Saturday, December 30, 2017

ಗೆಲುವಿನ ಸೌಧಕ್ಕೆ ಅಡಿಗಲ್ಲಾದ ನಾಯಕರು…

ನಾಯಕ ಎಂಬ ಪದವೊಂದಕ್ಕೆ ಹಲವಾರು ವ್ಯಾಖ್ಯಾನಗಳಿವೆ. ಮುಂದಾಳು, ಗಟ್ಟಿಗ, ನಿಪುಣ, ಚಿಂತಕ, ಧೀರ ಎಂಬ ಕೆಲವು ಅಥವಾ ಇನ್ನೂ ಹಲವು ಸಮರೂಪಿ ಸಂದೇಶ ಸಾರುವ ಪದಗಳ ಸಮ್ಮಿಶ್ರಣದ ವ್ಯಕ್ತಿತ್ವ ನಾಯಕನೆನಿಸಿಕೊಳ್ಳುತ್ತದೆ. ಇಂತಹ ಹಲವಾರು ವ್ಯಕ್ತಿತ್ವಗಳನ್ನು ನಾವು ದಿನಜೀವನದಲ್ಲಿ ಕಾಣುತ್ತೇವೆ, ಕೇಳುತ್ತೇವೆ. ಕೆಲವು ನೋಡಲು ಚೆಂದವೆನಿಸಿದರೆ ಇನ್ನೂ ಕೆಲವು ಕೇಳಲಷ್ಟೇ ಲಾಯಕ್ಕಾಗಿರುತ್ತವೆ! ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕ್ರೀಡೆ ಎಂಬುದು ಕೇವಲ ಆಟವಲ್ಲ. ಅದೊಂದು ಭಾರಿ ಪ್ರೊಫೆಶನ್. ತಾಳ್ಮೆ, ನಿಖರತೆ, ಪೂರ್ವಭಾವಿ ಚಿಂತನೆ, ವ್ಯಕ್ತಿತ್ವ ವಿಕಸನ, ತಂತ್ರಗಾರಿಕೆ, ಸಂವಹನ ಎಂಬೆಲ್ಲ ಹಲವು ಅಂಶಗಳು ಸೇರಿ ಇಂದು ಅದು ಕೇವಲ ಮನೋರಂಜನೆಯ ತಾಣವಾಗಷ್ಟೇ ಉಳಿದಿಲ್ಲ. ಶತಮಾನಗಳ ಇತಿಹಾಸವಿರುವ ಕ್ರೀಡೆಗಳಲ್ಲಿ ಕ್ರಿಕೆಟ್ ಕೂಡ ಒಂದು. ಕ್ರಿಕೆಟ್ ಸಹ ಹೀಗೆಯೇ ಕೇವಲ ಮನೋಲ್ಲಾಸಕೆಂದು ಆಡಲು ಶುರುವಾಗಿ ಇಂದು ಒಂದು ಜೆಂಟಲ್ ಮ್ಯಾನ್ ಗೇಮ್ ಎನ್ನಿಸಿಕೊಂಡಿದೆ. ಭಾರತದಲ್ಲಿ ಅಂದು ಕೇವಲ ರಾಜ ಮಹರಾಜಾರುಗಳಿಗಷ್ಟೇ ಸೀಮಿತವಾಗಿದ್ದ ಆಟವೊಂದು ಇಂದು ಸಕಲರಿಗೂ ಸಲ್ಲುವ ಹೊಂಗಿರಣವಾಗಿದೆ. ಕಳೆದ ನಾಲ್ಕೈದು ದಶಕಗಳಿಂದೀಚೆಗಂತೂ ದೇಶದ ಜನಮನದ ಅತ್ಯಾಪ್ತ ಅಂಶವಾಗಿಬಿಟ್ಟಿದೆ. ಹೀಗೆ ಕೇವಲ ದಶಕಗಳ ಅಂತರಲ್ಲಿ ಭಾರತೀಯ ಕ್ರಿಕೆಟ್ ಜಗತ್ತೇ ಹುಬ್ಬೇರುವಂತೆ ಬೆಳೆದು, ಹೊಳೆದು, ಉತ್ತುಂಗಕ್ಕೇರಿ ರಾರಾಜಿಸಲು ಕಾರಣಗಳು ಹಲವಿರಬಹುದು. ಅಂತಹ ಹಲವು ಕಾರಣಗಳಲ್ಲಿ ನಾಯಕನೆಂಬ ಅಂಶವೂ ಒಂದು. ಕಳೆಗುಂದಿದ ತಂಡದ ಚೈತನ್ಯನಾಗಿ, ತಂಡದೊಳಗಿನ ಕಿತ್ತಾಟ ಮನಸ್ತಾಪಗಳ ಶಮನಿಯಾಗಿ, ಗೆಲುವಿನಲ್ಲಿ ಹಿಂದಿದ್ದು ಕಷ್ಟಗಾಲದಲ್ಲಿ ಮುಂಬಂದು ಎದೆಯೊಡ್ಡುವ ಧೀರನಾಗಿ ಅಷ್ಟೇ ಅಲ್ಲದೆ ತನ್ನ ನಂತರದ ಪೀಳಿಗೆಗಾಗಿ ಸದೃಢ ತಂಡದ ಬುನಾದಿಯೊಂದನ್ನು ಹಾಕಿಕೊಟ್ಟು ಹೋಗುವ/ಹೋಗಿರುವ ಹಲವಾರು ನಾಯಕರಿಂದ ಇಂದು ಟೀಮ್ ಇಂಡಿಯಾ ಎಂಬುದೊಂದಾಗಿದೆ. ಟೆಸ್ಟ್ ಪಂದ್ಯವನ್ನು ಆಡಲು ಶುರುವಿಟ್ಟು ಸುಮಾರು 86 ವರ್ಷಗಳ ಈ ಸುಧೀರ್ಘ ಅವಧಿಯಲ್ಲಿ ಭಾರತ ಇಂತಹ ಹಲವಾರು ನಾಯಕರನ್ನು ಕಂಡಿದೆ.

ಆಗೆಲ್ಲ ದೇಶದಲ್ಲಿ ಕ್ರಿಕೆಟ್ ಎಂದರೆ ಬಾಂಬೆ, ಮದ್ರಾಸ್, ದೆಹಲಿ, ಕೋಲ್ಕತ್ತ ಎಂಬಷ್ಟೇ ವಲಯಗಳಿಗೆ ಸೀಮಿತವಾಗಿದ್ದವು. ಒಬ್ಬ ಆಟಗಾರ ಕ್ರಿಕೆಟರ್ ಎಂದೆನಿಸಿಕೊಳ್ಳುವುದಕ್ಕೆ ಹೆಚ್ಚಾಗಿ ಇವಿಷ್ಟೇ ವಲಯವೊಂದರಾವುದರಲ್ಲಾದರೂ ಬೆವರು ಸುರಿಸಬೇಕಾಗಿದ್ದಿತು. ಅಲ್ಲದೆ ವಲಯಗಳಲ್ಲಿನ ಭೇದ ಭಾವಗಳೂ ಕೊಂಚ ಹೆಚ್ಚಾಗೇ ಇದ್ದ ಕಾಲವದಾಗಿತ್ತು. ಟೆಸ್ಟ್ ಕ್ರಿಕೆಟ್ ಆಡಲು ಶುರುವಾಗಿ ಹತ್ತಿರ ಹತ್ತಿರ ಮೂರು ದಶಕಗಳಾಗಿದ್ದರೂ ಕನಿಷ್ಠ ಒಂದಾದರೂ ಪಂದ್ಯವನ್ನು ಭಾರತ ತಂಡ ವಿದೇಶಿ ನೆಲದಲ್ಲಿ ಗೆದ್ದಿರಲಿಲ್ಲ. ಅಲ್ಲೊಂದು ಇಲ್ಲೊಂದು ಪಂದ್ಯಗಳ ಡ್ರಾ ಅನ್ನು ಬಿಟ್ಟರೆ ಉಳಿದಂತೆ ಸರಣಿ ಸರಣಿ ಸೋಲುಗಳೇ ತಂಡದ ಸಾಧನೆಯಾಗಿರುತ್ತಿತ್ತು. ಅಂತಹ ಕಾಲಘಟ್ಟದಲ್ಲಿ ತಂಡವನ್ನು ಮುನ್ನೆಡಸಲು ಬಂದವನೇ ನವಾಬ್ ಮನ್ಸೂರ್ ಅಲಿ ಖಾನ್ ಪಟೌಡಿ ಅಥವಾ ಕ್ರಿಕೆಟ್ ಪ್ರಿಯರ ಟೈಗರ್ ಪಟೌಡಿ. ಹೆಸರಿಗೆ ತಕ್ಕಂತೆ ಆತ ಕೇವಲ ಒಬ್ಬ ನವಾಬನಂತಿರದೆ ಹುಲಿಯ ಕೆಚ್ಚನ್ನು ತಂಡದಲ್ಲಿ ಹಚ್ಚಿಸಿದ ನಾಯಕನಾಗಿದ್ದ. 1961 ರಲ್ಲಿ ಟೈಗರ್ ತಂಡದ ಚುಕ್ಕಾಣಿಯನ್ನು ಹಿಡಿದಾಗ ಆತನಿಗೆ ಕೇವಲ 21 ವರ್ಷಗಳು! ಆಡಿದ್ದ ಪಂದ್ಯಗಳು ಕೇವಲ ಮೂರೇ ಮೂರು!! ಸಂಪೂರ್ಣ ಹಿರಿಯರ ಅತಿ ಕಿರಿಯ ನಾಯಕನಾಗಿ ತಂಡವನ್ನು ನೆಡೆಸಿದ ಆತ ಎಲ್ಲಾ ಅಂದುಕೊಂಡಂತೆ ತಂಡದ ಜೋಳಿಗೆಗೆ ಮಗದೊಂದು ಸೋಲಿನ ಉಡುಗರೆಯನ್ನು ಗಳಿಸಲಿಲ್ಲ. ಕಡೆಯಪಕ್ಷ ಗೆಲ್ಲಲಾಗದಿದ್ದರೂ ಅಂದು ಪಂದ್ಯವನ್ನು ಡ್ರಾ ನಲ್ಲಿ ಅಂತ್ಯಗೊಳ್ಳುವಂತೆ ಮಾಡಿದ್ದ ಚಿಗುರು ಮೀಸೆಯ ಪೋರ. ಆ ಮೂಲಕ ದೇಶೀ ಕ್ರಿಕೆಟ್ ವಲವದಲ್ಲಿ ಒಂದು ಬಗೆಯ ನವ ಚೈತನ್ಯನ್ನು ಮೂಡಿಸಿದ್ದ. ಟೆಸ್ಟ್ ಕ್ರಿಕೆಟ್ನಲ್ಲಿ ಸ್ಪಿನ್ನರ್ಗಳ ಮಹತ್ವವನ್ನು ಅರಿತಿದ್ದ ಪಟೌಡಿ ಮೂರು ಸ್ಪಿನ್ನರ್ಗಳ ತಂಡವನ್ನು ಆಟದ ಕಣಕ್ಕೆ ಇಳಿಸಲು ಮೊದಲುಮಾಡಿದ. ಅಲ್ಲಿಂದ ಮುಂದೆ ಸದೃಢ ಸ್ಪಿನ್ನರ್ಗಳ ತಂಡವೊಂದನ್ನು ಕಟ್ಟುವಲ್ಲಿ ಯಶಸ್ವಿಯಾದ. ಇಂದು ಏರಪಲ್ಲಿ ಪ್ರಸನ್ನ, ವೆಂಕಟರಾಘವನ್, ಚಂದ್ರಶೇಖರ್ ಅಥವಾ ಭೀಷನ್ ಸಿಂಗ್ ಬೇಡಿಯೆಂಬ ಸ್ಪಿನ್ ಮಾಂತ್ರಿಕರ ಹೆಸರನ್ನು ನಾವು ಇತಿಹಾಸದ ಪುಟಗಳಲ್ಲಿ ಕಾಣುತ್ತೇವೆಂದರೆ ಅದರ ಬಹುಪಾಲು ಶ್ರೇಯ ನಾಯಕ ಪಟೌಡಿಗೂ ಸಲ್ಲಬೇಕು. ಅಂತೂ 1967 ರ ನ್ಯೂಜಿಲ್ಯಾಂಡ್ ಪ್ರವಾಸದಲ್ಲಿ ಮೂರುವರೆ ದಶಕಗಳಿಂದಲೂ ಕಾಡುತ್ತಿದ್ದ ಬರವನ್ನು ಪಟೌಡಿ ಹಾಗು ತಂಡ ಕೊನೆಗೊಳಿಸಿತು. ಭಾರತ ವಿದೇಶಿ ನೆಲದಲ್ಲಿ ಮೊದಲ ಟೆಸ್ಟ್ ಗೆಲವು ಹಾಗು ಸರಣಿ ಗೆಲುವನ್ನೂ ತನ್ನದಾಗಿಸಿಕೊಂಡಿತು. ಅಪಘಾತವೊಂದರಲ್ಲಿ ತನ್ನ ಬಲಗಣ್ಣಿನ ದೃಷ್ಟಿಯನ್ನು ಕಳೆದುಕೊಂಡು ಮುಂದೆಂದೂ ಕ್ರಿಕೆಟ್ ಅನ್ನು ಆಡಲಾಗದು ಎಂಬಂತಹ ಸಂದರ್ಭದಲ್ಲಿ ಕೆಲ ತಿಂಗಳಾಗುವುದರೊಳಗೆಯೇ ಮತ್ತೊಮ್ಮೆ ಆಟದ ಅಂಗಳಕ್ಕೆ ಇಳಿದು ಶತಕವೊಂದನ್ನು ಭಾರಿಸುವ ಕೆಚ್ಚೆದೆ ಪಟೌಡಿಯದಾಗಿದ್ದಿತು. ಇದೇ ಕೆಚ್ಚೆದೆಯ ನಾಯಕತ್ವ ಮುಂಬಂದ ಹಲವಾರು ಆಟಗಾರರಿಗೆ ಸ್ಫೂರ್ತಿಯಾಯಿತು.

1975 ರಷ್ಟರಲ್ಲಿ ಪಟೌಡಿ ತಮ್ಮ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದರು. ಅಷ್ಟರೊತ್ತಿಗೆ ಭಾರತ ವಿಶ್ವ ಕ್ರಿಕೆಟ್ ನಲ್ಲಿ ತನ್ನ ಛಾಪನ್ನು ಮೂಡಿಸುತ್ತಿತ್ತಾದರೂ, ದೇಶದ ಮಟ್ಟಕ್ಕೆ ಉತ್ತಮ ಸಾಧನೆಗಳನ್ನು ಮಾಡುತ್ತಿದ್ದಾದರೂ ಯಾವುದೇ ಅಂತಾರಾಷ್ಟ್ರೀಯ ಮಟ್ಟದ ಚಾಂಪಿಯನ್ ಶಿಪ್ನನ್ನು ಅದು ತನ್ನದಾಗಿರಿಸಿಕೊಂಡಿರಲಿಲ್ಲ. ಅಂತಹ ಒಂದು ಮೇಜರ್ ಬ್ರೇಕಿಗೋಸ್ಕರ ತಂಡ ಸನ್ನದ್ಧವಾಗಿದ್ದಿತು. ಅದು ವಿಶ್ವಕಪ್ 1983. ಜೂನ್ 18. ಭಾರತ ಸರಣಿಯಲ್ಲಿ ನಾಲ್ಕು ಪಂದ್ಯಗಳಾಡಿ ಎರಡರಲ್ಲಿ ಗೆದ್ದು ಮತ್ತೆರಡರಲ್ಲಿ ಸೋತಿದ್ದಿತು. ಜಿಂಬಾಂಬೆ ವಿರುದ್ದದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮೊದಲು ಬ್ಯಾಟ್ ಬೀಸಿದ ಭಾರತ ಕೇವಲ ಒಂಬತ್ತು ರನ್ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್ಗಳನ್ನು ಎದುರಾಳಿ ತಂಡಕ್ಕೆ ಒಪ್ಪಿಸಿತು. ತಂಡದ ಅಗ್ರಮಾನ್ಯ ಆಟಗಾರರೆಲ್ಲ ಪೆವಿಲಿಯನ್ ತಲುಪಿ ಇನ್ನೇನು ಕೆಲವೇ ನಿಮಿಷಗಳಲ್ಲಿ ತಂಡ ಆಲೌಟ್ ಆಗುತ್ತದೆ ಎನ್ನುವಾಗ ಬ್ಯಾಟ್ ಬೀಸಲು ಬಂದವನೇ ಇಪ್ಪತ್ತನಾಲ್ಕು ವರ್ಷ, ಆರು ಅಡಿ ಎತ್ತರದ ನಾಯಕ ಕಪಿಲ್ ದೇವ್. ಇಡೀ ಇನ್ನಿಂಗ್ಸ್ನನ್ನು ಕಟ್ಟುವ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಎಳೆದುಕೊಂಡ ಈತ ಆಗಿನ ಕಾಲಕ್ಕೆ ಯಾರು ಕೇಳರಿಯದ ಮಟ್ಟದ ಬ್ಯಾಟಿಂಗ್ನನ್ನು ಅಲ್ಲಿ ಪ್ರದರ್ಶಿಸುತ್ತಾನೆ. ಒಂದು ಸಮಯಕ್ಕೆ 17 ರನ್ಗಳನ್ನು ಗಳಿಸಿ 5 ವಿಕೆಟ್ ಕಳೆದುಕೊಂಡಿದ್ದ ತಂಡ ಇನ್ನಿಂಗ್ಸ್ ಮುಗಿಯುವಾಗ ಬರೋಬ್ಬರಿ 266 ರನ್ಗಳನ್ನು ತನ್ನ ಖಾತೆಯಲ್ಲಿ ಇರಿಸಿಕೊಂಡಿತ್ತು. 16 ಬೌಂಡರಿ ಹಾಗು 6 ಸಿಕ್ಸರ್ಗಳನ್ನು ಒಳಗೊಂಡ 175 ರನ್ ಗಳ ಪ್ರಚಂಡ ಆಟವನ್ನು ಆಡಿ ಕಪಿಲ್ ಒಂದು ಬದಿಯಲ್ಲಿ ಅಜೇಯನಾಗಿ ಉಳಿದಿದ್ದ. ನಂತರದ ಇನ್ನಿಂಗ್ಸ್ ನಲ್ಲಿ ಜಿಂಬಾಂಬೆಯನ್ನು 235 ರನ್ ಗಳಿಗೆ ಕಟ್ಟಿಹಾಕಿ ತಂಡ ಸರಣಿಯಲ್ಲಿ ಮರುಜೀವವನ್ನು ಪಡೆಯಿತು. ನಂತರ ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ನನ್ನು ಮಣಿಸಿ ದೈತ್ಯ ವೆಸ್ಟ್ ಇಂಡೀಸ್ ವಿರುದ್ದದ ಫೈನಲ್ಸ್ ಗೆ ಅಣಿಯಾಯಿತು. ಭಲಿಷ್ಟ ವಿಂಡೀಸ್ನ ಎದುರು ಅಂದು ಸೋಲೆಂಬುದು ಭಾರತಕ್ಕೆ ಕಟ್ಟಿಟ್ಟ ಬುತ್ತಿ ಎಂಬುದು ಬಹುಪಾಲು ಜನರಿಗೆ ಸಹಜವಾಗಿಯೇ ಅನ್ನಿಸಿದ್ದ ವಿಷಯ. ಆದರೆ ಕಪಿಲ್ ತಂಡವನ್ನು ಯಾವುದೇ ಆತಂಕಗಳಿಗೂ ಎಡೆಮಾಡಿಕೊಡದೆ ಮುನ್ನೆಡೆಸುತ್ತಾನೆ. ಭಾರತ ನೀಡಿದ 183 ರನ್ ಗಳ ಸಾಧಾರಣ ಮೊತ್ತವನ್ನು ಬೆನ್ನತ್ತಿದ್ದ ವೆಸ್ಟ್ ಇಂಡೀಸ್ಗೆ ಗೆಲುವು ನೀರು ಕುಡಿದಷ್ಟೇ ಸುಲಭವಾಗಿದ್ದಿತು. ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಮತ್ತೊಮ್ಮೆ ಆಸರೆಯಾದವನು ಅದೇ ನಾಯಕ. ಮದನ್ ಲಾಲ್ರ ಎಸೆತವನ್ನು ವೆಂಡಿಸ್ ನ ಲೆಜೆಂಡ್ VV ರಿಚರ್ಡ್ಸ್ ಮಿಡ್ ವಿಕೆಟ್ನ ಕಡೆಗೆ ಬಾರಿಸಿದಾಗ ಬಹುಪಾಲು ಮಂದಿ ಆಕಾಶದಲ್ಲಿ ತೇಲುತ್ತಿದ್ದ ಬಾಲನ್ನು ನೋಡುತ್ತಿದ್ದರೆ ವಿನಃ ಮಿಂಚಿನ ವೇಗದಲ್ಲಿ ಕಪಿಲ್ ಅದೇ ದಿಕ್ಕಿನಲ್ಲಿ ಓಡುವುದನ್ನು ಗಮನಿಸಲಿಲ್ಲ! ಕಷ್ಟಕರವಾಗ ಆ ಕ್ಯಾಚ್ ಅನ್ನು ಕಪಿಲ್ ಇಡಿದಿದ್ದೆ ತಡ ನೆರೆದಿದ್ದ ಪ್ರೇಕ್ಷಕರ ಸಂಭ್ರಮ ಮುಗಿಲು ಮುಟ್ಟಿತು. ಇತ್ತ ಕಡೆ ಸೋಲು ಗ್ಯಾರಂಟಿ ಎಂದು ಕೈಚೆಲ್ಲಿ ಕೂತಿದ್ದ ಲಕ್ಷಾಂತರ ಭಾರತೀಯರ ರೂಮು ರೋಮುಗಳು ಎದ್ದು ನಿಂತವು. ವಿಶ್ವಕಪ್ ಅನ್ನು ಎತ್ತಿ ಹಿಡಿದಷ್ಟೇ ಖುಷಿಯಲ್ಲಿ ದೇಶ ಸಂಭ್ರಮಿಸಿತು! ಆ ಕ್ಯಾಚಿನ ಮುಖೇನ ಕಪಿಲ್ ಇಡೀ ಪಂದ್ಯದ ದಿಕ್ಕನ್ನೇ ಬದಲಾಯಿಸಿದನು. ಅಲ್ಲಿಂದ ಮುಂದಕ್ಕೆ ತರಗಲೆಗಳಂತೆ ಉದುರತೊಡಗಿದ ವಿಂಡೀಸ್ ತಂಡ 140 ರನ್ ಗಳಿಗೆ ತನ್ನೆಲ್ಲಾ ವಿಕೆಟ್ಗಳನ್ನು ಒಪ್ಪಿಸಿ ಚೊಚ್ಚಲ ಪ್ರಶಸ್ತಿಗೆ ಭಾರತವನ್ನು ಭಾಜನವಾಗುವಂತೆ ಮಾಡಿತು. ಇಡೀ ಸರಣಿಯಲ್ಲಿ ಕಪಿಲ್ ಗಳಿಸಿದ್ದು 303 ರನ್ ಹಾಗು ಪಡೆದದ್ದು 12 ವಿಕೆಟ್ ಗಳು. ಆಗಿನ ಕಾಲಕ್ಕೆ ಅದೊಂದು ಮಹತ್ತರವಾದ ಸಾಧನೆ. 'Leading from the Front' ಎಂಬ ನಾಣ್ಣುಡಿಯಂತೆ ಕಪಿಲ್ ಅಂದು ಮುಂನಿಂತು ತಂಡವನ್ನು ಮುನ್ನೆಡೆಸಿದ. ಕ್ರೀಡಾ ವಲಯದಲ್ಲಿ ವಿಶ್ವದ ಗಮನವನ್ನು ದೇಶದೆಡೆ ತಿರುಗುವಂತೆ ಮಾಡಿದ. ಇಂತಹದೊಂದು ಬ್ರೇಕ್ಗೋಸ್ಕರ ಕಾಯುತ್ತಿದ್ದ ತಂಡ ಮುಂದೆ ಮತ್ತೊಂದು ಮಗದೊಂದು ಸಾದನೆಗಳನ್ನು ಮಾಡುತ್ತಾ ಮುನ್ನೆಡೆಯಿತು. ದೇಶದಲ್ಲಿ ಕ್ರಿಕೆಟ್ ಕ್ರಾಂತಿಯನ್ನೇ ಹಬ್ಬಿಸಿತು 1983 ರ ವಿಶ್ವಕಪ್.

ಅಲ್ಲಿಂದ ಮುಂದೆ ತಂಡ ವರ್ಲ್ ಚಾಂಪಿಯನ್ಷಿಪ್ ಹಾಗು ಇನ್ನಿತರೇ ಬಹುಮುಖ್ಯ ಸರಣಿಗಳನ್ನು ಗೆಲ್ಲತೊಡಗಿತ್ತು. ವಿಶ್ವದ ಅಗ್ರಮಾನ್ಯ ತಂಡಗಳಲ್ಲಿ ಒಂದಾಗಿದ್ದಿತು. ವರ್ಷ 1999. ಕಪಿಲ್ ದೇವ್ ನಿವೃತ್ತಿಯಾಗಿ ಭಾರತ ತಂಡದ ಕೋಚ್ ಆಗಿ ಕಾರ್ಯನಿರ್ವಾಹಿಸುತ್ತಿದ್ದ ಕಾಲವದು. ಭಾರತ ಸಚಿನ್, ಅಜರುದ್ದೀನ್. ಗಂಗೂಲಿ, ದ್ರಾವಿಡ್, ಜಡೇಜಾ, ಕುಂಬ್ಳೆ ಎಂಬ ಹಲವು ದಂತಕತೆಗಳ ತಂಡವಾಗಿ ಹೊರಹೊಮ್ಮಿತ್ತು. ಇಂತಹ ಒಂದು ತಂಡಕ್ಕೆ ಕಾಡ್ಗಿಚ್ಚಿನಂತೆ ಬಂದು ಅಪ್ಪಳಿಸಿದ ಸುದ್ದಿ ಮ್ಯಾಚ್ ಫಿಕ್ಸಿಂಗ್ ! ಸೌತ್ ಆಫ್ರಿಕಾ ಸರಣಿಯಿಂದ ಶುರುವಾಗಿರಬಹುದಾದ ಈ ಬೆಂಕಿಗೆ ತಂಡದ ಅತಿರಥ ಮಹಾರಥಿಗಳ ಸ್ಥಾನವನ್ನೇ ಬಲಿಕೊಡಬೇಕಾಯಿತು. ವಿಶ್ವಕ್ರಿಕೆಟ್ನಲ್ಲಿ ದೇಶದ ಮಾನ ಮೂರು ಕಾಸಿಗೆ ಹರಾಜಾಯಿತು. ಅತ್ತ ಕಡೆ ನಾಯಕತ್ವವನ್ನು ವಹಿಸಿಕೊಂಡು ಸಾಲು ಸಾಲು ಸೋಲುಗಳನ್ನು ಕಾಣುತ್ತಿದ್ದ ಸಚಿನ್ ತಂಡವನ್ನು ಇನ್ಮುಂದೆ ಮುನ್ನೆಡೆಸಲು ನಿರಾಕರಿಸತೊಡಗಿದ. ವಿಶ್ವರಾಂಕಿಂಗ್ ನಲ್ಲಿ ಭಾರತ ಎಂಟನೇ ಸ್ಥಾನಕ್ಕೆ ಕುಸಿಯಿತು.ಆಗ ಆಯ್ಕೆ ಸಮಿತಿಯ ಮುಂದೆ ಇದ್ದ ಏಕೈಕ ಆಯ್ಕೆ ಬೆಂಗಾಲದ ಹುಲಿ ಖ್ಯಾತಿಯ ಸೌರವ್ ಗಂಗೂಲಿ. ಅಷ್ಟರಲ್ಲಾಗಲೇ ವಿಶ್ವದ ಅಗ್ರಮಾನ್ಯ ಬ್ಯಾಟ್ಸಮನ್ ಗಳಲ್ಲಿ ಒಬ್ಬನಾಗಿದ್ದ ಸೌರವ್ ನಾಯಕನಾದ ಮೇಲೆ ಮಾಡಿದ ಮೊದಲ ಕೆಲಸ ತಂಡದ ಕಟ್ಟುವಿಕೆ. ಲೆಜೆಂಡರಿ ಆಟಗಾರರ ಸ್ಥಳಕ್ಕೆ ಯುವಪೀಳೆಗೆಯನ್ನು ತಯಾರು ಮಾಡುವ ಬಗೆ. ಇಂದು ದೇಶದ ಟಾಪ್ ಕ್ರಿಕೆಟರ್ ಗಳಲ್ಲಿ ಒಂದಾಗಿರುವ ಸೆಹ್ವಾಗ್, ಜಹೀರ್ ಖಾನ್, ಯುವರಾಜ್, ಮುಹಮದ್ ಕೈಫ್, ಪಾರ್ಥಿವ್ ಪಟೇಲ್, ಇರ್ಫಾನ್ ಪಠಾಣ್, ಬಾಲಾಜಿ ಹೀಗೆ ಇನ್ನೂ ಹಲವು ಯುವ ಚೆಹರೆಗಳ ಆಯ್ಕೆ ಗಂಗೂಲಿಯ ನಿರ್ದೇಶನದ ಮೇರೆಯೇ ನೆಡೆಯಿತು. ಹೀಗೆ ಯುವ ಪಡೆಯ ತಂಡವನ್ನು ಕಟ್ಟಿಕೊಂಡು ಜಗತ್ತನ್ನು ಜಹಿಸಲು ಹೋದ ಸೌರವ್ ಅಕ್ಷರ ಸಹ ಪ್ರೇಕ್ಷಕರ ಹುಬ್ಬೇರುವಂತೆ ಮಾಡುತ್ತಾನೆ. ಭಾರತ ಅದೆಷ್ಟೇ ಭಲಿಷ್ಟವಾಗಿದ್ದರೂ ವಿದೇಶಿ ನೆಲಗಳಲ್ಲಿ ಆದರ ಸಾಧನೆ ನಗಣ್ಯ ಎಂಬ ಮಾತೊಂದು ಇದ್ದಿತು. ಈ ಮಾತಿಗೆ ಅಪವಾದವೇನೋ ಎಂಬಂತೆ ಸೌರವ್ ಹಾಗು ತಂಡ ಅಂದು ಆಟವನ್ನು ಆಡಿತ್ತು. ತಾವೇ ರಾಜರು ಎಂಬಂತೆ ಬೀಗುತ್ತಿದ್ದ ಬಿಳಿಯರ ಸೊಕ್ಕನ್ನು ಅವರದೇ ನೆಲದಲ್ಲಿ ಅಡಗಿಸುವ ಚತುರತೆಯನ್ನು ಗಂಗೂಲಿ ತಂಡಕ್ಕೆ ಕಲಿಸಿಕೊಟ್ಟಿದ್ದ. ಇಂಗ್ಲೆಂಡ್, ಪಾಕಿಸ್ತಾನ, ವೆಸ್ಟ್ ಇಂಡೀಸ್, ಬಾಂಗ್ಲಾದೇಶ ಹೀಗೆ ಹೊಡದೆಯಲ್ಲ ಅಸಾದ್ಯವಾಗಿದ್ದ ಸಾಧನೆಯೊಂದನ್ನು ಗಂಗೂಲಿ ಹಾಗು ತಂಡ ಮಾಡುತ್ತದೆ. ಎಂಟನೇ ಸ್ಥಾನದಲ್ಲಿದ್ದ ತಂಡ ಕೆಲವೇ ವರ್ಷಗಲ್ಲಿ ಎರಡನೇ ಸ್ಥಾನದಲ್ಲಿ ರಾರಾಜಿಸುತ್ತಿರುತ್ತದೆ. ಕಳೆಗುಂದುತಿದ್ದ ತಂಡಕ್ಕೆ ಮರುಜೀವ ಬರುತ್ತದೆ.

ಮುಂದೆ ಗ್ರೆಗ್ ಚಾಪೆಲ್ ನಂತಹ ಸಿಡುಕು ಮೋರೆಯ ವ್ಯಕ್ತಿಯಿಂದಾಗಿ ಮತ್ತೊಮ್ಮೆ ಅಲ್ಲೊಲ್ಲ ಕಲ್ಲೊಲ್ಲವಾದ ತಂಡ ನಾಯಕನನ್ನೇ ಹೊರಹಾಕುವ ಸಂಧರ್ಭವೊಂದು ಎದುರಾಗುತ್ತದೆ. ಗಂಗೂಲಿ ಅಂದು ನಾಯಕತ್ವದಿಂದಷ್ಟೇ ಅಲ್ಲದೆ ತಂಡದಿಂದಲೂ ಹೊರಗುಳಿಯಬೇಕಾಗುತ್ತದೆ. ಆದರೇನಂತೆ ಕೈಕಟ್ಟಿ ಕೂರುವ ಜಾಯಮಾನ ಗಂಗೂಲಿಯದಾಗಿರಲಿಲ್ಲ. ದೇಶೀ ರಣಜಿ ಪಂದ್ಯಗಳಲ್ಲಿ ಬೆವರು ಸುರಿಸಿ ಮತ್ತೊಮ್ಮೆ ತಂಡಕ್ಕೆ ಪುನರಾಯ್ಕೆಯಾಗುತ್ತಾನೆ. ಈ ಕಮ್ ಬ್ಯಾಕ್ ಅಂದಿನ ಅದೆಷ್ಟು ಯುವಪೀಳಿಗೆಗೆ ಸ್ಫೂರ್ತಿದಾಯಕವಾಯಿತೆಂದು ಹೇಳಲಾಗದು. ಮುಂದೆ 2007 ರ ವಿಶ್ವಕಪ್ ನ ಸೋಲಿನಿಂದ ದ್ರಾವಿಡ್ ನಾಯಕತ್ವದಿಂದ ಕೆಳಗಿಳಿದಾಗ ಎಲ್ಲರ ದೃಷ್ಟಿ ಮತ್ತೊಮ್ಮೆ ಗಂಗೂಲಿಯ ಮೇಲೆ ಇದ್ದಿರುತ್ತದೆ. ಆದರೆ ಆಯ್ಕೆ ಸಮಿತಿ ಒಲವು ತೋರಿಸಿದ್ದು ಮಾತ್ರ ಮಹೇಂದ್ರ ಸಿಂಗ್ ಧೋನಿ ಎಂಬ ಮ್ಯಾಚ್ ವಿನ್ನರ್ ನ ಮೇಲೆ. ಆತ ತನ್ನ ಆಯ್ಕೆಯನ್ನು ಅದೆಷ್ಟರ ಮಟ್ಟಿಗೆ ಸಮರ್ಥಿಸಿಕೊಂಡ ಎಂದರೆ ಮುಂದೆ ಆತ ದೇಶವಷ್ಟೇ ಅಲ್ಲದೆ ಇಡೀ ವಿಶ್ವದಲ್ಲೇ ಮಹೋನ್ನತ ನಾಯಕನೆನ್ನುವ ಬಿರುದಿಗೆ ಬಾಜನನಾಗುತ್ತಾನೆ. ಟೆಸ್ಟ್ ಹಾಗು ಏಕದಿನ ಪಂದ್ಯದಲ್ಲಿ ತಂಡದ ಅಗ್ರಸ್ಥಾನ, ಟೀ 20 ಹಾಗು ಏಕದಿನ ವಿಶ್ವಕಪ್ , ಚಾಂಪಿಯನ್ಸ್ ಟ್ರೋಫಿ ಗಳ ಗೆಲುವುಗಳಲ್ಲದೆ ಇನ್ನೂ ಹಲವಾರು ಸರಣಿಗಳನ್ನು ಜಯಿಸತೊಡಗಿದ. ಒಂದು ಕಾಲಕ್ಕೆ ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಎಂದರೆ ಹೇಗೆ ಇತರ ತಂಡಗಳು ನಡುಗುತ್ತಿದ್ದವೋ ಅಂತೆಯೇ ಭಾರತವನ್ನು ಧೋನಿ ಸಜ್ಜುಗೊಳಿಸಿದ. ಅಗ್ರೆಸಿವ್ ಎಂಬ ಪದಕ್ಕೆ ಅಪವಾದ ಏನೋ ಎಂಬಂತೆ ದೋನಿ ಆಡುವುದು ಎಲ್ಲರಿಗು ತಿಳಿದಿರುವ ವಿಷಯವೇ. ತಾಳ್ಮೆ ಎಂಬ ಅಂಶ ಅದೆಷ್ಟರ ಮಟ್ಟಿಗೆ ನಾಯಕನಾದವನಿಗೆ ಪ್ರಾಮುಖ್ಯವಾದುದು ಎಂಬುದು ಧೋನಿಯನ್ನು ನೋಡಿಯೇ ಕಲಿಯಬೇಕೇನೋ. ಇಂದು ಟ್ವಿಟ್ಟರ್, ಫೇಸ್ಬುಕ್ ಗಳ ಸಂತೆಯಲ್ಲಿ ತಮ್ಮ ಸ್ಥಾನ ಮಾನದ ಒಂದಿಷ್ಟೂ ಘನತೆ, ಜವಾಬ್ದಾರಿಯನ್ನು ಅರಿಯದ ಅದೆಷ್ಟೋ ಆಟಗಾರರಿಗೆ ಧೋನಿ ಒಬ್ಬ ಮಾದರಿ ಪುರುಷ. ನಯ ನಾಜೂಕು, ಮಾತಿನ ಮೇಲೆ ಹಿಡಿತ, ಎಷ್ಟು ಬೇಕೋ ಅಷ್ಟೇ ಹೇಳುವ /ಕೇಳುವ ಪ್ರಭುದ್ದತೆ ಇವೆಲ್ಲವೂ ಧೋನಿಯನ್ನು ಒಬ್ಬ ವಿಭಿನ್ನ ಬಗೆಯ ನಾಯಕನಾಗಿ ಮಾಡಿವೆ.

ಹೀಗೆ ದೇಶದ ಅತಿ ಯಶಸ್ವೀ ನಾಯಕನಾಗಿದ್ದ ಧೋನಿಯ ದಾಖಲೆಯನ್ನು ಮುರಿಯಲು ಸದ್ಯಕಂತೂ ಯಾರಿಂದಲೂ ಸಾಧ್ಯವಿಲ್ಲ ಎನ್ನುವಾಗಲೇ ಬೆಂಕಿಯ ಚೆಂಡಿನಂತೆ ಸಿಡಿದು ಹೊರಬಂದ, ಬ್ಯಾಟಿಂಗ್ ನಲ್ಲಿ ಸಚಿನ್ ನ ಸಾಧನೆಯನ್ನೇ ಮುರಿಯಬಲ್ಲ ಕ್ಷಮತೆಯ ಈತ ಯುವ ಪೀಳಿಗೆಯ ಹಾಟ್ ಫಾವೊರೇಟ್. ಮೂರು ಬಗೆಯ ಆವೃತ್ತಿಗಳಲ್ಲೂ 50 ರ ಮೇಲಿನ ಬ್ಯಾಟಿಂಗ್ ಸರಾಸರಿಯನ್ನು ಹೊಂದಿ, ನಾಯಕನಾಗಿ ಪ್ರಚಂಡ ಯಶಸ್ಸನ್ನು ಗಳಿಸಿರುವ ವಿರಾಟ್ ಕೊಹ್ಲಿ ಆಧುನಿಕ ಕ್ರಿಕೆಟ್ ಗೆ ಹೇಳಿಮಾಡಿಸಿರುವ ಆಟಗಾರ. ಅಂದು ಕೇವಲ ಡ್ರಾ ಮಾಡುವುದಕಷ್ಟೆ ಆಡುತ್ತಿದ್ದ ಭಾರತ ತಂಡ ಇಂದು ಗೆಲ್ಲುವುದಕಷ್ಟೇ ಮಾತ್ರವೇನೋ ಎಂಬಂತೆ ಆಡುತ್ತಿದೆ. ಪ್ರತಿ ಸರಣಿಯನ್ನು ವೈಟ್ವಾಷ್ ಮಾಡಿಯೇ ಗೆಲ್ಲಬೇಕು ಏನೋ ಎಂಬಂತೆ ಆಡುವ ಕೊಹ್ಲಿ ಹಾಗು ತಂಡ ಇನ್ನೂ ಹಲವಾರು ಕಠಿಣ ಪರೀಕ್ಷೆಗಳಿಗೆ ತನ್ನನ್ನು ಒಡ್ಡಿಕೊಳ್ಳಬೇಕಿದೆ. ಸ್ವದೇಶೀ ನೆಲದಲ್ಲಿ ತಂಡದ ಸಾಧನೆ ಅದೆಷ್ಟೇ ಉತ್ತಮವಾಗಿರಬಹುದು ಆದರೆ ವಿದೇಶಿ ನೆಲದಲ್ಲೂ ಅದೇ ಬಗೆಗಿನ ಸಾಧನೆಯನ್ನು ಮಾಡಬೇಕಿದೆ. ಪ್ರಸ್ತುತ ತಂಡ ಹಾಗು ನಾಯಕನನ್ನು ನೋಡಿದರೆ ಅಂತಹ ಸಾವಾಲುಗಳು ನೀರು ಕುಡಿದಷ್ಟೇ ಸುಲಭವೆಂದೆನಿಸದಿರದು.


ಒಟ್ಟಿನಲ್ಲಿ ಅಂದು ಜೀವನ ನಿರ್ವಹಣೆಗಷ್ಟೇ ಆಡಲು ಶುರುವಾದ ಆಟ ಪ್ರತಿಷ್ಠೆ, ಹೆಸರು, ಸಾಧನೆ ಹಾಗು ಪ್ರಭುತ್ವವನ್ನು ಸಾಧಿಸಲು ಇಂದು ಆಡಲಾಗುತ್ತಿದೆ. ಇಂದು ಇಡೀ ವಿಶ್ವವನ್ನೇ ಬಗ್ಗುಬಡಿಯಬಲ್ಲ ಭಾರತ ತಂಡವೊಂದು ನಮ್ಮ ಮುಂದಿಂದೆ ಎಂದರೆ ಅದಕ್ಕೆ ಇವರಿಷ್ಟೇ ಅಲ್ಲದೆ ಇನ್ನೂ ಹಲವಾರು ಆಟಗಾರರ, ನಾಯಕರ ಕೊಡುಗೆಯೂ ಮಹತ್ವವಾದುದು. ಸ್ವಾತಂತ್ರ್ಯ ಪೂರ್ವ ಆಂಗ್ಲರ ಸೊಕ್ಕನ್ನು ಬಗ್ಗು ಬಡಿಯುತ್ತಿದ್ದ, ದೇಶದ ಮೊದಲ ಟೆಸ್ಟ್ ಕ್ಯಾಪ್ಟನ್ CK ನಾಯ್ಡು ನಂತರದ ಸುನಿಲ್ ಗವಾಸ್ಕರ್, ಬಿಷನ್ ಸಿಂಗ್ ಬೇಡಿ, ಮೊಹಮ್ಮೆದ್ ಅಝರುದ್ದೀನ್ ನಂತಹ ಇನ್ನೂ ಹಲವಾರು ನಾಯಕರು, ಸಚಿನ್ , ಸೆಹ್ವಾಗ್, ಗಂಭೀರ್, ದ್ರಾವಿಡ್, ಲಕ್ಷ್ಮಣ್, ಕುಂಬ್ಳೆ, ಜಾವಗಲ್ ಶ್ರೀನಾಥ್, ಹರ್ಭಜನ್, ಯುವರಾಜ್ ರಂತಹ ಆಟಗಾರರ ನೆರವಿನಿಂದ ಇಂದು ಕ್ರಿಕೆಟ್ ಎಂಬುದು ದೇಶದ ಹೆಮ್ಮೆಯ ಕ್ರೀಡೆಯಾಗಿದೆ. ಆದರೆ ಇದೇ ಯಶಸ್ಸನ್ನು ಮುಂದೆ ಅದೆಷ್ಟು ವರ್ಷಗಳ ಕಾಲ ತಂಡ ಮುಂದುವರೆಸಿಕೊಂಡು ಹೋಗುವುದೋ ಎಂಬುದನ್ನು ಮಾತ್ರ ಕಾದು ನೋಡಬೇಕು.

Friday, December 22, 2017

ಕೊಳಕು ಪ್ಯಾಂಟಿನ ಹರಿದ ನೋಟು ...


ಅದೊಂದು ದೊಡ್ಡ ವೇದಿಕೆ. ವ್ಯಕ್ತಿಮಹನೀಯನೊಬ್ಬ ಕಿಕ್ಕಿರಿದು ನೆರೆದಿದ್ದ ಜನಸ್ತೋಮದ ಮುಂದೆ ಕಿವಿತಮಟೆಯೇ ಉದುರುವಂತೆ ಅರಚುತಿದ್ದ. ಏಳಿಗೆ ಎಂದರೆ ತಮ್ಮೆಲ್ಲ ಕೆಲಸಕಾರ್ಯಗಳನ್ನು ಬಿಟ್ಟು ಇಂತಹ ಬಿಟ್ಟಿ ಭಾಷಣವನ್ನು ಕೇಳುವುದು ಮಾತ್ರವೆಂದೇ ಅಂದುಕೊಂಡಿದ್ದ ಸಾವಿರಾರು ಜನ ಆತನ ಒಂದೊಂದು ಮಾತಿಗೂ ‘ಓ…’ ಎನ್ನುತ್ತಾ, ಶಿಳ್ಳೆಯೊಡೆಯುತ್ತ, ಬೊಬ್ಬೆಯಾಕುತ್ತಾ ಕುಣಿದಾಡುತಿದ್ದರು. ನೆರೆದಿದ್ದ ಜನಸ್ತೋಮದಲ್ಲಿ ಅಪ್ಪನೂ ಒಬ್ಬನಾಗಿರುವಾಗ ಮೆನೆಯಲ್ಲಿನ ಮಕ್ಕಳು ಪೋಲಿ ಬೀಳುವ ಮೊದಲ ದಿನಕ್ಕೆ ನಾಂದಿಯನ್ನು ಹಾಡಿದ್ದರು. ತನ್ನ ಗೂಡು ಪೆಟ್ಟಿಗೆಯ ಡಬ್ಬದಿಂದ ಬೀಡಿಯ ಕಟ್ಟು, ಬೆಂಕಿಯಪೊಟ್ಟಣವನ್ನು ಯಾವುದೇ ಭಾವಗಳಿಲ್ಲದೆ ಮಕ್ಕಳಿಗೆ ಕೊಟ್ಟ ಗೂಡಂಗಡಿಯ ತಾತ ಚಡ್ಡಿ ಹಾಕಿರುವ ಅವುಗಳಿಂದ ಪಡೆದ ಹರಿದ ಐವತ್ತು ರೂಪಾಯಿಗಳಿಗೆ ಚಿಲ್ಲರೆಯನ್ನು ಹಿಂದುರಿಗಿಸುವ ಮುನ್ನತಪ್ಪು ಲೆಕ್ಕವನ್ನೇನಾದರೂ ಹೇಳಿ ಒಂದೆರೆಡು ರೂಪಾಯಿ ಲಪಟಾಯಿಸುವುದರ ಬಗ್ಗೆ ಆಲೋಚಿಸುತ್ತಿದ್ದನೇ ವಿನ್ಹಾ ಎಳೆಯ ವಯಸ್ಸಿಗೆ ಬೀಡಿಯ ಮೋಹಕ್ಕೆ ಬಿದ್ದಿರುವ ಆ ಕುಡಿಗಳಿಗೆ ಗದರಿಸುವ ಗುರುತರ ಕಾರ್ಯವನ್ನು ನಿಭಾಯಿಸಲಿಲ್ಲ. ಬೀಡಿಯ ನಂತರ ಕೊನೆಗೊಂದು ಸಿಗರೇಟಿಗೂ ಬೇಕಿದ್ದ ಹಣವಷ್ಟೇನ್ನೇ ಅಪ್ಪನ ಪ್ಯಾಂಟಿನ ಜೇಬಿನಿಂದ ಎಗರಿಸಿಕೊಂಡು ಬಂದಿದ್ದವರು ಅರ್ವತ್ತು ವಯಸ್ಸಿನ ತಾತಪ್ಪನ ಕುತಂತ್ರವನ್ನು ಸಫಲವಾಗಲು ಬಿಡುತ್ತಾರೆಯೇ?!

