Friday, May 25, 2018

ಮರುಭೂಮಿಯ ಸೆರೆವಾಸ

'ನಿನ್ನ್ ಆ ರಾಶಿ ಕೂದ್ಲು ನೋಡಕ್ ಆಗಲ್ಲ ಮಹರಾಯ, ಸೆಲೂನ್ ಶಾಪಿಗೆ ತಿಂಗ್ಳಿಗೆ ಒಮ್ಮೆ ಆದ್ರೂ ಹೋಗೋದಲ್ವ' ಎಂಬ ಮಾತನ್ನು ಕಳೆದ ಕೆಲ ತಿಂಗಳಿಂದ ಕೇಳಿ ಕೇಳಿ ಕೊನೆಗೂ ಏಕೋ ಆ ದಡೂತಿ ಬಂಗಾಳಿಯ ಶಾಪಿಗೆ ಹೋಗುವ ಮನಸ್ಸಾಯಿತು. ರೂಮಿನಲ್ಲಿದ್ದ ಹೂವಿನ ಗಿಡಕ್ಕಿಂತಲೂ ಕಾಳಜಿ ವಹಿಸಿ ಬೆಳೆಸಿದ್ದ ಕೇಶರಾಶಿಯನ್ನು ಹೀಗೆ 'ನೋಡಕ್ ಆಗಲ್ಲ ಮಹರಾಯ' ಎಂಬ ಗವಾರರ ಮಾತುಗಳಿಗೆ ಕೊಂಚ ಸಿಟ್ಟು ಬಂದರೂ ಆ ಬಂಗಾಳಿಯ ಗಜಗಾತ್ರದ ಹಸ್ತಗಳಿಂದ ತಲೆಗೂ ಹಾಗು ಬೆನ್ನಿಗೂ ಪಟಪಟನೆ ಬಡಿಸಿಕೊಳ್ಳುವ ಸುಖಕ್ಕಾದರೂ ಇಂದು ಸೆಲೂನಿನೆಡೆ ಹೋಗಬೇಕೆನಿಸಿತು. ಬಂಗಾಳಿ, ಅಂದರೆ ನಮ್ಮ ಪಚ್ಚಿಮ ಬಂಗಾಳದವನಲ್ಲ. ಅದಕ್ಕೂ ಕೊಂಚ ಎಡಕ್ಕಿರುವ ಬಾಂಗ್ಲಾ ದೇಶದವ. ಮೀಸೆ ಚಿಗುರುವ ವಯಸ್ಸಿನಲ್ಲಿ ತನ್ನೂರಿನ ಯಾರೊ ಒಬ್ಬನನ್ನು ಕಾಡಿ ಬೇಡಿ ಇಲ್ಲಿಗೆ ಬಂದು ಪರಿಚಯಸ್ತರೊಬ್ಬರ ಬಳಿ ಕೆಲಸ ಕಲಿತು ಇಂದು ತನ್ನದೇ ಆದೊಂದು ಸೆಲೂನ್ ಶಾಪ್ ತೆರೆದು ಎರಡು ಹುಡುಗರನ್ನು ಕೆಲಸಕ್ಕೂ ಇಟ್ಟುಕೊಂಡಿದ್ದಾನೆ. ಕಾರ್ಪೊರೇಟ್ ಪದದಲ್ಲಿ ಏಳುವುದಾದರೆ ಏಕ್ದಂ 'ವರ್ಟಿಕಲ್ ಗ್ರೂಥ್ '! ಕೆಲವರುಷಗಳ ಪರಿಚಯ. ಪ್ರತಿಬಾರಿಯೂ ರೂಮಿನಿಂದ ಹೊರಗಿಳಿದರೆ 'ಸಲಾಂ ಸಾಬ್' ಎನುತ್ತಾ ಆತ್ಮೀಯವಾದೊಂದು ನಗುವನ್ನು ಚೆಲ್ಲಿದರೂ ಆತನ ದೃಷ್ಟಿ ಮಾತ್ರ ಗ್ರಾಹಕನ ಕೇಶರಾಶಿಯ ಉದ್ದಳತೆಯ ಮೇಲೆಯೇ ಇದ್ದಿರುತ್ತದೆ. ಬೇಕಂತೆಲೆ ಏನೋ ಎಂಬಂತೆ 'ಸಾಬ್, ಛೋಟೆ ಬಾಲ್ ಆಪ್ಕೋ ಸಹಿ ನಹಿ ದಿಕ್ತ' ಎನ್ನುತ್ತಾ ಪ್ರತಿಬಾರಿಯೂ ಎರಡಿಂಚಿನ ಕೂದಲಿನ ಉದ್ದವನ್ನು ಕನಿಷ್ಠ ಹತ್ತು ಪರ್-ಸೆಂಟ್ಟೂ ತಗ್ಗಿಸದೆ ತನ್ನ ಮುಂದಿನ ತಿಂಗಳ ಬಿಸಿನೆಸ್ ಗೂ ಅಂದೇ ಇನ್ವೆಸ್ಟ್ಮೆಂಟ್ ಮಾಡಿಕೊಳ್ಳುತ್ತಿದ್ದ.

ಹಳೆಯ ಹಿಂದಿ ಹಾಡುಗಳೊಟ್ಟಿಗೆ ವೀಕೆಂಡಲೊಂದು ಬಿಯರು, ಮುಂಜಾವಿನ ಅಥವಾ ಇಳಿಸಂಜೆಯಲ್ಲೊಂದು ವಾಕು, ಅಲ್ಲೆಲ್ಲೋ ದೂರದ ಮರದ ಕೆಳಗೆ ಅಂಗಾತ ಮಲಗಿ ಒಂದೆರೆಡು ಪುಸ್ತಕಗಳ ಓದು, ಪಾಕಕ್ರಾಂತಿಯ ಮೋಜು... ಹೀಗೆ ವಾರಕ್ಕೊಂದು ಸಿಗುವ ರಜೆಯ ಟೈಮ್ ಟೇಬಲ್ಲಿಗೆ ಇತ್ತೀಚಿಗೆ ಈ ಭೀಮಗಾತ್ರ ಬೆಂಗಾಲಿಯ ಮಾಸ್ಸಾಜು ಕೂಡ ಸೇರಿಕೊಂಡಿದೆ. ಕನಿಷ್ಠ ಎರಡು ತಿಂಗಳಿಗೊಮ್ಮೆಯಾದರು ಅತ್ತ ಕಡೆ ಹೋಗೆ ಬರಬೇಕು. ಇಲ್ಲವಾದಲ್ಲಿ ಕೂತೇ ಕೈಲಾಸ ಸೇರುವಂತಹ ಪ್ರಸ್ತುತ ಕೆಲಸದಲ್ಲಿ ಜಡಗಟ್ಟಿದ ಬೆನ್ನುಮೂಳೆಗಳನ್ನು ಬಾಗಿ ಬೆಂಡಾಗಿಸುವವರ್ಯಾರು? ತಲೆಯ ಕೂದಲನ್ನು ಹಿಡಿದೆಳೆದು ಅದರ ಭಾರವನ್ನು ಇಳಿಸುವವರ್ಯಾರು? ಈ ಮಸ್ಸಾಜು ಕೆಜಿಗಟ್ಟಲೆ ತೂಕದ ಕೇಶರಾಶಿಯ ಗಾತ್ರವನ್ನು ಕಡಿಮೆಗೊಳಿಸುವುದಷ್ಟೇ ಅಲ್ಲದೆ ಅದರ ತುಸು ಕೆಳಗೆ ತುಂಬಿರುವ ಅಗಣಿತ ಸಂಖ್ಯೆಯ ನೋವು, ಹತಾಶೆ ಹಾಗು ಏಕಾಂತವನ್ನು ಕರಗಿಸಿಕೊಳ್ಳುವ ಪ್ರಕ್ರಿಯೆಯೇ ಆಗಿತ್ತೆಂದು ಹೇಳಬಹುದು.

ಬೆಳಗಿನ ಹತ್ತುಘಂಟೆಗೇ ಭಿಕೋ ಎನ್ನುತ್ತಿದ್ದ ಸೆಲೂನಿನ ಒಳಹೊಕ್ಕು ನೋಡಿದಾಗ ಅಲ್ಲಿ ಕೆಲಸಕ್ಕಿದ್ದ ಹುಡುಗರಿಬ್ಬರನ್ನು ಬಿಟ್ಟರೆ ಬಂಗಾಳಿ ಮಾತ್ರ ಕಾಣಲೇ ಇಲ್ಲ. 'ಎಲ್ಲಿ ನಿಮ್ಮ ಒಡೆಯ' ಎಂದು ಕೇಳಿದಾಗ ಆತ ಊರಿಗೆ ಹೋಗಿದ್ದಾನೆಂದು ಬರುವುದು ಇನ್ನೆರೆಡು ದಿನಗಳಾಗುತ್ತವೆ ಎಂಬ ಉತ್ತರ ದೊರೆತಿತು. ಬಂಗಾಳಿಯ ವಿನಃ ಈ ಎರೆಡು ಚಿಳ್ಳೆ ಪಿಳ್ಳೆ ಗಳಿಂದ ಆಗದ ಕೆಲಸವಲ್ಲ. ಆತ ಬರುವವರೆಗೂ ಕಾಯಬಹುದಿತ್ತು. ಆದರೆ ಮ್ಯಾಸ್ಸಜಿನ ತುಡಿತ ಅಷ್ಟೊಂದು ಶಾಂತವಾಗಿಬೇಕಲ್ಲ. 'ಅದು ಎಲ್ಲಿಯಾದರೂ ಸರಿಯೇ' ಎಂಬ ಮಕ್ಕಳ ಹಠಹಿಡಿಯತೊಡಗಿತು. ಮೊದಲಬಾರಿಗೆ ಅಕ್ಕಪಕ್ಕದ ಇತರೆ ಸೆಲೂನ್ ಶಾಪಿನ ಒಳಗೆ ಇಣುಕಿದೆ. ತುಸುದೂರದಲ್ಲಿದ್ದ ಇನ್ನೊಂದು ಶಾಪಿನ ಒಳಗೆ ಹೊಕ್ಕು ನೋಡಿದರೆ ಬಿಳಿಯ ಅಂಗಿಯನ್ನು ಧರಿಸಿ ತೆಳ್ಳಗೆ ಬೆಳ್ಳಗೆ ಇದ್ದೊಬ್ಬ ವ್ಯಕ್ತಿಯೊಬ್ಬ ಗಾಢ ಮೌನದ ಮುಖವಾಡವನ್ನೊತ್ತು ಇತ್ತಲೇ ನೋಡುತ್ತಿದ್ದ. ಸುಸ್ತು ಹತಾಶೆಗಳನ್ನೊಳಗೊಂಡ ಆ ನೋಟ ಒಂದು ಬಗೆಯ ಕಿಚ್ಚಿನ ನೋಟದಂತೆಯೂ ಕಾಣುತಿದ್ದಿತು. ‘ತತ್.. ಈ ನನ್ನ್ ಮಗ ನೋಡೋ ನೋಟಾನೆ ಹೀಗಿರ್ಬೇಕಾದ್ರೆ ಇನ್ ಮಸಾಜ್ ಮಾಡಿ ಅಂತಾ ಕೇಳೋಕ್ಕಾಗುತ್ತ?’ ಆದರೆ ಕೂದಲು ಬೇರೆ ಜಡೆ ಹಾಕೋವಷ್ಟು ಬೆಳೆದಿದೆ. ಶಾಪಿನ ಒಳಗೆ ಬಂದು ಹಾಗೆಯೆ ಹೊರಗೆ ಹೋಗಲು ಆಗಲಿಲ್ಲ. Infact ಧೈರ್ಯ ಸಾಲಲಿಲ್ಲ! ಬೇಕೋ ಬೇಡವೋ ಎನುತ ನನ್ನ ಪಾಡಿಗೆ ನಾನು ಹಾಯಾಗಿ ಚಾಚಿಕೊಂಡಿದ್ದ ಕುರ್ಚಿಯ ಮೆಲೋಗಿ ಕುಳಿತೆ. ಕೂಡಲೇ ತನ್ನ ಹಿಂಬದಿಗೆ ಸಣ್ಣದೊಂದು ಕುರ್ಚಿಯ ಮೇಲೆ ಕೂತಿದ್ದ ಆತ ಎದ್ದು ಬಿಳಿಯ ಬಟ್ಟೆಯೊಂದನ್ನು ಎದೆ ಹಾಗು ಹೊಟ್ಟೆಯ ಸುತ್ತಲೂ ಹೊದಿಸಿ ಕುತ್ತಿಗೆಗೊಂದು ಬಿಳಿಯ ಪೇಪರಿನ ಬಟ್ಟೆಯೊಂದನ್ನು ಕಟ್ಟಿದ. ಕೈಲಿದ್ದ ಮೊಬೈಲು ಹಾಗು ಕನ್ನಡಕವನ್ನು ಮುಂದಿದ್ದ ಮೇಜಿನ ಮೇಲೆ ಇಡುವಂತೆ ಕಣ್ಸನ್ನೆ ಮಾಡಿ, ಸರ್ವದಿಕ್ಕುಗಳಿಗೂ ಏಕರೂಪವಾಗಿ ಬೆಳೆದಿದ್ದ ಕೂದಲಿನ ಮೇಲೊಮ್ಮೆ ಕೈಯಾಡಿಸಿ 'ಏನಯ್ಯ ಇದು' ಎಂಬಂತೆ ತನ್ನ ಅಸ್ತವನ್ನು ಅರಳಿಸಿದ. ಬಾಯ್ಬಿಟ್ಟೂ ಕೇಳಲಾಗದ ಆ ಸಿಡುಕು ಮುಸುಡಿಯನ್ನು ಕಂಡು ಮಯ್ಯಲ್ಲ ಕೆಂಡಸುರಿದಂತಾಗಿ ಸಿಟ್ಟನ್ನು ಅದುಮಿಟ್ಟುಕೊಂಡ ನಾನು 'ನೋಡೇಬಿಡುವ' ಎನುತ ಸುಮ್ಮನೆ ಕುಳಿತೆ. ಮುಂದಿದ್ದ ಬೃಹತ್ ಕನ್ನಡಿಯ ಮೂಲಕ ನನ್ನನ್ನೇ ಕೆಲಕಾಲ ಗುರಾಹಿಸಿದ ಆ ಮೊರೆ ಮುಂದಿದ್ದ ನೀರಿನ ಬಾಟಲಿಯನ್ನು ತೆಗೆದು ಇಂಚಿಚ್ಛೇ ನೀರನ್ನು ಕೂದಲ ಮೇಲೆ ಚಿಮುಕಿಸತೊಡಗಿತು. ನರನಾಡಿಯಲ್ಲಿದ್ದ ರಕ್ತವನ್ನೆಲ್ಲ ಬಸಿದುಬಿಟ್ಟ ದೇಹಕ್ಕೆ ಕೆಲಸ ಕೊಟ್ಟಂತೆ ಆ ಸ್ಪ್ರೇ ಬಾಟಲಿನಿಂದ ಚಿಮುಕುತಿದ್ದ ನೀರು ಪ್ರತಿ ಬಾರಿಗೆ ಒಂದೋ ಅಥವಾ ಎರಡೂ ಕೂದಲೆಳೆಗಳನ್ನು ಮಾತ್ರವಷ್ಟೇ ನೆನೆಸುತಿದ್ದಿತು. ಕೋಪ ತಡೆಯಲಾಗಲಿಲ್ಲ. 'ಭಾಯ್, ಹೇರ್ ಕಟಿಂಗ್ ಮಾಡಿ, ಹೂವಿನ ಗಿಡ ಬೆಳೆಸ್ಬೇಡಿ ತಲೆ ಮೇಲೆ' ಎಂಬಂತೆ ಜೋರಾಗೆ ಹಿಂದಿಯಲ್ಲೇ ಅರಚಿದೆ. ಅಲ್ಲಿಯವರೆಗೂ ತನಗೂ ಆ ಕಾಯಕ್ಕಕ್ಕೂ ಸಂಭಂಧವಿಲ್ಲವೇನೋ ಎಂಬಂತಿದ್ದ ಆ ವ್ಯಕ್ತಿ ಕೂಡಲೇ ಗಂಟಲನ್ನು ಸರಿಪಡಿಸಿಕೊಳ್ಳುತ್ತ 'ಫಾಸ್ಟಿಂಗ್ ಸಾಬ್' ಎನ್ನುತ್ತಾ ಸುಮ್ಮನಾದ. ಮುಸ್ಲಿಮರ ಪವಿತ್ರ ಮಾಸವದು ಎಂಬುದ ಮರೆತೇಬಿಟ್ಟಿದ್ದ ನಾನು ಕೆಲಕಾಲ ಸುಮ್ಮನಾದೆ. ದಿನಪೂರ್ತಿ ಒಂದುಹನಿ ನೀರೂ ಇಲ್ಲದೆ ಹೀಗೆ ಬೆಳಗಿನಿಂದ ಸಂಜೆಯ ತನಕ ಉಪವಾಸವಿರುವುದನ್ನು ನೆನೆದೇ ಮೈ ಜುಮ್ಮೆನ್ನುವ ನನಗೆ ಆತನ ಆ ಸಿಡುಕು ಮೊರೆಯಲ್ಲೂ ಎಲ್ಲೋ ಒಂದೆಡೆ ಕರುಣಾಭಾವ ಕಂಡಿತು. ನಂತರ ಆತನ ಪಾಡಿಗೆ ಕೆಲಸದಲ್ಲಿ ಮಗ್ನನಾದ.

ಆದರೆ ಬಂದ ಕೆಲಸವನ್ನು ಮಾಡಿಸಿಕೊಂಡು ಹೋಗದೆ ಆದೀತೆ? ಆದರೆ ಮಸಾಜ್ ಮಾಡಲು ಬೇಕಾದ ಶಕ್ತಿಯಾಗಲಿ, ಗೆಲುವಾಗಲಿ ಒಂದಿನಿತೂ ಆತನಲ್ಲಿ ಇದ್ದಂತೆ ಕಾಣಲಿಲ್ಲ. ಆದರೆ ಪುಸಲಾಯಿಸಿಯಾದರೂ ಸರಿಯೇ ತಿಂಗಳು ಬಿಟ್ಟು ಬಂದವನಿಗೆ ಒಂದೆರೆಡು ಗುದ್ದನ್ನು ಗುದ್ದಿಸಿಕೊಂಡು ಹೋಗದಿರಲಾಗುತ್ತದೆಯೇ? ನಾನೇ ಮೊದಲು ಮಾಡಿ 'ಕಿದರ್ ಸೆ ಹೊ' ಎನ್ನುತ ಮಾತು ಶುರುಮಾಡಿದೆ.

ಕೆಲ ಕ್ಷಣ ಸುಮ್ಮನಿದ್ದು 'ಪಾಕಿಸ್ತಾನ್…' ಎಂದ ಆತನ ಧ್ವನಿಯಲ್ಲಿ ಮೂಡಿದ ಏಕರೂಪೇನ ದ್ವಂದ್ವವು ನನ್ನ ಮುಖದ ಮೇಲೆಯೂ ಮೂಡಿತು. ನಂತರ ಕತ್ತರಿಯ ಚಟ್ ಪಟ್ ಸದ್ದು ತಲೆಯ ಹಿಂಭಾಗದಿಂದ ಮುಂಬದಿಗೆ ಬಂದಿತ್ತು.

'ಆಪ್ ಕಿದರ್ ಸೆ ಹೊ ' ಎಂದ ಆತನ ಪ್ರೆಶ್ನೆಗೆ ಅಳುಕುತ್ತಲೇ ನಾನು 'ಇಂಡಿಯಾ' ಎಂದೆ.

ಪುನ್ಹ ಒಂತಿಷ್ಟು ಮೌನ. ತದನಂತರ ಆತ ನಾನೇನು ಮಾಡುತ್ತಿರುವೆನೆಂದು ಕೇಳಿ ತಿಳಿದು, ಇದ್ದಕ್ಕಿದಂತೆ ತನಗೂ ನಾನಿರುವ ಕಡೆ ಯಾವುದಾದರೊಂದು ಕೆಲಸವನ್ನು ಹುಡುಕಿ ಕೊಡುವಂತೆ ಕೇಳಿಕೊಂಡ!

'ಅರ್ರೆ, ತನ್ನ ಕಾಯಕವೇ ಬಂಡವಾಳವಾಗಿರುವ, ತುಸುಮಟ್ಟಿಗೆ ಹಾಯಾದ ಕೆಲಸವೆನ್ನಬಹುದಾದ ಕೆಲಸವನ್ನು ಬಿಟ್ಟು ಈತ ಮಾಡುವುದಾದರೂ ಏನುಂಟು?!' ಎಂಬ ಪ್ರೆಶ್ನೆಯೊಂದು ಮನದೊಳಗೆ ಮೂಡಿತು.

ಕೂತೂಹಲದಿಂದ ಏಕೆ, ಏನೆಂದು ವಿಚಾರಿಸಿದೆ.

ಮೌನದ ಕಟ್ಟೆಯೊಡೆದಂತೆ ಒಂದೇ ಉಸಿರಿನಲ್ಲಿ ಆತ ತನ್ನ ಬವಣೆಯನ್ನೆಲ್ಲವನ್ನು ಹೊರಹಾಕತೊಡಗಿದ. ಪಾಕಿಸ್ತಾನದ ಇಸ್ಲಾಮಾಬಾದ್ ನಿಂದ ಬಂದು ಇಂದಿಗೆ ಸುಮಾರು ಆರು ತಿಂಗಳಾಯಿತಂತೆ. ಊರಿನಲ್ಲೊಂದು ತನ್ನದೇ ಆದ ಪುಟ್ಟ ಸೆಲೂನ್ ಶಾಪನ್ನು ನೆಡೆಸುತ್ತಿದ್ದ ಈತ ತಾನೊಬ್ಬ ಸುಖೀಜೀವಿಯಾಗಿದ್ದೆ ಎಂಬುದನ್ನು ಇಲ್ಲಿಗೆ ಬಂದಮೇಲೆಯೇ ಮನಗಂಡನಂತೆ! ಮಳಿಗೆಯ ಖರ್ಚುವೆಚ್ಚಗಳೆಲ್ಲವನ್ನು ಕಳೆದು ಕಮ್ಮಿ ಎಂದರೂ ದಿನಕ್ಕೆ ಐನೂರರಿಂದ ಸಾವಿರ ರೂಪಾಯಿಗಳನ್ನು ಉಳಿಸುತ್ತಿದ್ದ ಈತನಿಗೆ ತನ್ನ ಗಳಿಕೆ ಬಹಳ ಕಡಿಮೆಯಾಯಿತೆಂದೋ ಅಥವ ಹೊರದೇಶಕ್ಕೆ ಹೋದರೆ ನಿಮಿಷ ಮಾತ್ರದಲ್ಲಿ ಕುಭೇರನಾಗಬಹುದೆಂಬ ಕನಸನ್ನು ಕಂಡೊ ಏನೋ, ಹೊರದೇಶದಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪರಿಚಯ ಮಾಡಿಕೊಂಡು ಕೆಲಸವನ್ನು ಹೊಂದಿಸುವಂತೆ ಕೇಳಿಕೊಳ್ಳುತ್ತಾನೆ. ಆತನೋ ಹೀಗೆ ರಾಶಿ ರಾಶಿ ಅಮಾಯಕರನ್ನು ತುಂಬಿ ತಂದು ಇಲ್ಲಿಗೆ ಸುರಿಯುವವ. ಶಿಕಾರಿ ತಾನಾಗಿಯೇ ಬಲೆಗೆ ಬೀಳಲು ಬಂದರೆ ಬಿಟ್ಟನೇ. ವೀಸಾ, ಪಾಸ್ಪೋರ್ಟ್, ಟಿಕೆಟ್ಟು, ಕಮಿಷನ್ ಮಣ್ಣು ಮಸಿ ಎನುತ್ತಾ ಸಾವಿರಾರು ರೂಪಾಯಿಗಳನ್ನು ಆತನಿಂದ ಕಸಿದುಕೊಂಡು ನಂತರದ ಕೆಲವೇ ದಿನಗಳಲ್ಲಿ ಮರಳುಗಾಡಿನ ಕಾನನದೊಳಗೆ ಆತನನ್ನು ತಂದು ಬಿಡುತ್ತಾನೆ. ಎಲ್ಲೆಡೆ ವಿಚಾರಿಸಿ ಕೊನೆಗೆ ಕೆಲಸ ಸಿಗದಿರುವಾಗ ಆತನನ್ನು ದೇಶಾಂತರ ಹೊತ್ತು ತಂದ ವ್ಯಕ್ತಿಯೇ ಇಲ್ಲಿಯ ಸೆಲೂನ್ ಶಾಪಿನಲ್ಲಿ ಕೆಲಸವನ್ನು ಹುಡುಕಿ ಕಳುಹಿಸುತ್ತಾನೆ. ಆದರೆ ಪ್ರತಿ ತಿಂಗಳ ಆತನ ಸಂಬಳದಲ್ಲಿ ಕನಿಷ್ಠವೆಂದರೂ 10 ಪ್ರಸೆಂಟ್ ನಷ್ಟು ಹಣ ಆ ದಳ್ಳಾಳಿಯ ಜೇಬನು ಸೇರಬೇಕೆಂಬ ಕಾರಾರಿನೊಂದಿಗೆ! ಇರಲು ಮೂರಡಿಯ ಒಂದಿಷ್ಟು ಜಾಗ ಹಾಗು ದಿನಕ್ಕೆ ಮೂರು ಬಾರಿ ರೋಟಿ ಹಾಗು ಇಂತಿಷ್ಟು ಬಾಜಿಯನ್ನು ಬಿಟ್ಟರೆ ಈತನಿಗೆ ಬರುತ್ತಿದ್ದ ಸಂಬಳ ತಾನು ಊರಿನಲ್ಲಿ ಗಳಿಸುತ್ತಿದ್ದ ಅರ್ಧದಷ್ಟೂ ಸಮನಿರಲಿಲ್ಲ. ಬೆಳಗ್ಗಿನಿಂದ ದುಃಖ, ಕೋಪ, ಹಸಿವನ್ನು ತಡೆದುಕೊಂಡು, ಬಂದುಹೋಗುವ ಗ್ರಾಹಕರ ಇಚ್ಛೆಗನುಗುಣವಾಗಿ ಅವರ ಕೇಶರಾಶಿಯನ್ನು ವಿನ್ಯಾಸಗೊಳಿಸಿ, ತಲೆಯನ್ನು ತೀಡಿ ತಿವಿದು ಅವರ ಚಿಂತೆಯನ್ನು ದೂರಾಗಿಸುವ ಈತ ಹಲವು ಬಾರಿ ತನ್ನ ತಾಯ್ನಾಡಿಗೆ ಹಿಂದಿರುಗಲು ಆವಣಿಸಿದರೂ ತಾನು ಕೆಲಸ ಮಾಡುತಿದ್ದ ಮಾಲೀಕನೊಟ್ಟಿಗೆ ಎರಡು ವರ್ಷದ ಕರಾರಿದ್ದ ಕಾರಣ ಅದು ಸಾಧ್ಯವಾಗದೆ ಸುಮ್ಮನಾಗಿದ್ದಾನೆ.

