Saturday, June 27, 2020

ಪಯಣ - 3

'ಬೋಳಿಮಗ ನಿಮ್ ಅಪ್ಪಂಗ್ ಹೇಳು.... ನಿನ್ ಕಾಲ್ ಕಟ್ ಮಾಡಿ ನಾಯಿಗ್ ಆಕ್ತಿನಿ..' ಅಪ್ಪ ಚೀರತೊಡಗಿದ. ಊರಿಗೆ ಬಂದು ಒಂದೊಳ್ಳೆ ನಿದ್ರೆ ಮಾಡುವ ಕನಸು ಆದಿಗೆ ನನಸಾಗದ ಕನಸ್ಸಾಗಿಯೇ ಉಳಿದಿದೆ. ದಿನಾ ಬೆಳಗಾದರೆ ಹಾವು ಮುಂಗಸಿಯಂತೆ ಕಾದಾಡುವ ಇವರುಗಳನ್ನು ಕಂಡು ಭಯ, ಅಂಜಿಕೆ ಇತ್ತೀಚಿಗೆ ಏಕೋ ವಿಪರೀತವಾಗಿದೆ. ಅಪ್ಪನ ಸದ್ದನ್ನು ಕೇಳಿದರೇ ಎದೆ ಒಂದೇ ಸಮನೆ ಬಡಿದುಕೊಳ್ಳುತ್ತದೆ. ಜೀವನದ ಮೇಲೆಯೇ ಒಂದು ಬಗೆಯ ಜಿಗುಪ್ಸೆ ಮೂಡತೊಡಗುತ್ತದೆ. ಆಗೆಲ್ಲ ತಂಗಿ ಆತನಿಗೆ ಬಹುವಾಗಿ ನೆನಪಾಗುತ್ತಾಳೆ.

'ಅಯ್ಯ ನಿನ್ನ ನಾಲ್ಗೆ ಸೇದೋಗ.. ನಿಮ್ಮ್ ಅಪ್ಪ ಏನ್ ಸಂಪಾನ್ನ?.. ಮನೆ ಒಳ್ಗಡೆ ತೋರ್ಸೋ ನಿನ್ ಪೌರುಷನ ಹೊರ್ಗಡೆ ತೋರ್ಸು ಮುಂಡೇದೆ ' ಎಂದು ಅಮ್ಮ ಖಾರವಾಗಿಯೇ ಹೇಳಿದಳು.

'ನಿನ್ ಜಾತಿನಾ..' ಎಂದು ರಣಭಯಂಕರನಾದ ಅಪ್ಪ ಅಮ್ಮನನ್ನು ಒಡೆಯಲು ದಬದಬನೆ ನುಗ್ಗಿದ. ಅಷ್ಟರಲ್ಲಿ ಆದಿ ಎದ್ದು ಅಡುಗೆ ಮನೆಗೆ ಓಡಿ ಆತನನ್ನು ಎಳೆಯತೊಡಗಿದ. ಹುಚ್ಚೇರಿದ ಶ್ವಾನದಂತೆ ಹಿಂದೆಳೆದಷ್ಟೂ ಆತ ನುಗ್ಗಿ ನುಗ್ಗಿ ಮುನ್ನೆಡೆಯತೊಡಗಿದ. ಆದಿಗೆ ಭಯದೊಟ್ಟಿಗೆ ದುಃಖವೂ ಉಲ್ಬಣಿಸಿತ್ತು. ಅಷ್ಟರಲ್ಲಾಗಲೇ ಕಣ್ಣೀರ ಧಾರೆ ಉಕ್ಕಿ ಹರಿಯತೊಡಗಿತ್ತು.

'ಅಪ್ಪ.. ಬಿಡಪ್ಪ.. ನಿನ್ನ ದಮ್ಮಯ್ಯ ಅಂತೀನಿ.. ಬಿಡು' ಎಂದು ರೋದಿಸತೊಡಗಿದ ಆತನನ್ನು ಕಂಡು ಕೂಡಲೇ ಅಪ್ಪ ದೂರವಾಗಿ,

'ನೀನೂ ಬಳೆ ತೊಟ್ಕೊಂಡು ಹಿಂಗೇ ಇದ್ಬಿಡು..ಒಳ್ಳೆ ಹೆಂಗ್ಸ್ ಆಗೋದಲ್ಲೋ ನೀನೂ.. ಥು..' ಎನುತ ಮೂದಲಿಸಿ ಆತ ಹೊರನೆಡೆದ.

'ನೀನ್ಯಾಕೋ ಅಳ್ತಿಯಾ .. ಹೋಗ್ ಮಲಿಕೋ' ಎನುತ ಅಮ್ಮ ತನ್ನ ಕೆಲಸದಲ್ಲಿ ಮಗ್ನಳಾದಳು.

ಆದರೆ ಅಪ್ಪನ ಮಾತುಗಳು ಆದಿಯನ್ನು ನಾಚಿಕೆಯ ಕೂಪದೊಳಗೆ ತಳ್ಳಿದಂತೆ ಮಾಡಿದವು. ತಾನೊಬ್ಬ ಸಭ್ಯ ವ್ಯಕ್ತಿಯಾಗಿ ಊರಿನಲ್ಲಿ ನಾಲ್ಕಾರು ಜನಗಳಿಂದ ಗೌರವವನ್ನು ಗಳಿಸಿಕೊಳ್ಳಬೇಕು, ಅಲ್ಲ, ಇಡೀ ಪ್ರಪಂಚದಲ್ಲೇ ಗೌರವವನ್ನು ಗಿಟ್ಟಿಸಿಕೊಳ್ಳಬೇಕು,ಸಿನಿಮಾ ನಟನಾಗೋ, ಪ್ರಸಿದ್ಧ ಗಾಯಕನಾಗೋ, ಹೆಚ್ಚು ಹಣ ಸಂಪಾದಿಸುವ ಮಂತ್ರಿಯಾಗೋ, ಖಡಕ್ ಅಧಿಕಾರಿಯಾಗೋ ಅಥವಾ ಅಪ್ರತಿಮ ಕ್ರಿಕೆಟ್ ಆಟಗಾರನಾಗಿಯೋ ಒಟ್ಟಿನಲ್ಲಿ ತನ್ನ ನೋಡಲು ಜನರು ಮುಗಿಬೀಳಬೇಕು. ನೋವು ಹತಾಶೆಯನ್ನು ನೀಡಿದ ಸಮಾಜದ ಜನ ನನ್ನ ನೋಡಿ ಗಡಗಡನೆ ಕಂಪಿಸಬೇಕು. ನನ್ನ ಒಂದು ಮಾತು ವೇದವಾಕ್ಯವಾಗಬೇಕು ಎಂದು ಕನಸ್ಸನ್ನು ಕಾಣುತ್ತಿದ್ದ ಆದಿಗೆ ಅಪ್ಪನ ಮೂರೂ ಬಿಟ್ಟ ವರ್ತನೆ ಹಾಗು ಅಮ್ಮನ ಹಠಮಾರಿತನವನ್ನು ಕಂಡು ಸಿಟ್ಟು ವಿಪರೀತವಾಯಿತು. ವಿಕಾರವಾಗಿ ಕೂಗುತ್ತ ತನ್ನೆರೆಡು ಕೈಗಳಿಂದ ಕೂದಲುಗಳನ್ನು ಹಿಡಿದೆಳೆಯತೊಡಗಿದ.

'ನಿಂಗೇನಾಯಿತೋ ಮಾರಾಯ.. ಹೋಗ್ಲಿ, ಹೋಗ್ ಮುಖ ತೊಳ್ಕ, ತಿಂಡಿ ಮಾಡಂತೆ ' ಎಂದು ಅಮ್ಮ ಆದಿಯ ಅಂತರ್ಯುದ್ಧಕ್ಕೆ ಕಿಂಚಿತ್ತೂ ಬೆಲೆಯನ್ನು ಕೊಡದವಳಂತೆ, ಅಪ್ಪನ ಈ ಉಪಟಳ ಅತಿ ಸಾಮಾನ್ಯವಾದ ಸಂಗತಿಯೇನೂ ಎಂಬಂತೆ ವರ್ತಿಸತೊಡಗಿದಳು.ಅಕ್ಕಿ ರೊಟ್ಟಿ ಹಾಗು ತರಕಾರಿ ಸಾರಿನೊಟ್ಟಿಗೆ ಸಿಟ್ಟಿನಿಂದ ಬೇಡವೆಂದರೂ ಬಿಡದೆ ಸುರಿದ ತುಪ್ಪವನ್ನು ಬೆರೆಸಿ ತಿಂದು ಮನೆಯಿಂದ ಬಿರಬಿರನೆ ಹೊರನೆಡೆದ.

**

ಅದು ತಾನು ಚಿಕ್ಕಂದಿನಿಂದ ಓದಿ ಬೆಳೆದ ಶಾಲೆ. ಊರ ಹಿರಿಯ ಪ್ರಾಥಮಿಕ ಪಾಠಶಾಲೆ. ಏಳುಕೋಣೆಗಳ ತರಗತಿಗಳನ್ನು ಬಿಟ್ಟರೆ ಪ್ರವೇಶದ್ವಾರಕ್ಕೆ ಎದುರಾಗಿ ಸಿಗುವ ಎಂಟನೇ ಕೋಣೆಯೇ ಶಾಲೆಯ ಕಾರ್ಯಲಯ / ಆಫೀಸ್ ರೂಮ್. ಆಗೆಲ್ಲ ಈ ಆಫೀಸ್ ರೂಮಿನ ಒಳಗೆ ಹೋಗುವುದೇ ಒಂದು ಸಾಧನೆ ಎಂದುಕೊಂಡಿದ್ದ ಆದಿ ಹಾಗು ಆತನ ಗೆಳೆಯರು ಅದೆಷ್ಟೋ ಬಾರಿ ಕಿಟಕಿಯ ಮೂಲಕ ಕಳ್ಳರು ಇಣುಕುವಂತೆ ಅದರ ಪಕ್ಕಕ್ಕೆ ಇದ್ದ ಸಣ್ಣ ರೂಮಿನೊಳಗೆ ಇಣುಕುತ್ತಿದ್ದರು. ಅಲ್ಲಿ ಹಿಮಾಲಯ ಪರ್ವತವನ್ನು ಏರಿ ಸುಸ್ತಾಗಿ ವಿಶ್ರಮಿಸುವ ಅರ್ಥಾತ್ ನಿದ್ರೆಗೆ ಜಾರಿರುವ ಶಿಕ್ಷಕರನ್ನು ಕಂಡು ನಗುವ ಖುಷಿ ಅಪಾರವಾದುದ್ದಾಗಿತ್ತು. ಅಲ್ಲದೆ ಮಧ್ಯಾನದ ತಮ್ಮ ಈ ನಿದ್ರಾ ತಪಸ್ಸಿಗೆ ಭಂಗಬಾರದಿರುವಂತೆ ಮಕ್ಕಳ್ಳೆಲ್ಲರನ್ನೂ ಹೊರಕಳಿಸಿ ದಷ್ಟಪುಷ್ಟವಾಗಿರುವ ಒಂದಿಬ್ಬರು ಹುಡುಗರನ್ನು ಸ್ಕೂಲ ದೊಡ್ಡ ಗೇಟಿನ ದ್ವಾರಪಾಲಕರನ್ನಾಗಿ ಮಾಡಿ ಯಾರೊಬ್ರನ್ನೂ ಶಾಲೆಯ ಒಳಗೆ ಬಿಡದಂತೆ ಹೇಳುತ್ತಿದ್ದರು ಅಲ್ಲಿನ ಶಿಕ್ಷಕರು. ಆದರೆ ಆದಿ ಹಾಗು ಆತನ ಗುಂಪು ಮಾತ್ರ ಹೊಟ್ಟೆನೋವು ತಲೆನೋವೆಂಬ ಕಳ್ಳ ನೆಪವನ್ನೊಡ್ಡಿ ಶಾಲೆಯ ಒಳಗೆಯೇ ಇದ್ದು ಆಫೀಸ್ ರೂಮಿನ ಕಿರುಗಂಡಿಯ ಮೂಲಕ ಶಿಕ್ಷಕರ ವಿಭಿನ್ನ ಆಕೃತಿಗಳನ್ನು ನೋಡಿ ನಲಿಯುತ್ತಿದ್ದರು.

ಇದೀಗ ವರ್ಷಗಳೇ ಕಳೆದಿವೆ. ಹಳೆಯ ನೆನಪುಗಳು ಶಾಲೆಯ ಮುಂಬದಿಯ ತೆಂಗಿನ ಮರಗಳಂತೆ ಬೆಳೆದು ದಿಗಂತ ಮುಟ್ಟುವುದೊಂದೇ ಬಾಕಿ ಎನುವಂತೆ ಬೆಳೆದಿವೆ. ಗೇಟಿನ ಮೂಲಕ ಒಳಬಂದು ಬಲಕ್ಕೆ ತಿರುಗಿದರೆ ಏಳನೇ ತರಗತಿಯ ಹುಡುಗರು ಏನೋ ಒಕ್ಕೂರಲಿನಿಂದ ಓದುತ್ತಿದ್ದಾರೆ.

‘ಸತ್ಯ ನಿತ್ಯತೆಯ ನಿಯಮ. ಶಕ್ತಿಯನ್ನು ಸೃಷ್ಟಿಸಲೂ ಆಗದು. ನಾಶ ಪಡಿಸಲೂ ಆಗದು. ಅದನ್ನು ಒಂದು ಬಗೆಯಿಂದ ಮತ್ತೊಂದು ಬಗೆಗೆ ಪರಿವರ್ತಿಸಬಹುದಷ್ಟೆ’

ಸ್ವಲ್ಪ ಸುಮ್ಮನಾದ ನಂತರ ಶಿಕ್ಷಕರು ನೆನ್ನೆಯ ಮನೆಗೆಲಸವನ್ನು ತೋರಿಸುವಂತೆ ಹೇಳಿದರು. ನೆನ್ನೆಯಷ್ಟೇ ಹೊಸ ನೋಟ್ ಬುಕ್ಕನ್ನು ತಂದಿದ್ದ ಹುಡುಗನೊಬ್ಬನಿಗೆ ಮೆನೆಗೆಲಸ ಇದೇ ಎಂಬುದೇ ಮರೆತುಹೋಗಿದೆ. ಹೆದರುತ್ತಲೇ ಶಿಕ್ಷಕರ ಬಳಿಗೆ ಹೋದ ಆತ ಮುಂದೆ ಏನು ಮಾಡುವುದೆಂದು ತೋಚದೆ ಅಳುಕುತ್ತಲೇ ನೋಟ್ಬೊಕ್ಕನ್ನು ಅವರಿಗೆ ನೀಡಿದ. ಅದನ್ನು ನೋಡಿದ ಶಿಕ್ಷಕಿ ಕೂಡಲೇ ತನ್ನ ಕನ್ನಡಕವನ್ನು ಹಾಕಿಕೊಂಡರು. ಕಣ್ಣನ್ನು ಕೆರಳಿಸಿ ಹುಡುಗನನ್ನು ಧಿಟ್ಟಿಸತೊಡಗಿದರು. ನಂತರ ನೋಟ್ ಬುಕ್ಕಿನ ಮೊದಲ ಪೇಜಿನ ತುಂಬಾ ಬರೆದಿದ್ದ ಪದಗಳನ್ನು ಕ್ಲಾಸಿಗೆ ಕೇಳುವಂತೆ ಜೋರಾಗಿ ಓದಿ ಹೇಳಿದಳು. ಶಿಕ್ಷಕಿಯ ಕನ್ನಡಕ ಹಾಗು ಅದರೊಳಗಿದ್ದ ಬೆಂಕಿ ಕಾರುವ ಕಣ್ಣುಗಳನ್ನು ಕಂಡು ಹುಡುಗನಿಗೆ ಕಾಲುಗಳು ಒಂದೇ ಸಮನೆ ನಡುಗಹತ್ತಿದವು. ಆ ವರ್ಷ ತೆರೆಕಂಡ ಚಲನಚಿತ್ರಗಳ ಹೆಸರು ಹಾಗು ಅವುಗಳ ನಾಯಕ ನಾಯಕಿಯರ ಹೆಸರುಗಳನ್ನು ನೀಟಾಗಿ ನೋಟ್ಬುಕ್ಕಿನಲ್ಲಿ ಬರೆಯಲಾಗಿದ್ದಿತು. ಇಡೀ ಶಾಲೆ ನಗೆಯ ಹೊಳೆಯಲ್ಲಿ ತೇಲಿ ಹೋಯಿತು. ಹುಡುಗನಿಗೂ ನಗುವ ಮನಸ್ಸಾದರೂ ಕನ್ನಡಕದ ಒಳಗಿದ್ದ ಆ ಶಿಕ್ಷಕಿಯ ಪ್ರಖರ ಕಣ್ಣುಗಳು ಆತನ ಯಾವೊಂದು ಪ್ರತಿಕ್ರಿಯೆಯೂ ಹೊರಬಾರದಂತೆ ಹತ್ತಿಕ್ಕಿದ್ದವು. ಟೇಬಲ್ಲಿನ ಮೇಲಿದ್ದ ಬೆತ್ತದ ಕೋಲಿನಿಂದ ಕೈಮೇಲೆ ಒಂದೆರೆಡು ಪೆಟ್ಟುಗಳನ್ನು ಬಾರಿಸಿ ಅವರು ನೋಟ್ ಬುಕ್ಕನ್ನು ಹೊರಗೆಸೆದರು. 'ಹೋಗಿ ಹೋಂ ವರ್ಕ್ ಬರ್ಕೊ ಬಾ.. ಕತ್ತೆ' ಎಂದರು. ಪ್ರೀತಿಯಿಂದ ಕೊಂಡ ವರ್ಷದ ಮೊದಲ ಪುಸ್ತಕ ಗಾಳಿಯಲ್ಲಿ ತೇಲುತ್ತಾ ಕ್ಲಾಸ್ ರೂಮಿನ ಹೊರಬಂದು ಆದಿಯ ಮುಖಕ್ಕೆ ಬಡಿದಂತೆ ಭಾಸವಾಯಿತು. ಕಲ್ಪನಾ ಲೋಕದಲ್ಲಿ ಮುಳುಗಿದ್ದ ಆತನಿಗೆ ತನ್ನ ಬಾಲ್ಯವನ್ನು ನೆನೆದು ಮುಗುಳ್ನಗೆಯೊಂದು ಮೂಡಿತು.

ತಾನು ಅಂದು ಬರೆದಿದ್ದ ಚಲನಚಿತ್ರದ ಆ ಹೆಸರುಗಳು ಇಂದಿಗೂ ಆತನ ಮನದಲ್ಲಿ ಮರೆಯದೆ ಹಚ್ಚೋತ್ತಿವೆ.

'ಯಸ್..' ಗಡಸು ಧ್ವನಿಯಲ್ಲಿ ತನ್ನನ್ನು ಸಂಬೋಧಿಸಿ ಕರೆದ ಸದ್ದು ಸ್ಕೂಲಿನ PT ಮಾಸ್ಟರದ್ದು. ಕಪ್ಪಗೆ ಆರಡಿ ಉದ್ದದ ಆ ದೇಹಾಕಾಯ ಈಗಲೂ ಅದೇನೋ ಒಂದು ಬಗೆಯ ಭಯವನ್ನು ಹುಟ್ಟಿಸುತ್ತಿತ್ತು.

'ನಮಸ್ಕಾರ ಸಾರ್.. ಹೇಗಿದ್ದೀರಾ'

'ನಮಸ್ತೆ.. ಯಾರಪ್ಪ ನೀನು'

'ಮರ್ತ್ ಹೋಯ್ತಾ ಸಾರ್..ನಾನು ಆದಿ.. ಎಂಟ್ ವರ್ಷದ ಹಿಂದೆ ಇಲ್ಲೇ ಓದಿದ್ದೆ..'

'ಒಹ್ ಹೌದೇ.. ಒಳ್ಳೇದು.. ಎಲ್ಲಿದ್ದೀಯಪ್ಪ.. ಈಗ್ ಏನ್ ಮಾಡ್ತಾ ಇದ್ದೀಯ'

'ಡಿಗ್ರಿ ಓದ್ತಾ ಇದ್ದೀನಿ ಸಾರ್..'

'ಗುಡ್, ವೆರಿ ಗುಡ್. ನಮ್ ಸ್ಕೂಲ್ ಮಕ್ಳು ಹೀಗೆ ದೊಡ್ಡ್ ದೊಡ್ಡ್ ಕೋರ್ಸ್ ಓದಿ ನಮ್ ಶಾಲೆ ಹೆಸ್ರು ಉಳಿಸ್ಬೇಕು'

ಡಿಗ್ರಿಯನ್ನೂ ಒಂದು ದೊಡ್ಡ್ ಕೋರ್ಸ್ ಎನ್ನುವ ಅವರ ಮಾತನ್ನು ಕೇಳಿ ಆದಿಗೆ ತನ್ನ ಮೇಲೆಯೇ ಕರುಣೆ ಮೂಡಿತು!

'ಖಂಡಿತ ಸಾರ್. ನಿಮ್ಮಂತ ಶಿಕ್ಷಕರು ಈಗೆಲ್ಲಿ ಸಿಗ್ತಾರೆ.. ನಿಮ್ಮಂತ ಟೀಚರ್ಸ್ ಇರ್ದೆ ಹೋಗಿದ್ರೆ ನಾವೆಲ್ಲಿ ಇಷ್ಟ್ ಓದೋಕೆ ಆಗೋದು'

ಕೊಂಚ ಮುಗುಳ್ ನಕ್ಕ ಅವರು 'ಓದೋಕೆ ಒಳ್ಳೆ ಆಸಕ್ತಿ ಅನ್ನೋದು ಬೇಕಪ್ಪ .. ಅದ್ ಇಲ್ಲ ಅಂದ್ರೆ ಏನ್ ಮಾಡಿದ್ರೂ ಅಷ್ಟೇನೆ.. ನೀವೆಲ್ಲ ಆಸಕ್ತಿ ಕೊಟ್ಟು ಓದಿದಕ್ಕೆ ಈವಾಗ ಡಿಗ್ರಿ ತನಕ ಓದಿರೋದು' ಎಂದು 'ಅದ್ ಬಿಡಪ್ಪ, ಏನ್ ಬಂದಿದ್ದು ಈಗ? ಏನಾದ್ರು ಕೆಲ್ಸ ಇತ್ತ' ಎಂದು ಕೇಳಿದರು.

'ಹೌದು ಸಾರ್.. ಸ್ಟಡಿ ಸರ್ಟಿಫಿಕೇಟ್ ಬೇಕಿತ್ತು'

'ಹೌದೇ.. ಆದ್ರೆ ಹೆಡ್ ಮೇಡಂ ಇವತ್ತು ಬಂದಿಲ್ವಲ್ಲ..' ಎಂದು ಕೊಂಚ ಸುಮ್ಮನಾದ ನಂತರ

'ತೊಂದ್ರೆ ಇಲ್ಲ ಬಾ.. ನಾನೇ ಬರ್ದು ಸ್ಟ್ಯಾಂಪ್ ಹಾಕಿ ಕೊಡ್ತಿನಿ.. ಅದಕ್ಕಾಗಿ ಇನ್ನೊಂದ್ ದಿನ ಯಾಕ್ ಬರ್ತೀಯ' ಎಂದು ಆದಿಯನ್ನು ಆಫೀಸ್ ರೂಮಿನೊಳಗೆ ಕೊಂಡೊಯ್ದರು.

'ಯಾವ ಇಯರ್ ಅಪ್ಪ ನಿಂದು' ಎಂದು ತಮ್ಮ ಕನ್ನಡಕವನ್ನು ಸರಿಪಡಿಸಿಕೊಳ್ಳುತ್ತಾ ದೊಡ್ಡದಾದೊಂದು ರಿಜಿಸ್ಟರ್ ಬುಕ್ಕನ್ನು ತೆಗೆದು ನೋಡತೊಡಗಿದರು.

ಒಂದು ಕಾಲದಲ್ಲಿ ಶಾಲೆಗೇ ಬಾರದಿರಲು ನೆಪವೊಡ್ಡುತ್ತಿದ್ದ ಆದಿ ಈಗ ಪ್ರತಿ ದಿನವೂ ಆ ಶಾಲೆಗೆ ಬಂದು ಕೂರಲು ಅವಣಿಸುತ್ತಾನೆ. ಒಮ್ಮೆಲೇ ಇಡೀ ವ್ಯವಸ್ಥೆಯೇ ಬದಲಾಗಬಾರದೇಕೆ? ನಾವಿಲ್ಲಿಯವರೆಗೂ ಓದಿರುವುದನ್ನು ಯಾರಾದರೂ ಉಗ್ರಹೋರಾಟ ಮಾಡಿ ಅನರ್ಹಗೊಳಿಸಿ ನಮ್ಮೆಲ್ಲರನ್ನೂ ಪುನ್ಹ ಮೊದಲನೇ ತರಗತಿಯಿಂದ ಓದುವಂತೆ ಮಾಡಬಾರದೇಕೆ? ಆಗ ನನ್ನ ಆಗಿನ ಗೆಳೆಯರೆಲ್ಲರೂ ಮತೊಮ್ಮೆ ಸಿಗುವರು.

ಖುಷಿಯೂ ಬಹುಷಃ ಸಿಗುವಳು.

ಖುಷಿ. ಹೆಸರನ್ನು ನೆನಪಿಸಿಕೊಂಡಾಗಲೇ ಮೈಯ ರೋಮುಗಳೆಲ್ಲ ಎದ್ದು ನಿಂತವು ಆದಿಗೆ. ಇಂದು ತಾನು ನಿಂತಿದ್ದ ಜಾಗದಲ್ಲೇ ಸರಿಯಾಗಿ ಎಂಟು ವರ್ಷದ ಹಿಂದೆ ಕೊನೆಯ ಬಾರಿ ಆಕೆಯನ್ನು ನೋಡಿದ್ದ ನೆನಪು. ಏಳನೇ ತರಗತಿಯ ಪಬ್ಲಿಕ್ ಪರೀಕ್ಷೆಯ ನಂತರ ಮಾರ್ಕ್ಸ್ ಶೀಟನ್ನು ತೆಗೆದುಕೊಳ್ಳಲು ಕೊನೆಯಬಾರಿ ಹೋದಾಗ ಕಾಕತಾಳೀಯವೆಂಬಂತೆ ಆಕೆಯೂ ಅದೇ ಸಮಯಕ್ಕೆ ಬಂದಿದ್ದಳು. ಕಪ್ಪು ಬಣ್ಣದ ಬಟ್ಟೆಯ ಮೇಲೆ ಹರಿಶಿನ ಬಣ್ಣದ ನಕ್ಷತ್ರಗಳೂ ಅಥವಾ ಹರಿಶಿನ ಬಣ್ಣದ ಬಟ್ಟೆಯ ಮೇಲೆ ಕಪ್ಪು ಬಣ್ಣದ ಚಿಟ್ಟೆಗಳೋ ನೆನಪಿಗೆ ಬರುತ್ತಿಲ್ಲ. ಆದರೆ ಆಕೆಯ ನೆನಪು ಬಾರದ ದಿನಗಳೇ ಇರಲಿಲ್ಲ. ಕಲ್ಲಾಟ. ಬಿಡುವು ಸಿಕ್ಕಾಗೆಲ್ಲ ಆಕೆಯ ಜೊತೆಗೆ ಹತ್ತಾರು ಕಲ್ಲುಗಳು. ಕರ ಕರ ಸದ್ದನ್ನು ಮಾಡುತ್ತಾ, ಒಂದೊಂದೇ ಕಲ್ಲನ್ನು ಗಾಳಿಗೆ ಎಸೆಯುತ್ತಾ, ಕೈ ಬೆವತು ನೆಲದ ಮೇಲಿದ್ದ ದೂಳೆಲ್ಲ ಸೇರಿ ಕೊಳಕುಗೊಂಡ ಕೈಗಳಲ್ಲೇ ಒಂದರಹಿಂದೊಂದರಂತೆ ಆಕೆಯೊಟ್ಟಿಗೆ ಆಡಿದ ಆಟಗಳು ಅದೆಷ್ಟೋ. ಕಡೆಯ ಪಕ್ಷ ಅಂದಿನ ಒಂದೆರೆಡು ಕಲ್ಲುಗಳನ್ನು ನಾನು ಇಂದಿಗೂ ಕಾಪಾಡಿಕೊಂಡು ಬರಬೇಕಿತ್ತು ಎಂದುಕೊಳ್ಳುತ್ತಾನೆ ಆದಿ.

'ಇಲ್ಲಿದೆ ನೋಡು.. ಸಿಗ್ತು ಬಿಡು..' ಎಂದರು ಮೇಷ್ತ್ರು.

ಆದಿ ತನ್ನ ಹೆಸರಿನ ಪೇಜಿನಲ್ಲೇ ಇದ್ದ ಖುಷಿಯ ಹೆಸರನ್ನು ನೋಡಿದ. ಖುಷಿ, ರೋಲ್ ನಂಬರ್ 36.

ತನ್ನ ಬಳಿಯಿದ್ದ ಸ್ಟಡಿ ಸರ್ಟಿಫಿಕೇಟ್ ನ ಕಾಪಿಯನ್ನು ಅವರಿಗೆ ನೀಡಿದ ಆದಿ. ಅತ್ಯಂತ ನಾಜೂಕಾಗಿ ಏಕಾಗ್ರತೆಯಿಂದ ಅದನ್ನು ಬರೆದು ಶಾಲೆಯ ಸ್ಟ್ಯಾಂಪ್ ನ್ನು ಹಾಕಿ ತಮ್ಮದೇ ಸಹಿಯನ್ನು ಅದರಲ್ಲಿ ತಿದ್ದಿ ಕೊಟ್ಟರು. ಆಗಿನ ಬ್ಯಾಚಿನಿಂದ ಉಳಿದಿರುವ ಏಕೈಕ ಶಿಕ್ಷಕರು ಇವರು ಮಾತ್ರ ಎಂದು ಏಕೋ ಆದಿಯ ಮನಸ್ಸು ಕಸಿವಿಸಿಯಾಯಿತು. ಅವರಿಗಾಗಿ ಒಂದು ನೂರರ ನೋಟನ್ನು ಕೊಡುವ ಮನಸ್ಸಾದರೂ ಎಲ್ಲಿ ಅಬ್ಬರಿಸಿ ಕಿವಿಯಿಂಡುವರೋ ಎಂಬ ಭಯದಿಂದ ಆತ ಸುಮ್ಮನಾದ.

'ಸರಿ ಸಾರ್, ಬರ್ತೀನಿ. ತುಂಬ ಧನ್ಯವಾದ ' ಎಂದೇಳಿ ಆದಿ ಆಫೀಸ್ ರೂಮಿನಿಂದ ಹೊರನೆಡೆದ.

ಆಫೀಸ್ ರೂಮಿನ ಪಕ್ಕದಲ್ಲಿದ್ದ ಕಿಟಕಿಯ ಕಿಂಡಿ ಈಗಲೂ ಹಾಗೆಯೆ ಇದೆ. ಒಮ್ಮೆ ಅದರ ಮೂಲಕ ನೋಡುವ ಮನಸ್ಸಾಗಿ ಅದರ ಬಳಿಗೆ ಹೋದರೂ ಏಕೋ ಇಣುಕಿ ನೋಡುವ ಧೈರ್ಯ ಮಾತ್ರ ಸಾಲಲಿಲ್ಲ. ಹಾಗೆಯೇ ಮುನ್ನೆಡೆದು ತಾನು ಓದಿದ ತರಗತಿಗಳನ್ನೆಲ್ಲ ಒಳಗೆ ಕಣ್ಣಾಯಿಸಿ ಖುಷಿಯೊಟ್ಟಿಗೆ ಕಲ್ಲಾಟವಾಡುತ್ತಿದ್ದ ಜಾಗದಲ್ಲಿ ತುಸುಹೊತ್ತು ಸುಮ್ಮನೆ ಕೂತ.

****

‘ಹಾಯ್.. ಅವತ್ತು ನೀವ್ ಹೇಳಿದ್ದ ಬಿಸಿನೆಸ್ ಪ್ಲಾನ್ ಎಕ್ಸಲೆಂಟ್ ಆಗಿತ್ತು. Really a very good concept! You should keep working on it…’ ಎಲ್ಲಿಂದಲೋ ಪ್ರತ್ಯಕ್ಷನಾದವನಂತೆ ಲೊಕೇಶನ ಬಳಿಗೆ ಬಂದು ಹೇಳಿದ ಆದಿ.

ಒಮ್ಮೆ ಸೂಕ್ಶ್ಮವಾಗಿ ಆತನನ್ನು ಗಮನಿಸಿದ ಲೋಕೇಶ ‘ಹೌದು ಬಿಡಪ್ಪ.. ಇಡೀ ಕ್ಲಾಸ್ಗೆ ಗೊತ್ತಾಗ್ಲಿಲ್ಲ ಇನ್ ನಿಂಗೆ ಎಲ್ಲ ಗೊತ್ತಾಯ್ತ..? ಸುಮ್ನೆ ಅಟ್ಟ ಏರ್ಸ್ಬೇಡ..' ಆದಿಯ ಮಾತಿಗೆ ತೀರಾ ಉಡಾಫೆಯ ಉತ್ತರವನ್ನು ಕೊಟ್ಟ ಲೋಕೇಶ.

ತನ್ನ ಬಹುವಚನದ ಪ್ರೆಶ್ನೆಗೆ ಲೊಕೇಶನ ಏಕವಚನದ ಉತ್ತರ ಕೊಂಚ ಸಿಟ್ಟು ಮೂಡುವಂತೆ ಮಾಡಿದರೂ ಆದಿ ಸುಮ್ಮನಾದ.

'Zuckerberg ಫೇಸ್ಬುಕ್ ಕಂಡುಹಿಡಿದಾಗಲೂ ಕೆಲವು ಮಂದಿ ಹೀಗೆಯೇ ಅಂದಿದ್ದರು.. ನಿಮ್ಮ ಐಡಿಯಾ ಅದಕ್ಕೇನೂ ಕಮ್ಮಿ ಇಲ್ಲ..' ಈ ಬಾರಿ ಆದಿ ಬೇಕಂತೆಲೆ ಆತನನ್ನು ಅಟ್ಟಕ್ಕೇರಿಸಿದ.

ಆದರೆ ಲೋಕೇಶ ಈ ಬಾರಿ ಸೀರಿಯಸ್ನಾದ. ಆತನ ಮುಖ ಗಂಟುಕಟ್ಟಿತು. ಕೈಗಳೆರೆಡು ಪ್ಯಾಂಟಿನ ಜೇಬಿನೊಳಗೆ ಹೋದರೆ ಬುಜಗಳೆರಡು ಮೇಲೆದ್ದವು.

'I know bro, ಅದು ಒಳ್ಳೆ ಕಾನ್ಸೆಪ್ಟ್ ಅಂತ. ಆದ್ರೆ ಏನ್ ಮಾಡೋದು ಕೆಲವ್ರಿಗೆ ಅದೆಲ್ಲ ಅರ್ಥ ಆಗಲ್ಲ. ಅದೆಷ್ಟ್ ಜನ ಎಂಜಿನೀರ್ಸ್ ಇಂದು ಸರಿಯಾದ ಕೆಲ್ಸ ಸಿಗ್ದೆ ಬಿಪಿಒ, ಕಾಲ್ ಸೆಂಟರ್ ಗಳಲ್ಲಿ ಕೆಲ್ಸ ಮಾಡ್ತಾ ಇದ್ದಾರೆ. ಅವ್ರ ತಪ್ಪು ಅಲ್ಲಿ ಏನೂ ಇರಲ್ಲ. ಎಲ್ಲ ನಮ್ಮ್ ಸಿಸ್ಟಮ್ ಪ್ರಾಬ್ಲಮ್ ಅಷ್ಟೇ. ಸ್ಟೇಟ್ ಗೆ ಒಳ್ಳೆ ಕಾಲೇಜು ಅಂತಾರೆ ಆದ್ರೆ ಪ್ಲೇಸ್ಮೆಂಟ್ಸ್ ಗೆ ಒಳ್ಳೆ ಕಂಪನಿ ಕರೆದುಕೊಂಡು ಬರೋ ತಾಕತ್ತ್ ಇರಲ್ಲ. 100% ರಿಸಲ್ಟ್ ಅಂತಾರೆ ಆದ್ರೆ ಅಲ್ಲಿ ಪಾಸಾದ ಹಾರ್ಡ್ವೇರ್ ಇಂಜಿನಿಯರ್ ಅವ್ರ ಅಪ್ಪನಾಣೆ ಗೊತ್ತಿರದ ಸಾಫ್ಟ್ವೇರ್ ಕೆಲ್ಸ ಮಾಡೋಕ್ಕೆ ಹೇಳ್ತಾರೆ. ಇಲ್ಲಿ ವಿಷ್ಯ ಇರೋದು ರಿಸೋರ್ಸ್ ಗಳನ್ನು ಅಲೋಕೇಟ್ ಮಾಡೋಕಡೆ. ಸರಿಯಾದ ವಿದ್ಯಾರ್ಥಿಗೆ ಸರಿಯಾದ ಡೆಸ್ಟಿನೇಷನ್ ರೀಚ್ ಮಾಡಿಸೋ ಒಂದು ಗೈಡಿಂಗ್ ಪಾತ್ ಬೇಕಷ್ಟೆ. ವಾಟೆವರ್, ಸದ್ಯಕ್ಕೆ ಅದೆಲ್ಲ ನನ್ನಿಂದ ಅಂತೂ ಸಾಧ್ಯ ಇಲ್ಲ. As of now I’m concentrating on something else..' ಎಂದು ಸುಮ್ಮನಾಗುತ್ತಾನೆ.

'ಬಟ್ ನೀವೇನಾದ್ರು ಹಾಗೆ ಟ್ರೈ ಮಾಡೋದಿದ್ರೆ ನನ್ನ 100% ಸಪೋರ್ಟ್ ಇರುತ್ತೆ ' ಎಂದು ಮುಗುಳ್ ನಕ್ಕ ಆದಿ.

