Friday, July 17, 2020

ಪಯಣ - 12

ಅದು ಹತ್ತು ಹನ್ನೆರೆಡರ ಎಳೆಯ ವಯಸ್ಸಾದರೂ ಪ್ರೀತಿ ಪ್ರೇಮವೆಂಬ ಅಸಹಜ ಭಾವವೊಂದು ಆ ಮುಗ್ದ ಮನಸ್ಸುಗಳಲ್ಲಿ ಮನಸ್ಸುಗಳಲ್ಲಿ ಹಾಸುಹೊಕ್ಕುವ ಸಮಯವದು.

'ಲೋ .. ರಾಕಿ ಕಟ್ಟಿದ್ದೀನಿ .. ದುಡ್ಡ್ ಕೊಡೊ..' ತರಗತಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ಅನವಶ್ಯಕವಾಗಿ ಆದಿಯ ವೈರಿಯಾಗಿದ್ದ ಹುಡುಗನ ಕೊರಳು ಪಟ್ಟಿಯನ್ನಿಡಿದು ಕೇಳತೊಡಗಿದಳು ಖುಷಿ. ಇಡೀ ಕ್ಲಾಸಿನಲ್ಲೇ ತನ್ನೊಬ್ಬನಿಗೆ ಮಾತ್ರ ರಾಕಿ ಕಟ್ಟಿಸಿಕೊಳ್ಳುವ ಅಧಿಕಾರವಿದೆಯೇನೋ ಎಂಬಂತೆ ಆತ ಬೀಗುತ್ತಿದ್ದ. ಸ್ವಲ್ಪ ಹೊತ್ತಿನಲ್ಲೇ ತರಗತಿಯ ಇತರ ಹುಡುಗಿಯರೂ ಆತನನ್ನು ಸುತ್ತುವರೆದರು ಹಾಗು ತಮ್ಮ ಜೇಬಿನಲ್ಲಿದ್ದ ಬಣ್ಣ ಬಣ್ಣದ ರಾಖಿಯನ್ನು ಹೊರತೆಗೆದು ಅವನ ಕೈ ತುಂಬೆಲ್ಲ ಕಟ್ಟತೊಡಗಿದರು.

ಅದು ಚಿತ್ತಾಕರ್ಷಕ ರಾಖಿಯ ಮೋಡಿಯೋ ಅಥವಾ ತನ್ನನು ಖುಷಿ ‘ಇಗ್ನೋರ್’ ಮಾಡಿದಳೊ ಎಂಬ ಬಾಲಸಹಜ ಕೋಪವೋ ಅಥವಾ ತನ್ನ ಮುಂದೆ ಹುಡಗಿಯರ ಮುದ್ದು ಕೃಷ್ಣನಾದ ತನಗಿಂದಲೂ ಹೆಚ್ಚು ಅಂಕಗಳನ್ನು ಪಡೆಯುವ ಹುಡುಗನ ಮೇಲೆ ಮೂಡಿದ ಅಸೂಯೆಯೋ ಏನೋ ಒಟ್ಟಿನಲ್ಲಿ ಚೀರಾಡುತ್ತಿದ ಗುಂಪಿನಿಂದ ದೂರಬಂದು ಶಾಲೆಯ ಕಟ್ಟೆಯ ಮೇಲೆ ಕೂತ ಆದಿ.

ಅದೆಷ್ಟೋ ಹೊತ್ತಿನ ನಂತರ ಕ್ಲಾಸಿನಿಂದ ಹೊರಬಂದ ಖುಷಿ ಆದಿಯನ್ನುದ್ದೇಶಿಸಿ,

'ಇಲ್ಯಾಕೋ ಕೂತಿದ್ದೀಯ' ಎಂದು ಕೇಳಿದಳು.

'ಹೋಗೆ, ನನ್ನ್ ಹತ್ರ ಮಾತಾಡ್ಬೇಡ! ಇನ್ಮೇಲೆ ನಾನ್ ನಿನ್ನೊಟ್ಟಿಗೆ ಕಲ್ಲಾಟ ಆಡಲ್ಲ .. ನಮ್ಮ್ ಮನೆ ಹತ್ರ ಈಗ ಹೊಸ ಫ್ರೆಂಡ್ ಬಂದಿದ್ದಾಳೆ, ನಾನ್ ಅವಳೊಟ್ಟಿಗೇ ಇನ್ಮುಂದೆ ಕಣ್ಣಾ ಮುಚ್ಚಾಲೆ ಆಡ್ತೀನಿ..' ಆದಿಯ ಮುಖ ರಸ್ತೆಬದಿಯ ಆಲೂಬೋಂಡದಂತೆ ಊದಿಕೊಂಡಿತ್ತು.

'ಏನಾಯಿತೋ ಆದಿ.. ಯಾರಾದ್ರು ಬೈದ್ರಾ' ತನ್ನ ಸಹಜ ಕಳವಳದ ಧ್ವನಿಯಲ್ಲಿ ಆಕೆ ಕೇಳಿದಳು.

'ನೀನ್ ಅವ್ನಿಗೆ ಮಾತ್ರ ರಾಖಿ ಕಟ್ದೆ.. ನಂಗಿಲ್ವ?'

ಆದಿಯ ಪ್ರೆಶ್ನೆಗೆ ನಗತೊಡಗಿದ ಖುಷಿ 'ನಾನ್ ನಿಂಗೆ ರಾಕಿ ಕಟ್ಟಲ್ಲ ಕಣೋ..' ಎಂದಳು.

ಆದಿಯ ಕೋಪ ಇನ್ನೂ ವಿಪರೀತವಾಯಿತು. ತನ್ನೊಟ್ಟಿಗೆ ಕಲ್ಲಾಟವನ್ನು ಆಡಲು ತಂದಿದ್ದ ಕಲ್ಲುಗಳನ್ನು ದೂರಕ್ಕೆ ಎಸೆದು ಆದಿ ತರಗತಿಯ ಒಳಗೆ ಓಡಿದ.

'ಆದಿ ನಿಲ್ಲೋ .. ನಾನು ಬರ್ತೀನೋ ಕಣ್ಣಾ ಮುಚ್ಚಾಲೆ ಆಡೋದಿಕ್ಕೆ.. ನಿಲ್ಲೋ..'

ದಶಕದ ಹಿಂದಿನ ಹಿಂದಿ ಹಾಡುಗಳನ್ನು ಹಾಕಿ ಗರಗರನೆ ತಿರುಗುತ್ತಿದ್ದ ಸೀಲಿಂಗ್ ಫ್ಯಾನನ್ನು ಧಿಟ್ಟಿಸುತ್ತಾ ಅಂಗಾತ ಮಲಗಿದ್ದ ಆದಿ, ಆ ಹಾಡುಗಳು ಚಿತ್ರೀಕರಣಗೊಳುತ್ತಿದ್ದ ಕಾಲದ ತನ್ನ ಹಾಗು ಖುಷಿಯ ನೆನಪುಗಳನ್ನು ಕೆದಕತೊಡಗಿದ. ಆಕೆ ತನ್ನ ಬಿಟ್ಟು ಯಾರೊಟ್ಟಿಗೂ ಮಾತಾಡಬಾರದು, ಸೇರಬಾರದು, ಆಟವಾಡಬಾರದೆಂಬ ಹಠ ಈತನದ್ದಾರೆ ಇಡೀ ಶಾಲೆಗೆ ಶಾಲೆಯೇ ಖುಷಿಯನ್ನು ಸುತ್ತುವರೆಯುತ್ತಿತ್ತು. ದೂರದಿಂದಲೇ ಆಕೆಯ ನೀಳಜಡೆಯನ್ನು ದಿಟ್ಟಿಸುತ್ತಾ ಆಕೆ ಗುಂಪಿನಿಂದ ಹೊರಬರುವುದನ್ನೇ ಆತ ಕಾಯುತ್ತಿದ್ದ ಹಾಗು ಅಕೆಗೆಂದೇ ಹತ್ತಾರು ಕಲ್ಲುಗಳನ್ನು ತನ್ನ ಚಡ್ಡಿಯ ಜೇಬಿನಲ್ಲಿ ಇರಿಸಿಕೊಂಡಿರುತ್ತಿದ್ದ. ಆ ಎಳೆಯ ವಯಸ್ಸಿನಲ್ಲೇ ಕ್ಲಾಸಿನ ಇತರ ಹುಡುಗರು ಆದಿ ಖುಷಿಯೊಟ್ಟಿಗೆ ಇರಬಯಸುತ್ತಿದ್ದದ್ದನು ಕಂಡು ಕತ್ತಿ ಮಸೆಯುತ್ತಿದ್ದರು ಹಾಗು ಸುಖಾಸುಮ್ಮನೆ ಆದಿಯೊಟ್ಟಿಗೆ ಕಾದಾಡುತ್ತಿದ್ದರು! ರಾತ್ರಿಯ ವೇಳೆ ಕೆಲವೊಮ್ಮೆ ಮನೆಯವರೆಲ್ಲ ಹೊರಗೆ ಬಂದು ಮೆಟ್ಟಿಲುಗಳ ಮೇಲೆ ಕೂತರೆ ಈತ ತಮ್ಮ ಮನೆಯ ಕಾಂಪೌಂಡಿನ ಮೇಲೆ ಕೂತು ತಿಂಗಳ ಬೆಳಕಿನ ಆ ತಂಪು ರಾತ್ರಿಯಲ್ಲಿ ಒಂದೆರಡು ಕಿಲೋಮೀಟರ್ ಗಳು ದೂರವಿದ್ದ ನಗರದ ಮಧ್ಯಭಾಗದ ತೆಂಗಿನ ಮರಗಳ ಸಾಲನ್ನೇ ಧಿಟ್ಟಿಸುತ್ತಿದ್ದ. ಖುಷಿಯ ಮನೆಯೂ ಅಲ್ಲಿಯೇ ಇದ್ದರಿಂದ ಬಹುಷಃ ಅವಳೂ ಹೀಗೆ ಹೊರಬಂದು ನನನ್ನು ನೋಡುತ್ತಿರಬಹುದೆಂಬ ಅಮಾಯಕ ಕಲ್ಪನೆಯಿಂದ! ಅದೇನಕ್ಕೋ ತಿಳಿಯದು ಆ ಒಂದು ಶುಕ್ರವಾರದಂದು ಆದಿ ಆಕೆಯಿಂದ ಎರಡು ರೂಪಾಯಿ ಪಡೆದು ಮುಂದಿನ ವಾರದ ಸೋಮವಾರದಂದು ತಂದು ಹಿಂದಿರುಗಿಸಿದ್ದ. ಅಂತೆಯೇ ಶಾಲೆಯಲ್ಲಿ ನೆಡೆಸುತ್ತಿದ್ದ ಸಂಗೀತ ಕ್ಲಾಸಿಗೆ ಸೇರಿ ಅಲ್ಲಿನ ಶಿಕ್ಷಕಿ ಖುಷಿಯ ಧ್ವನಿ ಇಡಿದಿಡಿದು ಬಿಡುತ್ತಿದೆ ಎಂದು, ನಂತರದ ದಿನಗಳಿಂದ ಆಕೆ ಕ್ಲಾಸಿಗೆ ಬಾರದೆ ಹೋದಾಗ ಈತನೂ ಆ ಕ್ಲಾಸಿಗೆ ಗುಡ್ ಬೈ ಹೇಳಿದ್ದ. ಅರೆಬರೆ ನಾಟ್ಯದ ಸ್ಟೆಪ್ಪುಗಳನ್ನೇ ಕಲಿತು ಶಾಲೆಯ ಯೂನಿಯನ್ ಡೇ ಗೆ ಚಿತ್ರ ವಿಚಿತ್ರವಾಗಿ ಕುಣಿದು ಕುಪ್ಪಳಿಸಿದ ಆ ದಿನಗಳು ಅದೆಂತೆಂಹ ಜಂಜಾಟದ ದಿನಗಳಲ್ಲೂ ಆದಿಯ ಮನಸ್ಸಿಗೆ ಒಂದು ಮಂದಹಾಸವನ್ನು ನೀಡುತ್ತಿದ್ದವು. ಮುಖದ ಮೇಲೊಂದು ಸಂತೋಷದ ಕಳೆಯನ್ನು ಹೊತ್ತಿಸುತ್ತಿದ್ದವು.

ಸೀಲಿಂಗ್ ಫ್ಯಾನು ಗರಗರನೆ ತಿರುಗುತ್ತಲಿತ್ತು. 'ನಾ ತುಮ್ ಜಾನೋ ನ ಹಮ್..' ಎಂದು ಲಕ್ಕಿ ಅಲಿ ಪದಗಳಿಗೆ ಜೀವ ತುಂಬಿ ಹಾಡುತ್ತಿದ್ದ. ಕೂಡಲೇ ಆದಿಯ ಫೋನು ಟನ್ ಟನ್.. ಎಂಬ ಸದ್ದಿನೊಂದಿಗೆ ಬೆಳಗತೊಡಗಿತು. ರಾತ್ರಿ ಹನ್ನೊಂದರ ನಂತರ ತನ್ನ ಫೋನು ಸದ್ದು ಮಾಡಿತೆಂದರೆ ಸಾಕು ಆದಿಯ ಹೃದಯ ಅಮಾನುಷವಾಗಿ ಬಡಿಯತೊಡಗುತ್ತದೆ. ಟನ್ಗುಟ್ಟ ಆ ಎರೆಡು ಮೆಸೇಜುಗಳು ಖುಷಿಯ ಮೆಸ್ಸೇಜುಗಳೇ ಎಂದು ಹೃದಯ ಹೇಳುತ್ತಿರಲು, ಅವು ಆಕೆಯ ಮೆಸೇಜುಗಳೇ ಆಗಿರಲಿ ಎಂದು ಮನಸ್ಸೂ ಸಹ ಬೇಡಿಕೊಳ್ಳುತ್ತಿತ್ತು. ವಾರಗಳ ನಂತರ ಮೊದಲ ಬಾರಿಗೆ ಬಂದಿರಬಹುದಾದ ಆಕೆಯ ಮೆಸೇಜುಗಳು ಆದಿಯ ದುಗುಡವನ್ನು ದೂರ ಮಾಡಿದ್ದವು. ಆದಿ ಸುಮ್ಮನಾದ. ಅದೆಷ್ಟು ಹೊತ್ತಿನವರೆಗೆ ತನ್ನನ್ನು ತಾನು ತಡೆದುಕೊಳ್ಳಬಲ್ಲೆ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು ಎಂದುಕೊಳ್ಳುವ ಮೊದಲೇ ಆತನ ಕೈಗಳು ಮೊಬೈಲನ್ನು ಅನ್ ಲಾಕ್ ಮಾಡಿದ್ದವು!

'Hi.. How are you..' ಎಂದು ಕಳಿಸಿದ್ದ ಆಕೆಯ ಮೆಸ್ಸೇಜುಗಳನ್ನು ನೋಡಿಯೇ ಆದಿಯ ಕಣ್ಣಂಚುಗಳು ಒದ್ದೆಯಾಗತೊಡಗಿದವು. ಕಳೆಗಟ್ಟಿದ್ದ ಫೋನಿಗೆ ಏನೋ ಒಂದು ಹೊಸತನವನ್ನು ಆ ಪದಗಳು ತಂದಿದ್ದವು. ಆದಿಯ ಮುಖದ ಮೇಲಿದ್ದ ದುಃಖದ ಸಿಕ್ಕುಗಳು ಮರೆಯಾಗಿದ್ದವು ಹಾಗು ಆಕೆಯ ಮೇಸಜಿಗೆ ಪ್ರತ್ಯುತ್ತರವಾದ ಮೆಸೇಜನ್ನು ಕಳುಹಿಸುವುದ ಬಿಟ್ಟು ಆತ ಆ ನಡುರಾತ್ರಿಯಲ್ಲಿಯೇ ಆಕೆಗೆ ಫೋನಾಯಿಸಿದ!


****

ಬೆಳ್ಳಂಬೆಳೆಗೆ ಎಲ್ಲರಿಗಿಂತ ಮೊದಲೇ ಎದ್ದು ರೆಡಿಯಾದ ಆದಿ ಲೊಕೇಶನನ್ನು ತನ್ನ ಕಾಲಿನಿಂದ ತಿವಿಯತೊಡಗಿದ. ನೆನ್ನೆ ರಾತ್ರಿಯವರೆಗೂ ಇಹಲೋಕದ ಕಲ್ಪನೆಯನ್ನೇ ಮರೆತು ಜೈಲುವಾಸಿಯಾಗಿದ್ದಂತಹ ಈತನಿಗೆ ಏನಾಗಿರಬಹುದೆಂದು ಆ ನಿದ್ದೆಗಣ್ಣಿನಲ್ಲೂ ನಾನು ಯೋಚಿಸತೊಡಗಿದೆ.

'ತತ್ ತೇರಿ .. ಏನಾ ಲೈ ನಿಂದು..!!' ಲೋಕೇಶ ಒಮ್ಮೆಲೇ ಅರಚಿದ.

'ಗುರು ಬನ್ನಿ ಜಾಗಿಂಗ್ಗೆ .. ಅದೇನೋ ಅವತ್ತು ಸೂಪರ್ ಆಗ್ ಓಡ್ತಿಯ .. ಅದು .. ಇದು ಅಂತಿದ್ರಿ..' ಮೂದಲಿಸುವ ಧ್ವನಿಯಲ್ಲಿ ಆದಿ ಹೇಳಿದ.

ಆತನ ಮಾತನ್ನು ಕೇಳಿ ಸುಮ್ಮನಾದ ಲೋಕಿ ನಿಧಾನವಾಗಿ ಮೇಲಿದ್ದು ಕಣ್ಣುಮುಚ್ಚಿಕೊಂಡೇ ಆಕಳಿಸುತ್ತಾ, ' ದೇವ್ರು ನಿಂಗೆ ಒಳ್ಳೆ ಬುದ್ದಿ ಕೊಟ್ಟಿದ್ದಾನೆ.. ಒಳ್ಳೇದಾಗ್ಲಿ.. ತಾವ್ ಈಗ ಹೋಗಿ ಜಾಗಿಂಗ್ ಮಾಡ್ತಾ ಇರಿ.. ನಾನ್ ಇನ್ ಅರ್ಧ ಗಂಟೇಲಿ ಬರ್ತೀನಿ' ಎಂದು ಆತನನ್ನು ಕಳುಹಿಸಿದ. ಆದಿ ಇನ್ನೂ ಬಾಗಿಲನ್ನು ದಾಟುವ ಮೊದಲೇ,

'ನೋಡೋ ಬಡ್ಡಿ ಮಗ್ನೆ .. ಹುಡ್ಗಿ ಅಂತ ಒಂದ್ ಇದ್ರೆ ಲೈಫಲ್ಲಿ ಏನೇನೆಲ್ಲಾ ಚೇಂಜ್ ಆಗುತ್ತೆ .. ನೀನು ಇದ್ದೀಯ .. ಆ ಟೀಚರ್ ಅಂಟಿನ ಇಟ್ಕೊಂಡು..' ಎನುತ ಮಕಾಡೆ ಬಿದ್ದು ನಿದ್ರಿಸತೊಡಗಿದ.

'ಲೋಫರ್ ನನ್ ಮಗ್ನೆ .. ರಾಧಾ ಅಂತ ಅವ್ರ್ ಹೆಸ್ರು' ಎಂದು ಆತನ ಅಂಡಿನ ಮೇಲೊಂದು ಜೋರಾಗಿ ಜಾಡಿಸಿ ಒದ್ದ ನಾನು 'ನಮ್ಮೊಳಗಿನ ಸುಖಕ್ಕೆ ಪರಜನರ ಕೊಡುಗೆ ಇಷ್ಟ್ಯಾಕೆ?' ಎಂದು ಯೋಚಿಸುತ್ತಲೇ ಬೆಳಗಿನ ಮತ್ತೊಂದು ಸುತ್ತಿನ ಗತ್ತಿನ ನಿದ್ದೆಗೆ ಜಾರಿದೆ.

ಲೋಕೇಶ ಫೀಲ್ಡ್ ನ್ನು ತಲುಪುವ ಮೊದಲೇ ಆದಿ ಮೂರ್ನಾಲ್ಕು ಸುತ್ತನ್ನು ಓಡಿ ಅರ್ವತ್ತರ ಆ ವ್ಯಕ್ತಿಯೊಟ್ಟಿಗೆ ಸಂಭಾಷಿಸುತ್ತಿದ್ದ. ಆದಿ ಹೋದವನೇ ಅವರಿಗೆ ವಂದಿಸಿ ಆದಿಯನ್ನು ಪಕ್ಕಕ್ಕೆ ಕರೆತಂದು,

'ಏನಪ್ಪಾ ಬೋಧನೆ ಮಾಡ್ತಾ ಇದ್ದ ಆ ಬುಡ್ಡ' ಎಂದು ಕೇಳಿದ.

'ಏನು ಇಲ್ಲ .. ನೀನ್ ಸೂಪರ್ ಆಗಿ ಓಡ್ತಿಯ.. ಬ್ರಿಲಿಯಂಟ್ .. ಫೆಂಟಾಸ್ಟಿಕ್..ಅಂತ ಹೇಳ್ತಾ ಇದ್ರಪ್ಪ.’

'ಬ್ರಿಲಿಯಂಟ್, ಫೆಂಟಾಸ್ಟಿಕ್… ಸೀರಿಯಸ್ಲೀ!?' ಅಣುಕಿಸುವವನಂತೆ ಲೋಕಿ ಆದಿಯನ್ನು ಕೇಳಿದ.

'ಇರ್ಬಹುದು ಗುರು .. ಯಾಕೆ ತಮ್ಗೆ ಜಲಸಿನ?'

'ತಂದೆ.. ಕೋಣ ಒಡ್ದನ್ಗೆ ಓಡಿದ್ರೆ ಅದನ್ನ ಯಾರೂ ರನ್ನಿಂಗ್ ಅನ್ನಲ್ಲ.. ಗೊತ್ತಿರ್ಲಿ .. ಅಲ್ಲೂ ಸ್ವಲ್ಪ ನ್ಯಾಕು, ಟೆಕ್ನಿಕು ಅನ್ನೊದು ಇರುತ್ತೆ.. ಆ ಬುಡ್ಡ ಅಂಕಲ್ ಇಡೀ ಲೈಫಲ್ಲಿ 5 km/hr ಗಿಂತ ಹೆಚ್ಚು ಓಡಿರೋದೇ ಇಲ್ಲ ಅಂತದ್ರಲ್ಲಿ ನೀನ್ ಒಳ್ಳೆ ಅವ್ನ್ ಮಾತ್ ಕೇಳ್ತಾ ಇದ್ದೀಯಲ್ಲ .. ಫ್ಯಾಕ್ಟ್ ಹೇಳ್ತಿನಿ ಕೇಳು.. ಫಸ್ಟ್ ಆಫ್ ಆಲ್ ನಿನ್ ರನ್ನಿಂಗ್ ರನ್ನಿಂಗೇ ಅಲ್ಲ, ಓಕೇ?.. You have to go a long way ahead .. Morever, 400 ಮೀಟರ್ ರನ್ನಿಂಗ್ ಅಲ್ಲಿ ಡಿಸ್ಟ್ರಿಕ್ ಲೆವೆಲ್ ರೆಕಾರ್ಡ್ 44 ಸೆಕೆಂಡ್ಸ್.. So, ಸದ್ಯಕ್ಕೆ ನಿನ್ ಟಾರ್ಗೆಟ್ ಅದನ್ನ ಬೀಟ್ ಮಾಡೋದು.. ಮೊನ್ನೆ ನೀನು ಓಡ್ತಾ ಇದ್ದಾಗ, according to my calculation it was approximately 54 Seconds.. You still got to to improve 10 Seconds.. mind it!'

ಲೊಕೇಶನ ಮಾತನ್ನು ಕೇಳಿ ಕೊಂಚ ಮುನಿಸಿಕೊಂಡವನಂತಾದ ಆದಿ ಬೇರೆ ದಾರಿ ಕಾಣೆದೆ ತಲೆಯನ್ನು ಅಲ್ಲಾಡಿಸಿದ ಹಾಗು ಇಂದೇ ಎಲ್ಲ ರೆಕಾರ್ಡ್ಗಳನ್ನು ಮುರಿಯುವವನಂತೆ ಪುನ್ಹ ನಾಲ್ಕು ಸುತ್ತನ್ನು ಜೀವ ಬಿಟ್ಟು ಓಡಿದ.

ಈ ಬಾರಿ ಲೋಕೇಶನ ಟೈಮರ್ನ ಸಮಯ 52.5 ಸೆಕೆಂಡ್ಗಳೆಂದು ತೋರಿಸುತ್ತಿತ್ತು.


****


ಕಾರಿಡಾರಿನ ಆ ಕಡೆಯಿಂದ ರಾಧಾ ಬರುತಿರಲು.. ನನ್ನ ಸುತ್ತಲಿನ ಪ್ರಪಂಚ ಒಮ್ಮೆಲೇ ಸ್ತಬ್ದವಾದಂತಾಗಲು...ನಾಗರಹಾವು ಚಿತ್ರದ ‘ಬಾರೆ ಬಾರೆ..’ ಹಾಡಿನ ಸ್ಲೋ ಮೋಶನ್ ಫ್ರೆಮ್ಗಳು ನನ್ನ ಕಣ್ಣ ಮುಂದೆ ಒಂದೊಂದಾಗಿಯೇ ಬರತೊಡಗಿದವು.

ಜೇನಿನ ನೆಡೆಯಂತೆ ರಾಧಾ ನನ್ನ ಹತ್ತಿರಕ್ಕೆ ಬಂದರು.

'What the fuck you guys think about youself, uh?' ಎಲ್ಲಿಲ್ಲದ ಆವೇಶದಲ್ಲಿ ಆಕೆ ಸಿಡಿಲಬ್ಬರಿಸಿದಂತೆ ಕೂಗತೊಡಗಿದವು. ತಣ್ಣನೆಯ ಗಾಳಿ ಅವರ ಮುಂಗುದಲೆರಡನ್ನು ತೋಯ್ಸಿ ಅವರ ಕೋಪಭಾವದ ಅಂದವನ್ನು ದುಪ್ಪಟ್ಟಾಗಿಸಿತ್ತು. 'ಕಮ್ ಟು ಟೆರೇಸ್..' ಎಂದು ನನ್ನನ್ನು ಇಲ್ಲಿ ಕಾಯಲೇಳಿ ಅದಾಗಲೇ ಅರ್ಧ ತಾಸೇ ಸಂದಿದ್ದವು.

'ಸಮಾಧಾನ.. ಕೂಲ್.. ಏನಾಯಿತು ಅಂತ ನಿಧಾನಕ್ಕೆ ಹೇಳಿ' ನಾನೆಂದೆ.

'ಎಲ್ಲಿ ಆ ನಿನ್ ರೂಮೇಟ್ ಲೋಕೇಶ ..ಈಡಿಯಟ್.. '

'ಹಲೋ .. Mind your language.. He is not just my roomate .. he is like my brother..'

'So, ಬ್ರದರ್ ಆದ್ ಮಾತ್ರಕ್ಕೆ ಸಿಕ್ ಸಿಕ್ದವರ್ನ ಸೋಶಿಯಲ್ ಮೀಡಿಯಾದಲ್ಲಿ ಮಾನ ಹಾರಾಜ್ ಹಾಕ್ ಬಹುದಾ ಅವ್ನು?'

'ಸೋಶಿಯಲ್ ಮೀಡಿಯಾನ?!'

'ಹೌದು ಸಾರ್ .. To be precise it’s called Orkut’

'ಏನ್ ಮಾಡ್ದ ಅಂತ ಸರಿಯಾಗಿ ಹೇಳಿ ರಾಧಾ .. don't drag it unnecessarily' ನಾನು ಬೇಕಂತಲೇ ಗೊತ್ತಿರದವಂತೆ ನಟಿಸಿದೆ.

'Nothing unnecessary here..ಏನ್ ದೊಡ್ಡ್ ಸೋಶಿಯಲ್ ರಿಫಾರ್ಮೆರ ಅವ್ನು ..’ ಎಂದು ಕೆಲಕ್ಷಣ ನನ್ನನು ತೀಕ್ಷ್ಣವಾಗಿ ನೋಡಿ 'ಮಾಲಲ್ಲಿ ತಿಂದು ಬಾಡಿ ಅಲ್ದೆ ಬುದ್ಧಿನೂ ಕೊಬ್ಬಿದೆ, New Generation Hypocrisy ಅಂತ ಏನೇನೋ ಬಾಯಿಗೆ ಬಂದಾಗೇ ಬರ್ದು ಜನರ ಫೋಟೋ ಟ್ಯಾಗ್ ಮಾಡಿ ಮಾನ ಹರಾಜ್ ಮಾಡ್ತಾನಲ್ಲ ಅವ್ನ್ ಏನು ಬಾರಿ ಸಾಚಾನಾ.. ಅಲ್ಲ ಅವ ಯಾವಾಗ ಕಾಲೇಜಲ್ಲಿ ಕೂತಿರೋದನ್ನ ನೋಡಿದ್ದೀವಿ ಹೇಳು..ಯಾವಾಗ್ ನೋಡಿದ್ರು ಗದ್ದೆ ಶುಠಿ ಅಂತ .. Is he even called as a student first of all ..ಫುಡ್ ಬಗ್ಗೆ ಬರೀತಾನೆ ಲೋಫರ್..'

'ರೀ.. ಅವ್ನ್ ಏನ್ ಮಾಡ್ಬಾರ್ದನ್ನು ಮಾಡ್ತಾ ಇಲ್ಲ .. ಕೃಷಿ ಮಾಡೋದೂ ಒಂದ್ ಕಲೆ.. ಅಪ್ಪನ್ ದುಡ್ಡ್ ಇದೆ ಅಂತ ಮೇಲಿಂದ ಕೆಳಕ್ಕೂ ಅದ್ರಲ್ಲೇ ಸ್ನಾನ ಮಾಡೋರ್ ಮದ್ಯೆ he is earning his own.. ಅವ ಮನ್ಸ್ ಮಾಡಿದ್ರೆ ಕ್ಲಾಸಲ್ಲಿ ಕೂತು ಓದದೇನೆ ಕಾಲೇಜಿಗೆ ಟಾಪ್ ಬರಬಲ್ಲ.. Don’t underestimate him.. ಮಕ್ಕಳಿಗಿಂತ ಕಡೆಯಾಗಿ ತಿಂದು ಪ್ರಾಣಿಗಳ ತರ ಗಬ್ಬೆಬ್ಬಿಸಿ ಒಬ್ಬ ಕ್ಲೀನರ್ ಬಾಯನ್ನು ಕ್ಲೀನಿಂಗ್ ಮಷೀನ್ ತರ ನೋಡೋ ಜನಗಳಿಗೆ ಆತರ ಮಾಡಿದ್ರೆ ತಪ್ಪೇನಿದೆ..' ತೀಕ್ಷ್ಣವಾಗಿಯೇ ನಾನು ಪ್ರತಿಕ್ರಿಯಿಸಿದೆ.

'ಇಡೀ ಕ್ಲಾಸ್ ರೂಮಲ್ಲಿ ಟೀಚರ್ಸ್ನ ಟೀಸ್ ಮಾಡ್ತಿರ್ಬೇಕಾದ್ರೆ ಎಲ್ಲಿ ಹೋಗಿತ್ತು ಇವ್ನ ಈ ಫಿಲೋಸಫರ್ ಟೀಚಿಂಗ್ಸು? ಇವ್ನ್ ತಪ್ಪ್ ಮಾಡಿದ್ರೆ ಎಲ್ಲ ಓಕೆ. ಬೇರೆಯವರ್ ಮಾಡಿದ್ರೆ ಮಾತ್ರ ಸಮಾಜ ಸೇವಕ ಆಗ್ತಾನ? Listen, ಇಂಟರ್ನೆಟ್ ಇದೆ ಅಂತ ಸಿಕ್ ಸಿಕ್ದವ್ರ ಮಾನ ಹಾರಾಜ್ ಹಾಕಿದ್ರೆ ಹುಷಾರ್.. ನಿನ್ ಬ್ರದರ್ಗೆ ಹೇಳು.. ಡಿಫೆಮೇಷನ್ ಕೇಸ್ ಹಾಕಿದ್ರೆ ಮುಂದೆ ಏನ್ ಆಗುತ್ತೆ ಅಂತಾನೂ ಗೊತ್ತಿರ್ಲಿ'

ಕೊಬ್ಬಿ ಕೂತಿರುವ ಆ ದೇಹಗಳಿಗೆ ಫೇಮ್ ಎಂಬ ಪದದ ಕಲ್ಪನೆಯೇ ಇದ್ದಂತೆ ನನಗೆ ಕಾಣಲಿಲ್ಲ. ನಗುವನ್ನು ನಾನು ತಡೆದುಕೊಂಡೆ.

'ಏನ್ರಿ ಒಳ್ಳೆ ಕೊಲೆ ಮಾಡಿರೋ ರೀತಿ ಹೇಳ್ತಾ ಇದ್ದೀರಾ..'

'ಯಸ್ ಅದು ಒಂದ್ ರೀತಿಲಿ ಕೊಲೆನೆ.. ಕ್ಯಾರೆಕ್ಟರ್ ಮರ್ಡರಿಂಗ್ ಇನ್ ಸೋಶಿಯಲ್ ಮೀಡಿಯಾ!'

'ರೀ..ಹೋಗ್ಲಿ ಬಿಡ್ರಿ ...ಯಾರ್ದೋ ಬಗ್ಗೆ ಯಾರ್ ಏನೋ ಬರ್ದ್ರು ಅಂತ ನೀವ್ಯಾಕೆ ಅಷ್ಟ್ ಫ್ರಸ್ಟ್ಟ್ರೇಟ್ ಆಗ್ತೀರಾ ..'

'ಯಾರ್ ಬಗ್ಗೆ ಆದ್ರೂ ಅಷ್ಟೇ .. Being a citizen of the country it’s my responsibility! Moreover ನಿನ್ ಬ್ರದರ್ ಟ್ಯಾಗ್ ಮಾಡಿದ್ದು ಬೇರೆ ಯಾರನ್ನು ಅಲ್ಲ ನನ್ನ ಅಣ್ಣ ಮತ್ತು ಅತ್ಗೆನ, ನೆನ್ಪ್ ಇರ್ಲಿ!'

ಅವರ ಕೊನೆಯ ಮಾತನ್ನು ಕೇಳಿ ನನ್ನ ಗಂಟಲು ಮರುಭೂಮಿಯ ಬರ ನೆಲದಂತಾಯಿತು. ಪದಗಳೇ ಮೂಡದ ನನ್ನಲ್ಲಿ.'ಒಹ್..' ಎಂದಷ್ಟೇ ಹೇಳಲು ಶಕ್ತನಾಗುವಷ್ಟು ಮಾತ್ರ ಶಕ್ತಿ ಉಳಿಯಿತು. ಭೇಟೆಗಾರ ಕುದ್ದು ತನ್ನ ಭೇಟೆಗೇ ಸಿಲುಕಿಗೊಂಡ ಪರಿಸ್ಥಿತಿ. ಲೊಕೇಶನ ಪರವಾಗಿ ವಾದಿಸಿದರಿಂದಲೋ ಅಥವ ಅಂದು ಆಕೆಗೆ ‘ದಿ ಕಿಸ್..’ ಕೊಡಲಿಲ್ಲವೆಂಬ ಕೋಪದಿಂದಲೋ ಅಥವ ಇತ್ತೀಚೆಗೆ ಬೇಕಂತಲೇ ನಾನು ಆಕೆಯನ್ನು ಅವಾಯ್ಡ್ ಮಾಡುತ್ತಿದ್ದೇನೆಂಬ ಸಂಶಯದಿಂದಲೋ ಏನೋ ಆಕೆ ಮತ್ತಷ್ಟು ಉದ್ವಿಗ್ನಗೊಂಡವಳಂತೆ ಸಿಡಿಮಿಡಿಗೊಳ್ಳುತ್ತಾ ಅಲ್ಲಿಂದ ಹೊರಟಳು.

ಹಿತವಾಗಿ ಬೀಸುವ ಗಾಳಿಯನ್ನು ಬಡಿದು ಓಡಿಸುವಂತೆ ಆಡುತ್ತಿದ್ದ ಆಕೆಯ ಕೋಪಿಷ್ಠ ಕೂದಲನ್ನೇ ನಾನು ತದೇಕಚಿತ್ತದಿಂದ ನೋಡುತ್ತಾ ನಿಂತೆ.



****





'ಒಹ್ ಶಿಟ್ .. ಏನೋ ಇದು..?!' ಕೈಗಳೆರಡನ್ನು ತನ್ನ ಹಿಂತಲೆಗೆ ಹೊತ್ತುಕೊಟ್ಟು ಬೆಳ್ಳಂಬೆಳೆಗೆ ಡಿಸ್ಟ್ರಿಕ್ಟ್ ಫೀಲ್ಡನ ಸ್ಟೇಜ್ನ ಮೇಲೆ ನೆಡೆಯುತ್ತಿದ್ದ ಯಾವುದೊ ಸಾರ್ವಜನಿಕ ಸಮಾರಂಭವನ್ನು ಆತಂಕದಿಂದ ನೋಡುತ್ತಾ ಹೇಳಿದ ಲೋಕೇಶ. ಅಲ್ಲಿಗೆ ಬರುವವರೆಗೂ ಲವಲವಿಕೆಯಿಂದಿದ್ದ ಆತ, ರನ್ನಿಂಗ್ ಟ್ರ್ಯಾಕನ್ನೂ ದಾಟಿ ನೆರೆದಿದ್ದ ಜನಸಮೂಹವನ್ನು ಕಂಡು ಹತಾಶನಾದ. ಆತನ ಹಿಂದೆಯೇ ಬಂದ ಓಟಗಾರ ಆದಿ ತನ್ನ ಓಟಕ್ಕೆ ಸಾಸಿವೆಕಾಳಿನಷ್ಟೂ ಸಂಬಂಧವಿರದ ಮಾರ್ಕ್ ಟೈಸನ್ನ ಬಾಕ್ಸಿಂಗ್ ಪಂಚ್ಗಳನ್ನು ಗಾಳಿಯಲ್ಲಿ ತೇಲಿಬಿಡುತ್ತಾ, ಪ್ರತಿ ಅರೆಕ್ಷಣಕ್ಕೂ 'ಡುಫ್ .. ಡುಫ್' ಎಂಬ ಸದ್ದಿನೊಟ್ಟಿಗೆ ಜಿಗಿದು ಜಂಪ್ ಮಾಡುತ್ತ ನಿಂತಿದ್ದ. ಅದು ಖುಷಿಯ ಖುಷಿಯೋ ಅಥವಾ ಓಟದ ಖುಷಿಯೋ ತಿಳಿಯದು. ಲೋಕೇಶ ತನ್ನ ತಲೆಯ ಮೇಲೆ ಕೈಹೊತ್ತು ನಿಂತಿದ್ದನ್ನೂ ಸಹ ಆತ ಲೆಕ್ಕಿಸಲಿಲ್ಲ. 'ಯಾ .. ಹೂ .. ಡುಫ್..' ಎಂದು ಸದ್ದು ಮಾಡುತ್ತಾ ಕೊನೆಗೆ ಬ್ರುಸ್ಲಿ ಮಹಾಶಯನನ್ನೂ ನಡುವಿನಲ್ಲಿ ತಂದು ಕುಣಿಯುತ್ತಿದ್ದ. ಅದೆಷ್ಟೋ ನಿಮಿಷಗಳವರೆಗೂ ಲೋಕೇಶ ಮುಂದುವರೆಯದನ್ನು ಕೊನೆಗೂ ಗ್ರಹಿಸಿದ ಆತ,

'Any problems buddy?!' ಎಂದು ತನ್ನ ಮುಷ್ಟಿಯನ್ನು ಮುಖದ ಮುಂದಿನ ನಿರ್ವಾತ ಪ್ರದೇಶದಲ್ಲಿ ಯಾವುದೊ ಕಾಲ್ಪನಿಕ ಬಿಂದುವಿನೆಡೆಗೆ ಗುರಿಮಾಡಿ ಒಂದೇ ಸಮನೆ ಬಡಿಯ ತೊಡಗಿದ.

'ಏನಲೇ ನಿಂದು .. ಥು.. ಮುಚ್ಕೊಂಡ್ ಒಂದ್ ಸೆಕೆಂಡ್ ನಿಂತು ಆಕಡೆ ನೋಡು' ಎನುತ ಸಾರ್ವಜನಿಕರನ್ನು ಉದ್ದೇಶಿಸಿ ಅರಚುತಿದ್ದ ರಾಜಕಾರಣಿಗಳ ಸ್ಟೇಜನ್ನು ತೋರಿಸಿದ ಲೋಕೇಶ. .

'ಅರ್ರೆ, ಏನೋ ಇದು .. ಬೆಳ್ ಬೆಳ್ಗೆ. ಇವ್ರಿಗೆ ಮಾಡೋಕ್ ಬೇರೆ ಏನ್ ಕೆಲ್ಸ ಇಲ್ವ..' ಕೊನೆಗೂ ಇಹಲೋಕಕ್ಕೆ ಬಂದವನಂತೆ ಆದಿ ನುಡಿದ.

'ಅವ್ರಿಗೆ ಕೆಲ್ಸ ಇಲ್ಲ ಆದ್ರೆ ಇವ್ರಿಗ್ ಏನಾಗಿದ್ಯಪ್ಪ ..’ ಎಂದು ಅಲ್ಲಿ ನೆರೆದಿದ್ದ ಜನಸಮೂಹನ್ನು ನೋಡಿ ‘ವಾಕಿಂಗೆ ತುಂಬಾ ಜನ ಬರ್ತಾರೆ ಅಂತಾನೆ ಇಲ್ಲೇ ಪ್ರೋಗ್ರಾಮ್ ಹಾಕೊಂಡಿರೋದು ಕರ್ಮದವ್ರು' ಎಂದ.

'ಹೋಗ್ಲಿ ಬಿಡ್ ಮಚಿ .. ಒಂದ್ ದಿನ ತಾನೇ .. ರನ್ನಿಂಗ್ ನಾಳೆ ಕಂಟಿನ್ಯೂ ಮಾಡಿದ್ರೆ ಆಯ್ತು..' ಎಂದು ಆದಿ ಹೊರಡಲು ಅಣಿಯಾದ.

'ಇಟ್ಸ್ ನಾಟ್ ಅಬೌಟ್ ದಟ್ ' ಎಂದು ಸುಮ್ಮನಾದ ಲೋಕೇಶ 'ಬಾ..' ಎಂದು ಆದಿಯೊಟ್ಟಿಗೊಡಗೂಡಿ ಸ್ಟೇಜಿನ ಬಳಿಗೆ ನೆಡೆದ.

ಒಲ್ಲದ ಮನಸ್ಸಿನಲ್ಲಿಯೇ ಆದಿ ಆತನನ್ನು ಹಿಂಬಾಲಿಸಿದ.

ಅಮೆರಿಕಾದವರು ಇನ್ನೇನು ಬಂದು ಅಣುಬಾಂಬನ್ನು ಸುರಿದುಬಿಡುವರೋ ಎಂದರಿತು ಮಾಡುವ ಎಮರ್ಜೆನ್ಸಿ ಮೀಟಿಂಗ್ನಂತೆ ಜಿಲ್ಲೆಯ ಹೆಚ್ಚು ಕಡಿಮೆ ಅಷ್ಟೂ ರಾಜಕೀಯ ತಲೆಗಳು ಆ ವಿಶಾಲ ಸ್ಟೇಜಿನ ಮೇಲೆ ರಾರಾಜಿಸಿದ್ದವು. ಇಡೀ ಸಿಟಿಯ ಶಾಂತ ಮುಂಜಾವಿನ ಪರಿಸರವನ್ನು ತನ್ನ ಕರ್ಕಶ ಶಬ್ದದಿಂದ ಹಾಳುಗೆಡವುವಂತೆ ಧ್ವನಿವರ್ಧಕವು ಶಕ್ತಿಮೀರಿ ಅರಚುತಿತ್ತು. ಸ್ಟೇಜಿನ ಕೆಳಗ್ಗೆ ನಿಂತಿದ್ದ ಪಕ್ಷದ ಕಟ್ಟಾ ಕಾರ್ಯಕರ್ತರು ಮೇಲೆ ನೆಡೆಯುತ್ತಿದ್ದ ಭಾಷಣವೊಂದನ್ನು ಆಲಿಸುವುದ ಬಿಟ್ಟು ಸಾಧ್ಯವಾದ ಬೇರೆಲ್ಲ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. 'ರಂಗಣ್ಣ .. ನೆನ್ನೆ ಬಾಟ್ಲಿಗೆ 200, ಇವತ್ತ್ ಬೆಳಗ್ಗೆ ಬಿರಿಯಾನಿ ಊಟಕ್ಕೆ 250, ಬಸ್ ಚಾರ್ಜು 50 ಅಂತ ಒಟ್ಟ್ 500 ರೂಪಾಯಿ ಪೀಕಿದ್ರಲ್ಲ, ಎಲ್ಲಿ, ನೆಟ್ಟಗೆ 10 ಜನಾನು ಇಲ್ವಲ್ರಿ?' ಎಂಬ ಸಂಭಾಷಣೆಗಳೇ ಅಲ್ಲಿ ಹೆಚ್ಚಾಗಿ ಕೇಳಿಬರುತ್ತಿದ್ದವು.

'ಪ್ರಿಯ ಜನರೇ .. ಇದು ನೆಡೆಯಲ್ಲ .. ಇಂತ ಗೊತ್ತು ಗುರಿ ಇಲ್ಲದ ಸರ್ಕಾರ ಯಾರಿಗೆ ತಾನೇ ಬೇಕು .. ನಾವೆಲ್ಲಾ ಒಗ್ಗಟ್ಟಾಗಿ ಇಂದು ಸರ್ಕಾರದ ವಿರುದ್ಧ ಸಮರ ಸಾರ್ಬೇಕು..ಇಲ್ಲ ಅಂದ್ರೆ ನಮ್ಗೆ ಉಳಿಗಾಲವಿಲ್ಲ..' ಎಂದು ಒಬ್ಬ ರಾಜಕಾರಣಿ ತನ್ನ ಗಂಟಲು ಹರಿಯುವಂತೆ ಚೀರತೊಡಗಿದ. ಆತ ಇತರೆ ರಾಜ್ಯಗಳ ಹೋಲಿಕೆಯನ್ನು ನೀಡುತ್ತಾ ಅಲ್ಲಿ ಅಷ್ಟು ಸಾಲ ಮನ್ನವಾಗಿದೆ, ಇಲ್ಲಿ ಇಷ್ಟಾಗಿದೆ ಎಂದು ಕೊನೆಗೆ ತಮ್ಮ ರಾಜ್ಯದ 'ಶೂನ್ಯ ಸಾಧನೆ'ಯನ್ನು ಹೀಯಾಳಿಸುತ್ತ ಆತ ತನ್ನ ಭಾಷಣವನ್ನು ಮುಂದುವರೆಯುತ್ತಾನೆ. ಸರ್ಕಾರ ಬಿದ್ದರೆ ಜಾತಿ ಕೋಟದ ಮೇಲೆ ಹೈ ಪ್ರೊಫೈಲ್ ಮಿನಿಸ್ಟರ್ಗಿರಿಯನ್ನು ತನ್ನದಾಗಿಸಿಕೊಳ್ಳುವ ಆತನ ಆಸೆಯ ಹೊಳಪು ಬಲ್ಲವರಿಗೆ ಮಾತ್ರ ತಿಳಿದಿತ್ತು.

'ನಿಮ್ಮ ಎದೆ ಮುಟ್ಕೊಂಡ್ ಹೇಳಿ .. ನಿಮ್ಗೆ ಇಂತ ಸರ್ಕಾರ ಬೇಕಾ.. ಬಡವರ ರಕ್ತ ಹೀರೊ ಇಂತ ನಾಯಕರು ಬೇಕಾ' ಶಾಲಾ ಮಕ್ಕಳಿಗೆ ನಿಮ್ಗೆ ಭಾನುವಾರ ತರಗತಿಗಳು ಬೇಕಾ ಎಂಬಂತೆ ಆತ ನೆರೆದಿದ್ದ ಅಷ್ಟೂ ತಲೆಗಳನ್ನು ಉದ್ದೇಶಿಸಿ ಆತ ಕೇಳಿದ.

'ಬೇಡ .. ಬೇಡ .. ಬೇಡ ಆನ್ರೋ..' ಕಾರ್ಯಕರ್ತರು ತಮ್ ತಮ್ಮ ಜನರ ಗುಂಪಿನೆಡೆಗೆ ಮೊಗಮಾಡಿ ಜೋರಾಗಿ ಪಿಸುಗುಡತೊಡಗಿದರು. ಆದರೆ ಅದು ರಾತ್ರಿಯ ಗುಂಡಿನ ಮತ್ತೊ ಅಥವ ಇನ್ನು ಸ್ವಲ್ಪ ಸಮಯದಲ್ಲಿ ಸವಿಯಬಹುದಾದ ಬಿರಿಯಾನಿಯ ಕನಸೋ ಅಥವಾ ಭಾಷಣ ಘೋಷಣೆಗಳೆಂದರೆ ಸಹಜವಾಗಿ ಮೂಡುವ ಹಿಂಜರಿಕೆಯ ಸ್ವಭಾವವೊ ಏನೊ ಗುಂಪಿನಿಂದ ಒಂದೆರೆಡು ಧ್ವನಿಗಳು ಬಿಟ್ಟರೆ ಬೇರ್ಯಾರು ತುಟಿಕ್ ಪಿಟಿಕ್ ಅನ್ನಲಿಲ್ಲ. ಮೇಲಾಗಿ ವಾಕಿಂಗೆ ಬರುವ ಭಾಗಶಃ ಸಿಟಿಯ ಪ್ರಜ್ಞಾವಂತ ನಾಗರಿಕರೂ ಸಹ ಅದಾಗಲೇ ಬಂದ ದಾರಿಗೆ ಸುಂಕವಿಲ್ಲವೆಂದು ಗೊಣಗಿಕೊಳ್ಳುತ್ತ ಅಲ್ಲಿಂದ ಜಾಗ ಕಿತ್ತಿದ್ದರಿಂದಲೂ ಮೂಡಬೇಕಿದ್ದ ಸಹಜ ಸದ್ದು ಅಲ್ಲಿ ಮೂಡಲಿಲ್ಲವೆನ್ನಬಹುದು.

