Friday, August 17, 2018

ಆಟವೆಂಬುದು ಕ್ರೀಡೆಯಾಗಬೇಕಾದರೆ ..

ಕತ್ತಿಮಸೆಯುವ ದೇಶಗಳ ಎದೆಯಲ್ಲಿ ನಡುಕಹುಟ್ಟಿಸಿ ದೇಶದ ತಲೆಯನೆತ್ತಿ ನಿಲ್ಲುವಂತೆ ಮಾಡಿದ ದೇಶದ ಮಾಜಿ ಪ್ರಧಾನಿ, ಭಾರತರತ್ನ, ದೇಶದ ರಾಜಕೀಯ ಇತಿಹಾಸದ ಅಜಾತಶತ್ರು ಅಟಲ್ ಬಿಹಾರಿ ವಾಜಿಪೇಯಿ, ವೆಸ್ಟ್ ಇಂಡೀಸ್ ವಿರುದ್ಧ ಅವರದ್ದೇ ನೆಲದಲ್ಲಿ ಮೊದಲ ಟೆಸ್ಟ್ ಸರಣಿಯ ಸಿಹಿಯನ್ನು ಗಳಿಸಿಕೊಟ್ಟ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅಜಿತ್ ವಾಡೇಕರ್, ಮಾಜಿ ಲೊಕಸಭಾ ಸ್ಪೀಕರ್ ಸೋಮನಾಥ ಚಟರ್ಜಿ, ದ್ರಾವಿಡ ಚಳುವಳಿಯ ಅಸ್ಮಿತೆಯ ಪ್ರತೀಕ ಹಾಗು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಹಾಗು ಶತಮಾನದ ಮಹಾ ಜಲಪ್ರಳಯದ ರೌದ್ರಾವತಾರಕ್ಕೆ ಕೇರಳ ಹಾಗು ದೇಶದ ಹಲವೆಡೆ ಬಲಿಯಾದ ಎಲ್ಲ ಜೀವಗಳಿಗೂ ಶಾಂತಿಯನ್ನು ಕೋರುತ್ತಾ....

ಕೆಲದಿನಗಳ ಹಿಂದೆ ಹಿಮಾದಾಸ್ ಎಂಬ ಹೆಸರೊಂದು ಎಲ್ಲಡೆ ಸದ್ದು ಮಾಡಿತ್ತು. 46 ವರ್ಷಗಳ ಇತಿಹಾಸವಿರುವ ‘IAAF ವಿಶ್ವ ಚಾಂಪಿಯನ್ ಶಿಪ್’ ನಲ್ಲಿ 51.46 ಸೆಕೆಂಡುಗಳಲ್ಲಿ 400 ಮೀಟರ್ ಓಟವನ್ನು ಜಿಂಕೆಯಂತೆ ಕ್ರಮಿಸಿ ಭಾರತಕ್ಕೆ ಮೊಮ್ಮದಲ ಚಿನ್ನದ ಪದಕವನ್ನು ಗಳಿಸಿ ಇತಿಹಾಸವನ್ನು ಬರೆದ ಈಕೆ ಕತ್ತಲು ಕಳೆಯುವ ಮುನ್ನ ಅರಳಿದ ತಾವರೆಯಂತಾಗಿದ್ದಳು. ಭಾರತೀಯ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ವಿಜೃಂಭಿಸುವಂತೆ ಮಾಡಿದ ಆಕೆಯ ಸಾಧನೆಯ ಗುಣಗಾನವನ್ನು ಮಾಡದಿರುವವರಿಲ್ಲ. ರಾಶಿ ರಾಶಿ ಶೇರು, ಲೈಕು ಹಾಗು ಕಾಮೆಂಟುಗಳು, ಇತರ ನಟ ನಟಿಯರನ್ನು ಈಕೆಗೆ ಹೋಲಿಸಿ ಅವರನ್ನು ಜರಿಯುವ ಪೋಸ್ಟುಗಳು, ಸೋತರೂ, ಗೆದ್ದರೂ ರಾಜಕಾರಣಿಗಳಿಗೆ ಹಾಗು ಸರ್ಕಾರಗಳಿಗೆ ನೆಡೆಯುವ ಮಂಗಳಾರತಿಗಳು, ಚಿನ್ನ ಬಂದರೂ ಜಾತಿ ಬಿಡದ ಸರ್ಚುಗಳು, ಅವುಗಳಿಂದ ವಿಶ್ವಮಟ್ಟದಲ್ಲಿ ತಲೆಕೆಳಗು ಮಾಡುವಂತಾದ ಕಾಮೆಂಟುಗಳು, ಒಂದೇ ಎರಡೇ. ಬಿರುಗಾಳಿಯಂತೆ ಎತ್ತಲಿಂದಲೋ ಬಂದು ಅಲ್ಲೊಲ್ಲ ಕಲ್ಲೋಲವಾಗಿಸಿ ಧೂಳೆಬ್ಬಿಸಿಬಿಟ್ಟಿತು ಈ ಸುದ್ದಿಯೊಂದು.

