Saturday, June 27, 2020

ಪಯಣ - 5

'ಎಷ್ಟೋತ್ರಿ ನಿಮ್ಗೆ ಬರೋಕ್ಕೆ.. ಮೆಸೇಜ್ ಮಾಡಿ ಅರ್ಧ ಘಂಟೆ ಆಗ್ತಾ ಬಂತು.. ಎಲ್ ಇದ್ರಿ ಇಷ್ಟೊತ್ತು ' ಹೆಸರಿಗೆ ಮಾತ್ರ ಕ್ಯಾಂಟೀನ್ ಎಂದೆನಿಸಿಕೊಂಡಿದ್ದ, ನೀರಿಗೆ ಹಾಲನ್ನು ಬೆರೆಸಿದ್ದ ಐದು ರೂಪಾಯಿಯ ಒಂದು ಕಪ್ ಟೀಯನ್ನು ಕುಡಿಯುವ ನೆಪದಲ್ಲಿ ಘಂಟೆಗಟ್ಟಲೆ ಕಾಲಹರಣ ಮಾಡುವ ಕಾಲೇಜಿನ ಹಲವಾರು ವಿದ್ಯಾರ್ಥಿಗಳ ಅಡ್ಡವಾಗಿದ್ದ ಸ್ಥಳದಲ್ಲಿ ರಾಧಾ ನನಗಾಗಿ ಕಾಯುತ್ತಿದ್ದರು. ಕ್ಯಾಂಟೀನಿನ ಕೊನೆಯ ಬೆಂಚಿನಲ್ಲಿ ಆಕೆ ನನ್ನೆಡೆಗೆ ತಿರುಗಿದ್ದರಿಂದ ನನ್ನ ಮುಂದಿದ್ದ ಹೊಟ್ಟೆಕಿಚ್ಚಿನ ಹುಡುಗರಿಗ್ಯಾರಿಗೂ ಆಕೆಯ ಮುಖದರ್ಶನವಾಗುತ್ತಿರಲಿಲ್ಲ. ಪ್ರಸ್ತುತ ಹಾಗುಹೋಗುಗಳು, ಸಂಗೀತ, ಕಲೆ, ವಿಶ್ವ, ವಿಜ್ಞಾನ, ಸಮಾಜ, ಅಮೀಬಾ ಹಾಗು ಏಲಿಯನ್ಸ್ ನಿಂದಿಡಿದು ಪ್ರೀತಿ, ಪ್ರೇಮ, ಪ್ರಣಯದವರೆಗೂ ಪಾರದರ್ಶಕ ಚರ್ಚೆಗಳು ನೆಡೆಯುತ್ತ ಇತ್ತೀಚೆಗೆ ನಮ್ಮಲ್ಲಿ ಒಂದು ಬಗೆಯ ಸ್ನೇಹಭಾವ ಮೂಡಿದೆ. ತನ್ನ ಸಹೋದ್ಯೋಗಿಗಳನ್ನು ಬಿಟ್ಟರೆ ಹೆಚ್ಚಾಗಿ ಆಕೆ ಕಳೆಯುತ್ತಿದ್ದದ್ದು ನನ್ನೊಡನೆಯೇ. ಆದಿ ಹಾಗು ಲೋಕೇಶ ಹೆದರಿಯೋ ಅಥವಾ ಬೇಕಂತೆಲೇ ಏನೋ ಇವರು ನನ್ನೊಟ್ಟಿಗಿದ್ದಾಗ ಕಾಣಲು ಸಿಗದಂತೆ ಪರಾರಿಯಾಗುತ್ತಾರೆ. ಲಲನೆಯರ ಗಂಧಗಾಳಿಯಿರದ ಆ ಬ್ರಹ್ಮಚಾರಿಗಳ ನಡುವೆ ಪ್ರಕೃತಿಯಿತ್ತ ಪ್ರತಿಭೆಯನ್ನು ನಾನು ಎಲ್ಲಿ ಕಳೆದುಕೊಳ್ಳುವೆನೋ ಎಂಬ ಭಯದಲ್ಲಿ ನಾನು ಆಗಾಗ್ಗೆ ರಾಧಾರನ್ನು ಭೇಟಿಯಾಗಿ ಮಾತಿನ ಮತ್ತಿನಲ್ಲಿ ಕಳೆಯುತ್ತಿದ್ದೆ!. ಯಾವುದೇ ವಿಷಯವನ್ನು ಮುಚ್ಚು ಮರೆಯಿಲ್ಲದೆ ಆಡುವ ಒಬ್ಬ ಶಿಕ್ಷಕಿ ಕಮ್ ಗೆಳತಿ ಸಿಗುತ್ತಾರೆಂಬುದೇ ನನಗೆ ಊಹಿಸಲು ಸಾಧ್ಯವಿರಲಿಲ್ಲ. ಮೊನ್ನೆ ಹೀಗೆಯೇ ಮಾತನಾಡುವಾಗ ನಾನು ಬೇಕಂತಲೇ ನಿಮಗೆ ಕೇಸರಿಬಾತ್ ಮಾಡಲು ಬರುವುದಿಲ್ಲವೆಂದೇಳಿ ಇಂದು ಒಂದು ಭರ್ತಿ ಡಬ್ಬ ಕೇಸರಿಬಾತನ್ನು ಮಾಡಿ ತರುವಂತೆ ಮಾಡಿದ್ದೆ.

'ಗಾಸಿಪ್ ರಿ .. ತುಂಬಾ ದಿನ ಆಗಿತ್ತು ಅವ್ರ್ ಇವ್ರ್ ಬಗ್ಗೆ ಗಾಸಿಪ್ ಮಾಡಿ.. ಅದೇನೋ ಒಂತರ ಮಜಾ ಇರುತ್ತೆ ಈ ಗಾಸಿಪ್ ಮಾಡೋದ್ರಲ್ಲಿ ಯು ನೋ..' ನಗುತ್ತಲೇ ನಾನು ಉತ್ತರಿಸಿದೆ.

'Seriously..?' ಎಂದು ಮುಖವನ್ನು ಕಿವಿಚಿ ಆಕೆ ಕೇಳಿದರು.

'ಹುಂ, ರಿ.. ಈ ಮನುಷ್ಯ ಸರ್ವಭಾವಗಳ ಆಗರ.. ಇಲ್ಲಿ ಗಾಸಿಪ್ ಎಂಬ ಭಾವ ಆತನಿಗೆ ಒಂತರ ನಿಜವಾದ ನೆಮ್ಮದಿಯನ್ನು ನೀಡುತ್ತದೆ. ಒಂಥರ ಕ್ಲೀನ್ ಆಕ್ಸಿಜನ್ ಇದ್ದ ಹಾಗೆ..'

'ಅದು ಭಾವ ಅಲ್ಲ ಸಾರ್ .. ಚಟ .. ಸಿಗರೇಟು ಬಿಯರ್ ಇದ್ದ ಹಾಗೆ..'

'ನಾನೊಟ್ಟಿಗೆ ಒಮ್ಮೆ ಗಾಸಿಪ್ ಮಾಡಿ ನೋಡಿ ರಾಧಾ.. ನೀವೇ ಅಂತೀರಾ ಆಮೇಲೆ ಅದು ಚಟನೋ ಮತ್ತೊಂದೊ ಅಂತ, Its like haven sometimes!'

'ಸರಿ ಸರಿ.. ಆದ್ರೆ ಸದ್ಯಕಂತೂ ಅದ್ ಬೇಡ.. ನಿಮ್ಮ್ ಗಾಸಿಪ್ನ ನಿಮ್ಮೊಳಗೆ ಇಟ್ಕೊಳ್ಳಿ..ಇದನ್ನ ತಗೊಳ್ಳಿ, ನಿಮ್ ಕೇಸರಿಬಾತ್.. ಏನ್ ಮಾಡೋಕ್ ಬರಲ್ಲ ಅಂತಿದ್ರಲ್ಲ. ತಿಂದ್ ನೋಡಿ ಈಗ..' ಎಂದು ಕಾಲು ಕೆಜಿಯಷ್ಟು ನನ್ನಿಷ್ಟದ ತಿಂಡಿಯನ್ನು ನೀಡಿದರು. ಜೊತೆಗೆ ಅದನ್ನು ತಾನೇ ಮಾಡಿದ್ದೇನೆಂದು ದೃಡೀಕರಿಸಲು ಅದನ್ನು ಮಾಡಿದ್ದ ವಿಡಿಯೋವನ್ನೂ ಸಹ ರೆಕಾರ್ಡ್ ಮಾಡಿ ತಂದಿದ್ದರು.

'ಹುಂ ಬಿಡ್ರಿ .. ನೀವೇ ಮಾಡಿದ್ದು ಅಂತ ಪ್ರೂವ್ ಆಯ್ತು.. ಆದ್ರೆ ಕೇಸರಿ ಬಾತ್ ಮಾಡೋರಿಗೆ ಬಿರಿಯಾನಿ ಮಾಡೋಕ್ ಬರಲ್ಲ ಅಲ್ವಾ' ಎಂದೆ.

'ಹೌದು ಸಾರ್.. ನನ್ನ್ ಟ್ಯಾಲೆಂಟ್ ನ ಟೇಕನ್ ಫಾರ್ ಗ್ರಾಂಟೆಡ್ ಅಂದ್ಕೊಂಡಿದ್ದೀರಾ ನೀವು' ಎಂದು ಆಕೆ ನಕ್ಕರು.

ನಾನೂ ಸಹ ನಗಾಡಿದೆ. ಶುದ್ಧ ಜೇನಿನ ಪದರದಂತಿದ್ದ ರಸಭರಿತವಾದ ಅಂತಹ ಕೇಸರಿಬಾತನ್ನು ನಾನು ಹಿಂದೆಂದೂ ತಿಂದಿಲ್ಲವೆನಿಸಿತು.

'ರಿ.. ಅದ್ ಏನ್ ಒಳ್ಳೆ ಮಕ್ಳು ತಿಂದಾಗೆ..ಗಲ್ಲದ್ ಮೇಲೆ ಸ್ವಲ್ಪ ಉಳ್ಕೊಂಡಿದೆ..' ಎಂದು ಮುಂಬಾಗಿ ಆಕೆಯ ಕರ್ಚಿಪಿನಿಂದ ನನ್ನ ಗಲ್ಲವನ್ನು ಒರೆಸಿದ ರು. ಆಕೆಯ ಕೈ ಬೆರಳು ನನ್ನ ತುಟಿಯನ್ನು ತಾಕಿದವು. ಆಕೆಯ ಹಿಂದಿದ್ದ ಗಂಡು ಹಿಂಡಿಗೆ ಕೆಲಕಾಲ ಹೃದಯ ಬಡಿತವೇ ನಿಂತಂತಾಗಿರಬೇಕು. ನಗುತ್ತಿದ್ದ ಮಗುವಿಗೆ ಒಮ್ಮೆಲೇ ಸೂಜಿಯನ್ನು ಚುಚ್ಚಿದಂತಾಯಿತು. ನಾನು ಪುನಃ ತಿನ್ನಲು ಪ್ರಾರಂಭಿಸಿದೆ.

'ನೀವ್ ತಿನ್ನಲ್ವಾ..' ಎಂದು ಕೇಳಿದೆ. ಇಲ್ಲವೆಂಬಂತೆ ಅವರು ತಲೆಯಾಡಿಸಿದರು.

'ಹೇ ..' ಎಂದೇಳಿ ಆಕೆ ನನ್ನನ್ನೇ ನೋಡತೊಡಗಿದರು. ಬಹುಷಃ ಮೊದಲಿಂದಲೂ ಹೀಗೆಯೇ ನೋಡುತಿದ್ದರೆನೊ ತಿಳಿಯದು. ನಾನು ಬರಗೆಟ್ಟ ಪ್ರಾಣಿಯಂತೆ ತಿನ್ನುವುದರಲ್ಲೇ ಮಗ್ನವಾಗಿದ್ದೆ.

'ನನ್ಗೆ ನಿಮ್ಮತ್ರ ಒಂದು ವಿಷಯ ಕೇಳ್ಬೇಕಿತ್ತು.. ಇನ್ಫ್ಯಾಕ್ಟ್ ಇದನ್ನು ನನಗೆ ಪ್ರತಿಯೊಬ್ಬ ಹುಡುಗ್ರನ್ನೂ ಕೇಳ್ಬೇಕು ಅನ್ಸುತ್ತೆ'

'ಕೇಳಿ.. ಸರ್ವಪೋರರ ಪರವಾಗಿ ನಾನು ಉತ್ತರಿಸುತ್ತೇನೆ' ಎಂದು ನಗಾಡಿದೆ.

'ಹುಡ್ಗಿರ್ನ ಹತ್ರದಿಂದ ನೋಡಿದ್ರೆ, ಅಥವಾ ಜಸ್ಟ್ ಟಚ್ ಮಾಡಿದ್ರೆ ಸಾಕು..ಹುಡುಗ್ರಿಗೆ ಅದೇನೋ ಆಗುತ್ತೆ ಅಂತಾರಲ್ಲ.. ಏನದು..?'

ಆಗತಾನೆ ಗಂಟಲಿನೊಳಗೆ ಇಳಿದಿದ್ದ ಕೇಸರಿಬಾತಿನ ತುತ್ತೊಂದು ಪುನ್ಹ ಹೊರಬಂತಾಯಿತು ನನಗೆ. ಸಿಹಿನೀರಿನ ಕೊಳದಲ್ಲಿ ಇಜುತ್ತಿದ್ದವನಿಗೆ ಕೂಡಲೇ ಯಾರೋ ಸಾವಿರ ವ್ಯಾಟ್ಗಳ ಕರೆಂಟ್ ಅನ್ನು ಕೊಟ್ಟಂತೆ. ಪ್ರತ್ಯತ್ತವಾಗಿ ಏನೆನ್ನಬೇಕೆಂದು ನನಗೆ ಖಂಡಿತ ತಿಳಿಯಲಿಲ್ಲ.

'ಹಾಗೆಲ್ಲ ಏನಿಲ್ಲ ರೀ.. ಸುಮ್ನೆ ಗಿಮಿಕ್ಕು.. ಮೂವಿ, ಸೀರಿಯಲ್ಸ್ ಗಳಿಗೆ ಮಾತ್ರ ಅದೆಲ್ಲ' ಎಂದೆ.

'Be practical, ನಿಜ ಹೇಳಿ. ನಂಗೆ ತಿಳ್ಕೊಬೇಕು.. ನಿಜವಾಗಲೂ ನಿಮ್ಗೆ ಏನೂ ಅನ್ಸಲ್ವಾ ?'

'ನಂಗೆ ಮಾತ್ರ ಅಲ್ಲ ರಾಧಾ, ಯಾರಿಗೂ ಏನು ಅನ್ಸಲ್ಲ.. it’s all fake ' ಎಂದು ನಾನು ಪುನಃ ಸುಮ್ಮನಾದೆ.

ಆಕೆ ಕೇವಲ ಕುತೂಹಲಕ್ಕಾಗಿ ಮಾತ್ರ ಈ ಮಾತನ್ನು ಕೇಳುತ್ತಿದ್ದಾಳೆ ಎಂದು ನನಗೆ ತಿಳಿದಿತ್ತು. ಆದರೆ ಭೂಮಿಯ ಮೇಲಿನ ಪ್ರತಿಯೊಂದು ಗಂಡು ಜೀವಿಗೆ ಹೆಣ್ಣೊಂದರ ಪರಮ ಸುಮಧುರ ಸ್ಪರ್ಶ ಯಾವ್ಯಾವ ಅಂಗಗಳಲ್ಲಿ ಏನೇನು ಮಾಡುತ್ತದೆ ಎಂದು ಹೇಗೆ ಬಿಡಿಸಿ ಹೇಳಲಿ. ನಾನು ಬೇರೊಂದು ವಿಷಯವನ್ನು ತೆಗೆಯಲು ಯೋಚಿಸತೊಡಗಿದೆ. ಆದರೆ ಕೂಡಲೇ ಅವರು ಮುಂಬಾಗಿ ಎದೆಯ ಬಾಗ ನನಗೆ ಕಾಣುವಂತೆ ತನ್ನ ಮುಖವನ್ನು ನನ್ನ ಬಳಿಗೆ ತಂದರು. ಆಕೆಯ ಆ ಹಾಲಿನ ಕೆನೆಯಂತಹ ಚರ್ಮವನ್ನು ನಾನು ಮೊದಲ ಬಾರಿಗೆ ಅಷ್ಟು ಹತ್ತಿರದಿಂದ ನೋಡತೊಡಗಿದೆ. ಕಲ್ಲಂಗಡಿ ಹಣ್ಣನ್ನೇ ನಾಚಿಸುವ ಬಣ್ಣದ ಅವರ ತುಟಿಗಳು ನನ್ನ ಇಡೀ ದೇಹವನ್ನು ಬಿಸಿಯಾಗಿಸತೊಡಗಿತು. ಎರಡೇ ಇಂಚುಗಳ ಅಂತರದಲ್ಲಿದ್ದ ಅಪ್ಸರೆಗೆ ಮುತ್ತಿಕ್ಕುವ ಇಂತಹ ಅವಕಾಶ ಸಾವಿರಕ್ಕೊಬ್ಬರಿಗೆ ಮಾತ್ರ ಸಿಗಬಲ್ಲದು.

'Tell me, ನಿಮ್ಗೆ ಎನೂ ಫೀಲ್ ಆಗ್ತಾ ಇಲ್ವಾ..' ಎಂದು ನನ್ನ ಕೈಯನ್ನು ಹಿಡಿದು ಅದುಮಿದರು. ಏನೋ ಹೇಳಲು ತಡವರಿಸಿದೆ. ಮಾತು ಬರಲಿಲ್ಲ.

ಇನ್ನು ಅಲ್ಲಿರಲು ಸಾಧ್ಯವಿಲ್ಲವೆಂದೆನಿಸಿ ಕೂಡಲೇ ಎದ್ದು ಬಿರಬಿರನೆ ಹೊರನೆಡೆದೆ.

ಇಡ್ಲಿಗೆ ಸಾಂಬಾರನ್ನು ಹಾಕಲು ಹೋದ ಮಾಣಿ ನಮ್ಮೆಡೆ ನೋಡುತ್ತಾ ತನ್ನ ಪಂಚೆಯ ಮೇಲೆಯೆ ಒಂದು ಸೌಟು ಸಾರನ್ನು ಸುರಿದುಕೊಂಡ.




*****


'Excuse me..? ಏನಾಯಿತ್ರಿ ನಿಮ್ಗೆ..ಏನ್ ಇವತ್ತ್ ಮೌನ ವ್ರತನ?' ರಾಧಾ ನನ್ನ ಕೇಳಿದರು. ಕಾಲೇಜಿನ ಕಾರಿಡಾರಿನಲ್ಲಿ ನಾನು ಹಾಗು ಅವರು ನಿಂತಿದ್ದೆವು. ಕ್ಯಾಂಟೀನಿನ ‘ಆ ದಿನ’ದಿಂದ ನನ್ನನೊಳಗೆ ಅದೇನೋ ಒಂದು ಬಗೆಯ ನಾಚಿಕೆಯ ಭಾವ ಮೂಡಿದ್ದರೆ ಆಕೆ ಮಾತ್ರ ಏನೂ ಆಗಿಯೇ ಇಲ್ಲವೆಂಬಂತೆ ವರ್ತಿಸುತ್ತಿದ್ದರು.. ಅದೇಕೆ ಅಂದು ಆಕೆ ಕೇಳಿದರೋ ತಿಳಿಯಲಿಲ್ಲ. ಇವರು ಕೆಲ ಪತ್ರಿಕೆಗಳಿಗೆ ಅಂಕಣಗಳನ್ನೂ ಬರೆಯುವುದುಂಟು. ಕೆಲವೊಮ್ಮೆ ಈ ಬರಹಗಾರರಿಗೆ ಮಾನವನ ಅತಿ ಸಹಜ ಗುಣಗಳ ದರ್ಶನವಾಗಬೇಕಿರುತ್ತದೆ. ಆ ಭಾವಘಳಿಗೆಯನ್ನು ಅನುಭವಿಸಲು ಅಥವಾ ತಿಳಿಯಲು ಕೆಲವರು ಯಾವುದೇ ಮುಚ್ಚು ಮರೆಯಿಲ್ಲದೆ ಅದೆಂತಹ ಕೆಲಸವನ್ನೂ ಮಾಡಬಲ್ಲರು. ಮಾಡಿಸಬಲ್ಲರು. ಅದು ಕೇವಲ ಕುತೂಹಲ. ಫ್ಯಾಕ್ಟ್ ಚೆಕ್ಕಿಂಗ್ ಎನ್ನಬಹುದು. ತಾವು ಬರೆಯುವ ಅಥವಾ ಹೇಳುವ ವಿಷಯಗಳು ನೈಜವಾಗಿರಬೇಕು, ಅದು ಕಲ್ಪನಾ ಬರಹಗಳಾಗಿರಬಾರದು ಎಂಬ ಬಯಕೆ. ಬಹುಷಃ ರಾಧಾ ಇಂತಹ ಯಾವುದೊಂದೂ ವಿಷಯವನ್ನು ಬರೆಯುತ್ತಿರಬೇಕು. ಆದರೆ…

ನಾನು ರಾಧಾರ ಮುಖವನ್ನೊಮ್ಮೆ ನೋಡಿದೆ. ಪಶ್ಚಿಮದಿಂದ ಬೀಸುತ್ತಿದ್ದ ತಿಳಿಗಾಳಿ ಅವರ ಮುಂಗೂದಲನ್ನು ಪದೇ ಪದೇ ಕೆಣಕುತ್ತಿತ್ತು. ಅದೆಂಥಹ ಘೋರ ಕಠೋರ ಹೃದಯಿಯೂ ಕರಗಿ ನೀರಾಗಬೇಕು ಅಂತಹ ನೋಟವದು. ನನ್ನ ಮನಸ್ಸು ಮಾತಾಡುವದನ್ನು ಮುಂದುವರೆಸಿತು…

ಆದರೆ, ಅದು ಅಷ್ಟು ಮಾತ್ರವಾಗಿರದೆ ಇದ್ದರೆ? ಅಂದಿನ ಆ ಪ್ರೆಶ್ನೆ ಯಾವೊಂದು ಆರ್ಟಿಕಲ್ನ ವಿಷಯವಾಗಿರದೆ ಇದ್ದರೆ?! ಸುಖಾಸುಮ್ಮನೆ ನನ್ನ ಅತಿ ಸಮೀಪಕ್ಕೆ ಬಂದು ಹಾಗೆ ಕೈಗಳನ್ನು ಅದುಮಿ ನನ್ನ ರೋಮು ರೋಮುಗಳೆಲ್ಲವನ್ನು ಎದ್ದು ನಿಲ್ಲುವಂತೆ ಮಾಡಿ ನೋಡಿದ ಆ ನೋಟ ನನಗೆ ರಣಭಯಂಕರ ಸಿಡಿಲಿನ ಮನಮೋಹಕ ದೃಶ್ಯದಂತೆ ಆನಂದವೂ ಜೊತೆಗೆ ಭಯವೂ ಒಟ್ಟಿಗೆ ಮೂಡುವಂತೆ ಮಾಡಿದ್ದಿತು. ಹಾಗಾದರೆ ಏನಿದರ ಅರ್ಥ? ಆಕೆ ಏನಾದರೂ …ಕೂಡಲೇ ಆಕೆಯ ಪ್ರೆಶ್ನೆಯ ನೆನಪಾಗಿ,

'I’m Sorry, ಅವತ್ತು ನೀವ್ ಕೇಳಿದ್ ಪ್ರೆಶ್ನೆಗೆ ಏನೂ ಉತ್ತರಿಸದೆ ನಾನು ಎದ್ದ್ ಬಂದಿದ್ದಕ್ಕೆ ಇರ್ಬೇಕು' ಎಂದು ಮುಗುಳ್ನಕ್ಕೆ.

'That's okay .. ನೀವ್ ಎದ್ದ್ ಬಂದಾಗ್ಲೇ ನಂಗೆ ನನ್ನ ಆನ್ಸರ್ ಸಿಗ್ತು ಬಿಡಿ, ನೀವ್ ಅಷ್ಟೆಲ್ಲ intellectuality ಬಗ್ಗೆ ಮಾತಾಡೋರು ಅಷ್ಟೊಂದೆಲ್ಲ ನಾಚ್ಕೋಬಾರ್ದು..' ಎಂದು ಹೇಳಿದರು.

ಆಕೆಯ ತುಟಿಯ ಮೇಲಿದ್ದ ಕಳ್ಳ ನಗೆಯನ್ನು ನಾನು ಗಮನಿಸದೇ ಇರಲಿಲ್ಲ.

'What do you mean?’

'Nothing ..ನೀವ್ ಹುಡುಗ್ರಿಗೆ ಜಸ್ಟ್ ಟಚ್ ಮಾಡೋದ್ರಲ್ಲೇ ಕಾಮೋತ್ತೇಜನೆ ಆಗುತ್ತೆ ಅಂದ್ರೆ ಆ ಸೃಷ್ಟಿಕರ್ತ ರಿಯಲಿ ಗ್ರೇಟ್ ಯು ನೋ ..'

'ಹಲೋ, ಒಂದ್ ನಿಂಷ.. ಫಸ್ಟ್ ಆಫ್ ಆಲ್ ನಂಗೆ ಆವತ್ತು Aphrodisiac ಆಗಿತ್ತು ಅಂತ ಯಾರ್ ಹೇಳಿದ್ದು?'

'ಅದ್ ಏನ್ರಿ Aphrodisiac ಅಂದ್ರೆ?' ಗೊಂದಲದ ನೋಡದಲ್ಲಿ ಆಕೆ ಕೇಳಿದರು.

'ನೀವ್ ಅಂದ್ರಲ್ಲ , ಇಂಗ್ಲಿಷ್ ಅಲ್ಲಿ ಅದರ ಅರ್ಥ ಅದೇ'

'Come on .. don’t be so Conservative.. Moreover ನೀವ್ ಕನ್ನಡದಲ್ಲಿ ಹೇಳಿದ್ ಮಾತ್ರಕ್ಕೆ ಅದರ ಅರ್ಥ ಏನ್ ಚೇಂಜ್ ಆಗಲ್ಲ'

'Whatever.. But how could you say that? ನನ್ನೊಳಗೆ ಏನಾಗುತ್ತೆ ಅಂತ ಅಷ್ಟ್ easy ಯಾಗಿ ಅದೇಗ್ ಹೇಳ್ತೀರಾ ನೀವು?' ಕಾಲೇಜಿನ ಕ್ಯಾಂಟಿನಲ್ಲಿ ಹಾಲಿಗೆ ನೀರನ್ನು ಬೆರೆಸುವ ಪ್ರಮಾಣದಲ್ಲಿ ನಿಜಕ್ಕೆ ಸುಳ್ಳನ್ನು ಬೆರೆಸಿ ನಟಿಸಿದೆ.

ಮೊದಲ ಬಾರಿಗೆ ಆಕೆಯೊಟ್ಟಿಗೆ ನಾನು ಮುಚ್ಚುಮರೆಯನ್ನು ಸಾಧಿಸತೊಡಗಿದೆ.

'What do you mean by how could you say that.. You were excited, I know' ಎಂದು ತನ್ನ ತೀಕ್ಷ್ಣ ದೃಷ್ಟಿಯಿಂದ ನನ್ನ ನೋಡತೊಡಗಿದರು.

ನೈಸರ್ಗಿಕವಾಗಿ ಜರುಗುವ ಪ್ರಕ್ರಿಯೆಯನ್ನು ಹೌದೆಂದು ಒಪ್ಪಿಕೊಳ್ಳಲು ನನಗೇಕೆ ಈ ಪರಿಯ ನಾಚಿಕೆ ತಿಳಿಯಲಾಗಲಿಲ್ಲ.

ನಾನು ಸುಳ್ಳನ್ನು ಮುಂದುವರೆಸಿದೆ.

'ಸುಮ್ನೆ ಏನೇನೋ ಕಲ್ಪಿಸಿಕೊಳ್ಳಬೇಡಿ ರಾಧಾ.. ಅಂತಹ ಸಿಲ್ಲಿ ರೀಸನ್ಸ್ ಗೆಲ್ಲ ಅದೆಲ್ಲ ಆಗೋದಾಗಿದ್ರೆ ಅಷ್ಟೇ ಆಮೇಲೆ..'

'What?! So, ನಿಮ್ಗೆ ಅವತ್ತು ಏನೂ ಆಗ್ಲಿಲ್ವಾ.. ಹಾಗಾದ್ರೆ ಯಾಕೆ ಎದ್ದ್ ಹೋದ್ರಿ? You are lying, otherwise prove it now!'

'ಮಗ್ನೆ, ಇವತ್ತ್ ನೀನ್ ಸತ್ತೇ..' ಮನಸ್ಸು ಮಾತಾಡಿತು.

'ರಾಧಾ.. ಇವಾಗ ಅದೆಲ್ಲ ಏಕೆ.. ಬಿಟ್ಬಿಡಿ.. ಲೆಟ್ಸ್ ಟಾಕ್ ಸಂಥಿಂಗ್ ಎಲ್ಸ್'

'Don’t ever dare to lie to me . ನಾನ್ ಇದನ್ನ ಕಾಲೇಜಿನ ಎಲ್ರತ್ರನೂ ಹೋಗಿ ಕೇಳೋದಿಲ್ಲ. ನೀವೊಬ್ಬ matured knowledgeable ಪರ್ಸನ್ ಅಂತ ನಂಗೊತ್ತು.. Moreover a good friend, ಅದಕ್ಕೆ ಕೇಳೋದು, ಚರ್ಚಿಸೋದು'

'ರಾಧಾ That doesn’t mean..' ಎಂದು ಏನನ್ನೋ ಹೇಳಲೊದ ನನ್ನನ್ನು ತಡೆದು,

‘This weekend 10 PM.. I will be there at your home. Tell Adishesh & Lokesh to adjust somewhere else for that one night ' ಎಂದು ಕಟ್ಟಪ್ಪಣೆಯನ್ನು ಮಾಡಿದರು.

ನನ್ನ ಮಸಸ್ಸು ಅದಾಗಲೇ ಸಾವಿರ ಕಿಲೋಮೀಟರ್ ದೂರಕ್ಕೆ ಓಡಿಯಾಗಿದ್ದಿತು! ಕಾರಣ ನಾಚಿಕೆಯಿಂದಲೋ, ಭಯದಿಂದಲೋ ಅಥವಾ ಸಂತೋಷದಿದಲೋ ನನಗೆ ಖಂಡಿತಾ ತಿಳಿಯಲಿಲ್ಲ! ಆಕೆಯ ಪ್ರೆಶ್ನೆಗೆ ಉತ್ತರಿಸಲಾಗದೆ ನಾನು ಮಿಕ ಮಿಕ ಅವರನ್ನು ನೋಡತೊಡಗಿದೆ.



****





ಆ ನಡುರಾತ್ರಿಯ ಘಾಡಕತ್ತಲೆಯಲ್ಲಿ ಮೀಸೆ ಚಿಗುರದ ನಾಲ್ಕು ತಲೆಗಳು ಹಾಸ್ಟೆಲ್ಲಿನ ಹಿಂಬಾಗಿಲಿನಿಂದ ಹೊರಬಿದ್ದವು. ಮಳೆಗಾಲದ ಆರಂಭವಾದುದರಿಂದ ಅದು ಹಲಸಿನ ಹಣ್ಣಿನ ಘಮಘಮಿಸುವ ಕಾಲ. ಖಾಲಿ ಜೇಬು ಹಾಗು ಅರೆ ತುಂಬಿದ ಹೊಟ್ಟೆಯ ಜೊತೆಗೆ ಒಂದಿಷ್ಟು ಸಮಾನ ಮನಸ್ಸಿನ ಗೆಳೆಯರು. ಜಗತ್ತನ್ನು ಅನುಭವಿಸಲು ಇಷ್ಟು ಸಾಕಿತ್ತು ಆ ಗುಂಪಿಗೆ. ಜೇಮ್ಸ್ ಬಾಂಡ್ ಚಿತ್ರಗಳ ಬಾಂಡುಗಳಂತೆ ಒಬ್ಬರಿಂದೊಬ್ಬರು ಗೋಡೆಯನ್ನಿಡಿದುಕೊಂಡು ನೆಡೆದ ಗುಂಪು ಬಂದು ನಿಂತದ್ದು ಪಕ್ಕದ ತೋಟದ ಬಕ್ಕೆ ಹಲಸಿನ ಮರದ ಬುಡಕ್ಕೆ. ಬೆಳಗಿನ ಹೊತ್ತು ಆ ಮರದ ಬುಡದಲ್ಲೇ ನಿಂತು ಯಾವ ಕಾಯಿ ಹಣ್ಣಾಗಿದೆ ಯಾವ ಕಾಯಿ ಬಲಿತಿದೆ ಎಂದು ಅಂದಾಜುಹಾಕಿ ಬಂದಿದ್ದ ಒಂದು ತಲೆ ಕೊಡಲೇ ಮರವನ್ನು ಏರತೊಡಗಿತು. ಉಳಿದ ಮೂರು ತಲೆಗಳು ಕಾವಲು ಕಾಯುವಂತೆ ಅತ್ತಿಂದಿತ್ತ ಇತ್ತಿಂದಂತ್ತ ನೆಡೆಯತೊಡಗಿದವು. ವಾನರರೂ ನಾಚುವಂತೆ ಕುಪ್ಪಳಿಸುತ್ತ ಮರವತ್ತಿದ ಆ ತಲೆ ಕರಾರುವಕ್ಕಾಗಿ ಹಲಸಿನ ಗೊಂಚಲಿನ ಹಣ್ಣಾದ ಹಣ್ಣನ್ನೇ ಹೋಗಿ ಮಿಡಿಯಿತು. ಬಾಡೂಟ ಮಾಡಿದ ಹೊಟ್ಟೆಯನ್ನು ಮಿಡಿದಂತೆ ಸದ್ದು ಮಾಡಿದ ಆ ಹಣ್ಣನು ಒಂದೇ ಎಳೆತದಲ್ಲಿ ತೊಟ್ಟನ್ನು ತುಂಡರಿಸಿ ಕೆಳಗೆಸೆಯಿತು. ಹಣ್ಣು ಬಿದ್ದ ಸದ್ದಿಗೆ ತುಸು ದೂರದಲ್ಲೇ ಇದ್ದ ವಾರ್ಡನ್ನಿನ ಮನೆಯ ನಾಯಿ ಬೌಗುಟ್ಟಿತು. ನಾಯಿಯ ಸದ್ದಿಗೆ ಕೆಲಕ್ಷಣ ನಾಲ್ಕೂ ತಲೆಗಳು ತುಟಿಕ್ ಪಿಟಿಕ್ ಅನ್ನಲ್ಲಿಲ. ಕಲ್ಲಿನ ಮೂರ್ತಿಗಳಂತೆ ನಿಂತಲ್ಲೆಯೇ ಅಜೀವ ವಸ್ತುಗಳಂತಾದವು. ಯಾರು ಗಮನಿಸಲಿಲ್ಲ ಎಂಬುದನ್ನು ಅರಿತ ಆ ಪಡೆ ಕೂಡಲೇ ಕಾರ್ಯಪ್ರವೃತವಾಯಿತು. ಮರದ ಮೇಲಿದ್ದ ತಲೆ ಕ್ಷಣಮಾತ್ರದಲ್ಲಿ ಕೆಳಗಿಳಿದು ಬಂದು ನೋಡುತ್ತದೆ, ಅಷ್ಟರಲ್ಲಾಗಲೇ ಉಳಿದ ಮೂರು ತಲೆಗಳ ನಡುವೆ ವಿಷಯವೊಂದಕ್ಕೆ ವಾಗ್ವಾದ ಬಿರುಸುಗೊಂಡಿರುತ್ತದೆ. ಹಾಸ್ಟೆಲಿನಿಂದ ಹೊರಬರುವಾಗ ಹಣ್ಣನ್ನು ಸುಲಿಯಲು ಚಾಕೊಂದನ್ನು ತರುವ ಕಾಂಟ್ರಾಕ್ಟ್ ನ್ನು ಪಡೆದಿದ್ದ ತಲೆ ಹಲಸಿನ ಹಣ್ಣನ್ನು ಕಾಪುವ ಕನಸಲ್ಲಿ ಅದನ್ನು ಮರೆತಿದ್ದಿತು. ಈಗ ಪುನ್ಹ ವಾಪಸಾಗುವಷ್ಟು ಸಮಯವಾಗಲಿ ಅದಕ್ಕೆ ಬೇಕಾದ ತಾಳ್ಮೆಯಾಗಲಿ ಯಾರೊಬ್ಬರಲ್ಲೂ ಇರಲಿಲ್ಲ. ಹಣ್ಣಿನ ಘಮ ಮತ್ತು ಬರಿಸುವಂತಿತ್ತು. ಮರವತ್ತಿದ ತಲೆಯನ್ನು ಉಳಿದ ಮೂರು ತಲೆಗಳು ತಮ್ಮ ಕರುಣಾಜನಕ ನೋಟದಿಂದ ನೋಡತೊಡಗಿದವು. ಒಂದಿಷ್ಟು ಕೆಟ್ಟ ಪದಗಳನ್ನು ಬೈಯುತ್ತಾ ಕಾರ್ಯಪ್ರವೃತವಾದ ಅದು ಹಲಸಿನ ಹಣ್ಣನು ತನ್ನ ತೊಡೆಯ ಮೇಲೆ ಹಾಕಿಕೊಂಡಿತು. ಅಕ್ಷರ ಸಹ ಉಗ್ರನರಸಿಂಹ ಹಿರಣ್ಯಕಷುಪನನ್ನು ಬಗೆದು ವದೆ ಮಾಡಿದಂತೆ ತನ್ನ ಬರಿಗೈಯಿಂದಲೇ ಅದು ಹಲಸಿನ ಹಣ್ಣನ್ನು ಎರಡು ಓಳಾಗಿಸಿತು! ಕತ್ತಲೆಯಲ್ಲಿಯೂ ಮಿನುಗುತ್ತಿದ್ದ ಕೆಂದಳದಿ ಬಣ್ಣದ ಆ ತೊಳೆಗಳು ನಿಂತವರ ಕಣ್ಣುಗಳನ್ನು ಕುಕ್ಕತೊಡಗಿವು. ನಾಲ್ವರ ಒಳಗಿದ್ದ ರಾಕ್ಷಸಿ ಗುಣ ಕೂಡಲೇ ಜಾಗೃತವಾಯಿತು. ನಿಮಿಷಮಾತ್ರದಲ್ಲಿ ಹಣ್ಣು ತನ್ನ ಅಸ್ತಿತ್ವವನ್ನು ಕಳೆದುಕೊಂಡಿತು! ಉಘೇ ಉಘೇ ಎಂಬ ಜೈಕಾರದೊಟ್ಟಿಗೆ ಮರವತ್ತಿದ ತಲೆಯನ್ನು ಇತರೆ ತಲೆಗಳು ಸದ್ದಾಗದಂತೆ ಕುಣಿಸಿದವು.

'ಮಚಿ.. ಏನ್ ಒಂದ್ ಬಿಯರ್ ಗೇ ಆಫಾ?' ಆದಿಯ ಭುಜವನ್ನು ಅಲುಗಾಡಿಸುತ್ತಾ ಕೇಳಿದ ಲೋಕೇಶ. ನನ್ನ ಕಡೆಯಿಂದ ಅಂದು ಬ್ರಹ್ಮಚಾರಿಗಳಿಬ್ಬರಿಗೂ ಕಂಠ ಪೂರ್ತಿ ಬೀಯರು ಹಾಗು ಒಂದು ಗಡತ್ತಾದ ಬಾಡೂಟದ ಪಾರ್ಟಿ ಕೊಡಲಾಗುತ್ತಿತ್ತು.

