Friday, February 24, 2017

ಜೀವನ ಕಟ್ಟಿದ ಸಮಾಜಕ್ಕಿಂದು ನೀಡಬೇಕಿದೆ ನಿನ್ನ ಕೊಡುಗೆಯೊಂದು…


ಅದು 1988 ರ ಮಳೆಗಾಲ. ಮುಂಬೈ ನ ಮೆಡಿಕಲ್ ಶಾಪೊಂದರ ಗೋಡೆಯ ಮೇಲೆ ಟಿವಿ ಸೀರಿಯಲ್ ಒಂದರ ಪೋಸ್ಟರ್ ಚಿಟ-ಪಟ ಮಳೆಗೆ ನೆನೆದು ಕರಗುತ್ತಿರುತ್ತದೆ. ‘FAUJI’ ಎಂಬ ಶೀರ್ಷಿಕೆಯ ಆ ಪೋಸ್ಟರ್ನಲ್ಲಿ ಎಣ್ಣೆ ಮೆತ್ತಿದ್ದ ಮುಖ, ಗೇರಣ್ಣಿನ ಆಕೃತಿಯ ಮೂಗು, ಹಾಗು ಹುಬ್ಬಿದ ತುಟಿಗಳೊಟ್ಟಿಗೆ ಮಿಲಿಟರಿ ಸಮವಸ್ತ್ರ ಧರಿಸಿ ನಿಂತಿದ್ದ ನಾಯಕನನ್ನು ಕಂಡು ಅಲ್ಲಿ ನೆರೆದಿದ್ದ ಜನ ಗೇಲಿಮಾಡುತ್ತಿದ್ದರೆ ಇತ್ತ ಕಡೆ ಯುವಕನೊಬ್ಬ ಸುರಿಯುತ್ತಿದ್ದ ಮಳೆಯಲ್ಲಿಯೇ ಓಡಿಬಂದು ಏದುಸಿರು ಬಿಡುತ್ತಾ ಮೆಡಿಕಲ್ ನ ಒಳಗೆ ನುಗ್ಗುತ್ತಾನೆ. ದುಃಖದ ಛಾಯೆ ಅವನ ಮುಖದಲ್ಲಿ ಎದ್ದು ಕಾಣುತ್ತಿದ್ದರೆ ಅತ್ತು ಬೇಸತ್ತ ಕಣ್ಣುಗಳಿಂದ ಕಣ್ಣೀರು ಮಳೆಯಂತೆಯೇ ನಿಧಾನವಾಗಿ ಜಿನುಗುತ್ತಿರುತ್ತವೆ. ಆತ ಬಂದವನೇ ಅವಸರವಸರದಲ್ಲಿ ಔಷದವನ್ನು ಪಡೆದು ತನ್ನ ಲೋಳಕು ಪ್ಯಾಂಟಿನ ನಾಲ್ಕೂ ಜೇಬುಗಳಿಂದ ಒಂದೊಂದೇ ನೋಟುಗಳನ್ನು ಎಳೆದು ಕೊಡುತ್ತಿದ್ದರೆ ಆತನ ಕೈ ಗಡಗಡನೆ ನಡುಗುತ್ತಿರುತ್ತದೆ. ಇತ್ತಕಡೆ ಪೋಸ್ಟರ್ ನನ್ನುನೋಡಿ ಗೇಲಿಮಾಡುತ್ತಿದ್ದ ಗುಂಪಿನ ಮಾತುಗಳು ಅವನ ಕಿವಿಗಳಿಗೆ ಸ್ಪಷ್ಟವಾಗಿ ಕೇಳುತ್ತಿದ್ದರೂ ಆತ ಮರುಮಾತನಾಡದೆ ಔಷದವನ್ನು ಪಡೆದು ಮತ್ತದೇ ಮಳೆಯಲ್ಲಿ ಓಡಿ ಮರೆಯಾಗುತ್ತಾನೆ. ಚಿತ್ರದ ಪೋಸ್ಟರ್ ನನ್ನು ನೋಡಿ ಗೇಲಿ ಮಾಡುತ್ತಿದ್ದವನೊಬ್ಬ ಇವನನ್ನು ನೋಡಿ ಒಮ್ಮೆಲೇ ಮಾತು ಬಾರದ ಕಲ್ಲಿನಂತಾಗಿಬಿಡುತ್ತಾನೆ. ಕರಗುತ್ತಿದ್ದ ಪೋಸ್ಟರ್ ನ ಇನ್ನೂ ಸಮೀಪಕ್ಕೆ ಹೋಗಿ ಪರೀಕ್ಷಿಸುತ್ತಾನೆ….ಅಲ್ಲಿಂದ ಓಡಿದ ಆ ಯುವಕ ನೇರವಾಗಿ ದೆಹಲಿಗೆ ಹೊರಡುತ್ತಿದ್ದ ತನ್ನ ಗೆಳೆಯನ ಮನೆಗೆ ಬಂದು, ತಂದಿದ್ದ ಔಷದವನ್ನು ಅವನ ಕೈಲಿತ್ತು ಆದಷ್ಟು ಬೇಗ ತನ್ನ ಅಮ್ಮನಿಗೆ ತಲುಪಿಸಬೇಕೆಂದು ಕೇಳಿಕೊಳ್ಳುತ್ತಾನೆ. ಕಾಯಿಲೆಯಿಂದ ನರಳುತ್ತಿರುವ ಅಮ್ಮ ಬೇಗ ಗುಣವಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಾನೆ. ಅಶ್ರುಧಾರೆಗಳು ಒಮ್ಮೆಲೇ ಭೋರ್ಗರೆದು ಕೆನ್ನೆಗಳ ಮೇಲೆ ಹರಿಯತೊಡಗುತ್ತವೆ.

ಇಂದು ಆತ ಬೆಳೆದು ದೊಡ್ಡವನಾಗಿದ್ದಾನೆ. ಅದು ಯಾವ ಪರಿಯೆಂದರೆ ಈತನ ಒಂದು ನೋಟವನ್ನು ಕಣ್ತುಂಬಿಕೊಳ್ಳಲು ಹಗಲು ರಾತ್ರಿಯೆನ್ನದೆ ಘಂಟೆಗಳ ಕಾಲ ಗೋಡೆಯ ಮೇಲೆ ತಟಸ್ಥವಾಗುವ ಹಲ್ಲಿಗಳಂತೆ ಈತನ ಮನೆಯ ಹೊರಗೆ ಕಾದು ನಿಲ್ಲುವ ಲಕ್ಷ ಲಕ್ಷ ಯುವಕ ಯುವತಿಯರಿದ್ದಾರೆ. ಜಾಹಿರಾತು ಕಂಪನಿಗಳೂ ಸಹ ಈತನ ಒಂದು ಸಹಿಗೆ ಸಿಹಿಯನ್ನು ಹೊತ್ತೊಯ್ಯುವ ಇರುವೆಗಳಂತೆ ಸಾಲುಗಟ್ಟಿ ನಿಂತುಕೊಳ್ಳುತ್ತವೆ. ಚಿತ್ರದ ನಿರ್ದೇಶಕ ನಿರ್ಮಾಪಕರಿಗಂತೂ ಈತ ಕೈಗೆಟುಕದ ಕೊಹಿನೂರ್ ವಜ್ರ ವೇ ಸರಿ. ಅಂದು ಚಿತ್ರಗಳಲ್ಲಿ ಒಂದು ಸಣ್ಣ ಅವಕಾಶಕ್ಕಾಗಿ ಹವಣಿಸುತ್ತಿದ್ದ ಆತ ಇಂದು ತನ್ನ ಸ್ವಂತ ಚಿತ್ರ ನಿರ್ಮಾಣ ಸಂಸ್ಥೆಯನ್ನೇ ಸ್ಥಾಪಿಸಿ ಅಂತಹ ಸಾವಿರಾರು ಯುವಕರಿಗೆ ಅವಕಾಶವನ್ನು ನೀಡುವ ಮಟ್ಟಕೆ ಬೆಳೆದಿದ್ದಾನೆ! ಪರದೆಯ ಮೇಲಿನ ಗುಣಗಳಷ್ಟೇ ಗಮನಿಸುವ ಸಿನಿಪ್ರಿಯರಿಗಂತೂ ಈತನೇ ಆರಾಧ್ಯ ದೈವ. ಈತನ ನಟನೆಯೇ ಅಂಥಹದ್ದು. ಕಣ್ಣುಗಳನ್ನೇ ಮಾತಿಗಿಳಿಸಿದಂತೆ ಮಾಡುವ ನಟನೆ, ಪಾತ್ರಗಳಿಗೆ ನೈಜ ಜೀವ ತುಂಬುವ ಕಲೆ, ಕೇಳಿದಷ್ಟು ಸಾಕೆನಿಸದ ಮಾತಿನ ಶೈಲಿ ಹಾಗು ಅದಕ್ಕೆ ಪೂರಕವಾದ ನವಿರಾದ ಧ್ವನಿ ಅಲ್ಲದೆ ಇವೆಲ್ಲ ಗುಣಗಳಿಗೂ ಕಿರೀಟಪ್ರಾಯವಾಗಿರುವ ಈತನ ಪ್ರಬುದ್ಧವಾದ ಹಾಸ್ಯಪ್ರಜ್ಞೆ ಇಂದು ಈತನನ್ನು ದೇಶದ ಅತಿ ಉನ್ನತ ನಾಯಕ ನಟರಲೊಬ್ಬನನ್ನಾಗಿ ಮಾಡಿದೆ. ಕಿಂಗ್ ಖಾನ್, ಬಾದ್ ಷ ಆಫ್ ಬಾಲಿವುಡ್, ದಿ ಕಿಂಗ್ ಆಫ್ ರೋಮ್ಯಾನ್ಸ್ ಎಂಬೆಲ್ಲ ಹೆಸರುಗಳಿಂದ ಪ್ರಸಿದ್ದಿ ಹೊಂದಿರುವ ಈತ ಅಂದು ಮಲಗಲು ಒಂದು ಸೂರಿಲ್ಲದೆ ಮುಂಬೈ ಎಂಬ ಮಾಯಾನಗರಿಗೆ ಬಂದು, ರೈಲ್ವೆ ನಿಲ್ದಾಣಗಳಲ್ಲಿ ಮಲಗೆದ್ದು, ಸಿನಿಮಾ ಲೋಕದಲ್ಲಿ ಅವಕಾಶವನ್ನು ಪಡೆದು, ಸಿಕ್ಕ ಸಿಕ್ಕ ಪಾತ್ರಗಳನ್ನೆಲ್ಲ ಮಾಡುತ್ತಾ ತನ್ನ ನೆಲೆಯನ್ನು ಗಟ್ಟಿಗೊಳಿಸಿಗೊಂಡು ಇಂದು ತಾನೇ ಒಂದು ‘ಬ್ರಾಂಡ್’ ಎನ್ನಿಸಿಕೊಳ್ಳುವ ಮಟ್ಟಕ್ಕೆ ಬೆಳೆದ ಪರಿಯಂತೂ ಯಾವ ಚಿತ್ರಕಥೆಗೂ ಕಮ್ಮಿಯಿಲ್ಲ. ಈತ ಬೆಳೆದು ಬಂದ ಹಾದಿಯಲ್ಲಿ ಪ್ರತಿ ಹೆಜ್ಜೆಗೂ ಸವಾಲುಗಳು ಜೊತೆಗೆ ಕಷ್ಟಗಳು ಒಂದರಿಂದೊಂದು ಪುಟಿದೆದ್ದು ನಿಲ್ಲುತ್ತಿದ್ದವು. ಅದು ತನ್ನ ಹದಿನೈದನೇ ವಯಸ್ಸಿಗೆ ತಾನು ಅತಿಯಾಗಿ ಪ್ರೀತಿಸುತಿದ್ದ ತಂದೆಯನ್ನು ಕಳೆದುಕೊಂಡದ್ದಾಗಿರಬಹುದು ಅಥವಾ ಕೆಲವರ್ಷಗಳಲ್ಲೇ ತಾಯಿಯನ್ನೂ ಕಳೆದುಕೊಂಡು ಮತ್ತಷ್ಟು ಸೊರಗಿದ ದಿನಗಳಾಗಿರಬಹುದು ಅಥವಾ ಸಿನಿಮಾಗಳಲ್ಲಿ ಕೊಂಚ ಉತ್ತಮ ಪಾತ್ರಗಳು ಸಿಗತೊಡಗಿದಾದ ತನ್ನ ಗೇಲಿಮಾಡಿ ಅವಮಾನವನ್ನು ಮಾಡಲೆತ್ನಿಸುತ್ತಿದ್ದ ಸಹನಟರಾಗಿರಬಹುದು ಅಥವಾ ಹಸಿದ ಹೊಟ್ಟೆಗೆ ಕನಿಷ್ಠ ಹಿಟ್ಟಿಲ್ಲದೆ ಸೊರಗಿದ ಘಳಿಗೆಯಾಗಿರಬಹುದು ಒಟ್ಟಿನಲ್ಲಿ ಈತ ಕಷ್ಟದ ದಿನಗಳನ್ನು ಮುಷ್ಠಿ ಕಟ್ಟಿ ಸೋಲಿಸಿ ಬೆಳೆದ ಛಲಗಾರ. ಈತನ ಸಿನಿಮಾಗಳು ಅದೆಷ್ಟೇ ಪ್ರಸಿದ್ದಿ ಹೊಂದಿದರೂ ಈತ ಇಷ್ಟವಾಗುವುದು ಇಂತಹ ಎಲ್ಲ ಅಡೆತಡೆಗಳನ್ನು ಮೆಟ್ಟಿ ಬೆಳೆದು ಬದುಕನ್ನು ಕಟ್ಟಿಕೊಂಡ ಪರಿಯಿಂದ. ಗಾಡ್ ಫಾದರ್ ಗಳೆಂಬ ಆಧಾರಗಳಿಲ್ಲದೆ ಚಿತ್ರರಂಗದಲ್ಲಿ ಇಂದು ಸೂಪರ್ ಸ್ಟಾರ್ ಗಳೆನ್ನಿಸಿಕೊಂಡಿರುವ ಕೆಲವೇ ಕೆಲವು ನಟರಲ್ಲಿ ಈತನೂ ಒಬ್ಬ.

ತನ್ನ ಬುದ್ದಿ ಬಲಿತ ಮೇಲೆ ಕೆಲವೇ ವರ್ಷಗಳು ತಂದೆಯೊಟ್ಟಿಗಿದ್ದರೂ ಆ ಕೊಂಚ ಸಮಯದಲ್ಲೇ ಸಾಕಷ್ಟು ವಿಚಾರಗಳನ್ನು ಅವರಿಂದ ಕಲಿಯುತ್ತಾನೆ. ಇಂದಿನ ಈತನ ‘ಡೌನ್ ಟು ಅರ್ಥ್’ ಗುಣಕ್ಕೆ ಅಂದು ತಂದೆಯೊಟ್ಟಿಗಿನ ವಿಚಾರಪೂರ್ವಕ ಒಡನಾಟ ಹಾಗು ಅವರಿಂದ ಕಲಿತ ನಮ್ರತೆಯ ಗುಣಗಳೇ ಹೆಚ್ಚಾಗಿ ಕಾರಣವಾಗಿರುತ್ತದೆ. ಅಲ್ಲದೆ ಈತನಿಗೆ ಒಮ್ಮೆ ಯಾವುದಾದರೊಂದು ವಿಷಯದಲ್ಲಿ ಗೀಳು ಹತ್ತಿಕೊಂಡರೆ ಆ ವಿಷಯದಲ್ಲಿ ಏನಾದರೊಂದು ಸಾಧಿಸಿದ ನಂತರವೇ ನೆಮ್ಮದಿಯ ನಿಟ್ಟುಸಿರು. ಉದಾಹರಣೆಗೆ ತನ್ನ ಕಾಲೇಜು ದಿನಗಳಲ್ಲಿ ಕ್ರಿಕೆಟ್, ಫುಟ್ ಬಾಲ್ ಹಾಗು ಹಾಕಿಯಲ್ಲಿ ಆಸಕ್ತಿಯನ್ನು ಮೂಡಿಸಿಕೊಂಡ ಈತ, ತದಾ ನಂತರ ತನ್ನನ್ನು ಅದೆಷ್ಟರ ಮಟ್ಟಿಗೆ ಈ ಆಟಗಳಲ್ಲಿ ತೊಡಗಿಸಿಕೊಂಡನೆಂದರೆ ಶಾಲಾ ಕಾಲೇಜುಗಳಲ್ಲಿ ಪಠ್ಯ ಹಾಗು ಪಠ್ಯೇತರ ವಿಷಯಗಳಲ್ಲಿ ಅವಿರತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವರ್ಷದ ಕೊನೆಯಲ್ಲಿ ಕೊಡುವ 'ಸ್ವಾರ್ಡ್ ಆಫ್ ಹಾನರ್' ಪ್ರಶಸ್ತಿಯನ್ನು ಪಡೆಯುತ್ತಾನೆ. ಫುಟ್ ಬಾಲ್ ಹಾಗು ಕ್ರಿಕೆಟ್ ನಲ್ಲಿ ಕಾಲೇಜು ತಂಡದ ನಾಯಕನೂ ಆಗುತ್ತಾನೆ.

ಇಂದು ನಡುರಾತ್ರಿಯಲ್ಲಿ ತನಗರಿಯದಂತೆ ಒದಗಿ ಬರುವ ಸ್ಟಾರ್ಡಮ್ ಎಂಬ ಹುಚ್ಚು ಹಸಿವಿನಿಂದ ಕಂಗೆಟ್ಟು, ಜೊತೆಗಿದ್ದವರ ಮರೆತೇ ಬಿಟ್ಟು, ವರ್ಷಕೊಂದರಂತೆ ಬದಲಾಹಿಸಿಕೊಳ್ಳುವ ವಸ್ತುಗಳಂತೆ ಆಗಿರುವ ಅದೆಷ್ಟೋ ಚಿತ್ರರಂಗದ ನಟ ನಟಿಯರ ದಾಂಪತ್ಯ ಹಾಗು ಸಾಮಾಜಿಕ ಜೀವನಗಳಲ್ಲಿ ಇಂದು ಇವನದು ಅಕ್ಷರ ಸಹ ಬೌಧಿಕ ನಡತೆ. ಅದು ತನ್ನ ಕಷ್ಟಗಾಲದಲ್ಲಿ ಜೊತೆಗಿದ್ದು ಕೈ ಹಿಡಿದು ನೆಡೆದು ಬಂದ ಮಡದಿಯಾಗಲಿ ಅಥವಾ ಜೇಬು ತೂತುಬಿದ್ದ ಮಡಕೆಯಾದಾಗಲೂ ಬೆನ್ನ ಹಿಂದಿದ್ದು ನೆಡೆಸಿ ದಡವನ್ನು ತಲುಪಿಸಿದ ಸ್ನೇಹಿತರಾಗಲಿ ಯಾರನ್ನೂ ಸಹ ಈತ ಮರೆತಿಲ್ಲ. ಅಲ್ಲದೆ ಜಾತಿ, ಮತ ಅಂದ ಚೆಂದದ ಹಿಂದಿರುವ ಪ್ರೀತಿಯನ್ನೆಂದೂ ನಂಬದ ಈತ ತನ್ನ ಮಕ್ಕಳಲ್ಲೂ ಆ ಗುಣಗಳು ಬರಲಿ ಎಂದು ಬಯಸುತ್ತಾನೆ. ಮನೆಯಲ್ಲಿ ಕುರಾನ್ ಹಾಗು ಭಗವತ್ಗೀತೆಯನ್ನು ಒಟ್ಟೊಟ್ಟಿಗೆ ತನ್ನ ಮಕ್ಕಳಿಗೆ ಕಲಿಯಲು ಅನುವುಮಾಡಿಕೊಡುತ್ತಾನೆ. ಈತ ಸಮಾಜಕ್ಕೆ ಮಾದರಿಯಾಗುವುದು ಇವೇ ಕೆಲವು ಗುಣಗಳಿಂದ ಹಾಗು ಜೊತೆಗೆ ತನ್ನ ಅಭೂತಪೂರ್ವ ಚಿತ್ರಗಳಿಂದ ಹಾಗು ಅವುಗಳಿಗೆ ಜೀವ ತುಂಬುವ ತನ್ನ ಅಮೋಘ ನಟನೆಯಿಂದ. ದಿಲ್ ಸೆ, ಹೇ ರಾಮ್, ಅಶೋಕ, ಕಲ್ ಹೊ ನ ಹೊ, ಸ್ವದೇಶ್, ಚಕ್ ದೇ, ಮೈ ನೇಮ್ ಈಸ್ ಖಾನ್, ಹೀಗೆ ಹಲವು ಚಿತ್ರಗಳು ಕೇವಲ ಚಿತ್ರಗಳಾಗಿರದೆ ಹಲವರ ಜೀವನವನ್ನು ರೂಪಿಸಿರುವ ಪಠ್ಯಗಳಾಗಿವೆ. ಪ್ರೀತಿ, ಸ್ನೇಹ, ಛಲ, ವಿನಯತೆ, ಗಾಂಭೀರ್ಯತೆ ಎನ್ನುವ ಹಲವಾರು ಭಾವಗಳನ್ನು ಒಟ್ಟೊಟ್ಟಿಗೆ ಮೂಡಿಸಬಲ್ಲ ಈತನ ಉತ್ಕೃಷ್ಟ ನಟನೆ ನಿರ್ದೇಶಕರ ಕನಸ್ಸನ್ನು ನನಸಾಗುವಂತೆ ಪರದೆಯ ಮೇಲೆ ಮೂಡಿಸಿ ತನ್ನ ಹಾಗು ಚಿತ್ರದ ಹೆಸರನ್ನೂ ನೋಡುಗರಲ್ಲಿ ಅಮರವಾಗಿಸಿದ್ದಾನೆ. ಜನರ ಮನೆಮಾತಾಗಿದ್ದಾನೆ.

ಆದರೆ,

ಒಬ್ಬ ನಟ ಆತ ಯಾವುದೇ ಸ್ಥರದಲ್ಲಿರಲಿ, ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿಯಾದರೂ ನೋಡುಗರ ಮೇಲೆ ತನ್ನ ಪ್ರಭಾವವನ್ನು ಬೀರುತ್ತಿರುತ್ತಾನೆ. ತನಗರಿಯದಂತೆ ಸಾಮಾಜಿಕ ಜವಾಬ್ದಾರಿ ಎಂಬ ಕಾಣದ ಬೇತಾಳವನ್ನು ಹೆಗಲೇರಿಸಿಕೊಂಡಿರುತ್ತಾನೆ. ಭಾರತದಂತಹ ಮುಗ್ದ ದೇಶದ ಎಳೆಯ ಮನಗಳ ಮೇಲೆ, ಅದೂ ಪ್ರಸ್ತುತ ಸಿನಿಮೀಯ ಜಗತ್ತಿನಲ್ಲಿ ಇಂತಹ ನಟರ ಪ್ರತಿ ನಡೆಯೂ ವಿಪರ್ಯಾಸವೆನಿಸಿದರೂ ಹಲವರಿಗೆ ದಾರಿದೀಪಗಳಾಗಿರುವುದು ಸುಳ್ಳೇನೂ ಅಲ್ಲ. ನಟರೇನೋ ಚಿತ್ರದ ಮಟ್ಟಿಗೆ ತಮ್ಮನ್ನು ಹುಚ್ಚರನ್ನಾಗಿ, ರೌಡಿಗಳಾಗಿ, ಮಾದಕ ವ್ಯಸನಿಗಳಾಗಿ, ಕಳ್ಳರಾಗಿ, ಸುಳ್ಳರಾಗಿ ತಮಗೆ ಬಂದ ಯಾವುದೇ ಪಾತ್ರವಾದರೂ ಅದಕೊಂದ್ದು ಜೀವ ತುಂಬಿ, ನಟಿಸಿ, ಪ್ರೇಕ್ಷಕರನ್ನು ರಮಿಸಿ ನಂತರ ಆ ಪಾತ್ರವನ್ನು ಮರೆತು ಬೇರೊಂದು ಪಾತ್ರವನ್ನು ಹಿಡಿಯತೊಡಗುತ್ತಾರೆ. ಆದರೆ ಪ್ರೇಕ್ಷಕ? ಆ ಚಿತ್ರ ಹಾಗು ಅದರೊಳಗಿನ ಪಾತ್ರವನ್ನು ಜೀವನೋಪಾಯಕ್ಕೆ ಕೂಡಿಡುವ ಆಸ್ತಿಯಂತೆ ತನ್ನೊಳಗೆ ಬೆಳೆಸಿಕೊಳ್ಳುತ್ತಾನೆ. ಕೆಲವರಂತೂ ಪ್ರತಿ ದಿನವೂ ಆ ಪಾತ್ರಗಳ ಮಂತ್ರವನ್ನೇ ಜಪಿಸುತ್ತಿರುತ್ತಾರೆ. ತಾನು ಆ ಪಾತ್ರಗಳಂತೆ ಮಾರ್ಪಾಡಾಗಲು ಪ್ರಯತ್ನಿಸುತ್ತಾರೆ.
ಅಲ್ಲದೆ ಇಂದು ಲಕ್ಷಾಂತರ ಜನರನ್ನು ಕೇವಲ ಒಂದಿಷ್ಟು ಪದಗಳಲ್ಲೇ (ಡೈಲಾಗ್) ಪರಿವರ್ತಿಸಬಲ್ಲ ದೊಡ್ಡ ನಟಿಮಣಿಗಳು ನಿಜಜಗತ್ತಿನಲ್ಲಿ ಕ್ಯಾಮೆರಗಳೆಂಬ ಕಪ್ಪು ಡಬ್ಬದ ಮುಂದೆ ಬಂದರಂತೂ ಅವಕ್ಕೆ ಜಗತ್ತೇ ಮರೆಯಾಗಿಬಿಡುತ್ತದೆ. ಬೇಡವೆಂದೆಡೆಯಲ್ಲ ಹರಿದು ಬರಿದಾಗುವ ವಸ್ತ್ರಗಳು, ಹೊಲಸು ಮಾತುಗಳನ್ನೇ ಹಾಸ್ಯ ಪ್ರಜ್ನೆಗಳೆಂದು ನಂಬಿ ಹಲ್ಲು ಕಿರಿಯುವ ಕಿರುತೆರೆ ನಟರು, ಇಂತಿಷ್ಟೂ ಸಾಮನ್ಯಜ್ಞಾನವಿಲ್ಲದಿದ್ದರೂ ಇತರರನ್ನು ಅರ್ಥವಾರಿಯದ ತರ್ಕದ ಆಧಾರದ ಮೇಲೆ ಮನಬಂದಂತೆ ಜರಿಯುವ (ಟ್ವಿಟ್ಟರ್ ಮೂಲಕ) ಮೀಸೆ ಚಿಗುರದ ನಟರು, ನಿಜ ಜಗತ್ತಿನಲ್ಲೇ ನಟಿಸಿ, ನಟಿಸಬೇಕಾದ ಕಡೆ ತಿಣುಕಾಡಿ ಹಣ ಸುರಿದಾದರೂ ಸರಿ ಪ್ರಶಸ್ತಿ ಎಂಬ ಗರಿಯನ್ನು ಮುಡಿಗೇರಿಸಿಕೊಳ್ಳಲು ಆವಣಿಸುವ ನಟ ನಟಿಯರು ಇಂದು ಕೋಟಿ ಕೋಟಿ ಜನರ ಹಾಟ್ ಫೆವೋರೆಟ್. ಪ್ರತಿಭೆಗಿಂತಲೂ ಹೆಚ್ಚಾಗಿ ಪ್ರಸಿದ್ಧಿಯೇ ಇವರನ್ನು ಈ ಮಟ್ಟಕ್ಕೆ ತಂದಿರುತ್ತದೆ ಎಂದರೆ ಸುಳ್ಳಾಗಲಾರದು. ಇಂಥವರನ್ನು ತದೇಕಚಿತ್ತವಾಗಿ ಅನುಸರಿಸುವ ಹಾಗು ಆದರ್ಶ ವ್ಯಕ್ತಿಗಳನ್ನಾಗಿ ಮಾಡಿಕೊಳ್ಳುವ ನೋಡುಗ ಅದೆಷ್ಟರ ಮಟ್ಟಿಗೆ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು ಎಂಬುದೇ ಇಲ್ಲಿನ ಪ್ರೆಶ್ನೆ.

ಇನ್ನು ನಮ್ಮ ನಾಯಕನ ವಿಷಯಕ್ಕೆ ಬಂದರೆ ಆತನಿಗಿಂದು 50 ವಸಂತಗಳೇ ಕಳೆದಿವೆ. ಈತ ಚಿತ್ರರಂಗದಲ್ಲಿ ಈಗಲೂ ಸಹ ಅತಿ ಬೇಡಿಕೆಯ ನಟ. ಪರಿಣಾಮ ಆತ ತನ್ನ ಕೇಶರಾಶಿಯನ್ನು ಮುದುಡಿ ಜುಟ್ಟೊಂದನ್ನು ಕಟ್ಟಿದ್ದರೆ ದೇಶದಲ್ಲಿ ಕೋಟಿ ಕೋಟಿ ಜುಟ್ಟುಗಳು ಮಿರ-ಮಿರನೆ ಮೂಡುತ್ತವೆ. ಆತ ಬಿದ್ದು ಮೂಳೆ ಮುರಿದುಕೊಂಡು ಕೈಗೆ ಬ್ಯಾಂಡೇಜ್ ಒಂದನ್ನು ಕಟ್ಟಿಕೊಂಡರೆ ಇತ್ತ ನೂರಾರು ಜನ ಕ್ಲಿನಿಕ್ ಗಳ ಮುಂದೆ ಸಾಲು ಗಟ್ಟಿ ನಿಲ್ಲುತ್ತಾರೆ, ತಾವೂ ಅವನಂತೆ ಕೈಗೆ ಬಿಳಿಯ ಬ್ಯಾಂಡೇಜ್ ಅನ್ನು ಕಟ್ಟಿ ಬೀಗಲು ಹವಣಿಸುವ ಹುಚ್ಚು ಅಭಿಮಾನಿಗಳು. ಇಷ್ಟೆಲ್ಲಾ ಬಗೆಯಲ್ಲಿ ತನ್ನನು ಅನುಸರಿಸುವ ದೊಡ್ಡ ಬಳಗವನ್ನೇ ಹೊಂದಿರುವ ಈತ ಸಾರ್ವಜನಿಕ ಮಟ್ಟದಲ್ಲಿ ಎಷ್ಟರ ಮಟ್ಟಿಗೆ ಪ್ರಭುದ್ಧನಾಗಿರಬೇಕೆಂದು ತಿಳಿಹೇಳುವವರ್ಯಾರು? ದೇಶದ ಪ್ರಧಾನಿ ಹಾಗು ರಾಷ್ಟ್ರಪತಿಗಳು ಒಂದೇ ವೇದಿಕೆಯ ಮೇಲೆ ಆಸೀನವಾಗಿರುವಾಗ ಮೊದಲ ಸಂಬೋಧನೆ ಎಂದಿಗೂ ರಾಷ್ಟ್ರಪತಿಯನ್ನು ಕುರಿತು ಆಗಿರಬೇಕೆಂದು, ತನಗೆ ನೀಲಿ ಚಿತ್ರಗಳ ನಾಯಕನಾಗಬೆನೆಂಬ ಆಸೆ ಅದು ಸ್ವಂತದ ವಿಷಯ, ಆದರೆ ಅದನ್ನು ಸಾರ್ವಜನಿಕವಾಗಿ ಹೇಳಿ ಅಭಿಮಾನಿಗಳಲ್ಲಿ/ದೇಶವಾಸಿಗಳಲ್ಲಿ ಗೊಂದಲವನ್ನುಂಟುಮಾಡುವ ಅವಶ್ಯಕತೆಯಾದರೂ ಏನಿದೆ ಎಂದು ಈತನಿಗೆ ಬಿಡಿಸಿ ಹೇಳುವವರ್ಯಾರು? ಸಾವಿರಾರು ಜನರು ಸೇರಿರುವಾಗ, ಮೈಕೆಂಬ ಮಹಾ ಅಸ್ತ್ರ ಕೈಯ್ಲಲಿರುವಾಗ, ಇಂತಹ ದೊಡ್ಡ ನಟರ ಬಾಯಿಯಿಂದ ಹೊರಡುವ ಪ್ರತಿ ಮಾತುಗಳು ಮುತ್ತುಗಳಂತೆ, ನೆಡೆಯುವ ಪ್ರತಿ ಹೆಜ್ಜೆಯೂ ಮೈಲಿಗಲ್ಲಿನಂತೆ ಎಂಬ ಜವಾಬ್ದಾರಿ ಇನ್ನೂ ಹೆಚ್ಚಾಗಿ ಈತನಲ್ಲಿ ಮೂಡಬೇಕಿದೆ.

ಈತನ ಚಿತ್ರಗಳ ವಿಷಯದಲ್ಲೂ ಬದಲಾಗಬೇಕಾದ ಅಂಶಗಳು ಬಹಳಷ್ಟಿವೆ. ಡಾನ್ ಗಳನ್ನು, ಕಳ್ಳ ಕಾಕರನ್ನು, ಸಾರಾಯಿ ದಂಧೆಯನ್ನು ಮಾಡುವ ದರೋಡೆಕೋರರನ್ನು ಹಿರಿ ಹಿರಿ ಹಿಗ್ಗಿಸಿ ತೋರುವ ಚಿತ್ರಗಳಿಗೆ ಈತನಂತಹ ನಟರು ನಾಯಕನಾಗುತ್ತಿರುವು ದೇಶೀ ಚಿತ್ರರಂಗಕ್ಕೆ ಬರಬಡಿದ ಸೂಚನೆ! ಇವುಗಳೇನಿದ್ದರೂ ಬುದ್ದಿ ಚಿಗುರೊಡೆಯದ ಅಥವಾ ಸಾಮಾಜಿಕ ಕಳಕಳಿಇಲ್ಲದ ಅಥವಾ ಚಿತ್ರನಿರ್ಮಾಣವನ್ನೇ ‘ದಂಧೆ’ಯಾಗಿಸಿಕೊಂಡಿರುವ ಚಿತ್ರ ‘ವಿ’ರಚನಾಕಾರರಿಗೆ ಮಾತ್ರ ಸೀಮಿತ. ಇಂತಹ ಪಾತ್ರಗಳು ಹಾಗು ಚಿತ್ರಗಳು ಕಷ್ಟದ ಎಲ್ಲ ಮಜಲುಗಳನ್ನು ಜಡಿದು ಮೇಲೆ ಬಂದು ಜೀವನಸ್ಪೂರ್ತಿದಾಯಕವಾಗುವ ನಮ್ಮ ನಾಯಕನ ವ್ಯಕ್ತಿತ್ವದವರಂತವರಿಗಲ್ಲ. ಕಳೆದ ಏಳೆಂಟು ವರ್ಷಗಳಿಂದ ಈತನ ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದು ಸ್ಪಷ್ಟವಾಗಿ ಅರಿವಿಗೆ ಬರುತ್ತದೆ. 'ಮೈ ನೇಮ್ ಇಸ್ ಖಾನ್' ಚಿತ್ರದ ನಂತರ ಈತನ ಯಾವ ಚಿತ್ರವೂ ಇಂದು ನೋಡಿ ಮುಂದೊಂದು ದಿನ ನೆನಪಿನಲ್ಲುಳಿಯುವ ಮಟ್ಟಕ್ಕಿಲ್ಲ. ಕಾರಣ ಹಲವು. ಪ್ರಮುಖವಾಗಿ ಇಂದಿಗೂ ಸಹ ಕೇವಲ ವ್ಯಕ್ತಿ ಕೇಂದ್ರಿತ ಪಾತ್ರಗಳನ್ನೇ ಅರಸಿ ಹೋಗುತ್ತಿರುವುದು ಅಲ್ಲದೆ ಸಮಾಜಮುಖಿ ಹಾಗು ಅರ್ಥಪೂರ್ಣ ಲೊ ಬಜೆಟ್ ಚಿತ್ರಗಳಿಂದ ವಿಮುಖನಾಗಿರುವುದು.