'ಥಾಂಕ್ ಯು ಬ್ರೋ ' ಎಂದ ಲೋಕೇಶ ಕಾಲೇಜಿನ ಟೆರೇಸಿನ ಮೇಲಿಂದ ಅಂತ್ಯವಿರದ ಅನಂತದಂತೆ ಚಾಚಿದ್ದ ಹಸಿರುಸಿರಿಯನ್ನೇ ನೋಡತೊಡಗುತ್ತಾನೆ. ಆದಿಶೇಷನೂ ಆಕೆಡೆಗೆ ಮೊಗ ಮಾಡುತ್ತಾನೆ.

'If you don’t mind, ನಿನ್ನ್ ಹತ್ರ ಒಂದು ಪ್ರೆಶ್ನೆ ಕೇಳ್ಬೇಕಿತ್ತು' ಲೋಕೇಶ ಕೇಳುತ್ತಾನೆ

'Sure..'

'ನೀನು ಯಾವಾಗಲು ಕ್ಲಾಸ್ ರೂಮಿನಲ್ಲಿ ಅಪ್ಸೆಟ್ ಆಗಿರ್ತಿಯ ಏಕೆ.. I have seen you crying many times..'

ಲೊಕೇಶನ ಅಚಾನಕ್ ಪ್ರೆಶ್ನೆಗೆ ಆದಿಗೆ ಉತ್ತರ ಬಾರದಂತಾಗಿ ಗಂಟಲು ಹಿಡಿದಂತಾಗುತ್ತದೆ. ಮುಂದೆ ಎಂದು ಮಾಡಬೇಕೆಂದು ತೋಚದೆ,

'Its nothing..' ಎಂದ ಆತ 'ಕ್ಲಾಸಲ್ಲಿ ಸಿಗೋಣ..' ಎನುತ ಅಲ್ಲಿಂದ ಬಿರಬಿರನೆ ನೆಡೆದು ಹೋಗುತ್ತಾನೆ.

ಅದೇ ಸಮಯಕ್ಕೆ ಈಕಡೆಯಿಂದ ಬಂದ ನನ್ನ 'ಹಾಯ್..' ಗೂ ಉತ್ತರಿಸದೆ ತಲೆ ಕೆಳಗಾಕಿಕೊಂಡು ಆತ ಟೆರೇಸಿನ ಮೆಟ್ಟಿಲಿನಿಂದಿಳಿದ.

'ಏನ್ ಎಳ್ದಪ್ಪ ಪುಣ್ಯಾತ್ಮ.. ಅವನ್ಯಾಕೆ ಹಾಗ್ ಹೊರಟೋದ' ಎಂದು ಲೊಕೇಶನನ್ನು ಕೇಳಿದೆ.

'ಏನಿಲ್ಲ ಬಿಡು.. ಬೈ ದ ವೆ ನಿನ್ನ್ ಹತ್ರ ಒಂದ್ ವಿಷ್ಯ ಮಾತಾಡ್ಬೇಕಿತ್ತು. ಗಲ್ಫ್ ದೇಶಗಳಲ್ಲಿ ಹೆಚ್ಚಾಗಿ ಉಪಯೋಗಿಸೋದು ಈಜಿಪ್ಟ್ and ಬ್ರೆಜಿಲ್ ಕಾಫಿ ಯು ನೋ ..'

‘So..?!’ ಎಂದ ನನಗೆ ಕೊಂಚ ದಿಗ್ಭ್ರಮೆಯಾಯಿತು.

‘ಅವ್ರಿಗೆ ನಮ್ಮ ಮಲೆನಾಡಿನ ಅಚ್ಚ ಕಾಫಿ ರುಚಿ ಗೊತ್ತಿರೋದೇ ಇಲ್ಲ ಮಚಿ. ಹುರಿದ ಪ್ಯೂರ್ ಕಾಫಿ ಬೀಜಕ್ಕೆ ಚಕೋರಿ ಪುಡಿಯನ್ನಷ್ಟೇ ಮಿಕ್ಸ್ ಮಾಡಿ ಆ ಸುಹಾಸನೆಭರಿತ ನಮ್ಮ ನ್ಯಾಚುರಲ್ ಕಾಫಿ ಎಲ್ಲಿ, ಗಾಜಿನ ಡಬ್ಬಿಯೊಳಗೆ ಹಕ್ಕಿಯ ಇಕ್ಕೆಗಳಂತೆ ಕಾಣುವ ಕಪ್ಪಾದ ಆ ಮಣ್ಣಿನ ಪುಡಿಗಳೆಲ್ಲಿ? ನಮ್ಮ್ ಕಾಫಿ, ನಮ್ಮ್ ಹೆಮ್ಮೆ. ಅಲ್ದೆ ಇಲ್ಲಿ ನಮ್ಮವರು ಐವತ್ತು ಕೆಜಿಯ ಒಂದು ಮೂಟೆಯಷ್ಟು ಕಾಫಿಯಲ್ಲಿ ಗಳಿಸೋದು ಅಮ್ಮಮ್ಮ ಎಂದ್ರೆ ಎಂಟರಿಂದ ಒಂಬತ್ತು ಸಾವಿರ. ಇನ್ನು ಖರ್ಚು-ಗಿರ್ಚು ಎಲ್ಲ ಕಳೆದು ಸಿಗೋದು ಹೆಚ್ಚೆಂದರೆ ಐದೇ ಐದು ಸಾವಿರ.. ಇದನ್ನ ಫಾರಿನರ್ಸ್ ಕೇವಲ 10% ಕಾಫಿಯಲ್ಲೇ ದುಡೀತಾರೆ ಮಚಿ! ಅಂದರೆ ಇಲ್ಲಿನ ಐವತ್ತು ಕೆಜಿ ಬ್ಯಾಗು ಅಲ್ಲಿ ಕಡಿಮೆ ಅಂದ್ರೂ 25 ಸಾವಿರ ರೂಪಾಯಿಗಳಿಗೆ ವ್ಯಾಪಾರ ಆಗುತ್ತೆ! ಕಸ್ಟಮ್ಸ್, ಷಿಪ್ಮೆಂಟ್ ಅಂತ ಎಲ್ಲ ಕಳದ್ರು ಒನ್ ಟು ಡಬಲ್ ಲಾಭ ಇದೆ. ಮೇಲಾಗಿ ಇಂಥಾ ಒಂದು ಬಿಸಿನೆಸ್ ಮಾಡೋದ್ರಿಂದ ನಮ್ಮ ಸಣ್ಣ ಹಾಗು ಅತಿ ಸಣ್ಣ ಕಾಫಿ ರೈತರನ್ನು ಉತ್ಕೃಷ್ಟ ಮಟ್ಟದ ಸಾವಯವ ಬೆಳೆಯನ್ನು ಬೆಳೆಯಲು ಉತ್ತೇಜಿಸಬಹುದಲ್ಲದೆ ಅವರ ಬೆಳೆಗೆ ಇಲ್ಲಿನ ಮಾರುಕಟ್ಟೆಗೂ ಹೆಚ್ಚಿನ ಬೆಲೆ ಸಿಗಲ್ವಾ?’

'ಬಾಸ್, ನಿನ್ನ ಕೈ ಮುಗೀತಿನಿ. ನೀನು ಸಿಯಮ್ಮೋ ಪಿಯಮ್ಮೋ ಆಗ್ಬೇಕಾದವನು ಇಲ್ಲಿ ಟೈಮ್ ವೇಸ್ಟ್ ಮಾಡ್ತಾ ಇದ್ದೀಯ ಅನ್ಸುತ್ತೆ. ಪ್ಲೀಸ್ ಚೇಂಜ್ ಯುವರ್ ಡೆಸ್ಟಿನೇಷನ್' ಎಂದಾಗ ಲೋಕೇಶ ಆತ್ಮಾಭಿಮಾನದ ನಗೆಯನ್ನು ಬೀರತೊಡಗಿದ.

'ತತ್ ನನ್ನ್ ಮಗ್ನೆ, ನಗಾಡೋದು ಬೇರೆ ನೋಡು. ಮಾಡೋಕ್ ಏನ್ ಕೆಲ್ಸ ಇಲ್ವಾ ನಿಂಗೆ. ಅಲ್ಲ, ಮನೇಲಿ ಕಷ್ಟ ಪಟ್ಟು ಓದೋ ಆಸಾಮಿ ಅಂತ ಕಳ್ಸಿದ್ರೆ ಇವ್ನ್ ಇಲ್ಲಿ ಬಿಸಿನೆಸ್ ಮಾಡ್ತಾನಂತೆ. ಲೋ ಮಹರಾಯ ಇನ್ನೂ ಟೈಮ್ ಉಂಟಪ್ಪ ಬಿಸಿನೆಸ್ ಮಾಡೋಕ್ಕೆ. ಮೊದ್ಲು ಈ ಕಾಲೇಜ್ ಅನ್ನೋ ಬಿಸಿನೆಸ್ ಅನ್ನು ಸರಿಯಾಗಿ ಮುಗ್ಸು. ಆಮೇಲೆ ನೋಡೋಣಂತೆ ನಿನ್ನ ಈ ಓವರ್ಸೀಸ್ ಬಿಸಿನೆಸ್ ಪ್ಲಾನ್ನ.' ಎಂದಾಗ ಆತನ ಮುಖ ಸೆಪ್ಪಗಾಯಿತು. ಸಿಟ್ಟಾದರೆ ಆಗಲಿ ಎಂದು ಸುಮ್ಮನಾದೆ.

'ಸರಿ ಬಿಡಪ್ಪ, ನಿಮ್ಗೆಲ್ಲಾ ನನ್ನ್ ಪ್ಲಾನ್ ಬಗ್ಗೆ ಎಲ್ಲಿ ಅರ್ಥ ಆಗುತ್ತೆ. zukerber ಏನ್ ಓದ್ ಮುಗ್ಸಿನೇ ಫೇಸ್ಬುಕ್ ಇನ್ವೆಂಟ್ ಮಾಡಿದ್ನ?'

ತುಸು ಹೊತ್ತಿನ ಮೊದಲು ಆದಿಯೇನಾದರೂ ಆ ಫೇಸ್ಬುಕ್ ಪಿತಾಮಹನ ಹೆಸರನ್ನು ಹೇಳಿರದಿದ್ದರೆ ಖಂಡಿತವಾಗಿಯೂ ಈ ನಾಮಪದ ನಮ್ಮ ಸಂಭಾಷಣೆಯಲ್ಲಿ ಮೂಡುತ್ತಿರಲಿಲ್ಲ!

'ಗುರುವೇ ತಮ್ಗೆ ಸಾಷ್ಟಾಂಗ ನಮಸ್ಕಾರ. ನಿಮ್ಮ್ ಅತ್ತೆ ಪಾಠ ಉಂಟು ಬಾ ಬೇಗ ಹೋಗಿ ಮಲ್ಗೋಣ.. ಅಲ್ಲಿ ನಿದ್ರೇಲಿ ಕನ್ಸ್ ಕಾಣ್ತಾ Zukerburg ನ ಕೇಳಂತೆ ' ಎಂದು ನಾನು ಟೆರೇಸ್ನಿಂದ ಕೆಳಗಿಳಿದೆ. ತಲೆಯನ್ನು ಕೆಳಗಾಕಿಕೊಂಡು ಲೋಕೇಶ ಶೂನ್ಯವನ್ನು ದೃಷ್ಟಿಸುವಂತೆ ನಿಂತಿದ್ದ.

ಆದಿ ಮೂವರಿಗೂ ಮೊದಲೇ ಸೀಟನ್ನು ಹಿಡಿದಿಟ್ಟಿದ್ದ. ನಾನು ಕೂತ ಎಷ್ಟೋ ಹೊತ್ತಿನ ನಂತರ ಲೋಕೇಶ ಕ್ಲಾಸ್ಸಿಗೆ ಬಂದ.

'ಮಚಿ, ಬಿಸಿನೆಸ್ ಕನ್ಫರ್ಮ್ಡ್. ನೆಕ್ಸ್ಟ್ ವೀಕ್ ಕಾಫಿ ಸ್ಯಾಂಪಲ್ ಅನ್ನು ಕಳಿಸ್ತಾ ಇದ್ದೀನಿ!'



****



ಈ ಸಿನಿಮಾ ಹಾಡುಗಳೇ ಒಂತರ ವಿಚಿತ್ರ. ಮೊದಮೊದಲು ತೀರಾ ಸಾಧಾರಣವೆನಿಸುವ ಹಾಡುಗಳು ಕೇಳುತ್ತಾ ಹೋದಂತೆ ಮನಸ್ಸಿಗೆ ಬಹಳ ಹಿಡಿಸಿಬಿಡುತ್ತವೆ. ಅದರೆ ಅದನ್ನೇ ಅತಿಯಾಗಿ ಕೇಳಿದರೆ ಅಮೃತವೂ ವಿಷವಾಗುವಂತೆ ಸಾಕು ಸಾಕೆನಿಸಿ ಮತ್ತೆಂದೂ ಕೆಳಬಾರದೇನೋ ಎನ್ನುವಷ್ಟು ಬೊರೊಡೆಯುತ್ತದೆ. ಆದರೆ ಈ ಹಿಂದೂಸ್ತಾನಿ ಸಂಗೀತವಿದ ಜಾದುವೆ ಬೇರೆ. ದಿನ, ರಾತ್ರಿ ಎನ್ನದೆ ಯಾವುದೇ ಸಮಯದಲ್ಲೂ ಯಾವ ಭಾವದಲ್ಲೂ ಸರಿಯೇ, ಕೇಳುತ್ತಾ ಹೋದರೆ ಆಧ್ಯಾತ್ಮಿಕ ತಪಸ್ಸಿಗೆ ಕೂತಂತೆ ಸುಖದ ಮತ್ತಿನಲ್ಲಿ ತೇಲಿ ತೇಲಿ ಮಾಯವಾಗುವುದಂತೂ ಸುಳ್ಳಲ್ಲ. ಆ ಸಂತೋಷಕ್ಕೆ ಪಾರವೇ ಇರುವುದಿಲ್ಲ. ರಾಗ ತಾಳ ಗಮಕಗಳೊಟ್ಟಿಗೆ ಮಧುರ ಧ್ವನಿಯೊಂದು ಸೇರಿದರಂತೂ ಸ್ವರ್ಗಕ್ಕೇ ಮೂರೇ ಗೇಣು.

'ಏನ್ ಕೇಳ್ತಿದ್ದೀಯ..?' ಪಕ್ಕದಲ್ಲಿ ಬಂದು ನಿಂತ ಆದಿಯ ಪ್ರೆಶ್ನೆ ನನಗೆ ಕೇಳದಂತಾಯಿತು. ಕಾರಿಡಾರಿನ ಪ್ಯಾರಾಫಿಟ್ ಗೋಡೆಗೆ ನನ್ನ ಕೈಯನ್ನು ಒರಗಿಸಿಕೊಂಡು ಇಯರ್ ಫೋನುಗಳೆರಡನ್ನೂ ಕಿವಿಗೆ ಹಾಕಿಕೊಂಡು ಭೀಮ್ ಪಲಾಸಿ ರಾಗವನ್ನು ಹೈ ವೊಲ್ಯೂಮ್ ನಲ್ಲಿ ನಾನು ಕೇಳುತ್ತಿದ್ದೆ. ತಿಂಗಳುಗಳ ಒಡನಾಟ ನಮ್ಮಲ್ಲಿ ಈಗ ಹೋಗು ಬಾ ಎನ್ನುವ ಮಟ್ಟಕ್ಕೆ ಬೆಳೆದಿದ್ದಿತು.

'ಏನಂದೆ?' ಇಯರ್ ಫೋನೊಂದನ್ನು ತೆಗೆದು ನಾನು ಕೇಳಿದೆ.

'ಯಾವ್ ಸಾಂಗ್ ಕೇಳ್ತಾ ಇದ್ದೀಯ ಅಂದೇ'

'ಸಾಂಗ್ ಎಲ್ಲ ಅಲ್ಲ, ರಾಗ ಕೇಳ್ತಾ ಇದ್ದೀನಿ'

'ಯಾರ್ ಹಾಡಿರೋದು'

'ಮೈ ಫವೆರೆಟ್, ಕೌಶಿಕಿ ಚಕ್ರಬೊರ್ತಿ'

'ಒಹ್.. ಬಂಗಾಳಿ ಸಿಂಗರ್'

ಹಿಂದೂಸ್ತಾನಿ ಸಂಗೀತವನ್ನು ಕೇಳಿ ಆಸ್ವಾದಿಸುವವರಿಗೆ ತಾವುಗಳು ನೂರರಲ್ಲಿ ಒಬ್ಬರು ಎಂಬೊಂದು ಸಣ್ಣ ಅಹಃ ಇರುತ್ತದೆ. ಹಾಗಿರುವಾಗ ಎದುರಿಗಿರುವವರು ಹೀಗೆ ಹಿಂದೂಸ್ತಾನಿ ಸಂಗೀತಗಾರರ ಹೆಸರೊಂದನ್ನು ಹೇಳಿ, ಆ ಗಾಯಕ ಅಥವಾ ಗಾಯಕಿಯ ಊರು ಅಥವಾ ಸ್ಥಳದ ಬಗ್ಗೆ ಹೇಳಿದರಂತೂ ಆಗುವ ಆನಂದ ಹೇಳತೀರದು.

'ಯಸ್.. ನೀನೂ ಅವ್ರನ್ನು ಕೇಳ್ತಿಯಾ?'

'ಹೌದು, ಆಗಾಗ.. ತುಂಬಾನೇ ಹೆಚ್ಚಿನ ಸಂಗೀತ ಜ್ಞಾನ ಇರುವವರು ಆಕೆ.. ವಾಯ್ಸ್ ಅಂತೂ ಮಾರ್ವೆಲಸ್!' ಎಂದ ಆದಿ

ತುಸು ಸಮಯದ ನಂತರ,

'ನಾಲ್ಕ್ ಲೈನಿನ ಮೂವಿ ಸಾಂಗ್ಸ್ ಹಾಡಿಗೇ ಸಂಗೀತದ ಆ ಪ್ರಶಸ್ತಿ ಈ ಪ್ರಶಸ್ತಿ ಅಂತ ತಗೋಣೊರು ಅದೇ ಸಂಗೀತದ ಇಂತಹ ಒಂದೆರೆಡು ರಾಗಗಳನ್ನು ಹಾಡಿ ತೋರಸ್ಲಿ ನೋಡಣ..' ನಾನೆಂದೆ.

'ಅದೂ ನಿಜ..ಹೆಚ್ಚಾಗ್ತಿರೋ ಮೂವಿ ಸಾಂಗ್ಸ್ ಗಳಿಂದ ನಿಜವಾದ ಸಂಗೀತ ಏನಂತಾನೆ ಜನ ಮರೀತಾ ಇದ್ದಾರೆ. ಆದ್ರೆ ಇತ್ತೀಚಿನ ಯೂಥ್ ಸಾಂಗ್ ಗಳೇನೂ ಕಳಪೆ ಅನ್ನೋಕ್ಕಾಗಲ್ಲ. ಅಲ್ಲಿ ಏನಿಲ್ಲ ಅಂದರೂ ಒಂದು ಪವರ್ಫುಲ್ ಎನರ್ಜಿ ಇದೆ. ಆದ್ರೆ ಆ ಎನರ್ಜಿನ ಸರಿಯಾದ ಕಡೆ ಡೈವರ್ಟ್ ಮಾಡ್ಕೊಂಡ್ರೆ things would be much much better.' ಎಂದ ಆದಿಯ ಮಾತಿಗೆ,

'Whatever.. ಅವ್ರ್ ಅದೇನೇ ಚೆನ್ನಾಗಿ ಹಾಡ್ಲಿ, ಆದ್ರೆ ಆ ವಿಚಿತ್ರ ಡ್ರೆಸ್ಸು, ಪ್ರಿಡೇಟರ್ ತರ ಹುಚ್ಚ್ ಹುಚ್ಚಾಗಿ ಬಿಡೋ ಕೂದ್ಲು, ಗಡ್ಡ ಇವನ್ನೆಲ್ಲ ನೋಡಕ್ಕಂತೂ ಆಗಲ್ಲ.. ಇತ್ತೀಚಿಗೆ ಮ್ಯೂಸಿಕ್ ಮೇಲೆ ದೊಡ್ಡವರಿಗೆ ಇಂಟರೆಸ್ಟ್ ಹೋಗಿರೋದೇ ಇದಕ್ಕೆ ಅನ್ಸುತ್ತೆ.. ಅದೇ ಮ್ಯೂಸಿಕ್ ನ ನೀಟಾಗಿ ಬಂದು ಹಾಡಿದ್ರೆ ಕಷ್ಟನೋ ಸುಖಾನೋ ಒಂದ್ ಸ್ವಲ್ಪ ಜನ ಆದ್ರೂ ಕೇಳೋಕ್ಕೆ ಟ್ರೈ ಮಾಡ್ತಾರೆ'

ಸಂಗೀತದ ಬಗೆಗೆ ಮಾತಾಡುತ್ತಾ ಸಮಯ ಜರುಗಿದ್ದೆ ತಿಳಿಯಲಿಲ್ಲ. ಆದಿ ಹೊರಗಿನಿಂದ ನೋಡಲು ತೀರಾ ಸಾಧಾರಣದವನಂತೆ ಕಂಡರೂ ಒಳಗಿನಿಂದ ತೀರಾ ಬುದ್ದಿವಂತ. ದೇಶ ವಿದೇಶಗಳ ಹಾಗು ಹೋಗುಗಳು, ಸಾಮನ್ಯ ಜ್ಞಾನ, ಸಂಗೀತ, ಸಾಹಿತ್ಯ ಅಲ್ಲದೆ ಶೈಕ್ಷಣಿಕವಾಗಿಯೂ ಆತ ಪ್ರತಿಭಶಾಲಿ. ಆದ್ರೆ ತುಂಬಾನೇ ಮಂಕು ಜೀವಿ. ಯಾಕಪ್ಪ ಏನ್ ನಿನ್ ಪ್ರಾಬ್ಲಮ್ಮು ಎಂದು ಹೆಗಲ ಮೇಲೆ ಕೈಯಾಕಿ ಕೇಳಿದರೂ ಏನು ಹೇಳುವುದಿಲ್ಲ. ನನ್ನ ಹಾಗು ಲೋಕೇಶನೊಟ್ಟಿಗೆ ಬಿಟ್ಟರೆ ಬೇರೆಯವರೊಟ್ಟಿಗೆ ಮಾತನಾಡುವುದೇ ಕಡಿಮೆ. ಪಾಠವನ್ನು ಕೇಳದೆಯೇ ಇಂಟರ್ನಲ್ಸ್ ಗಳಲ್ಲಿ ಪಾಸಾಗಿ ನಮ್ಮನ್ನೂ ಪಾಸ್ ಮಾಡಿಸುವ ಈತ ಏನಾದರು ಫಸ್ಟ್ ಬೆಂಚಿನ ವಿದ್ಯಾರ್ಥಿಗಳಂತೆ ಓದಿದರೆ ಯೂನಿವರ್ಸಿಟಿಗೇ ಟಾಪರ್ ಆಗುವುದರಲ್ಲಿ ಸಂಶಯವೇ ಇಲ್ಲ.

'ಆದಿ, ನಿನ್ನ್ ಅತ್ತಿಗೆ ಬಂದ್ಲು ನೋಡು..' ಕ್ಲಾಸ್ ರೂಮಿಗೆ ವಾಪಸ್ಸಾಗುವಾಗ ಆಕಡೆಯಿಂದ ಬಂದ ಹುಡುಗಿಯೊಬ್ಬಳನ್ನು ಕಂಡು ನಾನು ಹೇಳಿದೆ. ಆಕೆಯ ಅಂದವಾದ ಮೈಮಾಟದ ಜೊತೆಗೆ ಬಿಳಿಬಣ್ಣದ ಚೂಡಿದಾರದ ಕೆಂಪು ಹೂವುಗಳ ಪೋಣಿಸುವಿಕೆ ಎಂತವರನ್ನೂ ಆಕೆಯೆಡೆಗೆ ನೋಡುವಂತೆ ಮಾಡುತ್ತಿದ್ದವು. ತನ್ನ ಕೂದಲನ್ನು ಸಿಂಪಲ್ಲಾಗಿ ಹಿಂದಕ್ಕೆಳೆದು ಕಟ್ಟಿ ಸಾಧಾರಣವಾದ ಕಿವಿಯ ಓಲೆಗಳನ್ನು ಧರಿಸಿದ್ದರೂ ಕಾಮನಬಿಲ್ಲಿನಂತಹ ಆ ಬಾಗಿದ ಹುಬ್ಬುಗಳು ಹಾಗು ದೃಷ್ಟಿ ನೆಟ್ಟರೆ ಸರಿಸಲಾಗದಂತಹ ಮಲ್ಲಿಗೆಯಂತಹ ಆ ಕಣ್ಣುಗಳು ಆಕೆಯನ್ನು ಅಪ್ಸರೆಯನ್ನಾಗಿ ಮಾಡಿದ್ದವು.

ಕೌಶಿಕಿಯ ಭೀಮ್ ಪಲಾಸಿ ರಾಗ ಮುಗಿದು ಲತಾ ಮಂಗೇಶ್ಕರರ 'ಬಾಹೋ ಮೇ ಚಲೇ ಆಹೋ ..' ಹಾಡು ಇಯರ್ ಫೋನುಗಳಿಂದ ಮೂಡಿತು. ಸಂದರ್ಭಕ್ಕೆ ತಕ್ಕ ಸಂಗೀತ ನನ್ನ ಒಲವಿನ ಕವಿಯನ್ನು ಜಾಗೃತಗೊಳಿಸಿತು

'ಚೆನ್ನಾಗಿದ್ದಾಳೆ..' ಆದಿ ಏನೋ ಹೇಳಬೇಕಲ್ಲ ಎನ್ನುವಂತೆ ಹೇಳಿದ.

'ಲೋ.. ನಿನ್ ಅತ್ತಿಗೆ ಅವ್ಳು.. ಅವ್ಳ್ ನನಿಗ್ ಮಾತ್ರ ಚೆನ್ನಾಗ್ ಕಾಣ್ ಬೇಕು ತಿಳಿತಾ' ಎಂದು ಬೆದರಿಸುವ ಧ್ವನಿಯಲ್ಲಿ ಹೇಳಿದೆ.

'ಸರಿ ಬಿಡಪ್ಪ' ಎನುತ ಆತ ಕ್ಲಾಸ್ ರೂಮಿನೊಳಗೆ ನೆಡೆದ. ನಾನು ಹೆಸರರಿಯದ ಆದಿಯ ಅತ್ತಿಗೆಯನ್ನು ಹಿಂಬಾಲಿಸಿದೆ.

'Excuse Me..'

'Yes..'

'ನೀವು ರಾಧ ಅಲ್ವ..?'

ನನ್ನ ಮುಖದ ಮೇಲಿನ ಕಳ್ಳ ನಗೆಯನ್ನು ಕಂಡು ಆಕೆ ತನ್ನ ಕೈಗಳೆರಡನ್ನು ಕಟ್ಟಿ ತೀಕ್ಷ್ಣ ದೃಷ್ಟಿಯಿಂದ ನನ್ನನ್ನು ನೋಡಿದರು.

'ಹೌದು, ಏನಿವಾಗ?'

'ನಿಮ್ಮ್ ಹತ್ರ ಏನೋ ಹೇಳ್ಬೇಕಿತ್ತು'

'ಹೌದೇ, ಹಾಗಾದ್ರೆ ಫೋನ್ ನಂಬರ್ ಬೇಕು ಅನ್ಸುತ್ತೆ'

'Actually, it's about my friend '

'Oh, ಏನಾಗ್ಬೇಕಂತೆ ನಿಮ್ ಫ್ರೆಂಡ್ಡಿಗೆ..?'

'ಅವ್ರಿಗೆ ಒಬ್ಳು ಅತ್ತಿಗೆ ಬೇಕಂತೆ'

ಸುಮ್ಮನಾದ ಆಕೆ ತುಸು ಮುಗುಳ್ ನಕ್ಕಳು.

'ರೀ ಮಿಸ್ಟರ್, ಅಷ್ಟ್ ಒಳ್ಳೆ ಸ್ಕಿಟ್ ಬರೀತೀರಾ, ಯಾಕ್ರೀ ನಿಮ್ಗೆ ಇವೆಲ್ಲ, ಒಳ್ಳೆ ಪೊರ್ಕಿ ತರ '

ಕೊಡಲೇ ನನ್ನನ್ನು ಯಾರೋ ರೆಕ್ಕೆ ಪುಕ್ಕವನ್ನು ಕಟ್ಟಿ ಆಕಾಶಕ್ಕೆ ತೇಲಿಬಿಟ್ಟಂತಹ ಅನುಭವವಾಯಿತು. Juniors Art Exploration ಅನ್ನೋ ragging ನಿಯಮಕ್ಕೆ ನಾಟಕವನ್ನು ಆಡಿ ಸೀನಿಯರ್ಸ್ಗಳಿಂದ ಬೈಸಿಕೊಂಡಿದ್ದ ಮಹಾನ್ ಕಾರ್ಯವನ್ನು ಈಕೆ ಒಳ್ಳೆಯ ಸ್ಕಿಟ್ ಎಂದೇಳಿ ನನ್ನ ಮನದೊಳಗೆ ಸುಪ್ತವಾಗಿದ್ದ ಬರಹಗಾರನೊಬ್ಬನ್ನನ್ನು ಪುಟಿದು ನಿಲ್ಲಿಸಿದಳು . ಬೈ ದಿ ವೆ, ಅವತ್ತು ragging ಎಂದು ಬಂದಿದ್ದ ಅಷ್ಟೂ ಮಂದಿಯೂ ನಮ್ಮ ಸೀನಿಯರ್ಸ್ಗಳೇ! ಏಕೋ ಎದೆ ಒಂದೇ ಸಮನೆ ಬಡಿದುಕೊಳ್ಳತೊಡಗಿತು.

ಆರಡಿ ಎಂಟಡಿ ಎತ್ತರದ ಸೀನಿಯರ್ಸ್ ಎಂಬ ದಾಂಡಿಗರ ಗುಂಪಿನವಳೇ ಇವಳು? ಆದರೂ ನಾನು ಕೂಡಲೇ ಸೋಲನೊಪ್ಪಿಕೊಳ್ಳಲಿಲ್ಲ.

'ಮೀನಿಂಗ್ ಫುಲ್ ಸ್ಕಿಟ್ ಬರಿಯೋರು flirt ಮಾಡಬಾರ್ದು ಅಂತ ರೂಲ್ಸ್ ಏನಾದ್ರೂ ಇದಿಯಾ, ರಾಧಾ' ಸಾಧ್ಯವಾದಷ್ಟು ನಾಜೂಕಾಗಿ ಆಕೆಯ ಹೆಸರನ್ನು ಕೂಗಿದೆ.

'ಒಹ್, So you are here to flirt with me, uh'

'if you wish so'

'What’s your name you said'

'ಕೃಷ್ಣಾ..!'

ಆಕೆ ಈ ಬಾರಿ ಜೋರಾಗೆ ನಕ್ಕುಬಿಟ್ಟರು.

'ರಾಧಾ - ಕೃಷ್ಣ, ಚೆನ್ನಾಗಿರುತ್ತೆ ಅಲ್ವಾ..?' ಈ ಬಗೆಯ ಪ್ರತ್ಯುತ್ತರ ಕೊಟ್ಟ ಧೈರ್ಯಕ್ಕೆ ನನಗೆ ನನ್ನ ಮೇಲೆಯೇ ಅಭಿಮಾನ ಮೂಡಿತು.

'ಒಹ್ ರಿಯಲಿ, ಬನ್ನಿ ಹಾಗಾದ್ರೆ. ನಿಮ್ಮನ್ನ ಗೋಪಿಕೆಯರೊಟ್ಟಿಗೆ ಇಂಟ್ರಡ್ಯೂಸ್ ಮಾಡಿಸ್ತೀನಿ ' ಎಂದು ಆಕೆ ಮುನ್ನೆಡೆದರು.

ಕ್ಲಾಸ್ಸು ಗೀಸು ಎಲ್ಲ ಇರ್ಲಿ ಆಕಡೆ ಎನುತ ನಾನು ಆಕೆಯನ್ನು ಹಿಂಬಾಲಿಸಿದೆ. ಆಕೆ ಮೊದಲ ಮಹಡಿಯ ಮೆಟ್ಟಿಲನ್ನು ಏರಿದರು. ಅಂದುಕೊಂಡಂತೆ ಏಳನೇ ಸೆಮಿಸ್ಟರ್ ನ ಸೀನಿಯರ್ಸ್ ಕ್ಲಾಸ್ಸನ್ನು ಪ್ರವೇಶಿಸಿದರು. ನಾನು ಧೈರ್ಯ ಮಾಡಿ ಒಳನುಗ್ಗಿದೆ. ಆದರೆ ಆಕೆ ಕ್ಲಾಸ್ ರೂಮಿನ ಒಳ ಹೊಕ್ಕಂತೆಯೇ ಕ್ಲಾಸಿನ ಅಷ್ಟೂ ವಿದ್ಯಾರ್ಥಿಗಳು, ಆರಡಿ ಏಳಡಿ ಉದ್ದದ ದಾಂಡಿಗರೂ ಸೇರಿ, ಎದ್ದು ನಿಂತರು!!

'ಸಿಟ್ ಡೌನ್ ಕ್ಲಾಸ್..' ಎಂದು ಆಕೆ ನನ್ನೆಡೆಗೆ ಮೊಗ ಮಾಡಿದ ತಡವೇ ನಾನು ಕೂಡಲೇ ಮುಂದೊದಗುವ ಅಪಾಯವನ್ನು ಅರಿತು ಚಂಗನೆ ಅಲ್ಲಿಂದ ನೆಗೆದು ಓಟ ಕಿತ್ತೆ. ಅಲ್ಲಿಂದ ಓಡಲು ಶುರು ಮಾಡಿ ಹಾಸ್ಟೆಲ್ಲಿನ ನನ್ನ ರೂಮನ್ನು ಸೇರಿದವ ಮುಂದಿನ ಒಂದು ವಾರಗಳವರೆಗೆ ಕಾಲೇಜಿನ ಮುಖವನ್ನು ಮತ್ತೊಮ್ಮೆ ನೋಡಲಿಲ್ಲ!!

**

'ಅಯ್ಯೋ.. ಉಫ್.. ಸಾಕಪ್ಪ ಸಾಕು.. ಇನ್ ನಂಗ್ ನಗಾಡೋಕ್ ಆಗಲ್ಲ..' ನನ್ನ ಹಾಗು ಮೇಡಂ ರಾಧಾರ ಸಂಕ್ಷೀಪ್ತ ಲವ್ ಸ್ಟೋರಿಯನ್ನು ಕೇಳಿ ಲೋಕೇಶ ಗಹಗಹನೇ ನಗತೊಡಗಿದ. ಆದಿಯ ಮುಖದಲ್ಲೂ ಒಂದು ಮಂದಹಾಸ ಮೂಡಿತ್ತು.

'ಆ ಸೀನಿಯರ್ ದಾಂಡಿಗರನ್ನು ನೋಡ್ಬೇಕಿತ್ತು ಆದಿ, ಒಳ್ಳೆ ಪಿಎಂಗೆ ಇರೋ ಬಾಡಿ ಗೌರ್ಡ್ಸ್ ತರ ನನ್ನನೇ ಗುರಾಹಿಸ್ತಾ ಇದ್ರು.. ರಾಧಾ ಏನ್ ಅವ್ರಪ್ಪನ ಮನೆ ಪ್ರಾಪರ್ಟಿನ?'

'ಹೌದು ಗುರು ಅದ್ ಅವರಪ್ಪನ್ಮನೆ ಪ್ರಾಪರ್ಟಿನೇ ಇರಬಹದು..ಯಾರಿಗೊತ್ತು, ಅವರಷ್ಟೂ ಜನಕ್ಕೆ ಈಕೆ ಸಾಮೂಹಿಕವಾಗಿ ರಾಕಿ ಕಟ್ಟಿರ್ಬೇಕು' ಎಂದಾಗ ಎಲ್ಲರು ಒಟ್ಟಿಗೆ ನಕ್ಕೆವು.

ವಿಚಿತ್ರವೆಂಬಂತೆ ಕಾರಿಡಾರಿನ ಒಂದು ಮೂಲೆಯಲ್ಲಿ ನಿಂತು ನಾವುಗಳು ನಗುವಾಗ ರಾಧಾ ದೂರದಲ್ಲಿ ನಿಂತು ನಮ್ಮನ್ನು, especially ನನ್ನನ್ನು ಸಿಟ್ಟಿನ ಕಣ್ಣುಗಳಿಂದ ನೋಡುತ್ತಿದ್ದರು. ಆಕೆಯ ತೀಕ್ಷ್ಣ ದೃಷ್ಟಿ ನನ್ನ ಗೆಳೆಯರಿಬ್ಬರು ಧಿಕ್ಕಾಪಾಲಾಗಿ ಓಟ ಕೀಳುವಂತೆ ಮಾಡಿತು. ಆಕೆ ನನ್ನ ಬಳಿಗೆ ಬಂದು ನಿಂತರು. ಇಡೀ ಕ್ಲಾಸ್ಸಿನ ಮುಂದೆ ಕಕ್ಕಾಬಿಕ್ಕಿಯಾಗಿ ಓಡಿ ವಾರಗಟ್ಟಲೆ ಮರೆಯಾಗಿದ್ದ ನನಗೆ ನಾಚಿಕೆಯಲ್ಲಿ ಮಿಂದು ಎದ್ದಂತಹ ಅನುಭವ. ಎಲ್ಲಿ ಆಕೆ ಆ ವಿಷಯವನ್ನು ಪ್ರಸ್ತಾಪಿಸಿ ನನ್ನ ನಿಂತಲ್ಲೇ ಕೊಲ್ಲುತ್ತಾಳೋ ಎಂದುಕೊಂಡೆ. ಆದರೆ ನನ್ನ ಬಳಿಗೆ ಬಂದ ಆಕೆ ದೂರದ ಕಾಡುಗಳನ್ನು ಧಿಟ್ಟಿಸುತ್ತಾ,

'ಪ್ರೀತಿ ,ಪ್ರೇಮ ಎಂಬುದೆಲ್ಲ ತೀರಾನೆ Illogical. Ultimate goal of a couple is making their next generation. That’s what the world wants. That’s what the creator want us to do.. ' ನನ್ನ ಸ್ಕೀಟ್ಟಿನ ಒಂದೆರೆಡು ಸಾಲುಗಳನ್ನು ಆಕೆ ಹೇಳಿದಳು. ತೀರಾ ಕಳಪೆಯಾದ ನಾಟಕ ಅಂದುಕೊಂಡಿದ್ದರೂ ಲೆಕ್ಚರರ್ ಒಬ್ಬರು ಅದರ ಸಾಲುಗಳನ್ನೂ ನೆನಪಿಟ್ಟುಕೊಂಡಿರುವರು ಎಂಬುದನ್ನು ಕಂಡು ನನಗೆ ಖುಷಿಯಾಯಿತು. ಇನ್ ಫ್ಯಾಕ್ಟ್ ಒಂದು ಬಗೆಯ ಅಹಂ ಮೂಡಿತು!

