Sunday, December 8, 2019

ಸಾಧನೆಗೆ ಬೇಕಾದ ಜೀವರಸ ...

ಗಿಡದ ಎಲೆಯೊಂದಕ್ಕೆ ಅಂಟಿಕೊಂಡಿದ್ದ ಗೂಡಿನಿಂದ (cocoon) ಆಗತಾನೆ ಚಿಟ್ಟೆಯೊಂದು ಹೊರಬರಲು ಆವಣಿಸುತ್ತಿತ್ತು. ಮೊದಲ ಬಾರಿಗೆ ಜಗತ್ತನ್ನು ನೋಡುವ ತವಕದಲ್ಲೇನೋ ಎಂಬಂತೆ ಆ ಸಣ್ಣ ರಂಧ್ರದ ಮೂಲಕ ಹೊರಬಾರಲಾಗದೆ ಅದು ಹರಸಾಹಸ ಪಡುತ್ತಿದೆ. ಕತ್ತನ್ನು ಹೊರಹಾಕುವುದು, ಒಳಗೆಳೆದುಕೊಳ್ಳುವುದು ಮತ್ತೊಮ್ಮೆ ಗೂಡಿನೊಳಗೋಗಿ ಸ್ವಲ್ಪಹೊತ್ತಿನ ನಂತರ ಪುನಹಃ ತನ್ನೆಲ್ಲ ಶಕ್ತಿಯನ್ನು ಬಿಟ್ಟು ಹೊರಬರಲು ಆವಣಿಸುವುದು, ಹೀಗೆ ಅದರ ಪ್ರಯತ್ನ ಸತತವಾಗಿ ಮುಂದುವರೆದಿತ್ತು. ಒಮ್ಮೆ ಹೊರಬಂದು ತನ್ನ ರೆಕ್ಕೆಯನ್ನು ಚಾಚಿ ಎತ್ತರೆತ್ತರಕ್ಕೆ ಹಾರುತ್ತಾ ಹೂವಿಂದ ಹೂವಿಗೆ ಹೋಗಿ ಕೂತು ಮಕರಂದನ್ನು ಹೀರಿ ಸುಖಿಸುವ ಸವಿಗನಸು ಆ ಎಳೆಯ ಚಿಟ್ಟೆಗೆ. ಆದರೆ ಆ ಸಣ್ಣ ರಂಧ್ರವನ್ನು ಬೇಧಿಸಿ ಹೊರಬರಲು ಅದಕ್ಕೆ ಆಗುತ್ತಿಲ್ಲ. ಹಾಗಂತ ತನ್ನ ಸತತ ಪ್ರಯತ್ನವನ್ನೂ ಸಹ ಅದು ಬಿಡುತ್ತಿಲ್ಲ.

ಪ್ರತಿದಿನ ಅದೇ ಹಾದಿಯಲ್ಲಿ ನೆಡೆದುಕೊಂಡು ಹೋಗುತ್ತಿದ್ದ ಹುಡುಗನೊಬ್ಬ ಈ ಚಿಟ್ಟೆ ಹುಳುವಾಗಿದ್ದ ಸಮಯದಿಂದ ಎಲೆಯ ಕೆಳಗೆ ಗೂಡುಕಟ್ಟುವವರೆಗೂ ಸೂಕ್ಶ್ಮವಾಗಿ ಗಮನಿಸುತ್ತಿದ್ದ. ಇಂದು ಆ ಗೂಡಿನಲ್ಲಿ ಸಣ್ಣ ರಂಧ್ರವೊಂದು ಮೂಡಿದ್ದನ್ನು ಗಮನಿಸಿದ ಆತ ಹತ್ತಿರ ಬಂದು ನೋಡುತ್ತಾನೆ ಎಳೆಯ ಚಿಟ್ಟೆಯ ಮರಿ ತನ್ನೆಲ್ಲ ಶಕ್ತಿಯನ್ನು ಹೊರಹಾಕಿ ಆ ಪುಟ್ಟ ರಂಧ್ರದ ಮೂಲಕ ಹೊರಬರಲು ಆವಣಿಸುತ್ತಿದೆ. ಸಂತಸಗೊಂಡ ಆ ಹುಡುಗ ಚಿಟ್ಟೆ ಹೊರಬಂದು ಹಾರುವುದನ್ನೇ ಆಸೆಯ ಕಣ್ಣಿನಿಂದ ಕಾಯತೊಡಗಿದ. ನಿಮಿಷಗಳು, ಘಂಟೆಗಳು ಉರುಳಿದವು. ಚಿಟ್ಟೆ ಅದೆಷ್ಟೇ ಪ್ರಯತ್ನ ಪಟ್ಟರೂ ರಂಧ್ರದ ಮೂಲಕ ಹೊರಬರಲಾಗುತ್ತಿಲ್ಲ. ಹುಡುಗನ ಸಹನೆ ಮೀರಿತು. ಹೀಗೆ ಇನ್ನೂ ಒಂದೆರಡು ತಾಸು ಹೋದರೆ ಆಯಾಸದಿಂದಲೇ ಚಿಟ್ಟೆ ಸತ್ತು ಹೋದಿತು ಎಂದುಕೊಂಡ ಆತ ಸಣ್ಣ ಕಡ್ಡಿಯೊಂದನ್ನು ಮುರಿದು ಅದರ ತುದಿಯಿಂದ ಆ ಗೂಡನ್ನು ನಿಧಾನವಾಗಿ ಒಡೆದ. ಕೂಡಲೇ ಚಿಟ್ಟೆಯ ಮರಿ ಹೊರಬಂದಿತು. ಏಳುತ್ತಾ ಬೀಳುತ್ತಾ ಕೊನೆಗೆ ಇಂಚಿಚ್ಛೇ ಹಾರಲೂ ಪ್ರಯತ್ನಿಸಿತು. ಅದರೆ ಅದೆಷ್ಟೇ ಹೊತ್ತು ಕಾದರು ಆ ಚಿಟ್ಟೆಯ ಪೂರ್ಣ ರೆಕ್ಕೆಗಳು ಹಿಗ್ಗಲೇ ಇಲ್ಲ. ಅದೆಷ್ಟೇ ಹಾರಲು ಪ್ರಯತ್ನಿಸಿದರೂ ಚಿಟ್ಟೆ ನೆಲದ ಮೇಲೆ ದೊಪ್ಪನೇ ಬೀಳುವುದು ತಪ್ಪಲಿಲ್ಲ.

ವಿಪರ್ಯಾಸವೆಂಬಂತೆ ಆ ಚಿಟ್ಟೆ ಮುಂದೆ ಎಂದಿಗೂ ಹಾರಲು ಸಾಧ್ಯವಾಗಲಿಲ್ಲ. ಚಿಟ್ಟೆಗೆ ಸಹಾಯ ಮಾಡಲು ಹೊರಟ ಹುಡುಗನಿಗೆ ತನ್ನ ಗೂಡಿನ ರಂಧ್ರದ ಮೂಲಕ ಹೊರಬರವ ಕಷ್ಟದ ಪ್ರಕ್ರಿಯೆಯಲ್ಲೇ ಅದಕ್ಕೆ ಹಾರಲು ಬೇಕಾಗುವ ಅಮೂಲ್ಯ ಜೀವರಸ ದೇಹದಿಂದ ರೆಕ್ಕೆಗೆ ಹರಿಯುತ್ತದೆ ಎಂದು ತಿಳಿ ದಿರಲೇ ಇಲ್ಲ! ಆ ಜೀವರಸದ ವಿನ್ಹಾ ಚಿಟ್ಟೆಗಳಿಗೆ ಹಾರಲು ಸಾಧ್ಯವೇ ಇಲ್ಲ.

ಗೂಡಿನಿಂದ ಹೊರಬರಲು ಪಡುವ ಕಷ್ಟವೆ ಚಿಟ್ಟೆಗೆ ಹಾರಲು ಸಹಾಯ ಮಾಡುತ್ತದೆ ಎಂಬುದು ಎಂತಹ ಸೋಜಿಗದ ಸಂಗತಿ ನೋಡಿ. ಚಿಟ್ಟೆಯ ಮುಂದಿನ ಕನಸಿನ ದಿನಗಳಿಗೆ ಕಷ್ಟದ ಅವೊಂದು ಘಳಿಗೆ ಅನಿವಾರ್ಯ ಹಾಗು ಅಷ್ಟೇ ಅಮೂಲ್ಯ. ಮಾನವನ ಜೀವನವೂ ಇದಕ್ಕೆ ಹೊರತೆ? ಸುಖವೇ ಎಂದೆಂದಿಗೂ ಸಿಗಬೇಕೆಂದು ಬಯಸುವ ನಾವುಗಳಿಗೆ ಕಷ್ಟಗಳೂ ಸಹ ಅಷ್ಟೇ ಮಹತ್ವವನ್ನು ಪಡೆಯುತ್ತವೆ, ಕಷ್ಟ ದುಃಖಗಳಿಲ್ಲದ ಜೀವನವೂ ಅದೆಂತಹ ಜೀವನ ಎಂದನಿಸದಿರದು. ಚಿಟ್ಟೆಯ ಈ ಕತೆ ಆ ನಿಟ್ಟಿನಲ್ಲಿ ಯೋಚಿಸುವಂತೆ ನಮ್ಮನ್ನು ಪ್ರೇರೇಪಿಸಬೇಕು. ಅಲ್ಲದೆ ಮುಂದೆ ತನಗೆ ಹಾರಲಾಗದು, ತನ್ನ ಕನಸ್ಸಿನ ಮಕರಂದವನ್ನು ಹೀರಲಾಗದು ಎಂದು ಚಿಟ್ಟೆ ಕೊರಗಿತೆ, ಆತ್ಮಾರ್ಪಣೆ ಮಾಡಿಕೊಂಡಿತೇ? ಈ ಪ್ರೆಶ್ನೆಯ ಉತ್ತರವೂ ನಮ್ಮ ಜೀವನದ ಮತ್ತಷ್ಟು ಗೊಂದಲಗಳಿಗೆ ನೀತಿಪಾಠವಾಗಬಹುದು, ಅಲ್ಲವೇ?

Saturday, November 16, 2019

ಗುರಿಯೊಂದು ಸ್ಪಷ್ಟವಾದ ಮೇಲೆ ಕೈ ಮೂಳೆ ಮುರಿದರೇನು ಕನ್ನಡಕ ಒಡೆದರೇನು..!?

ಕಷ್ಟ-ದುಃಖಗಳೆಂಬುದು ಜೀವನದಲ್ಲಿ ಅದೆಷ್ಟು ಮಹತ್ವವಾದವು ಅಲ್ವೇ. ಮುಖ್ಯವಾಗಿ ಮಹತ್ತರವಾದ ಸಾಧನೆಯನ್ನು ಬೆನ್ನತ್ತಿರುವ ಅಥವಾ ಮುಂದೆ ಅಂತಹದೊಂದು ಸಾಧನೆಯನ್ನು ಮಾಡಲಿರುವ ಜೀವಗಳಿಗೆ ತಿಳಿದೋ ಅಥವಾ ತಿಳಿಯದೆಯೋ ಈ ಕಷ್ಟ ದುಃಖಗಳೆಂಬ ಸಹಾಯಕರು ಒದಗಿಸಿಕೊಡುವ ಎನರ್ಜಿ ಬಹುಶಃ ಮತ್ಯಾವುದೇ ಸಪ್ಲಿಮೆಂಟರಿಗಳಿಗೂ ಮಿಗಿಲಾದದ್ದು! ವಿಪರ್ಯಾಸವೆಂದರೆ ಈ ಕಹಿಸತ್ಯ ಬೆಳಕಿಗೆ ಬರುವುದು ಸಾಧನೆಯ ಗುರಿಯನ್ನು ಛಂಗನೆ ಹಾರಿ ತಲುಪಿದ ಮೇಲೆಯೇ. ಅಲ್ಲಿಯವರೆಗೂ ಹಿಂಸೆಯ ಕೂಪವೆನಿಸುವ ಆ ಕಷ್ಟ ದುಃಖಗಳು, ಗುರಿಯನ್ನು ತಲುಪಿದ ಒಮ್ಮೆಲೇ ಸಾಧನೆಯ ಮಹಾ ಮೆಟ್ಟಿಲುಗಳಾಗುತ್ತವೆ. ಬಹುಷಃ ಆ ಕಷ್ಟಗಳನ್ನು ದೈರ್ಯದಿಂದ ಎದುರಿಸದಿದ್ದರೆ, ಮುನ್ನುಗ್ಗಿ ನೆಡೆಯದಿದ್ದರೆ ಇಂದು ನಾನಿಷ್ಟರ ಮಟ್ಟಿಗೆ ಬೆಳೆಯುತ್ತಿರಲಿಲ್ಲವೇನೋ ಎಂದು ಅವೇ ಕಷ್ಟ-ದುಃಖಗಳನ್ನು ಉಪ್ಪರಿಗೆಯ ಮೇಲೆ ಕೂರಿಸಿ ಮೆರೆಸುವ ಹೇಳಿಕೆಗಳು ನಮಗೆ ಕಾಣಸಿಗುತ್ತವೆ. ಬಡತನ, ಹಸಿವು, ಪೋಷಕರ ಕಚ್ಚಾಟ, ಸಮಾಜದ ತುಳಿತ ಎಂಬೆಲ್ಲ ಮುಳ್ಳುಗಳು ಮಗುವೊಂದರ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತಿರುವಾಗ ಅರಳುವ ಕುಡಿಯಂತಹ ಮಕ್ಕಳ ಮನಸ್ಸನ್ನು ಸಂತೈಸಿ, ಗುರಿಯನ್ನು ಸ್ಪಷ್ಟಪಡಿಸಿ, ಇವೆಲ್ಲವನ್ನು ಮೆಟ್ಟಿ ನೆಡೆದರೆ ಮಾತ್ರವೇ ನಿನಗೆ ದೂರತೀರವನ್ನು ತಲುಪಲು ಸಾಧ್ಯ ಎಂದು ಹೇಳುವ ದಾರಿದೀಪಗಳು ಇಂದು ಎಷ್ಟಿವೆ?

ಇದು ಸಹ ಅಂತಹದ್ದೆ ಒಬ್ಬ ಸಾಧಕನ ಕತೆ. ಸಾಧನೆಗೂ ಮೊದಲಿನ ಕಷ್ಟ ದುಃಖಗಳ ಕಥೆ. ಒಲಿಂಪಿಕ್ಸ್ ನಲ್ಲಿ ನಮ್ಮ ಇಡೀ ದೇಶ ಇಲ್ಲಿಯವರೆಗೂ ಗೆದ್ದಿರುವ ಚಿನ್ನದ ಪದಕಗಳಿಗಿಂತಲೂ ಮೂರು ಪಟ್ಟು ಪದಕಗಳನ್ನು ಒಬ್ಬನೇ ಗೆದ್ದಿರುವ ಶೂರನ ಕಥೆ. ದುಃಖ, ನೋವು, ಮೂದಲಿಕೆ, ದುಶ್ಚಟಗಳೆಂಬ ಕಷ್ಟಗಳನ್ನು ತನ್ನ ವಿಸ್ತಾರವಾದ ಕೈಗಳಿಂದ ಹಿಂದಕ್ಕೆ ತಳ್ಳುತ್ತಾ, ಹೀಜುತ್ತಾ ಇತಿಹಾಸ ನಿರ್ಮಿಸಿದ ಮಹಾರಥಿಯ ಕಥೆ.

ಹೆಸರು ಮೈಕಲ್ ಫೆಲ್ಫ್ಸ್. ಗಾಡ್ ಫಾದರ್ ಗಳಿರದ ಜೀವನವಾದರೂ ಯಾವುದೇ ಗಾಡ್ ಗಿಂತಲೂ ಮಿಗಿಲಾದ ತಾಯಿ ಹಾಗು ತನ್ನ ಖುದ್ದು ಫಾದರ್ಗಿಂತಲೂ ಆಪ್ತನಾದ ಕೋಚ್ ನನ್ನು ಆತ ಗಳಿಸಿದ್ದ. ನೀರಿನೊಳಗೆ ಮುಖವನ್ನೇ ಮುಳುಗಿಸಲು ಹೆದರುತ್ತಿದ್ದ ಹುಡುಗನೊಬ್ಬನನ್ನು ಒಲಿಂಪಿಕ್ ಇತಿಹಾಸದ ದಂತಕತೆಯನ್ನಾಗಿ ಮಾಡಿದ ಶ್ರೇಯ ಆತನ ಏಕೈಕ ಕೋಚ್ (!) ಬಾಬ್ ಬೌಮನ್ಗೆ ಸೇರಿದರೆ ಆತನ ಗುರಿಯನ್ನು ಸ್ಪಷ್ಟಪಡಿಸಿ ಆತ್ಮಸ್ತಯ್ರ್ಯವನ್ನು ತುಂಬಿದ ಹೆಗ್ಗಳಿಕೆ ಗಂಡನಿಂದ ಬೇರ್ಪಟ್ಟು ಮೂರು ಮಕ್ಕಳನ್ನು ಕಷ್ಟಪಟ್ಟು ಸಾಕಿದ ಆ ಮಾತೆಗೆ ಸಲ್ಲಬೇಕು. ಚಿಕ್ಕವನಿದ್ದ ಮೈಕಲ್ಗೆ ಅರಿವಿರದ ಮತ್ತೊಂದು ಖಾಯಿಲೆ ಇದ್ದಿತು. ADHD. ಸರಳ ಭಾಷೆಯಲ್ಲಿ ಹೇಳುವುದಾದರೆ ನಿಂತರೆ ನಿಲ್ಲಲಾಗದ ಕೂತರೆ ಕೂರಲಾಗದ ಒಂದು ಬಗೆಯ ದ್ವಂದ್ವದ ಮನೋಸ್ಥಿತಿ. ಎಳೆಯ ಪ್ರಾಯದ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುವ ಒಂದು ಬಗೆಯ ಕಾಯಿಲೆ. ಅಂತಹ ಮಾನಸಿಕ ತೊಳಲಾಟದ ದ್ವಂದ್ವಕ್ಕೆ ಅಂಕುಶ ಆಡಿದ್ದೇ ಆತನ ಈಜುಗಾರಿಕೆ ಎಂದರೆ ಅದು ತಪ್ಪಾಗದು. ಫಿಲಿಪ್ಸ್ ಒಮ್ಮೆ ನೀರಿನಲ್ಲಿ ತಲೆಯನ್ನು ಮುಳುಗಿಸಿದರೆ ಮುಗಿಯಿತು, ಆತನ ಏಕಾಗ್ರತೆ ಒಮ್ಮೆಲೇ ಬಂಡೆಗಲ್ಲಿನಂತೆಯೇ ಸ್ಥಿರ ಹಾಗು ಗಟ್ಟಿಯಾಗಿಬಿಡುತ್ತದೆ. ಹೀಗೆ ಈಜುಗಾರಿಗೆ ಎಂಬುದು ಆತನಿಗೊಂದು ಹವ್ಯಾಸವಾಯಿತಷ್ಟೆ ಅಲ್ಲದೆ ತನ್ನ ಮಾನಸಿಕ ತೊಳಲಾಟವನ್ನು ಮರೆಮಾಡುವ ಸಾಧನವೂ ಆಯಿತು. ಅದೆಷ್ಟರ ಮಟ್ಟಿಗೆಂದರೆ ತನ್ನ ಹತ್ತನೇ ವಯಸ್ಸಿಗೆ ಆತ ತನ್ನ ಹೆಸರಿನ ಹತ್ತಾರು ರಾಷ್ಟ್ರಿಯ ಈಜು ಧಾಖಲೆಯನ್ನು ನಿರ್ಮಿಸಿದ್ದ! ಅಲ್ಲದೆ ತನ್ನ ಕೇವಲ ಹದಿನೈದನೇ ವಯಸ್ಸಿಗೆ ಅಮೇರಿಕವನ್ನು 2000 ನೇ ಇಸವಿಯ ಸಿಡ್ನಿ ಒಲಿಂಪಿಕ್ಸ್ ನಲ್ಲಿ ಪ್ರತಿನಿಧಿಸಿದ್ದ!

ಮುಂದೆ ನೆಡೆಯುವುದೆಲ್ಲ ಆತನ ಪ್ರತಿಶ್ರಮಕ್ಕೆ ದೊರೆತ ಪ್ರತಿಫಲ. ಬರೋಬ್ಬರಿ ಹದಿನಾರು ವರ್ಷಗಳ ಈತನ ವೃತ್ತಿಜೀವನದಲ್ಲಿ ಒಟ್ಟು 39 ವಿಶ್ವದಾಖಲೆಗಳು ಹಾಗು 23 ಗಿನ್ನಿಸ್ ದಾಖಲೆಗಳನ್ನು ನಿರ್ಮಿಸಿ ಒಲಿಂಪಿಕ್ಸ್ ನಲ್ಲಿ 'ದಿ ಮೋಸ್ಟ್ ಡೆಕೋರೇಟೆಡ್ ಅಥ್ಲೀಟ್' ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಾನೆ.

ಆದರೆ ಇಲ್ಲಿ ವಿಷಯ ಆತನ ಚಿನ್ನದ ಸಾಧನೆಗಳ ಬಗ್ಗೆಯಲ್ಲ. ಬದಲಾಗಿ ಆತ ಅವನ್ನು ಸಾಧಿಸಿದ ಹಾದಿಯ ಕುರಿತು. ಹಾದಿಯಲ್ಲಿ ಎದುರಾದ ಸಮಸ್ಯೆಗಳನ್ನು ಮೆಟ್ಟಿ ಮುನ್ನುಗ್ಗಿದ ಕುರಿತು. 2004ರ ಒಲಿಂಪಿಕ್ಸ್ ನಲ್ಲಿ ಆರು ಪದಕಗಳನ್ನು ಗೆದ್ದು ಹೆಸರು ಮಾಡಿದ್ದ ಫೆಲ್ಪ್ಸ್ ಅದೊಂದು ದಿನ ಮುಂದಿನ ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಈಜಿನ ಎಲ್ಲಾ ಪ್ರಕಾರದ ಚಿನ್ನದ ಪದಕಗಳನ್ನು ಗೆದ್ದು ದಶಕಗಳ ಹಳೆಯ ಅಮೇರಿಕಾದ ದಂತಕತೆ ಮಾರ್ಕ್ ಸ್ಪಿಟ್ಸ್ ನ ದಾಖಲೆಯನ್ನು ಮುರಿಯುವುದಾಗಿ ಹೇಳಿಕೆ ನೀಡಿದ. ಈತ ಹೀಗೆ ಹೇಳಿಕೆ ನೀಡಿದ ಕೂಡಲೇ ಅಮೇರಿಕದಾದ್ಯಂತ ಚರ್ಚೆಗಳು ಶುರುವಾದವು. ಎಲ್ಲಿಯ ಸ್ಪಿಟ್ಸ್ ಅದೆಲ್ಲಿಯ ಫೆಲ್ಪ್ಸ್? ಎಲ್ಲೆಂದರಲ್ಲಿ ಜನ ಈತನನ್ನು ಮೂದಲಿಸತೊಡಗಿದರು. ಎಳೆಯ ವಯಸ್ಸಿನ ಬಾಲಸಹಜ ಹೇಳಿಕೆಗಳು ಎಂದು ಹಂಗಿಸತೊಡಗಿದರು. ಒಲಿಂಪಿಕ್ಸ್ ನಲ್ಲಿ ಇರುವ ಎಂಟೇ ಪ್ರಕಾರಗಳ ಈಜಿನಲ್ಲಿ ಅಷ್ಟೂ ಪಂದ್ಯಗಳಲ್ಲಿ ಚಿನ್ನದ ಪದಕಗಳನ್ನು ಗೆಲ್ಲುವುದು ಸಾಧ್ಯವೇ ಇಲ್ಲವೆಂದು ಹಲವರು ಖಡಾಖಂಡಿತವಾಗಿ ಹೇಳಿದರು. ನೂರಾರು ಜನ ಸೆಣೆಸಿ ಕನಿಷ್ಠ ಒಂದು ಪದಕವನ್ನು ಗೆಲ್ಲಲು ಹರಸಾಹಸ ಮಾಡುತ್ತಿರುವಾಗ ಇಪ್ಪತ್ತರ ಹರೆಯದ ಹುಡುಗನೊಬ್ಬ ಒಮ್ಮೆಗೆ ಎಂಟು ಚಿನ್ನದ ಪದಕಗಳನ್ನು ಗೆಲ್ಲುತ್ತೇನೆಂದರೆ ನಮಗೇ ಹಾಸ್ಯಾಸ್ಪದವೆನಿಸದಿರದು. ಇತ್ತ ಕಡೆ ಇಲ್ಲ ಸಲ್ಲದ ಹೇಳಿಕೆಗಳು ಬರುತ್ತಿದ್ದರೆ ಅತ್ತ ಕಡೆ ಫೆಲ್ಪ್ಸ್ ತನ್ನ ಕಠಿಣ ತಯಾರಿಯಲ್ಲಿ ಕಾರ್ಯೋನ್ಮುಖನಾಗಿದ್ದ. ಮೈಗೆರಗುವ ಕಲ್ಲುಗಳನ್ನೇ ಸಾಧನೆಯ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಗುರಿಯೆಡೆಗೆ ಮುನ್ನುಗ್ಗುತ್ತಿದ್ದ. ಸ್ಪಿಟ್ಸ್ ದಿನಕ್ಕೆ ಎಂಟು ಘಂಟೆ ಅಭ್ಯಾಸ ನೆಡೆಸುತ್ತಿದ್ದರೆ ಈತ ಹನ್ನೆರಡು ಘಂಟೆ ಈಜತೊಡಗಿದ!

ಆದರೆ ವಿಧಿಯಾಟ ಬೇರೆಯದೇ ಆಗಿದ್ದಿತು. ಬೀಜಿಂಗ್ ಒಲಿಂಪಿಕ್ಸ್ ಇನ್ನೊಂದು ವರ್ಷವಿರುವಾಗ ಅಪಘಾತವೊಂದರಲ್ಲಿ ಈತನ ಬಲಗೈಯ ಮೂಳೆ ಮುರಿದುಹೋಯಿತು! ಆತನ ಡಾಕ್ಟರ್ ನಿನಗೆ ಮುಂದಿನ ಕೆಲವರ್ಷಗಳವರೆಗೂ ಈ ಕೈಯನ್ನು ಈಜಲು ಉಪಯೋಗಿಸಲಾಗದು ಎಂದು ಹೇಳಿದರು! 2008 ರ ಒಲಿಂಪಿಕ್ಸ್ ಮುಂದಿಂದೆ, ಚಿನ್ನದ ಪದಕಗಳನ್ನು ಗೆಲ್ಲುವ ತನ್ನ ಜೀವಮಾನದ ಹೇಳಿಕೆಯೊಂದ ನ್ನೂ ಕೊಟ್ಟಾಗಿದೆ. ಈಗ ನಿಲ್ಲುವ ಮಾತೆಲ್ಲಿ. ಒಂದಿಷ್ಟು ಹೆಚ್ಚುಕಡಿಮೆಯಾದರೆ ತನ್ನ ಜೀವನದ ಈಜುಗಾರಿಕೆಗೆ ಮಹಾಕುತ್ತು. ಸಂಬಂಧಿಗಳು,ಹಿತೈಷಿಗಳು ಬುದ್ಧಿವಾದವನ್ನು ಹೇಳಿದರು. ನಿನ್ನ ಕೈ ಚೆನ್ನಾಗಿದ್ದರೆ ಮುಂದಿನ ಬಾರಿಯ ಒಲಿಂಪಿಕ್ಸ್ನಲ್ಲಿ ಈಜಬಹುದಪ್ಪಾ ಸುಮ್ಮನೆ ಡಾಕ್ಟರ್ ಹೇಳುವ ಮಾತನ್ನು ಕೇಳು ಎಂದರು. ಆದರೆ ಇಟ್ಟ ಹೆಜ್ಜೆಯನ್ನು ಹಿಂದಿಡುವ ಜಾಯಮಾನ ಈತನದಲ್ಲ. ಕೈ ಸರಿಯಿರದಿದ್ದರೇನು ತನ್ನ ಕಾಲಿನಲ್ಲಿ ಈಜುವುದನ್ನು ಶುರುಮಾಡಿದ! ತನ್ನೆಲ್ಲ ಶಕ್ತಿಯನ್ನು ಕಾಲಿನ ಸ್ನಾಯುಗಳ ಮೇಲಿರಿಸಿ ಮುನ್ನುಗ್ಗತೊಡಗಿದ. ಈತನ ಪರಿಶ್ರಮ ಅದೆಷ್ಟರ ಮಟ್ಟಿಗೆತ್ತೆಂದರೆ ಮುಂದಿನ ವರ್ಷ ತನ್ನ ಮುರಿದ ಕೈ ಈಜಿಗೆ ಅಣಿಯಾದದ್ದು ಓಡುವ ಗಾಡಿಗೆ ಎಕ್ಟ್ರಾ ಎಂಜಿನ್ಗಳು ದೊರೆತಂದಾದವು. ಆದರೂ ಹಲವರಿಗೆ ಈತ ಎಂಟು ಪದಕಗಳನ್ನು ಗೆಲ್ಲುವುದು ಹಾಗಿರಲಿ ಕನಿಷ್ಠ ಒಂದನ್ನು ಗೆಲ್ಲುವುದನ್ನೂ ಸಂಶಯಪಡುತ್ತಿದ್ದರು. ಫೆಲ್ಪ್ಸ್ ದೃತಿಗೆಡಲಿಲ್ಲ. ಚೀನಾದ ಆ ಜಗತ್ಪ್ರಸಿದ್ದ ಒಲಿಂಪಿಕ್ಸ್ನಲ್ಲಿ ಒಂದರಿಂದೊಂದು ಚಿನ್ನದ ಪದಕಗಳನ್ನು ಗೆಲ್ಲುತ ತನ್ನೆಡೆಗೆ ಕುಹಕವಾಡಿದ ಅಷ್ಟೂ ಜನರ ಬಾಯನ್ನು ಮುಚ್ಚತೊಡಗಿದ. ಮೊದಲ ಏಳು ಪ್ರಕಾರದ ಈಜಿನಲ್ಲಿ ಏಳು ಚಿನ್ನದ ಪದಕವನ್ನು ಗಳಿಸಿಯೇ ಬಿಟ್ಟ!!


ಅಂದು ಆತ ತನ್ನ ಎಂಟನೇ ಹಾಗು ಕೊನೆಯ ಈಜಿಗೆ ಅಣಿಯಾಗುತ್ತಿದ್ದಾನೆ. ಕಳೆದ ಏಳೂ ಈಜಿನ ಪ್ರಕಾರಗಳಲ್ಲಿ ಅದಾಗಲೇ ಚಿನ್ನವನ್ನು ಗೆದ್ದು ಶತಮಾನದ ಇತಿಹಾಸವನ್ನು ಅದಾಗಲೇ ಸೃಷ್ಟಿಸಿದ್ದಾನೆ. ಇದು ಆತನ ಹೇಳಿಕೆಯ ಎಂಟನೇ ಚಿನ್ನದ ಪದಕದ ಈಜು. 200 ಮೀಟರ್ಗಳ ಬಟರ್ ಫ್ಲೈ. ತನ್ನ ಎರಡೂ ಕೈಗಳನ್ನು ಮೇಲಕೆತ್ತಿ ಎದೆಯ ಮುಖಾಂತರ ಚಿಟ್ಟೆಯಂತೆಯೇ ಈಜುವ ಬಗೆ. ಫೆಲ್ಪ್ಸ್ ನೀರಿಗೆ ಜಿಗಿದ. ಶರವೇಗದಲ್ಲಿ ಇತರ ಈಜುಗಾರರನ್ನು ಹಿಂದಿಕ್ಕತೊಡಗಿದ. ಆದರೆ ಆತನ ಚಿನ್ನದ ಕನಸಿಗೆ ಕೊನೆಗಾಲದ ವಿಘ್ನವೊಂದು ಎದುರಾಯಿತು. ಕಣ್ಣನು ನೀರಿನಲ್ಲಿ ಗಟ್ಟಿಯಾಗಿ ಮುಚ್ಚಿದ್ದ ಆತನ ಕನ್ನಡಕ ಸಣ್ಣದಾಗಿ ಸೀಳುಬಿಟ್ಟಿತು. ಪರಿಣಾಮ ನೀರು ಒಮ್ಮೆಲೇ ಕಣ್ಣೊಳಗೆ ರಭಸವಾಗಿ ನುಸುಳತೊಡಗಿತು. ಕಣ್ಣು ಹುರಿಯಹತ್ತಿತು. ಆದರೆ ಈಜುತ್ತಿದ್ದವನ ಹೆಸರು ಮೈಕಲ್ ಫೆಲ್ಪ್ಸ್. ಮುರಿದ ಕೈಯಲ್ಲೇ ಈಜಿ ಚಿನ್ನವನ್ನು ಗೆದ್ದವನಿಗೆ ಕಣ್ಣಿಗೆ ಉರಿಕೊಡುವ ನೀರು ಅದ್ಯಾವ ಲೆಕ್ಕ. ಆತನಿಗೆ ತನ್ನ ಇನ್ನೂರು ಮೀಟರ್ ರೇಸಿನಲ್ಲಿ ಅದೆಷ್ಟು ಬಾರಿ ಕೈಗಳನ್ನು ಬಡಿಯಬೇಕೆಂಬ ಕರಾರುವಕ್ಕಾದ ಲೆಕ್ಕವಿದ್ದಿತು. ಅಂತೆಯೇ ಎಣಿಸುತ್ತಲೇ ಮುನ್ನುಗ್ಗಿದ. ನೋಡನೋಡುತ್ತಲೇ ಈಜಿನ ಕೊನೆಯನ್ನು ತಲುಪಿದ. ಸಿಳ್ಳೆ ಕೇಕೆಗಳ ಮದ್ಯೆ ಎತ್ತರದಲ್ಲಿ ಝಗಝಗಿಸುತ್ತಿದ್ದ ಸ್ಕೋರ್ ಬೋರ್ಡನ್ನು ನೋಡುತ್ತಾನೆ, ತನ್ನ ಹೆಸರಿನ ಮುಂದೆ WR ಎಂಬ ಅಕ್ಷರಗಳು ಮೂಡಿ ಮಿನುಗತ್ತಿವೆ. ಅರ್ತಾಥ್ ಆತನ ಆ ಈಜು ವರ್ಲ್ಡ್ ರೆಕಾರ್ಡ್ ವೇಗದಲ್ಲಿ ಮುಗಿಸಲಾಗಿದೆ ಎಂದು! ಆತನ ಒದ್ದೆಯಾದ ಕಣ್ಣುಗಳು ಪುನಃ ಒದ್ದೆಯಾದವು. ಅಲ್ಲದೆ ತಾನು ಗೆದ್ದ ಎಂಟು ಚಿನ್ನದ ಪದಕಗಳಲ್ಲ್ಲಿ ಏಳು ವರ್ಲ್ಡ್ ರೆಕಾರ್ಡ್ಗಳನ್ನು ಆತ ಅಲ್ಲಿ ನಿರ್ಮಿಸಿದ್ದ!

ಇದು 21ನೆಯ ಶತಮಾನ ಕಂಡ ಸಾಧಕನೊಬ್ಬನ ಕತೆ. ಜೀವನದಲ್ಲಿ ಬಂದ ಕಷ್ಟಗಳನ್ನು ಬಿಗಿದಪ್ಪಿಕೊಂಡೇ ಮುನ್ನೆಡೆದ ಅಮೇರಿಕಾದ ಸಾಹಸಿಯೊಬ್ಬನ ಕತೆ. ಗುರಿಯೊಂದು ಸ್ಪಷ್ಟವಾದರೆ ಏನೆಲ್ಲವನ್ನು ಸಾಧಿಸಬಹುದೆಂದು ಫಿಲ್ಪ್ಸ್ ಜಗತ್ತಿಗೆ ತೋರಿಸಿಕೊಟ್ಟ. ತನ್ನನ್ನು ಅಣಕಿಸಿದ, ನೋಯಿಸಿದ ಸಮಾಜವನ್ನೇ ಎನರ್ಜಿ ಸಪ್ಲಿಮೆಂಟಿನಂತೆ ಬಳಸಿಕೊಂಡು ಮುನ್ನೆಡೆದ. 2012 ರ ಲಂಡನ್ ಒಲಿಂಪಿಕ್ಸ್ ನಲ್ಲಿ ಪುನಃ ಆರು ಪದಗಳನ್ನು ಗೆದ್ದು ಭಾಗಶಃ ನಿವೃತ್ತಿ ಹೊಂದಿದ್ದ ಫಿಲ್ಪ್ಸ್ ವಯೋಸಹಜ ಚಟುವಟಿಕೆಗಳಂತೆ ಕುಡಿತ, ಡ್ರಗ್ಸ್ ಎನ್ನುತ್ತಾ ಸುದ್ದಿಯಾಗತೊಡಗಿದ. ಇದೇ ಕಾರಣಕ್ಕೆ ಜೈಲುವಾಸವನ್ನೂ ಅನುಭಸಿಸತೊಡಗಿದ. ಇಡೀ ವಿಶ್ವವೇ ಗುರುತಿಸುವ ಹೆಗ್ಗಳಿಕೆಯ ಕ್ರೀಡಾಪಟುವೊಬ್ಬ ಒಮ್ಮೆಲೇ ಜೈಲುಕೋಣೆಯನ್ನು ಸೇರುವುದು ತಮಾಷೆಯ ವಿಷಯವಲ್ಲ. ಇದು ಫಿಲ್ಪ್ಸ್ ನನ್ನು ನಡುಗಿಸಿಹಾಕಿತು. ನಿವೃತ್ತಿ ಹೊಂದಿದ್ದ ಆತ ಕೂಡಲೇ ಮತ್ತೊಂದು ಪಣತೊಟ್ಟ. ಐದನೇ ಬಾರಿಗೆ 2016 ರ ರಿಯೋ ಒಲಿಂಪಿಕ್ಸ್ ನಲ್ಲಿ ಈಜಿ ಗೆಲ್ಲುವುದಾಗಿ ಘೋಷಿಸಿದ. ತನ್ನೆಲ್ಲ ಚಟಗಳನ್ನು ತುಳಿದು ಮಗದೊಮ್ಮೆ ನೀರಿಗೆ ನೆಗೆದ. ಗುರಿ ಸ್ಪಷ್ಟವಾದ ಮೇಲೆ ಮುಂದೇನು. ರಿಯೋ ವಿನಲ್ಲಿ ಆತ ಬಾಚಿದ್ದು ಒಟ್ಟು ಆರು ಮೆಡಲ್ಗಳು. ಅದರಲ್ಲಿ ಚಿನ್ನದ ಮೆಡಲ್ಗಳ ಸಂಖ್ಯೆ ಬರೋಬ್ಬರಿ ಐದು!

Sunday, October 13, 2019

ಡಿಸ್ಲಿಕ್ಸಿಯಾ ಸಮಸ್ಯೆಯಿಂದ ಬಳಲುತ್ತಲೇ ಜುರಾಸಿಕ್ ಪಾರ್ಕ್ನ ಡೈನೋಸರ್ಗಳನ್ನು ಸೃಷ್ಟಿಸಿದನೀತ!


ವಿಶ್ವದ ಆಲ್ ಟೈಮ್ ಗ್ರೇಟೆಸ್ಟ್ ಮೂವಿ ಡೈರೆಕ್ಟರ್ ಗಳ್ಯಾರು ಎಂದು ಹುಡುಕುತ್ತಾ ಹೊರಟರೆ ಈತನ ಹೆಸರು ಮೊದಲ ಐದರೊಳಗೆ ಬರಲೇಬೇಕಿದೆ. ಸೈನ್ಸ್ ಫಿಕ್ಷನ್ನಿಂದಿಡಿದು ಇತಿಹಾಸದ ದಂಥಕತೆಗಳನ್ನೊಳಗೊಂಡ ಚಿತ್ರಗಳನ್ನು ನಿರ್ದೇಶಿಸಿರುವ ಈತನ ಭಾಗಶಃ ಅಷ್ಟೂ ಚಿತ್ರಗಳು ಬಾಕ್ಸ್ ಆಫೀಸ್ನನ್ನು ಕೊಳ್ಳೆಹೊಡೆದಿರುವುದಷ್ಟೇ ಅಲ್ಲದೆ ಚಿತ್ರನಿರ್ಮಾಣದಲ್ಲಿ ತೊಡಗಿರುವವರಿಗೆ ಮೈಲ್ ಸ್ಟೋನ್ಗಳಾಗಿ ನಿಂತಿವೆ. ಅನಿಮೇಷನ್ ಅಥವಾ ಮತ್ಯಾವುದೇ ಪ್ರಸ್ತುತ ಟೆಕ್ನಾಲಜಿಗಳು ಪ್ರಭುದ್ದಗೊಂಡಿರದ ಕಾಲದಲ್ಲೇ Jaws, Indiana Jones, Jurassic Park ಗಳಂತಹ ಅಸಾಮಾನ್ಯ ಚಿತ್ರಗಳನ್ನು ನೀಡಿದ ಈತ ಪ್ರಸ್ತುತ 25,000 ಕೋಟಿಗೂ ಹೆಚ್ಚಿನ ಆಸ್ತಿಯ ಶ್ರೀಮಂತ ನಿರ್ದೇಶಕ. ಹಾಗಂದ ಮಾತ್ರಕ್ಕೆ ಈತ ಚಿನ್ನದ ಕೋಳಿಯನ್ನು ತನ್ನ ಜೊತೆಯಲ್ಲಿಯೇ ಅವುಚಿಕೊಂಡು ಬೆಳೆದವನಲ್ಲ. ಈತನ ಪ್ರಸ್ತುತ Success ಸ್ಟೋರಿಗಳು ಸ್ಪೂರ್ತಿದಾಯಕವಾಗಲು ಈತ ಬೆಳೆದು ಬಂದ ಹಾದಿಯನ್ನೊಮ್ಮೆ ನೋಡಬೇಕು. ಗುರಿಯೊಂದು ಸ್ಪಷ್ಟವಾಗಿದ್ದರೆ, ಗೆಲ್ಲಬೇಕೆಂಬ ಹಠವೊಂದಿದ್ದರೆ ಕಷ್ಟನಷ್ಟಗಳೆಲ್ಲ ತೃಣಮಾತ್ರಕ್ಕೆ ಸಮ ಎಂಬುದನ್ನಿಲ್ಲಿ ಕಾಣಬಹುದು.


ಹುಟ್ಟುವಾಗಲೇ ಡಿಸ್ಲೆಕ್ಸಿಯಾ ಸಮಸ್ಯೆಯಿಂದ ಬಳಲುತ್ತಿದ್ದ ಈತ ಶಾಲಾ ದಿನಗಳಲ್ಲಿ ಇತ್ತ ಕಡೆ ಓದಲೂ ಆಗದೆ ಆತ್ತ ಕಡೆ ಗೆಳೆಯರೊಟ್ಟಿಗೆ ಬೆರೆತು ಆಡಲೂ ಆಗದೆ ನರಳುತ್ತಿದ್ದ. ಈತನ ವಿಚಿತ್ರ ವರ್ತನೆಯನ್ನು ಕಂಡು ಈತನ ಗೆಳೆಯರು ಗೇಲಿ ಮಾಡುತ್ತಿದರಷ್ಟೇ ಅಲ್ಲದೆ ಕೆಲವೊಮ್ಮೆ ಬೈದು ಅವಮಾನಿಸಿ ತಳಿಸುತ್ತಿದ್ದರು. ಆ ಬೈಗುಳ ಹಾಗು ಅವಮಾನಗಳು ಈಗಲೂ ಕಾಡುತ್ತವೆಂದು ಆತ ಕೆಲವೊಮ್ಮೆ ಹೇಳಿಕೊಂಡಿದ್ದಾನೆ! ತನ್ನ ಮುಗ್ದ ಕಣ್ಣುಗಳನ್ನು ಬಿಟ್ಟು ಪ್ರಪಂಚವನ್ನು ಸರಿಯಾಗಿ ಅರಿಯುವ ಮೊದಲೇ ಗೇಲಿ, ಅವಮಾನಗಳಿಂದ ಬೆಳೆಯುತ್ತಿದ್ದ ಈತನಿಗೆ ತನ್ನದೇ ಅದೊಂದು ಆಸೆಯಿದ್ದಿತು. ಆ ಅಸೆ ಸಮಾಜದ ಮೂದಲಿಕೆಯಿಂದ ತನ್ನಿಂತಾನೇ ಮನದೊಳಗೆ ಹುಟ್ಟಿದ್ದೋ ಅಥವಾ ವಯೋಸಹಜವಾಗಿ ಬೆಳೆದದ್ದೋ ತಿಳಿಯದು ಆದರೆ ಆರೇಳು ವರ್ಷದ ಆ ಪೋರನಿಗೆ ಚಿತ್ರ ನಿರ್ಮಿಸುವ ಮಹದಾಸೆ ಮನದೊಳಗೆ ಮೂಡಿತು. ತನ್ನ ಅಪ್ಪನ ಬಳಿಯಿದ್ದ ಸಣ್ಣದೊಂದು ಕ್ಯಾಮೆರಾವನ್ನು ಹಿಡಿದು ತನಗನಿಸಿದ ಹಾಗೆ ಚಿತ್ರೀಕರಿಸುತ್ತಾ ನಡೆದ. ಇದೆ ಹವ್ಯಾಸ ಆತನ ಆಪ್ತ ಗೆಳೆಯನಾಯಿತು.



ಕಾಲ ಓಡತೊಡಗಿತು. ಓದಿನಲ್ಲಿ ತೀರಾನೇ ಹಿಂದಿದ್ದರೂ ತನ್ನ ಹದಿನೆಂಟನೇ ವಯಸ್ಸಿಗೇ ಹಲವಾರು ಸಣ್ಣ ಚಿತ್ರಗಳನ್ನು 'ಸೃಷ್ಟಿಸಿ' ಚಿತ್ರಿಸುವುದನ್ನು ಆತ ಕಲಿತಿದ್ದ. ಮುಂದಿನ ಆತನ ಗುರಿ ಯೂನಿವರ್ಸಿಟಿ ಆಫ್ ಸೌತ್ ಕ್ಯಾಲಿಫೋರ್ನಿಯಾ. ಚಿತ್ರ ನಿರ್ಮಾಣದಲ್ಲಿ ಡಿಗ್ರಿಯೊಂದನ್ನು ಮಾಡಬೇಕೆಂಬ ಆತನ ಮಹದಾಸೆಗೆ ಯೂನಿವರ್ಸಿಟಿ ತಣ್ಣೀರೆರಚಿತು. ಕಾರಣಾತರಗಳಿಂದ ಈತನ ಅಪ್ಲಿಕೇಶನ್ ತಿರಸ್ಕರಿಸಲ್ಪಟ್ಟಿತ್ತು. ಅಷ್ಟೆಲ್ಲ ಕಷ್ಟಗಳ ಒರತಾಗಿಯೂ ಮುನ್ನೆಡೆದು ತನ್ನ ಜೀವನದ ಏಕೈಕ ಗುರಿಯನ್ನು ತಲುಪಲು ಆಗಲಿಲ್ಲವೆಂದು ಆತ ಖಂಡಿತವಾಗಿಯೂ ಕುಗ್ಗಿದ. ಆದರೆ ಬಗ್ಗಲಿಲ್ಲ! ಛಲವನ್ನು ಬಡಿದೆಬ್ಬಿಸಿದ. ಮುನ್ನೆಡೆದ. ಪ್ರತಿದಿನ ತನ್ನ ನಗರದಲ್ಲಿದ್ದ ಅಷ್ಟೂ ಚಿತ್ರಮಂದಿರಗಳಿಗೆ ಭೇಟಿಯಿಟ್ಟು ಎಲ್ಲ ಬಗೆಯ ಚಿತ್ರಗಳನ್ನು ಸೂಕ್ಷ್ಮವಾಗಿ ನೋಡತೊಡಗಿದ. ಚಿತ್ರನಿರ್ದೇಶನದ ಸೂಕ್ಷಮಾತಿಸೂಕ್ಷ್ಮ ಅಂಶಗಳನ್ನು ಗಮನಿಸತೊಡಗಿದ. ತನ್ನ ಪ್ರಯತ್ನವನ್ನು ಮುಂದುವರೆಸುತ್ತಲೇ ಇದ್ದ ಈತನಿಗೆ ಸಂಬಳವಿಲ್ಲದ ಇಂಟರ್ನ್ಶಿಪ್ ಮಾಡುವ ಅವಕಾಶವೊಂದು ಕೊನೆಗೂ ಬಂದೊದಗುತ್ತದೆ. ಆ ಸಂಸ್ಥೆಯ ಹೆಸರೇ ಜಗತ್ಪ್ರಸಿದ್ದ ಯೂನಿವರ್ಸಲ್ ಸ್ಟುಡಿಯೋ. ಹಾರುಬಯಸುವ ಹಕ್ಕಿಗೆ ಈಗ ಪಂಜರದ ಬಾಗಿಲನ್ನು ತೆರೆದುಕೊಟ್ಟಂತಾಯಿತು. ಅಲ್ಲಿಂದ ಮುಂದೆ ತನ್ನ ನಡೆಯಲ್ಲಿ ಈತ ನಿಂತ ಉದಾಹರಣೆಗಳೇ ಇಲ್ಲ. ಕಾಡಿದ ಹಾಗು ಕಾಡುತ್ತಿರುವ ಡಿಸ್ಲೆಕ್ಸಿಯಾ ಹಾಗು ಖಿನ್ನತೆಯೂ ಕೂಡ ಈತನನ್ನು ತಡೆಯಲಾಗಲಿಲ್ಲ! ಅಲ್ಲಿ ತಾನು ನಿರ್ದೇಶಿಸಿದ ಮೊದಲ ಚಿತ್ರದಲ್ಲೇ ಕಂಪನಿಯ ವೈಸ್ ಪ್ರೆಸಿಡೆಂಟ್ನ ಕಣ್ಣಿಗೆ ಬಿದ್ದ ಈತ ಮುಂದೆ ಒಂದೊಂದಾಗಿಯೇ ಇತಿಹಾಸವನ್ನು ಸೃಷ್ಟಿಸುತ್ತಾ ಸಾಗಿದ.



