Sunday, October 8, 2017

ಹಣಕಾಸು ಮಸೂದೆ 2017 : ಬವಣೆಯೊ ಅಥವಾ ಬದಲಾವಣೆಯೂ .. ?

ನೀವು ಸರ್ಕಾರೀ ಅಧಿಕಾರಿಗಳಾಗಿದ್ದರೆ, ಲಂಚಬಾಕರಾಗಲಿದ್ದರೆ, ಅಕ್ರಮ ಆಸ್ತಿಯನ್ನು ಸಂಪಾದಿಸಿಕೊಂಡಿದ್ದರೆ ಸ್ವಲ್ಪ ಜೋಕೆ! ಈ ಎಚ್ಚರಿಕೆಯನ್ನು ಸುಮಾರು ಅರ್ದ ವರ್ಷಗಳ ಮೊದಲೇ ಕೊಡಬೇಕಾಗಿಡಿತು, ಕ್ಷಮೆಯಿರಲಿ! ಇನ್ನು ಮುಂದೆ ಅಕ್ರಮ ಸಂಪಾದನೆಗಳ ಮೇಲೆ ದಾಳಿ ಮಾಡುವ IT ಅಧಿಕಾರಿಗಳು ಮೀನಾ ಮೇಷ ಎಣಿಸದೆ, ಕನಿಷ್ಠ ಒಂದಿಷ್ಟೂ ಸುಳಿವನ್ನೂ ನೀಡದೆ ಯಾವುದೇ ಸಮಯದಲ್ಲಾದರೂ ಮನೆಗೆ ನುಗ್ಗಬಹುದು ಅಲ್ಲದೆ ಇನ್ನು ಮುಂದೆಲ್ಲ ಹಿಂದಿನಂತೆ ಇತ್ತ IT ಅಧಿಕಾರಿಗಳು ಮನೆಯನ್ನು ಜಾಲಾಡುತ್ತಿದ್ದರೆ ಗೊತ್ತಿಲ್ಲದಂತೆ ತನ್ನ ಲಾಯರಿನ ಮೂಲಕ ಕೋರ್ಟಿನ ಬಾಗಿಲು ತಟ್ಟುವ ಅವಕಾಶವೂ ಆ ವ್ಯಕ್ತಿಗೆ ಇರುವುದಿಲ್ಲ. ಈ ವಿಷಯ ಅದೆಷ್ಟು ಜನರಿಗೆ ಸಂತಸವನ್ನು ತರುತ್ತದೋ ಅಥವಾ ಆಕಾಶವೇ ತಲೆ ಮೇಲೆ ಬಿದಂತೆ ಮಾಡುತ್ತದೋ ಅದು ಅವರವರ ನಾಮಕ್ಕೆ ಹಾಗು ಬಕುತಿಗೆ ಬಿಟ್ಟದು. ಒಟ್ಟಿನಲ್ಲಿ ಇಂತಹ ಹಲವಾರು ಬದಲಾವಣೆಯೊಂದಿಗೆ ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ ಫೈನಾನ್ಸ್ ಬಿಲ್ (ಹಣಕಾಸು ಮಸೂದೆ) ಜಾರಿಗೊಂಡಿದೆ. ಮಾಧ್ಯಮಗಳಲ್ಲಿ ಅಷ್ಟೇನೂ ಚರ್ಚೆಗೆ ಗ್ರಾಸವಾಗಾದ ಅಥವಾ ನಿಜವಾಗಿಯೂ ಅಂತಹ ಮಹಾ ಬದಲಾವಣೆಗಳೇನೂ ಇಲ್ಲದ ಕಾರಣಕ್ಕೋ ಏನೋ(!) ಈ ಮಸೂದೆ ಅತ್ತ ಕಿವಿಯಿಂದ ಒಳನುಸುಳಿ ಇತ್ತ ಕಿವಿಯಿಂದ ಮರೆಯಾಯಿತು. ಆದರೂ ಇಷ್ಟು ತಿಂಗಳುಗಳ ನಂತರ ಈ ಬಿಲ್ಲಿನಲ್ಲಿರುವ ಕೆಲವು ಮಹತ್ವದ ಅಂಶಗಳನ್ನು ಅವುಗಳನ್ನು ನಾವು ಮರೆಸಿಕೊಳ್ಳುವ ಮುನ್ನ ಕೆದಕುವ ಮನಸ್ಸಾಯಿತು.


ಕೇವಲ ಲೋಕಸಭೆಯ ಸದಸ್ಯರುಗಳ ಅನುಮತಿಯೊಂದಿಗೆ ಜಾರಿಯಾಗಬಲ್ಲ ಮಸೂದೆಗಳಲ್ಲಿ ಹಣಕಾಸು ಮಸೂದೆಯೂ ಒಂದು. ಪ್ರಸ್ತುತ ಅಧಿಕಾರದಲ್ಲಿರುವ ಬಹುಮತ ಸರಕಾರದ ಪರಿಣಾಮ ಇಂತಹ ಹಲವಾರು ಮಸೂದೆಗಳನ್ನು ನೀರು ಕುಡಿದಂತೆ ಸಂಸತ್ತಿನಲ್ಲಿ ಪಾಸುಮಾಡಬಹದುದು. ಉದ್ದೇಶ ಸಾತ್ವಿಕವಾಗಿದ್ದು, ಪಾರದರ್ಶಕವಾಗಿ ಯಾವುದಾದರೊಂದು ಕಾನೂನನ್ನು ಜಾರಿಗೊಳಿಸಲು ಇಂತಹ ಬಹುಮತ ಸರಕಾರಗಳಿಗೆ ಇದು ಸುವರ್ಣಾವಕಾಶ. ಅದೇನೇ ಇರಲಿ ಸದ್ಯಕ್ಕೆ ಜಾರಿಯಾಗಿರುವ ಫೈನಾನ್ಸ್ ಬಿಲ್ ಸಹ ಇಂತಹದ್ದೇ ಒಂದು ಲೋಕಸಭೆಯಬಹುಒಮ್ಮತದ ಕಾನೂನಾಗಿದೆ ಹಾಗು ಸಾಮಾನ್ಯನೆಂಬ ಕುರುಡನಿಗೆ ಆಕಾಶದ ನಕ್ಷತ್ರವನ್ನು ತೋರಿದಂತಿದೆ!

1. ಇನ್ನು ಮುಂದೆ ಖಾಸಗಿ ಕಂಪನಿಗಳು ರಾಜಕೀಯ ಪಕ್ಷಗಳಿಗೆ ನೀಡುವ ಡೊನೇಷನ್ ಮೊತ್ತಕ್ಕೆ ಯಾವುದೇ ಬೇಲಿಯಿಲ್ಲ ಹಾಗು ಅಂತಹ ಕಂಪನಿಗಳಿಗೂ ಈ ರವಾನೆಗಳನ್ನು ‘ನೋಟ್’ಮಾಡಿಕೊಳ್ಳುವ ಅಗತ್ಯತೆ ಇಲ್ಲ! ಹೌದು, ಕಳೆದ ವರ್ಷದವರೆಗೂ ಕೇವಲ 7.5% ನಷ್ಟೇ ಹಣವನ್ನು (ಒಂದು ಕಂಪನಿಯ ಮೂರು ವರ್ಷದ ನಿವ್ವಳ ಲಾಭದ ಸರಾಸರಿಯ 7.5%) ಮಾತ್ರ ಪಕ್ಷವೊಂದಕ್ಕೆ ದೇಣಿಗೆಯ ರೂಪದಲ್ಲಿ ನೀಡಬಹುದಾಗಿದ್ದ ಕಾನೂನಿನ ನಿಯಮವನ್ನು ಗಾಳಿಗೆ ತೂರಿದ ಮಸೂದೆ ಈ ಬಾರಿ ಯಾವುದೇ ಕಂಪನಿಯಾಗಲಿ, ಅದೆಷ್ಟೇ ಹಣವನ್ನು ಆಗಲಿ, ತಮಗೆ ಹತ್ತಿರುವಿರುವ/ಸಹಕರಿಸುವ, ಅಧಿಕಾರದಲ್ಲಿರುವ/ವಿಪಕ್ಷಲ್ಲಿರುವ ಯಾವುದೇ ಪಕ್ಷಕ್ಕಾದರೂ ಸುರಿಯಬಹುದು. IT ಅಧಿಕಾರಿಗಳೂ ಇಲ್ಲಿ ಕಂಪನಿಯನ್ನು ಪ್ರೆಶ್ನಿಸಲಾರರು! ಅಲ್ಲದೆ ವಿದೇಶದಿಂದ ರಾಜಕೀಯ ಪಕ್ಷಗಳಿಗೆ ಬರುವ ಚಂದಾವನ್ನೂ ಕಳೆದ ಬಾರಿ 'ಲೀಗಲ್' ಮಾಡಿಯಾಗಿದೆ. ಇಂತಹುಗಳ ಮದ್ಯೆ ದೇಶವನ್ನು ನೆಡೆಸುವುದು ಜನರಿನದ ಆರಿಸಲ್ಪಟ್ಟ ಸರ್ಕಾರವೇ ಅಥವಾ ಈ ರೀತಿ ತೆರೆಮರೆಯ ಚೋರನಂತೆ ಬಿಗಿಹಿಡಿತವನ್ನು ಸಾಧಿಸಬಲ್ಲ ದೇಶೀ ಹಾಗು ವಿದೇಶಿ ಕಂಪನಿಗಳೇ ಎಂಬ ಸಂಶಯ ಇಲ್ಲಿ ಮೂಡದೇ ಇರದು?!

2. IT ACT 1962 ರ ಪ್ರಕಾರ ಯಾವುದೇ IT ದಾಳಿ ನೆಡೆಯುವ ಮುನ್ನ ಅಲ್ಲೊಂದು ಬಲವಾದ ಕಾರಣವಿರಬೇಕು. ಅದನ್ನೇ ಕಾನೂನಿನ ಚೌಕಟ್ಟಿನಲ್ಲಿ ‘Reason to Believe' ಎಂದು ಕರೆಯಲಾಗುತ್ತದೆ. ಇಲ್ಲಿ ಅಕ್ರಮವಾಗಿ ಕೂಡಿಟ್ಟುರುವ/ಗಳಿಸಿಕೊಂಡಿರುವ ಹಣ ಅಥವಾ ಚಿನ್ನ ಅಥವಾ ಆಸ್ತಿ ಅಥವಾ ಇವೆಲ್ಲವೂ ಆದರೂ ಸರಿಯೇ ಒಟ್ಟಿನಲ್ಲಿ ದಾಳಿಯನ್ನು ನೆಡೆಸುವ ಅಧಿಕಾರಿ ತಾನು ದಾಳಿ ನೆಡೆಸುತ್ತಿರುವ ನಿಖರ ವಿಷಯದ ಬಗ್ಗೆ ತನ್ನ ಮೇಲಧಿಕಾರಿಯಲ್ಲ್ಲಿ ಅನುಮತಿಯನ್ನು ಪಡೆದು ತದಾನಂತರ ಭ್ರಷ್ಟರ ಮನೆ ಆಫೀಸುಗಳಿಗೆ ಲಗ್ಗೆ ಇಡಬಹುದಾಗಿತ್ತು. ಪ್ರಸ್ತುತ ಕಾನೂನು ಇಂತಹ ಒಂದು ನಿಯಮವನ್ನು ಇಲ್ಲವಾಗಿಸಿದೆ. ಬಿಕರಿಯಾಗಿರುವ ವ್ಯವಸ್ಥೆಯಲ್ಲಿ IT ಇಲಾಖೆಯ ಮೇಲೆ ಒಂದಿಷ್ಟು ಭಯ ಭಕ್ತಿ ಉಳಿಯಬೇಕು ಎಂದರೆ ಇಂತಹ ನಿರ್ಧಾರಗಳೇನೋ ಅತ್ಯವಶ್ಯಕ. ಆದರೆ ಇದೆ ಕಾನೂನನ್ನು ಅಧಿಕಾರದಲ್ಲಿರುವ ಸರ್ಕಾರಗಳು ತಮ್ಮ ವಿರೋಧಿಗಳನ್ನು ಮಟ್ಟ ಹಾಕಲು ಮಾತ್ರ ಬಳಸಿಕೊಂಡರೆ ಇದಕ್ಕಿಂತ ದುರಂತ ಮತ್ತೊಂದಿರುವುದಿಲ್ಲ.

3. ಮಾತೆತ್ತಿಯರೇ ಪಾರದರ್ಶಕತೆ ಎನ್ನುವ ನಮ್ಮ ಸರ್ಕಾರಗಳು ಆ ನಿಟ್ಟಿನಲ್ಲಿ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಮಾತ್ರ ಹಲವರಲ್ಲಿ ದಿಗಿಲನ್ನುಟ್ಟಿಸುತ್ತವೆ. ಪ್ರಸ್ತುತ ಕಾನೂನಿನಲ್ಲಿ ಈ ಪಾರದರ್ಶಕತೆ ಎಂಬ ವಿಶೇಷಣಕ್ಕೆ ಇಂಬು ಕೊಡುವಂತೆ 'ಎಲೆಕ್ಟ್ರೋರಿಯಾಲ್ ಬಾಂಡ್' ಎಂಬೊಂದು ನೀತಿಯನ್ನು ಜಾರಿಗೊಳಿಸಲಾಯಿತು. ಅದೇನೆಂದರೆ ಇನ್ನು ಮುಂದೆ ಯಾವುದೇ ರಾಜಕೀಯ ಪಕ್ಷಗಳಿಗೆ ದೇಣಿಗೆಯ ರೂಪದಲ್ಲಿ ಹಣವನ್ನು ನೀಡಬಯಸಿದರೆ ಅಬ್ಬಬ್ಬಾ ಎಂದರೆ 2000 ರೂಪಾಯಿಗಳನಷ್ಟೇ ನೀಡಬಹುದು. ಒಂದುಪಕ್ಷ ಅದಕ್ಕಿಂತ ಹಚ್ಚಿನ ಹಣವನ್ನು ನೀಡುವ 'ಅಗತ್ಯತೆ' ಏನಾದರು ನಿಮಗೆ ಬಂದರೆ ಆಗ ನೀವು ಎಲೆಕ್ಟ್ರೋರಿಯಾಲ್ ಬಾಂಡ್ ಗಳನ್ನೇ ಖರೀದಿಸಬೇಕು. ನೀವು ಬ್ಯಾಂಕುಗಳಿಗೆ ನೀಡುವ ಹಣದ ಮೊತ್ತದ ಸರಿಸಮನಾಗಿ ಆಯಾ ಬ್ಯಾಂಕುಗಳು ನಿಮಗೆ ಕರಾರುಪತ್ರವೊಂದನ್ನು ನೀಡುತ್ತವೆ. ಇದನ್ನೇ ವಿತ್ತವಲಯಲ್ಲಿ ಎಲೆಕ್ಟ್ರೋರಿಯಾಲ್ ಬಾಂಡ್ ಎಂದು ಕರೆಯಲಾಗುತ್ತದೆ. ಇಂತಹ ಬಾಂಡ್ ಗಳನ್ನು ನೀವು ತಮಗಿಷ್ಟವಾದ ಪಕ್ಷದ ಖಾತೆಗಳೆಗೆ ಮನಃಪೂರ್ವಕವಾಗಿ ಜಮಾವಣೆಮಾಡಬಹುದು. ಆದರೆ ಪಾರದರ್ಶಕತೆಯ ಹಿನ್ನಲೆಯಲ್ಲಿ ಇಂತಹ ಎಲೆಕ್ಟ್ರೋರಿಯಾಲ್ ಬಾಂಡ್ ಗಳು ಅದೆಷ್ಟು ಪ್ರಸ್ತುತ ಎಂಬುದೇ ಪ್ರೆಶ್ನೆ. ಏಕೆಂದರೆ ದೊಡ್ಡ ದೊಡ್ಡ ದೇಣಿಗೆಯನ್ನು ದೇಶದ ಹಿರಿಯ ಕಂಪೆನಿಗಳಿಂದ, ವ್ಯಕ್ತಿಗಳಿಂದ ಸ್ವೀಕರಿಸುವ ರಾಜಕೀಯ ಪಕ್ಷಗಳು ಕೊಟ್ಟವರ ನಾಮವನ್ನು ಅನಾವರಣಗೊಳಿಸದಿದ್ದರೆ ಏನು ಬಂತು? ಯಾವ ಬಗೆಯಿಂದ ಈ ನಿಯಮ ಪಾರದರ್ಶಕತೆಯ ಪರಿಧಿಯೊಳಗೆ ಬರುತ್ತದೆ?

4. ಇವೆಲ್ಲ ವಿಷಯಗಳಿಗಿಂತ ಮಿಗಿಲಾದ ಹಾಗು ಮಹತ್ವಪೂರ್ಣವಾದ ವಿಚಾರವೆಂದರೆ the way the Bill has been Implemented. ಉದಾಹರಣೆಗೆ ಈಗ ನೀವೊಂದು ಹೊಸ ಕಾನೂನನ್ನುದೇಶದಾದ್ಯಂತ ತರಲು ಇಚ್ಛಿಸುತ್ತೀರ ಎಂದಿಟ್ಟುಕೊಳ್ಳಿ. ಅಂತಹ ಯಾವುದೇ ಕಾನೂನುಗಳು ಮೊದಲು ಲೋಕಸಭೆ ನಂತರ ರಾಜ್ಯಸಭೆಯಲ್ಲಿ ಚರ್ಚೆಗೊಂಡು, ತೇರ್ಗಡೆಗೊಂದು, ರಾಷ್ಟ್ರಪತಿಯವರ ಅಂಕಿತಕ್ಕೆ ಹೋಗಿ ತದನಂತರ ದೇಶದಾದ್ಯಂತ ಕಾನೂನಾಗಿ ಜಾರಿಗೊಳ್ಳುತ್ತದೆ. ಆದರೆ ಕೆಲವು ಮಸೂದೆಗಳು ಕಾನೂನಾಗಿ ಜಾರಿಗೊಳಲು ಕೇವಲ ಲೋಕಸಭೆಯ ಸರ್ವಾನುಮತದ ಒಪ್ಪಿಗೆಯಷ್ಟೇ ಸಾಕು. ಅಂತಹ ಕೆಲವು ಮಸೂದೆಗಳಲಿ ಹಣಕಾಸು ಮಸೂದೆಯೂ ಒಂದು. ಈಗ ನೀವು ಇಚ್ಛಿಸುತ್ತಿರುವ ಕಾನೂನು ಬೇರೆ ಯಾವುದಾದರೊಂದು ಮಸೂದೆಯಾಗಿದ್ದರೆ ಮೇಲ್ಮನೆ (ರಾಜ್ಯಸಭೆ) ಹಾಗು ಕೆಳಮನೆ (ಲೋಕಸಭೆ) ಯ ಅನುಮತಿಗೆ ಕಾದುಕೂರಬೇಕಿತ್ತು. ಆದರೆ ಒಂದು ಪಕ್ಷ ನೀವೇನಾದರೂ ಆ ಮಸೂದೆಯನ್ನು ಹಣಕಾಸು ಮಸೂದೆಯೊಟ್ಟಿಗೆ ಸೇರಿಸಿ ಕೈ ತೊಳೆದುಕೊಂಡು ಕುಳಿತರೆ ನಿಮ್ಮ ಕೆಲಸ ಭಾಗಶಃ ಆದಂತೆಯೇ! ನೀವು ಇಚ್ಛಿಸಿದ ಕಾನೂನು ನಿಜವಾದ ಹಣಕಾಸು ಮಸೂದೆಯೊಟ್ಟಿಗೆ ಸೇರಿ ಕೇವಲ ಲೋಕಸಭೆಯ ಅನುಮತಿಯೊಂದಿಗೇ ಪಾಸಾಗಿಬಿಡುತ್ತದೆ. ಅಲ್ಲದೆ ಮೊದಲೇ ಹೇಳಿದಂತೆ ಲೋಕಸಭೆಯಲ್ಲಿ ಮೆಜಾರಿಟಿ ಸದಸ್ಯರು ಒಂದೇ ಪಕ್ಷದವರಾಗಿದ್ದರೆ (ಪ್ರಸ್ತುತ ಲೋಕಸಭೆಯಂತೆ) ಅವರು ಆಡಿದ್ದೇ ಆಟ, ಹೇಳಿದ್ದೆ ಪಾಠ! ಪ್ರಸ್ತುತ ಫೈನಾನ್ಸ್ ಬಿಲ್ಲಿನಲ್ಲಿ ಇದೇ ರೀತಿ ಐಟಿ ರೇಡ್, ವಿದೇಶಿ ದೇಣಿಗೆ ಎಂಬ ಹಲವಾರು ವಿಷಯಗಳನ್ನು ಸೇರಿಸಿ, ಅವುಗಳಿಗೆ ಹಣಕಾಸು ಮಸೂದೆಎಂಬ ಬಣ್ಣವನ್ನು ಲೇಪಿಸಿ,ದೇಶದ ಎರಡೂ ಸದನಗಳಲ್ಲಿ ಕೂಲಂಕೂಷವಾಗಿ ಚರ್ಚಿಸದೆ ಏಕಮುಖವಾಗಿ ಕಾನೂನನ್ನು ಜಾರಿಗೆ ತರಲಾಗಿದೆ ಹಾಗು ಇದು ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಬಹಳ ಆತಂಕದ ವಿಚಾರ ಎಂಬುದು ಹಲವು ವಿತ್ತಪಂಡಿತರ ಅಭಿಪ್ರಾಯ.


ಇವುಗಳನ್ನು ಹೊರತುಪಡಿಸಿ ಕಾರ್ಪೊರೇಟ್ ಟ್ಯಾಕ್ಸ್ ನಲ್ಲಿ ಇಳಿಕೆ, ಸ್ಟಾರ್ಟ್-ಅಪ್ಸ್ ಗಳಿಗೆ ತೆರಿಗೆಯಲ್ಲಿ ವಿನಾಯಿತಿ ಎಂಬ ಕೆಲವು ಬಹುಪಯೋಗಿ ಅಂಶಗಳನ್ನೂ ಈ ಫೈನಾನ್ಸ್ ಬಿಲ್ಲಿನಲ್ಲಿ ಅಳವಡಿಸಲಾಗಿದೆ. ಆದರೆ ಯಾವುದೇ ಕಾನೂನಾಗಲಿ ಅದು ಸಂವಿಧಾನಿಕವಾಗಿ, ಸರ್ವಾನುಮತದ ಅನುಮತಿಯ ವಿನಃ ಜಾರಿಗೊಂಡರೆ/ಜಾರಿಗೊಳಿಸಿದರೆ ಮುಂಬರುವ ಪೀಳಿಗೆಯೂ ಅದೇ ಚಾಳಿಯನ್ನು ಬೆಳಿಸಿಕೊಂಡು ಪ್ರಜಾತಂತ್ರತೆಯಂಬ ಕೋಟೆಯನ್ನು ಅದ್ವಾನವನ್ನಾಗಿ ಮಾಡಿಬಿಡಬಹುದು. ಅಲ್ಲದೆ ದೇಶದ ಜನತೆಯೂ ಜಾರಿಗೊಳ್ಳುವ ಪ್ರತಿ ಕಾನೂನನ್ನೂ ಕೂಲಂಕುಷವಾಗಿ ಅರಿತುಕೊಳ್ಳುವ ಪ್ರಯತ್ನವನ್ನು ಮಾಡಬೇಕು. ಪ್ರೆಶ್ನಿಸಬೇಕು. ಪಕ್ಷಾತೀತವಾಗಿ. ಮನೆಯಲ್ಲಿ ಅಪ್ಪ ಜೋಜಾಡಿಕೊಂಡು ಹಣವನ್ನು ಕಳೆದುಕೊಂಡು ಬಂದರೆ ಮನೆಯವರು ಆತನನ್ನು ತಿದ್ದಲು ಪ್ರತ್ನಿಸುತ್ತಾರೆಯೇ ವಿನಃ ಅದನ್ನು ಪಕ್ಕದ ಮನೆಯವರೊಟ್ಟಿಗೆ ಹೇಳಿಕೊಂಡು ವ್ಯಂಗ್ಯಮಾಡುವುದಿಲ್ಲ! ಅಲ್ಲವೇ?

