Saturday, April 29, 2017

ನಮ್ಮೂರ ಜಾತ್ರೆ


ಕಾಲ ವಸಂತವನ್ನು ಕಳೆದು ಉರಿ ಬೇಸಿಗೆಗೆ ಒಗ್ಗತೊಡಗಿತ್ತು. ರೆನೊಲ್ಡ್ಸ್ ಹಾಗು ‘ಟಿಕ್- ಟಿಕ್ ಪೆನ್ನುಗಳೊಟ್ಟಿಗೆ ಗಾಜಿನ ದೇಹದಂತಹ ಪ್ಲಾಸ್ಟಿಕ್ನ ಪೆನ್ನುಗಳೂ ಮಕ್ಕಳ ಕೈಸೇರತೊಡಗಿದ್ದವು. TVS ಹಾಗು ಬಜಾಜ್ ಬೈಕುಗಳೊಟ್ಟಿಗೆ ಓತಿಕ್ಯಾತದ ಮುಖಕ್ಕೆ ಹೋಲುವ ಹೆಡ್ಲೈಟ್ ನ ನವ ಮಾದರಿಯ ಬೈಕುಗಳು ರಸ್ತೆಯ ಮೇಲೆ ಕಾಣತೊಡಗಿದ್ದವು. ಫೋನೆಂದರೆ ರಸ್ತೆ ಬದಿಯ ಬೋರ್ ವೆಲ್ಲಿನ ಕುತ್ತಿಗೆಯನ್ನು ಸಾಧ್ಯವಾದಷ್ಟು ಮೇಲಕ್ಕೆಳೆದು ನಿಲ್ಲಿಸಿರಿವ ಕಂಬಗಳು ಹಾಗು ಅವುಗಳ ಬುಡದಲ್ಲಿ ಶಾವಿಗೆ ಪಾಯಸದ ಶಾವಿಗೆಗಳಂತೆ ನುಲಿದುಕೊಂಡಿರುವ ರಾಶಿ ರಾಶಿ ವೈರುಗಳು ಎಂದರಿತ್ತದ್ದ ಎಷ್ಟೋ ಜನರಿಗೆ ಇವುಗಳ್ಯಾವುದರ ಕಿರಿ- ಕಿರಿ ಇಲ್ಲದೆ ಜೇಬಿನ ಒಳಗಿರಿಸಿ ಎಲ್ಲೆಂದರಲ್ಲಿಗೆ ಕೊಡೊಯ್ಯಬಲ್ಲ ಫೋನುಗಳು ಬರುತ್ತಿದೆ ಎಂದು ಕೇಳಿ ಆಶ್ಚರ್ಯ ಚಕಿತವಾಗುತ್ತಿದ್ದ ಕಾಲವದು. ಅಲ್ಲದೆ ಪ್ರಪಂಚದ ಯಾವುದೇ ಸಮಸ್ಯೆಗಳಿಗೂ ಒಂದಿಲ್ಲೊಂದು ಉತ್ತರವನ್ನು ಕೊಡಬಲ್ಲ 'ಗೂಗಲ್' ಎಂಬೊಂದು ಯಂತ್ರವಿದೆ ಎಂದರೆ ಕೇಳಿದವರು ಗಹಗಹನೇ ನಕ್ಕಿ ಹಾಗೆಂದವನನ್ನೊಮ್ಮೆ ಮೇಲಕ್ಕೂ ಕೆಳಕ್ಕೂ ಅನುಮಾನಾಸ್ಪದವಾಗಿ ನೋಡಿ ಸುಮ್ಮನಾಗಿಬಿಡುತ್ತಿದ್ದರು. ಒಟ್ಟಿನಲ್ಲಿ ಕಾಲ ವಸಂತವನ್ನು ಕಳೆದು ಉರಿ ಬೇಸಿಗೆಗೆ ಒಗ್ಗತೊಡಗಿತ್ತು.

ಅಪ್ಪ ಊರು ಬಿಟ್ಟು ಸಿಟಿ ಸೇರಿ ಬದುಕನ್ನು ಕಟ್ಟಿಕೊಳ್ಳುವ ಪ್ರಯತ್ನದಲ್ಲಿರುವಾಗ ಸಹಜವಾಗಿಯೇ ಮಗನಿಗೆ ಹತ್ತಿರವಾದದ್ದು ಸಿಟಿಗೆ ಸಮೀಪದಲ್ಲಿದ್ದ ಅಮ್ಮನ ತವರು ಮೆನೆ. ಜೊತೆಗೆ ಅಲ್ಲಿನ ಸೀಬೆ ಹಲಸು ಹಾಗು ಕಿತ್ತಳೆ. ಪ್ರತಿ ಸೀಸನ್ ಗೆ ತಕ್ಕಂತೆ ಕರಾರುವಕ್ಕಾಗಿ ಹಾಜರಾಗುತಿದ್ದ ಈ ಹಣ್ಣುಗಳು ಮಗನನ್ನೂ ಅವುಗಳ ಆಗಮನಕ್ಕೆ ತಕ್ಕಂತೆ ಆ ಊರಿಗೆ ಬರಮಾಡಿಕೊಳ್ಳುತ್ತಿದ್ದವು. ಸೀಬೆ ಹಾಗು ಕಿತ್ತಳೆಗಳು ಮಳೆಗಾಲ ಹಾಗು ಬೇಸಿಗೆಗೊಮ್ಮೆ ಹಾಜರಾದರೆ ಹಲಸು ವರ್ಷಕೊಮ್ಮೆ ಮಾತ್ರ. ಅದೂ ಬೇಸಿಗೆ ಕಳೆದು ಮೆಳೆಗಾಲ ಶುರುವಾದ ಕೆಲ ತಿಂಗಳುಗಳ ನಡುವೆ ತನ್ನ ಕಾಲಘಟ್ಟವನ್ನು ಸೃಷ್ಟಿಸಿಕೊಂಡಿತ್ತು. ಬೇಸಿಗೆಯ ಶಾಲಾ ರಜ ದಿನಗಳೆಂದರೆ ಅಜ್ಜನ ಮನೆಯೆಂದು ಸ್ವಯಂ ಘೋಷಿಸಿಕೊಂಡಿದ್ದ ಮಗ ಮುಂದಿನ ಎರಡು ತಿಂಗಳು ಅಲ್ಲಿ ರಾಜನಂತೆ. ಬೇಸಿಗೆಯ ಹಣ್ಣುಗಳು ಮಳೆಗಾಲದ ಹಣ್ಣುಗಳಂತೆ ಎಲ್ಲೆಂದರಲ್ಲಿ ಸಮೃದ್ದವಾಗಿರದೆ ಅಲ್ಲೊಂದು ಇಲ್ಲೊಂದು ಎಂಬಂತೆ ಚದುರಿಕೊಂಡಿರುತಿದ್ದವು. ಆದರೇನಂತೆ, ಮೂರಡಿಯಂತಿದ್ದ ಮಗನ ದೇಹ ಯಾವ ಬೇಲಿಯ ಕನಿಷ್ಠ ಸಂಧಿಯನ್ನೂ ಸಲೀಸಾಗಿ ನುಸುಳಿ ಯಾರ ಮನೆಯ ತೋಟಕ್ಕಾದರೂ ಲಗ್ಗೆ ಹಿಟ್ಟುಬಿಡುತ್ತಿತ್ತು. ಹೀಗೆ ಕದ್ದು ಮುಚ್ಚಿ ತಿಂದ ಹಣ್ಣುಗಳು ಅದೆಷ್ಟೋ. ಈ ಮೂರೂ ಹಣ್ಣಿನಲ್ಲಿ ಯಾವುದೂ ಸಹ ಕದ್ದವ ಕಳ್ಳನೆಂದು ಗುರುತು ಮಾಡುವುದು ತುಸು ಕಷ್ಟವಾದರಿಂದ (ತಿಂದ ನಂತರ ಕೆಲ ಸಮಯದ ಮಟ್ಟಿಗೆ ಬರುವ ಹಣ್ಣಿನ ಘಮವನ್ನು ಹೊರತುಪಡಿಸಿ) ಇವುಗಳ ಕಳ್ಳಸಾಗಣೆ ತುಸು ಸರಳವೇ.

ಇವುಗಳೊಟ್ಟಿಗೆ ಮತ್ತೊಂದು ಹಣ್ಣಿತ್ತು. ಅದನ್ನು ತಿನ್ನಲು ಅತಿ ಇಷ್ಟ ಆದರೆ ಕದ್ದು ತಿಂದರೆ ಕಳ್ಳತನದ ಹಣೆಪಟ್ಟಿಯಿಂದ ಕಾಪಾಡಿಕೊಳ್ಳುವುದು ಬಲುಕಷ್ಟ. ಅಲ್ಲದೆ ಈ ಹಣ್ಣನು ತಿನ್ನಲು ಮನೆಯಿಂದ ತುಸು ದೂರವೂ ಹೋಗಬೇಕಿತ್ತು, ಅದೂ ಊರಿನ ಜಾತ್ರೆಗೆ ನೆಡೆದುಕೊಂಡು ಹೋಗುವ ಹಾದಿಯಲ್ಲಿ. ಆದರೆ ತೋಳಗಳ ಕಾಟ ಅಲ್ಲಿಯವರೆಗೂ ಹೋಗಲು ಬೇಕಿದ್ದ ಧೈರ್ಯವನ್ನು ಊರಿನ ಮಕ್ಕಳಿಗೆ ಅರಿಯದಂತೆಯೇ ಕಸಿದುಕೊಂಡುಬಿಟ್ಟಿತ್ತು. ಕದ್ದು ತಿಂದವ ತಾನು ಕಳ್ಳನಲ್ಲ ಎಂದು ಸುಳ್ಳಿನ ಬಾಯಿಂದ ಹೇಳಿದರೂ ಈ ಹಣ್ಣಿನ ಕಲೆ ನಾಲಿಗೆಯ ಮೇಲೆ ಸತ್ಯದ ಅಚ್ಚಿನಂತೆ ಕೂತುಬಿಡುತಿತ್ತು! ಯಸ್, ನೇರಳೆ ಹಣ್ಣು. ಭತ್ತದ ಗದ್ದೆಯ ಬದುಗಳಲ್ಲಿ ಅಥವಾ ಕಾಫೀ ತೋಟದ ಮದ್ಯೆ ಅಲ್ಲೊಂದೂ ಇಲ್ಲೊಂದೂ ಇರುತಿದ್ದ ಈ ಹಣ್ಣಿನ ಸ್ವಾದ ತಿಂದವನಿಗಷ್ಟೇ ಗೊತ್ತಿತ್ತು.

ಒಟ್ಟಿನಲ್ಲಿ ವಾರ್ಷಿಕ ರಜೆಯ ಎರಡು ತಿಂಗಳೂ ಅಜ್ಜನ ಮನೆಯಲ್ಲಿ ಚಿಂದಿ ಊಡಹಿಸುವ ಸಂಭ್ರಮಕ್ಕೆ ನೇರಳೆ ಹಣ್ಣಿನ ಆಸೆಯೂ ಕಾರಣವಾಗಿತ್ತು. ಆದರೆ ಈ ಹಣ್ಣನು ತಿನ್ನಲು ಎದುರಾಗುತ್ತಿದ್ದ ದ್ವಂದ್ವದ ಸ್ಥಿತಿ ಮಾತ್ರ ಅನುಭವಿಸಿದ ಚಡ್ಡಿ ಚಿಕ್ಕಣ್ಣಗಳಿಗಷ್ಟೇ ಗೊತ್ತು. ವಿಷಯವಿಷ್ಟೇ. ಜಾತ್ರೆ ಗೊತ್ತಾದ ಸುಮಾರು ಒಂದು ತಿಂಗಳ ಮೊದಲೇ ಹಳ್ಳಿಯ ಮನೆಗಳ ಪ್ರತಿ ವಸ್ತುವನ್ನೂ ಶುಚಿಮಾಡಿ ಹಾಗು ಹದಿನೈದು ದಿನದ ಮೊದಲು 'ಚೌತ' ಎಂಬ ನಿಯಮ/ವ್ರತ ಊರಿನ ಎಲ್ಲೆಲ್ಲೂ ಶುರುವಾಗುತ್ತಿತ್ತು. ಈ ಚೌತದಲ್ಲಿ ಮನೆಯವರ್ಯಾರು ಮಾಂಸಾಹಾರವಾಗಲಿ, ಅಂಗಡಿಯ ತಿಂಡಿ ತಿನಿಸುಗಳಾಗಲಿ, ತಲೆಯನ್ನು ಕ್ಷೌರ ಮಾಡಿಸಿಕೊಳ್ಳುವುದಾಗಲಿ ಕಡೆ ಪಕ್ಷ ಗಂಜಿ ಬಸಿದ ಅನ್ನವನ್ನೂ ಮಾಡುವಂತಿರಲಿಲ್ಲ (ಗಂಜಿ ಹಿಂಗಿಸಿದ ಅನ್ನವಾದರೆ ಓಕೆ). ಹೀಗೆ ಹದಿನೈದು ದಿವಸ ಯಾರು ಶ್ರದ್ದಾಭಕ್ತಿಯಿಂದ ನಿಯಮವನ್ನು ಪಾಲಿಸಿಕೊಂಡು ಇರುತ್ತಾರೋ ಅವರುಗಳು ಮಾತ್ರ ಊರಿನ ಜಾತ್ರೆಗೆ ಹೋಗಲು ಅರ್ಹರು.

ಮಕ್ಕಳಿಗಾದರೆ ದೊಡ್ಡವರೊಟ್ಟಿಗೆ ಊರ ಜಾತ್ರೆಯ ಹಾದಿಯಲ್ಲಿ ಹೋಗುವ ಅವಕಾಶ ಹಾಗು ನೇರಳೆ ಹಣ್ಣನು ಸವಿಯುವ ಭಾಗ್ಯ. ಹೀಗೆ ಹಬ್ಬದ ರಜೆಗೆ ಅಜ್ಜನ ಮನೆಗೆ ಬಂದು ಹದಿನೈದು ದಿವಸ ಅಂಗಡಿಯ ತಿಂಡಿಗಳೊಟ್ಟಿಗೆ ತಾತ್ಕಾಲಿಕ ವಿಚ್ಛೇದನವೋ ಅಥವಾ ಒಂದು ದಿವಸ ನೇರಳೆ ಹಣ್ಣನ್ನು ಸವಿಯುವ ಮಜವೋ ಎಂಬ ಸಂಕಷ್ಟದಲ್ಲಿ ಮಗ ಆರಿಸಿಕೊಳ್ಳುತಿದ್ದದು ಕೊನೆಗೆ ಊರ ಜಾತ್ರೆಯ ಚೌತವನ್ನೇ.

ಹೀಗೆ ಚೌತವೆಂಬ ವ್ರತಕ್ಕೆ ಸೇರಿ ‘ಛೆ! ಒಂದು ಪೆಪ್ಪೆರ್ಮೆಂಟಿನ ಗಾತ್ರಕ್ಕಿಂತಲೂ ಸಣ್ಣದಾದಾ ಹಣ್ಣನು ತಿನ್ನುವ ಆಸೆಯಲ್ಲಿ ಅಂಗಡಿ ತಿಂಡಿಗಳನ್ನು ಸವಿಯುವ ಸುಖವೇ ಇಲ್ಲವಾಹಿತೆ ಎಂದು ಮರುಗಿ ಧುಗುಡವೊಂದು ಮಗನ ಮನದೊಳಗೆ ಮನೆಮಾಡುತಿತ್ತು. ಆಗ ಸೋತು ಬಿದ್ದ ಮೊಗವನ್ನು ಕಂಡು ಅಜ್ಜಿ, ಸಂಜೆಯ ವೇಳೆಗೆ ಮನೆಯ ಹಿಂಬದಿಯ ಗೋಣಿಮರದ ಮೇಲೆ ಹಬ್ಬಿಕೊಂಡಿದ್ದ ವೀಳೇದೆಲೆಯ ಬಳ್ಳಿಯಿಂದ ಒಂದು ಎಲೆಯನ್ನು ಕಿತ್ತು ತಂದು ಅದರ ಮೇಲೆಲ್ಲಾ ಸಣ್ಣ ಸಣ್ಣ ತೂತುಗಳನ್ನು ಮಾಡಿ, ಒಲೆಯ ಮುಂದೆ ಮುದುಡಿ ಕೂತಿದ್ದ ಮೊಮ್ಮಗನ ಬಳಿಗೆ ಬಂದು, ಕೈಯಲ್ಲಿ ಹಿಡಿದ ಎಲೆಯನ್ನು ತಲೆಯಿಂದ ಪಾದದವರೆಗೂ ನೀಳಿಸುತ್ತಾ 'ಹೋದೋರ್ ಕಣ್ಣ್ , ಬಂದೋರ್ ಕಣ್ಣ್, ,' ಎಂದು ಶುರುಮಾಡಿದರೆ ಅದು 'ನರಿ ಕಣ್ಣ್ , ಕೋಳಿ ಕಣ್ಣ್' ಎಂದು ಪ್ರಾಣಿಗಳವೆರೆಗೂ ಬಂದು ನಿಲ್ಲುತಿತ್ತು. ಮಜವೆನ್ನಿಸುತಿದ್ದದ್ದು ಮಾತ್ರ ಆಕೆ ಅದ್ಯಾವ ಯಾವ ಕಣ್ಣುಗಳ ದೃಷ್ಟಿ ತೆಗೆಯುತ್ತಾಳೆ ಎಂಬ ಕುತೂಹಲದಲ್ಲೇ. ಅಲ್ಲದೆ ಮೊಮ್ಮಗನೂ ಸಹ ಮದ್ಯದಲ್ಲಿ ತನ್ನ ಇಚ್ಛೆಯ ಇಂಗಿತವನ್ನು ವ್ಯಕ್ತಪಡಿಸಿ 'ಗಿರೀಶನ ಕಣ್ಣ್, ಕಾರ್ತಿಕನ ಕಣ್ಣ್ , ಸಂದೀಪನ ಕಣ್ಣ್' ಎಂಬ ತನ್ನ ಸ್ನೇಹಿತರ ಕಣ್ಣುಗಳನ್ನೂ ಸೇರಿಸಿ ಆಕೆಯ ಕಣ್ಣಿನ ಪದ್ಯವನ್ನು ಸಾಧ್ಯವಾದಷ್ಟು ಹಿಗ್ಗಿಸುತ್ತಿದ್ದೆ. ನಂತರ ನೀಳಿಸಿದ ಎಲೆಯನ್ನು ಒಲೆಯ ಕೆಂಡದ ಮೇಲೆ ಹಾಕಿ ಅದು ಚಟ ಪಟನೆ ಸುಟ್ಟು ಸದ್ದುಮಾಡುತ್ತಿದ್ದಾಗ ಅಜ್ಜಿ ತನ್ನ ಆಶ್ಚರ್ಯವನ್ನು ವ್ಯಕ್ತಪಡಿಸುತ್ತಾ 'ಎಷ್ಟ್ ಕಣ್ಣ್ ಬಿದ್ದಿದಾವೆ ನೋಡು' ಎನ್ನುತ ಸುಟ್ಟು ಕರಕಲಾದ ಎಲೆಯ ಅಸ್ತಿಯ ತುದಿಯ ಕಪ್ಪು ಮಸಿಯನ್ನು ಒತ್ತಿ ಮೊಮ್ಮಗನ ಹಣೆಯ ಹಾಗು ಕಾಲಿನ ಪಾದದ ಮೇಲೂ ಒಂದೊಂದು ಚುಕ್ಕೆಯನ್ನು ಹಿಡುತಿದ್ದಳು. ಅದು ಹೆಗಲೇರಿದ ದೃಷ್ಟಿ ಕೆಳಗೆ ಬಿದ್ದ ಕಾರಣವೋ ಅಥವಾ ಆಕೆಯ ಪದ್ಯದ ಖುಷಿಯೋ ಏನೋ ಮಂದಹಾಸವೊಂದು ಮೊಮ್ಮಗನ ಮುಖದ ಮೇಲೆ ಮೂಡುತಿತ್ತು. ಹೀಗೆ ಹದಿನೈದು ದಿನಗಳಲ್ಲಿ ನನಗಾಗಿ ಕನಿಷ್ಠಪಕ್ಷ ಏಳೆಂಟು ವೀಳೇದೆಲೆಗಳ ದೇಹತ್ಯಾಗವಾದರೂ ಮೊಮ್ಮಗನಿಗಾಗಿ ಆಗುತ್ತಿತ್ತು. ಹೀಗೆ ಅಂಗಡಿ ತಿಂಡಿಗಳ ಪೋಷಣೆ ಇಲ್ಲದೆ ಕಷ್ಟಪಟ್ಟು ತಳ್ಳುತ್ತಿದ್ದ ದಿನಗಳಲ್ಲಿ ಕೊನೆಕೊನೆಗೆ ಕುಂತರೆ, ನಿಂತರೆ, ಅಲ್ಲದೆ ಮಲಗಿದರೆ ಕನಸ್ಸಿನಲ್ಲಿಯೂ ಸಹ ತಿಂಡಿಗಳೇ ಕಾಣುವಂತಾದ ಮೇಲೆ ಒಮ್ಮೊಮ್ಮೆ ಆದದ್ದು ಆಗಲಿ ಅಜ್ಜನ ಖಾಕಿ ಚಡ್ಡಿಯ ಜೇಬಿನಿಂದ ಚಿಲ್ಲರೆಯನ್ನು ಲಪಟಾಯಿಸಿ ಶುಂಠಿ ಪೆಪೆರ್ಮೆನ್ಟ್, ಬಾದಾಮಿ ಚಾಕಲೇಟು ಹಾಗು ಬಿಗ್ ಬಬೂಲ್ ಚೀವಿಂಗ್ ಗಮ್ ಗಳನ್ನು ಒಂದೇ ಬಾರಿಗೆ ಬಾಯಿಯೊಳಗೆ ತೂರಿಕೊಂಡು ನುಂಗಿಬಿಡಬೇಕೆಂಬ ಆರ್ತನಾದ ಒಳಗೊಳಗೇ ಮೂಡುತಿದ್ದರೂ 'ಅಂಗಡಿ ತಿಂಡಿ ತಿಂದು ಜಾತ್ರೆಗೆ ಬಂದ್ರೆ ದೇವಸ್ಥಾನದ ಜೇನುಗಳು ಅಟ್ಟಾಡಿಸ್ಕೊಂಡು ಕಚ್ಚುತ್ತವೆ' ಎಂಬ ಭಯಹುಟ್ಟಿಸುವ ಮಾತುಗಳನ್ನು ಕೇಳಿ ಅಂಗಡಿಗೆ ಹೋಗಬೇಕೋ ಅಥವಾ ತೆಪ್ಪಗೆ ಮನೆಯ ಊಟವನ್ನು ತಿಂದು ಇರಬೇಕೋ ಎಂಬ ಪೀಕಲಾಟ ಶುರುವಾಗುತ್ತಿತ್ತು. ಅಂತೂ ಇಂತೂ ದಿನಗಳು ಯುಗಗಳಂತೆ ಕಳೆದು ಹದಿನೈದು ದಿನದ ಚೌತ ಮುಗಿದು ಜಾತ್ರೆಯ ದಿನ ಬಂದೆ ಬಿಡುತಿತ್ತು. ರಾವಣನ ಕಠೋರ ತಪಸ್ಸಿಗೆ ಶಿವ ಪ್ರತ್ಯಕ್ಷನಾದದಂತೆ.