ವಯಸ್ಸಿಗೆ ತಕ್ಕಂತೆ ಪಾತ್ರಗಳನ್ನು ಮಾಡಬೇಕೆಂಬ ಯಾವುದೇ ಬೇಲಿಗಳು ನಟನ ಪ್ರಪಂಚದಲ್ಲಿಲ್ಲದಿದ್ದರೂ, ಹಣದ ಆಸೆಯನ್ನು ತೊರೆದು ಇಲ್ಲಿಯವರೆಗೂ ತನ್ನನು ನಂಬರ್ ಒನ್ ನಟನನ್ನಾಗಿ ಮಾಡಿದ ಆತನ ಹುಚ್ಚು ಅಭಿಮಾನಿಗಳ ಹಿತದೃಷ್ಟಿಯಿಂದಲಾದರೂ ಚಿತ್ರಗಳನ್ನು ಆರಿಸಿಕೊಳ್ಳುವಾಗ ಈತ ಯೋಚಿಸಬೇಕಾಗಿದೆ. ಅಮಿರ್ ನ ದಂಗಲ್, ತಾರೆ ಝಮೀನ್ ಪರ್, ಲಗಾನ್, ಸರ್ಫಾರೋಶ್ ಚಿತ್ರಗಳಾಗಿರಬಹುದು ಅಥವಾ ಏರ್ ಲಿಫ್ಟ್, ಸ್ಪೆಷಲ್ 26, ಹಾಲಿಡೇ ಗಳಂತಹ ಅಕ್ಷಯ್ ಕುಮಾರ್ ನ ಚಿತ್ರಗಳಾಗಿರಬಹುದು ಇವುಗಳು ನೋಡುಗರಲ್ಲಿ ಒಂದು ಹೊಸ ವಿಚಾರಧಾರೆಯನ್ನು ಪುಟಿದೇಳಿಸುತ್ತವೆ. ದೇಶದ ಬಗ್ಗೆ ಅಲ್ಲದೆ ಸಾಮಾಜಿಕ ಕಳಂಕಗಳ ಬಗ್ಗೆ ಅರಿವು ಮೂಡಿಸುತ್ತವೆ. ಇಲ್ಲಿ ನಿರ್ದೇಶಕ ಹಾಗು ಕಥೆಗಾರರ ಕೊಡುಗೆ ಬಹಳಷ್ಟು ಇದ್ದರೂ ಅವುಗಳು ಹೆಚ್ಚಾಗಿ ಪರಿಣಾಮ ಬೀರುವುದು ಇಂತಹ ಅಗ್ರ ನಟರು ಅವುಗಳಿಗೊಂದು ಜೀವವನ್ನು ತುಂಬಿದಾಗ. ದೇಶ, ನಾಡು ಹಾಗು ಸಂಸ್ಕೃತಿಯ ಪ್ರತೀಕವಾದಂತಹ ಚಿತ್ರಗಳು ಇಂದು ಹೆಚ್ಚಾಗಿ ಮೂಡಬೇಕಿದೆ. 'ಸ್ವದೇಶ್' ಚಿತ್ರದ ನಾಯಕ ಮೋಹನ್ ತನ್ನ ಐಶಾರಾಮಿ ಕೆಲಸವನ್ನು ಬಿಟ್ಟು ದೇಶದ ಉನ್ನತಿಗೆ ಮರಳಿ ತಾಯ್ನಾಡಿಗೆ ಬಂದಂತೆ ಇಂದು ಜನರ ಜೇವನವನ್ನು ಮಾರ್ಪಡಿಸಬಲ್ಲ ಚಿತ್ರಮಾಧ್ಯಮವೆಂಬ ಮಹಾ ಅಸ್ತ್ರದ ಮೂಲಕ ಮತ್ತೊಮ್ಮೆ ನೈತಿಕ ಹಾಗು ಸಾಮಾಜಿಕ ಕಳಕಳಿಯ ಚಿತ್ರಗಳನ್ನು ನಮ್ಮ ನಾಯಕ ನೀಡಬೇಕಿದೆ. 'ಕಿಂಗ್ ಆಫ್ ರೋಮ್ಯಾನ್ಸ್' ಇಂದು 'ಕಿಂಗ್ ಆಫ್ ಗುಡ್ ಥಿಂಗ್ಸ್' ಸಹ ಆಗಬೇಕಿದೆ.

Thursday, February 16, 2017

ಸ್ಪೇಸ್ ಜನರೇಟರ್ :ಇದು ನಾಳೆಗಳ ವಿದ್ಯುತ್ತ್ ಸಮಸ್ಯೆಗಳಿಗೆ ಸೂಕ್ತ ಪರಿಹಾರವಾಗಬಲ್ಲದೇ?

ಆಧುನಿಕ ಜಗತ್ತೆಂದು ಕರೆಯಲ್ಪಡುವ ಪ್ರಸ್ತುತ ಕಾಲವನ್ನು ನಾವು ಒಮ್ಮೆ ಕಣ್ಣು ಮುಚ್ಚಿ ಕಲ್ಪಿಸಿಕೊಂಡರೆ ಹೆಚ್ಚಾಗಿ ಕಾಣಸಿಗುವುದು ಝಗಝಗಿಸುವ ರಂಗು ರಂಗಿನ ಬೆಳಕು ಅಥವ ಅದರ ಮೂಲವಾದ ವಿದ್ಯುತ್ತು ಎನ್ನಬಹುದು. ಆಧುನಿಕ ಜಗತ್ತು ನಿಂತಿರುವ ಅತ್ಯವಶ್ಯಕ ಆಧಾರ ಸ್ತಂಭಗಳಲ್ಲಿ ಈ ವಿದ್ಯುತ್ತ್ ಕೂಡ ಒಂದು. ಇಂದು ಆಹಾರವನ್ನು ಬೇಯಿಸುವುದರಿಂದ ಹಿಡಿದು ಹಾಯಾಗಿ ಮಲಗುವವರೆಗೂ ಇದರ ಅವಶ್ಯಕೆತೆ ಇರುವುದು ಎಲ್ಲರಿಗೂ ತಿಳಿದಿರುವ ವಿಚಾರವೆ. ನವೀಕರಿಸಲಾಗದ ಶಕ್ತಿಯ ರೂಪಗಳಲ್ಲಿ ಒಂದಾಗಿರುವ ವಿದ್ಯುತ್ತಿನ ಕೊರತೆ ದಿನಕಳೆದಂತೆ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ಇದರ ಮಿತ ಬಳಕೆಗೆ ಏನೆಲ್ಲಾ ಸಂಶೋಧನಾ ಸರ್ಕಸ್ ಗಳನ್ನೂ ಮಾಡಿದರೂ ರಕ್ಕಸ ಬಾಯಿಯ ಮಾನವನನ್ನು ತೃಪ್ತಿಪಡಿಸಲ್ಲಲಾಗುತ್ತಿಲ್ಲ ಎನ್ನುವುದು ಸುಪರಿಚಿತವಾಗಿರುವ ವಿಷಯ. ಕಲ್ಲಿದ್ದಲು, ಜಲ, ಪವನ ಶಕ್ತಿ ಹಾಗು ಪರಮಾಣು ಮೂಲಗಳು ಮುಂದೊಂದು ದಿನ ಬರಿದಾದ ಮೇಲೆ ಏನೆಂಬ ಪ್ರೆಶ್ನೆ ದಶಕಗಳಿಂದ ನಮ್ಮೆಲ್ಲರ ಮುಂದಿದ್ದರೂ, ಇನ್ನೂ ಸಹ ಇದಕ್ಕೊಂದು ಸಮರ್ಪಕ ಉತ್ತರವನ್ನು ನಮಗೆ ಹುಡುಕಿಕೊಳ್ಳಲಾಗಿಲ್ಲ.

ಹೀಗೆಯೇ ಈ ವಿಷಯದ ಬಗ್ಗೆ ಅಂತರ್ಜಾಲದಲ್ಲಿ ತಡಕಾಡುವಾಗ ಪರಮಹಂಸ ತಿವಾರಿ ಎಂಬ NPCI ಯ (ನ್ಯಾಷನಲ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ ) ನಿವೃತ್ತ ಡೈರೆಕ್ಟರ್ ಅವರ ಸಂಶೋಧನೆಯ ಬಗ್ಗೆ ತಿಳಿಯಲ್ಪಟ್ಟಿತ್ತು. ಮೂಲತಃ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿರುವ ತಿವಾರಿಯವರು ದೇಶದ ಅಣು ವಿಜ್ಞಾನದ ಕ್ಷೇತ್ರದಲ್ಲಿ ಬಹಳಷ್ಟು ಉನ್ನತ ಹುದ್ದೆಗಳನ್ನು ಅಲಂಕರಿಸಿರುತ್ತಾರೆ. ತಮ್ಮ ವೃತ್ತಿಯ ಉದ್ದಕ್ಕೂ ದೇಶದ ಮಹತ್ವದ ಪ್ರಾಜೆಕ್ಟ್ ಗಳನ್ನು ಸಾಕಾರಗೊಳಿಸುವಲ್ಲಿ ಯಶಸ್ವಿಯಾದ ಇವರು ನಿವೃತ್ತಿಯ ನಂತರ 'ಬ್ಯಾಕ್ ಟು ಬೇಸಿಕ್ಸ್' ಎಂಬುವಂತೆ ತಮ್ಮ ಜೀವನದುದ್ದಕ್ಕೂ ಕಾಡುತ್ತಿದ್ದ ವೈಜ್ಞಾನಿಕ ಹಾಗು ತಾಂತ್ರಿಕ ಪ್ರೆಶ್ನೆಗಳಿಗೆ ಉತ್ತರವನ್ನು ಹುಡುಕಹೊರಟರು. ಹೀಗೆ ಸಂಶೋಧನೆಯನ್ನು ನೆಡೆಸುತ್ತಾ ಹೊರಟವರಿಗೆ ಹೊಳೆದದ್ದೇ ನಾಳಿನ ವಿದ್ಯುತ್ತ್ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ಕೊಡಬಲ್ಲ ‘ರಿಯಾಕ್ಷನ್ ಲೆಸ್ AC ಸಿನ್ಕ್ರೋನಸ್ ಜನರೇಟರ್' (RLG) ಅಥವಾ ಸರಳವಾಗಿ ಹೇಳುವುದಾದರೆ ನಿರ್ವಾತ(Vaccum)ದಿಂದ ಶಕ್ತಿಯನ್ನು ಪಡೆದು ಚಲಿಸುವ ಜನರೇಟರ್! ಅಂದರೆ ಇದರ ಚಲನೆಗೆ ಯಾವುದೇ ಬಗೆಯ ಇಂಧನ ಮೂಲಗಳಾಗಲಿ (ಡೀಸೆಲ್, ಪೆಟ್ರೋಲ್ ಇತ್ಯಾದಿ )ಬೇಡ. ಯಸ್, ನಂಬಲಸಾದ್ಯವಾದರೂ ಒಮ್ಮೆ ತಿಳಿಯಲೇ ಬೇಕಾದ ವಿಷಯವಿದು.

1831 ರಲ್ಲಿ ಮೈಕಲ್ ಫ್ಯಾರಡೆ ಎಲೆಕ್ಟ್ರಿಕ್ ಜನರೇಟರ್ ನನ್ನು ರೂಪಿಸಿದ ಮಾದರಿ/ನಿಯಮ ಶತಕಗಳ ನಂತರವೂ ಹಾಗೆಯೇ ಇದೆ. ಈ ವಿಷಯದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆ ಮಾಡಲಾಗುವುದಿಲ್ಲ ಎಂದೇನಲ್ಲ, ಆದರೆ ವಿದ್ಯುತ್ತನ್ನು ಉತ್ಪಾದಿಸುವ ಈ ಮಾದರಿ/ನಿಯಮ ಒಂಥರಾ ಜಗತ್ತನೇ ಅಳೆಯುವ ನ್ಯೂಟನ್ನಿನ ಸೂತ್ರಗಳಂತೆ. ಅವುಗಳನ್ನು ಬದಲಾಹಿಸುವುದು ಅಥವಾ ಮಾರ್ಪಾಡು ಮಾಡಲು ಹೋಗುವುದು ಒಂದು ಬಗೆಯ ಮೂರ್ಖತನದ ಕೆಲಸ. ಪರಿಣಾಮ ಜನರೇಟರ್ ಎಂದರೆ ಎರಡು ಅಯಸ್ಕಾಂತ ಹಾಗು ಒಂದು ವಾಹಕದ(Conductor) ಸುರಳಿ, ವಾಹಕದ ಸುರಳಿ ಅಯಸ್ಕಾಂತದ ನಡುವೆ ಸುತ್ತಿದ್ದಷ್ಟೂ ಅದಕ್ಕೆ ಪೂರಕವಾಗಿ ವಿದ್ಯುತ್ತ್ ಉತ್ಪತಿಯಾಗುತ್ತದೆಯೆಂದು ನಾವು ತಿಳಿದು ಬೆಳೆದಿರುವವರು. ಹೀಗೆ ವಿದ್ಯುತ್ತನ್ನು ಉತ್ಪಾದಿಸುವ ಹಿಂದಿರುವ ಅತಿ ದೊಡ್ಡ ಸವಾಲು ವಾಹಕದ ಸುರಳಿಯನ್ನು ಯಾವ ವಿಧದಲ್ಲಿ, ಎಷ್ಟು ವೇಗವಾಗಿ ಸುತ್ತಿಸಬಹುದು ಎಂಬುವುದರಲ್ಲಿರುತ್ತದೆ. ಇದಕ್ಕಾಗಿಯೇ ಕಲ್ಲಿದ್ದಲು, ಜಲ, ಪವನ ಶಕ್ತಿ, ಪರಮಾಣು ಹಾಗು ಇನ್ನಿತರೆ ಶಕ್ತಿಯ ಮೂಲಗಳು ಬಳಕೆಯಾಗುವುದು. ಆದರೆ ಪರಮಹಂಸ ತಿವಾರಿಯವರು ಈ ಮೂಲ ವಿಧಾನವನ್ನೇ ಪ್ರೆಶ್ನಿಸತೊಡಗುತ್ತಾರೆ! ವಿದ್ಯುತ್ತ್ ಉತ್ಪತಿಯಾಗಲು ವಾಹಕದ ಸುರಳಿ ಸುತ್ತಲೇಬೇಕೆ? ಎಂಬ ಸವಾಲನ್ನು ಕೇಳಿಕೊಳ್ಳುತ್ತಾರೆ. ಹೀಗೆ ಯೋಚಿಸುತ್ತಿರುವಾಗಲೇ ನಮ್ಮ ಉಪನಿಷತ್ತಿನ ಕೆಲವು ಬರಹಗಳು ಅವರ ಕಲ್ಪನೆಗೆ ತಕ್ಕ ಪುಷ್ಟಿಯನ್ನು ಕೊಡುತ್ತವೆ. ಅವುಗಳ ಪ್ರಕಾರ ಆಕಾಶ/ನಿರ್ವಾತವೇ ಸರ್ವ ವಿಶ್ವದ ಉಗಮಕ್ಕೆ ಕಾರಣವೆಂದೂ ಆಕಾಶ/ನಿರ್ವಾತ ಎಂದಾಗ ಅದು ಕೇವಲ ಖಾಲಿಯಿರುವ ಜಾಗವೆನ್ನುವುದಂತೂ ನೂರಕ್ಕೆ ನೂರರಷ್ಟು ಸುಳ್ಳು ಎಂಬುದನ್ನು ಅವಲಂಬಿಸಿ, ಜಗತ್ತನೇ ಸೃಷ್ಟಿಸಿರುವ ಆಕಾಶವನ್ನು ಈ ಜನರೇಟರ್ ನ ಶಕ್ತಿಯ ಮೂಲವಾಗಿ ಪರಿಗಣಿಸುತ್ತಾರೆ. ಈ ಸೂತ್ರವನ್ನು ವಸ್ತುಗಳ ಅಣು ಹಾಗು ಪರಮಾಣುಗಳಿಗೂ ಅನ್ವಹಿಸುತ್ತಾರೆ. ಮಹಾವಿಜ್ಞಾನಿ ಐನ್ಸ್ಟೈನ್ ನ 'ಥಿಯರಿ ಆಫ್ ರಿಲೇಟಿವಿಟಿ'ಯೂ ಸಹ ಇದಕ್ಕೆ ಪೂರಕವಾಗಿರುತ್ತದೆ. ವಾಹಕ, ಅಯಸ್ಕಾಂತಗಳ ಸ್ಥಾನಪಲ್ಲಟ ಹಾಗು ಅವುಗಳ ಅಣು ಹಾಗು ಪರಮಾಣುಗಳ ನಡುವಿನ ವಿಶಿಷ್ಟ ಅಧ್ಯಯನದಿಂದ ತಿವಾರಿಯವರು ಈ ಪಾತ್ ಬ್ರೇಕಿಂಗ್ ಸಂಶೋದನೆಯಲ್ಲಿ ಯಶಸ್ವಿಯಾದರು. ಪರಿಣಾಮ, ಸಹಜವಾಗಿ ಬಳಸುವ ಇಂಧನದ ಮೂಲಗಳ (ಪೆಟ್ರೋಲ್, ಡೀಸೆಲ್, ಕಲ್ಲಿದ್ದಲು ಇತ್ಯಾದಿ) ಬಳಕೆಯಿಲ್ಲದೆಯೇ ಈ ಜನರೇಟರ್ ಕಾರ್ಯ ನಿರ್ವಹಿಸತೊಡಗಿತು! 'ಶಕ್ತಿಯನ್ನು ಸೃಷ್ಟಿಸಲು ಹಾಗು ನಾಶಪಡಿಸಲು ಸಾಧ್ಯವಿಲ್ಲ, ಅದನ್ನು ಒಂದು ರೂಪದಿಂದ ಮತ್ತೊಂದು ರೂಪಕ್ಕೆ ಮಾತ್ರ ಬದಲಾಹಿಸಬಹುದು' ಎಂಬ ನಮ್ಮ ಬಾಲ್ಯದ ವಿಜ್ಞಾನದ ಪಾಠದ ‘ಶಕ್ತಿ ನಿತ್ಯತೆಯ ನಿಯಮ’ವನ್ನು ಅಲುಗಾಡಿಸಿತು. ಏಕೆಂದರೆ ಈ ಸಂಶೋದನೆಯಲ್ಲಿ ವಿದ್ಯುತ್ತ್ ಶಕ್ತಿಯನ್ನು ಯಾವುದೇ ಇತರ ಶಕ್ತಿಯ ಮೂಲಗಳಿಲ್ಲದೆ ಉತ್ಪದಿಸಬಹುದಾಗಿದೆ! ಅರ್ಥಾತ್ ಶಕ್ತಿಯ ಒಂದು ರೂಪವನ್ನು ಸೃಷ್ಟಿಸಬಹುದಾಗಿದೆ!!