Friday, October 6, 2017

ಕಥೆ - ಮಧುಮಗನ ಮದುವೆ..

ಹುಡುಗ ಈ ಬಾರಿ ಮದುವೆ ಆಗುತ್ತಿದ್ದಾನಂತೆ. ಮೊದಲ ವರ್ಷ ಮನೆ, ಕಳೆದ ವರ್ಷ ಕಾರು ತೆಗೆದುಕೊಂಡ ಆತನಿಗೆ ಪ್ರಸ್ತುತ ವರ್ಷ ಮಾಡಲು ಬೇರೇನೂ ಕ್ಯಾಮೆ ಇಲ್ಲದ ಕಾರಣ ಅವರ ಪೋಷಕಪೂಜ್ಯರು ಈ ಬಾರಿ ಮದುವೆ ಮಾಡಿಕೊಳ್ಳುವ ಆರ್ಡರ್ ಅನ್ನು ಜಾರಿಗೆ ತಂದಿದ್ದಾರಂತೆ. ದೇಶದ ರಾಜಧಾನಿಯಲ್ಲಿ ಕೆಲಸ ಗಿಟ್ಟಿಸಿಕೊಂಡು ವರ್ಷಕ್ಕೊಮ್ಮೆ ಅಥವಾ ಎರಡು ಸಾರಿ (ಆದೂ ದೀಪಾವಳಿ ಹಬ್ಬದ ಇನ್ಕ್ರಿಮೆಂಟ್ ಸಿಕ್ಕರೆ ಮಾತ್ರ) ಮನೆಗೆ ಬಂದೊಗುವ ಅಮಾಯಕನಿಗೆ ಬಂದಾಗಲೆಲ್ಲ ಒಂದಲ್ಲೊಂದು ಪ್ರಾಜೆಕ್ಟ್ ಗಳನ್ನು ನೀಡಿ ಅದನ್ನು ಪೂರ್ಣಗೊಳಿಸಿಕೊಂಡೆಯೇ ತೀರುತ್ತಿದ್ದರು ಆತನ ಪೋಷಕರು. ಈ ವರುಷದ ಮದುವೆಯ ನಂತರ ಮುಂದಿನ ವರ್ಷ ಅದೇನು ಕೇಳುವರೋ/ಹೇಳುವರೋ ಎಂಬುದೇ ಎಂದು ಪ್ರಸ್ತುತ ಸುತ್ತ ಮುತ್ತಲಿನೆಲ್ಲರಿಗೂ ಕಾಡುತ್ತಿರುವ ಏಕೈಕ ಪ್ರೆಶ್ನೆ. ಹೆತ್ತವರು ಕೇಳಿದಕ್ಕೆಲ್ಲ ಕೋಲೆ ಬಸವನಂತೆ ತಲೆಯಾಡಿಸುವ ಮಧುಮಗ ತನ್ನ ಫ್ಯೂಚರ್ ಹೆಂಡತಿಯೊಟ್ಟಿಗೆ ಅದೇಗೆ ಜೀವನದ ಬಂಡಿಯನ್ನು ಸವೆಸುತ್ತಾನೋ ಕಾದು ನೋಡಿ ಆನಂದ ಪಡಬೇಕು ಎಂದು ಕೆಲವರು ಘಳಿಗೆ ನೋಡುತ್ತಿದ್ದರು!!


ಹೇಳಿದ ದಿನಕ್ಕಿಂತ ಒಂದು ದಿನ ಮುಂಚೆಯೇ ಬಂದಿಳಿದ ಮಗನನ್ನು ಕಂಡು ಪೋಷಕರಿಂದಿಡಿದು ಮದುವೆಗೆ ಜಮಾವಣೆಗೊಂಡಿದ್ದ ನೆಂಟರಾದಿಗಳಿಗೂ ಅಂದು ಸಂತಸ. ಮದುವೆಗೆ ಇನ್ನು ಮೂರು ವಾರಗಳಿವೆ. ಮದುವೆಯ ಆಡಳಿತದ ಅಧಿಕಾರ ಅಪ್ಪನೊಬ್ಬನಿಗೆ ಮಾತ್ರ ಇದ್ದಿದ್ದರಿಂದ ಮಧುಮಗ ನಿರಾಳ. ಮನೆಯ ಬಣ್ಣದಿಂದಿಂದಿಡು ಮಧುಮಗನ ಒಳ ಉಡುಪುಗಳ ಆಯ್ಕೆಗೂ ಅಪ್ಪನ ಇಂಗಿತವೇ ಬೇಕಿದ್ದಿತು. ಆದ ಕಾರಣ ಮದುವೆ ಮನೆಯ ಕೆಲಸ ಕಾರ್ಯಗಳ ಕಳ್ಳ ನೆಪವನ್ನು ಒಡ್ಡಿ ಮೂರು ವಾರದ ಮುಂಚೆಯೇ ತಮ್ಮ ಕ್ಯಾಂಪ್ ಅನ್ನು ತೆರೆದಿದ್ದ ಮಧುಮಗನ ಸೋದರಸಂಬಂಧಿಗಳು ಹಾಡು, ಹರಟೆ, ಇಸ್ಪೀಟು, ಡ್ರಿಂಕು ಎನ್ನುತ್ತಾ ತಮ್ಮ ಮನೋರಂಜನೆಯ ಅಡ್ಡವನ್ನಾಗಿ ಮನೆಯನ್ನು ಮಾಡಿಕೊಂಡಿದ್ದರು. ಏನೇ ಹೇಳಿದರು 'ದೊಡ್ಡಪ್ಪನಿಗೆ ಹೇಳಿ' ಎನ್ನುತ್ತಾ ಅಲೆಮಾರಿಗಳಂತೆ ಮನೆಯೊಳಗೇ ಅಡ್ಡಾಡಿಕೊಂಡು ಇದ್ದರು. ಮಧುಮಗ ಬಂದು ಎಲ್ಲರನ್ನು ಮಾತಾಡಿಸಿ ತನ್ನ ಲಗೇಜುಗಳ ಸಮೇತ ಆತನ ರೂಮಿನೊಳಗೆ ಹೋಗುವುದನ್ನೇ ಕಾಯುತ್ತಿದ್ದ ಈ ಪಡೆ, ಆತನನ್ನೇ ಹಿಂಬಾಲಿಸುತ್ತ ರೂಮಿನ ಒಳಹೊಕ್ಕು, ಬಾಗಿಲನ್ನು ಮುಚ್ಚಿ, ಹಸಿದ ಪ್ರಾಣಿಗಳಂತೆ ಕ್ಷಣಾರ್ಧದಲ್ಲಿ ಆತನ ಲಗೇಜಿನ ಮೇಲೆ ಮುಗಿಬಿದ್ದವು. ಕೆಲನಿಮಿಷಗಳ ಹುಡುಕಾಟದ ನಂತರವೂ ತಾವು ‘ಬಯಸಿದ್ದು’ ಸಿಗದಿದ್ದಾಗ ಹ್ಯಾಪೆ ಮೊರೆಯನ್ನು ಹಾಕಿಕೊಂಡು ಒಂದೊಂದಾಗೆ ಜಾಗ ಕಿತ್ತವು. ಆದರೆ ಸಂಜೆ ಯಾರಿಗೂ ತಿಳಿಯದಂತೆ ಕಿಡ್ನಾಪ್ ಮಾಡಿಯಾದರೂ ಸರಿಯೇ ಊರಿನ ಬಾರಿಗೆ ತನ್ನನ್ನು ಎತ್ತಾಕಿಕೊಂಡು ಹೋಗಿ ನಾಲ್ಕು ನಾಲ್ಕು ಪೆಗ್ ಗಳನ್ನು ಗಂಟಲಿನೊಳಗೆ ಗಟಗಟ ಇಳಿಸಿ ಜೇಬಿಗೆ ಕತ್ತರಿ ಹಾಕುವರು ಎಂಬುದ ಚೆನ್ನಾಗಿ ಬಲ್ಲ ಮಧುಮಗ.

ತುಸು ಹೊತ್ತು ಹಾಗೆಯೇ ವಿರಮಿಸಲೆಂದು ಮಂಚದ ಮೇಲೆ ಒರಗಿದ್ದ ಮಧುಮಗನ ದೃಷ್ಟಿ ಕೋಣೆಯ ಮೂಲೆಯ ಮೇಜಿನ ಮೇಲಿಟ್ಟಿದ್ದ ಮಧುವೆಯ ಆಮಂತ್ರಣ ಪ್ರತಿಗಳ ಮೇಲೆ ಬಿದ್ದಿತು. ಅದಾಗಲೇ ನೆಂಟರಾದಿಗಳಿಂದಿಡಿದು ಮಧುಮಗನ ಗೆಳೆಯರಾದಿಗಳಿಗೆ ಅಪ್ಪನೇ ಆಮಂತ್ರಣ ಪ್ರತಿಯನ್ನು ಹಂಚಿದ್ದರಿಂದ ಹಾಗು ಉಳಿದ ಇತರ ಗೆಳೆಯರು ಹಾಗು ಸಹೋದ್ಯೋಗಿಗಳಿಗೆ ಹುಡುಗನೇ ಖುದ್ದಾಗಿ ಫೋನಾಹಿಸಿ ಕರೆದಿದ್ದರಿಂದ್ದ ಮೇಜಿನ ಮೇಲಿದ್ದ ಪ್ರತಿಗಳೆಲ್ಲವೂ ಮಿಕ್ಕಿ ಉಳಿದವುಗಳೆಂದು ಅಂದುಕೊಂಡನು. ಹಾಗೆಯೆ ಒಂದೆರೆಡು ಪ್ರತಿಗಳನ್ನು ತೆಗೆದುಕೊಂಡು ನೋಡುತ್ತಾನೆ. ಇನ್ನೂ ಯಾರೆಲ್ಲ ಮಿಕ್ಕಿರಬವುದೆಂದು ಯೋಚಿಸತೊಡಗುತ್ತಾನೆ. ಯೋಚನೆಯಲ್ಲಿ ಮಗ್ನನಾದ ಮಧುಮಗನಿಗೆ ಕೂಡಲೇ ‘ಅವರಿಬ್ಬರ’ ನೆನಪು ಮಗದೊಮ್ಮೆ ಮೂಡುತ್ತದೆ.ಅವರಿಬ್ಬರನ್ನೂ ಮದುವೆಗೆ ಕರೆಯುವವರೆಗೂ ಅದೇನೋ ಒಂದು ಅಪೂರ್ಣತೆಯ ಭಾವ ಮನದಲ್ಲಿ ಮೂಡುತ್ತಿರುತ್ತದೆ.

ವರುಷಗಳೇ ಕಳೆದಿವೆ ಈ ಇಬ್ಬರು ದೂರಾಗಿ. ಆತ ಕಾಲೇಜಿನ ಮೊದಲನೇ ದಿನದಿಂದ ಪರಮಾಪ್ತನೆನಿಸಿಕೊಂಡ ಸ್ನೇಹಿತನಾದರೆ ಆಕೆ ಕೆಲಸದ ಜೊತೆಯಲ್ಲಿ ಜೊತೆಯಾದ ಸ್ನೇಹಿತೆ.

ಮೊದಮೊದಲು ನಯ ನಾಜೂಕಿನಿಂದ 'ಹೋಗಿ, ಬನ್ನಿ' ಎನ್ನುತ್ತಿದ್ದ ಆತ ಬರ ಬರುತ್ತಾ 'ಬಡ್ಡಿಮಗ್ನೆ, ಸಿಗ್ರೆಟ್ ಕೊಡ್ಸೋ' ಎಂಬ ಮಟ್ಟಿಗೆ ಮಧುಮಗನ ಗೆಳೆಯನಾಗಿದ್ದ. ಕೊಂಚ ಮುಂಗೋಪಿ, ಉಳಿದಂತೆ ಸೀದಾ ಸಾದಾ ವ್ಯಕ್ತಿ. ಪರೀಕ್ಷೆಗಳಲ್ಲಿ ಪಾಸುಮಾಡಿಸುವುದರಿಂದಿಡಿದು ಹುಡುಗಿಯರಿಗೆ ಪ್ರೇಮಪತ್ರವನ್ನು ಬರೆದುಕೊಡುವವರೆಗೂ ಆತನ ಸಹಾಯವೇ ಬೇಕಿದ್ದಿತು. ದೋಸ್ತಿ ಎಂದರೆ ಅವರಿಬ್ಬರ ಹಾಗೆ ಇರಬೇಕು ಎಂದು ಇಡೀ ಕಾಲೇಜಿಗೆ ಕಾಲೇಜೇ ಮಾತಾಡಿಕೊಳ್ಳುತ್ತಿತ್ತು. ಅದೇನು ಒಂದು ಕೆಟ್ಟ ಘಳಿಗೆಯೋ, ಗ್ರಹಚಾರವೋ, ಅಥವಾ ತನ್ನ ದುರ್ಬುದ್ಧಿಯೋ ಅದೊಂದು ದಿನ ಯಾವುದೊ ಕೆಲಸದ ನಿಮಿತ್ತಾ ಐವತ್ತು ಸಾವಿರ ರೂಪಾಯಿಗಳನ್ನು ಆತನಿಂದ ಪಡೆದ ಮಧುಮಗ ಅದನ್ನು ಹಿಂದಿರುಗಿಸುವ ಮಾತನ್ನು ಮಾತ್ರ ಎತ್ತಲೇ ಇಲ್ಲ. ಇಂದು ನಾಳೆಯಾಗಿ, ನಾಳೆ ನಾಡಿದ್ದಾಗಿ, ದಿನಗಳು ತಿಂಗಳುಗಳಾಗಿ ಉರುಳಿದವು. ಈವೊಂದು ಕಾರಣಕ್ಕೆ ಏನೋ ನಿಧಾನವಾಗಿ ಮಧುಮಗ ಆತನ ಸಂಪರ್ಕದಿಂದ ವಿಮುಖನಾಗತೊಡಗಿದ್ದ. ಮಧುಮಗನಿಗೆ ದೆಹಲಿಯಲ್ಲಿ ಕೆಲಸ ದೊರೆತು ಚೆನ್ನಾಗಿ ದುಡಿಯಲು ಶುರುಮಾಡಿದ್ದ. ಆದರೆ ಆ ವೇಳೆಗಾಗಲೆ ಹಣವನ್ನು ಹಿಂದಿರುಗಿಸುವ ಮನಸ್ಥಿತಿಯೇ ಆತನಿಗೆ ಇಲ್ಲದಾಗಿದ್ದಿತು. ಕೆಲ ತಿಂಗಳ ಹಿಂದೆಯಷ್ಟೇ ಕೃಷ್ಣ-ಕುಚೇಲರಂತಿದ್ದ ಜೋಡಿಯನ್ನು ಕೇವಲ ಒಂದಿಷ್ಟು ನೋಟುಗಳ ಮಾಹೆ ಒಡೆದು ಪುಡಿಮಾಡಿದನ್ನು ಮಾತ್ರ ಮಧುಮಗ ಆಗೊಮ್ಮೆ ಈಗೊಮ್ಮೆ ನೆನೆದು ಚಿಂತಿಸುತ್ತಿದ್ದ. ಕೆಲವೊಮ್ಮೆ ತನ್ನ ಮೇಲೆ ತನಗೆ ಜಿಗುಪ್ಸೆ ಬಂದರೂ ಅದೇಗೋ ಅದನ್ನು ಅದುಮಿಕೊಂಡು ನಿರಾಳನಾಗಿದ್ದ. ಇತ್ತ ಕಡೆ ಹಣ ನೀಡಿದ್ದ ಗೆಳೆಯನೂ ಒಮ್ಮೆಯೂ ಈತನಿಗೆ ಫೋನಾಯಿಸುವುದಾಗಲಿ ಮಾಡಿರಲಿಲ್ಲ. ಕಾರಣ ತಿಳಿಯುವ ಗೋಜಿಗಂತೂ ಮಧುಮಗ ಹೋಗಿಯೇ ಇರಲಿಲ್ಲ.

ದೆಹಲಿಗೆ ಹೋಗಿ ಸಂಬಳವನ್ನುಎಣಿಸಲು ಶುರುವಿಟ್ಟಾಗ ಸಾಮನ್ಯವಾಗಿಯೇ ಹುಡುಗಿಯರನ್ನು ಗೆಳತಿಯರನ್ನಾಗಿ ಮಾಡಿಕೊಳ್ಳುವ ಗೀಳು ಅಲ್ಲಿನ ಎಲ್ಲರಲ್ಲೂ. ಸುತ್ತಲು,ತಿನ್ನಲು, ಹರಟೆಯೊಡೆಯಲು ಅಲ್ಲದೆ ಹತ್ತಿಪ್ಪತ್ತು ಫೋಟೋಗಳ ರಾಶಿಯೊಂದನ್ನು ತಮ್ಮ ಫೇಸ್ಬುಕ್ ಪೇಜಿನಲ್ಲಿ ಅಪ್ಲೋಡ್ ಮಾಡಲೂ ಹುಡುಗಿಯರ ಕೆಲ ಚಹರೆಗಳು ಅತಿಪ್ರಾಮುಖ್ಯ ವಿಚಾರಗಳಲ್ಲೊಂದಾಗಿದ್ದವು. ಜಿರೋಗಿರಿಯ ಕೂಪದಿಂದ ಹೀರೋಗಿರಿಯ ಶಿಖರವನ್ನೇರಲು ಬೇಕಾದ ಆಧಾರವಾಗಿ ಅಂದು ಹುಡುಗರು ಹುಡುಗಿಯರಿಗೆ, ಹುಡುಗಿಯರು ಹುಡುಗರಿಗೆ ಜೊತೆಯಲ್ಲಿ ಬೇಕಾಗಿದ್ದರು. ಇಂತಹ ಅವಲಂಬಿತ ಜೀವನದ ಕಾಲಘಟ್ಟದಲ್ಲಿ ಮಧುಮಗನಿಗೆ ಜೊತೆಯಾದವಳು 'ಅವಳು'. ತಮ್ಮೂರಿನ ಹತ್ತಿರದ ಹಳ್ಳಿಯಿಂದಲೇ ಬಂದ ಆಕೆ ಮಧುಮಗನ ಜೀವನದ ಹೂದೋಟವನ್ನು ಒಳಹೊಕ್ಕ ಮೊದಲ ಚಿಟ್ಟೆ. ಬೆಳಗಿನಿಂದ ಸಂಜೆಯವರೆಗೂ ಒಬ್ಬರನೊಬ್ಬರು ಬಿಟ್ಟಿರುತ್ತಿದ್ದ ಸಮಯವೇ ಬಲು ಕಡಿಮೆ. ಇವರಿಬ್ಬರ ಬಗೆಗೆ ಸಹೋದ್ಯೋಗಿಗಳು ಆಡಿಕೊಳ್ಳುವ ಗುಸುಗುಸು ಆಗಾಗ್ಗೆ ಮಧುಮಗನ ಕಿವಿಗೆ ಬೀಳುತ್ತಿದ್ದಾರು ಅದನ್ನು ಆತ ಹಿತವಾಗಿರುವ ಭಾವಕೋಶದೊಂದರೊಳಗೆ ಸೇರಿಸಿಕೊಳ್ಳುತ್ತಿದ್ದ. ಖುಷಿಯಾಗುತಿದ್ದ . ಆದರೆ ಆ ವಿಷಯವಾಗಿ ಎಂದೂ ಆಕೆಯೊಟ್ಟಿಗೆ ಮಾತಿಗಿಳಿದಿರಲಿಲ್ಲ. ಊಟ, ತಿಂಡಿ, ಓದು, ಪುಸ್ತಕ, ಜೀವನ, ಚಲನಚಿತ್ರ, ಸಾವು, ಹುಟ್ಟು, ಬ್ರಹ್ಮಾಂಡ, ಏಲಿಯನ್ಸ್, ಶಾಶ್ವತ, ನಶ್ವರ ಹೀಗೆ ಜಗತ್ತಿನಲ್ಲಿ ಘಟಿಸುವ ಅಥವಾ ಘಟಿಸುತ್ತಿರುವ ಪ್ರತಿಯೊಂದೂ ವಿಷಯವನ್ನೂ ಘಂಟೆಗಳ ಕಾಲ ಚರ್ಚಿಸುತ್ತಿದ್ದ ಇಬ್ಬರೂ ಕಾಲಚಕ್ರದ ಓಟದಲ್ಲಿ ತಮ್ಮನೇ ತಾವು ಮರೆತಿದ್ದರು. ವಾರಗಳು ದಿನಗಳಂತೆ ಕಳೆದವು. ಅವೊಂದು ದಿನ ಸಿಟಿಯ ಎತ್ತರವಾದ ಪಾರ್ಕಿನಲ್ಲಿ ಕೂತಿದ್ದ ಇಬ್ಬರು ಪಡುವಣದಲ್ಲಿ ಲೀನವಾಗುತ್ತಿದ್ದ ಸೂರ್ಯನನ್ನು ತದೇಕಚಿತ್ತದಿಂದ ನೋಡುತಿದ್ದರು. ಮಧುಮಗ ಇದ್ದಕ್ಕಿದಂತೆ ಅವಳನ್ನು ಉದ್ದೇಶಿಸಿ ತನಗರಿಯದಂತೆ ಆಕೆಯನ್ನು ಮನಸ್ಸಾರೆ ಇಚ್ಛಿಸುತ್ತಿದ್ದೇನೆಂದೂ ಆಕೆ ಸಮ್ಮತಿಸಿದರೆ ಕೂಡಲೇ ಮನೆಯವರನ್ನು ಒಪ್ಪಿಸುತ್ತೇನೆಂದೂ ಹೇಳಿ ಮೊದಲ ಬಾರಿಗೆ ಆಕೆಯ ಕೆನ್ನೆಯ ಮೇಲೊಂದು ಹೂಮುತ್ತನಿಟ್ಟು ಸುಮ್ಮನಾಗುತ್ತಾನೆ. ಈತನನ್ನೇ ಕಳವಳಗೊಂಡು ಕೆಲಹೋತ್ತು ನೋಡಿದ ಆಕೆ ಕೆಲ ಕ್ಷಣಗಳ ನಂತರ ಒಂದೇ ಸಮನೆ ಗಳಗಳ ಅಳಲು ಶುರು ಮಾಡಿದಳು. ಕಾರಣ ಅರಿಯನವನಾದ ಮಧುಮಗ ಆಕೆಯನ್ನು ಸಂತೈಸಲು ಮುಂದಾದಾಗ ಆತನನ್ನು ಒಮ್ಮೆಲೇ ದೂರಕ್ಕೆ ತಳ್ಳಿ 'ಪವಿತ್ರವಾದ ಗೆಳೆತನದ ಗುರಿ ಮದುವೆಯಾಗುವುದೊಂದೇ ಅಲ್ಲ, ಮೈಂಡ್ ಇಟ್!' ಎಂದು, ಆಕೆಯನ್ನು ಈತ ಮುಂದೆಂದೂ ಸಿಗುವುದಾಗಲಿ ಫೋನಾಯಿಸುವುದಾಗಲಿ ಮಾಡಬಾರದೆಂದು ಹೇಳಿ ಅಲ್ಲಿಂದ ಹೊರಟಳು. ಕ್ಷಣ ಮಾತ್ರದಲ್ಲೇ ಆಕಾಶವೇ ಕುಸಿದು ಕೆಳಗೆ ಬಿದ್ದಂತಹ ಅನುಭವವಾದ ಮಧುಮಗನಿಗೆ ತನ್ನ ಪ್ರೀತಿಯ ನಿವೇದನೆ ಅಷ್ಟೊಂದು ಘೋರ ಪಾಪವೇ ಎಂದನಿಸತೊಡಗಿತ್ತು. ಇದಾದ ಕೆಲದಿನಗಳಲ್ಲೇ ಆಕೆ ತನ್ನ ಕೆಲಸಕ್ಕೆ ರಾಜೀನಾಮೆಯನ್ನು ನೀಡಿ ಹೊರಡುವ ಮೊದಲು ಈತನಿಗೊಂದು ಕಾಗದವನ್ನಿಟ್ಟು ಅಲ್ಲಿಂದ ಬೀಳ್ಕೊಟ್ಟಳು. ಆಕೆ ಈತನನ್ನು ಒಬ್ಬ ಉತ್ತಮ ಗೆಳೆಯನಾಗಿ ಮಾತ್ರ ಹಚ್ಚಿಕೊಂಡಿದ್ದಳೆಂದೂ, ಮೊದಲೊಮ್ಮೆ ಈಕೆಗೆ ಈಗೆಯೆ ಗೆಳೆಯನೊಬ್ಬ ಪ್ರೇಮ ನಿವೇದನೆಯನ್ನು ಮಾಡಿ ಅತಿಯಾಗಿ ಸತಾಯಿಸಿದ್ದನೆಂದೂ, ಅಲ್ಲಿಂದ ಮುಂದಕ್ಕೆ ಈಕೆ ಯಾವ ಹುಡುಗನನ್ನೂ ಗೆಳೆಯನಾಗಿ ಮಾಡಿಕೊಳ್ಳಲಿಲ್ಲವೆಂದೂ, ದೇವರ ಕೃಪೆಯಿಂದ ಮಧುಮಗನಂತಹ ಒಳ್ಳೆಯ ಗೆಳೆಯ ಆಕೆಗೆ ದೊರೆತರೂ ಆತನೂ ತನ್ನ ಉದ್ದೇಶವನ್ನು ಪ್ರೀತಿ ಪ್ರೇಮವೆಂಬ ಮೂರುಕಾಸಿನ ಭಾವಗಳಿಗೇ ಮುಡಿಪಾಗಿಟ್ಟಿರುವುನ್ನು ಕಂಡು ಅತಿಯಾಗಿ ನೊಂದ ಆಕೆ ಇವನಿಂದ ದೂರವಾಗುತ್ತಿದ್ದಾಳೆ ಎಂಬುದು ಆ ಪತ್ರದ ಒಟ್ಟು ಸಾರಾಂಶವಾಗಿದ್ದಿತು. 'ಪ್ರೀತಿಯನ್ನು ಗೆಳೆತನಕ್ಕಿಂತ ಮಿಗಿಲಾದ ಭಾವವನ್ನಾಗಿ ಮಾಡಲಾಗದು, ಇಂದಿಗೂ ಎಂದೆಂದಿಗೂ' ಎಂಬ ಆಕೆಯ ಪತ್ರದ ಕೊನೆಯ ಸಾಲುಗಳು ಮಧುಮಗನನ್ನು ಈಗಲೂ ಕಾಡುತ್ತಿವೆ.

ತನ್ನ ಯೋಚನಾಲಹರಿಯಲ್ಲಿ ಮುಳುಗಿಹೋಗಿದ್ದ ಮಧುಮಗನನ್ನು ಹುಚ್ಚು ಹಿಡಿದ ವಾನರರಂತೆ ಅರಚಾಡುತಿದ್ದ ಸೋದರಸಂಬಂಧಿಗಳ ಸದ್ದು ಎಚ್ಚರಿಸಿತು. ಈ ಇಬ್ಬರು ಗೆಳೆಯರ ಬಗ್ಗೆ ರೂಮಿನ ಹೊರಗೆ ಅರಚುತ್ತಿದ್ದ ವಾನರರ ಗುಂಪಿನೊಳಗೇ ಒಂದಿಬ್ಬರು ಬಲ್ಲರಾದರೂ ಯಾರೂ ಆತನೊಟ್ಟಿಗೆ ಅಷ್ಟಾಗಿ ಚರ್ಚಿಸುತ್ತಿರಲಿಲ್ಲ. ಅಂದು ಸಂಜೆ ಅಂದುಕೊಂಡಂತೆ ಊರು ಸುತ್ತುವ ನೆಪವೊಡ್ಡಿ ಮಧುಮಗನನ್ನು ಎಳೆದುಕೊಂಡೋದ ಪಡೆ ಕಂಠಪೂರ್ತಿ ಕುಡಿದು ವಾಪಸ್ಸಾಗುವಾಗ ಮಧ್ಯರಾತ್ರಿ ಕಳೆದಿತ್ತು. ಎಣ್ಣೆಯ ನಶೆಯಲ್ಲಿ ಏನೆಲ್ಲಾ ಸಂಭಾಷಣೆಗಳು ನೆಡೆದವು ಎಂಬುದ ಅದೆಷ್ಟೇ ತಡಕಾಡಿದರೂ ಮಾರನೇ ದಿನ ಮಧುಮಗನಿಗೆ ನೆನಪಿಗೇ ಬಾರದಿರದಾಗಿದ್ದಿತು.

ದಿನಗಳು ಕಳೆದವು. ಮದುವೆಯ ಆ ದಿನ ಕೊನೆಗೂ ಬಂದೇ ಬಿಟ್ಟಿತು. ಊರಿನ ವಾರದ ಸಂತೆಗಿಂತಲೂ ಹೆಚ್ಚಿನ ಜನ ಮದುಮಗನ ಮನೆಯಲ್ಲಿ ಅಂದು ಜಮಾವಣೆಗೊಂಡಿದ್ದರು. ತಾಲೂಕಿನ MLA ಗಿಂತಲೂ ಮದುಮಗನ ಅಪ್ಪ ಅಂದು ಬ್ಯುಸಿ. ಮಧುಮಗ ಏಳುವುದನ್ನೇ ಕಾಯುತ್ತಿದ್ದ ಎಲ್ಲರು ಆತನ ನಿತ್ಯಕರ್ಮಗಳನ್ನೊಂದು ಒರೆತುಪಡಿಸಿ ಬೇರೆಲ್ಲ ಕಾರ್ಯಚಟುವಟಿಕೆಗಳನ್ನು ತಾವಾಗಿಯೇ ಅವನ ಮೇಲೆ ಮಾಡತೊಡಗಿದರು. ಬೆಳಗಿನಿಂದ ಸಂಜೆಯವರೆಗೂ ಮಧುಮಗ ಕೇವಲ ಆಡುವ ಗೊಂಬೆಯಂತಾಗಿದ್ದ. ಅಪ್ಪ, ಅಮ್ಮ, ಗೆಳೆಯರು, ಸೋದರರು ಅಲ್ಲದೆ ಕ್ಯಾಮೆರಾ ಮ್ಯಾನ್ ಗಳೂ ಸಹ ಹೇಳಿದಡೆ ಕೂರುವುದು, ನಿಲ್ಲುವುದಷ್ಟೇ ಆತನ ಕಾಯಕವಾಗಿದ್ದಿತು. ಅದು ಬಾಡೂಟದ ಮದುವೆಯಾದದ್ದರಿಂದ ನೆರೆದಿದ್ದ ಬಹುಪಾಲು ಜನರಿಗೆ ಜೋಡಿಗೆ ಆಶ್ರಿವದಿಸುವುದಕ್ಕಿಂತ ಹೆಚ್ಚಾಗಿ ಊಟದ ಕೋಣೆಯೊಳಗೆ ಓಡುವುದೇ ಅತಿ ಮಹತ್ವವಾದ ಕಾರ್ಯವಾಗಿದ್ದಿತು. ಆದರಿಂದ ಕಾಟಾಚಾರಕೆಂಬಂತೆ ಮ೦ಟಪದ ಬಳಿಗೆ ಬಂದು ಐವತ್ತೋ ನೂರೊ ರೂಪಾಯಿಗಳನ್ನು ನಾಲ್ಕಾಣೆಯ ಒಂದು ಕಾಗದೊಳಗೆ ತುರುಕಿ ಫೋಟೋ ತೆಗೆಸಿಕೊಳ್ಳಲೂ ನಿಲ್ಲದೆ ತರಾತುರಿಯಲ್ಲಿ ಜಾಗ ಕೀಳುತ್ತಿದ್ದರು. ಕೆಲವರಂತೂ ಸಾಲಿನಲ್ಲಿ ಕಾದು ಕಾದು ಎಲ್ಲಿ ಪಂಕ್ತಿಗಳು ಹೆಚ್ಚಾಗುತ್ತಿದ್ದಂತೆ ಮಾಂಸದ ಚೂರುಗಳ ಸಂಖ್ಯೆಯಲ್ಲೂ ಇಳಿಮುಖ ಕಾಣುತ್ತದೆಂಬ ಲೆಕ್ಕಾಚಾರದೊಂದಿಗೆ ಚಿಂತಾಗ್ರಸ್ತರಾಗಿ ಯಾರು ನೋಡುತ್ತಿಲ್ಲ ಎಂದು ತಮಗೆ ತಾವೇ ಅಂದುಕೊಂಡು ಸಾಲಿನಿಂದ ವಾಪಸ್ಸಾಗಿ ಊಟದ ಮನೆಯನ್ನು ಒಳಹೊಕ್ಕುತ್ತಿದ್ದರು. ಅಂತೂ ಬಂದ ಅಷ್ಟೂ ಜನರನ್ನು ಹಲ್ಲು ಕಿಸಿಯುತ್ತಾ ಮಾತನಾಡಿಸುತ್ತಿದ್ದ ಜೋಡಿಗೆ ಬಾಯೆಲ್ಲ ನೋವು ಶುರುವಾಗಿದ್ದಿತು. ಎರೆಡೆರಡು ಬಾರಿ ಗಡತ್ತಾಗಿ ಬಾರಿಸಿ, ಮದುವೆಗೆ ಬಂದ ಹುಡುಗಿಯರನ್ನು ನಗಿಸಲು ಹರಸಾಹಸ ಪಡುತ್ತಿದ್ದ ಸೋದರ ಪಡೆ ಇತ್ತಕಡೆ ಕೂತಿದ್ದ ತಮ್ಮನ್ನು ಒಂದಿಷ್ಟೂ ಗುರುತಿಡಿಯದಂತೆ ವರ್ತಿಸುತ್ತಿದ್ದದ್ದನ್ನು ಕಂಡು ಮಧುಮಗನಿಗೆ ಸಿಟ್ಟು ನತ್ತಿಗೇರತೊಡಗಿತ್ತು.

ಒಳ ಬರುತಿದ್ದ ಜನಸಂಖ್ಯೆ ಇನ್ನೇನು ಕ್ಷೀಣಿಸ ತೊಡಗಿತ್ತು ಎಂಬಷ್ಟರಲ್ಲಿ ವೀಲ್ ಚೇರಿನಲ್ಲಿ ವ್ಯಕ್ತಿಯೊಬ್ಬನನ್ನು ಕೂರಿಸಿಸಿಕೊಂಡು ಹಿರಿಯರೊಬ್ಬರು ಬರತೊಡಗಿದರು. ಗಡ್ಡವನ್ನು ಬಿಟ್ಟು, ಕಾಯಿಲೆ ಬಿದ್ದವನಂತಿದ್ದ ವ್ಯಕ್ತಿಯ ಕಾಲುಗಳೆರಡೂ ಇರದಾಗಿದ್ದವು. ಮಧುಮಗ ಯಾರೋ ಹುಡುಗಿಯ ಕಡೆಯವರಿರಬೇಕೆಂದು ಎಡಕ್ಕೆ ತಿರುಗಿದರೆ ಆಕೆ ತನಗೆ ಗೊತ್ತಿಲ್ಲವೆಂಬಂತೆ ತಲೆಯಾಡಿಸಿದಳು. 'ಬಡ್ಡಿ ಮಗ್ನೆ, ಡೆಲ್ಲಿಗೋದ್ರೆ ಏನ್ ನಾವೆಲ್ಲಾ ಮರ್ತ್ ಹೋದ್ವಾ ನಿಂಗೆ' ಎನ್ನುತ ಚೇರನ್ನು ತಳ್ಳಿಕೊಂಡು ಬಳಿಗೆ ಬಂದು ಮದುಮಗನ ಕೈಯ್ಯ ಕುಲುಕತೊಡಗಿದ ಆತ. ತನ್ನ ಜೀವಮಾನದಲ್ಲೇ ಮತ್ತೆಂದೂ ಈತನ್ನು ಎದುರಿಸುವ ಶಕ್ತಿಯನ್ನು ಕಳೆದುಕೊಂಡಿದ್ದ ಮಧುಮಗ ಕೆಲ ಕ್ಷಣಗಳ ಕಾಲ ಅವಕ್ಕಾಗಿ ನಿಂತುಬಿಟ್ಟಿದ್ದ. ತನ್ನ ಕೃಷ್ಣ ಕುಚೇಲರ ಜೋಡಿಯಲ್ಲಿ ಕೃಷ್ಣನಾದವನಿವನು! ಕಾಲೇಜು ಕಳೆದು ಕೆಲದಿನಗಳ ನಂತರ ಮನೆಗೆ ಹೋಗುವಾಗ ಹಿಂದಿನಿಂದ ಬಂದ ಬಸ್ಸೊಂದು ಈತನ ಕಾಲಿನ ಮೇಲೆ ಹಾದುಹೋದದ್ದಾಗಿಯೂ, ಎಷ್ಟೇ ಪ್ರಯತ್ನ ಪಟ್ಟರೂ ಕಾಲನ್ನು ಉಳಿಸಿಕೊಳ್ಳಲಾಗಲಿಲ್ಲವೆಂದೂ, ವರ್ಷಗಳ ಕಾಲ ಆಸ್ಪತೆಯಲ್ಲಿಯೇ ಕಳೆಯಬೇಕಾಯಿತೆಂದೂ ಈತನ ವೃತ್ತಾಂತವನ್ನು ವೀಲ್ ಚೇರನ್ನು ತಳ್ಳಿಕೊಂಡು ಬಂದ ಅವರಪ್ಪ ಹೇಳಿದರು. ಅಲ್ಲಿಯವರಿಗೂ ಮಧುಮಗನ ಕೈಯನ್ನೇ ಬಿಗಿದಿಡಿದುಕೊಂಡಿದ್ದ ಆತ ಕೆಮ್ಮಿ ಗಂಟಲನ್ನು ಸರಿಪಡಿಸಿಕೊಳ್ಳುತ್ತಾ ಹುಡುಗಿಗೂ ಮಧುವೆಯ ಶುಭಾಶಯವನ್ನು ಕೋರಿ ತಾನು ತಂದಿದ್ದ ಉಡುಗೊರೆಯ ಪೊಟ್ಟಣವನ್ನು ಇಬ್ಬರಿಗೂ ಒಂದೊಂದು ಕೊಟ್ಟು, ಒಂದೆರೆಡು ಫೋಟೋಗಳನ್ನು ತೆಗೆದುಕೊಂಡು ಅಲ್ಲಿಂದ ಹೊರಟ. ಹೊರಡುವಾಗ 'ಅತ್ತಿಗೆನ ಕರ್ಕೊಂಡು ಮನೆಗ್ ಬಂದ್ ಹೋಗು' ಎಂದ ಅವನ ಧ್ವನಿಯನ್ನು ಕೇಳಿ ಮಧುಮಗನ ಕಣ್ಣಂಚು ಒದ್ದೆಯಾದದ್ದು ಮಾತ್ರ ಯಾರಿಗೂ ತಿಳಿಯಲಿಲ್ಲ. ನನಗೊಬ್ಬ ಆಪ್ತ ಗೆಳೆಯಲಿಲ್ಲ ಎಂದೇ ಎಲ್ಲರೊಟ್ಟಿಗೂ ಹೇಳಿ ಕೊರಗುತ್ತಿದ್ದ ಮಧುಮಗ, ಕಷ್ಟಗಾಲದಲ್ಲೂ ನೀಡಿದ್ದ ಅಷ್ಟು ದೊಡ್ಡ ಮೊತ್ತದ ಹಣವನ್ನು ವಾಪಸ್ಸು ಕೇಳದ ಈತನನ್ನು ನೆನಪಿನ ಮೂಟೆಯಲ್ಲಿ ಕಟ್ಟಿ ಎಲ್ಲೋ ಮೊಲೆಗೆಸೆದಿದ್ದನು. ಮೇಲಾಗಿ ತಾನು ಕರೆಯದಿದ್ದರೂ ಅವನಾಗಿಯೇ ಮದುವೆಗೆ ಬಂದು ಗೆಳೆತನ ಏನೆಂಬುದನ್ನು ತನಗೆ ತೋರಿಸಿಕೊಟ್ಟ ಎಂದುಕೊಳ್ಳುತ್ತಾನೆ. ನಾಚಿಕೆಯಿಂದ ತಗಿದ್ದ ಮಧುಮಗನ ತಲೆ ಮೇಲೇಳಲು ತಡಕಾಡುತ್ತಿರುತ್ತದೆ. ಹಣವೆಂಬ ಮಾಹೆ ಗೆಳೆತನದಲ್ಲಿ ಎಂದಿಗೂ ಬರಬಾರದು ಎಂದು ಕೊಳ್ಳುತ್ತಾನೆ. ಅಲ್ಲದೆ ಆತನ ಆ ಐವತ್ತು ಸಾವಿರಕ್ಕೆ ಮತ್ತೂ ಐವತ್ತು ಸಾವಿರ ಸೇರಿಸಿ ಯಾರಿಗೂ ತಿಳಿಯದಂತೆ ಅವನಿಗೆ ತಲುಪಿಸಬೇಕೆಂದು ಅಂದುಕೊಳ್ಳುತ್ತಾನೆ. ತನಗೊಬ್ಬ ಗೆಳೆಯನೆಂಬುವನು ಇದ್ದಾನೆ ಎಂಬ ಸಮಾಧಾನವೇ ಅವನಿಗೆ ಕೋಟಿ ಗಳಿಸಿದಕ್ಕಿಂತಲೂ ಮಿಗಿಲಾಗಿರುತ್ತದೆ.

