೋಲ್ಗ್ ಆದ್ರೂ ಹೋಗ್ಬಾರ್ದ.. ನಿನ್ ಕಾಲ್ ಸೇದೋಗ..ನಿನ್ ಮಕ ಮಣ್ಣ್ ತಿನ್ನ..' ಅಪ್ಪ ತನ್ನ ಕಾಲಿನಿಂದ ಒದ್ದ ರಭಸಕ್ಕೆ ನೆಲದ ಮೇಲೆ ಬಿದ್ದ ಅಮ್ಮ ಅರಚತೊಡಗಿದಳು. ಅದಾಗಲೇ ಆದಿ ಆ ವಾನರ ಜಗಳದ ಮಧ್ಯವರ್ತಿಯಾಗಿ ಅವರಿಬ್ಬರ ನೆಡುವೆ ನಿಂತಿದ್ದ. ಹೊರಗೆಲ್ಲ ಒಬ್ಬರು ಕೆಮ್ಮಿದರೂ ನಡುಗಿ ನೀರಾಗುವ ಈತ ಅಮ್ಮನ ಮೇಲೆ ತೋರುವ ಪರಾಕ್ರಮವನ್ನು ಆದಿಗೆ ಸಹಿಸದಾಯಿತು. ಅಕ್ಕಪಕ್ಕದ ಮನೆಯವರು ಏನೆನ್ನುತ್ತಾರೆ ಎಂಬುದನ್ನೂ ಲೆಕ್ಕಿಸದೆ ಅಪ್ಪ ತನ್ನ ಅಶ್ಲೀಲ ಪದವಿಯ ಜ್ಞಾನವನ್ನು ತೋರ್ಪಡಿಸತೊಡಗಿದ.

'ಬಾಯಿ ಮುಚ್ಚಪ್ಪ ಸಾಕು.. ಬೈಯೋಕ್ಕೆ ನಿಂಗೊಬ್ಬನಿಗೆ ಬರೋದು ಅಂತ ಆರ್ಚ್ಬೇಡ .. ನಿಂಗಂತೂ ಮಾನ ಮಾರ್ಯಾದೆ ಇಲ್ಲ ಅಂತ ನಮ್ಮನ್ನೂ ಹಾಗೆ ಅನ್ಕೋಬೇಡ'

'ಮುಚ್ಚೋ ಲೈ ಅಲಾಲ್ಕೋರ್ ನನ್ನ್ ಮಗ್ನೆ.. ನಾನ್ ಗೆಯ್ದ್ ಹಾಕಿರೋದನ್ನೇ ತಿಂದು ತಿಂದು ಇಷ್ಟ್ ಮಾತಾಡ್ತಿರ.. ಇನ್ ನೀವೇ ದುಡಿಯೋದ್ ಆಗಿದ್ರೆ ಇನ್ನೇನ್ ಹೇಳ್ತಿದ್ರೋ..' ಎಂದು ತನ್ನನ್ನು ಒಬ್ಬ ದೇಶ ಕಾಯುವ ಸೈನಿಕರಿಗೆ ಹೋಲಿಸತೊಡಗಿದ ಆತ. ಬಾಯಿಂದ ಹೊರಸೂಸುತಿದ್ದ ಹೆಂಡದ ವಾಸನೆ ಆದಿಯನ್ನು ತಲುಪಲು ಹೆಚ್ಚು ಸಮಯ ಹಿಡಿಯಲಿಲ್ಲ. ಹೆಚ್ಚಿನ ಮಾತು ಅನಾಹುತಕ್ಕೆ ನಾಂದಿಯಾಗುತ್ತದೆಂದು ಆತನಿಗೆ ಅನಿಸಿತು. ಅಮ್ಮನನ್ನು ಸುಮ್ಮನಿರಿಸಲು ಆತ ಪ್ರಯತ್ನಿಸಿದ. ಆದರೆ ಅದು ಬೆಂಕಿಯ ಮೇಲೆ ಸೀಮೆಯೆಣ್ಣೆಯನ್ನು ಸುರಿದಂತೆ ವ್ಯರ್ಥವಾದ ಕಾಯಕವಾಗಿದ್ದಿತು. ಆಕೆಯ ಕೊಂಕು ಮಾತುಗಳು ಆದಿಯನ್ನೂ ಕೆರಳುಸುತ್ತಿದ್ದ ವಲ್ಲದೆ ಸಮಯೋಚಿತ ಮೊಂಡು ಮಾತುಗಳು ಅಪ್ಪನನ್ನಂತೂ ಪ್ರತ್ಯುತ್ತರ ಕೊಡದಂತೆ ಕಟ್ಟಿಬಿಡುತ್ತಿದ್ದವು. ಮನೆ ರಣರಂಗವಾಯಿತು. ಅದಾಗಲೇ ಪಕ್ಕದ ಮನೆಯ ಒಂದಿಬ್ಬರು ಹೊರಬಂದು ಎತ್ತಲೋ ನೋಡುವ ನಟನೆಯನ್ನು ಮಾಡುತ್ತಾ ತಮ್ಮ ಕಿವಿಗಳೆರಡನ್ನೂ ಆದಿಯ ಪೋಷಕರ ವಾಗ್ಯುದ್ಧದೆಡೆ ಕೇಂದ್ರೀಕರಿಸಿದ್ದರು.

'ಆಗಲ್ಲ ಅಂದ್ರೆ ಆಗಲ್ಲ.. ಇವಾಗ್ಲೆ ಹೊರಟೊಗು..' ಅಪ್ಪ ಅರಚಿದ.

'ಹೋಗ್ತಿನೋ .. ನೀನ್ ಊರಲ್ ಇರೋ ಮುಂಡೆರ್ನ ಎಲ್ಲ ಕರ್ಕೊಬಂದು ಸಾಕೋ..ನಿಂಗ್ ಬೇಕಾಗಿರೋದು ಅದೇ ಅಲ್ವ'

'ನಾನ್ ಯಾವಳ್ನಾರು ಕಾರ್ಕೊ ಬರ್ತೀನಿ.. ಬೇಕಾದ್ರೆ ಕಟ್ಕೊಂಡ್ತೀನಿ.. ನೀನ್ಯಾವಳೇ ಕೇಳೋಕ್ಕೆ' ತನ್ನ ಒಂದು ಕಾಲನ್ನು ಮರದ ಕುರ್ಚಿಯ ಮೇಲಿರಿಸಿದ ಆತ ತನ್ನ ಕೈಗಳಿಂದ ಮೂಗಿನ ಹೊಕ್ಕನ್ನು ತೆಗೆಯುತ್ತಾ ಹೇಳತೊಡಗಿದ. ಆತನ ಆ ಮಾತನ್ನು ಕೇಳಿ ಅಡುಗೆ ಮಾಡುತ್ತಿದ್ದ ಆಕೆ ಅನ್ನದ ಸಮೇತ ಪಾತ್ರೆಯನ್ನು ನೆಲಕ್ಕೆ ಕುಕ್ಕಿದಳು ಅಮ್ಮ. ಬಿಸಿಯಾದ ಅನ್ನ ಹಾಗು ಅದರ ಗಂಜಿ ಆಕೆಯ ಕಾಲುಗಳ ಮೇಲೆ ಹರಿದು ಪಸರಿಸಿತು. ಆ ಸದ್ದಿಗೆ ಆದಿ ಕೂಡಲೇ ಅಡುಗೆ ಮನೆಯೊಳಗೇ ಓಡಿದ. ಆಗಷ್ಟೇ ನೀರನ್ನು ಒರೆಸಿದ್ದ ಆ ಹಸಿಬಟ್ಟೆಯನ್ನು ಕಾಲುಗಳ ಮೇಲೆ ಒತ್ತಿಹಿಡಿಡಿದ್ದಳು ಅಮ್ಮ. ಕಣ್ಣು ರೆಪ್ಪೆಗಳೆರಡೂ ಸಹ ಅಂತೆಹೆ ಗಟ್ಟಿಯಾಗಿ ಒಂದಕ್ಕೊಂದು ಒತ್ತಿಕೊಂಡಿದ್ದವು. ಕಳ್ಳಿಯ ಹಾಲಿನಂತೆ ಆಶ್ರುಧಾರೆಗಳು ಪಟಪಟನೆ ಉದುರತೊಡಗಿದ್ದವು. ಆದಿಗೆ ಆ ದೃಶ್ಯವನ್ನು ನೋಡಲಾಗಲಿಲ್ಲ. ಒಮ್ಮೆಲೇ ಅಪ್ಪನ ಕುತ್ತಿಗೆಯನ್ನು ಅದುಮಿ ಸಾಯಿಸಿಬಿಡಬೇಕೆಂಬ ಮನಸ್ಸಾದರೂ ಏಕೋ ಕೈಗಳು ಮುಂಬರಲಿಲ್ಲ. ಆತನ ಕಣ್ಣುಗಳೂ ಹುಕ್ಕಿ ಹರಿದವು.

ಆಕೆಯನ್ನು ಸಮಾಧಾನಪಡಿಸಲು ಮುಂದಾದ ಆದಿಯನ್ನು ಪಕ್ಕಕ್ಕೆ ತಳ್ಳಿ ಆಕೆ ಮಲಗುವ ಕೋಣೆಯೊಳಗೆ ಹೋದಳು. ಆದಿ ಅಳುತ್ತಲೇ ಅನ್ನವನ್ನೆಲ್ಲವನ್ನು ಕೈಯಿಂದ ಪಾತ್ರೆಯೊಳಗೆ ಸೀಟಿ ಅದನ್ನು ಹೊರಗೆಸೆದ. ಕೈ ಉರಿಯುವಷ್ಟು ಬಿಸಿಯಾಗಿದ್ದ ಅನ್ನದ ಗಂಜಿ ಇನ್ನು ಆಕೆಯ ಕಾಲುಗಳ ಮೇಲೆ ಅದೆಂತಹ ನೋವನ್ನು ಉಂಟುಮಾಡಿರಬಹುದು ಎಂಬುದನ್ನು ಆತ ಯೋಚಿಸಲೂ ಅಶಕ್ತನಾದ. ಆಕೆಯ ನೋವೆಲ್ಲಾ ತನಗೇ ಬರಬಾರದೇಕೆ ಎಂದು ಪ್ರಾರ್ಥಿಸತೊಡಗಿದ. ಅನ್ನವನ್ನು ಹೊರಗೆಸೆಯಲು ಬಂದಾಗ ಪಕ್ಕದ ಮನೆಯ ಹೆಂಗಸು ಏನೆಂದು ಕೇಳಿದಾಗ ಪಾತ್ರೆ ಕೈ ಜಾರಿ ಬಿತ್ತೆಂದೂ ಏನೂ ಹೆಚ್ಚು ಪೆಟ್ಟಾಗಲಿಲ್ಲ ಎಂದೇಳಿ ಸುಮ್ಮನಾದ. ತನ್ನ ತಾಯಿಯ ವಯಸ್ಸಿನ ಆ ಹೆಂಗಸು ಆದಿಯ ಉತ್ತರವನ್ನು ಕೇಳಿ ಆತನನ್ನು ತನ್ನ ಕರುಣಾಜನಕ ದೃಷ್ಟಿಯಿಂದ ನೋಡಿದಳು. ಆಕೆಯ ನೋಟದಲ್ಲಿ ತಾನೆಲ್ಲ ಬಲ್ಲೆ, ಪಾಪದ ಹುಡುಗ, ಅಪ್ಪ ಅಮ್ಮಂದಿರ ಕಿತ್ತಾಟದಲ್ಲಿ ಕಮರಿಹೋಗುತ್ತಿದ್ದಾನೆ ಎಂಬ ಒಂದು ನೋಟವಿತ್ತು. ಅವರನ್ನು ನೋಡಿ ಆದಿಗೆ ತನ್ನೆಲ್ಲ ದುಃಖವನ್ನು ಅಲ್ಲೇ, ಅದೇ ಕ್ಷಣದಲ್ಲಿ ಅತ್ತು ಕಳೆದುಕೊಳ್ಳಬೇಕೆನಿಸಿತು. ಅಪ್ಪನ ಅರಚುವಿಕೆ ಮತ್ತೆ ಭಯವನ್ನು ಉಂಟುಮಾಡಿತು.

'ನೀನ್ ಏನಾದ್ರೂ ಮಾಡು ಮಾರಾಯ.. ಅಮ್ಮ ಮಗ ಗಂಟು ಮೂಟೆ ಕಟ್ಕೊಂಡ್ ಹೋದ್ರೆ ಸರಿ..' ತನ್ನ ಅಧಿಕಾರವಾಣಿಯಲ್ಲಿ ಅಪ್ಪ ಹೇಳಿದ. ನೋವಿನಿಂದ ಮುಚ್ಚಿದ್ದ ಅಮ್ಮನ ರೆಪ್ಪೆಗಳು ಇನ್ನೂ ಒಂದನೊಂದು ಬಿಟ್ಟಿರಲಿಲ್ಲ. ಆ ನೋವಿನಲ್ಲೂ ಆಕೆ ಅಪ್ಪನ ಮಾತಿಗೆ ಕೊಂಕು ನುಡಿಯುವದನ್ನು ಮಾತ್ರ ಬಿಡಲಿಲ್ಲ.

'ಹೋಗ್ತಿವಿ .. ಸಾಯ್ಬೇಡ, ಸ್ವಲ್ಪ ಹೊತ್ತು ಬಾಯ್ ಮುಚ್ಕೊಂಡ್ ಇರು ತಂದೆ..' ಎಂದ ಆದಿ ಕೂಡಲೇ ಜೇನುತುಪ್ಪದ ಡಬ್ಬಿಯನ್ನು ತಂದು ಅಮ್ಮನ ಕಾಲುಗಳಿಗೆ ಹಚ್ಚತೊಡಗಿದ. ಆಕೆ ಆದಿಯನ್ನು ನೋಡುತ್ತಾ ಒಂದೇ ಸಮನೆ ಅಳತೊಡಗಿದಳು.

'ನಿಮ್ ಕಾಲೇಜತ್ರನೇ ಯಾವ್ದಾದ್ರು ಒಂದ್ ರೂಮ್ ಮಾಡಣ.. ನಾನೂ ಯಾವ್ದಾದ್ರು ಕೆಲ್ಸನ ನೋಡ್ಕೊಂಡ್ತೀನಿ..ನಿಂಗು ಅಡಿಗೆ ಊಟ ಅಂತ ಆಗುತ್ತೆ.. ನೆಡಿ, ಆದದ್ ಆಗ್ಲಿ.. ಈ ಬೇವರ್ಸಿ ಸಾವಾಸ ಸಾಕು ಇನ್ನು' ಎಂದು ಅಪ್ಪನಿಗೂ ಕೇಳುವಂತೆ ಆಕೆ ನುಡಿದಳು. ಆಕೆಯ ಮಾತನ್ನು ಕೇಳಿ ಆದಿಗೆ ಪ್ರಜ್ಞೆ ತಪ್ಪುವಂತಾಯಿತು. ಕೂಡಲೇ ಏನನ್ನು ಉತ್ತರಿಸಬೇಕೆಂದು ತೋಚದೆ ಆತ ರೂಮಿನಿಂದ ಹೊರಬಂದ. ಚಾರ್ಜಿಗೆ ಇರಿಸಿದ್ದ ಮೊಬೈಲನ್ನು ಹೊರತೆಗೆದು ಲೋಕೇಶನಿಗೆ ಫೋನಾಯಿಸಿದ. ಅದು ಐದಾರು ರಿಂಗುಗಳಾಗುವಷ್ಟರಲ್ಲೇ ಆತ ಮನೆಯಿಂದ ತುಸು ದೂರಕ್ಕೆ ಬಂದು ನಿಂತಿದ್ದ. ಅಪ್ಪ ಎಲ್ಲಿ ಅಮ್ಮನನ್ನು ಬೈಯುತ್ತಾನೋ, ಹೊಡೆಯುತ್ತಾನೋ ಎಂದು ತನ್ನ ಒಂದು ಕಿವಿಯನ್ನು ಆಕಡೆಯೇ ಇರಿಸುವುದನ್ನು ಮಾತ್ರ ಮರೆಯಲಿಲ್ಲ. ಫೋನನ್ನು ಎತ್ತಿದ ಲೊಕೇಶನ 'ಹೇಗಿದ್ದೀಯಪ್ಪ ಗುರು..' ಎಂಬ ಮಾತನ್ನು ಕೇಳಿ ಆದಿಯ ಧ್ವನಿ ಗದ್ಗತಿತವಾಯಿತು. ಕೂಡಲೇ ಸಾಧ್ಯವಾದಷ್ಟು ಕಡಿಮೆ ಸದ್ದನ್ನು ಮಾಡುತ್ತಾ ಆತ ಅಳತೊಡಗಿದ. ಮೊದಲಿಗೆ ಏಕೆ ಏನೆಂದು ಕೇಳಿದ ಲೋಕೇಶ ಸಂಧರ್ಭವನ್ನು ಅರಿತು ಆತ ಅಳುವವರೆಗೂ ಕಾದ. ಎಷ್ಟೋ ನಿಮಿಷಗಳ ನಂತರ ಇಹಸ್ಥಿತಿಗೆ ಬಂದ ಆದಿ ಏನನ್ನೂ ಹೇಳದೆ ನಾನೊಂದು ರೂಮನ್ನು ಮಾಡಬೇಕು, ನಿನ್ನ ಸಹಾಯ ಬೇಕು, ಅಮ್ಮನನ್ನು ಕರೆದುಕೊಂಡು ಬರುವುದಾಗಿ ಹೇಳಿದ. ಆದಿ ಬಾಯಿಬಿಟ್ಟು ಇಂತಿತ್ತೇ ಆಯಿತೆಂದು ಹೇಳದಿದ್ದರೂ ಆತನ ಮಾತಿನ ವರಸೆಯಿಂದ ಲೋಕೇಶ ಅದಾಗಲೇ ಆದಷ್ಟು ವಿಷಯವನ್ನು ಗ್ರಹಿಸಿದ್ದ. ನಂತರ ಏನು ಎತ್ತ ಎಂದು ಹೆಚ್ಚೇನೂ ಕೇಳದೆ ತುಸು ಹೊತ್ತು ಯೋಚಿಸಿ ತನ್ನ ಮಾತನ್ನು ಮುಂದುವರೆಸಿದ.

