Friday, July 20, 2018

ಬಾಡುಟವೊಂದರ ಐತಿಹ್ಯ - I

ಹೊತ್ತು ಮುಳುಗಿ ಅದಾಗಲೇ ಕಪ್ಪು ಆಗಸದಲ್ಲಿ ತುಂತುರು ಚುಕ್ಕಿಗಳು ಮಿನುಗತೊಡಗಿವೆ. ತನ್ನೊಟ್ಟಿಗಿದ್ದ ನಾಲ್ವರು ಸೈನಿಕರು ತಮ್ಮ ತಮ್ಮ ಖಡ್ಗಗಳಿಂದ ಖಣಖಣ ಶಬ್ದವನ್ನು ಹೊಮ್ಮಿಸುತ್ತಾ ಯುದ್ಧಕ್ಕೆ ತಯಾರಿ ನೆಡೆಸುತ್ತಿದ್ದಾರೆ. ಯುದ್ಧದ ಸ್ಥಳ ತಾನಿರುವ ಜಾಗದಿಂದ ಸುಮಾರು ಐವತ್ತು ಕ್ರೋಶ ದೂರದ್ಲಲಿದೆ. ಆನೆ, ಕುದುರೆ, ಒಂಟೆಗಳ ಜೊತೆಗೆ ಎರಡೂ ಕಡೆಯ ಲಕ್ಷಾಂತರ ಸೈನಿಕರ ರೋಷ, ಭಯ, ಧೈರ್ಯ, ಚೀರುವಿಕೆ, ರೋಧನೆ, ರಕ್ತ, ಬಳಲಿಕೆ, ದುಃಖ, ಸಾವು.. ಅಬ್ಬಬ್ಬಾ ಎಷ್ಟೆಲ್ಲಾ ಭಾವಸ್ಥಿತಿಗಳುಗಳು! ನಾನೊಬ್ಬ ಅಡುಗೆಯವ. ಡೇರೆಯಲ್ಲಿರುವ ದಿನಸಿಗಳನ್ನು ಕಾಪಾಡುವ ಸಲುವಾಗಿ ಇರುವ ಈ ನಾಲ್ಕು ಸೈನಿಕರ ರಣೋನ್ಮಾದ ಭಾವಗಳನ್ನು ಕಂಡೇ ಮೈಕೈಗಳೆಲ್ಲ ನಡುಗುತ್ತಿವೆ, ಇನ್ನು ಯುದ್ಧವನ್ನು ಸಾಕ್ಷಾತ್ ಕಣ್ಣುಗಳಿಂದ ನೋಡುವ ಧೈರ್ಯವಿದೆಯೇ? ಯಾ ಅಲ್ಲಾ… ನನ್ನನು ಜೀವಮಾನವಿಡೀ ಒಬ್ಬ ಅಡುಗೆಯುವನಾಗಿಯೇ ಇರಿಸು. ಯುದ್ಧದಲ್ಲಿ ಸಾಧ್ಯವಾಗದ್ದನ್ನು ನನ್ನೀ ಪಾಕಜ್ಞಾನದಲ್ಲಿ ಗಳಿಸಿಕೊಳ್ಳುವೆ. ಸಾಧಿಸುವೆ. ಮರುಭೂಮಿಯ ನೆಲಕ್ಕೆ ನೀರನ್ನು ಸುರಿದಂತೆ ಕಣ್ಮುಚ್ಚಿ ಬಿಡುವಷ್ಟರಲ್ಲಿ ತಟ್ಟೆಯನ್ನೇ ಖಾಲಿ ಮಾಡುವ ದೇಹಗಳಿಗೆ ರುಚಿಕಟ್ಟಾದ ಊಟವನ್ನು ಮಾಡಿ ತಣಿಸುವುದು ಸಹ ಏನು ಸುಲಭದ ಕೆಲಸವೇ? ಅದೇನೇ ಆಗಲಿ. ನನ್ನ ಅಡುಗೆಯ ಕೈಚಳಕದಿಂದ ಸೈನಿಕರೆಲ್ಲರ ವಿಶ್ವಾಸವನ್ನು ಗಳಿಸಕೊಳ್ಳಬೇಕು. ಮುಂದೊಂದು