ಅದೊಂದು ದಿನ ಈತನ ಸಾಧನೆಯನ್ನು ಗಮನಿಸಿ ಯೂನಿವರ್ಸಿಟಿಯೊಂದು ಗೌರವ ಡಾಕ್ಟರೇಟ್ ಕೊಡಲು ಆಹ್ವಾನಿಸುತ್ತದೆ. ಆದರೆ ಈತ ಆ ಯೂನಿವರ್ಸಿಟಿಗೆ ಹೋಗಿ ಡಾಕ್ಟರೇಟನ್ನು ಸ್ವೀಕರಿಸುವ ಮೊದಲು ಇಟ್ಟ ಏಕೈಕ ಬೇಡಿಕೆಯೆಂದರೆ ಹಲವು ವರ್ಷಗಳ ಹಿಂದೆ ತನ್ನನ್ನು ರಿಜೆಕ್ಟ್ ಮಾಡಿ ಮನೆಗೆ ಕಳುಹಿಸಿದ ಅದೇ ಪ್ರೊಫೆಸರ್ನಿಂದ ಸರ್ಟಿಫಿಕೇಟ್ನ ಮೇಲೆ ಸಹಿ ಹಾಕಬೇಕೆಂದು! Yes. ಅಂದು ಡಾಕ್ಟರೇಟ್ ಕೊಡಲು ಆಹ್ವಾನಿಸಿದ ಆ ಯೂನಿವರ್ಸಿಟಿ ಯಾವುದಂತಿರ? ಅದು ಅದೊಂದು ದಿನ ಈತನ ಅಪ್ಲಿಕೇಶನನ್ನು ನಿರಾಕರಿಸಿ ಸೀಟು ಕೊಡದೆ ವಾಪಸ್ಸು ಕಳಿಸಿದ್ದ ಯೂನಿವರ್ಸಿಟಿ ಆಫ್ ಸೌತ್ ಕ್ಯಾಲಿಫೋರ್ನಿಯಾ!


ಸಕ್ಸಸ್ ಎಂದರೆ ಹೀಗಿರಬೇಕಲ್ಲವೇ?


ಕಾಲ ಎಂದಿಗೂ ನಿಂತ ನೀರಲ್ಲ. ಕೆಲವೊಮ್ಮೆ ನಾವು ಈಜದಿದ್ದರೂ ಆ ಸೆಳೆತ ನಮ್ಮನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಹೊತ್ತೊಯ್ಯುತ್ತದೆ. ಅಲ್ಲಿ ಗುರಿಯಿರುವುದಿಲ್ಲ. ಅಲ್ಲಿ ಯಾವ ಸಮಯಕ್ಕೆ ಯಾವ ಬಂಡೆಗೆ ಗುದ್ದಿ ಅದೇನು ಅನಾಹುತ ಸಂಭವಿಸುವುದೋ ತಿಳಿಯದು. ಆದರೆ ಗುರಿ ಸ್ಪಷ್ಟವಿರುವ ಕೆಲವರು ಅದೆಂತಹ ಸೆಳೆತದ ವಿರುದ್ಧವಾದರೂ ಸರಿಯೇ ಕಷ್ಟಪಟ್ಟು ಈಜುತ್ತಾ ತಮ್ಮ ಗುರಿಯನ್ನು ಸೇರುತ್ತಾರೆ. ಇಚ್ಛಾಶಕ್ತಿಯೆಂಬ ಮೂಲ ಮಂತ್ರವನ್ನು ಜಪಿಸುತ್ತ ಹೀಗೆ ಧಿಟ್ಟ ಹೆಜ್ಜೆಯನ್ನು ಹಿಡುತ್ತಾರೆ. ಅಂದಹಾಗೆ ಇಷ್ಟೆಲ್ಲಾ ಸಾದನೆಗಳನ್ನು ಮಾಡಿದ ಅಮೇರಿಕಾದ ಆ ಸುಪ್ರಸಿದ್ದ ಡೈರೆಕ್ಟರ್ನ ಹೆಸರೇ ಲೆಜೆಂಡರಿ ಸ್ಟೀವನ್ ಸ್ಪಿಲ್ಬರ್ಗ್.

Wednesday, August 7, 2019

ಸ್ವರ್ಗವನ್ನಾವರಿಸುವುದಿನ್ನು ಮಲೆನಾಡ ಕಾಫಿಯ ಕಂಪು... Bon Voyage you Sir!!

ಜುಲೈ 30, 2019. ಆ ದಿನದ ಬೆಳಗಿನ ಸೂರ್ಯ ಯಾರಿಗೆ ಏನನ್ನು ಹೊತ್ತು ತಂದನೋ ಗೊತ್ತಿರಲಿಲ್ಲ ಆದರೆ ದಕ್ಷಿಣ ಭಾರತದ ಲಕ್ಷಾಂತರ ಮಲೆನಾಡಿಗರಿಗಂತೂ ದುಃಖದ ಮಹಾ ಮಡುವನ್ನೇ ತಂದೆಸೆದಿದ್ದ. ಮೋಡಗಳ ಮದ್ಯೆ ಆಗಾಗ ಮರೆಯಾಗಿ ಆಟವಾಡುತ್ತಿದ್ದ ಆತ ಮಲೆನಾಡ ಕಣ್ಮಿಣಿಯಂತಿದ್ದ ನಾಯಕನೊಬ್ಬನ ಕಣ್ಮರೆಯನ್ನು ಸೂಚಿಸುತ್ತಿದ್ದ. ಅಂದು ಇಡೀ ಊರಿಗೆ ಊರೇ ಒಂದು ಮಹಾ ಮೌನದಲ್ಲಿ ಮುಳುಗಿಹೋಗಿತ್ತು. ‘ಜೀವನ ಇಷ್ಟೇಯೇ?’ ಎಂದೆನಿಸಿ ಬೇಸರಗೊಂಡು ಮುಚ್ಚಿದ ಅಂಗಡಿ ಮುಂಗಟ್ಟುಗಳು ಒಂದೆಡೆಯಾದರೆ, ಇತ್ತಕಡೆ ಅನಿವಾರ್ಯ ಕಾರಣಗಳಿಂದ ತೆರೆದ ಮಳಿಗೆಗಳೂ ಬಿಕೋ ಎನ್ನುತ್ತಿದ್ದವು. ಹಾಲು ಮಾರುವವರ, ಪೇಪರ್ ಹಾಕುವನವರ ಅಥವಾ ತರಕಾರಿ ಗಾಡಿಯ ವ್ಯಕ್ತಿಗಳಿಂದಿಡಿದು ಸಾವಿರಾರು ಎಕರೆ ಕಾಫಿ ತೊಡದ ಒಡೆಯರ ಮುಖಗಳ ಮೇಲೂ ನೋವಿನ ಛಾಯೆಯೊಂದು ಅಂದು ಮನೆಮಾಡಿತ್ತು. ಜಾತಿ, ಪಂಥ, ಬಡವ, ಬಲ್ಲಿದ, ಹಿರಿಯರು, ಕಿರಿಯರೊಟ್ಟಿಗೆ ಆ ನಾಯಕ ಬೆಳೆಸಿದ್ದ ಕೋಟ್ಯಂತರ ಕಾಫಿ ಗಿಡಗಳೂ ಸಹ ಅಂದು ದುಃಖಗೊಂಡಿದ್ದವು. In a broad sense ಅರಗಿಸಿಕೊಳ್ಳಲಾಗದ ಸ್ಮಶಾನ ಮೌನವೊಂದು ಪಶ್ಚಿಮ ಘಟ್ಟದ ನಾಡನ್ನು ಅಂದು ಆವರಿಸಿತ್ತು. ಕಾರಣ, ದೇಶವಷ್ಟೇ ಅಲ್ಲದೆ ವಿದೇಶಗಳಿಗೂ ಮಲೆನಾಡ ಕಾಫಿಯ ಸುಮಧುರ ಘಮವನ್ನು ಪಸರಿಸಿದ್ದ, ವಿಶ್ವದ ಭೂಪಟದಲ್ಲಿ ಮಲೆನಾಡ ಚಿರಗುರುತನ್ನು ಹುಟ್ಟುಹಾಕಿದ, ಕಾಫಿ ಬೆಳೆಗಾರ, ಉದ್ಯಮಿ, ಕಾಫಿ ಕಿಂಗ್ , ಸಾಹಸಿ, ಕನಸುಗಾರ, , ತೆರೆಮರೆಯ ಸಮಾಜಸೇವಕ, ಸರಳ ಸಜ್ಜನಿಕೆಯ ಮನುಷ್ಯನೊಬ್ಬ ಕಳೆದ ಹನ್ನೆರೆಡು ಘಂಟೆಗಳಿಂದ ಕಾಣೆಯಾಗಿದ್ದ ವಿಷಯ! ವ್ಯಕ್ತಿಯೊಬ್ಬ ಕೇವಲ ಕಾಣೆಯಾದ ಮಾತ್ರಕ್ಕೇ ಲಕ್ಷಾಂತರ ಮನಸ್ಸುಗಳು ಹೀಗೆ ದುಃಖತಪ್ತವಾಗುತ್ತವೆಂದರೆ ಆ ವ್ಯಕ್ತಿತ್ವ ಜನಮಾನಸದ ಮೇಲೆ ಅದೆಂತಹ ಪ್ರಭಾವವನ್ನು ಬೀರಿರಬಹುದೆಂದು ನಾವು ಊಹಿಸಬಹುದು.

ಹೆಚ್ಚೇನ್ನಿಲ್ಲ, ಕೇವಲ ದಶಕಗಳೆರಡರ ಹಿಂದಕ್ಕೆ ಹೋದರೆ ಕಾಫಿ ಎಂಬುದು ಉಳ್ಳವರ, ದೊಡ್ಡವರ ಪೇಯ ಎಂಬೊಂದು ಮನೋಭಾವನೆ ಭಾರತೀಯರಲ್ಲಿದ್ದಿತು. ಟೀ ಅಥವಾ ಚಹಾ ದೇಶದ ಕೋಟ್ಯಾನುಕೋಟಿ ಜನರ ನಾಲಿಗೆಯ ಮೇಲೆ ನಲಿಯುತ್ತಿತ್ತು. ಕಾಫಿ ಎಂಬ ಹೆಸರನ್ನು ಜನ ಕೇಳಿದ್ದರೇ ವಿನ್ಹಾ ನೋಡಿರುವ ಮಂದಿ ಬಹಳ ವಿರಳವಾಗಿದ್ದರು. ಇನ್ನು ರೈತರ ವಿಷಯಕ್ಕೆ ಬಂದರೆ ತಾವು ಬೆಳೆದ ಬೆಳೆಯನ್ನು ಮುಕ್ತವಾಗಿ ಮಾರುಕಟ್ಟೆಯಲ್ಲಿ ಮಾರಲೂ ಬೇರೆಯೊಬ್ಬರ ಅಪ್ಪಣೆಯನ್ನು ಪಡೆಯಬೇಕಿತ್ತು. ಅಲ್ಲದೆ ಕಾಫಿ ಎಂಬುದು ಅಂದು ಬಹುಪಾಲು ಜನರಿಗೆ ಜೀವನ ನೆಡೆಸಲು ಇದ್ದ ಒಂದು ಸಣ್ಣ ಆಧಾರವಾಗಿದ್ದಿತೇ ವಿನ್ಹಾ ರಾಷ್ಟ್ರಮಟ್ಟದಲ್ಲಿ ದೇಶದ ಆದಾಯಕ್ಕೆ ಬೆನ್ನೆಲುಬಾಗುವ ಉದ್ಯಮವಂತೂ ಅದು ಆಗಿರಲೇ ಇಲ್ಲ. ಇನ್ನು ನಮ್ಮ ಬೆಳೆಗಾರರು ವಿದೇಶಗಳಿಗೆ ರಫ್ತುಮಾಡಿ ಹಣ ಗಳಿಸುವುದೆಲ್ಲ ಕನಸ್ಸಿನ ಮಾತೆ ಸರಿ. ಕಾರಣ ಅಂತಹ ರಪ್ತಿಗೆ ಸರ್ಕಾರಗಳು ವಿಧಿಸುತ್ತಿದ್ದ ಭಾರಿ ಮೊತ್ತದ ತೆರಿಗೆಗಳು ಹಾಗು ಕಾಫಿ ಬೋರ್ಡ್ ಎಂಬ ತಡೆಗೋಡೆಗಳು. ಮೇಲಾಗಿ ವಿಶ್ವದಾದ್ಯಂತ ಅಷ್ಟರಲ್ಲಾಗಲೇ ಹಲವಾರು ಚಿರಪರಿಚಿತ ಕಾಫಿ ಬ್ರಾಂಡ್ಗಳು ನೆಲೆಯೂರಿದ್ದರಿಂದ ಕಗ್ಗತ್ತಲೆಯ ಮಲೆನಾಡ ಮೂಲೆಯ ನಮ್ಮ ಕಾಫಿ ಬೀಜಗಳನ್ನು ಅಲ್ಲಿಯವರೆಗೂ ಕೊಂಡೊಯ್ದು ಅಂತಹ ದೈತ್ಯ ಬ್ರಾಂಡ್ಗಳೊಟ್ಟಿಗೆ ಪೈಪೋಟಿಯನ್ನು ಮಾರುವವರ್ಯರು? ವಿದೇಶಿ ಮಾರುಕಟ್ಟೆಗಳನ್ನು ನಮ್ಮಲ್ಲಿಗೆ ಕರೆದು ತರುವವರ್ಯಾರು ? ಇವೆಲ್ಲ ಪ್ರೆಶ್ನೆಗಳ ಉತ್ತರ ಮಲೆನಾಡ ಚಿಗುರು ಮೀಸೆಯ ಸಣಕಲು ಕಾಯದ ಆ ಒಬ್ಬ ವ್ಯಕ್ತಿಯಲ್ಲಿದ್ದಿತು. ಆತನ ಹೆಸರೇ ವೀರಪ್ಪ ಗಂಗಯ್ಯ ಸಿದ್ದಾರ್ಥ.

'In the next 15-20 years, there will be around 15 to 20 retail brands from India in the high-Streets of the world & we want our brand to be one of them. We want to make every Indian is proud of our brand'

ಅದು 2016, ಕಾನ್ಪುರ IIT. ನಾಳಿನ ದಿನಗಳ ಮಹತ್ತರ ಕನಸನ್ನು ಹೊತ್ತ ನೂರಾರು ವಿದ್ಯಾರ್ಥಿಗಳ ಮುಂದೆ ತಮ್ಮ Cafe Coffee Day ಕುರಿತು ಈ ಮಾತನ್ನು ಹೇಳುತಿದ್ದ ಸಿದ್ಧಾರ್ಥರ ಮುಖದಲ್ಲಿದ್ದ ಆ ಹುಮ್ಮಸ್ಸನ್ನು ನೋಡಬೇಕು. ವರ್ಷಗಳ ಹಿಂದೆ ಯಾರಿಗೂ ಬೇಡವಾದ ವಲಯವನ್ನು ಬ್ರಾಂಡ್ ಒಂದಾಗಿ ಮಾರ್ಪಡಿಸಿ ವಿದೇಶದ ನೆಲದಲ್ಲಿ ಅದನ್ನು ಪ್ರತಿಷ್ಠಾಪಿಸುವ ಅವರ ಕನಸ್ಸನ್ನು ಕಂಡು ಅಲ್ಲಿ ನೆರೆದಿದ್ದ ಅಷ್ಟೂ ಮಂದಿಯೂ ಆತ್ಮವಿಶ್ವಾಸದ ಅಲೆಯಲ್ಲಿ ತೇಲಿದಂತೂ ಸುಳ್ಳಲ್ಲ. ಹೆಚ್ಚು ಕಡಿಮೆ ಆ ಕನಸ್ಸು ಇಂದಿಗೆ ನನಸ್ಸಾಗಿದೆ ಎಂದರೆ ತಪ್ಪಾಗದು. CCD ಎಂದರೆ ಇಂದು ದೇಶದ ಭಾಗಶಃ ಯುವಕ ಯುವತಿಯರ ದೈನಂದಿಂದ ರೂಟೀನಲ್ಲಿ ಒಂದಾಗಿಬಿಟ್ಟಿದೆ. IT ಜನರ ಹಾಡು, ಹರಟೆ, ಸುಖ, ದುಃಖ, ನೋವು, ನಲಿವುಗಳೆಲ್ಲದರ ಮೇಟಿಂಗ್ ಪಾಯಿಂಟ್ ಈ CCD. ನಾನಿಲ್ಲಿ ಗೂಡಂಗಡಿಯಲ್ಲಿ ಸಿಗುವ ರುಚಿಕರವಾದ ಒಂದಕ್ಕಿ ದುಡ್ಡಿನ ಕಾಫಿಗೂ, CCDಯಲ್ಲಿ ದೊರೆಯುವ ಮೂರಂಕಿಯ ಕಾಫಿಗೂ ಹೋಲಿಕೆ ಮಾಡುತ್ತಿಲ್ಲ. Ofcourse ಹಣವನ್ನು ಮುಂದಿಟ್ಟರೆ ಅಲ್ಲಿ ಕಾಣುವ ಏರಿಳಿತ ಸಾಮನ್ಯವೇ. But here I’m taking about a Brand. The Brand. ಪ್ರಸ್ತುತ ಪೈಪೋಟಿಯ ಕಾಲದಲ್ಲಿ ಬ್ರಾಂಡ್ ಒಂದನ್ನು ಸೃಷ್ಟಿಸಿ ಬೆಳೆಸಿ ಮುನ್ನೆಡೆಸುವ ಪ್ರಕ್ರಿಯೆಗೂ ತಾಯಿಯೊಬ್ಬಳು ಮೊದಲ ಬಾರಿ ಗರ್ಭವತಿಯಾಗಿ ಮುದ್ದಾದ ಮಗುವನ್ನು ಭೂಮಿಗೆ ತರುವ ಕ್ರಿಯೆಗೂ ಏನೇನೂ ವ್ಯತ್ಯಾಸವಿರುವುದಿಲ್ಲ. ಅಳುತ್ತಲೇ ಬರುವ ಮಗುವನ್ನು ಸಂತೈಸಿ, ಮುದ್ದಿಸಿ, ಹಾಲುಣಿಸಿ, ಶುಚಿಗೊಳಿಸಿ, ಕಷ್ಟಗಳೆಲ್ಲದರಿಂದ ರಕ್ಷಿಸಿ ಬೆಳೆಸುವ ಪ್ರಕ್ರಿಯೆ ಒಂದೆಡೆ ಸಾಕು ಸಾಕೆನಿಸಿದರೆ ಮತ್ತೊಂದೆಡೆ ಮನಸ್ಸಿಗೊಂದು ಅವರ್ಣನೀಯವಾದ ಮುದವನ್ನು ನೀಡುತ್ತಿರುತ್ತದೆ. ತನ್ನಿಂದ ಜೀವಕಂಡ ಮಗು ಹೆಮ್ಮರವಾಗಿ ಬೆಳೆಯುವ ಕನಸ್ಸು ಅಲ್ಲಿರುತ್ತದೆ. ಅದೇನೇ ಕಷ್ಟಗಳು ಬಂದರೂ ಸಹಿಸುವ ಮನೋಬಲ ಅದಾಗಿರುತ್ತದೆ. ಅಂತಹದ್ದೇ ತಾಯಿಯ ಕನಸ್ಸನ್ನು ಬ್ರಾಂಡ್ಗಳ ಸೃಷ್ಟಿಸುವ ಬಿಸಿನೆಸ್ ಮ್ಯಾನ್ಗಳು ಕಾಣುತ್ತಾರೆ. ಶತಾಯಗತಾಯ ಆದೂ ಸಹ ಹೆಮ್ಮರವಾಗಿ ಬೆಳೆಯಬೇಕು, ರಾಜ್ಯ, ದೇಶಗಳಷ್ಟೇ ಅಲ್ಲದೆ ವಿದೇಶಗಳಲ್ಲೂ ತನ್ನ ಹೆಸರು ಕೀರ್ತಿಯನ್ನು ಗಳಿಕೊಳ್ಳಬೇಕು ಎಂಬ ಕನಸು ಅವರದ್ದಾಗಿರುತ್ತದೆ. ಅಂತಹ ತಾಯಿಯ ಮಮತೆಯ ಕನಸಿಗೆ ನಾವು ಬೆಲೆಕಟ್ಟುವ ಧಾವಂತ ಎಂದಿಗೂ ಮಾಡಕೂಡದು.ಅಂತ ನೂರಾರು ಕನಸ್ಸುಗಳ ನಡುವೆ ನಮ್ಮ CCDಯೂ ಕೂಡ ಒಂದು.

1983. ಮಲೆನಾಡಿನ ಮಟ್ಟಕ್ಕೆ ಶ್ರೀಮಂತ ಮನೆತನದಲ್ಲಿ ಹುಟ್ಟಿ ಬೆಳೆದ ಹುಡುಗನೊಬ್ಬ ಅಂದು ಸೀದಾ ಬಾಂಬೆಗೆ ಹೋಗುವ ಟ್ರೈನನ್ನು ಹಿಡಿದ. ಸೈನ್ಯಕ್ಕೆ ಸೇರಬೇಕೆಂದು ಪ್ರಯತ್ನಿಸಿ ಸೋತರೂ ಜೀವನದಲ್ಲಿ ಪುನಃ ಮತ್ತೇನನ್ನೋ ಸಾಧಿಸಬೇಕೆಂಬುದು ಆತನ ಕನಸ್ಸಾಗಿರುತ್ತದೆ. ಆದರೆ ಅದು ಏನು, ಹೇಗೆ, ಎಲ್ಲಿ ಎಂಬುದು ತಿಳಿದಿರುವುದಿಲ್ಲ. ರೂಮೊಂದನ್ನು ಬುಕ್ಕು ಮಾಡಿ ಕೆಲಸವನ್ನು ಅರೆಸತೊಡಗಿದ. ಕಣ್ಣಿಗೆ ಕಂಡ ದೊಡ್ಡದಾದ ಕಟ್ಟಡದ ಆರನೇ ಅಂತಸ್ತನ್ನು ಏರಿದ 22ರ ಆ ಪೋರ ಸೀದಾ ನೆಡೆದದ್ದೇ ಆಗಿನ ಕಾಲಕ್ಕೆ ಬಾಂಬೆಯಲ್ಲಿ ಒಳ್ಳೆಯ ಹೆಸರನ್ನು ಗಳಿಸಿದ್ದ JM Financial ಎಂಬ ಕಂಪೆನಿಯೊಳಕ್ಕೆ. ಗೊತ್ತಿಲ್ಲ, ಗುರಿಯಿಲ್ಲ, Appointment ಎಂಬುದು ಇಲ್ಲವೇ ಇಲ್ಲ. ಆದರೂ ಯಂಗ್ ಸಿದ್ದಾರ್ಥನ ಅದೃಷ್ಟ ಚೆನ್ನಾಗಿಯೇ ಇದ್ದಿತು. ಆತನ ಜೀವನ ಬದಲಾದ ಅಮೋಘ ಕ್ಷಣಗಳವು. ಕಂಪನಿಯ ಮಾಲೀಕ Mr. Naveen Bhai Kampani ಖುದ್ದಾಗಿ ಈತನನ್ನು ತನ್ನ ತಂಡದಲ್ಲಿ ನೇಮಿಸಿಕೊಂಡರು. ಆ ಬಿಸಿರಕ್ತದ ಹುಡುಗನ ಜೀವನದಲ್ಲಿ ಮುಂದೆ ನೆಡೆದ ಘಟನೆಗಳೆಲ್ಲ ವಸಂತ ಮಾಸದ ಹೂವುಗಳಂತೆ ಒಂದರಿಂದೊಂದು ಅರಳಿ ಘಮಿಸತೊಡಗಿದವು. ಸಿದ್ಧಾರ್ಥರ JM Financial ನೊಳಗಿನ ಸ್ಟಾಕ್ ಮಾರ್ಕೆಟ್ಟಿನ ಅನುಭವ ಹಾಗು ಜ್ಞಾನ ಅವನ ಜೀವನಕ್ಕಾಗುವಷ್ಟು ದೊರೆಯಿತು. ಮೇಲಾಗಿ ಅಲ್ಲಿ ದೊರೆತ ದೊಡ್ಡ ದೊಡ್ಡ ವ್ಯಕ್ತಿಗಳ ಪರಿಚಯ, ಅವರ ಜೀವನದ ಮೌಲ್ಯಗಳು ಸಿದ್ದಾರ್ಥರನ್ನು A man with ambition ರನ್ನಾಗಿ ಮಾಡಿತು. ಕನಸ್ಸೊಂದು ಚಿಗುರೊಡೆಯಿತು. ಎರಡೇ ವರ್ಷಗಳ ನಂತರ ತಾಯ್ನೆಲಕ್ಕೆ ಆಗಮಿಸಿದ ಸಿದ್ದಾರ್ಥ್ ಸೀದಾ ತನ್ನ ಕನಸ್ಸಿನ ಗೋಪುರಕ್ಕೆ ಅಡಿಪಾಯವನ್ನು ಹಾಕಿದರು. ಸ್ಟಾಕ್ ಮಾರ್ಕೆಟ್ ನಲ್ಲಿ ಚತುರತೆಯಿಂದ ಇನ್ವೆಸ್ಟ್ ಮಾಡುತ್ತಾ ಬಂದ ಹಣವನ್ನು ಸೀದಾ ಕಾಫಿತೋಟಗಳ ಕೊಳ್ಳುವಿಕೆಯಲ್ಲಿ ತೊಡಗಿಸುತ್ತಾರೆ. ನೋಡನೋಡುತ್ತಲೇ ಸಾವಿರಾರು ಎಕರೆ ತೋಟದ ಮಾಲೀಕರಾಗುತ್ತಾರೆ.

ಇಲ್ಲಿನ ನಂತರ 'ಬ್ರಾಂಡ್' ಎಂಬ ಕಾನ್ಸೆಪ್ಟ್ ಸಿದ್ದಾರ್ಥರ ತಲೆಯೊಳಗೆ ಬಂದದ್ದೇ ತಡ ಆಗಿನ ಕಾಲಕ್ಕೆ ತೀರಾ ಸೋಜಿಗವೆಂದೆನಿಸಿದ ಬಿಸಿನೆಸ್ ಮಾಡೆಲ್ ಒಂದನ್ನು ತನ್ನ ಕನಸ್ಸಿನ ಕೂಸಗಿ ತೊಡೆಯಮೇಲೆ ಅವರು ಹಾಕಿಕೊಂಡರು. ತಾವು ಬೆಳೆದ ಕಾಫಿಯನ್ನು ತೃಣಮಾತ್ರದ ಬೆಲೆಗೆ ಮಾರಿ ದೂರದಲ್ಲಿ ಅಲ್ಯಾರೋ ಒಂದಿಷ್ಟೂ ಮೈ ಬಗ್ಗಿಸದೆ ಕೋಟಿ ಕೋಟಿಯನ್ನು ಎಣಿಸುವ ಪ್ರಕ್ರಿಯೆಯನ್ನು ಮೊಟಕು ಗೊಳಿಸಬೇಕೆಂದುಕೊಂಡರು. ಅದು ತಾನೊಬ್ಬನಿಗೆ ಅಲ್ಲದೆ ಈ ಪ್ರದೇಶದಲ್ಲಿ ನೆಲೆಸಿರುವ ಸಾವಿರಾರು ಕಾಫಿ ಬೆಳೆಗಾರರಿಗೂ ವರವಾಗಿ ಪರಿಣಮಿಸುತ್ತಿತ್ತು. ಪರಿಸ್ಥಿತಿಯನ್ನು ಅರಿತ ಸಿದ್ದಾರ್ಥ ಸುಮ್ಮನೆ ಕೂರಲಿಲ್ಲ. ಕಮಿಟಿಯೊಂದನ್ನು ಮಾಡಿಕೊಂಡು ಸೀದಾ ಭೇಟಿ ಮಾಡಿದ್ದೆ ಆಗಿನ ಹಣಕಾಸು ಸಚಿವರಾಗಿದ್ದ ಪ್ರಸ್ತುತ ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ರವರನ್ನು! ಒಂದರೆಗಳಿಗೆಯೂ ಯೋಚಿಸದೆ ಇವರ ಕೋರಿಕೆಯನ್ನು ಮನ್ನಿಸಿದ ಸಿಂಗ್ ಕಾಫಿಯನ್ನು ರಫ್ತ್ತುಮಾಡಲು ಇದ್ದ ಹಲವು ಬಗೆಯ ತೊಡಕುಗಳನ್ನು ಹಾಗು ಹೆಮ್ಮರವಾಗಿ ಬೆಳೆದು ನಿಂತ ಸುಂಕಗಳನ್ನು ತೆರವುಗೊಳಿಸಿದರು. ಆ ದಿನ ಮಲೆನಾಡ ಕಾಫಿ ಬೆಳೆಗಾರರಿಗೆ ಉಂಟಾದ ಖುಷಿಗೆ ಬಹುಷಃ ಪಾರವೇ ಇರಲಿಲ್ಲವೆಂದೆನಿಸುತ್ತದೆ. ಅಲ್ಲಿಂದ ಮುಂದೆ ಟ್ರೇಡಿಂಗ್ ಹಾಗು ಎಕ್ಸ್ಪೋರ್ಟ್ ಮಾಡುವ ಕಂಪನಿಯನ್ನು ಖುದ್ದು ಹುಟ್ಟುಹಾಕಿದರು. ಹೀಗೆ ಹುಟ್ಟಿಕೊಂಡ ಕಂಪನಿಯೇ Amalgamated Bean Coffee Trading Company ಅಥವ ಮಲೆನಾಡಿಗರ ಪ್ರೀತಿಯ ABC.

ABCಯ ನಂತರ Coffee Day ಯನ್ನು ಸ್ಥಾಪಿಸಿ ಅದರ ಮುಖೇನ CCD, Tanglin, Sical Logistics, Serai Resorts, Way to Wealth, ಎಂಬ ಚಿರಪರಿಚಿತ ಬ್ರಾಂಡ್ಗಳೊಟ್ಟಿಗೆ ಹಲವಾರು IT ಕಂಪನಿಗಳಲ್ಲೂ ಅವರು ತೊಡಗಿಸಿಕೊಂಡರು. ಇದು ಗೆದ್ದ ಉದ್ಯಮಿಯೊಬ್ಬ ಬೆಳೆದು ಬಂದ ಸಕ್ಸಸ್ ಪಾತ್ ನಂತಷ್ಟೇಯೇ ಆಗಿದ್ದರೆ ಇಷ್ಟೆಲ್ಲಾ ಹೇಳಬೇಕಾದ ಅವಶ್ಯಕತೆ ಇರಲಿಲ್ಲ. ಬದಲಾಗಿ ಸಿದ್ದಾರ್ಥ್ ಒಬ್ಬ ಸಮಾಜವಾದಿ ಧೋರಣೆಯುಳ್ಳ ವ್ಯಕ್ತಿತ್ವ. ಉದಾಹರಣೆಗೆ ಮೇಲೆ ತಿಳಿಸಿದ ಯಾವುದಾದರೊಂದು ಸಂಸ್ಥೆಯಲ್ಲಿ ಹೋಗಿ ನೋಡಿದರೆ ಮಿನಿಮಮ್ ಎಂದರೂ 60 ರಿಂದ 70 % ನಷ್ಟು ನೌಕರರು ಮಲೆನಾಡಿಗರೇ ಅಥವಾ ಕನ್ನಡಿಗರೇ ಆಗಿರುತ್ತಾರೆ. ತಮ್ಮ ತಮ್ಮ ಊರುಗಳಲ್ಲಿ ಕನಿಷ್ಠ ವೇತನವನ್ನಷ್ಟೇ ಗಳಿಸುತ್ತಾ ಜೀವನ ಸವೆಸುವ ಸಾವಿರಾರು ಯುವಕ ಯುವತಿಯರು ಇಂದು Coffee Dayಯ ಅವಿಬಾಜ್ಯ ಅಂಗವಾಗಿಬಿಟ್ಟಿದ್ದಾರೆ. ಒಂದು ಪಕ್ಷ ಡಿಗ್ರಿ ಗಿಗ್ರಿಗಳೆಲ್ಲ ಇಲ್ಲವಾದರೆ ಏನಪ್ಪಾ ಮಾಡುವುದು ಎಂದರೆ 'ಹೋಗಯ್ಯಾ..' ಎನುತ ಮನೆಯ ದಾರಿಯನು ತೋರಿಸುವ ಪ್ರಸ್ತುತ ಕಾಲದಲ್ಲಿ ಸಿದ್ಧಾರ್ಥ್ ಅಂತವರಿಗಾಗಿಯೇ ಒಂದು ತರೆಬೇತಿ ಸಂಸ್ಥೆಯನ್ನು ಕಟ್ಟಿಕೊಟ್ಟರು! ಅಲ್ಲಿನ ಆ ಪರಿಸರದಲ್ಲಿ ಒಂದಿಷ್ಟು ತರಬೇತಿಯನ್ನು ಗಳಿಸಿದರೆ ಸಾಕು ಗರಿಗರಿಯಾದ ಆಫರ್ ಲೆಟರ್ ಕೆಲವೇ ತಿಂಗಳುಗಳಲ್ಲಿ ಅಭ್ಯರ್ಥಿಯ ಕೈಯನ್ನು ಬಂದು ಸೇರುತ್ತದೆ. ಇನ್ನು ಈ ಪ್ರಾಂತ್ಯದ ರೈತರಿಗೆ ಇವರು ಪ್ರತ್ಯಕ್ಷವಾಗಿ ಹಾಗು ಪರೋಕ್ಷವಾಗಿಯೂ ಮಾಡಿರುವ ಉಪಕಾರಗಳು ಅನೇಕನೇಕ. ಎಲ್ಲಿಯೂ ಸಹ ತನ್ನ ಹೆಸರಾಗಲಿ ಅಥವಾ ತಮ್ಮ ಕುಟುಂಬದವರ ಹೆಸರಾಗಲಿ ಬರಲು ಬಯಸದ ಸಿದ್ದಾರ್ಥ್ ಒಂತರ ಮಲೆನಾಡ ರಾಬಿನ್ ಹುಡ್ ಎಂದೇ ಹೇಳಬಹುದು! ಇದಕ್ಕೆ ಒಂದು ಪೂರಕ ಉದಾಹರಣೆ ಚಿಕ್ಕಮಗಳೂರಿನಲ್ಲಿ ಸ್ಥಾಪಿಸುತ್ತಿದ್ದ, ಕ್ಯಾಶ್ ಕೌಂಟಗಳೆ ಇಲ್ಲದ ಒಂದು Multi Specialty Hospital..! Yes, try believing your eyes! ಒಂದಿನಿತೂ ಬಿಡಿಗಾಸಿಲ್ಲದೇ ಆಸ್ಪತ್ರೆಯೊಂದನ್ನು ಅದೂ ಸಹ Multi Specialty Hospital ಒಂದನ್ನು ಸ್ಥಾಪಿಸುವುದೆಂದರೆ ಹುಡುಗಾಟಿಕೆಯ ವಿಚಾರವೆನ್ನಬಹುದು. ಹತ್ತಾರು ಸರ್ಕಾರಗಳು ಬಂದರೂ ಮಾಡಲಾಗದಂತಹ ಇಂತಹ ಕಾರ್ಯವನ್ನು ಸಿದ್ದಾರ್ಥ್ ತಮ್ಮ ಹೆಗಲ ಮೇಲಾಕಿಕೊಂಡಿದರು.

ಸಿದ್ಧಾರ್ಥ್ ಎಂದರೆ ರಾಜ್ಯದ ಹೆಚ್ಚಿನ ಮಂದಿಗೆ ಪರಿಚಯವೇ ಇರಲಿಲ್ಲ. ‘ಒಹ್ ಅವ್ರ್ ಬಿಡಪ್ಪ ‘CM ಅಳಿಯ...’ಹಾಗೆ’...’ಹೀಗೆ’..’ ಎಂದಷ್ಟೇ ಹೇಳುವವರಿದ್ದರೆ ವಿನ್ಹಾ ಇಡೀ ದೇಶಕ್ಕೇ 2003 ರ "Entrepreneur of the Year" by The Economic Times ಹಾಗು 2011 ರ "NextGen Entrepreneur" by Forbes India ಪ್ರಶಸ್ತಿ ಪಡೆದದ್ದನ್ನು ತಿಳಿದೂ ತಿಳಿಯದಂತಿದ್ದರು. ವಿಪರ್ಯಾಸವೆಂಬಂತೆ ಅದೆಷ್ಟೋ ಮಂದಿಗೆ, ಮಲೆನಾಡಿಗರಿಗೂ ಸಹ, ಸಿದ್ಧಾರ್ಥರ ವಿಶ್ವರೂಪ ಗೋಚರವಾದದ್ದು ಅವರು ನಮ್ಮಿಂದ ಮರೆಯಾದ ಮೇಲೆಯೇ! ದೇಶ ವಿದೇಶದ ಅತ್ಯುನ್ನತ ಶಿಕ್ಷಣ ಸಂಸ್ಥೆಗಳೇ ಮಾತನಾಡಲು ಹಾತೊರೆದು ಕರೆಯುತ್ತಿದ್ದ, ಸ್ಟಾರ್ ಬಗ್ಗು ಮತ್ತೊಂದು ಮಗದೊಂದು ವಿದೇಶಿ ಬ್ರಾಂಡುಗಳಿಗೆ ಸವಾಲೆಸೆದಿದ್ದ, ಕಂಡು ಕೇರಳಿಯದ ವಿಶ್ವವೇ ಗಮನ ಸೆಳೆದ APRC Motor Rallyಯ ಕಾರುಗಳನ್ನು ನಮ್ಮ ಕಾಫಿ ತೋಟಗಳ ನಡುವೆ ಚೀರಾಡಿಸಿದ್ದ, ಎಲ್ಲಕ್ಕೂ ಮಿಗಿಲಾಗಿ ಅರ್ಧಲಕ್ಷದಷ್ಟು ಜನರಿಗೆ ದಾರಿದೀಪವಾಗಿದ್ದ ಚಹರೆಯೊಂದು ಈಗ ಕಣ್ಮರೆಯಾಗಿದೆ. ಒಬ್ಬ ನಾಯಕನನ್ನಾಗಲಿ ಅಥವಾ ಒಂದು ಕಂಪೆನಿಯನ್ನಾಗಲಿ ಮುಟ್ಟುಗೋಲು ಹಾಕಿ ಮುಚ್ಚಾಕಲು ಕೇವಲ ನಿಮಿಷಗಳು ಮಾತ್ರ ಸಾಕು ಆದರೆ ಅದೇ ನಾಯಕ ಅಥವಾ ಅಂತಹದ್ದೇ ಕಂಪೆನಿಯನ್ನು ಮತ್ತೊಮ್ಮೆ ಕಟ್ಟಲು ಅದೆಷ್ಟು ದಶಕಗಳು ಬೇಕು? ಈ ನಮ್ಮ ಸೀದಾ- ಸಾದಾ ಪ್ರೆಶ್ನೆಗೆ ಇನ್ಕಮ್ ಟ್ಯಾಕ್ಸ್ ಎಂಬ ನೇಣಿನ ಕುಣಿಕೆಯನ್ನು ಕೊರಳ ಸುತ್ತ ಹಾಕಿ ಆಟವಾಡಿಸುವ ಸರ್ಕಾರಗಳೇ ಉತ್ತರಿಸಬೇಕು. ಸಾವಿರಾರು ಜನರ ದಾರಿದೀಪವಾಗಿದ್ದ ಸಿದ್ದಾರ್ಥ್ ಅಂದು ಒಂತಿಷ್ಟು ಗಾಳಿಗಾಗಿ ಹಾತೊರೆಯುತ್ತಾ ಹುಸಿರುಗಟ್ಟಿ ಮುಳುಗಿ ಮುಳುಗಿ ಕೊನೆಗೆ ಅನಾಥವಾಗಿ ನದಿಯ ದಂಡೆಯ ಮೇಲೆ ಮಲಗಿರುವ ದೃಶ್ಯವನ್ನು ನೋಡಿದ ಪ್ರತಿಯೊಬ್ಬರಿಗೂ ಕಣ್ಣಂಚುಗಳು ಒದ್ದೆಯಾದದಂತೂ ಸುಳ್ಳಲ್ಲ. ಸೋಲಿಗೆ ಸಾವೇ ಉತ್ತರವಲ್ಲ ಎಂದು ಹಚ್ಚೋತ್ತಿದಂತೆ ಹೇಳುತ್ತಿದ್ದ ವ್ಯಕ್ತಿಯೊಬ್ಬ ಇಂದು ಖುದ್ದು ತಾನಾಗಿಯೇ ಆ ಮಾತನ್ನು ಮುರಿದು ನೀರಿಗೆ ಹಾರಿ ಪ್ರಾಣ ಕಳೆದುಕೊಂಡನೆಂದರೆ ಅದೆಂದಂಥ ಅಘಾದವಾದ ಒತ್ತಡ ಆತನನ್ನು ಕಾಡಿರಬಾರದು?! ಕಾಲವೇ ಇದಕೆಲ್ಲ ಉತ್ತರಿಸಬೇಕು. ಇನ್ನೂರು ಮುನ್ನೂರರ ಗಡಿಯಲಿದ್ದ ಕಾಫಿ ಡೇ ಯ ಷೇರುಗಳು ಪ್ರಪಾತಕ್ಕೆ ಬೀಳುವ ಮೊದಲೇ ಅವೆಲ್ಲವನ್ನು ಖರೀದಿಸಿ ವಿಶ್ವವಿಖ್ಯಾತ ನಮ್ಮ ಮಲೆನಾಡ ಕಂಪನಿಯನ್ನು ಉಳಿಸಿಕೊಳ್ಳಬೇಕೆಂದು ಹಾತೊರೆಯುವ ಜನರ ಹಪಾಹಪಿಯನ್ನು ಕಂಡರೆ ಕಣ್ಣಿಗೆ ಕಾಣದೆಯೇ ರಾಜ್ಯದ ಜನಮನದಲ್ಲಿ ಶಾಶ್ವತ ನೆಲೆಯೊಂದು ನಮ್ಮ ಸಿದ್ದಾರ್ಥರಿಗೆ ಅದಾಗಲೇ ಲಭಿಸಿದೆ ಎಂದರೆ ಸುಳ್ಳಾಗದು.

Bon Voyage… The leader!!


Monday, July 8, 2019

ಒಂಟಿಬೆಟ್ಟದ ಸ್ಮಶಾನ - 2

*** Continued
https://sujithckm.blogspot.com/2017/11/blog-post_29.htmlhttps://sujithckm.blogspot.com/2017/11/blog-post_29.html


ಈ ಭಾರಿ ಅದೆಷ್ಟೇ ಪ್ರಯತ್ನ ಪಟ್ಟರೂ ಅದು ಕನಸ್ಸಲ್ಲವೆಂಬ ಖಾತ್ರಿ ರಾಹುಲ್ನಿಗೆ ಅದಾಗಲೇ ಆಗಿರುತ್ತದೆ. 'ಜಣ್ .. ಜಣ್' ಎಂದು ಎರಡೆಜ್ಜೆ ಮುಂದೆ ಬಂದ ಆ ಭಯಾನಕ ಸದ್ದಿಗೆ ಇಡೀ ಪ್ರಕೃತಿಯೇ ಒಮ್ಮೆಗೆ ಶಾಂತವಾಗಿಬಿಡುತ್ತದೆ. ಕಡುಗೆಂಬು ಕಣ್ಣಿನ ನಾಯಿಗಳೆರಡು ದಾರಿಯನ್ನು ಬಿಡುವಂತೆ ವೃತ್ತದಿಂದ ಹೊರಬಂದು ನಿಲ್ಲುತ್ತವೆ. ರಾಹುಲ್ನ ದೇಹದ ರೋಮಗಳೆಲ್ಲವೂ ಸಟೆದು ನಿಂತಿರುತ್ತವೆ. ಹೃದಯಬಡಿತ ಆತನ ದೇಹವನ್ನೇ ಕಂಪಿಸುವಂತಿರುತ್ತದೆ. 'ಜಣ್..ಜಣ್' ಎಂಬ ಮತ್ತೆರಡು ಹೆಜ್ಜೆಗಳ ಸದ್ದು! ಆ ಅದೃಶ್ಯ ಆಕೃತಿ ಕೆಲವೇ ಅಡಿಗಳ ಮುಂದೆ ಬಂದಿರುವ ಖಾತ್ರಿಯಾದ ಕೂಡಲೇ ರಾಹುಲ್ ಒಮ್ಮೆ ಜೋರಾಗಿ ಕೂಗತೊಡಗುತ್ತಾನೆ. ಆದರೆ ಆ ಸದ್ದು ಭದ್ರವಾಗಿ ಮುಚ್ಚಿರುವ ಕೋಣೆಯಳೊಗೆಯೇ ಗಿರಕಿ ಹೊಡೆದಂತೆ ಅರೆಕ್ಷಣದಲ್ಲೇ ಅಂತರ್ದಹನವಾಗುತ್ತದೆ. ರಾಹುಲ್ ಒಮ್ಮೆಲೇ ಅಳತೊಡಗುತ್ತಾನೆ. ಆತನ ಅಳುವಿನಲ್ಲಿ ಕಾಪಾಡಿ..ಎಂಬ ಪದ ಬಹಳಾನೇ ಕರುಣಾಜನಕವಾಗಿ ಮೂಡುತ್ತಿರುತ್ತದೆ. ಕೂಡಲೇ 'ಘ್ರಾ.....' ಎಂದು ಘೋರವಾಗಿ ಮೂಡತೊಡಗಿದ ಸದ್ದು ಒಮ್ಮೆಲೇ ಜೋರಾಗುತ್ತಾ ಹೋಗುತ್ತದೆ. ಹತ್ತಾರು ಜನರ ಆಕ್ರಂದನಗಳನ್ನು ನುಂಗಿದ ಭಯಾನಕ ಹೆಣ್ಣು ಸದ್ದಿನಂತಿದ್ದ ಆ ಧ್ವನಿ ನೋಡನೋಡುತ್ತಲೇ ಇಡೀ ಭೂಮಂಡಲವನ್ನೇ ನಡುಗಿಸಿಬಿಡುವಂತೆ ಹಬ್ಬುತ್ತದೆ. ಆ ಸದ್ದಿನಿಂದ ಅಕ್ಕಪಕ್ಕದ ಮರಗಿಡಗಳಲ್ಲಿದ್ದ ಹಕ್ಕಿ ಪಕ್ಷಿಗಳೆಲ್ಲವೂ ಪ್ರಕೃತಿವಿಕೋಪದ ಮುನ್ಸೂಚನೆ ಸಿಕ್ಕಾಗ ಚೆಲ್ಲಾಪಿಲ್ಲಿಯಾಗಿ ಹಾರುವಂತೆ ಹಾರಿ ಕಣ್ಮರೆಯಾಗುತ್ತವೆ. ಹೆಚ್ಚುಕಡಿಮೆ ಎರಡು ನಿಮಿಷಗಳಿಗೂ ಮಿಗಿಲಾಗಿ ಬಂದ ಆ ಸದ್ದಿಗೆ ರಾಹುಲ್ ತರತರನೇ ನಡುಗ ಹತ್ತುತ್ತಾನೆ. ಕೂಡಲೇ ದೂರದಿಂದ ಯಾರೋ ಕೂಗಿದ ಹಾಗೆ ಸದ್ದು!