ನಂತರ 'ಅವತ್ತೇನಾದ್ರೂ ನೀವು ಹಿಂಗೇ ಸಿಕ್ಕಿದ್ರೆ ಕೆನ್ನೆ ಮೇಲೆ ನಾಲ್ಕ್ ಬಾರ್ಸ್ಬಿಡ್ತಿದ್ದೆ!!' ಎಂದರು.

ಈಕೆ ಯಾಕಪ್ಪ ಹೀಗೆ ಕನ್ಫ್ಯೂಸ್ ಮಾಡ್ತಾ ಇದ್ದಾರೆ ಅಂದುಕೊಂಡೆ. ರಾಧಾ ಮೇಡಂ, ಮೇಡಂ ಆದ್ರೂ ಅತಿ ಯಂಗ್ ಹುಡುಗಿ. I mean ನನಗಿಂತ ಹೆಚ್ಚೆಂದರೆ ನಾಲ್ಕು ವರ್ಷ ದೊಡ್ಡವರಿರಬಹುದು. ಯಾಕೋ ನಮ್ಮ ಗುರು ಸಚಿನ್ ತೆಂಡೂಲ್ಕರ್ ನೆನಪಾದರು. ಮನದೊಳಗೆ ಅವರನ್ನು ನೆನೆದು ನಾನು ಮುಂದುವರೆದೆ.

'ಇವಾಗಲೂ ನನ್ನ ಕೆನ್ನೆ ಇಲ್ಲೇ ಇದೆ, ರಾಧಾ..ಮೇಡಂ..'

'See, You know that flirting leads to Love.. According to you if love is illogical, then why the hell is this .. uh ' ಎಂದು ಗದರಿಸುತ್ತ ಕೇಳಿದರು. ಈಕೆ ಬಂದಿರುವುದು ಇಂಟೆಲ್ಲೆಕ್ಟುಲಿಟಿಯ ಬಗೆಗಿನ ಕಷ್ಟದ ಚರ್ಚೆ ಮಾಡಲು ಎಂದು ಅರಿತು ನನಗೆ ಬೇಸರವಾಯಿತಾದರೂ ನಾನು ಅದನ್ನು ತೋರ್ಪಡಿಸಲಿಲ್ಲ. ಒಂದು ಪಕ್ಷ ನಾನೇನಾದರೂ ಇಲ್ಲಿ ಸೋತರೆ ಖಂಡಿತವಾಗಿಯೂ ಮುಂದೆಂದೂ ಆಕೆಯ ಮುಂದೆ ತಲೆಯೆತ್ತೆನು. ಆಕೆಯ ಏರುಧ್ವನಿ ದೂರದಲ್ಲಿ ನೆಡೆದುಕೊಂಡು ಹೋಗುತ್ತಿದ್ದ ಹುಡುಗಿಯರಿಬ್ಬರನ್ನು ನಮ್ಮೆಡೆಗೆ ನೋಡುವಂತೆ ಮಾಡಿತು. ಕ್ಲಾಸಿನಲ್ಲಿ ಫೇಲ್ ಆಗಿದ್ದರಿಂದ ಶಿಕ್ಷಕರು ವಿದ್ಯಾರ್ಥಿಗೆ ಬೈಯುತ್ತಿದ್ದಾರೆಂದು, ಎಲ್ಲಿ ತಮ್ಮನ್ನೂ ಕರೆದು ನಮ್ಮ ಮಾರ್ಕ್ಸ್ ಗಳನ್ನು ಕೇಳಿಯಾರು ಎನುತ ಅವರು ಬಿರಬಿರನೇ ಅಲ್ಲಿಂದ ನೆಡೆದರು.

‘ಗುರಿಯ ದಾರಿಯಲ್ಲಿ ನೆಡೆಯುವಾಗ ಗುರಿಯೊಂದೇ ಮುಖ್ಯವಾಗಿರುತ್ತದೆ. ಉಸಿರಿರಾಡುವ ಗಾಳಿ, ಕುಡಿಯುವ ನೀರು ಹಾಗು ಆಹಾರ ಪ್ರಮುಖವಾಗಿರುದಿಲ್ಲ. ಹಾಗಂತ ಊಟ, ಗಾಳಿ ಹಾಗು ನೀರನ್ನು ಸೇವಿಸದೇ ಗುರಿಯನ್ನೂ ತಲುಪಲಾಗುವುದಿಲ್ಲ you know. ಈ ಫ್ಲರ್ಟು ಲವ್ವು ಎಲ್ಲ ಒಂತರ ಫುಡ್ ಅಂಡ್ ಆಕ್ಸಿಜನ್ ಇದ್ದ ಹಾಗೆ. ನಿಮ್ಮ ಜೀವನದ ಅಲ್ಟಿಮೇಟ್ ಗುರಿ ಅದಂತೂ ಅಲ್ಲವೇ ಅಲ್ಲ. ಪ್ರತಿಯೊಬ್ಬರ ಜೀವನಕ್ಕೂ ಒಂದೊಂದು ಗುರಿ ಇದ್ದೇ ಇರುತ್ತದೆ ರಾಧಾ. ವಿಪರ್ಯಾಸವೆಂಬಂತೆ ಲಕ್ಷಕ್ಕೊಬ್ಬರೋ ಇಬ್ಬರೋ ಮಾತ್ರ ಅದನ್ನು ಅರಿತುಕೊಳ್ಳುತ್ತಾರೆ. ' ಎಂದೋ ಬರೆದಿದ್ದ ಅರೆ ಬರೆ ನೆನಪಿದ್ದ ಸಾಲುಗಳನ್ನು ನಾನು ಉಸುರಿದೆ.

ನಂತರ ಒಂದಿಷ್ಟು ಮೌನ.

ನಾನು ಏನಂದೆ ಎಂದು ನನಗೇ ಬಹುಷಃ ತಿಳಿಯಲಿಲ್ಲ. ಆಕೆ ಏನಾದರೂ 'Could you please explain it once again' ಎಂದಿದ್ದರಂತೂ ನನ್ನ ಮಾತೇ ನಿಂತು ಹೋಗಿರುತ್ತಿತ್ತು! ದೇವರ ಕೃಪೆಯಿಂದ ಆಗ ಬೆಳಗಿನ ಪಿರಿಯಡ್ ಒಂದು ಮುಗಿದು ವಿದ್ಯಾರ್ಥಿಗಳೆಲ್ಲ ಹೊರ ಬಂದರು. ಆಕೆ ಏನೂ ಕೇಳುವಂತೆ ಮಾಡಿ 'will discuss it some other time' ಎಂದು ಅಲ್ಲಿಂದ ಬಿರಬಿರನೆ ಹೊರಟು ಹೋದರು. ನನ್ನ ಮಾತಿನ ಮೋಡಿಗೆ ನನ್ನನ್ನು ಕಾಣಲು ಬಂದಿದ್ದಾರೆ ಎಂದುಕೊಂಡವನಿಗೆ, ಸೀನಿಯರ್ಸ್ ಗಳ ಕಾಟವನ್ನು ತಡೆಯಲೋಗಿ ಏನೋ ಗಿಜುಗಿ ಬರೆದಿದ್ದ ನಾಟಕದ ಸಾಲುಗಳ ತಪ್ಪನು ತಿದ್ದಲಷ್ಟೇ ಬಂದಿದ್ದಾರೆ ಎಂದರಿತು ಒಂದೆಡೆ ಖುಷಿಯಾದರೆ ಮತ್ತೊಂದೆಡೆ ತೀರಾ ಬೇಸರವೂ ಆಯಿತು.

ನನ್ನ ಜೀವನದ Ultimate ಗುರಿ ನಿಜ ಪ್ರೀತಿಯೊಂದನ್ನು ಅರಸುವುದೇ. True love exists ಎನ್ನುವುದನ್ನು prove ಮಾಡುವುದೇ?

'Waa..w, ಏನೋ ಮಚ ಇದು! ಏನನ್ದ್ರೋ ಅವ್ರು' ಕಾಣೆಯಾಗಿದ್ದ ಲೋಕೇಶ ಎಲ್ಲಿಂದಲೋ ಕೂಡಲೇ ಪ್ರತ್ಯಕ್ಷನಾಗಿ ನನ್ನ ಹೆಗಲ ಮೇಲೆ ಕೈಯಾಕಿ ಎಳೆದೆಳೆದು ಕೇಳತೊಡಗಿದ.

'ನಿಮ್ಮ್ ಫ್ರೆಂಡ್ಸ್ ಗೆ ಬಳೆ ಕೊಡ್ಸಬೇಕಿತ್ತು, ಸೈಜ್ ಎಷ್ಟು ಅಂತಾ ಕೇಳಿ ಅಂದ್ರು'

'ಹೋಗ್ಲಿ ಬಿಡಪ್ಪ.. ಪ್ರೈವಸಿ ಇರ್ಲಿ ಅಂತ ನಾನ್ ಓಡಿದೆ.'

ಸದ್ಯ, ಓಡಿದೆ ಎಂದು ಒಪ್ಪಿಕೊಂಡನಲ್ಲ ಎಂದು ಒಂದಿಷ್ಟು ಸಮಾಧಾನವಾಯಿತು.

'ನೆಕ್ಸ್ಟ್ ಟೈಮ್ ನಂಗೆ ಪ್ರೈವಸಿ ಬೇಡಪ್ಪ.. ಏನಾದ್ರೂ ಹೆಚ್ಚು ಕಡಿಮೆ ಆದ್ರೆ ಹೆಲ್ಪ್ ಮಾಡೋಕ್ಕೆ ಅಂತ ಆದ್ರೂ ಸ್ವಲ್ಪ ದೂರದಲ್ಲಿ ನಿಂತಿರಿ ' ಎಂದು ಕ್ಲಾಸ್ ರೂಮಿನೊಳಗೆ ನೆಡೆದೆ.



ಮುಂದುವರೆಯುವುದು ..

ಪಯಣ - 2

ಸಿಟ್ಟು ಹಾಗು ದುಃಖಗಳ ಹೊಳೆ ಸಮರಾಶಿಯಲ್ಲಿ ಮನಸ್ಸನ್ನು ಆವರಿಸದರೆ ದುಃಖವೆಂಬ ಆ ಪ್ರಧಾನಭಾವವೇ ಗೆದ್ದೇ ತೀರುತ್ತದೆ.

ಲೌಡ್ ಸ್ಪೀಕರ್ ನಲ್ಲಿರಿಸಿದ ಮೊಬೈಲಿನಲ್ಲಿ ಕೊಂಕು ನುಡಿದು ಮೂದಲಿಸುತ್ತಿರುವ ಅಮ್ಮನ ದುಃಖಬರಿತ ಧ್ವನಿ ಒಂದೆಡೆಯಾದರೆ ತನ್ನ ಮಾವನಿಂದಿಡು ಅವನ ಮಡದಿಯನ್ನೂ ಲೆಕ್ಕಿಸದೆ ಬಯ್ಯತೊಡಗಿದ್ದ ಹೆಸರಿಗೆ ಮಾತ್ರವಾಗಿದ್ದ ಅಪ್ಪನೆಂಬ ಸಿಡುಕ. ಸಿಟ್ಟು ದುಃಖಗಳ ಈ ತೊಳಲಾಟದ ಸನ್ನಿವೇಶವನ್ನು ಕಾಲೇಜಿನ ಕಾರಿಡಾರ್ನ ಒಂದೆಡೆ ನಿಂತು ತನ್ನ ಮೊಬೈಲಿನಲ್ಲಿ ಆಲಿಸುತ್ತಿದ್ದ ಆದಿ ಉಸಿರುತಡೆಯಿಡಿದು ಅಳತೊಡಗಿದ. ತನ್ನಪ್ಪನ ದುರ್ವರ್ತನೆಯನ್ನು ಕೇಳಿ ಮೈಯಲ್ಲ ಕುದಿಬಂದಂತಹ ಸಿಟ್ಟುಬಂದರೆ ಅಮ್ಮನ ಗದ್ಗದಿತ ಸ್ವರ ಅವನನ್ನು ಕಣ್ಣೀರಿನ ಅಲೆಯಲ್ಲಿ ಮುಳಿಗಿಸುತ್ತಿದ್ದವು. ತನ್ನಿಂದೆ ಗುಜುಗುಜುಗುಡುತ್ತಿದ ವಿದ್ಯಾರ್ಥಿಗಳ ಗುಂಪಿಗೆ ವಿಮುಖವಾಗಿ ವಿಶಾಲವಾಗಿ ಹರಡಿದ್ದ ಬೆಟ್ಟಗುಡ್ಡಗಳೆಡೆಗೆ ನಿಂತು ಆತ ರೋಧಿಸುತ್ತಿದ್ದಾನೆ. ತರಗತಿ ಶುರುವಾಗಿ ಎಲ್ಲರೂ ಒಳಗೊದ ಮೇಲೆ ಮುಖವನ್ನು ತೊಳೆದುಕೊಂಡು ಬಂದು ಒಬ್ಬಂಟಿಗನಂತೆ ಹಿಂದಿನ ಬೆಂಚಿನಲ್ಲಿ ಕೂತ. ಸೆಮಿಸ್ಟರ್ ಶುರುವಾಗಿ ಎರಡು ತಿಂಗಳಾದರೂ ಯಾರೊಬ್ಬರೂ ಈತನಿಗೆ ಗೆಳೆಯನ ಪಟ್ಟವನ್ನು ಕಟ್ಟಿರಹರು. ಮಾತು ಬಾರದ ಮೂಕನಾಗಿ, ದುಃಖ ದ್ವೇಷಗಳ ಅಲೆಗಳ ತಿಕ್ಕಾಟವನ್ನು ಹತ್ತಿಕ್ಕುತ್ತಾ ಪಾಠವನ್ನು ಕೇಳುವ ನಾಟಕವನ್ನು ನಟಿಸತೊಡಗಿದ.

ತನ್ನ ಮುಂದೆ ಕೂತಿದ್ದ ವಿದ್ಯಾರ್ಥಿ ಸಮೂಹವನ್ನು ಒಮ್ಮೆ ಹಾಗೆಯೇ ಗಮನಿಸುತ್ತಾನೆ. ಆ ಉದ್ದುದ್ದ ಜಡೆಯ ಹುಡುಗರ ಕೇಶರಾಶಿಯ ಹೊಳಪುಗಳೇನು, ಅವರ ಬ್ರಾಂಡೆಡ್ ಡ್ರೆಸ್ಸುಗಳೇನು, ಶಿಕ್ಷಕರೂ ತಮಗೆ ಜಿಗುಪ್ಸೆಯಾಗದಿರಲಿ ಎನ್ನುವಂತೆ ಅಂತವರನ್ನೇ ಮುಂದಿನ ಸಾಲಿನಲ್ಲಿ ಕೂರಿಸಿದ್ದಾರೆಯೋ ಎಂದನಿಸುತ್ತದೆ ಆತನಿಗೆ. ಇನ್ನು ಹುಡುಗಿಯರ ಅಂದ ಚಂದವೆಲ್ಲ ದೂರದ ಮಾತು, ಕನಿಷ್ಠ ಅವರ ಮುಖವನ್ನೂ ತಲೆಯೆತ್ತಿ ನೋಡಿದರೂ ಈ ಸುಂದರ ಸುಮಧುರ ಪ್ರಪಂಚದಲ್ಲಿ ತಾನೊಬ್ಬ ಮಹಾಕುರೂಪಿಯೇನೋ ಎಂಬಂತಹ ಭಾವನೆ ಈತನಲ್ಲಿ ಮೂಡುತ್ತಿತ್ತು. ಈ ಹುಡುಗ ಹುಡುಗಿಯರ ಜೀವನ ತನ್ನ ಜೀವನಕ್ಕಿಂತ ಅದೆಷ್ಟು ಭಿನ್ನ? ಇವರ ಸುಗುಣ ಜಾತಿಯ ಪೋಷಕರು, ನೆಮ್ಮದಿಯ ಜೀವನ, ಓದು, ಹರಟೆ, ನಕ್ಕು ನಲಿಯುವ ಬಾಳು ಎನುತ ಮತ್ತೊಂದು ಕಲ್ಪನಾ ಲೋಕದಲ್ಲಿ ಮುಳುಗುತ್ತಾನೆ. ಇದ್ದಕ್ಕಿಂದಂತೆ ಸೈಲೆಂಟ್ ಮೋಡಿನಲ್ಲಿದ್ದ ಆತನ ಮೊಬೈಲ್ ಅದುರತೊಡಗಿತು. ಅಮ್ಮನ ಫೋನನ್ನು ನೋಡಿದಾಕ್ಷಣ ಸಿಟ್ಟು ವಿಪರೀತವಾಗಿ ಕೆಂಪು ಬಟನ್ ಅನ್ನು ಒತ್ತಿದ್ದಾಗ ಬಂದ ಆ ಸದ್ದು ಲೆಕ್ಚರರ್ ಬೋರ್ಡಿನ ಮೇಲೆ ಚಾಕ್ ಪೀಸ್ನಿಂದ ಕುಟ್ಟಿದಂತಿತ್ತು.

**

'What the...! ಏನ್ ಹೇಳ್ತೀಯೋ ನೀನು? ಅಲ್ಲ ಮಾರಾಯ ಈ ಸ್ಕ್ಯಾಮ್ ಗಳು ನಿನ್ನ ಹುಡ್ಕೊಂಡ್ ಬರ್ತಾವೋ ಅಥವಾ ಸ್ಕ್ಯಾಮ್ ಗಳನ್ನೇ ನೀನು ಹುಡ್ಕೊಂಡು ಹೋಗ್ತಿಯೋ..' ಎಂದು ಗಹಗಹನೇ ನಗುತ್ತ ಹೇಳಿದ ನನ್ನ ಮಾತಿಗೆ ಲೋಕೇಶ,

'ಹೋಗ್ಲಿ ಬಿಡ್ ಮಚಿ ಇದೆಲ್ಲ ಇದ್ದಿದ್ದೇ. Anyways, ನಿನ್ ದುಡ್ಡ್ ಮಾತ್ರ ಸೇಫ್.. ತಗೋ ' ಏನುತಾ ತನ್ನ ಜೇಬಿನಲ್ಲಿದ್ದ ಹತ್ತುಸಾವಿರದ ಕಂತೆಯನ್ನು ನನ್ನ ಕೈಲಿಟ್ಟ.

'ಮೂರ್ಛೆ ಬಿದ್ದ ಆ ಐದಡಿ ಆಸಾಮಿ ಮತ್ತೆ ಅಲ್ಲಿಗೆ ಹೋಗಿದ್ನಂತೆ.. ಸೆಟ್ನ ಬಿಚ್ಚ್ಕೊಂಡು ಹೋಗೋಕೆ. ಕೊನೆಗೆ ಏನು ವರ್ಕ್ ಔಟ್ ಆಗ್ಲಿಲ್ಲ ಅನ್ನೋ ಸಿಟ್ಟಿಗೆ ಅಲ್ಲಿದ್ದ ಹಂದಿಮರಿಗಳನ್ನು ಕದಿಯೋಕ್ಕೆ ಹೋಗಿ ಊರವರಿಂದ ಚೆನ್ನಾಗಿ ಗೂಸಾ ತಿಂದು ಈಗ ಜೈಲಿನಲ್ಲಿದ್ದನಂತೆ..' ಎಂದಾಗ ನನಗೆ ಮತ್ತೊಮ್ಮೆ ನಗುವನ್ನು ತಡೆಯಲಾಗಲಿಲ್ಲ. 'ಇಂಥವರಿಂದಾನೆ ನೋಡು ನಿಯತ್ತಾಗಿ ಸಂಪಾದನೆ ಮಾಡೋದು ಅಂದ್ರೆ ಈಗಿನ್ ಕಾಲದಲ್ಲಿ ಸಾಧ್ಯನೇ ಇಲ್ವೇನೋ ಅನ್ನೋಹಾಗೆ ಹಾಗಿರೋದು..' ನೋಟಿನ ಕಂತೆಯನ್ನು ಜೀನ್ಸ್ ಪ್ಯಾಂಟಿನ ಜೇಬಿನೊಳಗೆ ತೂರಿಸಿಕೊಳ್ಳುತ್ತಾ ನಾನೆಂದೆ.

ಇನ್ನೇನು ಬೆಳಗಿನ ಕೊನೆಯ ಪಿರಿಯಡ್ ಶುರುವಾಗುವ ಘಂಟೆ ಭಾರಿಸಿ ನಾವುಗಳು ಕ್ಲಾಸ್ ರೂಮಿನ ಒಳಹೋಗಬೇಕು ಎನ್ನುವಷ್ಟರಲ್ಲಿ ನಮ್ಮ ಹಿಂದೆ ಬಂದ ಸದ್ದೊಂದು,

'ಬ್ರದರ್, ಸ್ವಲ್ಪ ನಿಮ್ಮ್ ಮೊಬೈಲ್ ಕೊಡ್ತೀರಾ? ಅರ್ಜೆಂಟ್ ಆಗಿ ಮನೆಗ್ ಫೋನ್ ಮಾಡ್ಬೇಕು.. ನನ್ನ ಬ್ಯಾಲೆನ್ಸ್ ಮುಗಿದಿದೆ ' ಎಂದಾಗ ನಾನು ಲೊಕೇಶನ ಮುಖವನ್ನು ನೋಡಿದೆ. ಲೋಕೇಶ ತನ್ನ ಮೊಬೈಲನ್ನು ಆತನಿಗೆ ನೀಡಿದ. ಆತ ನನ್ನ ಫೋನನ್ನು ತೆಗೆದುಕೊಂಡು ತುಸುದೂರ ಹೋದನಂತರ ಲೋಕೇಶ 'ಆದಿಶೇಷ್ ಅಂತ, ತುಂಬಾ ಸೈಲೆಂಟ್ ಹುಡ್ಗ.. ಯಾವಾಗ್ಲೂ ಏನೋ ಒಂತರ ಚಿಂತೇಲೆ ಇರ್ತಾನೆ, ಎರಡನೇ ಸೆಮಿಸ್ಟರ್ಗೆ ಕಾಲೇಜ್ ಚೇಂಜ್ ಮಾಡ್ಕೊಂಡು ಇಲ್ಲಿಗೆ ಬಂದಿದ್ದಾನೆ ' ಎನ್ನುತ್ತಾನೆ.

ಸ್ವಲ್ಪ ಹೊತ್ತಿನ ನಂತರ ಮೊಬೈಲ್ನನ್ನು ಹಿಂದಿರಿಗಿಸುವ ನೆಪದಲ್ಲಿ ಆತ ನಮ್ಮ ಬಳಿಯೇ ಬಂದು ಕೂತ. ಕೆಲಸಮಯದ ನಂತರ ಆತನನ್ನು ಗಮನಿಸಿದೆ. ದುಃಖಭರಿತ ಆ ಕಣ್ಣುಗಳಲ್ಲಿ ಒರೆಸಿದಷ್ಟೂ ಕಣ್ಣೀರ ಹನಿಗಳು ಉದುರುತ್ತಿದ್ದವು. ಲೋಕೇಶ ನನ್ನ ಮುಖವನೊಮ್ಮೆ ಬೇಸರದಿಂದ ನೋಡಿದ.



**



ಎರಡುವಾರಕ್ಕೊಂದೇ ಕುಡಿಯುತ್ತಿದ್ದ ಬಿಯರ್ನ ಸರದಿ ನೆನ್ನೆಯ ರಾತ್ರಿ ಬಂದಿದ್ದರಿಂದ ಇಂದು ಕಾಲೇಜಿನ ಮೊದಲ ಪಿರಿಯಡ್ಗೆ ಬಂಕ್ ಹಾಕುವ ಕಾರ್ಯಕ್ರಮವಿದ್ದಿತು. ಲೋಕೇಶ ತನ್ನ ಕಾಲನ್ನು ರಾತ್ರಿಯಿಡಿ ನನ್ನ ಮೇಲೆಸೆದು ಆ ಮತ್ತಿನ ರಾತ್ರಿಯಲ್ಲೂ ನಿದ್ದೆ ಬಾರದಂತೆ ಮಾಡಿದ್ದ. ಅಲ್ಲದೆ 'ಕೋತಿ ತಾನ್ ಕೆಡೋದಲ್ದೆ, ಇಡೀ ಕಮ್ಯೂನಿಟಿಯನ್ನೇ ಕೆಡಿಸಿತು..' ಎನ್ನುವ ಹಾಗೆ 'ಮಾಸ್ ಬಂಕ್' ಎಂಬ ಪಾವನ ಕಾರ್ಯವನ್ನು ಶುರುಮಾಡಿ ಅದರಲ್ಲಿ ಗೆದ್ದೂ ಸಹ ತೀರಿದ್ದ. ಅಲ್ಲದೆ ಹಾಗೆ ಬಂಕ್ ಹಾಕಿದ ತಪ್ಪಿಗೆ ಬೇಕಾದ ಹಾಜರಿಯ ವಿಲೇವಾರಿಯನ್ನು ಮಾಡಲೂ ಸಹ ಈತನೇ ನೆರವಾಗುತ್ತಿದ್ದ. ಹಾಗಾಗಿ ಇಂದು ಆತನ ಕೃಪೆಯಿಂದ ಮೊದಲ ಪಿರಿಯಡ್ನ ಕ್ಲಾಸಿನ ಬೆಂಚುಗಳು ಕೇವಲ ಮೊದಲ ಸಾಲಿನ ಪ್ರವೀಣರಿಗೆ ಮೀಸಲಾಗಿದ್ದಿತು.

'ತತ್ತ್ .. ಹಾಸ್ಟೆಲಿಗೋಗಿ ರೆಡಿ ಆಗೋ ಮಾರಾಯ.. ಅದೆಷ್ಟ್ ಗೊರ್ಕೆ ಹೊಡಿತಿಯ ' ಎಂದು ಬೈದ ನಂತರ ಕೊಸರಾಡಿಕೊಂಡು ಎದ್ದು ಕೂತ ಲೋಕೇಶ.

'ತಾವೆನ್ ಕಮ್ಮಿನಾ .. ಸೊಳ್ಳೆಗಳೂ ಹೆದ್ರಿ ಓಡ್ ಹೋಗೋ ಹಾಗೆ ಗೊರಕೆ ಹೊಡೆಯೋದು ಯಾರಪ್ಪ..' ಎಂದು ಇಲ್ಲದ ಸುಳ್ಳನ್ನು ಸೃಷ್ಟಿಸಿ ನನ್ನ ಮೇಲೆಯೇ ಒರಿಸತೊಡಗಿದ. ಅಂತೆಯೇ ಯಾವುದೊ ಕರ್ಕಶ ಸದ್ದನ್ನು ತನ್ನ ಮೊಬೈಲಿನಲ್ಲಿ ರೆಕಾರ್ಡ್ ಮಾಡಿದ್ದನ್ನು ಕೇಳಿಸಿ ಅದು ನನ್ನದೇ ಗೊರಕೆಯ ಸದ್ದೆಂದು ವಾದಿಸತೊಡಗಿದ.

'ಆ ಹೊಸ ಹುಡ್ಗ ಆದಿಶೇಷ ನನ್ನ್ ರೂಮಿಗೆ ಶಿಫ್ಟ್ ಆಗ್ಲ ಅಂತ ಕೇಳ್ತಿದ್ದ..' ದಿಂಬನ್ನು ಗೋಡೆಗೆ ಒರಗಿಸಿ ಕೂರುತ್ತಾ ನಾನೇಳಿದೆ.

'ಒಹ್ ನ್ಯೂ ಕಮರ್ .. ಹಾಸ್ಟೆಲ್ ಏನಾಗಿದೆ ಅಂತೇ ಅವ್ನಿಗೆ ..'

'ಗೊತ್ತಿಲ್ಲ. ಬಂದ್ರೆ ಬರ್ಲಿ ಬಿಡು. ನಂಗೂ ಸ್ವಲ್ಪ ರೆಂಟ್ ಶೇರ್ ಆಗುತ್ತೆ.' ಎಂದ ನಾನು ತುಸು ಹೊತ್ತಿನ ನಂತರ 'ನೀನೂ ಯಾಕೆ ಇದೇ ರೂಮಿಗೇ ಶಿಫ್ಟ್ ಆಗ್ಬಾರದು ಮಾರಾಯ? ಹೇಗಿದ್ರು ಯಾವಾಗಲೂ ಇಲ್ಲೇ ಸಾಯ್ತಾ ಇರ್ತೀಯ .. ಅಫೀಷಿಯಲ್ ಆಗಿ ಬಂದ್ರೆ ರೆಂಟ್ ಖರ್ಚು ನಂಗೆ ಇನ್ನೂ ಕಡಿಮೆ ಆಗ್ಬಹುದಲ್ಲ..' ಆತನ ಮುಖಭಾವವನ್ನು ಗಮನಿಸುತ್ತಾ ನಾನೇಳಿದೆ.

'ನೋಡನಪ್ಪ .. ಆದ್ರೆ ನಾನ್ ರೆಂಟ್ ಕೊಡೋದು ಯಾವ್ದಾದ್ರು ಬಿಸಿನೆಸ್ ಶುರು ಮಾಡಿದ್ ಮೇಲೇನೆ..' ಎಂದು ಅಲ್ಲಿಯೇ ತನ್ನ ಚೌಕಾಶಿಯನ್ನು ಶುರುಮಾಡಿದ ಆತ. ನಾನು ಆತನನ್ನು 'ಥು..ನಿಂದು ಒಂದು ಜನ್ಮನಾ..' ಎಂಬ ನೋಟದಿಂದ ಗುರಾಯಿಸಿದಾಗ ಹಲ್ಲು ಕಿರಿಯುತ್ತ ನನ್ನ ಬಳಿಗೆ ಬಂದು 'ಜಸ್ಟ್ ಕಿಡ್ಡಿನ್ಗ್ ಮಚಿ..' ಎಂದು ನಗತೊಡಗಿದ.

'ಅದೆಲ್ಲ ಆಮೇಲೆ ನೋಡಣ .. ಮೊದ್ಲು ಕಾಲೇಜಿಗೆ ರೆಡಿ ಆಗು.. ಪ್ರಿನ್ಸಿ ಇವತ್ತು ಸರ್ಪ್ರೈಸ್ ವಿಸಿಟ್ ಮಾಡ್ತಾರಂತೆ.. ' ಎಂದ ಮೇಲೆಯೇ ಆತ ಎದ್ದು ಹಾಸ್ಟೆಲಿನ ಕಡೆಗೆ ಮುಖ ಮಾಡಿದ್ದು. ರಾತ್ರಿ ಕುಡಿದ ಬಿಯರ್ನ ಬಾಟಲಿಗಳನ್ನು ಹೆಕ್ಕಿ ನಾನು ರೂಮನ್ನು ಶುಚಿಗೊಳಿಸತೊಡಗಿದೆ.



**



'ಮಚಿ, ಉಷಾನ ನೋಡೋ. ಏನ್ ಐಟಂ ಆಗಿದ್ದಳೋ ಈಗ…' ಬಿಸಿನೆಸ್ ಡೆವೆಲಪಮೆಂಟ್ ಕ್ಲಾಸಿನ ನಿದ್ದೆಯ ಮತ್ತಿನಲ್ಲಿದ್ದ ನನ್ನನ್ನು ಬಡಿದೆಬ್ಬಿಸಿದ ಲೋಕೇಶ. ಇಡೀ ಕ್ಲಾಸ್ ರೂಮಿಗೆ ಇರುವ ಏಕೈಕ ಫ್ಯಾನಿನಿಂದ ಅದರ ಮೂಳೆ ಮುರಿಯುವಂತೆ ದುಡಿಸಿಕೊಂಡು ಅದು ಕರುಣಿಸುವ ಕೆಲವೇ ಕೆಲವು ಮೀಟರ್ / ಸೆಕೆಂಡ್ ಗಾಳಿಯನ್ನು ಕಷ್ಟಪಟ್ಟು ಆಸ್ವಾದಿಸುತ್ತಾ ಹೆಚ್ಚುಕಡಿಮೆ ಶಿಕ್ಷಕರಾದಿಯಾಗಿ ವಿದ್ಯಾರ್ಥಿಗಳೂ ನಿದ್ರೆಗೆ ಶರಣಾಗುವ ಮಧ್ಯಾಹನದ ಆ ಮತ್ತು ಆಹಾ…! ಎನಿಸುವಂತಿತ್ತು. ಒಂದು ಪಕ್ಷ ನಾನೇನಾದರೂ ಕಾಲೇಜಿನ ಪ್ರಿನ್ಸಿಪಲ್ ಆಗಿದ್ದರೆ ಇಡೀ ಕಾಲೇಜಿಗೆ ಕಾಲೇಜು ಮದ್ಯಾಹ್ನದ ಒಂದು ಪವರ್ ನ್ಯಾಪನ್ನು ತೆಗೆದುಕೊಳ್ಳುವುದನ್ನು ಖಡ್ಡಾಯ ಮಾಡಿ ಆ ನಿದ್ರೆಯಲ್ಲೂ ಏನಾದರೊಂದು ಚಿಂತನಾ ಕಾರ್ಯಗಳನ್ನು ಮಾಡುವ ವಿದ್ಯಾರ್ಥಿಗಳನ್ನು ತಯಾರಿಸುವ ಹೊಣೆಯನ್ನು ಶಿಕ್ಷಕರಿಗೆ ನೀಡುತ್ತಿದ್ದೆ!!

'ತತ್ತ್ ಏನಪ್ಪಾ ನಿನ್ ಗೋಳು , ಮುಚ್ಕೊಂಡ್ ಮಲ್ಕೋ ಇಲ್ಲ ನಂಗ್ ಮಲ್ಗೊಕ್ ಆದ್ರೂ ಬಿಡು' ಎಂದು ಕೊಸರಾಡುವಷ್ಟರಲ್ಲೇ ಶಿಕ್ಷಕರ ಕೈಲಿದ್ದ ಚಾಕ್ ಪೀಸಿನ ತುಂಡು ನನ್ನ ಕೆನ್ನೆಯನ್ನು ರಪ್ಪನೆ ಬಂದು ತಟ್ಟಿತು. ಚಾಕ್ ಪೀಸಿನ ಒಡೆತಕ್ಕೆ ಒಂದರೆ ಸೆಕೆಂಡು ಮಾತು ಬಾರದಂತಾಗಿ ಏನು ಮಾಡಬೇಕೆಂದು ನನಗೆ ತಿಳಿಯಲಿಲ್ಲ. ಲೋಕೇಶನ ದೃಷ್ಟಿ ಇನ್ನೂ ಉಷಾಳ ಮುಖವನ್ನು ತಲುಪಿರದಿದ್ದರಿಂದ ಹಾಗು ಆ ಸಮಯದಲ್ಲಿ ಆತನಿಂದ ಯಾವುದೇ ಬಗೆಯ ಸಹಾಯವನ್ನು ಆಕ್ಷೇಪಿಸುವದೂ ನಿಷ್ಪ್ರಯೋಜಕ ಕೆಲಸವಾದ್ದರಿಂದ ನಾನು ನಿರಪರಾಧಿಯಂತೆ ತಲೆತಗ್ಗಿಸಿಕೊಂಡು ಎದ್ದು ನಿಂತೆ.

'ಏನ್ರಿ ನೀವು.. ಮಾನ ಮರ್ಯಾದೆ ಏನೂ ಇಲ್ವಾ.. ಮನೆ ಒಳಗೆ ಅಮ್ಮನ್ ಕಾಲ್ ಮೇಲೆ ಮಲ್ಗೊ ಹಾಗೆ ಮಲಗಿದ್ದೀರಲ್ಲರಿ’

'ಅಮ್ಮನ್ ಕಾಲ್ ಮೇಲೆ ಮಲಗೋಕೆ ಮಾನ ಮರ್ಯಾದೆ ಯಾಕ್ ಬೇಕು ಮೇಡಂ..' ಎಂದಾಗ ಒಂದಷ್ಟು ಜನ ಗಹಗಹಿಸಿ ನಕ್ಕರು.

'Don’t talk Non Sense with me..' ಊಹಿಸಲಾರದ ಪ್ರತ್ಯುತ್ತರವನ್ನು ಕೇಳಿ ಆಕೆ ತನ್ನ ಸಹಜ ಏರು ಧ್ವನಿಯಲ್ಲಿ ಅಬ್ಬರಿಸಿದರು.

'Then tell me Mam, What Should I speak with you..’ ಎಂದು ರಾಗವಾಗಿ ನಾನು ಹೇಳಿದಾಗ ಇಡೀ ಕ್ಲಾಸಿಗೆ ಕ್ಲಾಸೇ ಬಿದ್ದು ನಗತೊಡಗಿತು.

ಆದರೆ ಆಕೆ ಗಟ್ಟಿ ಹೆಣ್ಣು. ಸೋಲನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವಾಕೆಯಲ್ಲ. ಮೇಲಾಗಿ ಸಾಂಸ್ಕೃತಿಕ ಚಟುವಟಿಕೆಗಳ ಆಗರವಾಗಿದ್ದ ನಮ್ಮ ಕಾಲೇಜಿನಲ್ಲಿ ಶಿಕ್ಷಕ ಹಾಗು ವಿದ್ಯಾಥಿಗಳ ಈ ಬಗೆಯ ‘ಚರ್ಚಾಕೂಟ’ಗಳು ಆಗಾಗ್ಗೆ ನೆಡೆಯುತ್ತಲೇ ಇರುತ್ತಿದ್ದರಿಂದ ಮಾತಿನ ಪೆಟ್ಟನ್ನು ಮಾತಿನಿಂದಲೇ ಕೊಡಬೇಕಾಗಿ ಬರುತ್ತಿತ್ತು.