ಜಾತ್ರೆಯ ದಿನದಂದು ಪ್ಯಾಂಟು ಶರ್ಟು ಧರಿಸಿದ ಗಂಡಸರು ಉಸ್ತುವಾರಿಯನ್ನು ನೋಡಿಕೊಳ್ಳಲು ಬೇಗನೆ ಮನೆಯಿಂದ ಹೊರಟರೆ ಅವರ ಮಕ್ಕಳು ಚಡ್ಡಿಯನ್ನು ಹಾಗು ಅಪ್ಪಂದಿರು ಪಂಚೆಯನ್ನು ಉಟ್ಟು ಸೂರ್ಯ ಆಳೆತ್ತರಕ್ಕೆ ಬಂದ ಮೇಲೆ ಹೊರಡುತ್ತಿದ್ದರು. ಅಜ್ಜಂದಿರೊಟ್ಟಿಗೆ ಹೋದರೆ ನೇರಳೆಹಣ್ಣನ್ನು ಕಿತ್ತು ಕೊಡುವುದಲ್ಲದೆ ಸಾವಕಾಶವಾಗಿ ಹೊಟ್ಟೆ ಬಿರಿಯುವಂತೆ ತಿನ್ನಲು ಅನುವು ಮಾಡಿಕೊಡುತಿದ್ದರು ಎಂಬುದು ಮಕ್ಕಳು ಗಳಿಕೊಂಡಿದ್ದ ತರ್ಕ. ಎಲ್ಲರು ಹೊರಟ ಮೇಲೆ ಕೊನೆಯದಾಗಿ ಊರ ಹುಡುಗಿಯರು, ಹೆಂಗಸರು ಹಾಗು ಅಜ್ಜಿಯಂದಿರು ಓಟ್ಟಾಗಿ ಗುಸು ಗುಸು ಗುಡುತ್ತಾ ದಾರಿಯಲ್ಲಿ ಸಿಗುವ ಮನೆಗಳ ಮುಂದೆ ಅರಳಿರುವ ವಿಧ ವಿಧವಾದ ಹೂವುಗಳನ್ನು ಕೂಯ್ದು ತಲೆಗೆ ಮುಡಿದುಕೊಳ್ಳುತ್ತಾ, ಹಾದಿಯಲ್ಲಿ ಅವರಿಗಾಗೇ ಕಾಯುತ್ತಿದ್ದ ಇತರ ಹೆಂಗಸರನ್ನೂ ತಮ್ಮ ಗುಂಪಿನೊಳಗೆ ಸೇರಿಸಿಕೊಂಡು ಸಾಗುತಿದ್ದರು. ಇತ್ತ ಕಡೆ ಅಪ್ಪಂದಿರು ಹೋದ ನಂತರ ಅಜ್ಜಂದಿರೊಟ್ಟಿಗೆ ಹೊರಟ ಮೊಮ್ಮಕಳ ಪಡೆ ಅಕ್ಷರ ಸಹ ವಾನರರಂತೆ ಕುಣಿಯುತ್ತಾ, ಕೂಗುತ್ತ, ಹೊಟ್ಟೆಗೆ ವಾರದಿಂದ ಹಿಟ್ಟೇ ಸಿಕ್ಕಿಲ್ಲವೇನೋ ಎಂಬಂತೆ ನೇರಳೆ ಮರದ ರೆಂಬೆ ಕೊಂಬೆ ಗಳಲ್ಲಿ ಜೋತುಬಿದ್ದು ಹಣ್ಣು, ಕಾಯಿ ಎನ್ನದೆ ಸಿಕ್ಕ ಸಿಕ್ಕ ಗೊಂಚಲನ್ನು ಹಾಗೆಯೆ ಬಾಯಿಯ ಒಳಗೆ ಗಿಡುಗಿಕೊಂಡುಬಿಡುತ್ತಿದ್ದರು. ಹತ್ತಾರು ಹಣ್ಣಿನ ರಸ ಒಮ್ಮೆಲೇ ಬಾಯೊಳಗೆ ಕರಗಿ ಗಂಟಲಿನ ಒಳಗೆ ಇಳಿದರೆ, ಆಹಾ..! ಎಂದನಿಸಿ ಹಾಗೆಯೆ ಕಣ್ಣು ಮುಚ್ಚಿಕೊಂಡು ಕೆಲ ಕ್ಷಣ ತಮ್ಮನ್ನೇ ತಾವು ಮರೆತುಬಿಡುತ್ತಿದ್ದರು. 'ಕಸ-ಕಡ್ಡಿ, ಉಳ-ಗಿಳ ನೋಡ್ಕಂಡ್ ತಿನ್ನಿ' ಎಂದನ್ನುತಿದ್ದ ಅಜ್ಜನ ಮಾತಿಗೆ ಬೆಲೆಕೊಟ್ಟು ನಂತರದ ಗೊಂಚಲನ್ನು ಬಾಯಿಯ ಒಳಗೆ ಹಾಕಿಕೊಳ್ಳುವ ಮೊದಲು ಕಾಟಾಚಾರಕ್ಕೊಮ್ಮೆ 'ಊಫ್' ಎಂದರೆ ಬಾಯೊಳಗಿದ್ದ ಮೊದಲಿನ ಗೊಂಚಲಿನ ಹಣ್ಣಿನ ಬೀಜಗಳು ಪಟಪಟನೆ ಹೊರಗೆ ಉದುರುತಿದ್ದವು. ಅಷ್ಟರಲ್ಲಿ ಊರ ಹೆಂಗಳೆಯರ ಗುಂಪು ಮಕ್ಕಳಿದ್ದ ಸ್ಥಳದಲ್ಲಿಗೆ ಬಂದು ಕಡುನೀಲಿಯ ನಾಲಗೆ ಹಾಗು ಕಲೆ ಕಲೆಯಾದ ಬಟ್ಟೆಯನ್ನು ಕಂಡು ಕೆಂಡಾಮಂಡಲವಾಗಿ ಕೈಗೆ ಸಿಕ್ಕ ಕೋಲು ತಡಿಕೆಯನ್ನು ಅವರವರ ಮಕ್ಕಳ ಮೇಲೆ ಬೀಸತೊಡಗಿದರೆ ಮಕ್ಕಳು ಇದ್ದೆನೋ ಬಿದ್ದೆನೋ ಎಂಬಂತೆ ಮರದದಿಂದ ಜಿಗಿದು ಓಡುತಿದ್ದರು. ಅಂತೂ ದಾರಿಯ ನೇರಳೆ ಹಣ್ಣುಗಳ ಸೇವನೆಯ ನಂತರ ಬಹು ನಿರೀಕ್ಷಿತ ಜಾತ್ರೆ ಬಂದೆ ಬಿಡುತಿತ್ತು. ಅಲ್ಲಿಯವರೆಗೂ ಅಜ್ಜಂದಿರ ಕೈಯನ್ನು ಹಿಡಿದು ಬರುತಿದ್ದ ಮೊಮ್ಮಕ್ಕಳು ಜಾತ್ರೆಯ ಆವರಣದೊಳಗೆ ಕಾಲಿಡುತ್ತಿದ್ದಂತೆ ಕಾಣೆಯಾಗಿಬಿಡುತಿದ್ದವು. ಕಾರಣ ಜಾತ್ರೆಗಾಗೇ ಅಜ್ಜ, ಅಜ್ಜಿ, ಅತ್ತೆ ಮಾವ ಅಲ್ಲದೆ ಜಾತ್ರೆಗೆ ಬಂದ ನೆಂಟರಿಷ್ಟರ ಮುಂದೆಲ್ಲ ಕೈ ಒಡ್ಡಿ, ಪುಸಲಾಯಿಸಿ ಕಾಸನ್ನು ಪೀಕಿ, ಜೇಬನ್ನು ತುಂಬಿಸಿಕೊಂಡು ಬಂದ ಯಶಸ್ಸನ್ನು ಜಾತ್ರೆಯೊಳಗೆ ಉಡಾಯಿಸುವ ನಶೆಯಲ್ಲಿ. ಇತ್ತ ಕಡೆಯಿಂದ ಹೊರಟು ದೇವಾಲಯದ ಸುತ್ತ ಸುತ್ತಿ ಅತ್ತ ಕಡೆಯಿಂದ ಬಂದರೆ ಜೇಬಿನಲ್ಲಿದ್ದ ದುಡ್ಡು ಮಾಯವಾಗಿ, ಹದಿನೈದು ದಿವಸಗಳ ಕಾಲ ಅನುಭವಿಸಿದ ವನವಾಸಕ್ಕೆ ಚಾಕಲೇಟು, ಐಸ್ ಕ್ರೀಮ್, ಕಬ್ಬಿನ ಹಾಲು, ಬೋಂಡಾ ಪಕೋಡಗಳ ಮಿಶ್ರಣ ಹೊಟ್ಟೆಯೊಳಗಿನ ನೇರಳೆ ಹಣ್ಣಿನ ಪದರದ ಮೇಲೆ ಕೂತು ಗರಗುಡುವ ತೇಗು ಒಂದೆರೆಡು ಬಾರಿ ಬರುತ್ತಿತ್ತು.

ತುಸು ಸಮಯದ ನಂತರ ಅತಂತ್ರವಾಗಿ ಅಲೆಯುತ್ತಾ ಪ್ಲಾಸ್ಟಿಕ್ ಗೊಂಬೆಗಳು,ಪೀಪಿಗಳು ಹಾಗು ಕಂಪನಿಗಳೇ ನಾಚಿ ನೀರಾಗುವಂತ ಏರೋಪ್ಲೇನ್ ಹಾಗು ಹೆಲಿಕ್ಯಾಪ್ಟಾರ್ ಗಳನ್ನು ನೋಡಿ, ಕೆಲ ನಿಮಿಷಗಳ ಹಿಂದಷ್ಟೇ ಇದ್ದ ದುಡ್ಡನ್ನು ಎದ್ವಾ-ತದ್ವಾ ತಿಂದು ಖರ್ಚು ಮಾಡಿದಕ್ಕಾಗಿ ಕೊಂಚ ಪಶ್ಚಾತಾಪ ಪಟ್ಟು, ತಕ್ಷಣ ಅಜ್ಜನ ನೆನಪಾಗಿ, ಆ ಸಾವಿರ ಜನರ ಮದ್ಯೆ ಅಲೆಮಾರಿಯಂತೆ ಹುಡುಕಿ ಕೊನೆಗೆ ಬಿಳಿ ಪಂಚೆಯುಟ್ಟು, ಮೋಟು ಬೀಡಿಯನ್ನು ಎಳೆಯುತಿದ್ದ ಅಜ್ಜಂದಿರ ಗುಂಪಿನೊಳಗೆ ನುಗ್ಗಿ ಮೊದಲ ಬಾರಿಗೆ ಅಜ್ಜನನ್ನು ನೋಡುತ್ತಿರುವೆನೇನೋ ಎಂಬಂತೆ ಅವರ ಕಾಲಿನ ಬಳಿ ನಾಯಿಮರಿಗಳು ತಮ್ಮ ಮಾಲೀಕನ ಕಾಲಿಗೆ ಬೆನ್ನು ಉಜ್ಜುವಂತೆ ನುಲಿಯುತ್ತ ನಿಂತರೆ ಜೇಬಿನಲ್ಲಿದ್ದ ದುಡ್ಡನ್ನು ಗುಳುಂ ಮಾಡಿಹಾಗಿದೆ ಎಂಬ ಸೂಚನೆ ಅಜ್ಜನಿಗೆ ರವಾನೆಯಾಗಿಬಿಡುತ್ತಿತ್ತು. ಆದರೂ ಅವರು ತಮಗೇನು ತಿಳಿಯದೆಂಬಂತೆ 'ಇವತ್ತು ಗ್ಯಾರಂಟಿ ಮಳೆಯಾಗುತ್ತೆ.. ಊರ್ ಜಾತ್ರೆ ಅಂದ್ರೆ ಸುಮ್ನೇನಾ' ಎಂದು ಜಾತ್ರೆಯ ಬಗ್ಗೆ ಹಾಗು ದೇವರ ಬಗ್ಗೆ ಅಧಮ್ಯ ಭಕ್ತಿಯಿದ್ದ ಯಾರೋ ಹೇಳುವುದನ್ನು ಕೇಳಿಸಿಕೊಳ್ಳುತ್ತಿದ್ದರು. ಮೊಮ್ಮಗ ಸಾಧ್ಯವಾದಷ್ಟು ಅಜ್ಜನ ಪ್ರದಕ್ಷಿಣೆ ಮಾಡಿದ ಮೇಲೆ ಅತಿ ಸಣ್ಣ ಧ್ವನಿಯಲ್ಲಿ 'ಅಜ್ಜಾ....' ಎಂದು ಶುರು ಮಾಡಿದರೆ 'ತೇರ್ ಎಳಿಯೋ ಟೈಮ್ ಆಯಿತು.. ಸುಮ್ನೆ ಇಲ್ಲೇ ಇದ್ರೆ ವಾಪಾಸ್ ಹೋಗಾಗ ಏನಾದ್ರು ಕೊಡುಸ್ತೀನಿ' ಎಂದು ಕೊನೆಯವರೆಗೂ ಅಜ್ಜಂದಿರ ದುಂಡುಕಲ್ಲಿನ ಸಭೆಯಲ್ಲಿಯೇ ಕೂರಬೇಕಾದ ಇಕ್ಕಟಿನ ಸ್ಥಿತಿಯಲ್ಲಿ ಮೊಮ್ಮಗನನ್ನು ಸಿಲುಕಿಸಿ ಬಿಡುತ್ತಿದ್ದರು ಅವನ ಅಜ್ಜ. ಮೊಮ್ಮಗ ಅವರುಗಳು ಎಳೆಯುವ ಮೋಟು ಬೀಡಿಯ ಕೆಂಪನೆಯ ತುದಿಯನ್ನೇ ತದೇಕಚಿತ್ತದಿಂದ ನೋಡಿ ಕುಳಿತು ಬಿಡುತ್ತಿದ್ದ, ಹತ್ತು ರೂಪಾಯಿಯ ಪ್ಲಾಸ್ಟಿಕ್ ಕಾರನ್ನು ಪಡೆಯುವ ಆಸೆಯಲ್ಲಿ.


ದೇವಾಲಯದ ಸುತ್ತಲೂ ಹತ್ತಾರು ಊರುಗಳ ಸಾವಿರಾರು ಜನರು ಸೇರಿದ್ದ ಆ ಜಾತ್ರೆಯನ್ನು ಎತ್ತರದ ಸ್ಥಳದಿಂದ ನೋಡುವ ಖುಷಿಯೇ ವಿಭಿನ್ನ. ದೇವಾಲಯದ ಒಂದು ಮೂಲೆಯಲ್ಲಿ ಕಟ್ಟಿ ನಿಲ್ಲಿಸಿದ್ದ ದೇವರ ತೇರು ಬಣ್ಣ ಬಣ್ಣದ ಹೂವು, ಕಾಗದ ಹಾಗು ಬಾಳೆಯ ಎಲೆಗಳಿಂದ ಶೃಂಗರಿಸಲ್ಪಟ್ಟಿರುತ್ತಿತು. ಅದರ ಮುಂದೆ ಊರ ಗಂಡಸರೆಲ್ಲರು ಕೋಲಾಟವಾಡಲು ಎರೆಡೆರೆಡು ಅಡಿಯ ರಾಶಿ ಕೋಲುಗಳನ್ನು ತುಂಡರಿಸಿ ಇಡಲಾಗಿರುತ್ತಿತು. ತೇರನ್ನು ಎಳೆಯಲು ಬಿಟ್ಟಿದ್ದ ದೊಡ್ಡ ಹಗ್ಗವನ್ನು ನೋಡಿ ತಾನೂ ಎಳೆಯಬೇಕೆಂಬ ಆಸೆ ಚಿಗುರೊಡೆದರೂ, ‘ನಾಟ್-ಎಲಿಜಿಬಲ್ ಹಿರಿಯರ ಕೆಟಗೆರಿ’ಯ ಒಳಗೆ ಮಕ್ಕಳನ್ನೂ ಸೇರಿಸಲಾಗಿದ್ದರಿಂದ ನಿಯಮಗಳ ಪ್ರಕಾರ ಮಕ್ಕಳು ಆ ಕಾರ್ಯಕ್ಕೆ ಅನರ್ಹರಾಗಿದ್ದವು.ಆದರೂ ಒಂದೆರೆಡು ಮಕ್ಕಳು ಮಾತ್ರ ಚಡ್ಡಿ ಜಾರಿದರೂ ಸರಿಯೇ ನಾವು ಎಳೆದು ತೋರಿಸುವೆವೆಂದು ಎದೆಯುಬ್ಬಿಸಿಕೊಂಡು ಹೋಗಿ ತೇರಿನ ಗಾಲಿ ಒಂದೆರೆಡು ಸುತ್ತು ಸುತ್ತುವುದರೊಳಗೆ ಎಳೆತದ ರಭಸಕ್ಕೆ ದೊಡ್ಡ ಪಾದಗಳ ಕೆಳಗೆ ಸಿಕ್ಕಿ ಅಪ್ಪಚ್ಚಿ ಆಗುವ ಮೊದಲೇ ಇದ್ದೆನೋ ಬಿದ್ದೆನೋ ಎಂದು ನುಸುಳಿ ಹೊರಬಂದುಬಿಡುತ್ತಿದ್ದರು.

ಹಳೆಕಾಲದ ಹಂಚಿನ ಮನೆಯಂತ್ತಿದ್ದ ಆ ದೇವಾಲಯದ ಒಳಗೆ ಬಲಕ್ಕೂ ಹಾಗು ಎಡಕ್ಕೂ ದೇವರುಗಳ ವಿಗ್ರಹಗಳು. ಹೆಚ್ಚಿನದವು ಈಶ್ವರನ ನಾಮಾಂಕಿತದ ದೇವರುಗಳೇ ಎಂಬ ನೆನಪು. ಈ ಊರು ಸಿಟಿಯಿಂದ ಹೆಚ್ಚೇನೂ ದೂರದಲ್ಲಿಲ್ಲದಿದ್ದರೂ ಸಿಟಿಯಲ್ಲಿರದ ಜಾತೀಯತೆ ಇಲ್ಲಿ ಮಾತ್ರ ಎದ್ದು ಕಾಣುತಿತ್ತು. ಗೌಡ, ಶೆಟ್ಟಿ, ಆಚಾರಿಗಳ ಮನೆ ಒಂದೆಡೆಯಾದರೆ ಹರಿಜನರ ಕೇರಿ ಮೂರ್ನಾಲ್ಕು ಕಿಲೋಮೀಟರ್ನ ಆಚೆ. ಆದರೆ ಗೌಡರ ಮನೆಯ ಕಾಫಿ ತೋಟದ ಚಿಗುರು ತೆಗೆಯುವುದು, ಗಿಡಗಳ ಬಡ್ಡೆ ಬಿಡಿಸಿ ಗೊಬ್ಬರ ಹಾಕುವುದು, ಹಣ್ಣು ಕುಯ್ಯುವುದು ಅಲ್ಲದೆ ಗದ್ದೆ ಕೆಲಸದ ನಾಟಿ, ಕುಯ್ಲು ಹಾಗು ಒಕ್ಕಲಾಟದ ಸಮಯಕ್ಕೂ ಹರಿಜನರ ನಿಂಗಿ, ಸಿದ್ದ, ಕೆಂಚ ಎನ್ನುವ ಎರಡಕ್ಷರದ ಮಾನವರೇ ಯಂತ್ರಗಳು. ಬೆಳಗಿನ ಜಾವ ಏಳಕ್ಕೆ ಸರಿಯಾಗಿ ಬಂದು ಅಕ್ಕಿ ರೊಟ್ಟಿ ಹಾಗು ಯಾವುದೊ ಒಂದು ಸಾರನ್ನು ಗಂಗಾಳದಲ್ಲಿ (ಅವರಿಗಾಗೇ ಮನೆಯೋರಗೆ ಒಂದು ಜೊತೆ ಇರುತ್ತಿದ್ದ ಗಂಗಾಳ ಹಾಗು ಲೋಟದಲ್ಲಿ ) ಹಾಕಿ ತರುತ್ತಿದ್ದ ಮನೆಯ ಅಮ್ಮನಿಂದ ಕಾಫಿಯನ್ನು ಕೇಳಿ ಕುಡಿದು, ವೀಳೇದೆಲೆ, ಅಡಿಕೆ, ಸುಣ್ಣ ಹಾಗು ಕಡ್ಡಿಪುಡಿಯನ್ನು ಬಾಯಿಗೆ ಹಾಕಿಕೊಂಡು ತೋಟ ಅಥವಾ ಗದ್ದೆಯ ಒಳಗೆ ಒಕ್ಕರೆ ಜೀವ ಪಣವಿಟ್ಟು ಗೇಯುತಿದ್ದರು, 'ಅಯ್ಯರ್ ಮನೆ ಚೆನ್ನಾಗಿದ್ರೆ ನಾವೂ ವೈನಾಗಿರ್ತಿವಿ' ಎಂದು ಹೇಳುತ್ತಾ. ಆದರೆ ಊರ ಜಾತ್ರೆಯಲ್ಲಿ ದೇವರ ಪೂಜೆ ಹಾಗು ಹಣ್ಣುಕಾಯಿಯ ಜವಾಬ್ದಾರಿ ಮಾತ್ರ ಹರಿಜನರದ್ದೇ. ಎಲ್ಲ ಜಾತಿಯ ಜನರು ತಂದು ಕೊಡುತ್ತಿದ್ದ ಹಣ್ಣು ಕಾಯಿಯನ್ನು ಹರಿಜನ ಪೂಜಾರಿಯೇ ತೆಗೆದುಕೊಂಡು, ಪೂಜೆ ಹಾಗು ಮಂಗಳಾರತಿಯನ್ನು ಮಾಡಿ ತೀರ್ಥವನ್ನು ಕೊಡುತ್ತಿದ್ದರು. ಎಲ್ಲರೂ ಧನ್ಯತೆಯಿಂದ ದೇವರ ಮುಂದೆ ಕೈಮುಗಿದು ತಲೆಬಾಗುತ್ತಿದ್ದರು.

