Monday, August 21, 2017

ಪೂರ್ಣತೆಯ ಚೇತನ…

ಅರೆಬರೆಯಾಗಿ ಕತೆ ಕಾದಂಬರಿಗಳನ್ನು ಓದುತಿದ್ದ ನನಗೆ ಓದಿನ ನಂತರ ಕಾಡುತಿದ್ದ ಹಲವು ಪ್ರೆಶ್ನೆಗಳಲಿ ಪೂರ್ಣತೆ ಎಂಬ ಪದವೂ ಒಂದು. ಒಂದು ಕಾದಂಬರಿಯನ್ನು ಕೊಂಡು ಓದುವಾಗ ಪಾತ್ರಗಳ ಪರಿಚಯದಿಂದ ಶುರುವಾಗುವ ಆ ಕಥೆ ಕೊನೆಗೆ ಅರ್ಥಪೂರ್ಣವಾದ ಪರ್ಯವಸನವನ್ನು ಕಾಣುವಂತೆ ಮನಸ್ಸು ಭಯಸುತ್ತದೆ. ಇಲ್ಲದೆ ಹೋದಲ್ಲಿ 'ಇದೇನಪ್ಪ ತಳ ಬುಡ ಇಲ್ಲ ಈ ಪುಸ್ತಕ' ಅನ್ನಿಸಿ ಕೆಲವೊಮ್ಮೆ ಕೊಸರಾಡುತ್ತೇವೆ. ಕುವೆಂಪುರವರ 'ಮಲೆಗಳಲ್ಲಿ ಮದುಮಗಳು' ಇಂತಹ ಪುಸ್ತಕಗಳಿಗೊಂದು ಉಧಾಹರಣೆ. ಇಲ್ಲಿ ಕುವೆಂಪುರವರೇ ಮುನ್ನುಡಿಯಲ್ಲಿ ಹೇಳಿರುವಂತೆ ಆ ಕಥಾಹಾದಿಗೆ ಆದಿಯೂ ಇಲ್ಲ ಅಂತ್ಯವೂ ಇಲ್ಲ. ಪಾತ್ರಗಳು ಕೈಹಿಡಿದು ನೆಡೆಸಿಕೊಂಡ ಹಾಗೆ ಕಾದಂಬರಿಕಾರ ಹೋಗಿರುತ್ತಾನೆ. ಅಂತೆಯೇ ಜೀವನ. ಇಲ್ಲಿ ಹುಟ್ಟಿನಿಂದ ಶುರುವಾಗುವ ಜೀವನದ ಕತೆ ಆತನ ಕೊನೆಯುಸಿರಿನ ತನಕವಷ್ಟೇ ಪ್ರಸ್ತುತವಾಗಿರುತ್ತದೆ. ಒಂದು ಪಕ್ಷ ಆ ಘಳಿಗೆಗೆ ವ್ಯಕ್ತಿಯ ಕಾರ್ಯಯೋಜನೆಗಳೆಲ್ಲವೂ ಸಾಕಾರಗೊಂಡಿರದೆ ಇದ್ದರೆ ಆತನ ಜೀವನ ಅಪೂರ್ಣವಾಯಿತೇ? ಅಥವಾ ನಾಲ್ಕು ದಿನ ಜೀವಿಸಿದರೂ ಸರಿಯೇ, ನಿನ್ನೆ ನಾಳೆಗಳ ಚಿಂತೆಯಿಲ್ಲದೆ, ಮನಸ್ಸಿಗೆ ಸರಿ ತೋಚಿದ್ದನ್ನು ಪಣತೊಟ್ಟು ಮಾಡಲೆತ್ನಿಸಿ, ಸೋಲೋ ಗೆಲುವೋ, ಕಾರ್ಯವೆಂಬ ಚೇತನವನೊಂದೆ ನಂಬಿ ಬಾಳುವುದರಲ್ಲಿಯೇ ಪೂರ್ಣತೆ ಎಂಬುದು ಅಡಗಿರಬಹುದು. ತೇಜಸ್ವಿಯವರ ಜೀವನ ಈ ಮಾತಿಗೊಂದು ಉತ್ತಮ ಉದಾಹರಣೆ ಎಂಬುದು ನನ್ನ ಅನಿಸಿಕೆ. ಕುವೆಂಪುರವರ ಚೇತನರಾಗಿ, ಪ್ರಕೃತಿ ಪ್ರೇಮಿಯಾಗಿ, ಪ್ರೇಮಿಯಾಗಿ, ಬರಹಗಾರನಾಗಿ, ಕೃಷಿಕನಾಗಿ, ಸಾಮಾನ್ಯರಲ್ಲಿ ಅತಿಸಾಮಾನ್ಯರಂತೆ ಬೆರೆತು ಬೆಳೆದು, ಮನಸ್ಸಿಗೆ ಸರಿ ಎನಿಸದಷ್ಟನ್ನೇ ಮಾಡಿ ಕೊನೆಗೆ ಪ್ರಕೃತಿಯ ಮಡಿಲಲ್ಲೇ ಕೊನೆಯುಸಿರೆಳೆದ ಇವರ ಜೀವನ ಹೆಸರಿಗೆ ತಕ್ಕಂತೆ ಪೂರ್ಣ, ಸಂಪೂರ್ಣ.