‘ಸ್ಪೇಸ್’ ಜನರೇಟರ್ ಎಂದೇ ಪ್ರಸಿದ್ದಿ ಪಡೆಯುತ್ತಿರುವ ಇದರ ಕಾರ್ಯ ಪ್ರವೃತ್ತಿಗೆ ಹಾಗು ದಕ್ಷತೆಯ (Efficiency) ವಿಷಯಕ್ಕೆ ಬಂದರೆ ಇದು ಒಮ್ಮೆ ಶುರುವಾಗಲು ಅತ್ಯಲ್ಪ ಪ್ರಮಾಣಾದ ಶಕ್ತಿಯ ಅವಶ್ಯಕತೆ (Initial Power) ಬೇಕಾಗುತ್ತದೆ. ಅಂದರೆ ಒಮ್ಮೆ ವಾಹಕವನ್ನು ಕೆಲವು ಸುತ್ತುಗಳನ್ನು ಸುತ್ತಲು ಬೇಕಾಗುವ ಶಕ್ತಿ ಮಾತ್ರ. ನಂತರ ಇದರ ಓಟದ ಹಾದಿ ತೀರಾ ಸುಲಭ. ಈ ಜನರೇಟರ್ ನ ಇಂಟರಸ್ಟಿಂಗ್ ವಿಚಾರವಿರುವುದು ಇಲ್ಲೆಯೇ. ಬೌತಶಾಸ್ತ್ರದ ‘ಲೆನ್ಸ್’ ನ ನಿಯಮದ (Lens Law) ಪ್ರಕಾರ ಯಾವುದೇ ಒಂದು ಯಂತ್ರ ಹೆಚ್ಚೆಂದರೆ ಪ್ರತಿಶತ 90-95% ರಷ್ಟು ದಕ್ಷತೆಯನ್ನು ಗಳಿಸಬಹುದು. ಅಥವಾ ಯಾವುದೇ ಯಂತ್ರಕ್ಕೆ 100% ಗಿಂತ ಹೆಚ್ಚಿನ ಧಕ್ಷತೆ ಗಳಿಸಲು ಸಾಧ್ಯವಿಲ್ಲ ಎನ್ನುವುದಾಗಿದೆ. ಸರಳವಾಗಿ ಹೇಳುವುದಾದರೆ ಒಬ್ಬ ವ್ಯಕ್ತಿಗೆ ನಾವು ಹತ್ತು ಗುದ್ದನ್ನು ಕೊಟ್ಟರೆ ಆತ ತನ್ನ ನಂತರದವನಿಗೆ ಒಂಬತ್ತೇ ಅಥವಾ ಹೆಚ್ಚೆಂದರೆ ಹತ್ತು ಗುದ್ದನ್ನು ಕೊಡಬಲ್ಲ ಸಾಮರ್ಥ್ಯ ಮಾತ್ರ ಗಳಿಸಬಹುದು. ಆದರೆ ತಿವಾರಿಯವರ ಸಂಶೋಧನೆ ಈ ನಿಯಮವನ್ನೇ ತಲೆಗೆಳಗಾಗಿ ಮಾಡುತ್ತದೆ. ಜನರೇಟರ್ ಶುರುವಾಗಲು ಕೊಡುವ Initial Power ನ 2.38 ರಷ್ಟು ಅಂದರೆ, 238% ರಷ್ಟು ದಕ್ಷತೆಯನ್ನು ಈ ಜನರೇಟರ್ ಗಳಿಸುತ್ತದೆ! ಲೆನ್ಸ್ ನ ನಿಯಮಕ್ಕೆ ವಿರುದ್ಧವಾದ ಕಾರಣ ಇಲ್ಲಿ ನಮಗೆ ಕೊಂಚ ಅನುಮಾನ ಮೂಡಿದರೂ, ಸಾಲು ಸಾಲು ನಿಖರ ಫಲಿತಾಂಶಗಳು ಆ ಎಲ್ಲ ಅನುಮಾನಗಳಿಗೆ ತಣ್ಣೀರನ್ನು ಎರಚುತ್ತಿವೆ. ಅಲ್ಲದೆ ಈ ಅಂಕಿ ಅಂಶಗಳನ್ನು ದೇಶ ವಿದೇಶದ ಹಲವಾರು ಖ್ಯಾತ ವಿಜ್ಞಾನಿಗಳೇ ಪರೀಕ್ಷಿಸಿ ಒಪ್ಪಿಕೊಂಡಿದ್ದಾರೆ.

ನಾವು ನಿತ್ಯ ಮನೆಯಲ್ಲಿ ಬಳಸುವ 40 ವ್ಯಾಟ್ ಬಲ್ಬ್ ಅನ್ನು ಒಂದೇ ಸಮನೆ 25 ಘಂಟೆಗಳ ಉರಿಸಲು ಬೇಕಾಗುವ ಶಕ್ತಿಯ ಪ್ರಮಾಣ 1 ಕಿಲೋ ವ್ಯಾಟ್ ಹವರ್ ( 40Watt x 25 Hour). ಸಮೀಕ್ಷೆಗಳ ಪ್ರಕಾರ ನಮ್ಮ ದೇಶದ ಪ್ರತಿ ಮನೆಯ ವರ್ಷದ ವಿದ್ಯುತ್ತ್ ಬೇಡಿಕೆಯ ಸರಾಸರಿ ಪ್ರಮಾಣ ಸುಮಾರು 900 ರಿಂದ 1000 kWH. ಇಷ್ಟೊಂದು ವಿದ್ಯುತ್ತ್ ಬೇಡಿಕೆಯಿರುವ ದೇಶಕ್ಕೆ ಪೂರ್ಣ ಪ್ರಮಾಣದ ಪರಿಹಾರವನ್ನು ಒದಗಿಸಲಾಗದಿದ್ದರೂ ಬಹುಮಟ್ಟಿನ ಯಶಸ್ಸನ್ನು ತಿವಾರಿಯವರ ಸಂಶೋಧನೆಯಿಂದ ನಿರೀಕ್ಷಿಲಾಗಿದೆ. ಅದಾಗಲೇ 10kWH ಹಾಗು 25kWH ಸಾಮರ್ಥ್ಯದ ಜನರೇಟರ್ ಗಳನ್ನು ರೂಪಿಸುವಲ್ಲಿ ತಂಡ ಸಫಲವಾಗಿದೆ. ಅಲ್ಲದೆ ನಮ್ಮ ‘ಕರ್ನಾಟಕ ಪವರ್ ಕಾರ್ಪೋರೇಶನ್ ಲಿಮಿಟೆಡ್’ (KPCL) ಒಂದೆರೆಡು ಪ್ರದೇಶಗಳಲ್ಲಿ ಇವುಗಳನ್ನು ಅಳವಡಿಸಿ ಯಶಸ್ವಿಯಾಗಿರುವುದೂ ಉಂಟು. ಮುಂದೆ ಈ ಅಭೂತಪೂರ್ವ ಸ್ಪೇಸ್ ಜನರೇಟರ್ ನ ಪೇಟೆಂಟ್ ಅನ್ನು ತಿವಾರಿಯವರು ಯಾವಾಗ ಪಡೆದುಕೊಂಡರೋ ಆಗಲೇ ನೋಡಿ ಜಗತ್ತಿಗೆ ಇಂಧನವಿಲ್ಲದೆ ಚಲಿಸಬಲ್ಲ ಜನರೇಟರ್ ನ ಬಗ್ಗೆ ಹಂತ ಹಂತವಾಗಿ ತಿಳಿಯಲ್ಪಟ್ಟಿದ್ದು. ನಿರೀಕ್ಷೆಯಂತೆ ಸೌಧಿ ಅರೇಬಿಯಾ, ಬ್ರಿಟನ್, ಅಮೇರಿಕದಂತಹ ಹಲವಾರು ತೈಲಭರಿತ ದೈತ್ಯ ರಾಷ್ಟ್ರಗಳು ಈ ಸಂಶೋಧನೆಯ ವಿರುದ್ಧ ಚಕಾರವೆತ್ತಿವೆ. ಪೆಟ್ರೋಲ್ ಡಿಸೇಲ್ ಗಳೆಂಬ ಪಲ್ಯ ಉಪ್ಪಿನಕಾಯಿಗಳಿದೆ ಊಟವನ್ನು ಹೇಗೆ ಮಾಡಿಯಾರು ಎಂಬ ಭ್ರಮಲೋಕದ ನಾಯಕರುಗಳು! ಅದೇನೇ ಇರಲಿ, ತಿವಾರಿಯವರ ಈ ಯಂತ್ರದ ಬಗ್ಗೆ ಸರ್ಕಾರದ ವಿಶ್ವಾಸಭರಿತ ಪ್ರೋತ್ಸಹ ಹಾಗು ಭದ್ರತೆ ಮುಂದೊಂದು ದಿನ ಜಗತ್ತೆ ಭಾರತವನ್ನು ಬೆರಗು ಕಣ್ಣಿನಿಂದ ನೋಡುವಂತೆ ಮಾಡಬಹುದು ಅಲ್ಲದೆ ನಶಿಸಿಹೋಗುತ್ತಿರುವ ಇಂಧನಗಳು ನಾಳೆ ನಮ್ಮ ಕಣ್ಣ ಮುಂದೆಯೇ ಬರಿದಾದಾಗ ಏನೆಂಬ ಪ್ರೆಶ್ನೆಗೆ ಈ ಸಂಶೋಧನೆ ಸೂಕ್ತ ಪರಿಹಾರವನ್ನು ನೀಡಬಲ್ಲದು. ಸದ್ಯಕ್ಕೆ ಹೆಚ್ಚಿನ ಸಾಮರ್ಥ್ಯದ ಜನರೇಟರ್ ಗಳನ್ನು ರೂಪಿಸುವತ್ತ ಈ ತಂಡದ ಗಮನ ಕೇಂದ್ರೀಕೃತವಾಗಿದೆ. ಈಗ ಏನಿದ್ದರೂ ತಿವಾರಿಯವರ ಹಾಗು ಸರ್ಕಾರದ ಮುಂದಿನ ನಡೆಯ ಮೇಲೆಯೇ ಎಲ್ಲರ ಗಮನ. ಅಲ್ಲಿಯವರೆಗೂ Just Wait & Watch!

ಹೆಚ್ಚಿನ ಮಾಹಿತಿಗೆ :

http://www.tewari.org/

http://www.rexresearch.com/tewari/tewari.htm

http://economictimes.indiatimes.com/news/science/bengaluru-innovator-creates-super-high-efficiency-machine-that-produces-power-from-vacuum/articleshow/46832793.cms

Thursday, February 9, 2017

ದಕ್ಷಿಣದಲ್ಲೊಂದು ದಿನ...


ಸ್ವಾರ್ಥತೆಯಂಬ ಕಾಮಾಲೆ ಕಣ್ಣಿನ ಮೇಲೆ ಹಳದಿ ಬಣ್ಣದ ಕನ್ನಡಕವನ್ನು ಧರಿಸಿರಿವ ಜಗತ್ತಿನ ಯಾವುದೋ ಮೂಲೆಯಿಂದ ದೂರದ ಜಾತ್ರೆಗೆ ಹೊರಟ್ಟಿದ್ದ ಅಣ್ಣ ತಮ್ಮರ ಜೋಡಿ ಮನೆ ಬಿಟ್ಟು ಆಗಲೇ ನಾಲ್ಕು ತಾಸಾಗಿ, ಉರಿ ಬಿಸಿಲು ರಣವಾಗಿ, ಗಂಟಲು ಒಣಗಿ, ಕುಡಿಯಲು ನೀರು ಸಿಗದೇ, ಪರಿತಪಿಸುತ್ತಿದ್ದಿತು. ಅಣ್ಣ ಅತ್ತಿತ್ತ ಅಲೆದಾಡಿ ನೀರಿರುವ ಒಂದು ಕರೆಯನ್ನು ಹುಡುಕಿ ತನ್ನ ಸಣ್ಣ ತಮ್ಮನನ್ನು ಅಲ್ಲಿಗೆ ಕರೆದೊಯ್ದ. ಇಬ್ಬರು ಸಾಧ್ಯವಾದಷ್ಟು ನೀರನ್ನು ಹೀರಿ ಪಯಣವನ್ನು ಮುಂದುವರೆಸಿದರು. ಮೊದಲ ಬಾರಿಗೆ ಜಾತ್ರೆಗೆ ಹೋಗುತ್ತಿರುವ ತಮ್ಮ, ಜಾತ್ರೆಯ ನೋಡುವ ಮೊದಲೇ ಅಣ್ಣನ ವರ್ಣನೆಯಿಂದ ಒಮ್ಮೆ ಅದನ್ನು ಕಲ್ಪಿಸಿಕೊಳ್ಳುವ ತವಕದಲ್ಲಿರುತ್ತಾನೆ. ತಂಪು ನೀರಿನ ಸಾಂತ್ವನ ಹಿತವೆನಿಸಿದ ಮೇಲೆ ಒಂದರಿಂದೊಂದು ಮೂಡುತ್ತಿದ್ದ ಪ್ರೆಶ್ನೆಗಳ ಉಪಟಳಕ್ಕೆ ಸುಮ್ಮನಿರದೆ ಯಾರೋ ಒಡೆದುಕೊಂಡು ಹೋಗುತ್ತಿದ್ದ ಹೋರಿಯನ್ನು ಕಂಡು 'ಅಣ್ಣ, ಆ ಹೋರಿಯ ಕೊಂಬು ಹಾಗು ಮೈಯ ಮೇಲೆ ಬಣ್ಣವನ್ನೇಕೆ ಮೆತ್ತಿದ್ದಾರೆ?' ಎಂದು ಕೇಳುತ್ತಾನೆ. ಅದಕ್ಕೆ ಅಣ್ಣನು ಅದು ಜಾತ್ರೆಯಲ್ಲಿ ಓಡುವ ಹೋರಿಯೆಂದು, ಅದನ್ನು ಹಿಡಿದು ನಿಲ್ಲಿಸಿದ ವ್ಯಕ್ತಿ ವಿಜಯಶಾಲಿಯೆಂದೂ, ಅಲ್ಲದೆ ಇದೇ ರೀತಿ ಹಲವು ಹೋರಿಗಳು ಬೇರೆ ಬೇರೆ ಊರುಗಳಿಂದ ಬರುತ್ತಿವೆ ಎನ್ನುತ್ತಾನೆ. ತುಸು ಹೊತ್ತು ಸುಮ್ಮನಿದ್ದ ತಮ್ಮ 'ಓಡುವ ಹೋರಿಯನ್ನ ಹಿಡಿಯುವುದರಿಂದ ಏನು ಸಿಗುತ್ತದೆ?' ಎಂಬ ಪ್ರೆಶ್ನೆಯ ಕೊನೆಯಲ್ಲಿ ಅವನ ಮುಖದ ಮೇಲೆ ಮೂಡಿದ ಗೊಂದಲದ ಭಾವವನ್ನು ಕಂಡು ಒಳಗೊಳಗೇ ನಕ್ಕ ಅಣ್ಣ ತನಗೆ ಗೊತ್ತಿಲ್ಲವೆನ್ನುತ್ತಾ ಸುಮ್ಮನಾಗುತ್ತಾನೆ. ಗೊತ್ತಿದ್ದರೂ ಏನೆಂದು ಹೇಳುವುದು? ಜಾತ್ರೆಗೆ ಹೋದಮೇಲೆ ಅವನೇ ನೋಡಿ ತಿಳಿಯಲಿ ಎಂದುಕೊಳ್ಳುತ್ತಾನೆ.

