Sunday, December 23, 2018

ಕನ್ನಡಿಗನೊಬ್ಬನ ಕ್ಲಾಸಿಕ್ ವಿಮಾನಗಳು ಆಗಸದಲ್ಲಿ ಹಾರುವುದನ್ನು ನೋಡಲು ಇನ್ನೆಷ್ಟು ದಶಕಗಳು ಕಾಯಬೇಕೋ?!

'ಈತ ನಮ್ಮ ನೂರು ಬಿಲಿಯನ್ ಕಂಪನಿಯ ಚೇರ್ಮ್ಯಾನ್. ಅಪ್ಪನ ಕಂಪನಿಯನ್ನು ಮುನ್ನೆಡಿಸಿಕೊಂಡು ಬಂದು ಎದ್ವಾ ತದ್ವಾ ಸಾಲವನ್ನು ಮಾಡಿ ತೀರಿಸಲಾಗದೆ ಇಂದು ವಿದೇಶದಲ್ಲಿ ಅಡಗಿ ಕೂತಿದ್ದಾನೆ. ಆತ ಮಾಡಿರುವ ಸಾಲದ ಮೊತ್ತ ಹೆಚ್ಚು ಕಡಿಮೆ ನಮ್ಮ ಇಡೀ ಕಂಪನಿಯ ರೆವೆನ್ಯೂ ಮೊತ್ತಕ್ಕೆ ಸಮ. ನಮ್ಮ ಕಂಪನಿಯನ್ನಷ್ಟೇ ಅಲ್ಲದೆ ನಮ್ಮನ್ನು ನಂಬಿಕೊಂಡು ಕೂತಿರುವ ಇನ್ನೂ ಹತ್ತಾರು ಕಂಪನಿಗಳ ಭವಿಷ್ಯದೊಟ್ಟಿಗೆ ಚೆಲ್ಲಾಡಿ ಮರೆಯಾದವನಿವ' ಎಂಬಮಾತುಗಳಿಗೆ ಪೂರಕವಾಗಿರುವ ಹಾಗು ಅದೇ ಪೇಜಿನಲ್ಲಿ ಕಂಪನಿಯ ಇತರ ಉದ್ಯೋಗಿಗಳನ್ನು Mr. ಅಥವ Mrs. ಎಂಬ ಗೌರವ ಸೂಚಕಗಳನ್ನು ಬಳಸಿ ಸಂಭೋದಿಸಿ ಆದರೆ ಕಂಪನಿಯ ಚೇರ್ಮ್ಯಾನ್ ನನ್ನು ಕೇವಲ ಹೆಸರಿನಿಂದಷ್ಟೇ ಕರೆಯುವ ಕಂಪನಿಯ ವೆಬ್ಸೈಟ್ ಅನ್ನು ಎಲ್ಲಿಯಾದರೂ ಕಂಡಿರುವಿರಾ? ಇಲ್ಲವಾದರೆ ಒಂದು ಕಾಲಕ್ಕೆ ಇಡೀ ವಿಶ್ವದಲ್ಲೇ ಟಾಪ್ ಸ್ಪಿರಿಟ್ ಕಂಪನಿಗಳಲ್ಲಿ ಒಂದಾಗಿ ಇಂದು ಅಕ್ಷರ ಸಹ ತನ್ನ ಉಳಿವಿಗಾಗಿ ಪರದಾಡುತ್ತಿರುವ ಯುಬಿ.ಗ್ರೋಪ್ಸ್ ನ ವೆಬ್ಸೈಟ್ ಗೆ ಒಮ್ಮೆ ಭೇಟಿ ಕೊಡಿ. ತನಗೆ ಅನ್ನ ಕೊಟ್ಟ ಒಡೆಯನಾದರೂ, ತಪ್ಪು ಮಾಡಿದಾಗ ಆತನನ್ನು ಕಳ್ಳನೆಂದೇ ಕರೆಯುತ್ತೀವಿ ಎಂಬಂತಿದ್ದೆ ಅಲ್ಲಿಯ ಬೋರ್ಡ್ ಆಫ್ ಡೈರೆಕ್ಟರ್ ಗಳ ಮಾತುಗಳು.

ಯುಬಿ.ಗ್ರೋಪ್ಸ್. ವಿಠ್ಠಲ್ ಮಲ್ಯರಿಂದ ಹಿರಿದಾಗುತ್ತಾ ಬೆಳೆದುಬಂದ ಮದ್ಯದ ಈ ಸಂಸ್ಥೆ ಎಂಬತ್ತರ ದಶಕದಷ್ಟೊತ್ತಿಗೆ ದೇಶದ ಅತ್ಯುನ್ನತ ಸ್ಪಿರಿಟ್ ಕಂಪೆನಿಗಳಲ್ಲಿ ಒಂದೆನಿಸಿಕೊಂಡಿತ್ತು. ತಾನು ಕಟ್ಟಿದ ಭವ್ಯ ಕೋಟೆಯನ್ನು ಇನ್ನೂ ಹಿರಿದಾಗಿಸುವ ಕನಸ್ಸು ವಿಠ್ಠಲ್ ಮಲ್ಯರದು. ಆ ಕನಸ್ಸಿನ ಮೂಲಬೇರು ತನ್ನ ಏಕೈಕ ಸುಪುತ್ರ. ವಿದೇಶದಲ್ಲೇ ನೆಲೆಯೂರಿದ್ದ ಆತನನ್ನು ಇಲ್ಲಿಗೆ ಕರೆತರುವ ಮೊದಲು ಆತನ ಚಿಗುರು ಮೀಸೆಯ ಕಾಲದಲ್ಲೇ ತನ್ನದಲ್ಲದ ಬೇರೊಂದು ಕಂಪನಿಯಲ್ಲಿ (Hoechst Corporation ) ಕೆಲಸಮಾಡಲು ಸೂಚಿಸುತ್ತಾರೆ. ಕಾರಣ ವ್ಯವಹಾರಗಳ ಹಾಗು ಮಾರುಕಟ್ಟೆಯ ಹಾಗುಹೋಗುಗಳ ತಿಳುವಳಿಕೆ. ಇದು ಒಬ್ಬ ಕೋಟ್ಯಧಿಪತಿ ಅಪ್ಪನಿಗೆ ಇರುವ ಸಹಜ ತುಮುಲಾ. ತಾನು ಬೆಳೆಸಿಕೊಂಡು ಬಂದ ಸಾಮ್ರ್ಯಾಜ್ಯವನ್ನು ಮುನ್ನೆಡೆಸಿಕೊಂಡು ಒಯ್ಯುವ ಒಬ್ಬ ಸಾರಥಿ ನನ್ನ ಮಗನಾದರೆ ಸಾಕೆಂದು ಅವರ ಆಶಯವಿತ್ತೇನೋ. ಆದರೆ ಇತ್ತಕಡೆ ಖಾಸಗಿ ಕಂಪನಿಯಲ್ಲಿ ಸಾಮಾನ್ಯ ನೌಕರನಾಗಿ (ಊಹೆಯಷ್ಟೇ!) ದುಡಿಯುತ್ತಿದ್ದ ಬಿಸಿರಕ್ತದ ಆ ಮಗನಿಗೆ ವಯೋಸಹಜವಾದ ಅದೇನೇ ಶೋಕಿಗಳಿದ್ದರೂ ಕಂಪನಿಯನ್ನು ವಿಶ್ವಮಟ್ಟದಲ್ಲಿ ಮಿಂಚುವಂತೆ ಮಾಡುವ ಮಹಾದಾಸೆಯಿದ್ದಿತು. ಅಂತೆಯೇ 1983 ರಲ್ಲಿ ವಿಠ್ಠಲ್ ಮಲ್ಯರ ಕಾಲವಾದ ನಂತರ ಸಂಸ್ಥೆಯ ಆಡಳಿತ ಚುಕ್ಕಾಣಿಯನ್ನು ಹಿಡಿದ ಮಗ ನೋಡ ನೋಡುತ್ತಲೇ ದೇಶವೇ ಬೆರಗಾಗುವಂತಹ ಸಾಮ್ರಾಜ್ಯನು ಕಟ್ಟಿದ. ಕೇವಲ ಸ್ಪಿರಿಟ್ ಉದ್ಯಮವೊಂದೇ ಅಲ್ಲದೆ, ಇಂಜಿನಿಯರಿಂಗ್, ಟ್ರೇಡಿಂಗ್, ಕೆಮಿಕಲ್ಸ್, ಫಾರ್ಮುಲಾ ಒನ್ ರೇಸ್, ಐಪಿಎಲ್, IT Consulting ನಂತಹ ಹತ್ತಾರು ವಲಯಗಳನ್ನು ಆಕ್ರಮಿಸಿಕೊಳ್ಳುತ್ತಾ, ನಷ್ಟ ಹೊಂದುತ್ತಿದ್ದ ಕೆಲ ಸಂಸ್ಥೆಗಳನ್ನು ಮಾರುತ್ತಾ, ಅಪ್ಪನಿಂದ ಬಂದ ಸಂಸ್ಥೆಯ ವಹಿವಾಟನ್ನು ಒಂದಲ್ಲ ಎರಡಲ್ಲ ಬರೋಬ್ಬರಿ 64% ನಷ್ಟು ಹೆಚ್ಚಿಸಿ ತೋರಿಸುತ್ತಾನೆ. ಅದೂ ಸಹ ಕೇವಲ 15 ವರ್ಷಗಳ ಅಂತರದೊಳಗೆ. ಮುಂದೆ ಯುಬಿ.ಗ್ರೋಪ್ಸ್ ಕೇವಲ ಸ್ಪಿರಿಟ್ ಸಂಸ್ಥೆಯಂದಷ್ಟೇ ಅಲ್ಲದೆ ದೇಶದ ಅತ್ಯುನ್ನತ ಸಂಘಟಿತ ಸಂಸ್ಥೆಗಳಲ್ಲಿ ಒಂದಾಯಿತು.

ಹೆಸರು ವಿಜಯ್ ವಿಠ್ಠಲ್ ಮಲ್ಯ. ಬ್ರಾಹ್ಮಣನೆಂಬ ಗರಿ ಹೆಸರಿಗೆ ಮಾತ್ರ. ಉಳಿದಂತೆ ಮನುಷ್ಯ ಏಕ್ದಂ ಮಾಸ್ ವಿಥ್ ಕ್ಲಾಸ್. ಆ ರಂಗು ರಂಗಿನ ಬಟ್ಟೆಗಳೇನು, ಕೋಟಿ ಬೆಲೆಬಾಳುವ ವಾಚು ಶೆಡ್ಗಳೇನು, ಕೈಯಲೊಂದು ಎಣ್ಣೆಯ ಬಾಟಲು, ಸೊಂಟದ ಪಕ್ಕಕೊಬ್ಬಳು ರಂಬೆಯಂತಹ ಬೆಡಗಿ. 'ಕಿಂಗ್ ಆಫ್ ಗುಡ್ ಟೈಮ್ಸ್' ಎಂಬ ಮಾತಿಗೆ ಪಕ್ಕಾ ಅನ್ವರ್ಥ ನಾಮವಾಗಿದ್ದಿತು ಆತನ ವಿಲಾಸಿ ಜೀವನ. Hopefully ಹೀಗಲೂ ಹೆಚ್ಚು ಕಡಿಮೆ ಹಾಗೆಯೆ ಇದೆ. ಆತ ತೆರೆಯ ಹಿಂದೆ ಅದೇನೇ ಮಾಡಲಿ, ಆದರೆ ಮಾರುಕಟ್ಟೆಯ ತೆರೆಯ ಮುಂದೆ ಆತನೊಬ್ಬ ಪಕ್ಕಾ ಬಿಸಿನೆಸ್ ಮ್ಯಾನ್. ಜನ ಯಾವುದನ್ನು ಆತನ ಶೋಕಿ ಎಂದು ಕರೆಯುತ್ತಿದರೋ ಅವುಗಳೆಲ್ಲವೂ ಇಂದು ವಿಶ್ವಪ್ರಖ್ಯಾತ ಬ್ರಾಂಡ್ ಗಳಾಗಿ ಕೋಟ್ಯಂತರ ಜನರ ಮನೆಮಾತಾಗಿವೆ. ಬ್ರಾಂಡ್ ಎಂಬ ಪದದ ನಿಜ ಅರ್ಥ ತಿಳಿದವರಿಗಷ್ಟೇ ಗೊತ್ತು ಒಂದು ಬ್ರಾಂಡನ್ನು ಕಟ್ಟುವುದೆಷ್ಟು ಕಷ್ಟವೆಂದು. ಈಗಂತೂ ಕಟ್ಟುವುದೆಂದರೆ ಪಂಚೆ ಉಡುವ ಮೇಸ್ಟ್ರಿಯೂ ಕಟ್ಟುತ್ತಾನೆ. ಆದರೆ ಕಟ್ಟಿದ ಆ ಬ್ರಾಂಡನು ಜಗತ್ತಿನ ಮೂಲೆ ಮೂಲೆ ಗಳ ಕೋಟಿ ಕೋಟಿ ಜನರ ನೆಚ್ಚಿನ ಪ್ರಾಡಕ್ಟ್ ಆಗಿ ಪರಿವರ್ತಿಸುವ ಕಾರ್ಯದಲ್ಲಿರುವ ಆ ಚಾಣಾಕ್ಷತನ ಕೇವಲ ಕುಡಿದು ತಿಂದು ತೇಗುವ ಡೊಳ್ಳೊಟ್ಟೆಗಳಿಗಳಿಗೆ ಬರುವಂತಹದಲ್ಲ. ಮಲ್ಯ ಈ ಮಾತಿಗೆ ಅಪವಾದ! ಅರ್ತಾಥ್ ಅಪ್ಪನಿಂದ ಬಳುವಳಿಯಾಗಿ ಪಡೆದ ಕೋಟೆಯೊಂದು ಇದ್ದಿದಂತೂ ನಿಜ. ಆದರೆ ಆ ಕೋಟೆಯನ್ನು ಸಾಮ್ರಾಜ್ಯವನ್ನಾಗಿ ಮಾಡಿ ತೋರಿಸಿದ ನಡೆಯಲ್ಲಿ ಆತನ ಮೋಜು ಮಸ್ತಿಯ ಆಟಗಳೆಲ್ಲವೂ ಗೌಣವಾಗುತ್ತವೆ. ಇಲ್ಲಿ ಮುಖದ ಮೇಲಿರುವ ಕಲೆಯೊಂದರಿಂದಷ್ಟೇ ಆ ವ್ಯಕ್ತಿತ್ವವನ್ನು ಅಳೆಯಾಲಾಗುತ್ತದೆಯೇ ವಿನಃ ಆದರ ಸುತ್ತಿರುವ ಆಕರ್ಷಕ ವ್ಯಕ್ತಿತ್ವದಿಂದಲ್ಲ.. ದೇಶವೆಂದರೆ ಟಾಟಾ, ಬಿರ್ಲಾ, ಅಂಬಾನಿ ಎಂದುಕೊಂಡವರಿಗೆ ಠಕ್ಕರ್ ಕೊಡುವ ಖಾಸಗಿ ಕಂಪನಿಯಾಗಿ ಯುಬಿ.ಗ್ರೋಪ್ಸ್ ಮಾರ್ಪಾಡಾಗತೊಡಗಿತು. ಅದು ಕೇವಲ ಕೊಟ್ಟು ಗಳಿಸುವ ವ್ಯವಹಾರವಷ್ಟೇ ಅಲ್ಲದೆ 'ವಾವ್' ಎಂಬ ಹ್ಯಾಪಿ ಫೀಡ್ಬ್ಯಾಕ್ ಗಳನ್ನು ಗ್ರಾಹಕರಿಂದ ಪಡೆಯುವ ಕಂಪೆನಿಯಾಯಿತು. ಎಲ್ಲ ಅಂದುಕೊಂಡಂತೆಯೇ ನೆಡೆಯುತ್ತಿತ್ತು. ಆಗ ಎಲ್ಲವೂ ಸರಿಯಾಗಿದ್ದಿತು.

ಅದು ವರ್ಷ 2003. ತನ್ನ ಬಹುವರ್ಷದ ಕನಸ್ಸೊಂದು ನನಸಾಗಿದ ದಿನವದು. ಮದ್ಯದ ಬಾಟಲಿಗಳ ಮೇಲೆ ಮೂಡಿ ಜಗತ್ಪ್ರಸಿದ್ದಿ ಹೊಂದಿದ ಅಕ್ಷರಗಳು ಈಗ ವಿಮಾನಯಾನ ವಲಯಕ್ಕೆ ಕಾಲಿರಿಸಿದವು. KFA (ಕಿಂಗ್ ಫಿಷರ್ ಏರ್ಲೈನ್ಸ್). ಆದರೆ ಸಂಸ್ಥೆ ತನ್ನ ವಿಮಾನವನ್ನು ಗಗನಕ್ಕೆ ಚಿಮ್ಮಿಸಲು ಬರೋಬ್ಬರಿ ಎರಡು ವರ್ಷ ಕಾಯಬೇಕಾಯಿತು. ಕೊನೆಗೂ ಮೇ 9, 2005 ರಲ್ಲಿ ಮುಂಬೈಯಿಂದ ಹೊರಟ Airbus A-320 ದೆಹಲಿ ವಿಮಾನ ನಿಲ್ದಾಣವನ್ನು ತಲುಪಿದಾಗ ಮಲ್ಯನ ಖುಷಿಗೆ ಪಾರವೇ ಇರಲಿಲ್ಲ. ಆದರೆ ಆ ಆಸಾಮಿಯ ಕನಸ್ಸು ಅಲ್ಲಿಗೆ ನಿಲ್ಲಲಿಲ್ಲ. ತನ್ನ ಕಂಪು ಬಿಳಿಪಿನ ಸೂಪರ್ ಕೂಲ್ ವಿಮಾನಗಳು ದೇಶವಿದೇಶಗಳ ನೆಲವನ್ನೂ ತಲುಪಬೇಕೆಂಬ ಮಹದಾಸೆ ಆತನದು. ಆದರೆ ನಮ್ಮ ದೇಶದ ಕಾನೂನಿನ ಪ್ರಕಾರ ಯಾವುದೇ ವಿಮಾನ ರಾಷ್ಟ್ರ ಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟಕ್ಕೆ ಹಾರಲು ಇಚ್ಛಿಸಿದರೆ ಆ ಸಂಸ್ಥೆಯ ಆಯುಷ್ಯ ಕಡಿಮೆ ಎಂದರೂ 5 ವರ್ಷಗಳಾಗಿರಬೇಕು.

ಮಲ್ಯ ಯೋಚಿಸಿದ. ಯೋಜಿಸಿದ. ಅದು ಬಡಜನರ ಏರ್ಲೈನ್ ಎಂದೇ ಪ್ರಸಿದ್ದಿ ಹೊಂದಿದ್ದ, ಸಾಮಾನ್ಯರಲ್ಲಿ ಅತಿ ಸಾಮನ್ಯನೊಬ್ಬನೂ ಮನಸ್ಸು ಮಾಡಿದರೆ ವಿಮಾನಯಾನ ಸಂಸ್ಥೆಯನ್ನೇ ಹುಟ್ಟುಹಾಕಬಹುದೆಂಬುದನ್ನು ತೋರಿಸಿಕೊಟ್ಟಿದ್ದ ಕ್ಯಾಪ್ಟನ್ ಗೋಪಿನಾಥ್ ರವರ ಡೆಕ್ಕನ್ ಏವಿಯೇಷನ್ ಸಂಸ್ಥೆ ನಷ್ಟದಲ್ಲಿ ಸಾಗುತ್ತಿದ್ದ ಕಾಲ. ಧುಬಾರಿ ತೈಲ ಬೆಲೆ ಹಾಗು ಅಷ್ಟೇ ಧುಬಾರಿಯಾದ ನಿರ್ವಹಣ ವೆಚ್ಚವನ್ನು ಭರಿಸಲಾಗದೆ ಕುಂಟುತ್ತಿದ್ದ ಡೆಕ್ಕನ್ ಏವಿಯೇಷನ್ ಮಲ್ಯನ ಕಣ್ಣಿಗೆ ಚಿನ್ನದ ಕೋಳಿಯಾಗಿ ಕಾಣತೊಡಗಿತು. ಕಾರಣ ಒಂದು ಪಕ್ಷ ತಾನೇನಾದರೂ ಆ ಸಂಸ್ಥೆಯ ಬಹುಪಾಲು ಷೇರನ್ನು ಖರೀದಿಸಿದರೆ ಅದಾಗಲೇ ಹತ್ತು ವರ್ಷಗಳನ್ನು ಪೂರೈಸಿದ್ದ ಡೆಕ್ಕನ್ ಏವಿಯೇಷನ್ ಕಿಂಗಫಿಶರ್ ಏರ್ಲೈನ್ಸ್ ನ ವಿಮಾನಗಳಿಗೆ ವಿದೇಶದ ಟಿಕೆಟ್ ಆಗಿ ಪರಿಣಮಿಸುತ್ತಿತ್ತು. ಹುಮ್ಮಸ್ಸಿನ ವಿಜಯ್ ಅಂದು ಹಿಂದೂ ಮುಂದೂ ನೋಡದೆ ಡೆಕ್ಕನ್ ಏವಿಯೇಷ ನ್ನಿನ 26% ಷೇರುಗಳನ್ನು ಖರೀದಿಸಿದ. ಕಿಂಗ್ ಫಿಷರ್ ಪರದೇಶದ ನೆಲವನ್ನೂ ಸ್ಪರ್ಶಿಸಿತು.

ಗುರಿಯೇನೋ ಸ್ಪಷ್ಟವಾಗಿದ್ದಿತು. ಆತನ ಆ ಸಾಧನೆ ಆತನೊಬ್ಬನದೇ ಅಲ್ಲದೆ ಇಡೀ ಕಂಪನಿಯನ್ನು, ಒಂದು ಕೋನದಲ್ಲಿ ದೇಶವನ್ನೂ ಹೆಮ್ಮೆ ಪಡುವಂತೆ ಮಾಡಿತ್ತು. ಆದರೆ ಈ ಬಾರಿ ಕಾಲ ಮಾತ್ರ ಕೈಕೊಟ್ಟಿತ್ತು. ವಿಮಾನಯಾನ ಶುರುವಾದ ಮೊದಲ ವರ್ಷದಿಂದಲೂ ಕೇವಲ ನೆಗೆಟಿವ್ ನಿವ್ವಳ ಲಾಭವಷ್ಟೇ ಕಂಪನಿಯ ಪಾಲಾಗತೊಡಗಿತು. ಒಂದು ಸಮಯದಲ್ಲಿ ದೇಶದ ಎರಡನೇ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾಗಿ ಬೆಳೆದರೂ ಗುಡ್ಡದಂತೆ ಬೆಳೆಯುತ್ತಿದ್ದ ನಷ್ಟವನ್ನು ಮಾತ್ರ ಯಾರೊಬ್ಬರಿಂದಲೂ ತಪ್ಪಿಸಲಾಗಲಿಲ್ಲ. ಸಂಸ್ಥೆಯ ಉಳಿವಿಗಾಗಿ ರಾಶಿ ರಾಶಿ ಸಾಲದ ಹೊರೆ. ಕಿಂಗ್ ಆಫ್ ಗುಡ್ ಟೈಮ್ಸ್ ನ ಬ್ಯಾಡ್ ಟೈಮ್ ಶುರುವಾಯಿತು.

ಮುಂದೆ ನೆಡೆದ ವಿಷಯಗಳೆಲ್ಲ ನಮ್ಮ ಮಾಧ್ಯಮಗಳು ನಮ್ಮೆಲ್ಲರ ತಲೆಯಲ್ಲಿ ಅಳಿಸದಂತೆ ಹಚ್ಚೋತ್ತಿವೆ. ಕಳ್ಳ, ಸುಳ್ಳ, ಮೋಸಗಾರ, ಬಂಡ, ಪುಕ್ಕಲ etc etc. ಅಲ್ಲಿಯವರೆಗೂ ತನ್ನ ಅಣ್ತಮ್ಮ ಎಂದು ಹೆಮ್ಮೆಯಿಂದ ಹೆಸರಿಸಿಕೊಳ್ಳುತ್ತಿದ್ದ ಪಕ್ಷಗಳೂ 'ನಂದಲ್ಲ ನಿಂದು, ನಿಂದಲ್ಲ ನಂದು' ಏನುತಾ ಕೆಸರಾಟವನ್ನು ಆಡತೊಡಗಿದವು. ಅತ್ತ ಕಡೆ ನೋಡಿದರೆ ಅಸಲಿನ ಮೇಲೆ ಬಡ್ಡಿಯ ತೂಕ ಹೆಚ್ಚಾಗತೊಡಗಿತು. ನೌಕರರಿಗೆ ತಿಂಗಳ ಸಂಬಳ ಕೊಡಲು ಹಣವಿರಲಿಲ್ಲ. ನೌಕರರು ಮುಷ್ಕರಕ್ಕೆ ಕೂತರು. ವಿಮಾನಗಳ ಹಾರಾಟ ಕ್ಷೀಣಿಸತೊಡಗಿತು. ಇತ್ತ ಕಡೆ ನೌಕರರು ಅತಂತ್ರರಾಗಿ ಪರದಾಡುತ್ತಿದ್ದರೆ ಅತ್ತ ಕಡೆ ಮಲ್ಯ ಕೋಟಿ ಕೋಟಿ ಹಣವನ್ನು ಐಪಿಎಲ್ ಹಾಗು ತನ್ನ ಬರ್ತ್ಡೇಯ ವಿಜೃಂಭಣೆಯಲ್ಲಿ ಸುರಿಯತೊಡಗಿದ. ಭವ್ಯ ಭಾರತದ MP ಯಾಗಿ ತನ್ನ ನೌಕರರನ್ನು ನಡುನೀರಿನಲ್ಲಿ ಬಿಟ್ಟು ಮೋಜು ಮಸ್ತಿ ಮಾಡಿದನ್ನು ಮಾತ್ರ ಯಾರು ಕೂಡ ಕ್ಷಮಿಸಲಾರರು. ಬಹುಷಃ ಇದೆ ಶಾಪ ‘ರಿಚರ್ಡ್ ಬ್ರಾನ್ಸನ್ ಆಫ್ ಇಂಡಿಯ’ ಎಂದೆನಿಸಿಕೊಂಡಿದ್ದ ಮಲ್ಯನನ್ನು ಬಲವಾಗಿ ತಟ್ಟಿರಬೇಕು.

ಸರಿ ಸುಮಾರು ಮೂರು ದಶಕಗಳ ತನ್ನ ಬಿಸಿನೆಸ್ ಮಂತ್ರವನ್ನು ಮಲ್ಯ ಕಿಂಗ್ಫಿಷರ್ ಏರ್ಲೈನ್ಸ್ ಅನ್ನು ಮುನ್ನೆಡುಸುವಲ್ಲಿ ಏಕೋ ಮರೆತಿದ್ದ. ಅಲ್ಲ ಸ್ವಾಮಿ, ಒಂದಲ್ಲ ಎರಡಲ್ಲ ಬರೋಬ್ಬರಿ 8 ವರ್ಷಗಳಾದರೂ ಒಂದು ನಯಾ ಪೈಸೆ ಲಾಭವನ್ನು ಸಂಸ್ಥೆ ಗಳಿಸುತ್ತಿಲ್ಲವೆಂದರೆ ಅಲ್ಲಿ ಏನೋ ತೊಡಕಿದೆ ಎಂದರ್ಥ. ಆಗ ಮಾಲೀಕನಾಗಿ ಸಂಸ್ಥೆಯ ಮಾಡೆಲ್ ಅಥವಾ ಸ್ಟ್ರಾಟರ್ಜಿಯನ್ನು ಬದಲಿಸುವುದ ಬಿಟ್ಟು ಮತ್ತೂ ರಾಶಿ ರಾಶಿ ಹಣವನ್ನು ತಂದು ಸುರಿಯತೊಡಗಿದರೆ ಏನಾದೀತು?. ಅದು ಬ್ಯಾಂಕುಗಳ ಮರ್ಮವೊ ಅಥವಾ ಕರ್ಮವೋ, ಇಂದಲ್ಲ ನಾಳೆ ಏರ್ಲೈನ್ಸ್ ನ ಟೈಮ್ ಬದಲಾಗುತ್ತದೆ ಎಂದು ಕಾದು ಕುಳಿತದಷ್ಟೇ ಬಂತು ಅವುಗಳ ಪಾಲಿಗೆ. ಆತನ ಸಾಲದ ಮೊತ್ತ ಸಚಿನ್ ತೆಂಡುಲ್ಕರ್ನ ರನ್ನುಗಳಂತೆ ಬೆಳೆಯುತ್ತಲೇ ಹೋಯಿತು. ಅತ್ತ ಕಡೆ ಸಚಿನ್ ರನ್ ಗಳ ರಾಶಿಯನ್ನು ಹೊತ್ತು ನೆಮ್ಮದಿಯಿಂದ ನಿವೃತ್ತಿ ಹೊಂದಿದರೆ ಇತ್ತ ಕಡೆ ಮಲ್ಯ ಸಾಲದ ಹೊರೆಯನ್ನು ಹೊರಲಾರದೆ ಏರ್ಲೈನ್ ಬಿಸಿನೆಸ್ ನಿಂದ ನಿವೃತ್ತಿ ಹೊಂದತೊಡಗಿದ.

ತಾನು ಕಟ್ಟಿ ಬೆಳೆಸಿದ ಸಂಸ್ಥೆ ಹುಟ್ಟಿಸಿದ ಮಕ್ಕಳಿಗಿಂತಲೂ ಬಲು ಹತ್ತಿರ. ಆದರಿಂದಲೇನೋ ಅಂದು ಇತರೆ ವಿದೇಶಿ ಏರ್ಲೈನ್ ಸಂಸ್ಥೆಗಳು KFA ಯನ್ನು ಖರೀದಿಸಲು ಬಂದಾಗಲೂ ಮಲ್ಯ ಒಂತಿಷ್ಟೂ ಮನಸು ಮಾಡಲಿಲ್ಲ. ಒಂದು ಪಕ್ಷ ಆತ ಸಂಸ್ಥೆಯನ್ನು ಮಾರಿ ಸುಮ್ಮನಾಗಿದ್ದರೂ ಸಾಲವೆಲ್ಲ ತೀರಿ ಇನ್ನೂ ರಾಶಿ ಕೋಟಿಗಳು ಆತನ ಬ್ಯಾಂಕಿನ ಖಾತೆಯಲ್ಲಿ ಉಳಿಯುತ್ತಿತೇನೋ. ಆದರೆ ಆತ ಸೋಲೊಪ್ಪಿಕೊಳ್ಳಲಿಲ್ಲ. ನಡೆ ತಪ್ಪಾಗಿದ್ದಿತು, ಆದರೆ ಗುರಿ ಸಂಸ್ಥೆಯನ್ನು ಉಳಿಸಿಕೊಳ್ಳುವುದಾಗಿದ್ದಿತು. ಸಾಲ ಮಾಡಿ ಮನೆ ಕಟ್ಟಿ ಕೊನೆಗೆ ಹಣಹೊಂದಿಸಲಾಗದೆ ಮನೆಯನ್ನೇ ಮಾರಬೇಕೆಂದಾಗ ಎದುರಾಗುವ ಸ್ಥಿತಿಯೇ ಅಂದು ಆತನದು. ಉದ್ಯಮಿಗಳಿಗೆ ತಮ್ಮ ಜೀವಮಾನದ ಒಂದಿಲ್ಲೊಂದು ಘಳಿಗೆಯಲ್ಲಿ ಈ ಸ್ಥಿತಿ ಎದುರಾಗುತ್ತದೆ. ಕನಸ್ಸು ಬಿತ್ತಿ ಕಟ್ಟಿದ ಮನೆಯನ್ನು ಮಾರಬೇಕೋ ಅಥವ ಬೇರೆ ದಾರಿ ಕಾಣದೆ ಮರುಗಬೇಕೋ ಆಗ ಅದರ ಉತ್ತರ ಮಾತ್ರ ಪ್ರರಿಸ್ಥಿತಿಯ ಹತ್ತಿರ! ಅಂದಹಾಗೆ ಮಲ್ಯ ವಿದೇಶಕ್ಕೆ ಹಾರಿ ಹೋದರೂ ಈ ವರ್ಷದ ಶುರುವಿನಲ್ಲಿ ಸುಮಾರು 6000 ಕೋಟಿ ರೂಪಾಯಿಗಳ ಸಾಲವನ್ನು ಮೊದಲ ಕಂತಿನಲ್ಲಿ ತೀರಿಸುವೆನು ಎಂದದ್ದೂ ಉಂಟು. ಆದರೆ ಬ್ಯಾಂಕುಗಳು ಕೇಳಲಿಲ್ಲ. ಕೊಟ್ಟರೆ ಅಸಲು ಬಡ್ಡಿ ಸಮೇತ ಎಲ್ಲವೂ ಬೇಕೆನುತ ಹಠಹಿಡಿದವು.

ಮೊನ್ನೆ ಮೊನ್ನೆಯಷ್ಟೇ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ 'ದಶಕಗಳಿಂದ ಸಾಲವನ್ನು ಮರುಪಾವತಿ ಮಾಡಿಕೊಂಡು ಬಂದು ಇಂದು ಬ್ಯುಸಿನೆಸ್ ನಲ್ಲಿ ನಷ್ಟವನ್ನು ಅನುಭವಿಸಿ ಸಾಲತೀರಿಸಲಾಗದಿದ್ದ ಮಾತ್ರಕ್ಕೆ ಅವರನ್ನು ಮೋಸಗಾರರು ಎಂಬುವುದು ತಪ್ಪಾಗುತ್ತದೆ' ಎಂದರು. ಇದೇ ಮಾತನ್ನು ಒಂದು ಪಕ್ಷ ಐದಾರು ವರ್ಷಗಳ ಹಿಂದೆ ದೇಶದ ಹೆಮ್ಮೆಯ ಪ್ರತೀಕವಾಗಿದ್ದ ವಿಮಾನಸಂಸ್ಥೆಯೊಂದು ಮುಚ್ಚುವಾಗ ಹೇಳಿದ್ದರೆ ಬಹುಶಃ ಚೆನ್ನಾಗಿರುತ್ತಿತ್ತು. ಅರ್ಥಪೂರ್ಣವಾಗಿರುತ್ತಿತು. ಅಲ್ಲ ಸರ್, ಇಂದು ಸರ್ಕಾರವೇ ತನ್ನ ಉಮೇದುವಾರಿಕೆಯಲ್ಲಿ ನೆಡೆಸುವ ದೇಶದ ಅತಿ ದೊಡ್ಡ ವಿಮಾನ ಸಂಸ್ಥೆಯೇ ಪ್ರತಿಕೂಲ ಮಾರುಕಟ್ಟೆಯ ಹೊಡೆತಕ್ಕೆ ಸಿಕ್ಕಿ ಡೋಲಾಯಮಾನವಾಗುವ ಸ್ಥಿತಿಯಲ್ಲಿರುವಾಗ ನಷ್ಟದಲ್ಲಿದ್ದ ಉದ್ಯಮಿಗಳ ಸಂಸ್ಥೆಗಳ ಕತೆ ಇನ್ನು ಹೇಗಿರಬಹುದು? ಕಿಂಗ್ ಫಿಷರ್ ಏರ್ಲೈನ್ಸ್ ಮುಚ್ಚಲು ಮಲ್ಯನ ಪೆದ್ದುತನ ಎಷ್ಟಿದ್ದಿತೋ ಅಷ್ಟೇ ಹುಂಬತನ ಸರ್ಕಾರದ್ದೂ ಇದ್ದಿತು. ಸಂಸ್ಥೆಯೊಂದನ್ನು ಮುಚ್ಚಿಸುವಾಗ ಸಿಗುವ ಖುಷಿ ಅದನ್ನು ಉಳಿಸಿ ಕೊಡುವುದರಿರಲಿಲ್ಲ. ಯಾರೋ ಮಾಡಿದ್ದ ತಪ್ಪಿಗೆ ಸರಕಾರವೇಕೆ ದಂಡ ತೆತ್ತಬೇಕು ಎಂಬ ಮಾತು ಸರಿಯೇ. ಆದರೆ ಮುಚ್ಚಿದ ಒಂದು ಬ್ರಾಂಡಿನ ಸರಿಸಮನಾದ ಮತ್ತೊಂದು ಬ್ರಾಂಡನ್ನು ಕಟ್ಟಲು, ಸಾವಿರಾರು ಜನರಿಗೆ, ದೇಶಕ್ಕೆ ಪರೋಕ್ಷವಾಗಿಯಾದರೂ ಆದಾಯವನ್ನು ಗಳಿಸಿಕೊಡುವ ಮತ್ತೊಂದು ಸಂಸ್ಥೆಯೊಂದನ್ನು ನಿಮಿಷಮಾತ್ರದಲ್ಲಿ ಕಟ್ಟಲ್ಲಂತೂ ಸಾಧ್ಯವೇ ಇಲ್ಲ. ಅದರಲ್ಲೂ ಕಿಂಗ್ ಫಿಷರ್ ಎಂಬ ಕನ್ನಡಿಗನೊಬ್ಬನ ಕ್ಲಾಸಿಕ್ ವಿಮಾನಗಳು ಆಗಸದಲ್ಲಿ ಹಾರಾಡುವುದನ್ನು ನೋಡಲು ಇನ್ನೆಷ್ಟು ದಶಕಗಳು ಬೇಕೋ ಯಾರು ಬಲ್ಲರು?


Saturday, December 15, 2018

820 ಗುಳಿಗೆಗಳನ್ನು ತಿನ್ನಿಸಿ ಪರಾರಿಯಾದ 420 ಅಮಾಯಕ!

ತಿಹಾರ್ ಜೈಲು. ಬಹುಷಃ ಈ ಹೆಸರನ್ನಿಂದು ಕೇಳಿರದವರಿರಲು ಸಾಧ್ಯವೇ ಇಲ್ಲ. ದೇಶ-ವಿದೇಶದ ಹೈ ಪ್ರೊಫೈಲ್ ನಟೋರಿಯಸ್ ಕ್ರಿಮಿನಲ್ ಗಳನ್ನು ಬಂಧಿಸುವ ಈ ಕಾರಾಗೃಹ ದೇಶದ ಅಷ್ಟೂ ಜೈಲುಗಳಲ್ಲಿಯೂ ಅತಿ ಹೆಚ್ಚಿನ ಭದ್ರತೆಯನ್ನೊಳಗೊಂಡ ಚಕ್ರವ್ಯೂಹವೆಂದೇ ಹೇಳಬಹುದು! ಅಪ್ಪಿ-ತಪ್ಪಿ ಒಂದು ಇಲಿಮರಿಯೂ ಸಹ ಒಳಹೊಕ್ಕರೆ ಹೊರಬಾರಲು ಪೇಚಾಡುವಂತಹ ಭದ್ರತೆಯ ಈ ಜೈಲಿನಿಂದ ಎಸ್ಕೇಪ್ ಆಗುವುದೆಂದರೆ ಆತ ಒಬ್ಬ ದೇವದೂತನಾಗಿರಬೇಕೇ ವಿನಃ ಸಾಮಾನ್ಯ ವ್ಯಕ್ತಿಯಾಗಿರಲಂತೂ ಸಾಧ್ಯವೇ ಇಲ್ಲ! ಆದರೂ, ಅಲ್ಲೊಬ್ಬಇಲ್ಲೊಬ್ಬ ಕೋಟಿಗೊಬ್ಬನಂತಹ ಕಿಲಾಡಿಗಳು ಇಲ್ಲೂ ಸಹ ತಮ್ಮ ಕೈಚಳಕವನ್ನು ತೋರಿ ಅಂತಹ ಭಾರಿ ಭದ್ರತೆಯ ಕೋಟೆಯನ್ನೇ ಮೀಟಿ ಪರಾರಿಯಾದದ್ದುಂಟು. ಇಂತಹ ಪ್ರತಿಭಾನ್ವಿತ ದೇಹದೂತರ ಕೆಲ ರೋಚಕ ಕತೆಗಳು ದೇಶದ ಇತಿಹಾಸದಲ್ಲಿ ಇಂದು ಹಚ್ಚಳಿಯಾಗಿ ಉಳಿದುಕೊಂಡಿವೆ. ಆ ಪ್ರತಿಭಾನ್ವಿತ ಕ್ರಿಮಿನಲ್ಗಳ ದೇಶೀ / ವಿದೇಶಿ ಕ್ಯಾರೆಕ್ಟರ್ ಗಳು ಇಂದು ದೇಶ ವಿದೇಶದ ಹಲವಾರು ಚಿತ್ರಗಳಲ್ಲಿ ನಾಯಕನಟರಾಗಿ ನಟಿಸಿ ಹಲವೆಡೆ 'ಸ್ಫೂರ್ತಿ'ದಾಯಕವೂ ಆಗಿವೆ ಎಂದರೆ ಅದು ನಮ್ಮೆಲ್ಲರ ವಿಪರ್ಯಾಸವೇ ಸರಿ!

ಹೆಸರು ಚಾರ್ಲ್ಸ್ ಶೋಭ್ರಾಜ್. ಸೈಕೋಪಾಥ್ , ಸೀರಿಯಲ್ ಕಮ್ ಬಿಕಿನಿ ಕಿಲ್ಲರ್, ವಂಚಕ, ದಿ ಸರ್ಪೆಂಟ್ , ಚತುರ ಸುಳ್ಳುಗಾರ ಹಾಗು ಒಬ್ಬ ಭಯಾನಕ ಎಸ್ಕೇಪಿಸ್ಟ್ etc etc ಎಂಬುದೆಲ್ಲ ಈತ ಕಷ್ಟಪಟ್ಟು ಗಳಿಸಿಕೊಂಡ ಅನ್ವರ್ಥನಾಮಗಳು! ವಿಯೆಟ್ನಾಂ ನಲ್ಲಿ ಹುಟ್ಟಿ ಫ್ರಾನ್ಸ್ನಲ್ಲಿ ಬೆಳೆದು, ತನ್ನ ಕುಕೃತ್ಯಗಳಿಂದ ವಿಶ್ವದಾದ್ಯಂತ ಪ್ರಸಿದ್ದಿ ಪಡೆದು ಸದ್ಯಕ್ಕೆ ನೇಪಾಳದ ಜೈಲಿನಲ್ಲಿ ಶಿಕ್ಷೆಯನ್ನನುಭವಿಸುತ್ತಿರುವ ಈತನ ಹೆಸರನ್ನು ಕೇಳಿದ್ದರೆ ಅಂದು ವಯಸ್ಸಿನ ಹುಡುಗಿಯರಷ್ಟೇ ಅಲ್ಲದೆ ಕಲ್ಲುಗುಂಡಿನಂತ ಪೊಲೀಸರೂ ಬೆಚ್ಚಿಬೀಳುತ್ತಿದ್ದರು. 1944 ರಲ್ಲಿ ಭಾರತೀಯ ಸಿಂಧಿ ಮೂಲದ ಅಪ್ಪನಿಗೆ (ಶೋಬ್ರಾಜ್) ಜನಿಸಿದ ಚಾರ್ಲ್ಸ್ ನ ಬಾಲ್ಯ ಇತರೆ ಎಲ್ಲ ಮಕ್ಕಳಂತಿರಲಿಲ್ಲ. ಈತನ ಅಮ್ಮನೊಟ್ಟಿಗೆ ಲಿವಿಂಗ್ ರಿಲೇಶನ್ಶಿಪ್ ನಲ್ಲಿದ್ದ ಅಪ್ಪ ಅದೊಂದು ದಿನ ಕುಟುಂಬವನ್ನು ಬಿಟ್ಟು ಬೇರೊಂದು ಸಂಸಾರವನ್ನು ಹೂಡಿದಾಗ ಚಾರ್ಲ್ಸ್ ಗೆ ಐದಾರು ವರ್ಷಗಳಿರಬಹುದು. ನಂತರ ಅಮ್ಮ ಮತ್ತೊಬ್ಬ ಬಾಯ್ ಫ್ರೆಂಡನ್ನು ಮಾಡಿಕೊಂಡು ಸುತ್ತತೊಡಗುವುದನ್ನು ನೋಡಿ ಸಹಿಸಲಾರದೆಯೋ ಅಥವಾ ಹೇಳುವವರು ಕೇಳುವವರಿಲ್ಲದಿದ್ದರಿಂದೇನೊ ಚಾಲ್ಸ್ ಮನಬಂದ ಕುಕೃತ್ಯಗಳನ್ನು ರಾಜಾರೋಷವಾಗಿ ಮಾಡತೊಡಗಿದ. ಅದು ಆತನ ಜೀವನದ ದಿಕ್ಕನ್ನೇ ಬುಡಮೇಲು ಮಾಡಿತು. ಪರಿಣಾಮ ಎಳೆಯ ವಯಸ್ಸಿನಲ್ಲಿಯೇ ಜೈಲು ಸೇರಿ ಶಿಕ್ಷೆಯನ್ನನುಭವಿಸುತ್ತಾನೆ. ಇಷ್ಟೆಲ್ಲದರ ನಡುವೆಯೂ ಆ ಹುಡುಗನಿಗೆ ಒಂದು ಹವ್ಯಾಸ ಮಾತ್ರ ವಿಪರೀವಾಗಿದ್ದಿತು. ಪುಸ್ತಕಗಳ ಓದು. ಎಲ್ಲ ಬಗೆಯ ಪುಸ್ತಕಗಳನ್ನು ಅದರಲ್ಲೂ ಮನಶಾಸ್ತ್ರದ ಬಗೆಗಿನ ಪುಸ್ತಕಗಳನ್ನು ಹೆಚ್ಚಾಗಿ ಓದುತ್ತಿದ್ದ ಚಾಲ್ಸ್ ತನ್ನ ಮುಂದಿರುವವರ ಗುಣನಡತೆ ಇಷ್ಟ ಕಷ್ಟಗಳಿಂದಿಡಿದು ಸೂಕ್ಷ್ಮತೆ ಹಾಗು ನ್ಯೂನ್ಯತೆಗಳೆಲ್ಲವನ್ನು ಕೂಡಲೇ ಅರಿತು ಅದಕ್ಕೆ ಪೂರಕವಾದೊಂದು ಏನಾದರು ತಂತ್ರವನ್ನು ಹೂಡಿ ಅವರ ವಿಶ್ವಾಸ ಗಿಟ್ಟಿಸಿಕೊಂಡು ಅವರಿಗೇ ದ್ರೋಹ ಬಗೆಯುವ ಕಲೆಯನ್ನು ನಿಧಾನವಾಗಿ ಈತ ಕರಗತಮಾಡತೊಡಗಿದ.

