Friday, October 23, 2020

ಪಯಣ - 17

ಬಹುಷಃ ನನಗಾಗಿಯೇ ಎಂಬಂತೆ ಮೂರ್ನಾಲ್ಕು ಬಗೆಯ ರುಚಿಕಟ್ಟಾದ ಸಸ್ಯಾಹಾರಿ ಭಕ್ಷ್ಯಗಳನ್ನು ತಯಾರಿಸಿದ್ದ ಅವರು ನನ್ನ ಹೊಟ್ಟೆಯ ಕಟ್ಟೆ ಹೊಡೆಯುವಷ್ಟು ತಿನಿಸಿದರು. ನಂತರ ಅವರ ಮನೆಯ ಚಡಿಯ ಮೇಲೆ ಬಂದು ಕೂತು ಮಾತಿಗಿಳಿದು ನನ್ನ ಬಗೆಗೆ ಕೇಳಿ ತಿಳಿದುಕೊಂಡು ಈ ವಯಸ್ಸಿನಲ್ಲಿಯೇ ಅಧ್ಯಾತ್ಮದ ಬಗೆಗಿನ ನನ್ನ ಒಲವಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

'ಆದ್ರೆ ಬಾಯಿಜಾನ್ ಒಂದು ಪ್ರೆಶ್ನೆ..' ಎಂದು ನನ್ನ ಮುಖವೆನ್ನೇ ಅವರು ನೋಡತೊಡಗಿದರು. ಆ ನೋಟದಲ್ಲಿ ಒಂದು ಬಗೆಯ ದ್ವಂದ್ವ ಹಾಗು ಕೊಂಚ ಕಾಳಜಿಯೂ ತುಂಬಿಕೊಂಡಿತ್ತು.

'ನೀವ್ ಹುಡುಕಿಕೊಂಡು ಹೋಗ್ತಿರೋ ಆ ಭಗವಂತ ನಿಮ್ಗೆ ಖಂಡಿತವಾಗಿಯೂ ಸಿಗ್ತಾನ?' ಎಂದು ಕೇಳಿದರು.

ಕೊಂಚ ಮುಗುಳ್ ನಕ್ಕ ನಾನು 'ಭಾಯಿ, ನಾನು ಯಾವ ಭಗವಂತನನ್ನೂ ಹುಡುಕಿಕೊಂಡು ಹೋಗ್ತಾ ಇಲ್ಲ.. ಆತ ಇಲ್ಲಿ , ಅಲ್ಲಿ , ಎಲ್ಲೆಲ್ಲಿಯೂ ಇದ್ದಾನೆ. ಗುರುತು ಪರಿಚಯ ಇಲ್ಲದ ನನ್ನನ್ನು ನಿಮ್ಮ ಮನೆಗೆ ಕರೆದು ತಂದು ಸತ್ಕರಿಸಿದಿರಿ .. ಆತ ನಿಮ್ಮ ರೂಪದಲ್ಲೂ ಇದ್ದಾನೆ .. ಆದರೆ ನಾನು ಹೋಗ್ತಾ ಇರೋದು ಮನಸ್ಸು ಸೆಳೆದ ಕಡೆಗೆ .. ಆ ಅಪೂರ್ವ ಬೆಳಕಿನ ಬಳಿಗೆ '

'ಅಪೂರ್ವ ಬೆಳಕು..' ಎಂದು ಪುನಃ ಕೊಂಚ ದಿಗ್ಬ್ರಾಂತರಾದ ಅವರನ್ನು ಕಂಡು,

'ಜಾಸ್ತಿ ಯೋಚಿಸಬೇಡಿ .. ನಾನು ವಾಪಸ್ಸು ಬರುವಾಗ ಪುನಃ ನಿಮ್ಮಲಿಗೆ ಬಂದು ಅದರ ಬಗ್ಗೆ ವಿವರಿಸುತ್ತೀನಿ' ಎಂದೆ.

ಬೇರೇನು ಕೇಳದೆ ಅವರೂ ಸುಮ್ಮನಾದರು. ಕಲ್ಪನೆಗೂ ಮೀರಿದ ನಮ್ಮ ಸಂಭಾಷಣೆಗಳನ್ನು ತನ್ನ ಪುಟ್ಟ ಕಣ್ಣುಗಳನ್ನು ಅರಳಿಸಿ ಅಲಿ ನಮ್ಮನ್ನೇ ನೋಡತೊಡಗಿದ್ದ.

ನಂತರ ಕೊಂಚ ಲೋಕಾರೂಡಿಯ ಮಾತನಾಡಿ ನಾನು ಇನ್ನೇನು ಹೋರಡುತ್ತೀನಿ ಎಂದು ಹೇಳಿದಾಗ ಬಿಡದೆ ಇನ್ನೂ ಒಂದು ದಿನ ಅಲ್ಲಿಯೇ ಇರುವಂತೆ ಒತ್ತಾಯಿಸಿದರು. ಅಲ್ಲದೆ ಮಾರನೆ ದಿನ ಅವರೇ ನೆಡೆಸುವ ಮೋಟಾರು ರಿಪೇರಿ ಅಂಗಡಿಗೆ ಕರೆದುಕೊಂಡು ಹೋಗಿ ದೂಳುಗಟ್ಟಿದ ನನ್ನ ಗಾಡಿಯನ್ನು ಸಂಪೂರ್ಣವಾಗಿ ಸರ್ವಿಸ್ ಮಾಡಿ ಹಣಕೊಡಲು ಮುಂದಾದರೂ ತೆಗೆದುಕೊಳ್ಳದೆ ನನ್ನನ್ನು ತಬ್ಬಿಕೊಂಡು ಬೆನ್ನು ತಟ್ಟಿ ಅಲ್ಲಿಂದ ಬೀಳ್ಕೊಟ್ಟರು.

****



'ಒಹ್..' ಎಂದಷ್ಟೇ ಹೇಳಲು ಶಕ್ತನಾದ ಲೋಕೇಶ ಮುಂದೇನು ಕೇಳಬೇಕೆಂದು ತೋಚದೆ ಸುಮ್ಮನಾದ. ಮೊದಲ ಬಾರಿ ಎಂಬಂತೆ ಆದಿ ಖುಷಿಯ ಕುರಿತು ಲೊಕೇಶನ ಬಳಿ ಮನಸ್ಸು ಬಿಚ್ಚಿ ಮಾತನಾಡತೊಡಗಿದ. ತನ್ನ ಜೀವನದಲ್ಲಿ ಮೂಡಿದ ಕೆಲವೇ ಕೆಲವು ಸಂತೋಷದ ಕಿರಣಗಳಿಗೆ ಕಾರಣಳಾಗಿದ್ದ ಖುಷಿ ಬೇರೊಬ್ಬನನ್ನು ಇಷ್ಟಪಡುತ್ತಿರುವುದಾಗಿ ಹೇಳಿದಳಂತೆ. ಆಕೆಯ ಕುಟುಂಬ ತುಂಬಾನೇ ಆತ್ಮೀಯವಾಗಿ ಬಲ್ಲ ಆ ಹುಡುಗನ ಕುಟುಂಬವನ್ನು ನೋಡಿದರೆ ಮುಂದೆ ಯಾವುದೇ ವಿಘ್ನಗಳು ಎದುರು ಕಾಣುವುದಿಲ್ಲವಂತೆ. ಅದನ್ನು ಕೇಳಿದ ಆದಿಯ ಮನಸ್ಸು ಭಾರವಾಯಿತು. ಅಲ್ಲಿಯವರೆಗಿದ್ದ ಆತನ ಏಕೈಕ ನಂಬಿಕೆಯ ಕೋಟೆ ಛಿದ್ರವಾಯಿತು. ಎದೆ ವಿಪರೀತವಾಗಿ ನೋಯತೊಡಗಿತು. ಕೊನೆಗೆ ಆತ ಕಾಲೇಜಿನ ಕರಿಡಾರಿನ ನೆಲದ ಮೇಲೆಯೇ ಕುಸಿದುಬಿಟ್ಟ. ದುಃಖ ತುಂಬಿದ ಆತನ ಮನಸ್ಸು ಒಮ್ಮೆಲೇ ಅತ್ತುಬಿಡಬೇಕೆಂದು ಅವಣಿಸುತ್ತಿದ್ದರೂ ಆತ ತಡೆದುಕೊಂಡಿದ್ದ. ಕೂಡಲೇ ಲೊಕೇಶನನ್ನು ನೆನಪಿಸಿಕೊಂಡು ಆತನಿರುವಲ್ಲಿಗೆ ಬಂದು ಒಂದೇ ಸಮನೆ ಚಿಕ್ಕ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅಳತೊಡಗಿದ. ತನ್ನ ಬಾಲ್ಯದಿಂದ ಇಂದಿನವರೆಗಿನ ಆಕೆಯ ಒಡನಾಟ, ಗೆಳೆತನ ಎಲ್ಲವನ್ನು ಆದಿ ವಿವರಿಸಿದ.

'ಇಷ್ಟೊಂದು ನಿನ್ನ ಹಚ್ಚ್ಕೊಂಡವಳು ಸಡನ್ ಆಗಿ ಬೇರೆಯವರ್ನ ಅದೇಗೆ ಇಷ್ಟ ಪಡ್ತಾಳೋ' ಲೋಕೇಶ ಕೇಳಿದ.

'ಅದ್ರಲ್ಲಿ ಏನ್ ತಪ್ಪಿದೆ ಲೋಕಿ? That's fine.. ಅವ್ಳು ಬೇರೆ ಯಾರನ್ನೂ ಇಷ್ಟ ಪಡ್ದಲೇ ಇರ್ಬಾರ್ದು ಅಂತ ಏನ್ ಇಲ್ವಲ್ಲ. Infact I respect her feelings towards someone.. let her be happy .. ಆದ್ರೆ..' ಎಂದ ಮರು ಸೆಕೆಂಡಿನಲ್ಲೇ ಮತ್ತೊಂದು ಸುತ್ತಿನ ಅಳುವನ್ನು ಶುರುಮಾಡಿದ.

ಲೋಕೇಶ ಆತನನ್ನೇ ತೀಕ್ಷ್ಣ ಕಣ್ಣುಗಳಿಂದ ನೋಡತೊಡಗಿದ.

**

ಆದರೆ ಅಂದಿನಿಂದ ಆದಿ ತೀರಾನೇ ಮಂಕಾದ. ಓಟ ಪಾಠಗಳೆಲ್ಲ ದೂರದ ಮಾತು ಪ್ರತಿನಿತ್ಯ ಕನಿಷ್ಠ ಒಂದು ಹೊತ್ತು ಊಟವನ್ನೂ ಮಾಡುವುದ ನಿಲ್ಲಿಸಿದ. ಆತನ ಅಮ್ಮನ ಫೋನುಗಳು ಒಂದರಿಂದೊಂದು ದಿನವಿಡಿ ಬಂದರೂ ಯಾವಾಗಲಾದರೊಮ್ಮೆಯಷ್ಟೇ ಆತ ಅವುಗಳಿಗೆ ಉತ್ತರಿಸತೊಡಗಿದ. ಪ್ರತಿದಿನ ಬೆಳಗ್ಗೆ ಲೋಕೇಶ ಆತನನ್ನು ರನ್ನಿಂಗ್ ಟ್ರ್ಯಾಕ್ ನಲ್ಲಿ ಓಡಿಸುವುದಕ್ಕೆ ಹಲವು ಬಗೆಯ ಹರಸಾಹಸ ಮಾಡಿದರೂ ಬೆಡ್ಡಿನಿಂದ ಒಂದಿಚೂ ಆತನನ್ನು ಕದಲಿಸಲಾಗುತ್ತಿರಲಿಲ್ಲ. ಕಾಲೇಜಿನ ಶಿಕ್ಷಕರೂ ಈಗ ಆದಿಯನ್ನು ವಿಚಾರಿಸತೊಡಗಿದರು. ಕೆಲವರು ಫೋನು ಮಾಡಲು ಪ್ರಯತ್ನಿಸಿದರೂ ಆತ ಉತ್ತರಿಸುತ್ತಿರಲಿಲ್ಲ.

ಲೋಕೇಶ ತನ್ನ ಕೈಲಾದ ಪ್ರಯತ್ನವನ್ನು ಮಾಡಿ ಸುಸ್ತಾದ. ಕೆಲವೊಮ್ಮೆ ಖುಷಿಗೆ ತಾನೇ ಖುದ್ದಾಗಿ ಫೋನಾಯಿಸಬೇಕೆಂಬ ಮನಸ್ಸಾದರೂ ಒಮ್ಮೆಯೂ ಮಾತನಾಡಿರದ ಆಕೆಯೊಟ್ಟಿಗೆ ಏನು ಮಾತಾಡಬೇಕೆಂದು ತೋಚದೆ ಸುಮ್ಮನಾಗುತ್ತಿದ್ದ. ಆದಿ ಗುರುತು ಹಿಡಿಯದಷ್ಟು ಸಣಕಲಾಗತೊಡಗಿದ. ಲೋಕೇಶ ಪ್ರತಿದಿನ ಆತನ ಕಾಲುಗಳಿಗೆ ಬಗೆಬಗೆಯ ಎಣ್ಣೆಗಳನ್ನು ತಿಕ್ಕುತ್ತಾ ಕನಿಷ್ಠ ಕಾಲಿನ ಸ್ನಾಯುಗಳಾದರೂ ಸಣಕಲಾಗದಿರಲಿ ಎಂದು ಪ್ರಯತ್ನಿಸತೊಡಗಿದ. ಅದೆಷ್ಟೇ ಒತ್ತಾಯ ಮಾಡಿದರು ಬಿಯರ್ ಅನ್ನು ಸಹ ಮುಟ್ಟುವುದನ್ನು ಬಿಟ್ಟುಬಿಟ್ಟ ಆದಿ. ಕೆಲವೊಮ್ಮೆ ಹಿಂದೂಸ್ತಾನಿ ಸಂಗೀತವನ್ನು ಹಾಕುವಂತೆ ಕೇಳಿದರೂ ಕೊಂಚ ಸಮಯದಲ್ಲೇ ಬೇಡವೆಂದು ನಿಲ್ಲಿಸಿಬಿಡುತ್ತಿದ್ದ. ವಸಂತಕಾಲವನ್ನು ಕಳೆದ ಮರದಂತೆ ಬರಡಾಯಿತು ಆದಿಯ ಮನಸ್ಸು. ತಾನೆಂದು ಅಂದುಕೊಂಡಿರದ, ಕೇವಲ ಕನಸ್ಸಿನಲ್ಲಿಯೇ ಮಾತ್ರ ಸಾಧ್ಯವಾಗಬಹುದಿದ್ದ ಖುಷಿಯ ಸಾಂಗತ್ಯ ಈ ಬಗೆಯಲ್ಲಿ ಮುರಿದುಬೀಳುತ್ತದೆ ಎಂದು ಬಹುಶಃ ಆತನಿಗೆ ತಿಳಿದಿರಲಿಲ್ಲ. ಹಸಿದ ಕರುವಿಗೆ ಅಮ್ಮನ ಘಂಟೆಯ ಸದ್ದಿನ ಮುದ್ದು ನಾದವಾಗಿದ್ದ, ಜ್ವಾಲಾಮುಖಿಯೇ ಎದುರಾದರೂ ಧೈರ್ಯದಿಂದ ಎದುರಿಸಬಲ್ಲ ಶಕ್ತಿಯಾಗಿದ್ದ ಖುಷಿ ಆದಿಯನ್ನು ಒಂಟಿಯಾಗಿಸಿದಳು.

ಕೆಲವೊಮ್ಮೆ ಇದೆಲ್ಲ ಕನಸ್ಸಾಗಿ ನಾಳೆ ಪುನ್ಹ ನಾನು ಖುಷಿಗೆ ಫೋನಾಯಿಸಬಾರದೇಕೆ? 'ಹಲೋ..' ಎಂಬ ಉದ್ವೇಗಭರಿತ ಆಕೆಯ ಮಾತುಗಳು ನನ್ನನ್ನು ಮತ್ತೊಮ್ಮೆ ಸಂತೈಸಬಾರದೇಕೆ? ಆಕೆಯನ್ನು ನಾನು ಇನ್ನೂ ಆಳವಾಗಿ ಅರಿಯಬಾರದೇಕೆ? ನನ್ನೊಳಗಿನ ತುಮುಲಗಳನ್ನೆಲ್ಲ ಎಳೆಎಳೆಯಾಗಿ ಆಕೆಯೊಟ್ಟಿಗೆ ಹಂಚಿಕೊಳ್ಳಬಾರದೇಕೆ? ಎಂದು ಯೋಚಿಸಿದಾಗಲೆಲ್ಲ ಆದಿಯ ಕಣ್ಣಂಚುಗಳು ಒದ್ದೆಯಾಗುತ್ತಿದ್ದವು. ಕನಿಷ್ಠ ಪಕ್ಷ ಆಕೆ ದಿನಕೊಮ್ಮೆಯಾದರೂ ನನಗೆ ಫೋನನ್ನು ಮಾಡುತ್ತಿರಲಿ. ನನ್ನೊಟ್ಟಿಗೆ ಮನಸ್ಸು ಬಿಚ್ಚಿ ಮಾತಾಡುತ್ತಿರಲಿ. ಕೊನೆಯ ಪಕ್ಷ ಗೆಳೆಯರಾಗಿಯಾದರೂ ಸರಿಯೇ, ಆಕೆ ನನ್ನೊಂದಿಗೆ ಎಂದೆಂದಿಗೂ ಇರಲಿ. ಆಕೆ ಯಾರನನ್ನಾದರೂ ಮದುವೆಯಾಗಲಿ. ಆಕೆಯ ಪ್ರೀತಿಯೂ ಒಂದು ಪ್ರೀತಿಯಲ್ಲವೇ? ಕೂಡಲೇ ಆತನಿಗೆ ಏನೋ ಅನಿಸಿತು. ಅದು ಆತನನ್ನು ಸಟೆದು ಕೂರುವಂತೆ ಮಾಡಿತು.