'ನಿಮ್ಗೆ ಇಂತ ಸರ್ಕಾರ ಬೇಕ ಮಹಾಜನರೇ ?' ಎಂದು ಮತ್ತೊಮ್ಮೆ ಅರಚಿದ ರಾಜಕಾರಣಿ ತನ್ನ ಸಿಟ್ಟಿನ ಕಣ್ಣುಗಳಿಂದ ಕಾರ್ಯಕರ್ತರನ್ನು ನೋಡತೊಡಗಿದ.

'ಯಸ್ ಮೈ ಲೀಡರ್ .. ಸರ್ಕಾರ ಬೇಕು .. ಬೇಕೇ ಬೇಕು .. ಕೋಟಿ ಕೋಟಿ ಖರ್ಚ್ ಮಾಡಿ ಎಲೆಕ್ಟ್ ಮಾಡಿರೋದು ಮೂರ್ ದಿನಕ್ಕೆ ಗಂಟು ಮೂಟೆ ಕಟ್ಸಿ ಮೂಲೆಗೆ ಹಾಕೋಕಲ್ಲ!'

ಗುಂಪಿನ ಮಧ್ಯದಿಂದ ಮೂಡಿದ ಈ ಅಚಾನಕ್ ಉತ್ತರಕ್ಕೆ ಕಕ್ಕಾಬಿಕ್ಕಿಯಾದ ರಾಜಕಾರಣಿ ಸದ್ದು ಬಂದೆಡೆಯೇ ನೋಡತೊಡಗಿದ. ಸ್ಟೇಜಿನ ಮೇಲಿದ್ದ ಇತರರ ದೃಷ್ಟಿಯೂ ಅತ್ತ ಕಡೆಗೇ ತಿರುಗಿತು. ದಷ್ಟಪುಷ್ಟವಾದ ಕೈಯೊಂದು ಜನರ ಗುಂಪಿನ ಮದ್ಯೆ ಮೇಲೆದ್ದು ನಿಂತಿತ್ತು. ಕಾರ್ಯಕರ್ತರು ಇನ್ನೇನು ಧಿಕ್ಕಾಪಾಲಾಗಿ ಓಡುವುದೊಂದೇ ಬಾಕಿ. ಆದಿ ತನ್ನ ಪಕ್ಕಕ್ಕೆ ತಿರುಗಿ ರಾಜಕಾರಣಿಯ ಮುಖಕ್ಕೆ ಒಡೆದವನಂತೆ ಉತ್ತರಿಸಿದ ಲೋಕೇಶನನ್ನು ಕಂಡು ಚೇಳು ಕಡಿದವರಂತೆ ಚಂಗನೆ ನೆಗೆದು ಪಕ್ಕದ ಗುಂಪಿನಲ್ಲಿ ಮರೆಯಾದ ಹಾಗು 'ಲೋಕಿ .. ಬೇಡ .. ಸುಮ್ನಿರೋ ..' ಎಂದು ಅಲ್ಲಿಂದಲೇ ಪಿಸುಗುಡತೊಡಗಿದ.

'ಯಂಗ್ ಮ್ಯಾನ್ .. ನಿಮ್ಗೆ ಇವೆಲ್ಲ ಅರ್ಥ ಆಗಲ್ಲ ಅನ್ಸುತ್ತೆ...ನಾವ್ ಹೇಳ್ತಾ ಇರೋದು ಜನಗಳ ಒಳಿತಿಗೇ'

'ನಾನ್ ಹೇಳ್ತಾ ಇರೋದು ಜನಗಳ ಒಳಿತಿಗೇನೆ ಸಾರ್..' ರಪ್ಪನೆ ಲೊಕೇಶನೂ ಉತ್ತರಿಸಿದ.

'ಒಹ್ ಇಸ್ ಇಟ್ .. ಬನ್ನಿ ಹಾಗಾದ್ರೆ .. ಇಲ್ ಬಂದು ಮಾತಾಡಿ .. ಬಂದು ವಿವರಿಸಿ.. ದಿಸ್ ಸ್ಟೇಜ್ ಇಸ್ ಫಾರ್ ಯು' ಎಂದ ರಾಜಕಾರಣಿ ಬಹುಶಃ ಬೊಗಳುವ ನಾಯಿ ಕಚ್ಚುವುದಿಲ್ಲವೆಂಬ ಲೆಕ್ಕಾಚಾರದಲ್ಲಿ ಸ್ಟೇಜಿನ ಕೊಂಚ ಹಿಂದೆ ಸರಿದು ನಿಂತಂತೆ ನಟಿಸಿದ. ಪಕ್ಕದಲ್ಲಿ ಆಸೀನರಾಗಿದ್ದಂತಹ ಇತರೆ ರಾಜಕಾರಣಿಗಳು ಪ್ರೋಗ್ರಮಿನ ಪ್ರೊಟೋಕಾಲನ್ನು ಮುರಿದ ಆತನನ್ನು ದುರುಗುಟ್ಟು ನೋಡುತ್ತಾ ಮನದೊಳಗೆ ಗುಸು ಗುಸು ಬೈಯತೊಡಗಿದರು. ಯುವಜನರ ಹುಲಿಯೆಂಬ ನಾಮಾಂಕಿತದ ಆತ ಇತರೆ ರಾಜಕಾರಣಿಗಳಿಗೆ ತನ್ನ ಕಣ್ಣಿನಲ್ಲೇ ಏನೂ ಆಗಲಿಲ್ಲವೆಂಬ ಸಮಜಾಯಿಷಿಯನ್ನು ನೀಡಿ ಇನ್ನೇನು ಮೈಕಿನೆಡೆಗೆ ಪುನಃ ಬರಬೇಕು ಅನ್ನುವಷ್ಟರಲ್ಲಿಯೇ ಲೋಕೇಶ ಅಲ್ಲಿಗೆ ಬಂದು 'ಒಂದೂರಿನಲ್ಲಿ ಒಬ್ಬ ಯುವಕನಿದ್ದ..' ಎಂದು ಯಾರಿಗೆ ಯಾವುದೇ ಗೌರವಸೂಚಕಗಳಿಲ್ಲದೆಯೇ ತನ್ನ ಭಾಷಣವನ್ನು ಮುಂದುವರೆಸಿದ!

Continues..

Saturday, July 11, 2020

ಪಯಣ - 11

ರಾತ್ರಿ ತಡರಾತ್ರಿಯವರೆಗೂ ಮೊಬೈಲ್ ಚಾಟ್ ಹಿಸ್ಟರಿಯನ್ನು ಚಾಚೂತಪ್ಪದೆ ರಿವೈಸ್ ಮಾಡಿದ ಆದಿಗೆ ಬೆಳ್ಳಂಬೆಳಗೆ ಆತನ ಅಮ್ಮನ ಫೋನ್ ಕಾಲು ಬಡಿದೆಬ್ಬಿಸಿತು . ಕಟ್ ಮಾಡಿದಷ್ಟೂ ಪುನ್ಹ ರಿಂಗುಡುತಿದ್ದ ಫೋನನ್ನು ಕಡೆಗೂ ಕಿವಿಯ ಮೇಲಿಟ್ಟ ಆತ ಸಿಟ್ಟಿನಿಂದ 'ಏನ್ ಆಯ್ತ್ ಇವತ್ತು ಬೆಳ್ ಬೆಳ್ಗೆ?!' ಎನುತ ಅರಚಿದ. ಅತ್ತ ಕಡೆಯಿಂದ ಅಮ್ಮ ಅದೇನೋ ವಿಷಯದ ಬಗ್ಗೆ ಏರು ಧ್ವನಿಯಲ್ಲಿ ಹೇಳುತ್ತಾ ಹೋದಂತೆ ಅದಕ್ಕೆ ತಾಳವೇನೋ ಎಂಬಂತೆ ಅಪ್ಪನೂ ಜೋರಾಗಿ ಚೀರತೊಡಗಿದ. ಮೊಬೈಲ್ನಿಂದ ಬರುತ್ತಿದ್ದ ಅರಚಾಟದ ಸದ್ದು ಹೆಚ್ಚಾದಂತೆ ಆದಿ ಎದ್ದು ರೂಮಿನ ಹೊರಗೆ ಬಂದ. ಕೈ ಮೀರಿರುವ ಘಳಿಗೆಯಲ್ಲಿ ತಾನೂ ಬೆಂಕಿಯ ಕಿಡಿಯಾದರೆ ಏನು ಗತಿ ಎಂದುಕೊಂಡು ಎಂದಿನಂತೆಯೇ ಅವರಿಬ್ಬರನ್ನು ಸಂತೈಸಲು ಆತ ಪ್ರಯತ್ನಿಸತೊಡಗಿದ. ಸಿಟ್ಟಿನ ಅಲೆ ಮನದೊಳಗೆ ಏರಿಳಿಯುತ್ತಿರಲು, ಆದಿ ಶಾಂತಿದೂತನಂತೆ ಪೋಷಕರ ಸಿಲ್ಲಿ ವಿಷಯಗಳಿಗೆ ಶಾಂತ ಸ್ವರದಲ್ಲಿ ಸಾಂತ್ವನವನ್ನು ಹೇಳುತ್ತಿರಲು, ಆತನ ಸಹನೆಯ ಕಟ್ಟೆ ಹೊಡೆಯಿತು. ಆದರೆ ಆತ ಅವರೊಟ್ಟಿಗೆ ಚೀರಾಡದೆ ತನ್ನ ಫೋನನ್ನೇ ಬಾಲ್ಕನಿಯ ನೆಲದ ಮೇಲೆ ಜೋರಾಗಿ ಎಸೆದು ಆವೇಶದಿಂದ ಒಂದೇ ಸಮನೆ ಏದುಸಿರು ಬಿಡುತ್ತ ನಿಂತ. ದೇವರಿಗೆ ಒಡೆಯುವ ಕಾಯಿಯಂತೆ ಛಿದ್ರ ವಿಛಿದ್ರವಾಗಿ ಫೋನು ಮುರುಟಿ ಬಿದ್ದಿತು. ಸಿಟ್ಟಿನಿಂದ ಏದುಸಿರು ಬಿಡುತ್ತಿದ್ದ ಆದಿಗೆ ಛಿದ್ರಗೊಂಡ ಮೊಬೈಲನ್ನು ಧಿಟ್ಟಿಸುತ್ತ ಇಂತಹ ಪೋಷಕರಿಂದ ಖುಷಿ ದೂರವಿದ್ದರೇ ಒಳ್ಳೆಯೆದು ಎಂಬ ಯೋಚನೆ ಮೂಡಿತು. ಇವರ ಕಿತ್ತಾಟ, ಅಪ್ರಬುದ್ದತೆ, ಅರಚಾಟ ಎಲ್ಲವೂ ಎಂಥವರಿಗೂ ಸಹಿಸಲಾಗದ ವಿಷಯಗಳಾಗುತ್ತವೆ ಎಂದನಿಸಿತು.

ಲೋಕೇಶ ಎದ್ದು ಜಾಗಿಂಗ್ ಗೆ ರೆಡಿಯಾಗತೊಳಗಿದ. ತಲೆಯಲ್ಲಿ ಸಾವಿರ ಯೋಚನೆಗಳ ಆಗರವನ್ನು ಸೃಷ್ಟಿಸಿಕೊಂಡಿದ್ದ ಆದಿಗೆ ಮುಂದೇನು ಮಾಡಬೇಕೆಂದು ತೋಚಲಿಲ್ಲ. ಒಡೆದ ತೆಂಗಿನಕಾಯಿಯ ಚೂರುಗಳಾಗಿದ್ದ ಫೋನಿನ ಭಾಗಗಳನ್ನು ಎತ್ತಿ ಒಂದೊಂದಾಗಿಯೇ ಜೋಡಿಸತೊಡಗಿದ. ಲೋಕೇಶ ಏನೋ ಹೇಳಿದ್ದನ್ನೂ ಅಷ್ಟಾಗಿ ಕೇಳಿಸಿಕೊಳ್ಳದೆ ತನ್ನ ವ್ಯರ್ಥ ಕೆಲಸದಲ್ಲಿಯೇ ಮಗ್ನನಾದ ಆತ. ಲೋಕೇಶ ತನ್ನ ಸ್ಪೋರ್ಟ್ಸ್ ಶೂ ಅನ್ನು ತೊಟ್ಟು ಜಾಗಿಂಗ್ಗೆ ಇನ್ನೇನು ಹೋಗಬೇಕು ಎನ್ನುವಷ್ಟರಲ್ಲಿ ಆದಿ ಲೋಕೇಶನಿಗೆ ನಿಲ್ಲುವಂತೆ ಹೇಳುತ್ತಾನೆ. ತೊಟ್ಟ ಚಡ್ಡಿಯಲ್ಲಿಯೇ ತೆಳುವಾದ ಟಿ ಶರ್ಟ್ ಹಾಗು ಶೂ ಅನ್ನು ತೊಟ್ಟು ತಾನೂ ಜಾಗಿಂಗ್ ಗೆ ಬರುವುದಾಗಿ ಹೇಳುತ್ತಾನೆ.

ಗಹಗಹನೇ ನಕ್ಕ ಲೊಕೇಶನನ್ನು ಆದಿಯ ತೀಕ್ಷ್ಣ ದೃಷ್ಟಿಗೆ ಮಾತು ಬಾರದಂತಾಗುತ್ತಾನೆ. ಆದಿಯ ಕಣ್ಣುಗಳು ಕೆಂಡದಂತೆ ಹೊಳೆಯುತ್ತಿದ್ದವು

'ಸರಿ ಬಾರಪ್ಪ .. ನಿನ್ ಇಷ್ಟ' ಎಂದು ಲೋಕೇಶ ಆತನನ್ನು ಡಿಸ್ಟ್ರಿಕ್ಟ್ ಫೀಲ್ಡ್ ಗೆ ಓಡಿಸಿಕೊಂಡೆ ಕರೆದೊಯ್ಯುತ್ತಾನೆ.

**

ಕಾಡು ನಾಡಾಗಿ ನಾಡು ಪಟ್ಟಣಗಳಾಗಿ ಈಗ ಪಟ್ಟಣಗಳು ಸ್ಮಾರ್ಟ್ ಸಿಟಿಗಳಾಗುತ್ತಿರುವ ಕಾಲದಲ್ಲಿ ಬೊಜ್ಜು ತುಂಬಿದ ದೇಹಗಳೇ ಎಲ್ಲೆಂದರಲ್ಲಿ. ದಿನದ ಹನ್ನೆರೆಡು ಘಂಟೆಗಳ ಕಾಲ ಲ್ಯಾಪ್ಟಾಪಿನ ಮುಂದೆಯೇ ಕೂತು ದಿನ ಕಳೆಯುವ ಪ್ರಸ್ತುತ ಕೆಲಸಗಳ ಕಾಲದಲ್ಲಿ ಇಂತಹ ಬೊಜ್ಜುದೇಹಗಳಿಗೆ ನಗರದ ಪಾರ್ಕು ಹಾಗು ಆಟದ ಫೀಲ್ಡ್ಗಳೇ ಒಂತರ ಸಾಮೂಹಿಕ ನೈಸರ್ಗಿಕ ಓಪನ್ ಜಿಮ್ಗಳಾಗಿಬಿಟ್ಟಿವೆ. ಬೆಳಗಾದರೆ ಸಾಕು ಹುಡುಗ ಹುಡುಗಿಯರು, ಆಂಟಿ ಅಂಕಲ್ ಗಳಲ್ಲದೆ ಅಜ್ಜ ಅಜ್ಜಿಯರವರೆಗೂ ಜನ ಇಲ್ಲಿ ಬಂದು ನೆರೆಯುತ್ತಾರೆ. ಕೆಲವರು ವಿಚಿತ್ರವಾಗಿ ಗುಂಪುಗಟ್ಟಿಕೊಂಡು ಗಹಗಹನೇ ನಗತೊಡಗಿದರೆ ಕೆಲವರು ಇವರ ಆ ವಿಚಿತ್ರ ವರ್ತನೆಯನ್ನು ಸಂಶಯದ ದೃಷ್ಟಿಯಿಂದ ನೋಡುತ್ತಾ ನೆಡೆಯುವರು. ಮತ್ತೆ ಕೆಲವರು ಮಿಲ್ಕಾ ಸಿಂಗ್ ಗಳಂತೆ ಮುಂದೆ ಸಿಕ್ಕವರನ್ನು ತುಳಿದು ತಿವಿದೇ ಬಿಡುವಂತೆ ಓಡತೊಡಗಿದರೆ ಇನ್ನು ಕೆಲವರು ಓಡುವುದಕ್ಕಿಂತ ಜಾಸ್ತಿ ಜ್ಯೂಸು, ಬಿಸ್ಕತ್ತು ಹಾಗು ಹಣ್ಣುಗಳನ್ನು ತಿಂದು ಸಾಂತ್ವನ ತಂದುಕೊಳ್ಳುವರು. ಇನ್ನು ಮಕ್ಕಳು ಯುವಕರಂತೂ ಇಡೀ ಫೀಲ್ಡ್ನ ತುಂಬೆಲ್ಲ ಪಸರಿಸಿಕೊಂಡು ಕ್ರಿಕೆಟ್ ಆಡುವ ಮೋಜು. ಯಾವ ಆಟಗಾರ ಅದ್ಯಾವ ಮ್ಯಾಚಿನವನೋ ಅದೊಂದು ಬಗೆಯ ಚಿದಂಬರ ರಹಸ್ಯವೇ ಹಲವರಿಗೆ. ಇನ್ನು ಕೆಲವರು ತಾವು ವಾಕ್ ಮಾಡಲು ಬಂದಿರುವುದೋ ಅಥವಾ ತಮ್ಮ ಅತಿ ಧುಬಾರಿ ನಾಯಿಯನ್ನು ಪ್ರದರ್ಶನಕ್ಕೆ ತಂದಿರುವರೋ ಹೇಳುವುದು ಕಷ್ಟ. ಕಿವಿಗೆ ಇಯರ್ ಫೋನನ್ನು ತೂರಿಸಿಕೊಂಡು ಹಜ್ಜೆಗೊಂದು ಹೆಜ್ಜೆಯನ್ನು ಪೋಣಿಸುತ್ತಾ ನೆಡೆದರೆ ಆ ಧುಬಾರಿ ನಾಯಿ ತನ್ನ ಅಗ್ಗದ ನಾಯಿ ಬುದ್ದಿಯನ್ನು ಬಿಡಬೇಕೆ? ಕುತ್ತಿಗೆಗೆ ಹಾಕಿರುವ ಸರಪಳಿಯೇ ತುಂಡಾಗುವಂತೆ ಗಬ್ಬು ವಾಸನೆ ಬರುವೆಡೆಯೊ ಅಥವಾ ಮತ್ಯಾವಾವುದೋ ಅನ್ಯ ಲಿಂಗಿ ನಾಯಿಯ ಸೆಳೆತಕ್ಕೊ ಒಳಗಾಗಿ ಓಟ ಕೀಳುವುದು. ಆಗ ಮಾತ್ರ ಬಹುಷಃ ಆ ನಾಯಿಯೊಟ್ಟಿಗೆ ವಾಕಿಂಗ್ ಬಂದಿರುವವರು ಜಾಗಿಂಗ್ ಮಾಡುವುದು! ಸುಪ್ತವಾಗಿದ್ದ ನಾಯಿಯ ನಾಯಿಬುದ್ಧಿಯನ್ನು ಕೂಡಲೇ ಶಮನಮಾಡುವುದು ಅಷ್ಟು ಸುಲಭವಲ್ಲ ಎಂದೆನಿಸಿ ಏದುಸಿರು ಬಿಡುತ್ತಾ ಕೊನೆಗೂ ಅದನ್ನು ಅದರ ಪಾಡಿಗೆ ಬಿಟ್ಟು ಕಲ್ಲು ಬೆಂಚಿನ ಮೇಲೆ ಕೂತು ನಿಟ್ಟುಸಿರು ಬಿಡುವರು.

ಲೋಕೇಶ ಅದೇನೇ ಬಡಬಡಿಸಿದರೂ ಆದಿ ಒಂದಿನಿತೂ ಪ್ರತಿಕ್ರಿಯೆ ನೀಡದೆಯೆ ಫೀಲ್ಡ್ನವರೆಗೂ ಓಡುತ್ತಲೇ ಬಂದ. ಆತನೊಳಗೆ ಈಗ ಅಪ್ಪ, ಅಮ್ಮ, ಖುಷಿ ಎಂಬ ಮೂರು ಪಾತ್ರಗಳು ಪ್ರೀತಿಯೆಂಬ ನಾಲ್ಕನೇ ಪಾತ್ರವನು ಸೃಷ್ಟಿಸಲು ಆವಣಿಸುತ್ತಿವೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಕಾರಣ ತನ್ನ ಪೋಷಕರೇ ಎಂದು ಆತ ಅಂದುಕೊಳ್ಳುತ್ತಾನೆ. ಕೋಪ ಇನ್ನೂ ವಿಪರೀತವಾಯಿತು. ಲೊಕೇಶನೊಟ್ಟಿಗೆ ಓಡೋಡಿಕೊಂಡೆ ಇಲ್ಲಿಯವರೆಗೂ ಬಂದ ಆದಿ ಒಂದಿನಿತೂ ಸುಸ್ತಾದವನಂತೆ ಕಾಣಲಿಲ್ಲ. ಲೋಕೇಶನೇ ಖುದ್ದಾಗಿ 'ಸ್ವಲ್ಪ ಹೊತ್ತು ಕೂತು ಆಮೇಲೆ ಜಾಗಿಂಗ್ ಮಾಡುವ' ಎಂದರೂ ಕೇಳದ ಆದಿ ಕ್ರೀಡಾಂಗಣದ ಸುತ್ತ ಓಡತೊಡಗುತ್ತಾನೆ. ತಲೆಯ ತುಂಬೆಲ್ಲ ಚಿತ್ತವನ್ನು ಹರಿದು ತಿನ್ನುವ ವಿಷಯಗಳೇ ತುಂಬಿರುವಾಗ ಬಹುಷಃ ಆತನಿಗೆ ತಾನು ಇಲ್ಲಿಗೆ ಬಂದಿರುವದೇ ಗೊತ್ತಿಲ್ಲದಿರಬಹುದು. ಆತ ಓಡುತ್ತಲೇ ಹೋದ. ಓಟ ತೀವ್ರವಾಯಿತು. ಮುಂದೆ ಸಿಕ್ಕ ಬೊಜ್ಜು ತುಂಬಿದ ದೇಹಗಳು ಈತನ ಓಟದ ರಭಸಕ್ಕೆ ಸರ್ರನೆ ದಾರಿ ಸರಿದು ಬದಿಗೆ ನಿಂತವು. ದುಭಾರಿ ನಾಯಿಯೊಂದು ತನ್ನ ಮಾಲೀಕನಿಂದ ಸರಪಣಿ ಸಮೇತ ಬೇರ್ಪಟ್ಟು ಆದಿಯೊಟ್ಟಿಗೆ ಓಡತೊಡಗಿತು.

ಅಷ್ಟು ದೊಡ್ಡ ಕ್ರೀಡಾಂಗಣದ ಎರಡನೇ ಸುತ್ತನ್ನು ಮುಗಿಸಿದ ಆದಿಯನ್ನು ಲೋಕೇಶ ಜೋರಾಗಿ ಕೂಗಿ ನಿಲ್ಲುವಂತೆ ಹೇಳುತ್ತಾನೆ. ಆದಿಗೆ ಆತನ ಕೂಗಿನ ಸದ್ದೂ ಕಿವಿಯ ಮೇಲೆ ಬೀಳಲಿಲ್ಲ. ಓಟ ಮುಂದುವರೆಯಿತು. ಆತನ ಓಟವನ್ನು ನೋಡಿದ ಲೋಕೇಶನಿಗೆ ಈಗ ಅಕ್ಷರ ಸಹ ದಿಗ್ಬ್ರಮೆಯಾಗತೊಡಗಿತು. ಆತ ತನ್ನ ಮೊಬೈಲನ್ನು ಹೊರತೆಗೆದ. ಮೂರನೇ ಸುತ್ತನ್ನು ಮುಗಿಸುವಷ್ಟರಲ್ಲಿ ವಾಕಿಂಗ್ ಗೆ ಬಂದಿದ್ದ ಹಲವರು ಟ್ರ್ಯಾಕ್ ನ ಉದ್ದಕ್ಕೂ ಈತನಿಗೆ ದಾರಿ ಬಿಡುವಂತೆ ಪಕ್ಕಕೆ ಸರಿದು ನಿಂತಿದ್ದರೆ, ಗಹಗಹನೇ ನಗುತ್ತಿದ್ದ ಹಿರಿಯರ ಗುಂಪೂ ಮೊದಲ ಬಾರಿಗೆ ಎಂಬಂತೆ ಅಷ್ಟು ದೊಡ್ಡ ಕ್ರೀಡಾಂಗವನ್ನು ಒಂದೇ ವೇಗದಲ್ಲಿ ಮೂರು ಬಾರಿ ಪ್ರದಕ್ಷಿಣೆ ಹಾಕಿದ ಯುವಕನನ್ನು ಬಾಯ್ಬಿಟ್ಟುಕೊಂಡೇ ನೋಡತೊಡಗಿತು. ನಾಲ್ಕನೇ ಸುತ್ತನ್ನು ತನ್ನ ಮೊಬೈಲಿನ ಟೈಮರ್ ನಲ್ಲಿ ಲೆಕ್ಕ ಹಾಕಿದ ಲೋಕೇಶನಿಗೆ ಆದಿಯ ವೇಗವನ್ನು ಕಂಡು ನಂಬಲೇ ಆಗಲಿಲ್ಲ.

'ಆದಿ...! ಕಮ್ ಆನ್ ಮ್ಯಾನ್ .. ಸ್ಟಾಪ್ ಇಟ್ ನೌ..' ನಾಲ್ಕನೇ ಸುತ್ತನ್ನು ಮುಗಿಸಿದ ಆದಿಯನ್ನು ಉದ್ದೇಶಿಸಿ ಈ ಬಾರಿ ತನ್ನ ಶಕ್ತಿಯನ್ನು ಮೀರಿ ಕೂಗಿದ.

ಆದಿ ನಿಲ್ಲಲಿಲ್ಲ.

ಆದರೆ ಈ ಬಾರಿ ಲೋಕೇಶ ಸುಮ್ಮನಿರದೆ ಆತನೂ ಆದಿಯ ಹಿಂದೆ ಓಡುತ್ತಾ ಒದ್ದೆಯಾಗಿದ್ದ ಆತನ ಶರ್ಟ್ನ ಕುತ್ತಿಗೆಯನ್ನು ಹಿಡಿದು ಜಗ್ಗತೊಡಗಿದ. ದುಃಖಭರಿತ ಸಿಟ್ಟಿನಲ್ಲಿ ಕೂಗುತ್ತಾ ಆದಿ ಲೊಕೇಶನ ಕೈಯನ್ನು ದೂರಕ್ಕೆ ತಳ್ಳುತ್ತಾನೆ. ಆದರೆ ಲೋಕೇಶ ಸುಮ್ಮನಾಗುವುದಿಲ್ಲ. ಆತನ ಕೈಯನ್ನು ಗಟ್ಟಿಯಾಗಿ ಹಿಡಿದು ನಿಲ್ಲಿಸತೊಡಗುತ್ತಾನೆ. ಕೆಲ ಕ್ಷಣ ಕೊಸರಾಡಿದಂತೆ ಆಡಿದ ಆದಿ ಕೊನೆಗೆ ಶಾಂತವಾಗುತ್ತಾನೆ. ಆತನ ಕಣ್ಣುಗಳು ರಕ್ತ ಕಾರುವಂತೆ ಕೆಂಪಾಗಿದ್ದವು. ಲೋಕೇಶ ಆತನಿಗೆ ಕುಡಿಯಲು ನೀರನ್ನು ಕೊಟ್ಟರು ಒಂದು ಗುಟುಕು ಕುಡಿಯದ ಆತ ಕೂಡಲೇ ಅಲ್ಲಿಂದ ರೂಮಿನೆಡೆಗೆ ಓಡುತ್ತಾನೆ. ಲೋಕೇಶ ಆಶ್ಚರ್ಯದಿಂದ ಆತ ಓಡಿದ ದಿಕ್ಕನೇ ನೋಡುತ್ತಾ ನಿಲ್ಲುತ್ತಾನೆ.

'ಏನಪ್ಪಾ ಆತ ನಿನ್ ಫ್ರೆಂಡ' ಹಿಂದಿನಿಂದ ಬಂದ ಅರ್ವತ್ತರ ವ್ಯಕ್ತಿಯೊಬ್ಬರು ಕೇಳಿದರು.

'ಹೌದು ಸಾರ್.. ಏಕೆ?'

'ನೋಡು, ನಾನ್ ಇಲ್ಲಿ ಕಳೆದ ಮೂವತ್ತು ವರ್ಷದಿಂದ ವಾಕಿಂಗ್ ಗೆ ಬರ್ತಾ ಇದ್ದೀನಿ .. ಆದ್ರೆ ಈ ರೀತಿ ನಾಲ್ಕ್ ರೌಂಡ್ ರನ್ನಿಂಗ್ ನ ಇಷ್ಟ್ ಫಾಸ್ಟಾಗಿ ಓಡಿರೋದ್ನ ಯಾರನ್ನೂ ನೋಡಿಲ್ಲ.. ಅವ್ರು ನ್ಯಾಷನಲ್ ಲೆವೆಲ್ ರನ್ನರ?' ಎಂದು ಕೇಳುತ್ತಾರೆ.

ಅವರ ಪ್ರೆಶ್ನೆಗೆ ನಕ್ಕ ಲೋಕೇಶ ತನ್ನ ಫೋನಿನ ಟೈಮರ್ ಅನ್ನು ತೆಗೆದು ನೋಡುತ್ತಾ,

'ಸದ್ಯಕ್ಕೆ ಒಬ್ಬ ಟ್ರೂ ಲವರ್ ಅಷ್ಟೇ ಸರ್ .. ಇನ್ ಸ್ವಲ್ಪ ದಿನದಲ್ಲಿ ನೋಡಿ ಹಿ ವಿಲ್ ಬಿ ಆ ಡ್ಯಾಶಿಂಗ್ ರನ್ನರ್..' ಎನ್ನುತ್ತಾನೆ.

**

ಸುಪ್ತವಾಗಿದ್ದ ಆದಿಯ ಆ ಅದ್ಭುತ ಓಟ ಲೋಕೇಶನಲ್ಲಿ ಹಲವಾರು ಪ್ರೆಶ್ನೆಗಳನ್ನು ಹುಟ್ಟು ಹಾಕಿದ್ದವು. ವರ್ಷಗಳಿಂದ ಓಡುತ್ತಿರುವ ತಾನೇ ಮನಸ್ಸು ಮಾಡಿ ಓಡಿದರೂ ಹೆಚ್ಚೆಂದರೆ ಎರಡು ಸುತ್ತುಗಳನ್ನು ಓಡಬಹುದಾದ ಟ್ರ್ಯಾಕ್ ಅನ್ನು ಆದಿ ಅದೇಗೆ ಒಮ್ಮೆಲೇ ನಾಲ್ಕು ಸುತ್ತನ್ನು ಓಡಿದ ಎಂದು ದಿಗ್ಭ್ರಮೆಯಾಯಿತು. ಒಟ್ಟಿಗೆ ಒಂದು ಹೊಸ ಆಲೋಚನೆಯೂ ಮೂಡಿತು.

ಜಾಗಿಂಗ್ ಮುಗಿಸಿ ಅಲ್ಲಿಂದ ಸೀದಾ ತನ್ನ ಶುಂಠಿ ಗದ್ದೆಗೆ ಹೋಗಿ ಅಜ್ಜಿಯೊಟ್ಟಿಗೆ ಜೀವನದ ಬಗೆಗಿನ ಅರೆಪಕ್ವಗೊಂಡ ಕೆಲವು ವಿಚಾರಗಳನ್ನು ಚರ್ಚಿಸಿ ರೂಮಿಗೆ ಬಂದ ಲೋಕೇಶ ಎಂದಿನಂತೆ ಕೈಕಾಲುಗಳನ್ನು ತೊಳೆಯದೆ ರೂಮಿನೊಳಗೆ ಬಂದು ಮಲಗಿದ್ದ ನನ್ನ ಮೇಲೆ ದೊಪ್ಪನೆ ಬಿದ್ದ. ಕನಸ್ಸಿನ ಲೋಕದಲ್ಲಿ ಆರಾಮಾಗಿ ವಿಶ್ರಮಿಸುತ್ತಿದ್ದ ನನಗೆ ದೊಡ್ಡ ಬಂಡೆಯೊಂದು ಮೈಮೇಲೆ ಕುಸಿದು ಬಿದ್ದಂತಹ ಅನುಭವವಾಯಿತು. ಎದ್ದು ವಾಸ್ತವವನ್ನು ಅರಿತು , ಲೊಕೇಶನ ಅಂಡಿನ ಮೇಲೆ ಎರಡು ಬಾರಿ ಜಾಡಿಸಿ ಒದೆದ ಮೇಲೆಯೇ ನನ್ನ ಕೋಪ ಕೊಂಚ ಶಮನವಾದದ್ದು. ನಾನು ಶಕ್ತಿ ಮೀರಿ ಕೊಟ್ಟ ಏಟನ್ನೂ ಅಷ್ಟಾಗಿ ಲೆಕ್ಕಕ್ಕೆ ತೆಗೆದುಕೊಳ್ಳದೆ ಆತ,

'ಮಚಿ.. ಇವತ್ತಿಂದ ಇನ್ ಆರ್ ತಿಂಗಳ್ಲಲಿ ನಮ್ಮಲ್ಲಿ ಒಬ್ಬ ಯೂನಿವರ್ಸಿಟಿ ಚಾಂಪಿಯನ್ ಆಗ್ತಾನೆ.. ದಿ ರನ್ನಿಂಗ್ ಚಾಂಪಿಯನ್'. ಎಂದು ಆತ ಹೇಳಿದ. ಬಾಯ್ಬಿಟ್ಟರೆ ಆಕಾಶಕ್ಕೆ ಹಾರುವ ಮಾತಾಡುವ ಆತನ ಮಾತನ್ನು ನಾನು ಕೇಳಿಯೂ ಕೇಳದವನಂತೆ ಸುಮ್ಮನಾದೆ. ಆದರೂ ಯಾಕೋ ಕೇಳಬೇಕೆಂದ್ದಾಗಿ,

'ಯಾರಪ್ಪ ಅದು ಮಹಾತ್ಮಾ' ಎಂದು ಹೊದೆದುಕೊಂಡಿದ್ದ ರಗ್ಗನ್ನು ಮುಖ ಮುಚ್ಚುವಂತೆ ಮೇಲಕ್ಕೆ ಎಳೆದುಕೊಂಡೆ.

'ಆದಿ..' ಎಂದಷ್ಟೇ ಹೇಳಿದ ಆತ ಸುಮ್ಮನಾದ. ಓದುವ ಕಾಲದಲ್ಲಿ ಶುಂಠಿ ಬಿಸಿನೆಸ್ನಂತ ಅಡ್ಡ ಕಸುಬನ್ನು ಹಿಡಿದಿರುವ ಈ ಅಡ್ಡಕಸುಬಿ ಇನ್ನು ಆ ಅಮಾಯಕ ಆದಿಶೇಷನನ್ನು ಮುಗಿಸಿಬಿಡುವನೋ ಎಂದು ಕೂಡಲೇ ಎದ್ದು ಕೂತೆ.

'ವ್ಹಾಟ್ ?! ಮಗ್ನೆ ನೀನು ಫೇಲ್ ಆಗೋದಲ್ದೆ ಅವನ್ನೂ ಜೊತೆಗೆ ಕೂರ್ಸ್ಕೊಬೇಕು ಅನ್ಕೊಂಡಿದ್ದೀಯ?! ಪಾಪ ಅವ್ನ್ ಏನ್ ಮಾಡ್ದ ಅಂತ ಈಗ ರನ್ನಿಂಗು'

'ಏನ್ ಮಾಡಿದಾನ.. ನೋಡಿಲ್ಲಿ' ಎಂದು ತನ್ನ ಜೇಬಿನಲ್ಲಿದ್ದ ಮೊಬೈಲನ್ನು ಹೊರಗೆಳೆದು ತೋರಿಸುತ್ತಾ 'ರೆಕಾರ್ಡ್ ಬ್ರೇಕಿಂಗ್ ಸ್ಪೀಡಲ್ಲಿ ಓಡ್ತಾನೇ ಕಾಣಪ್ಪಾ ಈ ಮಹಾಶಯ.. ನಂಗಂತೂ ಅಷ್ಟ್ ಓಡೋಕೆ ಸಾಧ್ಯನೇ ಇಲ್ಲ ಬಿಡು .. ಅದ್ ಯಾರನ್ನ ಓಡಿಸ್ಕೊಂಡ್ ಹೋಗ್ತಾ ಇದ್ನೋ ಗೊತ್ತಿಲ್ಲ' ಎಂದು ನಗತೊಡಗಿದ.

'ಲೋಕಿ ಬೇಡ್ವೊ .. ಅವ್ನ್ ಏನಾದ್ರೂ ಫೇಲ್ ಆದ್ರೆ ನಮ್ ಕತೇನೂ ಅಷ್ಟೇ.. ಅವ್ನ್ ಪಾಡಿಗೆ ಅವ್ನ ಓದೋಕ್ಕೆ ಬಿಡು' ನಾನೆಂದೆ.

'ನೋ ವೇಸ್.. ನೀನ್ ಸುಮ್ನಿರಪ್ಪಾ, ನಾನೇನ್ ಅವ್ನ ಮಾರ್ಸಿಗೂ ಅಥವಾ ಮತ್ತೊಂದು ಗ್ರಹಕ್ಕೋ ಕಳ್ಸ್ತಾ ಇಲ್ಲ..ಏನ್ ದಿನಕ್ಕೆ ಒಂದ್ ಘಂಟೆ ಖರ್ಚ್ ಮಾಡಿದ್ರೆ ಸಾಕು' ಎನ್ನುತ್ತಾನೆ. ಅಷ್ಟರಲ್ಲಿ ಸ್ನಾನಕ್ಕೆ ಹೋಗಿದ್ದ ಆದಿ ಹೊರಬರುತ್ತಾನೆ. ಎಂದಿನಂತೆ ಯಾರೊಟ್ಟಿಗೂ ಮಾತನಾಡದೆ ಸೆಪ್ಪೆಮೋರೆಯನ್ನು ಹಾಕಿಕೊಂಡೆ ಕಾಲೇಜಿಗೆ ರೆಡಿಯಾಗತೊಡಗುತ್ತಾನೆ.

'ಆದಿ, ದಾರೀಲಿ ಪ್ರಿನ್ಸಿಪಲ್ ಸಿಕ್ಕಿದ್ರು' ಲೋಕೇಶ ಹೇಳಿದ.

'ಒಹ್, ಏನಂತೆ'

'ಅವ್ರ್ ಮಗಳಿಗೆ ಒಬ್ಬ ಬಾಯ್ ಫ್ರೆಂಡ್ ಬೇಕಂತೆ..' ಎಂದ ಆತ ಗೊಳ್ಳನೆ ನಗತೊಡಗಿದ. ಒಮ್ಮೆಲೇ ಮೂಡಿದ ಆ ಪ್ರತಿಕ್ರಿಯೆಗೆ ನನಗೂ ನಗುವನ್ನು ತಡೆಯಲಾಗಲಿಲ್ಲ.

ಆದಿ ಸುಮ್ಮನಿದ್ದ.

ಕೂಡಲೇ ಲೋಕೇಶ ಆತನ ಬಳಿಗೋಗಿ 'ಮಚಿ, ನೀನ್ ಈ ಪಾಟಿ ಓಡಿರೋದನ್ನ ನಾನು ನೋಡಿರಲೇ ಇಲ್ಲ. ಏನ್ ಅಂತ ಬ್ರಿಲಿಯಂಟ್ ರನ್ನಿಂಗ್ ಅಲ್ದೆ ಇದ್ರೂ ಇಟ್ಸ್ ಪ್ರಾಮಿಸಿಂಗ್. ಡೈಲಿ ಇದೆ ರೀತಿ ಪ್ರಾಕ್ಟೀಸ್ ಮಾಡಿದ್ರೆ ಯೂನಿವರ್ಸಿಟಿ ಚಾಂಪಿಯನ್ಶಿಪ್ಗೆ ಟ್ರೈ ಮಾಡಬಹುದು..' ಎಂದು ಸುಮ್ಮನಾದ.

'ನನ್ನ್ ಲೈಫೇ ಒಂದು ಚಾಂಪಿಯನ್ ಶಿಪ್ ಆಗಿದೆ ಇವಾಗ .. ಮೊದ್ಲು ಅದನ್ನ ಗೆದ್ರೆ ದೊಡ್ಡ್ ವಿಷ್ಯ..' ಎಂದ ಆದಿ ಮತ್ತೇನೂ ಮಾತನಾಡದೆ ಬಿರಬಿರನೆ ರೂಮಿನಿಂದ ಹೊರನೆಡೆದ.

ಲೋಕೇಶನಿಗೆ ಏನೇಳಬೇಕೆಂದು ತೋಚದೆ ನನ್ನೆಡೆಗೆ ನೋಡತೊಡಗಿದ.



****



ಮದ್ಯಾಹ್ನದ ಊಟಕೆಂದು ಬರ್ಗರ್ ತಿನ್ನಲು ಕಾಲೇಜಿನ ಹತ್ತಿರದ ಮಾಲಿಗೆ ಬಂದು ಕೂತಿರುವಾಗ ಪಕ್ಕದ ಟೇಬಲ್ಲಿನ ತಿಂದು ಬಿಟ್ಟ ಪ್ಲೇಟ್ಗಳನ್ನು ತೆಗೆಯಲಿಲ್ಲವೆಂದು ಬೊಜ್ಜುಗಟ್ಟಿದ್ದ ದೇಹಗಳೆರೆಡು ಅಲ್ಲಿನ ಕ್ಲೀನರನ್ನು ಕರೆದು ಒಂದೇ ಬೈಯತೊಡಗಿದವು. ಬಿರಬಿರನೆ ವಾನರರಂತೆ ಅರೆಬರೆ ತಿಂದು ಬಿಸುಟು ಹೋಗಿದ್ದ ಆಹಾರವನ್ನು ಆತ 'ಸಾರಿ ಸಾರ್ , ಸಾರಿ ಮೇಡಂ' ಏನುತಾ ಎತ್ತಿ ಪ್ಲೇಟ್ ಒಂದಕ್ಕೆ ಸುರಿದು ಅದನ್ನು ಪಕ್ಕದ ಡಸ್ಟ್ ಬಿನ್ನಿಗೆ ಹಾಕಿ ಬಂದು, ಸ್ಪ್ರೇಯ ನೀರನ್ನು ಟೇಬಲ್ಲಿನ ಮೇಲೆಲ್ಲಾ ಚುಮುಕಿಸಿ ಬಟ್ಟೆಯೊಂದನ್ನು ತೆಗೆದು ನೀಟಾಗಿ ಒರೆಸಿ ಅವರನ್ನು ಕೂರುವಂತೆ ಹೇಳುತ್ತಾನೆ.

'ಹ್ಯುಮಾನಿಟಿ ಅನ್ನೋ ಪದಕ್ಕೆ ಅರ್ಥ ಹೋಗಿರೋದೇ ಇಂತವರಿಂದ..' ಸಂಕಟದ ಅಲೆಯೊಂದು ಲೋಕೇಶನ ಮುಖದ ಮೇಲೆ ಮೂಡಿ ಮರೆಯಾಯಿತು.

'ಅಲ್ ನೋಡ್ ಮಚಿ ಆ ಕಾಗೆಗಳನ್ನ.. ತಿನ್ನೋಕ್ಕೆ ಒಂಚೂರು ಊಟ ಸಿಕ್ರು ಸಾಕು ಹೇಗೆ ಕೂಗಿ ತನ್ನವರೆಲ್ಲರನ್ನು ಕರೆಯುತ್ತೆ..ಅಲ್ಲಿ ವರ್ಣ, ಜಾತಿ, ಮೇಲು ಕೀಳು ಅನ್ನೋ ಒಂಚೂರೂ ತಾರತಮ್ಯ ಇಲ್ಲ. ಹಸಿದಾಗ ಮಾತ್ರ ಆಹಾರ ಇಲ್ಲವರಾದರೆ ವಿರಾಳವಾದ ವಿಹಾರ. ಇಂತಹ ಮುಗ್ದ ಪ್ರಾಣಿಗಳ ನಡುವೆ ಮಾನವ ಅದೇಗೆ ಜನ್ಮ ತಾಳಿದ ಅನ್ನೋದೇ ತಿಳಿಯೋಲ್ಲ . ಅದೆಷ್ಟು ಕೆಟಗರಿಯ ಮಾನವರು ಇದ್ದಾರೆ ಇಲ್ಲಿ. ದೇಶ, ಭಾಷೆ, ಜಾತಿ, ವರ್ಣದಿಂದಿಡು ಪ್ರಗತಿಪರ, ದೇಶದ್ರೋಹಿ, ಅತ್ಯಾಚಾರಿ.. ಥು.. ನಮ್ದು ಒಂದು ಜೀವ್ನಾನ..' ಲೋಕೇಶನ ಸದ್ದು ನಾವು ಕೂತಿದ್ದ ಮೂರು ಟೇಬಲ್ಲಿನ ಆಚೆಗೂ ಕೇಳಿ ಕೆಲವರು ನಮ್ಮೆಡೆಗೆ ತಿರುಗುವಂತೆ ಮಾಡಿತು.

'ಹೊಟ್ಟೆ ತುಂಬಿದಾಗ ಮಾತ್ರ ಕೊಡ್ಬೇಕು ಅನ್ಸೋದು ..ಇಲ್ಲ ಅಂದ್ರೆ ಪ್ರಾಣಿಗಳಿಂತ ಕೀಳು.. ಆ ಕಣ್ಣುಗಳನ್ನು ನೋಡು ಮಚಿ .. ಬರಿ ನಾನು , ನನಗೆ , ನನ್ನದು ಅನ್ನೋದೇ ತುಂಬಿ ಕೊಬ್ಬಿ ಹೋಗಿದೆ..’

'ಗುರು.. ತಿಂದ್ ಆಯ್ತಾ.. ಫಸ್ಟ್ ಪಿರಿಯಡ್ ನಿಮ್ ಕುಂಬಕರ್ಣಿ ಅತ್ತೆದು.. ಬರ್ತೀಯೋ ಇಲ್ಲ ಇಲ್ಲೇ ಕೊಬ್ಬಿರೋ ಕಣ್ಣ್ಗಳನ್ನ ನೋಡ್ತಾ ಕೂರ್ತಿಯೋ ' ಎಂದು ಆತನ ಮಾತಿಗೆ ಕಿಂಚಿತ್ತು ಬೆಲೆಕೊಡದಂತೆ ಆತನಿಗೆ ನೆನಪಿಸಿದೆ.

ಆದಿ ಒಂದು ಮುಗುಳ್ನಕ್ಕ. ಆತನ ಮುಖದ ಮೇಲೆ ಇತ್ತೀಚಿಗೆ ನಗುವೆಂಬುದನ್ನು ಕಂಡು ತಿಂಗಳುಗಳೇ ಆಗಿವೆ.

'ಹಲೋ.. ಮಿಸ್ಟರ್!!' ಎಂದು ಜೋರಾಗಿ ಅರಚಿದ ಲೋಕಿ. ತುಸು ಮೊದಲು ತಾವೇ ಪರಮಪಾವನರಂತೆ ಟೇಬಲನ್ನು ಕ್ಲೀನರೊಬ್ಬನಿಂದ ಶುಚಿಗೊಳಿಸಿ ಈಗ ಬೇಕಾದ ಬೇಡವಾದ ಎಲ್ಲವನ್ನು ಆರ್ಡರ್ ಕೊಟ್ಟು ತಂದು, ರಕ್ಕಸರಂತೆ ತಿಂದು, ಫ್ರೆಂಚ್ ಫ್ರೈ ಹಾಗು ಕೆಚಪ್ಪಿನ ಒಡೆದ ಪ್ಯಾಕನ್ನು ಟೇಬಲ್ಲಿನ ಮೇಲೆಲ್ಲಾ ಚೆಲ್ಲಿ, ಬರ್ಗರ್ನ ಸುತ್ತಿ ಕೊಡುವ ಪೇಪರ್ ಹಾಗು ಟಿಶ್ಯೂವನ್ನು ಉಂಡೆಗಟ್ಟಿ ಕಸದ ತೊಟ್ಟಿಯಲ್ಲಿ ಬಿಸಾಡುವಂತೆ ಎಸೆದು ಗೊರ್ರನೆ ತೇಗುತ್ತಾ ಎದ್ದು ನೆಡೆಯತೊಡಗಿದ ಆ ಜೋಡಿಗೆ ಲೊಕೇಶನ ಗದರಿಸುವ ಸದ್ದು ಇತ್ತ ಕಡೆ ತಿರುಗುವಂತೆ ಮಾಡಿತು.

'ಯೆ..ಸ್..' ಅಮೇರಿಕ ಅಧ್ಯಕ್ಷನ ಹೆಂಡತಿಯಂತೆ ಧಿಮಾಕಿನ ಧ್ವನಿಯಲ್ಲಿ ನುಡಿದಳು ಆತನೊಟ್ಟಿಗಿದ್ದ ಆಕೆ.

'ಟೇಬಲನ್ನು ಅಷ್ಟ್ ಕ್ಲೀನ್ ಆಗಿ ಯಾಕ್ರೀ ಬಿಟ್ ಹೋಗ್ತಾ ಇದ್ದೀರಾ.. ಇನ್ನೂ ಸ್ವಲ್ಪ ಗಲೀಜ್ ಮಾಡಿ.. ಕ್ಲೀನರ್ ಬಾಯ್ ಅನ್ನೋ ಪ್ರಾಣಿ ಕಮ್ ಮಷೀನ್ ಇದ್ಯಲ್ಲ .. ಕ್ಲೀನ್ ಮಾಡುತ್ತೆ..’ ಅವರನ್ನೇ ದುರುಗುಟ್ಟಿ ನೋಡುತ್ತಾ ಹೇಳಿದ ಲೋಕೇಶ.

'Excuse me .. Mind your own Business!!'

‘I’m midning my own business Ma’m.. Now will you be kind enough to clean the table & leave..?' ತನ್ನ ಸಿಟ್ಟನ್ನು ಬಿಟ್ಟೂ ಬಿಡದವನಂತೆ ಹೇಳತೊಡಗಿದ ಲೋಕೇಶ.