ಉರಿ ಬಿಸಿಲಿನ ಧಗೆಗೆ ದಣಿದು ದಾರಿಯ ಪಕ್ಕದಲ್ಲಿದ್ದ ಹಲಸಿನ ಮರದ ಕೆಳಗೆ ಇಬ್ಬರು ತುಸು ಹೊತ್ತು ನಿಲ್ಲುತ್ತಾರೆ. ‘ಬಾಯಾರಿಕೆಯಾಗಿದೆಯಾ ?’ ಎಂದು ತಮ್ಮನನ್ನು ಮತ್ತೊಮ್ಮೆ ವಿಚಾರಿಸಿದಾಗ ಉತ್ತರವಾಗಿ 'ಅಣ್ಣ, ನಿಜ ಹೇಳು.. ಓಡುವ ಹೋರಿಗಳನ್ನ ಹಿಡಿಯುವುದರಿಂದ ಅವರಿಗೆ ಏನು ಸಿಗುತ್ತೆ' ಎಂಬ ಪ್ರೆಶ್ನೆಯನ್ನೇ ತಮ್ಮ ಹರಿಬಿಡುತ್ತಾನೆ. ಹೇಳಬಾರದೆಂದುಕೊಂಡಿದ್ದ ಅಣ್ಣ ಕೊನೆಗೆ, ಇದು ಒಂದು ಬಗೆಯ ಕ್ರೀಡೆಯೆಂದೂ, ಸುಗ್ಗಿ ಹಬ್ಬದ ನಂತರ ಹಳ್ಳಿಗರ ಮನೋರಂಜನೆಗಾಗಿ, ಕೆಲವೆಡೆ ಸಂಪ್ರದಾಯವಾಗಿ ಇನ್ನೂ ಕೆಲವೆಡೆ ಹಬ್ಬವಾಗಿಯೂ ಆಚರಿಸುತ್ತಾರೆ, ಗಟ್ಟಿಮುಟ್ಟಾದ ಎತ್ತುಗಳನ್ನ ಇದಕ್ಕೆಂದೇ ತಯಾರು ಮಾಡುತ್ತಾರೆ ಎಂದು ಸುಮ್ಮನಾಗುತ್ತಾನೆ. ಅಷ್ಟರಲ್ಲಾಗಲೇ ಪಯಣ ಮತ್ತೆ ಮುಂದುವರೆದಿರುತ್ತದೆ. ಅಣ್ಣ ಮುಂದುವರೆಸಿ, ‘ಅದು ಬಹಳ ಒಳ್ಳೆ ತಯಾರಿಯೇ, ಆದರೆ, ಅದರಿಂದ ಪ್ರತಿಫಲವನ್ನು ಪಡೆಯಬೇಕು ಎಂಬುದೇ ಅದರ ಹಿಂದಿನ ಕಾಣದ ನೆರಳಾಗಿರುತ್ತದೆ .ತನ್ನ ಹೋರಿ ಗೆಲ್ಲಲಿ ಎಂಬ ಆಸೆಗೆ ಇಷ್ಟೆಲ್ಲಾ. ಅಲ್ಲಿ ಒಂದು ಸಣಕಲು ಹೋರಿ ದಿನವಿಡೀ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರೆ, ಇಲ್ಲಿ ಈ ಗಡುಸು ಹೋರಿಗೆ ರಾಜ ಮರ್ಯಾದೆ! ಅಲ್ಲಿ ಅದಕ್ಕೆ ಒಣಹುಲ್ಲಿನ ಭಕ್ಷ್ಯವಾದರೆ ಇಲ್ಲಿ ಇದಕ್ಕೆ ಬೇಯಿಸಿದ ಹುರುಳಿ ಕಾಳುಗಳ ಸವಿಯುವ ಸುಖ. ಒಮ್ಮೆ ಈ ಹೋರಿಗೆ ವಯಸ್ಸಾಯಿತೋ, ಇದಕ್ಕೂ ಅದೇ ಗತಿ. ನಂತರ ಮತ್ತೊಂದು ಎಳೆಮರಿ ಆಟಕ್ಕಾಗಿ ತಯಾರಾಗುತ್ತದೆ’ ಎಂದು ಸುಮ್ಮನಾಗುತ್ತಾನೆ.
‘ಅಷ್ಟೆಲ್ಲ ಖರ್ಚು ಮಾಡಿ, ನಿಗಾ ಮಾಡಿ, ಪ್ರೀತಿಯಿಂದ ಸಾಕುವುದು ಒಳ್ಳೆಯದೇ ಅಲ್ವ? ಕೊನೆಪಕ್ಷ ಅದು ಪ್ರಾಣಿ, ಗೇಯುವುದು ಹಾಗು ಮಲಗುವುದಷ್ಟೇ ಅದರ ಕಾಯಕ ಎಂಬ ಹೀನ ಮನಸ್ಥಿತಿಯಿಂದಾದರೂ ಜನರು ಹೊರ ಬರುತ್ತಾರಲ್ಲ’ ಎಂದ ತಮ್ಮನಿಗೆ, 'ಗೆಲ್ಲಬೇಕೆಂಬ ಸ್ವಾರ್ಥತೆಯೇ ಮನದೊಳಗೆ ತುಂಬಿಕೊಂಡಿರುವಾಗ ಎಲ್ಲಿಯ ಪ್ರೀತಿ, ಎಲ್ಲಿಯ ನಿಗಾ ತಮ್ಮ?' ಎಂದು ಸುಮ್ಮನಾಗುತ್ತಾನೆ. ತಮ್ಮ ಮರು ಪ್ರೆಶ್ನೆ ಹಾಕುವುದಿಲ್ಲ. ಜಾತ್ರೆ ತಲುಪಲು ಇನ್ನು ಕೆಲ ತಾಸು ನೆಡೆಯಬೇಕು ಎಂದು ಯಾರೋ ಹೇಳಿದನ್ನು ಕೇಳಿದಂತಾಯಿತು. ಸ್ವಲ್ಪ ಸಮಯದ ನಂತರ ತಮ್ಮ ಮುಂದುವರೆಸಿ 'ಈ ಕ್ರೀಡೆ ಹೇಗಿರುತ್ತದೆ, ಗೆಲ್ಲುವುದು ಅಂದರೆ ಏನು? ಸೋಲುವುದು ಹೇಗಿರುತ್ತದೆ??' ಎಂದು ಕೇಳುತ್ತಾನೆ. ಆದರೆ ಉತ್ತರ ಹೇಳಲು ಅಣ್ಣ ನಿರಾಕರಿಸಿ ಮಾತನಾಡದೆ ಬೇಗ ಬೇಗ ನೆಡೆಯಬೇಕೆಂದು ಹೇಳುತ್ತಾನೆ. ತಕ್ಷಣ ಇಳಿಬಿದ್ದ ಮುದ್ದು ತಮ್ಮನ ಮುಖವನ್ನು ಗಮನಿಸಿ ' ಅದು ಸಾವಿರಾರು ಜನರು ಗುಂಪುಗೊಂಡಿರುವ ಸಾಗರ. ಎಲ್ಲರೂ ಕತ್ತಲು ಕೋಣೆಯೊಳಗಿಂದ ಹೊರಬರುವ ಹೋರಿಯನ್ನು ಜಿಗಿದು ಹಿಡಿಯುವ ತವಕದಲ್ಲಿರುತ್ತಾರೆ. ತೊಡೆಯನ್ನು ತಟ್ಟಿಕೊಳ್ಳುತ್ತಿರುತ್ತಾರೆ' ಎಂದಾಗ ತಮ್ಮನ ಕಿವಿ ನಿಮಿರುತ್ತದೆ.

'ಆಮೇಲೆ?'

'ಅವರಿಗೆ ಕೋಣವನ್ನು ತಬ್ಬಿ ಹಿಡಿದು, ಗೆದ್ದು ಬೀಗುವ ಚಟವಾದರೆ, ಕೋಣಕ್ಕೆ ಇದ್ದೆನೋ ಬಿದ್ದೆನೋ ಎಂದು ತಪ್ಪಿಸಿಕೊಂಡು ಓಡುವ ಬವಣೆ! ಬೆಕ್ಕಿಗೆ ಚಿನ್ನಾಟ ಆದರೆ ಇಲಿಗೆ ಪ್ರಾಣ ಸಂಕಟ ಅಂತಾರಲ್ಲ ಹಾಗೆ' ಎನ್ನುತ್ತಾನೆ.

'ಆದ್ರೆ, ಆ ಕೋಣ ಯಾಕೆ ಓಡಬೇಕು, ಸುಮ್ನೆ ಅದ್ರ ಪಾಡಿಗೆ ಅದು ನಿಂತಲ್ಲೇ ನಿಂತ್ರೆ ಯಾರಿಗ್ ಏನ್ ಮಾಡೋಕ್ ಆಗುತ್ತೆ ?' ಎಂದ ತಮ್ಮನ ಮುಗ್ದ ಪ್ರೆಶ್ನೆಯ ದ್ವಂದ್ವವನ್ನು ಅರಿತ ಅಣ್ಣ, ‘ಹೋರಿಗಳು ಓಡ್ಲಿಲ್ಲ ಅಂದ್ರೆ, ಅದರ ಬಾಲವನ್ನು ಹಿಡಿದು ಬಾಯಿಂದ ಕಚ್ಚುವುದಾಗಿಯೂ, ಚೂಪಾದ ಅಸ್ತ್ರಗಳಿಂದ ತಿವಿಯುವುದಾಗಿಯೂ, ಮದಬಂದಂತೆ ಓಡಲು ಕಣ್ಣಿಗೆ ಮೆಣಸಿನಕಾಯಿಯನ್ನು ತುರುಕುವುಗಾಗಿಯೂ, ಕೆಲವೆಡೆ ಕುಡಿದು ತುದಿ ಮುರಿದ ಬುಗುರಿಯಂತೆ ಕುಣಿಯುತ್ತ ಜನರು ಹೋರಿಯ ಬಾಯೊಳಕ್ಕೂ 'ಎಣ್ಣೆ'ಯ ಸ್ವಾಹಾವನ್ನು ಮಾಡಲಾಗುವುದು ಎಂದು ಕೇಳಿದ್ದೀನಿ’ ಎಂದಾಗ ತಮ್ಮ ತನ್ನ ಬೆರಗು ಕಣ್ಣುಗಳಿಂದ ಅಣ್ಣನನ್ನೇ ನೋಡುತ್ತಿರುತ್ತಾನೆ. ಅಣ್ಣ ಮುಂದುವರೆಸಿ, ‘ಇಲ್ಲಿಯಾದರು ಪರವಾಗಿಲ್ಲ ತಮ್ಮ, ಹೊರದೇಶಗಳಲ್ಲಿ ಈ ಆಟ ಇನ್ನೂ ವಿಚಿತ್ರ. ಅಲ್ಲಿ ಆಟದ ಮೈದಾನದ ಒಳಗೆ ಹೋರಿಗಳನ್ನು ಬಿಟ್ಟು, ಕೆಂಪು ಬಟ್ಟೆಗಳನ್ನೇ ಬಂಡವಾಳವಾಗಿಸಿಕೊಂಡು, ಚೂರಿಗಳಿಂದ ಹತ್ತಾರು ಜನ ಕೋಣವನ್ನು ತಿವಿದು ತಿವಿದು ಸಾಯಿಸುವುದೇ ಒಂದು ಆಟವಂತೆ! ಅಲ್ಲಿ ಜೀವವೊಂದು ರಕ್ತ ಕಾರಿ ಸಾಯಿತ್ತಿದ್ದಾರೆ ಇತ್ತ ಜನರ ಗುಂಪು ಪ್ರತಿ ಚೂರಿಯ ಇರಿತಕ್ಕೂ ಕೇಕೆ ಹಾಗುತ್ತ ಕುಣಿಯುತ್ತಿರುತ್ತದೆ ಎಂದು ಕೇಳಿರುವೆ ಎನ್ನುತ್ತಾನೆ. ಆ ಆಟಗಳಿಗೆ ಹೋಲಿಸಿದರೆ ಈ ಆಟಗಳೇ ಕೋಣಗಳಿಗೆ ಸುಖದ ಸುಪ್ಪತ್ತಿಗೆ ಎನ್ನುತ್ತಾನೆ. ಕೊನೆ ಪಕ್ಷ ಹೋರಿಯ ಬಾಲವನ್ನು ಹುಚ್ಚು ನಾಯಿಗಳಂತೆ ಕಚ್ಚುವ ಮುನ್ನ ಒಮ್ಮೆಯಾದರೂ ಕಾಯಿ ಒಡೆದು, ಕುಂಕುಮವನ್ನಿಟ್ಟು ಕೈ ಮುಗಿಯುತ್ತಾರೆ ಇವರು ಎನ್ನುತಾನೆ.

ಅಷ್ಟರಲ್ಲಾಗಲೇ ಭಯದ ಛಾಯೆ ತಮ್ಮನನ್ನು ಅವನಿಗರಿಯದಂತೆ ಆವರಿಸುತ್ತದೆ. ಮುಂದೇನು ಕೇಳ ಬೇಕೆಂದು ಅರಿಯದೆ ಸುಮ್ಮನಾದ ತಮ್ಮನನ್ನು ‘ಏನಾಯಿತು’ ಎಂದು ಕೇಳಿದಾದ 'ಅಣ್ಣ, ಬಾ ನಾವು ವಾಪಸ್ ಹೋಗೋಣ.. ಈ ಹಿಂಸೆನ ಯಾರಾದರೂ ಆಟ ಅಂತಾರ..?! ಮಾನವರಿಗೆ ಅದು ಆಟವಾದರೆ ಪ್ರಾಣಿಗಳಿಗೆ ಜೀವನ. ಅವರ ಸುಖ ಸಮಾರಂಭಗಳಿಗೆ ಪ್ರಾಣಿಗಳೇಕೆ ಆಟದ ಗಾಳವಾಗಬೇಕು..? ಅವರು ಅಷ್ಟೆಲ್ಲ ಮಾಡುವ ಮೊದಲು ಪ್ರಾಣಿಗಳ ಅಭಿಪ್ರಾಯವನ್ನು ಒಮ್ಮೆ ಕೆಳಬಾರದೇ..?! ಎಲ್ಲ ಮಾನವ ಹೇಳಿದ ಹಾಗೆ ನೆಡೆದರೆ ಆ ಆಟಕ್ಕಾದರೂ ಮರ್ಯಾದೆ ಇರುತ್ತದೆಯೇ? ಪ್ರಾಣಿಗಳ ಅಭಿಪ್ರಾಯವೂ ಅವಶ್ಯವಾಗುವುದಿಲ್ಲವೇ?' ಎನ್ನುತ್ತಾನೆ. ಅಣ್ಣನಿಗೆ ಉತ್ತರಿಸಲು ಪದಗಳ ಕೊರತೆ ಕಾಣುತ್ತದೆ. ನಂತರ ಇಲ್ಲಿಯವರೆಗೂ ಬಂದು ಈಗ ವಾಪಾಸ್ ಹೋದರೆ ಸರಿಯಾಗುವುದಿಲ್ಲ ಬಾ ಇನ್ನೇನು ಜಾತ್ರೆ ಬಂದೇ ಬಿಟ್ಟಿತು ಎಂದು ಮನವೊಲಿಸಿ ಕರೆದುಕೊಂಡು ಹೋಗುತ್ತಾನೆ.

ತಮ್ಮನ ಪ್ರೆಶ್ನೆಯ ಹಿಂದಿದ್ದ ಸಾಮಾನ್ಯವಾದ ಹಾಗು ಅಷ್ಟೇ ಮಹತ್ವವಾದ ಪ್ರೆಶ್ನೆಯ ಬಗ್ಗೆ ಯೋಚಿಸುತ್ತಾ ಅಣ್ಣ ನಿರ್ಲಿಪ್ತ ಭಾವದಿಂದ ಮುಂದುವರೆಯುತ್ತಾನೆ. ನಂತರ ತಮ್ಮನನ್ನು ಉದ್ದೇಶಿಸಿ 'ನಮ್ಮ ದೇಶದಲ್ಲಿ ಸಂವಿಧಾನ ಎಂಬ ಒಂದು ದೊಡ್ಡ ಕಾನೂನು ಇದೆಯೆಂತೆ. ಅದರಲ್ಲಿ ಎಲ್ಲ ಜನರಿಗೂ ಒಂದೇ ನ್ಯಾಯವಂತೆ. ಮೇಲು-ಕೀಳು, ಬಡವ-ಬಲ್ಲಿದ, ಜಾತಿ-ಪಂಥ ಹೀಗೆ ಏನನ್ನೂ ಲೆಕ್ಕಿಸದೆ ಎಲ್ಲರಿಗೂ ಒಂದೇ ಸಮನಾಗಿ ರೂಪಿಸಿರುವ ಕಾನುನಂತೆ ಅದು. ಆದರೆ 'ಮಾನವ-ಅಮಾನವ' ರಲ್ಲಿ ಮಾತ್ರ ಅದರಲ್ಲಿ ತಾರತಮ್ಯ ಇದೆಯಂತೆ. ಅದರಲ್ಲಿ ಮಾನವರಿಗೆ ಇರುವ ಮೂಲಬೂತ ಹಕ್ಕು ಪ್ರಾಣಿಗಳಿಗಿಲ್ಲ! ಅವರಿಗರುವ ವಾಕ್ ಸ್ವಾತಂತ್ರ್ಯ ಇವುಗಳಿಗಿಲ್ಲ, ಮಾತೆ ಬಾರದ ಮೇಲೆ ವಾಕ್ ಸ್ವಾತಂತ್ರ್ಯಕ್ಕೆಲ್ಲಿಂದ ಬೆಲೆ ಬಿಡು. ಆದರೂ ಅದ್ಯಾರೋ ಒಂದಿಷ್ಟು ಜನ ಈ ರೀತಿ ಮಾಡುವುದು ತಪ್ಪು ಎಂದು ಹಠಮಾಡಿ ಅದೇನೋ ಸುಪ್ರೀಂ ಕೋರ್ಟ್ ನಿಂದ ನ್ಯಾಯ ತಂದರಂತೆ. ಆಗ ತಮ್ಮ ಮನೆಯ ಬೆಂಕಿಯನ್ನು ಆರಿಸುವ ಬದಲು ಬೇರ್ಯಾವ ಮನೆಗೆ ಬೆಂಕಿ ಬಿದ್ದಿದೆ ಎಂದು ನೋಡುವ ತೆವಲಿನ ಜನ, ಬೂತ ಬಡಿದವಂತೆ ರೊಚ್ಚಿಗೆದ್ದರಂತೆ! ಜಗತ್ತೇ ಕೊನೆಯಾದಂತೆ ವಿಲ-ವಿಲ ಒದ್ದಾಡಿಕೊಂಡರಂತೆ! ಕೆಲವರು ಇದನ್ನ ನಿಲ್ಲಿಸೋದಾದ್ರೆ ದೇವ್ರ ಹೆಸ್ರಲ್ಲಿ, ಹಬ್ಬದ ನೆಪದಲ್ಲಿ ರಾಶಿ-ರಾಶಿ ಪ್ರಾಣಿಗಳನ್ನೂ ಕಡಿಯೋದ ನಿಲ್ಲಿಸಲಿ ಎಂದು ಒಣ ಸಬೂಬನ್ನು ಕೊಟ್ಟರಂತೆ. ಅದು ದೊಡ್ಡ ಕಳ್ತನ, ಆದ್ರೆ ಇದು ಚಿಕ್ಕ ಕಳ್ತನ. ಅವ್ರ್ ಅಷ್ಟ್ ಕದ್ರೆ, ನಾವ್ ಇಷ್ಟೇ ಕದಿಯೋದು, ಏನಾಗಲ್ಲ ಬಿಡಿ ಅಂದ್ರಂತೆ! ’ ಎಂದು ಸುಮ್ಮನಾಗುತ್ತಾನೆ.