'ಪ್ರೀತಿ?! ಮೊದಲ ಬಾರಿಗೆ ನನ್ನ ಮನಸ್ಸು ಪ್ರೀತಿ ಎಂಬ ಪದವನ್ನು ಎತ್ತಿದೆ. ಇಷ್ಟೆಲ್ಲಾ ಆದರೂ ಪ್ರಸ್ತುತ ಘಳಿಗೆಯವರೆಗೂ ಆಕೆಯನ್ನು ನಾನು ಪ್ರೀತಿಯೆಂಬ ಕಣ್ಣಿನಿಂದ ನೋಡುತ್ತಿದ್ದೇನೆ ಎಂದು ಅಂದುಕೊಂಡಿರಲೇ ಇಲ್ಲ.. ಇದೇಗೆ ಸಾಧ್ಯ?! ನನ್ನ ಹಾಗು ಆಕೆಯ ಆ ಅತ್ಯಾಪ್ತ ಸಂಬಂಧ ಪ್ರೀತಿಯ ಸಂಕೇತವೇ? ಪ್ರೀತಿ ಎಂದರೆ ಹೀಗೆಯೇ. ಇದು ಪ್ರೀತಿಯೇ?'



**

ಕನ್ನಡಿಯ ಮುಂದೆ ಆದಿಯನ್ನು ತರತನೇ ಎಳೆದು ತಂದ ಲೋಕೇಶ ಛಟಾರನೆ ಆತನ ಕೆನ್ನೆಗೆ ಭಾರಿಸಿದ. ಆದಿ ಏನೂ ಮಾತನಾಡದೆ ತಲೆ ಕೆಳಹಾಕಿಕೊಂಡು ನಿಂತ. ಒಂದರಿಂದೊಂದಂತೆ ನಾಲ್ಕು ಭಾರಿ ಪುನಃ ಭಾರಿಸಿದ. ಲೊಕೇಶನ ಮುಖ ಕೆಂಪೇರಿದರೂ ಆದಿಯ ಮುಖಭಾವದಲ್ಲಿ ಯಾವುದೇ ಬದಲಾವಣೆಗಳು ಕಾಣಲಿಲ್ಲ.

'ಬಡ್ಡಿ ಮಗ್ನೆ.. ಅಮ್ಮ ನೋಡಿದ್ರೆ ಅಲ್ಲಿ ಅಪ್ಪ ಇಲ್ಲ ಅಂತ ಒಬ್ರೇ ನರಳ್ತಾ ಇದ್ದಾರೆ..ಆರೋಗ್ಯ ಹದಗೆಟ್ಟಿ ಸಣಕಲಾಗಿ ಹೋಗಿದ್ದಾರೆ.. ನಿನ್ಗೆ ಮಾತ್ರ ಅದ್ಯಾರೋ ಶೂರ್ಪನಖಿ ಸಿಗ್ಲಿಲ್ಲ ಅಂತ ಸಾಯ್ತಾ ಇದ್ದೀಯ.. ಥು .. ನಿಂದೂ ಒಂದ್ ಜನ್ಮನ .. ನಿನ್ನಂತ ಮಕ್ಳು ಇದ್ರೆಷ್ಟು ಸತ್ರೇಷ್ಟು .. ಜೀವಕೊಟ್ಟ ಪೇರೆಂಟ್ಸ್ ಗಿಂತ ನಿಮ್ಮಂತವರಿಗೆ ದಾರೀಲಿ ಸತ್ರೂ ತಿರಿಗ್ ನೋಡ್ದೆ ಇರೋ ಜನರೇ ಇಷ್ಟ ಆಗ್ತಾರೆ .. ಇನ್ಫ್ಯಾಕ್ಟ್ ಅದು ಅವ್ರ್ ತಪ್ಪಲ್ಲಪ್ಪ .. ನಿನ್ನಂತ ಮೂರ್ ಕಾಸಿನ ಜನ್ರ ತಪ್ಪು .. ಯಾರಲೇ ಅದು .. ಅಪ್ಪ ಅಮ್ಮನಿಗಿಂತಾನೂ ಜಾಸ್ತಿ ಆಗೋರು.. ಹೊಟ್ಟೆ ಬಟ್ಟೆ ಕಟ್ಟಿ ಬೆಳ್ಸೋಕೆ ಮಾತ್ರ ಅವ್ರ್ ಬೇಕು .. ಸೀಮೆಗಿಲ್ದಿರೋ ತುಕಾಲಿ ಮಾತಿಗೆ ನಿಂಗೆ ಬೇರ್ಯವಳ್ ಯಾರೋ ಬೇಕು .. '

ತನ್ನೊಳಗೆ ನೆಡೆಯುತಿದ್ದ ಆಂತರಿಕ ತೊಳಲಾಟಗಳಲ್ಲಿ ಅಮ್ಮನೂ ಅಪ್ಪನೂ ಹಾಗು ಖುಷಿಯೂ ಇದ್ದರೂ ಯಾರೊಟ್ಟಿಗೂ ಆ ಬಗ್ಗೆ ಹೇಳಿಕೊಳ್ಳದ ಆದಿಗೆ ಕೂಡಲೇ ಸಂಕಟದ ಅಲೆಗಳು ಒಳಗಿನಿಂದ ತೋಯಿಸಿ ಬಂದಂತಾಯಿತು. ಆದರೆ ಆತ ಅಳಲಿಲ್ಲ.

'ನೋಡಪ್ಪ ಗುರು .. ನೀನ್ ಯಾವ್ ರೀತಿಯ ಆಶಿಕ್ ಅಂತ ಗೊತ್ತಿಲ್ಲ .. ಅದ್ರೊಟ್ಟಿಗೆ ಏನ್ ಮಾಡ್ಕೊಂಡ್ ಆದ್ರೂ ಸಾಯಿ .. ಆದ್ರೆ ಈಗ ಇಮ್ಮಿಡಿಯೇಟ್ ಆಗಿ ಮನೆಗ್ ಹೋಗು .. ಅಮ್ಮನೊಟ್ಟಿಗೆ ಸ್ವಲ್ಪ ದಿನ ಇರು.. ಮಗ ಅನ್ನೋ ಕಿಂಚಿತ್ತು ಬೆಲೆಯನ್ನಾದರೂ ತೋರ್ಸು ಮಾರಾಯ ... '

ಆದಿ ಆಗಲೂ ಸುಮ್ಮನಿದ್ದ.

'ಇಂಟರ್ನಲ್ಸ್ ಇಲ್ಲ .. ಅಟೆಂಡ್ಎನ್ಸ್ ಇಲ್ಲ .. ಅಟ್ ಲೀಸ್ಟ್ ರನ್ನಿಂಗ್ ಅಲ್ಲಿ ಏನಾದ್ರೂ ಮಾಡಿದ್ರೆ ಸ್ಪೋರ್ಟ್ ಕೋಟದಲ್ಲಿ ಆದ್ರೂ ಎಕ್ಸಾಮ್ಸ್ ಸ್ಕಿಪ್ ಮಾಡಬಹುದಿತ್ತು .. ಕರ್ಮಕ್ಕೆ ಆದೂ ಹಾಳಾಗಿ ಹೋಯ್ತು .. ಇನ್ ಇಲ್ಲಿ ಟೈಮ್ ವೇಸ್ಟ್ ಮಾಡೋಕಿಂತ ಅಮ್ಮನೊಟ್ಟಿಗಾದ್ರೂ ಇರು ಗುರು'

ಎಲ್ಲವನ್ನು ಕೇಳಿ ಆದಿ ಪುನಃ ತನ್ನ ಬೆಡ್ಡಿನ ಮೇಲೆ ಹೋಗಿ ಸುಮ್ಮನೆ ಮಲಗಿದ. ಲೋಕೇಶನಿಗೆ ತನ್ನ ಮುಂದಿದ್ದ ಕನ್ನಡಿಯನ್ನು ಬರಿಗೈಯಿಂದಲೇ ಪುಡಿಮಾಡಬೇಕೆಂಬ ಮನಸ್ಸಾದರೂ ಶಾಂತನಾದ.

ರಾತ್ರಿಯಿಡಿ ಲೋಕೇಶ ಯೋಚಿಸಿದ.

ಆದರೆ ರಾತ್ರಿ ಕಳೆದು ಬೆಳಗಾಗುವುದರೊಳಗೆ ಆದಿ ಊರಿನ ಬಸ್ಸನ್ನು ಹಿಡಿದ.

**

ಹಲವು ತಿಂಗಳುಗಳ ನಂತರ ಮನೆಗೆ ಬಂದ ಆದಿಯನ್ನು ಕಂಡ ಅಮ್ಮ ಬಾಚಿ ತಬ್ಬಿಕೊಂಡು ಅಳತೊಡಗಿದರು. ಎಲುಬುಗಟ್ಟಿದ ಮಗನ ಸ್ಥಿತಿಯನ್ನು ಕಂಡು ಹೌಹಾರಿದ ಅವರು ಕೂಡಲೇ ಎಲ್ಲವನ್ನು ಮರೆತವರಂತೆ ಮಗನ ಶುಶ್ರುಷೆಯಲ್ಲಿ ತೊಡಗಿದರು. ಮಗನಿಗೆ ಮೆಟ್ಟಿದ ಜನರ ಕಣ್ಣನ್ನು ತೆಗೆಯಲು ಹಳದಿ ಕುಂಕುಮ ಬೆರೆಸಿದ್ದ ನೀರಿನ ತಟ್ಟೆಯೊಳಕ್ಕೆ ತೊಟ್ಟು ಮುರಿದ ತೂತು ಮಾಡಿದ ವೀಳೆಯದೆಲೆಯನ್ನು ಅದ್ದಿ ಅದಕೊಂದಿಷ್ಟು 'ಥು ಥು' ಎಂದು ಉಗಿದು ಮಗನ ಮುಖಕ್ಕೆ ನೀಳಿಸಿ, ನಂತರ ಅದ್ದಿದ್ದ ಎಲೆಯನ್ನು ಗ್ಯಾಸ್ ಸ್ಟೋವಿನ ಮೇಲೆ ಸುಟ್ಟು ಕರಕಲಾದ ಅದರ ಮಸಿಯನ್ನು ತಂದು ಮಗನ ಹಣೆಗೆ ಹಚ್ಚಿ ಕೈಯನ್ನು ಮುಖದ ಮೇಲೆ ಸವರಿ ಲಟಲಟನೆ ಲಟಿಗೆಗಳನ್ನು ಮುರಿದು ಜೋರಾಗಿ ನಿಟ್ಟುಸಿರು ಬಿಟ್ಟರು. ನಂತರ ಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡಲು ಹೇಳಿ , ಬೆನ್ನನ್ನು ಉಜ್ಜಿ ಅವನ ಎಲುಬುಗಟ್ಟಿದ ಬೆನ್ನುಮೂಳೆಗಳನ್ನು ನೋಡುತ್ತಾ 'ಯಾಕ್ ಮಗ ಹೀಗಾಗಿದ್ದೀಯ' ಎಂದು ಕನಿಕರ ಪಟ್ಟರು. ಅಡಿಗೆಮನೆಗೆ ಬಂದವರೇ ಮಗನ ನೆಚ್ಚಿನ ಅಕ್ಕಿ ರೊಟ್ಟಿ ಹಾಗು ಕೋಳಿ ಮಾಂಸದ ಅಡುಗೆಯನ್ನು ಮಾಡತೊಡಗಿದರು. ಬರಗೆಟ್ಟ ಕಟ್ಟೆಯಾಗಿದ್ದ ಆದಿಯ ಹೊಟ್ಟೆಗೆ ಅಮ್ಮನ ಕೈರುಚಿಯ ಮತ್ತು ಎಲ್ಲ ನೋವುಗಳನ್ನು ಮರೆಸಿಹಾಕಿತು. ಲೆಕ್ಕಕ್ಕೆ ಸಿಗದಷ್ಟು ರೊಟ್ಟಿಗಳನ್ನು ತಿಂದು ಮಲಗಿದವನಿಗೆ ಎಚ್ಚರವಾದಾಗ ಸಂಜೆಯ ಕತ್ತಲೆ ಮುಸುಕು ಹಾಕತೊಡಗಿತ್ತು. ಅಮ್ಮ ಕಾದು ಕೂತವಳಂತೆ ಆತ ಕಣ್ಣು ಬಿಡುತ್ತಲೇ ಬಿಸಿಬಿಸಿಯಾದ ಕಾಫಿಯನ್ನು ಮಾಡಿ ತಂದಳು. ಅದೆಷ್ಟೋ ದಿನಗಳಿಂದ ಗಜತೂಕದಂತೆ ಕಲ್ಲಿನಂತಾಗಿದ್ದ ಆತನ ತಲೆಯ ತೂಕ ಮನೆಯ ಘಮಭರಿತ ಕಾಫಿಯನ್ನು ಹೀರುತ್ತಲೇ ಕ್ಷೀಣಿಸತೊಡಗಿತು. ಮನೆಯ ಟೆರೇಸಿನ ಮೇಲತ್ತಿ ಮುಳುಗಿದ ಸೂರ್ಯನ ಹಾದಿಯನ್ನು ಅದೆಷ್ಟೋ ಹೊತ್ತಿನವರೆಗೂ ಹಾಗೆಯೇ ನೋಡುತ್ತಾ ನಿಂತ ಆದಿ. ಸಂಜೆಯ ಹಿತವಾದ ತಂಗಾಳಿ ಆತನ ಮನಸ್ಸಿನ ಭಾರವನ್ನು ತಗ್ಗಿಸಿತು.

'ಎಲ್ ಹೋಗಿರ್ಬಹುದೋ ಆದಿ .. ಇವತ್ತಿಗೆ ಆರ್ ತಿಂಗ್ಳ್ ಆಯ್ತಲ್ಲೋ..' ಟಿವಿಯಲ್ಲಿ ಬರುತ್ತಿದ್ದ ಯಾವುದೊ ಕಾರ್ಯಕ್ರಮವನ್ನು ನೆಪಮಾತ್ರಕ್ಕೆ ನೋಡುವಂತೆ ಅಮ್ಮ ಹೇಳಿದರು.

ಕೆಲ ಕಾಲ ಸುಮ್ಮನಿದ್ದ ಆದಿ ಕೊನೆಗೆ ತಾನು ಅಪ್ಪನನ್ನು ಹುಡುಕಿಕೊಂಡು ತಮಿಳುನಾಡಿನ ಬೃಹದೇಶ್ವರ ದೇವಾಲಯದವರೆಗೂ ಹೋಗಿದ್ದಾಗಿ ಹೇಳಿದನು. ಮಗನ ಮಾತುಗಳನ್ನು ಕೇಳಿ ಆಶ್ಚರ್ಯಗೊಂಡ ಅಮ್ಮ ಆ ಶಿವ ಅದ್ಯಾವ ದೇವಸ್ಥಾನಕ್ಕೆ ಅವ್ರುನ್ನ ಕರಿತಾನೋ ಏನೋ ಎಂದು ಗಳಗಳನೆ ಅಳತೊಡಗಿದರು. ನಂತರ ಅವರು ಹೀಗೆ ಮನೆ ಬಿಡಲು ಬಹುಶಃ ನನ್ನ ಕೊಂಕು ಮಾತುಗಳು ಹಾಗು ಜಗಳವೇ ಕಾರಣ ಎಂದೂ ರೋಧಿಸತೊಡಗಿದರು.

'ನಿನ್ ಯಾಕಮ್ಮ ಅಳ್ತಿಯ .. ಯಾರ್ ಮನೇಲಿ ಇಲ್ದೆ ಇರೋದ್ ಏನಲ್ಲ .. ಯಾರೂ ಬೇಡ ಆದವ್ರಿಗೆ ಜಗಳ ಆದ್ರೇನು ಜಾತ್ರೆ ಆದ್ರೇನು'

'ಮೊದ್ಲೆಲ್ಲ ಹೀಗ್ ಇರ್ಲಿಲ್ಲ ಆದಿ .. ಬರಬರುತ್ತಾ ಈ ಜನ , ಮೋಸ , ವಂಚನೆ , ಸುಳ್ಳುತನ ಇಂತಹ ವಿಷ್ಯಗಳಿಗೇ ಜಾಸ್ತಿ ಸಿಟ್ ಮಾಡ್ಕೊಂಡು ಮನೇಲಿ ಅರಚಾಡತೊಡಗಿದರು.. ನಂಗೂ ಕೋಪ ತಡೀಲಾರ್ದೆ ಬೈಯ್ತಾ ಇದ್ದೆ..'

ಆದಿ ಸುಮ್ಮನಾದ. ಅಪ್ಪ ಅಮ್ಮರ ಅರಚಾಟದ ದಿನಗಳನ್ನು ನೆನೆದು ಆದಿಗೆ ಮತ್ತೆ ತಲೆನೋಯತೊಡಗಿತು. ತಂಗಿಯ ನೆನೆಪೂ ಮರುಕಳಿಸತೊಡಗಿತು. ಸೋಫಾದ ಮೇಲೆಯೇ ಆತ ನಿದ್ರೆಗೆ ಜಾರಿದ. ಅಮ್ಮ ಅವನನ್ನು ಎಬ್ಬಿಸಿ ಮಂಚದ ಮೇಲೆ ಮಲಗಿಸಿದರು.