‘Fuck off..’ ಎಂದು ಖಾರವಾಗಿ ಪ್ರತಿಕ್ರಿಯಿಸಿದ ಆಕೆ ತನ್ನೊಟ್ಟಿಗೆ ಬಂದ ಯುವಕನ ಕೈ ಹಿಡಿದು ಎಳೆದುಕೊಂಡು ಹೊರಡತೊಡಗಿದಳು.

ಕೂಡಲೇ ಅಲ್ಲಿಗೆ ಬಂದ ಕ್ಲೀನರ್ ಹುಡುಗನನ್ನು ಕಣ್ ಸನ್ನೆಯಲ್ಲೇ ಶುಚಿಗೊಳಿಸದಂತೆ ಹೇಳಿದ ಲೋಕೇಶ,

'ಕ್ಲೀನ್ ಮಾಡೇ ಹೋಗ್ಬೇಕು.. ಇಲ್ಲ ಅಂದ್ರೆ ಇದೆ ಫೋಟೋನ ನ್ಯೂಸ್ ಪೇಪರ್ಸ್ ಗೆ ಹಾಕಿ ಮಾನ ತೆಗಿಬೇಕಾಗುತ್ತೆ..' ಎಂದು ಆತ ಅವರಿಬ್ಬರು ಕೂತು ತಿನ್ನುತ್ತಿದ್ದ ಹಾಗು ತಿಂದ ನಂತರದಲ್ಲಿ ಸೆರೆಹಿಡಿದಿದ್ದ ಫೋಟೋವನ್ನು ಕಾಣುವಂತೆ ತನ್ನ ಮೊಬೈಲಿನಲ್ಲಿ ಅವರಿಗೆ ತೋರಿಸುತ್ತಾನೆ. ಫೋಟೋವನ್ನು ಯಾವಾಗ ಅವರುಗಳು ಕಂಡರೋ ಕೊಂಚ ಹೊತ್ತು ಯೋಚಿಸುವಂತೆ ಮಾಡಿ ತಮ್ಮೆಲ್ಲ ಅಟ್ಟಿಟ್ಯೂಡನ್ನು ಬದಿಗಿಟ್ಟವರಂತೆ ಸಿಡುಕು ಮೊರೆಯಲ್ಲಿಯೇ ತಿಂದ ಅಷ್ಟೂ ವೆಸ್ಟನ್ನು ಪ್ಲೇಟ್ನ ಮೇಲಿರಿಸಿ ಅದನ್ನು ಪಕ್ಕದ ಡಸ್ಟ್ ಬಿನ್ನಿಗೆ ಸುರಿದು ಗೊಣಗಿಗೊಳ್ಳುತ್ತಾ ಅಲ್ಲಿಂದ ಜಾಗ ಕಿತ್ತರು.

ಅಲ್ಲಿಯವರೆಗೂ ನೆರೆದಿದ್ದ ಎಲ್ಲರೂ ಇತ್ತಕಡೆಯೇ ನೋಡುತ್ತಿದ್ದರು ಹಾಗು ಊಟವಾದ ನಂತರ ತಮ್ಮ್ ತಮ್ಮ ಪ್ಲೇಟಿನಲ್ಲಿದ್ದ ಮಿಕ್ಕ ಊಟವನ್ನು ಖುದ್ದು ತಾವಾಗಿಯೇ ಎತ್ತಿ ಕಸದ ಬುಟ್ಟಿಗೆ ಸುರಿದು ಬರತೊಡಗಿದರು.

'ನೋಡ್ದ ಮಚಿ.. ಎಲ್ಲದಕ್ಕೂ ಒಂದ್ ಟ್ರಿಕ್ ಇರುತ್ತೆ' ಎಂದ ಲೋಕೇಶ ನಮತ್ತ ನೋಡುತ್ತಾ ನಗತೊಡಗಿದ.

'ಏನೋ ಬಿಡಪ್ಪ.. ಆದ್ರೆ ನಿನ್ ಈ ಸೋಶಿಯಲ್ ರಿಫಾರ್ಮ್ ಅಲ್ಲಿ ಆ ಅಮಾಯಕ ಕ್ಲೀನರ್ ಬಾಯ್ ಕೆಲ್ಸ ಹೋಗ್ಬಾರ್ದು ಅಷ್ಟೇ' ಎಂದೇ ನಾನು.

'ಹಾಗೇನಾದ್ರೂ ಆದ್ರೆ ಇವ್ನ್ ಅಂಗಡಿ ಮುಚ್ಚ್ಸಲ್ವ..'

'ಹೌದು ಬಾರಪ್ಪ ರೌಡಿ ರಂಗಣ್ಣ.. ಬಿಟ್ರೆ ನೀನು ಕಾಲೇಜನ್ನೂ ಮುಚ್ಚುಸ್ತಿಯ' ಎಂದ ನಾನು ಹೊರಡಲು ಅಣಿಯಾದೆ.

ಎಲ್ಲಿ ತಮ್ಮ ಫೋಟೋವನ್ನೂ ನ್ಯೂಸ್ ಪೇಪರ್ಸ್ ಗೆ ಹಾಕಿ ಮಾನವನ್ನು ಹರಾಜು ಹಾಕುವನೋ ಎಂಬಂತೆ ಆದಿ ನಮ್ಮೆಲ್ಲರ ಪ್ಲೇಟ್ಗಳನ್ನೂ ಎತ್ತಿ ಬದಿಗಿಟ್ಟು ಟೇಬಲನ್ನು ಶುಚಿಗೊಳಿಸಿದ.

ಲೋಕೇಶ ಏನೋ ಮೊಬೈಲ್ನಲ್ಲಿ ಟೈಪ್ ಮಾಡುವಂತೆ ಮಾಡಿ ದೊಡ್ಡದಾದ ಮಂದಹಾಸವನ್ನು ಬೀರತೊಡಗಿದ.

'ಈಗ್ ಏನಾಯಿತೋ ತಂದೆ?' ನಾನು ಕೇಳಿದೆ.

'ಏನಿಲ್ಲ.. ಆ ಧಡೂತಿ ಜೋಡಿ ಫೋಟೋನ ಆರ್ಕುಟ್ ನಲ್ಲಿ ಅಪ್ಲೋಡ್ ಮಾಡ್ದೆ ಅಷ್ಟೇ'

'ಎಂಥ ಕುಟ್ಟು??' ಮೊದಲಬಾರಿಗೆ ಎಂಬಂತೆ ಕೇಳಿದ ವಿಚಿತ್ರ ಪದವನ್ನು ಮಗದೊಮ್ಮೆ ಕೇಳಿದೆ.

'ಒಂದು ಸೋಶಿಯಲ್ ನೆಟ್ವರ್ಕಿಂಗ್ ಸೈಟ್ .. ಅಲ್ಲಿ ನೂರಾರ್ ಜನ ಫ್ರೆಂಡ್ಸ್ ಗ್ರೂಪ್ಸ್ ಇರುತ್ತೆ .. ಕೆಲವ್ ತಿಂಗಳ ಮೊದಲಷ್ಟೇ ಲಾಂಚ್ ಆಗಿದ್ದು .. ನಮ್ ಕಾಲೇಜ್ ಗ್ರೂಪು ಅದ್ರಲ್ಲಿದೆ.. ಅದೇ ಒಂದು ಗ್ರೂಪಿಗೆ ಈ ಫೋಟೋ ಹಾಕಿ ಕಾಮೆಂಟ್ಸ್ ಬರ್ದಿದ್ದೀನಿ ..'

'ಲೋ ಯಾಕೋ ಇದೆಲ್ಲ.. ಅವ್ರ್ ಕ್ಲೀನ್ ಮಾಡಿ ಹೋದ್ರಲ್ಲ '

'ಹೌದು ಗುರು .. ಆದ್ರೆ ಏನ್ ಮಾಡೋದು, Fuck off ಅಂತ ಬೈದ್ಲಲ್ಲ ' ಎಂದ ಲೋಕೇಶ ವ್ಯಂಗ್ಯಭರಿತ ನಗುವನ್ನು ಬೀರಿದ.

Continues..

Saturday, July 4, 2020

ಪಯಣ - 10

ತಿಳಿದ ಮಟ್ಟಿನ ಕನ್ನಡ ವ್ಯಾಕರಣಗಳ ಜ್ಞಾನದಿಂದಲೇ ಕಾದಂಬರಿಯ ಓದಿನಲ್ಲಿ ಮಗ್ನಳಾಗಿದ್ದ ಅಮೇಲಿಗೆ ಬೆಂಬಿಡದೆ ಮೂಡುತ್ತಿದ್ದ ಮೊಬೈಲಿನ ಸದ್ದು ಎಚ್ಚರಿಸಿತು. ಅಷ್ಟರಲ್ಲಾಗಲೇ ನಾಲ್ಕೈದು ಬಾರಿ ಕಾಲನ್ನು ಡಿಸ್ಕನೆಕ್ಟ್ ಮಾಡಿದರೂ ಪುನ್ಹ ರಿಂಗಣಿಸುತ್ತಿದ್ದ ಫೋನನ್ನು ಸಿಟ್ಟಿನಿಂದ ಕೈಗೆತ್ತುಕೊಂಡು 'ಹಲೋ .. ಬಡ್ಡಿಮಗ್ನೆ .. ರಾತ್ರಿ ಆದ್ರೂ ಏನೋ ನಿಂದು ಪ್ರಾಬ್ಲಮ್ಮು' ಎಂದು ಚೀರಿದಳು. ಚೀರುವಿಕೆಯ ಆ ರಭಸಕ್ಕೆ ಆಕೆಯ ಮುಂಗೂದಲು ಗಾಳಿಯಲ್ಲಿ ಹಾರುತ್ತ ಕೆಳ ಬೀಳುತ್ತಿತ್ತು.

'ಒಹ್ .. ಮೈ .. ಗಾಡ್ .. ಏನೇ ಅಮೆಲಿ ಇಷ್ಟ್ ಚೆನ್ನಾಗಿ ಬೈಯೋದನ್ನ ಯಾವಾಗ ಕಲ್ತೆ..?' ಎಂದು ಅತ್ತಕಡೆಯಿಂದ ನಗುತ್ತ ಹೇಳಿದ ರಾಜ್. ದೂರದೂರಿನಲ್ಲಿ ಕನ್ನಡದ ಬೈಗುಳವೂ ಆತನಿಗೆ ಎಲ್ಲಿಲ್ಲದ ಸಂತೋಷವನ್ನು ನೀಡಿತಲ್ಲದೆ ಆಕೆ ಪುನಃ ಮತ್ತೇನಾದರೂ ಬೈಯಲಿ ಎಂದು ಕಾಯತೊಡಗಿದ.

'ರಾಜ್ .. ಡೋಂಟ್ ಟೆಸ್ಟ್ ಮೈ ಪೇಶೆನ್ಸ್ .. ಐಮ್ ರೀಡಿಂಗ್ ಎ ಕನ್ನಡ ನಾವೆಲ್ .. ಪ್ಲೀಸ್ ಲೀವ್ ಮೀ ಅಲೋನ್' ಎಂದು ಫೋನನ್ನು ಕಟ್ ಮಾಡಿ ತನ್ನ ಬೆಡ್ಡಿನ ಪಕ್ಕಕ್ಕೆ ಎಸೆದಳು. ಕೆಲ ಸೆಕಂಡುಗಳ ಒಳಗೆಯೇ ಪುನ್ಹ ರಿಂಗಣಿಸಿದ ಫೋನನ್ನು ಪುನಃ ಕೈಗೆತ್ತುಕೊಂಡು 'ರಾಜ್ .. ವಾಟ್ ಹೆಪ್ಪೆನ್ಡ್ .. ನಾಳೆ ಮಾತಾಡಿದ್ರೆ ಆಗೋಲ್ವಾ . ಪ್ಲೀಸ್..' ಎಂದು ಶಾಂತವಾಗಿಯೇ ಹೇಳಿದಳು. ಆಕೆ ಹಾಗೆಂದು ಇನ್ನೇನು ಫೋನನ್ನು ಬದಿಗೆಸೆಯಬೇಕು ಎನ್ನುವಷ್ಟರಲ್ಲಿ ರಾಜ್ ಮಾತನಾಡಿ,

'ಅಮಿ .. ಏನಿಲ್ಲ .. ಇಶಾ ಎಲ್ಲಿದ್ದಾಳೆ .. ಆಗಿಂದ ಫೋನ್ ಮಾಡ್ತಾ ಇದ್ದೀನಿ . ಪಿಕ್ ಮಾಡ್ತಾ ಇಲ್ಲ' ಎಂದು ಕೇಳಿದನು.

'ಅವ್ಳು ಕೃಷ್ಣನ ಟೆಂಪಲ್ಗೆ ಹೋಗಿದ್ದಾಳೆ..ಮೇ ಬಿ ಅಲ್ಲೇ ಇರ್ಬೇಕು..' ಎಂದು ಮುಂದೇನೋ ಕೇಳುವಷ್ಟರಲ್ಲಿಯೇ ಅತ್ತ ಕಡೆಯಿಂದ ಕಾಲ್ ಡಿಸ್ಕನೆಕ್ಟ್ ಟೋನ್ ಬರತೊಡಗಿತು. ಹೆಚ್ಚೇನೂ ತಲೆ ಕೆಡಿಸಿಕೊಳ್ಳದೆ ಆಮೇಲಿ ತನ್ನ ಓದಿನಲ್ಲಿ ಮುಂದುವರೆದಳು. ಆ ರಾತ್ರಿಯೇ ಅಷ್ಟೂ ಪುಟಗಳನ್ನು ಓದೇ ತೀರಬೇಕೆಂಬ ಅಧಮ್ಯ ಆಸೆಯಿಂದ.



*********************************************************************************



ಪುಟ 51

'ಯಾಕಪ್ಪ ಮರಿ .. ಏನ್ ಸಮಾಚಾರ .. ಊಟ , ತಿಂಡಿ , ನಿದ್ದೆ ಎಲ್ಲ ಸರಿಯಾಗ್ ಮಾಡ್ತಾ ಇಲ್ವಂತೆ.. ಏನ್ ವಿಷ್ಯ' ತನ್ನ ಸಹಜ ಮೂದಲಿಸುವ ಧ್ವನಿಯಲ್ಲಿ ರೂಮಿನೊಳಗೆ ಬರುತ್ತಾ ಕೇಳಿದ ಲೋಕೇಶ. ಪ್ರತ್ಯುತ್ತರವಾಗಿ ಆದಿ ಆತನನ್ನು ಒಂದೆರಡು ಕ್ಷಣ ಗುರಾಯಿಸಿ ಸುಮ್ಮನಾದ. ಹಾಡುಗಳ ಸಂತೆಯಲ್ಲಿ ನಾನು ನನ್ನದೇ ಲೋಕವೊಂದರಲ್ಲಿ ಮುಳುಗಿಹೋಗಿದ್ದೆ. ಶಾಂತವಾಗಿದ್ದ ರೂಮಿನ ಏಕಾಂತತೆಯನ್ನು ಲೊಕೇಶನ ಆಗಮನ ಅಲ್ಲೊಲ್ಲ ಕಲ್ಲೋಲ ಮಾಡಿತು. ಗದ್ದೆಯ ಕೆಸರು ಮೆತ್ತಿದ ಶೂ ಗಳು , ನಾತ ಭರಿತ ಆ ಸಾಕ್ಸ್ಗಳು, ಬಡಬಡನೆ ತನ್ಮಯತೆಗೆ ಭಂಗ ತರುವ ಆತನ ಮಾತುಗಳ ಸದ್ದು ಕೋಪದ ಅಗ್ನಿಗೆ ತುಪ್ಪವನ್ನು ಸುರಿದಂತೆ ಮಾಡಿದವು.

'ಹೋಗಿ ಕಾಲ್ ತೊಳ್ಕೊ ಬಾರೋ ಹಂದಿಮುಂಡೆಗಂಡ!!' ಇನ್ನೂ ಉಸಿರು ತಡೆಯಿಡಿಯಲಾರದೆ ನಾನು ಅರಚಿದೆ.

'ಹ್ಯಾಂಡಿ ಮೂನ್ ಡೇ ಗಾಂಡ.. ವಾಟ್ ಡಸ್ ಇಟ್ ಮೀನ್ ಮೈ ಬೇಬಿ' ಎಂದ ಆತ ನನ್ನ ತಬ್ಬಿಕೊಳ್ಳಲು ಮುಂದಾದ. ಅತಿ ಖುಷಿಯಾದಾಗ ಅಥವಾ ಬೇರ್ಯಾರೊ ದುಃಖದಲ್ಲಿದ್ದಾಗ ಆತನ ಈ ಬಗೆಯ ನಟನೆ ತೀರಾನೇ ಸಾಮಾನ್ಯ. ಕೂಡಲೇ ನಾನು ಕಾಲಿನಿಂದ ಆತನ ಎದೆಗೆ ದೊಪ್ಪನೆ ಗುದ್ದಿದೆ. ಅದರ ರಭಸಕ್ಕೆಆತ ಸಿನಿಮೀಯ ರೀತಿಯಲ್ಲಿ ನಟಿಸುತ್ತಾ ಆದಿಯ ಮೇಲೆರಗಿ ಬಿದ್ದ. ಆತ ಆದಿಯನ್ನು ತಬ್ಬಿ ಮುದ್ದಾಡುವಂತೆ ನಟಿಸಿದ. ಮೂಗನ್ನು ಸಾಧ್ಯವಾದಷ್ಟು ಮುಚ್ಚಿಕೊಳ್ಳುತ್ತ ನಾನು ನಗತೊಡಗಿದೆ. ಖುಷಿಯ ಮೆಸೇಜುಗಳ ಬರದಲ್ಲಿ ಅಲ್ಲಿಯವರೆಗೂ ದುಃಖದ ಕರಿಛಾಯೆಯನ್ನು ಮುಖದ ಮೇಲೆ ಹೊದ್ದಿಕೊಂಡಿದ್ದ ಆದಿ ಲೊಕೇಶನನ್ನು ಪಕ್ಕಕ್ಕೆ ತಳ್ಳಿ ಛಟಾರನೆ ಆತನ ಕೆನ್ನೆಯ ಮೇಲೊಂದು ಭಾರಿಸಿದ! ಕರೆಂಟು ಹೋದ ಟೀವಿಯಂತೆ ನನ್ನ ನಗು ಒಮ್ಮೆಲೇ ಕಾಣೆಯಾಯಿತು. ನೆನ್ನೆಯಷ್ಟೇ ಟೆರೇಸಿನ ಮೇಲೆ ಬಿದ್ದ ರಾಧಾರ ಹೊಡೆತವನ್ನು ಮರೆಯಲೆತ್ನಿಸುತ್ತಿದ್ದ ನೆನಪು ನನ್ನೊಳಗೆ ಮತ್ತೊಮ್ಮೆ ಮೂಡಿತು. ಕೈಗಳು ತಂತಾನೇ ನನ್ನ ಕೆನ್ನೆಯನ್ನು ಅವರಿಸಿದವು. ಕೋಣೆ ಎಲ್ಲಿಲ್ಲದ ಮಹಾ ಮೌನದಲ್ಲಿ ಲೀನವಾಯಿತು. ಅಷ್ಟರಲ್ಲಾಗಲೇ ಎಳೆಮಕ್ಕಳ ಮುಖದಂತೆ ಕೂಡಲೇ ರಂಗೇರಿದ ಲೊಕೇಶನ ಚಹರೆಗೆ ತತ್ಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲು ತೋಚಲಿಲ್ಲವೆಂದೆನಿಸುತ್ತದೆ.

'ಬಡ್ಡಿ ಮಗ್ನೆ .. ಅಮ್ಮ .. ಏನ್ ತಿಂತೀಯಾ ಮಾರಾಯ .. ಒಳ್ಳೆ ಸನ್ನಿ ಡಿಯೋಲ್ ಕೈ ತರ ಇದಾವಾಲೋ ಅವು' ಎಂದು ಮುಖವನ್ನು ಹಿಂಡಿಕೊಂಡು, ಕೆನ್ನೆಯನ್ನು ಒರೆಸಿಕೊಳ್ಳುತ್ತಾ ಹೇಳಿದ.

ಪ್ರತ್ಯುತರವಾಗಿ ಆದಿ ಏನನ್ನೂ ಉತ್ತರಿಸದೆ ಅಲ್ಲಿಂದ ಎದ್ದು ಹೊರನೆಡೆದ. ಏನಾಗಿದೆ ಎಂಬಂತೆ ಲೋಕೇಶ ಸನ್ನೆಯಲೇ ನನ್ನ ಕೇಳಿದ.

ಸಾಕ್ಸ್ಗಳ ದುರ್ವಾಸನೆ ಅದಾಗಲೇ ರೂಮನ್ನು ಪಸರಿಸಿ ನನ್ನ ಮೂಗನ್ನೂ ಅದಕ್ಕೆ ಒಗ್ಗಿಕೊಂಡಿದ್ದರಿಂದಲೋ ಏನೋ, ಏನೂ ಗೊತ್ತಿಲ್ಲವೆಂಬಂತೆ ನಾನು ತಲೆಯಾಡಿಸಿದೆ.



****



ಬಣ್ಣ ಬಣ್ಣದ ಹಣ್ಣುಗಳನ್ನು ಭಿನ್ನ ವಿಭಿನ್ನವಾಗಿ ಬೆರೆಸೆ, ಅದಕೊಂದಿಷ್ಟು ಬಗೆಬಗೆಯ ಪೌಡರುಗಳನ್ನು ಸೇರಿಸಿ, ಕಣ್ಣು ನಾಲಿಗೆ ಜೊತೆಗೆ ಮನಸ್ಸಿಗೂ ಮುದವನ್ನು ನೀಡುವ ಕಲಾಕೇಂದ್ರವೆಂದೇ ಪ್ರಸಿದ್ದಿ ಕಾಲೇಜಿನ ಪಕ್ಕದ ಈ ಜ್ಯೂಸ್ ಶಾಪು. ಚಿತ್ರಗಾರ ಬಳಸುವ ಕುಂಚದ ಬಣ್ಣಗಳಂತೆ ಬಗೆ ಬಗೆಯ ಹಣ್ಣುಗಳನ್ನು ಬೆರೆಸಿ ಮಾಡಿ ನೀಡುವ ಆ ಪಾನಕ ದ ಆ ಶಾಪು ಪಾಕೇಟು ಮನಿ ಕೈಸೇರಿದಾಗಲಷ್ಟೇ ಹೋಗಲು ಅರ್ಹತೆ ಪಡೆಯುವ ಜಾಗವಾಗಿದ್ದಿತು. ಇಂದು ಬೆಳಗಿನ ಮೊದಲ ಘಂಟೆಗೇ ಚಚ್ಚಿ ಹೊಡೆಯುತ್ತಿದ್ದ ನಿದ್ರೆಯ ಜೋಂಪನ್ನು ಚಚ್ಚಿ ಹೊಡೆಯಲು ಲೋಕೇಶ ನನ್ನನ್ನು ಇಲ್ಲಿಗೆ ಕರೆತಂದ ಎಂಬ ನನ್ನ ಯೋಚನೆ ಸುಳ್ಳಾಯಿತು.

‘Oh god, are you Serious dude?!’ ಕುಡಿಯುತ್ತಿದ್ದ ಜ್ಯೂಸಿನ ಗುಟುಕು ನತ್ತಿಗೇರುವಂತೆ ನಾನು ಅರಚಿದೆ.

'ನಿಧಾನಕ್ಕೋ ಮಾರಾಯ .. ಅದೇನ್ ಒಳ್ಳೆ ಜೀವ ಹೋದರಾಗೆ ಆಡ್ತೀಯ..' ಅತ್ಯಂತ ಶಾಂತ ಪದಗಳಲ್ಲಿ ಹೇಳಿದ ಲೋಕೇಶ ಆತ ತನ್ನ ಮುಂದಿದ್ದ ಜ್ಯೂಸನ್ನು ಸ್ಟ್ರೇ ಮೂಲಕ ಗೋಲಾಕಾರದಲ್ಲಿ ತಿರುಗಿಸತೊಡಗಿದ.

'ಮಗ್ನೆ, ಸುಮ್ನೆ ಬಾಯಿಗ್ ಬಂದಾಗೇ ಮಾತಾಡ್ಬೇಡ..ನಿಜ ಹೇಳು.. Are you fucking serious ?!'

'Yes I do..' ಅತಿ ಗಂಭೀರವಾದ ಧ್ವನಿಯಲ್ಲಿ ಆತ ನುಡಿದ.

ಕೂಡಲೇ ಏನೇಳಬೇಕೆಂದು ತಿಳಿಯದೆ ಕೊಂಚ ಸುಮ್ಮನಾದ ನಾನು,

'ಮಚಿ.. ನಂಗೊತ್ತು. ಈ ಬ್ಯುಟಿ, ಬಾಡಿ, ಕಲ್ಲರು ಮತ್ತೊಂದು ಮಗದೊಂದು ಎಲ್ಲ ಟೈಮ್ ಪಾಸ್ ಆದಹಾಗೆ ಸುಕ್ಕುಗಟ್ಟಿ ಹೋಗೋ ವಿಷಯಗಳು ಅಂತ .. But in practicle, I mean.. No! its not possible at all .. ಸುಮ್ನೆ ಆಟ ಆಡ್ಬೇಡ, ನಿಜ ಹೇಳು..Do you really love her..?' ಸಾಧ್ಯವಾದಷ್ಟು ಸ್ಥಿತಪ್ರಜ್ಞೆಯನ್ನು ಕಾಪಾಡಿಕೊಂಡು ನಾನು ಬಡಬಡಿಸಿದೆ.

'ನೋಡಪ್ಪ .. ನಂದು ಏನಿದ್ರೂ ಸ್ಟ್ರೇಟ್ ಫಾರ್ವರ್ಡ್ ಥಿಂಗ್ಸ್ .. ನಾನು ಶಶಿನ ಮೀಟ್ ಮಾಡೋಕ್ಕೆ ಶುರು ಮಾಡಿದ್ದು ಉಷಾನ ಅವಾಯ್ಡ್ ಮಾಡೋಕ್ಕೇ ಇರ್ಬಹುದು. ಮೊದ್ಲೆಲ್ಲಾ ಸುಮ್ನೆ ಟೈಮ್ ಪಾಸ್ ಅಂತ ಕ್ಯಾಂಟೀನು ಅಲ್ಲಿ ಇಲ್ಲಿ ಸಿಗ್ತಾ ಇದ್ದೆ. ಆದ್ರೆ ದಿನಾ ಹೋದಂತೆ ತಿಳೀತು ಆಕೆ ಅದೆಂತ ಅದ್ಭುತ ಹುಡ್ಗಿ ಅಂತ. ಮಚಿ, ನಿಮ್ಗ್ಯಾರಿಗೂ ಗೊತ್ತಿಲ್ಲ ಆಕೆ ಕಾಲೇಜ್ ಮುಗ್ಸಿ ಬೇಗ ಮನೆಗ್ ಹೋಗಿ ಅಡಿಗೆ ಮಾಡಿಟ್ಟು ಸೀದಾ ಬಿಪಿಓ ಒಂದಕ್ಕೆ ಹೋಗ್ತಾಳೆ. ಅಲ್ಲಿ ರಾತ್ರಿ ಹನ್ನೊಂದ್ ಘಂಟೆ ತನ್ಕ ಕೆಲ್ಸ ಮಾಡ್ತಾಳೆ.. ಆಮೇಲೆ ಬಂದು ಮತ್ತೆ ಓದಿ ಬೆಳಗ್ಗೆ ಆರಕ್ಕೆ ಎದ್ದು ತಿಂಡೀ ಊಟ ಮಾಡಿಟ್ಟು ಕಾಲೇಜಿಗೆ ಬರ್ತಾಳೆ. ಅಷ್ಟೆಲ್ಲ ಕಷ್ಟ ಪಟ್ಟೂ ಆಕೆ ಕ್ಲಾಸಿಗೆ ಫಸ್ಟ್ ಬರ್ತಾಳೆ ಯು ನೋ.. ' ಎಂದು ಆಕೆಯ ದಿನಚರಿಯನ್ನು ಅಚ್ಚುಗಟ್ಟಾಗಿ ಬಾಯಿಪಾಠ ಮಾಡಿಕೊಂಡವನಂತೆ ಹೇಳಿದ.

'ಒಂದ್ ನಿಮಿಷ ' ಎಂದು ನಾನು ಆತನನ್ನು ಅಲ್ಲಿಗೇ ತಡೆದು 'ಕಾಲೇಜ್ ಓಕೆ, ಬಿಪಿಒನೂ ಓಕೆ.. ಅಲ್ಲ ತಿಂಡಿ ಊಟ ಎಲ್ಲ ಮಾಡೋಕ್ಕೆ ಅವ್ರ್ ಮನೇಲಿ ಬೇರೆ ಯಾರು ಮನುಷ್ರೆ ಇಲ್ವಾ?' ಸಂಶಯದ ದೃಷ್ಟಿಯಿಂದ ನಾನು ಕೇಳಿದೆ.

'ಅಪ್ಪ ಒಬ್ರೇ ಮಚಿ.. ಅಮ್ಮ ಇಲ್ಲ.. ಅಪ್ಪನೂ ಪಾರ್ಶ್ವವಾಯು ಬಂದು ಬೆಡ್ಡಲ್ಲೇ ಯಾವಾಗ್ಲೂ' ಎಂದ ಲೋಕೇಶ ತನ್ನ ತಲೆಯನ್ನು ತಗ್ಗಿಸಿದ.

ನಾನು ಸುಮ್ಮನ್ನಿದ್ದೆ.

ಆತನೇ ಮುಂದುವರೆಸಿ,

'ಜೀವನ ಯಾರನ್ನು ಇಷ್ಟ್ ಕಾಡಬಾರ್ದು ಮಚಿ.. ಕೈಲಾಗದ ಅಪ್ಪ, ಹತ್ತಿರಕ್ಕೆ ಸುಳಿಯದ ನೆಂಟರಿಷ್ಟರು, ಒಬ್ಳೆ ಹುಡ್ಗಿ. ಓದು, ಜೀವನ, ಕನಸ್ಸು, ಕಷ್ಟ, ಜಿಗುಪ್ಸೆ, ಅಸಹಾಯಕತೆ, ಇವೆಲ್ಲದರ ಜೊತೆಗೆ ಅಮ್ಮನ ನೆನಪು.. ಅದೇಗೆ ಅವೆಲ್ಲನ ಸಹಿಸ್ಕೊಂಡು ಇರ್ತಾಳೋ ನಂಗಂತೂ ತಿಳಿಯಲ್ಲ.. ಬಟ್ ಇಷ್ಟೆಲ್ಲಾ ಇದ್ರೂ ಅವ್ಳ್ ಯಾವತ್ತಾದ್ರೂ ಬೇಜಾರು ಮಾಡ್ಕೊಂಡಿರೋದಾಗ್ಲಿ, ಅಳ್ತಾ ಇರೋದಾಗಲಿ ನೋಡಿದ್ದೀಯಾ? ಎಲ್ಲೂ ಇಲ್ಲದ ಒಂದು ಸ್ಮೈಲ್ ಯಾವಾಗಲೂ ಅವ್ಳ ಫೇಸ್ ಮೇಲೆ ನಲಿತ ಇರುತ್ತೆ.. ನಿಜವಾಗಲು ಹೇಳ್ಬೇಕಂದ್ರೆ ನಂಗೆ ಆಕೆ ಇಷ್ಟ ಆಗಿದ್ದು ಅದೇ ಚಾರ್ಮಿಂಗ್ ಅಂಡ್ ಇನ್ಸ್ಪಿರೇಷನಲ್ ಸ್ಮೈಲ್ ನಿಂದ. ಅವ್ಳ ಬಣ್ಣ, ಬ್ಯೂಟಿ ಎಲ್ಲ ಅವ್ಳ್ ಪಡ್ಕೊ ಬಂದಿರೋ ಥಿಂಗ್ಸ್ ಅಲ್ಲ.. ಒಂದ್ ಪಕ್ಷ ಅವುನ್ನ ಇಲ್ಲೇ ಏನಾದ್ರು ಗಳಿಸೋದಾಗಿದ್ರೆ ಇವ್ಳು ಅದೆಷ್ಟು ಗಳಿಸ್ತಾ ಇದ್ಲು ಅಂದ್ರೆ ರಂಭೆ ಊರ್ವಶಿ ಎಲ್ಲರೂ ಇವಳ ಕಾಲ್ ಧೂಳಿಗೆ ಸಮ ಆಗ್ತಾ ಇದ್ರು..’ಎಂದು ಸುಮ್ಮನಾದ.

ಹತ್ತಾರು ಯೋಚನೆಗಳು ಅದಾಗಲೇ ನನ್ನ ತಲೆಯನ್ನು ಸುತ್ತಲಾರಂಬಿಸಿದವು.

ನಿಷ್ಕಲ್ಮಶ ಪ್ರೀತಿ ಎಂದರೆ ಇದೆಯೇ?

ಕಾಲೇಜಿನ ಯಾವೊಬ್ಬ ಹುಡುಗನೂ ಕಣ್ಣೆತ್ತಿ ನೋಡದ ಹುಡುಗಿಯೊಬ್ಬಳನ್ನು ತಾನು ಮನಸ್ಸು ಮಾಡಿದರೆ ಯಾವ ಹುಡುಗಿಯನ್ನೂ ಬೀಳಿಸಿಕೊಳ್ಳಬಲ್ಲೆ ಎಂಬ ಹುಡುಗನೊಬ್ಬ ಇಷ್ಟ ಪಡುವುದೆಂದರೆ ತೀರಾ ಸಾಮನ್ಯವಾದ ಮಾತಲ್ಲ. ಪ್ರೀತಿ ಹೀಗೂ ಚಿಗುರಬಹುದೇ ಎಂದನಿಸಿತು ನನಗೆ. ಲೋಕೇಶನ ರೂಪದಲ್ಲಿ ಘನ ವ್ಯಕ್ತಿತ್ವವೊಂದು ನನ್ನ ಕುರಿತು ಮಾತಾಡಿದಂತೆ ಭಾಸವಾಯಿತು.

ಕೂಡಲೇ ಗ್ಲಾಸಿನಲ್ಲಿದ್ದ ಜ್ಯೂಸನ್ನು ಅರ್ಧಕ್ಕೆ ಬಿಟ್ಟು, ಲೋಕೇಶ ಏನೋ ಹೇಳುತ್ತಿರುದನ್ನೂ ಆಲಿಸದೆ ಅಲ್ಲಿಂದ ಎದ್ದು ಟೆರೇಸಿನ ಮೇಲೆ ಹೋದೆ. ದೂರದ ಬೃಹತ್ ಬೆಟ್ಟವನ್ನು ಧಿಟ್ಟಿಸುತ್ತ ಹಲವು ನಿಮಿಷಗಳ ಕಾಲ ಕಲ್ಲಿನಂತೆ ನಿಂತೇ.

ಅದೆಷ್ಟೋ ಸಮಯದ ನಂತರ ಮನಸ್ಸು ಹಗುರಾಯಿತು.



****



'ಮಂತ್ ಎಂಡ್' ಎಂಬ ಕಷ್ಟಗಾಲದ ದಿನಗಳಲ್ಲೂ ಹೇಗೋ ಚಿಲ್ಲರೆ ಕಾಸನ್ನು ಹೊಂದಿಸಿ ನಮಗಾಗಿ ಬಿಯರ್ ಹಾಗು ರಸ್ತೆಬದಿಯ ಖಾರವಪ್ಪರಿಸಿದ ಮೀನಿನ ಫ್ರೈ ಗಳನ್ನು ಬಾಳೆಯೆಲೆಯಲ್ಲಿ ಕಟ್ಟಿಸಿಕೊಂಡು ಬಂದು 'cheer....!' ಎಂದ ಲೋಕೇಶ ಗಟಗಟನೆ ಒಮ್ಮೆಲೇ ಅರ್ಧಬಾಟಲಿಯ ಪೇಯವನ್ನು ಮುಗಿಸಿಹಾಕಿದ. ಉಷಾಳ ಮನೆ ಎಂದು ಆ ದಿನ ನೆಡೆದಿದ್ದ ಕರ್ಮಕಾಂಡದ ನಂತರ ಯಾರೊಬ್ಬರೂ ಬಿಯರ್ ಒಂದನ್ನು ಬಿಟ್ಟು ಬೇರೇನನ್ನೂ ಮುಟ್ಟುತ್ತಿರಲಿಲ್ಲ. ಅದೂ ಸಹ ನಾವು ಮಾಡುತ್ತಿರುವುದು ಯಾವುದೊ ಒಂದು ಪಾಪದ ಕೆಲಸವೆಂಬ ತಪ್ಪಿತಸ್ಥ ಭಾವನೆಯಿಂದ!

ಲೊಕೇಶನ ಆ ಭೀಮವರ್ತನೆಗೆ ಬೆರಗಾಗಿಯೇನೋ ಎಂಬಂತೆ ಆದಿ ತನ್ನ ಮೊದಲ ಸಿಪ್ಪನ್ನು ಕುಡಿಯಬೇಕೋ ಬೇಡವೋ ಎಂಬಂತೆ ನೋಡಹತ್ತಿದ್ದ. ಮೋಡದ ಕುರುಹುಗಳಿಲ್ಲದ ಎಲ್ಲೆಂದರಲ್ಲಿ ನಕ್ಷತ್ರಗಳೇ ಮಿನುಗುತ್ತಿರುವ ಸ್ವಚ್ಛಂದ ಆಗಸದ ನೀರವ ಮೌನದೊಟ್ಟಿಗೆ ಆಗೊಮ್ಮೆ ಹೀಗೊಮ್ಮೆ ಬೀಸುವ ತಂಗಾಳಿ ಟೆರೇಸಿನ ವಾತಾವರಣವನ್ನು ಮೋಹಕವಾಗಿಸುತ್ತಿತ್ತು. ಲೋಕೇಶ ಕೂಡಲೇ ರೂಮಿಗೆ ಹೋಗಿ ಟ್ರೆಕಿಂಗ್ಗೆ ಹೋದಾಗ ಬೇಕಾಗುತ್ತದೆಯೆಂದು ತಂದಿದ್ದ ಕೆಂಡದ ಒಲೆಯನ್ನು ಜೊತೆಗೆ ಒಂದಿಷ್ಟು ಇದ್ದಿಲನ್ನು ಹೊತ್ತು ತಂದು ಕಬ್ಬಿಣದ ಆ ಒಲೆಯೊಳಗೆ ಅವುಗಳನ್ನು ಸುರಿದು ನಿಧಾನವಾಗಿ ಬೆಂಕಿಯತ್ತಿಸಿದ. ನೋಡನೋಡುತ್ತಿದ್ದಂತೆ ಕಪ್ಪುಬಣ್ಣದ ಇದ್ದಿಲ ಪುಡಿಗಳು ಸುಂದರವಾದ ಕೆಂಪುಬಣ್ಣದಕ್ಕೆ ತಿರುಗಿ ಉರಿಯತೊಡಗಿದವು. ಬೆಚ್ಚನೆಯ ಬಿಸಿಗೆ ರುಚಿಯೇರಿಸುವ ತಣ್ಣನೆಯ ಬೀಯರು ಹಾಗು ಖಾರವಾದ ಮೀನಿನ ಫ್ರೈ ಹೇಳಿಮಾಡಿಸಿದಂತೆ ಒಗ್ಗಿಕೊಂಡವು. ಲೋಕೇಶ ಎಂದಿನಂತೆ ಶರವೇಗದ ಮಾತುಗಳನ್ನು ಒಂದರಿಂದೊಂದು ಹರಿಯಬಿಡುತ್ತಿದ್ದರೆ ಇತ್ತ ಕಡೆ ಆದಿ ಖುಷಿಯ ನೆನಪಿನಲ್ಲಿ ತನ್ನ ಜೋಲು ಮುಖವನ್ನು ಇಳಿಬಿಟ್ಟು ಅಷ್ಟೇನೂ ಮಾತನಾಡದೆ ಸುಮ್ಮನಿದ್ದ. ನಾನಾಗಲಿ ಅಥವಾ ಲೊಕೇಶನಾಗಲಿ ಆತನನ್ನು ಕೆಣಕುವ ಗೋಜಿಗೆ ಹೋಗಲಿಲ್ಲ.

ಕೆಲಸಮಯದ ನಂತರ ತನ್ನ ದಿನದ ರೂಟೀನನ್ನು ಪೂರ್ಣಗೊಳಿಸಲೆಂಬಂತೆ ಲೋಕೇಶನೂ ಶಶಿಯ ನಂಬರಿಗೆ ಫೋನಾಯಿಸಿ ಬ್ಯುಸಿಯಾದರೆ, ಆದಿ ನಿದ್ರೆಬರುತ್ತಿದೆ ಎಂಬ ಸುಳ್ಳು ಸಬೂಬನ್ನು ನೀಡಿ ಅಲ್ಲಿಂದ ಎದ್ದು ರೂಮಿಗೆ ನೆಡೆದ. ತಾನು ಖುಷಿಯೊಟ್ಟಿಗೆ ಆಡಿರುವ ಮಾತುಗಳನ್ನು ತನ್ನ ಮೊಬೈಲಿನ ಚಾಟ್ ಹಿಸ್ಟರಿಗೆ ಹೋಗಿ ಓದುತ್ತಾ ದುಃಖಿಸುತ್ತಾ ಕೂರುವನು ಎಂಬುದು ತಿಳಿದಿದ್ದರೂ ನಾನು ಆತನನ್ನು ತಡೆಯಲಿಲ್ಲ.

ಪಂಪುಹುಳದ ದೇಹದಂತೆ ಪ್ರಕಾಶಮಾನವಾಗಿ ಮಿನುಗಿ ಮತ್ತೆ ಕಪ್ಪಾಗುತ್ತಿದ್ದ ಕೆಂಡವನ್ನು ನೊಡುತ್ತಾ ಕಳೆದುಹೋದ ನನಗೆ ಯಾಕೋ ನೂರಾರು ವರ್ಷಗಳ ಹಿಂದಕ್ಕೆ ಯೋಚನಾಲಹರಿಯನ್ನು ಹೊತ್ತೊಯ್ಯಲು ಮನಸ್ಸಾಯಿತು!

ಸಂಬಂಧಗಳು ಅದೆಷ್ಟು ನಶ್ವರ? ಕಾಲವೆಂಬ ಸಾರ್ವಕಾಲಿಕ ಸತ್ಯ ಈ ಜಗತ್ತಿನಲ್ಲಿ ಏನನ್ನೂ ಶಾಶ್ವತವಾಗಿ ನೆಲೆಯೂರಲು ಬಿಡದು. ಕುಡಿದ ಮೇಲೆ ಪ್ರತಿಯೊಬ್ಬರೂ ನಮ್ಮ ಸಂಬಂಧಿಗಳೇ ಆಗುತ್ತಾರೆ. ಇನ್ನು ನಿಜ ಸಂಬಂಧಿಗಳಂತೂ ಒಡಹುಟ್ಟಿದವರೇನೋ ಎಂಬಂತೆ ಭಾಸವಾಗುತ್ತಾರೆ. ಅವರುಗಳು ಪಕ್ಕದಲ್ಲಿ ಕೂತು ಲೋಕಾಭಿರಾಮದ ಮಾತನ್ನು ಆಡುತ್ತಾ ಹೋದರೆ ಎಲ್ಲವೂ ಸ್ವಚ್ಛಂದವಾಗಿ ಕಾಣುತ್ತದೆ. ಅವರ ಸುಳ್ಳೂ ಸುಳ್ಳೆನಿಸುವುದಿಲ್ಲ. ಬಹುಶಃ ಕುಡಿದಾಗ ಅವರು ಸುಳ್ಳನೆ ಹೇಳದಿರಬಹುದು! ಅತ್ತರೆ ಅವರೊಟ್ಟಿಗೆ ಗಳಗಳನೆ ಅತ್ತುಬಿಡುವ, ನಕ್ಕರೆ ಅವರೊಟ್ಟಿಗೆ ನಲಿದುಬಿಡುವ, ದ್ವೇಷ, ಅಸೂಹೆ, ನಾಚಿಕೆ, ಸಂಶಯಗಳಿಲ್ಲದ ಈ ಅಮಲಿನ ಘಳಿಗೆ ಅದೆಷ್ಟು ಚೆಂದ?! ಭಾವ ಮೈಧುನ, ಮಾವ ಅಳಿಯ, ಕೆಲವೊಮ್ಮೆ ಅಣ್ಣ ತಮ್ಮಂದಿರೂ ಕೂತು ಹೀಗೆ ಒಟ್ಟಿಗೆ ಕುಡಿದು ಕಾಲದ ಮೂಸೆಯಲ್ಲಿ ಅದೆಷ್ಟು ಭಾರಿ ನಲಿದು, ಕುಣಿದು ಮರೆಯಾಗಿರಬಹದುದು?

ನೂರು ವರ್ಷದ ಹಿಂದಿನ ನನ್ನ ಹಿರಿಕರು ಯಾಕಿಂದು ನೆನಪಾಗುತ್ತಿದ್ದಾರೆ?

ದಿನವಿಡಿ ಗದ್ದೆ ತೋಟಗಳಲ್ಲಿ ದುಡಿದು, ದಣಿದು ಸಂಜೆಯಪ್ಪುವ ವೇಳೆಗೆ ತವರಿಗೆ ಹೋಗಿರುವ ಮಡದಿಯನ್ನು ನೋಡಲು ಲೈಟು ಟಾರ್ಚುಗಳಿಲ್ಲದ ಕಗ್ಗತ್ತಲೆಯ ಸಾಗರದಲ್ಲಿಯೆ ದಾರಿಯ ಗುರುತಿಡಿದು, ಹೊರಟು , ದಾರಿಯಲ್ಲಿ ಸಿಕ್ಕ ಬೈನೆ ಸೇಂದಿಯನ್ನು ಬಿದಿರಿನ ಒಳ್ಳೆಯೊಳಗೆ ಸುರಿಸಿಕೊಂಡು, ಪಕ್ಕದ ಗೂಡಂಗಡಿಯಲ್ಲಿ ಮಡದಿಗೆಂದು ಒಂದಿಷ್ಟು ಸಿಹಿತಿಂಡಿಗಳನ್ನು ಕಟ್ಟಿಸಿ ತನ್ನ ಕೋಟಿನ ಜೇಬಿನೊಳಗಿಟ್ಟು, ಅಲ್ಲಿಯವರೆಗೂ ಹಿಂಬಾಲಿಸಿಕೊಂಡು ಬರುತ್ತಿದ್ದ ನಾಯಿಯನ್ನು ಕಲ್ಲಿನಿಂದ ಹೊಡೆದು ದೂರಕ್ಕೆ ಓಡಿಸಿ ಬಿರಬಿರನೆ ನೆಡೆಯಹತ್ತಿ, ತುಸು ದೂರ ಸಾಗುತ್ತಿದ್ದಂತೆ ಹಿಂದಿನಿಂದ ಪುನ್ಹ ಏನೋ ನೆಡೆದುಕೊಂಡು ಬರುತ್ತಿರುವ ಸದ್ದಾಗುವುದನ್ನು ಆಲಿಸಿ ಅಲ್ಲಿಯೇ ನಿಂತು ಹೆಗಲ ಮೇಲಿದ್ದ ತಾಮ್ರದ ಹುಲಿಗುರುತಿನ ಕೇಪಿನ ಕೋವಿಯ ಕುದುರೆಯನ್ನು ಮೇಲೇರಿಸಿ , ಮೂಡುತ್ತಿದ್ದ ಶಬ್ದವನ್ನು ಕಿವಿಗೊಟ್ಟು ಕೇಳಿ ಅದು ತಮ್ಮ ಮನೆಯ ಕರಿಯ ನಾಯಿ ಎಂದು ತಿಳಿದು 'ಕರಿಯ!! ನಿನ್ ಜಾತಿಗ್ ನನ್ ಮೆಟ್ ಹೊಡ್ಯ..! ದಾರಿ ಮೂಸ್ಕೊಂಡೆ ಬಂತು ನೋಡ್ ಬೇವರ್ಸಿ ಮುಂಡೇದು' ಎಂದು ಅರಚಿದ ಕೂಡಲೇ ಬಾಲ ಅಲ್ಲಾಡಿಸಿಕೊಂಡು ಕುಯ್ ಗುಡುತ್ತಾ ಬರುವ ನಾಯಿಗೆ ಕೈಗೆ ಸಿಕ್ಕ ಏನಾದರೊಂದರಿಂದ ಹೊಡೆದು, ಮತ್ತೊಮ್ಮೆ ಬೈದು, ಬೆಂಬಿಡದ ಅದನ್ನು ಕಂಡು ಕೊನೆಗೆ ಬಂದರೆ ಬರಲಿ ಎನುತ ಮಾವನ ಮನೆಗೆ ಜೊತೆಗಾರನಾಗಿ ಕರೆದುಕೊಂಡು ಹೋಗುತ್ತಿದ್ದ ಹಿರಿಯಳಿಯ!