ಇನ್ನೇನು ಜೋಡಿ ಊಟದ ಹಾಲಿನೊಳಗೆ ಹೋಗಬೇಕು ಎನ್ನುವಷ್ಟರಲ್ಲಿ 'ಅವಳು' ಹತ್ತಿರ ಬಂದು ನಿಂತಿರುತ್ತಾಳೆ! ಮಧುಮಗನಿಗಂತೂ ಪರಮಾಶ್ಚರ್ಯ. ತನ್ನ ಕಣ್ಣುಗಳನ್ನು ಆತನಿಗೆ ನಂಬಲೇ ಆಗಲಿಲ್ಲ. ತನ್ನ ಬಾಲ್ಯದಲ್ಲಿ ಕಳೆದುಹೋಗಿದ್ದ ಆಟಿಕೆಯೊಂದು ಇಂದು ಪುನ್ಹ ಸಿಕ್ಕಂತ ಭಾವ! ತಾನು ದೆಹಲಿಯಲ್ಲಿ ಕೊನೆ ಬಾರಿ ನೋಡಿದಕ್ಕೂ ಇಂದಿಗೂ ಬಹಳಾನೇ ವ್ಯತ್ಯಾಸ ಆಕೆಯಲ್ಲಿ ಕಾಣುತ್ತಾನೆ. ಗುಳಿ ಬಿದ್ದ ಕಣ್ಣುಗಳು, ಸಣಕಲಾಗಿ ಕಪ್ಪಾದ ದೇಹಸಿರಿಯನ್ನು ಕಂಡು ಒಮ್ಮೆಲೇ ಈಕೆಯನ್ನು ಗುರುತಿಡಿಯುವುದು ಕಷ್ಟವೆನಿಸುತ್ತದೆ. ಆದರೂ ಆಕೆಯ ಸೌಂದರ್ಯ ಸಿರಿಗೆ ಅಲ್ಲಿ ನೆರೆದಿದ್ದ ಯಾರೊಬ್ಬರೂ ಸರಿಸಾಟಿಇರಲಿಲ್ಲ ಎನ್ನಬಹುದು. ಆಕೆ ಸ್ಟೇಜಿನ ಮೇಲೆ ಬಂದಾಗಲಿಂದ ತಾವು ಪಟಾಯಿಸಲು ಹರಸಾಹಸ ಪಡುತಿದ್ದ ಹುಡುಗಿಯರನ್ನು ಬಿಟ್ಟು ಇತ್ತ ಕಡೆಯೇ ತಮ್ಮ ಬಾಯಿಗಳನ್ನು ಊರಗಲ ಕಿಸಿದುಕೊಂಡು ನೋಡುತಿದ್ದ ಮಧುಮಗನ ಸೋದರ ಸಂಬಂಧಿಗಳೇ ಅದಕ್ಕೆ ಸಾಕ್ಷಿ. ‘ಮೈ ಬೆಸ್ಟ್ ಫ್ರೆಂಡ್’ ಎನ್ನುತ್ತಾ ಆಕೆಯನ್ನು ತನ್ನ ಭಾವಿ ಹೆಂಡತಿಗೆ ಪರಿಚಯಿಸುತ್ತಾನೆ. ಆಕೆ ಈಗ ತಾನು ಊರಿನ ಶಾಲೆಯಲ್ಲಿ ಶಿಕ್ಷಕಿಯಾಗಿಯೂ ಹಾಗು ಬಿಡುವಿನ ವೇಳೆಯಲ್ಲಿ ವ್ಯವಸಾಯವನ್ನು ಮಾಡಿಕೊಂಡಿರುವುದಾಗಿಯೂ, ಸಮಯ ಮಾಡಿಕೊಂಡು ಒಮ್ಮೆ ಬಂದೋಗಬೇಕೆಂದು ಅವಳು ಹೇಳುತ್ತಾಳೆ. ಆಕೆಯ ಮದುವೆ ಆಗಿದೆಯೇ ಎಂಬ ಪ್ರೆಶ್ನೆಯನ್ನು ಕೇಳಲು ಮಧುಮಗನಿಗೆ ಧೈರ್ಯ ಸಾಲದಾಗುತ್ತದೆ. ಅಲ್ಲಿಯವರೆಗೂ ಕಾಣೆಯಾಗಿದ್ದ ತನ್ನ ಸೋದರರ ಗುಂಪು ಇವರಿಬ್ಬರ ಸಂಭಾಷಣೆ ಮುಗಿಯುವುದನ್ನೇ ಕಾಯುತ್ತಾ 'ಗಿಫ್ಟ್ ಏನೂ ಇಲ್ವಾ' ಎಂದು ಜೋರಾಗಿ ಅರಚುತ್ತಾರೆ. 'ನೋ ಗಿಫ್ಟ್ಸ್ ಇನ್ ಫ್ರೆಂಡ್ಶಿಪ್' ಎಂದು ನಗುತ್ತಾ ಹೊರಡಲು ಅಣಿಯಾದ ಆಕೆಯನ್ನು ಮಧುಮಗ ತಾನು ಆಕೆಯನ್ನು ಮದುವೆಗೆ ಕರೆಯಲು ಮರೆತೋಯಿತೆಂದು ನಟಿಸುತ್ತಾನೆ. ಆಕೆ ನಗುತ್ತಾ 'ಐ ನೋ, ನಿನ್ನ ಕಸಿನ್ಸ್ ಎಲ್ಲಾರು ಕಾಲ್ ಮಾಡಿ ರಿಕ್ವೆಸ್ಟ್ ಮಾಡ್ಕೊಂಡಿದಕ್ಕೆ ನಾನು ಬಂದೆ' ಎಂದಳು. ಕೂಡಲೇ ಆಶ್ಚರ್ಯದಿಂದ ತನ್ನ ಸಹೋದರರ ಗುಂಪನ್ನು ನೋಡತೊಡಗಿದ ಮಧುಮಗನಿಗೆ ಹಾಗಾದರೆ ಮೊದಲು ಬಂದ ಗೆಳೆಯನನ್ನೂ ಇವರೇ ಕರೆದಿರಬೇಕು ಎಂದುಕೊಳ್ಳುತ್ತಾನೆ. ಅದ್ಯಾವಾಗ ಇವರಿಬ್ಬರ ಬಗ್ಗೆ ವಾನರ ಪಡೆಗೆ ಹೇಳೇದ್ದೇನೋ ಎಂದುಕೊಂಡನು. ಒಟ್ಟಿನಲ್ಲಿ ಗೆಳೆಯರಿಗಿಂತ ಮಿಗಿಲಾಗಿ ತನ್ನ ಜೀವನದ ಬಹುಮುಖ್ಯ ಇಬ್ಬರು ವ್ಯಕ್ತಿಗಳನ್ನು ಮದುವೆಗೆ ಕರೆತಂದು ಈ ಕೆಲಕ್ಷಣಗಳನ್ನು ಅಮರವಾಗಿಸಿದ ಆ ವಾನರರ ಗುಂಪಿಗೆ ಮನದಲ್ಲೇ ಒಂದು ದೊಡ್ಡ ಥ್ಯಾಂಕ್ಸ್ ಅನ್ನು ಹೇಳಿಕೊಳ್ಳುತ್ತಾನೆ. ಬಾಯಿಬಿಟ್ಟು ಅವರ ಉಪಕಾರವನ್ನು ಕೊಂಡಾಡಿದರೆ ತನ್ನ ಮೊದಲ ರಾತ್ರಿ ಎಂಬುದನ್ನೂ ಲೆಕ್ಕಿಸದೆ ಮತ್ತೊಮ್ಮೆ ಕಿಡ್ನಾಪ್ ಮಾಡಿ ಬಾರಿನೆಡೆ ಕೊಂಡೊಯ್ಯಬಲ್ಲ ಆಸಾಮಿಗಳಿವರು ಎನ್ನುವುದು ಆತನಿಗೆ ತಿಳಿದಿರುತ್ತದೆ. ಸರಿ 'ಅವಳ'ನ್ನು ಬೀಳ್ಕೊಡುವ ಮುನ್ನ ‘ಒಂದು ಫೋಟೋ’ ಎಂದ ಮಧುಮಗ ಅವಳನ್ನು ತನ್ನ ಬಳಿಗೆ ಕರೆದು ನಿಲ್ಲಿಸಿಕೊಳ್ಳುತ್ತಾನೆ. ಫೋಟೋದಲ್ಲಿ ಕೇವಲ ಮೂವರೇ ಬಂದರೆ ಸರಿಯಿರುವುದಿಲ್ಲ ಯಾರಾದರೂ ಒಂತಿಷ್ಟು ಜನ ಬನ್ನಿ ಎಂದ ಫೋಟೋಗ್ರಾಫರ್ಗಳ ಕೋರಿಗೆ ಓಗೊಟ್ಟ ಮಧುಮಗನ ಸಹೋದರರ ಗುಂಪು ತಾವೂ ಸಹ ಅದನ್ನೇ ಬಯಸುತಿದ್ದದೆಂದು ಒಬ್ಬೊಬ್ಬರಾಗೆ ಬಂದು ಜಮಾವಣೆಗೊಳ್ಳುತ್ತಾರೆ. ಆದರೆ, ಎಲ್ಲರೂ ಮಧುಮಗನ ಬಲಬದಿಗೆ 'ಅವಳ' ಪಕ್ಕದಲ್ಲೇ ನಿಲ್ಲತೊಡಗುತ್ತಾರೆ. ಇದೇನಾಯಿತಪ್ಪ ಎನ್ನುತ್ತಾ ಫೋಟೋಗ್ರಾಫೇರ್ಸ್ ಗಳು ತಲೆಕೆರೆದುಕೊಳ್ಳಲು ಶುರುಮಾಡಿದರು. ಮಧುಮಗನ ಬಲಬದಿ ರಾಣಿಚೆನ್ನಮ್ಮ ಎಕ್ಸ್ಪ್ರೆಸ್ ರೈಲು ಬಂದು ನಿಂತಂತಿತ್ತು. ಪರಿಸ್ಥಿತಿಯನ್ನು ಅರಿತ ಮಧುಮಗ ಕೆಲವರನ್ನು ಇತ್ತಲೂ ಬರುವಂತೆ ಕೇಳಿಕೊಂಡನು. ಕೂಡಲೇ ನೀನು ನೀನೆಂಬ ಉದ್ಗಾರದೊಂದಿಗೆ ಸಣ್ಣದಾದ ಜಟಾಪಟಿ ಗುಂಪಿನೊಳಗೇ ನೆಡೆಯತೊಡಗಿತು. ಕೊನೆಗೆ ಮದುಮಗನ ಅಪ್ಪ 'ಏನಾಯಿತರ್ಲಾ ನಿಮ್ಗೆ' ಎಂದು ಅಬ್ಬರಿಸಿದಾಗಲೇ ಕೆಲವರು ಮಧುಮಗನ ಎಡಕ್ಕೂ ಇನ್ನು ಕೆಲವರು ಆತನ ಕಾಲಿನ ಬಳಿ ಬಂದು ಕೂತು ಬಿಟ್ಟರು. ಇನ್ನು ಕೆಲವರು ಕೂತರೆ ಚೆನ್ನಾಗಿರುವುದಿಲ್ಲವೆಂದು ಮಧುಮಗನನ್ನೇ ಹಿಂದಕ್ಕೆ ದಬ್ಬಿ ವಿವಿಧ ಬಂಗಿಯಲ್ಲಿ 'ಅವಳೊಟ್ಟಿಗೆ' ಪೋಸನ್ನು ಕೊಡಲು ಪ್ರಯತ್ನಿಸುತ್ತಿದ್ದರು.ಕಾಲ ಕೈಜಾರುವುದರೊಳಗೆ ತಮ್ಮ ಕೆಲಸವನ್ನು ಮುಗಿಸಬೇಕೆಂದುಕೊಂಡ ಫೋಟೋಗ್ರಾಫರ್ಸ್ ಗಳು ಒಂದೆರೆಡು ಫೋಟೋಗಳನ್ನು ತೆಗೆಯುವ ಶಾಸ್ತ್ರವನ್ನು ಮಾಡಿಯೇಬಿಟ್ಟರು. ಕಷ್ಟಪಟ್ಟು ಹುಡುಕಿದರೂ ಮಧುಮಗನ ಮುಖಚರ್ಯೆ ಆ ಅಮೂಲ್ಯ ಫೋಟೋದಲ್ಲಿ ಇಂದಿಗೂ ಗೋಚರಿಸುವುದಿಲ್ಲ!




Sunday, October 1, 2017

ಕುಸ್ತಿ ಪಂದ್ಯದ ದಂತಕಥೆ : ದಿ ಗ್ರೇಟ್ ಗಾಮ!

ಕುಸ್ತಿ ಪಂದ್ಯದ ಇತಿಹಾಸದಲ್ಲಿ ಸೋಲಿಲ್ಲದ ಸರದಾರನೊಬ್ಬನಿದ್ದ. ಭಾರತ, ಇಂಗ್ಲೆಂಡ್, ಫ್ರಾನ್ಸ್ ನಷ್ಟೇ ಅಲ್ಲದೆ ಇಡೀ ಭೂ ಮಂಡಲದಲ್ಲೇ ಆತ ಒಮ್ಮೆಯೂ ಸೋತ ಪುರಾವೆಗಳಿಲ್ಲ! ಬರೋಬ್ಬರಿ 50 ವರ್ಷಗಳಗಾಲ ಅಜೇಯನಾಗಿ ವಿಶ್ವದೆಲ್ಲೆಡೆ ರಾರಾಜಿಸಿದ್ದ ಆ ಕುಸ್ತಿಪಟು ಸ್ವಾತಂತ್ರ್ಯಪೂರ್ವ ಭಾರತದ ಹೆಮ್ಮೆಯ ಹೆಸರು. ಒಮ್ಮೆ ಬರೋಬ್ಬರಿ 20 ಕುಸ್ತಿಪಟುಗಳನ್ನು ಒಮ್ಮೆಲೇ ಎದುರಿಸಬಲ್ಲೆ ಎಂದು ಹೇಳಿದರೂ ಒಬ್ಬನೂ ಆತನ ಬಳಿಗೆ ಸುಳಿದಿರಲಿಲ್ಲ!! ಅಂತಹ ಒಂದು ಭಯಂಕರ ಭಯವನ್ನು ಹೊತ್ತಿಸಿ ತಿರುಗುತ್ತಿದ್ದ ಆ ವ್ಯಕ್ತಿಯ ಹೆಸರೇ 'ದಿ ಗ್ರೇಟ್ ಗಾಮ' ಅಥವಾ ಕುಸ್ತಿ ಇತಿಹಾಸದ ದಂತಕತೆ ಗುಲಾಮ್ ಮೊಹಮ್ಮೆದ್ ಬಕ್ಷ್.

1878 ಮೇ 22 ರಲ್ಲಿ ಪಂಜಾಬಿನ ಅಮೃತಸರದಲ್ಲಿ ಜನಿಸಿದ 5 ಅಡಿ 7 ಅಂಗುಲ ಉದ್ದದ ಗಾಮ ಬೆಳಕಿಗೆ ಬಂದದ್ದು ಅಂದಿನ ಕುಸ್ತಿ ಚಾಂಪಿಯನ್ ಎನಿಸಿದ್ದ 7 ಅಡಿ ಉದ್ದದ ರಹೀಮ್ ಬಕ್ಷ್ ಎಂಬ ಕುಸ್ತಿಪಟುವಿಗೆ ಸವಾಲೆಸೆದಾಗ. ಪ್ರಸ್ತುತ ಟೀಮ್ ಇಂಡಿಯ ಕ್ರಿಕೆಟ್ ತಂಡವನ್ನು ಚೀನೀ ತಂಡವೊಂದು ಕೆದಕಿದಂತೆ. ತನ್ನ ಹತ್ತನೇ ವಯಸ್ಸಿಗಾಗಲೇ ಕುಸ್ತಿಯ ಅಖಾಡಕ್ಕಿಳಿದು ಕೊಂಚ ಮಟ್ಟಿನ ಹೆಸರನ್ನು ಗಳಿಸಿದ್ದ ಗಾಮ, ರಹೀಮ್ ಬಕ್ಷ್ ಎಂಬ ದೈತ್ಯನನ್ನು ಎದುರಾಕಿಕೊಂಡದ್ದು ಅಂದು ಹಲವರಿಗೆ ತಮಾಷೆಯ ವಿಚಾರವಾಗಿದ್ದಿತು. ಅಲ್ಲದೆ ಆಗ ಗಾಮನ ವಯಸ್ಸೂ ಕೇವಲ 17 ವರ್ಷಗಳು! ಆದರೆ ಮೀಸೆ ಚಿಗುರದ ಪೋರನೊಬ್ಬ ದೇಶೀ ಕುಸ್ತಿ ಚಾಂಪಿಯನ್ ಒಬ್ಬನೊಟ್ಟಿಗೆ ಸೆಣೆಸುವುದೇ ಅಂದು ಮಹಾ ಸುದ್ದಿಯಾಗಿದ್ದಿತು. ಅಲ್ಲದೆ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡ ಸುದ್ದಿಯಂತೂ ಕೆಲವರಿಗೆ ತಮ್ಮ ಕಿವಿಯನ್ನೇ ನಂಬದಂತೆ ಮಾಡಿತ್ತು. ಹೌದು, ಅಂದು ಗಾಮ ರಹೀಮ್ ಬಕ್ಷ್ ನನ್ನು ಸೋಲಿಸಲಾಗದಿದ್ದರೂ ಆತನ ಎದಿರು ಸೋಲೊಪ್ಪಿಕೊಳ್ಳಲಿಲ್ಲ! ಇಷ್ಟೇ ಸಾಕಾಗಿತ್ತು ಅಂದು ಗಾಮ ದೇಶದ ಕುಸ್ತಿ ವಲಯದಲ್ಲಿ ಹೆಸರು ಗಳಿಸಿಕೊಳ್ಳಲು. ಅಲ್ಲಿಂದ ಮುಂದೆ ದೇಶದ ದೊಡ್ಡ ದೊಡ್ಡ ಕಲಿಗಳನ್ನು ಅಡ್ಡಡ್ಡ ಮಲಗಿಸತೊಡಗಿದ ಈ ಭೂಪ ಮುಂದೊಂದು ದಿನ ಅದೇ ಏಳು ಅಡಿಯ ರಹೀಮ್ ಬಕ್ಷ್ ನನ್ನೂ ಸೋಲಿಸಿಯೇ ತೀರುತ್ತಾನೆ. ಅಲ್ಲಿಂದ ಮುಂದೆ ಅಖಂಡ ಭಾರತದಲ್ಲಿ ಗಾಮನನ್ನು ಸೋಲಿಸುವ ಮತ್ತೊಬ್ಬ ಕಾಣಲಿಲ್ಲ. ಮುಂದೆ ಗಾಮನ ಪಯಣ ದೂರದ ಇಂಗ್ಲೆಂಡ್ ಕಡೆಗೆ. ಬಿಳಿಯರ ಶಕ್ತಿ ಹಾಗು ಸೊಕ್ಕನ್ನೂ ನೆಲಕುರುಳಿಸುವ ಎಡೆಗೆ.

ಆದರೆ ಲಂಡನ್ ನಗರಿಯಲ್ಲಿ ಕುಸ್ತಿಯ ಅಖಾಕ್ಕಿಳಿಯುವುದು ಅಷ್ಟೇನೂ ಸುಲಭವಾಗಿರಲಿಲ್ಲ. ಪರಿಣಾಮ ಗಾಮ ತನ್ನೊಡನೆ ಸೆಣೆಸಲು ಸುತ್ತೋಲೆಯೊಂದನ್ನು ಹೊರಡಿಸಬೇಕಾಯಿತು. ಆದರೆ ಸುಖಾಸುಮ್ಮನೆ ಕುಸ್ತಿ ಪಂದ್ಯಕ್ಕೆ ಬಾ ಎಂದರೆ ಬಂದುಬಿಡುವರಾಗಿರಲಿಲ್ಲ ಬಿಳಿಯ ದೈತ್ಯರು. ಹಾಗಾಗಿ ಗಾಮ ಅವರುಗಳೆಲ್ಲರಿಗೂ ಒಂದು ಸವಾಲನ್ನೆಸೆಯುವ ಸುತ್ತೋಲೆಯನ್ನು ಹೊರಡಿಸುತ್ತಾನೆ. 'ಎಷ್ಟೇ ತೂಕದ, ಯಾವುದೇ ವರ್ಗದ ಯಾವ ಕುಸ್ತಿಪಟುವೆ ಆಗಲಿ, ಅವರನ್ನು ಕೇವಲ ಮೂವತ್ತು ನಿಮಿಷದೊಳಗೆ ಅಂತಹ ಮೂವರು ಪಟುಗಳನ್ನು ಸೋಲಿಸುವುದಾಗಿ' ಹೇಳುತ್ತಾನೆ. ಅಷ್ಟೆಲ್ಲಾ ಸಾಮರ್ಥ್ಯದ ಜೀವವೊಂದು ಬದುಕಿರಲೇ ಸಾಧ್ಯವಲ್ಲ ಎಂದರಿತಿದ್ದ ಅಲ್ಲಿನ ಕುಸ್ತಿಪಟುಗಳು ಈ ಘೋಷಣೆಯನ್ನು ಸುಳ್ಳುವಾರ್ತೆ ಎಂಬಂತೆ ಅಲ್ಲಗೆಳೆಯುತ್ತಾರೆ! ಆದರೆ ಕಳೆಗುಂದದ ಗಾಮ ಈ ಬಾರಿ ನೇರವಾಗಿ ಒಂದೆರೆಡು ಕುಸ್ತಿ ಪಟುಗಳನ್ನೇ ಆರಿಸಿಕೊಂಡು ಸವಾಲನ್ನೆಸೆಯುತ್ತಾನೆ. ಅವರನ್ನು ಈತ ಸೋಲಿಸುವುದಾಗಿಯೂ ಇಲ್ಲವೇ ಈತನೇ ಖುದ್ದಾಗಿ ಪ್ರಶಸ್ತಿಯ ಮೊತ್ತದಷ್ಟೇ ಹಣವನ್ನು ಅವರಿಗೆ ನೀಡುವುದಾಗಿ ತಿಳಿಸುತ್ತಾನೆ. ಇಂತಹ ನೇರ ಸವಾಲಿಗೆ ಅಣಿಯಾದ ಮೊದಲ ಕುಸ್ತಿಪಟು ಬೆಂಜಮಿನ್ ರೋಲರ್. ಅಂದು ನೆಡೆದ ಕಾಳಗದಲ್ಲಿ ಕೇವಲ 100 ಸೆಕೆಂಡ್ ನೊಳಗೆ ಬೆಂಜಮಿನ್ ರೋಲರ್ ಗಾಮ ನ ವಿರುದ್ಧ ಸೋಲನೊಪ್ಪಿಕೊಂಡಿರುತ್ತಾನೆ! ಕೂಡಲೇ ಸುದ್ದಿ ನಗರದ ಎಲ್ಲಡೆ ಹಬ್ಬಿದ್ದರಿಂದ ಉತ್ಸಾಹಗೊಂಡ ಇತರ ಕುಸ್ತಿಪಟುಗಳು ಮಾರನೇ ದಿನ ಇವನ ವಿರುದ್ಧ ಸೆಣೆಸಲು ಅಣಿಯಾಗುತ್ತಾರೆ. ಅಂದು ಗಾಮ ಅಲ್ಲಿಗೆ ಬಂದಿದ್ದ ಅಷ್ಟೂ ಜನ ಕುಸ್ತಿಪಟುಗಳನ್ನು ಒಂದೇ ದಿನದಲ್ಲಿ ಸದೆಬಡಿದಿರುತ್ತಾನೆ. ಅವರುಗಳ ಸಂಖ್ಯೆ ಬರೋಬ್ಬರಿ 12!!

ಅಲ್ಲಿಂದ ಮುಂದೆ ಗಾಮನ ನೆಡೆ ಆನೆಯ ನೆಡೆಯಾಗಿ ಸಾಗುತ್ತದೆ. ವಿಶ್ವದ ಯಾವುದೇ ಮೂಲೆಯಿಂದಲೂ ಯಾರೊಬ್ಬ ಕುಸ್ತಿಪಟುವೂ ಈತನನ್ನು ಸೋಲಿಸುವುದು ಇರಲಿ ಎದುರು ಹಾಕಿಕೊಳ್ಳಲೂ ಅಂಜುತ್ತಿದ್ದರು. ಅಂದಿನ ವಿಶ್ವ ಚಾಂಪಿಯನ್ ಆಗಿದ್ದ ಸ್ಟ್ಯಾನಿಸ್ಲಾಸ್ಸ್ ಜ್ಬೈಸ್ಕೊ ನನ್ನು ಗಾಮ ಎರಡು ಘಂಟೆ ಮುವ್ವತೈದು ನಿಮಿಷಗಳ ಕಾಲ ಮಕಾಡೆ ಮಲಗಿಸಿದ್ದು ಇಂದಿಗೂ ಕೇಳುಗರ ಎದೆಯನ್ನು ನಡುಗಿಸದಿರದು.

ಗಾಮನ ದಿನನಿತ್ಯದ ಅಭ್ಯಾಸವೇನಾದರೂ ಕೇಳಿದರೆ ಅಬ್ಬಬ್ಬ ಎನಿಸದಿರದು ನಮಗೆ. ಬರೋಬ್ಬರಿ 5000 ಸ್ಸ್ಕ್ವಾಟ್ಸ್ ಹಾಗು 3000 ಪುಷಪ್ಸ್ ದಿನವೊಂದಕ್ಕೆ! ಇನ್ನು 7.5 ಲೀಟರ್ ನಷ್ಟು ಹಾಲು ಹಾಗು 1 ಕೆಜಿಯಷ್ಟು ಬಾದಾಮಿ ಈತನ ಶಕ್ತಿಯನ್ನು ಹೆಚ್ಚಿಸುತ್ತಿದ್ದವು. ಇಂತಹ ಒಬ್ಬ ಮಹಾಕಲಿಯ ಪ್ರಭಾವ ವಿಶ್ವದೆಲ್ಲೆಡೆ ಪಸರಿಸಿತ್ತು ಎಂಬುದ್ದಕ್ಕೆ ಮಾರ್ಷಲ್ ಆರ್ಟ್ಸ್ ಸ್ಪೆಷಲಿಸ್ಟ್ 'ಬ್ರೂಸ್ ಲಿ' ಯೇ ಒಂದು ಉತ್ತಮ ಉದಾಹರಣೆ. ಬ್ರೂಸ್ ಲಿ ಗಾಮನ ತರಬೇತಿಯಿಂದ ಉತ್ತೇಜನಗೊಂಡಿದ್ದನಲ್ಲದೆ ತನ್ನ ತರಬೇತಿಗಳಲ್ಲೂ ಕೆಲವೊಂದನ್ನು ಬೆರೆಸಿಕೊಳ್ಳುತ್ತಿದ.

ಇಂತಹ ಒಬ್ಬ ವ್ಯಕ್ತಿ ಬದುಕಿದ್ದ ಎಂದರೆ ನಂಬುವುದೇ ಅಸಾಧ್ಯ. ಯಾವುದೇ ಕ್ರೀಡೆಯಾಗಲಿ ಅದರಲ್ಲಿ ಯಾರೊಬ್ಬ ಮಹಾನ್ ಎಂದೆನಿಸಿಕೊಂಡಿದ್ದರೂ ತನ್ನ ವೃತ್ತಿಜೀವನದ ಆದಿಯಲ್ಲೋ ಅಥವಾ ಅಂತ್ಯದಲ್ಲೋ ಎಲ್ಲದರೊಮ್ಮೆ ಸೋತೆ ಸೋತಿರುತ್ತಾರೆ. ಸೋಲುವುದು ಅನಿವಾರ್ಯವಿಲ್ಲದಿದ್ದರೂ ನಮಗೆ ಅಂತಹ ಒಂದೂ ಪುರಾವೆಗಳು ಇತರೆ ಕ್ರೀಡೆಗಳಲ್ಲಿ ಕಾಣಲು ಸಿಗದು. ಆದರೆ ಗಾಮ ತಾನು ಆಡಿದ ಅಷ್ಟೂ ವೃತ್ತಿಪರ ಕುಸ್ತಿಯಲ್ಲಿ ಒಮ್ಮೆಯೂ ಸೋಲನ್ನು ಕಾಣದಿರುವುದು ನಿಜವಾಗಿಯೂ ಆಶ್ಚರ್ಯಕರ. 1200 ಕೆಜಿಯ ಕಲ್ಲೊಂದನ್ನು ಎತ್ತಬಲ್ಲ ವ್ಯಕ್ತಿಯೊಬ್ಬನಿದ್ದ ಎಂದರೆ ಅದು ಗಾಮ ಮಾತ್ರ. ಆತ ಎತ್ತಿದ್ದ ಅಷ್ಟು ದೊಡ್ಡ ಕಲ್ಲು ಇಂದಿಗೂ ಬರೋಡ ಮ್ಯೂಸಿಯಂ ನಲ್ಲಿ ಇರಿಸಲಾಗಿದೆ. ವಿಶ್ವವನ್ನೇ ತನ್ನ ಕದಂಭ ಬಾಹುಗಳಿಂದ ಬಗ್ಗು ಬಡಿದ ಗಾಮನ ಇರುವಿಕೆಗೆ ಅದು ಸಾಕ್ಷಿಯಾಗಿದೆ.