ಇತ್ತಕಡೆ ಹರಿಜನರ ಕೇರಿಯಿಂದ ಬೂತಪ್ಪನ ಅಡ್ಡೆ ತಳಿರು ತೋರಣಗಳಿಂದ ಶೃಂಗಾರಗೊಂಡು ನಾಲ್ಕು ಜನರ ಹೆಗಲೇರಿ ನೆಡೆದರೆ ಅದರ ಮುಂದೆ ಡೊಳ್ಳು, ತಮಟೆ ಹಾಗು ತುತ್ತೂರಿಗಳ ಸದ್ದು ಜೊತೆಗೆ ಮಕ್ಕಳ ಕುಣಿತ. ವಯಸ್ಸು ಇನ್ನೂ ಹತ್ತು ದಾಟದಿದ್ದರೂ ತಮಟೆಯ ಸದ್ದಿಗೆ ಹಳ್ಳಿಯ ಮಟ್ಟಿಗೆ ಮೈಕಲ್ ಜ್ಯಾಕ್ಸನ್ ಅಂತೆಯೇ ಕುಣಿಯುವ ಮಕ್ಕಳನ್ನು ಅಜ್ಜನ ಪಂಜೆಯ ಹಿಂದೆ ಸರಿದು ಕದ್ದು ಮುಚ್ಚಿ ನೋಡುತಿದ್ದ ಮೊಮ್ಮಕಳಿಗೆ ನಾಚಿಕೆಯಾದಂತಾಗಿ ತಲೆ ತಗ್ಗುತ್ತಿತ್ತು. 'ನೋಡ್ರ ಹೆಂಗ್ ಕುಣಿತವೇ ಆ ಹುಡುಗ್ರು.. ನೀವು ಇದ್ದೀರಾ' ಎಂದ ಮತ್ತೊಬ್ಬ ಅಜ್ಜನನ್ನು ಮೊಮ್ಮಗ ಗುರಾಹಿಸಿ ಸುಮ್ಮನಾಗಿ ಬಿಡುತ್ತಿದ್ದ. ಆದರೂ ಒಳಗೊಳಗೇ ಅನ್ಯಾಯವಾಗಿ ಎಲ್ಲರ ಮುಂದೆ ಹೀರೋಗಿರಿಯ ಪಟ್ಟವನ್ನು ಅಲಂಕರಿಕೊಂಡ ಆ ಹುಡುಗರ ವಿರುದ್ಧವಾಗಿ ಎದ್ದ ಕಿಚ್ಚು ಮಾತ್ರ ಕಡಿಮೆಯಾಗುತ್ತಿರಲಿಲ್ಲ. ಬೂತಪ್ಪನ ಅಡ್ಡೆ ಕುಣಿಯುತ್ತಾ, ವಾಲುತ್ತಾ ದೇವಸ್ಥಾನದ ಮುಂಬದಿಗೆ ಬಂದು ಒಳಗಿರುವ ದೇವನಿಗೆ ನಮನ ಸಲ್ಲಿಸುವಂತೆ ಮೇಲಿಂದ ಕೆಳಕ್ಕೂ, ಕೆಳಗಿನಿಂದ ಮೇಲಕ್ಕೂ ತೂಗಿ ದೇವಸ್ಥಾನದ ಬಲದಿಂದ ಎಡಕ್ಕೆ ಮೂರು ಸುತ್ತುಗಳನ್ನು ಸುತ್ತಿ ಅದಕ್ಕಾಗೇ ಮಾಡಿದ ಮಂಟಪದಲ್ಲಿ ಕೂತುಬಿಡುತ್ತಿತ್ತು. ನೆರೆದವರೆಲ್ಲರೂ ಬೂತಪ್ಪನಿಗೂ ತಂದಿದ್ದ ಹಣ್ಣು ಕಾಯಿಯನ್ನು ಕೊಟ್ಟು ಪೂಜೆ ಮಾಡಿಸಿ ತಮ್ಮ ತಮ್ಮ ಸ್ಥಳಕ್ಕೆ ಬಂದು ಕೂತುಬಿಡುತ್ತಿದ್ದರು. ಅಷ್ಟರಲ್ಲಿ ಬೂತದ ಅಡ್ಡೆಯ ಪೂಜೆಯನ್ನು ಮಾಡುತ್ತಿದ್ದ ಪೂಜಾರಿ ಬಾಳೆಹಣ್ಣಿನ ಮೇಲೆ ಚುಚ್ಚಿದ ಗಂಧದ ಕಡ್ಡಿಯನ್ನು ಕಿತ್ತು ಅಡ್ಡೆಯ ಬೆಳ್ಳಿಯ ಭೂತಪ್ಪನ ಮುಖದ ಬಳಿಗೆ ತಂದು, ಭಕ್ತಿಯಿಂದ ನೀಳಿಸಿ, ಪುನ್ಹ ಮತ್ತದೇ ಬಾಳೆಹಣ್ಣುಗಳಿಗೆ ಚುಚ್ಚಿ ಪಕ್ಕದಲ್ಲಿದ್ದ ಚಾಟಿಯನು ಕೈಗೆ ತೆಗೆದುಕೊಂಡು ಅಡ್ಡೆಯ ಮುಂದೆ ನಿಲ್ಲುತ್ತಾನೆ. ನಿಂತಲ್ಲೇ ಕಾಲನ್ನು ಅದುರಿಸುತ್ತಾ ನಿಧಾನವಾಗಿ ಕಣ್ಣನು ಮುಚ್ಚುತ್ತಾನೆ. ಒಮ್ಮೆಲೇ ಬೂತಪ್ಪ ಆ ಪೂಜಾರಿಯ ಮೇಲೆ ಆಗಮನಗೊಂಡು ತನ್ನ ಕೈಯಲ್ಲಿದ್ದ ಚಾಟಿಯಿಂದ ರಪಾರನೆ ಮೈಯ ಮೇಲೆ ಹೋಡೆದುಕೊಳ್ಳುತ್ತದೆ ಹಾಗು ಒಂದೇ ಸಮನೆ ಕಿರುಚತೊಡಗುತ್ತದೆ. ಅಲ್ಲಿಯವರೆಗೂ ಮೈಕಲ್ ಜ್ಯಾಕ್ಸನ್ ರಂತೆ ಕುಣಿದು ಕುಪ್ಪಳಿಸುತ್ತಿದ್ದ ಗುಂಪು ಚಾಟಿಯ ಸದ್ದಿಗೆ ದಿಕ್ಕಾ ಪಾಲಾಗಿ ಹೆದರಿ ಓಡುವುದ ನೋಡಿ ನನಗೆ ಎಲ್ಲಿಲ್ಲದ ಸಂತೋಷ. ಹೊಟ್ಟೆಯೊಳಗಿನ ಕಿಚ್ಚಿನ ಜ್ವಾಲೆ ನಂದಿಹೋಗುತ್ತಿದ್ದ ನೆಮ್ಮದಿ. ಭೂತದ ಸದ್ದಿಗೆ ಒಂದು ನಿಮಿಷ ಸುತ್ತಲಿನ ಪರಿಸರ ತಣ್ಣಗಾಗುತ್ತದೆ. ನಂತರ ಒಬ್ಬೊರಾಗೆ ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಬೂತಪ್ಪನ ಮುಂದೆ ಸಾಲಾಗಿ ನಿಂತುಕೊಳ್ಳುತ್ತಾರೆ.



ಅದು ಪೇಟೆಯ ವೈದ್ಯರು ಗುಣಪಡಿಸಲಾಗದ ಕಾಯಿಲೆಯಾಗಲಿ, ಮನೆಯ ಯಜಮಾನ ಹೆಂಡದ ಹೊಂಡಕ್ಕೆ ಬಿದ್ದು ಸಂಸಾರ ನರಕವಾದ ಗೋಳನ್ನು, ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿ ಫಸಲು ಕೈಕೊಡುವ ಆತಂಕವನ್ನು ಅಥವಾ ಮನೆಯ ಹಿರಿಯ ಮಗಳಿಗೊಂದು ತಕ್ಕ ವರ ಸಿಗದಿರುವುದನ್ನು ಊರ ಜನರು ಎಳೆ ಎಳೆಯಾಗಿ ಹೇಳುವುದನ್ನ ಗುಟುರುತ್ತಾ ಕೇಳುವ ಬೂತಪ್ಪ ಯಾವುದಾದರೊಂದು ಸಮಾಧಾನದ ಪರಿಹಾರವನ್ನು ಕರುಣಿಸಿ ಮಂತ್ರಿಸಿದ ನಿಂಬೆಹಣ್ಣನ್ನು ಕೈಗಿಡುತ್ತಿತ್ತು. ಈಗೆ ಕೊಡಲ್ಪಟ್ಟ ನಿಂಬೆಹಣ್ಣು ರೋಗವನ್ನು ವಾಸಿಪಡಿಸುವ ಔಷಧದಿಂದಿಡಿದು ಮನೆಗೆ ವರವನ್ನು ತರುವ ಜೋಯೀಸನಾಗಿಯೂ ಕಾರ್ಯ ನಿರ್ವಹಿಸುತ್ತಿತ್ತು. ಅಂತೂ ಊರ ಜನರ ಸಮಸ್ಯೆಗೆ 'ನಾನಿದ್ದೀನಿ, ಹೆದ್ರಬ್ಯಾಡ' ಎನ್ನುತ್ತಾ ಹೇಳಿ ಜನರಲ್ಲಿ ನೆಮ್ಮದಿಯ ನಿಟ್ಟುಸಿರೊಂದನ್ನು ಬಿಡಿಸುತ್ತಿದ್ದ, ಆ ಪುಟ್ಟ ಊರ ರಕ್ಷಕ ಬೂತಪ್ಪ. ಬೂತಪ್ಪ ಬರುವುದು ಹರಿಜನರ ಕೇರಿಯಿಂದ, ಆ ಕೇರಿಯ ಒಬ್ಬರನ್ನೂ ಮನೆಯ ಒಳಗೆ ಸೇರಿಸದ ನಮ್ಮವರು ಆ ದೇವರ ಮುಂದೆ ಮಾತ್ರ ಏತಕ್ಕೆ ಕೈ ಮುಗಿದು ನಡುಗುತ್ತಾ ನಿಲ್ಲುತ್ತಾರೆ ಎಂಬ ಅರೆದ್ವಂದ್ವದ ಪ್ರೆಶ್ನೆಯೊಂದು ಪ್ರತಿಬಾರಿಯೂ ಮೊಮ್ಮಗನಲ್ಲಿ ಮೂಡಿ ಮರೆಯಾಗುತ್ತಿತು.

ಊರ ಜನರೆಲ್ಲರಿಗೂ ತನ್ನ ಅಭಯದ ಹಸ್ತವಿರುವುದನ್ನು ನೆನಪಿಸಿ ಕೊನೆಗೆ ದೇವಾಲಯದ ಬಾಗಿಲ ಮುಂದೆ ಕೂಗುತ್ತಾ, ಚಾಟಿಯಲ್ಲಿ ಹೊಡೆದುಕೊಳ್ಳುತ್ತಾ ಬೂತಪ್ಪ ಹೊರಟುಬಿಡುತ್ತಿದ್ದ. ಅವನು ಹೋದ ಕೂಡಲೇ ತಮಟೆಯ ಸದ್ದುಗಳು ಮತ್ತೊಮೆ ಜೋರಾಗಿ ಮಾರ್ದನಿಸತೊಡಗಿ ಮಹಾ ಮಂಗಳಾರತಿಯಾಗುತಿತ್ತು. ತದಾನಂತರ ದೇವಾಲಯದ ಒಳಗಿರುವ ಉತ್ಸವ ಮೂರ್ತಿಯನ್ನು ಜನರು ಹೊತ್ತು ತಂದು ತೇರಿನ ಮೇಲಿ ಕೂರಿಸಿ, ಸಿಂಗರಿಸಿ, ನೂರಾರು ಕಾಯಿಗಳನ್ನು ಪಟ ಪಟನೆ ತೇರಿನ ಮುಂದೆ ಹೊಡೆದ ನಂತರ ಡೊಳ್ಳು ಮೇಳಗಳೊಟ್ಟಿಗೆ ಮೆರವಣಿಗೆ ಶುರುವಾಗಿ ಬಿಡುತ್ತಿತ್ತು. ಅಷ್ಟರಲ್ಲಿ ನಿಂತು ನಿಂತು ಸುಸ್ತಾಗಿ ಹೈರಾಣಾಗಿದ್ದ ಮೊಮ್ಮಗನನ್ನು ಅಜ್ಜ ಎತ್ತಿಕೊಂಡು ಹೆಗಲಮೇಲೆ ಕೂರಿಸಿ ದೇವರನ್ನು ನೋಡುವಂತೆ ಹೇಳುತ್ತಿದ್ದರು. ಯುವಕರೆಲ್ಲ 'ಹೈಸ, ಹೈಸ ' ಎಂದು ಏದುಸಿರಿನ ಧ್ವನಿಯಲ್ಲಿ ತಮ್ಮ ಶಕ್ತಿಯನ್ನೆಲ್ಲ ಮೀರಿ ಎಳೆಯುತಿದ್ದ ಮಕ್ಕಳ ತೊಡೆ ಗಾತ್ರದ ಹಗ್ಗವನ್ನು ಹಾಗು ಭೀಮಗಾತ್ರದ ತೇರಿನ ಗಾಲಿಗಳನ್ನೂ ನೋಡುತ್ತಾ ಮೊಮ್ಮಗ ನಿಲ್ಲುತ್ತಿದ್ದ. ತೇರು ತಮ್ಮ ಬಳಿಗೆ ಬರುವವರೆಗೂ ಕಾದು, ಅದು ಹತ್ತಿರ-ಹತ್ತಿರವಾಗುತ್ತಿದ್ದಂತೆ ಜನರೆಲ್ಲ ತಮ್ಮ ಕೈಯಲ್ಲಿದ್ದ ಮಂಡಕ್ಕಿ, ಬಾಳೆಹಣ್ಣುಗಳನ್ನು ದೇವರ ಮೂರ್ತಿಗೆ ಬೀಳುವಂತೆ ಎಸೆಯುತ್ತಿದ್ದರೆ ಅದು ಹೆಚ್ಚಾಗಿ ಹೋಗಿ ಬೀಳುತಿದ್ದದ್ದು ಮೂರ್ತಿಯ ಪಕ್ಕದ ಪೂಜಾರಿಯ ಬೆತ್ತಲೆ ಬೆನ್ನಿನ ಮೇಲೆಯೇ. ಆತ ಬಾಳೆಹಣ್ಣುಗಳಿಂದ ಅದೆಷ್ಟೇ ಏಟನ್ನು ತಿಂದರೂ ಒಂದೇ ಸಮನಾದ ಶ್ರದ್ದಾ ಭಕ್ತಿಯಿಂದ ದೇವರ ಪೂಜೆಯಲ್ಲಿ ನಿರತನಾಗಿರುತಿದ್ದ.

ತೇರು ದೇವಾಲಯವನ್ನು ಮೂರು ಸುತ್ತು ಸುತ್ತುವುದನ್ನೇ ಅಲ್ಲಿಯವರೆಗೂ ಕಾಯುತ್ತ ಕುಳಿತ್ತಿದ್ದವೇನೋ ಎಂಬಂತೆ ಮೋಡಗಳು ಒಂದರಿಂದೊಂದಂತೆ ಮೇಲೇರ ತೊಡಗುತ್ತವೆ. ಇನ್ನೇನು ದೇವರು ದೇವಾಲಯದ ಒಳಗೆ ಸೇರುತ್ತಿದೆ ಎಂಬುವುದರೊಳಗೆ ವಿಪರೀತವಾದ ಗಾಳಿಯ ಮಾರುತಗಳು ಬೀಸುತ್ತಾ ತಮ್ಮೊಟ್ಟಿಗೆ ಮಳೆಯ ಹನಿಗಳನ್ನೂ ಹೊತ್ತು ತರುತ್ತಿದ್ದವು. ನೋಡ ನೋಡುತ್ತಲೇ ಜಬಜಬನೆ ಮಳೆರಾಯ ಆಗಮಿಸಿಬಿಡುತ್ತಾನೆ. 'ನೋಡಿದ್ರ, ಆ ದ್ಯಾವ್ರು ಅಂದ್ರೆ ಸುಮ್ಕೆಯ.. ಮಳೆ ಬರುತ್ತೆ ಅಂದ್ರೆ ಬರುತ್ತೆ' ಕೊಂಚ ಸಮಯದ ಮೊದಲು ತಾನಾಡಿದ ಮಾತುಗಳನ್ನು ಸಮರ್ಥಿಸಿಕೊಳ್ಳುತ್ತ ಆ ವ್ಯಕ್ತಿ, ಕಾಫಿ, ಟೀ ಹಾಗು ಬಜ್ಜಿಗಳನ್ನು ಮಾರುತಿದ್ದ ಅಂಗಡಿಯೊಳಗೆ ಓಡತೊಡಗುತ್ತಾನೆ. ಅಜ್ಜ ಮೊಮ್ಮಗನನ್ನು ಹೆಗಲಮೇಲೆ ಹೊತ್ತುಕೊಂಡು ದೇವಾಲಯದ ಒಳಗೆ ಓಡುತ್ತಿದ್ದರು. ಕನಿಷ್ಠ ಪಕ್ಷವೆಂದರೂ ಎರಡು ಘಂಟೆಗಳ ಕಾಲ ಒಂದೇ ಸಮನೆ ಸುರಿಯುತ್ತಿದ್ದ ಮಳೆಯ ರಭಸಕ್ಕೆ ಮಾರಾಟಕ್ಕಿಟ್ಟಿದ್ದ ಪುಟ್ಟ ಪುಟ್ಟ ಗೊಂಬೆಗಳೆಲ್ಲ ನೀರಿನಲ್ಲಿ ತೊಯ್ದು ಹೋಗುತ್ತಿದ್ದವು. ಸಮಯವನ್ನು ನೋಡಿ ಮತ್ತೊಮ್ಮೆ ಅಜ್ಜನಲ್ಲಿ ಆಟಿಕೆಯನ್ನು ಕೊಡಿಸಲು ಮೊಮ್ಮಗ ಕುಯ್ಗುಡುತ್ತಿದ್ದ. ಅಜ್ಜ ಸುಮ್ಮನಿರಬೇಕೆಂದೂ, ಮಳೆ ನಿಂತ ಮೇಲೆ ಗುರಿ ಹೊಡೆಯುತ್ತಾರೆಂದೂ ಹೇಳಿ ಊರಿನ ಯುವಕರು ಹೊತ್ತು ತಂದಿದ್ದ ಕೋವಿಯನ್ನು ತೋರಿಸುತ್ತಿದ್ದರು. ದೇವಾಲಯದ ಆವರಣದಲ್ಲಿ, ದೂರ ದೂರಕ್ಕೂ ಯಾವುದೇ ಊರುಗಳಿರದ ದಿಕ್ಕಿನಲ್ಲಿ ಸುಮಾರು ಹತ್ತಡಿಯ ಎರಡು ಕಂಬಗಳನ್ನು ನೆಟ್ಟು ಅವುಗಳ ನಡುವೆ ಹಗ್ಗವೊಂದನ್ನು ಕಟ್ಟಿ ಅದಕ್ಕೆ ಹಲಸು, ಚಕ್ಕೋತ, ಕುಂಬಳಕಾಯಿ ಹಾಗು ಇನ್ನಿತರೇ ಹಣ್ಣುಗಳನ್ನು ಇಳಿಬಿಡಲಾಗುತ್ತಿತ್ತು. ಆ ಕಂಬಗಳಿಂದ ಸುಮಾರು ಮೂವತ್ತರಿಂದ ನಲ್ವತ್ತು ಮೀಟರ್ ದೂರದಲ್ಲಿ ನಿಂತು ಕೋವಿಗಳಿಂದ ಆ ಹಣ್ಣುಗಳಿಗೆ ಗುರಿಯಿಟ್ಟು ಹೊಡೆಯಬೇಕಿತ್ತು. ಅದಕ್ಕಾಗೇ ಸುಮಾರು ಹತ್ತರಿಂದ ಹದಿನೈದು ಪರವಾನಿಗೆ ಪಡೆದ ಕೋವಿಗಳು ಹಾಗು ಅದರ ಮಾಲೀಕರು ತಯಾರಾಗಿರುತ್ತಿದರು. ಮಳೆ ನಿಂತು ಗುರಿಹೊಡೆಯಲು ಶುರುವಾದರೆ ಮೊಮ್ಮಗನ ಕೈಯ ಬೆರಳುಗಳು ಮಾತ್ರ ಕಿವಿಯ ಒಳಗೆ ಸೇರಿರುತ್ತಿದ್ದವು! ಪ್ರತಿ ನಿಖರವಾದ ಗುಂಡಿಗೆ ಎಲ್ಲರೂ ಚಪ್ಪಾಳೆ ಹೊಡೆಯುವುದನ್ನು ಕಂಡು ಅವುಗಳೂ ಹೊರಬಂದು ಒಂದೆರೆಡು ಚಪ್ಪಾಳೆಯನ್ನು ಬಾರಿಸಿ ನಂತರದ ಗುಂಡು ಹಾರುವ ಮೊದಲೇ ಮತ್ತದೇ ಕಿವಿಗಳನ್ನು ಸೇರಿಬಿಡುತ್ತಿದ್ದವು. ಹೀಗೆ ಸುಮಾರು ಹತ್ತಿಪ್ಪತ್ತು ಒಡೆತಗಳಲ್ಲಿ ಗುರಿಗಳು ಛಿದ್ರಗೊಂಡು ಕೆಳಗೆ ಬಿದ್ದು ಬಿಡುತ್ತಿದ್ದವು. ಅದಾದ ನಂತರ ಇತರ ದೇವರುಗಳ ಉತ್ಸವಮೂರ್ತಿಗಳನ್ನು ಹೊರತಂದು ಸಣ್ಣ ಸಣ್ಣ ಅಡ್ಡೆಯಲ್ಲಿ ಕಟ್ಟಿ (ಒಬ್ಬ ವ್ಯಕ್ತಿ ಒರುವಂತೆ) ದೇವಾಲಯದ ಸುತ್ತ ಸುತ್ತುವ ಪ್ರತೀತಿ. ಗುಂಡಿನ ಸದ್ದಿಗೆ ಕಾಣೆಯಾಗಿದ್ದ ಮೈಕಲ್ ಜಾಕ್ಸನ್ ರ ಗುಂಪು ಮತ್ತೊಮ್ಮೆ ಮೂಡುತ್ತಿದ್ದ ತಮಟೆಯ ಸದ್ದಿಗೆ ಪ್ರತ್ಯಕ್ಷವಾಗಿಬಿಡುತಿತ್ತು. ದೇವರ ಅಡ್ಡೆಗಳು ದೇವಾಲಯದ ಸುತ್ತ ಪ್ರದಕ್ಷಿಣೆ ಮುಗಿಸಿ ಅವುಗಳನ್ನು ಪುನ್ಹ ಸ್ವಸ್ಥಾನಕ್ಕೆ ಮರಳಿಸಿದ ಮೇಲೆ ಕೋಲುಗಳ ರಾಶಿಯಿಂದ ಜೋಡಿ ಕೋಲುಗಲು ಊರ ಗಂಡಸರುಗಳ ಕೈ ಸೇರುತ್ತಿದ್ದವು. ಸುಮಾರು ಇಪ್ಪತ್ತರಿಂದ ಇಪ್ಪತೈದು ಅಡಿಯ ವೃತ್ತವನ್ನು ನಿರ್ಮಿಸಿ ಅತಿ ಸರಳ ಹೆಜ್ಜೆಗಳನ್ನು ಹಾಕುತ್ತ ತಮಟೆಯ ಸದ್ದಿಗೆ ವೃತ್ತವು ನಿಧಾನವಾಗಿ ಸುತ್ತುವುದನ್ನು ನೋಡುವದೇ ಕಣ್ಣಿಗೊಂಡು ಹಬ್ಬ. ಕೊನೆಯದಾಗಿ ಎಲ್ಲ ವಾದ್ಯಗಳಿಂದ ಮೂಡುವ ಸದ್ದಿಗೆ ಗೌಡ, ಆಚಾರಿ, ಶೆಟ್ಟಿ ಎನ್ನದೆ ಹರಿಜನರೂ ಸಹ ಒಟ್ಟಾಗಿ ಕುಣಿದು ಕುಪ್ಪಳಿಸುತ್ತಿದ್ದರು.



ಹೀಗೆ ಊರ ಹಾದಿಯ ನೇರಳೆ ಮರದಿಂದ ಶುರುವಾದ ಜಾತ್ರೆಯ ಖುಷಿ ಅಜ್ಜನ ಚೆಡ್ಡಿಯ ಜೇಬಿನಿಂದ ನೋಟುಗಳ ಕಂತೆಯನ್ನು ಹೊರತೆಗೆದು ಮೊಮ್ಮಗನಿಗೊಂದು ಆಟಿಕೆಯನ್ನು ಕೊಡಿಸುವ ವರೆಗೂ ಇರುತ್ತಿತ್ತು. ಬಳಿಕ ಮುಂದಿನ ವರ್ಷದ ಜಾತ್ರೆಗೆ ಕಾಲಗಣನೆ ಆರಂಭವಾಗುತ್ತಿತ್ತು.

ಕಾಲ ಉರುಳಿದೆ. ಅಂದಿನ ಮಕ್ಕಳು ಇಂದು ಅಪ್ಪಂದಿರಾಗಿ, ಅಪ್ಪಂದಿರು ಅಜ್ಜಂದಿರಾಗಿ, ಅಜ್ಜಂದಿರು ಮರೆಯಾಗಿ ಕೇವಲ ನೆನಪಾಗಿ ಉಳಿದಿದ್ದಾರೆ. ಅವರೊಟ್ಟಿಗೆ ತಾವು ಉಳಿಸಿ ಬೆಳೆಸಿ ತಂದ ಒಂದು ಆಚರಣೆಗಳನ್ನೂ ಕೊಂಡು ಒಯ್ದಿದ್ದಾರೆ. ಆ ಊರಿನ ಇಂದಿನ ಯುವಕರಲ್ಲಿ ಬೂತಪ್ಪನ ಮೇಲಾಗಲಿ ಅಥವಾ ದೇವಾಲಯದ ದೇವರ ಮೇಲಾಗಲಿ ಇರಬೇಕಾದ ಕನಿಷ್ಠ ಭಯ ಭಕ್ತಿಯೂ ಇರದಂತಾಗಿದೆ. ಅಂದು ಹರಿಜನ ಹಾಗು ಗೌಡರ ನಡುವೆ ಅದೆಷ್ಟೇ ಜಾತೀಯತೆ ಇದ್ದರೂ ತೋಟದ ಕೆಲಸದ ನೆಪದಲ್ಲಿ, ಭತ್ತದ ಒಕ್ಕಲಾಟದ ರೂಪದಲ್ಲಾದರೂ ಎಲ್ಲರೂ ಒಂದಾಗಿರುತ್ತಿದ್ದರು. ಹರಿಜನರು ನೆಟ್ಟಿ ಬಿತ್ತಿದ ಅಕ್ಕಿಯ ಅಗಳುಗಳನ್ನೇ ಮನೆಯ ದೇವರಿಗೆ ಅರ್ಪಿಸುತಿದ್ದ ಇತರೆ ಪಂಗಡದ ಜನರ ಮನದೊಳಗೆ ಕೊಂಚವೂ ಬೇಧ ಭಾವದ ತಾರತಮ್ಯವಿತ್ತೆಂದು ಹೇಳಲಾಗುವುದಿಲ್ಲ. ಹರಿಜನರೂ ತಮ್ಮ ಒಡೆಯನಿಗೆ ಕಾಯಿಲೆ, ರೋಗ ರುಜಿನಗಳು ಬಂದರೆ ಕೂಡಲೇ ಬೂತಪ್ಪನ ಮುಂದೆ ಬಂದು ಅವನನ್ನು ಸಾಧ್ಯವಾದಷ್ಟು ಬೈದು ಬೇಗನೆ ಗುಣಮುಖ ಮಾಡಬೇಕೆಂಬ ಕೋರಿಕೆಯನ್ನು ಇಟ್ಟು ಹರಕೆಯನ್ನು ಹೊರುತ್ತಿದ್ದರು. ಊರ ಜಾತ್ರೆ ಈ ಎಲ್ಲಾ ಜನರನ್ನು ಒಂದಾಗಿಸುತ್ತಿತು. ಇಂದು ಅದೇ ದೇವಾಲಯವನ್ನು ಕೆಡವಿ ಒಂದು ನವ ದೇವಾಲಯವನ್ನು ಕಟ್ಟುವ ಆಲೋಚನೆ ಊರಿನವರಿಗೆ. ಅದಾಗಲೇ ದೇವಾಲಯವನ್ನು ಕೆಡವಿ ಹೊಸದಾದ ಗೋಡೆಗಳೂ ಮೇಲೆದ್ದಿವೆ. ಆ ಕೆಲಸಕ್ಕಾಗೇ ಅಧ್ಯಕ್ಷ ಉಪಾದ್ಯಕ್ಷರನ್ನೂ ಆರಿಸಲಾಗಿದೆ. ಈಗ ಏನಿದ್ದರೂ 'ನೀ ಅಷ್ಟು ಕೊಡು, ಅವ ಅಷ್ಟು ಕೊಡಲಿ' ಎಂಬ ಹಣದ ಮಾತುಗಳೇ ಎಲ್ಲೆಲ್ಲೂ ಹರಿದ್ದಾಡುತ್ತಿವೆ. ಅಲ್ಲದೆ ಹೊಸ ದೇವಾಲಯದ ಒಳಗಿನ ಪೂಜೆ ನಮ್ಮ ಜಾತಿಯವರೇ ಮಾಡಬೇಕೆಂಬ ವಾದಗಳೂ ಮೂಡಿ ವಿಷಯ ಕೋರ್ಟಿನ ಮೆಟ್ಟಿಲನ್ನೂ ಏರಿದೆ.. ಈ ಎಲ್ಲಾ ಬೆಳವಣಿಗೆಗಳಿಂದ ಸುಮಾರು ಏಳೆಂಟು ವರ್ಷಗಳಿಂದ ಆ ಊರಿನ ಜಾತ್ರೆ ಕೇವಲ ನೆನಪಾಗೆ ಉಳಿದಿದೆ. ಬೈಕು ಕಾರುಗಳ ಅಬ್ಬರದಲ್ಲಿ ಊರ ಜಾತ್ರೆಯ ಕಾಲು ದಾರಿಯನ್ನು ಮುಚ್ಚಿ ಈಗ ಅಲ್ಲಿ ಯಾರೋ ತೋಟವನ್ನು ಮಾಡಿಕೊಂಡಿದ್ದಾರೆ. ಮಂಗಗಳ ಕಾಟ ಜಾಸ್ತಿಯಾಗಿದೆ ಎಂದು ಅಳಿದುಳಿದ ಒಂದೆರೆಡು ನೇರಳೆ ಮರಗಳನ್ನೂ ನೆಲಸಮ ಮಾಡಿದ್ದಾರೆ. ಇಂದು ಹಬ್ಬವೆಂದರೆ ಹೆಂಡ ತುಂಡುಗಳೆಂದು ಬೆಳೆಯುತ್ತಿರುವ ದಿನಗಳಲ್ಲಿ ಅಂದು ಚೌತ, ಜಾತ್ರೆಯ ಜೇನು, ಬೂತಪ್ಪ ಎಂಬ ಭಯಹುಟ್ಟಿಸುವ ಕಟ್ಟು ನಿಟ್ಟಿನ ಆಚರಣೆಯೇ ಸುಂದರವಾಗಿದ್ದಿತು ಎಂದನಿಸುತ್ತದೆ. ವಸಂತವನ್ನು ಕಳೆದುಕೊಂಡ ಕಾಲವಿಂದು ಉರಿಬಿಸಿಲ ಧಗೆಯಲ್ಲಿ ಬೇಯತೊಡಗಿದೆ.



Friday, April 28, 2017

ನೆಲದ ನಂಟು…


ಅದು ಮಲೆನಾಡಿನ ಪುಟ್ಟ ಗ್ರಾಮ. ಹೆಚ್ಚೆಂದರೆ ಎಂಟತ್ತು ಮನೆಗಳು, ಒಂದು ಪುಟ್ಟ ದೇವಸ್ಥಾನ, ಹಾಗು ಒಂದು ಹೊಳೆ. ದಿನನಿತ್ಯದ ಬಳಕೆಗೆ, ವ್ಯವಸಾಯಕ್ಕೆ, ಹಸು ಎತ್ತುಗಳಿಗೆ ಆ ಹೊಳೆಯ ನೀರೇ ಆಧಾರ. ಊರಿನ ಹಿರಿಕ ತಿಪ್ಪಜ್ಜ. ಆತನಿಗೆ ತಿಳಿದಿರುವ ಮಟ್ಟಿಗೆ ಒಮ್ಮೆಯೂ ಆ ಹೊಳೆಯ ನೀರು ಬತ್ತಿರುವ ನೆನಪಿಲ್ಲ. ಆದ ಕಾರಣಕ್ಕೆ ಬೇರ್ಯಾವ ಪರ್ಯಾಯ ನೀರಿನ ವ್ಯವಸ್ಥೆಯೂ ಆ ಪುಟ್ಟ ಗ್ರಾಮಕ್ಕೆ ಅವಶ್ಯಕೆತೆಯಿರಲಿಲ್ಲ. ತಿಪ್ಪಜ್ಜನಿಗೆ ಎರಡು ಗಂಡು ಮಕ್ಕಳು. ಅಣ್ಣ ಹರೀಶ ಹಾಗು ತಮ್ಮ ಗಿರೀಶ. ಓದಿನಲ್ಲಿ ಚಿಕ್ಕನಿಂದಲೂ ಮುಂದಿದ್ದ ಗಿರೀಶ ತನ್ನ ಹತ್ತನೇ ತರಗತಿಯ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಪಟ್ಟಣಕ್ಕೆ ತೆರಳಿ ಅಲ್ಲಿಯೇ ಡಿಗ್ರಿಯನ್ನು ಪಡೆದು ನೌಕರಿಯನ್ನೂ ಗಿಟ್ಟಿಸಿಕೊಳ್ಳುತ್ತಾನೆ. ಆದರೆ ಸ್ಕೂಲು ಎಂದರೆ ಮೂರು ಮೈಲು ಓಡುತ್ತಿದ್ದ ಹರೀಶನಿಗೆ ಮಾತ್ರ ಪುಸ್ತಕದ ವಿದ್ಯೆಯ ಗಂಧ ಗಾಳಿ ಎಂಬುದು ತಗುಲಲಿಲ್ಲ. ಆದರೆ ವ್ಯವಸಾಯದ ವಿಧ್ಯೆಯನ್ನು ಯಾವುದೇ ಪರಿಣಿತನಿಗೂ ಬಲ್ಲದ ಮಟ್ಟಿಗೆ ಕರಗತ ಮಾಡಿಕೊಂಡಿದ್ದ. ಭೂಮಿಯನ್ನು ತಾಯಿಯಂತೆ ಪ್ರೀತಿಸುತ್ತಿದ್ದ. ದಿನದ ಅಷ್ಟೂ ಸಮಯವನ್ನು ಜಮೀನಿನಲ್ಲೇ ಕಳೆಯುತ್ತಿದ್ದ. ಮಳೆ ಎಂದು ಶುರುವಾಗುತ್ತದೆ, ಎಷ್ಟು ದಿನ ಸುರಿಯುತ್ತದೆ, ಯಾವ ತರಕಾರಿಯನ್ನು ಯಾವ ಕಾಲದಲ್ಲಿ ಬೆಳೆದರೆ ಹೆಚ್ಚು ಲಾಭ ಅನ್ನುವುದಲ್ಲದೆ ಅತಿಯಾದ ಆಸೆಗಾಗಿ ನೆಲವನ್ನು ಹಣವನ್ನು ಸುರಿಯುವ ಯಂತ್ರದಂತೆ ನೋಡಬಾರದೆಂದೂ, ಅದಕ್ಕೂ ಜೀವಿಗಳಂತೆ ನೋವು, ನಲಿವು, ಕೋಪ-ತಾಪಗಳೆಂಬ ಭಾವನೆಗಳು ಇವೆಯೆಂದು ಅರಿತಿದ್ದನು. ಗಿರೀಶ ಯುಗಾದಿ ಹಾಗು ದೀಪಾವಳಿಗೆ ಊರಿಗೆ ಬಂದರೆ ಎರಡು ದಿನವಿದ್ದು ಹೋಗಿಬಿಡುತ್ತಿದ್ದ. ಜಮೀನಿನ ಕತೆ ಹೇಗಿದೆ, ಯಾವ ಬೆಳೆಯನ್ನು ಹಾಕಲಾಗಿದೆ, ದನಗಳು ಹೇಗಿವೆ ಎಂಬ ಯಾವ ಪ್ರೆಶ್ನೆಯೂ ಆತನಿನ ಬರದು. ಒಟ್ಟಿನಲ್ಲಿ ತಿಪ್ಪಜ್ಜನ ಆಷ್ಟೂ ಆಸ್ತಿಯ ಜವಾಬ್ದಾರಿಯು ಅಣ್ಣ ಹರೀಶನ ಹೆಗಲ ಮೇಲಿದ್ದಿತು.

ದಿನಗಳು ಕಳೆದವು. ತಿಪಜ್ಜ ತಾನು ಸಾಯುವ ಮೊದಲು ಮಕ್ಕಳಿಬ್ಬರಿಗೂ ಆಸ್ತಿಯ ಸಮಭಾಗವನ್ನು ಮಾಡಬೇಕೆಂದು ಇಚ್ಛಿಸಿ ಗಿರೀಶನನ್ನು ಊರಿಗೆ ಕರೆಯುತ್ತಾನೆ. ಇಬ್ಬರನ್ನು ಎದುರು ಕೂರಿಸಿಕೊಂಡು ನಾಲ್ಕು ಎಕರೆ ಜಮೀನನ್ನು ತಮ್ಮ ಗಿರೀಶನಿಗೆ, ಊರಿನ ಮನೆ ಹಾಗು ಮೂರು ಎಕರೆ ಜಮೀನನ್ನು ಅಣ್ಣ ಹರೀಶನ ಹೆಸರಿಗೆ ಬರೆದಿರುತ್ತಾನೆ. ವಿಷಯವನ್ನು ಮಕ್ಕಳ ಮುಂದಿಟ್ಟ ತಿಪ್ಪಜ್ಜ ಇಬ್ಬರಿಗೂ ತನ್ನ ತೀರ್ಮಾನದ ಬಗ್ಗೆ ಇರುವ ಸಮ್ಮತಿಯನ್ನು ಗಮನಿಸುತ್ತಾನೆ. ಇದಾದ ಕೆಲದಿನಗಳ ನಂತರ ಹರೀಶ ಅಣ್ಣನನ್ನು ಕಂಡು ತಾನು ಸಿಟಿಯಲ್ಲಿ ಒಂದು  ಹೊಸ ಉದ್ದಿಮೆಯನ್ನು ಪ್ರಾರಂಭಿಸುವುದಾಗಿಯೂ ಅದಕ್ಕಾಗಿ ತನಗೆ ಹೆಚ್ಚಿನ ಹಣದ ಅವಶ್ಯಕೆತೆ ಇರುವುದರಿಂದ ತನ್ನ ಪಾಲಿನ ಜಮೀನನ್ನು ಮಾರಲಿಚ್ಚಿಸುವುದಾಗಿ ತಿಳಿಸುತ್ತಾನೆ. ತಮ್ಮನ ಮಾತನ್ನು ಏಕ್ ದಮ್ ನಿರಾಕರಿಸಿದ ಅಣ್ಣ, ಭೂಮಿ ನಮ್ಮ ತಾಯಿ, ನಮ್ಮ ಹೊಟ್ಟೆಬಟ್ಟೆಗೆ, ನಿನ್ನ ಓದಿಗೂ ಆಕೆಯ ಅನ್ನವೇ ಕಾರಣ. ಊರಿಗೆ ವಾಪಾಸ್ ಬಂದು ಇಲ್ಲೇ ವ್ಯವಸಾಯದೊಟ್ಟಿಗೆ ಡಿಗ್ರೀಗೆ ಪೂರಕವಾದ ಕೆಲಸವನ್ನೇನಾದರೂ ಮಾಡಿದರಾಯಿತು ಎಂದು ಬುದ್ದಿ ಮಾತು ಹೇಳುತ್ತಾನೆ. ಆದರೆ ಹಳ್ಳಿ ಎಂದರೆ ಅವಿಧ್ಯಾವಂತರ ಸಂತೆ ಎಂದುಕೊಂಡಿದ್ದ ಗಿರೀಶ ಮಾತ್ರ ಅಣ್ಣನ ಮಾತನ್ನು ಕಿವಿಗೆ ಹಾಕಿಕೊಳ್ಳುವುದಿಲ್ಲ. ಜಮೀನನ್ನು ಮಾರೆ ತೀರುತ್ತೇನೆಂಬ ಹಠಕ್ಕೆ ಬಿದ್ದವನಂತೆ ವರ್ತಿಸುತ್ತಾನೆ. ಆದರೆ ತಾನು ಹುತ್ತಿ ಬೆಳೆದ ನೆಲವನ್ನು ಕಂಡವರ ಪಾಲಾಗುವುದನ್ನು ಕಾಣದ ಅಣ್ಣ ಹರೀಶ, ಜಮೀನನ್ನು ಬೇರೆ ಯಾರಿಗೂ ಮಾರಬಾರದೆಂದು ಆತನ ಎಲ್ಲ ಜಮೀನನ್ನು ತಾನೇ ಖರೀದಿಸುವುದಾಗಿ ಹೇಳುತ್ತಾನೆ. ಕೆಲವೇ ದಿನಗಳಲ್ಲಿ ಕಾಗದ ಪತ್ರಗಳೆಲ್ಲ ರೆಡಿಯಾಗಿ ಜಮೀನು ಅಣ್ಣನ ಹೆಸರಿಗೆ ಮಾರಿ ಬಂದ ನಾಲ್ಕು ಲಕ್ಷಗಳಲ್ಲಿ ಉದ್ದಿಮೆಯ ಕನಸನ್ನು ಹೊತ್ತು ಗಿರೀಶ ಸಿಟಿ ಸೇರುತ್ತಾನೆ. ಸಾಕಷ್ಟು ಏಳು ಬೀಳುಗಳ ನಂತರ ಆತ ಉದ್ದಿಮೆಯಲ್ಲಿ ಲಾಭ ಕಾಣತೊಡಗುತ್ತಾನೆ.
ತಿಪ್ಪಜ್ಜನ ಕೊನೆಯ ಆಸೆಯಂತೆ ಹರೀಶ ಊರಿನ ಭಟ್ಟರ ಮಗಳನ್ನು ವರಿಸುತ್ತಾನೆ. ಗಿರೀಶ ಸಿಟಿಯಲ್ಲೇ ಒಬ್ಬ ಹುಡುಗಿಯನ್ನು ಪ್ರೀತಿಸಿ ಮದುವೆಯಾಗುತ್ತಾನೆ. ಇಬ್ಬರಿಗೂ ಒಬ್ಬೊಬ್ಬ ಗಂಡು ಮಕ್ಕಳಾಗುತ್ತವೆ. ಹರೀಶನ ಮಗ ತಿಪ್ಪೇಶಿಗೆ ಊರ ಶಾಲಾ ಕಾಲೇಜಿನ ಸರ್ಕಾರಿ ವಿಧ್ಯಾಬ್ಯಾಸವಾದರೆ ಗಿರೀಶನ ಮಗ ಸೈದಾಂತ್ ಗೆ ಸಿಟಿಯ ಅತಿ ಹೆಚ್ಚು ದುಡ್ಡನ್ನು ಕಸಿದು ದೊಡ್ಡ ಶಾಲೆ ಎನಿಸಿಕೊಂಡಿರುವಲ್ಲಿ.