ಹೊಲಗೇರಿಯ ಕೆಂಚ ನೆನ್ನೆಯಷ್ಟೇ ಅಳಿಯ ಬರುವ ಸುದ್ದಿಯನ್ನು ಮಾವನಿಗೆ ಹೇಳಿದ ಕೂಡಲೇ ಹುರಿದ ಕಾಡಂದಿ ಮಾಂಸ ಹಾಗು ಮನೆಕೋಳಿಯ ಬಾಡೂಟವನ್ನು ಅವರು ಏರ್ಪಡಿಸಿದ್ದರು. ಸಂಜೆಯಿಂದ ಕಾದು ಕಾದು ಕೊನೆಗೆ ದೂರದಲ್ಲಿ ನಾಯಿಗಳು ಬೊಗಳುವ ಸದ್ದನ್ನು ಕೇಳಿ ಕೆಂಚನನ್ನು ಕೂಗಿ ಕರೆದು ಬೆಳಕಿನ ಪಂಜನ್ನು ಮಾಡಿಕೊಂಡು ಅಳಿಯರನ್ನು ಬರಮಾಡಿಕೊಳ್ಳಲು ತಾವೂ ಹೊರಟುಬಿಟ್ಟರು. ಊರಿನ ನಾಯಿಗಳು ಅದಾಗಲೇ ತಮ್ಮ ವಲಯಕ್ಕೆ ಬಂದಿರುವ ಅಳಿಯನ ಏಕೈಕ ನಾಯಿಯ ಮೇಲೆ ಆಕ್ರಮಣವನ್ನು ಘೋಷಿಸಿದ್ದವು. ಮಾವನ ಊರಿನ ನಾಯಿಗಳ ಕಾಟಕ್ಕೆ ತಮ್ಮ ಮನೆಯ ಕರಿಯನೇ ಕಾರಣವೆಂದು ಅದಕ್ಕೆ ಬೈಯುತ್ತಾ, ಶಪಿಸುತ್ತಾ ಇತರೆ ನಾಯಿಗಳಿಂದ ರಕ್ಷಿಸಿಕೊಳ್ಳುತ್ತಾ ಬರುತ್ತಿದ್ದ ಅಳಿಯನನ್ನು ಮಾವಯ್ಯ ಕೊನೆಗೂ ಬರಮಾಡಿಕೊಂಡು, ಯೋಗಕ್ಷೇಮ ಹಾಗು ಮಳೆ ಬೆಳೆಯನ್ನು ಕೇಳಿ ಊರಿನ ನಾಯಿಗಳನ್ನು ಗದರಿಸಿ ಅಲ್ಲಿಂದ ಮನೆಯೆ ಹಾದಿಯನ್ನು ಹಿಡಿಯುತ್ತಿದ್ದರು. ಮನೆಯ ಬಾಗಿಲಲ್ಲೇ ಬಿಂದಿಗೆ ನೀರನ್ನಿಡಿದು ಕಾಯುತ್ತಿದ್ದ ಆತ್ತೆ ಹಾಗು ಮಗಳನ್ನು ಕಂಡು ಊರಿಂದ ತಂದ ಭತ್ತ, ಬೇಳೆ, ತರಕಾರಿ ಹಾಗು ಸಿಹಿತಿಂಡಿಗಳನ್ನು ನೀಡಿ, ಬಿಂದಿಗೆಯ ಬೆಚ್ಚನೆಯ ನೀರನ್ನು ಕಾಲುಗಳ ಮೇಲೆ ಹೊಯ್ದುಕೊಂಡು ಮನೆಯೊಳಗೇ ಹೋಗುತ್ತಿದ್ದ ಅಳಿಯ. ಕೆಂಚ ದೂರದೂರಿನ ನಾಯಿಯನ್ನು ಮಕ್ಕಳಂತೆ ಮುದ್ದಿಸುತ್ತಾ ಅಲ್ಲಿಯೇ ಜಗಲಿಯಲ್ಲಿ ಕೂರುತ್ತಿದ್ದ. ಒಂದು ಪಕ್ಷ ಒಡೆಯ ಬಂದು ಹೋಗೆಂದರೂ ಆತ ಅಲ್ಲಿಂದ ಕದಲುತ್ತಿರಲಿಲ್ಲ. ಕಾರಣ ಹಿರಿಮನೆಯ ಬಾಡೂಟದ ಜೊತೆಗೆ ಅಳಿಯರ ಹೆಗಲಿಗೆ ತಗಲಾಕಿಕೊಂಡಿದ್ದ ಸೇಂದಿಯ ಒಳ್ಳೆ! ಅಳಿಯ ಮಡದಿಯ ಕೋಣೆಗೆ ಹೋಗಿ ಒಂದರೆನಿಮಿಷ ತಮಾಷೆಯ ಮಾತನಾಡಿ ತನ್ನ ಕೋಟಿನ ಒಳಗಿಟ್ಟಿದ್ದ ಮಲ್ಲಿಗೆ ಹೂವಿನ ಹಾರವನ್ನು ತೆಗೆದು ಅವಳ ಕೈಯ ಮೇಲಿಟ್ಟು ಅಲ್ಲಿಂದ ಹೊರನೆಡೆದ. ಸಂತೋಷಗೊಂಡ ಮಡದಿ ಎಲ್ಲಿ ಅದರ ಘಮ ಪಸರಿಸಿ ಯಾರು ಏನೆಂದು ಕೇಳುವರೋ ಎಂಬ ನಾಚಿಕೆಯಲ್ಲಿ ಕೊಡಲೇ ತನ್ನ ಕಬ್ಬಿಣದ ಪೆಟ್ಟಿಗೆಯೊಳಕ್ಕೆ ಅದನ್ನು ಹಾಕಿ ಬೀಗವನ್ನು ಹಾಕುತ್ತಾಳೆ.

ಹಂದಿ ಮಾಂಸವನ್ನು ಮನೆಯೊಳಗೆ ತಾರದ ಕಾರಣ ಮನೆಯೋರಗಡೆಯ ಒಲೆಯ ಮುಂದೆ ಕುಳಿತರು ಶತಮಾನದ ಹಿಂದಿನ ಮಾವ ಹಾಗು ಅಳಿಯ. ಮಾವ ಮನೆಯಲ್ಲೇ ಮಾಡಿದ ಕಳ್ಳಭಟ್ಟಿಯ ಬಾಟಲಿಯನ್ನು ಕುಸ್ತಿ ಪಂದ್ಯದಲ್ಲಿ ಗೆದ್ದ ಪ್ರಶಸ್ತಿಯಂತೆ ತಂದರೆ ಅಳಿಯ ಹಾದಿಯಲ್ಲಿ ಕಟ್ಟಿಸಿಕೊಂಡು ತಂದಿದ್ದ ಹುಳಿ ಸೇಂದಿಯನ್ನು ಹೊರತೆಗೆದ. ಮನೆಯಾಕೆ ಕಡುಗಪ್ಪುಬಣ್ಣದ ಹುರಿದ ಹಂದಿಯ ತುಂಡುಗಳು, ನಾಟಿ ಕೋಳಿಯ ಸಾರು ಹಾಗು ಕಂಚಿಹಣ್ಣಿನ ಕೆಂಬಣ್ಣದ ಉಪ್ಪಿನಕಾಯಿಯನ್ನು ತಂದಿಟ್ಟು ಜೊತೆಗೆ ಒಲೆಯ ಪಕ್ಕದ ಗೋಡೆಯ ಮೇಲಕ್ಕೆ ನೇತಾಕಿದ್ದ ಲೋಟ ಹಾಗು ತಟ್ಟೆಯನ್ನೂ ತೆಗೆದು ಕೆಳಗಿಟ್ಟಳು. ತಟ್ಟೆ ಹಾಗು ಲೋಟದ ಸದ್ದನ್ನು ಕೇಳಿದ ಕೂಡಲೇ ಕೆಂಚ ಕ್ಷಣಮಾತ್ರದಲ್ಲಿ ಮುಂದಿನ ಬಾಗಿಲಿನಿಂದ ಹಿತ್ತಲುಬಾಗಿಲಿಗೆ ಅಹ್ವಾನವಿಲ್ಲದೆಯೇ ಬಂದು ಹಲ್ಲುಕಿರಿದುಕೊಂಡು ನಿಂತ.

ಮುಂದೆ ಮಾವ ಒಲೆಯ ಕೆಂಡವನ್ನು ಮೆಲ್ಲ ಮೆಲ್ಲನೆ ಕಬ್ಬಿಣದ ಕೊಳಪೆಯಲ್ಲಿ ಊದುತ್ತಾ ಸೇಂದಿ ಹಾಗು ಕಳ್ಳಭಟ್ಟಿಯ ಕಹಿ ಸಿಹಿಯನ್ನು ಸವಿಯುತ್ತಾ, ಕೆಂಚ ಹಾಗು ಆತನ ಪ್ರೇಮಕಥೆಯನ್ನು ಅಣಕಿಸುತ್ತಾ, ಅಳಿಯನ ಊರಿನ ನಾಯಿಗೆ ಪ್ರೀತಿ ತೋರುವಂತೆ ತಿಂದು ಬಿಟ್ಟ ಮೂಳೆಗಳನ್ನು ಎಸೆಯುತ್ತಾ, ನಗುತ್ತ, ನಗಿಸುತ್ತಾ, ಒಮ್ಮೊಮ್ಮೆ ಗಂಭೀರವಾಗಿ 'ಅಳಿಯರೇ ನೀವು ನೂರ್ ಕಾಲ ಬಾಳಿ ಬದುಕಬೇಕು.. ನನ್ನ ಆಯಸ್ಸೂ ನಿಮ್ಗೆ ಹೋಗ್ಲಿ' ಎಂದು ಅತ್ತರೆ ಇತ್ತ ಕಡೆ ಅಳಿಯ ಮಾವನ ಕಾಲನ್ನು ಹಿಡಿಕೊಂಡು 'ದೇವರಂತ ಮಾವಯ್ಯ .. ನೀವು ನೂರ್ ಕಾಲ ಬದುಕ್ ಬೇಕು ..' ಎಂದು ತೊದಲುತ್ತಾ ಆತನೂ ರೋಧಿಸುತ್ತಾನೆ. ಅವರಿಬ್ಬರ ರೋಧನೆಯಲ್ಲಿ ಲಾಭ ಅನುಭವಿಸಿದ್ದು ಮಾತ್ರ ಕೆಂಚ ಹಾಗು ಅಳಿಯನ ನಾಯಿ ಮಾತ್ರ.

ಸಮಯ ಸಾಗಿದಂತೆ ಮಾತಿನ ಸದ್ದು ಹೆಚ್ಚಾದಂತೆ ಮನೆಯೊಳಗಿಂದ 'ಲೇ ಕೆಂಚ .. ಬಿಟ್ರೆ ಊರೇ ಮುಳುಗಸ್ತಿಯ ನೀನು .. ಬಾರ್ಲ ಈಕಡೆ .. ಹೊತ್ತು ಗೊತ್ತು ಅನ್ನೋದ್ ಇಲ್ಲ .. ಉಣ್ಣು ಬಾ' ಎಂದು ಮನೆಯಾಕೆ ಪರೋಕ್ಷವಾಗಿ ಮಾವ ಹಾಗು ಅಳಿಯನನ್ನು ಕುರಿತು ಚಾಟಿ ಬೀಸಿದರೆ ಅದರ ಅರ್ಥವನ್ನು ಅರಿತ ಅಳಿಯ ಹೇಗೋ ಪುಸಲಾಯಿಸಿ ನಶೆಯೇರಿ ವಾಲಾಡುವ ಮಾವನನ್ನು ತಂದು ಊಟಕ್ಕೆ ಕೂರಿಸುತ್ತಿದ್ದ.

ತಮ್ಮ ಹಿರೀಕರು ಹೀಗಿದ್ದಿರಬಹುದೇ ..? ಎಂದು ನೆನೆದು ನಗತೊಡಗಿದ ನನ್ನನ್ನು ಫೋನಿನಲ್ಲಿ ಪ್ರೇಮಶಾಸ್ತ್ರವನ್ನು ಹೇಳುತ್ತಿದ್ದ ಲೋಕೇಶ ಏನೆಂಬಂತೆ ಕೇಳಿದ. ನಾನು ಏನು ಆಗಿಲ್ಲವೆಂಬತೆ ಮುಸುಕುಗಟ್ಟುತ್ತಿದ್ದ ಕೆಂಡವನ್ನು ಊದಿದೆ.

'ಈ ಕೆಂಡಗಳಂತೆ ಆಗಲೂ ಅಲ್ಲಿ ಕೆಂಡವೊಂದು ಉರಿಯುತ್ತಿತ್ತು. ಮಾವ ಅಳಿಯ ಕಾಲದ ಗಾಲಿಯಲ್ಲಿ ತಮ್ ತಮ್ಮ ಆಯಸ್ಸನ್ನು ಒಬ್ಬಬ್ಬರಿಗೊಬ್ಬರು ಕೊಡತೊಡಗಿದ್ದರು. ಅಸಲಿಗೆ ಅವರು ಯಾರು, ಯಾರಿಗೆ ಏನನ್ನು ಕೊಡುತ್ತಿದ್ದರು?! ಅವರೆಲ್ಲ ಹೀಗೆಲ್ಲಿ? ಮಾವ, ಅಳಿಯ, ಮಡದಿ, ಅತ್ತೆ, ಕೆಂಚ ಹಾಗು ಊರಿನ ನಾಯಿ. ಈಗ ಯಾರೊಬ್ಬರೂ ಇಲ್ಲ. ಕಾಲಚಕ್ತ್ರ ಎಲ್ಲರನ್ನೂ ಮರೆಯಾಗಿಸಿದೆಯೇ ? ಕೊನೆ ಪಕ್ಷ ಅವರು ಆಡಿದ ಮಾತುಗಳಾಗಲಿ, ಮದಭರಿತ ಆ ಸಂಜೆಗಳಾಗಲಿ ಈಗ ಯಾವುವೂ ಇಲ್ಲ. ಇಂದು ನಾವಿಲ್ಲಿ ಅಕ್ಕ ಪಕ್ಕದಲ್ಲೇ ಇದ್ದರೂ ನೂರು ವರ್ಷಗಳ ನಂತರ ಈ ಘಳಿಗೆಗೂ ಅದ್ಯಾವ ಬೆಲೆ? ಕಳೆದುಹೋದ ಘಳಿಗೆಯ ಬೆಲೆ ಅದೆಂದಿನವರೆಗೆ?' ಆದರೆ ಮಾವ ಅಳಿಯರ ಆ ಸುಂದರ ಜೀವನದ ಒಂದೆರೆಡು ಜೀನ್ಸ್ಗಳು ಬಹುಷಃ ನನ್ನ ರಕ್ತದಲ್ಲಿರಬಹುದೇ? ಅವುಗಳೇ ಇಂದು ನನಗೆ ಅವರನ್ನು ಕಲ್ಪಿಸುತ್ತಿರಬಹುದೇ? ತಿಳಿಯಲಿಲ್ಲ.

ದೂರದ ಒಂದೆರೆಡು ನಕ್ಷತ್ರಗಳು ಬಲು ಪ್ರಕಾಶಮಾನವಾಗಿ ಮಿನುಗಿದಂತೆ ಭಾಸವಾಯಿತು.

ಒಟ್ಟಿನಲ್ಲಿ ಪ್ರಸ್ತುತ ಕಾಲದ ಬೀಯರ್ ಎಂಬ ಮಹಾಶಯ ನನಗೆ ಗತಕಾಲದ ತನ್ನ ಸಹೋದ್ಯೋಗಿಗಳನ್ನು ನೆನಪಿಸಿ ಒಂದು ಹೊಸ ಭಾವವನ್ನು ಹುಟ್ಟು ಹಾಕಿದ. ಅಳಿಯ ಮಾವನನ್ನು ಊಟಕ್ಕೆ ಕರೆದುಕೊಂಡುಹೋದ ಹಾಗೆ ಲೋಕಿ ನನ್ನನ್ನು ರೂಮಿನೊಳಗೆ ಕರೆದುಕೊಂಡು ಹೋಗಿ ಪಾರ್ಸೆಲ್ ತರಿಸಿದ್ದ ಬಿರಿಯಾನಿಯನ್ನು ಪ್ಲೇಟಿನ ತುಂಬಾ ಹಾಕಿ ತಿನ್ನಲು ಕೊಟ್ಟ. ಆಗಲೂ ನನ್ನಲ್ಲಿ ಮೂಡಿದ ಪ್ರೆಶ್ನೆ,

'ನಾನ್ಯಾಕೆ ಮುಂದೆ ಮಾವ ಅಳಿಯನ ತರಹದ್ದೇ ಜೀವನವನ್ನು ನೆಡೆಸಬಾರದು?'

Continues..

Saturday, June 27, 2020

ಪಯಣ - 9

'ರೀ..ಇದೇನ್ರಿ ಸಗಣಿ ಗೊಬ್ರ.. ಒಳ್ಳೆ ಸಿಮೆಂಟ್ ಪೀಸ್ ಇದ್ದಂಗೆ ಇದ್ಯಲ್ಲ..' ಎಂದು ತರಾತುರಿಯಲ್ಲಿ ಟ್ರಾಕ್ಟಾರ್ನಲ್ಲಿ ಎಲ್ಲಿಂದಲೋ ಹೊತ್ತು ತಂದ ಒಣಗಿದ ಸಗಣಿಯನ್ನು ನೋಡಿ ಹೇಳಿದ ಲೊಕೇಶ. ಪ್ರತ್ಯುತ್ತರವಾಗಿ ಏನೇಳಬೇಕೆಂದು ತಿಳಿಯದೆ ತಲೆಯನ್ನು ಕೆರೆದುಕೊಂಡು ನಿಂತ ಮೇಸ್ತ್ರಿ,

'ಇಷ್ಟ್ ಬೇಗ ಇಷ್ಟೇ ಅರೆಂಜ್ ಮಾಡೋಕ್ಕೆ ಆಗಿದ್ದು ಸಾರ್.. ' ಎಂದ.

'ತತ್ತ್ .. ಇಸ್ಕಿ.. ' ಎಂದು ತನ್ನ ತೊಡೆಯ ಮೇಲೆ ರಪ್ಪನೆ ಗುದ್ದಿದ ಲೋಕೇಶ, 'ಸರಿ, ಇವಾಗ ಎಷ್ಟ್ ಜನ ಇದ್ದಾರೆ' ಎಂದು ಮೇಸ್ತ್ರಿಯನ್ನು ನೋಡಿದ.

ಸಗಣಿ ಗೊಬ್ಬರ ಎಂದಾಗ ಭಾಗಶಃ ಮಂದಿ ಅಲ್ಲಿಂದ ಕಾಲ್ಕಿತ್ತಿದ್ದರು. ಮೇಸ್ತ್ರಿ ದೂರದಲ್ಲಿದ್ದ ಒಬ್ಬಳೇ ಅಜ್ಜಿಯನ್ನು ನೋಡಿದ.

ವಯಸ್ಸು ಎಪ್ಪತ್ತು ದಾಟಿದರೂ ಅಜ್ಜಿ ಲವಲವಿಕೆಯಿಂದ್ದಿತ್ತು. ಎಲ್ಲರು ಹೋದಮೇಲೆ ಸುಮ್ಮನೆ ಕಾಲಹರಣವೇಕೆಂದು ಯಾರು ಹೇಳದಿದ್ದರೂ ತಾನೇ ಖುದ್ದಾಗಿ ಗದ್ದೆಯ ಕಳೆಯನ್ನು ತೆಗೆಯತೊಡಗಿತು. ಲೋಕೇಶ ಅಜ್ಜಿಯ ಬಳಿಗೊದ.

'ಏನ್ ಶುಂಠಿ ಮಾಡ್ತಾರೋ ಏನೊ .. ಮನ್ಸನ ರಕ್ತಹೀರೊ ಪಿಶಾಚಿ ಈ ಶುಂಠಿ.. ಭೂಮ್ ತಾಯ್ ಸಾರ ಎಲ್ಲ ಹೀರಿ ಹಾಕುತ್ತೆ.. ಯಾರ್ ಹೇಳ್ತಾರೋ ಇವಕ್ಕೆಲ್ಲ' ಎಂದು ಶಪಿಸುತ್ತಾ ಕೆಲಸವನ್ನು ಮುಂದುವರೆಸಿದಳು.

'ಅಜ್ಜಿ .. ಏನ್ ನಿನ್ ಹೆಸ್ರು' ಎಂದ ಲೋಕೇಶ.

'ನನ್ನ್ ಹೆಸ್ರ್ ಕಟ್ಕೊಂಡ್ ಏನ್ ಆಗ್ ಬೇಕ್ಲ ನಿಂಗೆ ..' ಎಂದಳು ಅಜ್ಜಿ. ಕೂಡಲೇ ಮೇಸ್ತ್ರಿ ಮದ್ಯಸ್ಥಿಕೆ ವಹಿಸಿ,

''ಅಜ್ಜಿ .. ಶುಂಠಿ ಗದ್ದೆ ಮಾಡ್ತಿರೋರು ಇವ್ರೆಯ.. ಲೋಕೇಶ್ ಅಂತ’ ಎಂದು ಆತನನ್ನು ಪರಿಚಯಿಸಿದ.

'ಲೋಕೇಶ ಆದ್ರೇನು ಆದಿಶೇಷ ಆದ್ರೇನು .. ಇಲ್ಲಿ ಎಲ್ಲ ಒಬ್ರೇಯ... ಒಳ್ಳೇದು .. ಒಳ್ಳೇದು .. ಹುಡುಗ್ರು ಗದ್ದೆ ಗಿದ್ದೆ ಮಾಡೋದೆಲ್ಲ ಒಳ್ಳೆ ಶಕ್ನ.. ಆದ್ರೆ ಶುಂಠಿ ದುಡ್ಡ್ ಕೊಡಬಹುದು .. ನೆಲನ ಜೊಳ್ ಆಗ್ಸುತ್ತೆ.. '

'ಇರ್ಬಹುದು ಅಜ್ಜಿ .. ಮುಂದಿನ್ ಸಾರಿ ಭತ್ತ ಹಾಕ್ತಿನಿ .. ಈ ಸರಿ ಮಾತ್ರ ಶುಂಠಿ' ಎಂದು ಆತ ಮುಗುಳ್ ನಗುತ್ತಾನೆ .

ಮಾತಾಡುವಾಗಲೂ ತನ್ನ ಸ್ವಂತ ಗದ್ದೆಯೇ ಎಂಬಂತೆ ಕಳೆಯನ್ನು ಕೀಳುತ್ತಾ ಇದ್ದ ಅಜ್ಜಿಯನ್ನು ಕಂಡು ಲೋಕೇಶನಿಗೆ ಏನೋ ಒಂದು ಸಂತೋಷವಾಯಿತು.

'ಅಜ್ಜಿ .. ಸಾಕ್ ಕೆಲ್ಸ ಮಾಡಿದ್ದು.. ನಾನು ಈ ಸಾರಿ ಬರಿ ಸಗಣಿ ಗೊಬ್ಬರ ಹಾಕಣ ಅಂತಿದ್ದೀನಿ, ಹೇಗೆ.' ಎಂದು ವಿಚಾರಿಸುವ ಧಾಟಿಯಲ್ಲಿ ಕೇಳಿದ

ಕೊಂಚ ಹೊತ್ತು ಸುಮ್ಮನಾದ ಅಜ್ಜಿ ಬಗ್ಗಿದ ತನ್ನ ತಲೆಯನ್ನು ಮೇಲೆತ್ತಿದಳು.

'ಏನಪ್ಪಾ ನಿನ್ ಹೆಸ್ರು' ಎಂದು ಪ್ರೀತಿಯಿಂದ ಕೇಳುವಂತೆ ಮಾಡಿದಳು.

'ಲೋಕೇಶ'

'ಇಲ್ಲಿ ಎಲ್ರೂ ಈಶ್ರೆ..' ಎಂದು ನಕ್ಕ ಅಜ್ಜಿ 'ಮಗ .. ಒಂದ್ ಮಾತ್ ದಿಟ .. ಗೋಮಾತೆ ಗೋಬ್ರಾನ ಹಾಕಿ ಗದ್ದೆ ಬೆಳೀತೀನಿ ಅನ್ನೋ ನಿನ್ನ್ ಗುರಿ ಸರಿಯಾಗೇ ಇರುತ್ತೇ ಬಿಡು' ಎಂದು ತುಸು ಸುಮ್ಮನಾಗಿ, 'ಆದ್ರೆ ಆ ಒಣಗಿದ್ ಸಗಣಿ ಹಾಕೋ ಮೊದ್ಲು ಅದನ್ನ ನೀರಲ್ಲಿ ನೆನ್ಸಿ , ಬೇವಿನ್ ಹಿಂಡಿ ಗಂಜಲ ಹಾಕಿ ಸ್ವಲ್ಪ ದಿನ ಬಿಟ್ಟು ಅಮ್ಯಾಗೆ ಹಾಕು..' ಎಂದು ಸಲಹೆ ನೀಡಿದಳು.

ಏಕೋ ಅಜ್ಜಿಯ ಮಾತು ಲೋಕೇಶನಿಗೆ ನಾಟಿತು. ಆಕೆಯ ಉಪದೇಶದಂತೆ ಲೋಕೇಶ ಸಗಣಿಗೊಬ್ಬರವನ್ನು ತಯಾರಿಸಿದ. ಗದ್ದೆಯಲ್ಲಿಯೇ ಗುಂಡಿಯೊಂದನ್ನು ಮಾಡಿ ಅಲ್ಲಿಯೇ ಎಲ್ಲವನ್ನು ಸಿದ್ದಪಡಿಸಿದ. ವಿಪರ್ಯಾಸವೆಂಬಂತೆ ಅಂದು ಸಗಣಿ ಗೊಬ್ಬರವನ್ನು ಸಿಂಪಡಿಸುವಾಗ ಯಾರೊಬ್ಬ ಕಾರ್ಮಿಕನೂ, ಖುದ್ದು ಮೇಸ್ತ್ರಿಯೂ, ಸಹ ಅತ್ತ ಕಡೆ ಸುಳಿಯಲಿಲ್ಲ! ಲೋಕೇಶ ಹಾಗು ಅಜ್ಜಿಯಿಬ್ಬರೇ ಅಷ್ಟೂ ಗದ್ದೆಗೆ ಗೊಬ್ಬರವನ್ನು ಸಿಂಪಡಿಸಿದರು.

ಕೆಲಸದ ಖುಷಿಯಲ್ಲಿ ಲೋಕೇಶ ಊಟವನ್ನು ಮರೆತುಬರುವುದು, ಅಜ್ಜಿಯೊಟ್ಟಿಗೆ ಆಕೆಯ ಗುಡಿಸಿಲಿಗೆ ಹೋಗಿ ಅನ್ನ ಸಾರು ಹಾಗು ರಾಗಿ ಅಂಬಲಿಯನ್ನು ಸವಿಯುವುದು, ಅಲ್ಲಿಯೇ ಮರದ ಕೆಳಗೆ ಅರೆ ಹೊತ್ತು ಅಂಗಾತ ಮಲಗುವುದು ತೀರಾ ಸಾಮಾನ್ಯವಾಯಿತು. ಸಗಣಿ, ವಾಸನೆ, ಕೆಸರು, ಹಿಂಸೆ ಎಂಬ ಯಾವುದೇ ಪೊಳ್ಳು ನಾಟಕಗಳಿಲ್ಲದೆ ಲೋಕೇಶ ಕೆಲಸದಲ್ಲಿ ಮಗ್ನನಾಗಿದ್ದ. ಚಿಗುರೆಲೆಯ ಚಿನ್ನದ ಬಣ್ಣದ ಎಳೆಯ ಶುಂಠಿಯ ಎಲೆಗಳು ಒಂದೊಂದಾಗಿಯೇ ಮೇಲ್ಬರತೊಡಗಿದವು. ಲೊಕೇಶನ ಆನಂದಕ್ಕೆ ಪಾರವೇ ಇಲ್ಲದಂತಾಯಿತು.



****



ರಾತ್ರಿಯ ಆ ನೀರವ ಮೌನದಲ್ಲಿ ಕೆನ್ನೆಗಳ ಮೇಲೆ ಮೂಡಿದ ಸದ್ದು ಕೊಂಚ ಹೆಚ್ಚಾಗಿದ್ದರೂ ಪ್ರತಿಧ್ವನಿಸುವ ಮಟ್ಟಿಗಿದ್ದಿತು. ಪ್ರತಿದಿನ ಸಂಜೆ ಕತ್ತಲಾದ ಮೇಲೆ ಟೆರೇಸ್ನ ಮೇಲೆ ಬಂದು ಖುಷಿಗೆ ಫೋನಾಯಿಸುವ ಮೊದಲು ಹೀಗೆ ತನ್ನ ಕೆನ್ನೆಯ ಮೇಲೊಮ್ಮೆ ಹೊಡೆದುಕೊಂಡು ಜರುಗುತ್ತಿರುವುದೆಲ್ಲ ಕನಸ್ಸಲ್ಲ ಎಂದು ಖಾತ್ರಿಮಾಡಿಕೊಳ್ಳುತ್ತಿದ್ದ ಆಸಾಮಿ! ಕಳೆದ ಮೂರ್ನಾಲ್ಕು ತಿಂಗಳ ಈ ಘಳಿಗೆಯಲ್ಲಿ ಪ್ರತಿದಿನವೂ ಅಮಾಯಕ ಪೆಟ್ಟನ್ನು ತಿನ್ನುತ್ತಿದ್ದ ಆತನ ಕನ್ನೆಯೂ ಇತ್ತೀಚಿನ ಕೆಲದಿನಗಳಿಂದ ಒಂದು ರೀತಿಯಲ್ಲಿ ಒಗ್ಗಿಕೊಂಡಂತಿತ್ತು. ಅದೆಷ್ಟೇ ಜೋರಾಗಿ ಹೊಡೆದರೂ ಸ್ಪರ್ಶಜ್ಞಾನವಿರದ ಕಲ್ಲಿನಂತೆ ತನ್ನ ಪಾಡಿಗೆ ಅದು ತಾನಿರತೊಡಗಿತು. ಆದರೆ ಈ ಸುಮ್ಮನಿರುವಿಕೆ ಅದಕ್ಕೆ ಮತ್ತೊಂದು, ಇನ್ನೂ ಜೋರಾದ ಪೆಟ್ಟನ್ನು ಆದಿಯ ಅಸ್ತಗಳಿಂದ ದಯಪಾಲಿಸುತ್ತಿತ್ತು. ಆಗ ಅನಿವಾರ್ಯವಾಗಿ ಮೆದುಳಿನ ಕೆಲ ಕೋಶಗಳನ್ನು ಜಾಗೃತಗೊಳಿಸಿ ತನ್ನ ಮೇಲಾಗುವ ಶೋಷಣೆಯನ್ನು ತಪ್ಪಿಸಿಕೊಳ್ಳುತ್ತಿತ್ತು.

'ಛಟಾರ್..!' ಇಂದು ಎಂದಿಗಿಂತಲೂ ತುಸು ಜೋರಾಗಿಯೇ ಬಿದ್ದ ಪೆಟ್ಟು ಆದಿಗೆ ತನ್ನ ಕನಸ್ಸೆಂಬ ಸುಳ್ಳನ್ನು ಪ್ರತ್ಯೇಕಿಸುವುದಷ್ಟೇ ಅಲ್ಲದೆ ಕೆನ್ನೆಯ ಮೇಲೆ ಆಗಿನಿಂದಲೂ ಚೀರಾಡುತ್ತಿದ್ದ ಸೊಳ್ಳೆಯೊಂದರ ಕೊನೆಗಾಲವನ್ನೂ ಕರುಣಿಸಿತ್ತು. ಪಕ್ಕದಲ್ಲಿದ್ದ ನಲ್ಲಿಯ ನೀರಿನಿಂದ ಸೊಳ್ಳೆಯ ಅಸ್ತಿಯನ್ನು ಹರಿಯಬಿಟ್ಟು ಆದಿ ತನ್ನಿಷ್ಟದ ಹಾಡೊಂದನ್ನು ಹಾಕಿದ.

'ಸವಿ ಸವಿ ನೆನಪು .. ಸವಿ ಸವಿ ನೆನಪು , ಸಾವಿರ ನೆನಪು..' ಒಂದರೆ ನಿಮಿಷ ತನ್ನ ಕಣ್ಣನ್ನು ಮುಚ್ಚಿ ತನ್ನ ಬಾಲ್ಯದ ದಿನಗಳನ್ನು ನೆನೆಯತೊಡಗಿದ. ತನ್ನ ಬಾಲ್ಯವೆಲ್ಲವೂ ಖುಷಿಯೇ ಆಗಿದ್ದರಿಂದ ಆತನಿಗೆ ಅವಳ ಬಿಟ್ಟು ಬೇರೇನೂ ಅಲ್ಲಿ ನೆನೆಯಲು ಸಾಧ್ಯವಾಗಲಿಲ್ಲ. ಸಾದ್ಯವೂ ಇರಲಿಲ್ಲ! ಕೂಡಲೇ ಮೊಬೈಲ್ನ ಸ್ಪೀಕರ್ 'ಟಣ್..' ಎಂದು ಸದ್ದು ಮಾಡಿತು. ಎಂದಿನಂತೆ 'Hi..' ಎಂಬ ಖುಷಿಯ ಮೆಸ್ಸೇಜು ಸರಿಸಮಯಕ್ಕೆ ಬಂದಿತು. ಇಡೀ ಜಗತ್ತಿನ ಅಷ್ಟೂ ಸುಖ ಸಂತೋಷಗಳು ಆದಿಗೆ ಆಕೆ ಕಳುಹಿಸಿದ ಆ ಎರಡಕ್ಷರದಲ್ಲಿ ಕಾಣತೊಡಗಿದವು. ಮನಸ್ಸು ಪ್ರಸನ್ನವಾಯಿತು. ಈ ಸಂತೋಷ ಎಂದಿಗೂ ಮುಗಿಯದಿರಲಿ ಎಂದು ಬೇಡುತ್ತ ಆತ ಆಕೆಯ ನಂಬರ್ಗೆ ಫೋನಾಯಿಸಿದ. ಉದ್ವೇಗಭರಿತ 'ಹಲೋ..!' ಎಂಬ ಧ್ವನಿ ಅತ್ತಕಡೆಯಿಂದ ಸ್ವಾಗತಿಸಿತು.

ಮತ್ತದೇ ‘ಹಾಯ್, ಹೇಗಿದ್ದೀಯ, ಏನ್ ಊಟಕ್ಕೆ' ಎಂಬ ಟ್ರಡಿಷನಲ್ ಪ್ರೆಶ್ನೆಗಳ ನಂತರ 'ಮತ್ತೆ..?' ಎಂಬ ಉತ್ತರವಿಲ್ಲದ ಪ್ರೆಶ್ನೆಯನ್ನು ಕೇಳುವುದು ಇತ್ತೀಚೆಗೆ ಸಾಮಾನ್ಯವಾಯಿತು. ಹಾಗೆ ಕೇಳಿದಾಗಲೆಲ್ಲ ಆಕಡೆಯಿಂದ ಆಕಳಿಕೆಯ ಸದ್ದೋ ಅಥವಾ ಏನೂ ಇರದ ಸ್ತಬ್ದತೆಯೊಂದು ಮೂಡುತ್ತಿತ್ತು. ಹೇಳುವುದೆಲ್ಲ ಹೇಳಿ, ಕೇಳುವುದೆಲ್ಲ ಕೇಳಿ ಈಗ ಭಾಗಶಃ ತೆರೆದ ಪುಸ್ತಕದಂತಾಗಿರುವ ಇಬ್ಬರ ಜೀವನದಲ್ಲಿ ಹೊಸತೆಂಬ ಏನೂ ಇರದಂತಾಯಿತು. ಸಂಬಂಧಗಳಲ್ಲಿ ಅತಿವೃಷ್ಟಿಯನ್ನಾಗಲಿ ಅಥವಾ ಅನಾವೃಷ್ಟಿಯನ್ನಾಗಲಿ ಸೃಷ್ಟಿಸಿಕೊಳ್ಳದೆ ಸಂಬಾಳಿಸಿಕೊಂಡು ಹೋಗಬೇಕು, ಮಾತು, ಬಯಕೆ, ಫೋನು, ಮೆಸೇಜು, ಸಿಟ್ಟು, ಕೋಪ, ತಾಪ ಎಲ್ಲವೂ ಇತಿಮಿತಿಯಾಗಿ ನಿಯಮಿತವಾಗಿರಬೇಕು, ಆಕೆ Hi .. ಎಂದಾಕ್ಷಣಕ್ಕೆ ತನ್ನ ಇಡೀ ದಿನಚರಿಯನ್ನು ಒಂದು ಕ್ಷಣವೂ ಪುರುಸತ್ತಿರದೆ ಉಸಿರುಗಟ್ಟಿ ಹೇಳಿಬಿಟ್ಟು ಕೊನೆಗೆ 'ಮತ್ತೆ..?' ಎಂದು ಆಕೆಯನ್ನು ಕೇಳಬಾರದು, ದಿನವಿಡಿ ಆಕೆಯ ಜಪವೊಂದೇ ಮಾಡುತ್ತಾ ಊಟ, ತಿಂಡಿ, ಏನ್ ಕುಡಿದೆ, ಯಾವ ಜ್ಯೂಸು, ಅದ್ ಬೇಡ ಇದನ್ನ ಕುಡಿ, ಯಾರೊಟ್ಟಿಗೆ ಇಷ್ಟೊತ್ತು ಮಾತಾಡ್ತಿದ್ದೆ, etc etc ಎಂಬುದನ್ನೆಲ್ಲ ಕೇಳಿ ಆಕೆಯ ತಲೆಗೂ ಮನಸ್ಸಿಗೂ ಒಟ್ಟೊಟ್ಟಿಗೆ ನೋವನ್ನು ನೀಡಬಾರದು ಎಂಬುದೆಲ್ಲ ಆತನಿಗೆ ಎಲ್ಲಿ ತಿಳಿದಿತ್ತು? ಆದರೆ ಜೀವನದ ಅನಂತ ವಸಂತಮಾಸವನ್ನು ಕರುಣಿಸಿರುವ ತನ್ನಾಕೆಯನ್ನು ಮಗುವಿನ ಪ್ರೀತಿಯಂತೆ ಹಠಬಿದ್ದು ಪಡೆಯುವ ಪೆದ್ದನಂತ ಆದಿಯಲ್ಲಿ ಬೇರ್ಯಾವ ಯೋಚನೆಯೂ ಬರುತ್ತಿರಲಿಲ್ಲ. ಆಲ್ಲಿದ್ದದ್ದು ಕೇವಲ ಕಾಳಜಿ. ಅನಿರ್ವಚನೀಯವಾದ, ಎಂದಿಗೂ ಬತ್ತದ ಗೆಳತಿಯೆಂಬ ಮಧುರ ಕಾಳಜಿ. ವಿಪರ್ಯಾಸವೆಂದರೆ ಅದು ಖುಷಿಗೆ ಗೋಚರವಾಗುತ್ತಿದ್ದದ್ದು ಮಾತ್ರ ದಿನದ ನೂರು ಮೆಸೇಜುಗಳ ಕೋಟಾವನ್ನು ಪ್ರತಿದಿನವೂ ಇಂತಹ ಸಮಯ ಹರಣ ಪ್ರೆಶ್ನೋತ್ತರಗಳಿಗೆ ವ್ಯಹಿಸಿ ಸಂಜೆ ಐದಾಗುವಷ್ಟರಲ್ಲಿ ಅಷ್ಟೂ ಖಾಲಿಯಾಗಿ ನಂತರದ ಪ್ರತಿ ಮೆಸೇಜಿಗೆ ಹಣವ್ಯಹಿಸಬೇಕಾದಾಗ ಮೂಡುತ್ತಿದ್ದ ಸಿಟ್ಟಿನ ರೂಪದಲ್ಲಿ. ಆಫ್ ಕೋರ್ಸ್, ಸಾಮಾನ್ಯನಾದವರಿಗೆ ಇಂತಹ ವಿಷಯಗಳ ಮೇಲೆ ಕಿರಿಕಿರಿಯಾಗುಸುವುದು ಸಾಮಾನ್ಯವೇ.

ಅದೇನೋ ಒಂದು ಉದ್ವಿಗ್ನತೆ, ಆತುರ, ಕಾತುರ ಆತನಿಗೆ ಆಕೆಯ ಹೆಸರಿನ ಮೆಸೇಜೊಂದು ಟನ್ಗುಟ್ಟರೆ. ಆಕೆಯೂ ಈತ ಅದೆಷ್ಟೇ ತಲೆತಿಂದರೂ ಪ್ರತಿದಿನ ಒಂದೆರೆಡು ಮೆಸೇಜುಗಳನ್ನು ಕಳಿಸದೆ ಇರುತ್ತಿರಲಿಲ್ಲ. ಖುಷಿಯ ಮರಳುವಿಕೆ ಜೀವನದಲ್ಲಿ ಎಲ್ಲಿಲ್ಲದ ಖುಷಿಯನ್ನು ತಂದಿರುವಾಗ ನಗುವುದು, ನಗಿಸುವುದು ಆದಿಗೆ ತೀರಾ ಕಷ್ಟದ ವಿಷಯವೇನಾಗಿರಲಿಲ್ಲ. ಆದರೆ ಆದಿಶೇಷ ಎಲ್ಲವನ್ನೂ ಸಶೇಶಿಸುವುದರಲ್ಲೇ ಕಾರ್ಯೋನ್ಮುಕನಾಗಿದ್ದ. ಆದರೆ ಇಂದು ಆಕೆಯ ಸೆನ್ಸ್ ಆಫ್ ಹ್ಯುಮರನ್ನು ಪರೀಕ್ಷಿಸಲೋಗಿ ಆಕೆಯ ಕೋಪ ದ ಕಟ್ಟೆಯನ್ನು ಒಡೆಯುವಂತೆ ಮಾಡಿ, ಮಾತಿನ ಮದ್ಯೆಯೇ ಆಕೆ ಫೋನ್ ಕಟ್ ಮಾಡುವಂತೆ ಮಾಡಿದ! ಕೂಡಲೇ ಹತ್ತಾರು ಫೋನುಗಳನ್ನು ಇತ್ತಕಡೆಯಿಂದ ಮಾಡಿದರೂ ಆಕೆ ಒಂದಕ್ಕೂ ಉತ್ತರಿಸಲಿಲ್ಲ. ನಂತರದ ದಿನ ಎಲ್ಲವು ಸರಿಯೋಗಬಹುದು ಎಂದುಕೊಂಡವನಿಗೆ ಮತ್ತದೇ ಬಗೆಯ ಪ್ರತಿಕ್ರಿಯೆ. ಮೆಸೇಜಿಗೆ ಉತ್ತರವಿಲ್ಲ, ಫೋನನ್ನು ಎತ್ತುತ್ತಿಲ್ಲ.

ದಿನಗಳು ಕಳೆದವು.

ಮೋಡ ಕವಿದ ವಾತಾವರಣದಂತೆ ದಿನವೆಲ್ಲ ಆತನ ಮುಖ ಇಳಿಬಿಟ್ಟಿತು. ಯಾರೊಟ್ಟಿಗೂ ಮಾತನಾಡದ ಆತ ಖುಷಿಯ ಮೆಸೇಜಿಗೆ ಬಕಪಕ್ಷಿಯಂತೆ ಕಾಯತೊಡಗಿದ. ಸದ್ದಿಲ್ಲದಂತೆ ಅಡಗಿ ಮರೆಯಾಗಿದ್ದ ದುಗುಡದ ಛಾಯೆ ಒಂದೊಂದಾಗಿಯೇ ಆತನನ್ನು ಪುನ್ಹ ಆವರಿಸತೊಡಗಿದವು.




****



ಬೆಳಗಾದರೆ ಸಾಕು ಈ ಹಕ್ಕಿಗಳೆಲ್ಲವಕ್ಕೂ ಚಿಯ್ ಗುಡುವ ಕೆಲಸವನ್ನು ನೀಡಿದವರ್ಯಾರು? ಕೋಳಿಗಳಿಗೆ ಕೂಗಲು ಹೇಳಿಕೊಟ್ಟವರ್ಯರು? ಕರಾರುವಕ್ಕಾಗಿ ತಮ್ಮ ನಿರ್ಧಿಷ್ಟ ಸಮಯಕ್ಕೆ ಅಲರಾಂ ಬಾರಿಸಿದಂತೆ ಎದ್ವಾ-ತದ್ವಾ ಗೀಳಿಡುವ ಇವುಗಳು ಹೇಳಲು ಪ್ರಯತ್ನಿಸುತ್ತಿರುವುದಾರೂ ಏನು? ಬೆಳಗಾಗಿದೆ ಎದ್ದೇಳಿ ಎಂಬುದನ್ನು ಹೇಳುವುದಾದರೆ ಇವುಗಳ ವಿನ್ಹಾ ಸೂರ್ಯ ಮೇಲೇರುವುದು ಜಗತ್ತಿಗೇನು ತಿಳಿಯುವುದಿಲ್ಲವೇ? ಹಾಗಾದರೆ ಏನಿರಬಹದು ಈ ಹಕ್ಕಿಗಳ ಸದ್ದಿನ ಹಿಂದಿನ ಮೆಸೇಜು? ಅದ್ಯಾವ ಟೆಕ್ನಾಲಜಿ ಈ ಧ್ವನಿಯನ್ನು ಅರ್ಥೈಸಬಹುದು? ತಾವು ಬದುಕುವ ಒಂದೆರೆಡು ವರ್ಷಗಳಲ್ಲಿ ಆವು ಹೀಗೆ ಕೂಗಿ ಸಾಧಿಸುವುದಾದರೂ ಏನು?

ಆದರೆ ಸಮಯ ಎಲ್ಲರಿಗೂ ಒಂದೆಯೇ? ನಾವು ನಮ್ಮಲಿನ ಸಮಯದ ಮೇರೆಗೆ ಕೇವಲ ಒಂದೆರೆಡು ವರ್ಷಗಳೆನ್ನುತ್ತೀವಿ, ಆದರೆ ಅವಕ್ಕೆ ಆ ಒಂದೆರೆಡು ವರ್ಷಗಳೇ ಜೀವನದ ಅಷ್ಟೂ ಹಾದಿ. ಹುಟ್ಟು, ಸಾವು, ಪ್ರೀತಿ, ಮಮತೆ, ಬಾಲ್ಯ ,ಮುಪ್ಪು, ಎಲ್ಲವನ್ನೂ ಮಾನವರಂತೆಯೇ ಸಾಧಿಸುವ ಅವುಗಳ ಕಾಲಚಕ್ರ ನಮಗಿಂತಲೂ ಚಿಕ್ಕದಾದದ್ದು. ಅರ್ಥಾತ್ ನಮ್ಮ ಜೀವನದ ಸಾಧನೆಗೆ ನೂರು ವರ್ಷಗಳು ಬೇಕಾದರೆ ಅವುಗಳ ಸಾಧನೆ ಕೆಲವೇ ವರ್ಷಗಳಲ್ಲಿಯೇ ಸಾಧ್ಯವಿರಬಹುದು. ಲವ್ಕಿಕ ಸಾಧನೆಗಳನ್ನು ಬಿಟ್ಟು ಆದ್ಯಾತ್ಮಿಕ ಸಾಧನೆಯೆನ್ನಾದರೂ ಅವುಗಳು ಕೈಕೊಂಡರೆ ಪರಿಣಾಮವೇನಾಗಬಹುದು? ಸಾಧು ಸಂತರಂತೆ ಸಮಾಧಿ ಅವಸ್ಥೆಗೇರಲು ಇವುಗಳಿಗೆ ನಿಮಿಷಮಾತ್ರದಲ್ಲಿ ಸಾದ್ಯವಾಗಬಹುದೇ? ಇನ್ನು ದಿನ ಮಾತ್ರ ಜೀವನ ನೆಡೆಸುವ ಹೂವು ಹಣ್ಣುಗಳ ಕತೆಯೇನು? ಅಥವಾ ನಮಗಿಂತಲೂ ಹೆಚ್ಚು ಜೀವಿಸುವ ಇತರ ಪ್ರಾಣಿಗಳ ಮರ್ಮವೇನು? ಜೀವನದ ಕಾಲಾವಧಿ ಎಲ್ಲರಿಗು ಏಕೆ ಸಮನಾಗಿಲ್ಲ? ನಿಸರ್ಗ ಇವೆಲ್ಲವನ್ನೂ ನಮ್ಮಿಂದ ಮುಚ್ಚಿಟ್ಟಿದೆಯೇ? ಅಥವಾ ನಾವೇ ಹುಟ್ಟು ಕುರುಡರೇ?

ಅದ್ಯಾಕೋ ಇಂದು ಎಂದಿಗಿಂತ ಮೊದಲೇ ಎಚ್ಚರವಾಯಿತು. ಗರಗನೆ ತಿರುಗುತ್ತಿದ್ದ ಸೀಲಿಂಗ್ ಫ್ಯಾನನ್ನು ಧಿಟ್ಟಿಸುತ್ತಾ ಮಲಗಿದ್ದ ನನಗೆ ಬೆಳಗಿನ ಹಕ್ಕಿಗಳ ಚಿಲಿಪಿಲಿ ಸದ್ದು ವಿಭಿನ್ನವಾದೊಂದು ಯೋಚನೆನ್ನು ಹುಟ್ಟುಹಾಕಿತು. ರಾತ್ರಿಯಿಡೀ ರಾಧಾರ ಯೋಚನೆಯಲ್ಲೇ ಕಳೆದ ನನಗೆ ಒಂದರೆಕ್ಷಣವೂ ಸರಿಯಾಗಿ ನಿದ್ರಿಸಲು ಸಾಧ್ಯವಾಗಿರಲಿಲ್ಲ. ಚಿತ್ರವಿಚಿತ್ರವಾದ ಪ್ರೆಶ್ನೆಗಳು ಹಾಗು ಅಷ್ಟೇ ಘೋರವಾದ ಉತ್ತರಗಳು ನನನ್ನು ಕೊರೆದುಹಾಕಿದ್ದವು. ಇನ್ನು ಹೀಗೆಯೇ ಯೋಚಿಸಿದರೆ ಆಗದು ಎನುತ ಎದ್ದು ಟೆರೇಸಿನ ಮೇಲೆ ಬಂದೆ. ತಂಪಾದ ಗಾಳಿ ಹಿತವಾಗಿ ನನ್ನನು ತಬ್ಬಿಕೊಂಡಿತು. ಕಾಲಿಗೆ ಮೆಟ್ಟಿಕೊಂಡಿದ್ದ ಚಪ್ಪಲಿಯನ್ನು ಅಲ್ಲಿಯೇ ಪಕ್ಕಕ್ಕೆ ಬಿಟ್ಟು ಜಗತ್ತನ್ನು ಬೆಳಗಲು ಅಣಿಯಾಗುತ್ತಿದ್ದ ಜೀವದೀಪದೆಡೆಗೆ ನೋಡುತ್ತಾ ನಿಂತೇ. ಯಾವುದೂ ಮಹತ್ವದ ಕಾರ್ಯಕ್ಕೆ ಸದ್ದಿಲ್ಲದೇ ಹೋಗುತ್ತಿರುವಂತೆ ನಿಧಾನವಾಗಿ ಮುಂದುವರೆಯುತ್ತಿದ್ದ ಹಕ್ಕಿಗಳ ಸಾಲು ನನ್ನ ಮನಸ್ಸನ್ನೂ ತಮ್ಮೊಟ್ಟಿಗೆ ತೇಲಿಸಿಕೊಂಡು ಹೋದವು. ಕೈಗಳು ತಂತಾನೆ ಜೋಡಲ್ಪಟ್ಟವು. ಸೂರ್ಯನಮಸ್ಕಾರದ ಹನ್ನೆರೆಡು ಆಸನಗಳ ನಂತರ ಪದ್ಮಾಸನವಾಗಿ ಕೂತು ಓಂಕಾರವನ್ನು ಗುನುಗತೊಡಗಿದೆ. ಆಹಾ.. ಆ ನಿರ್ಲಿಪ್ತ ವಾತಾವರದಲ್ಲಿ ಅಕ್ಷರಸಹಃ ಹಾರುತ್ತ ದೂರ..ದೂರ.. ಬಹುದೂರ ಸಾಗಿದಂತಹ ಅನುಭವವನ್ನು ಅನುಭವಿಸಿದವನಿಗೇ ಗೊತ್ತು. ಸಿಟ್ಟು, ಕೋಪ, ತಾಪ, ಮಧ, ಮತ್ಸರ, ಕಿಚ್ಚು, ಪ್ರೀತಿ, ನಾನು.. ಎಂಬ ಎಲ್ಲವನ್ನು ಬಿಟ್ಟೂ, ಬಿಡದಂತೆ ಬಲು ದೂರ ಹಿತವಾದೊಂದು ಪ್ರದೇಶಕ್ಕೆ ಸಾಗಿದಂತಹ ಅಮೋಘ ಅನುಭವ.