ಜೈಲಿನಿಂದ ಹೊರಬಂದ ಬಿಸಿರಕ್ತದ ಚಾಲ್ಸ್ ಕೋಟ್ಯಧಿಪತಿ ಕುಳಗಳೇ ತುಂಬಿ ತುಳುಕುತ್ತಿದ್ಧ ಫ್ರಾನ್ಸ್ ಗೆ ತೆರಳಿ ತಾನು ಅಲ್ಲಿಯವರೆಗೂ ಸಂಪಾದಿಸಿದ್ದ ಜ್ಞಾನವನ್ನೆಲ್ಲ ಧಾರೆಯೆರೆದು ವಿಶ್ವವನ್ನೇ ಲೂಟಿದ ಪ್ರೆಂಚರನ್ನು ನಿರಾಯಾಸವಾಗಿ ಲೂಟಿಮಾಡತೊಡಗುತ್ತಾನೆ. ಆದರೆ ಆತನ ಹಾವಳಿ ಹೆಚ್ಚು ಕಾಲ ನಡೆಯಲಿಲ್ಲ. ಅಲ್ಲಿನ ಪೊಲೀಸರಿಗಾಗಲೇ ಆ ಬಗ್ಗೆ ಸುಳಿವು ಸಿಕ್ಕು ಆತನನ್ನು ಹಿಡಿಯಲು ಬಲೆಯನ್ನು ಬೀಸುತ್ತಾರೆ. ಏತನ್ಮದ್ಯೆ ಪರ್ಷಿಯಾದ ಒಬ್ಬಾಕೆಯನ್ನು ಮದುವೆಯೂ ಆಗಿದ್ದ ಆತ ಪೊಲೀಸರಿಂದ ಸಂಸಾರ ಸಮೇತ ಪರಾರಿಯಾಗತೊಡಗಿದ. ಸಾಮನ್ಯದ ಕಳ್ಳಕಾಕರಾದರೆ ಸಿಟಿಯ ಅಥವಾ ಹಳ್ಳಿಯ ಅಲ್ಲೋ ಇಲ್ಲೋ ತಲೆಮರೆಸಿಕೊಂಡು ಕೆಲಕಾಲದ ನಂತರ ಹೊರಬಂದು ಬದುಕುತ್ತಿದ್ದರು. ಆದರೆ ಈ ಪ್ರಚಂಡ ವಂಚಕ ಮಾತ್ರ ತಾನು ಮಾಡಿರುವ ಕುಕೃತ್ಯಗಳ ಸಲುವಾಗಿಯೋ ಅಥವ ವಿಶ್ವವನ್ನೇ ದೋಚಿ ಮೆರೆಯುವ ಆಸೆಯಿಂದಲೋ ಏನೋ ಫ್ರಾನ್ಸ್ ಅನ್ನು ಬಿಟ್ಟು ಪರಾರಿಯಾದದ್ದು ಸೀದಾ ಮುಂಬೈಯಿಗೆ. ಪೋಲೀಸರ ಸರ್ಪಗಾವಲಿನಲ್ಲಿಯೂ ಅದೇಗೆ ಈತ ಎಸ್ಕೇಪ್ ಆತ ಎಂಬುದು ಆತನೊಬ್ಬನಿಗೆ ಮಾತ್ರ ಗೊತ್ತು! ಅದು 1970. ದೇಶದ ರಾಜಕೀಯ ಸ್ಥಿತಿ ಅಲ್ಲೊಲ್ಲ ಕಲ್ಲೋಲವಾಗುವ ಎಲ್ಲಾ ಮುನ್ಸೂಚನೆಗಳು ಮೂಡುತ್ತಿದ್ದ ಸಂಧಿಘ್ನ ಕಾಲ. ಮುಂಬೈಗೆ ಬಂದಿಳಿದ ಚಾಲ್ಸ್ ಕೆಲಸಮಯದಲ್ಲಿ ಹೆಣ್ಣುಮಗಳೊಬ್ಬಳ ತಂದೆಯೂ ಆಗುತ್ತಾನೆ. ಆದರೆ ಊರು ಬಿಟ್ಟ ಸಂಸಾರಿ ಹೊರ ಊರಿನಲ್ಲಿ ಕುಟುಂಬವನ್ನು ಪೊರೆಯುವದ ಬಿಟ್ಟು ಮತ್ತದೇ ದೋಚುವ ಚಾಳಿಗೆ ಮೈಯೊಡ್ಡುತ್ತಾನೆ. ಕ್ರಮೇಣವಾಗಿ ಆತನ ಪತ್ನಿಯೂ ಒಲ್ಲದ ಮನಸ್ಸಿನಿಂದ ಆತನ ದುಷ್ಕೃತ್ಯಗಳಿಗೆ ಸಾಥ್ ನೀಡಬೇಕಾಗುತ್ತದೆ. ಇನ್ನು 2008 ರಲ್ಲೇ ಮುಂಬೈಯ ಭದ್ರತೆ ಹಾಗಿರುವಾಗ ಮೂವತ್ತು-ನಲ್ವತ್ತು ವರ್ಷಗಳ ಹಿಂದೆ ಹೇಗಿದ್ದಿರಬಹದು?! ಚಾಲ್ಸ್ ನಂತ ಖದೀಮರಿಗೆ ಅದು ಸ್ವರ್ಗದ ತಾಣವಾಗಿದ್ದಿತೇನೋ. ಅಂತಹ ಸ್ವರ್ಗದಲ್ಲಿ ಸ್ಮಗ್ಲಿಂಗ್, ಗ್ಯಾಂಬ್ಲಿಂಗ್ ಹಾಗು ಟೂರಿಸ್ಟ್ ಗಳಾಗಿ ಬರುತ್ತಿದ್ದ ವಿದೇಶಿಗರನ್ನು ಲೂಟುತ್ತಿದ್ದ ಈ ಆಸಾಮಿ ಕೊನೆ ಕೊನೆಗೆ ಹಾಡ ಹಗಲೇ ಬ್ಯಾಂಕ್ಗಳ ದರೋಡೆಗೆ ಹ ಇಳಿಯುತ್ತಾನೆ. ಕೊನೆಗೂ ನಮ್ಮ ಪೊಲೀಸ್ ಮಹಾಶಯರ ಕೈಗೆ ಸಿಕ್ಕಿಕೊಂಡ ಈತ ಅಲ್ಲೂ ಸಹ ಪವಾಡಸದೃಶ್ಯ ರೀತಿಯಲ್ಲಿ ಪಾರಾಗುತ್ತಾನೆ. ನಂತರದ ಈತನ ಲೂಟಿಯಾತ್ರೆ ಉತ್ತರದ ಆಫ್ಘಾನಿಸ್ತಾನದೆಡೆಗೆ. ಕಾಬುಲ್ ನಲ್ಲಿ ಪ್ರವಾಸಿಗರ ವಿಪರೀತ ಲೂಟಿ ಕೂಡಲೇ ಅಲ್ಲಿನ ಅಧಿಕಾರಿಗಳನ್ನೂ ಜಾಗೃತಗೊಳಿಸಿತು. ಅಲ್ಲಿಯೂ ಸಿಕ್ಕಿಹಾಕಿಕೊಂಡ ಈತ ಮತ್ತೊಮ್ಮೆ ಅಧಿಕಾರಿಗಳಿಗೆ ಚಳ್ಳೆಹಣ್ಣನು ತಿನ್ನಿಸಿ ಇರಾನ್ ಗೆ ಪರಾರಿಯಾಗುತ್ತಾನೆ. ಆದರೆ ಈ ಬಾರಿ ಕೇವಲ ಜೈಲಿನಿಂದಷ್ಟೇ ಪರಾರಿಯಾಗುವುದಲ್ಲದೆ ತನ್ನ ಪುಟ್ಟ ಸಂಸಾರವನ್ನು ನಡುನೀರಿನಲ್ಲಿ ಬಿಟ್ಟು ಪಲಾಯನಗೈದಿರುತ್ತಾನೆ. ಕೆಲ ಸಮಯದ ನಂತರ ಅಣ್ಣನ ಹಿರಿಮೆಯ ಸುದ್ದಿಗೆ ಮನಸೋತು ಇದ್ದೂ ಸತ್ತಂತಿದ್ದ ಆತನ ತಮ್ಮ ಎಲ್ಲಿಂದಲೋ ಅಣ್ಣನನ್ನು ಅರಸಿಕೊಂಡು ಹೋಗಿ ಆತನ ಪಾದಾರವಿಂದಗಳಿಗೆರಗಿ ತನ್ನನೂ ಈ ಮಾರ್ವೆಲಸ್ ಬಿಸಿನೆಸ್ಗೆ ಸೇರಿಸಿಕೊಳ್ಳಬೇಕೆಂದು ಬೇಡಿಕೊಳ್ಳುತ್ತಾನೆ. ಅಣ್ಣ ತಥಾಸ್ತು ಎನ್ನುತ್ತಾನೆ! ಮುಂದೆ ಶುರುವಾದ ಅಣ್ಣ ತಮ್ಮಂದಿರ ಕೈಚಳಕ ಹೆಚ್ಚು ಕಡಿಮೆ ಅಷ್ಟೂ ಮಧ್ಯಪ್ರಾಚ್ಯಾದೇಶಗಳನ್ನು ಒಳಹೊಕ್ಕು ದೂರದ ಗ್ರೀಸ್ನ ವರೆಗೂ ವ್ಯಾಪಿಸುತ್ತದೆ. ಕೊನೆಗೆ ಸಹೋದರರ ಸವಾಲನ್ನು ಸ್ವೀಕರಿಸಿದ ಅಥೆನ್ಸ್ ನ ಅಧಿಕಾರಿಗಳು ಜೋಡಿಯನ್ನು ಹಿಡಿದು ಜೈಲಿನೊಳಗೆ ದಬ್ಬುತ್ತಾರೆ. ಆದರೆ ಅವರಿಗೇನು ಗೊತ್ತಿತ್ತು ತಾವು ಹಿಡಿದ ವ್ಯಕ್ತಿ ಕಟ್ಟಿ ಕೂರಿಸಲಾಗದ ಗಾಳಿಯಂತವನೆಂದು! ಅಲ್ಲಿನ ಅಧಿಕಾರಿಗಳೇ ಕಕ್ಕಾಬಿಕ್ಕಿಯಾಗುವಂತೆ ಅಣ್ಣ, ತಮ್ಮನ ಐಡೆಂಟಿಯನ್ನೇ ಬದಲಿಸುತ್ತಾನೆ. ಅರ್ಥಾತ್ ತಾನೇ ಸಣ್ಣವನೆಂದು ಹಾಗು ಅಸಲಿಯ ತಮ್ಮನೇ ಚಾರ್ಲ್ಸ್ ಎಂದು ಅಧಿಕಾರಿಗಳಿಗೆ ಮಣ್ಣು ಮುಕ್ಕಿಸುತ್ತಾನೆ. ಅದೂ ಸಹ ಒಂದು ಕಲೆ. ಒಟ್ಟಿನಲ್ಲಿ ಒಳಗಿದ್ದ ಆತನ ತಮ್ಮನಿಗೆ 18 ವರ್ಷದ ಕಾರಾಗೃಹ ಶಿಕ್ಷೆಯಾದಾಗಲೇ ಜಗತ್ತಿಗೆ ತಿಳಿದಿದ್ದು ಅಣ್ಣ ಚಾಲ್ಸ್ ಅದಾಗಲೇ ದೇಶವನ್ನು ಬಿಟ್ಟು ಪರಾರಿಯಾಗಿದ್ದನೆಂದು!

ದೇಶವಿದೇಶಗಳ ಹಲವಾರು ಭಾಷೆಗಳಲ್ಲಿ ನಿಪುಣನಾಗಿದ್ದ ಈತನ ಹೆಚ್ಚಿನ ಟಾರ್ಗೆಟ್ 20-25 ರ ವಯಸ್ಸಿನ ಪ್ರವಾಸಿ ಹುಡುಗಿಯರು. ತನ್ನ ಅಂದವಾದ ಮೈಮಾಟದಿಂದ ಹುಡುಗಿಯರನ್ನು ಸೆಳೆದು ಡ್ರಗ್ಸ್ ನ ನಶೆಯನ್ನು ಹತ್ತಿಸಿ ಅವರನ್ನು ಲೂಟಿ ಮಾಡುತ್ತಿದ್ದನಲ್ಲದೆ ವಿಚಿತ್ರ ರೀತಿಯಲ್ಲಿ ಅವರನ್ನು ಕೊಂದು ಸಾಯಿಸಿರುವುದೂ ಉಂಟು! ಎಪ್ಪತನೆ ದಶಕದ ಮೊದಲಾರ್ದದಲ್ಲೇ ಸುಮಾರು 15 ರಿಂದ 20 ಕೊಲೆಗಳನ್ನು ಮಾಡಿದ್ದ ಕೀರ್ತಿ ಈತನ ಹೆಸರಿನಲ್ಲಿದ್ದಿತು! ಡಜನ್ ಗಟ್ಟಲೆ ದೇಶಗಳಲ್ಲಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಎಂಬ ಪಟ್ಟವೂ ಈತನದೇ ಆಗಿದ್ದಿತು.

ಎತನ್ಮದ್ಯೆ 1976 ರಲ್ಲಿ ಈತ ಭಾರತದ ಅಧಿಕಾರಿಗಳ ಬಲೆಗೆ ಸಿಕ್ಕಿಹಾಕಿಕೊಳ್ಳುತ್ತಾನೆ. ಅದು ಪೊಲೀಸ್ ಅಧಿಕಾರಿಗಳು ಆತನಿಗಾಗಿ ಬೀಸಿದ ಬಲೆಯೊ ಅಥವ ಆತನೇ ತನಗಾಗಿ ರಚಿಸಿದ ತಂತ್ರವೋ, ಉತ್ತರ ಕಾಣಲು ಪೊಲೀಸರಿಗೆ ಎರಡು ದಶಕಗಳು ಬೇಕಾಯಿತು! ದೆಹಲಿಯ ಹೈ ಪ್ರೊಫೈಲ್ ಪಾರ್ಟಿಯೊಂದಲ್ಲಿ ನೆರೆದಿದ್ದ ಹಲವಾರು ಪ್ರೆಂಚ್ ಪ್ರಜೆಗಳಿಗೆ ಡ್ರಗ್ಸ್ ಕೊಟ್ಟು ಲೂಟಿಮಾಡಲು ಪ್ರಯತ್ನಿಸಿ ಪೊಲೀಸರಿಗೆ ಸಿಕ್ಕಿಹಾಕಿಕೊಂಡ ಈತ ತನ್ನ ಹಳೆಯ ಅಳಿದುಳಿದ ಕರ್ಮಕಾಂಡಗಳೆಲ್ಲದರ ಫಲವಾಗಿ ಬರೋಬ್ಬರಿ 11 ವರ್ಷ ಕಾರಾಗೃಹ ಶಿಕ್ಷೆಯನ್ನು ‘ವಿಧಿಸಿಕೊಳ್ಳುತ್ತಾನೆ’. ಅದಾಗಲೇ ಭಾರತದಲ್ಲಿ ಎರಡೆರಡು ಭಾರಿ ಜೈಲ್ ಬ್ರೇಕ್ಗಳ ಹೆಗ್ಗಳಿಕೆಗೆ ಹೆಸರುವಾಸಿಯಾಗಿದ್ದ ಈತನನ್ನು ಇಟ್ಟರೆ ತಿಹಾರ್ ಜೈಲೇ ಬೇಕೆಂದು ಅಧಿಕಾರಿಗಳು ಅಂದು ತೀರ್ಮಾನಿಸಿದರು. ಅಲ್ಲಿಗೆ 1976 ರಿಂದ 1986 ರ ವರೆಗಿನ ಜೈಲುವಾಸ ಆತನಿಗೆ ಫಿಕ್ಸ್ ಆಗುತ್ತದೆ. ಆದರೆ ಈ ಆಸಾಮಿಗೆ ತಿಹಾರ್ ಜೈಲುವಾಸ ಅದೆಷ್ಟು ಪ್ರಿಯವಾಗಿತೆಂದರೆ 1986 ರಿಂದ ಮತ್ತೂ 10 ವರ್ಷ ಅಲ್ಲೇ ಇರಬೇಕೆಂದು ತೀರ್ಮಾನಿಸುತ್ತಾನೆ! ದಿನ ಅದೇ ಕಂಬಿಗಳು, ಅದೇ ಗೋಡೆಗಳು, ಅದೇ ಪರಿಸರ ಮತ್ತದೇ ಊಟವನ್ನು ತಿಂದು ಜೀವನವೇ ನರಕವೆನಿಸುವ ಜೈಲಿನಂತಹ ಜಾಗದಲ್ಲೂ ದಶಕಗಳ ಕಾಲ ಜೀವನ ನೆಡೆಸಿ ಮತ್ತದೇ ಜಾಗಕ್ಕೆ ಬರಲಿಚ್ಛಿಸುವ ವ್ಯಕ್ತಿ ಹುಚ್ಚನೇ ಸರಿ. ಆದರೆ ಚಾಲ್ಸ್ ಒಂಥರಾ ಬುದ್ದಿವಂತ ಹುಚ್ಚ. ಆತನ ಈ ಎಕ್ಸ್ಟೆಂಡೆಡ್ ಜೈಲುವಾಸದ ಪ್ಲಾನ್ ಶತಾಯ ಗತಾಯ ಸಾಧಿಸಿಯೇ ತೀರಬೇಕಾಗಿರುತ್ತದೆ. ಕಾರಣ ಮಾತ್ರ ಬಹುಷಃ ಅಲ್ಲಿನ ಯಾರೊಬ್ಬರಿಗೂ ತಿಳಿದಿರಲು ಸಾಧ್ಯವಿಲ್ಲ! ಅದಕ್ಕಾಗಿ ಆತ ಮಾಡಿದ ಪ್ಲಾನ್ ಪ್ರಿಸನ್ ಬ್ರೇಕ್ ಅರ್ಥಾತ್ ಜೈಲಿನಿಂದ ಎಸ್ಕೇಪ್ ಆಗುವುದು! ಇಲ್ಲಿ ಕೊಂಚ ದ್ವಂದ್ವಕ್ಕೊಳಗಾಗುವುದು ಅತಿ ಸಹಜವೇ. ಆದರೆ ಮೊದಲೇ ಹೇಳಿದಂತೆ ಈತ ಬುದ್ದಿವಂತ ಹುಚ್ಚ.

ಇಡೀ ಭೂಮಂಡಲವನ್ನೇ ತನ್ನ ಕ್ರೈಂ ಅಡ್ಡವಾಗಿಸಿಕೊಂಡಿದ್ದ ಈತನಿಗೆ ಹೊದಡೆಯಲ್ಲ ಪೋಲೀಸರ ಹಾಗು ಕೋರ್ಟುಗಳ ‘ರಾಜಾತಿಥ್ಯ’ ದೊರೆಯುತ್ತಿತ್ತು. ಹಾಗೆಯೆ ಥೈಲ್ಯಾಂಡಿನ ಸರ್ಕಾರ ಕೊಲೆ ಕೇಸೊಂದರಲ್ಲಿ ಈತನನ್ನು ವಿಚಾರಣೆಗೊಳಿಸಬೇಕಿತ್ತು. ಒಂದು ವೇಳೆ ಈತನ ವಿರುದ್ದದ ಅಲ್ಲಿಯ ಅಪರಾದಗಳೆಲ್ಲ ಸಾಬೀತಾದಾರೆ ಅಲ್ಲಿನ ಸರ್ಕಾರ ಈತನಿಗೆ ಮರಣದಂಡಣೆಯನ್ನು ನೀಡಿದರೂ ಆಶ್ಚರ್ಯಪಡಬೇಕಾಗಿರಲಿಲ್ಲ. ಆದರೆ ಆ ದೇಶದಲ್ಲಿ ಒಂದು ಕಾನೂನಿದೆ. ಒಂದು ವೇಳೆ ಕೇಸೊಂದರ ಕುರಿತು ಅಧಿಕಾರಿಗಳು ಮೂಲ ಅಪರಾಧಿಯನ್ನು 20 ವರ್ಷಗಳ ಒಳಗೆ ವಿಚಾರಣೆಗೆ ಒಳಪಡಿಸದಿದ್ದರೆ, ಅಥವ ಆ ಕೇಸಿನ ಬಗ್ಗೆ ಒಂದಿಷ್ಟೂ ವಿಚಾರಣೆ ನೆಡೆಯದಿದ್ದರೆ ಆ ಕೇಸನ್ನು ಮುಚ್ಚಿಹಾಕಲಾಗುತ್ತದೆ. ಎಲ್ಲವನ್ನೂ ಪಕ್ಕ ಲೆಕ್ಕಾಚಾರದಲ್ಲಿ ಮಾಡುವ ಚಾರ್ಲ್ಸ್ ಈ ವಿಷಯವನ್ನು ಚೆನ್ನಾಗಿ ಅರಿತಿದ್ದ. 1975 ರಲ್ಲಿ ಆರಂಭವಾದ ಆ ಕೇಸು ಒಂದು ವೇಳೆ 1995ರ ವರೆಗೂ ಯಾವುದೇ ಆಂತ್ಯವನ್ನು ಕಾಣದಿದ್ದರೆ ಅದು ಮುಚ್ಚಲ್ಪಡುತ್ತಿತ್ತು. ಅದಾಗಲೇ ಹನ್ನೊಂದು ವರ್ಷಗಳ ಜೈಲುವಾಸವನ್ನು ಅನುಭವಿಸದ ಚಾಲ್ಸ್ ನಮ್ಮ ದೇಶದ ಅಧಿಕಾರಿಗಳು ಆತನನ್ನು ಥೈಲ್ಯಾಂಡಿನ ಅಧಿಕಾರಿಗಳಿಗೆ ವರ್ಗಾವಣೆ ಮಾಡುವ ಮೊದಲೇ ಈತ ಭಾರತದಲ್ಲೇ ಮತ್ತೊಂದು ಕ್ರೈಂ ಅನ್ನು ಮಾಡಬೇಕು ಹಾಗು ಅದರ ಶಿಕ್ಷೆಯ ಅವಧಿ ಕನಿಷ್ಠ ಹತ್ತು ವರ್ಷಕ್ಕೂ ಮಿಗಿಲಾಗಿರಬೇಕು! ಜೈಲಿನಲ್ಲಿದ್ದೇ ಮತ್ತೆ ಜೈಲು ಸೇರುವ ಸಾಹಸವನ್ನು ಮಾಡಬೇಕೆಂದರೆ ಇರುವ ಒಂದೇ ಉಪಾಯ ಜೈಲಿನಿಂದ ಕದ್ದು ಓಡುವುದು ಹಾಗು ಕೆಲದಿನಗಳ ನಂತರ ಪುನಃ ಪೊಲೀಸರಿಗೆ ಸಿಕ್ಕಿಹಾಕಿಕೊಳ್ಳುವುದು. ಕ್ರಿಮಿನಲ್ ಮೈಂಡ್ ಎಂದರೆ ಇದಕ್ಕೆ ಹೇಳುವುದೇನೋ. ಹೀಗೆ ಮಾರ್ಚ್ 16, 1986 ರ ರಾತ್ರಿ ಏಷ್ಯಾದಲ್ಲೇ ಅತಿ ಹೆಚ್ಚಿನ ಭದ್ರತೆಯ ಜೈಲೊಂದರಿಂದ ಪುಟಗೋಸಿಯಂತಿದ್ದ ಚಾರ್ಲ್ಸ್ ಓಟ ಕಿತ್ತಿರುತ್ತಾನೆ. ಆದರೆ ಅಂತಹ ಭದ್ರತೆಯ ಜೈಲಿಂದ ನೈಟ್ ವಾಕಿಗೆ ಹೋಗುವಂತೆ ನಿರಾಯಾಸವಾಗಿ ಈತ ಹೊರಬಂದಿದ್ದಾದರೂ ಹೇಗೆ?!

ಜೈಲೆಂದರೆ ಹೆಚ್ಚಾಗಿ ಪಾಪಿ ಜೀವಗಳೇ ತುಂಬಿ ತುಳುಕುವ ಭಯಾನಕ ಅಡ್ಡ. ಅಂತಹ ಜಾಗದಲ್ಲಿ ಹುಟ್ಟು ಗುಣ ಸತ್ತರೂ ಹೋಗದಂತಹ ಅಸಾಮಿಗಳನ್ನೇನು ಹುಡುಕುವುದು ಕಷ್ಟವೇ? ಇದನ್ನು ಅರಿತಿದ್ದ ಚಾರ್ಲ್ಸ್ , ಜೈಲಿನೊಗಳೇ ಡ್ರಗ್ಸ್ ಸಾಗಾಣಿಕೆಯಿಂದ ಸಿಕ್ಕಿಬಿದ್ದು ಕೊಳೆಯುತ್ತಿದ್ದ ಬಿಳಿಯನೊಬ್ಬನ ಪರಿಚಯವನ್ನು ಮಾಡಿಕೊಳ್ಳುತ್ತಾನೆ. ಹೆಸರು ಡೇವಿಡ್ ಹಾಲ್. ಮೊದಲೇ ಪಕ್ಕ ಮನಶಾಸ್ತ್ರವನ್ನು ಅರೆದು ಕುಡಿದವನಾಗಿದ್ದ ಚಾರ್ಲ್ಸ್ ಡೇವಿಡ್ ನ ಸಂಪೂರ್ಣ ಗುಣನಡತೆಯನ್ನು ತಿಳಿಯುತ್ತಾನೆ. ಎಲ್ಲೆಲ್ಲಿ ಆತನ ವೀಕ್ ಪಾಯಿಂಟ್ ಗಳಿದ್ದವೊ ಅಲ್ಲೆಲ್ಲ ತನ್ನ ನರಿ ಬುದ್ದಿಯನ್ನು ಬಳಸಿ ಆತನನ್ನು ಒಂತರ ಎಮೋಷನಲ್ ಬ್ಲಾಕ್ ಮೇಲ್ಗೆ ಒಳಪಡಿಸುತ್ತಾನೆ. ಕೆಲ ಸಮಯದ ನಂತರ ಆತನನ್ನು ತನ್ನ ಆಟಿಕೆಯಂತಾಗಿ ಮಾಡಿಕೊಂಡು ಮೊದಲು ಆತನನ್ನು ಜೈಲಿನಿಂದ ಹೊರಕಳಿಸಿ ನಂತರ ಅವನ ಮೂಲಕ ತನ್ನ ಕಾರ್ಯವನ್ನು ಸಿದ್ಧಿಸಿಕೊಳ್ಳುವ ಪ್ಲಾನ್ ಈತನದ್ದು. ಡೇವಿಡ್ ಎಂಬ ಮಂಕನೂ ಈತನ ಮಾತಿಗೆ ಬೆಲೆಕೊಟ್ಟು ಹೇಳಿದಂತೆಯೇ ನೆಡೆದುಕೊಳ್ಳುತ್ತಾನೆ. ಅದೇಗೆ ಮಾನವನ ಅಂಗಾಗಗಳ ಬಗ್ಗೆ ತಿಳಿದಿದ್ದನೋ ಏನೋ ಆಸ್ಪತ್ರೆಗೆ ಬಂದ ಡಾಕ್ಟರ್ ರಿಂದಲೇ ಡೇವಿಡ್ ಗೆ ಕಿಡ್ನಿ ಸಮಸ್ಯೆ ಇದೆ ಎಂದು ನಂಬುವಂತೆ ಮಾಡಿ ಅವರಿಂದಲೇ ಈತನನ್ನು ಜಾಮೀನಿನ ಮೇಲೆ ಬಿಡುವಂತೆ ಮಾಡುತ್ತಾನೆ ಚಾರ್ಲ್ಸ್! ಜೈಲಿನಿಂದ ಹೊರಬಂದ ಡೇವಿಡ್ ಸೀದಾ ತನ್ನ ದೇಶದ ವಿಮಾನವನ್ನು ಹತ್ತುವುದನ್ನು ಬಿಟ್ಟು ಕೀಲುಗೊಂಬೆಯಂತೆ ಚಾಲ್ಸ್ ನ ಎಸ್ಕೇಪ್ ಪ್ಲಾನ್ ಗೆ ಕಾರ್ಯೋನ್ಮುಖನಾಗುತ್ತಾನೆ.

ಅದಕ್ಕಾಗಿ ಬೇಕಾಗಿದ್ದ ಜನರನ್ನು ಉಪಕರಣಗಳನ್ನು ಡೇವಿಡ್ ಒಟ್ಟುಗೂಡಿಸತೊಡಗುತ್ತಾನೆ. ಇತ್ತ ಕಡೆ ಖದೀಮ ಚಾರ್ಲ್ಸ್ ಜೈಲಿನೊಳಗೇ ಇನ್ನೂ ಮೂವರ ಗುಂಪೊಂದನ್ನು ಕಟ್ಟಿಕೊಂಡು, ಅವರನ್ನೂ ಜೈಲಿನಿಂದ ಪರಾರಿಯಾಗಿಸುವ ಮಾತನ್ನು ಕೊಟ್ಟು ಅವರ ಮೂಲಕ ಡೇವಿಡ್ ಗೆ ಪ್ರಿಸನ್ ಬ್ರೇಕ್ ನ ಬಗ್ಗೆ ನಿರ್ದೇಶನವನ್ನು ನೀಡುತ್ತಿರುತ್ತಾನೆ. ಇವೆಲ್ಲ ಈತನ ಪ್ಲಾನ್ ಬಿ. ಆತನ ಪ್ಲಾನ್ ಎ ಬೇರೆಯೇ ಇರುತ್ತದೆ! ಅಲ್ಲದೆ ಅದು ಸಿಕ್ಕಾಬಟ್ಟೆ 'ಸ್ವೀಟ್' ಹಾಗು ವೆರಿ ವೆರಿ ಸಿಂಪಲ್ ಕೂಡ ಆಗಿರುತ್ತದೆ. ಎಸ್ಕೇಪ್ ಪ್ಲಾನಿನ ಕೆಲವು ತಿಂಗಳುಗಳ ಮೊದಲಿಂದಲೇ ಇಲ್ಲಸಲ್ಲದ ಕಾರಣಗಳನ್ನು ಹೇಳಿ ತಿಂಡಿ ಹಣ್ಣುಗಳನ್ನು ತರಿಸಿ ಜೈಲಿನವರಿಗೆಲ್ಲವೂ ಸಾಕೆನಿಸುವಷ್ಟು ಹಂಚುತ್ತಿದ್ದ ಚಾರ್ಲ್ಸ್. ಅಂದ ಹಾಗೆ ಈತ ಆ ಕಾಲದ ದಿ ಮೋಸ್ಟ್ ರಿಚ್ಚೆಸ್ಟ್ ಕ್ರಿಮಿನಲ್! ತನ್ನ ಬಗೆಗೆ ಪುಸ್ತಕ ಬರೆಯುವರಿಗೆ, ಚಲನಚಿತ್ರಗಳನ್ನು ಮಾಡುವವರಿಗೆ, ಇಂಟರ್ವ್ಯೂ ಮಾಡಲು ಬರುವ ಟಿವಿ ಚಾನೆಲ್ ಗಳಿಗೆ ಎರ್ರಾಬಿರಿ ಚಾರ್ಜ್ ಮಾಡುತ್ತಿದ್ದ ಚಾರ್ಲ್ಸ್ ಆಗಿನ ಕಾಲಕ್ಕೆ ಒಬ್ಬ ಕೋಟ್ಯಧಿಪತಿ. ಮೇಲಾಗಿ ದೊಡ್ಡ ದೊಡ್ಡ ಕುಳಗಳನೆಲ್ಲ ದೋಚಿ ಈತ ಮಾಡಿಟ್ಟಿರುವ ಹಣವೇ ಎಷ್ಟಿದೆಯೆಂದು ಇಂದಿಗೂ ಸಹ ಯಾರಿಗೂ ತಿಳಿದಿಲ್ಲ. ಒಟ್ಟಿನಲ್ಲಿ ಅನಾಮಿಕವಾಗಿದ್ದ ತನ್ನ ಅಕೌಂಟಿನಿಂದ ಈ ಎಲ್ಲ ಕಾರುಬಾರುಗಳು ಈತನಿಗೆ ಜೈಲಿನೊಳಗಿಂದಲೇ ಸಾದ್ಯವಾಗುತ್ತಿದ್ದವು. ಮಾರ್ಚ್ 16 ರ ಭಾನುವಾರ ತನ್ನ ಹುಟ್ಟುಹಬ್ಬವೆಂದು ಭರ್ಫಿ ಹಾಗು ದ್ರಾಕ್ಷಿಯನ್ನು ತರಿಸಿದ ಈತ ಎಲ್ಲರಿಗೂ ಬಾಯಿ ತುಂಬುವಷ್ಟು ನೀಡಿ ಖುಷಿಪಡತೊಡಗಿದ. ಜೈಲಿನ ಗಾರ್ಡುಗಳೂ ಯಾವುದೇ ಸಂಶಯವಿಲ್ಲದೆ ಆತ ನೀಡಿದ ಸಿಹಿಯನ್ನು ತಿಂದು ತೇಗಿದರು. ಆದರೆ ಆ ತೇಗು ಸಾಮನ್ಯದ ತೇಗಾಗಿರಲಿಲ್ಲ. ತಿಂದ ಕೆಲ ಹೊತ್ತಿನಲ್ಲಿಯೇ ಎಲ್ಲಿಲ್ಲದ ನಿದ್ರೆ ಅವರನ್ನು ಆವರಿಸತೊಡಗಿತು. ಕಾರಣ ಈತ 'ಲಾರ್ಪೊಸ್' ಎಂಬ ನಿದ್ರೆ ಮಾತ್ರೆಯ ಒಟ್ಟು 820 ಸಣ್ಣ ಸಣ್ಣ ಗುಳಿಗೆಗಳನ್ನು ಆ ಸಿಹಿಗಳಲ್ಲಿ ಸೇರಿಸಿದ್ದನ್ನು! ತಿಂದು ನಿದ್ರೆಹೋಗುವುದು ಹಾಗಿರಲಿ ಬಹುಷಃ ಆ ಮಟ್ಟಿನ ಡೋಸ್ಗೆ ವಾಸನೆ ಕುಡಿದೇ ಹಲವರು ಮೂರ್ಛೆ ಹೋಗಿರಬಹುದು. ಆದರೆ ಗುಳಿಗೆಗಳು 820 ಆಗಿದ್ದರೆ ಚಾರ್ಲ್ಸ್ ಮಾತ್ರ ಪಕ್ಕಾ 420! ಅಷ್ಟು ಗುಳಿಗೆಗಳಿದ್ದರೂ, ಅದೆಷ್ಟೇ ಅವುಗಳನ್ನು ತಿಂದರೂ ಬರೋಬ್ಬರಿ ಮೂವತ್ತು ನಿಮಿಷಗಳವರೆಗೂ ಯಾವುದೇ ಪರಿಣಾಮ ಬೀರದಂತೆ ಡೋಸ್ ಗಳನ್ನು ಮಾಡಿದ್ದ ಈ ಡ್ರಗ್ ಪರಾಕ್ರಮಿ. ಮುಂದಿನ್ನೇನು. ಸರಿಯಾಗಿ ಮೂವತ್ತು ನಿಮಿಷಗಳ ನಂತರ ಗೇಟಿನ ದ್ವಾರಪಾಲಕರೆಲ್ಲರೂ ತಮ್ಮ ಬಾಯಿಗಳನ್ನು ತೆರೆದುಕೊಂಡು ಗನ್ನುಗಳನ್ನು ತಬ್ಬಿಕೊಂಡು ಸುಖ ನಿದ್ರೆಗೆ ಜಾರಿದ್ದರು. ರಾಜಾರೋಷವಾಗಿ ಹೊರನೆಡೆದರು ಚಾರ್ಲ್ಸ್ ಹಾಗು ಆತನ ದೇಸಿ ಸಂಗಡಿಗರು.

ಇದು ಭಾರತದ ಕಳ್ಳ ಪೋಲೀಸರ ಇತಿಹಾಸದಲ್ಲಿ ಹಚ್ಚಳಿಯಾಗಿ ಉಳಿದ ಬೆಚ್ಚಿಬೀಳಿಸುವ ಕಥನ. ನಮ್ಮ ವ್ಯವಸ್ಥೆ ಅದೆಷ್ಟೇ ಉತ್ಕೃಷ್ಟವಾಗಿದ್ದರೂ ಜೈಲುಗಳು ಅದೆಂತಹದ್ದೇ ಭದ್ರತೆಯನ್ನು ಒಳಗೊಂಡಿದ್ದರೂ ಕಳ್ಳನನ್ನು ಕೂಡಿಡುವಾಗ ಕಳ್ಳನಂತೆಯೇ ಯೋಚಿಸಬೇಕೆಂಬ ಪಾಠವನ್ನು ಇದು ಅಧಿಕಾರಿಗಳಿಗೆ ನೀಡಿತು. ಅಲ್ಲಿಂದ ಮುಂದೆ ಚಾರ್ಲ್ಸ್ ತನಗಾದ ಎಲ್ಲ ಬಗೆಯ ಸುಳಿವುಗಳನ್ನು ನೀಡುತ್ತಾ ಪೊಲೀಸರೇ ಅವನ ಬಳಿಗೆ ಬರುವಂತೆ ಮಾಡಿಕೊಳ್ಳುತ್ತಾನೆ. ಗೋವಾದ ಹೋಟೆಲೊಂದರಲ್ಲಿ ಬಂದಿಯಾದ ಆತ ಅಂದುಕೊಂಡಂತೆ ಪ್ರಿಸನ್ ಬ್ರೇಕಿನ ಸಲುವಾಗಿ ಮುಂದಿನ 10 ವರ್ಷ ಅಂದರೆ 1997 ರ ವರೆಗೂ ಜೈಲುವಾಸವನ್ನನುಭವಿಸಿ ಕೊನೆಗೂ ಥೈಲ್ಯಾಂಡಿನ ಅಧಿಕಾರಿಗಳಿಗೆ ಸಿಗದಂತೆ ಬಚಾವಾಗುತ್ತಾನೆ. ಇಂತಹ ಒಬ್ಬ ಕೊಲೆಪಾತಕೀಗೂ ನಮ್ಮಲ್ಲಿ ಆತ್ಮಸ್ಟ್ರೈರ್ಯ ವನ್ನು ತುಂಬಿ ಆತನ ಪರವಾಗಿ ಕಾಯ-ವಾಚಾ-ಮನಸಾ ವಾದಿಸುತ್ತಾ ಹೋರಾಟ ನೆಡೆಸಿ ದೇಶಕ್ಕಾಗಿ ಕಾದಾಡಿದ ಯೋಧನೊಬ್ಬನ್ನು ಬೀಳ್ಕೊಡುವಂತೆ ವಿಮಾನ ಹಚ್ಚುವ ನಮ್ಮ ಲಾಯರುಗಳಿಗೂ ಪ್ರಶಸ್ತಿಯನ್ನು ತಂದು ನೀಡಬೇಕು! ಭಾರತದಿಂದ ಪ್ಯಾರಿಸ್ ಗೆ ಹಾರಿದ ಚಾರ್ಲ್ಸ್ ತಾನು ದೋಚಿದ ಹಣದಿಂದ ಅಲ್ಲಿ ಒಬ್ಬ ಸೆಲೆಬ್ರಿಟಿಯ ಐಷಾರಾಮಿ ಜೀವನವನ್ನು ನೆಡೆಸುತ್ತಾನೆ. ಆದರೆ ವಿಧಿಯಾಟದ ಮುಂದೆ ಯಾರು ದೊಡ್ಡವರು? ಅಲ್ಲಿಂದ 5 ವರ್ಷದ ನಂತರ ನೇಪಾಳದಲ್ಲಿ ಸೆರೆಸಿಕ್ಕ ಚಾರ್ಲ್ಸ್ ಅಲ್ಲಿನ ಯಾವುದೊ ಹಳೆಯ ಕೊಲೆಕೇಸಿನಲ್ಲಿ ಪುನ್ಹ ಬಂಧಿತನಾಗಿ ಜೀವಾವಧಿ ಶಿಕ್ಷೆಯನ್ನನುಭವಿಸುತ್ತಾನೆ. ಆದರೆ ಅರ್ವತ್ತು ವರ್ಷದ ಮುದುಕ ಚಾರ್ಲ್ಸ್ ಪೆನ್ನಿನ ನಿಬ್ ಗಳ ಮೂಲಕ ಡ್ರಗ್ಸ್ ಗಳನ್ನು ತರಿಸಿ ಅಲ್ಲಿಯೂ ಪರಾರಿಯಾಗುವ ಖತರ್ನಾಕ್ ಸ್ಕೆಚನ್ನು ಮತ್ತೊಮ್ಮೆ ರೂಪಿಸುತ್ತಾನೆ. ಆದರೆ ಈ ಭಾರಿ ಅಲ್ಲಿನ ಪೊಲೀಸರಿಗೆ ರೆಡ್ ಹ್ಯಾಂಡಿನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ ಹಾಗು ಇಂದಿಗೂ ಅಲ್ಲಿಯೇ ಕೊಳೆಯುತ್ತಿದ್ದಾನೆ..

ಬರೆಯುತ್ತ ಹೋದರೆ ಇಂಥ ಸಮಾಜಘಾತುಕ ವ್ಯಕ್ತಿತ್ವಗಳು ಅಗಣಿತ ಸಂಖ್ಯೆಯ ಸರಕುಗಳನ್ನು ನೀಡುತ್ತಾ ಹೋಗುತ್ತವೆ. ಆದರೆ ಇದರಿಂದ ಸಮಾಜಕ್ಕೆ ಒಳಿತಾಗುವ ವಿಚಾರಗಳಂತೂ ಎಳ್ಳಷ್ಟೂ ಇರುವುದಿಲ್ಲ. ಆದರೆ ಒಂದು ವಿಷಯ ಮಾತ್ರ ಧಿಟ. ಪ್ರತಿಭೆಯೆಂಬ ಮಾಯಕುದುರೆಗೆ ಲಂಗು ಲಗಾಮೆಂಬ ಮೂಗುದಾರವನ್ನು ತೊಡಿಸದಿದ್ದರೆ ಅದರ ಓಟ ಅದೆಷ್ಟೇ ಥ್ರಿಲ್ಲಿಂಗಾದರೂ ಅಂತ್ಯ ಮಾತ್ರ ಅಷ್ಟೇ ಘೋರವಾಗಿರುತ್ತದೆ.

Friday, November 30, 2018

ಬಾರ್ಡರ್-ಗವಾಸ್ಕರ್ ಸರಣಿ : ಅಂದು - ಇಂದು!


ಸ್ಥಳ : ಕೊಲ್ಕತ್ತಾ. ಮಾರ್ಚ್ 15, 2001.

ಮೊದಲ ಇನ್ನಿಂಗ್ಸ್
:
ಆಸ್ಟ್ರೇಲಿಯ : 445/10
ಭಾರತ : 212/10

ಎರಡನೇ ಇನ್ನಿಂಗ್ಸ್ : (ಫಾಲೋ ಆನ್)
ಭಾರತ : 657/7 (D)
ಆಸ್ಟ್ರೇಲಿಯ : 171/10



ಆ ದಿನದ ಸೂರ್ಯ ಪಶ್ಚಿಮದಲ್ಲಿ ಮರೆಯಾಗುತ್ತಾ ಕ್ರಿಕೆಟ್ ಲೋಕದ ಮಹಾ ಅಚ್ಚರಿಯೊಂದಕ್ಕೆ ಸಾಕ್ಷಿಯಾದನು. ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದ ಆ ಟೆಸ್ಟ್ ಭಾರತದ ಪಾಲಿಗಂತೂ ವಿಶ್ವಕಪ್ನನ್ನೇ ಗೆದ್ದು ಬೀಗಿದ ಅನುಭವವನ್ನು ನೀಡಿತು. ಅಂದು ಕೋಲ್ಕತ್ತದ ಆಗಸ ರಂಗು ರಂಗಿನ ಪಟಾಕಿಗಳಿಂದ ಶೃಂಗಾರಗೊಳ್ಳುತ್ತಿದ್ದರೆ ಇತ್ತ ಕಡೆ ಇಡೀ ದೇಶವೇ ಹಬ್ಬದ ವಾತಾವರಣವೇನೋ ಎಂಬ ಸಂಭ್ರಮದಲ್ಲಿ ನಲಿಯಿತು. VVS ಲಕ್ಷ್ಮಣ್, ಹರ್ಭಜನ್ ಸಿಂಗ್ ಹಾಗು ರಾಹುಲ್ ದ್ರಾವಿಡ್ ಅಂದು ಖಾನ್, ರೋಷನ್ ಹಾಗು ಬಚ್ಚನ್ ರೆಲ್ಲರನ್ನೂ ಹಿಂದಿಕ್ಕಿ ದೇಶದ ಜನಮಾನಸದಲ್ಲಿ ಹೀರೋಗಳಾಗಿಬಿಟ್ಟರು. ಒಟ್ಟು 557 ರನ್ಗಳು ಹಾಗು 13 ವಿಕೆಟ್ಗಳ ಈ ಮೂವರ ಆಟ ಅಂದು ವಿಶ್ವ ಕ್ರಿಕೆಟ್ನಲ್ಲಿ ಮ್ಯಾಚ್ ಫಿಕ್ಸಿಂಗ್ ಎಂಬ ಸ್ಲೋ ಪಾಯಿಸನ್ನಿಂದ ನೇಪಥ್ಯಕ್ಕೆ ಸೇರುತ್ತಿದ್ದ ಭಾರತೀಯ ಕ್ರಿಕೆಟ್ನ ಪುನರ್ಜನ್ಮಕ್ಕೆ ಕಾರಣವಾಯಿತು. ಹೈಡೆನ್, ಲ್ಯಾಂಗರ್, ಪಾಂಟಿಂಗ್, ವಾ ಬ್ರದರ್ಸ್, ಗಿಲ್ಕ್ರಿಸ್ಟ್, ವಾರ್ನ್, ಗಿಲ್ಲೆಸ್ಪಿ, ಮೆಗ್ರಾತ್ ಎಂಬ ಕ್ರಿಕೆಟ್ ದಂತಕತೆಗಳೇ ತುಂಬಿದ್ದ ತಂಡವೊಂದನ್ನು ಫಾಲೋ ಆನ್ ನ ಹೊರತಾಗಿಯೂ ಸಿನಿಮೀಯ ರೀತಿಯಲ್ಲಿ ಸೋಲಿಸುವುದು ಅಂದಿನ ಕಾಲಕಷ್ಟೆ ಅಲ್ಲದೆ ಇಂದಿಗೂ ಸಹ ಸಾಮಾನ್ಯದ ಮಾತಲ್ಲ. ಮೊದಲ ಟೆಸ್ಟ್ ನಲ್ಲಿ ಸೋತು ಎರಡನೇ ಟೆಸ್ಟನ್ನು ಇಲ್ಲಿ ದಾಖಲೆಯ ಅಂಕಿ ಅಂಶಗಳೊಟ್ಟಿಗೆ ಗೆದ್ದ ಭಾರತ ಅದೇ ಆತ್ಮವಿಶ್ವಾಸದಲ್ಲಿ ಮೂರನೆಯ ಹಾಗು ಅಂತಿಮ ಟೆಸ್ಟನ್ನು ಗೆದ್ದು ಸರಣಿಯನ್ನು ವಶಪಡಿಸಿಕೊಂಡಿತು. ಆ ಮೂಲಕ ಭಾರತದ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಕಾಂಗರೂಗಳ ಮೂರು ದಶಕದ ಕನಸಿಗೆ ತಣ್ಣಿರೆರಚಿತು!

ಹೆಸರು 'ಬಾರ್ಡರ್-ಗವಾಸ್ಕರ್' ಸರಣಿ. ಇಂಗ್ಲೆಂಡ್ ಹಾಗು ಆಸ್ಟ್ರೇಲಿಯಾ ಟೆಸ್ಟ್ ಪಂದ್ಯಗಳು ಎಂದಾಕ್ಷಣ ಹೇಗೆ 'ASHES' ನ ಹೆಸರು ಬರುತ್ತದೆಯೋ ಅಂತೆಯೇ ಭಾರತ ಹಾಗು ಆಸ್ಟ್ರೇಲಿಯಾ ಟೆಸ್ಟ್ ಎಂದಾಕ್ಷಣ ಕಣ್ಣ ಮುಂದೆ ಬರುವ ಹೆಸರೇ 'ಬಾರ್ಡರ್-ಗವಾಸ್ಕರ್' ಸರಣಿ. ಟೆಸ್ಟ್ ಕ್ರಿಕೆಟ್ ನಲ್ಲಿ ಹತ್ತುಸಾವಿರ ರನ್ ಗಳ ಕಿರೀಟವನ್ನು ಮೊದಲು ತೊಟ್ಟ ಸುನಿಲ್ ಗವಾಸ್ಕರ್ (1987) ಹಾಗು ಆಸ್ಟ್ರೇಲಿಯಾದ ಅಲನ್ ಬಾರ್ಡರ್ (1993) ದಿಗ್ಗಜದ್ವಯರ ಹೆಸರಿನಲ್ಲಿ ಕ್ರಮವಾಗಿ ಎರೆಡೆರೆಡು ವರ್ಷಕ್ಕೊಮ್ಮೆ ಭಾರತ ಹಾಗು ಆಸ್ಟ್ರೇಲಿಯಾ ತಂಡಗಳ ನಡುವೆ ನೆಡೆಯುವ ಹಣಾಹಣಿ. 1996 ರಲ್ಲಿ ಮೊದಲುಗೊಂಡು ಇಲ್ಲಿಯವರೆಗೂ ಒಟ್ಟು 13 ಸರಣಿಗಳನ್ನು ಆಡಿರುವ ಎರಡು ತಂಡಗಳಲ್ಲಿ ಭಾರತ 7 ಬಾರಿ, ಆಸ್ಟ್ರೇಲಿಯ 5 ಹಾಗು ಒಮ್ಮೆ (2003) ಸರಣಿ ಡ್ರಾ ನಲ್ಲಿ ಅಂತ್ಯ ಕಂಡಿದೆ. ಅಲ್ಲದೆ ಅತಿ ಹೆಚ್ಚು ರನ್ಗಳು (ಸಚಿನ್ ತೆಂಡೂಲ್ಕರ್) ಹಾಗು ಅತಿ ಹೆಚ್ಚಿನ ವಿಕೆಟ್ ಗಳ (ಅನಿಲ್ ಕುಂಬ್ಳೆ) ದಾಖಲೆಯೂ ಭಾರತೀಯರ ಹೆಸರಿನಲ್ಲಿಯೇ ಇದೆ ಎಂಬುದು ಹೆಮ್ಮೆಯ ವಿಷಯ.