ಮೊದಲು ಆತನಿಗೆ ಕೊಂಚ ಶಾಂತವಾಗುವಂತೆ ಹೇಳಿ, ಮನೆಯಲ್ಲಿನ ಜಗಳ ಇಂದು ನೆನ್ನೆಯಲ್ಲದೆಂದೂ ಜಗಳವಿರದ ಮೆನೆಯೇ ಪ್ರಪಂಚದಲ್ಲಿ ಇರುವುದಿಲ್ಲ ಎನ್ನುತ್ತಾನೆ. ವಿದ್ಯಾವಂತರಿಗೆ ತಾವು ಕಲಿಯುವ ವಿದ್ಯೆ ಎಂಬುದು ಕೇವಲ ಕೆಲಸವೊಂದನ್ನು ಗಿಟ್ಟಿಸಿಕೊಂಡು ಹಣವನ್ನು ಗಳಿಸುವುದಷ್ಟೇ ಅಲ್ಲದೆ ಜೀವನದಲ್ಲಿ ಬರುವ ಇಂತಹ ಹಲವಾರು ವಿಷಮ ಸ್ಥಿತಿಗಳನ್ನು ಧೈರ್ಯದಿಂದ, ಜಾಣ್ಮೆಯಿಂದ ಎದುರಿಸುವುದಾಗಿದೆ ಎನ್ನುತ್ತಾನೆ. ಈ ಸಮಯಕ್ಕೆ ಏನೇ ಮಾಡಿದರೂ ಅದು ಕಾರ್ಯಸಾಧುವಾದುದಲ್ಲ. ಸ್ವಲ್ಪ ಸಮಯ ಕಾಯಿ. ಪೋಷಕರು ಹಿರಿಯರು. ವಯಸ್ಸಿನಲ್ಲಿಯೂ ಹಾಗು ಬುದ್ದಿಯಲ್ಲಿಯೂ. ಅವರವರ ಕಿತ್ತಾಟಕ್ಕೆ ಅವರೇ ಹೊಣೆ ಹಾಗು ಅದಕೊಂಡು ಪರಿಹಾರವನ್ನೂ ಅವರೇ ಕಂಡುಕೊಳ್ಳಬೇಕು. ನೀನು ವರ್ಷಪೂರ್ತಿ ಇವಿಷ್ಟೇ ವಿಷಯದಲ್ಲಿ ಬಿದ್ದಿದ್ದರೆ ಖಂಡಿತಾವಾಗಿಯೂ ಓದಿನ ಮೇಲೆ ಗಮನ ಹರಿಸಲಾರೆ. ಹೇಗಾದರೂ ಮಾಡಿ ಕಾಲೇಜನ್ನು ಪಾಸು ಮಾಡಿಕೊ. ನಿನ್ನಂತ ಪ್ರತಿಭಾವಂತರಿಗೆ ಕಂಪನಿಗಳು ಸಾಲಾಗಿ ಬಂದು ನಿಲ್ಲುತ್ತವೆ. ಆಗ ನೀನು ಯಾರನ್ನಾದರೂ ಕರೆದುಕೊಂಡು ಬಾ. ಅಷ್ಟಾಗಿಯೂ ನೀನು ಅಮ್ಮನನ್ನು ಕರೆದುಕೊಂಡು ಬಂದೆ ಎಂದಿಟ್ಟುಕೋ, ಮನೆ, ಡೆಪಾಸಿಟ್, ಬಾಡಿಗೆ, ಸಾಮಾನುಗಳು ಅಂತ ಹತ್ತಿರ ಹತ್ತಿರ ಎರಡು ಲಕ್ಷವಾದರೂ ಬೇಕು. ಸದ್ಯಕ್ಕೆ ನನ್ನ ಬಳಿ ಅಷ್ಟು ಹಣ ಇದ್ದರೂ ನಾನು ಶುಂಠಿಯಲ್ಲಿ ತೊಡಗಿಸಿಕೊಂಡಿರುವುದರಿಂದ ಅದು ಸಾಧ್ಯವಾಗದ ಮಾತು. ಆದಿಗೆ ಲೊಕೇಶನ ಮಾತು ಹೌದೆನಿಸಿದರೂ ಕಾಲಿನ ಮೇಲೆ ಗಂಜಿಯನ್ನು ಚೆಲ್ಲಿಕೊಂಡು ಅವಡುಗಚ್ಚಿ ಅಳುತ್ತಿರುವ ಅಮ್ಮನ ರೋಧನೆಯನ್ನು ಸಹಿಸಲಾಗಲಿಲ್ಲ. ಅದೇನೇ ಆದರೂ ನಾನು ಹಾಗು ಲೋಕೇಶ ಆತನ ಜೊತೆಗಿರುತ್ತಿವೆಂಬ ಭರವಸೆಯಲ್ಲಿ 'ಯೋಚ್ನೆ ಮಾಡಿ ಕಾಲ್ ಮಾಡ್ತೀನಿ' ಎಂದೇಳಿ ಫೋನನ್ನು ಇರಿಸಿದ.

ಆದಿಗೆ ತಂಗಿ ಮತ್ತೊಮ್ಮೆ ನೆನಪಾದಾಳು. ಆಕೆಯನ್ನು ಊರಿಗೆ ಕರೆಯಬೇಕೆಂಬ ಮನಸ್ಸಾಯಿತು.

ಗಿಜಿಗಿಜಿಗುಡುವ ನಗರದ ಧಟ್ಟಣೆ, ಬೆಂಕಿಪೊಟ್ಟಣಗಳಂತೆ ಒಂದಕೊಂದು ಅಂಟಿಕೊಂಡಿರುವ ಇಕ್ಕಟ್ಟಾದ ಮನೆಗಳು, ಆ ಮನೆಗಳ ಮೇಲೆ ಮತ್ತೆ ಹಲವು ಮನೆಗಳು, ಪ್ರತಿ ಹನಿ ನೀರಿಗೂ ಹಾಹಾಕಾರ, ಕರುಣೆ ಎಂಬ ಪದವನ್ನೇ ಮರೆತು ಮೋಸ ಸುಲಿಗೆಗಳನ್ನೇ ವ್ಯವಹಾರ ಎಂದುಕೊಂಡು ಜೀವನ ನೆಡೆಸುವ ಜನಸಂತೆ. ಇವೆಲ್ಲದರ ಮುಂದೆ ತನ್ನ ಅಮ್ಮ ನಿಂತಿರುವುದನ್ನು ಆದಿ ಒಮ್ಮೆ ಕಲ್ಪಿಸಿಕೊಂಡ.

ಆ ನರಕದ ಕಾನನಕ್ಕಿಂತ ಅಪ್ಪನ ಹಿಂಸೆಯೇ ಕೊಂಚ ಸಣ್ಣದೆನಿಸಿತು ಆತನಿಗೆ!

ಮನೆಗೆ ವಾಪಸ್ಸಾದಾಗ ಆತನಿಗೆ ಅಪ್ಪ ಅಷ್ಟರಲ್ಲಾಗಲೇ ಹೊರಗೋದದ್ದು ತಿಳಿಯಿತು. ನೀರು ಅದ್ದಿದ್ದ ಬೆಳ್ಳನೆಯ ಬಟ್ಟೆಯನ್ನು ಕಾಲಿಗೆ ಕಟ್ಟಿಕೊಂಡು ಅಮ್ಮ ಆ ನೋವಿನಲ್ಲೂ ಪುನ್ಹ ಅಡುಗೆ ಮಾಡುವುದರಲ್ಲಿ ತೊಡಗಿದ್ದಳು. 'ನಿಂಗೇನಾದ್ರು ತಲೆ ಕೆಟ್ಟಿದ್ಯಾ..?' ಎಂದು ಆದಿ ಅಮ್ಮನನ್ನು ಬೈಯುತ್ತಾ ಆಕೆಗೆ ಆಸ್ಪತ್ರೆಗೆ ತೆರಳಲು ರೆಡಿಯಾಗುವಂತೆ ಹೇಳುತ್ತಾನೆ. ಕಣ್ಣೀರಿನ ತೇವವಿನ್ನೂ ಆರಿರದ ಕಣ್ಣುಗಳಿಂದ ಆದಿಯನ್ನು ಪ್ರೀತಿಯಿಂದ ನೋಡುತ್ತಾ 'ಬೇಡ ಮಗ .. ಏನಾಗದಿಲ್ಲ.. ಸ್ವಲ್ಪ ದಿನ ಎಲ್ಲ ಸರಿ ಆಗುತ್ತೆ' ಎಂದು ಆಕೆ ಹೇಳುತ್ತಾಳೆ. ಆದಿ ಅದೆಷ್ಟೇ ಹಠ ಹಿಡಿದರೂ ಕೇಳುವುದಿಲ್ಲ. ಅಲ್ಲದೆ ಸದ್ಯಕ್ಕೆ ಆದಿಯೊಟ್ಟಿಗೆ ಆಕೆ ಸಿಟಿಗೆ ಬರುವುದೂ, ಬಾಡಿಗೆ ಮನೆ ಮಾಡುವುದೂ ಎಲ್ಲವೂ ಆಗದ ಕೆಲಸವೆಂದೂ ಆತ ತನ್ನ ಓದಿನ ಮೇಲೆ ಸದ್ಯಕೆ ಗಮನವನ್ನು ಕೊಟ್ಟು ಕಾಲೇಜನ್ನು ಪಾಸುಮಾಡಿಕೊಳ್ಳುವಂತೆ ಲೋಕೇಶ ಹೇಳಿದ ಮಾತನ್ನೇ ಹೇಳುತ್ತಾಳೆ. ಆದಿ ಸಾಧ್ಯವಾದಷ್ಟು ಬಗೆಯಲ್ಲಿ ಆಕೆಯನ್ನು ಆ ನರಕದ ಕೂಪದಿಂದ ಹೊರತರಲು ಯೋಚಿಸುತ್ತಾನೆ. ಆದರೆ ಆತನ ಎಲ್ಲ ಆಲೋಚನೆಗಳು ಪ್ರಪಾತವೊಂದರ ತುತ್ತತುದಿಗೆ ಬಂದಷ್ಟೇ ನಿಲ್ಲುತ್ತಿದ್ದವು. ಸಾಕಷ್ಟು ವಿಚಾರಗಳನ್ನು ಮಾಡಿ ಕೊನೆಗೆ ಆತ ಕೈಚೆಲ್ಲಿ ಕೂರುತ್ತಾನೆ.

ಕೆಲಸಮಯದ ನಂತರ ಆಕೆ ಅನ್ನ, ಸಾರು, ಉಪ್ಪಿನಕಾಯಿ ಹಾಗು ಮೊಸರನ್ನು ತಟ್ಟೆಯ ತುಂಬ ಹಾಕಿ ತಂದು ಆದಿಗೆ ನೀಡುತ್ತಾಳೆ. ಆಕೆ ನೀಡಿದ ತಟ್ಟೆಯನ್ನೇ ನೋಡುತ್ತಾ ಆದಿ ಚಿಂತೆಯಲ್ಲಿ ಮುಳುಗುತ್ತಾನೆ. ಅಪ್ಪ, ಆತನ ಕೋಪ, ಬೈಗುಳ, ಅಮ್ಮನ ಅಸಹಾಯಕತೆ, ಕೊಂಕು ನುಡಿಗಳು, ಅರ್ಥವಿರದ ಜೀವನ ಇವುಗಳೆಲ್ಲ ಒಂದೆಡೆಯಾದರೆ ಮತ್ತೊಂದೆಡೆ ಆಕಾಶವನ್ನು ಚುಂಬಿಸುವ ಆತನ ಕನಸುಗಳು, ಹಠ, ಪ್ರತಿಜ್ಞೆ, ಹೆಸರು ಜೊತೆಗೆ ಖುಷಿ ... ಜೀವನದ ಮೇಲೆ ಆತನಿಗೆ ಜಿಗುಪ್ಸೆ ಮೂಡತೊಡಗಿತು. ನಾಚಿಕೆಯಾಯಿತು. ಕೋಪ ವಿಪರೀತವಾಯಿತು. ಮೇಲಾಗಿ ಅಮ್ಮನನ್ನು ಇಂತಹ ಕ್ರೂರಿ ಅಪ್ಪನೊಟ್ಟಿಗೆ ಮದುವೆ ಆ ವ್ಯಕ್ತಿಗಳ ಮೇಲೆ ಎಲ್ಲಿಲ್ಲದ ಆಕ್ರೋಶ ಮೂಡಿತು. ಹುಡುಗ ಹೇಗೆ ಏನು ಎಂಬೊಂದನ್ನೂ ಲೆಕ್ಕಿಸದೆ ಈಕೆಯ ಕೊರಳನ್ನು ನೀಡುವಂತೆ ಮಾಡಿದ ಆ ಕಟುಕರಿಗೆ ಸಾಧ್ಯವಾದಷ್ಟು ಹಿಡಿಶಾಪವನ್ನು ಹಾಕುತ್ತಾನೆ. ಊಟ ಮುಗಿಸಿ ಅಂದಿನ ರಾತ್ರಿಯೇ ಕಾಲೇಜಿಗೆ ಹೊರಡುವ ಸಿದ್ದತೆಯನ್ನು ಮಾಡುತ್ತಾನೆ.


****


'ವಾವ್.. Awesome ರಿ ನೀವು.. ಸೂಪ್ ಮಾಡೋದ್ನ ಎಲ್ ಕಲ್ತರಿ..?' ಬಿಸಿಯಾಗಿ ಹಬೆಯಾರುತ್ತಿದ್ದ ಸೂಪನ್ನು ಕುಡಿಯುತ್ತಾ ರಾಧಾ ಕೇಳಿದರು. ಅಂದುಕೊಂಡಂತೆಯೇ ವೀಕೆಂಡಿನ ಎಂಡಿಗೆ ಆಕೆ ನಮ್ಮ ರೂಮಿಗೆ ಬಂದಿದ್ದರು. ಆದಿ ಊರಿಗೆ ಹೋದರಿಂದ, ಹೋರಾಡಲು ಲೋಕೇಶನೊಬ್ಬನಿಗೆ ಆದದ್ದರಿಂದ ಅನಿವಾರ್ಯವಾಗಿ ಆತನೂ ಸಹ ಅಂದು ರೂಮನ್ನು ತೊರೆಯಬೇಕಾಯಿತು. ರೆಡಿಮೇಡ್ ಸಿಗುವ ಸೂಪಿನ ಪುಡಿಯನ್ನು ನೀರಿಗೆ ಬೆರೆಸಿ ಕುದಿಸಿ ತಂದ ಮಿಶ್ರಣಕ್ಕೇ ಈ ಪರಿಯಾದ ಫೀಡ್ ಬ್ಯಾಕ್ ಬಂದಾಗ ಒಮ್ಮೆಲೇ ಹುಬ್ಬಿ ಹಿಗ್ಗಿದ ನಾನು ‘ಬೆಳಗಿನಿಂದ ಕಷ್ಟಪಟ್ಟು ಮಾಡಿದ ರೆಸಿಪಿ’ ಎಂದು ಹೇಳುವ ಮನಸ್ಸಾದರೂ ಕೊನೆಗೆ ’ಮತ್ತೊಮ್ಮೆ ಮಾಡಿ ತೋರಿಸಿ’ ಎಂದು ಆಕೆ ಕೇಳಿದರೆ ಎಂದು ಹೆದರಿ ಸುಮ್ಮನಾದೆ. ಅಡುಗೆಮನೆಯಲ್ಲಿ ಬಿದ್ದಿದ್ದ ಸೂಪಿನ ಪುಡಿಯ ಖಾಲಿ ಪೊಟ್ಟಣವನ್ನು ತಂದು ತೋರಿಸಿದಾಗ ಇಬ್ಬರೂ ಒಟ್ಟಿಗೆ ನಕ್ಕೆವು. ಮೊದಲ ಬಾರಿಗೆ ಹೆಣ್ಣೊಂದರ ನಗುವನ್ನು ಕೇಳತೊಡಗಿದ ಕೆಳಗಿನ ಓನರ್ರ ಕಿವಿಗಳೊಟ್ಟಿಗೆ ರೂಮಿನ ಗೋಡೆಗಳೂ ಸಹ ಒಮ್ಮೆಲೇ ಕಕ್ಕಾಬಿಕ್ಕಿಯಾಗಿರಬೇಕು. ಕೊಂಚ ನಿಧಾನವಾಗಿ ನಗುವಂತೆ ಆಕೆಗೆ ಸಂಜ್ಞೆ ಮಾಡಿದೆ. ಅವರು ಕೆಂಪು ತುಟಿಗಳ ಮೇಲೆ ತಮ್ಮ ಸುಂದರ ನೀಳ ಬೆರಳನ್ನು ಇಟ್ಟರು.

ಫ್ರಿಡ್ಜ್ ನಲ್ಲಿದ್ದ ಆಕೆಗಿಷ್ಟವಾದ ಚಾಕೋಲೇಟ್ಗಳೆರಡನ್ನು ತಂದು ಒಂದನ್ನು ಅವರೆಡೆಗೆ ಎಸೆದೆ. ಅವರು ಹಿಡಿಯಲು ಅಣಿಯಾಗಿದ್ದ ಕೈಗಳನ್ನು ದಾಟಿ ಅದು ಅವರ ಮುಖಕ್ಕೆ ಟಪ್ಪನೆ ಬಡಿಯಿತು. 'ಔಚ್... ರೀ, ನನ್ ಮೇಲೆ ಸಿಟ್ ಇದ್ರೆ ಹೇಳ್ಬಿಡಿ ಈ ರೀತಿ ಚಾಕೋಲೇಟ್ನಿಂದ ಮಾತ್ರ ಹೊಡಿಬೇಡಿ ಪ್ಲೀಸ್..' ಎಂದು ಅಳುವ ಮಗುವಿನ ಮುಖವನ್ನು ಮಾಡಿದರು ಅವರು. ಚಾಕೋಲೇಟಿನ ನುಣುಪಾದ ತುದಿ ತಾಗಿದ ಕೂಡಲೇ ಕೆಂಪುಗೊಂಡ ಆಕೆಯ ಕೆನ್ನೆಯನ್ನು ಕಂಡ ನಾನು ಕೂಡಲೇ ಅವರ ಬಳಿಗೆ ಧಾವಿಸಿ ಕೈಗಳಿಂದ ಅವುಗಳನ್ನು ಮುಟ್ಟಿ 'Sorry.. ಪೆಟ್ಟಾಯಿತಾ..' ಎಂದೇ. ನನ್ನ ನೋಟ ಆಕೆಯ ನೋಟದೊಟ್ಟಿಗೆ ಸಂಧಿಸಿದವು. ಅದಾಗಲೇ ಅವು ನೂರಾರು ಮಾತುಗಳನ್ನು ತಮಗೆ ತಾವೇ ಆಡಿಕೊಂಡಿದ್ದವು. ಆಸ್ವಾದಿಸಿದಷ್ಟೂ ಸಾಕೆನಿಸದ ಆಕೆಯ ಸೆಂಟಿನ ಘಮ ಏನೋ ಒಂದು ಬಗೆಯ ಮತ್ತನ್ನು ತರಿಸುತ್ತಿತ್ತು. ಆಗಷ್ಟೇ ಮಜ್ಜಿಗೆಯಿಂದ ಹೊರತೆಗೆದ ಬೆಣ್ಣೆಯ ಮುದ್ದೆಯಂತಹ ನುಣುಪಾದ ಮೃದು ಕೆನ್ನೆಗಳ ಮೇಲಿದ್ದ ನನ್ನ ಕೈಗಳಿಗೆ ವಾಪಸ್ಸು ಬರುವ ಮನಸ್ಸೇ ಆಗಲಿಲ್ಲ. ಕೂಡಲೇ ಆಕೆಯೂ ಅವುಗಳ ಮೇಲೆ ಕೈಗಳನ್ನು ಇಟ್ಟರು. ಕಣ್ಣುಗಳನ್ನು ಮುಚ್ಚಿ ನನ್ನ ಕೈಗಳ ಮೇಲೆ ನುಣುಪಾದ ಕೆನ್ನೆಯನ್ನು ಸವರತೊಡಗಿದರು. ನಾನು ಸೇಫ್ಟಿಗೆ ಇರಲಿ ಎಂದು ಪಕ್ಕದಲ್ಲಿಟ್ಟಿದ್ದ ಪುಸ್ತಕಗಳನ್ನು ಒಂದೇ ಕೈಯಿಂದ ಬ್ಯಾಗಿನೊಳೊಳಗಿಟ್ಟು ದೂರಕ್ಕೆ ತಳ್ಳಿದೆ. ನನ್ನನ್ನು ಇನ್ನೂ ಹತ್ತಿರಕ್ಕೆ ಎಳೆದ ಅವರು ನನ್ನ ಬಲಗೈಯ ಉಗುರುಬೆರಳಿನ ಮೇಲೆ ನಯವಾಗಿ ಚುಂಬಿಸಿ ಮತ್ತೊಮ್ಮೆ ಧೀರ್ಘವಾಗಿ ನೋಡಿದರು.

ಅಷ್ಟರಲ್ಲಾಗಲೇ ತನ್ನ ಶಬ್ದಬರಿತ ಸದ್ದಿನಿಂದ ಕೂಗತೊಡಗಿದ ಹೃದಯದ ಢಮರುಗವನ್ನು ಕೇಳಿ ಆಶ್ಚರ್ಯ ಚಕಿತಳಾಗುವಂತೆ ನನ್ನ ಎದೆಯ ಬಳಿಗೆ ಬಂದು ಅವರ ಕಿವಿಯನು ಇರಿಸಿದರು. ಅದು ಅವರ ನಯವಾದ ಕೆನ್ನೆಗಳ ಸ್ಪರ್ಶವೋ ಏನೋ ಸದ್ದು ಇನ್ನೂ ವಿಪರೀತವಾಯಿತು. ಆ ಸದ್ದಿಗೆ ನನ್ನನು ನೋಡಿ ಜೋರಾಗಿ ನಗಲಾರಂಬಿಸಿ, 'ಏನ್ರೀ ನೀವ್ ಹುಡುಗ್ರು.. ನೋಡೋಕೆ ಮಾತ್ರ ಕಾಮ್ ಅಂಡ್ ಕಂಟ್ರೊಲ್ಡ್ ಅಂತ ಕಂಡ್ರೂ ಒಳಗಡೆ ಮಾತ್ರ ಯಾಕ್ರಿ ಹೀಗೆ?' ಎಂದರು. ಕಾಮ್ ಆಗಿರೋದು ಓಕೆ, ಈ ಕಂಟ್ರೋಲ್ ಬಗ್ಗೆ ಆಕೆಗೆ ಹೇಗೆ ತಿಳಿಯಿತು? ತಿಳಿಯಲಿಲ್ಲ. ಸದ್ಯಕ್ಕೆ ನನಗೆ ಏನೆಳಬೇಕೆಂದು ಅರಿಯಲಿಲ್ಲ. ದಡ್ಡನಂತೆ ನಕ್ಕೆ. 'ಒಹ್ ಮೈ ಗಾಡ್ .. ಇಷ್ಟು ಜೋರಾಗಿ ಹೃದಯ ಬಡಿಯೋದನ್ನ ನಾನು ಎಲ್ಲೂ ನೋಡಿರ್ಲಿಲ್ಲ ರಿ' ಎಂದು ನನ್ನ ಎದೆಯ ಮೇಲೆ ಕೈಯನಿಟ್ಟು ಮತ್ತೊಮ್ಮೆ ಪರೀಕ್ಷಿಸಿದಳು. ಆಕೆಯ ಆ ಒಂದು ಸ್ಪರ್ಶದಿಂದ ದೇಹದ ಕಣಕಣ ಕೋಶಗಳು ಜಾಗೃತಗೊಂಡವು. ಕೂಡಲೇ ಆಕೆಯನ್ನು ಗಟ್ಟಿಯಾಗಿ ತಬ್ಬಿಕೊಂಡು ಚುಂಬಿಸಬೇಕೆಂಬ ಮನಸ್ಸಾದರೂ ಆ ದಿನನಂತೆ 'ಆ ಸೃಷ್ಟಿಕರ್ತನ ಸೃಷ್ಟಿಯನ್ನು ಟೆಸ್ಟ್ ಮಾಡುವ ಸಲುವಾಗಿ ಮಾತ್ರ ನಾನು ಬಂದೆ' ಎಂದರೆ ನನ್ನ ಮಾನ ಮೂರು ಕಾಸಿಗೆ ಹರಾಜಾಕಿದಂತೆ ಆಗುವುದಂತೂ ಸುಳ್ಳಲ್ಲ. ಸಂಯಮವನ್ನು ತಂದುಕೊಂಡೆ. ಆಗಲಿಲ್ಲ. ಕಾಲೇಜಿನಲ್ಲಿ ಇಂಟರ್ನಲ್ಗೆ ಕೇವಲ ಒಂದೇ ಒಂದು ಮಾರ್ಕ್ಸನ್ನು ಕೊಡಲು ನಿರಾಕರಿಸುವ, ಕಾಪಿ ಒಡೆಯಲೂ ಬಿಡದ ಕಟ್ಟುನಿಟ್ಟಾದ ಶಿಕ್ಷಕಿಯಂತೆ ಅವರನ್ನು ಕಲ್ಪಿಸಿಕೊಂಡೆ. ಅದೂ ಸಹ ಪ್ರಯೋಜನವಾಗಲಿಲ್ಲ. 'ಥು ನಿನ್ನ ಗಂಡಸು ಜನುಮಕ್ಕೆ, ಯೋಗ, ಪ್ರಾಣಾಯಾಮ ಎಲ್ಲವನ್ನೂ ಮಾಡಿಯೂ ನಿಗ್ರಹ ಶಕ್ತಿ ಇಲ್ಲದಂತೆ ಆಡ್ತಿಯಲ್ಲ' ಎಂದು ನನ್ನನ್ನೇ ನಾನೇ ಬೈದುಕೊಂಡೆ. ಈ ಬಾರಿ ಕೊಂಚ ವಿಚಲಿತವಾಯಿತು ಮನಸ್ಸು. ಕೇವಲ ಕೆಲಕ್ಷಣದ ಸುಖಕಷ್ಟೆ ನಮ್ಮಮಾತು, ಚರ್ಚೆ, ಗೆಳೆತನ ಎಲ್ಲ ಸೀಮಿತವೆ? ಒಬ್ಬ lecturer ಆಗಿ ಅದ್ಯಾವ ಬಗೆಯ ಸಂಕೋಚಗಳಿಲ್ಲದೆ ಹುಡುಗರ ರೋಮಿಗೆ ಬರೋದೆಂದರೆ ಏನು ಸಾಮನ್ಯದ ಮಾತೆ? ಇಲ್ಲಿ ನಂಬಿಕೆ ಇದೆ. ಈ ನಂಬಿಕೆಯನ್ನು ನಾನು ಉಳಿಸಿಕೊಳ್ಳಬೇಕು. ಹಾಗಾದರೆ ಆ ಮಾಯನೋಟದಿಂದ ನನ್ನ ಬೆರಳಿನ ಮೇಲ್ಯಾಕೆ ಆಕೆ ಚುಂಬಿಸಿದರು? ಏನದರ ಅರ್ಥ? ಮನಸ್ಸು ಕೇಳಿತು. ಉತ್ತರ ತಿಳಿಯಲ್ಲಿಲ್ಲ. ಆಕೆ ನನ್ನ ಪರೀಕ್ಷಿಸಲಿ ಅಥವಾ ಇಲ್ಲದಿರಲಿ, ನಾನು ಮಾತ್ರ ಸಂಯಮವನ್ನು ಕಳೆದುಕೊಳ್ಳೆನು. ಗೆಳೆತನ ಹಾಗು ಬಯಕೆಯಲ್ಲಿ ನನ್ನ ಮನಸ್ಸು ಯಾವುದನ್ನು ಆಯ್ಕೆಮಾಡುತ್ತದೆ ಎಂದು ಪರೀಕ್ಷಿಸಿ ನೋಡುವ ಎಂದುಕೊಂಡೆ. ಆದದ್ದಾಗಲಿ ಎನುತ ಗಟ್ಟಿಮನಸ್ಸು ಮಾಡಿ ಕೂತೆ.

‘Hey.. What happened??' ನಯವಾಗಿ ಅವರು ಕೇಳಿದರು. ಅಷ್ಟರಲ್ಲಾಗಲೇ ಆಕೆ ತನ್ನ ಮುಖವನ್ನು ಬಲುಹತ್ತಿರಕ್ಕೆ ತಂದಿದ್ದರು. ದೂರದ ಚಂದಿರನ್ನು ಒಮ್ಮೆಲೆ ಕಿತ್ತು ಮುಖದ ಬಳಿಯಿರಿಸಿದಂತಹ ಆ ಘಳಿಗೆ ಕೆಲಕ್ಷಣಗಳ ಮೊದಲಷ್ಟೇ ನನಗೂ ಹಾಗು ನನ್ನ ಮನಸ್ಸಿಗೂ ನೆಡೆದ ವಾಗ್ಯುದ್ಧವನ್ನು ಮರೆಮಾಸಿತು. ಸಂಯಮ ಸಂಯಮವನ್ನು ಕಳೆದುಕೊಂಡಿತು. ಆಕೆಯ ಕೈಬೆರಳನ್ನು ನನ್ನ ಬೆರಳುಗಳೊಟ್ಟಿಗೆ ಬೆಸೆದೆ. ಆಕೆಯ ಹಣೆಯ ಮೇಲೆ ಇನ್ನೇನು ಚುಂಬಿಸಬೇಕು ಎನ್ನುವಷ್ಟರಲ್ಲಿ ಒಮ್ಮೆಲೆ ಕಾಲಿಂಗ್ ಬೆಲ್ಲು ಬಡಿದುಕೊಂಡಿತು! ಆಶ್ಚರ್ಯದಿಂದ ಇಬ್ಬರೂ ರೋಮಿನ ಹೊರಗೆ ನೋಡತೊಡಗಿದೆವು....


ಮುಂದುವರೆಯುವುದು..