ಅಂತ್ಯವಿರದ ಗುರಿಯೆಡೆಗೆ ಗುರಿಯ ಪಯಣ…

ಅದೆಷ್ಟೋ ಸಮಯದ ನಂತರ ಕಣ್ಣು ತೆರೆದೆ. ಸೂರ್ಯದೇವ ಅದಾಗಲೇ ತನ್ನ ಕಾರ್ಯವನ್ನು ಕೈಗೆತ್ತಿಕೊಂಡು ಪ್ರಕರವಾಗಿ ಬೆಳಗುತ್ತಿದ್ದಾನೆ. ಕೂಡಲೇ ಕೆಳಗಿಳಿದು ಬಂದು ಘಮಘಮಿಸುವ ಘಾಡ ಕಾಫಿಯನ್ನು ಮಾಡಿಕೊಂಡು ಮೊಬೈಲಿನೊಟ್ಟಿಗೆ ಪುನ್ಹ ಮೇಲೆ ಬಂದೆ. ಬೆಳಗಿನ ಹಿಂದೂಸ್ತಾನಿ ರಾಗವೊಂದನ್ನು ಹಾಕಿ ಕಾಫಿಯನ್ನು ಹೀರುತ್ತಾ ಹೋದಂತೆ ಮನಸ್ಸು ಹಲವಾರು ಆಸೆಗಳನ್ನು ಚುಗುರೊಡೆಸಿತು. ಕೂಡಲೇ ವೀಣೆಯನ್ನು ನುಡಿಸುವ ಮನಸಾಯಿತು. ಆದರೆ ವೀಣೆಯಾಗಲಿ ಅದನ್ನು ನುಡಿಸುವ ಪ್ರವೀಣತೆಯಾಗಲಿ ನನ್ನಲ್ಲಿರಲಿಲ್ಲ.

'ರಾಗ್ ವಿಭಾಸ್ ... ಕಿಶೋರಿ ಅಮೋನ್ಕರ್..?' ಎಂದ ಆದಿ ನನ್ನ ಪಕ್ಕಕ್ಕೆ ಬಂದು ನಿಂತನು. ರಾಗದ ಆಳದಲ್ಲಿ ಮುಳುಗಿದ್ದ ನಾನು ತಲೆಯನ್ನಷ್ಟೇ ಅಲ್ಲಾಡಿಸುತ್ತ ಆತನ ಪ್ರೆಶ್ನೆಗೆ ಹೌದೆಂದೇ. ಇಬ್ಬರು ಬಹಳ ಹೊತ್ತು ಸಂಗೀತವನ್ನು ಆಸ್ವಾದಿಸಿದೆವು. ಗಮಕ ಹಾಗು ಸ್ವರಗಳ ಸಮ್ಮಿಶ್ರಣದ ಆ ಮಧುರ ಹಿನ್ನಲೆಯಲ್ಲಿ ಮೂಡುತ್ತಿದ್ದ ಹಕ್ಕಿಗಳ ಸದ್ದು ಮತ್ತೊಂದು ಬಗೆಯ ಭ್ರಮಾ ಲೋಕವನ್ನೇ ಅಲ್ಲಿ ಸೃಷ್ಟಿಸಿದವು. ಆದಿ ನಾನು ಮಾತಾಡುವರೆಗೂ ಸುಮ್ಮನಿದ್ದ.

'ವಾವ್ .. ಈ ಸಂಗೀತ ಅನ್ನೋ ಭಾವಾತೀತ ಭಾವವನ್ನು ಕಂಡು ಹಿಡಿದ್ದಿದಾದರೂ ಯಾರು ಮಾರಾಯ..' ಮಂದ್ರದಲ್ಲಿ ಕೊನೆಗೊಂಡ ರಾಗಕ್ಕೆ ತಲೆಗೂಗುತ್ತ ನಾನೆಂದೆ.

'ಪರಿಸರ..' ಎಂದ ಆದಿ ಮುಂದುವರೆದ. 'ನಿರ್ಜೀವ ವಸ್ತುಗಳಿಂದ ಮೂಡುವ ಸದ್ದಿಗೇ ನಾವು ಹೀಗೆ ತಲೆದೂಗುತ್ತಿರಬೇಕಾದರೆ ಇನ್ನು ನೈಸರ್ಗಿಕವಾಗಿ ಮೂಡುವ ಆ ಮಧುರ ವಾಣಿಗೆ ಏನೆನ್ನಬೇಕು? ಪರಿಸರ ಪ್ರತಿ ಘಳಿಗೆಗೂ ಒಂದೊಂದು ರಾಗವನ್ನು ಏಕೆ ಹೊರಹೊಮ್ಮಿಸುತ್ತಿರಬಾರದು? ರಾಗ, ಗಮಕ, ಶ್ರುತಿ ಹಾಗು ತಾಳಗಳು ಇದ್ದರೂ ಕೊಂಚ ಭಿನ್ನವಾಗಿರಬಹುದು. ಅವು ಪರಿಸರದ ಸಂಗೀತವಾಗಿರಬಹುದು. ಯಾರಿಗೊತ್ತು? ಹಕ್ಕಿಗಳು ಬೆಳಗಿನ ಜಾವ ಕೂಗುವ ವಾಣಿಗೆ ನಾವು ಯಾವ ರಾಗದ ಹೆಸರಿಡಬೇಕು? ನಾವುಗಳೇಕೆ ಈ ಬಗೆಯಲ್ಲಿ ಯೋಚಿಸಬಾರದು? ಸಂಗೀತದ ಒಂದು ಹೊಸ ಬಗೆಯನ್ನೇ ಇಲ್ಲಿ ಆವಿಷ್ಕರಿಸಬಹುದಲ್ಲವೇ..?' ಎಂದ.

'ನಿಜ .. ಸಾವು ಬದುಕಿನ ಅಂತರ ನಮಗೆ ನೂರು ವರ್ಷವಾದರೆ ಅವಕ್ಕೆ ಕೇವಲ ಒಂದೆರೆಡು ವರ್ಷಗಳು. ನಾವು ನಮ್ಮ ಇಡೀ ಜೀವನದಲ್ಲಿ ಸಾಧಿಸುವುದನ್ನು ಅವು ಕೆಲವೇ ಕೆಲವು ತಿಂಗಳುಗಳಲ್ಲಿ ಸಾಧಿಸಬಲ್ಲವು. ಅದು ಸಂಗೀತವಾಗಲಿ ಅಥವಾ ಮತ್ತೇನೇ ಆಗಲಿ. ನಾವುಗಳು ಆ ರೀತಿನೂ ಯಾಕೆ ಯೋಚ್ನೆ ಮಾಡ್ಬಾರು?'

'ಮಾನವ ಬಂದುಕುತ್ತಿರೋದೇ ಒಂದು ಭ್ರಮ ಲೋಕದಲ್ಲಿ .. ಅಸ್ತಿತ್ವದಲ್ಲಿ ಇರದೇ ಇರೋ ನಕ್ಷತ್ರನೇ ನಿಜ ಅನ್ಕೊಂಡು ಬದುಕುವ ಆತನ ಚಿಂತನೆ ಬಹಳ ಸೀಮಿತವಾದದ್ದು. ಎಲ್ಲಿಯವರೆಗೂ ಆತ ಪರಿಸರಕ್ಕಾಗಿ ನಾವುಗಳೇ ವಿನಃ ನಮಗಾಗಿ ಪರಿಸರ ಅಲ್ಲ ಎಂದು ಅದ್ರೊಟ್ಟಿಗೆ ಏಕವಾಗಿ ಬದುಕಲು ಪ್ರಯತ್ನಿಸುವುದಿಲ್ಲವೋ ಅಲ್ಲಿಯವರೆಗೂ ಅದು ಆತನಿಗೆ ನಿಗೂಢವಾಗಿಯೇ ಇರುತ್ತದೆ. ಈ ಹಕ್ಕಿಗಳ ಸದ್ದಿನ ತರ.' ಎಂದು ಸುಮ್ಮನಾದನು

ಆದಿಯ ಮಾತುಗಳು ನನ್ನ ಆಳವನ್ನು ತಲುಪಿದವು.



****



'Waw! Is it that simple?' ಶಶಿಕಲಾ ಕೂತಿದ್ದ ಬೆಂಚಿನ ಮುಂದೆಯೇ ನಿಂತು ಆಕೆ ಹೇಳಿದ ಥಿಯರಿಯೊಂದನ್ನು ಕೇಳುವಂತೆ ನಟಿಸುತ್ತಾ ಹೇಳಿದ ಲೋಕೇಶ. ಪ್ರತಿ ಕ್ಷಣಕ್ಕೂ ಆತ ಆಕೆಯ ಪಕ್ಕದಲ್ಲಿದ್ದ ಉಷಾಳನ್ನು ತನ್ನ ಕಿರುನೋಟದಲ್ಲಿ ನೋಡುತ್ತಾ ಕಾಟಾಚಾರಕ್ಕೆ ಎಂಬಂತೆ ಶಶಿಕಲಾಳ ಮಾತಿಗೆ ಹುಂಗುಡುತ್ತಿದ್ದ. ಈತನ ಯಾವ ಡೊಂಬರಾಟಗಳಿಗೂ ಕ್ಯಾರೇ ಎನ್ನದೆ ಸಹಜವಾಗಿರುತ್ತಿದ್ದ ಉಷಾಳ ಸ್ವಭಾವ ಆತನಿಗೆ ಪದೇ ಪದೇ ಹಿಂಸಿಸುತ್ತಿತ್ತು. ಮೊದಲೆಲ್ಲ ಕೊಂಚ ಜೆಲಸಿಗಾದರೂ ತನ್ನೊಟ್ಟಿಗೆ ಮಾತನಾಡುವಳು ಎಂದುಕೊಂಡಿದ್ದ ಆತನಿಗೆ ಯಾವಾಗ ಆಕೆ ‘I don’t care.. get off..’ ಎಂಬ ಸ್ವಭಾವವನ್ನು ತೋರತೊಡಗಿದಳೋ ಆಗೆಲ್ಲ ಈತನ ಕಿಚ್ಚು ಕಾಡ್ಗಿಚ್ಚಿನಂತೆ ಹಬ್ಬತೊಡಗಿತು. ಪ್ರತಿ ಕ್ಲಾಸ್ಸಿನ ನಂತರ ಹೀಗೆ ಪ್ರೆಶ್ನೆ ಕೇಳುವಂತೆ ನಟಿಸಿ ಶಶಿಕಲಳ ಬಳಿಗೆ ಬಂದು ಆತ ನಿಲ್ಲುತ್ತಿದ್ದ.

'Yes it is.. could you please repeat it?' ಎಂದ ಶಶಿಯ ಪ್ರೆಶ್ನೆ ಕೂಡಲೇ ಸಿಡಿಲು ಬಡಿದಂತೆ ಬಂದೆರಗಿತು. ಆಕೆ ವಿವರವಾಗಿ ಒಂದನೇ ತರಗತಿಯ ಮಕ್ಕಳೂ ಅರ್ಥೈಸಿಕೊಳ್ಳುವಂತೆ ಹೇಳಿದ ವಿಷಯವನ್ನು ಎಳ್ಳಷ್ಟೂ ಕೇಳದೆ ತನ್ನ ಒಳಕೋಪದಲ್ಲಿ ಮಗ್ನನಾಗಿದ್ದ ಲೋಕೇಶ ಇನ್ನು ಇಲ್ಲಿ ನಿಂತರೆ ಉಷಾಳ ನೋಟದಲ್ಲಿ ತಾನು ಇನ್ನೂ ಬಿದ್ದುಬಿಡಬಹುದೆಂದುಕೊಂಡು ಕೂಡಲೇ,

'ರೀ ಶಶಿ ಬನ್ರಿ ಸಾಕು .. ರಿಪೀಟ್ ಅಂತೆ .. ಎಲ್ಲ ಅರ್ಥ ಆಗಿದೆ .. ಬೈ ದಿ ವೆ, ನಿಮ್ಗೆ ಟ್ರೀಟ್ ಬಾಕಿ ಇತ್ತಲ್ಲ ಇವತ್ತ್ ಕೊಡ್ತೀನಿ ಬನ್ನಿ' ಎಂದ.

ಹುಡುಗನೊಬ್ಬ ಅದರಲ್ಲೂ ಲೋಕೇಶನಂತ ಡೈನಾಮಿಕ್ ಪರ್ಸನಾಲಿಟಿಯ ಯುವಕನೊಬ್ಬ ತನ್ನನ್ನು ಕರೆದದ್ದು ಕೊಂಚ ಅನುಮಾನ ಮೂಡಿಸಿದರೂ ಬ್ಯಾಗನ್ನು ಹೊತ್ತು ಹೊರಟು ನಿಂತಳು ಶಶಿಕಲಾ.



****



'Impressive!! Well done my boy! .. Really proud of you..' ಮಂದವಾಗಿ ಬೀಸುತಿದ್ದ ಗಾಳಿಗೆ ತನ್ನ ಎದೆಯನೋಡ್ಡುತ್ತಾ ನಿಂತಿದ್ದ Mr.ಸಾಲ್ದಾನ ಜೋಸೆಫ್ ಶುಂಠಿಯ ಬೆಳೆಯನ್ನು ನೋಡುತ್ತಾ ಹೇಳಿದರು. ಟಿ ಶರ್ಟನ್ನೇ ಇನ್ ಮಾಡಿ ಬಿಳಿ ಪ್ಯಾಂಟು ಹಾಗು ಬಿಳಿಯ ಶೂ ಅನ್ನು ತೊಟ್ಟು ನಿಂತಿದ್ದ ಅವರು ಒಂತರ ಹಸಿರು ಗದ್ದೆಯಲ್ಲಿ ನಿಂತ ಹಿಮಕರಡಿಯಂತೆ ಕಾಣುತ್ತಿದ್ದರು. ಲೋಕೇಶ ಅವರ ಪಕ್ಕಕ್ಕೆ ತನ್ನ ಕೈಗಳೆರಡನ್ನು ಕಟ್ಟಿಕೊಂಡು ನಿಂತಿದ್ದ. ಹಾಳು ಬಿದ್ದು ಕುಡುಕರ ಅಡ್ಡವಾಗಿದ್ದ ಜಾಗವನ್ನು ಮನಸ್ಸಿಗೆ ಮುದ ನೀಡುವ ಹಸಿರ ಸಿರಿಯನ್ನಾಗಿ ಪರಿವರ್ತಿಸಿರುವ ಅವನ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಲೋಕೇಶ ಅನುಸರಿಸಿದ ಕೃಷಿಯ ಬಗೆಯನ್ನು ಸವಿವರವಾಗಿ ಕೇಳಿದ ಮೇಲಂತೂ ಸಂತೋಷದಿಂದ ತಲೆದೂಗಿದರು.ನಿಮ್ಮಂತ ಯಂಗ್ ಕ್ರಿಯೇಟಿವ್ ಥಿಂಕರ್ಸ್ ನಮ್ಮ ನಾಡಿಗೆ, ದೇಶಕ್ಕೆ ಬೇಕು ಲೋಕೇಶ್ ಎಂದರು.. ಸಾಲ್ದಾನ ಜೋಸೆಫ್ ಮತ್ತೊಮ್ಮೆ ತಮ್ಮ ಗದ್ದೆಯನ್ನು ಸುತ್ತು ಬಂದು ಲೊಕೇಶನ ಹೆಗಲ ಮೇಲೆ ಕೈಯಾಕಿ ‘If you need anything else give me call.. Keep up the good work ’ಎಂದೇಳಿ ತಮ್ಮ ಜೀಪನ್ನೇರಿ ಅಲ್ಲಿಂದ ಹೊರಟರು. ಲೋಕೇಶ ಖುಷಿಯಿಂದ ಪಕ್ಕದಲ್ಲಿದ್ದ ಬೆಟ್ಟವನ್ನು ಏರಿದ. ಒಳದಾರಿಯನ್ನು ಕಂಡುಹಿಡಿದ ಪರಿಣಾಮ ಈಗ ಆ ಭೀಮ ಬೆಟ್ಟ ಬೆಳಗಿನ ಜಾಗಿಂಗ್ ಟ್ರ್ಯಾಕ್ನಂತಾಗಿದೆ. ಮೇಲೇರಿದ ಆತ ನತ್ತಿಯಿಂದ ತಾನು ಬೆಳೆಸಿದ ಗದ್ದೆಯನೊಮ್ಮೆ ನೋಡತೊಡಗಿದ. ಆತನ ಮನಸ್ಸು ಖುಷಿಯಿಂದ ನಲಿಯುತ್ತಿತ್ತು. ಹಲವಾರು ಯೋಚನೆಗಳು ಅಲ್ಲಿ ಹಾದುಹೋಗುತ್ತಿದ್ದವು. ಕೆಲವೊಮ್ಮೆ ತನ್ನ ಸಾಲದ ಹೊರೆಯನ್ನು ತೀರಿಸುವ ಇನ್ವೆಸ್ಟ್ಮೆಂಟ್ನಂತೆ ಅದು ಕಂಡರೆ ಮತ್ತೊಮ್ಮೆ ತಾನೇ ಸ್ವತಃ ಹೆತ್ತು ಹೊತ್ತು ಬೆಳೆಸಿದ ಎಳೆಯ ಮಗುವಂತೆ ಕಾಣಿಸುತ್ತಿತ್ತು. ಆತ ಮೇಲಿಂದ ತನ್ನ ಗದ್ದೆಯನ್ನು ದಿಟ್ಟಿಸುತ್ತಿದ್ದರೆ ಆತ್ತ ಕಡೆಯಿಂದ ಗದ್ದೆಯೂ ಈತನನ್ನು ಮುಗ್ದವಾಗಿ ನೋಡುತ್ತಿರುವಂತೆ ಭಾಸವಾಯಿತು. ಕೂಡಲೇ ಆತನಿಗೆ ವಿಭಿನ್ನ ಆಲೋಚನೆಯೊಂದು ಮೂಡಿತು. ಪರಿಣಾಮ ಮನಸ್ಸು ಗೊಂದಲದಲ್ಲಿ ಮುಳುಗಿತು. ಕಷ್ಟಬಿದ್ದು, ಬಿತ್ತಿ ಬೆಳೆಸಿದ ಸಸಿಗಳು ತನ್ನ ಕರುಳ ಕುಡಿಯೇನೋ ಅನಿಸುತ್ತಿದ್ದ ಆತನಿಗೆ ಅವನ್ನು ಯಾವುದೇ ಕಾರಣಕ್ಕೂ ಕಟಾವು ಮಾಡಬಾರದೆಂಬ ಮಮತೆ ಮೂಡುತ್ತದೆ! ಆತನ ಸ್ಥಿತಿಪ್ರಜ್ಞ ಮನಸ್ಸು ಕಲ್ಪನಾ ಲೋಕದಿಂದ ಹೊರಬರುವಂತೆ ಅರಚುತ್ತಿದ್ದರೂ ಲೊಕೇಶನ ನಿಶ್ಚಯ ಒಮ್ಮೆಲೆ ದೃಢವಾಗುತ್ತದೆ!!

ಅದೇನೇ ಆಗಲಿ, ಅದ್ಯಾರೇ ಅದೇನನ್ನೇ ಅನ್ನಲಿ ಈ ಸಸಿಗಳ ಕುತ್ತಿಗೆಯನ್ನು ನಾ ಕಡಿಯೇನು! ನಾ ಬೆಳೆಸಿದ ಕಂದಮ್ಮಗಳನ್ನು ಅದೇಗೆ ಕೊಲ್ಲಲಿ?!



****



'ಕಿಸ್ ಮಿ, ಪ್ಲೀಸ್..' ಬರೆಯತೊಡಗಿದ ಕತೆಯ ಒಂದು ಕ್ಯಾರೆಕ್ಟ್ರನ್ನು ವಿವರಿಸತೊಡಗಿದ ನನಗೆ ರಾಧಾರ ಮಾತನ್ನು (ಆಸೆಯನ್ನು!) ಕೇಳಿ ಆಕಾಶವೇ ಕಳಚಿ ಬಿದ್ದಂತಹ ಅನುಭವವಾಯಿತು. ಕಣ್ಣುಗಳನ್ನು ಸಣ್ಣಗಾಗಿಸಿ, ಸಿಹಿತಿಂಡಿಗೆ ಹಠಹಿಡಿಯುವ ಮಕ್ಕಳಂತೆ ಮುಖವನ್ನು ಮಾಡಿ, 'ಅಚ್ಚ ಜಿ ಮೈ ಹಾರಿ ಚಲೋ ಮಾನ್ ಜಾಹೂ ನ' ಹಾಡಿನ ಮಧುಬಾಲಳಂತೆ ನನ್ನನ್ನು ನೋಡುತ್ತಾ ಕೇಳಿದ ಅವರ ಆ ಪರಿಗೆ ಒಲ್ಲೆ ಎನ್ನುವ ಗಂಡಸು ಬಹುಷಃ ಇಡೀ ಬ್ರಹ್ಮಾಂಡದಲ್ಲೇ ಇದ್ದಿರಲು ಸಾಧ್ಯವಿಲ್ಲವೇನೋ. ಏನು ಉತ್ತರಿಸಬೇಕೆಂದು ತಿಳಿಯದೆ ನಾನು ತಡವರಿಸಿದೆ.

'ರಿ ರಾಧ .. ಇತ್ತೀಚಿಗೆ ನೀವು ತುಂಬಾನೇ ಹಾಳಾಗಿದ್ದೀರಾ!'

'ಒಹ್, ಇಸ್ ಇಟ್ .. !' ಎಂದು ಸುಮ್ಮನಾಗಿ ಮುಂದೆ ಮತ್ತೇನನ್ನೋ ಹೇಳಲು ಮುಂದಾದ ಅವರು ಅದನ್ನು ಬದಲಿಸಿ 'ವಾಟೆವರ್.. ಕಿಸ್ ಮಿ ನೌ' ಎಂದು ಪುನ್ಹ ಗೋಗರೆಯತೊಡಗಿದರು.

‘Comeon . .ಇದು ಕಾಲೇಜ್ ರೀ . .ನನ್ನ್ ರೂಮ್ ಅಲ್ಲ' ನಾನು ನಗಾಡಿದೆ.

‘Doesn’t make any difference..’ ಎಂದ ಅವರು ನನ್ನ ಟಿಶರ್ಟ್ ಅನ್ನು ಹಿಡಿದು ಹತ್ತಿರಕ್ಕೆ ಎಳೆದುಕೊಂಡರು. ನನ್ನ ಎದೆ ಭಯದಿಂದಲೋ, ಉತ್ಸಾಹದಿಂದಲೋ ಗಡಗಡನೆ ನಡುಗತೊಡಗಿತು.ಟೆರೇಸಿನ ಮೇಲೆ ಸದ್ಯಕಂತು ನಾವಿಬ್ಬರೇ ಇದ್ದರೂ, ಗಂಡು ಮಾನವನ ನನ್ನೀ ಅಸೆ ಆಕಾಂಕ್ಷೆಗಳು ದೇವರಾಣೆಗೂ ಜಾಗೃತಗೊಂಡಿದ್ದರೂ, ಜೀವನದ ಮೊಮ್ಮದಲ ಚುಂಬನದ ಸುವರ್ಣಾವಕಾಶ ಮಗದೊಮ್ಮೆ ಎದುರಾಗಿದ್ದರೂ ನನ್ನ ಮನ ಪುನ್ಹ ತನ್ನ ಅಹಃ ಅನ್ನು ತೋರತೊಡಗಿತು.

ಸೊ, ನಿನ್ನ ಅವರ ಸಂಬಂಧ ಇಂತಹ ಕೆಲವು ಘಳಿಗೆಗಳಿಗೆ ಮಾತ್ರ ಸೀಮಿತವೇ? ಗೆಳೆತನ, ಸಲಿಗೆ ಅಂದ ಮಾತ್ರಕ್ಕೆ .. ಎಂದು ಏನೇನೋ ಗೊಣಗತೊಡಗಿತು.

‘What Happened?!’ ನಯವಾಗಿ ಕೇಳಿದರು ಅವರು.

ಅಗಣಿತ ಯೋಚನೆಯಲ್ಲಿ ಮುಳುಗಿದ ನನಗೆ ಆಕೆಯ ಪ್ರೆಶ್ನೆಗೆ ಉತ್ತರವನ್ನು ಹೇಳಲು ತಡವರಿಸತೊಡಗಿದೆ. ಏನೋ ಒಂದು ಗಟ್ಟಿ ನಿರ್ಧಾರವನ್ನು ಮಾಡಿಕೊಂಡಂತೆ ನಾನು,

ಆಕೆಯ ಕಪೋಲಗಳೆರಡನ್ನೂ ಹಿಡಿದು 'ರಾಧಾ .. Marry me!!' ಎಂದು ಪ್ರಯಾಸಪಟ್ಟು ಕೇಳಿದೆ. ನನ್ನ ಜೀವನದ ಅಷ್ಟೂ ಆಶೋತ್ತರಗಳನ್ನು ಈಡೇರಿಸುವ ಅಕ್ಷಯಪಾತ್ರೆಯಂತೆ ಆಕೆಯ ನುಣುಪಾದ ಮುಖ ನನಗೆ ಭಾಸವಾಯಿತು. ಬಹುಷಃ ನನ್ನ ಜೀವನದ ಗುರಿ ಸ್ಪಷ್ಟವಾಗತೊಡಗಿತು.

ಕೆಲಕ್ಷಣಗಳ ಕಾಲ ವಿಚಿತ್ರ ಭಂಗಿಯಲ್ಲಿ ನನ್ನ ನೋಡಿದ ಆಕೆ,

‘What did you just say?! ನನ್ನ ಕೈಗಳನ್ನು ಆಕೆಯ ಕೆನ್ನೆಗಳಿಂದ ಬೇರ್ಪಡಿಸಿ ದೂರಕ್ಕೆ ತಳ್ಳಿ ‘What’s your age you know by the way?’ ಎಂದು ಕುಪಿಸಿಗೊಂಡು ಕೇಳಿದರು.

'ಟ್ವೆಂಟಿ' ಪೆದ್ದನಂತೆ ನಾನು ಉತ್ತರಿಸಿದೆ.

'ಏನ್ ಕಾಮಿಡಿ ಮಾಡ್ತಿದ್ದೀಯಾ.. You know my age' ಎಂದು ಚಿದಂಬರ ರಹಸ್ಯವನ್ನು ಭೇದಿಸು ಸಾಧ್ಯವಾದರೆ ಎಂಬಂತೆ ನನ್ನ ಕೇಳಿದಳು.

'ಟ್ವೆಂಟಿ ಒನ್ ?'

'ನಿನ್ ತಲೆ .. I’m 25' ಎಂದು ಸುಮ್ಮನಾದರು

'ಸೊ ವಾಟ್ .. I love you and would like to marry you..That's it' ಎಂದು ಸುಮ್ಮನಾಗಿ 'That must be my destination'

'Destination?..What kind of Destination it is? And you love me in what bloody sense?' ಎಂದು ತುಸು ಜೋರಗಿಯೇ ಹೇಳಿದರು. ಈಗ ಕಾಣುತ್ತಿರುವ ಗಂಟಿಕ್ಕಿಕೊಂಡಿದ್ದ ಕೋಪಭರಿತ ಅವರ ಮುಖಕ್ಕೂ ಕೆಲ ಸೆಕೆಂಡುಗಳ ಹಿಂದಷ್ಟೇ ನನ್ನ ಕೈಯ ಮೇಲೆ ಅರಳಿದ ತಾವರೆಯಂತಹ ಆ ಚಹರೆಗೂ ಅಜಗಜಾಂತರ ವ್ಯತ್ಯಾಸವಿದ್ದಿತು.

'Don’t overreact.. ನೀವೂ ನನ್ನ ಇಷ್ಟ ಪಡುತ್ತಿದ್ದೀರಾ ಎನ್ನುವುದು ಗೊತ್ತು .. ನನ್ನ ಡಿಗ್ರಿ ಮುಗಿಯುವವರೆಗೂ ತಾಳಿ .. ನಂತರ ನಾನೇ ಖುದ್ದಾಗಿ ಮನೆಯವರನ್ನ ಒಪ್ಪಿಸ್ತೇನೆ’ ಎಂದು ನಾನು ಆಕೆಯ ಹತ್ತಿರಕ್ಕೆ ತೆರಳಿದೆ. ಆದರೆ ಈ ಬಾರಿ ಕೊಸರಾಡತೊಡಗಿ ತೀಕ್ಷ್ಣವಾಗಿ ನೋಡಿದ ಆಕೆ ನನ್ನ ಕೆನ್ನೆಯ ಮೇಲೊಂದು ಛಟಾರನೆ ಭಾರಿಸಿ ಅಲ್ಲಿಂದ ಬಿರಬಿರನೆ ಹೊರನೆಡೆದರು. ಆ ಹೊಡೆತ ನನಗೆ ಗೊಂದಲದೊಟ್ಟಿಗೆ ವಿಪರೀತ ನೋವನ್ನೂ ಉಂಟುಮಾಡಿತು. ಅಂತಹ ಅನ್ನಬಾರದನ್ನು ನಾನು ಏನಂದೆ ಎಂದು ಯೋಚಿಸುತ್ತಾ ನಿಂತೆ




ಮುಂದುವರೆಯುವುದು......

ಪಯಣ - 8

'ಅವಳಜ್ಜಿ .. ಕೊಬ್ಬ್ ನೋಡು .. ಏನ್ ಇವ್ಳು ಶಕೀರಾನ ತಂಗಿ .. ಅಟ್ಟಿಟ್ಯೂಡ್ ಬೇರೆ ..' ಕೆಂಡದ ಮೇಲಿನ ತುಂಡನ್ನು ತಿನ್ನಲೋಗಿ ಮೂತಿ ಸುಟ್ಟ ನಾಯಿಮರಿಯಂತೆ ನನ್ನ ಪಕ್ಕಕೆ ಕೂತು ಕುಯಿಂಗುಡತೊಡಗಿದ ಲೋಕೇಶ.

ಮದ್ಯಾಹ್ನದ ಆ ಫ್ರೀ ಕ್ಲಾಸ್ಸಿನಲ್ಲಿ ಹೀರೋಗಿರಿಯನ್ನು ತೋರಿಸುವ ಅಮಲಿನಲ್ಲಿ ಶಾರುಖ್ ಖಾನ ನಡಿಗೆಯನ್ನು ನಡೆಯುತ್ತಾ ತನ್ನ ಕ್ರಶ್ ಉಷಾಳ ಮುಂದೋಗಿ ನಿಂತ. ಆಕೆಯ ಮುಂದೆ ನಿಲ್ಲುವ ಧೈರ್ಯಕ್ಕೋ ಅಥವಾ ಸಾಹಸಕ್ಕೋ ಏನೋ ಇಡೀ ಕ್ಲಾಸೇ ಒಮ್ಮೆ ನಿಶಬ್ದವಾಯಿತು, ಆತನನ್ನೇ ಧಿಟ್ಟಿಸತೊಡಗಿತು. ಲೊಕೇಶನ ಆತ್ಮವಿಶ್ವಾಸ ನಾನು ಅಗಿದು ಹೊರಬಿಡುತ್ತಿದ್ದ ಚೀವಿಂಗ್ ಗಮ್ನ ಗುಳ್ಳೆಗಿಂತಲೂ ದೊಡ್ಡದಾಯಿತು.

'ಏ ಉಷಾ.. ನೆನ್ನೆ ಮಾಡಿದ್ ಮ್ಯಾಥಮೆಟಿಕ್ಸ್ ಕ್ಲಾಸ್ಸಿನ ನೋಟ್ಸ್ ಕೊಡೆ..' ಎಂದು ತನ್ನ ಮನೆಯಾಕೆಯನ್ನು ಕೇಳುವಂತೆ ಎದೆಯುಬ್ಬಿಸಿಕೊಂಡು ಕೇಳಿದ.

ಕೆಲಕ್ಷಣ ಆತನ ವಿಚಿತ್ರ ಬಂಗಿಯನ್ನು ಮೇಲಕ್ಕೂ ಕೆಳಕ್ಕೂ ನೋಡಿದ ಆಕೆ,

'ಹೋಗಲೋ ಪೊರ್ಕಿ .. ಮುಖ ನೋಡ್ಕೋ..ನೋಟ್ಸ್ ಕೊಡೆ ಅಂತೇ.. ಥು! ' ಎಂದು ಉಗಿದಳು.

ಆಕೆಯ ಆ ಉತ್ತರವನ್ನು ಕೇಳಿ ಕ್ಷಣಮಾತ್ರದಲ್ಲಿ ಲೊಕೇಶನ ಮುಖ ಕೆಂಪೇರಿತು. ಆಕೆಯ ಪಕ್ಕದಲ್ಲಿದ್ದ ಮೂವರು ಹುಡುಗಿಯರನ್ನು ಬಿಟ್ಟರೆ ಇಡೀ ಕ್ಲಾಸಿಗೆ ಕ್ಲಾಸೇ ಗೊಳ್ಳೆಂದು ನಕ್ಕಿತು. ನಮ್ಮ ಏಕೈಕ ಗೆಳೆಯನಿಗೆ ತುಂಬಿದ ಕ್ಲಾಸ್ ರೂಮಿನಲ್ಲಿ ನೆಡೆದ ಅವಮಾನದಿಂದ ಪಾರುಮಾಡುವುದ ಬಿಟ್ಟು ನಾನು ಹಾಗು ಆದಿ ನಕ್ಕರು ನಗದಂತೆ ನಟಿಸಿದೆವು. ಆ ನಗುವಿನ ತಡೆಯುವಿಕೆಯಲ್ಲಿ ನನ್ನ ಹೊಟ್ಟೆ ತಡೆಯಲಾರದಷ್ಟು ನೋಯತೊಡಗಿತು. ಆದಿ ಸುಸ್ಸು ಎಂದು ನಾಟಕವಾಡಿ ಕಾರಿಡಾರಿನ ಬಳಿಗೋಗಿ ಸಾಧ್ಯವಾದಷ್ಟು ನಗಾಡಿದ ಹಾಗು ಖುಷಿಗೆ 'Hi..' ಎಂಬ ಮೆಸೇಜನ್ನು ಕಳಿಸಿ ತನ್ನದೇ ಬೇರೊಂದು ಲೋಕದೊಳಗೆ ಮುಳುಗಿದ!

'ಬೆಳ್ಳಗೆ, ತೆಳ್ಳಗೆ ಈದ್ಬಿಟ್ರೆ ಏನ್ ಊರವ್ರೆಲ್ಲ ಪುಕ್ಸಾಟೆ ಬಿದ್ದಿರ್ತಾರೆ.. ನನ್ನ್ ಗದ್ದೆ ಒಳಗೆ ತಳ್ಳಿ ಬೆಳಗಿಂದ ಸಂಜೆವರ್ಗು ಗೇಯ್ಸ್ಬೇಕು .. ಲುಕ್ ನೋಡು .. ಅವಳಜ್ಜಿ ಪಿಂಡ.. ಸಿಗ್ಲಿ ತಾಳು..' ಎಂದು ತನ್ನೊಳಗೆ ಏನೇನೋ ಗುನುಗಿಕೊಳ್ಳತ್ತಾ ನನ್ನ ಪಕ್ಕಕ್ಕೆ ಬಂದು ಕುಳಿತ. ಕೆಲವೊಮ್ಮೆ ಎದ್ದು ನಂತರ ಕೂತೂ ಇನ್ನೇನು ಒಂದೇ ಕುಪ್ಪಳದಲ್ಲಿ ಆಕೆಯ ಬಳಿಗೆ ನೆಗೆದು ಆಕೆಯ ಕೆನ್ನೆಯ ಮೇಲೊಂದು ಛಟಾರನೆ ಭಾರಿಸುವವನಂತೆ ಆಡುತ್ತಿದ್ದ. ನಂತರ ಸ್ವಲ್ಪ ಹೊತ್ತು ಸುಮ್ಮನಾಗಿ, 'ಇನ್ಮುಂದೆ ನೋಡ್ತಾ ಇರು .. ಅವಳನ್ನ ಹೆಂಗ್ ಆಟ ಆಡಸ್ತೀನಿ ಅಂತ .. ಲೆಕ್ಚರರ್ ಮಗ್ಳು ಅಂತ ತುಂಬಾನೇ ಇದೆ.. ' ಎಂದು ಎದ್ದು ಕ್ಲಾಸಿನಿಂದ ಬಿರಬಿರನೆ ಹೊರನೆಡೆದ. ಮೊದಲೇ ಹಠಮಾರಿ. ಮುಂದೇನು ಮಾಡುವನೋ ಎಂದು ನನಗೆ ಕೊಂಚ ಭಯಮೂಡತೊಡಗಿತು. ಅದೇನೇ ಆಗಲಿ ತುಂಬಿದ ಕ್ಲಾಸಿನಲ್ಲಿ ಹುಡುಗನೊಬ್ಬನೊಟ್ಟಿಗೆ ಈ ರೀತಿ ವರ್ತಿಸುವುದು ಸುತರಾಂ ಸರಿಯಲ್ಲ ಎಂದೂ ಅನಿಸಿತು.

ಲೋಕೇಶ ಹೇಳುವಂತೆ ಅಂದ ಚೆಂದಗಳಿದ್ದ ಮಾತ್ರಕ್ಕೆ ಆಕೆಯ / ಆತನ ಮಾತುಗಳೆಲ್ಲವೂ ವೇದವಾಕ್ಯಗಳಾಗುತ್ತಾವೆಯೇ? ಇಲ್ಲವಾದರೆ ಅದು ಯಾರಿಗೂ ಬೇಡದ ಕಸವಾಗುತ್ತದೆಯೇ?

ಲೋಕೇಶ ಕ್ಲಾಸ್ ರೂಮಿನಿಂದ ಹೊರಬಂದವನೇ ದೂರದ ದುಡ್ಡವನ್ನು ಧಿಟ್ಟಿಸುತ್ತ ಕಾರಿಡಾರಿನ ಮೂಲೆಯಲ್ಲಿ ನಿಂತ.

'ಏನಾಗಲ್ಲ ಬಿಡು ಮಚಿ.. ನೀನೂ ಸಹ ಆ ತರ ಹುಡ್ಗಿರ್ನ ಏಕವಚನದಲ್ಲಿ ಮಾತಾಡ್ಸೋದು ಸರಿ ಇರ್ಲಿಲ್ಲ' ಕೂಡಲೇ ಆತನನ್ನು ಹಿಂಬಾಲಿಸಿ ಬಂದ ನಾನೆಂದೆ.

ಲೋಕೇಶ ಮಾತನಾಡಲಿಲ್ಲ.

ಆತನ ಹೆಗಲನ್ನು ತಟ್ಟುತ್ತಾ 'ಹೋಗ್ಲಿ ಬಿಡಿ ಬಾಸ್.. ಸಂಜೆ ಬಿಯರ್ ಟ್ರೀಟ್ ನನ್ನ್ ಕಡೆಯಿಂದ.. ತಮ್ಮ್ ಎಲ್ಲ ಫ್ರಸ್ಟ್ರೇಷನ್ ಅವಾಗ ತೆಗಿರಂತೆ..’

ಬಿಯರ್ನ ಹೆಸರೆತ್ತಿದರೆ ಸಾಕು ಮಕ್ಕಳಂತೆ ಕುಣಿದು ಕುಪ್ಪಳಿಸುವ ಆತ ಅದಕ್ಕೂ ಏನನ್ನು ಉತ್ತರಿಸಲ್ಲಿಲ್ಲ. ಕೂಡಲೇ ಕ್ಲಾಸ್ ರೂಮಿನೊಳಗೋಗಿ ತನ್ನ ಬ್ಯಾಗನ್ನು ತೆಗೆದುಕೊಂಡು ರೂಮಿಗೆ ಹೊರಟೇ ಹೋದ. ಆತ ಅಷ್ಟು ಸೀರಿಯಸ್ ಆಗಿದ್ದನ್ನು ನಾನು ಕಂಡಿರುವುದು ಬಹಳ ಕಡಿಮೆಯೇ. ಆಗಾದಾಗಲೆಲ್ಲ ಆತ ತೆಗೆದುಕೊಳ್ಳುವ ನಿರ್ಧಾರಗಳು ಮಾತ್ರ ಸಾಮಾನ್ಯನಾದವನಿಗೆ ಅರಗಿಸಿಕೊಳ್ಳುವುದು ತುಸು ಕಷ್ಟವೇ. ನನಗೆ ಚಿಂತೆ ಕಾಡತೊಡಗಿತು.

ಇಷ್ಟೆಲ್ಲಾ ಆದರೂ ಬಿಸ್ಕಟ್ ಪ್ಯಾಕಿನ ಗಾತ್ರದ ತನ್ನ ಫೋನಿನಲ್ಲಿ ತಲೆಯ ಹೇನನ್ನು ಹುಡುಕುವಂತೆ ಮೆಸ್ಸೇಜುಗಳನ್ನು ಕುಟ್ಟುತ್ತಿದ್ದ ಆದಿಯ ತಲೆಯ ಮೇಲೊಂದು ಜೋರಾಗಿ ತಟ್ಟಿ ಕ್ಲಾಸ್ ರೂಮಿನೊಳಗೆ ಕರೆದುಕೊಂಡು ಓದೆ.




****




ನೀರವ ಮೌನದ ರಾತ್ರಿಯನ್ನು ಒಮ್ಮೆಲೇ ಕದಡಿದಂತೆ ಮಾಡಿತು ಲೊಕೇಶನ ಚೀರುವ ಸದ್ದು.

'ಲೇ ನಿನ್ನಜ್ಜಿ, ಬಾರೆ ಹೊರ್ಗೆ..' ಎಂದು 'ಬಾ' ಅಕ್ಷರವನ್ನು ಎರಡು ಸೆಕೆಂಡುಗಳಿಗೂ ಮಿಗಿಲಾಗಿ ಎಳೆದು ಅರಚಿದ ಸದ್ದು ತೆಪ್ಪಗೆ ತಮ್ಮ ಪಾಡಿಗೆ ಹಾಯಾಗಿ ಮಲಗಿದ್ದ ನಾಯಿಗಳನ್ನೂ ಜಾಗೃತಗೊಳಿಸಿತು. ಕುಡಿದ ಅಮಲಿನಲ್ಲಿ ಮೂಡಿದ ವಿಚಿತ್ರ ಸದ್ದಿಗೆ ಯಾವುದೊ ಮಹಾ ಜೀವಜಂತುವೊಂದು ಆಗಸದಿಂದ ಬಂದು ಬಿದ್ದಿರಬೇಕೆಂಬ ಭಯದಿಂದಲೋ ಏನೋ ಕೂಡಲೇ ಅವುಗಳ ಬೊಗಳುವಿಕೆಯ ಬುದ್ಧಿಯೂ ಕೊಂಚ ಯೋಚಿಸತೊಡಗಿದಂತಿತ್ತು.

'ಏನೇ .. ನಿಮ್ ಅಮ್ಮ ಮಗ್ಳುದು .. ಏನ್ ಕಾಲೇಜ್ ನಿಮ್ಮಪ್ಪಂದ .. ಏನ್ ನಕ್ರ ಗೂರೂ ಇವರ್ದು..'

'ಲೋಕಿ .. ಸುಮ್ನಿರೋ .. ಲೋಫರ್ .. ಗೊತ್ತಾದ್ರೆ ನಾಳೆ ಡಿಬಾರ್ ಆಗ್ತಿವಿ..' ಸ್ಥಿತಪ್ರಜ್ಞನಂತೆ ನಟಿಸುತ್ತಿದ್ದ ಆದಿ ಲೊಕೇಶನನ್ನು ತಡೆಯಲು ಪ್ರಯತ್ನಿಸುತ್ತಿದ್ದರೆ ನಾನು ಅದಾಗಲೇ ಆಕಾಶದ ನಕ್ಷತ್ರವನ್ನು ಎಣಿಸುವಂತೆ ತಲೆಯನ್ನು ಮೇಲೆತ್ತಿ ಅವರಿಬ್ಬರನ್ನು ಹಿಂದಿಕ್ಕಿ ಮುನ್ನೆಡಯತೊಡಗಿದ್ದೆ. ಆದಿ ತಡೆಯುವಂತೆ ನನ್ನ ಕೊರಳ ಪಟ್ಟಿಯನ್ನು ಹಿಡಿದು ಎಳೆದ. ಅದರ ರಭಸಕ್ಕೆ ನಾನು ದೊಪ್ಪನೆ ಆತನ ಮೇಲೆರಗಿ ಬಿದ್ದೆ.

'ಡೋಂಟ್ ವರಿ ಮಚಿ .. ಡಿಬಾರ್ ಆದ್ರೆ ನಾನ್ ನಿಂಗೆ ಕೆಲ್ಸ ಕೊಡ್ತೀನಿ.. ಗದ್ದೇಲಿ..’ ಎಂದು ಕೊಂಚ ಸುಮ್ಮನಾಗಿ ‘ಅಮ್ಮ ಮಗ್ಳು ಇಬ್ರನ್ನೂ ಅಲ್ಲಿ ಕೆಲ್ಸಕ್ಕೆ ಸೇರಿಸ್ಕೊಬೇಕು .. ನೀನೆ ಮೇಸ್ತ್ರಿ..' ಎಂದು ಆತ ಕಿಸಕಿಸನೇ ನಕ್ಕರೆ ಅತ್ತಕಡೆ ಮನೆಯೊಳಗಡೆಯ ಲೈಟುಗಳು ಒಂದೊಂದಾಗಿಯೇ ಹೊತ್ತಿಕೊಂಡವು. ಮನೆಯ ಲೈಟುಗಳ ಹೊಳಪು ಬಾಲಮುದುಡಿ ಕುಯಿಂಗುಡುತ್ತಿದ್ದ ನಾಯಿಗಳಿಗೆ ಎಲ್ಲಿಲ್ಲದ ಬಂಡ ಧೈರ್ಯವನ್ನು ತಂದುಕೊಟ್ಟವು. ಕೂಡಲೇ ಕಿವಿಯ ಟಮಟೆಯೇ ಹರಿದು ಹೋಗುವಂತೆ ಬೊಬ್ಬಿಟ್ಟ ಅವುಗಳ ಸದ್ದು ಇಡೀ ಪ್ರದೇಶದಲ್ಲಿ ಮಾರ್ದನಿಸತೊಡಗಿತು.

'ಆದಿ, ಯಾವ್ ಪ್ರಾಣಿಗಳೂ ಅವು .. ಹುಲಿಗಳ ಆತ್ಮ ಮೈಮೇಲೆ ಬಂದಿರೋ ಹಾಗೆ ಕೂಗ್ತಾ ಇದ್ದವಲ್ಲೋ' ಎಂದ ಲೋಕಿ ಇತ್ತ ತಿರುಗಿದರೆ ಆತನಿಗೆ ನಾವುಗಳು ನೆಲದ ಮೇಲೆ ಬಿದ್ದಿರುವುದು ತಿಳಿಯಲಿಲ್ಲ. ನಾವು ಅಲ್ಲಿಂದ ಓಡಿರಬೇಕೆಂದುಕೊಂಡ ಆತ, 'ಬಡ್ಡಿಮಕ್ಳ, ನಿಲ್ರೋ .. ಓಡ್ಬೇಡಿ' ಎಂದು ಆತನೂ ಓಡಲು ಅಣಿಯಾಗಿ ನನ್ನ ಕಾಲು ಆತನಿಗೆ ತಡೆಯಾಗಿ ಮುಗ್ಗರಿಸಿ ದೊಪ್ಪನೆ ನೆಲದ ಮೇಲೆ ಬಿದ್ದ.