ಅಷ್ಟರಲ್ಲಿ ತಮ್ಮ ತನ್ನ ಅಣ್ಣನ ಮಾತುಗಳಲ್ಲಿ ಕಲ್ಪಿಸಿಕೊಂಡ ಜಾತ್ರೆ ಬಂದೇ ಬಿಡುತ್ತದೆ. ಆದರೆ ಅದು ತಮ್ಮನ ಎಳೆಯ ಕಲ್ಪನೆಗೂ ಮೀರಿ ದೊಡ್ಡಗಾಗಿರುತ್ತದೆ. ಅತಿ ವಿಶಾಲವಾದ ಬಯಲು ಪ್ರದೇಶದಲ್ಲಿ ಎಲ್ಲಿ ನೋಡಿದರೂ ಬಣ್ಣ ಬಣ್ಣದ ವಸ್ತ್ರವನ್ನು ತೊಟ್ಟಿರುವ ವ್ಯಕ್ತಿಗಳೇ. ತಿಂಡಿ ತಿನಿಸುಗಳ ಅಂಗಡಿಗಳು ಇರುವ ಸ್ಥಳದಿಂದ ಘಮ್ ಎಂದು ಕರಿದ ತುಪ್ಪದ ಸುವಾಸನೆ ಒಂದೆಡೆಯಾದರೆ, ಆಗಲೇ ಕುಡಿದು ತೂರಾಡುತ್ತಿರುವ ಹೆಂಡಕುಡುಕರ ಹಾಗು ಸಾರಾಯಿ ಅಂಗಡಿಗಳ ಗುಂಪು ಮತ್ತೊಂದೆಡೆ. ಅಷ್ಟರಲ್ಲಾಗಲೇ ಪಕ್ಕದ ನದಿಯ ದಂಡೆಯ ಮೇಲೆ ಅಣ್ಣ ಹೇಳುತ್ತಿದ್ದ ಹಾಗೆಯೇ ಹೋರಿಗಳನ್ನು ಓಡಿಸುವ ಆಟ ಶುರುವಾಗುವುದರಲಿತ್ತು. ಅಣ್ಣ ಹಾಗು ತಮ್ಮ ಒಂದು ಎತ್ತರದ ಪ್ರದೇಶಕ್ಕೆ ಹೋಗಿ ನಿಂತರು. ಹೋರಿಗಳ ಮಾಲೀಕರು ಒಬ್ಬೊಬ್ಬರಾಗೆ ತಮ್ಮ ಹೋರಿಗಳನ್ನು ತರುತ್ತಿದ್ದರೇ ನೋಡುಗರು ಅವುಗಳ ಕೊಂಬು, ತಲೆ ಹಾಗು ಮೈಯನ್ನು ಮುಟ್ಟಿ ನಮಸ್ಕಾರವನ್ನು ಮಾಡುತ್ತಿದ್ದರು! ಪ್ರತಿಯೊಬ್ಬರ ಸ್ಪರ್ಶಕ್ಕೂ ಕಿವಿ ಚಟ್ಟೆಯನ್ನು ಸರ್ರನೆ ಹಿಂದಕ್ಕೆ ತಿರುಗಿಸಿ ಬಾಲವನ್ನು ಎಡಕ್ಕೂ ಬಲಕ್ಕೂ ಬಡಿಯುತ್ತಿದ್ದರೆ ಆ ಹೋರಿಯ ಕಣ್ಣಗಳಲ್ಲಿ ಅದೆಂಥಹ ಪ್ರೀತಿಯ ಭಾವ! ಇಷ್ಟೊಂದು ಮುಗ್ದ ಹೋರಿಗಳು ಹೇಗೆ ಆ ಪಾಟಿ ಮದವೇರಿ ಓಡುತ್ತವೆ ಎಂಬುದ ನೋಡಬೇಕು ಎಂಬ ಕುತೂಹಲದಿಂದ ತಮ್ಮ ಕಾಯುತ್ತಾನೆ. ಹೋರಿಗಳಿಗೆ ಪೂಜೆಯನ್ನು ಮಾಡಿ, ತಲೆಯ ಮೇಲೆ ಹರಿಶಿನ ಕುಂಕುಮವನ್ನು ಚೆಲ್ಲಿ, ಕೊಂಬಿಗೊಂಡು ಕೆಂಪು ಬಟ್ಟೆಯನ್ನು ಕಟ್ಟಿ ಚೌಕಕಾರದ ಕೋಣೆಯೊಳಗೆ ಅವುಗಳನ್ನು ನೂಕುತ್ತಾರೆ.

ಆ ಕೋಣೆಯೊಳಗೆ ಏನಾಯಿತ್ತೆಂದು ಅರಿಯುವುದರೊಳಗೆ, ಒಳಗೆ ಹೋದ ಹೋರಿ ಒಮ್ಮೆಲೇ ಗುಟುರುತ್ತಾ ಸಿಕ್ಕ ಸಿಕ್ಕವರನ್ನೆಲ್ಲ ಕೊಂಬಿನಲ್ಲಿ ತಿವಿಯುತ್ತಾ ನುಗ್ಗಿ ಓಡುತ್ತದೆ. ಗುಂಪುಕಟ್ಟಿದ್ದ ಜನರಲ್ಲಿ ಒಬ್ಬೊಬ್ಬರೇ ಅದರ ಮೇಲೆ ಹುಲಿಯಂತೆ ನೆಗೆದು, ಕುತ್ತಿಗೆಯ ಮೇಲೋ, ಬುಜದ ಮೇಲೋ, ಕೋತಿಗಂತೆ ಜೋತುಬೀಳತೊಡಗುತ್ತಾರೆ. ತಮ್ಮ ಶಕ್ತಿಯ ಹಿರಿಮೆಯನ್ನು ಮೂಕ ಪ್ರಾಣಿಯೊಂದನ್ನು ಭಯ ಬೀಳಿಸಿ ಓಡಿಸಿ ಅದನ್ನು ತಡೆಯುವುದರ ಮುಖೇನ ವ್ಯಕ್ತಪಡಿಸಲು ಹವಣಿಸುತ್ತಾರೆ. ಆಟವೋ, ಓಟವೋ, ಭಯವೋ, ಭಕ್ತಿಯೋ, ಹೋರಿಯಂತೂ ಇದ್ದೆನೋ ಬಿದ್ದೆನೋ ಎಂದು ಓಡುತ್ತದೆ. ಸಿಕ್ಕ ಸಿಕ್ಕ ಪೊದೆಗಳೊಳಗೆ, ಹಳ್ಳ ಗುಂಡಿಗ ಗಳ್ಯಾವುದನ್ನು ಲೆಕ್ಕಿಸದೆ ಓಡತೊಡಗುತ್ತದೆ. ಹೀಗೆಯೇ ಓಡಿದ ಹೊರಿಯೊಂದು ದೊಡ್ಡ ಗೊಳ್ಳದ ಒಳಗೆ ಬಿದ್ದ ರಭಸಕ್ಕೆ ಅದರ ಕಾಲು ಮುರಿದು ನೇತಾಡತೊಡಗುತ್ತದೆ! ಮುರಿದ ಗೆಣ್ಣಿನ ಸಂದಿಯಿಂದ ರಕ್ತವೂ ಚಿಮ್ಮತೊಡಗುತ್ತದೆ.

ಇತ್ತಕಡೆ ತಮ್ಮ ತೆರೆದ ಬಾಯಿಯನ್ನು ಹಾಗೆಯೇ ಬಿಟ್ಟು, ಕಣ್ಣುಗಳನ್ನು ಸಾಧ್ಯವಾದಷ್ಟು ಹಿಗ್ಗಿಸಿ ನೆಡೆಯುವುದನ್ನೆಲ್ಲ ನೋಡುತ್ತಿರುತ್ತಾನೆ. ಅಣ್ಣನ ಮೈಯಿಗೆ ಅಂಟಿಕೊಂಡು ನಿಂತಿದ್ದ ಆತನ ಎದೆಬಡಿತ ಒಂದೇ ಸಮನೆ ಹೆಚ್ಚತೊಡಗುತ್ತದೆ.

ಕಾಲುಮುರಿದ ಹೋರಿ ಇನ್ನು ಓಡಲಾಗುವುದಿಲ್ಲ ಎಂದರಿತಾಗ ಅದರ ಮಾಲಿಕನಿಗೆ ಎಲ್ಲಿಲ್ಲದ ಕೋಪ ಹಾಗು ದುಃಖ ಒಮ್ಮೆಲೇ ಮೂಡುತ್ತದೆ. ಕೈಲಿದ್ದ ಬೆತ್ತದಿಂದ ರಪರಪನೆ ಹೋರಿಯ ಬೆನ್ನಿನ ಮೇಲೆ ಜಾಡಿಸತೊಡಗುತ್ತಾನೆ. ರಕ್ತದ ಮಡುವುನಲ್ಲಿ ನಿಂತಿದ್ದ ಹೋರಿ ಮುಂದೆ ಕದಲುವುದಿಲ್ಲ. ಸಿಟ್ಟು ಇಳಿಯುವವರೆಗೂ ಬಡಿದ ಮಾಲೀಕ, ಪಂಥ ಕಟ್ಟಿದ ಪರಿಣಾಮವಾಗಿ ಅವನಿಗೆ ಗೆಲ್ಲುವ ಅನಿವಾರ್ಯತೆಯ ನೆನಪಾಗುತ್ತದೆ. ಆತ ತಡಮಾಡದೆ ಎಲ್ಲರ ಬಳಿಗೂ ಹೋಗಿ 'ಯಾವುದಾದರೂ ಒಳ್ಳೆಯ ಹೋರಿ ಇದೆಯಾ' ಎಂದು ಅರೆ ಹುಚ್ಚನಂತೆ ಕೇಳತೊಡಗುತ್ತಾನೆ. ಎಲ್ಲರು ನಿರಾಕರಿಸಿದಾಗ ಅವನ ಕಣ್ಣು ಎತ್ತರದ ಜಾಗದಲ್ಲಿ ನಿಂತಿದ್ದ ಅಣ್ಣ ತಮ್ಮರ ಮೇಲೆ ಬೀಳುತ್ತದೆ! ಆತ ದಾಪುಗಾಲು ಹಾಕುತ್ತಾ ಇತ್ತ ಕಡೆ ಬರುವುದನ್ನು ಕಂಡ ತಮ್ಮ ಅಣ್ಣನಿಗೆ ಓಡಿಹೋಗೋಣವೆಂದು ಹೇಳುತ್ತಾನೆ! ಅಣ್ಣ ಬೇಡವೆನ್ನುತ್ತಾನೆ. ಹತ್ತಿರ ಬಂದ ಅವನ ಮುಖದಿಂದ ಹೆಂಡದ ನಾಥ ದೊಪ್ಪನೆ ಮುಖಕ್ಕೆ ಬಡಿಯುತ್ತಿರುತ್ತದೆ. ಆತ ಹತ್ತಿರಕ್ಕೆ ಬಂದವನೇ ಅಣ್ಣನನ್ನು ದುರುಗುಟ್ಟು ನೋಡಿ, ತುಟಿಯನ್ನು ಹಲ್ಲಿನಿಂದ ಕಚ್ಚಿ, ತಾನು ಹಿಡಿದಿದ್ದ ಕುಣಿಕೆಯ ಹಗ್ಗವನ್ನು ಅಣ್ಣನ ತಲೆಯ ಸುತ್ತ ಹಾಕಿಯೆ ಬಿಡುತ್ತಾನೆ! ಅಣ್ಣ ಒಂದೇ ಸಮನೆ ಕೊಸರಾಡ ತೊಡಗಿದರೆ ತಮ್ಮ 'ಅಂಬಾ' ಎನ್ನುತ ರೋದಿಸತೊಡಗುತ್ತಾನೆ! ಒಲ್ಲದ ಮನಸ್ಸಿನ ಅಣ್ಣನನ್ನು ಮಾಲೀಕ ಆಟದಲ್ಲಿ ಓಡಿಸಲು ಎಳೆದುಕೊಂಡು ಹೋದರೆ ಇತ್ತ ತಮ್ಮನ ರೋದನೆ ಮುಗಿಲು ಮುಟ್ಟುತ್ತದೆ. 'ಅಣ್ಣ ಹೆದರಬೇಡ, ನಾನು ಸಂವಿಧಾನದ ಕಾನೂನನ್ನು ಬಳಸಿ ನಿನ್ನನ ಬಿಡುಸ್ತಿನಿ. ಸುಪ್ರೀಂ ಕೋರ್ಟಿನಿಂದ ಆದೇಶ ತರತೀನಿ' ಎಂದು ಬಿಕ್ಕಳಿಸುತ್ತಿದ್ದ ತಮ್ಮನ ಮಾತನ್ನು ಕೇಳಿದಾಗ ಅಲ್ಲಿದ್ದ ಚಿಳ್ಳೆ-ಪಿಳ್ಳೆ ನಾಟಿ ಹೋರಿಗಳು ಗಹಗಹಿಸಿ ನಗಲಾರಂಭಿಸಿತ್ತವೆ..

Friday, February 3, 2017

ಆತ ಸೋಲಿಗೆ ಹೆದೆರೆನು ಎಂದ, ಈತ ಸಾವನ್ನೇ ಸೋಲಿಸಿ ಬಂದ....!

ಇಬ್ಬರೂ ವಿಶ್ವಪ್ರಸಿದ್ಧ ಎಡೆಗೈ ಬ್ಯಾಟ್ಸಮನ್ ಗಳು. ಒಮ್ಮೆ ಸ್ಕ್ರೀಜ್ ನಲ್ಲಿ ಇನ್ನಿಂಗ್ಸ್ ಕಟ್ಟಲು ಶುರುಮಾಡಿದರೆ ಚೆಂಡನ್ನು ಅನ್ನು ಬೌಂಡರಿಯ ಗೆರೆಯನ್ನು ದಾಟಿಸುತ್ತಾ ಕ್ರೀಡಾಂಗಳದಲ್ಲೇ ರಂಗೋಲಿಯ ಆಟವನ್ನು ಆಡುವವರು. ದೇಶವೇ ಹುಚ್ಚೆದ್ದು ಕುಣಿಯುವಂತೆ ಮಾಡುವರು. ಒಬ್ಬ ಆರು ಚೆಂಡುಗಳಿಗೆ ಆರು ಸಿಕ್ಸರ್ ಗಳನ್ನು ಬಾರಿಸಿದರೆ ಮತ್ತೊಬ್ಬ ಪ್ರತಿ ಚೆಂಡನ್ನು ಕ್ರೀಡಾಂಗಳದ ಹೊರಗೆ ಹೊಡೆಯಬಲ್ಲ ಸಾಮರ್ಥ್ಯದವನು! ಒಬ್ಬ ನಾಯಕನಾಗಿ ತಂಡವನ್ನು ಮುನ್ನೆಡೆಸಿದರೆ ಇನ್ನೊಬ್ಬ ಆ ನಾಯಕನ ತಂಡಕ್ಕೆ ಆಧಾರವಾದವನು. ಒಬ್ಬ ಹುಟ್ಟು ಹೋರಾಟದ ಸ್ವಭಾವದ ಗುರುವಾದರೆ, ಮತ್ತೊಬ್ಬ ಆತನ ನೆಚ್ಚಿನ ಕೆಚ್ಚಿನ ಶಿಷ್ಯ. ಅಲ್ಲದೆ ಈ ಇಬ್ಬರಲ್ಲೂ ಒಂದು ಗುಣ ಮಾತ್ರ ಹುಲಿಯ ಘರ್ಜನೆಯಂತೆ ಒಂದೇ ಸಮನಾಗಿದೆ. ಅಂದಿಗೂ ಹಾಗು ಇಂದಿಗೂ! 'ಕಮ್ ಬ್ಯಾಕ್' ಅಥವಾ ಪ್ರತಿ ಸೋಲಿನಲ್ಲೂ ಕುಗ್ಗದೆ, ನಿಲ್ಲದೆ, ನುಗ್ಗಿ ಮುನ್ನೆಡೆಯುವ ಗುಣ. ಇಬ್ಬರದೂ ಗೆಲ್ಲುವವರೆಗೂ ಸೋಲನೊಪ್ಪಿಕೊಳ್ಳದ ಜಾಯಮಾನದ ಬಣ. ಇಬ್ಬರೂ ಆ ಗುಣವನ್ನು ತಮ್ಮ ರಕ್ತದಲ್ಲೇ ಹೊತ್ತು ತಂದವರು. ಇದೆ ಗುಣದಿಂದ ತಮ್ಮದೇ ಆದ ಒಂದು ವಿಶಿಷ್ಟ ಅಭಿಮಾನಿ ಬಳಗವನ್ನು ಗಳಿಸಿಕೊಂಡವರು. ಇವರಲ್ಲಿ ಒಬ್ಬ ತಂಡದಿಂದ ಅದೆಷ್ಟೇ ಹೊರಗುಳಿದರೂ/ಹೊರಗುಳಿಸಿದರೂ ಛಲದಿಂದ ಹಾಗು ಬಿಡದ ಪ್ರಯತ್ನದಿಂದ ಪುಟಿದೆದ್ದು ಮತ್ತದೇ ತಂಡಕ್ಕೆ ಬಂದು ಸೇರುವವನು. ಮತೊಬ್ಬ ಸಾವೇ ಬಂದು ಜೀವನದ ಆಟವನ್ನೇ ಕೊನೆಗೊಳಿಸುತ್ತೇನೆಂದರೂ, ಸಾವನ್ನೇ ಸೋಲಿಸಿ ಮತೊಮ್ಮೆ ಆಟದ ಅಂಗಳಕ್ಕೆ ಬಂದಿಳಿದವನು! ಒಬ್ಬ ಭಾರತ ಕ್ರಿಕೆಟ್ ತಂಡದ ಹೆಮ್ಮೆಯ ನಾಯಕ ಸೌರವ್ ಗಂಗೂಲಿ ಎನ್ನುವುದಾದರೆ ಮತೊಬ್ಬ ಕೋಟ್ಯಂತರ ಕ್ಯಾನ್ಸರ್ ರೋಗಿಗಳಿಗೆ ಸ್ಪೂರ್ತಿಯಾದ ಯುವರಾಜ್ ಸಿಂಗ್.

