Thursday, August 3, 2017

ಬೇಲಿಯೇ ಎದ್ದು ಹೊಲ ಮೇಯುವ ಹೊತ್ತಿನಲ್ಲಿ....

'Little thieves are hanged, but great ones escape' ಎಂಬೊಂದು ಗಾದೆಯಿದೆ. ಅಕ್ಕಿ ಕದ್ದ ಕಳ್ಳ ಸಿಕ್ಕಿಕೊಂಡರೂ, ಆನೆ ಕದ್ದವನನ್ನು ಹಿಡಿಯಲಾಗದು ಎಂಬಂತೆ. ಪ್ರಸ್ತುತ ಮಧ್ಯಪ್ರಾಚ್ಯದ ದೇಶವಾದ ಕತಾರ್ ಕೂಡ ಅಕ್ಷರ ಸಹ ಈವೊಂದು ಗಾದೆಯ ಮಾತಿನಂತೆಯೇ ದಿನಕಳೆಯುವಂತಾಗಿದೆ. ಇಲ್ಲಿ ಸಣ್ಣ ಕಳ್ಳನ ಹಣೆಪಟ್ಟಿ ಕತಾರ್ ನದಾದರೆ, ಅನೆಕಳ್ಳನ ಹಣೆಪಟ್ಟಿ ಸೌದಿ ಹಾಗು ಅದರ ಮಿತ್ರಪಡೆಗಳದ್ದು ಎನ್ನಬಹುದು. ಕಳೆದ ಜೂನ್ 5 ರ ರಾತ್ರಿ ಮುಗಿದು ಹಗಲು ಮೂಡುವುದರೊಳಗೆ ಸೌದಿ ಅರೇಬಿಯಾ, ಬಹರೇನ್, ಯುಎಇ ಹಾಗು ಈಜಿಪ್ಟ್ ದೇಶಗಳು ಒಟ್ಟಾಗಿ ಮೈಲಿಗೆಯಾದ ವ್ಯಕ್ತಿಯನ್ನು ಊರಿನಿಂದ ಹೊರದಬ್ಬುವಂತೆ ಕತಾರ್ ನನ್ನು ತಮ್ಮ ಒಕ್ಕೊಟದಿಂದ ಹೊರಗಟ್ಟಿ ಸುದ್ದಿಮಾಡಿದವು. ಕಳೆದ ಕೆಲ ದಶಕಗಳಲ್ಲೇ ಒಂದು ದೇಶವನ್ನು ಈ ಮಟ್ಟಿಗೆ ವಿವಿಕ್ತಗೊಳಿಸುವ ಪ್ರಕ್ರಿಯೆ ಇದೆ ಮೊದಲೆನ್ನಬಹುದು.

ಭಾರತದಂತೆಯೇ ಪರ್ಯಾಯ ದ್ವೀಪ ರಾಷ್ಟ್ರವಾಗಿರುವ ಕತಾರ್ ತನ್ನ ಅಷ್ಟೂ ಭೂಗಡಿಯನ್ನು ದೈತ್ಯ ಸೌದಿ ಅರೇಬಿಯದೊಂದಿಗೇ ಹಂಚಿಕೊಂಡಿದೆ. ಪ್ರಸ್ತುತ ನಿರ್ಬಂಧದ ಪರಿಣಾಮ ಪರ್ಶಿಯನ್ ಗಲ್ಫ್ ನ ಒಂದು ಬದಿಯ ಸಂಪೂರ್ಣ ನೆಲಸಂಪರ್ಕವೇ ಈ ದೇಶಕ್ಕೆ ಇಲ್ಲದಂತಾಗಿದೆ.