2000-01ರ ಆಸ್ಟ್ರೇಲಿಯದ ಭಾರತ ಪ್ರವಾಸ ಹಾಗು 2003-04ರ ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸ. ಈ ಎರಡೂ ಸರಣಿಗಲ್ಲಿದ್ದ ರೋಚಕತೆ, ಹಠ ಹಾಗು ಉಭಯ ತಂಡಗಳ ಸಾಬೀತುಪಡಿಸುವಿಕೆಯ ಹಪಾಹಪಿ ಬಹುಷಃ ಬೇರ್ಯಾವ ಸರಣಿಯಲ್ಲಿಯೂ ಕಾಣಸಿಗದು. ಕಾರಣ ವಿಶ್ವವನ್ನೇ ಬಗ್ಗುಬಡಿದು ಮೆರೆಯುತ್ತಿದ್ದ ಆಸ್ಟ್ರೇಲಿಯಕ್ಕೆ ಕಬ್ಬಿಣದ ಕಡಲೆಯಾಗಿ ಅಂದು ಭಾರತ ತಂಡ ಮಾರ್ಪಾಡಾಗುತ್ತಿತ್ತು. ಹೋದಲೆಲ್ಲಾ ವಿಜಯಪತಾಕೆಯನ್ನು ಹಾರಿಸಿಯೇ ಬರುತ್ತಿದ್ದ ಧೈತ್ಯ ಕಾಂಗರು ಬಳಗದ ಎದುರು ಸಟೆದು ನಿಲ್ಲಬಲ್ಲ ತಂಡವೊಂದಿತ್ತೆಂದರೆ ಅದು ಭಾರತ ತಂಡ. ಈ ಎರಡೂ ಸರಣಿಗಳು ಟೆಸ್ಟ್ ಕ್ರಿಕೆಟ್ನಲ್ಲಿ ಕುಸಿಯುತ್ತಿದ್ದ ಭಾರತದ ವರ್ಚಸ್ಸನ್ನು ಮೇಲೆತ್ತಿ ನಿಲ್ಲಿಸಿದವಲ್ಲದೆ ವಿದೇಶಿ ನೆಲದಲ್ಲಿ ತಂಡವನ್ನು ಪಳಗಿಸುವ ಕಲೆಯನ್ನು ಪ್ರತಿಯೊಬ್ಬ ಆಟಗಾರನಲ್ಲೂ ಮೂಡಿಸಿದವು. ಇದರ ಸಂಪೂರ್ಣ ಕೀರ್ತಿ ಅಷ್ಟೂ ತಂಡಕ್ಕೂ ಸಲ್ಲಬೇಕಾದರೂ ಅದರ ಬಹುಪಾಲು ಕ್ರೆಡಿಟ್ ಡೇರಿಂಗ್ ಅಂಡ್ ಡ್ಯಾಶಿಂಗ್ ನಾಯಕನಾದ ಸೌರವ್ ಗಂಗೂಲಿಗೆ ಸೇರಬೇಕು ಎಂಬುದು ಹಲವರ ಅನಿಸಿಕೆ. ನಾಯಕನ ಹೆಚ್ಚಿನ ಹೊರೆಯ ನಂತರ 2000 ವರ್ಷದಿಂದಾಚೆಯ ಮ್ಯಾಚುಗಳಲ್ಲಿ ತನ್ನ ಬ್ಯಾಟಿಂಗ್ ನ ಹೊಳಪನ್ನು ಆತ ಕೊಂಚ ಕಳೆದುಕೊಂಡನಾದರೂ ನಾಯಕತ್ವದ ನೆಡೆಯಲ್ಲಿ ಮಾತ್ರ ನಿಸ್ಸಿಮನಾಗಿದ್ದ. ದೇಶೀ ನೆಲದಲ್ಲಿ ಭಾರತ ಅದೇನೇ ಸಾಧನೆ ಮಾಡಿದ್ದರೂ ವಿದೇಶಿ ನೆಲದಲ್ಲಿ ಅದರ ಸಾಧನೆ ಸೊನ್ನೆ ಎನ್ನುವ ಬಿಳಿಯರ ಮುಖ ಕೆಂಪಾಗುವಂತೆ ಅದೇ ನೆಲದಲ್ಲಿ ಅವರನ್ನೇ ಚಚ್ಚಿಕೆಡವಿ NatWest ಏಕದಿನ ಸರಣಿಯನ್ನು ವಶಪಡಿಸಿಕೊಂಡ ಗಂಗೂಲಿ ವಿಶ್ವವನ್ನೇ ಗೆಲ್ಲಲು ಬೇಕಾದ ತಂಡವನ್ನು ಕಟ್ಟಿದ್ದ. ಸೌತ್ ಆಫ್ರಿಕಾದ ನೆಲದಲ್ಲಿ 2003 ರ ವಿಶ್ವಕಪ್ ನ ಫೈನಲ್ ವರೆಗೂ ಬಂದು ಸರಣಿಯ ಪೂರ್ತಿ ಆಸ್ಟ್ರೇಲಿಯ ಒಂದನ್ನು ಹೊರತುಪಡಿಸಿ ಬೇರ್ಯಾವ ತಂಡಕ್ಕೂ ಮಣಿಯದ ಭಾರತ ತಂಡದ ಆ ಸಾಧನೆ ವಿಶ್ವದ ಹುಬ್ಬೇರುವಂತೆ ಮಾಡಿತ್ತು. ಇಂದಿಗೂ ವಿದೇಶಿ ನೆಲದಲ್ಲಿ ಭಾರತದ ಸಾಧನೆಯ ವಿಷಯ ಬಂದಾಗ ಗಂಗೂಲಿ ಹಾಗು ಆತನ ತಂಡದ ಸಾಹಸಗಳೇ ಮೊದಲ ಸಾಲಿನಲ್ಲಿ ಬರುತ್ತವೆ.

2001ರ ಬಾರ್ಡರ್-ಗವಾಸ್ಕರ್ ಸರಣಿ ಭಾರತದ ಪಾಲಿಗೆ ಗೆಲುವಿನ ನಗೆಯನ್ನು ತಂದಿತಾದರೂ ಆಸ್ಟೇಲಿಯ ನೆಲದ ಫಾಸ್ಟ್ ಪಿಚ್ ಗಳಲ್ಲಿ ತಮ್ಮ ತಾಕತ್ತನ್ನು ಒರೆಹಚ್ಚಿಕೊಳ್ಳುವ ಕೆಲಸ 2003ರ ತಂಡದ ಅಷ್ಟೂ ಆಟಗಾರರಿಗಿದ್ದಿತ್ತು. ಅಲ್ಲದೆ ಅದು ಆಸ್ಟ್ರೇಲಿಯಾದ ಲೆಜೆಂಡರಿ ಆಟಗಾರ ಸ್ಟೀವ್ ವಾ ನ ಕೊನೆಯ ಸರಣಿಯೂ ಆದದ್ದರಿಂದ ಕಾಂಗರೂ ಬಳಗ ಆತನ ಬೀಳ್ಕೊಡಿಗೆಯ ಕಾಣಿಕೆಯಾಗಿ ಶತಾಯ ಗತಾಯ ಟ್ರೋಫಿಯನ್ನು ಗೆದ್ದು ಕೊಡುವ ತವಕದಲ್ಲಿದ್ದಿತು. ಆಸ್ಟ್ರೇಲಿಯ ನೆಲದಲ್ಲಿ ಭಾರತದ ಗೆಲುವಿನ ಸಾಧನೆ ಕೇವಲ 11%. ಅರ್ಥಾತ್ 70 ವರ್ಷಗಳ ಉಭಯತಂಡಗಳ ಮುಖಾಮುಖಿಯಲ್ಲಿ ಭಾರತ ಆಸ್ಟ್ರೇಲಿಯವನ್ನು ಅದರದ್ದೇ ನೆಲದಲ್ಲಿ ಸೋಲುಣಿಸಿರುವುದು ಕೇವಲ 5 ಟೆಸ್ಟ್ ಗಳಲಷ್ಟೇ! 2003-04 ರ ಸರಣಿಯ ಹೊತ್ತಿಗೆ ಆ ಸಂಖ್ಯೆ ಕೇವಲ 3 ಮಾತ್ರವಾಗಿದ್ದಿತ್ತು! ಆದ ಕಾರಣ ಸರಣಿ ಭಾರತ ತಂಡಕ್ಕೆ ಆತ್ಮಗೌರವದ ಪ್ರತೀಕವಾಗಿತ್ತಷ್ಟೆ ಅಲ್ಲದೆ ಗೆದ್ದೇ ಬೀಗಬೇಕೆಂದು ಹಠಕ್ಕೆ ಬಿದ್ದಿದ್ದ ಆಸೀಸ್ ವೇಗಿಗಳ ಬಲಿಷ್ಠ ಆಕ್ರಮಣವ ದ ಜೊತೆಗೆ ಸ್ಲೆಡ್ಗಿಂಗ್ ಚಾಳಿಯನ್ನೂ ದಿಟವಾಗಿ ಎದುರಿಸುವುದಾಗಿದ್ದಿತು. ಗಾಯದ ಸಮಸ್ಯೆಯಿಂದ ಮೆಗ್ರಾಥ್ ಹಾಗು ಶೆರ್ನ್ ವಾರ್ನ್ ಸರಣಿಯಿಂದ ಹೊರಗುಳಿದದ್ದೂ ಸಹ ಭಾರತಕ್ಕಂದು ಪ್ಲಸ್ ಪಾಯಿಂಟ್.


ಮೊದಲ ಪಂದ್ಯ : ದ ಗಬ್ಬಾ ಕ್ರಿಕೆಟ್ ಮೈದಾನ, ಬ್ರಿಸ್ಬೈನ್. (4-8 Dec 2003)

ಮೋಡಗಳ ಕರಿಛಾಯೆಯಲ್ಲೇ ಶುರುವಾದ ಆಟ ಮೊದಲು ಆಸ್ಟ್ರೇಲಿಯಾದ ಬಿಗಿ ಹಿಡಿತದಲ್ಲಿಯೇ ಸಾಗಿತು. ನಂತರ 323 ರನ್ ಗಳ ಆಸೀಸ್ ನ ಮೊತ್ತವನ್ನು ಬೆನ್ನಟ್ಟಿದ ಭಾರತ 63 ರನ್ಗಳಿಗೆ 3 ವಿಕೆಟ್ ಗಳನ್ನು ಕಳೆದುಕೊಂಡು ಪರದಾಡತೊಡಗಿತ್ತು. ಇನ್ನೊಂದೆರೆಡು ವಿಕೆಟ್ಗಳು ಉರುಳಿದರೆ ಇಡೀ ಸರಣಿಗೆ ಬೇಕಿದ್ದ ಆರಂಭಿಕ ಆತ್ಮಸೈರ್ಯವೂ ಉರುಳುತ್ತಿತ್ತು. ಇನ್ನಿಂಗ್ಸ್ ಲೀಡ್ ಕೊಡಲಾಗದಿದ್ದರೂ ಟಪಟಪನೆ ಉದುರುತ್ತಿದ್ದ ವಿಕೆಟ್ಗಳನ್ನಾದರೂ ಕೂಡಲೇ ತಡೆದು ನಿಲಿಸಬೇಕಿತ್ತು. ಆಗ ಜೊತೆಯಾದ ಗಂಗೂಲಿ ಹಾಗು ಲಕ್ಷ್ಮಣ್ ಜೋಡಿ ಶೀತಬರೀತ ಆ ನೆಲದಲ್ಲೂ ಕಾಂಗರೂಗಳ ಬೆವರನ್ನು ಇಳಿಸಿದರು. ಆ ಇನ್ನಿಂಗ್ಸ್ ನ ಅದ್ಭುತ ಹೈಲೈಟ್ ಸೌರವ್ ಗಂಗೂಲಿಯ 196 ಎಸೆತಗಳ 144 ರನ್ಗಳು. ತಮ್ಮ ಬೌನ್ಸರ್ ಹಾಗು ಯಾರ್ಕ್ ರ್ ಗಳಿಂದ ವಿಸಿಟಿಂಗ್ ತಂಡದ ನಾಯಕನನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡುವ ಆಸ್ಟ್ರೇಲಿಯನ್ನರ ತಂತ್ರಗಾರಿಕೆಯನ್ನು ಬುಡಮೇಲು ಮಾಡಿದ ಗಂಗೂಲಿ ಆಸೀಸ್ ನೆಲದಲ್ಲಿ ಶತಕವನ್ನು ಸಿಡಿಸಿದ ಭಾರತದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಾನೆ. ಜೊತೆಗೆ ಆಸ್ಟ್ರೇಲಿಯನ್ನರೆಂದರೆ ರನ್ಗಳ ಸುರಿಮಳೆಗೈಯುವ ಲಕ್ಷ್ಮಣ್ 75 ರನ್ ಗಳಿಸಿ ಭಾರತದ ಮೊತ್ತವನ್ನು 400 ರ ಗಡಿಯನ್ನು ದಾಟಿಸಲು ನಿರ್ಣಾಯಕ ಪಾತ್ರವನ್ನು ವಹಿಸಿದ. ಅಷ್ಟರಲ್ಲಾಗಲೇ ಮಳೆಯ ಕಾರಣ ಪಂದ್ಯದ ನಾಲ್ಕು ದಿನಗಳು ಮುಗಿದ್ದಿದ್ದವು. ಯಾವ ಆಟವನ್ನೂ ಆಡಿದರೂ ಸಹ ಪಂದ್ಯ ಡ್ರಾನಲ್ಲಿ ಅಂತ್ಯ ಕಾಣುವುದರಲ್ಲಿ ಸಂಶಯವೇ ಇರಲಿಲ್ಲ. ಆದರೆ ಆಸೀಸ್ ನೆಲದಲ್ಲಿ ಭಾರತದ ಬ್ಯಾಟಿಂಗ್ ಹಾಗು ಬೌಲಿಂಗ್ ನ ಪರೀಕ್ಷೆಯ ಮೊದಲ ಪಂದ್ಯ ಅದಾಗಿದ್ದಿತು. ನಾಲ್ಕೈದು ಆಟಗಾರರನ್ನು ಬಿಟ್ಟರೆ ಉಳಿದೆಲ್ಲ ಚಿಗುರು ಮೀಸೆಯ ಆಟಗಾರರಿಗೆ ಅದು ಚೊಚ್ಚಲ ಆಸೀಸ್ ಪ್ರವಾಸ ಬೇರೆ. ಪಂದ್ಯದಲ್ಲಿ ಭಾರತದ ದಿಟ್ಟ ಉತ್ತರ ಸರಣಿ ರೋಚಕವಾಗುವ ಎಲ್ಲ ಮುನ್ಸೂಚನೆಯನ್ನೂ ಪ್ರೇಕ್ಷಕರಿಗೆ ನೀಡಿದವು. ಅಂದುಕೊಂಡಂತೆಯೇ ಮ್ಯಾಚ್ ಡ್ರಾ ನಲ್ಲಿ ಅಂತ್ಯಕಂಡಿತು.


ಎರಡನೇ ಪಂದ್ಯ : ಓವಲ್ ಕ್ರಿಕೆಟ್ ಮೈದಾನ, ಅಡಿಲೇಡ್. ( 12-16 Dec 2003)

ಭಾರತದ ಟೆಸ್ಟ್ ಇತಿಹಾಸದ ಮತ್ತೊಂದು ಐತಿಹಾಸಿಕ ಪಂದ್ಯಕ್ಕೆ ಸಾಕ್ಷಿಯಾಗುವುದರಲಿತ್ತು ಓವಲ್. ಹೆಚ್ಚುಕಡಿಮೆ 2001ರ ಕೋಲ್ಕತ್ತಾ ಟೆಸ್ಟ್ ಪಂದ್ಯವೇ ಮರುಕಳಿಸುವಂತಹ ಪ್ರದರ್ಶನ ಅಂದು ಆಸೀಸ್ ನೆಲದಲ್ಲಿ ಕಂಡಿತು. ಅಂದಿನಂತೆಯೇ ಇಂದೂ ಸಹ ಲಕ್ಷ್ಮಣ್ ಹಾಗು ದ್ರಾವಿಡ್ ಮುಳುಗುತಿದ್ದ ತಂಡವನ್ನು ಗೆಲುವಿನ ದಡ ತಲುಪಿಸಿದರು. ಹಾಗು ಅದು ಇರ್ಫಾನ್ ಪಠಾಣ್ ಎಂಬ ಸ್ವಿಂಗ್ ಮಾಂತ್ರಿಕನ ಡೆಬ್ಯು ಮ್ಯಾಚ್ ಕೂಡ. ಬೌಲರ್ಗಳಿಗೆ ಅಷ್ಟೇನೂ ನೆರವಾಗದ ಫ್ಲಾಟ್ ಪಿಚ್ ನಲ್ಲಿ ಪಠಾಣ್ ತನ್ನ ಚೊಚ್ಚಲ ವಿಕೆಟ್ ರೂಪದಲ್ಲಿ ಹಡೆನ್ ನನ್ನು ಹೊರಗಟ್ಟಿದ ಆ ಕ್ಷಣವಂತೂ ವಿಶ್ವದ ಯಾವುದೇ ಮೂಲೆಗೊದರೂ ಸಾವಿರ ಸಾವಿರ ಸಂಖ್ಯೆಯಲ್ಲಿ ಜಮಾವಣೆಗೊಂಡು ತಂಡವನ್ನು ಹುರಿದುಂಬಿಸುವ ಭಾರತೀಯರ ಸಂತಸ ಮುಗಿಲು ಮುಟ್ಟುವಂತೆ ಮಾಡಿತು. ಆದರೆ ಆ ಸಂತಸ ಬಹಳಷ್ಟು ಹೊತ್ತು ಉಳಿಯಲಿಲ್ಲ. ಆ ವರ್ಷದ ತನ್ನ ಎರಡನೇ ಡಬಲ್ ಸೆಂಚೂರಿಯನ್ನು ಪೂರ್ತಿಗೊಳಿಸಲು ಆಡಲಿಳಿದ್ದಿದ್ದ ರಿಕ್ಕಿ ಪಾಂಟಿಂಗ್ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿ ಭಾರತದ ಬೌಲರ್ಗಳ ಗಟ್ಟಿ ತೋಳುಗಳನ್ನು ಸೋಲಿಸಿದ. ಆತ ಗಳಿಸಿದ ಸ್ಕೋರ್ 242 ರನ್ನುಗಳು. ತಂಡದ ಮೊತ್ತ 556! ನಂತರ ಇನ್ನಿಂಗ್ಸ್ ಆರಂಭಿಸಿದ ಭಾರತದ ಪಾಲಿಗೆ ಉತ್ತಮ ಆರಂಭವವೇ ದೊರೆಯಿತು. ಏಕದಿನ ಪಂದ್ಯಗಳಂತೆ ಬ್ಯಾಟ್ ಬೀಸಿದ ಸೆಹ್ವಾಗ್ ತನ್ನ ಹಾಫ್ ಸೆಂಚೂರಿ ತಲುಪುವ ಕ್ಷಣಮಾತ್ರದಲ್ಲಿ ಬಿಚೆಲ್ ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದ. ಅತ್ತ ಕಡೆಯಿಂದ ಬಂದ ಗಂಗೂಲಿ ಹಾಗು ಸಚಿನ್ ತಮ್ಮ ಸ್ಕೋರು ಎರಡಂಕಿ ತಲುಪುವ ಮೊದಲೇ ಅದೇ ಹಾದಿಯನ್ನು ಹಿಡಿದರು. ಆಗ ತಂಡದ ಮೊತ್ತ 84/4. ಆಸ್ಟ್ರೇಲಿಯನ್ನರ ರನ್ ಗಡಿ ದಾಟಿ ಮುನ್ನುಗ್ಗಲು ಇನ್ನು ೪೭೨ ರನ್ ಗಳು ಬೇಕಿದ್ದಿತು. ಭಾರತದ ಬಳಿ ಉಳಿದ ವಿಕೆಟ್ಗಳು ಕೇವಲ ಆರೇ ಆರು. ಅಷ್ಟರಲ್ಲಾಗಲೇ ಫಾಲೋ ಆನ್ ತಪ್ಪಿಸಿಕೊಳ್ಳುವ, ಟೆಸ್ಟ್ ಡ್ರಾ ಮಾಡಿಕೊಳ್ಳುವ ಮಾತುಗಳು ಕಾಮೆಂಟರಿ ಕ್ಯಾಬಿನ್ ಇಂದ ಬರತೊಡಗಿದವು. ಸ್ಕ್ರೀಸ್ ನಲ್ಲಿ ಇದ್ದವರು ಭಾರತ ತಂಡದ ರಾಮಲಕ್ಷ್ಮಣ ಜೋಡಿಯಂದೆನ್ನಬಹುದಾದ ವೆರಿ ವೆರಿ ಸ್ಪೆಷಲ್ ಲಕ್ಷ್ಮಣ್ ಹಾಗು ದ ವಾಲ್ ದ್ರಾವಿಡ್. ಜೋಡಿ ಆಸ್ಟ್ರೇಲಿಯ ನೆಲದಲ್ಲಿ ಮಗದೊಂದು ಇತಿಹಾಸ ಬರೆಯಲು ಅಣಿಯಾಗತೊಡಗಿತು. ಭಾರತದ ನಿಜವಾದ ಟೆಸ್ಟ್ ಶುರುವಾದದ್ದು ಆಗೆನ್ನಬಹುದು. ಬೆಣ್ಣೆಯ ಮೇಲಿನ ಕಸವನ್ನು ತೆಗೆದಂತೆ ನಿರಾಯಾಸವಾಗಿ ಬೌಂಡರಿಗಳಿಗೆ ಚೆಂಡನ್ನು ಅಟ್ಟುತ್ತಾ ಮೋಹಕ ಇನ್ನಿಂಗ್ಸ್ ಕಟ್ಟಿದ್ದ ಜೋಡಿ ಬರೋಬ್ಬರಿ 303 ರನ್ ಗಳ ಸ್ಮರಣೀಯ ಜೊತೆಯಾಟವನ್ನು ನೀಡಿತು. ದ್ರಾವಿಡ್ ಟೆಸ್ಟ್ ಕ್ರಿಕೆಟ್ನ ದಿ ಬೆಸ್ಟ್ 233 ರನ್ಗಳನ್ನು ಸಿಡಿಸಿದರೆ, VVS ತಮ್ಮ ಸ್ಪೆಷಲ್ 148 ರನ್ಗಳನ್ನು ಕಲೆಹಾಕಿ ವಿಕೆಟನ್ನು ಒಪ್ಪಿಸಿದರು. ಈ ಜೊತೆಯಾಟ ಇಂದಿಗೂ ಟೆಸ್ಟ್ ಇತಿಹಾಸದಲ್ಲಿ ಗ್ರೇಟೆಸ್ಟ್ ಜೊತೆಯಾಟಗಳ ಸಾಲಿನಲ್ಲಿ ಒಂದಾಗಿ ಪರಿಗಣಿಸಲ್ಪಡುತ್ತದೆ. ಪಿಚ್ ನಿಧಾನವಾಗಿ ಬೌಲಿಂಗ್ಗೆ ಪೂರಕವಾಗತೊಡದಿದ್ದರೆ ಆತ್ತ ಕಡೆ ಭಾರತದ ಸ್ಕೋರು 500 ರ ಗಡಿಯನ್ನು ದಾಟಿತ್ತು. 33 ರನ್ ಗಳ ಲೀಡ್ ನೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಆಸೀಸನ್ನು ತನ್ನ ಮಾರಕ 6 ವಿಕೆಟ್ಗಳ ದಾಳಿಯಿಂದ 196 ರನ್ಗಳಿಗೆ ಹೆಡೆಮುರಿಕಟ್ಟಿದ ಅಗರ್ಕರ್ ಆ ದಿನದ ಹೀರೊ ನಂಬರ್ ಒನ್. ನಂತರ ದೊರೆತ 229 ರನ್ಗಳ ಮೊತ್ತ ದ ಗುರಿಯನ್ನು ಭಾರತ ಆಯಾಸಪಡುತ್ತಲೇ ಆರು ವಿಕೆಟ್ ಗಳನ್ನು ಕಳೆದುಕೊಂಡು ತಲುಪಿತು. ಗೆಲುವು ಖಚಿತವಾಗುವವರೆಗೂ ಆಗಲೂ ವಿಕೆಟ್ನ ಇನ್ನೊಂದೆಡೆ ಗಟ್ಟಿಗಲ್ಲಿನಂತೆ ನಿಂತ ವ್ಯಕ್ತಿ ಮತ್ತದೇ ರಾಹುಲ್ ದ್ರಾವಿಡ್. ಟೆಸ್ಟ್ ನ ಗೆಲುವು ಆಸೀಸ್ ನೆಲದಲ್ಲಿ ಭಾರತದ 22 ವರ್ಷಗಳ ಗೆಲುವಿನ ಬರವನ್ನು ನೀಗಿಸಿತಲ್ಲದೆ ಸರಣಿ ಗೆಲುವನ್ನೂ ಸಾಧಿಸಲೇಬೇಕೆಂಬ ಹುರುಪಿನಲ್ಲಿ ನಂತರದ ಟೆಸ್ಟ್ ಅನ್ನು ಎದುರುನೋಡಿತು.


ಮೂರನೇ ಪಂದ್ಯ : ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (26-30 Dec 2003)

ಟಾಸ್ ಗೆದ್ದು ಬ್ಯಾಟಿಂಗನ್ನು ಆಯ್ದುಕೊಂಡ ಗಂಗೂಲಿಯ ನಿರ್ಧಾರವನ್ನು ಅಕ್ಷರ ಸಹ ಸದುಪಯೋಗ ಮಾಡಿಕೊಂಡ ಚೋಪ್ರಾ ಹಾಗು ಸೆಹ್ವಾಗ್ ಜೋಡಿ ಕಳೆದ ಹತ್ತು ವರ್ಷಗಳಲ್ಲೇ ಮೊದಲ ಬಾರಿಗೆ ಆಸೀಸ್ ನೆಲದಲ್ಲಿ ಭಾರತೀಯ ಓಪನರ್ಗಳು ಗಳಿಸದ ಅತ್ಯಧಿಕ ಪಾರ್ಟ್ನರ್ ಶಿಪನ್ನು ಕಲೆಹಾಕಿದರು. 141 ರನ್ ಗಳ ಮೆಗಾ ಪಾರ್ಟರ್ಶಿಪ್ನ ನಂತರ ದ್ರಾವಿಡ್ನ ಜೊತೆಗೂಡಿದ ಸೆಹ್ವಾಗ್ ಬಿರುಸಿನ ಆಟವಾಡಿದನು. ಚೆಂಡನ್ನು ಬೌಂಡರಿ ಗೆರೆಗೆ ಅಟ್ಟುವ ಮೂಲಕ ಆಸ್ಟ್ರೇಲಿಯನ್ನರ ವಿರುದ್ಧ ತನ್ನ ಚೊಚ್ಚಲ ಸೆಂಚೂರಿಯನ್ನು ಪೂರೈಸಿದ. ಮುಂದಿನ್ನೇನು, ಸ್ಪಿನ್ ಹಾಗು ಪಾಸ್ಟ್ ದಾಳಿಗಳೆರಡೂ ಕಕ್ಕಾಬಿಕ್ಕಿಯಾಗುವಂತೆ ಬ್ಯಾಟ್ ಬೀಸಿ ತಂಡದ ಮೊತ್ತ 278/1 ತಲುಪುವಂತೆ ಮಾಡಿದ. ಆದರೆ ಅಲ್ಲಿಂದ ಮುಂದೆ ಒಂದರಿಂದೊಂದು ವಿಕೆಟ್ಗಳು ಉರುಳತೊಡಗಿದವು. ಸೆಹ್ವಾಗ್ 195 ರಲ್ಲಿ ಆಡುತ್ತಿದ್ದಾಗ ಬೌಂಡರಿಯ ಮೂಲಕ ತನ್ನ ಮೊದಲ ದ್ವಿಶತಕವನ್ನು ಪೂರೈಸುವ ಜೋಶಿನಲ್ಲಿ ಕ್ಯಾಟಿಚ್ ನ ಕೈಗೆ ಕ್ಯಾಚಿತ್ತು ಪೆವಿಲಿಯನ್ ನೆಡೆಗೆ ಹೆಜ್ಜೆ ಹಾಕುತ್ತಿದ್ದರೆ ಅಲ್ಲಿಯವರೆಗೂ ಕುಣಿದು ಕುಪ್ಪಳಿಸುತ್ತಿದ್ದ ಭಾರತೀಯ ಪ್ರೇಕ್ಷಕರು ಘಾಡ ಮೌನಕ್ಕೆ ಜಾರಿದರು. ಅಲ್ಲಿಗೆ ಭಾರತದ ಮೊದಲ ಇನ್ನಿಂಗ್ಸ್ ಕ್ಷೀಣಿಸಿತೆಂದೇ ಹೇಳಬೇಕು. ಕಾರಣ 278 ರನ್ಗಳಿಗೆ ಒಂದು ವಿಕೆಟ್ಗಳನ್ನು ಕಳೆದುಕೊಂಡಿದ್ದ ಭಾರತ ನಂತರದ 88 ರನ್ ಗಳಿಗೆ ಸರ್ವಪತನವನ್ನು ಕಂಡಿತು! ಎಲ್ಲೋ ಒಂದೆಡೆ ಈ ಪತನ ಸರಣಿಯ ಫಲಿತಾಂಶ ಭಾರತದ ಪರ ವಾಲಾಡಿರಲು ಪ್ರಮುಖ ಪರಿಣಾಮ ಬೀರಿತೆಂದೇ ಹೇಳಬಹುದು. ಸೊಗಸಾದ ಆರಂಭವನ್ನು ಪಡೆದು ಮೊದಲ ದಿನದ ಮೇಲುಗೈ ಸಾಧಿಸಿದ ಭಾರತ ಕೆಲವೇ ತಾಸುಗಳ ಹಾದಿಯಲ್ಲಿ ಮುಗ್ಗರಿಸಿತು. ಅಲ್ಲಿಂದ ಮುಂದೆ ಆಸೀಸ್ ಆಟಗಾರ ಘರ್ಜನೆ ಆರಂಭಗೊಂಡಿತು. ವೇಗವಾಗಿ ಬ್ಯಾಟ್ ಬೀಸಿದ ಹೈಡೆನ್ 136 ರನ್ ಗಳನ್ನು ಮಾಡಿದರೆ ಮಗದೊಂದು ದ್ವಿಶತಕವನ್ನು ಭಾರಿಸಿ ದಾಖಲೆ ಸೃಷ್ಟಿಸಿದ ಪಾಂಟಿಂಗ್ 257 ರನ್ಗಳ ಅದ್ಭುತ ಆಟವನ್ನು ಆಡಿದ. ಮೊದಲ ಇನ್ನಿಂಗ್ಸ್ ನ ಬಿರುಸುತನ ಎರಡನೇ ಇನ್ನಿಂಗ್ಸ್ ನಲ್ಲಿ ಭಾರತದ ಆಟದಲ್ಲಿ ಕಾಣಲಿಲ್ಲ. 286 ರನ್ ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡು 94 ರನ್ ಗಳ ಸಾಧಾರಣ ಟಾರ್ಗೆಟ್ ಅನ್ನು ಆಸೀಸ್ ಬಳಗಕ್ಕೆ ನೀಡಿ ಅದು ಸೋಲಿನ ಕಹಿಯನ್ನನುಭವಿಸಿತು. ಆದರೆ ಟೆಸ್ಟ್ ಸೋತರೂ ಭಾರತದ ಮೊದಲ ಇನ್ನಿಂಗ್ಸ್ ಅದರಲ್ಲೂ ಆ ಮೊದಲ ದಿನದಾಟ ನಮ್ಮವರ ಹುಮ್ಮಸ್ಸನ್ನು ಹೆಚ್ಚಿಸಿತು. ಅದರಲ್ಲೂ ಸೆಹ್ವಾಗ್ ಎಂಬ ರೋರಿಂಗ್ ಓಪನರ್ ನ ಭಯ ಅಲ್ಲಿಂದ ಮುಂದೆ ಆಸೀಸ್ ಬೌಲರ್ಗಳಿಗೆ ಕಾಡತೊಡಗಿತು.


ನಾಲ್ಕನೇ ಹಾಗು ಅಂತಿಮ ಪಂದ್ಯ : ಸಿಡ್ನಿ ಕ್ರಿಕೆಟ್ ಗ್ರೌಂಡ್ ( 2-6 Jan 2004 )

ಹೊಸವರ್ಷವನ್ನು ಆಸ್ಟ್ರೇಲಿಯಾದ ಅಂಗಳದಲ್ಲಿ ಆಚರಿಸಿಕೊಂಡ ಭಾರತೀಯ ಪಡೆ ಬಾರ್ಡರ್-ಗವಾಸ್ಕರ್ ಟ್ರೋಫಿಯ ಅಂತಿಮ ಹಣಾಹಣಿಗೆ ಸಜ್ಜಾಗಿದ್ದಿತು. ಸರಣಿ 1-1 ರಲ್ಲಿ ಸಮಭಲಗೊಂಡಿದ್ದರಿಂದ ಎರಡೂ ತಂಡಗಳಿಗೂ ಅದು ನಿರ್ಣಾಯಕ ಟೆಸ್ಟ್. ಆಸ್ಟ್ರೇಲಿಯನ್ನರಿಗೆ ತಮ್ಮ ಹೀರೋ ಸ್ಟೀವ್ ವಾ ನ ಅಂತಿಮ ಸರಣಿಯ ಬಿಳ್ಕೊಡುಗೆಯ ಕಾಣಿಕೆಯಾಗಿ ಪ್ರಶಸ್ತಿಯನ್ನು ಗೆದ್ದುಕೊಡಬೇಕೆಂಬ ಹಠವಿದ್ದರೆ ಭಾರತೀಯರಿಗೆ ತಮ್ಮ ಚೊಚ್ಚಲ ಟೆಸ್ಟ್ ಸರಣಿಯನ್ನು ಆಸೀಸ್ ಅಂಗಳದಲ್ಲಿ ಗೆದ್ದು ಇತಿಹಾಸ ಸೃಷ್ಟಿಸುವ ತವಕ. ವಾ ನ ಕೊನೆಯ ಪಂದ್ಯಕ್ಕಾಗಿ ಭರ್ಜರಿ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದ ಹೋಂ ಕ್ರೌಡ್ ನ ಭರಪೂರ ಸಪೋರ್ಟ್ ಆಸ್ಟ್ರೇಲಿಯನ್ನರಿಗೆ. ಇವೆಲ್ಲವೂ ಭಾರತಕ್ಕೆ ಪ್ರತಿಕೂಲ ವಾತಾವರಣೆವನ್ನೇ ಸೃಷ್ಟಿಸಿದ್ದವು. ಆದರೆ ಪ್ರತೀ ಪಂದ್ಯದಲ್ಲೂ ಒಂದಿಲ್ಲೊಬ್ಬ ಭಾರತೀಯ ಆಟಗಾರರು ಮಿಂಚುತಿದ್ದರೂ ದಿ ಗ್ರೇಟ್ ಸಚಿನ್ ನ ಪಾಲಿಗೆ ಸರಣಿ ಏಕೋ ರನ್ ಗಳಿಲ್ಲದ ಮರುಭೂಮಿಯಾಗಿದ್ದಿತು. ಸರಣಿಯ ಆರು ಇನ್ನಿಂಗ್ಸ್ ನಲ್ಲಿ ಆತ ಗಳಿಸಿದ್ದು ಕೇವಲ 83 ರನ್ ಗಳು. ಜೊತೆಗೆ ಎರೆಡೆರಡು ಡಕ್ ! ಆಸ್ಟ್ರೇಲಿಯಾದ ಲೋವರ್ ಆರ್ಡರ್ ಬ್ಯಾಟ್ಸ್ಮನ್ಗಳಿಗಿಂತಲೂ ಕನಿಷ್ಠ ರನ್ ಗಳನ್ನು ಗಳಿಸಿದ್ದ ಸಚಿನ್ಗೆ ತನ್ನ ಅಗಾಧತೆಯನ್ನು ತೋರಿಸಿಕೊಳ್ಳಲು ಉಳಿದದ್ದು ಕೇವಲ ಸಿಡ್ನಿ ಟೆಸ್ಟ್ ಮಾತ್ರ. ವಿಶ್ವದಾದ್ಯಂತ ಬೌಲರ್ಗಳ ನಿದ್ದೆ ಕೆಡಿಸುತ್ತಿದ್ದ ಮಾಸ್ಟರ್ ಬ್ಲಾಸ್ಟರ್ ಆಸ್ಟ್ರೇಲಿಯಾದ ನೆಲದಲ್ಲಿ ಮಿಂಚದೆ ಬರುವುದುಂಟೇ? ಬಹುಷಃ ಆತನ ಆಷ್ಟೂ ಆಟವೂ ಈ ಒಂದು ಟೆಸ್ಟ್ ಗಾಗಿಯೇ ಮೀಸಲಿತ್ತೇನೋ. ಕಾರಣ, ಟೆಸ್ಟ್ ಮುಗಿಯುವುದರೊಳಗೆ ಆತನ ಜೋಳಿಗೆಯಲ್ಲಿ ಒಂದು ಡಬಲ್ ಸೆಂಚೂರಿ ಹಾಗು ಒಂದು ಫಿಫ್ಟಿಯೊಟ್ಟಿಗೆ ಇದ್ದ ಒಟ್ಟು ರನ್ ಗಳು ಮುನ್ನೂರರ ಗಡಿಯನ್ನು ದಾಟಿದ್ದವು!

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತದ ಓಪನರ್ ಗಳು ಸ್ವಿಂಗ್ ಹಾಗು ಬೌನ್ಸರ್ ಗಳ ಹೊರತಾಗಿಯೂ ಮಗದೊಂದು ಉತ್ತಮ ಓಪನಿಂಗನ್ನು ನೀಡಿದರು. 194ಕ್ಕೆ ಮೂರು ವಿಕೆಟ್ ಗಳನ್ನು ಕಳೆದುಕೊಂಡಿದ್ದ ಭಾರತದ ನಾಲ್ಕನೇ ವಿಕೆಟ್ ಉರುಳಿದಾಗ ಪರದೆಯ ಮೇಲೆ ಮೂಡಿದ್ದ ಸ್ಕೋರ್ 547 ರನ್ಗಳು! ಸಚಿನ್ ಹಾಗು ಲಕ್ಷ್ಮಣ್ ಜೋಡಿ ಬರೋಬ್ಬರಿ 303 ರನ್ ಗಳ ಜೊತೆಯಾಟವನ್ನು ಅಲ್ಲಿ ನೀಡಿತು. ಲಕ್ಷ್ಮಣ್ 178 ರನ್ ಗಳನ್ನು ಮಾಡಿ ಔಟಾದರೆ ಸಚಿನ್ ಇನ್ನಿಂಗ್ಸ್ ನ ಕೊನೆಯವರೆಗೂ ತಂಡವನ್ನು ಮುನ್ನೆಡೆಸುತ್ತಾ 241 ರನ್ ಗಳನ್ನು ಗಳಿಸಿ ಅಜೇಯನಾಗಿ ಉಳಿದ. ಆಗ ತಂಡದ ಮೊತ್ತ 7 ವಿಕೆಟ್ ನಷ್ಟಕ್ಕೆ 705 ರನ್ ಗಳು. ಅದು ಇಂದಿಗೂ ಆಸ್ಟ್ರೇಲಿಯ ನೆಲದಲ್ಲಿ ಇನ್ನಿಂಗ್ಸ್ ಒಂದರ ಭಾರತದ ಅತ್ಯಧಿಕ ಮೊತ್ತ.

ಸರಣಿಗೂ ಮೊದಲು ಆಯ್ಕೆದಾರರ ಜೊತೆಗೆ ವಾಗ್ವಾದ ನೆಡೆಸಿದ್ದ ಗಂಗೂಲಿ ತಾನು ಬಯಸಿದ ಟೀಮನ್ನು ಕೊಡದಿದ್ದಲ್ಲಿ ತಾನೇ ತಂಡದಿಂದ ಹೊರಗುಳಿಯುವೆನು ಎಂದು ಹಠಹಿಡಿದಿದ್ದ. ಆ ಹಠದ ಹಿಂದಿದ್ದ ಏಕಮಾತ್ರ ಹೆಸರು ಅನಿಲ್ ಕುಂಬ್ಳೆ. ಆಸ್ಟ್ರೇಲಿಯಾದ ಫಾಸ್ಟ್ ಪಿಚ್ ಗಳಿಗೆ ಸ್ಪಿನ್ ಬೌಲಿಂಗ್ ಅಷ್ಟೇನೂ ಸೂಕ್ತವಲ್ಲವಾದರೂ ಒಂದೆರೆಡು ಸ್ಪಿನ್ನರ್ ಗಳು ತಂಡಕ್ಕೆ ಬೇಕಾಗಿಯೇ ಇದ್ದರು ಬಹಳಷ್ಟು ಯುವ ಸ್ಪಿನ್ನರ್ಗಳು ಅಂದು ಗಂಗೂಲಿಯ ಆಪ್ತವಲಯದಲ್ಲಿ ಕಾಣಿಸಿಕೊಂಡರೂ ನಾಯಕ ಮೊಗಮಾಡಿದ್ದು ಮಾತ್ರ ಜಂಬೊ ಕುಂಬ್ಳೆಯಡೆಗೆ. ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ ನ ಒಟ್ಟು ಎಂಟು ವಿಕೆಟ್ ಗಳನ್ನು ಕಬಳಿಸಿದ ಕುಂಬ್ಳೆ ತನ್ನ ಆಯ್ಕೆಯನ್ನು ದಾಖಲೆಯ ಅಂಕಿ ಅಂಶಗಳೊಟ್ಟಿಗೆ ಸಮರ್ಥಿಸಿಕೊಂಡ. ಅಲ್ಲದೆ ಇಡೀ ಸರಣಿಯಲ್ಲಿ ಅತಿಹೆಚ್ಚು ವಿಕೆಟ್ ಗಳನ್ನು(24) ಉರುಳಿಸಿ ಗಂಗೂಲಿಯ ನಂಬಿಕೆಯನ್ನು ಉಳಿಸಿಕೊಂಡ.

ಎರಡನೇ ಇನ್ನಿಂಗ್ಸ್ ನಲ್ಲಿ ಲ್ಯಾಂಗರ್ ಹಾಗು ಕ್ಯಾಟಿಚ್ನ ಸೆಂಚೂರಿಗಳ ಹೊರತಾಗಿಯೂ 474 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡ ಆಸ್ಟ್ರೇಲಿಯ ಭಾರತಕ್ಕೆ 231 ರನ್ಗಳ ಮುನ್ನಡೆಯನ್ನು ನೀಡಿತ್ತು. ನಂತರ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಭಾರತ ದ್ರಾವಿಡ್ ಹಾಗು ತೆಂಡೂಲ್ಕರ್ರ ಶತಕದ ಜೊತೆಯಾಟದ ನೆರವಿನಿಂದ ಹೆಚ್ಚು ಕಡಿಮೆ 5 ರನ್ ಗಳ ಸರಾಸರಿಯಲ್ಲಿ 211 ರನ್ ಗಳನ್ನು ಕಲೆಹಾಕಿತು. ನಾಲ್ಕನೇ ದಿನದಾಟದ ಇನ್ನು ನಾಲ್ಕು ಓವರ್ಗಳು ಬಾಕಿ ಇರುವಂತೆ ಡಿಕ್ಲೆರ್ ಮಾಡಿಕೊಂಡು ಆಸ್ಟ್ರೇಲಿಯನ್ನರಿಗೆ 443 ರನ್ ಗಳ ಬೃಹತ್ ಟಾರ್ಗೆಟನ್ನು ನೀಡಿತು. ತಮ್ಮ ತವರು ನೆಲದಲ್ಲೇ ಕೊನೆಯ ಟೆಸ್ಟ್ ನ ಕೊನೆಯ ಇನ್ನಿಂಗ್ಸ್ ನ ವರೆಗೂ ಆಸ್ಟ್ರೇಲಿಯನ್ನರನ್ನು ಈ ಮಟ್ಟಿಗೆ ಕಾಡಿರುವ ತಂಡ ಅಂದಿಗೆ ಬಹುಷಃ ಬೇರೊಂದಿರಲು ಸಾಧ್ಯವಿಲ್ಲ. ಅಲ್ಲಿದ್ದ ಆಟಗಾರರಿಂದಿಡಿದು ನೆರೆದಿದ್ದ ಪ್ರತಿಯೊಬ್ಬ ಪ್ರೇಕ್ಷಕನಿಗೂ ಭಾರತದ ಈ ಮಟ್ಟಿನ ಹೋರಾಟ ಸಹಜವಾಗಿಯೇ ದಿಗ್ಬ್ರಮೆಯನ್ನುಂಟುಮಾಡಿತ್ತು. ಭಾರತಕ್ಕು ಸರಣಿ ಗೆಲುವಿಗೂ ಇದ್ದ ಅಂತರ ಕೇವಲ ಹತ್ತು ವಿಕೆಟ್ಗಳಷ್ಟೇ. ಆದರೆ ಆಸ್ಟ್ರೇಲಿಯನ್ನರಿಗೆ ಅದು 443 ರನ್ಗಳ ದೂರದ ಪಯಣ. ಮೇಲಾಗಿ ಟೆಸ್ಟ್ ಇತಿಹಾಸದಲ್ಲೇ ಈವೊಂದು ಬೃಹತ್ ಮೊತ್ತವನ್ನು ನಾಲ್ಕನೇ ಇನ್ನಿಂಗ್ಸ್ ನಲ್ಲಿ ಗಳಿಸಿದ್ದ ಪುರಾವೆಗಳೇ ಇಲ್ಲ. ಆದರೇನಂತೆ. ಅಷ್ಟು ಸಲೀಸಾಗಿ ಸೋಲೊಪ್ಪಿಕೊಳ್ಳುವ ಜಾಯಮಾನ ಆಸ್ಟ್ರೇಲಿಯನ್ನರದಲ್ಲ. ಈಗಿನ ತಂಡ ಅದೇನೇ ಇರಬಹದು ಆದರೆ ಅಂದಿನ ಸ್ಟೀವ್ ವಾ ಬಳಗಗಂತೂ ಅದನ್ನು ಅರಗಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಮೇಲಾಗಿ ಅದು ಪ್ರತಿಷ್ಠೆಯ ಪ್ರೆಶ್ನೆ. ವಿಶ್ವಕಪ್ ಅನ್ನು ಗೆದ್ದ ತಂಡ ತನ್ನದೇ ನೆಲದಲ್ಲಿ ವಿದೇಶಿ ತಂಡದಿಂದ ಸರಣಿ ಸೋಲನ್ನು ಕಾಣುವುದು ಕಾಂಗರೂಗಳಿಗೆ ಕಲ್ಪನೆಗೂ ಮೀರಿದ ಸಂಗತಿಯಾಗಿದ್ದಿತು. ಆದ ಕಾರಣ ಏಕದಿನ ಪಂದ್ಯದಂತೆ ಬ್ಯಾಟ್ ಬೀಸಿದ ಆಸೀಸ್ ಪಡೆ ಶತಾಯಗತಾಯ ಗೆದ್ದೇ ತೀರುತ್ತೇವೆಂಬ ಅಚಲ ವಿಶ್ವಾಸದಿಂದ ಮುನ್ನೆಡಿಯಿತು. ಮೊದಲ ಇನ್ನಿಂಗ್ಸ್ ನಲ್ಲಿ 8 ವಿಕೆಟ್ ಗಳನ್ನು ಕಬಳಿಸಿದ ಕುಂಬ್ಳೆ ಎರಡನೇ ಇನ್ನಿಂಗ್ಸ್ ನಲ್ಲೂ ಅದೇ ಬಗೆಯ ಪ್ರದರ್ಶನವನ್ನು ತೋರಿ ಒಟ್ಟು 4 ವಿಕೆಟ್ಗಳನ್ನು ಒಡೆದುರುಳಿಸಿದ.