ಅಷ್ಟರಲ್ಲಾಗಲೇ ಮನೆಯ ದೇವರ ಕೋಣೆಯಿಂದ ಬಂದ ಘಂಟೆಯ ಸದ್ದು ಮನೆಯನ್ನೇ ಒಂದು ಕ್ಷಣಕ್ಕೆ ಅದುರಿಸಿದಂತಿದ್ದಿತು. ಲಕ್ಷಿ ಪಟದ ಮುಂದೆ ಮಗನ ವಿದ್ಯಾಭ್ಯಾಸ ಚೆನ್ನಾಗಿ ಆಗಲಿ ಎಂದು ಜೋರಾಗೆ ಹೇಳಿಕೊಳ್ಳುತ್ತಿದ್ದ ಮನೆಯ ಸೊಸೆ ಅರ್ಧ ಘಂಟೆಯ ನಂತರ ಪಕ್ಕದ ಮೆನೆಯಾಕೆಯೊಟ್ಟಿಗೆ ಮನೆಗೆ ಅಂಟಿಕೊಂಡಿದ್ದ ಗೂಡಂಗಡಿಯ ಮುಂದೆ ಕೂತಿದ್ದ ಮಾವನಿಗಾಗಲಿ, ಅಲ್ಲೆಲ್ಲೋ ಭಾಷಣದ ಪ್ರವಾಹವನ್ನೇ ಹರಿಸುತ್ತಿರುವ ತನ್ನ ಪತಿರಾಯನಿಗಾಗಲಿ ತಿಳಿಯದಂತೆ ಹೋಗಿ ತನ್ನ ಗಲ್ಲಿಯ ಹೆಂಗಸರೆಲ್ಲರ ಹೊಟ್ಟೆ ಉರಿಯುವಂತೆ ಕಾಣುವ ಹೊಸ ಸೀರೆಯೊಂದನ್ನು ತಂದು, ಹುಟ್ಟು ಬೀಗಬೇಕೆಂದು ಅವಣಿಸುತ್ತಿದ್ದಳು. ತಾತ ಅತ್ತ ಕಡೆ ಓದಂತೆಯೇ ಮೊಬೈಲ್ ಫೋನಿಗೆ ಕೈ ಹಾಕಿದ ಮೊಮ್ಮಗ ನೀಲಿ ಚಿತ್ರಗಳ ವೆಬ್ಸೈಟ್ ಒಂದನ್ನು ತೆರೆದು ಕಣ್ಣರಳಿಸಿ ನೋಡತೊಡಗಿದ.

ವಚನದಲ್ಲಿ ಮಾತ್ರ ಅಮ್ಮ ಅಕ್ಕ ಎನ್ನುತ್ತಾ ಒಳಗಣ್ಣಿನಲ್ಲಿ ಬೇರೊಂದು ನೀಚ ಕಲ್ಪನೆಯ ಲೋಕವನ್ನೇ ಸೃಷ್ಟಿಸಿಕೊಂಡು ಪಕ್ಕದ ರಾಜ್ಯದ ಹಳ್ಳಿಯೊಂದರಲ್ಲಿ ಸಿಗುವ ಮೂರು ಕಾಸಿನ ಉತ್ತಮ ಸೀರೆಗಳನ್ನು, ಕೊಂಡ ಕಾಸಿಗಿಂತ ಹತ್ತು ಪಟ್ಟು ಹೆಚ್ಚಿನ ಬೆಲೆಯಲ್ಲಿ ಮಾರುತ್ತಾ ಜೀವನ ಸಾಗಿಸುತ್ತಿದ್ದ ವ್ಯಾಪಾರೀ. ಹೆಂಗಸರಿಬ್ಬರು ಬಂದು ವ್ಯಾಪಾರಿಯ ಬಳಿ ಸೀರೆಯೊಂದನ್ನು ಕೊಂಡು ನೀಡಿದ್ದ ಸಾವಿರ ರೂಪಾಯಿಯ ಮೇಲೆ ಮಾವನ ಗಲ್ಲದ ಡಬ್ಬಿಯಿಂದ ತಂದಿದ್ದ ಹರಿದ ಐವತ್ತು ರೂಪಾಯಿಗಳನ್ನು ಅಂಗಡಿಯವನಿಗೆ ನೀಡಿ ವ್ಯಾಪಾರವನ್ನು ಅಂತಿಮಗೊಳಿಸಿದ್ದರು. ಊರೆಲ್ಲ ಅಲೆದರೂ ಒಂದು ರೂಪಾಯಿ ಸಿಗದ ಇಂದಿನ ಕಾಲದಲ್ಲಿ ಭಿಕ್ಷುಕನೊಬ್ಬನು ಕೈಚಾಚಿ ಅಂಗಡಿಯವನ್ನಿಲ್ಲಿಗೆ ಬಂದಾಗ ಗಲ್ಲದೊಳಗೆ ಕೈ ಹಾಕಿ, ಚಿಲ್ಲರೆ ಕಾಣದೆ, ಹೆಂಗಸರಿಬ್ಬರು ನೀಡಿದ್ದ ಹರಿದ ಐವತ್ತು ರೂಪಾಯಿಯನ್ನು ಈತ ಪರೀಕ್ಷಿಸುವ ಮೊದಲೇ ಆಕೆಯರಿಬ್ಬರು ಜಾಗ ಕಿತ್ತಿದ್ದರಿಂದ ಕಷ್ಟಪಟ್ಟು ಕನಿಕರವನ್ನು ಹೊತ್ತಿಸಿಕೊಂಡು ಹರಿದ ನೋಟನ್ನು ಭಿಕ್ಷುಕನ ಕೈಗಿರಿಸಿದ ವ್ಯಾಪಾರೀ.

ಗೋಡೆಗೆ ತಗುಲಿಹಾಕಿದ್ದ ಸರ್ವದೇವರುಗಳ ಪಟಗಳಿಗೆ ಕೈಯನ್ನು ಮುಗಿದು, ಊರು ಮುಳುಗಿಹೋದರೂ ಸರಿಯೇ ತನ್ನ ಗಲ್ಲಪೆಟ್ಟಿಗೆಯೊಂದು ತುಂಬಿದರೆ ಸಾಕೆಂದು ಬೇಡಿದ ಬಾರ್ ಅಂಗಡಿಯ ಮಾಲೀಕ ಬೆಳ್ಳಂಬೆಳೆಗೆ ಬಾರಿನ ಬಾಗಿಲನ್ನು ತೆಗೆಯುವಾಗಲೇ ಮುಂಜಾವು ಎಲ್ಲಾ ಕಾರ್ಯಗಳನ್ನು ಬದಿಗಿಟ್ಟು ದೇವಾಲಯಕ್ಕೆ ಹೋಗುವ ಶ್ರದ್ದಾಭರಿತ ಕಾರ್ಯದಂತೆ ಅಪ್ಪ ಹಾಗು ಇತರ ಕುಡುಕ ಪ್ರಜೆಗಳು/ ಕಾರ್ಯಕರ್ತರು ಅತ್ತ ಭಾಷಣದ ಮಧ್ಯೆಯೇ ಎದ್ದು ಇತ್ತಕಡೆ ಬಂದು ನಿಂತಿದ್ದರು. ಖಾಲಿ ಹೊಟ್ಟೆಗೆ ಗಟಗಟನೆ ಮದ್ಯವನ್ನು ಹೀರಿ, ಕಿಸೆಯ ದುಡ್ಡೆಲ್ಲ ಖಾಲಿಯಾಗಿ ಒಬ್ಬರ ಮುಖವನ್ನು ಮತ್ತೊಬ್ಬರು ಗಲಿಬಿಲಿಯಾಗಿ ನೋಡುತ್ತಾ ಕೊನೆಗೆ ಒಂತಿಷ್ಟು ಸಾಲದ ರೂಪದಲ್ಲೂ ಬಂದಿದ್ದನು ‘ಸಮಾ’ ಹೀರಿ ಭಾಷಣ ನೆಡೆಯುತ್ತಿದ್ದ ಸ್ಥಳಕ್ಕೆ ಮನಸ್ಸಿರದ ಮನಸ್ಸಲ್ಲಿ ಹೆಜ್ಜೆಯಿಟ್ಟರು. ಅತ್ತ ಕಡೆಯಿಂದ ಸಾಯುವವನಿಗೆ ಸ್ವರ್ಗ ಸಿಕ್ಕಂತೆ ಐವತ್ತು ರೂಪಾಯಿಯ ನೋಟೊಂದನ್ನು ಪಡೆದು ಮೊದಲು ಎರಡು ದಿನದಿಂದ ನೀರನ್ನು ಬಿಟ್ಟು ಬೇರೇನೂ ಕಾಣದ ಹೊಟ್ಟೆಗೆ ತಿಂಡಿಯೊಂದಿಷ್ಟನ್ನು ತಿನ್ನಲು ಧಾವಿಸುತ್ತಿದ್ದ ಹರಿದ ಬಟ್ಟೆಯ ಪ್ರಜೆಯನ್ನು ಸುತ್ತುವರೆದವು ಕುಡಿದ ಮತ್ತಿನಲ್ಲಿದ್ದ ಪ್ರಜೆಗಳು. 'ಅಸಹಾಯಕರಿಗೆ ಸಹಾಯಕರಾಗಿ, ಬಡವರಿಗೆ ಆಸರೆಯಾಗಿ, ಹಸಿದವನಿಗೆ ದಾನಿಯಾಗಿ...' ಎಂಬ ನಾಯಕನ ಭಾಷಣದ ಚೀರಾಟ ಗುಂಪಿನ ಪ್ರತಿ ಕಿವಿಗಳಿಗೂ ಬೀಳುತಿತ್ತು. ನತ್ತಿಗೆ ಏರಿದ್ದ ಹೆಂಡದ ಮತ್ತೊ ಅಥವ ಗುಣಸಹಜವಾಗಿದ್ದ ಒರಟು ತನವೋ ಅಥವ ಮಾನವೀಯತೆಯನ್ನು ಮರೆತ ಮನದ ಕ್ರೌರ್ಯವೊ ಏನೋ ಹಣವನ್ನು ಕೊಡಲೊಪ್ಪದ ಭಿಕ್ಷುಕನನ್ನು ಪ್ರಾಣಿಗಳಿಗೆ ಥಳಿಸಿದಂತೆ ಥಳಿಸಿ ಜೀವ ಹೋದರೂ ಬಿಗಿಮುಷ್ಟಿಯಲ್ಲಿ ಮುದುರಿ ಹಿಡಿದಿದ್ದ ಐವತ್ತು ರೂಪಾಯಿ ನೋಟನ್ನು ಪಡೆಯಲು ಹರ ಸಾಹಸ ಮಾಡಿ ಕೊನೆಗೆ ಕಲ್ಲೊಂದರಿಂದ ಆ ನೊಂದ ಕೈ ಗಳ ಮೇಲೆ ಜಜ್ಜಿ, ಮುದುಡಿ ಒದ್ದೆಯಾದ ಹರಿದ ನೋಟನ್ನು ಕಸಿದುಕೊಂಡು ಎಣ್ಣೆಯಂಗಡಿಯ ಕಡೆಗೆ ಧಾವಿಸಿತು ಅಮಲು ಕಾರ್ಯಕರ್ತರ ದಂಡು.

ಹಳಸು, ಹುಳುಕು, ಬೈಗುಳ, ನಿಷ್ಠುರ, ಶಾಪ, ಮತ್ತೊಂದು ಮಗದೊಂದು ಯಾವುದೇ ಆದರೂ ಸರಿಯೇ ಬಾಲ ಅಲ್ಲಾಡಿಸಿಕೊಂಡು ಕಂಡ ಕಂಡವರ ಹಿಂದೆಲ್ಲ 'ನೀನೆ ನನ್ನ ಸರ್ವಸ್ವ' ಎಂಬಂತೆ ಹೋಗುತ್ತಿದ್ದ ಬೀದಿ ನಾಯಿಯ ಮರಿಯೊಂದು ಹೆಂಡಗುಡುಕರ ಗುಂಪೊಂದು ವ್ಯಕ್ತಿಯೊಬ್ಬನನ್ನು ನೆಲದ ಮೇಲೆ ಹೊಡೆದುರುಳಿಸಿ ಎತ್ತಲೋ ಓಟ ಕಿತ್ತ ಎಡೆಗೆ ತಾನೂ ಓಡಲು ಶುರುವಿಟ್ಟು, ಗುಂಪಿನಲ್ಲೊಬ್ಬನ ದೈತ್ಯ ಕಾಲಿನಿಂದ ಕರುಳೇ ಕಕ್ಕಿ ಹೊರಬರುವಂತೆ ಹೊಟ್ಟೆಯ ಮೇಲೆ ಗುದ್ದನ್ನು ತಿಂದು ಚೆಂಡಿನಂತೆ ಹಾರಿ, ಬಿದ್ದು ಒರಳಾಡುತಿದ್ದ ಭಿಕ್ಷುಕನ ಬಳಿಗೆ ಬಿದ್ದಿತು. ನಾಯಿಯ ಆರ್ತನಾದ, ಭಿಕ್ಷುಕನ ರೋಧನೆ ಮುಗಿಲು ಮುಟ್ಟಿತು. ಬೆಳ್ಳಂಬೆಳೆಗೆ ರಾಶಿ ರಾಶಿ ಪುಸ್ತಕದ ಓರೆಯನ್ನು ಎಳೆಯ ಬೆನ್ನುಗಳ ಮೇಲೆ ಹೊತ್ತು ಸ್ಕೂಲಿಗೆ ಹೊರಟಿದ್ದ ಎಂಟು ವರ್ಷದ ಪುಟ್ಟಿ ವ್ಯಕ್ತಿಯೊಬ್ಬ ಬಿದ್ದು ಒರಳಾಡುತಿದ್ದದನ್ನು ಕಂಡು ಅವನ ಬಳಿಗೆ ಹೋಗಿ ಆತನ ನರಳುವಿಕೆಯಲ್ಲಿಯೇ ಹಸಿದ ಆರ್ತನಾದವನ್ನು ಅರಿತು (!) ಮನೆಯಿಂದ ಅಮ್ಮ ಕಟ್ಟಿ ಕೊಟ್ಟಿದ್ದ ಎರಡು ಇಡ್ಲಿಯನ್ನು ಪಕ್ಕದ ಅಂಗಡಿಯಿಂದ ಪಡೆದ ಒಂದಿಷ್ಟು ಪೇಪರ್ ಚೂರಿನ ಮೇಲೆ ಸುರಿದು ಆತನ ಮುಂದಿಟ್ಟಳು. ಒಂದಿಚು ಪೇಪರ್ ಅನ್ನೂ ಬಿಡದೆ ತಿನ್ನುವಷ್ಟು ಹಸಿವೆಯಲ್ಲಿಯೂ ಆತ ಒಂದು ಇಡ್ಲಿಯನ್ನು ಎದ್ದು ಸರಿಯಾಗಿ ನಿಲ್ಲಲೂ ಶಕ್ತನಾಗಿರದ ನಾಯಿ ಮರಿಯ ಮುಂದೆ ಇಟ್ಟನು. ತನ್ನ ಮುದ್ದು ಪಿಳಿ ಪಿಳಿ ಕಣ್ಣುಗಳಿಂದ ಅದು ಬಿಕ್ಷುಕನ ಮೇಲೆ ಕರುಣೆಯ ನೋಟವನ್ನು ಬೀರಿತ್ತು.

ಅಂಗಡಿಯ ಮುಂದೆ ಮತ್ತೊಂದು ಸುತ್ತು ಬಂದ ಗುಂಪು ಹರಿದ ಐವತ್ತು ರೂಪಾಯಿಯ ನೋಟನ್ನು ನೀಡಿ ಬಾಟಲಿಯೊಂದನ್ನು ಕೂಗಿ ಪಡೆದು ಗಟ ಗಟನೆ 'ಎತ್ತ'ತೊಡಗಿತು. ಅಂಗಡಿಯವ ನೋಟನ್ನು ಗಲ್ಲದ ಪೆಟ್ಟಿಗೆಯೊಳಗೆ ಹಾಕುವ ಮುನ್ನ ಅದರ ಹರಿದ ಆಕಾರವನ್ನು ಕಂಡು ಕುಪಿತನಾಗಿ ಗುಂಪಿನ ವಿರುದ್ಧ ಧ್ವನಿ ಎತ್ತುವ ಮೊದಲೇ ಹಫ್ತಾ ವಸೂಲಿಯ ಖದೀಮರು ಬಂದು ಆತನ ಕೈಲಿದ್ದ ನೋಟಿನೊಟ್ಟಿಗೆ ಇನ್ನೂ ಮೂರ್ನಾಲ್ಕು ನೋಟನ್ನು ಪಡೆದು ಜಾಗ ಕಿತ್ತರು.

ಒಳಗಡೆಯಿಂದ ಪುಟ್ಟಿ 'ಅಪ್ಪಾ, ಷೋ ಕಟ್ಟು' ಎಂದು ಕರೆದಿದ್ದರಿಂದ ಕಾರ್ಯಕರ್ತ ಕುಡುಕರ ಗುಂಪಿಗೆ ಬೈಯುವ ಮೊದಲೇ ಅಂಗಡಿಯವನಿಗೆ ಮನೆಯೊಳಗೇ ಹೋಗಬೇಕಾಗಿ ಬಂತು. ಅಷ್ಟರಲ್ಲಾಗಲೇ ಮನೆಯಾಕೆ ಮಗಳ ಶೂ ಅನ್ನು ಕಟ್ಟಿ ಇಡ್ಲಿಗೆ ಚಟ್ನಿ ಹಾಕಿದ್ದ ಡಬ್ಬವನ್ನು ಊಟದ ಡಬ್ಬಿಗೆ ಹಾಕಿ 'ಪೂರ್ತಿ ತಿಂದು ಬಾ' ಎಂದು ಕೂಗಿಕೊಂಡಳು. ಹಫ್ತಾ ವಸೂಲಿಯ ಗುಂಪು ಊರಿನ ಹತ್ತಿಪ್ಪತ್ತು ಅಂಗಡಿ ಗಳಿಂದ ಬಂದ ಹಣವನ್ನು ಭಾಷಣ ಬಿಗಿಯುತ್ತಿದ್ದ 'ಅಣ್ಣ'ನ ಹಿಂದೆ ಯಾರಿಗೂ ಕಾಣದಂತೆ ಆತನ ಕೈಯ ಮೇಲಿತ್ತವು. 'ಅಣ್ಣ' ಕೊನೆಗೂ ಭಾಷಣ ಮುಗಿಸಿ ಸ್ಟೇಜಿನಿಂದ ಕೆಳಗಿಳಿದು ಕಾರ್ಯಕರ್ತರೊಬ್ಬರ ಬಳಿ ಬಳಿಗೂ ಹೋಗಿ ಕೈ ಕುಲುಕುವ ನೆಪದಲ್ಲಿ ಒಂದೊಂದೇ ನೋಟನ್ನು ಅವರ ಕೈಮೇಲೆ ಇರಿಸತೊಡಗಿದ. ಖುಷಿಯನ್ನು ತಾಳಲಾರದೆ ಕುಡುಕ ಗುಂಪಿನ ಕೆಲವರಂತೂ 'ಅಣ್ಣ' ನ ಎದುರು ನಮಸ್ಕರಿಸುತ್ತಾ ಸಾಷ್ಟಾಂಗ ಬಿದ್ದರು, ಅಪ್ಪ ನೊಬ್ಬನ್ನನ್ನು ಬಿಟ್ಟು! ಬೇಸರ, ಆಶ್ಚರ್ಯ ಹಾಗು ಗೊಂದಲ ಭಾವಗಳು ಆತನ ಮನಸ್ಸನು ಆವರಿಸ್ದದವು. ಏಕೆಂದರೆ ಮನೆಯ ಗೋಡೆಗೆ ನೇತಾಕಿದ್ದ ಆತನ ಕೊಳಕು ಪ್ಯಾಂಟಿನ ಜೇಬಿನ ತಳದಲ್ಲಿ ವರ್ಷಗಳಿಂದ ಕೊಳೆಯುತಿದ್ದ ಹರಿದ ಐವತ್ತು ರೂಪಾಯಿ ನೋಟು ಇಲ್ಲಿ ಆತನ ಕೈಯ ಮೇಲೆ ಇರಿಸಲ್ಪಟಿತ್ತು!!

Saturday, December 16, 2017

ಬದಲಾವಣೆಯ ಹಾದಿಯಲ್ಲಿ ...

ಇದು ಸ್ಥಿತ್ಯಂತರದ ಕಾಲ. ಪ್ರಸ್ತುತ ಕಾಲಘಟ್ಟದ ಮಾನವನೊಬ್ಬನೇ ಮಾತ್ರ ಈ ಬಹುಮುಖ್ಯವಾದ ಘಳಿಗೆಗೆ ಇತಿಹಾಸದಲ್ಲಿ ಉಳಿಯುವ ಏಕಮಾತ್ರ ಸಾಕ್ಷಿಯ ಪ್ರತೀಕ. ಈತ ಪೋಸ್ಟ್ ಆಫೀಸಿನಿಂದ ಬರುವ ಪೋಸ್ಟ್ ಕಾರ್ಡಿಗೋಸ್ಕರ ತಿಂಗಳುಗಟ್ಟಲೆ ಕಾದಿರುವುದೂ ಉಂಟು, ಆಕಾಶದಿಂದ ಡ್ರೋನ್ ಗಳ ಮೂಲಕ ವಸ್ತುಗಳನ್ನು ನಿಮಿಷ ಮಾತ್ರದಲ್ಲಿ ಕ್ಯಾಚ್ ಇಡಿದಿರುವುದೂ ಉಂಟು! ತನ್ನದೇ ಪ್ರತಿಬಿಂಬವನ್ನು ಕಾಣಲು (ಫೋಟೋ) ವಾರಗಟ್ಟಲೆ ಕಾದು ಸಾವಿರಾರು ರೂಪಾಯಿಗಳನ್ನು ಸುರಿದಿರುವುದೂ ಉಂಟು, ಅಂಗೈಯಂಚಿನ ವಸ್ತುವೊದರಲ್ಲಿ (ಮೊಬೈಲ್) ಇಂತಹ ಲಕ್ಷಾಂತರ ಪ್ರತಿಬಿಂಬಗಳನ್ನು ಫ್ರೀ-ಆಫ್-ಕಾಸ್ಟ್ ನಲ್ಲಿ ಏಕಕಾಲಕ್ಕೆ ತೆಗೆದಿರುವುದೂ ಉಂಟು! ವರ್ಷಗಳ ಕಾಲ ಕಾಲು ಸವೆಸಿ ನೆಡೆದು ದಣಿದು ದೂರದ ಊರೊಂದನ್ನು ಸೇರಿರುವುದೂ ಉಂಟು, ಇಂದು ಅದೇ ಊರನ್ನು ಘಂಟೆಯೊಂದರಲ್ಲಿ ತಲುಪಿ ತೋರಿಸಿರುವುದೂ ಉಂಟು! ದುಡಿಯುವ ನೆಪದಲ್ಲಿ ಮೆನೆಬಿಡುವ ಅಪ್ಪ ವರ್ಷಾನುಗಟ್ಟಲೆ ಮನೆಯವರನ್ನು ಕಾಣದೆ ಪರಿತಪಿಸಿರುವುದೂ ಉಂಟು, ಇಂದು ದಿನದ ಇಪ್ಪನಾಲ್ಕೂ ಘಂಟೆಯೂ ಖಂಡಾಂತರ ದೂರದಿಂದ ಆತನ ಮೊಮ್ಮಕ್ಕಳೊಟ್ಟಿಗೆ ನೋಡುತ್ತಾ ನಲಿಯುತ್ತ ಮಾತಾಡಿರುವುದೂ ಉಂಟು! ಅದೆಷ್ಟೇ ಅರಚಾಡಿದರೂ ಗುಂಪುಗಳೆರಡನ್ನು ಬಡಿದಾಡಿಸಲಾಗದಿರುವುದೂ ಉಂಟು, ಒಂದು 'ಶೇರ್' ಎಂಬ ಭ್ರಮಲೋಕದ ಬಟನ್ ಅನ್ನು ಒತ್ತಿ ಕೋಮುಗಳಲ್ಲಿ ಬೆಂಕಿಯ ಜ್ವಾಲೆಯನ್ನು ಹೊತ್ತಿರಿಸಿರುವುದೂ ಉಂಟು!! ಒಟ್ಟಿನಲ್ಲಿ ಕಳೆದ ಇಪ್ಪತ್ತು ಮೂವತ್ತು ವರ್ಷಗಳ ಅವಧಿಯಲ್ಲಿ ಮಾನವ ಕಂಡಷ್ಟು ಬದಲಾವಣೆ ಇತಿಹಾಸದ ಯಾವೊಂದು ಕಾಲಘಟ್ಟದಲ್ಲೂ ಆತ ಕಂಡಿರಲು ಸಾಧ್ಯವಿಲ್ಲ. ಬೆಂಕಿಯ ಭಯದಲ್ಲೇ ಬದುಕುತ್ತಿದ್ದ ಆತ ಅದೇ ಬೆಂಕಿಯನ್ನು ತನ್ನ ಗುಲಾಮನಂತೆ ಮಾಡಿಕೊಳ್ಳಲು ಶತಮಾನಗಳ ಕಾಲ ಹೆಣಗಾಡಿದ ಆ ಕಾಲವೆಲ್ಲಿ, ಹೊಸದೊಂದು ಅನ್ವೇಷಣೆ ಜನಮಾನಸದ ರೀತಿ ನೀತಿಯನ್ನೇ ನಿಮಿಷಮಾತ್ರದಲ್ಲಿ ಬದಲಾಯಿಸುವ ಇಂದಿನ ಕಾಲವೆಲ್ಲಿ?! ಬದಲಾವಣೆಗಳೆಂಬುದು ಹೀಗೆ ಮಿಂಚಿನ ವೇಗದಲ್ಲಿ ಇಂದು ಆಗುವುದಾದರೆ ಪ್ರಸ್ತುತ ಜಾರಿಯಲ್ಲಿರುವ ಅದೆಷ್ಟೋ ವಸ್ತುಗಳು/ಟೆಕ್ನಾಲಜಿಗಳು ಸಹ ಕಣ್ಮರೆಯಾಗಿ ಆ ಜಾಗದಲ್ಲಿ ಮತ್ಯಾವುದೋ ವಸ್ತು/ಟೆಕ್ನಾಲಜಿಗಳು ಮುಂದೊಂದು ದಿನ ಬಂದು ಕೂರುವುದಂತೂ ಸುಳ್ಳಲ್ಲ. ಹೀಗೆ ಕೆಲಕಾಲದಿಂದ ನಮ್ಮ ಜೀವನದ ಸಂಗಾತಿಗಿಂತಲೂ ಹತ್ತಿರವಾಗಿದ್ದೂ ಇಂದು ಹೊಸತನದ ಭರದಲ್ಲಿ ನಶಿಸಿಹೋಗುತ್ತಿರುವ, ಕಾಲ ಸರಿದಂತೆ ಮುಂದೆಂದೂ ಬಾರದ/ಕಾಣದ ಕೆಲವು ವಸ್ತುಗಳನ್ನು ಇಲ್ಲಿ ಮೆಲುಕು ಹಾಕಲಾಗಿದೆ.

ಮುದ್ರಣ ಮಾಧ್ಯಮ :
ಆವೊಂದು ದಿನವಿತ್ತು. ಬೆಳಗೆದ್ದು ಆಟ, ಓಟ ಹಾಗು ಮತ್ತಿತರ ನಿತ್ಯಕರ್ಮಗಳನ್ನು ಮುಗಿಸಿ ರೆಡಿಯಾಗಿ ಮನೆಯ ಹಾಲಿಗೋ ಅಥವಾ ಬಾಗಿಲ ಮುಂದಿನ ಎಳೆಬಿಸಿಲ ಹೊಳಪಿಗೂ ಕುರ್ಚಿಯೊಂದನ್ನು ಎಳೆದು ತಂದು ಕೂತರೆ ಕೈಯಲ್ಲಿ ಎರಡು ವಸ್ತುಗಳು ಇದ್ದಿರಲೇಬೇಕಿದ್ದಿತು. ಒಂದು ಟೀ ಅಥವಾ ಕಾಫಿಯ ಲೋಟವರಾದರೆ ಇನ್ನೊಂದು ಚುರುಮುರು ಸದ್ದಿನೊಂದಿಗೆ ಜಗತ್ತಿನ ಮಿನಿ ದರ್ಶನವನ್ನು ಮಾಡಿಸುತ್ತಿದ್ದ ದಿನಪತ್ರಿಕೆ. ಕೆಲವರು ತಾಸುಗಳ ಕಾಲ ತಮ್ಮನ್ನು ತಾವು ದಿನಪತ್ರಿಕೆಯೊಳಗೆ ಮುಳುಗಿಸಿಕೊಂಡರೆ ಇನ್ನು ಕೆಲವರು ತಮ್ಮ ಮನೆಯಾಕೆಯ ಅರಚುವಿಕೆಗೋ, ಮಕ್ಕಳ ಉಪಟಳಕ್ಕೋ ಅಥವಾ ಮತ್ಯಾವುದೋ ದಿನದ ಜಂಜಾಟಗಳಿಗೋ ಮಣಿದು ಸಾಧ್ಯವಾದಷ್ಟು ವಿಷಯಗಳನ್ನೆಲ್ಲ ಗಬಗಬನೆ ಓದಿ, ಮಿಕ್ಕುಳಿದ ವಿಷಯಗಳನ್ನು ಹೀರಿಕೊಳ್ಳುವ ಚಟಕ್ಕೆ ಬದುಕುಳಿದ ಪುಟಗಳನ್ನು ತಮ್ಮ ಕೆಲಸದ ಬ್ಯಾಗಿನೊಳಗೆ ಸುರುಳಿ ಸುತ್ತಿ ತೂರಿಸಿಕೊಂಡು ಬಸ್ಸನ್ನೇ ಓದುವ ಸ್ಥಳವಾಗಿ ಮಾಡಿಕೊಂಡು, ಮಧ್ಯಾಹ್ನದ ಕೊಂಚ ಬಿಡುವಿನ ವೇಳೆಯಲ್ಲಿಯೂ ತಮ್ಮ ಊರಗಲ ಕೈಯನ್ನು ಚಾಚಿ ತಮ್ಮನು ತಾವು ಪತ್ರಿಕೆಯೊಳಗೆ ಕಳೆದುಕೊಂಡುಬಿಡುತ್ತಿದ್ದರು. ನಾವು ಚಿಕ್ಕವರಿದ್ದಾಗ ಅಥವಾ ತೀರಾ ಇತ್ತೀಚೆಗೂ ಕಾಣಸಿಗುವ ವಿದ್ಯಮಾನವಿದು. ಆದರೆ ಇನ್ನೊಂದಿಷ್ಟು ವಸಂತಗಳಲ್ಲಿ ಇವೆಲ್ಲ ಘಳಿಗೆಗಳು, ತವಕಗಳು ಕೇವಲ ನೆನಪಾಗಿ ಮಾತ್ರವಷ್ಟೇ ಉಳಿಯುತ್ತವೆ ಎಂದರೆ ನಾವು ನಂಬಲೇಬೇಕು! ಇಂದಿನ ಇಂಟರ್ನೆಟ್ಟಿನ ಮಾಯಾಜಾಲದದಲ್ಲಿ ನಮ್ಮ ಕೈಗೆಟುಕದ ವಸ್ತುವೊಂದಿಲ್ಲ. ಅಂತಹ ಮಹಾಸಾಗರದಲ್ಲಿ ದಿನಪತ್ರಿಕೆ ಎಂಬುದು ಯಾವ ಮಹಾ. ಅದಾಗಲೇ ಪ್ರಸ್ತುತ ಜಾರಿಯಲ್ಲಿರುವ ಬಹುತೇಕ ಪತ್ರಿಕೆಗಳು ತಮ್ಮ ತಮ್ಮ ಆನ್ಲೈನ್ ವೆಬ್ಸೈಟ್ಗಳನ್ನು ನಿರ್ಮಿಸಿಕೊಂಡು ಮುಂದಿನ ದಿನಗಳಿಗೆ ಸಜ್ಜಾಗಿವೆ. ಕ್ಷಣ ಕ್ಷಣದ ಬ್ರೇಕಿಂಗ್ ಸುದ್ದಿಗಳು, ಲಕ್ಷಾಂತರ ಭಿನ್ನ-ಭಿನ್ನ ಬಗೆಯ ವಿಷಯಗಳು ಕೈಯಂಚಿನಲ್ಲಿ ಸಿಗುವ ಸುಲಭ ಮಾರ್ಗವಿರುವಾಗ ಟೆಕ್ನಾಲಜಿಯ ನೆಪದಲ್ಲಿ ಕೊಂಚ ಸೊಂಬೇರಿಯಾಗಬಯಸುವ (ಪರಿಸರ ಸಂರಕ್ಷಣೆಯ ಸದುದ್ದೇಶವನ್ನೂ ಇಲ್ಲಿ ಅಲ್ಲಗೆಳೆಯಲಾಗುವುದಿಲ್ಲ) ಮಾನವ ಪತ್ರಿಕೆಗಳನ್ನು ಕೊಂಡು ತೆರೆದು ಕಷ್ಟ ಪಟ್ಟು ಓದುವುದು ಮುಗಿದು ಹೋದ ಅಧ್ಯಾಯವೆಂದೇ ಅನ್ನಬಹುದು! ಇನ್ನು ಮೊಬೈಲ್ ಫೋನುಗಳ ಸಂತೆಯಲ್ಲಿ ಪುಸ್ತಕಗಳಿಗೂ ಬಂದೊದಗಿರುವ ಆವಸ್ಥೆ ಹೆಚ್ಚು ಕಡಿಮೆ ಇಂತಹದ್ದೇ ಎಂದರೆ ಸುಳ್ಳಾಗದು. ಸರ್ವವೂ ಮೊಬೈಲ್ಮಯವಾಗಿರುವಾಗ ಕೆಜಿಗಟ್ಟಲೆ ತೂಕದ ಪುಸ್ತಕಗಳನ್ನು ಕೊಂಡು, ಓದಿ ಮನೆಯ ಕಪಾಟಿನಲ್ಲಿ ಜೋಡಿಸಿಡುವುದು, ಆಗೊಮ್ಮೆ ಈಗೊಮ್ಮೆ ತೆಗೆದು ದೂಳೋರೆಸುವ ಕಾರ್ಯದಲ್ಲಿ ಮಗದೊಮ್ಮೆ ಒಂದೆರೆಡು ಪುಟಗಳ ಓದಿನಲ್ಲಿ ತೊಡಗಿ, ಆಸಕ್ತಿ ಮೂಡಿ, ಇಡೀ ಪುಸ್ತಕವನ್ನೇ ಮತ್ತೊಮ್ಮೆ ತಿರುವಿಹಾಕಿ ಆನಂದಪಡುತಿದ್ದದ್ದು ಇನ್ನು ಕಳೆದುಹೋದ ನನಪುಗಳೆಂದೇ ಎನ್ನಬಹುದು! ಜೊತೆಗೆ ಪ್ರಿಂಟರ್ ಗಳು, ಕ್ಸೆರಾಕ್ಸ್ ಮಷೀನ್ಗಳು ಅಷ್ಟೇ ಏಕೆ ಸಂಪೂರ್ಣ ಕಾಯಂಪ್ರತಿಗಳ(HardCopies) ಕಾಲವೇ ಕೊನೆಗೊಳ್ಳುವ ಕಾಲ ಬಹುಬೇಗನೆ ಸಮೀಪಿಸುತ್ತಿದೆ ಎಂಬುದನ್ನು ಬಾಂಡ್ ಪೇಪರಿನಲ್ಲಿ ಬೇಕಾದರೂ ಕೂಡ ಬರೆದು ಕೊಡಬಹುದು!

ಕರೆನ್ಸಿ ನೋಟುಗಳು:
'ಸತ್ತ ಮೇಲೆ ದುಡ್ಡನ್ನೇನು ತಲೆಯಮೇಲೆ ಹೊತ್ತುಕೊಂಡು ಹೋಗಲಾಗುವುದಿಲ್ಲ' ಎಂಬ ಪ್ರಸಿದ್ಧ ನಾಣ್ನುಡಿ ಸುಳ್ಳಾಗುವ ಕಾಲ ಸಮಿಪಿಸುತ್ತಿದೆ! ಡಿಜಿಟಲೀಕರಣದ ಈ ಹೊಸ ಜಮಾನದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಎಲ್ಲ ಬಗೆಯ ನೋಟುಗಳು, ನಾಣ್ಯಗಳು ಮರೆಯಾಗಿ ಕೇವಲ ಆನ್ಲೈನ್ ಮುಖಾಂತರದ ಹಣವನ್ನು ಕಾಣುವ ದಿನಗಳು ಅದಾಗಲೇ ಬಹುಪಾಲು ಜನರ ದಿನಚರಿಯಲ್ಲಿ ಒಂದಾಗತೊಡಗಿದೆ. ಅದಾಗಲೇ ಗೋಪ್ಯನಾಣ್ಯ (ಬಿಟ್ ಕರೆನ್ಸಿ) ಗಳೆಂಬ ‘ಆನ್ಲೈನ್ ಕರೆನ್ಸಿ’ಗಳು ಮಾರುಕಟ್ಟೆಯನ್ನು ಅವರಿಸುತ್ತಿವೆ. ಇದು ಸಾಂಪ್ರದಾಯಿಕ ಹಣಕಾಸು ವ್ಯವಹಾರಗಳಿಗೆ ತೀರಾ ಭಿನ್ನವಾಗಿದ್ದು, ವಿಕೇಂದ್ರೀಕೃತ (ಬ್ಯಾಂಕ್ ಅಥವಾ ಮತ್ಯಾವುದೇ ಹಣಕಾಸು ಸಂಸ್ಥೆಗಳ ಅಧೀನಕ್ಕೆ ಒಳಪಟ್ಟಿರದ ಒಂದು ಜಾಲ) ಮಾದರಿಯನ್ನು ಒಳಗೊಂಡಿದೆ. ಇಡೀ ಪ್ರಪಂಚದಾದ್ಯಂತ ಏಕ ಮಾತ್ರದ ಡಿಜಿಟಲ್ ಕರೆನ್ಸಿಯ ರೂಪ! ಇನ್ನೇನಿದ್ದರೂ ಇಂತಹ ಡಿಜಿಟಲ್ ಕರೆನ್ಸಿಗಳು ಹಾಗು ಡಿಜಿಟಲ್ ವ್ಯವಸ್ಥೆ ಎಲ್ಲಾ ವರ್ಗದ ಜನರಿಗೆ ಅದೆಷ್ಟು ಬೇಗನೆ ತಲುಪಲಿದೆ ಎಂಬುದು ಮಾತ್ರವೇ ಆಗಿದೆ. ಡಿಜಿಟಲೀಕರಣ ಕೇವಲ ನೋಟುಗಳ ಕಾಟವನು ತಪ್ಪಿಸುವುದಲ್ಲದೆ ಪಾರದರ್ಶಕ ವ್ಯವಹಾರಗಳಿಗೂ ಇಂಬು ಕೊಡುತ್ತದೆ. ಆದರಿಂದಲೇ ಹತ್ತಾರು ದೇಶಗಳು ತಮ್ಮ ಪ್ರಜೆಗಳಿಗೆ ಆದಷ್ಟು ಬೇಗನೆ ಸಂಪೂರ್ಣ ಆನ್ಲೈನ್ ಟ್ರಾನ್ಸಾಕ್ಷನ್ಸ್ ಗಳಿಗೆ ಸಿದ್ಧರಾಗಲು ಹುರಿದುಂಬಿಸುತ್ತಿವೆ. ಆಗ ತನ್ನ ತಾತನ ಕಾಲದಿಂದ ಕೂಡಿಟ್ಟ ಹಣದ ರಾಶಿಯನ್ನು ಹೆಣದೊಟ್ಟಿಗೆಯೆ ಮಲಗಿಸಿ ಕಳಿಸಬೇಕಾಗುವುದೇನೋ ಯಾರು ಬಲ್ಲರು?!

ಕ್ಯಾಮೆರಾ :
ಆಧುನೀಕರಣವೆನ್ನುವ ಓಟದ ಮುಂದೆ ವೇಗೋತ್ಕರ್ಷವೂ ನಿಧಾನವೆಂದೆನಿಸುವುದು ಕ್ಯಾಮರಾಗಳ ಬಗ್ಗೆ ಯೋಚಿಸಿದಾಗ. ಹೆಚ್ಚೇನೂ ಅಲ್ಲ ಕೇವಲ ದಶಕಗಳ ಹಿಂದಷ್ಟೇ ನಾವುಗಳು ಕ್ಯಾಮೆರಾ ಒಂದನ್ನು ಕೊಂಡರೆ ಜೊತೆಗೆ ಸಣ್ಣ ನಶ್ಯಡಬ್ಬಿಯ ಆಕಾರದ ರೀಲುಗಳಿಗೂ ಕಾಸು ಚೆಲ್ಲಬೇಕಿದ್ದಿತು. ಫೋಟೋಗಳನ್ನು ತೆಗೆದ ನಂತರ ಮತ್ತೆ ಅದೇ ಅಂಗಡಿಗೆ ಓಟ ಕಿತ್ತು, ಮತ್ತೊಂದಿಷ್ಟು ಹಣವನ್ನು, ಸಮಯವನ್ನು ತೆತ್ತು ಕಾಯಂಪ್ರತಿಯೊಂದನ್ನು ಪಡೆಯುವಷ್ಟರಲ್ಲಿ ಸಾಕು ಸಾಕಪ್ಪ ಎಂದನಿಸುತಿತ್ತು. ಇವೆಲ್ಲ ಕಿರಿಕಿರಿಗಳಿಗೂ ಬ್ರೇಕ್ ಹಾಕಿದಂತೆ ಬಂದದ್ದೇ ಡಿಜಿಟಲ್ ಕ್ಯಾಮೆರಾಗಳು. ಎಲ್ಲೆಂದರಲ್ಲಿ ಸಮಾದಾನವಾಗುವವರೆಗೂ ಚಕ ಚಕನೆ ಫೋಟೋಗಳನ್ನು ಕ್ಲಿಕ್ಕಿಸಿ ತಮ್ಮ ಕಂಪ್ಯೂಟರ್ಗಳಿಗೆ ಜೋಡಿಸಿದರೆ ಸಾಕು. ನೂರು, ಸಾವಿರ ಫೋಟೋಗಳ ರಾಶಿ ಯಾವುದೇ ತೊಳೆಯುವಿಕೆ, ಹೊಳೆಯುವಿಕೆ ಎಂಬ ತಾಪತ್ರಯವಿಲ್ಲದೆ ಪರದೆಯ ತುಂಬ ಮೂಡಿಬಿಡುತ್ತವೆ. ಪರಿಣಾಮ ಒಂದುಕಾಲದಲ್ಲಿ ಐಶಾರಾಮತೆಯ ವಸ್ತುಗಳಲ್ಲಿ ಒಂದೆನಿಸಿದ್ದ ರೀಲ್ ಕ್ಯಾಮೆರಾಗಳು ಇಂದು ಮರೆಯಾಗಿವೆ. ಅಂದ ಮಾತ್ರಕ್ಕೆ ಪ್ರಸ್ತುತ ಜಾರಿಯಲ್ಲಿರುವ ಡಿಜಿಟಲ್ ಕ್ಯಾಮೆರಾಗಳೇನೂ ಶಾಶ್ವತವಲ್ಲ. ಮೊಬೈಲ್ ಫೋನುಗಳ ಭರಾಟೆಯಲ್ಲಿ ಅವುಗಳೂ ನಶಿಸುವ ಅಂಚಿನಲ್ಲಿವೆ. ಡಿಜಿಟಲ್ ಕ್ಯಾಮೆರಾಗಳಿಗಿಂತಲೂ ಉತ್ಕೃಷ್ಟವಾದ ಮೊಬೈಲ್ ಕ್ಯಾಮೆರಾಗಳು ಇಂದು ಮಾರುಕಟ್ಟೆಗೆ ಬಂದಿವೆ. ಸಕಲವೂ ಅಂಗೈಯಷ್ಟಿನ ಮೊಬೈಲ್ ಒಂದರಲ್ಲೆ ಸಿಗುತ್ತಿರುವಾಗ ಸಾವಿರಾರು ರೂಪಾಯಿಗಳನ್ನು ಕ್ಯಾಮೆರಾಗಳಿಗೆ ಪ್ರತ್ಯೇಕವಾಗಿ ಸುರಿಯುವುದು ಇನ್ನು ಮುಂದೆ ಹಾಸ್ಯಾಸ್ಪದವೆಂದೆನಿಸದಿರದು. ಅದೇನೇ ಇರಲಿ ಇಂದಿನ ನಾವುಗಳು ಕಪ್ಪುಬಿಳುಪಿನ ಕಾಯಂಪ್ರತಿಯ ಕಾಲದಿಂದ ಸೆಲ್ಫಿ ಎಂಬ ಹೊಸ ಪದವನ್ನೇ ಹುಟ್ಟಿಹಾಕಿದ ಯುಗಗಳೆರಡನ್ನೂ ಕಂಡು ಅನುಭವಿಸಿದ್ದೇವೆ. ಪುಳಕಗೊಂಡಿದ್ದೇವೆ.

ಫ್ಲಾಪಿ ಡಿಸ್ಕ್, ಸಿಡಿ ಡ್ರೈವ್ ಹಾಗು ಪೆನ್ ಡ್ರೈವ್ :
ಒಂದು ಸಣ್ಣಗಾತ್ರದ ಡಾಟಾವನ್ನು ಸೇವ್ ಮಾಡಲು ಇಡೀ ಕೋಣೆಯ ಗಾತ್ರದ ಯಂತ್ರವನ್ನು ಬಳಸುತ್ತಿದ್ದ ದಿನಗಳು ಕೆಲವರಿಗೆ ತಿಳಿದಿರಬಹುದು. ಅವೇ ದಿನಗಳು ಬರಬರುತ್ತ ಸಿಡಿ ಡ್ರೈವ್, ಫ್ಲಾಪಿ ಡಿಸ್ಕ್, ಪೆನ್ ಡ್ರೈವ್, ಹಾರ್ಡ್ ಡ್ರೈವ್, ಮೆಮೊರಿ ಕಾರ್ಡ್ ಗಳೆಂಬ ಸೂಕ್ಷ್ಮಾತಿಸೂಕ್ಷ್ಮ ಶೇಖರಣ ವಿಧಾನಗಳನ್ನು ಕಂಡುಕೊಂಡವು. ಅಂದು ಒಂದು ಕೋಣೆಯ ಗಾತ್ರದ ಯಂತ್ರದಲ್ಲಿ ಏನನ್ನು ಶೇಖರಿಸಿ ಇಡಬಹುದಿದ್ದಿತೋ ಇಂದು ಅದೇ ಡಾಟಾವನ್ನು ಕೇವಲ ಕಿರುಬೆರಳ ಉಗುರಿನ ಗಾತ್ರದ 'ಚಿಪ್ಪಿ'ನಲ್ಲಿ ಉದುಗಿಸಿಡಬಹುದು! ಹೀಗೆಯೇ ಮುಂದುವರೆದರೆ ಮುಂದೇನು ಎಂಬುವವರಿಗೆ ಪ್ರಸ್ತುತ ಸಂಶೋಧನ ವಲಯ ನೀಡಿದ ಉತ್ತರ 'ಕ್ಲೌಡ್ ಸ್ಟೋರೇಜ್'. ಹಾಲಿ ಚಾಲ್ತಿಯಲ್ಲಿರುವ ಭಾಗಶಃ ಎಲ್ಲ ಬಗೆಯ ಶೇಖರಣ ವಿಧಾನಗಳು ಇನ್ನು ಮುಂದೆ 'ವರ್ಚುಯಲ್ ' (ಆನ್ಲೈನ್ ಸರ್ವರ್ ಗಳಲ್ಲಿ ಶೇಖರಿಸಿಡುವ ವಿಧಾನ) ಆಗಲಿವೆ. ಅದಾಗಲೇ ಅದೆಷ್ಟೋ ಕಂಪ್ಯೂಟರ್ಗಳಲ್ಲಿ USB ಪೋರ್ಟ್ಗಳೇ ಬರುತ್ತಿಲ್ಲವೆಂದರೆ ಕ್ಲೌಡ್ ಸ್ಟೋರೇಜ್ಗಳ ಮೇಲಿನ ನಂಬಿಕೆ ಅದೆಷ್ಟರ ಮಟ್ಟಿಗೆ ಗಟ್ಟಿಯಿದೆ ಎಂಬುದನ್ನು ಊಹಿಸಬಹುದು. ಒಟ್ಟಿನಲ್ಲಿ ದಶಕಗಳ ಹಿಂದಷ್ಟೇ ಕಂಪ್ಯೂಟರ್ ಒಂದನ್ನು ತನ್ನ ಮನೆಯ ಟೇಬಲ್ಲಿನ ಮೇಲೆ ಕಾಣುವುದೇ ಯಾವುದೊ ಜನ್ಮದ ಪುಣ್ಯವೆಂದು ಭಾವಿಸಿದ್ದ ಮಕ್ಕಳು ಇಂದು ಅದೇ ಕಂಪ್ಯೂಟರನ್ನು ನೋಟ್ ಬುಕ್ಕಿನಂತೆ ಮಡಚಿ (ಸಂಕುಚಿತಗೊಂಡ ಶೇಕರಣ ವಿಧಾನದಿಂದ) ಬ್ಯಾಗಿನೊಳಗೆ ಗಿಡುಗಿಕೊಂಡು ಎಲ್ಲೆಂದರಲ್ಲಿ ಸುತ್ತಬಹುದಿತ್ತು ಎಂಬುದನ್ನು ಅಂದು ತಮ್ಮ ಕನಸ್ಸಿನಲ್ಲೂ ಊಹಿಸಿರಲು ಸಾಧ್ಯವಿಲ್ಲವೆಂದೆನಿಸುತ್ತದೆ.