ಅದಾಗಲೇ ಯಾರೋ ಒಳಗಿನಿಂದ ಹೊರಬಂದು ನಿಂತರು. ಬಹುಷಃ ಕಾಂಪೊಂಡಿನ ಗೋಡೆಗಳು ಎತ್ತರವಿದ್ದರಿಂದಲೋ ಏನೋ ನಾವುಗಳು ಕೆಳಗೆ ಬಿದ್ದು ಕೊಸರಾಡುತ್ತಿದ್ದದ್ದು ಅವರಿಗೆ ಕಾಣಲಿಲ್ಲ. ಆದಿ ಲೊಕೇಶನ ಬಾಯಿಯನ್ನು ತನ್ನ ಎರಡೂ ಕೈಗಳಿಂದ ಮುಚ್ಚಿ ಹಿಡಿದ ಸಾಹಸವಂತೂ ಅವರ್ಣನೀಯವಾದದ್ದು. ಒಂದೆರೆಡು ನಿಮಿಷ ಅಲ್ಲಿಯೇ ನಿಂತ ಅವರು ನಂತರ ಮನೆಯೊಳಗೇ ಹೋದರು. ಆದರೆ ಹೋಗುವ ಮುನ್ನ ಹುಚ್ಚು ರಕ್ಕಸರಂತೆ ಆಡುತ್ತಿದ್ದ ನಾಯಿಗಳೆರಡನ್ನೂ ಬಿಟ್ಟು ಏನೋ ವಿಚಿತ್ರವಾಗಿ ಅವುಗಳ ಕಿವಿಯಲ್ಲಿ ಹೇಳಿದರು. ಆ ನಾಯಿಗಳೂ ದೊಡ್ಡ ಗೇಟಿನ ಸರಳುಗಳ ಮದ್ಯೆಯೇ ಪವಾಡಸದೃಶ್ಯ ರೀತಿಯಲ್ಲಿ ನುಗ್ಗಿ ಹೊರಬಂದು ನಮ್ಮೆಡೆಗೆ ಬೌಗುಡತೊಡಗಿದವು. ಅಮಲಿನ ಅರೆಪ್ರಜ್ಞನಾಗಿದ್ದ ನಾನು ಉಳಿದ ಪ್ರಜ್ಞೆಯನ್ನು ಒಟ್ಟುಗೂಡಿಸಿ ನಾಯಿಗಳು ಅದೆಷ್ಟೇ ಕಿರುಚಾಡಿದರೂ ಅಲುಗಾಡಗೆ ಸುಮ್ಮನೆ ಇದ್ದುಬಿಡಬೇಕೆಂದು ಇಬ್ಬರಿಗೂ ಹೇಳಿದೆ. ಆಶ್ಚರ್ಯವೇನೋ ಎಂಬಂತೆ ಲೊಕೇಶನೂ ನನ್ನ ಮಾತನ್ನು ಕೇಳುವವನಂತೆ ಕಂಡ. ಜೀವವಿರದ ಕಲ್ಲಿನ ಬಂಡೆಗಳಂತೆ ಬಿದ್ದಿದ್ದ ನಮ್ಮನ್ನು ಕಂಡು ಅಕ್ಷರ ಸಹ ಕನ್ಫ್ಯೂಸ್ ಆದ ನಾಯಿಗಳು ಏನು ಮಾಡಬೇಕೆಂದು ತೋಚದೆ ಕಕ್ಕಾಬಿಕ್ಕಿಯಾಗಿ ಒಂದರ ಮುಖವನ್ನು ಮತ್ತೊಂದು ನೋಡತೊಡಗಿದವು. ರಾತ್ರಿಯ ನೀರವ ಮೌನ ಮತ್ತೊಮ್ಮೆ ಅಲ್ಲಿ ಆವರಿಸಿ ಇನ್ನೇನು ಅವುಗಳು ತಮ್ಮ ಸ್ವಸ್ಥಾನಕ್ಕೆ ಹೋಗಬೇಕು ಎನ್ನುವಷ್ಟರಲ್ಲಿ ಕಿಸಕ್ಕನೆ ನಕ್ಕ ಲೋಕೇಶ! ಬಲ ತಿರುವಿಕೊಂಡು ರಾಜನೆಡೆಯನ್ನು ಇಡುತ್ತಿದ್ದ ಅವುಗಳಿಗೆ ಲೊಕೇಶನ ನಗುವ ಸದ್ದು ನಮ್ಮ ಇರುವುಕೆಯನ್ನು ಖಾತ್ರಿ ಪಡಿಸಿತ್ತಲ್ಲದೆ ಆ ಸದ್ದು ನಮ್ಮನ್ನು ಮೂದಲಿಸಲು ಮೂಡಿರುವುದೇನೋ ಎಂಬಂತೆ ಕೆಂಡಾಮಂಡಲವಾದ ನಾಯಿಗಳು ನಮ್ಮನ್ನು ನುಂಗೇ ಬಿಡುತ್ತವೆನ್ನುವ ಧಾಟಿಯಲ್ಲಿ ಚೀರುತ್ತಾ ಮುನ್ನುಗ್ಗತೊಡಗಿದವು. ಅವುಗಳ ಆ ರುದ್ರವಾತಾರವನ್ನು ನೋಡಲಾಗದೆ ಎಂಬಂತೆ ನಾನು ಹಾಗು ಆದಿ ಜಾಗವನ್ನು ಒಂದೇ ಕುಪ್ಪಳದಲ್ಲಿ ಖಾಲಿಮಾಡಿದರೆ ಲೋಕೇಶ ಮಾತ್ರ ನೆಲದ ಮೇಲೆಯೇ ಕೂತಿದ್ದ. ನಾವುಗಳು ಅದೇನೇ ಅರಚಿದರೂ ಆತ ಅಲ್ಲಿಂದ ಕದಲಲಿಲ್ಲ. ಎರಡು ನಾಯಿಗಳಲ್ಲಿ ಬಲು ಎತ್ತರದ ಒಂದು ಇನ್ನೇನು ಬಂದು ಲೊಕೇಶನ ಭುಜಕ್ಕೆ ಬಾಯಿಯಾಕಿ ಎಳೆಯಬೇಕು ಎನ್ನುವಷ್ಟರಲ್ಲಿ ಕ್ಷಣಮಾತ್ರದಲಿ ಚಂಗನೆ ಎದ್ದುನಿಂತ ಲೋಕೇಶನ ಬಂಗಿಯನ್ನು ಕಂಡು ತಮ್ಮ ಅರಚುವ ಶಕ್ತಿಯನ್ನೆಲ್ಲ ಕಾಲಿಗೆ ಬ್ರೇಕ್ ಹಾಕುವುದರಲ್ಲಿ ಅವುಗಳು ವ್ಯಯಿಸಿದವು. ಲೋಕೇಶ ಯುದ್ಧಕ್ಕೆ ಅಣಿಯಾಗುವ ಉನ್ಮಾದಭರಿತ ಸೈನಿಕನಂತೆ ನಿಂತರೆ ಅವುಗಳಿಗೆ ಯಾವ ಪ್ರತಿಕ್ರಿಯೆಯನ್ನು ಕೊಡಬೇಕೆಂದು ಬಹುಷಃ ತಿಳಿಯಲಿಲ್ಲ. ಸಾಲದಕ್ಕೆ ಮನೆಯೊಳಗಿನ ಲೈಟುಗಳೂ ಆಗಲೇ ಆಫ್ ಆದವು. ಇಡೀ ಏರಿಯಾದಲ್ಲಿ ಕೇವಲ ಧ್ವನಿಯಿಂದಲೇ ಭಯವನ್ನು ಸೃಷ್ಟಿಸಿದ್ದ ನಾಯಿಗಳಿಂದು ಎಲ್ಲಿ ಇತರ ನಾಯಿಗಳ ಆಗಮವಾಗಿ ಅವುಗಳ ಮುಂದೆ ತಮ್ಮ ಹವಾ ಕಡಿಮೆಯಾಗುವುದೋ ಎಂಬಂತೆ ಕೂಡಲೇ ಅಲ್ಲಿಂದ ಜಾಗವನ್ನು ಕಿತ್ತವು.

ಮರುದಿನ ಬೆಳಗ್ಗೆ ಎದ್ದು ಒಬ್ಬರನೊಬ್ಬರ ಮುಖವನ್ನು ನೋಡಿದರೆ ಕರಿದ ಬೋಂಡಗಳಂತೆ ಅಲ್ಲಲ್ಲಿ ಕೆಂಪಗಿನ ಕಲೆಗಳು ಮೂಡಿದ್ದವು. ಬಟ್ಟೆಗಳೆಲ್ಲ ಹರಿದು ಕೊಳಕು ಮುದ್ದೆಯಾಗಿದ್ದವು. ಲೊಕೇಶನ ಕೈ ತೆರಚಿ ಕೆಂಪಾಗಿದ್ದರೆ ಹಣೆಯಲ್ಲಿ ರಕ್ತ ಹೆಪ್ಪುಗಟ್ಟಿದಂತೆ ಕಾಣುತ್ತಿತ್ತು. ನಾಯಿಗಳು ಅಲ್ಲಿಂದ ಜಾಗ ಕಿತ್ತ ಮೇಲೆ ಹೇಗೆ ರೂಮನ್ನು ತಲುಪಿದೆವು ಎಂದು ಯಾರೊಬ್ಬರಿಗೂ ನೆನಪಿಲ್ಲ. ಮೊದಲಬಾರಿಗೆ ಎಂಬಂತೆ ಬಿಯರ್ ಅನ್ನು ಬಿಟ್ಟು ಬೇರೆ ಬ್ರಾಂಡಿನ ಆಲ್ಕೋಹಾಲ್ ಗಳನ್ನು ಕುಡಿಯಲು ಪ್ರಯತ್ನಿಸಲೋಗಿ ಆದ ವಿಪತ್ತು ನಮ್ಮ ತಲೆಯನ್ನು ತಗ್ಗಿಸುವಂತೆ ಮಾಡಿತು. ಕಾಲೇಜಿನ ನಾಟಕ ಮಂಡಳಿಯ ಅಧ್ಯಕ್ಷನಗಾಗುವ ಅವಕಾಶವಿರುವ ನನಗೆ ಎಲ್ಲಿಯಾದರೂ ಈ ರೀತಿ ಕುಡಿದ ನಶೆಯಲ್ಲಿ ಯಾರಿಗಾದರೂ ಸಿಕ್ಕಿಕೊಂಡರೆ ಏನು ಗತಿ ಎಂದು ಯೋಚಿಸಿಯೇ ಮೈ ಜುಮ್ಮೆನಿಸಿತು. ಉಷಾ ತನಗೆ ಎಲ್ಲರ ಸಮ್ಮುಖದಲ್ಲೇ ಪೊರ್ಕಿ ಎಂದು ಬೈದ ಸಿಟ್ಟಿನ ಅಚಾತುರ್ಯದಲ್ಲಿ ಲೋಕೇಶ ಸಿಕ್ಕ ಸಿಕ್ಕಿದ್ದನ್ನೆಲ್ಲ ಕುಡಿದದ್ದು ನಮ್ಮ ಈ ಗತಿಗೆ ಕಾರಣವಾಯಿತು. ಆತ ತೊಟ್ಟ ಶೂಗಳನ್ನು ಮೊದಲ ಬಾರಿಗೆ ಎಂಬಂತೆ ರೂಮಿನೊಳಗೆ ತಂದು ಹಾಗೆಯೆ ಮಲಗಿದ್ದರೆ, ಆದಿ ಬಹಳ ಪ್ರಯತ್ನ ಮಾಡಿ ಹೊಟ್ಟೆಯೊಳಗೇ ತಡೆದಿದ್ದ ಎಲ್ಲವನ್ನೂ ಮಲಗಿದ್ದ ದಿಂಬಿನ ಮೇಲೆಯೇ ಕಕ್ಕಿಕೊಂಡಿದ್ದ. ಅಮಾಯಕನಂತೆ ಮುದುಡಿ ಮಲಗಿದ್ದ ಅವನನ್ನು ಬಚ್ಚಲುಮನೆಗೆ ತಂದು ಸ್ನಾನ ಮಾಡಿಸಿ ಮಲಗಿಸಿದೆವು. ಲೊಕೇಶನ ಗಾಯಗಳಿಗೆ ಬ್ಯಾಂಡೇಜನ್ನು ಹಾಕಿ ಕಣ್ಣ್ಮುಚ್ಚಿದವನಿಗೆ ಎಚ್ಚವಾದಾಗ ಅದಾಗಲೇ ಸಂಜೆ ಏಳಾಗಿದ್ದಿತು! ಲೋಕಿ ಮೊದಲ ಬಾರಿಗೆ ಎಂಬಂತೆ ತನಗೆ ತಿಳಿದ ಮಟ್ಟಿಗೆ ಮಾಡಿದ ಟೀಯನ್ನು ನಮ್ಮ ಮುಂದೆ ತಂದಿಟ್ಟ. ಮೂವರು ಒಂದಿನಿತು ಮಾತನಾಡದೆ ಕುಡಿದು ಸುಮ್ಮನೆ ಕೂತೆವು.

'This is it!.. ಇನ್ ಮುಂದೆ ಯಾವತ್ತೂ ಆ ಹಾಳದನ್ನ ಕುಡೀಬಾರ್ದು.. ಎನಿ ಟೈಮ್ .. ಎನಿ ವೇರ್ ..' ನಾನಂದೆ.

'ಸಾಯೋವರ್ಗು ನಾನ್ ಯಾವದೇ ಡ್ರಿಂಕ್ಸ್ನ ಮುಟ್ಟಲ್ಲ .. ಬಿಯರ್ ಒಂದನ್ನು ಬಿಟ್ಟು' ಎಂದು ತನ್ನ ತಲೆಯ ಮೇಲೆ ಕೈಯಿಟ್ಟು ಹೇಳಿದ ಲೊಕೇಶನನ್ನು ನಾನು ಹಾಗು ಆದಿ ದುರುಗುಟ್ಟಿ ನೋಡಿದೆವು.

'ಮಕ್ಳ .. ನೆನ್ನೆ ರಾತ್ರಿ ಅದ್ ಯಾರ್ ಮನೆ ಮುಂದೋ ನಾವು ಹಾಗೆ ಅರ್ಚಾಡಿದ್ದು? ಇವ ಅದೇ ಉಷಾಳ ಮನೆ ಅನ್ಕೊಂಡಿದ್ದ. ಅವ್ರ್ ಮನೆ ಇರೋದು ಇಲ್ಲಿಂದ ಮೂರ್ ಕಿಲೋಮೀಟರ್ ದೂರ್ದಲ್ಲಿ.. ಆಕಡೆ .. ನಾವ್ ಬಂದಿದ್ದು ಎಕ್ಸಾಕ್ಟ್ಲಿ ಅಪೋಸಿಟ್ ಕಡೆಯಿಂದ ' ಎಂದು ಆದಿ ಹೇಳಿದ ಕೂಡಲೇ ಜಾಗೃತರರಾದ ನಾನು, 'ಶಿಟ್ .. ನಾವೇನಾದ್ರು..' ಎಂದು ಆತಂಕದಿಂದ ಹೇಳಿದೆ. ಕೂಡಲೇ ದಡಬಡನೆ ಮೂವರು ಎದ್ದು ಒಂದು ಅಂದಾಜಿನ ಮೇಲೆ ನೆನ್ನೆ ರಾತ್ರಿ ಬಿದ್ದು ಒರಳಾಡಿದ ಜಾಗದ ತುಸು ದೂರಕ್ಕೆ ಬಂದು ನಿಂತೆವು. ಹದಿನೇಳನೇ ಶತಮಾನದ ಯಾರು ವಾಸಿಸದ ಹಾಳು ಬಂಗಲೆಯದು. ನಗರದ ಏಕ ಮಾತ್ರ ಹಳೆಯ ಕಟ್ಟಡ. ಗಾಳಿ ನೀರು ಬೆಳಕಿಲ್ಲದ ಅದನ್ನು ಈಗ ಸರ್ಕಾರವೇ ಮುಚ್ಚಿ ಹಾಕಿದೆ. ಎಲ್ಲೆಂದರಲ್ಲಿ ಹುಲ್ಲು ಪೊದೆಗಳು ಬೆಳೆದಿರುವ ಅದರಲ್ಲಿ ನೆನ್ನೆಯ ರಾತ್ರಿ ಲೈಟುಗಳು ಆನ್ ಆದದ್ದಾದರೂ ಹೇಗೆ. ಅದ್ಯಾರು ಅಲ್ಲಿಂದ ಹೊರಬಂದು ನಾವು ಬಿದ್ದಿರುವುದನ್ನೇ ನಿಂತು ಕೆಲ ಕಾಲ ನೋಡಿದರು. ತಮ್ಮ ಗಂಟಲೇ ಬಿರಿಯುವಂತೆ ಅರಚುತ್ತಿದ್ದ ಆ ನಾಯಿಗಳಾದರೂ ಎಂಥವು? ಎಂಬೆಲ್ಲ ನಡುಕಹುಟ್ಟಿಸುವ ಪ್ರೆಶ್ನೆಗಳು ಮೂಡುತ್ತಿರುವಾಗಲೇ ನಮ್ಮ ಪಕ್ಕದಲ್ಲಿದ್ದ ಮರದ ಮೇಲಿಂದ ಏನೋ ಜಾರಿದಂತಹ ಸದ್ದಾಯಿತು. ಇದ್ದೆವೋ ಬಿದ್ದೆವೋ ಎನುತ ಅಲ್ಲಿಂದ ಓಡಹತ್ತಿದವರು ನಿಂತದ್ದು ರೂಮಿಗೆ ಬಂದು ಬಾಗಿಲನ್ನು ಹಾಕಿದ ಮೇಲೆಯೇ!



****



'ನನ್ನ್ ಮಕ್ಳ, ಬಿಟ್ಟ್ ಬಿಡ್ರೋ ಲೇ .. ಪ್ಲೀಸ್..' ಆದಿ ಗೋಗರೆದ.

ದೂರದಿಂದ ನುಣ್ಣಗೆ ಕಾಣುವ ಬೆಟ್ಟವನ್ನು ಕ್ಷಣಮಾತ್ರದಲ್ಲಿ ಹತ್ತಿ ಬೀಗುವೆ ಎಂದು ಮುನ್ನೆಡೆದ ಆತ ಭೀಮಕಾಯದ ಬೆಟ್ಟ ಹತ್ತಿರವಾದಂತೆ ತನ್ನ ಜಂಘಾಬಲವೆಲ್ಲ ಕಮರಿದಂತಾಗಿ ಕೂಡಲೇ ಅಲ್ಲಿಂದ ಜಾಗ ಕೀಳಲು ಅವಣಿಸತೊಡಗಿದ. ಲೋಕೇಶ ಆತನನ್ನು ಅಣಕಿಸುತ್ತಾ 'ಬೆಟ್ಟದ್ ಮೇಲಿಂದ ಒಳ್ಳೆ ಸೀನರಿ ಕಾಣುತ್ತೆ ಮಚಿ, ಅಲ್ಲಿ ಇಯರ್ ಫೋನನ್ನು ಕಿವಿಗೆ ಹಾಕಿ ಹಾಡನ್ನು ಕೇಳುತ್ತಾ ಕೂತರೆ ನಿಂಗೆ ಸ್ವರ್ಗ ಕೈಗೆಟುಕಲು ಮೂರೇ ಮೂರು ಮಿಲಿಮೀಟರ್ ಎಂದು..' ಹೇಳುತ್ತಾನೆ. ಆದರೆ ಅದೆಷ್ಟೇ ಪುಸಲಾಯಿಸಿದರೂ ಕಾಲು ಕಿಲೋಮೀಟರ್ನಷ್ಟು ಅಗಲವಾದ ರುದ್ರರಮಣೀಯ ಬೆಟ್ಟ ಎಂತವರಿಗೂ ಒಮ್ಮೆ ಮೈನಡುಕವನ್ನು ಹುಟ್ಟಿಸು ವುದು ಸುಳ್ಳಲ್ಲ.

ಅದು ಮೆಳೆಗಾಲವಾದದ್ದರಿಂದ ಹಸಿರುಗಟ್ಟಿದ ಪಾಚಿ ಎಲ್ಲೆಂದರಲ್ಲಿ ಬೆಳೆದು ಕಾಲಿಟ್ಟಲ್ಲೆಲ್ಲ ಜಾರುತ್ತಿತ್ತು. ಒಬ್ಬರ ಕೈಯೊಬ್ಬರು ಹಿಡಿದುಕೊಂಡು ಭಯಪಡುತ್ತಲೇ ಬೆಟ್ಟದ ತುದಿಯನ್ನು ಕಷ್ಟಪಟ್ಟು ತಲುಪುವಷ್ಟರಲ್ಲಿ ಆ ಚಳಿಯಲ್ಲೂ ಮೈಯಲ್ಲ ಬೆವತಂತಿತ್ತು. ಆದರೆ ಹತ್ತುವಾಗ ಉಂಟಾದ ಆ ಉದ್ವೇಗ ಬೆಟ್ಟದ ತುದಿಯನ್ನು ತಲುಪಿದಾಗ ಮಾತ್ರ ಮಾಯವಾಯಿತು. ಎಲ್ಲೆಂದರಲ್ಲಿ ಕಾಣುವ ಆ ಹಚ್ಚ ಹಸಿರು, ತುಂತುರು ಮಳೆಯ ಹಾಡು, ಬೆಳ್ಳನೆಯ ಹೊದಿಕೆಯಂತಾವರಿಸಿರುವ ಮೋಡಗಳು, ಹಕ್ಕಿಗಳ ನಾದಮಯ ಪರಿಸರ ಎಲ್ಲವು ಸೇರಿ ಅಂದು ದ್ವಾರಸಮುದ್ರದ ದೇವಾಲಯದ ಒಳಗೆ ಮೂಡಿದ ಶಾಂತತೆಯೇ ಇಲ್ಲಿಯೂ ಮೂಡಿತು. ಮೈಕೊರೆಯುವ ಗಾಳಿಗೂ ನನಗೂ ಅದೇನೋ ಒಂದು ಬಗೆಯ ಅವಿನಾಭಾವ ಸಂಬಂಧವಿರುವಂತೆ ಭಾಸವಾಯಿತು. ಎಳೆಯ ಮುದ್ದಾದ ನಾಯಿಮರಿಗಳು ನಮ್ಮ ಕೈಕಾಲುಗಳನ್ನು ಕಚ್ಚುತ್ತಾ, ಮೈಯನ್ನು ತಿವಿಯುತ್ತಾ ಚಿನ್ನಾಟವಾಡುತ್ತಾ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವಂತೆ ಗಾಳಿಯೂ ನನ್ನೊಟ್ಟಿಗೆ ಆಡಿ ನಲಿಯುತ್ತಿದೆ ಎಂದೆನಿಸಿತು. ಕೂಡಲೇ ಮನದೊಳಗೆ ಮೂಡಿದ ಆ ಅಮೂರ್ತ ಖುಷಿಗೆ ಕಣ್ಣು ತುಂಬಿ ಬಂದಿತು. ಅತ್ತಷ್ಟೂ ಮನಸ್ಸು ನಲಿಯತೊಡಗಿತು. ಆದಿ ಹಾಗು ಲೋಕೇಶ ದೂರದಲ್ಲಿ ಅಸ್ಪಷ್ಟವಾಗಿ ಕಾಣುತ್ತಿದ್ದ ನಮ್ಮ ಕಾಲೇಜನ್ನು ನೋಡಿ ಅದೇನನ್ನೋ ವಾದಿಸುತ್ತಿದ್ದರು. ಕೊಂಚ ಸಮಯದ ನಂತರ ಆದಿ ತನ್ನ ಇಯರ್ ಫೋನನ್ನು ಕಿವಿಯೊಳಕ್ಕೆ ತೂರಿಕೊಂಡು ಕಲ್ಪನಾ ಲೋಕದಲ್ಲಿ ಮರೆಯಾದರೆ 'ಹೂವೆ .. ಹೂವೆ..ನಿನ್ನೀ ನಗುವಿಗೆ ಕಾರಣವೇನೇ' ಹಾಡನ್ನು ತನ್ನ ಲೌಡ್ ಸ್ಪೀಕರ್ನಲ್ಲಿ ಹಾಕಿ ಲೋಕೇಶ ಸಣ್ಣ ಸಣ್ಣ ಜಾತಿಯ ಹೂವುಹಣ್ಣುಗಳ ಫೋಟೋಗಳನ್ನು ತೆಗೆಯತೊಡಗಿದ.

ಸಮಯ ಹೇಗೆ ಜಾರಿತೋ ತಿಳಿಯಲೇ ಇಲ್ಲ. ಹತ್ತುವಾಗ ಮೌಂಟ್ ಎವರೆಸ್ಟ್ ಬೆಟ್ಟವನ್ನು ಏರುವಂತೆ ತಿಣುಕಾಡಿದ ಆದಿ ಇಳಿಯುವಾಗಂತೂ ತನ್ನ ಕಾಲಿನ ಕೀಲಿಗಳೇ ಉದುರಿವೆಯೋ ಎಂಬಂತೆ ಆಡಿದ. ಆದರೂ ತಿಂಗಳಿಗೆ ಕನಿಷ್ಠ ಒಂದೆರಡು ಬಾರಿಯಾದರೂ ಇಲ್ಲಿಗೆ ಬರುವ ಒಪ್ಪಂದವನ್ನು ಎಲ್ಲರೂ ಮಾಡಿಕೊಂಡೆವು.



****



'ನೋಡ್ ಮಚಿ.. ಮಾಥ್ಸ್ ನೋಟ್ ಬುಕ್ಕು..' ಎಂದು ಕಿಂಗ್ ಸೈಜಿನ ಬುಕ್ಕೊಂದನ್ನು ನನಗೆ ತೋರಿಸುತ್ತಾ ವಿಕಾರವಾಗಿ ನಗಾಡಿದ ಲೋಕೇಶ.

ಊರೇ ಮುಳುಗಿದರೂ ತಾನು ಒಂದರೆ ಪದವನ್ನೂ ಆ ಬುಕ್ಕಿನಿಂದ ಓದುವುದಿಲ್ಲವೆಂಬುದು ಗೊತ್ತಿದ್ದರೂ ಅದು ಆತನ ಕೈಯಲ್ಲಿ ರಾರಾಜಿಸುತ್ತಿತ್ತು.. ಆದರೆ ಈ ಬಾರಿ ಅದು ಉಷಾಳ ಬುಕ್ಕಾಗಿರದೆ ಆಕೆಯ BFF ಶಶಿಕಲದಾಗಿದ್ದಿತು.

ಶಶಿಕಲ ಓದಿನಲ್ಲಿ ಹಾಗು ಕ್ಲಾಸ್ ರೂಮಿನ ಬೆಂಚುಗಳಲ್ಲಿ ಎಲ್ಲರಿಗಿಂತ ಮುಂದಿದ್ದರೂ ಯಾವೊಬ್ಬ ಹುಡುಗನೂ ಆಕೆಯನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಕಾರಣ ಆಕೆಯ ಕಪ್ಪುವರ್ಣವಾಗಿರಬಹುದು, ಕರ್ಕಶ ಧ್ವನಿಯಾಗಿರಬಹದು ಅಥವಾ ಒಂದಕ್ಕೊಂದು ಹೋಲಿಕೆಯಿರದ ಡ್ರೆಸ್ ಸೆನ್ಸ್ ಆಗಿರಬಹದು. ಕುರೂಪಿ ಎನ್ನಲಾಗದ ತೀರಾ ಸಾಧಾರಣ ಮೈಕಟ್ಟಿನ ಆಕೆ ಉಷಾಳೊಬ್ಬಳಿಗೆ ಬಿಟ್ಟರೆ ಬೇರ್ಯಾರಿಗೂ ತಿಳಿದೂ ತಿಳಿಯದಂತಿದ್ದಳು. ಲೋಕೇಶ ಅಂದಿನ ತನ್ನ ಅವಮಾನದ ಪ್ರತಿಕಾರವೆಂಬಂತೆ ಶಶಿಕಲಳನ್ನು ಮಾತನಾಡಿಸಿ ಆಕೆಯಿಂದ ನೋಟ್ ಬುಕ್ಕನ್ನು ಕೊಂಡು, ಆಕೆಯ ಈ ಸಹಾಯಕ್ಕಾಗಿ ಒಂದು ಸಣ್ಣ ಟ್ರೀಟನ್ನೂ ಕೊಡುವುದಾಗಿ ಉಷಾಳಿಗೆ ಕೇಳುವಂತೆ ಜೋರಾಗಿ ಹೇಳಿ ನನ್ನಲ್ಲಿಗೆ ಬಂದು ಕುಳಿತ. ಆದರೆ ಆತ ನಗುವಂತೆ ಕಾಣುತ್ತಿದ್ದರೂ ಕಣ್ಣುಗಳು ಮಾತ್ರ ದ್ವೇಷದ ಅಲೆಗಳನ್ನು ತೇಲಿ ಬಿಡುತ್ತಿದ್ದವು. ಪ್ರತಿ ಮಾತಿಗೂ ಉಷಾಳನ್ನು ನೋಡುತ್ತಾ ಆಕೆಯ ಪ್ರತಿಕ್ರಿಯೆಯನ್ನು ನೋಡುತ್ತಿದ್ದ ಆತ. ಆಕೆ ಇದಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಎಂದಿನಂತೆಯೇ ಸಹಜವಾಗಿದ್ದಳು . ಆ ಸಹಜತೆಯೇ ಲೋಕೇಶನ ದ್ವೇಷದ ಬೆಂಕಿಗೆ ಇನ್ನಷ್ಟು ಮತ್ತಷ್ಟು ತುಪ್ಪವನ್ನು ಸುರಿಯುತ್ತಿತ್ತು.

'ನೋಡ್ತಾ ಇರು ಮಚಿ .. ಇನ್ಮುಂದೆ ಉಷಾನ ಹೆಂಗೆ ಆಟ ಆಡಿಸ್ತಿನಿ ಆಂತ..' ಎಂದು ನಾನು ಅಲ್ಲಿಂದ ಎದ್ದೋಗಿರುವುದನ್ನೂ ತಿಳಿಯದೆಯೇ ಆತ ಹೇಳಿದ.

ಕೂಡಲೇ ಆತನ ಫೋನು ರಿಂಗಾಯಿಸಿತು. ಅದು ಆತನ ಗದ್ದೆಯ ಮೇಸ್ತ್ರಿಯ ಫೋನೆಂದು ತಿಳಿದು ಮುಖ ಇಳಿಬಿದ್ದಿತು. ಮೇಸ್ತ್ರಿ ಆಕಡೆಯಿಂದ ಏನೋ ಹೇಳುವುದನ್ನು ಕೇಳಿ ಕಿರಿಕಿರಿಗೊಂಡ ಆತ,

'ಥು .. ರೀ .. ನಿಮ್ಗೆ ಹೇಳಿರ್ಲಿಲ್ವ .. ಯಾವದೇ ಕಾರಣಕ್ಕೂ ಕೆಮಿಕಲ್ಸ್ನ ಹಾಕ್ ಬೇಡಿ ಅಂತ.. ಸಗಣಿ ಮುಟ್ಟೂಕ್ಕೆ ಹೇಸಿಗೆ ಆಗುತ್ತೆ ಅಂದ್ರೆ ಅವ್ರಿಗೆ ಕಿಂಗ್ ಫಿಷರ್ ಕ್ಯಾಲೆಂಡರ್ಗೆ ಪೋಸ್ ಕೊಡೋಕ್ ಹೇಳಿ 'ಎಂದು ಅರಚಿದ. ಬಹುಷಃ ಕಿಂಗ್ ಫಿಷರ್ ಕ್ಯಾಲೆಂಡರ್ ಎಂದರೆ ಏನೆಂದು ತಿಳಿಯದ ಮೇಸ್ತ್ರಿ ಲೋಕೇಶನ ಬೈಗುಳವನ್ನೂ ಲೆಕ್ಕಿಸದೆ 'ದಿನಕ್ಕ್ ಎಷ್ಟ್ ಕೊಡ್ತಾರೆ ಸರ್..' ಎಂದ. ಕೊಡಲೇ ಲೊಕೇಶನ ಕೋಪ ವಿಪರೀತವಾಯಿತು. 'ರೀ .. ಏನ್ ಆಟ ಆಡ್ತಾ ಇದ್ದೀರಾ .. ಇನ್ ಅರ್ದ ಘಂಟೇಲಿ ನಂಗೆ ಸಗಣಿ ಗೊಬ್ಬರ ಬೇಕು..! ನಾನೇ ಬಂದ್ ಹಾಕ್ತಿನಿ .. ಇರೋರ್ ಬೇಕಾದ್ರೆ ಇರ್ಬಹುದು , ಬೇಡದವ್ರು ಹೊರಡಬಹುದು' ಎಂದೇಳಿ ಶರವೇಗದಲ್ಲಿ ಅತ್ತಕಡೆಯಿಂದ ಕ್ಲಾಸ್ ರೂಮಿನ ಒಳಗೆ ಬಂದ ಲೆಕ್ಚರೆರ್ನನ್ನೂ ಲೆಕ್ಕಿಸದೆ ಹೊರನಡೆದ. ಈತನ ವೇಗಕ್ಕೆ ಅವರೂ ದಾರಿ ಸರಿದು ಪಕ್ಕಕೆ ನಿಂತರು.



ಮುಂದುವರೆಯುವುದು...

ಪಯಣ - 7

'ಗುಡ್ ಮಾರ್ನಿಂಗ್ ಸರ್…' ಬೆಳ್ಳನೆ ನರಪಿಳ್ಳೆಯಂತಿದ್ದ ಫ್ರೆಷೆರ್ ಗ್ರೂಪಿನ ಹುಡುಗನೊಬ್ಬ ಲೋಕೇಶನನ್ನು ನೋಡಿ ಸೆಲ್ಯೂಟನ್ನು ಹೊಡೆದ.


ಬಹುಷಃ ಎಲ್ಲೋ ಒಬ್ಬನೇ ಪಾಪದ ಆಸಾಮಿ ಸಿಕ್ಕಾಗ ಸಿಕ್ಕಿದ್ದೇ ಚಾನ್ಸು ಎನುತ ragging ನ ಹೆಸರಿನಲ್ಲಿ ಈತ ಹಾಕಿ ರುಬ್ಬಿರಬೇಕು ಹಾಗಾಗಿ ಆತ ಅಷ್ಟೊಂದು ನಯನಾಜೂಕಿನಲ್ಲಿ 'ಗುಡ್ ಮಾರ್ನಿಂಗ್ ಸರ್..' ಎಂದಿರಬೇಕೆಂದು ಎಂದು ನಾನಂದುಕೊಂಡೆ. ಆದರೆ ತುಸು ದೂರ ನೆಡೆದ ನಂತರ ಒಂದು ಗುಂಪಿನಲ್ಲಿದ್ದ ಹತ್ತಾರು ಹುಡುಗ ಹುಡುಗಿಯರೂ ಒಟ್ಟಾಗಿ ಗುಡ್ ಮಾರ್ನಿಂಗ್ ಸರ್ ಎಂದು ರಾಗವನ್ನು ಎಳೆದರು. ಲೋಕೇಶ ನಸುನಕ್ಕು ಸುಮ್ಮನಾದ.


'ಅದ್ಯಾವಾಗ್ಲೋ , ಅಷ್ಟೂ ಜನಕ್ಕೆ ಒಟ್ಟಿಗೆ ragging ಮಾಡಿದೆ?' ಆಶ್ಚರ್ಯಚಕಿತನಾಗಿ ನಾನು ಕೇಳಿದೆ.


'ಲಾಸ್ಟ್ ವೆಡ್ಸ್ಡೇ .. ಮಾರ್ನಿಂಗ್ ಅವರ್ಸ್ ನಲ್ಲಿ' ನಗುತ್ತಾ ಆತ ಉತ್ತರಿಸಿದ.


'ಮಾರ್ನಿಂಗ್ ಅವರ್ಸ?!'


'ಹೂ ಗುರು .. ಮಾರ್ನಿಂಗ್ ಅವರ್ಸೆ.. ರೆಗ್ಯುಲರ್ ಕ್ಲಾಸ್ ಟೈಮಿಂಗ್ಸ್ ಅಲ್ಲೇ ' ಎಂದು,





**


ಈತ ಅಂದು ಕೆಮಿಸ್ಟ್ರಿ ಲ್ಯಾಬಿನ ಕಾರಿಡಾರ್ನಲ್ಲಿ ನೆಡೆದುಕೊಂಡು ಹೋಗುತ್ತಿರಬೇಕಾದರೆ ಕೆಸರುಗದ್ದೆಯ ಕಪ್ಪೆಗಳಂತೆ ವಟಗುಡುತ್ತಿದ್ದ ಫ್ರೆಷೆರ್ಸ್ ಕ್ಲಾಸ್ಸನ್ನು ನೋಡಿ ಅದೇ ಸುಸಮಯವೆಂದುಕೊಂಡು, 'ಮಕ್ಳ ಇದೆ ನಿಮ್ಗೆ ಹಬ್ಬ' ಎಂದು ತನ್ನ ಮನದಲ್ಲೇ ಅಂದುಕೊಂಡು ಕಾಲರ್ಡ್ ಟಿ-ಶರ್ಟ್ ಅನ್ನು ತನ್ನ ಜೀನ್ಸ್ನೊಳಗೆ ತುಂಬಿ ಟಿಪ್-ಟಾಪಾಗಿ ಕ್ಲಾಸ್ ರೂಮಿನ ಸ್ಟೇಜ್ ಮೇಲೆ ಹೋಗಿ ಸುಮ್ಮನೆ ನಿಂತನಷ್ಟೇ, ಕರೆಂಟು ತಗುಲಿದ ವಾನರರಂತೆ ತಮ್ಮ ತಮ್ಮ ಚಿತ್ರ-ವಿಚಿತ್ರ ಭಂಗಿಯಲ್ಲಿ ಅಂತಂತೆಯೇ ಕಲ್ಲುಗಟ್ಟಿಹೋದರು ಕ್ಲಾಸ್ಸಿನ ಅಷ್ಟೂ ಮಂದಿ ಹೊಸ ಬ್ಯಾಚಿನ ಪೋರ ಪೋರಿಯರು. ಕೆಲವರ ಬಾಯಿ ಊರಗಲದಷ್ಟು ತೆರೆದಿದ್ದರೆ, ಕೆಲವರ ಕೈ ತಲೆಯನ್ನು ಕೆರೆಯುತ್ತಾ ಹಾಗೆಯೆ ಅಂಟಿಕೊಂಡಿತ್ತು. ಕೆಲವರು ಡೆಸ್ಕ್ನ ಮೇಲೆ ವಸ್ತ್ರ ಧರಿಸಿದ ಗೊಮ್ಮಟೇಶ್ವರನಂತೆ ನಿಂತಿದ್ದರೆ, ಕೆಲ ಹುಡುಗರು ಹುಡುಗಿಯರ ಬೆಂಚುಗಳಿಂದ ನಿಧಾನವಾಗಿ ಹೊರಬರತೊಡಗಿದರು..! ತಾನು ಯಾರೆದು ಅವರಿಗೆ ನಯ ಪೈಸೆಯಷ್ಟು ಗೊತ್ತಿಲ್ಲ. ಸ್ಟೇಜಿನ ಮೇಲೆ ಬಂದು ನಿಲ್ಲುವವರೆಲ್ಲ ಶಿಕ್ಷಕರೇ ಅವಕ್ಕೆ! ಸಮಯವನ್ನು ಸದುಪಯೋಗ ಪಡಿಸಿಕೊಂಡ ಲೋಕೇಶ 'I Said, stand up' ಎಂದು ಜೋರಾಗಿ ಅರಚಿದ.. ಸಂತೆ ಮಾರ್ಕೆಟಿನ ವ್ಯಾಪಾರಿಗಳಂತೆ ಅರಚುತಿದ್ದ ಕ್ಲಾಸ್ಸು ಅಕ್ಷರ ಸಹ ಪಾಪದ ಮೂಕ ಪ್ರಾಣಿಗಳಂತಾಗಿ ಎದ್ದು ನಿಂತಿತ್ತು. ಕೊನೆಯ ಬೆಂಚಿನ ಕೆಲ ಹುಡುಗರು ತಾವು ಏನೋ ಮಹಾಪರಾದವನ್ನು ಮಾಡಿರುವಂತೆ ತಲೆಯನ್ನು ತಗ್ಗಿಸಿಕೊಂಡರು.


'ಲಾಸ್ಟ್ ಬೆಂಚ್ ಕಮ್ ಫಸ್ಟ್ .. ಫಸ್ಟ್ ಬೆಂಚ್ ಗೋ ಲಾಸ್ಟ್' ಎಂದು ಅತಿ ಗಡುಸಾಗಿ ಹೇಳಿದ ಲೋಕೇಶ. ಆತ ಹೇಳಿ ಮುಗಿಸುವ ಮೊದಲೇ ವಿನಿಮಯ ಪ್ರಕ್ರಿಯೆ ಶರವೇಗದಲ್ಲಿ ಪೂರ್ಣಗೊಂಡಿತ್ತು. ನಂತರ ಕೆಲಕಾಲ ಮೊದಲಿನ ಬೆಂಚಿನ ವಿದ್ಯಾರ್ಥಿಗಳನ್ನು ದುರುಗುಟ್ಟಿ ನೋಡತೊಡಗಿದ. ಪಾಪ ಅವರು ಅಳುವುದೊಂದೇ ಬಾಕಿ ಏನೋ ಎನ್ನುವಂತೆ ವರ್ತಿಸತೊಡಗಿದರು.


'So, class..' ಎಂದು ಕೊನೆಗೂ ಏನೋ ಹೇಳುವಂತೆ ಶುರು ಮಾಡಿದ. ವಿದ್ಯಾರ್ಥಿಗಳು ಆತ ಹೇಳದಿದ್ದರೂ ಟಕಟಕನೇ ತಮ್ಮ ನೋಟ್ ಬುಕ್ಕು ಹಾಗು ಪೆನ್ನನ್ನು ತೆಗೆದು ಕೂತರು.


'How many of you know how to do coding..?’ ಕೈಗಳನ್ನು ಹಿಂದಕ್ಕೆ ಕಟ್ಟಿ, ಇಲ್ಲದ ಸಣಕಲು ಹೊಟ್ಟೆಯನ್ನು ಸಾಧ್ಯವಾದಷ್ಟು ಮುಂಚಾಚಿ ತಲೆ ಆಕಾಶವನ್ನು ನೋಡುತ್ತಿದ್ದರೂ ಕಣ್ಣುಗಳು ಇಡೀ ಕ್ಲಾಸನ್ನೇ ನೋಡುವಂತೆ ವರ್ತಿಸತೊಡಗಿದ. ಪ್ರಶ್ನೆಯ ಉತ್ತರವಾಗಿ ಭಾಗಶಃ ಕೈಗಳು ಮೇಲ್ಬಂದವು. ಕೆಲವರು ಇಂಪ್ರೆಸ್ ಮಾಡಲು ಎಂಬಂತೆ ಎದ್ದು ನಿಂತು ಉತ್ತರಿಸಲೂ ಮುಂದಾದರು. ಸ್ಕೂಲಿನ ಚಾಳಿ ಎಂದು ಒಳಗೊಳಗೇ ನಗುತ್ತಾ ಸುಮ್ಮನಾದ ಲೋಕೇಶ.


'Then, how many of you how to do farming..?'


ಫಾರ್ಮಿನ್ಗ್ ಎಂದರೆ ಯಾವುದೂ ಕೋಡಿಂಗ್ ಲ್ಯಾಂಗ್ವೇಜ್ ಇರಬೇಕೆಂದು ಈ ಬಾರಿಯೂ ಸಾಕಷ್ಟು ಕೈಗಳು ಮೇಲ್ಬಂದವು. ಕೂಡಲೇ ತಲೆಯೊಳಗಿನ ಗಂಟೆ ಟಣ್ಣನೆ ಬಾರಿಸಿಯೋ ಏನೋ ಹಲವು ಕೈಗಳು ಪುನಃ ಕೆಳಗಿಳಿದವು. ಒಂದೆರಡು ಕೈಗಳಷ್ಟೇ ಲಂಬಕೋನದಲ್ಲಿ ನಿಂತಿದ್ದವು.


'Okay, how many of you like Pizza..?'


ಕ್ಲಾಸಿನ ಅಷ್ಟೂ ಕೈಗಳು ಮೇಲೆದ್ದವು.


'How many of you know how to make Pizza..? ' ವಿಚಿತ್ರವಾಗಿ ಮೂಡಿದ ಪ್ರೆಶ್ನೆಗೆ ಗೊಂದಲಗೊಂಡ ಮುಖಗಳು ಒಂದನೊಂದು ನೋಡಿಕೊಂಡವು. ಮೂರ್ನಾಲ್ಕು ಕೈಗಳಷ್ಟೇ ಅಲ್ಲಿ ಮೇಲ್ಬಂದವು. ಆಶ್ಚರ್ಯವೆಂಬಂತೆ ಆ ನಾಲ್ಕು ಕೈಗಳಲ್ಲಿ ಮೂರು ಕೈಗಳು ಹುಡುಗರದ್ದೇ ಆಗಿದ್ದಿತು!


'So class, what is the lesson you have learnt here?..first bench guys..?!’ ಎಂದಾಗ ಆಪತ್ಕಾಲದಲ್ಲಿ ಮೂಕಪ್ರಾಣಿಗಳು ಗುಂಪುಗಟ್ಟಿಕೊಳ್ಳುವಂತೆ ಆ ಬೆಂಚಿನ ಅಷ್ಟೂ ಹುಡುಗರು ಸಾಧ್ಯವಾದಷ್ಟು ಹತ್ತಿರತ್ತಿರಕ್ಕೆ ಜರುಗತೊಡಗಿದರು. ತಾವುಗಳ ಮದ್ಯೆ ಈಗ ಗಾಳಿಯೂ ಸಹ ನುಸುಳಲು ಸಾಧ್ಯವಿಲ್ಲವೆಂಬುದನ್ನು ಅರಿತ ಅವರು ಉತ್ತರಿಸಲು 'ನೀನು, ನೀನು' ಎಂಬಂತೆ ಒಬ್ಬರನೊಬ್ಬರು ತಿವಿಯತೊಡಗಿದರು. ಅವರ ತಲೆ ಇನ್ನೂ ಸಹ ಕೆಳಮುಖವಾಗಿಯೇ ಅಲುಗಾಡುತ್ತಿತ್ತು. ‘You red shirt..!’ ಅತ್ತಿಬ್ಬರು ಹಾಗು ಇತ್ತಿಬ್ಬರ ಒತ್ತುವಿಕೆಯಿಂದ ಬತ್ತಿದ ನಿಂಬೆಹಣ್ಣಿನಂತಾಗಿದ್ದ ಸಣಕಲು ದೇಹದ ಹುಡುಗನನ್ನು ಕೂಗಿದ ಲೋಕೇಶ. ಚಕ್ಕನೆ ಎದ್ದು ನಿಂತು ಏನೆಳಬೇಕೆಂದು ತೋಚದೆ ಬಡಬಡನೆ ತನ್ನೊಳಗೆ ತಾನೇ ಏನೇನೋ ಉದ್ಗರಿಸತೊಡಗಿದ ಆತ.


‘Sir, pizza is good but not that good.. good is a mom made roti.. pizza, they put sauce but roti is with coconut chutney..pizza no energy but roti full energy..’


ಆತನ ಅವಸ್ಥೆಯನ್ನು ಅರಿತ ಲೋಕೇಶ 'ಗುರು, ಸಾಕು ಕೂರಪ್ಪ..' ಎಂದು ಹೇಳಿದ, ಇಡೀ ಕ್ಲಾಸೇ ಗೊಳ್ಳೆಂದು ನಗತೊಡಗಿತು. ಅದನ್ನು ಕಂಡ ಆತ,


‘Shut up, I said.. Why the hell you people are laughing at him.. Coding doesn’t feed you and make your hunger gone. You cannot eat Money to get rid of hunger. Am I right ?? Life is not only about Studying, Coding & Earning. It’s all about Living... Learning & then Living... Creator has never sent us here with a degree attached. A farmer who invents a new kind of crop & earns few bugs in a year is far better than a person who works for an overseas firm and earns a lakh per month..’


ಈ ಬಾರಿ ಲೋಕೇಶ ತುಸು ಸೀರಿಯಸ್ಸಾಗಿಯೇ ಹೇಳಿದ. ತರಗತಿ ತದೇಕಚಿತ್ತದಿಂದ ಈತನ ಮಾತುಗಳನ್ನೇ ಕೇಳುತ್ತಿದ್ದವು.


ಈಗ ಹೆಚ್ಚು ಕೊರೆಯಲು ಸಮಯವಿಲ್ಲದೆ,


‘Okay, how many of you are having girlfriends here ?’ ಹುಡುಗರನ್ನು ಉದ್ದೇಶಿಸಿ ಆತ ಕೇಳಿದ.


ಭಯದಿಂದಲೋ , ನಾಚಿಕೆಯಿಂದಲೋ ಅಥವಾ ಅದೇ ವಾಸ್ತವವೋ ಏನೋ ಒಂದೂ ಕೈಗಳು ಅಲ್ಲಿ ಮೇಲೇಳಲಿಲ್ಲ.


‘See, this is what I don’t like. Guys know how to do coding but don’t know to have a girlfriend..! if not now then when?’


ಕೋರ್ಟ್ನಲ್ಲಿ ವಾದ ಮಾಡುವ ಲಾಯರುಗಳಂತೆ ಆತ ತನ್ನೆರಡು ಕೈಗಳನ್ನು ಗಾಳಿಯಲ್ಲಿ ತೇಲಿಸುತ್ತಾ ಅರಚತೊಡಗಿದ. ತರಗತಿ ಒಮ್ಮೆ ಜೋರಾಗಿ ನಕ್ಕಿತು. ಲೊಕೇಶನೂ ಈ ಬಾರಿ ಜೊತೆಗೂಡಿದ. ಕಾರಿಡಾರಿನಲ್ಲಿ ಹೋಗುತ್ತಿದ್ದ ಬೇರೆಯ ಡಿಪಾರ್ಟ್ಮೆಂಟಿನ ಶಿಕ್ಷಕರೊಬ್ಬರು ತರಗತಿಗಲ್ಲಿ ಎಂದೂ ಕೇಳದ ಒಕ್ಕೂರಲಿನ ನಗುವನ್ನು ಕೇಳಿ ಬಾಗಿಲಿನಿಂದ ಇಣುಕಿದರು. ಅದೃಷ್ಟವಶಾತ್ ಲೋಕೇಶನ ಮುಖಚಹರೆ ಅಷ್ಟಾಗಿ ತಿಳಿಯದಿದ್ದರಿಂದ ಆತನನ್ನು ನೋಡಿ ಬಹುಷಃ ಯಾರೋ ಹೊಸ ಲೆಕ್ಚರರ್ ಇರಬೇಕೆಂದುಕೊಂಡು ದೊಡ್ಡದಾದ ಮುಗುಳ್ ನಗೆಯನ್ನು ಬೀರಿ ವಾಪಸ್ಸಾದರು. ತಾನು ಇಲ್ಲೇ ಇದ್ದರೆ ಇನ್ನು ಉಳಿಗಾಲವಿಲ್ಲೆಂದು ಅರಿತ ಲೋಕೇಶ ಅಲ್ಲಿಂದ ಜಾಗ ಕೀಳಲು ಅನುವಾದ. ಸ್ಟೇಜಿನ ಮೇಲಿಳಿದು ಬಾಗಿಲಿನ ಹೊರಗೆ ಹೋಗಬೇಕು ಎನ್ನುವಷ್ಟರಲ್ಲಿ ಕೂಡಲೇ ನಿಂತು ಮತ್ತೊಮ್ಮೆ ತರಗತಿಯನ್ನುದ್ದೇಶಿಸಿ ..


'How many of you are ambitious' ಎಂದು ಕೇಳಿದ. ತರಗತಿಯ ಅಷ್ಟೂ ಕೈಗಳು ಆಕಾಶವನ್ನು ಮುಟ್ಟುವಂತೆ ಮೇಲೆದ್ದಿದ್ದವು…


**


ಲೊಕೇಶನ ಮಾತುಗಳನು ಕೇಳಿ ನನಗೆ ನಗುವನ್ನು ತಡೆಯಲಾಗಲಿಲ್ಲ.