ಕೆಲಕಾಲ ಸುಮ್ಮನಾಗಿ ಪುನ್ಹ ಮಾತು ಶುರುವಿಟ್ಟಾಗ ಆತನ ಧ್ವನಿ ಏಕೋ ಗದ್ಗದಿಸತೊಡಗಿತ್ತು. ಹೀಗೆ ಕೆಲದಿನಗಳ ಹಿಂದೆ ತನ್ನ ತಾಯಿ ತೀರಿಕೊಂಡಳೆಂಬ ವಿಷಯ ತಿಳಿದು ಕೂಡಲೇ ಹೋಗಬೇಕೆಂದಾಗ ಮಾಲೀಕ ಹಣವಿಲ್ಲವೆಂದು ನಿರಾಕರಿಸಿದನೆಂದು ಹೇಳುತ್ತಾನೆ. ಪಾಸ್ಪೋರ್ಟ್ ಹಾಗು ಒಂತಿಷ್ಟು ಹಣ ನನ್ನ ಕೈಲಿದ್ದರೆ ನಾನೇ ಹೇಗಾದರೂ ಮಾಡಿ ಹೋಗಿಬಿಡುತ್ತಿದ್ದೆ ಸಾಬ್ ಎಂದನಾತ. ಈಗ ತಾನು ಏನೇ ಮಾತಾಡಿದರೂ ಆತ ಅತ್ತುಬಿಡುವುದಂತು ಗ್ಯಾರೆಂಟಿ. ಆತನ ಬಿಳಿಯ ಮುಖವೆಲ್ಲ ಕೆಂಪಾಗಿ ಹೊಳೆಯತೊಡಗಿತ್ತು. ಸಿಟ್ಟು, ಕೋಪ, ಹತಾಶೆ ಎಲ್ಲವೂ ಒಮ್ಮೆಲೇ ಹೊರಬರಲು ಹವಣಿಸುತ್ತಿವೆಯೇನೋ ಎಂಬಂತೆ ಭಾಸವಾಗತೊಡಗಿತು. ಕೊನೆಯ ಭಾರಿಗೆ ತನ್ನ ತಾಯಿಯ ಮುಖವನ್ನೂ ನೋಡಲಾಗದ ಆತ ತನ್ನನ್ನು ತಾನೇ ಶಪಿಸಿಕೊಳ್ಳುತ್ತಿರವಂತೆ ಅನಿಸಿತು. ಆತನ ಮುಖಚಹರೆ ಮಾತಾಡತೊಡಗಿತು. ನಾವೋಬ್ಬ ಮುಖ ಪ್ರೇಕ್ಷಕನಾಗಿ ಕನ್ನಡಿಯ ಪ್ರತಿಬಿಂಬದಲ್ಲಿ ಆತನನ್ನು ಆಲಿಸತೊಡಗಿದ್ದೆ.

'ಏನಾದರು ಸರಿಯೇ, ಸಣ್ಣದೊಂದು ಕೆಲಸ ಕೊಡಿಸಿ ಬಾಯ್. ಇಲ್ಲಂತೂ ನಾನಿರಲಾರೆ' ಎನ್ನತೊಡಗಿದ. ತನಗಿಷ್ಟವಿಲ್ಲದ ಬೋರ್ಡಿಂಗ್ ಸ್ಕೂಲಿಗೆ ಹಾಕದಂತೆ ಮಕ್ಕಳು ಪೋಷಕರನ್ನು ಕಾಡುವಂತೆ. ಏನೋ ಒಂದು ಬಗೆಯ ಆತ್ಮಿಯತೆಯೊಂದು ಆತನಿಗೆ ಆತನನ್ನು ಕೇಳುವವರಲ್ಲಿ ಮೂಡುತ್ತಿತ್ತೇನೋ. ಆ ಸಾಲಿಗೆ ನಾನೇ ಮೊದಲಿಗನಿರಬೇಕು. ಏಕೋ ಪೇಚಿಗೆ ಸಿಕ್ಕ ಅನುಭವವಾಗತೊಡಗಿತು. ಕತ್ತಿನ ಸುತ್ತ ನನ್ನ ಪ್ರೀತಿಪಾತ್ರವಾದ ಕೂದಲುಗಳು ರಣರಂಗದಲ್ಲಿ ಹೋರಾಡಿ ಅಸುನೀಗಿದಂತೆ ಹಿಡಿಹಿಡಿಯಾಗಿ ಬಿದ್ದಿದ್ದವು. ಮತ್ತೆಂದೂ ಆ ಸ್ವಸ್ಥಾನಕ್ಕೆ ಹಿಂದಿರುಗದ ಅವುಗಳ ರೋಧನೆಯೂ ಅವುಗಳಲ್ಲಿ ಕಾಣಬಹುದಾಗಿದ್ದಿತು. ತಾನು ಸಹ ಅವುಗಳಂತೆಯೇ ಏನೋ ಎಂಬಂತೆ ಆ ರಾಶಿಯನ್ನೆಲ್ಲ ಹೆಕ್ಕಿ ಮೂಲೆಯಲ್ಲಿ ಒಂದೆಡೆ ಸುರಿದ ಆತ. ಒಂತಿಷ್ಟು ಹಣವನ್ನು ಗಳಿಸುವ ಆಸೆಯಲ್ಲಿ ದೇಶಾಂತರ ಬರುವ ಇಂತವರು ಕೊರಗಿ ದಣಿದು ಸಾಕು ಸಾಕಾಗಿ ಪುನ್ಹ ತಮ್ಮ ಸ್ವಸ್ಥಾನವನ್ನು ಸೇರುವಾಗ ಬದುಕಿನ ಬಾಗಿಲೇ ಮುಚ್ಚತೊಡಗಿರುತ್ತದೆ. ಅಂತಹ ಲಕ್ಷಾಂತರ ಬಡಪಾಯಿಗಳು ಇಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹುಡುಕಿದರೂ ಸಿಗುವರು! ಹುಟ್ಟೂರಿನ ಗಂಜಿ ಅನ್ನವೂ ಅಮೃತಕ್ಕೆ ಸಮವೆಂಬುದ ವಿಪರ್ಯಾಸವೆಂಬಂತೆ ಪರದೇಶಗಳಿಗೆ ಬಂದೇ ಕಲಿಯುವವರು. ಆದರೆ ಈ ಮಾತು ಎಲ್ಲರಿಗೂ ಅನ್ವಯವಾಗಬಲ್ಲದೇ? ಕೊಂಚ ದೂರದಲ್ಲಿದ್ದ ಬಂಗಾಳಿಯೂ ಹೀಗೆ ಹಲವು ವರ್ಷಗಳಿಂದೆ ಇಲ್ಲಿಗೆ ಬಂದು ಇದೆ ನೋವು ಹತಾಷೆಗಳನು ಅದೆಷ್ಟು ಅನುಭವಿಸಿರಬಹುದು? ಅದೆಂಥಹ ಹಸಿವುಗಳನ್ನು ನೀಗಿಕೊಂಡಿರಬಹುದು? ಅವುಗಳೆಲ್ಲದರ ಪರಿಣಾಮವಾಗಿಯೇ ಏನೋ ಇಂದು ಆತ ತನ್ನ ಸ್ವಂತ ಕಾಲಮೇಲೆ ನಿಂತಿದ್ದಾನೆ. ಸುಖೀಯಾಗಿದ್ದಾನೆ. ಕಷ್ಟಗಳು ಬರುವುದೇ ಮನಸ್ಸನ್ನು ಕಲ್ಲಾಗಿಸಲು. ಒಂತಿಷ್ಟು ಪೆಟ್ಟನ್ನು ತಿಂದು ನೆಮ್ಮದಿಯ ಜೀವನವನ್ನು ಕಾಣಲು.

ಮುಂದಿನ ಕೆಲಸನಿಮಿಷಗಳಲ್ಲಿ ಭಾಗಶಃ ಕೇಶರಾಶಿಯ ಹತ್ಯಾಕಾಂಡವೇನೋ ಮುಗಿಯಿತು. ಬಹುದಿನಗಳಿಂದಲೇನೋ ಎಂಬಂತೆ ಆತನ ದುಃಖವೂ ಕರಗಿ ನಿರಾಳತೆಯ ಭಾವವೊಂದು ಆತನಲ್ಲಿ ಮೂಡಿದಂತಿತ್ತು. ಈಗ ನನ್ನ ಮುಂದಿದ್ದ ಪ್ರೆಶ್ನೆಗಳು ಎರಡೇ. ಕೆಲಸವೊಂದರ ದೃಡೀಕರಣವನ್ನು ಆತನಿಗೆ ನೀಡುವುದು. ಎರಡು, ಒಂತಿಷ್ಟು ಪೆಟ್ಟನ್ನು ತಲೆಗೂ ಬೆನ್ನಿಗೂ ತಿಂದು ಹಿತಭಾವವನ್ನು ಅನುಭವಿಸುವುದು! ಆದರೆ ಅದ್ಯಾವ ಬಾಯಿ ಬಿಟ್ಟು ಆತನಲ್ಲಿ ಮಸಾಜ್ ಮಾಡಯ್ಯ ಎಂದು ಕೇಳಲಿ? ದುಃಖದಿಂದ ಬಾತಿದ್ದ ಆತನ ಮುಖವನ್ನು ನೋಡಿದರೆ ಇನ್ನೇನೂ ಹೆಚ್ಚನ್ನು ಹೇಳುವ ಅಥವ ಕೇಳುವ ಹಾಗಿರಲಿಲ್ಲ. ಮೇಲಾಗಿ ಆತ ಉಪವಾಸನಿರತ. ಬೇಕೋ ಬೇಡವೋ ಎನ್ನುತ್ತಲೇ ಮೇಲೇಳತೊಡಗಿದೆ. ಕೂಡಲೇ ನನ್ನ ಬುಜದಮೇಲೆ ಬಿದ್ದ ಆತನ ಎರಡು ಕೈಗಳು 'ಏಕ್ ಮಿನಿಟ್ ಸಾಬ್, ಮಸ್ಸಾಜ್ ಕರ್ತ ಹೂ' ಎನ್ನುತ್ತಾ ಏಳುತ್ತಿದ್ದವನನ್ನು ಪುನ್ಹ ಕುರ್ಚಿಯ ಮೇಲೆ ಕೂರಿಸಿದವು. ಬಾಯಿಬಿಟ್ಟು ಕೇಳದಿದ್ದರೂ ನನ್ನ ಮುಖಭಾವದಿಂದಲೇ ಏನೋ ನನ್ನನು ಆತ ಅರಿತಿದ್ದ! ನಂತರ ಗೋಡೆಗೆ ನೇತಾಕಿದ್ದ ದಪ್ಪದಾದೊಂದು ಟವೆಲ್ ಅನ್ನು ಬೆನ್ನ ಸುತ್ತಲೂ ಹೊದಿಸಿ, ಒಂತಿಷ್ಟು ನೀರನ್ನು ತಲೆಕೂದಲಿಗೆ ಚಿಮುಕಿಸಿ ತಲೆಯ ಸುತ್ತ ಹಾವುಗಳು ಹೊರಳಾಡಿಸಿದಂತೆ ಕೈಬೆರಳುಗಳನ್ನು ಆಡಿಸತೊಡಗಿದ. ಕಣ್ಣನ್ನು ಮುಚ್ಚಿ ನನ್ನ ಇಡೀ ತಲೆಯ ಅಧಿಕಾರವನ್ನು ಆತನಿಗೆ ಒಪ್ಪಿಸಿದೆ. ಅದು ಆಟಿಕೆಯ ಗೊಂಬೆಯಂತೆ ಆತ ಆಡಿಸಿದಂತೆ ಅಷ್ಟ ದಿಕ್ಕುಗಳಿಗೂ ತಿರುಗತೊಡಗಿತು. ಹೆಚ್ಚು ಕಡಿಮೆ ಆತನಷ್ಟೇ ಅಥವಾ ಕೊಂಚ ಹೆಚ್ಚೆಂದೇ ಹೇಳಬಹುದಾದ ಜಂಜಾಟಗಳನ್ನು ಹೊತ್ತಿದ ಹೊರೆಯನ್ನು ಕಳೆದುಕೊಳ್ಳತೊಡಗಿತು. ಆಗೊಂದು ಹೀಗೊಂದು ಬೆನ್ನಿಗೆ ಬೀಳುತಿದ್ದ ಗುದ್ದುಗಳು ಜಡಗಟ್ಟಿದ ಹುರುಪನ್ನು ಪುನಃ ಜಾಗೃತ ಗೊಳಿಸಿದವು. ಬದ್ದ ವೈರಿದೇಶದ ಪ್ರಜೆಯೊಬ್ಬ ಹೀಗೆ ಮತ್ತೊಬ್ಬನ ನೋವು ಹತಾಶೆಗಳ ಹೊರೆಯನ್ನು ತನ್ನ ಶಕ್ತಿಹೀನ ಸ್ಥಿತಿಯಲ್ಲೂ ಕಡಿಮೆಗೊಳಿಸತೊಡಗಿದ. ಎಲ್ಲಿಯ ದೇಶ ಅದೆಲ್ಲಿಯ ದ್ವೇಷ? ಕಷ್ಟ ಸುಖಗಳಿಗೆ ಸ್ಪಂದಿಸಬಲ್ಲ ಆತ್ಮಗಳೇ ಇಲ್ಲದ ಮೇಲೆ ದೇಶಕ್ಕೊಂದು ಬೇಲಿಯನ್ನು ಹಾಕಿ ಏನು ಪ್ರಯೋಜನ?

ತಿಳಿದ ಮಟ್ಟಿಗೆ ಯಾವೊಂದು ಕೆಲಸವೂ ನನ್ನ ತಲೆಗೆ ತಕ್ಷಣ ಹೊಳೆಯಲೇ ಇಲ್ಲ. ಮೇಲಾಗಿ ಆತನಿಗೆ ಗೊತ್ತಿರುವುದು ಈ ಒಂದೇ ಕೆಲಸವಾಗಿರುವುದರಿಂದ ಬೇರ್ಯಾವ ಕೆಲಸವನ್ನು ಹುಡುಕಿಕೊಟ್ಟರೂ ಆತ ಅದನ್ನು ಮೊದಲಿನಿಂದ ಕಲಿಯಬೇಕು. ಕೇವಲ ಹೊಟ್ಟೆಪಾಡಿಗಾಗಿ ತನ್ನ ಕೆಲಸದ ಹಿರಿತನದ ಅನುಭವವನ್ನು ಬದಿಗಿಡಬೇಕು. ಹುಡುಕಿಕೊಟ್ಟರೂ ಅದು ಇದೇ ವಲಯದ ಬೇರೊಂದು ಕೆಲಸವಾಗಬೇಕು ಅಂದುಕೊಂಡೆ. ಗಜಕಾಯದ ಬಂಗಾಳಿ ತನ್ನೂರಿನಿಂದ ಬಂದಾಗ ಭಾರತೀಯನಾಗಿ ನಾನು ಈ ಕುಡಿಮೀಸೆಯ ಪಾಕಿಸ್ತಾನಿಗೆ ಒಂದು ಕೆಲಸವನ್ನು ಹೊಂದಿಸಬೇಕು. ಸಾಧ್ಯವಾದಷ್ಟು ಸಹಾಯವನ್ನು ಮಾಡಬೇಕೆಂದು ಯೋಚಿಸತೊಡಗಿದೆ. 'ಸಾಬ್ ಚಿಂತಾ ಮತ್ ಕರೋ, ಕಾಮ್ ನಹಿ ಮಿಲೇಗ ತೊ ಬಿ ಟೀಕ್ ಹೈ' ಎನ್ನುತ ಆತ ಮುಗುಳ್ನಗೆಯೊಂದು ಬೀರಿದಾಗ ಏಕೋ ಮನದಲ್ಲಿ ತುಂಬಾನೆ ಕಸಿವಿಸಿಯಾಯಿತು. ಜೇಬಿನಲ್ಲಿದ್ದ ಎಲ್ಲವನ್ನು ಕಳೆದುಕೊಂಡು, ಹುಟ್ಟಿಬೆಳೆದ ತನ್ನೂರನ್ನು ಬಿಟ್ಟು, ಅರೆಹೊಟ್ಟೆಯಲ್ಲಿ ಬದುಕುತ್ತಿದ್ದ ವ್ಯಕ್ತಿಯೊಬ್ಬ ನಕ್ಕರೆ ಅದು ಹತಾಶೆಯ ನಗೆಯಲ್ಲದೆ ಮತ್ತೇನು? ಏನು ಹೇಳಬೇಕೆಂದು ತಿಳಿಯದೆ ಕೊಡಬೇಕಾಗಿದ್ದ ಹಣಕ್ಕಿಂತ ಎರಡರಷ್ಟನ್ನು ಕೊಟ್ಟು, ಆತನ ಕೆಲಸಕ್ಕಾಗಿ ಪ್ರಯತ್ನಿಸುವೆ ಎಂದು ಹೇಳಿ ಹೊರಬಂದರೂ ಆತನ ಆ ಅಮಾಯಕ ನಗುವಿನ ದೃಶ್ಯ ಮಾತ್ರ ನನ್ನನ್ನು ಬಹುದಿನಗಳವರೆಗೂ ಕೊರೆಯುತ್ತಲೇ ಇದ್ದಿತು.

Sunday, May 13, 2018

ಮಾನಹೀನ ಮಾತುಗಳಿಂದ ಬದುಕಬೇಕಿದೆಯೇ ನಮ್ಮ ಡೆಮಾಕ್ರಸಿ...?

ಸಣ್ಣವರಿದ್ದಾಗ ಶಿಕ್ಷಕರು ನಮಗೆ ಕಲಿಸಿದ್ದ ಅಮೋಘ ಶಿಕ್ಷಣಗಳಲ್ಲಿ ಸರಿಯೆನಿಸದ್ದಿದ್ದನ್ನು ಪ್ರೆಶ್ನಿಸುವುದೂ ಒಂದು. ಅದು 'ಏನಲೇ..!?' ಎಂದು ಕೊಳಪ್ಪಟ್ಟಿಯನ್ನು ಹಿಡಿದು ಜಾಡಿಸಿ ಕೇಳುವುದಕ್ಕಿಂತ ಮಿಗಿಲಾಗಿ, ಹರಿತವಾದ ಮಾತಿನಿಂದ ಸತ್ಯವೆಂಬ ಹಿಡಿತದೊಂದಿಗೆ ಮುಂದಿರುವವನ ಕಪಟ ವಂಚಕ ಮನಸ್ಥಿತಿಯನ್ನು ಬೆದರುಗೊಳಿಸುವ ಬಗೆಯಾಗಿದ್ದಿತು. ಅರ್ಥಾತ್ ಅವು ವೈಚಾರಿಕ ಬಗೆಯ ನೇರ ಪ್ರೆಶ್ನೆಗಳಾಗಿದ್ದವು. ಆದರೆ ಅಂದಿನ ಆ ಪಾಠವನ್ನು ಮರೆತ ಬಹುಮಂದಿ ಜನರು ಇಂದು ಕೇಳುವ ಪ್ರೆಶ್ನೆಗಳು ಏಕವಚನ ಪದಗುಚ್ಛಗಳ ಚಪ್ಪಲಿ ಏಟಿನಂತೆ ಮುಂದಿರುವ ವ್ಯಕ್ತಿಯ ಮಾನಹರಣ ಮಾಡುವ ಅಸ್ತ್ರಗಳಾಗಿವೆ. ಪುಕ್ಕಟೆಯಾಗಿ ಸಿಗುವ ಹೊಲಸು ಪದಗಳ ವಿಶೇಷಣಗಳನ್ನು ಬಳಸಿ ಮುಂದಿರುವವರ ಸ್ಥಾನ ಜೊತೆಗೆ ಮಾನವನ್ನೂ ತಿವಿದು ಹಾಕುವ ಇಂದಿನ ದಿನಗಳಲ್ಲಿ ವಿಷಯಕ್ಕೆ ತಕ್ಕನಾದಂತಹ ನೇರವಾದ ಪ್ರೆಶ್ನೆಗಳನ್ನೂ ಕೇಳುವವರ ಸಂಖ್ಯೆ ಕ್ಷೀಣಿಸುತ್ತಿದೆ! ಒಂದೋ ಆತ/ಅವಳು ಸಮಾಜದ ಅತಿ ಪ್ರಭಾವಿ ಗುಂಪಿನ ಇಂಪಾರ್ಟೆಂಟ್ ವ್ಯಕ್ತಿಗಳೆನಿಸಿಕೊಂಡಿರಬೇಕು ಅಥವಾ ಯಾರಿಗೂ ಕ್ಯಾರೇ ಎನ್ನದ ಖಡಕ್ ಅಧಿಕಾರಿಗಳಾಗಿರಬೇಕು. ಅಂತವರಿಗಷ್ಟೇ ಇಂದು ಪ್ರೆಶ್ನೆಗಳನ್ನು ಕೇಳುವ 'ಅಧಿಕಾರ' ಹಾಗು 'ಧೈರ್ಯ' ಸೀಮಿತವಾಗುತ್ತಿದೆ ಎಂದರೆ ಸುಳ್ಳಾಗದು. ಸಾಮಾನ್ಯನೊಬ್ಬನಿಗೆ ಇಂದು ಪ್ರೆಶ್ನಿಸುವ ಧೈರ್ಯವನ್ನು ತುಂಬುವ ಸಮಾಜವೇ ಇಲ್ಲವಾದರೆ ವಿಧ್ಯಾವಂತರಾಗಿಯೂ ಕುರಿಗಳು ಸಾರ್ ಕುರಿಗಳು ಎಂಬಂತೆ ಪ್ರೆಶ್ನಿಸುವ ನರಗಳನ್ನೇ ಕಳೆದುಕೊಂಡು ಒಬ್ಬರ ಬಾಲವನ್ನು ಇನ್ನೊಬ್ಬರು ಮೂಸುತ್ತಾ ಸಾಗುವ ಪಯಣ ಇದಾದಿತು.

ಪೀಠಿಕೆ ಇಷ್ಟಿರಲಿ. ಈಗ ವಿಷಯಕ್ಕೆ ಬರೋಣ. ಅದಕ್ಕೂ ಮೊದಲು ಒಂದೆರೆಡು ನೇರ ನುಡಿ. ಇಲ್ಲಿ ಕೇಳಲಾಗಿರುವ ಪ್ರೆಶ್ನೆಗಳಿಗೆ ಪಕ್ಷ, ಜಾತಿ, ಪಂಥ ಎಂಬ ಯಾವುದೇ ಬಗೆಯ ತುರಿಕೆಗಳಾಗಲಿ, ಖಾಯಿಲೆಯಗಳಾಗಲಿ ಅಂಟಿಕೊಂಡಿಲ್ಲ. ಭಾರತೀಯರಾಗಿ ಅದಕ್ಕಿಂತಲೂ ಹೆಚ್ಚಾಗಿ ಸ್ವಸ್ಥ ಮಾನವರಾಗಿ ಕೇಳಲೇ ಬೇಕಾದ ಪ್ರೆಶ್ನೆಗಳಿವು. ಮುಂದಿರುವ ಇನ್ನೊಬ್ಬರಿಗಲ್ಲದಿದ್ದರೂ ತಮಗೆ ತಾವೇ ಚುಚ್ಚಿಕೊಳ್ಳಬೇಕಾದದ ಸೂಜಿಗಳಿವು!

ಚುನಾವಣೆ. ಸಧ್ಯಕಂತೂ ಆಡುವ ಮಕ್ಕಳ ಬಾಯಲ್ಲೂ ರಾರಾಜಿಸುತ್ತಿರುವ ಏಕಮಾತ್ರ ಪದವಿದು. ಸ್ವಾತಂತ್ರ್ಯೋತ್ತರ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಈ ಮಟ್ಟಿನ ಉತ್ಸುಕತೆ, ಭಾಗವಹಿಸುವಿಕೆ, ಅರಚಾಡುವಿಕೆ ಬಹುಶಃ ಹಿಂದೆಲ್ಲೂ ನಮಗೆ ಸಿಗದು. ಇಂದು ಬದುಕಲು ಬೇಕಾಗಿರುವ ಗಾಳಿ, ನೀರು ಹಾಗು ಆಹಾರದಂತಹ ಕೆಟಗರಿಗಳಿಗೆ ಬಂದು ಸೇರಿರುವ ಇಂಟರ್ನೆಟ್ ಎಂಬ ಮಹಾ ಮಾಯಾವಿಯೇ ಇದಕ್ಕೆಲ್ಲ ಕಾರಣವೆಂಬುದು ಸರ್ವರಿಗೂ ತಿಳಿದಿರುವ ವಿಷಯ. ಇಲ್ಲಿ ಪ್ರತಿಯೊಬ್ಬನೂ ವಾಗ್ಮಿಯೇ. ಟ್ವೀಟು, ಕಾಮೆಂಟು, ಸ್ಟೇಟಸ್ಸು, ಎನ್ನುತ್ತಾ ಡೆಮೋಕ್ರಸಿಯ ಸ್ವಾತಂತ್ರ್ಯವನ್ನು ಅಕ್ಷರ ಸಹ ಪಾಲಿಸುವ ಆತ ತಾನು ಅರಚಿ ವ್ಯಕ್ತ ಪಡಿಸಲಾಗದದನ್ನು ಕೀಬೋರ್ಡಿನ ಕೀಲಿಗಳನ್ನು ಕುಟ್ಟುತ್ತಾ ತೋರ್ಪಡಿಸ ಬಯಸ್ಸುತ್ತಾನೆ. ಪದಗಳಿಗೆ, ಅವುಗಳಿಂದ ಮೂಡುವ ಹೊಲಸು ವಾಕ್ಯಗಳಿಗೆ ಬ್ರೇಕೇ ಇಲ್ಲದ ಇಲ್ಲೂ ಸಹ ಸಿಕ್ಕ ಸಿಕ್ಕವರ ಮಾನಹಾನಿ ಎಂಬುದು ನೀರು ಕುಡಿದಷ್ಟೇ ಸುಲಭ. ಜಾತಿ, ಮತ, ಪಂಥ ಎಂಬ ಅಸ್ತ್ರಗಳು ಯಾವುದೇ ಮುಲಾಜಿಲ್ಲದೆ ಇಲ್ಲಿ ಎಲ್ಲಡೆಯೂ ಬೇರುಬಿಟ್ಟಿವೆ. ಮೊದಲೆಲ್ಲ ಹೆದರಿ ಆಡಲಾಗುತ್ತಿದ್ದ ಮಾತುಗಳಿಗೀಗ ಶಿಳ್ಳೆ ಚಪ್ಪಾಳೆಗಳ ಜೊತೆಗೆ ಲೈಕು ಕಾಮೆಂಟುಗಳ ಪ್ರೋತ್ಸಹಗಳೂ ಸಿಗತೊಡಗಿವೆ. ನೀನು ಸೇರಾದರೆ ನಾನು ಸವಾಸೇರು! ನೀನು ಒಂದೆಂದರೆ ನಾನು ಹತ್ತನ್ನು ‘ಕುಟ್ಟ’ಬಲ್ಲೆ!! ಇಂಥಹ ಮನಸ್ಥಿತಿ ಇಂದು ಎಲ್ಲೆಡೆ ಮೂಡುತ್ತಿದೆ.