ಊರಿನಲ್ಲಿ ಡಿಗ್ರಿ ಮುಗಿಸಿದರೆ ಸಾಕು, ಮಗನನ್ನು ಉತ್ತಮ ರೈತನಾಗಿ ಮಾಡುವುದು ಹರೀಶನ ಕನಸು. ಉತ್ತಮ ಎಂದ ಮಾತ್ರಕ್ಕೆ ಹೆಚ್ಚು ಲಾಭಗಳಿಸುವುದಲ್ಲದೆ ವೈಜ್ಞಾನಿಕ ಮಾಧರಿಯ ಸಾವಯವ ಕೃಷಿ. ಆದರೆ ತಿಪ್ಪೇಶಿಗೆ ಮಾತ್ರ ದೂರದ ಬೆಟ್ಟ ನುಣ್ಣಗೆ ಎಂಬಂತೆ ಸಿಟಿಯ ರಂಗು ರಂಗಿನ ಜೀವನದ್ದೇ ಕನಸು. ವಯಸ್ಸು ಇಪ್ಪತ್ತು ಕಳೆದರೂ ಅಪ್ಪನೊಟ್ಟಿಗೆ ಬೆಳಗೆದ್ದು ಹೊಲದ ಕೆಲಸಕ್ಕೆ ಹೋಗನು. ಏನಿದ್ದರೂ ತಾನಾಯಿತು, ತನ್ನ ಕಾಲೇಜಾಯಿತು ಎಂದುಕೊಂಡಿರುತ್ತಿದ್ದ. ಕಾಟಾಚಾರಕ್ಕೆ ಎಂಬತೆ ವರ್ಷದಲ್ಲಿ ಕೆಲದಿನಗಳು ಮಾತ್ರ ಜಮೀನಿಗೆ ಹೋಗಿ ಕೊಯ್ತ ಪೈರನ್ನು ಸಿಟಿಗೆ ಸಾಗಿಸುವಲ್ಲಿ ಸಹಕರಿಸುತಿದ್ದ. ಮಗನ ಜೀವನದ ಬಗ್ಗೆ ಬಹು ದೊಡ್ಡ ಕನಸು ಕಟ್ಟಿಕೊಂಡಿದ್ದ ಅಪ್ಪ ಹರೀಶನಿಗೆ ತಿಪ್ಪೇಶಿಯ ಈ ನಡವಳಿಕೆ ದೊಡ್ಡ ಪ್ರೆಶ್ನೆಯಾಗಿ ಬಹುದಿನಗಳಿಂದ ಕಾಡುತಿತ್ತು.

ಅಲ್ಲದೆ ಊರ ಹೊಳೆಯೂ ದಿನ ಕಳೆದಂತೆ ಸೊರಗುತ್ತಾ ಹೋಗುತಿದ್ದದ್ದನ್ನು ಕಂಡು ದಿಗಿಲು ಪಡುತಿದ್ದ. ಈಗೆ ಮುಂದುವರೆದರೆ ಹೊಳೆಯ ನೀರನ್ನೇ ನಂಬಿ ಕೃಷಿಯನ್ನು ಮಾಡಬೇಕಿದ್ದ ತನ್ನ ಮಗನ ಕತೆ, ಹಳ್ಳಿಯ ಕಥೆ ಏನೆಂದು ಹಲವು ಬಾರಿ ಕೇಳಿಕೊಳ್ಳುತ್ತಿದ್ದ.

ಸಿಟಿಯಲ್ಲಿದ್ದ ಗಿರೀಶನ ಮಗ ಸೈದಾಂತ್ ನಿಗೆ ಸಣ್ಣವನಿಂದಲೂ ಗಿಡ ಮರಗಳ ಒಡನಾಟ. ಹಲಸಿನ, ಮಾವಿನ ಹಣ್ಣನ್ನು ತಿಂದು ಉಳಿಯುವ ಬೀಜವನ್ನು ಮನೆಯ ಕೈದೋಟದಲ್ಲಿ ಊತು ಅದಕ್ಕೆ ದಿನ ನೀರೆರೆಯುವುದು, ಹೂವಿನ ಗಿಡಗಳನ್ನು ನೆಡುವುದು , ಸಂಬಾರ ಬೀಜಗಳನ್ನು ಉದುರಿಸಿ ಸಂಬಾರಸೊಪ್ಪನು ಬೆಳೆದು ಅಮ್ಮನಿಗೆ ತಂದು ಕೊಡುವುದು ಇವೆಲ್ಲ ಅವನಿಗೆ ಬಲು ಇಷ್ಟವಾದ ಕಾಯಕ. ಕೈ, ಬಟ್ಟೆ ಎಲ್ಲ ಮಣ್ಣಾಗುತ್ತದೆ ಬೇಡವೆಂದರೂ ಕೇಳುತ್ತಿರಲಿಲ್ಲ. ಅಕ್ಕ ಪಕ್ಕದ ಮೆನೆಯ ಮಕ್ಕಳೊಟ್ಟಿಗೆ ಆಟವಾಡುವುದೇ ಬಲು ಅಪೂರ್ವ. ಈ ಗಿಡ ಯಾವುದು?, ಯಾವ ಹೂವು ಅಥವಾ ಹಣ್ಣು ಬಿಡುತ್ತದೆ?, ಯಾವ ಗೊಬ್ಬರ ಹಾಕಬೇಕು? ಎಂಬ ಪ್ರೆಶ್ನೆಗಳನ್ನು ಕೇಳಿ ತಿಳಿದುಕೊಳ್ಳುತ್ತಿದ್ದ. ಇದನೆಲ್ಲ ಕಂಡು ಗಿರೀಶನಿಗೆ ಕಳವಳದ ಜೊತೆಗೆ ತನ್ನ ಅಪ್ಪನ ಮಾತು ಪದೇ ಪದೇ ನೆನಪಾಗುತಿತ್ತು. 

'ನೀನು ಭೂಮ್ ತಾಯಿ ಬಿಟ್ಟು ಅದೆಷ್ಟೇ ದೂರ ಓಡಿದ್ರೂ ಅಷ್ಟೇಯ, ನಿನ್ ರಕ್ತದಾಗೆ ಹರಿತಾ ಇರದು ಅದೇ ಭೂಮ್ ತಾಯಿ ರಕ್ತಾನೆ! ಅದ್ ನಿನ್ನ ಒಂದಲ್ಲೊಂದ್ ದಿನ ಊರಿಗ್ ವಾಪಸ್ ಕರ್ಕಂಡ್ ಬರುತ್ತೆ ನೋಡ್ತಾ ಇರು' ಎಂಬ ತಿಪ್ಪಜ್ಜನ ಮಾತು ಎಲ್ಲಿ ನಿಜವಾಗುತ್ತದೋ ಎಂಬ ಒಂದು ಆತಂಕ ಸೈದಾಂತ್ ನನ್ನು  ಕಂಡು ಗಿರೀಶನಿಗೆ  ಪದೇ ಪದೇ ಕಾಡುತಿತ್ತು. ಅದಕ್ಕೆ ಪೂರಕವಾಗಿ ಆತ ತಾನು ಕಾಲೇಜಿನಲ್ಲಿ ಕೃಷಿ ವಿಜ್ಞಾನ ಪದವಿಯನ್ನೇ ಪಡೆಯಬೇಕು ಅಲ್ಲದೆ ಅದರಲ್ಲಿಯೇ ಉನ್ನತ ಶಿಕ್ಷಣವನ್ನೂ ಮಾಡಬೇಕೆಂದು ಹಠ ಹಿಡಿಯುತ್ತಾನೆ. ಅಪ್ಪ ಮಗನನ್ನು ಮನೆಯಿಂದ ಹೊರದಬ್ಬಿದರೂ ಪಾರ್ಟ್ ಟೈಮ್ ಕೆಲಸ ಮಾಡಿಕೊಂಡು ತಾನು ಓದುವುದಾಗಿ ಹೇಳುತ್ತಾನೆ. ಮಗನ ಹಠಕ್ಕೆ ಅಪ್ಪ ಕೊನೆಗೂ ಮಣಿಯಲೇ ಬೇಕಾಗುತ್ತದೆ! ದೇವರ ಮೇಲೆ ಭಾರ ಹಾಕಿ ಮಗನ ಓದಿಗೆ ಅನುಮತಿ ಕೊಡುತ್ತಾನೆ. ತಾನು ಕಟ್ಟಿ ಬೆಳೆಸಿದ ಉದ್ದಿಮೆಯ ಭವಿಷ್ಯ ಏನಾಗುತ್ತದೆಂದು ಪ್ರತಿದಿನ ಚಿಂತಿಸತೊಡಗುತ್ತಾನೆ.

ಒಂದು ಹೊಸ ತಳಿಯ ಗಿಡವನ್ನು ನೆಟ್ಟು ಬೆಳೆಸಿ ಅದರಿಂದ ಅಂದುಕೊಂಡಿರುವ ಮಟ್ಟಿನ ಫಲಿತಾಂಶವನ್ನು ಪಡೆಯುವವರೆಗೂ ಸೈದಾಂತ್ ಗೆ ನೆಮ್ಮದಿ ಇರುತ್ತಿರಲಿಲ್ಲ. ಅಲ್ಲದೆ ತಾನು ಓದಲೊದ ಊರಿನಲ್ಲಿ ಕೈದೋಟವಿರುವ ಒಂದು ಸಣ್ಣ ಮನೆಯನ್ನು ಬಾಡಿಗೆಗೆ ಪಡೆದುಕೊಂಡು ಅಲ್ಲಿ ತರಕಾರಿಗಳನ್ನು ಬೆಳೆದುಕೊಳ್ಳುತ್ತಿದ್ದ. ತನ್ನ ಓದಿನ ವಿದ್ಯೆಯನ್ನೂ ಅಲ್ಲಿ ಬಳಸಿಕೊಳ್ಳುತ್ತಿದ್ದರಿಂದ ಉತ್ತಮ ಗುಣಮಟ್ಟದ ತರಕಾರಿಗಳೇ ಬೆಳೆಯತೊಡಗಿದವು. ಅಲ್ಲದೆ ತಾನು ರಜೆಗೆ ಮನೆಗೆ ಓದಾಗಲೆಲ್ಲ ವಾರಕ್ಕಾಗುವಷ್ಟು ತರಕಾರಿಗಳನ್ನು ಕೊಂಡೊಯ್ಯುತ್ತಿದ್ದ. ತನ್ನ ಅಮ್ಮನಿಗೂ ಹೊಸ ಬಗೆಯ, ಅಧಿಕ ಇಳುವರಿ ಕೊಡುವ ಗಿಡಗಳನ್ನು ಬೇರು ಸಮೇತ ಕಟ್ಟಿಕೊಂಡು ಕೊಟ್ಟು ಬರುತಿದ್ದ. ಅಲ್ಲದೆ ದಿನದಿಂದ ದಿನಕ್ಕೆ ನೀರಿನ ಅಭಾವ ಎಲ್ಲೆಂದರಲ್ಲಿ ಹೆಚ್ಚುತ್ತಿದನ್ನು ಕಂಡು ಅದಕೊಂಡು ಸೂಕ್ತ ಪರಿಹಾರವನ್ನು ಕಂಡುಹಿಡಿಯುವ ಸನಿಹದಲ್ಲಿದ್ದ.
ಹರೀಶನ ಮಗ ತಿಪ್ಪೇಶಿಗೆ ಸಿಟಿಯ ಹುಚ್ಚು ಕನಸು ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು. ತಿಂಗಳಿಗೊಮ್ಮೆ ಅಪ್ಪನಿಂದ ನೂರೋ, ಇನ್ನೂರೋ ರೂಪಾಯಿಗಳನ್ನು ಕಸಿದುಕೊಂಡು ಸಿಟಿಯ ಬಸ್ಸು ಹಿಡಿದರೆ ಸಿನಿಮಾ, ಜೂಜು ಎನ್ನುತ ಎರಡು ದಿನಗಳ ನಂತರ ಬರುತಿದ್ದ. ಸದಾ ಮನೆಯಲ್ಲಿ ಒಂದಿಲ್ಲೊಂದು ವಿಷಯಕ್ಕೆ ಜಗಳ ಕಾಯುತಿದ್ದ. ಅಲ್ಲದೆ ತನ್ನ ತಿಪ್ಪೇಶಿ ಎಂಬ ಹೆಸರು  ಅಸಹ್ಯವಾಗಿದೆಯಂದು ಬದಲಾಯಿಸಿಕೊಳ್ಳುತ್ತೆನೆಂದು ಹೋಗಿ ಅಪ್ಪನಿಂದ ಚೆನ್ನಾಗಿ ಗೂಸಾ ತಿಂದಿರುವುದು ಉಂಟು. ಸೈದಾಂತ್ ಹಾಗು ತಿಪ್ಪೇಶಿ ಹೆಸರಿಗೆ ಮಾತ್ರ ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳಾಗಿದ್ದರು. ಗಿರೀಶನೂ ಹೊಲ ಗದ್ದೆಗಳನ್ನು ಮಾರಿ ಹೋದ ನಂತರ ಊರ ಕಡೆ ಎಂದಾದರೊಮ್ಮೆ ಹಾಗೆ ಬಂದು ಹೀಗೆ ಹೋಗಿ ಬಿಡುತಿದ್ದ. ಅಲ್ಲದೆ ಸೈದಾಂತ್ ನನ್ನು ಸಾಧ್ಯವಾದಷ್ಟು ಹಳ್ಳಿಯಿಂದ ದೂರವಿರಿಸಿದ್ದ. ಸೈದಾಂತ್ ಗೆ ಅಣ್ಣ ತಿಪ್ಪೇಶಿ ಕಂಡರೆ ಹೆಚ್ಚಿನ ಆತ್ಮೀಯತೆ ಇದ್ದರೂ ತಿಪ್ಪೇಶಿಗೆ ತಮ್ಮನ ಸಿಟಿಯ ಸ್ಕೂಲು, ಅವನ ವೇಷ ಭೂಷಣ, ಬೈಕು ಕಾರುಗಳು ಇವನ್ನೆಲ್ಲ ಕಂಡು ಅಸೂಹೆ. ಹೇಗಾದರೂ ಮಾಡಿ ತಾನೂ ಸಿಟಿಯಲ್ಲಿ ಈ ಬಗೆಯ ಜೀವನವನ್ನು ನೆಡೆಸಬೇಕೆಂಬ ಕನಸು ಆತನಲ್ಲಿ ಹೆಮ್ಮರವಾಗಿ ಬೆಳೆದು ಅದೆಷ್ಟೋ ದಿನಗಳಾಗಿದ್ದವು.

ಬಹಳ ವರ್ಷಗಳ ನಂತರ ಜಾತ್ರೆಗೆಂದು ಊರಿಗೆ ಬಂದಿದ್ದ ಸೈದಾಂತ್ ತನ್ನ ದೊಡ್ಡಪ್ಪನ ಮನೆಯ ಹೊಲ ಗದ್ದೆಯನ್ನು ಕಂಡು ಮೂಕವಿಸ್ಮಿತನಾಗುತ್ತಾನೆ. ಆಧುನಿಕ ಬಗೆಯ ಯಾವುದೇ ತಂತ್ರಜ್ಞಾನವಲ್ಲದೆಯೇ, ಕೇವಲ ಸಗಣಿ ಗೊಬ್ಬರದಲ್ಲೇ ಅಗಾಧವಾದ ಫಸಲನ್ನು ಬೆಳೆಯಬಲ್ಲ  ನೈಪುಣ್ಯತೆಯನ್ನು ಆತ ಬೇರೆಲ್ಲೂ ಕಂಡಿರಲಿಲ್ಲ. ಇದರ ಬಗ್ಗೆ ದೊಡ್ಡಪ್ಪನ್ನು ವಿಚಾರಿಸಿದಾಗ ಆತ 'ನಾನು ಭೂಮಿಯಲ್ಲಿ ಬೆಳೆಯನ್ನು ಬೆಳೆಯುತ್ತೇನೆ ಹಣವನ್ನಲ್ಲ' ಎಂದು ಸುಮ್ಮನಾಗುತ್ತಾನೆ. ಆದರೆ ದೊಡ್ಡಪ್ಪನ ವ್ಯವಸಾಯದ ಬಗೆಯನ್ನು ಪೂರ್ತಿಯಾಗಿ ತಿಳಿಯಲೇ ಬೇಕೆಂಬ ಹಠ ಹಾಗು ಆಸಕ್ತಿ  ಒಳಗೊಳಗೇ ಮೂಡುತ್ತದೆ. ದಿನ ಬೆಳೆಗೆದ್ದು ದೊಡ್ಡಪ್ಪನೊಟ್ಟಿಗೆ ಜಮೀನಿಗೆ ಹೋಗುವುದು, ಅವರು ಮಾಡುವ ಪ್ರತಿಯೊಂದು ಕಾರ್ಯವನ್ನು ತದೇಕಚಿತ್ತದಿಂದ ನೋಡುವುದು, ನೋಟ್ ಬುಕ್ಕಿನಲ್ಲಿ ಗುರುತು ಹಾಕಿಕೊಳ್ಳುವುದು, ಸಾಧ್ಯವಾದಷ್ಟು ತಾನೂ ಕೆಲಸದಲ್ಲಿ ಕೈ ಜೋಡಿಸುವುದು ಮಾಡತೊಡಗಿದ.

ಅತ್ತ ಕಡೆ ತಿಪ್ಪೇಶಿ ಸೂರ್ಯ ಆಳೆತ್ತರಕ್ಕೆ ಬಂದರೂ ಏಳುತ್ತಿರಲಿಲ್ಲ, ಇತ್ತ ಕಡೆ ತನ್ನ ತಮ್ಮನ ಮಗ ಸಿಟಿಯಲ್ಲಿದ್ದುಕೊಂಡು ಬೆಳೆದರೂ ಕೊಂಚವೂ ಅಂಜದೆ ತಮ್ಮೊಟ್ಟಿಗೆ ಹೊಲ ಗದ್ದೆಗಳಿಗೆ ಬಂದು ಕೆಸರಿನಲ್ಲಿ ದುಡಿಯುವುದ ಕಂಡು ಹರೀಶನಿಗೆ ಕಳವಳವಾಗುತ್ತದೆ. ಸೈದಾಂತ್ ನ ನಡವಳಿಕೆ, ಮಾತಿನ ರೀತಿ ಎಲ್ಲವೂ ಅವನಿಗೆ ಅಪ್ಪ ತಿಪ್ಪಜ್ಜ ನನ್ನು ನೆನಪಿಸುತ್ತದೆ. ಒಂದು ದಿನ ಬೆಳಗ್ಗೆ ಮನೆಯಿಂದ ಹೊಲಕ್ಕೆ ನೆಡೆದುಕೊಂಡು ಬರುತ್ತಿರುವಾಗ ಹರೀಶ ಸೈದಾಂತ್ ನನ್ನು ಕುರಿತು ಊರ ಹೊಳೆಯ ನೀರು ಕುಂದುತ್ತಿರುವುದಾಗಿಯೂ, ಹೀಗೆ ಮುಂದುವರೆದರೆ ಇನ್ನೊಂದೆರೆಡು ವರ್ಷಗಳಲ್ಲಿ ಕುಡಿಯಲು ಹಾಗು ಜಮೀನುಗಳಿಗೆ ನೀರಿರದೆ ಊರ ಜನರ ಜೀವನ ಅಸ್ತವ್ಯಸ್ಥವಾಗುತ್ತದೆಯೆಂದೂ ಅಲ್ಲದೆ ಮುಂಬರುವ ನೀರಿನ ಅಭಾವ ತನಗೂ ದಿನೇ ದಿನೇ ಕಾಡುತ್ತಿದೆಯೆಂದು ಹೇಳಿಕೊಳ್ಳುತ್ತಾನೆ.. ಮೊದಲ ಬಾರಿಗೆ ದೊಡ್ಡಪ್ಪ ತನ್ನ ಬಳಿ ಆತನ ಮನದ ತುಮುಲವನ್ನು ಹೇಳತೊಡಗಿದ್ದು ಸೈದಾಂತ್ ನಿಗೆ ಸಂತೋಷವಾಗುತ್ತದೆ. ಕೆಲಹೊತ್ತು ಸುಮ್ಮನಿದ್ದ ಆತ ಊರಿನಲ್ಲಿ ವರ್ಷಕ್ಕೆ ಎಷ್ಟು ಮಳೆಯಾಗುತ್ತದೆ ಎಂದು ಕೇಳುತ್ತಾನೆ. ಮೊದಲೆಲ್ಲ ವರ್ಷಕ್ಕೆ ಸುಮಾರು ಎಂಬತ್ತರಿಂದ ನೂರು ಇಂಚಿನವರೆಗೂ ಆಗುತ್ತಿತೆಂದೂ ಇತ್ತೀಚೆಗೆ ಅದು ನಲ್ವತ್ತು ಇಂಚಿನವರೆಗೆ ಇಳಿದಿದೆಯೆಂದು ಹೇಳುತ್ತಾನೆ. ಸೈದಾಂತ್ ಅದನ್ನು ತನ್ನ ನೋಟ್ ಬುಕ್ಕಿನಲ್ಲಿ ಗುರುತುಹಾಕಿಕೊಳ್ಳುತ್ತಾನೆ.