‘Oh is it, then Come on .. ಬನ್ನಿ ಇಲ್ಲಿ’ ಎನುತ ಅವರು ಬ್ಲಾಕ್ ಬೋರ್ಡಿನ ಬಳಿಗೆ ಹೋದರು. ಕೂಡಲೇ ಏನೂ ಅರಿಯದವನಂತೆ ನಾನು ಅವರನ್ನು ಹಿಂಬಾಲಿಸಿದೆ. ಲೋಕೇಶ ಸಿಕ್ಕ ಈ ಸದಾವಕಾಶವನ್ನು ಉಷಾಳ ಉದ್ದಳತೆಯನ್ನು ಕಣ್ಣಿನಲ್ಲೇ ಅಳೆಯುವುದರಲ್ಲಿ ಮಗ್ನನಾಗಿದ್ದ. ತನ್ನ ಒಬ್ಬನೇ ಅಮಾಯಕ ಗೆಳೆಯನ ಮಾನಾಪಹರಣದ ಸಂಧರ್ಭವೆಂದೂ ಅರಿಯದೆ ಆತ್ಮತೃಪ್ತಿಯ ನಗೆಯೊಂದನ್ನು ಬೀರುತ್ತಿದ್ದ.

'ರೀ ಮಿಸ್ಟರ್.. ನೋಡಿ, ಈ ಕ್ಲಾಸ್ಸಲ್ಲಿ ಒಬ್ರಾದ್ರೂ ನಾನ್ ಹೇಳಿರೋ ಪಾಠ ಆರ್ಥ ಆಗ್ಲಿಲ್ಲ ಅಥವಾ ನಿದ್ರೆ ಬರೋ ಆಗಿತ್ತು ಅನ್ಲಿ. I will make sure this will become my last class here.. ' ಎಂದು ನನಗೆ ಆ ಮ್ಯಾನೇಜ್ಮೆಂಟ್ ಕ್ಲಾಸ್ಸಿನ ಅತಿ ಕ್ಲಿಷ್ಟವಾದ ಸವಾಲನ್ನು ಹಾಕುವ ಮೊದಲು ತಾನು ಹೇಳಿದ ಮಾತನ್ನು ಸಮರ್ಥಿಸುವಂತೆ ತರಗತಿಯನೊಮ್ಮೆ ನೋಡಿದರು. ಆಶ್ಚರ್ಯವೆಂಬಂತೆ ಆ ಗುಂಪಿನ ಮಧ್ಯದಿಂದ ಕೈಯೊಂದು ಸದ್ದಿಲ್ಲದೆ ಮೇಲೆದ್ದು ನಿಂತಿತ್ತು! ತನ್ನ ಕಣ್ಣುಗಳೆರಡನ್ನೂ ಕೆರಳಿಸಿ ಆ ಕೈಗಳನ್ನೇ ನೋಡಿದ ಅವರು 'Hello, who the hell are you man & what do you want.. ' ಎಂದಾಗ ಲೋಕೇಶ,

'ನಿಮ್ಮ್ ಪಾಠಾನೂ ಅರ್ಥ ಆಗ್ಲಿಲ್ಲ + ಈ ಕಡೆ ನಿದ್ರೆನೂ ಬಿಡ್ತಿಲ್ಲ' ಎಂದು ಆಕಳಿಸುತ್ತಾ ಎದ್ದು ನಿಂತ!

ಮೊದಲ ಬಾರಿಗೆ ಅವರಿಗೆ ತಮ್ಮ ಮಾತಿನ ಮೇಲಿನ ಹಿಡಿತ ಸಡಿಲಗೊಂಡಿತು. ಧ್ವನಿ ಕೊಂಚ ತೊದಲತೊಡಗಿತು. ಅವರು ಉಷಾಳ ಮುಖವನ್ನೊಮ್ಮೆ ನೋಡಿದರು. ನಂತರದ ಕ್ಷಣದಲ್ಲೇ ಮತ್ತೆ ಗಟ್ಟಿಯಾದ ಉಸಿರೊಂದನ್ನು ಎಳೆದುಕೊಂಡು,

'ಸರಿ.. ಬನ್ರೀ.. ನೀವೂ ಬನ್ನಿ..ಸ್ಟೇಜ್ ಮೇಲೆ ನಿಂತು ನಾನ್ ಹೇಳ್ತಿರೋ ವಿಷ್ಯಾನ ಕ್ಲಾಸ್ಸಿಗೆ ಅರ್ಥ ಮಾಡ್ಸಿ.. ನಿಮ್ ನಿದ್ರೆನೂ ಹೋಗುತ್ತೆ, ನನಗೂ ಹೆಲ್ಪ್ ಆಗುತ್ತೆ..Come..Come ' ಎಂದು ಸ್ಟೇಜಿನಿಂದ ಕೆಳಗಿಳಿದರು. ಸಂದರ್ಭ ಬಿಗುವಾಯಿತು. ಕೆಲ ನಿಮಿಷ ಮೌನವಾಗಿದ್ದು 'Sorry ಮೇಡಂ' ಅಂದಿದ್ದರೆ ವಿಷಯ ಅಲ್ಲಿಗೆ ಮುಗಿಯುತ್ತಿತ್ತು. ಆದರೆ ಲೋಕೇಶ ಸುಮ್ಮನಾಗಲಿಲ್ಲ. ಈ ಹೊಸ ಐವತ್ತರ ಆಸುಪಾಸಿನ ಸ್ಟ್ರಿಕ್ಟ್ ಲೆಕ್ಚರರ್ನ ಮುಂದೆ ತನ್ನ ಹೀರೋಗಿರಿಯನ್ನು ತೋರಲೊದ ಆಸಾಮಿ.

ನನ್ನ ಪಕ್ಕಕ್ಕೆ ಬಂದು ನಿಂತವನು ಮುಗುಳ್ ನಕ್ಕು 'ಮಚಿ.. ಈದ್ ಯಾವ್ ಕ್ಲಾಸು' ಎಂದು ಕಿವಿಯ ಬಳಿ ಗುಸುಗುಡತೊಡತೊಡಗಿದ. ನಾನು ಬೇಕಂತಲೇ ಏನೂ ಮಾತನಾಡದೆ ಸುಮ್ಮನಾದೆ!

'ರೀ ಮಿಸ್ಟರ್, ಅಲ್ಲಿ ಬುಕ್ ಇದೆ, ಚಾಪ್ಟರ್ ನಂಬರ್ 2. ಸ್ಟಾರ್ಟ್ ಅಪ್ ಕಾನ್ಸೆಪ್ಟ್ಸ್ ' ಎಂದಾಗ ಲೋಕೇಶ ಪುಸ್ತಕವನ್ನು ಕೈಗೆತ್ತಿಗೊಂಡು ಬಿರಬಿರನೆ ಪುಸ್ತಕದ ಮೇಲೆ ಕಣ್ಣಾಯಿಸಿದ. ನಂತರ ಕೊಂಚ ಸುಮ್ಮನಾಗಿ ಸಿನಿಮೀಯ ರೀತಿಯಲ್ಲಿ ನಗುತ್ತಾ,

'You know class, ಈ ಪುಸ್ತಕದ ಬದ್ನೇಕಾಯಿನೆಲ್ಲ ಓದ್ತಾ ಇದ್ರೆ ದೇವ್ರಾಣೆ ನೀವು ಸ್ಟಾರ್ಟ್ ಅಪ್ಪು ಮಾಡಲ್ಲ ಮತ್ತೊಂದು ಮಾಡಲ್ಲ. ಅಲ್ಲ ರೀ, ಏನ್ ಇವಾಗ, ಬಿಸಿನೆಸ್ ಶುರು ಮಾಡ್ಬೇಕು ಅಷ್ಟೇ ತಾನೇ…' ತಾನು ಸೋತು ಸುಣ್ಣವಾಗಿದ್ದ ಬಿಸಿನೆಸ್ ನ ಯಾವುದಾದರೊಂದು ಕಾನ್ಸೆಪ್ಟ್ ಅನ್ನು ಹೇಳಲು ಹೊರಟಿರುವಂತಿದೆ ಎಂದು ನನಗೆ ಖಚಿತವಾಯಿತು.

'ಅದಕ್ಕ್ ಯಾಕ್ರೀ ಕ್ಲಾಸ್ ರೂಮ್ ಟೀಚಿಂಗು.. ಯಾಕ್ ಇಷ್ಟೆಲ್ಲಾ ಫೀಸು ಗೀಸು ಮತ್ತೊಂದು ಮಗದೊಂದು..? See, Until & Unless ನೀವು ರಣರಂಗಕ್ಕೆ ಇಳಿಯೋದಿಲ್ವೋ, ತಪ್ಪನ್ನು ಮಾಡೋದಿಲ್ವೋ, ಆ ತಪ್ಪಿಂದ ಪಾಠಗಳನ್ನು ಕಲಿಯೋದಿಲ್ವೋ ಅಲ್ಲಿವರೆಗೂ ನೀವ್ ಏನ್ ಓದಿದ್ರೂ ಅಷ್ಟೇನೆ! ನೀವು ತಪ್ಪ್ ಮಾಡಬಾರ್ದು ಅಂತ ಈ ಪುಸ್ತಕಗಳಿವೆ. ವಿಪರ್ಯಾಸ ಅಂದ್ರೆ ಇವೆ ವಿದ್ಯಾರ್ಥಿ ಜೀವನದ ಅತಿ ದೊಡ್ಡ ಶಾಪ... Yes. ಪುಸ್ತಕಗಳಿದ್ದರೆ ವಿದ್ಯಾರ್ಥಿಗಳು ತಪ್ಪನ್ನೇ ಮಾಡುವುದಿಲ್ಲ. ತಪ್ಪೇ ಮಾಡ್ದೆ ಗೆಲ್ಲೋದ್ರಲ್ಲಿ ಇರೋ ಮಜಾನಾದ್ರು ಏನು ಅಂತ? Come on guys, Let’s make mistake & learn the best out of it..' ಎನುತ ರಾಜನಗೆಯನ್ನು ಬೀರಿದನು.

ಮಾತಾಡಲು, Sorry, ಪಾಠ ಮಾಡಲು ಅನುಮತಿ ಕೊಟ್ಟ ಶಿಕ್ಷಕಿ ತನ್ನ ತಲೆಯನ್ನು ಕೆಳಹಾಕಿದರು.

'Anyways, ಈ ಟೀಚಿಂಗೇ ಟೀಚ್ ಮಾಡುವ ಒಂದು ಬ್ರಿಲಿಯೆಂಟ್ ಕಾನ್ಸೆಪ್ಟ್ ಅನ್ನು ನಾನು ನಿಮ್ಗೆ ಹೇಳ್ತಿನಿ.. Its Free, Its open, it’s useful & it’s very powerful too!'

ನಿದ್ರೆಗಣ್ಣಿನಲ್ಲಿದ ಕೆಲ ಹುಡುಗರು ಚಕಿತರಾದರೆ ಇನ್ನು ಕೆಲವರು 'ಇವನ್ಯಾವನೋ ಗುಲ್ಟು' ಎಂದು ಒಳಗೊಳಗೇ ನಗತೊಡದಿದರು. ಶಿಕ್ಷಕಿ ಮಾತ್ರ ತಾನು ಇಳಿಬಿಟ್ಟ ತಲೆಯನ್ನು ಮೇಲೇರಿಸಲಿಲ್ಲ.

'ಇದನ್ನು ಬಿಸಿನೆಸ್ ಅಂತ ಬೇರೆಯವರು ಕರೆಯಬಹದು. ಆದರೆ ನಾನು ಇದನ್ನು ಸೋಶಿಯಲ್ ಸರ್ವಿಸ್ ಅಂತಾನೆ ಅನ್ನೊದು. ಯಾಕಂದ್ರೆ ಇಲ್ಲಿ ಪ್ರಯೋಜನಕ್ಕೊಳಪಡುತ್ತಿರುವವರು ವಿದ್ಯಾರ್ಥಿಗಳು, ಕಾಲೇಜುಗಳು, ಹಾಗು ಕಂಪನಿಗಳು. ಇದೊಂದು ಟ್ರೈನಿಂಗ್ ಇನ್ಸ್ಟಿಟ್ಯೂಟ್. ನಮ್ಮ ತಾಲೂಕಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅದೆಷ್ಟೇ ಉತ್ತಮ ಅಂಕಗಳನ್ನೂ ಗಳಿಸಿಕೊಂಡಿದ್ದರೂ ಯಾವೊಂದು ಕಂಪನಿಯೂ ಸಿಟಿಯ ಕಾಲೇಜುಗಳಿಗೆ ಬರುವಂತೆ ಸೆಮಿಸ್ಟರ್ ಮುಗಿಯುವ ಮೊದಲೇ ಇಲ್ಲಿಗೆ ಬಂದು ನೂರಾರು ವಿದ್ಯಾರ್ಥಿಗಳನ್ನು ಹೆಕ್ಕಿ ಕರೆದುಕೊಂಡು ಹೋಗುವುದಿಲ್ಲ. It’s a fact. ಹಳ್ಳಿಯ ವಿದ್ಯಾರ್ಥಿಗಳು ಕಾಲೇಜು ಮುಗಿದು ವರ್ಷಾನುಗಟ್ಟಲೆ ಆ ಸಿಟಿಯ ನಗರಗಳಲ್ಲಿ ಕೆಲಸಕ್ಕಾಗಿ ಅಲೆಯಬೇಕು. ಸಿಕ್ಕರೂ ಅಂತ ಕೆಲಸಗಳಿಂದ ಬರುವ ಸಂಬಳ ಬಟ್ಟೆಗಾದರೆ ಹಿಟ್ಟಿಗಿಲ್ಲ, ಹಿಟ್ಟಿಗಾದರೆ ಬಟ್ಟೆಗಿಲ್ಲ ಎಂಬಂತೆ. ಇನ್ನು ಸಾಧಾರಣ ವಿದ್ಯಾರ್ಥಿಗಳಿಗಂತೂ ಕೆಲಸವೆಂಬುದು ಹಿಮಾಲಯ ಪರ್ವತವೇ ಸರಿ. ಊರಿನಿಂದ ಅಷ್ಟೋ ಇಷ್ಟೋ ಚಿಲ್ಲರೆ ಹಣವನ್ನು ಹಿಡಿದುಕೊಂಡು ಹೋಗಿ, ಯಾವುದೊ ಗೆಳೆಯನ ಒಂದು ರೂಮಿನ ಮೂಲೆಯಲ್ಲಿ ಒಂದಿಷ್ಟು ಜಾಗವನ್ನು ಪಡೆದು ದಿನವಿಡೀ ಸಿಟಿಯ ಗಲ್ಲಿಮೂಲೆಗಳನ್ನು ಸುತ್ತುತ್ತಾ, ಕಂಡ ಕಂಡಲ್ಲೆಲ್ಲ ತಮ್ಮ ರೆಸ್ಯುಮೆಗಳನ್ನು ಹಾಕುತ್ತಾ, ಹಣ ಖಾಲಿಯಾಗುತ್ತಿರುವಂತೆ ಏರೊಡೊತ್ತಿನ ಊಟವನ್ನು ಒಂದೊತ್ತಿಗೆ ಸೀಮಿತವಾಗಿರಿಸಿಕೊಳ್ಳುತ್ತಾ, ಕೊನೆಕೊನೆಗೆ ಕೇವಲ ಟೀ ಬನ್ನುಗಳಲ್ಲೇ ದಿನವನ್ನು ಸಾಗಿಸುತ್ತ, ಆಗಲೂ ಕೆಲಸ ಸಿಗದೇ ಕೊನೆಗೆ ಜೇಬಿನಲ್ಲಿದ್ದ ಚಿಲ್ಲರೆಯಲ್ಲ ಖಾಲಿಯಾದ ಮೇಲೆ ಊರಿನ ಯಾರೋ ಒಬ್ಬರನ್ನು ಸಿಟಿಯಲ್ಲಿ ಕಂಡು ಅವರಿಂದ ಒಂದಿಷ್ಟು ಹಣವನ್ನು ಸಾಲದ ರೂಪದಲ್ಲಿ ಪಡೆದು ಇದ್ದೆನೋ ಬಿದ್ದೆನೋ ಎಂಬಂತೆ ಊರಿಗೆ ಸೇರುವ ಇಂತಹ ಯುವಕರನ್ನು ಎಂಜಿನೀರ್ಸ್ ಗಳು ಎಂದು ಕರೆಯಬಹುದೇ?’

ತಲೆ ಮೇಲೆತ್ತದ ಶಿಕ್ಷಕಿಗೆ ಏನಾಯಿತೋ ಎಂದು ನನ್ನ ಚಿಂತೆ. ಆಕೆಗೆ ಲೊಕೇಶನ ಮಾತುಗಳನ್ನು ಕೇಳಿ ಕುಂತಲ್ಲೇ ಹೃದಯಘಾತವಾಗಿರಬಹುದೇ?!

'ನಾನು ಅಥವಾ ನಿಮ್ಮಲ್ಲೇ ಯಾರೊಬ್ಬರು ಶುರು ಮಾಡಲೋಗುತ್ತಿರುವ ಈ ಇನ್ಸ್ಟಿಟ್ಯೂಟ್ ಮೊದಲು ಕಂಪನಿಗಳನ್ನು ಸಂಪರ್ಕಿಸಿ ಅವರು ಪ್ರಸ್ತುತ ವರ್ಷಕ್ಕೆ ನೇಮಕಾತಿ ಮಾಡಲು ಯೋಜಿಸಿರುವ ವಿದ್ಯಾರ್ಥಿಗಳ ಅರ್ಹತೆ, ಬೇಡಿಕೆ ಹಾಗು ಒಟ್ಟು ಸಂಖ್ಯೆಯನ್ನು ಒಟ್ಟುಗೂಡಿಸಿಕೊಂಡು ಬರುತ್ತದೆ. ಹೀಗೆ ಎಂಟತ್ತು ಕಂಪನಿಗಳನ್ನು ಸಂಪರ್ಕಿಸಿ ವಿವರಗಳನ್ನು ಗುರುತಾಕಿಕೊಂಡು ಕಾಲೇಜನ್ನು ಸಂಪರ್ಕಿಸುವುದು. ಕಾಲೇಜಿನಲ್ಲಿ ತಮ್ಮಲ್ಲಿರುವ ವಿವರಗಳ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಆಯಾ ವಿಷಯದ್ಲಲಿಯೇ ಸಂಜೆ ಕಾಲೇಜು ಮುಗಿದ ಬಳಿಕ ಅಥವಾ ವಾರಾಂತ್ಯದಲ್ಲಿ ತರಬೇತಿಯನ್ನು ನೀಡುವುದು. ಉದಾಹರಣೆಗೆ ಇಂದು ಒಬ್ಬ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಮಾಡಿದ ವಿದ್ಯಾರ್ಥಿ ಹೆಚ್ಚಾಗಿ ಆಯ್ಕೆಯಾಗುತ್ತಿರುವುದು ಪ್ರೋಗ್ರಾಮಿಂಗ್ ಆಧಾರಿತ ಕೆಲಸಗಳ ಮೇಲೆಯೇ. ಅಂದರೆ ಕಂಪ್ಯೂಟರ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮಾಡಬೇಕಾದ ಕೆಲಸ. ಇದು ಅವನ ಸ್ವಂತದ ಆಯ್ಕೆಯಾಗದಿದ್ದರೂ ಪ್ರಸ್ತುತ ಪರಿಸ್ಥಿತಿ ಆತನನ್ನು ಮೂಕನನ್ನಾಗಿಸುತ್ತದೆ. ಹಾಗಾದರೆ ಕೊನೆಗೆ ಕಂಪ್ಯೂಟರ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮಾಡುವ ಕೆಲಸವನ್ನೇ ಈತ ಮಾಡಬೇಕಾದರೆ ಎಲೆಕ್ಟ್ರಿಕಲ್ ಇಂಜಿನಿಯರಿಂಗನ್ನು ತನ್ನ ನಾಲ್ಕು ವರ್ಷಗಳ ಕಲಿಕೆಯಲ್ಲಿ ಕಲಿತು ಏನು ಪ್ರಯೋಜನ? ಇಂದು ಬಹುಪಾಲು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಗೋಳು ಇದೆಯೇ. ಓದುವುದು ಒಂದು ಮಾಡುವುದು ಬೇರೊಂದು! ಇಲ್ಲಿ ಶುರುವಾಗುವ ಇನ್ಸ್ಟಿಟ್ಯೂಟ್, ಕಂಪನಿಗಳಿಂದ ಕರಾರುವಕ್ಕಾಗಿ ಡೇಟಾಗಳನ್ನು ಸಂಗ್ರಹಿಸಿ ಅವರವರ ಐಚ್ಚಿಕ ವಿಷಯಗಳಲ್ಲೇ ತರಬೇತಿಯನ್ನು ನೀಡುತ್ತದೆ. ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅವರ ವಲಯದಲ್ಲಿನದೇ ಕಂಪನಿಗಳ ಅಗತ್ಯದ ಮೇರೆಗೆ ತರಬೇತಿಯನ್ನು ನೀಡುತ್ತದೆ. ಅದೂ ಸಹ ಕೆಲಸ ದೊರೆತ ಮೊದಲ ಆರು ತಿಂಗಳು ಕಂಪೆನಿಗಳಲ್ಲಿ ನೀಡುವ ತರಬೇತಿಯಂತೆಯೆ. ಸಾದ್ಯವಾದರೆ ಈ ತರಬೇತಿಯಲ್ಲಿ ವಿದ್ಯಾರ್ಥಿಗಳು ತಮ್ಮ ಕೊನೆಯ ವರ್ಷದ ಪ್ರೊಜೆಕ್ಕ್ಟ್ ಅನ್ನೂ ಸಹ ಮಾಡಿಕೊಳ್ಳಬಹುದು.

ಈಗ ಸಂಸ್ಥೆಯ ಪ್ರಯೋಜನಕ್ಕೆ ಬಂದರೆ, ಮೊದಲು ವಿದ್ಯಾರ್ಥಿಗಳು ಅವರವರ ಐಚ್ಚಿಕ ವಿಷಯಗಳಲ್ಲೇ ವೃತ್ತಿ ಆಧಾರಿತ ತರಬೇತಿಯನ್ನು ಪಡೆದು ವರ್ಷಾಂತ್ಯದ ಹೊತ್ತಿಗೆ ಏಕ್ದಂ ರೆಡಿಯಾಗಿರುತ್ತಾರೆ. ಇದರಿಂದ ಕಂಪನಿಗಳಿಗೂ ತರಬೇತಿಯ ಹೊರೆ ಕಡಿಮೆಯಾಗಿ ಅವರಿಗಿಚ್ಚಿಸಿದ ವಿದ್ಯಾರ್ಥಿಗಳೇ ಪ್ಲೇಸ್ಮೆಂಟ್ ಸಮಯದಲ್ಲಿ ಇಲ್ಲಿ ತಯಾರಾಗಿ ನಿಂತಿರುತ್ತಾರೆ. ಎಲ್ಲಾ ಬಗೆಯ ಕಂಪನಿಗಳು ತಾವು ನಿರಾಳವಾಗಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಬಹುದು. ಅಲ್ಲದೆ ಪ್ರೊಬೇಷನ್ ಪಿರಿಯಡ್ ಅದು ಇದು ಏನದೆ ಮೊದಲ ದಿನದಿಂದಲೇ ಉದ್ಯೋಗಿಗಳ ಪೂರ್ಣ ಲಾಭವನ್ನು ಪಡೆಯಬಹುದು. ಒಂದು ಪಕ್ಷ ವಿದ್ಯಾರ್ಥಿಗಳು ಕಾಲೇಜಿಗೆ ಬರುವ ಕಂಪನಿಗಳಲ್ಲಿ ಆಯ್ಕೆಯಾಗದಿದ್ದರೂ ಅವರಿಗೊಂದು ವೃತ್ತಿ ಆಧಾರಿತ ತರಬೇತಿ ಅದಾಗಲೇ ಆಗಿರುತ್ತದೆ. ಇದು ಕೇವಲ ಪದವಿ ಪ್ರಮಾಣಪತ್ರವನ್ನು ಹಿಡಿದು ಕೆಲಸವನ್ನು ಅರಸುವುದಕಿಂತ ಎಷ್ಟೋ ಪಾಲು ವಾಸಿ ಅಲ್ಲವೇ? ಅಲ್ಲದೆ ಹಳ್ಳಿಗಳ ಕಾಲೇಜುಗಳಿಗೂ ಹೆಚ್ಚೆಚ್ಚು ಕಂಪನಿಗಳು ಬರುವುದರಿಂದ ಕಾಲೇಜಿಗೂ ಒಳ್ಳೆಯ ಹೆಸರು, ಹಳ್ಳಿಯ ವಿದ್ಯಾರ್ಥಿಗಳಿಗೂ ಒಂದೊಳ್ಳೆಯ ಅವಕಾಶ ದೊರೆತಂದಾಗುತ್ತದೆ.’ ಎಂದು ಸುಮ್ಮನಾಗುತ್ತಾನೆ.

ಪ್ಲೇಸ್ಮೆಂಟ್ ಎಂಬ ಪದವನ್ನು ಕೇಳಿಯೋ ಏನೋ ಇಡೀ ಕ್ಲಾಸೇ ಎಲ್ಲಿಲ್ಲದ ಒಂದು ಮೌನದಲ್ಲಿ ಲೀನವಾಯಿತು. ಗರಗರನೆ ತಿರುಗುತ್ತಿದ್ದ ಸೀಲಿಂಗ್ ಫ್ಯಾನ್ ಒಂದನ್ನು ಬಿಟ್ಟು.

'ವಾವ್.. What a concenpt .. ಬ್ರಿಲಿಯೆಂಟ್..!! ಎನುತ ನಿಂತು ಚಪ್ಪಾಳೆಯನ್ನು ಹೊಡೆಯ ತೊಡಗಿದಳು ಉಷಾ! ಆಕೆಯನ್ನು ಇಡೀ ಕ್ಲಾಸೇ ಅನುಕರಿಣಿಸಿತು. ಯಾರಿಗೂ ಬೇಡವಾದ ಪಾಪದ ಕೂಸಾಗಿ ನಾನು ಏನು ಮಾಡುವುದೆಂದು ತಿಳಿಯದೆ ಸುಮ್ಮನೆ ನಿಂತೆ.

ಕೂಡಲೇ ಉಷಾ ಕ್ಲಾಸಿನೆಡೆಗೆ ಮುಖ ಮಾಡಿ,

'ಹಲೋ, will you guys stop clapping please?! ಅಲ್ಲರೀ ಇದನ್ನ ಯಾರಾದ್ರೂ ಬಿಸಿನೆಸ್ ಅಂತಾರ? ಎಂದು ಕ್ಲಾಸನ್ನು ಒಮ್ಮೆ ನೋಡಿದಳು. ‘ನಮ್ಮೂರಲ್ಲಿ ಸೀಬೆಕಾಯಿ ಮಾರೋನು ಸಹ ಇದಕ್ಕಿಂತ ಒಳ್ಳೆ ಬಿಸಿನೆಸ್ ಮಾಡ್ತಾನೆ. ಇವನ್ಯಾರೊ ಹೇಳ್ದ , ಇವ್ರ್ ಕೇಳಿದ್ರು' ಎಂದು ಮುಖಕ್ಕೆ ಬಡಿದಂತೆ ಆಕೆ ಹೇಳಿದಳು. ಉಷಾಳ ಶಾಖವನ್ನು ಕಂಡು ತಬ್ಬಿಬ್ಬಾದ ಲೋಕೇಶ ನನ್ನೆಡೆ ನೋಡಿದ. ಪ್ರತ್ಯುತ್ತರವಾಗಿ ನನ್ನ ಹನ್ನೆರೆಡು ಹಲ್ಲುಗಳು ಆತನನ್ನು ನೋಡಿ ನಲಿದವು. ನಂತರ ಉಷಾ ಲೆಕ್ಚರರ್ ನ ಬಳಿಗೊಗಿ 'Mom, Come on .. Will go out and Complain Princi' ಎಂದಾಗ ನನ್ನ ಜಂಘಾಬಲವೇ ನಡುಗಿಹೋಯಿತು! ಕಾಲೇಜಿಗೆ ಸೇರಿ ಆರು ತಿಂಗಳಾದರೂ ಯಾರು ಯಾರ ಮಗಳು ಯಾರು ಯಾರ ಅಮ್ಮ ಎಂದರಿಯದ ಸಾಮಾನ್ಯ ಜ್ಞಾನ ನಮಗಿಂದು ಕೈಕೊಟ್ಟಿತು. ಆದರೆ ಲೆಕ್ಚರರ್ಗೆ ಕೂತಲ್ಲೇ ಹೃದಯಾಘಾತವಾಗಿ ಏನೋ ಹೆಚ್ಚು-ಕಡಿಮೆಯಾಗಿರಬೇಕೆಂದು ಊಹಿಸಿದ ನನಗೆ ತುಸು ಸಮಾಧಾನವಾಯಿತು. ಅಸಲಿಗೆ ನಮ್ಮ ಕ್ಲಾಸ್ ರೂಮಿನ ಏಕೈಕ ಫ್ಯಾನಿನ ಮಹಿಮೆಗೆ ಆ ತಾಯಿ ಕೂತಲ್ಲೇ ನಿದ್ರೆಗೆ ಜಾರಿದ್ದರು!! ಮಧ್ಯಾಹ್ನದ ನಿದ್ರೆಯ ಮತ್ತಿನಿಂದ ನಾವುಗಳು ಪರದಾಡುವುದು ಇಂದು ಆಕೆಗೂ ತಿಳಿದಿರಬಹುದು. ಉಷಾಳ ಮಾತನ್ನು ಕೇಳಿ ಎದ್ದು ಕೊಸರಾಡಿಕೊಳುತ್ತಾ ಏನನ್ನೂ ಮಾತನಾಡದೆ ಕ್ಲಾಸ್ ರೂಮಿನಿಂದ ಹೊರನೆಡೆದರು. ಅವರುಗಳು ಹೋದ ನಂತರ ಇಡೀ ಕ್ಲಾಸೇ ಶಿಳ್ಳು ಚಪ್ಪಾಳೆಗಳಿಂದ ಕೇಕೆ ಹಾಕಿತು. ಲೆಕ್ಚರರ್ನ್ನು ನಿದ್ರೆಗೆ ಜಾರಿಸಿದ ನಮ್ಮ ಯಶೋಗಾಥೆ ಮುಂದಿನ ಹಲವು ದಿನಗಳವರೆಗೂ ಕಾಲೇಜಿನ ಕ್ಯಾಂಪಸ್ ನಲ್ಲಿ ರಾರಾಜಿಸಿತು...


ಮುಂದುವರೆಯುವುದು..

Sunday, May 24, 2020

ಕಾದಂಬರಿ : ಪಯಣ -1

ಕ್ಯಾನ್ಬೆರಾ, ಆಸ್ಟ್ರೇಲಿಯ.

ಸಾವಿರಾರು ಕಿಲೋಮೀಟರ್ ದೂರ ದ್ವೀಪದೇಶದ, ಸುಂದರ ರಾಜಧಾನಿಯ, ನಗರವೊಂದರ ಗಜಿಬಿಜಿಗುಡುವ ರಸ್ತೆಯ, ಕಡೆಯ ತಿರುವಿನ, ಕೊನೆಯ ಅಪಾರ್ಟ್ಮೆಂಟಿನ ತುತ್ತತುದಿಯ ಫ್ಲೋರಿನ ನಾಲ್ಕನೇ ಮನೆಯ ಎರಡನೇ ರೂಮಿನ ಮೂಲೆಗೆ ಅಂಟಿಕೊಂಡಿರುವ ಬೆಡ್ಡಿನ ಬೆಚ್ಚಗಿನ ಹೊದಿಕೆಯ ಹಿತಾನಭಾವವನ್ನು ಆಸ್ವಾದಿಸುತ್ತಾ ಮಲಗಿದ್ದಳು ಇಶಾ.

ಚಳಿಗಾಲದ ಆ ಬೆಳಗು ತನ್ನೂರಿನ ಬೆಣ್ಣೆಯಂತಹ ಮಂಜಿನ ಸವಿನೆನಪನ್ನು ಹೊತ್ತು ತಂದು ಮತ್ತೊಂದು ಸುತ್ತಿನ ನಿದ್ರೆಗೆ ಜಾರಿಸಿ ಕೊನೆಗೂ ಆಕೆಯನ್ನು ಎಚ್ಚರಿಸಿದಾಗ ಘಂಟೆ ಒಂಬತ್ತು. ದಡಬಡನೆ ಎದ್ದು ರೆಡಿಯಾಗಿ ನಾಲ್ಕೈದು ನಿಮಿಷ ಬಾಲ್ಕನಿಯಲ್ಲಿ ಧಾನ್ಯವನ್ನು ಮಾಡಿ ತನ್ನ ಕಪ್ಪನೆಯ ನೀಳ ಕೂದಲನ್ನು ಹಾಗೆಯೇ ಹಿಂದಕ್ಕೆ ಇಳಿಬಿಟ್ಟು ಪ್ರಾಜೆಕ್ಟ್ ಥಿಸಿಸ್ನ ಹಾಳೆಗಳನ್ನು ಗಡಿಬಿಡಿಯಲ್ಲಿ ಜೋಡಿಸಿಕೊಂಡು ಫ್ರಿಜ್ಜಿನ ಬಳಿ ಬಂದು ನಿಂತರೆ ಮೊಟ್ಟೆ , ಹಾಲು , ಕಾರ್ನ್ ಫ್ಲಿಕ್ಸ್ ಹಾಗು ಹಲವು ಬಗೆಯ ತರಕಾರಿ ಹಣ್ಣುಗಳು. ಅವಸರದಲ್ಲಿ ಏನು ಮಾಡಬೇಕೆಂದು ತೋಚದೆ ಕೊನೆಗೆ ಹಸಿರು ಸೊಪ್ಪುಗಳ ನಡುವೆ ಏಕಾಂತವಾಗಿ ಬಿದ್ದಿದ್ದ ಸೇಬೊಂದನ್ನು ಕೈಗೆತ್ತಿಕೊಂಡು ರೂಮಿನಿಂದ ಹೊರನೆಡೆದಳು.

'ಇಶಾ.. ನಿಲ್ಲೆ .. ನಾನೂ ಬರ್ತಾ ಇದ್ದೀನಿ..' ಪಕ್ಕದ ಮನೆಯಿಂದ ಇಡೀ ಕಟ್ಟಡವೇ ನಡುಗುವಂತೆ ಅರಚಿದಳು ಅಮೆಲಿ. ದೂರದ ನ್ಯೂಯಾರ್ಕ್ನವಳು. ನ್ಯೂಯಾರ್ಕ್ ಹಾಗು ಕನ್ನಡ ? ಹೌದು.  ಪಿಎಚ್ಡಿ ಮಾಡಲು ಬಂದ ಈಕೆ ಮೊದಲ ವರ್ಷದ ನೈಟ್ ಔಟ್ ಪಾರ್ಟಿಯಲ್ಲಿ ದೇಶ ಭಾಷೆಗಳ ಬಗೆಗೆ ಇಶಾಳೊಟ್ಟಿಗೆ ಘೋರ ವಾಗ್ವಾದಕ್ಕೆ ಇಳಿದು, ಸೋತು, ಇನ್ನು ಆರೇ ತಿಂಗಳಲ್ಲಿ ಕನ್ನಡವನ್ನು ಓದುವುದು ಹಾಗು ಬರೆಯುವುದನ್ನು ಕಲಿಯುವುದಾಗಿ ಹೇಳಿ ಅಂತೆಯೇ ಈಗ ಮೂರು ವರ್ಷಗಳ ನಂತರ ಇಶಾಳನ್ನೂ ನಾಚಿಸುವಂತಹ ಕನ್ನಡವನ್ನು ಕಲಿತಿದ್ದಾಳೆ. ಸದ್ಯಕ್ಕೆ ಇಶಾಳ ಬೆಸ್ಟ್ ಫ್ರೆಂಡ್ ಕಮ್ ಫ್ಲೋರ್ ಮೇಟ್.

'ಏನೇ .. ನೀನೂ ಇನ್ನೂ ಹೊರ್ಟಿಲ್ವ..?' ಅಪಾರ್ಟ್ ಮೆಂಟಿನ ಕಿಟಕಿಯಯನ್ನು ಇಣುಕುತ್ತಾ ಕೇಳಿದಳು ಇಶಾ.

ಅಚ್ಚುಗಟ್ಟಾದ ಚಿನ್ನದ ಬಣ್ಣದ ಕೂದಲಿನ ತಿರುಬನ್ನು ಹಿಂದಕ್ಕೆ ಕಟ್ಟಿ ಅದಕೊಂಡು ಚಂದದ ಹೂವನ್ನು ಮುಡಿದು ಬೆಳ್ಳನೆಯ ಸೀರೆಯನುಟ್ಟು ಹೊರಬಂದ ಅಮೆಲಿ,

'ಸೀ .. ಪಕ್ಕಾ ಇಂಡಿಯನ್ ಹುಡ್ಗಿತರ ಕಾಣ್ತಾ ಇದೀನಿ ಆಲ್ವ..' ಎಂದು ಎಡಕ್ಕೂ ಬಲಕ್ಕೂ ತಿರುಗಿ ತನ್ನ ಕೆಂದಾವರೆ ಬಣ್ಣದ ಸೌಂದರ್ಯವನ್ನು  ಪ್ರದರ್ಶಿಸತೊಡಗಿದಳು. ರಸಿಕರ ಕಣ್ಣಿಗೆ ಮಲ್ಲಿಗೆ ಹೂವಿನಂತೆ ಕಾಣುವ ಆಕೆಯ ಸೌಂದರ್ಯ ಇಶಾಳಿಗೆ ಕಿಂಚಿತ್ತೂ ಕ್ಯಾರೆ ಎನಿಸಲಿಲ್ಲ.