Friday, September 22, 2017

ಪರಮಾಣುಬಾಂಬುಗಳಿಗಿಂತಲೂ ಅಪಾಯಕಾರಿಯಾಗಬಹುದೇ ಈ ಟೆಕ್ನಾಲಜಿ!?

ಮಾನವನ ಅಳಿವು ಉಳಿವಿನ ಬಗೆಗಿನ ವಾದ-ಸಂವಾದಗಳು ಇಂದು ನೆನ್ನೆಯದಲ್ಲ. ಪ್ರತಿಯೊಂದು ಹೊಸ ಆವಿಷ್ಕಾರಗಳ ಸಾಧಕಗಳನ್ನು ಹೊರತುಪಡಿಸಿ ಅವುಗಳ ಬಾದಕಗಳನಷ್ಟೇ ನೋಡಿದಾಗ ಭಾಗಶಃ ಹೆಚ್ಚಿನ ಅವಿಷ್ಕಾರಗಳು ಆತನ ಉಳಿವಿಗೇ ಕುತ್ತು ತರವಂತಿರುತ್ತವೆ ಎಂಬುದು ಜಗಜ್ಜನಿತ ವಿಚಾರ. ಅದು ನ್ಯೂಕ್ಲಿಯರ್ ಬಾಂಬಿನಿಂದ ಹಿಡಿದು ಇಂದಿನ ಮೊಬೈಲ್ ಫೋನುಗಳವರೆಗೂ ಪ್ರಸ್ತುತ. ನೈಸರ್ಗಿಕವಾಗಿ ಬಳುವಳಿಯಾಗಿ ಬಂದಂತಹ ದೇಹಸಿರಿಯನ್ನು ಆದಷ್ಟೂ ಸೋಮಾರಿಯನ್ನಾಗಿ ಮಾಡಲು ಟೆಕ್ನಾಲಜಿ ಎಂಬೊಂದು ಹೆಸರನ್ನು ಕೊಟ್ಟು ಸೃಷ್ಠಿಗೆ ಸವಾಲೆಸೆಯುವ ಕಾರ್ಯವನ್ನು ಮಾನವ ತನ್ನ ಮೊದಲೆನೆ ದಿನದಿಂದಲೇ ಹಮ್ಮಿಕೊಳ್ಳುತ್ತಾನೆ. ಟೆಕ್ನಾಲಜಿಯ ಮರದ ನೆರಳಲ್ಲೇ ನಿಂತು ಮರವನ್ನೇ ಶಪಿಸುವಂತಹ ಮಾತು ಇದಾದರೂ ಪ್ರೆಶ್ನಿಸುವ ಗುಣವೇ ಅದರ ಬೆನ್ನೆಲುಬು ಎಂಬ ನಿಯಮವನ್ನು ಇಲ್ಲಿ ಆಧಾರವಾಗಿಟ್ಟುಕೊಳ್ಳೋಣ! ಇಂತಹ ಅದೆಷ್ಟೋ ಟೆಕ್ನಾಲಜಿಗಳು ಇಂದು ಮಾನವನ ಊಹೆಗೂ ಮೀರಿ ಬೆಳೆಯುತ್ತಿವೆ. ಅಂತಹದೊಂದು ಟೆಕ್ನಾಲಜಿಗಳಲ್ಲಿ ಕೃತಕ ಬುದ್ದಿವಂತಿಕೆಯೂ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಸಹ ಒಂದು.

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆದರಿಸಿದ ಅದೆಷ್ಟೋ ಚಲಚಿತ್ರಗಳು ಇಂದು ಪರದೆಯ ಮೇಲೆ ಮೂಡಿ ಅದರ ಬಗೆಗಿನ ಒಂದು ಪಕ್ಷಿನೋಟವನ್ನು ಜನಮಾದ್ಯಮಕ್ಕೆ ತೋರಿಸಿವೆ. ಇಲ್ಲಿ ತನ್ನ ಸುತ್ತಲಿನ ಆಗುಹೋಗುಗಳನ್ನು ಒಂದು ಸಾಮಾನ್ಯ ಜೀವಿಯಂತೆಯೇ ಗ್ರಹಿಸಬಲ್ಲ ಯುಕ್ತಿಯ ಆ ರೋಬೋಟ್/ ಯಂತ್ರಗಳು ಮುಂದೊಂದು ದಿನ ತನ್ನನ್ನು ಸೃಷ್ಟಿಸಿದ ಮಾನವನನ್ನೇ ಎದುರಾಕಿಕೊಳ್ಳುತ್ತವೆ. ಅಪ್ಪನ ಕೊರಳುಪಟ್ಟಿಯನ್ನು ಮಗ ಬಿಗಿಮುಷ್ಟಿಯಲ್ಲಿ ಹಿಡಿದುಕೊಂಡಂತೆ! ಅಂದು ಮಾನವನ ಹಾಗು ಅವನ ಸೃಷ್ಟಿಯ ಯಂತ್ರಗಳ ನಡುವಿನ ತಾಕತ್ತಿನ ಪರೀಕ್ಷೆಯಾಗುತ್ತದೆ. ಯಂತ್ರಗಳೇನಾದರೂ ಸೋತರೆ ಅದು ಮಾನವನ ಸೋಲೇ ಆಗಿರುತ್ತದೆ ಇಲ್ಲವಾದರೆ ಭೂಗೋಳ ಒಂದು ಯಂತ್ರಗಳ ಬೃಹತ್ ಉಂಡೆಯಾಗಿಬಿಡುತ್ತದೆ! ಸದ್ಯಕಂತೂ ಇವೆಲ್ಲ ವಿಚಾರಗಳು ಪಾಪ್ಕಾರ್ನ್ ಅನ್ನು ತಿನ್ನುತ್ತಾ ಸಿನಿಮಾ ಮಂದಿರದಲ್ಲಿ ಕೂತು ನೋಡಲು ಮುದವೆನಿಸಿದರೂ ಮುಂದೊಂದು ದಿನ ಇಂತಹ ಸಾಧ್ಯತೆಯನ್ನು ಅಲ್ಲಗೆಳೆಯಲಾಗುವುದಿಲ್ಲ. ಪರಮಾಣು ಬಾಂಬ್ ಗಳಿಗಿಂತಲೂ ಕೃತಕ ಬುದ್ದಿವಂತಿಕೆ ಅತಿ ಅಪಾಯಕಾರಿ ವಿಷಯವೆಂಬುದು ಆಗಲೇ ಅದೆಷ್ಟೋ ವಿಜ್ಞಾನಿಗಳ ದಿಟ್ಟ ಅಭಿಪ್ರಾಯವಾಗಿದೆ.

ಇಪ್ಪತ್ತನೆಯ ಶತಮಾನದ ಆದಿಯಲ್ಲಿಯೇ ಕೃತಕ ಬುದ್ಧಿವಂತಿಕೆಯ ಬಗ್ಗೆ ಅದೆಷ್ಟೋ ಊಹಾಪೋಹಗಳಿದ್ದರೂ ಅದಕ್ಕೊಂದು ಸದೃಶ್ಯ ರೂಪ ದೊರೆತದ್ದು 1955 ರಲ್ಲಿ ಜಾನ್ ಮೆಕಾರ್ತಿ ಎಂಬ ಅಮೆರಿಕಾದ ವಿಜ್ಞಾನಿಯಿಂದ. ಮೆಕಾರ್ತಿ ಹಾಗು ತಂಡ ಅಂದು LISP ಎಂಬ ಕಂಪ್ಯೂಟರ್ ಭಾಷೆಯೊಂದನ್ನು ಆವಿಷ್ಕರಿಸಿ ಅದನ್ನು ಯಂತ್ರಗಳಿಗೆ ಅಳವಡಿಡಿಸಿ ಕೃತಕ ಬುದ್ಧಿವಂತಿಕೆ ಎಂಬುದು ಕನಸಿನ ಮಾಯಜಿಂಕೆಯಂತಲ್ಲ ಎನ್ನುವುದನ್ನು ಸಾಬೀತುಪಡಿಸಿದರು. ಕೂಡಲೇ ವಿಶ್ವದಾದ್ಯಂತ ಈ ಒಂದು ವಿಷಯದ ಬಗ್ಗೆ ವ್ಯಾಪಕ ಸಂಶೋದನೆಗಳಾದವು. ಆದರೆ ಗೊತ್ತು ಗುರಿಯಿಲ್ಲದ, ಅಲ್ಲಿಯವರೆಗೂ ಕೇವಲ ಕಲ್ಪನೆಗಷ್ಟೇ ಸೀಮಿತವಾಗಿದ್ದ ವಿಷಯವೊಂದಕ್ಕೆ ಕೋಟ್ಯಾನುಕೋಟಿ ಸುರಿದರೂ ಹೇಳಿಕೊಳ್ಳುವ ಮಟ್ಟಿನ ಪ್ರತಿಫಲ ಮುಂದೆ ಸಿಗದೇ ಇದ್ದ ಕಾರಣ ಸಂಶೋಧನೆಯ ಸದ್ದು ಮಂಕಾಗತೊಡಗಿತು. ಆದರೆ ಕೆಲದಶಕಗಳ ನಂತರ ಚೆಸ್ ಆಟದ ದಿಗ್ಗಜ ಗ್ಯಾರಿ ಕಾಸ್ಪೋರೊವ್ ನನ್ನು ಕೃತಕ ಬುದ್ಧಿವಂತಿಕೆಯ ‘ಡೀಪ್ ಬ್ಲೂ’ ಎಂಬ ಯಂತ್ರ ಸೋಲಿಸಿದಾಗಲೇ ಜಗತ್ತಿಗೆ ಕೃತಕ ಬುದ್ಧಿವಂತಿಕೆಯ ನಿಜದರ್ಶನವಾದದ್ದು. ಮುಂದೆ IBN ಕಂಪನಿ ವಿಕಾಸಗೊಳಿಸಿದ್ದ 'ವ್ಯಾಟ್ಸನ್' ಎಂಬ ಪ್ರೋಗ್ರಾಮ್ ಅಮೇರಿಕಾದ ರಸಪ್ರೆಶ್ನೆ ಕಾರ್ಯಕ್ರಮದ ವಿಜೇತರಿಬ್ಬರಿಗೆ ಸೋಲಿನ ರುಚಿಯನ್ನು ಕಾಣಿಸಿದಾಗಲಂತೂ ಕೃತಕ ಬುದ್ಧಿವಂತಿಕೆಯ ಮೇಲಿದ್ದ ಎಳ್ಳಷ್ಟೂ ಸಂಶಯಗಳು ದೂರವಾಗತೊಡಗಿದವು.

ಅದಾಗಲೇ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನ ಹಲವು ಉತ್ಪನ್ನಗಳು ನಮ್ಮನ್ನು ಸುತ್ತುವರೆದಿವೆ ಅಥವಾ ಸುತ್ತುವರೆಯುತ್ತಿವೆ. ನೀವು ಆಪಲ್ ಐ-ಫೋನ್ ಬಳಕೆದಾರರಾದರೆ ಅದರಲ್ಲಿ ನಾವು ಕೇಳುವ ಪ್ರತಿಯೊಂದು ಉಲ್ಟಾಸೀದಾ ಪ್ರೆಶ್ನೆಗಳಿಗೂ ಮಾನವರಂತೆಯೇ ಉತ್ತರಿಸುವ 'ಸಿರಿ' ಅಪ್ಲಿಕೇಶನ್ ಸಹ ಈ ಕೃತಕ ಬುದ್ಧಿವಂತಿಕೆಯ ಉಪಉತ್ಪನ್ನವೇ ಆಗಿದೆ. ಗೂಗಲ್ ಸರ್ಚ್ ನಿಂದಿಡಿದು ‘Go’ ಆಟದಲ್ಲೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತನ್ನ ಛಾಪನ್ನು ಮೂಡಿಸಿದೆ. ‘Go’ ಪುರಾತನ ಚೀನಾದ ಆಟಗಳಲ್ಲೋದು. ಚೆಸ್ನಂತೆಯೇ ಈ ಆಟದಲ್ಲಿಯೂ ಸಹ ಪ್ರತಿ ಹೆಜ್ಜೆಗೂ ನೂರಾರು ಸಾವಿರಾರು ದಾರಿಗಳಿರುತ್ತವೆ.ಡೀಪ್ ಮೈಂಡ್ ಟೆಕ್ನಾಲಜೀಸ್ ಲಿಮಿಟೆಡ್ ಎಂಬ ಲಂಡನ್ ಮೂಲದ ಕಂಪನಿಯೊಂದು ಅಭಿವೃದ್ಧಿ ಪಡಿಸಿದ 'ಅಲ್ಫಾಗೊ' ಎಂಬ ಕೃತಕ ಬುದ್ಧಿವಂತಿಕೆಯ ಪ್ರೋಗ್ರಾಮ್ ಮೊದಲ ಬಾರಿಗೆ 2015 ರಲ್ಲಿ Go ಆಟದ ವಿಶ್ವದ ನಂಬರ್ ಒನ್ ಆಟಗಾರನನ್ನುಸೋಲಿಸಿ, ಇತಿಹಾಸ ಸೃಷ್ಟಿಸಿ ಎಲ್ಲೆಡೆ ವಿಸ್ಮಯವನ್ನು ಮೂಡಿಸಿತ್ತು. ಅಲ್ಲಿಂದ ಮುಂದೆ ಈ ವಿಷಯದ ಬಗೆಗಿನ ಸಂಶೋಧನೆ, ಅಭಿವೃದ್ಧಿ ಹಾಗು ಒಳಹೊರಗುಗಳ ಬಗ್ಗೆ ಆಳವಾದ ಚರ್ಚೆಗಳು ಶುರುವಾಗಿ ಖಾಸಗಿ ಕಂಪನಿಗಳೂ ಸಹ ನೂರಾರು ಕೋಟಿ ಹಣವನ್ನು ಈ ವಿಷಯದ ಅಧ್ಯಯನಕ್ಕಾಗೆ ಮುಡಿಪಾಗಿಡಲು ಮುಂದೆ ಬಂದವು.

ಅಸಲಿಗೆ ಕೃತಕ ಬುದ್ದಿವಂತಿಕೆ ಎಂಬುದು ತಾಯಿಯ ಗರ್ಭದಿಂದ ಆಗಷ್ಟೇ ಹೊರಬಂದ ಮಗುವಿನಂತೆ. ಮಗು ಬೆಳೆಯುತ್ತ ತನ್ನ ಸುತ್ತಲಿನ ಆಗುಹೋಗುಗಳಿಂದ, ಪರಿವರ್ತನೆಗಳಿಂದ ಹೇಗೆ ಒಂದೊಂದೇ ಅಂಶಗಳನ್ನು ತನ್ನ ಮಸ್ತಿಸ್ಕದೊಳಗೆ ಸೇರಿಸಿಕೊಂಡು ವಿಕಾಸಗೊಳ್ಳುತ್ತದೆಯೋ ಹಾಗೆಯೆ ಕೃತಕ ಬುದ್ದಿವಂತಿಕೆ ಇರುವೆಯ ಗಾತ್ರದಿಂದ ಶುರುವಾಗಿ ಆನೆಯ ಗಾತ್ರದ ಬುದ್ಧಿಯನ್ನು ಗಳಿಸಿಕೊಳ್ಳುತ್ತದೆ. ಹುಟ್ಟಿದ ಕೆಲವರ್ಷಗಳಲ್ಲೇ ನೆಡೆಯುವುದ ಕಲಿಯುವ ಮಗುವೊಂದಕ್ಕೆ ಇಪ್ಪತ್ತು ವರ್ಷಗಳ ನಂತರ ಹೇಗೆ ಪುನಃ ಅದಕ್ಕೆ ರಿವಿಶನ್ನಿನ್ನ ಆಗತ್ಯವಿರುವುದಿಲ್ಲವೊ ಅಂತೆಯೇ ಕೃತಕ ಬುದ್ಧಿವಂತಿಕೆಯ ಕಲಿಕೆಯೂ ಸಹ ದಿನದಿಂದ ದಿನಕ್ಕೆ ಹೊಸ ವಿಷಯಗಳ ಬಗ್ಗೆಯೇ ವಿನಃ ಹಾದುಹೊದ ವಿಷಯಗಳ ಬಗ್ಗೆಯಾಗಿರುವುದಿಲ್ಲ. ಆದರೆ ಹತ್ತೊಂಬಂತ್ತರ ಮಗ್ಗಿಯೊಂದನ್ನು ಕಲಿಯುವ ಮಗು ಮುಂದೊಂದು ದಿನ ಅದನ್ನು ಮರೆಯಲೂಬಹುದು. ಆದರೆ ಕೃತಕ ಬುದ್ದಿವಂತಿಕೆಯಲ್ಲಿ ಈ ಮರೆಯುವ ಚಾಳಿಗೆ ಆಸ್ಪದವೇ ಇರುವುದಿಲ್ಲ.ಅಂದ ಮಾತ್ರಕ್ಕೆ ಕೃತಕ ಬುದ್ದಿವಂತಿಕೆ ಎಂಬುದು ನಮ್ಮ ದಿನನಿತ್ಯದ ಸಹವರ್ತಿಗಳಾದ ವಾಷಿಂಗ್ ಮಷೀನ್ ಅಥವಾ ಫ್ರಿಡ್ಜ್ ಗಳಂತೆ ಹೇಳಿದ ಕೆಲಸವನ್ನಷ್ಟೇ ಮಾಡಿ ಸುಮ್ಮನಿರುವ ಯಂತ್ರಗಳಲ್ಲ. ಬದಲಾಗಿ ಇವುಗಳಲ್ಲಿ ಸ್ವಚಿಂತನೆ, ಸರಿತಪ್ಪು ನಿರ್ಧರಿಸುವ ತಾರ್ಕಿಕ ಗುಣ ಒಟ್ಟುಗೂಡುತ್ತಾ ಸಾಗುತ್ತದೆ. ಅರ್ತಾಥ್ ಅಕ್ಷರಸಹ ಯಾಂತ್ರಿಕ ಮಾನವನನ್ನು ಅಥವಾ ಅದಕ್ಕಿಂತಲೂ ಮಿಗಿಲಾದ ಮಾಹೆಯೊಂದನ್ನು ಸೃಷ್ಟಿಸುವ ಗುರಿ ಈ ವಲಯದ್ದಾಗಿರುತ್ತದೆ. ಒಟ್ಟಿನಲ್ಲಿ ಇಡೀ ಭೂಮಿಯನ್ನೇ ತನ್ನ ಮುಷ್ಟಿಯಲ್ಲಿ ಹಿಡಿಯಲೆತ್ನಿಸುತ್ತಿರುವ ಮಾನವ ಜೀವಿ ತನ್ನಂತೆಯೇ ಜೀವಭಾವದಿಂದ ಕೂಡಿದ ಯಾಂತ್ರಿಕ ವಿಸ್ಮಯವನ್ನು ಸೃಷ್ಟಿಸುವ ಸನಿಹದಲ್ಲಿದ್ದಾನೆ.

ಹೀಗೆ ಮುಂದೊಂದು ದಿನ ಆರ್ಟಿಫಿಕಲ್ ಇಂಟೆಲಿಜೆನ್ಸ್ ಎಂಬುದು ಮನೆಯ ಅಡುಗೆಯವರಾಗಿ, ಪ್ರೀತಿಯ ಪೋಷಕರರಾಗಿ, ಬಾಡಿಗಾರ್ಡ್ ಗಳಾಗಿ, ಚಾಲಕ ರಹಿತ ವಾಹನಗಳ ಚಾಲಕನಾಗಿ, ಗಡಿ ಕಾಯುವ ಸೈನಿಕರಾಗಿ, ವೈಜ್ಞಾನಿಕ ಗೊಂದಲಗಳ ನಿವಾರಕನಾಗಿ ಅಲ್ಲದೆ ಇಡೀ ಬ್ರಹ್ಮಾಂಡದ ಅನಂತತೆಯ ಉತ್ತರದಾಯಕನೂ ಆದರೆ ಸಂಶಯಪಡಬೇಕಿಲ್ಲ. ಆದರೆ ಇವೆಲ್ಲ ಮಾನವನ ಬಿಗಿಹಿಡಿತದ ಅಧೀನದಲ್ಲಿಯೇ ಜರುಗುವ ಕ್ರಿಯೆಗಳು ಎಂದುಕೊಂಡು ಯೋಚಿಸಿದರೆ ಮಾತ್ರ ನಮಗೆ ರೋಮಾಂಚನವೆನಿಸಬಹುದು, ಕೂತುಹಲಕಾರಿಯಾಗಬಹುದು. But there is a Catch! ಮೊದಲೇ ಹೇಳಿದಂತೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಎಂಬುದು ಎಂದಿಗೂ ಮಾನವನ ಅಧೀನದಲ್ಲೇ ಇರುವ ಯಂತ್ರಗಳು ಎಂದರೆ ಅದು ನಮ್ಮ ದಿನನಿತ್ಯ ಬಳಕೆಯ ಮಷೀನ್ ನಂತಾಗಿಬಿಡುತ್ತವೆ. ಬದಲಾಗಿ ಗಳಿಕೊಳ್ಳುವ ಕೃತಕ ಬುದ್ದಿಯ ಸಹಾಯದಿಂದ ಅವುಗಳಿಗೆ ಮಾನವನ ಬಿಗಿ ನಿಯಂತ್ರಣದ ಸರಪಳಿಯಿಂದ ಕಳಚಿಕೊಳ್ಳುವುದು ಕಷ್ಟದ ವಿಷಯವಾಗುವುದಿಲ್ಲ. ಆಗ ಉದ್ಭವಗೊಳ್ಳುವ ಯಾಂತ್ರಿಕ ಮಾನವ ನಿಜ ಮಾನವಂತೆಯೇ ಅರಿಷಡ್ವರ್ಗ ಗಳ ದಾಸನಾದರೂ ಚಕಿತರಾಗಬೇಕಿಲ್ಲ. Infact ನಿಜ ಮಾನವನಿಗಿಂತಲೂ ಮಿಗಿಲಾದ ಭಾವಗಳು ಅವುಗಳಲ್ಲಿ ಮೂಡಬಹುದು! ಆಸೆಯೇ ದುಃಖಕ್ಕೆ ಮೂಲ ಎಂಬುದು ಅಸಲಿ ಮಾನವನ ಗಾದೆಯಾದರೆ, ನಿರಾಸೆಯೇ ದುಃಖಕ್ಕೆ ಮೂಲ ಎಂಬುದು ಆ ಯಾಂತ್ರಿಕ ಮಾನವನ ಜೀವನ ಮಂತ್ರವಾಗಬಹುದು. ಹೀಗೆ ಮುಂದುವರೆದು ಈ ಭೂಮಿಯೇ ನನ್ನದು, ನಾನೇ ರಾಜ ಎಂಬ ಹೊಸತೊಂದು ಸಾಮ್ರಾಜ್ಯವೇ ಶುರುವಾಗುವ ಸಾಧ್ಯತೆಯನ್ನೂ ಅಲ್ಲಗೆಳೆಯಲಾಗುವುದಿಲ್ಲ. ಮೊದಲಬಾರಿ ಕೇಳುವವರಿಗೆ ಇದು ಹಾಸ್ಯಾಸ್ಪದ ವಾದವೆನಿಸಿದರೂ ಸಂಶೋಧಿಸುತ್ತಾ ಹೊರಟರೆ ಇಂತಹ ವಿಷಯಗಳೇ ಹೆಚ್ಚು ಹೆಚ್ಚಾಗಿ ನಮಗೆ ಕಾಣಸಿಗುತ್ತವೆ. ವಿಜ್ಞಾನಿ ಸ್ಟೀಫನ್ ಹಾಕಿಂಗ್, ಟೆಸ್ಲಾ ಕಂಪನಿಯ ಒಡೆಯ ಇಲೊನ್ ಮುಸ್ಕ್ ಅಲ್ಲದೆ ಮೈಕ್ರೋಸಾಫ್ಟ್ ದಿಗ್ಗಜ ಬಿಲ್ ಗೇಟ್ಸ್ ಕೂಡ ಹೇಳುವ ಮಾತುಗಳು ಅಂತಹದ್ದೇ. ಅದಾಗಲೇ ನ್ಯೂಕ್ಲಿಯರ್ ಬಾಂಬುಗಳ ತಯಾರಿಯ ನಿಯಂತ್ರಣದಂತೆಯೇ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಿಂದ ಮುಂಬರುವ ಅದೆಷ್ಟೋ ಕಂಟಕಗಳ ನಿವಾರಣೆಗೆ ಇಂದೇ ಕಾಯಿದೆ ಹಾಗು ವಿದೇಯಕಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡಲೇ ಜಾರಿ ಮಾಡಬೇಕೆಂಬ ಕೂಗು ಸಹ ದೊಡ್ಡದಾಗುತ್ತಿದೆ. ಇಲ್ಲದಿದ್ದರೆ ಇಂದು ಗನ್ನು ಬಾಂಬುಗಳಿಂದ ಹೊಡೆದಾಡುವ ದೇಶಗಳು ಮುಂದೊಂದು ದಿನ ನಶಿಸಲಾಗದೆ ಇರುವ ಇಂತಹ ಹಲವಾರು ಯಂತ್ರಗಳ ದಾಳಿಗಳಿಗೆ ತುತ್ತಾಗಿ ಅಸ್ತಿತ್ವವೇ ಇಲ್ಲದ ಬರಡು ಭೂಮಿಗಳಾಗಬಹುದು ಎಂಬುದು ಸದ್ಯಕ್ಕೆ ಬಹುಜನರ ಅಭಿಮತ.