ಕೈಲೊಂದು ಬೀಯರಿನ ಬಾಟಲಿಯನ್ನು ಹಿಡಿದು ತನ್ನ ಪದವಿಪೂರ್ವ ಕಾಲೇಜಿನ ದಿನಗಳನ್ನು ನೆನೆಯುತ್ತಾ ಆದಿ ಅಂತರ್ಮುಖಿಯಾಗಿದ್ದನು. ಆಗೆಲ್ಲ ತಾನು ಅದೆಷ್ಟು ಚುರುಕಾಗಿದ್ದೆ. ನಗುವಾಗಲಿ, ಸಿಟ್ಟಾಗಲಿ, ಬೇಸರವಾಗಲಿ ಅಥವಾ ಮತ್ಯಾವುದೇ ಭಾವಗಳಾಗಲಿ ಅದೆಷ್ಟು ಮುಕ್ತವಾಗಿದ್ದವು. ಈಗಿನಂತೆ ಒಳಗೆ ಬೆಂಕಿಯ ಜ್ವಾಲೆಯನ್ನೇ ಹಿಡಿದಿಕೊಂಡಿದ್ದರೂ ಹೊರಗೆ ನಸುನಗುವ ಕಾಲವಂತೂ ಅದಾಗಿರಲಿಲ್ಲ. ನಾನೇಕೆ ಹೀಗಾದೆ? ಆದಿ ಯೋಚಿಸತೊಡಗಿದ್ದ. ಮರವನ್ನು ಏರಿ ಇಡೀ ಹಾಸ್ಟೆಲ್ಲಿಗೆ ಹಲಸಿನ ಹಣ್ಣನ್ನು ತಿನ್ನಿಸುತ್ತಿದ್ದ ತನ್ನ ಪರಾಕ್ರಮವನ್ನು ನೆನೆದು ಆದಿಯ ಮುಖದಲ್ಲಿ ಮಂದಹಾಸವೊಂದು ಮೂಡಿತು. ಸದ್ಯಕ್ಕೆ ಲೊಕೇಶನ ಪ್ರೆಶ್ನೆ ಆತನನ್ನು ಜಾಗೃತಗೊಳಿಸಿತು.

ಇಲ್ಲವೆಂಬಂತೆ ಆತ ತಲೆಯಾಡಿಸಿದ.

'ನೀನೋ..ನಿನ್ ಮೂಡೋ.. ಒಂದೋ ಭಯಾನಕ ಲವ್ ಫೇಲ್ಯೂರು ಇಲ್ಲ ಯಾವ್ದೋ ಫ್ಯಾಮಿಲಿ ಮ್ಯಾಟರು..ಏನ್ ಮಚಿ.. ಹಾಗೇನಿದ್ರೂ ನಮ್ಮೊಟ್ಟಿಗೆ ಹೇಳೋ' ಅದಾಗಲೇ ಮೂರನೇ ಬಿಯರ್ ಬಾಟಲಿಯನ್ನು ಕೈಯಲ್ಲಿಡಿದಿದ್ದ ಲೋಕೇಶ ತನ್ನ ಕೊನೆಯ ಪದವನು ತುಸು ಹೆಚ್ಚಾಗಿಯೇ ಎಳೆದಿದ್ದ. ನಾನು ನಗಾಡಿದೆ.

'ಇವ್ನ್ ನೋಡಪ್ಪ.. ಆಶಿಕ್ಕು.. ನಗಾಡ್ತಾ ಇರೋದು.. ಕಾಲೇಜಲ್ಲಿ ರಾಧಾ ಸಿಕ್ಕಿದಿಂದ ಅದೇನ್ ಮಾತು.. ಅದೇನ್ ಡಿಸ್ಕಶನ್ನು..ಮಗ್ನೆ ನೀನ್ ಏನ್ ಕಿತ್ತಾಕಿದ್ರೂ ಅಷ್ಟೇ, ಅವ್ರ್ ಮಾತ್ರ ನಿಂಗ್ ಸಿಗಲ್ಲ.. ಚಾಲೆಂಜ್ ಕಟ್ತೀನಿ.. ರೆಡಿನಾ?' ಆತನ ಪ್ರತಿ ಪದವೂ ಲಕ್ವಾ ಹೊಡೆದ ಬಾಯಿಂದ ಮೂಡುವ ಪದಗಳಂತೆ ಮುರುಟಿಗೊಂಡಿದ್ದವು. ಆಲ್ಕೋಹಾಲಿನ ಮತ್ತಿನಲ್ಲೂ ನಾನು ಕಷ್ಟಪಟ್ಟು ಅವನ್ನು ಗ್ರಹಿಸತೊಡಗಿದೆ. ಹಾಗು ಅಷ್ಟೇ ನಯವಾಗಿ ನಿರ್ಲಕ್ಷಿಸತೊಡಗಿದೆ.

'ಆಮೇಲೆ ತಾವು..? ಮನೇಲಿ ಓದೋ ಮಾರಾಯ ಅಂತ ಕಳ್ಸಿದ್ರೆ ಆಸಾಮಿ MLM ಬ್ಯುಸಿನೆಸ್ಸಂತೆ, ಕಾಫಿ ಎಕ್ಸ್ಪೋರ್ಟ್ ಅಂತೆ , ಕೋಚಿಂಗ್ ಇನ್ಸ್ಟಿಟ್ಯೂಟು ಇವಾಗ ಅದೂ ಆಗ್ಲಿಲ್ಲ ಅಂತ ಶುಂಠಿ ಬೆಳೀತಾನಂತೆ..' ನಾನೆಂದೆ.

'ಮಕ್ಳ ನಾನದನ್ನ ಇಂಡಿಪೆಂಡೆಂಟ್ ಆಗಿ ಇವತ್ತು ಮಾಡ್ತಾ ಇದ್ದೀನಿ .. ಯಾರ್ ಕ್ಯಾರು ಇಲ್ಲ .. ಮೈ ಓನ್ .. ಮುಂದೊಂದ್ ದಿನ ನೀವು ಅದನ್ನ ಬೇರೆಯವರಿಗೆ ಮಾಡ್ತಾ ಸ್ಯಾಲರಿ ತಗೋಂತಾ ಇರ್ತೀರ ನೋಡಿ.. ಆಗ ಹೇಳಿ ಈ ಮಾತನ್ನು..' ಎಂದು ಸುಮ್ಮನಾದ. ನಾವ್ಯಾಕೆ ಇವನ ಶುಂಠಿ ಗದ್ದೆಯಲ್ಲಿ ಕೆಲಸ ಮಾಡಬೇಕು? ನಾನು ಹಾಗು ಆದಿ ಒಬ್ಬರನ್ನೊಬ್ಬರು ನೋಡಿದೆವು. ಮುಂದೆ ಯೋಚಿಸಿ ಮಾತಾಡುವಷ್ಟು ಪ್ರಜ್ಞೆ ಉಳಿಯದೆ ಇದ್ದರಿಂದ ವಾತಾವರಣ ತುಸು ಶಾಂತವಾಯಿತು. ಆದಿಯ ಲ್ಯಾಪ್ಟಾಪಿನಿಂದ ಲತಾ ಮ್ಯಾಗೇಶ್ಕರರ ಧ್ವನಿಯಲ್ಲಿ ಅಭಿಮಾನ್ ಚಿತ್ರದ 'ಪಿಯಾ ಬಿನ ಬಾಸಿಯ ಬಾಜೇ' ಹಾಡು ಮೋಹಿಸತೊಡಗಿತು. ಏನೋ ಹೇಳಲು ಹೊರಟವನಿಗೆ ನನಗೆ ಕೂಡಲೇ ಮಾತು ನಿಂತು ಹೋಯಿತು. ಕಣ್ಣು ಮುಚ್ಚಿ ಜಯ ಬಾಧುರಿಯನ್ನು ಕಣ್ಣ ಮುಂದೆ ತಂದು ಲತಾರ ಗಾನಸುದೆಯನ್ನು ಆಸ್ವಾದಿಸತೊಡಗಿದೆ. ಮದ್ಯದ ಮತ್ತಿನಲ್ಲಿ ಇಂತಹ ಮನಸ್ಸು ಹಿಂಡುವಂತಹ ಹಾಡುಗಳು ತಂದುಕೊಡುವ ಸುಖ ಕುಡುಕರಾದರೆ ಅದು ನೂರು ಪೆಗ್ಗುಗಳಿಗೆ ಸಮವೆನ್ನಬಹುದು. ಬಹುಷಃ ಇನ್ನೂ ಮಿಗಿಲಿರಬಹುದು.

ಕೆಲ ನಿಮಿಷಗಳಲ್ಲೇ ಹಾಡು ಮುಗಿಯಿತು. ಕುರುಡನಿಗೆ ಮೊದಲಬಾರಿಗೆ ಜಗದರ್ಶನವಾಗುವಂತೆ ನಿಧಾನವಾಗಿ ನಾನು ಕಣ್ಣುಗಳನ್ನು ಬಿಡತೊಡಗಿದೆ. ಬ್ರಹ್ಮಚಾರಿಗಳಿಬ್ಬರೂ ಹಾಡಿನ ಜೊತೆಗೆ ಮೈಮರೆತು ನಾನು ಗುನುಗಿದ ಆಡಿಯೋವನ್ನು ರೆಕಾರ್ಡ್ ಮಾಡುತ್ತ ನಗಹತ್ತಿದ್ದರು. ನಂತರ ಅದನ್ನು ನನಗೆ ಕೇಳಿಸಿದರು. ಆ ಕುಡಿದ ಮತ್ತಿನಲ್ಲೂ ನನಗೆ ನನ್ನ ಧ್ವನಿಯ ಮೇಲೆ ವೈರಾಗ್ಯ ಮೂಡಿತು. ಮತ್ತೆಂದು ಹಾಡಲೇ ಬಾರದೆಂದು ತೀರ್ಮಾನಿಸಬೇಕೆಂದುಕೊಂಡೆ!

ಕೆಲಸಮಯದ ನಂತರ ನಾನು ನನ್ನೊಳಗೆ ಅಡಗಿಸಿಕೊಂಡಿದ್ದ ಸುಪ್ತ ಬುದ್ದಿಯನ್ನು ಜಾಗೃತಗೊಳಿಸಿದೆ. ಅದೇ ಸುಸುಮಯವೆಂದು,

'Guys.. ನಿಮ್ಮ್ ಹತ್ರ ಒಂದ್ ರಿಕ್ವೆಸ್ಟ್..' ನನ್ನ ರೂಮಿಗೆ ರೂಮೆಟುಗಳಾಗಿ ಬಂದರೂ ಔಪಚಾರಿಕ ನೆಲೆಯಲ್ಲಿ ನಾನು ಅವರನ್ನು ಕೇಳಬೇಕಂದುಕೊಂಡು ಕೇಳಿದೆ.

'ಈ ವೀಕ್ ಎಂಡ್ ರಾಧಾ ನಮ್ಮ ರೂಮಿಗೆ ಬರ್ತಾ ಇದ್ದಾರೆ!'

'ಏನ.. ಎಲ್ಲಿಗ್ ಹೋಗ್ತಾ ಇದ್ದಾರೆ..' ಲೋಕೇಶ ನ ಪ್ರತಿ ಪದಗಳ ನಡುವಿನ ಅಂತರ ಚದುರುವ ಮೋಡಗಳಂತೆ ದೂರ ದೂರವಾಗುತ್ತಿದ್ದವು.

'ಹೋಗ್ತಾ ಇಲ್ಲಪ್ಪ ತಂದೆ.. ಬರ್ತಾ ಇದ್ದಾರೆ.. ಇಲ್ಲಿಗೆ..ನಮ್ಮ್ ಪ್ಲಾಟಿಗೆ'

'ಬರ್ಲಿ ಬಿಡು.. ನಿಂಗೇನು ಪ್ರಾಬ್ಲಮ್ಮು.. '

'ಸರಿ ಹಾಗಾದ್ರೆ' ಇನ್ನು ಹೆಚ್ಚು ಮಾತನಾಡಿ ಪ್ರಯೋಜನವಿಲ್ಲವೆಂದು ನಾನು ಸುಮ್ಮನಾದೆ. ನನ್ನನ್ನು ಗಮನಿಸಿದ ಆದಿ,

'ಏನೋ ವಿಷ್ಯ..ಲೆಕ್ಚರರ್ ಒಬ್ರು ಬ್ಯಾಚೊಲೇರ್ ರೂಮಿಗೆಲ್ಲ ಬರೋದು ಸರಿ ಇರುತ್ತಾ?'

'ನಾನೇನ್ ಕರೀಲಿಲ್ಲಪ್ಪ..ಅವ್ರೆ ಬರ್ತೀನಿ ಅಂತ ಬರ್ತಾ ಇರೋದು..' ಎಂದು ನಾನು ಹೇಳಿದೆ.

'ಎಷ್ಟ್ ಹೊತ್ತಿಗೆ ?'

ನಾನು ಆದಿಯ ಕಣ್ಣುಗಳನ್ನೇ ಧಿಟ್ಟಿಸುತ್ತಾ 'ರಾತ್ರಿ ಹತ್ತಕ್ಕೆ..'

ಕುಡಿಯುತ್ತಿದ್ದ ಬಿಯರ್ನ ಗುಟುಕು ಕೂಡಲೇ ನತ್ತಿಗೇರಿ ಒಮ್ಮೆಲೇ ಕೆಮ್ಮತೊಡಗಿದ ಆತ. ನಾನು ತಲೆಯನ್ನು ತಟ್ಟಿಕೊಳ್ಳುವಂತೆ ಸಂಜ್ಞೆ ಮಾಡಿದೆ.

'ಲೋ ಮಹರಾಯ.. ಏನೋ ನಿಮ್ಮಿಬ್ರುದು..ರಾತ್ರಿಹೊತ್ತ್ ಯಾಕೋ ಬರ್ತಾ ಇರೋದು ಅವ್ರು..?' ಬಿಯರನ್ನು ಕುಡಿಸಿದ ಮಾತ್ರಕ್ಕೆ ನಾನು ಹೇಳಿದ್ದಕ್ಕೆಲ್ಲ ತಲೆಯಾಡಿಸುವವರು ಎಂದುಕೊಂಡ ನನ್ನ ಲೆಕ್ಕಾಚಾರ ಸ್ವಲ್ಪ ಉಲ್ಟಾ ಹೊಡೆಯತೊಡಗಿತು. ಲೋಕೇಶ ಕುಡಿತದ ಮತ್ತಿನಲ್ಲಿ ಕಣ್ಣುಮುಚ್ಚಿಕೊಂಡು ಭುಜವನ್ನು ಕುಣಿಸುತ್ತ ತನ್ನದೇ ಯಾವುದೊ ಲೋಕದಲ್ಲಿದ್ದರಿಂದ ಆತನ ಅಭಿಪ್ರಾಯ ಸದ್ಯಕಂತೂ ಮಾನ್ಯವಾಗುತ್ತಿರಲಿಲ್ಲ.

'ಹಾಗೇನಿಲ್ಲ ಮಚಿ.. ನಾನ್ ಎಲ್ಲ explain ಮಾಡ್ತೀನಿ..But ಅವತ್ತೊಂದಿನ ನೀವು ಹಾಸ್ಟೆಲಿನ ಯಾರ್ದಾದ್ರೂ ರೂಮಲ್ಲಿ ಅಡ್ಜಸ್ಟ್ ಮಾಡ್ಕೋಬೇಕು'

'ನಿನ್ ರೂಮು , ನೀನ್ ಥಿಂಕ್ ಮಾಡು.. ಓನರ್ ಬೇರೆ ಕೆಳಗ್ಗೆ ಇರ್ತಾರೆ.. ನಾನು ಈ ವೀಕ್ ಊರಿಗ್ ಹೋಗ್ತಾ ಇದ್ದೀನಿ, ನಂದೇನು ಪ್ರಾಬ್ಲಮ್ ಇಲ್ಲ.. ಇವ್ನ್ ಕೇಳು' ಎಂದು ಆದಿ ಲೊಕೇಶನನ್ನು ನೋಡಿದ.


****


ಸುಡುಬಿಸಿಲಿನ ತಾಪದಿಂದ ಬೆವರುತ್ತ ಬಂದ ಅಪ್ಪ ಸಂತೆಯಿಂದ ತಂದ ಎರಡೂ ದಿನಸಿ ಗಂಟುಗಳನ್ನು ಬಾಗಿಲ ಬಳಿ ಇರಿಸಿದ. ಆಗೆಲ್ಲ ನಾಲ್ಕೈದು ಅಂತಹ ಬ್ಯಾಗುಗಳನ್ನು ಎತ್ತುತ್ತಿದ್ದ ಅಮ್ಮನಿಗೆ ಇಂದು ಒಂದು ಬ್ಯಾಗನ್ನೂ ಎತ್ತಿಡಲು ಆಗುತ್ತಿಲ್ಲ. ಆದಿ ಕೂಡಲೇ ಹೋಗಿ ಎರಡೂ ಬ್ಯಾಗನ್ನು ತನ್ನ ಒಂದೊಂದು ಕೈಯಲ್ಲಿಡಿದು ಅಡುಗೆ ಮನೆಯಲ್ಲಿ ತಂದಿರಿಸಿದ. ಅಮ್ಮ ಬಂದು ಒಂದೊಂದೇ ಸಾಮಾನುಗಳನ್ನು ತೆಗೆದು ಜೋಡಿಸತೊಡಗಿದಳು.

ಭಾರತ ಆಸ್ಟ್ರೇಲಿಯ ತಂಡದ ಮ್ಯಾಚನ್ನು ನೋಡುತಿದ್ದ ಮಗನನ್ನು ನೋಡಿದ ಅಪ್ಪ 'ಓದೋದ್ ಬಿಟ್ ಇದೇ ಮಾಡು..' ಎಂದು ಸಿಡುಕಿದ. ಆದಿ ಅದಕ್ಕೆ ಕ್ಯಾರೇ ಎನ್ನದೆ ಟಿವಿ ನೋಡುವುದರಲ್ಲೇ ಮಗ್ನನಾದ. ಅಪ್ಪ ತನ್ನ ಪ್ಯಾಂಟಿನ ಜೇಬಿನಲ್ಲಿ ತಂದಿರಿಸಿದ ಓಲ್ಡ್ ಮಾಂಕ್ ರಮ್ಮನ್ನು ರಾತ್ರಿಯ ತೀರ್ಥ ಪ್ರಸಾದಕ್ಕೆಂದು ತೆಗೆದಿಟ್ಟ. ಖೈದಿಗಳ ಮುಂದೆ ಪೊಲೀಸರು ತೆಗೆದಿಡುವ ರಿವಾಲ್ವರ್ನಂತೆ ಆ ಕಾಗದದ ಪೊಟ್ಟಣದ ರಮ್ಮು ಆದಿಯ ಮನದೊಳಗೆ ಒಂದು ಬಗೆಯ ಭಯವನ್ನು ಹುಟ್ಟಿಸಿತು.

'ಕಡ್ಲೆ ಹಿಟ್ಟು ಇಲ್ಲ.. ಬೆಲ್ಲ ಒಂದ್ ಕೆಜಿ ತರೋಕ್ ಹೇಳಿದ್ದೆ.. ಅರ್ಧ ಕೆಜಿ ಮಾತ್ರ ಬಂದಿದೆ.. ಕರ್ಮ' ಎಂದು ಅಡುಗೆಮನೆಯಿಂದ ಕೂಗಿದಳು ಅಮ್ಮ. ಆಕೆಯ ಕರ್ಮ ಎಂಬ ಪದದ ಅರ್ಥ ಆ ಸಮಯಕ್ಕೆ ಕೇವಲ ಕರ್ಮವಾಗಿರದೆ ಒಂದು ಬಗೆಯ ಶಾಪವೆಂಬುದಾಗಿದ್ದಿತು.

'ಅಷ್ಟ್ ಹೇಳೋಳು ನೀನೆ ಹೋಗಿ ತರ್ಬೇಕಿತ್ತು..' ಅಪ್ಪ ಅರಚಿದ. ತನ್ನ ಪ್ರತೀ ತಪ್ಪಿಗೂ ಅರಚುವಿಕೆಯ ಗುರಾಣಿಯನ್ನೇ ಬಳಸಿ ಮುಂದಿರುವವರ ಮಾತನ್ನು ನಿಲ್ಲಿಸುವಲ್ಲಿ ನಿಷ್ಣಾತನಾಗಿದ್ದ ಆತ.

'ತಲೆ ಆಕಾಶದ್ ಮೇಲೆ ಇದ್ರೆ ಇನ್ನೇನಾಗುತ್ತೆ.. ಹೇಳೋದು , ಕೇಳ್ದಷ್ಟ್ ಕೊಟ್ಟ್ ತರೋದು..! ಏನ್ ಕೊಡ್ತಾ ಇದ್ದಾರೆ, ಇಲ್ಲ ಅಂತ ನೋಡೋದ್ ಬೇಡ್ವಾ?'

'ನೋಡ್ ಮಾರಾಯ.. ಈ ರಾಕ್ಷಸಿ ಹೆಂಗ್ಸ್ ಅತ್ರ ನಂಗಾಗಲ್ಲ.. ಏನ್ ಸಾಯಿತಾಳೆ' ಅಂದ ಅಪ್ಪ ಕೊಂಚ ಸುಮ್ಮನಾಗಿ ತಾನು ನೀರು ಕುಡಿಯುತ್ತಿದ್ದ ತಾಮ್ರದ ಲೋಟವನ್ನು ಒಮ್ಮೆಲೇ ಜೋರಾಗಿ ನೆಲದ ಮೇಲೆಸೆದ. ಹತ್ತಾರು ಮಗ್ಗುಲಲ್ಲಿ ಬಿದ್ದು ಸದ್ದು ಮಾಡುತ್ತಾ ಲೋಟ ಶಾಂತವಾಯಿತು. ಅದರ ಆ ವಿಪರೀತ ಸದ್ದಿಗೆ ಆದಿಯ ಎದೆ ಒಂದೇ ಸಮನೆ ಬಡಿದುಕೊಳ್ಳತೊಡಗಿತು.

'ಅಮ್ಮ ಸುಮ್ನಿರಮ್ಮ.. ಸಾಯಂಕಾಲ ನಾನೇ ಹೋಗಿ ತರ್ತೀನಿ..' ಎಂದ ಆದಿಯ ಮಾತಿಗೆ,

'ಸರಿ ಬಿಡಪ್ಪ.. ಹೀಗೆ ಆದ್ರೆ ಉದ್ದಾರ ಆದಂಗೆ'. ದಿನನಿತ್ಯದ ಕಚ್ಚಾಟದಲ್ಲಿ ಆಕೆಯ ಉದ್ದಾರ ಎಂಬ ಪದಕ್ಕೆ ಅದ್ಯಾವ ಬಗೆಯ ಸ್ಥಾನವಿದೆಯೋ ಬಲ್ಲವರ್ಯಾರು? ಆಕೆ ಕೂಡಲೇ ಬಟ್ಟೆಯೊಂದನ್ನು ತಂದು ನೆಲದ ಮೇಲೆ ಹರಡಿದ್ದ ನೀರನ್ನು ಒರೆಸತೊಡಗಿದಳು. ಅಪ್ಪನಿಗೆ ಹಿಡಿಶಾಪಗಳ ಸುರಿಮಳೆಗೈಯಲಾಗುತಿತ್ತು. ಕಣ್ಣಲ್ಲೇ ಸುಟ್ಟು ಭಸ್ಮ ಮಾಡುವವರಂತೆ ಆತ ಆಕೆಯನ್ನು ಧಿಟ್ಟಿಸತೊಡಗಿದ.

'ಮನೆ ಬಿಟ್ಟ್ ತೋಲ್ಗ್ ಆದ್ರೂ ಹೋಗ್ಬಾರ್ದ.. ನಿನ್ ಕಾಲ್ ಸೇದೋಗ..ನಿನ್ ಮಕ ಮಣ್ಣ್ ತಿನ್ನ..' ಅಪ್ಪ ತನ್ನ ಕಾಲಿನಿಂದ ಒದ್ದ ರಭಸಕ್ಕೆ ನೆಲದ ಮೇಲೆ ಬಿದ್ದ ಅಮ್ಮ ಅರಚತೊಡಗಿದಳು. ಅದಾಗಲೇ ಆದಿ ಆ ವಾನರ ಜಗಳದ ಮಧ್ಯವರ್ತಿಯಾಗಿ ಅವರಿಬ್ಬರ ನೆಡುವೆ ನಿಂತಿದ್ದ. ಹೊರಗೆಲ್ಲ ಒಬ್ಬರು ಕೆಮ್ಮಿದರೂ ನಡುಗಿ ನೀರಾಗುವ ಈತ ಅಮ್ಮನ ಮೇಲೆ ತೋರುವ ಪರಾಕ್ರಮವನ್ನು ಆದಿಗೆ ಸಹಿಸದಾಯಿತು. ಅಕ್ಕಪಕ್ಕದ ಮನೆಯವರು ಏನೆನ್ನುತ್ತಾರೆ ಎಂಬುದನ್ನೂ ಲೆಕ್ಕಿಸದೆ ಅಪ್ಪ ತನ್ನ ಅಶ್ಲೀಲ ಪದವಿಯ ಜ್ಞಾನವನ್ನು ತೋರ್ಪಡಿಸತೊಡಗಿದ.

'ಬಾಯಿ ಮುಚ್ಚಪ್ಪ ಸಾಕು.. ಬೈಯೋಕ್ಕೆ ನಿಂಗೊಬ್ಬನಿಗೆ ಬರೋದು ಅಂತ ಆರ್ಚ್ಬೇಡ .. ನಿಂಗಂತೂ ಮಾನ ಮಾರ್ಯಾದೆ ಇಲ್ಲ ಅಂತ ನಮ್ಮನ್ನೂ ಹಾಗೆ ಅನ್ಕೋಬೇಡ'

'ಮುಚ್ಚೋ ಲೈ ಅಲಾಲ್ಕೋರ್ ನನ್ನ್ ಮಗ್ನೆ.. ನಾನ್ ಗೆಯ್ದ್ ಹಾಕಿರೋದನ್ನೇ ತಿಂದು ತಿಂದು ಇಷ್ಟ್ ಮಾತಾಡ್ತಿರ.. ಇನ್ ನೀವೇ ದುಡಿಯೋದ್ ಆಗಿದ್ರೆ ಇನ್ನೇನ್ ಹೇಳ್ತಿದ್ರೋ..' ಎಂದು ತನ್ನನ್ನು ಒಬ್ಬ ದೇಶ ಕಾಯುವ ಸೈನಿಕರಿಗೆ ಹೋಲಿಸತೊಡಗಿದ ಆತ. ಬಾಯಿಂದ ಹೊರಸೂಸುತಿದ್ದ ಹೆಂಡದ ವಾಸನೆ ಆದಿಯನ್ನು ತಲುಪಲು ಹೆಚ್ಚು ಸಮಯ ಹಿಡಿಯಲಿಲ್ಲ. ಹೆಚ್ಚಿನ ಮಾತು ಅನಾಹುತಕ್ಕೆ ನಾಂದಿಯಾಗುತ್ತದೆಂದು ಆತನಿಗೆ ಅನಿಸಿತು. ಅಮ್ಮನನ್ನು ಸುಮ್ಮನಿರಿಸಲು ಆತ ಪ್ರಯತ್ನಿಸಿದ. ಆದರೆ ಅದು ಬೆಂಕಿಯ ಮೇಲೆ ಸೀಮೆಯೆಣ್ಣೆಯನ್ನು ಸುರಿದಂತೆ ವ್ಯರ್ಥವಾದ ಕಾಯಕವಾಗಿದ್ದಿತು. ಆಕೆಯ ಕೊಂಕು ಮಾತುಗಳು ಆದಿಯನ್ನೂ ಕೆರಳುಸುತ್ತಿದ್ದ ವಲ್ಲದೆ ಸಮಯೋಚಿತ ಮೊಂಡು ಮಾತುಗಳು ಅಪ್ಪನನ್ನಂತೂ ಪ್ರತ್ಯುತ್ತರ ಕೊಡದಂತೆ ಕಟ್ಟಿಬಿಡುತ್ತಿದ್ದವು. ಮನೆ ರಣರಂಗವಾಯಿತು. ಅದಾಗಲೇ ಪಕ್ಕದ ಮನೆಯ ಒಂದಿಬ್ಬರು ಹೊರಬಂದು ಎತ್ತಲೋ ನೋಡುವ ನಟನೆಯನ್ನು ಮಾಡುತ್ತಾ ತಮ್ಮ ಕಿವಿಗಳೆರಡನ್ನೂ ಆದಿಯ ಪೋಷಕರ ವಾಗ್ಯುದ್ಧದೆಡೆ ಕೇಂದ್ರೀಕರಿಸಿದ್ದರು.

'ಆಗಲ್ಲ ಅಂದ್ರೆ ಆಗಲ್ಲ.. ಇವಾಗ್ಲೆ ಹೊರಟೊಗು..' ಅಪ್ಪ ಅರಚಿದ.

'ಹೋಗ್ತಿನೋ .. ನೀನ್ ಊರಲ್ ಇರೋ ಮುಂಡೆರ್ನ ಎಲ್ಲ ಕರ್ಕೊಬಂದು ಸಾಕೋ..ನಿಂಗ್ ಬೇಕಾಗಿರೋದು ಅದೇ ಅಲ್ವ'

'ನಾನ್ ಯಾವಳ್ನಾರು ಕಾರ್ಕೊ ಬರ್ತೀನಿ.. ಬೇಕಾದ್ರೆ ಕಟ್ಕೊಂಡ್ತೀನಿ.. ನೀನ್ಯಾವಳೇ ಕೇಳೋಕ್ಕೆ' ತನ್ನ ಒಂದು ಕಾಲನ್ನು ಮರದ ಕುರ್ಚಿಯ ಮೇಲಿರಿಸಿದ ಆತ ತನ್ನ ಕೈಗಳಿಂದ ಮೂಗಿನ ಹೊಕ್ಕನ್ನು ತೆಗೆಯುತ್ತಾ ಹೇಳತೊಡಗಿದ. ಆತನ ಆ ಮಾತನ್ನು ಕೇಳಿ ಅಡುಗೆ ಮಾಡುತ್ತಿದ್ದ ಆಕೆ ಅನ್ನದ ಸಮೇತ ಪಾತ್ರೆಯನ್ನು ನೆಲಕ್ಕೆ ಕುಕ್ಕಿದಳು ಅಮ್ಮ. ಬಿಸಿಯಾದ ಅನ್ನ ಹಾಗು ಅದರ ಗಂಜಿ ಆಕೆಯ ಕಾಲುಗಳ ಮೇಲೆ ಹರಿದು ಪಸರಿಸಿತು. ಆ ಸದ್ದಿಗೆ ಆದಿ ಕೂಡಲೇ ಅಡುಗೆ ಮನೆಯೊಳಗೇ ಓಡಿದ. ಆಗಷ್ಟೇ ನೀರನ್ನು ಒರೆಸಿದ್ದ ಆ ಹಸಿಬಟ್ಟೆಯನ್ನು ಕಾಲುಗಳ ಮೇಲೆ ಒತ್ತಿಹಿಡಿಡಿದ್ದಳು ಅಮ್ಮ. ಕಣ್ಣು ರೆಪ್ಪೆಗಳೆರಡೂ ಸಹ ಅಂತೆಹೆ ಗಟ್ಟಿಯಾಗಿ ಒಂದಕ್ಕೊಂದು ಒತ್ತಿಕೊಂಡಿದ್ದವು. ಕಳ್ಳಿಯ ಹಾಲಿನಂತೆ ಆಶ್ರುಧಾರೆಗಳು ಪಟಪಟನೆ ಉದುರತೊಡಗಿದ್ದವು. ಆದಿಗೆ ಆ ದೃಶ್ಯವನ್ನು ನೋಡಲಾಗಲಿಲ್ಲ. ಒಮ್ಮೆಲೇ ಅಪ್ಪನ ಕುತ್ತಿಗೆಯನ್ನು ಅದುಮಿ ಸಾಯಿಸಿಬಿಡಬೇಕೆಂಬ ಮನಸ್ಸಾದರೂ ಏಕೋ ಕೈಗಳು ಮುಂಬರಲಿಲ್ಲ. ಆತನ ಕಣ್ಣುಗಳೂ ಹುಕ್ಕಿ ಹರಿದವು.

ಆಕೆಯನ್ನು ಸಮಾಧಾನಪಡಿಸಲು ಮುಂದಾದ ಆದಿಯನ್ನು ಪಕ್ಕಕ್ಕೆ ತಳ್ಳಿ ಆಕೆ ಮಲಗುವ ಕೋಣೆಯೊಳಗೆ ಹೋದಳು. ಆದಿ ಅಳುತ್ತಲೇ ಅನ್ನವನ್ನೆಲ್ಲವನ್ನು ಕೈಯಿಂದ ಪಾತ್ರೆಯೊಳಗೆ ಸೀಟಿ ಅದನ್ನು ಹೊರಗೆಸೆದ. ಕೈ ಉರಿಯುವಷ್ಟು ಬಿಸಿಯಾಗಿದ್ದ ಅನ್ನದ ಗಂಜಿ ಇನ್ನು ಆಕೆಯ ಕಾಲುಗಳ ಮೇಲೆ ಅದೆಂತಹ ನೋವನ್ನು ಉಂಟುಮಾಡಿರಬಹುದು ಎಂಬುದನ್ನು ಆತ ಯೋಚಿಸಲೂ ಅಶಕ್ತನಾದ. ಆಕೆಯ ನೋವೆಲ್ಲಾ ತನಗೇ ಬರಬಾರದೇಕೆ ಎಂದು ಪ್ರಾರ್ಥಿಸತೊಡಗಿದ. ಅನ್ನವನ್ನು ಹೊರಗೆಸೆಯಲು ಬಂದಾಗ ಪಕ್ಕದ ಮನೆಯ ಹೆಂಗಸು ಏನೆಂದು ಕೇಳಿದಾಗ ಪಾತ್ರೆ ಕೈ ಜಾರಿ ಬಿತ್ತೆಂದೂ ಏನೂ ಹೆಚ್ಚು ಪೆಟ್ಟಾಗಲಿಲ್ಲ ಎಂದೇಳಿ ಸುಮ್ಮನಾದ. ತನ್ನ ತಾಯಿಯ ವಯಸ್ಸಿನ ಆ ಹೆಂಗಸು ಆದಿಯ ಉತ್ತರವನ್ನು ಕೇಳಿ ಆತನನ್ನು ತನ್ನ ಕರುಣಾಜನಕ ದೃಷ್ಟಿಯಿಂದ ನೋಡಿದಳು. ಆಕೆಯ ನೋಟದಲ್ಲಿ ತಾನೆಲ್ಲ ಬಲ್ಲೆ, ಪಾಪದ ಹುಡುಗ, ಅಪ್ಪ ಅಮ್ಮಂದಿರ ಕಿತ್ತಾಟದಲ್ಲಿ ಕಮರಿಹೋಗುತ್ತಿದ್ದಾನೆ ಎಂಬ ಒಂದು ನೋಟವಿತ್ತು. ಅವರನ್ನು ನೋಡಿ ಆದಿಗೆ ತನ್ನೆಲ್ಲ ದುಃಖವನ್ನು ಅಲ್ಲೇ, ಅದೇ ಕ್ಷಣದಲ್ಲಿ ಅತ್ತು ಕಳೆದುಕೊಳ್ಳಬೇಕೆನಿಸಿತು. ಅಪ್ಪನ ಅರಚುವಿಕೆ ಮತ್ತೆ ಭಯವನ್ನು ಉಂಟುಮಾಡಿತು.

'ನೀನ್ ಏನಾದ್ರೂ ಮಾಡು ಮಾರಾಯ.. ಅಮ್ಮ ಮಗ ಗಂಟು ಮೂಟೆ ಕಟ್ಕೊಂಡ್ ಹೋದ್ರೆ ಸರಿ..' ತನ್ನ ಅಧಿಕಾರವಾಣಿಯಲ್ಲಿ ಅಪ್ಪ ಹೇಳಿದ. ನೋವಿನಿಂದ ಮುಚ್ಚಿದ್ದ ಅಮ್ಮನ ರೆಪ್ಪೆಗಳು ಇನ್ನೂ ಒಂದನೊಂದು ಬಿಟ್ಟಿರಲಿಲ್ಲ. ಆ ನೋವಿನಲ್ಲೂ ಆಕೆ ಅಪ್ಪನ ಮಾತಿಗೆ ಕೊಂಕು ನುಡಿಯುವದನ್ನು ಮಾತ್ರ ಬಿಡಲಿಲ್ಲ.

'ಹೋಗ್ತಿವಿ .. ಸಾಯ್ಬೇಡ, ಸ್ವಲ್ಪ ಹೊತ್ತು ಬಾಯ್ ಮುಚ್ಕೊಂಡ್ ಇರು ತಂದೆ..' ಎಂದ ಆದಿ ಕೂಡಲೇ ಜೇನುತುಪ್ಪದ ಡಬ್ಬಿಯನ್ನು ತಂದು ಅಮ್ಮನ ಕಾಲುಗಳಿಗೆ ಹಚ್ಚತೊಡಗಿದ. ಆಕೆ ಆದಿಯನ್ನು ನೋಡುತ್ತಾ ಒಂದೇ ಸಮನೆ ಅಳತೊಡಗಿದಳು.

'ನಿಮ್ ಕಾಲೇಜತ್ರನೇ ಯಾವ್ದಾದ್ರು ಒಂದ್ ರೂಮ್ ಮಾಡಣ.. ನಾನೂ ಯಾವ್ದಾದ್ರು ಕೆಲ್ಸನ ನೋಡ್ಕೊಂಡ್ತೀನಿ..ನಿಂಗು ಅಡಿಗೆ ಊಟ ಅಂತ ಆಗುತ್ತೆ.. ನೆಡಿ, ಆದದ್ ಆಗ್ಲಿ.. ಈ ಬೇವರ್ಸಿ ಸಾವಾಸ ಸಾಕು ಇನ್ನು' ಎಂದು ಅಪ್ಪನಿಗೂ ಕೇಳುವಂತೆ ಆಕೆ ನುಡಿದಳು. ಆಕೆಯ ಮಾತನ್ನು ಕೇಳಿ ಆದಿಗೆ ಪ್ರಜ್ಞೆ ತಪ್ಪುವಂತಾಯಿತು. ಕೂಡಲೇ ಏನನ್ನು ಉತ್ತರಿಸಬೇಕೆಂದು ತೋಚದೆ ಆತ ರೂಮಿನಿಂದ ಹೊರಬಂದ. ಚಾರ್ಜಿಗೆ ಇರಿಸಿದ್ದ ಮೊಬೈಲನ್ನು ಹೊರತೆಗೆದು ಲೋಕೇಶನಿಗೆ ಫೋನಾಯಿಸಿದ. ಅದು ಐದಾರು ರಿಂಗುಗಳಾಗುವಷ್ಟರಲ್ಲೇ ಆತ ಮನೆಯಿಂದ ತುಸು ದೂರಕ್ಕೆ ಬಂದು ನಿಂತಿದ್ದ. ಅಪ್ಪ ಎಲ್ಲಿ ಅಮ್ಮನನ್ನು ಬೈಯುತ್ತಾನೋ, ಹೊಡೆಯುತ್ತಾನೋ ಎಂದು ತನ್ನ ಒಂದು ಕಿವಿಯನ್ನು ಆಕಡೆಯೇ ಇರಿಸುವುದನ್ನು ಮಾತ್ರ ಮರೆಯಲಿಲ್ಲ. ಫೋನನ್ನು ಎತ್ತಿದ ಲೊಕೇಶನ 'ಹೇಗಿದ್ದೀಯಪ್ಪ ಗುರು..' ಎಂಬ ಮಾತನ್ನು ಕೇಳಿ ಆದಿಯ ಧ್ವನಿ ಗದ್ಗತಿತವಾಯಿತು. ಕೂಡಲೇ ಸಾಧ್ಯವಾದಷ್ಟು ಕಡಿಮೆ ಸದ್ದನ್ನು ಮಾಡುತ್ತಾ ಆತ ಅಳತೊಡಗಿದ. ಮೊದಲಿಗೆ ಏಕೆ ಏನೆಂದು ಕೇಳಿದ ಲೋಕೇಶ ಸಂಧರ್ಭವನ್ನು ಅರಿತು ಆತ ಅಳುವವರೆಗೂ ಕಾದ. ಎಷ್ಟೋ ನಿಮಿಷಗಳ ನಂತರ ಇಹಸ್ಥಿತಿಗೆ ಬಂದ ಆದಿ ಏನನ್ನೂ ಹೇಳದೆ ನಾನೊಂದು ರೂಮನ್ನು ಮಾಡಬೇಕು, ನಿನ್ನ ಸಹಾಯ ಬೇಕು, ಅಮ್ಮನನ್ನು ಕರೆದುಕೊಂಡು ಬರುವುದಾಗಿ ಹೇಳಿದ. ಆದಿ ಬಾಯಿಬಿಟ್ಟು ಇಂತಿತ್ತೇ ಆಯಿತೆಂದು ಹೇಳದಿದ್ದರೂ ಆತನ ಮಾತಿನ ವರಸೆಯಿಂದ ಲೋಕೇಶ ಅದಾಗಲೇ ಆದಷ್ಟು ವಿಷಯವನ್ನು ಗ್ರಹಿಸಿದ್ದ. ನಂತರ ಏನು ಎತ್ತ ಎಂದು ಹೆಚ್ಚೇನೂ ಕೇಳದೆ ತುಸು ಹೊತ್ತು ಯೋಚಿಸಿ ತನ್ನ ಮಾತನ್ನು ಮುಂದುವರೆಸಿದ.