'ಏ ಬೇವರ್ಸಿ ಮುಂಡೆ.. ಈ ಅಮಾಸೆಗೆ ಮುಗಿತು ಕಣೆ ನಿನ್ ಕತೆ.. ಗಂಡುಸರೇ ಬೇಕೆನೆ ನಿಂಗೆ.. ಲೌಡಿಮಗ್ಳೆ ಬಾರೆ ಇಲ್ಲಿ ..! ' ಎಂದು ದೂರದಲ್ಲಿ ಲ್ಯಾಟಿನ್ನನ್ನು ಹಿಡಿದು ಮುದುಕಿಯೊಂದರ ಸದ್ದು ಮೂಡಿತು. ಆ ಸದ್ದಿಗೆ ನೂರು ಮೀಟರ್ ದೂರದಲ್ಲಿದ್ದ ಆ ಬೆಳಕಿನ ಕಡೆಗೆ ನಾಲ್ಕೇ ಹೆಜ್ಜೆಯಲ್ಲಿ 'ಜಲ್ .. ಜಲ್ .. ಜಲ್ .. ಜಲ್ ' ಎಂದು ಕುಪ್ಪಳಿಸಿದ ಆ ಸದ್ದು ಮತ್ತೊಮ್ಮೆ ಹೃದಯವಿದ್ರಾವಕ ಸದ್ದಿನಿಂದ ಕೂಗುತ್ತದೆ. ಲಾಟಿನ್ನ್ನಿನ ಬೆಳಕಿನ ಹಿನ್ನಲೆಯಲ್ಲಿ ಹೊಳೆಯುತ್ತಿದ್ದ ಆ ಮುದುಕಿಯ ಬಿಳಿ ಕೂದಲುಗಳು ಒಮ್ಮೆಲೇ ಗಾಳಿಗೆ ತೂರುತ್ತಾ ಹಾರತೊಡಗುತ್ತವೆ. ಆ ಅದೃಶ್ಯ ಆಕಾರದ ಮೊಗ ಆ ಮುದುಕಿಯ ಮುಖದ ಅತಿ ಸಮೀಪವಿರುವಂತೆ ಭಾಸಾಭಾಗುತ್ತಿತ್ತು. ಆದರೆ ಮುದುಕಿ ತಾನು ನಿಂತ ಜಾಗದಿಂದ ಒಂದಿನಿತೂ ಕದಲದೆ ಆ ಅದೃಶ್ಯ ಆಕೃತಿಯನ್ನೇ ದಿಟ್ಟಿಸಿ ನೋಡತೊಡಗುತ್ತದೆ. ಕೊಡಲೇ ತನ್ನ ಬಲಗೈಯ ಮುಷ್ಟಿಯಲ್ಲಿದ್ದ ಬೂದಿಯಂತಹ ಪುಡಿಯನ್ನು ಅದರ ಮೇಲೆ ಎಸೆಯುತ್ತಾಳೆ. ಲ್ಯಾಂಟೀನಿನ ಬೆಳಕಿನಲ್ಲಿ ಬೂದಿಯಿಂದ ಮೂಡಿದ ಆ ಆಕೃತಿಯ ಎತ್ತರ ಕಡಿಮೆ ಎಂದರೂ ಹನ್ನೆರೆಡು ಅಡಿಯಷ್ಟಿದ್ದಿತು!! ಬೂದಿ ಬಿದ್ದ ಮರುಕ್ಷಣದಲ್ಲೇ ಆ ಭೀಮಾಕೃತಿ ಕಣ್ಣಿಗೆ ಕಾಣದಂತೆ ಕಾಡಿನೊಳಗೆ ನುಗ್ಗಿ ಮಾಯವಾಯಿತು. ಅದರ ಹಿಂದೆದ್ದ ನಾಯಿಗಳೂ ಚೆಲ್ಲಾಪಿಲ್ಲಿಯಾಗಿ ಓಡುತ್ತಾ ಕತ್ತಲೆಯಲ್ಲಿ ಮರೆಯಾದವು.

ದೂರದಲ್ಲಿದ್ದ ಮುದುಕಿ ರಾಹುಲ್ನನ್ನೇ ದುರುಗುಟ್ಟಿ ನೋಡತೊಡಗಿದ್ದಳು. 'ಯಾರಯ್ಯ ನೀನು .. ಇಲ್ಲೇನ್ ಮಾಡ್ತಾ ಇದ್ದೀಯ' ಎನ್ನುತ್ತಾ ಕೋಲನ್ನು ಊರಿಕೊಂಡು ಕುಂಟುತ್ತಾ ಹತ್ತಿರವಾದಳು ಆ ಮುದುಕಿ. ಜನರ ಹೆಜ್ಜೆಗುರುತುಗಳಿಲ್ಲದ ಈ ಕಡುಕಾನನದಲ್ಲಿ ಮುದುಕಿಯೊಬ್ಬಳ ಇರುವಿಕೆ ರಾಹುಲನಿಗೆ ಸಂಶಯವನ್ನು ಹುಟ್ಟಿಹಾಕಿತು. ಹತ್ತಿರವಾದ ಆಕೆ ರಾಹುಲ್ನನ್ನು ಮೇಲಿಂದ ಕೆಳಗಿನವರೆಗೂ ನೋಡುತ್ತಾ 'ಅವ್ಳ್ ಕಣ್ಣು ನಿನ್ ಮ್ಯಾಗೆ ಬಿದೈತೆ.. ನೀನ್ ಎಲ್ ಹೋದ್ರೂ ಅವ್ಳ್ ಬಿಡಾಕಿಲ್ಲ.. ನೀನು ನಾಳೆತಂಕ ಇಲ್ಲೇ ಇರು.. ಅಮಾಸೆ ದಿನ ನೀನ್ ಎಲ್ ಇದ್ರೂ ಹಿಂದೇನೆ ಬರ್ತಾಳೆ.. ಆಗ ಆಯಿತೇ ಅವ್ಳಿಗೆ ಮಾರಿ ಹಬ್ಬ..' ಎನ್ನುತ್ತಾಳೆ. ನಂತರ ರಾಹುಲ್ ಅಲ್ಲಿಯವರೆಗೂ ನೆಡೆದ ವಿಷಯವನ್ನೆಲ್ಲ ವಿವರಿಸಿ ಕೊನೆಗೆ ತನ್ನ ಮೆನೆಯವರು ನನಗಾಗಿ ಕಾಯುತ್ತಿದ್ದಾರೆ ಎಂದು ಹೇಳುತ್ತಾನೆ. ಆ ಭಯಾನಕ ಸ್ಮಶಾನದಲ್ಲಿ ಇನ್ನು ನಿಲ್ಲುವುದು ಬೇಡವೆಂದು ಅಲ್ಲದೆ ಈ ಒಂಟಿಬೆಟ್ಟ ಗಂಡಸರಿಗಂತೂ ಅಲ್ಲವೇ ಅಲ್ಲವೆಂದು ಮುದುಕಿ ರಾಹುಲ್ನನ್ನು ಹಿಂಬಾಲಿಸುವಂತೆ ಹೇಳುತ್ತಾಳೆ. ರಾಹುಲ್ ಆಕೆ ನೆಡೆದ ಹಾದಿಯನ್ನೇ ಹಿಡಿಯುತ್ತಾನೆ. ಸುಮಾರು ಅರ್ಧ ಘಂಟೆಗಳ ಕಾಲ ಕಾಡಿನ ಕಡುಗಪ್ಪಿನಲ್ಲಿ ನೆಡೆದ ನಂತರ ಸಣ್ಣದಾದ ಗುಡಿಸಲೊಂದು ಸಿಗುತ್ತದೆ. 'ಬಾ..' ಎಂದು ಕರೆದ ಮುದುಕಿ ಗುಡಿಸಿಲಿನೊಳಗೆ ಹೋಗಿ ಚಿಮಣಿಯಯನ್ನು ಹತ್ತಿಸುತ್ತಾಳೆ. ಗುಡಿಸಿಲಿನ ಒಳಗೊದ ರಾಹುಲ್ ಅದರಳೊಗೆ ಒಮ್ಮೆ ಕಣ್ಣಾಯಿಸಿದಾಗ ಎಲ್ಲೆಂದರಲ್ಲಿ ಕಟ್ಟುಗಳು, ಬಗೆ ಬಗೆಯ ಪ್ರಾಣಿಗಳ ಕೊಂಬುಗಳು, ಮಂತ್ರಿಸಿದ ನಿಂಬೆ ಹಣ್ಣುಗಳೇ ಕಾಣುತ್ತವೆ. 'ಹೊಟ್ಟೆ ಹಸ್ದಿರುತ್ತೆ.. ತಗ..' ಎಂದ ಮುದುಕಿ ಒಂದು ಗೊಂಚಲು ಬಾಳೆಹಣ್ಣನ್ನು ನೀಡುತ್ತಾಳೆ. ಆತ ತಾವು ಒಂದೆರೆಡು ತೆಗೆದುಕೊಳ್ಳಿ ಎಂದಾಗ ಬೇಡವೆಂಬಂತೆ ಆಕೆ ತಲೆಯನ್ನು ಅಲ್ಲಾಡಿಸುತ್ತಾಳೆ. ನೀರು ಕಾಣದ ನೆಲದಂತಾಗಿದ್ದ ರಾಹುಲ್ನ ಹೊಟ್ಟೆಯ ಬಾಯಾರಿಕೆ ಕ್ಷಣಮಾತ್ರದಲ್ಲಿ ಅಷ್ಟೂ ಹಣ್ಣುಗಳನ್ನು ತಿನ್ನಿಸುತ್ತದೆ. ಮುದುಕಿ ರಾಹುಲ್ನನ್ನು ನೋಡಿ ನಗುತ್ತಾಳೆ. ನಗುವಾಗ ಆಕೆಯ ಕಂದುಮಿಶ್ರಿತ ಹಲ್ಲುಗಳು ಹೊರಬಂದು ವಿಕಾರವಾಗಿ ಕಾಣತೊಡಗುತ್ತವೆ. ನಂತರ ರಾಹುಲ್ ಆಕೆಯನ್ನು ವಿಚಾರಿಸುತ್ತಾ ಆಕೆಯ ಹೆಸರು, ಊರು, ಮೆನೆಯವರು ಎಲ್ಲವನ್ನು ಕೇಳುತ್ತಾ ಆಕೆ ಈ ಗುಡಿಸಿಲಿನಲ್ಲಿ ಒಬ್ಬಳೇಕೆ ಇರುವುದೆಂದು ಕೇಳುತ್ತಾನೆ.

ಆಕೆಯ ಹೆಸರು ಕೆಂಚಿಯೆಂದೂ, ಆಕೆ ದೂರದ ಬಯಲುಸೀಮೆಯವಳೆಂದು ಮದುವೆಯ ನಂತರ ಗಂಡನೊಟ್ಟಿಗೆ ಇಲ್ಲಿಗೆ ಬಂದು ಸಂಸಾರ ಊಡಿದಳೆಂದು ಮುದುಕಿ ತನ್ನ ಬಗ್ಗೆ ಹೇಳತೊಡಗುತ್ತಾಳೆ. ಮದುವೆಯ ಒಂದು ವರ್ಷದ ನಂತರ ಆಕೆಗೆ ಗಂಡುಮಗುವೊಂದು ಜನಿಸುತ್ತದೆ. ಆಕೆಯ ಗಂಡ ಮಗುವಾದ ನಂತರ ಪರಸ್ತ್ರೀಯ ಸಂಗವನ್ನು ಬಯಸುತ್ತ ಪಕ್ಕದ ಊರಿನ ದ್ಯಾವಿ ಎಂಬ ಹುಡುಗಿಯ ಹಿಂದೆ ಬೀಳುತ್ತಾನೆ. ಆ ದ್ಯಾವಿ ಮದುವೆಯ ಕನಸೊತ್ತ ಹದಿನಾರರ ಚಲುವೆ. ಕೆಂಚಿಯ ಗಂಡನ ಮೋಹಕ ಮಾತುಗಳಿಗೆ ಬಲಿಯಾಗಿ ಪ್ರತಿದಿನ ರಾತ್ರಿ ಆ ಒಂಟಿಬೆಟ್ಟದ ತಪ್ಪಲಿನಲ್ಲಿ ಸಿಗತೊಡಗುತ್ತಾಳೆ. ದಿನಗಳೆದಂತೆ ವಿಷಯ ದ್ಯಾವಿಯ ಅಪ್ಪನಿಗೆ ಗೊತ್ತಾಗಿ ಒಂದುದಿನ ಆತ ಮನಬಂದಂತೆ ಆ ಹುಡುಗಿಗೆ ಥಳಿಸಿ ರಾತ್ರೋ ರಾತ್ರಿ ಆಕೆಯ ಕೈಗಳುಗಳೆರಡನ್ನು ಕಟ್ಟಿ ಪ್ರಾಣಿಗಳನ್ನು ಎಳೆದು ತಂದಂತೆ ಎಳೆದುಕೊಂಡು ಬಂದು ಕೆಂಚಿಯ ಮೆನೆಯ ಮುಂದೆ ಎಸೆದುಹೋಗುತ್ತಾನೆ. ಕೆಳಜಾತಿಯವರಾದ್ದರಿಂದಲೋ ಏನೋ ಆತ ನ್ಯಾಯವನ್ನಾಗಲಿ, ಜಗಳವನ್ನಾಗಲಿ ಮಾಡಲೋಗುವುದಿಲ್ಲ. ಗಾಯದ ಮಡುವಿನಲ್ಲಿ ನರಳುತ್ತಿದ್ದ ಆಕೆಯನ್ನು ಕಂಡು ಕೆಂಚಿ ಶುಶ್ರುಶೆಯನ್ನು ಮಾಡಿ ತನ್ನ ಗುಡಿಸಿನಲ್ಲೇ ಮಲಗಿಸಿಕೊಳ್ಳುತ್ತಾಳೆ. ವಿಷಯ ತಿಳಿದ ಕೆಂಚಿಯ ಗಂಡ ತಮ್ಮಿಬ್ಬರ ಬಗ್ಗೆ ಕೆಂಚಿಗೆ ತಿಳಿಸದೇ ಗೌಪ್ಯವಾಗಿರುವಂತೆ ದ್ಯಾವಿಗೆ ಹೇಳುತ್ತಾನೆ. ದಿನಗಳೆದಂತೆ ಇಲ್ಲಿಯೂ ಕೆಂಚಿ ನೀರು ತರಲು ಅಥವಾ ಬಟ್ಟೆಯೊಗೆಯಲು ಹೊಳೆಯಬಳಿಗೆ ಹೋದಾಗ ಆತ ದ್ಯಾವಿಯನ್ನು ಕಾಡತೊಡಗುತ್ತಾನೆ. ಬಲವಂತ ಮಾಡುತ್ತಾನೆ. ಅತ್ತ ಕಡೆ ತಾನು ಹುಟ್ಟಿ ಬೆಳೆದ ಮನೆಗೂ ಹೋಗಲಾಗದೆ ಇತ್ತ ಕಡೆ ಈತನ ಕಾಟವನ್ನೂ ತಡೆಯಲಾಗದೆ ದ್ಯಾವಿ ದಿನೇ ದಿನೇ ಸೊರಗುತ್ತಾಳೆ. ಒಂದು ದಿನ ಪಾತ್ರೆಯನ್ನು ತೊಳೆಯಲು ಹೋದ ಕೆಂಚಿ ಬಿಟ್ಟ ಮತ್ತೊಂದು ಪಾತ್ರೆಯನ್ನು ತರಲು ವಾಪಸ್ಸು ಬಂದಾಗ ತನ್ನ ಗಂಡ ದ್ಯಾವಿಯ ಮೇಲೆರಗಿರುವ ನಗ್ನ ದೃಶ್ಯವನ್ನು ಕಂಡು ಕೆಂಡಾಮಂಡಲವಾಗುತ್ತಾಳೆ. ಕೂಡಲೇ ಪಕ್ಕದಲ್ಲಿದ್ದ ತಡಿಗೆಯನ್ನು ತೆಗೆದು ಗಂಡನಿಗೂ ದ್ಯಾವಿಗೂ ಮನಬಂದಂತೆ ಬಡಿಯತೊಡಗುತ್ತಾಳೆ. ದ್ಯಾವಿ ಕೆಂಚಿಯ ಕಾಲಿಡಿಯುತ್ತಾ ಕ್ಸಮಿಸಬೇಕೆಂದೂ, ಇದರಲ್ಲಿ ತನ್ನ ತಪ್ಪೇನೂ ಇಲ್ಲವೆಂದು ಅಂಗಲಾಚಿ ಬೇಡಿಕೊಳ್ಳುತ್ತಾಳೆ. ಆದರೆ ಕೆಂಚಿ ಇದ್ಯಾವುದನ್ನು ಕೇಳುವ ಸ್ಥಿತಿಯಲ್ಲಿರುವುದಿಲ್ಲ. ಆ ದಿನದಿಂದಲೇ ತನ್ನ ಗಂಡನನ್ನೂ ಆಕೆಯನ್ನು ಮನೆಯಿಂದ ಹೊರಗಟ್ಟಿ ಇನ್ನೆಂದೂ ತನಗೆ ಮುಖವನ್ನು ತೋರಿಸಬಾರದೆಂದು ಅರಚುತ್ತಾಳೆ. ನಂತರ ಅದೆಷ್ಟೋ ತಿಂಗಳುಗಳ ಕಾಲ ಅವರಿಬ್ಬರೂ ಏನಾದರೆಂದು ತಿಳಿಯಲಿಲ್ಲ. ಕೊನೆಗೆ ಯಾರಿಂದಲೋ ಕೇಳಿದ ವಿಷಯ ಕೆಂಚಿಯ ಮರ್ಯಾದೆಯೇ ಅರಾಜಾಕುವಂತೆ ಮಾಡುತ್ತದೆ. ತನ್ನ ಗಂಡ ಆಕೆ ಹಾಗು ಇನ್ನು ಕೆಲವರು ಸೇರಿ ದೂರದ ಊರಿನಲ್ಲಿ ವೈಶ್ಯವಾಟಿಕೆಯನ್ನು ಶುರುಮಾಡಿದ್ದರೆಂದೂ ಈಗ ಇಡೀ ಊರಿಗೆ ಊರೇ ಸಂಜೆಯಾದರೆ ಅಲ್ಲಿ ನೆರೆಯುತ್ತಾರೆಂದು ತಿಳಿಯುತ್ತಾಳೆ. ಹಣೆಯ ಮೇಲೆ ಬರೆದಂತೆ ನೆಡೆಯುತ್ತದೆ ಎಂದುಕೊಂಡು ಇದ್ದೊಬ್ಬ ಮಗನನ್ನು ಕಷ್ಟಪಟ್ಟು ಬೆಳೆಸುತ್ತಾ ಹೋಗುತ್ತಳೆ ಕೆಂಚಿ. ವರುಷಗಳು ಉರುಳಿದವು. ಆದರೆ ವಿಪರ್ಯಾಸವೆಂಬಂತೆ ವಯಸ್ಸಿಗೆ ಬಂದ ತನ್ನ ಮಗನೂ ಕೊನೆಗೆ ಅದೇ ವೈಶ್ಯವಾಟಿಕೆಯ ಅಡ್ಡದ ಗಿರಾಕಿಯಾಗಿ ದಿನಕಳೆಯತೊಡಗುತ್ತಾನೆ. ವಿಷಯ ತಿಳಿದ ಕೆಂಚಿ ವಿಧವಿಧವಾಗಿ ಮಗನಿಗೆ ಬುದ್ದಿಯನ್ನು ಹೇಳಿದರೂ ಆತ ಅಲ್ಲಿಗೆ ಹೋಗುವುದ ಮಾತ್ರ ನಿಲ್ಲಿಸಲಿಲ್ಲ. ಜೀವನಕ್ಕಾಗಿ ಇದ್ದೊಬ್ಬ ಮಗನೂ ಹೀಗೆ ಅಡ್ಡದಾರಿ ಹಿಡಿದಿದ್ದನ್ನು ಕಂಡ ಕೆಂಚಿ ಶತಾಯಗತಾಯ ಏನಾದರು ಮಾಡಲೇಬೇಕೆಂದು ಒಂದು ದಿನ ತಿಳಿಯದಂತೆ ಮಗನನ್ನು ಹಿಂಬಾಲಿಸುತ್ತಾಳೆ. ಅದೆಷ್ಟೋ ಸಮಯ ನೆಡೆದ ನಂತರ ದ್ಯಾವಿಯ ಮನೆ ಕಾಣುತ್ತದೆ. ಅದರ ಹೊರಜಗಲಿಯಲ್ಲಿ ನಾಲ್ಕೈದು ಜನರ ಸಣ್ಣ ಸಣ್ಣ ಗುಂಪುಗಳು ಇಸ್ಪೀಟನ್ನು ಆಡುತ್ತಾ, ಕಳ್ಳಭಟ್ಟಿಯನ್ನು ಕುಡಿಯುತ್ತಾ ಮತ್ತಿನಲ್ಲಿ ಮರೆತ್ತಿರುತ್ತದೆ. ಆಗೊಮ್ಮೆ ಈಗೊಮ್ಮೆ ಒಬ್ಬೊಬ್ಬ ಗಂಡಸರೂ ಆ ಮೆನೆಯ ಒಳಗೊಗಿ ಹೊರಬರುತ್ತಿರುತ್ತಾರೆ. ಕೆಂಚಿಯೂ ವಿಧವಿಧವಾದ ಖಾದ್ಯವನ್ನು ತಯಾರಿಸಿ ನೆರೆದಿದ್ದವರಿಗೆಲ್ಲ ತಂದು ಕೊಡುತ್ತಿರುತ್ತಾಳೆ. ಹಾಗೆ ಬಂದಾಗಲೆಲ್ಲ ಕೆಲವರು ಆಕೆಯ ಕೈಯನ್ನು ಹಿಡಿದೆಳೆದು ಆಕೆಯನ್ನು ಚುಂಬಿಸಲು ಪ್ರಯತ್ನಿಸುತ್ತಿರುತ್ತಾರೆ. ಮೊದಮೊದಲು ಕೊಸರಾಡುವ ಆಕೆ ಚಿಲ್ಲರೆಯ ಗಂಟುಗಳು ಹೊರಬಿದ್ದಕೂಡಲೇ ಬದಲಾಗುತ್ತಾಳೆ. ಆ ವ್ಯಕ್ತಿಯನ್ನು ಮೋಹಿಸಿದಂತೆ ನಟಿಸಿ ಒಳಬರುವಂತೆ ಸಂಜ್ಞೆ ಮಾಡುತ್ತಾಳೆ. ಇದನ್ನೆಲ್ಲಾ ದೂರದಲ್ಲಿ ನಿಂತು ನೋಡುತ್ತಿದ್ದ ಕೆಂಚಿಗೆ ಕೋಪ ನತ್ತಿಗೇರುತ್ತದೆ. ತನ್ನ ಮಗ ಎಲ್ಲಾದರೂ ಕಾಣುತ್ತಾನೇನೋ ಎಂದು ಕಾಯುತ್ತಾಳೆ. ಎಷ್ಟೇ ಹೊತ್ತು ಕಾದರೂ ಆತನ ಚಹರೆ ಅಲ್ಲಿ ಕಾಣುವುದಿಲ್ಲ. ಕೆಲಸಮಯದ ನಂತರ ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಕೆಂಚಿಯ ಮಗನು ಆ ಮನೆಯಿಂದ ತೂರಾಡುತ್ತಾ ಹೊರಬರುತ್ತಾನೆ.ಆತ ಹುಡುಗಿಯೊಬ್ಬಳ ಕೈಯನ್ನು ಹಿಡಿದೆಳೆಯುತ್ತಿರುತ್ತಾನೆ ಹಾಗು ಮತ್ತೊಂದು ಕೈಯಲ್ಲಿ ಮದ್ಯದ ಬಾಟಲಿ. ಕೂಡಲೇ ಹೊರಬಂದ ದ್ಯಾವಿ ಹಾಗು ತನ್ನ ಗಂಡ ಕೆಂಚಿಯ ಮಗನಿಂದ ಆ ಹುಡುಗಿಯನ್ನು ಬಿಡಿಸಿ ಮೆಟ್ಟಿಲಿನಿಂದ ಜಾಡಿಸಿ ಒದೆಯುತ್ತಾರೆ. ಮೊದಲೇ ಕುಡಿದ ಮತ್ತಿನಲ್ಲಿದ್ದ ಆತ ಒಮ್ಮೆಲೇ ಬಂದು ನೆಲದ ಮೇಲೆ ಅಪ್ಪಳಿಸುತ್ತಾನೆ. ಮಗ ನಶೆಯಲ್ಲಿದ್ದರೂ, ಪರಸ್ತ್ರೀಯರ ಸಂಗವನ್ನು ಮಾಡಿ ಬಂದಿದ್ದರೂ ಕೆಂಚಿಗೆ ತಡೆಯಲಾಗಲಿಲ್ಲ. 'ಮಗನೇ..' ಎನ್ನುತ್ತಾ ತನ್ನ ದೊಡ್ಡ ಧ್ವನಿಯಲ್ಲಿ ಆಕ್ರಂದಿಸುತ್ತಾ ಹೋಗಿ ತಬ್ಬಿಕೊಳ್ಳುತ್ತಾಳೆ. ಮಗನ ರಕ್ತಮಯ ಮುಖವನ್ನು ಕಂಡ ಕೆಂಚಿ ಕೂಡಲೇ ಪ್ರತಿಜ್ಞೆ ಮಾಡುವವಳಂತೆ ಇನ್ನೊಂದು ತಿಂಗಳಲ್ಲಿ ದ್ಯಾವಿ ಹಾಗು ತನ್ನ ಗಂಡನ ಜೀವವನ್ನು ಬಲಿಪಡೆಯದಿದ್ದರೆ ತನ್ನ ಹೆಸರು ಕೆಂಚಿಯೇ ಅಲ್ಲ ಎಂದು ಹೇಳಿಬರುತ್ತಾಳೆ.

ಅಲ್ಲಿಂದ ಮುಂದೆ ತನ್ನ ಮಗನನ್ನು ಸಮಜಾಯಿಸಿ ಆ ಅಡ್ಡದಲ್ಲಿರುವ ವ್ಯಕ್ತಿ ಈತನ ಸ್ವಂತ ಅಪ್ಪನೆಂದ ಮೇಲೆ ಕೆಂಚಿಯ ಮಗನೂ ಅತ್ತ ಕಡೆ ಹೋಗುವುದನ್ನು ನಿಲ್ಲಿಸುತ್ತಾನೆ. ಅಲ್ಲದೆ ಕೆಂಚಿ ತನಗೆ ತಿಳಿದ ಜನರಿಂದ ವಿಚಾರಿಸಿ ಹುಡುಗಿಯೊಬ್ಬಳನ್ನು ಗೊತ್ತು ಮಾಡಿ ಮಗನಿಗೆ ಮದುವೆ ಮಾಡುವುದೆಂದೂ ತೀರ್ಮಾನಿಸುತ್ತಾಳೆ. ಆದರೆ ಅದೇ ಸಮಯಕ್ಕೆ ಆಕೆಗೆ ತನ್ನ ಪ್ರತಿಜ್ಞೆಯ ಅರಿವಾಗುತ್ತದೆ. ತನಗೆ ತಿಳಿದಿದ್ದ ತಂತ್ರವಿದ್ಯೆಯನ್ನೆಲ್ಲ ಪ್ರಯತ್ನಿಸಿ ನೋಡುತ್ತಾಳೆ. ಕೊನೆಗೆ ಅದೊಂದು ಅಮಾವಾಸ್ಯೆಯ ದಿನ ಹಿಟ್ಟಿನ ಗೊಂಬೆಗಳೆರಡನ್ನು ಮಾಡಿ ಅವುಗಳಿಗೆ ಪೂಜೆಯನ್ನು ಮಾಡಿ ತಾನು ಬಲ್ಲ ಮಂತ್ರಗಳನೆಲ್ಲ ಹೇಳುತ್ತಾ ಕತ್ತಿಯಿಂದ ಎರಡೂ ಗೊಂಬೆಗಳ ತಲೆಯನ್ನು ಉದುರಿಸುತ್ತಾಳೆ. ಮಾರನೇ ದಿನ ದ್ಯಾವಿ ಹಾಗು ಆತನ ಗಂಡ ರಕ್ತ ಕಾರಿಕೊಂಡು ಸತ್ತರೆಂಬ ಸುದ್ದಿ ಬಂದು ಮುಟ್ಟುತ್ತದೆ.

ಕೆಂಚಿಯ ಕತೆಯನ್ನು ಕೇಳುತ್ತಾ ಮಗ್ನನಾಗಿದ್ದ ರಾಹುಲ್ನಿಗೆ ಜಬಜಬನೇ ಸುರಿಯಹತ್ತಿದ ಮಳೆಯ ಸದ್ದು ವಿಚಲಿತಪಡಿಸುತ್ತದೆ. ಕೂಡಲೇ ಗುಡಿಸಲಿನ ಮರದ ಬಾಗಿಲು ಒಂದೇ ಸಮನೆ ಬಡಿದುಕೊಳ್ಳತೊಡಗುತ್ತದೆ.

'ಏ .. ಮಾರಿಮುಂಡೆ .. ಏನ್ ನಿಜ ಕೇಳಿ ಮೈ ಉರಿತ ಇದ್ಯೇನೆ.. ಆದ್ರಗಿತ್ತಿ, ನನ್ನ ಬಾಳನ್ನೇ ಹಾಳ್ ಮಾಡಿದಲ್ಲದೆ, ನನ್ನ ಗಂಡ, ಮಗನ್ನೂ ಕಿತ್ತ್ ತಿಂದಲ್ಲೇ, ನಾಳೇನೇ ಕೊನೆ, ಅದೇನ್ ಕಿಸ್ಕೊಂತೀಯೋ ಕಿಸ್ಕ' ಎಂದು ಅಜ್ಜಿ ಕೂಗಿಟ್ಟಳು. ಅಜ್ಜಿಯ ಆ ಸದ್ದಿಗೆ ಗಾಳಿ ತಣ್ಣಗಾಗಿ ಬಾಗಿಲು ಬಡಿಯುವುದೂ ಒಮ್ಮೆಲೇ ನಿಂತಿತು. ಹೊರಗಡೆಯ ಮಳೆ ಮಾತ್ರ ಹಾಗೆಯೇ ಮುಂದುವರೆಯಿತು.

ಸ್ವಲ್ಪ ಸಮಯದ ನಂತರ 'ನಿಮ್ಮ ಮಗನ್ನೂ.. ' ಎಂದು ಕೇಳಿದಾಗ,

ಮುದುಕಿ ಉತ್ತರಿಸುತ್ತಾ, ಹೌದು. ಆ ರಂಡೆ ಸತ್ತ್ ನರ್ಕ ಸೇರ್ದೆ ಇಲ್ಲೇ ಅಲೀತ ಕೂತ್ಲು. ಆಕೆ ಕಣ್ಣ್ ನನ್ನ್ ಮಗುನ್ ಮ್ಯಾಲೆ ಬಿತ್ತು ಎನ್ನುತ್ತಾ, ಮಗ ಇವೆಲ್ಲ ಚಟವನ್ನು ಬಿಟ್ಟು ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿಸಿಕೊಂಡು ಇರುವಾಗ ಆಕೆ ಅಮಾವಾಸ್ಯೆಯ ದಿನದಂದು ಚಿತ್ರ ವಿಚಿತ್ರ ರೀತಿಯಲ್ಲಿ ಬಂದು ಮಗನಿಗೆ ಕಾಟ ಕೊಡುತ್ತಿದ್ದದಾಗಿಯೂ, ಮಗ ಕೊನೆಗೆ ಭಯವನ್ನು ತಾಳಲಾರದೆ ಮದುವೆ ಇನ್ನೇನು ನಾಲ್ಕು ದಿನಗಳಿದ್ದವು ಎನ್ನುವಾಗ ಕೆರೆಗೆ ಹಾರಿ ಪ್ರಾಣ ಬಿಟ್ಟನೆಂದು ಹೇಳಿದಳು. ಅಲ್ಲಿಂದ ಮುಂದೆ ತನಗೂ ಕೊಡಬಾರದ ಕಾಟವನ್ನೆಲ್ಲ ಕೊಟ್ಟರೂ ತಾನು ಒಬ್ಬಳೇ ಆಕೆಯ ಅಷ್ಟೂ ಉಪಟಳಗಳನ್ನು ಹೇಗೋ ಸಹಿಸಿಕೊಂಡು ಬಂದಳೆಂದಳು. ಮುಂದೆ ಹೀಗೆಯೇ ವಯಸ್ಸಿಗೆ ಬಂದ ಹುಡುಗರ ಜೀವ ಪಡೆಯುವ ಖಯಾಲಿಯನ್ನು ಬೆಳೆಸಿಕೊಂಡು ಪ್ರತಿಬಾರಿಯೂ ಒಬ್ಬೊಬ್ಬರನು ಬಲಿಪಡೆದಾಗಲೂ ಆಕೆಯ ಆಕೃತಿ ದೊಡ್ಡದಾಗುತ್ತಾ ಹೋಯಿತೆಂದು ಅಜ್ಜಿ ಹೇಳುತ್ತಾಳೆ.

ಸ್ವಲ್ಪ ಯೋಚಿಸಿದ ರಾಹುಲ್ 'ಅಜ್ಜಿ ಅದೇನೇ ಆಗಲಿ.. ನೀವು ಆಕೆಯ ವಿರುದ್ಧ ಮಾಠ ಮಂತ್ರ ಮಾಡಿದ್ದು ಸರಿಯಲ್ಲ ಅನ್ಸುತ್ತೆ. ಪರಿಸ್ಥಿತಿ ಆಕೆಯನ್ನು ಹಾಗೆ ಮಾಡಿರಬಹುದು. ನಿಮ್ಮ ಗಂಡ ಆಕೆಯನ್ನು ವೈಶ್ಯವಾಟಿಕೆಗೆ ತಳ್ಳಿರಬಹುದು. ಅತ್ತ ಆಕೆಯ ಮನೆಯವರೂ ಆಕೆಗೆ ಸಹಾಯ ಮಾಡಲು ಬರಲಿಲ್ಲ. ಇಪ್ಪತ್ತು ತುಂಬದ ಹುಡುಗಿಯಾಗಿ ತಾವೇ ಆ ಸ್ಥಾನದಲ್ಲಿದ್ದರೆ ಏನು ಮಾಡುತ್ತಿದ್ದೀರಿ' ಎಂದು ಕೇಳುತ್ತಾನೆ.

ಕೂಡಲೇ ಅಜ್ಜಿ ರಾಹುಲ್ನನ್ನ ದುರುಗುಟ್ಟಿ ನೋಡತೊಡಗಿದಳು. ಭಯಂಕರ ಸರಿಸೃಪದಂತಹ ಕಣ್ಣಿನ ಆ ತೀಕ್ಷ್ಣನೋಟ ರಾಹುಲ್ಗೆ ಆ ಚಳಿಯಲ್ಲೂ ಹಣೆಗಳ ಮೇಲೆ ಬೆವರಿನ ಹನಿಗಳು ಮೂಡುವಂತೆ ಮಾಡಿದವು. ಆ ನೋಟವನ್ನು ನೋಡಲಾಗದೆ ರಾಹುಲ್ ಬೇರೆಡೆ ತಿರುಗಿದ.
'ಏಯ್.. ಏನ್ಲಾ ನೀನು ಅವ್ಳ್ ಪರವಾಗಿ ಮಾತಾಡೋದು.. ನಿಂಗಿತ್ತ ನಂಗೊತ್ತು ಆ ಹಡಬೆ ಬಗ್ಗೆ.. ನೀ ಮುಚ್ಕಂಡಿರು' ಎಂದು ಅತಿ ಒರಟು ಧ್ವನಿಯಲ್ಲಿ ಆಕೆ ಹೇಳಿದಳು. ಆ ಮಾತಿನ ಧಾಟಿಗೆ, ಗಡಸುತಕ್ಕೆ ರಾಹುಲನಿಗೆ ಮಾತೇ ಹೊರಡಲಿಲ್ಲ. ಗಂಡನನ್ನು ಕಳೆದುಕೊಂಡ ಹೆಂಗಸಿನ ರೊಚ್ಚಿರಬಹುದೆಂದು ಆತ ಮುಂದೇನು ಮಾತಡಲಿಲ್ಲ. ಕೆಲಹೊತ್ತಿನ ನಂತರ ಆಕೆ ರಾಹುಲ್ಗೆ ಮಲಗಲು ಹೇಳಿ ತಾನು ಸ್ವಲ್ಪ ಸಮಯದ ನಂತರ ಪಕ್ಕದ ಕೋಣೆಯಲ್ಲಿ ಬಂದು ಮಲಗುವುದಾಗಿ ಹೇಳಿ ಉರಿಯುತ್ತಿದ್ದ ಚಿಮಣಿಯನ್ನು ಹೊರತೆಗೆದುಕೊಂಡು ಹೋಗುತ್ತಾಳೆ. ಗುಡಿಸಲನ್ನು ಮಹಾ ಕತ್ತಲೆಯೊಂದು ಪುನ್ಹ ಆವರಿಸಿತು.ಭಯದಲ್ಲೇ ಆತ ಕಣ್ಣನ್ನು ಮುಚ್ಚಿದ.

ಎಷ್ಟೋ ಸಮಯದ ನಂತರ ಯಾರೋ ಬಂದು ರಾಹುಲ್ ನನ್ನು ಬಡಿದಂತಾಯಿತು. ಆದರೆ ಅಲ್ಲಿ ಯಾರೂ ಇದ್ದಂತೆ ಕಾಣಲಿಲ್ಲ. ತನ್ನ ವಾಚಿನಲ್ಲಿ ಸಮಯವನ್ನು ನೋಡಲು ಹೋದಾಗಲೂ ಆತನಿಗೆ ಅದು ಕತ್ತಲೆಯಲ್ಲಿ ಸರಿಯಾಗಿ ಕಾಣಲಿಲ್ಲ. ಒಂದು ಕ್ಷಣಕ್ಕೆ ಸುಮ್ಮನಾದ ಆತ ಗುಡಿಸಲಿನ ಮೂಲೆಯಲ್ಲಿ ಯಾರೋ ನಿಂತು ಅಳುತ್ತಿರುವ ಹಾಗೆ ಭಾಸವಾಗುತ್ತದೆ. ಕಪ್ಪು ಮುದ್ದೆಯ ದೈತ್ಯಾಕಾರ ಕೊಂಚ ಗಮನವಿಟ್ಟು ನೋಡಿದರೆ ಅಸ್ಪಷ್ಟವಾಗಿ ಕಾಣುತ್ತಿತ್ತು. ಎಳೆಯ ಹೆಣ್ಣುಮಗಳ ಆ ಧ್ವನಿ ಅಜ್ಜಿಯದಂತೂ ಆಗಿರಲೇ ಇಲ್ಲ. ಆದರೂ ಆತ 'ಅಜ್ಜಿ.. ' ಎಂದು ಒಮ್ಮೆ ಸಣ್ಣ ಧ್ವನಿಯಲ್ಲಿ ಕೂಗುತ್ತಾನೆ. ಆ ಕಡೆಯಿಂದ ಯಾವುದೇ ಉತ್ತರವಿಲ್ಲ. ಪಕ್ಕದ ಕೋಣೆಯಲ್ಲಿ ತಾನು ಮಲಗಿರುವುದಾಗಿ ಅಜ್ಜಿ ಹೇಳಿದ ಮೇಲೆ ಆಕೆ ಅಲ್ಲಿರಬಹುದೇ? ಮೇಲೇಳಲು ಆತನಿಗೆ ಧೈರ್ಯ ಸಾಲುವುದಿಲ್ಲ. ಆ ಕೋಣೆಯಿಂದ ಯಾವುದೇ ಬೆಳಕೂ ಸಹ ಮೂಡುತ್ತಿರಲಿಲ್ಲ. ಅಳುವ ಸದ್ದು ಮಾತ್ರ ಮುಂದುವರೆಯಿತು

'ಯಾ..ಯಾ.. ಯಾರು' ಎಂದ ರಾಹುಲ್. ಆತನ ಧ್ವನಿಯಲ್ಲಾಗಲೇ ಅಳುವು ಸಹಜ ಮನೆಮಾಡಿತ್ತು.

'ಹೆದರಬೇಡಿ ಬುದ್ದಿ.. ನಾನೇನು ಮಾಡಕಿಲ್ಲ ನಿಮ್ಗೆ' ಎಂದಿತು ಆ ಧ್ವನಿ. ಆದರೂ ರಾಹುಲ್ನಿಗೆ ಭಯ ತಡೆಯಲಾಗಲಿಲ್ಲ. ಏನೇಳಬೇಕು ಅಥವಾ ಏನನ್ನು ಮಾಡಬೇಕೆಂಬುದೂ ಆತನಿಗೆ ತೋಚಲಿಲ್ಲ. ಕೂಡಲೇ ಅದು ಮುಂದುವರೆದು,

'ಬುದ್ದಿ ನಾನು ಅಕ್ಕ ಹೇಳಿದ ದ್ಯಾವಿ ' ಎಂದಿತು ಆ ಧ್ವನಿ. ಮಾತನ್ನು ಕೇಳಿ ರಾಹುಲ್ ಭಯದಿಂದ ಅಕ್ಷರ ಸಹ ಅಳತೊಡಗಿದ. ದೇವರೇ ಇದೂ ಸಹ ಮೊದಲು ಕಂಡಂತಹ ಕನಸ್ಸಾಗಲಿ ಎಂದು ಬೇಡಿಕೊಳ್ಳತೊಡಗಿದ. ಕಡು ಕತ್ತಲೆಯ ಆಳವಾದ ಭಯಂಕರ ಭಾವಿಯೊಳಗೆ ಆತ ಸಿಲುಕಿಕೊಂಡಿರುವಂತೆ ಆತನಿಗೆ ಅನಿಸುತ್ತದೆ. ಅದೆಷ್ಟೋ ವರ್ಷಗಳ ಹಿಂದೆ ಸತ್ತಿರುವ ಅತೃಪ್ತ ಆತ್ಮವೊಂದು ನನ್ನ ಮುಂದಿದೆ ಎಂಬುದನ್ನು ಕಲ್ಪಿಸಿಕೊಂಡೇ ಆತನ ಭಾಗಶಃ ಜೀವ ಇಂಗಿದಂತಹ ಅನುಭವವಾಗಿರುತ್ತದೆ. ಹೋದರೆ ಒಮ್ಮೆಲೇ ಜೀವ ಹೊರಟುಹೋಗಲಿ, ಈ ರೀತಿ ಭಯಗೊಂಡು ನರಳುವುದಂತೂ ಬೇಡವೇ ಬೇಡವೆಂದು ಆತ ಮತ್ತೊಮ್ಮೆ ದೇವರಲ್ಲಿ ಬೇಡಿಕೊಳ್ಳುತ್ತಾನೆ. ಅಷ್ಟರಲ್ಲಾಗಲೇ ಆ ಧ್ವನಿ ಪುನ್ಹ ಮುಂದುವರೆದು,

'ಬುದ್ದಿ..ನಾನೇಳೋದನ್ನ ಭಯ ಬಿಟ್ಟು ಕೇಳಿ ಬುದ್ದಿ.. ನೀವೇ ನಂಗೆ ಇರೋ ಕೊನೆ ನಂಬ್ಕೆ! ' ಎಂದ ಅದು ತನ್ನ ಕತೆಯನ್ನು ಹೇಳತೊಡಗಿತು. ರಾಹುಲ್ ಮಾತ್ರ ಕೂತಲ್ಲಿಂದ ಅಲುಗಾಡಲಿಲ್ಲ. ಜೋರಾಗಿ ಕೂಗಿಕೊಂಡರೂ ಆ ದೈತ್ಯ ಕಪ್ಪು ಮುದ್ದೆಯಿಂದ ಪಾರಾಗುವುದು ಅಷ್ಟು ಸುಲಭದ ಕೆಲಸವಲ್ಲವೆಂಬುದು ಆತನಿಗೆ ತಿಳಿದಿದ್ದಿತು. ಆತನಿಗಿದ್ದ ಒಂದೇ ಆಯ್ಕೆ ಸಾಧ್ಯವಾದಷ್ಟು ಧೈರ್ಯ ಮಾಡಿ ಆ ಧ್ವನಿ ಏನೇಳುತ್ತದೆ ಎಂದು ಕೇಳುವುದು.

ಅದು ಮುಂದುವರೆದು, ಅಜ್ಜಿ ಹೇಳಿದ ಮಾತುಗಳು ನಾನು ಮತ್ತು ಆಕೆಯ ಗಂಡ ಗುಡಿಸಿಲಿನೊಳಗೆ ಅರೆಬೆತ್ತಲೆಯಾಗಿ ಕಾಣುವವರೆಗೂ ನಿಜವೆಂದು ಅದಾದ ನಂತರ ಹೇಳಿದ ಮಾತುಗಳೆಲ್ಲವೂ ಶುದ್ಧ ಸುಳ್ಳೆಂದು ಹೇಳುತ್ತದೆ. ಕೆರೆಗೆ ಹೋಗಿದ್ದ ಕೆಂಚಿ ಅಂದು ಗುಡಿಸಲಿಗೆ ವಾಪಸ್ಸು ಬಂದಾಗ ಆಕೆಯ ಗಂಡ ನನ್ನನು ಬಲಾತ್ಕಾರ ಮಾಡುವುದನ್ನು ಕಂಡು ಕೆಂಡಾಮಂಡಲವಾಗಿ ನನ್ನನ್ನು, ಆಕೆಯ ಗಂಡನನ್ನು ಥಳಿಸಿ ಅವನನ್ನು ಅಲ್ಲಿಯೇ ಕೊಂದೇ ಹಾಕುತ್ತಾಳೆ! ಆದರೆ ನನ್ನನ್ನು ಮಾತ್ರ ಕೊಲ್ಲದೆ ಪಕ್ಕದ ಊರಿನ ವೈಶ್ಯವಾಟಿಕೆಯ ಅಡ್ಡಕ್ಕೆ ತಬ್ಬುತ್ತಾಳೆ. ಅಸಹಾಯಕಳಾದ ನಾನು ಬೇರೆ ದಾರಿಯಿಲ್ಲದೆ ಅಲ್ಲಿಯೇ ಉಳಿಯಬೇಕಾಯಿತು ಎನ್ನುತ್ತಾಳೆ. ಮೊದಮೊದಲು ಜೀವನವೇ ನರಕವೆಂಬಂತಹ ಪರಿಸ್ಥಿತಿ ಎದುರಾದರೂ ಕ್ರಮೇಣ ಅದೇ ಜೀವನಕ್ಕೆ ಒಗ್ಗಿಕೊಳ್ಳುತ್ತಾಳೆ. ಅಲ್ಲಿಂದ ಮುಂದೆ ಅದೆಷ್ಟೋ ವರ್ಷಗಳವರೆಗೂ ದ್ಯಾವಿ, ಕೆಂಚಿಯ ಮುಖವನ್ನೂ ನೋಡದೆ ವೈಶ್ಯವಾಟಿಕೆಯ ವೃತ್ತಿಯಲ್ಲೇ ಮುಂದುವರೆಯುತ್ತಾಳೆ. ಅದೊಂದು ದಿನ ಪಕ್ಕದ ಊರಿನ ಸುಂದರ ಚೆಲುವ ಮದ್ಯವಯಸ್ಸಿನವಳಾಗಿದ್ದ ದ್ಯಾವಿಯ ಚೆಲುವಿಗೆ ಮನಸ್ಸೋತು ಪ್ರತಿ ದಿನ ಅಲ್ಲಿಗೆ ಬರತೊಡಗಿದ. ಮೊದಲೆಲ್ಲ ಆತನಿಗೆ ಇದೆಲ್ಲ ತಪ್ಪು, ಸರಿಯಲ್ಲ ಎಂದು ಬುದ್ದಿಮಾತು ಹೇಳುತ್ತಿದ್ದ ದ್ಯಾವಿಯೂ ಬರಬರುತ್ತಾ ಆತನ ಮಾತಿಗೆ, ಹಾಸ್ಯಪ್ರಜ್ಞೆಗೆ, ಚೆಲುವಿಗೆ ಹಾಗು ಗಡಸು ಮೈಮಾಟಕ್ಕೆ ಮನಸೊತ್ತಿದ್ದಳು. ಹೀಗೆಯೇ ಮುಂದುವರೆದಾಗ ಅದೊಂದು ದಿನ ಕೆಂಚಿ ಬಂದು ರಾದಂತ ಮಾಡಿದಾಗಲೇ ತಿಳಿದದ್ದು ಆತ ಆಕೆಯ ಮಗನೆಂದು! ಕೂಡಲೇ ದ್ಯಾವಿ ಆಕೆಯ ಕಾಲಿಗೆರಗಿ ಪರಿಪರಿಯಾಗಿ ಬೇಡಿಕೊಂಡರೂ, ಅದಾಗಲೇ ಅಲ್ಲಲ್ಲಿ ಬಿಳಿಗೂದಲು ಕಾಣುತ್ತಿದ್ದ ಕೆಂಚಿ ರಾಕ್ಷಸಿಯಂತಾಗಿ ದ್ಯಾವಿಯನ್ನು ಕಾಡುವುದಾಗಿ ಪ್ರತಿಜ್ಞೆ ಮಾಡುತ್ತಾಳೆ. ಮರದ ಕೊರಡಿನಿಂದ ಮಗನನ್ನು ಪ್ರಾಣಿಗಳಿಗೆ ಬಡಿದಂತೆ ಬಡಿದು ಅರೆಜೀವವಾಗಿದ್ದ ಆತನನ್ನು ಸುರಿಯುತ್ತಿದ್ದ ಮಳೆಯಲ್ಲಿಯೇ ಥರಥರನೆ ಎಳೆದುಕೊಂಡು ಮನೆಗೆ ಹೋಗುತ್ತಾಳೆ. ಮಾಠ ಮಂತ್ರದ ವಿದ್ಯೆಯನ್ನು ತಿಳಿದಿದ್ದ ಆಕೆ ಮುಂದೆ ಅದೇ ಸಿಟ್ಟಿನಲ್ಲಿ ತನ್ನ ಸ್ವಂತಃ ಮಗನನ್ನೇ ಅದಕ್ಕೆ ಆಹುತಿಕೊಟ್ಟು ಹುಚ್ಚಿಯಾದಳಂತೆ! ಅಲ್ಲಿಂದ ಮುಂದೆ ಪ್ರತಿ ಅಮಾವಾಸ್ಯೆಯ ರಾತ್ರಿ ಕಾಡಿನಲ್ಲಿ ಒಬ್ಬಳೇ ಅಲೆಯುತ್ತಾ ಅದೇನೋ ಬಗೆಯ ಚಿತ್ರವಿಚಿತ್ರ ಪೂಜೆಗಳನ್ನು ಮಾಡುತ್ತಾ ದ್ಯಾವಿಯನ್ನೂ ರಕ್ತಕಾರಿ ಸಾಯುವಂತೆ ಮಾಡುತ್ತಾಳೆ. ಆದರೆ ನನ್ನ ಆತ್ಮಕ್ಕೆ ಮುಕ್ತಿ ದೊರೆಯದಂತೆ, ಆಕೆಯ ಆಯಸ್ಸೂ ಸಹ ಕೊನೆಯಾಗದಂತೆ ವಯಸ್ಸಿಗೆ ಬಂದ ಯುವಕರನ್ನು ನನ್ನನ್ನು ಬಳಸಿ ಕಾಡಿನಲ್ಲಿ ದಿಕ್ಕು ತಪ್ಪುವಂತೆ ಮಾಡಿ ವಿಚಿತ್ರ ರೀತಿಯಲ್ಲಿ ಅವರನ್ನು ಕೊಂದು ಅಮರತ್ವವನ್ನು ಸಾಧಿಸಲು ಹೊರಟಿದ್ದಾಳೆ ಎನ್ನುತ್ತಾಳೆ. ಅಲ್ಲದೆ ಹೀಗೆ ಆ ಯುವಕರನ್ನು ಸಾಯಿಸುವಾಗ ಆಕೆ ತನ್ನ ನಿಜರೂಪಕ್ಕೆ ಬಂದು ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಅವರೊಟ್ಟಿಗೆ ದೈಹಿಕ ಸಂಬಂಧವನ್ನು ಹೊಂದುತ್ತಾಳೆ. ಆಕೆಯ ಪ್ರಕಾರ ಗಂಡನನ್ನು, ಮಗನನ್ನು ಕೊಂದ ದ್ಯಾವಿಗೆ ಅದು ಶಿಕ್ಷೆಯಂತೆ! ಹೀಗೆ ನೂರಾರು ಯುವಕರು ಆಕೆಯ ಮಂತ್ರವಿದ್ಯೆಗೆ ಬಲಿಯಾಗಿ ನಶಿಸಿಹೋಗಿದ್ದಾರೆ ಎನ್ನುತ್ತಾಳೆ.