ಪಯಣ - 4

Dear Mr.Lokesh,

With respect to your shipment being sent from India, we are sorry to inform you that the container consisting of coffee has been rejected by the Food inspecting authorities in the customs at the destination. Attached is the cancellation receipt. Accordingly, the shipment has been rejected & has been destroyed immediately and no refund can be availed as per the set norms. However, considering the scenario we are providing you a special discount on our freight cost which will be communicated to you in our next email.

Thanks for choosing us.

Regards,
Manager,
CM Shipping & forwarding,
Mumbai, India.

ಕಾಫಿ ಬಿಸಿನೆಸ್ ಮಾಡಲು ಹೊರಟ ಲೋಕೇಶ ಮೊದಲು ಸಣ್ಣದೊಂದು ಸ್ಯಾಂಪಲ್ ಪ್ಯಾಕನ್ನು ಕಳಿಸಿ, ಎಲ್ಲವೂ ಸರಿಯಂತಾಗಿ ದೂರದ ಗಲ್ಫ್ ರಾಷ್ಟ್ರರೊಂದರಲ್ಲಿ ಒಬ್ಬ ಕಸ್ಟಮರ್ ಅನ್ನೂ ಸಹ ಗಳಿಸಿದ. ಎರಡೇ ತಿಂಗಳಲ್ಲಿ ಲೋಕಲ್ ಕಾಫಿ ಬೆಳೆಗಾರರಿಂದ ಕಾಫಿಯನ್ನು ಪಡೆದು, ಪುಡಿ ಮಾಡಿ, ಅದನ್ನುಪ್ಯಾಕ್ ಮಾಡಿಸಿ, ಅದಕೊಂದು Bar-code, Expiry date, Date of Manufacture ಎಲ್ಲವನ್ನು ಹಾಕಿ ಮೊದಲ ಆರ್ಡರ್ ಗೆ ಅಡ್ವಾನ್ಸ್ ಅನ್ನೂ ಸಹ ಪಡೆದುಕೊಂಡಿದ್ದ. ಅದೇ ಅಡ್ವಾನ್ಸ್ ದುಡ್ಡಿನಲ್ಲಿ ಇಲ್ಲಿನ ಕಾಫಿ ಬೆಳೆಗಾರರಿಗೆ ಹಣವನ್ನೂ ಸಂದಾಯ ಮಾಡಿ ಸಂಪೂರ್ಣ ಷಿಪ್ಮೆಂಟನ್ನು ಅಲ್ಲಿಯವರೆಗೂ ಕಳುಹಿಸುವ ಜವಾಬ್ದಾರಿಯನ್ನೂ ತಾನೇ ತೆಗೆದುಕೊಂಡಿದ್ದ. ಆದರೆ ವಿಧಿಯಾಟ ಬೇರೆಯೇ ಆಗಿದ್ದಿತು. ಸ್ಯಾಂಪಲ್ ಪ್ಯಾಕನ್ನು accept ಮಾಡಿದ್ದ ಕಸ್ಟಮ್ಸ್ ನ ಅಧಿಕಾರಿಗಳು ರಿಯಲ್ ಶಿಪ್ಮೆಂಟನ್ನು ಮಾತ್ರ ಸಾರಾಸಗಟಾಗಿ ರಿಜೆಕ್ಟ್ ಮಾಡಿದ್ದರು. ಅಲ್ಲದೆ ಅಲ್ಲಿನ ನಿಯಮಗಳ ಪ್ರಕಾರ ಈ ರೀತಿ ರಿಜೆಕ್ಟ್ ಆದ ಸ್ಯಾಂಪಲ್ ಗಳನ್ನು ಕೂಡಲೇ ಡೆಸ್ಟ್ರಾಯ್ ಮಾಡಲಾಗಿದೆ ಎಂಬ ಸಂದೇಶವನ್ನು ಕಳುಹಿಸುತ್ತಾರೆ. ಅಸಲಿಗೆ ಅದು ಒಳಗೊಳಗೇ ನೂರಾರು ಜನರಲ್ಲಿ ಹರಿದು ಹಂಚಿದರೂ ಅದನ್ನು ಕೇಳುವವರು ಯಾರು ಇರುವುದಿಲ್ಲ. ಒಟ್ಟಿನಲ್ಲಿ ಲೋಕೇಶನಿಗೆ ಮಾತ್ರ ಈಗ ಲಕ್ಷ ಲಕ್ಷಗಳ ಸಾಲ!

'Bloody customs.. ಏನ್ ಈ ಕಾಫಿ ಕುಡಿದ್ರೆ ಇವರಪ್ಪ ಸತ್ತ್ ಹೋಗ್ತಾ ಇದ್ನ.. ನಾವೆಲ್ಲಾ ಕುಡಿಯೊಲ್ವ.. ಏನ್ ಆಗಿದೆ ಮಚಿ ನಮ್ಮ್ ಕಾಫಿಗೆ.. ಅಮೇರಿಕ ಇಂಗ್ಲೆಂಡ್ನಿಂದ ಬರೋ ಟೂರಿಸ್ಟ್ಸ್ ಗೆ ನಮ್ಮ ಫಿಲ್ಟರ್ ಕಾಫಿನೇ ಬೇಕಂತೆ.. ಆದ್ರೆ ಈ ಶೋಕಿಲಾಲರಿಗೆ ಇದು Suspected Sample ಅಂತೆ.. My foot..ಎಲ್ಲದೂ ನಮ್ಮ್ ಈ government ಪ್ರಾಬ್ಲಮ್.. ಫಾರಿನ್ ಅಫೇರ್ ಮಿನಿಸ್ಟರ್ಸು, ಕಾಮರ್ಸ್ ಮಿನಿಸ್ಟರ್ಸು ವರ್ಷಕ್ಕೆ ಎರ್ಡ್ ಎರ್ಡ್ ಸಾರಿ ಮೀಟಿಂಗ್ ಮಾಡ್ತಾರೆ ಅವರೊಟ್ಟಿಗೆ.. ಅವಾಗ ಏನ್ ಕಿತ್ತಾಕ್ತಾರೆ ಇವ್ರು.. ಅಲ್ಲ, ಇಲ್ಲಿ ನಮ್ಮ್ ರೈತ್ರು ಸಾಲ ಸೂಲ ಅಂತ ಸಾಯಿತಾನೆ ಇದ್ದಾರೆ.. ನಮ್ಮ ಮಲೆನಾಡ್ ಕಾಫಿನ ಇವ್ರು ಒಂದು ಬ್ರಾಂಡ್ ಮಾಡೋಕ್ ಆಗಲ್ವ..? ರೈತ್ರಿಗೆ ನಿಜವಾದ ಮಾರ್ಕೆಟ್ ರೇಟ್ ಕೊಡ್ಸೋಕ್ ಆಗಲ್ವ..? ಅಲ್ಲ ಮಚಿ, ಇದೆ ಕಾಫಿನ ಅಮೆರಿಕದವ್ರು ಇಂಪೋರ್ಟ್ ಮಾಡ್ಕೊಂಡು ಗಾಜಿನ ಬಾಟ್ಲಿಗಳೊಳಗೆ ತುಂಬಿ ಕೊಟ್ರೆ ಚಪ್ಪರ್ಸ್ಕೊಂಡು ಕುಡಿತಾರೆ.. ಅದ್ಯಾವ್ದೋ ಸ್ಟಾರ್ ಬಗ್ಗಂತೆ ಒಂದ್ ಕಪ್ ಕಾಫಿಗೆ ನೂರೈವತ್ತು ಡಾಲರ್ ಅಂತೇ. ಒನ್ ಫಿಫ್ಟಿ ಡಾಲರ್, ಟೆನ್ ಥೌಸಂಡ್ ರುಪೀಸ್!! Can you believe it? ಇದನ್ನ ನಮ್ಮ್ ಪ್ಲಾಂಟರ್ಸ್ ಏನಾದ್ರೂ ಕೇಳಿದ್ರೆ ಹಾರ್ಟ್ ಅಟ್ಟ್ಯಾಕ್ ಆಗ್ಬಿಡುತ್ತೆ. ಇಲ್ಲಿ ಒಂದು ಮೂಟೆ ಕಾಫಿಗೂ ಆ ಪ್ರೈಸ್ ಸಿಗೋದಿಲ್ಲ ಗೊತ್ತಾ? Raw, Authentic ಪೌಡರ್ ಕೊಟ್ರೆ ಇವ್ರಜ್ಜಿ ರಿಜೆಕ್ಟ್ ಮಾಡ್ತಾರಾ? It’s all our government fault you know.. It’s our entire system fault! 'ಎಂದೇಳಿ ತನ್ನ ಕೋಪವೆಲ್ಲವನ್ನು ಹೊರಹಾಕುತ್ತಾ ಮತ್ತೊಮ್ಮೆ ಆ ಇಮೇಲನ್ನು ಓದಿದ ಲೋಕೇಶ.



****



'ಇಲ್ವೋ..ನೀನ್ ನಂಗೆ ಸಿಕ್ಕೇ ಸಿಗ್ತಿಯ ಅಂತ ಗೊತ್ತಿತ್ತು. ಹೊಸ ಸ್ಕೂಲು ನನಗೆ ಒಂಚೂರು ಇಷ್ಟ ಇಲ್ಲ ಕಣೋ .. ನೀನೂ ನಮ್ಮ್ ಸ್ಕೂಲ್ಗೆ ಸೇರೋ ಆದಿ .. ನಂಗೆ ಅಲ್ಲಿ ಯಾರೂ ಫ್ರೆಂಡ್ಸ್ ಗಳೇ ಇಲ್ಲ ಗೊತ್ತ...?' ಆದಿಯ ಎದೆಗೊರಗಿ ಖುಷಿ ಬಿಕ್ಕಳಿಸತೊಡಗಿದ್ದಳು. ಕಪ್ಪುಬಣ್ಣದ ಆಕಾಶವನ್ನು ಚೀರಿ ಹೊರಬರುತ್ತಿರುವ ಹಳದಿ ಚಿಟ್ಟೆಗಳಂತಿದ್ದ ಆಕೆಯ ಫ್ರಾಕ್ ಏನೋ ಒಂದು ವಿಭಿನ್ನ ಲೋಕವನ್ನೇ ಸೃಷ್ಟಿಸಿದ್ದವು. ಆದಿಗೆ ಈಗ ಯಾವ ಮಾತುಗಳೂ ಬರುತ್ತಿಲ್ಲ. ಮಾತಾಡಲೂ ಏನೂ ತೋರುತ್ತಿಲ್ಲ. ಆಕೆಯೆ ಮುಂದುವರೆಸಿ,

'ನಂಗೆ ನಿನ್ನ ಸ್ಕೂಲ್ಗೆ ಸೇರ್ಬೇಕು ಅಂತ ಇಷ್ಟ.. ಆದ್ರೆ ಮನೇಲಿ ಅಪ್ಪ,ಅಮ್ಮ, ಒಪ್ಪಿದ್ರೂ ನಮ್ಮ್ ಅಣ್ಣ ಒಪ್ಪಲ್ಲ ಕಣೋ..' ಎಂದಳು.

ಆಕೆಯ ಅಣ್ಣನ ಪಟ ಆದಿಯ ಮನದೊಳಗೆ ಹಾಗೆಯೇ ಒಮ್ಮೆ ಮೂಡಿತು. ಚಿಕ್ಕಂದಿನಲ್ಲಿ ನೋಡಿದ್ದ ಆತನ ಸಿಡುಕು ಮೊಗ ಒಮ್ಮೆ ಕಣ್ಣ ಮುಂದೆ ಬಂದಿತು. ಅಲ್ಲಿ ಯಾವುದೇ ಭಾವನೆಗಳ ಸುಳಿವುಗಳಾಗಲಿ ಅಥವ ಹಿಂದೊಮ್ಮೆ ಅಲ್ಲಿ ಮೂಡಿರುವ ಕುರುಹುಗಳಾಗಲಿ ಕಾಣಲಿಲ್ಲ.

'ಆತ ಹಠಮಾರಿ.. ಆತ ಹೇಳಿದ್ದೆ ಮನೇಲಿ ನಡೀಬೇಕು .. ನಾನು ಯಾವ್ ಕೋರ್ಸ್ ಮಾಡ್ಬೇಕು, ಏನ್ ಒದ್ಬೇಕು ಎಲ್ಲ ಅವ್ನೆ ಡಿಸೈಡ್ ಮಾಡೋದು .. ಅಪ್ಪಂಗೂ ಹೆದ್ರಲ್ಲ .. ಯಾರ್ ಮಾತೂ ಕೇಳಲ್ಲ ..ನನ್ನ ಫೈನಲ್ ಇಯರ್ ಮುಗಿಯೋದೊಳಗೆ ನೀನು ಜಾಬ್ ಹುಡ್ಕೋಬೇಕು ಆದಿ.. ಇಲ್ಲ ಅಂದ್ರೆ ನಂಗೊತ್ತಿಲ್ಲ..' ಎಂದೇಳಿ ಆಕೆ ಜೋರಾಗಿ ಅಳತೊಡಗಿದಳು. ಆತನ ಎದೆಬಡಿತ ಗಟ್ಟಿಯಾಗಿ ತಬ್ಬಿ ಹಿಡಿದಿದ್ದ ಆಕೆಯನ್ನೂ ದಾಟಿ ಹೊರಬರತೊಡಗಿದ್ದವು.

ನೋಡುತ್ತಾನೆ, ಇದ್ದಕ್ಕಿಂದಂತೆ ದೂರದಲ್ಲಿ ಆತನ ಅಣ್ಣ ಬಂದು ನಿಂತಿದ್ದಾನೆ! ನಿಂತಲ್ಲೇ ಭಸ್ಮ ಮಾಡುವಂತಹ ಆತನ ಕಣ್ಣುಗಳು ಆದಿಯ ಹೃದಯ ಸಿಡಿದು ಛಿದ್ರವಾಗುವಂತೆ ಮಾಡಿದವು. ಆತ ದಾಪುಗಾಲು ಹಾಕುತ್ತ, ತನ್ನ ಅಪ್ಪನಂತೆಯೇ, ಈತನ ಬಳಿಗೆ ಬರತೊಡಗುತ್ತಾನೆ. ಆತನ ಕೈಲೂ ಬೆಲ್ಟೋಂದು ಹಾವಿನಂತೆ ನೇತಾಡುತ್ತಿರುತ್ತದೆ. ಹತ್ತಿರ ಬರಬರುತ್ತಾ ಆತನ ಆಕೃತಿಯೂ ದೊಡ್ಡದಾಗುತ್ತಾ ಹೋಗುತ್ತದೆ. ಹೆದರುತ್ತಾ ಆಕೆ ಆದಿಯ ಹಿಂದಕ್ಕೆ ಸರಿದಳು. ಆದಿ ಒಂದೊಂದೇ ಹೆಜ್ಜೆಗಳನ್ನು ಹಿಂದಕ್ಕ್ಕೆ ಇಡುತ್ತಾನೆ. ಹತ್ತಿರಬಂದವನೇ ಕೈ ಎತ್ತಿ ಇನ್ನೇನು ಆದಿನಿಗೆ ಒಡೆಯಬೇಕು ಎನ್ನುವಷ್ಟರಲ್ಲಿ ಧಡಾರನೆ ಎದ್ದು ಕೂತ ಆದಿ!

ನಿಜ ಜಗತ್ತಿಗೆ ಬರಲು ಆದಿಗೆ ಕೊಂಚ ಸಮಯವೇ ಹಿಡಿಯಿತು. ಮಧ್ಯಾಹ್ನದ ಊಟದ ನಂತರ ಮಲಗಿದ್ದ ಆತನಿಗೆ ತನ್ನ ಕಲ್ಪನಾ ಪ್ರಪಂಚ ಪ್ರಸ್ತುತದಲ್ಲಿರಬಹುದಾದ ಖುಷಿಯನ್ನು ಹಾಗು ಆತನ ಅಣ್ಣನನ್ನೂ ಕಲ್ಪಿಸಿ ಕೊಟ್ಟಿತ್ತು.