ಮಧ್ಯಪ್ರಾಚ್ಯದಲ್ಲಿನ ಅಷ್ಟೂ ದೇಶಗಳು ಎಷ್ಟು ಪ್ರಮಾಣದಲ್ಲಿ ಕಚ್ಚಾ ತೈಲವನ್ನು ವಿದೇಶಗಳಿಗೆ ರಫ್ತ್ತು ಮಾಡುತ್ತಾವೆಯೋ ಅಷ್ಟೇ ಪ್ರಮಾಣದಲ್ಲಿ ದಿನನಿತ್ಯದ ಆಹಾರ ಪದಾರ್ಥಗಳನ್ನು ಇತರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತವೆ. ಪರಿಮಾಣ ನೆರೆಯ ದೇಶಗಳೂಡಗಿನ ಮೃದುವಾದ ಸಂಬಂಧ ಅತಿಯಾಗಿಯೇ ಅವುಗಳಿಗೆ ಅವಶ್ಯವಾಗಿರುತ್ತದೆ. ಇನ್ನು ಸೌದಿ, ಬಹರೇನ್ ಹಾಗು ಯುಎಇ ದೇಶಗಳಿಂದ ಸುತ್ತುವರೆದಿರುವ ಕತಾರ್ ತಾನು ಆಮದು ಮಾಡಿಕೊಳ್ಳುವ ಅಷ್ಟೂ ಉತ್ಪನ್ನಗಳಿಗೆ ಇವಿಷ್ಟೇ ದೇಶಗಳ ನೆಲ ಹಾಗು ವಾಯುಮಾರ್ಗವನ್ನು ಬಳಸುತ್ತಿತ್ತು. ಪರಿಣಾಮ ಆಮದು ವೆಚ್ಚ ಅಷ್ಟೇನೂ ಹೆಚ್ಚಿರದೇ ಉತ್ಪನ್ನಗಳ ವೆಚ್ಚವೂ ಒಂದು ಬಗೆಯಲ್ಲಿ ಕಡಿಮೆಯೆನಿಸುತ್ತು. ಆದರೆ ಪ್ರಸ್ತುತ ಬಂದೆರಗಿದ ದಿಗ್ಬಂಧನದಿಂದ ಕತಾರ್ ನ ಜೋಡಣೆಗೆ ಉಳಿದಿರುವ ಏಕೈಕ ಮಾರ್ಗ ಜಲಮಾರ್ಗ. ಅದೂ ಸಹ ಸಾವಿರಾರು ಕಿಲೋಮೀಟರ್ ಬಳಸಿ ಬರಬೇಕಾದ ಅನಿವಾರ್ಯತೆ. ವಾಯುಮಾರ್ಗವೂ ಭಾಗಶಃ ಅಂತೆಯೇ. ಇನ್ನು ದಿನನಿತ್ಯದ ಅಗತ್ಯ ವಸ್ತುಗಳ ಪೂರೈಕೆಯಂತೂ ಮುಳ್ಳಿನ ಮೇಲಿನ ನೆಡೆತದಂತಾಗಿದೆ. ಸದ್ಯಕ್ಕೆ ಸಾವಿರ ಕಿಲೋಮೀಟರ್ಗಳಷ್ಟು ದೂರದಲ್ಲಿರುವ ಕುವೈತ್ ಹಾಗು ಒಮಾನ್ ದೇಶಗಳೇ ಪರಮಾಪ್ತ ನೆರೆಯ ರಾಷ್ಟ್ರಗಳು. ಕುಪಿತಗೊಂಡಿರುವ ದೇಶಗಳು ಹಾಗು ಕತಾರ್ ನ ನಡುವೆ ಮಧ್ಯವರ್ತಿಗಳ ಕೆಲಸ ಸದ್ಯಕ್ಕೆ ಈ ಎರಡು ದೇಶಗಳ ಮೇಲಿರುವ ಗುರುತರ ಜವಾಬ್ದಾರಿ.