ದಿನ ರಾಜರಮನೆಯ ಮುಖ್ಯ ಅಡುಗೆಯ ಭಟ್ಟನಾಗಿ ನಾಲ್ಕಾರು ಜನರಿಂದ ಸಲಾಂಗಳನ್ನು ಗಿಟ್ಟಿಸಿಕೊಳ್ಳಬೇಕು ಎನ್ನುತ್ತಿರುವಾಗಲೇ ಒಬ್ಬ ಸೈನಿಕ ಏದುಸಿರು ಬಿಡುತ್ತ ನಾನಿರುವಲ್ಲಿಗೆ ಓಡಿ ಬಂದು 'ರಣರಂಗದಲ್ಲಿ ಯುದ್ಧ ತೀವ್ರಗೊಂಡಿದ್ದು ಅದು ಬೇಗನೆ ಮುಗಿಯುವ ಹಾಗೆ ಕಾಣುತ್ತಿಲ್ಲವಂತೆ. ನಾಳೆಯ ಅಪರಾಹ್ನದ ಹೊತ್ತಿಗೆ ಗಾಯಗೊಂಡ ಹತ್ತಿಪ್ಪತ್ತು ಸೈನಿಕರು ನಮ್ಮ ಡೇರೆಗೆ ವಿಶ್ರಾಂತಿಗೆ ಬರಲಿದ್ದಾರಂತೆ.ಅತಿ ರುಚಿಕಟ್ಟಾದ ಮಾಂಸದ ಊಟವನ್ನು ಮಾಡಿ ಬಡಿಸಿ ಅವರ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಆಜ್ಞೆ ಸ್ವತಃ ಶೆಹನ್ ಶಾ ರಿಂದ ಬಂದಿದೆ..' ಪಾರಿವಾಳದ ಕಾಲಿಗೆ ಕಟ್ಟಿದ್ದ ಬಟ್ಟೆಯ ಮೇಲೆ ಬರೆದಿದ್ದ ಅಕ್ಷರಗಳನ್ನು ಓದುತ್ತಾ ನನಗೆ ಕೇಳುವಂತೆ ಹೇಳಿದನಾತ.

ಶೆಹನ್ ಶಾರ ಹೆಸರು ಕೇಳಿಯೇ ಅರ್ಧ ಅಧೀರನಾದ ನಾನು ಮುಂದೇನು ಮಾಡಬೇಕೆಂದು ತೋಚಲಿಲ್ಲ. ಗೋಧಾಮಿನಲ್ಲಿ ಹೇಳಿಕೊಳ್ಳುವಂತಹ ವಿಶಿಷ್ಟ ಪದಾರ್ಥಗಳೇನೂ ಇರಲಿಲ್ಲ. ದೇಶದ ಉತ್ತರ ಪ್ರಾಂತ್ಯದಿಂದ ತರಿಸಿರುವ, ರಾಜಮನೆಯಲ್ಲಿ ಮಾಡುವ ವಿಶಿಷ್ಟವಾದ ಅಕ್ಕಿಯೇನೋ ಇದೆ. ಜೊತೆಗೆ ಒಂತಿಷ್ಟು ಈರುಳ್ಳಿ, ಶುಂಠಿ, ಕೆಂಪುಮೆಣಸು, ತುಪ್ಪ, ಸಂಬಾರ, ಹಸಿರುಮೆಣಸು, ಬೆಳ್ಳುಳ್ಳಿ, ಚಕ್ಕೆ, ಲವಂಗಗಳಿಂದ ಹಾಗು ಇತರೆ ಮಸಾಲ ಪದಾರ್ಥಗಳಿಂದ ಕೂಡಿದ ಒಂದೆರೆಡು ಗಂಟುಗಳಿವೆ. ತುಸು ಹೊತ್ತು ಸುಮ್ಮನಾದ ನಾನು ನನ್ನೊಳಗೆ ಜರುಗುತ್ತಿದ್ದ ಗೊಂದಲದ ಅಲೆಗಳನ್ನು ಮುಖದ ಮೇಲೆ ವ್ಯಕ್ತಪಡಿಸಲಾಗದೆ ಕೂತೆ. ಸೈನಿಕ ಅತ್ತ ಹೋದಮೇಲೆ ಮತ್ತದೇ ಚಿಂತೆ ಕಾಡತೊಡಗಿತು. ಹಸಿರು ಬಾಳೆಎಲೆಯ ಮೇಲೆ ಅಚ್ಚಬಿಳಿಯ ಹಬೆಯಾರುವ ಬಿಸಿಬಿಸಿಯಾದ ಅನ್ನದ ರಾಶಿಯೊಂದಿದ್ದರೆ ಒಂದಿನಿತು ಉಪ್ಪಿನ ಕಾಯಿಯೂ ಮುಷ್ಟಾನ್ನ ಭೋಜನದ ಸವಿಯನ್ನು ಒದಗೀಸಿತು. ಜೊತೆಗೆ ಮಡಕೆಯಲ್ಲಿ ತುಂಬಿ ಹಸಿ ಮಣ್ಣಿನಲ್ಲಿ ಹುದುಗಿಸಿರುವ ಮೊಸರೆನೋ ಇದೆ. ಒಂದೆರೆಡು ಸೌಟು ಗಟ್ಟಿ ಮೊಸರು, ಬೆಂಕಿಯ ಕೆಂಡಕ್ಕೆ ಒಡ್ಡಿ ಬಾಡಿಸಿದ ಒಂದು ಸಣ್ಣ ಗಾತ್ರದ ಈರುಳ್ಳಿ, ಒಂದೆರೆಡು ಎಳೆಯ ಹಸಿರುಮೆಣಸಿನ ಕಾಯಿ ಜೊತೆಗೆ ತುರಿತುರಿಯಾದ ಬಿಸಿಮಾಡಿದ ತುಪ್ಪ... ಇಷ್ಟು ಸಾಕು ಸೈನಿಕರ ನಾಲಿಗೆಯನ್ನು ತಣಿಸಲು. ಮೇಲಾಗಿ ಸೈನಿಕರು ಪೆಟ್ಟು ತಿಂದು ಧಣಿದು ಬಂದವರು. ಹಸಿದು ಬರಬಿದ್ದ ಹೊಟ್ಟೆಗೆ ಏನಾದರೇನು? ಎಂದು ಸಮಾಧಾನ ತಂದುಕೊಳ್ಳಲು ಪ್ರಯತ್ನಿಸಿದರೂ ರಾಜನ ಕಟ್ಟಾಜ್ಞೆಯನ್ನು ಅಷ್ಟು ಹಗುರವಾಗಿ ಪರಿಗಣಿಸಲು ಸಾಧ್ಯವಾಗಲಿಲ್ಲ. ತುಸು ಹೊತ್ತು ಆಕಾಶವನ್ನು ಧಿಟ್ಟಿಸತೊಡಗಿದೆ. ಕೂಡಲೇ ಉಪಾಯವೊಂದು ಹೊಳೆಯಿತು. ಪರಿಣಾಮ ರಾತ್ರಿಯ ಊಟಕ್ಕೆ ಮಾಡುವ ಅಡುಗೆಯಲ್ಲಿ ಆ ಪ್ರಯೋಗವನ್ನು ಮಾಡಬಯಸಿದೆ. ಆದರೆ ಗುರಿ ಗೊತ್ತಿಲ್ಲದ ಕವಲೊಡೆದ ಹಲವು ದಾರಿಗಳ ಕೇಂದ್ರಬಿಂದುವಿನಲ್ಲಿ ನಿಂತಂತಾಯಿತು. ಊಟ ರುಚಿಯಾಗದಿದ್ದರೆ ನಾಲ್ವರು ಸೈನಿಕರನ್ನು ಹೇಗೋ ಸಂಭಾಳಿಸಬಹುದು. ಆದರೆ ಹತ್ತಾರು ಗಜಕಾಯದ ದಾಂಡಿಗರ ಮುನಿಸು ನನ್ನ ಪ್ರ್ರಾಣಕ್ಕೇ ಕುತ್ತು ತರುವುದಂತೂ ಸುಳ್ಳಲ್ಲ!