ಮರುದಿನ ಬೆಳಗ್ಗೆ ಬೇಗನೆ ಎದ್ದ ಆದಿ ವಾಕಿಂಗೆಂದು ನೆಡೆಯುತ್ತಾ ಅಪ್ಪ ಪ್ರತಿದಿನ ಬರುತ್ತಿದ್ದ ಊರ ಹೊರವಲಯದ ಸಣ್ಣ ಕಾಡಿನಲ್ಲಿದ್ದ ಬಿಲ್ಲೇಶ್ವರನ ದೇವಾಲಯಕ್ಕೆ ಬಂದನು. ಕಲ್ಲಿನಿಂದ ನಿರ್ಮಾಣಗೊಂಡಿದ್ದ ಆ ದೇವಾಲಯದ ಸುತ್ತಲೂ ಹಚ್ಚ ಹಸಿರ ಪೊದೆಗಳು ಆವರಿಸಿದ್ದವು. ಚಪ್ಪಲಿಯನ್ನು ಬದಿಗಿರಿಸಿ ಕಲ್ಲಿನ ಮೆಟ್ಟಿಲುಗಳಿಗೆ ನಮಸ್ಕರಿಸಿ ಒಳಗೆ ಹೋದರೆ ಅದೇನೋ ಒಂದು ಬಗೆಯ ಶಾಂತತೆ. ಸುಮಾರು ಎಂಟತ್ತು ಶತಮಾನಗಳಿಗೂ ಹಳೆಯದಾದ ಆ ದೇವಾಲಯವನ್ನು ಮೊದಲ ಬಾರಿಗೆ ಆದಿ ಪ್ರವೇಶಿಸಿದ. ಘಾಡ ಕಪ್ಪು ಕಲ್ಲಿನಿಂದ ನಿರ್ಮಾಣಗೊಂಡಿರುವ ಆ ದೇವಾಲಯದ ಮಧ್ಯ ಭಾಗದಲ್ಲಿ ಶಿವನ ಲಿಂಗ ರಾಜಗಾಂಭೀರ್ಯದಿಂದ ನಿಲ್ಲಲ್ಪಟ್ಟಿತು. ಯಾರೋ ಅದೆಷ್ಟೋ ದಿನಗಳ ಹಿಂದೆ ಹಚ್ಚಿದ್ದ ಮಣ್ಣಿನ ದೀಪ ಆದಿಯನ್ನು ಹತ್ತಿರಕ್ಕೆ ಕರೆಯಿತು. ಕೊಡಲೇ ಆದಿ ದೇವಾಲಯದದ ಪಕ್ಕದಲ್ಲಿ ಹರಿಯುತ್ತಿದ್ದ ಸಣ್ಣ ತೊರೆಯಲ್ಲಿ ಕೈಕಾಲುಗಳನ್ನು ತೊಳೆದುಕೊಂಡು, ದೇವಾಲಯಕ್ಕೆ ಅಂಟಿಕೊಂಡಿದ್ದ ದಾಸವಾಳ ಗಿಡದ ಹೂವುಗಳನ್ನು ಕಿತ್ತು ತಂದ. ಗುಡಿಯ ಮೂಲೆಯಲ್ಲಿ ಯಾರೋ ಇಟ್ಟಿದ್ದ ದೀಪದ ಎಣ್ಣೆಯನ್ನು ಕಂಡು ಸುಟ್ಟು ಕರಕಲಾಗಿದ್ದ ದೀಪದ ಬತ್ತಿಯನ್ನು ಸರಿಪಡಿಸಿ ದೀಪವನ್ನು ಹತ್ತಿಸಿದ. ದೀಪದ ಬೆಳಕು ಶಿವಲಿಂಗಕ್ಕೆ ಚಿನ್ನದ ಹೊಳಪನ್ನು ನೀಡಿತು. ಆದಿಯ ಕೈಗಳು ತನ್ನಿಂತ್ತಾನೆ ಒಟ್ಟಾದವು. ಆತ ಅಲ್ಲಿಯೇ ಕಲ್ಲಿನ ನೆಲದ ಮೇಲೆ ಕೂತು ಓಂಕಾರವನ್ನು ಗುನುಗತೊಡಗಿದ. ಸುತ್ತಮುತ್ತಲಿನ ಹಕ್ಕಿಗಳ ಇಂಚರ ಹೆಚ್ಚಾಗತೊಡಗಿತು. ಕೆಲನಿಮಿಷಗಳ ಕಾಲ ಹೀಗೆ ಓಂಕಾರವನ್ನು ಗುನುಗಿದವನಿಗೆ ಕೂಡಲೇ ಎಚ್ಚರವಾಯಿತು.ಶಿವನ ಆ ಲಿಂಗದ ಹಿಂದೆ ಏನೋ ಅಡಗಿ ಕೂತಿರುವಂತೆ ಭಾಸವಾಯಿತು. ಹೋಗಿ ನೋಡಬೇಕೆಂಬ ಕುತೂಹಲವಾದರೂ ಏನೋ ಒಂದು ಬಗೆಯ ಭಯ. ಆದರೂ ಮನಸ್ಸು ಮಾಡಿ ಆತ ಒಳನೆಡೆದ

Continues..

Monday, October 12, 2020

ಪಯಣ - 16


ತನ್ನ ಪ್ರೆಶ್ನೆಗೆ ಉತ್ತರಿಸದನ್ನು ಕಂಡು ಕೋಪಗೊಂಡ ಶಶಿ ಅಜ್ಜಿಯ ಬೆಳಿಗೆ ಬಂದು,

'ಅಜ್ಜಿ .. ನೀವಾದ್ರೂ ಹೇಳ್ಬಾರ್ದ .. ಕಾಲೇಜಿಗೆ ಬರದೆ ಒಂದ್ ತಿಂಗ್ಳ್ ಆಯ್ತು .. ಹೀಗೆ ಇನ್ ಸ್ವಲ್ಪ ದಿನ ಹೋದ್ರೆ ಈ ವರ್ಷ ಪೂರ್ತಿ ಹಾಳಾಗುತ್ತೆ..'

'ಮಗ , ಈಗಿನ್ ಕಾಲ್ದಾಗೆ ಇಂತ ಹುಡುಗ್ರು ಕೋಟಿಗೂ ಒಬ್ರು ಸಿಗಾಕಿಲ್ಲ .. ನಿನ್ ಆ ಕಾಲೇಜು ಗೀಲೇಜು ಎಲ್ಲ ಹಸಿದವ್ನ ಹೊಟ್ಟೆ ತುಂಬಿಸಾಕಿಲ್ಲ. ಹಾಳ್ ಬಿದ್ದಿರೋ ನೆಲ್ದಲ್ಲಿ ಬಿತ್ತೋ ಇಂತ ಮಗಿಂಗೆ ಯಾವ್ ವರ್ಷನೂ ಹಾಳಾಗಾಕಿಲ್ಲ ಬುಡು..' ಎಂದು ಅಜ್ಜಿ ಹೇಳಿದಾಗ ಶಶಿಯ ಕೋಪ ಇನ್ನೂ ವಿಪರೀತವಾಯಿತು. ಆಕೆ ಅವರಿಬ್ಬರನ್ನು ಅಲ್ಲಿಯೇ ಬಿಟ್ಟು ತುಸು ದೂರದ ಗದ್ದೆಯ ಬದುವಿನ ಮೇಲೆ ಹೋಗಿ ಕೂತಳು. ಅದು ಆ ಸ್ಥಳದ ಮಹಿಮೆಯೋ ಏನೋ, ಸ್ವಲ್ಪ ಹೊತ್ತು ಶಾಂತವಾಗಿ ಕೂತ ನಂತರ ಆಕೆಯ ಮನಸ್ಸು ಹಗುರಾಯಿತು. ಬಿಸಿಲು ಅದಾಗಲೇ ನತ್ತಿಯ ಮೇಲೆ ಬಂದಿದ್ದರಿಂದ ಲೋಕೇಶ ಉಳುತ್ತಿದ್ದ ಎತ್ತುಗಳನ್ನು ಹಳ್ಳದ ಬದಿಗೆ ಕಟ್ಟಿ, ಅವುಗಳಿಗೆ ನೀರನ್ನು ಕುಡಿಯಲು ಬಿಟ್ಟು, ತನ್ನ ಕೈಕಾಲುಗಳನ್ನುತೊಳೆದುಕೊಂಡು ಶಶಿಯ ಬಳಿಗೆ ಬಂದ. ಅಜ್ಜಿ ಎತ್ತುಗಳಿಗೆ ಬೆಳಗೆಯೇ ಕೊಯ್ದಿರಿಸಿದ ಹಸಿರು ಹುಲ್ಲನ್ನು ಹಾಕತೊಡಗಿದಳು. ಹಚ್ಚ ಹಸಿರೇ ಎಲ್ಲೆಲ್ಲೂ ಪಸರಿಸಿದ್ದ ಅಲ್ಲಿ ಕಡುಬಿಸಿಲೂ ತಂಪಾಗಿಯೇ ಪಸರಿಸಿಕೊಂಡಿತ್ತು. ಶಶಿಯ ಬಳಿಗೆ ಬಂದು ಕೂತವನೇ,

'ಕೃಷಿ ಒಂತರ ಧ್ಯಾನ ಮಾಡಿದಹಾಗೆ ಶಶಿ. ಧ್ಯಾನ ಮಾಡುವಾಗ ಡಿಸ್ಟ್ರೆಬ್ ಮಾಡ್ಬಾರ್ದು ಅಂತ ಗೊತ್ತಿಲ್ವ' ಎಂದು ಆಕೆಯನ್ನು ಛೇಡಿಸಿದ.

ತನ್ನ ಮುಷ್ಟಿಗಟ್ಟಿದ ಕೈಗಳಿಂದ ಆತನ ಬೆನ್ನಿನ ಮೇಲೆ ಗುದ್ದಿದ ಆಕೆ,

'ಹೌದು ಸಾರ್ .. ನೀವು ಇಲ್ಲಿ ಕೃಷಿ ಧ್ಯಾನ ಮಾಡ್ತಾ ಇರಿ .. ನಿಮ್ ಸೆಮಿಸ್ಟರ್ ಎಕ್ಸಾಮ್ಸ್ನ ಯಾರಾದ್ರೂ ಧ್ಯಾನಗುರು ಬಂದು ಬರೀತಾರೆ'

'ನನ್ನ್ ಮುಂದೆ ಇರೋ ಒಂದೇ ಎಕ್ಸಾಮ್ ಅಂದ್ರೆ ಈ ಸರಿ ಭತ್ತ ಬೆಳೆಯೋದು ಶಶಿ .. ಕರೆಕ್ಟ್ ಟೈಮಿಗೆ ಮಳೆರಾಯ ಬಂದು ಈ ಎಕ್ಸಾಮ್ಸ್ ಅಲ್ಲಿ ಕಾಪಾಡಿದ್ರೆ ಸಾಕು'

'ಲೋಕೆಶ್ .. Are you serious ..? ಭತ್ತ ಬೆಳೆಯೋ ಆಸೆಗೆ ನಿನ್ ಮೂರ್ ವರ್ಷದ ಓದನ್ನು ಬಲಿಕೊಡೋದು ಎಷ್ಟ್ ಸರಿ? ಮೇಲಾಗಿ ಕೃಷಿ ಮಾಡೋಕ್ಕೆ 24X7 ಗದ್ದೆಲೇ ಇರ್ಬೇಕು ಅಂತ ಏನಿಲ್ಲ ಅಂತ ನೀನೆ ಹೇಳ್ತಿದ್ದೆ.. ಹೀಗೆನಾಯ್ತು..’ ಅಧಿಕಾರವಾಣಿಯಲ್ಲಿ ಆಕೆ ಕೇಳಿದಳು.