ಮೊದಲು ಆತನಿಗೆ ಕೊಂಚ ಶಾಂತವಾಗುವಂತೆ ಹೇಳಿ, ಮನೆಯಲ್ಲಿನ ಜಗಳ ಇಂದು ನೆನ್ನೆಯಲ್ಲದೆಂದೂ ಜಗಳವಿರದ ಮೆನೆಯೇ ಪ್ರಪಂಚದಲ್ಲಿ ಇರುವುದಿಲ್ಲ ಎನ್ನುತ್ತಾನೆ. ವಿದ್ಯಾವಂತರಿಗೆ ತಾವು ಕಲಿಯುವ ವಿದ್ಯೆ ಎಂಬುದು ಕೇವಲ ಕೆಲಸವೊಂದನ್ನು ಗಿಟ್ಟಿಸಿಕೊಂಡು ಹಣವನ್ನು ಗಳಿಸುವುದಷ್ಟೇ ಅಲ್ಲದೆ ಜೀವನದಲ್ಲಿ ಬರುವ ಇಂತಹ ಹಲವಾರು ವಿಷಮ ಸ್ಥಿತಿಗಳನ್ನು ಧೈರ್ಯದಿಂದ, ಜಾಣ್ಮೆಯಿಂದ ಎದುರಿಸುವುದಾಗಿದೆ ಎನ್ನುತ್ತಾನೆ. ಈ ಸಮಯಕ್ಕೆ ಏನೇ ಮಾಡಿದರೂ ಅದು ಕಾರ್ಯಸಾಧುವಾದುದಲ್ಲ. ಸ್ವಲ್ಪ ಸಮಯ ಕಾಯಿ. ಪೋಷಕರು ಹಿರಿಯರು. ವಯಸ್ಸಿನಲ್ಲಿಯೂ ಹಾಗು ಬುದ್ದಿಯಲ್ಲಿಯೂ. ಅವರವರ ಕಿತ್ತಾಟಕ್ಕೆ ಅವರೇ ಹೊಣೆ ಹಾಗು ಅದಕೊಂಡು ಪರಿಹಾರವನ್ನೂ ಅವರೇ ಕಂಡುಕೊಳ್ಳಬೇಕು. ನೀನು ವರ್ಷಪೂರ್ತಿ ಇವಿಷ್ಟೇ ವಿಷಯದಲ್ಲಿ ಬಿದ್ದಿದ್ದರೆ ಖಂಡಿತಾವಾಗಿಯೂ ಓದಿನ ಮೇಲೆ ಗಮನ ಹರಿಸಲಾರೆ. ಹೇಗಾದರೂ ಮಾಡಿ ಕಾಲೇಜನ್ನು ಪಾಸು ಮಾಡಿಕೊ. ನಿನ್ನಂತ ಪ್ರತಿಭಾವಂತರಿಗೆ ಕಂಪನಿಗಳು ಸಾಲಾಗಿ ಬಂದು ನಿಲ್ಲುತ್ತವೆ. ಆಗ ನೀನು ಯಾರನ್ನಾದರೂ ಕರೆದುಕೊಂಡು ಬಾ. ಅಷ್ಟಾಗಿಯೂ ನೀನು ಅಮ್ಮನನ್ನು ಕರೆದುಕೊಂಡು ಬಂದೆ ಎಂದಿಟ್ಟುಕೋ, ಮನೆ, ಡೆಪಾಸಿಟ್, ಬಾಡಿಗೆ, ಸಾಮಾನುಗಳು ಅಂತ ಹತ್ತಿರ ಹತ್ತಿರ ಎರಡು ಲಕ್ಷವಾದರೂ ಬೇಕು. ಸದ್ಯಕ್ಕೆ ನನ್ನ ಬಳಿ ಅಷ್ಟು ಹಣ ಇದ್ದರೂ ನಾನು ಶುಂಠಿಯಲ್ಲಿ ತೊಡಗಿಸಿಕೊಂಡಿರುವುದರಿಂದ ಅದು ಸಾಧ್ಯವಾಗದ ಮಾತು. ಆದಿಗೆ ಲೊಕೇಶನ ಮಾತು ಹೌದೆನಿಸಿದರೂ ಕಾಲಿನ ಮೇಲೆ ಗಂಜಿಯನ್ನು ಚೆಲ್ಲಿಕೊಂಡು ಅವಡುಗಚ್ಚಿ ಅಳುತ್ತಿರುವ ಅಮ್ಮನ ರೋಧನೆಯನ್ನು ಸಹಿಸಲಾಗಲಿಲ್ಲ. ಅದೇನೇ ಆದರೂ ನಾನು ಹಾಗು ಲೋಕೇಶ ಆತನ ಜೊತೆಗಿರುತ್ತಿವೆಂಬ ಭರವಸೆಯಲ್ಲಿ 'ಯೋಚ್ನೆ ಮಾಡಿ ಕಾಲ್ ಮಾಡ್ತೀನಿ' ಎಂದೇಳಿ ಫೋನನ್ನು ಇರಿಸಿದ.

ಆದಿಗೆ ತಂಗಿ ಮತ್ತೊಮ್ಮೆ ನೆನಪಾದಾಳು. ಆಕೆಯನ್ನು ಊರಿಗೆ ಕರೆಯಬೇಕೆಂಬ ಮನಸ್ಸಾಯಿತು.

ಗಿಜಿಗಿಜಿಗುಡುವ ನಗರದ ಧಟ್ಟಣೆ, ಬೆಂಕಿಪೊಟ್ಟಣಗಳಂತೆ ಒಂದಕೊಂದು ಅಂಟಿಕೊಂಡಿರುವ ಇಕ್ಕಟ್ಟಾದ ಮನೆಗಳು, ಆ ಮನೆಗಳ ಮೇಲೆ ಮತ್ತೆ ಹಲವು ಮನೆಗಳು, ಪ್ರತಿ ಹನಿ ನೀರಿಗೂ ಹಾಹಾಕಾರ, ಕರುಣೆ ಎಂಬ ಪದವನ್ನೇ ಮರೆತು ಮೋಸ ಸುಲಿಗೆಗಳನ್ನೇ ವ್ಯವಹಾರ ಎಂದುಕೊಂಡು ಜೀವನ ನೆಡೆಸುವ ಜನಸಂತೆ. ಇವೆಲ್ಲದರ ಮುಂದೆ ತನ್ನ ಅಮ್ಮ ನಿಂತಿರುವುದನ್ನು ಆದಿ ಒಮ್ಮೆ ಕಲ್ಪಿಸಿಕೊಂಡ.

ಆ ನರಕದ ಕಾನನಕ್ಕಿಂತ ಅಪ್ಪನ ಹಿಂಸೆಯೇ ಕೊಂಚ ಸಣ್ಣದೆನಿಸಿತು ಆತನಿಗೆ!

ಮನೆಗೆ ವಾಪಸ್ಸಾದಾಗ ಆತನಿಗೆ ಅಪ್ಪ ಅಷ್ಟರಲ್ಲಾಗಲೇ ಹೊರಗೋದದ್ದು ತಿಳಿಯಿತು. ನೀರು ಅದ್ದಿದ್ದ ಬೆಳ್ಳನೆಯ ಬಟ್ಟೆಯನ್ನು ಕಾಲಿಗೆ ಕಟ್ಟಿಕೊಂಡು ಅಮ್ಮ ಆ ನೋವಿನಲ್ಲೂ ಪುನ್ಹ ಅಡುಗೆ ಮಾಡುವುದರಲ್ಲಿ ತೊಡಗಿದ್ದಳು. 'ನಿಂಗೇನಾದ್ರು ತಲೆ ಕೆಟ್ಟಿದ್ಯಾ..?' ಎಂದು ಆದಿ ಅಮ್ಮನನ್ನು ಬೈಯುತ್ತಾ ಆಕೆಗೆ ಆಸ್ಪತ್ರೆಗೆ ತೆರಳಲು ರೆಡಿಯಾಗುವಂತೆ ಹೇಳುತ್ತಾನೆ. ಕಣ್ಣೀರಿನ ತೇವವಿನ್ನೂ ಆರಿರದ ಕಣ್ಣುಗಳಿಂದ ಆದಿಯನ್ನು ಪ್ರೀತಿಯಿಂದ ನೋಡುತ್ತಾ 'ಬೇಡ ಮಗ .. ಏನಾಗದಿಲ್ಲ.. ಸ್ವಲ್ಪ ದಿನ ಎಲ್ಲ ಸರಿ ಆಗುತ್ತೆ' ಎಂದು ಆಕೆ ಹೇಳುತ್ತಾಳೆ. ಆದಿ ಅದೆಷ್ಟೇ ಹಠ ಹಿಡಿದರೂ ಕೇಳುವುದಿಲ್ಲ. ಅಲ್ಲದೆ ಸದ್ಯಕ್ಕೆ ಆದಿಯೊಟ್ಟಿಗೆ ಆಕೆ ಸಿಟಿಗೆ ಬರುವುದೂ, ಬಾಡಿಗೆ ಮನೆ ಮಾಡುವುದೂ ಎಲ್ಲವೂ ಆಗದ ಕೆಲಸವೆಂದೂ ಆತ ತನ್ನ ಓದಿನ ಮೇಲೆ ಸದ್ಯಕೆ ಗಮನವನ್ನು ಕೊಟ್ಟು ಕಾಲೇಜನ್ನು ಪಾಸುಮಾಡಿಕೊಳ್ಳುವಂತೆ ಲೋಕೇಶ ಹೇಳಿದ ಮಾತನ್ನೇ ಹೇಳುತ್ತಾಳೆ. ಆದಿ ಸಾಧ್ಯವಾದಷ್ಟು ಬಗೆಯಲ್ಲಿ ಆಕೆಯನ್ನು ಆ ನರಕದ ಕೂಪದಿಂದ ಹೊರತರಲು ಯೋಚಿಸುತ್ತಾನೆ. ಆದರೆ ಆತನ ಎಲ್ಲ ಆಲೋಚನೆಗಳು ಪ್ರಪಾತವೊಂದರ ತುತ್ತತುದಿಗೆ ಬಂದಷ್ಟೇ ನಿಲ್ಲುತ್ತಿದ್ದವು. ಸಾಕಷ್ಟು ವಿಚಾರಗಳನ್ನು ಮಾಡಿ ಕೊನೆಗೆ ಆತ ಕೈಚೆಲ್ಲಿ ಕೂರುತ್ತಾನೆ.

ಕೆಲಸಮಯದ ನಂತರ ಆಕೆ ಅನ್ನ, ಸಾರು, ಉಪ್ಪಿನಕಾಯಿ ಹಾಗು ಮೊಸರನ್ನು ತಟ್ಟೆಯ ತುಂಬ ಹಾಕಿ ತಂದು ಆದಿಗೆ ನೀಡುತ್ತಾಳೆ. ಆಕೆ ನೀಡಿದ ತಟ್ಟೆಯನ್ನೇ ನೋಡುತ್ತಾ ಆದಿ ಚಿಂತೆಯಲ್ಲಿ ಮುಳುಗುತ್ತಾನೆ. ಅಪ್ಪ, ಆತನ ಕೋಪ, ಬೈಗುಳ, ಅಮ್ಮನ ಅಸಹಾಯಕತೆ, ಕೊಂಕು ನುಡಿಗಳು, ಅರ್ಥವಿರದ ಜೀವನ ಇವುಗಳೆಲ್ಲ ಒಂದೆಡೆಯಾದರೆ ಮತ್ತೊಂದೆಡೆ ಆಕಾಶವನ್ನು ಚುಂಬಿಸುವ ಆತನ ಕನಸುಗಳು, ಹಠ, ಪ್ರತಿಜ್ಞೆ, ಹೆಸರು ಜೊತೆಗೆ ಖುಷಿ ... ಜೀವನದ ಮೇಲೆ ಆತನಿಗೆ ಜಿಗುಪ್ಸೆ ಮೂಡತೊಡಗಿತು. ನಾಚಿಕೆಯಾಯಿತು. ಕೋಪ ವಿಪರೀತವಾಯಿತು. ಮೇಲಾಗಿ ಅಮ್ಮನನ್ನು ಇಂತಹ ಕ್ರೂರಿ ಅಪ್ಪನೊಟ್ಟಿಗೆ ಮದುವೆ ಆ ವ್ಯಕ್ತಿಗಳ ಮೇಲೆ ಎಲ್ಲಿಲ್ಲದ ಆಕ್ರೋಶ ಮೂಡಿತು. ಹುಡುಗ ಹೇಗೆ ಏನು ಎಂಬೊಂದನ್ನೂ ಲೆಕ್ಕಿಸದೆ ಈಕೆಯ ಕೊರಳನ್ನು ನೀಡುವಂತೆ ಮಾಡಿದ ಆ ಕಟುಕರಿಗೆ ಸಾಧ್ಯವಾದಷ್ಟು ಹಿಡಿಶಾಪವನ್ನು ಹಾಕುತ್ತಾನೆ. ಊಟ ಮುಗಿಸಿ ಅಂದಿನ ರಾತ್ರಿಯೇ ಕಾಲೇಜಿಗೆ ಹೊರಡುವ ಸಿದ್ದತೆಯನ್ನು ಮಾಡುತ್ತಾನೆ.


****


'ವಾವ್.. Awesome ರಿ ನೀವು.. ಸೂಪ್ ಮಾಡೋದ್ನ ಎಲ್ ಕಲ್ತರಿ..?' ಬಿಸಿಯಾಗಿ ಹಬೆಯಾರುತ್ತಿದ್ದ ಸೂಪನ್ನು ಕುಡಿಯುತ್ತಾ ರಾಧಾ ಕೇಳಿದರು. ಅಂದುಕೊಂಡಂತೆಯೇ ವೀಕೆಂಡಿನ ಎಂಡಿಗೆ ಆಕೆ ನಮ್ಮ ರೂಮಿಗೆ ಬಂದಿದ್ದರು. ಆದಿ ಊರಿಗೆ ಹೋದರಿಂದ, ಹೋರಾಡಲು ಲೋಕೇಶನೊಬ್ಬನಿಗೆ ಆದದ್ದರಿಂದ ಅನಿವಾರ್ಯವಾಗಿ ಆತನೂ ಸಹ ಅಂದು ರೂಮನ್ನು ತೊರೆಯಬೇಕಾಯಿತು. ರೆಡಿಮೇಡ್ ಸಿಗುವ ಸೂಪಿನ ಪುಡಿಯನ್ನು ನೀರಿಗೆ ಬೆರೆಸಿ ಕುದಿಸಿ ತಂದ ಮಿಶ್ರಣಕ್ಕೇ ಈ ಪರಿಯಾದ ಫೀಡ್ ಬ್ಯಾಕ್ ಬಂದಾಗ ಒಮ್ಮೆಲೇ ಹುಬ್ಬಿ ಹಿಗ್ಗಿದ ನಾನು ‘ಬೆಳಗಿನಿಂದ ಕಷ್ಟಪಟ್ಟು ಮಾಡಿದ ರೆಸಿಪಿ’ ಎಂದು ಹೇಳುವ ಮನಸ್ಸಾದರೂ ಕೊನೆಗೆ ’ಮತ್ತೊಮ್ಮೆ ಮಾಡಿ ತೋರಿಸಿ’ ಎಂದು ಆಕೆ ಕೇಳಿದರೆ ಎಂದು ಹೆದರಿ ಸುಮ್ಮನಾದೆ. ಅಡುಗೆಮನೆಯಲ್ಲಿ ಬಿದ್ದಿದ್ದ ಸೂಪಿನ ಪುಡಿಯ ಖಾಲಿ ಪೊಟ್ಟಣವನ್ನು ತಂದು ತೋರಿಸಿದಾಗ ಇಬ್ಬರೂ ಒಟ್ಟಿಗೆ ನಕ್ಕೆವು. ಮೊದಲ ಬಾರಿಗೆ ಹೆಣ್ಣೊಂದರ ನಗುವನ್ನು ಕೇಳತೊಡಗಿದ ಕೆಳಗಿನ ಓನರ್ರ ಕಿವಿಗಳೊಟ್ಟಿಗೆ ರೂಮಿನ ಗೋಡೆಗಳೂ ಸಹ ಒಮ್ಮೆಲೇ ಕಕ್ಕಾಬಿಕ್ಕಿಯಾಗಿರಬೇಕು. ಕೊಂಚ ನಿಧಾನವಾಗಿ ನಗುವಂತೆ ಆಕೆಗೆ ಸಂಜ್ಞೆ ಮಾಡಿದೆ. ಅವರು ಕೆಂಪು ತುಟಿಗಳ ಮೇಲೆ ತಮ್ಮ ಸುಂದರ ನೀಳ ಬೆರಳನ್ನು ಇಟ್ಟರು.

ಫ್ರಿಡ್ಜ್ ನಲ್ಲಿದ್ದ ಆಕೆಗಿಷ್ಟವಾದ ಚಾಕೋಲೇಟ್ಗಳೆರಡನ್ನು ತಂದು ಒಂದನ್ನು ಅವರೆಡೆಗೆ ಎಸೆದೆ. ಅವರು ಹಿಡಿಯಲು ಅಣಿಯಾಗಿದ್ದ ಕೈಗಳನ್ನು ದಾಟಿ ಅದು ಅವರ ಮುಖಕ್ಕೆ ಟಪ್ಪನೆ ಬಡಿಯಿತು. 'ಔಚ್... ರೀ, ನನ್ ಮೇಲೆ ಸಿಟ್ ಇದ್ರೆ ಹೇಳ್ಬಿಡಿ ಈ ರೀತಿ ಚಾಕೋಲೇಟ್ನಿಂದ ಮಾತ್ರ ಹೊಡಿಬೇಡಿ ಪ್ಲೀಸ್..' ಎಂದು ಅಳುವ ಮಗುವಿನ ಮುಖವನ್ನು ಮಾಡಿದರು ಅವರು. ಚಾಕೋಲೇಟಿನ ನುಣುಪಾದ ತುದಿ ತಾಗಿದ ಕೂಡಲೇ ಕೆಂಪುಗೊಂಡ ಆಕೆಯ ಕೆನ್ನೆಯನ್ನು ಕಂಡ ನಾನು ಕೂಡಲೇ ಅವರ ಬಳಿಗೆ ಧಾವಿಸಿ ಕೈಗಳಿಂದ ಅವುಗಳನ್ನು ಮುಟ್ಟಿ 'Sorry.. ಪೆಟ್ಟಾಯಿತಾ..' ಎಂದೇ. ನನ್ನ ನೋಟ ಆಕೆಯ ನೋಟದೊಟ್ಟಿಗೆ ಸಂಧಿಸಿದವು. ಅದಾಗಲೇ ಅವು ನೂರಾರು ಮಾತುಗಳನ್ನು ತಮಗೆ ತಾವೇ ಆಡಿಕೊಂಡಿದ್ದವು. ಆಸ್ವಾದಿಸಿದಷ್ಟೂ ಸಾಕೆನಿಸದ ಆಕೆಯ ಸೆಂಟಿನ ಘಮ ಏನೋ ಒಂದು ಬಗೆಯ ಮತ್ತನ್ನು ತರಿಸುತ್ತಿತ್ತು. ಆಗಷ್ಟೇ ಮಜ್ಜಿಗೆಯಿಂದ ಹೊರತೆಗೆದ ಬೆಣ್ಣೆಯ ಮುದ್ದೆಯಂತಹ ನುಣುಪಾದ ಮೃದು ಕೆನ್ನೆಗಳ ಮೇಲಿದ್ದ ನನ್ನ ಕೈಗಳಿಗೆ ವಾಪಸ್ಸು ಬರುವ ಮನಸ್ಸೇ ಆಗಲಿಲ್ಲ. ಕೂಡಲೇ ಆಕೆಯೂ ಅವುಗಳ ಮೇಲೆ ಕೈಗಳನ್ನು ಇಟ್ಟರು. ಕಣ್ಣುಗಳನ್ನು ಮುಚ್ಚಿ ನನ್ನ ಕೈಗಳ ಮೇಲೆ ನುಣುಪಾದ ಕೆನ್ನೆಯನ್ನು ಸವರತೊಡಗಿದರು. ನಾನು ಸೇಫ್ಟಿಗೆ ಇರಲಿ ಎಂದು ಪಕ್ಕದಲ್ಲಿಟ್ಟಿದ್ದ ಪುಸ್ತಕಗಳನ್ನು ಒಂದೇ ಕೈಯಿಂದ ಬ್ಯಾಗಿನೊಳೊಳಗಿಟ್ಟು ದೂರಕ್ಕೆ ತಳ್ಳಿದೆ. ನನ್ನನ್ನು ಇನ್ನೂ ಹತ್ತಿರಕ್ಕೆ ಎಳೆದ ಅವರು ನನ್ನ ಬಲಗೈಯ ಉಗುರುಬೆರಳಿನ ಮೇಲೆ ನಯವಾಗಿ ಚುಂಬಿಸಿ ಮತ್ತೊಮ್ಮೆ ಧೀರ್ಘವಾಗಿ ನೋಡಿದರು.

ಅಷ್ಟರಲ್ಲಾಗಲೇ ತನ್ನ ಶಬ್ದಬರಿತ ಸದ್ದಿನಿಂದ ಕೂಗತೊಡಗಿದ ಹೃದಯದ ಢಮರುಗವನ್ನು ಕೇಳಿ ಆಶ್ಚರ್ಯ ಚಕಿತಳಾಗುವಂತೆ ನನ್ನ ಎದೆಯ ಬಳಿಗೆ ಬಂದು ಅವರ ಕಿವಿಯನು ಇರಿಸಿದರು. ಅದು ಅವರ ನಯವಾದ ಕೆನ್ನೆಗಳ ಸ್ಪರ್ಶವೋ ಏನೋ ಸದ್ದು ಇನ್ನೂ ವಿಪರೀತವಾಯಿತು. ಆ ಸದ್ದಿಗೆ ನನ್ನನು ನೋಡಿ ಜೋರಾಗಿ ನಗಲಾರಂಬಿಸಿ, 'ಏನ್ರೀ ನೀವ್ ಹುಡುಗ್ರು.. ನೋಡೋಕೆ ಮಾತ್ರ ಕಾಮ್ ಅಂಡ್ ಕಂಟ್ರೊಲ್ಡ್ ಅಂತ ಕಂಡ್ರೂ ಒಳಗಡೆ ಮಾತ್ರ ಯಾಕ್ರಿ ಹೀಗೆ?' ಎಂದರು. ಕಾಮ್ ಆಗಿರೋದು ಓಕೆ, ಈ ಕಂಟ್ರೋಲ್ ಬಗ್ಗೆ ಆಕೆಗೆ ಹೇಗೆ ತಿಳಿಯಿತು? ತಿಳಿಯಲಿಲ್ಲ. ಸದ್ಯಕ್ಕೆ ನನಗೆ ಏನೆಳಬೇಕೆಂದು ಅರಿಯಲಿಲ್ಲ. ದಡ್ಡನಂತೆ ನಕ್ಕೆ. 'ಒಹ್ ಮೈ ಗಾಡ್ .. ಇಷ್ಟು ಜೋರಾಗಿ ಹೃದಯ ಬಡಿಯೋದನ್ನ ನಾನು ಎಲ್ಲೂ ನೋಡಿರ್ಲಿಲ್ಲ ರಿ' ಎಂದು ನನ್ನ ಎದೆಯ ಮೇಲೆ ಕೈಯನಿಟ್ಟು ಮತ್ತೊಮ್ಮೆ ಪರೀಕ್ಷಿಸಿದಳು. ಆಕೆಯ ಆ ಒಂದು ಸ್ಪರ್ಶದಿಂದ ದೇಹದ ಕಣಕಣ ಕೋಶಗಳು ಜಾಗೃತಗೊಂಡವು. ಕೂಡಲೇ ಆಕೆಯನ್ನು ಗಟ್ಟಿಯಾಗಿ ತಬ್ಬಿಕೊಂಡು ಚುಂಬಿಸಬೇಕೆಂಬ ಮನಸ್ಸಾದರೂ ಆ ದಿನನಂತೆ 'ಆ ಸೃಷ್ಟಿಕರ್ತನ ಸೃಷ್ಟಿಯನ್ನು ಟೆಸ್ಟ್ ಮಾಡುವ ಸಲುವಾಗಿ ಮಾತ್ರ ನಾನು ಬಂದೆ' ಎಂದರೆ ನನ್ನ ಮಾನ ಮೂರು ಕಾಸಿಗೆ ಹರಾಜಾಕಿದಂತೆ ಆಗುವುದಂತೂ ಸುಳ್ಳಲ್ಲ. ಸಂಯಮವನ್ನು ತಂದುಕೊಂಡೆ. ಆಗಲಿಲ್ಲ. ಕಾಲೇಜಿನಲ್ಲಿ ಇಂಟರ್ನಲ್ಗೆ ಕೇವಲ ಒಂದೇ ಒಂದು ಮಾರ್ಕ್ಸನ್ನು ಕೊಡಲು ನಿರಾಕರಿಸುವ, ಕಾಪಿ ಒಡೆಯಲೂ ಬಿಡದ ಕಟ್ಟುನಿಟ್ಟಾದ ಶಿಕ್ಷಕಿಯಂತೆ ಅವರನ್ನು ಕಲ್ಪಿಸಿಕೊಂಡೆ. ಅದೂ ಸಹ ಪ್ರಯೋಜನವಾಗಲಿಲ್ಲ. 'ಥು ನಿನ್ನ ಗಂಡಸು ಜನುಮಕ್ಕೆ, ಯೋಗ, ಪ್ರಾಣಾಯಾಮ ಎಲ್ಲವನ್ನೂ ಮಾಡಿಯೂ ನಿಗ್ರಹ ಶಕ್ತಿ ಇಲ್ಲದಂತೆ ಆಡ್ತಿಯಲ್ಲ' ಎಂದು ನನ್ನನ್ನೇ ನಾನೇ ಬೈದುಕೊಂಡೆ. ಈ ಬಾರಿ ಕೊಂಚ ವಿಚಲಿತವಾಯಿತು ಮನಸ್ಸು. ಕೇವಲ ಕೆಲಕ್ಷಣದ ಸುಖಕಷ್ಟೆ ನಮ್ಮಮಾತು, ಚರ್ಚೆ, ಗೆಳೆತನ ಎಲ್ಲ ಸೀಮಿತವೆ? ಒಬ್ಬ lecturer ಆಗಿ ಅದ್ಯಾವ ಬಗೆಯ ಸಂಕೋಚಗಳಿಲ್ಲದೆ ಹುಡುಗರ ರೋಮಿಗೆ ಬರೋದೆಂದರೆ ಏನು ಸಾಮನ್ಯದ ಮಾತೆ? ಇಲ್ಲಿ ನಂಬಿಕೆ ಇದೆ. ಈ ನಂಬಿಕೆಯನ್ನು ನಾನು ಉಳಿಸಿಕೊಳ್ಳಬೇಕು. ಹಾಗಾದರೆ ಆ ಮಾಯನೋಟದಿಂದ ನನ್ನ ಬೆರಳಿನ ಮೇಲ್ಯಾಕೆ ಆಕೆ ಚುಂಬಿಸಿದರು? ಏನದರ ಅರ್ಥ? ಮನಸ್ಸು ಕೇಳಿತು. ಉತ್ತರ ತಿಳಿಯಲ್ಲಿಲ್ಲ. ಆಕೆ ನನ್ನ ಪರೀಕ್ಷಿಸಲಿ ಅಥವಾ ಇಲ್ಲದಿರಲಿ, ನಾನು ಮಾತ್ರ ಸಂಯಮವನ್ನು ಕಳೆದುಕೊಳ್ಳೆನು. ಗೆಳೆತನ ಹಾಗು ಬಯಕೆಯಲ್ಲಿ ನನ್ನ ಮನಸ್ಸು ಯಾವುದನ್ನು ಆಯ್ಕೆಮಾಡುತ್ತದೆ ಎಂದು ಪರೀಕ್ಷಿಸಿ ನೋಡುವ ಎಂದುಕೊಂಡೆ. ಆದದ್ದಾಗಲಿ ಎನುತ ಗಟ್ಟಿಮನಸ್ಸು ಮಾಡಿ ಕೂತೆ.

‘Hey.. What happened??' ನಯವಾಗಿ ಅವರು ಕೇಳಿದರು. ಅಷ್ಟರಲ್ಲಾಗಲೇ ಆಕೆ ತನ್ನ ಮುಖವನ್ನು ಬಲುಹತ್ತಿರಕ್ಕೆ ತಂದಿದ್ದರು. ದೂರದ ಚಂದಿರನ್ನು ಒಮ್ಮೆಲೆ ಕಿತ್ತು ಮುಖದ ಬಳಿಯಿರಿಸಿದಂತಹ ಆ ಘಳಿಗೆ ಕೆಲಕ್ಷಣಗಳ ಮೊದಲಷ್ಟೇ ನನಗೂ ಹಾಗು ನನ್ನ ಮನಸ್ಸಿಗೂ ನೆಡೆದ ವಾಗ್ಯುದ್ಧವನ್ನು ಮರೆಮಾಸಿತು. ಸಂಯಮ ಸಂಯಮವನ್ನು ಕಳೆದುಕೊಂಡಿತು. ಆಕೆಯ ಕೈಬೆರಳನ್ನು ನನ್ನ ಬೆರಳುಗಳೊಟ್ಟಿಗೆ ಬೆಸೆದೆ. ಆಕೆಯ ಹಣೆಯ ಮೇಲೆ ಇನ್ನೇನು ಚುಂಬಿಸಬೇಕು ಎನ್ನುವಷ್ಟರಲ್ಲಿ ಒಮ್ಮೆಲೆ ಕಾಲಿಂಗ್ ಬೆಲ್ಲು ಬಡಿದುಕೊಂಡಿತು! ಆಶ್ಚರ್ಯದಿಂದ ಇಬ್ಬರೂ ರೋಮಿನ ಹೊರಗೆ ನೋಡತೊಡಗಿದೆವು....


ಮುಂದುವರೆಯುವುದು..

ಪಯಣ - 4

Dear Mr.Lokesh,

With respect to your shipment being sent from India, we are sorry to inform you that the container consisting of coffee has been rejected by the Food inspecting authorities in the customs at the destination. Attached is the cancellation receipt. Accordingly, the shipment has been rejected & has been destroyed immediately and no refund can be availed as per the set norms. However, considering the scenario we are providing you a special discount on our freight cost which will be communicated to you in our next email.

Thanks for choosing us.

Regards,
Manager,
CM Shipping & forwarding,
Mumbai, India.

ಕಾಫಿ ಬಿಸಿನೆಸ್ ಮಾಡಲು ಹೊರಟ ಲೋಕೇಶ ಮೊದಲು ಸಣ್ಣದೊಂದು ಸ್ಯಾಂಪಲ್ ಪ್ಯಾಕನ್ನು ಕಳಿಸಿ, ಎಲ್ಲವೂ ಸರಿಯಂತಾಗಿ ದೂರದ ಗಲ್ಫ್ ರಾಷ್ಟ್ರರೊಂದರಲ್ಲಿ ಒಬ್ಬ ಕಸ್ಟಮರ್ ಅನ್ನೂ ಸಹ ಗಳಿಸಿದ. ಎರಡೇ ತಿಂಗಳಲ್ಲಿ ಲೋಕಲ್ ಕಾಫಿ ಬೆಳೆಗಾರರಿಂದ ಕಾಫಿಯನ್ನು ಪಡೆದು, ಪುಡಿ ಮಾಡಿ, ಅದನ್ನುಪ್ಯಾಕ್ ಮಾಡಿಸಿ, ಅದಕೊಂದು Bar-code, Expiry date, Date of Manufacture ಎಲ್ಲವನ್ನು ಹಾಕಿ ಮೊದಲ ಆರ್ಡರ್ ಗೆ ಅಡ್ವಾನ್ಸ್ ಅನ್ನೂ ಸಹ ಪಡೆದುಕೊಂಡಿದ್ದ. ಅದೇ ಅಡ್ವಾನ್ಸ್ ದುಡ್ಡಿನಲ್ಲಿ ಇಲ್ಲಿನ ಕಾಫಿ ಬೆಳೆಗಾರರಿಗೆ ಹಣವನ್ನೂ ಸಂದಾಯ ಮಾಡಿ ಸಂಪೂರ್ಣ ಷಿಪ್ಮೆಂಟನ್ನು ಅಲ್ಲಿಯವರೆಗೂ ಕಳುಹಿಸುವ ಜವಾಬ್ದಾರಿಯನ್ನೂ ತಾನೇ ತೆಗೆದುಕೊಂಡಿದ್ದ. ಆದರೆ ವಿಧಿಯಾಟ ಬೇರೆಯೇ ಆಗಿದ್ದಿತು. ಸ್ಯಾಂಪಲ್ ಪ್ಯಾಕನ್ನು accept ಮಾಡಿದ್ದ ಕಸ್ಟಮ್ಸ್ ನ ಅಧಿಕಾರಿಗಳು ರಿಯಲ್ ಶಿಪ್ಮೆಂಟನ್ನು ಮಾತ್ರ ಸಾರಾಸಗಟಾಗಿ ರಿಜೆಕ್ಟ್ ಮಾಡಿದ್ದರು. ಅಲ್ಲದೆ ಅಲ್ಲಿನ ನಿಯಮಗಳ ಪ್ರಕಾರ ಈ ರೀತಿ ರಿಜೆಕ್ಟ್ ಆದ ಸ್ಯಾಂಪಲ್ ಗಳನ್ನು ಕೂಡಲೇ ಡೆಸ್ಟ್ರಾಯ್ ಮಾಡಲಾಗಿದೆ ಎಂಬ ಸಂದೇಶವನ್ನು ಕಳುಹಿಸುತ್ತಾರೆ. ಅಸಲಿಗೆ ಅದು ಒಳಗೊಳಗೇ ನೂರಾರು ಜನರಲ್ಲಿ ಹರಿದು ಹಂಚಿದರೂ ಅದನ್ನು ಕೇಳುವವರು ಯಾರು ಇರುವುದಿಲ್ಲ. ಒಟ್ಟಿನಲ್ಲಿ ಲೋಕೇಶನಿಗೆ ಮಾತ್ರ ಈಗ ಲಕ್ಷ ಲಕ್ಷಗಳ ಸಾಲ!

'Bloody customs.. ಏನ್ ಈ ಕಾಫಿ ಕುಡಿದ್ರೆ ಇವರಪ್ಪ ಸತ್ತ್ ಹೋಗ್ತಾ ಇದ್ನ.. ನಾವೆಲ್ಲಾ ಕುಡಿಯೊಲ್ವ.. ಏನ್ ಆಗಿದೆ ಮಚಿ ನಮ್ಮ್ ಕಾಫಿಗೆ.. ಅಮೇರಿಕ ಇಂಗ್ಲೆಂಡ್ನಿಂದ ಬರೋ ಟೂರಿಸ್ಟ್ಸ್ ಗೆ ನಮ್ಮ ಫಿಲ್ಟರ್ ಕಾಫಿನೇ ಬೇಕಂತೆ.. ಆದ್ರೆ ಈ ಶೋಕಿಲಾಲರಿಗೆ ಇದು Suspected Sample ಅಂತೆ.. My foot..ಎಲ್ಲದೂ ನಮ್ಮ್ ಈ government ಪ್ರಾಬ್ಲಮ್.. ಫಾರಿನ್ ಅಫೇರ್ ಮಿನಿಸ್ಟರ್ಸು, ಕಾಮರ್ಸ್ ಮಿನಿಸ್ಟರ್ಸು ವರ್ಷಕ್ಕೆ ಎರ್ಡ್ ಎರ್ಡ್ ಸಾರಿ ಮೀಟಿಂಗ್ ಮಾಡ್ತಾರೆ ಅವರೊಟ್ಟಿಗೆ.. ಅವಾಗ ಏನ್ ಕಿತ್ತಾಕ್ತಾರೆ ಇವ್ರು.. ಅಲ್ಲ, ಇಲ್ಲಿ ನಮ್ಮ್ ರೈತ್ರು ಸಾಲ ಸೂಲ ಅಂತ ಸಾಯಿತಾನೆ ಇದ್ದಾರೆ.. ನಮ್ಮ ಮಲೆನಾಡ್ ಕಾಫಿನ ಇವ್ರು ಒಂದು ಬ್ರಾಂಡ್ ಮಾಡೋಕ್ ಆಗಲ್ವ..? ರೈತ್ರಿಗೆ ನಿಜವಾದ ಮಾರ್ಕೆಟ್ ರೇಟ್ ಕೊಡ್ಸೋಕ್ ಆಗಲ್ವ..? ಅಲ್ಲ ಮಚಿ, ಇದೆ ಕಾಫಿನ ಅಮೆರಿಕದವ್ರು ಇಂಪೋರ್ಟ್ ಮಾಡ್ಕೊಂಡು ಗಾಜಿನ ಬಾಟ್ಲಿಗಳೊಳಗೆ ತುಂಬಿ ಕೊಟ್ರೆ ಚಪ್ಪರ್ಸ್ಕೊಂಡು ಕುಡಿತಾರೆ.. ಅದ್ಯಾವ್ದೋ ಸ್ಟಾರ್ ಬಗ್ಗಂತೆ ಒಂದ್ ಕಪ್ ಕಾಫಿಗೆ ನೂರೈವತ್ತು ಡಾಲರ್ ಅಂತೇ. ಒನ್ ಫಿಫ್ಟಿ ಡಾಲರ್, ಟೆನ್ ಥೌಸಂಡ್ ರುಪೀಸ್!! Can you believe it? ಇದನ್ನ ನಮ್ಮ್ ಪ್ಲಾಂಟರ್ಸ್ ಏನಾದ್ರೂ ಕೇಳಿದ್ರೆ ಹಾರ್ಟ್ ಅಟ್ಟ್ಯಾಕ್ ಆಗ್ಬಿಡುತ್ತೆ. ಇಲ್ಲಿ ಒಂದು ಮೂಟೆ ಕಾಫಿಗೂ ಆ ಪ್ರೈಸ್ ಸಿಗೋದಿಲ್ಲ ಗೊತ್ತಾ? Raw, Authentic ಪೌಡರ್ ಕೊಟ್ರೆ ಇವ್ರಜ್ಜಿ ರಿಜೆಕ್ಟ್ ಮಾಡ್ತಾರಾ? It’s all our government fault you know.. It’s our entire system fault! 'ಎಂದೇಳಿ ತನ್ನ ಕೋಪವೆಲ್ಲವನ್ನು ಹೊರಹಾಕುತ್ತಾ ಮತ್ತೊಮ್ಮೆ ಆ ಇಮೇಲನ್ನು ಓದಿದ ಲೋಕೇಶ.



****



'ಇಲ್ವೋ..ನೀನ್ ನಂಗೆ ಸಿಕ್ಕೇ ಸಿಗ್ತಿಯ ಅಂತ ಗೊತ್ತಿತ್ತು. ಹೊಸ ಸ್ಕೂಲು ನನಗೆ ಒಂಚೂರು ಇಷ್ಟ ಇಲ್ಲ ಕಣೋ .. ನೀನೂ ನಮ್ಮ್ ಸ್ಕೂಲ್ಗೆ ಸೇರೋ ಆದಿ .. ನಂಗೆ ಅಲ್ಲಿ ಯಾರೂ ಫ್ರೆಂಡ್ಸ್ ಗಳೇ ಇಲ್ಲ ಗೊತ್ತ...?' ಆದಿಯ ಎದೆಗೊರಗಿ ಖುಷಿ ಬಿಕ್ಕಳಿಸತೊಡಗಿದ್ದಳು. ಕಪ್ಪುಬಣ್ಣದ ಆಕಾಶವನ್ನು ಚೀರಿ ಹೊರಬರುತ್ತಿರುವ ಹಳದಿ ಚಿಟ್ಟೆಗಳಂತಿದ್ದ ಆಕೆಯ ಫ್ರಾಕ್ ಏನೋ ಒಂದು ವಿಭಿನ್ನ ಲೋಕವನ್ನೇ ಸೃಷ್ಟಿಸಿದ್ದವು. ಆದಿಗೆ ಈಗ ಯಾವ ಮಾತುಗಳೂ ಬರುತ್ತಿಲ್ಲ. ಮಾತಾಡಲೂ ಏನೂ ತೋರುತ್ತಿಲ್ಲ. ಆಕೆಯೆ ಮುಂದುವರೆಸಿ,

'ನಂಗೆ ನಿನ್ನ ಸ್ಕೂಲ್ಗೆ ಸೇರ್ಬೇಕು ಅಂತ ಇಷ್ಟ.. ಆದ್ರೆ ಮನೇಲಿ ಅಪ್ಪ,ಅಮ್ಮ, ಒಪ್ಪಿದ್ರೂ ನಮ್ಮ್ ಅಣ್ಣ ಒಪ್ಪಲ್ಲ ಕಣೋ..' ಎಂದಳು.