ಗಣಕಯ೦ತ್ರ (Calculator) :
ಕ್ಯಾಲ್ಕುಲೇಟರ್ ಎಂದ ಮಾತ್ರಕ್ಕೆ ಬಹುಪಾಲು ಮಂದಿಗೆ ನೆನಪು ಬರುವುದು 0.7734 (HELLO), 4377 (HELL) ಹಾಗು ಇನ್ನು ಕೆಲವು ಅಡಲ್ಟ್ರಿ (ಆಗಿನ ಕಾಲಕ್ಕೆ!) ಅರ್ಥವನ್ನು ಬಿತ್ತುವ ಅಂಕೆಯಿಂದ ಮೂಡುವ ಪದಗಳು. ಎದೆ ಜೇಬಿನ ಒಳಗೆ ಪರೀಕ್ಷೆಗೆ ಕೊಂಡೊಯ್ಯಲು ಮನೆಯವರಿಗೆಲ್ಲ ಕಾಟ ಕೊಟ್ಟು, ಅತ್ತು ಒದ್ದಾಡಿ ಪಡೆದುಕೊಂಡು ಕೊನೆಗೆ ಹೆಚ್ಚಾಗಿ ಅವುಗಳಲ್ಲಿ ಮಾಡುತ್ತಿದ್ದದ್ದು ಇಂತಹ ಸರ್ಕಸ್ಗಳನ್ನೇ! ಇನ್ನು ಕೆಲವರು ಪರೀಕ್ಷೆಯಲ್ಲಿ ಕಾಪಿ-ಗೀಪಿ ಒಡೆಯಲು ಹೇಗಾದರೂ ಸಾಧ್ಯವಿದೆಯೇ ಎಂದು ದಿನವೆಲ್ಲ ಗೋಳಾಡಿ ಆಗಿನ ಕಾಲಕ್ಕೆ ಇವುಗಳ ಮೇಲೆ ಪಿಎಚ್ಡಿ ಗಳನ್ನೂ ಮಾಡಿರುವವರೂ ಉಂಟು. ಒಟ್ಟಿನಲ್ಲಿ ಕ್ಲಿಷ್ಟ ಲೆಕ್ಕಾಚಾರಗಳ ಸ್ಪಷ್ಟ ನಿವಾರಕನಾಗಿ ಜನಸಾಗರದಲ್ಲಿ ಬೆರೆತು ಹೋಗಿದ್ದ ಈ ಕ್ಯಾಲ್ಕುಲೇಟರ್ ಗಳು ಇಂದು ಮೂಲೆಗುಂಪನ್ನು ಹಿಡಿಡಿಯುತ್ತಿವೆ. ಇವುಗಳ ರಿಪ್ಲೇಸೆಮೆಂಟ್ ಗಳೂ ಸಹ ಸರ್ವವ್ಯಾಪಿ ಸಂಪನ್ನರಾದ ಮೊಬೈಲ್ ಮಹಾಶಯರುಗಳೇ. ಹೇಗೆ, ಏನು ಎಂಬುದರ ವಿವರಣೆಯನ್ನೇನು ಹೆಚ್ಚಾಗಿ ಹೇಳುವ ಅಗತ್ಯವೆಂದುಕೊಳ್ಳುವೆ.

ಲ್ಯಾಂಡ್ ಲೈನ್ ಫೋನುಗಳು:
ಬೋರ್ವೆಲ್ಲಿನ ಕುತ್ತಿಗೆಯನ್ನು ಹಿಡಿದೆಳೆದು, ಶಾವಿಗೆ ಪಾಯಸದಂತಹ ವೈರುಗಳನ್ನು ಅದರ ಬುಡದಲ್ಲಿ ರಾಶಿ ರಾಶಿಯಾಗಿ ಚೆಲ್ಲಿ, ಮೆಳೆಗಾಲದಲ್ಲಿ ಸತ್ತೂ ಬದುಕಿದಂತೆ ಆಗೊಮ್ಮೆ ಈಗೊಮ್ಮೆ ಜೀವವನ್ನು ಪಡೆದುಕೊಳ್ಳುತ್ತಾ ಇರುತ್ತಿದ್ದ ಇವುಗಳು ಇಷ್ಟು ಬೇಗನೆ ತೆರೆಮರೆಗೆ ಸರಿದವೆಂದರೆ ನಂಬಲಸಾಧ್ಯ. ಕರೆಂಟು ಕಂಬಗಳಂತೆ ಇವುಗಳಿಗೇ ಪ್ರತ್ಯೇಕವಾದ ಕಂಬಗಳನ್ನು ನೆಡಿಸಿ, ಕಾಡು, ಹಳ್ಳ, ತೋಟವನ್ನೆಲ್ಲ ದಾಟಿಕೊಂಡು ಬರುತ್ತಿದ್ದ ಇವುಗಳ ಜಾಲ ಇಂದು ಕೇವಲ ಆಫೀಸ್ ಗಳಿಗೆ ಮಾತ್ರ ಸೀಮಿತವಾಗಿದೆ ಅಷ್ಟೇ. ಅತ್ತ ಕಡೆಯಿಂದ ಸತ್ತು ಬಿದ್ದಿರುವ ಮತ್ತೊಂದು ಫೋನಿಗೆ ಫೋನಾಯಿಸಿದಾಗ ಬರುತ್ತಿದ್ದ ಟೋನ್ ಗಳನ್ನೇ ಇಂಪಾದ ಸಂಗೀತವೇನೋ ಎಂಬುವ ಮಟ್ಟಿಗೆ ಕೇಳುತ್ತಾ ಹಿರಿಯರಲೊಬ್ಬರು ಬೈಯುವವರೆಗೂ ಕಿವಿಯ ಮೇಲೆ ಒತ್ತಿಕೊಂಡ ರಿಸೀವರ್ ಅನ್ನು ಕೆಳಗಿಡದ ಆ ದಿನಗಳನ್ನು ನೆನೆದರೆ ಇಂದು ಹೊಟ್ಟೆ ಬಿರಿಯುವಷ್ಟು ನಗು ಬರುವುದಂತೂ ಸುಳ್ಳಲ್ಲ. ಒಟ್ಟಿನಲ್ಲಿ ಮತ್ತದೇ ಮೊಬೈಲ್ ಫೋನುಗಳ ಭರಾಟೆಯಲ್ಲಿ ಲ್ಯಾಂಡ್ ಲೈನ್ ಗಳೆಂಬ ಇಪ್ಪತ್ತನೇ ಶತಮಾನದ ಅದ್ಭುತ ಅನ್ವೇಷಣೆಯೊಂದು ಇಂದು ತೆರೆಮರೆಗೆ ಸರಿದಿದೆ.


ಹೀಗೆ ದಿನ ಕಳೆದಂತೆ ನಾವುಗಳು ಯಾವುದನ್ನು ಅತ್ಯುತ್ತಮವೆಂದು ಭಾವಿಸಿರುತ್ತೇವೆಯೋ ನಾಳೆಯೇ ಅದು ನಮಗೆ ಬೇಡವಾಗಿಬಿಟ್ಟಿರುತ್ತದೆ. ಇದೆ ಸ್ಥಿತ್ಯಂತರದ ಯುಗ. ಸ್ಲೇಟು-ಬಳಪ, ಬ್ಯಾಗು-ಪುಸ್ತಕ, ಭೂಪಟಗಳು, ಡಿವಿಡಿ ಪ್ಲೇಯರ್ಗಳು, ಟೇಪ್ ರೆಕಾರ್ಡ್ಸ್ಗಳು, ಅಷ್ಟೇ ಅಲ್ಲದೆ ಫ್ಯಾಕ್ಸ್ ಮಷೀನ್ಗಳೂ, ವಾಚುಗಳೂ ಇಂದು ವಿದಾಯದ ವೇಳೆಯಲ್ಲಿವೆ. ಇನ್ನು ಕೊಂಚ ದೂರಾಲೋಚನೆ ಮಾಡಿದರೆ ಮಾನವನ ಮಾತುಗಳು, ಬರೆಯುವ ಲಿಪಿಗಳು, ಹೊರಾಂಗಣ ಆಟೋಟಗಳು ಕೊನೆಕೊನೆಗೆ ಆತನ ಬದಲಿಗೆ ಯಂತ್ರಗಳೇ ಈ ಜಗತ್ತನ್ನು ಅವರಿಸಿದರೂ ಆಶ್ಚರ್ಯ ಪಡಬೇಕಿಲ್ಲ. ಆಗಿನ ಕಾಲದಲ್ಲಿ ಎಲ್ಲವೂ ಎಲ್ಲರಿಗೂ ಸಿಗುತ್ತಿರಲಿಲ್ಲ. ಆದರಿಂದಲೋ ಏನೋ ಮಾನವ ತನ್ನಲ್ಲಿದ್ದ ಚಿಕ್ಕ ಪುಟ್ಟ ವಸ್ತುಗಳಲ್ಲೇ ಸಂತೋಷಪಡುತ್ತಿದ್ದ. ಸುಖಿಯಾಗಿರುತ್ತಿದ್ದ. ವಾರಕ್ಕೊಮ್ಮೆ ಬರುತ್ತಿದ್ದ ಚಲನಚಿತ್ರ ವೀಕ್ಷಣೆಗೇ ಮಿಕ್ಕಿದ ಆರು ದಿನಗಳು ವಾದ ಸಂವಾದಗಳು ನೆಡೆಯುತ್ತಿದ್ದವು. ದೂರದ ಊರಿನಿಂದ ಅಪ್ಪನೋ, ಅಕ್ಕನೋ,ತಮ್ಮನ್ನೂ ಬರೆಯುತ್ತಿದ್ದ ಕಾಗದದ ನಿರೀಕ್ಷೆಯ ಸಂತೋಷವೆಲ್ಲಿ? ಒಂದು ನಿಮಿಷವೂ ನಮ್ಮವರು 'ಆಫ್ ಲೈನ್' ಆದರೆ ಪ್ರಾಣಪಕ್ಷಿಯೇ ಹಾರಿಹೋದಂತೆ ಆಡುವ ಇಂದಿನ ಕಾಲದಲ್ಲಿ ಅಂದು ತಿಂಗಳುಗಟ್ಟಲೆ ಯಾವುದೇ ಮೊಬೈಲ್, ಇಂಟರ್ನೆಟ್ ಗಳೆಂಬ ಆಧಾರಗಳಿಲ್ಲದಯೇ ಮನೆಯಿಂದ ಹೊರಗಿರುತ್ತಿದ್ದಾಗ ಇರುತ್ತಿದ್ದ ಧೈರ್ಯವೆಲ್ಲಿ? ಒಟ್ಟಿನಲ್ಲಿ ಪ್ರಸ್ತುತ ಮಾನವನಿಗೆ ಕ್ಷಣಮಾತ್ರದಲ್ಲಿ ಮನಸ್ಸಿಗೆ ಬೇಕೆನಿಸಿದ್ದು ದೊರೆಯತೊಡಗಿದೆ. ಇರದಿರುವುದನ್ನು ಪಡೆಯುವುದರಲ್ಲೇ ಜೀವನದ ಖುಷಿ ಎಂಬುದು ಅಡಗಿದೆ. ಆದರೆ ಇಂದು ಬೇಕಿರದ್ದನ್ನೂ ಬೇಕಾಗಿರುವುದಕ್ಕಿಂತ ಹೆಚ್ಚಾಗಿಯೇ ಪಡೆದುಕೊಂಡಿರುವ ಮಾನವನ ಮುಂದಿನ ದಿನಗಳು ಗುರಿಯಿರದ ನೆಡೆಯಂತಾದರೂ ಸುಳ್ಳಾಗದು. ಮೊಬೈಲ್ ಇಂಟರ್ನೆಟ್ಗಳೆಂಬ ಶತಮಾನದ ಅನ್ವೇಷಣೆಗಳು ಮಿಕ್ಕುಳಿದ ಇನ್ನೂ ಅದೆಷ್ಟು ವಸ್ತುಗಳನ್ನು ಬದಲಾಯಿಸುತ್ತವೆಯೋ ಅಥವಾ ಬದಲಾವಣೆಯ ಕಾಲದಲ್ಲಿ ಅವುಗಳೇ ಬದಲಾಗಿ ಬೇರೊಂದು ರೂಪವನ್ನು ಧರಿಸುತ್ತವೆಯೋ ಕಾದು ನೋಡಬೇಕು ಎಂದಿದೆ ಸ್ಥಿತ್ಯಂತರದ ಕಾಲ!

Thursday, December 7, 2017

ಗಳಿಸಬೇಕು ಒಂದು ದಿನ, ಗಳಿಸಿದ್ದನ್ನು ಕೊಡಲೂಬೇಕಿದೆ ಎಮ್ಮ ಮನ!

ಆತ ಪ್ರಪಂಚದ ಅತಿರಥ ಶ್ರೀಮಂತ. ಆಸ್ತಿಯ ಮೊತ್ತ ಸುಮಾರು ಐದುಕಾಲು ಲಕ್ಷ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು! ಕಾಲೇಜಿನಿಂದ ಹೊರಬಿದ್ದು ಮುಂದೆ ಇನ್ನೇನೂ ಸಾಧ್ಯವಲ್ಲ ಎಂಬಂತಿದ್ದ ಹುಡುಗನೊಬ್ಬನಿಂದ ಈ ಮಟ್ಟಿನ ಬೆಳವಣಿಗೆ ಸಾಧ್ಯವೆ ಎಂಬುದು ಇಂದಿಗೂ ಹಲವರಲ್ಲಿ ಕಾಡುತ್ತಿರುವ ಜಟಿಲ ಪ್ರೆಶ್ನೆ. ಇವನೊಟ್ಟಿಗೆ ಮತ್ತೊಬ್ಬನಿದ್ದಾನೆ. ಇಂದಿಗೂ ಕೀಲಿಮಣೆಯ ದಶಕದಷ್ಟು ಹಳೆಯ ಮೊಬೈಲ್ ಫೋನನ್ನೇ ಉಪಯೋಗಿಸುವ ಈತ ಸುಮಾರು ನಾಲ್ಕುವರೆ ಲಕ್ಷ ಕೋಟಿ ರೂಪಾಯಿಗಳ ಒಡೆಯ! ಕೋಕಾ ಕೋಲಾ, ವೀಕ್ಲಿ ಮ್ಯಾಗಜಿನ್, ಚೆವಿಂಗ್-ಗಮ್ ಗಳನ್ನು ಮಾರುತ್ತಿದ್ದ ಈ ಪೋರ 'ಲಕ್ಷ ಗಳಿಕೆಗಿರುವ ಸಾವಿರ ಮಾರ್ಗಗಳು' ಎಂಬಂತಹ ಒಂದು ಪುಸ್ತಕದಿಂದ ಪ್ರೇರಣೆ ಪಡೆದು ಈ ಮಟ್ಟಿಗೆ ಬೆಳೆದ ಎಂದರೆ ನೀವು ನಂಬಲೇಬೇಕು!

ಕಳೆದ ಹಲವು ದಶಕಗಳಿಂದ ಪ್ರಪಂಚದ ಅತಿ ದೊಡ್ಡ ಶ್ರೀಮಂತರ ಪಟ್ಟಿಯ ಅಗ್ರಸ್ಥಾನದಲ್ಲಿ ರಾರಾಜಿಸುವ ಇವರಿಬ್ಬರ ಹೆಸರನ್ನು ಕೇಳದಿರುವವರು ಅತಿ ವಿರಳ ಎನ್ನಬಹದು. ಮೊದಲನೆಯವ ದೈತ್ಯ ಮೈಕ್ರೋಸಾಫ್ಟ್ ಕಂಪನಿಯ ಸಂಸ್ಥಾಪಕ ಬಿಲ್ ಗೇಟ್ಸ್ ಎಂದಾದರೆ ಇನ್ನೊಬ್ಬ ಷೇರು ಮಾರುಕಟ್ಟೆಯ ಪ್ರಚಂಡ ಹೂಡಿಕೆದಾರ ವಾರೆನ್ ಬಫೆಟ್. ಇಂದು ಇವರಿಬ್ಬರ ಹೆಸರನ್ನು ಇಲ್ಲಿ ಪ್ರಸ್ತಾಪಿಸುತ್ತಿರಲು ಕಾರಣವಿದೆ. ಗಳಿಕೆಯ ಸಾರ್ಥಕತೆಯ ಶೃಂಗವನ್ನು ಇಲ್ಲಿ ಕಾಣಬಹುದಾಗಿದೆ. ವಿಶ್ವದ ಹಿರಿಯ ಶ್ರೀಮಂತದ್ವಯರು ಎಂಬ ವಿಶೇಷಣವಷ್ಟೇ ಅಲ್ಲದೆ ಮತ್ತೊಂದು ಬಹು ಮುಖ್ಯ ಗುಣ ಇವರಿಬ್ಬರನ್ನು ಒಂದಾಗಿ ಬೆಸೆದಿದೆ. ಇದು ವಿಶ್ವದ ಹಲವು ದೊಡ್ಡ ಕುಳಗಳ ತನು-ಮನದಲ್ಲೂ ಅಷ್ಟಾಗಿ ಚಿಗುರದ ಆಲೋಚನೆ. ಗಳಿಸುವ ಸಂಪತ್ತೂ ಹೆಮ್ಮೆಯಿಂದ ಸಂಭ್ರಮಿಸುವ ನೆಡೆ. ಅದೇ ಫಿಲಾಂತ್ರೋಫಿ / ಲೋಕೋಪಕಾರಿಕೆ. ಇಂದು ಫಿಲಾಂತ್ರೋಫಿ ಎಂಬ ಹೆಸರಿನಲ್ಲಿ ನೂರಾರು ಕಂಪನಿಗಳು ತಮ್ಮ ಕೈಲಾದ ಸಮಾಜ ಕಲ್ಯಾಣ ಕಾರ್ಯಗಳನ್ನು ಮಾಡುತ್ತಿರುವುದು ನಮಗೆ ಕಾಣಸಿಗುವ ವಿಷಯವೇ. ಆದರೆ ಈ ಇಬ್ಬರು ಮಹಾಶಯರ ಕಲ್ಯಾಣಕಾರ್ಯ ಇಂತಹ ದಿನನಿತ್ಯದ ನೂರಾರು ಫಿಲಾಂತ್ರೋಫೇರ್ಸ್ ಗಳಿಂಗಿಂತ ಸಾವಿರ ಪಟ್ಟು ಮಿಗಿಲಾದುದು ಎನ್ನಬಹುದು. ಸಮಾಜ ಕಲ್ಯಾಣವೆಂದರೆ ಮೂಗು ಮುರಿಯುವ ಪ್ರಸ್ತುತ ಕಾಲದಲ್ಲಿ ಲೋಕೋಪಯೋಗಿ ಕಾರ್ಯಗಳನ್ನು ಹೀಗೆ ಸಣ್ಣ ಅಥವ ದೊಡ್ಡ ಎಂಬ ಅಳತೆಗೋಲುಗಳಿಂದ ಅಳೆಯುವುದು ಸಮಂಜಶವಲ್ಲದಾದರೂ ಇವರಿಬ್ಬರ ವಿಷಯದಲ್ಲಿ ಅದು ಕೊಂಚ ಗೌಣವಾಗುತ್ತದೆ.

2010ರಲ್ಲಿ ಈ ನಿಟ್ಟಿನಲ್ಲಿ ಕೈಜೋಡಿಸಿದ ಈ ದಿಗ್ಗಜರು ತಮ್ಮ ಆಸ್ತಿಯ ಸುಮಾರು ಅರ್ದದಷ್ಟು ಹಣವನ್ನು ಸಮಾಜ ಕಲ್ಯಾಣ ಸೇವೆಗಳಿಗಾಗಿ ಮುಡಿಪಾಗಿಡುವ ಪ್ರತಿಜ್ಞೆಯನ್ನು (Pledge ) ಮಾಡಿದರು! ಇದರ ಬೆನ್ನಲ್ಲೇ 'ದಿ ಗಿವಿಂಗ್ ಪ್ಲೆಡ್ಜ್' ಎಂಬ ಚಾರಿಟಬಲ್ ಸಂಸ್ಥೆಯನ್ನು ಸ್ಥಾಪಿಸಿದ ಜೋಡಿ ವಿಶ್ವದ ಶ್ರೀಮಂತರೆಲ್ಲರೂ ತಮ್ಮ ಆಸ್ತಿಯ ಅರ್ದದಷ್ಟು ಹಣವನ್ನು ಲೋಕೋಪಯೋಗಿ ಕಾರ್ಯಗಳಿಗೆ ವಿನಿಯೋಗಿಸಬೇಕೆಂದು ಕೇಳಿಕೊಂಡರು. ವಾರೆನ್ ಬಫೆಟ್ ಇನ್ನೂ ಒಂದೆಜ್ಜೆ ಮುಂದೆ ಹೋಗಿ ತನ್ನ ಸಂಪತ್ತಿನ ಶೇಕಡಾ 99 ರಷ್ಟನ್ನು ಇಂತಹ ಕಾರ್ಯಗಳಿಗೆ ವಿನಿಯೋಗಿಸಲು ಮುಂದಾಗುತ್ತಾನೆ! ಹೀಗೆ ಶುರುವಾದ 'ದಿ ಗಿವಿಂಗ್ ಪ್ಲೆಡ್ಜ್' ಸಂಸ್ಥೆ ಇಂದು ವಿಶ್ವದ ಸುಮಾರು 158 ಶ್ರೀಮಂತರ ಮನಒಲಿಸುವಲ್ಲಿ ಯಶಸ್ವೀಯಾಗಿದೆ. ತಮ್ಮ ಅರ್ದಕ್ಕಿಂತಲೂ ಹೆಚ್ಚಿನ ಸಂಪತ್ತನ್ನು ಲೋಕ ಕಲ್ಯಾಣ ಕಾರ್ಯಗಳಿಗೆ ಮುಡಿಪಾಗಿಡಲು ಪ್ರೇರೇಪಿಸಿದೆ. ಇಷ್ಟೆಲ್ಲಾ ಜನರನ್ನು ಒಲಿಸಿ, ಒಪ್ಪಿಸಿದರೆ ಎಷ್ಟೆಲ್ಲಾ ಮೊತ್ತದ ಸಂಪತ್ತು ಬಂದಿರಬಹುದು ಎಂಬ ಗುಣಸಹಜ ಪ್ರೆಶ್ನೆ ಸಾಮಾನ್ಯರಾದ ನಮ್ಮಲ್ಲಿ ಬಾರದೆ ಇರದು. ಅದರ ಮೊತ್ತ ಸುಮಾರು ಇಪ್ಪತೈದು ಲಕ್ಷ ಕೋಟಿ ರೂಪಾಯಿಗಳು! (2017-18 ನೇ ಸಾಲಿನ ಕರ್ನಾಟಕ ಸರ್ಕಾರದ ಆಯವ್ಯಯದ ಒಟ್ಟು ಮೊತ್ತವೇ ಹತ್ತಿರ ಹತ್ತಿರ ಎರಡು ಲಕ್ಷ ಕೋಟಿ ರೂಪಾಯಿಗಳು.) 'ಜೋಕ್ ಮಾಡ್ಬೇಡಿ ಸುಮ್ನಿರಿ ಸಾರ್' ಎಂಬ ಒಬ್ಬ ಸಾಮಾನ್ಯನ ಅಲಷಿಸುವ ಮಾತಿಗೆ ಮತ್ತಷ್ಟು ವಿಸ್ಮಯವನ್ನು ಮೂಡಿಸುವ ಈ ಪಟ್ಟಿಗೆ ಇತ್ತೀಚಿನ ಸೇರ್ಪಡೆ ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕರಲ್ಲೊಬ್ಬರಾದ ನಂದನ್ ನೀಲ್ಕಣಿ. ಕಳೆದ ತಿಂಗಳು ನಿಲ್ಕಣಿ ದಂಪತಿ ತಮ್ಮ ಸಂಪತ್ತಿನ ಅರ್ದದಷ್ಟು ಅಂದರೆ ಸುಮಾರು 5500 ಕೋಟಿ ರೂಪಾಯಿಗಳಷ್ಟನ್ನು ಸಮಾಜಸೇವಾ ಕಾರ್ಯಗಳಿಗೆ ಮುಡಿಪಾಗಿಡುವರೆಂದು ಘೋಷಿಸಿಕೊಂಡಿದ್ದಾರೆ. ಅಲ್ಲದೆ ವಿಪ್ರೋ ಸಂಸ್ಥೆಯ ಅಜೀಮ್ ಪ್ರೇಮ್ಜಿ, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಂಜುದಾರ್ ಷಾ, ಶೋಭಾ ಡೆವೆಲಪರ್ಸ್ನ PNC ಮೆನನ್ ಹಾಗು ಭಾರತಿ ಏರ್ಟೆಲ್ ನ ಸುನಿಲ್ ಮಿತ್ತಲ್ ಕುಟುಂಬ ಈ ಒಪ್ಪಂದಕ್ಕೆ ಸಹಿ ಹಾಕಿರುವ ಇತರ ಭಾರತೀಯರು.

ನೂರಾರು, ಸಾವಿರಾರು ಸರ್ಕಾರಗಳು ನಾಯಕರುಗಳು ಸಮಾಜದ ಸರ್ವ ಕಾರ್ಪಣ್ಯಗಳನ್ನು ನಿವಾರಿಸಬಲ್ಲವರೆಂದು ಅರಚಿ, ಬಂದು, ಬೆಳಗಿ ಮರೆಯಾದರೂ ಇಂದಿಗೂ ಅಪೌಷ್ಟಿಕತೆ, ಆಹಾರದ ಕೊರತೆ, ಕುಡಿಯುವ ನೀರಿನ ಕೊರತೆ, ಮೂಲಭೂತ ಶಿಕ್ಷಣದ ಅಭಾವ, ಕನಿಷ್ಠ ಸೂರಿನ ಅಭಾವ ಎಂಬಂತಹ ಬೇಸಿಕ್ ಅವಶ್ಯಕೆತೆಗಳೇ ವಿಶ್ವದ ಕೋಟಿ ಕೋಟಿ ಜನರಿಗೆ ಸಿಗದಿರುವದು ದುರದೃಷ್ಟಕರ. ಕಾರಣ ಒಂದೆಡೆ ಸರ್ಕಾರಗಳ ಬಾಯ್ಬಡಿಕೆಯ ತೋರಿಕೆಯಾದರೆ ಇನ್ನೊಂದೆಡೆ ಹೊಟ್ಟೆ ತುಂಬಿ ಮಿಕ್ಕುವುದನ್ನೂ ಮುಕ್ಕುವ ಮನಸ್ಥಿತಿಯ ಜನರ ಗುಂಪು. ಒಂದು ವರದಿಯ ಪ್ರಕಾರ ವಿಶ್ವದ ಅರ್ದದಷ್ಟು ಸಂಪತ್ತು ಇಂದು ಕೇವಲ ಕೇವಲ 1% ನಷ್ಟು ಜನರ/ಶ್ರೀಮಂತರ ಬೊಗಸೆಯೊಳಗಿದೆಯಂತೆ! ಅಂದರೆ ಭೂಮಿಯನ್ನು ಸರಿಯಾಗಿ ಎರಡು ಭಾಗಗಳಾಗಿ ವಿಂಗಡಿಸಿ ಒಂದು ಭಾಗದಲ್ಲಿ ಈ ಎಲ್ಲಾ ಶ್ರೀಮಂತರನ್ನು ಹಾಗು ಇನ್ನೊಂದೆಡೆ ಉಳಿದ ಇತರರನ್ನು ಬಿಟ್ಟರೆ ಏಳುವರೆ ಕೋಟಿಯಷ್ಟು ಜನ ಸಂಪೂರ್ಣ ಒಂದು ಭಾಗವನ್ನು ಆಕ್ರಮಿಸಿದರೆ ಉಳಿದ ಭಾಗವನ್ನು ತುಂಬಿಕೊಳ್ಳುವವರು ಬರೋಬ್ಬರಿ ಏಳುನೂರ ಐವತ್ತು ಕೋಟಿ ಜನ!! ಈ ಮಟ್ಟಿನ ಮಹಾವ್ಯತ್ಯಾಸವನ್ನು ಅರಿತೋ ಏನೋ ಎಂಬಂತೆ ಬಿಲ್ ಗೇಟ್ಸ್ ಹಾಗು ವಾರೆನ್ ಬಫೆಟ್ ಒಟ್ಟುಗೂಡಿ ಒಂದು ಹೊಸ ಇತಿಹಾಸವನ್ನು ಬರೆಯಲು ಮುಂದಾಗಿರುವುದು. ತುಂಬು ಹೃದಯದಿಂದ ಕೊಟ್ಟು ಸಾರ್ಥಕತೆಯ ಹಾಗು ಅರ್ಥಪೂರ್ಣ ಜೀವನವನ್ನು ನೆಡೆಸಲು ಪ್ರೇರೇಪಿಸುತ್ತಿರುವುದು. ದಿ ಗಿವಿಂಗ್ ಪ್ಲೆಡ್ಜ್ ಸಂಸ್ಥೆ ವಿಶ್ವದ ಇಂತಹ ಹಲವಾರು ಮೂಲಭೂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ, ಮನುಷತ್ವ ಎಂಬ ಮರೆಯಾಗುತ್ತಿರುವ ಚಿಗುರನ್ನು ಬೆಳೆಸಲು ಪಣತೊಟ್ಟಿದೆ.

ಇನ್ನು ನಮ್ಮ ದೇಶದ ವಿಚಾರಕ್ಕೆ ಬಂದರೆ ಒಂದು ಪಕ್ಷ ಈ ಸಂಸ್ಥೆ ಏನಾದರೂ ನಮ್ಮ ದೇಶದ ಮೊದಲ ಇಪ್ಪತ್ತರಿಂದ ಇಪ್ಪತೈದು ಶ್ರೀಮಂತರ ಮನ ಒಲಿಸಿದರೂ ಸಾಕು, ಅದರಿಂದ ಬರುವ ಮೊತ್ತವೇ ಸುಮಾರು ಹದಿನೈದು ಲಕ್ಷ ಕೋಟಿ ರೂಪಾಯಿಗಳು!! (ಪ್ರತಿಯೊಬ್ಬರು ತಮ್ಮ ಸಂಪತ್ತಿನ ಅರ್ಧದಷ್ಟು ಮೊತ್ತವನ್ನು ವಿನಿಯೋಗಿಸಲು ಮುಂದಾದರೆ ಮಾತ್ರ). ನಮ್ಮ ದೇಶದ ಒಂದು ವರ್ಷದ ಆಯವ್ಯಯವೇ ಸುಮಾರು ಇಪ್ಪತ್ತರಿಂದ ಇಪ್ಪತ್ತೆರೆಡು ಲಕ್ಷ ಕೋಟಿಗಳಿರುವಾಗ ನಮ್ಮೆಲ್ಲ ದೊಡ್ಡ ಮಹಾನುಭಾವರುಗಳೇನಾದರೂ ಇಂತಹದೊಂದು ಮನೋವೈಶಾಲ್ಯತೆಯನ್ನು ಮೆರೆದರೆ ಖಂಡಿತವಾಗಿಯೂ ಆಳುವ ಸರ್ಕಾರಗಳು ತಮ್ಮ ನೂರಾರು ವರುಷಗಳ 'ವೃತ್ತಿಜೀವನ'ದಲ್ಲಿ ಸಾಧಿಸದ್ದನ್ನು ಒಂದೇ ವರ್ಷದಲ್ಲಿ ಇಂತಹ ಕಾರ್ಯಗಳು ಮಾಡಿ ತೋರಿಸಬಲ್ಲವೇನೋ?!
ಇನ್ನು ಸಮಾಜಸೇವೆ ಎನ್ನುವ ಬಣ್ಣದ ಮಾತುಗಳಿಂದ ರಾಜಕಾರಣ ಮಾಡುವ ನಮ್ಮ ನಾಯಕರು ಹಾಗು ಅವರ ಪಕ್ಷಗಳು 'ನಿಜವಾದ' ಸಮಾಜಸೇವೆಯ ಹೆಸರಿನಲ್ಲಿ ತಮ್ಮ/ಪಕ್ಷದ ಅರ್ಧದಷ್ಟು ಹಣವನ್ನು ಬಿಟ್ಟುಕೊಡುವ ಒಂದು ಕರಾರಿನ ಮೇಲೆ ಒಂದು ಪಕ್ಷ ಸಹಿ ಮಾಡಲಿ ನೋಡುವ! ಪ್ರಸ್ತುತ ಸ್ಥಿತಿಗತಿಗಳನ್ನು ಗಮನಿಸಿದರೆ ನಮ್ಮ ಕನಸ್ಸಿನಲ್ಲೂ ಇಂತಹದೊಂದು ಘಟನೆ ನೆಡೆಯುತ್ತದೆ ಎಂದು ಊಹಿಸಲಾಗುವುದಿಲ್ಲ ಬಿಡಿ.
ಭಾರತದ ಶ್ರೀಮಂತರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದು ದಿನದಿಂದ ದಿನಕ್ಕೆ ಒಂದಿಲ್ಲೊಂದು ಶತಕೋಟಿಗಳ ವಹಿವಾಟನ್ನು ನೆಡೆಸುವ 'ಇವರು', ಮಿತ್ತಲ್, ಟಾಟಾ, ಪ್ರೇಮ್ಜಿ ಯವರಂತಹ ಮಹಾನುಭಾವರೇ ತಮ್ಮ ಬಹುಪಾಲು ಮೊತ್ತದ ಹಣವನ್ನು ಇಂತಹ ಒಂದು ಸದುದ್ದೇಶದ ಕಾರ್ಯಗಳಿಗೆ ಮುಡಿಪಾಗಿಡುವಾಗ ಗುಲಗಂಜಿಯಷ್ಟು ಹಣವನ್ನಷ್ಟೇ ಎಲ್ಲೋ ಒಂದೆಡೆ ಕೊಟ್ಟು ನಾನೂ ಸಮಾಜಸೇವಕ ಎಂಬಂತೆ ಫೋಸು ಕೊಟ್ಟು ಇಷ್ಟೆಲ್ಲಾ ಬೆಳೆಯಲು ಪ್ರತ್ಯಕ್ಷವಾಗಿ ಅಥವ ಪರೋಕ್ಷವಾಗಿ ಕಾರಣರಾದ ದೇಶ ಹಾಗು ದೇಶದ ಜನತೆಗೆ ಮರಳಿಸುವ ಕಾರ್ಯವನ್ನು ಮಾಡುವುದೆಂದು? ಬಿಟ್ಟಿ ಇಂಟರ್ನೆಟ್ಟನು ಬಿಸಿನೆಸ್ ನ ಒಳಯೋಚನೆಯಲ್ಲೇ ಕೊಟ್ಟರು ಅವರನ್ನು ಸಮಾಜಸೇವಕರಂತೆ ಕಾಣುವುದು ಮಾತ್ರ ನಮ್ಮ ದುರದೃಷ್ಟ.

ಖ್ಯಾತ ಬರಹಗಾರ್ತಿ ಸುಧಾಮೂರ್ತಿಯವರು ಒಂದೆಡೆ ತಮ್ಮ ವೃತ್ತಿ ಜೀವನದ ಆರಂಭದ ಕಾಲದಲ್ಲಿ ಟಾಟಾ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗ ನೆಡೆದ ಒಂದು ಘಟನೆಯನ್ನು ಮೆಲುಕು ಹಾಕಿಕೊಳ್ಳುತ್ತಾರೆ. ಟಾಟಾ ಗುಂಪಿನ ಅಂಗಸಂಸ್ಥೆಯಾಗಿದ್ದ ಟೆಲ್ಕೊ ಕಂಪನಿಯ ಮೊದಲ ಮಹಿಳಾ ತಾಂತ್ರಿಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಕೆಲವರ್ಷಗಳ ನಂತರ ನಿರ್ಗಮಿಸುವ ಸಮಯದಲ್ಲಿ ಟಾಟಾ ಸಂಸ್ಥೆಯ ಮುಕುಟಮಣಿ JRD ಟಾಟಾರನ್ನು ಕಾಣುವ ಸಂಧರ್ಭವೊಂದು ಒದಗಿಬಂದು ಆಕೆ ತನ್ನ ಪತಿ ಹೊಸದೊಂದು (ಇನ್ಫೋಸಿಸ್) ಕಂಪನಿಯನ್ನು ಹುಟ್ಟುಹಾಕಲು ಮುಂದಾಗಿದ್ದಾರೆ, ತಾನು ಅವರ ಸಹಾಯಕ್ಕಾಗಿ ಇಲ್ಲಿಯ ಕೆಲಸವನ್ನು ಬಿಡುತ್ತಿದ್ದೇನೆ ಎಂದಾಗ ಅವರು ಮಂದಹಾಸದ ನೆಗೆಯೊಂದನ್ನು ಬೀರುತ್ತಾ 'ನೀನು ನಿಮ್ಮ ಹೊಸ ಕಂಪನಿಯಿಂದ ಅದೆಷ್ಟೇ ಸಂಪತ್ತನ್ನು ಗಳಿಸು, ಆದರೆ ಖಂಡಿತವಾಗಿಯೂ ನೀನು ಗಳಿಸಿದ್ದನು ಸಮಾಜಕ್ಕೆ ಹಿಂದುರಿಗಿಸುವಳಂತಾಗು ಏಕೆಂದರೆ ಸಮಾಜ ನಿನಗೆ ಹೆಚ್ಚೆಚ್ಚು ನೀಡಿದರಿಂದಲೇ ನೀನು ಹೆಚ್ಚೆಚ್ಚು ಬೆಳೆಯಬಹುದು. ಹೀಗೆ ಸಮಾಜದಿಂದ ಪಡೆದದ್ದನ್ನು ಹಿಂದಿರುಗಿಸಲು ಮಾತ್ರ ಮರೆಯಬೇಡ' ಎಂದಿದ್ದರಂತೆ. JRD ಯವರನ್ನು ಗುರುವಿಂದಂತೆ ಪೂಜಿಸುತ್ತಿದ್ದ ಸುಧಾಮೂರ್ತಿ ಅವರ ಆ ಮಾತನ್ನು ಇಂದು ಅಕ್ಷರ ಸಹ ನಿಜವಾಗಿ ಮಾಡಿ ತೋರಿಸಿದ್ದಾರೆ. ಇನ್ಫೋಸಿಸ್ ಫೌಂಡೇಶನ್ ಎಂಬ ಲೋಕೋಪಯೋಗಿ ಸಂಸ್ಥೆಯನ್ನು ಹುಟ್ಟುಹಾಕಿ ದಕ್ಷಿಣ ಭಾರತದಾದ್ಯಂತ ತಮಗಾದ ಸೇವೆಯನ್ನು ನಿಸ್ವಾರ್ಥವಾಗಿ ಮಾಡಿಕೊಂಡು ಬಂದಿದ್ದಾರೆ. ನೂರಾರು ಸಂಸ್ಥೆಗಳಿಗೆ ಆದರ್ಶಪ್ರಾಯರಾಗಿದ್ದರೆ.

ಇಂತಹ ಜನೋಪಕಾರಿ ಮನೋಭಾವ ಮರಿಮಕ್ಕಳ ಮೊಮ್ಮಕ್ಕಳಿಗೆ ಕೂಡಿಡುವ ಇಂದಿನ ಕಾಲದಲ್ಲಿ ಹಲವರಲ್ಲಿ ಮೂಡಬೇಕಿದೆ. ಭೂಮಿಯ ಮೇಲಿನ ಯಾವೊಂದು ಜೀವಿಗಳಲ್ಲೂ ಕಾಣದ ಭೇದ-ಭಾವ, ಮೇಲು-ಕೀಳು ಹಾಗು ಬಡವ-ಬಲ್ಲಿದನೆಂಬ ನೀಚ ಪಿಡುಗುಗಳನ್ನು ಮಾನವ ಬುಡಸಮೇತ ಕಿತ್ತೆಸೆಯುವ ಸಮಯ ಬಂದಿದೆ. ಬಿಲ್ ಗೇಟ್ಸ್ ಹಾಗು ವಾರೆನ್ ಬಫೆಟ್ ರ ಈ ನಿಟ್ಟಿನ ಕಾರ್ಯ ಇನ್ನಷ್ಟು ಯಶಸ್ಸು ಕಾಣಲಿ, ಸಕಲರಲ್ಲೂ ಇಂತಹ ಲೋಕೋಪಯೋಗಿ ಮನೋಭಾವ ಬೆಳೆಯುವಂತಾಗಲಿ ಎಂದು ಸದ್ಯಕ್ಕೆ ಆರೈಸೋಣ.

ದಿ ಗಿವಿಂಗ್ ಪ್ಲೆಡ್ಜ್ ನ ಹೆಚ್ಚಿನ ಮಾಹಿತಿಗಾಗಿ,

https://givingpledge.org/

Wednesday, November 29, 2017

ಕಥೆ - ಒಂಟಿಬೆಟ್ಟದ ಸ್ಮಶಾನ - 1

                               
ಸಿಟಿಯ ಬಿಸಿಲಲ್ಲೇ ಹುಟ್ಟಿ ಬೆಳೆದಿದ್ದ ರಾಹುಲ್ನಿಗೆ ಹಾರರ್ ಮೂವಿಗಳೆಂದರೆ ಪಂಚಪ್ರಾಣ. ಪ್ರೀತಿ,ಪ್ರೇಮ,ಪ್ರಣಯ ಎಂಬ ಅಳಿಯ ಅಲ್ಲ ಮಗಳ ಗಂಡನೆನಿಸಿಕೊಳ್ಳುವ ಚಿತ್ರಗಳೆಂದರೆ ಆತ ಉರಿದುಬೀಳುತ್ತಿದ್ದ. ಬಿಟ್ಟಿಯಾಗಿ ಅಂತಹ ಚಿತ್ರದ ಟಿಕೆಟ್ ದೊರೆತರೂ ಹೋಗದೆ ಇರುವಂತಹ ಆಸಾಮಿ. ಆದರೆ ಸಿಟಿಯಲ್ಲಿ ಯಾವುದೇ ಇಂಗ್ಲಿಷ್ ಹಾರರ್ ಚಿತ್ರಗಳೂ ಬಂದರೂ ಬೆಂಬಿಡದೆ ನೋಡುವ ಖಯಾಲಿ. ಚಿತ್ರದ ಪೋಸ್ಟರ್ ನೋಡಿಯೇ ಗಡ ಗಡ ನಡುಗುವ ಒಂದಿಷ್ಟು ಸ್ನೇಹಿತರನ್ನು ಅವರು ಅಕ್ಷರ ಸಹ ಕಾಲಿಗೆ ಅಡ್ಡ ಬೀಳುತ್ತೀನಿ ಬಿಡಪ್ಪ ಎಂದರೂ ತಾನೇ ಖುದ್ದಾಗಿ ಅಷ್ಟೂ ಜನರಿಗೆ ಟಿಕೆಟ್ ಗಳನ್ನು ಕೊಂಡು, ಜೊತೆಗೆ ಒಂದಿಷ್ಟು ಪಾಪ್ ಕಾರ್ನ್ ಹಾಗು ಪೆಪ್ಸಿಯನ್ನೂ ಕೊಂಡು ಚಿತ್ರ ಮಂದಿರಕ್ಕೆ ಎಳೆದುಕೊಂಡು ಹೋಗುತ್ತಿದ್ದ. ಕಿವಿ ಸಿಡಿದು ಹೋಗುವ ಶಬ್ದದೊಂದಿಗೆ ಎದೆ ಜಲ್ಲ್ ಎನಿಸುವ ದೃಶ್ಯಗಳ ಕುತೂಹಲ ಒಂದೆಡೆಯಾದರೆ, ಊರಿಗೆ ದೊಡ್ಡದಾದ ಮೀಸೆ ಗಡ್ಡವನ್ನು ಬಿಟ್ಟು ನಿಮಿರುವ ತನ್ನ ಉತ್ತರಕುಮಾರ ಸ್ನೇಹಿತರು ಕಣ್ಮುಚ್ಚಿ ಕಿವಿಗೆ ಕೈಯ್ಯ ಬೆರಳುಗಳನ್ನು ಚುಚ್ಚಿ ಪಡುವ ಪಾಡಿನ ಮಜಾ ಇನ್ನೊಂದೆಡೆ. ಆ ಸ್ನೇಹಿತರೋ ಈತ ತುತ್ತು ಕೊಡಿಸಿ ಟಿಕೆಟ್ ಅನ್ನೂ ಕೊಡಿಸಿದ ಎಂಬ ಒಂದೇ ಕಾರಣಕ್ಕೆ ಮಾತ್ರ ತಮ್ಮ ದೇಹವನ್ನು ಸಿನಿಮಾ ಮಂದಿರದ ಒಳಗಿರಿಸಿ ಮನಸ್ಸನ್ನು ಊರ ದೇವಾಲಯದ ದೇವರ ಮುಂದಿರಿಸುತ್ತಾರೆ ವಿನ್ಹಾ ಗೆಳೆತನದ ಗಟ್ಟಿತನವನ್ನೂ ಪ್ರದರ್ಶಿಸುವುದಕಂತೂ ಅಲ್ಲವೇ ಅಲ್ಲ.ಅಂತೂ ತಿಂಗಳಿಗೆ ಎರೆಡೆರಡು ಅಮಾವಾಸ್ಯೆಯನ್ನು ಕಾಣುತ್ತಿದ್ದರು ಆತನ ಸ್ನೇಹಿತರು. ಒಂದು ಚಂದ್ರ ಕಾಣೆಯಾದಗಾದರೆ ಮತ್ತೊಂದು ರಾಹುಲ್ನ ಬಿಟ್ಟಿ ಟಿಕೆಟ್ಟು ಸಿಕ್ಕಾಗ!