ಈಗ ಆ ಸುದ್ದಿ ಶಾಂತವಾಗಿದೆ. ಭೋರ್ಗರೆಯುವ ನದಿಯ ಸಿಹಿ ನೀರು ಸಮುದ್ರ ಸರೋವರಗಳನ್ನು ಸೇರಿ ತನ್ನ ಸಿಹಿತನವನ್ನು ಕಳೆದುಕೊಳ್ಳುವಂತೆ ಆ ಸುದ್ದಿಯ ವಿಶಿಷ್ಟತೆಯೂ ಇಂದೂ ಗೌಣವಾಗಿದೆ. ಅರೆಹೊಟ್ಟೆಯಲ್ಲೇ ಆಕೆ ಬೆವರು ಸುರಿಸಿ ಓಡಲತ್ತಿದಾಗ ಆಕೆಯ ಕಷ್ಟಗಳನ್ನು ಕಾಣದ ಕೈಗಳಿಗೆ ಇಂದು ಚಿನ್ನದ ಬಿಲ್ಲೆಯೊಂದು ಆ ಎಳೆಯ ಕೊರಳಮೇಲೆ ರಾರಾಜಿಸಿದ ಕೂಡಲೇ ಜ್ಞಾನೋದಯವಾಗುತ್ತದೆ. ಆ ಸ್ಕಾಲರ್ಶಿಪ್ಗಳೇನು, ಆ ಕೋಟಿ ಕೋಟಿ ರೂಪಾಯಿಗಳ ಜಾಹಿರಾತುಗಳ ಒಪ್ಪಂದಗಳೇನು, ಸರ್ಕಾರಗಳ ಪ್ರೋತ್ಸಹ ಧನಗಳೇನು ಹಾಗು ಸರ್ಕಾರೀ ಹುದ್ದೆಗಳೇನು! ಇಲ್ಲಿ ಕ್ರೀಡೆ, ದೇಶ ಹಾಗು ಹೆಮ್ಮೆ ಎನ್ನುವ ಅಭಿಮಾನಕ್ಕಿಂತ ಹೆಚ್ಚಾಗಿ ತಮ್ಮ ತಮ್ಮ ಒಂದಿಷ್ಟು ಬೇಳೆಯನ್ನು ಬೇಯಿಸಿಕೊಳ್ಳುವ ಚತುರತೆಯನ್ನು ಬಿಟ್ಟರೆ ಇಲ್ಲಿ ಬೇರೇನು ಕಾಣುವುದಿಲ್ಲ.ಈಕೆಯ ಸಾಧನೆಗೆ ನೀಡಿದ ಅಷ್ಟೇ ಕೋಟಿಗಳನ್ನು ಅಲ್ಲಿ ಬಿಸಿಲ ಧಗೆಯಲ್ಲಿ 'ಕುಟುಂಬವೋ ಅಥವಾ ದೇಶವೋ' ಎಂಬ ದ್ವಂದ್ವದಲ್ಲಿ ಕಾಲ ತಳ್ಳುವ ಇತರೆ ಮಕ್ಕಳಿಗೂ ನೀಡಲಾಗುವುದಿಲ್ಲವೇ? ಅಷ್ಟಿಲ್ಲದಿದ್ದರೂ ಇಷ್ಟಾದರೂ ಕ್ರೀಡಾ ಸ್ಕಾಲರ್ಶಿಪ್ಗಳು ಇಂದು ಅದೆಷ್ಟು ವಿದ್ಯಾರ್ಥಿಗಳಿಗೆ ದೊರೆಯುತ್ತಿದೆ? ಅಲ್ಲೊಬ್ಬ ಐಎಎಸ್ ಆಕಾಂಕ್ಷಿಯ ಹುದ್ದೆಯನ್ನು ಕ್ಷಣಮಾತ್ರದಲ್ಲಿ ಕಿತ್ತು ಪದಕವನ್ನು ಪಡೆಯುವ ಇವರಿಗೆ ಕೊಟ್ಟು 'ಅತ್ತ ಕ್ರೀಡೆಯೂ ಇಲ್ಲ, ಇಲ್ಲಿ ಅಧಿಕಾರಿಯೂ ಅಲ್ಲ' ಎಂಬ ಗೊಂದಲದ ಗೋಜಲಿಗೆ ತಳ್ಳುವ ವಿಪರ್ಯಾಸವಾದರೂ ಏತಕ್ಕೆ? ಪದಕಗಳ ನಂತರ ಹರಿಯುವ ಹಣದ ಹೊಳೆ ಆಟದ ಮೊದಲೇ ಹುಟ್ಟುವುದಿಲ್ಲವೇಕೆ?