ನಾವುಗಳು ಜನ ಐದಾದ್ದರಿಂದ ರಾತ್ರಿಯ ಊಟಕ್ಕೆ ಪದಾರ್ಥದ ಪರಿಮಾಣವೂ ಅಷ್ಟೇನೂ ಹೆಚ್ಚಾಗಿ ಬೇಕಾಗಿರಲಿಲ್ಲ. ಯೋಚನೆಯಲ್ಲೇ ಮುಳುಗಿದ್ದ ನನಗೆ ಸೈನಿಕರು ನಾನಿದ್ದಲಿಗೆ ಬಂದ ಸದ್ದು ಅರಿವಿಗೆ ಬಾರದಾಯಿತು. ಒಂದರ ಮೇಲೊಂದು ಖಡ್ಗವನ್ನು ಎಸೆದ ಅವರು ‘ಊಟಕ್ಕೆಟಕ್ಕೆ ಏನು ತಯಾರಿ?' ಎಂಬಂತೆ ನನ್ನನ್ನೇ ಗುರಾಹಿಸತೊಡಗಿದರು! ಕೂಡಲೇ ಎಚ್ಚೆತ್ತುಕೊಂಡ ನಾನು ಏನನ್ನೂ ಉತ್ತರಿಸಲಾಗದೆ ಅವಸರವಸರವಾಗಿ ಕಾರ್ಯೋನ್ಮುಖನಾದೆ. ಹಿಂದೆಂದೂ ಈ ಬಗೆಯ ಮೈಮರೆಯುವಿಕೆ ಬಂದಿರಲಿಲ್ಲ. ರಾಜರ ಕಟ್ಟಪ್ಪಣೆಯೋ ಏನೋ ಇಂದು ಮನಸ್ಸು ಬಹಳಾನೇ ಬೆದರಿದೆ. ಆದರೆ ಈ ಕ್ಷಣಕ್ಕೆ ನನಗೆ ಬಂದೊದಗಿರುವ ಸವಾಲೆಂದರೆ ಮಧವೇರಿದ ಆನೆಗಳಂತೆ ಘೀಳಿಡುವ ನಾಲ್ವರು ಸೈನಿಕರ ಹಸಿವನ್ನು ನೀಗಿಸುವುದು. ಇನ್ನೇನು ಇವರು ತುಸು ಹೊತ್ತಿನಲ್ಲಿ ಪಕ್ಕದಲ್ಲೇ ಇರುವ ಕೆರೆಗೆ ಹೋಗಿ ಸ್ನಾನಾದಿಗಳನ್ನು ಮಾಡಿ ವಾಪಸ್ಸಾಗುತ್ತಾರೆ. ಬೆವತು ದಣಿದ ದೇಹ ಬಯಸಿದರೆ ಒಂದಷ್ಟು ಕಾಲ ಈಜಾಡುವುದೂ ಉಂಟು. ಆದರೆ ಬಂದ ಕೂಡಲೇ ಘಮಘಮಿಸುವ ಭೀಮಹಾರವೊಂದು ಸಿದ್ಧವಿರಬೇಕು. ಇಂದು ಯಾವುದೇ ಶಿಕಾರಿಯಾಗದಿದ್ದ ಕಾರಣ ಮಾಂಸದ ಅಡಿಗೆ ಇರುವುದಿಲ್ಲವೆಂಬುದು ಅವರುಗಳಿಗೆ ತಿಳಿದಿರುತ್ತದೆ. ಸಮಯ ಓಡತೊಡಗಿತು.

ಅಲ್ಲಿಯವರೆಗೂ ಒಂದೇ ಒಲೆಯಲ್ಲಿ ಅಡುಗೆಯನ್ನು ಮಾಡುತ್ತಿದ್ದ ನಾನು ಸಮಯ ಸಾಧನೆಗಾಗಿ ಎಂಬಂತೆ ತುಸು ಪಕ್ಕದಲ್ಲಿಯೇ ಮೂರು ಕಲ್ಲುಗಳಿಂದ ಮತ್ತೊಂದು ಒಲೆಯನ್ನು ಮಾಡಿಕೊಂಡೆ. ಅಡುಗೆ ಏನೇ ಆದರೂ ಅನ್ನವೆಂಬ ಮೂಲಧಾತು ಅದರಲ್ಲಿ ಇದ್ದಿರಲೇಬೇಕು. ಹಾಗಾಗಿ ಎಲ್ಲಕಿಂತ ಮೊದಲು ಅನ್ನವನ್ನು ಮಾಡೋಣವೆಂದು ನಾಲ್ಕು ಪಾವು ಅಕ್ಕಿಯನ್ನು ಮಡಿಕೆಯ ಪಾತ್ರೆಯೊಂದಕ್ಕೆ ಸುರಿದು ಪಕ್ಕದಲ್ಲೇ ಇದ್ದ ಸಣ್ಣ ಝರಿಯ ಬಳಿಹೋಗಿ ತೊಳೆದು, ಜಾಲಾಡಿಸಿ, ನೀರನ್ನು ತುಂಬಿಕೊಂಡು ತಂದೆ. ಹಳೆಯ ಒಲೆಯ ಮೇಲೆ ಮಣ್ಣಿನ ಮಡಕೆಯನ್ನು ಆಸೀನಪಡಿಸಿ ಬೆಂಕಿಯೊತ್ತಿಸಿದ ಮೇಲೆ ಅರ್ಧ ಕೆಲಸವೇ ಮುಗಿಯಿತು ಎನ್ನುವಷ್ಟು ನೀರಾಳಭಾವ ಮನಸ್ಸನ್ನು ತುಂಬಿತು. ಬೆಂಕಿಯ ಕಾವು ಹಸಿವನ್ನು ನೀಗಿಸುವ ಪುಣ್ಯಕಾರ್ಯಕ್ಕೆ ಎಡೆಬಿಡದೆ ದುಡಿಯುವಂತೆ ಹುರಿಯತೊಡಗಿತು. ತಾನು ಸುಟ್ಟು ಇತರರ ಹೊಟ್ಟೆಯನ್ನು ತುಂಬುವ ತ್ಯಾಗಮಯಿ ಜೇವವೇನೋ ಅದು ಎಂಬಂತೆ ಅದು ನನಗೆ ಭಾಸವಾಹಿತು.ಲೋಕಾರೂಢ ಚಿಂತನೆಗೆ ಅದು ಸಮಯವಲ್ಲ. ಅನ್ನವೇನೋ ಇನ್ನು ಕೆಲನಿಮಿಷಗಳಲ್ಲಿಯೇ ಆಗಿಬಿಡುತ್ತದೆ. ರಾಜಧಾನಿಯಿಂದ ಸೊಪ್ಪು ತರಕಾರಿಗಳನ್ನೊತ್ತು ಬರುವ ಒಂಟೆಗಳ ಸಾಲು ಬೇರೆ ವಿಳಂಬವಾಗಿದೆ.

ಕಳೆದ ಕೆಲದಿನಗಳಿಂದ ಇಲ್ಲಿಯೇ ತಂಗಿ ಸ್ಥಳಪರಿಚವಿದ್ದ ನಾನು ಕಾಡಿನ ಅಲ್ಲಲಿ ಬೆಳೆದ್ದಿದ್ದ ಭಕ್ಷಿಸಲು ಯೋಗ್ಯವಾದ ಹಸಿರು ತರಕಾರಿ, ಸೊಪ್ಪು ಹಾಗು ಗೆಡ್ಡೆ ಗೆಣೆಸುಗಳನ್ನು ಗಮನಿಸಿದ್ದೆ. ಅನಿವಾರ್ಯವಿದ್ದ ಕಾರಣ ಒಂದು ಅಂದಾಜಿನ ಮೇಲೆ ತಿಂಗಳಬೆಳಕಿನ ಮಬ್ಬಿನಲ್ಲಿಯೇ ಕಟ್ಟಿಗೆಯ ಬೆಳಕೊಂದನ್ನು ಹಿಡಿದು ಸ್ಥಳವನ್ನು ಗುರುತುಮಾಡಿಕೊಂಡು ಹೆಜ್ಜೆ ಹಾಕಿದೆ. ಡೇರೆಯಿಂದ ಹೆಚ್ಚು ದೂರಹೋಗಬಾರದೆಂಬ ಹೆಚ್ಚರಿಕೆಯ ಕರೆಘಂಟೆ ತಲೆಯೊಳಗೆ ಸದ್ದುಮಾಡುತ್ತಲೇ ಇದ್ದಿತು. ದೇಶದ ಅಲ್ಲಲಿ ಇತ್ತೀಚಿಗೆ ಚಾಲ್ತಿಯಲ್ಲಿ ಬಂದಿರುವ ಹಸಿರಾದ ಹುಳಿಹಣ್ಣನ್ನು ಹಲವೆಡೆ ಅಡುಗೆಗೆ ಬಳಸುವುದನ್ನು ನೋಡಿದ್ದೇನೆ. ಹಸಿರಿರುವ ಇದನ್ನು ಕಿತ್ತು ಇಟ್ಟರೆ ಕೆಲದಿನಗಳಲ್ಲೇ ಕಡುಕೆಂಪುಬಣ್ಣಕ್ಕೆ ತಿರುಗುತ್ತದೆ. ಮೃದುವಾಗುತ್ತದೆ. ಊರಿನ ಗಲ್ಲಿಯ ಮಕ್ಕಳಂತೂ ಹೊಟ್ಟೆ ಬಿರಿಯುವಂತೆ ಇದನ್ನು ಕಾಪುತ್ತ ತಿಂದು ಹೊಟ್ಟೆ ನೋವೆನುತ ಬಿದ್ದು ಹೊರಳಾಡುವುದುಂಟು. ಈಗ ಅದೇ ಹಣ್ಣಿನ ಗಿಡವನ್ನು ನನ್ನ ಕಾಲ ಬಳಿಯೇ ಕಂಡೆ. ಎರಡಡಿ ಉದ್ದದ ಗಿಡದ ಎಲೆಗಳು ತುಂಬೆ ಗಿಡಗಳ ಎಲೆಗಳಂತೆಯೇ ಕಾಣುತ್ತವೆ. ಹೆಸರಿಡದ ಆ ಹಸಿರು ಗಿಡಗಳು ಹಣ್ಣುಗಟ್ಟಿವೆಯೇ ಎಂದು ಪರೀಕ್ಷಿಸಿದರೆ ಅದಾಗಲೇ ಕಾಡ ಇಲಿ ಅಳಿಲುಗಳು ಕಾಯಿಯ ತೊಟ್ಟಷ್ಟನ್ನೇ ಬಿಟ್ಟು ಪೂರಾ ಗೊಂಚಲ್ಲನ್ನು ತಿಂದು ಜಾಗ ಕಿತ್ತಿವೆ. ಆದರೆ ಛಲ ಬಿಡಲಿಲ್ಲ. ಈ ಜಾತಿಯ ಕಾಯಿ ಒಂದೋ ಎರಡು ಮಾತ್ರವಷ್ಟೇ ಬೆಳೆಯವು. ತಮ್ಮ ಸಂಸಾರದ ಕನಿಷ್ಠ ಹತ್ತಿಪ್ಪತ್ತು ಇತರೆ ಗಿಡಗಳಿಗೆ ಜೊತೆಗೆ ಜನ್ಮನೀಡುವವು. ಕೊಂಚ ಅತ್ತಿಂದಿತ್ತ ಅಲೆದಾಡಿದ ಮೇಲೆ ಮುಳ್ಳು ಆವರಿಸಿದ ಪೊದೆಗಳ ಹಿಂದೆ ಇಂಥದ್ದೇ ಮತ್ತೊಂದು ಗಿಡ ಕಂಡಿತು. ಹಣ್ಣು ಹಣ್ಣಾಗಿದ್ದ ಆ ಗಿಡದ ತುಂಬೆಲ್ಲ ಕೆಂಪು ಕಾಯಿಗಳ ರಾಶಿ ರಾಶಿ ಗೊಂಚಲುಗಳು! ಕೂಡಲೇ ಕವಚದಂತೆ ಆವರಿಸಿದ ಪೊದೆಯನ್ನು ಪಕ್ಕಕ್ಕೆ ಸರಿಸಿ ಕಳೆತ ಮಾವಿನಹಣ್ಣುಗಳಂತೆ ಬಾಡಿ ಬತ್ತಿದ ಹಣ್ಣುಗಳನ್ನು ಒಂದೊಂದಾಗಿಯೇ ಕೀಳತೊಡಗಿದೆ. ಪೂರಾ ಕಲೆತಿದ್ದ ಹಣ್ಣೊಂದನ್ನು ಅದರ ಲೋಳೆಯಾದ ಸಣ್ಣ ಸಣ್ಣ ಬೀಜಗಳು ಹೊರಬರುವಂತೆ ಕೈಯಲ್ಲಿ ಹಿಸುಕಿ ಹಾಕಿದೆ. ಆಗೊಮ್ಮೆ ಈಗೊಮ್ಮೆ ಬರುವ ಮಳೆಯ ಮಹಿಮೆಗೆ ಇವುಗಳ ಸಂಸಾರ ಇನ್ನೂ ವೃದ್ಧಿಸಲಿ ಎಂಬ ಆಶಯದೊಂದಿಗೆ..

