Thursday, August 10, 2017

ಪಂಚಾಯಿತಿ ಹಾಗು ಪಾರ್ಲಿಮೆಂಟ್ ನಡುವೇಕೆ ಈ ತಾರತಮ್ಯ?

2014ರಲ್ಲಿ ರಾಜಸ್ಥಾನ ಸರ್ಕಾರ ಪಂಚಾಯಿತಿ ಮಟ್ಟದ ಚುನಾವಣೆಗಳಿಗೆ ಸ್ಪರ್ಧಿಸುವ ಆಕಾಂಕ್ಷಿಗಳಿಗೆ ಕನಿಷ್ಠ ವಿದ್ಯಾಹರ್ತೆ ಇರಬೇಕೆಂಬ ಮಹತ್ತರವಾದ ಆದೇಶವೊಂದನ್ನು ಹೊರಡಿಸಿತು. ಸಿಡಿಲಿನಂತೆ ಬಂದೆರಗಿದ ಸುದ್ದಿಯಿಂದ ಕೂಡಲೇ ನೂರಾರು ಪರ ವಿರೋಧದ ಚರ್ಚೆಗಳು ನೆಡೆದವು. ಇದು ದಲಿತ ವಿರೋಧಿ ರಾಜಕೀಯ ಅದು ಇದು ಎನ್ನುತ ಒಂದು ಮಿನಿ ಹೋರಾಟವೇ ಹುಟ್ಟಿಕೊಂಡಿತು. ಇದು ಹೆಬ್ಬೆಟೊತ್ತುವ, ಸರ್ಕಾರದ ಹಣದ ಗುಣಾಕಾರ ಭಾಗಾಕಾರ ಗೊತ್ತಿರದ ನೂರಾರು ಹಳ್ಳಿಗರ ಕನಸಿನ ಮೇಲೆ ತಣ್ಣೀರೆರಚಿದಂತಾಯಿತು. ಕೆಲದಿನದಗಳ ನಂತರ ಹರ್ಯಾಣ ಸರ್ಕಾರವೂ ಅದೇ ಹಾದಿಯನ್ನು ಹಿಡಿಯಿತು. ಏನೋ ಹೊಸದೊಂದು ಬದಲಾವಣೆಯ ಅಲೆ ದೇಶದಲ್ಲೆಡೆ ಏಳುತ್ತಿದೆ ಎನ್ನುವಷ್ಟರಲ್ಲೇ ಎಲ್ಲವೂ ಮತ್ತದೇ ಶಾಂತ ಮೌನದ ಕತ್ತಲಿನಲ್ಲಿ ಲೀನವಾಗತೊಡಗದವು. ಸಾಂವಿಧಾನಿಕ ಅಧಿಕಾರವನ್ನೇ ಹತ್ತಿಕ್ಕುವ ನಿಯಮವಿದು ಎನಿಸಿದರೂ ಡಿಜಿಟಲ್ ಯುಗವೆಂದು ಕರೆಸಿಕೊಳ್ಳುವ ಪ್ರಸ್ತುತ ಕಾಲದಲ್ಲಿ ಕನಿಷ್ಠ ವಿದ್ಯಾರ್ಹತೆಗೂ ಜಿಪುಣುತನವೇತ್ತಕ್ಕೆ ಎಂದನಿಸದಿರದು ನಮಗೆ.