ಕೂಡಲೇ ರಾಹುಲನಿಗೆ ಆ ಅಜ್ಜಿಯ ಮಾತು ನೆನಪಾಗುತ್ತದೆ. ತನ್ನ ಮಗ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಾಗಿಯಾಗಿದ್ದ ಎಂದ ಆಕೆಯ ಮಾತು ನೆನಪಾಗಿ ಆತನ ಮೈ ಜುಮ್ ಎನಿಸುತ್ತದೆ. ಪ್ರಸ್ತುತ ದಿನದಿಂದ ಲೆಕ್ಕ ಹಾಕಿದರೆ ಕನಿಷ್ಠವೆಂದರೂ ನೂರಾಮೂವತ್ತು ವರ್ಷಗಳಾದರೂ ಆ ಮುದುಕಿಗೆ ಈಗ ಆಗಿರಬಹುದು. ಆ ವಿಷಯವನ್ನು ಯೋಚಿಸಿಯೇ ಆತನ ಮೈ ನಡುಗಹತ್ತುತ್ತದೆ. ಭಯವನ್ನು ಹುಟ್ಟಿಸುತ್ತಿದ್ದ ಆ ದೈತ್ಯ ಆಕೃತಿಯ ಅರ್ತಾತ್ ದ್ಯಾವಿಯ ಮಾತುಗಳ ಮೇಲೆ ನಿಧಾನವಾಗಿ ವಿಶ್ವಾಸ ಮೂಡುತ್ತದೆ. ದ್ಯಾವಿ ಮುಂದುವರೆದು,

ನಾಳೆ ಅಮಾವಾಸ್ಯೆಯಾದರಿಂದ ಕೆಂಚಿಯ ಶಕ್ತಿ ಆಗ ನೂರು ಆನೆಯಷ್ಟಾಗುತ್ತದೆ. ಆಗ ಆಕೆಯನ್ನು ಯಾರಿಂದಲೂ ಅಲುಗಾಡಿಸಲಾಗುವುದಿಲ್ಲವೆಂದು ಹೇಳುತ್ತಾಳೆ. ಆದರಿಂದ ಇಂದೇ ಆಕೆಯ ಪೂಜೆಯನ್ನು ನಿಲ್ಲಿಸಿ ಆಕೆಯನ್ನು ಕೊಲ್ಲಬೇಕು. ಆಕೆಯ ಒಳಗಿರುವ ಶಕ್ತಿ ಹೊರ ಹೋದರೆ ನಿಸರ್ಗವೇ ಕ್ಷಣಮಾತ್ರದಲ್ಲಿ ಆಕೆಯನ್ನು ಪಂಚಭೂತಗಳಲ್ಲಿ ಲೀನಗೊಳಿಸುತ್ತದೆ. ಹಾಗೆ ಮಾಡಲು ಆಕೆಗೆ ಕಾಮೋತ್ತೇಜನೆಯನ್ನು ಮಾಡಿ, ಆಕೆಯನ್ನು ನಿಜರೂಪಕ್ಕೆ ತರಿಸಿ, ಮೋಹಗೊಳಿಸಿ ದೂರದಲ್ಲಿರುವ ಕಾಲಭೈರವ ಸ್ವಾಮಿಯ ಗುಡಿಯ ನೂರು ಅಡಿ ಒಳಗೆ ತಂದರೂ ಸಾಕು, ಆಕೆ ಕ್ಷಣಾರ್ಧದಲ್ಲಿ ಬೂದಿಯಾಗಿ ಕೊನೆಯಾಗುತ್ತಾಳೆ. ನಾನೂ ಕೂಡ ಆಕೆಯೊಟ್ಟಿಗೆ ಇಲ್ಲಿಂದ ಮುಕ್ತಿಪಡೆಯಬಹುದು ಎನ್ನುತ್ತಾಳೆ. ಒಂದು ಪಕ್ಷ ಅದು ಸಾಧ್ಯವಾಗದಿದ್ದರೆ ಇನ್ನು ಮುನ್ನೂರು ವರ್ಷಗಳವರೆಗೂ ಆಕೆಯನ್ನು ಯಾರೂ ಏನೂ ಮಾಡಲಾಗುವುದಿಲ್ಲ ಎನ್ನುತ್ತಾಳೆ. ಅಲ್ಲದೆ ಈಗ ಕೆಂಚಿ ಗುಡಿಸಿಲಿನ ಹಿಂದುಗಡೆಯೇ ಮಂತ್ರಾದಿಗಳನು ಮಾಡುತ್ತಾ ಮೈಮರೆತಿದ್ದಾಳೆ ಎಂದು ದ್ಯಾವಿ ಹೇಳುತ್ತಾಳೆ.

ಮಾತುಗಳೆಲ್ಲವನ್ನು ಕೇಳಿದ ರಾಹುಲ್ ಧೈರ್ಯ ತಂದುಕೊಳುತ್ತಾನೆ. ತಾನು ಈಗ ಹೊರಾಡದಿದ್ದರೆ ಸಾವೆಂಬುದು ಕಟ್ಟಿಟ್ಟ ಬುತ್ತಿ. ಕೊನೆಪಕ್ಷ ದ್ಯಾವಿಯ ಮಾತುಗಳಂತೆ ಪ್ರಯತ್ನಿಸಿಯಾದರೂ ನೋಡುವ ಎಂದುಕೊಳ್ಳುತ್ತಾನೆ. ಕಣ್ಣುಮುಚ್ಚಿ ತನ್ನ ಅಮ್ಮನನ್ನು ಒಮ್ಮೆ ನೆನೆದು ಮಾಡುವ ಕಾರ್ಯದ ರೂಪುರೇಷೆಯನ್ನು ಚಿತ್ರಿಸಿಕೊಳ್ಳುತ್ತಾನೆ. ಕೆಲನಿಮಿಷಗಳ ನಂತರ ನಿಧಾನವಾಗಿ ಕಣ್ಣನು ಬಿಡುತ್ತಾನೆ, ಅಲ್ಲಿಯವರೆಗೂ ಕಾಣೆಯಾಗಿದ್ದ ಕೆಂಚಿ ಚಿಮಣಿಯನ್ನು ತನ್ನ ಮುಖದ ಬಳಿಗಿರಿಸಿ ದೈತ್ಯ ಕಡುಗಪ್ಪು ಕಣ್ಣುಗಳನ್ನು ಹಿಗ್ಗಿಸಿ ರಾಹುಲ್ ನನ್ನೇ ಧಿಟ್ಟಿಸುತ್ತಾ ನಿಂತಿರುತ್ತಾಳೆ. ಚಿಮಣಿಯ ಬೆಳಕಿಗೆ ಆಕೆಯ ಮುಖ ಭಯಹುಟ್ಟಿಸುವಂತಿರುತ್ತದೆ. ದ್ಯಾವಿಯ ಆತ್ಮ ಅಷ್ಟರಲ್ಲಾಗಲೇ ಅಲ್ಲಿಂದ ನಾಪತ್ತೆಯಾಗಿರುತ್ತದೆ.

'ಯಾಕ್ಲಾ.. ನಿದ್ದೆ ಬರ್ಲಿಲ್ವಾ..?' ಬೆದರಿಸುವ ಧ್ವನಿಯಲ್ಲಿ ಆಕೆ ಕೇಳಿದಳು.ಕಲ್ಲಿನ ಮೂರ್ತಿಯಂತೆ ಆಕೆಯ ಕಣ್ಣುಗಳಾಗಲಿ, ಬಿಳಿಯ ಕೂದಲಾಗಲಿ ಒಂದಿನಿತೂ ಅಲುಗಾಡುತ್ತಿರಲಿಲ್ಲ.

'ಇಲ್ಲ ನಿದ್ದೆ ಬರ್ತಾ ಇಲ್ಲ.. ಸೆಕೆ' ಎಂದ ರಾಹುಲ್ ತನ್ನ ಟಿಶರ್ಟನ್ನು ತೆಗೆದು ಬದಿಗಿಟ್ಟ. ಕಟ್ಟುಮಸ್ತಾದ ಆತನ ದೇಹವನ್ನು ಕಂಡು ಕೆಂಚಿ ಹಲ್ಲು ಬಿರಿದಳು. ಆಕೆ ನಕ್ಕಂತೆ ಕಂಡರೂ ಕಣ್ಣುಗಳೂ ಮಾತ್ರ ಇನ್ನೂ ಭಯಂಕರವಾಗಿಯೇ ಕೆರಳಿದ್ದವು. ರಾಹುಲ್ ತನ್ನ ಕೈಗಳ ಲಠಿಕೆಗಳನ್ನು ಮುರಿಯತೊಡಗಿದ.

'ಬಾ.. ನಾ ಮಂಗುಸ್ತೀನಿ.. ನನ್ನ್ ತೊಡೆ ಮ್ಯಾಗೆ ಮಂಕ' ಎಂದ ಕೆಂಚಿ ರಾಹುಲ್ನ ಹತ್ತಿರ ಬರತೊಡಗಿದಳು. ದಮ್ಮುಗಟ್ಟಿದ ಏದುಸಿರಿನ ಸದ್ದು ಆಕೆ ಹತ್ತಿರವಾದಂತೆ ಸ್ಪಷ್ಟವಾಗಿ ರಾಹುಲ್ ಗೆ ಕೇಳತೊಡಗಿತು. ಆಕೆ ತನ್ನ ಪಕ್ಕಕ್ಕೆ ಬಂದು ಕೂತು ರಾಹುಲ್ನ ಕೂದಲನ್ನು ಒಮ್ಮೆಲೇ ಹಿಡಿದೆಳೆದು ತನ್ನ ತೊಡೆಯ ಮೇಲೆ ಹಾಕಿಕೊಂಡಳು. ಹೆಬ್ಬೆರಳ ಗಾತ್ರದ ಮೂಳೆಗಳು ಮಾತ್ರ ತನ್ನ ತಲೆಯ ಕೆಳಗಿರುವ ಅನುಭವ ರಾಹುಲನಿಗೆ ಕೂಡಲೇ ಆಯಿತು. ಭಯದಲ್ಲಿ ಆತ ತನ್ನ ಕಣ್ಣುಗಳನ್ನು ಮುಚ್ಚಿಯೇ ಮಲಗಿದ. ಕೆಲಕ್ಷಣಗಳಲ್ಲೇ ಒಣಗಿದ ಮರದ ತೊಗಟೆಗಳು ತನ್ನ ಎದೆಯ ಮೇಲೆ ಹರಿದಾಡಿದಂತಹ ಅನುಭವ ಆತನಿಗೆ. ಅದು ಕೆಂಚಿಯ ಕೈಗಳೇ ಎಂದು ಅರಿಯಲು ಹೆಚ್ಚು ಸಮಯ ಹಿಡಿಯಲಿಲ್ಲ. ಇನ್ನೂ ತಡ ಮಾಡಿದರೆ ಆಗದು ಎಂದರಿತ ರಾಹುಲ್ ಕೂಡಲೇ ಆಕೆಯನ್ನು ಪಕ್ಕಕೆ ತಳ್ಳಿ ಗುಡಿಸಿಲಿನ ಬಾಗಿಲಿಂದ ಹೊರ ಓಡಿದ. ಗುಡಿಸಿಲಿನ ಹಿಂದೆ ಬೆಂಕಿಯ ಕುಂಡ, ಹರಿಶಿನ ಕುಂಕುಮದ ರಾಶಿ, ರುಂಡ ಬೇರ್ಪಟ್ಟ ಎರಡು ಕೋಳಿಗಳು ಬಿದ್ದಿದ್ದವು. ಏನು ಮಾಡಬೇಕೆಂದು ತೋಚದೆ ರಾಹುಲ್ ಚೀರುತ್ತಾ ಎಲ್ಲವನ್ನು ತನ್ನ ಕಾಲಿನಿಂದ ಒದೆಯತೊಡಗಿದ. ಅಷ್ಟರಲ್ಲಾಗಲೇ ಕೆಂಚಿ ರಾಹುಲ್ನ ಹಿಂದೆಯೇ ಬಂದು ನಿಂತಿರುತ್ತಾಳೆ. ಕೆಲಕ್ಷಣಗಳ ಹಿಂದಷ್ಟೇ ಕಂಡ ಆಕೆಯ ದೇಹ ಈಗ ಅಕ್ಷರ ಸಹ ಮಹಾ ಬದಲಾವಣೆಯನ್ನು ಕಂಡಿರುತ್ತದೆ. ಆಕೆಯ ಸೊಂಟದ ಮುಂದಿನ ಬಾಗ ನೆಲಕ್ಕೆ ತಾಗುವಷ್ಟು ಮುಂಬಾಗಿರುತ್ತದೆ ಹಾಗು ಆಕೆಯ ತಲೆ ಹಾವಿನ ಹೆಡೆಯಂತೆ ಮೇಲೇರಲು ಆವಣಿಸುತ್ತಿರುತ್ತದೆ! ಕೀಲಿಕೊಟ್ಟ ಮರದ ಗೊಂಬೆಯಂತೆ ಯಾಂತ್ರಿಕವಾಗಿ ಆಕೆ ಮುಂಬರುತ್ತಾಳೆ. ಮಿಂಚಿನ ವೇಗದಲ್ಲಿ ರಾಹುಲ್ನನ್ನು ಸುತ್ತ ತೊಡಗುತ್ತಾಳೆ. ಗಹಗಹನೇ ನಗುತ್ತಾ ಚೀರತೊಡಗುತ್ತಾಳೆ. ಆ ಸದ್ದಿಗೆ ಇಡೀ ಕಾಡೇ ಮಾರ್ದನಿಸತೊಡಗುತ್ತದೆ. ರಾಹುಲ್ ತನ್ನ ಕಿವಿಯನ್ನು ಗಟ್ಟಿಯಾಗಿ ಮುಚ್ಚಿಕೊಳ್ಳುತ್ತಾನೆ.'ಲೇ..' ಎಂದ ಆಕೆ ಒಮ್ಮೆಲೇ ನಿಂತು ರಾಹುಲ್ನ ತೀರಾ ಸಮೀಪಕ್ಕೆ ಬರತೊಡಗುತ್ತಾಳೆ. ಆನೆಯ ಹೆಜ್ಜೆಗಳಂತೆ ಆಕೆಯ ಪ್ರತಿ ಹೆಜ್ಜೆಗೂ ನೆಲ ಕಂಪಿಸತೊಡಗುತ್ತದೆ. ಬೃಹದಾದ ಪರ್ವತವೊಂದು ತನ್ನ ಮುಂದೆ ನಿಂತಿರುವ ಅನುಭವವಾದರೂ 'ಜೈ ಶ್ರೀ ರಾಮ್ .. ಜೈ ಹನುಮಾನ್' ಎನುತ ರಾಹುಲ್ ಆಕೆಯೆಡೆಗೆ ತನ್ನ ಕಾಲುಗಳಿಂದ ಒದೆಯುತ್ತಾನೆ. ಅದು ತನ್ನ ನಿಜಶಕ್ತಿಯೋ ಅಥವಾ ದೇವರ ನಾಮದ ಮಹಿಮೆಯೋ ಏನೋ ಹತ್ತಾರು ಪ್ರಾಣಿಗಳ ಕೀಚಲು ಧ್ವನಿಯಿಂದ ಚೀರುತ್ತಾ ಅದು ದೂರಹೋಗಿ ಬೀಳುತ್ತದೆ.

ಕೂಡಲೇ ರಾಹುಲ್ನ ಕಿವಿಯ ಬಳಿ 'ಬುದ್ದಿ..' ಎಂದು ಹೇಳಿದ ಸದ್ದಿನ ಅನುಭವವಾಗುತ್ತದೆ. ರಾಹುಲ್ ತನ್ನ ಪಕ್ಕಕ್ಕೆ ತಿರುಗುತ್ತಾನೆ. ಅದೇ ದಿಕ್ಕಿನಲ್ಲಿ ಇನ್ನು ಸ್ವಲ್ಪ ದೂರದಲ್ಲಿ ಮತ್ತದೇ ಸದ್ದು. ಕಾಲಭೈರೇಶ್ವರನ ದೇವಾಲಯದ ದಾರಿತೋದರಲು ದ್ಯಾವಿಯ ಸದ್ದಿದು ಎಂದು ಅರಿಯಲು ಆತನಿಗೆ ಹೆಚ್ಚು ಸಮಯ ಹಿಡಿಯಲಿಲ್ಲ. ಕೂಡಲೇ ಆತ ಆ ಸದ್ದು ಬರುವ ದಿಕ್ಕಿನ ಕಡೆಗೆ ಓಡತೊಡಗುತ್ತಾನೆ. ಕಲ್ಲು ಮುಳ್ಳುಗಳೆಲ್ಲ ಕಾಲಿಗೆ ತಗುಲಿ ಗಾಯಗಳಾಗುತ್ತಿದ್ದರೂ ಅದ್ಯಾವುದೂ ಆತನ ಅರಿವಿಗೆ ಬರುವುದಿಲ್ಲ. ತಾನು ಓಡಲು ಶುರುವಿಟ್ಟು ಒಂದೆರಡು ನಿಮಿಷಗಳಾಗಿರಬಹುದು ಅಷ್ಟರಲ್ಲಾಗಲೇ ತನ್ನನ್ನು ಹಿಂಬಾಲಿಸುತ್ತಿರುವ ಸದ್ದು ಆತನ ಅರಿವಿಗೆ ಬರುತ್ತದೆ. ಹೆಚ್ಚು ಕಡಿಮೆ ಕುದುರೆಯೊಂದು ಹುಚ್ಚೆದ್ದು ಓಡುವಂತೆ. ಆದರೆ ಅದು ಕೆಂಚಿಯಾಗಿರದೆ ದೈತ್ಯ ನಾಯಿಯೊಂದರ ಆಕೃತಿಯಾಗಿರುತ್ತದೆ. ವಿಚಿತ್ರವೆಂಬಂತೆ ಅದು 'ನಿಲ್ಲಲೇ..' ಎಂದು ವಿಕಾರವಾಗಿ ಕೂಗುತ್ತಿರುತ್ತದೆ. ಕೆಂಚಿಯ ಸದ್ದೂ ಅಲ್ಲಿ ಮಿಳಿತಗೊಂಡಿರುವುದು ರಾಹುಲ್ನ ಅನುಭವಕ್ಕೆ ಬಾರದೇ ಇರಲಿಲ್ಲ. ರಾಹುಲ್ ತನ್ನ ಶಕ್ತಿಯನ್ನೆಲ್ಲ ಬಳಸಿ ಓಡತೊಡಗುತ್ತಾನೆ. ದ್ಯಾವಿಯ ಧ್ವನಿ ಆತನಿಗೆ ದಾರಿಯನ್ನು ತೋರಿಸುತ್ತಿರುತ್ತದೆ. ಇನ್ನೇನು ದೂರದಲ್ಲಿ ಗುಡಿಯಾಕಾರದ ಆಕೃತಿಯೊಂದು ಕಾಣತೊಡಗಿತು ಎನ್ನುವಷ್ಟರಲ್ಲಿ ತನ್ನ ಕೂದಲನ್ನು ಹಿಡಿದು ಹಿಂದಕ್ಕೆ ಎಳೆದುಕೊಂಡ ಅನುಭವ. ಆ ಎಳೆತಕ್ಕೆ ಅದೆಷ್ಟೋ ದೂರ ಹಾರಿ ಬಿದ್ದ ರಾಹುಲ್ ನೋವಿನ ಮಡುವಿನಲ್ಲಿ ನರಳತೊಡಗುತ್ತಾನೆ.

'ಏಯ್ ..ಆ ಸೂಳೆಮುಂಡೆ ನಿಂಗೆಲ್ಲ ಏಳಿದ್ಲಾ.. ' ದೈತ್ಯಾಕಾರದ ನಾಯಿ ರಾಹುಲ್ನನ್ನು ಸುತ್ತುತ್ತ ವಿಕಾರವಾಗಿ ಮಾತನಾಡತೊಡಗಿತು. ಕಾಡಿನ ಹಕ್ಕಿಪಕ್ಷಿಗಳೆಲ್ಲವೂ ಚೆಲ್ಲಾಪಿಲ್ಲಿಯಾಗುವಂತೆ ಕೂಗತೊಡಗಿತು. ಕೆಂಚಿ ತನ್ನ ಮಂತ್ರವಿದ್ಯೆಯಿಂದ ನಾಯಿಯ ಒಳಹೊಕ್ಕಿದ್ದಾಳೆ, ಅಲ್ಲದೆ ಜೀವವನ್ನು ಪಡೆಯುವುದಾಗಿದ್ದರೆ ಆಕೆ ನನನ್ನು ಅಷ್ಟರಲ್ಲಾಗಲೇ ಮುಗಿಸಿಬಿಡುತ್ತಿದ್ದಳು, ಅದರಿಂದ ನಾಳೆಯವರೆಗೂ ನನಗೆ ಏನನ್ನೂ ಮಾಡಳು ಎಂಬುದನ್ನು ಆತ ದೃಢಪಡಿಸಿಕೊಂಡ. ಹೇಗಾದರೂ ಮಾಡಿ ಗುಡಿಯ ಬಳಿಗೆ ಈಕೆಯನ್ನು ಕರೆದುಕೊಂಡು ಹೋಗಬೇಕು. ಕೂತಲ್ಲೇ ಆತನ ಚಿತ್ತ ಓಡತೊಡಗಿತು. ದೈತ್ಯಾಕಾರದ ನಾಯಿ ಆತನನ್ನು ಸುತ್ತುವರೆಯುತ್ತಲೇ ಇದ್ದೀತು. ರಾಹುಲ್ ಎದ್ದುನಿಲ್ಲುತ್ತಾನೆ. ತಾನು ಧರಿಸಿದ್ದ ವಸ್ತ್ರಗಳನೆಲ್ಲ ಕಳಚಿ ನೆಲಕ್ಕೆಸೆಯುತ್ತಾನೆ. ಚಳಿಯಿಂದ ಆತನ ಮೈ ನಡುಗತೊಡಗುತ್ತದೆ. ಆತ ಹಾಗೆ ಮಾಡಿದ ಮರುಕ್ಷಣವೇ ಆ ದೈತ್ಯ ನಾಯಿ ಸಣ್ಣ ಮರಿಯಂತೆ ಕುಯ್ಗುಡುತ್ತಾ ಬಾಲವನ್ನು ಅಲ್ಲಾಡಿಸುತ್ತ ನಿಲ್ಲುತ್ತದೆ. ಮರುಗಳಿಗೆಯೇ ಅದರ ಹಿಂದಿದ್ದ ಕತ್ತಲೆಯಲ್ಲಿ ಚಂಗನೆ ಜಿಗಿದು ಮರೆಯಾಗುತ್ತದೆ. ನಿಟ್ಟುಸಿರು ಬಿಡುತ್ತಾ ರಾಹುಲ್ ತಾನು ನಿಂತಲ್ಲಿಯೇ ದೊಪ್ಪನೆ ಕೂರುತ್ತಾನೆ. ತನ್ನ ಅವಸ್ಥೆಯನ್ನು ಕಂಡು ಆತನಿಗೆ ವಿಪರೀತ ದುಃಖವಾದರೂ ಕೆಂಚಿಯ ದುಷ್ಟ ಶಕ್ತಿಯನ್ನು ಮುಗಿಸಿಯೇ ತೀರಬೇಕೆಂಬ ಉತ್ಕಟ ಹಠ ಆತನಲ್ಲಿ ಮೂಡುತ್ತದೆ. ಪ್ರತಿ ನಿಮಿಷಕ್ಕೂ ದ್ಯಾವಿಯ ಸದ್ದು ಬರುತ್ತಿದ್ದದ್ದನು ಗಮನಿಸಿದ ಆತ ಇದೆ ಸುಸಮಯವೆಂದು ಗೋಪುರದ ಬಳಿಗೆ ತೆರಳುತ್ತಾನೆ. ಕೆಲಹೊತ್ತಿನ ಮೊದಲಷ್ಟೇ ಕಳಚಿ ಹಾಕಿದ ವಸ್ತ್ರಗಳನ್ನು ಹುಡುಕುತ್ತಾನೆ. ಆದರೆ ಎಲ್ಲಿ ನೋಡಿದರೂ ಅವು ಕಾಣುವುದಿಲ್ಲ! ಅದು ಯಾರ ಕೃತ್ಯವೆಂದು ಚೆನ್ನಾಗಿ ಅರಿತ ರಾಹುಲ್ ನಗ್ನವಾಗಿಯೇ ದ್ಯಾವಿಯ ಧ್ವನಿಯನ್ನು ಹಿಂಬಾಲಿಸುತ್ತಾನೆ.

ನೆಡೆಯಲು ಶುರುಮಾಡಿ ಹತ್ತಾರು ನಿಮಿಷಗಳಾದರೂ ಮೊದಲು ಅಸ್ಪಷ್ಟವಾಗಿ ಕಂಡ ಆ ಗುಡಿ ಮಾತ್ರ ಆತನಿಗೆ ಕಾಣುವುದೇ ಇಲ್ಲ! ಒಂದೋ ಕೆಂಚಿಯ ಆ ದೈತ್ಯ ಶಕ್ತಿಗೆ ತಾನು ಬಹಳಾನೇ ದೂರ ಹಾರಿ ಬಿದ್ದಿರಬೇಕು ಅಥವಾ ಆಕೆ ಮತ್ತೆ ಬೇಕಂತಲೇ ನನ್ನ ದಿಕ್ಕನ್ನು ತಪ್ಪಿಸುತ್ತಿರಬೇಕು. 'ಬುದ್ದಿ..' ಎನ್ನುತ್ತಿದ್ದ ಧ್ವನಿಯಲ್ಲಿ ಮೊದಲಿನ ಮುಗ್ದತೆ ಮಾಯವಾಗಿದ್ದಿತು. ಏನೋ ಒಂದು ಕಪಟ ಆಲೋಚನೆ ತುಂಬಿರುವ ಮದಭರಿತ ಆ ಧ್ವನಿಯನ್ನು ರಾಹುಲ್ ಗಮನವಿಟ್ಟು ಕೇಳಿದ. ಆತನ ಹೆಜ್ಜೆಗಳ ಅಂತರ ಕ್ಷೀಣಿಸತೊಡಗಿತು. ವೇಗ ತಂತಾನೇ ಕಡಿಮೆಯಾಯಿತು. ತಾನು ನೆಡೆಯುತ್ತಿದ್ದ ದಿಕ್ಕಿನಲ್ಲಿ ಒಂದತ್ತು ಮಾರು ದೂರದಲ್ಲಿ ದೈತ್ಯ ಮರದ ಹಿಂದೆ ಬೆಳಕೊಂದು ಮೂಡಿರುತ್ತದೆ. 'ಯಾರದು..' ಎಂದು ಕೂಗಿದ ರಾಹುಲ್ ಕೂಡಲೇ ತನ್ನ ನಡೆಯನ್ನು ನಿಲ್ಲಿಸುತ್ತಾನೆ. 'ಬುದ್ದಿ.. ನಾನು ಬುದ್ದಿ ದ್ಯಾ...ವಿ' ಎಂದು ವಿಕಾರವಾಗಿ ನಗುತ್ತಾ ಕೆಂಚಿ ಮರದ ಹಿಂದಿನಿಂದ ಹೊರಬರುತ್ತಾಳೆ. ಕೊಳೆತ ಹುಳಗಳಂತಹ ಆಕೆಯ ಹಲ್ಲುಗಳು, ಕಡುರಕ್ತಬಣ್ಣದ ಕಣ್ಣುಗಳು, ವಿಚಿತ್ರ ಜಂತುವಿನಂತೆ ಬಾಗಿರುವ ಆಕೆಯ ದೇಹವನ್ನು ಕಂಡು ರಾಹುಲ್ ಹೌಹಾರಿದ. ಒಂದು ಕೈಯಲ್ಲಿ ಚಿಮಣಿಯಯನ್ನು ಹಿಡಿದ್ದಿದ್ದ ಕೆಂಚಿ ತನ್ನ ಬಲಗೈಯಲ್ಲಿ ಯಾರದೋ ಕೂದಲನ್ನು ಗಟ್ಟಿಮಾಡಿ ಹಿಡಿದು ಜಗ್ಗುತ್ತಿರುವಂತೆ ಕಾಣುತಿತ್ತು. ಆದರೆ ಅಲ್ಲಿ ಯಾರೂ ಇರದೇ ಕೇವಲ ಕೂದಲು ಮಾತ್ರ ಕಾಣುತಿತ್ತು. 'ಬುದ್ದಿ.. ಓಡಿ.. ಬುದ್ದಿ..' ಎಂಬ ಸದ್ದು ಅಲ್ಲಿಂದ ಬಂದ ಕೂಡಲೇ ರಾಹುಲ್ ತಾನು ಬಂದ ವಿರುದ್ಧ ದಿಕ್ಕಿಗೆ ಓಡತೊಡಗಿದ. ಕೆಂಚಿ ದ್ಯಾವಿಯ ಆತ್ಮವನ್ನು ಕಟ್ಟಿಹಾಕಿ ತನ್ನ ದಿಕ್ಕನ್ನು ತಪ್ಪಿಸುತ್ತಿದ್ದಾಳೆ ಎಂದರಿತ ರಾಹುಲ್ ಈ ಬಾರಿ ಧ್ವನಿ ಬರುತ್ತಿದ್ದ ದಿಕ್ಕಿಗೆ ವಿರುದ್ಧವಾಗಿಯೇ ಓಡುತ್ತಾನೆ.

ರಾಹುಲ್ನ ನಗ್ನ ದೇಹವನ್ನು ಕಂಡು ಒಂದು ಕೈಯಲ್ಲಿ ದ್ಯಾವಿಯ ದೈತ್ಯ ಆತ್ಮವನ್ನು ಮತ್ತೊಂದು ಕೈಯಲ್ಲಿ ಚಿಮಣಿಯನ್ನು ಹಿಡಿದ್ದಿದ್ದರೂ ಕೆಂಚಿ ಆತನನ್ನು ಆಸೆಯ ಕಣ್ಣುಗಳಿಂದ ಹಿಂಬಾಲಿಸುತ್ತಾಳೆ. ಆದರೆ ಈ ಬಾರಿ ಆಕೆಗೆ ರಾಹುಲ್ನ ವೇಗಕ್ಕೆ ಒಗ್ಗಿಕೊಳ್ಳಲು ಆಗಲಿಲ್ಲ. ಆದರೆ ರಭಸವಾಗಿ ಆತನ ದೇಹದ ವಾಸನೆಯನ್ನು ಗ್ರಹಿಸುತ್ತಾ ಮುನ್ನೆಡೆಯುತ್ತಾಳೆ. ಆಕೆಗೆ ರಾಹುಲ್ನನ್ನು ಒಮ್ಮೆಲೇ ಭಕ್ಷಿಸಿ ಬಿಡುವ ಆಸೆ. ಆದರೆ ದ್ಯಾವಿಯ ಆತ್ಮವನ್ನೂ ಬಿಡಲು ಸಾಧ್ಯವಲ್ಲ. ಅದೆಷ್ಟೋ ಸಮಯ ಕುಂಟುತ್ತಾ ನೆಡೆದ ನಂತರ ರಾಹುಲ್ ಪೊದೆಯೊಂದರ ಮುಂದೆ ನಿಂತಿರುವುದು ಆಕೆಗೆ ಕಾಣುತ್ತದೆ. ಕೂಡಲೇ ಒಂದೇ ಸಮನೆ ಕಟಕಟನೆ ಹಲ್ಲುಕಡಿಯತೊಡಗಿದ ಕೆಂಚಿ 'ಬಾರ್ಲ.. ನಿಂಗೇನೂ ಮಾಡಾಕಿಲ್ಲ.. ಬರ್ಲಾ' ಎಂದು ಆತನೆಡೆಗೆ ಮುನ್ನೆಡಿಯುತ್ತಾಳೆ. ರಾಹುಲ್ ನಿಂತ ನೆಲದಿಂದ ಕದಲಲಿಲ್ಲ. ಕೆಂಚಿಯ ದೃಷ್ಟಿ ರಾಹುಲ್ನ ಕಣ್ಣುಗಳ ಮೇಲೆ ನೆಟ್ಟಿರುತ್ತದೆ. ಕೊದಲನ್ನು ಹಿಡಿದೆಳೆದು ಬರುತ್ತಿದ್ದ ಕಡೆಯಿಂದ ದ್ಯಾವಿಯ ರೋಧನೆ ವಿಪರೀತವಾಗಿರುತ್ತದೆ. ರಾಹುಲ್ನ ಕೆಲವೇ ಹೆಜ್ಜೆಗಳ ಸಮೀಪಕ್ಕೆ ಬಂದ ಕೆಂಚಿ ಆತನನ್ನು ಮೇಲಿನ ಕೆಳಕ್ಕೂ ಒಮ್ಮೆಲೇ ನೋಡಿ ಗಹಗಹನೇ ನಗತೊಡಗುತ್ತಾಳೆ. ನಂತರ ಒಮ್ಮೆಲೇ ಸುಮ್ಮನಾಗಿ, ತನ್ನ ಹಾವಿನ ಹೆಡೆಯಂತಹ ತಲೆಯನ್ನು ಅರ್ಧಚಂದ್ರಾಕೃತಿಯಲ್ಲಿ ಎಡಕ್ಕೂ ಬಲಕ್ಕೂ ತಿರುಗಿಸುತ್ತಾ, ತಾನು ನಿಂತ ಪಕ್ಕಕ್ಕೆ ದೊಡ್ಡವೃತ್ತವರೊಂದನ್ನು ಎಳೆದು ಕೈಯಲ್ಲಿ ಹಿಡಿದ್ದಿದ್ದ ದ್ಯಾವಿಯ ಅದೃಶ್ಯ ಆತ್ಮವನ್ನು ಅದರೊಳಗೆ ಎಸೆಯುತ್ತಾಳೆ. ಅದು ಅಲ್ಲೇ ನರಳುತ್ತಾ ಬೀಳುತ್ತದೆ. ನಂತರ ತನ್ನ ಮೈಯ ಮೇಲಿದ್ದ ಕೊಳಕು ವಸ್ತ್ರಗಳನೆಲ್ಲ ಕಿತ್ತೊಗೆದು ನಿಂತ ಕೆಂಚಿಯ ದೇಹವನ್ನು ನೋಡಿದ ರಾಹುಲ್ ಗೆ ಒಮ್ಮೆಲೇ ವಾಂತಿಬಂದಂತಾದರೂ ಹೇಗೋ ಸಹಿಸಿಕೊಳ್ಳುತ್ತಾನೆ. ಆ ಹುಳುಗಟ್ಟಿದ ಕುಬ್ಜ ದೇಹ ಒಂದೊಂದೇ ಹೆಜ್ಜೆ ಮುಂಬಂದಂತೆ ರಾಹುಲ್ ನಿದಾನವಾಗಿ ಪೊದೆಯ ಹಿಂದಕ್ಕೆ ಸರಿಯತೊಡಗುತ್ತಾನೆ. ಆದರೆ ಅದರ ಕಣ್ಣಿನೊಟ್ಟಿಗೆ ನೆಟ್ಟ ದೃಷ್ಟಿಯನ್ನು ಮಾತ್ರ ಕದಲಿಸುವುದಿಲ್ಲ. ಒಂದು, ಎರಡು, ಮೂರು.. ನಾಲ್ಕನೇ ಹೆಜ್ಜೆಗೆ ದೊಪ್ಪನೆ ಕೆಳಬಿದ್ದ ಕೆಂಚಿಯ ದೇಹ ಪೊದೆಗಳು ಮುಚ್ಚಿದ ಒಂಟಿಬೆಟ್ಟದ ಪ್ರಪಾತದೊಳಗೆ ಜಾರುತ ಹೋಗುತ್ತದೆ. ಆ ಸಣ್ಣ ಪ್ರಪಾತ ಸೀದಾ ಕಾಲಭೈರೇಶ್ವರನ ಗುಡಿಯ ಸಮೀಪಕ್ಕೆ ಹೋಗಿರುತ್ತದೆ. ಅಷ್ಟರಲ್ಲಾಗಲೇ ಚೀರುತ್ತಾ. ಅರಚುತ್ತಾ ಸದ್ದು ಮಾಡತೊಡಗಿದ ಕೆಂಚಿ ಗಾಜಿನ ಗೋಡೆಯಂತಿದ್ದ ಪರಿಧಿಯೊಳಗೆ ಮಿಂಚಿನ ವೇಗದಲ್ಲಿ ಸುತ್ತತೊಡಗುತ್ತಾಳೆ. ಗುದ್ದತೊಡಗುತ್ತಾಳೆ. ಕಾದ ಹಂಚಿನ ಮೇಲೆ ಹುಳುವೊಂದು ಬಿದ್ದಂತೆ ವಿಲವಿಲ ಒದ್ದಾಡುತ್ತಾಳೆ. ಕೂಡಲೇ ಕಾಡಿನ ಗಾಳಿ ವಿಪರೀತವಾಗಿ ಗಿಡಮರಗಳೆಲ್ಲ ಮುರುಟಿಗೊಳ್ಳತೊಡಗುತ್ತವೆ. ದೂರದಲ್ಲೆಲ್ಲೋ ನರಿಗಳು ಒಮ್ಮೆಲೇ ಗೀಳಿಡುತ್ತವೆ. ನೋಡನೋಡುತ್ತಿದ್ದಂತೆ ಕೆಂಚಿಯ ದೇಹ ಸಣ್ಣದಾಗುತ್ತ ಗುಡಿಯ ಮುಂದೆಯೇ ಕಣ್ಮರೆಯಾಗುತ್ತವೆ. ಬೆಂಕಿಯ ಕಿಡಿಯೊಂದು ಚಟ್ಟನೆ ಸಿಡಿದು ನಶಿಸಿಹೋಗುತ್ತದೆ.

ಕೆಲಸಮಯ ರೌದ್ರಗೊಂಡ ಪ್ರಕೃತಿ ಒಮ್ಮೆಲೇ ಶಾಂತವಾಗುತ್ತದೆ. ಬಿರುಗಾಳಿ ನಿಂತು ಪರಿಸರ ತಂಪಾಗುತ್ತದೆ. ದೂರದಲ್ಲೆಲ್ಲೋ ಕೂಗುತ್ತಿದ್ದ ನರಿಗಳ ಗಂಟಲನ್ನು ಯಾರೋ ಅದುಮಿ ಹಾಕಿದಂತಹ ಸದ್ದು ಮೂಡುತ್ತದೆ. ಕೂಡಲೇ ರಾಹುಲ್ನಿಗೆ ತಲೆ ಸುತ್ತು ಬಂದಂತಾಗಿ ಅಲ್ಲಿಯೇ ಕುಸಿಯುತ್ತಾನೆ.

****

ಬೆಳಕಿನ ಕಿರಣಗಳು ಅದಾಗಲೇ ರಾಹುಲ್ನ ಮುಖದ ಮೇಲೆ ನಲಿಯುತ್ತಿರುತ್ತವೆ. ಹಕ್ಕಿಗಳ ಆ ಚಿಲಿಪಿಲಿ ಸದ್ದು ಅದೇನೋ ಒಂದು ಬಗೆಯ ನೆಮ್ಮದಿಯನ್ನು ಮೂಡಿಸುತ್ತಿರುತ್ತವೆ. ತುಸುಹೊತ್ತು ಓರಳಾಡಿದ ರಾಹುಲ್ಗೆ ಕೂಡಲೇ ಎಚ್ಚರವಾಗಿ ನೋಡುತ್ತಾನೆ ತಾನು ಒಂಟಿಬೆಟ್ಟದ ಬುಡದಲಿದ್ದ ಕಾಲಭೈರೇಶ್ವರ ಸ್ವಾಮಿಯ ಗುಡಿಯ ಮರದ ಬುಡಕ್ಕೆ ತಲೆಕೊಟ್ಟು ಮಲಗಿರುವುದು ತಿಳಿಯುತ್ತದೆ. ತನ್ನ ವಸ್ತ್ರಗಳೆಲ್ಲವೂ ಆತನ ಮೈಮೇಲೆ ಮೊದಲಿನಂತೆಯೇ ಇರುತ್ತವೆ. ಮೇಲೆದ್ದು ಗುಡಿಯ ಒಳಗಿದ್ದ ಘಾಡಕಪ್ಪುಬಣ್ಣದ ಮೂರ್ತಿಗೆ ಭಕ್ತಿಯಿಂದ ಕೈಮುಗಿದು ರಾತ್ರಿ ಕೆಂಚಿ ಜಾರಿದ ಸಣ್ಣ ಪ್ರಪಾತವನ್ನು ಆತ ಏರುತ್ತಾನೆ. ದ್ಯಾವಿಯನು ಕೂಡಿಹಾಕಿದ ಪರಿಧಿಯನ್ನು ಹುಡುಕಿಕೊಂಡು ಬಂದು ನೋಡುತ್ತಾನೆ, ಅಲ್ಲೊಂದು ಪುಟ್ಟ ಸೇವಂತಿಗೆ ಹೂವು ಬಿದ್ದಿರುತ್ತದೆ. ದೂರದ ಎಲ್ಲೆಲ್ಲಿಯೂ ಸೇವಂತಿಗೆ ಗಿಡದ ಕುರುಹುಗಳಿರದಿದ್ದರೂ ಅಲ್ಲಿಗೆ ಆ ಹೂವು ಹೇಗೆ ಬಂತೆಂದು ಅರಿಯದಾಗುತ್ತಾನೆ. ಪ್ರೀತಿಯಿಂದ ಆ ಹೂವನ್ನು ತನ್ನ ಎದೆಯ ಜೇಬಿನೊಳಗಿರಿಸಿ ತಾನೊಂದು ಆತ್ಮಕೆ ಮುಕ್ತಿ ದೊರಕಿಸಿದೆ ಎಂಬ ಖುಷಿಯಲ್ಲಿ ಮುನ್ನೆಡೆಯುತ್ತಾನೆ. ಅದೆಷ್ಟೋ ದೂರ ನೆಡೆದ ನಂತರ ಯಾರೋ ತನ್ನ ಹೆಸರನ್ನು ಹಿಡಿದು ಕರೆಯುತ್ತಿರುವ ಸದ್ದು ಆತನಿಗೆ ಕೇಳುತ್ತದೆ. ಒಂದೆರೆಡು ಬಾರಿ ಕೇಳಿದ ನಂತರವೇ ಅದು ತನ್ನ ಅಮ್ಮನ ಸದ್ದೆಂದು ಆತನಿಗೆ ತಿಳಿಯುತ್ತದೆ. ಕೂಡಲೇ ಅದೇ ದಿಕ್ಕಿನೆಡೆಗೆ ಓಡುತ್ತಾನೆ. ಅಮ್ಮ, ಮದುಮಗ ಹಾಗು ಇತರ ಗೆಳೆಯರು ರಾಹುಲ್ನ ಹೆಸರನ್ನು ಕೂಗುತ್ತಾ ಇತ್ತಲೇ ಬರುತ್ತಿರುತ್ತಾರೆ. ದೂರದಿಂದ ಅವರನ್ನು ನೋಡಿಯೇ ಆನಂಧಬಾಷ್ಪಗಳು ಮೂಡಿ 'ಅಮ್ಮಾ..' ಎಂದು ಅಳುತ್ತಾ ಅವರೆಡೆಗೆ ಓಡುತ್ತಾನೆ ರಾಹುಲ್....

Saturday, May 18, 2019

ಗೆಸ್ಟ್ ಹೌಸು ಹೋಮ್ ಸ್ಟೇ ಗಳ ಪೆಗ್ಗೋ ಅಥವಾ ಮಲೆನಾಡ ಸಿಹಿಸುಗ್ಗಿಯ ಹಿಗ್ಗೋ ... ?!