ಅದು 1991-92 ರ ಆಸ್ಟ್ರೇಲಿಯ ಪ್ರವಾಸ. ಇಪ್ಪತು ವರ್ಷದ ಚಿಗುರು ಮೀಸೆಯ ಪೋರನೊಬ್ಬ ಭಾರತ ತಂಡದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಳ್ಳುತ್ತಾನೆ. ಬೆಟ್ಟದಷ್ಟು ಪ್ರತಿಭೆಯನ್ನು ಹೊಂದಿದ್ದರೂ ಸರಣಿಯುದ್ದಕ್ಕೂ ಆಡಲು ಸಾಧ್ಯವಾದದ್ದು ಕೇವಲ ಒಂದೇ ಏಕದಿನ ಪಂದ್ಯ. ಇದಾದ ನಂತರ ಕಾರಣಾಂತರಗಳಿಂದ ತಂಡದಿಂದ ಹೊರಗುಳಿದ ಗಂಗೂಲಿ ಭಾರತ ತಂಡಕ್ಕೆ ಮತ್ತೊಮ್ಮೆ ಬರುವುದು ಕಷ್ಟ ಸಾಧ್ಯವಾಗಿತ್ತು. ಆದರೆ ಆಸಾಧ್ಯವನ್ನು ಒಪ್ಪಿಕೊಳ್ಳುವ ಜಾಯಮಾನವಲ್ಲದ ಈತ ಪ್ರತಿದಿನ ಆ ಒಂದು ಘಳಿಗೆಗೋಸ್ಕರ ಹೋರಾಡುತ್ತಾನೆ. ದೇಶೀ ರಣಜಿ ಪಂದ್ಯದಲ್ಲಿ ಬೆವರು ಹರಿಸುತ್ತಾನೆ. ದಿನ, ತಿಂಗಳು, ವರ್ಷಗಳು ಕಳೆದವು. 5 ವರ್ಷಗಳ ಸತತ ಪ್ರಯತ್ನದ ಪರಿಣಾಮ 1996 ರ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿ ತಂಡಕ್ಕೆ ಮತೊಮ್ಮೆ ಕಮ್ ಬ್ಯಾಕ್ ಮಾಡುತ್ತಾನೆ. ಅದು ಆತನ ಚೊಚ್ಚಲ ಟೆಸ್ಟ್ ಪಂದ್ಯ. ಸ್ಥಳ ಕ್ರಿಕೆಟ್ ನ ಕಾಶಿ 'ಲಾರ್ಡ್ಸ್' ಕ್ರೀಡಾಂಗಣ. ಆದೇ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಮತ್ತೊಬ್ಬ ಯುವ ಆಟಗಾರ ನಮ್ಮ ರಾಹುಲ್ ದ್ರಾವಿಡ್ ಎಂಬುದು ವಿಶೇಷ. ಪ್ರತಿಭೆ ಅಷ್ಟಿದ್ದರೂ ಕಾರಣವಿಲ್ಲದೆ 5 ವರ್ಷ ತಂಡದಿಂದ ಹೊರಗುಳಿದ ಬರದಿಂದಲೋ ಅಥವಾ ತನ್ನ ಸಹಜ ಬ್ಯಾಟಿಂಗ್ ಕಲೆಯಿಂದಲೋ ಏನೋ ಗಂಗೂಲಿ ತನ್ನ ಮೊದಲ ಪಂದ್ಯದಲ್ಲೇ ಪ್ರಚಂಡ ಶತಕವನ್ನು ಗಳಿಸಿಬಿಡುತ್ತಾನೆ. ಅಲ್ಲದೆ ಇದು ಪದಾರ್ಪಣೆಯ ಪಂದ್ಯದಲ್ಲೇ, ಲಾರ್ಡ್ಸ್ ಅಂಗಳದಲ್ಲಿ ಗಳಿಸಿದ ಗರಿಷ್ಟ ದಾಖಲೆಯಾಗಿಬಿಡುತ್ತದೆ. ಈತನ ಬಗ್ಗೆ ಕೊಂಕು ನುಡಿಯುತ್ತಿದ್ದ ಅದೆಷ್ಟೋ ಜನರ ಬಾಯನ್ನು ಮುಚ್ಚಿಸುತ್ತದೆ. ಸೌರವ್ ಗಂಗೂಲಿ ಎಂಬ ಯುವ ಆಟಗಾರನ ಹೆಸರು ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಿಂದ ಕೆತ್ತಲ್ಪಡುತ್ತದೆ. ಅಲ್ಲಿಂದ ಮುಂದೆ ಈ ಬೆಂಗಾಲದ ಹುಲಿಯ ಆಟವನ್ನು ಯಾವ ಬೌಲರ್ ನಿಂದಲೂ ತಡೆಯಲಾಗಲಿಲ್ಲ ನೋಡ ನೋಡುತ್ತಲೇ ಈತ ವಿಶ್ವದ ಅಗ್ರಕ್ರಮಾಂಕದ ಆಟಗಾರರಲ್ಲಿ ಒಬ್ಬನಾಗಿಬಿಡುತ್ತಾನೆ. ಭಾರತ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿ ಬಿಡುತ್ತಾನೆ.

1999 ರಲ್ಲಿ ಸೌತ್ ಆಫ್ರಿಕಾ ವಿರುದ್ದದ ಸರಣಿಯಿಂದ ಭುಗಿಲೆದ್ದ ಮ್ಯಾಚ್ ಫಿಕ್ಸಿಂಗ್ ಎಂಬ ಜ್ವಾಲೆ ಭಾರತ ಕ್ರಿಕೆಟ್ನ ಅತಿರಥ ಮಹಾರಥರ ಆಟವನ್ನೇ ಬಲಿತೆಗೆದುಕೊಳ್ಳುತ್ತದೆ. ಪರಿಣಾಮ ಭಾರತ ಕ್ರಿಕೆಟ್ ತಂಡಕ್ಕೆ ಒಬ್ಬ ಸಮರ್ಥ ನಾಯಕನ ಅವಶ್ಯಕತೆ ಎದುರಾಗುತ್ತದೆ. ಒಮ್ಮೆ ಸೋತು ಕೈಚೆಲ್ಲಿ ಕೂತಿದ್ದ ಸಚಿನ್ ಗೆ ಮತ್ತೊಮ್ಮೆ ನಾಯಕತ್ವದ ಡ್ರೈವಿಂಗ್ ಸೀಟ್ ಅನ್ನು ಕೊಟ್ಟರೂ ಪದೇ ಪದೇ ಸೋಲಿನ ಪಂದ್ಯಗಳು ಆತನನ್ನು ಮತ್ತಷ್ಟು ಕುಗ್ಗಿಸಿದವು. ಅಷ್ಟರಲ್ಲಾಗಲೇ ಗಂಗೂಲಿ ಉಪನಾಯಕನ ಮಟ್ಟಕ್ಕೆ ಬೆಳೆದು ನಿಂತಿರುತ್ತಾನೆ. ಅಲ್ಲದೆ ತನ್ನ ನೇರ ಹಾಗು ದಿಟ್ಟ ನಿರ್ಧಾರಗಳಿದ ತಂಡದಲ್ಲಿ ಹೆಸರನ್ನೂ ಮಾಡಿರುತ್ತಾನೆ. ಅಂತೂ ನಾಯಕತ್ವದ ಸ್ಥಾನದಿಂದ ಸಚಿನ್ ಕೆಳಗಿಳಿದ ಮೇಲೆ ಅದರ ಜವಾಬ್ದಾರಿ ಗಂಗೂಲಿಯ ಮೇಲೆ ಬಂದಿತ್ತು. ಅಂದು ಆತ್ಮಸ್ಥೈರ್ಯ ಕಳೆದುಕೊಂಡ ತಂಡವನ್ನು ಟೊಂಕ ಕಟ್ಟಿ ನಿಲ್ಲಿಸಬೇಕಾದ ಅನಿವಾರ್ಯತೆ ಆತನ ಮುಂದಿತ್ತು. ಅವಮಾನಕ್ಕೊಳಗಾಗಿದ್ದ ಭಾರತ ತಂಡವನ್ನು ವಿಶ್ವ ಕ್ರಿಕೆಟ್ನಲ್ಲಿ ಪುನಶ್ಚೇತನಗೊಳಿಸಬೇಕಿತ್ತು. ಈ ಎಲ್ಲಾ ಸವಾಲನ್ನು ಹೊತ್ತು ಗಂಗೂಲಿ ಅಂದು ತಂಡವನ್ನು ಮುನ್ನೆಡೆಸಿದ. ಅಲ್ಲದೆ ದಕ್ಷಿಣ ಆಫ್ರಿಕಾದ ವಿರುದ್ಧ ನಾಯಕನಾಗಿ ತನ್ನ ಮೊದಲ ಸರಣಿಯನ್ನೂ ಗೆದ್ದು ತೋರಿಸಿದ.

ಫಿಕ್ಸಿಂಗ್ ಮಾಫಿಯಾದಲ್ಲಿ ಕಳೆದುಹೋದ ಭಾರತೀಯ ಕ್ರಿಕೆಟ್ನ ದಿಗ್ಗಜರ ಸ್ಥಾನಕ್ಕೆ ಅಷ್ಟೇ ಬಲಿಷ್ಟವಾದ ಹೊಸ ಮುಖಗಳನ್ನು ನೇಮಿಸಬೇಕಾದ ಜವಾಬ್ದಾರಿ ಗಂಗೂಲಿಯ ಮೇಲಿದ್ದಿತು. ಆದರೆ ಅದು ನೀರು ಕುಡಿದಷ್ಟು ಸುಲಭದ ಕೆಲಸವಾಗಿರಲಿಲ್ಲ. ಅಜರುದ್ದೀನ್, ಜಡೇಜಾ, ಮೊಂಗ್ಯರಂತಹ ಕ್ರಿಕೆಟ್ ದಿಗ್ಗಜರನ್ನು ರೀಪ್ಲೇಸ್ ಮಾಡುವುದು ಏನು ಸುಲಭದ ಮಾತೆ? ಆದರೆ ಅದರ ಅನಿವಾರ್ಯತೆ ಈ ನವ ನಾಯಕನ ಮುಂದಿದ್ದಿತು. ಅಷ್ಟರಲ್ಲಾಗಲೇ ಭಾರತ ಕಿರಿಯರ ತಂಡ 19 ವರ್ಷದೊಳಗಿನ ವಿಶ್ವಕಪ್ ಅನ್ನು ಗೆದ್ದುಕೊಂಡಿರುತ್ತದೆ. ಅಲ್ಲದೆ ಸರಣಿ ಶ್ರೇಷ್ಠ ಹಿರಿಮೆಗೆ ಪಾತ್ರನಾದ ಯುವರಾಜ್ ಸಿಂಗ್ ಎಂಬ ಹುಡುಗನ ಬಗ್ಗೆ ಬಹಳಷ್ಟು ಹೆಗ್ಗಳಿಕೆಯ ಮಾತುಗಳು ಕೇಳತೊಡಗಿದವು. ಆತನ ರಣಜಿ ಪಂದ್ಯಗಳ ಅಂಕಿ ಅಂಶಗಳು ಅದಕ್ಕೆ ಪೂರಕವಾಗಿದ್ದವು. ಅಷ್ಟರಲ್ಲಾಗಲೇ ಗಂಗೂಲಿ ಆತನ ಬಗ್ಗೆ ಡೀಟೈಲ್ಡ್ ವಿಚಾರಗಳನ್ನು ಸಂಪಾದಿಸಿರುತ್ತಾನೆ. ಆಟವನ್ನು ಒಮ್ಮೆ ನೋಡುತ್ತಾನೆ. ಅಷ್ಟೇ. ನಂತರ ICC ನಾಕ್ಔಟ್ ಸರಣಿಗೆ ತಂಡ ಪ್ರಕಟವಾದಾಗ ಯುವಿಯ ಹೆಸರು ಪಟ್ಟಿಯಲ್ಲಿ ಇರುತ್ತದೆ! ಅಂತೂ ಅಕ್ಟೋಬರ್ 3, 2000 ರಂದು ಕೀನ್ಯಾದ ವಿರುದ್ಧ ತನ್ನ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಯುವಿ ಆಡುತ್ತಾನೆ. ಹೀಗೆ ನಾಯಕನಾಗಿ ಮುಂದಿನ ದಿನಗಳ ಕನಸನ್ನು ಹೊತ್ತು ಹೊಸ ಹೊಸ ಮುಖಗಳನ್ನು ಭಾರತ ತಂಡಕ್ಕೆ ಸೇರಿಸಿದ ಕೀರ್ತಿ ಗಂಗೂಲಿಯದು. ಮುಂದೆ ಮೊಹಮ್ಮೆದ್ ಕೈಫ್,ವಿರೇಂದ್ರ್ ಸೆಹವಾಗ್, ಹರ್ಭಜನ್ ಸಿಂಗ್, ಜಹೀರ್ ಖಾನ್ ಅಲ್ಲದೆ ಧೋನಿಯನ್ನೂ ಸಹ ತಂಡಕ್ಕೆ ತರುವಲ್ಲಿ ಈ ಬಂಗಾಲದ ಯುವರಾಜನ ಶ್ರಮ ಮಹತ್ತರವಾದದ್ದು. ಅಲ್ಲದೆ ಈ ಆಯ್ಕೆಗಳು ಕೇವಲ ನಾಮ್ಕಾ-ವಾಸ್ಥೆ ಹೆಸರುಗಳಾಗದೆ, ಮುಂದಿನ ದಿನಗಳ ಕ್ರಿಕೆಟ್ ದಂತಕಥೆಗಳಾದ ವಾಸ್ತವತೆ ನಮ್ಮ ನಿಮ್ಮೆಲ್ಲರ ಮುಂದೆಯೇ ಇದೆ. ಪ್ರತಿಭೆಯನ್ನು ಗುರುತಿಸುವ ಆ ಮಟ್ಟಿನ ಸೂಕ್ಷ್ಮತೆ ಗಂಗೂಲಿಯ ನಾಯಕತ್ವದಲ್ಲಿದ್ದಿತ್ತು.

ಗಂಗೂಲಿ ಯುವ ಆಟಗಾರರೊಟ್ಟಿಗೆ ಸದೃಢ ತಂಡವೊಂದನ್ನು ಕಟ್ಟಿ 2003 ರ ಏಕದಿನ ವಿಶ್ವಕಪ್ ನಲ್ಲಿ ಫೈನಲ್ ನ ಹಂತದ ವರೆಗೂ ತಂಡವನ್ನು ಮುನ್ನೆಡುಸುತ್ತಾನೆ. ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಇಂಗ್ಲೆಂಡ್ ಹಾಗು ಪಾಕಿಸ್ತಾನದಂಥ ಬಲಿಷ್ಟ ತಂಡಗಳ ಆಟಗಾರರ ಮುಂದೆ ತನ್ನ ಚಿಗುರು ಮೀಸೆಯ ಹುಡುಗರನ್ನು ಕಣಕ್ಕಿಳಿಸಿ ಅಂದು ಫೈನಲ್ ನ ವರೆಗೂ ಮುನ್ನೆಡೆಸಿದ್ದು ಅಸಾಧ್ಯದ ವಿಷಯವೇ ಆಗಿದ್ದಿತು! ಭಾರತ ತಂಡ ಅದೆಷ್ಟೇ ಸದೃಢವಾದರೂ ವಿದೇಶಿ ನೆಲದಲ್ಲಿ ಅದರ ಆಟ 'ಠುಸ್' ಎನ್ನುವ ಮಾತಿಗೆ ಗಂಗೂಲಿಯ ತಂಡ ಅಪವಾದವಾಗಿದ್ದಿತು. ವಿದೇಶಿ ನೆಲದಲ್ಲಿ ಗೆಲುವನ್ನು ಗಳಿಸುವ ಚಾಣಾಕ್ಷತನವನ್ನು ತಂಡಕ್ಕೆ ಕಲಿಸಿಕೊಟ್ಟದ್ದು ಈ ನಾಯಕನೇ. ಆದರೆ ಅಷ್ಟರಲ್ಲಾಗಲೇ ಕೃಷ್ಣ-ಅರ್ಜುನರಂತಿದ್ದ ಜಾನ್ ರೈಟ್-ಗಂಗೂಲಿ ಜೋಡಿ ಬೇರ್ಪಡುವುದರಲ್ಲಿತ್ತು. ಕೋಚ್ ಜಾನ್ ಅವರ ತಂಡದೊಟ್ಟಿಗಿನ ಒಪ್ಪಂದ ಮುಗಿಯುವುದರಲಿತ್ತು. ಜಾನ್ ರೈಟ್ ನಂತರ ಬೇರೊಬ್ಬ ಕೋಚ್ ಆಗಲೇಬೇಕು ಎಂದಾಗ ಗ್ರೆಗ್ ಚಾಪೆಲ್ ಎಂಬ ನರಿ ಬುದ್ದಿಯ ಕೋಚ್ ಅನ್ನು ತಂಡಕ್ಕೆ ಸೂಚಿಸಿದ್ದು ಗಂಗೂಲಿಯೇ. ಜನರನ್ನು ಆಯ್ಕೆ ಮಾಡುವಾಗ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದ ಆತ ಈ ಬಾರಿ ಬಹಳವಾಗಿಯೇ ಎಡವಿರುತ್ತಾನೆ. 1981 ರ ನ್ಯೂಜಿಲ್ಯಾಂಡ್ ವಿರುದ್ದದ ಸರಣಿಯಲ್ಲಿ ಕೊನೆಯ ಎಸೆತದ್ದಲ್ಲಿ ಎದುರಾಳಿ ತಂಡಕ್ಕೆ ಆರು ರನ್ನುಗಳ ಅವಶ್ಯಕತೆ ಇದ್ದಾಗಲೂ ತನ್ನ ಬೌಲರ್ಗೆ ಅಂಡರ್ ಆರ್ಮ್ ಎಸೆತವನ್ನು ಎಸೆಯಲು ಹೇಳಿಕೊಟ್ಟು ವಿಶ್ವದ ಎಲ್ಲೆಡೆಯಿಂದ ಛೀಮಾರಿ ಹಾಕಿಸಿಕೊಂಡ ಹೇಡಿ ಸ್ವಭಾವದ ಆಟಗಾರನೇ ಈ ಗ್ರೆಗ್ ಚಾಪೆಲ್! ಅಂತೂ ಚಾಪೆಲ್ ಎಂಬ ಸಿಡುಕು ಮೋರೆಯ ಕೋಚ್ ಒಬ್ಬ ತಂಡಕ್ಕೆ ಬಂದು, ವಿಶ್ವ ಕ್ರಿಕೆಟ್ ನಲ್ಲಿ ಉತ್ತುಂಗದಲ್ಲಿದ್ದ ಭಾರತ ತಂಡವನ್ನು ಕಾಲು ಮುರಿದು ಕೂರಿಸಿದ ನಿದರ್ಶನ ಜಗತ್ತಿನ ಮುಂದೆಯೇ ಇದೆ. ಅಲ್ಲದೆ ತನ್ನನ್ನು ತಂಡಕ್ಕೆ ಬರುವಂತೆ ಸೂಚಿಸಿದ್ದ ಗಂಗೂಲಿಯನ್ನೇ ತಂಡದಿಂದ ಈತ ಹೊರದಬ್ಬುತ್ತಾನೆ! ಆದರೆ ಆತ ಚೆಲ್ಲಾಟವಾಡಿದ್ದು ಸದ್ದು ಮಾಡಿದರೆ ಬಾಲ ಮುದುಡಿಕೊಂಡು ಹೆದರಿ ಓಡಿಹೋಗುವ ಕಾಂಗರೂಗಳೊಟ್ಟಿಗಾಗಿರಲಿಲ್ಲ. ಅವಮಾನಿಸಿದಷ್ಟು ಪುಟಿದೆದ್ದು ನಿಲ್ಲುವ ಹುಲಿಯ ಸ್ವಭಾವದ ಒಬ್ಬ ವ್ಯಕ್ತಿಯೊಟ್ಟಿಗೆ! ಅಷ್ಟಗ್ಯೂ ಅಂದು ಗಂಗೂಲಿ ತನ್ನ ಎಂದಿನ ಉತ್ತಮ ಫಾರ್ಮ್ ನಲ್ಲಿರಲಿಲ್ಲ, ನಿಜ. ಅದನ್ನರಿತ ಆತ ಮತ್ತೊಮ್ಮೆ ತಯಾರಿಯಲ್ಲಿ ತೊಡಗುತ್ತಾನೆ. ತನ್ನ ವೀಕ್ ಪಾಯಿಂಟ್ ಗಳ ಮೇಲೆ ಗಮನ ಹರಿಸುತ್ತಾನೆ. ತಾನೇ ಕಟ್ಟಿದ ತಂಡದಿಂದ ಹೊರಗುಳಿಯುವುದು ಗಂಗೂಲಿಯಿಂದ ಸಹಿಸಲಾಗಲಿಲ್ಲ. ಅಂತೂ ತನ್ನ ಅವಿರತ ಶ್ರಮದಿಂದ ತಂಡಕ್ಕೆ ಮತ್ತೊಮ್ಮೆ ಸೇರಿಕೊಳ್ಳುತ್ತಾನೆ. ಅಲ್ಲದೆ 2007 ರಲ್ಲಿ ಟೆಸ್ಟ್ ಹಾಗು ಏಕದಿನ ಪಂದ್ಯಗಳಲ್ಲಿ ಭಾರತದ ಪರ ಅತಿಹೆಚ್ಚು ರನ್ ಗಳನ್ನೂ ಗಳಿಸುತ್ತಾನೆ. ಹೀಗೆ ಗೆಲ್ಲುವ ವರೆಗೂ ಸೋಲನ್ನು ಒಪ್ಪಿಕೊಳ್ಳಬಾರದು ಎಂಬ ಸಂದೇಶವನ್ನು ಜಗತ್ತಿಗೆ ಸಾರುತ್ತಾನೆ ಈ ಕಮ್ ಬ್ಯಾಕ್ ಕಿಂಗ್!

