Thursday, August 31, 2017

ಬುದ್ದಿವಂತರನ್ನೇ ಅತಿಬುದ್ದಿವಂತರನ್ನಾಗಿ ಮಾಡಲು ಪ್ರಸ್ತುತ ಶಾಲಾ ಕಾಲೇಜುಗಳೆ ಬೇಕೆ? ಅಥವಾ 'ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು' ಎಂಬೊಂದು ಮಾತೆ ಸಾಕೆ?

ಇದು ಸ್ಪರ್ಧಾತ್ಮಕ ಜೀವನ. ಸಾಮನ್ಯ ನೆಡಿಗೆಗೆ ಇಲ್ಲಿ ಆಸ್ಪದವೇ ಇಲ್ಲ. ಇಲ್ಲಿ ಪ್ರತಿಯೊಬ್ಬನೂ ಉಸೈನ್ ಬೋಲ್ಟ್ ಆಗಿರಲೇಬೇಕು ಅಥವಾ ಆಗಬೇಕು. ಇಲ್ಲವಾದಲ್ಲಿ ಬದುಕುವುದೇ ಕಷ್ಟಸಾಧ್ಯ! ಶಿಕ್ಷಣ, ಉದ್ಯೋಗ, ಸಂಸಾರ, ಸಂಬಂಧ, ಸದ್ಯಕ್ಕಂತೂ ಈ ಸ್ಪರ್ಧೆ ಎಂಬ ಗೀಳು ತಾನು ಕಾಲು ಸೋಕಿಸದಿರುವ ವಲಯವಿಲ್ಲ, ವಿಷಯವಿಲ್ಲ.

ಇಂತಹ ಒಂದು ಓಟದ ಜಗತ್ತಿಗೆ ಕಾಲಿಡುವ ಕುಡಿ ತಾನು ಕಣ್ಣುತೆರೆಯುವುದೊಳಗೆ ಪುಸ್ತಕಗಳ ರಾಶಿಯ ಕಾನನದಲ್ಲಿ ಆರಳುವ ವಯಸ್ಸಿಗೆ ಮಹಾಜ್ಞಾನಿಯಾಗಬೇಕೆಂಬ ತನ್ನ ಸುತ್ತಲಿನ ಸಮಾಜದ ಬಯಕೆಯಲ್ಲಿ ಕರಗಿ ಕಮರಿ ಹೋಗಿರುತ್ತದೆ. ಕಾರಣ ಇದೇ ಸ್ಪರ್ಧೆಯ ಮಾಹೆ. ಆದರೆ ಜ್ಞಾನವೆಂಬುದು ಕೇವಲ ಪುಸ್ತಕಗಳ ಒಳಗಿರುವ ಬಿಳಿಹಾಳೆಗಳ ಮೇಲಿನ ಕಪ್ಪು ಅಕ್ಷರಗಳ ಪದಮಾಲೆಯಷ್ಟೇ ಅಲ್ಲದೆ ದಿನ ನಿತ್ಯದ ಸೂರ್ಯೋದಯದಿಂದ ಹಿಡಿದು ಸೂರ್ಯಾಸ್ತದವರೆಗಿನ ಕಾಲಘಟ್ಟದಲ್ಲಿ ನೆಡೆಯುವ ಅಪಾರ ಸಂಖ್ಯೆಯ ಸಂಗತಿಗಳ ಒಟ್ಟು ಮೊತ್ತವೂ ಹೌದು ಎಂಬುದನ್ನು ಹೇಳಿಕೊಡುವ ಶಾಲೆಗಳೆಷ್ಟಿವೆ ಇಂದು? ಮಗುವೊಂದು ಜನಿಸುವ ಮೊದಲೇ ಶಾಲೆಯನ್ನು ಹುಡುಕುವ ಖಯಾಲಿಯ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿಂತಿರುವ ಪ್ರತಿಯೊಬ್ಬರೂ ಮೊದಲ ಸಾಲಿನ ಅತೀ ಪ್ರವೀಣರೇ. ಇಲ್ಲಿ ಎಲ್ಲವೂ ಮೊದಲು. ಮಗು ಹುಟ್ಟುವ ಮೊದಲೇ ಶಾಲೆಯಲ್ಲಿ ಅಡ್ಮಿಷನ್, ಹತ್ತನೇ ತರಗತಿ ಮುಗಿಯುವುದರೊಳಗೆಯೇ ಸಿ.