ಪ್ರಸ್ತುತ ಚುನಾವಣೆಯಲ್ಲಂತೂ ಇಂತಹ ಕೆಸರೆರಚಾಟಗಳು ಯಾರ ಹಂಗಿಲ್ಲದೆಯೇ ಸಾಗಿವೆ. ಅದು ಪಿಎಂ ನಿಂದಿಡಿದು ಸಿಮ್ ರ ವರೆಗೂ ಪ್ರಸ್ತುತವಾಗಿದೆ. ಇಂಟರ್ನೆಟ್ ಲೋಕದಿಂದಿಡಿದು ಬೆಳಕು ಕಾಣದ ಗುಡಿಸಿಲಿನವರೆಗೂ ಅದು ಹರಡಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಚೆಹರೆಯಾಗಿ, ಕೋಟಿ ಕೋಟಿ ದೇಹಶಾಭಿಮಾನಿಗಳ ಹೆಮ್ಮೆಯ ನಾಯಕನಾಗಿ, ಭಾರತದ ಪ್ರಧಾನಿಯ ಸ್ಥಾನದಲ್ಲಿ ಕೂತು ಚುನಾವಣೆಯ ಪ್ರಚಾರದ ಭರದಲ್ಲಿ ತಮ್ಮದೇ ದೇಶದ ಮುಖ್ಯಮಂತ್ರಿಗಳನ್ನು, ಮಾಜಿ ಪ್ರಧಾನಿಗಳನ್ನು ಸಾಮೂಹಿಕವಾಗಿ ಜರಿಯುವ ಪರಿ ಅದೆಷ್ಟರ ಮಟ್ಟಿಗೆ ಸರಿ? ರಾಜ್ಯದ ಘನವೆತ್ತ ಮುಖ್ಯಮಂತ್ರಿಯಾಗಿ, ಆರು ಕೋಟಿ ಜನರ ಮುಂದಾಳುವಾಗಿ, ಸಮಾಜದ ಅತಿ ಗೌರವಾನ್ವಿತ ಸ್ಥಾನದಲ್ಲಿ ಕೂತಿರುವ ಹಿರಿಯರಾಗಿ, ಸಿಗುವ ಕೇವಲ ಬೆರಳೆಣಿಕೆಯ ಮತಗಳ ಧುರಾಸೆಯಲ್ಲಿ ದೇಶದ ನೂರು ಕೋಟಿ ಜನರ ಪ್ರಧಾನಮಂತ್ರಿಯನ್ನು ತೆಗಳುವನಂತಹ ಮಾತುಗಳು ಆ ಸ್ಥಾನಕ್ಕೆ ಶೋಭೆ ತರುವಂಥಹದ್ದೇ? ಇಂತಹ ವೈಮಸ್ಸಿನಿಂದ, ತಾರತಮ್ಯದಿಂದ, ಸರಿಹೊಂದದ ತಾಳಮೇಳದಿಂದ ಏಕರೂಪವಾದ ದೇಶದ ಅಭಿವೃದ್ಧಿ ನಿಜವಾಗಿಯೂ ಸಾಧ್ಯವವಿದೆಯೇ? ಇನ್ನು ಇವರುಗಳ ಹಿಂದಕ್ಕೂ ಮುಂದಕ್ಕೂ ಅಡ್ಡಾಡಿಕೊಂಡು ಕೈ ಮುಗಿದು ಕಾಲಿಗೆರಗಿ ದೇವತಾಮನುಷ್ಯರ ಸ್ಟೇಟಸ್ ಅನ್ನು ಗಿಟ್ಟಿಸಿಕೊಡಬಲ್ಲ ಇತರೆ ನಾಯಕರುಗಳನಂತೂ ಕೇಳುವುದೇ ಬೇಡ. ಘಂಟೆಗೊಂದು, ನಿಮಿಷಕ್ಕೊಂದರಂತೆ ಫೇಸ್ ಬುಕ್ಕಿನ 'ನೇರಪ್ರಸಾರ'ದ ವಾಚಕರಾಗಿ, ನಾವೇ ಸರಿ, ಉಳಿದೆಲ್ಲವೂ ಸುಳ್ಳು ಎಂಬಂತೆ ಬೊಬ್ಬೆಯೊಡೆದು ಬೀಗುವ ಇವರುಗಳ ಮನಸ್ಥಿತಿಯಿಂದ ಸಮಾಜ ಕಲಿಯುವುದೇನು? ನಾಯಿ, ಸಗಣಿ, ಕಪಿ ಎಂಬ ಮೂಕಪ್ರಾಣಿಗಳಗೆ ಎದುರು ಪಕ್ಷದವರನ್ನು ಹೋಲಿಸಿ ಅವುಗಳ ಮರ್ಯಾದೆಯನ್ನೂ ಹಾಳುಮಾಡುವುದಲ್ಲದೆ ಹುಚ್ಚ, ಅರೆಹುಚ್ಚ, ಪಾಪಿ, ಕಳ್ಳ, ಸುಳ್ಳ ಎಂಬ ಹಣೆಪಟ್ಟಿಯನ್ನು ಮನಬಂದಂತೆ ಮನಬಂದವರಿಗೆ ಕಟ್ಟುವ ನ್ಯಾಯಾಧೀಶರಂತೆ ಆಗಿರುವ ನಾಯಕರನ್ನು ಹದ್ದುಬಸ್ತಿನಲ್ಲಿಡುವವರು ಯಾರು? ಇಂತಹ ಕೀಳುಮಟ್ಟದ ಪ್ರಚಾರದಿಂದ ನಾಗರಿಕತೆಯ ನಮ್ಮ ಪಯಣ ಹಿಮ್ಮುಖವಾಗಿ ಸಾಗುವುದರಲ್ಲಿ ದೂಸರಾ ಮಾತೇ ಇಲ್ಲ ಅಲ್ಲವೇ? ಕೋಟಿ ಕೋಟಿ ಜನರ ಬೆವರ ಹಣವನ್ನು ಕೊಳ್ಳೆಯೊಡೆದು ಸೆರೆವಾಸದ ಸುಖವನ್ನನುಭವಿಸಿ ಬಂದ ಭಂಡ ವ್ಯಕ್ತಿಗಳಿಗೆ ಟಿಕೇಟನ್ನು ನೀಡಿ, ಸಾಲದಕ್ಕೆ ಡೆಲ್ಲಿಯಿಂದ ಹರಾರಿಕೊಂಡು ಬಂದು ಅವರ ಪರವಾಗಿ ಭಾಷಣಯೊಡೆಯುವ ಮುನ್ನ ತಾವು ಮಾಡುತ್ತಿರುವ ಕಾರ್ಯ ಅಕ್ಷರ ಸಹ ತಪ್ಪೆಂದು ಅವರುಗಳಾಗಲಿ ಅಥವಾ ಸತ್ಯವೇ ತನ್ನ ತಾಯಿ ತಂದೆ ಸತ್ಯವೇ ನನ್ನ ಬಂಧು ಬಳಗ ಎನ್ನುತ್ತಾ 'ನೆಟ್ಟಿ'ನಲ್ಲಿ ನಲಿಯುವ ಇತರೆ ನಾಯಕರುಗಳಾಗಲಿ ಉಸಿರೆತ್ತಬಲ್ಲರೇ? ಪ್ರೆಶ್ನಿಸಬಲ್ಲರೇ? ಇಲ್ಲ ಖಂಡಿತವಾಗಿಯೂ ಇಲ್ಲ! ಏಕೆಂದರೆ ತಾವು ಒಂದು ಪಕ್ಷವನ್ನು ಅನುಸರಿಸಿದ ಮಾತ್ರಕ್ಕೆ ಅದರ ನಾಯಕರುಗಳು ಏನೇ ಅಂದರೂ ಅದು ವೇಧವಾಕ್ಯಕ್ಕೆ ಸಮ! ಅವರ ಪ್ರತಿಯೊಂದು ನಡೆಯನ್ನು ಕಣ್ಣು ಕೆಟ್ಟಿ, ಕಿವಿಯ ಮುಚ್ಚಿ ಹಿಂಬಾಲಿಸುವ ಸುಶಿಕ್ಷಿತರ ಗುಂಪೊಂದೇ ಇಂದು ನಿರ್ಮಾಣವಾಗಿದೆ. ಆಧುನಿಕ ಜಗತ್ತಿನ ಹೊಸ ಬಗೆಯ ಗುಲಾಮಗಿರಿ ಇದ್ದಲ್ಲದೆ ಮತ್ತೇನು? ಅಲ್ಲದೆ ಇಂತಹ ಕಪಟ ನಾಯಕರ ದೌಲು, ಹುಂಬುತನ, ಹಗೆ, ದ್ವೇಷ ಹಾಗು ವೈರತ್ವದಿಂದ ಕೂಡಿದ ಮಾತುಗಳಿಗೆ ಮರುಳಾಗಿ ನಾವು ವೋಟನ್ನು ಒತ್ತಬೇಕೆ? ಅಷ್ಟಾಗಿಯೂ ಅಂತವರಿಗೇ ಓಟನ್ನು ಒತ್ತಿ ಸುಶಿಕ್ಷಿತರಾಗಿಯೂ ನಾವು ಅಶಿಕ್ಷಕರಾಗಿದ್ದೀವಿ ಎಂಬುದನ್ನು ಸಾಬೀತುಪಡಿಸಿ ತೋರಿಸಬೇಕಿದೆಯೇ?

ದೇಶದ, ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ಕಾಣದ ಭರಾಟೆಯಲ್ಲಿ ಇಂದು ಚುನಾವಣೆಗಳು ನೆಡೆಯುತ್ತಿವೆ. ಜಾತಿ ಹಾಗು ಧರ್ಮದ ರಾಜಕಾರಣ ಸಮಾಜವನ್ನೇ ಒಡೆದು ಹೋಳಾಗಿಸುವ ಭರದಲ್ಲಿ ಮುನ್ನಿಗ್ಗುತ್ತಿದೆ. ಇಂದಿನ ಯಾವೊಬ್ಬ ರಾಜಕಾರಣಿಯ ಬಾಯಲ್ಲೂ ಏಕತೆ, ಅನ್ಯೂನ್ಯತೆ, ಸಹಬಾಳ್ವೆ ಎಂಬ ಪದಗಳೇ ಮೂಡದಾಗಿವೆ. ಪ್ರತಿಯೊಂದು ಕ್ಷೇತ್ರದ ಟಿಕೆಟ್ಟಿಗೂ ಜಾತಿವಾರು ಸರ್ವೆಗಳೆ ಮೂಲಾಧಾರವಾಗಿರುತ್ತವೆ. ಅಲ್ಲ ಸ್ವಾಮಿ, ನಮ್ಮ ಹಿರೀಕರೇನೋ ತಿಳಿದೋ ತಿಳಿಯದೆಯೋ ನೂರಾರು ಜಾತಿ ಪಂಗಡಗಳನ್ನು ಸೃಷ್ಟಿಸಿ ಮರೆಯಾದರು. ಇಷ್ಟೆಲ್ಲಾ ಜಾತಿಗಳಿರುವುದರಿಂದ ಗುಂಪು ಪಂಗಡಗಳನ್ನು ಲೆಕ್ಕ ಹಾಕುತ್ತೀರಾ. ಒಂದು ಪಕ್ಷ ಇಂತಹ ಜಾತಿ ಧರ್ಮಗಳೇ ಇಲ್ಲದ ನಾಡು ನಮ್ಮದಾಗಿದ್ದರೆ ಯಾವ ಆಧಾರದ ಮೇಲೆ ನಿಮ್ಮ ಟಿಕೇಟುಗಳು ಹಂಚಿಕೆಯಾಗುತ್ತಿದ್ದವು?! ಅದ್ಯಾವ ಬಗೆಯ ಸಮೀಕರಣ ನಿಮ್ಮನ್ನು ಗೆಲ್ಲಿಸುತಿತ್ತು? ಒಂದು ಧರ್ಮವನ್ನು ನಿಂಧಿಸಿ ಮತಯಾಚಿಸುವ ಮನಸ್ಸುಗಳು ಇಂದು ಬದಲಾಗಬೇಕಿದೆ. 'ನಾನು ಸಾಯುತ್ತೀನಿ, ಸಾಯುವ ಮೊದಲೊಮ್ಮೆ ಗೆಲ್ಲಿಸಿ' ಎಂಬ ನಾಟಕೀಯ ಮಾತುಗಳಿಗೆ ಮಣೆಯಾಕುವುದನ್ನು ನಿಲ್ಲಿಸಬೇಕಿದೆ. ಭಾರತ ರತ್ನ ವ್ಯಕ್ತಿಯ ಹೆಸರನ್ನೇ ಕತ್ತರಿಸಿ ಉಚ್ಚರಿಸಬಲ್ಲದ ನಾಯಕರಿಂದ ನಾವುಗಳು ಕಲಿಯಬೇಕೇ? ಹಣಕೊಟ್ಟು ಕಟ್ಟಿದ ಗುಂಪಿನ ಮುಂದೆ ದೇಶಾಭಿಮಾನದ ಮಾತುಗಳನ್ನು ಸುರಿದರೆ ಸಮಾಜ ಉದ್ದಾರವಾದೀತೇ? ಇಂತಹ ಪರಿಸ್ಥಿಯಲ್ಲಿ ಎಲ್ಲೆಲ್ಲಿಯೂ ಅಂಧ ಗುಂಪುಗಾರಿಕೆಯೆ ರಾರಾಜಿಸುತ್ತಿರುವಾಗ ಯಾವ ಗುಂಪನ್ನು ನಾವು ಸೇರಬೇಕು ಅಥವ ಯಾವ ಗುಂಪಿಗೆ ನಮ್ಮ ಬೆಂಬಲ ಮೂಡಬೇಕು? ಈ ಆಯ್ಕೆಯೂ ಬೇಡ ಮುಂದೆ ಅದರಿಂದುಟಾಗುವ ಕಹಿ ಅನುಭವವೂ ಬೇಡವೆಂದನ್ನುತ್ತಿದೆ ಮನದ ಮಾತು!

Friday, May 4, 2018

ಮೆಚ್ಚಲೇಬೇಕಿದೆ ಗೌತಮನ ಈ ಗಂಭೀರ ನಡೆ...!

ಡಿಸೆಂಬರ್ 15, 2006.

ದೇಸಿ ಕ್ರಿಕೆಟ್ನ ಮಹಾರಾಜನೆಂದೇ ಬಿಂಬಿತನಾಗಿದ್ದ ಗ್ರೇಟ್ ನಾಯಕನೊಬ್ಬನ ಅಗ್ನಿಪರೀಕ್ಷೆಯ ದಿನವಂದು. ತಿಂಗಳುಗಳ ಕೆಳಗಷ್ಟೇ ಭಾರತ ತಂಡದ ನಾಯಕನಾಗಿ ಸತತ ಐದು ವರ್ಷಗಳ ಕಾಲ ತಂಡದ ಹಾಗುಹೋಗುಗಳ ಮಾವುತನಾಗಿದ್ದ ವ್ಯಕ್ತಿ ಇಂದು ಅಕ್ಷರ ಸಹ ತಂಡದಲ್ಲಿ ತನ್ನ ಸ್ಥಾನವನ್ನುಉಳಿಸಿಕೊಳ್ಳಲು ಹೆಣಗುತ್ತಿದ್ದಾನೆ. ಅದು ಕೂಡ ತಂಡದ ಒಬ್ಬ ಸಾಮಾನ್ಯ ಸದಸ್ಯನಾಗಿ! ಹತ್ತು-ಹನ್ನೆರೆಡು ವರ್ಷಗಳ ಕಾಲ ಕ್ರಿಕೆಟ್ ನಲ್ಲೆ ಬದುಕನ್ನು ಕಳೆದೂ, ಕ್ರಿಕೆಟ್ ಇತಿಹಾಸದಲ್ಲಿ ಒಬ್ಬ ಅಜರಾಮರ ವ್ಯತಿತ್ವವೆನಿಸಿಕೊಂಡರೂ ಯಾಕಪ್ಪ ಈತನಿಗೆ ಇನ್ನೂ ಆಡುವ ಹುಚ್ಚು ಎಂದು ಹೇಳಿದವರು ಅದೆಷ್ಟೋ. ಪಾತಾಳ ಸೇರುತ್ತಿದ್ದ ತಂಡವೊಂದನ್ನು ಶಿಖರದ ತುತ್ತ ತುದಿಯ ಬಳಿಗೆ ತಂದು ನಿಲ್ಲಿಸಿದ ವ್ಯಕ್ತಿಯನ್ನೇ ತಂಡದಿಂದ ತೆಗೆದು ಹಾಕಿದ್ದ ಮೇಲೆ ಪುನಃ ತಂಡದಲ್ಲಿ ಅವಕಾಶವನ್ನು ಕೋರುವುದು ಮರ್ಯಾದೆಗೇಡು ಎಂದು ಈತನ ಅಭಿಮಾನಿಗಳೇ ಅಂದು ಬಯ್ಯತೊಡಗಿದರು. ಸಂಸಾರದ ಜವಾಬ್ದಾರಿ, ಹಣದ ಕೊರತೆ ಏನಾದರೂ? ಬಿಲ್ಲಕುಲ್ ಇಲ್ಲ! ಅಷ್ಟಕ್ಕೂ ಬೆಂಗಾಲದ ಅತಿ ಶ್ರೀಮಂತ ಕುಟುಂಬಗಳಲ್ಲಿ ಒಂದಾಗಿರುವ ಈತನ ಕುಟುಂಬಕ್ಕೆ ಹಣದ ಕೊರತೆ ಎಂದರೆ ಕೇಳಿದವರು ನಗುವರು. ಹಾಗಾದರೆ ತನ್ನ ಮುವತ್ನಾಲ್ಕನೇ ವಯಸ್ಸಿನಲ್ಲಿಯೂ ಹಠವಿಡಿದ ಮಗುವಿನಂತೆ ಈತ ಭಾರತ ತಂಡಕ್ಕೆ ಕಮ್ ಬ್ಯಾಕ್ ಮಾಡಲೇ ಬೇಕು ಎನುತ ಕೂತಿರುವುದಾದರೂ ಏತಕ್ಕೆ? ಏಕೆಂದರೆ ಆತ ಸೌರವ್ ಗಂಗೂಲಿ! ಆಕಾಶವೇ ಕಳಚಿ ಬಿದ್ದರೂ ಸೋಲನೊಪ್ಪಿಕೊಳ್ಳದ , ಹೋದರೂ ತಲೆಯೆತ್ತಿ ಆತ್ಮಗೌರವದಿಂದ ಹೊರಡಬೇಕೆಂಬ ಖಯಾಲಿಯ ನಾಯಕ.

ಮ್ಯಾಚ್ ಫಿಕ್ಸಿಂಗ್ ಹಗರಣದ ನಂತರ ಚಿಂದಿ ಚಿತ್ರಾನ್ನವಾಗುತ್ತಿದ್ದ ತಂಡವನ್ನು ಒಂದುಗೂಡಿಸಿ ಬೆಳೆಸಿದ್ದಷ್ಟಲ್ಲದೆ ವಿದೇಶಿ ನೆಲೆಗಳಲ್ಲಿ ಗೆಲುವೆಂಬ ಮಾಯಾಜಿಂಕೆಯ ಬೆನ್ನನೇರುವ ಕಲೆಯನ್ನು ತಂಡಕ್ಕೆ ಕರಗತಮಾಡಿತೋರಿಸಿದ ಶ್ರೇಯ ಗಂಗೂಲಿಯದು. ಮುಂದೊಂದು ದಿನ ತಾನೇ ಖುದ್ದಾಗಿ ತಂಡದ ಕೋಚ್ ಸ್ಥಾನಕ್ಕೆ ಗ್ರೆಗ್ ಚಾಪೆಲ್ ಎಂಬ ಸಿಡುಕು ಮೋರೆಯ ವ್ಯಕ್ತಿಯನ್ನು ಆಯ್ದು ತಂದು ಆತನಿಂದಲೇ ತಂಡದಿಂದ ಹೊರಹಾಕಿಸಿಕೊಂಡ ಪ್ರಸಂಗ ಬಹುಷಃ ಕ್ರಿಕೆಟ್ ಇತಿಹಾಸದಲ್ಲೇ ಬೇರ್ಯಾವ ತಂಡದಲ್ಲೂ ಬಂದಿರಲು ಸಾದ್ಯವಿಲ್ಲ. ಅಲ್ಲಿಂದ ಮುಂದೆ ನೆಡೆದದ್ದು ಮಾತ್ರ ಕಮ್ ಬ್ಯಾಕ್ ಕಿಂಗ್ ಎಂದು ಹೆಸರು ಗಳಿಕೊಂಡ ಈತನ ಯಶೋಗಾಥೆ. ಅಂದು ಡಿಸೆಂಬರ್ 15, 2006 ರ ಸೌತ್ ಆಫ್ರಿಕಾ ವಿರುದ್ದದ ಮೊದಲ ಇನ್ನಿಂಗ್ಸ್ ನಲ್ಲಿ ಈತ ಗಳಿಸಿದ್ದು ಕೇವಲ 51 ರನ್ ಗಳಾದರೂ ಅದರಿಂದ ಆತ ತನ್ನನು ತಂಡದಿಂದ ಹೊರತಳ್ಳಿದವರಿಗೆ, ಆತನ ಬಗ್ಗೆ ಉಡಾಫೆಯ ಮಾತನ್ನಾಡಿದವರಿಗೆ, ಮುಳುಗುವಾಗಲೂ ತಮ್ಮವನೆಂಬ ಆತ್ಮೀಯತೆಯಿಂದಲೂ ಕೈಹಿಡಿದು ಮೇಲೆತ್ತದ ಇತರ ಆಟಗಾರರಿಗೆ ಇನ್ನಿಂಗ್ಸ್ ನ ಕೊನೆಯವರೆಗೂ ಸ್ಕ್ರೀಸ್ನ ಇನ್ನೊಂದು ಬದಿಯಲ್ಲಿ ನಿಂತು ಘರ್ಜಿಸುತ್ತಲೇ ಉತ್ತರಿಸಿದ. ಮಸಸ್ಸು ಮಾಡಿದರೆ ಕಮ್ ಬ್ಯಾಕ್ ಎಂಬುದು ಮೂವತ್ನಾಲ್ಕನೇ ವಯಸ್ಸಿನಲ್ಲಿಯೂ ಸಾಧ್ಯವಾಗದಿರದು ಎಂಬುದನ್ನು ಸಾಭೀತುಮಾಡಿದ. ಅಂದು ಆತನ ಕಮ್ ಬ್ಯಾಕ್ ಜಗತ್ತಿಗೆ ತನ್ನ ಶಕ್ತಿಯ ಪ್ರಭಾವವನ್ನು ತೋರಿಸಿಕೊಳ್ಳುವುದಕ್ಕಿಂತ ಮಿಗಿಲಾಗಿ ತನಗೆ ತಾನೇ ಉತ್ತರಿಸಿಕೊಳ್ಳುವ ಪ್ರಕ್ರಿಯೆಯಾಗಿದ್ದಿತು. ಆತ್ಮವಿಶ್ವಾಸ ಹಾಗು ತಕ್ಕ ಶ್ರಮವನ್ನು ವ್ಯಹಿಸಿದರೆ ಜಗತ್ತಿನಲ್ಲಿ ಅಸಾಧ್ಯವಾದುದು ಏನೇನೂ ಇಲ್ಲವೆಂಬುದನ್ನು ತೋರಿಸಿಕೊಡುವುದಾಗಿದ್ದಿತು.

ಹೆಚ್ಚುಕಡಿಮೆ ಹನ್ನೆರೆಡು ವರ್ಷಗಳ ನಂತರ ದೇಶ ಕಂಡ ಮತ್ತೊಬ್ಬ ಎಡಗೈ ಬ್ಯಾಟ್ಸಮನ್ ಇಂದು ಅದೇ ಸ್ಥಾನದಲ್ಲಿ ನಿಂತಿದ್ದಾನೆ. ಸಿಡುಕ, ಅಹಂಕಾರಿ, ರನ್ ಗಳಿಸಲು ಅಶಕ್ಯನಾದವ, ನಾಯಕನ ಹಿಡಿತವನ್ನು ಕಳೆಕೊಂಡಿರುವವ, ಹೀಗೆ ನಾನಾ ಬಗೆಯಲ್ಲಿ ಜರಿಯುವವರಿಗೆ ಉತ್ತರಿಸುವ ಪರಿಸ್ಥಿಯಲ್ಲಿದ್ದಾನೆ. ಆದರೆ ಉತ್ತರಿಸಬಲ್ಲನೆ ? ಆತನ ಕ್ರಿಕೆಟ್ ವ್ಯಕ್ತಿವವನ್ನು ಚೆನ್ನಾಗಿ ಬಲ್ಲವರಿಗೆ ಈ ಪ್ರೆಶ್ನೆಗೆ ಉತ್ತರ 'ಹೌದು' ಎಂಬುದು ತಿಳಿದೇ ಇದೆ! ಹೆಸರು ಗೌತಮ್ ಗಂಭೀರ್. ಭಾರತಕ್ಕೆ 2007 ಹಾಗು 2011 ರ ವಿಶ್ವಕಪ್ ನ ಕಿರೀಟವನ್ನು ತೊಡಿಸಿದ ಕಾರ್ಯದಲ್ಲಿ ಸಿಂಹಪಾಲು ಶ್ರಮ ಇವನದ್ದೇ ಎಂಬುದು ಭಾರತೀಯರಿಗಲ್ಲದೆ ಕ್ರಿಕೆಟ್ ಆಡುವ ಎಲ್ಲ ದೇಶಗಳಿಗೂ ತಿಳಿದುಂಟು. ಟೆಸ್ಟ್, ಒಂಡೇ ಹಾಗು ಟೀ 20 ಯಾವುದೇ ಬಗೆಯಾಗಲಿ ಆಯಾ ಫಾರ್ಮ್ಯಾಟ್ ಗಳಿಗೆ ಹೇಳಿಮಾಡಿಸಿದಂತೆ ಬ್ಯಾಟ್ ಬೀಸುತ್ತಿದ್ದ ಈತನ ಕ್ರಿಕೆಟ್ ಪಯಣ ಮಾತ್ರ ಒಂದು ಧುರಂತ ಕತೆ ಎಂದರೆ ಸುಳ್ಳಾಗದು. ವಿಶ್ವದ ಅಗ್ರಮಾನ್ಯ ಬ್ಯಾಟ್ಸ್ಮನ್ ಗಳ ಪಟ್ಟಿಯಲ್ಲಿ ಅಗ್ರಮಾನ್ಯನಾಗಿರುತ್ತಿದ್ದ, ತಂಡದ ಕಿರಿಯ ಆಟಗಾರರೊಟ್ಟಿಗೆ ತನ್ನ ಪ್ರಶಸ್ತಿಯನ್ನು ಹಂಚಿಕೊಳ್ಳುತ್ತಿದ್ದ, ಸಂಧರ್ಭ ಬಂದಾಗ ತಂಡವನ್ನು ಮುನ್ನೆಡಿಸಿ ಗೆಲುವನ್ನು ಸಾಧಿಸುತಿದ್ದ ಆಟಗಾರನೊಬ್ಬ ಇಂದು ರಾಷ್ಟ್ರೀಯ ತಂಡದಲ್ಲಿ ಬಿಡಿ ಕನಿಷ್ಠ ಪಕ್ಷ ಮೋಜು ಮಸ್ತಿಯ ಹುತ್ತವೆಂದೇ ಕಾಣುವ ಐಪಿಎಲ್ ನ ತಂಡವೊಂದರಲ್ಲೂ ಪರ್ಮನೆಂಟಾದ ಆಟಗಾರನೊಬ್ಬನಾಗಲು ಹೆಣಗುತ್ತಿದ್ದಾನೆ. ಪ್ಲೇ ಆಫ್ ದೂರದ ಮಾತು ಪ್ರತಿ ವರ್ಷ ಸೀಸನ್ ಮುಗಿದಾಗ ಕನಿಷ್ಠಪಕ್ಷ ಟಾಪ್ 5 ತಂಡದಲ್ಲೂ ಕಾಣದಿದ್ದ ಫ್ರಾಂಚೈಸಿಯೊಂದಕ್ಕೆ ಎರೆಡೆರಡು ಬಾರಿ ಪ್ರಶಸ್ತಿಯ ಪ್ರತಿಮೆಯನ್ನು ಮುಡಿಗೇರಿಸಿಕೊಟ್ಟ ಈತ ಅದೇ ಫ್ರಾಂಚೈಸಿಯಿಂದಲೇ ಹೊರಹಾಕಿಸಿಕೊಳ್ಳುತ್ತಾನೆ. ಹಣವೆಂದರೆ ಕ್ರಿಕೆಟ್, ಕ್ರಿಕೆಟ್ ಎಂದರೆ ಹಣವಾಗಿರುವ ಇಲ್ಲಿ ಫ್ರಾಂಚೈಸಿ ಗಳ ಕೈಕೆಳಗೆ ಆಡುವುದು ಕಬ್ಬಿಣ ಜಲ್ಲೆಯ ನುರಿತದಂತೆ ಎಂಬುದನ್ನು ಗಂಗೂಲಿ ತಾನು ಬರೆದ ಪುಸ್ತಕದಲ್ಲಿ (A Century Is Not Enough) ಸೊಗಸಾಗಿ ವರ್ಣಿಸಿದ್ದಾನೆ. ಆತನೂ ಕೆಲವರ್ಷಗಳ ಹಿಂದೆ ಅದೇ ಪ್ರಾಂಚೈಸಿಯಿಂದ ಹೀನಾಯವಾಗಿ ಹೊರಹಾಕಿಸಿಕೊಂಡಿದ್ದ. ಇಂದು ಗಂಭೀರ್ ನ ಸರಧಿ. ಆದರೆ ಆತ ತಂಡದಿಂದ ಹೊರಬಿದ್ದ ಕೂಡಲೇ ಡೆಲ್ಲಿಯ ಡೆವಿಲ್ಸ್ ಗಳು ತೆಕ್ಕೆಗೆ ಹಾಕಿಕೊಂಡರೂ ಸೀಸನ್ ನ ಆರ್ಧ ಮ್ಯಾಚುಗಳು ಮುಗಿಯುವ ಮೊದಲೇ ಆತನನ್ನು ತಂಡದಲ್ಲಿ ಉಳಿಸಿಕೊಳ್ಳಲು ಅಶಕ್ಯವಾದವು.