ಒತ್ತಡದ ಸ್ಥಿತಿಯಲ್ಲೂ ಮನೋಜ್ಞವಾಗಿ ಬ್ಯಾಟ್ ಬೀಸತೊಡಗಿದ ಆಸೀಸ್ ಬ್ಯಾಟ್ಸಮನ್ಗಳ ಆಟವನ್ನು ನೋಡಿದವರಿಗೆ ಅದು ಗೆಲುವಿನ ಓಟವೆಂದೇ ಎನಿಸಿತು. ಆದರೆ ಪಂದ್ಯದ ಕೊನೆಯ 30 ಓವರ್ ಗಳು ಬಾಕಿ ಇರುವಾಗ ಪಾಂಟಿಂಗ್ ನ ರೂಪದಲ್ಲಿ 4ನೇ ವಿಕೆಟ್ ಯಾವಾಗ ಬಿದ್ದಿತೋ ಆಗ ಮಾತ್ರ ಭಾರತೀಯ ಪಡೆಯಲ್ಲಿ ಗೆಲುವಿನ ವಿಶ್ವಾಸ ಚಿಗುರೊಡೆಯತೊಡಗಿದ್ದು. ಪಾಂಟಿಂಗ್ ಪೆವಿಲಿಯನ್ ಗೆ ಸೇರಿದ ಕೆಲಕ್ಷಣ ಮೌನವಾದ ಸಿಡ್ನಿ ಮೈದಾನ ಅಷ್ಟೂ ಜನರನ್ನು ಎದ್ದು ನಿಲುವಂತೆ ಮಾಡಿತು. ಕೂಡಲೇ ಚಟಚಟ ಸದ್ದಿನ ಚಪ್ಪಾಳೆಯ ರಣಕಹಳೆ ಮೊಳಗಿ ಮಾರ್ಧನಿಸತೊಡಗಿತು. ಕಾರಣ ತಮ್ಮ ಹೀರೊ, ಹೆಚ್ಚು ಕಡಿಮೆ 20 ವರ್ಷಗಳ ಕಾಲ ದೇಶಕ್ಕಾಗಿ ಆಡಿದ ದಂತಕತೆ ಸ್ಟೀವ್ ವಾ ಕೊನೆಯ ಬಾರಿಗೆ ಆಸೀಸ್ ಜೆರ್ಸಿಯನ್ನು ತೊಟ್ಟು ಆಡಲು ಇಳಿಯುತಿದ್ದ. ನೋಡುಗರ ಮೈ ರೋಮಾಂಚನಗೊಳ್ಳುವಂತೆ ಮೂಡಿದ ಆ ಸ್ವಾಗತದ ಮೊರೆತ ಆತ ಸ್ಕಿರ್ಸ್ ನ ಮೇಲೆ ಬಂದು ನಿಂತರೂ ಸಹ ನಿಲ್ಲಲಿಲ್ಲ. ಅಂತಹ ಒಂದು ಸೂಪರ್ ಮ್ಯಾನ್ ನಾಯಕನ ಕೊನೆಯ ಪಂದ್ಯದ ಫಲಿತಾಂಶವೂ ಆತನ ಹೆಗಲ ಮೇಲೆಯೇ ಕುಳಿತಿತ್ತು. ಮೂವತ್ತು ಓವರ್ಗಳು. ಇನ್ನೊಂದೆರೆಡು ವಿಕೆಟ್ ಉರುಳಿದರೆ ಭಾರತದ ದಶಕಗಳ ಕನಸು ನನಸು. 242 ರನ್ ಗಳನ್ನು ಗಳಿಸಿದರೆ ಆಸ್ಟ್ರೇಲಿಯನ್ನರ ಕನಸು ನನಸು. ಇಂತಹ ಸಂಧಿಘ್ನ ಪರಿಸ್ಥಿಯಲ್ಲಿ ಆಡಲತ್ತಿದ ವಾ ಹಾಗು ಕ್ಯಾಟಿಚ್ ಜೋಡಿ ಪಂದ್ಯವನ್ನು ಗೆದ್ದೇ ತೀರಬೇಕೆಂಬ ದೃಢ ನಿರ್ಧಾರದಲ್ಲಿ ಮುನ್ನುಗ್ಗಿದಂತಿತ್ತು. ಭಾರತದ ಬೌಲರ್ ಗಳ ಯಾವ ತಂತ್ರಮಂತ್ರಕ್ಕೂ ಬಗ್ಗದ ವಾ, ಕ್ಯಾಟಿಚ್ನ ಜೊತೆಗೂಡಿ ಬರೊಬ್ಬರಿ 142 ರನ್ ಗಳ ಜೊತೆಯಾಟವನ್ನು ನೀಡಿದ. ತನ್ನ 80 ರನ್ ಗಳ ಅಮೋಘ ಆಟದಿಂದ ಕೊನೆಯ ಟೆಸ್ಟ್ ಪಂದ್ಯವನ್ನು ಸೋಲಿನ ದವಡೆಯಿಂದ ಪಾರುಮಾಡಿ ಆಸ್ಟ್ರೇಲಿಯನ್ನರ ಸರಣಿ ಸೋಲನ್ನು ತಡೆದನಾತ. ಸರಣಿಯ ಕೊನೆಯ ಟೆಸ್ಟ್ ನ ಕೊನೆಯ ಓವರ್ನನಲ್ಲಿ ಕುಂಬ್ಳೆಯ ಬೌಲಿಂಗ್ ಗೆ ಕ್ಯಾಚನಿತ್ತು ಆತ ಔಟಾದಾಗ ನೆರೆದಿದ್ದ ಅಷ್ಟೂ ಜನರು ಕೆಲಕ್ಷಣ ಮೌನವಾದರು. ಸಿಡ್ನಿ ಮೈದಾನ ಮತ್ತೊಮ್ಮೆ ಚಪ್ಪಾಳೆಯ ಸದ್ದಿನಲ್ಲಿ ಮುಳಿಗಿತು. ಸೂರ್ಯ ಪಶ್ಚಿಮದ ಆಗಸದಲ್ಲಿ ಕಣ್ಮರೆಯಾಗತೊಡಗಿದ್ದ. ಸರಣಿ ಸೋಲನ್ನು ತಪ್ಪಿಸಿದ ಆತ್ಮತೃಪ್ತಿಯೊಂದಿಗೆ ತನ್ನ ಕೊನೆಯ ಹೆಜ್ಜೆಗಳನ್ನು ಇಡುತ್ತಾ ಸ್ಟೀವ್ ವಾ ಡ್ರೆಸ್ಸಿಂಗ್ ರೂಮಿನೆಡೆ ಸಾಗಿದ. 90 ನೇ ಓವರ್ನ ಕೊನೆಯ ಒಂದು ಎಸೆತ ಬಾಕಿ ಇರುವಾಗ ಗಿಲ್ಕ್ರಿಸ್ಟ್ ವಿಕೆಟ್ ಅನ್ನು ಉರುಳಿಸಿದ ಭಾರತಕ್ಕೆ ಟೆಸ್ಟ್ ಗೆಲ್ಲಲು ಬಾಕಿ ಉಳಿದ ಒಂದು ಎಸೆತದದಲ್ಲಿ 4 ವಿಕೆಟ್ಗಳನ್ನು ಉರುಳಿಸಬೇಕಿದ್ದರೆ ಆಸ್ಟ್ರೇಲಿಯನ್ನರಿಗೆ 86 ರನ್ಗಳ ಅವಶ್ಯಕತೆ ಇದ್ದಿತು. ಸರಿಯಾಗಿ 90 ಓವರ್ಗಳಿಗೆ ಮುಗಿಯಬೇಕಿದ್ದ ಮ್ಯಾಚು ಇನ್ನೂ 4 ಓವರ್ಗಳಿಗೆ ವಿಸ್ತರಿಸಲ್ಪಟ್ಟಿತ್ತಾದರೂ ಫಲಿತಾಂಶ ಅಂದುಕೊಂಡಂತೆಯೇ ಡ್ರಾ ನಲ್ಲಿ ಕೊನೆಗೊಂಡಿತು. ಕಳೆದ ಸರಣಿ (2001) ಭಾರತದ ಪಾಲಾದರಿಂದ ಪ್ರಸ್ತುತ ಟ್ರೋಫಿ ಭಾರತದ ಬಳಿಯೇ ಉಳಿಯಿತು. ಸರಣಿ ಸಮಬಲದಲ್ಲಿ ಅಂತ್ಯಕಂಡರೂ ಗೆದ್ದಷ್ಟೇ ಖುಷಿ ಮಾತ್ರ ಭಾರತದ ಪಾಳಯದಲ್ಲಿ ಮನೆ ಮಾಡಿತ್ತು. ಕಾರಣ ಆ ಫಲಿತಾಂಶ ಆಸೀಸ್ ನೆಲದಲ್ಲಿ ಭಾರತದ ಅಲ್ಲಿಯವರೆಗಿನ ದಿ ಬೆಸ್ಟ್ ಆಗಿದ್ದಿತು. ಇಂದಿಗೂ ಕೂಡ! ಒಂದುಪಕ್ಷ ಉತ್ತಮ ಆರಂಭವನ್ನು ಪಡೆದಿದ್ದ ಮೂರನೇ ಟೆಸ್ಟ್ ಅನ್ನು ಗೆದ್ದಿದ್ದರೆ ಅಥವಾ ಡ್ರಾ ಮಾಡಿಕೊಂಡಿದ್ದರೂ ಸರಣಿ ಗೆಲುವಿನ ಹಿರಿಮೆ ಅಂದು ಭಾರತದಾಗಿರುತ್ತಿತ್ತು. ರಾಹುಲ್ ದ್ರಾವಿಡ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಬಾಜನನಾದರೆ ಕುಂಬ್ಳೆ ಸರಣಿಯ ಅತಿ ಹೆಚ್ಚು ವಿಕೆಟನ್ನು (24) ಬರೆದು ದಾಖಲೆ ಬರೆದ. ಸೆಹ್ವಾಗ್, ದ್ರಾವಿಡ್, ಸಚಿನ್, ಗಂಗೂಲಿ. ಲಕ್ಷ್ಮಣ್ ಹಾಗು ಕುಂಬ್ಳೆ ಇಂದು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅಜರಾಮರರಾಗಲು ಈ ಸರಣಿ ಪ್ರಮುಖ ಪಾತ್ರವನ್ನು ವಹಿಸಿತು.

ಇಂದು ಆ ಸರಣಿ ಮುಗಿದು ಒಂದೂವರೆ ದಶಕಗಳೇ ಕಳೆದಿವೆ. ಪ್ರಸ್ತುತ 10 ಓವರ್ಗಳ ಕ್ರಿಕೆಟ್ ಪಂದ್ಯಗಳಲ್ಲಿ ಟೆಸ್ಟ್ ಕ್ರಿಕೆಟ್ ನ ಹೊಳಪು ಕಾಣೆಯಾಗುತ್ತಿರುವುದು ಒಂದೆಡೆಯಾದರೆ ನೆಡೆಯುವ ಟೆಸ್ಟ್ ಪಂದ್ಯಗಳ ಹೆಚ್ಚಿನ ಆಯುಷ್ಯ ಹೆಚ್ಚೆಂದರೆ ಮೂರುದಿನಗಳಿಗಷ್ಟೇ ಕೊನೆಯಾಗುತ್ತಿದೆ. ಟೆಸ್ಟ್ ರಾಂಕಿಂಗ್ನಲ್ಲಿ ಇಂದು ಭಾರತ ನಂಬರ್ 1 ಸ್ತಾನದಲ್ಲಿದ್ದರೂ, ನಂಬರ್ 1 ಬ್ಯಾಟ್ಸಮನ್ಗಳೆಲ್ಲರೂ ನಮ್ಮವರೇ ಆದರೂ, ಎದುರಾಳಿ ಪಾಳಯಗಳಲ್ಲಿ ದಂತಕತೆಗಳೆನ್ನುವ ಅಂದಿನ ಆಟಗಾರರ್ಯಾರು ಇರದಿದ್ದರೂ ಆಸ್ಟ್ರೇಲಿಯಾ ಹಾಗು ಸೌತ್ ಆಫ್ರಿಕಾದ ನೆಲಗಳಲ್ಲಿ ಟೆಸ್ಟ್ ಸರಣಿ ಗೆಲ್ಲುವ ಭಾರತದ ಕನಸು ಇನ್ನೂ ಕನಸಾಗಿಯೇ ಉಳಿದಿದೆ. ಪ್ರಸ್ತುತ ಬಾರ್ಡರ್-ಗವಾಸ್ಕರ್ ಸರಣಿ ಸೊರಗಿ ಸುಣ್ಣವಾಗಿರುವ ಆಸ್ಟ್ರೇಲಿಯ ತಂಡವನ್ನು ಬಗ್ಗು ಬಡಿದು ಭಾರತ ಆ ಮೈಲಿಗಲ್ಲನ್ನು ತಲುಪುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಆದರೆ ದೇಸಿ ಪಿಚ್ ಗಳಲ್ಲಿ ಅದೇನೇ ಕುಣಿದರು ತನ್ನ ಸಾಮರ್ಥ್ಯ ಹಾಗು ಬಂಡವಾಳವನ್ನು ವಿದೇಶಿ ನೆಲದಲ್ಲಿ ತೋರಿಸುವ ಚಾಲೆಂಜ್ ತಂಡದ ಅಷ್ಟೂ ಆಟಗಾರರ ಮುಂದಿದೆ.


Friday, November 16, 2018

ಸಂಸದರ ಸಮೇತ ಇಡೀ ಪಾರ್ಲಿಮೆಂಟನ್ನೇ ಮಾರಿದ ಭೂಪನೀತ!!

ಪ್ರತಿಭೆ. ಎಲ್ಲೆಂದರಲ್ಲಿ ಎಲ್ಲರಿಗೂ ಸಿಗುವ ವಸ್ತುವಂತು ಇದು ಅಲ್ಲವೇ ಅಲ್ಲ. ಹುಟ್ಟುತ್ತಲೇ ಬರುವ ಪ್ರತಿಭೆಯನ್ನು ಹೇಗೆ ಪ್ರತಿಭೆಯೆಂದೆನ್ನಲಾಗದೋ ಹಾಗೆಯೇ ಕಷ್ಟ ಪಟ್ಟು ಗಿಟ್ಟಿಸಿಕೊಳ್ಳುವ ಪ್ರತಿಭೆಯನ್ನು ಪ್ರತಿಭೆಯೆಂದೆನ್ನಲಾಗದಿರದು! ಹಾಗೆ ಅದನ್ನು ಅದನ್ನು ಗಿಟ್ಟಿಸಿಕೊಳ್ಳಲು ಸವೆಸಬೇಕಾದ ಹಾದಿಯೂ ಸಹ ಬಲು ದುರ್ಘಮ. ಒಮ್ಮೆ ದೊರೆತರೆ ಮೇಲು-ಕೀಳು, ಬಡವ-ಬಲ್ಲಿದ, ಕಳ್ಳ ಕಾಕರ್ಯಾರನ್ನೂ ಸಹ ಅದು ಪರಿಗಣಿಸುವುದಿಲ್ಲ. ಕಾರ್ಯಗಳು ಒಳ್ಳೆವೋ, ಕೆಟ್ಟವೋ ಅಥವ ಉಪಯೋಗ ದುಷ್ಪಾರಿಣಾಮಗಳೇನೇ ಇದ್ದರೂ ಲೆಕ್ಕಿಸದೆ ಆಡಿಸುವವನ ಕೈಚಳಕದಲ್ಲಿ ಪ್ರತಿಭೆಯೂ ಕೂಡ ಆಡತೊಡಗುತ್ತದೆ. ವಿಶ್ವೇಶ್ವರೈಯ್ಯ, ಸತ್ಯಜಿತ್ ರೇ, ವಿರಾಟ್ ಕೊಹ್ಲಿ ಅಥವಾ ಧೀರೂಭಾಯಿ ಅಂಬಾನಿಯಂತಹ ಹಲವರೊಟ್ಟಿಗಿದ್ದ/ಇರುವ ವಿಭಿನ್ನ ಹಾಗು ವಿಶಿಷ್ಟ ಪ್ರತಿಭೆಯೇ ಅವರನ್ನು ಇಂದು ದೇಶದ ಇತಿಹಾಸದಲ್ಲಿ ದಂತಕತೆಗಳನ್ನಾಗಿ ಮಾಡಿದೆ. ಅಂತೆಯೇ ವೀರಪ್ಪನ್ , ಸದ್ದಾಂ ಹುಸೇನ್, ಒಸಾಮಾ ಬಿನ್ ಲಾಡೆನ್ರಂತಹ ನರರಾಕ್ಷಸರ ಕೈಯ ಬೆಂಕಿಯ ಉಂಡೆಯಂತೆಯೂ ಅದು ಸಾವಿರಾರು ಜನರ ವಂಚನೆ ಹಾಗು ಮಾರಣಹೋಮದಲ್ಲಿ ಪರೋಕ್ಷವಾಗಿಯೂ ಸಹಕರಿಸಿದೆ! ಇಂತಹದ್ದೇ ಪ್ರತಿಭೆಯನ್ನು ಬೆಳೆಸಿಕೊಂಡು ಬಂದ ಹಲವರು ದೇಶದ ನಾನಾ ಜೈಲುಗಲ್ಲಿ ಬಂದಿಯಾಗಿ, ಶಿಕ್ಷೆಗಳೆಲ್ಲವನ್ನೂ ಅನುಭವಿಸಿದರೆ ಕೆಲವರು ಅಲ್ಲಿಯೇ ಕೊಳೆತು ಕೊನೆಯುಸುರೆಳೆದಿದ್ದಾರೆ. ಇನ್ನು ಕೆಲವರು ತಮ್ಮ ಕೊನೆಗಾಲದಲ್ಲಿ ಕುಂಟುತ್ತಾ ಕೊರಗುತ್ತಾ ಹೊರಬರುತ್ತಾರೆ ಮತ್ತೂ ಕೆಲವರು ಮಾತ್ರ ಒಂದಲ್ಲ, ಎರಡಲ್ಲ ಹತ್ತಾರು ಭಾರಿ ಅಂತಹ ಭಾರಿ ಜೈಲುಗಳಿಗೇ ಚಳ್ಳೆಹಣ್ಣನು ತಿನ್ನಿಸಿ ಹೊರ ಓಡಿರುವುದೂ ಉಂಟು. ಅಲ್ಲೂ ಇದ್ದ ಆ ಅಮೂಲ್ಯ ಅಂಶವೇ ಪ್ರತಿಭೆ! ಇಂತಹ ಪ್ರತಿಭೆಗಳ ಮಾಸ್ಟರ್ ಗೇಮ್ಗಳನ್ನು ನಾವು ಹಲವಾರು ಚಿತ್ರಗಳಲ್ಲಿ ಕಂಡು ಬೆರಗಾಗಿದ್ದೇವೆ. ಅಂತಹ ಪ್ರತಿಭೆಯುಳ್ಳವನು ಒಬ್ಬ ವಿಲನ್ ನಂತಾದರೂ ನೋಡುಗರನೇಕರಿಗೆ ಮಾತ್ರ ನಾಯಕಶ್ರೇಷ್ಠ!


ನಟ್ವರ್ಲಾಲ್ :

ಸ್ವಾತಂತ್ರ್ಯಪೂರ್ವ ಭಾರತದಿಂದ ಇತ್ತೀಚಿನ ಕೆಲದಶಕಗಳವರೆಗೂ ಈ ಒಂದು ಹೆಸರು ತುಂಬಾನೇ ಹೆಸರು ಮಾಡಿದ್ದಿತು. ಕಳ್ಳತನವನ್ನು ಪ್ರತಿಭೆಯೆಂದುಕೊಂಡವರಿಗೆ ಆ ಪ್ರತಿಭೆಗೆ ಕೊಡುವ ಉತ್ಕೃಷ್ಟ ಬಿರುದೇನೋ ಎಂಬುವಂತೆ ನಟ್ವರ್ಲಾಲ್ನ ಹೆಸರನ್ನು ಬಳಸಲಾಗುತ್ತಿತ್ತು. ನೂರಕ್ಕಿಂತ ಹೆಚ್ಚಿನ ಕೇಸುಗಳ ಫಲದಿಂದ 113 ವರ್ಷಗಳ ಸಜೆಗೆ ಒಳಗಾಗಿದ್ದ , 8 ರಾಜ್ಯದ ಪೊಲೀಸರಿಗೆ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿ, 50 ಕಿಂತ ಹೆಚ್ಚಿನ ಅನ್ವರ್ಥ ನಾಮಗಳನ್ನು ಒಳಗೊಂದು, ಟಾಟಾ, ಬಿರ್ಲಾ ಹಾಗು ಅಂಬಾನಿಯರಂತಹ ಹತ್ತಾರು ಉದ್ಯಮಪತಿಗಳಿಗೆ ಮಂಕುಬುದ್ದಿಯನ್ನೆರಚಿ, ರಾಷ್ಟ್ರಪತಿಗಳ ಹಸ್ತಾಕ್ಷರವನ್ನೇ ನಕಲು ಮಾಡಿದ್ದ, ಮೂರು ಬಾರಿ ತಾಜ್ ಮಹಲ್ ಅನ್ನು, ರಾಷ್ಟ್ರಪತಿಭವನ ಅಷ್ಟೇ ಏಕೆ ನಮ್ಮ ಇಡೀ ಪಾರ್ಲಿಮೆಂಟನ್ನೇ ಅಷ್ಟೂ ಸಂಸದರೊಟ್ಟಿಗೆ( !) ವಿದೇಶಗರಿಗೆ ಮಾರಿದವನೀತ ಎಂದರೆ ನಮಗೆ ಅಚ್ಚರಿಯಾಗದಿರದು. ಇಂದು ದಿನವಿಡಿ ಅರಚಾಡಿ ಕಚ್ಚಾಡಿ ಸಂತೆಯಂತಾಗುತ್ತಿರುವ ನಮ್ಮ ವ್ಯವಸ್ಥೆಯನ್ನು ಮಾರುವ ಇಂಥವರು ಇಂದಿಗೂ ಇದ್ದಿದ್ದರೆ ಬಹುಷಃ ಒಳಿತಾಗುತ್ತಿತ್ತೇನೋ. ಅದಿರಲಿ. ಇಷ್ಟೆಲ್ಲಾ ಕೃತ್ಯಗಳನ್ನು ಎಸಗಿ ಸಿಕ್ಕಿಹಾಕಿಕೊಂಡ ಈತ ತನ್ನ ನೂರಾರು ವರ್ಷದ ಸೆರೆವಾಸದಲ್ಲಿ ಅನುಭವಿಸಿದ್ದು ಮಾತ್ರ ಹೆಚ್ಚೆಂದರೆ 20 ವರ್ಷಗಳಷ್ಟೇ. ಬಾಕಿ ಅಷ್ಟೂ ಬಾರಿಯೂ ಒಂದಲ್ಲ ಒಂದು ಬಗೆಯಲ್ಲಿ ಪೊಲೀಸರಿಗೆ ಚಳ್ಳೆಹಣ್ಣನು ತಿನ್ನಿಸಿ ಪರಾರಿಯಾಗಿರುತ್ತಾನೆ. ಈತನ ಕಟ್ಟ ಕಡೆಯ ಎಸ್ಕೇಪ್ ನೆಡೆದದ್ದು 1996 ರಲ್ಲಿ. ಆತನಿಗಾದ ಬರೋಬ್ಬರಿ 84 ವರ್ಷ!

ಮೋಸಮಾಡಿ ಹಣಗಳಿಸುವ ಹವ್ಯಾಸ ಈತನಿಗೆ ತನ್ನ ಓದಿನ ದಿನಗಳಿಂದಲೇ ಮೈಹತ್ತಿತ್ತು. ಪರಿಚಯದವರೊಬ್ಬರು ಬ್ಯಾಂಕ್ ಡ್ರಾಫ್ಟ್ ಗಳನ್ನು ಬ್ಯಾಂಕಿಗೆ ಜಮಾವಣೆ ಮಾಡಲು ಈತನನ್ನು ಕಳಿಸುವಾಗ ಅವರುಗಳ ಹಸ್ತಾಕ್ಷರಗಳನ್ನು ನೋಡುತ್ತಾ ಪಕ್ಕಾ ಒರಿಜಿನಲ್ ಹಸ್ತಾಕ್ಷರಗಳಂತೆಯೇ ನಕಲು ಮಾಡುವುದನ್ನು ಕಲಿತು ಅಂದಿಗೇ ಸಾವಿರಾರು ರೂಪಾಯಿಗಳನ್ನು ಬ್ಯಾಂಕಿನಿಂದ ಪಡೆದು ಪರಾರಿಯಾದನಾತ. ಅಲ್ಲಿಂದ ಶುರುವಾದ ಈತನ ಕಳ್ಳತನದ ಪ್ರತಿಭೆ, ಒಂದು ಮೂಟೆ ಅಕ್ಕಿಯನ್ನು ದೇಶದ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಕಳಿಸಿ ಸಿಗುವ ಬಿಲ್ಲಿನಲ್ಲಿ ಒಂದರ ಮುಂದೆ ಎರಡು ಸೊನ್ನೆಯನ್ನು ಸುತ್ತಿ ತಾನೊಬ್ಬ ದೊಡ್ಡ ಅಕ್ಕಿವ್ಯಾಪಾರೀ ಎಂದು ತೋರಿಸಿಕೊಂಡು ಬ್ಯಾಂಕುಗಳಿಗೆ ಮೋಸ ಮಾಡುವವರೆಗೂ ಮುಂದುವರೆಯಿತು. ಅಲ್ಲದೆ ಕೇಂದ್ರ ಸರ್ಕಾರದ ಉನ್ನತ ಸಚಿವರ PA ಎಂದು ನಂಬಿಸಿ ನಮ್ಮ ಪಕ್ಷದ ರಾಜಕಾರಣಿಗಳಿಗೆ ಉತ್ಕೃಷ್ಟ ಮಟ್ಟದ ವಾಚುಗಳು ಬೇಕೆಂದು ಅವುಗಳನ್ನು ಉದ್ಯಮಿಗಳಿಂದ ಖರೀದಿಸಿ ನಕಲು ಚೆಕ್ ಗಳನ್ನು ಬರೆದು ಪರಾರಿಯಾದ ಕೇಸುಗಳೇ ಇವನ ಹೆಸರಲ್ಲಿ ಹತ್ತಾರಿವೆ. ಅಲ್ಲದೆ ವೇಶ್ಯೆಯರಿಗೆ ಮತ್ತಿನ ಮಾತ್ರೆಯನ್ನು ತಿನ್ನಿಸಿ ಅವರ ಆಭರಣಗಳ ಲೂಟಿ, ರೈಲ್ವೆ ಆರ್ಡರ್ಗಳನ್ನು ಸೃಷ್ಟಿಸಿ ವಸ್ತುಗಳನ್ನು ರಾಜಾರೋಷವಾಗಿ ಪಡೆದು ಪರಾರಿಯಾಗುವಿಕೆ ಎಲ್ಲವು ಅಂದಿನ ಕಾಲಕ್ಕೆ ಕೇಳುಗರಿಗೆ ರೋಮಾಂಚನಕಾರಿಯಾದ ಸುದ್ದಿಗಳಾಗಿದ್ದವು. ಇನ್ನು ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ರ ಹಸ್ತಾಕ್ಷರವನ್ನು ನಕಲು ಮಾಡಿ ದೇಶದ ಭವ್ಯ ಸ್ಮಾರಕಗಳನ್ನು ಮಾರಿರುವ ಕತೆಗಳಂತೂ ಈತ ಹುಟ್ಟಿರುವುದೇ ಫೋರ್ಜರಿ ಮಾಡುವ ಸಲುವಾಗೇ ಎಂದನಿಸದಿರದು.



1957, ಕಾನ್ಪುರ ಜೈಲು: 

ತನ್ನ ಕುಕೃತ್ಯಗಳಿಂದ ದೇಶವ್ಯಾಪಿ ಹೆಸರಾಗಿ ಕೊನೆಗೂ ಪೋಲೀಸರ ದಿವ್ಯಹಸ್ತಗಳಿಗೆ ದೊರೆತ ಈತ ಕಾನ್ಪುರ ಜೈಲಿನಲ್ಲಿ ಶಿಕ್ಷೆಯನ್ನನುಭವಿಸಬೇಕಾಯಿತು. ಆದರೆ ತನ್ನ ಮಧ್ಯ ವಯಸ್ಸಿನಲ್ಲಿದ್ದ ನಟ್ವರ್ಲಾಲ್ (ಅಂದಹಾಗೆ ಆತನ ಅಸಲಿ ಹೆಸರು ಮಿಥಿಲೇಶ್ ಕುಮಾರ್ ಶ್ರೀವತ್ಸವ!) ಹೇಗೆ ತಾನೇ ತನ್ನನು ನಾಲ್ಕು ಕೋಣೆಗಳ ರೂಮಿನೊಳಗೆ ಬಂದಿರಿಸಿಕೊಳ್ಳಲು ಸಾಧ್ಯ? ಆತನ ಮನಸ್ಸು ಸದಾ ಹೊರ ಜಗತ್ತನ್ನೇ ಹಾತೊರಿಯುತ್ತಿತ್ತು . ಹೊರಬಂದು ಮತ್ತಷ್ಟು ದೊಡ್ಡ ದೊಡ್ಡ ಕುಳಗಳ ಜೇಬಿಗೆ ಕತ್ತರಿಯನ್ನು ಹಾಕುವ ವಿಧವಿಧವಾದ ಯೋಜನೆಗಳು ಆತನ ತಲೆಯೊಳಗೆ ತಯಾರಾಗಿ ಕಾರ್ಯರೂಪಕ್ಕೆ ಬರಲು ಹವಣಿಸುತ್ತಿದ್ದವು. ಅಂದು ತನ್ನ ಕಿಲಾಡಿ ಬುದ್ದಿಯನ್ನು ಬಳಸಿ ಪೋಲೀಸ್ ಸಮವಸ್ತ್ರ ಒಂದನ್ನು ಕದ್ದ ಈತ ಅದನ್ನು ತನ್ನ ಕೋಣೆಯೊಳಗೆ ಯಾರಿಗೂ ಕಾಣದಂತೆ ಮುಚ್ಚಿಡುತ್ತಾನೆ. ನಂತರ ತನ್ನ ರೂಮಿನ ದ್ವಾರಪಾಲಕರನ್ನು ನಯವಾಗಿ ಪಾಟಯಿಸಿಕೊಂಡಿದ್ದ ಆತ ಹಣ ತುಂಬಿದ ಎರಡು ಬ್ಯಾಗುಗಳನ್ನು ಅವರಿಗೆ ನೀಡಿ ಅಂದು ರಾತ್ರಿ ತನ್ನ ಕೋಣೆಯ ಬಾಗಿಲನ್ನು ಮುಚ್ಚದಂತೆ ಕೇಳಿಕೊಳ್ಳುತ್ತಾನೆ. ಅಷ್ಟು ದೊಡ್ಡ ನೋಟಿನ ಗಂಟನ್ನು ಕಂಡ ದ್ವಾರಪಾಲಕರು ತಮ್ಮ ಕೆಲಸ ಹೋದರೂ ಚಿಂತೆಯಿಲ್ಲವೆಂಬಂತೆ ಆತನ ಬಾಗಿಲನ್ನು ತೆರೆದು ಬಿಟ್ಟರು. ಕದ್ದ ಪೊಲೀಸ್ ಸಮವಸ್ತ್ರವನ್ನು ನೀಟಾಗಿ ಧರಿಸಿ ರಾಜಾರೋಷವಾಗಿ ಹೊರಬಂದ ಅವನನ್ನು ಕಂಡ ಕಾನ್ಸ್ಟೇಬಲ್ ಗಳು ನಮಸ್ಕರಿಸುತ್ತಾ ಜೈಲಿನ ಹೊರಗೇಟನ್ನು ತೆರೆದರು. ಬಹುಷಃ ಆತನ ಆ ಪರ್ಸನಾಲಿಟಿ ಯಾವೊಬ್ಬ ಪೊಲೀಸ್ ಅಧಿಕಾರಿಗೂ ಕಡಿಮೆ ಇದ್ದಿರಲು ಸಾಧ್ಯವಿಲ್ಲ. ಜೈಲಿನಿಂದ ಹೊರಬಂದ ಆತ ನೇರವಾಗಿ ದೂರದಲ್ಲಿದ್ದ ಪೊಲೀಸ್ ಜೀಪಿನೊಳಗೆ ಕೂರುತ್ತಾನೆ. ಆದರೆ ಚಾಲಕನಿಗೂ ಅದೇನು ಮಂಕು ಕವಿದಿತ್ತೋ ಅಥವಾ ಆತನೂ ಈ ಹೊಸ ಅಧಿಕಾರಿಯ ರಗಡ್ ಲುಕ್ಕಿಗೆ ಹೆದರಿಯೋ ಏನೋ ಕೂಡಲೇ ಜೀಪನ್ನು ಶುರುಮಾಡಿ ಆತ ಹೇಳಿದ ಕಡೆ ಚಲಾಯಿಸಿಕೊಂಡು ಹೋಗುತ್ತಾನೆ! ಇತ್ತ ಕಡೆ ಹಣದ ಗಂಟಿನ ಖುಷಿಯಲ್ಲಿದ್ದ ದ್ವಾರಪಾಲಕರು ಗಂಟನ್ನು ಬಿಚ್ಚಿ ನೋಡಿದರೆ ಕಾಣಸಿಕ್ಕ ರಾಶಿ ರಾಶಿ ಬಿಳಿಯ ಹಾಳೆಗಳನ್ನು ನೋಡಿ ಎದೆಬಡಿದುಕೊಂಡು ಅಳತೊಡಗಿದರು. ದೇಶದ ಇತಿಹಾಸದಲ್ಲಿ ಇಂದಿಗೂ ದಿ ಗ್ರೇಟ್ ಎಸ್ಕೇಪ್ ಗಳ ಸಾಲಿನಲ್ಲಿ ನಟ್ವರ್ಲಾಲ್ನ ಈ ಸಾಹಸ ಮೊದಲಾಗಿ ಬರುತ್ತದೆ.

ತನ್ನ ಜೀವನವೆಲ್ಲ ಕಳ್ಳ ಪೊಲೀಸ್ ಆಟದಲ್ಲಿಯೇ ಕಳೆದ ಈತ ತನ್ನ ಎಂಬತ್ತರ ವಯಸ್ಸಿನಲ್ಲಿ ಇಂದೋರ್ ಜೈಲಿನಲ್ಲಿ ಸೆರೆಸಿಕ್ಕು ಕಾಲವನ್ನು ತಳ್ಳುತ್ತಿರುತ್ತಾನೆ. ಆದರೆ ತನ್ನ ಜೀವಮಾನದ ಪಾಪವನ್ನೆಲ್ಲ ಹೊತ್ತುಕೊಂಡು ಸುತ್ತುತ್ತಿದ್ದ ಈ ಹಣ್ಣು ಹಣ್ಣು ಮುದುಕನನ್ನು ಮಹಾರಾಷ್ಟ್ರ ಪೊಲೀಸರು ಬಾಕಿ ಉಳಿದಿದ್ದ ಹಲವಾರು ಕೇಸುಗಳ ಸಲುವಾಗಿ 1996 ರಲ್ಲಿ ಮುಂಬೈಗೆ ಕರೆಸಿಕೊಳ್ಳುತ್ತಾರೆ. ನೆಡೆಯಲೂ ಶಕ್ತವಿರದ ಮುದುಕ ನಟ್ವರ್ಲಾಲ್ ವೀಲ್ ಚೀರಿನ ಮೂಲಕ ಓಡಾಡುತ್ತಿರತ್ತಾನೆ. ಮುಂಬೈಗೆ ಬಂದ ಆತ ತನಗೆ ಕಿಡ್ನಿ ಸಮಸ್ಯೆ ಇದೆ ಎನುತ ಆಸ್ಪತ್ರೆಗೆ ಸೇರಿಕೊಳ್ಳುವ ನೆಪವೊಡ್ಡಿ ಆಸ್ಪತ್ರೆಗೆ ತೆರಳುತ್ತಾನೆ. ಇಬ್ಬರು ಕಾನ್ಸ್ಟೇಬಲ್ಗಳನ್ನು ಜೊತೆಮಾಡಿ ನೆಡೆದಾಡಲು ಶಕ್ಯವಿರದ ಮುದುಕನೊಬ್ಬನ್ನು ಆಸ್ಪತ್ರೆಗೆ ಕಳುಹಿಸುತ್ತಾರೆ ಅಲ್ಲಿನ ಅಧಿಕಾರಿಗಳು. ಮಾರ್ಗಮಧ್ಯದಲ್ಲಿ ದೆಹಲಿಯ ರೈಲ್ವೆ ಸ್ಟೇಷನ್ ನಲ್ಲಿ ತನ್ನೊಟ್ಟಿಗಿದ್ದ ಕಾನ್ಸ್ಟೇಬಲ್ ರಿಗೆ ಕುಡಿಯಲು ಚಹಾವನ್ನು ತರುವಂತೆ ಹೇಳಿ ಅಲ್ಲಿಯೂ ವಿಸ್ಮಯವೆನ್ನುವ ರೀತಿ ಈತ ಪರಾರಿಯಾಗುತ್ತಾನೆ. ಅದೇ ಆತನ ಕೊನೆಯ ಸುದ್ದಿ. ಅಲ್ಲಿಂದ ಮುಂದೆ ನಟ್ವರ್ಲಾಲ್ ಯಾರಿಗೂ ಎಲ್ಲಿಯೂ ಸಿಗುವುದಿಲ್ಲ. ಆದರೆ ಆತನ ದಂತಕಥೆಗಳು ಮಾತ್ರ ಇಂದಿಗೂ ಜೀವಂತವಾಗಿವೆ. ಅಲ್ಲದೆ ಆತನ ಸಾವೂ ಕೂಡ ಕೊನೆಗೆ ಪ್ರೆಶ್ನೆಯಾಗಿಯೇ ಉಳಿಯಿತು. ಕಾರಣ 2009ರಲ್ಲಿ ಆತನ ವಕೀಲ ನಟ್ವರ್ಲಾಲ್ ಆ ವರ್ಷ ಸತ್ತನೆಂದು ಆತನ ವಿರುದ್ದವಿದ್ದ ನೂರಾರು ಕೇಸುಗಳನ್ನು ತೆರವುಗೊಳಿಸಬೇಕೆಂದು ಕೇಳಿಕೊಳ್ಳುತ್ತಾನೆ. ಆದರೆ ನಟ್ವರ್ಲಾಲ್ನ ತಮ್ಮ 1996 ರಲ್ಲಿಯೇ ಆತ ಸತ್ತನೆಂದು ತಾನಾಗಿಯೇ ಖುದ್ದಾಗಿ ಆತನ ಅಂತ್ಯಕ್ರಿಯೆಯನ್ನು ಮಾಡಿರುವುದಾಗಿಯೂ ಹೇಳುತ್ತಾನೆ. 1996 ರಲ್ಲಿಯೇ ಆತ ಸತ್ತರೆ 2009 ರಲ್ಲಿ ಆತನ ವಿರುದ್ದದ ಕೇಸುಗಳನ್ನು ಖುಲಾಸೆ ಮಾಡಬೇಕೆನ್ನುವ ವಕೀಲರ ವಾದದ ಪ್ರಕಾರ ಆತ ಅಂದಿಗೂ ಜೀವಂತವಿದ್ದನು ಎಂಬ ಸಂಶಯ ಮಾತ್ರ ಬಾರದಿರದು.

ಹೀಗೆ ಪ್ರತಿಭೆ ಎಂಬ ಹುಚ್ಚು ಕುದುರೆಯ ಓಟದ ಹಾದಿ ಕೇವಲ ಅದನ್ನು ಓಡಿಸುವವನ ಮನದಲ್ಲಿ ಮೂಡಿದಂತಿರುತ್ತದೆ. ಅದೇ ಪ್ರತಿಭೆಯನ್ನು ಸಮಾಜ ಕಟ್ಟುವ ಕೆಲಸಗಳಿಗೆ ಬಳಸಿಕೊಂಡಿದ್ದರೆ ನಟ್ವರ್ಲಾಲ್ನ ಹೆಸರನ್ನು ಇಂದು ಬೇರೊಂದು ರೀತಿಯಾಗಿಯೇ ಬಳಸಿಕೊಳ್ಳಲಾಗುತ್ತಿತ್ತು. ತನ್ನನ್ನು ದೇಶೀ ರಾಬಿನ್ ಹುಡ್ ಎಂದೇ ಕರೆದುಕೊಂಡು ಮೆರೆಯುತ್ತಿದ್ದ ಈತ ಒಂದು ಉತ್ಕೃಷ್ಟ ಪ್ರತಿಭೆಯನ್ನು ಪೋಲುಮಾಡಿದ ಉದಾಹರಣೆಯಾಗಿ ಮಾತ್ರವಷ್ಟೇ ಇತಿಹಾಸದಲ್ಲಿ ಕಾಣಸಿಗುತ್ತಾನೆ. ಇಂಥಹದ್ದೇ ಚಾಣಾಕ್ಷ ಬುದ್ದಿಯ ಮತ್ತೊಬ್ಬ ದೇಶದ ಅತಿ ಸುರಕ್ಷಿತ ಜೈಲೆಂಬ ಹೆಗ್ಗಳಿಕೆಗೆ ಪಾತ್ರವಾಗುವ ತಿಹಾರ್ ಜೈಲಿನಿಂದ ಪಾರಾರಿಯಾಗಿ ಪೋಲಿಸರ ತಲೆತಗ್ಗುವಂತೆ ಮಾಡುತ್ತಾನೆ. ನಂತರ ಹಾಗೂ ಹೀಗೋ ಸೆರೆಸಿಕ್ಕ ಆತ ತಾನು ತಪ್ಪಿಸಿಕೊಳ್ಳುವುದು ಹಾಗು ಮತ್ತೊಮೆ ಹೀಗೆ ಸೆರೆಸಿಕ್ಕುವುದು ಎಲ್ಲವೂ 'ಪಾರ್ಟ್ ಆಫ್ ಮೈ ಪ್ಲಾನ್' ಎಂದು ವಿಚಾರಣಾಧಿಕಾರಿಗಳು ಕಕ್ಕಾಬಿಕ್ಕಿಯಾಗುವಂತೆ ಮಾಡುತ್ತಾನೆ. ಆತ ಜೈಲಿನಿಂದ ತಪ್ಪಿಸಿಕೊಂಡಿದ್ದೇಕೆ, ತಪ್ಪಿಸಿಕೊಂಡು ಮತ್ತೊಮ್ಮೆ ಸೆರೆ ಸಿಕ್ಕಿದಾದರೂ ಏತಕ್ಕೆ? ವಿದೇಶಿ ಪೋರನ ಆ ದೇಶೀ ಎಸ್ಕೇಪ್ ಸ್ಟೋರಿ ಮುಂದಿನ ಅಂಕಣದಲ್ಲಿ...

Friday, October 26, 2018

#MeToo, ಒಂದೆರಡು ಪ್ರೆಶ್ನೆಗಳು from Me Too...!

ಸ್ಥಳ ವರ್ಲಿ, ಮುಂಬೈ. ಅದು ಕಡುಕಪ್ಪು ಕೋಟುಗಳು ಹಾಗು ಎಲ್ಲೆಂದರಲ್ಲಿ ಸೀಳಿಕೊಂಡು ಗಾಳಿಗೆ ಹಾರಾಡುತ್ತಿರುವ ಡ್ರೆಸ್ಸುಗಳೇ ತುಂಬಿ ತುಳುಕುತ್ತಿರುವ ಸ್ಟಡಿಯಂ. ಸೇರಿರುವರೆಲ್ಲ ಸಿನಿಮಾರಂಗದಲ್ಲಿ ಒಂದಿಲ್ಲೊಂದು ಬಗೆಯಲ್ಲಿ ಗುರುತಿಸಿಕೊಂಡಿರುವ ದೂಡ್ಡ ದೊಡ್ಡ ಹಸ್ತಿಗಳು. ಘಾಡ ಮೌನದ ಸೀರಿಯಸ್ನೆಸ್ ಅನ್ನು ಒಳಗೊಂಡ ಆ ಮುಖಗಳನ್ನು ಗಮನಿಸಿದಾಗ ಮುಂದಿದ್ದ ಸ್ಟೇಜಿನ ಮೇಲೆ ಇಂದು ತೀರಾಸಾಮನ್ಯವೆನಿಸಿಕೊಂಡಿರುವಂತೆ ಕೇಂದ್ರ ಸರ್ಕಾರಗಳ ನೆಡೆಯ ವಿರುದ್ಧವೋ, ದೇವಸ್ಥಾನಗಳಿಗೆ ಮಹಿಳೆಯ ಪ್ರವೇಶ ಬೇಕೆಂಬುದ್ದರ ಬಗ್ಗೆಯೂ ಅಥವಾ ಜೀವ ಪಣವಿಟ್ಟು ಕಾದಾಡುವ ಸೈನಿಕರ ನಡೆಗಳ ಬಗ್ಗೆಯೂ ಜನತೆಗೆ ಅರ್ಥವಾಗದ ದುಬಾರಿ ಭಾಷೆಯಲ್ಲಿ ಅವರವರೇ ಚರ್ಚಿಸಿ, ಮಧ್ಯದಲ್ಲಿ ಒಂದೆರೆಡು ಮದ್ಯಗಳನ್ನು ಏರಿಸಿ, ಕೊನೆಗೆ ತೂರಾಡುತ್ತಾ ಮನೆಗೆ ತೆರಳುವ ಹೈ ಪ್ರೊಫೈಲ್ ಪ್ರಗತಿಪರರ ಕಾರ್ಯಕ್ರಮವೇನೋ ಎಂದೆನಿಸುತ್ತಿತ್ತು. ಆದರೆ ಅಂದು ಅಲ್ಲಿ ನೆಡೆದದ್ದೇ ಬೇರೆ. ಮುಂದಿನ ಮೂರ್ನಾಲ್ಕು ಘಂಟೆ ಅಲ್ಲಿ ನೆಡೆದ ಪ್ರಹಸನ ಇಡೀ ದೇಶಕ್ಕೆ ದೇಶವೇ ಹುಚ್ಚೆದ್ದು ಚರ್ಚಿಸುವ ವಿಷಯವಾಯಿತು. ಸ್ಲೇಟೊಂದನ್ನು ಹಿಡಿದು ಅರೆನಗ್ನಗೊಂಡ ಪಬ್ಲಿಸಿಟಿಯನ್ನೇ ಸಾಧನೆ ಎಂದುಕೊಂಡು ಅರಚಾಡುವ ಕೆಟಗರಿಯ ಮೂವರು, ವಾನರರ ಸೈನ್ಯದ ಕಿರಾತಕರಂತಿರುವ ಆರೇಳು ಜನರನ್ನು ಸ್ಟೇಜಿನ ಮೇಲೆ ಕರೆಸಿ ಅವರ ಮೂರು ತಲೆಮಾರಿನ ಕುಟುಂಬವನ್ನು ಜಾತಿ ವರ್ಣವೆನ್ನದೇ ಮುಖದಿಂದ ಹಿಡಿದು ಮರ್ಮಾಂಗದವರೆಗೂ ಅಣಕಿಸಿ, ಹೀಯಾಳಿಸಿ ತಮ್ಮ ವಿಷಯ ದಾಹದ ತೃಷೆಯನ್ನು ತೀರಿಸಿಕೊಂಡಿದ್ದನ್ನು ಅಲ್ಲಿ ನೆರೆದಿದ್ದ ಜೆಂಟಲ್ ಮ್ಯಾನ್ ಡ್ರೆಸ್ಸಿನ ಸೆಲೆಬ್ರಿಟಿಗಳು ಎದ್ದು ಬಿದ್ದು ನಗುತ್ತಾ ಸ್ವಾಗತಿಸಿದರು. ಕೇಕೆಹಾಕುತ್ತ ಕುಣಿದು ಕುಪ್ಪಳಿಸಿದರು. ಅಲ್ಲಿ ನೆರೆದಿರುವರಷ್ಟೇ ಅಲ್ಲದೆ ಬಾರದಿರುವರನ್ನೂ ಮಾತಿನಲ್ಲಿ ಅಳಿದು ಜಾಡಿಸಿದರು. ಹಿರಿಯರು ಕಿರಿಯರು ಎಂಬೋದನ್ನು ಲೆಕ್ಕಿಸದೆ ನೆಡೆದ ಆ 'A' ಕೆಟಗರಿಯ ಕಾರ್ಯಕ್ರಮವನ್ನು ಪ್ರೆಶ್ನಿಸಹೊರಟವರಿಗೆ 'ಅಭಿವ್ಯಕ್ತಿ' ಸ್ವಾತಂತ್ರ್ಯದ ಬಾವುಟವನ್ನು ಹಾರಿಸುತ್ತ ನಂತರ ನುಳಚಿಕೊಂಡರು. ಯಾವುದೇ ಹ್ಯಾಷ್ ಟ್ಯಾಗ್ ಗಳಾಗಲಿ, ಪಿಟಿಷನ್ಗಳ ಅಭಿಯಾನಗಳಾಗಲಿ ಅಂದು ಕಾಣಲಿಲ್ಲ. ಅಲ್ಲಿ ನೆರೆದಿದ್ದ ಯಾವೊಬ್ಬ ಸೆಲೆಬ್ರೆಟಿಯೂ ನನ್ನ ಮಾನ ಹರಾಜಾಯಿತು ಏನುತಾ ಮಾನನಷ್ಟ ಮೊಕದ್ದಮ್ಮೆಯನ್ನು ಊಡಲಿಲ್ಲ.... ಏಕೆ?