'ಅಲ್ವೋ ಮಾರಾಯ .. ನಿನ್ನ ಫಾರ್ಮಿನ್ಗ್ ಬಿಸಿನೆಸ್ ನ ಅಲ್ಲೂ ತೂರ್ಸದ?! ಅಯ್ಯೋ, ಕತೆಯೇ.. ಏನೋ… ಮಾಸ್ ragging ಅಂದ್ರೆ ಇದು ನೋಡಪ್ಪ' ಎಂದು ಆತನ ಬೆನ್ನನ್ನು ತಟ್ಟಿದೆ.


'ಚುರ್ಕುಟ್ಸ್ .. ಅದ್ ಎಷ್ಟ್ ದಿನ ಸೆಲ್ಯೂಟ್ ಹೊಡಿತಾರೋ ಹೊಡಿಲಿ' ಎಂದ ಲೋಕೇಶ 'ಎಲ್ಲಪ್ಪ ನಮ್ಮ ಸ್ಯಾಡ್ ರಾಜೇಶ್ ಖನ್ನಾ..' ಎಂದು ಕೇಳಿದ.



****



ನಾಟಕದ ರಿಹರ್ಸಲ್ಗೆ ಒಬ್ಬೊಬ್ಬರೇ ಹುಡುಗರನ್ನು ಕರೆದು ಸ್ವಾತಂತ್ರ್ಯ ಸಂಗ್ರಾಮದ ಒಂದೆರೆಡು ಡೈಲಾಗ್ ಗಳನ್ನು ಹೇಳುವಂತೆ ಪೀಡಿಸುತ್ತಿದ್ದ ಸಮಾಜ-ವಿಜ್ಞಾನದ ಮೇಷ್ಟು ತಮ್ಮ ಈ ಅರಸುವಿಕೆಯ ಕಾರ್ಯದಲ್ಲಿ ಬೆಳಗಿನಿಂದ ಸುಸ್ತಾಗಿ ಹೈರಾಣಾಗಿದ್ದರು. ಮುಂಬರುವ ಸ್ವಾತಂತ್ರ್ಯ ದಿನಾಚರಣೆಗೆ ಮಕ್ಕಳಿಂದ ನಾಟಕವಾಡಿಸುವ ಹೊಣೆಯನ್ನು ಶಾಲೆಯ ಮ್ಯಾನೇಜ್ಮೆಂಟ್ ಅವರಿಗೆ ವಹಿಸಿದ್ದಿತ್ತು. ಅವರು ಕೆಚ್ಚೆದೆಯ ಬಿಸಿರಕ್ತದ ಭಗತ್ ಸಿಂಗ್ ಒಬ್ಬನನ್ನು ಅಲ್ಲಿ ಅರಸುತ್ತಿದ್ದರು. ಸುಮಾರು ಐವತ್ತು ಹುಡುಗರ ಆಡಿಷನ್ ಪಡೆದುಕೊಂಡ ಮೇಲೆ ಕೊನೆಯದಾಗಿ ಎರಡನೇ ಬೆಂಚಿನ ಕೊನೆಯಲ್ಲಿ ಕೂತಿದ್ದ ಆದಿಯ ಮೇಲೆ ಅವರ ಕಣ್ಣು ಬಿದ್ದಿತು. ತನ್ನ ಕೈಗಳನ್ನು ಗಲ್ಲದ ಮೇಲಿರಿಸಿ ಪಕ್ಕದ ಸಾಲಿನಲ್ಲಿದ್ದ ಹುಡುಗಿಯೊಬ್ಬಳ ಎಣ್ಣೆ ಹಾಕಿ ಬಾಚಿದ ಜೋಡಿ ಜುಟ್ಟುಗಳನ್ನು ನೋಡುತ್ತಾ ಆಸಾಮಿ ಆಕೆ ಖುಷಿಯೇ ಯಾಕಾಗಿರಬಾರದೆಂಬ ಕಲ್ಪನಾ ಲೋಕದಲ್ಲಿ ಕಳೆದುಹೋಗಿದ್ದ. ಮೇಷ್ಟ್ರ ಸದ್ದು ಆತನನ್ನು ಬಡಿದೆಬ್ಬಿಸಿತು.


‘ಏನಯ್ಯ ನಿನ್ ಹೆಸ್ರು..' ಎಳೆಯ ಮಕ್ಕಳದರಾದರೆ ಚಡ್ಡಿ ಒದ್ದೆಯಾಗುವಂತಿತ್ತು ಅವರ ಆ ಧ್ವನಿಯ ಆರ್ಭಟ.


'ಆದಿಶೇಷ ಸರ್..' ಯಾವುದೇ ಅಳುಕಿಲ್ಲದೆ ಉಚ್ಚಸ್ವರದಲ್ಲಿ ಮೂಡಿದ ಆತನ ಸದ್ದನ್ನು ಕೇಳಿ ಮೇಷ್ತ್ರು ಆತನನ್ನು ಹತ್ತಿರಕ್ಕೆ ಕರೆದರು.


‘ಬಾರಯ್ಯ ಇಲ್ಲಿ .. ತಗೋ ಈ ಸಾಲನ್ನು ಓದ್ಕೊಂಡು ಅದನ್ನ ಆಕ್ಟ್ ಮಾಡಿ ತೋರ್ಸು'.


ಒಂದಿನಿತು ಭಯವಿಲ್ಲದೆ ತೀರಾ ಸಾಮನ್ಯವಾಗಿಯೇ ಅವರ ಬಳಿಗೆ ಬಂದ ಆದಿ ಅವರ ಕೈಲಿದ್ದ ಹಾಳೆಯ ಸಾಲನ್ನು ಮನದೊಳಗೆ ಓದಿಕೊಂಡ. ಸ್ವಲ್ಪ ಸಮಯದ ನಂತರ,


'ಯಾರ್ ಸಾರ್ ಇದು..?' ಎಂದು ಅಳುಕಿಲ್ಲದ ಪ್ರೆಶ್ನೆಯನ್ನು ಕೇಳಿದ. ಆದಿಯ ಪ್ರೆಶ್ನೆಗೆ ಮೇಷ್ಟು ಒಮ್ಮೆಲೇ ಚಕಿತರಾದರು. ಅಲ್ಲಿಯವರೆಗೂ ಯಾವೊಬ್ಬ ಹುಡುಗನೂ ಭಯದಿಂದಲೋ ಅಥವಾ ಅಂಜಿಕೆಯಿಂದಲೋ ಗಜಕಾಯದ ಮೇಷ್ಟ್ರಿಗೆ ಮರು ಪ್ರೆಶ್ನೆಯನ್ನು ಮಾಡದೇ ಅವರು ಹೇಳಿದ ವಾಕ್ಯಗಳನ್ನು ಚಾಚೂತಪ್ಪದೆ ಹೇಳಿ ವಾಪಸ್ಸಾಗುತ್ತಿದ್ದರೆ ವಿನಹಃ ಬೇರೇನೂ ಕೇಳುವ ಆತ್ಮಹತ್ಯೆಯಂತಹ ಕಾರ್ಯಕ್ಕೆ ಹೋಗಿರಲಿಲ್ಲ.


ಆದರೂ ಪರೀಕ್ಷೆ ಮಾಡುವ ಎಂದು ಅವರು,


'ಇದನ್ನ್ ಯಾರ್ ಹೇಳಿದ್ದು ಅನ್ನೋದ್ ಗೊತ್ತಿಲ್ವ ನಿಂಗೆ ..?! ಯಾವ್ ಸೀಮೆ ಹುಡ್ಗನೋ ನೀನು?!' ಗದರಿಸುವ ಧ್ವನಿಯಲ್ಲಿ ಅವರು ಕೇಳಿದರು.


'ಸಾರ್.. ನಿಜ್ವಾಗ್ಲೂ ನಂಗೆ ಇದು ಯಾರ್ ಅಂದಿದ್ದು ಅಂತ ಗೊತ್ತಿಲ್ಲ ಸಾರ್' ಎಂದ ಆದಿಶೇಷ.


'ಇಂಡಿಯನ್ ಆಗಿ ಇವ್ನ ಬಗ್ಗೆ ಇಷ್ಟೂ ಗೊತ್ತಿಲ್ಲ ಅಂದ್ರೆ ನೀನ್ ವೇಸ್ಟು..' ಎಂದ ಮೇಷ್ಟ್ರು ಉತ್ತರವನ್ನು ಅಪೇಕ್ಷಿಸುವ ನೆಪದಲ್ಲಿ ಕ್ಲಾಸಿನ ಇತರ ವಿದ್ಯಾರ್ಥಿಗಳೆಡೆಗೆ ತಿರುಗಿದರು. ಅಲ್ಲಿಯವರೆಗೂ ಮುಂದೆ ನೆಡೆಯುತ್ತಿದ್ದ ಘಟನೆಯಲ್ಲಿ ತಾವೂ ಪಾತ್ರಧಾರಿಗಳಾಗುವೆಂಬ ಅರಿವಿಲ್ಲದೆ ತಮ್ಮ ಪಾಡಿಗೆ ತಾವೇ ಗುಸುಗುಸುಗುಡುತ್ತಿದ್ದ ಗುಂಪು ಒಮ್ಮೆಲೇ ಜಾಗೃತಗೊಂಡಿತು. ನಿರಾಯಾಸವಾಗಿ ಅವುಗಳ ತಲೆಗಳು ಕೆಳಕ್ಕೆ ಮಡಚಿಕೊಂಡವು. ಅದರ ಸಂಜ್ಞೆಯನ್ನು ಅರಿತ ಮೇಷ್ಟ್ರು ತಮ್ಮ ಹಣೆಯನ್ನು ಚಚ್ಚಿಕೊಳ್ಳುತ್ತಾ ವೀರ ಯೋಧ ಭಗತ್ ಸಿಂಗ್ನ ಬಗ್ಗೆ ಸವಿವರವಾಗಿ ವಿವರಿಸತೊಡಗಿದರು. ಸಹಜತೆಗೆ ತೀರಾನೇ ಹತ್ತಿರವಾಗಿದ್ದ ಅವರ ವರ್ಣನೆ ಆದಿಗೆ ಗತಕಾಲದ ಭಗತ್ ತನ್ನ ಮುಂದೆಯೇ ಬಂದು ನಿಲ್ಲುವಂತೆ ಮಾಡಿತು. ಆತನ ತುಂಟತನ,ಎಲ್ಲಿರದ ಎದೆಗಾರಿಕೆ, ಬೆಂಬಿಡದ ಛಲ, ಎಂದಿಗೂ ಮುಗಿಯದ ದೇಶಪ್ರೇಮ, ಎಂತಹ ನೋವನ್ನೂ ಸಹಿಸುವ ಧಿಟ್ಟತನ ಎಲ್ಲವೂ ಆದಿಯ ರೋಮು ರೋಮುಗಳನ್ನು ಎದ್ದು ನಿಲ್ಲುವಂತೆ ಮಾಡಿದವು. ಬ್ರಿಟಿಷರಿಗೆ ಸೆರೆಸಿಕ್ಕ ಭಗತ್ ಅಂದು ನಗು ನಗುತ್ತಲೇ 'Inquilab Zindabad' ಎನುತ ನೇಣುಗಂಬವನ್ನೇರಿದ ಎಂಬುದನ್ನು ಕೇಳಿ ಆದಿಗೆ ನಂಬಿಕೆಯೇ ಬರಲಿಲ್ಲ.


'ರಣರಂಗದ ರಣಕಹಳೆಗೆ ಬಾಲಮುದುಡಿ ಜಾಗಕೀಳುವ ಹೇಡಿಗಳಿಗೆ ನಾನೇಕೆ ತಲೆಬಾಗಲಿ..? ನೀವುಗಳು ನನ್ನ ಈ ದೇಹವನ್ನು ಬಂಧಿಸಿರಬಹುದು ಆದರೆ ನನ್ನ ಈ ಮನಸ್ಸನ್ನಾಗಲಿ ಅಥವ ಯೋಚನೆಯನ್ನಾಗಲಿ ಅಲ್ಲ.. ಒಬ್ಬ ಭಾರತೀಯನನ್ನು ನೀವು ತುಳಿಯಬಹುದು ಆದರೆ ಆತನ ಆಲೋಚನೆಗಳನಲ್ಲ.. ಈ ಮದ್ದುಗುಂಡುಗಳಾಗಲಿ, ಗನ್ನುಗಳಾಗಲಿ ದೇಶದಲ್ಲಿ ಕ್ರಾಂತಿಯನ್ನು ಮೂಡಿಸವು ಬದಲಾಗಿ ಆಲೋಚನಾ ಬರಿತ ಮನಸ್ಸುಗಳು ಮಾತ್ರ ಅಂತಹ ಮಹಾಕ್ರಾಂತಿಯ ಹರಿಕಾರರಾಗಬಹುದು.. ನಿಮ್ಮ ಉಳಿಗಾಲ ಮುಗಿದು ಅಳಿವಿನ ದಿನಗಳು ಶುರುವಾಗಿವೆ..Inquilab..' ಎಂದು ಜೋರಾಗಿ ಕೂಗುತ್ತಾನೆ ಆದಿ. ಇಡೀ ತರಗತಿಯಲ್ಲಿ ಆತನ ಧ್ವನಿ ಪ್ರತಿಧ್ವನಿಸುತ್ತದೆ.


'Zindabad..' ಎಂದ ಮೇಷ್ಟ್ರು ಒಮ್ಮೆ ಜೋರಾಗಿ ಚಪ್ಪಾಳೆಯನ್ನು ತಟ್ಟಿದರು.


ಒಂದಿನಿತು ಅಳುಕಿಲ್ಲದೆ ಮೂಡಿದ ಆ ಕಣ್ಣಿನ, ಕಣ್ಣ ಉಬ್ಬಿನ ಮೇಲಿನ ಪ್ರಚಂಡ ಅಭಿವ್ಯಕ್ತಿಯನ್ನು ಕಂಡ ಮೇಷ್ಟು ವಿಸ್ಮಿತರಾದರು.


'ಏನಯ್ಯ .. ಊರಲ್ಲಿ ನಾಟಕ ಕಂಪನಿಯಲ್ಲೇನಾದರೂ ಕೆಲ್ಸ ಮಾಡ್ತಿಯಾ?' ನಗುತ್ತಾ ಅವರು ಕೇಳಿದರು.


'ಇಲ್ಲ ಸಾರ್..' ಎಂದ ಆತ ಕಾಗದವನ್ನು ಅವರಿಗೆ ಹಿಂದುರಿಗಿಸಿ ತನ್ನ ಜಾಗಕ್ಕೆ ಹೋಗಿ ಕುಳಿತ. ಎಣ್ಣೆ ಹಾಕಿ ಬಾಚಿದ ಆ ಹುಡುಗಿಯ ಕೂದಲುಗಳ ಮೇಲೆ ಆತನ ದೃಷ್ಟಿ ಪುನ್ಹ ಕೇಂದ್ರೀಕೃತವಾಯಿತು…


ಅದೆಂತಹ ತುಮುಲ? ಅದೆಂತಹ ಆ ಆಕರ್ಷಣೆ? ನಟನೆ. ಎಲ್ಲೂ ಕಲಿಯದೇ, ಎಲ್ಲಿಯೂ ನೋಡದೆ ತನ್ನೊಳಗೆ ತಾನೇ ಮೂಡಿದ ಆ ಭಾವಲಹರಿಯ ನಟನ ಚತುರತೆ ನನ್ನನು ಶಾಲೆಯ ಹೀರೊ ಮೆಟೀರಿಯಲ್ಲನ್ನಾಗಿ ಮಾಡಿತು. ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ತಾಂತ್ಯಾ ಟೋಪೆ, ಸಾವರ್ಕರ್ ಅಥವಾ ಭಾಷಣ, ಚರ್ಚೆ ಅಥವಾ ಮತ್ಯಾವುದೇ ಕಾರ್ಯಕ್ರಮವಾದರೂ ನನ್ನೆಸರೇ ಮೊದಲು!


**


'Shit ..!!' ಟೆರಸಿನ ಪ್ಯಾರಾಫಿಟ್ ವಾಲ್ನ ಮೇಲೆ ತನ್ನ ಕೈಯನ್ನು ಜೋರಾಗಿ ಬಡಿದ ಆದಿ. ಕಲಾವಿದನಾಗುವ ಕನಸ್ಸನ್ನು ಕಂಡಿದ್ದ ಆತ ಪ್ರಸ್ತುತ ಅರ್ಥವಲ್ಲದ ಕಲಿಕೆ, ಗುರಿಯಿಲ್ಲದ ಜೀವನ, ಖುಷಿಯಿಲ್ಲದ ಮನೆ ಇವೆಲ್ಲದರ ನಡುವೆ ನಲುಗಿ ನರಳುತ್ತಿರುವುದರ ಹತಾಶೆ ಒಮ್ಮೆಲೇ ಉಕ್ಕಿತು. ನನ್ನ ನೋಡಲು, ನನ್ನ ಮಾತನ್ನು ಕೇಳಲು ಸಾಗರೋಪಾದಿಯಲ್ಲಿ ಜನ ಸೇರುವಂತಾಗುವ ಆ ದಿನ ದಾರ ತುಂಡಾದ ಗಾಳಿಪಟದಂತೆ ಗುರಿಯಿರದ ದಿಕ್ಕಿನಲ್ಲಿ ಹಾರಿ ಮರೆಯಾಗತೊಡಗಿತು.


ಆದರೆ ಇಂದು ಕೋಪ ಮೂಡಲು ಕಾರಣ ಮತ್ತೊಂದಿತ್ತಿತು. ಖುಷಿಯ ಮೊಬೈಲ್ ನಂಬರ್ ದೊರೆತ ನಂತರ ನಿಶಾಚರಿ ಪ್ರಾಣಿಯಂತಾಗಿರುವ ಆತ ಮಧ್ಯರಾತ್ರಿಯವರೆಗೂ ಸಾಕು ಸಾಕೆನಿಸುವಷ್ಟು ಮಾತನಾಡುತ್ತಿದ್ದ. ಆ ನಗುವೇನು, ಆ ಮಾತಿನ ವರಸೆಯೇನು? ಇನ್ನು ಪುಣ್ಯಾತ್ಮನ Sense of Humor ಅಂತೂ ಲೊಕೇಶನನ್ನೇ ಮೀರಿಸುವಂತಿತ್ತು. ಹುಡುಗ ಹೊಸ ಉರುಪಿನಲ್ಲಿ ಹೊಳೆಯುತ್ತಿದ್ದ. ಬಹುಷಃ ಆ ಖುಷಿಯಲ್ಲೇ ಅನಿಸುತ್ತೆ ಕಳೆದ ಇಂಟರ್ನಲ್ ನಲ್ಲಿ ಕೊನೆಯ ಒಂದು ಘಂಟೆಯಷ್ಟೇ ಓದಿ ಇಡೀ ಕ್ಲಾಸ್ಸಿಗೆ ಮೊದಲು ಬಂದದ್ದು. ಭಾರತ ಪಾಕಿಸ್ತಾನದ ನೆಲದಲ್ಲಿ ಚೊಚ್ಚಲ ಒಂಡೇ ಸರಣಿಯನ್ನು ಗೆದ್ದು ಬೀಗಿದಾಗ ಯಾರು ಸಹ ಊಹಿಸಿರದಂತೆ ಹಾಸ್ಟೆಲ್ಲಿನ ಟೆರೇಸಿನ ಮೆಲೋಗಿ ತನ್ನ ಅಂಗಿಯನ್ನು ಕಳಚಿ ಗಾಳಿಯಲ್ಲಿ ತೂರುತ್ತಾ ಇಡೀ ಸಿಟಿಗೆ ಕೇಳುವಂತೆ ಅರಚಿದ್ದ. ಆತನ ಆ ಎಕ್ಸೈಟ್ ಮೆಂಟ್ ನನಗಂತೂ ಕಲ್ಪನೆಗೂ ಮೀರಿದ ದೃಶ್ಯವಾಗಿದ್ದಿತು. ಆದಿಯೊಳಗಿದ್ದ ಮತ್ತೊಬ್ಬ ಆದಿಯನ್ನು ಅದು ಪರಿಚಯಿಯಿಸಿತು. ಹಾಗಾಗಿ ಇತ್ತೀಚೆಗೆ ತನ್ನ ಹಳೆಯ ಕನಸ್ಸುಗಳಿಗೆಲ್ಲ ಪುನ್ಹ ಬಣ್ಣವನ್ನು ತುಂಬುವ ಕೆಲಸವನ್ನು ಆತ ಮಾಡುತ್ತಿದ್ದಾನೆ. ವ್ಯರ್ಥ ಮಾಡಿದ ಸಮಯವನ್ನು ನೆನೆದು ಮರುಗುತ್ತಾನೆ. ಈಗ ಪ್ಯಾರಾಫಿಟ್ ವಾಲ್ನ ಮೇಲೆ ತನ್ನ ಕೈಯನ್ನು ಬಡಿದದ್ದೂ ಸಹ ಅಂತಹ ಒಂದು ಕಾರಣಕ್ಕೆ. ಒಟ್ಟಿನಲ್ಲಿ ಖುಷಿ, ಸುಪ್ತವಾಗಿದ್ದ ಆದಿಶೇಷನನ್ನು ಜಾಗೃತಗೊಳಿಸಿದ್ದಾಳೆ.


‘ಜಿಂದಗಿ ... ಕೈಸಿ ಪಹೇಲಿ ಹೈ..’ ಎನ್ನುತ ತನ್ನನ್ನುದ್ದೇಶಿಸಿ ಹಿಂದಿನಿಂದ ಹಾಡುತ್ತಾ ಬಂದ ನಮ್ಮನ್ನು ಕಂಡು ತನ್ನ ಯೋಚನಾಲೋಕದಿಂದ ಇಹಲೋಕಕ್ಕೆ ಬಂದ ಆದಿ.


'ನೀನೋ .. ನಿನ್ ಟೆರೆಸೊ , ಯಾವಾಗ್ ನೋಡಿದ್ರೂ ಇದನ್ನ್ ಬಿಟ್ ಕೆಳಗ್ ಬರೋದೇ ಇಲ್ಲ ಅಂತಿಯಲ್ಲ ಮಾರಾಯ.. ಬೈ ದ ವೆ ನಿನ್ ಅತ್ಗೆನ ಏನಾದ್ರೂ ನೋಡಿದ್ಯಾ…' ತನ್ನ ಸಹಜ ಮೂದಲಿಸುವ ಧ್ವನಿಯಲ್ಲಿ ಲೋಕೇಶ ಕೇಳಿದ.


'ಹುಂ.. ಬಂದಿದ್ರು.. ರಾಕೀ ಹಬ್ಬಕ್ಕೆ ರಾಕಿ ಕಟ್ಬೇಕು .. ಲೋಕೇಶಂಗೆ ಯಾವ ಕಲರ್ ಇಷ್ಟ ಅಂತ ಕೇಳಿದ್ರು' ಎಂದ ಆದಿ.


ಅಚಾನಕ್ಕಾಗಿ ಮೂಡಿದ ಆತ ಉತ್ತರಕ್ಕೆ ನಾನು ಗಹಗಹಿಸಿ ನಗಾಡಿದೆ. ತೀರಾ ಏಕಾಂತದಲ್ಲಿದ್ದಾಗ ಆದಿಯನ್ನು ಕೆಣಕುವುದು ತನಗೇ ತಾನೇ ಸಂಕಷ್ಟವನ್ನು ಆಹ್ವಾನಿಸಿಕೊಂಡ ಹಾಗೆ ಎಂದು ಮನಗಂಡ ಲೋಕೇಶ,


'ನನ್ನ ಗುಡ್ಡ ಎಷ್ಟ್ ಆರಾಮಾಗಿದೆ ಅಲ..' ಎಂದು ಕಾಲೇಜಿನಿಂದ ಸುಮಾರು ನಾಲ್ಕೈದು ಕಿಲೋಮೀಟರ್ ದೂರದಲ್ಲಿದ್ದ ಪಾಚಿಗಟ್ಟಿದ್ದ ಬಂಡೆಯಂತೆ ಕಾಣುತ್ತಿದ್ದ ಗುಡ್ಡವನ್ನು ನೋಡಿದ. ಆ ಗುಡ್ಡದ ಬುಡಕ್ಕೇ ಲೊಕೇಶನ ಗದ್ದೆಗಳು ಚಿಗುರು ಬಿಡುತ್ತಿದ್ದುವು ಹಾಗು ಆತ ಬೆಳ್ಳಂಬೆಳಗ್ಗೆ ಜಾಗಿಂಗೆಂದು ಅಲ್ಲಿಗೆ ಹೋದಾಗಲೆಲ್ಲ ಒಂದು ದಿನ ಗುಡ್ಡದ ತುದಿಯನ್ನು ಹತ್ತೇ ತೀರಬೇಕೆಂದು ಹೇಳಿಕೊಳ್ಳುತ್ತಿದ್ದ.


'ತನ್ನ ಮೇಲೆ ಅದೆಷ್ಟೋ ಮರಗಿಡಗಳು, ಪ್ರಾಣಿ ಪಕ್ಷಿಗಳನ್ನು ಸಾಕಿಕೊಂಡು ಅವುಗಳೆಲ್ಲದರ ಚೆಲ್ಲಾಟ, ತುಂಟಾಟ, ಬಡಿದಾಟಗಳನೆಲ್ಲ ಸಹಿಸಿಕೊಂಡು ದೂರದಿಂದ ಮಾತ್ರ ಶಾಂತವಾಗಿ ನಿಂತಿರುವಂತೆ ಕಾಣುವ ಅದನ್ನು ನೋಡಿದರೆ ಅದಕ್ಕೂ ನಮಗೂ ಏನೂ ವ್ಯತ್ಯಾಸವಿಲ್ಲ ಅನ್ಸಲ್ವಾ..' ಎಂದು ಕೇಳಿದ ಆದಿ.


ಆತನ ಮಾತುಗಳು ನನ್ನಲ್ಲಿ ಏನೋ ಒಂದು ಬಗೆಯ ಹೊಸ ಆಲೋಚನೆಯನ್ನು ಹುಟ್ಟು ಹಾಕಿದವು. ನಂತರದ ಕೆಲ ನಿಮಿಷಗಳ ಕಾಲ ಮೂವರು ಆ ಬೆಟ್ಟವನ್ನೇ ದಿಟ್ಟಿಸುತ್ತಾ ಏಕಾಂತವಾದೆವು. ಅಚಾನಕ್ಕಾಗಿ ಮೂಡಿದ ನಿಶಬ್ದವನ್ನು ಭೇದಿಸಲು ಲೋಕೇಶ, 'ನೆಕ್ಸ್ಟ್ ವೀಕ್, ಟ್ರೆಕ್ ಟು ದಿ ಬೆಟ್ಟ' ಎಂದ.


ಒಂದಿನಿತು ಯೋಚಿಸದೆ ನಾನು ಹಾಗು ಆದಿ ಸಮ್ಮತಿಸುವಂತೆ ತಲೆಯಾಡಿಸಿದೆವು.





****



‘ಏನೋ ಗೊತ್ತಿಲ್ಲ.. ಒಂದೊಂದ್ ಸಾರಿ Intellectuality ಬಗ್ಗೆ ಮಾತಾಡ್ತಾರೆ.. ಒಮ್ಮೊಮ್ಮೆ ಪ್ರೀತಿನೇ ಎಲ್ಲಾ ಅಂತಾರೆ... ನಿನ್ನೊಬ್ಬನೆ ನಾನು ಟ್ರಸ್ಟ್ ಮಾಡೋದು ಅಂತಾರೆ .. ಇವೆಲ್ಲಾವನ್ನ ಸೇರ್ಸಿ ನ್ಯೂಸ್ ಪೇಪರ್ಗೆ ಆರ್ಟಿಕಲ್ ಕೂಡ ಬರೀತಾರೆ.. ಮೊನ್ನೆ ನಾನ್ ಒಬ್ಬ ಹುಡುಗನ್ನ ಜೀವನ ಪೂರ್ತಿ ಲವ್ ಮಾಡ್ಬೇಕು ಆದ್ರೆ ಮದ್ವೆ ಅವನ್ನ ಆಗ್ಬಾರ್ದು, ಮದ್ವೆ ಬೇರೆ ಯಾರ್ನೋ ಆಗಿ ಈ ಹುಡ್ಗನ ಯಾವತ್ತೂ ಪ್ರೀತಿ ಮಾಡ್ತಾ ಇರ್ಬೇಕು ಅಂತಾರೆ.. ನನಗಂತೂ ಮುಂದೆ ಏನ್ ಮಾಡ್ಬೇಕು ಅಂತ ತಿಳಿತಾ ಇಲ್ಲ..' .


ಕೆಲ ತಿಂಗಳುಗಳ ಸಲಿಗೆಯಲ್ಲೇ ರಾಧಾ ನನಗೆ ತೀರಾನೇ ಹತ್ತಿರವಾಗಿದ್ದರು. ನನಗಿಂತ ದೊಡ್ಡವರು. ಜಾತಿ ಕುಲ ಗೋತ್ರವಂತೂ ಇದ್ದರೂ ಗೊತ್ತಿರದವರು.. ಆಕೆಗೆ ನನ್ನ ಮೇಲೆ ಗೆಳೆಯನೆಂಬ ಕಾಳಜಿ ಬಿಟ್ಟು ಬೇರ್ಯಾವ ಬಗೆಯ ಭಾವಗಳು ಇವೆಯೋ, ಇಲ್ಲವೋ? ನಾ ಕಾಣೆ. ಆದಷ್ಟು ಬೇಗ ಈ ಸಲಿಗೆಗೆ ಸಂಬಂಧವೊಂದನ್ನು ಕಟ್ಟಿಬಿಡಬೇಕೆಂಬ ಆಸೆಯಿದ್ದರೂ ಮುಂದಿನ ಕಪ್ಪಾದ ಹಾದಿ ನನ್ನನು ಪ್ರತೀ ಬಾರಿಯೂ ಕಟ್ಟಿ ನಿಲ್ಲಿಸುತ್ತಿತ್ತು. ಈಗ ಸಮುದ್ರದ ಈಜಿನಂತೆ ಮುಂದೆ ಹೋದಷ್ಟೂ ಆಳ ವಿಪರೀತವಾಗತೊಡಗಿದೆ. ಕೆಲವೊಮ್ಮೆ ಭಯವೂ ಆಗುತ್ತದೆ. ಒಂತೊಮ್ಮೆ ಎಲ್ಲರನ್ನೂ ಒಪ್ಪಿಸಿ, ಅದೇನೇ ಆದರೂ ಸರಿಯೇ ಎಂದು ಈಕೆಯೊಟ್ಟಿಗೆ ಮದುವೆಯಾದರೆ? ಆಗ ಮೂಡುವ ನಂತರದ ಪ್ರೆಶ್ನೆಯೇ , ನನ್ನ ಜೀವನದ ಗುರಿ ಅಷ್ಟಕ್ಕೇ ಸೀಮಿತವೇ? ಆಕೆಯನ್ನು ಕೊನೆಯವರೆಗೂ ನಗಿಸುವುದು, ಸುಖಿಸುವುದು, ದುಡಿಯುವುದು, ಮನೆ, ಮಕ್ಕಳು..ನನಗಿದೆಲ್ಲ ಸಾದ್ಯವುಂಟೇ? ಇಲ್ಲ. ಗೊತ್ತಿಲ್ಲ! ಆದರೆ ಆಕೆಯೆಂದರೆ ನನಗೇನೋ ಒಂದು ಮಧುರ ಭಾವ. ಆ ಮಲ್ಲಿಗೆ ಹೊವಿನಂತಹ ಅರಳಿದ ಮುಖವನ್ನು ನೋಡಿದರೆ ದಿನದ ಜಂಜಾಟವೆಲ್ಲ ಮಂಗಮಾಯಾ. ಜೊತೆಗೆ ಅದೇನೋ ಒಂದು ಬಗೆಯ ವಿಪರೀತ ಆಕರ್ಷಣೆ. ಎಂತಹ ಜಾಗದಲ್ಲೂ ಕ್ಷಣಮಾತ್ರದಲ್ಲೇ ಮತ್ತೇರಿಸುವ ಆಕೆಯ ಆ ಮೈಮಾಟ ನಲಿಯುವ ನವಿಲಿಗೆ ಚಿನ್ನದ ಗರಿಗಳಂತೆ. ಅಮೋಘ. ಅನನ್ಯ. ಆದರೆ ನನ್ನ ಹಾಗು ಆಕೆಯ ಸಂಬಂಧ ಕೇವಲ ಸಲುಗೆಯಾಗಿರಬಾರದು. ಆಕರ್ಷಣೆಯಂತೂ ಬಿಲ್ಲಕುಲ್ ಇರಲೇಬಾರದು. ಆದರೆ ನನ್ನ ಹೃದಯ ಸ್ವಚ್ಛಂದವಾದರೂ ಮನಸ್ಸು ಮಾತ್ರ ತದ್ವಿರೋಧಿ. ಎಂದಿಗೂ ಅದು ಹೇಳಿದಂತಯೇ ನೆಡೆಯಬೇಕು! I hate it.




Continue...

ಪಯಣ - 6

...ಆಶ್ಚರ್ಯದಿಂದ ಇಬ್ಬರೂ ರೋಮಿನ ಹೊರಗೆ ನೋಡತೊಡಗಿದೆವು. ಆಕೆಯ ಮಾತಿನ ಸದ್ದನ್ನು ಕೇಳಿ ಓನರ್ ಅಂಕಲ್ ಪರೀಕ್ಷಿಸಲೆಂದು ಮೇಲೆ ಬಂದಿರಬಹುದೇ? ಇದ್ದರೂ ಇರಬಹುದು. ಇಡೀ ಕಟ್ಟಡದ ಸಿಸಿಟಿವಿ ಕ್ಯಾಮೆರಮ್ಯಾನ್ ಆಗಿರುವ ಆತ ರಾಧಾ ಬಂದಿದ್ದನ್ನೂ ನೋಡಿರಬಹುದು. ಕೇಳಿದರೆ ಎಕ್ಸಾಮ್ಸ್ ಗೆ ಪರ್ಸನಲ್ ಟ್ಯೂಷನ್ ತೆಗೊಂತ ಇದ್ದೀನಿ ಎಂದು ಉತ್ತರಿಸಬಹುದು. ಆದರೆ ಆತ ನಂಬನು. ನಂಬದಿದ್ದರೆ ಕತ್ತೆ ಬಾಲ ಎಂದು ಮೇಲೆದ್ದೆ. ಏನೂ ಆಗುವುದಿಲ್ಲವೆಂದು ಆಕೆಯ ಕಿವಿಯ ಬಳಿ ನಿಧಾನವಾಗಿ ಉಸುರಿ ನಾವಿದ್ದ ರೂಮಿನ ಬಾಗಿಲನ್ನು ಎಳೆದುಕೊಂಡು ಹೊರಬಂದೆ. ಮತ್ತೊಮ್ಮೆ ಬೆಲ್ಲು ಬಡಿಯಿತು. ಮೊದಲಬಾರಿಗೆ ಆ ಬಾಗಿಲಿಗೆ ಮೂರು ಲಾಕ್ ಗಳನ್ನು ಹಾಕಿದ್ದೆ. ಒಂದೊಂದನ್ನೇ ನಿಧಾನವಾಗಿ ತೆಗೆಯತೊಡಗಿದೆ. ಓನರ್ ಅಂಕಲ್ನ ಒಟ್ಟಿಗೆ ಅವರ ಮಡದಿಯೂ ಬಂದಿದ್ದರೆ ಏನು ಮಾಡುವುದೆಂದು ಯೋಚಿಸುತ್ತಾ ಬಾಗಿಲನ್ನು ತೆರೆದರೆ ಆಶ್ಚರ್ಯವೊಂದು ಕಾದಿತ್ತು. ಸೆಪ್ಪೆಮೋರೆಯನ್ನು ಹಾಕಿಕೊಂಡು ಆದಿ ತನ್ನ ಲಗೇಜ್ ಬ್ಯಾಗಿನೊಟ್ಟಿಗೆ ಅಲ್ಲಿ ನಿಂತಿದ್ದಾನೆ!

**

'ಏನಾಯಿತೋ ಮಚಿ.. ರಾತ್ರಿನೇ ಯಾಕೋ ಬಂದ್ಬಿಟ್ಟೆ?' ನಾನು ಕೇಳಿದ ಪ್ರೆಶ್ನೆಗೆ ಆದಿ ಕೂಡಲೇ ಉತ್ತರಿಸಲಿಲ್ಲ. ಏನೂ ಆಗಿಲ್ಲವೆಂದು, ನಾಳೆ ಸಾರಿಗೆ ನೌಕರರು ಮುಷ್ಕರ ಊಡಿ ರಸ್ತೆಯನ್ನು ತಡೆಯಿಡಿಯುವ ಸಂಭವವಿರುವುದರಿಂದ ರಿಸ್ಕ್ ಬೇಡವೆಂದು ಬೇಗ ಬಂದನೆನ್ನುತ್ತಾನೆ. ಜೀವನದ ಮೊಮ್ಮೊದಲ ಸುಮಧುರ ಕ್ಷಣಗಳನ್ನು ಅನುಭವಿಸಲು ಅಣಿಯಾಗಿದ್ದ ನನಗೆ ಸಾರಿಗೆ ನೌಕರರರು ಹಾಗು ಮಿಗಿಲಾಗಿ ಆದಿಯ ಮೇಲೆ ಎಲ್ಲಿಲ್ಲದ ಕೋಪ ಮೂಡಿತು. ಹಸಿದ ನಾಯಿಮರಿಗೆ ಟಿವಿಯೊಳಗಿನ ಮಾಂಸದ ತುಂಡನ್ನು ತೋರಿಸಿದಂತ್ತಾಗಿತ್ತು ನನ್ನ ಪರಿಸ್ಥಿತಿ. ಆದಿ ಬಂದ ಕೂಡಲೇ ರಾಧಾ ನಮ್ಮ ಮನೆಯಿಂದ ನೆಡೆದರು.

'By the way, how was your day.. ?' ತನ್ನ ಬಟ್ಟೆಗಳನ್ನು ಜೋಡಿಸುತ್ತಾ ಆದಿ ಕೇಳಿದ. ಶಾಂತ ಕಣ್ಣಿನಿಂದಲೇ ನಾನು ಆತನನ್ನು ಗುರಾಯಿಸತೊಡಗಿದೆ.


****


'ನೋಡ್ರಿ.. ಇವನಿಗೆ ಏನೂ ಗೊತ್ತಿಲ್ಲ, ಕೇಳಿದಷ್ಟು ಕೊಡ್ತಾನೆ ಅಂತೆಲ್ಲಾ ಅನ್ಕೋ ಬೇಡಿ.. ಕೊಟ್ರೆ, ದಿನ ಸಂಬಳ.. ಗಂಡಾಳು ಹೆಣ್ಣಾಳು ಇಬ್ರಿಗೂ ದಿನಕ್ಕೆ 500. ಆಗುತ್ತಾ, ಇಲ್ವಾ? ' ಶುಂಠಿಯ ಬೀಜಗಳಿಗೆ ಮಣ್ಣಿನ ಬೆಡ್ ಗಳನ್ನು ನಿರ್ಮಿಸಲು ತನ್ನೊಟ್ಟಿಗೆ ಜನಗಳನ್ನು ತಂದಿದ್ದ ಮೇಸ್ತ್ರಿಯೊಟ್ಟಿಗೆ ಲೋಕೇಶ ಚರ್ಚಿಸತೊಡಗಿದ. ಅಂದು ಭಾನುವಾರವಾದರಿಂದ ನಾವು ಮೂವರೂ ಲೊಕೇಶನ ಟೆಂಪರರಿ ಗದ್ದೆಯೆಡೆಗೆ ಸವಾರಿಯನ್ನು ಹೂಡಿದ್ದೆವು. ಸಿಟಿಯಿಂದ ಸುಮಾರು ನಾಲ್ಕೈದು ಕಿಲೋಮೀಟರ್ ದೂರದಲ್ಲಿರುವ ಜಾಗ ಬೆಳ್ಳಂಬೆಳೆಗೆ ಸೂರ್ಯ ಉದಯಿಸುವ ಹೊತ್ತಿಗೆ ಬಂದರಂತೂ ಸ್ವರ್ಗಕ್ಕೆ ಮೂರೇ ಗೆಣೇನೋ ಎಂಬಂತಿರುತ್ತದೆ. ಗದ್ದೆಯ ಪಕ್ಕಕ್ಕೇ ಬೆಳೆದುಕೊಂಡಿರುವ ಬೃಹದಾಕಾರದ ಗುಡ್ಡದ ಮೇಲಿದ್ದ ಮರಗಳಿಂದ ಚಿಲಿಪಿಲಿಗುಡುವ ಸಹಸ್ರಾರು ಪಕ್ಷಿಗಳು, ಆ ತಂಪಾದ ಗಾಳಿ, ಮೋಡ ಚದುರಿದ ಶಾಂತ ಆಗಸ ಹಾಗು ಸ್ಪೂರ್ತಿಯ ಚಿಲುಮೆಯಂತೆ ನಿಧಾನವಾಗಿ ಮೇಲೇಳುತ್ತಿರುವ ಸೂರ್ಯದೇವ. ಬಸ್ಸಲ್ಲಿ ಹೋಗೋಣವೆಂದರೂ ಕೇಳದೆ ಅಲ್ಲಿಂದ ಇಲ್ಲಿಯವರೆಗೂ ಜಾಗಿಂಗ್ ಎಂದು ಓಡಿಸಿಕೊಂಡೇ ಬಂದ ಲೊಕೇಶನ ಮೇಲಿದ್ದ ಸಿಟ್ಟೆಲ್ಲವೂ ಈ ಪ್ರಕೃತಿಯ ಸೊಬಗಿನಲ್ಲಿ ಶಮನವಾಗಿದ್ದಿತು.

'ಬ್ಯಾಡಿ ಸರ.. ಸುಮ್ನೆ ನಿಮ್ಗೆ ಲಾಸ್ ಆಗುತ್ತೆ.. ಕಾಂಟ್ರಾಕ್ಟ್ ರೇಟ್ ಮಾತಾಡೋಣ.. ಫೈನಲ್ ಆಗಿ ಒಂದ್ ರೇಟ್ ನೀವೇ ಹೇಳಿ ' ಎಂದ ಮೂರಡಿ ಉದ್ದದ ಉತ್ತರಕರ್ನಾಟಕದೆಡೆಯ ಮೇಸ್ತ್ರಿ. ಲೋಕೇಶ ಕೂಡಲೇ ತನ್ನ ಫೋನಿಂದ ಯಾವುದೊ ನಂಬರ್ ಗೆ ಫೋನ್ ಮಾಡಿ 'ರೀ ಸೋಮಶೇಖರ್, ಕಳ್ಸ್ರಿ ನಿಮ್ ಜನಾನ.. ಇಲ್ ಯಾರೋ ಟೈಮ್ ವೇಸ್ಟ್ ಮಾಡೋಕ್ಕೆ ಅಂತಾನೆ ಬಂದಿದ್ದಾರೆ ಅನ್ಸುತ್ತೆ..' ಎಂದ ಮಾತನ್ನು ಕೇಳಿದ ಕೂಡಲೇ ಕಕ್ಕಾಬಿಕ್ಕಿಯಾದ ಮೂರಡಿಯ ಮೇಸ್ತ್ರಿ 'ಸಾಮಿ.. ಒಂದ್ ನಿಂಷ.. ಸರಿ. ಅದೇನೋ ಕೊಡ್ತಿರೋ ಕೊಡಿ. ಕಾಪಿ ತಿಂಡಿಗೆ ಅಂತ ಒಂದ್ ಐವತ್ ಸೇರ್ಸಿ ಕೊಟ್ರೆ ಆಯಿತು' ಎಂದ. ತನ್ನ ಕೋಪವನ್ನು ನಿಗ್ರಹಿಸುವಂತೆ ವರ್ತಿಸಿದ ಲೋಕೇಶ 'ನೀವಿನ್ನು ನಡಿಬಹುದು.. ಬೇರೆ ಜನ ಬರ್ತಾ ಇದ್ದಾರೆ..' ಎಂದಕೂಡಲೇ. 'ಯಾ.. ಸುಮ್ನಿರಿ ಬುದ್ದಿ.. ನೀವೊಳ್ಳೆ..ಎಷ್ಟಾದ್ರೂ ಕೊಡಿ.. ಕಾಫಿ ಗೀಫಿ ಏನು ಬ್ಯಾಡ.. ಹೇಯ್ ಏನ್ ಮಾಡಕ್ ಹತ್ತಿರ್ಲೆ ನೀವು, ನಡೀರ್ ನಡೀರಿ. ನಾಳಿ ಒಳಿಕ್ಕ ಕೆಲ್ಸ ಮುಗಿಸ್ಬೇಕಂತಿ..' ಎನ್ನುತ ಮೇಸ್ತ್ರಿ ತನ್ನವರನ್ನು ಕೆಲಸಕ್ಕೆ ತೊಡಗಿಸತೊಡಗಿದ. ಲೋಕೇಶ ನಮ್ಮನ್ನು ನೋಡಿ ಒಮ್ಮೆ ಮುಗುಳ್ನಕ್ಕ.

'ಅಲ್ಲ ಮಾರಾಯ.. ಒಂದ್ ಐವತ್ ರೂಪಾಯಿಗೆ ಕಂಜೂಸ್ತನ ಮಾಡ್ತಿಯಲ್ಲ. ಎಲ್ಲೆಲ್ಲೋ ಕೊಡ್ತೀಯ,ಪಾಪ ಅವ್ರಿಗೆ ಕೊಟ್ರೆ ಏನಾಗೋದು ನಿಂಗೆ' ಎಂದ ಆದಿ.

'ಸಾರ್, ಸುಮ್ನಿರಿ ತಾವು. ದುಡ್ಡು ಡೈರೆಕ್ಟ್ ಆಗಿ ಕೆಲ್ಸ ಮಾಡೋರ್ ಕೈಗೇ ಹೋದ್ರೆ ಓಕೆ.. ಆ ಮೂರಡಿ ಮೇಸ್ತ್ರಿ ಫಿಲ್ಟರ್ ಮಾಡಿ ಅವ್ರುಗಳಿಗೆ ಅದರ ಅರ್ದಾನು ಕೊಡಲ್ಲ...ನಾನೇ ಕೊನೆಗೆ ಒಂದಿಷ್ಟು ಅಂತ ಜನಗಳಿಗೆ ಕೊಡ್ತೀನಿ.. ಅದನ್ನ ಈವಾಗಲೇ ಹೇಳಿದ್ರೆ ಸಂಬಳದಲ್ಲೇ ಅದನ್ನೂ ಕಟ್ ಮಾಡ್ಕೊಂಡು ಕೊಡ್ತಾನೆ ಆಸಾಮಿ'

'Good .. ನೀನ್ ಮಾಡೋದೂ ಸರೀನೇ.. ಆದ್ರೂ ಬಾರ್ಗೇನಿಂಗ್ ಮಾಡೋದನ್ನ ನಿನ್ನಿಂದ ಕಲಿಬೇಕು ನೋಡಪ್ಪ' ಎಂದ ಆದಿ.

ಲೋಕೇಶ ನಗಾಡಿದ. ತನ್ನ ಜಾಗಿಂಗ್ ಸೂಟ್ನಲ್ಲಿದ್ದ ಆತ ಅಲ್ಲಿಯೇ ಮೇಲಕ್ಕೂ ಕೆಳಕ್ಕೂ ಬಗ್ಗುತ್ತಾ ಸಣ್ಣದಾಗಿ ವ್ಯಾಯಾಮವನ್ನು ಮಾಡತೊಡಗಿದ.

ವೀಳೇದೆಲೆಗೆ ಅಡಿಕೆ ಕಡಿಪುಡಿ ಹಾಗು ಸುಣ್ಣವನು ಮೆತ್ತಿ ಬಾಯನ್ನು ಭರ್ತಿಮಾಡಿಕೊಳ್ಳುತ್ತಿದ್ದ ಕೂಲಿಯ ಹೆಂಗಸರು ಈತನನ್ನು ನೋಡಿ ನಗುತ್ತಿದ್ದರು.

ಬಾಯ್ತುಂಬ ಎಲೆಯಡಿಕೆಯ ರಸವೇ ತುಂಬಿದ್ದರೂ, ತುಟಿಗಳು ಬಿರಿದು ದಂತಪಂಕ್ತಿಗಳು ಕಾಣದಿದ್ದರೂ ಅವರು ನಕ್ಕರು ಎಂಬ ಖಾತ್ರಿ ನನಗೆಗಾಯಿತು ಎಂದು ನಾನು ಯೋಚಿಸತೊಡಗಿದೆ.

'ಮತ್ತೆ ಅದ್ಯಾರೋ ಸೋಮಶೇಖರ್ ಎಂದಲ್ಲ ಅವ್ರ್ ಜನ ಬಂದ್ರೆ ಏನ್ ಮಾಡ್ತಿಯಾ' ಎಂದ ಆದಿಯ ಪ್ರೆಶ್ನೆಗೆ,

'ನಾನು ಯಾವ್ ನಂಬರಿಗೂ ಫೋನೇ ಮಾಡ್ಲಿಲ್ಲ .. I know how to bargain ' ಎಂದು ಪುನಃ ನಗಾಡಿದ.


****



'ಮಗ್ನೆ, ನಿಂಗೆ ಎರ್ಡ್ ಇಂಟರ್ನಲ್ನಲ್ಲೆ ಫುಲ್ ಮಾರ್ಕ್ಸ್ ಬಂದಿದೆ.. ಮೂರ್ನೆದೇನು ಬರಿಯೋದು..?' ಕಾಲೇಜಿನ ಕಾರಿಡಾರಿನ ಮೂಲೆಯಲ್ಲಿ ನಿಂತು ಲೋಕೇಶ ಹೇಳಿದ.

'ಹಾಗೇನಿಲ್ಲ.. ಆ ನೆಪದಲ್ಲಾದರೂ ರಿವಿಶನ್ ಆಗುತ್ತಲ ಅಂತ..' ಎಂದ ಆದಿಯ ಮಾತಿಗೆ,

'ರಿವಿಶನ್ನು ಬೇಡ ಗಿವಿಷನ್ನು ಬೇಡ.. ಮುಚ್ಕೊಂಡು ನನ್ ಹೆಸ್ರಲ್ಲಿ ಇಂಟರ್ನಲ್ ಬರಿ..'