ಒಂದೊಮ್ಮೆ ಈ ಕನಸ್ಸು ನನಸ್ಸಾದರೆ? ಆದರೆ ಆಕೆ ನನಗೆ ಕೆಲಸವನ್ನು ಹುಡುಕಿಕೊಳ್ಳಲು ಹೇಳುತ್ತಿರುವುದು ಏಕೆ?? ಆದಿ ತನ್ನಲ್ಲೇ ಕೇಳಿಕೊಳ್ಳುತ್ತಾನೆ

ಅಷ್ಟರಲ್ಲಾಗಲೇ ತನ್ನ ಒಂದು ಕೈಯಿಂದ ಫೋನಿನ ತುದಿಯನ್ನು ಬಲಕಿವಿಯ ಬಳಿಗೆ ಇರಿಸಿಕೊಂಡು, ಕಣ್ಣುಗಳೆರಡನ್ನೂ ಬಿಗಿದಾಗಿ ಮುಚ್ಚಿ, ಡಾಕ್ಟರ್ಗಳಿಗೆ ಹೆದರುವ ಮಕ್ಕಳ ಮುಖವನ್ನು ಮಾಡಿ ರೂಮಿನೊಳಗೆ ಬಂದ ಲೋಕೇಶ.

'ಯಸ್ ಸರ್, ಓಕೆ, ಓಕೆ.. ಇಲ್ಲ ಸರ್, ಇನ್ ಸ್ವಲ್ಪ ದಿನ. ಶೋರ್ ಸರ್.. ಓಕೆ ಸರ್.. ಓಕೆ.. bye ' ಎಂದೇಳುತ್ತಾ ಫೋನನ್ನು ಆದಿಯ ಬೆಡ್ಡಿನ ಮೇಲೆಸೆದು ಪಕ್ಕದಲ್ಲಿದ್ದ ಬೀನ್ ಬ್ಯಾಗಿನ ಮೇಲೆ ದೊಪ್ಪನೆ ಕೂತ. ಅದೆಷ್ಟೇ ಜನರ ಪೃಷ್ಠಗಳು ಬಂದು ತಿವಿದಾಡಿದರೂ ಏನೂ ಮಾಡಲಾಗದ ಆ ಬೀನ್ ಬ್ಯಾಗಿನ ವ್ಯಥೆಯಂತೆ ನನ್ನ ಕತೆಯಾಯಿತಲ್ಲ ಎಂದುಕೊಳ್ಳುತ್ತಾನೆ.

'ಏನಾಯಿತೋ.. ಯಾರ್ದು ಫೋನು?' ಆದಿ ಕೇಳಿದ.

'ಇನ್ಯಾರಪ್ಪ.. ಕಾಫಿ ಎಕ್ಸ್ಪೋರ್ಟ್ ಗೆ ಸಾಲ ಕೊಟ್ಟ ಪಾರ್ಟಿ.. ಎಂಟ್ ಲಕ್ಷ + ಇಂಟರ್ಸ್ಟ್ ಕೇಳ್ತಾ ಇದ್ದಾನೆ..' ವಿಚಿತ್ರ ರೀತಿಯಲ್ಲಿ ಸದ್ದನ್ನು ಮಾಡುತ್ತಿದ್ದ ಫ್ಯಾನನ್ನು ಧಿಟ್ಟಿಸುತ್ತಾ ಹೇಳಿದ ಲೋಕೇಶ.

'Shit Man, ಹೇಗೋ ಅಷ್ಟ್ ಸಾಲ ತೀರ್ಸೋದು ಇವಾಗ? ಇಂಥ ಪ್ರಾಬ್ಲೆಮ್ಸ್ ಗೆಲ್ಲ ಸರ್ಕಾರಗಳು ಏನೂ ಮಾಡಲ್ವಾ?'

'ಸರ್ಕಾರಗಳ? ಸುಮ್ನಿರಪ್ಪಾ..ಅವ್ರನ್ನ ನಂಬ್ಕೊಂಡ್ ಕೂತ್ರೆ ಅಷ್ಟೇನೆ'

'That’s not right Lokesh, ನೀನು ಎಲ್ಲದಕ್ಕೂ ಸರ್ಕಾರವನ್ನು ಧೂಷಿಸೋದು ಸರಿಯಲ್ಲ. ನೀನು ಬಿಸಿನೆಸ್ ಮಾಡೋ ಮೊದ್ಲೇ ಯಾವ್ದಾದ್ರೊಂದು ಸರಿಯಾದ Goverament ಡಿಪಾರ್ಟ್ಮೆಂಟ್ ಗೆ ಹೋಗಿ ವಿಷ್ಯಾನ ತಿಳ್ಕೊಂಡು ಆಮೇಲೆ ಮುಂದುವರ್ದಿದ್ರೆ ಈ ರೀತಿ ಆಗ್ತಿರ್ಲಿಲ್ಲ'

'Come on man, Do you think this is really gonna work? ಆದಿ, ನಮ್ಮ ಇಂಡಿಯದಲ್ಲಿ ಇಂಥ ಅದೆಷ್ಟೋ ಐಡಿಯಾಗಳು, ಪ್ರಾಜೆಕ್ಟ್ ಗಳು ಇರ್ತಾವೆ. ಅವರೆಲ್ಲರೂ ನಮ್ಮ್ governmentನ ಕೇಳಿ ಖಾರ ಅರಿಯೋದಾಗಿದ್ರೆ ಅಷ್ಟೇ. ಏನು ಬೇಡಪ್ಪ ಸಿಟಿ ಲಿಮಿಟ್ ಅಲ್ಲಿ ಒಂದು ಮನೆ ಕಟ್ಟೋಕ್ಕೆ ಲೈಸನ್ಸ್ ಮಾಡ್ಸ್ ನೋಡು ನೋಡಣ. ನಮ್ ಹೆಣ ಬಿದ್ದೋಗಿರುತ್ತೆ. ಅಂತದ್ರಲ್ಲಿ ಇನ್ನು ಎಕ್ಸ್ಪೋರ್ಟ್ ಎಲ್ಲ ಆಗ್ ಹೋಗೋ ವಿಷ್ಯ ಅಲ್ಲ. ಮೇಲಾಗಿ ನಾವುಗಳು ಎಲ್ಲ ಸರ್ಕಾರಗಳೇ ಮಾಡ್ತವೆ ಅಂತ ಕೂರೋದು ದಡ್ಡತನ. ಇದು ಡಿಜಿಟಲ್ ಯುಗ. ಇಡೀ ಪ್ರಪಂಚಾನೆ ಈಗ ಈ ಮೊಬೈಲ್ ಒಳಗಿದೆ. ಟೆಕ್ನಾಲಜಿ ಎಂಟ್ರಿ ಮಾಡ್ದೆ ಇರೋ ಏರಿಯಗಳೇ ಇಲ್ಲ. So we have to be independent now.. ತಪ್ಪ್ ಮಾಡಿದ್ರೂ ಅದ್ರಿಂದ ಕಲಿಬೇಕು. ಕಲೀತಾನೆ ಇರ್ಬೇಕು.. ಕಲಿತಾ Independent ಆಗ್ಬೇಕು'

'But this one is your costliest mistake. Anyways, ಈಗ ಹಣ ತೀರ್ಸೋಕ್ಕೆ ಮತ್ತ್ಯಾವ ತಪ್ಪ್ ಮಾಡ್ಬೇಕು ಅಂತ ಇದ್ದೀಯ?'

'Farming..' ಎಂದ ಲೊಕೇಶನ ಮಾತಿನಲ್ಲಿ ಏನೋ ಒಂದು ಬಗೆಯ ದೃಢತೆ ಇದ್ದಂತಿತ್ತು.

'What?! Boss, are you serious?'

'Yes, Farming is the only option. ಸ್ವಲ್ಪ ಮಾರ್ಕೆಟ್ ರಿಸರ್ಚ್ ಮಾಡಿದ್ದೀನಿ. ನೆಕ್ಸ್ಟ್ ಇಯರ್ ಶುಂಠಿಗೆ ಒಳ್ಳೆ ಬೆಲೆ ಬರ್ತಾ ಇದೆ. ಮೇಲಾಗಿ ಶುಠಿ ಒನ್ ಟು ಫೋರ್ ಟೈಮ್ಸ್ ಪ್ರಾಫಿಟ್ ಕೊಡೊ ಬೆಳೆ. ಇಲ್ಲಿಂದ 5 ಕಿಲೋಮೀಟರ್ ದೂರದ ಹಳ್ಳಿ ಒಂದ್ರಲ್ಲಿ ಗದ್ದೇನ ಲೀಸ್ಗೆ ಪಡೀತೀನಿ. ಅಲ್ಲೂ ಸಹ ರೈತ್ರು ಮಳೆ ಸರಿ ಆಗ್ತಾ ಇಲ್ಲ ಅಂತ ಜಾಗನೆಲ್ಲ ಹಾಳ್ ಬಿಟ್ಟಿದ್ದಾರೆ. ನೀನ್ ಹೇಳ್ದಲ್ಲ ನಮ್ಮ government ಅಂತ ಅದೇ government ಈಗ ಮನ್ಸ್ ಮಾಡಿದ್ರೆ ಆ ಹಳ್ಳಿಯ ಅಷ್ಟೂ ಗದ್ದೆಗಳನ್ನು ಲೀಸ್ ಗೆ ತಗೊಂಡು ರೈತರಿಂದಲ್ಲೇ ಕೃಷಿ ಮಾಡಿಸಬಹುದಿತ್ತು. ಹೆಚ್ಚೇನೂ ಬೇಡ ನಮ್ ಜಿಲ್ಲೆಗೆ ಏನೇನು ಬೇಕು ಅದನ್ನಾದ್ರೂ ಬೆಳೆಯಬಹುದಿತ್ತು. Transportation ಪ್ರಾಬ್ಲಮ್ ಇಲ್ಲ. ನೀರ್ ಬೇಕಾದ್ರು ಟ್ಯಾಂಕರ್ನಿಂದ ಇಲ್ಲಿಂದಲ್ಲೇ ಸಾಗಿಸ್ಬಹುದಿತ್ತು. ಇಂಥ convenient ಪ್ಲೇಸ್ ಎಲ್ಲಿಸಿಗುತ್ತೆ ಹೇಳು. ಆದ್ರೆ ಅವ್ರಿಗೆ ಆ ತಲೆನೋವೆಲ್ಲ ಬೇಕಿಲ್ಲ. ಟ್ಯಾಕ್ಸ್ ಅಂತ ನಮ್ಮ್ ದುಡ್ಡನು ತಗೊಂಡು ಆಮೇಲೆ ನಮ್ಗಳಿಗೆ ಕೊಡಕ್ಕೆ ನಾಟ್ಕ ಮಾಡೋದು ಅವರ ಚಾಳಿ. Anyways, I have decided. ಕಾಲೇಜಿಗೆ ಹೋಗ್ತಾನೆ ಫಾರ್ಮಿನ್ಗ್ ಅನ್ನೂ supervise ಮಾಡ್ತೀನಿ..' ಎಂದು ಸುಮ್ಮನಾದ.

' ಆದ್ರೆ ಅಲ್ಲಿವರೆಗೂ ನಂಗೆ ಟೈಮ್ ಬೇಕು ಮಚಿ. At least for another 8 months. ನಾಳೇನೇ ಅವ್ರತ್ರ ಹೋಗಿ ಮಾತಾಡ್ಬೇಕು. ನಿಮ್ಮ್ ಅಸಲು ಹಾಗು ಇಂಟ್ರೆಸ್ಟ್ ಖಂಡಿತಾ ತೀರಿಸ್ತೀನಿ ಅಂತ ಕೇಳ್ಕೊಬೇಕು. ಆಗಲ್ಲ ಅಂದ್ರೆ ಏನಾಗುತ್ತೋ ಗೊತ್ತಿಲ್ಲ, But have to try. ಆಮೇಲೆ ನಾನ್ ಒಬ್ನೇ ಅಂತೂ ಹೋಗಲ್ಲ. ನೀವಿಬ್ಬರೂ ಬರ್ಬೇಕು' ಎಂದು ನನ್ನನ್ನೂ ಸಂಬೋಧಿಸಿ ಹೇಳಿದ.

'ನಾನ್ ರೆಡಿನಪ್ಪ' ಎಂದ ಆದಿಯ ಮಾತಿಗೆ, ನನ್ನ ಒಂದು ಮಾತನ್ನು ಕೇಳಬೇಕೆಂಬ ಸೌಜನ್ಯವನ್ನೂ ತೋರದೆ

'So, tomorrow evening 5 o'clock. ಸಿಟಿ ಕ್ಲಬ್ ' ಎಂದ ಲೋಕೇಶ.



**

ಸಿಟಿ ಕ್ಲಬ್. ಕಾಡ್ಗಿಚ್ಚಿನಂತೆ ಶರವೇಗದಲ್ಲಿ ಹರಡುತ್ತಿರುವ ನಗರೀಕರಣದ ಮಾಹೆಯಲ್ಲಿ ಆಗೆಲ್ಲ ಕಿಲೋಮೀಟರ್ ಗಟ್ಟಲೆ ದೂರದಿಂದ ನಿಂತೂ ನೋಡಿದರೂ ಗುರುತಿಸಬಹುದಾಗಿದ್ದ ಕಟ್ಟಡ ಇಂದು GPS ಹಾಕಿ ಹುಡುಕಿದರೂ ಸಿಗುವುದು ಕಷ್ಟಸಾಧ್ಯ ಎನಿಸುವ ಜಾಗವಾಗಿದೆ. ಊರಿನ ಹಸಿರು ಬಣ್ಣದ ಈ ಕಟ್ಟಡ ಸಂಜೆಯಾಯಿತೆಂದರೆ ತಾಲೂಕಿನ ದೊಡ್ಡ ದೊಡ್ಡ ಕುಳಗಳು ಒಂದೆಡೆ ಸೇರುವ ಅಡ್ಡ. ಅನಧಿಕೃತವಾಗಿ ನೆಡೆಯುವ ಕೆಲವು ಕಾರ್ಯಗಳು ಅಧಿಕೃತವಾಗಿ ನೆಡೆಯಬೇಕಿದ್ದ ಹಲವು ಕಾರ್ಯಗಳನ್ನು ಅಲ್ಲಿ ಮುಚ್ಚಿಹಾಕಿವೆ. ಅಪ್ಪನ ಅಥವ ಅಜ್ಜನ ಜೀಪೂ ಅಥವಾ ಕಾರನ್ನೋ ತಂದು, ಕಂಗ್ಲಿಷಿನಲ್ಲಿ ಕೇಳುಗ ಕಿವುಡಾಗುವಂತೆ ಅಥವ ಹೆದರುವಂತೆ ಅರಚುತ್ತಾ, ಕಷ್ಟಪಟ್ಟು ಆಡುವ ಬಿಲಿಯರ್ಡ್ಸ್ ನೊಟ್ಟಿಗೆ ಇಷ್ಟಪಟ್ಟು ಕುಡಿಯುವ ಮದ್ಯದ ಮೋಜಿಗೆ ಇವರುಗಳು ಪ್ರೆಸಿಡೆಂಟು , ವೈಸ್ ಪ್ರೆಸಿಡೆಂಟುಗಳೆನುತ ತಮಗೆ ತಾವೇ ಕಿರೀಟಗಳನ್ನು ತೊಡಿಸಿಕೊಂಡು ಮಧ್ಯರಾತ್ರಿಯ ಘಾಡ ಮೌನದಲ್ಲಿ ತಮ್ಮ ಫೋರ್ ವೀಲರ್ ಗಳ ಕರ್ಕಶ ಸದ್ದನ್ನು ಹೊರಹೊಮ್ಮಿಸುತ್ತಾ ಹೊರಡದಿದ್ದರೆ ಕ್ಲಬ್ಬಿನ ಗಬ್ಬಿಗೆ ಕನ್ನಡಿ ಹಿಡಿಯುವರ್ಯಾರು?