ಕೇವಲ 25 ಲಕ್ಷ ಜನಸಂಖ್ಯೆಯ ಒಂದು ಪುಟ್ಟ ದೇಶವನ್ನು ಜಾಗತಿಕ ಮಟ್ಟದಲ್ಲಿ ಭಾಗಶಃ ಏಕಾಂಗಿಯಾಗಿ ನಡುನೀರಿನಲ್ಲಿ ಬಿಟ್ಟದ್ದಾದರೂ ಏತಕ್ಕೆ? ಆ ದೇಶವು ಭಯೋತ್ಪಾದನೆಗೆ ನೀಡುವ ಕುಮ್ಮಕ್ಕು ಎಂದು ಮೇಲಿಂದ ಮೇಲೆ ಕಂಡು ಬರುವ ವಿಷಯ. ಭಯೋತ್ಪಾದನೆಯ ವಿರೋಧದ ಪರವಾಗಿನ ಈ ನಿರ್ಧಾರ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಾಗಿ ಪ್ರಶಂಸೆಯನ್ನೇ ಗಳಿಸಿದರೂ ಏಕಾಏಕಿ ದೇಶವೊಂದರ ಮೇಲೆ ಅಷ್ಟದಿಗ್ಬಂಧನವನ್ನು ಹೇರಿದ ಇತರೆ ದೇಶಗಳಾದರೂ ಅದೆಷ್ಟರ ಮಟ್ಟಿಗೆ ಸಾಚಾಗಳು ಎಂಬುದೇ ಪ್ರಸ್ತುತ ಪ್ರೆಶ್ನೆ. ತಾಲಿಬಾನ್, ಲಷ್ಕರೆ ತೈಬಾ, ಅಲ್ಕೈದಾ ಭಯೋತ್ಪಾದಕ ಗುಂಪುಗಳಿಗೆ ಕುಮ್ಮಕ್ಕು ಕೊಡುವ ಸೌದಿ ಅರೇಬಿಯಾ, ವಿಶ್ವದ ಎಲ್ಲ ಬಗೆಯ ಚೋರ ಮಹಾರಥಿಗಳ ಸ್ವರ್ಗದಂತಿರುವ ಯುಎಇ, ಸರ್ಕಾರದ ವಿರುದ್ಧ ಧ್ವನಿಯೆತ್ತಿದರೆ ಗುಂಡಿನ ಮೂಲಕವೇ ಉತ್ತರಿಸುವ ಈಜಿಪ್ಟ್ ನಂತಹ ದೇಶಗಳ ಕರಾಳ ಇತಿಹಾಸದ ಹಿನ್ನಲೆಯಲ್ಲಿ ಈ ನಿರ್ಧಾರವನ್ನು ವೀಕ್ಷಿಸಿದರೆ ನ್ಯಾಯ ಹಾಗು ಅನ್ಯಾಯದ ನಡುವಿರುವ ವ್ಯತ್ಯಾಸ ಸ್ಪಷ್ಟವಾಗಿ ತಿಳಿಯಬರುತ್ತದೆ.