ಆ ತಿಂಗಳು ರಾಹುಲ್ನ ಆಫೀಸಿನ ಸಹೋದ್ಯೋಗಿ ಕಮ್ ಬೆಸ್ಟ್ ಫ್ರೆಂಡ್ನ ಮದುವೆ ಸಟ್ಟೇರಿತ್ತು. ಮದುಮಗ ಮದುವೆಯ ಒಂದು ತಿಂಗಳ ಮೊದಲೇ ರಜೆ ಹಾಕಿ ಊರಿಗೆ ಹೋದರಿಂದ ಇತರ ಸ್ನೇಹಿತರಾದಿಗಳಿಗೆ ಕಾಗದ ಹಂಚುವ ಕೆಲಸ ಒಂದೆಡೆಯಾದರೆ, ಮದುಮಗನ ಊರು ಮಲೆನಾಡಿನ ಧಟ್ಟಾರಣ್ಯದ ಪುಟ್ಟ ಗೂಡಿನೊಳಗೆ ಅವಿತಿರುವಂತ್ತಿರುವಾಗ ಮದುವೆಯ ಮನೆಗೆ ಸಿಟಿಯಿಂದ ತಲುಪಬೇಕಾದ ಬಹುಮಖ್ಯ ವಸ್ತುಗಳೆಲ್ಲವನ್ನೂ ಊರಿನಿಂದ ಬರುವ ಯಾರೊಟ್ಟಿಗಾದರೂ ಹೊರಿಸಿ ಕಳಿಸುವ ಜವಬ್ದಾರಿಯೂ ರಾಹುಲ್ನ ಮೇಲಿದ್ದಿತು. ಇಷ್ಟೆಲ್ಲಾ ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿರುವ ಆಸಾಮಿ ಮದುವೆಯ ಎರಡು ದಿನ ಮೊದಲು ಬರುತ್ತೀನಿ ಎಂದರೆ ಕೇಳಬೇಕಾ. ಮದುಮಗನ ಅಮ್ಮನೇ ಖುದ್ದಾಗಿ ಫೋನಾಯಿಸಿ ಹದಿನೈದು ದಿನ ಮೊದಲೇ ಬರುವಂತೆ ಹೇಳುತ್ತಾರೆ. ಸರಿ ಎನ್ನುತ್ತಾ ಕೊನೆಗೆ ಒಂದಿಷ್ಟು ಕಳ್ಳ ನೆಪವನ್ನು ಕ್ರೂಡೀಕರಿಸಿ ಜೊತೆಗೆ ಗೆಳೆಯನ ಮದುವೆಯ ನೆಪವನ್ನೂ ಒಡ್ಡಿ ಎರಡು ವಾರಗಳ ಬರಪೂರ ರಜೆಯನ್ನು ಆಫೀಸಿನಿಂದ ಗಿಟ್ಟಿಸಿಕೊಂಡ.

ಅದು ಮಳೆಗಾಲ ಹಾಗು ಚಳಿಗಾಲ ಪರಸ್ಪರ ಸಂಧಿಸುವ ವಿಶಿಷ್ಟವಾದ ಮಾಸ. ಬಿಟ್ಟು ಬಿಟ್ಟು ಹೊಡೆಯುವ ಹಿಂಗಾರಿನ ಮಳೆ ಒಂದೆಡೆಯಾದರೆ ಮೈ ಕೊರೆಯುವ ಚಳಿ ಮತ್ತೊಂದೆಡೆ. ಮಲೆನಾಡಿನ ದಟ್ಟಾರಣ್ಯದ ಕಿರಿದಾದ ಗುಂಡಿಬಿದ್ದ ರಸ್ತೆಯಲ್ಲಿ ಆಮೆನೆಡೆಯಲ್ಲಿ ದಿನಕೊಮ್ಮೆ ಬರುವ ಬಸ್ಸು ರಾಹುಲ್ನನ್ನು ಮದುಮಗನ ಊರಿನ ಮಣ್ಣಿನ ದಾರಿಯ ಮುಂದೆ ತಂದು ನಿಲ್ಲಿಸಿತು. ಹಸಿರು ಸಾಗರದೊಳಗೆ ಕಷ್ಟ ಪಟ್ಟು ನುಗ್ಗಿದ ಆ ಮಣ್ಣಿನ ರಸ್ತೆಯೊಂದೆ ಮನೆ ತಲುಪಲು ಸದ್ಯಕ್ಕೆ ರಾಹುಲನಿಗೆ ಸಿಕ್ಕ ಏಕೈಕ ಸುಳಿವು. ಬ್ಯಾಗನ್ನು ಹೆಗಲ ಮೇಲೇರಿಸಿಕೊಂಡು ಸಿಳ್ಳೆಯಾಕುತ್ತಾ ಆತ ಮುನ್ನೆಡೆದ. ಸೂರ್ಯನ ಒಂದಿಷ್ಟು ಬೆಳಕನ್ನು ಜಪ್ಪಯ್ಯ ಅಂದರೂ ಬಿಡಲೊಲ್ಲೆವು ಎಂಬಂತೆ ಬೆಳೆದಿದ್ದ ಸಾಗರ ಸಂಖ್ಯೆಯ ಮರಗಳ ಕಣ್ ಕೊರೆಸುವಿಕೆ ಸಾಕು ಸಾಕಪ್ಪ ಎನಿಸುತಿತ್ತು. ಜೊತೆಗೆ ಕೆಲ ಹೊತ್ತಿನ ಮುಂಚಷ್ಟೇ ಭೋರ್ಗರೆದಿದ್ದ ಮಳೆರಾಯ ಕಾಡಿನ ಹಸಿರಿನೊಟ್ಟಿಗೊಳಗೂಡಿ ವಿಭಿನ್ನ ಬಗೆಯ ಪರಿಮಳವನ್ನು ಸೃಷ್ಟಿಸಿದ್ದ . ಅದೂ ಸಹ ಕೆಲ ಸಮಯದ ನಂತರ ತಲೆ ನೋವನ್ನು ತರಿಸುತ್ತಿತ್ತು. ಒಟ್ಟಾರೆ ಯಾವೆಲ್ಲ ಮಿತವಾಗಿ ಹಿತವಾಗಿರಬೇಕಿತ್ತೋ ಅವುಗಳೆಲ್ಲ ಇಂದು ಹೆಚ್ಚಾಗಿ ಚುಚ್ಚಿ ಸತಾಯಿಸುತ್ತಿವೆ. ಅಂತೂ ಒಂದು ತಾಸು ನೆಡೆದ ನಂತರ ಸಿಕ್ಕ ಮತ್ತೊಂದು ರಹದಾರಿಯ ಮುಂದೆ ಒಣಗಿದ ಮಾವಿನ ತೋರಣವನ್ನು ಕಂಡಾಗ ಮಾತ್ರ ಈ ದಿಕ್ಕಿನಲ್ಲಿ ಜನಗಳಿರಬಹುದೆಂಬ ಒಂದಿಷ್ಟು ಸುಳಿವು ರಾಹುಲ್ನಿಗೆ ಸಿಕ್ಕಿತು.ನಿಲ್ಲುತ್ತಾ, ಏದುಸಿರು ಬಿಡುತ್ತಾ, ಮತ್ತೆ ಬೇಗಬೇಗನೆ ನೆಡೆಯುತ್ತಾ ಅಂತೂ ನಾಲ್ಕೈದು ಮನೆಗಳಿರುವ ಜಾಗವೊಂದನ್ನು ಕಂಡಾಗ ತಾನು ದಾರಿ ತಪ್ಪಿದೆನೆಂದು ಕಾಡುತಿದ್ದ ಆತಂಕ ಆತನಲ್ಲಿ ಕೊಂಚ ಕಡಿಮೆಯಾಯಿತು.

ಇನ್ನೇನು ಆ ಪುಟ್ಟ ಊರ ಒಳಗೆ ಕಾಲಿಡಬೇಕು ಅನ್ನುವಷ್ಟರಲ್ಲಿ ಕಿವಿಯ ತಮಟೆಗಳೇ ಛಿದ್ರವಾಗುವಂತಹ ಭಯಂಕರ ಸದ್ದಿಗೆ ಬೆಚ್ಚಿ ಬಿದ್ದ ರಾಹುಲ್. ಹುಲಿಗಳೂ ಬಾಲಮುದುಡಿ ಜಾಗಕೀಳುವಂಥಹ ಶ್ವಾನ ದಳಗಳವು. ಬಣ್ಣ ಬಣ್ಣದ ಬಟ್ಟೆ ಹಾಗು ಬೆನ್ನಿನ ಮೇಲೆ ನೇತಾಕಿಕೊಂಡಿದ್ದ ಬ್ಯಾಗನ್ನು ಕಂಡು ತಮ್ಮ ಕಲ್ಪನೆಗೆ ತಕ್ಕಂತೆ ಏನೋ ಒಂದು ವಿಷಜಂತುವನ್ನು ಕಲ್ಪಿಸಿಕೊಂಡತೆ ಆ ನಾಯಿಗಳು ಅಷ್ಟ ದಿಕ್ಕೂಗಳಿಂದಲೂ ರಾಹುಲ್ನನ್ನು ಘೇರಾವ್ ಮಾಡಿದವು. ಅವುಗಳ ಆಳೆತ್ತರದ ದೇಹಸಿರಿ, ಕ್ಷಣಾರ್ಧದಲ್ಲಿ ಭೇಟೆಯನ್ನು ಕತ್ತರಿಸಿ ಹಾಕಬಹುದಾದ ಚೂಪಾದ ಭಯಂಕರವಾದ ಹಲ್ಲುಗಳು, ನೋಟದಲ್ಲೇ ವೈರಿಯನ್ನು ಮೂರ್ಛೆ ತಪ್ಪಿಸಬಲ್ಲವಂತಹ ಆ ರೌದ್ರ ಕಣ್ಣುಗಳು ಅಂತಹ ತಣ್ಣನೆಯ ವಾತಾವರಣದಲ್ಲಿಯೂ ರಾಹುಲ್ನ ಮೈಬೆವರುವಂತೆ ಮಾಡಿದವು. ಪ್ರತಿ ಕ್ಷಣಕ್ಕೂ ಅರಚುತ್ತಾ ಇಂಚಿಚೆ ಮುಂಬರುತ್ತಿದ್ದ ಶ್ವಾನ ದಳಗಳ ವೃತ್ತ ಇನ್ನೇನು ರಾಹುಲ್ನನ್ನು ಆವರಿಸಿದವು ಅನ್ನುವಷ್ಟರಲ್ಲಿ ಅತ್ತಕಡೆಯಿಂದ ಓಡೋಡಿ ಬಂದ ವ್ಯಕ್ತಿಯೊಬ್ಬ ವೃತ್ತವನ್ನು ಚದುರುವಂತೆ ಮಾಡಿದ. ಆದರೆ ತೋರ್ಪಡಿಕೆಗಷ್ಟೇ ಓಡುವಂತೆ ನಟಿಸಿದ ಆ ಗುಂಪು ಕತ್ತಿನ ಕೂದಲನ್ನು ನಿಮಿರಿಸಿ ದೂರದಲ್ಲಿ ಗುರ್ರ್ ಎನ್ನುತ ಸದ್ದುಮಾಡುತ್ತಲೇ ಇದ್ದವು. ಅವುಗಳ ನೋಟದಲ್ಲಿ ಏನೋ ಒಂದು ಬಗೆಯ ಕಿಚ್ಚು ಎದ್ದು ಕಾಣುತ್ತಿತ್ತು. ಅವುಗಳಿಗೆ ಮಾತು ಬಲ್ಲದಾಗಿದ್ದಿದ್ದರೆ ಬೆಚ್ಚಿ ಬೀಳುವ ಸತ್ಯವೊಂದನ್ನು ಅಲ್ಲಿ ಬಾಯಿ ಬಿಡುತ್ತಿದ್ದವೇನೋ ಯಾರು ಬಲ್ಲರು?!

ರಾಹುಲ್ನ ಆಗಮನವನ್ನೇ ಕಾಯುತ್ತಿದ್ದ ಆ ವ್ಯಕ್ತಿ ತಾನು ಮದುಮಗನ ಸಂಬಂಧಿಯೆಂದೂ ರಾಹುಲ್ ಗೆ ಬಹಳ ಬಾರಿ ಫೋನಾಯಿಸಿದರೂ ಆತನ ಮೊಬೈಲ್ನಿಂದ ಯಾವುದೇ ಉತ್ತರ ಬರಲಿಲ್ಲವೆಂದು ಹೇಳಿದಾಗ ಉತ್ತರವಾಗಿ ರಾಹುಲ್ ದಾರಿಯುದ್ದಕ್ಕೂ ಒಂದಿನಿತು ಸಿಗ್ನಲ್ನ ಸುಳಿವು ಸಿಗಲಿಲ್ಲ ಎನ್ನುತ ಮೊಬೈಲ್ನನ್ನು ತೆಗೆದು ನೋಡುತ್ತಾನೆ, ಅಷ್ಟೂ ಪಾಯಿಂಟ್ಗಳ ಸಿಗ್ನಲ್ ಮೊಬೈಲ್ ನ ಒಂದು ತುದಿಯಲ್ಲಿ ಕಾಣುತ್ತಿದೆ! ನಾಯಿಗಳ ಸದ್ದಿಗೆ ಎದೆಬಡಿತ ಒಂದೇ ಸಮನೆ ಏರುತ್ತಿರುವಾಗ ರಾಹುಲ್ನಿಗೆ ಸದ್ಯಕ್ಕೆ ಬೇರ್ಯಾವ ಯೋಚನೆಯೂ ಆತನಲ್ಲಿ ಬರುವುದಿಲ್ಲ. ಏನೋ ಮೊಬೈಲ್ ನ ತೊಂದರೆ ಇರಬೇಕೆಂದು ಸುಮ್ಮನಾಗುತ್ತಾನೆ. ಮದುವೆಯ ಮನೆಯ ಒಳಗೆಲ್ಲ ಒಂದು ಸುತ್ತು ಸುತ್ತಿ, ಮದುಮಗ ಎಲ್ಲೆಂದು ವಿಚಾರಿಸಿ, ಆತ ಪಟ್ಟಣಕ್ಕೆ ಹೋಗಿದ್ದಾನೆಂದು ತಿಳಿದು ಮದ್ಯಾಹ್ನದ ಊಟವನ್ನು ಮಾಡಿ ಹಾಗೆಯೆ ಒಂದು ನಿದ್ರೆಗೆ ಜಾರುತ್ತಾನೆ.

ಸಂಜೆ ಕಣ್ಣು ತೆರೆದಾಗ ಸಮಯ ಐದಾಗಿದ್ದಿತು. ಎದ್ದು ರೆಡಿಯಾಗಿ ಹೊರಗೆ ಬಂದ ರಾಹುಲ್ ಗೆ ಮಲೆನಾಡಿನ ಘಮಘಮಿಸುವ ಕಾಫಿಯ ಕಪ್ಪು ಸಿಕ್ಕಿ ಕ್ಷಣಕಾಲ ಕಾಲವೇ ಮರೆತುಹೋದಂತಿತ್ತು. ಒಂದೆರೆಡು ಕೆಜಿಯಷ್ಟು ಕಾಫಿಪುಡಿಯನ್ನು ಮನೆಗೆ ತೆಗೆದುಕೊಂಡು ಹೋಗುವುದಾಗಿ ಕೇವಲ ಮೊಬೈಲ್ನ ಸದ್ದಿನಲ್ಲಿ ಪರಿಚಯವಿದ್ದ ಮದುಮಗನ ಅಮ್ಮನಿಗೆ ಹೇಳಿ ಮನೆಯಿಂದ ಹೊರಬಂದ. ಮದುವೆಯ ಮನೆಯ ಕೆಲವೇ ಜನರ ಸದ್ದಿನಲ್ಲಿ ತನ್ನ ಮನೆಯಿಂದ ಬಂದ ಹಲವು ಮಿಸ್ಡ್ ಕಾಲ್ ಗಳು ಆತನಿಗೆ ತಿಳಿಯಲೇ ಇಲ್ಲ. ಮನೆಯಿಂದ ಕೊಂಚ ದೂರಕ್ಕೆ ಬಂದು ಸುತ್ತಲೂ ಯಾವುದೇ ಹುಲಿಯಾಕಾರದ ನಾಯಿಗಳು ಇಲ್ಲವೆಂದು ಖಚಿತಪಡಿಸಿಕೊಂಡು ಮನೆಗೆ ಫೋನಾಯಿಸಿದ. ಅತ್ತ ಕಡೆಯಿಂದ ಅಮ್ಮ 'ಹಲೋ' ಎಂಬ ಸ್ವಾಗತಸೂಚಕವನ್ನೂ ಬಳಸದೆ ಒಂದೇ ಉಸಿರಿನಲ್ಲಿ ಕಳವಳಗೊಂಡಂತೆ ಮಾತುಗಳನ್ನು ಮುಂದುವರಿಸಿದಳು. ಆಕೆ ಇಂದು ಮದ್ಯಾಹ್ನ ಮಲಗಿದ್ದಾಗ ಏನೋ ಕೆಟ್ಟ ಕನಸ್ಸೊಂದು ಬಿದ್ದಂತಾಗಿ, ಅದರ ವರ್ಣನೆಯನ್ನೇನು ಅಷ್ಟಾಗಿ ಮಾಡದೆ, ರಾಹುಲ್ ಮದುವೆ ಮುಗಿಯುವವರೆಗೂ ಎಲ್ಲೂ ದೂರ ಸುತ್ತಲು ಹೋಗದಂತೆ ಹೇಳುತ್ತಾಳೆ. ಅಮ್ಮನನ್ನು ನೋಯಿಸಬಾರದು ಎಂದೆಣಿಸಿ 'ಸರಿ' ಎನ್ನುವ ಮೊದಲೇ ಆತನಿಗೆ ದೂರ ದೂರದ ಮಂಜು ಕವಿದಿದ್ದ ಬೆಟ್ಟಗಳು ಕೈ ಬೀಸಿ ಕರೆದಂತಾಗುತ್ತದೆ. ಒಂದೊಳ್ಳೆ ಟ್ರೆಕಿಂಗ್ ಮಾಡಿದರಾಯಿತು ಎಂದುಕೊಂಡು ಒಳಗೊಳಗೇ ಸಂತೋಷಪಟ್ಟುಕೊಂಡ. ಅಮ್ಮ ಇನ್ನೂ ಏನೋ ಹೇಳುತ್ತಿರುವಾಗಲೇ ಫೋನ್ ಇದ್ದಕ್ಕಿದಂತೆ ಕಟ್ ಆಯಿತು. ಫೋನನ್ನು ನೋಡಿದ ರಾಹುಲ್ ಬೆಳಗ್ಗೆ ಕಂಡಂತೆ ಒಂದಿನಿತು ಸಿಗ್ನಲ್ ಅದರಲ್ಲಿ ಕಾಣುವುದಿಲ್ಲ. ಆತ ನಿಜವಾಗಿಯೂ ಏನೋ ಫೋನಿನಲ್ಲಿ ತೊಂದರೆ ಇರಬಹುದೆಂದು ಊಹಿಸಿ ಮನೆಯ ಒಳಗೆ ಹೋಗಲು ತಿರುಗಿದನಷ್ಟೆ, ರಕ್ತವೆ ಸಿಡಿದು ಹೊರಬರುವಂತೆ ಕೆಂಪಾಗಿದ್ದ ಕಣ್ಣುಗಳನ್ನು ಹೊತ್ತಿಸಿ ಗುರ್ರ್ ಎನ್ನುತ್ತಾ ರಾಹುಲ್ನನ್ನೇ ನೋಡುತ್ತಾ ನಿಂತಿತ್ತು ಬೆಳಗ್ಗೆ ಕಂಡ ನಾಯಿಗಳೆಲ್ಲದಕ್ಕಿಂತ ದೊಡ್ಡದಾದ ನಾಯಿಯೊಂದು!

ಆದರೆ ರಾಹುಲ್ ಈ ಬಾರಿ ಹೆದರದೆ, ಇತರ ಯಾರನ್ನೂ ಸಹಾಯಕ್ಕೆ ಕರೆಯದೆ ನಾಯಿಯ ಕಣ್ಣಿನಲ್ಲಿ ಕಣ್ಣನ್ನಿಟ್ಟೆ ನೋಡಿದ. ಕೆಲಕಾಲ ಗುರ್ರೆಂದು ಸದ್ದು ಮಾಡುತ್ತಿದ್ದ ಆ ನಾಯಿ ಇದ್ದಕ್ಕಿದ್ದಂತೆ ತಣ್ಣಗಾಗಿ ಕಾಲಿನಿಂದ ಮಣ್ಣನು ಪರಪರನೆ ಕೆರೆಯುತ್ತ ಎತ್ತಲೋ ಮುಖ ಮಾಡಿ ಕೂಗತೊಡಗಿತು. ನಾಯಿಯೊಂದು ಅಷ್ಟೆಲ್ಲ ಅರಚಿದರೂ ಮನೆಯ ಯಾರೊಬ್ಬರೂ ಹೊರಗೆ ಬಾರಲಿಲ್ಲ. ನಾಯಿಯು ಮುಖ ಮಾಡಿ ಕೂಗುತ್ತಿದ್ದ ದಿಕ್ಕಿನೆಡೆ ಎತ್ತರವಾದ ಪರ್ವತವೊಂದು ಏಕಾಂತವಾಗಿ ನಿಂತಿದ್ದಿತು. ಮಧ್ಯಾಹ್ನದ ಮೇಲೆ ಮೋಡಗಳು ಒಂದಿಷ್ಟು ಚದರಿ ಸೂರ್ಯನ ತಿಳಿ ರಶ್ಮಿಗಳು ಕಾಣತೊಡಗುತ್ತಿರುತ್ತವೆ. ಇನ್ನು ಸೂರ್ಯಾಸ್ತವಾಗಲು ಒಂದು ತಾಸಿರುವಾಗ ಬೇಗನೆ ಹೋದರೆ ಆ ಬೆಟ್ಟದ ಮೇಲೆ ನಿಂತು ಆನಂದಿಸಬಹುದು ಎಂದೆಣಿಸಿ, ಅಲ್ಲದೆ ನಾಯಿಯು ಆಕಡೆಯೆ ತಿರುಗಿ ಕೂಗುತ್ತಿದ್ದರಿಂದ ಚಿತ್ರಗಳಲ್ಲಿ ತೋರಿಸುವಂತೆ ಏನೋ ಒಂದು ಪತ್ತೇದಾರಿ ವಿಷಯ ಅಲ್ಲಿರಬಹುದು ಎಂದು ತನ್ನಲ್ಲೇ ಅಂದು ಕೊಳ್ಳುತ್ತಾನೆ. ಧೈರ್ಯವೆಲ್ಲ ಒಟ್ಟುಗೂಡಿಸಿ ನಾಯಿಯ ಬಳಿಗೆ ನೆಡೆಯುತ್ತಾನೆ. ನಾಯಿ ತಾನು ಮೊಗ ಮಾಡಿ ಕೂಗುತ್ತಿದ್ದ ದಿಕ್ಕಿನಲ್ಲಿಯೇ ನೆಡೆಯುತ್ತದೆ. ರಾಹುಲ್ ಅದನ್ನು ಹಿಂಬಾಲಿಸುತ್ತಾನೆ. ಹೋಗುವ ಮುನ್ನ ನಾಯಿ ರಾಹುಲನ್ನು ಆತ ಕಡೆ ಬರಬಾರದೇನೋ ಎಂಬಂತೆ ನೆಲವನ್ನು ಪರಪರ ಕೆರೆಯುತ್ತಾ ಸೂಚನೆಯನ್ನು ನೀಡುತ್ತಿರುತ್ತದೆ. ಆದರ ಸೂಚನೆಯ ಅರಿವು ರಾಹುಲ್ಗೇನಾದರೂ ಆಗಿದ್ದಿದ್ದರೆ ಅಕ್ಷರ ಸಹ ಆತ ತಲೆ ಸುತ್ತಿ ಬಿದ್ದುಬಿಟ್ಟಿರುತ್ತಿದ್ದ! ಬೆಟ್ಟವನ್ನು ಏರುವ ಮುನ್ನ ಮನೆಯವರಿಗೆ ಒಂದು ಮಾತು ಹೇಳುವುದನ್ನೂ ಲಕ್ಷಿಸಿ ಜಿಗ್ಗು ಮುಳ್ಳುಗಳನ್ನು ಬಿಡಿಸಿಕೊಳ್ಳುತ್ತಾ ಆತ ಮುನ್ನೆಡೆದ. ಕೆಲ ಹೊತ್ತು ಸದ್ದು ಮಾಡದೇ ರಾಹುಲ್ನ ಮುಂದೆಯೇ ನೆಡೆದ ಆ ಹುಲಿಯಾಕಾರದ ನಾಯಿ ಒಮ್ಮೆಲೇ ‘ಕಯ್ಯಂಯೋ’ ಎಂದು ಸದ್ದು ಮಾಡುತ್ತಾ ಹಿಂದಕ್ಕೆ ಓಡುತ್ತಾ ಮರೆಯಾಯಿತು. ಯಾಕೋ ರಾಹುಲನಿಗೆ ಅಲ್ಲಿಂದಲೇ ವಾಪಸ್ಸು ಹೋಗುವ ಮನಸ್ಸಾದರೂ ಇನ್ನೇನು ಕೆಲವೇ ಹೆಜ್ಜೆಗಳ ಅಂತರದಲ್ಲಿದ್ದ ಬೆಟ್ಟದ ತಪ್ಪಲು ಆತನನ್ನು ಕೈ ಬೀಸಿ ಕರೆದಂತಾಯಿತು.

ರಾಹುಲ್ ಬೆಟ್ಟದ ತಪ್ಪಲನ್ನು ತಲುಪಿದಾಗ ಸೂರ್ಯದೇವ ಅಷ್ಟರಲ್ಲಾಗಲೇ ಕರಗಿ ಮರೆಯಾಗಿದ್ದನು. ಕೆಲನಿಮಿಷಗಳ ಕಾಲ ಅತ್ತಲೇ ನೋಡುತ್ತಾ ನಿಂತ ರಾಹುಲ್ ಇನ್ನೇನು ಎದ್ದು ಹೋರಡಬೇಕು ಎಂದು ಹಿಂತಿರುಗುವಾಗಲೇ ಕಣ್ಣೇ ಕಪ್ಪಾಗುವಂತಹ ಕತ್ತಲೆ ಕಾಡನ್ನು ಆವರಿಸಿರುತ್ತದೆ! ನಿಮಿಷಗಳ ಅಂತರದಲ್ಲಿಯೇ ಬದಲಾವಣೆಯಾದ ಪರಿಸರವನ್ನು ಕಂಡು ದಿಗ್ಬ್ರಾಂತನಾದ ಆತ ತಾನು ಏರಿ ಬಂದ ದಾರಿಯ ದಿಕ್ಕನ್ನು ನೆನಪಿಸಿಕೊಳ್ಳುತ್ತಾನೆ. ತನ್ನ ಕೈಗಳೇ ಕಾಣದಷ್ಟು ಕತ್ತಲೆಯ ಒಳಗೆ ಯಾವುದೊ ಒಂದು ಊಹೆಯ ಮೇಲೆ ಕೆಳಗಿಳಿಯುತ್ತಾ ಸಾಗುತ್ತಾನೆ. ಜೊತೆಗೆ ಅಲ್ಲಿಯವರೆಗು ಬೆಳಕನ್ನು ಸೂಸುತ್ತಿದ್ದ ಮೊಬೈಲ್ ಇದ್ದಕಿದಂತೆ ಸ್ವಿಚ್ ಆಫ್ ಆಗುತ್ತದೆ. ಎಷ್ಟೇ ಪ್ರಯತ್ನಪಟ್ಟರೂ ಅದನ್ನು ಆನ್ ಮಾಡಲು ಆತನಿಗೆ ಆಗುವುದಿಲ್ಲ. ಮುಂದೇನು ಮಾಡಬೇಕೆಂದು ಅರಿಯದ ರಾಹುಲ್ ಆದದ್ದು ಆಗಲಿ ಎನುತ ಸಿಕ್ಕ ಸಿಕ್ಕ ಮರ ಜಿಗ್ಗುಗಳಿಗೆಲ್ಲ ಗುದ್ದಿಕೊಳ್ಳುತ್ತ ದಿಕ್ಕುಕೆಟ್ಟವನಂತೆ ನೆಡೆಯತೊಡಗುತ್ತಾನೆ. ಅದೆಷ್ಟೋ ಘಂಟೆಗಳ ಕಾಲ ನೆಡೆದ ಆತ ಕೊನೆಗೆ ತಾನು ದಾರಿ ತಪ್ಪಿದೆನೆಂದು ಮನಗಂಡ ಮೇಲೆ ಕೊಂಚ ಹೊತ್ತು ಸುಧಾರಿಸಿಕೊಳ್ಳಲು ಅಲ್ಲಿಯೇ ಕೂರುತ್ತಾನೆ. ಧಟ್ಟ ಆರಣ್ಯದ ಕಪ್ಪು ಬೆಳಕಿನಲ್ಲಿ ಎತ್ತ ಹೋಗಬೇಕೆಂದು ಆತನಿಗೆ ತೋಚುವುದಿಲ್ಲ. ಮುಂದೇನು ಮಾಡುವುದೆಂದು ತೋರದೆ, ಮೊಬೈಲ್ನನ್ನು ಒಂದೆರೆಡು ಬಾರಿ ಆನ್ ಮಾಡಲು ಪ್ರಯತ್ನಿಸಿ ಸಾಧ್ಯವಾಗದೆ ಅದನ್ನು ಶಪಿಸುತ್ತಾ ಕೂರುತ್ತಾನೆ.

ಒಂಡೆದೆರಡು ತಾಸು ಅಲ್ಲಿಯೇ ಕೂತ ನಂತರ ಇದ್ದಕ್ಕಿದಂತೆ ಯಾರೋ ಓಡುತ್ತಿರುವ ಸದ್ದನ್ನು ಕೇಳಿ ರಾಹುಲ್ ಚಕಿತನಾಗುತ್ತಾನೆ. ಸದ್ದನ್ನು ತದೇಕಚಿತ್ತದಿಂದ ಆಲಿಸುತ್ತಿದ್ದ ಆತನಿಗೆ ಆ ಹೆಜ್ಜೆಗಳ ಸದ್ದು ತನ್ನೆಡೆಯೆ ಬರುತ್ತಿದ್ದೆ ಎಂಬುದರ ಅನುಭವವಾಗುತ್ತದೆ. ಸದ್ದು ಹತ್ತಿರವಾದಂತೆ ತಾನು ಕೂತಿದ್ದ ನೆಲವೇ ನಡುಗುತ್ತಿದ್ದ ಅನುಭವ! ಈ ಭಯಾನಕ ಓಟ ಯಾವುದೇ ಆನೆಯಾಕಾರದ ಜೀವಿಯಿಂದ ಮಾತ್ರ ಸಾಧ್ಯ. ಆದರೆ ಅದರ ಪ್ರತಿ ಹೆಜ್ಜೆಯ ನಡುವಿನ ಅಂತರ ಹಾಗು ವೇಗ ಅದು ನಾಲ್ಕು ಕಾಲಿನ ಜೀವಿಯೊಂದಕ್ಕೆ ಹೋಲಿಕೆಯಾಗುತ್ತಲೇ ಇಲ್ಲ! ರಾಹುಲ್ ತಾನು ನಿಂತಲ್ಲಿಂದ ಎದ್ದು ನಿಲ್ಲುತ್ತಾನೆ. ಅಲ್ಲಿಯವರೆಗು ಓಡೋಡಿ ಬರುತ್ತಿದ್ದ ಆ ಹೆಜ್ಜೆಗಳ ಸದ್ದು ಒಮ್ಮೆಲೆ ನಿಧಾನಗೊಳ್ಳುತ್ತದೆ. ಮಳೆಯ ದಿನಗಳಾದರಿಂದ ಒಣಗಿದ ದರಗುಗಳು ಅಷ್ಟೇನೂ ಇಲ್ಲದಿದ್ದರೂ ಹೆಜ್ಜೆಯ ಸಪ್ಪಳ ಸ್ಪಷ್ಟವಾಗಿ ಆತನಿಗೆ ಕೇಳುತ್ತಿರುತ್ತದೆ. ಹೆಜ್ಜ್ಜೆಗಳ ಸದ್ದು ಹತ್ತಿರವಾಗುತ್ತವೆ. ರಾಹುಲ್ ನಿಧಾನವಾಗಿ ಹೆಜ್ಜೆಗಳನ್ನು ಹಿಂದಿಡತೊಡಗುತ್ತಾನೆ. ಕೂಡಲೇ ಆತನಿಗೆ ಯಾರೋ ತನ್ನಿಂದೆ ನಿಂತಿದ್ದಾರೆ ಎಂದೆನಿಸಿ ಹಿಂದಿರುದಿದ್ದರೆ ಕೆಲವು ಹೊತ್ತಿನ ಮುಂಚೆಯಷ್ಟೇ ತನಗೆ ಎದುರಾಗಿದ್ದ ದೈತ್ಯ ನಾಯಿ ಗರಬಡಿದಂತೆ ಅಲ್ಲಿ ನಿಂತಿರುತ್ತದೆ! ರಾಹುಲ್ಗೆ ಎದೆ ಸಿಡಿದಂತ ಅನುಭವವಾಗುತ್ತದೆ. ತನ್ನ ಕಿವಿಗಳಿಗೆ ಕೇಳಿಸುವಂತಹ ಎದೆಬಡಿತ ಅದಾಗಿರುತ್ತದೆ. ತನ್ನ ಹಿಂದೆಯೇ ನಿಂತತ್ತಿಂದ ಆ ನಾಯಿ ನಿಧಾನವಾಗಿ ರಾಹುಲ್ನ ಮುಂಬದಿಗೆ ಬಂದು ಆ ಭಯಂಕರ ಸದ್ದು ಬರುತ್ತಿದ್ದ ಕಡೆ ಮುಖ ಮಾಡಿ ನಿಲ್ಲುತ್ತದೆ. ಅಲ್ಲಿಯವರೆಗೂ ಮುಂದಡಿಯಿಟ್ಟು ಬರುತ್ತಿದ್ದ ಆ ಸದ್ದು ನಾಯಿಯನ್ನು ಕಂಡು ಒಮ್ಮೆಲೇ ನಿಂತುಬಿಡುತ್ತದೆ. ನೋಡ ನೋಡುತ್ತಿದಂತೆ ಬೆಳಗ್ಗೆ ಕಂಡ ನಾಯಿಗಳ ಗುಂಪು ಆ ಕತ್ತಲೆಯ ಹುತ್ತದಿಂದ ಒಂದೊಂದಾಗಿಯೇ ವೃತ್ತಾಕಾರದಲ್ಲಿ ಬಂದು ನಿಲ್ಲುತ್ತವೆ. ಅವುಗಳ ಕಣ್ಣು ಆ ಘಾಡ ಕತ್ತಲೆಯಲ್ಲೂ ಕೆಂಪಗೆ ಹೊಳೆಯುತ್ತಿರುವಂತೆ ರಾಹುಲ್ನಿಗೆ ಭಾಸವಾಗುತ್ತದೆ. ಅವುಗಳು ಸುತ್ತುವರೆದ ಮದ್ಯದಲ್ಲಿ ಯಾರೋ ನಿಂತಿರುವಂತೆ ಕಾಣುತ್ತದೆ. ಆದರೆ ಯಾರು ಇಲ್ಲ! ಅದೆಷ್ಟೇ ಘಟ್ಟಿ ಮನಸ್ಸಿನವನಾದರೂ ರಾಹುಲ್ ಆ ಕ್ಷಣ ಮಾತ್ರ ಅಕ್ಷರ ಸಹ ನಡುಗತೊಡಗುತ್ತಾನೆ. ತನ್ನ ಮುಂದಿದ್ದ ನಾಯಿ ಆ ಅದೃಶ್ಯ ಆಕಾರದೆಡೆ ಮುಖಮಾಡಿ ನೆಲವೇ ಅದುರುವಂತೆ ಕೂಗುತ್ತದೆ. ಆ ಕೂಗು ಕಾಡಿಗೆ ಕಾಡೇ ಬೆಚ್ಚಿ ಬೀಳುವಂತಿರುತ್ತದೆ.

ರಾಹುಲ್ನಿಗೆ ಗಟ್ಟಿಯಾಗಿ ಉಸಿರಾಡಲೂ ಧೈರ್ಯ ಸಾಲುವುದಿಲ್ಲ. ತನ್ನ ರಕ್ಷಕನಂತೆ ನಿಂತಿದ್ದ ಆವೊಂದು ನಾಯಿಯಿರದಿದ್ದರೆ ಏನಾಗುತ್ತಿತೋ ಎಂದನಿಸುತ್ತದೆ. ಆ ಕೊರೆಯುವ ಚಳಿಯಲ್ಲೂ ಬಟ್ಟೆಯಲ್ಲ ಒದ್ದೆಯಾಗುವಂತೆ ಆತ ಬೆವತಿರುತ್ತಾನೆ. ಒಮ್ಮೆ ಜೋರಾಗಿ ಕೂಗಿಕೊಳ್ಳಲೂ ಆತನಿಗೆ ಆಗುತ್ತಿಲ್ಲ. ಎಷ್ಟೇ ಶತಪ್ರಯತ್ನ ಮಾಡಿದರೂ ಅದು ಸಾಧ್ಯವಾಗುತ್ತಿಲ್ಲ. ಕೂಡಲೇ ತನ್ನ ಮುಂದಿದ್ದ ಆ ನಾಯಿ ಕಾಲುಗಳಿಂದ ನೆಲವನ್ನು ಪರಪರನೆ ಕೆರೆದು ಕುತ್ತಿಗೆಯ ಜುಟ್ಟನು ನಿಮಿರಿಸಿ ಆ ಅದೃಶ್ಯ ಆಕಾರವನ್ನು ಸುತ್ತುವರೆದಿದ್ದ ನಾಯಿಗಳ ಕಡೆ ಬೌಗುಡುತ್ತ ನೆಗೆಯುತ್ತದೆ. ಇದಕ್ಕಿದಂತೆ ಚದುರಿದ ಆ ಗುಂಪು ಸಿಕ್ಕ ಸಿಕ್ಕ ಕಡೆ ಓಡಿ ಮರೆಯಾಗುತ್ತದೆ. ನಾಯಿಗಳ ಗುಂಪು ಕಾಣೆಯಾದ ನಂತರ ತುಸು ಹೊತ್ತು ಅಲ್ಲಿಯೇ ನಿಂತಿದ್ದ ಆ ದೊಡ್ಡ ನಾಯಿ ನಿಧಾನವಾಗಿ ತನ್ನ ಬಲಕ್ಕೆ ತಿರುಗಿ ಇಳಿಯತೊಡಗುತ್ತದೆ. ರಾಹುಲ್ ಆ ನಾಯಿಯನ್ನೇ ಹಿಂಬಾಲಿಸುತ್ತಾನೆ. ಹೀಗೆ ಆ ನಾಯಿಯ ಹಿಂದೆ ಸಾಗುತ್ತ ಒಂದತ್ತು ನಿಮಿಷವಾಗಿರಬಹುದು ಅಷ್ಟೇ. ಇದ್ದಕ್ಕಿದಂತೆ ಬೆಟ್ಟದ ಮೇಲಿನಿಂದ ಆ ದೈತ್ಯ ಸದ್ದು ತನ್ನೆಲ್ಲ ಶಕ್ತಿಯನ್ನು ಬಳಸಿ ಓಡಿ ಬಂದಂತಹ ಸದ್ದು ರಾಹುಲ್ನಿಗೆ ಕೇಳಿಸುತ್ತದೆ. ಶ್ವಾಸಕೋಶಗಳೇ ಕಕ್ಕಿ ಹೊರಗೆ ಬರುವೆವೋ ಎಂಬಂತಹ ಎದುಸಿರು, ಅದರೊಟ್ಟಿಗೆ ಕೈಬಳೆ ಹಾಗು ಕಾಲ್ಗೆಜ್ಜೆಯ ನಾದವೂ ಮೂಡತೊಡಗಿರುತ್ತದೆ! ಕೆಲನಿಮಿಷಗಳ ಮೊದಲೇ ಅಷ್ಟೂ ನಾಯಿಗಳನ್ನು ಹಿಮ್ಮೆಟ್ಟಿಸಿದ್ದ ನಾಯಿ ಕುಯ್ ಗುಡುತ್ತಾ ಪುನ್ಹ ಎತ್ತಲೋ ಓಡತೊಡಗುತ್ತದೆ. ರಾಹುಲ್ ಸಹ ಆ ನಾಯಿಯು ಓಡಿದ ದಿಕ್ಕಿನಲ್ಲೇ ಓಡತೊಡಗುತ್ತಾನೆ. ಓಟದ ರಭಸಕ್ಕೆ ಕಲ್ಲು ಮುಳ್ಳುಗಳು ತರಚಿ ಆತನ ಕೈ ಕಾಲುಗಳೆಲ್ಲ ರಕ್ತ ಮಾಯವಾಗುತ್ತದೆ. ಆದರೆ ಓಡುವುದ ಮಾತ್ರ ಆತ ನಿಲ್ಲಿಸಲಿಲ್ಲ. ಒಂದೆರೆಡು ಬಾರಿ ಹಾದಿಯಲ್ಲಿ ಸಿಕ್ಕ ಸಣ್ಣಪುಟ್ಟ ಗುಂಡಿಯೊಳಕ್ಕೂ ಕಾಲಿಟ್ಟು ನಾಲ್ಕೈದು ಸುತ್ತು ಉರುಳಿ ಬಿದ್ದರೂ ಗಮನಿಸದೆ, ದೇವರ ನಾಮಗಳನ್ನು ಜಪಿಸುತ್ತಾ ರಾಹುಲ್ ಓಡತೊಡಗುತ್ತಾನೆ.ರಾಹುಲ್ನ ಮೈಯ ರೋಮುಗಳೆಲ್ಲ ವಿದ್ಯುತ್ತ್ ಹರಿದಂತೆ ನಿಮಿರಿ ನಿಂತಿದ್ದವು.

ಒಳದಾರಿಗಳಲ್ಲಿ ಕಳ್ಳರಂತೆ ಓಡುತ್ತಾ ಸಾಗಿದ ನಾಯಿ ಕೊನೆಗೂ ಬಲ್ಬು ಲೈಟುಗಳಿಂದ ಕೂಡಿದ ಊರೊಂದಕ್ಕೆ ರಾಹುಲ್ ನನ್ನು ತಂದು ನಿಲ್ಲಿಸುತ್ತದೆ. ಆದರೂ ಹಿಂದುರಿಗಿ ನೋಡಲು ಆತನಿಗೆ ಧೈರ್ಯ ಸಾಲುತ್ತಿರಲಿಲ್ಲ. ತಾನು ಓಡುತ್ತಾ ಬಂದು ನಿಂತ ಆ ಊರು ತುಸು ದೊಡ್ಡದಾಗಿಯೇ ಇರುತ್ತದೆ. ಬೀದಿ ದೀಪಗಳು, ಅಂಗಡಿ ಮುಂಗಟ್ಟುಗಳು ಅಲ್ಲಲಿ ಕಾಣಸಿಗುತ್ತವೆ. ಆದರೆ ಯಾವೊಬ್ಬ ನರಪಿಳ್ಳೆಯೂ ಅಲ್ಲಿ ಕಾಣಸಿಗುವುದಿಲ್ಲ. ಆದರೆ ಅಲ್ಲಿಯವರೆಗೂ ತನ್ನ ಮುಂದಿದ್ದ ಆ ನಾಯಿ ಮಾತ್ರ ಕಣ್ಮರೆಯಾಗಿರುತ್ತದೆ! ನಾಯಿಯ ಬಗ್ಗೆ ಹೆಚ್ಚಾಗಿ ಚಿಂತಿಸದೆ ನಿಧಾನವಾಗಿ ಆ ಜನನಿಬಿಡ ರಸ್ತೆಯಲ್ಲಿ ಚಲಿಸುತ್ತಿರುವಾಗ ಹಿಂದಿನಿಂದ ಯಾರೋ ಬಂದು ರಾಹುಲ್ನ ಹೆಗಲನ್ನು ಅದುಮಿ ಹಿಡಿದಂತಾಗುತ್ತದೆ.

ರಾಹುಲ್ ತನ್ನ ಧೈರ್ಯವನ್ನೆಲ್ಲ ಬಳಸಿ ಹಿಂದುರಿಗಿ ನೋಡುತ್ತಾನೆ. ಆ ಹೊಸ ಊರಿನಲ್ಲಿ ಅಪರಾಹ್ನ ನಾಯಿಗಳಿಂದ ರಕ್ಷಿಸಿದ್ದ ಮಧುಮಗನ ಸಂಬಂಧಿ 'ಹಾಯ್, ನೀವು ರಾಹುಲ್ ಅಲ್ವ?' ಎಂದು ಕೇಳುತ್ತಾನೆ. ಆತನ ಪ್ರೆಶ್ನೆಯಲ್ಲಿ ಮೊದಲ ಬಾರಿಯ ಸಂಭಾಷಣೆಯ ನಯ ವಿನಯ ಅಡಗಿದಂತಿರುತ್ತದೆ. ಕೆಲ ಘಂಟೆಗಳ ಹಿಂದಷ್ಟೇ ಸಿಕ್ಕ ಆ ವ್ಯಕ್ತಿ ಮತ್ತೊಮ್ಮೆ ಏಕೆ ತನ್ನನು ಹೊಸಬನಂತೆ ಕಾಣುತ್ತಿದ್ದಾನೆ ಎಂದು ರಾಹುಲ್ನಿಗೆ ದಿಗ್ಬ್ರಮೆಯಾಗುತ್ತದೆ. ಅಲ್ಲದೆ ಆತ ಇಷ್ಟು ರಾತ್ರಿಯಲ್ಲಿ ಈ ಊರಿನಲ್ಲಿ ಏನು ಮಾಡುತ್ತಿದ್ದಾನೆ ಎಂಬುದರ ಮೇಲೂ ಸಂಶಯ ಮೂಡುತ್ತದೆ. ಆತ ಮಾತು ಮುಂದುವರೆಸುತ್ತಾ 'ಎಲ್ಲಿ ಸಾರ್ ನೀವು, ನೆನ್ನೆಯಿಂದ ನಿಮ್ಮ್ ನಂಬರ್ ಗೆ ಕಾಲ್ ಮಾಡಿ ಮಾಡಿ ಸಾಕಾಯಿತು. ಹೊಸ ಊರು, ಹೊಸ ದಾರಿ.. ಎಲ್ಲ್ ಕಳೆದೋದ್ರು ಅಂತ ನಾನು ನಿಮ್ಮನ್ನ ಹುಡುಕೊಂಡು ಹೊರಟೆ, ಇಲ್ಲೇ ಸಿಕ್ಕಿದ್ರಿ ನೋಡಿ' ಎನ್ನುತ್ತಾ ಕೈ ಕುಲುಕಲು ಮುನ್ನುಗ್ಗುತ್ತಾನೆ. ರಾಹುಲ್ನ ರಕ್ತ ಮಯ ಕೈ ಹಾಗು ಕಾಲುಗಳನ್ನು ಕಂಡು ಹೆಚ್ಚೇನು ಚಕಿತನಾಗದೇ ಮುಗುಳ್ನಗೆಯ ನೋಟವನು ಆತ ಬೀರುತ್ತಾನೆ.