ಆಕೆಯ ಅಣ್ಣನ ಪಟ ಆದಿಯ ಮನದೊಳಗೆ ಹಾಗೆಯೇ ಒಮ್ಮೆ ಮೂಡಿತು. ಚಿಕ್ಕಂದಿನಲ್ಲಿ ನೋಡಿದ್ದ ಆತನ ಸಿಡುಕು ಮೊಗ ಒಮ್ಮೆ ಕಣ್ಣ ಮುಂದೆ ಬಂದಿತು. ಅಲ್ಲಿ ಯಾವುದೇ ಭಾವನೆಗಳ ಸುಳಿವುಗಳಾಗಲಿ ಅಥವ ಹಿಂದೊಮ್ಮೆ ಅಲ್ಲಿ ಮೂಡಿರುವ ಕುರುಹುಗಳಾಗಲಿ ಕಾಣಲಿಲ್ಲ.

'ಆತ ಹಠಮಾರಿ.. ಆತ ಹೇಳಿದ್ದೆ ಮನೇಲಿ ನಡೀಬೇಕು .. ನಾನು ಯಾವ್ ಕೋರ್ಸ್ ಮಾಡ್ಬೇಕು, ಏನ್ ಒದ್ಬೇಕು ಎಲ್ಲ ಅವ್ನೆ ಡಿಸೈಡ್ ಮಾಡೋದು .. ಅಪ್ಪಂಗೂ ಹೆದ್ರಲ್ಲ .. ಯಾರ್ ಮಾತೂ ಕೇಳಲ್ಲ ..ನನ್ನ ಫೈನಲ್ ಇಯರ್ ಮುಗಿಯೋದೊಳಗೆ ನೀನು ಜಾಬ್ ಹುಡ್ಕೋಬೇಕು ಆದಿ.. ಇಲ್ಲ ಅಂದ್ರೆ ನಂಗೊತ್ತಿಲ್ಲ..' ಎಂದೇಳಿ ಆಕೆ ಜೋರಾಗಿ ಅಳತೊಡಗಿದಳು. ಆತನ ಎದೆಬಡಿತ ಗಟ್ಟಿಯಾಗಿ ತಬ್ಬಿ ಹಿಡಿದಿದ್ದ ಆಕೆಯನ್ನೂ ದಾಟಿ ಹೊರಬರತೊಡಗಿದ್ದವು.

ನೋಡುತ್ತಾನೆ, ಇದ್ದಕ್ಕಿಂದಂತೆ ದೂರದಲ್ಲಿ ಆತನ ಅಣ್ಣ ಬಂದು ನಿಂತಿದ್ದಾನೆ! ನಿಂತಲ್ಲೇ ಭಸ್ಮ ಮಾಡುವಂತಹ ಆತನ ಕಣ್ಣುಗಳು ಆದಿಯ ಹೃದಯ ಸಿಡಿದು ಛಿದ್ರವಾಗುವಂತೆ ಮಾಡಿದವು. ಆತ ದಾಪುಗಾಲು ಹಾಕುತ್ತ, ತನ್ನ ಅಪ್ಪನಂತೆಯೇ, ಈತನ ಬಳಿಗೆ ಬರತೊಡಗುತ್ತಾನೆ. ಆತನ ಕೈಲೂ ಬೆಲ್ಟೋಂದು ಹಾವಿನಂತೆ ನೇತಾಡುತ್ತಿರುತ್ತದೆ. ಹತ್ತಿರ ಬರಬರುತ್ತಾ ಆತನ ಆಕೃತಿಯೂ ದೊಡ್ಡದಾಗುತ್ತಾ ಹೋಗುತ್ತದೆ. ಹೆದರುತ್ತಾ ಆಕೆ ಆದಿಯ ಹಿಂದಕ್ಕೆ ಸರಿದಳು. ಆದಿ ಒಂದೊಂದೇ ಹೆಜ್ಜೆಗಳನ್ನು ಹಿಂದಕ್ಕ್ಕೆ ಇಡುತ್ತಾನೆ. ಹತ್ತಿರಬಂದವನೇ ಕೈ ಎತ್ತಿ ಇನ್ನೇನು ಆದಿನಿಗೆ ಒಡೆಯಬೇಕು ಎನ್ನುವಷ್ಟರಲ್ಲಿ ಧಡಾರನೆ ಎದ್ದು ಕೂತ ಆದಿ!

ನಿಜ ಜಗತ್ತಿಗೆ ಬರಲು ಆದಿಗೆ ಕೊಂಚ ಸಮಯವೇ ಹಿಡಿಯಿತು. ಮಧ್ಯಾಹ್ನದ ಊಟದ ನಂತರ ಮಲಗಿದ್ದ ಆತನಿಗೆ ತನ್ನ ಕಲ್ಪನಾ ಪ್ರಪಂಚ ಪ್ರಸ್ತುತದಲ್ಲಿರಬಹುದಾದ ಖುಷಿಯನ್ನು ಹಾಗು ಆತನ ಅಣ್ಣನನ್ನೂ ಕಲ್ಪಿಸಿ ಕೊಟ್ಟಿತ್ತು.

ಒಂದೊಮ್ಮೆ ಈ ಕನಸ್ಸು ನನಸ್ಸಾದರೆ? ಆದರೆ ಆಕೆ ನನಗೆ ಕೆಲಸವನ್ನು ಹುಡುಕಿಕೊಳ್ಳಲು ಹೇಳುತ್ತಿರುವುದು ಏಕೆ?? ಆದಿ ತನ್ನಲ್ಲೇ ಕೇಳಿಕೊಳ್ಳುತ್ತಾನೆ

ಅಷ್ಟರಲ್ಲಾಗಲೇ ತನ್ನ ಒಂದು ಕೈಯಿಂದ ಫೋನಿನ ತುದಿಯನ್ನು ಬಲಕಿವಿಯ ಬಳಿಗೆ ಇರಿಸಿಕೊಂಡು, ಕಣ್ಣುಗಳೆರಡನ್ನೂ ಬಿಗಿದಾಗಿ ಮುಚ್ಚಿ, ಡಾಕ್ಟರ್ಗಳಿಗೆ ಹೆದರುವ ಮಕ್ಕಳ ಮುಖವನ್ನು ಮಾಡಿ ರೂಮಿನೊಳಗೆ ಬಂದ ಲೋಕೇಶ.

'ಯಸ್ ಸರ್, ಓಕೆ, ಓಕೆ.. ಇಲ್ಲ ಸರ್, ಇನ್ ಸ್ವಲ್ಪ ದಿನ. ಶೋರ್ ಸರ್.. ಓಕೆ ಸರ್.. ಓಕೆ.. bye ' ಎಂದೇಳುತ್ತಾ ಫೋನನ್ನು ಆದಿಯ ಬೆಡ್ಡಿನ ಮೇಲೆಸೆದು ಪಕ್ಕದಲ್ಲಿದ್ದ ಬೀನ್ ಬ್ಯಾಗಿನ ಮೇಲೆ ದೊಪ್ಪನೆ ಕೂತ. ಅದೆಷ್ಟೇ ಜನರ ಪೃಷ್ಠಗಳು ಬಂದು ತಿವಿದಾಡಿದರೂ ಏನೂ ಮಾಡಲಾಗದ ಆ ಬೀನ್ ಬ್ಯಾಗಿನ ವ್ಯಥೆಯಂತೆ ನನ್ನ ಕತೆಯಾಯಿತಲ್ಲ ಎಂದುಕೊಳ್ಳುತ್ತಾನೆ.

'ಏನಾಯಿತೋ.. ಯಾರ್ದು ಫೋನು?' ಆದಿ ಕೇಳಿದ.

'ಇನ್ಯಾರಪ್ಪ.. ಕಾಫಿ ಎಕ್ಸ್ಪೋರ್ಟ್ ಗೆ ಸಾಲ ಕೊಟ್ಟ ಪಾರ್ಟಿ.. ಎಂಟ್ ಲಕ್ಷ + ಇಂಟರ್ಸ್ಟ್ ಕೇಳ್ತಾ ಇದ್ದಾನೆ..' ವಿಚಿತ್ರ ರೀತಿಯಲ್ಲಿ ಸದ್ದನ್ನು ಮಾಡುತ್ತಿದ್ದ ಫ್ಯಾನನ್ನು ಧಿಟ್ಟಿಸುತ್ತಾ ಹೇಳಿದ ಲೋಕೇಶ.

'Shit Man, ಹೇಗೋ ಅಷ್ಟ್ ಸಾಲ ತೀರ್ಸೋದು ಇವಾಗ? ಇಂಥ ಪ್ರಾಬ್ಲೆಮ್ಸ್ ಗೆಲ್ಲ ಸರ್ಕಾರಗಳು ಏನೂ ಮಾಡಲ್ವಾ?'

'ಸರ್ಕಾರಗಳ? ಸುಮ್ನಿರಪ್ಪಾ..ಅವ್ರನ್ನ ನಂಬ್ಕೊಂಡ್ ಕೂತ್ರೆ ಅಷ್ಟೇನೆ'

'That’s not right Lokesh, ನೀನು ಎಲ್ಲದಕ್ಕೂ ಸರ್ಕಾರವನ್ನು ಧೂಷಿಸೋದು ಸರಿಯಲ್ಲ. ನೀನು ಬಿಸಿನೆಸ್ ಮಾಡೋ ಮೊದ್ಲೇ ಯಾವ್ದಾದ್ರೊಂದು ಸರಿಯಾದ Goverament ಡಿಪಾರ್ಟ್ಮೆಂಟ್ ಗೆ ಹೋಗಿ ವಿಷ್ಯಾನ ತಿಳ್ಕೊಂಡು ಆಮೇಲೆ ಮುಂದುವರ್ದಿದ್ರೆ ಈ ರೀತಿ ಆಗ್ತಿರ್ಲಿಲ್ಲ'

'Come on man, Do you think this is really gonna work? ಆದಿ, ನಮ್ಮ ಇಂಡಿಯದಲ್ಲಿ ಇಂಥ ಅದೆಷ್ಟೋ ಐಡಿಯಾಗಳು, ಪ್ರಾಜೆಕ್ಟ್ ಗಳು ಇರ್ತಾವೆ. ಅವರೆಲ್ಲರೂ ನಮ್ಮ್ governmentನ ಕೇಳಿ ಖಾರ ಅರಿಯೋದಾಗಿದ್ರೆ ಅಷ್ಟೇ. ಏನು ಬೇಡಪ್ಪ ಸಿಟಿ ಲಿಮಿಟ್ ಅಲ್ಲಿ ಒಂದು ಮನೆ ಕಟ್ಟೋಕ್ಕೆ ಲೈಸನ್ಸ್ ಮಾಡ್ಸ್ ನೋಡು ನೋಡಣ. ನಮ್ ಹೆಣ ಬಿದ್ದೋಗಿರುತ್ತೆ. ಅಂತದ್ರಲ್ಲಿ ಇನ್ನು ಎಕ್ಸ್ಪೋರ್ಟ್ ಎಲ್ಲ ಆಗ್ ಹೋಗೋ ವಿಷ್ಯ ಅಲ್ಲ. ಮೇಲಾಗಿ ನಾವುಗಳು ಎಲ್ಲ ಸರ್ಕಾರಗಳೇ ಮಾಡ್ತವೆ ಅಂತ ಕೂರೋದು ದಡ್ಡತನ. ಇದು ಡಿಜಿಟಲ್ ಯುಗ. ಇಡೀ ಪ್ರಪಂಚಾನೆ ಈಗ ಈ ಮೊಬೈಲ್ ಒಳಗಿದೆ. ಟೆಕ್ನಾಲಜಿ ಎಂಟ್ರಿ ಮಾಡ್ದೆ ಇರೋ ಏರಿಯಗಳೇ ಇಲ್ಲ. So we have to be independent now.. ತಪ್ಪ್ ಮಾಡಿದ್ರೂ ಅದ್ರಿಂದ ಕಲಿಬೇಕು. ಕಲೀತಾನೆ ಇರ್ಬೇಕು.. ಕಲಿತಾ Independent ಆಗ್ಬೇಕು'

'But this one is your costliest mistake. Anyways, ಈಗ ಹಣ ತೀರ್ಸೋಕ್ಕೆ ಮತ್ತ್ಯಾವ ತಪ್ಪ್ ಮಾಡ್ಬೇಕು ಅಂತ ಇದ್ದೀಯ?'

'Farming..' ಎಂದ ಲೊಕೇಶನ ಮಾತಿನಲ್ಲಿ ಏನೋ ಒಂದು ಬಗೆಯ ದೃಢತೆ ಇದ್ದಂತಿತ್ತು.

'What?! Boss, are you serious?'

'Yes, Farming is the only option. ಸ್ವಲ್ಪ ಮಾರ್ಕೆಟ್ ರಿಸರ್ಚ್ ಮಾಡಿದ್ದೀನಿ. ನೆಕ್ಸ್ಟ್ ಇಯರ್ ಶುಂಠಿಗೆ ಒಳ್ಳೆ ಬೆಲೆ ಬರ್ತಾ ಇದೆ. ಮೇಲಾಗಿ ಶುಠಿ ಒನ್ ಟು ಫೋರ್ ಟೈಮ್ಸ್ ಪ್ರಾಫಿಟ್ ಕೊಡೊ ಬೆಳೆ. ಇಲ್ಲಿಂದ 5 ಕಿಲೋಮೀಟರ್ ದೂರದ ಹಳ್ಳಿ ಒಂದ್ರಲ್ಲಿ ಗದ್ದೇನ ಲೀಸ್ಗೆ ಪಡೀತೀನಿ. ಅಲ್ಲೂ ಸಹ ರೈತ್ರು ಮಳೆ ಸರಿ ಆಗ್ತಾ ಇಲ್ಲ ಅಂತ ಜಾಗನೆಲ್ಲ ಹಾಳ್ ಬಿಟ್ಟಿದ್ದಾರೆ. ನೀನ್ ಹೇಳ್ದಲ್ಲ ನಮ್ಮ government ಅಂತ ಅದೇ government ಈಗ ಮನ್ಸ್ ಮಾಡಿದ್ರೆ ಆ ಹಳ್ಳಿಯ ಅಷ್ಟೂ ಗದ್ದೆಗಳನ್ನು ಲೀಸ್ ಗೆ ತಗೊಂಡು ರೈತರಿಂದಲ್ಲೇ ಕೃಷಿ ಮಾಡಿಸಬಹುದಿತ್ತು. ಹೆಚ್ಚೇನೂ ಬೇಡ ನಮ್ ಜಿಲ್ಲೆಗೆ ಏನೇನು ಬೇಕು ಅದನ್ನಾದ್ರೂ ಬೆಳೆಯಬಹುದಿತ್ತು. Transportation ಪ್ರಾಬ್ಲಮ್ ಇಲ್ಲ. ನೀರ್ ಬೇಕಾದ್ರು ಟ್ಯಾಂಕರ್ನಿಂದ ಇಲ್ಲಿಂದಲ್ಲೇ ಸಾಗಿಸ್ಬಹುದಿತ್ತು. ಇಂಥ convenient ಪ್ಲೇಸ್ ಎಲ್ಲಿಸಿಗುತ್ತೆ ಹೇಳು. ಆದ್ರೆ ಅವ್ರಿಗೆ ಆ ತಲೆನೋವೆಲ್ಲ ಬೇಕಿಲ್ಲ. ಟ್ಯಾಕ್ಸ್ ಅಂತ ನಮ್ಮ್ ದುಡ್ಡನು ತಗೊಂಡು ಆಮೇಲೆ ನಮ್ಗಳಿಗೆ ಕೊಡಕ್ಕೆ ನಾಟ್ಕ ಮಾಡೋದು ಅವರ ಚಾಳಿ. Anyways, I have decided. ಕಾಲೇಜಿಗೆ ಹೋಗ್ತಾನೆ ಫಾರ್ಮಿನ್ಗ್ ಅನ್ನೂ supervise ಮಾಡ್ತೀನಿ..' ಎಂದು ಸುಮ್ಮನಾದ.

' ಆದ್ರೆ ಅಲ್ಲಿವರೆಗೂ ನಂಗೆ ಟೈಮ್ ಬೇಕು ಮಚಿ. At least for another 8 months. ನಾಳೇನೇ ಅವ್ರತ್ರ ಹೋಗಿ ಮಾತಾಡ್ಬೇಕು. ನಿಮ್ಮ್ ಅಸಲು ಹಾಗು ಇಂಟ್ರೆಸ್ಟ್ ಖಂಡಿತಾ ತೀರಿಸ್ತೀನಿ ಅಂತ ಕೇಳ್ಕೊಬೇಕು. ಆಗಲ್ಲ ಅಂದ್ರೆ ಏನಾಗುತ್ತೋ ಗೊತ್ತಿಲ್ಲ, But have to try. ಆಮೇಲೆ ನಾನ್ ಒಬ್ನೇ ಅಂತೂ ಹೋಗಲ್ಲ. ನೀವಿಬ್ಬರೂ ಬರ್ಬೇಕು' ಎಂದು ನನ್ನನ್ನೂ ಸಂಬೋಧಿಸಿ ಹೇಳಿದ.

'ನಾನ್ ರೆಡಿನಪ್ಪ' ಎಂದ ಆದಿಯ ಮಾತಿಗೆ, ನನ್ನ ಒಂದು ಮಾತನ್ನು ಕೇಳಬೇಕೆಂಬ ಸೌಜನ್ಯವನ್ನೂ ತೋರದೆ

'So, tomorrow evening 5 o'clock. ಸಿಟಿ ಕ್ಲಬ್ ' ಎಂದ ಲೋಕೇಶ.



**

ಸಿಟಿ ಕ್ಲಬ್. ಕಾಡ್ಗಿಚ್ಚಿನಂತೆ ಶರವೇಗದಲ್ಲಿ ಹರಡುತ್ತಿರುವ ನಗರೀಕರಣದ ಮಾಹೆಯಲ್ಲಿ ಆಗೆಲ್ಲ ಕಿಲೋಮೀಟರ್ ಗಟ್ಟಲೆ ದೂರದಿಂದ ನಿಂತೂ ನೋಡಿದರೂ ಗುರುತಿಸಬಹುದಾಗಿದ್ದ ಕಟ್ಟಡ ಇಂದು GPS ಹಾಕಿ ಹುಡುಕಿದರೂ ಸಿಗುವುದು ಕಷ್ಟಸಾಧ್ಯ ಎನಿಸುವ ಜಾಗವಾಗಿದೆ. ಊರಿನ ಹಸಿರು ಬಣ್ಣದ ಈ ಕಟ್ಟಡ ಸಂಜೆಯಾಯಿತೆಂದರೆ ತಾಲೂಕಿನ ದೊಡ್ಡ ದೊಡ್ಡ ಕುಳಗಳು ಒಂದೆಡೆ ಸೇರುವ ಅಡ್ಡ. ಅನಧಿಕೃತವಾಗಿ ನೆಡೆಯುವ ಕೆಲವು ಕಾರ್ಯಗಳು ಅಧಿಕೃತವಾಗಿ ನೆಡೆಯಬೇಕಿದ್ದ ಹಲವು ಕಾರ್ಯಗಳನ್ನು ಅಲ್ಲಿ ಮುಚ್ಚಿಹಾಕಿವೆ. ಅಪ್ಪನ ಅಥವ ಅಜ್ಜನ ಜೀಪೂ ಅಥವಾ ಕಾರನ್ನೋ ತಂದು, ಕಂಗ್ಲಿಷಿನಲ್ಲಿ ಕೇಳುಗ ಕಿವುಡಾಗುವಂತೆ ಅಥವ ಹೆದರುವಂತೆ ಅರಚುತ್ತಾ, ಕಷ್ಟಪಟ್ಟು ಆಡುವ ಬಿಲಿಯರ್ಡ್ಸ್ ನೊಟ್ಟಿಗೆ ಇಷ್ಟಪಟ್ಟು ಕುಡಿಯುವ ಮದ್ಯದ ಮೋಜಿಗೆ ಇವರುಗಳು ಪ್ರೆಸಿಡೆಂಟು , ವೈಸ್ ಪ್ರೆಸಿಡೆಂಟುಗಳೆನುತ ತಮಗೆ ತಾವೇ ಕಿರೀಟಗಳನ್ನು ತೊಡಿಸಿಕೊಂಡು ಮಧ್ಯರಾತ್ರಿಯ ಘಾಡ ಮೌನದಲ್ಲಿ ತಮ್ಮ ಫೋರ್ ವೀಲರ್ ಗಳ ಕರ್ಕಶ ಸದ್ದನ್ನು ಹೊರಹೊಮ್ಮಿಸುತ್ತಾ ಹೊರಡದಿದ್ದರೆ ಕ್ಲಬ್ಬಿನ ಗಬ್ಬಿಗೆ ಕನ್ನಡಿ ಹಿಡಿಯುವರ್ಯಾರು?

'ಏನೋ ಮಚಿ ಇದು.. ಒಳ್ಳೆ 7 ಸ್ಟಾರ್ ಹೋಟೆಲ್ ಇದ್ದಾಗೆ ಇದಿಯಲ್ಲೋ' ಮೊದಲ ಬಾರಿಗೆ ಕ್ಲಬ್ನ ಒಳಹೊಕ್ಕ ನನ್ನ ಬಾಯಿಂದ ಮಾತುಗಳು ತಂತಾನೇ ಹೊರಬಂದವು. ಸಾಧಾರಣವಾದ ನಗರಸಭೆಯಂತಹ ಸರ್ಕಾರೀ ಕಟ್ಟಡದ ಪ್ರವೇಶದ್ವಾರವನ್ನು ಹೊಂದಿದ್ದ ಈ ಕ್ಲಬ್ನ ಒಳ ಹೊಕ್ಕರೆ ಬೇರೇನೇ ಒಂದು ಪ್ರಪಂಚ ಅನಾವರಣಗೊಳ್ಳುತ್ತಿತ್ತು. ಇಡೀ ನೆಲಮಾಳಿಗೆಯೇ ಹರಡಿಕೊಂಡಿರುವಂತಿರುವ ತಿಳಿನೀಲಿ ನೀರಿನ ಸ್ವಿಮಿಂಗ್ ಪೂಲು, ಅರೆನಗ್ನ ಅವಸ್ಥೆಯ ದಡೂತಿ ದೇಹಗಳು, ಅದರ ಸುತ್ತಲೂ ಜಾತ್ರೆಯ ಆಟಿಕೆಯ ಮಳಿಗೆಗಳಂತೆ ಬೀಡುಬಿಟ್ಟಿರುವ ಟೇಬಲ್ ಟೆನ್ನಿಸ್ ಹಾಗು ಬಿಲಿಯರ್ಡ್ಸ್ ಆಟಗಳ ಟೇಬಲ್ಲುಗಳು, ಬಿಳಿ ವಸ್ತ್ರವನ್ನು ಧರಿಸಿ ಅತ್ಯಂತ ಶಿಸ್ತಿನ ಸಿಪಾಯಿಗಳಂತೆ ನೆಡೆದಾಡುವ waiterಗಳು, ಬಣ್ಣ ಬಣ್ಣದ ಮದ್ಯಗಳು ಇವೆಲ್ಲವನ್ನು ಕಂಡು ನಮಗೆ ಏನು ಮಾಡಬೇಕೆಂಬುದೇ ತಿಳಿಯಲಿಲ್ಲ!

'Mr. ಲೋಕೇಶ್..' ಹಿಂದಿನಿಂದ ಬಂದ ಆ ಗಡಸು ಧ್ವನಿಗೆ ನನ್ನ ಎದೆ ಒಮ್ಮೆಗೆ ಝಲ್ ಎಂದಿತು. ಬಿಳಿ ಶರ್ಟ್ ಹಾಗು ಕಪ್ಪು ಬಣ್ಣದ ಜಾಗಿಂಗ್ ಪ್ಯಾಂಟನ್ನು ಧರಿಸಿದ್ದ ಐವತ್ತರ ಆಸುಪಾಸಿನ ವ್ಯಕ್ತಿಯೊಬ್ಬ ಶಟಲ್ ನ ರಾಕೆಟ್ಟೊಂದನ್ನು ಹಿಡಿದು ನಿಂತಿದ್ದ. ಬೆವರುಮಯ ಗೊಂಡಿದ್ದ ಆತನ ಮುಖದಲ್ಲಿ ಮಂದಹಾಸವೊಂದು ಮೂಡಿತ್ತು.

'ಯಸ್, ಯಸ್ ಸರ್. ಲೋಕೇಶ್ ಹಿಯರ್' ಎಂದು ಲೋಕಿ ನಮ್ಮ ಮೂರು ಜನರ ಗುಂಪನ್ನು ಸೀಳಿಕೊಂಡು ಮುಂಬಂದ.

'ಒಹ್..You are Mr. ಲೋಕೇಶ್.. I was waiting ..ಬನ್ನಿ ಕೂತ್ಕೊಂಡು ಮಾತಾಡುವ' ಎಂದು 'These people..?' ಏನುತಾ ನಮ್ಮಿಬ್ಬರನ್ನು ನೋಡಿದರು. ಒಂದೊಮ್ಮೆ ನಮಗೂ ಈ ಸಂಭಾಷಣೆಗೂ ಯಾವುದೇ ಸಂಭಂದವಿಲ್ಲವೆಂದು ತಿಳಿದು ಎಲ್ಲಿ ನಮ್ಮನ್ನು ಹೊರಹಾಕಿ ನನ್ನ ಭಿಟ್ಟಿ ಊಟವನ್ನು ಹೊಟ್ಟೆ ತುಂಬಾ , ಫ್ರೀ ಯಾಗಿ , ತಿನ್ನುವ ಕನಸ್ಸಿಗೆ ಮಣ್ಣು ಎರಚುತ್ತಾರೋ ಎಂದು ನನಗೆ ಕಳವಳವಾಗತೊಡಗಿತು. ಲೋಕೇಶನಿಗೆ ಸಾದ್ಯವಾದರೆ ಪಾರ್ಸೆಲ್ ಅನ್ನು ಕಟ್ಟಿ ತರಲು ಹೇಳಬೇಕು ಎಂದುಕೊಳ್ಳುತ್ತಿರುವಾಗ ಲೋಕೇಶ,

'They are my friends sir. No issues if they are around' ಎಂದ.

ನಮ್ಮನ್ನು especially ನನ್ನನ್ನು ಮೇಲಕ್ಕೂ ಕೆಳಕ್ಕೂ ನೋಡಿದ ಆ ವ್ಯಕ್ತಿ 'waiter..' ಎಂದು ಕೂಗಿ ಪೂಲಿನ ಬಳಿಯಿದ್ದ ನಾಲ್ಕು ಜನ ಕೂರುವ ಟೇಬಲ್ಲಿನ ಬಳಿಗೆ ನೆಡೆದ. ಲೊಕೇಶನನ್ನೂ ಹಿಂದಿಕ್ಕಿ ನಾನು ಅವರ ಹಿಂದೆ ಓಡಿದೆ.


'ಯಸ್ ಲೋಕೇಶ್.. ಟೆಲ್ ಮಿ.. ವಾಟ್ಸ್ ಯುವರ್ ಪ್ಲಾನ್ ಅಬೌಟ್ returning the ಮನಿ' ಎಂದ ಅವರ ಪ್ರೆಶ್ನೆಗೆ ಲೋಕೇಶ ಸುಮ್ಮನಾದ. ಆತ ಬಿಳಿ ಬಣ್ಣದ ಪಿಂಗಾಣಿ ಕಪ್ಪಿಗೆ ಬ್ಲಾಕ್ ಟೀಯನ್ನು ಸುರಿದು ಸಕ್ಕರೆಯ ಒಂದೆರೆಡು ಪ್ಯಾಕುಗಳನ್ನು ಹಾಕಿ ಚಮಚವೊಂದರಿಂದ ವೃತ್ತಾಕಾರವಾಗಿ ನಿಧಾನವಾಗಿ ತಿರುಗಿಸುತ್ತಿದ್ದ. ಅದಕ್ಕೆ ಮಿಲ್ಕ್ ಪೌಡರನ್ನು ಹಾಕುವುದೇ, ಹಾಕಿದರೆ ಕಪ್ಪಿಂದ ಕಪ್ಪಿಗೆ ಸುರಿದು ಚೆನ್ನಾಗಿ ಮಿಕ್ಸ್ ಮಾಡುವುದೇ, ಬೇಡವೇ ಎಂದು ಆತ ಯೋಚಿಸುತ್ತಿರಬಹುದೇ ಎಂದು ನಾನು ಯೋಚಿಸಿದೆ. ಆತ ಮತ್ತೂ ಸುಮ್ಮನಿದ್ದ. ನಾನು ತಂದೂರಿ ಚಿಕನ್ನಿನ ಎರಡನೇ ಪ್ಲೇಟನ್ನು ಆರ್ಡರ್ ಮಾಡಿದೆ. ಆದಿ ಕಾಫಿಯಷ್ಟನ್ನೇ ಹೇಳಿ ಕುಡಿಯುತ್ತಿದ್ದ.

'ಟ್ರಸ್ಟ್ ..' ಎಂದ ಲೋಕೇಶ ಕೊಂಚ ಸುಮ್ಮನಾದ. ಲೊಕೇಶನ ದೃಷ್ಟಿ ಬ್ಲಾಕ್ ಟೀಯ ಮೇಲೆ ಮೂಡುತ್ತಿದ್ದ ಹಬೆಯ ಮೇಲೆ ಕೇಂದ್ರೀಕರಣಗೊಂಡಿತ್ತು.

'Trust is my plan for returning your money, sir'

ಕೊಂಚ ವಿಚಲಿತರಾದ ಅವರು,

'Hello Mister.. have you lost your mind?' ಎಂದರು. ಅವರ ಗಡಸು ಧ್ವನಿ ಲೊಕೇಶನನ್ನು ಇಹಲೋಕಕ್ಕೆ ಕರೆತಂದಿತು. ಅದೇ ಸಮಯಕ್ಕೆ ತಂದೂರಿ ಚಿಕನ್ನಿನ ಎರಡನೇ ಪ್ಲೇಟೂ ಸಹ ಬಂದಿತು. ಅವರು ನನ್ನನೊಮ್ಮೆ ದುರುಗುಟ್ಟಿ ನೋಡಿದರು. ನಾನು ದೃಷ್ಟಿಯನ್ನು ಬದಲಿಸಿ ಕೆಂಪು ಕೆಂಪಾಗಿ ಘಮಘಮಿಸುತ್ತಿದ್ದ ಚಿಕನ್ನನ್ನು ನೋಡುತ್ತಾ ಖಾಲಿಯಾದ ಪ್ಲೇಟನ್ನು waiter ಗೆ ನೀಡಿ ಸುಮ್ಮನಾದೆ. ಆತ ತಂದ ಪ್ಲೇಟನ್ನು ಟೇಬಲ್ಲಿನ ಮೇಲಿಟ್ಟ. ಅವರ ದೃಷ್ಟಿ ಇನ್ನೂ ನನ್ನ ಮೇಲೆಯೇ ಇದೆ ಎಂದು ಅರಿತಾಗ ನಾನು ತನಗೆ ಬೇಡವಂತೆ ನಟಿಸುತ್ತಾ ಲೋಕೇಶ ಹಾಗು ಆದಿಯರನ್ನು ನೋಡಿ ತಿನ್ನುವಂತೆ ಸಂಜ್ಞೆಯನ್ನು ಮಾಡಿದೆ. ಅವರಿಬ್ಬರೂ ಬೇಡವೆಂಬಂತೆ ತಲೆಯಾಡಿಸಿದರು. ಮರ್ಯಾದೆ ಹರಾಜಾದರೂ ಬಂಡತನ ಬಿಡದ ಪುಂಡನಂತೆ ಕೊನೆಗೆ ನಾನು ಪ್ಲೇಟನ್ನು 'ಸರ್..' ಏನುತ ಅವರ ಮುಂದಕ್ಕೆ ಜಾರಿಸಿದೆ. ಅವರು ತಿರಸ್ಕಾರದ ನೋಟದಿಂದ ತಮ್ಮ ದೃಷ್ಟಿಯನ್ನು ಬದಲಿಸಿದರು.

‘You, Mister. This is not the fun game we are discussing here. ಅಲ್ರಿ ರಿಟರ್ನ್ ಮಾಡೋಕೆ ಆಗಲ್ಲ ಅಂದ್ರೆ ಯಾಕ್ರೀ ಸಾಲ ಎಲ್ಲ ನಿಮ್ಗೆ ? ನನ್ನ್ ಮ್ಯಾನೇಜರ್ ಬರ್ಲಿ, ಆ ಪೆದ್ದ್ ಮುಂಡೇದುಕೆ ಹೇಳಿದ್ದೆ. ನೋಡ್ದೆ ಮಾಡ್ದೆ ಯಾರಿಗೂ ಸಾಲ ಕೊಡ್ಬೇಡ ಅಂತ.'

ಅವರ ಬಾಯಿಂದ 'ಪೆದ್ದ್ ಮುಂಡೇದು' ಎಂಬ ಲೋಕಲ್ ಪದವನ್ನು ಕೇಳಿ ಕೊಂಚ ಚಕಿತನಾದ ಲೋಕೇಶ,

'ಸರ್.. ನಾನು ಸಾಲ ತೆಗೆದುಕೊಳ್ಳುವ ಮುಂಚೆ ನಿಮ್ಗೆ ಒಂದು ಇಮೇಲ್ ಬರ್ದಿದ್ದೆ. ನನ್ನ ಪ್ಲಾನ್, ಅದ್ರಿಂದ ಸಿಗೋ ಪ್ರಾಫಿಟ್, ನಮ್ಮ ರೈತರಿಗೆ ಆಗುವ ಲಾಭ ಎಲ್ಲವನ್ನೂ explain ಮಾಡಿದ್ದೆ. ನೀವೂ ಸಹ ಓದಿ ಅಪ್ರಿಷಿಯೇಷನ್ ಮೇಲ್ ಕಳ್ಸಿದ್ರಿ. ನೆನ್ಪ್ ಇದ್ಯಾ ಸಾರ್’ ಎಂದು ಕೇಳಿದ ಲೋಕೇಶ. ಮುಂದೆ ಯಾವುದೇ ಪ್ರತಿಕ್ರಿಯೆಗಳು ಆಕಡೆಯಿಂದ ಬಾರಾದಿದ್ದರಿಂದ ಪುನ್ಹ ಮುಂದುವರೆಸಿ, ‘ನಾನು ಅಲ್ಲಿ ದುಡ್ಡ್ ಮಾಡ್ಬೇಕು ಅನ್ನೋಕ್ಕಿಂತ ಹೆಚ್ಚಾಗಿ ಹೊಸದಾಗಿ ಏನಾದ್ರೂ ಮಾಡ್ಬೇಕು ಅನ್ನೋ ಹಠ ಇತ್ತು ಸರ್. ಆದ್ರೆ ನನ್ನ್ ಹಠಕ್ಕೆ ಬೇರೆಯವ್ರ ದುಡ್ಡಿನ ಜೊತೆ ಆಡೋದು ಸರಿಯಲ್ಲ, I know. ಆದ್ರೆ ಏನ್ ಮಾಡೋದು ಸರ್ , ನಾನ್ ಅಂದ್ಕೊಂಡಿದ್ದೇ ಒಂದು ಆಗಿದ್ದೇ ಮತ್ತೊಂದು. ಆದ್ರೆ ನಾನು ಪಕ್ಕಾ ಮಾರ್ಕೆಟ್ ರಿಸರ್ಚ್ ಮಾಡಿದ್ದೆ. ನಮ್ಮ್ ಕಾಫಿ ಪ್ಲಾಂಟರ್ಸ್ ಗೆ ಆ ರೊಟು ಸರಿಯಾಗಿ ಗೊತ್ತಾದ್ರೆ ಒನ್ ಟು ಡಬಲ್ ಪ್ರಾಫಿಟ್ ತೆಗಿಬಹುದು. ಅದಕ್ಕೆ ಸ್ವಲ್ಪ ಧೈರ್ಯ ಬೇಕು ಅಂಡ್ ಒಳ್ಳೆ ಕಾಂಟ್ಯಾಕ್ಟ್ಸ್. ನನ್ನ್ ಹತ್ರ ಮೊದಲನೆಯದಿದೆ ಆದ್ರೆ ಸೆಕೆಂಡ್ ಒನ್ ಇಲ್ಲ! ಬಟ್ ನಾನದನ್ನ ಸುಲಭವಾಗಿ ಕಳ್ಕೋಣಕ್ಕೆ ಬಿಡಲ್ಲ ಸರ್. Im in touch with PMO office. Hope to receive a positive reply soon..' ಎಂದು ಸುಮ್ಮನಾದ.

ಅತ್ತ ಕಡೆಯಿಂದ ಆಗಲೂ ಯಾವುದೇ ರಿಪ್ಲೈ ಬಾರದೆ ಇದ್ದರಿಂದ ಪುನ್ಹ ಮುಂದುವರೆಸಿ,

'ಸರ್.. ನಿಮ್ ಸಾಲ ತೀರುತ್ತೆ, don't worry. ನನ್ನ್ ಹತ್ರ ಸ್ವಲ್ಪ ಗೋಲ್ಡ್ ಇದೆ ಹಾಗು ನನ್ನ ಫ್ರೆಂಡ್ಸ್ ಹತ್ರ ಇರೋ ಅಮೌಂಟ್ ಎಲ್ಲ ಸೇರಿಸಿ ಒಟ್ಟು 3 ಲಕ್ಷ ಆಗುತ್ತೆ. ಆದ್ರೆ ಆ ಹಣವನ್ನು ನಾನು ಇವಾಗ್ಲೆ ನಿಮ್ಗೆ ಕೊಡಕ್ ಆಗಲ್ಲ. ಅದನ್ನ ನಾನು ಜಿಂಜರ್ ಬಿಸಿನೆಸ್ ಅಲ್ಲಿ ಇನ್ವೆಸ್ಟ್ ಮಾಡ್ತಾ ಇದ್ದೀನಿ. By the end of this year you will be having the money along with the interest' ಎಂದೇಳಿ ನನಗೆ ಹೇಳಿದ ಶುಂಠಿಯ ಘಾಟನ್ನು ಅವರಿಗೂ ಪಸರಿಸಿದ. ಮೊದಮೊದಲು ಕಾಟಾಚಾರಕ್ಕೆ ಕೇಳುವಂತೆ ಮಾಡಿದ ಅವರು ಯಾವಾಗ ಲೋಕೇಶ ತನ್ನ ಸಂಪೂರ್ಣ ಯೋಜನೆಯನ್ನು ಅವರಿಗೆ ವಿವರಿಸಿ 'This model can be extended to other sectors as well' ಎಂದಾಗ ಅವರ ಮುಖದಲ್ಲಿ ಕಳೆದುಹೋಗಿದ್ದ ಮಂದಹಾಸ ಪುನ್ಹ ಮೂಡಿತು.

ನಮ್ಮನ್ನು ಕೇಳದೇ ಈತ ಮೂರು ಲಕ್ಷ ಒಟ್ಟುಮಾಡುವುದಾದರೂ ಹೇಗೆ ಎನುತ ನಾನು ಹಾಗು ಆದಿ ಒಬ್ಬರನ್ನೊಬ್ಬರ ಮುಖವನ್ನು ಕಳವಳದಿಂದ ನೋಡಿದೆವು.

ತುಸು ಯೋಚಿಸಿದಂತೆ ಮಾಡಿದ ಅವರು,

'ಅದಕ್ಕಾಗಿ ಸ್ಟಡಿ discontinue ಮಾಡ್ಬೇಕಲ್ರಿ?!'

'ಸುಮ್ನೆ ಇರಿ ಸಾರ್.. ಕೃಷಿ ಅಂದ್ರೆ ಏನ್ ನಾವೂ ಅದ್ರೊಟ್ಟಿಗೆ ಊಟ ತಿಂಡಿ ಮಾಡ್ತಾ ಕೂರ್ಬೇಕಾ? ಒಬ್ಬ ಮೇಸ್ತ್ರಿನ ಇಟ್ಕೊಂಡು ಕೆಲ್ಸ ಮಾಡಿಸ್ತೀನಿ. Of course ಜನ ಕೆಲ್ಸ ಮಾಡ್ದೆ ಇರ್ಬಹುದು.. ಮಾಡಿದ್ರೂ ಅರ್ಧಂಬರ್ಧ ಮಾಡ್ಬಹುದು.. ಬಟ್ ಅದನ್ನೆಲ್ಲಾ ಯೋಚ್ನೆ ಮಾಡ್ತಾ ಕೂತ್ರೆ ಮುಂದೆ ಹೋಗೋಕ್ ಆಗಲ್ಲ ಸಾರ್.. ಗುರಿನ ಬಿಟ್ಟು ಬರಿ obstacles ಬಗ್ಗೆನೇ ಯೋಚ್ನೆ ಮಾಡ್ತಾ ಇದ್ರೆ ಗುರಿ ಮರ್ತೂಗಿ ಬರಿ obstaclesಗಳೆ ಗುರಿಯಾಗ್ಬಿಡ್ತಾವೆ.. ಅಷ್ಟಾಗು ನಾನ್ ಎಕ್ಸಾಮ್ಸ್ ನೆಲ್ಲ ಓದಿ ಪಾಸ್ಮಾಡೊ ಹುಡ್ಗ ಅಂತೂ ಅಲ್ವೇ ಅಲ್ಲ' ಎಂದು ನಗುತ್ತಾ ಆದಿಯ ಮುಖವನ್ನು ನೋಡಿದ. ಆದಿ ಮುಗುಳ್ನಕ್ಕ.