ಕತಾರ್ನ ಸುದ್ದಿವಾಹಿನಿಯೊಂದು ಅಲ್ಲಿನ ದೊರೆ ಹಮದ್ ಅಲ್ ತಾನಿ ಇರಾನ್ ಹಾಗು ಇಸ್ರೇಲ್ ದೇಶಗಳನ್ನು ಹೊಗಳುತ್ತಿರುವ ಸುದ್ದಿಯೊಂದನ್ನು ಪ್ರಸಾರ ಮಾಡಿತ್ತು. ತನ್ನಷ್ಟೇ ಬಲಾಡ್ಯವಾಗುತ್ತಿರುವ ಇರಾನ್ ಹಾಗು ಭೂನಕ್ಷೆಯಲ್ಲಿ ಇಂಚಷ್ಟಿದ್ದರೂ ಪ್ರಪಂಚವನ್ನೇ ತನ್ನೆಡೆ ಸೆಳೆಯುತ್ತಿರುವ ಇಸ್ರೇಲ್ ನನ್ನು ಕಂಡ ನೆರಳಿಗೆ ಆಗದ ಸೌದಿ ಅರೇಬಿಯಾಕ್ಕೆ ತನ್ನ ಗುಂಪಿನಲೊಬ್ಬ ಆ ದೇಶದ ಪರವಾಗಿ ಮಾತನಾಡಿದ್ದು ಸಹಿಸದಾಯಿತು. ಅಲ್ಲದೆ ಕೆಲದಿನಗಳ ನಂತರ ಅದೇ ದೊರೆ ಇರಾನ್ ನ ಅಧ್ಯಕ್ಷ ಸ್ತಾನಕ್ಕೆ ಪುನರಾಯ್ಕೆಯಾದ ಹಸ್ಸನ್ ರೌಹಾನಿಗೆ ಫೋನಾಯಿಸಿ ಆತನಿಗೆ ಶುಭಹಾರೈಕೆಯನ್ನು ತಿಳಿಸುತ್ತಾನೆ. ಈ ವಿಷಯವೂ ಸೌದಿ ದೊರೆಯ ಕಿವಿಗೆ ಬಿದ್ದ ಕೂಡಲೇ ಕೆಂಡಾಮಂಡಲವಾಗಿ ಬುಸುಗುಡತೊಡಗಿದ ಆತ ತನ್ನೊಟ್ಟಿಗೆ ಇದರೆ ದೇಶಗಳ ರಾಜರುಗಳನ್ನೂ ಸೇರಿಸಿಕೊಂಡು ಅಲ್ಲೊಂದು ಇಲ್ಲೊಂದು ಬಿದ್ದಿದ್ದ ಹಳಸಿದ ವಿಷಯಗಳನ್ನು ಎಕ್ಕಿಕೊಂಡು ರಾಜತಾಂತ್ರಿಕವಾಗಿ ಕತಾರ್ ನನ್ನು ಹೊರಗಟ್ಟುತ್ತಾನೆ. ಕೂಡಲೇ ಎಚ್ಚೆತ್ತುಕೊಂಡ ಕತಾರ್ ವೆಬ್ಸೈಟ್ ನಲ್ಲಿ ಪ್ರಚಾರವಾದ ಈ ಎಲ್ಲ ಸುದ್ದಿಗಳು ಸುಳ್ಳೆಂದೂ, ವೆಬ್ಸೈಟ್ ಅನ್ನು ಯಾರೋ ಕಿಡಿಗೇಡಿಗಳು ಹ್ಯಾಕ್ ಮಾಡಿ ಇಂತಹ ವಿಷಯಗಳನ್ನೆಲ್ಲ ಪ್ರಸಾರಮಾಡಿದ್ದಾರೆ ಎಂದಿತು. ಅಷ್ಟರಲ್ಲಾಗಲೇ ಕತಾರ್ ನ ಈ ಕೂಗನ್ನು ಯಾವೊಂದು ದೇಶವೂ ಕೇಳುವ ಸ್ಥಿತಿಯಲ್ಲಿರಲಿಲ್ಲ.

ವೈಯಕ್ತಿಕ ಜಿಡಿಪಿ ಗಳಿಕೆಯಲ್ಲಿ ವಿಶ್ವದಲ್ಲೇ ನಂಬರ್ ಒನ್ ಎನಿಸಿರುವ ಕತಾರ್ ಈ ಎಲ್ಲ ಬೆಳವಣಿಗೆಯಿಂದ ಅಷ್ಟೇನೂ ಕುಂದಲಿಲ್ಲ. ಅದಾಗಲೇ ಇರಾನ್ ಹಾಗು ಟರ್ಕಿ ದೇಶಗಳ ಸಹಾಯ ಹಸ್ತಗಳು ದೇಶದ ಬೆಂಬಲಕ್ಕೆ ಬಂದಿವೆ. ಒಂದು ಬಗೆಯಲ್ಲಿ ಹೇಳುವುದಾದದರೆ ಈ ಬಹಿಷ್ಕಾರದಿಂದ ಕತಾರ್ ಗಿಂತಲೂ ಹೆಚ್ಚಿನ ನಷ್ಟ ಇತರೆ ದೇಶಗಳಿಗೆ ಆಗಲಿದೆ ಎಂದರೂ ಸುಳ್ಳಾಗದು. ಕತಾರ್ನರಾಜಧಾನಿ ದೊಹಾದಲ್ಲಿ ಮದ್ಯಪ್ರಾಚ್ಯದಲ್ಲೇ ಅತಿ ದೊಡ್ಡ ವಾಯುನೆಲೆಯನ್ನು ಹೊಂದಿರುವ ಅಮೇರಿಕಾಕ್ಕೆ ಈ ನಡೆ ತಲೆನೋವಾಗಿ ಪರಿಣಮಿಸಿದೆ. ದಶಕಗಳಿಂದ ಉತ್ತಮ ಸಂಬಂಧವನ್ನು ಹೊಂದಿರುವ ಕತಾರ್ ನ ಪರವಾಗಿ ಹೇಳಿಕೆ ನೀಡಿದರೆ ಸೌದಿ ಹಾಗು ಇತ್ತೀಚೆಗಷ್ಟೇ ಅತಿ ದೊಡ್ಡ ಶಸ್ತ್ರಾಸ್ತ್ರ ಗಳ ಒಪ್ಪಂದವನ್ನು ಮಾಡಿಕೊಂಡ ಸೌದಿಯ ಪರವಾಗಿ ಹೇಳಿದರೆ ಕತಾರ್ ಮುನಿಸಿಕೊಳ್ಳತೊಡಗಿವೆ. ಇದೆ ದ್ವಂದ್ವದ ಪ್ರತಿರೂಪ ಅಧ್ಯಕ್ಷ ಟ್ರಂಪ್ ನ ಇತ್ತೀಚಿನ ಕೆಲ ಟ್ವೀಟ್ಗಳಲ್ಲಿ ಕಾಣಬಹುದು. ಇನ್ನು ತನ್ನ 65% ನಷ್ಟು ನೈಸರ್ಗಿಕ ಅನಿಲವನ್ನು (LNG ) ಕತಾರ್ ನಿಂದಲೇ ಆಮದು ಮಾಡಿಕೊಳ್ಳುವ ಭಾರತಕ್ಕೂ ಇನ್ನು ಮುಂದೆ ಬೆಲೆ ಏರಿಕೆಯ ಬಿಸಿ ತಟ್ಟಬಹುದು.