ಇದೇ ಬೈಗುಳಗಳು ಮತ್ತದೇ ಮಾತುಗಳು. ಹೇಳಿ ಕೇಳಿ ‘ಸಾಕಾಗಿದೆ’ ಎಂಬುದು ಮಾತ್ರ ಕಹಿಸತ್ಯ. ಹೇಳುವ ನಾವುಗಳೂ ಮಿಲ್ಕಾ ಸಿಂಗ್ ಗಳೇನಲ್ಲ ಅಥವಾ ಪಿ ವಿ ಸಿಂಧುಗಳೂ ಅಲ್ಲ. ಸರ್ಕಾರ ಅಥವಾ ಸಂಸ್ಥೆಗಳಿಗೆ ಹಾಗಲ್ಲ ಹೀಗೆ ಮಾಡಿ ಎನ್ನುವ ನೈತಿಕ ಹಕ್ಕು ನಮಗಿಲ್ಲದಿದ್ದರೂ ನಮ್ಮ ನಮ್ಮ ಮನೆಯಲ್ಲೇ ನೆಡೆಯುವ ತಿರುಗುದಾರಿಗಳನ್ನು ಸರಿಪಡಿಸಿಕೊಳ್ಳಬಲ್ಲೆವು. ಉದಾಹರಣೆಗೆ ಇಂದು ಎಲ್ಲಾ ಸೌಲಭ್ಯಗಳೂ ಇದ್ದೂ ಅದರ ಒಂತಿಷ್ಟೂ ಸದುಪಯೋಗ ಮಾಡಿಕೊಳ್ಳದ ನಾವುಗಳೇ 'ಸರ್ಕಾರಗಳ ನಿರ್ಲಕ್ಷ್ಯತನದಿಂದ' ಇಂದು ದೇಶದ ಕ್ರೀಡೆಗಳು ನೆಲಕಚ್ಚಿವೆ ಎನ್ನುತ್ತೀವಿ. ಆದರೆ ನಮ್ಮದೇ ಮಕ್ಕಳನ್ನು ಡಿಗ್ರಿ ಮುಗಿದ ಕೂಡಲೇ ಅಥವಾ ಮುಗಿಯುವ ಮೊದಲೇ ಉನ್ನತ ವ್ಯಾಸಂಗಕ್ಕೆ ಎಂದು ವಿದೇಶಗಳಿಗೆ ಹಾರಲು ವಿಮಾನಗಳ ಟಿಕೆಟ್ಟುಗಳನ್ನು ಕಾಯ್ದಿರಿಸುತ್ತೀವಿ! ಆಕೆಯ ಅಥವಾ ಆತನ ಆಟವನ್ನು ನೋಡಿ 'ಛೆ..ಥು' ಎಂದು ಜರಿಯುತ್ತೀವಿ. ಆದರೆ ಕ್ರೀಡೆ ದೂರದ ಮಾತು ಕನಿಷ್ಠ ಪಕ್ಷ ಎದ್ದು ಅತ್ತಿಂದಿತ್ತ ನೆಡೆಯಲೂ ಆಗದೆ ಕೂತ ಸ್ಥಳಕ್ಕೆ ದೇಹವನ್ನು ಅಂಟಿಸಿಕೊಂಡು ಕೈಕಾಲುಗಳಿದ್ದೂ ಅಂಗವಿಕಲರಾಗುತ್ತೀವಿ. ಏನೂ ಇಲ್ಲದೆ ಆಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದನ್ನು ನೋಡಿ ಕೊಂಡಾಡುತ್ತಿವಿ. ಆದರೆ ಸಾಧಿಸಲು ಸಕಲವೂ ಇದ್ದೂ ಕೇವಲ ನ್ಯೂನ್ಯತೆಗಳನ್ನೇ ದೊಡ್ಡದಾಗಿಸಿ ಕೊಂಡು ಕುಯಿಂಗುಡುತ್ತಿವಿ.