ಡೇರೆಗೆ ಬಂದವನೇ ಮೀಯಲು ಹೋದ ಸೈನಿಕರು ಇನ್ನು ಬಂದಿರಲಿಲ್ಲವೆಂಬ ಖಾತ್ರಿಯನ್ನು ಮಾಡಿಕೊಂಡು ಬತ್ತಳಿಕೆಯಲ್ಲಿ ತುಂಬಿಕೊಂಡು ಬಂದಿದ್ದ ಕೆಂಪು ಕಾಯಿಗಳನ್ನು ಅಥವಾ ಹಣ್ಣುಗಳನ್ನು ಮತ್ತದೇ ಝರಿಯ ಬಳಿಗೋಗಿ ತೊಳೆದು ತಂದೆ. ಸಾಂಬಾರ ಪದಾರ್ಥಗಳ ಗಂಟುಗಳನ್ನು ಬಿರಬಿರನೆ ತಂದು ಒಂದೊಂದಾಗಿಯೇ ಬಿಚ್ಚತೊಡಗಿದೆ. ಏನು ಮಾಡಹೋಗುತ್ತಿರುವನೆಂದು ತಿಳಿಯುತ್ತಿಲ್ಲ. ಆದರೂ ಯಾರೋ ಅಣಿಮಾಡಿ ಮಾಡಿಸುತ್ತಿರುವಂತೆ ಕೈಗಳು ತಮ್ಮ ಪಾಡಿಗೆ ಬೇಕೆನಿಸಿದ ವಸ್ತುಗಳನ್ನು ಜೋಡಿಸಿಕೊಳ್ಳತೊಡಗಿದವು. ಗಂಟಿನಿಂದ ನಾಲ್ಕೈದು ಈರುಳ್ಳಿಗಳನ್ನು ಹೊರಗೆಳೆದು ಹೆಚ್ಚತೊಡಗಿದೆ. ಕಣ್ಣೀರು ಬಾರದಿರಲಿ ಎನುತ ಅವುಗಳ ಒಂದೆರೆಡು ಸಿಪ್ಪೆಗಳನ್ನು ತಲೆಗೂದಲಿನ ಮದ್ಯಕ್ಕೆ ತುರುಕಿಸಿದರೆ ಕಣ್ಣೀರು ಒಮ್ಮಿಂದೊಮ್ಮೆಗೆ ಮಂಗಮಾಯಾ! ಅರ್ಧಚಂದ್ರಾಕೃತಿಯ ಹತ್ತಾರು ಹೋಳುಗಳ ನಂತರ ತೊಳೆದು ತಂದಿದ್ದ ಕೆಂಪು ತರಕಾರಿಯನ್ನು ಮೃದುವಾಗಿ ತುಂಡರಿಸತೊಡಗಿದೆ. ಹುಳಿಹುಳಿಯಾದ ವಾಸನೆ ಮೂಗನ್ನು ಬಡಿಯುತ್ತಲೇ ಬೇಡವೆನಿಸಿದರೂ ಮೂಗು ಕ್ರಮೇಣ ಅದಕ್ಕೆ ಹೊಗ್ಗಿಕೊಳ್ಳತೊಡಗಿತು. ನಾಲ್ಕೈದು ಕೆಂಪು ಹಣ್ಣುಗಳನ್ನು ಕೊಯ್ದು ಇನ್ನೇನು ಮಸಾಲಾ ಪದಾರ್ಥಗಳಿಗೆ ಕೈಹಾಕಬೇಕು ಎನ್ನುವಷ್ಟರಲ್ಲಿ ಕಾಡುಕೋಳಿಗೆ ಹಾಕಿದ್ದ ಬಲೆಯ ದಿಕ್ಕಿನಿಂದ ಪಟಪಟನೆ ಬಡಿದುಕೊಳ್ಳುತ್ತಿದ್ದ ರೆಕ್ಕೆಗಳ ಸದ್ದು ಕೇಳಿತೊಡಗಿತು….