'ಕೃಷಿ ಬಗ್ಗೆ ಕೃಷಿಕ ಆಗಿ ಮಾತ್ರ ಮಾತಾಡಿ ಲೋಕೇಶ್.. ಹೇಳೋದಕ್ಕೂ ಮಾಡೋದಕ್ಕೂ ಬಹಳಾನೇ ವ್ಯತ್ಯಾಸ ಇರುತ್ತೆ.. ಈಗಿನ ಕಾಲದಲ್ಲಿ ಪ್ರತಿ ಹೆಜ್ಜೆ ಇಡಬೇಕಾದ್ರೂ ನೂರ್ ಸಾರಿ ಯೋಚ್ನೆ ಮಾಡ್ಬೇಕು ..You have to think zillion times before you start anything .. ಆದ್ರೆ ನಿಮ್ದು ಬಿಸಿರಕ್ತ... ಕೇಳೋದಿಲ್ಲ.. ಅಲ್ವೇ' ಎಂದು ನಕ್ಕರು.

'ಮನುಷ್ಯ zillion ಟೈಮ್ಸ್ ಯೋಚ್ನೆ ಮಾಡ್ತಾ ಕೂತಿದ್ರೆ ಇನ್ನೂ ಮಿಲಿಯನ್ ಟೈಮ್ಸ್ ಹಿಂದೇನೆ ಇರ್ತಾ ಇದ್ದ ಸರ್..ಅದೆಲ್ಲ ಬೇಡ ಬಿಡಿ.. ನಿಮ್ಗೆಲ್ಲಾ ಒಂದ್ ಸಣ್ಣ ಸ್ಟೋರಿ ಹೇಳ್ತಿನಿ.. ಕೇಳಿ ' ಎಂದು ನಮ್ಮನ್ನೂ ಒಮ್ಮೆ ನೋಡಿದ. ಮೂಗಿಗೆ ಬಡಿಯ ಹತ್ತಿದ್ದ ತಂದೂರಿ ಚಿಕನ್ನಿನ ಘಮ ಕ್ಷಣ ಕ್ಷಣಕ್ಕೂ ಕ್ಷೀಣಿಸುತ್ತಿತ್ತು. ದೇವರೇ ಈ ಪೊಳ್ಳು ವಾಗ್ಮಿ ಲೊಕೇಶನ ತಲೆಗೆ ನಾಲ್ಕು ಭಾರಿಸಿ ಸುಮ್ಮನಿರಿಸು ಎಂದು ನಾನು ಬೇಡಿಕೊಂಡೆ.

'ಸರಿಯಾಗಿ ಮೂವತ್ತು ವರ್ಷದ ಹಿಂದೆ ಒಬ್ಬ ಯಂಗ್ ಹುಡ್ಗ ಈ ಊರಿನಲ್ಲಿದ್ದ.. ಬಿಸಿ ರಕ್ತದ ಹುಡ್ಗ ಅಂದ್ಕೊಳ್ಳಿ.. ಬಹಳಾನೇ ಮಹತ್ವಕಾಂಕ್ಷಿ..ನೇರ ನುಡಿ... ದೇಶಪ್ರೇಮಿ.. ಇಂಗ್ಲಿಂಡಿನಲ್ಲಿ ಓದಿದ್ದರೂ ಊರಿಗೆ ಬಂದು ಕೃಷಿ ಮಾಡತೊಡಗಿದ.. ಅದೇನೋ ಕೃಷಿ ಅಂದರೆ ಆತನಿಗೆ ಎಲ್ಲಿಲ್ಲದ ಆನಂದ . ಅಪ್ಪನ ಬೇಜಾನ್ ಆಸ್ತಿ ಇದ್ದರೂ ಅದನ್ನು ನೆಡೆಸೋದೇನು ಅಷ್ಟೇನು ಸುಲಭ ಆಗಿರ್ಲಿಲ್ಲ..ಆದ್ರೂ ಆತ ಪಣತೊಟ್ಟ.. ಈಜಿದ ..ಗೆಳೆಯರಲ್ಲ ಆತನನ್ನು ಮೂದಲಿಸಿದರು. ಎಲ್ಲವನ್ನು ಮಾರಿ ಇಂಗ್ಲೆಂಡ್ ನಲ್ಲಿ ಸೆಟ್ಲ್ ಆಗುವ ಸಜೆಶನ್ ಕೊಟ್ರು..ಆತ ಕೇಳಲಿಲ್ಲ, ಹಿಡಿದ ದಾರಿಯನ್ನು ಬಿಡಲಿಲ್ಲ. ಆತನ ಆ ಡೈನಾಮಿಕ್ ಯೋಚನೆ ಹಾಗು ಯೋಜನೆಗಳಿಂದ ಇಂದು ಆತ ಇಡೀ ಜಿಲ್ಲೆಯ ಏಕೈಕ ಸಾವಯವ ಕೃಷಿಕ ಅನ್ನಿಸಿಕೊಂಡಿದ್ದಾನೆ. ಅಲ್ದೆ ರೈತರಿಗೆ ಒಂದು ಕಾಫಿ ಕ್ಯೂರಿಂಗ್ ಹಾಗು ಹಾಲಿನ ಸಂರಕ್ಷಣ ಘಟಕವನ್ನು ಸ್ಥಾಪಿಸಿ ಸರ್ಕಾರಗಳಿಂದ ಪ್ರಶಸ್ತಿಗಳನ್ನೂ ಪಡೆದಿದ್ದಾನೆ... ತನ್ನ ಗೆಳೆಯರ ಮಾತನ್ನು ಕೇಳಿ ಅಂದು ಬ್ರಿಟನ್ಗೋ ಅಥವಾ ಫ್ರಾನ್ಸಿಗೂ ಹೋಗಿ ಸೆಟ್ಲ್ ಆಗಿದ್ರೆ ಚೆನ್ನಾಗಿರಬಹುದಿತ್ತು.. ಆದ್ರೆ ಆತನ ಗುರಿ ಸ್ಪಷ್ಟವಾಗಿತ್ತು..ಬಿಸಿರಕ್ತ ಕುದಿಯುತ್ತಾ ಇತ್ತು.. ತಾಯ್ನಡಿನ ಮಣ್ಣು ಚಿನ್ನ ಎಂಬ ಅರಿವು ಆತನಿಗಿತ್ತು' ಎಂದ ಲೋಕೇಶ ನನ್ನನ್ನು ನೋಡಿದ. ಆತ ಏನು ಹೇಳಲೋರಟ್ಟಿದ್ದಾನೆ ಎಂದು ಕೇಳುವ ಮೊದಲೇ ಪುನ್ಹ ಮುಂದುವರೆಸಿ,

'ಇಷ್ಟೆಲ್ಲಾ ಸಾಧನೆ ಮಾಡಿದ ಹೆಮ್ಮೆಯ ವ್ಯಕ್ತಿ ಯಾರು ಗೊತ್ತಾ.., ಎಂದು ಸಣ್ಣದಾದ ಬ್ರೇಕನ್ನು ನೀಡಿ ಎಲ್ಲರ ಮುಖವನ್ನು ಮತ್ತೊಮ್ಮೆ ನೋಡಿ ‘ಅವ್ರು ಬೇರೆ ಯಾರು ಅಲ್ಲ ಜಿಲ್ಲೆಯ ಪ್ರಖ್ಯಾತ ಹೆಮ್ಮೆಯ ಕಾಫಿ ಬೆಳೆಗಾರರಾದ ಶ್ರೀಯುತ ಸಾಲ್ದಾನಾ ಜೋಸೆಫ್..' ಎಂದು ನಮ್ಮ ಮುಂದೆ ಕೂತಿದ್ದ ಅವರನ್ನು ತೋರಿಸಿದ. ನಾನು ಹಾಗು ಆದಿ ಒಬ್ಬರನೊಬ್ಬರು ಆಶ್ಚರ್ಯದಿಂದ ನೋಡಿದೆವು. ಅಪ್ಪಿ ತಪ್ಪಿ ಲೈಬ್ರರಿಯಲ್ಲಿ ಯಾವುದೊ ಹಿಸ್ಟರಿ ಬುಕ್ ಓದಿ ಈತನ ತಲೆಕೆಟ್ಟಿರಬಹುದೆಂದು ನಾನು ಅಂದುಕೊಂಡೆ. ಆದರೆ ಮುಂದೆ ನೆಡೆದ ಘಟನಾವಳಿ ನನ್ನ ಊಹೆಯನ್ನು ಸುಳ್ಳಾಗಿಸಿತು.

'Oh, come-on Lokesh, don’t embarrass me please.. ನೀವು ಹೀಗೆಲ್ಲ ಹೇಳಿದ್ರೆ ನಾನು ದುಡ್ಡ್ ಕೇಳೋದು ಬಿಟ್ಟ್ ಬಿಡ್ತೀನಿ ಅನ್ಕೋಬೇಡಿ' ಎಂದು ಅವರು ನಕ್ಕರು.

'ಇಲ್ಲ ಸರ್ .. This is the legend what our city speak about you..ಅವತ್ತು ನೀವು ಇಲ್ಲೇ ಇದ್ದು ಕೃಷಿ ಮಾಡ್ತೀನಿ ಅಂದ್ಕೊಂಡಾಗ್ಲೂ ನಿಮ್ಗೆ ಕೃಷಿ ಮೇಲೆ ಅಂತಹ ಆಳವಾದ ಜ್ಞಾನ ಇರ್ಲಿಲ್ಲ ಅಲ್ವ ಸರ್.. ಆದ್ರೂ ನೀವು ಪ್ರಯತ್ನ ಪಟ್ರಿ.. ಸೊತ್ರಿ.. ಸೊತ್ರಿ.. ಎಷ್ಟೋ ಸೋಲಿನ ನಂತ್ರ ಗೆದ್ರಿ.. ಅಲ್ವ?'

ಅವರ ಮುಗುಳ್ ನಗುವೆ ಲೊಕೇಶನ ಪ್ರೆಶ್ನೆಗೆ ಉತ್ತರವಾಗಿದ್ದಿತು.

'Right now ನಾನು ಕೂಡ ಅದೇ ಪ್ಲೇಸ್ ನಲ್ಲಿ ಇದ್ದೀನಿ.. ನಂಗೆ ನಿಮ್ಮಿಂದ ಏನೂ ಬೇಡ ಸರ್.. I just need a handful of days.. let me achieve it sir' ಎಂದು ಸುಮ್ಮನಾದ.

ಆಸಾಮಿ ಬರುವಾಗ ಅವರ ಜೀವನಕತೆಯನ್ನೇ ಅರೆದು ಕುಡಿದು ಬಂದಹಾಗಿದೆ. ಆದರೆ ಲೊಕೇಶನ ಈ ರೀತಿಯ ಟ್ರಿಕ್ಸ್ ಗಳೇ ಅದೆಷ್ಟೋ ಬಾರಿ ಸಫಲವಾಗಿವೆ. ವ್ಯಕ್ತಿ ಬಿಸಿನೆಸ್ ಮೆಟೀರಿಯಲ್ ಅನ್ನೋದರಲ್ಲಿ ದೂಸರಾ ಮಾತೇ ಇಲ್ಲ ಎಂದು ನನಗನಿಸಿತು.

'ನೋಡಿ ಲೋಕೇಶ್.. ಏನೇ ಅಂದ್ರು Business is Business.. ಆದ್ರೆ ನಿಮ್ಮನ ನೋಡಿ ನನ್ಗೆ ನನ್ನ ಯಂಗ್ ಡೇಸ್ ನೆನಪಿಗೆ ಬರುತ್ತೆ.. ಅದೇ ಜೋಷ್ ಅದೇ ಸ್ಪಷ್ಟತೆ.. I liked it..' ಎಂದು ಸುಮ್ಮನಾಗಿ 'Only 8 months.. Also ನೀವ್ ಹೇಳಿದ್ದ ಜಾಗದಲ್ಲೇ ನನ್ನ ಮೂರ್ ಎಕ್ರೆ ಖಾಲಿ ಗದ್ದೆ ಇದೆ.. ಬೇಕಾದ್ರೆ ಅದನ್ನೂ ಯೂಸ್ ಮಾಡ್ಕೊಳಿ.. ರೆಂಟ್ ಎಲ್ಲ ಏನು ಬೇಡ..' ಎಂದರು.

ಸಾಲ ಕೊಡೋಕ್ ಆಗಲ್ಲ ಸ್ವಾಮಿ ಏನುತಾ ಲೋಕೇಶ ಕಾಲಿಗೆರಗುವ ಸೀನ್ಗಳೆಲ್ಲ ಇರಬಹುದೆಂದು ಬಂದ ನನಗೆ ಗಡತ್ತಾದ ಊಟ, ಆತನಿಗೆ ಮೂರು ಎಕರೆ ಜಾಗ ಫ್ರೀಯಾಗಿ ದೊರೆಯುತ್ತದೆ ಎಂಬುದನ್ನು ಊಹಿಸಿಕೊಳ್ಳಲೂ ನನಗೆ ಸಾಧ್ಯವಾಗಲಿಲ್ಲ. ಸಾಲದಕ್ಕೆ ಮರ್ಯಾದೆ ಬಿಟ್ಟ ಕಾಲೇಜಿನ ಎಕಾನಾಮಿಕಲ್ ಬ್ಯಾಚುಲರ್ಸ್ ಎಂದು ಸಾಬೀತುಪಡಿಸುವ ಸಲುವಾಗೇ ಏನೋ ನಾನು ಒಂದು ಚಿಕ್ಕನ್ ಬಿರಿಯಾನಿಯನ್ನೂ ನಾನು ರೂಮಿಗೆ ಕಟ್ಟಿಸಿಕೊಂಡಿದ್ದೆ

'ಮಗ್ನೆ, ಅಷ್ಟೆಲ್ಲ ಹೆಂಗೋ ಹುಳ ಬಿಟ್ಟೆ?' ಪ್ಲಾಂಟರ್ಸ್ ಕ್ಲಬ್ಬಿನಿಂದ ಹೊರಬರುತ್ತಾ ಲೋಕೇಶನನ್ನು ಕೇಳಿದೆ ನಾನು.

'ಟ್ಯಾಲೆಂಟ್ ಮಚಿ..ಎಲ್ರಿಗೂ ಅದ್ ಬರಲ್ಲ' ಎಂದು ಸಹಜವಾಗಿಯೇ ತಂತಾನೇ ಹೊಗಳತೊಡಗಿದ ಆತ.

'ಹಾಗಾದ್ರೆ ಈ ಸಾರಿ ಇಂಟರ್ನಲ್ಸ್ ನಲ್ಲೂ ನಿನ್ನ ಟ್ಯಾಲೆಂಟ್ ತೋರಿಸೇ ಪಾಸಾಗು ' ಎಂದ ಆದಿ.

'ಇಲ್ಲ ಗುರು.. ಹಾಗೆಲ್ಲ ಮಾಡ್ಬೇಡ.. ತಾವ್ ಇದ್ರೆ ನಾವು, ಇವ್ನು, ಇಡೀ ಅರ್ಧಕ್ಕರ್ಧ ಕ್ಲಾಸು..ನಿನ್ ಟ್ಯಾಲೆಂಟ್ ಮುಂದೆ ನಮ್ದೇಲ್ಲ ಏನೂ ಇಲ್ಲ ಬಿಡು' ಎಂದು ಆದಿಯನ್ನು ಪುಸಲಾಯಿಸತೊಡಗಿದ. ಅಷ್ಟರಲ್ಲಿ ನಾವು ಕ್ಲಬ್ಬಿನ ಗೇಟಿನ ಬಳಿಗೆ ಬಂದಿದ್ದೆವು. ಕ್ಲಬ್ಬಿನ ಹೊರಕ್ಕೂ ಒಳಕ್ಕೂ ಎಮರ್ಜೆನ್ಸಿಯ ಆಂಬುಲೆನ್ಸ್ ಗಳಂತೆ ಇತ್ತಿಂದತ್ತ ಅತ್ತಿಂದಿತ್ತ ಸದ್ದುಮಾಡುತ್ತಾ ನುಗ್ಗುವ ದುಭಾರಿ ನಾಲ್ಕು ಚಕ್ರದ ಗಾಡಿಗಳ ಒಳಗಿರುವ ಚಹರೆಗಳನ್ನು ತಮ್ಮ ಅಮಾಯಕ ಕಣ್ಣುಗಳಿಂದ ನೋಡುವ ಹತ್ತಾರು ಚಹರೆಗಳು ಗೇಟಿನ ಬಳಿ ನಿಂತಿದ್ದವು. ತಲೆಗೆದರಿಕೊಂಡ ಹಳದಿ ಹಲ್ಲಿನ ಕೊಳಕು ಬಟ್ಟೆಯ ಆ ಮಕ್ಕಳನ್ನು ಕಂಡರೆ ಎಂತಹ ವ್ಯಕ್ತಿಗೂ ತನ್ನ ದೊಡ್ಡತನವನ್ನು ಪ್ರದರ್ಶಿಸುವ ಅವಕಾಶ ಒದಗಿ ಬರುತ್ತಿತ್ತು. ಆಗ ತಮ್ಮ ಕಾರನ್ನು ನಿಲ್ಲಿಸಿ ನೂರೋ, ಇನ್ನೂರೋ ಅಥವಾ ಕೈಗೆ ಬಂದಷ್ಟು ದುಡ್ಡನ್ನು ಎಳೆದು ಕೊಟ್ಟು ಹೋಗುತ್ತಿದ್ದರು ಆ ದೊಡ್ಡವರು. ಸಿಕ್ಕ ಹಣವನ್ನು ಬೀಡಿ, ಸಿಗರೇಟು, ಗುಟ್ಕಾ, ಸಾರಾಯಿ ಎನುತ ಆ ಗುಂಪು ಖರ್ಚು ಮಾಡುವುದು ಮಾತ್ರ ಬೇರೆಯ ಮಾತು.

ಅಂತ ದೊಡ್ಡ ಕುಳಗಳ ಅನ್ವೇಷಣೆಯಲ್ಲಿ ಈಗಲೂ ಅಲ್ಲಿಯೇ ನಿಂತಿತ್ತು ಆ ಮರಿ ಪೋಕರಿ ಸೈನ್ಯ. ನಾವು ಬಂದದನ್ನು ಕಂಡ ಅವರು,

'ಅಣ್ಣ.. ದುಡ್ಡ್ ಕೊಡಣ್ಣ..ಪ್ಲೀಸ್, ಪ್ಲೀಸ್ ' ಎಂದು ಪೀಡಿಸತೊಡಗಿದರು.

'ನನ್ನ್ ಹತ್ರ ಇಲ್ಲ ಗುರು.. ಅಂಕಲ್ ನ ಕೇಳು' ಎನುತ ನಾನು ಆದಿಯನ್ನು ತೋರಿಸಿದೆ.

'ಅಂಕಲ್.. ಅಂಕಲ್.. ದುಡ್ಡ್ ಕೊಡಿ ಅಂಕಲ್.. ಊಟ ಮಾಡಿ ಮೂರ್ ದಿನ ಆಯ್ತು ಅಂಕಲ್.. ಪ್ಲೀಸ್ ಅಂಕಲ್' ಎಂದು ರೋಧಿಸುವ ನಾಟಕವಾಡಿದ ಗುಂಪನ್ನು ಲೋಕೇಶ ಬೈಯುತ್ತಾ ದೂರ ಸರಿಸತೊಡಗಿದ. ಅವರ ಒಂದೊಂದೇ ಮುಖವನ್ನು ನೋಡಿದ ಆದಿ ಕೂಡಲೇ ತನ್ನ ಪರ್ಸನ್ನು ಹೊರಗೆಳೆದು ನೂರರ ಒಂದು ನೋಟನ್ನು ಅವರ ಕೈಲಿಟ್ಟ. ಹಣವನ್ನು ಪಡೆದ ಗುಂಪು ಮರುಕ್ಷಣದಲ್ಲೇ ಈತನೊಬ್ಬ ಅಜೀವ ವಸ್ತುವೇನೋ ಎಂಬಂತೆ ತಮಗೂ ಹಾಗು ಈತನಿಗೂ ಯಾವುದೇ ಸಂಬಂಧ ಇಲ್ಲವೆಂಬಂತೆ ಅಲ್ಲಿಂದ ಜಾಗ ಕಿತ್ತವು. ಪುನ್ಹ ತಮ್ಮ ಸ್ವಸ್ಥಾನಕ್ಕೆ ಹೋಗಿ ಮತ್ತೊಂದು ಗಿರಾಕಿಗೆ ಕಾಯತೊಡಗಿದವು.

'ಲೋ .. ನಿಂಗೇನು ಹುಚ್ಚ.. ಆ ಗುಡ್ಕ ತಿನ್ನೋ ಕಪಿಗಳಿಗೆ ನೂರ್ ರೂಪಾಯ್ ಕೊಡೊದ?' ನಾನು ಕೇಳಿದೆ.

'ಒಬ್ಬ ನನ್ನ್ ಮುಂದೆ ಕೈ ಚಾಚುತ್ತಿದ್ದಾನೆ ಎಂದರೆ ನಂಗೆ ಏನೂ ತೋಚಲ್ಲ.. ತನ್ನ ಎಲ್ಲವನ್ನು ಬಿಟ್ಟು ಇನ್ನೊಬ್ಬರ ಮುಂದೆ ಕೈ ಚಾಚುವುದು ಅಷ್ಟು ಸುಲಭ ಅಲ್ಲ.. ನೂರ್ ರೂಪಾಯ್ ಎಲ್ಲಿ ಹೋಗಿ ಎಲ್ ಬರುತ್ತೋ ಗೊತ್ತಿಲ್ಲ.. ಆದ್ರೆ ಕೈ ಚಾಚಿದವ್ರಿಗೆ ಇಲ್ಲ ಆನ್ಬಾರ್ದು ಅಷ್ಟೇ' ಆದಿ ಹೇಳಿದ.

'ನಿನ್ ಕಿತ್ತೊಗಿರೊ ಈ ಫಿಲಾಸಪಿನ ನೀನೆ ಇಡ್ಕೊ ಗುರು... ಎಳೆ ಮಕ್ಕಳಿಗೆ ದುಡ್ಡ್ ಕೊಟ್ಟ್ ಹಾಳ್ ಮಾಡ್ತಾ ಇದ್ದೀಯ ನೀನು' ಎಂದೇ ನಾನು.

'ನಿಂಗೆ ಅರ್ಥ ಆಗಲ್ಲ ಬಿಡು..' ಎಂದು ಆದಿ ಸುಮ್ಮನಾದ.

ಆ ಗುಂಪು ನಿಂತಿದ್ದ ತುಸು ದೂರದಲ್ಲಿ ಅಜ್ಜಿಯೊಂದು ಮರದ ನೆರಳ ಕೆಳಗೆ ನಿಂತಿತ್ತು. ಅದರ ವೇಷಭೂಷಣ ಜೋಳಿಗೆ ಎಲ್ಲವನ್ನು ನೋಡಿದರೆ ಅದೂ ಸಹ ಹೀಗೆಯೇ ಕೈಚಾಚಿ ಬೇಡಿ ತಿನ್ನುವ ಜೀವವೆಂದು ಅರಿವಾಯಿತು. ಏಕೋ ನನಗೆ ಅವಳ ಬಳಿಗೆ ಹೋಗುವ ಹಾಗಾಯಿತು . ಕೂಡಲೇ ನಾನು ಆಕೆಯ ಬಳಿಗೊದೆ. ತನ್ನ ಎಡ ಬುಜದ ಮೇಲೊಂದು ಬಟ್ಟೆಯ ಜೋಳಿಗೆ ಹಾಗು ಬಲಗೈಯಲ್ಲಿ ಎರಡು ಪ್ಲಾಸ್ಟಿಕ್ ಕವರ್. ಒಂದರ ತುಂಬೆಲ್ಲ ರೊಟ್ಟಿ, ದೋಸೆ, ಚಪಾತಿಗಳಾದರೆ ಇನ್ನೊಂದರಲ್ಲಿ ಸಾರು ಹಾಗು ಪಲ್ಯಗಳ ಮಿಶ್ರಣ. ನಾನು ಆಕೆಯ ಮುಂದೋಗಿ ನಿಂತರೂ ಆಕೆ ನನ್ನನ್ನು ಏನೂ ಕೇಳಲಿಲ್ಲ. ಆಕೆಯ ನೋಟ ನನ್ನಲ್ಲಿ ಏನೋ ಒಂದು ಬಗೆಯ ಸಂಕಟವನ್ನು ಉಂಟುಮಾಡಿತು. ನಾನು ಆಕೆಯ ಕಣ್ಣುಗಳನ್ನೇ ನೋಡತೊಡಗಿದೆ. ‘ಕ್ಲಬ್ಬು , ಮೋಜು , ಮಸ್ತಿ , ಹಣ , ಗಾಡಿ , ಗುಟ್ಕಾ ಎಲ್ಲದರ ಮದ್ಯೆ ಜೀವನವೆಂದರೆ ಇದೆ , ನನನ್ನು ನೋಡಿ ಕಲಿ’ ಅನ್ನುವಂತಿತ್ತು ಆಕೆಯ ನೋಟ. ನಾನು ಕ್ಲಬ್ಬಿನಿಂದ ಕಟ್ಟಿಸಿಕೊಂಡು ಬಂದಿದ್ದ ಬಿರಿಯಾನಿಯೊಟ್ಟಿಗೆಐನೂರರ ಒಂದು ನೋಟನ್ನು ಅದರೊಟ್ಟಿಗಿಟ್ಟು ಆಕೆಗೆ ನೀಡಿದೆ. ಬಿರಿಯಾನಿಯ ಪೊಟ್ಟಣವಷ್ಟನ್ನೇ ಪಡೆದು ಆಕೆ ಹಣವನ್ನು ನನಗೆ ವಾಪಸ್ಸು ನೀಡಿದಳು! ಪುನ್ಹ ನಾನು ಕೊಡಲೋದೆ. ಆಕೆ ಬೇಡವೆನುತ ತನ್ನ ತಲೆಯನ್ನಾಡಿಸಿದಳು. ನನಗೆ ದಿಗ್ಭ್ರಮೆಯಾಯಿತು. ಪ್ಲಾಂಟರ್ಸ್ ಕ್ಲಬ್ಬು, ಐಷಾರಾಮಿ ಕಾರುಗಳು, ಸ್ವಿಮ್ಮಿಂಗ್ ಪೂಲು, ಟೇಬಲ್ ಟೆನ್ನಿಸ್ ಟೇಬಲ್ಲು, ದುಬಾರಿ ಇಂಗ್ಲೀಷು, ತಂದೂರಿ ಚಿಕನ್ನು, ಸುಳ್ಳೇಳಿ ಹಣವನ್ನು ದೋಚುವ ಮಕ್ಕಳು, ಅವರ ಕೊಳಕು ಬಟ್ಟೆ ಹಾಗು ಈ ಮುದುಕಿ. ನನಗೆ ಅಲ್ಲಿ ನಿಲ್ಲಲಾಗಲಿಲ್ಲ. ಕೂಡಲೇ ಅಲ್ಲಿಂದ ಹೊರಟೆ. ಮುದುಕಿ ಪೊಟ್ಟಣವನ್ನು ಬಿಡಿಸಿ ಬಿರಿಯನಿ ಅನ್ನವನ್ನು ಚಪಾತಿ, ದೋಸೆ ಹಾಗು ರೊಟ್ಟಿಯಿದ್ದ ಪ್ಲಾಸ್ಟಿಕ್ ಕವರ್ನೊಳಗೆ ಹಾಕಿಕೊಂಡಳು. ಆಕೆಗೆ ಬಿರಿಯಾನಿ ಹಾಗು ರೊಟ್ಟಿಗಳ ನಡುವೆ ಯಾವುದೇ ವ್ಯತ್ಯಾಸ ಕಾಣಲಿಲ್ಲ. ಎಲ್ಲವನ್ನೂ ಒಟ್ಟಿಗೆ ಬೆರೆಸಿ ಶಾಂತವಾಗಿ ಪುನಃ ಮರದ ಕೆಳಗೆ ನಿಂತಳು.

****

ಪಯಣ - 3

'ಬೋಳಿಮಗ ನಿಮ್ ಅಪ್ಪಂಗ್ ಹೇಳು.... ನಿನ್ ಕಾಲ್ ಕಟ್ ಮಾಡಿ ನಾಯಿಗ್ ಆಕ್ತಿನಿ..' ಅಪ್ಪ ಚೀರತೊಡಗಿದ. ಊರಿಗೆ ಬಂದು ಒಂದೊಳ್ಳೆ ನಿದ್ರೆ ಮಾಡುವ ಕನಸು ಆದಿಗೆ ನನಸಾಗದ ಕನಸ್ಸಾಗಿಯೇ ಉಳಿದಿದೆ. ದಿನಾ ಬೆಳಗಾದರೆ ಹಾವು ಮುಂಗಸಿಯಂತೆ ಕಾದಾಡುವ ಇವರುಗಳನ್ನು ಕಂಡು ಭಯ, ಅಂಜಿಕೆ ಇತ್ತೀಚಿಗೆ ಏಕೋ ವಿಪರೀತವಾಗಿದೆ. ಅಪ್ಪನ ಸದ್ದನ್ನು ಕೇಳಿದರೇ ಎದೆ ಒಂದೇ ಸಮನೆ ಬಡಿದುಕೊಳ್ಳುತ್ತದೆ. ಜೀವನದ ಮೇಲೆಯೇ ಒಂದು ಬಗೆಯ ಜಿಗುಪ್ಸೆ ಮೂಡತೊಡಗುತ್ತದೆ. ಆಗೆಲ್ಲ ತಂಗಿ ಆತನಿಗೆ ಬಹುವಾಗಿ ನೆನಪಾಗುತ್ತಾಳೆ.

'ಅಯ್ಯ ನಿನ್ನ ನಾಲ್ಗೆ ಸೇದೋಗ.. ನಿಮ್ಮ್ ಅಪ್ಪ ಏನ್ ಸಂಪಾನ್ನ?.. ಮನೆ ಒಳ್ಗಡೆ ತೋರ್ಸೋ ನಿನ್ ಪೌರುಷನ ಹೊರ್ಗಡೆ ತೋರ್ಸು ಮುಂಡೇದೆ ' ಎಂದು ಅಮ್ಮ ಖಾರವಾಗಿಯೇ ಹೇಳಿದಳು.

'ನಿನ್ ಜಾತಿನಾ..' ಎಂದು ರಣಭಯಂಕರನಾದ ಅಪ್ಪ ಅಮ್ಮನನ್ನು ಒಡೆಯಲು ದಬದಬನೆ ನುಗ್ಗಿದ. ಅಷ್ಟರಲ್ಲಿ ಆದಿ ಎದ್ದು ಅಡುಗೆ ಮನೆಗೆ ಓಡಿ ಆತನನ್ನು ಎಳೆಯತೊಡಗಿದ. ಹುಚ್ಚೇರಿದ ಶ್ವಾನದಂತೆ ಹಿಂದೆಳೆದಷ್ಟೂ ಆತ ನುಗ್ಗಿ ನುಗ್ಗಿ ಮುನ್ನೆಡೆಯತೊಡಗಿದ. ಆದಿಗೆ ಭಯದೊಟ್ಟಿಗೆ ದುಃಖವೂ ಉಲ್ಬಣಿಸಿತ್ತು. ಅಷ್ಟರಲ್ಲಾಗಲೇ ಕಣ್ಣೀರ ಧಾರೆ ಉಕ್ಕಿ ಹರಿಯತೊಡಗಿತ್ತು.

'ಅಪ್ಪ.. ಬಿಡಪ್ಪ.. ನಿನ್ನ ದಮ್ಮಯ್ಯ ಅಂತೀನಿ.. ಬಿಡು' ಎಂದು ರೋದಿಸತೊಡಗಿದ ಆತನನ್ನು ಕಂಡು ಕೂಡಲೇ ಅಪ್ಪ ದೂರವಾಗಿ,

'ನೀನೂ ಬಳೆ ತೊಟ್ಕೊಂಡು ಹಿಂಗೇ ಇದ್ಬಿಡು..ಒಳ್ಳೆ ಹೆಂಗ್ಸ್ ಆಗೋದಲ್ಲೋ ನೀನೂ.. ಥು..' ಎನುತ ಮೂದಲಿಸಿ ಆತ ಹೊರನೆಡೆದ.

'ನೀನ್ಯಾಕೋ ಅಳ್ತಿಯಾ .. ಹೋಗ್ ಮಲಿಕೋ' ಎನುತ ಅಮ್ಮ ತನ್ನ ಕೆಲಸದಲ್ಲಿ ಮಗ್ನಳಾದಳು.

ಆದರೆ ಅಪ್ಪನ ಮಾತುಗಳು ಆದಿಯನ್ನು ನಾಚಿಕೆಯ ಕೂಪದೊಳಗೆ ತಳ್ಳಿದಂತೆ ಮಾಡಿದವು. ತಾನೊಬ್ಬ ಸಭ್ಯ ವ್ಯಕ್ತಿಯಾಗಿ ಊರಿನಲ್ಲಿ ನಾಲ್ಕಾರು ಜನಗಳಿಂದ ಗೌರವವನ್ನು ಗಳಿಸಿಕೊಳ್ಳಬೇಕು, ಅಲ್ಲ, ಇಡೀ ಪ್ರಪಂಚದಲ್ಲೇ ಗೌರವವನ್ನು ಗಿಟ್ಟಿಸಿಕೊಳ್ಳಬೇಕು,ಸಿನಿಮಾ ನಟನಾಗೋ, ಪ್ರಸಿದ್ಧ ಗಾಯಕನಾಗೋ, ಹೆಚ್ಚು ಹಣ ಸಂಪಾದಿಸುವ ಮಂತ್ರಿಯಾಗೋ, ಖಡಕ್ ಅಧಿಕಾರಿಯಾಗೋ ಅಥವಾ ಅಪ್ರತಿಮ ಕ್ರಿಕೆಟ್ ಆಟಗಾರನಾಗಿಯೋ ಒಟ್ಟಿನಲ್ಲಿ ತನ್ನ ನೋಡಲು ಜನರು ಮುಗಿಬೀಳಬೇಕು. ನೋವು ಹತಾಶೆಯನ್ನು ನೀಡಿದ ಸಮಾಜದ ಜನ ನನ್ನ ನೋಡಿ ಗಡಗಡನೆ ಕಂಪಿಸಬೇಕು. ನನ್ನ ಒಂದು ಮಾತು ವೇದವಾಕ್ಯವಾಗಬೇಕು ಎಂದು ಕನಸ್ಸನ್ನು ಕಾಣುತ್ತಿದ್ದ ಆದಿಗೆ ಅಪ್ಪನ ಮೂರೂ ಬಿಟ್ಟ ವರ್ತನೆ ಹಾಗು ಅಮ್ಮನ ಹಠಮಾರಿತನವನ್ನು ಕಂಡು ಸಿಟ್ಟು ವಿಪರೀತವಾಯಿತು. ವಿಕಾರವಾಗಿ ಕೂಗುತ್ತ ತನ್ನೆರೆಡು ಕೈಗಳಿಂದ ಕೂದಲುಗಳನ್ನು ಹಿಡಿದೆಳೆಯತೊಡಗಿದ.

'ನಿಂಗೇನಾಯಿತೋ ಮಾರಾಯ.. ಹೋಗ್ಲಿ, ಹೋಗ್ ಮುಖ ತೊಳ್ಕ, ತಿಂಡಿ ಮಾಡಂತೆ ' ಎಂದು ಅಮ್ಮ ಆದಿಯ ಅಂತರ್ಯುದ್ಧಕ್ಕೆ ಕಿಂಚಿತ್ತೂ ಬೆಲೆಯನ್ನು ಕೊಡದವಳಂತೆ, ಅಪ್ಪನ ಈ ಉಪಟಳ ಅತಿ ಸಾಮಾನ್ಯವಾದ ಸಂಗತಿಯೇನೂ ಎಂಬಂತೆ ವರ್ತಿಸತೊಡಗಿದಳು.ಅಕ್ಕಿ ರೊಟ್ಟಿ ಹಾಗು ತರಕಾರಿ ಸಾರಿನೊಟ್ಟಿಗೆ ಸಿಟ್ಟಿನಿಂದ ಬೇಡವೆಂದರೂ ಬಿಡದೆ ಸುರಿದ ತುಪ್ಪವನ್ನು ಬೆರೆಸಿ ತಿಂದು ಮನೆಯಿಂದ ಬಿರಬಿರನೆ ಹೊರನೆಡೆದ.

**

ಅದು ತಾನು ಚಿಕ್ಕಂದಿನಿಂದ ಓದಿ ಬೆಳೆದ ಶಾಲೆ. ಊರ ಹಿರಿಯ ಪ್ರಾಥಮಿಕ ಪಾಠಶಾಲೆ. ಏಳುಕೋಣೆಗಳ ತರಗತಿಗಳನ್ನು ಬಿಟ್ಟರೆ ಪ್ರವೇಶದ್ವಾರಕ್ಕೆ ಎದುರಾಗಿ ಸಿಗುವ ಎಂಟನೇ ಕೋಣೆಯೇ ಶಾಲೆಯ ಕಾರ್ಯಲಯ / ಆಫೀಸ್ ರೂಮ್. ಆಗೆಲ್ಲ ಈ ಆಫೀಸ್ ರೂಮಿನ ಒಳಗೆ ಹೋಗುವುದೇ ಒಂದು ಸಾಧನೆ ಎಂದುಕೊಂಡಿದ್ದ ಆದಿ ಹಾಗು ಆತನ ಗೆಳೆಯರು ಅದೆಷ್ಟೋ ಬಾರಿ ಕಿಟಕಿಯ ಮೂಲಕ ಕಳ್ಳರು ಇಣುಕುವಂತೆ ಅದರ ಪಕ್ಕಕ್ಕೆ ಇದ್ದ ಸಣ್ಣ ರೂಮಿನೊಳಗೆ ಇಣುಕುತ್ತಿದ್ದರು. ಅಲ್ಲಿ ಹಿಮಾಲಯ ಪರ್ವತವನ್ನು ಏರಿ ಸುಸ್ತಾಗಿ ವಿಶ್ರಮಿಸುವ ಅರ್ಥಾತ್ ನಿದ್ರೆಗೆ ಜಾರಿರುವ ಶಿಕ್ಷಕರನ್ನು ಕಂಡು ನಗುವ ಖುಷಿ ಅಪಾರವಾದುದ್ದಾಗಿತ್ತು. ಅಲ್ಲದೆ ಮಧ್ಯಾನದ ತಮ್ಮ ಈ ನಿದ್ರಾ ತಪಸ್ಸಿಗೆ ಭಂಗಬಾರದಿರುವಂತೆ ಮಕ್ಕಳ್ಳೆಲ್ಲರನ್ನೂ ಹೊರಕಳಿಸಿ ದಷ್ಟಪುಷ್ಟವಾಗಿರುವ ಒಂದಿಬ್ಬರು ಹುಡುಗರನ್ನು ಸ್ಕೂಲ ದೊಡ್ಡ ಗೇಟಿನ ದ್ವಾರಪಾಲಕರನ್ನಾಗಿ ಮಾಡಿ ಯಾರೊಬ್ರನ್ನೂ ಶಾಲೆಯ ಒಳಗೆ ಬಿಡದಂತೆ ಹೇಳುತ್ತಿದ್ದರು ಅಲ್ಲಿನ ಶಿಕ್ಷಕರು. ಆದರೆ ಆದಿ ಹಾಗು ಆತನ ಗುಂಪು ಮಾತ್ರ ಹೊಟ್ಟೆನೋವು ತಲೆನೋವೆಂಬ ಕಳ್ಳ ನೆಪವನ್ನೊಡ್ಡಿ ಶಾಲೆಯ ಒಳಗೆಯೇ ಇದ್ದು ಆಫೀಸ್ ರೂಮಿನ ಕಿರುಗಂಡಿಯ ಮೂಲಕ ಶಿಕ್ಷಕರ ವಿಭಿನ್ನ ಆಕೃತಿಗಳನ್ನು ನೋಡಿ ನಲಿಯುತ್ತಿದ್ದರು.