ಅರ್ಧದಷ್ಟು ಕ್ರಿಕೆಟ್ ಇಂದು ದೈಹಿಕ ಆಟವಾದರೆ ಉಳಿದರ್ಧ ಅಥವಾ ಇನ್ನೂ ಹೆಚ್ಚಿನ ಬಾಗ ಅದೊಂದು ಮೆಂಟಲ್ ಗೇಮ್ ಎಂಬುವುದು ಸರ್ವ ಆಟಗಾರರ ಒಕ್ಕೂರಲ ಅನಿಸಿಕೆ. ಅಲ್ಲದೆ ಇಂದು ಆಡುವವರಿಗಿಂತಲೂ ಹೆಚ್ಚಾಗಿ AC ಕೋಣೆಯಲ್ಲಿ ಬೊಬ್ಬೆಯೊಡೆಯುವವರು, ಸ್ಟಾಟಿಸ್ಟಿಕ್ಸ್ನ ದಾಸರಾಗಿ ಅದನ್ನು ಪುಂಖಾನುಪುಂಖಾವಾಗಿ ಜನಮಾನಸದೊಳಗೆ ಹರಿಬಿಡುವವರ ಸಂಖ್ಯೆಯೇ ಜಾಸ್ತಿಯಾಗಿದೆ. 'ವರ್ಸ್ಟ್ ಸ್ಪೆಷಲಿಸ್ಟ್ ಬ್ಯಾಟ್ಸ್ಮೆನ್', 'ಸ್ಮಾರ್ಟ್ ಸ್ಟ್ರೈಕ್ ರೇಟ್', 'ಮೋಸ್ಟ್ ವ್ಯಾಲ್ಯೂಬಲ್ ಪ್ಲೇಯರ್', 'ಬೆಸ್ಟ್ ಸ್ಟ್ರೈಕ್ ರೇಟ್' ಹೀಗೆ ಆಟಗಾರರನ್ನು ಅಳೆದು ತೂಗುವ ನೂರಾರು ಕೆಟಗರಿಗಳು ಇಂದು ಕ್ರಿಕೆಟ್ ನಲ್ಲಿವೆ. ಆಟಗಾರ ಕ್ರೀಡಾಂಗಣದಲ್ಲಿ ದೈಹಿಕವಾಗಿ ಸೆಣೆಸುವುದಲ್ಲದೆ ಆಫ್ ದಿ ಫೀಲ್ಡ್ ಇಂತಹ ಅರ್ಥವಿಲ್ಲದ ಅಂಕೆ ಸಂಖ್ಯೆಗಳೊಟ್ಟಿಗೆ ಮಾನಸಿಕವಾಗಿ ಗುದ್ದಾಡಬೇಕು. ಇಂತಹ ಗುದ್ದಾಟದಿಂದಲೇ ಇಂದು ಒಬ್ಬ ಆಟಗಾರ ಕ್ಷಣಮಾತ್ರದಲ್ಲಿ ಯಶಸ್ಸಿನ ಉತ್ತುಂಗದಿಂದ ಸೋಲಿನ ಕೂಪದೊಳಗೆ ದೊಪ್ಪನೆ ಬೀಳುವುದು. ಹಾಗಾಗಿ ಕಮ್ ಬ್ಯಾಕ್ ಎಂಬುವುದು ಅಂದಿನಷ್ಟು ಇಂದು ಸುಲಭವಲ್ಲ. ಏಕೆಂದರೆ ಅಂದು ಆಟಗಾರನ ಕಂಬ್ಯಾಕ್ ಇಂಟರ್ನೆಟ್ಟಿನ ಬಹುಕೋಟಿ ಟ್ವೀಟ್, ಕಾಮೆಂಟ್ ಗಳೊಟ್ಟಿಗಿರದೆ ಕೇವಲ ಕ್ರೀಡಾಂಗಣದೊಳಗಿನ ಬ್ಯಾಟು ಬಾಲುಗಳೊಟ್ಟಿಗಿದ್ದಿತು. ಬೆವರು ಸುರಿಸಿ ಹೆಸರು ಗಳಿಸುವುದರೊಟ್ಟಿಗಿದ್ದಿತು.

ಇಂದು ಗಂಭೀರ್ ದೆಹಲಿ ತಂಡದ ನಾಯಕನ ಸ್ಥಾನದಿಂದ ನಿವೃತ್ತಿ ಘೋಷಿಸಿದ್ದರೆ ಅದರ ಹಿಂದೆಯೂ ಹೀಗೆಯೇ ಬೊಬ್ಬೆಯೊಡೆದು ಬೀಗುವ ನೂರಾರು ಬಾಯಿಗಳು ಹಾಗು ಅವುಗಳೊಳಗಿನ ಸಾವಿರಾರು ಸ್ಟ್ಯಾಟಿಸ್ಟಿಕ್ಸ್ ಗಳೂ ಕಾರಣವಿರಬಹುದು. ಇಂದು ಮಾನಸಿಕವಾಗಿ ಒಬ್ಬ ಆಟಗಾರ ಸೋತನೆಂದರೆ ಆತನಿಗೆ ತನ್ನ ಕರಿಯರ್ ನನ್ನು ಕೊನೆಗೊಳಿಸಿದಷ್ಟೇ ದುಃಖ ಹತಾಶೆಯನ್ನು ಸಹಿಸಿಕೊಳ್ಳಬೇಕಾಗುವುದು. ಆದರೆ ಮಾನವನ ಗುಣವೈಖರಿಯನ್ನು ಹೀಗೀಗೆ ಇಂತಿಷ್ಟೇ ಎಂದು ಏಳಲು ಸಾಧ್ಯವಿದೆಯೇ? ತನ್ನ 42 ನೇ ವಯಸ್ಸಿನಲ್ಲಿ ಚೊಚ್ಚಲ ರಣಜಿ ಪಂದ್ಯವನ್ನಾಡಿ ನೋಡುಗರ ರೋಮು ರೋಮುಗಳನ್ನು ಎದ್ದು ನಿಲ್ಲಿಸಿದ್ದ ಪ್ರವೀಣ್ ತಾಂಬೆಯಾಗಲಿ, ಕ್ಯಾನ್ಸರ್ ಎಂಬ ಮಹಾಮಾರಿಯನ್ನೇ ಬಡಿದುರುಳಿಸಿ ಪುನ್ಹ ಕ್ರಿಕೆಟ್ ಮೈದಾನದಲ್ಲಿ ಫೊರು ಸಿಕ್ಸರ್ ಗಳ ಸುರಿಮಳೆಗೈಯುವ ಯುವರಾಜ್ ಸಿಂಗ್ ರಂತವರಾಗಲಿ ಅಥವ ತಿನ್ನಲು ಹಿಟ್ಟಿಲ್ಲದೆ ಇರಲೊಂದು ಸೂರಿರದೆ ಕಡುಕಷ್ಟದಲ್ಲಿ ಬದುಕಿ ಕೋಟ್ಯಧಿಪತಿಗಳಾಗಿರುವ ಅದೆಷ್ಟೋ ಆಟಗಾರರಾಗಿರಲಿ ಇಂದು ಅವರೆಲ್ಲ ಹೀಜಿ ಒದ್ದಾಡಿ ಜೀವನವನ್ನು ಒಂದು ಆದರ್ಶಪರವಾದ ಹೊತ್ತಿಗೆಯನ್ನಾಗಿ ಮಾಡಿಕೊಂಡಿದ್ದಾರೆ ಎಂದರೆ ಅದರಲ್ಲಿ ಕ್ರಿಕೆಟ್ ಎಂಬ ಆಪತ್ಭಾಂದವನ ಕೃಪೆ ಅದೆಷ್ಟಿದೆ ಎಂದು ತಿಳಿಯುತ್ತದೆ. ಇಷ್ಟೆಲ್ಲಾ ಸಾಧ್ಯತೆಗಳಿರುವ ಆಟವೊಂದರಲ್ಲಿ ಮಹಾಒತ್ತಡವಿರುವ ಅದೆಷ್ಟೋ ಮ್ಯಾಚುಗಳಲಿ ಬೌಂಡರಿಯ ಅಷ್ಟ ದಿಕ್ಕುಗಳಿಗೂ ಮನಬಂದಂತೆ ಚಚ್ಚಿ ಬೌಲರ್ಗಳ ಬೆವರಿಳಿಸುತ್ತಿದ್ದ ಗೌತಮನೆಂಬ ಗಂಭೀರ ವ್ಯಕ್ತಿಗೆ ಮಗದೊಮ್ಮೆ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡು ಮತ್ತೊಂದು ಸೆಂಚೂರಿಯನ್ನು ಗಳಿಸುವುದು ಯಾವ ಮಹಾಕಷ್ಟದ ಕಾರ್ಯ ?

ಆದರೆ ಗಂಭೀರ್ ನ ಈ ನಡೆ ಇನ್ನೊಂದು ಬಗೆಯಲ್ಲಿ ನೋಡಬಯಸುವವರಿಗೆ ಬೇರೆಯದ್ದೇ ನೀತಿ ಪಾಠವನ್ನು ಹೇಳಿಕೊಡುತ್ತದೆ. ತನಗಿಂತ ತಂಡ ಮೊದಲು, ಹಣಕ್ಕಿಂತ ಆಟ ಮಿಗಿಲು ಎನ್ನುವುದು ಕೇವಲ ಬಾಯಿಮಾತಿನ ವಚನಗಳಂತಾಗಿರುವಾಗ ಗೌತಮ್ ಗಂಭೀರ್ ಅವುಗಳನ್ನು ಅಕ್ಷರ ಸಹ ನಿಜಜೀವನದಲ್ಲೇ ಮಾಡಿ ತೋರಿಸಿದ್ದಾನೆ. ತಂಡ ಸೋಲಿನ ಸರಮಾಲೆಯನ್ನೇ ಮುಡಿಗೇರಿಸ್ಕೊಳ್ಳುತ್ತಿರುವಾಗ ಕಾರಣ ನಾನಲ್ಲ ನೀನು, ನೀನಲ್ಲ ಅವನು ಎಂದು ಬ್ಲೇಮ್ ಗೇಮ್ಗಳು ನೆಡೆಯುತ್ತಿರುವಾಗ ಹೀನಾಯ ಪ್ರದರ್ಶನದ ಅಷ್ಟೂ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೇರಿಸಿಕೊಂಡು ನಾಯಕನ ಸ್ಥಾನವನ್ನು ತ್ಯೆಜಿಸಿದ್ದನಲ್ಲದೆ ತಾನು ಪಡೆದಿದ್ದ ಅಷ್ಟೂ ಹಣವನ್ನು ಫ್ರಾಂಚೈಸಿಗಳಿಗೆ ಹಿಂದಿರುಗಿಸಲೂ ಮುಂದಾಗಿದ್ದಾನೆ. ಹಣವೇ ಸರ್ವಸ್ವವಾಗಿರುವ ಪ್ರಸ್ತುತ ಕಾಲದಲ್ಲಿ ಕೂತಕೂತಲ್ಲೆ ಸಿಗುವ ಕೋಟಿ ಕೋಟಿ ರೂಪಾಯಿಗಳನ್ನು ಹಿಂತಿರುಗಿಸುವವರು ಎಲ್ರಿ ಸಿಗುತ್ತಾರೆ? ಆತ ಬೇರೇನೂ ಮಾಡದೆ ಕೇವಲ ಬೆಂಚಿನ ಮೇಲೆ ಕುಳಿತು ಚಪ್ಪಾಳೆ ತಟ್ಟಿದರೂ ಸಾಕಾಗಿದ್ದಿತು ಅಷ್ಟೂ ಹಣವು ಬಡ್ಡಿಸಮೇತ ಆತ ಅಕೌಂಟಿನಲ್ಲಿ ಬಿದ್ದಿರುತ್ತಿತ್ತು. ಆದರೆ ಸ್ಪೋರ್ಟ್ಸ್-ಮ್ಯಾನ್ಷಿಪ್ ಎಂಬುದು ರಕ್ತದ ಕಣಕಣದಲ್ಲಿ ಅಡಗಿರುವವರಿಗೆ ಆಡದೆ ಸಿಗುವ ಬಹುಮಾನವೂ ಕಸಕ್ಕೆ ಸಮವಾಗಿರುತ್ತದೆ ಎಂಬುದು ಇಲ್ಲಿ ತಿಳಿಯುತ್ತದೆ. ಅಲ್ಲದೆ ಪ್ರಸ್ತುತ ಚುನಾವಣೆಯ ಈ ದಿನಗಳಲ್ಲಿ ರಾಜಕಾರಣಿಗಳೂ ಸಹ ಹೀಗೆಯೇ ಆತ್ಮಾವಲೋಕನ ಮಾಡಿಲೊಳ್ಳಬಲ್ಲರೇ ಎಂಬೊಂದು ಪ್ರೆಶ್ನೆ ನಮ್ಮನ್ನು ಕಾಡದಿರದು? ಜಿಲ್ಲೆಯ ಅಥವಾ ತಾಲೂಕಿನ ಜೀರೋ (೦) ಅಭಿವೃದ್ಧಿಗೆ ಮರುಗಿ ತಾನು ಈ ಕಾರ್ಯಕ್ಕೆ ಲಾಯಕ್ಕಲ್ಲವೆನುತ ತಮ್ಮ ತಮ್ಮ ಸ್ಥಾನಗಳಿಗೆ ರಾಜೀನಾಮೆಯನ್ನು ಇವರುಗಳೂ ನೀಡಬಲ್ಲರೇ? ಇಂಪಾಸಿಬಲ್! ಅಲ್ಲವೇ? ಅದೇನೇ ಇರಲಿ ಈ ಬಾರಿ ಚುನಾವಣ ಆಯೋಗವೇನಾದರೂ ಗಂಭೀರ್ ನನ್ನೇ ತನ್ನ ಬ್ರಾಂಡ್ ಅಂಬಾಸಿಡರ್ ನನ್ನಾಗಿ ಮಾಡಿದ್ದರೆ ಜನರ ಹಣವನ್ನು ಕೊಳ್ಳೆಯೊಡೆಯುವ ಅದೆಷ್ಟೋ ಕಳಪೆ ರಾಜಕಾರಣಿಗಳಿಗೆ ಪರೋಕ್ಷವಾಗಿ ಮಹತ್ತರವಾದ ಸಂದೇಶವೊಂದು ತಲುಪುತ್ತಿತ್ತೇನೋ?!

Saturday, April 28, 2018

ಗ್ರೇಟ್ ವಾರ್ : ಏಕಮಾತ್ರ ಗುಂಡಿನಿಂದ ನೆಡೆದ ಕೋಟಿ ಜನರ ಹರಣ.

ಜುಲೈ 28, 1914. ನೋಡನೋಡುತ್ತಲೇ ಲಾಂಗ್ ರೇಂಜ್ ಯುದ್ಧ ಟ್ಯಾಂಕರ್ ನಿಂದ ಪುಟಿದೆದ್ದ ಸಿಡಿಮದ್ದೊಂದು ಸೆರ್ಬಿಯಾ ದೇಶದೆಡೆ ಶರವೇಗದಲ್ಲಿ ಚಿಮ್ಮಿತು. ನಂತರದ ಕೆಲವೇ ಕೆಲವು ದಿನಗಳಲ್ಲಿ 28 ದೇಶಗಳ ಸುಮಾರು ಎರಡು ಕೋಟಿ ಜನರ ಜೀವವನ್ನು ಭಸ್ಮಿಸಿ ಇಡೀ ಭೂಖಂಡವನ್ನೇ ತಾನು ಅಲ್ಲೊಲ್ಲ ಕಲ್ಲೊಲ್ಲ ಮಾಡಬಲ್ಲನೆಂಬ ಒಂದಿನಿತು ಸುಳಿವು ಆ ಸಿಡಿಮದ್ದಿಗೆ ಇದ್ದಿರಲಾರದು! ಕರ್ತವ್ಯ ನಿರತ ಸೈನಿಕನಂತೆ ದೇಶಗಳೆರಡರ ಗಡಿರೇಖೆಯನ್ನು ತನ್ನ ಪಾಡಿಗೆ ತಾನು ದಾಟಿ ಹಾರಿಹೋಯಿತು. ಅದು ಹಾರಿದ್ದು ಅಂದಿನ ಆಸ್ಟ್ರಿಯಾ-ಹಂಗೇರಿ ಸಾಮ್ರಾಜ್ಯದ ನೆಲದಿಂದ. ಅಶಾಂತಿಯ ಬೆಂಕಿಯನ್ನು ವಿಶ್ವದೆಲ್ಲೆಡೆದೆ ಪಸರಿಸಿದ ಶಾಂತ ಭೂಮಿಯಿಂದ.

ಜುಲೈ 23, 1914. ಹೆಚ್ಚು ಕಡಿಮೆ ಗುಲಾಮಗಿರಿಯ ಘೋಷಣೆಗಳೇನೋ ಎಂಬಂತಿದ್ದ ಒಟ್ಟು 10 ಬೇಡಿಕೆಗಳನೊತ್ತ ಪ್ರತಿಯೊಂದು ಸೆರ್ಬಿಯಾ ದೇಶದ ರಾಜ ಪೀಟರ್ನ ಕೈ ಸೇರಿತು. ಆಸ್ಟ್ರಿಯಾ-ಹಂಗೇರಿ ಸಾಮ್ರಾಜ್ಯದ ಚಕ್ರವರ್ತಿ ಫ್ರಾನ್ಸ್ ಜೋಸೆಫ್ ಕಳುಹಿಸಿದ ಈ ಬೇಡಿಕೆಗಳು ಬೇಡಿಕೆಗಳೆನ್ನುವುದಕ್ಕಿಂತ ಹೆಚ್ಚಾಗಿ ಯುದ್ಧಕ್ಕೆ ಪ್ರೇರೇಪಿಸುವ ಚುಚ್ಚುಮದ್ದುಗಳೇನೋ ಎಂಬಂತ್ತಿದ್ದವು! ಆದರೂ ಸೆರ್ಬಿಯಾ ಆ ಒಟ್ಟು ಹತ್ತು ಅಂಶಗಳಲ್ಲಿ ಎಂಟಕ್ಕೆ ಅಸ್ತು ಎಂದಿತು. ಎಷ್ಟಾದರೂ ಆ ದೇಶದ ರಾಜಕುಮಾರನೊಬ್ಬನನ್ನು ತನ್ನ ದೇಶದ ಜನರಿಂದ ಸಾಯಿಸಲ್ಪಟ್ಟ ಅಪವಾದವನ್ನು ಹಣೆಯಮೇಲೆ ಕಟ್ಟಿಕೊಂಡಿರುವಾಗ ಇಲ್ಲ ಎನ್ನಲು ಸಾಧ್ಯವುಂಟೆ!? ಆ ಎಂಟು ಅಂಶಗಳನ್ನು ಒಪ್ಪಿಕೊಂಡಿದ್ದರ ಪರಿಣಾಮ ಹೆಚ್ಚು ಕಡಿಮೆ ತನ್ನ ಜುಟ್ಟನೆಲ್ಲ ಆಸ್ಟ್ರಿಯಾ-ಹಂಗೇರಿಯ ಕೈಗೆ ಕೊಟ್ಟಂತೆಯೇ ಇದ್ದಿತು. ಆದರೆ ಯುದ್ದಮಾಡಲೇ ಕಾಲುಕೆರೆದುಕೊಂಡು ಕೂತಂತಿದ್ದ ಆಸ್ಟ್ರಿಯಾ-ಹಂಗೇರಿ ಸಾಮ್ರಾಜ್ಯ ಮಾತ್ರ ಆ ಎರಡು ಬೇಡಿಕೆಗಳ ನಕಾರಣೆಗೋಸ್ಕರ ಕೂಡಲೇ ಸೆರ್ಬಿಯಾದ ವಿರುದ್ಧ ಯುದ್ಧ ಸಾರಿತು! ಅಲ್ಲಿಗೆ ಆಗಿನ ಕಾಲಕ್ಕೆ ದಿ ಗ್ರೇಟ್ ವಾರ್ ಎಂದು ಕರೆಸಿಕೊಂಡ ಯುದ್ಧವೊಂದು ಅಧಿಕೃತವಾಗಿ ಘೋಷಣೆಯಾಯಿತು. ಸುಖಾಸುಮ್ಮನೆ ರಷ್ಯಾ, ಜರ್ಮನಿ, ಫ್ರಾನ್ಸ್ ಹಾಗು ಬ್ರಿಟನ್ ದೇಶಗಳನ್ನು ಯುದ್ಧಕ್ಕೆ ಎಳೆತರಲಾಯಿತು.

ಜೂನ್ 18, 1914. ಆಸ್ಟ್ರಿಯಾ-ಹಂಗೇರಿಯ ಉತ್ತರಾಧಿಕಾರಿ ಆರ್ಚ್ ಡ್ಯೂಕ್ ಆತನ ಪತ್ನಿ ಸಮೇತವಾಗಿ ಸೇನಾವೀಕ್ಷಣೆಗೆಂದು ದೇಶದ ಸರಾಜೇವೊ ನಗರಕ್ಕೆ ಪ್ರವಾಸವನ್ನು ಕೈಗೊಳ್ಳುತ್ತಾನೆ. ಅದು ಮಳೆಗಾಲದ ಹಣಬೆಗಳಂತೆ ದೇಶಗಳು ಉಗಮಗೊಳ್ಳುತ್ತಿದ್ದ ಪರ್ವಕಾಲ. ಧರ್ಮ, ರೀತಿ, ಆಚರಣೆಯ ಮೇರೆಗೆ ಪ್ರತಿಯೊಂದು ಗುಂಪುಗಳೂ ತನಗೊಂದಿರಲಿ ಎಂದು ದೇಶಗಳನ್ನು ಕಟ್ಟಲು ಹೊರಟ್ಟಿದ್ದ ಸಮಯ. ಸಣ್ಣಪುಟ್ಟ ದೇಶಗಳಾದರೆ ಒಡೆದಾಡಿ ಬಡಿದಾಡಿ ತಮಗೆ ಬೇಕಾದ ನೆಲವನ್ನು ತಮ್ಮದಾಗಿಸಿಕೊಳ್ಳಬಹುದಾಗಿತ್ತು ಆದರೆ ಅದೇ ಬೇಡಿಕೆ ಘಟಾನುಘಟಿ ಸಾಮ್ರಾಜ್ಯಗಳೊಟ್ಟಿಗಾದರೆ ದಶಕಗಳ ಕಾಲ ಸೇಡಿನ ಕಿಡಿಯನ್ನು ಬಚ್ಚಿಟ್ಟುಕೊಂಡೇ ಬದುಕಬೇಕಿದ್ದಿತ್ತು. ಅದೇ ಬಗೆಯ ಸೇಡಿನ, ರೋಷದ ಕಿಡಿಯೊಂದು ಅಂದು ಸ್ಲಾವಿಕ್ ಜನಗಳೆಂದು ಕರೆಯಲ್ಪಡುತ್ತಿದ್ದ ಆಸ್ಟ್ರಿಯಾ-ಹಂಗೇರಿ ಸಾಮ್ರಾಜ್ಯದ ಗುಂಪೊಂದರಲ್ಲಿ ಅಡಗಿತ್ತು. ಆ ಗುಂಪು ತಮಗೊಂದು ತುಂಡು ಜಾಗವನ್ನು ಬಿಟ್ಟುಕೊಟ್ಟರೆ ತಾವೊ ಒಂದು ದೇಶವನ್ನು ಕಟ್ಟಿ ಮೆರೆಯಬಹುದೆಂಬ ಕನಸ್ಸನ್ನು ಕಟ್ಟಿತ್ತು. ಆದರೆ ಸ್ಲಾವಿಕ್ ಜನರ ಈ ಬೇಡಿಕೆಗಳಿಗೆ ಕ್ಯಾರೇ ಎನ್ನದ ಆಸ್ಟ್ರಿಯಾ-ಹಂಗೇರಿ ಸಾಮ್ರಾಜ್ಯ ಅವರನ್ನು ಆಟಕುಂಟು ಲೆಕ್ಕಕ್ಕಿಲ್ಲದವರಂತೆ ಮಾಡಿಬಿಟ್ಟಿತ್ತು. ಅಲ್ಲದೆ ನೆರೆಯ ಸೆರ್ಬಿಯ ದೇಶವೇ ಇವರಿಗೆಲ್ಲ ಕುಮಕ್ಕು ನೀಡಿ ಕುಣಿಸುತ್ತಿದೆ ಎಂಬುದೂ ತಿಳಿದಿದ್ದಿತು. ಆದ ಕಾರಣ ಸ್ಲಾವಿಕ್ ಜನರ ಗುಂಪಿಗೆ ಅಲ್ಲಿನ ರಾಜಮನೆತನದ ಕುಟುಂಬಗಳ ಮೇಲೆ ಹದ್ದಿನ ಕಣ್ಣೊಂದು ಮೊದಲಿನಿಂದಲೇ ಇದ್ದಿತು. ಅಂದು ಆರ್ಚ್ ಡ್ಯೂಕ್ ಹಾಗು ಆತನ ಪತ್ನಿ ಪ್ರವಾಸವನ್ನು ಕೈಗೊಂಡಾಗ ಆತನ ಗುಪ್ತಚರ ಇಲಾಖೆ ಅಲ್ಲಿ ಅವರಿಗೆ ಬಂದೆರಗುವ ಅಪಾಯದ ಬಗ್ಗೆ ಸುಳಿವನ್ನು ನೀಡಿತ್ತಾದರೂ ಆತ ಅಷ್ಟೇನೂ ತಲೆಕೆಡಿಸಿಕೊಳ್ಳದೆ ಗ್ರಾಫ್ಟ್ & ಸ್ಟಿಫ್ ಕಂಪನಿಯ ತನ್ನ ಐಷಾರಾಮಿ ಕಾರನ್ನು ಏರುತ್ತಾನೆ. ಶಾಂತ ಸಂಡೇಯ ಹಗಲನ್ನು ಸವಿಯುತ್ತಾ ಸರಾಜೇವೊ ನಗರದ ಗಡಿಯನ್ನು ಪ್ರವೇಶಿಸುತ್ತಾನೆ. ಅಂದೇನಾದರೂ ರಾಜಕುಮಾರ ತನ್ನ ಗುಪ್ತಚರ ಇಲಾಖೆಯ ಮಾತನ್ನು ನಂಬಿದ್ದರೆ, ಸರಜೇವೊ ನಗರದ ಪ್ರವಾಸವನ್ನೇದರೂ ಮೊಟಕುಗೊಳಿಸಿದ್ದರೆ ಇಂದು ವಿಶ್ವದ ಪ್ರಸ್ತುತ ಚಿತ್ರಣವೇ ಬದಲಾಗಿರುತ್ತಿತ್ತೇನೋ ಎಂದರೆ ನಾವು ನಂಬಲೇಬೇಕು!!!