'ಹುಂ ಬಾರಮ್ಮ .. ನ್ಯೂಯಾರ್ಕಿನ ಗೌರಮ್ಮ ..ಹನ್ನೊಂದ್ ಘಂಟೆಯೊಳಗೆ ಥೀಸಿಸ್ ಸಬ್ಮಿಟ್ ಮಾಡ್ಬೇಕು..ನೆನ್ಪ್ ಇದ್ಯಾ..' ಎನುತ ತನ್ನೊಳಗಿನ ವಯೋಸಹಜ ಹೆಣ್ಣಿನ ಸಣ್ಣದಾದ ಅಸೂಯೆಯನ್ನು ಹತ್ತಿಕ್ಕಿಕೊಂಡು ಆಕೆ ಹೇಳಿದಳು.

'ಎಕ್ಸ್ ಕ್ಯೂಸ್ ಮೀ .. ರಾತ್ರಿ ಎಷ್ಟ್ ಬಿಯರ್ ಕುಡಿದಿ ಡಿಯರ್..? ಥೀಸಿಸ್ ಸಬ್ಮಿಶನ್ ಡೇಟ್ ಪೋಸ್ಟ್ ಪೊನ್ಡ್ ಆಗಿದೆ ಅಂತ ನಿನ್ನೇನೆ ಅನೌನ್ಸ್ ಮಾಡಿದ್ರಲ್ಲ ..' ಹಾಲುಬಿಳುಪಿನ ತನ್ನ ಸೊಂಟದ ಮೇಲೆ ಕೈಯಿಟ್ಟು ಕೇಳಿದಳು ಅಮೆಲಿ.

ಒಮ್ಮೆಲೇ ಇಶಾಳಿಗೆ ತನ್ನ ಮರುವಿನ ಅರಿವಾಯಿತು. ನೆನ್ನೆ ಇಡೀ ಕ್ಲಾಸಿಗೆ ಕ್ಲಾಸೇ ಈ ಬಗ್ಗೆ ಹೇಳಿಕೊಂಡು ಸಂಭ್ರಮಿಸಿದ ಕ್ಷಣಗಳೇ ಆಕೆಯಿಂದ ಮರೆಯಾಗಿವೆ. ಅದೇನೋ ತಿಳಿದಿಲ್ಲ. ಇತ್ತೀಚಿಗೆ ಈ ಬಗೆಯ ಮರೆಯುವಿಕೆ ಆಕೆಗೆ ಸರ್ವೇ ಸಾಮಾನ್ಯ ವಿಷಯವಾಗಿಬಿಟ್ಟಿದೆ.

'ಒಹ್ ಗಾಡ್ .. ನನ್ ಮೆಮೋರಿಗೂ ಏನಾಗಿದೆ ಇತ್ತೀಚೆಗೆ ಅಂತ..' ಎಂದು ಕೈಲಿದ್ದ ಅರೆತಿಂದ ಸೇಬಿನಿಂದ ತನ್ನ ಹಣೆಯ ಮೇಲೆ ಚಚ್ಚಿಕೊಂಡು ಬಾಲನಗೆಯನ್ನು ಬೀರಿದ ಇಶಾ ದೊಡ್ಡ ಹೊರೆಯೊಂದು  ಹೆಗಲಮೇಲಿಂದ ಕೆಳಗಿಳಿದಂತೆ ಪಕ್ಕದ ಗೋಡೆಗೆ ಒರಗಿ ನಿಂತಳು.

'ಮೇ ಬಿ ಥೀಸಿಸ್ ಸಬ್ಜೆಕ್ಟ್ ಅನ್ನೇ ನೀನು ಚೇಂಜ್ ಮಾಡ್ಬೇಕು ಅನ್ಸುತ್ತೆ ..' ಎಂದ ಅಮೆಲಿ .. 'ಫ಼ಾರ್ಗಾಟ್ ಟು ಇನ್ಫಾರಂ .. ನೆನ್ನೆ ಇಂಡಿಯಾದಿಂದ ನಿನಗೆ ಕೋರಿಯರ್  ಏನೋ ಬಂದಿದೆ ಅಂತ ವಾಚ್ ಮ್ಯಾನ್ ಹೇಳ್ತಾ ಇದ್ದಾ .. Check it out ' ಎಂದು ಕನ್ನಡಿಯ ಮುಂದೆ ಬಾಗಿ ತನ್ನ ನುಣುಪಾದ ಕೆನ್ನೆಗಳಿಗೆ ಮೇಕಪ್ಪಿನ ಫೈನಲ್ ಟಚ್ಚನ್ನು ಕೊಡತೊಡಗಿದಳು.

'ಕೊರಿಯರ..?' ಎಂದು ಸಂಶಯದಿಂದ ಕೇಳಿದ ಇಶಾ ಕೂಡಲೇ ಲಿಫ್ಟಿನಿಂದ ಕೆಳಗಿಳಿದು ಸ್ವಲ್ಪ ಸಮಯದ ನಂತರ ಬಿಳಿಯ ಕವರಿನ ಒಂದು ಲಕೋಟೆಯನ್ನು ಕೈಯಲ್ಲಿಡಿದು ತಂದಳು.

ಕಣ್ಣುಗಳಿಗೆ ಘಾಡವಾದ ಕಪ್ಪನ್ನು ಮೆತ್ತಿಕೊಳ್ಳುತ್ತಾ ಯಾವುದೊ ಒಂದು ಹಿಂದಿ ಹಾಡನ್ನು ಗುನುಗುತ್ತಿದ್ದ ಅಮೆಲಿ 'ಏನದು..' ಎಂಬಂತೆ ಕಣ್ ಸನ್ನೆಯಲ್ಲಿಯೇ ಕೇಳಿದಳು. ಇಶಾ ಕಾರಿಡಾರಿನಲ್ಲಿಯೇ ಲಕೋಟೆಯನ್ನು ಒಡೆದು ವಿಳಾಸವನ್ನು ಓದಿ ನಂತರ ಕೆಲಕ್ಷಣ ಮೌನವಾಗಿ 'ಹಿ ಡಿಡ್ ಇಟ್.. ಯಸ್ .. ಐ ನ್ಯೂ ಇಟ್' ಎಂದು ಖುಷಿಯಿಂದ ಹೇಳುತ್ತಾ ಅದರೊಳಗಿದ್ದ ನೂರಾರು ಪುಟಗಳ ಹಾಳೆಗಳನ್ನು ಹೊರತೆಗೆದಳು.

'ಇಶಾ .. ಥೀಸಿಸ್ ಅನ್ನೂ ನೀನು ಬೇರೆಯವರ ಕೈಲಿ ಬರ್ಸೊದ... ಏನಾಗಿದೆ ನಿಂಗೆ ..By the way, who is that he ..?' ಎಂದು ಛೇಡಿಸುವಂತೆ ಕೇಳಿದಾಗ,

'ಸುಮ್ನಿರಮ್ಮ .. ನಾನೇನ್ ನೀನ್ ಕೆಟ್ಟೋದ್ನ... ಇದು ನನ್ನ ಸ್ಟೂಡೆಂಟ್ , Sorry , ಫ್ರೆಂಡೊಬ್ಬ ಬರ್ದಿರೋ ಡ್ರಾಫ್ಟ್ ನಾವೆಲ್.. ಓದಿ ಅಂತ ನನ್ಗೆ ಮೊದಲ ಕಾಪಿ ಕಳ್ಸಿದ್ದಾನೆ.. ' ಎಂದಳು.

'ನಾನೇನ್ ನೀನ್ ಕೆಟ್ಟೋದ್ನ..' ಎಂಬ ವಾಕ್ಯದ ಅರ್ಥ ಅರಿಯದಾದರೂ 'ಪರ್ವಾಗಿಲ್ಲ ಮೇಡಂ.. ತಮಗೆ ನಾವೆಲ್ ಎಡಿಟ್ ಮಾಡೋ ಕ್ಯಾಪಾಸಿಟಿ ಅಂತ ನನಗೆ ಗೊತ್ತಿರ್ಲಿಲ್ಲ.. ಎನಿವೇಸ್, ನೀನ್ ಓದಿ ಆದ್ಮೇಲೆ ವಿಥ್ ಯುವರ್ ಸ್ಟೂಡೆಂಟ್ ಕಮ್  ಫ್ರೆಂಡ್ ಪರ್ಮಿಷನ್ ಇದ್ರೆ ನಾನು ಸ್ವಲ್ಪ ಓದುತ್ತೀನಿ.. ಕೊಡ್ತಿಯಾ ' ಎಂದು ತನಗೂ ಕನ್ನಡವನ್ನು ಓದಲು ಬರುತ್ತದೆ ಎಂಬುದನ್ನು ಇಶಾಳಿಗೆ ಮನದಟ್ಟು ಮಾಡಿದಳು.  ಹೀಗೆ ಒಬ್ಬರನ್ನೊಬ್ಬರು ಛೇಡಿಸಿಕೊಂಡು  ಇನ್ನೇನು ಇಬ್ಬರು ಹೊರಟು ಕಾಲೇಜಿಗೆ ನೆಡೆಯಬೇಕು ಎನ್ನುವಷ್ಟರಲ್ಲಿ ಇಶಾ ಆಕೆಯನ್ನು ತಡೆದು,

'ಅಮಿ .. ನೀನ್ ಹೋಗು .. ಹೇಗೂ ಥೀಸಿಸ್ ಸಬ್ಮಿಶನ್ ಇಲ್ಲ .. ನಂಗೆ ಯಾಕೋ ಕ್ಲಾಸ್ಸಲ್ಲಿ ಕೂರಕ್ಕೆ ಮನ್ಸ್ ಇಲ್ಲ .. ' ಎಂದಳು.

ಕೆಲ ಸೆಕೆಂಡುಗಳಲ್ಲಿಯೇ ಬದಲಾದ ಇಶಾಳ ನಿರ್ಧಾರವನ್ನು ಕಂಡು ಕೊಂಚ ಸಂಶಯಗೊಂಡ ಅಮೆಲಿ ನಗುತ್ತಲೇ 'ಕುಚ್ ತೊ ಹೂಹ ಹೇ .. ಕುಚ್ ಹೊ ಗಯಾ ಹೆ..' ಎಂದು ಬರೋಬ್ಬರಿ ಇಪ್ಪತ್ತು ಬಾರಿ ನೋಡಿರುವ ‘ಕಲ್ ಹೊ ನಾ ಹೊ’ ಚಿತ್ರದ ಹಾಡನ್ನು ಅಣಕಿಸುವಂತೆ ಆಕೆಯ ಬಳಿಗೆ ಬಂದು ಹಾಡತೊಡಗಿದಳು. ಅರ್ಥವಾಗದ ಹಳೆಗನ್ನಡ ಪದಗಳ ಬಳಕೆಯನ್ನು ಮಾಡಿ ಹೇಗೋ ಆಕೆಯನ್ನು ಕಾಲೇಜಿಗೆ ತಳ್ಳಿದ ಮೇಲೆ ರೂಮಿಗೆ ವಾಪಸ್ಸಾದ ಇಶಾ ತನ್ನ ಸಂಯಮದ ಕಟ್ಟೆ ಒಡೆದಂತೆ ಹಾಕಿರುವ ಚಪ್ಪಲಿಯನ್ನೂ ಕಳಚದೆ ಮೊದಲ ಹಾಳೆಯನ್ನು ತೆರೆದು ಒಂದೇ ನಿಮಿಷದಲ್ಲಿ ಓದುವಂತೆ ಅಷ್ಟೂ ಹಾಳೆಗಳನ್ನು ಪಟಪಟನೆ ತಿರುವತೊಡಗಿದಳು.

ಮೂರ್ನಾಲ್ಕು ಭಾರಿ ಅಳಿಸಿ, ಮತ್ತೆರೆಡು ಬಾರಿ ನಗಿಸಿ, ಭಯ, ಖುಷಿ , ಹಠ , ಅಸೂಹೆ , ಹಾಗು ರೋಚಕತೆಯಿಂದ ಕೂಡಿದ ಕಥೆ ಒಮ್ಮೆಲೇ ಏನೆಂದು ಅರಿವಾಗದಿದ್ದರೂ ಕೊನೆಯ ಕೆಲ ಪುಟವನ್ನು ಓದಿದಾಗಲೇ ಅವಳಿಗೆ ಅದರ ಭಾಗಶಃ ರೂಪ ಗೋಚರಿಸತೊಡಗಿದ್ದು.  ಬೆಳಗಿನಿಂದ ರಾತ್ರಿಯವರೆಗೂ ಒಂದೇ ಗುಕ್ಕಿನಲ್ಲಿ ಓದುವಂತೆ ಮಾಡಿದ ಆ ಹಾಳೆಗಳು ಕತೆಯ ಅಂತ್ಯವನ್ನು ಮಾತ್ರ  ಕಾಣಿಸಿರಲಿಲ್ಲ. ಏಕೆಂದು ಆತನಿಗೆ ಕೂಡಲೇ ಇಮೇಲ್ ಮಾಡಿ ಕೇಳಿಬಿಡಬೇಕೆಂಬ ಮನಸ್ಸಾಯಿತಾದರೂ ಏಕೋ ಆಕೆ ಸುಮ್ಮನಾದಳು. ಅಂತ್ಯದ ಆತುರಕಿಂತಲೂ ಇಶಾಳ ಮನಸ್ಸು ಆಗ ಏಕಾಂತದ ಮೊರೆಯನ್ನು ಬಯಸಿತು. ಇಲ್ಲವಾದರೆ ಬೆಳಗಿನಿಂದ ಸಂಜೆಯ ತನಕ ಗ್ರಹಿಸಿದ ಅಮೂಲ್ಯವಾದ ಜೀವನ ಪಾಠವೊಂದು ಕರಗಿ ನೀರಾಗಿ ಹೋಗಬಹುದೆಂಬ ಭಾವ. ಕೂಡಲೇ ಮೇಲೆದ್ದು ಮೊಬೈಲಿನಲ್ಲಿ ಸಮಯವನ್ನು ನೋಡಿದಳು. ಅದಾಗಲೇ ರಾತ್ರಿ ಎಂಟರ ಆಸುಪಾಸು. ಸ್ನಾನಾದಿಗಳನ್ನು ಮುಗಿಸಿ ಒಂದರೆ ಹೊತ್ತು ಧ್ಯಾನವನ್ನು ಮಾಡಿದರೂ ಮನಸ್ಸು ಶಾಂತವಾಗಲಿಲ್ಲ. ಓದಿದ್ದ ಹಾಳೆಗಳೆಲ್ಲವನ್ನು ಜೋಡಿಸಿ ಅಮೆಲಿಯ ರೂಮಿನ ಟೇಬಲ್ಲಿನ ಮೇಲಿಟ್ಟು ಕೂಡಲೇ ಹತ್ತಿರದ ಕೃಷ್ಣನ ದೇವಾಯಲಯಕ್ಕೆ ಹೋಗಲು ನಿರ್ಧರಿಸಿದರು. ಕೈತುಂಬ ಮುಚ್ಚುವ ನೀಳವಾದ ಸ್ವೇಟ್ಟರು ಹಾಗು ತಲೆಗೆ ಒಂದು ಕಪ್ಪಾದ ಟೋಪಿಯೊಂದನ್ನು ತೊಟ್ಟು ದೇವಾಲಯದ ಬಳಿಗೆ ಹೆಜ್ಜೆಯಿಟ್ಟಳು.

ನಡುಗಹುಟ್ಟಿಸುವ ಆ ಚಳಿಯಲ್ಲಿ ಒಂದರೆಕಿಲೋಮೀಟರ್ ನಡೆಯುವಷ್ಟರಲ್ಲಿಯೇ ದೇವಾಲಯದ ಘಂಟೆಗಳ ಸದ್ದು ಕೇಳತೊಡಗಿದವು. ಇಡೀ ನಗರದಲ್ಲೇ ಇರುವ ಕೆಲವೇ ಕೆಲವು ದೇವಾಲಗಳಲ್ಲಿ ಕೃಷ್ಣನ ಈ ದೇವಾಲಯ ಕೆಲವೊಮ್ಮೆ ರಾತ್ರಿಯಿಡಿ ತೆರೆದಿರುತ್ತದೆ ಹಾಗು ಸಾಮೂಹಿಕ ಭಜನೆ ಮತ್ತಿತರ ಕಾರ್ಯಕ್ರಮಗಳು ನೆಡೆಯುತ್ತವೆ. ಬಿಳಿಯರು, ಕರಿಯರು, ಮೇಲು, ಕೀಳು ಎಂದಿರದೆ ವಿಶ್ವದ ಎಲ್ಲ ಸಮುದಾಯದ ಜನ ಅಲ್ಲಿ ಬೆರೆಯುತ್ತಾರೆ. ತಮಗೆ ತಿಳಿದ ಮಟ್ಟಿಗೆ ದೇವರನ್ನು ಆರಾಧಿಸುತ್ತಾರೆ. ವಾರಕ್ಕೆ ಒಂದೆರೆಡು ಬಾರಿ ಅಮೆಲಿಯೊಟ್ಟಿಗೆ ಬರುವ ಇಶಾ ತನ್ನೂರಿನ ದೇವಾಲಯದೊಳಗಿನ ತನ್ಮಯತೆಯನ್ನೇ ಇಲ್ಲಿಯೂ ಕಂಡಿದ್ದಾಳೆ.  ‘ದೇಶಯಾವುದಾದರೇನು, ಕೋಶ ಯಾರುಬರೆದರೇನು, ಭಕ್ತಿ ಇರಲು ಇಲ್ಲಿ  ಬಾರನೇನು ಅವನು?’ ಎಂದು ತನ್ನೊಳಗೆ ಅನೇಕ ಬಾರಿ ಹೇಳಿಕೊಳ್ಳುವ ಇಶಾ ದೇವಾಲಯದ ಬೃಹತ್ ದ್ವಾರದ ಮುಂದೆ ಬಂದು ನಿಂತಳು. ಚಪ್ಪಲಿಗಳನ್ನು ಪ್ರಾಂಗಣದವರೆಗೂ ಹಾಕಿಕೊಂಡು ಹೋಗಬಾಹುದಾದರೂ ಎಂದಿನಂತೆಯೇ ಅವುಗಳನ್ನು ಅಲ್ಲಿಯೇ ಬಿಟ್ಟು ಬಿಳಿಯ ಗ್ರಾನೈಟ್ ಕಲ್ಲುಗಳಿಂದ ಮಾಡಿದ ಮೆಟ್ಟಿಲುಗಳನ್ನು ಒಂದೊಂದಾಗಿಯೇ ಹತ್ತತೊಡಗಿದಳು. ಶ್ರೀಕೃಷ್ಣನಿಗೆ ಕೈ ಮುಗಿದು ತಾನು ಎಂದಿನಂತೆ ಕೂರುವ ಸ್ಥಳಕ್ಕೆ ಬಂದು ಕಂಬಒರಗಿ ಕೂತರೆ ತಲೆ ಯಾಕೋ ಭಾರವಾಗತೊಡಗಿತು.. ಅಲ್ಲಿ ಸಂಚರಿಸುತ್ತಿದ್ದ ಬಹುಷಃ ಎಲ್ಲ ಜಾತಿಯ ಹಾಗು ವರ್ಣದ ಜನರ ಗುಂಪಿನಲ್ಲಿ ಅವರಿಗೆ ತಾನು ಓದಿದ ಕತೆಯ ಒಂದು ಚಹರೆ ಬಹುವಾಗಿ ಕಾಡತೊಡಗಿತು.

ನಿಮಿಷಮಾತ್ರದಲ್ಲಿ ಕಣ್ಣೀರ ಧಾರೆ ಅವಳ ಕಪೋಲಗಳೆರಡನ್ನು  ತೊಯ್ಸತೊಡಗಿದವು. 

**

ಪಾಠ ಕಲಿಸುವ ಶಿಕ್ಷಕರೊಟ್ಟಿಗೆ ವಾಗ್ವಾದದಕ್ಕೆ ಇಳಿಯುವುದರ ಹುಚ್ಚು ಅದೆಂತಹದ್ದು ಎಂದು ಅಮೆಲಿಯನ್ನು ನೋಡಿ ಕಾಣಬೇಕು. ಅದು ಶಿಕ್ಷಣಕ್ಕೆ ಪೂರಕವಾದ ತಾರ್ಕಿಕ ಚರ್ಚೆಯೇ ಆಗಿದ್ದರೂ ಟಾಮ್ ಅಂಡ್ ಜೆರ್ರಿಯ ಇಲಿಯನ್ನು ಅಟ್ಟಾಡಿಸುವ ಆ ಆ ಪುಡಾರಿ ಬೆಕ್ಕಿನಂತೆ ಈಕೆ ತಮ್ಮ ಶಿಕ್ಷಕರನ್ನು ಪ್ರೆಶ್ನೆಗಳ ಸುರಿಮಳೆಯಲ್ಲಿ ಮೀಯಿಸಿ ಸತಾಯಿಸುತ್ತಾಳೆ. ಬಹುಷಃ ಆಕೆಯ ಕಲಿಕೆಯ ಶೈಲಿಯೇ ಹಾಗಿರಬಹುದು . ಆದರೆ ಕೆಲವೊಮ್ಮೆ ತನನ್ನು ಒಬ್ಬ ಪ್ರಚಂಡ ವಾಗ್ಮಿ ಎಂದು ಭ್ರಮಿಸಿಕೊಂಡು ಇನ್ನಿಲ್ಲದಂತೆ ಸೋತು ಅವರು ಹೇಳುವ ಯಾವ ಕಾರ್ಯಕ್ಕೂ ಸೈ ಎನ್ನುವ ಹುಡುಗಿ. ಆಕೆಯ ಕನ್ನಡ ಕಲಿಕೆಯೇ ಅದಕ್ಕೊಂದು ಉತ್ತಮ ಉದಾಹರಣೆ.

ಇಂದೂ ಸಹ ಕಾಲೇಜಿನಲ್ಲಿ ನೈಜೀರಿಯದ ಶಿಕ್ಷಕರೊಬ್ಬರಿಗೆ ಪ್ರೆಶ್ನೆಯನ್ನು ಕೇಳಿ , ಆ ಪ್ರೆಶ್ನೆ ಚರ್ಚೆಯಾಗಿ , ಚರ್ಚೆ ವಾದವಾಗಿ , ವಾದ ಬೈಗುಳವಾಗಿ , ಶಾಪವಾಗಿ ಕೊನೆಗೆ ಮುಗಿಯುವಷ್ಟರಲ್ಲಿ ಘಂಟೆ ರಾತ್ರಿಯ ಹನ್ನೊಂದು. ಆ ಆಸಾಮಿಯೂ ತಾನೇನು ಕಮ್ಮಿ ಇಲ್ಲವೆನ್ನುವಂತೆ ಈಕೆಯ ಮಾತಿಗೆ ಮಾತು ಬೆಳಸಿ ಕೊನೆಗೆ ತನ್ನ ಜೀವನದ ಮೇಲೆಯೇ ಜಿಗುಪ್ಸೆ ಬರುವಂತೆ ಬೈಸಿಕೊಂಡು ಹ್ಯಾಪೆ ಮೊರೆಯನ್ನು ಹಾಕಿಕೊಂಡು ಹೊರಟುಹೋದ.

ಇಶಾಳೊಟ್ಟಿಗೆ ಹೊರಗೆ ಊಟ ಮಾಡಿದಾರಾಯಿತು ಎಂದು ಬೇಗ ಬೇಗನೆ ಮನೆಗೆ ಬಂದ ಅಮೆಲಿಗೆ ಇಶಾ ಕಾಣಲಿಲ್ಲ. ಆಕೆಯ ಫೋನಂಬರಿಗೆ ಕೂಡಲೇ ಡಯಲ್ ಮಾಡಿದಳು. 'Dont disturb ..I’m in temple' ಎಂಬ ಆಟೋ ರಿಪ್ಲೈ ಮೆಸೇಜ್ ಬಂದ ಮೇಲೆ ತನ್ನ ರೂಮಿನೊಳಗೆ ಬಂದ ಆಕೆಗೆ ಡೆಸ್ಕಿನ ಮೇಲೆ ಇಡಲಾಗಿದ್ದ ಕಾದಂಬರಿಯ ಹಾಳೆಗಳ ಮೇಲೆ ದೃಷ್ಟಿ ನೆಟ್ಟಿತು. ಇಶಾ ಇಷ್ಟು ಬೇಗ ಕಾದಂಬರಿಯನ್ನು ಓದಿರುವಳೇ ಎಂಬ ಒಂದು ಸಣ್ಣ ಸಂಶಯ ಆಕೆಯಲ್ಲಿ ಮೂಡಿತು.

ಅದು ಭಾಷೆಯ ಆಕರ್ಷಣೆಯೋ ಏನೋ, ಬೆಡ್ಡಿನ ಮೇಲೆ ದೊಪ್ಪನೆ ಬಿದ್ದವಳೇ ಹಾಳೆಗಳ ಪುಟಗಳನ್ನು ಪಕ್ಕಕ್ಕೆ ಇರಿಸಿ ಅವುಗಳ ಮಧ್ಯದ ಯಾವುದೊ ಒಂದು ಪುಟವನ್ನು ತೆರೆದು ಸುಮ್ಮನೆ ಓದಿದಳು. ಒಂದೆರೆಡು ನಿಮಿಷದಲ್ಲಿಯೇ ಆಕೆಗೆ ಏನೋ ಒಂದು ಬಗೆಯ ಕೂತುಹಲ ಮೂಡಿದಂತಾಗಿ ಕೂಡಲೇ ಎದ್ದು ಬಿಸಿ ನೀರಿನ ಜಳಕನ್ನು ಮುಗಿಸಿ ಇನ್ಸ್ಟಾ ಮ್ಯಾಗ್ಗಿ ಪ್ಯಾಕನ್ನು ಒಡೆದು ನೀರಿನಲ್ಲಿ ಬೆರೆಸಿ ಅದನ್ನು ಪ್ಲೇಟಿಗೆ ಹಾಕಿ ತಂದಳು. ಪಬ್ಲಿಕ್ ಪರೀಕ್ಷೆಗೆ ಓದುವ ಗಂಭೀರ ವಿದ್ಯಾರ್ಥಿಯಂತೆ ಕಾಲುಗಳನ್ನು ಮಡಚಿ ಮೊದಲ ಪುಟವನ್ನು ಕೈಗೆತ್ತಿಕೊಂಡಳು. ಅದಕ್ಕೂ ಮೊದಲು ಇಶಾಳ ಪ್ಲಾಟಿಗೋಗಿ ಕನ್ನಡ ಡಿಕ್ಷನರಿಯನ್ನು ಪಕ್ಕಕ್ಕೆ ತಂದಿಡುವುದ ಮರೆಯಲಿಲ್ಲ.

 

*******************************************************************************************

                                                             

ಪುಟ-೧. 

ಅದು ಬೆಳಗಿನ ಜಾವ ಸುಮಾರು ಆರರ ಆಸುಪಾಸು. ಜಾಗಿಂಗ್ ಮಾಡುತ್ತಲೇ ಓಡೋಡಿ ಬಂದ ಲೋಕೇಶ ಒಂದೇ ಸಮನೆ ಬಾಗಿಲನ್ನು ಬಡಿಯತೊಡಗಿದ. ಬೆಳಗಿನ ಜಡತ್ವದ ಕೋಟೆಯನ್ನು ಭೇದಿಸುವ ಸೈನಿಕನ ಸದ್ದಿನಂತೆ ಆತ ಅರಚತೊಡಗಿದ. ಬೊಬ್ಬಿ ಗೀಳಿಡುವ ಸಂತೆಯಾಗಿರುವ ಪ್ರಪಂಚದಲ್ಲಿ ಚಿಂತೆ ಇರದೇ ಸುಖವನ್ನು ಕಾಣುವ ನಿದ್ರೆಯೆಂಬ ಮಹಾತಪಸ್ಸಿಗೆ ಇಳಿದಿದ್ದ ನನಗೆ ಆತನ ಅರಚುವಿಕೆ ಎಲ್ಲಿಲ್ಲದ ಕೋಪವನ್ನು ತಂದಿತು. ಘಾಡ ನಿದ್ದೆಯಲ್ಲೂ ಕಷ್ಟಪಟ್ಟು ಎದ್ದು ಬಾಗಿಲನ್ನು ತೆರೆದ ನನ್ನನ್ನು ಪಕ್ಕಕ್ಕೆ ತಳ್ಳಿ  ಫ್ರಿಡ್ಜ್ ನಲ್ಲಿದ್ದ ತಣ್ಣೀರನ್ನು ಹೊರತೆಗೆದು ಗಟಗಟನೆ ಕುಡಿದು,

'ಮಚಿ, ಅರ್ಜೆಂಟ್ ಆಗಿ ಒಂದು ಹತ್ತು ಸಾವಿರ ದುಡ್ಡ್ ಬೇಕೋ. ಒಳ್ಳೆ ಒಂದು ಬಿಸಿನೆಸ್ ಪ್ರಪೋಸಲ್ ಬಂದಿದೆ. ಪಕ್ಕದ ಊರಲ್ಲಿ ಓಪನ್ ಗ್ರೌಂಡ್ ಮೀಟಿಂಗ್ ಇದ್ಯಂತೆ, ಇವತ್ತೇ ಹೊರಡ್ಬೇಕು..' ಎಂದು ಬೆವರು ಮೆತ್ತಿದ ಉದ್ದನೆಯ ಕೂದಲನ್ನು ತನ್ನ ಎರಡೂ ಕೈಗಳಿಂದ ಹಿಂದಕ್ಕೆ ಸರಿಸುತ್ತಾ ಬಡಬಡನೆ ಒದರುತ್ತಾನೆ. ಎತ್ತರ ಆರಡಿ ಇರದಿದ್ದರೂ, ಮೈಯ ಬಣ್ಣ ಹಾಲಿನಂತೆ ಹೊಳೆಯದಿದ್ದರೂ ಜಡೆ ಕಟ್ಟಬಹುದಾದಂತಹ ಆತನ ನೀಳ  ಕೇಶ ರಾಶಿ ಏನೋ ಒಂದು ಮೆರುಗನ್ನು ಆತನಿಗೆ ತಂದಿಟ್ಟಿತು. ಓದು ಮುಗಿಯುವುದರೊಳಗೆ ತನ್ನದೇ ಏನೋ ಒಂದು ಸ್ಟಾರ್ಟಪ್ಪನ್ನು ನೆಡೆಸಬೇಕೆಂಬ ಅದಮ್ಯ ಹಠದೊಂದಿಗೆ ಗುಂಡಿಗೆ ಬೀಳಲು ಹವಣಿಸುವ ಹಲವರಲ್ಲಿ ಮೊದಲಿಗ ನಮ್ಮ ಲೋಕೇಶ. ಓದಿನಲ್ಲಿ ಹಿಂದಿದ್ದರೂ 'ಅಂಬಾನಿ ಏನು ಡಿಗ್ರಿ ತಗೊಂಡೆ ಬಿಲೇನಿಯರ್ ಆದ್ನಾ?' ಎಂದುಕೊಂಡೆ ತನ್ನೆಲ್ಲಾ ಘನಕಾರ್ಯಗಳನ್ನು ನಮ್ಮೊಟ್ಟಿಗೆ ಸಮರ್ಥಿಸಿಕೊಳ್ಳುತ್ತಿದ್ದ. ಆಗಲೇ ಲಕ್ಷ ದುಡ್ಡಿನ ಸಾಲಗಾರನಾಗಿರುವ ಈತ ಅಂಬಾನಿ ಆಗ್ತಾನೋ ಅಥವ ಮಹಾ ಮೋದಿಯ ತದ್ರೂಪಿಯಾಗುತ್ತಾನೋ ಎಂಬುದೇ ಸದ್ಯ ಫ್ರೆಂಡ್ ಸರ್ಕಲ್ ಗಳಲ್ಲಿ ಇತ್ತೀಚಿಗೆ ನೆಡೆಯುತ್ತಿರುವ ಚರ್ಚೆ.

'ನೋಡಪ್ಪ ನೆಕ್ಸ್ಟ್ ಮಂತ್ ಶುರುವಲ್ಲೇ ನಂಗೆ ದುಡ್ಡ್ ವಾಪಸ್ ಬೇಕು. ನನ್ನ್ ಪಾರ್ಟ್ ಟೈಮ್ ಕೆಲ್ಸದ ಸೇವಿಂಗ್ಸ್ ಅದು. ನನ್ನ್ ಮಕ್ಳ ಬರಿ ತಗೋಣೋದೆ ಮಾಡ್ತಿರಲ್ಲ, ಯಾವಾಗ್ಲಾದ್ರೂ ಕೊಡೋದೂ ಕಲಿರೋ'  ನಾನೆಂದೆ.

'ಬಂದ ಹಾಜಿರ್ ಹೈ ಹುಕುಂ .. ಆಪ್ ಕೆ ಲಿಯೆ ಜಾನ್ ಬಿ ತೈಯಾರ್ ಹೈ.. ಈ ದುಡ್ಡು ಗಿಡ್ಡು ಎಲ್ಲ ಯಾವ್ ಮಹಾ ಲೆಕ್ಕ ' ಎನುತ ಸಾರ್ಕ್ಯಾಸ್ಟಿಕ್ ಆಗಿ ನಟಿಸತೊಡಗಿದ .

ಮಧ್ಯದ ಬೆರಳನ್ನು ತೋರಿಸಿದ ನಾನು ರೂಮಿನೊಳಗೋಗಿ ಡೆಬಿಟ್ ಕಾರ್ಡನ್ನು ತಂದು ಅವನ ಕೈಮೇಲಿಟ್ಟು,

 ‘ವಾಪಾಸ್ ಇಟ್ಟೋಗು.. ನನ್ನ ಎಬ್ಬಿಸ್ಬೇಡ..' ಎಂದೆ.

'ಥಾಂಕ್ ಯು ಮಚಿ..' ಎನುತ ತನ್ನ ಬೆವರಿನ ಮೈಯಲ್ಲೇ ನನ್ನನ್ನು ಬಾಚಿ ತಬ್ಬಿಕೊಂಡ ಆತನನ್ನು ನಾನು ಸಾಧ್ಯವಾದಷ್ಟು ದೂರಕ್ಕೆ ತಳ್ಳಿದೆ.

**

'ಡಿಯರ್ ಫ್ರೆಂಡ್ಸ್, ವೆಲ್ಕಮ್ ಯು ಆಲ್..' ಎಂದ ಧ್ವನಿವರ್ಧಕದ ಕರ್ಕಶ ಸದ್ದು ಆಗಷ್ಟೇ ಮುಸುಕುಹಾಕುತ್ತಿದ್ದ  ಸುಖನಿದ್ದೆಗೆ ಭಂಗ ತರುವಂತಿತ್ತು. ಊರಿನ ಸಂತೇಮಾಳದಲ್ಲಿ ಮದುವೆಗೆ ಬಳಸುವ ಶಾಮಿಯಾನವನ್ನು ಕಟ್ಟಿ, ಕಂಗೆಟ್ಟ ಕೆಂಪು ಹಾಗು ಜಿಡ್ಡುಗಟ್ಟಿದ್ದ ಬಿಳಿಯ ಬಣ್ಣದ ಚೇರುಗಳನ್ನು ಮನಬಂದಂತೆ ಅಸ್ತವ್ಯಸ್ತವಾಗಿ ಜೋಡಿಸಿ, ಪ್ರೈಮರಿ ಶಾಲೆಯ ಮಕ್ಕಳನ್ನು ನಿಗ್ರಹಿಸುವ ಶಿಕ್ಷಕಿಯರಂತಹ ಹಠಮಾರಿ ಹುಡುಗಿಯರಿಬ್ಬರನ್ನು ಮ್ಯಾನೇಜರ್ ಗಳಾಗಿ ನೇಮಿಸಿ ಓಪನ್ ಗ್ರೌಂಡ್ ಮೀಟಿಂಗನ್ನು ಆಯೋಜಿಸಲಾಗಿತ್ತು. ಬಂದವರನ್ನೆಲ್ಲ ಜೋರು ಮಾಡಿ ಅಲ್ಲಲ್ಲೇ ಕೂರಿಸುತಿದ್ದ ಆ ಸಮಾರಂಭ ಒಂತರ ಜನರೇಟರ್ನ ಶಕ್ತಿಯಲ್ಲಿ ಹಳ್ಳಿಮೂಲೆಯೊಂದರಲ್ಲಿ ರಾತ್ರಿಯ ಚಿತ್ರವನ್ನು ತೋರಿಸಿದಂತಿತ್ತು. ಆ ಹುಡುಗಿಯರೂ ತಾವೇ ಭವಿಷ್ಯದ ಪಿಯಮ್ಮೋ ಅಥವಾ ಸಿಯಮ್ಮು  ಕ್ಯಾಂಡಿಡೇಟುಗಳೋ ಎಂಬಂತೆ ತುಸು ಜಾಸ್ತಿಯೇ ಕುಣಿಯುತ್ತಿದ್ದರು. ಓಪನ್ ಗ್ರೌಂಡ್ ಮೀಟಿಂಗ್ ನಲ್ಲಿ ನೆರೆದಿದ್ದ  ಹತ್ತಿಪ್ಪತ್ತು ಮಂದಿಯೂ ಮೀಸೆ ಚಿಗುರದ ಅಮಾಯಕ ಹುಡುಗರು. ಜೊತೆಗೆ ಒಂದಿಬ್ಬರು ಕುಡಿದರೂ ಕುಡಿಯದಂತೆ ನಟಿಸಲಿಚ್ಚಿ ಫೇಲಾದ ವಾಗ್ಮಿಗಳು ಹಾಗು 'ಪ್ಯಾಟೆ'ಯ ಎಲ್ಲೆಂದರಲ್ಲಿ ಸಮಯ ಹರಣ ಮಾಡದೆ ಜೀವನ ನೆಡೆಸುವ ಒಂದಷ್ಟು ಪ್ರಜ್ಞಾವಂತ ನಾಗರಿಕರು. ಧ್ವನಿವರ್ಧಕದ ಸದ್ದನ್ನುಕೇಳಿ ವಿಚಲಿತನಾದ ಲೋಕೇಶ ತನ್ನೆರಡು ಅಸ್ತಗಳಿಂದ ಕಣ್ಣುಗಳನ್ನು ಉಜ್ಜಿಕೊಳ್ಳುತ್ತಾ ಎದ್ದೇಳತೊಡಗಿದ. ಮಲಗಿದ್ದು ಒಂದತ್ತೇ ನಿಮಿಷವಾದರೂ ಕೋಟ್ಯಧಿಪತಿಯಾಗುವ ಕನಸ್ಸನ್ನು ಕಂಡು ಸ್ವರ್ಗಲೋಕಕ್ಕೆ ಒಂದು ವಾಕನ್ನು ಹೋಗಿ ಬಂದತಿದ್ದ. ಸುತ್ತ ನೆರೆದಿದ್ದ ಹತ್ತು ಮತ್ತೊಂದು ಜನರನ್ನು ಕಂಡು ಉಳಿದವರು ಎಲ್ಲಿ ಎಂದು ಭವಿಷ್ಯದ ಸಂಭಾವ್ಯ ಪಿಯಮ್ ಅಥವಾ ಸಿಯಮ್ ಗಳಿಬ್ಬರನ್ನು ಕೇಳಿ,

'ರೀ, ಸಾರ್ ಭಾಷ್ಣ ಕೇಳ್ರಿ ಮೊದ್ಲು..' ಎಂದ ಒಬ್ಬಾಕೆಯನ್ನು ಹಾಗೆಯೆ ದುರುಗುಟ್ಟಿ ನೋಡಿ ಸುಮ್ಮನಾದ.