ಮಲೆನಾಡು. ಇತ್ತೀಚಿನ ಕೆಲವರ್ಷಗಳವರೆಗೂ ಈ ಮಲೆನಾಡು ಎಂದರೆ ಬೆಟ್ಟ, ಗುಡ್ಡ, ಮಳೆ, ಹಸಿರು, ತಂಪು, ಕಂಪು ಇಂಪುಗಳ ಜೊತೆಗೆ ಪ್ರಾಣಿ ಪಕ್ಷಿ ಜೀವಜಂತುಗಳೆಲ್ಲವಿಂದ ಕೂಡಿದ ಶಾಂತಿ, ನೆಮ್ಮದಿಯ ಸ್ವರ್ಗವೆಂದೇ ಗುರುತಿಸಲ್ಪಡುತಿತ್ತು. ಜೀವನದ ಅದೆಷ್ಟೇ ಕಷ್ಟನಷ್ಟಗಳಿದ್ದರೂ ಇಲ್ಲಿಯ ಗೆಳೆಯರ ಅಥವ ನೆಂಟರಿಷ್ಟರ ಮನೆಗೋ, ತೋಟಕ್ಕೋ ಅಥವಾ ಗೆಸ್ಟ್ ಹೌಸುಗಳಿಗೂ ಬಂದು ಒಂದೆರೆಡು ದಿನ ಆಧುನಿಕ ಜಗತ್ತಿನ ಸ್ಲೋ ಪಾಯಿಸನ್ಗಳಾದ ಮೊಬೈಲು, ಇಂಟರ್ನೆಟ್ಟು ಮತ್ತೊಂದು ಮಗದೊಂದುಗಳೆಲ್ಲವನ್ನೂ ಮರೆತು ಇಲ್ಲಿನ ನೆಲದ ಮೇಲೆ ಇತ್ತಿಂದತ್ತ ಅತ್ತಿಂದಿತ್ತ ನೆಡೆದಾಡಿದರೂ ಸಾಕಿತ್ತು, ಬೇಸತ್ತು ಜಡಗಟ್ಟಿದ ಜೀವಕ್ಕೆ ಅದೇನೋ ಒಂದು ಬಗೆಯ ಚೈತ್ಯನ್ಯದ ಕಳೆ ಮೂಡಿಬಿಡುತ್ತಿತ್ತು. ಮನಸ್ಸು ಹಗುರವಾಗುತ್ತಿತ್ತು. Life is Beautiful ಎಂದೆನಿಸಿ ಮಹಾನೆಮ್ಮದಿಯೊಂದು ತನ್ನಿಂತಾನೇ ಮೂಡಿಬಿಡುತ್ತಿತ್ತು. ಇದೆಲ್ಲ Past. ಹೆಚ್ಚುಕಡಿಮೆ ದಶಕಗಳಿಂದಿನ ಮಾತುಗಳು ಎನ್ನಬಹುದು. ಮಲೆನಾಡು ಆಗತಾನೆ ಡಿಜಿಟಲ್ ಜಗತ್ತಿಗೆ ಬಾಗಿಲುತೆರೆಯ ತೊಡಗಿತ್ತು. ತಾಲೂಕಿಗೊಂದೆರಡರಂತಿದ್ದ ಗೆಸ್ಟ್ ಹೌಸುಗಳಿಗೂ ಅಥವಾ ಹೋಂಸ್ಟೇಗಳಿಗೋ ಶರವೇಗದಲ್ಲಿ ಹೋಗುತ್ತಿದ್ದ ದೊಡ್ಡ ಚಕ್ರದ ಕಾರುಗಳನ್ನು ಕಣ್ಣರಳಿಸಿಕೊಂಡು ನೋಡುತ್ತಿದ್ದ ಮಲೆನಾಡಿಗರು ಕೊಂಚ ಯೋಚಿಸತೊಡಗಿದರು. ಸಾಧಾರಣವಾಗಿದ್ದ ತಮ್ಮ ಮನೆಗೂ ಬಣ್ಣಗಿಣ್ಣವನ್ನು ಬಳಿದು ಒಂದೆರೆಡು ರೂಮುಗಳನ್ನು ಶುಚಿಗೊಳಿಸಿ ಮನೆಯ ಮುಂದೊಂದು ಅಂಕುಡೊಂಕಿನ ಅಕ್ಷರಗಳ ಹೋಂ ಸ್ಟೇ ಎಂಬ ಬೋರ್ಡನ್ನು ಹಾಕಿಯೇಬಿಟ್ಟರು. ಆಗ ಶುರುವಾಯಿತು ನೋಡಿ ಮಲೆನಾಡ ಮೋಡಿ. ಹೆಚ್ಚೇನು ಇಲ್ಲ ಸ್ವಾಮಿ, ಮಲೆನಾಡಿಗರು ದಿನ ಸೇವಿಸುವ ಅಕ್ಕಿ ರೊಟ್ಟಿ, ಕಾಯಿ ಚಟ್ನಿ, ಕಡುಬು, ರಾಗಿಯ ಅಂಬಲಿ, ನಾನಾ ಬಗೆಯ ಅಣಬೆಗಳು, ಬಿದಿರಿನ ಕಳಲೆ, ನಾಟಿ ಕೋಳಿಸಾರು, ಕಾಡುಹಂದಿ ಮಾಂಸಗಳನ್ನೇ ಮಾಡಿ ಉಣಬಡಿಸಿದತೊಡಗಿದಾಗ ನಗರದ ಪ್ರವಾಸಿಗರ ದಂಡೇ ಸಾಲಾಗಿ ಬಂದು ನಿಲ್ಲತೊಡಗಿತು. ಶಾಂತ ಪರಿಸರ, ಬಾಯಿಚಪ್ಪರಿಸುವ ಊಟಾದಿಗಳು, ಯಾರ ಮುಲಾಜಿಲ್ಲದೆಯೋ ಎಲ್ಲೆಂದರಲ್ಲಿ ಉಗಿದು, ಸುರಿದು, ಹೋದ ಜಾಗವನ್ನೆಲ್ಲ ಗಬ್ಬೆಬ್ಬಿಸಿ, ಕೊಳಕುಗೊಳಿಸಿ, ಕಾನೂನು ಕಟ್ಟಳೆಗಳೇ ಇಲ್ಲದ ಯಾವುದೊ ಹೊಸ ಗ್ರಹಕ್ಕೆ ಬಂದವರಂತೆ ವರ್ತಿಸಿ ತೆರಳತೊಡಗಿದರು. ಮಾಲೀಕ ಕೇಳಿದ ಹಣಕ್ಕಿಂತ ದುಪ್ಪಟ್ಟು ಹಣವನ್ನು ಕೊಟ್ಟರು. ಪೇಟೆಯ ವೈನು ಜಿನ್ನುಗಳೊಟ್ಟಿಗೆ ಹಳ್ಳಿಯ ಸೇಂದಿ ಕಳ್ಳುಗಳ ಸವಿಯ ರುಚಿಯನ್ನೂ ಚಪ್ಪರಿಸಿದರು. ಹಸಿರು ಗೊಬ್ಬರ ಬೀಳಬೇಕಿದ್ದ ಮಲೆನಾಡ ರಸ್ತೆ ಬದಿಯ ಮರಗಳ ಬುಡಗಳಿಗೆ ಮದ್ಯದ ಬಾಟಲಿಗಳ ರಾಶಿಗೊಬ್ಬರವನ್ನು ಫ್ರೀಯಾಗಿ ತಂದು ಸುರಿಯತೊಡಗಿದರು. ಪೇಟೆಯ ದುಡ್ಡು, ಹಳ್ಳಿಯ ಪರಿಸರಗಳ ಈ ತಿಕ್ಕಾಟದಲ್ಲಿ ಪೇಟೆಯ ದುಡ್ಡೇ ಕ್ರಮೇಣ ಗೆಲ್ಲತೊಡಗಿತು. ಅಚ್ಚುಗಟ್ಟಾಗಿ ಮನೆ ಹಾಗು ತೋಟವನ್ನು ಮಾಡಿಕೊಂಡಿದ್ದ ಹಲವಾರು ಮಲೆನಾಡಿಗರು ಇಂದು ಇಂತಹ ಹೋಂ ಸ್ಟೇಗಳೆಂಬ ಬೆಪ್ಪು ಹುಚ್ಚಿನಲ್ಲಿ ತಮ್ಮ ಮೆನೆಮಠಗಳೆಲ್ಲವನ್ನು ಕುಡಿದು ಕುಣಿಯುವ ಮನೋರಂಜನಾ ಅಡ್ಡಗಳನ್ನಾಗಿ ಮಾಡಿಕೊಂಡಿದ್ದಾರೆ. ಹಚ್ಚಹಸಿರ ಸುಂದರ ತೋಟವನ್ನು ಕಾಡನ್ನು ಕಡಿದು ರೆಸಾರ್ಟು, ಪಬ್ಬು, ಗೆಸ್ಟ್ ಹೌಸುಗಳೆಂಬ ಹಲವಾರು ವಾಣಿಜ್ಯ ಕೇಂದ್ರಗಳನ್ನು ಹುಟ್ಟಿಸುತ್ತಿದ್ದಾರೆ. ಇನ್ನು ಹಿರಿಯರಿಂದ ಬಂದ ತೋಟ ಗದ್ದೆಗಳ ಮೇಲಿನ ನಿಗಾವಂತೂ ಅಷ್ಟಕಷ್ಟೇ. ಕೇಳಿದರೆ 'ಕೂಲಿ ಮಾಡೋಕ್ಕೆ ಜನ ಎಲ್ರಿ ಸಿಗ್ತಾರೆ ಇವಾಗಿನ್ ಕಾಲ್ದಲ್ಲಿ' ಎನುತ ಅವುಗಳನ್ನು ಹಾಳುಗೆಡತ್ತಿರುವುದು ಇಂದು ಸಾಮನ್ಯದ ಸಂಗತಿಯಾಗುತ್ತಿವೆ. ಒಟ್ಟಿನಲ್ಲಿ ಭೂಲೋಕದ ಸ್ವರ್ಗದಂತಿದ್ದ ನಮ್ಮ ಮಲೆನಾಡು ಇಂದು ನೋಡನೋಡುತ್ತಲೇ ಶರವೇಗದಲ್ಲಿ ಕ್ಷೀಣಿಸುತ್ತಿದೆ. ಮರುಭೂಮಿಯ ಉರಿಬಿಸಿಲು, ಕುಡಿಯುವ ಹನಿ ನೀರಿಗೂ ಹಾಹಾಕಾರ, ಹಸಿರನ್ನೇ ನುಂಗಿ ಮುನ್ನುಗ್ಗುತ್ತಿರುವ ನಗರವ್ಯಾಪ್ತಿ ಇವೆಲ್ಲವುಗಳಿಂದ ಇಂದು ಮಲೆನಾಡು ಕಣ್ಮರೆಯಾಗುತ್ತಿದೆ.

ಇದು ಪ್ರಸ್ತುತ ಮಲೆನಾಡ ಕತೆ. ಈಗ ಮುಖ್ಯ ವಿಷಯಕ್ಕೆ ಬರೋಣ. ದಕ್ಷಿಣ ಭಾರತದ ಕಿರೀಟಪ್ರಾಯವಾಗಿರುವಂತಹ ಮಲೆನಾಡೇ ಈ ರೀತಿ ಕಣ್ಮರೆಯಾದರೆ ಇನ್ನು ಗತಕಾಲದಿಂದ ನೆಡೆದುಕೊಂಡು ಬಂದ ಇಲ್ಲಿಯ ಸಂಪ್ರದಾಯ, ವಿಶಿಷ್ಟ ಆಚರಣೆಗಳು, ಆಚಾರ-ವಿಚಾರಗಳು, ಹಬ್ಬ-ಹರಿದಿನಗಳ ಕತೆ ಏನಾಗಬಹುದು? ಒಮ್ಮೆ ಯೋಚಿಸಿ. ನೋ ಡೌಟ್, ಅವುಗಳೂ ಸಹ ನಗರೀಕರಣದ ಈ ಮಹಾ ಬಿರುಗಾಳಿಯಲ್ಲಿ ಹೇಳಹೆಸರಿಲ್ಲದೆ ಕಣ್ಮರೆಯಾಗಬಹುದು.

ಸುಗ್ಗಿ ಹಬ್ಬ. ವಸಂತಮಾಸ ಬಂತೆಂದರೆ ಮಲೆನಾಡಿನ ಮನೆಮನೆಗಳಲ್ಲೂ ಏನೋ ಒಂದು ಬಗೆಯ ಸಂಭ್ರಮದ ವಾತಾವರಣ. ವರ್ಷಪೂರ್ತಿ ತಮ್ಮ ತೋಟಗದ್ದೆಗಳಲ್ಲಿ ದುಡಿದು ದಣಿದ ಮನಗಳಿಗೆ ಒಂದಿನಿತು ದಿನಗಳ ಬಿಡುವು. ನಗರಗಳಲ್ಲಾದರೆ ಬಿಡುವು ಎಂದಾಕ್ಷಣ ತಮ್ಮ ಗಂಟು ಮೂಟೆಗಳನೆಲ್ಲ ಕಟ್ಟಿಕೊಂಡು ಇಂತಹ ಸುಂದರ ಶಾಂತ ಪರಿಸರಗಳಿಗೆ ಲಗ್ಗೆಹಿಟ್ಟು ಪುಡಿಮಾಡಿಬರುವ ಕಾರ್ಯಕ್ರಮವಾಗಿರುತ್ತದೆ. ಆದರೆ ಮಲೆನಾಡಿಗರಲ್ಲಿ ಅದರ ಬಗೆಯೇ ತೀರಾ ಭಿನ್ನವಾದುದು. ಊರು ಕೇರಿಯ ಹಿರಿಯರೆಲ್ಲ ಒಂದೆಡೆ ಸೇರಿ ಗತಕಾಲದಿಂದ ನೆಡೆದುಕೊಂಡು ಬಂದ ಮಲೆನಾಡ ಹೆಮ್ಮೆಯ ಸುಗ್ಗಿಹಬ್ಬದ ತಯಾರಿಗೆ ಆಗ ಶುರುವಿಟ್ಟುಕೊಳ್ಳುತ್ತಾರೆ. ಅಲ್ಲಿಂದ್ದ ಮುಂದೆ ಮೂರ್ನಾಲ್ಕು ವಾರಗಳವರೆಗೆ ಊರವರೆಲ್ಲ ಅಪ್ರತಿಮ ಶುಚಿತ್ವವನ್ನು ಕಾಪಾಡಿಕೊಳ್ಳುತ್ತಾರೆ. ಅದು ಹೆಸರಿಗೆ ಮಾತ್ರದ ಶುಚಿತ್ವವಲ್ಲ ಸ್ವಾಮಿ. ಆಗ ಕ್ಷೌರವನ್ನೂ ಮಾಡಿಸುವಂತಿಲ್ಲ. ಅಂಗಡಿ ಬೇಕರಿಗಳ ತಿಂಡಿ ತಿನಿಸು ಗಳನಂತೂ ಬಿಲ್ಕುಲ್ ತಿನ್ನುವಂತಿರುವುದಿಲ್ಲ. ಅನ್ನವನ್ನು ಅದರ ಗಂಜಿ ಹೋಗುವಂತೆ ಬಸಿಯದೆಯೇ ತಯಾರಿಸಿ ಸೇವಿಸಬೇಕಾಗುವುದು.. ಪೇಟೆಯೆಡೆಗೆ ಹೋಗಿಬಂದರೆ ಮನೆಯೊಳಗೇ ಬರುವಂತಿರುವುದಿಲ್ಲ. ಅಂತವರು ಹಿತ್ತಲು ಬಾಗಿಲಿಂದ ಬಚ್ಚಲುಮನೆಗೆ ಬಂದು ಮಿಂದೇ ಮನೆಯೊಳಗೇ ಬರಬೇಕಾಗುವುದು ಅಲ್ಲದೆ ಕಾಲಿಗೆ ಪಾದರಕ್ಷೆಗಳನ್ನೂ ತೊಡುವಂತಿಲ್ಲ. ಇನ್ನು ಮಾಂಸ ಮದ್ಯಾದಿಗಳನ್ನು ಕನಸ್ಸಿನಲ್ಲಿಯೂ ನೆನೆಯುವುದಿಲ್ಲ. ದಿನ ಸಂಜೆಯಾದರೆ ಒಂದು ತೊಟ್ಟಾದರೂ ಸರಿಯೆ ಮದ್ಯದ ಹನಿಗಳಿಂದ ತಮ್ಮ ಗಂಟಲನ್ನು ನೆನೆಸದೆ ಬಿಡದ ಹಲವರು ಇಲ್ಲಿ ತಿಂಗಳುಗಟ್ಟಲೆ ಮದ್ಯಾದಿಗಳಿಂದ ವಿಮುಖರಾಗಿ ಇರುವುದನ್ನು ಮೆಚ್ಚಲೇ ಬೇಕು. ಇಲ್ಲಿ ದೇವರ ಮೇಲಿನ ಭಕ್ತಿಯಿದೆ. ಭಕ್ತಿಯಷ್ಟೇ ಭಯವೂ ಇದೆ. ಊರಿನ ನೆಲ ಜಲ ಬೆಳೆಗೆ ಪೋಷಕರಾದ ದೇವ ದೇವಿಯರ ಉತ್ಸವನ್ನು ಆಚರಿಸಲು ಹೀಗೆ ಊರಿಗೆ ಊರೇ ಸನ್ಯಾಸತ್ವವನ್ನು ಸ್ವೀಕರಿಸುವ ಪರಿ ವಿಶಿಷ್ಟವಾದುದು, ವಿಶೇಷವಾದುದು. ನಾಲ್ಕಾರು ಹಳ್ಳಿಗಳು ಜೊತೆಗೂಡಿ ನೆಡೆಸುವ ಈ ಹಬ್ಬದ ಶುರುವನ್ನು ಯಾರು ಮಾಡಿದರೋ ಆ ಭಗವಂತನೇ ಬಲ್ಲ. ಆದರೆ ಆ ಮೂಲಕ ಪ್ರಸ್ತುತ ಯಾವುದೇ ಸರ್ಕಾರ ಅಥವಾ ರಾಜಕೀಯ ಪಕ್ಷಗಳಿಗೂ ಮಾಡಲಾಗದಂತಹ ಹಳ್ಳಿ ಹಳ್ಳಿಗಳ ನಡುವಿನ ಸಹಬಾಳ್ವೆ, ಬಾತೃತ್ವ, ಪ್ರೀತಿ ವಿಶ್ವಾಸಗಳನ್ನುಈ ಸುಗ್ಗಿಹಬ್ಬ ಕಾಪಾಡಿಕೊಂಡು ಬಂದಿದೆ. ತೋರ್ಪಡಿಕೆಯ ಭಕ್ತಿಯ ಒಂದಿನಿತು ನಾಮಶೇಷಗಳಿಲ್ಲದೆ, ಚಿನ್ನ ಬೆಳ್ಳಿ ವಜ್ರ ವೈಡೂರ್ಯಗಳ ಆಡಂಬರಗಳಿಲ್ಲದೆ ಹುಟ್ಟಬಟ್ಟೆಯಲ್ಲೇ ಕೈಮುಗಿದು 'ಅಮ್ಮಾ, ತಂದೆ' ಎನುತ ದೇವರ ಅಡ್ಡೆಗಳ ಮುಂದೆರಗುವ ಮಲೆನಾಡಿಗರ ಆ ಭಕ್ತಿ, ಶ್ರದ್ದೆ ನೋಡುಗರಲ್ಲಿ ರೋಮಾಂಚನವನ್ನು ಮೂಡಿಸುತ್ತವೆ.

ಹರಿಜನರ ಕೇರಿಯಿಂದ ಬರುವ ಭೂತಪ್ಪ ಇಡೀ ಹಳ್ಳಿಯ ಮನೆಮನೆಗಳಿಗೋಗಿ ಹಬ್ಬದ ಕರೆಯೋಲೆಯನ್ನು ಕೊಟ್ಟು ಬಂದ ನಂತರ ಎರಡು ಮೂರು ಅಥವ ಕೆಲವೆಡೆ ಹಲವು ವಾರಗಳವರೆಗೂ ಸುಗ್ಗಿಹಬ್ಬದ ಸಂಭ್ರಮ ನೆಡೆಯುತ್ತದೆ. ಆಗ ಪ್ರತಿದಿನವೂ ಒಂದೊಂದು ಬಗೆಯ ಆಚರಣೆ ಪೂಜೆಗಳು . ಕಾಳಬ್ಬ/ ಅವರಳೆಕಾಳಬ್ಬ (ಕೇವಲ ಮೊಳಕೆ ಕಟ್ಟಿದ ವಿಧ ವಿಧವಾದ ಕಾಳುಗಳ ಪಲ್ಯ ಹಾಗು ಸಾರನ್ನು ಮಾಡುವುದು), ದೇವತೆಗಳನ್ನು ಶೃಂಗಾರಗೊಳಿಸಿ ಗುಡಿಯಿಂದ ಹೊರತರುವ ದಿನ (ಅಂದು ಮನೆಯಲ್ಲಿ ಯಾವುದೇ ಸುಡುವ/ಹುರಿಯುವ ಆಹಾರಗಳನ್ನು, ರೊಟ್ಟಿ, ಚಪಾತಿ ಇತ್ಯಾದಿಗಳನ್ನು ಮಾಡುವಂತಿಲ್ಲ), ಹಸಿಗೆ (ಕೇವಲ ಹಾಲು ಹಾಗು ಕೆಲ ಹಣ್ಣುಗಳನ್ನು ಮಾತ್ರ ತಿಂದು ದೇವರ ಅಡ್ಡೆಗಳನ್ನು ಹೊರುವ ದಿನ), ಗುರಿಯೊಡೆಯುವುದು (ವಿವಿಧ ಬಗೆಯ ಹಣ್ಣುಗಳನ್ನು ಎತ್ತರದೆರಡು ಕಂಬಗಳಿಗೆ ನೇತಾಗಿ ಊರಿನ ಮನೆಗಳ ಕೇಪಿನ ಅಥವಾ ತೋಟದ ಕೋವಿಗಳಿಂದ ಗುರಿಯೊಡೆಯುವುದು), ಕೆಂಡ (ರಾಶಿ ಕೆಂಡವನ್ನು ದೇವಾಲಯದ ಮಂದಾಕಿ ಬರಿಕಾಲಿನಿಂದಲೇ ತುಳಿಯುತ್ತಾ ದೇವಾಲಯವನ್ನು ಸುತ್ತುವುದು), ತೇರು (ದೇವಾಲಯದ ದೇವ / ದೇವತೆಯ ವಿಗ್ರಹವನ್ನು ರಥವೊಂದರಲ್ಲಿ ಕೂರಿಸಿ ದೇವರ ಸುತ್ತ ಪ್ರದಕ್ಷಣೆ ಸುತ್ತಿಸುವುದು) ಹೀಗೆ ಒಂದೊಂದು ಹಳ್ಳಿಗಳಲ್ಲೂ ಒಂದೊಂದು ಬಗೆಯ ವಿಶಿಷ್ಟ ಹಾಗು ವಿಭಿನ್ನ ಆಚರಣೆಗಳನ್ನು ನೆಡೆಸುತ್ತಾರೆ. ಇನ್ನು ಇಲ್ಲಿನ ದೇವ-ದೇವತೆಗಳ ಹೆಸರೋ ದೊಡ್ಡಮ್ಮ, ಚಿಕ್ಕಮ್ಮ, ನಾಕುರಮ್ಮ, ಎಂಬ ಹೆಣ್ಣುದೇವತೆಗಳ ಜೊತೆಗೆ ಈಶ್ವರನ ಹಲವು ನಾಮಧ್ಯೆಯಗಳ ಗಂಡುದೇವರುಗಳ ಹೆಸರು. ಇನ್ನು ಭೂತಪ್ಪ ಈ ದೇವ ದೇವತೆಯರ ರಕ್ಷಕನಾಗಿ ಅವರನ್ನು ಹೊತ್ತೊಯ್ಯುವ ಮೆರವಣಿಗೆಯಲ್ಲಿ ಎಲ್ಲರಿಗಿಂತಲೂ ಮುಂದಿರುತ್ತಾನೆ. ಹೆಚ್ಚಾಗಿ ಹರಿಜನರೇ ಹೊತ್ತು ಸಾಗುವ ಆ ಬೂತಪ್ಪನ ‘ಅಡ್ಡೆ’ಯನ್ನು ಅತ್ಯಂತ ಭಾವಬಕುತಿಯಿಂದ ಊರಿನ ಜನರು ನೋಡುತ್ತಾರೆ. ಊರುಕೇರಿ ಎಲ್ಲವನ್ನು ಸುತ್ತಿ ಗುಣವಾಗದ ಕಾಯಿಲೆಗೆ, ಮಗಳ ಕಂಕಣ ಭಾಗ್ಯದ ವಿಘ್ನಗಳ ನಿವಾರಣೆಯ ಬಗ್ಗೆ, ಗಂಡನ ಕುಡಿತದ ಬಗ್ಗೆ, ಬರಗಾಲದ ಮಳೆ ಬೆಳೆಯ ಕಷ್ಟಗಳ ಬಗ್ಗೆ ಯಾರಿಲ್ಲ ಅಂದರೂ ಕೊನೆಗೆ ಬೂತಪ್ಪನೆ ನಮಗೆ ಗತಿ ಎಂಬ ನಂಬುಗೆಯನ್ನು ಇಂದಿಗೂ ಇಟ್ಟುಕೊಂಡಿದ್ದಾರೆ ಇಲ್ಲಿನ ಮಲೆನಾಡಿಗರು. ಇಲ್ಲಿ ಹರಿಜನ ಮೆಲ್ಜನ ಎಂಬ ತಕರಾರುಗಳಿಲ್ಲ. ಕ್ಷಮಿಸಿ, ತಕರಾರುಗಳಿರಲಿಲ್ಲ! ಇಡೀ ಮಲೆನಾಡಿಗರು ತಿನ್ನುವ ತುತ್ತನ್ನು ಭಿತ್ತಿ, ಬೆಳೆಸಿ, ಕಟಾವು ಮಾಡಿಕೊಡುತ್ತಿದ್ದ ಜನರೊಟ್ಟಿಗೆ ತಕರಾರು ಎಂಬ ಪದಕ್ಕೆ ಯಾವ ಬಗೆಯ ಅರ್ಥ? ಕೆಲವೆಡೆಯಂತೂ ಇಡೀ ದೇವಸ್ಥಾನದ ದೇವದೇವತೆಗಳ ಪೂಜೆಯ ಜವಾಬ್ದಾರಿಯನ್ನೂ ಈ ಹರಿಜನರೆ ಮಾಡುತ್ತಾರೆ. ಶ್ರದ್ಧಾ ಭಕ್ತಿಯಿಂದ ಅವರುಗಳು ಕೊಡುವ ತೀರ್ಥ ಪ್ರಸಾದವನ್ನು ಊರಿನ ಎಲ್ಲರು ಸೇವಿಸಿ ಕೈಮುಗಿಯುತ್ತಾರೆ. ತಮಟೆ ಡೊಳ್ಳಿನ ಸದ್ದಿಗೆ ಎಲ್ಲರೂ ಒಟ್ಟಾಗಿ ಕುಣಿಯುತ್ತಾರೆ. ಕುಣಿದು ನಲಿಯುತ್ತಾರೆ.

ಪ್ರಸ್ತುತ ರಣಬಿಸಿಲಿನ ಝಳಪಿಗೆ ಮೈಯೊಡ್ಡಿರುವ ತಣ್ಣನೆಯ ಬೆಣ್ಣೆಯ ಮುದ್ದೆಯಂತಾಗಿರುವ ಮಲೆನಾಡ ನೆಲದಲ್ಲಿ ಅಳಿದುಳಿದ ಈ ಸುಗ್ಗಿಯ ಸಂಭ್ರಮವೂ ನಿಧಾನವಾಗಿ ಕರಗಿ ಕಣ್ಮರೆಯಾಗುತ್ತಿದೆ. ಊರು, ಕೇರಿ, ಹೊಲ, ದೇವಸ್ಥಾನ ಇವಿಷ್ಟೇ ಜೀವನವನ್ನಾಗಿ ಮಾಡಿಕೊಂಡಿದ್ದ ತಲೆಮಾರೂ ಸಹ ಇಂದು ಅಳಿವಿನ ಅಂಚಿನಲ್ಲಿದ್ದೆ. ಜಗತ್ತೇ ತನ್ನ ಮುಷ್ಠಿಯೊಳಗೆ ಎಂದುಕೊಂಡೆ ಹುಟ್ಟುವ ಇಂದಿನ ಯುವಜನ ಊರು ಸುಗ್ಗಿಹಬ್ಬಗಳೆಲ್ಲ ದೂರದ ಮಾತು ಕನಿಷ್ಠ ಪಕ್ಷ ತಮ್ಮ ಹಳ್ಳಿಯ ದೇವಸ್ಥಾನದ ದಾರಿಯನ್ನು ತೋರಿಸಲು ತಡವರಿಸುತ್ತಾರೆ. ಇನ್ನು ಅಳಿದುಳಿದ ಮನೆಯ ಯಜಮಾನರುಗಳಿಗೆ, ಪ್ರಜ್ಞಾವಂತ ಹಳ್ಳಿಗರಿಗೆ ಮೊದಲೇ ಹೇಳಿದಂತೆ ಹೋಂ ಸ್ಟೇ, ಗೆಸ್ಟ್ ಹೌಸುಗಳ ಕನಸ್ಸೇ ಬಹುವಾಗಿ ತುಂಬಿಕೊಂಡಿದೆ ಎಂದರೆ ತಪ್ಪಾಗದು. ತಾನಾಯಿತು ತನ್ನ್ನ ಹಣ ಸಂಪಾದನೆಯಾಯಿತು ಎಂದುಕೊಂಡೆ ಕಾಲ ತಳ್ಳುವ ಜನರ ಮದ್ಯೆ ಸುಗ್ಗಿಯ ಸಂಭ್ರಮ ಮುಳುಗಡೆಗೊಳ್ಳುತ್ತಿದೆ. ಅಷ್ಟಾಗಿಯೂ ಅಲ್ಲೊಂದು ಇಲ್ಲೊಂದು ಹಳ್ಳಿಗಳ ಜನರೆಲ್ಲ ಜೊತೆಗೂಡಿ ಹಬ್ಬವನ್ನು ಆಚರಿಸಲು ಮುಂದಾದರೆ ಎದುರಾಗುವ ಮತ್ತೊಂದು ಮಹಾ ಸಮಸ್ಯೆ 'ಹರಿಜನರ ದೇವಸ್ಥಾನ ಪ್ರವೇಶ'. ಸ್ವಸೃಷ್ಟಿಯ ಜಾಲದೊಳಗೆ ಖುದ್ದು ಮಾನವನೇ ಬಿದ್ದು ಒದ್ದಾಡುತ್ತಿರುವುದ್ದಕ್ಕೆ ಇದಕ್ಕಿಂತ ಮತ್ತೊಂದು ಸ್ಪಷ್ಟ ನಿದರ್ಶನ ಮತ್ತೊಂದು ಸಿಗದು. ತಲೆತಲಾಂತರದಿಂದ ನೆಡೆದುಕೊಂಡು ಬಂದ 'ಸಂಪ್ರದಾಯ' ದ ಪ್ರಕಾರ ಹರಿಜರರ ದೇವಾಲಯ ಪ್ರವೇಶಕ್ಕೂ ಇಂತಿಷ್ಟು ಲಕ್ಶ್ಮಣರೇಖೆಗಳಿದ್ದವು. ಆ ರೇಖೆಗಳನ್ನು ನಮ್ಮ ಹಿರಿಯರು ಸಂಪ್ರದಾಯವೆಂದು ಕರೆದರೆ ಈಗ ಆ ಸಂಪ್ರದಾಯ ಮುರಿದುಬಿಳಿಯುವ ಕಾಲ ಸನಿಹವಾಗುತ್ತಿದೆ! ಯಾವ ಜಾತಿಯ ಹಂಗಿಲ್ಲದೆಯೋ ದೇಶದ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳನ್ನು, ರಾಜಕಾರಣಿಗಳೇನಾದರೂ ದೇವಾಲಯ ಪ್ರವೇಶಕ್ಕೆ ಬಂದರೆ ಅಂತವರನ್ನು ತಡೆಯುವ ಹುಂಬುತನ ಇಂದು ಅದೆಷ್ಟು ಮಂದಿಗಿದೆ? ಕೆಲವು ಸಾರಿ ಅಂತವರು ದೇವರ ದರ್ಶನವಲ್ಲ, ದೇವರನ್ನೇ ಅವರ ದರ್ಶನಕ್ಕೆ ತಂದು ನಿಲ್ಲಿಸಿದರೂ ಆಶ್ಚರ್ಯಪಡಬೇಕಾಗಿಲ್ಲ. ಆದರೆ ತಮ್ಮ ಜೀವಮಾನ ಪೂರ್ತಿ ನೋಡಿ, ಕಲಿತು, ನೆಡೆಸಿಕೊಂಡು ಬಂದಿರುವ ಆಚರಣೆಯನ್ನು ಅಷ್ಟು ಸಲೀಸಾಗಿ ಬಿಟ್ಟುಕೊಡದ ಊರಿನ ಜನ ಹೆಸರಿಗೆ ಮಾತ್ರವಷ್ಟೇ ಇದ್ದ ಭೇದ ಭಾವದ ಬೇಲಿಯನ್ನು ಕಿತ್ತು ಕಲ್ಲಿನ ಗೋಡೆಯನ್ನೇ ಅಲ್ಲಿ ಕಟ್ಟುತ್ತಿದ್ದಾರೆ. ಹಬ್ಬ ನಿಂತರೂ ಚಿಂತೆಯಿಲ್ಲ ನಮ್ಮ ಹಿರಿಯರ 'ಸಂಪ್ರದಾಯ'ವನ್ನು ಅಷ್ಟು ಸಲೀಸಾಗಿ ಬಿಟ್ಟುಗೋಡೆವು ಏನುತಾ ಅರಚುತ್ತಾರೆ. ಮತ್ತದೇ ಮನೆ ಕಮ್ ಹೋಂಸ್ಟೇಗಳಿಗೆ ಹೋಗಿ ಜಾತಿಯ ಹಂಗಿಲ್ಲದ ಅತಿಥಿಗಳಿಗೆ ಕಾಯುತ್ತಾ ಕೂರುತ್ತಾರೆ! ಇಲ್ಲಿ ತಮ್ಮ ಮನೆಯ 'ಸಂಪ್ರದಾಯ' ಎಲ್ಲಡಗಿ ಹೋಯಿತೋ ಬಲ್ಲವರ್ಯಾರು?

ದೇವರಿಗೂ ಮಿಗಿಲಾದ ಹಣಭಕ್ತಿ, ವೈಮನಸ್ಸು, ತುಳಿದು ಮೇಲೆ ನಿಲ್ಲುವ ರಾಕ್ಷಸಿ ಬುದ್ದಿ, ಭಕ್ತಿ ಗುಲಗಂಜಿಯಷ್ಟಿರದಿದ್ದರೂ ಸರಿ ದೇವಸ್ಥಾನದ ಇತಿಹಾಸದ ಹಾಗು ಆಚರಣೆಗಳ ಮಹತ್ವವನ್ನು ಅರಿಯದಿದ್ದರೂ ಸರಿ ಒಟ್ಟಿನಲ್ಲಿ ತಾನು ದೇವಸ್ಥಾನವನ್ನು ಒಳಹೊಕ್ಕು ಬಂದರೆ ಸಾಧಿಸಿದ ಸಾಧನೆಯಾದರೂ ಏನೆಂದು ಅರಿಯದ ಅಮಾಯಕ ಜೀವಿಗಳ ಮದ್ಯೆ ನಿಂತು ಸೊರಗುತ್ತಿರುವುದು ಮಾತ್ರ ಸುಗ್ಗಿಯ ಹಿಗ್ಗು. ಸಂಪ್ರದಾಯದ ಹೆಸರೇಳಿ ಸಮಾನತೆಯ ಹಕ್ಕನ್ನು ಕಸಿಯಬೇಕೋ ಅಥವ ಇಲ್ಲಿಗೆ ಮುಗಿಯಿತು ಎನುತ ಅಂತಹ ಆಚರಣೆಗಳನ್ನೇ ಬಿಡಬೇಕೋ ಎಂಬ ದ್ವಂದ್ವದಲ್ಲಿ ಇಂದು ಮಲೆನಾಡಿಗರಿದ್ದಾರೆ. ಪಿಜ್ಜಾ ಬರ್ಗರ್ ಹಾಗು ಮಾಮೂಸ್ಗಳ ಈ ಹೊಸ ಪೀಳಿಗೆಗೆ ಇನ್ನು ಸುಗ್ಗಿಯ ಜಾತ್ರೆಯ ಜಿಗಳಿ ಹಾಗು ಟಮಟಗಳ ಸಿಹಿಯನ್ನು ತಿನಿಸುವವರ್ಯಾರು ? ಮಲೆನಾಡ ಸುಗ್ಗಿಯನ್ನು ಮುನ್ನೆಡೆಸುವವರ್ಯಾರು ?

(* ಮೇಲೆ ತಿಳಿಸಿದ ಕೆಲ ಆಚರಣೆಗಳು ಕೊಂಚ ಬದಲಿರಬಹುಸು ಅಥವಾ ತಪ್ಪಿರಲೂಬಹುದು. ಇಲ್ಲಿ ನನ್ನ ತಪ್ಪಿಗಿಂತ ಹೆಚ್ಚಾಗಿ ದಶಕಗಳ ಕಾಲದವರೆಗೆ ಸುಗ್ಗಿಯ ಜಾತ್ರೆಯನ್ನು ನಿಲ್ಲಿಸಿದ ಜನಗಳೇನೇಕರಿಗೇ ಇದರ ಹೊಣೆ ನೇರವಾಗಿ ಸಲ್ಲುತ್ತದೆ! ಹೀಗೆಯೇ ಮುಂದುವರೆದರೆ, ಮುಂದೊಂದು ದಿನ ಒಂದು ಪಕ್ಷ ಯುವಕರೆಲ್ಲ ಒಟ್ಟಾಗಿ ಹಬ್ಬವನ್ನು ಆಚರಿಸಲು ಬಂದರೂ ಆಚಾರ ಸಂಪ್ರದಾಯಗಳೇ ಗೊತ್ತಿಲ್ಲದೇ ಪರದಾಡಿದರೂ ಆಶ್ಚರ್ಯ ಪಡಬೇಕಾಗಿಲ್ಲ!)

Friday, March 8, 2019

ನೋಡಿ ಸ್ವಾಮಿ .. ನಾವಿರೋದು ಹೀಗೆ.. !!

ಮೊನ್ನೆ ಆ ದೃಶ್ಯಗಳನ್ನು ನೋಡಿ ಯಾಕೋ ನಮ್ಮ ಶಂಕರ್ ನಾಗ್ ನೆನಪಾದ್ರು. ಅದು ಶಂಕರ್ ನಾಗ್ ಅನ್ನೋದಕ್ಕಿಂತ ಶಂಕರ್ ನಾಗ್ ಅಭಿನಯದ 'ನೋಡಿ ಸ್ವಾಮಿ ನಾವಿರೋದೇ ಹೀಗೆ' ಚಿತ್ರದ ಟೈಟಲ್ ಹಾಡು ನೆನಪಾಯಿತು ಎನ್ನಬಹುದು. ನಗರದ ಗಲ್ಲಿಮೂಲೆಗಲ್ಲಿ ತನ್ನ MAT ಬೈಕಿನ ಮೇಲೆ ಕೂತು ಹಾಡುತ್ತಾ ಸಾಗುವ ಚಿತ್ರದ ದೃಶ್ಯದ ತುಣುಕು, ದಿನ ಬೆಳಗಾದರೆ ಬೆಳ್ಳನೆಯ ಬಟ್ಟೆಗಳನ್ನು ತೊಟ್ಟು 'ನಾನೇ ಸಾಚಾ ಆತ ಮಾತ್ರ ನೀಚ' ಎಂಬಂತೆ ಎಲ್ಲೆಂದರಲ್ಲಿ ಬೈಯುವ ಭಾಷಣಗಳನ್ನು ಮಾಡುತ್ತಾ ಓಟಿಗಾಗಿ ಊರೂರು ಸುತ್ತುತ್ತಾ ಕೊನೆಗೆ ಅಪ್ಪಿ ತಪ್ಪಿ ಆತನೇ ಎದುರಿಗೆ ಪ್ರತ್ಯಕ್ಷವಾದರೆ ‘ಹಿಂದಿ ಚೀನೀ ಬಾಯಿ ಬಾಯಿ' ಎಂಬುವಂತೆ ತಬ್ಬಿಕೊಂಡು ಮುತ್ತಿಡುವುದೊಂದೇ ಬಾಕಿ ಏನೋ ಎಂಬ ಧಾಟಿಯಲ್ಲಿ ನಟಿಸುತ್ತಾ ನಿಲ್ಲುವ ರಾಜಕಾರಣಿಗಳನ್ನು ನೆನೆಪಿಸುತ್ತಿತ್ತು. ಅವರುಗಳ ಹಿಂದೆಯೇ ನಮ್ಮ ಶಂಕರ್ ಗುರು 'ನೋಡಿ ಸ್ವಾಮಿ ಇವ್ರ್ ಇರೋದೇ ಹೀಗೆ' ಎಂದು ಹಾಡಿದಂತೆ ಭಾಸವವಾಗುತ್ತಲಿತ್ತು. ನಿಂತ ನೆರಳಿಗೆ ಆಗದ ಮಾಜಿ ಸಿಯಮ್ ಗಳಿಬ್ಬರು ವೇದಿಕೆಯೊಂದರ ಮೇಲೆ ಕೈ ಕೈ ಕುಲುಕುತ್ತಾ 'ಪಾಲಿಟಿಕ್ಸ್ ಅಪಾರ್ಟ್, ನಾವಿಬ್ಬರು ಅತ್ಯುತ್ತಮ ಸ್ನೇಹಿತರು' ಎಂದಾಗ ನೆರೆದಿದ್ದ ನೂರಾರು ಅಭಿಮಾನಿಗಳು ತಲೆಯನ್ನು ಕೆರೆದುಕೊಳ್ಳುತ್ತಾ ಒಬ್ಬರನ್ನೊಬ್ಬರು ಮಿಕ ಮಿಕ ನೋಡತೊಡಗಿದಂತೂ ಸುಳ್ಳಲ್ಲ. ರಾಜ್ಯದ ಹಿರಿಯ ರಾಜಕಾರಣಿಗಳಾಗಿ ಅಂತವರ ಬಾಯಿಂದ ಇಂಥ ಹಿರಿಯ ಮಾತುಗಳು ಬರುವುದು ತಪ್ಪೇನಿಲ್ಲ. We Should Appreciate that. ಆದರೆ ಇಂದು ಹೀಗಂದು ನಾಳೆ ಮತ್ತದೇ ಮೈ ಮೈ.. ತು ತು .. ಎಂದು ಬೆಂಕಿಕಾರುವ ಮಾತುಗಳಾದರು ಏತಕ್ಕೆ ಸ್ವಾಮಿ? ಮಿಗಿಲಾಗಿ ಇಂತಹ ಪೊಳ್ಳು ಮಾತುಗಳ ಸರದಾರರಾಗಿ ಅವರುಗಳಿಗೇ ಇರದ ವೈರತ್ವವನ್ನು ಒಬ್ಬ ಕಾಮನ್ ಸಿಟಿಸನ್ ಆಗಿ ನಾವ್ಯಕ್ಕೆ ಕಟ್ಟಿಕೊಳ್ಳಬೇಕು ಹೇಳಿ?!

ಅದು ಐವತ್ತನೇ ದಶಕದ ಕೊನೆಯ ವರ್ಷಗಳು. ನೆಹರು ನಾಯಕತ್ವದ ಸರ್ಕಾರದ ನಡೆಗಳೆಲ್ಲವೂ ಸುದ್ದಿಯಷ್ಟೇ ಆಗುತ್ತಿರಬೇಕಾದರೆ ಇತ್ತ ಕಡೆ ಪಾರ್ಲಿಮೆಂಟಿನಲ್ಲಿ ತನ್ನ ಮೂವತ್ತು ವರ್ಷದ ಆಸುಪಾಸಿನ ಯುವಕನೊಬ್ಬ ಅಂತಹ ಗಟ್ಟಿ ಸರ್ಕಾರದ ವಿರುದ್ಧವೇ ಅಬ್ಬರದ ಪ್ರೆಶ್ನೆಗಳನ್ನು ಸುರಿಸುತ್ತಿರುತ್ತಾನೆ. ದೇಶ ನೆಲ ಜಲ ಎನುತ ಮುಂದಿರುವವರ ಬೆವರನ್ನು ಇಳಿಸುತ್ತಿದ್ದ ಆತ ಪತ್ರಕರ್ತನಲ್ಲದೆ ಒಬ್ಬ ಕವಿಯೂ ಹೌದು. ಸಂಸತ್ತಿನ ಮೂಲೆ ಮೂಲೆಗಳಲ್ಲಿ ಮಾರ್ಧನಿಸುತ್ತಿದ್ದ ಆತನ ಧ್ವನಿ ಪ್ರಧಾನಿ ನೆಹರುರವರ ಕಿವಿಯನ್ನು ಮುಟ್ಟಲು ಹೆಚ್ಚು ಸಮಯ ಹಿಡಿಯಲಿಲ್ಲ. ಅವರೂ ನೋಡಿದರು. ಕೇಳಿದರು. ಪ್ರತಿಪಕ್ಷದವನಾದರೂ ಆತನ ಪ್ರತಿ ಪ್ರೆಶ್ನೆಯ ಆಳವನ್ನು ಅರಿತರು. ಕೆಲ ಸಮಯದ ನಂತರ ಆತನ ಗುಣನಡತೆಗೆ ಆಲ್ಮೋಸ್ಟ್ ಇಂಪ್ರೆಸ್ ಆಗಿದ್ದ ನೆಹರು ವಿದೇಶೀಯರೊಬ್ಬರಿಗೆ ಈ ಯುಂಗ್ ವ್ಯಕ್ತಿಯನ್ನು ಪರಿಚಯಿಸುತ್ತಾ 'ನೋಡಿ ಸ್ವಾಮಿ, ಈತ ಮುಂದೊಂದು ದಿನ ನಮ್ಮ ದೇಶದ ಪ್ರಧಾನಿಯಾಗುತ್ತಾನೆ' ಎಂದು ಹೆಮ್ಮೆಯಿಂದ ಹೇಳುತ್ತಾರಂತೆ. ಅದು ನೆಹರುರವರ ಮಾತಿನ ಜಾದುವೋ ಏನೋ ಅದಾದ ನಾಲ್ಕು ದಶಕಗಳ ನಂತರ ಆತ ಹತ್ತನೇ ಪ್ರಧಾನಿಯಾಗಿ ದೇಶದ ಚುಕ್ಕಾಣಿಯನ್ನು ಹಿಡಿದಿದ್ದ! ಅಂತಹ ಪಕ್ಷಾತೀತ ಗೌರವವನ್ನು ಗಳಿಸಿದ್ದ ಈ ನಾಯಕ 1971 ರ ಬಾಂಗ್ಲಾ ವಿಮೋಚನೆಯಲ್ಲಿ ಇಂದಿರಾ ಗಾಂಧಿಯವರ ದೃಢನಿರ್ಧಾರಕ್ಕೆ ಮೆಚ್ಚಿ ತಾನು ಜನಸಂಘದ ನಾಯಕನಾದರೂ ಈಗಿನ ರಾಜಕಾರಣಿಗಳಂತೆ 'ಪ್ರೂಫ್ ಕೊಡ್ರಪ್ಪ' ಎಂಬುದ ಬಿಟ್ಟು ಆಕೆಯನ್ನು ಮುಕ್ತವಾಗಿ ಬೆಂಬಲಿಸಿರುವುದೂ ಉಂಟು. ಎಂಬತ್ತರ ದಶಕದಲ್ಲಿ ರಾಜೀವ್ ಗಾಂಧಿ ಪ್ರೈಮ್ ಮಿನಿಸ್ಟರ್ ಆಗಿದ್ದ ಕಾಲವದು. ಅದಾಗಲೇ ತನ್ನ ಒಂದು ಕಿಡ್ನಿಯನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಈ ನಾಯಕನಿಗೆ ಉಳಿದ ಮತ್ತೊಂದು ಕಿಡ್ನಿಯೂ ಸಮಸ್ಯೆಯನ್ನು ಕೊಡತೊಡಗಿತು. ಇಲ್ಲಿಯೇ ಚಿಕಿತ್ಸೆ ಏನುತಾ ಸೂಜಿಮೊನೆಯಷ್ಟೂ ಎಡವಟ್ಟಾದರೆ ಇರುವ ಒಂದು ಕಿಡ್ನಿಗೂ ಆಪತ್ತು. ಆಗ ನಮ್ಮ ದೇಶ ಸ್ವಾವಲಂಬಿಯಾಗಲು ಸೂಪರ್ ಕಂಪ್ಯೂಟರನ್ನು ಸಿದ್ಧಪಡಿಸುವ ಗುಂಗಿನಲ್ಲಿತ್ತು. ಆದರೆ ಕಿಡ್ನಿಯನ್ನು ರೀಪೇರಿ ಮಾಡುವ ಸೂಪರ್ ತಂತ್ರಜ್ಞಾನಗಳಿಗಾಗಿ ಮತ್ತದೇ ಅಮೇರಿಕಾದ ಕದವನ್ನೇ ತಟ್ಟಬೇಕಿದ್ದಿತು. ಹಾಗಾಗಿ ಈತ ಶತಾಯ ಗತಾಯ ಅಂದು ಅಮೆರಿಕವನ್ನು ತಲುಪಬೇಕಿದ್ದಿತು. ಅಮೇರಿಕಾದ ಪ್ರವಾಸ, ಮೆಡಿಕಲ್ ಬಿಲ್ಲುಗಳು, ಊಟ ತಿಂಡಿಯ ಖರ್ಚು ಏನು ಸಾಮನ್ಯದ ಮಾತೆ? ಮೇಲಾಗಿ ಹೆಂಡತಿ ಮಕ್ಕಳಿಲ್ಲದ ಈ ಆಸಾಮಿ ತನ್ನೆಲ್ಲವನ್ನು ದೇಶಕ್ಕೆ ಸಮರ್ಪಿಸಿದ ರಾಜಕೀಯ ಸನ್ಯಾಸಿ. ಸಮಸ್ಯೆ ಉಲ್ಬಣಿಸತೊಡಗಿತು. ಇನ್ನೇನು ಕಾಲ ಮಿತಿಮೀರಿತು ಎನ್ನುವಾಗ ಈತನ ನೆರವಿಗೆ ಬಂದವರೇ ಪ್ರಧಾನಿ ರಾಜೀವ್ ಗಾಂಧಿ! ಭಾರತದಿಂದ ವಿಶ್ವಸಂಸ್ಥೆಗೆ ಹೋಗುವ ಸದಸ್ಯರ ಪಟ್ಟಿಯಲ್ಲಿ ಈತನ ಹೆಸರನ್ನು ಸೇರಿಸಿ ಅವರನ್ನು ಅಮೇರಿಕಾದ ವಿಮಾನವನ್ನು ಹತ್ತಿಸಿದರಂತೆ. ಅಲ್ಲದೆ ಇವರು ಸಂಪೂರ್ಣ ಗುಣಮುಖರಾದ ಮೇಲೆಯೇ ವಾಪಸ್ಸು ಕರೆತರುವಂತೆಯೂ ಸೂಚಿಸಿದರಂತೆ. ಪಕ್ಷ ಪ್ರತಿಪಕ್ಷಗಳೆಂದರೆ ಸಾವು, ಕೊಲೆ, ಒಡೆತ, ಬಡಿತ ಎಂದಾಗಿರುವ ಪ್ರಸ್ತುತ ಕಾಲದಲ್ಲಿ ಇಂತಹ ನಾಯಕರುಗಳ ಅಭಾವ ಬಹಳಷ್ಟು ಇದೆ. ಮುಂದೆ 1991 ರಲ್ಲಿ ರಾಜೀವ್ ಗಾಂಧಿಯವರ ಹತ್ಯೆಯ ನಂತರ ಮಾತಾಡಿದ ಈ ನಾಯಕ 'ಇಂದು ನಾನು ಜೀವಂತವಾಗಿರಲು ಕಾರಣ ನನ್ನ ತಮ್ಮನಂತಿದ್ದ ದಿವಗಂತ ರಾಜೀವ್ ಗಾಂಧಿ' ಎಂದು ಕೆಲವರ್ಷಗಳ ಹಿಂದೆ ಜರುಗಿದ ಘಟನೆಯನ್ನು ಮೆಲುಕು ಹಾಕಿದರಂತೆ. ಒಹ್, ಹಾಗಂತ ಈ ನಾಯಕ ಯಾರೆಂದು ಹೇಳಲೇ ಇಲ್ಲ. ಆತ ಮತ್ಯಾರು ಅಲ್ಲ. ಕಳೆದವರ್ಷ ಇಹಲೋಕ ತ್ಯೆಜಿಸಿದ ಸರ್ವಪಕ್ಷಗಳಿಂದಲೂ ಅಜಾತಶತ್ರುವೆನಿಸಿಕೊಂಡಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ.