ರಾಹುಲ್ನಿಗೆ ಒಂದು ಕ್ಷಣಕ್ಕೆ ನಿಂತ ನೆಲವೇ ಕುಸಿದಂತ ಅನುಭವ. ತಾನು ಮಧ್ಯಾಹ್ನ ಮಾತಾಡಿಸಿದ್ದ ವ್ಯಕ್ತಿ ಇವನೆಯೇ. ಕಿಂಚಿತ್ತೂ ವ್ಯತಾಸವಿಲ್ಲ. ಆದರೂ ಧೈರ್ಯ ಮಾಡಿ ಆತನ್ನಲ್ಲಿ ಹೇಳಿಯೇ ಬಿಡುತ್ತಾನೆ. ತಾನು ಬಸ್ಸಿನಿಂದ ಇಳಿದು ಮದುಮಗನ ಮನೆಗೆ ಹೊರಟಿದ್ದು, ಅಲ್ಲಿನ ಆ ವಿಚಿತ್ರ ನಾಯಿಗಳ ಕಾಟ, ತಾನು ಪಕ್ಕದಲ್ಲಿದ್ದ ಬೆಟ್ಟಕ್ಕೆ ಹತ್ತಿದ್ದು, ಮೊಬೈಲ್ ಇದ್ದಕ್ಕಿಂತೆ ಆಫ್ ಆದದ್ದು, ಕೊನೆಗೆ ನಾಯಿಗಳಲ್ಲೊಂದು ತನಗೆ ದಾರಿ ತೋರಿಸಿದ್ದು, ನಂತರ ಒಂದು ಅದೃಶ್ಯ ದೈತ್ಯ ಹೆಜ್ಜೆ ತನ್ನನ್ನು ಅಟ್ಟಿಸಿಕೊಂಡು ಬಂದಿದ್ದು ಇವೆಲ್ಲವನ್ನು ಹೇಳುವಷ್ಟರಲ್ಲೇ ಆ ವ್ಯಕ್ತಿ ತರ ತರನೇ ನಡುಗಲು ಶುರುವಿಟ್ಟುಕೊಂಡಿರುತ್ತಾನೆ. ಅಳುವ ಸ್ವರದಲ್ಲಿ 'ಸಾರ್, ನೀವು ಹೋಗಿದ್ದು ಒಂಟಿ ಬೆಟ್ಟದ್ ಪಕ್ಕದಲ್ಲಿರೋ ಹಾಳ್ ಸ್ಮಶಾನದ ಜಾಗಕ್ಕೆ ಸಾರ್! ಊರಿಗೆ ಬರೋ ಹೊಸ ಜನ್ರನ್ನ ದಾರಿ ದಾರಿ ತಪ್ಪಸ್ತಾಳೆ ಸಾರ್ ಅವ್ಳು! ಆಗ್ಲೇ ಹತ್ತಾರು ಜನಾನ ಬಲಿ ತಗೊಂಡಿದ್ದಾಳೆ ಸಾರ್.. ಅಯ್ಯೋ, ನೀವ್ ಯಾಕ್ ಸಾರ್ ಆಕಡೆ ಹೋದ್ರಿ' ಎನ್ನುತ್ತಾ ರೋಧಿಸತೊಡಗುತ್ತಾನೆ ಆತ. ಆದರೆ ತಾನು ಬಸ್ಸಿಳಿದು ಓದ ದಿಕ್ಕಿನಲ್ಲಿ ಸವೆದ ದಾರಿಯಿದ್ದು, ಮೂರ್ನಾಲ್ಕು ಮನೆಗಳು ಇದ್ವಲ್ಲ, ನಿಮ್ಮನ್ನೂ ಆ ಮೆನೇಲಿ ನೋಡಿದ್ನರಿ, ಎನ್ನುತ್ತಾನೆ ರಾಹುಲ್. ಆಗ ಆ ವ್ಯಕ್ತಿಯಿಂದ ಬಂದ ಉತ್ತರವನ್ನು ಕೇಳಿ ರಾಹುಲನಿಗೆ ತಲೆ ಸುತ್ತು ಬರುವಂತಾಗುತ್ತದೆ. ಏಕೆಂದರೆ ಆತ ಮಧ್ಯಾಹ್ನದಿಂದ ಸಂಜೆಯವರೆಗೂ ಮಲಗೆದ್ದು ಬಂದ ಜಾಗದಲ್ಲಿ ಯಾವುದೇ ಮನೆಗಳಿರದೆ ಅಲ್ಲಿದ್ದದ್ದು ನಾಲ್ಕೈದು ಹಾಳುಬಿದ್ದ ಘೋರಿಗಳಾಗಿರುತ್ತವೆ!!

ಸ್ವಿಚ್ ಆಫ್ ಆಗಿದ್ದ ಫೋನು ಕೂಡಲೇ ಟ್ಯೂಬ್ ಲೈಟಿನಂತೆ ಮಿನುಗತೊಡಗುತ್ತದೆ. ಇನ್ನೇನು ಆನ್ ಆಯಿತು ಎನ್ನುವಷ್ಟರಲ್ಲಿ ಜೀವವೇ ಕಳೆದುಕೊಂಡಂತೆ ಒಂದೇ ಕ್ಷಣದಲ್ಲಿ ಪುನಃ ಆಫ್ ಆಗಿ ಬಿಡುತ್ತದೆ! ಶಾಂತವಾಗಿದ್ದ ಜಾಗದಲ್ಲಿ ಇದ್ದಕಿದಂತೆ ವಿಪರೀತ ಗಾಳಿ! ಮಧುಮಗನ ಸಂಬಂಧಿ ಇನ್ನು ಇಲ್ಲಿ ನಿಲ್ಲುವುದು ಬೇಡವೆಂದು ಆಗೋ ಅಲ್ಲಿ ಮಧುಮಗನ ಮನೆ ಕಾಣುತ್ತಿದೆಯೆಂದು ಚಪ್ಪರ ಕಟ್ಟಿದ್ದ ಮನೆಯನ್ನು ತೋರಿಸುತ್ತಾ, ಮನೆಯವರೆಲ್ಲ ನಿನ್ನೆಯಿಂದ ಚಿಂತಾಗ್ರಸ್ತರಾಗಿ ಕಾಯುತ್ತಿದ್ದಾರೆ ಎನ್ನುತ್ತಾ ಬೇಗನೆ ಆತ್ತ ಕಡೆ ನೆಡೆಯಲು ಹೇಳುತ್ತಾನೆ. ತನ್ನ ಕಿವಿಗಳೆ ನಂಬಲಾಗದಂತಹ ಸುದ್ದಿಯನ್ನು ಕೇಳಿ ಅಕ್ಷರ ಸಹ ಹೆದರಿ ಹೈರಾಣಾಗಿದ್ದ ರಾಹುಲ್ ಆ ವ್ಯಕ್ತಿಗಿಂತ ಮೊದಲೇ ಮಧುಮಗನ ಮನೆಯೆಡೆ ಧಾವಿಸುತ್ತಾನೆ.

ಮನೆಯ ಕಡೆಗೆ ಧಾವಿಸುತ್ತಿದ್ದ ರಾಹುಲ್ ಆ ಭಯಾನಕ ಘಳಿಗೆಯಲ್ಲಿಯೂ ತನ್ನ ಹಿಂದೆ ಬರುತ್ತಿದ್ದ ವ್ಯಕ್ತಿಯ ಹೆಸರೇನೆಂದು ಕೇಳಬಯಸುತ್ತಾನೆ. ಅದಕ್ಕೆ ಮರುತ್ತರವಾಗಿ ಕೀರಲು ಧ್ವನಿಯಲ್ಲಿ ರೋಧಿಸಿದ ಸದ್ದು ಹಿಂದಿನಿಂದ ಬರಲು ರಾಹುಲ್ ಅತ್ತ ಕಡೆ ತಿರುಗುತ್ತಾನಷ್ಟೆ, ಮತ್ತೊಮ್ಮೆ ಸಿಡಿಲು ಬಡಿದಂತಹ ಅನುಭವ ಆತನಿಗೆ! ಅಲ್ಲಿಯವರೆಗೂ ತನ್ನ ಬಳಿ ಮಾತಾಡುತ್ತಿದ್ದ ವ್ಯಕ್ತಿಯ ದೇಹ ಪೂರ್ತಿಯಾಗಿ ತಾನು ಇಳಿದು ಬಂದ ಬೆಟ್ಟದ ಕಡೆಗೆ ತಿರುಗಿರುತ್ತದೆ, ಆದರೆ ರುಂಡ ಮಾತ್ರ ರಾಹುಲ್ನನ್ನೇ ದುರುಗುಟ್ಟು ನೋಡುತ್ತಿರುತ್ತದೆ!! 'ಓ..ಡಿ.. ಓಡಿ' ಎನ್ನುತ್ತಾ ಕರ್ಕಶ ಸ್ವರದಿಂದ ಅರಚುತ್ತಿದ್ದ ಆತನನ್ನು ಕಂಡು ಮತಿ ಕೆಟ್ಟವರಂತೆ ರಾಹುಲ್ ಚೀರುತ್ತಾ ಹೆಜ್ಜೆಯನ್ನು ಹಿಂದಿಡತೊಡಗುತ್ತಾನೆ. ನೋಡ ನೋಡುತ್ತಲೇ ಆ ವ್ಯಕ್ತಿಯ ಕಾಲನ್ನು ಯಾರೋ ಹಿಡಿದೆಳೆಯುತ್ತಾರೆ! ಆದರೆ ಯಾರೆಂದು ಎಷ್ಟೇ ಪ್ರಯತ್ನಪಟ್ಟರೂ ಕಾಣುವುದಿಲ್ಲ, ಕಾಲ್ಗೆಜ್ಜೆ, ಕೈಬಳೆ ಹಾಗು ಏದುಸಿರಿನ ಸದ್ದನ್ನು ಬಿಟ್ಟು. ಆ ಎಳೆತದ ರಭಸಕ್ಕೆ ಆ ವ್ಯಕ್ತಿ ಜೋರಾಗಿ ನರಳುತ್ತಾ ಕೆಳಗೆ ಬೀಳುತ್ತಾನೆ. ಆತನ ನರಳುವಿಕೆಯಲ್ಲಿ ಹೆಣ್ಣು ಧ್ವನಿಯೊಂದೂ ಮಿಶ್ರಣಗೊಂಡಿರುವುದು ಕೊಂಚ ಗಮನವಿಟ್ಟು ಆಲಿಸಿದ್ದರೆ ಕೇಳುತಿತ್ತು. ಆ ಅದೃಶ್ಯ ಆಕಾರ ಆತನನ್ನು ದರದರನೆ ಕಾಡಿನೊಳಗೆ ಎಳೆದುಕೊಂಡು ಹೋಗಿ ಮರೆಯಾಗುತ್ತದೆ. ನರಳುವಿಕೆಯ ಸದ್ದು ಮಾತ್ರ ಬಹು ಸಮಯದವರೆಗೂ ಮಾರ್ದನಿಸುತ್ತಲೇ ಇರುತ್ತದೆ.



ರಾಹುಲ್ ಒಂದೇ ಉಸಿರಿನಲ್ಲಿ ಮದುಮಗನ ಮನೆಯ ಕಡೆ ಓಡುತ್ತಾನೆ. ರಾಹುಲ್ನನ್ನು ಕಂಡು ಮನೆಯವರಿಗೆಲ್ಲ ಸಂತೋಷ ಹಾಗು ಭಯ ಒಟ್ಟೊಟ್ಟಿಗೆ. ರಾಹುಲ್ ಕೊಂಚ ಸಮಯ ಸುಧಾರಿಸಿಕೊಂಡ ಮೇಲೆ ಬೆಳಗಿನಿಂದ ನೆಡೆದ ಒಂದೊಂದೇ ವಿಷಯವನ್ನು ಹೇಳಿ ಕೊನೆಗೆ ನನ್ನ ಕಣ್ಣ ಮುಂದೆಯೇ ನಿಮ್ಮ ಸಂಭಂದಿ ಯುವಕನನ್ನು ಆ ಅದೃಶ್ಯ ಭೀಭತ್ಯ ಆಕಾರ ಎಳೆದುಕೊಂಡು ಹೋಗಿ ಗುಡ್ಡದಲ್ಲಿ ಮರೆಯಾಯಿತು ಎನ್ನುತ್ತಾ ಅಕ್ಷರ ಸಹ ಸಣ್ಣ ಮಕ್ಕಳಂತೆ ಅಳಲು ಶುರುವಿಡುತ್ತಾನೆ. ಕೊಂಚ ಹೊತ್ತು ಸಾವಧಾನವಾಗಿ ಆಲಿಸಿದ ಮನೆಯವರು ಕೊನೆಗೆ ರಾಹುಲ್ನನ್ನು ಸಮಾಧಾನ ಪಡಿಸುತ್ತಾ ಮನೆಯ ಒಂದು ಮೂಲೆಯಲ್ಲಿ ಹಾರವನ್ನಾಕಿ ನೇತಾಕಿದ್ದ ವ್ಯಕ್ತಿಯ ಫೋಟೋವನ್ನು ತೋರಿಸುತ್ತಾರೆ. ರಾಹುಲ್ ತಾನಿದ್ದಲ್ಲಿಂದ ಎದ್ದು ಆ ಫೋಟೋದ ಬಳಿ ಹೋಗಿ ನೋಡಿದರೆ ಅದು ತಾನು ಸ್ವಲ್ಪ ಹೊತ್ತು ಮುಂಚೆ ಕಂಡ ವ್ಯಕ್ತಿಯ ಫೋಟೋವೇ ಆಗಿರುತ್ತದೆ!! ಆಗ ಮೆನೆಯವರಲ್ಲೊಬ್ಬರು ಆತ ಮದುಮಗನ ಸೋಧರ ಸಂಬಂಧಿಯೆಂದೂ ಆತ ಕಾಲವಾಗಿ ಅದಾಗಲೇ ಒಂದು ತಿಂಗಳಾಗಿದೆ ಎಂದು ತಿಳಿಸುತ್ತಾರೆ!! ಅಲ್ಲದೆ ಆತ ಹೀಗೆ ದಾರಿ ತಪ್ಪಿದ ಅನೇಕರನ್ನು ನಾಯಿಯ ರೂಪದಲ್ಲಿ ಅಥವಾ ಮತ್ಯಾವುದೋ ರೂಪದಲ್ಲಿ ಬಂದು ರಕ್ಷಿಸುತ್ತಾನೆ ಎಂದು ತಿಳಿಸುತ್ತಾರೆ. ರಾಹುಲ್ ಮುಂದೇನನ್ನೂ ಕೇಳಲು ಅಥವ ಹೇಳುವ ಸ್ಥಿತಿಯಲ್ಲಿರುವುದಿಲ್ಲ. ಯಾವುದೇ ಭಾವವೂ ಆತನಿಂದ ಆ ಕ್ಷಣದಲ್ಲಿ ಹೊರಹೊಮ್ಮುವುದಿಲ್ಲ. ಅಲ್ಲಿಯವರೆಗೂ ತನ್ನ ಗೆಳೆಯನ ಸುಳಿವು ಕಾಣದೆ ಆತ ಎಲ್ಲಿ ಎನ್ನುತ್ತಾ ಮೆತ್ತಗೆ ನೆರೆದಿದ್ದವರನ್ನು ಕೇಳುತ್ತಾನೆ. ಯಾರೊಬ್ಬರೂ ಏನನ್ನು ಹೇಳುವುದಿಲ್ಲ. ಅಲ್ಲಿಯವರೆಗೂ ಗಿಜಿ ಗಿಜಿ ಗುಟ್ಟುತ್ತಿದ್ದ ಆ ಗುಂಪು ಕೂಡಲೇ ಘಾಡ ಮೌನದಲ್ಲಿ ಲೀನವಾಗುತ್ತದೆ. ರಾಹುಲ್ ಮತ್ತೊಮ್ಮೆ ತನ್ನ ಗೆಳೆಯ ಎಲ್ಲಿದ್ದಾನೆ ಎಂದು ಜೋರಾಗಿ ಕೇಳುತ್ತಾನೆ. ಯಾರೊಬ್ಬರಿಂದಲೂ ಯಾವುದೇ ಬಗೆಯ ಪ್ರತಿಕ್ರಿಯೆ ವ್ಯಕ್ತವಾಗುವುದಿಲ್ಲ. ಬದಲಾಗಿ ಅಲ್ಲಿದ್ದ ಒಂದಿಷ್ಟು ಹೆಂಗಸರ ಕೂದಲುಗಳು ತನಗೆ ತಾವೇ ಬಿಚ್ಚಿಕೊಂಡು ಮುಖವನ್ನು ಆವರಿಸಿಕೊಳ್ಳುತ್ತವೆ!! ಒಂದೆರೆಡು ಗಂಡಸರು ತಮ್ಮ ಮೈಯ್ಯ ಮೇಲಿನ ವಸ್ತ್ರವನ್ನೆಲ್ಲ ಕಳಚಿ ಜೋರಾದ ಕೀಚಲು ಧ್ವನಿಯನ್ನು ಸೂಸುತ್ತಾ ಮನೆಯಿಂದ ಹೊರಗೋಡಿ ಕತ್ತಲೆಯಲ್ಲಿ ಮರೆಯಾಗುತ್ತಾರೆ! ಅಷ್ಟೂ ಹೆಂಗಸರುಗಳು ತನ್ನ ಕಾಲನ್ನು ನೆಲಕ್ಕೆ ಗುದ್ದುತ್ತ ತಮ್ಮ ಕೆಂಪಾದ ಕಣ್ಣುಗಳಿಂದ ರಾಹುಲ್ನನ್ನು ದುರುಗುಟ್ಟು ನೋಡುತ್ತಾ ಸುತ್ತುವರೆಯುತ್ತಾರೆ...

ರಾಹುಲ್ 'ಬೇಡ,..ಬೇಡ' ಎನ್ನುತ್ತಾ ವಿಲ ವಿಲ ಒದ್ದಾಡ ತೊಡಗುತ್ತಾನೆ. ಚಳಿಗೆ ಒದೆದುಕೊಂಡಿದ್ದ ಓದಿಕೆ ಮಂಚದಿಂದ ಕೆಳಗೆ ಬಿದ್ದಿರುತ್ತದೆ. ಮೈಯೆಲ್ಲಾ ಬೆವರುಮಯ! ಮದ್ಯಾಹ್ನ ಕೊಂಚ ವಿಶ್ರಾಂತಿಗೆಂದು ಮಲಗಿದ್ದ ರಾಹುಲ್ ಮೊದಲ ಬಾರಿಗೆ ಬಿದ್ದ ಈ ಭಯಾನಕ ಕನಸ್ಸಿಗೆ ಅಕ್ಷರ ಸಹ ನಲುಗಿ ಹೋಗಿರುತ್ತಾನೆ! ಕಣ್ಣು ತೆರೆದು ಅದೆಷ್ಟೋ ನಿಮಿಷಗಳ ನಂತರ ರಾಹುಲ್ನಿಗೆ ನಿಜ ಜಗತ್ತಿನ ಅರಿವವಾಗುತ್ತದೆ. ತನ್ನ ಗೆಳೆಯರನ್ನು ಪುಕ್ಕಲರು ಎಂದು ಅಣಕಿಸುತ್ತಿದ್ದ ಈತ ಇಂದು ಕೇವಲ ಕನಸ್ಸೊಂದಕ್ಕೆ ಈ ಮಟ್ಟಿನ ಭಯಬೀತಿಗೊಂಡಿದ್ದು ಮಾತ್ರ ತನ್ನ ಮೇಲೆ ಆತನಿಗೆ ನಗು ಬರಿಸುವಂತಿರುತ್ತದೆ. ಕಿಟಕಿಯಿಂದ ಮನೆಯ ಹೊರಗೆ ನೋಡುತ್ತಾನೆ, ಅದಾಗಲೇ ಮಳೆರಾಯ ಮತ್ತೊಂದು ಸುತ್ತು ಭೇಟಿಕೊಟ್ಟು ಮರೆಯಾಗಿರುತ್ತಾನೆ. ಗಡಿಯಾರದಲ್ಲಿ ಘಂಟೆ ಐದನ್ನು ತೋರಿಸುತ್ತಿರುತ್ತದೆ. ಮಂಚದಿಂದ ಎದ್ದು ರೆಡಿಯಾಗಿ ಮನೆಯಿಂದ ಕೊಂಚ ದೂರ ಬಂದು ದಿಗಂತವರೆಗೆ ಹಬಿದ್ದ ಹಸಿರು ಸಿರಿಯನ್ನು ನೋಡತೊಡಗುತ್ತಾನೆ. ಜೊತೆಗೆ ತನ್ನ ಕನಸ್ಸಿನಲ್ಲಿ ಕಂಡ ಬೆಟ್ಟವೇನಾದರೂ ಅಲ್ಲಿ ಇರಬಹುದಾ ಎಂದೂ ಅರಸುತ್ತಾನೆ. ಆದರೆ ಅದೇ ಬಗೆಯ ಇನ್ನೂ ಎತ್ತರವಾದ ಹಾಗು ಧಟ್ಟವಾದ ಕಾಡಿನಿಂದ ಆವರಿಸಿದ ಬೆಟ್ಟವೊಂದು ಅಲ್ಲಿಯೇ ಇರುತ್ತದೆ.! ಆ ಬೆಟ್ಟವನ್ನು ಕಂಡು ಒಂದೇ ಕ್ಷಣಕ್ಕೆ ಹೃದಯ ಬಡಿತ ನಿಂತತಾದದ್ದು ಮಾತ್ರ ಸುಳ್ಳಲ್ಲ. ಅಲ್ಲಿಯವರೆಗೂ ಸೈಲೆಂಟ್ ಮೋಡಿನಲ್ಲಿಟ್ಟಿದ್ದ ತನ್ನ ಮೊಬೈಲ್ ಅನ್ನು ತೆಗೆದು ನೋಡುತ್ತಾನೆ, ಅಮ್ಮನಿಂದ ಮೂವತ್ತೆರೆಡು ಮಿಸ್ಸೇಡ್ ಕಾಲ್ ಗಳು! ಕೊಂಚ ಚಕಿತಗೊಂಡ ಆತ ಕೂಡಲೇ ಅಮ್ಮನ ನಂಬರ್ ಗೆ ಫೋನಾಯಿಸುತ್ತಾನೆ. ಅತ್ತ ಕಡೆಯಿಂದ ಬಂದ ಧ್ವನಿ ಮಾತ್ರ ತನ್ನ ಗೆಳೆಯ ಮದುಮಗನದ್ದಾಗಿರುತ್ತದೆ! ಹಿನ್ನಲೆಯಲ್ಲಿ ತನ್ನ ಅಮ್ಮ ಅಳುತ್ತಿರುವ ಸದ್ದು ಸ್ಪಷ್ಟವಾಗಿ ರಾಹುಲ್ ಗೆ ಕೇಳುತ್ತಿರುತ್ತದೆ. ರಾಹುಲ್ ಮಾತನಾಡುವ ಮೊದಲೇ ಮದುಮಗ, ರಾಹುಲನಿಗೆ ಆತ ಕೂಡಲೇ ಎಲ್ಲಿದ್ದರೂ ಮರುಮಾತನಾಡದೆ ಬಸ್ಸೊಂದನ್ನು ಹಿಡಿಸು ಸಿಟಿಗೆ ವಾಪಸ್ಸು ಬರಬೇಕೆಂದು, ತಾನು ಮದುವೆಯಾಗಲು ಇಚ್ಛಿಸಿದ್ದ ಹುಡುಗಿ ತನ್ನ ಸೋಧರ ಸಂಭಂದಿ ಹುಡುಗನೊಬ್ಬನನ್ನು ಇಷ್ಟಪಡುತ್ತಿದ್ದಳೆಂದೂ, ತನ್ನೊಟ್ಟಿಗೆ ಆಕೆಯ ಮಧುವೆ ನಿಶ್ಚಿತವಾದ ಕೆಲ ದಿನಗಳ ನಂತರ ಆತ್ಮಹತ್ಯೆ ಮಾಡಿಕೊಂಡಳ್ಳೆಂದೂ, ಅಲ್ಲದೆ ಆಕೆ ಇಷ್ಟ ಪಟ್ಟ ಹುಡುಗನನ್ನೂ ಅಂದರೆ ತನ್ನ ಸೋಧರ ಸಂಭಂಧಿಯನ್ನೂ ಬಲಿ ತೆಗೆದುಕೊಂಡು ತನ್ನನ್ನೂ ಮುಗಿಸಲು ಕಾಡುತ್ತಿದ್ದಾಳೆಂದೂ, ಅಲ್ಲದೆ ನನ್ನ ಮದುವೆಗೆ ಸಹಾಯ ಮಾಡಿದ ಪ್ರತಿಯೊಬ್ಬರನ್ನೂ ಹೀಗೆ ಒಂದಿಲ್ಲೊಂದು ಬಗೆಯಲ್ಲಿ ಕಾಡುತ್ತಿದ್ದಾಳೆಂದು, ತಾನು ಒಂದು ತಿಂಗಳ ಮೊದಲೇ ಆಫೀಸಿಗೆ ರಜೆಹಾಕಿ ಊರಿಗೆ ಕಾರಿನಲ್ಲಿ ಬರುವಾಗ ಅಪಘಾತವಾಗಿ ನಿನ್ನೆಯವರೆಗೂ ಕೋಮಾದಲ್ಲಿ ಇದ್ದೇನೆಂದು, ಇಂದಿನವರೆಗೂ ರಾಹುಲ್ ನೊಟ್ಟಿಗೆ ತಾನು ಒಂದು ಮಾತನ್ನೂ ಆಡಿಲ್ಲವೆಂದು ಹೇಳುತ್ತಾನೆ. ಅಲ್ಲದೆ ಪ್ರಸ್ತುತ ರಾಹುಲ್ ಎಲ್ಲಿದ್ದಾನೆಂದು ಯಾರಿಗೂ ತಿಳಿದಿಲ್ಲವೆಂದು, ನೆನ್ನೆಯಿಂದ ಆತನನ್ನು ಸಂಪರ್ಕಿಸಲು ಶತಪ್ರಯತ್ನ ಮಾಡುತ್ತಿದ್ದಾರೆಂದೂ ಸಹ ಹೇಳುತ್ತಾನೆ!! ರಾಹುಲ್ ಮರುತ್ತರವಾಗಿ ಏನೋ ಹೇಳಲು ಶುರುವಿಡುವ ಮೊದಲೇ ಶಾರ್ಟ್ ಸರ್ಕ್ಯೂಟ್ ನ ಸದ್ದಿನಂತೆ ಆತನ ಮೊಬೈಲ್ ಬಗೆ ಬಗೆಯ ಸದ್ದನ್ನು ಮಾಡುತ್ತಾ ಆಫ್ ಆಗಿ ಬಿಡುತ್ತದೆ! ಕೂಡಲೇ ಎಲ್ಲಿಂದಲೋ ಪ್ರತ್ಯಕ್ಷವಾದಂತೆ ಎಂಟತ್ತು ನಾಯಿಗಳು ರಾಹುಲ್ನನ್ನು ಸುತ್ತುವರೆಯುತ್ತವೆ. ಅವುಗಳ ಬಾಯಿಯಿಂದ ಕಡುಗಪ್ಪು ಬಣ್ನದ ರಕ್ತದ ಕೂಡಿ ಹರಿಯುತ್ತಿರುತ್ತದೆ. ಕ್ಷಣಮಾತ್ರದಲ್ಲಿ ಮೋಡಗಳು ಒಂದರಿಂದೊಂದು ಕವಿದು ಘಾಡ ಕತ್ತಲೆಯ ವಾತಾವರಣವನ್ನು ಮೂಡಿಸುತ್ತವೆ. ತನ್ನ ಹಿಂದೆ ಯಾವುದೊ ಒಂದು ದೈತ್ಯ ಆಕಾರವೊಂದು ನಿಂತಿರುವ ಖಾತರಿ ರಾಹುಲ್ ನಿಗೆ ಅದಾಗಲೇ ಆಗಿರುತ್ತದೆ. ಹಿಂದಿರುಗಲು ಬೇಕಾದ ಧೈರ್ಯವಾಗಲಿ, ಶಕ್ತಿಯಾಗಲಿ ಮಾತ್ರ ಆತನಲ್ಲಿ ಇಲ್ಲವಾಗಿರುತ್ತದೆ….!


Thursday, November 23, 2017

ಕೋಟಿ ಜನರ ಕಷ್ಟದಲ್ಲಿ ಕೋಟಿ-ಕೋಟಿಯನ್ನೆಣಿಸುವ ಮುನ್ನ..!!

ಕೆಳಗಿನ ಕೆಲ ಪ್ರೆಶ್ನೆಗಳಿಗೆ ಸಾದ್ಯವಾದರೆ ನಿಮ್ಮ ಎದೆಯ ಮೇಲೆ ಕೈಯಿರಿಸಿ ಉತ್ತರಿಸಿ. ಕಳೆದ ತಿಂಗಳು ರಾಜ್ಯದಾದ್ಯಂತ ನೆಡೆದ ವೈದ್ಯರ ಮುಷ್ಕರವನ್ನು ನಿಜವಾಗಿಯೂ ನೀವು ಬೆಂಬಲಿಸುತ್ತೀರಾ? ಇಂದು ಕೆಲಸ ಮಾಡಿದರಷ್ಟೇ ನಾಳಿನ ಕೂಳನ್ನು ಕಾಣುವ ಕೋಟ್ಯಂತರ ಹೊಟ್ಟೆಗಳ ಮಳೆ ಲಕ್ಷ ಲಕ್ಷ ಹೊರೆಯನ್ನೊರಿಸುವ ಖಾಸಗಿ ಆಸ್ಪತ್ರೆಗಳ ದಬ್ಬಾಳಿಕೆಗೆ ಕಾನೂನಿನ ಚೌಕಟ್ಟಿನಲ್ಲಿ ಕಡಿವಾಣ ಹಾಕುವ ಒಂತಿನಿತು ಕಾನೂನು ನಿಮಗೆ ಬೇಡವೆನಿಸುವುದೇ? ವೈದ್ಯ ಹೇಳಿದ್ದೆ ರೋಗ ನೀಡಿದ್ದೆ ಮದ್ದು ಎಂಬಂತಾಗಿರುವ ಸಂದರ್ಭದಲ್ಲಿ , ರೋಗಿಗಳ/ಜನತೆಯ ಹಿತದೃಷ್ಟಿಯಿಂದ ತರಲೆತ್ನಿಸುತ್ತಿರುವ ಕಾಯಿದೆಯ ನಿಜವಾದ ಉದ್ದೇಶ ನಿಮಗೆ ತಿಳಿದಿದೆಯೇ? ನಿಮ್ಮ ಹತ್ತಿರವರೇ ಒಬ್ಬರು ತಕ್ಷಣಕ್ಕೆ ಯಾವುದಾದರೊಂದು ಪ್ರೈವೇಟ್ ಆಸ್ಪ್ರತ್ರೆಗೆ ಸೇರಿ ನಂತರ ಹಣ ಸಾಲುತ್ತಿಲ್ಲವೆನ್ನುತ್ತ ಜೆಲ್ಲೆಯ ಅಥವಾ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ಬಂದು ಪಡುವ ವಿಪರ್ಯಾಸವನ್ನು ಕಣ್ಣು ಮುಚ್ಚಿಕೊಂಡು ನೀವು ಸಹಿಸುತ್ತೀರಾ? ಅದೇ ಪ್ರೈವೇಟ್ ಆಸ್ಪತ್ರೆಯಲ್ಲಿ ಸತ್ತ ಒಂದು ಬಡ ಹೆಣವನ್ನು ಹಿಂದಿರುಗಿಸಲೂ ಹಣದ ಬಿಲ್ಲನ್ನೇ ಮುಂದಿಟ್ಟು ಸತಾಯಿಸುವ ಕಟು ಹೃದಯಿಗಳನ್ನು ನೀವು ಹೊತ್ತು ಮೆರವಣಿಗೆ ಮಾಡುತ್ತೀರಾ? ಯಾರೋ ಪುಡಾರಿ ರಾಜಕಾರಣಿ ತನ್ನ ಬೇಳೆಯನ್ನು ಬೇಯಿಸಿಕೊಳ್ಳಲು ಅಂತಹ ಸಂಸ್ಥೆಗಳನ್ನು ವಿರೋಧಿಸಲಾರ ಎಂಬುದಾದರೆ ನೀವುಗಳು ಸಹ ‘ಕುರಿಗಳು ಸಾರ್ ಕುರಿಗಳು’ ಎಂಬಂತೆ ಆತನನ್ನೇ ಹಿಂಬಾಲಿಸುತ್ತೀರಾ? ಹೇಳಿ. ಇಂದು ಒಂದು ಸಾಧಾರಣ ಜ್ವರಕ್ಕೆ ಪ್ಯಾರಾ-ಅಸಿಟಮೋಲ್ ಮಾತ್ರೆಯನ್ನು ಕೊಡಲೇ ಸಾವಿರ ಸಾವಿರ ರೂಪಾಯಿಗಳನ್ನು ಪೀಕುವ ಆಸ್ಪತ್ರೆಗಳು ದಿನಕ್ಕೆ ಇನ್ನೂರು ರೂಪಾಯಿ ಹಣವನ್ನು ಸಂಪಾದಿಸುವ ವ್ಯಕ್ತಿಯನ್ನು ಅಂತಹ ಆಸ್ಪತ್ರೆಗಳ ಹತ್ತಿರವೂ ಸುಳಿಯದಂತೆ ಮಾಡುತ್ತಿರುವುದು ಎಷ್ಟು ಮಟ್ಟಿನ ನ್ಯಾಯ? ಇವರಿಗೆ ಜಾಗ, ಓದು, ಕಟ್ಟಡ ಎಲ್ಲವೂ ಬಡ ಜನರ ದುಡ್ಡಿನಲ್ಲಿ ನೆಡೆವ ರಾಜ್ಯಸರ್ಕಾರದ್ದೇ ಬೇಕು ವಿನಃ ಅಂತಹ ಬಡ ಜನರ ಶೂಶ್ರುಷೆಯಲ್ಲ.ದಿನಪೂರ್ತಿ ಇಂಗ್ಲಿಷಿನ ಪೋಷಾಕುಗಳನ್ನೇ ತೋರುತ್ತ 1 ನಿಮಿಷ ತೋರ್ಪಡಿಕೆಗೆ ಏನೋ ಎಂಬಂತೆ ಕನ್ನಡ ಕನ್ನಡ ಎಂದು ಬೊಬ್ಬೆಯೊಡೆಯುವ ಹಲವರು ಇದೇ ಕನ್ನಡ ನಾಡಿನಲ್ಲಿ ಅವೇ ಇಂಗ್ಲಿಷ್ ಔಷಧಗಳು ತಮ್ಮ ರಣಬೆಲೆಯ ಬಲದಲ್ಲಿ ನಮ್ಮವರನ್ನು ಕಬ್ಬಿನ ಜಲ್ಲೆಯಂತೆ ಅರೆಯುತ್ತಿರುವುದು ನಿಮಗೆ ತಪ್ಪು ಎನಿಸುವುದಿಲ್ಲವೇ?

ಹಣ ಉಳಿಸುವ ಆಸೆಗೆ/ಅನಿವಾರ್ಯತೆಗೆ ಸಾಲು-ಸಾಲಾಗಿ ನಿಂತು ನರಳುವ ಭಾಗ್ಯವನ್ನು ಕರುಣಿಸುವ ಸರ್ಕಾರೀ ಆಸ್ಪತ್ರೆಗಳು, ಗುಣವಾಗಿ ಹೊರಬರುವ ರೋಗಿ ಕೊನೆಗೆ ಆತನ ಬಿಲ್ಲಿನ ಮೊತ್ತವನ್ನು ನೋಡಿಯೆ ಮತ್ತೊಮ್ಮೆ ಅಸ್ವಸ್ಥನಾಗುವಂತೆ ಮಾಡುವ ಖಾಸಗಿ ಆಸ್ಪತೆಗಳು, ಎರಡೂ ಬೇಡವೆನ್ನುತ್ತಾ 'ಇದ್ದರೆ ಇದ್ದ ಸತ್ತರೆ ಸತ್ತ' ಎನ್ನುತ್ತಾ ವ್ಯವಸ್ಥೆಯ ಮೇಲೆ ನಂಬಿಕೆಯನ್ನೇ ಕಳೆದುಕೊಂಡು ಜೀವನ ಕಳೆಯುವ ಬಹುಮಂದಿ ವೃದ್ದರು, ಇವೆಲ್ಲಕ್ಕೂ ಶಾಸ್ತಿ ಎಂಬಂತೆ ರಾಜ್ಯ ಸರ್ಕಾರ ಮಂಡಿಸಲೊಗುತ್ತಿರುವ ಪ್ರಸ್ತುತ KPME (Karnataka Private Medical Establishment Act) ಮಸೂದೆಯ ಕೆಲವು ತಿದ್ದುಪಡಿ, ಅದರ ವಿರೋಧವಾಗಿ ಬೊಬ್ಬೆಯೊಡೆಯುವ ಖಾಸಗಿ ವೈದ್ಯರ ಸಂಘ, ತಿಳಿದೋ ತಿಳಿಯದೆಯೋ ಇದರ ಪರ ವಿರೋಧವನ್ನು ಮಂಡಿಸುವ ಸಾವಿರಾರು ಗುಂಪುಗಳು, ಇವೆಲ್ಲದರ ಜೊತೆಗೆ ಕುಟುಂಬದ ಹಾದಿಯಲ್ಲಿ ಇನ್ನೆಂದೂ ಬಾರದೆ ಕಣ್ಮರೆಯಾದ ಹತ್ತಾರು ಜೀವಗಳು, ನೋವುಗಳು. ಸದ್ಯಕ್ಕೆ ಇವಿಷ್ಟು ರಾಜ್ಯದ ವೈದ್ಯಕೀಯ ವಲಯದ ಪ್ರತಿದಿನದ ಹಾಗು ಹೋಗುಗಳು. ಕೊನೆಯ ಒಂದಿಷ್ಟು ಅಂಶಗಳು ಪ್ರಸ್ತುತ ಹೀನಾಯ ಸ್ಥಿತಿಗೆ ಮತ್ತಷ್ಟುಇಂಬು ಕೊಟ್ಟಂತಿದೆ.

ಮೊದಲಿಗೆ ರಾಜ್ಯದಲ್ಲಿ KPME ಮಸೂದೆ ಜಾರಿಯಾದದ್ದು 2007 ರಲ್ಲಿ. ಅಂದಿನ ರಾಜ್ಯ ಸರಕಾರ ಮಂಡಿಸಿದ ಈ ಮಸೂದೆಯ ಪ್ರಕಾರ ಪ್ರತಿಯೊಂದು ಖಾಸಗಿ ಆಸ್ಪತ್ರೆಗಳು ತಮ್ಮ ಹೆಸರನ್ನು ಸಂಬಂಧಪಟ್ಟ ಇಲಾಖೆಯಲ್ಲಿ ನೊಂದಾಯಿಸಿಕೊಳ್ಳಬೇಕಲ್ಲದೆ ಸರಕಾರ ರಚಿಸುವ ನಿಯಮಾವಳಿಗೆ ಬದ್ದವಾಗಿರಬೇಕು ಎಂಬುದಾಗಿದ್ದಿತು. ಈ ಅಂಶಗಳಲ್ಲಿ ಮೊದಲನೆಯ ಅಂಶವನ್ನು ಹೆಚ್ಚಿನ ಆಸ್ಪತ್ರೆಗಳು ಪಾಲಿಸಿವೆಯಾದರು ಹೊಳೆಯಲ್ಲಿ ಹುಣಸೆಯನ್ನು ತೊಳೆದಂತೆ ನಂತರದನ್ನು ಮಾಡಿದವು. ಇದಕ್ಕೆ ಮೂಲ ಕಾರಣ ಮಸೂದೆಯೊಂದನ್ನು ಜಾರಿಗೊಳಿಸಿ ನಂತರ ಕೈಕಟ್ಟಿ ಮೂಕವಾಗಿ ಕೂರುವ ಸರ್ಕಾರಗಳಾಗಿರಬಹುದು ಅಥವಾ ಇಂತಹ ಮಸೂದೆಯನ್ನು ಮಂಡಿಸುವವರೇ ಕುಟುಂಬದವರ ಹೆಸರಿನಲ್ಲಿ ರಾಶಿ ರಾಶಿ ಆಸ್ಪತ್ರೆಗಳನ್ನು ನಿರ್ಮಿಸಿಕೊಂಡಿರುವುದಾಗಿರಬಹುದು. ಇಂತಹ ಪ್ರಫುಲ್ಲ ವಾತಾವರಣದಲ್ಲಿ ನಿಯಮಾವಳಿಗಳು ಗಾಳಿಗೆ ಪ್ರಿಯವಾದದಂತೂ ಸುಳ್ಳಲ್ಲ. ಪರಿಣಾಮ ಖಾಸಗಿ ಆಸ್ಪತ್ರೆಗಳ ಬಡವರ ಮೇಲಿನ ಆರ್ಥಿಕ ಬಡಿತ ಇನ್ನೂ ವಿಪರೀತವಾಯಿತು. ಅದೆಷ್ಟರ ಮಟ್ಟಿಗೆ ಎಂದರೆ 'ದುಡ್ಡು ಇದ್ದರೆ ಮಣಿಪಾಲು, ಇಲ್ಲ ಅಂದ್ರೆ ಮಣ್ಣುಪಾಲು' ಎಂಬುವಷ್ಟರ ಮಟ್ಟಿಗೆ! ಹೃದಯ ಕಸಿಯಿಂದ ಹಿಡಿದು ಮಂಡಿಚಿಪ್ಪಿನ ಬದಲಿ ಎಲ್ಲವೂ ಹಣವಂತನ ಭಾಗ್ಯ ಎಂಬುದು ಸರ್ವವ್ಯಾಪ್ತಿಯಾಗಿರುವ ವಿಷಯ. ಬೇರೆ ಯಾರು ಬೇಡ ನಾವುಗಳೇ ಚಿಕಿತ್ಸೆಯ ನೆಪದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ರಾಶಿ ರಾಶಿ ದುಡ್ಡನು ಸುರಿದು ಹಿಡಿ ಹಿಡಿ ಶಾಪ ಹಾಕುತ್ತ ಅದೆಷ್ಟು ಬಾರಿ ವಾಪಸ್ಸು ಬಂದಿಲ್ಲ? ಜಿಗಣೆಗಳಂತೆ ಹಣವನ್ನು ಹೀರಿ ದರ್ಪದಿಂದ ವರ್ತಿಸುವ ಇಂತಹ ಹಲವಾರು ಸಂಸ್ಥೆಗಳಿಗೆ (ಆಸ್ಪತ್ರೆಗಳಿಗೆ) ಕೂಡಲೇ ಕಡಿವಾಣ ಹಾಕುವುದು ಅತ್ಯಾವಶ್ಯಕವಾಗಿದ್ದಿತು. ಅಂತೆಯೇ ಆಯಿತು. ಪ್ರಸ್ತುತ ಜಾರಿಯಲ್ಲಿದ್ದ KPME ಮಸೂದೆಯ ಮೇಲಿನ ಹಿಡಿತವನ್ನು ಬಿಗಿಗೊಳಿಸಿ ಇಂತಹ ಒಂದು ಮಸೂದೆ ಕೇವಲ ನಾಮ್-ಕಾ-ವಾಸ್ತೆ ಆಗಿರಬಾರದು ಎಂಬ ಕಾರಣಕ್ಕೆ ಪ್ರಸ್ತುತ ಆರೋಗ್ಯ ಸಚಿವಾಲಯ ಕೆಲವು ಅಂಶಗಳನ್ನು ಇದಕ್ಕೆ ಅಳವಡಿಸಹೊರಟಿದೆ. ಆಸ್ಪತ್ರೆಗಳಲ್ಲಿ ನೆಡೆಯುವ ಪ್ರತಿಯೊಂದೂ ಚಿಕೆತ್ಸೆಗಳಿಗೂ ರಾಜ್ಯದಾದ್ಯಂತ ಸಮರೂಪಿಯಾದ ಬೆಲೆಯನ್ನು ನಿಗದಿಪಡಿಸಲು, ತತ್ಕಾಲದ (ಎಮರ್ಜೆನ್ಸಿ) ಚಿಕಿತ್ಸೆಗಳಿಗೂ ಮುಂಗಡ ಹಣದ ಬೇಡಿಕೆಯನ್ನಿಡುವ ಅಭ್ಯಾಸಕ್ಕೆ ಬೇಲಿ ಹಾಕಲು, ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ ವ್ಯಕ್ತಿಯ ಮೃತದೇಹವನ್ನು ಮರಳಿಸುವ ಮುನ್ನ ಗಿರವಿ ಅಂಗಡಿಯ ಮಾಲಿಕನಂತೆ ಹಣದ ಕಂತೆಗಳನ್ನೇ ಕೇಳುವ ಕ್ರಮಕ್ಕೆ ಏಕ್ದಂ ಕಡಿವಾಣ ಹಾಕುವುದು ಈ ಮಸೂದೆಯ ಮೂಲ ಉದ್ದೇಶವಾಗಿದೆ. ಅದರ ಪ್ರಕಾರ ಒಂದು ವೇಳೆ ಈ ನಿಯಮವನ್ನು ಉಲ್ಲಘಂನೆ ಮಾಡುವುದಾದರೆ ಹಿಂದೆ ಸಾವಿರದಲ್ಲಿದ್ದ ದಂಡವನ್ನು ಈಗ ಲಕ್ಷಕ್ಕೆ ಹಾಗು ಜೈಲುವಾಸವನ್ನು ತಿಂಗಳುಗಳಿಂದ ವರ್ಷಗಳಿಗೆ ಏರಿಸಲಾಗಿದೆ!

ಪ್ರಸ್ತುತ ಜಾರಿಯಲ್ಲಿದ್ದ ಮಸೂದೆಯ ತಿದ್ದುಪಡಿಯ ಬಗೆಗಿನ ಚರ್ಚೆ ಬಹಳ ತಿಂಗಳುಗಳಿಂದ ನೆಡೆಯುತ್ತಲೇ ಇದೆ. ಈ ಕುರಿತು ಕಳೆದ ವರ್ಷವೇ ಸರ್ಕಾರ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ವಿಕ್ರಂಜಿತ್ ಸೇನ್ ರವರ ಅಧ್ಯಕ್ಷತೆಯಲ್ಲಿ ಕಮಿಟಿಯೊಂದನ್ನು ರಚಿಸಿ ಖಾಸಗಿ ಆಸ್ಪತ್ರೆಗಳ ಸುಲಿಗೆಯ ಬಗ್ಗೆ ಹಾಗು ಇದಕ್ಕೆ ಸಂಬಂಧಿಸಿದ ಇತರ ವಿಷಯಗಳ ಕುರಿತು ವರದಿಯೊಂದನ್ನು ಸಿದ್ಧಪಡಿಸಲು ಕೇಳಿಕೊಂಡಿತ್ತು. ಅದರಂತೆಯೇ ಈ ವರ್ಷದ ಏಪ್ರಿಲ್ಲಿನಲ್ಲಿ ರೆಡಿಯಾದ ಸಮಿತಿಯ ವರದಿಯನ್ನು, ಹಾಗು ಅದರಲ್ಲಿದ್ದ ಕೆಲವು ಅಳವಡಿಕೆಗಳನ್ನು ಕಂಡು ಕೆಂಡಾಮಂಡಲವಾದ ಖಾಸಗಿ ಆಸ್ಪತ್ರೆಗಳ ಸಂಘ ದಿನಕೊಂಡರಂತೆ ಹೊಸ ಹೊಸ ಖ್ಯಾತೆಗಳನ್ನು ಎತ್ತುತ್ತಾ ಕುಣಿದಾಡತೊಡಗಿತು. ಪ್ರೈವೇಟ್ ಆಸ್ಪತ್ರೆಗಳಿಗೆ ಕಡಿವಾಣ ಹಾಕುವ ಮೊದಲು ಸರ್ಕಾರೀ ಆಸ್ಪತ್ರೆಗಳ ಸ್ಟ್ಯಾಂಡರ್ಡ್ಸ್ ಅನ್ನು ಹೆಚ್ಚಿಸಿ ಅನ್ನುವುದು ಇವುಗಳಲ್ಲಿ ಒಂದು. ಪ್ರಸ್ತುತ ಸರ್ಕಾರೀ ಆಸ್ಪತ್ರೆಗಳ ಅವತಾರವನ್ನು ನೋಡಿದರೆ ಇವರ ಈ ಸಬೂಬು ತಪ್ಪೆಂದು ಅನಿಸದೇ ಇರದು. ಆದರೆ ಕಳ್ಳ ಯಾರು ಎಂದರೆ 'ನಾನಲ್ಲ, ಇವನು' ಎಂದು ಸರ್ಕಾರೀ ಆಸ್ಪತ್ರೆಗಳೆಡೆ ಬೊಟ್ಟುಮಾಡಿ ತೋರಿಸುವ ಇಂತಹ ಖಾಸಗಿ ಆಸ್ಪತ್ರೆಗಳ ಮೇಲೆ ಸಂಶಯ ಬಾರದೆ ಇರದು! ಸರಿ ಎನ್ನುತ್ತಾ ಪ್ರಸ್ತುತ ವಿಧಾನಸಭೆಯ ಅಧಿವೇಶನದವರೆಗೂ ತಳ್ಳಿಸಿಕೊಂಡು ಬಂದ ಮಸೂದೆ ಇನ್ನೇನು ಮಂಡಿಸಬೇಕು ಅನ್ನುವಷ್ಟರಲ್ಲಿ ರಾಜ್ಯದಾದ್ಯಂತ ಸುಮಾರು 500ಕ್ಕೂ ಹೆಚ್ಚಿನ ವೈದ್ಯರು ತಮ್ಮ ವೈದ್ಯ ವೃತ್ತಿಯ ಮೂಲ ಉದ್ದೇಶವನ್ನು ಮರೆತಂತೆ ರಸ್ತೆಗಿಳಿದು ಧರಣಿ ನೆಡೆಸಿದರು. ವೈದ್ಯಕೀಯ 'ಸೇವೆ' ಎಂಬುದು ಅಕ್ಷರ ಸಹ ಬಿಸಿನೆಸ್ ನಂತಾಗಿದೆ ಎಂಬುದನ್ನು ಸಾಬೀತುಮಾಡಿ ತೋರಿದರು. ಅತ್ತ ಚಿಕಿತ್ಸೆ ಸಿಗದೇ ವಿಲ ವಿಲ ಒದ್ದಾಡುತ್ತಿದ್ದ ಜೀವಗಳನ್ನೇ ಇಂದು ಕಣ್ಣೆತ್ತಿ ನೋಡದವರು ನಾಳೆ ಮಸೂದೆ ಮಂಡನೆಯಾಗಿ ರಾಜ್ಯಾದಾಂದ್ಯಂತ ಜಾರಿಯಾದರೆ ರೋಗಿಗಳ ಶುಶ್ರುಷೆಯನ್ನು ಅದೆಷ್ಟರ ಮಟ್ಟಿಗೆ ಮಾಡಬಹುದೆಂದು ನೀವೇ ಊಹಿಸಬಹುದು.

ಕಳೆದ ಆಗಸ್ಟ್ ನಲ್ಲಿ ಕೇಂದ್ರ ಸರ್ಕಾರ ಮಂಡಿಚಿಪ್ಪಿನ ಜೋಡಣೆ ಹಾಗು ಶಸ್ತ್ರ ಚಿಕಿತ್ಸೆಯ ದರವನ್ನು ಶೇಕಡ 70% ನಷ್ಟು ಇಳಿಸಿ ದೇಶದಾದ್ಯಂತ ಆಸ್ಪತ್ರೆಗಳು ಈ ದರವನ್ನೇ ಪಾಲಿಸುವಂತೆ ನಿಯಮವನ್ನು ಜಾರಿಗೊಳಿಸಿತು. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಜಾರಿಯಲ್ಲಿದ್ದ ಚಿಕಿತ್ಸೆಯ ವೆಚ್ಚವನ್ನು ಪ್ರತಿಶತ 70 ರಷ್ಟು ಇಳಿಸಿದರೂ ಆಸ್ಪತ್ರೆಗಳೇನು ಬೀದಿಗೆ ಬೀಳಲಿಲ್ಲ. ಡಾಕ್ಟರುಗಳೇನು ಮನೆ ಮಠವನ್ನು ಕಳೆದುಕೊಳ್ಳಲಿಲ್ಲ. ಹಾಗಾದರೆ ಇಲ್ಲಿಯವರೆಗೂ ಖಾಸಗಿ ಆಸ್ಪತ್ರೆಗಳು ಬಕಾಸುರರಂತೆ ಜನರ ಹಣ ಹಾಗು ನೆಮ್ಮದಿಯನ್ನು ಸಾಗರೋಪಾದಿಯಲ್ಲಿ ನುಂಗಿ ನೀರು ಕುಡಿದ್ದಿದಂತೂ ಸುಳ್ಳಲ್ಲ. ಅಲ್ಲವೇ? ಇದು ಕೇವಲ ಮಂಡಿಚಿಪ್ಪಿನ ಮಹಿಮೆ. ಅಂತಹ ಇನ್ನೆಷ್ಟು ರಾಶಿ ರಾಶಿ ದೇಹದ ಬಿಡಿ ಬಾಗಗಳ ಬಿಸಿನೆಸ್ ಗಳು ರೋಗಿಯ ರೋಗಗಳೊಟ್ಟಿಗೆ ಹಸುಕೊಕ್ಕಿವೆಯೋ ಯಾರು ಬಲ್ಲರು?!

ಖಾಸಗಿ ಆಸ್ಪತ್ರೆಗಳು ಈ ರೀತಿಯಾಗಿ ಯದ್ವಾ ತದ್ವಾ ಹಣವನ್ನು ಪೀಕಲು ಇರುವ ಮತ್ತೊಂದು ಮುಖ್ಯ ಕಾರಣ ಇನ್ಶೂರೆನ್ಸ್. ಹೌದು, ರೋಗಿಯ ಬಳಿ ಇನ್ಶೂರೆನ್ಸ್ ಎಂಬೊಂದು ಟ್ರಂಪ್ ಕಾರ್ಡ್ ಇದೆ ಎಂದರೆ ಆಸ್ಪತ್ರೆಗಳ ಬಿಲ್ಲಿನಲ್ಲಿ ನೂರು ಸಾವಿರವಾಗಬಹುದು, ಸಾವಿರ ಲಕ್ಷವಾಗಬಹುದು! ಇನ್ಶೂರೆನ್ಸ್ ಕಂಪನಿಗಳು ಕೊಡುತ್ತವಲ್ಲಾ ಎನ್ನುತ ರೋಗಿಗಳೂ ಬಾಯಿ ಮುಚ್ಚಿ ಸುಮ್ಮನೆ ಕೂರುತ್ತಾರೆ. ರೋಗಿಗಳ ನೆಪದಲ್ಲಿ ಹಣವನ್ನು ಲೂಟಿ ಮಾಡುವ ಮತ್ತೊಂದು ವಿಧಾನ ಶಿಫಾರಸ್ಸು (ರೆಫೆರೆನ್ಸ್) ಮಾಡುವಿಕೆ. ಆಸ್ಪತ್ರೆಗಳಲ್ಲಿ ಮಾತ್ರೆಯನ್ನೋ, ಯಾವುದೊ ಒಂದು ಬಗೆಯ ಚಿಕೆತ್ಸೆಯನ್ನೂ ಬ್ರಹ್ಮಲಿಪಿಯ ಕೋಡ್-ವರ್ಡ್ ಗಳಲ್ಲಿ ಬರೆದು ಅದನ್ನು ಅವರು ಹೆಸರಿಸಿದ್ದ ಮೆಡಿಕಲ್ ಅಥವಾ ಪರೀಕ್ಷಾ ಕೇಂದ್ರಕ್ಕೆ ಹೋಗಬೇಕೆಂದು ಡಾಕ್ಟರ್ ಗಳು ಆಜ್ಞಾಪಿಸುತ್ತಾರೆ. ಒಂದು ಪಕ್ಷ ಅವರು ಹೇಳಿದ ಮೆಡಿಕಲ್ ಅಥವಾ ಪರೀಕ್ಷಾ ಕೇಂದ್ರಕ್ಕೆ ಹೋಗದಿದ್ದರೆ ರೋಗಿ ತನ್ನ ಅಂತ್ಯವನ್ನೇ ಕಾಣುತ್ತಾನೇನೋ ಎನ್ನುವಂತಿರುತ್ತದೆ ಅವರ ಆ ದರ್ಪದ ಮಾತು. ಹೀಗೆ ಕಳುಹಿಸಿಕೊಡುವ ರೋಗಿಗಳ ಹಣದಲ್ಲಿ ನನಗೆ ಇಷ್ಟು, ನಿನಗೇ ಅಷ್ಟು ಎಂಬಂತೆ ಹಣ ಹಂಚಿಕೆಯಾಗುವುದು ಒಂದು ಆಡುವ ಮಕ್ಕಳಿಗೂ ತಿಳಿದಿರುವ ವಿಷಯವೇ! ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆಯಂತೆ ಆಸ್ಪತ್ರೆ, ಮೆಡಿಕಲ್ ಹಾಗು ಪರೀಕ್ಷ ಕೇಂದ್ರಗಳು ಹೀಗೆ ರೋಗಿಗಳ ಹೆಸರಲ್ಲಿ ಹಣವನ್ನು ಲೂಟಿ ಸಹಜವಾದ ವಿಷಯವಾಗಿದೆ. ಆದರೂ ಯಾರೊಬ್ಬರೂ ಇದರ ಬಗ್ಗೆ ಧ್ವನಿ ಎತ್ತುವುದಿಲ್ಲ. ಈಗ ಸರ್ಕಾರವೊಂದು ಈ ನಿಟ್ಟಿನಲ್ಲಿ ಜಾರಿಗೊಳಿಸಲೆತ್ನಿಸಿರುವ ಕಾನೂನು ಇವೆಲ್ಲ ಅಕ್ರಮಗಳಿಗೂ ಕಡಿವಾಣ ಹಾಕುವ ನಿಟ್ಟಿನಲ್ಲಿಯೇ ಇದೆ. ಆದರೂ ಈ ಮಸೂದೆಗೆ ವಿರೋಧವನ್ನು ವ್ಯಕ್ತಪಡಿಸುತ್ತಿರುವುದು ನಮ್ಮ ದೌರ್ಭ್ಯಾಗ್ಯವೇ ಸರಿ.

ಇವೆಲ್ಲ ವಾದ ಪ್ರತಿವಾದಗಳ ಹಿನ್ನಲೆಯಲ್ಲಿ ಬಹಳಷ್ಟು ವಿಷಯಗಳು ಆಳುವ ಸರಕಾರಗಳನ್ನು ತಮ್ಮ ಆತ್ಮಾವಲೋಕನವನ್ನು ಮಾಡಿಕೊಳ್ಳುವಂತೆ ಮಾಡಿವೆ. ಸರ್ಕಾರೀ ಆಸ್ಪತ್ರೆಗಳೆಂದರೆ ಗತಿ ಇಲ್ಲದವರಿಗೆ ಎಂಬುವಂತಹ ಮನೋಭಾವವೊಂದು ಜನರಲ್ಲಿ ಇಂದು ಆಳವಾಗಿ ಬೇರೂರಿದೆ. ಈ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳೆಂಬುದು ಪ್ರತಿಯೊಂದು ಕುಟುಂಬಗಳ ಪ್ರತಿಷ್ಠೆಯ ವಿಷಯವಾಗಿರುವುದಂತೂ ಸುಳ್ಳಲ್ಲ. ಜನರ ಪರವಾಗಿ ಹೊರಡುವ ಸದುದ್ದೇಶವಿದ್ದರೆ ಸರ್ಕಾರಗಳ ಮೊದಲ ಹೋರಾಟ ಇಂತಹ ಮನೋಸ್ಥಿತಿಯ ವಿರುದ್ದವಾಗಿರಬೇಕು. ಸರ್ಕಾರೀ ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಗಳಿಗೆ ಯಾವುದೇ ವಿಧದಲ್ಲೂ ಕಡಿಮೆಯಿಲ್ಲ ಎಂಬುದನ್ನು ಸಾಧಿಸಿ ತೋರುವ ಕಡೆಯಿರಬೇಕು. ಓದು, ಚಿಕಿತ್ಸೆ ಖಾಸಗಿಯದ್ದು, ಕೆಲಸ ಮಾತ್ರ ಸರ್ಕಾರದ್ದು ಎಂಬುವ ಉದ್ಯೋಗಕಾಂಕ್ಷಿಗಳಿಗೆ ಮಾತ್ರ ಸರ್ಕಾರೀ ಆಸ್ಪತ್ರೆಗಳು, ಶಾಲೆಗಳು ಪ್ರಿಯವಾದರೆ ಸಾಲದು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳನ್ನೇ ಆಧಾರವಾಗಿಟ್ಟುಕೊಂಡು ಅಲ್ಲಿರುವ ಸರ್ಕಾರೀ ಆಸ್ಪತ್ರೆಗಳನ್ನು ಅಭಿವೃದ್ದಿಪಡಿಸುವ ಗುರಿಯನ್ನು ಹಿಟ್ಟುಕೊಳ್ಳಲಿ. ವೈದ್ಯರ ಸಂಬಳ, ಅತ್ಯಾಧುನಿಕ ಫೆಸಿಲಿಟಿಗಳು, ಚಿಕಿತ್ಸಾ ಯಂತ್ರಗಳು, ಎಲ್ಲ ಬಗೆಯ ಡಿಪಾರ್ಟ್ಮೆಂಟುಗಳನ್ನು ಖಾಸಗಿ ಆಸ್ಪತ್ರೆಗಳ ಹಂತಕ್ಕೆ ತಂದು ನಿಲ್ಲಿಸಲಿ. ಆಗ ನೋಡುವ, ಏಕೆ ಜನಸಾಮಾನ್ಯರಿಗೆ ಸರ್ಕಾರೀ ಆಸ್ಪತ್ರೆಗಳು ಪ್ರಿಯವಾಗದೆ


ಪ್ರಸ್ತುತ ಮಸೂದೆ ಎರಡೂ ಸದನಗಳ ಅಂಕಿತವನ್ನು ಜೊತೆಗೆ ರಾಜ್ಯಪಾಲರ ಅನುಮೋದನೆಯನ್ನೂ ಪಡೆದಿದೆ.ಇಲ್ಲಿಯವರೆಗೂ ಆಳುವ ಸರ್ಕಾರಗಳು ಮಾಡುವ ಪ್ರತಿಯೊಂದು ಕಾರ್ಯಗಳನ್ನು ವಿರೋಧಿಸುವುದಷ್ಟೇ ತಮ್ಮ ಧ್ಯೇಯವೆಂದುಕೊಂಡಿದ್ದ ವಿರೋಧಪಕ್ಷಗಳು ಯಾವಾಗ ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗಲು ಶುರುವಾದರೋ ಸರ್ವಾನುಮತದಿಂದ ಈ ವಿಧೇಯಕಕ್ಕೆ ಒಪ್ಪಿಗೆ ನೀಡಿವೆ. ಇದೊಂದು ಉತ್ತಮ ಬೆಳವಣಿಗೆ. ಅದಾಗಲೇ ಸರ್ಕಾರೀ ಆಸ್ಪತ್ರೆಗಳನ್ನೂ ಅಲ್ಲಿನ ವೈದ್ಯರನ್ನೂ ಈ ನಿಯಮದ ಒಳಗೆ ಒಳಪಡಿಸಿ ಎನ್ನುತ್ತಾ ರಾಜ್ಯ ವೈದ್ಯರ ಸಂಘ ಹೈಕೋರ್ಟಿನ ಕದವನ್ನು ತಟ್ಟಿದ್ದೆ. ಹಾಗು ಇದು ನ್ಯಾಯ ಸಮ್ಮತವೂ ಹೌದು. ರಾಜ್ಯದಾದ್ಯಂತ ಏಕರೂಪ ನಿಯಮವನ್ನು ಜಾರಿತರುವಾಗ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣವೇಕೆ? ಆದರೆ ಸದ್ಯಕ್ಕೆ ಜಾರಿಯಾಗಿರುವ ಈ ಕಾನೂನಿನ ಮೇಲಿನ ಸಿಟ್ಟನ್ನು ಅಮಾಯಕ ರೋಗಿಗಳ ಮೇಲೆ ತೋರದಂತಾಗಲಿ, ಇದರಿಂದ ಸಕಲರಿಗೂ (ಖಾಸಗಿ / ಸರ್ಕಾರೀ) ಒಳಿತಾಗಲಿ ಎಂಬುದೇ ಸದ್ಯಕ್ಕೆ ಬಹುಜನರ ಆಶಯ.

Friday, November 10, 2017

ಕಥೆ : ಮನೆ


ಸಮಯ ಇನ್ನು ಮಧ್ಯರಾತ್ರಿಯನ್ನು ಕಳೆದಿರಲಿಲ್ಲ. ಮನೆಯ ಅಟ್ಟದ ಮೇಲೆ ಮಲಗಿದ್ದ ಮಗ ನಿಮಿಷಕ್ಕೊಮ್ಮೆ ಮಗ್ಗುಲು ಬದಲಾಯಿಸುತ್ತಿದ್ದ. ಆ ಒರಳಾಟಕ್ಕೆ ಅಟ್ಟದ ಮರದ ಹಲಗೆಗಳ ನಡುವೆ ಹಚ್ಚಿದ್ದ ಸುಣ್ಣದ ಎಕ್ಕೆಗಳು ಹಿಡಿ-ಹಿಡಿಯಾಗಿ ಕೆಳಗೆ ಚಾಪೆಯನ್ನಾಸಿಕೊಂಡು ಮಲಗಿದ್ದ ಅಪ್ಪನ ಮೇಲೆ ಬೀಳತೊಡಗುತ್ತಿದ್ದವು. ನಡು ನಡುವೆ ಚಟ್ ಪಟ್ ಎಂಬ ಸದ್ದಿನೊಂದಿಗೆ ಸೊಳ್ಳೆಗಳನ್ನು ಜಜ್ಜುವ ಸಿಟ್ಟಿನಲ್ಲಿ ಮಗ ತನ್ನ ಕೆನ್ನೆಯ ಮೇಲೆ ತಾನೇ ಬಾರಿಸಿಕೊಳ್ಳುತ್ತಿರುತ್ತಾನೆ. ತಾಸುಗಳು ಕಳೆದರೂ ನಿದ್ರೆಯೇರದ್ದಿದ್ದಾಗ ಒಮ್ಮೆಲೇ ಮೇಲೆದ್ದು ಮೆಯ್ಯ ಮೇಲಿದ್ದ ಬನಿಯನ್ನು ಹಾಗು ಲುಂಗಿಯನ್ನು ಬಿಚ್ಚೋಗೆದು, ಪಕ್ಕದಲ್ಲಿದ್ದ ಪುಸ್ತಕವನ್ನೇ ಬೀಸಣಿಗೆಯಂತೆ ಮಾಡಿಕೊಂಡು ಅಂಗಾತ ಮಲಗಿಕೊಳ್ಳುತ್ತಾನೆ. ಸೆಖೆಯೇನೋ ಕೊಂಚ ಕಡಿಮೆಯಾಯಿತೆಂದೆನಿಸಿದರೂ ಸೊಳ್ಳೆಗಳ ಆಕ್ರಮಣ ಮಾತ್ರ ವಿಪರೀತವಾಗುತ್ತದೆ. ಸಿಟ್ಟಿನಿಂದ ಮಗ ತನ್ನ ಅಂಗಾಗಳಿಗೆಲ್ಲ ಕೈ ಏಟಿನ ರುಚಿಯನ್ನು ತೋರಿಸುತ್ತ ಒರಳಾಡತೊಡಗುತ್ತಾನೆ. ಅಟ್ಟದ ಮೇಲೆ ಮೂಡುತ್ತಿದ್ದ ಸದ್ದಿಗೆ ವಿಚಲಿತರಾದ ಅಮ್ಮ 'ಅದ್ಯಾಕ್ ಅಷ್ಟ್ ಒದ್ದಾಡ್ತಿಯೋ, ಮುಖ ಓದ್ಕಂಡ್ ಮಲ್ಕ' ಎಂದ ಮಾತಿಗೆ ತದ್ವಿರುದ್ಧವಾಗಿ ಏನೋ ಅರಚಿದ ಮಗ.

ಇಂಜಿನಿಯರಿಂಗ್ ಮುಗಿಸಿ ಒಂದು ವರುಷವಾದರೂ ಯಾವೊಂದು ಕೆಲಸವೂ ಸಿಗದೇ ಒಂದಿಷ್ಟು ದಿನಗಳ ಕಾಲ ಮನೆಯಲ್ಲಿ ಇರಲು ಬಂದು ಅದಾಗಲೇ ನಾಲ್ಕು ತಿಂಗಳಾಗಿದೆ! 'ಸಿಟಿನೂ ಸಾಕು, ಆ ಕೆಲ್ಸನೂ ಸಾಕು. ಪಕ್ಕದೂರಿನ ಗ್ರಾಮ್ ಪಂಚಾಯಿತಿಲಿ ಬಿಲ್ ಕಲೆಕ್ಟರ್ ಕೆಲ್ಸ ಖಾಲಿ ಇದ್ಯಂತೆ. ಸ್ವಲ್ಪ ಟಬೇಲ್ ಕೆಳಗೆ ತಳ್ಳಿದ್ರೆ ಕೆಲ್ಸ ಗ್ಯಾರೆಂಟಿ' ಎನ್ನುತ್ತಾ ದಿನವೆಲ್ಲ ಊರಿನಲ್ಲೇ ಅಲೆದಾಡಿಕೊಂಡು ಕಾಲ ತಳ್ಳುತ್ತಿದ್ದ. ಓದಿನಲ್ಲಿ ತೀರಾ ಕನಿಷ್ಠದವನಲ್ಲನಾದರೂ ಪ್ರಸ್ತುತ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಗೋಳನ್ನು ಕಂಡು, ಅನುಭವಿಸಿ ಒಂದು ಬಗೆಯ ಅಸಡ್ಡೆ ಆತನಲ್ಲಿ ಮೂಡಿದೆ.

ಹತ್ತನೇ ತರಗತಿಯಲ್ಲಿ ಊರಿಗೇ ಮೊದಲಿಗನಾಗಿ ಬಂದಂದೇ ಅಪ್ಪನಿಗೆ ಗೊತ್ತಾದದ್ದು ಮಗನ ಅಸಲಿಯತ್ತು. ಅಂದು ಶುರುವಾದ ಒಂದು ಉತ್ಕಟ ಛಲ ಮಗನನ್ನು ಒಬ್ಬ ಇಂಜಿನಿಯರ್ ನನ್ನಾಗಿ ಮಾಡಿ ತೀರುವವರೆಗೂ ಆರಲಿಲ್ಲ. ಆತನ ಕುಟುಂಬದಲ್ಲೇ ಯಾರೊಬ್ಬರೂ ಈ ಮಟ್ಟಿನ ವಿದ್ಯಾಭ್ಯಾಸವನ್ನು ಮಾಡಿರುವ ಪುರಾವೆಗಳೇ ಇರಲಿಲ್ಲ. ಆ ಹೆಮ್ಮೆಯೆ ಅಪ್ಪನನ್ನು ಮತ್ತಷ್ಟು ಛಲಗಾರನಾಗಿ ಮಾಡಿತು. ತನ್ನ ರಕ್ತ ಬೆವರನ್ನು ಬಸಿದು ಮಗನೆಂಬ ಆಸ್ತಿಯನ್ನು ಬೆಳೆಸಿದ.

ಮನೆಯನ್ನು ಬಿಟ್ಟರೆ ಆತನಿಗಿರುವ ಕಡೆಯ ಆಸ್ತಿಯೇ ಈ ಮಗ.

ಆದರೆ ಇಂದು ಮಗ ಹೆಸರಿಗಷ್ಟೇ ಇಂಜಿನಿಯರ್. ಆತನ ಭವಿಷ್ಯ ಮಾತ್ರ ತೋಟದ ಕೂಲಿ ಕೆಲಸದವನಿಗಿಂತಲೂ ಅತಂತ್ರ. ಮನೆಯ ಹೆಸರನ್ನು ಬೆಳಗಬೇಕಾದ ಮಗನಿಗೆ ಜೀವನದ ಹಾಫ್ ಸೆಂಚುರಿಯನ್ನು ಪೂರೈಸಿದ್ದ ಅಪ್ಪ ಏನಾದರೊಂದು ದಾರಿಯನ್ನು ಮಾಡಲು ಅವಣಿಸುತ್ತಿದ್ದ. ಮನೆಗೆ ಮೂರೊತ್ತಿನ ಊಟವನ್ನು ವ್ಯವಸ್ಥೆ ಮಾಡುವುದೇ ಹರಸಾಹಸವಾಗಿರುವಾಗ ಮಗನಿಗಾಗಿ ಪ್ರತ್ಯೇಕವಾಗಿ ಏನಾದರು ಮಾಡಲು ಬೇಕಾದ ಸಮಯವಾಗಲಿ, ಹಣವಾಗಲಿ ಮಾತ್ರ ಅಪ್ಪನಲ್ಲಿ ಇರಲಿಲ್ಲ. ತನ್ನ ಕಣ್ಣ ಮುಂದೆಯೇ ಮಗನನ್ನು ಬೆಳೆಸಬೇಕೆಂದು ಮುಂಬೈಯ ಗಾರ್ಮೆಂಟ್ ಕಂಪನಿಯ ಕೆಲಸವನ್ನೂ ಬಿಟ್ಟು ಊರಿಗೆ ಬಂದು ನೆಲೆಗೊಂಡಿದ್ದ ಅಪ್ಪ. ಒಂದು ಪಕ್ಷ ಇಲ್ಲಿಯವರೆಗೂ ಆ ಕಂಪನಿಯಲ್ಲಿ ದುಡಿದ್ದಿದ್ದರೆ ಕಡೆ ಪಕ್ಷ ಒಂದು ನಾಲ್ಕೆಕರೆ ಜಮೀನನ್ನಾದರೂ ಮಾಡಬಹುದಿದ್ದತು ಎಂದು ಅದೆಷ್ಟೋ ಬಾರಿ ಅನಿಸಿದ್ದರೂ ಮನೆ ಹಾಗು ಮನೆಯವರನ್ನು ಬಿಟ್ಟಿರಲು ಅಪ್ಪನಿಗೆ ಸಾಧ್ಯವೇ ಆಗುತ್ತಿರಲಿಲ್ಲ. ಮಗ ಹುಟ್ಟಿದ ಮೇಲಂತೂ ಒಂದು ದಿನವೂ ಆತನಿಗೆ ಅಲ್ಲಿ ನೆಲೆಸಲು ಸಾಧ್ಯವಾಗಿರಲಿಲ್ಲ.

ಸುಣ್ಣದ ಎಕ್ಕೆಗಳ ಪುಡಿ ಮೈಯ ಮೇಲೆ ಬೀಳುತ್ತಿದ್ದರಿಂದ ಅಪ್ಪನಿಗೂ ಅಂದು ನಿದ್ರೆ ಆವರಿಸಲಿಲ್ಲ. ಹುಣ್ಣಿಮೆಯ ಚಂದಿರನ ಬಳದಿಂಗಳು ಹೊರಗೆಲ್ಲ ಪಸರಿಸಿರುವುದನ್ನು ಕಂಡ ಆತ ಬಾಗಿಲನ್ನು ತೆರೆದು ಹೊರಬಂದು ಮನೆಯ ಸಣ್ಣ ಕಾಂಪೌಂಡನ್ನೊರಗಿ ನಿಲ್ಲುತ್ತಾನೆ. ತಂಪಾದ ಗಾಳಿ ಆತನಿಗೆ ಕೊಂಚ ಹಿತವೆನಿಸುತ್ತದೆ. ಆದರೆ ಇಂದು ಅಪ್ಪನಿಗೆ ನಿದ್ರೆ ಬಾರದಿದ್ದಕ್ಕೂ ಹೀಗೆ ಹೊರಬಂದು ಗಾಳಿಗೆ ಮಯೊಡ್ಡಿದಕ್ಕೂ ಎಳ್ಳಷ್ಟೂ ಸಂಬಂಧವಿಲ್ಲ. ಅದೆಷ್ಟೇ ಸೆಕೆಯ ಮಾಸವಾದರೂ ಸರಿಯೇ ಮನೆಯ ನೆಲದ ಮೇಲೆ ಚಾಪೆಹಾಸಿ ಮಲಗಿದರೆ ಸಾಕು, ಕಣ್ತೆರೆಯುತ್ತಿದ್ದದ್ದು ಮರುದಿನ ಮುಂಜಾನೆಯೇ. ಆ ಮನೆಯೇ ಅಂತಹದ್ದು. ಸಿಟಿಯ ಒಳಗಿರುವ ಹಂಚಿನ ಮನೆ. ಅಪ್ಪನ ಅಪ್ಪ ಕಟ್ಟಿಸಿದ ಮನೆ. ಕುಟುಂಬದವರೆಲ್ಲರನ್ನೂ ಸಾಕಿದ ಮನೆ. ಅಪ್ಪ ಕೊಟ್ಟ, ಮುಂದೆ ಮಗನಿಗೆ ಕೊಡಬೇಕಾದ ಮನೆ. ಐವತ್ತು ವರ್ಷದ ಈ ಮನೆ ಅದೆಂಥಹ ಮಹಾ ಗಾಳಿ ಮಳೆಗೂ ಅಲುಗದೆ ನಿಂತಿದೆ. ಹಳೆ ಕಾಲದ ನಿರ್ಮಾಣವನ್ನೂ ಕೊಂಚ ಒಳಗೊಂಡಿದೆ. ಸುತ್ತ ಮುತ್ತ ಕಣ್ಣಾಹಿಸಿದರೂ ಈ ಮನೆಗೆ ಹೋಲುವ ಮಾದರಿಯ ಮತ್ತೊಂದು ಮನೆಯಿಲ್ಲ. ಅಲ್ಲಿರುವುದೆಲ್ಲ ನವ ಮಾದರಿಯ RCC ಮನೆಗಳೇ. ಸಿಟಿಯ ಮಧ್ಯದಲ್ಲಿರುವ ಈ ಹಳೆಕಾಲದ ಹಂಚಿನ ಮನೆ ಗತಿಸಿದ ಕಾಲದ ಏಕಮಾತ್ರ ಪುರಾವೆಯಂತಿದೆ. ಅಲ್ಲದೆ ಅಪ್ಪನೊಟ್ಟಿಗೆ ಬೆಳೆದು ಆತನ ಕಣ ಕಣದಲ್ಲೂ ಬಸಿದುಕೊಂಡಿದೆ, ಆತನ ನೆನಪಿನ ಗಣಿಯಾಗಿದೆ.

ಮನೆ ಕಟ್ಟುವಾಗ ಅಂಬೆಗಾಲಿಟ್ಟು ನೆಡೆದಾಡುತಿದ್ದ ಅಪ್ಪ ಮನೆಕಟ್ಟಲು ತಂದು ಸುರಿದಿದ್ದ ಮರಳನ್ನು ಹಿಡಿ ಹಿಡಿ ತಿಂದು ಅವಾಂತರ ಮಾಡಿಕೊಂಡಿದ್ದ ನೆನಪಾಗಲಿ, ಅಪ್ಪನ ದುಡ್ಡನ್ನು ಕದ್ದು ಸಿಕ್ಕಿಹಾಕಿಕೊಂಡ ಭಯದಲ್ಲಿ ಮನೆಯ ಹಂಚಿನ ತುದಿಗೆ ಯಾರಿಗೂ ಸಿಗದಂತೆ ಹೋಗಿ ಕುಳಿತು ಮನೆಯವರೆಲ್ಲವನ್ನೂ ಸತಾಯಿಸಿದ ಘಳಿಗೆಯಾಗಲಿ, ಅಜ್ಜಿಯ ಮನೆಯಿಂದ ತಂದ ಹಲಸಿನ ಹಣ್ಣನು ಎಲ್ಲರು ನಿದ್ರಿಸುತ್ತಿರುವಾಗ ಅಟ್ಟಕ್ಕೆ ಏರಿ ಒಬ್ಬನೇ ಸುಲಿದು ತಿಂದ ಚಿತ್ರವಾಗಲಿ ಇಂದಿಗೂ ಅಪ್ಪನ ಕಣ್ಣ ಮುಂದೆ ಬರುತ್ತಿರುತ್ತವೆ. ಮನೆಯ ಬಾಗಿಲಿಗೆ ಮುಂದೆಯೆ ನಿರ್ಮಿಸಿದ್ದ ಆ ಮೆಟ್ಟುಲುಗಳಲ್ಲೇ ಅಮ್ಮ ಅಪ್ಪನನ್ನು ಎದೆಗವುಚಿಕೊಂಡು ಲಾಲಿ ಹಾಡುತ್ತಾ ಮಲಗಿಸಿದ ದಿನಗಳೆಷ್ಟೋ. ಸುಮಾರು ಏಳೆಂಟು ವರ್ಷಗಳ ವರೆಗೂ ಅಪ್ಪ ಅಮ್ಮನ ತೊಡೆಯ ಮೇಲೆ ಹಾಗೆಯೆ ತಲೆಯಿಟ್ಟು ಮಲಗುತ್ತಿದ್ದ. ಪ್ರತಿದಿನ.

ಯಾಕೋ ಇಂದು ಅಮ್ಮ ಬಲವಾಗಿ ಆತನಿಗೆ ನೆನಪಾಗತೊಡಗಿದಳು. ಅಮ್ಮ ಕಾಲವಾಗಿ ಹತ್ತು ವರ್ಷಗಳೇ ಆದರೂ ಆಕೆ ಇಲ್ಲದ ಅನುಭವವೇ ಅಪ್ಪನಿಗಾಗಿಲ್ಲ. ಪ್ರತಿದಿನವೂ ಹೀಗೆಯೆ ರಾತ್ರಿಯ ಸಮಯ ಮೆಟ್ಟಿಲುಗಳನ್ನು ನೋಡಿದರೆ ಆಕೆ ಅಲ್ಲೇ ಕೂತು ತನ್ನನ್ನು ಆಕೆಯ ತೊಡೆಯ ಮೇಲೆ ಮಲಗಲು ಕರೆಯುತ್ತಿದ್ದಾಳೆ ಎನಿಸತೊಡಗುತ್ತದೆ. ಒಮ್ಮೆ ಅಲ್ಲಿ ಕೂತರೆ ಸಾಕು, ದಿನದ ಜಂಜಾಟವೆಲ್ಲ ಕ್ಷಣದಲ್ಲೇ ಮಂಗಮಾಯ! ಅಪ್ಪ ಮೆಟ್ಟಿಲುಗಳ ಮೇಲೆ ಹೋಗಿ ಕುಳಿತ. ಗಾಳಿ ಇನ್ನೂ ಹಿತವಾಗಿ ಬೀಸತೊಡಗಿತ್ತು. ತನ್ನ ಹೆಂಡತಿ, ಮಗನಿಗೆ ಸುಮ್ಮನೆ ಮಲಗಲು ಮತ್ತೊಮ್ಮೆ ಕೂಗಿದ್ದು ಕೇಳಿಸಿತು.

ಯೋಚಿಸತೊಡಗಿದ ಅಪ್ಪ. ಮಗನ ಜೀವನದ ಬಗ್ಗೆ, ಆತನ ನಾಳೆಗಳ ಬಗ್ಗೆ. ಮನೆಯೊಂದನ್ನು ಬಿಟ್ಟರೆ ಮಗನಿಗೆ ಕೊಡಲು ಆತನಲ್ಲಿ ಬೇರೇನೂ ಇಲ್ಲ. ಒಮ್ಮೆ ಮಗ ತನ್ನ ಸ್ವಂತ ಕಾಲ ಮೇಲೆ ನಿಂತರೆ ಸಾಕು, ಅಪ್ಪನ ವರ್ಷಗಳ ತಪಸ್ಸಿಗೆ ವರ ದೊರಕಿದಂತಾಗುತ್ತದೆ. ಬಿಲ್ ಕಲೆಕ್ಟರ್ ಹುದ್ದೆಯ ಹೊರಒಳಗುಗಳನ್ನು ಚೆನ್ನಾಗಿ ಅರಿತಿದ್ದ ಅಪ್ಪ, ಮಗನನ್ನು ಒಬ್ಬ ಗಿಂಬಳದ ಆಸೆಗೆ ದುಡಿಯುವ ನೌಕರನನ್ನಾಗಿ ಖಂಡಿತ ನೋಡಲಾರ. ಆದ ಕಾರಣಕ್ಕೆ ಒಳಗೆ ಅದೆಷ್ಟೇ ಮೃದು ಸ್ವಭಾವದವನಾಗಿದ್ದರೂ ಮಗನ ಮುಂದೆ ಮಾತ್ರ ಬಹಳ ಸೀರಿಯಸ್ ಆಗಿಯೇ ವರ್ತಿಸುತ್ತಿದ್ದ. ಆತ ಕೇಳಿದಕ್ಕೆಲ ಹುಂ ಅನ್ನದೆ ಒಂದು ಬಗೆಯ ಅದ್ದುಬಸ್ತಿನಲ್ಲೇ ಮಗನನ್ನು ಇರಿಸಿಕೊಂಡಿದ್ದ. ಆದ ಕಾರಣವೇ ಎರಡು ತಿಂಗಳ ಮೊದಲೇ ಬಿಲ್ ಕಲೆಕ್ಟರ್ ಹುದ್ದೆ ಇದೆಯೆಂದು ತಿಳಿದರೂ ಇಂದಿನವರೆಗೂ ಅವನ ಕೋರಿಕೆಗೆ ಅಸ್ತು ಎಂದಿರಲಿಲ್ಲ. ಆದರೆ ಅದೆಷ್ಟೇ ಅದ್ದುಬಸ್ತಿನಲ್ಲಿ ಇರಿಸಿಕೊಂಡಿದ್ದರೂ ಮಗನನ್ನು ತನ್ನಂತೆ ಒಬ್ಬ ಛಲಗಾರನಾಗಿ ಮಾಡಲಾಗಲಿಲ್ಲ ಎಂಬ ಕೊರಗು ಅಪ್ಪನಲ್ಲಿ ಇದೆ. ಪ್ರಸ್ತುತ ಪರಿಸ್ಥಿತಿಯೂ ಇಂಜಿನಿಯರಿಂಗ್ ಓದಿದವರಿಗೆ ಅಷ್ಟೇನೂ ಪೂರಕವಾಗಿಲ್ಲದಿರುವುದೂ ಅಪ್ಪನ ಸುಮ್ಮನಿರುವಿಕೆಗೆ ಒಂದು ಕಾರಣವಾಗಿದ್ದಿತು. ಮೆಟ್ಟಿಲುಗಳ ಮೇಲೆ ಕೂತ ಅಪ್ಪನಿಗೆ ಇಂದು ಏಳಲು ಮನಸ್ಸೇ ಬರುತ್ತಿಲ್ಲ. ಕೂತಷ್ಟೂ ಇನ್ನೂ ಕೂರಬೇಕು ಎಂದನಿಸತೊಡಗುತ್ತದೆ. ಆದರೆ ಎಂದಿನಂತೆ ಇಂದು ಮಾತ್ರ ಆತನ ತಲೆಯನ್ನು ಕೊರೆಯುತ್ತಿದ್ದ ಚಿಂತೆ ಮಾತ್ರ ಕೆಳಗಿಳಿಯಲಿಲ್ಲ.

ಬುದ್ದಿ ಪಕ್ವತೆಯ ಹಾದಿಯನ್ನು ಹಿಡಿದಾಗಿನಿಂದಲೂ ಅಪ್ಪನನ್ನು ಕಂಡರೆ ಅಷ್ಟಕಷ್ಟೇ ಮಗನಿಗೆ. ಯಾವಾಗಲೂ ಸೀರಿಯಸ್ಸಾಗಿ ಕೋರ್ಟಿನ ಜಡ್ಜ್ ನಂತೆ ಇರುವ ಅಪ್ಪನೊಟ್ಟಿಗೆ ಮಗ ಮಾತಾಡುತ್ತಿದ್ದದ್ದೇ ಬಲು ಅಪೂರ್ವ. ಸಣ್ಣವನಿದ್ದಾಗ ಅವರ ಈ ಗುಣ ಹೆಚ್ಚು ಹಿಡಿಸದಿದ್ದ ಅವನಿಗೆ ದೊಡ್ಡವನಾಗುತ್ತಾ ಅವರ ಹಿಂದಿನ ಒಂದೊಂದು ನಿರ್ಧಾರಗಳ ಬಗ್ಗೆಯೂ ಸಿಟ್ಟು ಬರತೊಡಗುತ್ತದೆ. ಅದು ದೂರದ ಮುಂಬೈಯಲ್ಲಿ ಗಾರ್ಮೆಂಟ್ ಕಂಪನಿಯೊಂದರ ಮ್ಯಾನೇಜರ್ ಆಗಿದ್ದ ಕೆಲಸವನ್ನು ಬಿಟ್ಟು ಊರಿಗೆ ವಾಪಾಸ್ ಬಂದದ್ದಾಗಲಿ ಅಥವಾ ಕೆಲ ವರ್ಷಗಳ ಹಿಂದೆ ಒಂದೊಳ್ಳೆ ಪಾರ್ಟಿ ಇಪ್ಪತ್ತು ಲಕ್ಷ ರೂಪಾಯಿಗೆ ಮನೆಯನ್ನು ಕೊಂಡುಕೊಳ್ಳುತ್ತೇನೆ ಎಂದರೂ ಒಪ್ಪದ ನಿರ್ಧಾರವಾಗಲಿ ಅಥವಾ ಇತ್ತೀಚಿಗೆ ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್ ಹುದ್ದೆಗೂ ಅಸ್ತು ಎನ್ನದೆ ಸತಾಯಿಸುತ್ತಿದ್ದ ಅಪ್ಪನನ್ನು ಕಂಡರೆ ಉರಿದು ಬೀಳುತಿದ್ದ ಮಗ. ತನ್ನ ಪ್ರಸ್ತುತ ಅವಸ್ಥೆಗೆ ಒಂದಿಲ್ಲೊಂದು ಬಗೆಯಲ್ಲಿ ಅಪ್ಪನೇ ಕಾರಣವೆಂಬ ಮನಸ್ಥಿತಿಯನ್ನು ಆತ ಬೆಳೆಸಿಕೊಂಡಿರುತ್ತಾನೆ. ಬೆಳಗ್ಗೆದ್ದರೆ ತನ್ನಂತೆಯೇ ಇಂಜಿನಿಯರಿಂಗ್ ಮಾಡಿ ಕೆಲಸ ಸಿಗದೇ ಅಲೆಯುತ್ತಿದ್ದ ಊರಿನ ಇನ್ನಿತರ ಹುಡುಗರನ್ನು ಕಟ್ಟಿಕೊಂಡು ಸುತ್ತುತಿದ್ದ . ದಿನವಿಡಿ ಈಗಿರುವ ಶಿಕ್ಷಣ ವ್ಯವಸ್ಥೆಗೆ, ತಾವು ಓದಿದ ಶಿಕ್ಷಣ ಸಂಸ್ಥೆಗಳಿಗೆ, ತಮಗೆ ಕೆಲಸ ಕೊಡದ ಕಂಪನಿಗಳಿಗೆ ಶಪಿಸುತ್ತಾ, ಕೆಲವೊಂದು ಬಿಸಿನೆಸ್ ಪ್ಲಾನ್ ಗಳನ್ನು ಹಣೆಯುತ್ತ ಕಾಲಹರಣ ಮಾಡುತಿದ್ದ.

ಆದರೆ ಇಂದು ಮಾತ್ರ ಮಗನಿಗೆ ತನ್ನ ಹೊಸ ಬಗೆಯ ಬಿಸಿನೆಸ್ ಪ್ಲಾನ್ ಬಹಳ ಸತಾಯಿಸುತ್ತಿದೆ. ಗೆಲುವಿನ ಖಚಿತತೆಯ ಬೆಗ್ಗೆ ಎಳ್ಳಷ್ಟೂ ಅನುಮಾನವಲ್ಲ ಅವನಿಗೆ! ಇದನ್ನು ಗೆಳೆಯರೊಟ್ಟಿಗೆ ಸೇರಿ ಮಾಡಬೇಕಾ ಅಥವಾ ತಾನೇ ಖುದ್ದಾಗಿ ಬಂಡವಾಳ ಹೂಡಿ ಶುರುಮಾಡಬೇಕಾ ಎಂಬ ಗೊಂದಲದಲ್ಲಿ ಆತ ಮುಳುಗುತ್ತಾನೆ. ಗೆಳೆಯರನ್ನು ಒಟ್ಟುಗೂಡಿ ಶುರುವಿಟ್ಟುಕೊಂಡರೆ ಗೆಳೆತನ ಹಾಗು ಹಣ ಎಂದಿಗೂ ಎಣ್ಣೆ-ನೀರಿನಂತೆ ಎಂಬುದ ಆತ ಚೆನ್ನಾಗಿ ಬಲ್ಲ. ಒಂದು ಪಕ್ಷ ತಾನೇ ಎಲ್ಲ ಜವಾಬ್ದಾರಿಯನ್ನು ಹೊತ್ತು ಮಾಡ ಹೊರಟರೆ ಕನಿಷ್ಠ ಎಂದರೂ ಹತ್ತರಿಂದ ಹನ್ನೆರಡು ಲಕ್ಷಗಳಷ್ಟು ಬಂಡವಾಳ ಬೇಕು. ಹತ್ತು ಲಕ್ಷಗಳು ಹೋಗಲಿ, ಕಡೆ ಪಕ್ಷ ಹತ್ತು ಸಾವಿರಗಳಾದರೂ ತನ್ನಲ್ಲಿ ಅಥವಾ ಅಪ್ಪನೊಟ್ಟಿಗಾಗಲಿ ಇಲ್ಲ ಎಂಬುದು ಮಗನಿಗೆ ಗೊತ್ತು. ಅಪ್ಪನನ್ನು ಕೇಳಿದರೆ ಆತನಿಂದ ಆಗದು. ಒಂದು ಪಕ್ಷ ಸಾದ್ಯವಾಗುತ್ತಿದ್ದಾದರೂ ಇಂತಹ ಹೆಚ್ಚಿನ ಖರ್ಚುಗಳಿಗೆಲ್ಲ ಆತ ಸಮ್ಮತಿಸುತ್ತಿರಲೂ ಇಲ್ಲ. ಆದರೂ ಅಪ್ಪ ಏನಾದರೊಂದು ವ್ಯವಸ್ಥೆ ಮಾಡಬಹುದೇ ಎಂಬ ಪ್ರೆಶ್ನೆ ಮಗನಲ್ಲಿ ಮೂಡುತ್ತದೆ. ಅಪ್ಪನನ್ನು ಬಿಟ್ಟರೆ ಯಾರಿದ್ದಾರೆ ತನಗೆ ಸಹಾಯ ಮಾಡಲು? ಕೊನೆಯ ಸಾಲುಗಳನ್ನು ಮಗ ತನ್ನೊಳಗೆ ಹೇಳಿಕೊಳ್ಳುತ್ತಿರುವಾಗ ಮಾತ್ರ ಏನೋ ಒಂದು ಬಗೆಯ ದಿಗ್ಬ್ರಮೆ ಮೂಡುತ್ತದೆ. ಇಷ್ಟು ವರ್ಷಗಳ ಕಾಲದಲ್ಲಿ ಒಮ್ಮೆಯೂ ಸಹ ಇಂತಹ ಒಂದು ಭಾವ ಆತನಲ್ಲಿ ಮೂಡಿರಲಿಲ್ಲ. ಅಪ್ಪನನ್ನು ಬಿಟ್ಟರೆ ನನಗೆ ಮತ್ಯಾರು?!

ಮಾರನೆಯ ದಿನದ ಸಂಜೆ ಮನೆಯ ಮೆಟ್ಟಿಲುಗಳ ಮೇಲೆ ಕೂತಿದ್ದ ಅಪ್ಪನ ಮುಂದೆ ಬಂದು ಕೂತ ಮಗ ತಾನು ಯೋಚಿಸಿದ್ದ ಯೋಜನೆಯನ್ನು ತನ್ನ ಪಾಡಿಗೆ ತಾನು ಹೇಳಿಕೊಂಡು ಹೋಗುತ್ತಾನೆ. ಅದು ಅಪ್ಪನ ಕಿವಿಗೆ ಬೀಳುತ್ತಿದೆ ಎಂಬುದ ತಿಳಿದೇ ಶುರು ಮಾಡುತ್ತಾನೆ. ಮನೆಯ ಬಾಗಿಲಿಗೆ ತಲೆಯನ್ನು ಒರಗಿ ಚಿಂತಿಸುತ್ತಿದ್ದರೂ ಒಂದು ಬಗೆಯ ಗಾಂಭೀರ್ಯತೆ ಅಪ್ಪನ ಮುಖದ ಮೇಲೆ ಮೂಡಿರುತ್ತದೆ.