'ಶಶಿ .. ನಿಂಗೆ ಹೇಗ್ Explain ಮಾಡ್ಲಿ..? ಪ್ಲೀಸ್ ಅರ್ತ ಮಾಡ್ಕೋ. ನಂಗೆ ಸದ್ಯಕ್ಕೆ ಕೃಷಿ ಬಿಟ್ಟು ಬೇರೇನೂ ತಿಳಿತಿಲ್ಲ.. ಅದೆಷ್ಟೇ ಕೆಲ್ಸ ಮಾಡಿದ್ರೂ ಸಾಲ್ತ ಇಲ್ಲ.. ಅಟ್ ದಿಸ್ ಪಾಯಿಂಟ್ ಇಫ್ ಯು ಆಸ್ಕ್ ಮಿ , ನನಗೆ ಇಲ್ಲೇ ಇದೆ ಜಾಗದಲ್ಲಿ ಜೀವನ ಪರ್ಯಂತ ಇರ್ಬೇಕು ಅನ್ನಿಸ್ತಾ ಇದೆ. ಮನೆ, ಓದು, ಹಾಡು, ಪಾಠ, ಹಣ , ಆಸೆ ಯಾವುದೂ ಬೇಡ. ನೆಲವೊಂದು ಸಾಕು. ನೆಲದ ಮಣ್ಣಿದ್ದರೆ ಸಾಕು. ಅಲ್ಲಿ ಒಂದಿಷ್ಟು ಹಸಿರು ಜೀವಗಳಿಗೆ ಬದುಕನ್ನು ಕಟ್ಟಿಕೊಡಬೇಕು. ಅವುಗಳನ್ನು ಪೋಷಿಸಬೇಕು. ಸಾಕಿ ಸಲಹಬೇಕು. ಅಲ್ಲದೆ..' ಎಂದು ಏನೋ ಹೇಳಲು ಮುಂದಾಗಿ 'ಶಶಿ , ಡೋಂಟ್ ವರಿ .. ನಂಗೆ ನಿನ್ನ ಕನ್ಸರ್ನ್ ಅರ್ಥ ಆಗುತ್ತೆ ..ನೀನ್ ಅನ್ಕೋಳ್ಳೋ ಹಾಗೆ ಏನೂ ಆಗಲ್ಲ.. ಟ್ರಸ್ಟ್ ಮಿ' ಎಂದು ಆಕೆಯ ಮೃದು ಕೈಯನ್ನು ತನ್ನ ಒರಟು ಅಸ್ತಗಳಿಂದ ಅದುಮುತ್ತಾನೆ.

'ಲೋಕೇಶ್ .. ಬಿ ಲಾಜಿಕಲ್ .. ನೀನ್ ಹೇಳೋದು ಕತೆ ರೂಪದಲ್ಲಿ ಕೇಳೋಕ್ಕೆ ಚೆನ್ನಾಗಿರುತ್ತೆ.. ಪ್ಲೀಸ್ ಅಂಡರ್ಸ್ಟ್ಯಾಂಡ್ .. ಅಟ್ ಲೀಸ್ಟ್ ಸೆಮಿಸ್ಟರ್ ಎಕ್ಸಾಮ್ಸ್ಗೆ ಆದ್ರೂ ಎನ್ರೋಲ್ ಮಾಡ್ಕೋ .. ನಾನ್ ನಿಂಗೆ ಹೇಳ್ ಕೊಡ್ತೀನಿ ' ಎಂದಳು. ಲೋಕೇಶ ಅವಳ ಕಳವಳಗೊಂಡ ಮುಖವನ್ನು ನೋಡಿ ಮಂದಹಾಸವನ್ನು ಬೀರತೊಡಗಿದ. ಅಜ್ಜಿ ಅದಾಗಲೇ ಊಟವನ್ನು ಇವರು ಇರುವಲ್ಲಿಗೇ ತಂದಳು. ಬಾಳೆದೆಲೆಯ ಮೇಲೆ ಮೂಡಿದ ಹಬೆಯಾರುತ್ತಿದ್ದ ಕೆಂಪಕ್ಕಿಯ ಅನ್ನ , ಬೇಳೆ ಸಾರು , ಮಜ್ಜಿಗೆ ಹಾಗು ಉಪ್ಪಿನಕಾಯಿಯನ್ನು ಕಂಡು ಲೋಕೇಶನ ಮನಸ್ಸು ಪ್ರಸನ್ನವಾಯಿತು. ಒಂದು ಮುಡಿ ಅನ್ನದ ತುತ್ತನ್ನು ಕಟ್ಟಿ ಅಜ್ಜಿಯ ಜೊತೆಗಿರುತ್ತಿದ್ದ ನಾಯಿಗೆಂದು ತೆಗೆದಿಟ್ಟ ಹಾಗು ಮತ್ತೊಂದು ಮುಡಿ ಅನ್ನವನ್ನು ಪಕ್ಕದಲ್ಲಿ ಚಿಲಿಪಿಲಿಗುಡುತ್ತಿದ್ದ ಹಕ್ಕಿಗಳೆಡೆಗೆ ಎಸೆದ. ಕೂಡಲೇ ಹಕ್ಕಿಗಳು ಪುರ್ರನೆ ಅಲ್ಲಿಂದ ಹಾರಿದರೂ ಕೆಲನಿಮಿಷದ ನಂತರ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಾಪಸ್ಸು ಹಾರಿಬಂದವು. ಲೋಕೇಶ ಒಂದೊಂದೇ ಮುಡಿಯಷ್ಟು ಅನ್ನವನ್ನು ಅವುಗಳಿಗೆ ಎಸೆಯುತ್ತಿದ್ದರೆ ಅವುಗಳು ಧೈರ್ಯ ಮಾಡಿ ಒಂದೊಂದೇ ಹೆಜ್ಜೆಯನ್ನು ಮುಂದಿಡತೊಡಗಿದವು. ಯಾವಾಗ ಲೋಕೇಶ ಅವುಗಳಿಗೆ ಅಪಾಯಕಾರಿಯಂತೆ ಕಾಣಲಿಲ್ಲವೋ ಕೂಡಲೇ ಅಷ್ಟೂ ಹಕ್ಕಿಗಳು ಆತನ ಊಟ ಮಾಡುತ್ತಿದ್ದ ಎಡೆಗೇ ಮುತ್ತಿಗೆಯನ್ನು ಹಾಕಿದವು. ಮೊದಲ ಬಾರಿ ಎಂಬಂತೆ ಅವುಗಳನ್ನು ನೋಡುತ್ತಾ ಲೋಕೇಶ ಗಳಗಳನೆ ಅಳತೊಡಗಿದ.

****

ಅದೇನೋ ಒಂದು ಬೆಳಕು ನನನ್ನು ಹತ್ತಿರಕ್ಕೆ ಎಳೆಯುತ್ತಿದೆ. ಅದರಲ್ಲಿ ವಿಪರೀತವಾದೊಂದು ಸಂತೋಷವಿದೆ. ಸತ್ಯವಿದೆ. ಶಾಂತಿಯಿದೆ. ಇತ್ತೀಚೆಗೆ ಗುರುತು ಮಾಡಿಕೊಂಡು ನಾನು ದೇವಾಲಯಗಳಿಗೆ ಹೋಗುತ್ತಿಲ್ಲ. ಒಂದೆಡೆ ಹೋಗಿ ಅಲ್ಲಿಯೇ ಜನರು ಮಾತಾಡುವ, ವರ್ಣಿಸುವ ದೇವಾಲಯಗಳ ಪರಿಚಯವನ್ನು ಮಾಡಿಕೊಂಡು ಮುನ್ನಡೆಯತೊಡಗಿದೆ. ಊರು ಕೇರಿಗಳು ಈಗ ಬೇಡವಾದವು. ಪ್ರತಿ ದೇವಾಲಯಗಳೂ ನನನ್ನು ಆ ಬೆಳಕಿನ ಇನ್ನೂ ಹತ್ತಿರಕ್ಕೆ ಕೊಂಡೊಯ್ಯುತ್ತಿವೆ ಎಂದೆನಿಸುತ್ತಿದೆ. ಅಲ್ಲದೆ ಈಗ ಬೆಳಗಿರಲಿ,ಸಂಜೆಯಾಗಲಿ ಅಥವಾ ಸೂರ್ಯ ನತ್ತಿಗೇರಿರುವ ಸಮಯವಾದರೂ ಸರಿಯೇ ದೇವಾಲಯವನ್ನು ಪ್ರವೇಶಿಸುತ್ತಿದ್ದೆ. ಜನರ ಆ ಚೀರಾಟಗಳ ಸಂತೆಯ ನಡುವೆಯೂ ಮನಸ್ಸು ಧ್ಯಾನ ಮಾಡುವುದನ್ನು ಕಲಿಯಿತು. ಅದು ಯಾವ ಊರು ಎನ್ನುವುದಕ್ಕಿಂತ ಹೆಚ್ಚಾಗಿ ಅದು ಯಾವ ದೇವಾಲಯವೆಂದೆಷ್ಟೇ ಮನದಲ್ಲಿ ಉಳಿಯತೊಡಗಿತು.