ಆದರೆ ಇವೆಲ್ಲದರ ಮದ್ಯೆ ಉದ್ಭವವಾದ ಮತ್ತೊಂದು ಪ್ರೆಶ್ನೆ, ಕನಿಷ್ಠ ವಿದ್ಯಾಹರ್ತೆ ಕೇವಲ ಪಂಚಾಯತಿ ಗ್ರಾಮಸ್ಥರಿಗೇಕೆ ಎಂಬುದು? ಗೊತ್ತು ಗುರಿ ಇಲ್ಲದ, ಯಾವುದೇ ಅತ್ಯುನ್ನತ ವಿದ್ಯಾರ್ಹತೆಯೂ ಇಲ್ಲದೆ ಗುಡಿಸಿಲಿನಿದ್ದವ ಒಮ್ಮೆ MLAಯೋ ಅಥವಾ MPಯೋ ಆದರೆ ಕಣ್ಣಿಗೆ ಕುಕ್ಕುವಂತಹ ರಾಜರಮನೆಗಳನ್ನು ನಿರ್ಮಿಸಿಕೊಂಡು ಮಧ್ಯರಾತ್ರಿಯ ಶ್ರೀಮಂತನಾಗಿಬಿಡುತ್ತಾನೆ. ಹೀಗೆ ಕೇವಲ ಹಣಕ್ಕಾಗೇ ರಾಜಕೀಯ ಎಂದು ಮೆರೆಯುವ ಇವರುಗಳಿಗ್ಯಾಕೆ ಕನಿಷ್ಠ ವಿದ್ಯಾಹರ್ತೆ ಎಂಬುದು ಅನ್ವಹಿಸುವುದಿಲ್ಲ? ತಮ್ಮ ತಮ್ಮ ಕ್ಷೇತ್ರಗಳ ಲಕ್ಷಾಂತರ ಜನರ ನಾಳಿನ ದಿನಗಳ ಬದುಕನ್ನು ಕಟ್ಟಬೇಕಾದ, ಏರಿಳಿತವಿರುವ ದೇಶದ ಎಕಾನಮಿಯಲ್ಲಿ ತನ್ನ ಕ್ಷೇತ್ರವನ್ನು ಸಂಬಾಳಿಸಿಕೊಂಡು ಮೇಲೆತ್ತುವ ಮಹೋನ್ನತ ಜವಾಬ್ದಾರಿಯ ವ್ಯಕ್ತಿಗೆ ಕೊನೆ ಪಕ್ಷ ಒಂದು ಡಿಗ್ರಿಯ ಆಧಾರವೂ ಬೇಡವೇ? ಅಲ್ಲೆಲ್ಲೋ ಕೂಲಿ ನಾಲಿ ಮಾಡಿಕೊಂಡು ಜೀವನಸಾಗಿಸುವ ಜನರಿಗಾದರೆ ಸಿಡಿಲು ಬಂದೆರಗಿದಂತೆ ಪ್ರತ್ಯಕ್ಷವಾಗಿಬಿಡುವ ನೀತಿ ನಿಯಮಗಳು, ನಾನೆ ರಾಜ ಎಂಬಂತೆ ಗಸ್ತು ಹೊಡೆಯುವ ಹಲವು ಮಂದಿ ರಾಜಕಾರಣಿಗಳಿಗೇಕಿಲ್ಲ? ಕಾನೂನು ಎಲ್ಲರಿಗೂ ಒಂದೇಯಾಗುವುದಾದರೆ ಪಂಚಾಯತಿ ಹಾಗು ಪಾರ್ಲಿಮೆಂಟ್ ಗೇಕೆ ಅಂತರ?

ಸ್ವಾತಂತ್ರ್ಯ ಬಂದ ಹೊಸತರಲ್ಲಿಯೇ ಆಗಿನ ಚುನಾವಣಾಯೋಗದ ಅಧ್ಯಕ್ಷರು ಪ್ರಧಾನಿಯಾದವರಿಗೆ ಈ ಒಂದು ವಿಷಯದ ಬಗ್ಗೆ ಪತ್ರಬರೆದು ‘ಮಿನಿಮಮ್ ಎಜುಕೇಷನಲ್ ಕ್ವಾಲಿಫಿಕೇಷನ್’ ಎಂಬುದು ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಕನಿಷ್ಠ ಅರ್ಹತೆಗಳಲ್ಲೊಂದಾಗಲಿ ಎಂದಿದ್ದರು. ಆದರೆ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಪ್ರತಿಯೊಬ್ಬ ಭಾರತೀಯನ ಸಂವಿಧಾನಿಕ ಹಕ್ಕುಗಳಲ್ಲೊಂದು, ಆತ ಕೂಡಿ ಕಳೆಯುವ ಲೆಕ್ಕವನ್ನೇ ತಿಳಿಯದಿರುವ ಗಾಂಪನೆ ಆದರೂ ಪರವಾಗಿಲ್ಲ ದೇಶದ ಕೋಟ್ಯಾನುಕೋಟಿ ಜನರ ಜೀವನವನ್ನು ನಿರ್ಧರಿಸುವ ನಾಯಕನಾಗಲು ಅರ್ಹ ಎಂಬ ವಾದ ಸರಣಿಯೊಂದಿಗೆ ಆ ಯೋಚನೆಗೆ ಇತೀಶ್ರಿ ಹಾಡಲಾಯಿತು! ಪ್ರಸ್ತುತ ಸ್ಥಿತಿಗತಿಗಳನ್ನು ನೋಡಿದರೆ ಸದ್ಯಕಂತೂ ಇಂತಹದೊಂದು ಕಾನೂನು ದೇಶದ ಉದ್ದಗಲಕ್ಕೂ ವಿಸ್ತರಿಸುವ ಯಾವುದೇ ಸೂಚನೆಗಳು ಗೋಚರಿಸುತ್ತಿಲ್ಲ. ಒಂದು ವೇಳೆ ಇಂತಹ ಕಾನೂನುಗಳು ಜಾರಿಗೆ ಬಂದರೂ ಮೊದಲನೆಯದಾಗಿ, ಕಷ್ಟ ದುಃಖಗಳೊಟ್ಟಿಗೆ ಜೀವನವನ್ನು ಸವೆಸಿ, ಶಾಲಾ ಕಾಲೇಜುಗಳ ಮೆಟ್ಟಿಲನ್ನೂ ತುಳಿಯದೆ ಜೀವನದಲ್ಲಿ ಮಹೋತ್ತಮವಾದ ಏನನ್ನಾದರೂ ಸಾಧಿಸಬೇಕಾದರೆ ಡಿಗ್ರಿಯೊಂದೇ ಅಸ್ತ್ರವಲ್ಲ ಎಂದು ಸಾಬೀತುಪಡಿಸಿದ ಅದೆಷ್ಟೋ ಹಳ್ಳಿಯ ನಾಯಕರು ನೆನೆಗುದಿಗೆ ಬೀಳುತ್ತಾರೆ. ಜಾರಿಗೊಳಿಸದೆ ಹೋದರೆ ರಾಜಕೀಯವನ್ನೇ ಒಂದು ಬ್ಯುಸಿನೆಸ್ ಎಂದು ಅರಿತಿರುವ ಅದೆಷ್ಟೋ ರಾಜಕಾರಣದ ಪುಡಾರಿಗಳು ಇಂತಹ ಸಾಧಾರಣ ಜ್ಞಾನವನ್ನು ಗಳಿಸಿರುವ ನೂರಾರು ಗ್ರಾಮ ರಾಜಕಾರಣದ ನಾಯಕರ ಕಣ್ಣಿಗೆ ಮಣ್ಣೆರೆಚುತ್ತಾರೆ. ಇದಕೊಂಡು ಸೂಕ್ತ ಪರಿಹಾರ, ಮೊದಲು ವಿದ್ಯಾರ್ಹತೆಯನ್ನು ಎಲ್ಲರಿಗೂ ಕಡ್ಡಾಯಗೊಳಿಸಿ ನಂತರ ಇಂತಹ ನಿಯಮಗಳ ಜಾರಿಯೆಡೆಗೆ ಒಲವುತೋರುವುದು. ಅಂದು ದೇಶ ಬೆಳೆಯುತ್ತಿರುವಾಗಲೇ ‘ಎಜುಕೇಶನ್ ಫಸ್ಟ್, ಪವರ್ ಇಸ್ ನೆಕ್ಸ್ಟ್’ ಎಂಬೋದು ಕಾನೂನನ್ನು ಜಾರಿಗೊಳಿಸಿದ್ದರೆ ಸಂವಿಧಾನಿಕವಾಗಿಯೇ ವಿದ್ಯಾವಂತ ಅಭ್ಯರ್ಥಿಗಳು ಚುನಾವಣಾ ಕಣಕ್ಕಿಳಿಯುತ್ತಿದ್ದರು, ನಾಳಿನ ಏಳಿಗೆಯ ದಿನಗಳನ್ನು ಅಂದೇ ಕಾಣುತ್ತಿದ್ದರು.