'ಇದನ್ನು ಬಿಸಿನೆಸ್ ಅಂತ ಬೇರೆಯವರು ಕರೆಯಬಹದು. ಆದರೆ ನಾನು ಇದನ್ನು ಸೋಶಿಯಲ್ ಸರ್ವಿಸ್ ಅಂತಾನೆ ಕರೀತೀನಿ. ಯಾಕಂದ್ರೆ ಇಲ್ಲಿ ಪ್ರಯೋಜನಕ್ಕೊಳಪಡುತ್ತಿರುವವರು ವಿದ್ಯಾರ್ಥಿಗಳು, ಕಾಲೇಜುಗಳು, ಹಾಗು ಕಂಪನಿಗಳು. ಹೌದು, ಇದೊಂದು ಟ್ರೈನಿಂಗ್ ಇನ್ಸ್ಟಿಟ್ಯೂಟ್. ನಮ್ಮ ತಾಲೂಕಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅದೆಷ್ಟೇ ಉತ್ತಮ ಅಂಕಗಳನ್ನೂ ಗಳಿಸಿಕೊಂಡಿದ್ದರೂ ಯಾವೊಂದು ಕಂಪನಿಯೂ ಬೆಂಗಳೂರಿನ ಕಾಲೇಜುಗಳಿಗೆ ಬರುವಂತೆ ಸೆಮಿಸ್ಟರ್ ಮುಗಿಯುವ ಮೊದಲೇ ಇಲ್ಲಿಯ ಕಾಲೇಜುಗಳಿಗೆ ಬಂದು ನೂರಾರು ವಿದ್ಯಾರ್ಥಿಗಳನ್ನು ಹೆಕ್ಕಿ ಕರೆದುಕೊಂಡು ಹೋಗುವುದಿಲ್ಲ. ಹಳ್ಳಿಯ ವಿದ್ಯಾರ್ಥಿಗಳು ಕಾಲೇಜು ಮುಗಿದು ವರ್ಷಾನುಗಟ್ಟಲೆ ಬೆಂಗಳೂರಿನಂತ ನಗರಗಳಲ್ಲಿ ಕೆಲಸಕ್ಕಾಗಿ ಅಲೆಯಬೇಕು. ಸಿಕ್ಕರೂ ಅಂತ ಕೆಲಸಗಳಿಂದ ಬರುವ ಸಂಬಳ ಬಟ್ಟೆಗಾದರೆ ಹಿಟ್ಟಿಗಿಲ್ಲ, ಹಿಟ್ಟಿಗಾದರೆ ಬಟ್ಟೆಗಿಲ್ಲ ಎಂಬಂತೆ. ಇನ್ನು ಸಾಧಾರಣ ವಿದ್ಯಾರ್ಥಿಗಳಿಗಂತೂ ಕೆಲಸವೆಂಬುದು ಹಿಮಾಲಯ ಪರ್ವತವೇ ಸರಿ. ಊರಿನಿಂದ ಅಷ್ಟೋ ಇಷ್ಟೋ ಹಣವನ್ನು ಹಿಡಿದುಕೊಂಡು ಹೋಗಿ, ಯಾವುದೊ ಗೆಳೆಯನ ಒಂದು ರೂಮಿನ ಮೂಲೆಯಲ್ಲಿ ಒಂದಿಷ್ಟು ಜಾಗವನ್ನು ಪಡೆದು ದಿನವಿಡೀ ಸಿಟಿಯ ಗಲ್ಲಿಮೂಲೆಗಳನ್ನು ಸುತ್ತುತ್ತಾ, ಕಂಡ ಕಂಡಲ್ಲೆಲ್ಲ ಇಂಟರ್ವ್ಯೂ ಗಳನ್ನು ಕೊಡುತ್ತಾ, ಹಣ ಖಾಲಿಯಾಗುತ್ತಿರುವಂತೆ ಏರೊಡೊತ್ತಿನ ಊಟವನ್ನು ಒಂದೊತ್ತಿಗೆ ಸೀಮಿತವಾಗಿರಿಸಿಕೊಳ್ಳುತ್ತಾ, ಕೊನೆಕೊನೆಗೆ ಕೇವಲ ಟೀ ಬನ್ನುಗಳಲ್ಲೇ ದಿನವನ್ನು ಸಾಗಿಸುತ್ತ, ಆಗಲೂ ಕೆಲಸ ಸಿಗದೇ ಕೊನೆಗೆ ಊರಿನ ಯಾರೋ ಒಬ್ಬರನ್ನು ಸಿಟಿಯಲ್ಲಿ ಕಂಡು ಅವರಿಂದ ಒಂದಿಷ್ಟು ಹಣವನ್ನು ಸಾಲದ ರೂಪದಲ್ಲಿ ಪಡೆದು ಇದ್ದೆನೋ ಬಿದ್ದೆನೋ ಎಂಬಂತೆ ಊರಿಗೆ ಸೇರುವ ಇಂತಹ ಯುವಕರನ್ನು ಎಂಜಿನೀರ್ಸ್ ಗಳು ಎಂದು ಕರೆಯಬಹುದೇ?’

ಅಪ್ಪ ಯಾವ ಭಾವವನ್ನೂ ಸೂಚಿಸದೆ ಕೇಳಿಸಿಕೊಳ್ಳುತ್ತಿರುತ್ತಾನೆ. ಆದರೂ ಮಗ ಮುಂದುವರೆಸಿದ,

'ನಾನು ಶುರು ಮಾಡಲೋಗುತ್ತಿರುವ ಇನ್ಸ್ಟಿಟ್ಯೂಟ್ ಮೊದಲು ಕಂಪನಿಗಳನ್ನು ಸಂಪರ್ಕಿಸಿ ಅವರು ಪ್ರಸ್ತುತ ವರ್ಷಕ್ಕೆ ನೇಮಕಾತಿ ಮಾಡಲು ಯೋಜಿಸಿರುವ ವಿದ್ಯಾರ್ಥಿಗಳ ಅರ್ಹತೆ, ಬೇಡಿಕೆ ಹಾಗು ಒಟ್ಟು ಸಂಖ್ಯೆಯನ್ನು ಒಟ್ಟುಗೂಡಿಸಿಕೊಂಡು ಬರುತ್ತದೆ. ಹೀಗೆ ಎಂಟತ್ತು ಕಂಪನಿಗಳನ್ನು ಸಂಪರ್ಕಿಸಿ ವಿವರಗಳನ್ನು ಗುರುತಾಕಿಕೊಂಡು ಕಾಲೇಜನ್ನು ಸಂಪರ್ಕಿಸುವುದು. ಕಾಲೇಜಿನಲ್ಲಿ ತಮ್ಮಲ್ಲಿರುವ ವಿವರಗಳ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಆಯಾ ವಿಷಯದ್ಲಲಿಯೇ ಸಂಜೆ ಕಾಲೇಜು ಮುಗಿದ ಬಳಿಕ ಅಥವಾ ವಾರಾಂತ್ಯದಲ್ಲಿ ತರಬೇತಿಯನ್ನು ನೀಡುವುದು. ಉದಾಹರಣೆಗೆ ಇಂದು ಒಬ್ಬ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಮಾಡಿದ ವಿದ್ಯಾರ್ಥಿ ಹೆಚ್ಚಾಗಿ ಆಯ್ಕೆಯಾಗುತ್ತಿರುವುದು ಪ್ರೋಗ್ರಾಮಿಂಗ್ ಆಧಾರಿತ ಕೆಲಸಗಳ ಮೇಲೆಯೇ. ಅಂದರೆ ಕಂಪ್ಯೂಟರ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮಾಡಬೇಕಾದ ಕೆಲಸ. ಇದು ಅವನ ಸ್ವಂತದ್ದ ಆಯ್ಕೆಯಾಗದಿದ್ದರೂ ಪ್ರಸ್ತುತ ಪರಿಸ್ಥಿತಿ ಆತನನ್ನು ಮೂಕನನ್ನಾಗಿಸುತ್ತದೆ. ಹಾಗಾದರೆ ಕೊನೆಗೆ ಕಂಪ್ಯೂಟರ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮಾಡುವ ಕೆಲಸವನ್ನೇ ಈತ ಮಾಡಬೇಕಾದರೆ ಬೇರೆ ವಿಷಯಗಳನ್ನು ತನ್ನ ನಾಲ್ಕು ವರ್ಷಗಳ ಕಲಿಕೆಯಲ್ಲಿ ಕಲಿತು ಏನು ಪ್ರಯೋಜನ? ಇಂದು ಬಹುಪಾಲು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಗೋಳು ಇದೆಯೇ. ಓದುವುದು ಒಂದು ಮಾಡುವುದು ಬೇರೊಂದು! ನಾನು ಶುರು ಮಾಡುವ ಇನ್ಸ್ಟಿಟ್ಯೂಟ್, ಕಂಪನಿಗಳಿಂದ ಕರಾರುವಕ್ಕಾಗಿ ಡೇಟಾಗಳನ್ನು ಸಂಗ್ರಹಿಸಿ ಅವರವರ ಐಚ್ಚಿಕ ವಿಷಯಗಳಲ್ಲೇ ತರಬೇತಿಯನ್ನು ನೀಡುತ್ತದೆ. ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅವರ ವಲಯದಲ್ಲಿನದೇ ಕಂಪನಿಗಳ ಅಗತ್ಯದ ಮೇರೆಗೆ ತರಬೇತಿಯನ್ನು ನೀಡುತ್ತದೆ. ಅದೂ ಸಹ ಕೆಲಸ ದೊರೆತ ಮೊದಲ ಆರು ತಿಂಗಳು ಕಂಪೆನಿಗಳಲ್ಲಿ ನೀಡುವ ತರಬೇತಿಯಂತೆಯೆ. ಸಾದ್ಯವಾದರೆ ಈ ತರಬೇತಿಯಲ್ಲಿ ವಿದ್ಯಾರ್ಥಿಗಳು ತಮ್ಮ ಕೊನೆಯ ವರ್ಷದ ಪ್ರೊಜೆಕ್ಕ್ಟ್ ಅನ್ನೂ ಸಹ ಮಾಡಿಕೊಳ್ಳಬಹುದು.

ಈಗ ನನ್ನ ಸಂಸ್ಥೆಯ ಪ್ರಯೋಜನಕ್ಕೆ ಬಂದರೆ, ಮೊದಲು ವಿದ್ಯಾರ್ಥಿಗಳು ಅವರವರ ಐಚ್ಚಿಕ ವಿಷಯಗಳಲ್ಲೇ ವೃತ್ತಿ ಆಧಾರಿತ ತರಬೇತಿಯನ್ನು ಪಡೆದು ವರ್ಷಾಂತ್ಯದ ಹೊತ್ತಿಗೆ ರೆಡಿಯಾಗಿರುತ್ತಾರೆ. ಇದರಿಂದ ಕಂಪನಿಗಳಿಗೂ ತರಬೇತಿಯ ಹೊರೆ ಕಡಿಮೆಯಾಗಿ ಅವರಿಗಿಚ್ಚಿಸಿದ ವಿದ್ಯಾರ್ಥಿಗಳೇ ತಯಾರಾಗಿ ನಿಂತಿರುತ್ತಾರೆ. ಎಲ್ಲಾ ಬಗೆಯ ಕಂಪನಿಗಳು ತಾವು ನಿರಾಳವಾಗಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಬಹುದು. ಅಲ್ಲದೆ ಮೊದಲ ದಿನದಿಂದಲೇ ಉದ್ಯೋಗಿಗಳ ಪೂರ್ಣ ಲಾಭವನ್ನು ಪಡೆಯಬಹುದು. ಒಂದು ಪಕ್ಷ ವಿದ್ಯಾರ್ಥಿಗಳು ಕಾಲೇಜಿಗೆ ಬರುವ ಕಂಪನಿಗಳಲ್ಲಿ ಆಯ್ಕೆಯಾಗದಿದ್ದರೂ ಅವರಿಗೊಂದು ವೃತ್ತಿ ಆಧಾರಿತ ತರಬೇತಿ ಆಗಲೇ ಆಗಿರುತ್ತದೆ. ಇದು ಕೇವಲ ಪದವಿ ಪ್ರಮಾಣಪತ್ರವನ್ನು ಹಿಡಿದು ಕೆಲಸವನ್ನು ಅರಸುವುದಕಿಂತ ಎಷ್ಟೋ ವಾಸಿ.ಅಲ್ಲದೆ ಹಳ್ಳಿಗಳ ಕಾಲೇಜುಗಳಿಗೂ ಹೆಚ್ಚೆಚ್ಚು ಕಂಪನಿಗಳು ಬರುವುದರಿಂದ ಕಾಲೇಜಿಗೂ ಒಳ್ಳೆಯ ಹೆಸರು, ಹಳ್ಳಿಯ ವಿದ್ಯಾರ್ಥಿಗಳಿಗೂ ಒಂದೊಳ್ಳೆಯ ಅವಕಾಶ ದೊರೆತಂದಾಗುತ್ತದೆ.’ ಎಂದು ಸುಮ್ಮನಾಗುತ್ತಾನೆ.

ಕೆಲಹೊತ್ತು ಸುಮ್ಮನೆ ಕೂತು ಅಪ್ಪನಿಂದ ಯಾವುದೇ ಪ್ರತ್ಯುತ್ತರ ಬಾರದಿದ್ದನ್ನು ಕೇಳಿ ಮಗ ಸಿಟ್ಟಿನಿನ ಅಲ್ಲಿಂದ ಎದ್ದು ಹೊರನೆಡೆಯುತ್ತಾನೆ, ಅಪ್ಪನ ಮುಖವನ್ನೂ ತಿರುಗಿ ನೋಡದೆ. ಒಂದು ಪಕ್ಷ ನೋಡಿದ್ದರೆ ಹೆಮ್ಮೆಯಿಂದ ಪ್ರಜ್ವಲಿಸುತ್ತಿರುವ ಕಣ್ಣುಗಳ ಕಾಂತಿಗೆ ಮಗ ದಂಗಾಗಿ ಹೋಗಿರುತ್ತಿದ್ದ!!...

ಮಗ ತನ್ನಲ್ಲಿ ಬಂದು ಆತನ ಬಿಸಿನೆಸ್ ಪ್ಲಾನ್ ನನ್ನು ಹೇಳಿದ ದಿನದಿಂದಲೂ ಅಪ್ಪನಿಗೆ ಸ್ವರ್ಗಕ್ಕೆ ಮೂರೇ ಗೇಣು ಎಂಬಂತಿದ್ದೆ. ಇಂತಹ ಉತ್ಕೃಷ್ಟವಾದ ಯೋಜನೆ ಮಗನಲ್ಲಿ ಮೂಡಬಹುದು ಎಂದರೆ ಆತ ಮುಂದೆ ಅದೆಷ್ಟು ಉನ್ನತಿಯನ್ನು ಗಳಿಸಬಹುದು ಎಂದು ಯೋಚಿಸಿದಷ್ಟೂ ಸಂತೋಷದ ಅಲೆಗಳು ಒಂದರಿಂದೊಂದು ಮೇಲೇರಿ ಅವನನ್ನು ಅಪ್ಪಳಿಸತೊಡಗುತ್ತವೆ. ಪ್ರತಿ ನಿಮಿಷ ಪ್ರತಿ ಘಳಿಗೆಯೂ ಆತನ ಆ ಇನ್ಸ್ಟಿಟ್ಯೂಟ್ ಬಗ್ಗೆಯೇ ಯೋಚಿಸುತ್ತಿರುತ್ತಾನೆ. ಆದರೆ ಅದಕ್ಕೆ ಬೇಕಾದ ಬಂಡವಾಳವಾಗಲಿ ಅಥವಾ ಇನ್ಯಾವ ಬಗೆಯ ಬೆಂಬಲವಾಗಲಿ ಆತನಿಗೆ ತಿಳಿದಿಲ್ಲ. ಹೆಂಡತಿಯೊಂದಿಗೆ ಅದರ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಾನೆ. ಈ ಪ್ರಾಜೆಕ್ಟ್ ನನ್ನು ಮಗನೆ ಖುದ್ದಾಗಿ ಪ್ರಾರಂಭಿಸಲು ಕಡೆ ಪಕ್ಷ ಹನ್ನೆರಡು ಲಕ್ಷಗಳು ಬೇಕೆಂದು ತಿಳಿದುದಂಗಾಗಿ ಹೋಗುತ್ತಾನೆ. ಎಷ್ಟೇ ಯೋಚಿಸಿದರೂ ಅಷ್ಟೊಂದು ಮೊತ್ತದ ಹಣವನ್ನು ಹೊಂದಿಸುವುದು ಹೇಗೆಂದು ಆತನಿಗೆ ತಿಳಿಯುವುದಿಲ್ಲ.

ಮಗನಿಗಂತೂ ಅಪ್ಪನ ಮೇಲೆ ಭರವಸೆ ಎಂಬುದೇ ಉಳಿದಿರುವುದಿಲ್ಲ. ಯಾವುದೇ ಬಗೆಯ ಬಂಡವಾಳವಾದರೂ ಅಪ್ಪನ ಬಳಿ ಇದ್ದದ್ದು ಕೇವಲ ಮನೆಯೊಂದೇ ಮಾತ್ರ. ಆತ ಏನಿದ್ದರೂ ಅದನ್ನು ಮಾರಿಯೇ ಮಗನ ಕನಸಿನ ಗೋಪುರವನ್ನು ಕಟ್ಟಿಕೊಡಬೇಕು. ಆದರೆ ಕುಟುಂಬದ ಇತರ ಸದಸ್ಯರಲ್ಲಿ ಒಂದಾಗಿದ್ದ, ತನ್ನ ಅಮ್ಮನನ್ನು ದಿನವೂ ಕಾಣುತಿದ್ದ, ತನ್ನ ಸರ್ವಸ್ವವೇ ಆಗಿದ್ದ ಮನೆಯನ್ನು ಅಪ್ಪ ಅಷ್ಟು ಸುಲಭವಾಗಿ ಮಾರಬಲ್ಲನೆ? ಆದರೆ ದಿನೇ ದಿನೇ ಮಗನ ಜೋತುಬಿದ್ದ ಮುಖವನ್ನು ಮಾತ್ರ ಆತನಿಂದ ನೋಡಲಾಗುತ್ತಿರಲಿಲ್ಲ.

ಅಂದು ಬೆಳಗ್ಗೆ ಮೊದಲ ಬಾರಿ ಏನೋ ಎಂಬಂತೆ ಮುಂಜಾನೆ ಆರರ ಹೊತ್ತಿಗೆ ಮಗನ ಕಣ್ಣುಗಳು ಒಮ್ಮೆಲೇ ತೆರೆದವು. ಎಷ್ಟೇ ಪ್ರಯತ್ನಿಸಿದರೂ ಮತ್ತೊಮ್ಮೆ ಮಲಗಲು ಸಾದ್ಯವಾಗುವುದಿಲ್ಲ. ಎದ್ದು ಇನ್ನೇನು ಅಟ್ಟದಿಂದ ಕೆಳಗಿಳಿಯಬೇಕು ಅನ್ನುವಷ್ಟರಲ್ಲೇ ಅಪ್ಪನ ಹಳೆಯ ಕಬ್ಬಿಣದ ಟ್ರಂಕು ಮಗನ ಕಣ್ಣಿಗೆ ಬೀಳುತ್ತದೆ. ಚಿಕ್ಕವನಿದ್ದಾಗ ಅಪ್ಪನನ್ನು ಅದೆಷ್ಟೇ ಕಾಡಿ ಬೇಡಿದರೂ ಒಮ್ಮೆಯೂ ಆತ ಅದರ ಕೀಲಿಯನ್ನು ಮಗನಿಗೆ ನೀಡಿರಲಿಲ್ಲ. ಈಗೆಲ್ಲ ಅದರ ಕೀಲಿಯನ್ನು ಮನೆಯ ಬಾಗಿಲಿಗೆ ಬಳಸುತ್ತಿದ್ದರಿಂದ ಟ್ರಂಕನ್ನು ಹಾಗೆಯೆ ಬಿಡಲಾಗಿದ್ದಿತು. ಆದರೆ ಒಮ್ಮೆಯೂ ಅದನ್ನು ತೆಗೆಯುವ ಗೋಜಿಗಂತೂ ಮಗ ಹೋಗಿರಲಿಲ್ಲ. ರದ್ದಿಯವನಿಗೆ ಅದನ್ನು ಮಾರಿ ಅಟ್ಟದ ಜಾಗವನ್ನು ಒಂತಿಷ್ಟು ವಿಸ್ತರಿಸಬೇಕೆಂಬುದಷ್ಟೇ ಆತನ ತಲೆಯಲ್ಲಿ ಕೆಲ ದಿನಗಳಿಂದ ಕೊರೆಯುತ್ತಿತ್ತು.

ಅದ್ಯಾಕೋ ಇಂದು ಒಮ್ಮೆ ಅದನ್ನು ತೆಗೆದು ನೋಡಬೇಕಂಬ ಮನಸ್ಸಾಯಿತು. ಅಟ್ಟದಿಂದ ಇಳಿಯುತಿದ್ದವ ಮತ್ತೊಮೆ ಮೇಲೇರಿ ಹೋಗುತ್ತಾನೆ. ಸದ್ದಾಗದಂತೆ ಟ್ರಂಕನ್ನು ಹಾಸಿಗೆಯ ಬಳಿಗೆಳೆದು ತೆರೆಯುತ್ತಾನೆ.

ಟ್ರಂಕನ್ನು ತೆರೆದ ಕೆಲ ಕ್ಷಣಗಳು ಮಗನಿಗೆ ಮಾತೆ ಹೊರಡದಂತಾಗುತ್ತದೆ. ತಾನು ಅಂಬೆಗಾಲಿಟ್ಟು ಚಲಿಸುತ್ತಿದ್ದಾಗಿನಿಂದ ಹಿಡಿದು ಕಳೆದ ವರ್ಷ ಹಳೆಯದಾಯಿತು ಬೇಡವೆಂದು ಬಿಸಾಡಿದ್ದ ಶರ್ಟನ್ನೂ ಅದರಲ್ಲಿ ನೀಟಾಗಿ ಮಡಚಿ ಇಡಲಾಗಿದ್ದಿತು. ಇಷ್ಟು ವರ್ಷಗಳು ಕಳೆದರೂ ತಾನು ಚಿಕ್ಕವನಿದ್ದಾಗ ಹಾಕಿಕೊಳ್ಳಲು ಹಟಮಾಡುತ್ತಿದ್ದ ನೀಲಿಯ ಬಣ್ಣದ ಮಂಕಿ ಟೋಪಿ ಇನ್ನೂ ಹಾಗೆಯೇ ತನ್ನ ಹೊಳಪನ್ನು ಕಳೆದುಕೊಳ್ಳದೆ ಇಡಲ್ಪಟ್ಟಿತ್ತು! ಮಗ ಟೋಪಿಯನ್ನು ತೆಗೆದು ಹಾಕಿಕೊಳ್ಳಲು ಯತ್ನಿಸುತ್ತಾನೆ. ಆಗುವುದಿಲ್ಲ. ಬಟ್ಟೆಗಳ ತಳದಲ್ಲಿ ಬೆಳ್ಳಿಯ ಕಾಲುಂಗುರ, ಗಾಜಿನ ಬಳೆಗಳ ಚೂರುಗಳು ಸಿಗುತ್ತವೆ. ಅವು ತನ್ನ ಅಜ್ಜಿಯ ವಸ್ತುಗಳು ಎಂದರಿಯಲು ಮಗನಿಗೆ ಹೆಚ್ಚು ಸಮಯ ಹಿಡಿಯುವುದಿಲ್ಲ. ಯಾಕೋ ಎದೆ ಬಾರವಾಯಿತ್ತೆಂದೆನಿಸುತ್ತದೆ. ಟ್ರಂಕಿನ ಒಂದು ಮೂಲೆಯಲ್ಲಿ ಉದ್ದದೊಂದು ನೋಟ್ ಬುಕ್ಕು ಇರುವುದನ್ನು ಕಂಡು ಮಗ ಅದನ್ನು ಕೈಗೆತ್ತಿಕೊಳ್ಳುತ್ತಾನೆ. ಅಪ್ಪನ ಆಸ್ತಾಕ್ಷರದಲ್ಲಿ ಬರೆದ ಪುಟಗಳವು. ಅಷ್ಟೊಂದು ಅಂದವಾಗಿ ಅಪ್ಪ ಬರೆಯಬಲ್ಲರು ಎಂಬುದು ಮಗನಿಗೆ ತಿಳಿದಿರುವುದೇ ಇಲ್ಲ. ಪುಸ್ತಕದ ಮೊದಲ ಪುಟದಲ್ಲೇ 'ನನ್ನ ಮನೆ' ಎಂಬ ಶೀರ್ಷೆಕೆಯನ್ನು ದೊಡ್ಡ ಅಕ್ಷಗಳಲ್ಲಿ ತಿದ್ದಲಾಗಿರುತ್ತದೆ. ಒಂದೊಂದೇ ಪುಟಗಳನ್ನು ಮಗ ಓದುತ್ತಾ ಹೋಗುತ್ತಾನೆ. ತಮ್ಮ ಮನೆಯನ್ನು ಕಟ್ಟಿದ ಬಗ್ಗೆ, ಅಪ್ಪ ಮಗುವಾಗಿನಿಂದ ಮನೆಯಲ್ಲಿ ಆಡಿ ಬೆಳೆದ ಬಗ್ಗೆ, ತನ್ನ ಅಜ್ಜಿಯ ಬಗ್ಗೆ ಅತ್ಯಾಪ್ತವಾಗಿ ಬರೆದಿದ್ದ ವಾಕ್ಯಗಳನ್ನು ಓದಿ ಮಗನಿಗೆ ಅಳು ಬರುವಂತಾಗುತ್ತದೆ. ಅಷ್ಟು ಚೆನ್ನಾಗಿ ಅಪ್ಪ ಮನೆಯನ್ನು ವರ್ಣಿಸಿದ್ದ. ನೋಟುಬುಕ್ಕಿನ ಅರ್ಧ ಬಾಗ ಮನೆ ಹಾಗು ಅಜ್ಜಿಯ ಬಗ್ಗೆಯಾದರೆ ಉಳಿದರ್ಧ ಬಾಗ ಕೇವಲ ಮಗನ ಬಗ್ಗೆಯೇ ಆಗಿರುತ್ತದೆ. ತಾನು ಮುಂಬೈಯ ಕೆಲಸವನ್ನು ಬಿಟ್ಟು ಬಂದ ಕಾರಣವಾಗಲಿ, ಮಗನನ್ನು ಇಂಜಿನಿಯರ್ ಮಾಡಲು ಶಪಥ ಪಟ್ಟ ಘಳಿಗೆಯನ್ನು, ಮುಂದಿನ ಭವಿಷ್ಯಕ್ಕೆ ಅವನ ಬಗ್ಗೆ ಕಂಡ ಕನಸ್ಸನ್ನು ಒಂದೊಂದಾಗೆ ಅಪ್ಪ ಅದರಲ್ಲಿ ಬರೆದಿರುತ್ತಾನೆ. ಪ್ರತಿ ಪುಟಗಳನ್ನು ತಿರುವಿಹಾಕುವಾಗಲೂ ಮಗನ ಕೈಗಳು ಒಂದೇ ಸಮನೆ ನಡುಗುತ್ತಿರುತ್ತವೆ. ವಾಸ್ತವದ ಹೊಳಪನ್ನು ಕಾಣಲು ಆಗದೆ ರೆಪ್ಪೆಗಳು ಕಂಪಿಸುವಂತೆ. ಮಗನಿಗೆ ತಾನೊಬ್ಬ ಕ್ರೂರಿ ಎಂಬ ಭಾವ ಒಳಗಿಂದೊಳಗೆ ಮೂಡುತ್ತದೆ. ತಾನು ಹುಟ್ಟಿದಾಗಿನಿಂದಲೂ ಅಟ್ಟದ ಗೋಡೆಗೆ ಬಣ್ಣವನ್ನು ಬಳಿಸಿಲ್ಲ ಎಂದೇ ಗೊಣಗುತ್ತಿದ್ದ ಮಗ, ತಾನು ಚಿಕ್ಕವನಿದ್ದಾಗ ಗೋಡೆಯ ತುಂಬೆಲ್ಲ ಗೀಚಿದ್ದ ಅಕ್ಷರಗಳ ಮುದ್ರೆಯನ್ನು ಅಳಿಸಲು ಮನಸ್ಸಿರದೆ ಅಪ್ಪ ಬಣ್ಣವನ್ನು ಒಡೆಸಿರುವುದಿಲ್ಲ ಎಂಬುದ ಓದಿ ಆತನ ಕಣ್ಣಂಚುಗಳು ಒದ್ದೆಯಾಗುತ್ತವೆ. ಒಮ್ಮೆ ಸುತ್ತಲೂ ಕಣ್ಣಾಹಿಸಿದ್ದಾಗ ತಾನು ಅಂಗನವಾಡಿಗೆ ಹೋಗುತ್ತಿದ್ದಾಗ ಪೆನ್ಸಿಲಿನಲ್ಲಿ ಗೀಚಿದ್ದ ನೂರಾರು ಅಕ್ಷಗಳು ಹಾಗೆಯೆ ಕಾಣಸಿಗುತ್ತವೆ. ಹಣ ಉಳಿಸಲು ಕೆಳಗೆ ಮಾತ್ರ ಬಣ್ಣ ಹೊಡೆದು ಅಟ್ಟದ ಮೇಲೆ ಹಾಗೆಯೆ ಬಿಟ್ಟಿದ್ದಾನೆ ಎಂದು ಮಗ ಅದೆಷ್ಟು ಬಾರಿ ಅಪ್ಪನ ಮೇಲೆ ಚೀರಿದ್ದಾನೋ ಲೆಕ್ಕವಿಲ್ಲ.

ಮುಂದೆ ಓದಲು ಮಗನಿಂದ ಸಾಧ್ಯವಾಗುವುದಿಲ್ಲ. ಯಾರೋ ತನ್ನ ಕಣ್ಣಿಗೆ ಕಟ್ಟಿದ ಬಟ್ಟೆಯನ್ನು ತೆರೆದಂತಹ ಅನುಭವವಾಯಿತು. ನೋಟುಬುಕ್ಕನು ಹಾಗೆಯೆ ಮಡಿಚಿಟ್ಟು ಅಟ್ಟದಿಂದ ಕೆಳಗಿಳಿಯುತ್ತಾನೆ. ಬಿದ್ದ ಸುಣ್ಣದ ಎಕ್ಕೆಗಳ ಜಾಗಕ್ಕೆ ಅಪ್ಪ ಹೊಸದಾಗಿ ಸುಣ್ಣವನ್ನು ಮೆತ್ತಿರುತ್ತಾನೆ. ಅಪ್ಪ ಎಲ್ಲೆಂದು ಅಮ್ಮನಲ್ಲಿ ಕೇಳಿ, ಅವರು ಪೇಟೆಯೆಡೆ ಹೋದರು ಎಂಬುದ ತಿಳಿದು ಕೊಡಲೇ ಹೊರನೆಡೆಯುತ್ತಾನೆ. ಮೆನೆಯಿಂದ ಹೊರಬರುವಾಗ ಅಪ್ಪ ವರ್ಣಿಸಿದ್ದ ಮನೆಯ ಮೆಟ್ಟಿಲುಗಳನ್ನು ನೋಡುತ್ತಾನೆ. ಕೂರುವ ಮನಸ್ಸಾಗಿ ಗೋಡೆಯನ್ನೊರಗಿ ಹಾಗೆಯೆ ತಾನೂ ಕೂರುತ್ತಾನೆ. ಏನಾಶ್ಚರ್ಯ! ತನ್ನ ತಲೆಯಲ್ಲಿದ್ದ ಚಿಂತೆಯಲ್ಲ ಒಮ್ಮೆಲೇ ಮಾಯವಾದಂತಹ ಅನುಭವ! ಮೇಲೇಳಲು ಮನಸ್ಸೇ ಒಪ್ಪುತ್ತಿಲ್ಲ! ಬುಕ್ಕಿನಲ್ಲಿ ಬರೆದ ಅಪ್ಪನ ಮಾತುಗಳು ನೂರಕ್ಕೆ ನೂರರಷ್ಟು ಸತ್ಯವೆನಿಸುತ್ತದೆ. ಒಲ್ಲದ ಮನಸ್ಸಿನಲ್ಲಿ ಎದ್ದು ಶೆಟ್ಟರ ಚಹದ ಅಂಗಡಿಯ ಬಳಿಗೆ ಹೋಗುತ್ತಾನೆ.

ತಮ್ಮ ಗುಂಪಿನ ಖಾಯಂ ಅಡ್ಡವಾಗಿದ್ದ ಶೆಟ್ಟರ ಅಂಗಡಿಗೆ ಬಂದು ಚಹಾ ಒಂದನ್ನು ಹೇಳಿ ಕೂತ ಮಗ ಅಪ್ಪನೇನಾದರೂ ಇತ್ತಕಡೆ ಬಂದಿದ್ದರೆಂದು ಶೆಟ್ಟರ ಬಳಿ ಕೇಳುತ್ತಾನೆ. ಆದರೆ ಮಗನ ಪ್ರೆಶ್ನೆಗೆ ಕ್ಯಾರೇ ಎನ್ನದ ಶೆಟ್ಟಿ ಚಹಾವನ್ನು ಒಂದು ಲೋಟದಿಂದ ಇನ್ನೊಂದು ಲೋಟಕ್ಕೆ ಸುರಿಯುತ್ತಾ ಈತನನ್ನೇ ಗುರಾಯಿಸತೊಡಗುತ್ತಾನೆ. ಮೊದಲ ಬಾರಿಗೆ ಆತನ ದೃಷ್ಟಿಯಲ್ಲಿನ ತೀವ್ರತೆ ಹಿಂದೆಂದೂ ಕಾಣದಷ್ಟಿರುತ್ತದೆ. ಕಾರಣವೇನೆಂದು ಮಗ ಅರಿಯದಾಗುತ್ತಾನೆ. ಟೀಯನ್ನು ಕುಡಿದು ಹಣವನ್ನು ಕೊಡಲು ಎದ್ದ ಮಗನನ್ನು ತಡೆದ ಶಟ್ಟಿ 'ನಿಮ್ಮಪ್ಪ ನಿನ್ ಹಳೆ ಬಾಕಿ ಎಲ್ಲ ಕೊಟ್ಟು ನೂರುಪಾಯಿ ಅಡ್ವಾನ್ಸ್ ಕೊಟ್ಟವ್ರೆ' ಎಂದು ಹೇಳಿ ಸುಮ್ಮನಾದ. ಆತನ ದೃಷ್ಠಿಯ ಹಿರಿತ ಮಾತ್ರ ಕಡಿಮೆಯಾಗಿರಲ್ಲಿಲ. ಇಷ್ಟು ವರ್ಷಗಳಲ್ಲಿ ಒಮ್ಮೆಯೂ ಶೆಟ್ಟಿಯ ಈ ಮುಖ ಚಹರೆಯನ್ನು ಮಗ ಕಂಡಿರಲಿಲ್ಲ. ಒಂದು ಬಗೆಯ ತಿರಸ್ಕಾರದ ನೋಟ ಅದಾಗಿದ್ದಿತು. ಅಪ್ಪ ಹಣವನ್ನು ಕೊಟ್ಟಿದ್ದಾರೆ ಎಂಬುದ ಕೇಳಿ ಕುಪಿತನಾದ ಮಗ 'ನಿಮ್ಗ್ಯಾರಿ ಅವ್ರ್ ಹತ್ರ ಹಣ ತಗೋಳಕ್ಕೆ ಹೇಳಿದ್ದು? ಸಾಲ ಮಾಡಿದವನು ನಾನು, ನಾನೇ ಸಾಲ ತೀರಿಸ್ತೀನಿ' ಎಂದು ಅಬ್ಬರಿಸತೊಡಗಿದ. ಅದಕ್ಕೆ ಉತ್ತರವಾಗಿ ಶೆಟ್ಟಿ 'ಸಾಕು ಮುಚ್ಚಪ್ಪ ಕಂಡಿದ್ದಾರೆ, ನಾಲ್ಕ್ ತಿಂಗಳಿಂದ ನೀನ್ ಸಾಲ ತೀರ್ಸಿರೋದು ಸಾಕು. ನಿಮ್ಮಂತ ಮಾಕ್ಳುನ್ನ ಆ ದ್ಯಾವ್ರು ನಿಮ್ಮಪ್ಪನಂಥ ಮನ್ಸ್ರುಗೆ ಯಾಕೆ ಕೊಡ್ತಾನೆ ಗೊತ್ತಿಲ್ಲ ಕಾಣೆ. ಏನ್ ಬ್ಯುಸಿನೆಸ್ ಮಾಡ್ತೀಯೋ ನೀನು? ಲೇ ನೀನ್ ಮೀಸೆ ಬರೋ ಗಂಡಸೇ ಆದ್ರೆ ನಿಮ್ಮಪ್ಪನಂತವ್ರ ಹತ್ರ ಹಣ ಕೇಳ್ತಿರ್ಲಿಲ್ಲ. ತಾಕತ್ ಇದ್ರೆ ನೀನೆ ಸಂಪಾದಿಸಿ ಬಿಸಿನೆಸ್ ನ ಶುರು ಮಾಡಿ ತೋರ್ಸು. ಪಾಪ ನಿಮ್ಮಪ್ಪ ದೇವರಂಥ ಮನುಷ ಎಷ್ಟೋ ವರ್ಷದಿಂದ ಕಾಪಡ್ಕೊಂಡು ಬಂದ ಮೆನೇನ ಇವತ್ತು ಮಾರೋಕ್ಕ್ ಒಂಟ್ಟವ್ನೆ. ಅದು ಜುಜುಬಿ ಮೂರ್ ಕಾಸಿಗೆ. ಮಗ, ಮಗ, ಮಗ. ಯಾವಾಗ್ ನೋಡಿದ್ರೂ ಮಗಂದೇ ಕನಸು ಅವ್ನಿಗೆ. ನೀನೋ.. ಹೋಗ್ಲಿ ಬಿಡು ನಿಮ್ಮಂಥವರಿಗೆ ಹೇಳಿ ಏನು ಪ್ರಯೋಜ್ನ' ಎಂದು ಸುಮ್ಮನಾಗುತ್ತಾನೆ. ಶೆಟ್ಟಿಯ ಮಾತುಗಳನು ಕೇಳಿದ ಮಗ ಶುರುವಿನಲ್ಲಿ ಆತ ಅಪ್ಪನ ಜಿಗ್ರಿ ದೋಸ್ತ್ ಎಂಬುದನ್ನೂ ತಿಳಿಯದೆ ಅವನ ಕೆನ್ನೆಗೆ ರಪರಪನೆ ನಾಲ್ಕು ಭಾರಿಸಬೇಕೆಂದೆನಿಸಿದರೂ ಅಪ್ಪ ಮನೆ ಮಾರುವ ವಿಷಯ ತಿಳಿದು ಕಳವಳಗೊಳ್ಳುತ್ತಾನೆ. ಮರುಗುತ್ತಾನೆ. ಕಣ್ಣುಗಳಿಗೆ ಕಪ್ಪುಗಟ್ಟಿದ ಅನುಭವವಾಗುತ್ತದೆ. ತನಗಾಗಿ ಅಪ್ಪ ಇಷ್ಟೆಲ್ಲಾ ಮಾಡಬಲ್ಲರೇ ಎಂಬುದ ಊಹಿಸಿಯೇ ಆತನಿಗೆ ಮಾತು ಹೊರಡದಂತಾಗುತ್ತದೆ. 'ಹೋಗು, ಸಬ್ ರಿಜಿಸ್ಟರ್ ಆಫೀಸಿಗೆ ನಿಮಪ್ಪ ಹೋಗಿದ್ದಾನೆ, ಯಾರೋ ಬರಿ ಇಪ್ಪತ್ತು ಲಕ್ಷಕ್ಕೆ ಮನೆ ಕೇಳ್ತಾ ಇದ್ದಾರಂತೆ. ಅರ್ಧ ಕೋಟಿ ಬೆಲೆಬಾಳೋ ಮನೇನ, ಅದಕ್ಕೂ ಹೆಚ್ಚಾಗಿ ಅವ್ನ ಸರ್ವಸ್ವಾನೆ ಆಗಿರೋ ಮನೇನ ಮಾರೋಕ್ ಹೊರಟಿದ್ದಾನೆ ನಿಮ್ಮಪ್ಪ, ಬೇಡ್ವೊ ಅಂದ್ರೆ ಮಗ ಚೆನ್ನಾಗಿರ್ಬೇಕಂತೆ, ತತ್' ಎಂದು ಶೆಟ್ಟಿ ಶಪಿಸತೊಡಗುತ್ತಾನೆ.

ಶೆಟ್ಟಿ ಮಾತುಗಳನ್ನು ಮುಂದುವರೆಸುತ್ತಾ ಹೋಗುತ್ತಾನೆ. ಆದರೆ ಯಾವೊಂದು ವಾಕ್ಯಗಳೂ ಮಗನ ಕಿವಿಗಳನ್ನು ಹೊಕ್ಕುವುದಿಲ್ಲ. ತನಗಾಗಿ ಯಾರು ಎಂಬ ಬಹುದಿನದ ಪ್ರೆಶ್ನೆಗೆ ಮಗನಿಗೆ ಉತ್ತರ ಸಿಕ್ಕಿರುತ್ತದೆ. ಕಣ್ಣುಗಳಲ್ಲಿ ನೀರಿನ ಕಟ್ಟೆಯೊಡೆದು ಧುಮುಕುತ್ತಿರುತ್ತದೆ. ಮರುಮಾತನಾಡದೆ ಒಂದೇ ಉಸಿರಿನಲ್ಲಿ ಮಗ ರಿಜಿಸ್ಟರ್ ಆಫೀಸಿನ ಕಡೆ ಓಡುತ್ತಾನೆ. ಶೆಟ್ಟಿ ಗೂಡಂಗಡಿಯ ಮೂಲೆಯಲಿ ನೇತಾಕಿದ್ದ ಗಣಪತಿ ಪಟಕ್ಕೆ ಭಕ್ತಿಯಿಂದ ಕೈಮುಗಿಯುತ್ತಾನೆ.

ಅದಾಗಲೇ ಪಟೇಲ ಹಾಗು ಅವನ ಸಂಗಡಿಗರು ಸಬ್ ರಿಜಿಸ್ಟರ್ ಆಫೀಸಿನಲ್ಲಿ ಅಪ್ಪ ತಲುಪುವ ಮೊದಲೇ ಬಂದು ಕುಳಿತ್ತಿರುತ್ತಾರೆ. ಅಪ್ಪ ಒಬ್ಬನೇ ಕಾಗದ ಪತ್ರಗಳನ್ನು ಹಿಡಿದು ಬಂದದ್ದು ಪಟೇಲನಿಗೆ ಕೊಂಚ ದಿಗ್ಬ್ರಮೆಯಾದರೂ ಅಷ್ಟು ಬೆಲೆಬಾಳುವ ಮನೆಯೊಂದನ್ನು ಕನಿಷ್ಠ ಕಾಸಿಗೆ ಕೊಂಡುಕೊಳ್ಳುವ ಚಾಲಾಕಿಯ ಅವನ ನೀಚತ್ವವನ್ನು ಇತರರೆದುರಿಗೆ ಮರೆಮಾಚಿಕೊಳ್ಳಲು ಒಳ್ಳೆಯದೇ ಆಯಿತೆಂದುಕೊಳ್ಳುತ್ತಾನೆ. ಜೀವನ ಪೂರ್ತಿ ಅಪ್ಪನನ್ನು ತುಚ್ಛವಾಗಿಯೇ ಕಂಡಿದ್ದ ಪಟೇಲ ಕಳೆದ ಹಲವು ವರ್ಷಗಳಿಂದ ಅಪ್ಪನ ಮನೆಯನ್ನು ಒಡೆದುಕೊಳ್ಳಲು ಹೊಂಚು ಹಾಕಿ ಕೂತಿದ್ದ. ಅಪ್ಪ ಬರುವುದನ್ನೇ ಇದಿರು ನೋಡುತ್ತಿದ್ದ ಪಟೇಲ ಕೂಡಲೇ ಸಬ್ ರಿಜಿಸ್ಟರ್ ರೂಮಿನೊಳಗೆ ನುಸುಳಿ ಕಾಗದಪಾತ್ರಗಳನ್ನೆಲ್ಲ ರೆಡಿ ಮಾಡಿಸುತ್ತಾನೆ. ಕೆಲ ಸಮಯದಲ್ಲೇ ಕಾಗದಪತ್ರಗಳೆಲ್ಲ ರೆಡಿಯಾಗಿ ಅಪ್ಪನ ಬಳಿ ಸಹಿಗಾಗಿ ಬರುತ್ತವೆ. ಅಲ್ಲಿಯವರೆಗೂ ಶಾಂತವಾಗಿದ್ದ ಅಪ್ಪ ಮನೆಯ ಮಾರಾಟದ ಬಾಂಡ್ ಪೇಪರ್ ಗಳನ್ನು ಕಂಡು ಕುಸಿದು ಕೂರುತ್ತಾನೆ. ಒಂದೇ ಸಮನೆ ಮಗುವಿನಂತೆ ರೋಧಿಸತೊಡಗುತ್ತಾನೆ. ಬಿಕ್ಕಳಿಸ ತೊಡಗುತ್ತಾನೆ. ಅಪ್ಪನನ್ನು ಅತ್ತಿರುವುದ ಎಂದಿಂಗೂ ಕಂಡಿರದ ಪಟೇಲ ಹಾಗು ಆತನ ಸಂಗಡಿಗರು ಕೆಲ ಕಾಲ ದಿಗ್ಬ್ರಾಂತರಾಗುತ್ತಾರೆ. ಅಪ್ಪ ಅಳುವುದ ಹಿಂದಿರುವ ಕಾರಣ ತಿಳಿದಿದ್ದರೂ ಪಟೇಲನ ಕಣ್ಣುಗಳು ಮಾತ್ರ ಪೆನ್ನನ್ನು ಹಿಡಿದಿದ್ದ ಅಪ್ಪನ ಕೈಗಳನ್ನೇ ದುರುಗುಟ್ಟುತ್ತಿರುತ್ತವೆ.'ಅಮ್ಮ.. ಅಮ್ಮ' ಎನ್ನುತ್ತಾ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಅಪ್ಪನನ್ನು ಸಮಾಧಾನ ಪಡಿಸಲು ಅಲ್ಲಿದ್ದ ಯಾವೊಂದು ಜೀವವು ಮುಂದೆ ಬರುವುದಿಲ್ಲ.

ಕೂಡಲೇ ಅಪ್ಪನ ಹೆಗಲ ಮೇಲೆ ಸಾಂತ್ವನದ ಕೈಯೊಂದು ಬೀಳುತ್ತದೆ. ಅಪ್ಪನ ಅಳು ಬೇಸಿಗೆಯ ಮಳೆಯಂತೆ ಕೂಡಲೇ ನಿಂತುಬಿಡುತ್ತದೆ. ಆ ಕೈಗಳ ಶಕ್ತಿಯೇ ಅಂತಹದ್ದು. ಅದು ಅಪ್ಪನ ಮಗ ಎಂದು ತಿಳಿಯದೆ ಗುಂಪಿನಲ್ಲಿದ್ದ ಒಬ್ಬ ಯಾರಯ್ಯ ನೀನು ಎಂದು ದರ್ಪದಿಂದ ಅಬ್ಬರಿಸಿದ್ದ ಕಡೆ ತಿರುಗಿದ ಮಗನ ಜ್ವಲಿಸಿವ ಕೆಂಪಾದ ಕಣ್ಣುಗಳು ಆ ವ್ಯಕ್ತಿಯ, ಅಷ್ಟೇ ಏಕೆ ಇಡೀ ಗುಂಪಿನ ಧೈರ್ಯವನ್ನೇ ಉದುಗಿ ಹೋಗುವಂತೆ ಮಾಡುತ್ತವೆ. ಮುಂದೆ ಯಾರೊಬ್ಬನೂ ತುಟಿಕ್ ಪಿಟಿಕ್ ಅನ್ನುವುದಿಲ್ಲ! ಅಪ್ಪನ ಈ ಸ್ಥಿತಿಯನ್ನು ಮಗನಿಗೆ ನೋಡಲಾಗುವುದಿಲ್ಲ. ಅವನ ಕೈಲಿದ್ದ ಬಾಂಡ್ ಪೇಪರ್ಗಳನ್ನು ತೆಗೆದುಕೊಂಡು ನೋಡುತ್ತಾನೆ. ಅಪ್ಪನ ಅಸ್ತಾಕ್ಷರ ಅಷ್ಟರಲ್ಲಾಗಲೇ ಅವುಗಳ ಮೇಲೆ ಮೂಡಿರುತ್ತದೆ. ತಂದೆಯ ಮಮತೆಗೆ, ತ್ಯಾಗಕ್ಕೆ ಕರಗಿನ ಮಗನ ಕಣ್ಣೀರಿನ ಹನಿಗಳು ಪಟಪಟನೆ ಅಸ್ತಾಕ್ಷರದ ಮೇಲೆ ಒಂದರಿಂದೊಂದು ಬೀಳುತ್ತವೆ.