ಅದು ಟ್ರಡಿಷನಲ್ ಚಿತ್ರಗಳ ಓಟವನ್ನು ತಡೆಯಿಡಿದು, ಬಡಿದು, ತುಳಿದು ಬೆಳೆಯಲೆತ್ನಿಸುತಿದ್ದ ಕಮರ್ಷಿಯಲ್ ಚಿತ್ರಗಳ ಜಮಾನ. ಆದರೆ ಅದೆಷ್ಟೇ ಕಮರ್ಷಿಯಾಲಿಟಿ ಚಿತ್ರದಲ್ಲಿ ಇದ್ದರೂ ಕ್ಲಾಸಿಕ್ ಚಿತ್ರಗಳ ಹೊಳಪಿನ ಮುಂದೆ ಆವುಗಳು ತೀರಾನೇ ಮಂಕಾಗುತ್ತಿದ್ದವು. ಕ್ರಿಯೆಟಿವಿಟಿ ಏನೆಂಬುದೇ ಅರಿಯದ ಅಮಾಯಕ ನಿರ್ದೇಶಕ ಆಗ ಬೇರೆದಾರಿ ಕಾಣದೆ ಕೆಲವು ವಯಸ್ಕ ಸೀನ್ಗಳನ್ನು ಚಿತ್ರಗಳಲ್ಲಿ ತೂರಿಸಬೇಕಾಯಿತು. ನಾವು ನಟರು, ಡೈರೆಕ್ಟರ್ ಸಾಹೇಬರ ಕೈಯಲ್ಲಿ ನಲಿಯುವ ಗೊಂಬೆಗಳು, ಅವರು ಆಡಿಸಿದ ಆಟವನ್ನು ಆಟವಾಡುವವರು ಎಂಬ ಸ್ಟೇಟ್ಮೆಂಟ್ ಗಳನ್ನು ನೀಡುತ್ತಾ ನಟ ನಟಿಯರೂ ತಮ್ಮ ಮೂರು ಕಾಸಿನ ಮರ್ಯಾದೆಯ ಹರಾಜನ್ನು ಕೊಂಚ ಡೈರೆಕ್ಟರ್ಗಳಿಗೂ ಹೊರಿಸಿ, ನಟಿಸಿ, ಹಣವನ್ನು ಗಳಿಸಿ ಅಲ್ಲಿಂದ ಪಾರಾಗುತ್ತಿದ್ದರು. ಹೆಚ್ಚಾಗಿ ತಮ್ಮ ವೃತ್ತಿಜೀವನದ ಆದಿಯಲ್ಲಿರುತ್ತಿದ್ದ ಅವರುಗಳು ಹಣ ಹಾಗು ಪಬ್ಲಿಸಿಟಿಗಳು ಸಿಗುವ ಕ್ರ್ಯಾಶ್ ಕೋರ್ಸ್ ಗಳ ಶಾರ್ಟ್ಕಟ್ಟನು ಹಿಡಿದ್ದಿದ್ದರು. ಆಗ ಎಲ್ಲವೂ ಸರಿ. ಎಲ್ಲರೂ ತನ್ನ ಜೀವನವನ್ನು ಕಟ್ಟಿ ಬೆಳೆಸುವ ಮಾರ್ಗದರ್ಶಕರು. ಅದಕ್ಕಾಗಿ ಚಿತ್ರದಲ್ಲಿ ಎಂತಹ ಸೀನ್ಗಳನ್ನೂ ಮಾಡಲು ಸಿದ್ದ. ಏನೂ ಮಾಡಲೂ ಸಿದ್ದ. ಏಕೆಂದರೆ ಅದು 'ಬೋಲ್ಡ್' ಕ್ಯಾರೆಕ್ಟರ್. ಅಲ್ಲದೆ ಅದೊಂದು ಆರ್ಟ್. ದುರ್ಬಿನ್ ಇಟ್ಟು ಕಣ್ಣರಳಿಸಿ ನೋಡಿದರೂ ಎಳ್ಳಷ್ಟೂ ನಟನೆಯ ಅಂಶವನ್ನು ಕಾಣದ ಆ ಮುಖಗಳು ಆರ್ಟ್ ಅಂಡ್ ಕ್ಯಾರೆಕ್ಟರ್ ಗಳ ಬಗ್ಗೆ ಮಾತನಾಡುವಾಗ ಅಂದು ಕಿವಿಯಿಟ್ಟು ಕೇಳುತ್ತಾ ಸಿಳ್ಳೆ ಚಪ್ಪಾಳೆಗಳನ್ನು ಬಾರಿಸಿದ ಗುಂಪನ್ನೂ ಶ್ಲಾಘಿಸಲೇ ಬೇಕು ಬಿಡಿ. ಅದೇನೇ ಇರಲಿ. ಈಗ ದಶಕಗಳ ನಂತರ ಮತ್ತದೇ ಕ್ಯಾರೆಕ್ಟರ್ಗಳು ತಲೆಯೆತ್ತಿವೆ. ತಮ್ಮ ನಟನ ಕೌಶ್ಯಲ್ಯದ ಹಿರಿಮೆಗೆ ಮೂರು ದಿನದ ಮಟ್ಟಿಗೆ ನೆಟ್ಟಗೆ ಚಿತ್ರರಂಗದಲ್ಲಿ ನೆಲೆಯೂರಲಾಗದ ಅವುಗಳು ಈಗ ಮತ್ತೊಮ್ಮೆ ಟಿವಿ ಪರದೆಯ ಮೇಲೆ ಬಂದಿವೆ. ಕೈಗೊಂದು ಕಾಲಿಗೊಂದು ಸಿಗುವ ರಿಯಾಲಿಟಿ ಷೋಗಳ ದೃಷ್ಟಿ ತಮ್ಮೆಡೆ ಹರಿಯಲೋ ಅಥವಾ ಮತ್ತದೇ ಪುಕ್ಕಟೆ ದೊರೆಯುವ ಹಣ ಹಾಗು ಪಬ್ಲಿಸಿಟಿಯ ಧಾಹಕ್ಕೋ ಆತೊರೆಯುವ ಅವುಗಳ ಹಪಾಹಪಿ ಪ್ರೆಸ್ ಕಾನ್ಫೆರೆನ್ಸ್ ಒಂದನ್ನು ಕರೆಸಿ ದಶಕಗಳ ಹಿಂದೆ ಜರುಗಿದ ಶೋಷಣೆಯನ್ನು ಊರು ಬಿದ್ದರೂ ಕ್ಯಾರೇ ಎನ್ನದೆ ಸೆಲೆಬ್ರಿಟಿಗಳ ಬಾಲದ ಹಿಂದೆ ಅಲೆಯುವ ಕೆಲ ಮಾಧ್ಯಮಗಳ ಮುಂದೆ ಕಾಣುತ್ತದೆ. ಅದೊಂದು ದಿನ, ಅದೆಲ್ಲೋ, ಅದೆಷ್ಟೊತ್ತಿಗೋ ನನ್ನ ಮೇಲೆ ಆತ ಅಸಭ್ಯವಾಗಿ ವರ್ತಿಸಿದ, ಹೇಳಬಾರದ ಮಾತನ್ನು ಹೇಳಿದ, ಶೋಷಿಸಿದ ಎಂದೆಲ್ಲಾ ಒದರುತ್ತಾ ನೆರೆದಿರುವವರ ಸಿಂಪತಿಯನ್ನು ಪಡೆಯಲೆತ್ನಿಸುವ ಅವುಗಳ ಪ್ರಸ್ತುತ ಆಟ ಯಾರಿಗೇನು ತಿಳಿಯದಂತಲ್ಲ. ಕ್ರಿಕೆಟ್ ದಿಗ್ಗಜರಿಂದಿಡಿರು ಪ್ರಸಿದ್ಧ ನಟ ನಿರ್ದೇಶಕರವರೆಗೆ ಬೊಟ್ಟು ಮಾಡುತ್ತಾ ಜೀವನದ ಗೊತ್ತು ಗುರಿ ಇಲ್ಲದೆ ಅಲೆಯುವ ಅವುಗಳ ಸ್ಟೇಟ್ಮೆಂಟ್ ಗಳನ್ನು ಪರೀಕ್ಷೆ ಹಾಗು ಪರಾಮರ್ಶೆಗೆ ಒಳಪಡಿಸದೆ ಮುಖ್ಯವಾಹಿನಿಯಲ್ಲಿ ಬಿತ್ತರಿಸಲಾಗುತ್ತದೆ. ಹೀಗೆ ಅಂದು ಯಾವುದೇ ನೀಲಿ ಚಿತ್ರಗಳಿಗೂ ಕಡಿಮೆ ಎನಿಸದ, ಎಂತಹ ವಯಸ್ಕ ಸೀನ್ಗಳನ್ನೂ ನೀರು ಕುಡಿದಂತೆ ಮಾಡಿ, ಒಂದು ಮಾತನ್ನು ತುಟಿಕ್ ಪಿಟಿಕ್ ಅನ್ನದೆ ಇಂದು ಅದೆಲ್ಲೋ ಆತ ಆಗಂದ,ಇವರು ಹೀಗೆಂದರು, ಈತ ಅಲ್ಲಿಗೆ ಕರೆದ, ಕಣ್ಸನ್ನೆ ಮಾಡಿದ ಹಾಗಾಗಿ ನನ್ನ ಮೇಲೆ ಶೋಷಣೆಯಾಗಿದೆ ಎಂಬ ಮಾತುಗಳಿಗೆ ಆ ಮಟ್ಟಿನ ಪ್ರಾಮುಖ್ಯತೆಯನ್ನು ಕೊಡುವ ಮಾಧ್ಯಮಗಳ ಬಗೆಯನ್ನು ಪ್ರೆಶ್ನಿಸುವರೇ ಇಲ್ಲ, ಏಕೆ?

ಅದೊಂದು ಕಾಲವಿತ್ತು. ಸಿನಿಮಾದಲ್ಲಿ ನಟಿಸುವ ನಾಯಕ ಹಾಗು ನಾಯಕಿಯರ ಆಧಾರದ ಮೇಲೆ ಪೋಷಕರು ತಮ್ಮ ಮಕ್ಕಳನ್ನು ಅಂತಹ ಸಿನಿಮಾಗಳಿಗೆ ಕರೆದುಕೊಂಡು ಹೋಗಬೇಕೋ ಬೇಡವೋ ಎಂಬುದನ್ನು ನಿರ್ಧರಿಸುತ್ತಿದ್ದರು. ಆ ನಾಯಕ ನಾಯಕಿರಿಯರೂ ಸಹ ತಮ್ಮ-ತಮ್ಮ ಸ್ಥಾನದ ಜವಾಬ್ದಾರಿಯನ್ನು ಅರಿತು ಸಿಗುವ ಪಾತ್ರಗಳನ್ನು ಕೇಳಿ, ಕಲ್ಪಿಸಿ, ಬೇಡವಾದಾದನ್ನು ತಿರಸ್ಕರಿಸಿ ಬೇಕಾದನ್ನು ಮಾರ್ಪಡಿಸಿ ಒಟ್ಟಿನಲ್ಲಿ ಎಲ್ಲಿಯೂ ತನ್ನ ಗೌರವಕ್ಕೆ ಹಾಗು ಜನತೆಯ ನಂಬುಗೆಗೆ ದಕ್ಕೆ ಬಾರದಂತಹ ಪಾತ್ರಗಳನ್ನು ಮಾಡುತ್ತಾ ನಟಿಸಿ ರಂಜಿಸುತ್ತಿದ್ದರು. ಆದರೆ ಕಾಲ ಕಳೆದಂತೆ ಹಣದ ಹುಚ್ಚುಹೊಳೆಯಲ್ಲಿ ಪ್ರಸ್ತುತ ಬಹುಪಾಲು ನಟನಟಿಯರು ಸಾಮಾಜಿಕ ಜವಾಬ್ದಾರಿ, ಅಭಿಮಾನಿಗಳ ಬಗೆಗಿನ ಕಳಕಳಿ ಎಂಬೆಲ್ಲ ನಿಯಮಗಳನ್ನು ಯಾವುದೇ ಮುಲಾಜಿಲ್ಲದೆ ಮುರಿದು 'ಫೇಮ್' ಎಂಬ ಕಿರೀಟದ ಧಾಹದಲ್ಲಿ ದೈಹಿಕವಷ್ಟೇ ಅಲ್ಲದೆ ಮಾನಸಿಕವಾಗಿಯೂ ನಗ್ನಗೊಳ್ಳುತ್ತಿದ್ದಾರೆ. ಪ್ರಸ್ತುತ ಕಾಲದ ಇಂತಹ ಬಹುಮಂದಿ ನಟ ನಟಿಯರಿಗೆ ಶೋಷಣೆಯ ಹೆಸರಿನಲ್ಲಿ ಇನ್ನೊಬ್ಬರ ಮೇಲೆ ಬೊಟ್ಟು ಮಾಡುವ ನೈತಿಕ ಹಕ್ಕು ನಿಜವಾಗಿಯೂ ಇದೆಯೇ ಎಂಬ ಪ್ರಶ್ನೆ ಉದ್ಭವಿಸದಿರದು. ಅಲ್ಲದೆ ಎಂದು 'ಚಿತ್ರಮಾಧ್ಯಮ'ಗಳು 'ಫಿಲ್ಮ್ಇಂಡಸ್ಟ್ರಿ'ಗಳಾದವೋ ಅಂದೇ ಕಲೆ, ಸಂಗೀತ, ಸಾಹಿತ್ಯ ಎಂಬ ಬೇಕಾದ ಅಂಶಗಳು ಅಲ್ಲಿಂದ ದೂರವಾದವು. ಇಂದು ಸಿನಿಮರಂಗವೇನಿದ್ದರೂ ಇತ್ತಕಡೆಯಿಂದ ನೂರು ರೂಪಾಯಿ ತಳ್ಳಿ ಅತ್ತ ಕಡೆಯಿಂದ ಕೋಟಿ ಪಡೆಯುವ ಯಂತ್ರವಷ್ಟಾಗಿ ನಿಂತಿದೆ. ಇಲ್ಲಿ ಎಲ್ಲವು ಹಣಮಯವಾಗಿರುವಾಗ ಸರಿ-ತಪ್ಪು, ಸುಳ್ಳು-ನಿಜ, ಕಪ್ಪು-ಬಿಳುಪೆಂಬ ಭಾವಗಳಿಗೆ ಎಲ್ಲಿಯ ಬೆಲೆ?

ಒಟ್ಟಿನಲ್ಲಿ ಲಂಗು ಲಗಾಮಿಲ್ಲದೆ ನ್ಯಾಯಮೂರ್ತಿಗಳಂತೆ ವರ್ತಿಸುವ ಮಾಧ್ಯಮಗಳು, ಹೊಲಸು ಪದಗಳ ಸರಮಾಲೆಯನ್ನೇ ಹಾಸ್ಯವೆಂದು ಪರಿಗಣಿಸಿ ನೋಡುಗರನ್ನು ರಂಜಿಸಲೆತ್ನಿಸುವ ಯುವ ಜನಾಂಗ, ಸಾಮಜಿಕ ಬದ್ಧತೆಯನ್ನು ಕಳೆದುಕೊಂಡಿರುವ ಪ್ರಸ್ತುತ ಚಿತ್ರರಂಗಳ ಹಿನ್ನಲೆಗಳಲ್ಲಿ ಇಂದು ಶೋಷಣೆ ಎಂಬ ಪದ ತನ್ನ ನಿಜತ್ವವನ್ನು ಕಳೆದುಕೊಳ್ಳುವಂತೆ ತೋರುತ್ತಿದೆ. ಬೇಕಾಬಿಟ್ಟಿ ಸಿಕ್ಕ ಸಿಕ್ಕಲೆಲ್ಲ ಬಳಕೆಯಾಗಿ ತನ್ನ ನೈಜ ಶಕ್ತಿಯನ್ನು ಕ್ಷಿಣೀಸಿಕೊಳ್ಳುತ್ತಿದೆ. ಮುಖವನ್ನು ಬಣ್ಣಮೆತ್ತುವ ಪೈಂಟ್ ಬೋರ್ಡಿನಂತೆ ಮಾಡಿಕೊಂಡು, ಲಕ್ಷಬೆಲೆಬಾಳುವ ಚಿನ್ನಾಭರಣಗಳನ್ನು ಕಷ್ಟಪಟ್ಟು ಹೊತ್ತುಕೊಂಡು, ಸರಿಯೋ ತಪ್ಪೋ, ನಿಜವೋ ಸುಳ್ಳೋ ಏನಾದರಾಗಲಿ ಮೇರು ವ್ಯಕ್ತಿತ್ವವೊಂದರ ಮಾನಹರಣ ಕಾರ್ಯಕ್ರಮವೆಂದರೆ ತಮ್ಮೆಲ್ಲ ಕೆಲಸಕಾರ್ಯಗಳನ್ನು ಬಿಟ್ಟು ಡೇರೆ ಹೂಡುವ ಕೆಲವು ಮಾನವಪ್ರಾಣಿಗಳನ್ನು ಒಳಗೊಂಡು 'ಶೋಷಣೆ' ಎನುತ ನುಲಿಯುವ ಗುಂಪಿಗೆ ಅಲ್ಲಿ ಸ್ಕೂಲು, ಕಾಲೇಜು, ಆಸ್ಪತ್ರೆ, ಕಚೇರಿಗಳಷ್ಟೇ ಅಲ್ಲದೆ ಆಶ್ರಮ ಅನಾಥಯಲಯಗಳಲ್ಲೂ ನಡೆಯುವ (!)ಶೋಷಣೆ ಶೋಷಣೆ ಎನಿಸುವುದಿಲ್ಲವೇ? ಅವುಗಳ ಧ್ವನಿಗೂ ಧ್ವನಿಗೂಡಿಸಬೇಕೆನಿಸುವುದಿಲ್ಲವೇ? ಸ್ಟಾರ್ಗಿರಿ ಇದ್ದ ಮಾತ್ರಕ್ಕೆ ಇಂದು ಊರಿಗೆ ಊರೇ ಈಕೆಗೆ ಬೆಂಬಲ ಕೊಡಬಹುದು. ಮುಖಕ್ಕೆ ಮಸಿಯನ್ನು ಮೆತ್ತಿಕೊಂಡು ಅಡುಗೆ ಮನೆಯಲ್ಲೆ ಕಾಲ ತಳ್ಳುವ ಅದೆಷ್ಟೋ ಮೂಕ ಜೀವಗಳಿಗೆ ಬೆಂಬಲ ಕೊಡುವವರ್ಯಾರು? ಮೇಲಾಗಿ ಇಂದು ಶೋಷಣೆ ಎಂಬುದು ಕೇವಲ ಮಹಿಳೆಯೊಬ್ಬಳ ಮಾತ್ರದ ಅನ್ಯಾಯದ ಭಾಗವೇ? ಅದೇ ಇಂಡಸ್ಟ್ರಿಯಲ್ಲಿ ಪುರುಷರೊಟ್ಟಿಗೂ ಜರುಗುವ ಶೋಷಣೆಗೆ ಏನೆಂದು ಕರೆಯುತ್ತಾರೆ? ಅಷ್ಟಾಗಿಯೂ ಕೆಲ ಹೆಂಗಸರಿಗೆ ಅದು ಶೋಷಣೆಯ ನಿಜ ರೂಪವೆಂದೇ ಎನಿಸಿದಲ್ಲಿ ನಮ್ಮ ಪೊಲೀಸ್ ಸ್ಟೇಷನ್ ಗಳು, ಕೋರ್ಟು ಕಛೇರಿಗಳೇನು ಸರ್ಕಾರದ ಬೆಂಚು ಬಿಸಿ ಮಾಡಲಿಕ್ಕಿರುವ ಸಂಸ್ಥೆಗಳೇ? ಹೋಗಿ, ನಿಮ್ಮ ಅಳಲನ್ನು, ನೋವನ್ನು, ಜಿಗುಪ್ಸೆಯನ್ನು ಪುರಾವೆಯ ಸಹಿತ ಅಲ್ಲಿ ಬಿಚ್ಚಿಡಿ. ಅದನ್ನು ಬಿಟ್ಟು ಸ್ವಘೋಷಿತ ನ್ಯಾಯಮೂರ್ತಿಗಳೆನಿಸಿರುವ ಟಿವಿ ಚಾನೆಲ್ಲುಗಳನ್ನು ಕರೆದು ಬಾಯಿಗೆ ಬಂದಂತೆ ಅರಚಿದರೆ ಅಪರಾಧಿಗೆ ಶಿಕ್ಷಿಸುವ ನಿಮ್ಮ ಪ್ರಯತ್ನ ನಿಜವಾಗಿಯೂ ಸಫಲವಾಗುತ್ತದೆಯೇ?

ಒಂದಂತು ನಿಜ. ಇಂದು ನೆಡೆಯುತ್ತಿರುವ #MeToo ಅಭಿಯಾನ ಮುಂದಿನ ದಿನಗಳಲ್ಲಿ ಮುಗ್ದ ಜೀವಗಳನ್ನು ಚಿತ್ರದ ಆಮಿಷವೊಡ್ಡಿ ತಮಗೆ ಬೇಕಂತೆ ಬಳಸಲಿಚ್ಛಿಸುವ ಅದೆಷ್ಟೋ ಮನಸ್ಸುಗಳಿಗೆ ಮರ್ಮಾಘಾತವನ್ನು ಉಂಟುಮಾಡುವದಂತು ಸುಳ್ಳಲ್ಲ. ಈ ಅಭಿಯಾನ ಕೇವಲ ಸಿನಿಮಾ ಇಂಡಸ್ಟ್ರಿಯಷ್ಟೇ ಅಲ್ಲದೆ ಇತರೆ ಎಲ್ಲಾ ವಲಯಗಳನ್ನು ಪ್ರವೇಶಿಸಬೇಕು. ಆದರೆ ಇಂದು ಸಮ್ಮತಿಸಿ ನಾಳೆ ದೂರುವಂತಹ ಅಥವಾ ನೋಡಿದ ಮಾತ್ರಕ್ಕೆ ತನ್ನ ಚಾರಿತ್ರವೇ ಹಾಳಾಯಿತ್ತೆನ್ನುವ ಬಾಲಿಶ ಹೇಳಿಕೆಗಳಿಗೆ ಪರಮಾರ್ಶೆಯ ಫಿಲ್ಟರ್ ಅನ್ನು ತೊಡಿಸದೆಯೇ ಸೊಪ್ಪು ತಿನ್ನಿಸುವುದನ್ನು ಮಾತ್ರ ಮಾಧ್ಯಮಗಳು ನಿಲ್ಲಿಸಲೇಬೇಕು. ಅಲ್ಲದೆ ಇವುಗಳೆಲ್ಲದರ ಅಖಾಡವಾಗಿರುವ ಸಿನಿಮಾ ರಂಗ ಕೊಂಚವಾದರೂ ಬದಲಾಗಬೇಕು. ಅರೆ ಬೆತ್ತಲ ಫೋಟೊಶೂಟ್ಗಳ ಮಾಧಕ ಪೋಸುಗಳಿಗೆ ನೋಡುಗರೇನು ಕಾಯಿ ಒಡೆದು ಪೂಜೆಮಾಡುವಿದಿಲ್ಲ ಸ್ವಾಮಿ. ನಿಜವಾದ ಅಭಿಯಾನ ಮೊದಲು ಕ್ರಿಯೇಟಿವಿಟಿಯ ಹೆಸರಿನಲ್ಲಿ ಫ್ಯಾಮಿಲಿ ಫಿಲಂ ಎಂದು ಪಬ್ಲಿಸಿಟಿಯನ್ನು ನೀಡಿ ‘ಇಂಟಿಮೇಟ್ ಸೀನ್ಗಳು ’ 'ಐಟಂ ಸಾಂಗ್ ಗಳು' 'ಹಾಟ್ ಸೀನ್'ಗಳು ಎಂಬ ಬಾಯಿಚಪ್ಪರಿಸುವ ದೃಶ್ಯಗಳನ್ನು ತೋರಿಸುವವರ ವಿರುದ್ದವೂ ಇರಲಿ. ಇಲ್ಲವಾದರೆ ಕೆಸರನ್ನು ತಿನ್ನುವ ಪ್ರಾಣಿಯನ್ನು ಕೆಸರಿಗೇ ಒಗೆದಂತೆ ಶೋಷಣೆಯೆನುತ ಒದರುವ ಮಾತುಗಳು ಅತ್ತ ಆರಕ್ಕೂ ಏರದ ಮೂರಕ್ಕೂ ಇಳಿಯದ ಗಾಳಿಪದಗಳಾಗಿ ಕಾಣೆಯಾಗಬಲ್ಲವು.

Friday, October 19, 2018

ಆಲಾಪ..

'ಎಕ್ಸ್ ಕ್ಯೂಸ್ ಮೀ .. ನೀವು ರಿಸೆರ್ವ್ಡ್ ಸೀಟಲ್ಲಿ ಕೂತಿದ್ದೀರಾ ಅನ್ಸುತ್ತೆ?'

'ಇಸ್ ಇಟ್?.. ಸ್ವಲ್ಪ ತಾಳಿ, ಒಮ್ಮೆ ಚೆಕ್ ಮಾಡ್ಕೊಬಿಡ್ತೀನಿ' ಎನುತ ಆಕೆ ಮೊಬೈಲ್ ಅನ್ನು ಹೊರಗೆಳೆದಳು

'ಓ ಗಾಡ್, ಮೊಬೈಲ್ ಸ್ವಿಚ್ ಆಫ್ ಬರ್ತಾ ಇದೆ. ಏನ್ ಹುಡುಗ್ರಪ್ಪ ಇವ್ರು…ಎನಿವೇಸ್ ಐಮ್ ಸಾರೀ..ನೀವ್ ಬಂದ್ ಕೂತ್ಕೊಳ್ಳಿ' ಎಂದು ಕೂಡಲೇ ಆಕೆ ಎದ್ದು ಕಾಫಿ ಡೇಯಿಂದ ಹೊರನೆಡೆದಳು.

ಈತನಿಗೆ ಅಷ್ಟರಲ್ಲಾಗಲೇ ತನ್ನ ಅನುಮಾನ ನಿಜವೆನಿಸಿದ್ದರಿಂದ ಒಂದರೆಕ್ಷಣ ಮಾತು ಬಾರದಂತಾಗುತ್ತದೆ. ತನ್ನ ಮೊಬೈಲ್ ಅನ್ನು ಹೊರಗೆಳೆದು ಸ್ವಿಚ್ ಆನ್ ಮಾಡಿದ ಕೂಡಲೇ ಆಕೆಯ ನಂಬರ್ ಎಂದು ಕಳಿಸಲ್ಪಟ್ಟಿದ್ದ ನಂಬರ್ನಿಂದ ಎರಡು ಮಿಸ್ಸೇಡ್ ಕಾಲ್ ಗಳು ಬಂದಿರುತ್ತವೆ. ಇದೇಗೆ ಸಾಧ್ಯ!? ಅದೆಷ್ಟೇ ಯೋಚಿಸಿದರೂ ಉತ್ತರ ಹೊಳೆಯಲಿಲ್ಲ. ಕೂಡಲೇ ಆಕೆಯ ಅಪ್ಪನಿಗೆ ಫೋನಾಯಿಸಿ ನಾಲ್ಕು ಬೈದುಬಿಡಬೇಕೆಂಬ ಮನಸ್ಸಾದರೂ ಏಕೋ ಸುಮ್ಮನಾಗುತ್ತಾನೆ. 'ಐಮ್ ಸಾರೀ..ನೀವ್ ಬಂದ್ ಕೂತ್ಕೊಳ್ಳಿ' ಎಂದ ಆಕೆಯ ಮಾತುಗಳಲ್ಲಿ ಅದೇನೋ ಒಂದು ಬಗೆಯ ಮುಗ್ದತೆ ಆತನನ್ನು ಕಾಡಿತು. ಅಂತಃಕರಣ ರೋಧಿಸಿತು. ತಾನು ಫೋಟೋದಲ್ಲಿ ನೋಡಿದ ಚಲುವೆ ನಿಜವಾಗಿಯೂ ಇವಳೇನಾ ಏನುತಾ ಆಕೆಯ ಫೋಟೋಗಳನ್ನೇ ಒಂದೊಂದಾಗೆ ನೋಡತೊಡಗಿದ.

.

.


ಆ ಕಿಕ್ಕಿರಿದ ಜನಸ್ತೋಮದಲ್ಲೂ ಸಣ್ಣ ಭೂಕಂಪನವನ್ನೇ ಸೃಷ್ಟಿ ಮಾಡಿದ್ದವು ಮಾನಸನ ಆ ಡ್ರಮ್ ಬೀಟ್ಸ್ ಗಳು. ಮಿರಿಮಿರಿ ಮಿರುಗುವ ಕಪ್ಪಾದ ಲೆದರ್ ಜಾಕೆಟ್, ಮುಖವನ್ನು ಅರೆ ಮುಚ್ಚುವಷ್ಟು ದೊಡ್ಡದಾದ ತಲೆಯ ಕ್ಯಾಪು, ಕಪ್ಪಾದ ಝರಿಯಂತೆ ಕೆಳಗಿಳಿದು ಬೆನ್ನಿನವರೆಗೂ ಬೆಳೆದಿರುವ ಆ ನೀಳ ಕೂದಲು, ಕಣ್ಣಿಗೊಂದು ಘಾಡ ಕೆಂಪಿನ ಕನ್ನಡಕ, ಕಪ್ಪು ಜೀನ್ಸಿನ ಕೆಳಗೆ ಬೆಳ್ಳಗೆ ಹೊಳೆಯುವ ಶೂಗಳೊಟ್ಟಿಗೆ ಡ್ರಮ್ ಸ್ಟಿಕ್ ಗಳೆರಡನ್ನು ಹಿಡಿದು ಈತ ಬಡಿಯುತ್ತಾ ಹೋದರೆ ಅಲ್ಲಿ ಸೇರುವ ಸಮಸ್ತ ಜನಸ್ತೋಮ ಹುಚ್ಚೆದ್ದು ಕುಣಿಯತೊಡಗುತ್ತದೆ. ಅದು ಆತನ ಸಂಗೀತ ಜ್ಞಾನವೂ ಅಥವಾ ಸಂಗೀತವೇನೆಂದೇ ಅರಿಯದ ಜನಸ್ತೋಮದ ರಂಜನೆಯೋ ಅಥವಾ ತನ್ನ ದುಃಖ, ನೋವು, ಹತಾಶೆ ಹಾಗು ಅವಮಾನವನ್ನು ಹೊರಹಾಕುವ ಪ್ರಕ್ರಿಯೆಯೋ ಒಟ್ಟಿನಲ್ಲಿ ವಾರಕ್ಕೊಂದೆರಡು ಬಾರಿ ಹೀಗೆ ತಡರಾತ್ರಿಯವರೆಗೆ ಪಬ್ಬಿನಲ್ಲಿ ಡ್ರಮ್ಸ್ಗಳನ್ನು ಚಚ್ಚಿ ಕೆಡವುವಂತೆ ಭಾರಿಸಿ ಮನಸ್ಸಿನ ತನ್ನೆಲ್ಲ ಭಾರವನು ಕರಗಿಸಿಕೊಳ್ಳುತ್ತಿದ್ದ ಮಾನಸ್. ರಂಜನೆ ಹವ್ಯಾಸವಾಗಿ, ಹವ್ಯಾಸ ರೂಟಿನ್ ನಂತಾಗಿ ಈಗ ಅದು ಒಂತರ ಚಟವಾಗಿಬಿಟ್ಟಿದೆ ಎಂದರೆ ತಪ್ಪಾಗದು. ಒಂದು ಪಕ್ಷ ಆತ ಬಿಯರ್ ಹಾಗು ಸಿಗರೇಟನ್ನೂ ಬಿಟ್ಟರೂ ಹೀಗೆ ವಾರಕೊಂದೆರಡು ಬಾರಿ ಡ್ರಮ್ ಗಳನ್ನು ಬಡಿಯದೇ ಇರುತ್ತಿರಲಾರ. ಇಲ್ಲವಾದರೆ ಏನನ್ನೋ ಕಳೆದುಕೊಂಡ ಶೂನ್ಯಭಾವ ಆತನ ಮನಸ್ಸನ್ನು ಆವರಿಸುತ್ತಿತ್ತು.

ಇಂದು ರಾತ್ರಿ ಹನ್ನೆರಡರ ಸುಮಾರಿಗೆ ಪುಬ್ಬಿನಿಂದ ಹೊರಬಂದ ಮಾನಸ್ ತನ್ನ ಕಾರಿನೊಳಗೆ ಕೂರುವ ಮುನ್ನ ಸಿಗರೇಟನ್ನು ಹೊತ್ತಿಸಲು ಲೈಟರ್ ಹೊರತೆಗೆದ. ಕೂಡಲೇ ರ್ರುಮ್ ರ್ರುಮ್ ಎಂದು ಸದ್ದು ಮಾಡುತ್ತಾ ಸೈಲೆಂಟ್ ಮೋಡಿನಲ್ಲಿದ್ದ ಆತನ ಮೊಬೈಲು ಅಲುಗಾಡತೊಡಗಿತು. ಟಪ್ ಟಪ್ ಎಂದು ಬಂದ ನಾಲ್ಕೈದು ಮೆಸೇಜ್ ಗಳನ್ನು ಆತ ಕಣ್ಣರಳಿಸಿ ನೋಡತೊಡಗಿದ. ಅದೆಂದೋ ಕಾಲೇಜಿನ ದಿನಗಳಲ್ಲಿ ತೆರೆದಿದ್ದ ಮ್ಯಾರೇಜ್ ಆಪ್ (!) ನಿಂದ ಯಾರೋ ಹುಡುಗಿ ಕಳುಹಿಸಿದ ಸಂದೇಶಗಳಾಗಿದ್ದವು. ಅಂತಹ ಅದೆಷ್ಟೋ ಮೆಸೇಜ್ ಗಳೂ ಬಂದಿದ್ದರೂ, ಅವುಗಳಿಗೆಗೆ ಗುಲಗಂಜಿಯಷ್ಟೂ ಗಮನವನ್ನು ನೀಡದ ಆತನಿಗೆ ಅದ್ಯಾಕೋ ಈಕೆ ಮನಸ್ಸಿಗೆ ತೀರಾ ಹಿಡಿಸಿದಳು. ಹುಡುಗಿ ನೋಡಲು ಹಾಲಿನ ಗೊಂಬೆಯಂತೆ ಸುಂದವಾಗಿದ್ದಾಳೆ. ಆ ಕಪ್ಪಾದ ಕಣ್ಣುಗಳು, ಕೆಂಪಾದ ತುಟಿ, ಘಾಡ ಕಪ್ಪು ಕೂದಲಿಗೆ ಹೊಂದುವಂತೆ ಹಚ್ಚೋತ್ತಿದಂತರಿರುವ ಆ ಹಣೆಯ ಹುಬ್ಬುಗಳು ಹಾಗು ಚೊಕ್ಕವಾದ ಒಂದು ಹಣೆಯ ಬೊಟ್ಟು ಆಕೆಯನ್ನು ಅಪ್ಸರೆಯ ಮಗಳೇನೋ ಎಂಬಂತೆ ಮಾಡಿದ್ದವು. ಪ್ರೀತಿ, ಪ್ರೇಮ, ಸಲುಗೆ, ಸಂಬಂಧ ಎಂದರೆ ಬೇಡವಾಗಿಬಿಟ್ಟಿದ್ದ ಮಾನಸನಿಗೆ ಅದೆಷ್ಟೇ ಪ್ರಯತ್ನಿಸಿದರೂ ಇಂದು ಆಕೆಗೆ ಪ್ರತಿಕ್ರಿಯಿಸದೆ ಇರಲಾಗಲಿಲ್ಲ.

**********************************************

ರೂಪ ಅತಿಸುಂಧರಿಯಾಗದಿದ್ದರೂ ಗುಣವಂತೆ. ಆಕೆಯ ಸನ್ನಡತೆ ಬೇರೆಯ ಯಾವುದೇ ನ್ಯೂನ್ಯತೆಗಳನ್ನೂ ಬದಿಗಿರಿಸುವಂತಿತ್ತು. ಆ ಸಣ್ಣ ಕಂಠದ ಮಾತುಗಳು, ಮಾತಿಗಿಂತ ಆ ಮಾತಿನ ಭಾವವನ್ನರಿತು ಪ್ರತಿಕ್ರಿಯಿಸುವ ಆಕೆಯ ಪ್ರೌಢಿಮೆ, ನವಿರಾದ ಹಾಸ್ಯಪ್ರಜ್ಞೆ, ಸ್ನಾತಕೋತರ ಪದವಿಗಳಿದ್ದರೂ ಅಹಂ ಇಲ್ಲದ ಆಕೆಯ ಕ್ಯಾರೆಕ್ಟರ್, ವಿಶಾಲ ಮನೋಭಾವ, ಇವೆಲ್ಲವೂ ಆಕೆಯನ್ನು ಒಂದು ಆಕರ್ಷಣ ಕೇಂದ್ರವನ್ನಾಗಿ ಮಾಡಿದ್ದವು. ಆದ್ದರಿಂದಲೇ ಏನೋ ದಶಕಗಳ ಹಿಂದಿನ ಅಂಗನವಾಡಿಯ ಗೆಳೆಯರೂ ಆಕೆಯ ಸಂಪರ್ಕದಲ್ಲಿದ್ದಾರೆ. ವರ್ಷಕೊಮ್ಮೆ ಕನಿಷ್ಠವಾದರೂ ಒಮ್ಮೆಯಾದರೂ ಆಕೆಯನ್ನು ನೆನೆದು ಫೋನಾಯಿಸುತ್ತಾರೆ. ತುಸು ಕಪ್ಪು ಬಣ್ಣ, ಕೋಲುಮುಖ ಹಾಗು ಕಣ್ಣಿಗೆ ದಪ್ಪದಾದೊಂದು ಕನ್ನಡಕವನ್ನು ಧರಿಸುವ ಆಕೆಗೆ ‘ಸಹಜ’ವಾಗಿಯೇ ಯಾವುದೇ ಪ್ರೀತಿ ಪ್ರೇಮ ಹಾಗು ಬಾಯ್ ಫ್ರೆಂಡ್ ಗಳೆಂಬ ನಂಟಿರಲಿಲ್ಲ. ರೂಪಳ ಪೋಷಕರಿಗೆ ಆಕೆ ಇಪ್ಪತೈದಾದಂತೆಯೇ ಮದುವೆಯ ಶಾಸ್ತ್ರವನ್ನು ಮಾಡಿ ಮುಗಿಸಬೇಕಂಬ ಚಿಂತೆ ಕಾಡತೊಡಗಿತ್ತು. ಕಳೆದ ಕೆಲ ವರ್ಷಗಳಿಂದ ಆಕೆಯನ್ನು ಕಾಡಿ-ಬೇಡಿ ಕೊನೆಗೆ 'ನೀವ್ ಯಾರನ್ನು ಹೇಳಿದ್ರು ನಾನ್ ಮದುವೆ ಆಗ್ತೀನಿ. ಆದ್ರೆ ಒಂದೇ ಕಂಡೀಶನ್, ಆತನಿಗೆ ಕುಡಿಯುವ ಚಟ ಮಾತ್ರ ಇರಬಾರದು' ಎಂದು ಆಕೆಯಿಂದ ಹೇಳಿಸಿಯೂ ಆಗಿದೆ.

ಪ್ರಸ್ತುತ ಕಾಲದಲ್ಲಿ ಇಂಟೆರ್ನೆಟ್ಟೇ ಎಲ್ಲ ಆಗಿರುವಾಗ ಇಂತಹ ಹುಡುಗನನ್ನು ಹುಡುಕಿಕೊಂಡು ಹೋಗುವುದು ಎಲ್ಲಿಗೆ. ರೂಪಾಳ ತಂದೆ ಉಪಾಯವೊಂದನ್ನು ಮಾಡಿ ಮ್ಯಾರೇಜ್ ಸೈಟಿನಲ್ಲಿ ತಮ್ಮ ಮಗಳ ಅಕೌಂಟ್ ಒಂದನ್ನು ತೆರೆದರು. ಅಲ್ಲಿ ಈಕೆಯ ಒಂದೇ ಕಂಡೀಶನ್ ಅನ್ನು ಸೇರಿಸಿ, ಒಂದೆರೆಡು ಫೋಟೋವನ್ನೂ ಅಪ್ಲೋಡ್ ಮಾಡಿದ್ದರು. ಇದಾದ ನಂತರ ಕೆಲದಿನಗಳ ಕಾಲ ತನ್ನ ಮಗಳಿಗೆ ಸರಿಹೊಂದುವ, ಅತಿ ಸುಂದರನೂ ಅಲ್ಲದ ಅತಿ ಕುರೂಪಿಯೂ ಎಂದನಿಸದ ಹುಡುಗನೊಬ್ಬನನ್ನು ಹುಡುಕತೊಡಗಿದರು. ಅದೆಷ್ಟೇ ಹುಡುಕಿದರೂ, ಅದೆಂತಹದ್ದೇ ಮೆಸೇಜ್ ಗಳನ್ನು ಹರಿಬಿಟ್ಟರೂ ಅತ್ತ ಕಡೆಯಿಂದ ಪ್ರತ್ಯುತ್ತರ ಮಾತ್ರ ಬರುತ್ತಿರಲಿಲ್ಲ. ಇಂತಹ ಗುಣವಂತ ಹುಡುಗಿಗೆ ಒಬ್ಬ ವರನೂ ಸಿಗಲಾರನೇ? ಬಣ್ಣ ಕೊಂಚ ಕಪ್ಪಾದ ಮಾತ್ರಕ್ಕೆ ಗುಣನಡತೆಗೆ ಬೆಲೆಯೇ ಇಲ್ಲವೇ? ಅಪ್ಪ ತಮ್ಮ ನೋವನ್ನು ಒಳಗೇ ಬಚ್ಚಿಟ್ಟು ರೋಧಿಸುತ್ತಿದ್ದರು. ರೂಪಾಳಿಗೆ ಅದರ ಬಗ್ಗೆ ಏನನ್ನು ಹೇಳುತ್ತಿರಲಿಲ್ಲ. ಒಂದು ಪಕ್ಷ ಹೇಳಿದ್ದರೂ ಆಕೆ ಇಂತಹ ಸಣ್ಣ ಪುಟ್ಟ ವಿಚಾರಗಳಿಗೆಲ್ಲ ಚಿಂತಿಸುತ್ತಿರಲಿಲ್ಲವೆಂಬುದು ಅವರಿಗೂ ತಿಳಿದಿತ್ತು. ಆದರೆ ತಂದೆಯ ಹೃದಯ, ಕೇಳಬೇಕಲ್ಲ. ತನ್ನ ಒಬ್ಬಳೇ ಮಗಳನ್ನು ಯಾರಾದರೂ ರಿಜೆಕ್ಟ್ ಮಾಡಿದರೆ ಅಥವಾ ಒಪ್ಪಿಕೊಳ್ಳದಿದ್ದರೆ ಅದು ಅವರ ಎದೆಗೇ ಭಲವಾದ ಗುದ್ದನ್ನು ನೀಡಿದಂತಾಗುತ್ತಿತ್ತು.

.

.


'ಸರ್, ನೀವು ಮಾನಸ್ ಅಲ್ವ?' ಎನುತ ತಾನು ಕೂತಿದ್ದ ಟೇಬಲ್ಲಿನ ಮುಂದೆ ಬಂದು ಕೂತರು, ಸುಮಾರು ಅರ್ವತ್ತು ವರ್ಷದ ಅವಳ ತಂದೆ. ತಪ್ಪು ಮಾಡಿರುವ ಅಮಾಯಕನ ನಗುವನ್ನು ಬೀರುತ್ತಾ ಕೂತ ಅವರನ್ನು ನೋಡಿ 'ಅಂಕಲ್, ಪ್ಲೀಸ್. ನನ್ನನ್ನ ಮಾನಸ್ ಅಂತಾನೆ ಕರೀರಿ.' ಎನುತ, ಅವರ ಮೇಲಿನ ಕೋಪ ಇನ್ನೂ ಆರಿರದಿದ್ದರೂ ಕುಡಿಯಲು ಏನಾದರು ಬೇಕೆಂದು ಕೇಳುತ್ತಾನೆ. ಏನೂ ಬೇಡೆಂದು ನಿರಾಕರಿಸಿದ ಅವರು ತುಸು ಮೊದಲು ಹೊರಟುಹೋದ ರೂಪಾಳ ಪರವಾಗಿ ಮಾನಸ್ನ ಕೈಗಳೆರಡನ್ನು ಬಿಗಿಯಾಗಿ ಹಿಡಿದುಕೊಂಡು 'ನನ್ನನ್ನು ಕ್ಷಮಿಸಿ…' ಎನುತ ಸಣ್ಣದಾಗಿ ಅಳತೊಡಗುತ್ತಾರೆ! ಅವರ ಕೈಗಳ ಕಂಪನ ಮಾನಸ್ನ ಅರಿವಿಗೆ ಸ್ಪಷ್ಟವಾಗಿ ಬರುತ್ತಿರುತ್ತದೆ. ಕೂಡಲೇ ಎದ್ದು ನಿಂತ ಮಾನಸ್ ಅವರನ್ನು ಸಮಾಧಾನಪಡಿಸುತ್ತಾ, 'ಅಂಕಲ್, ಈಗ ಏನಾಯಿತು ಅಂತ ನೀವ್ ಅಳ್ತಾ ಇದ್ದೀರಾ? ನನ್ಗೆ ಏನೊಂದು ಇಲ್ಲಿ ಅರ್ಥ ಆಗ್ತಿಲ್ಲ. ಪ್ಲೀಸ್ ಅಳ್ಬೇಡಿ' ಎನ್ನುತ್ತಾನೆ.

‘ಹುಟ್ಟಿ ಬೆಳೆಸಿದ ತಂದೆ ಕಾಣಪ್ಪಾ. ದೇವ್ರು ನನ್ನ್ ಮಗಳಿಗೆ ಎಲ್ಲವನ್ನೂ ಕೊಟ್ಟ, ಅಂದ ಅನ್ನೋ ಒಂದು ಕಳಶವನ್ನು ಬಿಟ್ಟು! ಆದರೆ ನನ್ನ್ ಮಗಳು ಯಾವುದೇ ರೀತಿಯಲ್ಲೂ ಅಸುಂದರೆಯಲ್ಲ. ಆಕೆಯ ಪ್ರತಿಯೊಂದು ಗುಣನಡತೆಯೂ ಅಪ್ಪಟ ಚಿನ್ನ ಕಾಣಪ್ಪಾ. ಆದರೆ ಈ ಸ್ವಾರ್ಥಿ ಜಗತ್ತಿಗೆ ಅದು ಅರಿವಿಗೆ ಬರುತ್ತಿಲ್ಲವಷ್ಟೇ’. ಮ್ಯಾರೇಜ್ ಸೈಟಿನಲ್ಲಿ ಅವಳ ಪರವಾಗಿ ನಾನೇ ಪ್ರೊಫೈಲ್ ಅನ್ನು ತೆರೆದಿದ್ದು ಎನ್ನುತ್ತಾರೆ.ಅದೆಷ್ಟೋ ದಿನಗಳ ನಂತರ ಆಕೆಯ ಪ್ರೊಫೈಲಿಗೆ ಯಾವುದೇ ಪ್ರತಿಕ್ರಿಯೆಯೂ ಬಾರದಿದ್ದಾಗ ಇವರು ಆಕೆಯ ಫೋಟೋಗಳನ್ನು ಎಡಿಟ್ ಮಾಡಿ ಕೃತಕ ಫಿಲ್ಟರ್ಗಳನ್ನು ಬಳಸಿ, ಒಬ್ಬ ವಿಭಿನ್ನ ಹುಡುಗಿಯೋ ಎಂಬುವಂತೆ ಕಾಣಿಸಿ ಬಂದ ಫೋಟೋವನ್ನು ಅಪ್ಲೋಡ್ ಮಾಡಿರುತ್ತಾರೆ. ಹಾಗು ತೀರಾ ಸಾಮನ್ಯವಾಗಿ ಕಾಣುತಿದ್ದ ಮಾನಸನ ಪ್ರೊಫೈಲ್ ಒಂದಕ್ಕೆ ಒಂದೆರಡು ಮೆಸೇಜ್ಗಳನ್ನು ಕಳಿಸಿ ಸುಮ್ಮನಾಗಿರುತ್ತಾರೆ.