Thursday, September 21, 2017

ಉತ್ತರೆಯರನ್ನು ದಕ್ಷಿಣೆಯರೊಟ್ಟಿಗೆ ಸೇರಿಸುವ ಸಾಹಸದ ಘಳಿಗೆಯಲ್ಲಿ…

ಉತ್ತರದ ಅತಿವೃಷ್ಟಿ ಹಾಗು ದಕ್ಷಿಣದ ಅನಾವೃಷ್ಟಿ, ಎರಡೂ ದೇಶವನ್ನು ಕಾಡುತ್ತಿರುವ ಬಹುಮುಖ್ಯವಾದ ಸಮಸ್ಯೆಗಳು. ಶತಮಾನಗಳಿಂದ ಜನಜೀವನಗಳನ್ನು ಬಹುವಾಗಿ ಕಾಡುತ್ತಾ ಬಂದಿರುವ ಈ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ಇತಿಶ್ರೀ ಹಾಡುತ್ತೇನೆಂದು ಆತ್ಮವಿಶ್ವಾಸದಿಂದ ಹೇಳುತ್ತಿದ್ದೆ. ಆ ಆತ್ಮವಿಶ್ವಾಸದ ಮಾತಿನ ಹಿಂದಿರುವ ಯೋಜನೆಯೇ ನದಿ ಜೋಡಣೆ. ಉತ್ತರದ ನದಿಗಳನ್ನು ಕಾಲುವೆ, ಆಣೆಕಟ್ಟುಗಳ ಮೂಲಕ ದಕ್ಷಿಣದ ನದಿಗಳ ಹರಿವಿನೊಟ್ಟಿಗೆ ಸೇರಿಸಿ, ಹಿಗ್ಗಿ ಒಡೆದು ಹೋಗುವ ಪ್ರವಾಹವನ್ನು ಕುಗ್ಗಿ ಸೊರಗಿ ಹೋಗುವ ಧಾರೆಯೊಟ್ಟಿಗೆ ಸೇರಿಸುವ ಪ್ರಕ್ರಿಯೆ. ಹಿಂದೆಲ್ಲ ಜನರು ಗಂಗೆಯನ್ನು ಕಾಣಲು ಅವಳ ಬಳಿಗೆ ಹೋದರೆ ಮುಂದೊಂದು ದಿನ ಇಂತಹ ಯೋಜನೆಗಳ ಮೂಲಕ ಆಕೆಯೇ ನಮ್ಮ ಮನೆಬಾಗಿಲಿಗೆ ಬಂದರೂ ಆಶ್ಚರ್ಯಪಡಬೇಕಾಗಿಲ್ಲ. ಸರಿಸುಮಾರು 30 ನದಿಗಳನ್ನು ಸುಮಾರು 5.6 ಲಕ್ಷ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಜೋಡಿಸಲ್ಪಡುವ ಯೋಜನೆ ಇದಾಗಿದೆ. ಪ್ರಸ್ತುತ ಶತಮಾನದ ಶುರುವಿನಲ್ಲೂ ಆಗಿನ ಸರ್ಕಾರ ಇದೇ ಯೋಜನೆಯನ್ನು ಜಾರಿಗೆ ತರಲು ತುದಿಗಾಲಲ್ಲಿ ನಿಂತಿತ್ತಾದರೂ ಅದ್ಯಾಕೋ ಯೋಜನೆಯ ಬಂಡಿ ಶುರುವಾಗಲೇಇಲ್ಲ. ವಿದೇಶಗಳಲ್ಲೂ ಇಂತಹ ಅದೆಷ್ಟೋ ನದಿಜೋಡಣೆ ಯೋಜನೆಗಳು ಶುರುವಾಗಿ ಕೊನೆಯಲ್ಲಿ ನೆಲಕಚ್ಚಿರುವುದೂ ಉಂಟು. ಇವುಗಳ ಹಿನ್ನಲೆಯಲ್ಲಿ ದೇಶದ ಅತಿ ದೊಡ್ಡ ಯೋಜನೆಗಳಲ್ಲೊಂದೆನಿಸಿಕೊಂಡಿರುವ ನದಿಜೋಡಣೆ ಯೋಜನೆಯ ಪೂರ್ವಪರಗಳ ಚಿಂತನ ಮಂಥನ ಸರಿಯಾಗಿ ಆಗಿದೆಯೇ ಎಂಬುದು ಗಂಭೀರವಾದ ವಿಚಾರ. ಇಲ್ಲವೇ ಇತ್ತೀಚೆಗಷ್ಟೇ ಕಣ್ಣು ಮಿಟುಕಿಸುವುದರೊಳಗೆ ಜಾರಿಗೊಳಿಸಿ, ಅನುಷ್ಠಾನದಲ್ಲಿ ಬಹುವಾಗಿ ಹೊಡೆತ ತಿಂದ 'ಇತರೆ ಎರಡು' ಯೋಜನೆಗಳಂತೆಯೇ ಈ ಯೋಜನೆಯೂ ಆಗುವ ಸಂಭವವಿದೆಯೇ ಎಂಬುದನ್ನು ಚರ್ಚಿಸಿ ಹೆಜ್ಜೆಹಿಡಬೇಕಿದೆ.


ಭಾರತ ಕೃಷಿ ಪ್ರಧಾನ ದೇಶ. ಮಾನ್ಸೂನ್ ಮಾರುತಗಳು ಅಥವ ಸರಳವಾಗಿ ಹೇಳುವುದಾದರೆ ನೈಸರ್ಗಿಕ ಮಳೆಯೇ ಬಹುಪಾಲು ಕೃಷಿಯ ಮಹಾಧಾರ. ಅದರೆ ಸ್ವಾತಂತ್ರ್ಯ ಬಂದು 70 ವರ್ಷಗಳ ನಂತರದ ದೇಶವೊಂದು ಇಂದಿಗೂ ತನ್ನ ಕೃಷಿ ಚಟುವಟಿಕೆಗಳಿಗೆ ಮಾನ್ಸೂನ್ ಮಾರುತಗಳನ್ನೇ ಬಹುವಾಗಿ ಅವಲಂಬಿಸಿದೆ ಎಂದರೆ ಅದು ಸೋಜಿಗದ ವಿಚಾರ. ಅದಾಗಲೇ ಇಂತಹ ಮಾರುತಗಳ ಏರಿಳಿತ, ಕಾಣೆಯಾಗುವಿಕೆಗಳಿಂದ ಪ್ರಸ್ತುತ ಕೃಷಿ ವಲಯದಲ್ಲಿ ಬೀರಿರುವ ವ್ಯತಿರಿಕ್ತ ಪರಿಣಾಮಗಳ ಉದಾಹರಣೆಗಳು ನಮ್ಮ ಮುಂದೆಯೇ ಹಲವಿವೆ. ದೇಶದ ಆಹಾರ ಭದ್ರತೆಯ ವಿಚಾರದಲ್ಲಿ ಸದೃಢವಾಗಬೇಕಾದ ಕಾಲದಲ್ಲಿ ಇನ್ನೂ ಸಹ ನೈಸರ್ಗಿಕ ಮಾರುತಗಳ ಸಹಕಾರವನ್ನೇ ನೆಚ್ಚಿಕೊಂಡು ಕೂರುವುದು ಮೂರ್ಖತನವೆಂದೆನಿಸದಿರದು. ನದಿ ಜೋಡಣೆ ಇಂತಹ ಅವಲಂಬಿತ ಕೃಷಿ ಪದ್ದತಿಗೆ ವರದಾನವಾಗಬಹುದು. ಅತಿಯಾಗಿ ಸುರಿಯುವ ಮಳೆ ಪ್ರದೇಶದಿಂದ ಕಾಲುವೆ ಹಾಗು ಅಣೆಕಟ್ಟುಗಳ ಮೂಲಕ ನಿಯಂತ್ರಿತವಾಗಿ ನೀರಿನ ಸರಬರಾಜು ಈ ಯೋಜನೆಯ ಮೂಲಕ ಸಾಧ್ಯವಾಗಬಹುದು. ಮಾನವನ ಹುಚ್ಚಾಟದಿಂದಲೇ ಹೆಚ್ಚಾಗಿ ಇಂದು ಕಣ್ಣಾಮುಚ್ಚಾಲೆ ಆಡುವ ಮಳೆಯನ್ನು ಅತಿಯಾಗಿ ನಂಬಿಕೊಂಡು ಕೂರುವುದನ್ನು ಈ ಮೂಲಕ ಕಡಿಮೆಗೊಳಿಸಬಹುದು.

ಇನ್ನು ವಿಶ್ವದ ನಾಲ್ಕನೇ ಅತಿ ದೊಡ್ಡ ‘ಗ್ರೀನ್ ಹೌಸ್’ ಅನಿಲಗಳ ಹೊರ ಸೋಸುವಿಕೆಯ ದೇಶವಾಗಿರುವ ಭಾರತ 'ಪ್ಯಾರಿಸ್ ಒಪ್ಪಂದ'ದ ಬಳಿಕ ದೇಶದ ಒಟ್ಟು ಶಕ್ತಿಯ ಉತ್ಪಾದನೆಯಲ್ಲಿ 40% ರಷ್ಟನ್ನು ನವೀಕರಿಸಬಹುದಾದ (Renewable) ಹಾಗು ಶುದ್ಧ ಶಕ್ತಿಯ (Clean Energy) ಮೂಲಗಳಿಂದಲೇ ಉತ್ಪಾದಿಸುತ್ತದೆಂದು ಹೇಳಿಕೊಂಡಿದೆ ಹಾಗು ಅದನ್ನು ಮಾಡಿಯೂ ತೋರಿಸಬೇಕಾದ ಅನಿವಾರ್ಯತೆ ಇದೆ! ಇಂತಹ 'ಕ್ಲೀನ್ ಎನರ್ಜಿ' ಯೋಜನೆಗಳಲ್ಲಿ ಜಲವಿದ್ಯುತ್ (Hydro Energy) ಯೋಜನೆಯೂ ಸಹ ಒಂದು. ನದಿ ಜೋಡಣೆಯ ಹಾದಿಯ ಸೂಕ್ತ ಸ್ಥಳಗಳಲ್ಲಿ ನಿರ್ಮಾಣವಾಗುವ ಅಣೆಕಟ್ಟುಗಳ ಮೂಲಕ ಜಲವಿದ್ಯುತ್ತನ್ನೂ ಉತ್ಪಾದಿಸುವುದು ಸಾಧ್ಯವಿದೆ. ದೇಶದ ಪ್ರಸ್ತುತ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ 15% ರಷ್ಟು ಮಾತ್ರ ಜಲವಿದ್ಯುತ್ ನ ಮೂಲಕ ಸಾಧ್ಯವಾಗುತ್ತಿದೆ. ಆದ ಕಾರಣ ಕೇಂದ್ರ ಸರ್ಕಾರಕ್ಕೆ ತನ್ನ ನದಿಜೋಡಣೆ ಯೋಜನೆಯನ್ನು ಸಮರ್ಥಿಸಿಕೊಳ್ಳಲು ಈವೊಂದು ಕಾರಣವೂ ಹೆಚ್ಚಾಗಿ ಸಹಕಾರಿಯಾಗಲಿದೆ. ಅಲ್ಲದೆ ಮೊದಲೇ ಹೇಳಿದಂತೆ ಪ್ರವಾಹವೆಂಬ ಅತಿವೃಷ್ಟಿಯಿಂದ ಪಾರಾಗಲು, ಬರಪೀಡಿತ ಸ್ಥಳಗಳಲ್ಲಿ ಹಸಿರು ಕ್ರಾಂತಿಯನ್ನು ಮೂಡಿಸಲು, ಕುಡಿಯುವ ನೀರಿನ ಆಹಾಕಾರಕ್ಕೆ, ಅಲ್ಲದೆ ಸದ್ಯಕ್ಕೆ ತಲೆದೋರಿರುವ ನಿರುದ್ಯೋಗ ಸಮಸ್ಯೆಗೂ ಒಂತಿಷ್ಟು ಪರಿಹಾರವನ್ನು ಕಂಡುಕೊಳ್ಳಲು ನದಿ ಜೋಡಣೆ ಯೋಜನೆ ಪೂರಕವಾಗಲಿದೆ. 

ಆದರೆ,

ಈ ಮೊದಲು ದೇಶದ ಹಾಗು ವಿಶ್ವದ ಹಲವೆಡೆ ಇಂತಹದ್ದೇ ಯೋಜನೆಗಳು ಜಾರಿಗೊಂಡು, ನಿಸರ್ಗನಾಶ, ಪರಿಸರ ವ್ಯವಸ್ಥೆಯ ಅಸ್ತವ್ಯಸ್ತೆ, ರಾಜಕೀಯ ಕಚ್ಚಾಟಗಳು ಎಂಬ ಮತ್ತೊಂದು ಮಗದೊಂದು ಕಾರಣಗಳ ಮೂಲಕ ಬಹುವಾಗಿ ಟೀಕೆಗೆ ಒಳಪಟ್ಟಿರುವ ನಿದರ್ಶನಗಳೂ ಇವೆ.

ಉತ್ತರಪ್ರದೇಶ ಹಾಗು ಮಧ್ಯಪ್ರದೇಶ ರಾಜ್ಯಗಳ ಕೆನ್ ಹಾಗು ಬೆಟ್ವಾ ನದಿಗಳ ಜೋಡಣೆಗೆ ಶುರುವಿಟ್ಟುಕೊಂಡಿರುವ ಕೇಂದ್ರ ಸರ್ಕಾರ ಅದಾಗಲೇ ಸ್ಥಳೀಯರಿಂದ ವ್ಯಾಪಕ ಟೀಕೆಗೆ ಗುರಿಯಾಗಿದೆ. ಈ ಯೋಜನೆಯ ಹಾದಿಯಲ್ಲಿ ಬರುವ ಪನ್ನಾ ರಾಷ್ಟೀಯ ಉದ್ಯಾನದ ಸುಮಾರು 55.75 ಚದರ ಕಿಲೋಮೀಟರ್ನಷ್ಟು ಹುಲಿ ಮೀಸಲು (Tiger Reserve) ಜಾಗ ಸಂಪೂರ್ಣ ಜಲಾವೃತಗೊಳ್ಳಲಿದೆ. ಅದಾಗಲೇ ಹತ್ತು ಹಲವು ಕಾರಣಗಳಿದ ಕ್ಷೀಣಿಸುತ್ತಿರುವ ರಾಷ್ಟ್ರೀಯ ಉದ್ಯಾನಗಳು ಹಾಗು ಹುಲಿ ಮೀಸಲು ಅರಣ್ಯಗಳು ಇಂತಹ ನಿಖರ ಫಲಿತಾಂಶವಿಲ್ಲದ ಯೋಜನೆಗಳಿಗೆ ಬಲಿಪಶುವಾಗುತವುದು ಶೋಚನೀಯ ಸಂಗತಿ. ಹೀಗೆಯೇ ನದಿ ಜೋಡಣೆಯಲ್ಲಿ ಬರುವ ಅದೆಷ್ಟೋ ದಟ್ಟಾರಣ್ಯಗಳು, ಹಳ್ಳಿಗಳು, ಮೀಸಲು ಅರಣ್ಯಗಳ ಉಳಿವಿಕೆ ಅದೆಷ್ಟರ ಮಟ್ಟಿಗೆ ಸಾಧ್ಯವಾಗಲಿದೆ ಎಂದು ಕಾದು ನೋಡಬೇಕು. ಜಾಗತಿಕವಾಗಿ ನೋಡುವುದಾದರೆ ಕಝಕಿಸ್ತಾನ ಹಾಗು ಉಜ್ಬೇಕಿಸ್ತಾನ್ ಗಳಲ್ಲೂ ಅಮು ದರ್ಯಾ ಹಾಗು ಡೈರ್ ದರ್ಯಾ ಎಂಬ ನದಿಗಳ ಹರಿವನ್ನು ಬದಲಿಸಿ ಪರಿಸರ ವ್ಯವಸ್ಥೆಯಲ್ಲಿ ಭಾರಿ ಅಲ್ಲೊಲ್ಲ ಕಲ್ಲೋಲವಾದ ಹಲವು ಯೋಜನೆಗಳನ್ನೂ ಇಲ್ಲಿ ಉಲ್ಲೇಖಿಸಬಹುದು.

ದೇಶದಲ್ಲಿ ನದಿ ಜೋಡಣೆ ಯೋಜನೆಯ ರೂಪುರೇಶೆ ಇಂದು ನೆನ್ನೆಯದಲ್ಲ. ಎಂಬತ್ತರ ದಶಕದಲ್ಲೇ ಅಂದಿನ ಸರ್ಕಾರಗಳು ಇದಕ್ಕೆ ಒಲವನ್ನು ತೋರಿಸಿದವಾದರೂ ಕಾರಣಾಂತರಗಳಿಂದ ದೇಶದ ಎಲ್ಲೆಡೆ ಇದು ಜಾರಿಯಾಗಲಿಲ್ಲ. ಅಲ್ಲದೆ ಅಂದೆಲ್ಲ ದೇಶದ ಉತ್ತರದಲ್ಲಿ ಬೀಳುತ್ತಿದ್ದ ಧಾರಾಕಾರ ಮಳೆಯ ಪ್ರಮಾಣ ಇಂದಿನ ಸಮಯಕ್ಕೆ ಹೋಲಿಸಿದರೆ ಅಜಗಜಾಂತರ ವ್ಯತ್ಯಾಸವಿರುವುದು ತಿಳಿದಿರುವ ವಿಷಯವೇ. ಅಂತಹದರಲ್ಲಿ ಬಹುಪಾಲು ಅಂದಿನ ಯೋಜನೆಯ ನೀಲನಕ್ಷೆಯನ್ನೇ ಹಿಡಿದುಕೊಂಡು, ಲಕ್ಷಾಂತರ ಕೋಟಿ ರೂಪಾಯಿಗಳನ್ನು ಕಣ್ಣಾಮುಚ್ಚಾಲೆಯಾಡುವ ವರುಣನನ್ನು ನೆಚ್ಚಿ ಸುರಿಯುವುದು ವಿಮರ್ಶಿಸಬೇಕಾದ ವಿಚಾರ. ಸದ್ಯದ ಅಂಕಿಅಂಶಗಳ ಪ್ರಕಾರ ಈ ಯೋಜನೆಗೆ ತಗುಲುವ ಒಟ್ಟು ಮೊತ್ತ ಸುಮಾರು 5 ರಿಂದ 6 ಲಕ್ಷ ಕೋಟಿ ರೂಪಾಯಿಗಳು. ಇದು ನಮ್ಮ ದೇಶದ ಜಿಡಿಪಿಯ ಅಂದಾಜು 5% ನಷ್ಟು ಮೊತ್ತ! ಇನ್ನು ಸರ್ಕಾರದ ಯಾವ ಯೋಜನೆ ತಾನೇ ಹೇಳಿದ ಸಮಯಕ್ಕಿಂತ ಹಾಗು ಅಂದಾಜಿಸಿದ ಹಣಕ್ಕಿಂತ ಮೊದಲೇ ಆಗಿವೆ?! ಹಾಗಾಗಿ ಈಗ ಹೇಳುತ್ತಿರುವ ಮೊತ್ತ ದಲ್ಲಾಳಿ ಹಾಗು ಭ್ರಷ್ಟ ಅಧಿಕಾರಿಗಳ 'ಸೇವೆ'ಯಲ್ಲಿ ಇನ್ನೂ ಹೆಚ್ಚಾಗುವುದರಲ್ಲಿ ದೂಸರಾ ಮಾತೇ ಇಲ್ಲ. ಅಲ್ಲದೆ ನಮ್ಮಲ್ಲಿ ನದಿಜೋಡಣೆ ಎಂಬುದು ರಾಜ್ಯ ರಾಜ್ಯಗಳ ನಡುವಿನ ಸಹಕಾರದ ವಿಷಯ. ಕೇಂದ್ರ ಸರ್ಕಾರ ಅದೆಷ್ಟೇ ಪಾರದರ್ಶಕವಾಗಿ ಯೋಜನೆಯನ್ನು ಶುರುವಿಟ್ಟುಕೊಂಡರೂ ರಾಜಕೀಯದ ಚದುರಂಗದ ಆಟ ಇಲ್ಲಿ ನೆಡೆದೇ ನೆಡೆಯುತ್ತದೆ. ಕೆಲ ರಾಜ್ಯಗಳು ಇದರಿಂದ ಅದೆಷ್ಟೇ ಒಳಿತಿದ್ದರೂ ಬೇಕಂತಲೇ ಕ್ಯಾತೆ ತೆಗೆದು ಸುಪ್ರೀಂ ಕೋರ್ಟಿನ ಮೊರೆಯನ್ನು ಹೋಗುವ ಸಂಭವವನ್ನೂ ಸಹ ತಪ್ಪಿಸಲಾಗುವುದಿಲ್ಲ. ಇವೆಲ್ಲ ತಕರಾರುಗಳು ಇತ್ಯರ್ಥವಾಗಿ ಶುರುವಾದ ಯೋಜನೆ ಕೊನೆಗಾಣುವುದರ ಒಳಗೆ ಅದೆಷ್ಟು ತಲೆಮಾರುಗಳು ಉರುಳುವವೋ ಅಥವಾ ಅದೆಷ್ಟರ ಮಟ್ಟಿನ ಹೊರೆಯನ್ನು ಜನಸಾಮಾನ್ಯ ಹೊರಬೇಕಾಗುವುದೋ ಕಾದು ನೋಡಬೇಕು.