ಮನೆಯಿಂದ ಈಗ ಹೆಚ್ಚುಕಡಿಮೆ ಸಾವಿರ ಕಿಲೋಮೀಟರ್ ದೂರ ಪ್ರಯಾಣಿಸಿರಬಹುದು. ಇಂದು ಬೆಳಗಿನ ಸೂರ್ಯನ ಕಿರಣಗಳು ದೇವಾಲಯದ ತುತ್ತತುದಿಯನ್ನು ತಲುಪುವ ಮೊದಲೇ ಅಲ್ಲಿಗೆ ಹೋದ ನಾನು ಕುತೂಹಲಕಾರಿ ಆ ಕೆತ್ತನೆಗಳನ್ನು ಘಂಟೆಗಳ ತನಕ ನೋಡುತ್ತಾ ನಿಂತೆ. ತಮ್ಮ ಎಲ್ಲವನ್ನೂ ಬದಿಗಿಟ್ಟು ಅವನಲ್ಲಿ ಒಂದಾಗಲು ಬರುವ ಅದು ಜಗತ್ ಪ್ರಸಿದ್ಧ ದೇವಾಲಯ. ಅಂತೆಯೇ ವಿಶ್ವದ ಮೂಲೆ ಮೂಲೆಗಳಿಂದ ಜನರನ್ನು ಆಕರ್ಷಿಸುವ ಆ ದೇವಾಲಯದ ಸುತ್ತ ಮೂಡಿರುವ ಕೆತ್ತನೆಗಳು ನೋಡುಗನ ಮನದೊಳಗೆ ಹಲವಾರು ಪ್ರೆಶ್ನೆಗಳನ್ನು ಹುಟ್ಟುಹಾಕುವುದಂತೂ ಸುಳ್ಳಲ್ಲ. ನೋಡಿದವನ ಕಣ್ಣು ಕೊರೆಯುವಂತಹ ಕಾಮೋತ್ತೇಜಕ ಕೆತ್ತನೆಗಳು ಅವು. ಎಲ್ಲಿಯೂ ಕಂಡರಿಯದ ಬಗೆಯ ಈ ಕೆತ್ತನೆಗಳನ್ನು ಅರ್ಥಯಿಸಿಕೊಳ್ಳಬೇಕೇ ಎಂದು ಮೊದಲಿಗೆ ಅನಿಸಿದರೂ ಒಳಗಿರುವ ಅವನಿಗೂ ಇಲ್ಲಿರುವ ಇವುಗಳಿಗೂ ಏನೋ ಒಂದು ಎಳೆ ಮಾರ್ಪಟ್ಟಂತಿದೆ ಎನಿಸಿತು.

ದೇವರ ಆಸ್ಥಾನ ಹಾಗು ಸಂಭೋಗದ ರಚನೆ? ಇದು ಹೇಗೆ ಸಾಧ್ಯ? ದೇಶದ ಬಹುತೇಕ ದೇವಾಲಯಗಳಲ್ಲೂ ಈ ಬಗೆಯ ಕೆತ್ತನೆಗಳಿವೆ. ಚಿತ್ತದ ಎಲ್ಲವನ್ನೂ ಬದಿಗಿಟ್ಟು ಒಳಗಿರುವ ಅವನಲ್ಲಿ ಒಂದಾಗಲು ಬರುವ ಜನರಿಗೆ ಈ ರೀತಿಯ ಕೆತ್ತನೆಗಳು ಅವರ ಚಿತ್ತಗಳನ್ನು ಕಲಕದೆಯೇ ಇರುತ್ತದೆಯೇ? ಚಿತ್ರ ವಿಚಿತ್ರ ಬಗೆಯ ಈ ಭಂಗಿಗಳನ್ನು ಕಲ್ಪಿಸಿಕೊಳ್ಳುವುದೇ ಅಸಾಧ್ಯ. ಮೇಲಾಗಿ ಪ್ರಾಣಿಗಳು?! ಪ್ರಾಣಿಗಳೊಟ್ಟಿಗಿನ ಸಂಭೋಗ? ಆಧುನಿಕ ಜಗತ್ತಿನ ಕೋರ್ಟು ಕಚೇರಿಗಳು ಇಂತಹ ಕ್ರಿಯೆಗಳನ್ನು ದಂಡನಾರ್ಹ ತಪ್ಪುಗಳೆಂದು ಘೋಷಿಸಿವೆ. ಇಲ್ಲ ಇದು ನೋಡಿದಷ್ಟು ಸುಲಭವಲ್ಲ. ಬಹುಷಃ ನಮ್ಮಂತಹ ಅಲ್ಪಮತಿಗಳಾದವರಿಗೆ ಇದು ಅರಿಯದ ವಿಷಯವಿರಬಹುದು. ಮೊದಲನೆಯದಾಗಿ ಎಂತವರ ಮನದಲ್ಲೂ ಕಾಮಭಾವನೆಗಳನ್ನು ಕೆರಳಿಸುವ ಈ ಅಮೋಘ ಕೆತ್ತನೆಯ ಕುಶಲತೆಗೆ ತಲೆದೂಗಲೇಬೇಕು. ಮಾನವನ ದೇಹದ ಅಂಗಾಗಗಳಿಗೆ ಎಲ್ಲಿಲ್ಲದ ಜೀವತುಂಬಿ ಕೆತ್ತಿರುವ ಆ ಮಹಾನ್ ಶಿಲ್ಪಿಗಳು ಅಸಾಮಾನ್ಯದವರೆಂದರೆ ಸುಳ್ಳಲ್ಲ. ಎರಡನೆಯದಾಗಿ ಇಲ್ಲಿ ಹೆಣ್ಣೇ ಎಲ್ಲ ಕೆತ್ತನೆಗಳ ಕೇಂದ್ರಬಿಂದು.

ತನ್ನ ವಿವಿಧ ಭಂಗಿಗಳಿಂದ ಪುರುಷನನ್ನು ಸೆಳೆಯುವ ಆಕೆಯನ್ನು ಈ ಒಂದು ಕೆತ್ತನೆ ಅದೆಷ್ಟು ಅರ್ಥಪೂರ್ಣವಾಗಿ ಹೇಳುತ್ತಿದೆ. ಇಲ್ಲಿ ಅರೆನಗ್ನಳಾಗಿರುವ ಹೆಣ್ಣೊಬ್ಬಳು ಭೀಮಗಾತ್ರದ ಹುಲಿಯಂತಹ ಪ್ರಾಣಿಯೊಟ್ಟಿಗೆ ಸೆಣೆಸುತ್ತಿದ್ದಾಳೆ. ವ್ಯಾಘ್ರವಾಗಿರುವ ಆ ಪ್ರಾಣಿ ಅವಳ ಮೇಲೆ ಧಾಳಿ ನೆಡೆಸುತ್ತಿದ್ದರೆ ಆಕೆ ಅದನ್ನು ತನ್ನ ಕೈಗಳಿಂದಲೇ ತಡೆದು ನಿಲಿಸಿದ್ದಾಳೆ. ಕಾಮವೆಂಬ ವ್ಯಾಘ್ರತೆಗೆ ಬಲಿಯಾಗಿ ಮದವೇರಿದ ಗಜದಂತಾಗುವ ಚಿತ್ತದ ಸ್ಥಾನದಲ್ಲಿ ಆ ಪ್ರಾಣಿ ನಿಂತಿರಬಹುದೇ? ಪ್ರತಿಬಾರಿ ಹೀಗೆ ಅನಿಸಿದಾಗಲೆಲ್ಲ ದೇಹವನ್ನು ನಿಯಂತ್ರಿಸಲು ಪ್ರಯತ್ನಿಸುವ ಮನಸ್ಸೇ ಆ ಹೆಣ್ಣಿನ ಪ್ರತಿರೋಪವಾಗಿರಬಹುದೇ? ಹಾಗಾದರೆ ಇಂತಹ ಕೆತ್ತನೆಗಳ ಅರ್ಥವೇನು? ಮನಸ್ಸನು ನಿಗ್ರಹಿಸಿ ದೇವಾಲಯದೊಳಗೆ ಪ್ರವೇಶಿಸು ಎಂದೇ?

ಹಾಗಾದರೆ ಜೀವನದಲ್ಲಿ ಕಾಮದ ನಿಜವಾದ ಪಾತ್ರವೇನು? ಜೀವನದ ಅರ್ಥ ಅಥವಾ ಗುರಿ ಈ ಕಾಮವೆಂಬ ಆಸೆಯೊಳಗೆ ಅದೆಷ್ಟರ ಮಟ್ಟಿಗೆ ಹುದುಗಿದೆ? ಅದು ತಪ್ಪೇ? ತಪ್ಪಾದರೆ ಅದು ನಮ್ಮೊಳಗೇ ಇರುವುದಾದರೂ ಏತಕ್ಕೆ? ಮನಸ್ಸಿಗೆ ಸಿಗುವ ಆ ಮಹಾಸುಖ ಧ್ಯಾನದಲ್ಲಿ ಅಡಗಿರುವಂತೆ ದೇಹಕ್ಕೆ ಬೇಕಾಗಿರುವ ಸುಖದ ಹಾದಿಯೇ ಇದು? ಹಾಗಾದರೆ ಮನಸ್ಸಿಗೆ ಖುಷಿಯನ್ನು ನೀಡುವುದರಲ್ಲಿ ತಪ್ಪಿಲ್ಲದಿದ್ದರೆ ದೇಹಕ್ಕೆ ಖುಷಿಯನ್ನು ಎರೆಯುವುದರಲ್ಲಿ ತಪ್ಪೇನಿದೆ?