ಇದೀಗ ವರ್ಷಗಳೇ ಕಳೆದಿವೆ. ಹಳೆಯ ನೆನಪುಗಳು ಶಾಲೆಯ ಮುಂಬದಿಯ ತೆಂಗಿನ ಮರಗಳಂತೆ ಬೆಳೆದು ದಿಗಂತ ಮುಟ್ಟುವುದೊಂದೇ ಬಾಕಿ ಎನುವಂತೆ ಬೆಳೆದಿವೆ. ಗೇಟಿನ ಮೂಲಕ ಒಳಬಂದು ಬಲಕ್ಕೆ ತಿರುಗಿದರೆ ಏಳನೇ ತರಗತಿಯ ಹುಡುಗರು ಏನೋ ಒಕ್ಕೂರಲಿನಿಂದ ಓದುತ್ತಿದ್ದಾರೆ.

‘ಸತ್ಯ ನಿತ್ಯತೆಯ ನಿಯಮ. ಶಕ್ತಿಯನ್ನು ಸೃಷ್ಟಿಸಲೂ ಆಗದು. ನಾಶ ಪಡಿಸಲೂ ಆಗದು. ಅದನ್ನು ಒಂದು ಬಗೆಯಿಂದ ಮತ್ತೊಂದು ಬಗೆಗೆ ಪರಿವರ್ತಿಸಬಹುದಷ್ಟೆ’

ಸ್ವಲ್ಪ ಸುಮ್ಮನಾದ ನಂತರ ಶಿಕ್ಷಕರು ನೆನ್ನೆಯ ಮನೆಗೆಲಸವನ್ನು ತೋರಿಸುವಂತೆ ಹೇಳಿದರು. ನೆನ್ನೆಯಷ್ಟೇ ಹೊಸ ನೋಟ್ ಬುಕ್ಕನ್ನು ತಂದಿದ್ದ ಹುಡುಗನೊಬ್ಬನಿಗೆ ಮೆನೆಗೆಲಸ ಇದೇ ಎಂಬುದೇ ಮರೆತುಹೋಗಿದೆ. ಹೆದರುತ್ತಲೇ ಶಿಕ್ಷಕರ ಬಳಿಗೆ ಹೋದ ಆತ ಮುಂದೆ ಏನು ಮಾಡುವುದೆಂದು ತೋಚದೆ ಅಳುಕುತ್ತಲೇ ನೋಟ್ಬೊಕ್ಕನ್ನು ಅವರಿಗೆ ನೀಡಿದ. ಅದನ್ನು ನೋಡಿದ ಶಿಕ್ಷಕಿ ಕೂಡಲೇ ತನ್ನ ಕನ್ನಡಕವನ್ನು ಹಾಕಿಕೊಂಡರು. ಕಣ್ಣನ್ನು ಕೆರಳಿಸಿ ಹುಡುಗನನ್ನು ಧಿಟ್ಟಿಸತೊಡಗಿದರು. ನಂತರ ನೋಟ್ ಬುಕ್ಕಿನ ಮೊದಲ ಪೇಜಿನ ತುಂಬಾ ಬರೆದಿದ್ದ ಪದಗಳನ್ನು ಕ್ಲಾಸಿಗೆ ಕೇಳುವಂತೆ ಜೋರಾಗಿ ಓದಿ ಹೇಳಿದಳು. ಶಿಕ್ಷಕಿಯ ಕನ್ನಡಕ ಹಾಗು ಅದರೊಳಗಿದ್ದ ಬೆಂಕಿ ಕಾರುವ ಕಣ್ಣುಗಳನ್ನು ಕಂಡು ಹುಡುಗನಿಗೆ ಕಾಲುಗಳು ಒಂದೇ ಸಮನೆ ನಡುಗಹತ್ತಿದವು. ಆ ವರ್ಷ ತೆರೆಕಂಡ ಚಲನಚಿತ್ರಗಳ ಹೆಸರು ಹಾಗು ಅವುಗಳ ನಾಯಕ ನಾಯಕಿಯರ ಹೆಸರುಗಳನ್ನು ನೀಟಾಗಿ ನೋಟ್ಬುಕ್ಕಿನಲ್ಲಿ ಬರೆಯಲಾಗಿದ್ದಿತು. ಇಡೀ ಶಾಲೆ ನಗೆಯ ಹೊಳೆಯಲ್ಲಿ ತೇಲಿ ಹೋಯಿತು. ಹುಡುಗನಿಗೂ ನಗುವ ಮನಸ್ಸಾದರೂ ಕನ್ನಡಕದ ಒಳಗಿದ್ದ ಆ ಶಿಕ್ಷಕಿಯ ಪ್ರಖರ ಕಣ್ಣುಗಳು ಆತನ ಯಾವೊಂದು ಪ್ರತಿಕ್ರಿಯೆಯೂ ಹೊರಬಾರದಂತೆ ಹತ್ತಿಕ್ಕಿದ್ದವು. ಟೇಬಲ್ಲಿನ ಮೇಲಿದ್ದ ಬೆತ್ತದ ಕೋಲಿನಿಂದ ಕೈಮೇಲೆ ಒಂದೆರೆಡು ಪೆಟ್ಟುಗಳನ್ನು ಬಾರಿಸಿ ಅವರು ನೋಟ್ ಬುಕ್ಕನ್ನು ಹೊರಗೆಸೆದರು. 'ಹೋಗಿ ಹೋಂ ವರ್ಕ್ ಬರ್ಕೊ ಬಾ.. ಕತ್ತೆ' ಎಂದರು. ಪ್ರೀತಿಯಿಂದ ಕೊಂಡ ವರ್ಷದ ಮೊದಲ ಪುಸ್ತಕ ಗಾಳಿಯಲ್ಲಿ ತೇಲುತ್ತಾ ಕ್ಲಾಸ್ ರೂಮಿನ ಹೊರಬಂದು ಆದಿಯ ಮುಖಕ್ಕೆ ಬಡಿದಂತೆ ಭಾಸವಾಯಿತು. ಕಲ್ಪನಾ ಲೋಕದಲ್ಲಿ ಮುಳುಗಿದ್ದ ಆತನಿಗೆ ತನ್ನ ಬಾಲ್ಯವನ್ನು ನೆನೆದು ಮುಗುಳ್ನಗೆಯೊಂದು ಮೂಡಿತು.

ತಾನು ಅಂದು ಬರೆದಿದ್ದ ಚಲನಚಿತ್ರದ ಆ ಹೆಸರುಗಳು ಇಂದಿಗೂ ಆತನ ಮನದಲ್ಲಿ ಮರೆಯದೆ ಹಚ್ಚೋತ್ತಿವೆ.

'ಯಸ್..' ಗಡಸು ಧ್ವನಿಯಲ್ಲಿ ತನ್ನನ್ನು ಸಂಬೋಧಿಸಿ ಕರೆದ ಸದ್ದು ಸ್ಕೂಲಿನ PT ಮಾಸ್ಟರದ್ದು. ಕಪ್ಪಗೆ ಆರಡಿ ಉದ್ದದ ಆ ದೇಹಾಕಾಯ ಈಗಲೂ ಅದೇನೋ ಒಂದು ಬಗೆಯ ಭಯವನ್ನು ಹುಟ್ಟಿಸುತ್ತಿತ್ತು.

'ನಮಸ್ಕಾರ ಸಾರ್.. ಹೇಗಿದ್ದೀರಾ'

'ನಮಸ್ತೆ.. ಯಾರಪ್ಪ ನೀನು'

'ಮರ್ತ್ ಹೋಯ್ತಾ ಸಾರ್..ನಾನು ಆದಿ.. ಎಂಟ್ ವರ್ಷದ ಹಿಂದೆ ಇಲ್ಲೇ ಓದಿದ್ದೆ..'

'ಒಹ್ ಹೌದೇ.. ಒಳ್ಳೇದು.. ಎಲ್ಲಿದ್ದೀಯಪ್ಪ.. ಈಗ್ ಏನ್ ಮಾಡ್ತಾ ಇದ್ದೀಯ'

'ಡಿಗ್ರಿ ಓದ್ತಾ ಇದ್ದೀನಿ ಸಾರ್..'

'ಗುಡ್, ವೆರಿ ಗುಡ್. ನಮ್ ಸ್ಕೂಲ್ ಮಕ್ಳು ಹೀಗೆ ದೊಡ್ಡ್ ದೊಡ್ಡ್ ಕೋರ್ಸ್ ಓದಿ ನಮ್ ಶಾಲೆ ಹೆಸ್ರು ಉಳಿಸ್ಬೇಕು'

ಡಿಗ್ರಿಯನ್ನೂ ಒಂದು ದೊಡ್ಡ್ ಕೋರ್ಸ್ ಎನ್ನುವ ಅವರ ಮಾತನ್ನು ಕೇಳಿ ಆದಿಗೆ ತನ್ನ ಮೇಲೆಯೇ ಕರುಣೆ ಮೂಡಿತು!

'ಖಂಡಿತ ಸಾರ್. ನಿಮ್ಮಂತ ಶಿಕ್ಷಕರು ಈಗೆಲ್ಲಿ ಸಿಗ್ತಾರೆ.. ನಿಮ್ಮಂತ ಟೀಚರ್ಸ್ ಇರ್ದೆ ಹೋಗಿದ್ರೆ ನಾವೆಲ್ಲಿ ಇಷ್ಟ್ ಓದೋಕೆ ಆಗೋದು'

ಕೊಂಚ ಮುಗುಳ್ ನಕ್ಕ ಅವರು 'ಓದೋಕೆ ಒಳ್ಳೆ ಆಸಕ್ತಿ ಅನ್ನೋದು ಬೇಕಪ್ಪ .. ಅದ್ ಇಲ್ಲ ಅಂದ್ರೆ ಏನ್ ಮಾಡಿದ್ರೂ ಅಷ್ಟೇನೆ.. ನೀವೆಲ್ಲ ಆಸಕ್ತಿ ಕೊಟ್ಟು ಓದಿದಕ್ಕೆ ಈವಾಗ ಡಿಗ್ರಿ ತನಕ ಓದಿರೋದು' ಎಂದು 'ಅದ್ ಬಿಡಪ್ಪ, ಏನ್ ಬಂದಿದ್ದು ಈಗ? ಏನಾದ್ರು ಕೆಲ್ಸ ಇತ್ತ' ಎಂದು ಕೇಳಿದರು.

'ಹೌದು ಸಾರ್.. ಸ್ಟಡಿ ಸರ್ಟಿಫಿಕೇಟ್ ಬೇಕಿತ್ತು'

'ಹೌದೇ.. ಆದ್ರೆ ಹೆಡ್ ಮೇಡಂ ಇವತ್ತು ಬಂದಿಲ್ವಲ್ಲ..' ಎಂದು ಕೊಂಚ ಸುಮ್ಮನಾದ ನಂತರ

'ತೊಂದ್ರೆ ಇಲ್ಲ ಬಾ.. ನಾನೇ ಬರ್ದು ಸ್ಟ್ಯಾಂಪ್ ಹಾಕಿ ಕೊಡ್ತಿನಿ.. ಅದಕ್ಕಾಗಿ ಇನ್ನೊಂದ್ ದಿನ ಯಾಕ್ ಬರ್ತೀಯ' ಎಂದು ಆದಿಯನ್ನು ಆಫೀಸ್ ರೂಮಿನೊಳಗೆ ಕೊಂಡೊಯ್ದರು.

'ಯಾವ ಇಯರ್ ಅಪ್ಪ ನಿಂದು' ಎಂದು ತಮ್ಮ ಕನ್ನಡಕವನ್ನು ಸರಿಪಡಿಸಿಕೊಳ್ಳುತ್ತಾ ದೊಡ್ಡದಾದೊಂದು ರಿಜಿಸ್ಟರ್ ಬುಕ್ಕನ್ನು ತೆಗೆದು ನೋಡತೊಡಗಿದರು.

ಒಂದು ಕಾಲದಲ್ಲಿ ಶಾಲೆಗೇ ಬಾರದಿರಲು ನೆಪವೊಡ್ಡುತ್ತಿದ್ದ ಆದಿ ಈಗ ಪ್ರತಿ ದಿನವೂ ಆ ಶಾಲೆಗೆ ಬಂದು ಕೂರಲು ಅವಣಿಸುತ್ತಾನೆ. ಒಮ್ಮೆಲೇ ಇಡೀ ವ್ಯವಸ್ಥೆಯೇ ಬದಲಾಗಬಾರದೇಕೆ? ನಾವಿಲ್ಲಿಯವರೆಗೂ ಓದಿರುವುದನ್ನು ಯಾರಾದರೂ ಉಗ್ರಹೋರಾಟ ಮಾಡಿ ಅನರ್ಹಗೊಳಿಸಿ ನಮ್ಮೆಲ್ಲರನ್ನೂ ಪುನ್ಹ ಮೊದಲನೇ ತರಗತಿಯಿಂದ ಓದುವಂತೆ ಮಾಡಬಾರದೇಕೆ? ಆಗ ನನ್ನ ಆಗಿನ ಗೆಳೆಯರೆಲ್ಲರೂ ಮತೊಮ್ಮೆ ಸಿಗುವರು.

ಖುಷಿಯೂ ಬಹುಷಃ ಸಿಗುವಳು.

ಖುಷಿ. ಹೆಸರನ್ನು ನೆನಪಿಸಿಕೊಂಡಾಗಲೇ ಮೈಯ ರೋಮುಗಳೆಲ್ಲ ಎದ್ದು ನಿಂತವು ಆದಿಗೆ. ಇಂದು ತಾನು ನಿಂತಿದ್ದ ಜಾಗದಲ್ಲೇ ಸರಿಯಾಗಿ ಎಂಟು ವರ್ಷದ ಹಿಂದೆ ಕೊನೆಯ ಬಾರಿ ಆಕೆಯನ್ನು ನೋಡಿದ್ದ ನೆನಪು. ಏಳನೇ ತರಗತಿಯ ಪಬ್ಲಿಕ್ ಪರೀಕ್ಷೆಯ ನಂತರ ಮಾರ್ಕ್ಸ್ ಶೀಟನ್ನು ತೆಗೆದುಕೊಳ್ಳಲು ಕೊನೆಯಬಾರಿ ಹೋದಾಗ ಕಾಕತಾಳೀಯವೆಂಬಂತೆ ಆಕೆಯೂ ಅದೇ ಸಮಯಕ್ಕೆ ಬಂದಿದ್ದಳು. ಕಪ್ಪು ಬಣ್ಣದ ಬಟ್ಟೆಯ ಮೇಲೆ ಹರಿಶಿನ ಬಣ್ಣದ ನಕ್ಷತ್ರಗಳೂ ಅಥವಾ ಹರಿಶಿನ ಬಣ್ಣದ ಬಟ್ಟೆಯ ಮೇಲೆ ಕಪ್ಪು ಬಣ್ಣದ ಚಿಟ್ಟೆಗಳೋ ನೆನಪಿಗೆ ಬರುತ್ತಿಲ್ಲ. ಆದರೆ ಆಕೆಯ ನೆನಪು ಬಾರದ ದಿನಗಳೇ ಇರಲಿಲ್ಲ. ಕಲ್ಲಾಟ. ಬಿಡುವು ಸಿಕ್ಕಾಗೆಲ್ಲ ಆಕೆಯ ಜೊತೆಗೆ ಹತ್ತಾರು ಕಲ್ಲುಗಳು. ಕರ ಕರ ಸದ್ದನ್ನು ಮಾಡುತ್ತಾ, ಒಂದೊಂದೇ ಕಲ್ಲನ್ನು ಗಾಳಿಗೆ ಎಸೆಯುತ್ತಾ, ಕೈ ಬೆವತು ನೆಲದ ಮೇಲಿದ್ದ ದೂಳೆಲ್ಲ ಸೇರಿ ಕೊಳಕುಗೊಂಡ ಕೈಗಳಲ್ಲೇ ಒಂದರಹಿಂದೊಂದರಂತೆ ಆಕೆಯೊಟ್ಟಿಗೆ ಆಡಿದ ಆಟಗಳು ಅದೆಷ್ಟೋ. ಕಡೆಯ ಪಕ್ಷ ಅಂದಿನ ಒಂದೆರೆಡು ಕಲ್ಲುಗಳನ್ನು ನಾನು ಇಂದಿಗೂ ಕಾಪಾಡಿಕೊಂಡು ಬರಬೇಕಿತ್ತು ಎಂದುಕೊಳ್ಳುತ್ತಾನೆ ಆದಿ.

'ಇಲ್ಲಿದೆ ನೋಡು.. ಸಿಗ್ತು ಬಿಡು..' ಎಂದರು ಮೇಷ್ತ್ರು.

ಆದಿ ತನ್ನ ಹೆಸರಿನ ಪೇಜಿನಲ್ಲೇ ಇದ್ದ ಖುಷಿಯ ಹೆಸರನ್ನು ನೋಡಿದ. ಖುಷಿ, ರೋಲ್ ನಂಬರ್ 36.

ತನ್ನ ಬಳಿಯಿದ್ದ ಸ್ಟಡಿ ಸರ್ಟಿಫಿಕೇಟ್ ನ ಕಾಪಿಯನ್ನು ಅವರಿಗೆ ನೀಡಿದ ಆದಿ. ಅತ್ಯಂತ ನಾಜೂಕಾಗಿ ಏಕಾಗ್ರತೆಯಿಂದ ಅದನ್ನು ಬರೆದು ಶಾಲೆಯ ಸ್ಟ್ಯಾಂಪ್ ನ್ನು ಹಾಕಿ ತಮ್ಮದೇ ಸಹಿಯನ್ನು ಅದರಲ್ಲಿ ತಿದ್ದಿ ಕೊಟ್ಟರು. ಆಗಿನ ಬ್ಯಾಚಿನಿಂದ ಉಳಿದಿರುವ ಏಕೈಕ ಶಿಕ್ಷಕರು ಇವರು ಮಾತ್ರ ಎಂದು ಏಕೋ ಆದಿಯ ಮನಸ್ಸು ಕಸಿವಿಸಿಯಾಯಿತು. ಅವರಿಗಾಗಿ ಒಂದು ನೂರರ ನೋಟನ್ನು ಕೊಡುವ ಮನಸ್ಸಾದರೂ ಎಲ್ಲಿ ಅಬ್ಬರಿಸಿ ಕಿವಿಯಿಂಡುವರೋ ಎಂಬ ಭಯದಿಂದ ಆತ ಸುಮ್ಮನಾದ.

'ಸರಿ ಸಾರ್, ಬರ್ತೀನಿ. ತುಂಬ ಧನ್ಯವಾದ ' ಎಂದೇಳಿ ಆದಿ ಆಫೀಸ್ ರೂಮಿನಿಂದ ಹೊರನೆಡೆದ.

ಆಫೀಸ್ ರೂಮಿನ ಪಕ್ಕದಲ್ಲಿದ್ದ ಕಿಟಕಿಯ ಕಿಂಡಿ ಈಗಲೂ ಹಾಗೆಯೆ ಇದೆ. ಒಮ್ಮೆ ಅದರ ಮೂಲಕ ನೋಡುವ ಮನಸ್ಸಾಗಿ ಅದರ ಬಳಿಗೆ ಹೋದರೂ ಏಕೋ ಇಣುಕಿ ನೋಡುವ ಧೈರ್ಯ ಮಾತ್ರ ಸಾಲಲಿಲ್ಲ. ಹಾಗೆಯೇ ಮುನ್ನೆಡೆದು ತಾನು ಓದಿದ ತರಗತಿಗಳನ್ನೆಲ್ಲ ಒಳಗೆ ಕಣ್ಣಾಯಿಸಿ ಖುಷಿಯೊಟ್ಟಿಗೆ ಕಲ್ಲಾಟವಾಡುತ್ತಿದ್ದ ಜಾಗದಲ್ಲಿ ತುಸುಹೊತ್ತು ಸುಮ್ಮನೆ ಕೂತ.

****

‘ಹಾಯ್.. ಅವತ್ತು ನೀವ್ ಹೇಳಿದ್ದ ಬಿಸಿನೆಸ್ ಪ್ಲಾನ್ ಎಕ್ಸಲೆಂಟ್ ಆಗಿತ್ತು. Really a very good concept! You should keep working on it…’ ಎಲ್ಲಿಂದಲೋ ಪ್ರತ್ಯಕ್ಷನಾದವನಂತೆ ಲೊಕೇಶನ ಬಳಿಗೆ ಬಂದು ಹೇಳಿದ ಆದಿ.

ಒಮ್ಮೆ ಸೂಕ್ಶ್ಮವಾಗಿ ಆತನನ್ನು ಗಮನಿಸಿದ ಲೋಕೇಶ ‘ಹೌದು ಬಿಡಪ್ಪ.. ಇಡೀ ಕ್ಲಾಸ್ಗೆ ಗೊತ್ತಾಗ್ಲಿಲ್ಲ ಇನ್ ನಿಂಗೆ ಎಲ್ಲ ಗೊತ್ತಾಯ್ತ..? ಸುಮ್ನೆ ಅಟ್ಟ ಏರ್ಸ್ಬೇಡ..' ಆದಿಯ ಮಾತಿಗೆ ತೀರಾ ಉಡಾಫೆಯ ಉತ್ತರವನ್ನು ಕೊಟ್ಟ ಲೋಕೇಶ.

ತನ್ನ ಬಹುವಚನದ ಪ್ರೆಶ್ನೆಗೆ ಲೊಕೇಶನ ಏಕವಚನದ ಉತ್ತರ ಕೊಂಚ ಸಿಟ್ಟು ಮೂಡುವಂತೆ ಮಾಡಿದರೂ ಆದಿ ಸುಮ್ಮನಾದ.

'Zuckerberg ಫೇಸ್ಬುಕ್ ಕಂಡುಹಿಡಿದಾಗಲೂ ಕೆಲವು ಮಂದಿ ಹೀಗೆಯೇ ಅಂದಿದ್ದರು.. ನಿಮ್ಮ ಐಡಿಯಾ ಅದಕ್ಕೇನೂ ಕಮ್ಮಿ ಇಲ್ಲ..' ಈ ಬಾರಿ ಆದಿ ಬೇಕಂತೆಲೆ ಆತನನ್ನು ಅಟ್ಟಕ್ಕೇರಿಸಿದ.

ಆದರೆ ಲೋಕೇಶ ಈ ಬಾರಿ ಸೀರಿಯಸ್ನಾದ. ಆತನ ಮುಖ ಗಂಟುಕಟ್ಟಿತು. ಕೈಗಳೆರೆಡು ಪ್ಯಾಂಟಿನ ಜೇಬಿನೊಳಗೆ ಹೋದರೆ ಬುಜಗಳೆರಡು ಮೇಲೆದ್ದವು.

'I know bro, ಅದು ಒಳ್ಳೆ ಕಾನ್ಸೆಪ್ಟ್ ಅಂತ. ಆದ್ರೆ ಏನ್ ಮಾಡೋದು ಕೆಲವ್ರಿಗೆ ಅದೆಲ್ಲ ಅರ್ಥ ಆಗಲ್ಲ. ಅದೆಷ್ಟ್ ಜನ ಎಂಜಿನೀರ್ಸ್ ಇಂದು ಸರಿಯಾದ ಕೆಲ್ಸ ಸಿಗ್ದೆ ಬಿಪಿಒ, ಕಾಲ್ ಸೆಂಟರ್ ಗಳಲ್ಲಿ ಕೆಲ್ಸ ಮಾಡ್ತಾ ಇದ್ದಾರೆ. ಅವ್ರ ತಪ್ಪು ಅಲ್ಲಿ ಏನೂ ಇರಲ್ಲ. ಎಲ್ಲ ನಮ್ಮ್ ಸಿಸ್ಟಮ್ ಪ್ರಾಬ್ಲಮ್ ಅಷ್ಟೇ. ಸ್ಟೇಟ್ ಗೆ ಒಳ್ಳೆ ಕಾಲೇಜು ಅಂತಾರೆ ಆದ್ರೆ ಪ್ಲೇಸ್ಮೆಂಟ್ಸ್ ಗೆ ಒಳ್ಳೆ ಕಂಪನಿ ಕರೆದುಕೊಂಡು ಬರೋ ತಾಕತ್ತ್ ಇರಲ್ಲ. 100% ರಿಸಲ್ಟ್ ಅಂತಾರೆ ಆದ್ರೆ ಅಲ್ಲಿ ಪಾಸಾದ ಹಾರ್ಡ್ವೇರ್ ಇಂಜಿನಿಯರ್ ಅವ್ರ ಅಪ್ಪನಾಣೆ ಗೊತ್ತಿರದ ಸಾಫ್ಟ್ವೇರ್ ಕೆಲ್ಸ ಮಾಡೋಕ್ಕೆ ಹೇಳ್ತಾರೆ. ಇಲ್ಲಿ ವಿಷ್ಯ ಇರೋದು ರಿಸೋರ್ಸ್ ಗಳನ್ನು ಅಲೋಕೇಟ್ ಮಾಡೋಕಡೆ. ಸರಿಯಾದ ವಿದ್ಯಾರ್ಥಿಗೆ ಸರಿಯಾದ ಡೆಸ್ಟಿನೇಷನ್ ರೀಚ್ ಮಾಡಿಸೋ ಒಂದು ಗೈಡಿಂಗ್ ಪಾತ್ ಬೇಕಷ್ಟೆ. ವಾಟೆವರ್, ಸದ್ಯಕ್ಕೆ ಅದೆಲ್ಲ ನನ್ನಿಂದ ಅಂತೂ ಸಾಧ್ಯ ಇಲ್ಲ. As of now I’m concentrating on something else..' ಎಂದು ಸುಮ್ಮನಾಗುತ್ತಾನೆ.

'ಬಟ್ ನೀವೇನಾದ್ರು ಹಾಗೆ ಟ್ರೈ ಮಾಡೋದಿದ್ರೆ ನನ್ನ 100% ಸಪೋರ್ಟ್ ಇರುತ್ತೆ ' ಎಂದು ಮುಗುಳ್ ನಕ್ಕ ಆದಿ.

'ಥಾಂಕ್ ಯು ಬ್ರೋ ' ಎಂದ ಲೋಕೇಶ ಕಾಲೇಜಿನ ಟೆರೇಸಿನ ಮೇಲಿಂದ ಅಂತ್ಯವಿರದ ಅನಂತದಂತೆ ಚಾಚಿದ್ದ ಹಸಿರುಸಿರಿಯನ್ನೇ ನೋಡತೊಡಗುತ್ತಾನೆ. ಆದಿಶೇಷನೂ ಆಕೆಡೆಗೆ ಮೊಗ ಮಾಡುತ್ತಾನೆ.

'If you don’t mind, ನಿನ್ನ್ ಹತ್ರ ಒಂದು ಪ್ರೆಶ್ನೆ ಕೇಳ್ಬೇಕಿತ್ತು' ಲೋಕೇಶ ಕೇಳುತ್ತಾನೆ

'Sure..'

'ನೀನು ಯಾವಾಗಲು ಕ್ಲಾಸ್ ರೂಮಿನಲ್ಲಿ ಅಪ್ಸೆಟ್ ಆಗಿರ್ತಿಯ ಏಕೆ.. I have seen you crying many times..'

ಲೊಕೇಶನ ಅಚಾನಕ್ ಪ್ರೆಶ್ನೆಗೆ ಆದಿಗೆ ಉತ್ತರ ಬಾರದಂತಾಗಿ ಗಂಟಲು ಹಿಡಿದಂತಾಗುತ್ತದೆ. ಮುಂದೆ ಎಂದು ಮಾಡಬೇಕೆಂದು ತೋಚದೆ,

'Its nothing..' ಎಂದ ಆತ 'ಕ್ಲಾಸಲ್ಲಿ ಸಿಗೋಣ..' ಎನುತ ಅಲ್ಲಿಂದ ಬಿರಬಿರನೆ ನೆಡೆದು ಹೋಗುತ್ತಾನೆ.

ಅದೇ ಸಮಯಕ್ಕೆ ಈಕಡೆಯಿಂದ ಬಂದ ನನ್ನ 'ಹಾಯ್..' ಗೂ ಉತ್ತರಿಸದೆ ತಲೆ ಕೆಳಗಾಕಿಕೊಂಡು ಆತ ಟೆರೇಸಿನ ಮೆಟ್ಟಿಲಿನಿಂದಿಳಿದ.

'ಏನ್ ಎಳ್ದಪ್ಪ ಪುಣ್ಯಾತ್ಮ.. ಅವನ್ಯಾಕೆ ಹಾಗ್ ಹೊರಟೋದ' ಎಂದು ಲೊಕೇಶನನ್ನು ಕೇಳಿದೆ.

'ಏನಿಲ್ಲ ಬಿಡು.. ಬೈ ದ ವೆ ನಿನ್ನ್ ಹತ್ರ ಒಂದ್ ವಿಷ್ಯ ಮಾತಾಡ್ಬೇಕಿತ್ತು. ಗಲ್ಫ್ ದೇಶಗಳಲ್ಲಿ ಹೆಚ್ಚಾಗಿ ಉಪಯೋಗಿಸೋದು ಈಜಿಪ್ಟ್ and ಬ್ರೆಜಿಲ್ ಕಾಫಿ ಯು ನೋ ..'

‘So..?!’ ಎಂದ ನನಗೆ ಕೊಂಚ ದಿಗ್ಭ್ರಮೆಯಾಯಿತು.

‘ಅವ್ರಿಗೆ ನಮ್ಮ ಮಲೆನಾಡಿನ ಅಚ್ಚ ಕಾಫಿ ರುಚಿ ಗೊತ್ತಿರೋದೇ ಇಲ್ಲ ಮಚಿ. ಹುರಿದ ಪ್ಯೂರ್ ಕಾಫಿ ಬೀಜಕ್ಕೆ ಚಕೋರಿ ಪುಡಿಯನ್ನಷ್ಟೇ ಮಿಕ್ಸ್ ಮಾಡಿ ಆ ಸುಹಾಸನೆಭರಿತ ನಮ್ಮ ನ್ಯಾಚುರಲ್ ಕಾಫಿ ಎಲ್ಲಿ, ಗಾಜಿನ ಡಬ್ಬಿಯೊಳಗೆ ಹಕ್ಕಿಯ ಇಕ್ಕೆಗಳಂತೆ ಕಾಣುವ ಕಪ್ಪಾದ ಆ ಮಣ್ಣಿನ ಪುಡಿಗಳೆಲ್ಲಿ? ನಮ್ಮ್ ಕಾಫಿ, ನಮ್ಮ್ ಹೆಮ್ಮೆ. ಅಲ್ದೆ ಇಲ್ಲಿ ನಮ್ಮವರು ಐವತ್ತು ಕೆಜಿಯ ಒಂದು ಮೂಟೆಯಷ್ಟು ಕಾಫಿಯಲ್ಲಿ ಗಳಿಸೋದು ಅಮ್ಮಮ್ಮ ಎಂದ್ರೆ ಎಂಟರಿಂದ ಒಂಬತ್ತು ಸಾವಿರ. ಇನ್ನು ಖರ್ಚು-ಗಿರ್ಚು ಎಲ್ಲ ಕಳೆದು ಸಿಗೋದು ಹೆಚ್ಚೆಂದರೆ ಐದೇ ಐದು ಸಾವಿರ.. ಇದನ್ನ ಫಾರಿನರ್ಸ್ ಕೇವಲ 10% ಕಾಫಿಯಲ್ಲೇ ದುಡೀತಾರೆ ಮಚಿ! ಅಂದರೆ ಇಲ್ಲಿನ ಐವತ್ತು ಕೆಜಿ ಬ್ಯಾಗು ಅಲ್ಲಿ ಕಡಿಮೆ ಅಂದ್ರೂ 25 ಸಾವಿರ ರೂಪಾಯಿಗಳಿಗೆ ವ್ಯಾಪಾರ ಆಗುತ್ತೆ! ಕಸ್ಟಮ್ಸ್, ಷಿಪ್ಮೆಂಟ್ ಅಂತ ಎಲ್ಲ ಕಳದ್ರು ಒನ್ ಟು ಡಬಲ್ ಲಾಭ ಇದೆ. ಮೇಲಾಗಿ ಇಂಥಾ ಒಂದು ಬಿಸಿನೆಸ್ ಮಾಡೋದ್ರಿಂದ ನಮ್ಮ ಸಣ್ಣ ಹಾಗು ಅತಿ ಸಣ್ಣ ಕಾಫಿ ರೈತರನ್ನು ಉತ್ಕೃಷ್ಟ ಮಟ್ಟದ ಸಾವಯವ ಬೆಳೆಯನ್ನು ಬೆಳೆಯಲು ಉತ್ತೇಜಿಸಬಹುದಲ್ಲದೆ ಅವರ ಬೆಳೆಗೆ ಇಲ್ಲಿನ ಮಾರುಕಟ್ಟೆಗೂ ಹೆಚ್ಚಿನ ಬೆಲೆ ಸಿಗಲ್ವಾ?’

'ಬಾಸ್, ನಿನ್ನ ಕೈ ಮುಗೀತಿನಿ. ನೀನು ಸಿಯಮ್ಮೋ ಪಿಯಮ್ಮೋ ಆಗ್ಬೇಕಾದವನು ಇಲ್ಲಿ ಟೈಮ್ ವೇಸ್ಟ್ ಮಾಡ್ತಾ ಇದ್ದೀಯ ಅನ್ಸುತ್ತೆ. ಪ್ಲೀಸ್ ಚೇಂಜ್ ಯುವರ್ ಡೆಸ್ಟಿನೇಷನ್' ಎಂದಾಗ ಲೋಕೇಶ ಆತ್ಮಾಭಿಮಾನದ ನಗೆಯನ್ನು ಬೀರತೊಡಗಿದ.

'ತತ್ ನನ್ನ್ ಮಗ್ನೆ, ನಗಾಡೋದು ಬೇರೆ ನೋಡು. ಮಾಡೋಕ್ ಏನ್ ಕೆಲ್ಸ ಇಲ್ವಾ ನಿಂಗೆ. ಅಲ್ಲ, ಮನೇಲಿ ಕಷ್ಟ ಪಟ್ಟು ಓದೋ ಆಸಾಮಿ ಅಂತ ಕಳ್ಸಿದ್ರೆ ಇವ್ನ್ ಇಲ್ಲಿ ಬಿಸಿನೆಸ್ ಮಾಡ್ತಾನಂತೆ. ಲೋ ಮಹರಾಯ ಇನ್ನೂ ಟೈಮ್ ಉಂಟಪ್ಪ ಬಿಸಿನೆಸ್ ಮಾಡೋಕ್ಕೆ. ಮೊದ್ಲು ಈ ಕಾಲೇಜ್ ಅನ್ನೋ ಬಿಸಿನೆಸ್ ಅನ್ನು ಸರಿಯಾಗಿ ಮುಗ್ಸು. ಆಮೇಲೆ ನೋಡೋಣಂತೆ ನಿನ್ನ ಈ ಓವರ್ಸೀಸ್ ಬಿಸಿನೆಸ್ ಪ್ಲಾನ್ನ.' ಎಂದಾಗ ಆತನ ಮುಖ ಸೆಪ್ಪಗಾಯಿತು. ಸಿಟ್ಟಾದರೆ ಆಗಲಿ ಎಂದು ಸುಮ್ಮನಾದೆ.

'ಸರಿ ಬಿಡಪ್ಪ, ನಿಮ್ಗೆಲ್ಲಾ ನನ್ನ್ ಪ್ಲಾನ್ ಬಗ್ಗೆ ಎಲ್ಲಿ ಅರ್ಥ ಆಗುತ್ತೆ. zukerber ಏನ್ ಓದ್ ಮುಗ್ಸಿನೇ ಫೇಸ್ಬುಕ್ ಇನ್ವೆಂಟ್ ಮಾಡಿದ್ನ?'

ತುಸು ಹೊತ್ತಿನ ಮೊದಲು ಆದಿಯೇನಾದರೂ ಆ ಫೇಸ್ಬುಕ್ ಪಿತಾಮಹನ ಹೆಸರನ್ನು ಹೇಳಿರದಿದ್ದರೆ ಖಂಡಿತವಾಗಿಯೂ ಈ ನಾಮಪದ ನಮ್ಮ ಸಂಭಾಷಣೆಯಲ್ಲಿ ಮೂಡುತ್ತಿರಲಿಲ್ಲ!

'ಗುರುವೇ ತಮ್ಗೆ ಸಾಷ್ಟಾಂಗ ನಮಸ್ಕಾರ. ನಿಮ್ಮ್ ಅತ್ತೆ ಪಾಠ ಉಂಟು ಬಾ ಬೇಗ ಹೋಗಿ ಮಲ್ಗೋಣ.. ಅಲ್ಲಿ ನಿದ್ರೇಲಿ ಕನ್ಸ್ ಕಾಣ್ತಾ Zukerburg ನ ಕೇಳಂತೆ ' ಎಂದು ನಾನು ಟೆರೇಸ್ನಿಂದ ಕೆಳಗಿಳಿದೆ. ತಲೆಯನ್ನು ಕೆಳಗಾಕಿಕೊಂಡು ಲೋಕೇಶ ಶೂನ್ಯವನ್ನು ದೃಷ್ಟಿಸುವಂತೆ ನಿಂತಿದ್ದ.

ಆದಿ ಮೂವರಿಗೂ ಮೊದಲೇ ಸೀಟನ್ನು ಹಿಡಿದಿಟ್ಟಿದ್ದ. ನಾನು ಕೂತ ಎಷ್ಟೋ ಹೊತ್ತಿನ ನಂತರ ಲೋಕೇಶ ಕ್ಲಾಸ್ಸಿಗೆ ಬಂದ.

'ಮಚಿ, ಬಿಸಿನೆಸ್ ಕನ್ಫರ್ಮ್ಡ್. ನೆಕ್ಸ್ಟ್ ವೀಕ್ ಕಾಫಿ ಸ್ಯಾಂಪಲ್ ಅನ್ನು ಕಳಿಸ್ತಾ ಇದ್ದೀನಿ!'



****



ಈ ಸಿನಿಮಾ ಹಾಡುಗಳೇ ಒಂತರ ವಿಚಿತ್ರ. ಮೊದಮೊದಲು ತೀರಾ ಸಾಧಾರಣವೆನಿಸುವ ಹಾಡುಗಳು ಕೇಳುತ್ತಾ ಹೋದಂತೆ ಮನಸ್ಸಿಗೆ ಬಹಳ ಹಿಡಿಸಿಬಿಡುತ್ತವೆ. ಅದರೆ ಅದನ್ನೇ ಅತಿಯಾಗಿ ಕೇಳಿದರೆ ಅಮೃತವೂ ವಿಷವಾಗುವಂತೆ ಸಾಕು ಸಾಕೆನಿಸಿ ಮತ್ತೆಂದೂ ಕೆಳಬಾರದೇನೋ ಎನ್ನುವಷ್ಟು ಬೊರೊಡೆಯುತ್ತದೆ. ಆದರೆ ಈ ಹಿಂದೂಸ್ತಾನಿ ಸಂಗೀತವಿದ ಜಾದುವೆ ಬೇರೆ. ದಿನ, ರಾತ್ರಿ ಎನ್ನದೆ ಯಾವುದೇ ಸಮಯದಲ್ಲೂ ಯಾವ ಭಾವದಲ್ಲೂ ಸರಿಯೇ, ಕೇಳುತ್ತಾ ಹೋದರೆ ಆಧ್ಯಾತ್ಮಿಕ ತಪಸ್ಸಿಗೆ ಕೂತಂತೆ ಸುಖದ ಮತ್ತಿನಲ್ಲಿ ತೇಲಿ ತೇಲಿ ಮಾಯವಾಗುವುದಂತೂ ಸುಳ್ಳಲ್ಲ. ಆ ಸಂತೋಷಕ್ಕೆ ಪಾರವೇ ಇರುವುದಿಲ್ಲ. ರಾಗ ತಾಳ ಗಮಕಗಳೊಟ್ಟಿಗೆ ಮಧುರ ಧ್ವನಿಯೊಂದು ಸೇರಿದರಂತೂ ಸ್ವರ್ಗಕ್ಕೇ ಮೂರೇ ಗೇಣು.

'ಏನ್ ಕೇಳ್ತಿದ್ದೀಯ..?' ಪಕ್ಕದಲ್ಲಿ ಬಂದು ನಿಂತ ಆದಿಯ ಪ್ರೆಶ್ನೆ ನನಗೆ ಕೇಳದಂತಾಯಿತು. ಕಾರಿಡಾರಿನ ಪ್ಯಾರಾಫಿಟ್ ಗೋಡೆಗೆ ನನ್ನ ಕೈಯನ್ನು ಒರಗಿಸಿಕೊಂಡು ಇಯರ್ ಫೋನುಗಳೆರಡನ್ನೂ ಕಿವಿಗೆ ಹಾಕಿಕೊಂಡು ಭೀಮ್ ಪಲಾಸಿ ರಾಗವನ್ನು ಹೈ ವೊಲ್ಯೂಮ್ ನಲ್ಲಿ ನಾನು ಕೇಳುತ್ತಿದ್ದೆ. ತಿಂಗಳುಗಳ ಒಡನಾಟ ನಮ್ಮಲ್ಲಿ ಈಗ ಹೋಗು ಬಾ ಎನ್ನುವ ಮಟ್ಟಕ್ಕೆ ಬೆಳೆದಿದ್ದಿತು.