'ಹಾದರಿಂದ, ನೀವುಗಳೂ ಸಹ ದಿ ಗ್ರೇಟ್ ಅಂಟೋನಿಯೋ ರಂತಾಗಲು ಈ ಕೂಡಲೇ ನಮ್ಮ ಬಿಸಿನೆಸ್ ಅನ್ನು ಸೇರಿಕೊಳ್ಳಿ. ಈ ಅವಕಾಶ ನಿಮುಗೆ ಭಾರಿ ಭಾರಿ ಭರೋದಿಲ್ಲ! ಭಂದಾಗ ಭಿಡಭೇಡಿ.. ಕಮೋನ್, ಏನ್ ಯೋಚಿಸ್ತ್ತಿದ್ದೀರಾ, ಬನ್ನಿ ಫ್ರೆಂಡ್ಸ್, ನಮ್ಮನ ಸೇರಿಕೊಳ್ಳಿ..' ಎಂದು ಮೈಕನ್ನು ಹಿಡಿದು ಧೀರ್ಘಾಕ್ಷರಗಳನ್ನು ಕಚ್ಚಿ-ಕಚ್ಚಿ  ಅರಚುತ್ತಿದ್ದ ಐದಡಿಯ ವ್ಯಕ್ತಿಯೊಬ್ಬನನ್ನು ಕಂಡು ಹೌಹಾರಿ ಕಕ್ಕಾಬಿಕ್ಕಿಯಾದರು ದೂರದ ಬಳ್ಳಾರಿಯಿಂದ ಬಂದ ಹೈದರಿಬ್ಬರು.

'ಏನ್ ಹೇಳಕ್ಕಾತ್ತವ್ನೆಲೇ ಇವ್ನು, ಹುಚ್ಚ್ ಮಂಗ್ಯಾ' ಎಂದು ತನ್ನ ಸಣಕಲು ದೇಹದ ದೊಡ್ಡ ಕಣ್ಣುಗಳನ್ನು ನಿಮಿರಿಸಿ ಹೇಳಿದ ಒಬ್ಬಾತನಿಗೆ ಮತ್ತೊಬ್ಬ 'ಈ ಸೂಳಿಮಗನೆ ಅನ್ಸುತ್ತೆ ಅವತ್ತ್ ಫೋನಾಗ ನನ್ನ್ ಹತ್ರ ಐವತ್ ಕೋಟಿ ದುಡ್ಡಾತ ಅಂದದ್ದು. ಆ ಮುಖಾ ನೋಡ್ಲೆ, ಹತ್ತಾಣೆ ಕೊಟ್ಟ್ ಒಂದ್ ಸಾಬೂನ್ ತಗಣಕ್ಕ್ ಗತಿಯಿಲ್ಲ, ಐವತ್ ಕೋಟಿ ಈತಂತೆ. ' ಎಂದು ವ್ಯಂಗ್ಯವಾಗಿ ಹೇಳಿದನು.

ಆ ವ್ಯಕ್ತಿ  ಭಾಷಣ ಮಾಡುತ್ತಿದ್ದ ಪಕ್ಕಕೆ ಹಂದಿಗಳ ಹಿಂಡುಗಳು ಬಂದು ಗುಟುರತೊಡಗಿದವು. ಭಾಷಣಗಾರನ ಭಾಷಣಕ್ಕೆ ತೀರಾನೇ ಉಪಟಳವಾದಂತಾಗಿ ಕೊನೆಗೂ ತಾಳಲಾರದೆ ಆತ ಪಕ್ಕದಲ್ಲಿದ್ದ ಕಲ್ಲೊಂದನ್ನು ತೆಗೆದುಕೊಂಡು ಹಂದಿಯೊಂದರ ಹೊಟ್ಟೆಗೆ ಬೀಳುವಂತೆ ತನ್ನ ಶಕ್ತಿಯಲ್ಲವನ್ನು ಬಿಟ್ಟು ಎಸೆದ. ಆ ಹೊಡೆತದಲ್ಲಿ ಈ ಮಹಾಸಭೆಗೆ ತಾನು ನೂರು ಜನರನ್ನು ಕರೆದುತಂದು  ಪಕ್ಕದಲ್ಲಿ ಕೋಟು ತೊಟ್ಟು ಕೂತಿದ್ದ ಮೂರ್ನಾಲ್ಕು ಪ್ರತಿಷ್ಠಿತ ವ್ಯಕ್ತಿಗಳಿಂದ ಶಹಬಾಸ್ ಗಿರಿಯನ್ನು ಪಡೆಯುವ ಕನಸ್ಸು ಹಾಳಾದ ಸಿಟ್ಟೂ ಸಹ ಸೇರಿದಂತಿತ್ತು. 'ಡಬ್ಬ್..' ಎಂದು ಮಾಗಿದ ಹಲಸಿನ ಹಣ್ಣಿಗೆ ಬಡಿದಂತಹ ಬಂದ ಆ ಸದ್ದಿಗೆ ಹಂದಿಗಳೆಲ್ಲ ಹುಂಕರಿಸುತ್ತಾ ಅಲ್ಲಿಂದ ಜಾಗ ಕಿತ್ತವು.  ಖಾಲಿ ಚೇರಿನ ಕೊನೆಯಲ್ಲಿ ನಿಂತಿದ್ದ, ಸಮಯ ಹರಣ ಮಾಡದೆ ಜೀವನ ನೆಡೆಸುವ ಒಂದಷ್ಟು ಪ್ರಜ್ಞಾವಂತ ನಾಗರಿಕರು ಈ ದೃಶ್ಯವನ್ನು ಕಂಡು ನಗತೊಡಗಿದರು…

'ಸೊ ಫ್ರೆಂಡ್ಸ್ .. ಖ್ಖಷ್ಟಗಳು ಯಾರಿಗೆ ಬರುದಿಲ್ಲ.. ನಾವೆಲ್ಲ ಖ್ಖಷ್ಟಗಳನ್ನೇ ಹುಂಡು ಬಂದೋರು.. ಬನ್ನಿ ಫ್ರೆಂಡ್ಸ್.. ಅಲ್ಲಿ ನಮ್ಮ ಅಕೌಂಟ್ ಡಿಪಾರ್ಟ್ಮೆಂಟ್ ಇದೆ' ಎನುತ ಮತದಾನ ಬೂತಿನಂತಹ ನೀಲಿ ಬಟ್ಟೆಯಿಂದ ಒಂದು ಚೌಕಾಕಾರದ ಕೋಣೆಯನ್ನು ತೋರಿಸಿ ಅದರೊಳಗೆ ಹೋಗಿ ಅಲ್ಲಿರುವ ಒಬ್ಬ ವ್ಯಕ್ತಿಯ ಕೈಯಲ್ಲಿ ತಮ್ಮ ಹಣವನ್ನು ಡಿಪಾಸಿಟ್ ಮಾಡಿ ಬರುವಂತೆ ಹೇಳುತ್ತಾನೆ. ಚೌಕದ ಸುತ್ತಲೂ ಮತ್ತದೇ ಹಂದಿಗಳು ಬಂದು ಗುಟುರುತ್ತಿದ್ದವು. ಸ್ಟೇಜಿನ ಮೇಲೆ ಕೂತ ಮೂವರು ಬಾಡಿಗೆ ವ್ಯಕ್ತಿಗಳು ತಮ್ಮ ಮುಂದಿದ್ದ ಬಿಸ್ಕತ್ತು, ಕಾಫಿಯನ್ನು ಡಾಳಾಗಿ ಸೇವಿಸುತ್ತಾ ತಮಗೂ ಹಾಗು ಕುಳ್ಳ ಅರಚುತ್ತಿರುವ ಮಾತಿಗೂ ಎಳ್ಳಷ್ಟೂ ಸಂಬಧವಿಲ್ಲವೇನೋ ಎಂಬಂತೆ ವರ್ತಿಸುತ್ತಿದ್ದರು. ಬಳ್ಳಾರಿಯ ಹೈದರು ಇನ್ನು ಇಲ್ಲಿ ಕೂತರೆ ತಮಗೆ ಉಳಿಗಾಲವಿಲ್ಲ ಎನುತ ತಮ್ಮ ಜಾಗವನ್ನು ಕೀಳಲು ಆವಣಿಸುತ್ತಿದ್ದರು.

'ಬೋಸುಡಿಮಗ ಫೋನ್ ಮಾಡ್ಲಿ ಇವಾಂಗ್ ಐತಿ..' ಏನುತಾ ಎದ್ದು ನಿಂತರೆ, ಪ್ರೈಮರಿ ಸ್ಕೂಲಿನ ಹೆಡ್ಮೇಡಂಗಳಂತೆ ಕಣ್ಕೆರಳಿಸಿಕೊಂಡು ಯಾರೊಬ್ಬರೂ ಎದ್ದು ಹೋಗದಂತೆ ಕಾವಲು ಕಾಯುತಿದ್ದ ದ್ವಾರಪಾಲಕೆಯರು ಎದುರಾದದ್ದನ್ನು ಕಂಡು ಬೆಚ್ಚಿಬಿದ್ದರು. ಆ ರಣಕಣ್ಣುಗಳಲ್ಲಿ ತಮ್ಮ ಗಂಡಸುತನದ ಧೈರ್ಯ ಕಾಣದಂತೆ ಮರೆಯಾಯಿತು.

'ಲೇ, ಆ ಅಕ್ಕಂದಿರ್ ನೋಡ್ಲೆ. ಎದ್ದ್ ಹೋದ್ರ ದನಿಗ್ ಹೊಡ್ದನ್ಗೆ ಹೊಡಿಬಹುದು.. ಇನ್ ಸ್ವಲ್ಪ ಹೊತ್ತ್ ಕೂರ್ಲೇ.. ಅಮೇಗ್ ಹೋಗಣ' ಎಂದು ತಮ್ಮ ತಮ್ಮಲ್ಲೇ ಮಾತನಾಡಿಕೊಂಡರು.

ಇದು ಯಾವ ಬಗೆಯ ಬಿಸಿನೆಸ್, ಏನನ್ನು ಮಾರಬೇಕು, ಇವುಗಳ ಶಾಖೆಗಳು ಎಲ್ಲಿವೆ ಎಂಬುದನ್ನು ಒಂದಿನಿತೂ ಹೇಳದೆ ಕೋಟಿ ಗಳಿಸುವ ಕನಸಿನ ಗೋಪುರವನ್ನಷ್ಟೇ ಕಟ್ಟಿ ಇಷ್ಟಿಷ್ಟು ದುಡ್ಡು ಕೊಡಬೇಕು ಎಂದರೆ ನಿಯತ್ತಿನ ನಾಗರಿಕರಿಗೆ ಸಿಟ್ಟು ಬಾರದೆ ಇರುತ್ತದೆಯೇ. ಲೋಕೇಶ ರೆಬಲ್ ನಂತಾದ. 'ರೀ ಮಿಸ್ಟರ್, ಬನ್ರೀ ಇಲ್ಲಿ..' ಎನುತ ತಾನು ಕೂತ ಜಾಗದಿಂದ ಒಂದಿಷ್ಟೂ ಕದಲದೆ ಭಾಷಣ ಮಾಡುತ್ತಿದ್ದ ವ್ಯಕ್ತಿಯನ್ನು ಕರೆದ. ಲೋಕೇಶ ಕೂತಲ್ಲೇ ಕೈಸನ್ನೆ ಮಾಡಿ ತನ್ನನ್ನು ಕರೆದದನ್ನು ಅವಮಾನವೆಂದು ಭಾವಿಸಿದ ಆ ವ್ಯಕ್ತಿ, ಕೂಡಲೇ ತನ್ನ ಸಿಟ್ಟಿನ ಕಣ್ಣುಗಳನ್ನು ರಣಚಂಡಿಯರಂತೆ ನಿಂತಿದ್ದ ಹೆಣ್ಣುಗಳ ಮೇಲೆ ಬೀರಿದ. ಕೂಡಲೇ ದೈವೀಶಕ್ತಿಯೊಂದು ತಮ್ಮ ಮೈಮೇಲೆ ಆವಾಹನೆಯಾದಹಾಗೆ ಚೀರುತ್ತಾ ಬಂದ ಅವರುಗಳು,

'ಏಯ್.. ಎನ್ನು..ಹ.. ಹೆಂಗಿದೆ ಮೈಗೆ.. ಅವ್ರ್ ಯಾರ್ ಗೊತ್ತಾ..?' ಎನುತ ತಮ್ಮ ಹೆಣ್ಣುದೇಹದೊಳಗಿದ್ದ ಗಂಡಸರನ್ನು ಮಾತಿಗಿಳಿಸಿದರು. ಅದಾಗಲೇ ಸಿಟ್ಟು ವಿಪರೀತವಾಗಿ ತನ್ನ ಸಹನೆಯನ್ನು ಕಳೆದುಕೊಂಡಿದ್ದ ಲೋಕೇಶ ಕೂಡಲೇ ತನ್ನ ಪಕ್ಕದಲ್ಲಿದ್ದ ಚೇರೊಂದನ್ನು ತನ್ನ ಬಲಗೈಯಲ್ಲಿ ಮೇಲಕೆತ್ತಿ ಮುಂದಿದ್ದ ಇನ್ನೊಂದು ಚೇರಿನ ಮೇಲೆ ರಭಸವಾಗಿ ಹೊಡೆದ. ಆ ಹೊಡೆತಕ್ಕೆ ಎರಡೂ ಚೇರುಗಳು ಸೀಳಿ ಮುರುಟಿಬಿದ್ದವು!  ಲೌಡ್ ಸ್ಪೀಕರ್ನ ಧ್ವನಿಯನ್ನೂ ಮೀರಿಸುವಂತೆ ಬಂದ ಆ ಸದ್ದಿಗೆ ರಣಚಂಡಿಯರಿಬ್ಬರು ವಿರುದ್ಧ ದಿಕ್ಕಿನಲ್ಲಿ ಕಕ್ಕಾಬಿಕ್ಕಿಯಾಗಿ ಓಡಿ ತಮ್ಮ ಪಿಳಪಿಳ ಕಣ್ಣನ್ನು ಬಿಡುತ್ತಾ ದೂರದಲ್ಲಿ ನಿಂತರು. ಬಳ್ಳಾರಿಯ ಹೈದರಿಬ್ಬರು ಇದೆ ಸುಸಮಯವೆಂದುಕೊಂಡು ತಮ್ಮ ಕಿರುಬೆರಳುಗಳೆರಡನ್ನು ಭಾಷಣಮಾಡುತ್ತಿದ್ದ ವ್ಯಕ್ತಿಗೆ ತೋರಿಸುತ್ತಾ ಹಂದಿಗಳು ಗುಟುರುತ್ತಿದ್ದ ಜಿಗ್ಗಿನೆಡೆಗೆ ನೆಡೆದು ಪವಾಡಸದೃಶ್ಯ ರೀತಿಯಲ್ಲಿ ಅವುಗಳ ಒಳಗೆ ತೂರಿಕೊಂಡೇ ಮಾಯಯಾಗಿಬಿಟ್ಟರು!

ತನ್ನ ಕೈಚಿಟಕಿಯನ್ನು ಹೊಡೆದು ಸನ್ನೆಯಲ್ಲೇ ತನ್ನ ಮುಂದೆ ಬರುವಂತೆ ಮತ್ತೊಮ್ಮೆ ಆಜ್ಞಾಪಿಸಿದ ಲೋಕೇಶನನ್ನು ಕಂಡು ಐದಡಿಯ ವ್ಯಕ್ತಿ ಉಗುಳನ್ನೇ ಗಟಗಟ ನುಂಗುತ್ತಾ ಹುಸಿನಗೆಯನ್ನು ಬೀರಿ ಮುಂಬಂದು ನಿಂತ.

'ಏನ್ರಿ ಇದು..?' ಲೊಕೇಶನ ಕಣ್ಣುಗಳು ಕಾದ ಕೆಂಡದಂತೆ ಕೆಂಪಾಗಿದ್ದವು.

'ಸಾರ್.. ಅದು..ಮಾರ್ಕೆಟಿಂಗ್ ಬಿಸಿನೆಸ್..' ಎಂದಷ್ಟೇ ಹೇಳಲು ಸಶಕ್ತನಾದ ಆತ ಲೊಕೇಶನ ಆ ತೀಕ್ಷ್ಣ ದೃಷ್ಟಿಯನ್ನು ನೋಡಲಾಗದೇನೋ ಎಂಬಂತೆ ತನ್ನ ಮೂರ್ಛೆಹೋಗುವ ನಾಟಕವನ್ನು ಆಡಿದ.

'ಓ ಧೇವನೇ' ಎಂದು ಹಾಸಿಗೆಯ ಮೇಲೆ ಮಲಗುವಂತೆ ಮಲಗಿದ ಆತನನ್ನು ಕಂಡು ಕಾಫಿ ಬಿಸ್ಕತ್ತಿನಲ್ಲೇ ಊಟವನ್ನು ಮಾಡುತ್ತಿದ್ದ ಕಪ್ಪು ಕೋಟಿನ ವ್ಯಕ್ತಿಗಳು ನಿಧಾನವಾಗಿ ಎದ್ದು ನಿಂತರು. ಅಷ್ಟರಲ್ಲಾಗಲೇ ನೆರೆದಿದ್ದ ಜನರಲ್ಲಿ ಗುಜುಗುಜು ಶುರುವಾಗತೊಡಗಿತು. ಲೋಕೇಶ ಸೀದಾ ಮೈಕಿನ ಬಳಿಗೋಗಿ ನೆರೆದಿದ್ದ ಜನರನ್ನು ಉದ್ದೇಶಿಸಿ ಇದೊಂದು ಬಗೆಯ ಸ್ಕ್ಯಾಮ್ ಎಂದೂ , ಅಮಾಯಕ ಜನರ ಹಣವನ್ನು ಲೂಟಿಮಾಡುವ ಷಡ್ಯಂತ್ರವೆಂದೂ ಹೇಳಿ ಎಲ್ಲರನ್ನು ಅಲ್ಲಿಂದ ತೆರಳುವಂತೆ ಹೇಳಿದ. ಹಾಗೆಯೆ ನೆರೆದಿದ್ದ ಪ್ರಜ್ಞಾವಂತ ಊರಿನ ಜನರಲ್ಲಿ ಕೂಡಲೇ ಹತ್ತಿರದ  ಪೊಲೀಸ್ ಠಾಣೆಗೆ ಪೋನಾಹಿಸಬೇಕೆಂದೂ ಆಜ್ಞಾಪಿಸಿದ. ಅಲ್ಲಿಯವರೆಗೂ ಕೂತಲ್ಲಿಯೇ ನೆಡೆಯುತ್ತಿದ್ದ ಎಲ್ಲವನ್ನೂ ಸಾವಧಾನವಾಗಿ ನೋಡತೊಡಗಿದ ಕಪ್ಪುಕೋಟಿನ ವ್ಯಕ್ತಿಗಳು ಯಾವಾಗ ಪೋಲೀಸರ ಹೆಸರನ್ನು ಕೇಳಿದರೋ ಕೂಡಲೇ ನೆಲಗೊಳಗೆ ಉದುಗಿಕೊಳ್ಳುವ ಇಲಿಮರಿಗಳಂತೆ ಒಬ್ಬೊಬ್ಬರಾಗಿಯೇ ಅಲ್ಲಿಂದ ಜಾಗ ಕೀಳತೊಡಗಿದರು. ಆಶ್ಚರ್ಯವೆಂಬಂತೆ ಕೆಲಸೆಕೆಂಡುಗಳ ಮೊದಲು ಮೂರ್ಛೆ ಬಿದ್ದಿದ್ದ ವ್ಯಕ್ತಿಯೂ ಯಾರಿಗೂ ತಿಳಿಯದಂತೆ ಅಲ್ಲಿಂದ ಕಾಣೆಯಾಗಿದ್ದ. ಇನ್ನು ರಣಚಂಡಿಯರಿಬ್ಬರು ಬಹುಷಃ ತಮ್ಮ ಊರ ದಾರಿ ಮರೆಯುವಂತಯೇ ಓಟ ಕಿತ್ತಿರೆನೊ ಎಂಬುದು ತಿಳಿಯಲಿಲ್ಲ.
 
 
ಮುಂದುವರೆಯುವುದು..

Sunday, December 8, 2019

ಸಾಧನೆಗೆ ಬೇಕಾದ ಜೀವರಸ ...

ಗಿಡದ ಎಲೆಯೊಂದಕ್ಕೆ ಅಂಟಿಕೊಂಡಿದ್ದ ಗೂಡಿನಿಂದ (cocoon) ಆಗತಾನೆ ಚಿಟ್ಟೆಯೊಂದು ಹೊರಬರಲು ಆವಣಿಸುತ್ತಿತ್ತು. ಮೊದಲ ಬಾರಿಗೆ ಜಗತ್ತನ್ನು ನೋಡುವ ತವಕದಲ್ಲೇನೋ ಎಂಬಂತೆ ಆ ಸಣ್ಣ ರಂಧ್ರದ ಮೂಲಕ ಹೊರಬಾರಲಾಗದೆ ಅದು ಹರಸಾಹಸ ಪಡುತ್ತಿದೆ. ಕತ್ತನ್ನು ಹೊರಹಾಕುವುದು, ಒಳಗೆಳೆದುಕೊಳ್ಳುವುದು ಮತ್ತೊಮ್ಮೆ ಗೂಡಿನೊಳಗೋಗಿ ಸ್ವಲ್ಪಹೊತ್ತಿನ ನಂತರ ಪುನಹಃ ತನ್ನೆಲ್ಲ ಶಕ್ತಿಯನ್ನು ಬಿಟ್ಟು ಹೊರಬರಲು ಆವಣಿಸುವುದು, ಹೀಗೆ ಅದರ ಪ್ರಯತ್ನ ಸತತವಾಗಿ ಮುಂದುವರೆದಿತ್ತು. ಒಮ್ಮೆ ಹೊರಬಂದು ತನ್ನ ರೆಕ್ಕೆಯನ್ನು ಚಾಚಿ ಎತ್ತರೆತ್ತರಕ್ಕೆ ಹಾರುತ್ತಾ ಹೂವಿಂದ ಹೂವಿಗೆ ಹೋಗಿ ಕೂತು ಮಕರಂದನ್ನು ಹೀರಿ ಸುಖಿಸುವ ಸವಿಗನಸು ಆ ಎಳೆಯ ಚಿಟ್ಟೆಗೆ. ಆದರೆ ಆ ಸಣ್ಣ ರಂಧ್ರವನ್ನು ಬೇಧಿಸಿ ಹೊರಬರಲು ಅದಕ್ಕೆ ಆಗುತ್ತಿಲ್ಲ. ಹಾಗಂತ ತನ್ನ ಸತತ ಪ್ರಯತ್ನವನ್ನೂ ಸಹ ಅದು ಬಿಡುತ್ತಿಲ್ಲ.

ಪ್ರತಿದಿನ ಅದೇ ಹಾದಿಯಲ್ಲಿ ನೆಡೆದುಕೊಂಡು ಹೋಗುತ್ತಿದ್ದ ಹುಡುಗನೊಬ್ಬ ಈ ಚಿಟ್ಟೆ ಹುಳುವಾಗಿದ್ದ ಸಮಯದಿಂದ ಎಲೆಯ ಕೆಳಗೆ ಗೂಡುಕಟ್ಟುವವರೆಗೂ ಸೂಕ್ಶ್ಮವಾಗಿ ಗಮನಿಸುತ್ತಿದ್ದ. ಇಂದು ಆ ಗೂಡಿನಲ್ಲಿ ಸಣ್ಣ ರಂಧ್ರವೊಂದು ಮೂಡಿದ್ದನ್ನು ಗಮನಿಸಿದ ಆತ ಹತ್ತಿರ ಬಂದು ನೋಡುತ್ತಾನೆ ಎಳೆಯ ಚಿಟ್ಟೆಯ ಮರಿ ತನ್ನೆಲ್ಲ ಶಕ್ತಿಯನ್ನು ಹೊರಹಾಕಿ ಆ ಪುಟ್ಟ ರಂಧ್ರದ ಮೂಲಕ ಹೊರಬರಲು ಆವಣಿಸುತ್ತಿದೆ. ಸಂತಸಗೊಂಡ ಆ ಹುಡುಗ ಚಿಟ್ಟೆ ಹೊರಬಂದು ಹಾರುವುದನ್ನೇ ಆಸೆಯ ಕಣ್ಣಿನಿಂದ ಕಾಯತೊಡಗಿದ. ನಿಮಿಷಗಳು, ಘಂಟೆಗಳು ಉರುಳಿದವು. ಚಿಟ್ಟೆ ಅದೆಷ್ಟೇ ಪ್ರಯತ್ನ ಪಟ್ಟರೂ ರಂಧ್ರದ ಮೂಲಕ ಹೊರಬರಲಾಗುತ್ತಿಲ್ಲ. ಹುಡುಗನ ಸಹನೆ ಮೀರಿತು. ಹೀಗೆ ಇನ್ನೂ ಒಂದೆರಡು ತಾಸು ಹೋದರೆ ಆಯಾಸದಿಂದಲೇ ಚಿಟ್ಟೆ ಸತ್ತು ಹೋದಿತು ಎಂದುಕೊಂಡ ಆತ ಸಣ್ಣ ಕಡ್ಡಿಯೊಂದನ್ನು ಮುರಿದು ಅದರ ತುದಿಯಿಂದ ಆ ಗೂಡನ್ನು ನಿಧಾನವಾಗಿ ಒಡೆದ. ಕೂಡಲೇ ಚಿಟ್ಟೆಯ ಮರಿ ಹೊರಬಂದಿತು. ಏಳುತ್ತಾ ಬೀಳುತ್ತಾ ಕೊನೆಗೆ ಇಂಚಿಚ್ಛೇ ಹಾರಲೂ ಪ್ರಯತ್ನಿಸಿತು. ಅದರೆ ಅದೆಷ್ಟೇ ಹೊತ್ತು ಕಾದರು ಆ ಚಿಟ್ಟೆಯ ಪೂರ್ಣ ರೆಕ್ಕೆಗಳು ಹಿಗ್ಗಲೇ ಇಲ್ಲ. ಅದೆಷ್ಟೇ ಹಾರಲು ಪ್ರಯತ್ನಿಸಿದರೂ ಚಿಟ್ಟೆ ನೆಲದ ಮೇಲೆ ದೊಪ್ಪನೇ ಬೀಳುವುದು ತಪ್ಪಲಿಲ್ಲ.

ವಿಪರ್ಯಾಸವೆಂಬಂತೆ ಆ ಚಿಟ್ಟೆ ಮುಂದೆ ಎಂದಿಗೂ ಹಾರಲು ಸಾಧ್ಯವಾಗಲಿಲ್ಲ. ಚಿಟ್ಟೆಗೆ ಸಹಾಯ ಮಾಡಲು ಹೊರಟ ಹುಡುಗನಿಗೆ ತನ್ನ ಗೂಡಿನ ರಂಧ್ರದ ಮೂಲಕ ಹೊರಬರವ ಕಷ್ಟದ ಪ್ರಕ್ರಿಯೆಯಲ್ಲೇ ಅದಕ್ಕೆ ಹಾರಲು ಬೇಕಾಗುವ ಅಮೂಲ್ಯ ಜೀವರಸ ದೇಹದಿಂದ ರೆಕ್ಕೆಗೆ ಹರಿಯುತ್ತದೆ ಎಂದು ತಿಳಿ ದಿರಲೇ ಇಲ್ಲ! ಆ ಜೀವರಸದ ವಿನ್ಹಾ ಚಿಟ್ಟೆಗಳಿಗೆ ಹಾರಲು ಸಾಧ್ಯವೇ ಇಲ್ಲ.

ಗೂಡಿನಿಂದ ಹೊರಬರಲು ಪಡುವ ಕಷ್ಟವೆ ಚಿಟ್ಟೆಗೆ ಹಾರಲು ಸಹಾಯ ಮಾಡುತ್ತದೆ ಎಂಬುದು ಎಂತಹ ಸೋಜಿಗದ ಸಂಗತಿ ನೋಡಿ. ಚಿಟ್ಟೆಯ ಮುಂದಿನ ಕನಸಿನ ದಿನಗಳಿಗೆ ಕಷ್ಟದ ಅವೊಂದು ಘಳಿಗೆ ಅನಿವಾರ್ಯ ಹಾಗು ಅಷ್ಟೇ ಅಮೂಲ್ಯ. ಮಾನವನ ಜೀವನವೂ ಇದಕ್ಕೆ ಹೊರತೆ? ಸುಖವೇ ಎಂದೆಂದಿಗೂ ಸಿಗಬೇಕೆಂದು ಬಯಸುವ ನಾವುಗಳಿಗೆ ಕಷ್ಟಗಳೂ ಸಹ ಅಷ್ಟೇ ಮಹತ್ವವನ್ನು ಪಡೆಯುತ್ತವೆ, ಕಷ್ಟ ದುಃಖಗಳಿಲ್ಲದ ಜೀವನವೂ ಅದೆಂತಹ ಜೀವನ ಎಂದನಿಸದಿರದು. ಚಿಟ್ಟೆಯ ಈ ಕತೆ ಆ ನಿಟ್ಟಿನಲ್ಲಿ ಯೋಚಿಸುವಂತೆ ನಮ್ಮನ್ನು ಪ್ರೇರೇಪಿಸಬೇಕು. ಅಲ್ಲದೆ ಮುಂದೆ ತನಗೆ ಹಾರಲಾಗದು, ತನ್ನ ಕನಸ್ಸಿನ ಮಕರಂದವನ್ನು ಹೀರಲಾಗದು ಎಂದು ಚಿಟ್ಟೆ ಕೊರಗಿತೆ, ಆತ್ಮಾರ್ಪಣೆ ಮಾಡಿಕೊಂಡಿತೇ? ಈ ಪ್ರೆಶ್ನೆಯ ಉತ್ತರವೂ ನಮ್ಮ ಜೀವನದ ಮತ್ತಷ್ಟು ಗೊಂದಲಗಳಿಗೆ ನೀತಿಪಾಠವಾಗಬಹುದು, ಅಲ್ಲವೇ?

Saturday, November 16, 2019

ಗುರಿಯೊಂದು ಸ್ಪಷ್ಟವಾದ ಮೇಲೆ ಕೈ ಮೂಳೆ ಮುರಿದರೇನು ಕನ್ನಡಕ ಒಡೆದರೇನು..!?

ಕಷ್ಟ-ದುಃಖಗಳೆಂಬುದು ಜೀವನದಲ್ಲಿ ಅದೆಷ್ಟು ಮಹತ್ವವಾದವು ಅಲ್ವೇ. ಮುಖ್ಯವಾಗಿ ಮಹತ್ತರವಾದ ಸಾಧನೆಯನ್ನು ಬೆನ್ನತ್ತಿರುವ ಅಥವಾ ಮುಂದೆ ಅಂತಹದೊಂದು ಸಾಧನೆಯನ್ನು ಮಾಡಲಿರುವ ಜೀವಗಳಿಗೆ ತಿಳಿದೋ ಅಥವಾ ತಿಳಿಯದೆಯೋ ಈ ಕಷ್ಟ ದುಃಖಗಳೆಂಬ ಸಹಾಯಕರು ಒದಗಿಸಿಕೊಡುವ ಎನರ್ಜಿ ಬಹುಶಃ ಮತ್ಯಾವುದೇ ಸಪ್ಲಿಮೆಂಟರಿಗಳಿಗೂ ಮಿಗಿಲಾದದ್ದು! ವಿಪರ್ಯಾಸವೆಂದರೆ ಈ ಕಹಿಸತ್ಯ ಬೆಳಕಿಗೆ ಬರುವುದು ಸಾಧನೆಯ ಗುರಿಯನ್ನು ಛಂಗನೆ ಹಾರಿ ತಲುಪಿದ ಮೇಲೆಯೇ. ಅಲ್ಲಿಯವರೆಗೂ ಹಿಂಸೆಯ ಕೂಪವೆನಿಸುವ ಆ ಕಷ್ಟ ದುಃಖಗಳು, ಗುರಿಯನ್ನು ತಲುಪಿದ ಒಮ್ಮೆಲೇ ಸಾಧನೆಯ ಮಹಾ ಮೆಟ್ಟಿಲುಗಳಾಗುತ್ತವೆ. ಬಹುಷಃ ಆ ಕಷ್ಟಗಳನ್ನು ದೈರ್ಯದಿಂದ ಎದುರಿಸದಿದ್ದರೆ, ಮುನ್ನುಗ್ಗಿ ನೆಡೆಯದಿದ್ದರೆ ಇಂದು ನಾನಿಷ್ಟರ ಮಟ್ಟಿಗೆ ಬೆಳೆಯುತ್ತಿರಲಿಲ್ಲವೇನೋ ಎಂದು ಅವೇ ಕಷ್ಟ-ದುಃಖಗಳನ್ನು ಉಪ್ಪರಿಗೆಯ ಮೇಲೆ ಕೂರಿಸಿ ಮೆರೆಸುವ ಹೇಳಿಕೆಗಳು ನಮಗೆ ಕಾಣಸಿಗುತ್ತವೆ. ಬಡತನ, ಹಸಿವು, ಪೋಷಕರ ಕಚ್ಚಾಟ, ಸಮಾಜದ ತುಳಿತ ಎಂಬೆಲ್ಲ ಮುಳ್ಳುಗಳು ಮಗುವೊಂದರ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತಿರುವಾಗ ಅರಳುವ ಕುಡಿಯಂತಹ ಮಕ್ಕಳ ಮನಸ್ಸನ್ನು ಸಂತೈಸಿ, ಗುರಿಯನ್ನು ಸ್ಪಷ್ಟಪಡಿಸಿ, ಇವೆಲ್ಲವನ್ನು ಮೆಟ್ಟಿ ನೆಡೆದರೆ ಮಾತ್ರವೇ ನಿನಗೆ ದೂರತೀರವನ್ನು ತಲುಪಲು ಸಾಧ್ಯ ಎಂದು ಹೇಳುವ ದಾರಿದೀಪಗಳು ಇಂದು ಎಷ್ಟಿವೆ?

ಇದು ಸಹ ಅಂತಹದ್ದೆ ಒಬ್ಬ ಸಾಧಕನ ಕತೆ. ಸಾಧನೆಗೂ ಮೊದಲಿನ ಕಷ್ಟ ದುಃಖಗಳ ಕಥೆ. ಒಲಿಂಪಿಕ್ಸ್ ನಲ್ಲಿ ನಮ್ಮ ಇಡೀ ದೇಶ ಇಲ್ಲಿಯವರೆಗೂ ಗೆದ್ದಿರುವ ಚಿನ್ನದ ಪದಕಗಳಿಗಿಂತಲೂ ಮೂರು ಪಟ್ಟು ಪದಕಗಳನ್ನು ಒಬ್ಬನೇ ಗೆದ್ದಿರುವ ಶೂರನ ಕಥೆ. ದುಃಖ, ನೋವು, ಮೂದಲಿಕೆ, ದುಶ್ಚಟಗಳೆಂಬ ಕಷ್ಟಗಳನ್ನು ತನ್ನ ವಿಸ್ತಾರವಾದ ಕೈಗಳಿಂದ ಹಿಂದಕ್ಕೆ ತಳ್ಳುತ್ತಾ, ಹೀಜುತ್ತಾ ಇತಿಹಾಸ ನಿರ್ಮಿಸಿದ ಮಹಾರಥಿಯ ಕಥೆ.