ಎಲ್ಲವನ್ನು ಮರೆತು ಧ್ಯಾನದಲ್ಲಿ ಮಗ್ನನಾಗಿ ಶಾಂತಿಯನ್ನು ಅರಸುವ ಆಸೆಯೂ ಒಂದು ಕಾಮನೆಯಲ್ಲವೇ?

ಏನೋ ಹೊಸತು ಹೊಳೆದಂತಾಗಿ ನಾನು ದೇವಾಲಯದ ಒಳಗೆ ಪ್ರವೇಶಿಸಿದೆ. ಯಾರೋ ನನ್ನನ್ನು ಹತ್ತಿರಕ್ಕೆ ಸೆಳೆದಂತಾಯಿತು. ಮುಂದೇನಾಯಿತು ಎಂದು ಅರಿಯುವುವಷ್ಟರಲ್ಲಿ ನಾನು ಅಲ್ಲಿರುವ ದೇವರ ಗರ್ಭಗುಡಿಯ ಮುಂದೆ ಓಂಕಾರವನ್ನು ಗುನುಗುತ್ತಿದ್ದೇನೆ. ಸಂಜೆಯ ಕೊನೆಯ ಆರತಿ ದೇವರಿಗೆ ಅರ್ಪಿಸಲ್ಪಡುತ್ತಿತ್ತು.

**

'ಅಬ್ಬಾ .. ಅಬ್ಬಾ .. ಆಂಕ್ ಖುಲ್ ಗಯಾ..' ನನ್ನ ಪಕ್ಕದಲ್ಲಿಯೇ ಕೂತಿದ್ದ ಐದಾರು ವರ್ಷದ ಬಾಲಕನೊಬ್ಬ ನಾನು ಕಣ್ಣು ತೆರೆಯುವುದನ್ನು ನೋಡಿದೊಡನೆಯೇ ತನ್ನ ಅಪ್ಪನನ್ನು ಕರೆಯುವಂತೆ ಮನೆಯ ಒಳಗೆ ಓಡಿದ. ಹಣೆಯ ಮೇಲೆ ತಣ್ಣನೆಯ ಬಟ್ಟೆಯನ್ನು ಹೊದಿಸಿದ ನಾನು ಯಾರದೋ ಮನೆಯ ಕೊಣೆಯಲ್ಲಿ ಮಲಗಿದ್ದೆ. ಹಂಚಿನ ಮನೆಯ ಆ ಕೋಣೆಯ ತುಂಬಾ ಸಾಂಬ್ರಾಣಿ ಹೊಗೆಯ ಘಮ. ಏನಾಗಿದೆ ಎಂದು ತಿಳಿದುಕೊಳ್ಳಲು ನಿಧಾನವಾಗಿ ಮೇಲೇಳತೊಡಗಿದರೆ ನಿತ್ರಾಣದಿಂದ ಎಂಬಂತೆ ಪುನ್ಹ ಮಂಚದ ಮೇಲೆಯೇ ಕುಸಿದು ಬಿದ್ದೆ. ಕೂಡಲೇ ಒಳಗಿನಿಂದ ಓಡಿಬಂದ ವ್ಯಕ್ತಿಯೊಬ್ಬರು ತಮ್ಮ ಅಗಲವಾದ ಕೈಗಳಿಂದ ನನ್ನ ಬೆನ್ನಿಗೆ ಆಧಾರವಾಗಿ 'ಸಂಬಾಲ್ಕೆ ಬಾಯಿಜಾನ್ ..' ಎಂದು ಒಂದು ದಿಂಬುವನ್ನು ಅಡ್ಡಲಾಗಿಸಿ ನನನ್ನು ಅದಕ್ಕೆ ಒರಗಿಸಿದರು. ಬಿಳಿಯಾದ ಜುಬ್ಬಾ ಹಾಗು ತಲೆಯ ಮೇಲೊಂದು ಬಿಳಿಯ ಟೋಪಿಯನ್ನು ಧರಿಸಿದ್ದ ಅವರನ್ನು ಕಂಡೊಡನೆಯೇ ಅದು ಮುಸ್ಲಿಂ ಕುಟುಂಬವೊಂದರ ಮನೆಯೆಂದು ತಿಳಿಯಿತು. ನಾನು ಮಾತು ಪ್ರಾರಂಬಿಸುವ ಮೊದಲೇ ಅವರು,

'ಹೆದರಬೇಡಿ ಬಾಯಿ .. ನಿಮ್ಗೆ ಏನೂ ಆಗಿಲ್ಲ. ನಿಮ್ ಊರು ಯಾವುದು ಅಂತ ಗೊತ್ತಿಲ್ಲ .. ಆದ್ರೆ ನೆನ್ನೆ ನಮ್ಮೊರಿನ ದೇವಸ್ಥಾನದಲ್ಲಿ ನೀವು ಧ್ಯಾನ ಮಾಡ್ತಾ ಕೂತಿದ್ರಿ..ಸಂಜೆಯವರೆಗೂ ಹಾಗೆಯೇ ಇದ್ರಿ ಅನ್ಸುತ್ತೆ. ನಾನು ಆ ದಾರೀಲಿ ಬರೋ ಅಷ್ಟ್ರಲ್ಲಿ ನೀವು ನೆಲದ ಮೇಲೆ ಬಿದ್ದಿದ್ರಿ. ನಾನು ಬಂದು ನೋಡಿದ್ರೆ ನಿಮ್ಮ ಮೈ ಬಿಸಿಯಾಗಿತ್ತು. ಅಕ್ಕ ಪಕ್ಕ ಯಾರು ಇರ್ಲಿಲ್ಲ. ಹಾಗಾಗಿ ನಮ್ಮನೆಗೆ ಕರ್ಕೊಂಡು ಬಂದೆ. ಈಗ ಹೇಗಿದ್ದೀರ' ಎಂದ ಅವರು ನನ್ನ ಹಣೆಯನ್ನು ಮುಟ್ಟಿ ಪರೀಕ್ಷಿಸಿದರು.

'ಒಹ್ .. sorry .. ನಿಮ್ಗೆ ದೊಡ್ಡ ತೊಂದ್ರೆ ಆಯಿತು ಅನ್ಸುತ್ತೆ..'

'ಅರ್ರೆ ಬಾಯಿಜಾನ್.. ಹಾಗೇನಿಲ್ಲ..ನಿಮ್ಮಂತ ಧ್ಯಾನಿಗಳಿಗೆ ಸತ್ಕಾರ ಮಾಡೋದೂ ಒಂದ್ ಪುಣ್ಯನೇ ಬಿಡಿ'

'ಇಲ್ಲ ಸಾರ್ ...’ ಎಂದು ಮುಗುಳ್ ನಕ್ಕ ನಾನು ‘ನಾನ್ ಧ್ಯಾನಿ ಏನ್ ಅಲ್ಲ ..ದೇವಸ್ಥಾನಗಳಲ್ಲಿ ಓಂಕಾರ ಗುನುಗುತ್ತಾ ಇತ್ತೇಚೆಗೆ ಅದೇನ್ ಆಗುತ್ತೋ ಗೊತ್ತಿಲ್ಲ..ಒಮ್ಮೆ ಕಣ್ಣ್ ಮುಚ್ಚಿದ್ರೆ ಘಂಟೆಗಳ ತನಕ ತೆರೆಯೋದೆ ಇಲ್ಲ' ಎಂದೆ.

'ಬಹುತ್ ಅಚ್ಚ .. ದೇವರ ಅನುಗ್ರಹ ನಿಮ್ಮೆಲೆ ಹೀಗೆ ಯಾವಾಗಲು ಇರತ್ತೆ ಬಿಡಿ.. ಈಗ ತುಂಬಾನೇ ದಣಿದಿದ್ದಿರ .. ನಿಧಾನವಾಗಿ ಎದ್ದೇಳಿ ಊಟ ಮಾಡುವಿರಂತೆ' ಎಂದು ನನ್ನ ಕೈಗಳನ್ನು ಅವರ ಭುಜದ ಮೇಲೆ ಹಾಕಿಕೊಂಡು ನೆಡೆಯ ತೊಡಗಿದರು. ಅವರ ಆರು ವರ್ಷದ ಆ ಪುಟಾಣಿ ಹುಡುಗನೂ ಸಹಾಯ ಮಾಡುವಂತೆ ನನ್ನ ಕಾಲನ್ನು ತಬ್ಬಿಕೊಂಡು ಸೆಣೆಸತೊಡಗಿದನು. ನಗುತ್ತ ನಾನು ಆತನ ತಲೆಯನ್ನು ಸವರಿದೆ.

'ನಿಮ್ಮ ಮಗನೆ ? ಹೆಸರು..?' ಎಂದು ಕೇಳಿದೆ.

'ಮೊಹಮ್ಮದ್ ಅಲಿ..' ಎಂದು ಅವರು ಹೇಳುವ ಮೊದಲೇ ಆತ ಉತ್ತರಿಸಿದ...

Continues