ಹಾಗಾದರೆ ದೇಶದ ನೀರಿನ ಸಮಸ್ಯೆಗಳಿಗೆ ಬಹುಕೋಟಿ ರೂಪಾಯಿಗಳ ನದಿಜೋಡಣೆಯೊಂದೇ ಸೂಕ್ತ ಪರಿಹಾರವೇ? ಮಳೆ ನೀರಿನ ಸಂಗ್ರಹ, ಅಂತರ್ಜಲ ವೃದ್ಧಿ, ಡಿಸಾಲೆನೇಷನ್, ಅರಣ್ಯಕರಣ, ಹನಿ ನೀರಾವರಿ ಪದ್ದತಿ, ಹೀಗೆ ಇನ್ನೂ ಹಲವು ಸರಳ ಖರ್ಚಿನ ನಿಖರ ಫಲಿತಾಂಶದ ಯೋಜನೆಗಳೂ ಏತಕ್ಕೆ ಉತ್ತರಗಳಾಗಬಾರದು? ಪ್ರಸ್ತುತ ಕುಂಠಿತ ಜಿಡಿಪಿಯ ದರದಲ್ಲಿ, ಮಾತೆತ್ತಿದರೆ ಕೇಳಿದವನು ಸುಸ್ತಾಗಿ ಕುಸಿದು ಬೀಳುವಂತಹ ಬಂಡವಾಳದ, ಒಂದಲ್ಲ ಒಂದು ಬಗೆಯಲ್ಲಿ ಜನರ(ಸರ್ಕಾರದ) ಬೊಕ್ಕಸದ ಮೇಲೆ ತೀವ್ರವಾಗಿ ಹೊರೆಯಾಗುವ ಯೋಜನೆಗಳೇ ಏತಕ್ಕೆ ಸರ್ಕಾರದ ಪ್ರಣಾಳಿಕೆಗಳಲ್ಲಿ ಮೂಡುತ್ತಿವೆಯೋ ತಿಳಿಯದು. ಎಷ್ಟಾದರೂ ನಾವುಗಳು ದಿನನಿತ್ಯದ ಅತಿಸಾಮಾನ್ಯ ವಿಷಯಗಳಲ್ಲೇ ಮುಳುಗಿ ಮರೆಯಾಗಿರುವ ಜನಸಾಮಾನ್ಯರು. ಮೇಲಿನವರು ಅದೇನೂ ಮಾಡಿದರೂ ತಿಳಿದು, ಅರಿತು, ಯೋಚಿಸಿ, ವಿಮರ್ಶಿಸಿ ಮಾಡುವವರು! ನಾವೇನಿದ್ದರೂ ಕೇಳುಗರು. ಹೇಳುಗರ ಮಾತಿಗೆ ಕಿವಿಯೊಡ್ಡುವರು, ತಲೆಬಾಗಿ 'ಜೈ' ಎನ್ನುವವರು!

Friday, September 15, 2017

ನಂಬುಗೆಯೆಂಬ ಅಡಿಪಾಯದಲ್ಲಿ ವೈಚಾರಿಕತೆಯ ಸ್ಥಾನ...

ಮಾನವನ ದಿನನಿತ್ಯದ ಕಾರ್ಯಚಟುವಟಿಕೆಗಳನ್ನು ಎರಡು ವಿಧಗಳಾಗಿ ವಿಂಗಡಿಡಬಹುದು. ಒಂದು ವ್ಯಾವಹಾರಿಕ ಮತ್ತೊಂದು ಭಾವನಾತ್ಮಕವಾದದ್ದು. ಈ ಎರಡು ಚಟುವಟಿಕೆಗಳು ಹಾಗು ಅವುಗಳ ಮೂಲವಾಗಿರುವ ಗುಣಗಳು ಒಂದಕೊಂದು ಎಷ್ಟು ತದ್ವಿರುದ್ದವೋ ಅಷ್ಟೇ ಒಂದಕೊಂದು ಪೂರಕ.

ಒಬ್ಬ ಮನುಷ್ಯ ತಾನು ಅದೆಷ್ಟೇ ಸಾತ್ವಿಕ ನಡವಳಿಕೆಯ ಮಹಾಪುರುಷನೇ ಆಗಿದ್ದರೂ ವ್ಯವಹಾರದ ವಿಷಯಕ್ಕೆ ಬಂದಾಗ ಅಲ್ಲಿ ಆತ ಮಹಾ ಚಾಣಕ್ಯನಾಗಿರುತ್ತಾನೆ. ಆತ ಒಬ್ಬ ಉತ್ತಮ ಸೇಲ್ಸ್ ಮ್ಯಾನ್ ಆಗಿದ್ದರೆ ಒಂದಲ್ಲ ಒಂದು ಬಗೆಯಲ್ಲಿ ತನ್ನ ಸರಕನ್ನು ಮಾರುವ ವ್ಯಾವಹಾರಿಕ ಜ್ಞಾನ, ಮಾತಿನ ತಂತ್ರಗಾರಿಕೆ, ನಿಪುಣತೆ ಹಾಗು ಇನ್ನು ಹಲವು ಹತಾರಗಳು ಆತನ ಬತ್ತಳಿಕೆಯಲ್ಲಿರುತ್ತವೆ. ಆ ಕೆಲಸವೊಂದನ್ನು ಮಾಡುವಾಗ ಆತ ತನ್ನ ಸಾತ್ವಿಕ ನಡವಳಿಕೆಯ ಭಾವನಾತ್ಮಕ ಗುಣವನ್ನು ಕೆಲಕಾಲದವರೆಗೆ ಎಲ್ಲೋ ಒಂದೆಡೆ ಭದ್ರವಾಗಿ ಮಲಗಿರಿಸಿ ಬರಬೇಕಾಗುತ್ತದೆ. ಇಲ್ಲವಾದಲ್ಲಿ ಇಂದಿನ ವ್ಯಾವಹಾರಿಕ ಪ್ರಪಂಚದಲ್ಲಿ ಆತನಂತಹ ವ್ಯಕ್ತಿಗಳು ‘ಮುಂದುವರೆದ’ ಅಥವಾ 'ಬೆಳೆದ' ಎಂದು ಕರೆಸಿಕೊಳ್ಳುವುದು ಕಷ್ಟ ಸಾಧ್ಯ. ಮುಂದಿರುವ ವ್ಯಕಿ ಸೇರಾದರೆ ಈತ ಸವಸೇರಾಗಿರಲೇಬೇಕು. ಇಂತಹ ಒಂದು ವ್ಯಾವಹಾರಿಕ ಗುಣ ಜಗತ್ತಿನ ಭಾಗಶಃ ಜನರ ಪ್ರಸ್ತುತ ವಸ್ತುಸ್ಥಿತಿ. ಇಲ್ಲಿ ಪ್ರತಿಯೊಂದು ವಿಷಯಗಳನ್ನು ಒರೆಹಚ್ಚಿ, ಪ್ರೆಶ್ನಿಸಿ, ಪರಿಕ್ಷಿಸಿ ನೋಡಲಾಗುತ್ತದೆ. ಕೊಳ್ಳುವ, ಕೇಳುವ, ನೋಡುವ ಅಲ್ಲದೆ ಆಡುವ ಮೊದಲೂ ವಿಷಯಗಳ ಪಚನಕ್ರಿಯೆ ಬಹುವಾಗಿ ಆಗುತ್ತದೆ.

ಅದೇ ಮಾನವನನಲ್ಲಿ ಇರುವ ಮತ್ತೊಂದು ಕಂಡೂ ಕಂಡರಿಯದಂತಹ ಗುಣವೇ ಭಾವನಾತ್ಮಕ ಗುಣ. ಇಲ್ಲಿ ಭಾವನೆಗಳದ್ದೇ ಮೇಲುಗೈ. ಇಲ್ಲಿ ಪ್ರೆಶ್ನಿಸುವ, ಪರೀಕ್ಷಿಸುವ ಗುಣಗಳಿಗೆ ಹೆಚ್ಚಾಗಿ ಆಸ್ಪದವಿರುವುದಿಲ್ಲ. ಯಾರೋ ಊದುವ ಪೀಪಿಗೆ ತಲೆಯಾಡಿಸುತ್ತಾ, ಅವರ ಜೈಕಾರಕ್ಕೆ ಜೈಕಾರವೊಂದು ತನಗರಿಯದಂತೆ ಒಳಗೊಳಗೆ ಮೂಡಿಬರುತ್ತದೆ. ಇಲ್ಲಿ ವಿಷಯಗಳ ಹೇರಿಕೆಗಿಂತ ಜನರಲ್ಲಿರುವ ಅಂತರಂಗದ ಮುಗ್ದತೆಯೇ ಪಾಪದ್ದು ಎನ್ನಬಹುದು. ಹಿರಿಯರು ಅಥವ ಹತ್ತಿರದವರು ಮಾಡುವ ಕಾರ್ಯಗಳು, ವಿಚಾರಗಳು ಇಲ್ಲಿ ಯಥಾವತ್ತಾಗಿ ಕಾಪಿಯೊಡಯಲ್ಪಡುತ್ತವೆ. ಏನು ಮಾಡುತ್ತಿದ್ದಾರೆ, ಏಕೆ ಮಾಡುತ್ತಿದ್ದಾರೆ ಎಂಬುದಕ್ಕಿಂತ ‘ಯಾರು’ ಮಾಡುತ್ತಿದ್ದಾರೆ ಎಂಬುದೇ ಮುಖ್ಯವಾಗಿರುತ್ತದೆ. ಅವರು ಸರಿ ಎಂದರೆ ಸರಿ, ತಪ್ಪೆಂದರೆ ತಪ್ಪು. ಈ ಬಗೆಯ ಒಂದು ಭಾವನಾತ್ಮಕ ಅಂಧತ್ವದ ಗುಣವದು.

ಈ ಎರಡು ಬಗೆಗಳನ್ನು ಇಲ್ಲಿ ಪ್ರಸ್ತಾಪಿಸಲು ಕಾರಣ ಬಹಳಷ್ಟಿದೆ. ಪ್ರಸ್ತುತ ಹಾಗುಹೋಗುಗಳನ್ನು ಗಮನಿಸಿದಾಗ ಈ ಎರಡೂ ಬಗೆಯ ಗುಣಗಳು ಹಾಗು ಅದರಿಂದ ಸಮಾಜದ ಮೇಲೆ ಬೀಳಬಹುದಾದ ಪರಿಣಾಮಗಳನ್ನು ನಿಸ್ಸಂದೇಹವಾಗಿ ಊಹಿಸಬಹುದಾಗಿದೆ.

ಇಂದು ಕೋತಿ ತಾನು ಕೆಡುವುದಲ್ಲದೆ ಇಡೀ ವನವನ್ನೇ ಕೆಡಿಸಿತು ಅನ್ನುವ ಹಾಗೆ ಒಬ್ಬ ವ್ಯಕ್ತಿ ತನ್ನೊಳಗಿನ ನಂಬುಗೆ ಹಾಗು ವಿಚಾರಗಳನ್ನು ನನ್ನವರು ನಮ್ಮವರು ಎಂಬುವವರ ಮೇಲೆಲ್ಲಾ ಹರಿಸಲು ಆವಣಿಸುತ್ತಾನೆ. ನನ್ನವರು ನಮ್ಮವರು ಆಂದಮೇಲೆ ನನ್ನ ದಾರಿಯನ್ನೇ ಅನುಕರಿಸಬೇಕು ಎಂದು ಇಚ್ಛಿಸುತ್ತಾನೆ. ಆ ವಿಚಾರ ವ್ಯಕ್ತಿನಿಷ್ಠವಾಗಿರಬಹುದು, ವಸ್ತುನಿಷ್ಠವಾಗಿರಬಹದು ಅಥವಾ ಮತ್ತೇನೋ ಒಂದು ಆಗಿರಬಹುದು. ಉದಾಹರಣೆಗೆ ಪ್ರಸ್ತುತ ಆದ್ಯಾತ್ಮಿಕ ವಲಯದಲ್ಲಿ ಕಾಣಿಸಿಕೊಳ್ಳುವ , ದೇವರಿಗಿಂತ ಕೇವಲ ಇಂಚಷ್ಟೇ ಸಣ್ಣವರೋ ಅಥವಾ ಸರಿಸಮಾನರೋ ಅಥವಾ ಅವನಿಗಿಂತಲೂ ಮಿಗಿಲೋ ಎಂಬ ಒಂದು ಇಮೇಜ್ ಅನ್ನು ಅಂತಹವರು ತಾವಾಗಿಯೇ ಮೂಡಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಆತನ/ಆಕೆಯ ಹಿಂಬಾಲಕರೇ ಸಮಾಜದಲ್ಲಿ ಮೂಡಿಸಿಬಿಡುತ್ತಾರೆ.ಅಂತವರನ್ನು ಆದ್ಯಾತ್ಮಿಕ ಲೋಕದ ಉತ್ತುಂಗದಲ್ಲಿ ಕುರ್ಚಿಯಲ್ಲಿ ಕೂರಿಸಿಬಿಡುತ್ತಾರೆ. ಇಂದು ಮುಂದು ನೋಡದೆ ಅಪ್ಪ ಹಾಕಿದ ಆಲದ ಮರ ಎನ್ನುತ ಮನೆಯ ಇತರರೂ, ನೆರೆಹೊರೆಯವರು, ನೆಂಟರಿಷ್ಟರು ಸಹ ಅಂತಹ ಅನುಕರಣೆಯ ಅಯಸ್ಕಾಂತದೆಡೆ ಆಕರ್ಷಿತರಾಗುತ್ತಾರೆ. ಭಾವನಾತ್ಮಕ ಗುಣ ಇಲ್ಲಿ ತನ್ನ ಕೈಚಳಕವನ್ನು ತೋರಿಸುತ್ತದೆ. ಹೀಗೆ ಅಂದು ಒಂದೆರೆಡು ಕುಟುಂಬಗಳಿಗೆ ದೇವರಂತೆ ಭಾಸವಾಗುವ ಈ ವ್ಯಕ್ತಿ ಬರಬರುತ್ತಾ ಒಂದು ಊರಿಗೆ, ಜಿಲ್ಲೆಗೆ ಅಷ್ಟೇ ಏಕೆ ಇಡೀ ದೇಶಕ್ಕೆ ದೇವರಂತಾಗಿ ಬಿಡುತ್ತಾನೆ. ಆಗ ಅವನ ಪ್ರವಚನಗಳೇನು? ಹಿತವಚನಗಳೇನು? ಅಬ್ಬಬ್ಬಾ! ಹೀಗೆ ಮಹಾ ಮೇಧಾವಿಗಳೆನಿಸಿಕೊಂಡವರು ಮುಂದೊಂದು ಸಿಂಹಾಸನದ ಮೇಲೆ ಕೂತು ಹೊಲಸು ಕೆಲಸ ಮಾಡಿದಾಗ, ಜನರಲ್ಲ ಹಿಡಿ ಹಿಡಿ ಶಾಪವನ್ನಾಕುತ್ತ ಮನಬಂದಂತೆ ಉಗಿಯತೊಡಗಿದಾಗ, ಪೊಲೀಸ್ ತನಿಖೆಗಳು ಇನ್ನಿಲ್ಲದಂತೆ ನೆಡೆಯತೊಡಗಿದಾಗ ಮಾತ್ರ ಆತನನ್ನು ಎತ್ತಿ ಮೇಲಕ್ಕೆ ಕೂರಿಸಿದವರ ಮುಖ ಕಪ್ಪಾಗುವಂತೆ ಮಾಡುತ್ತದೆ. ಹಣಸಂಪಾದನೆಯ ಬಿಸಿನೆಸ್ ಮ್ಯಾನ್ ಆಗಿ ,ಲಲನೆಯರ ಸ್ಥಾನ ಹಾಗು ಮನವನ್ನೂ ಕುಲಗೆಡಿಸುವ ಕಾಮಿಯಾಗಿ, ರಾಜಕಾರಣಿಗಳ ಜುಟ್ಟನ್ನು ಹಿಡಿದು ತಾನೇ ಪರೋಕ್ಷವಾಗಿ ಅಧಿಕಾರ ನೆಡೆಸುವ ನೇತಾರನಾಗಿ, ಸಿನಿಮಾ ನಟನಾಗಿ, ಒಟ್ಟಿನಲ್ಲಿ ಇಹವೆಲ್ಲ ನಶ್ವರವೆನ್ನುವ ಆತ ಅದೇ ನಶ್ವರ ಲೋಕದಲ್ಲಿ ಕಪಟ ರಾಜನಂತೆ ಜೀವಿಸುತ್ತಾನೆ.

ಪ್ರಸ್ತುತ ಸುದ್ದಿಯಲ್ಲಿರುವ ಗುರ್ಮಿತ್ ರಾಮ್ ರಹೀಮ್ ಕೂಡ ಇಂತಹ ಅದ್ವಾನತೆಗೆ ಒಂದು ಉತ್ತಮ ಉದಾಹರಣೆ. ಅಲ್ಲದೆ ಹೀಗೆಯೇ ಹಿಂದೆಯೂ ಹತ್ತಾರು ನೂರಾರು ವ್ಯಕ್ತಿಗಳು ತಮ್ಮ ಸುಳ್ಳು ಪರದೆಯನ್ನು ಕಳಚಿ ಸಮಾಜದ ಮುಂದೆ ನಗ್ನವಾಗಿರುವ ಸಂದರ್ಭಗಳು ಅನೇಕ. ಹೀಗೆ ನಗ್ನವಾದ ನಂತರ ರಾಶಿ ರಾಶಿ ಶಪಿಸುವ ನಾವುಗಳು ಇದಕ್ಕೂ ಮೊದಲು ಅದೇ ವ್ಯಕ್ತಿತ್ವಗಳನ್ನು ಭಕ್ತಿಭಾವಗಳಿಂದ ಪೂಜಿಸುವಾಗ ಮಾತ್ರ ಎಳ್ಳಷ್ಟೂ ಅವರ ನಿಜಸ್ಥಿತಿಯ ಬಗ್ಗೆ ಯೋಚಿಸುವುದಿಲ್ಲ. ಆಗೆಲ್ಲ ನಮ್ಮ ವ್ಯಾವಹಾರಿಕ/ವೈಚಾರಿಕ ಜ್ಞಾನ ಸ್ಥಿರ ರಜೆಯಲ್ಲಿ ಮಜಾ ಮಾಡುತ್ತಿರುತ್ತದೆ ಹಾಗು ಕೇವಲ ಭಾವನಾತ್ಮಕ ಜ್ಞಾನ ನಮ್ಮನ್ನು ಆವರಿಸಿರುತ್ತದೆ.

ಇನ್ನು ಗೌರಿ ಲಂಕೇಶ್ ರವರ ಹತ್ಯೆಯ ನಂತರವೂ ಜರುಗುತ್ತಿರುವ ಹಲವು ಘಟನೆಗಳು ಹೆಚ್ಚಾಗಿ ಭಾವನಾತ್ಮಕ ನಿಲುವನ್ನೇ ತಾಳಿವೆ. ಎಡ, ಬಲ, ಕಸ, ಕಡ್ಡಿ ಎಂಬ ಹಳಸುಗಳನ್ನು ಬದಿಗಿಟ್ಟು ಕೇವಲ ಮಾನವೀಯ ದೃಷ್ಟಿಯಿಂದ ಈ ಕೃತ್ಯವನ್ನು ನೋಡಲಾಗದ ವ್ಯಕ್ತಿತ್ವಗಳು ಕಳೆದ ಒಂದು ವಾರದಿಂದ ಎಲ್ಲೆಡೆ ಕಾಣುತ್ತಿವೆ. ಕೃತ್ಯದ ತ್ವರಿತ ವಿಚಾರಣೆಗಿಂತ ಒಬ್ಬರು ಇನ್ನೊಬ್ಬರ ಮೇಲೆ ಕೆಸರೆರಚಿಗೊಳ್ಳುವುದರಲ್ಲೇ ದಿನಗಳು ಕಳೆಯುತ್ತಿವೆ. ನೀರಿಗೆ ಬಿದ್ದ ವ್ಯಕ್ತಿಯನ್ನು ಬದುಕಿಸುವುದ ಬಿಟ್ಟು ಸೆಲ್ಫ್ ಫೊಕ್ಲೆಯ್ಮ್ಡ್ ನ್ಯಾಯಾಲಯಗಳಂತಿರುವ ಟಿವಿ ಸ್ಟುಡಿಯೋಗಳ ಮುಂದೆ ನ್ಯಾಯಾಧೀಶರಂತೆ ವರ್ತಿಸುವ ಸಂಕುಚಿತ ಮನಸ್ಸುಗಳು ಹೀಜಲು ಬಾರದೆ ಕೇವಲ ಬಡಾಯಿ ಕೊಚ್ಚಿಕೊಳ್ಳುವ ವ್ಯಕ್ತಿತ್ವಗಳು.ಇಂತಹ ಚರ್ಚೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಕೊನೆಯಲ್ಲಿ ಮೂಡುವ ಅಂತಿಮ ಚೀರಾಟ ಹಾಗು ಶುರುವಲ್ಲಿ ಪ್ರಸ್ತಾಪಿಸಲಾಗುವ ವಿಷಯಕ್ಕೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ಅದು ಕೇವಲ ಒಬ್ಬರನೊಬ್ಬರು ನಿಂದಿಸುವ, ಹಣಕಿಸುವ ಕಾರ್ಯಕ್ರಮವಾಗಿರುತ್ತದೆಯೇ ವಿನಃ ಅಲ್ಲಿ ವಿಷಯದ ಅಳವನ್ನು ಮುಟ್ಟುವ ಗೋಜಿಗಂತೂ ಹೋಗುವ ಮಾತೇ ಇಲ್ಲ. ಇನ್ನು ಇಂತಹ ಕಚ್ಚಾಟಕೂಟಗಳನ್ನು ರಾಜ್ಯದ, ದೇಶದ ಘನಂದಾರಿ ಸುದ್ದಿವಾಹಿನಿಗಳು ಬಿತ್ತರಿಸುವ ಅಷ್ಟೂ ತುಣುಕುಗಳನ್ನು ತದೇಕಚಿತ್ತದಿಂದ ನೋಡುವ ಜನತೆಯ ಮೇಲೆ ಬೀರುವ ಪರಿಣಾಮವಾದರೂ ಹೇಳತೀರದ್ದು. ಕುಂಬಳಕಾಯಿ ಕಾಯಿ ಕಳ್ಳ, ಕಳ್ಳನಾದರೆ ಮಾತ್ರ ಹೆಗಲು ಮುಟ್ಟಿ ನೋಡಿಕೊಳ್ಳಬೇಕಲಲ್ಲವೇ?! ಹಾಗಾದರೆ ಸತ್ಯ ಹೊರಬರುವ ಮುನ್ನವೇ ಊಹಾಪೋಹಗಳ ಕಾಲಹರಣವೇಕೆ?.