ಹೆಸರು ಮೈಕಲ್ ಫೆಲ್ಫ್ಸ್. ಗಾಡ್ ಫಾದರ್ ಗಳಿರದ ಜೀವನವಾದರೂ ಯಾವುದೇ ಗಾಡ್ ಗಿಂತಲೂ ಮಿಗಿಲಾದ ತಾಯಿ ಹಾಗು ತನ್ನ ಖುದ್ದು ಫಾದರ್ಗಿಂತಲೂ ಆಪ್ತನಾದ ಕೋಚ್ ನನ್ನು ಆತ ಗಳಿಸಿದ್ದ. ನೀರಿನೊಳಗೆ ಮುಖವನ್ನೇ ಮುಳುಗಿಸಲು ಹೆದರುತ್ತಿದ್ದ ಹುಡುಗನೊಬ್ಬನನ್ನು ಒಲಿಂಪಿಕ್ ಇತಿಹಾಸದ ದಂತಕತೆಯನ್ನಾಗಿ ಮಾಡಿದ ಶ್ರೇಯ ಆತನ ಏಕೈಕ ಕೋಚ್ (!) ಬಾಬ್ ಬೌಮನ್ಗೆ ಸೇರಿದರೆ ಆತನ ಗುರಿಯನ್ನು ಸ್ಪಷ್ಟಪಡಿಸಿ ಆತ್ಮಸ್ತಯ್ರ್ಯವನ್ನು ತುಂಬಿದ ಹೆಗ್ಗಳಿಕೆ ಗಂಡನಿಂದ ಬೇರ್ಪಟ್ಟು ಮೂರು ಮಕ್ಕಳನ್ನು ಕಷ್ಟಪಟ್ಟು ಸಾಕಿದ ಆ ಮಾತೆಗೆ ಸಲ್ಲಬೇಕು. ಚಿಕ್ಕವನಿದ್ದ ಮೈಕಲ್ಗೆ ಅರಿವಿರದ ಮತ್ತೊಂದು ಖಾಯಿಲೆ ಇದ್ದಿತು. ADHD. ಸರಳ ಭಾಷೆಯಲ್ಲಿ ಹೇಳುವುದಾದರೆ ನಿಂತರೆ ನಿಲ್ಲಲಾಗದ ಕೂತರೆ ಕೂರಲಾಗದ ಒಂದು ಬಗೆಯ ದ್ವಂದ್ವದ ಮನೋಸ್ಥಿತಿ. ಎಳೆಯ ಪ್ರಾಯದ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುವ ಒಂದು ಬಗೆಯ ಕಾಯಿಲೆ. ಅಂತಹ ಮಾನಸಿಕ ತೊಳಲಾಟದ ದ್ವಂದ್ವಕ್ಕೆ ಅಂಕುಶ ಆಡಿದ್ದೇ ಆತನ ಈಜುಗಾರಿಕೆ ಎಂದರೆ ಅದು ತಪ್ಪಾಗದು. ಫಿಲಿಪ್ಸ್ ಒಮ್ಮೆ ನೀರಿನಲ್ಲಿ ತಲೆಯನ್ನು ಮುಳುಗಿಸಿದರೆ ಮುಗಿಯಿತು, ಆತನ ಏಕಾಗ್ರತೆ ಒಮ್ಮೆಲೇ ಬಂಡೆಗಲ್ಲಿನಂತೆಯೇ ಸ್ಥಿರ ಹಾಗು ಗಟ್ಟಿಯಾಗಿಬಿಡುತ್ತದೆ. ಹೀಗೆ ಈಜುಗಾರಿಗೆ ಎಂಬುದು ಆತನಿಗೊಂದು ಹವ್ಯಾಸವಾಯಿತಷ್ಟೆ ಅಲ್ಲದೆ ತನ್ನ ಮಾನಸಿಕ ತೊಳಲಾಟವನ್ನು ಮರೆಮಾಡುವ ಸಾಧನವೂ ಆಯಿತು. ಅದೆಷ್ಟರ ಮಟ್ಟಿಗೆಂದರೆ ತನ್ನ ಹತ್ತನೇ ವಯಸ್ಸಿಗೆ ಆತ ತನ್ನ ಹೆಸರಿನ ಹತ್ತಾರು ರಾಷ್ಟ್ರಿಯ ಈಜು ಧಾಖಲೆಯನ್ನು ನಿರ್ಮಿಸಿದ್ದ! ಅಲ್ಲದೆ ತನ್ನ ಕೇವಲ ಹದಿನೈದನೇ ವಯಸ್ಸಿಗೆ ಅಮೇರಿಕವನ್ನು 2000 ನೇ ಇಸವಿಯ ಸಿಡ್ನಿ ಒಲಿಂಪಿಕ್ಸ್ ನಲ್ಲಿ ಪ್ರತಿನಿಧಿಸಿದ್ದ!

ಮುಂದೆ ನೆಡೆಯುವುದೆಲ್ಲ ಆತನ ಪ್ರತಿಶ್ರಮಕ್ಕೆ ದೊರೆತ ಪ್ರತಿಫಲ. ಬರೋಬ್ಬರಿ ಹದಿನಾರು ವರ್ಷಗಳ ಈತನ ವೃತ್ತಿಜೀವನದಲ್ಲಿ ಒಟ್ಟು 39 ವಿಶ್ವದಾಖಲೆಗಳು ಹಾಗು 23 ಗಿನ್ನಿಸ್ ದಾಖಲೆಗಳನ್ನು ನಿರ್ಮಿಸಿ ಒಲಿಂಪಿಕ್ಸ್ ನಲ್ಲಿ 'ದಿ ಮೋಸ್ಟ್ ಡೆಕೋರೇಟೆಡ್ ಅಥ್ಲೀಟ್' ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಾನೆ.

ಆದರೆ ಇಲ್ಲಿ ವಿಷಯ ಆತನ ಚಿನ್ನದ ಸಾಧನೆಗಳ ಬಗ್ಗೆಯಲ್ಲ. ಬದಲಾಗಿ ಆತ ಅವನ್ನು ಸಾಧಿಸಿದ ಹಾದಿಯ ಕುರಿತು. ಹಾದಿಯಲ್ಲಿ ಎದುರಾದ ಸಮಸ್ಯೆಗಳನ್ನು ಮೆಟ್ಟಿ ಮುನ್ನುಗ್ಗಿದ ಕುರಿತು. 2004ರ ಒಲಿಂಪಿಕ್ಸ್ ನಲ್ಲಿ ಆರು ಪದಕಗಳನ್ನು ಗೆದ್ದು ಹೆಸರು ಮಾಡಿದ್ದ ಫೆಲ್ಪ್ಸ್ ಅದೊಂದು ದಿನ ಮುಂದಿನ ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಈಜಿನ ಎಲ್ಲಾ ಪ್ರಕಾರದ ಚಿನ್ನದ ಪದಕಗಳನ್ನು ಗೆದ್ದು ದಶಕಗಳ ಹಳೆಯ ಅಮೇರಿಕಾದ ದಂತಕತೆ ಮಾರ್ಕ್ ಸ್ಪಿಟ್ಸ್ ನ ದಾಖಲೆಯನ್ನು ಮುರಿಯುವುದಾಗಿ ಹೇಳಿಕೆ ನೀಡಿದ. ಈತ ಹೀಗೆ ಹೇಳಿಕೆ ನೀಡಿದ ಕೂಡಲೇ ಅಮೇರಿಕದಾದ್ಯಂತ ಚರ್ಚೆಗಳು ಶುರುವಾದವು. ಎಲ್ಲಿಯ ಸ್ಪಿಟ್ಸ್ ಅದೆಲ್ಲಿಯ ಫೆಲ್ಪ್ಸ್? ಎಲ್ಲೆಂದರಲ್ಲಿ ಜನ ಈತನನ್ನು ಮೂದಲಿಸತೊಡಗಿದರು. ಎಳೆಯ ವಯಸ್ಸಿನ ಬಾಲಸಹಜ ಹೇಳಿಕೆಗಳು ಎಂದು ಹಂಗಿಸತೊಡಗಿದರು. ಒಲಿಂಪಿಕ್ಸ್ ನಲ್ಲಿ ಇರುವ ಎಂಟೇ ಪ್ರಕಾರಗಳ ಈಜಿನಲ್ಲಿ ಅಷ್ಟೂ ಪಂದ್ಯಗಳಲ್ಲಿ ಚಿನ್ನದ ಪದಕಗಳನ್ನು ಗೆಲ್ಲುವುದು ಸಾಧ್ಯವೇ ಇಲ್ಲವೆಂದು ಹಲವರು ಖಡಾಖಂಡಿತವಾಗಿ ಹೇಳಿದರು. ನೂರಾರು ಜನ ಸೆಣೆಸಿ ಕನಿಷ್ಠ ಒಂದು ಪದಕವನ್ನು ಗೆಲ್ಲಲು ಹರಸಾಹಸ ಮಾಡುತ್ತಿರುವಾಗ ಇಪ್ಪತ್ತರ ಹರೆಯದ ಹುಡುಗನೊಬ್ಬ ಒಮ್ಮೆಗೆ ಎಂಟು ಚಿನ್ನದ ಪದಕಗಳನ್ನು ಗೆಲ್ಲುತ್ತೇನೆಂದರೆ ನಮಗೇ ಹಾಸ್ಯಾಸ್ಪದವೆನಿಸದಿರದು. ಇತ್ತ ಕಡೆ ಇಲ್ಲ ಸಲ್ಲದ ಹೇಳಿಕೆಗಳು ಬರುತ್ತಿದ್ದರೆ ಅತ್ತ ಕಡೆ ಫೆಲ್ಪ್ಸ್ ತನ್ನ ಕಠಿಣ ತಯಾರಿಯಲ್ಲಿ ಕಾರ್ಯೋನ್ಮುಖನಾಗಿದ್ದ. ಮೈಗೆರಗುವ ಕಲ್ಲುಗಳನ್ನೇ ಸಾಧನೆಯ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಗುರಿಯೆಡೆಗೆ ಮುನ್ನುಗ್ಗುತ್ತಿದ್ದ. ಸ್ಪಿಟ್ಸ್ ದಿನಕ್ಕೆ ಎಂಟು ಘಂಟೆ ಅಭ್ಯಾಸ ನೆಡೆಸುತ್ತಿದ್ದರೆ ಈತ ಹನ್ನೆರಡು ಘಂಟೆ ಈಜತೊಡಗಿದ!

ಆದರೆ ವಿಧಿಯಾಟ ಬೇರೆಯದೇ ಆಗಿದ್ದಿತು. ಬೀಜಿಂಗ್ ಒಲಿಂಪಿಕ್ಸ್ ಇನ್ನೊಂದು ವರ್ಷವಿರುವಾಗ ಅಪಘಾತವೊಂದರಲ್ಲಿ ಈತನ ಬಲಗೈಯ ಮೂಳೆ ಮುರಿದುಹೋಯಿತು! ಆತನ ಡಾಕ್ಟರ್ ನಿನಗೆ ಮುಂದಿನ ಕೆಲವರ್ಷಗಳವರೆಗೂ ಈ ಕೈಯನ್ನು ಈಜಲು ಉಪಯೋಗಿಸಲಾಗದು ಎಂದು ಹೇಳಿದರು! 2008 ರ ಒಲಿಂಪಿಕ್ಸ್ ಮುಂದಿಂದೆ, ಚಿನ್ನದ ಪದಕಗಳನ್ನು ಗೆಲ್ಲುವ ತನ್ನ ಜೀವಮಾನದ ಹೇಳಿಕೆಯೊಂದ ನ್ನೂ ಕೊಟ್ಟಾಗಿದೆ. ಈಗ ನಿಲ್ಲುವ ಮಾತೆಲ್ಲಿ. ಒಂದಿಷ್ಟು ಹೆಚ್ಚುಕಡಿಮೆಯಾದರೆ ತನ್ನ ಜೀವನದ ಈಜುಗಾರಿಕೆಗೆ ಮಹಾಕುತ್ತು. ಸಂಬಂಧಿಗಳು,ಹಿತೈಷಿಗಳು ಬುದ್ಧಿವಾದವನ್ನು ಹೇಳಿದರು. ನಿನ್ನ ಕೈ ಚೆನ್ನಾಗಿದ್ದರೆ ಮುಂದಿನ ಬಾರಿಯ ಒಲಿಂಪಿಕ್ಸ್ನಲ್ಲಿ ಈಜಬಹುದಪ್ಪಾ ಸುಮ್ಮನೆ ಡಾಕ್ಟರ್ ಹೇಳುವ ಮಾತನ್ನು ಕೇಳು ಎಂದರು. ಆದರೆ ಇಟ್ಟ ಹೆಜ್ಜೆಯನ್ನು ಹಿಂದಿಡುವ ಜಾಯಮಾನ ಈತನದಲ್ಲ. ಕೈ ಸರಿಯಿರದಿದ್ದರೇನು ತನ್ನ ಕಾಲಿನಲ್ಲಿ ಈಜುವುದನ್ನು ಶುರುಮಾಡಿದ! ತನ್ನೆಲ್ಲ ಶಕ್ತಿಯನ್ನು ಕಾಲಿನ ಸ್ನಾಯುಗಳ ಮೇಲಿರಿಸಿ ಮುನ್ನುಗ್ಗತೊಡಗಿದ. ಈತನ ಪರಿಶ್ರಮ ಅದೆಷ್ಟರ ಮಟ್ಟಿಗೆತ್ತೆಂದರೆ ಮುಂದಿನ ವರ್ಷ ತನ್ನ ಮುರಿದ ಕೈ ಈಜಿಗೆ ಅಣಿಯಾದದ್ದು ಓಡುವ ಗಾಡಿಗೆ ಎಕ್ಟ್ರಾ ಎಂಜಿನ್ಗಳು ದೊರೆತಂದಾದವು. ಆದರೂ ಹಲವರಿಗೆ ಈತ ಎಂಟು ಪದಕಗಳನ್ನು ಗೆಲ್ಲುವುದು ಹಾಗಿರಲಿ ಕನಿಷ್ಠ ಒಂದನ್ನು ಗೆಲ್ಲುವುದನ್ನೂ ಸಂಶಯಪಡುತ್ತಿದ್ದರು. ಫೆಲ್ಪ್ಸ್ ದೃತಿಗೆಡಲಿಲ್ಲ. ಚೀನಾದ ಆ ಜಗತ್ಪ್ರಸಿದ್ದ ಒಲಿಂಪಿಕ್ಸ್ನಲ್ಲಿ ಒಂದರಿಂದೊಂದು ಚಿನ್ನದ ಪದಕಗಳನ್ನು ಗೆಲ್ಲುತ ತನ್ನೆಡೆಗೆ ಕುಹಕವಾಡಿದ ಅಷ್ಟೂ ಜನರ ಬಾಯನ್ನು ಮುಚ್ಚತೊಡಗಿದ. ಮೊದಲ ಏಳು ಪ್ರಕಾರದ ಈಜಿನಲ್ಲಿ ಏಳು ಚಿನ್ನದ ಪದಕವನ್ನು ಗಳಿಸಿಯೇ ಬಿಟ್ಟ!!


ಅಂದು ಆತ ತನ್ನ ಎಂಟನೇ ಹಾಗು ಕೊನೆಯ ಈಜಿಗೆ ಅಣಿಯಾಗುತ್ತಿದ್ದಾನೆ. ಕಳೆದ ಏಳೂ ಈಜಿನ ಪ್ರಕಾರಗಳಲ್ಲಿ ಅದಾಗಲೇ ಚಿನ್ನವನ್ನು ಗೆದ್ದು ಶತಮಾನದ ಇತಿಹಾಸವನ್ನು ಅದಾಗಲೇ ಸೃಷ್ಟಿಸಿದ್ದಾನೆ. ಇದು ಆತನ ಹೇಳಿಕೆಯ ಎಂಟನೇ ಚಿನ್ನದ ಪದಕದ ಈಜು. 200 ಮೀಟರ್ಗಳ ಬಟರ್ ಫ್ಲೈ. ತನ್ನ ಎರಡೂ ಕೈಗಳನ್ನು ಮೇಲಕೆತ್ತಿ ಎದೆಯ ಮುಖಾಂತರ ಚಿಟ್ಟೆಯಂತೆಯೇ ಈಜುವ ಬಗೆ. ಫೆಲ್ಪ್ಸ್ ನೀರಿಗೆ ಜಿಗಿದ. ಶರವೇಗದಲ್ಲಿ ಇತರ ಈಜುಗಾರರನ್ನು ಹಿಂದಿಕ್ಕತೊಡಗಿದ. ಆದರೆ ಆತನ ಚಿನ್ನದ ಕನಸಿಗೆ ಕೊನೆಗಾಲದ ವಿಘ್ನವೊಂದು ಎದುರಾಯಿತು. ಕಣ್ಣನು ನೀರಿನಲ್ಲಿ ಗಟ್ಟಿಯಾಗಿ ಮುಚ್ಚಿದ್ದ ಆತನ ಕನ್ನಡಕ ಸಣ್ಣದಾಗಿ ಸೀಳುಬಿಟ್ಟಿತು. ಪರಿಣಾಮ ನೀರು ಒಮ್ಮೆಲೇ ಕಣ್ಣೊಳಗೆ ರಭಸವಾಗಿ ನುಸುಳತೊಡಗಿತು. ಕಣ್ಣು ಹುರಿಯಹತ್ತಿತು. ಆದರೆ ಈಜುತ್ತಿದ್ದವನ ಹೆಸರು ಮೈಕಲ್ ಫೆಲ್ಪ್ಸ್. ಮುರಿದ ಕೈಯಲ್ಲೇ ಈಜಿ ಚಿನ್ನವನ್ನು ಗೆದ್ದವನಿಗೆ ಕಣ್ಣಿಗೆ ಉರಿಕೊಡುವ ನೀರು ಅದ್ಯಾವ ಲೆಕ್ಕ. ಆತನಿಗೆ ತನ್ನ ಇನ್ನೂರು ಮೀಟರ್ ರೇಸಿನಲ್ಲಿ ಅದೆಷ್ಟು ಬಾರಿ ಕೈಗಳನ್ನು ಬಡಿಯಬೇಕೆಂಬ ಕರಾರುವಕ್ಕಾದ ಲೆಕ್ಕವಿದ್ದಿತು. ಅಂತೆಯೇ ಎಣಿಸುತ್ತಲೇ ಮುನ್ನುಗ್ಗಿದ. ನೋಡನೋಡುತ್ತಲೇ ಈಜಿನ ಕೊನೆಯನ್ನು ತಲುಪಿದ. ಸಿಳ್ಳೆ ಕೇಕೆಗಳ ಮದ್ಯೆ ಎತ್ತರದಲ್ಲಿ ಝಗಝಗಿಸುತ್ತಿದ್ದ ಸ್ಕೋರ್ ಬೋರ್ಡನ್ನು ನೋಡುತ್ತಾನೆ, ತನ್ನ ಹೆಸರಿನ ಮುಂದೆ WR ಎಂಬ ಅಕ್ಷರಗಳು ಮೂಡಿ ಮಿನುಗತ್ತಿವೆ. ಅರ್ತಾಥ್ ಆತನ ಆ ಈಜು ವರ್ಲ್ಡ್ ರೆಕಾರ್ಡ್ ವೇಗದಲ್ಲಿ ಮುಗಿಸಲಾಗಿದೆ ಎಂದು! ಆತನ ಒದ್ದೆಯಾದ ಕಣ್ಣುಗಳು ಪುನಃ ಒದ್ದೆಯಾದವು. ಅಲ್ಲದೆ ತಾನು ಗೆದ್ದ ಎಂಟು ಚಿನ್ನದ ಪದಕಗಳಲ್ಲ್ಲಿ ಏಳು ವರ್ಲ್ಡ್ ರೆಕಾರ್ಡ್ಗಳನ್ನು ಆತ ಅಲ್ಲಿ ನಿರ್ಮಿಸಿದ್ದ!

ಇದು 21ನೆಯ ಶತಮಾನ ಕಂಡ ಸಾಧಕನೊಬ್ಬನ ಕತೆ. ಜೀವನದಲ್ಲಿ ಬಂದ ಕಷ್ಟಗಳನ್ನು ಬಿಗಿದಪ್ಪಿಕೊಂಡೇ ಮುನ್ನೆಡೆದ ಅಮೇರಿಕಾದ ಸಾಹಸಿಯೊಬ್ಬನ ಕತೆ. ಗುರಿಯೊಂದು ಸ್ಪಷ್ಟವಾದರೆ ಏನೆಲ್ಲವನ್ನು ಸಾಧಿಸಬಹುದೆಂದು ಫಿಲ್ಪ್ಸ್ ಜಗತ್ತಿಗೆ ತೋರಿಸಿಕೊಟ್ಟ. ತನ್ನನ್ನು ಅಣಕಿಸಿದ, ನೋಯಿಸಿದ ಸಮಾಜವನ್ನೇ ಎನರ್ಜಿ ಸಪ್ಲಿಮೆಂಟಿನಂತೆ ಬಳಸಿಕೊಂಡು ಮುನ್ನೆಡೆದ. 2012 ರ ಲಂಡನ್ ಒಲಿಂಪಿಕ್ಸ್ ನಲ್ಲಿ ಪುನಃ ಆರು ಪದಗಳನ್ನು ಗೆದ್ದು ಭಾಗಶಃ ನಿವೃತ್ತಿ ಹೊಂದಿದ್ದ ಫಿಲ್ಪ್ಸ್ ವಯೋಸಹಜ ಚಟುವಟಿಕೆಗಳಂತೆ ಕುಡಿತ, ಡ್ರಗ್ಸ್ ಎನ್ನುತ್ತಾ ಸುದ್ದಿಯಾಗತೊಡಗಿದ. ಇದೇ ಕಾರಣಕ್ಕೆ ಜೈಲುವಾಸವನ್ನೂ ಅನುಭಸಿಸತೊಡಗಿದ. ಇಡೀ ವಿಶ್ವವೇ ಗುರುತಿಸುವ ಹೆಗ್ಗಳಿಕೆಯ ಕ್ರೀಡಾಪಟುವೊಬ್ಬ ಒಮ್ಮೆಲೇ ಜೈಲುಕೋಣೆಯನ್ನು ಸೇರುವುದು ತಮಾಷೆಯ ವಿಷಯವಲ್ಲ. ಇದು ಫಿಲ್ಪ್ಸ್ ನನ್ನು ನಡುಗಿಸಿಹಾಕಿತು. ನಿವೃತ್ತಿ ಹೊಂದಿದ್ದ ಆತ ಕೂಡಲೇ ಮತ್ತೊಂದು ಪಣತೊಟ್ಟ. ಐದನೇ ಬಾರಿಗೆ 2016 ರ ರಿಯೋ ಒಲಿಂಪಿಕ್ಸ್ ನಲ್ಲಿ ಈಜಿ ಗೆಲ್ಲುವುದಾಗಿ ಘೋಷಿಸಿದ. ತನ್ನೆಲ್ಲ ಚಟಗಳನ್ನು ತುಳಿದು ಮಗದೊಮ್ಮೆ ನೀರಿಗೆ ನೆಗೆದ. ಗುರಿ ಸ್ಪಷ್ಟವಾದ ಮೇಲೆ ಮುಂದೇನು. ರಿಯೋ ವಿನಲ್ಲಿ ಆತ ಬಾಚಿದ್ದು ಒಟ್ಟು ಆರು ಮೆಡಲ್ಗಳು. ಅದರಲ್ಲಿ ಚಿನ್ನದ ಮೆಡಲ್ಗಳ ಸಂಖ್ಯೆ ಬರೋಬ್ಬರಿ ಐದು!

Sunday, October 13, 2019

ಡಿಸ್ಲಿಕ್ಸಿಯಾ ಸಮಸ್ಯೆಯಿಂದ ಬಳಲುತ್ತಲೇ ಜುರಾಸಿಕ್ ಪಾರ್ಕ್ನ ಡೈನೋಸರ್ಗಳನ್ನು ಸೃಷ್ಟಿಸಿದನೀತ!


ವಿಶ್ವದ ಆಲ್ ಟೈಮ್ ಗ್ರೇಟೆಸ್ಟ್ ಮೂವಿ ಡೈರೆಕ್ಟರ್ ಗಳ್ಯಾರು ಎಂದು ಹುಡುಕುತ್ತಾ ಹೊರಟರೆ ಈತನ ಹೆಸರು ಮೊದಲ ಐದರೊಳಗೆ ಬರಲೇಬೇಕಿದೆ. ಸೈನ್ಸ್ ಫಿಕ್ಷನ್ನಿಂದಿಡಿದು ಇತಿಹಾಸದ ದಂಥಕತೆಗಳನ್ನೊಳಗೊಂಡ ಚಿತ್ರಗಳನ್ನು ನಿರ್ದೇಶಿಸಿರುವ ಈತನ ಭಾಗಶಃ ಅಷ್ಟೂ ಚಿತ್ರಗಳು ಬಾಕ್ಸ್ ಆಫೀಸ್ನನ್ನು ಕೊಳ್ಳೆಹೊಡೆದಿರುವುದಷ್ಟೇ ಅಲ್ಲದೆ ಚಿತ್ರನಿರ್ಮಾಣದಲ್ಲಿ ತೊಡಗಿರುವವರಿಗೆ ಮೈಲ್ ಸ್ಟೋನ್ಗಳಾಗಿ ನಿಂತಿವೆ. ಅನಿಮೇಷನ್ ಅಥವಾ ಮತ್ಯಾವುದೇ ಪ್ರಸ್ತುತ ಟೆಕ್ನಾಲಜಿಗಳು ಪ್ರಭುದ್ದಗೊಂಡಿರದ ಕಾಲದಲ್ಲೇ Jaws, Indiana Jones, Jurassic Park ಗಳಂತಹ ಅಸಾಮಾನ್ಯ ಚಿತ್ರಗಳನ್ನು ನೀಡಿದ ಈತ ಪ್ರಸ್ತುತ 25,000 ಕೋಟಿಗೂ ಹೆಚ್ಚಿನ ಆಸ್ತಿಯ ಶ್ರೀಮಂತ ನಿರ್ದೇಶಕ. ಹಾಗಂದ ಮಾತ್ರಕ್ಕೆ ಈತ ಚಿನ್ನದ ಕೋಳಿಯನ್ನು ತನ್ನ ಜೊತೆಯಲ್ಲಿಯೇ ಅವುಚಿಕೊಂಡು ಬೆಳೆದವನಲ್ಲ. ಈತನ ಪ್ರಸ್ತುತ Success ಸ್ಟೋರಿಗಳು ಸ್ಪೂರ್ತಿದಾಯಕವಾಗಲು ಈತ ಬೆಳೆದು ಬಂದ ಹಾದಿಯನ್ನೊಮ್ಮೆ ನೋಡಬೇಕು. ಗುರಿಯೊಂದು ಸ್ಪಷ್ಟವಾಗಿದ್ದರೆ, ಗೆಲ್ಲಬೇಕೆಂಬ ಹಠವೊಂದಿದ್ದರೆ ಕಷ್ಟನಷ್ಟಗಳೆಲ್ಲ ತೃಣಮಾತ್ರಕ್ಕೆ ಸಮ ಎಂಬುದನ್ನಿಲ್ಲಿ ಕಾಣಬಹುದು.


ಹುಟ್ಟುವಾಗಲೇ ಡಿಸ್ಲೆಕ್ಸಿಯಾ ಸಮಸ್ಯೆಯಿಂದ ಬಳಲುತ್ತಿದ್ದ ಈತ ಶಾಲಾ ದಿನಗಳಲ್ಲಿ ಇತ್ತ ಕಡೆ ಓದಲೂ ಆಗದೆ ಆತ್ತ ಕಡೆ ಗೆಳೆಯರೊಟ್ಟಿಗೆ ಬೆರೆತು ಆಡಲೂ ಆಗದೆ ನರಳುತ್ತಿದ್ದ. ಈತನ ವಿಚಿತ್ರ ವರ್ತನೆಯನ್ನು ಕಂಡು ಈತನ ಗೆಳೆಯರು ಗೇಲಿ ಮಾಡುತ್ತಿದರಷ್ಟೇ ಅಲ್ಲದೆ ಕೆಲವೊಮ್ಮೆ ಬೈದು ಅವಮಾನಿಸಿ ತಳಿಸುತ್ತಿದ್ದರು. ಆ ಬೈಗುಳ ಹಾಗು ಅವಮಾನಗಳು ಈಗಲೂ ಕಾಡುತ್ತವೆಂದು ಆತ ಕೆಲವೊಮ್ಮೆ ಹೇಳಿಕೊಂಡಿದ್ದಾನೆ! ತನ್ನ ಮುಗ್ದ ಕಣ್ಣುಗಳನ್ನು ಬಿಟ್ಟು ಪ್ರಪಂಚವನ್ನು ಸರಿಯಾಗಿ ಅರಿಯುವ ಮೊದಲೇ ಗೇಲಿ, ಅವಮಾನಗಳಿಂದ ಬೆಳೆಯುತ್ತಿದ್ದ ಈತನಿಗೆ ತನ್ನದೇ ಅದೊಂದು ಆಸೆಯಿದ್ದಿತು. ಆ ಅಸೆ ಸಮಾಜದ ಮೂದಲಿಕೆಯಿಂದ ತನ್ನಿಂತಾನೇ ಮನದೊಳಗೆ ಹುಟ್ಟಿದ್ದೋ ಅಥವಾ ವಯೋಸಹಜವಾಗಿ ಬೆಳೆದದ್ದೋ ತಿಳಿಯದು ಆದರೆ ಆರೇಳು ವರ್ಷದ ಆ ಪೋರನಿಗೆ ಚಿತ್ರ ನಿರ್ಮಿಸುವ ಮಹದಾಸೆ ಮನದೊಳಗೆ ಮೂಡಿತು. ತನ್ನ ಅಪ್ಪನ ಬಳಿಯಿದ್ದ ಸಣ್ಣದೊಂದು ಕ್ಯಾಮೆರಾವನ್ನು ಹಿಡಿದು ತನಗನಿಸಿದ ಹಾಗೆ ಚಿತ್ರೀಕರಿಸುತ್ತಾ ನಡೆದ. ಇದೆ ಹವ್ಯಾಸ ಆತನ ಆಪ್ತ ಗೆಳೆಯನಾಯಿತು.



ಕಾಲ ಓಡತೊಡಗಿತು. ಓದಿನಲ್ಲಿ ತೀರಾನೇ ಹಿಂದಿದ್ದರೂ ತನ್ನ ಹದಿನೆಂಟನೇ ವಯಸ್ಸಿಗೇ ಹಲವಾರು ಸಣ್ಣ ಚಿತ್ರಗಳನ್ನು 'ಸೃಷ್ಟಿಸಿ' ಚಿತ್ರಿಸುವುದನ್ನು ಆತ ಕಲಿತಿದ್ದ. ಮುಂದಿನ ಆತನ ಗುರಿ ಯೂನಿವರ್ಸಿಟಿ ಆಫ್ ಸೌತ್ ಕ್ಯಾಲಿಫೋರ್ನಿಯಾ. ಚಿತ್ರ ನಿರ್ಮಾಣದಲ್ಲಿ ಡಿಗ್ರಿಯೊಂದನ್ನು ಮಾಡಬೇಕೆಂಬ ಆತನ ಮಹದಾಸೆಗೆ ಯೂನಿವರ್ಸಿಟಿ ತಣ್ಣೀರೆರಚಿತು. ಕಾರಣಾತರಗಳಿಂದ ಈತನ ಅಪ್ಲಿಕೇಶನ್ ತಿರಸ್ಕರಿಸಲ್ಪಟ್ಟಿತ್ತು. ಅಷ್ಟೆಲ್ಲ ಕಷ್ಟಗಳ ಒರತಾಗಿಯೂ ಮುನ್ನೆಡೆದು ತನ್ನ ಜೀವನದ ಏಕೈಕ ಗುರಿಯನ್ನು ತಲುಪಲು ಆಗಲಿಲ್ಲವೆಂದು ಆತ ಖಂಡಿತವಾಗಿಯೂ ಕುಗ್ಗಿದ. ಆದರೆ ಬಗ್ಗಲಿಲ್ಲ! ಛಲವನ್ನು ಬಡಿದೆಬ್ಬಿಸಿದ. ಮುನ್ನೆಡೆದ. ಪ್ರತಿದಿನ ತನ್ನ ನಗರದಲ್ಲಿದ್ದ ಅಷ್ಟೂ ಚಿತ್ರಮಂದಿರಗಳಿಗೆ ಭೇಟಿಯಿಟ್ಟು ಎಲ್ಲ ಬಗೆಯ ಚಿತ್ರಗಳನ್ನು ಸೂಕ್ಷ್ಮವಾಗಿ ನೋಡತೊಡಗಿದ. ಚಿತ್ರನಿರ್ದೇಶನದ ಸೂಕ್ಷಮಾತಿಸೂಕ್ಷ್ಮ ಅಂಶಗಳನ್ನು ಗಮನಿಸತೊಡಗಿದ. ತನ್ನ ಪ್ರಯತ್ನವನ್ನು ಮುಂದುವರೆಸುತ್ತಲೇ ಇದ್ದ ಈತನಿಗೆ ಸಂಬಳವಿಲ್ಲದ ಇಂಟರ್ನ್ಶಿಪ್ ಮಾಡುವ ಅವಕಾಶವೊಂದು ಕೊನೆಗೂ ಬಂದೊದಗುತ್ತದೆ. ಆ ಸಂಸ್ಥೆಯ ಹೆಸರೇ ಜಗತ್ಪ್ರಸಿದ್ದ ಯೂನಿವರ್ಸಲ್ ಸ್ಟುಡಿಯೋ. ಹಾರುಬಯಸುವ ಹಕ್ಕಿಗೆ ಈಗ ಪಂಜರದ ಬಾಗಿಲನ್ನು ತೆರೆದುಕೊಟ್ಟಂತಾಯಿತು. ಅಲ್ಲಿಂದ ಮುಂದೆ ತನ್ನ ನಡೆಯಲ್ಲಿ ಈತ ನಿಂತ ಉದಾಹರಣೆಗಳೇ ಇಲ್ಲ. ಕಾಡಿದ ಹಾಗು ಕಾಡುತ್ತಿರುವ ಡಿಸ್ಲೆಕ್ಸಿಯಾ ಹಾಗು ಖಿನ್ನತೆಯೂ ಕೂಡ ಈತನನ್ನು ತಡೆಯಲಾಗಲಿಲ್ಲ! ಅಲ್ಲಿ ತಾನು ನಿರ್ದೇಶಿಸಿದ ಮೊದಲ ಚಿತ್ರದಲ್ಲೇ ಕಂಪನಿಯ ವೈಸ್ ಪ್ರೆಸಿಡೆಂಟ್ನ ಕಣ್ಣಿಗೆ ಬಿದ್ದ ಈತ ಮುಂದೆ ಒಂದೊಂದಾಗಿಯೇ ಇತಿಹಾಸವನ್ನು ಸೃಷ್ಟಿಸುತ್ತಾ ಸಾಗಿದ.



ಅದೊಂದು ದಿನ ಈತನ ಸಾಧನೆಯನ್ನು ಗಮನಿಸಿ ಯೂನಿವರ್ಸಿಟಿಯೊಂದು ಗೌರವ ಡಾಕ್ಟರೇಟ್ ಕೊಡಲು ಆಹ್ವಾನಿಸುತ್ತದೆ. ಆದರೆ ಈತ ಆ ಯೂನಿವರ್ಸಿಟಿಗೆ ಹೋಗಿ ಡಾಕ್ಟರೇಟನ್ನು ಸ್ವೀಕರಿಸುವ ಮೊದಲು ಇಟ್ಟ ಏಕೈಕ ಬೇಡಿಕೆಯೆಂದರೆ ಹಲವು ವರ್ಷಗಳ ಹಿಂದೆ ತನ್ನನ್ನು ರಿಜೆಕ್ಟ್ ಮಾಡಿ ಮನೆಗೆ ಕಳುಹಿಸಿದ ಅದೇ ಪ್ರೊಫೆಸರ್ನಿಂದ ಸರ್ಟಿಫಿಕೇಟ್ನ ಮೇಲೆ ಸಹಿ ಹಾಕಬೇಕೆಂದು! Yes. ಅಂದು ಡಾಕ್ಟರೇಟ್ ಕೊಡಲು ಆಹ್ವಾನಿಸಿದ ಆ ಯೂನಿವರ್ಸಿಟಿ ಯಾವುದಂತಿರ? ಅದು ಅದೊಂದು ದಿನ ಈತನ ಅಪ್ಲಿಕೇಶನನ್ನು ನಿರಾಕರಿಸಿ ಸೀಟು ಕೊಡದೆ ವಾಪಸ್ಸು ಕಳಿಸಿದ್ದ ಯೂನಿವರ್ಸಿಟಿ ಆಫ್ ಸೌತ್ ಕ್ಯಾಲಿಫೋರ್ನಿಯಾ!


ಸಕ್ಸಸ್ ಎಂದರೆ ಹೀಗಿರಬೇಕಲ್ಲವೇ?


ಕಾಲ ಎಂದಿಗೂ ನಿಂತ ನೀರಲ್ಲ. ಕೆಲವೊಮ್ಮೆ ನಾವು ಈಜದಿದ್ದರೂ ಆ ಸೆಳೆತ ನಮ್ಮನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಹೊತ್ತೊಯ್ಯುತ್ತದೆ. ಅಲ್ಲಿ ಗುರಿಯಿರುವುದಿಲ್ಲ. ಅಲ್ಲಿ ಯಾವ ಸಮಯಕ್ಕೆ ಯಾವ ಬಂಡೆಗೆ ಗುದ್ದಿ ಅದೇನು ಅನಾಹುತ ಸಂಭವಿಸುವುದೋ ತಿಳಿಯದು. ಆದರೆ ಗುರಿ ಸ್ಪಷ್ಟವಿರುವ ಕೆಲವರು ಅದೆಂತಹ ಸೆಳೆತದ ವಿರುದ್ಧವಾದರೂ ಸರಿಯೇ ಕಷ್ಟಪಟ್ಟು ಈಜುತ್ತಾ ತಮ್ಮ ಗುರಿಯನ್ನು ಸೇರುತ್ತಾರೆ. ಇಚ್ಛಾಶಕ್ತಿಯೆಂಬ ಮೂಲ ಮಂತ್ರವನ್ನು ಜಪಿಸುತ್ತ ಹೀಗೆ ಧಿಟ್ಟ ಹೆಜ್ಜೆಯನ್ನು ಹಿಡುತ್ತಾರೆ. ಅಂದಹಾಗೆ ಇಷ್ಟೆಲ್ಲಾ ಸಾದನೆಗಳನ್ನು ಮಾಡಿದ ಅಮೇರಿಕಾದ ಆ ಸುಪ್ರಸಿದ್ದ ಡೈರೆಕ್ಟರ್ನ ಹೆಸರೇ ಲೆಜೆಂಡರಿ ಸ್ಟೀವನ್ ಸ್ಪಿಲ್ಬರ್ಗ್.

Wednesday, August 7, 2019

ಸ್ವರ್ಗವನ್ನಾವರಿಸುವುದಿನ್ನು ಮಲೆನಾಡ ಕಾಫಿಯ ಕಂಪು... Bon Voyage you Sir!!