'ಆದರೆ ನೀವೂ ಕೂಡ ಆ ಫೋಟೋದಲ್ಲೇ ಒಂತರ ಇದ್ದೀರಾ, ಇಲ್ಲಿ ಬೇರೇನೇ ಕಾಣ್ತಿರಲ್ಲ' ಎಂದ ಅವರ ಪ್ರೆಶ್ನೆಗೆ ಮಾನಸ್,

'ಅಂಕಲ್, ಅದು ನನ್ನ ಕಾಲೇಜು ದಿನಗಳ ಫೋಟೋ. ಹುಡುಗಾಟಿಕೆಯೂ ಮತ್ತೊಂದೋ ಒಂದು ಪ್ರೊಫೈಲ್ ಅನ್ನು ಕ್ರಿಯೇಟ್ ಮಾಡಿ ಅದ್ವಾನ ಮಾಡಿಕೊಂಡುಬಿಟ್ಟೆ. ಹಾಗೆಯೆ ಇದ್ದ ಆ ಪ್ರೊಫೈಲ್ ನಲ್ಲಿ ಆಗೊಮ್ಮೆ ಈಗೊಮ್ಮೆ ಮೆಸೇಜ್ಗಳು ಬರುತ್ತಿದ್ದರೂ ಏಕೋ ನಿಮ್ಮ ಮಗಳ ಪ್ರೊಫೈಲ್ ಇಷ್ಟವಾಯಿತು ' ಎಂದು ಸುಮ್ಮನಾಗುತ್ತಾನೆ.

ತನ್ನ ಮಗಳನ್ನು ಸುಂದರವಾಗಿ ಕಾಣಲು ಆಕೆಯ ಕನ್ನಡಕ ರಹಿತ ಫೋಟೋವೊಂದನ್ನು ಎಡಿಟ್ ಮಾಡಿ ಅಪ್ಲೋಡ್ ಮಾಡಿರುತ್ತಾರೆ ರೂಪಾಳ ತಂದೆ. ಆ ಫೋಟೋಗಳನ್ನು ನೋಡಿ ಅದೇನೋ ಒಂದು ಬಗೆಯ ಆಕರ್ಷಣೆ ಮಾನಸ್ನಿಗೆ ಅವಳ ಮೇಲೆ ಮೂಡಿರುತ್ತದೆ. ಅವರ ಮೆಸ್ಸೇಜಿಗೆ ಖುದ್ದು ಹುಡುಗಿಯೇ ಕೇಳಿಕೊಳ್ಳುತ್ತಿರುವಳು ಎಂದುಕೊಂಡು ತಿಳಿಸಿದ ಕಫೆ ಡೇ ಗೆ ಬಂದು, ಇಬ್ಬರಿಗೂ ಒಬ್ಬರನೊಬ್ಬರು ಗುರುತು ಹಿಡಿಯದಂತಾಗಿ ರೂಪ ಅಲ್ಲಿಂದ ಹೋದ ನಂತರ ಮಾನಸ್ ಅಲ್ಲೇ ಕೂತಿರುತ್ತಾನೆ.

ಅಷ್ಟರಲ್ಲಾಗಲೇ ರೂಪಾಳ ತಂದೆಯ ಕಣ್ಣೇರು ಒಣಗಿ ಕೆನ್ನೆಗಳ ಮೇಲೆ ತಮ್ಮ ಅಚ್ಚನ್ನು ಮೂಡಿಸಿದ್ದವು. ಮಾನಸ್ನಿಗೆ ಮುಂದೇನೂ ಹೇಳಲು ಪದಗಳೇ ತೋಚುವುದಿಲ್ಲ. 'ಸರಿ ಬಿಡಪ್ಪ.. ಅವ್ರ್ ಅವ್ರ ಹಣೇಲಿ ಏನೇನ್ ಬರ್ದಿರುತ್ತೋ ಅದ್ ಹಾಗೆ ಆಗುತ್ತೆ. ಆಲ್ ದ ಬೆಸ್ಟ್ ಫಾರ್ ಯುವರ್ ಫ್ಯೂಚರ್' ಎಂದು ಅವರು ಅಲ್ಲಿಂದ ಬೀಳ್ಗೊಂಡರು.

ಆ ದಿನದಿಂದ ಅದೇನೋ ಒಂದು ಬಗೆಯ ಹತಾಶೆ ಮಾನಸನನ್ನು ಆವರಿಸುತ್ತದೆ. ತನ್ನ ನೀಳ ಕೂದಲು, ಟ್ರಿಮ್ ಮಾಡದ ಗಡ್ಡ, ಬೀಯರ್ ಹಾಗು ಸಿಗರೇಟುಗಳಿಗೆ ಕಾರಣವಾಗಿದ್ದ ಕಹಿಘಟನೆಗಳು ಇನ್ನೂ ಮನಸ್ಸಿಂದ ಮಾಸುವ ಮುನ್ನವೇ ಮತ್ತೊಂದು ವಿಪರೀತವಾದಂತಹ ನೋವು ಅವರಿಸತೊಡಗುತ್ತದೆ. ಕಣ್ಣೇರಿರದೆ ಅಳುತ್ತಿದ್ದ ಆತನ ಕಣ್ಣುಗಳು ಇಂದು ತುಂಬಿ ಬಂದಿವೆ. ಹಳೆಯ ನೋವುಗಳಿಗೆ ಯಾರೋ ಬೆಂಕಿ ಗೀರಿ ಹಚ್ಚಿದಂತಾಗಿತ್ತು. ತಾನು ಹಾಗು ತನ್ನ ಜೀವನ ಎಂದುಕೊಂಡಿದ್ದವನಿಗೆ ಆ ಒಂದು ಕ್ಷಣಮಾತ್ರದ ಭೇಟಿ ಈ ಬಗೆಯ ನೋವನ್ನು ತರುತ್ತದೆ ಎಂದುಕೊಂಡಿರಲಿಲ್ಲ. ಚಲುವೆನ್ನೆ ನಾಚಿಸುವ ಅವಳ ನಡತೆ, ಅಸಹಾಯಕ ಅಪ್ಪ, ಅವರ ಕಣ್ಣೀರು.. ಪದೇ ಪದೇ ಆತನನ್ನು ಕಾಡತೊಡಗಿದವು.

ಭಾರಿಸುತ್ತಿದ್ದ ಡ್ರಮ್ ಗಳ ಸದ್ದು ಕೇಳುಗರಿಗೆ ನಡುಕವನ್ನುಂಟುಮಾಡುತ್ತಿರುತ್ತವೆ. ಬದಲಾವಣೆ ಬೇಕೆಂದು ಅವುಗಳು ಚೀರುತ್ತಿರುತ್ತವೆ.

ಹೆಳೆಯ ದಿನಗಳ ಮಾನಸ್ ಪುನ್ಹ ಹುಟ್ಟತೊಡಗುತ್ತಾನೆ. ಜಗತ್ತನೇ ಗೆಲ್ಲುವ ಮಹತ್ವಕಾಂಕ್ಷೆಯ, ಸಂಗೀತ ಲೋಕದಲ್ಲಿ ದಿಗ್ಗಜನಾಗುವ ಆ ಎಳೆಯ ಪೋರ ಡ್ರಮ್ ಭಿಟ್ಸ್ಗಳ ಸದ್ದಿನಲ್ಲಿ ಕಾಣೆಯಾಗಿಹೋದದ್ದೇ ತಿಳಿದಿರುವುದಿಲ್ಲ. ಕೆಲದಿನಗಲ್ಲೇ ನೀಳ ಕೂದಲಿಗೆ, ಕುರುಚಲು ಗಡ್ಡಕ್ಕೆ ಕತ್ತರಿಯನ್ನು ಹಾಕಿ ತನ್ನ ನೆಚ್ಚಿನ ಸಿತಾರ್ ಅನ್ನು ಹೊರತೆಗೆದ. ವರ್ಷಗಳ ಧೂಳು ಹಿಡಿದು ಜಡಗಟ್ಟಿ ಹೋದರೂ ಅದರ ತಂತಿಗಳನ್ನು ಮೀಟಿದಾಗ ಮೂಡುತ್ತಿದ್ದ ಸ್ವರಗಳು ಅದೇ ಆನಂದಭಾಷ್ಪವನ್ನು ಆತನಲ್ಲಿ ಮೂಡಿಸುತ್ತಿದ್ದವು. ಸಂಗೀತದ ತಾಲೀಮು ಮಗದೊಮ್ಮೆ ಆರಂಭವಾಯಿತು. ದಿನ ಬೆಳಗ್ಗೆ ಹಾಗು ಸಂಜೆ ಸರಸ್ವತಿ ಪಠಕ್ಕೆ ಪೂಜಿಸಿ ಸೀತಾರನ್ನು ನುಡಿಸತೊಡಗಿದ. ಮಂದಹಾಸ ಆತನ ಮುಖದಲ್ಲಿ ಮನೆಮಾಡಿತು. ಆ ಮಂದಹಾಸದ ಹಿಂದಿದ್ದ ಚಹರೆಯೇ ಕೆಲತಿಂಗಳ ಹಿಂದೆ ಕ್ಷಣಮಾತ್ರಕ್ಕೆ ಸಿಕ್ಕಿ ಮರೆಯಾದ ರೂಪ. ಮೇಲು-ಕೀಳು, ಭೇದಭಾವ, ಅಂದ-ಚಂದಳಿಗೆ ಒಂದಿಷ್ಟು ಜಾಗವಿರದ ಆಕೆಯ ಚಹರೆ ಮಾನಸನಿಗೆ ಕೆಲವೇ ಕ್ಷಣಗಳಾದರೂ ಜೀವನಕ್ಕಾಗುವಷ್ಟು ಕಲಿಕೆಯನ್ನು ಕಳಿಸಿದವು. ಆ ಗುಂಗಿನಲ್ಲೇ ಆತ ಮುಂದುವರೆದ.

ಅಂದಿನಿಂದ ಅದೆಷ್ಟೋ ಬಾರಿ ರೂಪಾಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಆತನಿಗೆ ಅದು ಸಾಧ್ಯವಾಗಲೇ ಇಲ್ಲ. ಯಾವುದೇ ಸಾಮಾಜಿಕ ಮಾಧ್ಯಮಗಳಲ್ಲೂ ಆಕೆಯ ಸುಳಿವು ಸಿಗಲಿಲ್ಲ. ಅಪ್ಪ ಮಗಳ ನಂಬರುಗಳೆರಡೂ ಸ್ವಿಚ್ ಆಫ್ ಬರುತ್ತಿದ್ದವು. ಆದರೆ ಆತನ ಅರಸುವಿಕೆ ಮಾತ್ರ ನಿಲ್ಲಲಿಲ್ಲ. ಇತ್ತೀಚಿಗೆ ಸಂಗೀತ ಕಚೇರಿಗಳನ್ನು ನೆಡೆಸಿಕೊಡಲು ಆತನಿಗೆ ಆಮಂತ್ರಣಗಳು ಬರತೊಡಗಿದವು. ಹೊಡದೆಯಲ್ಲ ಜನಸ್ತೋಮದಲ್ಲಿ ಆಕೆಯ ಚಹರೆಯನ್ನೇ ಆತ ಹುಡುಕುತ್ತಾನೆ. ಮೇಕಪ್ಪು ಬಳಿದು ಪಳಪಳ ಹೊಳೆಯುವ ಮುಖಗಳ ನಡುವೆ ಆ ಮುಗ್ದ ಮಧುರ ಚಹರೆ ಅದೆಷ್ಟೇ ಹುಡುಕಿದರೂ ಕಾಣುವುದಿಲ್ಲ. ಇತ್ತ ಕಡೆ ರೂಪಾಳೂ ಅಂದಿನಿಂದ ತನಗೆ ಹುಡುಗರನ್ನು ಹುಡುಕುವುದು ಬಿಡಬೇಕೆಂದೂ, ತಾನು ಇನ್ನೂ ಹೆಚ್ಚಿನ ಓದನ್ನು ಮಾಡುತ್ತಿರುವೆನೆಂದು ಅಪ್ಪನಿಗೆ ತಿಳಿಸುತ್ತಾಳೆ. ಮೊದಲ ಭಾರಿಗೆ ಹುಡುಗನೊಬ್ಬ ಇಷ್ಟವಾಗಿ ಸಿಗಲು ಹೋದರೆ ಆತ ಮೊಬೈಲನ್ನು ಸ್ವಿಚ್ ಆಫ್ ಮಾಡಿ ಬಾರಲೇ ಇಲ್ಲವೆಂದು ಕುಪಿಸಿಕೊಂಡು ಹುಡುಗರ ಮೇಲೆಯೇ ಒಂದು ಬಗೆಯ ಆಲಸ್ಯ ಅವಳಲ್ಲಿ ಮೂಡಿರುತ್ತದೆ.ಎಲ್ಲೆಂದರಲ್ಲಿ ಹರಿಬಿಟ್ಟಿದ್ದ ತನ್ನ ಹಾಗು ಅಪ್ಪನ ನಂಬರುಗಳೆರಡನ್ನೂ ಆಕೆ ಬದಲಿಸುತ್ತಾಳೆ.

ದಿನಗಳು ಕಳೆದವು...

ಅಂದು ತನ್ನ ಕಾಲೇಜಿನ ವಾರ್ಷಿಕೋತ್ಸವಕ್ಕೆ ಹಿಂದೂಸ್ತಾನಿ ಸಂಗೀತ ಕಚೇರಿಯನ್ನು ನೆಡೆಸುತ್ತಾರೆ ಎಂದು ತಿಳಿದು ರೂಪ ಎಲ್ಲರಿಗಿಂತ ಮೊದಲೇ ಆಡಿಟೋರಿಯಂನಲ್ಲಿ ಆಸೀನಳಾಗುತ್ತಾರೆ. ಸಂಗೀತದ ವ್ಯಾಕರಣ ಆಕೆಗೆ ಬಲ್ಲದು, ಆದರೆ ಸಂಗೀತವೆಂಬುದು ಭಾವಪದಗಳ ಸುಂದರ ಭಾಷೆ ಎಂಬುದು ಆಕೆಯ ಅಭಿಮತ. ಸಂಜೆ ಸರಿಯಾಗಿ ಏಳಕ್ಕೆ ಶುರುವಾದ ಸಂಗೀತ ಕಚೇರಿಗೆ ಹೇಳಿಕೊಳ್ಳುವ ಮಟ್ಟಿನ ಪ್ರೇಕ್ಷಕರೇನೂ ಸೇರಿರಲಿಲ್ಲ. ಕೊಳಲು ಹಾಗು ತಬಲದ ಜುಗಲ್ಬಂಧಿಯ ನಂತರ ಸೀತಾರ್ ವಾದಕ ಶ್ರೀಯುತ ಮಾನಸ್ ಎಂದು ಸಂಭೋದಿಸುತ್ತಾ ಆಹ್ವಾನಿಸಿದ ನಿರೂಪಕಿಯ ಮಾತನ್ನು ಕೇಳಿ ರೂಪಾಳ ಎದೆ ಒಮ್ಮೆಲೇ ಜಲ್ ಎನಿಸುತ್ತದೆ. ಮಾನಸ್ ಸ್ಟೇಜಿನ ಮೇಲೆ ಬಂದು ನೆರೆದವರಿಗೆಲ್ಲ ವಂದಿಸಿ ತನ್ನ ಸೀತಾರನ್ನು ನುಡಿಸತೊಡಗಿದಾಗ ಗುಸುಗುಸುಗುಡುತ್ತಿದ್ದ ಜನಸ್ತೋಮ ಕಲ್ಲಿನಂತೆ ಸ್ತಬ್ದವಾಗಿಬಿಡುತ್ತದೆ. ಆ ರಾಗಗಳ ಆಳೇತ್ತರ ಎಂತವರನ್ನೂ ಸಂಗೀತದ ಸುಧೆಯಲ್ಲಿ ತೇಲಾಡಿಸಿಬಿಡುವಂತಿತ್ತು. ಈತ ಇಷ್ಟು ಮಹಾನ್ ಕಲಾವಿದನಾಗಿರುವುದಕ್ಕೆ ಅಂದು ನನ್ನಂತ ಸಾಧಾರಣ ಹುಡುಗಿಯನ್ನು ಆತ ಭೇಟಿಯಾಗಲು ನಿರಾಕರಿಸಿದ್ದು. ಅವನೆಲ್ಲಿ, ನಾನೆಲ್ಲಿ?! ಆತ ಅಂದು ನನನ್ನು ಭೇಟಿಯಾಗದಿದ್ದದ್ದೇ ಒಳ್ಳೆಯದಾಯಿತು ಎಂಬ ಕೀಳರಿಮೆ ಆತನ ಸಂಗೀತವನ್ನು ಕೇಳಿ ರೂಪಾಳಲ್ಲಿ ಮೂಡುತ್ತದೆ. ಆ ಅದ್ಭುತ ಸಂಗೀತಕ್ಕೆ ಅಲ್ಲಿ ಮನಸೋತ ಪ್ರೇಕ್ಷಕರಿರಲಿಲ್ಲ. ಸಂಗೀತ ಬಲ್ಲವರು, ಬಾರದವರು ಎಲ್ಲರು ಗಮನವಿಟ್ಟು ಸಂಗೀತವನ್ನು ಕೇಳುತ್ತಿರಬೇಕಾದರೆ ರೂಪ ಮಾತ್ರ ಎದ್ದು ಸ್ಟೇಜಿನ ಮುಂದೆಯೇ ಹಾದು ಹೊರನೆಡುತ್ತಾಳೆ.

ಕಳೆದ ಒಂದು ವರ್ಷದಿಂದ ಹೊಡದೆಯಲ್ಲ ಹುಡುಕುತ್ತಿದ್ದ ಆ ಒಂದು ಚಹರೆ ಸಿಗದೆ ಮಾನಸನ ಮನಸ್ಸು ದುಃಖ ತುಂಬಿದ ಕಟ್ಟೆಯಂತಾಗಿದ್ದಿತು. ಅದೇನೋ ಈ ಬಾರಿ ಆತನಿಗೆ ತಡೆಯಲಾಗಲಿಲ್ಲ. ಸಂಗೀತದ ಸಾಗರದಲ್ಲಿ ಮುಳುಗಿದ್ದ ಆತನ ಕಣ್ಣುಗಳಿಂದ ಗಳಗಳನೆ ಅಶ್ರುಧಾರೆಗಳು ಮೂಡತೊಡಗಿದವು. ಆದರೆ ಸ್ವರಾಲಾಪನೆ ಮಾತ್ರ ಎಲ್ಲಿಯೂ ತಪ್ಪಲಿಲ್ಲ. ಅತ್ತು ಮಂಜುಗಟ್ಟಿದ್ದ ಕಣ್ಣುಗಳಿಗೆ ತನ್ನ ಎದುರಿಗೆ ಹಾದುಹೊದ 'ಆ' ಚಹರೆ ಕಾಣದಾಯಿತು. ಸಂಗೀತದ ಆಲಾಪ ಮುಗಿಲುಮುಟ್ಟಿತು.....



Monday, October 8, 2018

ಆಗಸಕ್ಕೆ ಏಣಿ ಹಾಕಿದ ನಾಯಕರಿವರು...

ರಿಚರ್ಡ್ ಬ್ರಾನ್ಸನ್ :
ಆತನ ವಯಸ್ಸು 16. ಬಾಲ್ಯವೆಲ್ಲ ಡಿಸ್ಲೆಕ್ಸಿಯಾ ಸಮಸ್ಯೆಯಿಂದ ನರಳಿದ ಆತ ತನ್ನ ಜೀವನದ ಅತಿ ಮಹತ್ವದ ಘಟ್ಟದಲ್ಲಿ ನಿಂತಿದ್ದಾನೆ. ಓದಲು, ಕಲಿಯಲು ಮನಸ್ಸಿದ್ದರೂ ದೇಹ ಸಾಥ್ ನೀಡುತ್ತಿಲ್ಲ. ಹಿಂದಿಯ 'ತಾರೆ ಝಮೀನ್ ಪರ್' ಚಿತ್ರವನ್ನು ನೋಡಿದವರಿಗೆ ಈ ಸಮಸ್ಯೆಯ ಆಳ ಒಂದಿಷ್ಟು ಅರಿಯಬಹುದು. ಅಂದು ಆತನ ಶಾಲೆಯ ಕೊನೆ ದಿನ . ಓದಲು ಬರೆಯಲು ಆಗದು ಎಂದರಿತ ಪೋಷಕರು ಆತನನ್ನು ಶಾಲೆಯಿಂದ ತೆಗೆಯುವ ನಿರ್ಧಾರವನ್ನು ಮಾಡಿದ್ದಾರೆ. ಆ ಎಳೆಯ ಹುಡುಗ ತನ್ನ ಸ್ನೇಹಿತರಿಂದ, ಶಾಲೆಯಿಂದ ದೂರವಾಗುತ್ತಿದ್ದಾನೆ. ಶಿಕ್ಷಕರಲೊಬ್ಬರು ಈತ ಹೊರಡುವಾಗ 'ನೀನು ಮುಂದೆ ಒಂದೋ ಅಪರಾದಿಯಾಗಿ ಜೈಲಿನಲ್ಲಿ ಕೊಳೆಯುತ್ತೀಯ ಇಲ್ಲವಾದರೆ ಒಬ್ಬ ಕೋಟ್ಯಧಿಪತಿಯಾಗಿ ಬೆಳೆಯುತ್ತೀಯ' ಎಂದು ದ್ವಂದ್ವದ ಹಾರೈಕೆಯೊಂದನ್ನು ನೀಡಿ ಬೀಳ್ಕೊಟ್ಟರು. ಹೇಳಿದ ಮಾತಿನ ಅರ್ಥವನ್ನು ಅರಿಯುವುದು ಹಾಗಿರಲಿ ಕಡೆಯ ಪಕ್ಷ ದಿನನಿತ್ಯದ ಕೆಲಸಕಾರ್ಯಗಳನ್ನೂ ಸರಿಯಾಗಿ ಮಾಡಲಾಗದ ಹುಡುಗನೊಬ್ಬ ಆತನ ಶಿಕ್ಷಕನ ಮಾತಿನಂತೆ ಇಂದು ಏನಾಗಿರಬಹುದು? ಅದು ಶಿಕ್ಷಕನ ಕುಹಕ ನುಡಿಯೂ ಅಥವಾ ಪ್ರೋತ್ಸಾಹಭರಿತ ಮಾತೋ, ಆತ ಮಾತ್ರ ಇಂದು ಜಗತ್ತಿನಾದ್ಯಂತ ಇರುವ ಸುಮಾರು 400 ಕಂಪನಿಗಳ ಒಡೆಯ! ಹೆಸರು ರಿಚರ್ಡ್ ಬ್ರಾನ್ಸನ್. ವರ್ಜಿನ್ ಗ್ರೂಪ್ಸ್ ಎಂಬ ವಿಶ್ವದ ಪ್ರಖ್ಯಾತ ಸಂಘಟಿತ ಸಂಸ್ಥೆಯ ಮಾಲೀಕನಾದ ಈತ ಬೆಳೆದು ಬಂದ ಹಾದಿ ಯಾವ ಚಿತ್ರಕತೆಗೂ ಕಮ್ಮಿ ಇಲ್ಲ. ಮಧ್ಯಮವರ್ಗದ ಕುಟುಂಬದಲ್ಲಿ ಬೆಳೆದ ಈತನ ಪೋಷಕರು ಈತನೊಬ್ಬ ಸಹಜ ಮಾನವ ಜೀವಿಯಾದರೆ ಸಾಕೆಂದಷ್ಟೇ ಅರಸಿದರು. ಹೊರಜಗತ್ತಿಗೆ ಈತ ಒಬ್ಬ ವಿಕಲಚೇತನನಂತೆ ಕಂಡರೂ ಈತನ ಒಳಜಗತ್ತು ಜಗತ್ತನೇ ಗೆಲ್ಲುವ ತವಕದಲ್ಲಿತ್ತು. ಆದುದರಿಂದಲೇ ಏನೋ ಅಂದು ಶಾಲೆಯಿಂದ ಹೊರಬಂದ ಬ್ರಾನ್ಸನ್ 'ಸ್ಟೂಡೆಂಟ್' ಎಂಬ ಹೆಸರಿನ ಮ್ಯಾಗಜಿನ್ ಒಂದನ್ನು ತೆರೆದೇಬಿಟ್ಟ! ತನ್ನ ಕ್ರಿಯಾಶೀಲತೆಯನ್ನೆಲ್ಲ ಆ ಮ್ಯಾಗಜಿನ್ ನ ಮೇಲೆತ್ತುವಿಕೆಯಲ್ಲೇ ಹರಿಸಿ ನೋಡನೋಡುತ್ತಿದ್ದಂತೆಯೇ ತನ್ನ ಒಡೆತನದ ರೆಕಾರ್ಡಿಂಗ್ ಸ್ಟುಡಿಯೋ ಒಂದನ್ನು ಆತ ತೆರದ. ಅಲ್ಲಿಂದ ಮುಂದೆ ಈತನನ್ನು ಯಾರೊಬ್ಬರೂ ಸಹ ಹಿಡಿದು ನಿಲ್ಲಿಸಲಾಗಲಿಲ್ಲ, ಸ್ವತಃ ಆತನ ಡಿಸ್ಲೆಕ್ಸಿಯಾ ಸಮಸ್ಯೆ ಕೂಡ! ಇಂದು 5.1 ಬಿಲಿಯನ್ ಡಾಲರ್ ಸಂಪತ್ತಿನ ಒಡೆಯನಾಗಿರುವ ರಿಚರ್ಡ್ ಬ್ರಾನ್ಸನ್ ನ ‘ವರ್ಜಿನ್ ಮೀಡಿಯಾ’ , ‘ವರ್ಜಿನ್ ಹಾಲಿಡೇಸ್’, ‘ವರ್ಜಿನ್ ಮ್ಯೂಸಿಕ್’ , ‘ವರ್ಜಿನ್ ಗಲಾಟಿಕ್’ ಎಲ್ಲವೂ ವಿಶ್ವದಾದ್ಯಂತ ಚಿರಪರಿಚಿತವಾಗಿರುವ ಬ್ರಾಂಡ್ ಗಳು.

ಜೆಫ್ ಬೆಝೋಸ್ :

ಬಿಲ್ ಗೇಟ್ಸ್ ಹಾಗು ವಾರೆನ್ ಬಫೆಟ್ ರನ್ನು ಹಿಂದಕ್ಕೆ ಹಾಕಿದ ಈತ ಇಂದು ವಿಶ್ವದ ಅಗ್ರಮಾನ್ಯ ಶ್ರೀಮಂತರ ಪಟ್ಟಿಯಲ್ಲಿ ಮೊದಲಿಗ. ಹೆಚ್ಚು ಕಡಿಮೆ ಪ್ರಸ್ತುತ ಪ್ರತಿಯೊಬ್ಬರೂ ಕೇಳಿರುವ ಅಮೆಜಾನ್ ಎಂಬ ಧೈತ್ಯ ಸಂಸ್ಥೆಯ ಮಾಲೀಕನಾದ ಈತ ಮೂವತ್ತು ವರ್ಷಗಳ ಹಿಂದೆ ನಮ್ಮ ನಿಮ್ಮಂತೆಯೇ ಬೆಳಗಿನಿಂದ ಸಂಜೆಯವರೆಗೆ ದುಡಿಯುವ ಒಬ್ಬ ಸಾಧಾರಣ ನೌಕರ. ಆದರೆ ತನ್ನ ಮೂರನೇ ವಯಸ್ಸಿಗೆ ಸ್ಕ್ರೂ ಡ್ರೈವರ್ ಒಂದನ್ನು ಹಿಡಿದು ತನ್ನನ್ನು ಕಟ್ಟಿ ಹಾಕುತಿದ್ದ ತೊಟ್ಟಿಲನ್ನೇ ಬಿಚ್ಚಲು ಹೊರಟಿದ್ದ ಮಗುವೊಂದು ಹೀಗೆ ಜೀವನವಿಡೀ ಖಾಸಗಿ ಕಂಪನಿಗಳಿಗೆ ದುಡಿಯುವ ಸಂಭವ ತೀರಾ ಕಡಿಮೆ. ಅಂತೆಯೇ ಕೆಲವರ್ಷಗಳ ಕಾಲ ಖಾಸಗಿ ಕಂಪನಿಗಳಿಗೆ ದುಡಿದ ಜೆಫ್ 1994 ರಲ್ಲಿ ಅಮೆಜಾನ್ ಎಂಬ ಆನ್ಲೈನ್ ಪುಸ್ತಕ ಮಳಿಗೆಯನ್ನು ತೆರೆದ. ಅದು ಇಂಟರ್ನೆಟ್ ಎಂಬ ಹೆಮ್ಮರ ಚಿಗುರೊಡೆಯುತ್ತಿದ್ದ ಕಾಲ. ಅದರ ಮುನ್ಸೂಚನೆ ಜೆಫ್ ನ ಬಡಿದೆಬ್ಬಿಸಲು ಹೆಚ್ಚು ಸಮಯ ಹಿಡಿಯಲಿಲ್ಲ. ಪುಸ್ತಕಗಳೊಟ್ಟಿಗೆ ಮ್ಯೂಸಿಕ್ ವಿಡಿಯೋ ಗಳು ಹಾಗು ಇತರೆ ಗೃಹಪಯೋಗಿ ವಸ್ತುಗಳನ್ನೂ ಅಲ್ಲಿ ಮಾರಲು ಆತ ಶುರುವಿಟ್ಟನು. ಆದರೆ ಹಿಂದೆಂದೂ ಕಾಣದ ಹೊಸ ಮಾದರಿಯ ವಹಿವಾಟನ್ನು ಗಮನಿಸಿ ಹಲವರು ಈತನಿಗೆ ಹೆಚ್ಚರಿಸಿದ್ದೂ ಉಂಟು. ಆದರೆ ಗುರಿ ಸ್ಪಷ್ಟವಾಗಿದ್ದು ನಮ್ಮ ಪ್ರಯತ್ನವೂ ಅದಕ್ಕೆ ಪೂರಕವಾಗಿದ್ದರೆ ಹೆದರುವ ಮಾತೆಲ್ಲಿಂದ? ಜೆಫ್ ತನ್ನ ವೇಗವನ್ನು ಹೆಚ್ಚಿಸಿದ. ನೋಡ ನೋಡುತ್ತಲೇ ಅಮೆಜಾನ್ ಮನೆ-ಮನೆಯ ಮಾತಾಯಿತು. ಜೆಫ್ನ ಸಾಧನೆ ನೆಟ್ಟಿನಲ್ಲಿ ಹರಿದಾಡತೊಡಗಿತು. Souq.com, ಗುಡ್ ರೀಡ್ಸ್, IMDb, ಶತಮಾನಗಳ ಇತಿಹಾಸ ವಿರುವ ‘ದಿ ವಾಷಿಂಗ್ ಟನ್ ಟೈಮ್ಸ್ ಪತ್ರಿಕೆ’ ,ಬ್ಲೂ ಆರಿಜಿನ್ ಎಂಬ ಒಟ್ಟು ಹದಿನಾಲ್ಕು ಕಂಪನಿಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡು ಮುನ್ನೆಡೆದ ಈತ ಇಂದು ಒಟ್ಟು 112 ಬಿಲಿಯನ್ ಡಾಲರ್ ಗಳ ಒಡೆಯ!

ಎಲಾನ್ ಮಸ್ಕ್ :
ಈತನಿಗೆ ಕಂಪ್ಯೂಟರ್ ಪ್ರೋಗ್ರಾಮಿಂಗ್ ನ ಹುಚ್ಚು ಅದೆಷ್ಟಿತ್ತೆಂದರೆ ತನ್ನ ಹತ್ತನೇ ವಯಸ್ಸಿಗೇ ಯಾವುದೇ ಶಾಲಾ ಕಾಲೇಜುಗಳ ತರಗತಿಗಳ ಅವಶ್ಯಕೆತೆ ಇಲ್ಲದೆಯೇ, ಮನೆಯಲ್ಲಿದ್ದ ಪುಸ್ತಕಗಳ ಓದಿನಿಂದಲೇ ವಿಡಿಯೋ ಗೇಮಿನ ಪ್ರೋಗ್ರಾಮ್ ಒಂದನ್ನು ಬರೆಯುತ್ತಾನೆ. ಅದು ಯಶಸ್ವಿಯೂ ಆಗುತ್ತದೆ. ನಂತರ ಆ ಗೇಮನ್ನು ಕೆಲವೇ ನೂರು ಡಾಲರ್ಗೆ ಕಂಪನಿಯೊಂದಕ್ಕೆ ಆತ ಮಾರಿಯೂ ಬಿಡುತ್ತಾನೆ! ಬಹುಷಃ ಈ ಒಂದು ವಹಿವಾಟೇ ಆತನಿಗೆ ಹೊಸತೊಂದನ್ನು ಹುಟ್ಟುಹಾಕಿ, ಬೆಳೆಸಿ ಅದನ್ನು ಮಾರಿ ಮಗದೊಂದು ಸಾಹಸಕ್ಕೆ ಕೈಯಾಕುವ ಧೈರ್ಯವನ್ನು ಅಂದು ಬೆಳೆಸಿರಬೇಕು. ಬ್ಯುಸಿನೆಸ್ ವಲಯದ ಐರನ್ ಮ್ಯಾನ್ ಎಂದೇ ಪ್ರಖ್ಯಾತಿ ಹೊಂದಿರುವ ಇಲಾನ್ ಮಸ್ಕ್ ಮುಂದೆ ಬೆಳೆದ ಹಾದಿ ಆತನ ಈ ನೆಡೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಸಾಕಷ್ಟು ಏಳುಬೀಳುಗಳ ನಂತರ 1995 ರಲ್ಲಿ Jip-2 ಎಂಬ ಆನ್ಲೈನ್ ಸಿಟಿ ಗೈಡ್ ವೆಬ್ಸೈಟ್ ಅನ್ನು ತೆರೆದ ಈತ ಕೆಲವೇ ವರ್ಷಗಳ ನಂತರ ಅದನ್ನು ಬೇರೊಂದು ಕಂಪನಿಗೆ ಮಾರಿ ಬರೋಬ್ಬರಿ 22 ಮಿಲಿಯನ್ ಡಾಲರ್ ಗಳನ್ನು ಗಳಿಸಿಕೊಳ್ಳುತ್ತಾನೆ. ದೊರೆತ ಹಣದಿಂದ X.com ಎಂಬ ಆನ್ಲೈನ್ ಬ್ಯಾಂಕಿಂಗ್ ಕಂಪನಿಯನ್ನು ತೆರೆದ ಈತ ಮುಂದೆ ಅದನ್ನು ‘ಕಾನ್ಫಿನಿಟಿ’ ಎಂಬ ಕಂಪೆನಿಯೊಟ್ಟಿಗೆ ವಿಲೀನಗೊಳಿಸಿ ಸ್ಥಾಪಿಸಿದ ಹೊಸ ಕಂಪನಿಯೇ ವಿಶ್ವವಿಖ್ಯಾತ 'Paypal.com'. ಮುಂದೆ Paypal ಅನ್ನು Ebay.com ಕಂಪನಿಗೆ 1.5 ಬಿಲಿಯನ್ ಡಾಲರ್ ಗೆ ಮಾರಿ ತನ್ನ ಷೇರಿನ ಮೊತ್ತ 165 ಮಿಲಿಯನ್ ಡಾಲರ್ ಗಳನ್ನು ಕಿಸೆಗೆ ಹಾಕಿಕೊಳ್ಳುತ್ತಾನೆ. ಬಂದ ಹಣದಿಂದ ಈತ ಸ್ಥಾಪಿಸಿದ ಮಗದೊಂದು ಕಂಪನಿ ಅಕ್ಷರ ಸಹ ಈತನ ಮೂರ್ಖ ನಡೆಯಂತೆ ಅಂದು ಎಲ್ಲರಿಗೂ ಭಾಸವಾಯಿತು. ಏಕೆಂದರೆ ಈತ ದೊರೆತ ಆ ದೊಡ್ಡ ಮೊತ್ತದ ಹಣವನ್ನು ಬಳಸಿಕೊಂಡಿದ್ದು ಅಂತರಿಕ್ಷ ವಾಹನಗಳ ಬಿಡಿಭಾಗಗಳ ನಿರ್ಮಾಣ ಹಾಗು ಬಾಹ್ಯಾಕಾಶಕ್ಕೆ ಚಲಿಸುವ ವಾಹನಗಳ ನಿರ್ಮಾಣದ SpaceX ಎಂಬ ಸಂಸ್ಥೆ! ಸರಿ ಆತನ ದುಡ್ಡು ಆತನ ಬುದ್ದಿ ಎಂದು ಸುಮ್ಮನಾದ ಈತನ ಹಿತೈಷಿಗಳಿಗೆ ಆತನ ಓಟದ ಗುರಿ ಇನ್ನೂ ತಿಳಿದಿರಲಿಲ್ಲ. ಮುಂದೆ ಟೆಸ್ಲಾ ಮೋಟಾರ್ಸ್ ಎಂಬ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವ ಕಂಪನಿ, ಸೋಲಾರ್ ಪ್ಯಾನೆಲ್ ಗಳನ್ನು ನಿರ್ಮಿಸುವ ಸೋಲಾರ್ ಸಿಟಿ ಎಂಬ ಕಂಪನಿ, OpenAI ಎಂಬ ಲಾಭರಹಿತ ಸಂಶೋಧನಾ ಸಂಸ್ಥೆಯನ್ನು ತೆರೆದು ಕೃತಕ ಬುದ್ದಿವಂತಿಕೆಗೆ ಉತ್ತೇಜನ, ಘಂಟೆಗೆ 2000 ಕಿಲೋಮೀಟರ್ ವೇಗವನ್ನು ತಲುಪುವ ಹೈಪರ್ ಲೂಪ್ ಎಂಬ ಸಾರಿಗೆ ವ್ಯವಸ್ಥೆಯನ್ನು ತನ್ನ ‘ದ ಬೋರಿಂಗ್’ ಕಂಪನಿಯ ಮೂಲಕ ಸಾಧಿಸಲು ಗುರಿಯನ್ನು ಹಾಕಿಕೊಂಡಿರುವ ಈತನದು ಇಂದು ಬೆಳೆಯುತ್ತಿರುವ ಹಲವು ಯುವ ಉದ್ಯಮಿಗಳಿಗೆ ಸ್ಪೂರ್ತಿದಾಯಕ ವ್ಯಕ್ತಿತ್ವ.

ಇಲ್ಲಿ ಏಕೆ ಈ ಮೂವರ ಬಗ್ಗೆ ಇಂದು ಚರ್ಚಿಸಲಾಗುತ್ತಿದೆ ಎಂಬ ಪ್ರೆಶ್ನೆಗೆ ಉತ್ತರ ಖಂಡಿತಾವಾಗಿಯೂ ಇದೆ. ಈ ಮೂವರ ಯೋಚನೆಯಲ್ಲೂ ಹಾಗು ಯೋಜನೆಯಲ್ಲೂ ಅತಿ ಕಾಮನ್ ಅಂಶ ಒಂದಿದೆ. ಅದೇ ಬಾಹ್ಯಾಕಾಶ. ಮಗುವೊಂದಕ್ಕೆ ತನ್ನ ಎಳೆತನದಲ್ಲಿ ಅಂತರಿಕ್ಷಕ್ಕೆ ಜಿಗಿಯುವ ಪ್ಲೈನು ರಾಕೆಟ್ಗಳನ್ನು ನೋಡಿ ನಾನೂ ಕೂಡ ಅಂತಹದೊಂದು ಸಾಧನೆಯನ್ನು ಮಾಡಬೇಕೆಂದು ಕನಸ್ಸು ಕಾಣುವುದು ತೀರಾ ಸಹಜವೇ.ಈ ತ್ರಿವಳಿಗಳೂ ಅಂತಹದ್ದೇ ಆದ ಕನಸ್ಸನ್ನು ತಮ್ಮ ಎಳೆಯ ವಯಸ್ಸಿನಲ್ಲಿ ಕಂಡಿದ್ದರು. ಸಮಯ ಹಾಗು ಸಂಧರ್ಭ ತಮ್ಮ ಕನಸ್ಸಿಗೆ ಪೂರಕವಾಗಿರಲಿಲ್ಲವಷ್ಟೇ. ಆದರೆ ಆ ಕನಸ್ಸು ಕಾಲದ ಗಾಲಿಯಲ್ಲಿ ಸವೆಯಲಿಲ್ಲ. ಅಳಿಸಲಿಲ್ಲ. ಒಳಗೊಳಗೇ ಅದು ಗಟ್ಟಿಗೊಂಡಿತ್ತು. ಎಂದು ಇವರುಗಳು ಯಶಸ್ಸಿನ ಉತ್ತುಂಗವನ್ನು ಹತ್ತಿದರೋ ಅಂದೇ ತಮ್ಮ ವಿಶಿಷ್ಟ ಕನಸ್ಸಿಗೆ ರೆಕ್ಕೆಯನ್ನು ಕಟ್ಟಲಾಂಬಿಸಿದರು. ರಿಚರ್ಡ್ ಬ್ರಾನ್ಸನ್ 2004 ರಲ್ಲಿ ವರ್ಜಿನ್ ಗಲಾಟಿಕ್ ಎಂಬ ಅಂತರಿಕ್ಷ ವಾಹನಗಳನ್ನು ತಯಾರಿಸುವ ಕಂಪನಿಯನ್ನು ಸ್ಥಾಪಿಸಿದ. ಎರಡು ಟೆಸ್ಟ್ ಫ್ಲೈಟ್ ಗಳನ್ನೂ ನಭಕ್ಕೆ ಚಿಮ್ಮಿಸಿ ಯಶಸ್ವಿಯೂ ಆಗಿರುವ ಕಂಪನಿ ಈಗ ಮಾನವ ಸಹಿತ ತನ್ನ ಚೊಚ್ಚಲ ಸ್ಪೇಸ್ ಶಿಪ್ ಅನ್ನು ಹಾರಿಸುವ ಸನಿಹದಲ್ಲಿದೆ. ಈ ಸಾಹಸಕ್ಕೆ ಸಾಕ್ಷಿಯಾಗುವ 'ಯಾತ್ರಿ' ಗಳಿಂದ ಅರ್ಜಿಯನ್ನು ಸ್ವೀಕರಿಸಿ ಹಲವರನ್ನು ಅಂತಿಮಗೊಳಿಸಿಯೂ ಆಗಿದೆ. ಅಲ್ಲದೆ ಅಂತಹ ಕೆಲ ನಿಮಿಷಗಳ ಯಾತ್ರೆಗೆ ಅವರುಗಳು ತೆರಬೇಕಾದ ಮೊತ್ತ ಹತ್ತಿರ ಹತ್ತಿರ 2 ಕೋಟಿ ರೂಪಾಯಿಗಳು! ಅಲ್ಲದೆ ಸ್ವತಃ ಬ್ರಾನ್ಸನ್ ಈ ಯಾತ್ರೆಯ ಮೊದಲ ಪ್ರಯಾಣಿಕನಾಗಲಿದ್ದಾನೆ. ಇನ್ನು ಜೆಫ್ ಬೆಝೋಸ್ನ ಬ್ಲೂ ಆರಿಜಿನ್ (ಕ್ರಿ ಶ 2000)ಕಂಪನಿಯೂ ಸಹ ಅಂತರಿಕ್ಷ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಿದೆಯಲ್ಲದೆ ಅಮೇರಿಕಾದ ನಾಸಾ ಸಂಸ್ಥೆಯ ರಾಕೆಟ್ಗಳನ್ನು ಹಾಗು ಹೊಸ ಟೆಕ್ನಾಲಾಜಿಗಳನ್ನು ಪರೀಕ್ಷಿಸುವ ಒಪ್ಪಂದವನ್ನೂ ಅದು ಮಾಡಿಕೊಂಡಿದೆ. ಈ ಮೂಲಕ ಖಾಸಗಿ ಅಂತರಿಕ್ಷ ಸಂಸ್ಥೆಗಳ ಹೊಸ ಯುಗಕ್ಕೆ ನಾಂದಿಯನು ಹಾಡಿದೆ. ನಿಧಾನವಾದರೂ ಅಚ್ಚುಗಟ್ಟಾಗಿ ಗಟ್ಟಿಯಾದ ಒಂದೊಂದೇ ಹೆಜ್ಜೆಯನ್ನು ಇಡುತ್ತಿರುವ ಬ್ಲೂ ಆರಿಜಿನ್ ಅಂತರಿಕ್ಷ ವಲಯದಲ್ಲಿ ಗಟ್ಟಿಗನೆಂಬುದರಲ್ಲಿ ಸಂಶಯವಿಲ್ಲ. ಇನ್ನು ಎಲಾನ್ ಮಸ್ಕ್ ನ SpaceX ಸಂಸ್ಥೆಯ ವಿಚಾರಕ್ಕೆ ಬಂದರೆ ಆತನ ಕನಸ್ಸು ಇನ್ನು ಒಂದೆಜ್ಜೆ ಮುಂದಿದೆ ಎನ್ನಬಹುದು. ಆತ ಯಾತ್ರಿಕರನ್ನು ನಿಮಿಷಮಾತ್ರಕ್ಕೆ ಗಗನಕ್ಕೆ ಕಳುಹಿಸಿ ವಾಪಸ್ಸು ಕರೆತರುವ ಯೋಜನೆಯಷ್ಟೇ ಅಲ್ಲದೆ ದೈನಂದಿನ ವಿಮಾನಯಾನಗಳಂತೆ ‘ಬಾಹ್ಯಾಕಾಶಯಾನ’ವನ್ನೂ ಮಾಡಿಸುವುದಾಗಿದೆ. ಅರ್ಥಾತ್ ಭೂಮಿಯ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಬಾಹ್ಯಾಕಾಶದ ಮುಖೇನ ಜಿಗಿಯುವ ಯೋಜನೆ. ಮುಂದೊಂದು ದಿನ ಈ ಯೋಜನೆ ಸಫಲಗೊಂಡರೆ ಇಡೀ ಭೂಮಿಯ ಯಾವ ಮೂಲೆಗೂ ಕೇವಲ ಅರ್ವತ್ತು ನಿಮಿಷಗಳೊಳಗೆ ತಲುಪಬಹುದಾಗಿದೆ! ಅಲ್ಲದೆ ಎಲಾನ್ ಮಸ್ಕ್ ಮಂಗಳ ಗ್ರಹದಲ್ಲಿ ಮಾನವರನ್ನು ಇಳಿಸುವ ತನ್ನ ಬಾಲ್ಯದ ಕನಸ್ಸನ್ನೂ ನನಸ್ಸಾಗಿಸುವ ಸನಿಹದಲ್ಲಿದ್ದಾನೆ. ಈ ಯೋಜನೆಗೆ ಅದಾಗಲೇ BFR (Big Falcon Rocket) ಎಂಬ ಮರುಬಳಕೆ ಮಾಡಬಹುದಾದ ಸ್ಪೇಸ್ ಕ್ರಾಫ್ಟ್ ಅನ್ನೂ ಅಭಿವೃದ್ಧಿ ಪಡಿಸಲಾಗುತ್ತಿದೆ.