ದೊಡ್ಡ ತತ್ವ ಮೀಮಾಂಸಕರಂತೆ ಅರೆಬರೆ ಅರ್ಥವಾಗುವ ಧಾಟಿಯಲ್ಲಿ ಸಾಹಿತ್ಯವನ್ನು ರಚಿಸದೇ, ಇದ್ದದನ್ನು ಇದ್ದ ಹಾಗೆಯೆ ಸರಳವಾಗಿ ಸುಂದರವಾಗಿ, ಚಿಕ್ಕದಾದರೂ ಚೊಕ್ಕವಾಗಿ ಓದುಗ ದೊರೆಯ ಮುಂದಿಡುತ್ತಿದ್ದದ್ದು ತೇಜಸ್ವಿಯವರ ಹಲವು ವಿಶಿಷ್ಟತೆಗಳಲ್ಲೊಂದು. ಪತ್ರಕರ್ತ ಮಹಾಶಯನಿಗೆ ಸಂದರ್ಶನ ಕೊಟ್ಟು ಬಾಯಿ ನೋಯಿಸಿಕೊಳ್ಳುವುದಕ್ಕಿಂತ ಕಾಡ ಕೆರೆಯ ಮೀನುಗಳನ್ನು ಹಿಡಿಯುತ್ತಾ ಕಾಲ ಕಳೆಯುವ ಜಾಯಮಾನದ ವ್ಯಕ್ತಿಯಿಂದ ನಾವು ಕಲಿಯಬೇಕಿರುವುದು ಬೆಟ್ಟದಷ್ಟಿವೆ. ನಿಜವಾದ ಸ್ವಾವಲಂಬತೆ ಎಂಬುದು ತನ್ನ ಅನ್ನವನ್ನು ತಾನೇ ಉತ್ತಿ ಬೆಳೆದು ತಿನ್ನುವುದರಲ್ಲಿರುತ್ತದೆ. ಎಷ್ಟೆಲ್ಲಾ ಇದ್ದರೂ ತೇಜಸ್ವಿ ಕೊನೆಯದಾಗಿ ಆಯ್ದುಕೊಂಡಿದ್ದು ನಿಸರ್ಗದ ಅಪ್ಪಟ ಮಡಿಲನ್ನೇ. ಉತ್ಕೃಷ್ಟ ಮಟ್ಟದ ಬತ್ತವನ್ನು ಬೆಳೆಯುವುದರಿಂದ ಹಿಡಿದು ಕಾಫಿತೋಟದ ಕಸಿಯನ್ನು ಮಾಡುವವರೆಗೂ ಅವರು ನೇಸರನಲ್ಲಿ ಒಂದಾಗಿದ್ದರು. ಇಂತಹ ಒಬ್ಬ ವ್ಯಕ್ತಿಯಿಂದ ಸಾಹಿತ್ಯ ಕೃತಿಗಳ ಸೃಷ್ಟಿ ಸಾದ್ಯವಾಗಬಹುದೆಂದರೆ ಸಾಹಿತ್ಯ ಸೃಷ್ಟಿಯ ಅಗಾಧತೆ ಅದೆಷ್ಟಿರಬಹುದೆಂದು ಎಂಬುದನ್ನು ನಾವು ಊಹಿಸಬಹುದು.