ಜುಲೈ 30, 2019. ಆ ದಿನದ ಬೆಳಗಿನ ಸೂರ್ಯ ಯಾರಿಗೆ ಏನನ್ನು ಹೊತ್ತು ತಂದನೋ ಗೊತ್ತಿರಲಿಲ್ಲ ಆದರೆ ದಕ್ಷಿಣ ಭಾರತದ ಲಕ್ಷಾಂತರ ಮಲೆನಾಡಿಗರಿಗಂತೂ ದುಃಖದ ಮಹಾ ಮಡುವನ್ನೇ ತಂದೆಸೆದಿದ್ದ. ಮೋಡಗಳ ಮದ್ಯೆ ಆಗಾಗ ಮರೆಯಾಗಿ ಆಟವಾಡುತ್ತಿದ್ದ ಆತ ಮಲೆನಾಡ ಕಣ್ಮಿಣಿಯಂತಿದ್ದ ನಾಯಕನೊಬ್ಬನ ಕಣ್ಮರೆಯನ್ನು ಸೂಚಿಸುತ್ತಿದ್ದ. ಅಂದು ಇಡೀ ಊರಿಗೆ ಊರೇ ಒಂದು ಮಹಾ ಮೌನದಲ್ಲಿ ಮುಳುಗಿಹೋಗಿತ್ತು. ‘ಜೀವನ ಇಷ್ಟೇಯೇ?’ ಎಂದೆನಿಸಿ ಬೇಸರಗೊಂಡು ಮುಚ್ಚಿದ ಅಂಗಡಿ ಮುಂಗಟ್ಟುಗಳು ಒಂದೆಡೆಯಾದರೆ, ಇತ್ತಕಡೆ ಅನಿವಾರ್ಯ ಕಾರಣಗಳಿಂದ ತೆರೆದ ಮಳಿಗೆಗಳೂ ಬಿಕೋ ಎನ್ನುತ್ತಿದ್ದವು. ಹಾಲು ಮಾರುವವರ, ಪೇಪರ್ ಹಾಕುವನವರ ಅಥವಾ ತರಕಾರಿ ಗಾಡಿಯ ವ್ಯಕ್ತಿಗಳಿಂದಿಡಿದು ಸಾವಿರಾರು ಎಕರೆ ಕಾಫಿ ತೊಡದ ಒಡೆಯರ ಮುಖಗಳ ಮೇಲೂ ನೋವಿನ ಛಾಯೆಯೊಂದು ಅಂದು ಮನೆಮಾಡಿತ್ತು. ಜಾತಿ, ಪಂಥ, ಬಡವ, ಬಲ್ಲಿದ, ಹಿರಿಯರು, ಕಿರಿಯರೊಟ್ಟಿಗೆ ಆ ನಾಯಕ ಬೆಳೆಸಿದ್ದ ಕೋಟ್ಯಂತರ ಕಾಫಿ ಗಿಡಗಳೂ ಸಹ ಅಂದು ದುಃಖಗೊಂಡಿದ್ದವು. In a broad sense ಅರಗಿಸಿಕೊಳ್ಳಲಾಗದ ಸ್ಮಶಾನ ಮೌನವೊಂದು ಪಶ್ಚಿಮ ಘಟ್ಟದ ನಾಡನ್ನು ಅಂದು ಆವರಿಸಿತ್ತು. ಕಾರಣ, ದೇಶವಷ್ಟೇ ಅಲ್ಲದೆ ವಿದೇಶಗಳಿಗೂ ಮಲೆನಾಡ ಕಾಫಿಯ ಸುಮಧುರ ಘಮವನ್ನು ಪಸರಿಸಿದ್ದ, ವಿಶ್ವದ ಭೂಪಟದಲ್ಲಿ ಮಲೆನಾಡ ಚಿರಗುರುತನ್ನು ಹುಟ್ಟುಹಾಕಿದ, ಕಾಫಿ ಬೆಳೆಗಾರ, ಉದ್ಯಮಿ, ಕಾಫಿ ಕಿಂಗ್ , ಸಾಹಸಿ, ಕನಸುಗಾರ, , ತೆರೆಮರೆಯ ಸಮಾಜಸೇವಕ, ಸರಳ ಸಜ್ಜನಿಕೆಯ ಮನುಷ್ಯನೊಬ್ಬ ಕಳೆದ ಹನ್ನೆರೆಡು ಘಂಟೆಗಳಿಂದ ಕಾಣೆಯಾಗಿದ್ದ ವಿಷಯ! ವ್ಯಕ್ತಿಯೊಬ್ಬ ಕೇವಲ ಕಾಣೆಯಾದ ಮಾತ್ರಕ್ಕೇ ಲಕ್ಷಾಂತರ ಮನಸ್ಸುಗಳು ಹೀಗೆ ದುಃಖತಪ್ತವಾಗುತ್ತವೆಂದರೆ ಆ ವ್ಯಕ್ತಿತ್ವ ಜನಮಾನಸದ ಮೇಲೆ ಅದೆಂತಹ ಪ್ರಭಾವವನ್ನು ಬೀರಿರಬಹುದೆಂದು ನಾವು ಊಹಿಸಬಹುದು.

ಹೆಚ್ಚೇನ್ನಿಲ್ಲ, ಕೇವಲ ದಶಕಗಳೆರಡರ ಹಿಂದಕ್ಕೆ ಹೋದರೆ ಕಾಫಿ ಎಂಬುದು ಉಳ್ಳವರ, ದೊಡ್ಡವರ ಪೇಯ ಎಂಬೊಂದು ಮನೋಭಾವನೆ ಭಾರತೀಯರಲ್ಲಿದ್ದಿತು. ಟೀ ಅಥವಾ ಚಹಾ ದೇಶದ ಕೋಟ್ಯಾನುಕೋಟಿ ಜನರ ನಾಲಿಗೆಯ ಮೇಲೆ ನಲಿಯುತ್ತಿತ್ತು. ಕಾಫಿ ಎಂಬ ಹೆಸರನ್ನು ಜನ ಕೇಳಿದ್ದರೇ ವಿನ್ಹಾ ನೋಡಿರುವ ಮಂದಿ ಬಹಳ ವಿರಳವಾಗಿದ್ದರು. ಇನ್ನು ರೈತರ ವಿಷಯಕ್ಕೆ ಬಂದರೆ ತಾವು ಬೆಳೆದ ಬೆಳೆಯನ್ನು ಮುಕ್ತವಾಗಿ ಮಾರುಕಟ್ಟೆಯಲ್ಲಿ ಮಾರಲೂ ಬೇರೆಯೊಬ್ಬರ ಅಪ್ಪಣೆಯನ್ನು ಪಡೆಯಬೇಕಿತ್ತು. ಅಲ್ಲದೆ ಕಾಫಿ ಎಂಬುದು ಅಂದು ಬಹುಪಾಲು ಜನರಿಗೆ ಜೀವನ ನೆಡೆಸಲು ಇದ್ದ ಒಂದು ಸಣ್ಣ ಆಧಾರವಾಗಿದ್ದಿತೇ ವಿನ್ಹಾ ರಾಷ್ಟ್ರಮಟ್ಟದಲ್ಲಿ ದೇಶದ ಆದಾಯಕ್ಕೆ ಬೆನ್ನೆಲುಬಾಗುವ ಉದ್ಯಮವಂತೂ ಅದು ಆಗಿರಲೇ ಇಲ್ಲ. ಇನ್ನು ನಮ್ಮ ಬೆಳೆಗಾರರು ವಿದೇಶಗಳಿಗೆ ರಫ್ತುಮಾಡಿ ಹಣ ಗಳಿಸುವುದೆಲ್ಲ ಕನಸ್ಸಿನ ಮಾತೆ ಸರಿ. ಕಾರಣ ಅಂತಹ ರಪ್ತಿಗೆ ಸರ್ಕಾರಗಳು ವಿಧಿಸುತ್ತಿದ್ದ ಭಾರಿ ಮೊತ್ತದ ತೆರಿಗೆಗಳು ಹಾಗು ಕಾಫಿ ಬೋರ್ಡ್ ಎಂಬ ತಡೆಗೋಡೆಗಳು. ಮೇಲಾಗಿ ವಿಶ್ವದಾದ್ಯಂತ ಅಷ್ಟರಲ್ಲಾಗಲೇ ಹಲವಾರು ಚಿರಪರಿಚಿತ ಕಾಫಿ ಬ್ರಾಂಡ್ಗಳು ನೆಲೆಯೂರಿದ್ದರಿಂದ ಕಗ್ಗತ್ತಲೆಯ ಮಲೆನಾಡ ಮೂಲೆಯ ನಮ್ಮ ಕಾಫಿ ಬೀಜಗಳನ್ನು ಅಲ್ಲಿಯವರೆಗೂ ಕೊಂಡೊಯ್ದು ಅಂತಹ ದೈತ್ಯ ಬ್ರಾಂಡ್ಗಳೊಟ್ಟಿಗೆ ಪೈಪೋಟಿಯನ್ನು ಮಾರುವವರ್ಯರು? ವಿದೇಶಿ ಮಾರುಕಟ್ಟೆಗಳನ್ನು ನಮ್ಮಲ್ಲಿಗೆ ಕರೆದು ತರುವವರ್ಯಾರು ? ಇವೆಲ್ಲ ಪ್ರೆಶ್ನೆಗಳ ಉತ್ತರ ಮಲೆನಾಡ ಚಿಗುರು ಮೀಸೆಯ ಸಣಕಲು ಕಾಯದ ಆ ಒಬ್ಬ ವ್ಯಕ್ತಿಯಲ್ಲಿದ್ದಿತು. ಆತನ ಹೆಸರೇ ವೀರಪ್ಪ ಗಂಗಯ್ಯ ಸಿದ್ದಾರ್ಥ.

'In the next 15-20 years, there will be around 15 to 20 retail brands from India in the high-Streets of the world & we want our brand to be one of them. We want to make every Indian is proud of our brand'

ಅದು 2016, ಕಾನ್ಪುರ IIT. ನಾಳಿನ ದಿನಗಳ ಮಹತ್ತರ ಕನಸನ್ನು ಹೊತ್ತ ನೂರಾರು ವಿದ್ಯಾರ್ಥಿಗಳ ಮುಂದೆ ತಮ್ಮ Cafe Coffee Day ಕುರಿತು ಈ ಮಾತನ್ನು ಹೇಳುತಿದ್ದ ಸಿದ್ಧಾರ್ಥರ ಮುಖದಲ್ಲಿದ್ದ ಆ ಹುಮ್ಮಸ್ಸನ್ನು ನೋಡಬೇಕು. ವರ್ಷಗಳ ಹಿಂದೆ ಯಾರಿಗೂ ಬೇಡವಾದ ವಲಯವನ್ನು ಬ್ರಾಂಡ್ ಒಂದಾಗಿ ಮಾರ್ಪಡಿಸಿ ವಿದೇಶದ ನೆಲದಲ್ಲಿ ಅದನ್ನು ಪ್ರತಿಷ್ಠಾಪಿಸುವ ಅವರ ಕನಸ್ಸನ್ನು ಕಂಡು ಅಲ್ಲಿ ನೆರೆದಿದ್ದ ಅಷ್ಟೂ ಮಂದಿಯೂ ಆತ್ಮವಿಶ್ವಾಸದ ಅಲೆಯಲ್ಲಿ ತೇಲಿದಂತೂ ಸುಳ್ಳಲ್ಲ. ಹೆಚ್ಚು ಕಡಿಮೆ ಆ ಕನಸ್ಸು ಇಂದಿಗೆ ನನಸ್ಸಾಗಿದೆ ಎಂದರೆ ತಪ್ಪಾಗದು. CCD ಎಂದರೆ ಇಂದು ದೇಶದ ಭಾಗಶಃ ಯುವಕ ಯುವತಿಯರ ದೈನಂದಿಂದ ರೂಟೀನಲ್ಲಿ ಒಂದಾಗಿಬಿಟ್ಟಿದೆ. IT ಜನರ ಹಾಡು, ಹರಟೆ, ಸುಖ, ದುಃಖ, ನೋವು, ನಲಿವುಗಳೆಲ್ಲದರ ಮೇಟಿಂಗ್ ಪಾಯಿಂಟ್ ಈ CCD. ನಾನಿಲ್ಲಿ ಗೂಡಂಗಡಿಯಲ್ಲಿ ಸಿಗುವ ರುಚಿಕರವಾದ ಒಂದಕ್ಕಿ ದುಡ್ಡಿನ ಕಾಫಿಗೂ, CCDಯಲ್ಲಿ ದೊರೆಯುವ ಮೂರಂಕಿಯ ಕಾಫಿಗೂ ಹೋಲಿಕೆ ಮಾಡುತ್ತಿಲ್ಲ. Ofcourse ಹಣವನ್ನು ಮುಂದಿಟ್ಟರೆ ಅಲ್ಲಿ ಕಾಣುವ ಏರಿಳಿತ ಸಾಮನ್ಯವೇ. But here I’m taking about a Brand. The Brand. ಪ್ರಸ್ತುತ ಪೈಪೋಟಿಯ ಕಾಲದಲ್ಲಿ ಬ್ರಾಂಡ್ ಒಂದನ್ನು ಸೃಷ್ಟಿಸಿ ಬೆಳೆಸಿ ಮುನ್ನೆಡೆಸುವ ಪ್ರಕ್ರಿಯೆಗೂ ತಾಯಿಯೊಬ್ಬಳು ಮೊದಲ ಬಾರಿ ಗರ್ಭವತಿಯಾಗಿ ಮುದ್ದಾದ ಮಗುವನ್ನು ಭೂಮಿಗೆ ತರುವ ಕ್ರಿಯೆಗೂ ಏನೇನೂ ವ್ಯತ್ಯಾಸವಿರುವುದಿಲ್ಲ. ಅಳುತ್ತಲೇ ಬರುವ ಮಗುವನ್ನು ಸಂತೈಸಿ, ಮುದ್ದಿಸಿ, ಹಾಲುಣಿಸಿ, ಶುಚಿಗೊಳಿಸಿ, ಕಷ್ಟಗಳೆಲ್ಲದರಿಂದ ರಕ್ಷಿಸಿ ಬೆಳೆಸುವ ಪ್ರಕ್ರಿಯೆ ಒಂದೆಡೆ ಸಾಕು ಸಾಕೆನಿಸಿದರೆ ಮತ್ತೊಂದೆಡೆ ಮನಸ್ಸಿಗೊಂದು ಅವರ್ಣನೀಯವಾದ ಮುದವನ್ನು ನೀಡುತ್ತಿರುತ್ತದೆ. ತನ್ನಿಂದ ಜೀವಕಂಡ ಮಗು ಹೆಮ್ಮರವಾಗಿ ಬೆಳೆಯುವ ಕನಸ್ಸು ಅಲ್ಲಿರುತ್ತದೆ. ಅದೇನೇ ಕಷ್ಟಗಳು ಬಂದರೂ ಸಹಿಸುವ ಮನೋಬಲ ಅದಾಗಿರುತ್ತದೆ. ಅಂತಹದ್ದೇ ತಾಯಿಯ ಕನಸ್ಸನ್ನು ಬ್ರಾಂಡ್ಗಳ ಸೃಷ್ಟಿಸುವ ಬಿಸಿನೆಸ್ ಮ್ಯಾನ್ಗಳು ಕಾಣುತ್ತಾರೆ. ಶತಾಯಗತಾಯ ಆದೂ ಸಹ ಹೆಮ್ಮರವಾಗಿ ಬೆಳೆಯಬೇಕು, ರಾಜ್ಯ, ದೇಶಗಳಷ್ಟೇ ಅಲ್ಲದೆ ವಿದೇಶಗಳಲ್ಲೂ ತನ್ನ ಹೆಸರು ಕೀರ್ತಿಯನ್ನು ಗಳಿಕೊಳ್ಳಬೇಕು ಎಂಬ ಕನಸು ಅವರದ್ದಾಗಿರುತ್ತದೆ. ಅಂತಹ ತಾಯಿಯ ಮಮತೆಯ ಕನಸಿಗೆ ನಾವು ಬೆಲೆಕಟ್ಟುವ ಧಾವಂತ ಎಂದಿಗೂ ಮಾಡಕೂಡದು.ಅಂತ ನೂರಾರು ಕನಸ್ಸುಗಳ ನಡುವೆ ನಮ್ಮ CCDಯೂ ಕೂಡ ಒಂದು.

1983. ಮಲೆನಾಡಿನ ಮಟ್ಟಕ್ಕೆ ಶ್ರೀಮಂತ ಮನೆತನದಲ್ಲಿ ಹುಟ್ಟಿ ಬೆಳೆದ ಹುಡುಗನೊಬ್ಬ ಅಂದು ಸೀದಾ ಬಾಂಬೆಗೆ ಹೋಗುವ ಟ್ರೈನನ್ನು ಹಿಡಿದ. ಸೈನ್ಯಕ್ಕೆ ಸೇರಬೇಕೆಂದು ಪ್ರಯತ್ನಿಸಿ ಸೋತರೂ ಜೀವನದಲ್ಲಿ ಪುನಃ ಮತ್ತೇನನ್ನೋ ಸಾಧಿಸಬೇಕೆಂಬುದು ಆತನ ಕನಸ್ಸಾಗಿರುತ್ತದೆ. ಆದರೆ ಅದು ಏನು, ಹೇಗೆ, ಎಲ್ಲಿ ಎಂಬುದು ತಿಳಿದಿರುವುದಿಲ್ಲ. ರೂಮೊಂದನ್ನು ಬುಕ್ಕು ಮಾಡಿ ಕೆಲಸವನ್ನು ಅರೆಸತೊಡಗಿದ. ಕಣ್ಣಿಗೆ ಕಂಡ ದೊಡ್ಡದಾದ ಕಟ್ಟಡದ ಆರನೇ ಅಂತಸ್ತನ್ನು ಏರಿದ 22ರ ಆ ಪೋರ ಸೀದಾ ನೆಡೆದದ್ದೇ ಆಗಿನ ಕಾಲಕ್ಕೆ ಬಾಂಬೆಯಲ್ಲಿ ಒಳ್ಳೆಯ ಹೆಸರನ್ನು ಗಳಿಸಿದ್ದ JM Financial ಎಂಬ ಕಂಪೆನಿಯೊಳಕ್ಕೆ. ಗೊತ್ತಿಲ್ಲ, ಗುರಿಯಿಲ್ಲ, Appointment ಎಂಬುದು ಇಲ್ಲವೇ ಇಲ್ಲ. ಆದರೂ ಯಂಗ್ ಸಿದ್ದಾರ್ಥನ ಅದೃಷ್ಟ ಚೆನ್ನಾಗಿಯೇ ಇದ್ದಿತು. ಆತನ ಜೀವನ ಬದಲಾದ ಅಮೋಘ ಕ್ಷಣಗಳವು. ಕಂಪನಿಯ ಮಾಲೀಕ Mr. Naveen Bhai Kampani ಖುದ್ದಾಗಿ ಈತನನ್ನು ತನ್ನ ತಂಡದಲ್ಲಿ ನೇಮಿಸಿಕೊಂಡರು. ಆ ಬಿಸಿರಕ್ತದ ಹುಡುಗನ ಜೀವನದಲ್ಲಿ ಮುಂದೆ ನೆಡೆದ ಘಟನೆಗಳೆಲ್ಲ ವಸಂತ ಮಾಸದ ಹೂವುಗಳಂತೆ ಒಂದರಿಂದೊಂದು ಅರಳಿ ಘಮಿಸತೊಡಗಿದವು. ಸಿದ್ಧಾರ್ಥರ JM Financial ನೊಳಗಿನ ಸ್ಟಾಕ್ ಮಾರ್ಕೆಟ್ಟಿನ ಅನುಭವ ಹಾಗು ಜ್ಞಾನ ಅವನ ಜೀವನಕ್ಕಾಗುವಷ್ಟು ದೊರೆಯಿತು. ಮೇಲಾಗಿ ಅಲ್ಲಿ ದೊರೆತ ದೊಡ್ಡ ದೊಡ್ಡ ವ್ಯಕ್ತಿಗಳ ಪರಿಚಯ, ಅವರ ಜೀವನದ ಮೌಲ್ಯಗಳು ಸಿದ್ದಾರ್ಥರನ್ನು A man with ambition ರನ್ನಾಗಿ ಮಾಡಿತು. ಕನಸ್ಸೊಂದು ಚಿಗುರೊಡೆಯಿತು. ಎರಡೇ ವರ್ಷಗಳ ನಂತರ ತಾಯ್ನೆಲಕ್ಕೆ ಆಗಮಿಸಿದ ಸಿದ್ದಾರ್ಥ್ ಸೀದಾ ತನ್ನ ಕನಸ್ಸಿನ ಗೋಪುರಕ್ಕೆ ಅಡಿಪಾಯವನ್ನು ಹಾಕಿದರು. ಸ್ಟಾಕ್ ಮಾರ್ಕೆಟ್ ನಲ್ಲಿ ಚತುರತೆಯಿಂದ ಇನ್ವೆಸ್ಟ್ ಮಾಡುತ್ತಾ ಬಂದ ಹಣವನ್ನು ಸೀದಾ ಕಾಫಿತೋಟಗಳ ಕೊಳ್ಳುವಿಕೆಯಲ್ಲಿ ತೊಡಗಿಸುತ್ತಾರೆ. ನೋಡನೋಡುತ್ತಲೇ ಸಾವಿರಾರು ಎಕರೆ ತೋಟದ ಮಾಲೀಕರಾಗುತ್ತಾರೆ.

ಇಲ್ಲಿನ ನಂತರ 'ಬ್ರಾಂಡ್' ಎಂಬ ಕಾನ್ಸೆಪ್ಟ್ ಸಿದ್ದಾರ್ಥರ ತಲೆಯೊಳಗೆ ಬಂದದ್ದೇ ತಡ ಆಗಿನ ಕಾಲಕ್ಕೆ ತೀರಾ ಸೋಜಿಗವೆಂದೆನಿಸಿದ ಬಿಸಿನೆಸ್ ಮಾಡೆಲ್ ಒಂದನ್ನು ತನ್ನ ಕನಸ್ಸಿನ ಕೂಸಗಿ ತೊಡೆಯಮೇಲೆ ಅವರು ಹಾಕಿಕೊಂಡರು. ತಾವು ಬೆಳೆದ ಕಾಫಿಯನ್ನು ತೃಣಮಾತ್ರದ ಬೆಲೆಗೆ ಮಾರಿ ದೂರದಲ್ಲಿ ಅಲ್ಯಾರೋ ಒಂದಿಷ್ಟೂ ಮೈ ಬಗ್ಗಿಸದೆ ಕೋಟಿ ಕೋಟಿಯನ್ನು ಎಣಿಸುವ ಪ್ರಕ್ರಿಯೆಯನ್ನು ಮೊಟಕು ಗೊಳಿಸಬೇಕೆಂದುಕೊಂಡರು. ಅದು ತಾನೊಬ್ಬನಿಗೆ ಅಲ್ಲದೆ ಈ ಪ್ರದೇಶದಲ್ಲಿ ನೆಲೆಸಿರುವ ಸಾವಿರಾರು ಕಾಫಿ ಬೆಳೆಗಾರರಿಗೂ ವರವಾಗಿ ಪರಿಣಮಿಸುತ್ತಿತ್ತು. ಪರಿಸ್ಥಿತಿಯನ್ನು ಅರಿತ ಸಿದ್ದಾರ್ಥ ಸುಮ್ಮನೆ ಕೂರಲಿಲ್ಲ. ಕಮಿಟಿಯೊಂದನ್ನು ಮಾಡಿಕೊಂಡು ಸೀದಾ ಭೇಟಿ ಮಾಡಿದ್ದೆ ಆಗಿನ ಹಣಕಾಸು ಸಚಿವರಾಗಿದ್ದ ಪ್ರಸ್ತುತ ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ರವರನ್ನು! ಒಂದರೆಗಳಿಗೆಯೂ ಯೋಚಿಸದೆ ಇವರ ಕೋರಿಕೆಯನ್ನು ಮನ್ನಿಸಿದ ಸಿಂಗ್ ಕಾಫಿಯನ್ನು ರಫ್ತ್ತುಮಾಡಲು ಇದ್ದ ಹಲವು ಬಗೆಯ ತೊಡಕುಗಳನ್ನು ಹಾಗು ಹೆಮ್ಮರವಾಗಿ ಬೆಳೆದು ನಿಂತ ಸುಂಕಗಳನ್ನು ತೆರವುಗೊಳಿಸಿದರು. ಆ ದಿನ ಮಲೆನಾಡ ಕಾಫಿ ಬೆಳೆಗಾರರಿಗೆ ಉಂಟಾದ ಖುಷಿಗೆ ಬಹುಷಃ ಪಾರವೇ ಇರಲಿಲ್ಲವೆಂದೆನಿಸುತ್ತದೆ. ಅಲ್ಲಿಂದ ಮುಂದೆ ಟ್ರೇಡಿಂಗ್ ಹಾಗು ಎಕ್ಸ್ಪೋರ್ಟ್ ಮಾಡುವ ಕಂಪನಿಯನ್ನು ಖುದ್ದು ಹುಟ್ಟುಹಾಕಿದರು. ಹೀಗೆ ಹುಟ್ಟಿಕೊಂಡ ಕಂಪನಿಯೇ Amalgamated Bean Coffee Trading Company ಅಥವ ಮಲೆನಾಡಿಗರ ಪ್ರೀತಿಯ ABC.

ABCಯ ನಂತರ Coffee Day ಯನ್ನು ಸ್ಥಾಪಿಸಿ ಅದರ ಮುಖೇನ CCD, Tanglin, Sical Logistics, Serai Resorts, Way to Wealth, ಎಂಬ ಚಿರಪರಿಚಿತ ಬ್ರಾಂಡ್ಗಳೊಟ್ಟಿಗೆ ಹಲವಾರು IT ಕಂಪನಿಗಳಲ್ಲೂ ಅವರು ತೊಡಗಿಸಿಕೊಂಡರು. ಇದು ಗೆದ್ದ ಉದ್ಯಮಿಯೊಬ್ಬ ಬೆಳೆದು ಬಂದ ಸಕ್ಸಸ್ ಪಾತ್ ನಂತಷ್ಟೇಯೇ ಆಗಿದ್ದರೆ ಇಷ್ಟೆಲ್ಲಾ ಹೇಳಬೇಕಾದ ಅವಶ್ಯಕತೆ ಇರಲಿಲ್ಲ. ಬದಲಾಗಿ ಸಿದ್ದಾರ್ಥ್ ಒಬ್ಬ ಸಮಾಜವಾದಿ ಧೋರಣೆಯುಳ್ಳ ವ್ಯಕ್ತಿತ್ವ. ಉದಾಹರಣೆಗೆ ಮೇಲೆ ತಿಳಿಸಿದ ಯಾವುದಾದರೊಂದು ಸಂಸ್ಥೆಯಲ್ಲಿ ಹೋಗಿ ನೋಡಿದರೆ ಮಿನಿಮಮ್ ಎಂದರೂ 60 ರಿಂದ 70 % ನಷ್ಟು ನೌಕರರು ಮಲೆನಾಡಿಗರೇ ಅಥವಾ ಕನ್ನಡಿಗರೇ ಆಗಿರುತ್ತಾರೆ. ತಮ್ಮ ತಮ್ಮ ಊರುಗಳಲ್ಲಿ ಕನಿಷ್ಠ ವೇತನವನ್ನಷ್ಟೇ ಗಳಿಸುತ್ತಾ ಜೀವನ ಸವೆಸುವ ಸಾವಿರಾರು ಯುವಕ ಯುವತಿಯರು ಇಂದು Coffee Dayಯ ಅವಿಬಾಜ್ಯ ಅಂಗವಾಗಿಬಿಟ್ಟಿದ್ದಾರೆ. ಒಂದು ಪಕ್ಷ ಡಿಗ್ರಿ ಗಿಗ್ರಿಗಳೆಲ್ಲ ಇಲ್ಲವಾದರೆ ಏನಪ್ಪಾ ಮಾಡುವುದು ಎಂದರೆ 'ಹೋಗಯ್ಯಾ..' ಎನುತ ಮನೆಯ ದಾರಿಯನು ತೋರಿಸುವ ಪ್ರಸ್ತುತ ಕಾಲದಲ್ಲಿ ಸಿದ್ಧಾರ್ಥ್ ಅಂತವರಿಗಾಗಿಯೇ ಒಂದು ತರೆಬೇತಿ ಸಂಸ್ಥೆಯನ್ನು ಕಟ್ಟಿಕೊಟ್ಟರು! ಅಲ್ಲಿನ ಆ ಪರಿಸರದಲ್ಲಿ ಒಂದಿಷ್ಟು ತರಬೇತಿಯನ್ನು ಗಳಿಸಿದರೆ ಸಾಕು ಗರಿಗರಿಯಾದ ಆಫರ್ ಲೆಟರ್ ಕೆಲವೇ ತಿಂಗಳುಗಳಲ್ಲಿ ಅಭ್ಯರ್ಥಿಯ ಕೈಯನ್ನು ಬಂದು ಸೇರುತ್ತದೆ. ಇನ್ನು ಈ ಪ್ರಾಂತ್ಯದ ರೈತರಿಗೆ ಇವರು ಪ್ರತ್ಯಕ್ಷವಾಗಿ ಹಾಗು ಪರೋಕ್ಷವಾಗಿಯೂ ಮಾಡಿರುವ ಉಪಕಾರಗಳು ಅನೇಕನೇಕ. ಎಲ್ಲಿಯೂ ಸಹ ತನ್ನ ಹೆಸರಾಗಲಿ ಅಥವಾ ತಮ್ಮ ಕುಟುಂಬದವರ ಹೆಸರಾಗಲಿ ಬರಲು ಬಯಸದ ಸಿದ್ದಾರ್ಥ್ ಒಂತರ ಮಲೆನಾಡ ರಾಬಿನ್ ಹುಡ್ ಎಂದೇ ಹೇಳಬಹುದು! ಇದಕ್ಕೆ ಒಂದು ಪೂರಕ ಉದಾಹರಣೆ ಚಿಕ್ಕಮಗಳೂರಿನಲ್ಲಿ ಸ್ಥಾಪಿಸುತ್ತಿದ್ದ, ಕ್ಯಾಶ್ ಕೌಂಟಗಳೆ ಇಲ್ಲದ ಒಂದು Multi Specialty Hospital..! Yes, try believing your eyes! ಒಂದಿನಿತೂ ಬಿಡಿಗಾಸಿಲ್ಲದೇ ಆಸ್ಪತ್ರೆಯೊಂದನ್ನು ಅದೂ ಸಹ Multi Specialty Hospital ಒಂದನ್ನು ಸ್ಥಾಪಿಸುವುದೆಂದರೆ ಹುಡುಗಾಟಿಕೆಯ ವಿಚಾರವೆನ್ನಬಹುದು. ಹತ್ತಾರು ಸರ್ಕಾರಗಳು ಬಂದರೂ ಮಾಡಲಾಗದಂತಹ ಇಂತಹ ಕಾರ್ಯವನ್ನು ಸಿದ್ದಾರ್ಥ್ ತಮ್ಮ ಹೆಗಲ ಮೇಲಾಕಿಕೊಂಡಿದರು.

ಸಿದ್ಧಾರ್ಥ್ ಎಂದರೆ ರಾಜ್ಯದ ಹೆಚ್ಚಿನ ಮಂದಿಗೆ ಪರಿಚಯವೇ ಇರಲಿಲ್ಲ. ‘ಒಹ್ ಅವ್ರ್ ಬಿಡಪ್ಪ ‘CM ಅಳಿಯ...’ಹಾಗೆ’...’ಹೀಗೆ’..’ ಎಂದಷ್ಟೇ ಹೇಳುವವರಿದ್ದರೆ ವಿನ್ಹಾ ಇಡೀ ದೇಶಕ್ಕೇ 2003 ರ "Entrepreneur of the Year" by The Economic Times ಹಾಗು 2011 ರ "NextGen Entrepreneur" by Forbes India ಪ್ರಶಸ್ತಿ ಪಡೆದದ್ದನ್ನು ತಿಳಿದೂ ತಿಳಿಯದಂತಿದ್ದರು. ವಿಪರ್ಯಾಸವೆಂಬಂತೆ ಅದೆಷ್ಟೋ ಮಂದಿಗೆ, ಮಲೆನಾಡಿಗರಿಗೂ ಸಹ, ಸಿದ್ಧಾರ್ಥರ ವಿಶ್ವರೂಪ ಗೋಚರವಾದದ್ದು ಅವರು ನಮ್ಮಿಂದ ಮರೆಯಾದ ಮೇಲೆಯೇ! ದೇಶ ವಿದೇಶದ ಅತ್ಯುನ್ನತ ಶಿಕ್ಷಣ ಸಂಸ್ಥೆಗಳೇ ಮಾತನಾಡಲು ಹಾತೊರೆದು ಕರೆಯುತ್ತಿದ್ದ, ಸ್ಟಾರ್ ಬಗ್ಗು ಮತ್ತೊಂದು ಮಗದೊಂದು ವಿದೇಶಿ ಬ್ರಾಂಡುಗಳಿಗೆ ಸವಾಲೆಸೆದಿದ್ದ, ಕಂಡು ಕೇರಳಿಯದ ವಿಶ್ವವೇ ಗಮನ ಸೆಳೆದ APRC Motor Rallyಯ ಕಾರುಗಳನ್ನು ನಮ್ಮ ಕಾಫಿ ತೋಟಗಳ ನಡುವೆ ಚೀರಾಡಿಸಿದ್ದ, ಎಲ್ಲಕ್ಕೂ ಮಿಗಿಲಾಗಿ ಅರ್ಧಲಕ್ಷದಷ್ಟು ಜನರಿಗೆ ದಾರಿದೀಪವಾಗಿದ್ದ ಚಹರೆಯೊಂದು ಈಗ ಕಣ್ಮರೆಯಾಗಿದೆ. ಒಬ್ಬ ನಾಯಕನನ್ನಾಗಲಿ ಅಥವಾ ಒಂದು ಕಂಪೆನಿಯನ್ನಾಗಲಿ ಮುಟ್ಟುಗೋಲು ಹಾಕಿ ಮುಚ್ಚಾಕಲು ಕೇವಲ ನಿಮಿಷಗಳು ಮಾತ್ರ ಸಾಕು ಆದರೆ ಅದೇ ನಾಯಕ ಅಥವಾ ಅಂತಹದ್ದೇ ಕಂಪೆನಿಯನ್ನು ಮತ್ತೊಮ್ಮೆ ಕಟ್ಟಲು ಅದೆಷ್ಟು ದಶಕಗಳು ಬೇಕು? ಈ ನಮ್ಮ ಸೀದಾ- ಸಾದಾ ಪ್ರೆಶ್ನೆಗೆ ಇನ್ಕಮ್ ಟ್ಯಾಕ್ಸ್ ಎಂಬ ನೇಣಿನ ಕುಣಿಕೆಯನ್ನು ಕೊರಳ ಸುತ್ತ ಹಾಕಿ ಆಟವಾಡಿಸುವ ಸರ್ಕಾರಗಳೇ ಉತ್ತರಿಸಬೇಕು. ಸಾವಿರಾರು ಜನರ ದಾರಿದೀಪವಾಗಿದ್ದ ಸಿದ್ದಾರ್ಥ್ ಅಂದು ಒಂತಿಷ್ಟು ಗಾಳಿಗಾಗಿ ಹಾತೊರೆಯುತ್ತಾ ಹುಸಿರುಗಟ್ಟಿ ಮುಳುಗಿ ಮುಳುಗಿ ಕೊನೆಗೆ ಅನಾಥವಾಗಿ ನದಿಯ ದಂಡೆಯ ಮೇಲೆ ಮಲಗಿರುವ ದೃಶ್ಯವನ್ನು ನೋಡಿದ ಪ್ರತಿಯೊಬ್ಬರಿಗೂ ಕಣ್ಣಂಚುಗಳು ಒದ್ದೆಯಾದದಂತೂ ಸುಳ್ಳಲ್ಲ. ಸೋಲಿಗೆ ಸಾವೇ ಉತ್ತರವಲ್ಲ ಎಂದು ಹಚ್ಚೋತ್ತಿದಂತೆ ಹೇಳುತ್ತಿದ್ದ ವ್ಯಕ್ತಿಯೊಬ್ಬ ಇಂದು ಖುದ್ದು ತಾನಾಗಿಯೇ ಆ ಮಾತನ್ನು ಮುರಿದು ನೀರಿಗೆ ಹಾರಿ ಪ್ರಾಣ ಕಳೆದುಕೊಂಡನೆಂದರೆ ಅದೆಂದಂಥ ಅಘಾದವಾದ ಒತ್ತಡ ಆತನನ್ನು ಕಾಡಿರಬಾರದು?! ಕಾಲವೇ ಇದಕೆಲ್ಲ ಉತ್ತರಿಸಬೇಕು. ಇನ್ನೂರು ಮುನ್ನೂರರ ಗಡಿಯಲಿದ್ದ ಕಾಫಿ ಡೇ ಯ ಷೇರುಗಳು ಪ್ರಪಾತಕ್ಕೆ ಬೀಳುವ ಮೊದಲೇ ಅವೆಲ್ಲವನ್ನು ಖರೀದಿಸಿ ವಿಶ್ವವಿಖ್ಯಾತ ನಮ್ಮ ಮಲೆನಾಡ ಕಂಪನಿಯನ್ನು ಉಳಿಸಿಕೊಳ್ಳಬೇಕೆಂದು ಹಾತೊರೆಯುವ ಜನರ ಹಪಾಹಪಿಯನ್ನು ಕಂಡರೆ ಕಣ್ಣಿಗೆ ಕಾಣದೆಯೇ ರಾಜ್ಯದ ಜನಮನದಲ್ಲಿ ಶಾಶ್ವತ ನೆಲೆಯೊಂದು ನಮ್ಮ ಸಿದ್ದಾರ್ಥರಿಗೆ ಅದಾಗಲೇ ಲಭಿಸಿದೆ ಎಂದರೆ ಸುಳ್ಳಾಗದು.

Bon Voyage… The leader!!