ಯುವಿ ಮುಂದೆ ಹಂತ ಹಂತವಾಗಿ ತಂಡದಲ್ಲಿ ಬೆಳೆಯತೊಡಗುತ್ತಾನೆ. ತಂಡದ ಅದ್ಭುತ ಕ್ಷೇತ್ರರಕ್ಷಕನಾಗಿ, ಮಧ್ಯಮ ಕ್ರಮಾಂಕದ ಬಲಿಷ್ಟ ಬ್ಯಾಟ್ಸಮನ್ ಆಗಿ ಅಲ್ಲದೆ, ಅವಶ್ಯಕತೆ ಎದುರಾದಾಗ ಭರವಸೆಯ ಬೌಲರ್ ಆಗಿಯೂ ಕೂಡ ಮಿಂಚುತ್ತಾನೆ. ಅಲ್ಲದೆ ತನ್ನ ನೆಚ್ಚಿನ ನಾಯಕನಂತೆ ಪ್ರತಿ ಸೋಲನ್ನೂ ಗೆಲುವಿನ ಮಜಲುಗಳಾಗಿ ಪರಿವರ್ತಿಸಿಕೊಂಡು ನೆಡೆಯುತ್ತಾನೆ. ಇವುಗಳ ಮದ್ಯೆ ಅದೇಷ್ಟೋ ಬಾರಿ ತಂಡದಿಂದ್ದ ಹೊರಗುಳಿದರೂ, ಕುಗ್ಗದೆಯೆ ಸತತ ಪರಿಶ್ರಮದಿಂದ ಪ್ರತಿ ಬಾರಿಯೂ ತಂಡಕ್ಕೆ ಕಮ್ ಬ್ಯಾಕ್ ಮಾಡುತ್ತಿರುತ್ತಾನೆ. ಇತ್ತ ತನ್ನ ನೆಚ್ಚಿನ ನಾಯಕನ ವೃತ್ತಿ ಜೀವನದ ಏರಿಳಿತಗಳನ್ನು ಬೆರಗುಗಣ್ಣಿನಿಂದ ವೀಕ್ಷಿಸುತ್ತಿದ್ದ ಯುವಿ ಅಕ್ಷರ ಸಹ ಗಂಗೂಲಿಯ ಸ್ವಭಾವವನ್ನೇ ಬೆಳೆಸಿಕೊಂಡಿರುತ್ತಾನೆ. ಮಾತಿಗೆ ಮಾತಿನಿಂದ ಉತ್ತವನ್ನು ಕೊಟ್ಟರೆ ಆಟಕ್ಕೆ ಆಟದಿಂದಲ್ಲೇ ಉತ್ತರಿಸುತ್ತಿರುತ್ತಾನೆ. ಆದರೆ 2011 ರ ಶುರುವಿಗಾಗಲೇ ಈತನ ಆರೋಗ್ಯ ಪದೇ ಪದೇ ಹದಗೆಡುತ್ತಿರುತ್ತದೆ. ಉಸಿರಾಟದ ತೊಂದರೆ, ವಾಕರಿಕೆ ಹಾಗು ರಕ್ತವಾಂತಿ ಬಹುವಾಗಿ ಕಾಡುತ್ತಿರುತ್ತದೆ. ಇದು ಆತನ ಶ್ವಾಸಕೋಶದಲ್ಲಿ ಬೆಳೆಯುತ್ತಿದ್ದ ಟ್ಯೂಮರ್ ಎಂದು ಯಾರಿಗೂ ತಿಳಿಯುವುದಿಲ್ಲ! ಅಷ್ಟರಲ್ಲಾಗಲೇ ಏಕದಿನ ವಿಶ್ವಕಪ್ ಸರಣಿಯೂ ಶುರುವಾಗಿರುತ್ತದೆ. ಒಳಗೊಳಗೇ ಬೇಯುತ್ತಿದ್ದ ದೇಹದಲ್ಲೇ ಅಂದು ಯುವಿ ವಿಶ್ವಕಪ್ ನಲ್ಲಿ ಭಾಗವಹಿಸುತ್ತಾನೆ. 362 ರನ್ ಹಾಗು 15 ವಿಕೆಟ್ಗಳ 'ದಾಖಲೆ'ಯೊಂದಿಗೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಳ್ಳುತ್ತಾನೆ. ಇನ್ನೊಂದು ವಿಧದಲ್ಲಿ ಹೇಳುವುದಾದರೆ ಒಬ್ಬ ಕ್ಯಾನ್ಸರ್ ರೋಗಿಯಾಗಿ 4 ‘ಮ್ಯಾನ್ ಆಫ್ ದಿ ಮ್ಯಾಚ್’ ಅವಾರ್ಡ್ ಗಳನ್ನ ಅಂದು ಪಡೆದುಕೊಳ್ಳುತ್ತಾನೆ! ನಂತರ ಕೆಲ ದಿನಗಳ ಬಳಿಕ ಶ್ವಾಸಕೋಶದ ಟ್ಯೂಮರ್ ಪತ್ತೆಯಾಗುತ್ತದೆ. ಅಲ್ಲದೆ ಮುಂದಿನ ಒಂದು ವರ್ಷಗಳ ಕಾಲ ಚಿಕಿತ್ಸೆ ಹಾಗು ವಿಶ್ರಾಂತಿಯಲ್ಲೇ ಕಳೆಯಬೇಕಾಗುತ್ತದೆ. ಯುವಿ ಎಂದಾಗಲೇ ಸಿಕ್ಸು ಫೋರುಗಳ ಕನಸ್ಸನ್ನು ಕಾಣುತ್ತಿದ್ದವರು ಅಂದು ಆತ ಬದುಕಿ ಉಳಿದರೆ ಸಾಕು ಎಂದು ದೇವರಲ್ಲಿ ಬೇಡಿ ಕೊಳ್ಳತೊಡಗುತ್ತಾರೆ. ಇನ್ನುಮುಂದೆ ಯುವಿ ಎಂಬ ಶ್ರೇಷ್ಠ ಕ್ರಿಕೆಟಿಗನ ಹೆಸರು ಕ್ರಿಕೆಟ್ ವಲಯದಲ್ಲಿ ಮರೆಯಾಯಿತು ಎನ್ನುವಾಗಲೇ ಅಚ್ಚರಿಯ ಸುದ್ದಿಯೊಂದು ಹೊರಬೀಳುತ್ತದೆ. ಯುವಿ ಕ್ರಿಕೆಟ್ ಆಡಲು ಮತ್ತೊಮ್ಮೆ ಸಜ್ಜಾಗಿದ್ದಾನೆ ಹಾಗು ದೇಶೀ ರಣಜಿ ಪಂದ್ಯದಲ್ಲಿ ಆಡಲು ಅಣಿಯಾಗುತ್ತಿದ್ದಾನೆ ಎಂಬ ಸುದ್ದಿ! ಈ ಸುದ್ದಿಯನ್ನು ಕೇಳಿದ ಜಗತ್ತೇ ಒಂದು ಕ್ಷಣ ನಿಬ್ಬೆರಗಾಯಿತು. ಒಮ್ಮೆ ಯೋಚಿಸಿ ನೋಡಿ. ಕ್ಯಾನ್ಸರ್ ಎಂಬ ಹೆಸರೇ ಅದೆಷ್ಟೋ ಜನರಲ್ಲಿ ಎದೆ ಬಡಿತವನ್ನು ಹೆಚ್ಚುಮಾಡುವ ಈ ಕಾಲದಲ್ಲೂ ಒಬ್ಬ ವ್ಯಕ್ತಿ ಕ್ಯಾನ್ಸರ್ ನೊಟ್ಟಿಗೆ ಹೋರಾಡಿ, ಬದುಕುಳಿದು, ಕೆಲ ದಿನಗಳ ಒಳಗೆ ಬ್ಯಾಟ್ ಹಿಡಿದು ಆಡಲು ಪಿಚ್ ಗೆ ಬರುವುದೆಂದರೆ ಏನು ಸಾಮನ್ಯದ ಮಾತೆ? ಇದು ಕೇವಲ ಯುವಿ ಯಂತಹ ದೃಢ ವ್ಯಕ್ತಿತ್ವದವರು ಮಾಡಬಹುದಾದ ಸಂಕಲ್ಪ. 'Passionate' ಎಂಬ ವಾಕ್ಯಕ್ಕೆ ಹೇಳಿಮಾಡಿಸಿದ ಕ್ಯಾರೆಕ್ಟರ್ ಈತನದು ಎಂಬುದು ಜಗದ್ಜಾಹಿತವಾಯಿತು. ಕ್ಯಾನ್ಸರ್ ನ ನಂತರ ಮೊದಲ ಬಾರಿಗೆ ತಂಡಕ್ಕೆ ಆಯ್ಕೆಯಾಗಿ ನ್ಯೂಜಿಲ್ಯಾಂಡ್ ವಿರುದ್ದದ ಪಂದ್ಯದಲ್ಲಿ 2 ಸಿಕ್ಸರ್ ಗಳನ್ನು ಪ್ರೇಕ್ಷಕರ ಗುಂಪಿನೊಳಕ್ಕೆ ಒಂದರಿಂದೊಂದು ಹೊಡೆದಾಗ ಹಲವರು ಹುಚ್ಚೆದ್ದು ಕುಣಿದು ಕುಪ್ಪಳಿಸಿದರೆ ಇನ್ನೂ ಕೆಲವರು ತಮ್ಮ ತೇವವಾದ ಕಣ್ಣುಗಳನ್ನು ನಿಧಾನವಾಗಿ ಒರೆಸಿಕೊಳ್ಳುತ್ತಿದ್ದರು. ಜೀವನ ಅದೆಷ್ಟೇ ಕಾಡಿದರೂ ಸೋಲದಿರು ಎಂಬ ಆತ್ಮವಿಶ್ವಾಸ ವನ್ನು ಸಾರುವ ಬಲಿಷ್ಟ ಸಿಕ್ಸರ್ ಗಳು ಅವಾಗಿದ್ದವು.

ಇದು ಭಾರತ ಕ್ರಿಕೆಟ್ ಜಗತ್ತಿಗೆ ಹೇಳಿದ ಧೀರರಿಬ್ಬರ ಕಥೆ. ಧೈರ್ಯ, ಛಲ ಹಾಗು ಸತತ ಪರಿಶ್ರಮದಿಂದ ಎಷ್ಟೆಲ್ಲಾ ಸಾಧಿಸಬಹುದು ಎಂದು ತೋರಿದ ನಾಯಕರಿಬ್ಬರ ಚರಿತೆ. ನಾವುಗಳು ಆಡುವ ಗಲ್ಲಿ ಕ್ರಿಕೆಟ್ನಲ್ಲೆ ಕೆಲವೊಮ್ಮೆ ಕಳಪೆ ಪ್ರದರ್ಶನ ತೋರಿದರೆ ಅದೆಷ್ಟು ನೊಂದುಕೊಳ್ಳುತ್ತೇವೂ. ಅದೆಷ್ಟೋ ಬಾರಿ ವಾರವಿಡೀ ಆ ಆಟದ ಬಗ್ಗೆಯೇ ಚಿಂತಿಸಿ ಮರುಗುತ್ತಿರುತ್ತೇವೆ. ಅಂತಹದರಲ್ಲಿ ಭಾರತದಂತ ದೇಶದ ಸಹಸ್ರ ಸಹಸ್ರ ಕ್ರಿಕೆಟ್ ಅಭಿಮಾನಿಗಳ ಮುಂದೆ, ದೇಶದ ಹೆಸರನ್ನು ಹೊತ್ತು ಆಡಲು ಇಳಿದು ಕಳಪೆ ಪ್ರದರ್ಶನವನ್ನು ತೋರುತ್ತ, ವಿಕೆಟ್ ಅನ್ನು ಕೈ ಚೆಲ್ಲಿ, ಪೆವಿಲಿಯನ್ನ ಹಾದಿ ಹಿಡಿದು ತಂಡದಿಂದ ಹೊರಗುಳಿಯುವುದು ಆ ಆಟಗಾರರಲ್ಲಿ ಅದೆಷ್ಟು ಆಳವಾದ ಖಿನ್ನತೆಯನ್ನು ಮೂಡಿಸಬಹುದು!? ಕ್ರಿಕೆಟ್ಟೇ ಜೀವನವಾಗಿರುವ ಅವರಿಗೆ ಇಂತಹ ಹೀನಾಯ ಪ್ರದರ್ಶನಗಳು ಅದೆಂಥಹ ನೋವಿನ ಕೂಪಕ್ಕೆ ನೂಕಬಹುದು? ಆದರೂ ಸಹ ಇವರುಗಳು ತಮ್ಮ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳದೆ, ಪ್ರತಿ ಬಾರಿಯೂ ಉತ್ತಮ ಪ್ರದರ್ಶನಗಳನ್ನು ನೀಡುವ ವಿಶ್ವಾಸದೊಂದಿಗೆ ಕಣಕ್ಕಿಳಿಯುವ ಗುಣಕ್ಕೆ ಎಲ್ಲರೂ ತಲೆಬಾಗಲೇಬೇಕು. ಅಂದು ಗಂಗೂಲಿ ಎಲ್ಲರ ಊಹೆಗೂ ಮೀರಿ ತಂಡದಿಂದ ಹೊರಗುಳಿದರೂ, ಛಲ ಬಿಡದೆ ಹೋರಾಡಿ ಮತ್ತೊಮ್ಮೆ ತಂಡಕ್ಕೆ ಸೇರಿಕೊಂಡ ಪರಿಯಾಗಲಿ ಅಥವಾ ಯುವಿ ಎಂಬ ಕೆಚ್ಚೆದೆಯ ಆಟಗಾರ ಕ್ಯಾನ್ಸರ್ ಎಂಬ ಮಹಾ ಮಾರಿಯ ವಿರುದ್ಧವೇ ಸೆಣೆಸಿ ಕ್ರಿಕೆಟ್ ಗೆ ಪುನರಾಗಮನಗೊಂಡು ಜಗತ್ತನೇ ಪುಳಕಗೊಳಿಸಿದ ಬಗೆಯಾಗಲಿ ಅಲ್ಲದೆ ಇನ್ನೂ ಹಲವು ದೃಶ್ಯಾಂತಗಳು ಹಾಗು ಅವುಗಳಿಂದ ದೊರೆತ ಪಾಠಗಳು ಇಂದು ಈ ಕ್ರಿಕೆಟ್ ಜಗತ್ತಿನಲ್ಲಿವೆ. ಗಂಗೂಲಿ ಕ್ರಿಕೆಟ್ ಅಂಗಳದಿಂದ ನಿವೃತ್ತಿಗೊಂಡು ಎಂಟು ವರ್ಷಗಳಾದರೂ ಅವನ ಸೇವೆ ಭಾರತೀಯ ಕ್ರಿಕೆಟ್ಗೆ ಇನ್ನೂ ಸಹ ಲಭ್ಯವಾಗುತ್ತಿದೆ. ಯುವಿ 'YouWeCan' ಎಂಬ ಸಂಸ್ಥೆಯ ಮೂಲಕ ಕ್ಯಾನ್ಸರ್ ರೋಗಿಗಳಿಗೆ ತನ್ನ ಕೈಲಾದ ಮಟ್ಟಿನ ಸೇವೆಯನ್ನು ಮಾಡುತ್ತಿದ್ದಾನೆ. ಮೊನ್ನೆ ಇಂಗ್ಲೆಂಡ್ ವಿರುದ್ದದ ಏಕದಿನ ಸರಣಿಯಲ್ಲಿ ಮತ್ತೊಮ್ಮೆ ಭರ್ಜರಿ ಫಾರ್ಮ್ ಗೆ ಮರಳಿದ ಯುವಿ, ಕೊಲ್ಕತ್ತಾ ಪಂದ್ಯದಲ್ಲಿ ಗಂಗೂಲಿಯೊಟ್ಟಿಗೆ ಹಸ್ತಲಾಘವ ಮಾಡುತ್ತಾ ಅನ್ಯೂನ್ಯವಾಗಿ ಮಾತನಾಡುವಾಗ ದಶಕದ ಹಿಂದಿನ ನೆನಪಿನ ಪುಟಗಳು ಒಂದರಿಂದೊಂದು ಹಾಗೆಯೇ ತೆರೆಯತೊಡಗಿದವು. ಗುರು ಶಿಷ್ಯರ ಜೋಡಿಯ ಮೋಡಿ ಅಲ್ಲಿದ್ದ ಪ್ರೇಕ್ಷಕರನ್ನು ಕುಣಿದು ಕುಪ್ಪಳಿಸುವಂತೆ ಮಾಡಿದವು.

PC : Internet