'ಏನಂದೆ?' ಇಯರ್ ಫೋನೊಂದನ್ನು ತೆಗೆದು ನಾನು ಕೇಳಿದೆ.

'ಯಾವ್ ಸಾಂಗ್ ಕೇಳ್ತಾ ಇದ್ದೀಯ ಅಂದೇ'

'ಸಾಂಗ್ ಎಲ್ಲ ಅಲ್ಲ, ರಾಗ ಕೇಳ್ತಾ ಇದ್ದೀನಿ'

'ಯಾರ್ ಹಾಡಿರೋದು'

'ಮೈ ಫವೆರೆಟ್, ಕೌಶಿಕಿ ಚಕ್ರಬೊರ್ತಿ'

'ಒಹ್.. ಬಂಗಾಳಿ ಸಿಂಗರ್'

ಹಿಂದೂಸ್ತಾನಿ ಸಂಗೀತವನ್ನು ಕೇಳಿ ಆಸ್ವಾದಿಸುವವರಿಗೆ ತಾವುಗಳು ನೂರರಲ್ಲಿ ಒಬ್ಬರು ಎಂಬೊಂದು ಸಣ್ಣ ಅಹಃ ಇರುತ್ತದೆ. ಹಾಗಿರುವಾಗ ಎದುರಿಗಿರುವವರು ಹೀಗೆ ಹಿಂದೂಸ್ತಾನಿ ಸಂಗೀತಗಾರರ ಹೆಸರೊಂದನ್ನು ಹೇಳಿ, ಆ ಗಾಯಕ ಅಥವಾ ಗಾಯಕಿಯ ಊರು ಅಥವಾ ಸ್ಥಳದ ಬಗ್ಗೆ ಹೇಳಿದರಂತೂ ಆಗುವ ಆನಂದ ಹೇಳತೀರದು.

'ಯಸ್.. ನೀನೂ ಅವ್ರನ್ನು ಕೇಳ್ತಿಯಾ?'

'ಹೌದು, ಆಗಾಗ.. ತುಂಬಾನೇ ಹೆಚ್ಚಿನ ಸಂಗೀತ ಜ್ಞಾನ ಇರುವವರು ಆಕೆ.. ವಾಯ್ಸ್ ಅಂತೂ ಮಾರ್ವೆಲಸ್!' ಎಂದ ಆದಿ

ತುಸು ಸಮಯದ ನಂತರ,

'ನಾಲ್ಕ್ ಲೈನಿನ ಮೂವಿ ಸಾಂಗ್ಸ್ ಹಾಡಿಗೇ ಸಂಗೀತದ ಆ ಪ್ರಶಸ್ತಿ ಈ ಪ್ರಶಸ್ತಿ ಅಂತ ತಗೋಣೊರು ಅದೇ ಸಂಗೀತದ ಇಂತಹ ಒಂದೆರೆಡು ರಾಗಗಳನ್ನು ಹಾಡಿ ತೋರಸ್ಲಿ ನೋಡಣ..' ನಾನೆಂದೆ.

'ಅದೂ ನಿಜ..ಹೆಚ್ಚಾಗ್ತಿರೋ ಮೂವಿ ಸಾಂಗ್ಸ್ ಗಳಿಂದ ನಿಜವಾದ ಸಂಗೀತ ಏನಂತಾನೆ ಜನ ಮರೀತಾ ಇದ್ದಾರೆ. ಆದ್ರೆ ಇತ್ತೀಚಿನ ಯೂಥ್ ಸಾಂಗ್ ಗಳೇನೂ ಕಳಪೆ ಅನ್ನೋಕ್ಕಾಗಲ್ಲ. ಅಲ್ಲಿ ಏನಿಲ್ಲ ಅಂದರೂ ಒಂದು ಪವರ್ಫುಲ್ ಎನರ್ಜಿ ಇದೆ. ಆದ್ರೆ ಆ ಎನರ್ಜಿನ ಸರಿಯಾದ ಕಡೆ ಡೈವರ್ಟ್ ಮಾಡ್ಕೊಂಡ್ರೆ things would be much much better.' ಎಂದ ಆದಿಯ ಮಾತಿಗೆ,

'Whatever.. ಅವ್ರ್ ಅದೇನೇ ಚೆನ್ನಾಗಿ ಹಾಡ್ಲಿ, ಆದ್ರೆ ಆ ವಿಚಿತ್ರ ಡ್ರೆಸ್ಸು, ಪ್ರಿಡೇಟರ್ ತರ ಹುಚ್ಚ್ ಹುಚ್ಚಾಗಿ ಬಿಡೋ ಕೂದ್ಲು, ಗಡ್ಡ ಇವನ್ನೆಲ್ಲ ನೋಡಕ್ಕಂತೂ ಆಗಲ್ಲ.. ಇತ್ತೀಚಿಗೆ ಮ್ಯೂಸಿಕ್ ಮೇಲೆ ದೊಡ್ಡವರಿಗೆ ಇಂಟರೆಸ್ಟ್ ಹೋಗಿರೋದೇ ಇದಕ್ಕೆ ಅನ್ಸುತ್ತೆ.. ಅದೇ ಮ್ಯೂಸಿಕ್ ನ ನೀಟಾಗಿ ಬಂದು ಹಾಡಿದ್ರೆ ಕಷ್ಟನೋ ಸುಖಾನೋ ಒಂದ್ ಸ್ವಲ್ಪ ಜನ ಆದ್ರೂ ಕೇಳೋಕ್ಕೆ ಟ್ರೈ ಮಾಡ್ತಾರೆ'

ಸಂಗೀತದ ಬಗೆಗೆ ಮಾತಾಡುತ್ತಾ ಸಮಯ ಜರುಗಿದ್ದೆ ತಿಳಿಯಲಿಲ್ಲ. ಆದಿ ಹೊರಗಿನಿಂದ ನೋಡಲು ತೀರಾ ಸಾಧಾರಣದವನಂತೆ ಕಂಡರೂ ಒಳಗಿನಿಂದ ತೀರಾ ಬುದ್ದಿವಂತ. ದೇಶ ವಿದೇಶಗಳ ಹಾಗು ಹೋಗುಗಳು, ಸಾಮನ್ಯ ಜ್ಞಾನ, ಸಂಗೀತ, ಸಾಹಿತ್ಯ ಅಲ್ಲದೆ ಶೈಕ್ಷಣಿಕವಾಗಿಯೂ ಆತ ಪ್ರತಿಭಶಾಲಿ. ಆದ್ರೆ ತುಂಬಾನೇ ಮಂಕು ಜೀವಿ. ಯಾಕಪ್ಪ ಏನ್ ನಿನ್ ಪ್ರಾಬ್ಲಮ್ಮು ಎಂದು ಹೆಗಲ ಮೇಲೆ ಕೈಯಾಕಿ ಕೇಳಿದರೂ ಏನು ಹೇಳುವುದಿಲ್ಲ. ನನ್ನ ಹಾಗು ಲೋಕೇಶನೊಟ್ಟಿಗೆ ಬಿಟ್ಟರೆ ಬೇರೆಯವರೊಟ್ಟಿಗೆ ಮಾತನಾಡುವುದೇ ಕಡಿಮೆ. ಪಾಠವನ್ನು ಕೇಳದೆಯೇ ಇಂಟರ್ನಲ್ಸ್ ಗಳಲ್ಲಿ ಪಾಸಾಗಿ ನಮ್ಮನ್ನೂ ಪಾಸ್ ಮಾಡಿಸುವ ಈತ ಏನಾದರು ಫಸ್ಟ್ ಬೆಂಚಿನ ವಿದ್ಯಾರ್ಥಿಗಳಂತೆ ಓದಿದರೆ ಯೂನಿವರ್ಸಿಟಿಗೇ ಟಾಪರ್ ಆಗುವುದರಲ್ಲಿ ಸಂಶಯವೇ ಇಲ್ಲ.

'ಆದಿ, ನಿನ್ನ್ ಅತ್ತಿಗೆ ಬಂದ್ಲು ನೋಡು..' ಕ್ಲಾಸ್ ರೂಮಿಗೆ ವಾಪಸ್ಸಾಗುವಾಗ ಆಕಡೆಯಿಂದ ಬಂದ ಹುಡುಗಿಯೊಬ್ಬಳನ್ನು ಕಂಡು ನಾನು ಹೇಳಿದೆ. ಆಕೆಯ ಅಂದವಾದ ಮೈಮಾಟದ ಜೊತೆಗೆ ಬಿಳಿಬಣ್ಣದ ಚೂಡಿದಾರದ ಕೆಂಪು ಹೂವುಗಳ ಪೋಣಿಸುವಿಕೆ ಎಂತವರನ್ನೂ ಆಕೆಯೆಡೆಗೆ ನೋಡುವಂತೆ ಮಾಡುತ್ತಿದ್ದವು. ತನ್ನ ಕೂದಲನ್ನು ಸಿಂಪಲ್ಲಾಗಿ ಹಿಂದಕ್ಕೆಳೆದು ಕಟ್ಟಿ ಸಾಧಾರಣವಾದ ಕಿವಿಯ ಓಲೆಗಳನ್ನು ಧರಿಸಿದ್ದರೂ ಕಾಮನಬಿಲ್ಲಿನಂತಹ ಆ ಬಾಗಿದ ಹುಬ್ಬುಗಳು ಹಾಗು ದೃಷ್ಟಿ ನೆಟ್ಟರೆ ಸರಿಸಲಾಗದಂತಹ ಮಲ್ಲಿಗೆಯಂತಹ ಆ ಕಣ್ಣುಗಳು ಆಕೆಯನ್ನು ಅಪ್ಸರೆಯನ್ನಾಗಿ ಮಾಡಿದ್ದವು.

ಕೌಶಿಕಿಯ ಭೀಮ್ ಪಲಾಸಿ ರಾಗ ಮುಗಿದು ಲತಾ ಮಂಗೇಶ್ಕರರ 'ಬಾಹೋ ಮೇ ಚಲೇ ಆಹೋ ..' ಹಾಡು ಇಯರ್ ಫೋನುಗಳಿಂದ ಮೂಡಿತು. ಸಂದರ್ಭಕ್ಕೆ ತಕ್ಕ ಸಂಗೀತ ನನ್ನ ಒಲವಿನ ಕವಿಯನ್ನು ಜಾಗೃತಗೊಳಿಸಿತು

'ಚೆನ್ನಾಗಿದ್ದಾಳೆ..' ಆದಿ ಏನೋ ಹೇಳಬೇಕಲ್ಲ ಎನ್ನುವಂತೆ ಹೇಳಿದ.

'ಲೋ.. ನಿನ್ ಅತ್ತಿಗೆ ಅವ್ಳು.. ಅವ್ಳ್ ನನಿಗ್ ಮಾತ್ರ ಚೆನ್ನಾಗ್ ಕಾಣ್ ಬೇಕು ತಿಳಿತಾ' ಎಂದು ಬೆದರಿಸುವ ಧ್ವನಿಯಲ್ಲಿ ಹೇಳಿದೆ.

'ಸರಿ ಬಿಡಪ್ಪ' ಎನುತ ಆತ ಕ್ಲಾಸ್ ರೂಮಿನೊಳಗೆ ನೆಡೆದ. ನಾನು ಹೆಸರರಿಯದ ಆದಿಯ ಅತ್ತಿಗೆಯನ್ನು ಹಿಂಬಾಲಿಸಿದೆ.

'Excuse Me..'

'Yes..'

'ನೀವು ರಾಧ ಅಲ್ವ..?'

ನನ್ನ ಮುಖದ ಮೇಲಿನ ಕಳ್ಳ ನಗೆಯನ್ನು ಕಂಡು ಆಕೆ ತನ್ನ ಕೈಗಳೆರಡನ್ನು ಕಟ್ಟಿ ತೀಕ್ಷ್ಣ ದೃಷ್ಟಿಯಿಂದ ನನ್ನನ್ನು ನೋಡಿದರು.

'ಹೌದು, ಏನಿವಾಗ?'

'ನಿಮ್ಮ್ ಹತ್ರ ಏನೋ ಹೇಳ್ಬೇಕಿತ್ತು'

'ಹೌದೇ, ಹಾಗಾದ್ರೆ ಫೋನ್ ನಂಬರ್ ಬೇಕು ಅನ್ಸುತ್ತೆ'

'Actually, it's about my friend '

'Oh, ಏನಾಗ್ಬೇಕಂತೆ ನಿಮ್ ಫ್ರೆಂಡ್ಡಿಗೆ..?'

'ಅವ್ರಿಗೆ ಒಬ್ಳು ಅತ್ತಿಗೆ ಬೇಕಂತೆ'

ಸುಮ್ಮನಾದ ಆಕೆ ತುಸು ಮುಗುಳ್ ನಕ್ಕಳು.

'ರೀ ಮಿಸ್ಟರ್, ಅಷ್ಟ್ ಒಳ್ಳೆ ಸ್ಕಿಟ್ ಬರೀತೀರಾ, ಯಾಕ್ರೀ ನಿಮ್ಗೆ ಇವೆಲ್ಲ, ಒಳ್ಳೆ ಪೊರ್ಕಿ ತರ '

ಕೊಡಲೇ ನನ್ನನ್ನು ಯಾರೋ ರೆಕ್ಕೆ ಪುಕ್ಕವನ್ನು ಕಟ್ಟಿ ಆಕಾಶಕ್ಕೆ ತೇಲಿಬಿಟ್ಟಂತಹ ಅನುಭವವಾಯಿತು. Juniors Art Exploration ಅನ್ನೋ ragging ನಿಯಮಕ್ಕೆ ನಾಟಕವನ್ನು ಆಡಿ ಸೀನಿಯರ್ಸ್ಗಳಿಂದ ಬೈಸಿಕೊಂಡಿದ್ದ ಮಹಾನ್ ಕಾರ್ಯವನ್ನು ಈಕೆ ಒಳ್ಳೆಯ ಸ್ಕಿಟ್ ಎಂದೇಳಿ ನನ್ನ ಮನದೊಳಗೆ ಸುಪ್ತವಾಗಿದ್ದ ಬರಹಗಾರನೊಬ್ಬನ್ನನ್ನು ಪುಟಿದು ನಿಲ್ಲಿಸಿದಳು . ಬೈ ದಿ ವೆ, ಅವತ್ತು ragging ಎಂದು ಬಂದಿದ್ದ ಅಷ್ಟೂ ಮಂದಿಯೂ ನಮ್ಮ ಸೀನಿಯರ್ಸ್ಗಳೇ! ಏಕೋ ಎದೆ ಒಂದೇ ಸಮನೆ ಬಡಿದುಕೊಳ್ಳತೊಡಗಿತು.

ಆರಡಿ ಎಂಟಡಿ ಎತ್ತರದ ಸೀನಿಯರ್ಸ್ ಎಂಬ ದಾಂಡಿಗರ ಗುಂಪಿನವಳೇ ಇವಳು? ಆದರೂ ನಾನು ಕೂಡಲೇ ಸೋಲನೊಪ್ಪಿಕೊಳ್ಳಲಿಲ್ಲ.

'ಮೀನಿಂಗ್ ಫುಲ್ ಸ್ಕಿಟ್ ಬರಿಯೋರು flirt ಮಾಡಬಾರ್ದು ಅಂತ ರೂಲ್ಸ್ ಏನಾದ್ರೂ ಇದಿಯಾ, ರಾಧಾ' ಸಾಧ್ಯವಾದಷ್ಟು ನಾಜೂಕಾಗಿ ಆಕೆಯ ಹೆಸರನ್ನು ಕೂಗಿದೆ.

'ಒಹ್, So you are here to flirt with me, uh'

'if you wish so'

'What’s your name you said'

'ಕೃಷ್ಣಾ..!'

ಆಕೆ ಈ ಬಾರಿ ಜೋರಾಗೆ ನಕ್ಕುಬಿಟ್ಟರು.

'ರಾಧಾ - ಕೃಷ್ಣ, ಚೆನ್ನಾಗಿರುತ್ತೆ ಅಲ್ವಾ..?' ಈ ಬಗೆಯ ಪ್ರತ್ಯುತ್ತರ ಕೊಟ್ಟ ಧೈರ್ಯಕ್ಕೆ ನನಗೆ ನನ್ನ ಮೇಲೆಯೇ ಅಭಿಮಾನ ಮೂಡಿತು.

'ಒಹ್ ರಿಯಲಿ, ಬನ್ನಿ ಹಾಗಾದ್ರೆ. ನಿಮ್ಮನ್ನ ಗೋಪಿಕೆಯರೊಟ್ಟಿಗೆ ಇಂಟ್ರಡ್ಯೂಸ್ ಮಾಡಿಸ್ತೀನಿ ' ಎಂದು ಆಕೆ ಮುನ್ನೆಡೆದರು.

ಕ್ಲಾಸ್ಸು ಗೀಸು ಎಲ್ಲ ಇರ್ಲಿ ಆಕಡೆ ಎನುತ ನಾನು ಆಕೆಯನ್ನು ಹಿಂಬಾಲಿಸಿದೆ. ಆಕೆ ಮೊದಲ ಮಹಡಿಯ ಮೆಟ್ಟಿಲನ್ನು ಏರಿದರು. ಅಂದುಕೊಂಡಂತೆ ಏಳನೇ ಸೆಮಿಸ್ಟರ್ ನ ಸೀನಿಯರ್ಸ್ ಕ್ಲಾಸ್ಸನ್ನು ಪ್ರವೇಶಿಸಿದರು. ನಾನು ಧೈರ್ಯ ಮಾಡಿ ಒಳನುಗ್ಗಿದೆ. ಆದರೆ ಆಕೆ ಕ್ಲಾಸ್ ರೂಮಿನ ಒಳ ಹೊಕ್ಕಂತೆಯೇ ಕ್ಲಾಸಿನ ಅಷ್ಟೂ ವಿದ್ಯಾರ್ಥಿಗಳು, ಆರಡಿ ಏಳಡಿ ಉದ್ದದ ದಾಂಡಿಗರೂ ಸೇರಿ, ಎದ್ದು ನಿಂತರು!!

'ಸಿಟ್ ಡೌನ್ ಕ್ಲಾಸ್..' ಎಂದು ಆಕೆ ನನ್ನೆಡೆಗೆ ಮೊಗ ಮಾಡಿದ ತಡವೇ ನಾನು ಕೂಡಲೇ ಮುಂದೊದಗುವ ಅಪಾಯವನ್ನು ಅರಿತು ಚಂಗನೆ ಅಲ್ಲಿಂದ ನೆಗೆದು ಓಟ ಕಿತ್ತೆ. ಅಲ್ಲಿಂದ ಓಡಲು ಶುರು ಮಾಡಿ ಹಾಸ್ಟೆಲ್ಲಿನ ನನ್ನ ರೂಮನ್ನು ಸೇರಿದವ ಮುಂದಿನ ಒಂದು ವಾರಗಳವರೆಗೆ ಕಾಲೇಜಿನ ಮುಖವನ್ನು ಮತ್ತೊಮ್ಮೆ ನೋಡಲಿಲ್ಲ!!

**

'ಅಯ್ಯೋ.. ಉಫ್.. ಸಾಕಪ್ಪ ಸಾಕು.. ಇನ್ ನಂಗ್ ನಗಾಡೋಕ್ ಆಗಲ್ಲ..' ನನ್ನ ಹಾಗು ಮೇಡಂ ರಾಧಾರ ಸಂಕ್ಷೀಪ್ತ ಲವ್ ಸ್ಟೋರಿಯನ್ನು ಕೇಳಿ ಲೋಕೇಶ ಗಹಗಹನೇ ನಗತೊಡಗಿದ. ಆದಿಯ ಮುಖದಲ್ಲೂ ಒಂದು ಮಂದಹಾಸ ಮೂಡಿತ್ತು.

'ಆ ಸೀನಿಯರ್ ದಾಂಡಿಗರನ್ನು ನೋಡ್ಬೇಕಿತ್ತು ಆದಿ, ಒಳ್ಳೆ ಪಿಎಂಗೆ ಇರೋ ಬಾಡಿ ಗೌರ್ಡ್ಸ್ ತರ ನನ್ನನೇ ಗುರಾಹಿಸ್ತಾ ಇದ್ರು.. ರಾಧಾ ಏನ್ ಅವ್ರಪ್ಪನ ಮನೆ ಪ್ರಾಪರ್ಟಿನ?'

'ಹೌದು ಗುರು ಅದ್ ಅವರಪ್ಪನ್ಮನೆ ಪ್ರಾಪರ್ಟಿನೇ ಇರಬಹದು..ಯಾರಿಗೊತ್ತು, ಅವರಷ್ಟೂ ಜನಕ್ಕೆ ಈಕೆ ಸಾಮೂಹಿಕವಾಗಿ ರಾಕಿ ಕಟ್ಟಿರ್ಬೇಕು' ಎಂದಾಗ ಎಲ್ಲರು ಒಟ್ಟಿಗೆ ನಕ್ಕೆವು.

ವಿಚಿತ್ರವೆಂಬಂತೆ ಕಾರಿಡಾರಿನ ಒಂದು ಮೂಲೆಯಲ್ಲಿ ನಿಂತು ನಾವುಗಳು ನಗುವಾಗ ರಾಧಾ ದೂರದಲ್ಲಿ ನಿಂತು ನಮ್ಮನ್ನು, especially ನನ್ನನ್ನು ಸಿಟ್ಟಿನ ಕಣ್ಣುಗಳಿಂದ ನೋಡುತ್ತಿದ್ದರು. ಆಕೆಯ ತೀಕ್ಷ್ಣ ದೃಷ್ಟಿ ನನ್ನ ಗೆಳೆಯರಿಬ್ಬರು ಧಿಕ್ಕಾಪಾಲಾಗಿ ಓಟ ಕೀಳುವಂತೆ ಮಾಡಿತು. ಆಕೆ ನನ್ನ ಬಳಿಗೆ ಬಂದು ನಿಂತರು. ಇಡೀ ಕ್ಲಾಸ್ಸಿನ ಮುಂದೆ ಕಕ್ಕಾಬಿಕ್ಕಿಯಾಗಿ ಓಡಿ ವಾರಗಟ್ಟಲೆ ಮರೆಯಾಗಿದ್ದ ನನಗೆ ನಾಚಿಕೆಯಲ್ಲಿ ಮಿಂದು ಎದ್ದಂತಹ ಅನುಭವ. ಎಲ್ಲಿ ಆಕೆ ಆ ವಿಷಯವನ್ನು ಪ್ರಸ್ತಾಪಿಸಿ ನನ್ನ ನಿಂತಲ್ಲೇ ಕೊಲ್ಲುತ್ತಾಳೋ ಎಂದುಕೊಂಡೆ. ಆದರೆ ನನ್ನ ಬಳಿಗೆ ಬಂದ ಆಕೆ ದೂರದ ಕಾಡುಗಳನ್ನು ಧಿಟ್ಟಿಸುತ್ತಾ,

'ಪ್ರೀತಿ ,ಪ್ರೇಮ ಎಂಬುದೆಲ್ಲ ತೀರಾನೆ Illogical. Ultimate goal of a couple is making their next generation. That’s what the world wants. That’s what the creator want us to do.. ' ನನ್ನ ಸ್ಕೀಟ್ಟಿನ ಒಂದೆರೆಡು ಸಾಲುಗಳನ್ನು ಆಕೆ ಹೇಳಿದಳು. ತೀರಾ ಕಳಪೆಯಾದ ನಾಟಕ ಅಂದುಕೊಂಡಿದ್ದರೂ ಲೆಕ್ಚರರ್ ಒಬ್ಬರು ಅದರ ಸಾಲುಗಳನ್ನೂ ನೆನಪಿಟ್ಟುಕೊಂಡಿರುವರು ಎಂಬುದನ್ನು ಕಂಡು ನನಗೆ ಖುಷಿಯಾಯಿತು. ಇನ್ ಫ್ಯಾಕ್ಟ್ ಒಂದು ಬಗೆಯ ಅಹಂ ಮೂಡಿತು!

ನಂತರ 'ಅವತ್ತೇನಾದ್ರೂ ನೀವು ಹಿಂಗೇ ಸಿಕ್ಕಿದ್ರೆ ಕೆನ್ನೆ ಮೇಲೆ ನಾಲ್ಕ್ ಬಾರ್ಸ್ಬಿಡ್ತಿದ್ದೆ!!' ಎಂದರು.

ಈಕೆ ಯಾಕಪ್ಪ ಹೀಗೆ ಕನ್ಫ್ಯೂಸ್ ಮಾಡ್ತಾ ಇದ್ದಾರೆ ಅಂದುಕೊಂಡೆ. ರಾಧಾ ಮೇಡಂ, ಮೇಡಂ ಆದ್ರೂ ಅತಿ ಯಂಗ್ ಹುಡುಗಿ. I mean ನನಗಿಂತ ಹೆಚ್ಚೆಂದರೆ ನಾಲ್ಕು ವರ್ಷ ದೊಡ್ಡವರಿರಬಹುದು. ಯಾಕೋ ನಮ್ಮ ಗುರು ಸಚಿನ್ ತೆಂಡೂಲ್ಕರ್ ನೆನಪಾದರು. ಮನದೊಳಗೆ ಅವರನ್ನು ನೆನೆದು ನಾನು ಮುಂದುವರೆದೆ.

'ಇವಾಗಲೂ ನನ್ನ ಕೆನ್ನೆ ಇಲ್ಲೇ ಇದೆ, ರಾಧಾ..ಮೇಡಂ..'

'See, You know that flirting leads to Love.. According to you if love is illogical, then why the hell is this .. uh ' ಎಂದು ಗದರಿಸುತ್ತ ಕೇಳಿದರು. ಈಕೆ ಬಂದಿರುವುದು ಇಂಟೆಲ್ಲೆಕ್ಟುಲಿಟಿಯ ಬಗೆಗಿನ ಕಷ್ಟದ ಚರ್ಚೆ ಮಾಡಲು ಎಂದು ಅರಿತು ನನಗೆ ಬೇಸರವಾಯಿತಾದರೂ ನಾನು ಅದನ್ನು ತೋರ್ಪಡಿಸಲಿಲ್ಲ. ಒಂದು ಪಕ್ಷ ನಾನೇನಾದರೂ ಇಲ್ಲಿ ಸೋತರೆ ಖಂಡಿತವಾಗಿಯೂ ಮುಂದೆಂದೂ ಆಕೆಯ ಮುಂದೆ ತಲೆಯೆತ್ತೆನು. ಆಕೆಯ ಏರುಧ್ವನಿ ದೂರದಲ್ಲಿ ನೆಡೆದುಕೊಂಡು ಹೋಗುತ್ತಿದ್ದ ಹುಡುಗಿಯರಿಬ್ಬರನ್ನು ನಮ್ಮೆಡೆಗೆ ನೋಡುವಂತೆ ಮಾಡಿತು. ಕ್ಲಾಸಿನಲ್ಲಿ ಫೇಲ್ ಆಗಿದ್ದರಿಂದ ಶಿಕ್ಷಕರು ವಿದ್ಯಾರ್ಥಿಗೆ ಬೈಯುತ್ತಿದ್ದಾರೆಂದು, ಎಲ್ಲಿ ತಮ್ಮನ್ನೂ ಕರೆದು ನಮ್ಮ ಮಾರ್ಕ್ಸ್ ಗಳನ್ನು ಕೇಳಿಯಾರು ಎನುತ ಅವರು ಬಿರಬಿರನೇ ಅಲ್ಲಿಂದ ನೆಡೆದರು.

‘ಗುರಿಯ ದಾರಿಯಲ್ಲಿ ನೆಡೆಯುವಾಗ ಗುರಿಯೊಂದೇ ಮುಖ್ಯವಾಗಿರುತ್ತದೆ. ಉಸಿರಿರಾಡುವ ಗಾಳಿ, ಕುಡಿಯುವ ನೀರು ಹಾಗು ಆಹಾರ ಪ್ರಮುಖವಾಗಿರುದಿಲ್ಲ. ಹಾಗಂತ ಊಟ, ಗಾಳಿ ಹಾಗು ನೀರನ್ನು ಸೇವಿಸದೇ ಗುರಿಯನ್ನೂ ತಲುಪಲಾಗುವುದಿಲ್ಲ you know. ಈ ಫ್ಲರ್ಟು ಲವ್ವು ಎಲ್ಲ ಒಂತರ ಫುಡ್ ಅಂಡ್ ಆಕ್ಸಿಜನ್ ಇದ್ದ ಹಾಗೆ. ನಿಮ್ಮ ಜೀವನದ ಅಲ್ಟಿಮೇಟ್ ಗುರಿ ಅದಂತೂ ಅಲ್ಲವೇ ಅಲ್ಲ. ಪ್ರತಿಯೊಬ್ಬರ ಜೀವನಕ್ಕೂ ಒಂದೊಂದು ಗುರಿ ಇದ್ದೇ ಇರುತ್ತದೆ ರಾಧಾ. ವಿಪರ್ಯಾಸವೆಂಬಂತೆ ಲಕ್ಷಕ್ಕೊಬ್ಬರೋ ಇಬ್ಬರೋ ಮಾತ್ರ ಅದನ್ನು ಅರಿತುಕೊಳ್ಳುತ್ತಾರೆ. ' ಎಂದೋ ಬರೆದಿದ್ದ ಅರೆ ಬರೆ ನೆನಪಿದ್ದ ಸಾಲುಗಳನ್ನು ನಾನು ಉಸುರಿದೆ.

ನಂತರ ಒಂದಿಷ್ಟು ಮೌನ.

ನಾನು ಏನಂದೆ ಎಂದು ನನಗೇ ಬಹುಷಃ ತಿಳಿಯಲಿಲ್ಲ. ಆಕೆ ಏನಾದರೂ 'Could you please explain it once again' ಎಂದಿದ್ದರಂತೂ ನನ್ನ ಮಾತೇ ನಿಂತು ಹೋಗಿರುತ್ತಿತ್ತು! ದೇವರ ಕೃಪೆಯಿಂದ ಆಗ ಬೆಳಗಿನ ಪಿರಿಯಡ್ ಒಂದು ಮುಗಿದು ವಿದ್ಯಾರ್ಥಿಗಳೆಲ್ಲ ಹೊರ ಬಂದರು. ಆಕೆ ಏನೂ ಕೇಳುವಂತೆ ಮಾಡಿ 'will discuss it some other time' ಎಂದು ಅಲ್ಲಿಂದ ಬಿರಬಿರನೆ ಹೊರಟು ಹೋದರು. ನನ್ನ ಮಾತಿನ ಮೋಡಿಗೆ ನನ್ನನ್ನು ಕಾಣಲು ಬಂದಿದ್ದಾರೆ ಎಂದುಕೊಂಡವನಿಗೆ, ಸೀನಿಯರ್ಸ್ ಗಳ ಕಾಟವನ್ನು ತಡೆಯಲೋಗಿ ಏನೋ ಗಿಜುಗಿ ಬರೆದಿದ್ದ ನಾಟಕದ ಸಾಲುಗಳ ತಪ್ಪನು ತಿದ್ದಲಷ್ಟೇ ಬಂದಿದ್ದಾರೆ ಎಂದರಿತು ಒಂದೆಡೆ ಖುಷಿಯಾದರೆ ಮತ್ತೊಂದೆಡೆ ತೀರಾ ಬೇಸರವೂ ಆಯಿತು.

ನನ್ನ ಜೀವನದ Ultimate ಗುರಿ ನಿಜ ಪ್ರೀತಿಯೊಂದನ್ನು ಅರಸುವುದೇ. True love exists ಎನ್ನುವುದನ್ನು prove ಮಾಡುವುದೇ?

'Waa..w, ಏನೋ ಮಚ ಇದು! ಏನನ್ದ್ರೋ ಅವ್ರು' ಕಾಣೆಯಾಗಿದ್ದ ಲೋಕೇಶ ಎಲ್ಲಿಂದಲೋ ಕೂಡಲೇ ಪ್ರತ್ಯಕ್ಷನಾಗಿ ನನ್ನ ಹೆಗಲ ಮೇಲೆ ಕೈಯಾಕಿ ಎಳೆದೆಳೆದು ಕೇಳತೊಡಗಿದ.

'ನಿಮ್ಮ್ ಫ್ರೆಂಡ್ಸ್ ಗೆ ಬಳೆ ಕೊಡ್ಸಬೇಕಿತ್ತು, ಸೈಜ್ ಎಷ್ಟು ಅಂತಾ ಕೇಳಿ ಅಂದ್ರು'

'ಹೋಗ್ಲಿ ಬಿಡಪ್ಪ.. ಪ್ರೈವಸಿ ಇರ್ಲಿ ಅಂತ ನಾನ್ ಓಡಿದೆ.'

ಸದ್ಯ, ಓಡಿದೆ ಎಂದು ಒಪ್ಪಿಕೊಂಡನಲ್ಲ ಎಂದು ಒಂದಿಷ್ಟು ಸಮಾಧಾನವಾಯಿತು.

'ನೆಕ್ಸ್ಟ್ ಟೈಮ್ ನಂಗೆ ಪ್ರೈವಸಿ ಬೇಡಪ್ಪ.. ಏನಾದ್ರೂ ಹೆಚ್ಚು ಕಡಿಮೆ ಆದ್ರೆ ಹೆಲ್ಪ್ ಮಾಡೋಕ್ಕೆ ಅಂತ ಆದ್ರೂ ಸ್ವಲ್ಪ ದೂರದಲ್ಲಿ ನಿಂತಿರಿ ' ಎಂದು ಕ್ಲಾಸ್ ರೂಮಿನೊಳಗೆ ನೆಡೆದೆ.



ಮುಂದುವರೆಯುವುದು ..

ಪಯಣ - 2

ಸಿಟ್ಟು ಹಾಗು ದುಃಖಗಳ ಹೊಳೆ ಸಮರಾಶಿಯಲ್ಲಿ ಮನಸ್ಸನ್ನು ಆವರಿಸದರೆ ದುಃಖವೆಂಬ ಆ ಪ್ರಧಾನಭಾವವೇ ಗೆದ್ದೇ ತೀರುತ್ತದೆ.

ಲೌಡ್ ಸ್ಪೀಕರ್ ನಲ್ಲಿರಿಸಿದ ಮೊಬೈಲಿನಲ್ಲಿ ಕೊಂಕು ನುಡಿದು ಮೂದಲಿಸುತ್ತಿರುವ ಅಮ್ಮನ ದುಃಖಬರಿತ ಧ್ವನಿ ಒಂದೆಡೆಯಾದರೆ ತನ್ನ ಮಾವನಿಂದಿಡು ಅವನ ಮಡದಿಯನ್ನೂ ಲೆಕ್ಕಿಸದೆ ಬಯ್ಯತೊಡಗಿದ್ದ ಹೆಸರಿಗೆ ಮಾತ್ರವಾಗಿದ್ದ ಅಪ್ಪನೆಂಬ ಸಿಡುಕ. ಸಿಟ್ಟು ದುಃಖಗಳ ಈ ತೊಳಲಾಟದ ಸನ್ನಿವೇಶವನ್ನು ಕಾಲೇಜಿನ ಕಾರಿಡಾರ್ನ ಒಂದೆಡೆ ನಿಂತು ತನ್ನ ಮೊಬೈಲಿನಲ್ಲಿ ಆಲಿಸುತ್ತಿದ್ದ ಆದಿ ಉಸಿರುತಡೆಯಿಡಿದು ಅಳತೊಡಗಿದ. ತನ್ನಪ್ಪನ ದುರ್ವರ್ತನೆಯನ್ನು ಕೇಳಿ ಮೈಯಲ್ಲ ಕುದಿಬಂದಂತಹ ಸಿಟ್ಟುಬಂದರೆ ಅಮ್ಮನ ಗದ್ಗದಿತ ಸ್ವರ ಅವನನ್ನು ಕಣ್ಣೀರಿನ ಅಲೆಯಲ್ಲಿ ಮುಳಿಗಿಸುತ್ತಿದ್ದವು. ತನ್ನಿಂದೆ ಗುಜುಗುಜುಗುಡುತ್ತಿದ ವಿದ್ಯಾರ್ಥಿಗಳ ಗುಂಪಿಗೆ ವಿಮುಖವಾಗಿ ವಿಶಾಲವಾಗಿ ಹರಡಿದ್ದ ಬೆಟ್ಟಗುಡ್ಡಗಳೆಡೆಗೆ ನಿಂತು ಆತ ರೋಧಿಸುತ್ತಿದ್ದಾನೆ. ತರಗತಿ ಶುರುವಾಗಿ ಎಲ್ಲರೂ ಒಳಗೊದ ಮೇಲೆ ಮುಖವನ್ನು ತೊಳೆದುಕೊಂಡು ಬಂದು ಒಬ್ಬಂಟಿಗನಂತೆ ಹಿಂದಿನ ಬೆಂಚಿನಲ್ಲಿ ಕೂತ. ಸೆಮಿಸ್ಟರ್ ಶುರುವಾಗಿ ಎರಡು ತಿಂಗಳಾದರೂ ಯಾರೊಬ್ಬರೂ ಈತನಿಗೆ ಗೆಳೆಯನ ಪಟ್ಟವನ್ನು ಕಟ್ಟಿರಹರು. ಮಾತು ಬಾರದ ಮೂಕನಾಗಿ, ದುಃಖ ದ್ವೇಷಗಳ ಅಲೆಗಳ ತಿಕ್ಕಾಟವನ್ನು ಹತ್ತಿಕ್ಕುತ್ತಾ ಪಾಠವನ್ನು ಕೇಳುವ ನಾಟಕವನ್ನು ನಟಿಸತೊಡಗಿದ.

ತನ್ನ ಮುಂದೆ ಕೂತಿದ್ದ ವಿದ್ಯಾರ್ಥಿ ಸಮೂಹವನ್ನು ಒಮ್ಮೆ ಹಾಗೆಯೇ ಗಮನಿಸುತ್ತಾನೆ. ಆ ಉದ್ದುದ್ದ ಜಡೆಯ ಹುಡುಗರ ಕೇಶರಾಶಿಯ ಹೊಳಪುಗಳೇನು, ಅವರ ಬ್ರಾಂಡೆಡ್ ಡ್ರೆಸ್ಸುಗಳೇನು, ಶಿಕ್ಷಕರೂ ತಮಗೆ ಜಿಗುಪ್ಸೆಯಾಗದಿರಲಿ ಎನ್ನುವಂತೆ ಅಂತವರನ್ನೇ ಮುಂದಿನ ಸಾಲಿನಲ್ಲಿ ಕೂರಿಸಿದ್ದಾರೆಯೋ ಎಂದನಿಸುತ್ತದೆ ಆತನಿಗೆ. ಇನ್ನು ಹುಡುಗಿಯರ ಅಂದ ಚಂದವೆಲ್ಲ ದೂರದ ಮಾತು, ಕನಿಷ್ಠ ಅವರ ಮುಖವನ್ನೂ ತಲೆಯೆತ್ತಿ ನೋಡಿದರೂ ಈ ಸುಂದರ ಸುಮಧುರ ಪ್ರಪಂಚದಲ್ಲಿ ತಾನೊಬ್ಬ ಮಹಾಕುರೂಪಿಯೇನೋ ಎಂಬಂತಹ ಭಾವನೆ ಈತನಲ್ಲಿ ಮೂಡುತ್ತಿತ್ತು. ಈ ಹುಡುಗ ಹುಡುಗಿಯರ ಜೀವನ ತನ್ನ ಜೀವನಕ್ಕಿಂತ ಅದೆಷ್ಟು ಭಿನ್ನ? ಇವರ ಸುಗುಣ ಜಾತಿಯ ಪೋಷಕರು, ನೆಮ್ಮದಿಯ ಜೀವನ, ಓದು, ಹರಟೆ, ನಕ್ಕು ನಲಿಯುವ ಬಾಳು ಎನುತ ಮತ್ತೊಂದು ಕಲ್ಪನಾ ಲೋಕದಲ್ಲಿ ಮುಳುಗುತ್ತಾನೆ. ಇದ್ದಕ್ಕಿಂದಂತೆ ಸೈಲೆಂಟ್ ಮೋಡಿನಲ್ಲಿದ್ದ ಆತನ ಮೊಬೈಲ್ ಅದುರತೊಡಗಿತು. ಅಮ್ಮನ ಫೋನನ್ನು ನೋಡಿದಾಕ್ಷಣ ಸಿಟ್ಟು ವಿಪರೀತವಾಗಿ ಕೆಂಪು ಬಟನ್ ಅನ್ನು ಒತ್ತಿದ್ದಾಗ ಬಂದ ಆ ಸದ್ದು ಲೆಕ್ಚರರ್ ಬೋರ್ಡಿನ ಮೇಲೆ ಚಾಕ್ ಪೀಸ್ನಿಂದ ಕುಟ್ಟಿದಂತಿತ್ತು.