'ಏನೋ ಮಚಿ ಇದು.. ಒಳ್ಳೆ 7 ಸ್ಟಾರ್ ಹೋಟೆಲ್ ಇದ್ದಾಗೆ ಇದಿಯಲ್ಲೋ' ಮೊದಲ ಬಾರಿಗೆ ಕ್ಲಬ್ನ ಒಳಹೊಕ್ಕ ನನ್ನ ಬಾಯಿಂದ ಮಾತುಗಳು ತಂತಾನೇ ಹೊರಬಂದವು. ಸಾಧಾರಣವಾದ ನಗರಸಭೆಯಂತಹ ಸರ್ಕಾರೀ ಕಟ್ಟಡದ ಪ್ರವೇಶದ್ವಾರವನ್ನು ಹೊಂದಿದ್ದ ಈ ಕ್ಲಬ್ನ ಒಳ ಹೊಕ್ಕರೆ ಬೇರೇನೇ ಒಂದು ಪ್ರಪಂಚ ಅನಾವರಣಗೊಳ್ಳುತ್ತಿತ್ತು. ಇಡೀ ನೆಲಮಾಳಿಗೆಯೇ ಹರಡಿಕೊಂಡಿರುವಂತಿರುವ ತಿಳಿನೀಲಿ ನೀರಿನ ಸ್ವಿಮಿಂಗ್ ಪೂಲು, ಅರೆನಗ್ನ ಅವಸ್ಥೆಯ ದಡೂತಿ ದೇಹಗಳು, ಅದರ ಸುತ್ತಲೂ ಜಾತ್ರೆಯ ಆಟಿಕೆಯ ಮಳಿಗೆಗಳಂತೆ ಬೀಡುಬಿಟ್ಟಿರುವ ಟೇಬಲ್ ಟೆನ್ನಿಸ್ ಹಾಗು ಬಿಲಿಯರ್ಡ್ಸ್ ಆಟಗಳ ಟೇಬಲ್ಲುಗಳು, ಬಿಳಿ ವಸ್ತ್ರವನ್ನು ಧರಿಸಿ ಅತ್ಯಂತ ಶಿಸ್ತಿನ ಸಿಪಾಯಿಗಳಂತೆ ನೆಡೆದಾಡುವ waiterಗಳು, ಬಣ್ಣ ಬಣ್ಣದ ಮದ್ಯಗಳು ಇವೆಲ್ಲವನ್ನು ಕಂಡು ನಮಗೆ ಏನು ಮಾಡಬೇಕೆಂಬುದೇ ತಿಳಿಯಲಿಲ್ಲ!

'Mr. ಲೋಕೇಶ್..' ಹಿಂದಿನಿಂದ ಬಂದ ಆ ಗಡಸು ಧ್ವನಿಗೆ ನನ್ನ ಎದೆ ಒಮ್ಮೆಗೆ ಝಲ್ ಎಂದಿತು. ಬಿಳಿ ಶರ್ಟ್ ಹಾಗು ಕಪ್ಪು ಬಣ್ಣದ ಜಾಗಿಂಗ್ ಪ್ಯಾಂಟನ್ನು ಧರಿಸಿದ್ದ ಐವತ್ತರ ಆಸುಪಾಸಿನ ವ್ಯಕ್ತಿಯೊಬ್ಬ ಶಟಲ್ ನ ರಾಕೆಟ್ಟೊಂದನ್ನು ಹಿಡಿದು ನಿಂತಿದ್ದ. ಬೆವರುಮಯ ಗೊಂಡಿದ್ದ ಆತನ ಮುಖದಲ್ಲಿ ಮಂದಹಾಸವೊಂದು ಮೂಡಿತ್ತು.

'ಯಸ್, ಯಸ್ ಸರ್. ಲೋಕೇಶ್ ಹಿಯರ್' ಎಂದು ಲೋಕಿ ನಮ್ಮ ಮೂರು ಜನರ ಗುಂಪನ್ನು ಸೀಳಿಕೊಂಡು ಮುಂಬಂದ.

'ಒಹ್..You are Mr. ಲೋಕೇಶ್.. I was waiting ..ಬನ್ನಿ ಕೂತ್ಕೊಂಡು ಮಾತಾಡುವ' ಎಂದು 'These people..?' ಏನುತಾ ನಮ್ಮಿಬ್ಬರನ್ನು ನೋಡಿದರು. ಒಂದೊಮ್ಮೆ ನಮಗೂ ಈ ಸಂಭಾಷಣೆಗೂ ಯಾವುದೇ ಸಂಭಂದವಿಲ್ಲವೆಂದು ತಿಳಿದು ಎಲ್ಲಿ ನಮ್ಮನ್ನು ಹೊರಹಾಕಿ ನನ್ನ ಭಿಟ್ಟಿ ಊಟವನ್ನು ಹೊಟ್ಟೆ ತುಂಬಾ , ಫ್ರೀ ಯಾಗಿ , ತಿನ್ನುವ ಕನಸ್ಸಿಗೆ ಮಣ್ಣು ಎರಚುತ್ತಾರೋ ಎಂದು ನನಗೆ ಕಳವಳವಾಗತೊಡಗಿತು. ಲೋಕೇಶನಿಗೆ ಸಾದ್ಯವಾದರೆ ಪಾರ್ಸೆಲ್ ಅನ್ನು ಕಟ್ಟಿ ತರಲು ಹೇಳಬೇಕು ಎಂದುಕೊಳ್ಳುತ್ತಿರುವಾಗ ಲೋಕೇಶ,

'They are my friends sir. No issues if they are around' ಎಂದ.

ನಮ್ಮನ್ನು especially ನನ್ನನ್ನು ಮೇಲಕ್ಕೂ ಕೆಳಕ್ಕೂ ನೋಡಿದ ಆ ವ್ಯಕ್ತಿ 'waiter..' ಎಂದು ಕೂಗಿ ಪೂಲಿನ ಬಳಿಯಿದ್ದ ನಾಲ್ಕು ಜನ ಕೂರುವ ಟೇಬಲ್ಲಿನ ಬಳಿಗೆ ನೆಡೆದ. ಲೊಕೇಶನನ್ನೂ ಹಿಂದಿಕ್ಕಿ ನಾನು ಅವರ ಹಿಂದೆ ಓಡಿದೆ.


'ಯಸ್ ಲೋಕೇಶ್.. ಟೆಲ್ ಮಿ.. ವಾಟ್ಸ್ ಯುವರ್ ಪ್ಲಾನ್ ಅಬೌಟ್ returning the ಮನಿ' ಎಂದ ಅವರ ಪ್ರೆಶ್ನೆಗೆ ಲೋಕೇಶ ಸುಮ್ಮನಾದ. ಆತ ಬಿಳಿ ಬಣ್ಣದ ಪಿಂಗಾಣಿ ಕಪ್ಪಿಗೆ ಬ್ಲಾಕ್ ಟೀಯನ್ನು ಸುರಿದು ಸಕ್ಕರೆಯ ಒಂದೆರೆಡು ಪ್ಯಾಕುಗಳನ್ನು ಹಾಕಿ ಚಮಚವೊಂದರಿಂದ ವೃತ್ತಾಕಾರವಾಗಿ ನಿಧಾನವಾಗಿ ತಿರುಗಿಸುತ್ತಿದ್ದ. ಅದಕ್ಕೆ ಮಿಲ್ಕ್ ಪೌಡರನ್ನು ಹಾಕುವುದೇ, ಹಾಕಿದರೆ ಕಪ್ಪಿಂದ ಕಪ್ಪಿಗೆ ಸುರಿದು ಚೆನ್ನಾಗಿ ಮಿಕ್ಸ್ ಮಾಡುವುದೇ, ಬೇಡವೇ ಎಂದು ಆತ ಯೋಚಿಸುತ್ತಿರಬಹುದೇ ಎಂದು ನಾನು ಯೋಚಿಸಿದೆ. ಆತ ಮತ್ತೂ ಸುಮ್ಮನಿದ್ದ. ನಾನು ತಂದೂರಿ ಚಿಕನ್ನಿನ ಎರಡನೇ ಪ್ಲೇಟನ್ನು ಆರ್ಡರ್ ಮಾಡಿದೆ. ಆದಿ ಕಾಫಿಯಷ್ಟನ್ನೇ ಹೇಳಿ ಕುಡಿಯುತ್ತಿದ್ದ.

'ಟ್ರಸ್ಟ್ ..' ಎಂದ ಲೋಕೇಶ ಕೊಂಚ ಸುಮ್ಮನಾದ. ಲೊಕೇಶನ ದೃಷ್ಟಿ ಬ್ಲಾಕ್ ಟೀಯ ಮೇಲೆ ಮೂಡುತ್ತಿದ್ದ ಹಬೆಯ ಮೇಲೆ ಕೇಂದ್ರೀಕರಣಗೊಂಡಿತ್ತು.

'Trust is my plan for returning your money, sir'

ಕೊಂಚ ವಿಚಲಿತರಾದ ಅವರು,

'Hello Mister.. have you lost your mind?' ಎಂದರು. ಅವರ ಗಡಸು ಧ್ವನಿ ಲೊಕೇಶನನ್ನು ಇಹಲೋಕಕ್ಕೆ ಕರೆತಂದಿತು. ಅದೇ ಸಮಯಕ್ಕೆ ತಂದೂರಿ ಚಿಕನ್ನಿನ ಎರಡನೇ ಪ್ಲೇಟೂ ಸಹ ಬಂದಿತು. ಅವರು ನನ್ನನೊಮ್ಮೆ ದುರುಗುಟ್ಟಿ ನೋಡಿದರು. ನಾನು ದೃಷ್ಟಿಯನ್ನು ಬದಲಿಸಿ ಕೆಂಪು ಕೆಂಪಾಗಿ ಘಮಘಮಿಸುತ್ತಿದ್ದ ಚಿಕನ್ನನ್ನು ನೋಡುತ್ತಾ ಖಾಲಿಯಾದ ಪ್ಲೇಟನ್ನು waiter ಗೆ ನೀಡಿ ಸುಮ್ಮನಾದೆ. ಆತ ತಂದ ಪ್ಲೇಟನ್ನು ಟೇಬಲ್ಲಿನ ಮೇಲಿಟ್ಟ. ಅವರ ದೃಷ್ಟಿ ಇನ್ನೂ ನನ್ನ ಮೇಲೆಯೇ ಇದೆ ಎಂದು ಅರಿತಾಗ ನಾನು ತನಗೆ ಬೇಡವಂತೆ ನಟಿಸುತ್ತಾ ಲೋಕೇಶ ಹಾಗು ಆದಿಯರನ್ನು ನೋಡಿ ತಿನ್ನುವಂತೆ ಸಂಜ್ಞೆಯನ್ನು ಮಾಡಿದೆ. ಅವರಿಬ್ಬರೂ ಬೇಡವೆಂಬಂತೆ ತಲೆಯಾಡಿಸಿದರು. ಮರ್ಯಾದೆ ಹರಾಜಾದರೂ ಬಂಡತನ ಬಿಡದ ಪುಂಡನಂತೆ ಕೊನೆಗೆ ನಾನು ಪ್ಲೇಟನ್ನು 'ಸರ್..' ಏನುತ ಅವರ ಮುಂದಕ್ಕೆ ಜಾರಿಸಿದೆ. ಅವರು ತಿರಸ್ಕಾರದ ನೋಟದಿಂದ ತಮ್ಮ ದೃಷ್ಟಿಯನ್ನು ಬದಲಿಸಿದರು.

‘You, Mister. This is not the fun game we are discussing here. ಅಲ್ರಿ ರಿಟರ್ನ್ ಮಾಡೋಕೆ ಆಗಲ್ಲ ಅಂದ್ರೆ ಯಾಕ್ರೀ ಸಾಲ ಎಲ್ಲ ನಿಮ್ಗೆ ? ನನ್ನ್ ಮ್ಯಾನೇಜರ್ ಬರ್ಲಿ, ಆ ಪೆದ್ದ್ ಮುಂಡೇದುಕೆ ಹೇಳಿದ್ದೆ. ನೋಡ್ದೆ ಮಾಡ್ದೆ ಯಾರಿಗೂ ಸಾಲ ಕೊಡ್ಬೇಡ ಅಂತ.'

ಅವರ ಬಾಯಿಂದ 'ಪೆದ್ದ್ ಮುಂಡೇದು' ಎಂಬ ಲೋಕಲ್ ಪದವನ್ನು ಕೇಳಿ ಕೊಂಚ ಚಕಿತನಾದ ಲೋಕೇಶ,

'ಸರ್.. ನಾನು ಸಾಲ ತೆಗೆದುಕೊಳ್ಳುವ ಮುಂಚೆ ನಿಮ್ಗೆ ಒಂದು ಇಮೇಲ್ ಬರ್ದಿದ್ದೆ. ನನ್ನ ಪ್ಲಾನ್, ಅದ್ರಿಂದ ಸಿಗೋ ಪ್ರಾಫಿಟ್, ನಮ್ಮ ರೈತರಿಗೆ ಆಗುವ ಲಾಭ ಎಲ್ಲವನ್ನೂ explain ಮಾಡಿದ್ದೆ. ನೀವೂ ಸಹ ಓದಿ ಅಪ್ರಿಷಿಯೇಷನ್ ಮೇಲ್ ಕಳ್ಸಿದ್ರಿ. ನೆನ್ಪ್ ಇದ್ಯಾ ಸಾರ್’ ಎಂದು ಕೇಳಿದ ಲೋಕೇಶ. ಮುಂದೆ ಯಾವುದೇ ಪ್ರತಿಕ್ರಿಯೆಗಳು ಆಕಡೆಯಿಂದ ಬಾರಾದಿದ್ದರಿಂದ ಪುನ್ಹ ಮುಂದುವರೆಸಿ, ‘ನಾನು ಅಲ್ಲಿ ದುಡ್ಡ್ ಮಾಡ್ಬೇಕು ಅನ್ನೋಕ್ಕಿಂತ ಹೆಚ್ಚಾಗಿ ಹೊಸದಾಗಿ ಏನಾದ್ರೂ ಮಾಡ್ಬೇಕು ಅನ್ನೋ ಹಠ ಇತ್ತು ಸರ್. ಆದ್ರೆ ನನ್ನ್ ಹಠಕ್ಕೆ ಬೇರೆಯವ್ರ ದುಡ್ಡಿನ ಜೊತೆ ಆಡೋದು ಸರಿಯಲ್ಲ, I know. ಆದ್ರೆ ಏನ್ ಮಾಡೋದು ಸರ್ , ನಾನ್ ಅಂದ್ಕೊಂಡಿದ್ದೇ ಒಂದು ಆಗಿದ್ದೇ ಮತ್ತೊಂದು. ಆದ್ರೆ ನಾನು ಪಕ್ಕಾ ಮಾರ್ಕೆಟ್ ರಿಸರ್ಚ್ ಮಾಡಿದ್ದೆ. ನಮ್ಮ್ ಕಾಫಿ ಪ್ಲಾಂಟರ್ಸ್ ಗೆ ಆ ರೊಟು ಸರಿಯಾಗಿ ಗೊತ್ತಾದ್ರೆ ಒನ್ ಟು ಡಬಲ್ ಪ್ರಾಫಿಟ್ ತೆಗಿಬಹುದು. ಅದಕ್ಕೆ ಸ್ವಲ್ಪ ಧೈರ್ಯ ಬೇಕು ಅಂಡ್ ಒಳ್ಳೆ ಕಾಂಟ್ಯಾಕ್ಟ್ಸ್. ನನ್ನ್ ಹತ್ರ ಮೊದಲನೆಯದಿದೆ ಆದ್ರೆ ಸೆಕೆಂಡ್ ಒನ್ ಇಲ್ಲ! ಬಟ್ ನಾನದನ್ನ ಸುಲಭವಾಗಿ ಕಳ್ಕೋಣಕ್ಕೆ ಬಿಡಲ್ಲ ಸರ್. Im in touch with PMO office. Hope to receive a positive reply soon..' ಎಂದು ಸುಮ್ಮನಾದ.