ಆಟ ನನಗೋ, ದೇಶಕ್ಕೋ ಅಥವಾ ಹಣಕ್ಕೋ ಎಂಬ ಅಸ್ಪಷ್ಟ ಗುರಿಗಳಿಂದಲೆಯೇ ಅರಳುವ ಕ್ರೀಡಾಪಟುಗಳು ಇಂದು ಘಮಿಕರಿಸುವ ಮೊದಲೇ ಕಮರುವುದು. ಅಲ್ಲಿ ಆಟವೆಂಬುದು ಪ್ಯಾಶನ್ ಅಥವಾ ಇಚ್ಛಿಸಿ ಪಡೆಯುವ ಪ್ರೊಫೆಶನ್. ಇಲ್ಲಿ ಆಟವೆಂಬುದು ಒಂದೋ ಹಣ ಇಲ್ಲವೆಂದರೆ ರೆಕ್ಕೆ ಕತ್ತರಿಸಿದ ನೊಣ! ಇಲ್ಲಿ ಎರಡು ಮುಖ್ಯ ವಿಚಾರಗಳನ್ನು ಗಮನಿಸಬೇಕು. ಒಂದು ದೇಶಕ್ಕೆ ಕೀರ್ತಿಯನ್ನು ಗಳಿಸಿಕೊಡಬೇಕೆಂಬ ಅಥವಾ ಹೆಸರು ಗಿಟ್ಟಿಸಿಕೊಳ್ಳಬೇಕೆಂಬ ಹಪಾಹಪಿ. ಎರಡನೆಯದು ನಿಖರತೆಯಿಲ್ಲದ ಕ್ರೀಡಾ ಹಾದಿಯಲ್ಲಿ ಆರ್ಥಿಕವಾಗಿ ಮುಗ್ಗರಿಸಿ ಮಕಾಡೆ ಬಿದ್ದು ಎದ್ದೇಳಲೇ ಆಗದೇನೋ ಎಂಬ ಭಯ. ಭಾರತದಂತಹಃ ಅಭಿವೃದ್ಧಿಶೀಲ ರಾಷ್ಟ್ರದ ಬಹುಸಂಖ್ಯೆಯ ಮಾಧ್ಯಮವರ್ಗದ ಜನರು ಎರಡನೆಯ ವಿಚಾರದ ತೂಕದಲ್ಲಿ ಮೊದಲನೇ ಸಂಗತಿಯನ್ನು ಹತ್ತಿಕ್ಕಿಕೊಳ್ಳುತ್ತಾರೆ. ಭಯ. ನನ್ನದೇಗೋ ಆಯಿತು ನನ್ನ ಮಗುವಿನ ಭವಿಷ್ಯ ಸುಭದ್ರವಾಗಿರಬೇಕೆಂಬ ಕನಸ್ಸನ್ನು ಕಾಣುವ ಮಾಧ್ಯಮವರ್ಗದ ಪೋಷಕರಿಗೆ ಆ ಸುಭದ್ರತೆಯ ಕಲ್ಪನೆಯೆಯೆಂದರೆ ಮಗ ಅಥವಾ ಮಗಳು ಬೆಳಗ್ಗೆ ಒಂಬತ್ತಕ್ಕೆ ಮನೆ ಬಿಟ್ಟು ಸಂಜೆ ಆರಕ್ಕೆ ಮನೆ ತಲುಪಿ, ತಿಂಗಳ ಕೊನೆಯಲ್ಲಿ ತಮಗಿಲ್ಲದಿದ್ದರೂ ಸರಿಯೇ ಅವರುಗಳು ಮಾತ್ರ ಒಳ್ಳೆಯ ಸಂಬಳವನ್ನು ಪಡೆದು, ಮದುವೆಯೊಂದಾಗಿ, ಮಕ್ಕಳು ಮರಿಗಳನ್ನು ಬೆಳೆಸಿ ಆ ನೆಮ್ಮದಿಯಲ್ಲೇ ತಾವು ಕಣ್ಣು ಮುಚ್ಚಿಕೊಂಡರೆ ಎಂಬ ಕನಸ್ಸಿನಲ್ಲಿಯೇ ಇರುತ್ತದೆ. ಅಲ್ಲದೆ ಭಾಗಶಃ ಜನರು ಇಂದು ಈ 'ಸಾಧನೆ'ಯನ್ನು ಸಾಧಿಸಿಯೇ ತೀರುತ್ತಾರೆ. ಇದರಲ್ಲಿ ಎಳ್ಳಷ್ಟೂ ತಪ್ಪಿಲ್ಲ. ಸ್ವಾಭಾವಿಕವಾಗಿ ಚಿಂತಿಸುವವರ ಸ್ವಾಭಾವಿಕ ಸ್ವಭಾವವಿದು. ಇಂತಹ ಸ್ವಾಭಾವಿಕತೆಯಲ್ಲಿ ಕ್ರೀಡೆ, ದೇಶ, ದೇಶಪ್ರೇಮವೆಂಬುದು ಅಸ್ವಾಭಾವಿಕವಾಗಿಯೇ ಅವರಲ್ಲಿ ಮೂಡಬೇಕು. ಮೋಡಕವಿದ ಆಗಸದಲ್ಲಿ ಇದ್ದಕ್ಕಿದಂತೆ ರವಿಯ ಕಿರಣಗಳು ಹೊಳೆದಂತೆ.