ಪ್ರಸ್ತುತ ರಾಜಕಾರಣಿಗಳು ಹಾಗು ರಾಜಕಾರಣಗಳನ್ನು ನೋಡಿದಾದ ಈಗೊಂದು ಕಾನೂನು ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎನಿಸದಿರದು. ರಾಜಕೀಯ/ಸಮಾಜಸೇವೆ ಎಂದರೆ ಕೇವಲ ರೆಸಾರ್ಟ್, ಕುದುರೆ ವ್ಯಾಪಾರ, ಹೈಜಾಕ್ , ಜಾತಿ ಹಾಗು ಪಂಗಡ ಇತ್ಯಾದಿ ಇತ್ಯಾದಿ ಪದಗಳೇ ಆಗಿಹೋಗಿರುವಾಗ ಸಮಸ್ತ ಜನರ ಏಳಿಗೆ ಹಾಗು ಪಾರದರ್ಶಕ ನಡತೆಯೇ ಪ್ರತಿಯೊಬ್ಬ ರಾಜಕಾರಣಿಯ ಏಕೈಕ ಮಾರ್ಗ ಎಂಬ ಮಾತುಗಳು ಇಂದು ಕೇವಲ ಪುಸ್ತಕದ ಬದನೇಕಾಯಿಯಾಗಿವೆ. ಒಂದು ತಾಲೂಕಿನ ಜನಪ್ರಧಿನಿಧಿಯಾದವರನ್ನು ಅಪರಾಧಿಗಳಂತೆ ಹೋಟೆಲ್ ಒಂದರಲ್ಲಿ ಕೂಡಿಹಾಕಿ ಕಾಪಾಡಿಕೊಳ್ಳುವ ರಣತಂತ್ರಕ್ಕೆ ರಾಜಕಾರಣವೆನ್ನಬೇಕೋ ಅಥವಾ ಸಂತೆಯಲ್ಲಿ ನೆಡೆಯುವ ತರಕಾರಿ ವ್ಯಾಪಾರ ಎನ್ನಬೇಕೋ ತಿಳಿಯದು. ಆತ ನೂರಾರು, ಲಕ್ಷಾಂತರ ಜನರಿಂದ ಆಯ್ಕೆಯಾದ ಜನಪ್ರತಿನಿಧಿಯೇ ಆಗಿದ್ದರೆ ಯಾವುದೇ ಕಾರಣಕ್ಕೂ ಹಣದ ಆಮಿಷಕ್ಕೆ ಬಲಿಯಾಗದೆ, ಬರುವ ಸವಾಲುಗಳೆಲ್ಲವನ್ನು ದೈರ್ಯದಿಂದ ಎದುರಿಸಿ ತಾನೊಬ್ಬ ಜನಪರನಾದ ನಿಯತ್ತಿನ ರಾಜಕಾರಣಿ ಎಂದು ತೋರಿಸಿಕೊಳ್ಳುತ್ತಿದ್ದ. ಆದರೆ ಹಣದ ಮೇಲಿನ ಆಮಿಷಕ್ಕೆ ಬಲಿಯಾಗುವ ಜೊಲ್ಲುಬುರುಕರು ಪ್ರತಿಯೊಬ್ಬರೂ ಎಂದು ತಿಳಿದಿರುವ ಮೇಲಿನವರು ರಾಜಕೀಯದ ಬಿಸಿನೆಸ್ ನ ಗಾಳವನ್ನು ಅದಕ್ಕನುಗುಣವಾಗಿಯೇ ನೆಡೆಸುವರು. ಇನ್ನು ಇಂತಹ ರಾಜಕಾರಣಿಗಳಿಂದ ಅದೆಂತಹ ದೇಶಸೇವೆ ಅಥವಾ ಸಮಾಜಸೇವೆಯನ್ನು ನಿರೀಕ್ಷಿಸಲು ಸಾಧ್ಯವುಂಟು? ಆದರೆ ಕನಿಷ್ಠ ವಿದ್ಯಾಹಾರ್ಹತೆಗೂ ಕಳಕಿಂತರಹಿತ ರಾಜಕಾರಣಕ್ಕೂ ಎಲ್ಲಿಯ ಸಂಬಂಧ ಎನಿಸಬಹುದು. ನಿಜ, ಗೋಸುಂಬೆ ಬಣ್ಣ ಬದಲಿಸಿದ ಮಾತ್ರಕ್ಕೆ ತನ್ನ ಇರುವಿಕೆಯನ್ನು ಕಾಣೆಯಾಗಿಸಿಕೊಳ್ಳಲಾಗುವುದಿಲ್ಲ. ಅಂತೆಯೇ ಜನರ ಬೆವರ ಹಣವನ್ನು ಹೀರಿ ಕೋಟ್ಯಧಿಪತಿಗಳಾಗುವ ರಾಜಕಾರಣಿಗಳು ಅದೆಷ್ಟೇ ವಿದ್ಯಾವಂತರಾದರೂ ಅಷ್ಟೆಯೇ.