ಇ.ಟಿ ಪರೀಕ್ಷೆಯ ಕೋಚಿಂಗ್, ಇನ್ನು ಸಿ.ಇ.ಟಿ ಮುಗಿದರೆ ಸೀದಾ ನಾಲ್ಕು ವರ್ಷ ನಂತರ ಮಾಡಬೇಕಾದ ಎಂ-ಟೆಕ್ ಅಥವಾ ಎಂಬಿಎ ಸ್ನಾತಕೋತ್ತರ ಪದವಿಗಳಿಗೋಸ್ಕರ ವಿದೇಶಿ ಯೂನಿವರ್ಸಿಟಿಗಳ ಜಾಲಾಟ ಶುರುವಾಗಿಬಿಟ್ಟಿರುತ್ತದೆ!

ಇಂದು ಪ್ರತಿ ಶಾಲೆಗಳು ತಾವು ಸೇರಿಸಿಕೊಳ್ಳುವ ಮಕ್ಕಳನ್ನು ಸಂತೆಯಲ್ಲಿ ಆರಿಸಿ ಚೀಲದೊಳಗೆ ಹಾಕಿಕೊಳ್ಳುವ ತರಕಾರಿಗಳಂತೆ ಶೋದಿಸುತ್ತವೆ. ಹೀಗೆಲ್ಲಾ ಶಾಲಾ ಮಟ್ಟದಲ್ಲೇ ನೆಡೆಯುವ ಈ ಶೋಧನಾ ಪ್ರಕ್ರಿಯೆ ಕಾಲೇಜು ಸೇರುವಷ್ಟರಲ್ಲಿ ಇನ್ನೂ ಸೂಕ್ಷ್ಮವಾಗಿರುತ್ತದೆ ಹಾಗು ಅಷ್ಟೇ ಕ್ಲಿಷ್ಟವಾಗಿರುತ್ತದೆ. ಒಟ್ಟಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಬುದ್ದಿವಂತನೆನಿಸಿಕೊಂಡ ವಿದ್ಯಾರ್ಥಿ ಉತ್ತಮ ಶಾಲೆ ಅಥವಾ ಕಾಲೇಜುಗಳನ್ನು ಒಳಹೊಕ್ಕರೆ, ಹಕ್ಕಿ ಗೂಡು ಕಟ್ಟುವುದನ್ನೇ ತದೇಕಚಿತ್ತದಿಂದ ನೋಡುವ ಕಡಿಮೆ ಅಂಕ ಪಡೆಯುವ ವಿದ್ಯಾರ್ಥಿ ದಡ್ಡನೆನಿಸಿಕೊಂಡು ಜಗತ್ತಿನ ಸ್ಪರ್ಧೆಯಲ್ಲಿ ಹಿಂದುಳಿದುಬಿಡುತ್ತಾನೆ. ಇಂತಹ ಪ್ರಸ್ತುತ ಪರಿಸ್ಥಿತಿಯಲ್ಲಿ ಶ್ರೀಮಂತ ಶ್ರೀಮಂತನಾಗಿಯೇ, ಬಡವ ಬಡವನಾಗಿಯೇ ಇರುವಂತೆ ಕೊಂಚ ಕಡಿಮೆ ಅಂಕವನ್ನು ಪಡೆದು ದಿಕ್ಕು ದಸೆಯಿಲ್ಲದಿರುವಂತೆ ಅಲೆಯುವ ಮಕ್ಕಳನ್ನು ನಮ್ಮ ದೇಶದ ಅತ್ಯುನ್ನತ ವಿದ್ಯಾಸಂಸ್ಥೆಗಳು ತಮ್ಮ ಉನ್ನತಗಿರಿ ಕೇವಲ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗಳನ್ನು ಇನ್ನೂ ಹೆಚ್ಚು ಅಂಕ ಪಡೆಯುವಂತೆ ಮಾಡುವುದೇ ಆಗಿದೆ ಎಂಬುದನ್ನು ಅರಿತಿರುವಂತೆಯೇ ಇದೆಯೆ ಹೊರತು ಸಾಧಾರಣ ಅಥವಾ ಅತಿಸಾಧಾರಣ ವಿದ್ಯಾರ್ಥಿಗಳನ್ನೂ ಮೇಲೆತ್ತಿ ಶೈಕ್ಷಣಿಕ ವ್ಯವಸ್ಥೆಯಲ್ಲಿರುವ ಅಸಮತೋಲನವನ್ನು ಸಮದೂಗಿಸುವ ಗುರುತರ ಕಾರ್ಯವೂ ತಮ್ಮದಾಗಿವೆ ಎಂಬುದನ್ನು ಮನಗಂಡಂತಿಲ್ಲ.

ಇಂದು ಶಾಲಾ ಕಾಲೇಜುಗಳಲ್ಲಿ ಮಗುವೊಂದು ಶಾಲೆಗೆ ಸೇರುವಾಗ ನಡೆಯುವ ಆಯ್ಕೆಯ ವಿಧಾನ ಸ್ಲೋ ಪಾಯಿಸನ್ ನಂತೆ ಸಮಾಜವನ್ನು ಕೊಲ್ಲುತ್ತಿರುವುದು ಸೂಕ್ಷ್ಮವಾಗಿ ಅವಲೋಕಿಸಿದರೆ ತಿಳಿಯುವ ವಿಚಾರ. ಮಗುವಿನ ಹಿಂದಿನ ತರಗತಿಯ ಅಂಕಿ ಅಂಶಗಳನೆಲ್ಲಾ ಬೂತಕನ್ನಡಿ ಹಿಡಿದು ಪರೀಕ್ಷಿಸುವುದರಿಂದ ಹಿಡಿದು ತೂಕ, ಎತ್ತರ ಹಾಗು ನಡತೆಯನ್ನೂ ಇಲ್ಲಿ ಒರೆಹಚ್ಚಿ ನೋಡಲಾಗುತ್ತದೆ. ನಂತರ ಉದ್ಯೋಗಕ್ಕಾಗಿ ನೆಡೆಯುವ ಸಂದರ್ಶನದಂತೆ ಪಿಳಿ ಪಿಳಿ ಕಣ್ಣುಬಿಡುವ ಮಕ್ಕಳನ್ನು ಸಾಲು ಸಾಲು ಪ್ರೆಶ್ನೆಗಳನ್ನು ಕೇಳಿ ಪರೀಕ್ಷಿಸಲಾಗುತ್ತದೆ. ಒಟ್ಟಿನಲ್ಲಿ ಶಾಲೆಗೆ ಬಂದು ಸೇರುವ ಮಕ್ಕಳು ಮೊದಲೇ ಸಕಲಕಲಾವಲ್ಲಭನಾಗಿರಬೇಕು ಹಾಗು ಬೆಸ್ಟ್ ಕ್ವಾಲಿಟಿ ಪ್ರಾಡಕ್ಟ್ ಗಳಾಗಿರಬೇಕು . ಶಾಲಾ ಶಿಕ್ಷಕರ ಆಯ್ಕೆಯ ಬಗ್ಗೆ ವಹಿಸದ ಇಂತಹ ಮುತುವರ್ಜಿ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳುವಾಗ ವಹಿಸಲಾಗುತ್ತದೆ. ಕಾಟಾಚಾರಕ್ಕೆ ಎಂಬಂತೆ ಒಂತಿಷ್ಟು ಎಳೆಯ ವಯಸ್ಸಿನ ಶಿಕ್ಷಕರನ್ನು ನೇಮಿಸಕೊಂಡು, ಕೇವಲ ಪುಸ್ತಕದೊಳಗಿನ ಅಕ್ಷರಗಳ ಸಂತೆಯನ್ನೇ ಶಿಕ್ಷಣವೆಂದು ನಂಬಿಸಿ, ಮಕ್ಕಳ ತಲೆಯೊಳಗೆ ಬಟ್ಟಿ ಇಳಿಸಿ, ವರ್ಷಾಂತ್ಯದ ವೇಳೆಗೆ 'ಶೇಕಡಾ 100 ರಷ್ಟು ಫಲಿತಾಂಶ' ಎಂಬ ಬೋರ್ಡುಗಳನ್ನು ಊರಿನ ಗಲ್ಲಿ ಮೂಲೆಗಳಲ್ಲಿಯೂ ತೂಗಾಕುವುದೇ ಇಂದಿನ ಸ್ಪರ್ಧಾತ್ಮಕ ಶಿಕ್ಷಣ ಸಂಸ್ಥೆಗಳ ಏಕೈಕ ಗುರಿ.

ತಮ್ಮ ಒಂತಿಷ್ಟೂ ಶ್ರಮದ ಹೂಡಿಕೆಯಿಲ್ಲದೆಯೇ ಬುದ್ದಿವಂತ ಮಕ್ಕಳನ್ನೇ ಅತಿ ಬುದ್ದಿವಂತರನ್ನಾಗಿ ಮಾಡುವ ಕಾರ್ಯಕ್ಕೆ ಶಿಕ್ಷಣವೆಂದು ಕರೆಲಾಗುತ್ತದೆಯೇ? ಅರೆಬರೆ ತಿಳಿದ ಅಥವಾ ಏನೂ ಬಲ್ಲದ ವಿದ್ಯಾರ್ಥಿಗಳನ್ನು ಕೈಹಿಡಿದು ಮೇಲೆತ್ತಲಾಗದ ಸರ್ಕಸ್ಸಿಗೆ ಶಿಕ್ಷಕರು, ಶಿಕ್ಷಣ ಸಂಸ್ಥೆಗಳು ಏತಕ್ಕೆ ಬೇಕು? 'ಲೆಸ್ ರಿಸ್ಕ್' ಎಂಬ ಪಾಲಿಸಿಯನ್ನು ಅನುಸರಿಸುವ ಇಂದಿನ ಶಿಕ್ಷಣ ಸಂಸ್ಥೆಗಳ ಜಮಾನದಲ್ಲಿ 'ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು' ಎಂಬ ಮಾತುಗಳು ನೂರಕ್ಕೆ ನೂರು ಪ್ರಸ್ತುತವೆನಿಸದಿರದು. ಮೂರು ವರ್ಷಕ್ಕೆ ಶಾಲೆಯ ಮೆಟ್ಟಿಲೇರಿ ಮುಂದಿನ ಮೂರು ವರ್ಷದಲ್ಲಿ ಭಾಗಶಃ ಪ್ರಾಥಮಿಕ ಶಿಕ್ಶಣವನ್ನೇ ಪೂರ್ತಿಗೊಳಿಸಿರುವಷ್ಟು ವಿಷಯಗಳನ್ನು ಆ ಪುಟ್ಟ ಮಸ್ತಿಷ್ಕದೊಳಗೆ ತುಂಬಿಕೊಂಡು ತಮ್ಮ ಆರನೇ ವಯಸ್ಸಿಗೆ ಒಂದನೇ ತರಗತಿಯನ್ನು ಸೇರುವ ಮಕ್ಕಳು ಒಂದೆಡೆಯಾದರೆ ಕಲ್ಲು ಮಣ್ಣುಗಳನ್ನೇ ತಮ್ಮ ಆಟಿಕೆಗಳನ್ನಾಗಿ ಮಾಡಿಕೊಂಡು, ಹಲಸು,ಕಿತ್ತಳೆ, ಪೇರಳೆ ಮರಗಳನ್ನು ಏರಿಳಿಯುತ್ತಾ ಸ್ಕೂಲು ಎಂದರೆ ಮೈಲು ದೂರ ಓಡುವ ಮಕ್ಕಳು ಮತ್ತೊಂದೆಡೆ. ಇಂತಹ ಎರಡು ವಿಭಿನ್ನ ಧ್ರುವಗಳನ್ನು ತರಗತಿಯ ಕೋಣೆಯೊಳಗೆ ಒಟ್ಟುಗೂಡಿಸಿ ನಾಳಿನ ಸಮಾಜದ ಅಡಿಪದರಗಳನ್ನು ರೆಡಿ ಮಾಡಲಾಗುತ್ತದೆ. ಆಗ ಸ್ವಾಭಾವಿಕವಾಗಿ ಶಿಕ್ಷಕರ ಪ್ರತಿಯೊಂದು ಪ್ರೆಶ್ನೆಗಳಿಗೆ ಕೀಲು ಗೊಂಬೆಯಂತೆ ಚಕಾಚಕ್ ಉತ್ತರಗಳನ್ನು ಕೊಡುವ 'ಪ್ರಿ-ಪ್ರೈಮರಿ' ಮಕ್ಕಳನ್ನು ಕಂಡು ತಮಗರಿಯದಂತೆ ಒಂದು ಬಗೆಯ ಕೀಳರಿಮೆ, ಧುಗುಡ, ಭಯ ಇತರೆ ಮಕ್ಕಳ ಮೇಲೆ ಮೂಡುತ್ತದೆ. ಇನ್ನು ದಿನಕೊಂದರಂತೆ ನೆಡೆಯುವ ವಿವಿಧ ಪರೀಕ್ಷೆಗಳಲ್ಲಿ ಕೊಂಚ ಕಡಿಮೆ ಅಂಕವೋ ಅಥವಾ ಫೇಲೋ ಆದರೆ ಅಂತಹ ಮಗುವಿನ ಸ್ಥಿತಿ ರೆಕ್ಕೆ ಮುರಿದ ಹಕ್ಕಿಯಂತಾಗಿ ಬಿಡುತ್ತದೆ. ಶಿಕ್ಷಕರಿಂದ ಹಿಡಿದು ನೆರೆಮನೆಯವರಿಗೂ ಆ ಮಗು ದಡ್ಡಶಿಕಾಮಣಿಯಾಗುತ್ತದೆ. ಕೂಡಲೇ ಕರೆಂಟಿನ ಶಾಕ್ ಹೊಡೆದವರಂತೆ ಆಡುವ ಪೋಷಕರು ಮಗು ಶಾಲೆಯಿಂದ ಮೆನೆಗೆ ಬರುವುದೇ ತಡ ಟ್ಯೂಷನ್ ಗಳೆಂಬ ಮತ್ತೊಂದು ಬಗೆಯ ಮಹಾಕೂಪದೊಳಗೆ ತಳ್ಳಿ ಬಿಡುತ್ತಾರೆ. ಆಟೋಟ ತುಂಟಾಟಗಳಿಲ್ಲದ ಮಗುವಿನ ಸರ್ವೋತೊಮುಖ ಬೆಳವಣಿಗೆ ಎಂಬುದು ಇಲ್ಲಿ ಮಣ್ಣು ಪಾಲು. ಒಟ್ಟಿನಲ್ಲಿ ಪ್ರಾಥಮಿಕ ಶಾಲೆಯ ನಂತರ ಪ್ರೌಢಶಾಲೆಗೆ, ತದಾನಂತರ ಕಾಲೇಜುಗಳಿಗೆ ಸೇರುವಾಗ ಭರಪೂರ ಧನಸಂಪತ್ತಿನೊಟ್ಟಿಗೆ ಮಕ್ಕಳ ಅಂಕಸಂಪತ್ತಿನ ಒತ್ತಡದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಬೆಳೆಸುತ್ತಾರೆ.