ಸರಾಜೇವೊ ನಗರಕ್ಕೆ ರಾಜಕುಮಾರ ಬರುತ್ತಾನೆಂದು ತಿಳಿದಿದ್ದ ಹತ್ಯೆಗಾರರ ಗುಂಪು ಕಳೆದ ಕೆಲದಿನಗಳಿಂದಲೇ ಅಲ್ಲಿ ಭಾರಿ ತಯಾರಿಯನ್ನು ಮಾಡಿರುತ್ತಾರೆ. ಮೇಲಾಗಿ ಈ ಹತ್ಯೆಯ ಮಾಸ್ಟರ್ ಮೈಂಡ್ ಗಳು ಸೆರ್ಬಿಯ ದೇಶದ ಸೈನ್ಯಾಧಿಕಾರಿಗಳೇ ಆಗಿದ್ದರಿಂದ ರಾಜನನ್ನು ಮುಗಿಸಲು ಬೇಕಾಗಿದ್ದ ಬಾಂಬು ಗನ್ನುಗಳ ಕೊರತೆ ಅವುಗಳಿಗೆ ಕಾಣುವುದಿಲ್ಲ. ಬರೋಬ್ಬರಿ ಆರು ಜನರ ಗುಂಪೊಂದನ್ನು ಕಟ್ಟಿ, ಅವಸರವಸರವಾಗಿ ತರಬೇತಿಯನ್ನು ನೀಡಿ, ರಾಜಕುಮಾರ ಆರ್ಚ್ ಡ್ಯೂಕ್ನ ಕಾರು ಅಂದು ಸಾಗುವ ಹಾದಿಯಲ್ಲಿ ದಾರಿಗೊಬೊಬ್ಬರಂತೆ ನಿಲ್ಲಿಸಲಾಯಿತು. ಸಮಯ ಬೆಳಗಿನ ಹತ್ತು ಘಂಟೆ. ಸರಾಜೇವೊ ನಗರದ ರಸ್ತೆಯನ್ನು ಪ್ರವೇಶಿಸಿದ ಕಾರು ಮೊದಲನೇ ಶೂಟರ್ ನನ್ನು ಕೂದಲೆಳೆಯಲ್ಲಿ ಹಾದುಹೋಗುತ್ತದೆ. ಮತ್ತೊಂದು ಗಲ್ಲಿಯಲ್ಲಿದ್ದ ಎರಡನೇ ಶೂಟರ್ ಸಹ ತನ್ನ ಸಣ್ಣಪುಟ್ಟ ಎಡವಟ್ಟುಗಳಿಂದ ಗನ್ನಿನಿಂದ ಗುಂಡನ್ನಾಗಲಿ ಅಥವಾ ಜೇಬಿನಲ್ಲಿದ್ದ ಬಾಂಬನ್ನಗಲಿ ಎಸೆಯಲಾಗಲಿಲ್ಲ. ಆದರೆ ನಗರದ ಮತ್ತೊಂದು ಮೂಲೆಯಲ್ಲಿದ್ದ ಮೂರನೇ ಶೂಟರ್ ಮಾತ್ರ ಸಿಕ್ಕ ಅವಕಾಶವನ್ನು ಕಳೆದುಕೊಳ್ಳಲಿಲ್ಲ. ರಾಜದಂಪತಿಗಳ ಮೇಲೆ ಗುಂಡಿನ ಸುರಿಮಳೆಗೈಯ್ಯದ್ದಿದ್ದರೂ ಕೈಯಲ್ಲಿದ್ದ ಬಾಂಬನ್ನು ಗುರಿಯಿಟ್ಟು ಅವರು ಚಲಿಸುತ್ತಿದ್ದ ಕಾರಿನ ಮೇಲೆ ಎಸೆದ. ಆದರೆ ವಿಧಿಯಾಟ ಬೇರೆಯೇ ಇದ್ದಿತು ನೋಡಿ. ಗಾಳಿಯಲ್ಲಿ ತೇಲಿಬಂದ ಬಾಂಬು ಕಾರಿನ ಹಿಂಬದಿಗೆ ತಗುಲಿ ರಸ್ತೆಯ ಮೇಲೆ ಬಿದ್ದಿತು. ಪರಿಣಾಮ ರಾಜದಂಪತಿಗಳನ್ನು ಹಿಂಬಾಲಿಸುತ್ತಿದ್ದ ಮತ್ತೊಂದು ಕಾರಿನಡಿ ಅದು ಸಿಡಿದು ಹಲವರನ್ನು ಗಾಯಗೊಳಿಸಿತು. ಎಲ್ಲೆಡೆಯೂ ಕೂಗು ಚೀತ್ಕಾರದ ಅಲ್ಲೊಲ್ಲ ಕಲ್ಲೊಲ್ಲವುಂಟಾಯಿತು. ಕೂಡಲೇ ರಾಜನ ಅಂಗರಕ್ಷಕರು ಆತನನ್ನು ಸುತ್ತುವರೆದು ಕಾರನ್ನು ಸುರಕ್ಷಿತವಾಗಿ ಅಲ್ಲಿಂದ ಮುನ್ನೆಡೆಸುತ್ತಾರೆ. ಇತ್ತ ಕಡೆ ತನ್ನ ವ್ಯರ್ಥ ಪ್ರಯತ್ನದಿಂದ ಕಕ್ಕಾಬಿಕ್ಕಿಯಾದ ಶೂಟರ್ ಸಿಟಿಯ ಜನತೆ ತನ್ನನ್ನು ಮುಗಿಸುವ ಮೊದಲೇ ಸೈನೇಡ್ ನ ಗುಳಿಗೆಯೊಂದನ್ನು ನುಂಗಿ ಪಕ್ಕದಲ್ಲಿದ್ದ ನದಿಗೆ ಹಾರುತ್ತಾನೆ. 'ಅಯ್ಯೋ ವಿಧಿಯೇ...!’ ಎಂಬಂತೆ ಪುಣ್ಯಾತ್ಮ ನುಂಗಿದ ವಿಷಗುಳಿಗೆಯೂ ತನ್ನ ಕೆಲಸವನ್ನು ಸರಿಯಾಗಿ ಮಾಡಲಿಲ್ಲ. ಅಲ್ಲದೆ ನದಿಯೂ ಸಹ ಬೇಸಿಗೆಯ ಒಣಬಿಸಿಲಿಗೆ ಮೊಣಕಾಲುದ್ದ ನೀರನ್ನೂ ಉಳಿಸಿಕೊಂಡಿರಲಿಲ್ಲ. ಸುತ್ತಲೂ ರಾಜನನ್ನು ಪ್ರೀತಿಸುವ ಜನರ ಉಗ್ರರೂಪ. ಪಿತೂರಿ ನೆಡೆಸಿದವನಿಗೇ ಪಿತೂರಿ ನೆಡೆಸಿದವೇನೋ ಎಂಬಂತಿದ್ದ ಸೈನೇಡ್ ಹಾಗು ಮೊಣಕಾಲುದ್ದ ನದಿಯ ಹಣೆಬರಹ. ಬೇಕಾದಾಗ ಸಾವು ಕೂಡ ಸಮುದ್ರದ ಮುತ್ತಿನಂತಾಗುವುದು ಎನ್ನುವುದು ಇದಕ್ಕಾಗಿಯೇ.

ಅಲ್ಲಿಂದ ಮುನ್ನೆಡೆದ ರಾಜಕುಮಾರ ಹಾಗು ಆತನ ಪತ್ನಿ ನೇರವಾಗಿ ಸಿಟಿಯ ಟೌನ್ ಹಾಲಿಗೆ ನೆಡೆಯುತ್ತಾರೆ. ಪೂರ್ವಸಿದ್ದತೆಯಂತೆ ಅಲ್ಲಿನ ಅಧಿಕಾರಿಗಳೆಲ್ಲ ರಾಜನ ಆಗಮನದ ನಂತರ ಕಾರ್ಯಕ್ರಮವನ್ನು ಉದ್ಘಾಟಿಸಿದರೂ ದಾರಿಯಲ್ಲಿ ಅವರ ಮೇಲೆ ನೆಡೆದ ಆತ್ಮಹತ್ಯಾ ಧಾಳಿಯ ನಂತರ ಏನುಮಾಡಬೇಕೆಂದು ತಿಳಿಯದೆ ಹೆದರುತ್ತಲೇ ಕಾರ್ಯಕ್ರಮವನ್ನು ನೆಡೆಸುತ್ತಾರೆ. ಆದರೆ ಬಾಂಬಿನ ಸಿಡಿತದಿಂದ ಗಾಯಗೊಂಡ ಜನರ ಆರ್ತನಾದವೇ ರಾಜನನ್ನು ಕಾಡುತ್ತಿದ್ದರಿಂದ ಆತ ಕೂಡಲೇ ಅವರನ್ನು ಸೇರಿಸಿದ ಆಸ್ಪತ್ರೆಗೆ ಹೋಗಲು ಬಯಸುತ್ತಾನೆ. ಕೆಲಸಮಯದ ಮುಂಚಷ್ಟೇ ತಮ್ಮ ಮೇಲೆ ಆತ್ಮಹತ್ಯಾ ಸಂಚು ನೆಡೆದಿದ್ದೂ ಕೂಡಲೇ ಹೊರಬರುವುದು ಸುರಕ್ಷಿತವಲ್ಲ ಎಂದರೂ ಕೇಳದೆ ಪತ್ನಿಸಮೇತವಾಗಿ ಆತ ಕಾರಿನಲ್ಲಿ ಕುಳಿತು ಆಸ್ಪತ್ರೆಯ ಹಾದಿಯನ್ನು ಹಿಡಿಯುತ್ತಾನೆ. ಬಹುಶ ಅದು ತನ್ನ ಅತಿಕೊನೆಯ ಅತಿದೊಡ್ಡ ತಪ್ಪೆಂದು ಆತನಿಗೆ ತಿಳಿಯುವುದಿಲ್ಲ.

ರಾಜಕುಮಾರನನ್ನು ಮುಗಿಸುವ ವ್ಯರ್ಥ ಪ್ರಯತ್ನದಿಂದ ಕಂಗೆಟ್ಟುಹೋಗಿದ್ದ ನಾಲ್ಕನೆಯ ಶೂಟರ್ ಅದೇನೇ ಆಗಲಿ ಈ ಬಾರಿ ಶತಾಯ-ಗತಾಯ ರಾಜಕುಮಾರರನ್ನು ಮುಗಿಸಲೇಬೇಕೆಂಬ ಹೊಂಚುಹಾಕಿರುತ್ತಾನೆ. ಹೆಸರು ಗ್ಯಾವ್ರಿಲೋ ಪ್ರಿನ್ಸಿಪ್. ವಯಸ್ಸು ಕೇವಲ ಹತ್ತೊಂಬತ್ತು ವರ್ಷ. ಕಾರ್ಯಕ್ರಮಗಳೆಲ್ಲ ಮುಗಿದು ರಾಜಕುಮಾರ ವಾಪಸ್ಸು ಹೊರಡುವ ದಿನ ಹಾದಿಯಲ್ಲಿ ಆತನನ್ನು ಮುಗಿಸಬೇಕೆಂಬ ಸಂಚನ್ನು ರೂಪಿಸಿದ್ದ ಗ್ಯಾವ್ರಿಲೋ ಅಚಾನಕ್ಕಾಗಿ ರಾಜಕುಮಾರ ಆತನ ಪತ್ನಿ ಸಮೇತವಾಗಿ ಆಸ್ಪತ್ರೆಯ ಹಾದಿಯಲ್ಲಿ ಎದುರಾದಾಗ ಕೊಂಚ ದಿಗ್ಬ್ರಮೆಯಾಗುತ್ತಾನೆ. ಸಿಕ್ಕ ಸುವರ್ಣಾವಕಾಶ ಕೈತಪ್ಪುವ ಮೊದಲೇ ಆತ ತನ್ನ ಜೇಬಿನಲ್ಲಿದ್ದ ಪಿಸ್ತೂಲನ್ನು ಹೊರಗೆಳೆದು ರಾಜಕುಮಾರ ಹಾಗು ಆತನ ಪತ್ನಿಯ ಮೇಲೆ ಗುಂಡಿನ ಸುರಿಮಳೆಗೈಯುತ್ತಾನೆ. FN ಮಾಡೆಲ್ ೧೯೧೦ ಪಿಸ್ತೂಲಿನಿಂದ ಹೊರಟ ಗುಂಡೊಂದು ರಾಜನ ಕತ್ತನ್ನು ಸೀಳಿ ಹೊರಹಾರಿತು! ಗಾಯಗೊಂಡ ಪ್ರಜೆಗಳ ಯುಗಕ್ಷೇಮವನ್ನು ವಿಚಾರಿಸಲು ಹೊರಟಿದ್ದ ಜೋಡಿ ಮತ್ತೆಂದೂ ಹಿಂಬರದಿರುವ ಲೋಕಕ್ಕೆ ಪ್ರಯಾಣಿಸುತ್ತಾರೆ. ವಿಪರ್ಯಾಸವೆಂಬಂತೆ ಅಂದು ಅವರ ವಿವಾಹ ವಾರ್ಷಿಕೋತ್ಸವವೂ ಆಗಿದ್ದಿತು! ಸರೆಜಾವೋ ಅಧಿಕಾರಿಗಳಿಗೆ ಜೀವಂತವಾಗಿ ಸೆರೆಸಿಕ್ಕ ಇವನಿಂದ ನಂತರದ ಕೆಲವೇ ದಿನಗಳಲ್ಲಿ ಸೆರ್ಬಿಯ ದೇಶದ ಅಧಿಕಾರಿಗಳ ಕೈವಾಡವಿರುವ ಗುಟ್ಟು ಹೊರಹಾಕಲ್ಪಡುತ್ತದೆ. ಆದರೆ ಸೆರ್ಬಿಯ ಸರ್ಕಾರ ಈ ಸಾವಿಗೂ, ತನಗೂ ಹಾಗು ಅಧಿಕಾರಿಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಕೈತೊಳೆದುಕೊಳ್ಳುವ ಹಾದಿಯನ್ನು ಹಿಡಿದರೂ ತನ್ನ ರಾಜಕುಮಾರನನ್ನು ಕಳೆದುಕೊಂಡು ಬೆಂಕಿಯ ಚಂಡಾಗಿದ್ದ ಆಸ್ಟ್ರಿಯಾ-ಹಂಗೇರಿ ಸಾಮ್ರಾಜ್ಯ ಸೆರ್ಬಿಯ ದೇಶಕೊಂದು ಕೊನೆಯನ್ನು ಕಾಣಿಸಬೇಕೆಂದೇ ನಿಶ್ಚಯಿಸಿತು.

ಇದು ಅಂದಿಗೆ ದಿ ಗ್ರೇಟ್ ವಾರ್ ಅಥವ ಇಂದಿಗೆ ಮೊದಲ ವಿಶ್ವಯುದ್ಧವೆಂದು ಕರೆಸಿಕೊಂಡ ಪ್ರಪಂಚದ ಭೀಕರ ರಕ್ತಸಿಕ್ತ ಅಧ್ಯಾಯ ಒಂದಕ್ಕೆ ಮುನ್ನುಡಿಯಾದ ಘಟನಾವಳಿಗಳು.ಒಂದು ಪಕ್ಷ ಅಂದು ಸೆರ್ಬಿಯ ದೇಶ ಆಸ್ಟ್ರಿಯಾ-ಹಂಗೇರಿಯ ಅಷ್ಟೂ ಬೇಡಿಕೆಗಳಿಗೆ ಅಸ್ತು ಎಂದಿದ್ದರೆ ಅಥವಾ ರಾಜಕುಮಾರನೊಬ್ಬ ಗುಪ್ತಚರ ಸಿಬ್ಬಂದಿಯ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದರೆ ಅಥವಾ ಟೌನ್ ಹಾಲಿನಿಂದ ಕೂಡಲೇ ವಾಪಸ್ಸು ಬರುವ ಮನಸ್ಸನ್ನು ಮಾಡದಿದ್ದರೆ ಬಹುಷಃ ಇಂದು ನಮ್ಮೆಲ್ಲರ ಸುತ್ತ ಬೇರೆಯೇ ದಿನಗಳು ಇರುತ್ತಿದ್ದವೇನೋ? ದೇಶಗಳೆರಡರ ಕಚ್ಚಾಟ ಅಂದು ಮಹಾಯುದ್ದವಾಗಿ ಪರಿಣಮಿಸಿದ್ದೂ ಸಹ ಕಾಕತಾಳೀಯಎನ್ನಬಹುದು. ಎಂದು ಆಸ್ಟ್ರಿಯಾ-ಹಂಗೇರಿ ಸಾಮ್ರಾಜ್ಯ ಸೆರ್ಬಿಯ ದ ಮೇಲೆ ಯುದ್ಧವನ್ನು ಕಾರಿದ ಸುದ್ದಿ ರಷ್ಯಾದೇಶದ ಕಿವಿಗೆ ಬಿದ್ದಿತೋ ಅಂದೇ ಅದು ಸೆರ್ಬಿಯಾದ ಸಹಾಯಕ್ಕಾಗಿ ಸೇನೆಯನ್ನು ಕಳಿಸಲು ತೀರ್ಮಾನಿಸಿತು. ಆದರೆ ಸೆರ್ಬಿಯ ದೇಶವನ್ನು ದ್ವೇಷಿಸುತ್ತಿದ ಹಾಗು ತನ್ನ ಮಿತ್ರ ರಾಷ್ಟ್ರ ಆಸ್ಟ್ರಿಯಾ-ಹಂಗೇರಿಯ ಪರವಾಗಿ ಜರ್ಮನಿ, ರಷ್ಯಾ ದೇಶದ ಈ ನಡೆಯನ್ನು ವಿರೋಧಿಸಿ ಅದರ ವಿರುದ್ಧ ಯುದ್ಧ ಕಾರಿತು. ಅಲ್ಲದೆ ಸೆರ್ಬಿಯ ದೇಶಕ್ಕೆ ಯಾವುದೇ ಬಗೆಯ ಸಹಾಯವನ್ನು ಮಾಡಬಾರದೆಂದು ಫ್ರಾನ್ಸ್ ದೇಶಕ್ಕೆ ಖಡಕ್ ಸಂದೇಶವನ್ನು ರವಾನಿಸಿತು. ಹೀಗೆ ತಣ್ಣಗಿದ್ದ ಫ್ರಾನ್ಸ್ ದೇಶವನ್ನೂ ಒಂದಿಲ್ಲೊಂದು ಬಗೆಯಲ್ಲಿ ಯುದ್ಧಕ್ಕೆ ಎಳೆತಂದಿತು. ಫ್ರಾನ್ಸ್ ನ ಮೇಲೆ ಜರ್ಮನಿಯ ದಾಳಿಗೆ ಬ್ರಿಟನ್ ಮುನಿಸಿಕೊಂಡು ಅದೂ ಕೂಡ ಜರ್ಮನಿಯ ವಿರುದ್ಧ ಯುದ್ಧ ಸಾರಿತು. ಮತ್ತೊಂದೆಡೆ ಇದೆ ಬಗೆಯ ತನ್ನ ಹುಚ್ಚಾಟಗಳಿದ ಬೆಲ್ಜಿಯಂ ಹಾಗು ದೂರದ ಅಮೆರಿಕ ದೇಶಗಳನ್ನೂಯುದ್ಧಕ್ಕೆ ಎಳೆತಂದು ಅವುಗಳ ವಿರುದ್ಧ ಸೆಣೆಸಾಡ ತೊಡಗಿತು. ಒಟ್ಟಿನಲ್ಲಿ ಹನುಮನ ಬಾಲಕ್ಕೆ ಬೆಂಕಿಯನ್ನು ಕೊಟ್ಟಂತೆ ಅಂದಿನ ಜರ್ಮನಿ ಎಂಬ ಅರೆಹುಚ್ಚು ದೇಶಕ್ಕೆ ಯುದ್ಧವನ್ನು ಎಲ್ಲೆಡೆ ಪಸರಿಸಲು ಸೆರ್ಬಿಯ ಹಾಗು ಆಸ್ಟ್ರಿಯಾ-ಹಂಗೇರಿಯ ಜಗಳವೊಂದು ಸಾಕಾಗಿದ್ದಿತು. ಅಂದು ಇದೇ ಯುದ್ಧ ನಂತರ ಹಲವು ವರ್ಷಗಳ ನಂತರ ಮರುಕಳಿಸಿದ ಎರಡನೇ ವಿಶ್ವಯುದ್ದಕೂ ನಾಂಧಿಯಾಯಿತು.


ಸೆಪ್ಟೆಂಬರ್ 28, 1918. ನಾಲ್ಕು ವರ್ಷಗಳ ಯುದ್ಧದಲ್ಲಿ ಜರ್ಜರಿತವಾದ ಜರ್ಮನಿ ಇನ್ನೇನು ರಣರಂಗದಿಂದ ಹಿಂದೆ ಸರಿಯಬೇಕು. ಅಷ್ಟರಲ್ಲಾಗಲೇ ಬ್ರಿಟನ್ ದೇಶದ ಸೇನಾ ತುಕಡಿಗಳು ಯುದ್ಧದಲ್ಲಿ ಸೇರ್ಪಡೆಗೊಂಡು ಜರ್ಮನಿ ಹಾಗು ಅದರ ಮಿತ್ರಪಡೆಗಳ ಸೈನಿಕರ ರುಂಡವನ್ನು ಚೆಂಡಾಡತೊಡಗಿದ್ದವು. ಯುದ್ಧರಂಗದಿಂದ ಕಾಲು ಕೀಳುತಿದ್ದ ಗಾಯಗೊಂಡ ಜರ್ಮನಿಯ ಸೈನಿಕನೊಬ್ಬ ಬ್ರಿಟನ್ ದೇಶದ ಸೈನಿಕನ ಎದುರಿಗೆ ಸಿಕ್ಕಿಬೀಳುತ್ತಾನೆ. ನಿಲ್ಲಲೂ ತ್ರಾಣವಲ್ಲದ ಆತನನ್ನು ಕಂಡು ಮರುಗಿದ ಬ್ರಿಟನ್ ಸೈನಿಕ ಕೆಲಕಾಲ ಆತನನ್ನೇ ನೋಡಿ ಆತನಿಗೆ ಏನನ್ನೂ ಮಾಡದೇ ಅಲ್ಲಿಂದ ಮುನ್ನಡೆಯುತ್ತಾನೆ. ಜೀವಭಿಕ್ಷೆಯನ್ನು ಪಡೆದ ಜರ್ಮನ್ ಸೈನಿಕ ಅಲ್ಲಿನ ಕಾಲುಕೀಳುತ್ತಾನೆ. ಈ ಘಟನೆ ಜರುಗಿದ ಹಲವು ದಶಕಗಳ ಕಾಲ ಬ್ರಿಟನ್ನಿನ ಸೈನಿಕ ತನ್ನನು ತಾನೇ ಶಪಿಸಿಕೊಳ್ಳುತ್ತಿರುತ್ತಾನೆ. ಆತನ ಆ ಒಂದು ಗುಂಡೇಟಿನಿಂದ ಜಗತ್ತಿನ ಕೋಟಿ ಕೋಟಿ ಜನರ ಜೀವವನ್ನು ತಾನು ರಕ್ಷಿಸಬಹುದಾಗಿತ್ತಲ್ಲ ಎಂದು ದುಃಖಿಸುತ್ತಾನೆ! ಏಕೆಂದರೆ ಅಂದು ಆತ ಜೀವಭಿಕ್ಷೆಯನ್ನು ನೀಡಿದ್ದು ಜಗತ್ತಿನ ಇತಿಹಾಸದಲ್ಲೇ ನರರಾಕ್ಷಸನೆಂದೇ ಬಿಂಬಿತವಾಗಿ ಕೋಟಿ ಕೋಟಿ ಜನರ ಮಾರಣಹೋಮಕ್ಕೆ ನೇರವಾಗಿ ಕಾರಣನಾದ ಕುಖ್ಯಾತ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್!!

ಮೊದಲನೇ ಮಹಾಯುದ್ಧ ಕೊನೆಗಂಡು ಇಂದು ಬರೋಬ್ಬರಿ ನೂರು ವರ್ಷಗಳು ಸಂದಿವೆ. ತೀವ್ರಗಾಮಿಯ ಪಿಸ್ತೂಲಿನಿಂದ 'ಸಿಡಿದ ಗುಂಡೊಂದು' ಮೊದಲನೇ ಮಹಾಯುದ್ಧವನ್ನು ಹುಟ್ಟುಹಾಕಿದರೆ, ಸೈನಿಕನ ಪಿಸ್ತೂಲಿನಿಂದ 'ಸಿಡಿಯದ ಗುಂಡೊಂದು' ಎರಡನೇ ಮಹಾಯುದ್ದವನು ಹುಟ್ಟುಹಾಕಿತು.