ತಮ್ಮ ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದಲ್ಲಿ ಹೇಳಿರುವಂತೆ ಹಳ್ಳಿಯ ಜನಗಳ ನಡುವೆ ಒಬ್ಬ ಮೂಕ ಪ್ರೇಕ್ಷಕನಂತೆ ಜೀವಿಸುತ್ತಾ ಒಂದು ಹೊಸ ಬಗೆಯ ಬರಹದ ಸ್ಪೂರ್ತಿಯನ್ನು ಅವರು ಕಂಡುಕೊಳ್ಳುತ್ತಾರೆ. ಪುಸ್ತಕದುದ್ದಕ್ಕೂ ಸಮಾಜದ ಕೆಲ ಗಂಭೀರವಾದ ವಿಷಯಗಳನ್ನು ಅತಿ ಸರಳವಾಗಿ ಮನಸೋಕುವಂತೆ ಕಟ್ಟಿಕೊಡುತ್ತಾ ಹೋಗುತ್ತಾರೆ. ಅಲ್ಲಿ ಆಸೆ,ಕೋಪ,ಕರುಣೆ, ಜಗಳ, ಜಾತಿ, ಬಡತನ, ಹೀಗೆ ಮಾನವ ಜೀವಿಯ ಎಲ್ಲಾ ಬಗೆಯ ಭಾವ ಹಾಗು ಸ್ಥಿತಿಗಳೂ ನೈಜವಾಗಿ ಹಾಸುಹೊಕ್ಕಿವೆ. ಸಾಮಾನ್ಯ ಓದುಬರಹ ತಿಳಿದವನೂ ಸಹ ತನ್ನ ಜ್ಞಾನಪರಿದಿಯೊಳಗೆ ಒಬ್ಬ ಚಿಂತನಕಾರನಾಗಿ ಅಥವಾ ತತ್ವಜ್ಞಾನಿಯಾಗಿ ತನ್ನ ಯೋಚನಾ ಲಹರಿಗೆ ಚಾಲನೆ ಕೊಡುವ ಈ ಪುಸ್ತಕ ಒಂದು ನವ ಮಾದರಿಯ ಸಾಹಿತ್ಯ ಸೃಷ್ಟಿಯೊಂದಕ್ಕೆ ದಾರಿಯನ್ನು ಮಾಡಿಕೊಂಡಿತು ಎಂದರೆ ಸುಳ್ಳಾಗದು. ಇಂತಹ ನೂರಾರು ಕೃತಿಗಳ ಮೂಲಕ ಆಡುವವರಿಂದಿಡಿದು ಅಳುವವನೊರೆಗೂ ತಾಕುವಂತೆ ಬರೆದು, ಬದುಕಿ ಮಾರೆಯಾದ ಪೂರ್ಣ ಚಂದ್ರ ತೇಜಸ್ವಿಯವರಂತಹ ವ್ಯಕ್ತಿತ್ವ ಮತ್ತೊಮ್ಮೆ ಸಿಗುವುದು ಬಲು ಅಪೂರ್ವ.

No comments:

Post a Comment