ಎಲ್ಲೋ ಒಂದೆಡೆ ವಿದ್ಯಾರ್ಹತೆ ಇರುವ ರಾಜಕಾರಣಿಗಳಿಗೂ, ಅದರಿಂದ ವಿಮುಖರಾದವರಿಗೂ ಒಂದು ದೊಡ್ಡ ಮಟ್ಟಿನ ವ್ಯತ್ಯಾಸವೆಂಬುದು ಇದ್ದೇ ಇರುತ್ತದೆ. ಆಸೆಬುರುಕ ಮನಸ್ಥಿತಿಯನ್ನು ಒಡೆದುರುಳಿಸಿ ಜನಪರ ಕಾಳಜಿಯ ವಿಷಯಗಳು ಇಂತಹ ಓದಿನಲ್ಲಿ ಸಿಕ್ಕಿರಬೇಕು. ಕಾನೂನು ಕಟ್ಟಳೆಗಳನ್ನು ಮಾಡುವಾಗ ಸಮಸ್ತ ಆಗು-ಹೋಗುಗಳ ಪರಿಚಯ ಇರುವ/ತಿಳಿದಿರುವ ವ್ಯಕ್ತಿಗಳ ಮುಖೇನ ಆಗಬೇಕು. ವಿಪರ್ಯಾಸದ ವಿಷಯವೆಂದರೆ ಇಂತಹ ಚಿಂತನೆ ಹಾಗು ಚಿಂತಕರು ಕೇವಲ ಪುಸ್ತಕ, ಕಥೆ, ಕವನಗಳನ್ನು ಬರೆದು ಮಾತ್ರ ತಮ್ಮ ಕೂಗನ್ನು ಹೊರಹಾಕುತ್ತುರಿವುದು. ಇಂತಹ ಉತ್ಕೃಷ್ಟ ವಿದ್ಯಾಹಾರ್ಹತೆ ಇರುವ ಚಿಂತಕರು, ವಿಚಾರವಂತರು ಹೆಚ್ಚಾಗಿ ರಾಜಕೀಯದೊಳಗೆ ಬರುವುದಿಲ್ಲ. ಬಂದರೂ ನೂರಾರು ಅಲ್ಪಮತಿಗಳ ಕಾಟಕ್ಕೆ ಬೇಸತ್ತು ಹಿಂದೆ ಸರಿಯುವರು. ಇನ್ನೂ ಕೆಲವೊಮ್ಮೆ ಹಣದ ಆಸೆಗೋ, ಮೀಸಲಾತಿಯ ಕನಸಿಗೂ ಅಥವಾ ಇನ್ಯಾವುದೋ ಕಾರಣಕ್ಕೋ ಜನರೇ ಇಂಥವರನ್ನು ರಾಜಕಾರಣಕ್ಕೆ ಬಾರದಂತೆ ನೋಡಿಕೊಳ್ಳುತ್ತಾರೆ! ಶಿವರಾಂ ಕಾರಂತರ ಜೀವನವೇ ಇದಕೊಂಡು ಸ್ಪಷ್ಟ ಉದಾಹರಣೆ. ಎಲ್ಲಕಿಂತ ಮೇಲಾಗಿ ಓದಿಗಾಗಿ ರಾಜಕೀಯವೇ ಹೊರತು ರಾಜಕೀಯಕ್ಕಾಗಿ ಓದು ಎಂಬಂತಾಗಬಾರದು. ಆದರೆ ಜನರಿಂದ, ಜನರಿಗಾಗಿ, ಜನಗಳಿಗೋಸ್ಕರ ತಾವುಗಳೆಂಬ ನಿಜವಾದ ಭಾವನೆ ಎಲ್ಲಿಯವರೆಗೂ ಎಲ್ಲರಲ್ಲಿಯೂ ಬರುವುದಿಲ್ಲವೋ ಅಲ್ಲಿಯವರೆಗೂ ಹಾವೂ ಸಾಯುವುದಿಲ್ಲ , ಕೋಲೂ ಮುರಿಯುವುದಿಲ್ಲ.

No comments:

Post a Comment