ಅಪ್ಪನ ಕಂಡು ಮಗನ ಮೊಗದಲ್ಲಿ ಮಂದಹಾಸವೊಂದು ಮೂಡಿದರೆ ಕಣ್ಣೇರಿಂದ ತೊಳೆದ ಇಂಕಿನ ಹನಿಗಳು ಒಂದೊಂದಾಗಿ ನೆಲವನ್ನು ಸೇರುತ್ತಿರುತ್ತವೆ….….

Thursday, November 9, 2017

ಸಮಾಜಸೇವೆ ಮಾಡಲು ರಾಜಕಾರಣವೆಂಬ ಅಸ್ತ್ರವೇ ಬೇಕೇ ಅಥವಾ ಮನೆಯಲ್ಲಿನ ಗಂಟು ಮೂಟೆಗಳ ಸಂಪತ್ತೇ ಸಾಕೆ?

ಸಮಾಜಸೇವೆ. ಅದೇನೇ ಹೇಳಿದರೂ ಈ ಪದವನ್ನು ಕೇಳಿದಾಗ ಮೊದಲಿಗೆ ಕಣ್ಣ ಮುಂದೆ ಬರುವವರಂತೂ ರಾಜಕಾರಣಿಗಳೆ! ಒಪ್ಪಿಕೊಳ್ಳಿ. ದೇಶದ ರಾಜಕೀಯ ಹಾಗು ಸಮಾಜಸೇವೆ ಎನ್ನುವ ಪದಗಳಿಗೆ ಅವಿನಾಭಾವ ಸಂಬಂಧ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ಚುನಾವಣೆಯ ಘಳಿಗೆ ಸಮೀಪಿಸುತ್ತಿದಂತೆ, ನಾಟಕದಲ್ಲಿ ತನ್ನ ಪಾತ್ರ ಬಂದಾಗ ಮಾತ್ರ ವೇದಿಕೆಯ ಮೇಲೆ ಬಂದು ನಂತರ ಮಾಯವಾಗುವ ನಟ ನಟಿಯರಂತೆ ರಾಜಕಾರಣಿಗಳು ಚುನಾವಣೆಯ ಸುಮೂಹರ್ತದಲ್ಲಿ ತಮ್ಮ ದಂಡಿನ ಮೂಲಕ ಮನೆ ಮೆನೆಯ ಮುಂದೆ ಪ್ರತ್ಯಕ್ಷರಾಗಿಬಿಡುತ್ತಾರೆ. ಕಳೆದ ಬಾರಿಯ ಚುನಾವಣೆಯ ಪುಳ್ಳಂಗೋವಿಯನ್ನೇ ಈ ಬರಿ ಕೊಂಚ ಅಪ್-ಗ್ರಡೆಡ್ ಪದಗಳಲ್ಲಿ ಉಚ್ಚರಿಸಿ, ಬಡವರ ಮನೆಯ ಉಪ್ಪು ಉಪ್ಪಿನಕಾಯಿಯನ್ನು ಚಪ್ಪರಿಸಿ, ತಮ್ಮ ಗುಡಾಣದ ಹೊಟ್ಟೆಯನ್ನು ಪ್ರದರ್ಶನ್ನಕ್ಕಿಟ್ಟಿರುವಂತೆ ತೂಗುತ್ತ-ವಾಲುತ್ತಾ ಸಾಗುವ ಇವರನ್ನು ಯಾರೋ ಒಂದಿಬ್ಬರು ಬಿಸಿ ರಕ್ತದ ಯುವಕರು 'ಯಾಕ್ರೀ ನಿಮ್ಗೆ ರಾಜಕಾರಣ? ಒಂದು ಹುಲ್ಲುಕಡ್ಡಿಯನ್ನ ಇಲ್ಲಿಂದ ಎತ್ತಿ ಅಲ್ಲಿಗೆ ಇಡಿಸೋ ತಾಕತ್ ಇಲ್ಲ ಅಂದ್ಮೇಲೆ ನಿಮ್ಗೆ ಯಾಕ್ ಬೇಕು ರಾಜಕೀಯ?' ಎಂದು ಕೇಳಿದರೆ ಬರುವ ಏಕೈಕ ಉತ್ತರ, 'ಸಮಾಜಸೇವೆ'

ಇತ್ತೀಚಿಗೆ ಸಮಾಜಸೇವೆ ಎಂಬುದು ಆಪತ್ಕಾಲದ ಆಕ್ಸಿಜೆನ್ ನಂತೆ ರಾಜಕಾರಣಿಗಳಿಗೆ ತನ್ನ ತಪ್ಪನೆಲ್ಲ ಮುಚ್ಚಿ ಮರೆಮಾಡುವ ಏಕೈಕ ಸಾಧನದಂತೆ ಆಗಿರುವುದಂತೂ ಸುಳ್ಳಲ್ಲ. ಕಳ್ಳಕಾಕರಿಂದ ಇಡಿದು ರೌಡಿ ಶೀಟರ್ಗಳೂ ಇಂದು ರಾಜಕಾರಣಕ್ಕೆ ಧುಮುಕಬೇಕಾದರೆ ಅವರಿಗಿರುವ ಏಕೈಕ ಅರ್ಹತೆಯಂದರೆ ಅದು ಸಮಾಜಸೇವೆಯ ಹೊರೆ. ಇದು ಒಂತರ ಗಬ್ಬು ನಾರುವ ಕಾರ್ಪೊರೇಟ್ ತೊಟ್ಟಿಯ ಮುಂದೆಯೆ ನಿಂತು ಶುಚಿತ್ವದ ಬಗ್ಗೆ ಭಾಷಣ ಬಿಗಿದಂತೆ. ತಮಾಷೆ ಎಂದರೆ ಇಂದು ಹುಟ್ಟುವಾಗಲೇ ಚಿನ್ನದ ತಟ್ಟೆಯೊಟ್ಟಿಗೆ ಆಡಿ ಬೆಳೆಯುವ ರಾಜಕಾಣಿಗಳ ಮಕ್ಕಳು ಮೊದಲ ಇಪ್ಪತ್ತು ಇಪ್ಪತೈದು ವರ್ಷ ತನ್ನ 'ಸಮಾಜಸೇವಕ' ತಂದೆಯ ‘ಸೇವೆ’ಯ ಹಣವನ್ನು ಯದ್ವಾ ತದ್ವಾ ಉಡಾಯಿಸಿ, ಓದು ಬರಹ ಗಳಿಗೂ ಒಬ್ಬ ಸಹಾಯಕನನ್ನು ಇರಿಸಿ (!), ಒಂದಿಷ್ಟು ಕೇಸು ಹಗರಣಗಳನ್ನು ಸೃಷ್ಟಿಸಿ, ಮುಚ್ಚಿಸಿ, ಕೊನೆಗೆ ಈತನಿಂದ ಮತ್ತೇನೂ ಆಗುವುದಿಲ್ಲ ಎಂದರಿತ ಅವನ/ಅವಳ, ಅಪ್ಪ/ಅಮ್ಮ, ಸ್ನಾನ-ಗೀನ ಮಾಡಿಸಿ, ಗಡ್ಡ-ಪಡ್ಡವನ್ನೆಲ್ಲ ನೀಟಾಗಿ ಬೋಳಿಸಿ, ಬಿಳಿಯ ಬಟ್ಟೆಗಳನ್ನು ತೊಡಿಸಿ, ಬಾಲದಂತೆ ಹೊಡದೆಯಲ್ಲ ಎಳೆದುಕೊಂಡು ಹೋಗಿ ಸಾವಿರಾರು ಜನರ ಮುಂದೆ ಅವನನ್ನೂ ಪ್ರತಿಷ್ಠಾಪಿಸಿ ಬಿಡುತ್ತಾರೆ, 'ಜೂನಿಯರ್ ಸಮಾಜ ಸೇವಕ’ ಎಂಬ ಅಂಕಿತ ನಾಮದೊಟ್ಟಿಗೆ! ಅಲ್ಲ, ಸಮಾಜ ಏನೆಂಬುದರ ಕಲ್ಪನೆಯೇ ಇಲ್ಲದ, ಹಸಿವು ಎಂಬುದೇನೆಂದೇ ಅರಿಯದ, ಅಪ್ಪನ ಮಕ್ಕಳನ್ನು ಸಮಾಜಸೇವೆಯ ಹೆಸರಲ್ಲಿ ದೇಶದ ನಾಳಿನ ನಾಯಕರನ್ನಾಗಿ 'ಮಾಡಲು' ಹೊರಟಿರುವ ಇಂದಿನ ಅದೆಷ್ಟೋ ರಾಜಕಾರಣಿಗಳನ್ನು ಸಮಾಜಸೇವೆಯನ್ನು ಫ್ಯಾಮಿಲಿ ಬಿಸಿನೆಸ್ ನನ್ನಾಗಿ ಯಾಕೆ ಮಾಡಿಕೊಂಡಿದ್ದೀರಿ ಸಾರ್ ಅಂದರೆ ಮಾತ್ರ ಉರಿದುಬೀಳುತ್ತಾರೆ. ಓದು ವಿದೇಶ, ಕಾರು ವಿದೇಶದ್ದು, ತೊಡುವ ಬಟ್ಟೆಯಿಂದಿಡಿದು ತಿನ್ನುವ ಊಟವೂ ವಿದೇಶದ್ದೇ ಆಗಿರುವ ಮಕ್ಕಳಿಗೆ ರಾಜಕೀಯ ಮಾತ್ರ ದೇಶದ್ದೇ ಯಾಕೆ ಬೇಕು? ಸಮಾಜ ಎಂಬುದು ವಿದೇಶದ್ಲಲೂ ಇದೆಯಲ್ಲ, ಅಲ್ಲಿನ ಸಮಾಜಸೇವೆ ಸಮಾಜಸೇವೆಯೆನಿಸಿಕೊಳ್ಳುವುದಿಲ್ಲವೇ? ಉತ್ತರ ಇಲ್ಲೇ ಇದೆ ನೋಡಿ. ಇಂದಿನ ಅದೆಷ್ಟೋ ರಾಜಕಾರಣಿಗಳ ಮಕ್ಕಳು ಒಂದೋ ಅಪ್ಪನ/ಅಮ್ಮನ ಒತ್ತಾಯದ ಮೇರೆಗೆ ಬೇಡ ಬೇಡವೆನ್ನುತ್ತಲೇ ಈ ಅಖಾಡಕ್ಕೆ ಧುಮುಕುತ್ತಾರೆ, ಇಲ್ಲವೇ ನಿರಾಯಾಸವಾಗಿ ಹೆಸರು ಹಾಗು ಹಸಿರನ್ನು ಗಳಿಸಿಕೊಳ್ಳಬಹುದಾದ ಏಕೈಕ ಸಾಧನವಾದ ತಮ್ಮ ರಾಜಕೀಯ ಫ್ಯಾಮಿಲಿ ಬಿಸಿನೆಸ್ ಅನ್ನು ಸೇರುತ್ತಾರೆ, ಇಲ್ಲವೇ ತಲೆಯನ್ನು ಸೀಳಿದರೂ ಒಂದೆರಡು ವಿಚಾರಯುತ ಪದಗಳನ್ನು ಕಲಿತಿರದಿದ್ದಾಗ ಅಪ್ಪನ ಮಗನಾಗಿ ಏನೇ ಏಳಿದರೂ ಕೈಕಟ್ಟಿ ಪಾಲಿಸುವ ಪಾರ್ಟಿಯ ಸೇವಕರ ಸೇವೆಯ ಭಾಗ್ಯವನ್ನು ಸವಿಯುವ ಆಸೆಯಲ್ಲಿ ರಾಜಕಾರಣವನ್ನು ಧುಮುಕುತ್ತಾರೆ. ದೇಶವನ್ನು ಉದ್ಧರಿಸುವ ಕನಸ್ಸಲ್ಲಿ. ಇಂಥವರಿಂದ ಅದ್ಯಾವ ಮಟ್ಟಿನ ಸಮಾಜಸೇವೆ ಸಾಧ್ಯವುಂಟು ನೀವೇ ಹೇಳಿ.


ಮೇಲಾಗಿ ಇಂದು ತಾಲೂಕಿಗೆ ಒಬ್ಬ MLA ಹಾಗು ಜಿಲ್ಲೆಗೊಬ್ಬ MP ಯ ಸ್ಥಾನವನ್ನೂ ಇಂತಹ ಹಾಲಿ ರಾಜಕಾರಣಿಗಳ ಮಕ್ಕಳೇ ಪ್ರತಿನಿಧಿಸುವಂತಾದರೆ, ಬಡವರ ನಡುವೆ ಬೆಳೆದು, ಕಷ್ಟ ಕಾರ್ಪಣ್ಯಗಳೇನು ಎಂದು ಅರೆದು ಕುಡಿದಿರುವ ಜನನಾಯಕನೊಬ್ಬ ಆ ಇಡೀ ತಾಲೂಕು ಅಥವಾ ಜಿಲ್ಲೆಯಲ್ಲೇ ಇಲ್ಲವೆಂದೇ ಅರ್ಥವೇ? ಸಮಾಜಸೇವೆ ಎಂಬುದು ಕೇವಲ ರಾಜಕಾರಣಿಗಳ ರಕ್ತದಲ್ಲಿ ಮಾತ್ರವೇ ಕಾಣಸಿಗುತ್ತದೆಯೇ? ಅಥವಾ ಇಂತಹ ಕುಟುಂಬರಾಜಕಾರಣದಿಂದ ಜನಸಾಮನ್ಯರಲ್ಲಿ ಮೂಡಬೇಕಾದ ನಾಯಕರುಗಳು ಅರಳುವ ಮುನ್ನವೇ ಚಿವುಟಿಹೋಗುತ್ತಾರೆಯೇ? ಹಾಗಾದರೆ ಇಂತಹ ರಾಜಕಾರಣ ಪ್ರಜಾತಂತ್ರ ವ್ಯವಸ್ಥೆಯ ಮೂಲ ಉದ್ದೇಶವನ್ನು ಈಡೇರಿಸಬಲ್ಲುದೆ? ಲಕ್ಷಾಂತರ, ಕೋಟ್ಯಂತರ ಜನರನ್ನು ಪ್ರತಿನಿಧಿಸುವ ಇಂತಹ ವ್ಯಕ್ತಿಗೆ ಕನಿಷ್ಠ ವಿದ್ಯಾರ್ಹತೆ, ಕ್ಲೀನ್ ಹಿಸ್ಟರಿಗಳೆಂಬ ಒಂತಿಷ್ಟು ಮಾನದಂಡಗಳೂ ಬೇಕಲ್ಲವೇ?


ಪ್ರಸ್ತುತ 'ಮುಷ್ಠಿಯೊಳಗಿನ ಪ್ರಪಂಚ'ದ ಜೀವನದಲ್ಲಿ ರಾಜಕಾರಣ ಎಂಬುದು ಪ್ರತಿಯೊಬ್ಬರಲ್ಲೂ ಅದೆಷ್ಟರ ಮಟ್ಟಿಗೆ ಹಾಸುಹೊಕ್ಕಿದೆ ಎಂದರೆ ಪ್ರತಿಯೊಬ್ಬ ಪ್ರಜೆಯೂ ತನ್ನದೊಂದಿರಲಿ ಎಂದು ಅಭಿಪ್ರಾಯ ಮೂಡಿಸುವ, ಮೊಳಗಿಸುವ ಮೇಧಾವಿಗಳೇ. ಒಂದು ಸರ್ಕಾರ ಜಾರಿಗೊಳಿಸುವ ಕಾನೂನು ಇಂದು ಹೆಚ್ಚಾಗಿ ವ್ಯಕ್ತಿನಿಷ್ಠವವಾಗಿಯೇ ಸ್ವೀಕರಿಸಲಾಗುತ್ತದೆಯೇ ವಿನಃ ವಸ್ತುನಿಷ್ಠವಾಗಿ ಅಲ್ಲ. ಇಂತಹ ವ್ಯಕ್ತಿನಿಷ್ಠ ಸರ್ಕಾರಗಳ ಯೋಜನೆಗಳನ್ನು ಕಣ್ಮುಚ್ಚಿ, ಕೈಚಾಚಿ ತಬ್ಬಿಕೊಳ್ಳುವವರು ಒಬ್ಬರಾದರೆ, ಮುಟ್ಟಿದರೆ ಮುನಿ ಸಸ್ಯದಂತೆ ಆಡುವವರು ಕೆಲವರು. ಒಟ್ಟಿನಲ್ಲಿ ಈ ಒಪ್ಪು ತಪ್ಪುಗಳ ಚರ್ಚೆಯೇ ಇಂದಿನ ಮುಷ್ಠಿಯೊಳಗಿನ ಪ್ರಪಂಚದ ಅವಿಬಾಜ್ಯ ಅಂಗ. ವಿಪರ್ಯಾಸವೆಂದರೆ ಇಂತಹ ಚರ್ಚೆಗಳನಷ್ಟನ್ನೇ ಜನರು ರಾಜಕಾರಣವೆಂದು ತಿಳಿದಿರುವದು. ದೇಶದ ಚುಕ್ಕಾಣಿಯನ್ನು ಹಿಡಿದಿರುವವರಿಗೂ ಇದೆ ಬೇಕಾದದ್ದು. ಸರಿಯೋ ತಪ್ಪೋ. ತಮ್ಮ ಒಂದು ವಿಷಯವನ್ನು ವಿರೋಧಿಸುತ್ತಿದ್ದಾರೆ ಎಂದರೆ ಅದರಿಂದ ಕಲಿಯುವ ಬದಲು ಇಂತಹ ಟೀಕೆಗಳನ್ನು ಕೇವಲ ವೈಯಕ್ತಿಕವಿವಾಗಿಸಿಕೊಂಡು ಕಚ್ಚಾಡತೊಡಗುತ್ತಾರೆ. ಮೆನೆಯಲ್ಲಿ ಅಪ್ಪ ತಪ್ಪುಮಾಡಿದರೆ ಅದನ್ನು ತಿದ್ದುವ ಕೆಲಸ ಮನೆಯ ಇತರ ಸದಸ್ಯದ್ದಾಗಿರಬೇಕು. ಕಲಿಯುವ ಮನಸ್ಸೂ ಅಪ್ಪನದ್ದಾಗಿರಬೇಕು. ಆಗಲೇ ಮನೆಎಂಬುದು ನೆಡೆಯುವುದು. ದೇಶವು ಸಹ ಒಂದು ಮೆನೆಯಲಲ್ಲವೇ?! ಇಂತಹ ಮನೆಯ ಸೇವೆ ಸಮಾಜಸೇವೆಯಂತೂ ಖಂಡಿತ ಅಲ್ಲ. ಇದು ದೇಶದ ಪ್ರತಿಯೊಬ್ಬನ ಆದ್ಯ ಕರ್ತವ್ಯ. ಕುಟುಂಬದ ಇತರ ಸದ್ಯರನ್ನು ಹಸಿವಿನಿಂದ, ಅಶಿಕ್ಷಣದಿಂದ, ಅನಾರೋಗ್ಯದಿಂದ ನರಳುವುದ ಕಾಣಲಾಗುತ್ತದೆಯೇ? ಮನೆಯ ನೆಡೆಸುವವನು ಖಂಡಿತವಾಗಿಯೂ ಇಂತಹ ಅಧೋಗತಿಗೆ ಮನೆಯವರನ್ನು ತಂದು ನಿಲ್ಲಿಸುವುದಿಲ್ಲ. ಸಮಾಜಸೇವೆಯ ಹೆಸರಲ್ಲಿ ಜನರ ಕಣ್ಣಿಗೆ ಸುಣ್ಣವನ್ನು ಬಳಿಯುವುದಿಲ್ಲ. ದೇಶವನ್ನು ಮನೆಯೆಂದು ಭಾವಿಸಿರುವ ನಾಯಕರಿಗೆ ಇಲ್ಲಿಯ ಪ್ರತಿಯೊಬ್ಬ ಯುವಕ, ಯುವತಿಯರೂ ಮಕ್ಕಳೆಯೇ. ಹಾಗಾದಾಗ ಮಾತ್ರ ಗಲ್ಲಿ ಗಲ್ಲಿಗೊಬ್ಬ ನಾಯಕ ಮೂಡಬಲ್ಲ. ಇಲ್ಲವಾದರೆ ಗುರಿ ಸ್ಪಷ್ಟವಲ್ಲದೆ ಗುಂಡನ್ನು ಹಾರಿಸಿದಂತಾಗುತ್ತದೆ ಲೋಕಲ್ ನಾಯಕರ ಸಮಾಜಸೇವೆಯ ರಾಜಕೀಯ.

ಎಲ್ಲಕ್ಕೂ ಮಿಗಿಲಾಗಿ ಮೂಡುವ ಒಂದು ಪ್ರೆಶ್ನೆಎಂದರೆ ಸಮಾಜಸೇವೆ ಮಾಡಲು ಇವರಿಗೆ ರಾಜಕಾರಣವೆಂಬ ಅಸ್ತ್ರವೇ ಬೇಕೇ ಅಥವಾ ತಮ್ಮ ಮನೆಯಲ್ಲಿನ ಗಂಟು ಮೂಟೆಗಳ ಸಂಪತ್ತೇ ಸಾಕೆ? ನಿಸ್ವಾರ್ಥವಾದ ಸಮಾಜಸೇವಕರಾದರೆ ತಮ್ಮ ಸ್ವಂತದ್ದ ಹಣವನ್ನೇ ಹಂಚಿ ಸಮಾಜದ ಏಳಿಗೆಯನ್ನು ಬಯಸಬವುದಿತ್ತು ಅಲ್ಲವೇ? ದೇಶದ ದುಡ್ಡನ್ನು ದೇಶಕ್ಕೇ ಹಂಚಲು ಇಂತಹ ಅಪ್ಪನ ಮಕ್ಕಳೇ ಬೇಕೇ? ಇಂತಹ ಮಧ್ಯವರ್ತಿ ಪಾಳೇಗಾರರನ್ನು ಮಾತ್ರ ಯಾವೊಬ್ಬ ಪ್ರಜೆಯೂ ನೀ ಬಂದು ನಮ್ಮ ಸಮಾಜಸೇವಕನಾಗು ಎಂದು ಕೇಳಿಕೊಳ್ಳುವುದಿಲ್ಲ. ತಮ್ಮ ತಮ್ಮ ಭಾವಚಿತ್ರದ ದೊಡ್ಡ ದೊಡ್ಡ ಪೋಸ್ಟರ್ಗಳು. 'ಶ್ರೀಯುತ MLA ಅವರ ಅನುಧಾನದಲ್ಲಿ ನಿರ್ಮಿಸಿರುವ ಆಟೋ ನಿಲ್ದಾಣ', 'ಜಿಲ್ಲೆಯ MP ಯವರ ಅನುಧಾನದಲ್ಲಿ ನಿರ್ಮಿಸಿರುವ ಉದ್ಯಾನವನ' ಇಂತಹ ಬೋರ್ಡುಗಳನ್ನು ಗಲ್ಲಿ ಗಲ್ಲಿಗೂ ಹಾಕುತ್ತಾರಲ್ಲ ಸ್ವಾಮಿ, ಏನು ಇವರು ತಮ್ಮ ಜೇಬಿನಿಂದ ತಂದು ಸುರಿಯುವ ಹಣವೇ ಅದು? ದೇಶದ ಪ್ರತಿಯೊಬ್ಬ ಟ್ಯಾಕ್ಸ್ ಪೆಯೆರ್ ಗಳ ಬೆವರಿನ ಹಣವಲ್ಲವೇ ಅದು? ವ್ಯಕ್ತಿಯೊಬ್ಬ ನಮ್ಮ ಮನೆಯ ದುಡ್ಡನ್ನು ಪಡೆದು ತನ್ನ ಹೆಸರಿನ ಬಿಸಿನೆಸ್ ಒಂದನ್ನು ಶುರುಮಾಡಿದರೆ ನಾವು ಸುಮ್ಮನಿರುತ್ತೇವೆಯೇ? ಆತನ ಕುತ್ತಿಗೆ ಪಟ್ಟಿ ಇಡಿದು ಕೇಳುವುದಿಲ್ಲವೇ? ಪ್ರಸ್ತುತ ಸಮಾಜಸೇವೆಯ ಹೆಸರಿನಲ್ಲಿ ರಾಜಕಾರಣಿಗಳು ಹಾಗು ಅವರ ಸುಪುತ್ರರುಗಳು ನೆಡೆಸುವ ಕಳ್ಳಾಟವನ್ನು ಹೀಗೆಯೇ ಕುತ್ತಿಗೆ ಪಟ್ಟಿಯನ್ನು ಹಿಡಿದು ನಾವು ಕೇಳಬಲ್ಲವೇ? ಅದು ಸಾಧ್ಯವಾದರೆ ಮಾತ್ರ ನೋಡಿ ನಮ್ಮ 'ಪ್ರಜಾ''ಪ್ರಭುತ್ವ' ದ ನಿಜವಾದ ಆಶಯ ಈಡೇರುವುದು. ಸಮಾಜಸೇವಕರು ಪ್ರಜಾ ಸೇವಕರಾಗುವುದು. ಆಯ್ಕೆ ನಮ್ಮದು. ಅನುಭವವೂ ನಮ್ಮದೇ!

S L B

ಇವರದ್ದು ನಿಜ ಜೀವನದಲ್ಲಷ್ಟೇ ಅಲ್ಲ ಸಾಹಿತ್ಯ ಲೋಕದಲ್ಲೂ ಆನೆಯ ನಡೆಯೇ. ಈ ಮಹೋನ್ನತ ನಡೆ ಯಾವುದೇ ಚಿತ್ರಕತೆಗೂ ಕಮ್ಮಿಯಲ್ಲ ಎಂದೇ ಅನ್ನಬಹುದು. ಬೇಜವಾಬ್ದಾರಿಯುತ ಅಪ್ಪನ ಹಿಂಸೆಯನ್ನನುಭವಿಸುತ್ತಾ, ಎಳೆಯ ಸಹೋದರ ಸಹೋದರಿಯರು ಹಾಗು ಅಮ್ಮನ ಸಾಲು ಸಾಲು ಸಾವುಗಳು ನೋವುಗಳು, ಬಡತನದ ಬವಣೆಯಲ್ಲಿ ಬೇಯುತ್ತಾ, ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿದ್ದ ಪೋರನೊಬ್ಬ ಅದ್ಯಾವ ಹುಮ್ಮಸ್ಸಿನ ಬಲದಿಂದ ಮುನ್ನೆಡೆದನೋ ಆತನೊಬ್ಬನೇ ಬಲ್ಲ. ಈ ಕಷ್ಟ ನೋವುಗಳೇ ಆತನನ್ನು ಒಬ್ಬ ಕಠಿಣ ಮನಸ್ಸಿನ ಸ್ವತಂತ್ರ ವ್ಯಕ್ತಿಯನ್ನಾಗಿ ಮಾಡಿದವು ಎಂದರೆ ಸುಳ್ಳಾಗದು. ಇಂದು ಕೇವಲ ದೇಶದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲೂ ತನ್ನ ಬರಹಗಳಿಂದ ಹೆಸರು ಮಾಡಿರುವ ಹಾಸನದ ಸಂತೇಶಿವರದ ಭೈರಪ್ಪನವರು ಕನ್ನಡದ ಹೆಮ್ಮೆಯ ಬರಹಗಾರರಲ್ಲೊಬ್ಬರು. ಕಳೆದ ಸುಮಾರು ಆರು ದಶಕಗಳಿಂದ ಕನ್ನಡ ಸಾಹಿತ್ಯ ಕೃಷಿಯಲ್ಲಿ ಸಕ್ರಿಯರಾಗಿರುವ ಇವರು ನವ್ಯ, ನವೋದಯ, ಬಂಡಾಯ ಎನ್ನುವ ಯಾವೊಂದು ಪಂಗಡಕ್ಕೂ ತೂಗಾಕಿಕೊಳ್ಳದೆ ತಮಗೆ ಸರಿಯೆನಿಸಿದ್ದನ್ನು, ತಮ್ಮ ಮನಸ್ಸು ನಿಶ್ಚಿಯಿಸಿದನ್ನು ಯಾವುದೇ ಅಡೆ ತಡೆಗಳಿಲ್ಲದೆ ಸಾಮಾನ್ಯನ ಧಾಟಿಯಲ್ಲಿ ವ್ಯಕ್ತಪಡಿಸುತ್ತಾ ಬಂದರು. ಓದುಗರ ಮನೆಮಾತಾದರು. ಹಳೆಬೇರುಗಳಿಂದಿಡಿದು ಹೊಸಚಿಗುರುಗಳಿಗೂ ಸ್ಪೂರ್ತಿಯಾದರು.


ಒಂದೆಡೆ ವಿಧಿ ಎಂಬುದು ತನ್ನ ಚಾಟಿಯ ಏಟಿನಿಂದ ಭ್ಯರಪ್ಪನವರನ್ನು ಹಣ್ಣುಗಾಯಿ ನೀರುಗಾಯಿ ಮಾಡುತ್ತಿದ್ದರೆ ಇನ್ನೊಂದೆಡೆ ಅದೇ ವಿಧಿ ಪ್ರತಿ ಏಟಿನ ನೋವನ್ನು ಸಹಿಸಿಕೊಳ್ಳುವ, ಏನಾದರೊಂದು ಸಾಧಿಸಬೇಕೆಂಬ ಕಿಚ್ಚುಳ್ಳ ಮನವೊಂದು ಎಳೆಯ ಭೈರಪ್ಪನವರಲ್ಲಿ ಬೆಳೆಸುತ್ತದೆ. ತನ್ನ ಆತ್ಮೀಯರನ್ನು ಕಳೆದುಕೊಂಡ ಭೈರಪ್ಪನವರು ಅಲೆಮಾರಿಯಂತೆ ಕೆಲವರ್ಷಗಳ ಕಾಲ ಊರೂರು ಅಲೆದರು. ಈ ಅಲೆದಾಟದ ಹಿಂದೆ ಅಂಥಹದ್ದೇನೂ ಮಹೋದ್ದೇಶಗಳಿರದಿದ್ದರೂ ಇವರು ಹೋದಡೆಯಲ್ಲ ಮಾತ್ರ ಜೀವನವನ್ನು ಕಲಿಸುವ ಗುರುಗಳೇ ಎದುರಾಗತೊಡಗಿದ್ದರು. ಕೆಲವರು ಮಾತಿನಿಂದಾದರೆ ಕೆಲವರು ಏಟಿನಿಂದ! ಕೆಲವರು ಇಷ್ಟದಿಂದಾದರೆ ಕೆಲವರು ಕಷ್ಟದಿಂದ! ಹೀಗೆ ಅಲೆಯುತ್ತ ದೂರದ ಮುಂಬೈವರೆಗೂ ಹೋಗಿದ್ದ ಭೈರಪ್ಪನವರು ತಮ್ಮ ಉದರ ಪೋಷಣೆಗೆ ಸಿನಿಮಾ ಮಂದಿರದ ಕಾವಲುಗಲಾರನಾಗಿ, ರೈಲ್ವೆ ಸ್ಟೇಷನ್ನಿನ ಕೂಲಿಯವನಾಗಿ, ನಾಟಕ ಕಂಪನಿಯಲ್ಲಿ ನೌಕರನಾಗಿ ಅಲ್ಲದೆ ಸನ್ಯಾಸಿಗಳೊಟ್ಟಿಗೆ ಸೇರಿ ಕೆಲಕಾಲ ಅವರಂತೆಯೇ ವೇಷಭೂಷಣಗಳನ್ನೂ ತೊಟ್ಟು ಅಲೆದಿರುವುದೂ ಉಂಟು. ಜೀವನದ ಪ್ರಾರಂಭದ ದಿನಗಳಲ್ಲಿ ವ್ಯತಿರಿಕ್ತವಾಗಿ ಕಾಡಿದ್ದ ವಿಧಿ ಈ ಬಾರಿ ಮಾತ್ರ ಭೈರಪ್ಪನವರನ್ನು ಪುನ್ಹ ಶಾಲೆಯೆಡೆ ಸೆಳೆದಿತ್ತು. ಆ ಸೆಳೆತ ಅದ್ಯಾವ ಪರಿಯೆಂದರೆ ಓದು ಬರಹಗಳೆರಡನ್ನೇ ಅವರ ಜೀವನದ ಅತ್ಯಾಪ್ತ ವ್ಯಕ್ತಿಗಳನ್ನಾಗಿ ಮಾಡಿತು. ಓದೇ ಅಂತಹದ್ದು. ಪಂಜರದೊಳಗಿನ ಗಿಳಿಮರಿಯನ್ನು ಬಾಗಿಲು ತೆರೆದು ಬಿಟ್ಟಂತೆ. ರೆಕ್ಕೆಗಳಿವೆ ಎಂಬುದನ್ನೇ ಮರೆತಿದ್ದ ಹಕ್ಕಿಗೆ ಮನವರಿಕೆ ಮಾಡಿಕೊಟ್ಟಂತೆ. ಅಂದು ಜೀವನದ ಆದಷ್ಟೂ ಏಳು ಬೀಳುಗಳಿಗೆ ಭೈರಪ್ಪನವರು ಆಸರಿಸಿದ್ದು ಓದನ್ನು ಮಾತ್ರ. ಉಳಿದಂತೆ ಜೀವನವಿಡೀ ಅವರು ಒಂಟಿ ಸಲಗವೇ. ಹೀಗೆ ಓದುತ್ತಾ ಸಾಗಿದ ಭೈರಪ್ಪನವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿಎ ಮುಗಿಸಿ ಅಲ್ಲಿಯೇ ಚಿನ್ನದ ಪದಕದ ಸಮೇತ ಎಂಎಯನ್ನು ಪೂರ್ಣಗೊಳಿಸಿದರು. ನಂತರ ಹುಬ್ಬಳ್ಳಿ, ಗುಜರಾತ್, ದೆಹಲಿ, ಮೈಸೂರು ಹಾಗು ದೇಶದ ಇನ್ನೂ ಹಲವೆಡೆ ಪ್ರಾದ್ಯಾಪಕರಾಗಿ ಸೇವೆ ಹಾಗು 1991ರಲ್ಲಿ ನಿವೃತ್ತಿ.


ಭೈರಪ್ಪರವ ವ್ಯಕ್ತ ಪ್ರಕಾರ ಕಾದಂಬರಿಗಳು. ಇಲ್ಲಿಯವರೆಗೂ ಸುಮಾರು 26 ಕಾದಂಬರಿಗಳನ್ನು ಸೃಷ್ಟಿಸಿರುವ ಇವರು ಅವುಗಳ ಮೂಲಕ ಕಮ್ಮಿಯಂದರೂ ನೂರರಿಂದ ನೂರೈವತ್ತು ಓದುಗರ ಪರಮಾಪ್ತ ಪಾತ್ರಗಳನ್ನು ಸೃಷ್ಟಿಸಿಕೊಟ್ಟಿದ್ದಾರೆ. ಒಮ್ಮೆ ಓದಿದವ ಮುಂದೆ ಎಂದೆಂದಿಗೂ ಮರೆಯಲಾಗದಂತಹ ಪಾತ್ರಗಳವು. ಎಲ್ಲ ಬಗೆಯ ರಸಗಳನ್ನು ಧಾರೆಎಳೆಯಬಲ್ಲ ಸೃಷ್ಟಿಕರ್ತನ ಸೃಷ್ಟಿಗಳವು. ಪಾತ್ರಗಳ ವಿಚಾರವನ್ನು ಇನ್ನೂ ಆಳವಾಗಿ ನೋಡಹೋದರೆ ಇವರ ಪ್ರತಿಯೊಂದು ಪುಸ್ತಕಗಳಲ್ಲೂ ಒಂದಲ್ಲೊಂದು ಗಟ್ಟಿಗಿತ್ತಿಯ ಪಾತ್ರವಂತೂ ಇದ್ದೆ ಇರುತ್ತದೆ. ಸಮಾಜದ ವ್ಯತಿರಿಕ್ತತೆಯ ತುಳಿತ ಆಕೆಯನ್ನು ಸದೃಢಳನ್ನಾಗಿಸುವ, ಸ್ವಾವಲಂಬಿಯನ್ನಾಗಿಸುವ ಇವರ ಬರವಣಿಗೆಯ ಪರಿಯಂತೂ ಮಹೋನ್ನತವಾದದ್ದು. ಅದು 'ದಾಟು' ವಿನ ಸತ್ಯಳ ಪಾತ್ರವಿರಬಹುದು, 'ಆವರಣ'ದ ರಝಿಯಾ, 'ಯಾನ'ದ ಉತ್ತರೆ, 'ಮಂದ್ರ'ದ ರಾಮಕುಮಾರಿ, ಅಥವಾ 'ತಬ್ಬಲಿಯು ನೀನಾದೆ ಮಗನೆ' ಪುಸ್ತಕದ ಹಿಲ್ಡಾಳ ಪಾತ್ರವಾಗಿರಬಹದು, ಇಲ್ಲಿ ಯಾವ ಹೆಣ್ಣು ಸಹ ಜೀವನದ ಕಷ್ಟಗಳಿಗೆ, ಬವಣೆಗಳಿಗೆ ಬೆನ್ನು ತೋರಿಸಿ ಓಡುವವಳಲ್ಲ. ಸ್ವಾಭಾವಿಕ ಹೆಣ್ಣಿನ ಗುಣದಂತೆ ಆಕೆ ಶುರುವಿನಲ್ಲಿ ಕೊಂಚ ಹಿನ್ನೆಡೆದರೂ ಕತೆ ಸಾಗಿದಂತೆ ಆಕೆ ಮುನ್ನೆಡೆದು ಬರುತ್ತಾಳೆ. ಛಲ, ಧೈರ್ಯ ಹಾಗು ಸ್ವಾವಲಂಬನೆಯ ವಿಶಿಷ್ಟ ಮೂರ್ತಿಯಾಗುತ್ತಾಳೆ. ಅಂತಹ ಅದೆಷ್ಟೋ ಪಾತ್ರಗಳು ಇಂದಿಗೂ ಪ್ರಸ್ತುತವಾಗಿವೆ. ಹೆಣ್ಣೆಂದರೆ ಒಳಗೆ, ಗಂಡೊಬ್ಬ ಮಾತ್ರ ಹೊರಗೆ ಎಂಬಂತಿದ್ದ ಕಾಲದಲ್ಲಿ ಮೂಡಿಬಂದ ಬೈರಪ್ಪನವರ ಈ ಕಾದಂಬರಿಗಳು ಲಕ್ಷಾಂತರ ಹೆಣ್ಣು ಮನಗಳನ್ನು ಅಂದು ಬಡಿದೆಬ್ಬಿಸಿದಂತೂ ಸುಳ್ಳಲ್ಲ.


ಯಾವೊಂದು ಬಗೆಯ ಅಥವಾ ಇಂತಿಷ್ಟೇ ವಲಯದಲ್ಲಿ ಮಾತ್ರವಷ್ಟೇ ಇವರ ಪ್ರವೀಣತೆ, ಇಂತಿಷ್ಟು ವಿಚಾರಗಳನ್ನು ಬಿಟ್ಟು ಇವರಿಂದ ಬೇರೇನೂ ಹೊತ್ತಿಸಲು ಸಾಧ್ಯವಿಲ್ಲ ಎನ್ನುವವರಿಗೆ ಇವರ 'ಮಂದ್ರ' ಹಾಗು 'ಯಾನ' ಪುಸ್ತಕಗಳೇ ತಕ್ಕ ಉತ್ತರಗಳು. ಮಂದ್ರ ಕೃತಿಗೆ ಜ್ಞಾನಪೀಠಕ್ಕೆ ಸರಿಸಮಾನವಾದದೆಂದೇ ಹೇಳಬಹುದಾದ ಸರಸ್ವತಿ ಸಮ್ಮಾನ್ ಪ್ರಶಸ್ತಿ ದೊರೆತರೆ, 'ಯಾನ' ಪುಸ್ತಕದ ವಿವರಣೆ ಸಾಮಾನ್ಯನಲ್ಲದೆ ವಿಜ್ಞಾನಿಗಳನ್ನೂ ಬೆರೆಗುಗೊಳಿಸಿದೆ! ಭೈರಪ್ಪನವರೇ ಹಾಗೆ. ಕಣ್ಣು ಮುಚ್ಚಿ, ತಲೆಗೆ ತೋಚಿದಷ್ಟನ್ನೇ ಗೀಚುವ ಜಾಯಮಾನದವರಲ್ಲ. ಪ್ರತಿ ಪುಸ್ತಕದ ಶುರುವಿನ ಮೊದಲು ಒಬ್ಬ Phd ವಿದ್ಯಾರ್ಥಿಗಿಂತಲೂ ಮಿಗಿಲಾದ ಸಂಶೋಧನೆ ಇವರಿಂದ ಜರುಗುತ್ತದೆ. ಅವರ ಆವರಣ ಕೃತಿಯ ಪ್ರಾರಂಭದ ಹಂತದಲ್ಲಿ ಮುಸ್ಲಿಂ ಧರ್ಮದ ಬಗ್ಗೆ, ಒಬ್ಬ ಸಾಮಾನ್ಯ ಮುಸ್ಲಿಂರ ದಿನಚರಿಯನ್ನು ಖುದ್ದಾಗಿ ನೋಡಿ ತಿಳಿದುಕೊಳ್ಳಲು ವಾರಗಳ ಕಾಲ ಒಂದು ಮುಸ್ಲಿಂ ಕುಟುಂಬದದಲ್ಲಿ ನೆಲೆಸಿ, ನೋಡಿ, ಅರಿತು ಪುಸ್ತಕವನ್ನು ಶುರುಮಾಡಿದ್ದರು! ಇನ್ನು ಇವರ 'ಮಂದ್ರ' ಪುಸ್ತಕ ಕೇವಲ ಸಾಹಿತ್ಯ ಕೃತಿ ಮಾತ್ರವಾಗಿರದೆ ಕಲ್ಯಾಣಿ, ಭೈರವ, ಮೋಹನ ಎಂಬ ಹಲವು ಹಿಂದುಸ್ಥಾನಿ ರಾಗಗಳನ್ನು ಸರಳ ಭಾಷೆಯಲ್ಲಿ ತಿಳಿಯೇಳುವ ಸಂಗೀತದ ಕಿರುಹೊತ್ತಿಗೆಯಂತಿದೆ. ಮಾನವನ ಜೀವನವನ್ನೇ ಸಂಗೀತಕ್ಕೆ ಹೋಲಿಸಿ, ರಸವನ್ನು ಹೊತ್ತಿಸಿದ ಇವರ ಆ ಕಲಾಚತುರತೆಗೆ ಹೋಲಿಕೆಯೇ ಇಲ್ಲವೆನ್ನಬಹುದು.ಇನ್ನು 'ಯಾನ' ಕೃತಿ ವಿಜ್ಞಾನಿ ಹಾಗು ತತ್ವಜ್ಞಾನಿ ಇಬ್ಬರನ್ನು ಒಟ್ಟುಗೂಡಿಸಿ ಮೂಡಿಬಂದ ಹೊತ್ತಿಗೆ. ಭೈರಪ್ಪನವರ ಸಮಕಾಲೀನರಲ್ಲಿ ಈ ಮಟ್ಟಿನ ಸಮ್ಮಿಶ್ರಣ ಬೇರ್ಯಾವ ಬರಹಗಾರನಿಂದಲೂ ಸಾಧ್ಯವಾಗದಿದ್ದದು ಭೈರಪ್ಪನವರ ಹಿರಿಮೆಗೆ ಹಿಡಿದ ಕನ್ನಡಿ ಎನ್ನಬಹುದು.


ಇಂದು ಭೈರಪ್ಪನವರ ಹೆಸರು ಕೇಳಿದರೆ ಮೈಮೇಲೆ ಕೆಂಡ ಸುರಿದವರಂತೆ ಆಡುವವರಿದ್ದಾರೆ. ಯಾವುದೊ ಒಂದು ಅಜೇಂಡಾದೊಂದಿಗೆ ತೂಗಾಗಿಕೊಂಡು ಇವರ ಬರಹಗಳು ಮೂಡುತ್ತವೆ ಎಂದು ಜರಿಯುವವರಿದ್ದಾರೆ. ಕೆಲವರಂತೂ ಇನ್ನೂ ಒಂದೆಜ್ಜೆ ಮುಂದೋಗಿ ಭೈರಪ್ಪನರ ಸಾಹಿತ್ಯ ಸಾಹಿತ್ಯವೇ ಅಲ್ಲ, ಅವರ ಪುಸ್ತಕದ ಪ್ರತಿ ಪಾತ್ರಗಳು ಸ್ವತಂತ್ರವಾಗಿ ಮೂಡುವುದೇ ಇಲ್ಲ, ಎಲ್ಲವೂ ಕೈಕಟ್ಟಿ ಕುಣಿಸುವ ಕೀಲುಗೊಂಬೆಗಳು ಎಂದು ದೂರುವವರಿದ್ದಾರೆ. ಆದರೆ ಭೈರಪ್ಪನವರು ಇದ್ಯಾವ ಕುಹಕಗಳಿಗೂ ಕಿವಿ ಕೊಟ್ಟು ಸಮಯವನ್ನು ಹರಣಮಾಡುವವರಲ್ಲ. ತಮ್ಮ ಅಸಂಖ್ಯ ಓದುಗ ಪ್ರೇಮಿಗಳಿಗೆ ಒಂದರಿಂದೊಂದು ಪುಸ್ತಕಗಳನ್ನು ನೀಡುತ್ತಾ ಆತ್ಮತೃಪ್ತಿಯ ಕಾರ್ಯದಲ್ಲಿ ನಿರತರಾಗಿರುವವರು ಅವರು. ಮಾತಿಗೆ ಮಾತಿನಲ್ಲಿ, ಬರಹಕ್ಕೆ ಬರವಣಿಗೆಯಲ್ಲಿ ಉತ್ತರಿಸಲಾಗದ ಗುಂಪೊಂದಕ್ಕೆ ಜವಾಬನ್ನು ನೀಡುತ್ತಾ ಕುಳಿತಿದ್ದರೆ ಇಂದು ಇಷ್ಟೆಲ್ಲಾ ಕೃತಿಗಳು ಇವರಿಂದ ಮೂಡಲು ಸಾಧ್ಯವಾಗದೆ ಇರುತಿತ್ತೇನೋ ಯಾರು ಬಲ್ಲರು?! ಒಬ್ಬ ಸಾಮನ್ಯನಿಗೆ ಅರ್ಥವಾಗದ ಧಾಟಿಯಲ್ಲಿ ಬರೆದು ಒಂದಿಷ್ಟು ಜನರ ಮೆಚ್ಚಿಗೆ ಗಳಿಸಿಕೊಳ್ಳುವರಿಂದ ಏನು ಬಂತು ಸ್ವಾಮಿ? ಕೂಲಿ ಕೆಲಸ ಮಾಡುವ ವ್ಯಕ್ತಿಯ ಬ್ಯಾಗಿನಲ್ಲೂ ತಾವು ಬರೆದ ಒಂದು ಪುಸ್ತಕವನ್ನು ಕಾಣ ಸಿಕ್ಕರೆ ಬರವಣಿಗೆಯ ಸಾರ್ಥಕತೆ ಅದಲ್ಲದೆ ಮತ್ತಿನ್ನೇನು? ಭೈರಪ್ಪನವರ ವಂಶವೃಕ್ಷ, ನಾಯಿ ನೆರಳು, ಗೃಹಬಂಗ, ನಿರಾಕರಣ, ಪರ್ವ, ನೆಲೆ, ಎಂಬ ಇನ್ನು ಹಲವು ಕೃತಿಗಳು ಕನ್ನಡ ಸಾಹಿತ್ಯ ಲೋಕದ ಮುಕುಟಮಣಿಗಳಂತೆ ಕಂಗೊಳಿಸುತ್ತಿವೆ. ಸಾಧ್ಯವಾದಷ್ಟು ಸವಿಯುವ ಭಾಗ್ಯ ಮಾತ್ರ ನಮಗೆ ಬಿಟ್ಟದ್ದು.