Friday, April 20, 2018

ದೇಶಾಭಿಮಾನದ ಮುಂದೆ ದೇಹಾಭಿಮಾನವನ್ನು ಮರೆಯಾಗಿಸಿದ ನಾಯಕ...

ಗುಡಾಣ ದೇಹದ ಮೇಲಿನ ಕರಿ ಕೋಟು, ತಲೆಯ ಮೇಲೊಂದು ಹಾಂಬರ್ಗ್ ಹ್ಯಾಟು, ಹುಟ್ಟುವಾಗಲೇ ಅಂಟಿಕೊಂಡು ಬಂದಿತ್ತೇನೋ ಎಂಬಂತೆ ಬಾಯನ್ನು ಬಿಟ್ಟಿರದ ಹೊಗೆಯಾರದ ಸಿಗಾರಿನೊಂದು ತುಂಡು, ಕೈಯಲ್ಲೊಂದು ಭಯ ಹುಟ್ಟಿಸುವ ವಾಕಿಂಗ್ ಸ್ಟಿಕ್ಕು. ಇವಿಷ್ಟೇ ಸಾಕು ಇಪ್ಪತ್ತನೇ ಶತಮಾನದ ಕಾಂಟ್ರವೇರ್ಷಿಯಲ್ ವ್ಯಕ್ತಿತ್ವವೊಂದನ್ನು ಬಣ್ಣಿಸಲು. ಭಾರತೀಯರ ಮಟ್ಟಿಗೆ ಗಾಂಧಿಯನ್ನು ಜರಿಯುತ್ತಿದ್ದ, ಭಾರತವನ್ನು ನಿಂತ ನೆರಳಿಗೆ ಆಗದ ಅಲ್ಲದೆ ನಲ್ವತ್ತು ಲಕ್ಷ ಭಾರತೀಯರ ಮರಣ ಮೃದಂಗಕ್ಕೆ ಪ್ರತ್ಯಕ್ಷವಲ್ಲವಾದರೂ ಪರೋಕ್ಷವಾಗಿ ಕಾರಣನಾದ ಈತ ದೇಶಪ್ರೇಮಿಗಳಿಗೆ ಅಕ್ಷರ ಸಹ ವಿಲನ್ನಂತಾದರೂ ಬ್ರಿಟನ್ನಿಗರ ಪಾಲಿಗೆ ಮಾತ್ರ ಸಾಕ್ಷಾತ್ ದೇವಧೂತ! ಪ್ರಪಂಚವನ್ನೇ ನುಂಗಿ ನೀರು ಕುಡಿಯುವಂತೆ ಧಾವಿಸುತಿದ್ದ ಹಿಟ್ಲರ್ ಎಂಬ ರಾಕ್ಷಸನಿಂದ ಬ್ರಿಟನ್ನನ್ನು ರಕ್ಷಿಸಿದನಲ್ಲದೆ ಎರಡನೇ ಮಹಾಯುದ್ದಕ್ಕೂ ಅಂತ್ಯವನ್ನು ಹಾಡಿಸಿದವನೀತ. ಎರಡು ಬಾರಿ ಬ್ರಿಟನಿನ್ನ ಪ್ರಧಾನಿಯಾಗಿ ದೇಶವನ್ನು ಮುನ್ನೆಡೆಸಿದ ಈತ ಒಬ್ಬ ಬರಹಗಾರ, ಅಧಿಕೃತ ಪತ್ರಕರ್ತ, ಸೇನಾನಾಯಕ ಹಾಗು ಒಬ್ಬ ಖ್ಯಾತ ಚಿತ್ರಗಾರನೂ ಹೌದು. ಕೆಲವು ನೆಗೆಟಿವ್ ಅಂಶಗಳನ್ನು ಬದಿಗಿರಿಸಿ ಈತನನ್ನು ನೋಡಬಯಸಿದವರಿಗೆ ವಿಶ್ವವನ್ನೇ ಆಳಿದ ದೇಶವೊಂದು ಹಿಟ್ಲರ್ನ ನಾಝಿ ಜರ್ಮನಿಯ ಗುಲಾಮನಾಗಬೇಕಿದ್ದ ಸಂಧಿಘ್ನ ಘಳಿಗೆಯಲ್ಲಿಯೂ ತಲೆ ತಗ್ಗಿಸದೆ ಹೋರಾಡಿದ ಧೈರ್ಯಶಾಲಿ ನಾಯಕನೊಬ್ಬ ಅನಾವರಣಗೊಳ್ಳುತ್ತಾನೆ. ಹೆಸರು ವಿನ್ಸ್ಟನ್ ಲಿಯೊನಾರ್ಡ್ ಸ್ಪೆನ್ಸರ್ ಚರ್ಚಿಲ್.

ಇಂಗ್ಲೆಂಡಿನ ಶ್ರೀಮಂತ ಕುಟುಂಬವೊಂದರಲ್ಲಿ ಜನಿಸಿದರೂ ಯುದ್ಧ ಭೂಮಿಯ ಸದ್ದು ಗದ್ದಲಗಳ ಕತೆಯನ್ನೇ ಕೇಳುತ್ತಾ ಬೆಳೆದವನೀತ. ಮುಂದೊಂದು ದಿನ ಬಂದೆರಗುವ ಯುದ್ಧನಾಯಕನ ಸ್ಥಾನಕ್ಕೆ ಇಂದೇ ತಯಾರಿ ನೆಡೆಸುವಂತೆ! ತನ್ನ ಓದು ಮುಗಿದ ಕೂಡಲೇ ಬ್ರಿಟನ್ ಸೈನ್ಯಕ್ಕೆ ಸೇರಿ ಅದರ ನಿಮಿತ್ತ ಕ್ಯೂಬಾ, ಸೂಡಾನ್ ಅಲ್ಲದೆ ಭಾರತಕ್ಕೂ ಈತ ಬಂದು ಹೋಗಿರುವುದುಂಟು. 1895 ರಿಂದ 1899 ರ ಮಧ್ಯೆ ಸುಮಾರು ಎರಡು ವರ್ಷಗಳ ಕಾಲ ಬೆಂಗಳೂರಿನಲ್ಲಿ ಈತ ನೆಲಸಿದ್ದನೆಂದು ಇತಿಹಾಸ ತಿಳಿಸುತ್ತದೆ. ಅಂದು ಒಬ್ಬ ಪತ್ರಕರ್ತನಗಾಗಿ ದೇಶದ ಹಲವೆಡೆ ಸಂಚರಿಸಿ ಆ ಕಾಲಕ್ಕೆ ಜರುಗುತಿದ್ದ ಯುದ್ಧ ಹಾಗು ಬಂಡಾಯಗಳ ಸುದ್ದಿಯನ್ನು ಇಂಗ್ಲೆಂಡಿನ ಪತ್ರಿಕೆಗಳಿಗೆ ಬರೆದು ಕಳುಹಿಸುತ್ತಿದ್ದ. ಅದೇ ಸಮಯದಲ್ಲಿ ಯುದ್ಧ ಹಾಗು ದಂಗೆಗಳ ಕುರಿತ ಹಲವಾರು ಪುಸ್ತಕಗಳನ್ನೂ ಈತ ರಚಿಸುತ್ತಾನೆ. ಗುಣಸಹಜವಾಗಿ ಬಂದಿತ್ತೇನೋ ಎಂಬಂತಿದ್ದ ವಾಕ್ ಚಾತುರ್ಯ, ಎಂತದೇ ವಿಷಮ ಪರಿಸ್ಥಿಯಲ್ಲೂ ಕಳೆಗುಂದದ ದೃಢ ವ್ಯಕ್ತಿತ್ವವನ್ನೊಂದಿದ್ದ ಈತನಿಗೆ ಮುಂದೆ ಬ್ರಿಟನ್ನಿನ ಪಾರ್ಲಿಮೆಂಟನ್ನೇರುವುದು ತೀರಾ ಕಷ್ಟದ ಕಾಯಕವೇನಾಗಲಿಲ್ಲ.

ಪಾರ್ಲಿಮೆಂಟಿನ ವಿದೇಶಾಂಗ ಖಾತೆಯಿಂದ ಹಿಡಿದು ಸೈನ್ಯದ ಉಸ್ತುವಾರಿಯನ್ನೂ ಸಂಭಾಳಿಸುವ ಹುದ್ದೆಯನ್ನು ನಲ್ವತ್ತು ವರ್ಷದ ಚರ್ಚಿಲ್ ತನ್ನ ಹೆಗಲಮೇಲೇರಿಸಿಕೊಂಡಿರುತ್ತಾನೆ ಎಂದರೆ ಬ್ರಿಟನ್ನಿನಲ್ಲಿ ಅಂದು ಆತನ ಪ್ರಭಾವ ಎಷ್ಟಿತೆಂದು ನಾವು ಊಹಿಸಬಹುದು. ಆದರೆ ಮಾನವ ತಾನೊಂದು ಬಯಸಿದರೆ ಕಾಲ ಬೇರೊಂದು ದಿಕ್ಕಿನಲ್ಲಿ ಆತನನ್ನು ಎಳೆದೊಯ್ಯುತ್ತದೆ. ಅದು ಮೊದಲನೇ ಮಹಾಯುದ್ಧ ಶುರುವಾದ ಕಾಲ. ಪ್ರಸುತ್ತ ಇಸ್ತಾನ್ ಬುಲ್ ನನ್ನು ಆಕ್ರಮಿಸುವ ನಿರ್ಧಾರವನ್ನು ಕೈಗೊಂಡ ಚರ್ಚಿಲ್, ಹಲವರ ಅಸಮಾಧಾನದ ನಡುವೆಯೇ ರಷ್ಯಾ ಹಾಗು ಫ್ರಾನ್ಸ್ ಸೈನಿಕರ ಸಹಯೋಗದಿಂದ ಇಸ್ತಾನ್ ಬುಲ್ ನ ನಿಜಶಕ್ತಿಯನ್ನು ಅರಿಯದೆಯೇ ಅದರ ಮೇಲೆ ಮುಗಿಬೀಳುತ್ತಾನೆ. ಪರಿಣಾಮ ಕೆಲ ತಿಂಗಳ ಅಂತರದಲ್ಲಿಯೇ ಒಂದು ಲಕ್ಷಕ್ಕೂ ಹೆಚ್ಚು ಸೈನಿಕರನ್ನು ಸಾವಿನ ಕೂಪದೊಳಗೆ ತಳ್ಳಿದ ಅಪವಾದವನ್ನು ಹೊತ್ತು ಸರ್ಕಾರದಲ್ಲಿದ್ದ ತನ್ನೆಲ್ಲ ಸ್ಥಾನಗಳಿಗೆಲ್ಲ ರಾಜಿನಾಮೆಯನ್ನು ನೀಡಬೇಕಾಗುತ್ತದೆ. ಇಂದು ತುಘಲಕ್ ನನ್ನು ಹೇಗೆ ಭಾರತದ ಇತಿಹಾಸ ಪರಿಹಾಸ್ಯ ಮಾಡುತ್ತದೆಯೂ ಹಾಗೆಯೆ ಅಂದು ಹಲವರು ಚರ್ಚಿಲ್ ನನ್ನು ಉಗಿಯತೊಡಗಿದರು. ಆದರೆ ಅಪಮಾನದ ಮಾತುಗಳಿಗೆ ನೊಂದು ಮುಖ ಮುಚ್ಚಿಕೊಂಡು ಮಲಗುವ ವ್ಯಕ್ತಿತ್ವ ಚರ್ಚಿಲ್ ನದ್ದಾಗಿರಲಿಲ್ಲ. ಅಲ್ಲಿಯವರೆಗೂ ಹೇಳಿ ಮಾಡಿಸುತ್ತಿದ್ದ ಆತ ಈಗ ಮಾಡಿ ತೋರಿಸುವ ಹಾದಿಯನ್ನು ಹಿಡಿಯುತ್ತಾನೆ. ಗುನ್ನು ಬಾಂಬುಗಳೊಟ್ಟಿಗೆ ನೇರವಾಗಿ ಯುದ್ಧರಂಗವನ್ನು ಪ್ರವೇಶಿಸುತ್ತಾನೆ. ಮೊದಲ ಮಹಾಯುದ್ಧದ ತೀವ್ರತೆ ಉತ್ತುಂಗದಲ್ಲಿದ್ದ ಆ ಕಾಲದಲ್ಲಿ ಲೆಫ್ಟಿನೆಂಟ್ ಕರ್ನಲ್ ನಾಗಿ ಸೇನಾತುಕಡಿಯೊಂದನ್ನು ಮುನ್ನೆಡೆಸುತ್ತಾನೆ. ವಿಶೇಷವೆಂದರೆ ಇತ್ತಕಡೆ ಚರ್ಚಿಲ್ ಯುದ್ಧಭೂಮಿಯಲ್ಲಿ ರಣತಂತ್ರ ರಚಿಸುತ್ತಿದ್ದರೆ ಅದೇ ಸಮಯಕ್ಕೆ ಅತ್ತ ಕಡೆ ಯುವ ಹಿಟ್ಲರ್ ಜರ್ಮನಿಯ ಪರವಾಗಿ ತನ್ನ ರಕ್ತ ಬೆವರನ್ನು ಸುರಿಸಿ ಸೆಣೆಸಾಡುತಿದ್ದ. ಇಬ್ಬರು ಒಬ್ಬರನೊಬ್ಬರು ಸಂಧಿಸದಿದ್ದರೂ, ಅಂದು ಯುದ್ಧಭೂಮಿಯಲ್ಲಿ ಏಕಕಾಲಕ್ಕೆ ವೈರಿಗಳಾಗಿ ಸೆಣೆಸಿದ ಸೈನಿಕರಿಬ್ಬರು ಇನ್ನು ಕೆಲವೇ ವರ್ಷಗಳಲ್ಲಿ ಆಯಾ ದೇಶಗಳ ಉನ್ನತ ಹುದ್ದೆಯನ್ನು ಅಲಂಕರಿಸಿ ಒಬ್ಬರ ಮೇಲೊಬ್ಬರು ಮುಗಿಬೀಳುತ್ತಾರೆ ಎಂದು ಯೋಚಿಸಿರಲು ಯಾರಿಂದಲೂ ಸಾಧ್ಯವಿರಲಿಲ್ಲ. ನೆನ್ನೆ ಮೊನ್ನೆಯವರೆಗೂ ಸರ್ಕಾರವನ್ನು ನೆಡೆಸುತ್ತಿದ್ದ ಚರ್ಚಿಲ್ ಇಂದು ಯುದ್ಧರಂಗಕ್ಕೆ ಬಂದು ನಿಂತ ಆತನ ನೆಡೆ ಸೈನಿಕರ ಆತ್ಮಸ್ತಯ್ರ್ಯವನ್ನು ನೂರುಪಟ್ಟು ಹೆಚ್ಚಿಸಿದಂತೂ ಸುಳ್ಳಲ್ಲ. ಅಲ್ಲದೆ ಅತ್ತ ಕಡೆ ಚರ್ಚಿಲ್ ನನ್ನು ಮನಸ್ಸಾಇಚ್ಛೆ ಬಯ್ಯುತಿದ್ದವರಿಗೂ ಆತನ ಈ ನಡೆಯಿಂದ ಕೊಂಚ ಮುಜುಗರವಾಗತೊಡಗಿತು. ಎಷ್ಟಿದ್ದರೂ ಆತನ ನಿರ್ಧಾರ ಅಂದು ಬಿಟನ್ನಿಗರ ಒಳಿತಿಗಾಗಿಯೇ ಆಗಿದ್ದಿತು ಎಂಬೊಂದು ಅಭಿಪ್ರಾಯ ಒಬ್ಬೊಬ್ಬರಲ್ಲೇ ಮೂಡತೊಡಗಿತು. ಪರಿಣಾಮ ಪಾರ್ಲಿಮೆಂಟಿನ ಬಾಗಿಲುಗಳು ಆತನಿಗಾಗಿ ತಾನಾಗಿಯೇ ತೆರೆಯತೊಡಗಿದವು. 1917 ರಲ್ಲಿ ಯುದ್ಧಸಾಮಗ್ರಿಗಳ ಸಚಿವನಾಗಿ ಪುನಃ ಆತ ಸರ್ಕಾರದ ಕುರ್ಚಿಯನ್ನು ಅಲಂಕರಿಸುತ್ತಾನೆ.

1920 ರ ಸುಮಾರಿಗಾಗಲೇ ಚರ್ಚಿಲ್ ನ ಮಾತುಗಳೆಂದರೆ ಬೆಂಕಿಯ ಕಿಡಿಗಳಂತೆ ಬ್ರಿಟನ್ನಿನಾದ್ಯಂತ ಸದ್ದುಮಾಡುತ್ತಿದ್ದವು. ನೇರ ನುಡಿಯ ಕಟು ಪದಗಳ ಆಗರವಾಗಿದ್ದ ಆತ ಗಾಂಧಿಯನ್ನಂತೂ ಮನ ಬಂದಂತೆ ಜರಿಯುತ್ತಿದ್ದ. ಅವರ ಚಳುವಳಿಯ ತೀವ್ರತೆಗೆ ಬೇಸತ್ತು 'ಗಾಂಧಿಯನ್ನು ಕೈ ಕಾಲು ಕಟ್ಟಿ ನಮ್ಮ ವೈಸ್ ರಾಯ್ ಯೊಬ್ಬರು ಕುಳಿತಿರುವ ಆನೆಯಿಂದ ತಿವಿದು- ತಿವಿದು ಸಾಯಿಸಬೇಕು' ಎಂದಿದ್ದ. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಉಪವಾಸನಿರತರಾಗಿ ಬ್ರಿಟಿಷ್ ರಾಜ್ ನ ದಬ್ಬಾಳಿಕೆಯ ವಿರುದ್ದ ಅಹಿಂಸಾ ಅಸ್ತ್ರವನ್ನು ಪ್ರಯೋಗಿಸಿ ದಿನಗಳನ್ನು ತಳ್ಳುತ್ತಿದ್ದಾಗ 'ಗಾಂಧಿ ಇನ್ನೂ ಸಾಯಲಿಲ್ಲವೇಕೆ? ಆತ ಇದೆ ಚಳುವಳಿಯಲ್ಲಿ ಹಸಿವಿನಿಂದ ಸತ್ತರೆ ನನಗೆ ಅಭ್ಯನ್ತರವೇನೂ ಇಲ್ಲ' ಎಂದಿದ್ದ ಸಿಡುಕು ಮೋರೆಯ ಚರ್ಚಿಲ್. 1942-43 ರಲ್ಲಿ, ಪ್ರಧಾನಿಯಾಗಿ ಎರಡನೇ ವಿಶ್ವಯುದ್ಧವನ್ನು ಎದುರಿಸುತ್ತಿದ್ದಾಗ, ಒಂದೊತ್ತು ತುತ್ತಿಗೂ ಹಾಹಾಕಾರವೆದ್ದಿದ್ದ ಬೆಂಗಾಳದ ಜನರಿಗೆ ಆಹಾರ ಪೂರೈಸುವ ಬದಲು ರಾಶಿ ರಾಶಿ ಆಹಾರವನ್ನು ಬ್ರಿಟನ್ನಿನ ಹಾಗು ಇತರೆ ಯುರೋಪಿಯನ್ ರಾಷ್ಟ್ರಗಳ ಗೋದಾಮುಗಳಲ್ಲಿ ಜಮಾವಣೆಗೊಳಿಸಿದ. ಅಂದು ಹಸಿವಿನ ಬೇಗೆಯಿಂದಲೇ ಸತ್ತ ಭಾರತೀಯರ ಸಂಖ್ಯೆ ಇಪ್ಪತ್ತು ಲಕ್ಷಕ್ಕೂ ಮಿಗಿಲು!!

ಎರಡನೇ ಮಹಾಯುದ್ಧ (1939-1945)
1939 ರಷ್ಟರಲ್ಲಾಗಲೇ ವಿಶ್ವದ ಭಾಗಶಃ ರಾಷ್ಟ್ರಗಳೆಲ್ಲ ಎರಡು ಬಣಗಳಾಗಿ ವಿಂಗಡಣೆಗೊಂಡವು. ಜರ್ಮನಿ, ಜಪಾನ್ ಹಾಗು ಇಟಲಿ ಒಂದೆಡೆಯಾದರೆ ಬ್ರಿಟನ್, ಫ್ರಾನ್ಸ್, ಅಮೇರಿಕ, ರಷ್ಯಾ(ಸೋವಿಯತ್ ಯೂನಿಯನ್), ಚೀನಾ, ಆಸ್ಟ್ರೇಲಿಯಾ ಹಾಗು ಕೆನಡಾ ದೇಶಗಳು ಮುಂದೆ ಕಾಲಾನುಕ್ರಮವಾಗಿ ಒಂದುಗೊಂಡು ಮೇಲಿನ ಮೂರು ರಾಷ್ಟ್ರಗಳ ವಿರುದ್ಧ ಮುಗಿಬಿದ್ದವು. 1939 ರಲ್ಲಿ ಜರ್ಮನಿ ಪೋಲೆಂಡ್ ನನ್ನು ಆಕ್ರಮಿಸುವ ಮೂಲಕ ಶುರುವಾದ ಯುದ್ಧ 1945 ರಲ್ಲಿ ಜಪಾನ್ ಶರಣಾಗತಿಯಾಗುವ ವರೆಗೂ ಮುಂದುವರೆಯಿತು. ಪೋಲೆಂಡ್ ನ ಮೇಲಿನ ಆಕ್ರಮಣದ ರುಚಿಯನ್ನು ಕಂಡ ಹಿಟ್ಲರ್ ತನ್ನೆಲ್ಲ ಶಕ್ತಿಯನ್ನು ಮೀರಿ ಸುತ್ತಮುತ್ತಲಿನ ದೇಶಗಳನ್ನು ಬಡಿದುರುಳಿಸಲು ಹವಣಿಸತೊಡದ. ತದಾನಂತರ ನೆದರ್ಲ್ಯಾಂಡ್ಸ್ಮ್ ಬೆಲ್ಜಿಯಂ, ಲೆಕ್ಸೆಮ್ ಬರ್ಗ್, ಫ್ರಾನ್ಸ್, ಡೆನ್ಮಾರ್ಕ್, ಯುಗೋಸ್ಲೋವಿಯಾ, ಗ್ರೀಸ್, ನಾರ್ವೆ ಹೀಗೆ ಹೆಚ್ಚುಕಡಿಮೆ ಅರ್ಧಕರ್ಧ ಯೂರಪ್ ಖಂಡವನ್ನೇ ಕಬಳಿಸತೊಡಗುತ್ತಾನೆ. ಮೊದಲನೇ ವಿಶ್ವಯುದ್ಧದಲ್ಲಿ ಜರ್ಮನಿಯ ಸೋಲು ಹಾಗು ಯೂರೋಪಿನ ಇತರೆಡೆ ಜರ್ಮನಿಗರ ಮೇಲೆ ನೆಡೆಯುತ್ತಿದ್ದ ದೌರ್ಜನ್ಯಗಳನ್ನೇ ಮಿಗಿಲಾಗಿಕೊಂಡು ಜರ್ಮನಿಗರನ್ನು ಹುರಿದುಂಬಿಸಿ, ಮತಾಂಧತೆಯ ಕ್ರೌರ್ಯದಲ್ಲಿ ಯಹೂದಿಗಳನ್ನು ಪ್ರಾಣಿಗಳಂತೆ ಚಿತ್ರಹಿಂಸೆ ಕೊಟ್ಟು ಸಾಯಿಸಿ, ವಿಶ್ವವನ್ನೇ ಗೆಲ್ಲಬೇಕೆಂಬ ಹುಚ್ಚುಕುದುರೆಯ ಮೇಲೇರಿ ಹೊರಟವನಿಗೆ ಕಂಡ ನಂತರದ ಹಾಗು ಕೊನೆಯ ರಾಷ್ಟ್ರ ಬ್ರಿಟನ್. ಬ್ರಿಟನ್ನಿನ ಮೇಲಿನ ಈ ಆಕ್ರಮಣ ಬಹುಷಃ ತನ್ನ ಜೀವನದ ಕೊನೆಯ ಆಕ್ರಮಣವಾದಿತೆಂದು ಹಿಟ್ಲರ್ ಊಹಿಸಿರಲೂ ಸಾಧ್ಯವಿಲ್ಲ. ಹಿಟ್ಲರ್ ಅಂದು ತಾನು ಕಬಳಿಸಿದ ದೇಶಗಳು ಶಸ್ತಾಸ್ರ ಹಾಗು ಸೇನಾಬಲದಲ್ಲಿ ಅಸಮರ್ಥವಾಗಿದ್ದವು ಎನ್ನುವುದಕ್ಕಿಂತ ಮಿಗಿಲಾಗಿ ಅವುಗಳಿಗೆ ಕಾಡಿದ ಅತಿ ದೊಡ್ಡ ಸಮಸ್ಯೆ ಎಂದರೆ ಒಬ್ಬ ಸಮರ್ಥ ನಾಯಕನದಾಗಿದ್ದಿತು. ಆದರೆ ಇದೆ ಮಾತು ಬ್ರಿಟನ್ನಿನ ವಿಷಯದಲ್ಲಿ ಮಾತ್ರ ಸುಳ್ಳಾಯಿತು. ಏಕೆಂದರೆ ಯುದ್ಧವೆಂಬ ಸಂದಿಘ್ನ ಸ್ಥಿತಿಯಲ್ಲೂ ಹಿಟ್ಲರ್ನನೆಂಬ ನರರಾಕ್ಷಸನ ಮುಂದೆ ಎದೆಯುಬ್ಬಿಸಿ ನಿಲ್ಲುವ ಧೈರ್ಯ ತೋರಿ ಅಂದು ದೇಶದ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲು ಸಮ್ಮತಿಸಿದ ವಿನ್ಸೆಟ್ ಚರ್ಚಿಲ್ ಎಂಬ ಅಜಾತಶತ್ರು ಬ್ರಿಟನ್ನಿನ ಪ್ರಧಾನಿಯಾಗಿದ್ದರಿಂದ.