ಇಲ್ಲಿ ಯಾರೋ ಒಬ್ಬ ನಾಯಕನೆನಿಸಿಕೊಂಡವನು ತಳಬುಡ ಇಲ್ಲದೆಯೇ ನೀಡುವ ಒಂದು ಹೇಳಿಕೆ ಅದು ಸರಿಯೋ ತಪ್ಪೋ ಎಂದು ಪರೀಕ್ಷಿಸುವ ಗೋಜಿಗೂ ಹೋಗದೆ, ಅದೇ ವಾದವನು ಮೊಂಡವಾದವನ್ನಾಗಿ ಮಾಡಿಕೊಂಡು, ಬಾಯಿಗೆ ಬಂದಂತೆ ಅರಚಾಡಿ ತಮ್ಮ ರಾಜಕೀಯ ಲಾಭವನ್ನು ಮಾಡಿಕೊಳ್ಳುವ ಹಲವರನ್ನು ಹಿಂಬಾಲಿಸುವ ಅಂಧರ ಗುಣವೂ ಸಹ ಭಾವನಾತ್ಮಕವಾದದ್ದು. ಇಂದು ಜರುಗುವ ಪ್ರತಿಯೊಂದು ವಿದ್ಯಮಾನಗಳು ಜನಮಾಸದೊಳಗೆ ಸೇರುವಾಗ ಅದೆಷ್ಟರ ಮಟ್ಟಿಗೆ ರೂಪಾಂತರವಾಗಿರುತ್ತದೆ ಎಂದರೆ ಮುಂದೊಂದು ದಿನ ಗೌರಿಯ ಹಂತಕರು ಸೆರೆಸಿಕ್ಕಿ ತಾವೇ ಆ ಕೊಲೆಯನ್ನು ಮಾಡಿರುವವರು ಎಂದರೂ ಈ ಒಂದು ಗುಂಪು ಅದನ್ನು ನಂಬದು. ಬದಲಾಗಿ ತಮ್ಮ ನಾಯಕ ಹೇಳಿದ್ದ ವ್ಯಕ್ತಿಗಳೇ ಅವನನ್ನು ಕೊಂದಿರುವರು ಎಂದೇ ವಾದಿಸುತ್ತಾರೆ.

ಯದ್ಯದಾಚಾರತಿ ಶ್ರೇಷ್ಠಸ್ತತ್ತ ದೇವೇತರೋ ಜನಃ ।
ಸ ಯತ್ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ

ಭಗವತ್ಗೀತೆಯ ಮೇಲಿನ ಶ್ಲೋಕ ಅಕ್ಷರ ಸಹ ಇಲ್ಲಿ ನಿಜವೆನಿಸುತ್ತದೆ. ನಾಯಕನೆನಿಸಿಕೊಂಡವನು ಅದೇನನ್ನು ಅನುಸರಿಸುವನೋ ಅಥವಾ ಪ್ರವಚನ ಮಾಡವುವನೋ ಇತರರೂ ಸಹ ಅದನ್ನು ಹಾಗೆಯೇ ಪಾಲಿಸುವರು. ಆದ ಕಾರಣ ನಾಯಕನಾದವನ ನಡೆ ಹಾಗು ನುಡಿ ಇತರರಿಗೆ ಮಾದರಿಯಾಗಿರಬೇಕು. ಆದರ್ಶದಾಯಕವಾಗಿರಬೇಕು.



ಅದೇನೆ ಇರಲಿ, ಮಾನವ ಹೆಚ್ಚಾಗಿ ತನ್ನ ಭಾವನಾತ್ಮಕ ವಿಚಾರಗಳಿಂದ ಗ್ರಹಿಸಿಕೊಳ್ಳುವ ವಿಚಾರಗಳನ್ನು ವ್ಯವಹಾರಿಕ ನೆಲೆಯಲ್ಲೂ ಒರೆ ಹಚ್ಚಿನೋಡಬೇಕು. ತಮ್ಮ ತನ, ತಮ್ಮ ಬುದ್ದಿ ಎಂಬುದಿರುವುದು ಅದಕ್ಕಾಗಿಯೇ ಅಲ್ಲವೇ?. ಪ್ರಸ್ತುತ ಸಾಮಾಜಿಕ ಜಾಲತಾಣಗಳ ಹಿನ್ನಲೆಯಲ್ಲಿ ಭಾರತದಂತಹ ದೇಶವೊಂದು ತನ್ನ ತನವನ್ನು ಕಳೆದುಕೊಳ್ಳದೆ ಬೆಳೆಯಬೇಕಾದರೆ ಅಲ್ಲಿ ಬಲವಾದ ವೈಚಾರಿಕ ನಿಲುವು ಅತ್ಯಗತ್ಯ. ಫೇಸ್ ಬುಕ್, ಟ್ವಿಟ್ಟರ್, ವಾಟ್ಸ್ ಆಪ್ ಗಳಲ್ಲಿ ಬರುವ ಪ್ರತಿಯೊಂದು ಸುದ್ದಿಗಳನ್ನು/ಹೇಳಿಕೆಗಳನ್ನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಂಬುವ ಜಾಯಮಾನವನ್ನು ಕ್ಷೀಣಿಸಿಕೊಳ್ಳಬೇಕು. ಇಲ್ಲವಾದರೆ ಇನ್ನೂ ಲಕ್ಷಾಂತರ ರಾಮ್ ರಹೀಮರು ಈ ನೆಲದಲ್ಲಿ ಹುಟ್ಟಬಹುದು ಇಲ್ಲವೇ ದೇಶದ ಅದೆಷ್ಟೋ ಕೋಟಿ ಜನರೆಲ್ಲರೂ ಗೌರಿಯ ಹಂತಕರಾಗಬಹುದು!

Friday, September 8, 2017

ವಿಶ್ವದ ದೊಡ್ಡಣ್ಣನಾಗುವ ಕನಸನೊತ್ತ ಘಳಿಗೆಯಲ್ಲಿ ...

ಕಳೆದ ಆಗಸ್ಟ್ 31ರ ಸಂಜೆ ದೇಶದ ವಿತ್ತ ವಲಯದಲ್ಲಷ್ಟೇ ಅಲ್ಲದೆ ಭಾಗಶಃ ಇತರ ಎಲ್ಲಾ ವಲಯಗಳಲ್ಲೂ ಹೆಚ್ಚಾಗಿ ಚರ್ಚೆಗೊಳಗಾದ ವಿಷಯ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ದರದ ಬಗೆಗೆ. ಕಾರಣ ಅಂದು ‘ಸೆಂಟ್ರಲ್ ಸ್ಟಾಟಿಸ್ಟಿಕಲ್ ಆರ್ಗನೈಜೇಷನ್’ (CSO) ತಿಳಿಯಪಡಿಸಿದ ಅಂಕಿಅಂಶಗಳ ಪ್ರಖಾರ 2017-18 ನೇ ಸಾಲಿನ ಮೊದಲ ತ್ರೈಮಾಸಿಕದ (ಏಪ್ರಿಲ್ ನಿಂದ ಜೂನ್ ವರೆಗೆ) ಜಿಡಿಪಿಯ ದರ 5.7%. ಈ ದರ ಕಳೆದ ತ್ರೈಮಾಸಿಕ್ಕೆ, ಅದರ ಮೊದಲಿನ ತ್ರೈಮಾಸಿಕ ಅಷ್ಟೇ ಏಕೆ ಕಳೆದ ಮೂರು ವರ್ಷಗಳಲ್ಲೇ ಅತಿ ಕಡಿಮೆ ದರವೆನಿಸಿಕೊಂಡಿದೆ! ಪರಿಣಾಮ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ, ಅವುಗಳ ದೂರದೃಷ್ಟಿಯ ಬಗೆಗೆ ಹಲವರಲ್ಲಿ ಸಂಶಯ, ಗೊಂದಲ ಹಾಗು ಹತಾಶೆಯನ್ನು ಹುಟ್ಟಿಸಿವೆ. ಬೆಂಕಿಯ ಮೇಲೆ ತುಪ್ಪ ಸುರಿದಂತೆ ಕೇಂದ್ರ ಹಣಕಾಸು ಮಂತ್ರಿಗಳೂ ತಮ್ಮ ಪತ್ರಿಕಾಗೋಷ್ಠಿಯಲ್ಲಿ 'ಪ್ರಸ್ತುತ ಜಿಡಿಪಿ ದರ ಕಳವಳಕಾರಿಯಾಗಿದ್ದೂ ಸರ್ಕಾರದ ಮುಂದೆ ಸವಾಲು ಎದುರಾಗಿದೆ' ಎಂಬ ಹೇಳಿಕೆಯ ನಂತರವಂತೂ ಈ ವಿಷಯದ ತೀವ್ರತೆ ಇನ್ನೂ ಹೆಚ್ಚಾಗಿದೆ.

ಜಿಡಿಪಿ ಎಂಬುದು ದೇಶದಲ್ಲಿ ವಾರ್ಷಿಕವಾಗಿ ಉತ್ಪತ್ತಿಯಾಗುವ ಎಲ್ಲಾ ಅಂತಿಮ ಸರಕುಗಳ (ಟಿವಿ, ಫ್ರಿಡ್ಜ್, ಬಸ್ಸು ಕಾರು, ಬಟ್ಟೆ, ಸೋಪು, ಬಿಸ್ಕತ್ತು ಇತ್ಯಾಗಿ ಇತ್ಯಾದಿ) ಒಟ್ಟು ಮೊತ್ತ ಎನ್ನಬಹುದು. ಕಳೆದ ಬಾರಿಯ ದೇಶದ ಒಟ್ಟು ಜಿಡಿಪಿಯ ಮೊತ್ತ ಸುಮಾರು 150 ಲಕ್ಷ ಕೋಟಿ ರೂಪಾಯಿಗಳ ಆಸುಪಾಸು. ಈ ಮೊತ್ತದ ಮೂಲಕ ಇಡೀ ವಿಶ್ವದ ಜಿಡಿಪಿಯ ಬೆಳವಣಿಗೆಯಲ್ಲಿ ದೇಶದ ಕೊಡುಗೆ ಸುಮಾರು 3% ನಷ್ಟಿದ್ದಿತು. ಇದು ಭಾರತವನ್ನು ವಿಶ್ವದಲ್ಲೇ ಏಳನೇ ಅತಿ ಹೆಚ್ಚು ಜಿಡಿಪಿಯ ದೇಶವನ್ನಾಗಿಸಿತ್ತು. ಇನ್ನು ಅಮೇರಿಕ ಸುಮಾರು 1250 ಲಕ್ಷ ಕೋಟಿ ರೂಪಾಯಿಗಳ ಒಟ್ಟು ಜಿಡಿಪಿಯ ಮೊತ್ತದೊಂದಿದೆ ಈ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದಿರಿಸಿಕೊಂಡಿತ್ತು.

ಇನ್ನು ಆಯಾ ವರ್ಷದ ಜಿಡಿಪಿಯ ಮೊತ್ತವನ್ನು ಕಳೆದ ವರ್ಷದ ಅಥವಾ ತ್ರೈಮಾಸಿಕದ ಮೊತ್ತಕ್ಕೆ ಹೋಲಿಸಿದರೆ ನಮಗೆ ಸಿಗುವ ಶೇಕಡಾವಾರುವನ್ನೇ 'ಜಿಡಿಪಿ ದರ' ಎನ್ನಲಾಗುತ್ತದೆ. ಕಳೆದ ವರ್ಷ ಇದೆ ತಿಂಗಳಿನಲ್ಲಿ ದೇಶದ ತ್ರೈಮಾಸಿಕ ಜಿಡಿಪಿ ದರ 7.9% ರ ಆಸುಪಾಸಿನಲ್ಲಿದ್ದಿತು. ಆದರೆ ಪ್ರಸ್ತುತ ಅಂಕಿ ಅಂಶಗಳ ಪ್ರಕಾರ ಅದು 5.7 % ನಷ್ಟಾಗಿದೆ. ಪ್ರಸ್ತುತ ಬೆಳವಣಿಗೆಯ ಕುಂಠಿತ ದರ ದೇಶದ ಇತಿಹಾಸದಲ್ಲೇ ಮೊದಲೇನಲ್ಲ. ಈ ಮೊದಲೂ ಎಪ್ಪತ್ತು ಹಾಗು ಎಂಬತ್ತರ ದಶಕದ ಹಲವು ವರ್ಷಗಳಲ್ಲಿ ಜಿಡಿಪಿಯ ದರ ಶೂನ್ಯಕ್ಕಿಂತಲೂ ಕಡಿಮೆ ಅಂದರೆ ಋಣಾತ್ಮಕವಾಗಿರುವುದೂ ಉಂಟು. ಆದರೆ ಕಳೆದ ಹಲವು ತ್ರೈಮಾಸಿಕಗಳಿಂದ ಏರುತ್ತಲೇ ಅಥವಾ ಬಾಗಶಃ ಅಚಲವಾಗಿದ್ದ ದರ ಒಮ್ಮಿಂದೊಮ್ಮೆಲೆ ಕುಸಿಯಲು ಕಾರಣವೇನು? ನೋಟ್ ಬ್ಯಾನ್, ಜಿಎಸ್ಟಿ, ಸಾಲಮನ್ನಾ ಎಂಬ ಮತ್ತೊಂದು ಮಗದೊಂದು ಯೋಜನೆಗಳನ್ನು ರಾತ್ರಿ ಕಳೆದು ಹಗಲಾಗುವುದರೊಳಗೆ ಜಾರಿಗೊಳಿಸಿ, ಊರೆಲ್ಲ ಡಂಗೂರ ಒಡೆಸಿ, ಕೊನೆಗೆ ಜನರ ಮುಂದೆ ತಲೆ ಕೆರೆದುಕೊಳ್ಳುವಂತಹ ನಿರ್ಧಾರಗಳು ಪ್ರಸ್ತುತ ಅಂಕಿಅಂಶಗಳ ಹಿನ್ನಲೆಯೊಂದಿಗೆ ದೇಶಕ್ಕೆ ಅದ್ಯಾವ ಬಗೆಯಲ್ಲಿ ಪೂರಕವಾಗಲಿವೆ ಎಂಬುದೇ ಪ್ರೆಶ್ನೆ.

ನೋಟು ಅಮಾನಿಕರಣ ದೇಶ ಕಂಡ ಹಲವು ದಿಟ್ಟ ನಿರ್ಧಾರಗಳಲ್ಲೊಂದು. ಪ್ರಸ್ತುತ ಜಾರಿಯಲ್ಲಿದ್ದ ಕಪ್ಪು ಹಣವನ್ನು ಮಟ್ಟ ಹಾಕುವುದೇ ಈ ನಿರ್ಧಾರದ ಹಿಂದಿದ್ದ ಬಹು ಮುಖ್ಯ ಚಿಂತನೆ. ಆದರ ಪ್ರಕಾರ ದೇಶದಲ್ಲಿ ಅಂದು ಜಾರಿಯಲ್ಲಿದ್ದ 15.44 ಲಕ್ಷ ಕೋಟಿ ರೂಪಾಯಿಗಳಲ್ಲಿ (ಕೇವಲ 500 ಹಾಗು 1000 ಮುಖಬೆಲೆಯ ನೋಟುಗಳ ಒಟ್ಟು ಮೊತ್ತ) ಒಟ್ಟು ಕಪ್ಪು ಹಣದ ಮೊತ್ತ ಸುಮಾರು ನಾಲ್ಕು ಲಕ್ಷ ಕೋಟಿಯಷ್ಟಾಗಿದ್ದಿತು(ಕೇಂದ್ರ ಸರ್ಕಾರದ ಪ್ರಕಾರ). ಹಾಗಾಗಿ ನೋಟು ಅಮಾನಿಕರಣದಿಂದ ದೇಶದ ಜೋಳಿಗೆಗೆ ಬಂದು ಸೇರಬೇಕಿದ್ದ ಮೊತ್ತ ಅಂದಾಜು ಹನ್ನೊಂದರಿಂದ ಹನ್ನೆಡರೆದು ಲಕ್ಷ ಕೋಟಿ ರೂಪಾಯಿಗಳು. ಆದರೆ ವಿಪರ್ಯಾಸವೊ, ಅವಿವೇಕಿತನವೋ ಅಥವಾ ಬಹುಜನರ ಬಹುಬಗೆಯ ಕೈಚಳಕದ ಫಲವೋ ಸುಮಾರು 99% ಹಣ ದೇಶದ ಜೋಳಿಗೆಗೆ ಇಂದು ವಾಪಸ್ಸುಬಿದ್ದಿದೆ! ಅರ್ತಾಥ್ ದೇಶದಲ್ಲಿ ಅಂದು ಇದ್ದ ಅಷ್ಟೂ ಹಣವು ಬಿಳಿಯ ಹಣವೇ ಆಗಿದ್ದಿತು ಎಂದರೆ ನಂಬಬಹುದೇ? ಹಾಗಾದರೆ ಸರ್ಕಾರದ ಅಂಕಿ ಅಂಶಗಳು ಅಂದು ಆಧಾರರಹಿತವಾಗಿದ್ದವೇ?

ನೋಟು ಅಮಾನ್ಯದಿಂದ ದೇಶದ ಬೊಕ್ಕಸಕ್ಕೆ ಆಗಿರುವ ನಷ್ಟ ಹಲವು ಸಾವಿರ ಕೋಟಿ ರೂಪಾಯಿಗಳು. ದೇಶದ ನಿರ್ಮಾಣ ವಲಯ ನೋಟು ಅಮಾನಿಕರಣದಿಂದ ತತ್ತರಿಸಿದ ಅತಿ ದೊಡ್ಡ ವಲಯ. ಅತಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದ್ದ ಈ ವಲಯವನ್ನು ಸದ್ಯಕಂತೂ ಶಕ್ತಿ ಮೀರಿ ಎಳೆದರೂ ಮೇಲೇಳುವುದು ಕಷ್ಟಸಾಧ್ಯ. ಇಂತಹ ಒಂದು ವಲಯದ ದಿಢೀರ್ ಕುಸಿತ ಜಿಡಿಪಿ ದರದ ಕುಂಠಿತದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಅಲ್ಲದೆ ದೇಶದ ಉತ್ಪಾದನಾ ವಲಯವೂ ಇಂತಹದ್ದೇ ಬಹುಮುಖ ಇಳಿಕೆಯನ್ನು ಇಲ್ಲಿ ಕಂಡಿದೆ. ಕಳೆದ ವರ್ಷ ಇದೆ ಸಮಯದಲ್ಲಿ ಸುಮಾರು 10.2% ನಷ್ಟಿದ್ದ ಈ ವಲಯದ ಅಭಿವೃದ್ಧಿಯ ದರ ಇಂದು 1.2% ರಷ್ಟರಲ್ಲಿ ಬಂದು ನಿಂತಿದೆ ಎಂದರೆ ನಂಬಲಸಾಧ್ಯ. ಇದಕ್ಕೆ ಪೂರಕವೆಂಬಂತೆ ನೋಟು ಅಮಾನ್ಯದ ಮೊದಲು 7.5% ರಷ್ಟಿದ್ದ ಜಿಡಿಪಿಯ ದರ ನಂತರದ ಕೆಲವೇ ದಿನಗಳಲ್ಲಿ 6.1% ರಷ್ಟಾಗಿದ್ದಿತು. ಕಳೆದ ಜುಲೈನ ಜಿಎಸ್ಟಿ ಜಾರಿಯ ನಂತರ ಉಂಟಾಗಿರುವ ಪರಿಣಾಮ ಮುಂದಿನ ತಿಂಗಳ ಜಿಡಿಪಿಯ ದರದಲ್ಲಿ ವ್ಯಕ್ತವಾಗಲಿದೆ. ಹಾಗು ಈ ದರ ಇನ್ನೂ ಹೆಚ್ಚು ಕ್ಷೀಣಿಸುವ ಸಂಭವವೇ ಹೆಚ್ಚು! ಇವುಗಳೆಲ್ಲದರ ಹಿನ್ನಲೆಯಲ್ಲಿ ಮೇಲೆದ್ದಿರುವ ಇಂತಹ ಹಲವು ಪ್ರೆಶ್ನೆಗಳಿಗೆ ಕೇಂದ್ರ ಸಮಜಾಯಿಷಿಕೊಡಬೇಕಿದೆ.

ಇಂದು ವಿಶ್ವದ ಇತರೆಲ್ಲ ದೇಶಗಳನ್ನೂ ಹಿಂದಿಕ್ಕಿ ಅತಿ ದೊಡ್ಡ ಆರ್ಥಿಕತೆಯಾಗುವ ಕನಸನ್ನು ಹೊತ್ತಿರುವ ಭಾರತ ಈ ರೀತಿಯ ಇಳಿಮುಖವಾದ ಬೆಳವಣಿಗೆಯ ದರವನ್ನು ಹೊತ್ತು ಅಂತಹ ಗುರಿಯೊಂದನ್ನುಸಾಧಿಸಲು ಸಾಧ್ಯವುಂಟೆ? ಜಿಡಿಪಿ ಎಂಬುದು ಒಂದು ದೇಶದ ಜನತೆಯ ಜೀವನಮಟ್ಟವನ್ನು(Standard Of Living) ಅಳೆಯುವ ಬಹುಮುಖ್ಯ ಮಾಪನಗಳಲ್ಲೊಂದು. ಇಂತಹ ಒಂದು ಮಾಪನದ ಸಂಖ್ಯ ಸೂಚಿಗಳು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿರಲೇಬೇಕು. ಭಾರತದನಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಗಂತೂ ಇದರ ಅಂಕಿ ಅಂಶಗಳ ಇಳಿಮುಖವಾಗುವಿಕೆ ತೀರಾ ಆತಂಕಕರ. ಹಿಂದೂ ಮುಂದೂ ನೋಡದೆ ಸಿನಿಮೀಯ ರೀತಿಯಲ್ಲಿ ಒಂದರ ಮೇಲೊಂದು ಕಾನೂನುಗಳನ್ನು ದೇಶದ ಜನತೆಯ ಮೇಲೇರಿಸುವ ಸರ್ಕಾರಗಳು ತಮ್ಮ ಉದ್ದೇಶ ಅದೆಷ್ಟೇ ಸಾತ್ವಿಕವಾಗಿದ್ದರೂ ಜಾರಿ ತರುವ ಮೊದಲು ಹಲವು ಬಾರಿ ಒರೆಹಚ್ಚಿ ಪರೀಕ್ಷಿಸಿ ನೋಡಬೇಕು. ಅಲ್ಲದೆ ಎಲ್ಲಿಯವರೆಗೂ ನಾವುಗಳೂ ಸಹ ಏರಲಾಗುವ ಪ್ರತಿಯೊಂದು ಕಾಯಿದೆ ಕಾನೂನುಗಳನ್ನು ಪ್ರೆಶ್ನಿಸುವ, ಪರೀಕ್ಷಿಸುವ ಗುಣವನ್ನು ಬೆಳೆಸಿಕೊಳ್ಳದೆ ಗುಂಪು ಸಮ್ಮತಿಸಿದಂತೆ ತಲೆಯಾಡಿಸುವ ಜಾಯಮಾನದವರಾಗಿರುತ್ತೇವೆಯೋ ಅಲ್ಲಿಯವರೆಗೂ ಗೆದ್ದೂ ಸೋತಂತೆ. ಅಲ್ಲದೆ ದೇಶದ ಅಭಿವೃದ್ಧಿ ಕೇವಲ ಜನತೆಯ ಮೇಲೆ ತೆರಿಗೆಯನ್ನೊರಿಸುವುದೇ ಆಗಿದೆ ಎಂಬ ಮನಸ್ಥಿತಿ ದೂರವಾಗಿ ಕಸದಿಂದಲೂ ರಸ ತೆಗೆಯುವಂತಹ ಯೋಜನಾಲೋಚನೆಗಳು ಸರ್ಕಾರಗಳ ಕಾರ್ಯಸೂಚಿಯಲ್ಲಿ ಮೂಡಬೇಕು. ಮುಂದಿನ ದಿನಗಳಿಗೆ ಹಾಕಿಕೊಂಡಿರುವ ಗುರಿಯನ್ನು ಅಂದುಕೊಂಡಂತೆಯೇ ಸಾಧಿಸಿ ತೋರಿಸಲೂಬೇಕು.