ಇಂತಹ ಲೋಕಮೆಚ್ಚಿದ ನಾಯಕರ ಅಭಾವ ಹೆಚ್ಚಿದೆ…ದೇಶ ಇಂದು ಜಾತಿ ರಾಜಕಾರಣದಲ್ಲಿ ಒಡೆದು ಚೂರಾಗಿದೆ…ಯಾವೊಬ್ಬ ನಾಯಕನಲ್ಲೂ ನಾನು ನಾನೆಂಬ ಅಹಂ ಬಿಟ್ಟರೆ ನಾವು ನಾವೆಂಬ ಮಾತಂತೂ ಕೇಳುವುದೇ ಇಲ್ಲ…ಅಂತೆಲ್ಲಾ ನಾವುಗಳು ಗೊಣಗುತ್ತಲೇ ಇರುತ್ತೇವೆ. ರಾಜಕಾರಣಿಗನ್ನು ಜರಿಯುತ್ತಲೇ ಇರುತ್ತಿವೆ. ಅಲ್ಲೇ ಇರುವುದು ನೋಡಿ ನಮ್ಮ ತಪ್ಪು. ಜನ್ಮವಿತ್ತ ಅಪ್ಪ ಅಮ್ಮಂದಿರ ಮಾತಿಗೇ ಮೂರುಕಾಸಿನ ಬೆಲೆಕೊಡದ ಈ ಕಾಲದಲ್ಲಿ ಹೆರದೆ, ಒರದೆ, ಸಾಕದೆ, ಸಾಲುಹದೆ ಬಿಳಿಬಟ್ಟೆಯನ್ನು ತೊಟ್ಟು ತಿರುಗುವ ವ್ಯಕ್ತಿಗಳಿಗೇಕೆ ಈ ಮಟ್ಟಿನ ಪ್ರಾಮುಖ್ಯತೆ? ಅವರ ಮಾತುಗಳಿಕೆಗೆ ವೇದವಾಕ್ಯಗಳಂತಹ ಬಿಲ್ಡಪ್ಪು? ತನ್ನ ಜೀವಮಾನದಲ್ಲೇ ಮೂರಕ್ಷರ ಓದದ, ಯಾವುದಾದರೊಂದು ವಿಷಯದಲ್ಲಿ ಎಳ್ಳಷ್ಟೂ ಜ್ಞಾನ ಸಂಪಾದಿಸದ, ಸುಟ್ಟು ಕರಕಲಾದ ಮಸಿಯಂತಹ ಸಾರ್ವಜನಿಕ ಜೀವನದ ಹಿಸ್ಟರಿಯನ್ನು ಹೊಂದಿರುವ ವ್ಯಕ್ತಿಗಳು ಕಣ್ಣು ಮುಚ್ಚಿ ಒದರುವ ಮಾತುಗಳನ್ನು ಕಣ್ಣು ಮುಚ್ಚಿಯೇ ಪಾಲಿಸುವ ಸುಶಿಕ್ಷಿತ ವರ್ಗಗಳೇ ಇಂದಿವೆ. ಅದರಲೇನು ತಪ್ಪಿದೆ? ದೇಶ ನೆಡೆಸಲು ಡಿಗ್ರಿ ಸರ್ಟಿಫಿಕೇಟುಗಳಿಗಿಂತ ರಾಜಕೀಯ ನೈಪುಣ್ಯತೆ, ದೇಶಪ್ರೇಮ, ಧೈರ್ಯ ಹಾಗು ಅಧಮ್ಯ ಚಲವೂ ಬೆಕಲ್ರಿ ಎನ್ನಬಹುದು, That’s right. ಈ ಮಾತು ನೂರಕ್ಕೆ ನೂರು ಸತ್ಯ. ಆದರೆ ಅಂತಹ ದೇಶನೆಡೆಸುವ ಸುಕುಮಾರರು ದೇಶದ ಹೆಸರಿನಲ್ಲಿಯೇ ಒಬ್ಬರಿಗೊಬ್ಬರು ಸಾರ್ವಜನಿಕವಾಗಿಯೇ ಬೈದುಕೊಳ್ಳುತ್ತಾ, ಚಪ್ಪಲಿಗಳಲ್ಲಿ ಬಡಿದೊಳ್ಳುತ್ತಾ, ತಾನು ಹುಟ್ಟುವಾಗಲೇ ಜಾತಿ ಧರ್ಮದ ಚರ್ಮವನ್ನು ಧರಿಸಿ ಬಂದವನೇನೋ ಎನುತ ಅನ್ಯಧರ್ಮಿಯರನ್ನು ಚೈಲ್ಡಿಶ್ ಕಾರಣಗಳಿಂದ ಜರಿಯುತ್ತಾ, ಪುಕ್ಸಟೆಯಾಗಿ ಸಿಗುವ ಫೇಮ್ ಹಾಗು ನೇಮ್ ಎನುತ ತನ್ನ ಇಡೀ ಸಂಸಾರದ ತಲೆಗಳನ್ನೆಲ್ಲಾ ರಾಜಾಕಿಯಾದ ಅಖಾಡದೊಳಗೆ ತೂರುತ್ತ, ತಾನೇ ತನ್ನ ಹೆಸರಿನ ಪ್ರತಿಮೆಗಳನ್ನು ನಿರ್ಮಿಸಿ ತಾನಾಗಿಯೇ ಪ್ರತಿಷ್ಠಾಪಿಸಿಕೊಳ್ಳುತ್ತಾ, ಒಕ್ಕೂಟ ವ್ಯವ್ಯಸ್ಥೆಯನ್ನೇ ಧಿಕ್ಕರಿಸುತ್ತಾ, ಅಂದು ಉಗಿದು ತೆಗಳಿದ ಪಕ್ಷಗಳನ್ನೇ ಇಂದು ಮೂರು ಬಿಟ್ಟು ಸೇರಿಕೊಳ್ಳುತ್ತಾ, ಒಟ್ಟಿನಲ್ಲಿ ಅಂತಾಷ್ಟ್ರೀಯ ಮಟ್ಟದಲ್ಲಿ ದೇಶದ ತಲೆಯನ್ನು ತಗ್ಗಿಸುವಂತಹ ಕಾರ್ಯಗಳನ್ನು ಮಾಡುವ ಇಂತಹ ರಾಜಕಾರಣಿಗಳನ್ನು ಬೆಂಬಲಿಸಬೇಕೇ? ಹಿಂಬಾಲಿಸಬೇಕೇ? ಇಂತಹ ವ್ಯಕ್ತಿನಿಷ್ಠ ಸಮಾಜಭ್ರಷ್ಟ ನಾಯಕರುಗಳಿಂದ ಸಮಾಜದ ಸ್ವಾಯತ್ತತೆಯಂತೂ ಕೆಡುವುದು ಇದ್ದದ್ದೇ ಆದರೆ ನಾವುಗಳೇಕೆ ನಮ್ಮ ಸ್ವಾಯತ್ತತೆಯನ್ನು ಕೆಡಿಸಿಕೊಳ್ಳಬೇಕು? ಅವರಾಡುವ ಉಡಾಫೆಯ ಮಾತುಗಳನ್ನು ಸೀರಿಯಸ್ಸಾಗಿ ಪರಿಗಣಿಸಿ ಉತ್ತಮ ನಾಯಕನನ್ನೂ ಸದ್ದಾಂ ಹುಸೇನ್ ಗಳಾಗಿ ಏಕೆ ಪರಿವರ್ತಿಸಬೇಕು. ಸ್ಟೇಜಿನ ಮೇಲೆ ಇಷ್ಟೆಲ್ಲಾ ಅರಚುವ ಇವರು ಕೆಲವೊಮ್ಮೆ ಸದನದ ಒಳಗೆ ಹೆಗಲ ಮೇಲೆ ಹೆಗಲಾಕಿಕೊಂಡು ಮುಸಿ ಮುಸಿ ನಗುವುದ ನೋಡಬೇಕು ಸ್ವಾಮಿ. ದ್ವೇಷದ ಪಾಪ ಮಾತ್ರ ಪಾಪದ ಹಿಂಬಾಲಕರಿಗೆ, 'ಪಾಲಿಟಿಕ್ಸ್ ಅಪಾರ್ಟ್, ನಾವೆಲ್ಲ ಫ್ರೆಂಡ್ಸ್' ಎಂಬ ಅವಕಾಶವಾಗಿ ಮಾತುಗಳು ಮಾತ್ರ ಇಂತಹ ನಾಯಕರಿಗೆ!.

ಇಂತಹ ಪರಿಸರದಲ್ಲಿ ಬದಲಾವಣೆ ಎಂಬುದು ಸಾಧ್ಯಕ್ಕೆ ದೂರವಾದ ಮಾತು. ಚುನಾವಣೆ ಸಮೀಪಿಸುತ್ತಿದ್ದಂತೆಯೇ ಹುತ್ತದ ಒಳಗಿನ ವಿಷಭರಿತ ಹಾವುಗಳಂತೆ ಒಂದೊಂದಾಗಿಯೇ ಹೊರಬರುವ ಇವರುಗಳ ನಾಲಿಗೆಗಳು ಸಮಾಜದ ಕಷ್ಟ ನೋವುಗಳಿಗೆ ಮತ್ತಷ್ಟು ಹುಳಿ ಹಿಂಡುವ ಕಾರ್ಯವನ್ನು ಮಾಡುತ್ತವೆ. ಚುನಾವಣೆಯ ಪ್ರಕ್ರಿಯೆ ಇವಕ್ಕೆ ಭಯೋತ್ಪಾದಕರ ವಿರುದ್ಧ ಹೊರಾಡುವ ಯುದ್ಧವೇನೋ ಎಂಬ ಮಟ್ಟಕ್ಕೆ ಮಾರ್ಪಾಡಾಗುತ್ತದೆ. ಕುರಿಕಾಯುವ ಮಾವುತನಾಗುವ ಇವರುಗಳು ಜನಸಾಮನ್ಯರ ಚಿತ್ತದ ಮುಗ್ದತೆಯ ಲಾಭವನ್ನು ಪಡೆಯುತ್ತಾರೆ. ಈ ಪ್ರಕ್ರಿಯೆ ಹೀಗೆಯೇ ಮುಂದುವರೆಯುತ್ತದೆ. ನಮ್ಮಂತ ಹಲವರಿಗೆ ಹೀಗಾದ ಪ್ರತಿಭಾರಿಯೂ ಶಂಕರ್ ನಾಗ್ರ MAT ಬೈಕು ನೆನಪಾಗುತ್ತಲೇ ಇರುತ್ತದೆ!

Tuesday, February 26, 2019

ಗುಡಿಯಿಂದ ಮನೆಕಾಯುವವನು ದೇವರಾದರೆ, ಗಡಿಯಿಂದ ದೇಶ ಕಾಯುವವನು .. ?

ಉರಿಯುವ ಬಿಸಿಲಾಗಲಿ ಅಥವಾ ಕೊರೆಯುವ ಚಳಿಯಾಗಲಿ, ಹಸಿವು ಕೂಗುತ್ತಿರಲಿ ಅಥವಾ ದುಃಖ ಮಡುಗಟ್ಟಿರಲಿ, ದೇಹ ಸಾಕೆನ್ನುತ್ತಿರಲಿ ಅಥವಾ ಭಯ ಮನೆಮಾಡಿರಲಿ, ಹಗಲಿರಲಿ, ಇರುಳಿರಲಿ, ಕೇವಲ ದೇಶ ದೇಶ ದೇಶವೆನುತ ಜೀವ ತೆತ್ತುವ ಆ ಹುಚ್ಚು ಪ್ರೇಮಿಗಳಿಗೆ ಅರ್ಥಾತ್ ನಮ್ಮ ಧೀರ ಸೈನಿಕರನ್ನು ಸ್ಮರಿಸುತ್ತಾ, ಗೌರವಿಸುತ್ತಾ ಹಾಗು ಶ್ರದ್ದಾಂಜಲಿಯನ್ನು ಅರ್ಪಿಸುತ್ತಾ...

ನಾನಿಂದು ಹೇಳಹೊರಟಿರುವುದು ಒಬ್ಬ ಪಾಪ್ಯುಲರ್ ಪತ್ತೇದಾರಿಯ ಬಗ್ಗೆ. 'ದಿ ಬ್ಲಾಕ್ ಟೈಗರ್' ಎಂಬ ಹುಲಿಯ ವರ್ಚಸ್ಸಿನ ಈತ ಭಾರತ ನೆಲದ ವೀರಪುತ್ರ. ಜೀವಹೋದರೂ ದೇಶದ ಮಾಹಿತಿಯನ್ನು ಬಿಡದ ಒಬ್ಬ true ಹೀರೋ. ತನ್ನ ಬದುಕಿನ ಅರ್ದದಷ್ಟು ಕಾಲವನ್ನು ದೇಶ ಹಾಗು ದೇಶದ ನೆಲಕ್ಕೆ ಮುಡಿಪಾಗಿಟ್ಟ ಈತನ ಜೀವನದ ಕೊನೆಯ ದಿನಗಳು ದುಃಖಾಂತ್ಯ ಕಂಡದ್ದು ಮಾತ್ರ ವಿಪರ್ಯಾಸವೇ ಸರಿ.

ಮಕಾಡೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಜಾಯಮಾನದ ಪಾಕಿಸ್ತಾನ ಮೂರು ಮೂರು ಬಾರಿ ಸೋತು ಸುಣ್ಣವಾದರೂ ನಾಲ್ಕನೇ ಬಾರಿಗೆ ಒಳನುಗ್ಗುವ ಕುತಂತ್ರವನ್ನು ರೂಪಿಸುತ್ತಿದ್ದ ಕಾಲವದು. ತೀವ್ರವಾದಿಗಳೆಂಬ ಆಂತರಿಕ ಭಯೋತ್ಪಾದಕರ ಬಲದಲ್ಲಿ ನೆಡೆಯುವ ದೇಶಗಳು ಮಾತ್ರ ಹೀಗೆ ತಿನ್ನಲು ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜಗತ್ತನ್ನು ಗೆಲ್ಲುವ ದುಸ್ಸಾಹಸಕ್ಕೆ ಕೈಹಾಕುವುದು. ಮೆಷಿನ್ ಗನ್ನುಗಳನ್ನು ಹಿಡಿದಿರುವ ಮಂಗಗಳ ಗುಂಪು ಜಗತ್ತನ್ನು ಗೆಲ್ಲುವುದುಂಟೆ ಎನುತ ಸುಮ್ಮನಿರಲೂ ಇತ್ತಕಡೆ ಸಾದ್ಯವಿರಲಿಲ್ಲ. ಭಾರತ ಆ ಮಿಲಿಟರಿ ಕಮಂಗಿಗಳ ನಾಲ್ಕನೇ ಆಕ್ರಮಣಕ್ಕೂ ಮೊದಲೇ ಹೆಚ್ಚೆತ್ತುಕೊಳ್ಳಬೇಕಿತ್ತು. ಸೋಲೋ ಗೆಲುವೋ, ಯುದ್ದವೆಂಬುದು ದೇಶವನ್ನು ಹಲವಾರು ವರ್ಷಗಳಿಗೆ ಹಿಂಬಡ್ತಿಯನ್ನು ನೀಡುವುದಂತೂ ಸುಳ್ಳಲ್ಲ. ಆದ ಕಾರಣ ಈ ಬಾರಿ ಸಾವು ನೋವುಗಳಿಲ್ಲದ ಸೈಲೆಂಟ್ ಯುದ್ಧವನ್ನು ಮಾಡಬೇಕಿದ್ದಿತು. ಕಾಲ ಮೀರುವ ಮೊದಲೇ ದೇಶಕ್ಕೆ ಅವರುಗಳ ಚಲನವಲನಗಳಲ್ಲದೆ, ತಂತ್ರ ಕುತಂತ್ರಗಳ ಬಗ್ಗೆಯೂ ತಿಳಿಯಬೇಕಿದ್ದಿತು. ಹಾಗಾಗಿ ನಮ್ಮವರಲ್ಲೊಬ್ಬ ಅವರ ಮನೆಯಲ್ಲಿದ್ದೆ ವಿಷಯಗಳನ್ನು ಸಂಗ್ರಹಿಸಬೇಕಿದ್ದಿತು. ಅವುಗಳನ್ನು ಅಲ್ಲಿಂದ ಇಲ್ಲಿಗೆ ಕಳುಹಿಸಬೇಕಿದ್ದಿತು. ಅರ್ತಾಥ್ County Needed a Smart & Powerful Spy!

ಅದು ಅರ್ವತ್ತನೆ ದಶಕದ ಕೊನೆಯ ವರ್ಷಗಳು. ರಾಜಸ್ತಾನದ ಗಂಗಾನಗರದಲ್ಲಿ ನೋಡಲು ಏಕ್ದಂ ಅಂದಿನ ಸೂಪರ್ಸ್ಟಾರ್ ವಿನೋದ್ ಖನ್ನಾನಂತೆ ಕಾಣುತಿದ್ದ ಚಿಗುರುಮೀಸೆಯ ಯುವಕನೊಬ್ಬ ಥಿಯೇಟರ್ ನ ಸ್ಟೇಜಿನ ಮೇಲೆ ತನ್ನ ನಟನಾ ಚತುರತೆಯಿಂದ ಮಿಂಚುತ್ತಿರುತ್ತಾನೆ. ಬೆಳ್ಳನೆಯ ಆರಡಿ ಎತ್ತರದ ದೇಹಾಕಾಯ ಹೊರಗಡೆಯಾದರೆ ದೇಶ ಹಾಗು ದೇಶಕ್ಕಾಗಿ ಏನಾದರೊಂದು ಮಾಡಲೇಬೇಕೆಂಬ ಹಪಾಹಪಿ ಆತನ ಒಳಗಡೆ. ಹಾಗಾಗಿ ತಾನು ನಟಿಸುತ್ತಿದ್ದ ನಾಟಕಗಳಲ್ಲಿ ತನಗೆ ಅಂತಹದ್ದೇ ಯಾವುದಾದರೊಂದು ಪಾತ್ರವನ್ನು ಗಿಟ್ಟಿಸಿಕೊಂಡು ಅದಕ್ಕೆ ಜೀವ ತುಂಬುತ್ತಿದ್ದ ಆತ. ಅದು ನೋಡುಗರಲ್ಲಿ ನಾಟಕವೂ, ನಿಜಜೀವನವೋ ಎಂಬ ಭ್ರಮೆಯನ್ನು ಮೂಡಿಸುವಂತಿತ್ತು ಆತನ ನಟನೆ. ಹೆಸರು ರವೀಂದ್ರ ಕೌಶಿಕ್ ಉರ್ಫ್ ನಬಿ ಅಹ್ಮದ್ ಶಾಕಿರ್!

ಆ ದಿನ ಭಾರತದ ಏಜೆಂಟ್ ಒಂದರ ಪಾತ್ರವನ್ನು ನಟಿಸುತ್ತಿದ್ದ ಈತನ ನಟನೆಯನ್ನು ನೋಡಿ ಅಲ್ಲಿ ಬೆರಗಾಗದಿರುವವರೇ ಇರಲಿಲ್ಲ. ದೇಶದ ಮುಂದಿನ ಸೂಪರ್ ಸ್ಟಾರ್ ಆಗುವ ಎಲ್ಲಾ ಲಕ್ಷಣಗಳಿದ್ದ ಆತನ ನಟನೆಯನ್ನು ಅಂದು ನೋಡಲು ಬಂದಿದ್ದವರ ಗುಂಪಿನಲ್ಲಿ ಕೇವಲ ಪ್ರೇಕ್ಷಕರಷ್ಟೇ ಅಲ್ಲದೆ ಭಾರತ ದೇಶದ ಗುಪ್ತಚರ ಸಂಸ್ಥೆಯ ಅಧಿಕಾರಿಗಳೂ ಇದ್ದರು. ಅಧಿಕಾರಿಗಳೇನು ನಾಟಕ ನೋಡಬಾರದೇ ಸ್ವಾಮಿ, ಅದರಲ್ಲೇನಿದೆ ಅಂಥಹದ್ದು ಎನ್ನಬಹುದು. ಆದರೆ ಅಂದು ಅಲ್ಲಿಗೆ ಬಂದಿದ್ದ ಅಧಿಕಾರಿಗಳು ನಾಟಕವನ್ನು ಅದೆಷ್ಟು ಆಸ್ವಾದಿಸಿದರೂ ಗೊತ್ತಿಲ್ಲ ಆದರೆ ತಾವು ವರುಷಗಳಿಂದ ಅರಸುತ್ತಿದ್ದ ವ್ಯಕಿಯೊಬ್ಬನನ್ನು ಆ ಯಂಗ್ ಸೂಪರ್ ಸ್ಟಾರ್ನಲ್ಲಿ ಅವರು ಕಂಡರು! ಕೂಡಲೇ ಆತನನ್ನು ಭೇಟಿಯಾಗಿ ಆತ ದೇಶದ ಹಿತರಕ್ಷಣೆಗೆ, ದೇಶದ ಜನರ ಒಳಿತಿಗೆ ಇಲಾಖೆಯನ್ನು ಸೇರಬೇಕೆಂಬ ಜಾಬ್ ಆಫರನ್ನೂ ಕೊಟ್ಟರು. ಅಲ್ಲದೆ ಮುಚ್ಚು ಮರೆಯಿಲ್ಲದೆ ಕೆಲಸ ಪಕ್ಕದ ಪಾಕಿಸ್ತಾನಕ್ಕೆ ತೆರಳಿ ಅಲ್ಲಿಂದ ಸೀಕ್ರೆಟ್ ಇನ್ಫಾರ್ಮಶನ್ ಗಳನ್ನು ಇಲ್ಲಿಗೆ ರವಾನಿಸುವುದು ಎಂದರು. ಬೇರೆಯವರಾಗಿದ್ದರೆ ಬಹುಷಃ ಕಡ್ಡಿ ಮುರಿದಂತೆ ಇಲ್ಲವೆನ್ನುತ್ತಿದ್ದರೋ ಅಥವಾ ಯೋಚಿಸಲು ಸಮಯಾವಕಾಶ ಕೇಳುತ್ತಿದ್ದರೊ ಏನೋ ಆದರೆ ಬಿಸಿರಕ್ತದ ದೇಶಭಕ್ತ ರವೀಂದ್ರ ಕೌಶಿಕ್ ನಿಂತ ಜಾಗದಲ್ಲೇ ಆ ಕಾರ್ಯಕ್ಕೆ ಸಮ್ಮತಿಸಿಯೇ ಬಿಟ್ಟ!

ಮುಂದಿನ್ನೇನು, ಮನೆಯಲ್ಲಿ ಇದು ದೇಶದ ಕೆಲಸ, ಸರ್ಕಾರಿ ಕೆಲಸವೆಂದಷ್ಟೇ ಹೇಳಿ ತರಬೇತಿಯಲ್ಲಿ ತೊಡಗೆಬಿಟ್ಟ ಆ ಯಂಗ್ ವಿನೋದ್ ಖನ್ನಾ. ಅದು ಬರೋಬ್ಬರಿ ಎರಡು ವರ್ಷಗಳ ತರೆಬೇತಿ. ಪಾಕಿಗಳ ಮದ್ಯೆ ಪಾಕಿಯೊಬ್ಬನಾಗುವ ಪ್ರಕ್ರಿಯೆ. ಉರ್ದು, ಪಂಜಾಬಿ ಭಾಷೆಗಳ ತಿಳಿವಳಿಕೆ ಹಾಗು ಉಚ್ಚಾರಣೆಗಳ ಜೊತೆಗೆ ಒಬ್ಬ ಅತ್ಯುನ್ನತ ಸೈನಿಕನನ್ನೂ ಅಲ್ಲಿ ನಿರ್ಮಿಸಲಾಗುತ್ತಿತ್ತು. ಯಾವುದೇ ಸಮಯದಲ್ಲಿ ಅದೆಂಥಹ ಕ್ಲಿಷ್ಟಕರ ಸನ್ನಿವೇಶಗಳೂ ಎದುರಾದರೂ ಧೈರ್ಯವಾಗಿ ಎದುರಿಸುವ ಯೊದ್ದನಾಗಿ ರವೀಂದ್ರ ಕೌಶಿಕ್ ಅಂದು ಮಾರ್ಪಾಡಾಗಿದ್ದ. 1975 ರ ಮುಂಜಾವಿನ ಒಂದು ದಿನ ಮನೆಯನ್ನು ಬಿಟ್ಟ ಕೌಶಿಕ್ ದೇಶಕ್ಕಾಗಿ ತನ್ನ ಸೇವೆಯನ್ನು ಆರಂಭಿಸಿಯೆ ಬಿಟ್ಟ. ಅಬುಧಾಬಿ, ದುಬೈ ಮಾರ್ಗದ ಮೂಲಕ ಪಾಕಿಸ್ತಾನವನ್ನು ತಲುಪಿದ ಈತ ಮೊದಲು ಮಾಡಿದ ಕೆಲಸ ಕರಾಚಿ ಯೂನಿವರ್ಸಿಟಿಯಲ್ಲಿ ಅಡ್ಮಿಶನ್. ಆಗ ಆತನ ಹೆಸರು ನಬಿ ಅಹ್ಮದ್ ಶಾಕಿರ್. ಅಲ್ಲಿ LLB ಯನ್ನು ಓದಲು ಶುರುಮಾಡಿದ ಈತನ ಗುರಿ ಪಾಕಿಸ್ತಾನದ ಸೈನ್ಯವನ್ನು ಸೇರುವುದು ಹಾಗು ಕ್ರಮೇಣವಾಗಿ ಮುಂಬಡ್ತಿಯನ್ನು ಪಡೆಯುವುದು. ಅಂತೆಯೇ ಡಿಗ್ರಿಯನ್ನು ಪೂರ್ಣಗೊಳಿಸಿ ಆಡಿಟರ್ ಆಗಿ ಪಾಕಿಸ್ತಾನ ಆರ್ಮಿಯನ್ನು ಸೇರಿದ ಕೌಶಿಕ್ ತನ್ನ ಚತುರತೆಯನ್ನು ನಮ್ಮಯ ಅಧಿಕಾರಿಗಳಿಗೆ ತೋರಿಸಿಬಿಟ್ಟ. ದೇಶಕ್ಕೆ ಬೇಕಾಗಿದ್ದ ಹಲವಾರು ಉಪಯುಕ್ತ ಮಾಹಿತಿಗಳು ಅಂದು ಒಂದೊಂದಾಗಿಯೇ ನಮ್ಮವರ ಕೈ ಸೇರತೊಡಗಿದವು. ಅಲ್ಲದೆ ಆತ ತನ್ನ ಈ ಕಾರ್ಯದಲ್ಲಿ ಅದೇಷ್ಟು ನೈಪುಣ್ಯನಾಗಿದ್ದನೆಂದರೆ ಕುತಂತ್ರಿ ಪಾಕ್ ಸೈನ್ಯದ ಅಧಿಕಾರಿಗಳಿಂದಲೇ ಶಹಬಾಸ್ಗಿರಿಯನ್ನು ಪಡೆಯುತ್ತಾ ಮುಂಬಡ್ತಿಯನು ಪಡೆದು ಮುಂದೊಂದು ದಿನ ಪಾಕಿಸ್ತಾನ ಆರ್ಮಿಯ ಮೇಜರ್ನ ಹುದ್ದೆಗೂ ಏರಿದ ಎಂದರೆ ನಾವು ನಂಬಲೇ ಬೇಕು. ಆತನ ಆ ಸಾಹಸದ ಕೆಲಸಕ್ಕೆ ಮೆಚ್ಚಿ ನಮ್ಮವರು 'ಬ್ಲಾಕ್ ಟೈಗರ್' ಎಂದು ನಾಮಕರಣ ಮಾಡಿರುವುದೂ ಉಂಟು.

ಏತನ್ಮದ್ಯೆ ತನ್ನ ಸಹೋದ್ಯೋಗಿಯ ಮಗಳೊಬ್ಬಳನ್ನು ಮದುವೆಯಾದ ಟೈಗರ್ ತನ್ನ ಸೂಕ್ಷ್ಮ ಕಾರ್ಯಾಚರಣೆಯನ್ನು ಮುಂದುವರೆಸಿಯೇ ಇದ್ದ. ಇದು ಆತನ ಪ್ಲಾನಿನ ಒಂದು ಬಾಗವೋ ಅಥವಾ ಆಕಸ್ಮಿಕವಾಗಿ ಜರುಗಿದ ಸಹಜ ಪ್ರೀತಿಯೋ ಗೊತ್ತಿಲ್ಲ. ಆದರೆ ಈ ಮನುಷ್ಯ ತನ್ನ ಹೆಂಡತಿ ಹಾಗು ನಂತರ ಜನಿಸಿದ ಮಗುವಿಗೂ ತನ್ನ ನಿಜ ಕಾರ್ಯದ ಬಗ್ಗೆ ತಿಳಿಸಲಿಲ್ಲ. ಅಲ್ಲದೆ ಇತ್ತಕಡೆ ಭಾರತದಲ್ಲಿ ಮನೆಯವರೊಟ್ಟಿಗೆ ನಿರಂತರ ಪತ್ರವ್ಯವಹಾರವನ್ನು ಹೊಂದಿದ್ದ ಆತ ಒಂದೆರೆಡು ಬಾರಿ ಮನೆಗೆ ಬಂದು ಹೋಗಿರುವುದೂ ಉಂಟು. ಹೀಗೆ ಬಂದಾಗಲೆಲ್ಲ ಮತ್ತದೇ ದೇಶದ ಕೆಲಸ, ಸರ್ಕಾರೀ ವೃತ್ತಿ ಎಂದಷ್ಟೇ ಹೇಳಿ ಒಬ್ಬ ಪಕ್ಕಾ ದೇಶಭಕ್ತ ಸೇವಕನಿಗೆ ಇರಬೇಕಾದ ಪ್ರೌಢಿಮೆಯನ್ನು ಮೆರೆದಿದ್ದ. ಅಲ್ಲದೆ ತಾನು ಪಕ್ಕದ ದೇಶದಲ್ಲಿ ಒಬ್ಬಾಕೆಯನ್ನು ಮದುವೆಯಾಗಿರುವಾದಾಗಲಿ ಹಾಗು ತನಗೊಬ್ಬ ಮಗನಿರುವ ಬಗ್ಗೆಯೂ ಆತ ಮೌನ ಮುರಿಯುವುದಿಲ್ಲ. ಹೀಗೆ ಬರೋಬ್ಬರಿ ಎಂಟು ವರ್ಷಗಳ ಕಾಲ ರಹಸ್ಯವಾಗಿ ನಮಗಾಗಿ ಶ್ರಮಿಸಿದ ಕೌಶಿಕ್ ಬಹುಷಃ ದೇಶದ ಇತಿಹಾಸದಲ್ಲಿಯೇ ತಾಯ್ನಾಡಿಗೆ ಬೇರ್ಯಾರೂ ಮಾಡದ ಪರಾಕ್ರಮವನ್ನು ಮಾಡಿರುವುದಂತೂ ಸುಳ್ಳಲ್ಲ.

ಅದು 1983ರ ಸೆಪ್ಟೆಂಬರ್ ನ ಸಮಯ. ನಮ್ಮಯ ಗುಪ್ತಚರ ಅಧಿಕಾರಿಗಳು ಇನಾಯತ್ ಎಂಬ ಏಜೆಂಟ್ ಒಬ್ಬನನ್ನು ಕೌಶಿಕ್ ನನ್ನು ಕಾಣಲು ಪಾಕಿಸ್ತಾನದ ಗಡಿಯನ್ನು ದಾಟಿಸಿದರು. ಆದರೆ ವಿಧಿಯಾಟವೋ ಏನೋ ಆ ಇನಾಯತ್ ಅಂದು ಪಾಕಿಸ್ತಾನಿ ಅಧಿಕಾರಿಗಳಿಗೆ ಸಿಕ್ಕಿಬಿದ್ದ. ಅಷ್ಟೇ . ಮುಂದೆ ನೆಡೆದ ಘಟನೆಗಳೆಲ್ಲ ಕೌಶಿಕ್ ನ ಜೀವನದ ಕಾರಾಳ ಕಡೆಯ ಪುಟಗಳನ್ನು ತೆರೆಯತೊಡಗಿದವು. ಪಾಕಿಗಳ ಚಿತ್ರಹಿಂಸೆಯನ್ನು ತಾಳಲಾರದೆ ಇನಾಯತ್ ಅಲ್ಲಿಯವರೆಗೂ ಗೌಪ್ಯವಾಗಿದ್ದ ವಿಷಯವನ್ನು ಕೊನೆಗೆ ಹೇಳಿಯೇ ಬಿಟ್ಟ. ಕೌಶಿಕ್ ಉರ್ಫ್ ನಬಿ ಅಹ್ಮದ್ ಭಾರತದಿಂದ ಬಂದು ಪಾಕಿಸ್ತಾನವನ್ನು ಪ್ರವೇಶಿಸಿ ಸಾಲು ಸಾಲು ಇನ್ಫಾರ್ಮಶನ್ ಗಳನ್ನು ರವಾನಿಸುತ್ತಿದ್ದ ಬಗೆಯೆಲ್ಲವನ್ನೂ ಒಂದಿಷ್ಟು ಬಿಡದೆ ಆತ ತೆರೆದಿಟ್ಟ. ಆತ ಹೇಳಿ ಸುಮ್ಮನಾಗುವ ಮೊದಲೇ ಇತ್ತಕಡೆ ಕೌಶಿಕ್ ನ ಗಟ್ಟಿ ಕೈಗಳ ಮೇಲೆ ಕೋಡಿಗಳು ಬಿದ್ದುಬಿಟ್ಟಿದ್ದವು.

ಭಾರತ ಹಾಗು ಭಾರತೀಯರು ಎಂದರೆ ನಿಂತ ನೆರಳಿಗೆ ಆಗದ ಪಾಕಿಸ್ತಾನ, ಅಲ್ಲಿಯ ಒಬ್ಬ ನಮ್ಮಲಿಗೆ ಬಂದು ನಮಗೇ ಚಳ್ಳೆಹಣ್ಣು ತಿನ್ನಿಸಿದನೆಂದರೆ ಸುಮ್ಮನಿರಬೇಕೇ. ಬಗೆ ಬಗೆಯ ಚಿತ್ರ ಹಿಂಸೆಯನ್ನು ನೀಡಿಯೂ ಕೊನೆಗೆ 1985 ರಲ್ಲಿ ಆತನಿಗೆ ಮರಣದಂಡನೆಯನ್ನು ನೀಡಲಾಯಿತು. ಆದರೆ ಮುಂದೆ ಅದನ್ನು ಕೊಂಚ ಸಡಿಲಿಸಿ ಜೀವಾವಧಿ ಶಿಕ್ಷೆಯೆಂದು ತಿದ್ದಲಾಯಿತಾದರೂ ಮುಂದೆ ಆತ ಅನುಭವಿಸದ ಯಾತನೆಯನ್ನು ನೋಡಿದರೆ ಅಂದೇ ಆತನಿಗೆ ಸಾವನ್ನು ಕರುಣಿಸಿದರೆ ಚೆನ್ನಾಗಿರುತ್ತಿತ್ತೇನೋ ಎಂದನಿಸದಿರದು!

ಇತ್ತ ಕಡೆ ಭಾರತ ಸರ್ಕಾರಕ್ಕೂ ಒಂತರ ಬಿಸಿತುಪ್ಪವನ್ನು ಗಂಟಲಿಗಿಟ್ಟ ಸಂಧರ್ಭ. ಸುದ್ದಿ ಅದಾಗಲೇ ಅಂತರಾಷ್ಟ್ರೀಯ ವೇದಿಕೆಯನ್ನು ತಲುಪಿದ ಕಾರಣ ಬಹಿರಂಗವಾಗಿ ಬೇರೊಂದು ದೇಶದ ಮೇಲೆ ಗೂಢಚಾರಿಕೆಯನ್ನು ನೆಡೆಸಿದೆ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಳ್ಳುವುದು ಆಗಿನ ಕಾಲಕ್ಕೆ ಸುತರಾಂ ಸಹಿಸಿಕೊಳ್ಳದ ವಿಷಯವಾಗಿದ್ದಿತು. ಅಲ್ಲದೆ ಗೂಡಾಚಾರಿ ಗುಂಪಿನಲ್ಲಿ ಹೀಗೆ ವ್ಯಕ್ತಿಯೊಬ್ಬ ಕೆಲಸದ ನಿಮಿತ್ತಾ ಬೇರೊಂದು ದೇಶದಲ್ಲಿ ಸಿಕ್ಕಿಬಿದ್ದರೆ ಖುದ್ದು ಕಳಿಸಿದ ದೇಶವೇ ನಿರಾಕರಿಸುತ್ತದೆ ಎಂಬ ನಿಯಮವಿದೆಯಂತೆ. ಈ ನಿಯಮವೇನು ನಮ್ಮ ಟೈಗರ್ ಗೆ ತಿಳಿದಿರಲಿಲ್ಲವೆಂದೆನಲ್ಲ. ಆದರೂ ಸಹ ಆ ವೀರಯೋಧ ದೇಶದ ರಕ್ಷಣೆಗೆ ತನ್ನ ಜೀವದ ಹಂಗುಬಿಟ್ಟು ಹೋಗಿದ್ದ. ವರ್ಷಗಳ ಕಾಲ ತಾನು, ತನ್ನ ಹೆಸರು, ತಮ್ಮವರು, ನೆಲ, ದೇಶವನ್ನಷ್ಟೇ ಅಲ್ಲದೆ ತನ್ನ ಧರ್ಮವನ್ನೂ ಬಿಟ್ಟು ದೇಶಕ್ಕಾಗಿ ಶ್ರಮಿಸಿದ. ಅಂತಹ ವೀರಪುರುಷನನ್ನು ಅಂದು ಕೈಹಿಡಿದು ಮೇಲೆತ್ತುವರಿರಲಿಲ್ಲ. 1985 ರಿಂದ ಶುರುವಾದ ಆತನ ನರಕಹಿಂಸೆ ಮುಂದಿನ ಒಂದೂವರೆ ದಶಕಗಳವರೆಗೂ ನೆಡೆಯಿತು. ದಿನಕ್ಕೆ ಒಪ್ಪೊತ್ತು ಊಟ.ಆ ಊಟದ ತುತ್ತು ಗಂಟಲೊಳಗೆ ಇಳಿಯುವ ಮೊದಲೇ ಮತ್ತೊಬ್ಬ ಅಧಿಕಾರಿ ತನ್ನ ಲಾಠಿಯನ್ನು ಹಿಡಿದು ಅವನ ಮುಂದೆ ಹಾಜರು. ಹೀಗೆ ಆಹಾರ, ನಿದ್ರೆ, ಗಾಳಿ, ಬೆಳಕು ಕಾಣದೆ ದಿನದಿಂದ ದಿನಕ್ಕೆ ಕೌಶಿಕ್ ಕುಂದತೊಡಗಿದ. ಕಲ್ಲುಗುಂಡಿನಂತಿದ್ದ ವ್ಯಕ್ತಿ ಮರದ ಚಕ್ಕೆಯಂತೆ ಮಾರ್ಪಾಡಾದ.

ಆಗಲೂ ಸಹ ಹೇಗೋ ಜೈಲಿನ ಆಧಿಕಾರಿಗಳ ಕಣ್ತಪ್ಪಿಸಿ ಮನೆಗೆ ಕಾಗದವನ್ನು ಬರೆಯುತ್ತಿದ್ದ. ತನ್ನ ನೋವು ಸಂಕಟವನ್ನು ತೋಡಿಕೊಳ್ಳುತ್ತಿದ್ದ. ಅಲ್ಲಿಂದ ಯಾವುದೇ ಪ್ರತುತ್ತರ ಬಾರದು ಎಂದು ತಿಳಿದ್ದಿದ್ದರೂ ಪತ್ರವನ್ನು ಬರೆಯುವುದ ನಿಲ್ಲಿಸಿರಲಿಲ್ಲ. 'ನಾನಿಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದೇನೆ, ನನಗೆ ಕಡೆ ಪಕ್ಷ ಒಂದಿಷ್ಟು ಔಷಧಿಗಳನ್ನಾದರೂ ತಲುಪಿಸುವ ವ್ಯವಸ್ಥೆಯನ್ನು ಮಾಡಿರಿ' ಎಂದು ಅಂಗಲಾಚಿಕೊಂಡು ಕೆಲವೊಮ್ಮೆ ಬರೆಯುತ್ತಿದ್ದ. ಒಂಬತ್ತು ತಿಂಗಳು ಹೊತ್ತು, ಹೆತ್ತು, ಎದೆಹಾಲ ಕುಡಿಸಿ ಮುದ್ದಾಗಿ ಬೆಳೆಸಿದ ಮಗ ಇಂದು ಜೈಲಿನಲ್ಲಿ ಊಟ ತಿಂಡಿಯಿಲ್ಲದೆ ಖಾಯಿಲೆಯಿಂದ ನರಳುತ್ತಿದ್ದಾನೆ ಎಂದರೆ ಆ ತಾಯಿಗೆ ಅದೆಂತಹ ನೋವು ಸಂಕಟವಾಗಿರಬಹುದು ಯೋಚಿಸಿ. ವರ್ಷಗಳ ಕಾಲ ಆತ್ತು ಅತ್ತು ಕೊನೆಗೆ ಆಕೆಯ ಕಣ್ಣೀರೆ ಹಿಂಗಿ ಹೋದವೇನೋ? ಆದರೆ ನಮ್ಮಲ್ಲಿ? ಅತ್ತಕಡೆಯಿಂದ ಪಿಕ್ ನಿಕ್ ಗೆ ಬಂದು ಮೋಜು ಮಸ್ತಿ ಮಾಡುವಂತೆ ಮುಂಬೈನ ಗಲ್ಲಿ ಗಲ್ಲಿಗಲ್ಲಿ ನರಮೇಧವನ್ನೇ ನೆಡಸಿ ಅಟ್ಟಹಾಸವನ್ನು ಮೆರೆದಿದ್ದ ಪಾಪಿಗಳಿಗೆ ವರ್ಷಗಳ ಕಾಲ ರಾಜಾತಿಥ್ಯ ಸಿಗುತ್ತದೆ. ಅಂತವರಿಗೆ ನೀಡುವ ಕೋಟಿ ಕೋಟಿ ಮೊತ್ತದ ಭದ್ರತೆಗಳೇನು? ಅವರ ಪರವಾಗಿ ವಾದಿಸುವ ಮೂರು ಬಿಟ್ಟ ವಕೀಲರ ಗುಂಪೆನು? ನಾಚಿಕೆಯಾಗಬೇಕು ನಮ್ಮ ಮೇಲೆ ನಮಗೆ!

ಅದೊಂದು ದಿನ ಮಗನ ಪತ್ರವೊಂದು ಮನೆಯವರ ಕೈ ಸೇರಿತು. ಅದನ್ನು ತೆರೆದು ಓದಿದರೆ ಅದರಲ್ಲಿ ಬರೆದಿದ್ದ ಮಾತುಗಳು ಮಾತ್ರ ಎಂತವರ ಮನವನ್ನು ಚುಚ್ಚುವುದಂತೂ ಸುಳ್ಳಲ್ಲ. 'ನಾನು ಭಾರತದವನಾದ ಮಾತ್ರಕ್ಕೆ ನನ್ನನು ಬಿಡಿಸಲು ಸಾಧ್ಯವಾಗುತ್ತಿಲ್ಲ. ಅದೇ ನಾನೊಬ್ಬ ಅಮೇರಿಕದವನಾಗಿದ್ದರೆ ಮೂರೇ ಮೂರು ದಿನದಲ್ಲಿ ಹೊರಬರುತ್ತಿದ್ದನೇನೋ ಏನೋ?!' ಎಂದು ಆತ ಬರೆದಿದ್ದ. ಇದಾದ ಕೆಲವೇ ದಿನಗಳಲ್ಲಿ ಭಾರತದ ಬ್ಲಾಕ್ ಟೈಗರ್ ಟಿಬಿ ಖಾಯಿಲೆಯಿಂದ ಸತ್ತನೆಂಬ ಸುದ್ದಿ ಬಂದಿತು.ಅದನ್ನು ಕೇಳಿ ಆತನ ತಂದೆ ಕೆಲವೇ ದಿನಗಲ್ಲಿ ಅಸುನೀಗಿದರೆ ಅಮ್ಮ ನಂತರದ ಕೆಲವರ್ಷಗಳ ಒಳಗೆ ಇಹಲೋಕ ತ್ಯೆಜಿಸಿದರು.

ನಂಬಿದರೆ ನಂಬಿ, ಅಷ್ಟೆಲ್ಲ ಚಿತ್ರಹಿಂಸೆಯನ್ನು ಅನುಭವಿಸಿದರೂ ಸಹ ನಮ್ಮ ಯಾವೊಂದೂ ಸಿಕ್ರೆಟ್ ಇನ್ಫಾರ್ಮಶನ್ಗಳನ್ನೂ ಕೌಶಿಕ್ ಅವರುಗಳಿಗೆ ಬಿಟ್ಟುಕೊಡಲಿಲ್ಲವಂತೆ!! ಇದೆಂತಹ ದೇಶಭಕ್ತಿ ಸ್ವಾಮಿ? ಗುಡಿಗೋಪುರಗಳಲ್ಲಿ ಕಾಣುವ ದೇವರು ನಮ್ಮ ಮನೆಯನ್ನು ಕಾಯ್ದರೆ, ಮಳೆಗಾಳಿಯೆನ್ನದೆ ಎಲ್ಲೆಂದರಲ್ಲಿ ಎದ್ದು ಬಿದ್ದು ಹೋರಾಡುವ ಈ ದೇವಮಾನವರು ನಮ್ಮ ದೇಶವನ್ನು ಕಾಯುವರು. ಅಂತಹ ಕೆಲವರು ನಮ್ಮ ಕಣ್ಣ ಮುಂದೆ ಇದ್ದರೆ ಇಂತಹ ಕೆಲವರು ಇದ್ದೂ ಕಾಣದಾಗುವರು. ಇಂತಹ ನೂರಾರು ವೀರಸೈನಿಕರ ಬಗ್ಗೆ ತಿಳಿದುಕೊಳ್ಳಲೂ ನಮಗೆ ಯೂಗ್ಯತೆ ಬೇಕು. ಅಂತಹ ಯೋಗ್ಯತೆಗೆಟ್ಟ ಮೂರುಕಾಸಿನ ಗುಂಪುಗಳಿಗಷ್ಟೇ ಇಂತಹ ಸೇನೆ ಹಾಗು ಸೈನಿಕರ ಮೇಲೆ ಪ್ರೆಶ್ನೆಯನ್ನು ಮಾಡಲು ಸಾಧ್ಯ..!



Wednesday, February 20, 2019

ಸಿಂಪಲ್ಲಾಗೊಂದು ಕಪೂರ್ ಸ್ಟೋರಿ..!

ವಾವ್, ಏನ್ ಸೀನ್ ಸರ್ ಅದು. ಸಿಟ್ಟು, ಮದ, ಮತ್ಸರದಿಂದ ಕೂಡಿದ ಆರಡಿ ಉದ್ದದ ಕ್ಯಾರೆಕ್ಟರ್ ಒಂದೆಡೆಯಾದರೆ, ನ್ಯಾಯ, ನೀತಿ ಹಾಗು ಘನತೆಯನೊತ್ತ ಕೀರ್ತಿಪುರುಷ ಇನ್ನೊಂದೆಡೆ. ಸುಳ್ಳು ಸತ್ಯಗಳ ಈ ಎರಡು ವ್ಯಕ್ತಿತ್ವಗಳ ತಿಕ್ಕಾಟದಲ್ಲಿ ನರಳುತಿರುವಾಕೆ ಎರಡಕ್ಕೂ ಜನ್ಮವಿತ್ತ ಮಹಾಮಾತೆ. ನಶ್ವರ ಜಗತ್ತಿನ ನೋಟಿನ ಮೂಲಕ ತನ್ನ ಹೆತ್ತ ತಾಯಿಗೆ ಬೆಲೆಕಟ್ಟಲೋಗಿ ಮುಂದಿದ್ದ ತನ್ನ ತಮ್ಮನ ಬಳಿ 'ತೇರೇ ಪಾಸ್ ಕ್ಯಾ ಹೈ 'ಎಂದಾಗ ಇಡೀ ಚಿತ್ರಮಂದಿರವೇ ಕುಣಿದು ಕುಪ್ಪಳಿಸುವಂತೆ ಆಡುವ 'ಮೇರೇ ಪಾಸ್ ಮಾ ಹೈ' ಎಂಬ ಆ ಡೈಲೌಗ್ ಕೇವಲ ಡೈಲೌಗ್ ಆಗಿರದೆ ಆಧುನಿಕ ಜಗತ್ತಿನ ಇಡೀ ಮಾನವ ಕುಲಕ್ಕೇ ಇಡಿದ ಕೈಗನ್ನಡಿಯಂತಿತ್ತು. ಜಗತ್ತಿನ ಸರ್ವ ಐಶ್ವರ್ಯವೆಲ್ಲವೂ ತಾಯಿಯೆಂಬ ಅಘಾಧತೆಯ ಮುಂದೆ ಅದೆಷ್ಟು ಕನಿಷ್ಠವಾಗುತ್ತದೆ ಎಂಬುದನ್ನು ನಾಲ್ಕೇ ಪದಗಳ ವಾಕ್ಯದಲ್ಲಿ ತೋರಿಸಿಕೊಟ್ಟ ಚತುರತೆಯಂತೂ ಫೆಂಟಾಸ್ಟಿಕ್! ಆಗ ಮಾತುಬಾರದ ಕಲ್ಲಿನಂತಾದ ಅಮಿತಾಬ್ ತನ್ನ ಸಣ್ಣ ತಮ್ಮನ ಮುಂದೆ ಮತ್ತೂ ಸಣ್ಣವನಾಗುತ್ತಾನೆ.