ಅಂದಿನ ಬ್ರಿಟನ್ ಪ್ರಧಾನಿ ನೆವಿಲ್ಲೆ ಚೇಂಬರ್ಲೇನ್ ಜರ್ಮನಿಯ ಮೇಲೆ ಮಾನ ಉಳಿಸಿಕೊಳ್ಳಲು ಎಂಬಂತೆ ಬಾಯಿಮಾತಿಗೆ ಯುದ್ಧ ಸಾರಿದರೂ ಹಿಟ್ಲರ್ನ ರಣಶಕ್ತಿಯ ಭಯದ ನಡುಕ ಒಳಗೊಳಗೇ ಹರಿದಾಡುತ್ತಿತ್ತು. ಅಲ್ಲದೆ ಅಂದಿನ ಸರ್ಕಾರದ ಅದೆಷ್ಟೋ ಮಂತ್ರಿಗಳಿಗೇ ಯುದ್ದದಲ್ಲಿ ಬ್ರಿಟನ್ನಿನ ಸೋಲು ಕಟ್ಟಿಟ್ಟ ಬುತ್ತಿ ಎಂಬುದು ಮನವರಿಕೆಯೂ ಆದಂತಿತ್ತು. ಆದದ್ದು ಆಗಲಿ ಹಿಟ್ಲರ್ ನೊಟ್ಟಿಗೆ ಶಾಂತಿ ಮಾತುಕತೆಯನ್ನು ಮಾಡಿ ಮುಂದೆ ಬಂದೆರಗುವ ಸಾವುನೋವುಗಳಿಗೆ ಫುಲ್ಸ್ಟಾಪ್ ಒಂದನ್ನು ಜಡಿಯೊಣ ಎಂದರೆ ಪ್ರಪಂಚವನ್ನೇ ಆಳಿದ 'ಗ್ರೇಟ್' ರಾಷ್ಟ್ರವೊಂದು ಯುದ್ಧ ಸಾರಿ, ಗುಂಡಿನ ಒಂದು ಸದ್ದನ್ನೂ ಕೇಳುವ ಮೊದಲೇ ಸೋಲನೊಪ್ಪಿಕೊಂಡಿತೆಂದರೆ ಅದರಿಂದಾಗುವ ಅವಮಾನ ಮಾತ್ರ ಮುಂದಿನ ಸಾವಿರ ವರ್ಷಗಳು ಬಂದರೂ ಅಳಿಸಿಹಾಕಲಾಗದು. ಹಾಗಾದರೆ ಗೆಲ್ಲಲು ತಾಕತ್ತಿಲ್ಲದಾದರೂ ಅಮಾಯಕ ಸೈನಿಕರ ಜೀವವನ್ನು ಬಲಿಕೊಡಬೇಕೆ? ಹಿಟ್ಲರ್ನ ಮುಂದೆ ಕೈಚಾಚಿ 'ಹೇಯ್ಲ್ ಹಿಟ್ಲರ್' ಎಂದು ನಾಝಿ ಸಲಾಂ ಒಂದನ್ನು ಹೊಡೆದರೆ ಸಬ್ ಕುಚ್ ಕತಮ್ ಆಗಿಬಿಡುವುದಿಲ್ಲವೇ? ಸೈನಿಕರ ಪ್ರಾಣ, ವಿಶ್ವವನ್ನು ಕೊಳ್ಳೆಹೊಡೆದ ಹಣ ಎಲ್ಲವು ಉಳಿಯುದಿಲ್ಲವೇ? ಈ ದ್ವಂದ್ವದ ಪರಿಸ್ಥಿತಿಯಲ್ಲಿ ಪ್ರಧಾನಿಗೆ ಕೂಡಲೇ ನೆನಪಾದ ಹೆಸರು ಬೊಜ್ಜು ಬೆಳೆಸಿಕೊಂಡು ಊದುಬಿದ್ದಿದ್ದ ಚರ್ಚಿಲ್. ಬ್ರಿಟನಿನ್ನ ಸೈನ್ಯವನ್ನು ನೆಡೆಸಲು ಒಬ್ಬ ಸಮರ್ಥ ನಾಯಕ ಯಾರಾಗಬೇಕೆಂದು ಚರ್ಚೆಯಾದಾಗ ಬಹುಪಾಲು ಜನರೂ ಚರ್ಚಿಲ್ ನೆಡೆಗೆ ಬೊಟ್ಟುಮಾಡಿದರು. ಆದರೆ ಹಿಂದೊಮ್ಮೆ ಅದೇ ಹುದ್ದೆಯಲ್ಲಿ ಲಕ್ಷಾಂತರ ಸೈನಿಕರ ಪ್ರಾಣವನ್ನು ಮನ ಬಂದಂತೆ ಬಲಿಕೊಟ್ಟು, ಅಶ್ರುವಾಯುವನ್ನು (ಟಿಯರ್ ಗ್ಯಾಸ್ / ರಾಸಾಯನಿಕ ಶಸ್ತ್ರಾಸ್ತ್ರ) ಬಳಸಲು ಅನುಮತಿ ನೀಡಿದ್ದನೆಂಬ ಅಪವಾದವೂ ಈತನ ಮೇಲಿದ್ದಿದ್ದರಿಂದ ಒಂದು ಬಣ ಈತನನ್ನು ಕ್ರೂರತೆಯ ಆಗರವೆಂದು ಜರಿಯತೊಡಗಿತು. ಪ್ರಧಾನಿಗೂ ಇಂತಹ ವ್ಯಕ್ತಿಯೇ ಬೇಕಾಗಿದ್ದಿತು. ಹಿಟ್ಲರ್ ನೆಂಬ ನರರಾಕ್ಷಸನ ಮುಂದೆ ತಲೆಯೆತ್ತಿ ನಿಲ್ಲಲು ಈ ವ್ಯಕ್ತಿತ್ವವಲ್ಲದೇ ಮತ್ಯಾವುದೂ ಸಮನಾಗುತ್ತಿರಲಿಲ್ಲ. ಪ್ರಧಾನಿ ಈ ಮಾತನ್ನು ಚೆನ್ನಾಗಿ ಬಲ್ಲವರಾಗಿದ್ದರಿಂದ ಚರ್ಚಿಲ್ನನ್ನು ಸುಮಾರು ಇಪ್ಪತೈದು ವರ್ಷಗಳ ನಂತರ ಪುನ್ಹ ಸನ್ಯಾಧಿಪತಿಯ ಸ್ಥಾನಕ್ಕೆ ಬರುವಂತೆ ಕೋರಿಕೊಳ್ಳುತ್ತಾರೆ. ಜೀವನವೆಲ್ಲ ಒಂದಿಲ್ಲೊಂದು ಬಗೆಯಲ್ಲಿ ಯುದ್ಧ ಹಾಗು ಸೈನ್ಯಗಳ ನಡುವೆ ಬೆಳೆದಿದ್ದ ಚರ್ಚಿಲ್ ತನ್ನ ಜೀವನದ ಅಷ್ಟೂ ಏಳುಬೀಳುಗಳು ಈ ಒಂದು ಸ್ಥಾನವನ್ನೇರಲೇ ಬಂದವೇನೋ ಅಂದುಕೊಳ್ಳುತ್ತಾನೆ. ಆದರೆ ಕೆಲದಿನಗಳ ಒಳಗೇ ಈ ಮಾತು ಸುಳ್ಳಾಗುತ್ತದೆ! ಆತನ ಜೀವನದ ಮಹಾಗುರಿ ಇನ್ನು ಒಂದು ಸ್ತರ ಮೇಲಿರುತ್ತದೆ! ಎರಡನೇ ಮಹಾಯುದ್ಧದ ಕಾವು ಬೆಂಕಿಯ ಉಂಡೆಗಳಾಗಿ ಬ್ರಿಟನನ್ನು ಅವರಿಸತೊಡಗಿದಾಗ ಜನರಲ್ಲಿ ಪ್ರಧಾನಿ ನೆವಿಲ್ಲೆ ಚೇಂಬರ್ಲೇನ್ ನ ಮೇಲೆ ವಿಶ್ವಾಸವೇ ಇಲ್ಲದಂತಾಗುತ್ತದೆ. ಹಿಟ್ಲರ್ನ ಗುಡುಗು ಮಿಂಚಿನಂತಹ ಮಾತುಗಳಿಗೆ ಚೇಂಬರ್ಲೇನ್ ನ ಬತ್ತಳಿಕೆಯಲ್ಲಿ ಮಾತುಗಳೇ ಕಾಣೆಯಾಗಿರುತ್ತವೆ. ಆದರೆ ಸೈನ್ಯಾದ್ಯಕ್ಷನಾಗಿದ್ದ ಚರ್ಚಿಲ್ ಮಾತ್ರ ಒಂದಿಲ್ಲೊಂದು ಬಗೆಯಲ್ಲಿ ಜರ್ಮನಿಯನ್ನು ಹೆಡೆಮುರಿಕಟ್ಟಲು ಆವಣಿಸುತ್ತಿರುವುದು ಮಾತ್ರ ಎಲ್ಲರಿಗೂ ತಿಳಿದಿರುತ್ತದೆ. ಸೈನ್ಯಾದ್ಯಕ್ಷರ ಮೇಲಿದ್ದ ಬ್ರಿಟನ್ನಿಗರ ನಂಬುಗೆ ಪ್ರಧಾನಿಯ ಮೇಲೇಯೇ ಇರುವುದಿಲ್ಲ! ಪರಿಣಾಮ ಚೇಂಬರ್ಲೇನ್ ತನ್ನ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಬೇಕಾಯಿತು. ಹಾಗಾದರೆ ಈಗ ದೇಶವನ್ನು ಯುದ್ಧಕಾಲದಲ್ಲಿ ಸಮರ್ಥವಾಗಿ ನೆಡೆಸಬಲ್ಲ ನಾಯಕನ್ಯಾರು ಎಂದರೆ ಅಲ್ಲಿಯವರೆಗೂ ನಾ ಮುಂದು ತಾ ಮುಂದು ಎನ್ನುತ್ತಿದ್ದವರು ಹಿಟ್ಲರ್ ನೊಟ್ಟಿಗೆ ಬಡಿದಾಡುವ ಸಂದರ್ಭ ಬಂದೆರಗಿದಾಗ ತೆರೆಮರೆಯ ಹಿಂದೆ ಸರಿಯತೊಡಗಿದರು! ಇನ್ನು ಕೆಲವರು ಆತನೊಟ್ಟಿಗೆ ಶಾಂತಿಮಾತುಕತೆಯನ್ನು ನೆಡೆಸುವ ಪ್ರಧಾನಿಯಾಗಬಯಸಿದರು. ಆದರೆ ಬ್ರಿಟನ್ನಿನ ಜನತೆ ಯಾವುದೇ ಕಾರಣಕ್ಕೂ ಹಿಟ್ಲರ್ನ ಮುಂದೆ ತಲೆಬಾಗುವಂತೆ ಕಾಣಲಿಲ್ಲ. ದೇಹ ಸತ್ತರೂ ಆತ್ಮ ಸೋಲಬಾರದು ಎಂಬಂತೆ ಸಿಡಿದೆದ್ದ ಅವರಿಗೆ ತಮ್ಮನ್ನು ನೆಡೆಸಲು ಚರ್ಚಿಲ್ ನಂತಹ ಮೊಂಡ ನಾಯಕನೇ ಬೇಕೆಂಬ ಹಠವನ್ನು ಹುಟ್ಟುಹಾಕಿದರು. ಮೇ 10, 1940. ಬ್ರಿಟನ್ನಿನ 61 ನೇ ಪ್ರಧಾನಿಯಾಗಿ ವಿನ್ಸೆಟ್ ಚರ್ಚಿಲ್ ಅಧಿಕಾರ ವಹಿಸಕೊಳ್ಳುತ್ತಾನೆ. ಮುಂದೆ ನೆಡೆಯುವುದೆಲ್ಲ ಗ್ರೇಟ್ ಬ್ರಿಟನ್ನಿನ, ದಿ ಗ್ರೇಟ್ ಹಿಸ್ಟರಿ. ಇಪ್ಪತೈದು ವರ್ಷಗಳ ಕೆಳಗೆ ಮೊದಲ ವಿಶ್ವಯುದ್ಧದ ರಣರಂಗದಲ್ಲಿ ಬಾಗಿಯಾಗಿದ್ದ ಸೈನಿಕರಿಬ್ಬರು ಅಂದು ದೇಶದ ಅತ್ಯುನ್ನತ ಹುದ್ದೆಗಳ ಮೇಲೆ ಕೂತು ಸಮರ ಸಾರುತ್ತಿರುವುದನ್ನು ವಿಶ್ವವೇ ಕುತೂಹಲದಿಂದ ನೋಡತೊಡಗಿತ್ತು. ಅತ್ತ ಕಡೆ ಜಪಾನ್, ತಟಸ್ಥವಾಗಿದ್ದ ಅಮೆರಿಕವನ್ನು ಕೆಣಕಿ ತಪ್ಪು ಮಾಡಿದರೆ ಇತ್ತ ಜರ್ಮನಿ ಚರ್ಚಿಲ್ ನೇತೃತ್ವದ ಬ್ರಿಟನ್ ಹಾಗು ಸ್ಟಾಲಿನ್ ನೇತೃತ್ವದ ರಷ್ಯಾವನ್ನು ಎದುರು ಹಾಕಿಕೊಂಡು ಪೇಚಾಡತೊಡಗಿತು.

“Success is going from failure to failure without loss of enthusiasm.” (ಗೆಲುವು ಎನ್ನುವುದು ಉತ್ಸಾಹವನ್ನು ಕಳೆದುಕೊಳ್ಳದೆ ಸೋಲಿನಿಂದ ಸೋಲಿನೊಳಗೆ ಚಲಿಸುವ ಪಯಣ) ಎಂಬ ಮಾತಿನಿಂದ ಮುನ್ನೆಡದ ಚರ್ಚಿಲ್ ತನ್ನ ಇಳಿವಯಸ್ಸಿನ ಅಷ್ಟೆಲ್ಲ ಶಕ್ತಿಯನ್ನು ಒಂದುಗೂಡಿಸಿ ದೇಶವನ್ನು ಸಮರಕ್ಕೆ ಸಿದ್ಧಗೊಳಿಸಿದ. ಬೆಂಗಾಲದ ಮಹಾಕ್ಷಾಮದಲ್ಲಿ ಭಾರತಕ್ಕೆ ಬರಬೇಕಿದ್ದ ಆಹಾರಧಾನ್ಯಗಳು ಯುದ್ಧ ನಿರತ ಬ್ರಿಟನ್ನಿನ ಗೋದಾಮು ಸೇರತೊಡಗಿದ್ದು ಇದೇ ಕಾರಣಕ್ಕೆ. ಭಾರತೀಯರಾದ ನಾವು ಚರ್ಚಿಲ್ನನ್ನು ಅದೆಷ್ಟೇ ದ್ವೇಷಿಸಿದರೂ ತನ್ನ ದೇಶದ ಹಿತಾಸಕ್ತಿಯಿಂದ ಕೈಗೊಂಡ ಆತನ ಕ್ರಮ ಭಾಗಶಃ ಬ್ರಿಟನ್ನಿಗರಿಗೆ ಸರಿಯಾಗಿಯೇ ಇದೇ ಎಂದನಿಸಿತ್ತು. ಅಲ್ಲದೆ ಯುದ್ಧದಲ್ಲಿ ದೇಶದ ಗಡಿಯನ್ನು ಉಳಿಸಿಕೊಳ್ಳಲು ಆತ ಹಿಡಿಯದಿರುವ ಹಾದಿಯೇ ಇಲ್ಲ. ಈ ಹಾದಿಯಲ್ಲೂ ಆತ ಸಾವಿರಾರು ಸೈನಿಕರನ್ನು ಎದ್ವಾ ತದ್ವಾ ಕಳೆದುಕೊಂಡು ಮತ್ತೊಮ್ಮೆ ದೇಶಿಗರ ದ್ವೇಷವನ್ನು ಕಟ್ಟಿಕೊಳ್ಳುತ್ತಾನೆ. ಆದರೆ ತನ್ನ ನಿರ್ಧಾರಗಳ ಬಗ್ಗೆ ಎಂದಿಗೂ ಆತ ದ್ವಂದ್ವನಾಗಿರುವುದಿಲ್ಲ. ಇಟ್ಟ ಹೆಜ್ಜೆಯನ್ನು ಆಕಾಶವೇ ಕುಸಿದರೂ ಹಿಂದಿಡಲಿಲ್ಲ. ದ್ವಿತೀಯ ಮಹಾಯುದ್ಧದಲ್ಲಿ ಬ್ರಿಟನ್ನಿನ ಶಕ್ತಿ ಅಂತಹ ಹೇಳಿಕೊಳ್ಳುವ ಮಟ್ಟದಲ್ಲಿದ್ದಿಲ್ಲದಾದರೂ ಚರ್ಚಿಲ್ ಎಂಬ ಅಜಾತಶತ್ರು ಅದನ್ನು ಸಮರ್ಥವಾಗಿ ಎದುರಿಸಿದ. ಸರ್ಕಾರದ ತನ್ನ ಮಂತ್ರಿಗಳೇ ಹಿಟ್ಲರ್ನ ಮುಂದೆ ಶರಣಾಗಿ ಎಂದು ಅದೆಷ್ಟೇ ಒತ್ತಾಯಪಡಿಸಿದರೂ ದೃತಿಗೆಡದ ಆತನ ವ್ಯಕ್ತಿತ್ವ ಮುಂದೆ ವಿಶ್ವದ ಅದೆಷ್ಟೋ ನಾಯಕರಿಗೆ ಸ್ಫೂರ್ತಿಯಾಯಿತು. ದೇಶಾಭಿಮಾನ ಎಂಬುದು ದೇಹಾಭಿಮಾನದ ಮುಂದೆ ಕ್ಷೀಣಿಸಬಾರದು ಎಂಬುದನ್ನು ಚರ್ಚಿಲ್ ಬ್ರಿಟನ್ನಿಗರಿಗೆ ಮನವರಿಕೆ ಮಾಡಿಕೊಟ್ಟಿದ್ದ. ಈ ಮನವರಿಕೆಯಲ್ಲಿಯೇ ಬ್ರಿಟನ್ ಅಂದು ಭಾಗಶಃ ಯುದ್ಧವನ್ನು ಜಯಿಸಿದಂತಿದ್ದಿತು. ಇಲ್ಲವಾದರೆ ಅಕ್ಕಪಕ್ಕದ ಇತರೇ ದೇಶಗಳಂತೆ ಬ್ರಿಟನ್ ಕೂಡ ಹಿಟ್ಲರ್ನ ಕರಾಳ ಕತ್ತಲೆಯಲ್ಲಿ ಲೀನವಾಗಿ ಭೂನಕ್ಷೆಯಿಂದಲೇ ಅಳಿಸಿಹಾಕಲ್ಪಡುತ್ತಿತ್ತೇನೋ ಬಲ್ಲವರ್ಯಾರು?!

ಆಯ್ಕೆ ನಮ್ಮದು.. ಅನುಭವವೂ ನಮ್ಮದೆ!

ದಲ್ಲಾಳಿ. ಮೊದಲೆಲ್ಲ ಈ ಪದವೊಂದನ್ನು ಕೇಳಿದರೆ ಏನೋ ಒಂದು ಬಗೆಯ ಆತಂಕ, ಭಯ. ಪೋಕರಿ, ಪುಂಡ, ಉಂಡಾಡಿ ಗುಂಡ ಇಂತಹ ಸಮಾನಾರ್ಥಗಳನ್ನು ನೀಡುವ ಹಲವು ಪದಗಳು ತಲೆಯೊಳಗೆ ಒಮ್ಮಿಂದೊಮ್ಮೆಗೆ ಮೂಡುತಿದ್ದವು. ಏನೋ ಒಂದು ಬಗೆಯ ಕಾನೂನುಬಾಹಿರವಾದ ಕಳ್ಳ ಕೆಲಸವನ್ನು ಮಾಡುವ ವ್ಯಕ್ತಿಯೇನೋ ಎನ್ನುವ ಹಾಗೆ. ಏಕೇ ಹಾಗನಿಸುತ್ತಿತೋ, ಖಂಡಿತಾ ತಿಳಿಯದು. ಆದರೆ ಕಾಲ ಕಳೆದಂತೆ ಈ ದಲ್ಲಾಳಿ ಎಂಬ ಪದ ದಿನಜೀವನದ ಹಾಗು ಹೋಗುಗಳಲ್ಲಿ ಅದೆಷ್ಟರ ಮಟ್ಟಿಗೆ ಹಾಸು ಹೊಕ್ಕಿದೆ ಎಂದರೆ ಅಂದು ಈ ಪದವೊಂದನ್ನು ಕೇಳಿ ಮೂಡುತ್ತಿದ್ದ ಹಲವು ಅರ್ಥಗಳನ್ನು ನೆನೆದು ಇಂದು ನಗು ಬರತೊಡಗುತ್ತದೆ. ವಿಪರ್ಯಾಸವೇನೋ ಎಂಬಂತೆ ಪ್ರಸ್ತುತ ಅದೆಷ್ಟೋ ಗಣಿತ ಪುಸ್ತಕಗಳ ಸಮಸ್ಯೆಗಳಲ್ಲಿ ದಲ್ಲಾಳಿ ಎಂಬ ಪದದ ಉಲ್ಲೇಖ ಅತಿಸಹಜವಾಗಿದೆ ಅಲ್ಲದೆ ದಲ್ಲಾಳಿಕೆಗೂ ಪ್ರಸ್ತುತ ದಿನಗಳಲ್ಲಿ ಕೋರ್ಸ್ಗಳೂ ಸಾಕಷ್ಟು ಬಂದಿವೆ. ಪರಿಣಾಮ ಪ್ರತಿಯೊಂದು ವ್ಯವಹಾರದ ಅವಿಭಾಜ್ಯ ಅಂಗಗಳಲ್ಲಿ ಈತನೂ ಒಬ್ಬನೇನೋ ಎನ್ನುವಷ್ಟರ ಮಟ್ಟಿಗೆ ಇದು ಬೆಳೆದು ನಿಂತಿದೆ. ಇಂದು ದಲ್ಲಾಳಿ ಎಂದರೆ ಒಂತರ ಮುಸ್ಸಂಜೆ ಮಾತು ಚಿತ್ರದ ಸುಧೀಪ್ ನಂತಾಗಿಬಿಟ್ಟಿದ್ದಾನೆ. ಆಪತ್ಬಾಂಧವ ಎಂದರೂ ತಪ್ಪಾಗದು. ಸಂತೆ, ಸರ್ಕಾರೀ ಕಚೇರಿ, ಶಿಕ್ಷಣ ಸಂಸ್ಥೆ, ಷೇರು ಪೇಟೆ, ರಿಯಲ್ ಎಸ್ಟೇಟ್ ಅಲ್ಲದೆ ಇಂದು ದೇವಸ್ಥಾನಗಳಿಗೂ ಈ ದಲ್ಲಾಳಿ ಎಂಬ ಶಬ್ದ ಜೋತುಬಿದ್ದಿದೆ ಎಂದರೆ ಆಶ್ಚರ್ಯಪಡಬೇಕಾಗಿಲ್ಲ. ಇಂಗ್ಲಿಷಿನಲ್ಲಿ ಅಂದವಾಗಿ ಕಾಣಲೇನೋ ಎಂಬಂತೆ ಬ್ರೋಕರ್!

ನಿಜ ಹೇಳಬೇಕೆಂದರೆ ಪ್ರಸ್ತುತ ಆರ್ಥಿಕ ವ್ಯವಸ್ಥೆಯನ್ನೆ ಹಾಳುಗೆಡವಿರುವ ಹಲವು ಮಹಾಮಾರಿಗಳಲ್ಲಿ ಈ ಬ್ರೋಕರಿಕೆಯೂ ಒಂದು! ಅಲ್ಲದೆ ಮತ್ತೇನು? ಬೆಳೆಗಾರ ರೈತ. ಭಕ್ಷಿಸುವವ ಗ್ರಾಹಕ. ಇವೆರಡರ ಮಧ್ಯೆ ಡೊಂಬರಾಟ ಕುಣಿಯುವವನೇ ದಲ್ಲಾಳಿ. ಕೆಲಸ ಸರ್ಕಾರೀ ನೌಕರರದ್ದು. ಸೇವೆ ಸಲ್ಲಬೇಕಾಗಿರುವುದು ಜನಸಾಮಾನ್ಯರಿಗೆ. ಮೆಧ್ಯೆ ದಲ್ಲಾಳಿಯ ಕೊಂಡಿಯಾಕಯ್ಯ ಎಂದರೆ ಉತ್ತರ ಮಾತ್ರ ತೇಲುವ ಗಾಳಿಗೆ ಪ್ರಿಯವಾದೀತು. ಮನೆ ಹಾಗು ತೋಟ ಅವನದ್ದು, ಮಾರುವವನಾತ. ಹಣ ಹಾಗು ಶ್ರಮ ಈತನದ್ದು, ಕೊಳ್ಳುವವನೀತ. ಆದರೂ ತಮಾಷೆಯೆಂದರೆ ಇಲ್ಲಿ ಇಬ್ಬರೂ ಆಯ್ದುಕೊಳ್ಳುವುದು ಬ್ರೋಕರ್ಗಳನ್ನೇ. ಅದು ಸಹ ತಾವಾಗಿಯೇ! ಕೊಳ್ಳುವವ ಮಾರುವವನಲ್ಲಿ ಬಾಯಿಬಿಟ್ಟು ವ್ಯಾಪಾರ ಕುದುರಿಸಲು ಅದೇನೋ ಒಂದು ಬಗೆಯ ಹಿಂಜರಿತ, ಮುಜುಗರ. ಇಬ್ಬರೂ ನ್ಯಾಯಾಧಿಪತಿಗಳಿಗೆ ಚರ್ಚೆಯನ್ನು ಒಪ್ಪಿಸುವ ವಕೀಲರಂತೆ ದಲ್ಲಾಳಿಗಳನ್ನು ತೂಗುವ ತಕ್ಕಡಿಯೇನೋ ಎಂಬಂತೆ ಕಾಣಬಯಸುತ್ತಾರೆ. ಅಲ್ಲಿರುವ ಕಡ್ಡಿಯನ್ನು ಇಲ್ಲಿಗೆ ಎತ್ತಿಡುವಷ್ಟೂ ಕಾಯಕವನ್ನು ಮಾಡದೆ ಆತ ಬ್ರೋಕರಿಕೆಯ ಕೃಪಾಕಟಾಕ್ಷದಲ್ಲಿ ಕಮಿಷನ್ ಎಂಬ ಮಾನದಂಡದ ಮೂಲಕ ಭರಪೂರ ಹಣವನ್ನು ಗಳಿಸಿಕೊಳ್ಳುತ್ತಾನೆ. ಇದು ಆಸ್ತಿಪಾಸ್ತಿಯ ವಿಚಾರವಾದರೆ ಇನ್ನು ಸರ್ಕಾರೀ ಕಚೇರಿಗಳಲ್ಲಂತೂ ಬ್ರೋಕರಿಕೆಯ ಕರಾಳ ಛಾಯೆ ಹೇಳತೀರದು. ಒಂದು ಸೂಕ್ಷ್ಮಾತಿಸೂಕ್ಷ್ಮ ಕೆಲಸಕ್ಕೂ ಮೈ ನೋವು, ಕಾಲುನೋವು, ಸರ್ ಇಲ್ಲ, ಮೇಡಂ ಇಲ್ಲ, ಇದ್ದರೂ ಅವರಿಗೆ ಹುಷಾರಿಲ್ಲ, ವಿವರಗಳು ತಪ್ಪಾಗಿ ಬರೆಯಲಾಗಿದೆ ಎಂಬ ನೂರೆಂಟು ಕಾರಣಗಳ ಹಿಂದೆ ಇರುವ ಏಕೈಕ ಕಾರಣ ಅಮಾಯಕರ ಕೈಯಿಂದ ಒಂದಿಷ್ಟು ಹಣವನ್ನು ಪೀಕುವಿಕೆ. ಇವರುಗಳ ಈ ತಳ ಬುಡ ಇಲ್ಲದ ಸಾಬೂಬಿಕೆ ಸೋತ ಜನಸಾಮಾನ್ಯ ಕೊನೆಗೆ ಆಯ್ದುಕೊಳ್ಳುವುದು ಕೆಲಸವಿಲ್ಲದೇ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಸರ್ಕಾರಿ ಕಚೇರಿಗಳ ಹೊರಗೆ ಅಲೆಯುವ ಆಪತ್ಬಾಂದವರನ್ನ, ಅರ್ಥಾತ್ ದಲ್ಲಾಳಿಗಳನ್ನ. ಅಲ್ಲಿನ ದಲ್ಲಾಳಿಗಳೋ ಇಡೀ ಸರ್ಕಾರೀ ಕಚೇರಿಯೇ ತಮ್ಮದೆಂಬಂತೆ ತನಗೆ, ಸಬೂಬು ನೀಡಿದವರಿಗೆ, ಹುಷಾರಿಲ್ಲದ್ದ ಸರ್ ಹಾಗು ಮೇಡಂ ಗಳಿಗೆ ಎಂಬಂತೆ ಎಲ್ಲರಿಗೂ ಸಾಕೆನ್ನುವಷ್ಟು ಕಮಿಷನ್ ಅನ್ನು ಇರಿಸಿಕೊಂಡು ನೂರು ರೂಪಾಯಿಗಳಲ್ಲಿ ಆಗುವ ಕೆಲಸವನ್ನು ಸಾವಿರ ರೂಪಾಯಿಗಳಿಗೆ ಸರಿದೂಗಿಸಿ ಹಣವನ್ನು ಜಡಿಯುತ್ತಾರೆ. ಹೀಗೆ ಎದ್ವಾ-ತದ್ವಾ ಹಣವನ್ನು ಪೀಕಿದರೆ ನೋಡಿ ಎರಡೇ ದಿನಗಳಲ್ಲಿ ಕೆಲಸ ಕಂಪ್ಲೀಟ್! ಅಂತಹ ಅಚ್ಚುಕಟ್ಟಾದ ವ್ಯವಸ್ಥೆ ಇಂದು ನಮ್ಮ ಕಣ್ಣ ಮುಂದೆಯೇ, ನಮ್ಮದೇ ಸರ್ಕಾರೀ ಕಚೇರಿಗಳಲ್ಲಿ ರಾಜಾರೋಷವಾಗಿ ನೆಡೆಯುತ್ತಿವೆ. ಅಲ್ಲದೆ ಇಲ್ಲಿ ಗಮನಿಸಬೇಕಾದ ಮತ್ತೊಂದು ಮಹತ್ವದ ವಿಷಯವೆಂದರೆ ಹಣ ಇರುವವರೇನೋ ಇಂತಹ ಬ್ರೋಕರ್ ಮಹಾಷಯರ ಸಹಾಯವನ್ನು ಪಡೆದು, ಅವರು ಕೇಳಿದಷ್ಟು ಹಣವನ್ನು ಸುರಿದು ಕೆಲಸವನ್ನು ಮಾಡಿಕೊಳ್ಳುತ್ತಾರೆ. ಆದರೆ ಇಂದು ಬೆವರು ಸುರಿಸಿದರೇನೇ ನಾಳೆಯ ಅನ್ನವನ್ನು ಕಾಣುವ ಸಾಮನ್ಯರ ಕತೆಯೇನು? ಹಣವನ್ನು ಕಂಡರೆಯೇ ಉಸಿರಾಡುವ ಖಯಾಲಿಯ ಬೊಜ್ಜುಗಟ್ಟಿದ ನೌಕರಶಾಯಿ ವ್ಯವಸ್ಥೆಯನ್ನು ಹುಟ್ಟುಹಾಕಿರುವವರು ನಾವೆಯೇ. ಇಂದು ಅದೇ ವ್ಯವಸ್ಥೆ ನಮ್ಮ ಬುಡಕ್ಕೇ ಬೆಂಕಿಯಿಡುವಂತಾಗಿರುವಾಗ ಮಾತ್ರ ಬೊಬ್ಬೆಯೊಡೆಯುತ್ತಿದ್ದೇವೆ.