ಪ್ರಸ್ತುತ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಒಟ್ಟು 13 ಐಐಎಂಗಳು, 16 ಐಐಟಿಗಳು ಹಾಗು ಸುಮಾರು ಆರ್ನೂರು ಯೂನಿವರ್ಸಿಟಿಗಳಿವೆ. ಇಂತಹದೊಂದು ಶಿಕ್ಷಣ ಸಂಸ್ಥೆಯಿಂದ ಹೊರಬರುವುದನ್ನೇ ಬಕಪಕ್ಷಿಗಳಂತೆ ಕಾಯುವ ಕಂಪನಿಗಳು (ಹೆಚ್ಚಿನವು ಸಾಕು ಸಾಕೆನ್ನುವಷ್ಟು ಹಣವನ್ನು ಸುರಿಯುವ ವಿದೇಶಿ ಕಂಪನಿಗಳು) ನಾ ಮುಂದು ತಾ ಮುಂದು ಎನ್ನುತ್ತಾ ಅಭ್ಯರ್ಥಿಗಳ ಆಯ್ಕೆಗಳನ್ನು ಶುರುವಚ್ಚಿಕೊಂಡುಬಿಡುತ್ತವೆ. ಇಂತಹ ಶಿಕ್ಷಣ ಸಂಸ್ಥೆಗಳಿಂದ ಬರುವ ವಿದ್ಯಾರ್ಥಿಗಳ ತಾಂತ್ರಿಕ ಹಾಗು ಆಡಳಿತಾತ್ಮಕ ಗುಣಮಟ್ಟದ ಬಗ್ಗೆ ದೂಸರಾ ಮಾತೆ ಇಲ್ಲ. ಇಲ್ಲಿನ ವಿದ್ಯಾರ್ಥಿಗಳು ತಮ್ಮ ಮಿಕ್ಕುಳಿದ ಜೀವನವೆಲ್ಲ 'ಐಐಟಿ ಪಾಸ್ ಔಟ್' , 'ಬ್ಯಾಚ್ XXXX, ಐಐಟಿ XXXXX' ಎಂಬ ಸಹನಾಮದೊಂದಿಗೆ ಹೆಮ್ಮೆಯಿಂದ ಕರೆಯಲ್ಪಡುತ್ತಾರೆ. ಭಾಗಶಃ ಇಂತಹ ಸ್ವದೇಶೀ ಕಲಿಗಳು ವಿಮಾನವನೇರಿ ವಿದೇಶಗಳ ಸೇವೆಗೆ ತೆರಳುವುದು ಬೇರೊಂದು ವಿಷಯ ಬಿಡಿ. ಆದರೆ ಅಂದು ಒಂದಿಷ್ಟು ಮನೋಸ್ತಯ್ರ್ಯ, ಪ್ರೀತಿ ಹಾಗು ವಿಶ್ವಾಸವನ್ನು ತುಂಬಿ ಕಡಿಮೆ ಅಂಕ ಪಡೆವ ಮಗುವನ್ನೂ ಜೀವನದ ದಾರಿಯೇ ಮುಗಿದೋಯಿತೆಂಬಂತೆ ಚಿತ್ರಿಸದಿದ್ದರೆ, 'ಮಿನಿಮಂ ಕ್ವಾಲಿಫಿಕೇಷನ್ ಫಾರ್ ಅಡ್ಮಿಶನ್' ಎಂಬೊಂದು ಅರ್ಹತಾ ಪಟ್ಟಿಯನ್ನು ಶಾಲೆಯ ಗೇಟಿಗೆ ತೂಗಾಕಿಕೊಳ್ಳದಿದ್ದರೆ, ಮಕ್ಕಳೆಲ್ಲರನ್ನೂ ಹಸಿ ಮಣ್ಣಿನ ಮುದ್ದೆಯೆಂದು ಭಾವಿಸಿ ಶ್ರದ್ದೆಯಿಂದ ವಿದ್ಯೆಯನ್ನು ಕಲಿಸುವ ಶಿಕ್ಷಕ ಅಥವಾ ಶಿಕ್ಷಕಿ ಅಂದು ಇತರೆಲ್ಲಾ ಮಕ್ಕಳಿಗೆ ದೊರಕಿದ್ದರೆ ಇಂದು ಪ್ರತಿಯೊಬ್ಬ ವಿದ್ಯಾರ್ಥಿಯೂ ಆ ಮಟ್ಟಕ್ಕೇರುವ ಅರ್ಹ ಆಕಾಂಕ್ಷಿಯಾಗಿರುತ್ತಿದ್ದ ಇಲ್ಲವೇ ತಾನು ಮನಸಾರೆ ನೆಚ್ಚುವ ವಿಷಯವನ್ನುಮುಕ್ತವಾಗಿ ಆರಿಸಿಕೊಂಡು ಕ್ರೀಡೆ, ಸಂಗೀತ, ಸಾಹಿತ್ಯ ಎಂಬೆಲ್ಲ ವಲಯಗಳೂ ಐಐಟಿ ಐಐಎಂ ಗಳಷ್ಟೇ ಮಹತ್ವವಾದವುಗಳು ಎಂಬುದನ್ನು ಸಾಬೀತುಪಡಿಸುತ್ತಿದ್ದ.

ಬೆಳೆಯುವ ಗಿಡ ಮೊಳಕೆಯಲ್ಲಿ. ಆದರೆ ಆ ಗಿಡಕ್ಕೆ ದಾರ ಕಟ್ಟಿ, ಕೋಲು ನೆಟ್ಟು ನೀನು ಹೀಗೆಯೇ ಇರಬೇಕು, ಇಂತೆಯೇ ಬೆಳೆಯಬೇಕು, ಬೇಗ ಮರವಾಗಬೇಕು, ಅತಿ ಬೇಗನೆ ಹಣ್ಣನ್ನು ನೀಡಬೇಕು ಎಂದು ಬಯಸುವುದು ಪ್ರಸ್ತುತ ಜಗತ್ತಿನ ಕಹಿಯಾದ ಸತ್ಯ. ಆಟವೇತಕ್ಕೆ ಆಡಬೇಕು ಎಂದರೆ 'ಮೊದಲು ಬರಲು' 'ಹೆಸರು ತರಲು' ಎಂತಾಗಿರುವ ಈಗಿನ ಕಾಲದಲ್ಲಿ , '' ಆಟ, ಆಡುದುವು 'ಹೇಗೆ' ಎಂದು ಅರಿಯಲು ಮಾತ್ರ. ಅಲ್ಲಿ ಸೋಲು ಗೆಲುವು ಮೊದಲು ಕೊನೆ ಎಂಬುದೆಲ್ಲ ನಗಣ್ಯ'' ಎಂದು ಹೇಳಿಕೊಡುವ ಶಿಕ್ಷಕರು ಬೇಕು. ಓಟವೆ ಜೀವನ, ಅಂಕವೇ ಶಿಕ್ಷಣ, ಹಣವೇ ಪಾವನ ಎಂಬ ಮನಸ್ಥಿತಿಯ ಸಮಾಜ ಇನ್ನು ಮುಂದೆ ಸಾಕು.


No comments:

Post a Comment