ಒಣಗಿದ ಬಳ್ಳಿಯೊಂದಕ್ಕೆ ಸರಗುಣಿಕೆಯನ್ನಾಕಿ ಒಂದು ಬದಿಯನ್ನು ಪೊದೆಯೊಂದಕ್ಕೆ ಬಿಗಿದು ಕಟ್ಟಿ ನೆಲದ ಅಲ್ಲಲ್ಲಿ ಅಕ್ಕಿಯ ಕಾಳುಗಳನ್ನು ಚೆಲ್ಲಿ ಬಂದಿದ್ದೆ. ಇಂತಹ ಕನಿಷ್ಠ ಪಂಜರಕ್ಕೆ ಯಾವ ತಲೆಕೆಟ್ಟ ಹಕ್ಕಿಯೂ ಸಹ ಬಂದು ಬೀಳುವುದಿಲ್ಲವೆಂಬುದು ಗೊತ್ತಿದ್ದರೂ ಗ್ರಹಚಾರ ಕೆಟ್ಟ ಜೀವಕ್ಕೆ ಹನಿನೀರೂ ಪ್ರವಾಹವಾಗಬಹುದೆಂದುಕೊಂಡು ಬಂದಿದ್ದೆ. ಈಗ ರೆಕ್ಕೆಗಳ ಚಟಪಟ ಸದ್ದು ಅದೇ ದಿಕ್ಕಿನಿಂದ ಬಂದ ಕಾರಣ ಮಸಾಲೆ ಪದಾರ್ಥಗಳ ಘಂಟನ್ನು ಅಲ್ಲಿಯೇ ಬಿಟ್ಟು ಸದ್ದು ಬರುತ್ತಿದ್ದ ದಿಕ್ಕಿನಲ್ಲಿ ಬಿರಬಿರನೆ ಹೆಜ್ಜೆಹಾಕಿದೆ. ಕೆಲಕ್ಷಣದವರೆಗೂ ಒಂದೇ ಸಮನೆ ಕೇಳುತ್ತಿದ್ದ ರೆಕ್ಕೆಗಳ ಸದ್ದನ್ನು ಇದ್ದಕ್ಕಿದಂತೆ ಯಾರೋ ತಡೆದು ನಿಲ್ಲಿಸಿದಂತಾಯಿತು. ಒಂದಿಷ್ಟು ತಿಂಗಳ ಬೆಳಕು ಆಕಾಶದಲ್ಲಿ ಮಿನುಗುತ್ತಿದ್ದಾರೂ ಅದು ಕರಾಳ ಕಾಡಿನ ಕಪ್ಪು ಧೈತ್ಯವನ್ನು ಕರಗಿಸಲಾಗಿರಲಿಲ್ಲ. ರೆಕ್ಕೆಗಳ ಶಬ್ದ ನಿಂತಕೂಡಲೇ ಮಹಾಮೌನವೊಂದು ನಾನಿಂತಿರುವ ಜಾಗವನ್ನು ಆವರಿಸಿತು. ಏಕೋ ಎದೆ ಒಮ್ಮೆಲೇ ಬಡಿದುಕೊಳ್ಳತೊಡಗಿತು. ಏನಾದರಾಗಲಿ ಹುಳಿಹಣ್ಣು ಹಾಗು ಅನ್ನವನು ಬೆರೆಸಿ ಏನಾದರೊಂದು ಆಹಾರವನ್ನು ಮಾಡಬಹುದು. ಹೇಗೋ ಇಂದು ಮಾಂಸಾಹಾರವಿಲ್ಲವೆಂಬುದು ಸೈನಿಕರಿಗೆ ತಿಳಿದೇ ಇದೆ. ಸುಮ್ಮನೆ ಏಕೆ ಮುನ್ನೆಡೆದು ಅಪಾಯವನ್ನು ಎದೆಯ ಮೇಲೆಳೆದುಕೊಳ್ಳಲಿ? ಜನನಿಬಿಡ ಇಂತಹ ಪ್ರದೇಶಗಳಲ್ಲಿ ಭೂತ ಪ್ರೇತಗಳ ಉಪಟಳವೇನು ಕಡಿಮೆ ಇರುವುದಿಲ್ಲ! ಎಂದುಕೊಂಡು ಇನ್ನೇನು ಹೆಜ್ಜೆಯನ್ನು ಹಿಂದಿಡಬೇಕು ಎನ್ನುವಷ್ಟರಲ್ಲಿ ದಬದಬ ಸದ್ದನ್ನು ಮಾಡುತ್ತಾ ಏನೋ ನನ್ನೆಡೆಗೆ ಓಡಿಬರುವ ಸದ್ದು ಕೇಳಿತು…!

Will be Continued ...

No comments:

Post a Comment