ಕೆಲದಿನಗಳ ನಂತರ ಹೊಲದ ಹಾದಿಯಲ್ಲಿ ನೆಡೆದು ಬರುವಾಗ ಸೈದಾಂತ್ ದೊಡ್ಡಪ್ಪನ್ನು ಉದ್ದೇಶಿಸಿ ತಾನು ಈ ಊರಿನ ನೀರಿನ ಸಮಸ್ಯೆಗೆ ಒಂದು ಪರಿಹಾರವನ್ನು ಯೋಚಿಸಿರುವುದಾಗಿಯೂ ಅದನ್ನು ಸಾಧಿಸಿ ತೋರಿಸಲು ಅವರ ಸಹಾಯ ಬೇಕೆಂದೂ ಕೇಳಿಕೊಳ್ಳುತ್ತಾನೆ. ಹುಡುಗ ಹುಡುಗಾಟಿಕೆಯ ಮಾತನಾಡುತ್ತಿದ್ದಾನೆ ಎಂದುಕೊಂಡು ಹರೀಶ ಮುಗುಳ್ ನಗುತ್ತ ಮುಂದೆ ಸಾಗುತ್ತಾನೆ. ಅಲ್ಲದೆ ಸೈದಾಂತ್ ಯಾವ ಡಿಗ್ರಿಯನ್ನು ಮಾಡಿದ್ದಾನೆ, ಈಗ ಏನು ಮಾಡುತ್ತಿದ್ದಾನೆ ಎಂಬುದೂ ಅರಿಯದ ಆತನಿಗೆ ತನ್ನ ಮುಗುಳ್ ನಗೆಯೇ ಅವನ ಪ್ರೆಶ್ನೆಗಳಿಗೆ ತಕ್ಕ ಉತ್ತವೆನ್ನುತಾ ಸುಮ್ಮನಾಗುತ್ತಾನೆ. ಆದರೆ ಕಳೆಗುಂದದ ಸೈದಾಂತ್ ತಾನು ಈಗಾಗಲೇ ಊರಿನ ಭಟ್ಟರ ಮೆನೆಯ ಮೇಲ್ಚಾವಡಿಯಲ್ಲಿ ಅದಕ್ಕೆ ಬೇಕಾದ ಸಿದ್ಧತೆಯನು ಮಾಡಿರುವುದಾಗಿಯೂ ಯಥಾವತ್ತಾದ ಸಿದ್ದತೆಯನ್ನು ತಮ್ಮ ಮನೆಯಲ್ಲೂ ಮಾಡುವುಗಾಗಿ ಹೇಳುತ್ತಾನೆ. ಊರ ಭಟ್ಟರು ನನ್ನ ಮಾವ. ಮಾವನ ಮನೆಗೇ ತನಗೆ ತಿಳಿಸದೆ ಹೋಗಿ ಇಷ್ಟೆಲ್ಲಾ ಮಾಡಿರುವುದು ಹರೀಶನಿಗೆ ಕೊಂಚ ಕೋಪವನ್ನು ತಂದರೂ ಈತ ಮಾಡಿರುವ ಆ ವ್ಯವಸ್ಥೆ ಏನಿರಬಹುದೆಂಬ ಕುತೂಹಲ ಮೂಡುತ್ತದೆ. ಸರಿ ಹೋಗಿ ನೋಡೇ ಬಿಡುವ ಎನ್ನುತ್ತಾ ಅಂದು ಇಬ್ಬರೂ ಹೊಲದ ಕೆಲಸವನ್ನು ಆಳುಗಳಿಗೆ ಹೇಳಿ ಭಟ್ಟರ ಮನೆಯ ಹಾದಿಯನ್ನು ತುಳಿಯುತ್ತಾರೆ.
ಭಟ್ಟರ ಮನೆಯ ಮೇಲಿನ ಛಾವಣಿಯ ಪೈಪಿನಿಂದ ಬೀಳುವ ನೀರನ್ನು ಮೊದಲು ಮರಳು ಹಾಗು ಇದ್ದಿಲಿನಿಂದ ಕೂಡಿದ ಒಂದು ಡಬ್ಬದ ಮೂಲಕ ಹಾಯಿಸಿ ಮತ್ತೊಂದು ಪೈಪಿನ ಮೂಲಕ ಒಂದು ಸಣ್ಣ ಹೊಂಡಕ್ಕೆ ಜೋಡಿಸಲಾಗಿದ್ದಿತು. ಸೈದಾಂತ್ ದೊಡ್ಡಪ್ಪನ್ನು ಭಟ್ಟರ ಮನೆಯ ಬಳಿ ಕರೆತಂದು, ಚಾವಣಿಯ ವಿಸ್ತಿರ್ಣ ಐನೂರು ಚದರ ಮೀಟರ್, ಊರಿನಲ್ಲಿ ಬೀಳುವ ಮಳೆಯ ಪ್ರಮಾಣ 40 ಇಂಚು ಅಂದುಕೊಂಡರೂ ಬೀಳುವ ಅಷ್ಟೂ ಮಳೆಯನ್ನು ಶೇಖರಿಸಿದರೆ ಸುಮಾರು 5,00,000 ಲೀಟರ್ ನಷ್ಟು ನೀರನ್ನು ನೀವು ವಾರ್ಷಿಕವಾಗಿ ಶೇಖರಿಸಬಹುದು ಎನ್ನುತ್ತಾನೆ. ನೀರು  ಮರಳು ಹಾಗು ಕಲ್ಲಿದ್ದಲ ಮೂಲಕ ಹರಿಯುವುದರಿಂದ ಸಾಕಷ್ಟು ಪ್ರಮಾಣದಲ್ಲಿ ಸೋಸಲ್ಪಟ್ಟಿರುತ್ತದೆ. ದಿನ ಬಳಕೆಗೆ ಹೇಳಿ ಮಾಡಿಸಿದ ಹಾಗಿರುತ್ತದೆ. ಒಂದು ಕುಟುಂಬದ ದಿನನಿತ್ಯದ ಬಳಕೆ ಸಾವಿರ ಲೀಟರ್ ನಷ್ಟಾದರೂ ವರ್ಷ ಪೂರ್ತಿ ಬೇರ್ಯಾವ ನೀರಿನ ಅವಶ್ಯಕತೆ ಇಲ್ಲದೆಯೇ ಜೀವಿಸಬಹುದು ಎನ್ನುತ್ತಾನೆ.

ಒಂದು ನಿಮಿಷ ಯೋಚಿಸುತ್ತ ನಿಂತ ದೊಡ್ಡಪ್ಪ, 'ಅದೆಲ್ಲ ಸರಿ ಮಗ, ನಮಗೆ ಕುಡಿಯೋದಕ್ಕಿಂತ ಹೆಚ್ಚಾಗಿ ನಮ್ಮ ಭೂಮ್ ತಾಯಿ ಕುಡಿಬೇಕು. ಅವ್ಳ ಬಾರ್ಯಾಕೆ ಹೋದ್ರೆ ನಮ್ಮ್ ಹೊಟ್ಟೆ ತುಂಬಿದಾಗೆ' ಎನ್ನುತ್ತಾನೆ.
'ದೊಡ್ಡಪ್ಪ, ಸಾಕು, ಪ್ಲೀಸ್. ನೀವು ನಿಮ್ಮ ಹೊಲ ಗದ್ದೇನ ಮಾತ್ರ ಭೂಮಿ ತಾಯಿ ಅನ್ಕೊಂಡ್ರೆ ಸಾಲಲ್ಲ. ಇಡೀ ನೆಲ ಈ ಊರೇ ಭೂಮಿ ತಾಯಿ. ಅಲ್ಲಿರೋ ಕಾಡು, ಜಿಗ್ಗು, ಹುಲ್ಲು, ಕಳ್ಳಿ ಎಲ್ಲದಕ್ಕೂ ನೀರ್ ಬೇಕು. ಅದ್ರ ಬಗ್ಗೆನೂ ಸ್ವಲ್ಪ ಯೋಚಿಸಿ. ಅವೂ ಇದ್ರೆ ತಾನೇ ಹಸಿರು. ಮೋಡ, ಮಳೆ?' ಎನ್ನುತ್ತಾನೆ.
'ಹುನಪ್ಪ, ನೀನ್ ಹೇಳೋದ್ ನಿಜ. ಆದ್ರೆ ಏನ್ ಮಾಡೋದು. ಈಗ ನೀರಿನ ಸಮಸ್ಯೆಗೆ ಪರಿಹಾರ ಹುಡುಕೋದ ಅತ್ವ ಕಾಡು, ಜಿಗ್ಗು, ಹುಲ್ಲು, ಕಳ್ಳಿ ಗಿಡಗಳನ್ನ ನೆಡುತ್ತಾ  ಕೂರೋದಾ?' ಎಂದು ಮಾರ್ಮಿಕವಾಗಿ ಅಲ್ಲದೆ ಅಷ್ಟೇ ಚಿಂತಾಗ್ರಸ್ತನಾಗಿ ಕೇಳುತ್ತಾನೆ.
'ನೆಡಿ, ಆದ್ರೆ ಕಡಿ ಬೇಡಿ. ಇರೋ ಹಸಿರನ್ನ ಹಾಗೆಯೇ ಉಳಿಸಿಕೊಳ್ಳಿ .ಈಗ ನಿಮ್ಮ ಹೊಲಗದ್ದೆಗಳ ವಿಷಯಕ್ಕೆ ಬಂದ್ರೆ ಇದೆ ಬಗೆಯ ದೊಡ್ಡ ಹೊಂಡವನ್ನ ಹೊಲದ ಸಮೀಪಕ್ಕೆ ಮಾಡಿ, ಒಂದು ದೊಡ್ಡ ಪೈಪನ್ನು ಅದಕ್ಕೆ ಜೋಡಿಸಿ, ಊರಿನ ಮನೆಯ ಛಾವಣಿಗಳ ನೀರನ್ನು ಆ ಪೈಪಿಗೆ ಸೇರುವಂತೆ ಮಾಡಬೇಕು . ಅಲ್ಲದೆ ಹೊಂಡವನ್ನು ತುಸು ಆಳಕ್ಕೆ ತೊಡುವುದರಿಂದ ಅಂತರ್ಜಲವು ಸೇರಿ ವರ್ಷವಿಡೀ ಹೊಲ ಗದ್ದೆಗಳಿಗೆ ನೀರು ಸಿಗುತ್ತದೆ. ಅಲ್ಲದೆ ಈ ಕೂಡಲೇ ಊರಿನ ಎಲ್ಲ ರೈತರು ಹನಿ ನೀರಾವರಿಯನ್ನು ಅಳವಡಿಸಿಕೊಳ್ಳಬೇಕಾಗಿ, ಹನಿ ನೀರಾವರಿ ಸಾಂಪ್ರದಾಯಿಕ ಪದ್ದತಿಯ ನೀರಾವರಿಗಿಂತ ಕೇವಲ ಅರ್ದದಷ್ಟುನೀರಿನಲ್ಲೇ ಉತ್ತಮ ಫಸಲನ್ನು ಬೆಳೆಯಬಹುದಾದ ವಿಧಾನ ಎಂದು ತಿಳಿಸುತ್ತಾನೆ. ಅಷ್ಟರಲ್ಲಾಗಲೇ ಊರಿನ ಹಲವು ಜನರು ಭಟ್ಟರ   ಮನೆಯ ಮುಂದೆ ಸೈದಾಂತ್ ಹೇಳುತ್ತಿದ್ದ ವಿಷಯವನ್ನು ತದೇಕಚಿತ್ತದಿಂದ ಕೇಳಿಸಿಕೊಳುತ್ತಿರುತ್ತಾರೆ. ಸೈದಾಂತ್ ಹೇಳಿ ಮುಗಿಸಿದ ನಂತರ ಕೆಲವರು ಮಳೆ ನೀರಿನ ಸಂರಕ್ಷಣೆಯ ವಿಧಾನವನ್ನು ಮೆಚ್ಚಿದರೆ ಇನ್ನು ಕೆಲವರು ಇದು ಸಾಧ್ಯವೇ ಇಲ್ಲವೆಂದು ನಾನಾ ತರ್ಕಗಳಿಂದ ಈ ವಿಧಾನವನ್ನು ಅಲ್ಲಗೆಳೆಯುತ್ತಾರೆ. ಆದರೆ ನೆಲಕ್ಕಾಗಿ ಯಾವ ಸವಾಲನ್ನೂ ಸ್ವೀಕರಿಸಬಲ್ಲವನಾಗಿದ್ದ ಹರೀಶ, ಸೈದಾಂತ್  ನ ಲೆಕ್ಕಾಚಾರವನ್ನು ಮತ್ತೊಮ್ಮೆ ಕೇಳಿಸಿಕೊಳ್ಳತೊಡಗುತ್ತಾನೆ.

ಮಾರನೇ ದಿನ ಬೆಳಗಾಗುವ ಮೊದಲೇ ಮನೆಯ ಹೊರಗಡೆ ಏನೋ ಸದ್ದನ್ನು ಕೇಳಿ ಹೊರಬಂದ ಸೈದಾಂತ್ ದೊಡ್ಡಪ್ಪ ಹೊಂಡವನ್ನು ಅಗೆಯುವುದನ್ನು ನೋಡುತ್ತಾನೆ. ಅಲ್ಲದೆ ಮನೆಯ ಛಾವಣಿಗೆ ಜೋಡಿಸಲು ಪೈಪುಗಳನ್ನೂ ತಂದು ಇಡಲಾಗಿರುತ್ತದೆ. ಊರಿನ ಬಹುತೇಕ ಮಂದಿ ತನ್ನ ಮಳೆ ನೀರಿನ ಸಂರಕ್ಷಣೆಯ ವಿಷಯವನ್ನು ಕಾಟಾಚಾರವಾಗಿ ತೆಗೆದುಕೊಂಡರು ತನ್ನ ದೊಡ್ಡಪ್ಪ ಮಾತ್ರ ಇಷ್ಟು ಬೇಗ ಅದನ್ನು ಗ್ರಹಿಸಿರುವುದಲ್ಲದೆ, ಅದಕ್ಕಾಗಿ ಕಾರ್ಯೋನ್ಮುಖವಾಗಿದ್ದು ಸೈದಾಂತ್ ಗೆ ಅತೀವ ಸಂತೋಷವನ್ನು ತರುತ್ತದೆ. ತನ್ನ ಅಪ್ಪ ಏನಾದರು ಅವರ ಪಾಲಿನ ಜಮೀನನ್ನು ಮಾರದೆಯೇ ಉಳಿಸಿಕೊಂಡಿದ್ದರೆ ಇಂದು ತಾನು ಇದೆ ಊರಿನಲ್ಲಿ ನೆಲೆಸಿ ಆದರ್ಶ ಕೃಷಿಕನಾಗುತ್ತಿದ್ದೆ ಎಂದುಕೊಳ್ಳುತ್ತಾನೆ.
ನೆಲವನ್ನು ತನಗಿಂತ ಹೆಚ್ಚಾಗಿ ಪ್ರೀತಿಸುವ ದೊಡ್ಡಪ್ಪನನ್ನು ಒಮ್ಮೆ ನೋಡುತ್ತಾನೆ. ವಯಸ್ಸಾಗಲೇ ಅರವತ್ತು ತಲುಪುತ್ತಿದೆ. ಅವರ ಪ್ರತಿ ಗುದ್ದಲಿಯ ಅಗೆತಕ್ಕೂ ಸೈಕಲ್ ಪಂಪಿನಂತೆ ಬರುವ ಏದುಸಿರನ್ನು ಕೇಳಿ ಸೈದಾಂತ್ ಕಳವಳಗೊಳ್ಳುತ್ತಾನೆ. ನೋಡಲಾರದೆ ಅವರ ಬಳಿ ಹೋಗಿ ತಾನು ಅಗೆಯುತ್ತೇನೆಂದು ಕೈಲಿದ್ದ ಗುದ್ದಲಿಯನ್ನು ತೆಗೆದುಕೊಳ್ಳುತ್ತಾನೆ.
'ನನ್ನ ಸೋಂಬೇರಿ ಮಗನಿಗಾದ್ರೂ ಈ ಬುದ್ದಿ ಬರ್ಬರದಿತ್ತಾ!' ಎಂದು ಹೇಳಿದ್ದು ಸೈದಾಂತ್ ನ ಕಿವಿಗೆ ಬೀಳುತ್ತದೆ.
'ಊರಲ್ಲಿ ಯಾರಿಗೂ ಇದು  ಅರ್ಥ ಆಗಿಲ್ಲ ಅನ್ಸುತ್ತೆ ಮಗ.. ನಂಗೆ ಮಾತ್ರ ಏನೋ ನಿನ್ ಮಾತಿನ್ ಮೇಲೆ ತುಂಬ ನಂಬಿಕೆ ಬಂದ್ ಬಿಟ್ಟಿದೆ. ಮೊದ್ಲು ಮನೆ ಹತ್ರ ಮಾಡಿ ಊರೋರಿಗೆ ತೋರ್ಸನ. ಅವುಕ್ಕೆ ಆಮೇಲೆ ಅರ್ಥ ಆದ್ರೂ ಆಗ್ಬಹುದು. ನಿಮ್ಮಜ್ಜ  ತಿಪ್ಪಜ್ಜಂಗೂ ನಿನ್ನ್ ಅಂಗೇ ಏನೋ ಹೊಸದು ಮಾಡ್ಬೇಕು ಅಂತ ಇಷ್ಟ ಇತ್ತು.. ಆಗಿನ್ ಕಾಲ್ದಾಗೆ ಬರಿ ಅರ್ಧ ಎಕ್ರೆ ಹೊಲ ಇಟ್ಕೊಂಡು, ಬೆಳ್ದು, ಉಳ್ಸಿ, ಏಳ್ ಎಕ್ರೆ ತನಕ ಮಾಡಿದ್ರು..ಅವ್ರ್ ಸತ್ಯನೇ ಇವತ್ತಿಗೂ ನಮ್ಮ್ ಮೇಲ್ ಎಲ್ಲ ಇರಾದು' ಎನ್ನುತ್ತಾನೆ. ಸೈದಾಂತ್ ಹೊಂಡವನ್ನು ಅಗೆಯುತ್ತಾ ದೊಡ್ಡಪ್ಪನ ಮಾತನ್ನು ಕೇಳಿಸಿಕೊಳ್ಳುತ್ತಿರುತ್ತಾನೆ.
'ನಾಡಿದ್ದು ಜಾತ್ರೆ ದಿನ ಎರ್ಡ್ ಇಂಚ್ ಮಳೆ ಖಂಡಿತಾ ಬರುತ್ತೆ..ನೋಡಣ ಎಷ್ಟ್ ನೀರ್ ಸಿಗುತ್ತೆ ಅಂತ. ಮತ್ತೆ ಮಗ ಅದೇನೋ ಅಂದಲ್ಲ, ಹನಿ ನೀರಾವರಿ ಅಂತ.. ಅದನ್ನು ಒಂಚೂರು ಅಮ್ಯಾಗೆ ಹೇಳ್ಕೊಡು.. ನೋಡಣ, ಆದ್ರೆ ಅದನ್ನು ಹಾಕೆಬಿಡೋಣ' ಎನ್ನುತ್ತಾ ನಿಧಾನವಾಗಿ ಮನೆಯೊಳಗೆ ನೆಡೆಯುತ್ತಾನೆ. ದೊಡ್ಡಪ್ಪನ ಮಾತುಗಳನ್ನು ಕೇಳಿ ಇನ್ನೂ ಹೆಚ್ಚಿನ ಉತ್ಸಾಹದಿಂದ ಸೈದಾಂತ್ ಹೊಂಡವನ್ನು ತೆಗೆಯತೊಡಗುತ್ತಾನೆ.

ಜಾತ್ರೆಯ ದಿನ ಬೇಗನೆ ಎದ್ದು ಶುಚಿಯಾಗಿ ದೇವಾಲಯದ ಬಳಿ ಹೋದ ಹರೀಶ, ದೇವಾಲಯದ ಕೆಲಸ ಕಾರ್ಯಗಳಲ್ಲಿ ನಿರತನಾಗುತ್ತಾನೆ. ತೋರಣ ಕಟ್ಟುವುದು, ಕೆಂಡಕ್ಕಾಗಿ ಸೌದೆಯ ಉರಿ ಹಚ್ಚುವುದು, ಮದ್ಯಾಹ್ನದ ಊಟದ ವ್ಯವಸ್ಥೆಯನ್ನು ನೋಡಿಕೊಳ್ಳುವು ಎನ್ನುತ ಅತ್ತಿತ್ತಾ ಓಡಾಡುತ್ತಿರುತ್ತಾನೆ. ಸಮಯ ಸಿಕ್ಕಾಗೆಲ್ಲ ನೆರಳಲ್ಲಿ ಕೂತು ಧಣಿವಾರಿಸಿಕೊಳ್ಳುತ್ತಿರುತ್ತಾನೆ. ಆದರೆ ಇಂದೇಕೋ ಆತನ ಹೃಧಯ ಒಂದೇ ಸಮನೆ ಬಡಿದುಕೊಳ್ಳುತ್ತಿರುತ್ತದೆ. ಸಮಯ ಕಳೆದಂತೆ ಜನಜಂಗುಳಿ ಹೆಚ್ಚಾಗುತ್ತಾ ತೊಡಗಿತು. ಸೈದಾಂತ್ ದೇವಾಲಯದ ಆಲದ ಮರದ ಬಳಿ ನಿಂತು ಜಾತ್ರೆಯನ್ನು ವೀಕ್ಷಿಸುತ್ತಿರುತ್ತಾನೆ. ಆಗಾಗ ಆಕಾಶವನು ನೋಡುತ್ತಾ ಮಳೆಬರುತ್ತದೆಂದು ದೊಡ್ಡಪ್ಪ ಹೇಳಿದ ಮಾತು ಅದೆಷ್ಟು ನಿಜವಿರಬಹುದೆಂದು ಕಾಯತೊಡಗುತ್ತಾನೆ. ಮೋಡದ ಒಂದು ಚೂರು ಕುರುವಿರದ ಬರಿದಾದ ನೀಲಿ ಆಕಾಶವನ್ನೂ ಲೆಕ್ಕಿಸದೆ ಊರ ಜನ ಮಳೆ ಬರೊದೊಳಗೆ ಕೆಂಡ ಹಾಯಬೇಕು ಎನ್ನುತ ಕೆಂಡದ ಬಳಿಗೆ ಹೋದದ್ದನ್ನು ಕಂಡು ದಿಗ್ಬ್ರಾಥನಾಗುತ್ತಾನೆ. ಇದೆಂತಹ ನಂಬಿಕೆ ಇವರದು ಎನ್ನುತ್ತಾ ತನ್ನ ದೊಡ್ಡಪ್ಪನನ್ನು ಅರಸತೊಡಗುತ್ತಾನೆ.

ದೇವಾಲಯದ ಹಿಂದಿನ ಹಲಸಿನ ಮರದ ಬುಡದಲ್ಲಿ ಕೂತಿದ್ದ ದೊಡಪ್ಪ ಒಂದೇ ಸಮನೆ ತನ್ನ ಎದೆಯನ್ನು ತಿಕ್ಕಿಕೊಳ್ಳುತ್ತಿರುತ್ತಾನೆ. ಕೂಡಲೇ ಅವನ ಬಳಿಗೆ ಧಾವಿಸಿದ ಸೈದಾಂತ್ ಏನಾಯಿತೆಂದು ಕೇಳುತ್ತಾನೆ. ಇದು ತೀರಾ ಸಹಜವೆಂಬಂತೆ ಹರೀಶ ದೇವರ ಕೆಂಡವನ್ನು ಹಾಯ್ದು ಹೋಗು ಎಂದು ಸೈದಾಂತ್ ಗೆ ಹೇಳುತ್ತಾನೆ.  ಅಷ್ಟರಲ್ಲಾಗಲೇ ಬಹುಪಾಲು ಮಂದಿ ಕೆಂಡವನ್ನು ಹಾಯ್ದಿರುತ್ತಾರೆ. ಚಿಕ್ಕವನಿದ್ದಾಗ ಕೆಂಡ ಹಾಯುವುದನ್ನು ಕಂಡಿದ್ದನಾದರೂ ಒಮ್ಮೆಯೂ ಆತ ಹಾಯುವ ರೇಜಿಗೆ ಹೋಗಿರಲಿಲ್ಲ. ಆದ ಕಾರಣ ಕೊಂಚ ಅಳುಕುತ್ತಲೇ ಕೆಂಡದ ರಾಶಿಯ ತುದಿಯಲ್ಲಿ ನಿಂತಿರುತ್ತಾನೆ. ಹಿಂದಿನಿಂದ ಒಮ್ಮೆಲೇ ಬಂದ ದೊಡ್ಡಪ್ಪ 'ಹೇ.. ಬಾ ಮಗ ಏನಾಗಕಿಲ್ಲ' ಎನ್ನುತ್ತಾ ಸೈದಾಂತ್ ನ ಕೈಯನ್ನು ಹಿಡಿದುಕೊಂಡು ಮುನ್ನುಗ್ಗುತ್ತಾನೆ. ಹುಲ್ಲು ಹಾಸಿನ ಮೇಲೆ ನೆಡೆದ ಅನುಭವ ಸೈದಾಂತ್ ನಿಗೆ ಆಗುತ್ತದೆ .ಹೀಗೆ ದೇವಾಲಯದ ಸುತ್ತ ನಾಲ್ಕು ಸುತ್ತನ್ನು ದೊಡ್ಡಪ್ಪನ್ನ ಕೈಯನ್ನು ಹಿಡಿದೇ ನೆಡೆಯುತ್ತಾನೆ. ಅಲ್ಲಿಯವರೆಗೂ ಒಂದೇ ಸಮನೆ ನೆಡಯುತಿದ್ದ ದೊಡಪ್ಪ ಕೊನೆಯ ಸುತ್ತಿನಲ್ಲಿ ಒಂದೇ ಸಮನೆ ಕಂಪಿಸತೊಡಗುತ್ತಾನೆ. ಕೊನೆಯ ಸುತ್ತಿನ ಕೆಂಡದ ಮೇಲೆ ಕಾಲಿಡುತ್ತಿದ್ದಂತೆ ದೊಪ್ಪನೆ ಬಿದ್ದುಬಿಡುತ್ತಾನೆ.

ಸೈದಾಂತ್ ಹಾಗು ಊರಿನ ಜನರೆಲ್ಲರೂ ಸೇರಿ ಹರೀಶನನ್ನು ಆಸ್ಪತ್ರೆಗೆ ಸೇರಿಸುತ್ತಾರೆ. ನಾಪತ್ತೆಯಾಗಿದ್ದ ತಿಪ್ಪೇಶಿ ವಿಷಯ ತಿಳಿದು ಸಂಜೆಯ ವೇಳೆಯಷ್ಟೊತ್ತಿಗೆ ಆಸ್ಪತ್ರೆಗೆ ಬರುತ್ತಾನೆ. ದೊಡ್ಡಪ್ಪನ ಮಾತಿನಂತೆ ಆಸ್ಪತ್ರೆಯ ಕಿಟಕಿಯ ಮೂಲಕ ಸೈದಾಂತ್ ಒಂದೇ ಸಮನೆ ಸುರಿಯುತ್ತಿದ್ದ ಮಳೆಯನ್ನು ನೋಡುತ್ತಿರುತ್ತಾನೆ. ಸ್ವಲ್ಪ ಸಮಯದ ನಂತರ ಹೊರ ಬಂದ ಡಾಕ್ಟರ್ ನನ್ನು ಏನಾಯಿತೆಂದು ವಿಚಾರಿಸಿದ ತಿಪ್ಪೇಶಿಗೆ ಡಾಕ್ಟರ್ ಆತನ ಹೆಗಲ ಮೇಲೆ ಕೈ ಹಾಕಿ 'ಸಾರಿ' ಎಂದು ಮುನ್ನೆಡೆಯುತ್ತಾರೆ. ಹೃದಯಘಾತದಿಂದ ಹರೀಶ ಮೃತಪಟ್ಟಿರುತ್ತಾನೆ. ಎಲ್ಲರೂ ಮೌನವಾಗುತ್ತಾರೆ. ಸೈದಾಂತ್ ನಿಂತಲ್ಲೇ ಕುಸಿಯುತ್ತಾನೆ. ತಿಪ್ಪೇಶಿ ಡಾಕ್ಟರ್ ಹಿಂದೆಯೇ ಹೋಗಿ ಮರಣ ದೃಡೀಕರಣ ಪತ್ರಕ್ಕೆ ಸಹಿ ಹಾಕಿ ಕೊಡಬೇಕೆಂದು ಕೇಳಿಕೊಳ್ಳುತ್ತಾನೆ.

ಹರೀಶನ ಅಂತ್ಯಕ್ರಿಯೆಗೆ ತಮ್ಮ ಗಿರೀಶನೂ ಬಂದಿರುತ್ತಾನೆ. ತಿಪ್ಪಜ್ಜನ ಪಕ್ಕದಲ್ಲಿಯೇ ಅಂತ್ಯಕ್ರಿಯೆಗೆ ಜಾಗ ಮಾಡಲಾಗಿರುತ್ತದೆ. ಮಾರನೇ ದಿನ ಗಿರೀಶ  ಮಗನನ್ನು ಊರಿಗೆ ಬರಲು ಹೇಳಿದರೂ ಸೈದಾಂತ್ ನಿರಾಕರಿಸುತ್ತಾನೆ. ಅವರು ಹೊರಡಬೇಕೆಂದು, ತಾನು ಕೆಲವು ದಿನಗಳ ನಂತರ ಫೋನ್ ಮಾಡುವುದಾಗಿ ತಿಳಿಸುತ್ತಾನೆ. ಕೇವಲ ಒಂದು ದಿನ ಬಂದ ಮಳೆಗೆ ಸಾಕಷ್ಟು ಪ್ರಮಾಣದ ತಿಳಿ ನೀರು ತಾನು ಹಾಗು ದೊಡಪ್ಪ ತೋಡಿದ ಹೊಂಡದಲ್ಲಿ ಶೇಕರಿಸಲ್ಪಟ್ಟಿದ್ದನ್ನು ಕಂಡು ಊರ ಜನ ಸೈದಾಂತ್ ನಲ್ಲಿಗೆ ಬಂದು ಅದರ ಬಗ್ಗೆ, ಹನಿ ನೀರಾವರಿಯ ಬಗ್ಗೆ ಹಾಗು ಇನ್ನು ಹಲವು ಕೃಷಿ ವಿಚಾರಗಳ ಬಗ್ಗೆ ತಿಳಿಯತೊಡಗುತ್ತಾರೆ. ಸೈದಾಂತ್ ನಿಗೆ ಈಗ ತಾನು ಊರ ಬಿಡುವುದು ಕಷ್ಟಸಾಧ್ಯವೆಂದೆನಿಸಿರುತ್ತದೆ. ಜೀವನವೆಲ್ಲ ಈ ಊರು ಹಾಗು  ಜಮೀನಿನಲ್ಲೇ ಕಳೆಯಬೇಕೆಂಬ ಉತ್ಕಟ ತವಕ ಆತನ ಮನದೊಳಗೆ ದಿನೇ ದಿನೇ ಮೂಡಿ ಬೆಳೆಯುತ್ತಿರುತ್ತದೆ. ಕೆಲದಿನಗಳಷ್ಟೇ ಆದರೂ ತನ್ನ ದೊಡ್ಡಪೆನೊಟ್ಟಿಗಿನ ಆತ್ಮೀಯ ಒಡನಾಟವೂ ಅದಕ್ಕೆ ಕಾರಣವಾಗಿರುತ್ತದೆ. 

ಕೆಲ ದಿನಗಳ ನಂತರ ತಿಪ್ಪೇಶಿ ಸೈದಾಂತ್ ನಲ್ಲಿಗೆ ಬಂದು ತಾನು ಊರ ಹೊಲವನ್ನೆಲ್ಲ ಮಾರಲು ನಿಶ್ಚಹಿಸಿರುವುದಾಗಿಯೂ ಸಿಟಿಗೆ ಹೋಗಿ ಉದ್ಯಮೆಯೊಂದನ್ನು ಶುರು ಮಾಡುವುದಾಗಿ ತಿಳಿಸುತ್ತಾನೆ. ತಿಪ್ಪೇಶಿಯ ಸಿಟಿಯ ಹುಚ್ಚುಕನಸಿನ ಬಗ್ಗೆ ಚೆನ್ನಾಗಿ ತಿಳಿದಿದ್ದ ಸೈದಾಂತ್ ಏನೇ ಹೇಳಿದರೂ ಕೇಳುವ ಮನಸ್ಥಿತಿಯಲ್ಲಿರದ ತಿಪ್ಪೇಶಿ ಮಾರಲು ಬೇಕಾದ ಕಾಗದ ಪತ್ರವನ್ನೆಲ್ಲ ತಯಾರು ಮಾಡಿಕೊಂಡಿರುತ್ತಾನೆ.

ರಾತ್ರಿಯೆಲ್ಲ ಯೋಚಿಸಿದ ಸೈದಾಂತ್ ಮಾರನೇ  ದಿನ ಅಪ್ಪನಿಗೆ ಫೋನ್ ಮಾಡಿ ತನಗೆ ತಕ್ಷಣ ಇಪ್ಪತ್ತು ಲಕ್ಷ ಬೇಕೆಂದೂ, ಕಾರಣ ಏನೆಂದು ಕೇಳಬಾರದೆಂದು ಹೇಳುತ್ತಾನೆ. ಒಂದೇ ಬಾರಿಗೆ ಮಗ ಇಷ್ಟೊಂದು ಭಾರಿ ಮೊತ್ತದ ಹಣವನ್ನು ಕೇಳುತ್ತಿರುವುದು ಇದೆ ಮೊದಲ ಬಾರಿಯಾದರೂ ಗಿರೀಶನಿಗೆ ತನ್ನ ಮಗನ ಮೇಲೆ ಸಂಪೂರ್ಣ ಭರವಸೆಯಿರುತ್ತದೆ. ಇನ್ನೆರೆಡು ದಿನದಲ್ಲಿ ಹಣವನ್ನು ಹೊಂದಿಸುವುದಾಗಿಯೂ ಮನೆಗೆ ಬಂದು ತೆಗೆದುಕೊಂಡು  ಹೋಗಬೇಕಾಗಿ ಹೇಳುತ್ತಾನೆ. ಅಪ್ಪನಿಂದ ಹಣವನ್ನು ಪಡೆದ ಸೈದ್ದಾತ್ ಹಣವನ್ನು ಇನ್ನು ಕೆಲವೇ ವರ್ಷದಲ್ಲಿ ಹಿಂದಿರುಗಿಸುವುದಾಗಿಯೂ ಹೇಳಿ, ಅಷ್ಟೂ ಹಣವನ್ನು ಹಳ್ಳಿಗೆ ತಂದು ತಿಪ್ಪೇಶಿಯ ಮುಂದಿಡುತ್ತಾನೆ. ಅಲ್ಲದೆ ಆತನ ಅಷ್ಟೂ ಆಸ್ತಿಯನ್ನು ತಾನು ಖರೀದಿಸುವುಗಾಗಿ, ಊರ ಮನೆ ಮಾತ್ರ ಹಾಗೆಯೇ ಇರಲಿ ಎಂದು ಹೇಳುತ್ತಾನೆ. ಸೈದಾಂತ್ ನ ಮಾತನ್ನು ಕೇಳಿ ತಿಪ್ಪೇಶಿಗೆ ಸ್ವರ್ಗವೇ ತನ್ನ ಮುಂದೆ ಬಂದು ನಿಂತ ಅನುಭವವಾಗುತ್ತದೆ. ನಂತರದ ಎರಡೇ ದಿನಗಳಲ್ಲಿ ಕಾಗದ ಪತ್ರವೆಲ್ಲ  ತಯಾರು ಮಾಡಿ ಅಪ್ಪನಿಂದ ಬಂದ ಆಸ್ತಿಯನ್ನು ಸೈದಾಂತ್ ನ ಹೆಸರಿಗೆ ಮಾರಿಬಿಡುತ್ತಾನೆ.

ದಿನಗಳು ಕಳೆದವು..

ನೋಡ ನೋಡುತ್ತಲೇ ತಿಪ್ಪೇಶಿ ಸಿಟಿಯ ಹಾದಿಯನ್ನು ಹಿಡಿದಿರುತ್ತಾನೆ. ನೇಗಿಲ ಹೊತ್ತು, ಎತ್ತುಗಳ ಹಿಂದೆ ಸೈದಾಂತ್ ಹೊಲದ ಕಡೆ ಹೋಗುತ್ತಿರುತ್ತಾನೆ.





Thursday, April 13, 2017

ಹಣವೆಂಬ ಕಣವಿರದ ಹೊಸ ಲೋಕವ ಹುಡುಕಬೇಕಯ್ಯಾ…

ಸನ್ನಿವೇಶ -೧

ಬೇಸಿಗೆಯ ಸುಡುಬಿಸಿಲಿಗೆ ತಲೆಸುತ್ತು ಬಂದು ನಿತ್ರಾಣದಿಂದ ಬಳಲುತ್ತಿದ್ದ ತಂದೆಯನ್ನು ನೋಡಲಾರದೆ ಊರಿನ ದೊಡ್ಡಾಸ್ಪತ್ರೆಗೆ (ಸರ್ಕಾರೀ ಆಸ್ಪತ್ರೆ) ಸೇರಿಸಲು ತೆರಳಿದ ಮಗನಿಗೆ ನರ್ಸುಗಳೆಂದು ಕರೆಯುವ ದರ್ಪದಿಂದ ಓಡಾಡುವ ಹೆಂಗಸರುಗಳು ‘ಆಸ್ಪತ್ರೇಲಿ ಯಾವ್ ಬೆಡ್ಡು ಖಾಲಿ ಇಲ್ಲರಿ.. ಪಕ್ಕದ್ ಪ್ರೈವೇಟ್ ಆಸ್ಪತ್ರೆಗೆ ಸೇರ್ಸಿ’ ಎಂದು ಅವಿನಿಯಪೂರ್ವಕವಾಗಿ ಅರಚಿದಾಗ ಮಗನಿಗೆ ಸಿಟ್ಟು ಉಕ್ಕಿ ಬಂದರೂ ಆತ ವ್ಯಕಪಡಿಸಲಾಗದ ಸ್ಥಿತಿಯಲ್ಲಿದ್ದ. ಆಸ್ಪತ್ರೆಯಲ್ಲಿ ಬೆಡ್ಡುಗಳು ಖಾಲಿ ಇವೆಯೆಂದು, ನರ್ಸುಗಳ ಕೈಯೊಳಗೆ ಒಂದೆರೆಡು ನೂರರ ನೋಟುಗಳನ್ನು ತುರುಕಿದರೆ ಬೆಡ್ಡಿರುವ ಕೋಣೆಗಳು ತನಗೆ ತಾನೇ ತೆರೆದುಕೊಳ್ಳುತ್ತವೆಂದು ಅಲ್ಲದೆ ಪಕ್ಕದ ಪ್ರೈವೇಟ್ ಹಾಸ್ಪಿಟಲ್ ಗೆ ಇಲ್ಲಿನ ಕಳಿಸಲ್ಪಡುವ ರೋಗಿಗಳಿಗೆ ಸಮನಾಗಿ ಕಮಿಷನ್ ಎಂಬ ಪ್ರೋತ್ಸಾಹ ಧನವನ್ನು ಇವರುಗಳಿಗೆ ನೀಡುತ್ತಾರೆಂದು, ಅದಕ್ಕಾಗೇ ಅಲ್ಲಿನ ಪ್ರೈವೇಟ್ ಆಸ್ಪತ್ರೆಯವರು ಯದ್ವಾ ತದ್ವ ಹಣ ಪೀಕುತ್ತಾರೆಂದು ಮಗನಿಗೆ ಚೆನ್ನಾಗಿ ತಿಳಿದಿತ್ತು. ಬಳಲುತ್ತಿದ್ದ ತಂದೆಯ ಮುಖವನ್ನು ಒಮ್ಮೆ ನೋಡಿ ಹಾಗೆಯೇ ಜೇಬಿನಲ್ಲಿದ್ದ ಕೆಲವೇ ನೋಟುಗಳನ್ನು ಗಮನದಲ್ಲಿಟ್ಟುಕೊಂಡು ಮಗ ಅಳುಕುತ್ತ ನೂರರ ಒಂದು ನೋಟನ್ನು ಆಕೆಯ ಕೈಯ ಮೇಲಿಟ್ಟ. ಆಕೆಯ ಅಜ್ಜನ್ನೂ ಅಥವಾ ಅಪ್ಪನೋ ಕಟ್ಟಿಸಿರುವ ಆಸ್ಪತ್ರೆಯಲ್ಲಿ ಕೊಡುವ ಉಚಿತ ಚಿಕಿತ್ಸೆಯನ್ನು ಕಂಡು ತಾಳಲಾರದೆಂಬಂತೆ ಆಕೆ ‘ನೂರ್ ರೂಪಾಯಿಯಲ್ಲಿ ಏನ್ರಿ ಸಿಗುತ್ತೆ.. ಬೆಡ್ ಒಂದಕ್ಕೆ 200 ನಡೀತಾ ಇರೋದು’ ಎಂದು ಧಿಮಾಕಿನ ಶೃಂಗದಿಂದ ಅರಚತೊಡಗಿದಳು. ಅಪ್ಪನ ಗೋಳನ್ನು ತಾಳಾಲಾರದೆ ಹಾಗು ಪ್ರೈವೇಟ್ ಆಸ್ಪತ್ರೆಗಳೆಂಬ ಹಣದ ಜಿಗಣೆಗಳ ದಾಹವನ್ನು ನೀಗಿಸಲಾರದೆ ತನ್ನ ಸಿಟ್ಟನ್ನು ಅದುಮಿಕೊಂಡು ಮಗ ನೂರರ ಮತ್ತೊಂದು ನೋಟನ್ನು ಆಕೆಯ ಕೈಯ ಮೇಲೆ ಇಟ್ಟನು. ಎರಡು ನೋಟುಗಳು ನರ್ಸ್ ಜೇಬಿನೊಳಗೆ ಇಳಿದಾಗ ಪಕ್ಕದಲ್ಲೇ ಇದ್ದ ವಿಶಾಲವಾದ ಕೋಣೆ ತೆರೆಯಲ್ಪಟ್ಟಿತ್ತು. ಅಲ್ಲಿ ಒಂದಲ್ಲ ಎರಡಲ್ಲ ಸುಮಾರು ಮೂವತ್ತರಿಂದ ನಲ್ವತ್ತು ಬೆಡ್ಡುಗಳು ಖಾಲಿ ಬಿದ್ದಿದ್ದವು. ಇನ್ನೂ ಹಲವು ಕುಟುಂಬಗಳೊಟ್ಟಿಗೆ ಹೀಗೆಯೇ ವಾಗ್ವಾದವನ್ನು ಮಾಡುತ್ತಿದ್ದ ನರ್ಸುಗಳು ಪ್ರತಿಯೊಬ್ಬರಿಂದ 200 ರೂಪಾಯಿಗಳನ್ನು ಪಡೆದು ಆ ಕೋಣೆಯೊಳಗೆ ಬಿಡುತ್ತಿದ್ದರು.