ಅತ್ತ ಕಡೆಯಿಂದ ಆಗಲೂ ಯಾವುದೇ ರಿಪ್ಲೈ ಬಾರದೆ ಇದ್ದರಿಂದ ಪುನ್ಹ ಮುಂದುವರೆಸಿ,

'ಸರ್.. ನಿಮ್ ಸಾಲ ತೀರುತ್ತೆ, don't worry. ನನ್ನ್ ಹತ್ರ ಸ್ವಲ್ಪ ಗೋಲ್ಡ್ ಇದೆ ಹಾಗು ನನ್ನ ಫ್ರೆಂಡ್ಸ್ ಹತ್ರ ಇರೋ ಅಮೌಂಟ್ ಎಲ್ಲ ಸೇರಿಸಿ ಒಟ್ಟು 3 ಲಕ್ಷ ಆಗುತ್ತೆ. ಆದ್ರೆ ಆ ಹಣವನ್ನು ನಾನು ಇವಾಗ್ಲೆ ನಿಮ್ಗೆ ಕೊಡಕ್ ಆಗಲ್ಲ. ಅದನ್ನ ನಾನು ಜಿಂಜರ್ ಬಿಸಿನೆಸ್ ಅಲ್ಲಿ ಇನ್ವೆಸ್ಟ್ ಮಾಡ್ತಾ ಇದ್ದೀನಿ. By the end of this year you will be having the money along with the interest' ಎಂದೇಳಿ ನನಗೆ ಹೇಳಿದ ಶುಂಠಿಯ ಘಾಟನ್ನು ಅವರಿಗೂ ಪಸರಿಸಿದ. ಮೊದಮೊದಲು ಕಾಟಾಚಾರಕ್ಕೆ ಕೇಳುವಂತೆ ಮಾಡಿದ ಅವರು ಯಾವಾಗ ಲೋಕೇಶ ತನ್ನ ಸಂಪೂರ್ಣ ಯೋಜನೆಯನ್ನು ಅವರಿಗೆ ವಿವರಿಸಿ 'This model can be extended to other sectors as well' ಎಂದಾಗ ಅವರ ಮುಖದಲ್ಲಿ ಕಳೆದುಹೋಗಿದ್ದ ಮಂದಹಾಸ ಪುನ್ಹ ಮೂಡಿತು.

ನಮ್ಮನ್ನು ಕೇಳದೇ ಈತ ಮೂರು ಲಕ್ಷ ಒಟ್ಟುಮಾಡುವುದಾದರೂ ಹೇಗೆ ಎನುತ ನಾನು ಹಾಗು ಆದಿ ಒಬ್ಬರನ್ನೊಬ್ಬರ ಮುಖವನ್ನು ಕಳವಳದಿಂದ ನೋಡಿದೆವು.

ತುಸು ಯೋಚಿಸಿದಂತೆ ಮಾಡಿದ ಅವರು,

'ಅದಕ್ಕಾಗಿ ಸ್ಟಡಿ discontinue ಮಾಡ್ಬೇಕಲ್ರಿ?!'

'ಸುಮ್ನೆ ಇರಿ ಸಾರ್.. ಕೃಷಿ ಅಂದ್ರೆ ಏನ್ ನಾವೂ ಅದ್ರೊಟ್ಟಿಗೆ ಊಟ ತಿಂಡಿ ಮಾಡ್ತಾ ಕೂರ್ಬೇಕಾ? ಒಬ್ಬ ಮೇಸ್ತ್ರಿನ ಇಟ್ಕೊಂಡು ಕೆಲ್ಸ ಮಾಡಿಸ್ತೀನಿ. Of course ಜನ ಕೆಲ್ಸ ಮಾಡ್ದೆ ಇರ್ಬಹುದು.. ಮಾಡಿದ್ರೂ ಅರ್ಧಂಬರ್ಧ ಮಾಡ್ಬಹುದು.. ಬಟ್ ಅದನ್ನೆಲ್ಲಾ ಯೋಚ್ನೆ ಮಾಡ್ತಾ ಕೂತ್ರೆ ಮುಂದೆ ಹೋಗೋಕ್ ಆಗಲ್ಲ ಸಾರ್.. ಗುರಿನ ಬಿಟ್ಟು ಬರಿ obstacles ಬಗ್ಗೆನೇ ಯೋಚ್ನೆ ಮಾಡ್ತಾ ಇದ್ರೆ ಗುರಿ ಮರ್ತೂಗಿ ಬರಿ obstaclesಗಳೆ ಗುರಿಯಾಗ್ಬಿಡ್ತಾವೆ.. ಅಷ್ಟಾಗು ನಾನ್ ಎಕ್ಸಾಮ್ಸ್ ನೆಲ್ಲ ಓದಿ ಪಾಸ್ಮಾಡೊ ಹುಡ್ಗ ಅಂತೂ ಅಲ್ವೇ ಅಲ್ಲ' ಎಂದು ನಗುತ್ತಾ ಆದಿಯ ಮುಖವನ್ನು ನೋಡಿದ. ಆದಿ ಮುಗುಳ್ನಕ್ಕ.

'ಕೃಷಿ ಬಗ್ಗೆ ಕೃಷಿಕ ಆಗಿ ಮಾತ್ರ ಮಾತಾಡಿ ಲೋಕೇಶ್.. ಹೇಳೋದಕ್ಕೂ ಮಾಡೋದಕ್ಕೂ ಬಹಳಾನೇ ವ್ಯತ್ಯಾಸ ಇರುತ್ತೆ.. ಈಗಿನ ಕಾಲದಲ್ಲಿ ಪ್ರತಿ ಹೆಜ್ಜೆ ಇಡಬೇಕಾದ್ರೂ ನೂರ್ ಸಾರಿ ಯೋಚ್ನೆ ಮಾಡ್ಬೇಕು ..You have to think zillion times before you start anything .. ಆದ್ರೆ ನಿಮ್ದು ಬಿಸಿರಕ್ತ... ಕೇಳೋದಿಲ್ಲ.. ಅಲ್ವೇ' ಎಂದು ನಕ್ಕರು.

'ಮನುಷ್ಯ zillion ಟೈಮ್ಸ್ ಯೋಚ್ನೆ ಮಾಡ್ತಾ ಕೂತಿದ್ರೆ ಇನ್ನೂ ಮಿಲಿಯನ್ ಟೈಮ್ಸ್ ಹಿಂದೇನೆ ಇರ್ತಾ ಇದ್ದ ಸರ್..ಅದೆಲ್ಲ ಬೇಡ ಬಿಡಿ.. ನಿಮ್ಗೆಲ್ಲಾ ಒಂದ್ ಸಣ್ಣ ಸ್ಟೋರಿ ಹೇಳ್ತಿನಿ.. ಕೇಳಿ ' ಎಂದು ನಮ್ಮನ್ನೂ ಒಮ್ಮೆ ನೋಡಿದ. ಮೂಗಿಗೆ ಬಡಿಯ ಹತ್ತಿದ್ದ ತಂದೂರಿ ಚಿಕನ್ನಿನ ಘಮ ಕ್ಷಣ ಕ್ಷಣಕ್ಕೂ ಕ್ಷೀಣಿಸುತ್ತಿತ್ತು. ದೇವರೇ ಈ ಪೊಳ್ಳು ವಾಗ್ಮಿ ಲೊಕೇಶನ ತಲೆಗೆ ನಾಲ್ಕು ಭಾರಿಸಿ ಸುಮ್ಮನಿರಿಸು ಎಂದು ನಾನು ಬೇಡಿಕೊಂಡೆ.

'ಸರಿಯಾಗಿ ಮೂವತ್ತು ವರ್ಷದ ಹಿಂದೆ ಒಬ್ಬ ಯಂಗ್ ಹುಡ್ಗ ಈ ಊರಿನಲ್ಲಿದ್ದ.. ಬಿಸಿ ರಕ್ತದ ಹುಡ್ಗ ಅಂದ್ಕೊಳ್ಳಿ.. ಬಹಳಾನೇ ಮಹತ್ವಕಾಂಕ್ಷಿ..ನೇರ ನುಡಿ... ದೇಶಪ್ರೇಮಿ.. ಇಂಗ್ಲಿಂಡಿನಲ್ಲಿ ಓದಿದ್ದರೂ ಊರಿಗೆ ಬಂದು ಕೃಷಿ ಮಾಡತೊಡಗಿದ.. ಅದೇನೋ ಕೃಷಿ ಅಂದರೆ ಆತನಿಗೆ ಎಲ್ಲಿಲ್ಲದ ಆನಂದ . ಅಪ್ಪನ ಬೇಜಾನ್ ಆಸ್ತಿ ಇದ್ದರೂ ಅದನ್ನು ನೆಡೆಸೋದೇನು ಅಷ್ಟೇನು ಸುಲಭ ಆಗಿರ್ಲಿಲ್ಲ..ಆದ್ರೂ ಆತ ಪಣತೊಟ್ಟ.. ಈಜಿದ ..ಗೆಳೆಯರಲ್ಲ ಆತನನ್ನು ಮೂದಲಿಸಿದರು. ಎಲ್ಲವನ್ನು ಮಾರಿ ಇಂಗ್ಲೆಂಡ್ ನಲ್ಲಿ ಸೆಟ್ಲ್ ಆಗುವ ಸಜೆಶನ್ ಕೊಟ್ರು..ಆತ ಕೇಳಲಿಲ್ಲ, ಹಿಡಿದ ದಾರಿಯನ್ನು ಬಿಡಲಿಲ್ಲ. ಆತನ ಆ ಡೈನಾಮಿಕ್ ಯೋಚನೆ ಹಾಗು ಯೋಜನೆಗಳಿಂದ ಇಂದು ಆತ ಇಡೀ ಜಿಲ್ಲೆಯ ಏಕೈಕ ಸಾವಯವ ಕೃಷಿಕ ಅನ್ನಿಸಿಕೊಂಡಿದ್ದಾನೆ. ಅಲ್ದೆ ರೈತರಿಗೆ ಒಂದು ಕಾಫಿ ಕ್ಯೂರಿಂಗ್ ಹಾಗು ಹಾಲಿನ ಸಂರಕ್ಷಣ ಘಟಕವನ್ನು ಸ್ಥಾಪಿಸಿ ಸರ್ಕಾರಗಳಿಂದ ಪ್ರಶಸ್ತಿಗಳನ್ನೂ ಪಡೆದಿದ್ದಾನೆ... ತನ್ನ ಗೆಳೆಯರ ಮಾತನ್ನು ಕೇಳಿ ಅಂದು ಬ್ರಿಟನ್ಗೋ ಅಥವಾ ಫ್ರಾನ್ಸಿಗೂ ಹೋಗಿ ಸೆಟ್ಲ್ ಆಗಿದ್ರೆ ಚೆನ್ನಾಗಿರಬಹುದಿತ್ತು.. ಆದ್ರೆ ಆತನ ಗುರಿ ಸ್ಪಷ್ಟವಾಗಿತ್ತು..ಬಿಸಿರಕ್ತ ಕುದಿಯುತ್ತಾ ಇತ್ತು.. ತಾಯ್ನಡಿನ ಮಣ್ಣು ಚಿನ್ನ ಎಂಬ ಅರಿವು ಆತನಿಗಿತ್ತು' ಎಂದ ಲೋಕೇಶ ನನ್ನನ್ನು ನೋಡಿದ. ಆತ ಏನು ಹೇಳಲೋರಟ್ಟಿದ್ದಾನೆ ಎಂದು ಕೇಳುವ ಮೊದಲೇ ಪುನ್ಹ ಮುಂದುವರೆಸಿ,

'ಇಷ್ಟೆಲ್ಲಾ ಸಾಧನೆ ಮಾಡಿದ ಹೆಮ್ಮೆಯ ವ್ಯಕ್ತಿ ಯಾರು ಗೊತ್ತಾ.., ಎಂದು ಸಣ್ಣದಾದ ಬ್ರೇಕನ್ನು ನೀಡಿ ಎಲ್ಲರ ಮುಖವನ್ನು ಮತ್ತೊಮ್ಮೆ ನೋಡಿ ‘ಅವ್ರು ಬೇರೆ ಯಾರು ಅಲ್ಲ ಜಿಲ್ಲೆಯ ಪ್ರಖ್ಯಾತ ಹೆಮ್ಮೆಯ ಕಾಫಿ ಬೆಳೆಗಾರರಾದ ಶ್ರೀಯುತ ಸಾಲ್ದಾನಾ ಜೋಸೆಫ್..' ಎಂದು ನಮ್ಮ ಮುಂದೆ ಕೂತಿದ್ದ ಅವರನ್ನು ತೋರಿಸಿದ. ನಾನು ಹಾಗು ಆದಿ ಒಬ್ಬರನೊಬ್ಬರು ಆಶ್ಚರ್ಯದಿಂದ ನೋಡಿದೆವು. ಅಪ್ಪಿ ತಪ್ಪಿ ಲೈಬ್ರರಿಯಲ್ಲಿ ಯಾವುದೊ ಹಿಸ್ಟರಿ ಬುಕ್ ಓದಿ ಈತನ ತಲೆಕೆಟ್ಟಿರಬಹುದೆಂದು ನಾನು ಅಂದುಕೊಂಡೆ. ಆದರೆ ಮುಂದೆ ನೆಡೆದ ಘಟನಾವಳಿ ನನ್ನ ಊಹೆಯನ್ನು ಸುಳ್ಳಾಗಿಸಿತು.

'Oh, come-on Lokesh, don’t embarrass me please.. ನೀವು ಹೀಗೆಲ್ಲ ಹೇಳಿದ್ರೆ ನಾನು ದುಡ್ಡ್ ಕೇಳೋದು ಬಿಟ್ಟ್ ಬಿಡ್ತೀನಿ ಅನ್ಕೋಬೇಡಿ' ಎಂದು ಅವರು ನಕ್ಕರು.

'ಇಲ್ಲ ಸರ್ .. This is the legend what our city speak about you..ಅವತ್ತು ನೀವು ಇಲ್ಲೇ ಇದ್ದು ಕೃಷಿ ಮಾಡ್ತೀನಿ ಅಂದ್ಕೊಂಡಾಗ್ಲೂ ನಿಮ್ಗೆ ಕೃಷಿ ಮೇಲೆ ಅಂತಹ ಆಳವಾದ ಜ್ಞಾನ ಇರ್ಲಿಲ್ಲ ಅಲ್ವ ಸರ್.. ಆದ್ರೂ ನೀವು ಪ್ರಯತ್ನ ಪಟ್ರಿ.. ಸೊತ್ರಿ.. ಸೊತ್ರಿ.. ಎಷ್ಟೋ ಸೋಲಿನ ನಂತ್ರ ಗೆದ್ರಿ.. ಅಲ್ವ?'

ಅವರ ಮುಗುಳ್ ನಗುವೆ ಲೊಕೇಶನ ಪ್ರೆಶ್ನೆಗೆ ಉತ್ತರವಾಗಿದ್ದಿತು.

'Right now ನಾನು ಕೂಡ ಅದೇ ಪ್ಲೇಸ್ ನಲ್ಲಿ ಇದ್ದೀನಿ.. ನಂಗೆ ನಿಮ್ಮಿಂದ ಏನೂ ಬೇಡ ಸರ್.. I just need a handful of days.. let me achieve it sir' ಎಂದು ಸುಮ್ಮನಾದ.

ಆಸಾಮಿ ಬರುವಾಗ ಅವರ ಜೀವನಕತೆಯನ್ನೇ ಅರೆದು ಕುಡಿದು ಬಂದಹಾಗಿದೆ. ಆದರೆ ಲೊಕೇಶನ ಈ ರೀತಿಯ ಟ್ರಿಕ್ಸ್ ಗಳೇ ಅದೆಷ್ಟೋ ಬಾರಿ ಸಫಲವಾಗಿವೆ. ವ್ಯಕ್ತಿ ಬಿಸಿನೆಸ್ ಮೆಟೀರಿಯಲ್ ಅನ್ನೋದರಲ್ಲಿ ದೂಸರಾ ಮಾತೇ ಇಲ್ಲ ಎಂದು ನನಗನಿಸಿತು.

'ನೋಡಿ ಲೋಕೇಶ್.. ಏನೇ ಅಂದ್ರು Business is Business.. ಆದ್ರೆ ನಿಮ್ಮನ ನೋಡಿ ನನ್ಗೆ ನನ್ನ ಯಂಗ್ ಡೇಸ್ ನೆನಪಿಗೆ ಬರುತ್ತೆ.. ಅದೇ ಜೋಷ್ ಅದೇ ಸ್ಪಷ್ಟತೆ.. I liked it..' ಎಂದು ಸುಮ್ಮನಾಗಿ 'Only 8 months.. Also ನೀವ್ ಹೇಳಿದ್ದ ಜಾಗದಲ್ಲೇ ನನ್ನ ಮೂರ್ ಎಕ್ರೆ ಖಾಲಿ ಗದ್ದೆ ಇದೆ.. ಬೇಕಾದ್ರೆ ಅದನ್ನೂ ಯೂಸ್ ಮಾಡ್ಕೊಳಿ.. ರೆಂಟ್ ಎಲ್ಲ ಏನು ಬೇಡ..' ಎಂದರು.