ಆ ಡೈಲೌಗಿಗೆ ಜೀವ ಬರಲು/ತರಲು ಚಿತ್ರಕತೆಗಾರರಾದ ಸಲೀಮ್-ಜಾವೇದ್ರ ಕ್ರಿಯೇಟಿವಿಟಿಯೊಟ್ಟಿಗೆ ಎದೆಯುಬ್ಬಿಸಿಕೊಂಡು ಆತ್ಮವಿಶ್ವಾಸದಿಂದ ಆಡಿದ ಆ ಮುಗ್ದ ಮಾತುಗಳೂ ಕಾರಣವಾಗಿರುತ್ತವೆ. ಅಂದಿಂಗೂ, ಇಂದಿಗೂ. ಕಣ್ಣುಗಳಲ್ಲಿನ ಆ ದೃಢತೆಯ ಜೊತೆಗೆ ಮುಖದ ಮೇಲೆ ಆ ಗಾಂಭೀರ್ಯತೆಯನ್ನೊತ್ತು ಸಂಭಾಷಣೆಯನ್ನು ಹೇಳಿದ ಆ ವ್ಯಕ್ತಿಯ ಹೆಸರೇ ದ ಒನ್ & ಓನ್ಲಿ Mr.ಶಶಿ ಕಪೂರ್. ಒಂದು ಕಾಲಕ್ಕೆ ಕಪೂರ್ ಮನೆತನದಲ್ಲಿ ಹ್ಯಾಂಡ್ಸಮ್ ಕಪೂರ್ ಎಂದು ಕರೆಯಲಾಗುತ್ತಿದ್ದ ಈತ ಇತರೆ ಬಹಳಷ್ಟು ನಟ ನಟಿಯರಂತೆ ಇಲ್ಲ ಸಲ್ಲದ ಕಾರಣಗಳಿಂದಾಗಿ ಪ್ರಸಿದ್ದಿ ಹೊಂದಲಿಲ್ಲ. ತಾನು ಹಾಗು ಸಿನಿಮಾ ಎಂದುಕೊಂಡು ಬದುಕಿದ ಈ ಜೀವ ಹೂವರಳಿ ಕೊನೆಯಾಗುವಂತೆ ಸದ್ದಿಲ್ಲದೆ ಮರೆಯಾಯಿತು. ಬಹುಷಃ ಆದರಿಂದಲೇನೋ ಪ್ರಶಸ್ತಿ ಪುರಸ್ಕಾರಗಳೂ ಸಹ ಈತನ ಮನೆಯ ಹಾದಿಯನ್ನು ಮರೆತವು.

ಅವತಾರ ಪುರುಷರಂತೆ ನಟರನ್ನು ಬಿಂಬಿಸಿ ಅವರ ಸುತ್ತಲೇ ಸುತ್ತುವಂತಹಃ, ನಿಜಜೀವನಕ್ಕೆ Infinity ಕಿಲೋಮೀಟರ್ಗಳಷ್ಟು ದೂರದಂತಹ ಕ್ಯಾರೆಕ್ಟರ್ ಹಾಗು ಕತೆಯನ್ನು ನೋಡುಗರಿಗೆ ನೀಡುತ್ತಿದ್ದ ಕಾಲದಲ್ಲಿ ಪಕ್ಕಾ ಕ್ಲಾಸಿಕ್ ಸಿನಿಮಾಗಳನ್ನು ಒಂದರಿಂದೊಂದರಂತೆ ನೀಡುತ್ತಾ, ಬೆರಳೆಣಿಕೆಯ ಪ್ರೇಕ್ಷಕರಾದರೂ ದೃತಿಗೆಡದೆ ಮತ್ತದೇ ಅರ್ಥಪೂರ್ಣ ಚಿತ್ರಗಳನ್ನು ಮಾಡುತ್ತ ಕಣ್ಣು ಮುಚ್ಚಿ ನೆಡೆಯುವ ಸಾಲಿನಲ್ಲಿ ವಿಭಿನ್ನರಾಗಿ ಕಾಣಿಸಿಕೊಳ್ಳತೊಡಗಿದ ವ್ಯಕ್ತಿ ಈ ಶಶಿ ಕಪೂರ್. ಭಾರತೀಯ ಸಿನಿಮಾವನ್ನು ಒಂದು ಮಜಲು ಎತ್ತರಕ್ಕೆ ಕೊಂಡೊಯ್ದ ಹಲವಾರು ಸೈಲೆಂಟ್ ಪೆರ್ಸನಾಲಿಟಿಗಳಲ್ಲಿ ಒಬ್ಬರು ಈ ಶಶಿ ಕಪೂರ್.. ಇವೆಲ್ಲ ಅಂಶಗಳ ಹೊರತಾಗಿ ಶಶಿ ಕಪೂರ್ ಎಂಬ ದಿಗ್ಗಜ ಹಲವರಿಗೆ ಇಷ್ಟವಾಗುವುದು ತನ್ನ ಆಫ್ ಸ್ಕ್ರೀನ್ ಪ್ರೇಮ ಕತೆಯಿಂದ. ಆಫ್ ಸ್ಕ್ರೀನ್ ಎಂದ ಮಾತ್ರಕ್ಕೆ ಯಾರೋ ಬೇರೊಬ್ಬ ವ್ಯಕ್ತಿ ಅಂದುಕೊಳ್ಳಬೇಡಿ. ಅದು ಸ್ವತಃ ಅವರ ಪತ್ನಿ ಜೆನ್ನಿಫರ್. ಮೀಸೆ ಚಿಗುರುವ ವಯಸ್ಸಿಗೆ ತನಗಿಂತಲೂ ಮೂರು ವರ್ಷ ದೊಡ್ಡವಳಾದ ಈಕೆಯನ್ನು ಭೇಟಿಯಾಗಿ ಮದುವೆಯ ಪ್ರಸ್ತಾಪ ವನಿಟ್ಟು, ವಿದೇಶಿ ಮಾವ ಹಾಗು ದೇಶೀ ಅಪ್ಪ(ಪೃಥ್ವಿರಾಜ್ ಕಪೂರ್) ನೊಟ್ಟಿಗೆ ಹೋರಾಡಿ, ಪ್ರೀತಿಗಾಗಿ ಸಿಂಗಾಪೂರದವರೆಗೂ ಹೋಗಿ ಕೊನೆಗೆ ಅಂದಿನ ಕಾಲಕ್ಕೆ ಬಹುಪಾಲು ಮಂದಿಗೆ ಅರಗಿಸಿಕೊಳ್ಳಲಾಗದಂತಹ ಜೋಡಿಯಾಗಿ ಹೊರಹೊಮ್ಮಿದರು ಇವರು. ಆದರೆ ವಿದೇಶಿ ಲವ್ ಸ್ಟೋರಿ ಹೆಚ್ಚು ದಿನ ನಡೆಯಲ್ಲ ಬಿಡಿ ಅಂದುಕೊಂಡವರಿಗೆ ಇವರ ಜೀವನ ಮಾತ್ರ ಒಂದು ನೀತಿಪಾಠವಾಯಿತು. ಮನಸ್ಸು ಮಾಡಿದ್ದರೆ ತನಗೆ ಸಿಗದ ತ್ರಿಪುರ ಸುಂದರಿ ಯಾರು ಎಂಬಂತಿದ್ದ ಕಾಲದಲ್ಲಿ ಶಶಿ ಎಲ್ಲಿಯೂ ತನ್ನ ಹಾಗು ಜೆನ್ನಿಫರ್ ನ ಸಂಬಂಧಕ್ಕೆ ಧಕ್ಕೆ ಬಾರದಂತೆ ನೋಡಿಕೊಂಡರು. ಹಾಗೊಮ್ಮೆ ಈಗೊಮ್ಮೆ ತಮ್ಮ ಹಾಗು ಇತರ ನಟಿಯರ ಬಗ್ಗೆ ಕಲ್ಪಿಸಿ ಮೂಡುವ ಕತೆಗಳೂ ಇವರ ಗಟ್ಟಿ ಸಂಬಂಧದ ಮುಂದೆ ಕ್ಷೀಣಿಸಿಹೋದವು. ಶಶಿ ತನ್ನಾಕೆಯನ್ನು ಅದೆಷ್ಟು ಇಷ್ಟಪಟ್ಟಿದ್ದರೆಂದರೆ ಅಂದು (1984) ರಲ್ಲಿ ಆಕೆ ಕ್ಯಾನ್ಸರ್ ನಿಂದ ಕಾಲವಾದ ನಂತರವೂ ಇವರು ಯಾರೊಬ್ಬರ ಸಂಗಡವನ್ನು ಬಯಸದೆ ತಮ್ಮ ಕೊನೆಯುಸಿರಿರುವರೆಗೂ ಏಕಾಂಗಿಯಾಗಿಯೇ ಆಕೆಯ ನೆನಪಲ್ಲೇ ಜೀವನ ಕಳೆದರು. ಬಹುಷಃ ಆ ಸ್ಥಾನವನ್ನು ತುಂಬುವ ಬೇರ್ಯಾರು ಇಲ್ಲಿ ಸಿಗಲಿಲ್ಲವೇನೋ? ಒಂದು ಪಕ್ಷ ಸಿಕ್ಕರೂ ಅದು ಬಹುಷಃ ಆ ಹೊಸ ವ್ಯಕ್ತಿಗೆ ಉಳಿದುಕೊಳ್ಳಲು ಶಶಿಯ ಹೃದಯದಲ್ಲಿ ಜಾಗವಿರಲಿಲ್ಲವೇನೋ?!

ಆಸೆಗೆ ಪ್ರೇಮವೆಂಬ ಹೆಸರು ಕಟ್ಟಿ, ಮೂರು ಗಂಟಿನ ಸಂಬಂಧಕ್ಕೆ ಮೂರುಕಾಸಿನ ಬೆಲೆಯನ್ನೂ ಕೊಡದೆ ಎಡಕ್ಕೂ ಬಲಕ್ಕೂ Swipe ಮಾಡುತ್ತ ಜೀವನದ ಸಾತಿಯ(ರ)ನ್ನು ಅರಸುವ ಈ ಕಾಲದಲ್ಲಿ ಶಶಿ ಕಪೂರ್ ತೀರಾ ಭಿನ್ನವಾಗಿ ಹಾಗು ಮಾದರಿಯಾಗಿ ಕಾಣುತ್ತಾರೆ. That's it.

'ಮೇರೇ ಪಾಸ್ ಮಾ ಹೈ' ಎಂದ ಗುಳಿಕೆನ್ನೆಯ ಆ ಲೆಜೆಂಡರಿ ವ್ಯಕ್ತಿ ಮೊನ್ನೆ ಡಿಸೆಂಬರ್ ಗೆ ಇಹಲೋಕ ತ್ಯೆಜಿಸಿ ಆಗಲೇ ಒಂದು ವರ್ಷವೇ ಸಂದಿದೆ. ನಗುಮೊಗದ ಯುವ ಚೆಲುವನಾಗಿ ನೋಡುಗರನ್ನು ರಂಜಿಸಿದ ಆ ಶಶಿಗೂ, ಬಾಡಿದ ಹಣ್ಣಿನಂತಾಗಿ ನೆಡೆಯಲೂ ಶಕ್ತನಿರದೆ ವೀಲ್ ಚೇರಿನ ಮೇಲೆಯೇ ತನ್ನ ಕೊನೆದಿನಗಳನ್ನು ತಳ್ಳಿದ ಶಶಿಯನ್ನು ನೋಡಿದರೆ ಕಾಲದ ಮೇಲೆ ಸಿಟ್ಟು ಬರುವುದಂತೂ ಸುಳ್ಳಲ್ಲ. ಏನಿಲ್ಲವಾದರೂ ಏನೊಂದಕ್ಕಾದರೂ ಇಂತಹ ವ್ಯಕ್ತಿಗಳು ಆಗೊಮ್ಮೆ ಈಗೊಮ್ಮೆ ನೆನಪಾಗುತ್ತಲೇ ಇರಬೇಕು. ಆದರೆ ಆ ಏನೊಂದು ಏನೆಂಬುದು ಮಾತ್ರ ನಮ್ಮ ನಿಮ್ಮ ವಿವೇಕ ಹಾಗು ವಿವೇಚನೆಗೆ ಬಿಟ್ಟ ವಿಷಯ.

ಕಾಲುಶತಮಾನ ಜನಮಾನಸವನ್ನಾಳಿದ ಕತೆಯೊಂದರ ಕತೆ!

ಭಾರತೀಯರ ಸಿನಿಮಾ ಕ್ರೆಝೇ ಅಂತಹದ್ದು. ಜನಜೀವನದ ವಿವಿಧ ಸ್ತರಗಳಲ್ಲಿ ಸಿಕ್ಕಾಬಟ್ಟೆ ಹಾಸುಹೊಕ್ಕಿರುವ ಈ ಸಿನಿಮಾ ಎಂಬ ಮಾಹೆ ಒಂಥರ ಊಟಕ್ಕೆ ಬೇಕಾದ ಉಪ್ಪಿನಕ್ಕಾಯಿಯಂತೆ. ಉಪ್ಪಿನಕ್ಕಾಯಿ ಇಲ್ಲದೆಯೇ ಊಟ ಮಾಡಬಹುದಾದರೂ ನಮ್ಮಲ್ಲಿ ಕೆಲವೆಡೆ ಅದೇ ಊಟವಾಗಿಬಿಡುತ್ತದೆ! ಜೀವನದ ಅಷ್ಟೂ ಸಂಕಷ್ಟಗಳಿಗೆ ಆಧ್ಯಾತ್ಮದ ಮೊರೆ ಹೋಗುವ ಗುಂಪು ಒಂದೆಡೆಯಾದರೆ ಅದಕ್ಕಿಂತಲೂ ನೂರು ಪಟ್ಟು ದೊಡ್ಡ ಗುಂಪು ತಮ್ಮ ತಮ್ಮ ಕಷ್ಟ ದುಃಖಗಳಿಗೆ ಆ ಸಿನಿಮಾಗಳ ಹಿಂದೆ ಬೀಳುವುದನ್ನು ಇಲ್ಲಿ ಅಲ್ಲಗೆಳೆಯಲಾಗುವುದಿಲ್ಲ. ಅದ್ಯಾವುದೋ ಕ್ರಿಸ್ತ ಪೂರ್ವ ಜಮಾನದಲ್ಲಿ ಕೈಕೊಟ್ಟ ಹುಡುಗಿಯ ನೆನಪಲ್ಲಿ ಮೀಯಲು ಅಥವಾ ಗುಡುಗು ಸಿಡಿಲುಗಳ ಆರ್ಭಟದ ನಡುವೆಯೂ ಕಿಲೋಮೀಟರ್ಗಟ್ಟಲೆ ದೂರ ನಿಂತು ಪ್ರೀತಿ ನಿವೇದನೆ ಮಾಡುವ ಮ್ಯಾಜಿಕನ್ನು ಕಂಡು ಬೆರಗಾಗಲು ಅಥವ ಪಠ್ಯ ಪುಸ್ತಕಗಳ ಬದನೇಕಾಯಿ ಎನುತ ಮೂರು ನಿಮಿಷದಲ್ಲಿ ಕೋಟ್ಯಾದಿಪತಿಯಾಗುವ 'ಇಸ್ಟೈಲ'ನ್ನು ನೋಡಿ inspire ಆಗಲು ಅಥವಾ ಆಫೀಸಿನಲ್ಲಿ ತನ್ನ ಬಾಸಿನ ಮೇಲಿನ ಸಿಟ್ಟನ್ನು ಇಲ್ಲಿ ಹೀರೊ ವಿಲ್ಲೈನ್ಸ್ ಗಳಿಗೆ ತದುಕುವ ಪೆಟ್ಟುಗಳಲ್ಲಿ ದಮನಮಾಡಿಕೊಳ್ಳಲು ಅಥವಾ ವಯಸ್ಸಿನ ಹುಡುಗ ಹುಡುಗಿಯರಿಗೆ ಆ ಹೊರಗಿನ ಕೆಟ್ಟ ಜಗತ್ತಿನಲ್ಲಿ ಕಪ್ಪುಕೋಣೆಯ ನಾಲ್ಕಡಿ ಜಾಗ ಸ್ವರ್ಗಲೋಕವಾಗಲು.. ಒಂದೇ ಎರಡೇ ಇಂತಹ ಹಲವಾರು ಕಾರಣಗಳಿಂದ ಸಿನಿಮಾ ಹಾಗು ಥಿಯೇಟರ್ ಗಳು ನಮ್ಮವರಿಗೆ ವಿಪರೀತ ಹತ್ತಿರವಾಗಿವೆ. ಇನ್ನು ನಟ ನಟಿಯರ ವಿಚಾರಕ್ಕೆ ಬಂದರಂತೂ ಕತೆಬರೆದು, ಸೆಟ್ ಹಾಕಿ, ಸಂಗೀತ ಕರೆದು, ಹಾಡಿ, ಹಣ ಸುರಿದು, ಬೆಳಕಿಡಿದು ದುಡಿಯುವ ನೂರಾರು ಜನರನ್ನೂ ಮರೆತು ಕ್ಯಾಮರಾದ ಮುಂದೆ ಕಾಣುವ ಆ ಒಂದು ಚಹರೆಗೆ ಕಠೋರ ತಪಸ್ಸಿಗೆ ದೊರಕುವ ಭಗವಂತನ ದರ್ಶನದಂತೆ ಆಡುವ ಜನರ ಗುಂಪು ಒಂದೆಡೆಯಾದರೆ ಕೆಲವೆಡೆ ಅಂತಹ ಚಹರೆಗಳು ಅಂತಹ ದೇವರೆಂಬ ಪವರ್ಫುಲ್ ಶಕ್ತಿಗೇ ಒಂದು ಗೇಣು ಕೀಳು! ಇಂತಹ ಹತ್ತಾರು ನೂರಾರು ಕಾರಣಗಳಿಂದಲೇ ಇಂದು ಭಾರತೀಯ ಸಿನಿಮಾ ಇಂಡಸ್ಟ್ರಿ ಇಡೀ ವಿಶ್ವದಲ್ಲಿಯೇ ಅತಿ ಶ್ರೀಮಂತ ಇಂಡಸ್ಟ್ರಿ ಎನಿಸಿಕೊಂಡಿದೆ. ಇದು ವಿಪರ್ಯಾಸವೋ, ಹಾಸ್ಯವೋ ಅಥವಾ ಆಯಾಸವವೋ ಹೇಳುವುದು ಕಷ್ಟ. ಆದರೆ ಒಂದು ಮಾತ್ರ ಸತ್ಯ. ಒಂದು ಕಾಲು ಬಿಲಿಯನ್ ಜನರ ನಮ್ಮ ದೇಶದಲ್ಲಿ ಒಬ್ಬೊಬ್ಬರಿಗೆ ಇರುವ ಹತ್ತಾರು ಕನಸುಗಳು ನನಸಾಗದ ನೋವುಗಳಿಗೆ, ಹತಾಶೆಗಳಿಗೆ ತೆರೆಯ ಮೇಲೆ ಕಾಣುವ ಆ ಕಾಲ್ಪನಿಕ ಚಿತ್ರ ಒಂದು ಬಗೆಯ ಸಾಂತ್ವಾನವನ್ನು ನೀಡಬಲ್ಲದು. ಅದಕ್ಕೆ ಆ ಶಕ್ತಿ ಇದೆ! ಕೆಲಚಿತ್ರಗಳನಂತೂ ನಮ್ಮವರು ಅದ್ಯಾವ ಪರಿ ಹಚ್ಚಿಕೊಳ್ಳುತ್ತಾರೆ ಎಂದರೆ ದಶಕಗಳವರೆಗೂ ಅದನ್ನು ಥಿಯೇಟರ್ ಗಳಿಂದ ತೆಗೆಯಲು ಬಿಡುವುದಿಲ್ಲ. ಯಸ್ ದಶಕ I mean ಡೇಕೇಡ್ಸ್!

ಈ ಚಿತ್ರ ರಿಲೀಸಾಗಿ ಇಂದಿಗೆ ಹೆಚ್ಚುಕಡಿಮೆ 25 ವರ್ಷಗಳಾಗಿವೆ. ಇಲ್ಲಿ ಮೇಲೆ ಹೇಳಿದ ಪವರ್ ಫುಲ್ ಚಹರೆಗಳಾಗಲಿ, ಕಾಲಿಟ್ಟ ಮಾತ್ರಕ್ಕೆ ಇಡೀ ಭೂಮಂಡಲವೇ ನಡುಗಿ ಗುಡುಗಿ ಸಿಡಿಯುವ ದೃಶ್ಯಗಳಾಗಲಿ ಅಥವಾ Massness ನ ಮತ್ಯಾವುದೇ ಅಂಶಗಳಾಗಲಿ ಇರಲಿಲ್ಲ. ತೊಂಬತ್ತರ ದಶಕದಲ್ಲಿ ಇಂತಹ ಎಲಿಮೆಂಟ್ಸ್ ಗಳು ಇಲ್ಲದೆಯೇ ಒಂದು ಚಿತ್ರವನ್ನು ಗೆಲ್ಲಿಸುವುದು ಸಾಧ್ಯಕ್ಕೆ ದೂರವಾದ ಮಾತಾಗಿದ್ದಿತು. ದೂರವೆನು, ಅಸಾಧ್ಯವೆಂದೇ ಹೇಳಬಹುದಿತ್ತು. ಆದರೆ ಸೋಜಿಗದ ಸಂಗತಿ ಎಂದರೆ ಈ ಮಾತ್ರ ಚಿತ್ರ ಗೆದ್ದಿತು! ಆ ಗೆಲುವಿನ ಕಂಪು ದೇಶ ವಿದೇಶಗಳೆಲ್ಲೆಲ್ಲೂ ಪಸರಿಸಿತು. ತಿಂಗಳು, ವರ್ಷ, ದಶಕಗಳಾಚೆಗೂ ಅದು ತನ್ನ ಛಾಪನ್ನು ಮೂಡಿಸಿತು. ಚಿತ್ರನಿರ್ಮಾಣದಲ್ಲಿ ಈ ಸಿನಿಮಾ ಟ್ರೆಂಡ್ ಸೆಟ್ಟರಾಯಿತು. ತೀರಾ ಸಾಧಾರಣವೆನಿಸಿಕೊಂಡಿದ್ದ ಇಂಡಸ್ಟ್ರಿಯ ಯಂಗ್ ಗ್ರೂಪೊಂದು ಅಂದು ಭಾರತೀಯ ಸಿನಿಮಾ ಇತಿಹಾಸದಲ್ಲಿ ಮೈಲಿಗಲ್ಲೊಂದನ್ನು ಸ್ಥಾಪಿಸಿತು.

ಹಾಗಾದರೆ ಅಂತಹ ಯಾವ ಅಂಶ ಚಿತ್ರವನ್ನು ಈ ಪರಿಯಾಗಿ ಗೆಲ್ಲಿಸಿತು? ಇಷ್ಟು ಕಾಲ ನೋಡಿದರೂ ಏಕೆ ಜನರ ಬಯಕೆ ಇನ್ನೂ ಕೊನೆಗೊಳ್ಳುತ್ತಿಲ್ಲ? ಅಂದಿನ ಜನರಿಗಷ್ಟೇ ಅಲ್ಲದೆ ಟಿಂಡರ್, ಇನ್ಸ್ಟಾ ಎನುವ ಪ್ರಸ್ತುತ ಯುವಪೀಳಿಗೆಗೂ ಈ ಚಿತ್ರ ಇಷ್ಟವಾಗಲು ಕಾರಣವೇನು?

ಚಿತ್ರಕಥೆ. ಚಿತ್ರರಸಿಕರ ಮನಸ್ಥಿತಿಯನ್ನು ಅರಿತು ಹದವಾಗಿ ಹಣೆದಿದ್ದ ಕಥೆ ಚಿತ್ರವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿತು. ಗೊತ್ತು ಗುರಿ ಇಲ್ಲದ ನಾಯಕ ರಾಜ್, ಕಪ್ಪೆಚಿಪ್ಪಿನ ಮುತ್ತಿನಂತೆ ವಿದೇಶದಲ್ಲಿದ್ದೂ ಆಚಾರವಿಚಾರಗಳ ಗೊಡೊಳಗಿರುವ ಮುದ್ದಾದ ಹೆಸರಿನ ನಾಯಕಿ, ವಿದೇಶದ ಲವ್ ಸ್ಟೋರಿ, ವಿರುದ್ಧ ಧ್ರುವಗಳಂತಹ ಹೀರೊ ಹಾಗು ಹೀರೋಯಿನ್ ನ ಅಪ್ಪಂದಿರು ಹಾಗು ಚಿತ್ರದ ಕೊನೆಯವರೆಗೂ ನೋಡುಗರನ್ನು ಕತೆಯಲ್ಲಿ ಹಿಡಿದಿಡುವ ಆ ಚಿತ್ರಕಥೆ ಆಗಿನ ಕಾಲಕ್ಕೆ ಅತಿ ಭಿನ್ನ ಹಾಗು ಶುದ್ಧ ಚಿನ್ನದಂತಿದ್ದಿತು. ಇಲ್ಲಿ ನಿರ್ಮಲ ಪ್ರೀತಿಯಿದೆ, ಅತ್ತು ಸುಖಪಡುವ ದುಃಖವಿದೆ, ತನ್ನ ಯವ್ವನವನ್ನು ನನ್ನ ಮಗ ಅನುಭವಿಸಲಿ ಎಂಬ ಅಪ್ಪ ಒಂದೆಡೆಯಾದರೆ, ತನ್ನ ಜೀವಮಾನದಲ್ಲೇ ಎಂದಿಗೂ ಕಾಣದ ಹುಡುಗನಿಗೆ ತನ್ನ ಮಗಳನ್ನು ಕಟ್ಟಲಿಚ್ಚಿಸುವ ಅಪ್ಪ ಇನ್ನೊಂದೆಡೆ. ಇಲ್ಲಿ ಕುಣಿದು ಕುಪ್ಪಳಿಸುವಂತಹ ಸಂಗೀತವಿದೆ, ಯೂರೋಪಿನ ಚಳಿಯಲ್ಲಿ ಕಾಲೆಳೆದು, ಬೈದಾಡಿ, ಗುಂಪಿನಿಂದ ಬೇರೆಯಾಗಿ, ನೆಡೆಯುತ್ತಲೇ ಸಾಗುವ ಮುದ್ದಾದ ಜೋಡಿಯಿದೆ, ಎಲ್ಲಕ್ಕೂ ಮಿಗಿಲಾಗಿ ಅತಿರೇಕವೆನಿಸದ ಸಹಜತೆ ಚಿತ್ರದ ಪ್ರತಿ ಫ್ರೇಮಿನಲ್ಲೂ ಬೇರುಬಿಟ್ಟಿದೆ. ಮಾನವ ಜೀವನದ ಎಲ್ಲ ಭಾವಗಳು ಮಿಳಿತಗೊಂಡಿರುವ ಸುಂದರ ಕಲ್ಪನೆಯ ಕತೆಯಿರದೆ ಹೋಗಿದ್ದರೆ ಚಿತ್ರ ಈ ಮಟ್ಟಿನ ಯಶಸ್ಸನ್ನು ಗಿಟ್ಟಿಸಿಕೊಳ್ಳುತ್ತಿರಲಿಲ್ಲವೇನೋ. ಪೀಳಿಗೆಗಳನ್ನು ಮರೆತು ಎಲ್ಲರಲ್ಲಿ ಬೆರೆಯುತ್ತಿರಲಿಲ್ಲವೇನೋ?

ಈ ಚಿತ್ರದ ಕತೆ, ನಿರ್ದೇಶನ, ನಿರ್ಮಾಣ ಎಲ್ಲವೂ ಹಿಂದಿ ಚಿತ್ರರಂಗದ ದಂತಕತೆ ಯಶ್ ಚೋಪ್ರರ ಮಗ ಆದಿತ್ಯ ಚೋಪ್ರಾನದು. ಮೊದಲು ಹಾಲಿವುಡ್ ನ ಟಾಮ್ ಕ್ರೂಸ್ ನನ್ನು ನಾಯಕನನ್ನಾಗಿ ಮಾಡಲು ಯೋಚಿಸಿದ್ದ ಆದಿ (!) ಒಂದು ಟ್ರೆಂಡ್ ಸೆಟ್ಟಿಂಗ್ ಚಿತ್ರವನ್ನು ಮಾಡಲೆಂದೇ ಆಕ್ಷನ್ ಕಟ್ ಹೇಳಿದಂತಿದೆ. ಕೇವಲ ಮೂರ್ನಾಲ್ಕು ವಾರದಲ್ಲೇ ಬರೆದು ಮುಗಿಸಿದ ಕತೆ ಅಂದು ಚಿತ್ರದಲ್ಲಿ ತೊಡಗಿದ ಅಷ್ಟೂ ಜನರ ಜೀವನನ್ನೇ ಬದಲಿಸಿತು. ಶಾರುಖ್ ಖಾನ್, ಕಾಜೋಲ್ರ ಜೋಡಿ ಭಾರತೀಯರ ಮಗಳು ಅಳಿಯರಂತಾದರು. ನಾಲ್ಕು ಕೋಟಿ ಸುರಿದು ನಿರ್ಮಿಸಿದ ಸಿನಿಮಾ ನೂರು ಕೋಟಿಗೂ ಹೆಚ್ಚಿನ ವಹಿವಾಟನ್ನು ನೆಡೆಸಿತು. ಚಿತ್ರದ ಹುಚ್ಚು ಅದ್ಯಾವ ಮಟ್ಟಿಗೆ ಜನಮಾನಸದಲ್ಲಿ ಹಬ್ಬಿತೆಂದರೆ ಚಿತ್ರದ ನಾಯಕ ನಾಯಕಿಯರು ಬಳಸಿದ ಬಟ್ಟೆಯ ಶೈಲಿಗಳೆಲ್ಲವೂ 'ಸಿಮ್ರಾನ್' ಹಾಗು 'ರಾಜ್' ನ ಹೆಸರಿನ ಬ್ರಾಂಡ್ಗಳಾಗಿ ಮಾರುಕಟ್ಟೆಗೆ ಬಂದವು. ಮುಂಬೈ ಸೆಂಟ್ರಲ್ ನ ಬಳಿ ಇರುವ ಮರಾಠ ಮಂದಿರ್ ಚಿತ್ರಮಂದಿರದಲ್ಲಿ ಚಿತ್ರ ಕಳೆದ ವರ್ಷದವರೆಗೂ ಓಡಿತು. ಈ ಪರಿ ಬರೋಬ್ಬರಿ 22 ವರ್ಷಗಳ ಕಾಲ ಚಿತ್ರವೊಂದು ನಡೆದಿರುವ ಉದಾಹರಣೆ ಭಾರತದಲ್ಲೇನು ಇಡೀ ವಿಶ್ವದಲ್ಲಿಯೇ ಇಲ್ಲ! ಕತೆ, ನಿರ್ದೇಶನ, ಸಂಗೀತ ಹಾಗು ನಟನೆ ಇತ್ತಕಡೆ ಹೆಚ್ಚೆನಿಸದೆ ಅತ್ತಕಡೆ ಕಡಿಮೆಯೂ ಎನಿಸದ ಫಾರ್ಮುಲಾ ಚಿತ್ರವನ್ನು ಗೆಲ್ಲಿಸಿತು. ಜನರ ಮನವನ್ನು ಗೆದ್ದಿತು. ಸ್ಕೂಲು ಕಾಲೇಜು Function ಗಳಲ್ಲಿ, ಮದುವೆ ಸಮಾರಂಭಗಳಲ್ಲಿ, ಜಾತ್ರೆ ಹಬ್ಬಗಳಲ್ಲಿ ಮೂಡುವ ಈ ಚಿತ್ರದ ಹಾಡುಗಳು ತಿಳಿದೋ ತಿಳಿಯದೆಯೋ ನೂರಾರು ಕೋಟಿ ಜನರ ತುಟಿಗಳಲ್ಲಿ ರಾರಾಜಿಸಿರುವುದಂತೂ ಸುಳ್ಳಲ್ಲ.

'ಜಾ .. ಸಿಮ್ರಾನ್ .. ಜಾ .. ಜೀಲೇ Apni ಜಿಂದಗಿ' ಎಂಬ ಅಂಬರೀಷ್ ಪೂರಿಯ ಡೈಲಾಗ್ ತೆರೆಯ ಮೇಲೆ ಬರುವವರೆಗೂ ಪಿನ್ ಡ್ರಾಪ್ ಸೈಲೆಂಟ್ ಆಗುವ ಚಿತ್ರಮಂದಿರ, ಸಿಮ್ರಾನ್ ಓಡಿ ರಾಜ್ ನ ತೆಕ್ಕೆಯನ್ನು ಸೇರಿದಾಗಂತೂ ಸಿಳ್ಳೆ ಚಪ್ಪಾಳೆಗಳ ಕಹಳೆಯನ್ನು ಎಲ್ಲೆಲ್ಲೂ ಮೂಡಿಸುತ್ತದೆ. ಎಲ್ಲರ ಮನದೊಳಗೂ ಅಡಗಿರುವ ಒಂದೊಂದು ಬಗೆಯ ರಾಜ್ ಹಾಗು ಸಿಮ್ರಾನ್ ರ ಕ್ಯಾರೆಕ್ಟರ್ ಹೊರಬಂದು ಅಲ್ಲಿ ನಲಿಯತೊಡಗುತ್ತದೆ. 'ದಿಲ್ ವಾಲೆ ದುಲ್ಹನಿಯಾ ಲೇ ಜಾಯೆಂಗೆ' ಎಂದು ಹಾಡುತ್ತದೆ!

Friday, February 8, 2019

ಮೆಹ್ತಾ Killed ಮೆಹ್ತಾ! - Part 4

Continued...

'Deepak Mehtha is gone!!.. ಆಸಾಮಿ ಇನ್ನು ಒಂದ್ ವಾರ ಲೇಟಾಗಿ ಬರ್ತಾನೆ ಅಂತ ಹೇಳಿ ಇವತ್ತೇ ಬಂದ, ಸೊ ವಿಥ್ ಮಿನಿಮಲ್ ಟೈಮ್ ನಾನೇ ಎಲ್ಲ ಕೆಲ್ಸ ಮುಗ್ಸಿದ್ದೀನಿ.. ಬಾಡಿ ನಿಮ್ ಕ್ಯಾಬಿನ್ ನ ಫ್ರಿಡ್ಜ್ ನ ಕಂಪಾರ್ಟ್ ಮೆಂಟ್ ಒಳಗೇ ಇದೆ.. ಇನ್ನು So many documents need his Thumb Impression.. ನೀವ್ ಯಾವಾಗ ಬರೋದು..? ‘ಎಂಬ ಮೆಸೇಜ್ ಹೋದ ಕೂಡಲೇ ಅತ್ತಕಡೆಯಿಂದ ಹತ್ತಾರು ಕಾಲ್ಸ್ ಗಳು ಬಂದರೂ ಒಂದನ್ನು ಸಹ ನಾನು ತೆಗೆಯಲಿಲ್ಲ.



ಕೊನೆಯದಾಗಿ ಬರಿ ದಿನಾಂಕವಿರುವ ಒಂದು ಮೆಸೇಜ್ ಬಂದಿತು.



ಭುಜಂಗ ಬರುವ ದಿನವನ್ನು ಸರಿಯಾಗಿ ನೋಡಿಕೊಂಡು ಅಲ್ಲಿಯವರೆಗೂ ಕೆಮಿಕಲ್ ಹಾಕಿ ಸಂರಕ್ಷಿಸಿಟ್ಟಿದ್ದ ಹೆಣವನ್ನು ರಾತ್ರಿಯೇ ಮೇಲೆ ಸಾಗಿಸಿ ಆತ ಆಫೀಸಿಗೆ ಬರುವ ಕೆಲಹೊತ್ತಿನ ಮುಂಚೆಯೇ ಹೊರಗೆಸೆದು ಕಂಪನಿಯ ಹಿಂದಿನಿಂದ ಇಳಿದು ಹೊರನೆಡೆದೆ. ಭುಜಂಗ ಬಂದವನೇ ಆದು ತನ್ನ ಸ್ವಂತ ಮಗನ ದೇಹವೆಂಬುದನ್ನೂ ಅರಿಯದೆ ಕೇಸನ್ನು ಮುಚ್ಚಿಸಿ ಹಾಕಿದ.



ಮೊನ್ನೆ ನಾನು ಬೆಳಗಿನ ಹೊತ್ತಿಗೆ ಆಫೀಸಿಗೆ ಹೋದಾಗ ನನ್ನನ್ನು ಆತನ ಮಗನೆಂದೇ ಭಾವಿಸಿ ಎದ್ದು ನಿಂತು ನನ್ನ ಕೆನ್ನೆಗೆ ಛಟಾರನೆ ಭಾರಿಸಿದ. 'ಬಡ್ಡಿ ಮಗ್ನೆ .. ಅಷ್ಟ್ ದಿನದಿಂದ ಫೋನ್ ಮಾಡ್ತಾ ಇದ್ದೀನಿ.. ತೆಗೆಯೋಕ್ಕೆ ಏನ್ ರೋಗ ನಿಂಗೆ ..?' ಎಂಬ ಸಿಡುಕಿನ ಧ್ವನಿಯಲ್ಲಿ ಅರಚಿದ ಆತನಿಗೆ ಸಹಜವಾಗಿಯೇ ತನ್ನ ಮಗನ ಮೇಲಿನ ಕಾಳಜಿಯಿತ್ತು. ಒಂದಿನಿತು ಕುಗ್ಗಿದ ಮನಸ್ಸಿಗೆ ಕೂಡಲೇ ನನ್ನ ತಂದೆಯ ನೆನಪು ಬಂದಿತು. ಅಲ್ಲದೆ ರಕ್ತದ ಮಡುವಿನಲ್ಲಿ ನರಳುತ್ತಿದ್ದ ನನ್ನ ಅಮ್ಮನ ತಾಳಿಯನ್ನೂ ಕಿತ್ತು ಪಾರಾಯಿಯಾಗಿದ್ದ ಕಿರಾತಕನ ವೇಷ ನನ್ನ ಕಣ್ಣ ಮುಂದೆ ಕಂಡಿತು. ಅಂದೇ ಪ್ರತಿಜ್ಞೆ ಮಾಡಿಕೊಂಡಂತೆ ತಾಯಿಯ ಚಿನ್ನವನ್ನು ಕದ್ದು ಕಟ್ಟಿದ ಚಿನ್ನದ ಅಂಗಡಿಗಳ ಚಿನ್ನದ ಗುಂಡಿನಿಂದಲೇ ನಿನ್ನ ಸಾಯಿಸುವೆ ಎಂಬ ಮಾತಿನಂತೆ 'ನಿನ್ ಮಗ ನಿನಗಿಂತ ಮೊದಲೇ ಹೋದ ಭುಜಂಗ.. ಇವಾಗ ನಿನ್ನ ಬಾರಿ .. ' ಎನುತ ನಿಖಿಲ್ ನ ಮುಖವಾಡವನ್ನು ತೆಗೆಯತೊಡಗಿದೆ. ಬುಡಕಡಿದ ಮರದಂತಾಗಿ ತರತರನೆ ನಡುಗತೊಡಗಿದ ಭುಜಂಗ. ಆತನ ಮುಖದ ಮೇಲೆ ಮೂಡಿದ ಆ ಗೊಂದಲ ಹಾಗು ವಿಪರೀತ ಭಯ, ಆಹಾ.. ಸಾವಿರ ಜನ್ಮಕ್ಕೆ ಸಾಕಾಗುವಷ್ಟು ನೆಮ್ಮದಿಯನ್ನು ನನಗೆ ನೀಡಿತು. ಆತ ತನ್ನ ಪೋಷಕರ ಕೊಲೆಗಾರನೆಂದೂ, ಆಸ್ತಿಯನ್ನು ಲಪಟಾಯಿಸಿದ್ದರ ಬಗ್ಗೆ, ಕಳೆದ ಇಪ್ಪತ್ತು ವರ್ಷಗಳಿಂದ ತಾನು ಈತನ ಒಂದೊಂದೇ ನಡೆಯನ್ನು ಗಮನಿಸುತ್ತಿದ್ದ ಬಗೆಯನ್ನು, ಎಲ್ಲವನ್ನು ಆ ಬೆವತ ಮುಖಕ್ಕೆ ಹೇಳತೊಡಗಿದೆ. ಕೂಡಲೇ ತನ್ನ ಫೋನಿನ ಮೇಲೆ ಕೈಹಾಕಹೋದ ಆತನನ್ನು ಕಂಡು ಗನ್ನಿನ ಟ್ರಿಗರ್ ಅನ್ನು ಒತ್ತಿಯೇ ಬಿಟ್ಟೆ. ಹಣೆಗೆ ತಗುಲಿದ ಚಿನ್ನದ ಗುಂಡು ಬಿಕ್ಕಿನ ಕಣ್ಣಿನ ಭುಜಂಗನನ್ನು ಕ್ಷಣಮಾತ್ರದಲ್ಲಿ ಮುಗಿಸಿತು. ತೆರೆದ ಬಾಯನ್ನು ಮುಚ್ಚದೆಯೇ ಪರಲೋಕಕ್ಕೆ ಸೇರಿದ ಭುಜಂಗ. ದಶಕಗಳ ಕಾಲ ನನ್ನ ಎದೆಯಲ್ಲಿ ಮನೆಮಾಡಿದ್ದ ಸಿಟ್ಟಿನ ಜ್ವಾಲೆಯೊಂದು ಅಂದು ಕೊನೆಯಾಯಿತು.. ಪೋಷಕರ ಆತ್ಮಕ್ಕೆ ಶಾಂತಿ ಸಿಕ್ಕಿತು' ಎಂದೇಳಿ ಸುಮ್ಮನಾದ ದೀಪಕ್ ಮೆಹ್ತಾ.



ಕಣ್ಣನ್ನು ಮುಚ್ಚದೆಯೇ ನಿರ್ಜೀವ ವಸ್ತುಗಳಂತೆ ಕೂತಿದ್ದ ಜನಸ್ತೋಮವನ್ನು ಜಡ್ಜಿನ ಮಾತು ಎದ್ದೇಳಿಸಿತು. ಜಡ್ಜ್ ಮಾತನಾಡಿ 'ದೀಪಕ್ ಮೆಹ್ತಾ ತಾನೇ ಭುಜಂಗ ರಾವ್ ಹಾಗು ಅವರ ಮಗ ನಿಖಿಲ್ ನನ್ನು ಕೊಂದಿರುವುದಾಗಿ ಒಪ್ಪಿಕೊಂಡಿರುವುದರಿಂದ, ಅಲ್ಲದೆ ಅದಕ್ಕೆ ಪೂರಕವಾದ ಸಾಕ್ಷದಾರಗಳೂ ಇರುವುದರಿಂದ ಕೇಸು ಇಲ್ಲಿಗೆ ಮುಗಿದಂತೆಯೇ ಸರಿ' ಎಂದೇಳಿ ಇನ್ನೇನು ಶಿಕ್ಷೆಯನ್ನು ಪ್ರಕಟಿಸಬೇಕು ಎನಿಸುವಷ್ಟರಲ್ಲಿ ಅಜಯ್ ಮತ್ತೊಮ್ಮೆ ಮಾತನಾಡಿ 'ಸಾರ್, ಒಂದು ನಿಮಿಷ' ಎನ್ನುತ್ತಾನೆ….!



ಒಂದಿನಿತು ಸಂಶಯವಿರದ ದಾಖಲೆಗಳನ್ನು ನೀಡಿ ಮಾತುಮರೆತು ನಿಂತಿದ್ದ ದೀಪಕ್ ಮೆಹ್ತಾರನ್ನೂ ಮಾತಿಗಿಳಿಸಿ ಸತ್ಯವನ್ನು ಹೊರಹಾಕಿದ ವ್ಯಕ್ತಿಯ ಮಾತನ್ನು ನಿರಾಕರಿಸದೆ ಜಡ್ಜ್ ಮಾತನಾಡುವಂತೆ ಹೇಳುತ್ತಾರೆ. ಮುಗಳ್ನಗುತ್ತಾ ದೀಪಕ್ ಮೆಹ್ತಾ ನಿಂತಿದ್ದ ಕಟಕಡೆಯ ಬಳಿಗೆ ಬಂದ ಅಜಯ್, ದೀಪಕ್ ಮೆಹ್ತಾರ ಕಣ್ಣುಗಳನ್ನೇ ನೋಡುತ್ತಾ,

'ಮಿಸ್ಟರ್ ದೀಪಕ್, ನೀವು ಕೊಲೆಮಾಡಿರುವುದು ಅಕ್ಷರ ಸಹ ಸತ್ಯ. ಅಂತೆಯೆ ತಾವು ಕೊಲೆಯಾಗದಿರುವುದೂ ಅಷ್ಟೇ ಸತ್ಯ.But, ನಿಮ್ಮಿಂದ ನೆಡೆದಿರುವ ಕೊಲೆಗಳ ಸಂಖ್ಯೆ ಎರಡಲ್ಲ….' ಎಂದು ಹೇಳಿ ತನ್ನ ದೃಷ್ಟಿಯನ್ನು ದೀಪಕ್ ಮೆಹ್ತಾರ ಚಹರೆಯಿಂದ ಸರಿಸಿ ಪಕ್ಕದಲ್ಲಿ ನಿಂತಿದ್ದ ದಪ್ಪ ಮೀಸೆಯ ಸಬ್ ಇನ್ಸ್ಪೆಕ್ಟರ್ ನ ಮೇಲೆ ಇರಿಸುತ್ತಾನೆ.

'ಓನ್ಲಿ ಒನ್!!'

'ವಾಟ್..?' ಪೊಲೀಸ್ ಹಾಗು ದೀಪಕ್ ಮೆಹ್ತಾರಿಬ್ಬರಿಂದ ಏಕಕಾಲದಲ್ಲಿ ಪ್ರೆಶ್ನೆ ಮೂಡಿತು.ಕಪ್ಪು ಬಣ್ಣದ ಸಬ್ ಇನ್ಸ್ಪೆಕ್ಟರ್ ನ ಮುಖ ಕರಿದ ಎಣ್ಣೆಯ ಬಣ್ಣಕ್ಕೆ ತಿರುಗಿತು. ಕೋರ್ಟಿನ ತುಂಬಾ ಮತ್ತೊಮ್ಮೆ ಗುಜುಗುಜು ಸದ್ದು.



'ಆರ್ಡರ್ .. ಆರ್ಡರ್'

'ಸರ್, ಅಂದು ನಿಖಿಲ್ ನ ಹೆಣವನ್ನು ಆಸ್ಪತ್ರೆಗೆ ಕೊಂಡೊಯ್ದದ್ದಾಗಲಿ, ಪೋಸ್ಟ್ ಮಾರ್ಟಮ್ ನ ಉಸ್ತುವಾರಿಯನ್ನು ವಹಿಸಿದ್ದಾಗಲಿ, ,ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾಗಲಿ, Infact ನಿಖಿಲ್ ರಾವ್ ನ ನಿಜವಾದ ಕೊಲೆಗಾರನೂ ಸಹ ಇದೆ ಸಬ್ ಇನ್ಸ್ಪೆಕ್ಟರ್, ನೀರಜ್ ಮಲ್ಹೋತ್ರ!!'



ತನ್ನ ಹೆಸರನ್ನು ಕೇಳಿದ ಕೂಡಲೇ ಕಕ್ಕಾಬಿಕ್ಕಿಯಾದ ನೀರಜ್ ಕೂಡಲೇ ತನ್ನ ರಿವಾಲ್ವರನ್ನು ಹೊರಗೆಳೆದು ಅಜಯ್ ಎಡೆಗೆ ಶೂಟ್ ಮಾಡಲೆತ್ನಿಸುತ್ತಾನೆ. ಆದರೆ ಆತನ ಪ್ರಯತನವನ್ನು ಕಟಕಡೆಯ ಮೇಲಿದ್ದ ದೀಪಕ್ ರಾವ್ ತಡೆಯಲೊಗುತ್ತಾನೆ. ಆದರೂ ಹಾರಿದ ಗುಂಡು ಮೆಹ್ತಾನ ತೋಳನು ಸವರಿಕೊಂಡು ಹೋಗಿ ಕೊಂಚ ಗಾಯವನ್ನೂ ಜೊತೆಗೆ ರಕ್ತವನ್ನು ಚಿಮ್ಮಿಸುತ್ತದೆ. ಕೂಡಲೇ ನೀರಜ್ ಮಲ್ಹೋತ್ರನನ್ನು ಸುತ್ತುವರೆದ ಇತರ ಪೊಲೀಸರು ಆತನ ಕೈಲಿದ್ದ ರಿವಾಲ್ವರನ್ನು ಕಸಿದುಕೊಂಡರು. ತಂಡದಲ್ಲಿದ್ದ ಮತ್ತೋರ್ವ ಸಬ್ ಇನ್ಸ್ಪೆಕ್ಟರ್ ಆತನ ಬೆನ್ನಿನ ಹಿಂದಕ್ಕೆ ತನ್ನ ರಿವಾಲ್ವರನ್ನು ಹಿಡಿದು ಅಲುಗಾಡದಂತೆ ನಿಲ್ಲಲು ಹೇಳುತ್ತಾರೆ. ಮೆಹ್ತಾನ ವಿರುದ್ಧವಾಗಿ ವಾದಿಸುತ್ತಿದ್ದ ಒಬ್ಬನೇ ಲಾಯರ್ ಕೂಡ ಸದ್ದುಗದ್ದಲವಿಲ್ಲದೆ ಕೂರುತ್ತಾನೆ.