ನರಳುತ್ತಿರುವ ರೋಗಿಗಳನ್ನು ಸತಾಯಿಸುವುದೇ ಕಾಯಕವನ್ನಾಗಿ ಮಾಡಿಕೊಂಡಿದ್ದ ಅಲ್ಲಿನ ಡಾಕ್ಟರ್’ಗಳು ಹಣದ ವಾಸನೆ ಬರುವವರೆಗೂ ಅತ್ತ ಸುಳಿಯುತ್ತಿರಲಿಲ್ಲ. ಅಂತೂ ಕಾದು, ಕಾದು ಎಷ್ಟೋ ಸಮಯದ ನಂತರ ಒಬ್ಬ ಡಾಕ್ಟರ್ ಹಾಗು ಆಕೆಯ ಹಿಂದೆ ಸ್ವಲ್ಪ ಹೊತ್ತಿನ ಹಿಂದಷ್ಟೇ ಇನ್ನೂರು ರೂಪಾಯಿಗಳನ್ನು ಕಸಿದುಕೊಂಡಿದ್ದ ನರ್ಸಮ್ಮ ಬಂದರು. ಕಣ್ಣು, ನಾಲಿಗೆಯನ್ನಷ್ಟೇ ಪರೀಕ್ಷಿಸಿದ ಡಾಕ್ಟರ್ ‘ಪೇಷಂಟ್ ತುಂಬ ಸೀರಿಯಸ್ ಆಗಿದ್ದಾರೆ, ಪಕ್ಕದ್ ಪ್ರೈವೇಟ್ ಆಸ್ಪತ್ರೆಗೆ ಸೇರ್ಸಿ’ ಎಂದು ಮುಂದೆ ನೆಡೆದರು. ‘ಸಾರ್, ನಾಲ್ಕ್ ಘಂಟೆಯಿಂದ ಕಾಯಿತಾ ಇದ್ದೀವಿ, ಬೆಡ್ಡಿಗೆ ಅಂತ ನರ್ಸ್ ದುಡ್ಡನ್ನು ತಗೊಂಡಿದ್ದಾರೆ, ನನ್ನ ಹತ್ರ ಪ್ರೈವೇಟ್ ಆಸ್ಪತ್ರೆಗೆ ಸೇರ್ಸೋಕ್ಕೆ ದುಡ್ಡ್ ಇದ್ದಿದ್ರೆ ಇಲ್ಲಿಗೆ ಯಾಕೆ ಬರ್ತಿದ್ದೆ? ತಲೆ ಸುತ್ತಿಗೆ ನೀವು ಪ್ರೈವೇಟ್ ಆಸ್ಪತ್ರೆ ಅಂದ್ರೆ ನಿಮ್ ಡಾಕ್ಟರ್’ಗಿರಿ ನಾಲಾಯಕ್ ಅನ್ಸಲ್ವಾ?’ ಎಂದು ಮಗ ಕೊನೆಗೂ ಜಾಡಿಸಿದ. ಪಕ್ಕದಲ್ಲಿದ್ದ ಬೆಡ್ಡಿನ ಜನರೆಲ್ಲಾ ಇವರನ್ನೇ ತದೇಕಚಿತ್ತದಿಂದ ನೋಡತೊಡಗಿದರು. ‘ರೀ ಮಿಸ್ಟರ್ ಏನ್ರಿ ನಿಮ್ ಹೆಸ್ರು, ನಾಲ್ಗೆ ಮೇಲೆ ನಿಗಾ ಇರ್ಲಿ’ ಎಂದು ಡಾಕ್ಟರ್’ನ ಸೇನಾಪತಿಯಂತೆ ನರ್ಸ್ ಮುಂದೆ ಬಂದಳು. ‘ಪ್ರೈವೇಟ್ ಆಸ್ಪತ್ರೆಗೆ ಸೇರ್ಸೋಕ್ಕೆ ಆಗ್ಲಿಲ್ಲ ಅಂದ್ರೆ ಸ್ಮಶಾನಕ್ಕೆ ಸೇರ್ಸಿ, ಹೋಗ್ರಿ’ ಎಂದು ಆಕೆ ಹೇಳಿ ತಿರುಗಿದೊಡನೆಯೇ ಆಕೆಯ ಜುಟ್ಟನ್ನು ಹಿಡಿದೆಳೆದು, ಕೈಯ ಮುಷ್ಟಿಯನ್ನು ಬಿಗಿ ಮಾಡಿ ಆಕೆಯ ಮುಖದ ಮೇಲೆ ಭಾರಿಸಿದ. ಹೊಡೆದ ಹೊಡತಕ್ಕೆ ನರ್ಸಮ್ಮ ಚೀರುತ್ತಾ ಮೂರ್ಛೆ ಬಿದ್ದಳು. ಇಲ್ಲಿದ್ದರೆ ತನಗೆ ಕೆಲಸಕ್ಕೆ ಕಂಟಕವೆಂದು ಡಾಕ್ಟರ್ ಅಲ್ಲಿಂದ ಜಾಗ ಕಿತ್ತರು.

ಸನ್ನಿವೇಶ -೨

ಅದು ಆ ರಾಜ್ಯದ ಅತಿ ಪ್ರಸಿದ್ಧ ದೇವಾಲಯ. ಪ್ರತಿ ದಿನ ಸಾವಿರಾರು ಕೆಲವೊಮ್ಮೆ ಲಕ್ಷಾಂತರ ಭಕ್ತಾದಿಗಳೂ ಬರುವುದುಂಟು. ಅದಷ್ಟು ಜನರ ಕಷ್ಟ ಕಾರ್ಪಣ್ಯಗಳನ್ನು ನೀಗಿಸುವ, ಸಹಬಾಳ್ವೆಯಿಂದ ಬದುಕುವ ಕಲೆಯನ್ನು ಕಲಿಸುವ ವಿಶಿಷ್ಟತೆ ಆ ಕ್ಷೇತ್ರದ ಮಹಿಮೆ. ಅಂದು ಬಂದ ಲಕ್ಷಾಂತರ ಭಕ್ತಾದಿಗಳಲ್ಲಿ ಅಪ್ಪ ಹಾಗು ಮಗ ಇಬ್ಬರೂ ಬಂದಿದ್ದರು. ಪ್ರತಿ ಸೆಕೆಂಡಿಗೆ ಇಬ್ಬರಂತೆ ಒಳಬಂದು ಹೊರಹೋಗುತ್ತಿದ್ದ ಆ ಜನಗಳನ್ನು ನಿಯಂತ್ರಿಸುವುದು ಅಲ್ಲಿನ ಕಾರ್ಯಪಾಲಕರಿಗೆ ತುಸು ಕಷ್ಟದ ಕೆಲಸವೇ ಆಗಿದ್ದಿತು. ಬೆಳಗ್ಗಿನ ಜಾವ ಹೊಳೆಯಲ್ಲಿ ಸ್ನಾನ ಮುಗಿಸಿ ಅರ್ಧ ದಿನದವರೆಗೂ ಕಾದು, ಭಕ್ತಾದಿಗಳ ಸಾಗರದೊಳಗೆ ಈಜುತ್ತಾ ಕಷ್ಟಪಟ್ಟು ದೇವಾಲಯದ ಒಳ ಹೋಗತೊಡಗಿದಅಪ್ಪ ಮಗ ದೇವರ ಗುಡಿಯನ್ನು ಸುತ್ತ ಸುತ್ತುತಾ ಇನ್ನೇನು ಕೊನೆಯ ಸುತ್ತಿನಲ್ಲಿ ದೇವರ ಮೂರ್ತಿಯನ್ನು ಕಣ್ಣುತುಂಬಿಕೊಳ್ಳಬೇಕು ಎನ್ನುವಷ್ಟರಲ್ಲಿ ಕಾರ್ಯಪಾಲಕರಲ್ಲೊಬ್ಬ ಅಪ್ಪನ ರೆಟ್ಟೆಯನ್ನು ಹಿಡಿದೆಳೆದು ಮುಂದೆ ತಳ್ಳುತ್ತಾನೆ. ‘ನಡಿ ಮುಂದೆ, ನಡಿತಾ ಇರ್ಬೇಕು’ ಎಂದು ಏಕವಚನದಲ್ಲಿ ಅರಚುತ್ತಾ ಸಿನಿಮೀಯ ರೌಡಿಗಳ ಡೈಲಾಗ್ ಗಳನ್ನು ಉಸುರುತ್ತಾ ಸಿಕ್ಕ ಸಿಕ್ಕವರನ್ನೆಲ್ಲ ಮುಂದಕ್ಕೆ ದಬ್ಬುತ್ತಾನೆ. ಮಗನ ಕೋಪ ನತ್ತಿಗೇರಿದರೂ ದೇವಾಲಯದ ಒಳಗೆಅದೇ ಧಾಟಿಯಲ್ಲಿ ಉತ್ತರಿಸುವುದು ಶಕ್ಯವಲ್ಲವೆನ್ನುತ್ತಾ ಸುಮ್ಮನಾಗುತ್ತಾನೆ. ಅಪ್ಪನೂ ಅತಂತ್ರ ಸ್ಥಿತಿಯಲ್ಲಿರುವ ಮುಸಿಯನಂತೆ ಕಣ್ಣುಗಳನ್ನು ಮಿಕ ಮಿಕ ಬಿಡುತ್ತಾ ಆತನನ್ನೇ ನೋಡತೊಡಗುತ್ತಾನೆ.

ಸರಿ ಅದದ್ದು ಆಗಲಿ, ದೇವನಿರುವುದು ನಮ್ಮ ತನದಲ್ಲಿ, ಜೀವಿಗಳ ಮನದಲ್ಲಿ ಅಂದುಕೊಂಡು ಪ್ರಸಾದವನ್ನು ಸ್ವೀಕರಿಸಲು ಊಟದ ಕೋಣೆಗೆ ಇಬ್ಬರೂ ಹೋಗುತ್ತಾರೆ. ಅತಿ ವಿಶಾಲವಾದ ಆ ಕೋಣೆಯಲ್ಲಿ ಜೇನಿನ ಗೂಡಿನಂತೆ ಎಲ್ಲ ಕಡೆಯಿಂದ ಜನರು ಮುತ್ತಿಕೊಂಡಿದ್ದರು. ಸ್ಕೂಲ್ ನ PT ಮಾಸ್ಟರ್ ನಂತೆ ಅರಚುವ ಅಲ್ಲಿನ ಕಾರ್ಯಪಾಲಕರು ಪ್ರಸಾದ ಸ್ವೀಕರಿಸಲು ಬರುವವರನ್ನು ತಮ್ಮ ಸೀಟಿಯ ಸದ್ದಿಗೆ ಎದ್ದು ಕೂರುವ ಮಕ್ಕಳಂತೆ ಕಾಣುತ್ತಾರೆ. ಇಲ್ಲೂ ಸಹ ಅದೇ ಸಿನಿಮೀಯ ಡೈಲಾಗ್ ಗಳು. ಒಟ್ಟಿನಲ್ಲಿಅಲ್ಲಿ ತಪ್ಪುಗಳೆಂದರೆ ಏನು ಎಂದು ಅರಿಯುವ ಮೊದಲೇ ಭಕ್ತಾದಿಗಳು ತಪ್ಪಿತಸ್ಥರಾಗುತ್ತಾರೆ.

ಮೇಲಿನ ಎರಡು ಸನ್ನಿವೇಶಗಳು ಇಂದಿನ ಹಲವಾರು ಆಸ್ಪತ್ರೆ ಹಾಗು ದೇವಾಲಯಗಳಿಗೆ ಅನ್ವಯಿಸುತ್ತವೆಂಬುದು ಸುಳ್ಳಲ್ಲ. ದೇಹದ ಕಷ್ಟಗಳಿಗೆ ಆಸ್ಪತ್ರೆಯ ಹಾದಿಯಾದರೆ ಜೀವನದ ಸಂಕಷ್ಟಗಳಿಗೆ ದೇವಾಲಯದ ಮೊರೆ. ಈ ಜಾಗಗಳಿಗೆ ಬೇಡವೆಂದರೂ ಬರುವೆವೆಂದು ಒಳ ನುಗ್ಗುವ ಜನರೇ ಬಲು ಹೆಚ್ಚು. ಆದರಿಂದಇಂತಹ ಸ್ಥಳಗಳಿಗೆ ಬರುವ ಪ್ರತಿಯೊಬ್ಬರೂ ಒಂದಿಲ್ಲೊಂದು ರೋದನೆಯನ್ನು ಒಳಗೆ ಅದುಮಿಕೊಂಡೆ ಬಂದಿರುತ್ತಾರೆ. ಅದೇನೇ ಆಗಲಿ, ನಿಮ್ಮ ಮುಂದೆ ನಾನು ಶರಣು ಎಂಬಂತೆ ತೆಲೆಯನ್ನು ತಗ್ಗಿಸುತ್ತಾರೆ. ದೇವಾಲಯಗಳಲ್ಲಿ ಕಾರ್ಯಪಾಲಕರು,ಆಸ್ಪತ್ರೆಗಳಲ್ಲಿ ನರ್ಸುಗಳು ಇಂತಹ ಜನರ ನಿಕಟಕ್ಕೆ ಸಿಗುವ ವ್ಯಕ್ತಿಗಳು.ಅವರುಗಳು ಹೇಳುವ ನೀತಿಯಾಗಲಿ ಅಥವಾ ಕೊಡುವ ಔಷಧೀಯ ಯಾವುದೇ ಬಗೆಯಾಗಿರಲಿ ಮರುಮಾತನಾಡದಾದೆ ಅವರ ಸೂಚನೆಗಳನ್ನು ಪಾಲಿಸುತ್ತಾರೆ. ಈ ಮುಗ್ದ ನಂಬಿಕೆಯೇ ಹೆಚ್ಚಾಗಿ ಮುಳುವಾಗುವುದು. ವಿಪರ್ಯಾಸವೆಂಬತೆ ಇಲ್ಲಿ ಸತಾಯಿಸಲ್ಪಡುವ ವ್ಯಕ್ತಿಗಳು ಕೇವಲ ಬಡ ಬಗ್ಗರು. ಪ್ರೆಶ್ನಿಸುವುದು, ಅದು ತಪ್ಪು, ಸರಿಯಲ್ಲ ಎನ್ನುವುದು ಅವರ ಜಾಯಮಾನದಲ್ಲಿ ಬಂದ ವಿಷಯವಲ್ಲ.ಅಂಥವರ ಮುಂದೆ ತಮ್ಮ ಬಲ ಪ್ರದರ್ಶಿಸುವಂತೆ ನಟಿಸುವ ಜನರು ದಿನೇ ದಿನೇ ಹೆಚ್ಚುತ್ತಿದ್ದಾರೆ. ಚಿನ್ನದ ಅಂಗಡಿಯನ್ನೇ ದೇಹದ ಮೇಲೆ ಇಳಿಸಿಕೊಂಡಿರುವ ವ್ಯಕ್ತಿಗಳು, ದೊಡ್ಡ ದೊಡ್ಡ ಕಾರುಗಳಲ್ಲಿ ಬರುವ ಜನರ ಮುಂದೆ ನಿಯತ್ತಿನ ಸೇವಕರಂತೆ ನುಲಿಯುವ ಇವರುಗಳು, ಬಡಜನರ ನೆರಳು ಕಂಡರೆ ಮಾತ್ರ ಸಿಡಿ ಮಿಡಿ ಸಿಡಿಯುತ್ತಾರೆ.ವರ್ತಕ ಸಮಾಜದಲ್ಲೂ ಅದೇ ಬವಣೆ. ಹಣವಿರುವ ಕೆಲವರು ಮುಲಾಜಿಲ್ಲದೆ ತೆತ್ತುವ ಬೆಲೆಗೆ ಒಗ್ಗಿಕೊಂಡು ಚೌಕಾಶಿ ಮಾಡುವ ಬಡವರನ್ನು ಮೇಲೆ ಕೆಳಗೆ ನೋಡುವ ವರ್ತಕರು ಅಂಥವರನ್ನು ಕಾಲಿನ ದೂಳಿನಂತೆಯೂ ಕಾಣುವುದುಂಟು.

ಒಟ್ಟಿನಲ್ಲಿ ಆಧುನಿಕ ಯುಗದ ಹೊಸ ಬಗೆಯ ಶೋಷಣೆಯ ವಿಷಯಗಳ ವೇದಿಕೆಗಳಾಗಿ ಆಸ್ಪತ್ರೆ ಹಾಗು ದೇವಾಲಯಗಳು ಮಾರ್ಪಾಡಾಗುತ್ತಿವೆ. ವಿಶೇಷ ದರ್ಶನ, ವಿವಿಧ ಬಗೆಯ ಅಭಿಷೇಕ ಹಾಗು ಅರ್ಚನೆಗಳು, ವಿಶೇಷ ಪ್ರಸಾದ ಎಂಬ ಹಲವು ವಿಶೇಷಣಗಳು ಬಡವ-ಬಲ್ಲಿದ ಎಂಬ ಹಲವು ಪಿಡುಗುಗಳನ್ನು ತಮಗರಿಯದೆ ದೇವಾಲಯದ ಆವರಣದಲ್ಲಿ ಪಸರಿಸುತ್ತಿವೆ. ಒಂದು ಘಂಟೆಯ ಕಾಲ ದೇವರ ದರ್ಶನಕ್ಕೆ ಕಾಯಲಾಗದ ವ್ಯಕ್ತಿಗೆ ದೇವರ ದರ್ಶನ ಕೇವಲ ನೆಪ ಮಾತ್ರಕ್ಕೆ ಎನ್ನಬಹುದು. ಅಲ್ಲದೆ ಯಾವ ದೇವರು ತಾನೇ ಸಾವಿರದ ಒಂದು ರೂಪಾಯಿಗೆ ನನಗೆ ಪಂಚಕಜ್ಜಾಯ ಅಭಿಷೇಕ, ನೂರು ರೂಪಾಯಿಗೆ ನನಗೆ ಸಾಮನ್ಯ ಅಭಿಷೇಕ ಎಂಬ ಪ್ರೈಸ್ ಟ್ಯಾಗ್ ಗಳನ್ನು ಅಂಟಿಸಿಕೊಂಡಿರುತ್ತವೆ? ಮಾನವನ ಹಣದ ಆಸೆಗೆ ಕೊನೆಯೆಂದು? ರಕ್ತ ಬೆವರು ಒಂದಾಗಿಸಿ ವರ್ಷವಿಡೀ ದುಡಿದ ಹಣವನ್ನು ಅರ್ಥವೇ ಆಗದ ಖಾಯಿಲೆಯ ಔಷಧಿಗಳಿಗೆ ಸುರಿವಾಗ ಪಡುವ ಸಂಕಟ ಅದನ್ನು ಅನುಭವಿಸಿದವನಿಗೇ ಗೊತ್ತು. ಬಟ್ಟೆ ಬದಲಾಯಿಸಲು, ಊಟ ಮಾಡಿಸಲು, ವೀಲ್ ಚೇರ್ ಗಳಲ್ಲಿ ಸಾಗಿಸಲು,ಎಲ್ಲಕ್ಕಿಂತ ಮಿಗಿಲಾಗಿ ಮಲಗಲು ಕನಿಷ್ಠ ಒಂದು ಬೆಡ್ ಅನ್ನು ನೀಡಲೂ ಹಣವನ್ನು ಕೇಳುವ ಆಸ್ಪತ್ರೆಗಳ ನೋಡಿದರೆ ಮಾನವೀಯತೆ ಎಂಬುದು ಏನೆಂಬ ಪ್ರಶ್ನೆ ಉದ್ಭವಿಸುತ್ತದೆ.

ಮೊನ್ನೆ ಕಬ್ಬಿನ ರಸವನ್ನು ಕುಡಿಯುವಾಗ ಬರಗಾಲದ ದಿಕ್ಸೂಚಿಯಂತಿದ್ದ ಬಿಸಿಲಿನ ಧಗೆಗೆ ಒಂದೆರೆಡು ಐಸ್ ಕ್ಯೂಬ್ ಇದ್ದರೆ ಹಾಕಿ ಕೊಡಿ ಎಂದಾಗ ಅಂಗಡಿಯವನು ‘ಐಸ್ ಎಲ್ಲ ಯಾಕೆ ಸಾರ್,ದೇಹ ಹಾಳು.ಇಲ್ಲಿ ಪ್ಯೂರ್ ಕಬ್ಬಿನ ರಸ ಮಾತ್ರ ಸಿಗೋದು’ ಎಂದನು. ಪಕ್ಕದಲ್ಲೇ ಇದ್ದ ನನ್ನ ಗೆಳೆಯ‘ಐಸ್ ಕ್ಯೂಬ್ ಗಳ ಬೆಲೆ ಈಗ ವಿಪರೀತ ಜಾಸ್ತಿ ಆಗಿದೆ’ ಎಂದು ಸುಮ್ಮನಾದ. ನಾನು ಏಕೆಂದು ಮರುಪ್ರಶ್ನಿಸಿದಾಗ ಮೊದಲೆಲ್ಲ ಆಸ್ಪತ್ರೆಗಳಲ್ಲಿ ಶವಗಳನ್ನು ಕೊಳೆಯದಂತೆ ಸಂರಕ್ಷಿಸಲು ಬಳಸುತ್ತಿದ್ದ ಮಂಜಿನ ಗೆಡ್ಡೆ ಗಳನ್ನು ಅಲ್ಲಿನ ಆಸ್ಪತ್ರೆಯವರು ಕಡಿಮೆ ದರದಲ್ಲಿ ಕದ್ದು ಮಾರುತ್ತಿದ್ದರೆಂದು, ನಂತರ ವಿಷಯ ತಿಳಿದು ಅಲ್ಲಿನ ಜನಸಾಮಾನ್ಯರು ಆಸ್ಪತ್ರೆಗಳಿಗೆ ಮುತ್ತಿಗೆ ಹಾಕಿ ಈ ಅನಾಚಾರವನ್ನು ನಿಲ್ಲಿಸಿದರು. ಅಲ್ಲಿಂದ ಮುಂದೆ ಹೆಚ್ಚಿನ ಬೆಲೆಯ ಮಂಜುಗೆಡ್ಡೆಗಳನ್ನು ಕೊಳ್ಳಲು ಕಂಜೂಸು ಮಾಡುವ ವ್ಯಾಪಾರಿಗಳು ‘ಪ್ಯೂರ್ ಕಬ್ಬಿನ ರಸ’ ಎಂಬ ಬೋರ್ಡ್ ಅನ್ನು ಹಾಕಿಕೊಂಡು ಸಮಾಜ ಸೇವಕರ ಪೋಸ್ ಅನ್ನು ನೀಡುತ್ತಿದ್ದಾರೆ ಎಂದ.

ಗಲ್ಲ ಪೆಟ್ಟಿಗೆಯ ಚಿಲ್ಲರೆ ದುಡ್ಡುಗಳನ್ನು ಎಣಿಸುತ್ತಾ ‘ಪಪ್ಪಾ, ದೇವಸ್ಥಾನಕ್ಕೆ ಹೋದಾಗ ಹಾಕೋಕೆ ಇಷ್ಟ್ ಚಿಲ್ಲರೆ ದುಡ್ಡ್ ಸಾಕಾಗಲ್ವ?’ ಎಂದ ಅಂಗಡಿಯವನ ಮಗನನ್ನು ನೋಡುತ್ತಾ ಸುಮ್ಮನೆ ನಿಂತೆ.