ಇಂತಹ ಮನಸ್ಥಿತಿಯ ಸಮಾಜದಲ್ಲಿ ಪ್ರತಿಭಾರಿಯ ಒಲಿಂಪಿಕ್ಸ್ ನಲ್ಲಿ ಕೇವಲ ಬೆರಳೆಣಿಕೆಯ ಪದಕಗಳನ್ನು ಗಳಿಸಿಬರುವ ನಮ್ಮವರ ಜರಿಯುವ ಹಕ್ಕು ನಮಗೆ ಎಳ್ಳಷ್ಟೂ ಇರುವುದಿಲ್ಲ ಎಂಬುದನ್ನು ನಾವು ಮನಗಾಣಬೇಕು. ಹಿಮಾದಾಸ್ ಗೆದ್ದರೆ ಅದು ಹೆಮ್ಮೆಯ ವಿಚಾರ. ಆದರೆ ಆ ಹೆಮ್ಮೆಯನ್ನು ಇತರೆ ನಟ ನಟಿಯರಿಗೆ ಹೋಲಿಸಿ ಜರಿಯುವುದು ಮಾತ್ರ ನಮ್ಮ ಕಮ್ಮಿ ಬುದ್ದಿಯ ಸಂಕೇತ. ಒಂದೂ ಮಾಡಿ ತೋರಿಸೋಣ ಅಥವ ಮಾಡುವವರಿಗೆ ಪ್ರೋತಾಹಿಸೋಣ. ಎರಡನ್ನೂ ಬಿಟ್ಟು ಕೇವಲ ಫೇಸ್ಬುಕ್ ಪೋಸ್ಟ್ಗಳನ್ನು ಶೇರ್ ಮಾಡುತ್ತಾ, ಆಟದ ಹಿರಿಮೆಯನ್ನು ಮರೆತು ಜಾತಿಯ ಹಿರಿಮೆಯನ್ನು ತಿಳಿಯಬಯಸಿದರೆ ಅದು ಕೇವಲ ಆಟವಾಗಿ ಉಳಿಯುತ್ತದೆಯೇ ವಿನಃ ಕ್ರೀಡೆಯಾಗಲು ಹೇಗೆ ತಾನೆ ಸಾಧ್ಯ?!

No comments:

Post a Comment