'ಥಾಂಕ್ ಯು ಮಿಸ್ಟರ್ ಮೆಹ್ತಾ.. anyone please treat his wound' ಎಂದಾಗ ವ್ಯಕ್ತಿಯೊಬ್ಬ ಮೆಡಿಕಲ್ ಕಿಟ್ಟೊಂದನ್ನು ಹಿಡಿದು ತಂದು ಕಟಕಟೆಯಲ್ಲೇ ಆತನ ಗಾಯಕ್ಕೆ ಬ್ಯಾಂಡೇಜ್ ಅನ್ನು ಕಟ್ಟುತ್ತಾನೆ.



ನಂತರ ಮಾತು ಮುಂದುವರೆಸಿದ ಅಜಯ್,

'Till this Very moment ನನಗೆ ನೀರಜ್ ಮಲ್ಹೋತ್ರ ನ ಮೇಲೆ ಪೂರ್ಣ ಸಂಶಯ ಇರಲಿಲ್ಲ. His gun shot made all things clear. ಅಂದು ನಿಖಿಲ್ ಸತ್ತ ಮೂರು ಗಂಟೆಯ ನಂತರ ಅಂದರೆ ಮಧ್ಯರಾತ್ರಿ ಒಂದುವರೆಯ ಸುಮಾರಿಗೆ ನಿಖಿಲ್ ರಾವ್ ನ ಹಸ್ತಾಕ್ಷರ ನೀರಜ್ ಮಲ್ಹೋತ್ರ ರಾತ್ರಿ ಡ್ಯೂಟಿ ಮಾಡುತ್ತಿದ್ದ ಪೊಲೀಸ್ ಸ್ಟೇಷನ್ ನ ಎಂಟ್ರಿ ಬುಕ್ಕಿನಲ್ಲಿ ರೆಕಾರ್ಡ್ ಆಗಿರುತ್ತದೆ. ಅಲ್ಲಿಗೆ ದೀಪಕ್ ಅಂದುಕೊಂಡ ಹಾಗೆ ನಿಖಿಲ್ ಪಾಯಿಸನ್ ನಿಂದ ಸಾಯಲಿಲ್ಲ. ಧೈರ್ಯ ಮಾಡಿ ನಾನೇ ಒಂದು ಸಣ್ಣ ಇನ್ವೆಸ್ಟಿಗೇಷನ್ ಮಾಡಿದೆ. ಲಂಚಬರಿತ ಈ ಕಾಲದಲ್ಲಿ ಎಂತಹ ಸತ್ಯವನ್ನೂ ಹೊರಗೆಳೆಯಬಹುದು ಬಿಡಿ.. ಪೊಲೀಸ್ ಗೌರ್ಡ್, ಪೋಸ್ಟ್ ಮೊರ್ಟ್ನಮ್ ಸಿಬ್ಬಂದಿ etc etc .. ಎಲ್ಲರಲ್ಲೂ ಇಂಚಿಚ್ಛೇ ಸತ್ಯ ಅಡಗಿದ್ದಿತು. ದೀಪಕ್ ಮೆಹ್ತಾ ನಿಖಿಲ್ ನ ಬಾಡಿಯನು ಫ್ರಿಡ್ಜ್ ನ ಒಳಗೆ ತಳ್ಳಿ ಹೋದ ಕೆಲಸಮಯದ ನಂತರ ನಿಖಿಲ್ ಗೆ ಪ್ರಜ್ಞೆ ಬಂದೂ ಕಷ್ಟಪಟ್ಟು ಫ್ರಿಡ್ಜ್ ನಿಂದ ಹೊರಬಂದು ತೂರಾಡುತ್ತಾ ನೀರಜ್ ಮಲ್ಹೋತ್ರ ನ ಸ್ಟೇಷನ್ ಅನ್ನು ತಲುಪುತ್ತಾನೆ. ನೀರಜ್ ನೆಡೆದ ವಿಷಯವನ್ನೆಲ್ಲ ತಿಳಿದ ಕೂಡಲೇ ತನ್ನೊಳಗೆ ಒಂದು ಮಾಸ್ಟರ್ ಪ್ಲಾನನ್ನು ಮಾಡುಕೊಳ್ಳುತ್ತಾನೆ. ಅಸಲಿಗೆ ದೀಪಕ್ ಮೆಹ್ತಾ ತಾನೇ ನಿಖಿಲ್ ನನ್ನು ಕೊಂದಿದ್ದಾನೆ ಎಂದುಕೊಂಡಿದ್ದಾನೆ. ಒಂದು ಪಕ್ಷ ನಾನು ನಿಖಿಲ್ ನನ್ನು ನಿಜವಾಗಿಯೂ ಮುಗಿಸಿದರೆ ಫಾರಿನ್ ರಿಟರ್ನ್ ದೀಪಕ್ ನನ್ನು ಬ್ಲಾಕ್ ಮೇಲ್ ಮಾಡಿ ಜೀವನಪೂರ್ತಿ ಹಣವನ್ನು ದೋಚಬಹುದೆಂಬ ಲೆಕ್ಕಾಚಾರ ಅವನದಾಗಿರುತ್ತದೆ!'

ಹೇಗೋ ಪುಸಲಾಯಿಸಿ ಸುಸ್ತಾಗಿದ್ದ ನಿಖಿಲ್ ನನ್ನು ಪುನ್ಹ ಅದೇ ಆಫೀಸಿಗೆ ಕರೆದುಕೊಂಡು ಬಂದ ನೀರಜ್ ತನ್ನ ರಿವಾಲ್ವರ್ನಿಂದ ಎದೆಯ ಕೆಳಗೆ ಮೂರು ಗುಂಡುಗಳನ್ನು ಹಾರಿಸಿ ಆತನನ್ನು ಸಾಯಿಸುತ್ತಾನೆ. ರಕ್ತ ಮಡುಗಟ್ಟುವಂತೆ ಮಾಡಿ, ಮತ್ತದೇ ಕೋಟನ್ನು ಕೃತಕ ಮುಖವಾಡವನ್ನೂ ಫ್ರಿಡ್ಜ್ ನ ಒಳಗೆ ತೂರಿಸುತ್ತಾನೆ. ಭುಜಂಗರಾವ್ ಬರುವ ದಿನ ದೀಪಕ್ ಮೆಹ್ತಾ ಅದು ತಾನೇ ಕೊಂದ ಹೆಣವೆಂದು ಭಾವಿಸಿ ಮೇಲಿಂದ ಎಸೆದು ಪರಾರಿಯಾಗುತ್ತಾನೆ. ಆಗ ತಾನೇ ಖುದ್ದಾಗಿ ಕೇಸಿನ ಜವಾಬ್ದಾರಿಯನ್ನು ಹೊತ್ತು ನೀರಜ್ ತನ್ನ ಗೇಮನ್ನು ಆಡುತ್ತಾನೆ. ಆದರೆ ಯಾವಾಗ ಕೇಸು ಹಿರಿಯ ಅಧಿಕಾರಿಗಳ ಗಮನ ಸೆಳೆಯಿತೋ ಆಗ ಒಮ್ಮೆ ಕೇಸು ಮುಗಿಯಲಿ ಎನುತ ತರಾತುರಿಯಲ್ಲಿ ದೀಪಕ್ ಮೆಹ್ತಾನನ್ನು ತಪ್ಪಿತಸ್ಥನನ್ನಾಗಿ ನಿರೂಪಿಸಿ ಜಾಗ ಕೀಳುವ ಸಂಚು ಅವನದಾಗಿರುತ್ತದೆ' ಎಂದು ಸುಮ್ಮನಾದಾಗ ನೀರಜ್ ಮೆಹ್ತಾ ತನ್ನ ತಲೆಯನ್ನು ತಗ್ಗಿಸಿಕೊಂಡಿರುತ್ತಾನೆ. ಆತನ ಆ ಸುಮ್ಮನಿರುವಿಕೆಯೇ ಎಲ್ಲ ಸಂಶಯಗಳಿಗೂ ಉತ್ತರವಾಗಿರುತ್ತದೆ. ಕೋರ್ಟನ್ನು ಮಹಾಮೌನವೊಂದು ಮತ್ತೊಮ್ಮೆ ಆವರಿಸಿರುತ್ತದೆ.

ಹೈ ಪ್ರೊಫೈಲ್ ಡಬಲ್ ಮರ್ಡರ್ ಕೇಸ್ ನ ಅಂತ್ಯ ಅಲ್ಲಿಗೆ ಪೂರ್ತಿಯಾಗಿರುತ್ತದೆ. ಅಲ್ಲಿಯವರೆಗೂ ತುಟಿಕ್ ಪಿಟಿಕ್ ಎನ್ನದ ಮಹೇಶ ಎದ್ದು ನಿಂತು ಚಪ್ಪಾಳೆಯ ಸುರಿಮಳೆಗೈಯ್ಯುತ್ತಾನೆ. ಆದರೆ ಜಡ್ಜಿನ ಕೆಮ್ಮಿನ ಸದ್ದೇ ಆತನನ್ನು ಪುನಃ ತನ್ನ ಸ್ವಸ್ಥಾನದಲ್ಲಿ ಕೂರುವಂತೆ ಮಾಡುತ್ತದೆ....



The End ....


ಮೆಹ್ತಾ Killed ಮೆಹ್ತಾ! - Part 3

Continued..


ಹಣೆಗೆ ಗುರಿಯಿಟ್ಟು ಹೊಡೆದ ಆ ಹೊಡೆತ ಕ್ಷಣಮಾತ್ರದಲ್ಲೇ ದೇಹವನ್ನು ಹೆಣವನನ್ನಾಗಿಸುತ್ತದೆ! ಆತನ ಕೈ ಮಾತ್ರ ಒಂದೇ ಸಮನೆ ನಡುಗಹತ್ತುತ್ತದೆ.

ಆ ದಿನ ಕಂಪನಿಯ ಪ್ರತಿಯೊಬ್ಬರನ್ನೂ ಆಫೀಸಿನ ಒಳಗೆಯೇ ಇರುವಂತೆ ಸೂಚಿಸಲಾಗಿದ್ದಿತು. ಸತ್ತು ಬಿದ್ದಿದ್ದ ಭುಜಂಗ್ ರಾವಿನ ಹೆಣವನ್ನು ತೆಗೆದ ನಂತರ ಪೊಲೀಸರು ದೀಪಕ್ ಮೆಹ್ತಾನನ್ನೂ ಅರೆಸ್ಟ್ ಮಾಡಿ ಕರೆದೊಯ್ದರು. ಆ ವಿಚಿತ್ರ ಘಟನೆಯನ್ನು ಕಂಡು ನಾಲ್ಕೈದು ಜನರು ಮೂರ್ಛೆ ತಪ್ಪಿ ಆಸ್ಪತ್ರೆ ತಲುಪಿದ್ದೂ ಉಂಟು! ನಂತರ ಒಬ್ಬೊಬ್ಬರನ್ನೇ ಕರೆದು ಇನ್ವೆಸ್ಟಿಗೇಷನ್ ಶುರುಮಾಡಿದ ಪೊಲೀಸರು ಅದನ್ನು ಮುಗಿಸುವಷ್ಟರಲ್ಲಿ ರಾತ್ರಿ ಹತ್ತಾಗಿದ್ದಿತು. ಆಗ ತಿಳಿದ ಮಹತ್ವದ ವಿಷಯವೇನೆಂದರೆ ಕಳೆದ ಎರಡು ವಾರಗಳಿಂದ ಸಿಸಿಟಿವಿ ಕ್ಯಾಮರಗಳೆಲ್ಲವೂ ಆಫ್ ಆಗಿದ್ದೂ ವಿಷಯವನ್ನು ಬುಜಂಗ್ರಾವಿನ ಗಮನಕ್ಕೆ ಹಲವು ಬಾರಿ ತಂದರೂ ಆತ ಬೇಕಂತಲೇ ಅದನ್ನು ಸರಿಪಡಿಸದಿದ್ದದು.

ಘಟನೆ ನೆಡೆದು ಎರಡು ದಿನಗಳ ನಂತರ ಜಡ್ಜಿನ ಆದೇಶದಂತೆ ಕಂಪನಿಯ ಎಲ್ಲರನ್ನೂ ಮತ್ತೊಂದು ಸುತ್ತಿನ ವಿಚಾರಣೆಗೆ ಕೋರ್ಟಿಗೆ ಬರುವಂತೆ ಹೇಳಲಾಗುತ್ತದೆ. ಹಲವಾರು ಸಾಕ್ಷಿಗಳನ್ನು ನ್ಯಾಯಮೂರ್ತಿಗಳ ಮುಂದೆಯೇ ವಿಚಾರಿಸಬೇಕೆಂದು ಆಜ್ಞೆಯಾಗಿರುತ್ತದೆ. ಜೀವ ಹೋದರೂ ನಾ ಕೋರ್ಟ್ ಗೆ ಬರೆನು ಎಂದು ಕೂತ ಮಹೇಶನನ್ನು ಮಕ್ಕಳನ್ನು ಮೊದಲ ಬಾರಿಗೆ ಶಾಲೆಗೆ ಸೇರಿಸುವ ಹಾಗೆ ಅಜಯ್ ಕಾಡಿ ಬೇಡಿ ಕರೆತಂದಿದ್ದ . ವಿಚಾರಣೆ ಶುರುವಾಗಿ ಬಹಳ ಸಮಯ ಕಳೆದರೂ ಯಾರೊಬ್ಬರಿಗೂ ಕೊಲೆಯ ಹಾಗು ಸಾವಿನ ಹಿಂದಿದ್ದ ನಿಖರ ಉತ್ತರ ತಿಳಿಯಲಿಲ್ಲ. ಅತ್ತ ಕಡೆ ಮೆಹ್ತಾ ಒಂದೂ ಪದವನ್ನು ಮಾತನಾಡದೆ ಕಲ್ಲುಗುಂಡಿನಂತೆ ನಿಂತಿದ್ದ. ಅಲ್ಲದೆ ಆತ ಮಾನವನೋ ಅಥವ ಸತ್ತ ಹೆಣಕ್ಕೆ ಆತ್ಮ ಸೇರಿ ನೆಡೆಸುತ್ತಿರುವ ಕೃತ್ಯವೋ ಎಂಬ ಭಯದೊಂದಿಗೆ ಯಾರೊಬ್ಬರೂ ಅವನ ವಿರುದ್ಧವಾಗಿ ಒಂದಿನಿತೂ ಕೆಟ್ಟದಾಗಿ ಹೇಳಿಕೆಯನ್ನು ಕೊಡಲಿಲ್ಲ. ಹತ್ತಿರವೂ ಸುಳಿಯಲಿಲ್ಲ. 'ತುಂಬಾ ಒಳ್ಳೆಯ ವ್ಯಕ್ತಿ', 'ಯಾರಿಗೂ ನಿಂದಿಸುತ್ತಿರಲಿಲ್ಲ', 'ಎಲ್ಲರನ್ನೂ ಸಮನಾಗಿ ಕಾಣುತ್ತಿದ್ದರು' ಎಂಬ ಗೌರವ ಸೂಚಕಗಳೇ ಎಲ್ಲರ ಹೇಳಿಕೆಗಳಲ್ಲೂ!

ತನ್ನ ಸರದಿ ಬರುತ್ತದೆ ಎಂದು ಕಾದು- ಕಾದು ಹೈರಾಣಾದ ಅಜಯ್ ಯಾವಾಗ ತನ್ನ ಹೆಸರನ್ನು ಕರೆಯಲಿಲ್ಲವೋ ಆಗ ಕೊಂಚ ಕುಪಿತಗೊಂಡವಂತೆ ಕೂಡಲೇ ಎದ್ದು ನಿಂತು ಅರಚಿತ.

'Would you please stop this Nonsense?!!'

ಗುಜುಗುಜುಗುಡುತ್ತಿದ್ದ ಸದ್ದು ಒಮ್ಮೆಲೇ ತಣ್ಣಗಾಗುತ್ತದೆ. ತಲೆತಗ್ಗಿಸಿಕೊಂಡು ನಿಂತಿದ್ದ ಮೆಹ್ತಾ ಕೂಡ ಅಜಯ್ ನನ್ನು ಒಮ್ಮೆ ನೋಡಿದ.

'ರೀ ಮಿಸ್ಟರ್, ಯಾರ್ರೀ ನೀವು? ನಿಮಗೇನಾದ್ರೂ ಹೇಳೋದಿದ್ರೆ ಕಟಕಟೆಯ ಮುಂದೆ ಬಂದು ಹೇಳಿ. Its not a Fish Market!' ಎಂದ ಜಡ್ಜಿನ ಮಾತಿಗೆ ಉತ್ತರಿಸುವಂತೆ, ಸಿಟ್ಟಿನ ಚಹರೆಯಲ್ಲಿಯೇ ಕಟಕಟೆಗೆ ಬಂದು ನಿಂತ ಅಜಯ್ ಕೊಂಚ ಹೊತ್ತು ಸುಮ್ಮನಾಗಿ ದೀಪಕ್ ಮೆಹ್ತಾನನ್ನೂ ಹಾಗು ಕೆಳಗೆ ನಿಂತಿದ್ದ ಸಬ್ ಇನ್ಸ್ಪೆಕ್ಟರ್ ಒಬ್ಬನನ್ನು ನೋಡಿದ.

'Your Honor, ನಾನು ಹೀಗ ಹೇಳಹೊರಟಿರುವ ವಿಷಯದ ಬಗ್ಗೆ ನನ್ನ ಬಳಿ ಸಂಪೂರ್ಣ ಸಾಕ್ಷ್ಯಾಧಾರಗಳಿವೆ ಹಾಗು ಯಾವುದನ್ನೂ ಊಹಿಸಿಕೊಂಡಾಗಲಿ, ಕಲ್ಪಿಸಿಕೊಂಡಾಗಲಿ ನಾನು ಹೇಳುತ್ತಿಲ್ಲ' ಎನ್ನುತ್ತಾನೆ.

'For your kind Information, ಅಂದು ಕಂಪನಿಯ ಮೇಲಿಂದ ಬಿದ್ದು ಸತ್ತದ್ದು ಬೇರ್ಯಾರು ಅಲ್ಲ ಅದು ಬುಜಂಗ್ ರಾವಿನ ಒಬ್ಬನೇ ಮಗ ನಿಖಿಲ್ ರಾವ್!!’’

ಕೋರ್ಟ್ನ ತುಂಬಾ ಮತ್ತೊಮೆ ಗುಸು ಗುಸು ಶುರುವಾಯಿತು. ಮಹೇಶ ತನ್ನ ಕಣ್ಣುಗಳನ್ನು ಸಾಧ್ಯವಾದಷ್ಟು ಹಿಗ್ಗಿಸಿ ಅಜಯ್ ನನ್ನೇ ನೋಡುತ್ತಿದ್ದ. ಮಗುವೊಂದಕ್ಕೆ ಮೊದಲ ಬಾರಿಗೆ ಜಾದೂವನ್ನು ತೋರಿಸಿದಂತೆ.

‘ಅಲ್ಲದೆ ಅದು ಯಾವುದೇ ಬಗೆಯ ಆತ್ಮಹತ್ಯೆಯಾಗಲಿ ಎಂತಹದ್ದು ಇಲ್ಲ! That was a pure Murder!’

'ಸತ್ತ್ತಿದ್ದು ದೀಪಕ್ ಮೆಹ್ತಾ ಎಂಬ ಪೊಲೀಸ್ ರಿಪೋರ್ಟ್ ಇದಿಯಲ್ರಿ'

'ಹೌದು ಸಾರ್, ಪೊಲೀಸ್ ರಿಪೋರ್ಟ್ ಹೇಳಿದ್ದ ಮಾತ್ರಕ್ಕೆ ಸತ್ಯ ಸುಳ್ಳಾಗೋದಿಲ್ಲ'

ಜಡ್ಜ್ 'ಆರ್ಡರ್ .. ಆರ್ಡರ್ ' ಎಂದ ನಂತರ ಅಜಯ್ ಮುಂದುವರೆಸಿ ತಾನು ಆ ದಿನ ರಾತ್ರಿ ಚೇರಿನ ಮೇಲೆ ಮಲಗಿ ತಡವಾದರಿಂದ ಆಫೀಸಿನಲ್ಲಿಯೇ ಕಳೆಯಬೇಕಾಗಿ ಬಂದು, ಹೊರಡುವ ಸಮಯಕ್ಕೆ ಆಕೃತಿಯೊಂದು ಭುಜಂಗರಾವಿನ ಕೋಣೆಯ ಒಳಗೆ ವಿಚಿತ್ರವಾಗಿ ಸದ್ದನು ಮಾತನಾಡುತ್ತಾ ಏನನ್ನೋ ಮಾಡುತ್ತಿರುವುದ ಕಾಣುತ್ತಾನೆಂದು ಹೇಳುತ್ತಾನೆ. ಮಾರನೇ ದಿನ ಅದು ಏನೆಂದು ತಿಳಿಯಲು ಇಂದೂ ಆ ಆಕೃತಿ ಬರಬಹುದೆಂಬ ಊಹೆಯ ಮೇರೆಗೆ ಒಂದೆರೆಡು ಸಣ್ಣ ಕ್ಯಾಮೆರಾ ಹಾಗು ಮೈಕ್ರೋಫೋನನ್ನು ಭುಜಂಗರಾವ್ ಬರುವ ಮೊದಲೇ ಆತನ ಕ್ಯಾಬಿನಲ್ಲಿ ಯಾರಿಗೂ ಕಾಣಿಸದಂತೆ ಅಳವಡಿಸುತ್ತಾನೆ.

ಕೆಲದಿನಗಳ ಹಿಂದೆ ಅವನ್ನು ತಂದು ತನ್ನ ಲ್ಯಾಪ್ಟಾಪ್ ಗೆ ಹಾಕಿ ನೋಡಿದಾಗ…..

ಆ ದಿನ ಬೆಳಗ್ಗೆ ಭುಜಂಗರಾವ್ ಆಫೀಸಿಗೆ ಬಂದ ಸ್ವಲ್ಪ ಸಮಯದಲ್ಲೆ ದೀಪಕ್ ಮೆಹ್ತಾ ಕೂಡ ಆಫೀಸಿಗೆ ಬರುತ್ತಾರೆ. ಆದರೆ ಬಂದ ದೀಪಕ್ ಕೂಡಲೇ ತನ್ನ ಮುಖದ ಮೇಲಿದ್ದ ಪೌಡರು ಮೆತ್ತಿದ್ದ ಚರ್ಮದ ಮುಖವಾಡವನ್ನು ತೆಗೆದು 'ಡ್ಯಾಡ್, ನನ್ನ್ ಕೈಯಲ್ಲಿ ಆಗಲ್ಲ.. ಇನ್ನು ಎಷ್ಟ್ ದಿನ ಅಂತ ಇದೆಲ್ಲ. ಬೇಗ ಅದೇನ್ ಡಾಕ್ಯುಮೆಂಟ್ಸ್ ಇದ್ದವೊ ಎಲ್ಲ ಮುಗ್ಸು..' ಎಂದು ಹೇಳಿದಾಗ ಭುಜಂಗ ರಾವ್, ದೀಪಕ್ ಮೆಹ್ತಾ ಫಾರಿನ್ ನಿಂದ ಬರಲು ಇನ್ನೂ ಸ್ವಲ್ಪ ದಿನ ಆಗುತ್ತೆ, ಬಂದ ದಿನವೇ ಆತನನ್ನು ಮುಗಿಸಬೇಕೆಂದು ಹೇಳುತ್ತಾನೆ. ನಂತರ ಆತನ ಹೆಣವನ್ನು ತಂದು ಆದರ ಥಂಬ್ ಇಂಪ್ರೆಷನ್ ಎಲ್ಲವನ್ನು ತೆಗೆದುಕೊಂಡು ಇಡೀ ಕಂಪನಿಯ ಮಾಲೀಕತ್ವವನ್ನು ತಮ್ಮದಾಗಿಸಿಕೊಂಡು ಆ ಹೆಣವನ್ನು ಆಫೀಸಿನ ಮೇಲ್ಚಾವಣಿಯಿಂದ ದಬ್ಬುವುದಾಗಿಯೂ ಹಾಗು ಅದು ಆತ್ಮಹತ್ಯೆ ಎಂಬುವಂತೆ ತೋರಿಸುವುದಾಗಿಯೂ ಸಂಚನ್ನು ರೂಪಿಸುತ್ತಾರೆ.

ಇತ್ತಕಡೆ ತಾನು ಹೇಳಿದ ದಿನಕ್ಕಿಂತ ಮೊದಲೇ ಬಂದ ದೀಪಕ್ ಹೋಟೆಲೊಂದರಲ್ಲಿ ಉಳಿದುಕೊಳ್ಳುತ್ತಾರೆ. ದಿನ ರಾತ್ರಿ ಆಫೀಸಿಗೆ ಬರುವುದು ಹಾಗು ದೀಪಕ್ ಮೆಹ್ತಾನ ಅಕೌಂಟ್ನಿಂದ Purchase Order ಗಳನ್ನು ಅನುಮೋದಿಸಿ ಅವನ್ನು ಮಾರಿ ಬಂದ ಹಣವನ್ನೂ ಕಂಪನಿಯ ಉದ್ಯೋಗಿಗಳಿಗೇ ಬೋನಸ್ ರೂಪದಲ್ಲಿ ನೀಡತೊಡಗುತ್ತಾರೆ. ನಿಖಿಲ್ ಹೇಗೆ ಸತ್ತನೋ I Dont know. ಅಂದು ನಿಖಿಲ್ ನ ಹೆಣ ಕೆಳಗ್ಗೆ ಬಿದ್ದ ಸಮಯಕ್ಕೆ ಸರಿಯಾಗಿ ಆಫೀಸಿಗೆ ಬಂದ ಬುಜಂಗ್ ರಾವ್ ಅದು ತನ್ನ ಸ್ವಂತ ಮಗನ ಹೆಣವೆಂಬುದನ್ನೂ ಅರಿಯದೇ ಪೊಲೀಸರನ್ನು ಒಳ ಕರೆದುಕೊಂಡು ಯಾವುದೇ ಇನ್ವೆಸ್ಟಿಗೇಷನ್ ಇಲ್ಲದೆಯೆ ಸ್ಯುಸೈಡ್ ಕೇಸಿನಲ್ಲಿ ವಿಚಾರಣೆಯನ್ನು ಮುಗಿಸಬೇಕೆಂದು ಒಪ್ಪಿಸುತ್ತಾನೆ. ಭುಜಂಗ್ ರಾವ್ ಹಾಗು ಮಗ ನಿಖಿಲ್ ಕೊಲೆಯ ಸಂಚನ್ನು ರೂಪಿಸಿದರ ಬಗ್ಗೆ ದೀಪಕ್ ಮೆಹ್ತಾಗೆ ಹೇಗೆ ತಿಳಿಯಿತೋ ನಾ ಕಾಣೆ. ಅಲ್ಲದೆ ದೀಪಕ್ ಮೆಹ್ತಾ ಕೂಡ ದಿನ ರಾತ್ರಿ ಬುಜಂಗ್ ರಾವಿನ ಚಿನ್ನದ ಅಂಗಡಿಗಳಿಗೆ ಮಾರುವೇಷದಲ್ಲಿ ತೆರಳಿ ಪ್ರತಿದಿನ ಚೂರು ಚೂರೇ ಚಿನ್ನದ ಪುಡಿಯಗಳನ್ನು ಕದ್ದು ಅದರಿಂದ ಗುಂಡೊಂದನ್ನು ತಯಾರಿಸಿದನ್ನು ತಾನು ಸ್ವತಃ ಅವರನ್ನು ಹಿಂಬಾಲಿಸಿ ರೆಕಾರ್ಡ್ ಮಾಡಿದ್ದಾಗಿಯೂ ಹಾಗು ನಿನ್ನೆ ಭುಜಂಗರಾವಿನ ತಲೆಯನ್ನೊಕ್ಕಿದ್ದು ಅದೇ ಚಿನ್ನದ ಗುಂಡೆಂದು ಹೇಳಿ ಅಜಯ್ ತನ್ನ ಬಳಿ ಇದ್ದ ಎಲ್ಲ ವಿಡಿಯೋ ಕ್ಲಿಪ್ ಗಳನ್ನು, ಇತರೆ ಸಾಕ್ಷಾಧಾರಗಳನ್ನು ಕೋರ್ಟಿನಲ್ಲಿ ಹಾಜರುಪಡಿಸುತ್ತಾನೆ.

ಅಲ್ಲಿಯವರೆಗೂ ಸುಮ್ಮನೆ ನಿಂತಿದ್ದ ದೀಪಕ್ ಮೆಹ್ತಾ ಕೂಡಲೇ ಕಟಕಟನೆ ಹಲ್ಲನ್ನು ಕಡಿಯ ಹತ್ತುತ್ತಾನೆ. ಚೂರಿ ಮಸೆಯುವಂತಹ ಆ ಭಯಂಕರ ಸದ್ದನ್ನು ಕೇಳಿದ ಜನರು ಅಕ್ಷರಸಹ ಕಲ್ಲಿನ ವಿಗ್ರಹವಾಗುತ್ತಾರೆ.

'Yes….!! ನಾನೇ ಆ ಬುಜಂಗನನ್ನು ಸಾಯಿಸಿದ್ದು !!' ಎಂದು ಭಯಂಕರವಾಗಿ ಚೀರಿದಾಗ ಜಡ್ಜ್ ಕೂಡ 'ಆರ್ಡರ್ .. ಆರ್ಡರ್' ಎಂದೇಳಿ ಆತನನ್ನು ಶಾಂತವಾಗಿಸುವುದನ್ನು ಮರೆತರು. ಇಡೀ ಕೋರ್ಟಿನ ಕೋಣೆಯೇ ಪ್ರತದ್ವನಿಸುವಂತಿದ್ದ ಆ ಸದ್ದನ್ನು ಕೇಳಿ ಹೊರಗಡೆಯಿದ್ದ ಜನರೂ ಒಳಬಂದು ಜಮಾವಣೆಗೊಳ್ಳತೊಡಗಿದರು.

'ಬ್ಲಡಿ ಭುಜಂಗ .. ನಮ್ಮ ಮನೆ ಅನ್ನ ತಿಂದು ನಮ್ಮ ಮನೆಗೇ ದ್ರೋಹ ಬಗೆದ Scoundrel.. ಇಪ್ಪತ್ತು ವರ್ಷದ ಹಿಂದೆ ನಾನು ಓದಲು ಹೊರದೇಶಕ್ಕೆ ಹೋದಾಗ ನಮ್ಮ ಮನೆಯ ಮ್ಯಾನೇಜರ್ ಆಗಿದ್ದ ಈತ ಸಿಗ್ನೇಚರ್ ಫೋರ್ಜರಿ ಮಾಡಿ ನಮ್ಮ ಮನೆ, ತೋಟ ಹಾಗು ಕಂಪನಿಯನ್ನೂ ತನ್ನ ಹೆಸರಿಗೆ ಮಾಡಿಕೊಂಡು, ಅಪ್ಪನನ್ನು ಕೊಂದು ಅಮ್ಮನಿಗೂ ಚೂರಿ ಹಾಕಿದ.. ಆ ನೋವಿನಲ್ಲೂ ಅಮ್ಮ ಮೈಕ್ ರೆಕಾರ್ಡರ್ ಅನ್ನು ಆನ್ ಮಾಡಿ ಎಲ್ಲ ವಿಷಯವನ್ನು ರೆಕಾರ್ಡ್ ಮಾಡಿ ಆ ಕ್ಯಾಸೆಟ್ ಅನ್ನು ಬಚ್ಚಿಟ್ಟಳು. ಆಕೆಯನ್ನು ಆಸ್ಪತ್ರೆಗೆ ಸೇರಿಸಲು ಪ್ರಯತ್ನಿಸಿದರೂ ಅದು ಪ್ರಯೋಜನವಾಗದೇ ಮಾರ್ಗ ಮಧ್ಯದಲ್ಲಿಯೇ ಆಕೆ ಕೊನೆಯುಸಿರೆಳೆದಳು. ಯಾರೊಬ್ಬರಿಗೂ ಆ ಕೊಲೆಯನ್ನು ಮಾಡಿದ್ದು ಭುಜಂಗನೇ ಎಂದು ತಿಳಿಯಲೇ ಇಲ್ಲ. ಅಪ್ಪಅಮ್ಮರ ಅಂತ್ಯ ಸಂಸ್ಕಾರಕ್ಕೆ ಬಂದು ಎದೆಬಡಿಕೊಂಡು ಅಳುತ್ತಿದ್ದ ನನಗೆ ಆ ಕ್ಯಾಸೆಟ್ ದೊರೆತರೂ ಅದನ್ನು ನಾನು ತಿಂಗಳುಗಳ ನಂತರ ವಿದೇಶಕ್ಕೆ ತೆರಳಿದ ಮೇಲೆಯೆ ಹಾಕಿ ಕೇಳಿದೆ. ಕೇಳಿ ರಕ್ತ ಕುದಿಯತೊಡಗಿತು. ಜೊತೆಗೆ ಅಮ್ಮನ ಕೊನೆಯ ಪದಗಳ ತೊದಲು ನುಡಿಗಳು. ದುಃಖ ಸಿಟ್ಟನ್ನು ಹುಟ್ಟುಹಾಕಿತು. ಆದರೆ ಸಿಟ್ಟು ಬೇಕಾಬಿಟ್ಟಿಯಾಗಿರದೆ ಗುರಿಯನ್ನು ಸ್ಪಷ್ಟವಾಗಿಸಿತು. ಆಗ ಒಂದು ವಿಷಯವನ್ನು ತೀರ್ಮಾನಿಸಿದೆ. ಇದನ್ನು ಪೊಲೀಸರಿಗೆ ತಿಳಿಸಿ ಆತನನ್ನು ಜೈಲಿಗೆ ಅಟ್ಟುವುದ ಬಿಟ್ಟು ಅಪ್ಪಅಮ್ಮರ ಮಗನಾಗಿ ಆತನನ್ನು ಕೊಂದೇ ನನ್ನ ಸೇಡನ್ನು ತೀರಿಸಿಕೊಳ್ಳುತ್ತೀನಿ ಹಾಗು ಅಪ್ಪ ಮಾಡಿಟ್ಟ ಅಷ್ಟೂ ಆಸ್ತಿಯನ್ನು ಹಾಗೆಯೆ ವಾಪಸ್ಸು ಪಡೆಯುತ್ತೀನಿ ಎಂದುಕೊಂಡು. ಅಂದು ಅಂತ್ಯಸಂಸ್ಕಾರಕ್ಕೆ ಹೋಗಿದ್ದಾಗ ತನ್ನ ಸ್ವಂತ ಪೋಷಕರನ್ನೇ ಕಳೆದುಕೊಂಡ ಮಕ್ಕಳಂತೆ ಅತ್ತು ನಟಿಸುತ್ತಿದ್ದ ಭುಜಂಗರಾವನ್ನು ಕಂಡು ಅಯ್ಯೋ ಎಂದುಕೊಂಡಿದ್ದೆ ಅಲ್ಲದೆ ಆತ ಹೇಳಿದ ಕಾಗದ ಪತ್ರಗಳೆಲ್ಲ ಮೇಲೆಯೂ ಸಹಿ ಹಾಕಿದೆ. ನಂತರವೇ ತಿಳಿದದ್ದು ಆತ ನಮ್ಮ ಅಷ್ಟೂ ಆಸ್ತಿಯ ಪಾಲುದಾರನಾಗಿದ್ದನೆಂದು ! ಆದರೆ ಆತ ಅದನ್ನು ಎಲ್ಲಿಯೂ ಹೇಳದೆ ಇಲ್ಲಿಯವರೆಗೂ ಗೌಪ್ಯವಾಗಿಟ್ಟುಕೊಂಡು ಬಂದಿದ್ದ. ಊರ ಆಸ್ತಿಗೆ ಮತ್ತೊಬ್ಬ ಮ್ಯಾನೇಜರ್ ಅನ್ನು ನೇಮಿಸಿ ಸಿಟಿಯ ಈ ಕಂಪನಿಯನ್ನು ತಾನೇ ಖುದ್ದಾಗಿ ನೆಡೆಸತೊಡಗಿದ. ನಾನೂ ಕಾದೆ. ಹತ್ತು ಕೋಟಿ ಬೆಲೆಬಾಳುವ ಕಂಪನಿಯಯನ್ನು ನೂರು ಕೋಟಿಗೆ ತಂದು ನಿಲ್ಲಿಸಿದ ಆತನ ಚತುರತೆಯನ್ನು ಮಾತ್ರ ಮೆಚ್ಚಲೇಬೇಕು. ನಾನು ಎಲ್ಲಿಯವರೆಗು ಬದುಕಿರುತ್ತೇನೆಯೋ ಅಲ್ಲಿಯವರೆಗೂ ಅರ್ಧ ಆಸ್ತಿಯ ಒಡೆಯನಾಗಿಯೇ ಇರದನ್ನು ಸಹಿಸಲಾರದ ಆತ ನನ್ನನ್ನು ಭಾರತಕ್ಕೆ ಕರೆಸಿ ಮುಗಿಸಿಬಿಡುವ ನಾಟಕವನ್ನು ಆಡುತ್ತಾನೆ. ಆದರೆ ನಾನು ಇಪ್ಪತ್ತು ವರ್ಷದಿಂದ ಈತನ ಒಂದೊಂದು ನಡೆಯನ್ನೂ ಕೂಲಂಕುಷವಾಗಿ ಗಮನಿಸಲು ಒಂದು ನೆಟ್ವರ್ಕ್ ಅನ್ನೇ ಸೃಷ್ಟಿಸಿಕೊಂಡಿದ್ದೆ. ಬೇಕಂತೆಲೆ ನನ್ನ ವಿದೇಶಿ ಬಿಸಿನೆಸ್ ನಷ್ಟಗೊಂಡಿದೆ ಎಂದು, ಸಾಲ ಹೆಚ್ಚಾಗಿ ಭಾರತಕ್ಕೆ ಮರಳುತ್ತಿದ್ದೇನೆಂದು ಹುಸಿ ಸುದ್ದಿಯನ್ನು ಹಬ್ಬಿಸಿದೆ. ಅದನ್ನು ನಂಬಿದ ಭುಜಂಗ ನಾನು ಬರುವ ದಿನದಂದೇ ನನ್ನನ್ನು ಮುಗಿಸುವ ಪ್ಲಾನನ್ನು ಮಗನೊಟ್ಟಿಗೆ ಸೇರಿ ಮಾಡಿಕೊಳ್ಳುತ್ತಾನೆ. ಆದರೆ ನಾನು ಬರುವ ಮೊದಲೇ ವಿದೇಶದಲ್ಲಿದ್ದ ಹೆಚ್ಚು ಕಡಿಮೆ ನನ್ನದೇ ವಯಸ್ಸಿನ ಆತನ ಮಗನನ್ನು ಕರೆಸಿ ಆತನಿಗೆ ನನ್ನನ್ನು ಹೋಲುವ ಮುಖವಾಡವನ್ನು ಹಾಕಿ ಪ್ರತಿದಿನ ಆಫೀಸಿಗೆ ಕರೆಸಿ ಆತನೇ ದೀಪಕ್ ಮೆಹ್ತಾ ಎಂದು ಎಲ್ಲರಲ್ಲೂ ನಂಬಿಕೆ ಹುಟ್ಟಿಸುತ್ತಾನೆ. ಅಂತಹ ಹತ್ತಾರು ನನ್ನನ್ನು ಹೋಲುವ ಮುಖವಾಡಗಳನ್ನು ಮಾಡಿಸಿ ಇಟ್ಟುಕೊಂಡಿರುತ್ತಾನೆ. ಹಾಗು ಬೋರ್ಡ್ ಮೀಟಿಂಗ್ ನಲ್ಲಿ ನಾನು ಕಂಪನಿಯ ಎಲ್ಲ ಷೇರನ್ನು ಮೆಹ್ತಾನಿಗೆ ಮಾರಿ ಹಣವನ್ನು ವಿದೇಶದಲ್ಲಿರುವ ಸಾಲವನ್ನು ತೀರಿಸಲು ವಿನಿಯೋಗಿಸುವುದಾಗಿ ಹೇಳಿಸುತ್ತಾನೆ. ಅಂತೆಯೇ ನನ್ನ ಸಹಿಯನ್ನು ನಕಲು ಮಾಡಿ ಕಾಗದ ಪತ್ರವನ್ನೆಲ್ಲವನ್ನೂ ತಯಾರಿಸಿದ. ಆಗ ಹೆಚ್ಚುಕಡಿಮೆ ಕಂಪನಿ ಭುಜಂಗಾರವಿನದ್ದೆ ಆಗಿದ್ದಿತು. ನಾನು ಬರುವ ದಿನ ಏರ್ಪೋರ್ಟಿನಿಂದ ರಾತ್ರಿಯೇ ಏನಾದರು ಕಾರಣ ಹೇಳಿ ಆಫೀಸಿಗೆ ಕರೆಸಿ, ಸಾಯಿಸಿ, ಮುಂದಕ್ಕೆ ಬೇಕಾಗುವ ಬೆರಳ ಗುರುತು ಇತ್ಯಾದಿಗಳೆಲ್ಲವನ್ನು ಕಾಗದ ಪತ್ರಗಳ ಮೇಲೆ ಹಾಕಿಸಿ ಕೊನೆಗೆ ಸತ್ತ ಹೆಣವನ್ನೇ ಕೆಳಗೆ ತಳ್ಳಿ ಆತ್ಮಹತ್ಯೆಯ ಪಟ್ಟಿಯನ್ನು ಕಟ್ಟುವುದು ಅವರುಗಳ ಪ್ಲಾನ್ ಆಗಿದ್ದಿತು! ಆದರೆ ನಾನು ಅದಾಗಲೇ ಭಾರತಕ್ಕೆ ಬಂದಿರುವುದಾಗಲಿ, ಹೋಟೆಲಿನಲ್ಲಿ ತಂಗಿ ಅವರನ್ನು ಇಂಚಿಂಚ್ಚು ನಡೆಯನ್ನು ಗಮನಿಸುತ್ತಿರುವುದಾಗಲಿ ಅವರಿಗೆ ತಿಳಿದಿರಲಿಲ್ಲ. ನಾನೇ ವೇಷಮರೆಸಿ ಪ್ರತಿದಿನ ಆಫೀಸಿಗೆ ರಾತ್ರಿಯ ಸಮಯದಲ್ಲಿ ನುಗ್ಗಿ ಭುಜಂಗನ ಕಂಪ್ಯೂಟರನ ಒಳಹೊಕ್ಕು ಅಷ್ಟೂ ದಾಖಲೆಗಳನ್ನು ನಕಲು ಮರುಸೃಷ್ಟಿಸಿದೆ. ಎಲ್ಲಿಯವರೆಗೂ ಎಂದರೆ ಇಂದು ಇಡೀ ಕಂಪನಿಯ ಒಡೆಯನ ಹೆಸರು ನನ್ನದೇ ಆಗಿದೆ. ಪಾಪ ಭುಜಂಗನಿಗೆ ಸಾಯುವಾಗಲೂ ಆ ವಿಷಯ ತಿಳಿಯಲಿಲ್ಲ ಎಂದು ಗಹಗಹನೇ ನಗುತ್ತಾನೆ.

ನಂತರ ಮುಂದುವರೆಸಿ, ನಮ್ಮ ತಂದೆ ಮಹಾ ತ್ಯಾಗಮಯಿ. ಅಂದು ತಿನ್ನಲು ಕೂಳಿಲ್ಲದೆ ಹಳ್ಳಿಯಲ್ಲಿ ಅಲೆಯುತ್ತಿದ್ದ ಭುಜಂಗನನ್ನು ಕರೆಸಿ ಕೆಲಸಕೊಟ್ಟು ಮ್ಯಾನೇಜರ್ನ ಹುದ್ದೆಯನ್ನು ಕೊಟ್ಟರೂ ತನ್ನ ನಾಯಿಬುದ್ಧಿಯನ್ನು ತೋರಿಸಿದ ಆತ. ಆದರಿಂದ ನಾನೇ ಖುದ್ದಾಗಿ ಕಂಪನಿಯ ಹಣದಲ್ಲೇ ಉದ್ಯೋಗಿಗಳಿಗೆ ಎರಡು ವರ್ಷದ ಬೋನಸ್ ಅನ್ನು ಒಮ್ಮೆಲೇ ಬರುವಂತೆ ಮಾಡಿದೆ.

ಅಂದು ನಾನು ವಿದೇಶದಿಂದ ಬರುತ್ತೇನೆ ಎಂಬುದನ್ನು ತಿಳಿಸಿ ಭೇಟಿಯಾಗೋಣ ಎಂದು ಕಳಿಸಿದ ಮೆಸೇಜ್ಗೆ ಸೀದಾ ಆಫೀಸ್ಸೆ ಹೋಗೋಣ ನಾನೇ ಪಿಕ್ ಮಾಡ್ತೀನಿ ಎಂದ ಭುಜಂಗನ ಮಗ. ಅಪ್ಪ ಸೇರಾದರೆ ಮಗ ಸವಾ ಸೇರು. ಕಾರಿನಲ್ಲೇ, 'ನೋಡ್ರಿ ನಮ್ಮಪ್ಪ ಕಷ್ಟ ಪಟ್ಟು ಮಾಡಿದ ಕಂಪನಿ ಇದು.. ಅವ್ರ್ ಇಲ್ದೆ ಇದ್ರೆ ಇಷ್ಟೆಲ್ಲಾ ಬೆಳೀತಾನೆ ಇರ್ತಿರ್ಲಿಲ್ಲ..' ಎನುತ ಪರೋಕ್ಷವಾಗಿ ಹೆದರಿಸತೊಡಗಿದ. ಅಂದುಕೊಂಡಂತೆಯೇ ಕೊಲ್ಲಲು ಸಿದ್ದವಾಗಿ ಬಂದಿದ್ದನಾತ! ರಾತ್ರಿ ಹತ್ತುವರೆಗೆ ಆಫೀಸಿಗೆ ಬಂದ ಕೂಡಲೇ ಗನ್ ಒಂದನ್ನು ತೆಗೆದು ನನ್ನ ಹಣೆಯ ಮೇಲಿಟ್ಟು ಟೇಬಲ್ಲಿನಲ್ಲಿದ ಕಾಗದ ಪತ್ರಗಳ ಮೇಲೆ ಸಹಿ ಮಾಡುವಂತೆ ಹೇಳಿದ. ಅಂತೆಯೇ ನಾನು ನನ್ನ ನಕಲಿ ಸಹಿಯನ್ನು ಮಾಡಿ ಇನ್ನೇನು ತಲೆಯೆತ್ತಬೇಕುವನ್ನುವಷ್ಟರಲ್ಲಿ ಆತನ ಗನ್ನನ್ನು ತಳ್ಳಿ ಆಣೆಯ ನೇರಕ್ಕೆ ಒಂದು ಬಲವಾದ ಗುದ್ದನು ಕೊಟ್ಟೆ. ಸೇಫ್ಟಿಗೆಂದು ತಂದಿದ್ದ ವಿಷ ಸಿಂಪಡಿಸಿದ ಕರ್ಚಿಫನ್ನು ಆತನ ಮೂಗಿನ ನೇರಕ್ಕೆ ಇರಿಸಿ ಪ್ರಜ್ಞೆ ತಪ್ಪಿಸಿದೆ. ಆದರೆ ವಿಷದ ಮತ್ತೊ ಅಥವ ಆತನ ಕೆಟ್ಟ ಗಳಿಗೆಯೋ ನಿಮಿಷಮಾತ್ರದಲ್ಲಿ ಆತನ ಪ್ರಾಣಪಕ್ಷಿ ಹಾರಿಹೋಯಿತು!! ಅಪ್ಪನನ್ನು ಸಾಯಿಸಲು ಹೋಗಿ ಮಗನನ್ನೇ ಪರಲೋಕಕ್ಕೆ ಕಳುಯಿಸಿದ ನನ್ನ ಎದೆ ನಡುಗತೊಡಗಿತು. ಕೆಲನಿಮಿಷಗಳಲ್ಲೇ ಇಹಸ್ಥಿತಿಗೆ ಬಂದ ನಾನು ಆತನ ಹೆಣವನ್ನು ಕಟ್ಟಿ ಊರೇ ಮಲಗಬಹುದಾದಷ್ಟು ದೊಡ್ಡದಾದ ಫ್ರಿಡ್ಜ್ ನ ಕೆಳ ಕಂಪಾರ್ಟ್ ಮೆಂಟ್ನ ಒಳಗೆ ತೂರಿಸಿ, ಗಟ್ಟಿಯಾದ ಕಲ್ಲಿನಂತೆ ಅಂಟುವ ಲಿಕ್ವಿಡ್ ನಿಂದ ನನ್ನದೇ ನಕಲಿ ಮುಖ ಚಹರೆಯನ್ನು ಆತನ ಮುಖಕ್ಕೆ ಅಂಟಿಸಿ ಫ್ರಿಡ್ಜ್ ನ ಕೀಲಿಯನ್ನು ಹಾಕಿದೆ.


ಆತನ ಮೊಬೈಲಿಂದ ಭುಜಂಗನಿಗೆ ಮೆಸೇಜ್ ಮಾಡಿದೆ.

Will be Continued...