ಒಟ್ಟಿನಲ್ಲಿ ಸಾಮಾನ್ಯ ಕುಟುಂಬದಲ್ಲೆ ಹಲವಾರು ಕಷ್ಟ, ದುಃಖ ಹಾಗು ನ್ಯೂನ್ಯತೆಗಳೊಟ್ಟಿಗೆ ನಮ್ಮ ನಿಮ್ಮಂತೆಯೇ ಹುಟ್ಟಿ ಬೆಳೆದ ಈ ಮೂವರು ಇಂದು ಇಡೀ ವಿಶ್ವದಲ್ಲೇ ತಮ್ಮ ಹೆಸರಿನ ಬ್ರಾಂಡನ್ನು ಕಟ್ಟಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಹೇಳಿಕೊಳ್ಳುವ ಮಹತ್ತರವಾದ ಡಿಗ್ರಿಗಳಿರದಿದ್ದರೂ ಅಂತರಿಕ್ಷ ವಲಯದಲ್ಲಿ ದೊಡ್ಡ ದೊಡ್ಡ ಹೆಸರಿನ ಸಂಸ್ಥೆಗಳೇ ಇವರ ಕಂಪನಿಯ ಟೆಕ್ನಾಲಜಿಗಳ ಮುಂದೆ ತಲೆಬಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಹಣವನ್ನು ಯಾರಾದರೂ ಗಳಿಸಬಹುದು. ಅದಕ್ಕೆ ಸಾವಿರಾರು ಮಾರ್ಗಗಳಿವೆ. ಆದರೆ ಗಳಿಸಿದ ನಂತರ ಇಡುವ ಹೆಜ್ಜೆ ಇದೆಯಲ್ಲ ಅದು ಆತನ ಅಥವಾ ಅವಳ ಸ್ವಭಾವವನ್ನು ಹಾಗು ಶಕ್ತಿಯನ್ನು ಜಗತ್ತಿಗೆ ತೋರಿಸುತ್ತದೆ. ಸೋಲು ಖಚಿತವೆಂದು ದೇವರೇ ಬಂದು ಹೇಳಿದರೂ ಇವರುಗಳು ಮಾತ್ರ ಪ್ರಯತ್ನಿಸುವುದ ಬಿಡಲಿಲ್ಲ. ಹಣದ ಹೊಳೆಯೇ ಪೋಲಾದರೂ ದೃತಿಗೆಡಲಿಲ್ಲ. ಅವರ ಪ್ರತಿ ಸೋಲೂ ಪ್ರಗತಿಯಾಗಿದ್ದಿತೇ ವಿನಃ ಕೇವಲ ನಡೆಯಾಗಿರಲಿಲ್ಲ. ಇಲ್ಲವಾದರೆ ತಿಂಗಳ ಕೊನೆಗೆ ಸಿಗುವ ಸಂಬಳಕ್ಕೆ ದುಡಿಯುವ ನೌಕರನೊಬ್ಬ ನಾಸಾದಂತಹ ಧೈತ್ಯ ಅಂತರಿಕ್ಷ ಸಂಸ್ಥೆಗಳಿಗೆ ರಾಕೆಟ್ ಗಳನ್ನು ಮಾಡಿ ಕೊಡುವ ಪ್ರಪೋಸಲ್ ಅನ್ನು ಇಡಲು ಸಾಧ್ಯವಾದೀತೆ? ಒಮ್ಮೆ ಯೋಚಿಸಿ. ಇವರುಗಳ ನಡುವೆ ಅದೆಂತಹ ಪೈಪೋಟಿಯೇ ಇರಬಹುದು ಆದರೆ ಸೋಲನ್ನು ಸೋಲಿಸಿ ಆಗಸಕ್ಕೆ ಏಣಿಯಿಟ್ಟವರಿವರು. ನಮ್ಮ ನಿಮ್ಮ ಸುತ್ತಲೂ ಇಂತಹ ಹತ್ತಾರು ನೂರಾರು ಅರಬ್ ಪತಿಗಳು, ಕೋಟ್ಯಾಧಿಪತಿಗಳು ಕಾಣಸಿಗುತ್ತಾರೆ. ಕೂತು ತಿಂದರೂ ಕೊಳೆಯುವಷ್ಟು ಹಣವಿರುವ ಶ್ರೀಮಂತರಿದ್ದಾರೆ. ವಿಶ್ವದ ಪಟ್ಟಿಯಲ್ಲಿ ಅಗ್ರಮಾನ್ಯರೆನಿಸಿಕೊಂಡವರಿದ್ದಾರೆ. ಆದರೆ ಅದರಲ್ಲಿ ಅದೆಷ್ಟು ಜನ ಇಂತಹ ಸಾಹಸದ ಕಾರ್ಯಕ್ಕೆ ಕೈಯಾಕಬಲ್ಲರು?. ಅವರಲ್ಲಿ ಅದೆಷ್ಟು ಮಂದಿಗೆ ಇಂತಹ ಡೇರಿಂಗ್ ವಲಯಗಳನ್ನು ಪ್ರವೇಶಿಸುವ ತಾಕತ್ತು ಹಾಗು ಆ ತಾಕತ್ತಿಗೆ ಬೇಕಾದ ವಿದ್ವತ್ತು ಇರಬಹುದು? ಉತ್ತರ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅತಿ ಮಹತ್ವವಾದದ್ದು!



Friday, September 28, 2018

ಇರುವುದೆಲ್ಲಿ..? 'ಆ ಮನೆ' ವಿಶ್ವದ ಅನಂತತೆಯಲ್ಲಿ....

ಭೂಮಿಯ ಮೇಲೆ ತನ್ನ ಪಾದಾರ್ಪಣೆಯದಾಗಿನಿಂದಲೂ ಮಾನವ ಒಂದಿಲ್ಲೊಂದು ಬಗೆಯಲ್ಲಿ ತನ್ನ ಸುತ್ತಲಿನ ಪರಿಸರವನ್ನು ಅನ್ವೇಷಿಸುತ್ತಿದ್ದಾನೆ. ಈ ಅನ್ವೇಷಣೆ ಆತನ ಹಸಿವು,ರಕ್ಷಣೆ ಹಾಗು ಮೈಗಳ್ಳತನಕ್ಕೆ ಪೂರಕವಾಗಿತ್ತಲ್ಲದೆ ಆತನ ಕುತೂಹಲ ಚಿಂತನೆಗಳಿಗೂ ದಾರಿಯನ್ನು ತೋರಿಸಿತು. ಆದ ಕಾರಣವೇ ಇತರೆ ಪ್ರಾಣಿಗಳೊಟ್ಟಿಗೆ ಗೆಡ್ಡೆ ಗೆಣಸು ಹಾಗು ಹಸಿ ಮಾಂಸವನ್ನು ತಿಂದು ಎಲ್ಲೆಂದರಲ್ಲಿ ಎದ್ದು ಬಿದ್ದು ಬೆಳೆಯುತ್ತಿದ್ದ ಜೀವಿಯೊಂದು ಇಂದು ತನ್ನ ಸಹವರ್ತಿ ಜೀವಿಗಳನೆಲ್ಲ ಬಿಟ್ಟು ಬಹಳಷ್ಟು ದೂರಕ್ಕೆ ಸಾಗಿರುವುದು. ಇಂದು ಆ ಜೀವಿಯ ನಡೆ ಕೇವಲ ಭೂಮಿಯ ಮೇಲೆ ಸಮಾಜವನ್ನು ನಿರ್ಮಿಸಿ ಬಾಳಿ ಬದುಕುವುದಲ್ಲದೆ ಪ್ರಚಂಡದೂರಗಳಲ್ಲಿರುವ ಗ್ರಹ, ಗ್ಯಾಲಕ್ಸಿಗಳ ಅಧ್ಯಯನವನ್ನೂ ಒಳಗೊಂಡಿದೆ. ಕತ್ತಲೆಯ ರಾತ್ರಿಯಲ್ಲಿ ಮಿನುಗುವ ಅಗಣಿತ ನಕ್ಷತ್ರಗಳ ನಡುವೆ ಗ್ರಹಗಳನ್ನು ಗುರುತಿಸಿ ಅದರ ಮುಖೇನ ಸೌರಮಂಡಲ, ಅಲ್ಲಿರುವ ಗ್ರಹಗಳು, ಅವುಗಳ ರಚನೆ, ತೂಕ, ಹಾಗು ತಾಪಮಾನವಲ್ಲದೆ ಅವುಗಳಿಗಿರುವ ನೈಸರ್ಗಿಕ ಉಪಗ್ರಹಗಳ ಬಗೆಗೂ ಈತ ಕೂತಲ್ಲೇ ಲೆಕ್ಕಾಚಾರ ಹಾಕತೊಡಗಿದ. ದಿನಗಳು ಕಳೆದಂತೆ, ವಿಜ್ಞಾನ ಬೆಳೆದಂತೆ ಈತನಿಗೆ ಅವುಗಳ ಮೇಲೂ ಕಾಲೂರಬೇಕೆಂಬ ತವಕ ವಿಪರೀತವಾಯಿತು. ಮಾನವನ ಈ ತವಕ ಏತಕೆ? ಅದನ್ನು ಆತನ ಮಸ್ತಿಷ್ಕದೊಳಗೆ ತುಂಬಿದವರ್ಯಾರು? ಭೂಮಿಯ ಮೇಲೆ ಬದುಕಲಿ ಎನುತ ಗಾಳಿ, ನೀರು ಎಲ್ಲವನ್ನೂ ಕೊಟ್ಟರೂ ಪಕ್ಕದ ಮನೆಯ ಮೇಲ್ಯಾಕೆ ಈತನಿಗೆ ಕಣ್ಣು ಎಂಬ ಪ್ರೆಶ್ನೆಗೆ ಉತ್ತರ ಮಾತ್ರ ನಾವುಗಳೇ ಹುಡುಕಿಕೊಳ್ಳಬೇಕು.

ಮಾನವ ಹೀಗೆ ಸೌರಮಂಡಲದಲ್ಲಿರುವ ಅಷ್ಟೂ ಗ್ರಹಗಳ ಆಳೆತ್ತರಗಳನ್ನು ಅರಿತು ಕೊನೆಗೆ ಹೆಚ್ಚುಕಡಿಮೆ ಯಾವ ಗ್ರಹಗಳ ಮೇಲೂ ಜೀವಿಗಳಿರುವುದು ಸಾಧ್ಯವಿಲ್ಲವೆಂಬುದನ್ನು ಅರಿತಮೇಲೆ ಆತನ ದೃಷ್ಟಿ ಸೌರಮಂಡಲದಾಚೆ ಇರುವ ಅನಂತ ವಿಶ್ವದ ಕಡೆಗೆ ನೆಟ್ಟಿತು. ನಮ್ಮ ಸೌರಮಂಡಲದಂತಹ ಕೋಟಿ ಕೋಟಿ ಸೌರಮಂಡಲಗಳಿರುವ ಅಗಾಧ ವಿಶ್ವದಲ್ಲಿ ಇತರೆ ಜೀವಿಗಳ ಇರುವಿಕೆಯನ್ನು ಅಲ್ಲಗೆಳೆಯಲಾಗುವುದಿಲ್ಲ ಎಂಬುದನ್ನರಿತು ತನ್ನ ಸಂಶೋಧನೆಯನ್ನು ಮುಂದುವರೆಸಿದರೂ ಇಂದಿಗೂ ಆತನಿಗೆ ಹೇಳಿಕೊಳ್ಳುವಂತಹ ಯಾವುದೇ ಪುರಾವೆಗಳು ಸಿಗದಿರುವುದು ವಿಪರ್ಯಾಸವೇ ಸರಿ. ಆದರೆ ಮುಂದೊಂದು ದಿನ ಇದು ಸಾಧ್ಯವಾಗದು ಎಂದು ಖಡಾಖಂಡಿತವಾಗಿ ಹೇಳಲೂ ಆಗದು. ಆದರೆ ಆ ಸಮಯದವರೆಗೆ ಮಾನವ ಬದುಕಿರಬೇಕು. ಆದರೆ ಇನ್ನು ಕೆಲವು ದಶಕಗಳಲ್ಲೇ ಸಾವಿರ ಕೋಟಿ ಜನಸಂಖ್ಯೆಯನ್ನು ಹಾಗು ಅವರುಗಳ ಉಪಟಳವನ್ನು ಸಹಿಸಿಕೊಳ್ಳಬೇಕಾದ ಭೂಮಿಯ ಕತೆ ಏನಾಗುತ್ತದೋ ಎಂಬುದನ್ನು ಯಾವೊಬ್ಬ ವಿಜ್ಞಾನಿಯೂ ನಿಖರವಾಗಿ ಹೇಳಲಾರ. ಈವೊಂದು ಕಾರಣಕ್ಕಾದರೂ ಮಾನವನಿಗೆ ತನ್ನ ಸೌರಮಂಡಲದ ಇತರ ಗ್ರಹಗಳ ವಿವರವಾದ ಅಧ್ಯಯನ ಅವಶ್ಯಕ. ಹಾಗೆ ಯೋಚಿಸುತ್ತಾ ಹೋದ ಮಾನವನಿಗೆ ತಕ್ಷಣ ಹೊಳೆದ ಗ್ರಹವೇ ಮಂಗಳ ಗ್ರಹ.

ಭೂಮಿ ಸೂರ್ಯನಿಂದ 93 ಮಿಲಿಯನ್ ಮೈಲುಗಳ ದೂರದಲ್ಲಿದ್ದರೆ ಮಂಗಳ ಸೂರ್ಯನಿಂದ 142 ಮಿಲಿಯನ್ ಮೈಲುಗಳಷ್ಟು ದೂರದಲ್ಲಿದೆ. ಹಾಗಾಗಿ ಅದು ಸೂರ್ಯನ ಸುತ್ತ ಸುತ್ತಲು ಭೂಮಿಗಿಂತಲೂ ಎರಡು ಪಟ್ಟು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ. ಅಂದರೆ ಅಲ್ಲಿನ ಇಂದು ವರ್ಷ ನಮ್ಮಯ ಎರಡು ವರ್ಷಕ್ಕೆ ಸಮ. ಆದರೆ ಕೆಲವು ನಿಮಿಷಗಳ ಅಂತರವನ್ನು ಬಿಟ್ಟರೆ ದಿನದ ಘಂಟೆಗಳು ಎರಡೂ ಗ್ರಹಗಳಲ್ಲೂ ಒಂದೇಯಾಗಿರುತ್ತದೆ. ಅಲ್ಲಿಯ ಸರಾಸರಿ ತಾಪಮಾನವೂ 30 ಡಿಗ್ರಿಗಳ ಒಳಗೆ ಇರುತ್ತದೆ. ವಾತವರಣ ಇಂಗಾಲದ ಡೈ ಆಕ್ಸೈಡ್ ಹಾಗು ಇತರ ಅನಿಲಗಳಿಂದ ಕೂಡಿದೆ. ಹೀಗೆ ಭಾಗಶಃ ಭೂಮಿಯ ಮೇಲ್ಮೈಯನ್ನೇ ಹೋಲುವ ಮಂಗಳ ಗ್ರಹ ಸಧ್ಯಕ್ಕೆ ಮಾನವನ ಲೆಕ್ಕಾಚಾರದಲ್ಲಿ ಜೀವಿಗಳ ಇರುವುಕೆಗೆ ಪೂರಕವಾಗಿರುವ ಗ್ರಹ. ಇದಲ್ಲದೆ ನಮ್ಮ ಸೌರಮಂಡಲದ ಅತಿದೊಡ್ಡ ಗ್ರಹವೆನಿಸಿಕೊಂಡ ಗುರುಗ್ರಹ ಸುಮಾರು ಎಂಬತ್ತು ಉಪಗ್ರಹಗಳನ್ನು ಒಳಗೊಂಡಿದೆ. ಆ ಉಪಗ್ರಹಗಳಲ್ಲಿ ಭೂಮಿಯ ಕಾಲು ಭಾಗದಷ್ಟು ದೊಡ್ಡದಾದ ‘ಯುರೋಪಿಯಾ’ ಎಂಬ ಉಪಗ್ರಹ ಒಂದಿದೆ. ಇದನ್ನು ಕ್ರಿಸ್ತ ಶಕ 1610 ರಲ್ಲಿ ಗೆಲಿಲಿಯೋ ತನ್ನ ಟೆಲಿಸ್ಕೋಪ್ ನ ಮೂಲಕ ಕಂಡುಹಿಡಿದ.(!) ಹೀಗೆ ಪತ್ತೆಯಾದ ಉಪಗ್ರಹದ ಮೇಲ್ಮೈ ದಟ್ಟವಾದ ಮಂಜುಗೆಡ್ಡೆಯಿಂದ ಕೂಡಿದ್ದೂ ಆ ಪದರದ ಕೆಳಗೆ ಅಗಾಧವಾದ ನೀರಿನ ಸಾಗರಗಳಿವೆ ಎಂಬುದನ್ನು ವಿಜ್ಞಾನಿಗಳು ಇತ್ತೀಚಿಗೆ ಪತ್ತೆಹಚ್ಚಿದ್ದಾರೆ. ಒಂದು ಪಕ್ಷ ಮಂಗಳವೇನಾದರೂ ಬದುಕಲು ಯೋಗ್ಯವಲ್ಲದ ನೆಲವಾದರೆ ಇಡೀ ಸೌರಮಂಡಲದಲ್ಲಿ ಬಹುಶಃ ಬದುಕಲು ಯೋಗ್ಯವಾದ ಮತ್ತೊಂದು ಗ್ರಹವೊಂದಿದ್ದರೆ ಅದು ಯುರೋಪಿಯಾ ಗ್ರಹವಾಗಬಹುದು ಎಂಬುದು ಸದ್ಯಕ್ಕೆ ಹಲವು ವಿಜ್ಞಾನಿಗಳ ಲೆಕ್ಕಾಚಾರ.

ಎರಡನೇ ವಿಶ್ವಯುದ್ಧದ ನಂತರ ವಿಶ್ವದ ಎರಡು ಮಹಾಶಕ್ತಿಗಳಾದ ಅಮೇರಿಕ ಹಾಗು ರಷ್ಯಾಗಳ ನಡುವೆ ನೆಡೆದ ಶೀತಲ ಸಮರದಲ್ಲಿ ಅಂತರಿಕ್ಷದ ಬಗೆಗಿನ ಅನ್ವೇಷಣೆಗಳು ವೇಗೋತ್ಕರ್ಷದ ಹಾದಿಯನ್ನು ಹಿಡಿದವು. ಈ ಸಮರದಲ್ಲಿ ನಾ ಮುಂದು ತಾ ಮುಂದು ಎನುತ ಮಂಗಳ ಗ್ರಹದ ಮೇಲೆ ಕಾಲಿಡಬಯಸಿದ ಎರಡು ದೇಶಗಳಲ್ಲಿ ಸಾಕಷ್ಟು ಕಷ್ಟ ನಷ್ಟಗಳ ನಂತರ ಅಮೆರಿಕದ ಮರಿನಾರ್-4 ಎಂಬ ಬಾಹ್ಯಾಕಾಶ ನೌಕೆ ಮೊದಲು (1965) ಮಂಗಳನ ಕಕ್ಷೆಯನ್ನು ಸೇರಲು ಸಫಲವಾಯಿತು. ಅಲ್ಲಿಂದ ಮುಂದೆ ಅದೇ ಅಮೇರಿಕ ಒಟ್ಟು ನಾಲ್ಕು ರೋವರ್ (ಮಂಗಳದ ನೆಲದ ಮೇಲೆ ಇಳಿದ ಯಂತ್ರಗಳು) ಗಳನ್ನು ಮಂಗಳ ಅಂಗಳದ ಮೇಲೆ ಇಳಿಸಿ ಇತಿಹಾಸವನ್ನು ಸೃಷ್ಟಿಸಿತು. ಕ್ಯೂರಿಯಾಸಿಟಿ (2011) ಹಾಗು ಆಪರ್ಚುನಿಟಿ (2003) ಎಂಬ ಎರಡು ರೋವರ್ಗಳು ಇಂದಿಗೂ ಭೂಮಿಯ ಪ್ರತಿನಿಧಿಗಳಾಗಿ ಮಂಗಳನಲ್ಲಿ ಕಾರ್ಯನಿರ್ವಹಿಸುತ್ತಿವೆ. ಇನ್ನು ಭಾರತದ ವಿಷಯಕ್ಕೆ ಬಂದರೆ ತನ್ನ ಮೊದಲ ಉಡಾವಣೆಯಲ್ಲೇ ಯಶಸ್ವೀಯಾದ ವಿಶ್ವದ ಏಕೈಕ ದೇಶವಾಗಿ ಅಲ್ಲದೆ ವಿಶ್ವದಲ್ಲೇ ಅತೀ ಅಗ್ಗವಾದ ಮಂಗಳಯಾನ (MOM) ಪ್ರೋಬನ್ನು 2013 ರಲ್ಲಿ ಗಗನಕ್ಕೆ ಹಾರಿಸಿ ಕಕ್ಷೆಯನ್ನು ತಲುಪಿಸಿದ ಕೀರ್ತಿ ನಮ್ಮ ಇಸ್ರೋ ಸಂಸ್ಥೆಗೆ ಸೇರುತ್ತದೆ. ಈ ಮೂಲಕ ಏಷ್ಯಾದಲ್ಲೇ ಮಂಗಳವನ್ನು ತಲುಪಿದ ಮೊದಲ (ವಿಶ್ವದಲ್ಲಿ ನಾಲ್ಕನೇ) ದೇಶವೆಂಬ ಹೆಗ್ಗಳಿಕೆಗೂ ಅದು ಪಾತ್ರವಾಗಿದೆ.

ಎಲ್ಲ ನಕ್ಷತ್ರಗಳಂತೆ ನಮ್ಮ ಸೂರ್ಯನೂ ಒಂದು ದಿನ ನಶಿಸಲೇಬೇಕು. ಅದರಲ್ಲಿರುವ ಹೈಡ್ರೋಜೆನ್ ಹಾಗು ಹೀಲಿಯಂ ಒಂದಿಷ್ಟೂ ಬಿಡದೆ ಖಾಲಿಯಾದ ನಂತರ ಕೆಂಡಂತಹ ದೈತ್ಯ ಸೂರ್ಯ ತನ್ನ ಹತ್ತಿರವಿರುವ ಗ್ರಹಗಳನೆಲ್ಲ ನುಂಗಿ ಹಾಕಲಿದೆ. ಇದಕ್ಕೆ ಕಾರಣ ಗುರುತಾಕರ್ಷಣೆಯಷ್ಟೇ ಅಲ್ಲದೆ ಆ ಸಮಯಕ್ಕೆ ಸೂರ್ಯ ಅದೆಷ್ಟರ ಮಟ್ಟಿಗೆ ದೊಡ್ಡವನಾಗಿರುತ್ತಾನೆ ಎಂದರೆ ಆದರ ಪ್ರಸ್ತುತ ಪರಿಧಿ ಹೆಚ್ಚು ಕಡಿಮೆ ಭೂಮಿಯ ಬಳಿಗೆ ಬಂದಿರುತ್ತದೆ!. ಆದರೆ ಇದು ಜರುಗಲು ಇನ್ನು 5 ಬಿಲಿಯನ್ ವರ್ಷಗಳಿಗೂ ಹೆಚ್ಚಿನ ಕಾಲವಿದೆ. ಅಷ್ಟೊತ್ತಿಗಾದರೂ ಮಾನವನಿಗೆ ಶತಾಯ ಗತಾಯ ಅಂತರಿಕ್ಷದಲ್ಲೊಂದು ಹೊಸ ಮನೆಯನ್ನು ಹುಡುಕುವ ಅವಶ್ಯಕೆತೆಯಿದೆ.ಆದರೆ ಸೂರ್ಯನ ಕಾಲಾವಧಿ ಹೀಗೆ ಮುಗಿದ ನಂತರ ನಮ್ಮ ಇಡೀ ಸೌರಮಂಡಲವೇ ಬದುಕನ್ನು ಕಳೆದುಕೊಳ್ಳುವಾಗ ಇಲ್ಲಿಯ ಯಾವುದೇ ಗ್ರಹಗಳ ಮೇಲೂ ಆತ ಶಾಶ್ವತವಾದೊಂದು ಮನೆಯನ್ನು ನಿರ್ಮಿಸಿಕೊಳ್ಳಲಾರ. ಹಾಗಾಗಿ ಆತನ ಅರಸುವ ಗುರಿಯೇನಿದ್ದರೂ ಅಂತರಿಕ್ಷದಲ್ಲಿ ಮತ್ತೊಂದು ಜೀವಿಸಲೋಗ್ಯವಾದ ಸಂಪೂರ್ಣ ಸೌರಮಂಡಲಗಳೇ ಆಗಿದೆ.

ಹೀಗೆ ದಿನದಿಂದ ದಿನಕ್ಕೆ ಆಗಸದೆಡೆಗೆ ದಾಪುಗಾಲಿಡುತ್ತಿರುವ ಮಾನವನ ಪ್ರಯತ್ನದ ಫಲಿತಾಂಶ ಅದೆಷ್ಟರ ಮಟ್ಟಿಗೆ ಸಫಲವಾಗಲಿದೆ? ಮಂಗಳ ಗ್ರಹದಲ್ಲಿ ತನ್ನ ಎರಡನೆಯ ಮನೆಯನ್ನು ಕಾಣುವ ಆತನ ಕನಸ್ಸು ನನಸಾಗಲಿದೆಯೇ ? ಬ್ರಹ್ಮಾಂಡದ ಅಲ್ಲೆಲ್ಲೋ ನಮ್ಮಂತೆಯೇ ಹೋಲುವ ಜೀವಿಗಳೋ ಅಥವಾ ಭೂಮಿಯೊಂದು ಸಿಗುವ ಲಕ್ಷಣಗಳೆಷ್ಟಿವೆ? ಇಂದು ಒಂದು ಗ್ರಹದಿಂದ ಮತ್ತೊಂದು ಗ್ರಹಕ್ಕೇ ಹೋಗಲು ಪರದಾಡುವ ಮಾನವನಿಗೆ ಅಂತಹ ಅನಂತ ದೂರದ ಪ್ರಯಾಣಕ್ಕೆ ಬೇಕಾಗುವ ವಾಹಕಗಳಾದರೂ ಎಂತಹದ್ದು? ಆದರೆ ಅಂತಹ ಜಾಗವೊಂದು ಅನಂತ ವಿಶ್ವದ ಅದ್ಯಾವ ಮೂಲೆಯಲ್ಲಿದೆ. ಅದನ್ನು ಹುಡುಕುವ ಬಗೆಯಾದರೂ ಎಂತಹದ್ದು?ಇದು ಖಂಡಿತವಾಗಿಯೂ ಸಾಧ್ಯವೇ? ಎಂಬ ಹಲವಾರು ಪ್ರೆಶ್ನೆಗಳು ನಮ್ಮೊಳಗೇ ಮೂಡುತ್ತವೆ.

ಐನ್ಸ್ಟಿನ್ ನ ಟೈಮ್-ಸ್ಪೇಸ್ ಥಿಯರಿ, ಟೈಮ್ ಮಷೀನ್, ಬ್ಲಾಕ್ ಹೋಲ್ಸ್, ಏಲಿಯನ್ಸ್ ಅಥವಾ ಇನ್ನಾವುದೇ ಥಿಯರಿಗಳೂ ಸದ್ಯಕಂತೂ ಈ ಪ್ರೆಶ್ನೆಗಳಿಗೆ ಪೂರಕವಾದಂತಹ ಉತ್ತರವನ್ನು ನೀಡಲಾರವು. ಹಾಗಾದರೆ ಬೇರ್ಯಾವ ಬಗೆಯಲ್ಲಿ ಈ ಕಾರ್ಯವನ್ನು ಸಿದ್ಧಿಗೊಳಿಸಬಹುದು? ದೀಪದ ಬೆಳಕು ತನ್ನ ಬುಡಕ್ಕೇ ಕತ್ತಲನೆಯನ್ನು ತಂದಂತೆ ನಾವುಗಳು ವಿಶ್ವದ ಸರ್ವವನ್ನೂ ಪಶ್ಚಿಮದ ಕನ್ನಡಕ ಒಂದರಲ್ಲೇ ನೋಡಲಿಚ್ಛಿಸುತ್ತೇವೆ. ನಮ್ಮ ವೇದ ಉಪನಿಷತ್ತುಗಳಲ್ಲಿ ತಿಳಿಸಿರುವ ಫಾರ್ಮುಲಾಗಳ ಮೇಲೂ ಒಮ್ಮೆ ಕಣ್ಣಾಯಿಸಿದರೆ ಬಹುಷಃ ಇನ್ನೊಂದು ಬಗೆಯ ಸಂಶೋಧನೆಯನ್ನು ಹುಟ್ಟುಹಾಕಬಹುದೇನೋ. ಮಹಾಭಾರತದದಲ್ಲಿ ಬಳಸಲಾದ ಬ್ರಹ್ಮಾಸ್ತ್ರ, ವಿಮಾನ, ವಿಷ್ಣವಾಸ್ತ್ರ ಎಂಬ ಹಲವು ಪದಗಳಾಗಲಿ, ಕಾಪರ್ನಿಕಸ್ ನಿಗಿಂತಲೂ ಸಹಸ್ರ ವರ್ಷಗಳ ಮುಂಚೆಯೇ ಸೌರಮಂಡಲ, ಗ್ರಹಗಳು, ಅವುಗಳ ಚಲನೆ, ದೂರದ ನಕ್ಷತ್ರಗಳು, ಗ್ರಹಣ ಇವುಗಳ ಬಗ್ಗೆ ವಿವರಿಸಿರುವ ವೇದ ಉಪನಿಷತ್ತುಗಳಾಗಲಿ ಎಲ್ಲವೂ ನಮ್ಮ ಪೂರ್ವಜರ ವೈಜ್ಞಾನಿಕ ಜ್ಞಾನದ ಆಳವನ್ನು ತೋರಿಸುತ್ತದೆ. ಇಂತಹ ಭಾರತೀಯ ವಿಜ್ಞಾನದ ನಿಟ್ಟಿನಲ್ಲೇನಾದರೂ ಸಂಶೋಧನೆ ನೆಡೆಸಿದರೆ ಬಹುಷಃ ಮೇಲಿನ ಕೆಲವು ಪ್ರೆಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಬಹುದೇನೋ. ಹಾಗಾದರೆ ಆ ಕಾಲಕ್ಕೆ ಭಾರತದ ವಿಜ್ಞಾನ ಅಷ್ಟೊಂದು ಮುಂದುವರೆದಿದ್ದರೆ ಇಂದಿಗೆ ನಾವುಗಳು ನಮ್ಮಂತೆಯೇ ಹೋಲುವ ಅದೆಷ್ಟೋ ಗ್ರಹಗಳನ್ನು ಕಂಡುಹಿಡಿಯಬಹುದಿತ್ತು, ಅದೇಕೆ ಸಾಧ್ಯವಾಗಲಿಲ್ಲ ಎಂಬ ಪ್ರೆಶ್ನೆ ಉದ್ಭವಿಸುವುದು ಸಹಜ. ಆದರೆ ಹಿಂದೂ ವಿಶ್ವವಿಜ್ಞಾನ (Hindu Cosmology) ದ ಪ್ರಕಾರ ಇಡೀ ಬ್ರಹ್ಮಾಂಡವು ಹುಟ್ಟುವ ಮತ್ತು ಸಾಯುವ ಆವರ್ತ ನಿಯಮವನ್ನು ಅನುಸರಿಸುತ್ತದೆ. ಈ ನಿಯಮವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಇಡೀ ಬ್ರಹ್ಮಾಂಡವೇ ಇಂತಹ ಹುಟ್ಟು ಸಾವುಗಳ ನಡುವೆ ಚಲಿಸುತ್ತಿದ್ದರೆ ಮಾನವ ಹೊಸ ಗ್ರಹವೊಂದನ್ನು ಹುಡುಕಿದರೆಷ್ಟು ಅಥವ ಬಿಟ್ಟರೆಷ್ಟು. ಪಡೆದುಕೊಂಡಿರುವ ನಿಸರ್ಗವನ್ನು ಹಾಳುಗೆಡವದೆ ಮನೆಯಲ್ಲಿಯೇ ಬದುಕಿ ನಮ್ಮ ಮನೆಯಲ್ಲಿಯೇ ಕೊನೆಯುಸಿರೆಳೆವುದು ನೆಮ್ಮದಿಯ ಕಾರ್ಯ. ಆದರಿಂದಲೇ ಏನೋ ನಮ್ಮ ಹಿರಿಕರು ವೈಜ್ಞಾನಿಕವಾಗಿ ಅದೆಷ್ಟೇ ಮುಂದುವರೆದಿದ್ದರೂ ಆ ವಿಜ್ಞಾನವನ್ನು ಬೇರೊಂದು ಗ್ರಹದ ಅನ್ವೇಷಣೆಗೆ ಬಳಸಿ ಅದನ್ನೂ ಹಾಳುಗೆಡಹುವ ಕಾರ್ಯಕ್ಕೆ ಕೈಯಾಕದಿದ್ದದ್ದು.

ಒಟ್ಟಿನಲ್ಲಿ ಅಂಬೆಗಾಲಿಡುತ ಬೆಳೆವ ಮಗುವಿಗೆ ಪ್ರತಿದಿನವೂ ಕುತೂಹಲ ಹಾಗು ಬೆರಗನ್ನು ನೀಡುವ ಪರಿಸರದಂತೆ ಇಂದು ವಿಶ್ವವು ಮಾನವನಿಗೆ ಗೋಚರವಾಗುತ್ತಿದೆ. ಈ ಅನಂತ ಸಮುದ್ರದಲ್ಲಿ ಆತನಿಗೆ ಕಲಿತಷ್ಟೂ, ತಿಳಿದಷ್ಟೂ ಕಡಿಮೆಯೇ. ಸೃಷ್ಟಿಯ ಮುಂದೆ ಇದು ಆತನ ಕುಬ್ಜತೆಯನ್ನು ತೋರಿಸುತ್ತದೆ. ಇದು ಮಹತ್ವಾಕಾಂಕ್ಷಿ ಮಾನವನಿಗೆ ಸುಮ್ಮನಿರದಿರಲು ವಿಷಯವೊಂದನ್ನು ಮಾತ್ರ ಸದಾ ತೆರೆದಿರುತ್ತದೆ. ಒಟ್ಟಿನಲ್ಲಿ ಮಾನವನ ಹೊಟ್ಟೆಗೆ ಹಿಟ್ಟು ಖಾಲಿಯಾಗುವ ಮುನ್ನ ಪಕ್ಕದ ಮನೆಯನ್ನು ಹುಡುಕುವ ಆತನ ಹುಚ್ಚು ಅದೆಂದು ಸಾಧ್ಯವಾಗಲಿದೆ ಎಂಬುದನ್ನು ಕಾದು ನೋಡಲೂ ನಮಗೆ ಸಾಧ್ಯವಾಗದೇನೋ?!!

Wednesday, September 19, 2018

ಕೊಡುವ ಮೂರಾಣೆಗೇನು ಇವನ ಹೆಗಲ ಮೇಲೊತ್ತು ಸುತ್ತಬೇಕೇನು?

ಜಾಗತಿಕ ಮಟ್ಟದಲ್ಲಿ ಇಂದು ನಾಲ್ಕು ರೀತಿಯ ದೇಶಗಳನ್ನು ಕಾಣುತ್ತೇವೆ. ಅವುಗಳಲ್ಲಿ ಮೊದಲನೆಯವು ಇತರೆ ದೇಶಗಳ ಸಂಕಷ್ಟಗಳಿಗೆ ಸ್ಪಂಧಿಸಿ ಅಲ್ಪವೋ ಅಪಾರವೋ ತಮ್ಮ ಕೈಲಾದ ನೆರವನ್ನು ನೀಡುವ ದೇಶಗಳು, ಕೆಲವು ಕೊಡುವವರಿಗೆ ನಮ್ರತೆಯಿಂದಲೇ ಬೇಡವೆಂದು ಕಷ್ಟಗಾಲದಲ್ಲಿ ತಮಗೆ ತಾವೇ ನೆರವಾಗುವ ದೇಶಗಳು, ನಂತರದವು ಸ್ವಪ್ರತಿಷ್ಠೆ, ಆತ್ಮಗೌರವ ಎಂಬುದನ್ನೆಲ್ಲವನ್ನು ಬಿಟ್ಟು ಎಷ್ಟೂ ಕೊಟ್ಟರೂ ಸಾಲದೆನುತ ಕೈಚಾಚುವು, ಮತ್ತುಳಿದವು ನೆರವನ್ನು ಕೊಟ್ಟೂ, ಮೂರನ್ನು ಬಿಟ್ಟು ಅಯ್ಯೋ ಕೊಟ್ಟೆನೆಲ್ಲಾ ಎಂಬ ಸಣ್ಣತನವನ್ನು ತೋರಿಸುವ ದೇಶಗಳು. ತಿಳಿದೋ ತಿಳಿಯದೆಯೋ ಯಾವೊಂದು ದೇಶವೂ ಸಹ ಈ ನಾಲ್ಕನೇ ಕೆಟಗರಿಗೆ ಬರಲಿಚ್ಚಿಸುವುದಿಲ್ಲ. ಅದು ಒಂತರ ಭಂಡತನದ ಪರಮಾವಧಿ ಎನ್ನುತ್ತಾರಲ್ಲ ಹಾಗೆ. ಮೇಲುಕೀಳೆಂಬ ಅಸಹನೆ, ನಾನು ನಾನೆಂಬ ಆಹಂ, ಕುತಂತ್ರಿ ತಂತ್ರಗಳೇ ತುಂಬಿ ತುಳುಕಾಡುವ ದೇಶವೊಂದು ಮಾತ್ರ ಈ ಬಗೆಯ ಕೊಟ್ಟು ಕೈ-ಕೈ ಹಿಸುಕುಕಿಕೊಳ್ಳುವ ಗುಂಪಿಗೆ ಸೇರುತ್ತದೆ.

ಪ್ರಸ್ತುತ ಟ್ರಂಪ್ ಮಹಾಶಯ ದಿ ಗ್ರೇಟ್ ಎಂದು ಕರೆಸಿಕೊಳ್ಳುವ ಅಮೇರಿಕವನ್ನು ಈ ನಾಲ್ಕನೇ ಕೆಟಗರಿಯ ದೇಶದ ಪಟ್ಟಿಯಲ್ಲಿ ತಂದು ನಿಲ್ಲಿಸಿದ್ದಾನೆ. ಕೊಟ್ಟ ಮೂರಾಣೆ ದುಡ್ಡಿನ ಗರ್ವದಿಂದ ನಾವು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹಣದ ನೆರವನ್ನು ನೀಡುತ್ತಾ ತಪ್ಪುಮಾಡುತ್ತಿದ್ದೇವೆ ಎನುತ ಸಣ್ಣತನದ ಮಾತನಾಡುತ್ತಾನೆ. ತಾನೇ ರಾಜನೆಂಬಂತೆ ಸಿಕ್ಕ ಸಿಕ್ಕ ಅಂತಾರಾಷ್ಟ್ರೀಯ ವಾಗ್ವಾದಗಳಿಗೆ ಮೂಗನ್ನು ತೂರಿಸುತ್ತಾ, ದ್ವೇಷದ ಜ್ವಾಲೆಯನ್ನು ಹೊತ್ತಿಸುತ್ತಾ, ತನ್ನ ಕಳ್ಳತನವನ್ನು ಮರೆಮಾಚಿಕೊಳ್ಳಲು ಇತರ ದೇಶಗಳ ಮೇಲೆ ಗೂಬೆಯನ್ನು ಕೂರಿಸುತ್ತಾ, ಅರಚುತ್ತಾ, ಬೆದರಿಸುತ್ತ, ಶ್ರೀಮಂತ ಅಪ್ಪನ ಪುಡಾರಿ ಮಗನಂತನಾಗಿದೆ ಇಂದು ಟ್ರಂಪ್ ಆಡಳಿತ. ಇಡೀ ಭೂಮಂಡಲವನ್ನೇ ತನ್ನ ನೌಕಾನೆಲೆಯ ತುಣುಕುಗಳನ್ನಾಗಿ ಮಾಡಿಕೊಳ್ಳುವ ಸಲುವಾಗಿಯೂ, ತನ್ನ ದೇಶದ ತೈಲಕ್ಕೆ ಅಂತರಾಷ್ಟ್ರಿಯ ಮಟ್ಟದಲ್ಲಿ ಬೇಡಿಕೆ ಹೆಚ್ಚಾಗಿಸಿಕೊಳ್ಳಲೋ, ನಾನಿದ್ದರೆ ಮಾತ್ರ ಇಂದು ವಿಶ್ವಮಾರುಕಟ್ಟೆ ನೆಡೆಯುವುದು ಎಂಬ ಭ್ರಮೆಯನ್ನು ಹುಟ್ಟುಹಾಕಲು ಅವಣಿಸುತ್ತಿರುವ ಈ ಆಸಾಮಿ ಕೊನೆಗೆ ಇದು ಸಾಧ್ಯವಿಲ್ಲ ಎಂಬುದನ್ನು ಮನಗಂಡಾಗ ಬಳಸುತ್ತಿರುವ ಕೊನೆಯ ಅಸ್ತ್ರಗಳೇ 'ಆರ್ಥಿಕ ದಿಗ್ಬಂಧನ' ಹಾಗು 'ಆರ್ಥಿಕ ನೆರವಿನ ಮೊಟಕುಗೊಳಿಸುವಿಕೆ'. ಅದರಲ್ಲೂ ಆರ್ಥಿಕ ನೆರವಿನ ಮೊಟಕುಗೊಳಿಸುವಿಕೆಯನ್ನು ಆತ ಹೇಳುವ ರೀತಿಯನ್ನು ನೋಡಿದರೆ ಇಂದು ವಿಶ್ವದ ಬಡದೇಶಗಳಿಗೆಲ್ಲವೂ ಈತನೊಬ್ಬನೇ ಅನ್ನಧಾತನೇನೋ ಎನ್ನುವ ಧಾಟಿಯದ್ದಾಗಿರುತ್ತದೆ. ಅಷ್ಟಾಗಿಯೂ ಇಂದು ಅಮೇರಿಕ ವಿದೇಶಗಳಿಗೆ ಕೊಡುವ ಆರ್ಥಿಕ ನೆರವು ಎಷ್ಟಂತೀರಾ, ಅದು ತನ್ನ ಒಟ್ಟು ಜಿಡಿಪಿಯ 0.7% ಮಾತ್ರ! ಇದು ಆರ್ಥಿಕವಾಗಿ ಸಣ್ಣವರಾದರೂ ಮನಸ್ಸಿನಿಂದ ದೊಡ್ಡವರಾದ ಸ್ವೀಡನ್, ನಾರ್ವೆಯ ಶೇಕಾಡುವರುವಿಗೆ ಹೋಲಿಸಿದರೆ ತೀರಾನೇ ಕಡಿಮೆ ಎಂಬುದು ಅಮೇರಿಕಾದ ಅಧ್ಯಕ್ಷನಿಗೇನು ತಿಳಿಯದ ವಿಚಾರವಲ್ಲ. ಅಷ್ಟಾಗಿಯೂ ಈತ ಸಾಕು ಮಕ್ಕಳಿಗೆ ಆಸ್ತಿಯ ಹಕ್ಕಿಲ್ಲವೇನೋ ಎಂಬಂತೆ ಅಭಿವೃದ್ದಿಶೀಲ ರಾಷ್ಟ್ರಗಳಿಗೆ ನಮ್ಮ ಆರ್ಥಿಕ ನೆರವನ್ನು ಮೊಟಕುಗೊಳಿಸಬೇಕು ಎಂಬಂತಹ ಬಾಲಿಶ ಹೇಳಿಕೆಗಳನ್ನು ಕೊಡುವಾಗ ಈತನ ಬೆಂಬಲಿಗರು ಕುಡಿದು ಕುಪ್ಪಳಿಸಲು ಖರ್ಚು ಮಾಡುವ ಒಟ್ಟು ಹಣದಿಂದಲೇ ಆಫ್ರಿಕಾದ ಯಾವುದಾದರೊಂದು ಜಿಲ್ಲೆಯನ್ನು ವರ್ಷವಿಡೀ ಬೆಳಗಬಹುದೇನೋ?!

ಅದು ಹಾಗಿರಲಿ. ಇಂದು ಜಾಗತಿಕವಾಗಿ ಜರುಗುತ್ತಿರುವ ವಿಶ್ವದ ಹತ್ತಾರು ಯುದ್ಧಗಳಲ್ಲಿ ಕನಿಷ್ಠ ಒಂದರಲ್ಲಿಯೂ ಅಮೇರಿಕಾದ ಪಾತ್ರ ಇಲ್ಲದಂತಿಲ್ಲ. ಅಲ್ಲದೆ ಕೈಕುಲುಕಿ ಚರ್ಚಿಸಿ ಕೊನೆಗೊಳ್ಳಬಹುದಾದ ಅದೆಷ್ಟೋ ವಿವಾದಗಳಿಗೆ ಈ ದೇಶ ಬೆಂಕಿ ಹಚ್ಚಿ ಕಾಲುಕಿತ್ತಿರುವ ಹತ್ತಾರು ನಿದರ್ಶನಗಳು ಇಂದು ನಮ್ಮ ಮುಂದಿವೆ. ಒಂದೆಡೆ ಯುದ್ದಗುಂಡುಗಳ ಸುರಿಮಳೆಯನ್ನು ಸುರಿಸುತ್ತಾ ತಕಥೈ ಕುಣಿಯುವ ದೇಶದಿಂದ ಶಾಂತಿ ನೆಮ್ಮದಿಯ ಮಾತುಗಳು ದುಸ್ವಪ್ನವೇ ಸರಿ. ಇಂತಹ ಯುದ್ಧಪ್ರಿಯ ನಾಯಕನ ಆಡಳಿತದ ಪ್ರಸ್ತುತ ಅಮೇರಿಕ, ತಾನು ಹೋದಲೆಲ್ಲ ಗುಡುಗಿ ಗುಂಡಾಂತರ ಮಾಡಿ ಅಲ್ಲಿನ ಜನಜೀವನವೆನ್ನಲ್ಲದೆ ಸಸ್ಯ ಸಂಕುಲವನ್ನೂ ಕಪ್ಪು ಹೊಗೆಯೊಳಗೆ ತಳ್ಳಿ ಬರುವುದು ಸಾಮನ್ಯವಾದ ಸಂಗತಿಯಾಗಿದೆ. ಈ ದೇಶ ಅಂತಹ ದೇಶಗಳ ಅಭಿವೃದ್ಧಿಗೆ ಅದೆಷ್ಟೇ ಪರಿಹಾರವನ್ನು ಕೊಟ್ಟರು ಸಾಲದು. 60ರ ದಶಕದ ವಿಯೆಟ್ನಾಂ ಯುದ್ಧದಲ್ಲಿ ಸ್ಥಳೀಯ ಪಡೆಗಳ ಹಲವು ಬಗೆಗಳ ಕಾಡಿನ ಯುದ್ಧವನ್ನು ಎದುರಿಸಲಾಗದೆ ನರಿಬುದ್ದಿಯನ್ನು ಅನುಸರಿಸಿದ ಅಮೇರಿಕ ವಿಯೆಟ್ನಾಂ ಸೈನಿಕರು ಅಡಗಿ ಕುಳಿತಿದ್ದ ಕಾಡಿನ ಮೇಲೆಲ್ಲಾ ‘ಏಜೆಂಟ್ ಆರೆಂಜ್’ ಎಂಬ ರಾಸಾಯನಿಕವನ್ನು ಸುರಿದು ಮಾಡಿರುವ ಅನಾಹುತವನ್ನು ಕಲ್ಪಿಸಲು ಸಾಧ್ಯವಲ್ಲ. ಆ ರಾಸಾಯನಿಕ ಅಂದು ಸಾವಿರಾರು ವಿಯೆಟ್ನಿಗರ ಜೀವ ಬಲಿಯನ್ನು ಪಡೆದುಕೊಂಡಿತಲ್ಲದೆ ಲಕ್ಷಾಂತರ ಜನರನ್ನು ಕ್ಯಾನ್ಸರ್ ಹಾಗು ಚರ್ಮದ ಖಾಯಿಲೆಗಳೊಟ್ಟಿಗೆ ಮಾನಸಿಕವಾಗಿಯೂ ಹಿಂಸಿಸಿತು. ಅದಕ್ಕಿಂತ ಮಿಗಿಲಾಗಿ ಅಂದು ಈ ರಾಸಾಯನಿಕದಿಂದ ಹೇಳಹೆಸರಿಲ್ಲದೆ ಮರೆಯದ ಹಸಿರುಗಾಡಿನ ಪ್ರದೇಶ ಬರೋಬ್ಬರಿ 31 ಲಕ್ಷ ಹೆಕ್ಟರ್!! ಅಲ್ಲದೆ ಎರಡನೇ ಮಹಾಯುದ್ಧದಲ್ಲಿ ಜಪಾನಿನ ಹಿರೋಷಿಮಾ ಹಾಗು ನಾಗಸಾಕಿ ನಗರಗಳ ಮೇಲೆ ಮಾನವೀಯತೆಯ ಎಲ್ಲ ಎಲ್ಲೆಯನ್ನು ಮೀರಿ ಅಣುಬಾಂಬನ್ನು ಎಸೆದು ನೆಡೆಸಿದ ಮಿಲಿಯನ್ಗಟ್ಟಲೆ ಜೀವಹಾನಿಗಳನ್ನು ಮುಂದೆ ಸಾವಿರವರ್ಷಗಳ ನಂತರವೂ ಖಂಡಿಸಲಾಗುತ್ತದೆ. ಇನ್ನು ಅಫ್ಘಾನಿಸ್ಥಾನ, ಸಿರಿಯಾ ಹಾಗು ಮಧ್ಯಪ್ರಾಚ್ಯದ ಹಲವೆಡೆ ಅಮೇರಿಕಾದ ಸೇನೆಗಳು ನೆಡೆಸಿರುವ ಧಾಂದಲೆಯ ಪುರಾವೆಗಳು ಒಂದೇ ಎರಡೇ. ಇಂತಹ ಅಮೆರಿಕವನ್ನು 'MAKE AMERICA GREAT AGAIN! ' ಎಂಬ ಸ್ಲೋಗನ್ನಿನೊಟ್ಟಿಗೆ ಗೆದ್ದ ಟ್ರಂಪ್ ನ ಪ್ರಕಾರ ರಾಶಿ ಕೋಟಿ ಜೀವಗಳನ್ನು ಬಲಿಪಡೆದು ದೊಡ್ಡವನು ಎನಿಸಿಕೊಂಡ ಹಾಗೆ ಮತ್ತದೇ ನರಯಜ್ಞವನ್ನು ಮಾಡಿ ಮಗದೊಮ್ಮೆ ಗ್ರೇಟ್ ಎಂದು ಕರೆಸಿಕೊಳ್ಳುದಾಗಿದೆ ಎನಿಸುತ್ತದೆ. ಇಂತಹ ನಿರ್ಧಯಿ ದೇಶದಿಂದ ಇಂದು ವಿಶ್ವದ ಮೂಲೆ ಮೂಲೆಗಳಲ್ಲಿಯೂ ಜರುಗಿದ ಅನಾಹುತಗಳಿಗೆ ಪರಿಹಾರವನ್ನು ಪರಿಹಾರವಲ್ಲದೆ ದಂಡದ ರೂಪದಲ್ಲಿ ಪಡೆಯಬೇಕು. ಕೊಡದಿದ್ದರೆ ಕೊಬ್ಬಿರುವ ದೇಹದಿಂದ ಕಕ್ಕಿಸಬೇಕು!