ಕೊಂಚ ಸುಮ್ಮನಾದ ಆದಿ, 'ಲೋ.. ಸಿಕ್ ಹಾಕೊಂಡ್ರೆ ಇಬ್ರು ಡಿಬಾರ್ ಆಗ್ತಿವಿ.. ಗೊತ್ತಲ್ಲ'

'ಏನೂ ಆಗಲ್ಲ..ನನ್ನ್ ಬ್ಲೂ ಬುಕ್ಕಲ್ಲಿ ತಲೆ ಬಗ್ಗಿಸ್ಕೊಂಡು ಬರಿ ಸಾಕು.. ನಾನು ಒಂದ್ ಡಮ್ಮಿ ಬ್ಲೂ ಬುಕ್ ಇಟ್ಕೊಂಡು ಬರಿತೀನಿ'

'ಲೋಕಿ, ಇನ್ನೂ ಒಂದ್ ವಾರ ಇದೆ ಇಂಟರ್ನಲ್ಸ್ ಗೆ.. ನಾನ್ ಹೇಳ್ಕೊಡ್ತೀನಿ, ಓದೋ...'

'ಇಲ್ಲ ಗುರು.. ಜೀವನಕ್ಕೆ ಉಪಯೋಗ ಆಗ್ದೇ ಇರೋದನ್ನ ಓದಿ ಸಾಧಿಸೋದು ಏನೂ ಇಲ್ಲ.. ಆ ಫಾರ್ಮುಲಾ, ಆ ಥಿಯೋರಂ, ಆ ಔಟ್ಪುಟ್ಟು, ಮಣ್ಣು ಮಸಿ.. I challenge you.. ಇನ್ ಒಂದ್ ಹತ್ ವರ್ಷ ಆದ್ಮೇಲೆ ನಿಂಗೆ ಇವೆಲ್ಲ ದೇವ್ರಾಣೆ ನೆನ್ಪ್ ಇರಲ್ಲ. ಇದ್ರೂ ಯೂಸ್ಗೆ ಬರೋಲ್ಲ..ಬರಿ ಎಕ್ಸೆಲ್ ಅಂಡ್ ಇಮೇಲ್ ಅಲ್ಲೇ ನಿನ್ನ ಇಡೀ ವರ್ಕ್ ಲೈಫ್ ಮುಗ್ದ್ ಹೋಗಿರುತ್ತೆ.. ಹೆಸ್ರಿಗೊಂಡು ಡಿಗ್ರಿ ಇರ್ಲಿ ಅಂತ ಅಷ್ಟೇ.. ಇಲ್ಲ ಅಂದ್ರೆ ಇದಕ್ಕೆಲ್ಲ ಟೈಮ್ ವೇಸ್ಟ್ ಮಾಡೋಕ್ಕೆ ನನ್ನ್ ಹತ್ರ ಅಂತೂ ಟೈಮ್ ಇಲ್ಲ.. Moreover ಈ ಎಕ್ಸಾಮ್ಸ್ ಗಳೆಲ್ಲ ಕೇವಲ ಸ್ಟೂಡೆಂಟ್ಸ್ ಗಳ ಮೆಮೊರಿ ಪವರ್ನ ಟೆಸ್ಟ್ ಮಾಡ್ತಾವೆ ವಿನಃ ಟ್ಯಾಲೆಂಟ್ನ ಅಂತೂ ಅಲ್ವೇ ಅಲ್ಲ..' ಎಂದು ನಗುತ್ತಾನೆ.

'ಹೌದಪ್ಪ.. ನೀನೆ ಒಂದು ಯೂನಿವೆರ್ಸಿಟಿನ ಶುರು ಮಾಡಿ ಅಲ್ಲಿ ನಿನ್ ಇಷ್ಟದಂತೆ ಪಾಠ ಮಾಡ್ಸು.. ಆದ್ರೆ ಅಲ್ಲಿವರೆಗೂ ದಯಮಾಡಿ ಕಾಲಿಗ್ ಬಂದಿದ್ದು ಪಂಚಾಮೃತ ಅಂತ ಸಿಗೋದನ್ನ ಓದ್ತಾ ಇರು..'

'ಏನ್ ಇದ್ಯಪ್ಪಾ ಓದೋಕ್ಕೆ.. ಯಾವ ಫಾರ್ಮುಲಾನೇ ನೋಡು ಯಾವ ಥಿಯೋರಂನೇ ನೋಡು, ಎಲ್ ನೋಡಿದ್ರೂ ಬರಿ ಫಾರಿನರ್ಸ್ ಹೆಸ್ರೇ .. ನಮ್ಮ ಆರ್ಯಭಟ, ಭಾಸ್ಕರಚಾರ್ಯ ಅಂತಾವ್ರೆಲ್ಲ ಇವ್ರಿಗೆ ಲೆಕ್ಕಕ್ಕೆ ಇಲ್ಲ.. ಫಾರಿನರ್ಸ್ಗೆ ಯೂನಿವರ್ಸಿಟಿ, ಟ್ಯೂಷನ್ನು, ಅಂತ ಹತ್ತಾರು ಫೆಸಿಲಿಟಿ ಪಡ್ಕೊಂಡು ಅವ್ರ್ ಕಂಡ್ ಹಿಡಿದಿರೋದನ್ನ ನಮ್ಮವ್ರು ಬರಿ ನೆಲದ ಮೇಲೆ ಕೂತ್ಕೊಂಡು ಅರೆಬೆತ್ತಲೆ ಬಟ್ಟೆಯಲ್ಲೇ ಸಾವಿರಾರು ವರ್ಷಗಳ ಹಿಂದೆನೇ ಕಂಡ್ ಹಿಡ್ದಿದ್ದಾರೆ.. ಇದೇನು ಇವಾಗ ಯಾರಿಗೂ ಗೊತ್ತಿರದೆ ಇರೋ ವಿಷಯ ಅಲ್ಲ ಬಿಡು..'

'So, what’s your point??'

'Nothing.. ನಂಗೆ ನಾನೇ ರಿಸರ್ಚ್ ಮಾಡಿ ಕಲಿ ಬೇಕು.. ಅದನ್ನ ಬರಿಬೇಕು.. ನಮ್ಮವರು 1000 ವರ್ಷಗಳ ಹಿಂದೆ ಕಟ್ಟಿದ್ದ ತಾಂಜಾಊರಿನ ಬೃಹದೇಶ್ವರ ಟೆಂಪಲ್ ತರ ಯಾವುದೇ ಇಂಜಿನಿಯರಿಂಗ್ ಡಿಗ್ರಿಗಳಿಲ್ಲದೆ ನಾನು ಕೂಡ ಅಂತಹ ಒಂದು ಸಾಧನೆಯನ್ನು ಮಾಡ್ಬೇಕು..'

ಆದಿ ನಗತೊಡಗಿದ.

'ಲೋಕಿ.. ಡೋಂಟ್ ವರಿ .. ನಾನ್ ನಿನ್ನ ಇಂಟರ್ನಲ್ಸ್ ಬರೀತಿನಿ.. ನೀನು ಸದ್ಯಕ್ಕೆ ಶುಂಠಿ ಬಿಸಿನೆಸ್ ಮಾಡು ಸಾಕು.. ಟೆಂಪಲ್ನ ಆಮೇಲೆ ಕಟ್ಸ್ವಂತೆ'

'ಲವ್ ಯು ಮಚಿ... ನಿಂಗೆ ಏನ್ ಟ್ರೀಟ್ ಬೇಕು ಕೇಳು .. ನಾನ್ ಕೊಡ್ತೀನಿ'

'ಏನು ಬೇಡಪ್ಪ.. ಬೃಹದೇಶ್ವರ ಟೆಂಪಲ್ ಅಂದ್ಯಲ್ಲ.. ನಂಗೆ ಯಾಕೋ ದ್ವಾರಸಮುದ್ರದ ಟೆಂಪಲ್ ಗೆ ಹೋಗ್ಬೇಕು ಅನ್ನಿಸ್ತಾ ಇದೆ.. ಅದೂ ಕೂಡ ಬೆಳ್ಳಂಬೆಳೆಗೆ..'

'ಅದಕ್ಕೇನಪ್ಪಾ.. ನಂದೇ ಖರ್ಚು.. ನೆಕ್ಸ್ಟ್ ವೀಕೇ ಹೋಗಣ.. ಇಂಟರ್ನಲ್ಸ್ ಮುಗ್ದ ಮೇಲೆ..'

'Done..' ಎಂದ ಆದಿ ಲೊಕೇಶನ ಹೊಸ ಬ್ಲೂ ಬುಕ್ಕಿನ ಮೇಲೆ ಆತನ ಹೆಸರನ್ನು ಬರೆದು ಬ್ಯಾಗಿನೊಳಗೆ ಇರಿಸಿದ.


****



ಮೂರು ಶತಮಾನಗಳ ಸಾಮ್ರಾಜ್ಯವೊಂದು ಕಟ್ಟಿಸಿದ ಒಂದುವರೆಸಾವಿರ ದೇವಾಲಯಗಳಲ್ಲಿ (!) ನಾಲ್ಕು ದಶಕ ಬೆವರು ಹರಿಸಿ ಕಟ್ಟಿಸಿದ ಈ ರಮ್ಯರಮಣೀಯ ದೇವಾಲಯದ ಆಯಸ್ಸೀಗ ಬರೋಬ್ಬರಿ ಒಂಬೈನೂರು ವರ್ಷಗಳು. ಹತ್ತಾರು ಆಕ್ರಮಣಗಳನ್ನು, ಭೂಕಂಪಗಳನ್ನು ಎದುರಿಸಿ ಗತಿಸಿದ ಇತಿಹಾಸಕ್ಕೂ ಹಾಗು ಪ್ರಸ್ತುತ ಪರಿಹಾಸ್ಯಕ್ಕೂ ನಿಂತಿರುವ ಏಕಮಾತ್ರ ಕೊಂಡಿಯಂತೆ ಕಾಣುತ್ತಿದೆ. ಈ ಕಲಾಶಕ್ತಿಕೇಂದ್ರ ಆಸಕ್ತಿದಾಯ ಕಣ್ಣುಗಳನ್ನು ತಮಗರಿಯಂದಂತೆ ಜಿನಿಗಿಸುವುದಂತೂ ಸುಳ್ಳಲ್ಲ. ಆ ಕೆತ್ತನೆ, ಆ ಚತುರತೆ, ಆ ಜೀವಂತಿಗೆ ಹಾಗು ಎಲ್ಲಿಲ್ಲದ ಶಾಂತತೆ. ಉತ್ತರ ದಿಕ್ಕಿನಿಂದ ದೇವಾಲಯದ ದ್ವಾರವನ್ನು ಪ್ರವೇಶಿಸಿದ ನನಗೆ ಗುಬ್ಬಚ್ಚಿಗಳ ಚಿಲಿಪಿಲಿ ನಾದವನ್ನು ಬಿಟ್ಟರೆ ಬೇರೇನೂ ಕೇಳಲಿಲ್ಲ. ತಂಪಾದ AC ಕೋಣೆಯೊಳಗೆ ಓದಂತೆ ತಣ್ಣಗಿನ ಪರಿಸರ ದೇವಾಲಯದೊಳಗೆ. ಮನಸಿನ ಬಾಯನ್ನು ಮುಚ್ಚಿಸುವ ಆ ಶಾಂತತೆಯಲ್ಲಿ ಚಿತ್ತವೂ ತಣ್ಣಗಾಗತೊಡದಿತು. ಹಾಗೆಯೆ ದೇವಾಯಲದ ಒಳಗೆ ಒಮ್ಮೆ ಕಣ್ಣಾಯಿಸಿದೆ. ನೆಲ, ಚಾವಣಿ, ಕಂಬಗಳಿಂದಿಡಿದು ಕಿಟಕಿ ದ್ವಾರಗಳೂ ಸಹ ಬಳಪದ ಕಲ್ಲಿನ ಬೈ ಪ್ರಾಡಕ್ಟುಗಳು. ಚೀವಿಂಗ್ ಗಮ್ಮನ್ನೂ ಬಹುಷಃ ಇಷ್ಟೊಂದು ಸ್ಪಷ್ಟವಾಗಿ ತಿದ್ದೀ ತೀಡಿ ಬಳುಕಿಸಿ ಕೊರೆಯಲು ಸಾಧ್ಯವಿಲ್ಲವೆನೋ. ಅಂತಹ ಚತುರತೆಯನ್ನು ಅಲ್ಲಿನ ಕಲ್ಲುಗಳ ಮೇಲೆ ಮೂಡಿಸಿರುವ ಶಿಲ್ಪಿಗಳ ಬೃಹತ್ವ ವರ್ಣನಾತೀತವಾದುದು. ನಯವಾದ ನುಣುಪಾದ ಮಂಟಪಗಳ ಮೇಲೆ ತನ್ನಿಂತಾನೇ ಕೂತ ನನ್ನ ದೇಹ ಪಕ್ಕದಲ್ಲಿದ್ದ ಕಲ್ಲಿನ ಕಂಬವೊಂದಕ್ಕೆ ಒರಗಿಕೊಂಡಿತು. ಪೂರ್ವದಿಂದ ರಂಗೇರುತ್ತಿದ್ದ ಆಗಸದ ಹೊಳಪು ನಕ್ಷತ್ರಗಳಂತೆ ಕೊರೆದಿರುವ ದೇವಾಲಯದ ಕಿಟಕಿಗಳ ಸಂದುಗಳಿಂದ ಮೋಹಕವಾಗಿ ಮೂಡತೊಡಗಿತ್ತು.ತನಗರಿಯಂದತೆಯೇ ನನ್ನ ಕಣ್ಣುಗಳು ಮುಚ್ಚಿಕೊಂಡವು. ಗುಬ್ಬಿಗಳ ಚಿಲಿಪಿಲಿ ಸದ್ದು ಕ್ರಮೇಣ ಮರೆಯಾಯಿತು. ಇಹಲೋಕದ ಪರಿಜ್ಞಾನವೇ ಕೊನೆಗೆ ಇಲ್ಲದಂತಾಯಿತು.

'ಮಚಿ, ಈ ದೇವಸ್ಥಾನಕ್ಕೆ ಮಾತ್ರ ವಿಮಾನ ಯಾಕಿಲ್ಲ..' ದೂರದಿಂದ ದೇವಾಲಯವನ್ನು ಕೈಕಟ್ಟಿ ನೋಡುತ್ತಿದ್ದ ಲೋಕೇಶ ಆದಿಯನ್ನು ಕೇಳಿದ.

'ವಿಮಾನನ?' ಎಂದು ಗಂಟಿಕ್ಕಿಕೊಂಡ ಆದಿಯ ಉಬ್ಬುಗಳ ಅರ್ಥವನ್ನು ಅರಿತ ಲೋಕೇಶ,

'ಹೌದು, ವಿಮಾನ. ನಮ್ಮ ಬಹಳಷ್ಟು ದೇವಾಲಯಗಳ ದ್ವಾರದಲ್ಲಿ ಅಥವಾ ದೇವಾಲಯದ ಮೇಲೆ ಕಾಣುವ ತ್ರಿಭುಜಾಕೃತಿ ಅಥವಾ ಗೋಪುರಾಕೃತಿಯ ರಚನೆ'

'ಹೌದಲ್ಲ..’ ಎಂದ ಆದಿ , ‘ಆದ್ರೂ ವಿಮಾನ ಇಲ್ದೆನೇ ದೇವಸ್ಥಾನ ಒಂತರ ಚೆನ್ನಾಗಿದೆ..' ಎಂದ. ಕೆಲಹೊತ್ತು ಸುಮ್ಮನಾಗಿ, 'ವಿಮಾನ? ಈತರ ಹೆಸ್ರು ಯಾಕಿರಬಹುದು.. ಏನ್ ಇಲ್ಲಿ ಪ್ಲೈನ್ ಲ್ಯಾಂಡ್ ಮಾಡ್ಬಹುದಾ' ಎಂದು ಕೇಳಿದ.

ಲೋಕೇಶ ನಗುತ್ತಾ, 'ಮಚಿ, ನಮ್ಮ ಹಿರೀಕ್ರು ನಮಗಿಂತ ಅದೆಷ್ಟು ಮುಂದುವರೆದಿದ್ರೂ ಅನ್ನೋದಕ್ಕೆ ಅವಾಗ ವಿಡಿಯೋ ರೆಕಾರ್ಡಿಂಗ್ಸ್ಗಳಿರಲಿಲ್ಲ… ಮಿಗಿಲಾಗಿ ಅವ್ರಿಗೆ ಅದನ್ನ ರೆಕಾರ್ಡ್ ಮಾಡಿ ಸೋಶಿಯಲ್ ನೆಟ್ವರ್ಕ್ಗಳಲ್ಲಿ ಹಾಕ್ಬೇಕು ಅನ್ನೋ ತೆವಲು ಸಹ ಇರ್ಲಿಲ್ಲ.. ಒಂದು ಪಕ್ಷ ಅದು ಇದ್ದಿದ್ರೆ ಅಥವಾ ದೇವಾಲಯದ ಕಲ್ಲುಗಳಿಗೇ ಮಾತು ಬರುವಂತಿದ್ರೆ ನಾವು ಆಗಿನ ಅದೆಷ್ಟು ವಿಸ್ಮಯಗಳನ್ನು ಕಾಣ್ತಿದ್ದೆವೋ ಏನೋ.. 7000 ವರ್ಷಗಳ ಹಿಂದಿನ ರಾಮಾಯಣದ ಕಾಲದಲ್ಲೇ ಪುಷ್ಪಕ ವಿಮಾನ ಎಂಬ ಹೆಸರು ಬಂದಿದೆ ಅಂದ್ರೆ ನಮ್ಮವರಿಗೆ ಇಂತಹ ಆಟೋಮೇಷನ್ಸ್ ಗಳ ಬಗ್ಗೆ ಸಾವಿರಾರು ವರ್ಷಗಳ ಹಿಂದೆಯೇ ಸ್ಪಷ್ಟ ಕಲ್ಪನೆ ಇತ್ತು ಅಂತ ಆಯ್ತು..ವಿಮಾನ means ವಿಮಾನ..ಹಾರುವ ವಸ್ತು.. ಏರೋಡೈನಾಮಿಕ್ಸ್ ಬುಕ್ಸ್ ತಗೊಂಡು ಓದಿದ್ರೆ ಇಂತಹ ತ್ರಿಭುಜಾಕೃತಿಯ ರಚನೆಗಳೇ ಹಾರಲು ಸೂಕ್ತ ಎಂಬುದನ್ನು ಕಾಣ್ತಿವಿ.. ಇವಾಗಿನ ಅದೆಷ್ಟು ವೆಸ್ಟೆರ್ನ್ ಮೂವಿಗಳಲ್ಲಿ ಇಂತಹ ಹಾರೋ ಫ್ಲೈಟ್ ಗಳನ್ನ ನಾವ್ ಕಾಣಲ್ಲ ಹೇಳು.. ವಿಪರ್ಯಾಸ ಅಂದ್ರೆ ನಾವು ಡೀಪ್ ಆಗಿ ನಮ್ಮವರ ಕ್ರಿಯೇಟಿವಿಟಿ ಬಗ್ಗೆ ಸ್ಟಡಿ ಮಾಡಲ್ಲ.. M.S, Mtech, CA, MBA ಇಷ್ಟ್ ಬಿಟ್ರೆ ಕಲೆ ಸಂಸ್ಕೃತಿ ಹಿಸ್ಟರಿಗಳನ್ನೆಲ್ಲ ಆಸ್ಥೆಯಿಂದ ಓದೋರು ಇವತ್ತಿನ ಕಾಲದಲ್ಲಿ ಎಷ್ಟ್ ಜನ ಸಿಗ್ತಾರೆ ಹೇಳು.. ನನ್ನ್ ಪ್ರಕಾರ ಈ ವಿಮಾನಗಳು ಹಾಗು ಬ್ರಹ್ಮಾಂಡಕ್ಕೂ ಏನೋ ಒಂದು ಕನೆಕ್ಷನ್ ಇದೆ.. ಏನು ಅಂತ ಮಾತ್ರ ಕೇಳ್ಬೇಡ.. But ಏನೋ ಒಂದು ಕನೆಕ್ಷನ್ ಇದೆ..' ಎಂದು ಲೋಕೇಶ ಸುಮ್ಮನಾದ.

ದೇವಾಲಯವನ್ನು ಪ್ರವೇಶಿಸುವ ಮೊದಲು ಅದರ ಹೊರಗಿನ ರಚನೆ ಹಾಗು ಆಕೃತಿಯನ್ನೇ ಭಿನ್ನ ವಿಭಿನ್ನವಾಗಿ ನೋಡುತ್ತಾ, ಚರ್ಚಿಸುತ್ತಾ ಇಬ್ಬರು ಮುನ್ನೆಡೆಯುತ್ತಿದ್ದರು. ಈಶ್ವರನಿಗೆ ಸಮರ್ಪಿತವಾಗಿರುವ ಈ ದೇವಾಲಯದ ಕೆತ್ತನೆ ಹಾಗು 'ಭಿತ್ತನೆ'ಯಲ್ಲಿ ಹಲವಾರು ಮಹತ್ವದ ಅಂಶಗಳು ಕಾಣಸಿಗುತ್ತವೆ. ಅದು ಯಾಂತ್ರಿಕಯುಗವಲ್ಲದ ಕಾಲದಲ್ಲಿ ಸುರುಳಿಯಾಕೃತಿಯಲ್ಲಿ ನಯವಾಗಿ ಕೆತ್ತಿರುವ ಕಂಬಗಳಾಗಿರಬಹುದು, ನಿಜ ಬಸವನೇ ಬಂದು ಮಂಡಿಯೂರಿ ಕೂತಿರುವಂತಿರುವ ಕಲ್ಲಿನ ಜೀವಂತಿಕೆಯಾಗಿರಬಹದು ಅಥವಾ ಇಡೀ ರಾಮಾಯಣ, ಮಹಾಭಾರತದ ಕತೆಯನ್ನು ಸೈನಿಕರ, ಕುದುರೆಗಳ, ರಣರಂಗಗಳ, ನೃತ್ಯಗಾರ್ತಿಯರ ಮೂಲಕ ಕೆತ್ತಿರುವ ಭಿತ್ತನೆಯಾಗಿರಬಹದು. ಒಟ್ಟಿನಲ್ಲಿ ಇಂತಹ ಅಗಣಿತ ವಿಸ್ಮಯಗಳ ಮೋಹಕ ಕೃತಿಯಾಗಿ ಹೊಯ್ಸಳರ ವಿಷ್ಣುದೇವರಾಯ ಕಟ್ಟಿಸಿದ ದ್ವಾರಕಾಸಮುದ್ರದ ಈ ದೇವಾಲಯ ಇಂದು ನಮ್ಮ ಮುಂದಿದೆ.

'ಲೋಕಿ, ಬಾ ಇಲ್ಲಿ...' ವಿಸ್ಮಯವನ್ನೇನೋ ಕಂಡಂತೆ ಆದಿ ದೇವಾಲಯದ ಪ್ರಾಂಗಣದಲ್ಲಿದ್ದ ಕಲ್ಲಿನ ಮೂರ್ತಿಯೊಂದನ್ನು ತುಂಬಾ ಹತ್ತಿರದಿಂದ ನೋಡುತ್ತಾ ಕೂಗಿದ. ಕೂಡಲೇ ಲೋಕೇಶ ಅವನ ಬಳಿಗೋಗಿ ನೋಡಿದರೆ ಪ್ರಸ್ತುತ ಕಾಲದಲ್ಲಿ ಅಂತರಿಕ್ಷಯಾನಿಗಳು ತೊಡುವ ದುಂಡಾದ ಹೆಲ್ಮೆಟ್ ಹಾಗು ಕೈಗೆ ಅವರಂತೆಯೇ ಧರಿಸಿರುವ ದಪ್ಪನಾದ ಗ್ಲೋಸ್ಸ್ಗಳನ್ನು ತೊಟ್ಟ ವ್ಯಕ್ತಿಯ ಮೂರ್ತಿಯೊಂದು ಕಾಣುತ್ತದೆ!

'ನಮ್ಮವ್ರಿಗೆ ಆವಾಗಲೇ ಸ್ಪೇಸ್ ಟ್ರಾವೆಲ್ ಬಗ್ಗೆ ಗೊತ್ತಿತ್ತೇನೋ?!' ಆದಿ ಆಶ್ಚರ್ಯಚಕಿತನಾಗಿ ಕೇಳಿದ.

'ಇರ್ಬಹುದು .. ಅಥವಾ ಇಲ್ದೇನೂ ಇರ್ಬಹುದು'

‘What do you mean .. ಇಲ್ಲ ಅಂದ್ರೆ ಅಂತರಿಕ್ಷಯಾನಿಗಳು ಹಾಕೋ ತರ ಮುಖ ಮುಚ್ಚಿದ ಮುಖವಾಡವನ್ನು ಯಾಕೆ ಹಾಕೋಂತರೇ?'

'ಯಾರಿಗೊತ್ತು .. ಯುದ್ಧದ ಟೈಮಲ್ಲಿ ತಲೆಗೆ ರಕ್ಷಣೆಗೆ ಅಂತ ಇರೋ ಗೌರ್ಡ್ ಅದಾಗಿರಬಹುದು ?!' ಎಂದು ತಾರ್ಕಿಕ ಉತ್ತರವನ್ನು ನೀಡಿದ ಲೋಕೇಶ .

'ಹಾಗಾದ್ರೆ ನಮ್ಮವ್ರಿಗೆ ಸ್ಪೇಸ್ ಟೆಕ್ನಾಲಜಿ ಬಗ್ಗೆ ಗೊತ್ತೇ ಇರ್ಲಿಲ್ಲ ಅಂತಾನಾ?'

'ನೋಡು ಆದಿ.. ಇಲ್ಲಿರೋ ಕೆಲ ಆಕೃತಿಗಳನ್ನ ನೋಡಿ ಪ್ರಸ್ತುತ ಟೆಕ್ನಾಲಜಿಗಳಿಗೆ ಅವುಗಳನ್ನು ಕಲ್ಪಿಸಿ ಇದು ಅದೆಯೇ ಅಂತ ಹೇಳೋದು ಮೂರ್ಖತನವಾಗುತ್ತೆ. ಫಸ್ಟ್ ಆಫ್ ಆಲ್ ನಾವು ಆಗಿನ ಕಾಲದವರನ್ನು ಈಗಿನವರೊಟ್ಟಿಗೆ ಕಂಪೇರ್ ಮಾಡೋದೇ ಮೊದಲ ತಪ್ಪು. ಅವ್ರು ಆಗಿನ ಕಾಲಕ್ಕೆ ದಿ ಗ್ರೇಟ್ ಅನ್ನಬಹುದಾದ ಜನಾಂಗ. ಯಾವುದೇ ಮೋಟಾರು, ಕರೆಂಟು, ಡಿಸೇಲು ಮತ್ತೊಂದು ಮಗದೊಂದುಗಳೆಂಬ ಆಧುನಿಕ ಯಂತ್ರೋಪಕರಣಗಳಿಲ್ಲದೆ ಇಷ್ಟೆಲ್ಲಾ ನಿರ್ಮಿಸಿ ತೋರಿಸಿದ್ದಾರೆ ಎಂದರೆ ಅವರ ಅಸಾಧಾರಣ ಕಲೆಗೆ ನಾವು ತಲೆಬಾಗಲೇಬೇಕು. ಪ್ರತಿ ಮೂರ್ತಿಗಳಲ್ಲಿ ಇರೋ ಆ ಡೀಟೇಲ್ ಹಾಗು ಇನ್ಫಾರ್ಮಶನ್ ಗಳೇ ಅದಕ್ಕೆ ಸಾಕ್ಷಿ. ಶ್ರೀಕೃಷ್ಣ ಎತ್ತಿ ಹಿಡಿದಿರುವ ಆ ಪರ್ವತವನ್ನು ನೋಡು. ಮೂರಡಿ ಉದ್ದದ ಆ ಕಲ್ಲಿನಲ್ಲಿ ಹಾವು, ಹುಳ, ಮಾನವ, ಮರ, ಹಕ್ಕಿ, ಹುಲಿ, ಬಾಳೆಯ ಗಿಡ ಹಾಗು ಅದರ ಗೊನೆ ಎಂಬ ಎಲ್ಲವನ್ನು ತೋರಿಸಿ ಪರ್ವತ ಎಂಬವುದರ ಸ್ಪಷ್ಟ ಕಲ್ಪನೆಯನ್ನು ಅದೆಷ್ಟು ಸೊಗಸಾಗಿ ತೋರಿಸಿದ್ದಾರೆ . ಆ ನರಹಹರಿಯ ಮೂರ್ತಿಯನ್ನು ಗಮನಿಸಿದ? ಹಿರಣ್ಯ ಕಶುಪುವಿನ ಕರುಳನ್ನೇ ಬಗೆದು ಸುರುಳಿಯಾಗಿ ಸುತ್ತಿ ತನ್ನ ಕೊರಳಿಗೆ ಹಾರವನ್ನಾಗಿ ಹಾಕಿಕೊಂಡಿರುವುದಾಗಲಿ, ತನ್ನ ಇನ್ನೊಂದು ಕೈಯಲ್ಲಿ ಆತನ ರಕ್ಷಕನ ಮುಖದ ಚರ್ಮವನ್ನು ಸಿಟ್ಟಿನಿಂದ ಎಳೆದಿರುವ ರಭಸಕ್ಕೆ ಆತನ ಕಣ್ಣುಗುಡ್ಡೆಗಳೇ ಕಿತ್ತು ಬಂದಿರುವ ಆ ಕಲ್ಲಿನ ಕೆತ್ತನೆಯನ್ನು ವರ್ಣಿಸಲು ಅಸ್ಸಾಧ್ಯ..ಇಂತಹ ಕಲೆ ಹಾಗು ಕುಶಲತೆಯನ್ನು ಪ್ರಸ್ತುತಕ್ಕೆ ಹೋಲಿಸುವುದು ಸುತರಾಂ ಸರಿಯಲ್ಲ. ಆದರೆ ಆವಾಗಲೇ ಹೇಳಿದಂತೆ ವಿಮಾನ ಹಾಗು ಇತರ ಕಲ್ಪನೆಗಳು ನಮ್ಮವರಿಗೆ ನಿಜವಾಗಿಯೂ ಇದ್ದಿರಲೂ ಬಹುದು. ಕಾರಣಾಂತರಗಳಿಂದ ಆ ತಂತ್ರಗಾರಿಕೆ ಕಾಲಘಟ್ಟದಲ್ಲಿ ಮರೆಯಾಗಿರಲೂಬಹುದು. ಆದರೆ ನನ್ನಂತವರಿಗೆ ಇಂತಹ ದೇವಾಲಯಗಳು ನಾವುಗಳು ಅದೆಷ್ಟೇ ಮುಂದುವರೆದಿದ್ದೀವಿ ಎಂದು ಬೀಗಿದರೂ ಕೈಹಿಡಿದು ನೆಲಕ್ಕೆ ತಂದು ನಿಲ್ಲಿಸುವ ಆತ್ಮಸಾಕ್ಷಿಗಳಂತೆ ಕಾಣುತ್ತವೆ' ಎನ್ನುತ್ತಾನೆ.

ಇಬ್ಬರ ಮದ್ಯೆ ಈ ಭಾರಿ ಚರ್ಚೆ ತುಸು ಧೀರ್ಘವಾಗಿ ಸಾಗಿತು.

'ಓಂ.......' ಕಣ್ಣು ಮುಚ್ಚಿ ಅದೆಷ್ಟೋ ಹೊತ್ತಿನ ನಂತರ ತನ್ನಿಂತಾನೇ ನನ್ನೊಳಗೆ ಮೂಡ ಹತ್ತಿದ ಓಂಕಾರದ ನಾಧ ಬಹಳ ಹೊತ್ತಿನವರೆಗೂ ಹಾಗೆಯೇ ಮುಂದುವರೆಯಿತು. ಲೋಕೇಶ ಹಾಗು ಆದಿಯರಿಬ್ಬರೂ ಅಷ್ಟರಲ್ಲಾಗಲೇ ದೇವಾಲಯದ ಒಳಗೆ ಬಂದು, ನಾನು ಧ್ಯಾನವನ್ನು ಮಾಡುತ್ತಿರುವುದನ್ನು ಕಂಡು ಅದರ ಇನ್ನೊಂದು ದಿಕ್ಕಿಗೆ ಹೋಗಿ ತಮ್ಮ ರಿಸೀರ್ಚನ್ನು ಮುಂದುವರಿಸಿದ್ದರು. ಸ್ಪಷ್ಟವಾಗಿ ಮೂಡಹತ್ತಿದ ಓಂಕಾರ ಕೆಲಹೊತ್ತಿನ ನಂತರ ಒಮ್ಮೆಲೇ ನಿಂತಿತು. ಅರೆಬರೆಯಾಗಿ ನನಗೆ ಇಹಲೋಕದ ಪ್ರಜ್ಞೆ ಬರತೊಡಗಿತು. ಪೂರ್ವದಲ್ಲಿ ಚೇತನಸ್ಫೂರ್ತಿಯಂತೆ ಸೂರ್ಯದೇವ ಕಿರಣಗಳ ಮೂಲಕ ತನ್ನನ್ನು ತಾನು ಪ್ರತಿಷ್ಠಾಪಿಸಿಕೊಂಡಿದ್ದ. ಪಕ್ಷಿಗಳು ಚಿಲಿಪಿಲಿಗುಟ್ಟುತ್ತಿದ್ದವು. ಮನಸ್ಸು ಹಗುರಾಗಿದ್ದಿತು. ಕಣ್ಣೀರ ಧಾರೆ ಹರಿದು ನನ್ನ ಕೆನ್ನೆಗಳು ತೇವವಾಗಿದ್ದವು.

ಕಲೆಯನ್ನೇ ಗೋಡೆಯನ್ನಾಗಿ ನಿರ್ಮಿಸಿರುವ ಅಗಣಿತ ಸಂಖ್ಯೆಯ ಆ ಕೆತ್ತನೆಗಳನ್ನು ನೋಡುತ್ತಾ ಅಕ್ಷರ ಸಹ ಮಾತು ಬಾರದಂತಹ ಅನುಭವ. ಹಿತವಾದ ಪರಿಸರ, ಹಗುರಾದ ಮನಸ್ಸು, ಅಚ್ಚುಗಟ್ಟಾಗಿ ಬಣ್ಣ ಬಳಿದಂತೆ ಹರಡಿಕೊಂಡಿರುವ ಹಸಿರಿನ ಜೊತೆಗೆ ಒಬ್ಬರನ್ನೊಬ್ಬರು ರೇಗಿಸುತ್ತಾ, ನಗುತ್ತ ಹೆಜ್ಜೆಯಾಕುತ್ತಿದ್ದ ನನ್ನವರು.. ಈಶ್ವರ ದೇವರ ಆಶ್ರಿವಾದವನ್ನು ಪಡೆದು ವಾಪಸ್ಸು ಹೊರಡಲು ಯಾಕೋ ಮನಸ್ಸೇ ಕೇಳುತ್ತಿಲ್ಲ. ಆದರೆ ದೇವಸ್ಥಾನಕ್ಕೆ ಆಗಮಿಸುವ ಜನಜಂಗುಳಿಯೂ ಕ್ರಮೇಣ ಹೆಚ್ಚಾಗತೊಡಗಿತು. ಮುಂಜಾವಿನಲ್ಲಿದ್ದ ಆ ತನ್ಮಯತೆ ಹೊತ್ತು ಮೂಡಿದಂತೆ ಮರೆಯಾಗತೊಡಗಿತು. ಒಲ್ಲದ ಮನಸ್ಸಿನಿಂದ ಹಿಂದುರಿಗಿ ನೋಡುತ್ತಲೇ ಅಲ್ಲಿಂದ ಬೀಳ್ಕೊಡಬೇಕಾಯಿತು.



****



'ಹಲೋ..!' ಉದ್ವೇಗಭರಿತ ಸಹಜ ಧ್ವನಿಯಲ್ಲಿ ಮೂಡಿದ ಆಕೆಯ ಆ ಧ್ವನಿಯನ್ನು ಸುಮಾರು ವರ್ಷಗಳ ನಂತರ ಕೇಳಿದ ಆದಿ ಕಣ್ಣನೊಮ್ಮೆ ಗಟ್ಟಿಯಾಗಿ ಮುಚ್ಚಿ ಆಕಾಶದೆಡೆಗೆ ಮುಖವನ್ನು ಮಾಡಿದ. ಸಂಜೆಯ ಹಿತವಾದ ಗಾಳಿ ಟೆರೇಸ್ನ ಮೇಲೆ ಹಾಯಾಗಿ ಬೀಸುತ್ತಿತ್ತು. ಅಗಣಿತ ಕಿಲೋಮೀಟರ್ ದೂರದ ನಕ್ಷತ್ರಗಳೊಟ್ಟಿಗೆ ನಗರದ ಲೈಟುಗಳೂ ಮಿರಿ ಮಿರಿ ಮಿನುಗತೊಡಗಿದ್ದವು. ಅದೆಷ್ಟೋ ದಿನಗಳ ನಂತರ ಅದೇನೋ ಒಂದು ಬಗೆಯ ಖುಷಿಯ ಹಿತಾನುಭಾವ ಆದಿಯ ಮನದೊಳಗೆ. ಮುಂಬರುವ ಪ್ರತಿ ಕ್ಷಣವನ್ನು ತೀವ್ರವಾಗಿ ಕಾತರದಿಂದ ಕಾಯುವಂತೆ ಸಂತೋಷದ ಬುಗ್ಗೆಗಳು ಮೂಡದೇ ಅದೆಷ್ಟೋ ವರ್ಷಗಳಾಗಿದ್ದ ಆದಿಯ ಮನಸ್ಸು ಇಂದು ಹೂವಂತೆ ಅರಳತೊಡಗಿತ್ತು. ಕಳೆದ ಎಂಟತ್ತು ವರ್ಷದ ವರ್ಷದ ಪ್ರತಿ ಘಳಿಗೆಯೂ ಒಂದಿಲ್ಲೊಂದು ಕಾರಣಗಳಿಂದ ನೆನೆಪಿಸಿಕೊಳ್ಳುತ್ತಿದ್ದ ವ್ಯಕ್ತಿಯ ಧ್ವನಿ ಇಂದು ತನ್ನ ಕಿವಿಗಳ ಮೇಲೆ ಬೀಳುತ್ತಿದೆ. ಆತನಿಗೆ ಅದು ನಿಜವೆಂದು ನಂಬಲು ಆಗುತ್ತಿಲ್ಲ. ಆರ್ಕುಟ್ ಎಂಬ ಮಾಯಾಜಿಂಕೆಗೆ ಮೋಹಗೊಂಡಿರುವ ಯುವಪಡೆ ಅದರಲ್ಲಿ ತಮ್ಮದೊಂದು ಪ್ರೊಫೈಲನ್ನು ತೆರೆದು ಮಾಡುವ ಮೊದಲ ಕೆಲಸವೇ ತಮ್ಮ ಹಳೆಯ ಗೆಳಯ ಗೆಳತಿಯರನ್ನು ಅರಸುವುದು. ಅಲ್ಲಿಯವರೆಗೂ ಇಮೇಲು,ಮೊಬೈಲು, ಮೆಸೇಜುಗಳು ಮಾತ್ರವೇ ಸ್ನೇಹದ ಕೊಂಡಿಗಳಾಗಿದ್ದ ಕಾಲದಲ್ಲಿ ಪ್ರಪಂಚದ ಅದ್ಯಾವ ಮೂಲೆಯಲ್ಲೋ ಕೂತು ಒಮ್ಮೆಗೆ ಹತ್ತಾರು ಜನರೊಟ್ಟಿಗೆ ಫ್ರೀಯಾಗಿ ಏಕಕಾಲದಲ್ಲಿ ಸಂಧಿಸಬಹುದಾದ ಒಂದು ವಸ್ತುವಿದ್ದರೆ ಅದಕ್ಕಿಂತ ಮಿಗಿಲಾದ ವರ ಬೇರೊಂದು ಇರಲಿಲ್ಲ. ಅಂತಹ ಆರ್ಕುಟ್ ಎಂಬ ಆಧುನಿಕ ವರದಲ್ಲಿ ತನ್ನದೊಂದು ಪ್ರೊಫೈಲನ್ನು ತೆರೆದು ಆದಿ ಮೊದಲು ಮಾಡಿದ ಕೆಲಸವೇ ಖುಷಿಯೆಂಬ ಹೆಸರಿನ ಪ್ರೊಫೈಲ್ಗಳನ್ನು ಅರಸುವುದು. ಸರಿಸುಮಾರು ಇನ್ನೂರು ಅಂತಹ ಪ್ರೊಫೈಲ್ಗಳನ್ನು ಅರಸಿ ಕೊನೆಗೆ ಸುಮಾರು ಮೂರುಸಾವಿರ ದಿನಗಳ ಹಿಂದೆ ಕಂಡಿದ್ದ ಚಹರೆ ಇದೇ ಎಂದು ಗುರುತಿಸಿ ಆಕೆಯನ್ನು ತನ್ನ ಫ್ರೆಂಡ್ ಲಿಸ್ಟ್ ನಲ್ಲಿ ಹಾಕಿದ. ಆಕೆಯೂ ತಿಳಿದೋ ತಿಳಿಯದೆಯೋ ಎಂಬಂತೆ ಈತನ ರಿಕ್ವೆಸ್ಟ್ ಅನ್ನು accept ಮಾಡಿದ್ದಳು. ಒಂದೆರೆಡು ಹಾಯ್ ಹಲೋ ಎಂಬ ಮೆಸ್ಸೇಜುಗಳ ನಂತರ ತನ್ನನ್ನು ಅವನೆಂದೂ, ಆಕೆಯನ್ನು ಅವಳೇ ಎಂದೂ, ಇಬ್ಬರೂ ಇಬ್ಬರನ್ನು ಗುರುತಿಸಿಕೊಂಡ ಮೇಲೆ ಆಕೆಯ ಮೊಬೈಲ್ ನಂಬರನ್ನು ಕೇಳಿದ ಆದಿ. ಮುಂದೆ ಜೀವಮಾನವಿಡಿ ಮರೆಯಲಾಗದಂತಹ ದೊರೆತ ಆ ನಂಬರನ್ನು ಆದಿ ತನ್ನ ಮಸ್ತಿಷ್ಕದೊಳಗೆ ಕ್ಷಣಮಾತ್ರದಲ್ಲಿಯೇ ಹಚ್ಚೋತ್ತಿಕೊಂಡ. ಅದಾದ ಮರುದಿನವೇ ಎಂದರೆ ಪ್ರಸ್ತುತ ದಿನ ಆಕೆಗೆ ಫೋನಾಯಿಸಿದ. ಹಸುವನ್ನು ಅರಸುತ್ತಿರುವ ಕರುವಿಗೆ ಬೀಳುವ ಘಂಟೆಯ ಸದ್ದಿನಂತೆ ಆಕೆಯ 'ಹಲೋ' ಎಂಬ ಆ ಎರಡಕ್ಷರದ ಧ್ವನಿ. ಆಕೆಯೊಟ್ಟಿಗೆ ಹೇಗೆ ಪ್ರಾರಂಭಿಸಬೇಕು, ಏನು ಮಾತಾಡಬೇಕು ಎಂದೆಲ್ಲ ಯೋಚಿಸಿದ್ದ ಆತನಿಗೆ ಈಗ ಮಾತೆ ಹೊರಬಾರದಂತಹ ಅನುಭವ.

'ಹಾಯ್...' ರಾಗವಾಗಿ ಆದಿ ಉತ್ತರಿಸಿದ.

'ಹಾಯ್...' ಅದೇ ರಾಗದಲ್ಲಿ ಆಕೆಯೂ ಅತ್ತಕೆಡೆಯಿಂದ ಪುನಃ ಉತ್ತರಿಸಿದಳು. ಮೊದಲ 'ಹಲೋ' ವಿನಲಿದ್ದ ಉದ್ವಿಗ್ನತೆ ಈ ಬಾರಿಯ 'ಹಾಯ್' ನಲ್ಲಿ ಇರಲಿಲ್ಲ. ಈ 'ಹಾಯ್' ಇಂಪಾಗಿಯೂ, ಮಧುರವಾಗಿಯೂ ಮೂಡಿದ್ದಿತು.

'Guess me...?' ಆದಿ ಹೇಳಿದ. ನೆನ್ನೆಯಷ್ಟೇ ಆಕೆಯ ನಂಬರನ್ನು ಪಡೆದು, ಇಂದು ಸಂಜೆ ಫೋನನ್ನು ಮಾಡುತ್ತೀನಿ ಎಂದೂ ಸಹ ಹೇಳಿ, ಈಗ 'Guess me...?' ಎಂದ ತನ್ನ ಪೆದ್ದುತನದ ಅರಿವಾಗಿ ತನ್ನ ನಾಲಿಗೆಯನ್ನು ಕಚ್ಚಿಕೊಂಡ. ಆಕೆಯೂ ಈತನ ಪ್ರೆಶ್ನೆಗೆ ಏನೇಳಬೇಕೆಂದು ತಿಳಿಯದೆ ಸುಮ್ಮನಾದಳು. ಜೀವನದ ಮಹತ್ವದ ತಿರುವಿನ ಮೊದಲ ಹೆಜ್ಜೆಯಲ್ಲೇ ಕುಂಟತೊಡಗಿದ ಆದಿ ಹೇಗೋ ಸಂಭಾಷಣೆಯನ್ನು ಮುಂದುವರೆಸಿದ. ಆದಿನ ನೆಡೆದ ಕೆಲವೇ ನಿಮಿಷಗಳ ಸಂಭಾಷಣೆ ಪ್ರಸ್ತುತ ಓದುತ್ತಿರುವ ಕಾಲೇಜು,ತಮ್ಮ ಶಾಲೆ, ಬಾಲ್ಯದ ದಿನಗಳು, ಬೋಧಿಸುತ್ತಿದ್ದ ಶಿಕ್ಷಕವರ್ಗ ಎಲ್ಲವನ್ನೂ ಒಮ್ಮೆ ಸಂಕ್ಷಿಪ್ತವಾಗಿ ಮೆಲುಕುಹಾಕಿತು. 'PT ಸರ್ ಈಗ್ಲೂ ಇದ್ದಾರೆ ಕಣೆ..' ಎಂದ ಆದಿಯ ಮಾತಿಗೆ ಹೌದೆಂದು ಆಕೆ ಉತ್ತರಿಸಿದಳು. ಮಾತಿನ ಹೊಳೆಯಲ್ಲಿ ಮುಳುಗಿ ತನ್ನ ಸುತ್ತಲಿನ ಪ್ರಪಂಚವನ್ನೇ ಮರೆತಿದ್ದ ಆದಿಗೆ ಲೋಕೇಶ ಬಂದು ಊಟಕ್ಕೆ ಕರೆದದ್ದೂ ತಿಳಿಯದಾಯಿತು. ಅಲ್ಲದೆ ಮೊಬೈಲಿನ ಬ್ಯಾಲೆನ್ಸ್ ತನ್ನ ಕೊನೆಯುಸಿರನ್ನು ಎಳೆಯುವ ಮೊದಲು ಫೊನಿಡಬೇಕು ಇಲ್ಲವಾದರೆ ಮೆಸ್ಸೇಜುಗಳನ್ನೂ ಕಳುವಿಸಲು ಬಹುಷಃ ಆಗದು ಎಂಬುದೂ ಸಹ ಅರಿಯದಾಯಿತು. ವಾಸ್ತವವಾಗಿ ಆತನಿಗೆ ಆ ಸಂಭಾಷಣೆ ನಿಜವೆಂದು ಅರಿಯಲೇ ಸಾಧ್ಯವಾಗದಾಯಿತು. ಅಂತಹ ಅದೆಷ್ಟು ಸಂಭಾಷಣೆಗಳನ್ನು ಆತ ಕಳೆದ ಎಂಟು ವರ್ಷಗಳಲ್ಲಿ ಮಾಡಿದ್ದಾನೋ ಆತನಿಗೇ ಲೆಕ್ಕವಿಲ್ಲ. ಆಗೆಲ್ಲ ಈತನೊಬ್ಬನೇ ಮಾತಾಡುವ ವಾಚಕನಾದರೆ ಆಕೆ ಕೇವಲ ಕೇಳುವ ಕಾಲ್ಪನಿಕ ಗೊಂಬೆಯಾಗಿರುತ್ತಿದ್ದಳು. ಅಷ್ಟರಲ್ಲಿ ಆಕೆಯೇ 'ಸರಿ ಕಣೋ, ಇನ್ನೊಂದ್ ದಿನ ಮಾತಾಡೋಣ.. ಟೈಮ್ ಆಯ್ತು' ಎಂದಳು. ಆಕೆಯ ಮಾತನ್ನು ಕೇಳಿದ ಆದಿಗೆ ಸಮಯದ ಮೇಲೆಯೇ ಕೋಪ ಬರತೊಡಗಿತು. ಒಂದರಿಂದೊಂದು ಮೂಡುತ್ತಿದ್ದ ಸಂತೋಷದ ಬುಗ್ಗೆಗಳು ಒಮ್ಮೆಲೇ ಕಾಣೆಯಾಗತೊಡಗಿದವು. ಮತ್ತದೇ ಬಗೆಯ ದುಗುಡದ ಛಾಯೆ ಆತನನ್ನು ಆವರಿಸತೊಡಗಿತು. ಆಕೆಗೆ ಒಂದು ಪದವನ್ನು ಆಡಲೂ ಬಿಡದೆ ತಾನೇ ಪಟಪಟನೆ ಮಾತಾಡತೊಡಗಿದ ಆದಿ ಈಗ ಫೋನನ್ನು ಇಡದಿರಲು ಕಾರಣಗಳನ್ನು ಯೋಚಿಸತೊಡಗಿದ. ಕೊನೆಗೆ ಬೇರೆ ದಾರಿಕಾಣದೆ ಒಲ್ಲದ ಮನಸ್ಸಿನಿಂದ 'ಸರಿ ಕಣೆ.. ಗುಡ್ನೈಟ್, ಸ್ವೀಟ್ ಡ್ರೀಮ್ಸ್, ಟೇಕ್ ಕೇರ್' ಎಂದಾಗ ಆಕೆ ಅದನ್ನೇ ಪುನರಾವರ್ತಿಸಿ ಫೋನನ್ನು ಇಟ್ಟಳು. ಬೆವರಿನಿಂದ ಒದ್ದೆಯ ಮುದ್ದೆಯಾಗಿದ್ದ ಕೈಗಳನ್ನು ತನ್ನ ಎದೆಗೆ ಅದ್ದಿಕೊಳ್ಳುತ್ತಾ ಆದಿ ಟೆರೇಸಿನ ಮೆಟ್ಟಿಲನ್ನು ಇಳಿಯತೊಡಗಿದ..



ಮುಂದುವರೆಯುವುದು...