ಸದ್ಯದ ಪರಿಸ್ಥಿತಯಲ್ಲಿ ಮಧ್ಯಪ್ರಾಚ್ಯದ ಈ ಒಳಜಗಳ ಕೂಡಲೇ ಶಮನವಾಗುವಂತೆ ಕಾಣುತಿಲ್ಲ. 2022 ರ ಫಿಫಾ ವಿಶ್ವಕಪ್ ಅನ್ನು ಆಯೋಜಿಸುವ ಯೋಜನೆಯನ್ನು ಹೊತ್ತಿರುವ ದೇಶಕ್ಕೆ ನೆರೆಯ ರಾಷ್ಟ್ರಗಳ ಈ ದಿಗ್ಬಂದನ ಅದೆಷ್ಟರ ಮಟ್ಟಿಗೆ ಪರಿಣಾಮ ಬೀರಲಿದೆ ಎಂಬುದನ್ನೂ ಕಾದು ನೋಡಬೇಕಿದೆ. ಸೌದಿ ಹಾಗು ಇತರೆ ದೇಶಗಳು ಒಂದಿಷ್ಟುದ್ದದ ಪಟ್ಟಿಯನ್ನು ಮಾಡಿ ಅವುಗಳಿಗೆ ಬದ್ದವಾಗುವಂತೆ ಕತಾರ್ ನನ್ನು ಒತ್ತಾಯಿಸುತ್ತಿವೆ. ಭಯೋತ್ಪಾನೆಯನ್ನು ಪ್ರಚೋದಿಸುವ ದೇಶಗಳ ವಿರುದ್ಧ ಇಂತಹ ನಿರ್ಧಾರಗಳು ಪ್ರಸ್ತುತ ಸ್ಥಿಯಲ್ಲಿ ತುಂಬಾ ಪರಿಣಾಮಕಾರಿಯಾದದ್ದು ಹಾಗು ಇದೆ ನೀತಿಯನ್ನು ಹೆಚ್ಚೆಚ್ಚು ದೇಶಗಳು ಭಯೋತ್ಪಾದನೆಯ ವಿರುದ್ದದ ಅಸ್ತ್ರವನ್ನಾಗಿ ಬಳಸಬೇಕು. ಆದರೆ ಬೇಲಿಯೇ ಎದ್ದು ಹೊಲವನ್ನು ತಿಂದಂತೆ ಇಲ್ಲಿ ತಪ್ಪೆಸಗುವ ದೇಶಗಳೇ ಬೇರೆಯವರ ತಪ್ಪನು ಪತ್ತೆಹಚ್ಚಿ ನ್ಯಾಯಮೂರ್ತಿಗಳಂತೆ ವರ್ತಿಸುವುದು ಮಾತ್ರ ಖಂಡನೀಯ ವಿಚಾರ.

No comments:

Post a Comment