ಇನ್ನು ಇಂತಹ ದೇಶಗಳು ಕೊಡುವ ತೃಣಮಾತ್ರದ ಆರ್ಥಿಕ ಸಹಾಯ ಯಾವ ದೇಶವನ್ನಾಗಲಿ ಇಂದು ಅಭಿವೃದ್ಧಿಯ ಉತ್ತುಂಗಕ್ಕೆ ತಂದು ನಿಲ್ಲಿಸಿದೆ? ಅಭಿವೃದ್ಧಿ ಹೊಂದುತ್ತಿರುವ ದೇಶಗಳೆಂದರೆ ಹೆಚ್ಚಾಗಿ ಅದು ಅಧಿಕಾರಿಗಳ ಮೋಸ, ಕಪಟ, ಲಂಚಗುಳಿತನ ಹಾಗು ಭ್ರಷ್ಟತೆಯ ವಿರುದ್ದದ ಹೋರಾಟವೇ ಆಗಿರುತ್ತದೆ. ಇಂತಹ ದೇಶಗಳಿಗೆ 'ಇಗೋ ತಗೋಳಿ' ಎನುತ ಜಾತ್ರೆಗೆ ಹೊರಡುವ ಹುಡುಗರ ಕೈಗೆ ಚಿಲ್ಲರೆಯನ್ನು ಸುರಿದಂತಹ ನೆರವನ್ನು ಕೊಟ್ಟರೆ ಆದರ ಪೂರ್ಣ ಪ್ರಮಾಣದ ಸದ್ಭಳಕೆಯಾಗದಿರುವುದು ಬೇರೆಯ ವಿಚಾರವೇ. ಆದರೆ ಅಭಿವೃದ್ಧಿ ಹೊಂದಿದ ಬಹಳಷ್ಟು ದೇಶಗಳು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೀಗೆ ನೆರವನ್ನು ಕೊಡುವ ಹಿಂದಿರುವ ಚಾಣಾಕ್ಷ ನೀತಿ ಇಂದು ಯಾರಿಗೂ ಗೊತ್ತಿರದ ವಿಷಯವೇನಲ್ಲ. ನನಗೊಂದು ನೌಕಾನೆಲೆ ಆಗಬೇಕು, ಯುದ್ಧ ಸಮಯದಲ್ಲಿ ತುರ್ತು ಸಹಾಯ ಸಿಗಬೇಕು, ವೀಸಾ ನಿಯಮಾವಳಿಗಳಲ್ಲಿ ನಮ್ಮವರಿಗೆ ರಿಯಾಯಿತಿ ದೊರಕಬೇಕು, ಆ ದೇಶದೊಟ್ಟಿಗೆ ವ್ಯಾಪಾರವನ್ನು ಮಾಡಬಾರದು, ಈ ದೇಶದಿಂದ ತೈಲವನ್ನು ಆಮದುಮಾಡಿಕೊಳ್ಳಬಾರದೆಂಬ ಸಾಲು ಸಾಲು ಕಂಡೀಷನ್ಗಳು ಆ ಮುಖೇನ ಉದ್ಭವಿಸುತ್ತವೆ. ಇನ್ನು ಹಣವೆಂದರೆ ಊಟ ಕಾಣದೆ ಎಷ್ಟು ದಿನಗಳಾದವೋ ಎಂಬಂತೆ ಬಾಯಿ ಬಿಡುವ ದೇಶಗಳು ಮುಂದೊಂದು ದಿನ ಬಂದೆರಗುವ ಆಪತ್ತನ್ನೂ ಲೆಕ್ಕಿಸದೆ 'ಜೈ' ಎನುತ ಅಂತಹ ದೇಶಗಳು ವಿಧಿಸುವ ಷರತ್ತುಗಳಿಗೆಲ್ಲಕ್ಕೂ ಒಪ್ಪಿಬಿಡುತ್ತವೆ. ಪರೋಕ್ಷವಾಗಿ ಜಗತ್ತನ್ನು ಆಕ್ರಮಿಸುವ ಜಾಣತನ ಇದಕ್ಕಿಂತ ಬೇರೊಂದಿದೆಯೇ? ಒಟ್ಟಿನಲ್ಲಿ ಆರ್ಥಿಕ ನೆರವು ಎಂಬ ಹೆಸರಿನಲ್ಲಿ ತನ್ನ ಇರುವಿಕೆಯನ್ನು ಗಟ್ಟಿಗೊಳಿಸಿಕೊಂಡು ಬೆಳೆಯುತ್ತಿರುವ ಅಮೇರಿಕ ಇಂದು ದೇಶಗಳ ಮೇಲೆ ಮಾಡಿರುವ ಆ ಡಿಪಾಸಿಟ್ ಗಳ ಪೂರ್ಣ ಪ್ರಮಾಣದ ನೆರವನ್ನು ಪಡೆಯುತ್ತಿದೆ ಅಷ್ಟೇ. ಇಂದು ಭಾರತಕ್ಕೆ ಅದು ಕೊಡುತ್ತಿರುವ ಆರ್ಥಿಕ ಸಹಾಯವನ್ನು ಮೊಟಕುಗೊಳಿಸಬೇಕು ಎನ್ನುತ್ತಿದೆ. ಆದರೆ ಸುಮಾರು ಆರೇಳು ವರ್ಷಗಳ ಹಿಂದೆ ಮನಮೋಹನ್ ಸಿಂಗ್ರ ಸರ್ಕಾರವಿದ್ದಾಗ ಕಡ್ಡಿ ಮುರಿದಂತೆ 'ನಿಮ್ಮ ನೆರವು ನಮಗೆ ಬೇಕಾಗಿಲ್ಲ' ಎಂದರೂ ಇಂದಿನವರೆಗೂ ಹಣವನ್ನು ನೀಡುತ್ತಾ ಬಂದಿದೆ ಎಂದರೆ ಈ ಕಪಟ ನೆರವಿನ ಹಿಂದಿರುವ ಸ್ವಹಿತಾಸಕ್ತಿ ಎಷ್ಟಿದೆ ಎಂದು ನಾವು ಅರಿಯಬೇಕು.

ಅಲ್ಲದೆ ಅಮೇರಿಕಾದ ಈ ನೀತಿ ಅಭಿವೃದ್ಧಿಹೊಂದಿದ ದೇಶಗಳೊಟ್ಟಿಗಾದರೆ ಅದೇ ರಷ್ಯಾ, ಚೀನಾ,ಆಸ್ಟ್ರೇಲಿಯಾದಂತಹ ದೇಶಗಳೊಟ್ಟಿಗೆ ಬೇರೇನೇ ತರಹದ್ದಾಗಿರುತ್ತದೆ. ಎಷ್ಟಿದ್ದರೂ ಅವು ಮುಂದುವರೆದ ದೇಶಗಳೆಂದು ಬಲ್ಲ ಅಮೇರಿಕ ಅಂತಹ ದೇಶಗಳನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಲು ಬಳಸುವ ಅಸ್ತ್ರ ಅಲ್ಲಿಂದ ಆಮದಾಗುವ ವಸ್ತುಗಳ ಮೇಲೆ ಎರಾಬಿರಿ ಸುಂಕವನ್ನು ಜಡಿಯುವುದು. ಆದರೆ ಆ ಸುಂಕ ಜಡಿದ ಕತೆಯ ಹಿಂದಿನ ಅಸಲಿಯತ್ತು ಬೇರೇನೇ ಇರುತ್ತದೆ. ಎಲ್ಲಿಯವರೆಗೂ ಆ ದೇಶ ತನ್ನ ತಾಳಕ್ಕೆ ತಕ್ಕಂತೆ ಕುಣಿಯುವುದಿಲ್ಲವೋ ಅಲ್ಲಿಯವರೆಗೂ ಇಂತಹ ಇತ್ತಲಬಾಗಿಲ ಕೆಲಸವನ್ನೇ ಅಮೇರಿಕ ಅದರಲ್ಲೂ ಟ್ರಂಪ್ ಆಡಳಿತ ಮಾಡಿಕೊಂಡು ಬಂದಿದೆ. ಅಂದರೆ ವಿಶ್ವದ ಯಾವುದೇ ದೇಶವೂ ತನ್ನ ಸಮನಾಗಿ ಬೆಳೆಯಬಾರದು, ನನ್ನ ನೆಡೆಯನ್ನು ಪ್ರೆಶ್ನಿಸಬಾರದು ಎಂಬುದಷ್ಟೇ ಆಗಿದೆ. ಇಲ್ಲವಾದರೆ 'ಆರ್ಥಿಕ ದಿಗ್ಬಂದನ' 'ನೆರವಿನ ಮೊಟಕುಗೊಳಿಸುವಿಕೆ' 'ಸುಂಕ ಏರಿಕೆ' ಎಂಬ ಪೆಟ್ಟುಗಳಲಿಂದ ಅದನ್ನು ಸದೆಬಡಿಯುತ್ತದೆ.

ಇಂತಹ ಕಿರಾತಕ ದೇಶಗಳ ನಡುವೆ ವಿಶ್ವಶಾಂತಿ, ಸಕಲಲೋಕಕಲ್ಯಾಣ ಎನುತ ನೆಡೆಯುತ್ತಿರುವ ಭಾರತದಂತಹ ದೇಶಗಳಿಗೆ ಎದುರಾಗುವ ಸಂದಿಘ್ನ ಸನ್ನಿವೇಶಗಳು ಒಂದೆರಡಲ್ಲ. ಅಸಲಿಯತ್ತು ಹೀಗಿರುವಾಗ ಪ್ರಸ್ತುತ ಕಾಲದಲ್ಲಿ ನಾವುಗಳು ಸ್ವಾವಲಂಬಿಗಳಾಗುವ ಜರೂರು ಅದೆಷ್ಟರಮಟ್ಟಿಗಿದೆ ಎಂಬುದನ್ನು ತಿಳಿಸಿ ಹೇಳಬೇಕಾಗಿಲ್ಲ. ಅತಿವೃಷ್ಟಿ ಹಾಗು ಅನಾವೃಷ್ಟಿಯ ಸಂದರ್ಭದಲ್ಲಷ್ಟೇ ನಾವುಗಳು ಇತರ ದೇಶಗಳ ನೆರವು ಬೇಡವೆಂದರೆ ಸಾಲದು. ಯುದ್ದೋಪಕರಣಗಳಿನಿಂದಿಡಿದು ಒಂದು ಅತ್ಯಾಧುನಿಕ ತಂತ್ರಜ್ಞಾನಗಳಿಗೂ ಇತರೆ ದೇಶಗಳನ್ನು ಅವಲಂಬಿಸುವುದನ್ನೂ ನಾವು ಮೊಟಕುಗೊಳಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರಗಳು ಯಾವುದೇ ಇರಲಿ, ಸ್ವಾವಲಂಬಿ ಯೋಜನೆಗಳಿಗೆ ಚಿಂತಿಸತೊಡಗಿದರೆ ಅವುಗಳನ್ನು ಮುಕ್ತವಾಗಿ ಬೆಂಬಲಿಸಬೇಕು. ಇಲ್ಲವಾದಲ್ಲಿ ಪ್ರಸ್ತುತ ಕಪಟ ದೊಡ್ಡಣ್ಣನ ಜಮಾನದಲ್ಲಿ ನಾವುಗಳು ಮೂರನೇ ಕೆಟಗರಿಯ ದೇಶವಾಗಿ ಪರದಾಡುವ ಸನ್ನಿವೇಶ ಬರಬಾರದಂತೇನಿಲ್ಲ!




Friday, September 7, 2018

ಬ್ರಿಟನ್ನಿಗರ ತಪ್ಪನ್ನೇ ಪುನರಾವರ್ತಿಸಿದರೆ ಅಮೇರಿಕನ್ನರು?!

ಜೂನ್ 23, 2016. ಎಡಮಗ್ಗುಲಲ್ಲಿ ಎದ್ದ ಬ್ರಿಟನ್ ಅಂದು ಮಹತ್ವದಾದೊಂದು ಜನಾದೇಶವನ್ನು ಸಂಗ್ರಹಿಸಿತು . ಇಡೀ ವಿಶ್ವದಾದ್ಯಂತ ದಿಗಿಲು ಹುಟ್ಟಿಸಿದ ಸುದ್ದಿಯೊಂದು ತನ್ನ ತಾರ್ಕಿಕ ಕೊನೆಯನ್ನು ತಲುಪುವ ಹಂತದಲ್ಲಿತ್ತು. ಬ್ರಿಟನ್, ಯೂರೋಪಿಯನ್ ಯೂನಿಯನ್ (EU) ನಿಂದ ಹೊರಬರಬೇಕೋ ಬೇಡವೋ ಎಂಬ ವಿಷಯದ ಕುರಿತಾಗಿದ್ದ ಜನಾದೇಶದ ಆ ಫಲಿತಾಂಶ ಮಾತ್ರ ಇಡೀ ವಿಶ್ವವನ್ನಲ್ಲದೆ ಸ್ವತಃ ಬ್ರಿಟನ್ ದೇಶದ ಪ್ರಧಾನಿಯನ್ನೇ ಬೆಚ್ಚಿ ಬೀಳುವಂತೆ ಮಾಡಿತು. ಸುಮಾರು ಅರ್ಧಕ್ಕಿಂತ ಹೆಚ್ಚಿನ ಪ್ರಜೆಗಳು ಅಂದು ಹೊರಬರುವ (BREXIT) ನಿರ್ಧಾರಕ್ಕೆ ಹಸಿರುನಿಶಾನೆಯನ್ನು ತೋರಿಸಿದರು. ಡೇವಿಡ್ ಕಮೆರೋನ್ ಕೂಡಲೇ ತನ್ನ ಪ್ರಧಾನಿ ಸ್ಥಾನಕ್ಕೆ ರಾಜಿನಾಮೆಯನ್ನು ನೀಡಿ ಸದ್ದಿಲ್ಲದೇ ತೆರೆಮರೆಗೆ ಸರಿದ. ಆಗ ಶುರುವಾದದ್ದು ನೋಡಿ ನಿಜವಾದ ಹಗ್ಗಜಗ್ಗಾಟ. ಗುಂಡು ನಳಿಕೆಯಿಂದ ಹಾರಿದ ಮೇಲೆ ತಪ್ಪಾಯಿತೇನೋ ಎಂಬಂತೆ ಹಣೆಯನ್ನು ಚಚ್ಚಿಕೊಂಡವರ ಸಾಲಿಗೆ ಸೇರಿದರು, ಜನಾದೇಶವನ್ನು ನೀಡಿದ ಜೇಂಟಲ್ಮ್ಯಾನ್ ಗಳು. ಅದಾಗಿ ಇಂದಿಗೆ ಎರಡು ವರ್ಷಗಳು ಕಳೆದಿವೆ. ಇಷ್ಟರಲ್ಲಾಗಲೇ ತನ್ನ ನಿರ್ಧಾರಕ್ಕೆ ಪೂರಕವಾಗಿ ಗುಂಪಿನಿಂದ ಹೊರಬಂದಿರಬೇಕಿದ್ದ ಬ್ರಿಟನ್ ಇನ್ನೂ ಕೂಡ ಮೀನಾಮೇಷ ಎಣಿಸುತ್ತಲಿದೆ. ನೀರಿನ ಮೇಲಿನ ಗುಳ್ಳೆಯಂತೆ ಕ್ಷಣಮಾತ್ರದಲ್ಲಿ ಹುಬ್ಬಿಕೊಂಡ ಬ್ರಿಟನ್ನಿಗರ ಹುಮ್ಮಸ್ಸು ಇಂದು ಏನಾಗಿದೆ? 'ಜೋಷ್' ನಲ್ಲಿ ಕಳೆದುಕೊಂಡ 'ಹೊಷ್' ಈಗ ಬಂದರೆಷ್ಟು ಹೋದರೆಷ್ಟು? ನಾನು, ನನ್ನದು ಎನುತ ಎಲ್ಲರಿಂದ ಪ್ರತ್ಯೇಕವಾಗಬಯಸಿದ ನಿರ್ಧಾರ ಅದೆಷ್ಟರ ಮಟ್ಟಿಗೆ ಸರಿಯೋ ಕಾದು ನೋಡಬೇಕು.

BREXIT ನ ಕೆಲವೇ ತಿಂಗಳ ಅವಧಿಯಲ್ಲಿ ಅಮೆರಿಕದಲ್ಲೊಂದು ನೆಲ ‘ಕಂಪಿಸದ’ ಭೂಕಂಪವೊಂದು ಜರುಗಿತು! 2016 ರ ಅಧ್ಯಕ್ಷರ ಚುನಾವಣೆಯಲ್ಲಿ ರಿಪಬ್ಲಿಕ್ ಪಕ್ಷದ ಡೊನಾಲ್ಡ್ ಟ್ರಂಪ್ ಮರಳುಗಾಡಿನ ಮಾನ್ಸೂನ್ ನಂತೆ ಹುಚ್ಚು ಮತಗಳ ಹೆಚ್ಚು ಸಂಖ್ಯೆಯಲ್ಲಿ ಜಯಗಳಿಸಿದ. ಕೆಲವರಿಗಂತು ಅದು ಇಂದಿಗೂ ನಂಬಲಾರದ ವಿಷಯವೇ ಸರಿ. ರಿಯಾಲಿಟಿ ಷೋ ನಲ್ಲಿ ಡೊಂಬರಾಟ ಕುಣಿಯುವ ಕ್ಯಾರೆಕ್ಟರ್ ಒಂದರ ನಕಲೆನಿಸುವ ಈತನೂ ಒಬ್ಬ ಅಧ್ಯಕ್ಷ ಆಕಾಂಕ್ಷಿಯೇ ಎಂದು ಅಂದು ರಿಪಬ್ಲಿಕ್ ಪಕ್ಷವನ್ನು ಕೇಳಿದವರೆಷ್ಟೋ. ಲಿಂಕನ್, ರೂಸ್ವೆಲ್ಟ್, ಬುಷ್ ರಂತಹ ನಾಯಕರನ್ನು ಕೊಟ್ಟ ಈ ಪಕ್ಷಕ್ಕೆ ಇಂತಹ ಒಬ್ಬ ವ್ಯಕ್ತಿಯ ಬಲದಲ್ಲಿ ಚುನಾವಣೆಯನ್ನು ಗೆಲ್ಲುವ ದುಸ್ಥಿತಿ ಬರಬಾರದಿತ್ತು ಎಂದವರು ಮತ್ತೆಷ್ಟು ಮಂದಿಯೋ. ಅದೇನೇ ಇದ್ದರು ಅಂದು ಜನರು ಮಣೆಹಾಕಿದ್ದು 'ಔಟ್ ಆಫ್ ದ ಬಾಕ್ಸ್' ಟ್ರಂಪ್ ಎಂಬ ಮುದುಕನಿಗೆಯೇ. 'ಅಮೇರಿಕ ಫಸ್ಟ್' ಎಂಬ ಎರಡಕ್ಷರದ ಪದಗಳ ಬಲದ್ಲಲ್ಲಿಯೇ ಅಂದು ಆತ ಚುನಾವಣೆಯನ್ನು ಗೆದ್ದ. ಅದೂ ಕೂಡ ಅಮೆರಿಕವನ್ನು ಮೊದಲುಗೊಳಿಸುವ, ಎಲ್ಲ ದೇಶಗಳಿಂದ ಪ್ರತ್ಯೇಕಿಸುವ, ನಾನು ನಾನೆಂಬ ಮೊಂಡುತನದ ಚುನಾವಣಾ ಪ್ರಚಾರವಾಗಿದ್ದಿತು. ಜನಗಳಿಗೂ ಹಳೆಯ ರಾಗ ಮತ್ತದೇ ತಾಳವನ್ನು ಕೇಳಿ 'ಬೋರ್' ಆಗಿತ್ತೇನೋ ಎಂಬಂತೆ ಬಹುಪಾಲು ಮಂದಿ ಹಿರಿ ಮುದುಕನೊಬ್ಬನಿಗೆ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲು ಕೊಟ್ಟರು. ಆದರೆ ಅಂದು ಈತನಿಗೆ ಬಿದ್ದ ಓಟುಗಳಲ್ಲಿ ವಿಮರ್ಶಕರು ಹಾಗು ವಿಚಾರವಂತರ ಓಟುಗಳೆಷ್ಟು, ಹಿರಿಯ ನಾಗರೀಕರ ಓಟುಗಳೆಷ್ಟು, ಬಿಸಿನೆಸ್ ಮ್ಯಾನ್ಗಳ ಓಟುಗಳೆಷ್ಟು, ನೌಕರರ ಓಟುಗಳೆಷ್ಟು ಹಾಗು ಪುಂಡ ಪೋಕರಿಗಳ ಓಟುಗಳೆಷ್ಟು ಎಂಬುದನ್ನು ಪ್ರತ್ಯೇಕಿಸಿ ಎಣಿಸಿ ನೋಡಿದರೆ ಬಹುಷಃ ಅಮೇರಿಕಾದ ಭವಿಷ್ಯವನ್ನು ನಿರ್ಧರಿಸಿದವರ್ಯಾರು ಎಂಬುದು ತಿಳಿಯುತ್ತದೇನೋ!

ವಿಶ್ವದಲ್ಲೇ ಅತಿಹೆಚ್ಚಿನ ಹಣವನ್ನು (ಭಾರತದ ಐದು ಪಟ್ಟು - 140 ಲಕ್ಷ ಕೋಟಿಗಳು) ತನ್ನ ಮಿಲಿಟರಿಗಾಗಿಯೇ ಸುರಿಯುವ ಧನವಂತ ದೇಶದ ಅಧಿಕಾರದ ಚುಕ್ಕಾಣಿಯನ್ನು WWE ಬಡಿದಾಟದ ಕಚ್ಚಾಟದಲ್ಲಿ ಹುಚ್ಚನಂತಾಗುತ್ತಿದ್ದ ವ್ಯಕಿಯೊಬ್ಬನ ಕೈಗೆ ಕೊಟ್ಟ ಅಲ್ಲಿನ ಬಹುಪಾಲು ಸತ್ಪ್ರಜೆಗಳೂ ಸಹ ಬ್ರಿಟನ್ನಿನ ಪ್ರಜೆಗಳಂತೆಯೇ ಇಂದು ಕೈ-ಕೈಯನ್ನು ಹಿಸುಕಿಕೊಳ್ಳುತ್ತಿದ್ದಾರೆ. ಮುಸ್ಲಿಂ ಜನಾಂಗ ಹಾಗು ಅಂತಹ ದೇಶಗಳ ವಿರುದ್ಧ ಆಕ್ರೋಶ, ನ್ಯೂಕ್ಲಿಯರ್ ಸುಸಜ್ಜಿತ ದೇಶಗಳ ಜೊತೆಗೆ ವೈಮಸಸ್ಸು, ಇಂದೂ ಮುಂದೂ ನೋಡದ ದೇಶ ದೇಶಗಳನ್ನು ಜರಿಯುವ ಬೇಕಾಬಿಟ್ಟಿ ಟ್ವೀಟ್ ಗಳು, ಇರಾನ್ ಹಾಗು ಚೀನಾದೊಟ್ಟಿಗಿನ ಟ್ರೇಡ್ ವಾರ್, ತಟಸ್ಥ ಭಾರತಕ್ಕೇ ಬುದ್ದಿ ಹೇಳುವಂತ ಹುಂಬತನ, ವಿಶ್ವವೇ ಸಮ್ಮತಿಸಿದ ಪ್ಯಾರಿಸ್ ಒಪ್ಪಂದದಿಂದ ಹೊರಬರುವಿಕೆ ಹಾಗು ಮಾಲಿನ್ಯವನ್ನು ಹೆಚ್ಚುಮಾಡುವ ಕಾರುಗಳ ತಯಾರಿಕೆಗೂ ಅನುಮತಿ ನೀಡುವಿಕೆ, ಆರೋಗ್ಯ ವಿಮೆಯನ್ನು ಮೊಟಕುಗೊಳಿಸಿವಿಕೆ, ವೈಟ್ ಹೌಸ್ ನ ಹಿರಿಯ ಅಧಿಕಾರಿಗಳೊಟ್ಟಿಗೆ ವೈಮನಸ್ಸು, ಅವರುಗಳ ರಾಜೀನಾಮೆ, ದೇಶದ ನ್ಯಾಯಾಧೀಶರೊಟ್ಟಿಗೆ, ಕೋರ್ಟುಗಳೊಟ್ಟಿಗೆ ವಾಗ್ವಾದ, ರಾಜಕೀಯವೇನೆಂದೇ ಅರಿಯದ ಮಗ, ಮಗಳು, ಅಳಿಯರೆಲ್ಲರಿಗೂ ವೈಟ್ ಹೌಸಿನ ಕೀಗುಚ್ಛವನ್ನು ನೀಡಿ ರಾಜಾಂತ್ರಿಕ ಧೂತರನ್ನಾಗಿ ದೇಶಾದಿಗಳಿಗೆ ಕಳುಹಿಸುವುದು... ಒಂದೇ ಎರಡೇ. ಅಧ್ಯಕ್ಷನಾದ ಕೇವಲ ಕೆಲವೇ ತಿಂಗಳುಗಲ್ಲಿ ಸಾಕು ಸಾಕಪ್ಪ ಎಂಬ ಮಟ್ಟಿಗೆ ಅಮೆರಿಕದವರನ್ನು ಆತಂಕಕ್ಕೆ ಗುರಿಮಾಡಿದನೀತ. ಉತ್ತರ ಕೊರಿಯದೊಟ್ಟಿಗೆ ನ್ಯೂಕ್ಲಿಯರ್ ವಾರ್ ಜರುಗಿ ದೇಶದ ಹವಾಯಿ ನಗರಕ್ಕೆ ಇನ್ನೇನು ಕಂಟಕ ಬಂದೆರಗಿತು ಎಂಬಂತೆ ಜನತೆಯ ಜೀವವನ್ನು ಬಾಯಿಗೆ ತಂದು ನಂತರ ತೆಪ್ಪಗಾದ ಈತನಿಂದ ವಿಶ್ವ ಇನ್ನು ಏನೇನನ್ನು ನೋಡುತ್ತದೆಯೋ ಸದ್ಯಕಂತು ತಿಳಿಯದು.

It was expected!


ಅಮೇರಿಕ ಒನ್, ಅಮೇರಿಕ ಫಸ್ಟ್, ಅಮೇರಿಕ ಗ್ರೇಟ್ ಎಂಬ ಅರಚುವಿಕೆಯಲ್ಲೇ ಗೆದ್ದ ಟ್ರಂಪ್ ನಿಂದ ಇವೆಲ್ಲ ಅತಿರೇಕಗಳು ಜರುಗಲೇ ಬೇಕಿದ್ದವು. ಹುಚ್ಚಾಸ್ಪತ್ರೆಯಲ್ಲಿ ಹುಚ್ಚನೊಬ್ಬ ಹುಚ್ಚನಂತೆ ವರ್ತಿಸದಿದ್ದರೆ ಆಸ್ಪತ್ರೆಗೆ ಬೆಲೆಯಿದೆಯೇ?! ಅಂತೆಯೇ ಅಮೇರಿಕವೆಂದರೆ ಅದ್ಯಾವುದೋ ಅನ್ಯ ಗ್ರಹದಲ್ಲಿರುವ ದೇವತೆಗಳ ದೇಶಗಳೇನೋ ಎಂಬಂತೆ ಬಿತ್ತರಿಸಿತೊಡಗಿದನೀತ. ಇಲ್ಲಿಗೆ ಬರುವವರು, ಹೋಗುವವರು, ಇರುವವರು, ಸಾಯುವವರು ಎಲ್ಲರನ್ನು ಸಂಶಯ ದೃಷ್ಟಿಯಿಂದಲೇ ನೋಡುವ ಈತ ತನ್ನ ದೇಶವನ್ನು ಒಂದು ಕಾರ್ಪೊರೇಟ್ ಕಂಪನಿಯಂತೆ ಬದಲಾಗಿಸತೊಡಗಿದ್ದಾನೆ. ಆ ಬುಡ ಗಟ್ಟಿಯಿಲ್ಲದ ಕಂಪನಿಯಲ್ಲಿ ಜರುಗುವ ನಿರ್ಧಾರಗಳೆಲ್ಲವೂ ಕೇವಲ ಲಾಭ ನಷ್ಟಗಳ ಸಮೀಕರಣಗಳಷ್ಟೇ. ಮೂಲತಃ ಬಿಸಿನೆಸ್ ಪರಿವಾರದವನಾದ ಟ್ರಂಪ್ ದೇಶವನ್ನು ನೆಡೆಸುವುದೆಂದರೆ ಕೇವಲ ಕೊಡುವುದು ಹಾಗು ಕೊಟ್ಟ ದುಡ್ಡಿಗೆ ಲಾಭವನ್ನು ಪಡೆಯುವುದೆಂದಷ್ಟೇ ತಿಳಿದಿರುವ ಹಾಗಿದೆ. 'ಹಸಿರು ಮನೆ ಪರಿಣಾಮದಿಂದ' ಹೊತ್ತಿ ಉರಿಯುವಂತಾಗಿರುವ ಧರೆಯನ್ನು ತಂಪಾಗಿಸಲು ವಿಶ್ವದ ದೇಶಗಳೆಲ್ಲವೂ ಜಾತಿ, ಪಂಥ, ದ್ವೇಷ ಅಸೂಯೆಗಳೆಲ್ಲವನ್ನೂ ಮರೆತು ಒಂದಾಗಿ 'ಪ್ಯಾರಿಸ್ ಒಪ್ಪಂದ' ಎಂಬ ಮಹತ್ವದ ಒಪ್ಪಂದವನ್ನು ಮಾಡಿಕೊಂಡು ಮುನ್ನೆಡೆಯಬಯಸಿದರೆ ಟ್ರಂಪ್ ಅಧ್ಯಕ್ಷನಾದ ಕೂಡಲೇ ಚೀನಾ, ಭಾರತ ಹಾಗು ಇನ್ನಿತರ ಅಭಿವೃದ್ಧಿಶೀಲ ರಾಷ್ತ್ರಗಳ ಮಾಲಿನ್ಯ ವಿಪರೀತವಾಗಿದ್ದು ಅವುಗಳಿಗೆ ಇನ್ನೂ ಹೆಚ್ಚಿನ ನಿಯಮಗಳನ್ನು ಜಡಿಯಬೇಕು, ಅದಿಲ್ಲದೆ ಈ ಒಪ್ಪಂದ ಅಮೆರಿಕಕ್ಕೆ ಮೋಸ ಬಗೆದಂತೆ ಎಂಬ ಭಂಡ ಸಬೂಬನನ್ನು ನೀಡಿ ಒಪ್ಪಂದದಿಂದ ಹೊರಬಂದ. 'ಅಮೆರಿಕಕ್ಕೆ ಮೋಸ' ಎಂಬ ಮಾತುಗಳನ್ನು ಕೇಳಿಯೇ ಶಿಳ್ಳೆ ಚಪ್ಪಾಳೆಗಳಿಂದ ಈತನ ನಿರ್ಧಾರವನ್ನು ಅಲ್ಲಿನ ಬಹುಪಾಲು ಜನತೆಯೂ ಸ್ವಾಗತಿಸಿದರು ಮತ್ತು ವಿಶ್ವದ ಯಾವ ಮಾನದಂಡಗಳಿಲ್ಲದೆಯೇ ಪರಿಸರವನ್ನು ನಾನಾಬಗೆಯಲ್ಲಿ ಮಾಲಿನ್ಯಮಾಡತೊಡಗಿದರು.

ಡೆಮೋಕ್ರೆಟ್ ಪಕ್ಷ ಹಾಗು ಹಿಂದಿನ ಅಧ್ಯಕ್ಷ ಬರಾಕ್ ಒಬಾಮನೆಂದರೆ ನಿಂತ ನೆರಳಿಗೆ ಆಗದ ಈತನಿಗೆ ಅವರ ಪ್ರತಿಯೊಂದು ನಿರ್ಧಾರಗಳನ್ನು ತುಂಡರಿಸುವುದು ಅಥವಾ ಅದರ ತದ್ವಿರುದ್ಧವಾಗಿ ಬೇರೊಂದು ತಲೆಬುಡವಿಲ್ಲದ ನಿಯಮವನ್ನು ಜಾರಿತರುವುದಷ್ಟೇ ಕಾಯಕವಾಗಿಬಿಟ್ಟಿತು. ಕೋಟ್ಯಾನುಕೋಟಿ ಜನರ ಅರೋಗ್ಯ ವಿಮೆ (ಒಬಾಮ ಹೆಲ್ತ್ ಕೇರ್)ಯನ್ನು ಮೊಟಕುಗೊಳಿಸಿ ಆಟಕುಂಟು ಲೆಕ್ಕಕಿಲ್ಲದಂತಹ ಮತ್ತೊಂದು ವಿಮೆಯನ್ನು ಜಾರಿಗೊಳಿಸಿದ ನಂತರ ಏನುಮಾಡಬೇಕೆಂದು ಯೋಚಿಸುತ್ತ ಕುಳಿತ ಟ್ರಂಪ್ ಗೆ ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂತಿಷ್ಟು ಜಗಳವಾಡಬೇಕೆಂಬ ಬಯಕೆ ಹೆಚ್ಚಾಯಿತೆನಿಸುತ್ತದೆ. ಕೂಡಲೇ ತೈಲ ಸಂಪತ್ಭರಿತ ಮಧ್ಯಪ್ರಾಚ್ಯಾದ ದೇಶ ಇರಾನ್ನ ಮೇಲೆ ಮುಗಿಬಿದ್ದ ಟ್ರಂಪ್ ಪಡೆ ಇರಾನ್ ಈಗಲೂ ಕೂಡ ಅಲ್ಲೊಂದು ಇಲ್ಲೊಂದು ನ್ಯೂಕ್ಲಿಯರ್ ಮಿಸೈಲ್ ಗಳನ್ನು ಪರೀಕ್ಷಿಸುತ್ತಿದೆ ಹಾಗು ಇದು ಹಿಂದಿನ ಸರ್ಕಾರ ಮಾಡಿಕೊಂಡ 'ನ್ಯೂಕ್ಲಿಯರ್ ಡೀಲ್' ಗೆ ವಿರುದ್ಧವಾಗಿದ್ದು ಕೂಡಲೇ ಇರಾನ್ ನ ಮೇಲೆ ಆರ್ಥಿಕ ದಿಗ್ಬಂದನವನ್ನು ಹೇರಿ ಅದನ್ನು ಎಲ್ಲರಿಂದ ಪ್ರತ್ಯೇಕಿಸಬೇಕೆಂದು ಅರಚತೊಡಗಿದ ಅಲ್ಲದೆ ಹಾಗೆ ಮಾಡಿಯೂ ಬಿಟ್ಟ! ಸರಿ ಒಂದುಪಕ್ಷ ಇರಾನ್ ನ್ಯೂಕ್ಲಿಯರ್ ಮಿಸೈಲ್ ಗಳನ್ನು ತಯಾರುಮಾಡಿಕೊಂಡಿದೆ ಅಂದುಕೊಳ್ಳೋಣ. ಮಿಡಲ್ ಈಸ್ಟ್ ಎಂದರೆ ಇಂದು ಯುದ್ಧದ ಗೂಡಾಗಿರುವ ಪ್ರದೇಶದಲ್ಲಿ ಸ್ವಂತ ರಕ್ಷಣೆಗೆ ದೇಶವೊಂದು ಸುಸಜ್ಜಿತವಾಗುವುದರಲ್ಲಿ ತಪ್ಪೇನಿದೆ? ದೇಶ ಸುಸಜ್ಜಿತವಾಗುವುದಕ್ಕೆ ಪ್ರಸ್ತುತ ಕಾಲದಲ್ಲಿ ನೂರಾರು ಸಾವಿರಾರು ತಂತ್ರಜ್ಞಾನಗಳು, ಯುದ್ದೋಪಕರಣಗಳು ಇದ್ದರೂ ನ್ಯೂಕ್ಲಿಯರ್ ಮಿಸೈಲ್ಗಳೇ ಏಕೆ ಬೇಕೆಂಬುದು ಸಹಜವಾದ ಪ್ರೆಶ್ನೆಯೇ. ಆದರೆ ಹೀಗೆ ಪ್ರೆಶ್ನೆಯನ್ನು ಕೇಳುವ ಅಮೇರಿಕ ಅದೆಷ್ಟರ ಮಟ್ಟಿಗೆ ಸಾಚಾ? ಸಮೀಕ್ಷೆಯೊಂದರ ಪ್ರಕಾರ ಇಂದು ವಿಶ್ವದಲ್ಲೇ ಅತಿಹೆಚ್ಚಿನ ನ್ಯೂಕ್ಲಿಯರ್ ಬಾಂಬುಗಳು, ಮಿಸೈಲ್ಗಳು ಅಮೆರಿಕವೊಂದರಲ್ಲಿಯೇ ಇವೆಯಂತೆ! ವಸ್ತುಸ್ಥಿತಿ ಹೀಗಿರುವಾಗ ಇನ್ನೊಂದು ದೇಶಕ್ಕೆ ಬುದ್ಧಿಹೇಳುವ ಕಾಯಕವಾದರೂ ಅದಕ್ಕೆ ಏಕೆ? ಹೋಗಲಿ ಇದು ಆ ಎರಡು ದೇಶಗಳ ಹಣೆಬರಹ ನಾವೇಕೆ ಮೂಗು ತೂರಿಸಬೇಕೆಂದು ಸುಮ್ಮನಿಯಬಹುದು. ಆದರೆ ಈ ಯಪ್ಪಾ ಅಮೇರಿಕ ಇರಾನೊಟ್ಟಿಗೆ ಮಾತುಬಿಟ್ಟರೆ ನೀವು ಕೂಡ ಮಾತು ಬಿಡಬೇಕು ಎಂದರೆ ಕೇಳಲಾಗುತ್ತದೆಯೇ ಸ್ವಾಮಿ? ವಿಶ್ವಮಾರುಕಟ್ಟೆ ಏನು ಅಮೇರಿಕವೊಂದೇ ಬೆವರು ಸುರಿಸಿ ಬೆಳೆಸಿದ ವಲಯವೇ? ಈ ಮಾರುಕಟ್ಟೆಯಲ್ಲಿ ಎಲ್ಲರಿಗೂ ಮುಕ್ತ ಅವಕಾಶವಿದೆ. ಇಲ್ಲಿ ಎಲ್ಲರೂ ಒಂದೇ ಎನ್ನುವಾಗ ಟ್ರಂಪ್ ಎಂಬ ದೊಣ್ಣೆ ನಾಯಕನ ಅನುಮತಿ ಯಾರಿಗೆ ತಾನೇ ಬೇಕು?

ಇದೆ ದ್ವೇಷರಾಜಕಾರಣವನ್ನು ವಿಶ್ವಮಾರುಕಟ್ಟೆಯ ಕಿಂಗ್ ಚೀನಾದ ಮೇಲೂ ಬಳಸಿ ಅಲ್ಲಿಂದ ತರುವ ಅಲ್ಯೂಮಿನಿಯಂ ಹಾಗು ಉಕ್ಕಿನ ಮೇಲೆ ಅಗಾಧವಾಗ (35%) ಸುಂಕವನ್ನು ಜಡಿದ. ಕೂಡಲೇ ಹೆಚ್ಚೆತ್ತುಕೊಂಡ ಚೀನಾವೂ ಅಮೆರಿಕದದಿಂದ ಬರುವ ವಸ್ತುಗಳ ಮೇಲೆ ಅದೇ ಪ್ರಮಾಣದ ಸುಂಕವನ್ನು ಜಡಿಯಲು ಶುರುವಿಟ್ಟಾಗ ಅಯ್ಯಯೋ.. ಎನುತ ಒಳಗೊಳಗೇ ನಾಲಿಗೆಯನ್ನು ಕಚ್ಚಿಕೊಂಡರೂ ಹೊರಗೆಲ್ಲೂ ಅದನ್ನು ತೋರಿಕೊಳ್ಳಲಿಲ್ಲ!

ಭಾಗಶಃ ಎಲ್ಲ ದೇಶಗಳೊಟ್ಟಿಗೂ ಶಾಂತಿಯ ಸಂಬಂಧವನ್ನು ಬೆಳೆಸಿಕೊಂಡಿರುವ ಭಾರತದಂತಹ ದೇಶಕ್ಕೆ ನೀವು ರಷ್ಯಾದಿಂದ ಯುದ್ದೋಪಕರಣವನ್ನು ಖರೀದಿಸಬಾರದು, ಇರಾನ್ ನಿಂದ ತೈಲವನ್ನು ಆಮದುಮಾಡಿಕೊಳ್ಳಬಾರದು, ಪರಮಾಣು ಪರೀಕ್ಷೆಯನ್ನು ಮಾಡಿಕೊಳ್ಳಬಾರದು ಎಂಬ ಪಾಠವನ್ನು ಹೇಳುವ ಟ್ರಂಪ್ ಅಜ್ಜಪ್ಪನಿಗೆ ನಾವುಗಳು ಇಂದಿಗೂ ಸಹ ಅವರ ತಾಳಕ್ಕೆ ಕುಣಿಯುವ ಕೀಲುಗೊಂಬೆಗಳು ಎಂಬ ನಿಲುವೇ ತಲೆಯಲ್ಲಿದ್ದಂತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ವಿಷಯ ಅದೆಷ್ಟೇ ಮಹತ್ವದಾಗಿದ್ದರೂ ಭಾರತದಂತಹ ದೇಶಗಳ ಖಡಕ್ ಉತ್ತರಗಳು ಅಮೆರಿಕಕ್ಕೆ ಮುಟ್ಟಿಕೊಳ್ಳುವಂತೆ ತಟ್ಟುತ್ತಿವೆ. ದೊಡ್ಡಣ್ಣ, ಹಿರಿಯಣ್ಣ, ದೈತ್ಯ, ನಾಯಕ ಎಂಬ ಪದಗಳಿಂದ ಕೂಡಿದ ಉಪಮೇಯಗಳ ಹೊಗಳಿಕೆಗಳ ಕಾಲ ಮುಗಿದು ಇಂದಿಗೆ ದಶಕಗಳೇ ಕಳೆದಿವೆ. 10% ಅಮೇರಿಕ ಒಂದೆಡೆಯಾದರೆ 90% ವಿಶ್ವದ ಇತರ ದೇಶಗಳು ಇನ್ನೊಂದೆಡೆ ಎಂಬುದ ಅದು ಮನವರಿಕೆ ಮಾಡಿಕೊಳ್ಳಬೇಕು.

ಟ್ರಂಪ್ ಚುನಾವಣೆಯಲ್ಲಿ ಅಬ್ಬರಿದ ಮಾತ್ರಕ್ಕೆ, ಆತ ಆ ಮಾತುಗಳಿಗೆ ಪೂರಕವಾಗಿ ನೆಡೆದುಕೊಳ್ಳುತ್ತಿರುವ ಮಾತ್ರಕ್ಕೆ ವಿಶ್ವವೇಕೆ ಆ ತಾಳಕ್ಕೆ ತಕ್ಕಂತೆ ಕುಣಿಯಬೇಕು? ಇಂದು ನಮಗೆ ಬೇರ್ಯಾವ ದೇಶಗಳ ಅನಿವಾರ್ಯವಿಲ್ಲವೆನುವವರು ಮೂರ್ಖರಲ್ಲದೆ ಬೇರ್ಯಾರು ಅಲ್ಲ. ಮನೆಗೆ ಬಂದುಹೋಗುವ ನೆರೆವೊರೆಯವರು ಅವರು ಕೇವಲ ನಮ್ಮ ಮನೆಯನ್ನು ಕೊಳ್ಳೆಹೊಡೆಯಲೇ ಬರುತ್ತಾರೆಂಬ ಮಾತು ಅದೆಷ್ಟರ ಮಟ್ಟಿಗೆ ಸರಿ? ಹಾಗೆನುತ ಅದೆಂದಿನವರೆಗೆ ನಾವುಗಳು ಅವರ ಮುಖವನ್ನು ನೋಡದೆ ಇರುವುದು? ಈ ಕಾರಣಕ್ಕಾಗಿಯೇ ಹಿಂದಿನ ಒಬಾಮ ಆಡಳಿತ ವಿಶ್ವದ ಪ್ರತಿಯೊಂದು ದೇಶಗಳೊಟ್ಟಿಗೂ ಒಂದಲ್ಲ ಒಂದು ಬಗೆಯಲ್ಲಿ ಉತ್ತಮ ಸಂಬಧವನ್ನು ಬೆಳೆಸಲು ಇಚ್ಛಿಸುತ್ತಿತ್ತು. ಆದರೆ ಈ ಒಂದು ಸರಳ ಫಾರ್ಮುಲಾ ಟ್ರಂಪ್ ಅಭಿಮಾನಿಗಳಿಗೆ ತಿಳಿಯಲಿಲ್ಲ. ಅಂದು ಒತ್ತಲು ಬಟನ್ ಒಂದಿದೆ ಏನುತಾ ಏಕಾಏಕಿ ಬ್ರಿಟನ್ ಅನ್ನು ಅತಂತ್ರ ಸ್ಥಿತಿಗೆ ತಂದ ಜನಗಳಂತೆಯೇ ಅಮೆರಿಕದ ಜನರೂ ಮಾಡಿದರು. ಟ್ರಂಪ್ ಅಧ್ಯಕ್ಷನಾದ ಎರಡು ವರ್ಷಗಳಲ್ಲಿಯೇ ಇಷ್ಟೆಲ್ಲಾ ಅನಾಹುತಗಳು ಜರುಗಿರುವಾಗ ಇನ್ನೊಂದೆರಡು ವರ್ಷಗಳಲ್ಲಿ ಅದ್ಯಾವ ಬಗೆಯ ಪ್ರಳಯ ಅಮೇರಿಕಾದ ನೆಲದಲ್ಲಿ ನೆಡೆಯುತ್ತದೆಯೋ ಕಾದು ನೋಡಬೇಕು.