ಸಾಲ ಕೊಡೋಕ್ ಆಗಲ್ಲ ಸ್ವಾಮಿ ಏನುತಾ ಲೋಕೇಶ ಕಾಲಿಗೆರಗುವ ಸೀನ್ಗಳೆಲ್ಲ ಇರಬಹುದೆಂದು ಬಂದ ನನಗೆ ಗಡತ್ತಾದ ಊಟ, ಆತನಿಗೆ ಮೂರು ಎಕರೆ ಜಾಗ ಫ್ರೀಯಾಗಿ ದೊರೆಯುತ್ತದೆ ಎಂಬುದನ್ನು ಊಹಿಸಿಕೊಳ್ಳಲೂ ನನಗೆ ಸಾಧ್ಯವಾಗಲಿಲ್ಲ. ಸಾಲದಕ್ಕೆ ಮರ್ಯಾದೆ ಬಿಟ್ಟ ಕಾಲೇಜಿನ ಎಕಾನಾಮಿಕಲ್ ಬ್ಯಾಚುಲರ್ಸ್ ಎಂದು ಸಾಬೀತುಪಡಿಸುವ ಸಲುವಾಗೇ ಏನೋ ನಾನು ಒಂದು ಚಿಕ್ಕನ್ ಬಿರಿಯಾನಿಯನ್ನೂ ನಾನು ರೂಮಿಗೆ ಕಟ್ಟಿಸಿಕೊಂಡಿದ್ದೆ

'ಮಗ್ನೆ, ಅಷ್ಟೆಲ್ಲ ಹೆಂಗೋ ಹುಳ ಬಿಟ್ಟೆ?' ಪ್ಲಾಂಟರ್ಸ್ ಕ್ಲಬ್ಬಿನಿಂದ ಹೊರಬರುತ್ತಾ ಲೋಕೇಶನನ್ನು ಕೇಳಿದೆ ನಾನು.

'ಟ್ಯಾಲೆಂಟ್ ಮಚಿ..ಎಲ್ರಿಗೂ ಅದ್ ಬರಲ್ಲ' ಎಂದು ಸಹಜವಾಗಿಯೇ ತಂತಾನೇ ಹೊಗಳತೊಡಗಿದ ಆತ.

'ಹಾಗಾದ್ರೆ ಈ ಸಾರಿ ಇಂಟರ್ನಲ್ಸ್ ನಲ್ಲೂ ನಿನ್ನ ಟ್ಯಾಲೆಂಟ್ ತೋರಿಸೇ ಪಾಸಾಗು ' ಎಂದ ಆದಿ.

'ಇಲ್ಲ ಗುರು.. ಹಾಗೆಲ್ಲ ಮಾಡ್ಬೇಡ.. ತಾವ್ ಇದ್ರೆ ನಾವು, ಇವ್ನು, ಇಡೀ ಅರ್ಧಕ್ಕರ್ಧ ಕ್ಲಾಸು..ನಿನ್ ಟ್ಯಾಲೆಂಟ್ ಮುಂದೆ ನಮ್ದೇಲ್ಲ ಏನೂ ಇಲ್ಲ ಬಿಡು' ಎಂದು ಆದಿಯನ್ನು ಪುಸಲಾಯಿಸತೊಡಗಿದ. ಅಷ್ಟರಲ್ಲಿ ನಾವು ಕ್ಲಬ್ಬಿನ ಗೇಟಿನ ಬಳಿಗೆ ಬಂದಿದ್ದೆವು. ಕ್ಲಬ್ಬಿನ ಹೊರಕ್ಕೂ ಒಳಕ್ಕೂ ಎಮರ್ಜೆನ್ಸಿಯ ಆಂಬುಲೆನ್ಸ್ ಗಳಂತೆ ಇತ್ತಿಂದತ್ತ ಅತ್ತಿಂದಿತ್ತ ಸದ್ದುಮಾಡುತ್ತಾ ನುಗ್ಗುವ ದುಭಾರಿ ನಾಲ್ಕು ಚಕ್ರದ ಗಾಡಿಗಳ ಒಳಗಿರುವ ಚಹರೆಗಳನ್ನು ತಮ್ಮ ಅಮಾಯಕ ಕಣ್ಣುಗಳಿಂದ ನೋಡುವ ಹತ್ತಾರು ಚಹರೆಗಳು ಗೇಟಿನ ಬಳಿ ನಿಂತಿದ್ದವು. ತಲೆಗೆದರಿಕೊಂಡ ಹಳದಿ ಹಲ್ಲಿನ ಕೊಳಕು ಬಟ್ಟೆಯ ಆ ಮಕ್ಕಳನ್ನು ಕಂಡರೆ ಎಂತಹ ವ್ಯಕ್ತಿಗೂ ತನ್ನ ದೊಡ್ಡತನವನ್ನು ಪ್ರದರ್ಶಿಸುವ ಅವಕಾಶ ಒದಗಿ ಬರುತ್ತಿತ್ತು. ಆಗ ತಮ್ಮ ಕಾರನ್ನು ನಿಲ್ಲಿಸಿ ನೂರೋ, ಇನ್ನೂರೋ ಅಥವಾ ಕೈಗೆ ಬಂದಷ್ಟು ದುಡ್ಡನ್ನು ಎಳೆದು ಕೊಟ್ಟು ಹೋಗುತ್ತಿದ್ದರು ಆ ದೊಡ್ಡವರು. ಸಿಕ್ಕ ಹಣವನ್ನು ಬೀಡಿ, ಸಿಗರೇಟು, ಗುಟ್ಕಾ, ಸಾರಾಯಿ ಎನುತ ಆ ಗುಂಪು ಖರ್ಚು ಮಾಡುವುದು ಮಾತ್ರ ಬೇರೆಯ ಮಾತು.

ಅಂತ ದೊಡ್ಡ ಕುಳಗಳ ಅನ್ವೇಷಣೆಯಲ್ಲಿ ಈಗಲೂ ಅಲ್ಲಿಯೇ ನಿಂತಿತ್ತು ಆ ಮರಿ ಪೋಕರಿ ಸೈನ್ಯ. ನಾವು ಬಂದದನ್ನು ಕಂಡ ಅವರು,

'ಅಣ್ಣ.. ದುಡ್ಡ್ ಕೊಡಣ್ಣ..ಪ್ಲೀಸ್, ಪ್ಲೀಸ್ ' ಎಂದು ಪೀಡಿಸತೊಡಗಿದರು.

'ನನ್ನ್ ಹತ್ರ ಇಲ್ಲ ಗುರು.. ಅಂಕಲ್ ನ ಕೇಳು' ಎನುತ ನಾನು ಆದಿಯನ್ನು ತೋರಿಸಿದೆ.

'ಅಂಕಲ್.. ಅಂಕಲ್.. ದುಡ್ಡ್ ಕೊಡಿ ಅಂಕಲ್.. ಊಟ ಮಾಡಿ ಮೂರ್ ದಿನ ಆಯ್ತು ಅಂಕಲ್.. ಪ್ಲೀಸ್ ಅಂಕಲ್' ಎಂದು ರೋಧಿಸುವ ನಾಟಕವಾಡಿದ ಗುಂಪನ್ನು ಲೋಕೇಶ ಬೈಯುತ್ತಾ ದೂರ ಸರಿಸತೊಡಗಿದ. ಅವರ ಒಂದೊಂದೇ ಮುಖವನ್ನು ನೋಡಿದ ಆದಿ ಕೂಡಲೇ ತನ್ನ ಪರ್ಸನ್ನು ಹೊರಗೆಳೆದು ನೂರರ ಒಂದು ನೋಟನ್ನು ಅವರ ಕೈಲಿಟ್ಟ. ಹಣವನ್ನು ಪಡೆದ ಗುಂಪು ಮರುಕ್ಷಣದಲ್ಲೇ ಈತನೊಬ್ಬ ಅಜೀವ ವಸ್ತುವೇನೋ ಎಂಬಂತೆ ತಮಗೂ ಹಾಗು ಈತನಿಗೂ ಯಾವುದೇ ಸಂಬಂಧ ಇಲ್ಲವೆಂಬಂತೆ ಅಲ್ಲಿಂದ ಜಾಗ ಕಿತ್ತವು. ಪುನ್ಹ ತಮ್ಮ ಸ್ವಸ್ಥಾನಕ್ಕೆ ಹೋಗಿ ಮತ್ತೊಂದು ಗಿರಾಕಿಗೆ ಕಾಯತೊಡಗಿದವು.

'ಲೋ .. ನಿಂಗೇನು ಹುಚ್ಚ.. ಆ ಗುಡ್ಕ ತಿನ್ನೋ ಕಪಿಗಳಿಗೆ ನೂರ್ ರೂಪಾಯ್ ಕೊಡೊದ?' ನಾನು ಕೇಳಿದೆ.

'ಒಬ್ಬ ನನ್ನ್ ಮುಂದೆ ಕೈ ಚಾಚುತ್ತಿದ್ದಾನೆ ಎಂದರೆ ನಂಗೆ ಏನೂ ತೋಚಲ್ಲ.. ತನ್ನ ಎಲ್ಲವನ್ನು ಬಿಟ್ಟು ಇನ್ನೊಬ್ಬರ ಮುಂದೆ ಕೈ ಚಾಚುವುದು ಅಷ್ಟು ಸುಲಭ ಅಲ್ಲ.. ನೂರ್ ರೂಪಾಯ್ ಎಲ್ಲಿ ಹೋಗಿ ಎಲ್ ಬರುತ್ತೋ ಗೊತ್ತಿಲ್ಲ.. ಆದ್ರೆ ಕೈ ಚಾಚಿದವ್ರಿಗೆ ಇಲ್ಲ ಆನ್ಬಾರ್ದು ಅಷ್ಟೇ' ಆದಿ ಹೇಳಿದ.

'ನಿನ್ ಕಿತ್ತೊಗಿರೊ ಈ ಫಿಲಾಸಪಿನ ನೀನೆ ಇಡ್ಕೊ ಗುರು... ಎಳೆ ಮಕ್ಕಳಿಗೆ ದುಡ್ಡ್ ಕೊಟ್ಟ್ ಹಾಳ್ ಮಾಡ್ತಾ ಇದ್ದೀಯ ನೀನು' ಎಂದೇ ನಾನು.

'ನಿಂಗೆ ಅರ್ಥ ಆಗಲ್ಲ ಬಿಡು..' ಎಂದು ಆದಿ ಸುಮ್ಮನಾದ.

ಆ ಗುಂಪು ನಿಂತಿದ್ದ ತುಸು ದೂರದಲ್ಲಿ ಅಜ್ಜಿಯೊಂದು ಮರದ ನೆರಳ ಕೆಳಗೆ ನಿಂತಿತ್ತು. ಅದರ ವೇಷಭೂಷಣ ಜೋಳಿಗೆ ಎಲ್ಲವನ್ನು ನೋಡಿದರೆ ಅದೂ ಸಹ ಹೀಗೆಯೇ ಕೈಚಾಚಿ ಬೇಡಿ ತಿನ್ನುವ ಜೀವವೆಂದು ಅರಿವಾಯಿತು. ಏಕೋ ನನಗೆ ಅವಳ ಬಳಿಗೆ ಹೋಗುವ ಹಾಗಾಯಿತು . ಕೂಡಲೇ ನಾನು ಆಕೆಯ ಬಳಿಗೊದೆ. ತನ್ನ ಎಡ ಬುಜದ ಮೇಲೊಂದು ಬಟ್ಟೆಯ ಜೋಳಿಗೆ ಹಾಗು ಬಲಗೈಯಲ್ಲಿ ಎರಡು ಪ್ಲಾಸ್ಟಿಕ್ ಕವರ್. ಒಂದರ ತುಂಬೆಲ್ಲ ರೊಟ್ಟಿ, ದೋಸೆ, ಚಪಾತಿಗಳಾದರೆ ಇನ್ನೊಂದರಲ್ಲಿ ಸಾರು ಹಾಗು ಪಲ್ಯಗಳ ಮಿಶ್ರಣ. ನಾನು ಆಕೆಯ ಮುಂದೋಗಿ ನಿಂತರೂ ಆಕೆ ನನ್ನನ್ನು ಏನೂ ಕೇಳಲಿಲ್ಲ. ಆಕೆಯ ನೋಟ ನನ್ನಲ್ಲಿ ಏನೋ ಒಂದು ಬಗೆಯ ಸಂಕಟವನ್ನು ಉಂಟುಮಾಡಿತು. ನಾನು ಆಕೆಯ ಕಣ್ಣುಗಳನ್ನೇ ನೋಡತೊಡಗಿದೆ. ‘ಕ್ಲಬ್ಬು , ಮೋಜು , ಮಸ್ತಿ , ಹಣ , ಗಾಡಿ , ಗುಟ್ಕಾ ಎಲ್ಲದರ ಮದ್ಯೆ ಜೀವನವೆಂದರೆ ಇದೆ , ನನನ್ನು ನೋಡಿ ಕಲಿ’ ಅನ್ನುವಂತಿತ್ತು ಆಕೆಯ ನೋಟ. ನಾನು ಕ್ಲಬ್ಬಿನಿಂದ ಕಟ್ಟಿಸಿಕೊಂಡು ಬಂದಿದ್ದ ಬಿರಿಯಾನಿಯೊಟ್ಟಿಗೆಐನೂರರ ಒಂದು ನೋಟನ್ನು ಅದರೊಟ್ಟಿಗಿಟ್ಟು ಆಕೆಗೆ ನೀಡಿದೆ. ಬಿರಿಯಾನಿಯ ಪೊಟ್ಟಣವಷ್ಟನ್ನೇ ಪಡೆದು ಆಕೆ ಹಣವನ್ನು ನನಗೆ ವಾಪಸ್ಸು ನೀಡಿದಳು! ಪುನ್ಹ ನಾನು ಕೊಡಲೋದೆ. ಆಕೆ ಬೇಡವೆನುತ ತನ್ನ ತಲೆಯನ್ನಾಡಿಸಿದಳು. ನನಗೆ ದಿಗ್ಭ್ರಮೆಯಾಯಿತು. ಪ್ಲಾಂಟರ್ಸ್ ಕ್ಲಬ್ಬು, ಐಷಾರಾಮಿ ಕಾರುಗಳು, ಸ್ವಿಮ್ಮಿಂಗ್ ಪೂಲು, ಟೇಬಲ್ ಟೆನ್ನಿಸ್ ಟೇಬಲ್ಲು, ದುಬಾರಿ ಇಂಗ್ಲೀಷು, ತಂದೂರಿ ಚಿಕನ್ನು, ಸುಳ್ಳೇಳಿ ಹಣವನ್ನು ದೋಚುವ ಮಕ್ಕಳು, ಅವರ ಕೊಳಕು ಬಟ್ಟೆ ಹಾಗು ಈ ಮುದುಕಿ. ನನಗೆ ಅಲ್ಲಿ ನಿಲ್ಲಲಾಗಲಿಲ್ಲ. ಕೂಡಲೇ ಅಲ್ಲಿಂದ ಹೊರಟೆ. ಮುದುಕಿ ಪೊಟ್ಟಣವನ್ನು ಬಿಡಿಸಿ ಬಿರಿಯನಿ ಅನ್ನವನ್ನು ಚಪಾತಿ, ದೋಸೆ ಹಾಗು ರೊಟ್ಟಿಯಿದ್ದ ಪ್ಲಾಸ್ಟಿಕ್ ಕವರ್ನೊಳಗೆ ಹಾಕಿಕೊಂಡಳು. ಆಕೆಗೆ ಬಿರಿಯಾನಿ ಹಾಗು ರೊಟ್ಟಿಗಳ ನಡುವೆ ಯಾವುದೇ ವ್ಯತ್ಯಾಸ ಕಾಣಲಿಲ್ಲ. ಎಲ್ಲವನ್ನೂ ಒಟ್ಟಿಗೆ ಬೆರೆಸಿ ಶಾಂತವಾಗಿ ಪುನಃ ಮರದ ಕೆಳಗೆ ನಿಂತಳು.

****