ಮಾರುಕಟ್ಟೆಯ ವಿಚಾರಕ್ಕೆ ಬಂದಾಗ ಕಾಫಿ ಬೆಳೆಯ ಇತಿಹಾಸವನ್ನು ಒಮ್ಮೆ ಗಮನಿಸೋಣ. ಸುಮಾರು 90ರ ದಶಕದವರೆಗೂ ಕಾಫಿ ಬೆಳೆಗಾರ ಅಂದು ತಾನು ಬೆವರು ಸುರಿಸಿ ಬೆಳೆದ ಬೆಳೆಯನ್ನು ಮುಕ್ತವಾಗಿ ಮಾರುವಂತೆಯೇ ಇರಲಿಲ್ಲ. ತಾವು ಬೆಳೆದದ್ದೆಲ್ಲವನ್ನೂ ಒಂತಿಬ್ಬರು ಮಧ್ಯವರ್ತಿ ಮಹಾಶಯರುಗಳಿಗೆ (ಕಾಫಿ ಬೋರ್ಡ್) ನೀಡಿ ಅವರು ಕೊಟ್ಟಷ್ಟನ್ನು ಪಡೆದುಕೊಳ್ಳಬೇಕಾಗಿದ್ದಿತು. ಲೇಖಕರಾದರೂ ಸ್ವತಃ ಕಾಫಿ ಬೆಳೆಗಾರರಾಗಿದ್ದ ಮೂಡಿಗೆರೆಯ ಪೂರ್ಣ ಚಂದ್ರ ತೇಜಸ್ವಿಯವರು ಅಂದು ಈ ಮಧ್ಯವರ್ತಿ ಹಾವಳಿಯ ಮೇಲೆ ಬೇಸತ್ತು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂಟೆಗೆ (50 ಕೆಜಿ ಯ ಬ್ಯಾಗುಗಳು) ಐದರಿಂದ ಆರುಸಾವಿರ ರೂಪಾಯಿಗಳಿದ್ದರೂ ಬೆಳೆಗಾರರಿಗೆ ಕಾಫಿ ಬೋರ್ಡ್ ಕೊಡುತ್ತಿರುವುದು ಕೇವಲ ಎಂಟನೂರರಿಂದ ಒಂಬೈನೂರು ರೂಪಾಯಿಗಳು ಮಾತ್ರ. ಕೂಡಲೇ ಮುಕ್ತ ಮಾರುಕಟ್ಟೆಗೆ ಅವಕಾಶ ಸಿಗದಿದ್ದರೆ ತಾವು ಸಂತೆಯಲ್ಲಿ ನಿಂತು ಕಾಫಿಯನ್ನು ಮಾರುವುದಾಗಿ ಗುಡುಗಿದ್ದರು. ಕೂಡಲೇ ಕಕ್ಕಾಬಿಕ್ಕಿಯಾದ ಕಾಫಿ ಬೋರ್ಡಿನ ಅಧಿಕಾರಿಗಳು ಮರುಕ್ಷಣವೇ ಸಂಧಾನವನ್ನೂ ಮಾಡಿದರೂ ಅಂದು ಹಚ್ಚಿಕೊಂಡ ಕಿಚ್ಚು ಕೂಡಲೇ ಶಮನಗೊಳ್ಳಲ್ಲಿಲ್ಲ. ಕ್ರಮೇಣ ದೇಶ ನೇರ ವಿದೇಶಿ ಹೂಡಿಕೆಯ ಬಕಪಕ್ಷಿಯಾಗತೊಡಗಿದಾಗ ಕಾಫಿ ಮಾರುಕಟ್ಟೆಯೂ ಮುಕ್ತ ವ್ಯಾಪಾರವಾಗಿ ಪ್ರತಿ ಬ್ಯಾಗಿಗೆ ಸಾವಿರ ರೂಪಾಯಿಯಿದ್ದ ಬೆಲೆ ಕೂಡಲೇ ಎಳರಿಂದ ಎಂಟು ಸಾವಿರಗಳಿಗೂ ಹೋಗಿರುವುದುಂಟು. ಒಂದಲ್ಲ ಎರಡಲ್ಲ ಬರೋಬ್ಬರಿ ಏಳರಿಂದ ಎಂಟು ಪಟ್ಟು ಹಣವನ್ನು ಮಧ್ಯವರ್ತಿ ಜಾಲ ಅಂದು ಆವರಿಸಿಬಿಟ್ಟಿದಿತು. ಕಾಫಿ ಬೆಳೆಗಾರರರು ನಿಟ್ಟುಸಿರು ಬಿಟ್ಟರು. ತಮ್ಮ ಬೆಳೆಯ ನಿಜಮೌಲ್ಯವನ್ನು ಅರಿಯತೊಡಗಿದರು.

ಇದೇ ಬಗೆಯ ಮಹಾ ಬದಲಾವಣೆ ಇಂದು ಇತರೇ ವಲಯಗಳಲ್ಲೂ ಬೇಕಾಗಿದೆ. ಹೆಚ್ಚಾಗಿ ನಗರಸನಭೆ, ಪುರಸಭೆಯಂತಹ ಸರ್ಕಾರೀ ಕಚೇರಿಗಳಲ್ಲಿ. ಕಚೇರಿಯ ಗುಮಾಸ್ತನನ್ನೂ ಅಣ್ಣ ಅಪ್ಪ ಎಂದು ಸಂಭೋದಿಸುತ್ತಾ ಮಾತಿಗಿಳಿಯುವ ಅಮಾಯಕರ ಶೋಷಣೆಗೆ ಇಲ್ಲಿ ಕೊನೆಯೇ ಇಲ್ಲದಂತಾಗಿದೆ. ಅವರ ಪರವಾಗಿ ವಾದಿಸಬೇಕಾದವರು ಇಂದು ಕ್ಯಾರೇ ಎನ್ನದೆ ಅಡ್ಡಾಡಿಕೊಂಡಿದ್ದಾರೆ.ಬಡಜನರ ಬೆವರಿನ ಸರ್ಕಾರದ ಹಣವನ್ನು ಸಂಬಳ ರೂಪದಲ್ಲಿ ಪಡೆಯುವುದಲ್ಲದೆ ಕೆಲಸ ಪೂರ್ಣಗೊಳ್ಳಲು ಅದೇ ಬೆವರಿನ ಮತ್ತಷ್ಟು ಹಣವನ್ನು ಗಿಂಬಳವಾಗಿ ನೀಡಲೇಬೇಕು. ಅದೂ ಕೂಡ ದಲ್ಲಾಳಿಗಳ ಹದ್ದುಬಸ್ತಿನಲ್ಲಿಯೇ. ಸೋಜಿಗವೋ ಏನೋ ಹಲವು ಬಾರಿ ಇಷ್ಟೆಲ್ಲಾ 'ಅಂಶ'ಗಳನ್ನೂ ಪಾಲಿಸಿಯೂ ಜನಸಾಮನ್ಯ ಕೊನೆಗೆ ವ್ಯಥೆಪಡುವುದು ಮಾತ್ರ ತಪ್ಪುವುದಿಲ್ಲ. ಇದ್ಯಾವ ಬಗೆಯ ಡೆಮಾಕ್ರಸಿ ಸ್ವಾಮಿ? ಬಡಪಾಯಿಯ ಬವಣೆಗೆ ಅಂತ್ಯವೆಂದು? ಪ್ರತಿ ಚುನಾವಣೆಯಲ್ಲೂ ಮಾಡುವ ಅದೇ ತಪ್ಪನ್ನು ಎಲ್ಲಿಯವರೆಗೂ ಜನಸಾಮನ್ಯ ಪುನರಾವರ್ತಿಸುತ್ತಾನೆಯೋ ಅಲ್ಲಿಯವರೆಗೂ ಫಲಾನುಭವಿಯೂ ಅವನೇ. ಆಯ್ಕೆ ನಮ್ಮದು. ಅನುಭವವೂ ನಮ್ಮದೆ.

Sunday, March 18, 2018

ವರ್ಷಗಳ ಕಾಲ ವರುಣದೇವನ ತಪಸ್ಸಿನಲ್ಲಿ...

ಆಹಾರ ಹಾಗು ನೀರಿಲ್ಲದೆ ಅದೆಷ್ಟು ದಿನಗಳ ಕಾಲ ಜೀವಿಯೊಂದು ಬದುಕಬಹುದು? ಎಂಬೊಂದು ಪ್ರೆಶ್ನೆಯನ್ನು ಕೇಳುತ್ತಾ ಹೋದಂತೆ ಕೆಲ ಘಂಟೆಗಳು, ದಿನಗಳು ಅಥವಾ ವಾರಗಳೆಂಬ ಉತ್ತರಗಳು ನಮಗೆ ಸಿಗಬಹುದು. ‘ಪ್ರಸ್ತುತ’ ಮಾನವ ಜೀವಿಯಂತೂ ದಿನಗಳು ಬಿಡಿ ಘಂಟೆಗಳೂ ಸಹ ಹೊಟ್ಟೆಗೆ ಹಿಟ್ಟಿಲ್ಲದೆ ಜೀವಿಸಲಾರ. ಒಂದು ಪಕ್ಷ ಅಂತಹ ಏನೂ ಸಿಗದ ಜಾಗಕ್ಕೇನಾದರೂ ಆತನನ್ನು ಹೊತ್ತೊಯ್ದರೆ ಬದುಕುವ ಉಪಾಯವನ್ನು ಹೆಣೆಯುವ ಬದಲು ಪರಲೋಕದ ಪಯಣವೇ ಆರಾಮದಾಯಕ ಎನುತ ಆತ ಕೈಲಾಸ ಯಾತ್ರೆಯನ್ನೇ ಕೈಗೊಂಡರೂ ಆಶ್ಚರ್ಯಪಡಬೇಕಾಗಿಲ್ಲ. ಆದರೆ ನೀರೇ ಸರ್ವಸ್ವವಾಗಿರುವ ಮೀನಿನಂತಹ ಜೀವಿಯೊಂದನ್ನು ನೀರಿರದ, ಎಕ್ಕಿ ತಿನ್ನಲು ಹುಳು ಹಪ್ಪಟೆಗಳಿಲ್ಲದ ಮರುಭೂಮಿಯೊಂದಕ್ಕೆ ಹೊತ್ತೊಯ್ದು ಬಿಟ್ಟರೆ ಅದು ಅದೆಷ್ಟು ದಿನಗಳ ಕಾಲ ಬದುಕಬಹುದು ಎಂದರೆ ಕೇಳಿದವರು 'ಸಾರ್, ನಾವ್ ಇಲ್ಲಿ ಕಾರ ಅರೆಯೋ ಅಷ್ಟೊತ್ತಿಗೆ ಅದು ಇಹ ಲೋಕ ಬಿಟ್ಟಿರುತ್ತೆ, ಯಾವ್ ಮೀನ್ ಸಾರ್, ಕೆಜಿಗೆಷ್ಟು' ಎನುತ್ತಾ ಬಾಯಲ್ಲಿ ನೀರೂರಿಸತೊಡಗುವವರೂ ಇದ್ದಾರೆ. ಆದರೆ ಸೃಷ್ಟಿ ಅದೆಷ್ಟು ವಿಸ್ಮಯ ಎಂಬುದರ ಕಿರುನೋಟ ನಮಗೆ ಈವೊಂದು ಪ್ರೆಶ್ನೆಗೆ ಉತ್ತರ ಕಂಡುಕೊಂಡರೂ ಸಾಕು! ಆಫ್ರಿಕ, ದಕ್ಷಿಣ ಅಮೇರಿಕ ಹಾಗು ಆಸ್ಟ್ರೇಲಿಯಾದ ಕೆಲವು ಬಾಗಗಲ್ಲಿ ಸಿಗುವ ಮೀನೊಂದು ಸುಡುವ ಉರಿ ಬಿಸಿಲಿಗೆ ಸುಟ್ಟ ಇಟ್ಟಿಗೆಯಂತಾಗುವ ನೆಲದ ಮಣ್ಣಿನಲ್ಲೇ ಉದುಗಿಕೊಂಡು ಬದುಕುವ ಕಾಲ ಒಂದಲ್ಲ ಎರಡಲ್ಲ, ಸುಮಾರು ನಾಲ್ಕು ವರ್ಷಗಳವರೆಗೂ ಮಿಗಿಲು!

ಹೌದು. ಪುಪ್ಪಸಮೀನು ಅಥವಾ Lungfish ಎಂದು ಕರೆಯಲ್ಪಡುವ ಈ ಮೀನು ಸೃಷ್ಟಿಯ ಚತುರತೆಗೇ ಸವಾಲೆಸೆಯುವಂತೆ 'ನೀರಲ್ಲಿ ಮೀನಾಗಿ, ಮಣ್ಣಲ್ಲಿ ಕಲ್ಲಾಗಿ' ಬದುಕಬಲ್ಲದು. ಹೆಸರೇ ಹೇಳುವಂತೆ ಈ ಮೀನು ಶ್ವಾಸಕೋಶಗಳನ್ನು ಒಳಗೊಂಡಿರುವ ಮೀನು. ಅರೆ, ಮೀನಿನಲ್ಲಿ ಕಿವಿರುಗಳುಗಳನ್ನು ಕೇಳಿದ್ದೇವೆ, ಈ ಶ್ವಾಸಕೋಶಗಳು ಎಲ್ಲಿಂದ ಬಂದವು ಎಂದರೆ ಉತ್ತರ ಮಾತ್ರ ಡಾರ್ವಿನ್ ನ ತತ್ವಗಳೇ ಕೊಡಬೇಕು. ಒಂದು ವೇಳೆ ಡಾರ್ವಿನ್ ನ ವಿಕಸನವಾದ ನಿಜವಾದರೆ ನೀರಿನೊಳಗಿರುವ ಆಹಾರದ ರುಚಿಗೆ ಬೇಸತ್ತು ನೆಲದ ಮೇಲಿನ ಹುಳ ಹಪ್ಪಟೆಗಳನ್ನು ಸವಿಯುವ ಖುಷಿಯಲ್ಲಿ ಶ್ವಾಸಕೋಶಗಳೆ ಸೃಷ್ಟಿಗೊಂಡಿರಬಹುದು. ಅಥವಾ ಸೃಷ್ಟಿಕರ್ತನ ಸೃಷ್ಟಿಯ ಹಲವು ವಿಸ್ಮಯಗಳಲ್ಲಿ ಈವೊಂದು ವಿಸ್ಮಯವೂ ಒಂದೆಂದು ಸುಮ್ಮನಿದ್ದುಬಿಡಬೇಕು! ಒಂದು ಲೆಕ್ಕದಲ್ಲಿ ನೋಡಿದರೆ ಇದು ಕಪ್ಪೆಯಂತೆ ಉಭಯಚರ ಜೀವಿ. ಸರಿ ಕಪ್ಪೆಯಂತೆ ನೀರು ಹಾಗು ನೆಲದಲ್ಲೂ ಬದುಕುವ ಇನ್ನೂ ಅದೆಷ್ಟೋ ಮೀನುಗಳಿದ್ದರೂ ವರ್ಷಗಳು ತಪಸ್ಸನ್ನು ಮಾಡುವ ಇದರ ಹಿಂದಿರುವ ಮಹಿಮೆಯಾದರೂ ಏನು ಎಂಬ ಪ್ರೆಶ್ನೆ ನಮ್ಮನ್ನು ಕಾಡದಿರದು.

ಆಫ್ರಿಕಾ, ಆಸ್ಟ್ರೇಲಿಯ ಹಾಗು ದಕ್ಷಿಣ ಅಮೇರಿಕಾದಲ್ಲಿ ಬಡಿಯುವ ಒಣಬಿಸಿಲು ಹಸಿರು ಕಾನನವನ್ನೇ ಬರಡು ಭೂಮಿಯಾನ್ನಾಗಿಸಬಲ್ಲದು. ಇನ್ನು ಕೆರೆ ತೆರೆ ಹಳ್ಳ ಕೊಳ್ಳಗಳ ಕತೆಯಂತೂ ಯಾವ ಲೆಕ್ಕ. ಪ್ರಖರ ಬಿಸಿಲಿಗೆ ಒಣ ಇಟ್ಟಿಗೆಗಳಂತಾಗುವ ಇವುಗಳ ಅವಶೇಷಗಳಿಂದಲೇ (ಮಣ್ಣಿನ ಇಟ್ಟಿಗೆಗಳು) ಅಲ್ಲಿನ ಜನರು ಮನೆಗಳನ್ನು ನಿರ್ಮಿಸಿಕೊಳ್ಳುವುದೂ ಉಂಟು. ಹೀಗೆ ಆವಿಯಾಗುವ ಪ್ರಕ್ರಿಯೆಯಲ್ಲಿ ಇತರ ಮೀನುಗಳು ವಿಲವಿಲ ಒದ್ದಾಡಿ ಸತ್ತು ಸುಣ್ಣವಾದರೆ ಈ ಪುಪ್ಪಸಮೀನು ಮಾತ್ರ ಅಂತಹ ಅಪಾಯದ ಘಳಿಗೆ ಎದುರಾಗುವ ಸಮಯಕ್ಕೆ ಸರಿಯಾಗಿ ನೆಲದೊಳಗೆ ಬಿಲವೊಂದನ್ನು ಕೊರೆದು ದೇಹವನ್ನು ಅದರೊಳಗೆ ಇಳಿಬಿಟ್ಟು ಲೋಳೆಯ ಪದರವೊಂದನ್ನು (mucus cocoon) ತನ್ನ ದೇಹದ ಸುತ್ತ ಸ್ರವಿಸಿಕೊಳ್ಳುತ್ತದೆ. ಈ ಪದರ ನಂತರ ಗಟ್ಟಿಯಾಗುತ್ತಾ ಒಂದು ಬಗೆಯ ರಕ್ಷಣಾ ಪೊರೆಯಂತೆ ಮೀನನ್ನು ಆವರಿಸಿಕೊಳ್ಳುತ್ತವೆ. ಸರಿ, ಮೀನೇನೋ ಭೂಮಿಯೊಳಗೆ ಹುದುಗಿ ಕವಚವನ್ನು ನಿರ್ಮಿಸಿಯೂ ಆಯಿತು ಆದರೆ ತಿನ್ನಲು ಅದಕ್ಕೆ ಒಂದಿನಿತು ಆಹಾರವೂ ಬೇಡವೇ? ಕಡೆ ಪಕ್ಷ ವಾರಕೊಂದೆರೆಡು ಕ್ರಿಮಿ ಕೀಟಗಳು? ಬಿಲ್ಲಕುಲ್ ಇಲ್ಲ! ಘಂಟೆ ಘಂಟೆಗೂ ಕರಾರುವಕ್ಕಾಗಿ ಮೇಯುವ ಜೀವಿಗಳಿಗೆ ಇದು ಸೋಜಿಗದ ಸಂಗತಿಯೇ. ತಿಂಗಳು ಹಾಗು ವರ್ಷಗಳ ಕಾಲ ಆಹಾರವೇ ಇಲ್ಲದೆ ಬದುಕುವುದು ಮಾತ್ರ ಈ ಮೀನುಗಳಿಗೆ ಬದುಕುವ ಅನೀವಾರ್ಯತೆ ತಂದೊದಗಿಸಿರುವ ವರವೆಂದೇ ಹೇಳಬಹುದು. ಇಲ್ಲವಾದಲ್ಲಿ ಬರಿದಾದ ನೆಲದೊಳಗೆ ವಿಲವಿಲ ಒದ್ದಾಡಿ ಇತರ ಪ್ರಾಣಿಗಳ ಆಹಾರವಾಗುವುದು ಎಷ್ಟು ಹೊತ್ತಿನ ಮಾತು. ಹೀಗೆ ನೆಲದೊಳಗೆ ಹುದುಗಿಕೊಂಡು ವರ್ಷಗಳ ಕಾಲ ಮಳೆರಾಯನಿಗೆ ಕಾಯುವ ಇವುಗಳು ತಮ್ಮ ದೇಹದಲ್ಲಿನ ತ್ಯಾಜ್ಯವನ್ನು ಬಹುತೇಕ ಕಡಿಮೆ ಮಾಡಿ ಯಕೃತ್ತಿನಲ್ಲಿ ವಿಷಯುಕ್ತ ವಸ್ತುಗಳು ಸಂಗ್ರಹವಾಗದಂತೆ ನೋಡಿಕೊಳ್ಳುತ್ತವೆ. ಚಯಾಪಚಯ ಕ್ರಿಯೆಯನ್ನೂ ಕಡಿಮೆಗೊಳಿಸಿ ಶಕ್ತಿಯನ್ನು ನಂತರದ ದಿನಗಳಿಗೆ ಕಾಪಾಡಿಕೊಳ್ಳುವ ಚತುರತೆಯೂ ಇವುಗಳಿಗೆ ಇವೆ. ಒಟ್ಟಿನಲ್ಲಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭವನ್ನು ಗಿಟ್ಟಿಸಿಕೊಳ್ಳುವ ಚತುರ ವ್ಯಾಪಾರಿಯ ಹಾಗೆ ಈ ಮೀನುಗಳು ನೆಲದೊಳಗೆ ಉದುಗಿಕೊಳ್ಳುವ ಮೊದಲು ಉಳಿಸಿಕೊಂಡ ಶಕ್ತಿಯಿಂದಲೇ ನಂತರದ ಕಾಲವನ್ನು ತಳ್ಳುತ್ತವೆ. ಇದೇ ತಂತ್ರಗಾರಿಕೆಯನ್ನು ಈಗ ಮಾನವ ಅರಿಯಲು ಬಯಸುತ್ತಿದ್ದಾನೆ. ಅದು ಸಾದ್ಯವಾದರೆ ಮಾನವ ಜೀವಿಗಳ ಕಡಿಮೆ ಶಕ್ತಿಯ ಬಳಕೆಯಿಂದ ಬಲು ದೂರಗಳ ಸ್ಪೇಸ್ ಟ್ರಾವೆಲ್ (ಆಕಾಶ ನಡಿಗೆ) ನಲ್ಲಿ ಈ ತಂತ್ರಗಾರಿಕೆ ಉಪಯೋಗವಾಗಲಿದೆ.

ಪ್ರಕೃತಿ ಜೀವಿಗಳಿಗೆ ಎಲ್ಲವನ್ನೂ ಕೊಡದಿದ್ದರೂ ಬದುಕುವ ಹಠವನ್ನು ಸಾಧಿಸಿಕೊಳ್ಳಲು ಒಂದು ಮುಕ್ತ ಅವಕಾಶವವನ್ನಂತೂ ಖಂಡಿತ ನೀಡಿದೆ. ಇಂತಹ ಅವಕಾಶಗಳಿಗೆ ಒಂದು ಸಣ್ಣ ಉದಾಹರಣೆ ಈ ಪುಪ್ಪಸ ಮೀನು. ಮಾನವ ಪ್ರಸ್ತುತ ಏನೆಲ್ಲವನ್ನೂ ಸಾಧಿಸಿದರೂ ಸೃಷ್ಟಿಕರ್ತನ ಇಂತಹ ಮತ್ತೊಂದು ಮಗದೊಂದು ವಿಸ್ಮಯಗಳ ಮುಂದೆ ಆತ ತೀರಾ ಕುಬ್ಜನಾಗಿದ್ದಾನೆ,ಆಗುತ್ತಿದ್ದಾನೆ. ಅಲ್ಲಿ ಅವನೆದಿದ್ದರೂ ಕೇವಲ ಒಬ್ಬ ಮೂಕ ಪ್ರೇಕ್ಷಕನಷ್ಟೇ!