**

'What the...! ಏನ್ ಹೇಳ್ತೀಯೋ ನೀನು? ಅಲ್ಲ ಮಾರಾಯ ಈ ಸ್ಕ್ಯಾಮ್ ಗಳು ನಿನ್ನ ಹುಡ್ಕೊಂಡ್ ಬರ್ತಾವೋ ಅಥವಾ ಸ್ಕ್ಯಾಮ್ ಗಳನ್ನೇ ನೀನು ಹುಡ್ಕೊಂಡು ಹೋಗ್ತಿಯೋ..' ಎಂದು ಗಹಗಹನೇ ನಗುತ್ತ ಹೇಳಿದ ನನ್ನ ಮಾತಿಗೆ ಲೋಕೇಶ,

'ಹೋಗ್ಲಿ ಬಿಡ್ ಮಚಿ ಇದೆಲ್ಲ ಇದ್ದಿದ್ದೇ. Anyways, ನಿನ್ ದುಡ್ಡ್ ಮಾತ್ರ ಸೇಫ್.. ತಗೋ ' ಏನುತಾ ತನ್ನ ಜೇಬಿನಲ್ಲಿದ್ದ ಹತ್ತುಸಾವಿರದ ಕಂತೆಯನ್ನು ನನ್ನ ಕೈಲಿಟ್ಟ.

'ಮೂರ್ಛೆ ಬಿದ್ದ ಆ ಐದಡಿ ಆಸಾಮಿ ಮತ್ತೆ ಅಲ್ಲಿಗೆ ಹೋಗಿದ್ನಂತೆ.. ಸೆಟ್ನ ಬಿಚ್ಚ್ಕೊಂಡು ಹೋಗೋಕೆ. ಕೊನೆಗೆ ಏನು ವರ್ಕ್ ಔಟ್ ಆಗ್ಲಿಲ್ಲ ಅನ್ನೋ ಸಿಟ್ಟಿಗೆ ಅಲ್ಲಿದ್ದ ಹಂದಿಮರಿಗಳನ್ನು ಕದಿಯೋಕ್ಕೆ ಹೋಗಿ ಊರವರಿಂದ ಚೆನ್ನಾಗಿ ಗೂಸಾ ತಿಂದು ಈಗ ಜೈಲಿನಲ್ಲಿದ್ದನಂತೆ..' ಎಂದಾಗ ನನಗೆ ಮತ್ತೊಮ್ಮೆ ನಗುವನ್ನು ತಡೆಯಲಾಗಲಿಲ್ಲ. 'ಇಂಥವರಿಂದಾನೆ ನೋಡು ನಿಯತ್ತಾಗಿ ಸಂಪಾದನೆ ಮಾಡೋದು ಅಂದ್ರೆ ಈಗಿನ್ ಕಾಲದಲ್ಲಿ ಸಾಧ್ಯನೇ ಇಲ್ವೇನೋ ಅನ್ನೋಹಾಗೆ ಹಾಗಿರೋದು..' ನೋಟಿನ ಕಂತೆಯನ್ನು ಜೀನ್ಸ್ ಪ್ಯಾಂಟಿನ ಜೇಬಿನೊಳಗೆ ತೂರಿಸಿಕೊಳ್ಳುತ್ತಾ ನಾನೆಂದೆ.

ಇನ್ನೇನು ಬೆಳಗಿನ ಕೊನೆಯ ಪಿರಿಯಡ್ ಶುರುವಾಗುವ ಘಂಟೆ ಭಾರಿಸಿ ನಾವುಗಳು ಕ್ಲಾಸ್ ರೂಮಿನ ಒಳಹೋಗಬೇಕು ಎನ್ನುವಷ್ಟರಲ್ಲಿ ನಮ್ಮ ಹಿಂದೆ ಬಂದ ಸದ್ದೊಂದು,

'ಬ್ರದರ್, ಸ್ವಲ್ಪ ನಿಮ್ಮ್ ಮೊಬೈಲ್ ಕೊಡ್ತೀರಾ? ಅರ್ಜೆಂಟ್ ಆಗಿ ಮನೆಗ್ ಫೋನ್ ಮಾಡ್ಬೇಕು.. ನನ್ನ ಬ್ಯಾಲೆನ್ಸ್ ಮುಗಿದಿದೆ ' ಎಂದಾಗ ನಾನು ಲೊಕೇಶನ ಮುಖವನ್ನು ನೋಡಿದೆ. ಲೋಕೇಶ ತನ್ನ ಮೊಬೈಲನ್ನು ಆತನಿಗೆ ನೀಡಿದ. ಆತ ನನ್ನ ಫೋನನ್ನು ತೆಗೆದುಕೊಂಡು ತುಸುದೂರ ಹೋದನಂತರ ಲೋಕೇಶ 'ಆದಿಶೇಷ್ ಅಂತ, ತುಂಬಾ ಸೈಲೆಂಟ್ ಹುಡ್ಗ.. ಯಾವಾಗ್ಲೂ ಏನೋ ಒಂತರ ಚಿಂತೇಲೆ ಇರ್ತಾನೆ, ಎರಡನೇ ಸೆಮಿಸ್ಟರ್ಗೆ ಕಾಲೇಜ್ ಚೇಂಜ್ ಮಾಡ್ಕೊಂಡು ಇಲ್ಲಿಗೆ ಬಂದಿದ್ದಾನೆ ' ಎನ್ನುತ್ತಾನೆ.

ಸ್ವಲ್ಪ ಹೊತ್ತಿನ ನಂತರ ಮೊಬೈಲ್ನನ್ನು ಹಿಂದಿರಿಗಿಸುವ ನೆಪದಲ್ಲಿ ಆತ ನಮ್ಮ ಬಳಿಯೇ ಬಂದು ಕೂತ. ಕೆಲಸಮಯದ ನಂತರ ಆತನನ್ನು ಗಮನಿಸಿದೆ. ದುಃಖಭರಿತ ಆ ಕಣ್ಣುಗಳಲ್ಲಿ ಒರೆಸಿದಷ್ಟೂ ಕಣ್ಣೀರ ಹನಿಗಳು ಉದುರುತ್ತಿದ್ದವು. ಲೋಕೇಶ ನನ್ನ ಮುಖವನೊಮ್ಮೆ ಬೇಸರದಿಂದ ನೋಡಿದ.



**



ಎರಡುವಾರಕ್ಕೊಂದೇ ಕುಡಿಯುತ್ತಿದ್ದ ಬಿಯರ್ನ ಸರದಿ ನೆನ್ನೆಯ ರಾತ್ರಿ ಬಂದಿದ್ದರಿಂದ ಇಂದು ಕಾಲೇಜಿನ ಮೊದಲ ಪಿರಿಯಡ್ಗೆ ಬಂಕ್ ಹಾಕುವ ಕಾರ್ಯಕ್ರಮವಿದ್ದಿತು. ಲೋಕೇಶ ತನ್ನ ಕಾಲನ್ನು ರಾತ್ರಿಯಿಡಿ ನನ್ನ ಮೇಲೆಸೆದು ಆ ಮತ್ತಿನ ರಾತ್ರಿಯಲ್ಲೂ ನಿದ್ದೆ ಬಾರದಂತೆ ಮಾಡಿದ್ದ. ಅಲ್ಲದೆ 'ಕೋತಿ ತಾನ್ ಕೆಡೋದಲ್ದೆ, ಇಡೀ ಕಮ್ಯೂನಿಟಿಯನ್ನೇ ಕೆಡಿಸಿತು..' ಎನ್ನುವ ಹಾಗೆ 'ಮಾಸ್ ಬಂಕ್' ಎಂಬ ಪಾವನ ಕಾರ್ಯವನ್ನು ಶುರುಮಾಡಿ ಅದರಲ್ಲಿ ಗೆದ್ದೂ ಸಹ ತೀರಿದ್ದ. ಅಲ್ಲದೆ ಹಾಗೆ ಬಂಕ್ ಹಾಕಿದ ತಪ್ಪಿಗೆ ಬೇಕಾದ ಹಾಜರಿಯ ವಿಲೇವಾರಿಯನ್ನು ಮಾಡಲೂ ಸಹ ಈತನೇ ನೆರವಾಗುತ್ತಿದ್ದ. ಹಾಗಾಗಿ ಇಂದು ಆತನ ಕೃಪೆಯಿಂದ ಮೊದಲ ಪಿರಿಯಡ್ನ ಕ್ಲಾಸಿನ ಬೆಂಚುಗಳು ಕೇವಲ ಮೊದಲ ಸಾಲಿನ ಪ್ರವೀಣರಿಗೆ ಮೀಸಲಾಗಿದ್ದಿತು.

'ತತ್ತ್ .. ಹಾಸ್ಟೆಲಿಗೋಗಿ ರೆಡಿ ಆಗೋ ಮಾರಾಯ.. ಅದೆಷ್ಟ್ ಗೊರ್ಕೆ ಹೊಡಿತಿಯ ' ಎಂದು ಬೈದ ನಂತರ ಕೊಸರಾಡಿಕೊಂಡು ಎದ್ದು ಕೂತ ಲೋಕೇಶ.

'ತಾವೆನ್ ಕಮ್ಮಿನಾ .. ಸೊಳ್ಳೆಗಳೂ ಹೆದ್ರಿ ಓಡ್ ಹೋಗೋ ಹಾಗೆ ಗೊರಕೆ ಹೊಡೆಯೋದು ಯಾರಪ್ಪ..' ಎಂದು ಇಲ್ಲದ ಸುಳ್ಳನ್ನು ಸೃಷ್ಟಿಸಿ ನನ್ನ ಮೇಲೆಯೇ ಒರಿಸತೊಡಗಿದ. ಅಂತೆಯೇ ಯಾವುದೊ ಕರ್ಕಶ ಸದ್ದನ್ನು ತನ್ನ ಮೊಬೈಲಿನಲ್ಲಿ ರೆಕಾರ್ಡ್ ಮಾಡಿದ್ದನ್ನು ಕೇಳಿಸಿ ಅದು ನನ್ನದೇ ಗೊರಕೆಯ ಸದ್ದೆಂದು ವಾದಿಸತೊಡಗಿದ.

'ಆ ಹೊಸ ಹುಡ್ಗ ಆದಿಶೇಷ ನನ್ನ್ ರೂಮಿಗೆ ಶಿಫ್ಟ್ ಆಗ್ಲ ಅಂತ ಕೇಳ್ತಿದ್ದ..' ದಿಂಬನ್ನು ಗೋಡೆಗೆ ಒರಗಿಸಿ ಕೂರುತ್ತಾ ನಾನೇಳಿದೆ.

'ಒಹ್ ನ್ಯೂ ಕಮರ್ .. ಹಾಸ್ಟೆಲ್ ಏನಾಗಿದೆ ಅಂತೇ ಅವ್ನಿಗೆ ..'

'ಗೊತ್ತಿಲ್ಲ. ಬಂದ್ರೆ ಬರ್ಲಿ ಬಿಡು. ನಂಗೂ ಸ್ವಲ್ಪ ರೆಂಟ್ ಶೇರ್ ಆಗುತ್ತೆ.' ಎಂದ ನಾನು ತುಸು ಹೊತ್ತಿನ ನಂತರ 'ನೀನೂ ಯಾಕೆ ಇದೇ ರೂಮಿಗೇ ಶಿಫ್ಟ್ ಆಗ್ಬಾರದು ಮಾರಾಯ? ಹೇಗಿದ್ರು ಯಾವಾಗಲೂ ಇಲ್ಲೇ ಸಾಯ್ತಾ ಇರ್ತೀಯ .. ಅಫೀಷಿಯಲ್ ಆಗಿ ಬಂದ್ರೆ ರೆಂಟ್ ಖರ್ಚು ನಂಗೆ ಇನ್ನೂ ಕಡಿಮೆ ಆಗ್ಬಹುದಲ್ಲ..' ಆತನ ಮುಖಭಾವವನ್ನು ಗಮನಿಸುತ್ತಾ ನಾನೇಳಿದೆ.

'ನೋಡನಪ್ಪ .. ಆದ್ರೆ ನಾನ್ ರೆಂಟ್ ಕೊಡೋದು ಯಾವ್ದಾದ್ರು ಬಿಸಿನೆಸ್ ಶುರು ಮಾಡಿದ್ ಮೇಲೇನೆ..' ಎಂದು ಅಲ್ಲಿಯೇ ತನ್ನ ಚೌಕಾಶಿಯನ್ನು ಶುರುಮಾಡಿದ ಆತ. ನಾನು ಆತನನ್ನು 'ಥು..ನಿಂದು ಒಂದು ಜನ್ಮನಾ..' ಎಂಬ ನೋಟದಿಂದ ಗುರಾಯಿಸಿದಾಗ ಹಲ್ಲು ಕಿರಿಯುತ್ತ ನನ್ನ ಬಳಿಗೆ ಬಂದು 'ಜಸ್ಟ್ ಕಿಡ್ಡಿನ್ಗ್ ಮಚಿ..' ಎಂದು ನಗತೊಡಗಿದ.

'ಅದೆಲ್ಲ ಆಮೇಲೆ ನೋಡಣ .. ಮೊದ್ಲು ಕಾಲೇಜಿಗೆ ರೆಡಿ ಆಗು.. ಪ್ರಿನ್ಸಿ ಇವತ್ತು ಸರ್ಪ್ರೈಸ್ ವಿಸಿಟ್ ಮಾಡ್ತಾರಂತೆ.. ' ಎಂದ ಮೇಲೆಯೇ ಆತ ಎದ್ದು ಹಾಸ್ಟೆಲಿನ ಕಡೆಗೆ ಮುಖ ಮಾಡಿದ್ದು. ರಾತ್ರಿ ಕುಡಿದ ಬಿಯರ್ನ ಬಾಟಲಿಗಳನ್ನು ಹೆಕ್ಕಿ ನಾನು ರೂಮನ್ನು ಶುಚಿಗೊಳಿಸತೊಡಗಿದೆ.



**



'ಮಚಿ, ಉಷಾನ ನೋಡೋ. ಏನ್ ಐಟಂ ಆಗಿದ್ದಳೋ ಈಗ…' ಬಿಸಿನೆಸ್ ಡೆವೆಲಪಮೆಂಟ್ ಕ್ಲಾಸಿನ ನಿದ್ದೆಯ ಮತ್ತಿನಲ್ಲಿದ್ದ ನನ್ನನ್ನು ಬಡಿದೆಬ್ಬಿಸಿದ ಲೋಕೇಶ. ಇಡೀ ಕ್ಲಾಸ್ ರೂಮಿಗೆ ಇರುವ ಏಕೈಕ ಫ್ಯಾನಿನಿಂದ ಅದರ ಮೂಳೆ ಮುರಿಯುವಂತೆ ದುಡಿಸಿಕೊಂಡು ಅದು ಕರುಣಿಸುವ ಕೆಲವೇ ಕೆಲವು ಮೀಟರ್ / ಸೆಕೆಂಡ್ ಗಾಳಿಯನ್ನು ಕಷ್ಟಪಟ್ಟು ಆಸ್ವಾದಿಸುತ್ತಾ ಹೆಚ್ಚುಕಡಿಮೆ ಶಿಕ್ಷಕರಾದಿಯಾಗಿ ವಿದ್ಯಾರ್ಥಿಗಳೂ ನಿದ್ರೆಗೆ ಶರಣಾಗುವ ಮಧ್ಯಾಹನದ ಆ ಮತ್ತು ಆಹಾ…! ಎನಿಸುವಂತಿತ್ತು. ಒಂದು ಪಕ್ಷ ನಾನೇನಾದರೂ ಕಾಲೇಜಿನ ಪ್ರಿನ್ಸಿಪಲ್ ಆಗಿದ್ದರೆ ಇಡೀ ಕಾಲೇಜಿಗೆ ಕಾಲೇಜು ಮದ್ಯಾಹ್ನದ ಒಂದು ಪವರ್ ನ್ಯಾಪನ್ನು ತೆಗೆದುಕೊಳ್ಳುವುದನ್ನು ಖಡ್ಡಾಯ ಮಾಡಿ ಆ ನಿದ್ರೆಯಲ್ಲೂ ಏನಾದರೊಂದು ಚಿಂತನಾ ಕಾರ್ಯಗಳನ್ನು ಮಾಡುವ ವಿದ್ಯಾರ್ಥಿಗಳನ್ನು ತಯಾರಿಸುವ ಹೊಣೆಯನ್ನು ಶಿಕ್ಷಕರಿಗೆ ನೀಡುತ್ತಿದ್ದೆ!!

'ತತ್ತ್ ಏನಪ್ಪಾ ನಿನ್ ಗೋಳು , ಮುಚ್ಕೊಂಡ್ ಮಲ್ಕೋ ಇಲ್ಲ ನಂಗ್ ಮಲ್ಗೊಕ್ ಆದ್ರೂ ಬಿಡು' ಎಂದು ಕೊಸರಾಡುವಷ್ಟರಲ್ಲೇ ಶಿಕ್ಷಕರ ಕೈಲಿದ್ದ ಚಾಕ್ ಪೀಸಿನ ತುಂಡು ನನ್ನ ಕೆನ್ನೆಯನ್ನು ರಪ್ಪನೆ ಬಂದು ತಟ್ಟಿತು. ಚಾಕ್ ಪೀಸಿನ ಒಡೆತಕ್ಕೆ ಒಂದರೆ ಸೆಕೆಂಡು ಮಾತು ಬಾರದಂತಾಗಿ ಏನು ಮಾಡಬೇಕೆಂದು ನನಗೆ ತಿಳಿಯಲಿಲ್ಲ. ಲೋಕೇಶನ ದೃಷ್ಟಿ ಇನ್ನೂ ಉಷಾಳ ಮುಖವನ್ನು ತಲುಪಿರದಿದ್ದರಿಂದ ಹಾಗು ಆ ಸಮಯದಲ್ಲಿ ಆತನಿಂದ ಯಾವುದೇ ಬಗೆಯ ಸಹಾಯವನ್ನು ಆಕ್ಷೇಪಿಸುವದೂ ನಿಷ್ಪ್ರಯೋಜಕ ಕೆಲಸವಾದ್ದರಿಂದ ನಾನು ನಿರಪರಾಧಿಯಂತೆ ತಲೆತಗ್ಗಿಸಿಕೊಂಡು ಎದ್ದು ನಿಂತೆ.

'ಏನ್ರಿ ನೀವು.. ಮಾನ ಮರ್ಯಾದೆ ಏನೂ ಇಲ್ವಾ.. ಮನೆ ಒಳಗೆ ಅಮ್ಮನ್ ಕಾಲ್ ಮೇಲೆ ಮಲ್ಗೊ ಹಾಗೆ ಮಲಗಿದ್ದೀರಲ್ಲರಿ’

'ಅಮ್ಮನ್ ಕಾಲ್ ಮೇಲೆ ಮಲಗೋಕೆ ಮಾನ ಮರ್ಯಾದೆ ಯಾಕ್ ಬೇಕು ಮೇಡಂ..' ಎಂದಾಗ ಒಂದಷ್ಟು ಜನ ಗಹಗಹಿಸಿ ನಕ್ಕರು.

'Don’t talk Non Sense with me..' ಊಹಿಸಲಾರದ ಪ್ರತ್ಯುತ್ತರವನ್ನು ಕೇಳಿ ಆಕೆ ತನ್ನ ಸಹಜ ಏರು ಧ್ವನಿಯಲ್ಲಿ ಅಬ್ಬರಿಸಿದರು.

'Then tell me Mam, What Should I speak with you..’ ಎಂದು ರಾಗವಾಗಿ ನಾನು ಹೇಳಿದಾಗ ಇಡೀ ಕ್ಲಾಸಿಗೆ ಕ್ಲಾಸೇ ಬಿದ್ದು ನಗತೊಡಗಿತು.

ಆದರೆ ಆಕೆ ಗಟ್ಟಿ ಹೆಣ್ಣು. ಸೋಲನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವಾಕೆಯಲ್ಲ. ಮೇಲಾಗಿ ಸಾಂಸ್ಕೃತಿಕ ಚಟುವಟಿಕೆಗಳ ಆಗರವಾಗಿದ್ದ ನಮ್ಮ ಕಾಲೇಜಿನಲ್ಲಿ ಶಿಕ್ಷಕ ಹಾಗು ವಿದ್ಯಾಥಿಗಳ ಈ ಬಗೆಯ ‘ಚರ್ಚಾಕೂಟ’ಗಳು ಆಗಾಗ್ಗೆ ನೆಡೆಯುತ್ತಲೇ ಇರುತ್ತಿದ್ದರಿಂದ ಮಾತಿನ ಪೆಟ್ಟನ್ನು ಮಾತಿನಿಂದಲೇ ಕೊಡಬೇಕಾಗಿ ಬರುತ್ತಿತ್ತು.

‘Oh is it, then Come on .. ಬನ್ನಿ ಇಲ್ಲಿ’ ಎನುತ ಅವರು ಬ್ಲಾಕ್ ಬೋರ್ಡಿನ ಬಳಿಗೆ ಹೋದರು. ಕೂಡಲೇ ಏನೂ ಅರಿಯದವನಂತೆ ನಾನು ಅವರನ್ನು ಹಿಂಬಾಲಿಸಿದೆ. ಲೋಕೇಶ ಸಿಕ್ಕ ಈ ಸದಾವಕಾಶವನ್ನು ಉಷಾಳ ಉದ್ದಳತೆಯನ್ನು ಕಣ್ಣಿನಲ್ಲೇ ಅಳೆಯುವುದರಲ್ಲಿ ಮಗ್ನನಾಗಿದ್ದ. ತನ್ನ ಒಬ್ಬನೇ ಅಮಾಯಕ ಗೆಳೆಯನ ಮಾನಾಪಹರಣದ ಸಂಧರ್ಭವೆಂದೂ ಅರಿಯದೆ ಆತ್ಮತೃಪ್ತಿಯ ನಗೆಯೊಂದನ್ನು ಬೀರುತ್ತಿದ್ದ.

'ರೀ ಮಿಸ್ಟರ್.. ನೋಡಿ, ಈ ಕ್ಲಾಸ್ಸಲ್ಲಿ ಒಬ್ರಾದ್ರೂ ನಾನ್ ಹೇಳಿರೋ ಪಾಠ ಆರ್ಥ ಆಗ್ಲಿಲ್ಲ ಅಥವಾ ನಿದ್ರೆ ಬರೋ ಆಗಿತ್ತು ಅನ್ಲಿ. I will make sure this will become my last class here.. ' ಎಂದು ನನಗೆ ಆ ಮ್ಯಾನೇಜ್ಮೆಂಟ್ ಕ್ಲಾಸ್ಸಿನ ಅತಿ ಕ್ಲಿಷ್ಟವಾದ ಸವಾಲನ್ನು ಹಾಕುವ ಮೊದಲು ತಾನು ಹೇಳಿದ ಮಾತನ್ನು ಸಮರ್ಥಿಸುವಂತೆ ತರಗತಿಯನೊಮ್ಮೆ ನೋಡಿದರು. ಆಶ್ಚರ್ಯವೆಂಬಂತೆ ಆ ಗುಂಪಿನ ಮಧ್ಯದಿಂದ ಕೈಯೊಂದು ಸದ್ದಿಲ್ಲದೆ ಮೇಲೆದ್ದು ನಿಂತಿತ್ತು! ತನ್ನ ಕಣ್ಣುಗಳೆರಡನ್ನೂ ಕೆರಳಿಸಿ ಆ ಕೈಗಳನ್ನೇ ನೋಡಿದ ಅವರು 'Hello, who the hell are you man & what do you want.. ' ಎಂದಾಗ ಲೋಕೇಶ,

'ನಿಮ್ಮ್ ಪಾಠಾನೂ ಅರ್ಥ ಆಗ್ಲಿಲ್ಲ + ಈ ಕಡೆ ನಿದ್ರೆನೂ ಬಿಡ್ತಿಲ್ಲ' ಎಂದು ಆಕಳಿಸುತ್ತಾ ಎದ್ದು ನಿಂತ!

ಮೊದಲ ಬಾರಿಗೆ ಅವರಿಗೆ ತಮ್ಮ ಮಾತಿನ ಮೇಲಿನ ಹಿಡಿತ ಸಡಿಲಗೊಂಡಿತು. ಧ್ವನಿ ಕೊಂಚ ತೊದಲತೊಡಗಿತು. ಅವರು ಉಷಾಳ ಮುಖವನ್ನೊಮ್ಮೆ ನೋಡಿದರು. ನಂತರದ ಕ್ಷಣದಲ್ಲೇ ಮತ್ತೆ ಗಟ್ಟಿಯಾದ ಉಸಿರೊಂದನ್ನು ಎಳೆದುಕೊಂಡು,

'ಸರಿ.. ಬನ್ರೀ.. ನೀವೂ ಬನ್ನಿ..ಸ್ಟೇಜ್ ಮೇಲೆ ನಿಂತು ನಾನ್ ಹೇಳ್ತಿರೋ ವಿಷ್ಯಾನ ಕ್ಲಾಸ್ಸಿಗೆ ಅರ್ಥ ಮಾಡ್ಸಿ.. ನಿಮ್ ನಿದ್ರೆನೂ ಹೋಗುತ್ತೆ, ನನಗೂ ಹೆಲ್ಪ್ ಆಗುತ್ತೆ..Come..Come ' ಎಂದು ಸ್ಟೇಜಿನಿಂದ ಕೆಳಗಿಳಿದರು. ಸಂದರ್ಭ ಬಿಗುವಾಯಿತು. ಕೆಲ ನಿಮಿಷ ಮೌನವಾಗಿದ್ದು 'Sorry ಮೇಡಂ' ಅಂದಿದ್ದರೆ ವಿಷಯ ಅಲ್ಲಿಗೆ ಮುಗಿಯುತ್ತಿತ್ತು. ಆದರೆ ಲೋಕೇಶ ಸುಮ್ಮನಾಗಲಿಲ್ಲ. ಈ ಹೊಸ ಐವತ್ತರ ಆಸುಪಾಸಿನ ಸ್ಟ್ರಿಕ್ಟ್ ಲೆಕ್ಚರರ್ನ ಮುಂದೆ ತನ್ನ ಹೀರೋಗಿರಿಯನ್ನು ತೋರಲೊದ ಆಸಾಮಿ.

ನನ್ನ ಪಕ್ಕಕ್ಕೆ ಬಂದು ನಿಂತವನು ಮುಗುಳ್ ನಕ್ಕು 'ಮಚಿ.. ಈದ್ ಯಾವ್ ಕ್ಲಾಸು' ಎಂದು ಕಿವಿಯ ಬಳಿ ಗುಸುಗುಡತೊಡತೊಡಗಿದ. ನಾನು ಬೇಕಂತಲೇ ಏನೂ ಮಾತನಾಡದೆ ಸುಮ್ಮನಾದೆ!

'ರೀ ಮಿಸ್ಟರ್, ಅಲ್ಲಿ ಬುಕ್ ಇದೆ, ಚಾಪ್ಟರ್ ನಂಬರ್ 2. ಸ್ಟಾರ್ಟ್ ಅಪ್ ಕಾನ್ಸೆಪ್ಟ್ಸ್ ' ಎಂದಾಗ ಲೋಕೇಶ ಪುಸ್ತಕವನ್ನು ಕೈಗೆತ್ತಿಗೊಂಡು ಬಿರಬಿರನೆ ಪುಸ್ತಕದ ಮೇಲೆ ಕಣ್ಣಾಯಿಸಿದ. ನಂತರ ಕೊಂಚ ಸುಮ್ಮನಾಗಿ ಸಿನಿಮೀಯ ರೀತಿಯಲ್ಲಿ ನಗುತ್ತಾ,

'You know class, ಈ ಪುಸ್ತಕದ ಬದ್ನೇಕಾಯಿನೆಲ್ಲ ಓದ್ತಾ ಇದ್ರೆ ದೇವ್ರಾಣೆ ನೀವು ಸ್ಟಾರ್ಟ್ ಅಪ್ಪು ಮಾಡಲ್ಲ ಮತ್ತೊಂದು ಮಾಡಲ್ಲ. ಅಲ್ಲ ರೀ, ಏನ್ ಇವಾಗ, ಬಿಸಿನೆಸ್ ಶುರು ಮಾಡ್ಬೇಕು ಅಷ್ಟೇ ತಾನೇ…' ತಾನು ಸೋತು ಸುಣ್ಣವಾಗಿದ್ದ ಬಿಸಿನೆಸ್ ನ ಯಾವುದಾದರೊಂದು ಕಾನ್ಸೆಪ್ಟ್ ಅನ್ನು ಹೇಳಲು ಹೊರಟಿರುವಂತಿದೆ ಎಂದು ನನಗೆ ಖಚಿತವಾಯಿತು.

'ಅದಕ್ಕ್ ಯಾಕ್ರೀ ಕ್ಲಾಸ್ ರೂಮ್ ಟೀಚಿಂಗು.. ಯಾಕ್ ಇಷ್ಟೆಲ್ಲಾ ಫೀಸು ಗೀಸು ಮತ್ತೊಂದು ಮಗದೊಂದು..? See, Until & Unless ನೀವು ರಣರಂಗಕ್ಕೆ ಇಳಿಯೋದಿಲ್ವೋ, ತಪ್ಪನ್ನು ಮಾಡೋದಿಲ್ವೋ, ಆ ತಪ್ಪಿಂದ ಪಾಠಗಳನ್ನು ಕಲಿಯೋದಿಲ್ವೋ ಅಲ್ಲಿವರೆಗೂ ನೀವ್ ಏನ್ ಓದಿದ್ರೂ ಅಷ್ಟೇನೆ! ನೀವು ತಪ್ಪ್ ಮಾಡಬಾರ್ದು ಅಂತ ಈ ಪುಸ್ತಕಗಳಿವೆ. ವಿಪರ್ಯಾಸ ಅಂದ್ರೆ ಇವೆ ವಿದ್ಯಾರ್ಥಿ ಜೀವನದ ಅತಿ ದೊಡ್ಡ ಶಾಪ... Yes. ಪುಸ್ತಕಗಳಿದ್ದರೆ ವಿದ್ಯಾರ್ಥಿಗಳು ತಪ್ಪನ್ನೇ ಮಾಡುವುದಿಲ್ಲ. ತಪ್ಪೇ ಮಾಡ್ದೆ ಗೆಲ್ಲೋದ್ರಲ್ಲಿ ಇರೋ ಮಜಾನಾದ್ರು ಏನು ಅಂತ? Come on guys, Let’s make mistake & learn the best out of it..' ಎನುತ ರಾಜನಗೆಯನ್ನು ಬೀರಿದನು.

ಮಾತಾಡಲು, Sorry, ಪಾಠ ಮಾಡಲು ಅನುಮತಿ ಕೊಟ್ಟ ಶಿಕ್ಷಕಿ ತನ್ನ ತಲೆಯನ್ನು ಕೆಳಹಾಕಿದರು.

'Anyways, ಈ ಟೀಚಿಂಗೇ ಟೀಚ್ ಮಾಡುವ ಒಂದು ಬ್ರಿಲಿಯೆಂಟ್ ಕಾನ್ಸೆಪ್ಟ್ ಅನ್ನು ನಾನು ನಿಮ್ಗೆ ಹೇಳ್ತಿನಿ.. Its Free, Its open, it’s useful & it’s very powerful too!'

ನಿದ್ರೆಗಣ್ಣಿನಲ್ಲಿದ ಕೆಲ ಹುಡುಗರು ಚಕಿತರಾದರೆ ಇನ್ನು ಕೆಲವರು 'ಇವನ್ಯಾವನೋ ಗುಲ್ಟು' ಎಂದು ಒಳಗೊಳಗೇ ನಗತೊಡದಿದರು. ಶಿಕ್ಷಕಿ ಮಾತ್ರ ತಾನು ಇಳಿಬಿಟ್ಟ ತಲೆಯನ್ನು ಮೇಲೇರಿಸಲಿಲ್ಲ.

'ಇದನ್ನು ಬಿಸಿನೆಸ್ ಅಂತ ಬೇರೆಯವರು ಕರೆಯಬಹದು. ಆದರೆ ನಾನು ಇದನ್ನು ಸೋಶಿಯಲ್ ಸರ್ವಿಸ್ ಅಂತಾನೆ ಅನ್ನೊದು. ಯಾಕಂದ್ರೆ ಇಲ್ಲಿ ಪ್ರಯೋಜನಕ್ಕೊಳಪಡುತ್ತಿರುವವರು ವಿದ್ಯಾರ್ಥಿಗಳು, ಕಾಲೇಜುಗಳು, ಹಾಗು ಕಂಪನಿಗಳು. ಇದೊಂದು ಟ್ರೈನಿಂಗ್ ಇನ್ಸ್ಟಿಟ್ಯೂಟ್. ನಮ್ಮ ತಾಲೂಕಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅದೆಷ್ಟೇ ಉತ್ತಮ ಅಂಕಗಳನ್ನೂ ಗಳಿಸಿಕೊಂಡಿದ್ದರೂ ಯಾವೊಂದು ಕಂಪನಿಯೂ ಸಿಟಿಯ ಕಾಲೇಜುಗಳಿಗೆ ಬರುವಂತೆ ಸೆಮಿಸ್ಟರ್ ಮುಗಿಯುವ ಮೊದಲೇ ಇಲ್ಲಿಗೆ ಬಂದು ನೂರಾರು ವಿದ್ಯಾರ್ಥಿಗಳನ್ನು ಹೆಕ್ಕಿ ಕರೆದುಕೊಂಡು ಹೋಗುವುದಿಲ್ಲ. It’s a fact. ಹಳ್ಳಿಯ ವಿದ್ಯಾರ್ಥಿಗಳು ಕಾಲೇಜು ಮುಗಿದು ವರ್ಷಾನುಗಟ್ಟಲೆ ಆ ಸಿಟಿಯ ನಗರಗಳಲ್ಲಿ ಕೆಲಸಕ್ಕಾಗಿ ಅಲೆಯಬೇಕು. ಸಿಕ್ಕರೂ ಅಂತ ಕೆಲಸಗಳಿಂದ ಬರುವ ಸಂಬಳ ಬಟ್ಟೆಗಾದರೆ ಹಿಟ್ಟಿಗಿಲ್ಲ, ಹಿಟ್ಟಿಗಾದರೆ ಬಟ್ಟೆಗಿಲ್ಲ ಎಂಬಂತೆ. ಇನ್ನು ಸಾಧಾರಣ ವಿದ್ಯಾರ್ಥಿಗಳಿಗಂತೂ ಕೆಲಸವೆಂಬುದು ಹಿಮಾಲಯ ಪರ್ವತವೇ ಸರಿ. ಊರಿನಿಂದ ಅಷ್ಟೋ ಇಷ್ಟೋ ಚಿಲ್ಲರೆ ಹಣವನ್ನು ಹಿಡಿದುಕೊಂಡು ಹೋಗಿ, ಯಾವುದೊ ಗೆಳೆಯನ ಒಂದು ರೂಮಿನ ಮೂಲೆಯಲ್ಲಿ ಒಂದಿಷ್ಟು ಜಾಗವನ್ನು ಪಡೆದು ದಿನವಿಡೀ ಸಿಟಿಯ ಗಲ್ಲಿಮೂಲೆಗಳನ್ನು ಸುತ್ತುತ್ತಾ, ಕಂಡ ಕಂಡಲ್ಲೆಲ್ಲ ತಮ್ಮ ರೆಸ್ಯುಮೆಗಳನ್ನು ಹಾಕುತ್ತಾ, ಹಣ ಖಾಲಿಯಾಗುತ್ತಿರುವಂತೆ ಏರೊಡೊತ್ತಿನ ಊಟವನ್ನು ಒಂದೊತ್ತಿಗೆ ಸೀಮಿತವಾಗಿರಿಸಿಕೊಳ್ಳುತ್ತಾ, ಕೊನೆಕೊನೆಗೆ ಕೇವಲ ಟೀ ಬನ್ನುಗಳಲ್ಲೇ ದಿನವನ್ನು ಸಾಗಿಸುತ್ತ, ಆಗಲೂ ಕೆಲಸ ಸಿಗದೇ ಕೊನೆಗೆ ಜೇಬಿನಲ್ಲಿದ್ದ ಚಿಲ್ಲರೆಯಲ್ಲ ಖಾಲಿಯಾದ ಮೇಲೆ ಊರಿನ ಯಾರೋ ಒಬ್ಬರನ್ನು ಸಿಟಿಯಲ್ಲಿ ಕಂಡು ಅವರಿಂದ ಒಂದಿಷ್ಟು ಹಣವನ್ನು ಸಾಲದ ರೂಪದಲ್ಲಿ ಪಡೆದು ಇದ್ದೆನೋ ಬಿದ್ದೆನೋ ಎಂಬಂತೆ ಊರಿಗೆ ಸೇರುವ ಇಂತಹ ಯುವಕರನ್ನು ಎಂಜಿನೀರ್ಸ್ ಗಳು ಎಂದು ಕರೆಯಬಹುದೇ?’

ತಲೆ ಮೇಲೆತ್ತದ ಶಿಕ್ಷಕಿಗೆ ಏನಾಯಿತೋ ಎಂದು ನನ್ನ ಚಿಂತೆ. ಆಕೆಗೆ ಲೊಕೇಶನ ಮಾತುಗಳನ್ನು ಕೇಳಿ ಕುಂತಲ್ಲೇ ಹೃದಯಘಾತವಾಗಿರಬಹುದೇ?!

'ನಾನು ಅಥವಾ ನಿಮ್ಮಲ್ಲೇ ಯಾರೊಬ್ಬರು ಶುರು ಮಾಡಲೋಗುತ್ತಿರುವ ಈ ಇನ್ಸ್ಟಿಟ್ಯೂಟ್ ಮೊದಲು ಕಂಪನಿಗಳನ್ನು ಸಂಪರ್ಕಿಸಿ ಅವರು ಪ್ರಸ್ತುತ ವರ್ಷಕ್ಕೆ ನೇಮಕಾತಿ ಮಾಡಲು ಯೋಜಿಸಿರುವ ವಿದ್ಯಾರ್ಥಿಗಳ ಅರ್ಹತೆ, ಬೇಡಿಕೆ ಹಾಗು ಒಟ್ಟು ಸಂಖ್ಯೆಯನ್ನು ಒಟ್ಟುಗೂಡಿಸಿಕೊಂಡು ಬರುತ್ತದೆ. ಹೀಗೆ ಎಂಟತ್ತು ಕಂಪನಿಗಳನ್ನು ಸಂಪರ್ಕಿಸಿ ವಿವರಗಳನ್ನು ಗುರುತಾಕಿಕೊಂಡು ಕಾಲೇಜನ್ನು ಸಂಪರ್ಕಿಸುವುದು. ಕಾಲೇಜಿನಲ್ಲಿ ತಮ್ಮಲ್ಲಿರುವ ವಿವರಗಳ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಆಯಾ ವಿಷಯದ್ಲಲಿಯೇ ಸಂಜೆ ಕಾಲೇಜು ಮುಗಿದ ಬಳಿಕ ಅಥವಾ ವಾರಾಂತ್ಯದಲ್ಲಿ ತರಬೇತಿಯನ್ನು ನೀಡುವುದು. ಉದಾಹರಣೆಗೆ ಇಂದು ಒಬ್ಬ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಮಾಡಿದ ವಿದ್ಯಾರ್ಥಿ ಹೆಚ್ಚಾಗಿ ಆಯ್ಕೆಯಾಗುತ್ತಿರುವುದು ಪ್ರೋಗ್ರಾಮಿಂಗ್ ಆಧಾರಿತ ಕೆಲಸಗಳ ಮೇಲೆಯೇ. ಅಂದರೆ ಕಂಪ್ಯೂಟರ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮಾಡಬೇಕಾದ ಕೆಲಸ. ಇದು ಅವನ ಸ್ವಂತದ ಆಯ್ಕೆಯಾಗದಿದ್ದರೂ ಪ್ರಸ್ತುತ ಪರಿಸ್ಥಿತಿ ಆತನನ್ನು ಮೂಕನನ್ನಾಗಿಸುತ್ತದೆ. ಹಾಗಾದರೆ ಕೊನೆಗೆ ಕಂಪ್ಯೂಟರ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮಾಡುವ ಕೆಲಸವನ್ನೇ ಈತ ಮಾಡಬೇಕಾದರೆ ಎಲೆಕ್ಟ್ರಿಕಲ್ ಇಂಜಿನಿಯರಿಂಗನ್ನು ತನ್ನ ನಾಲ್ಕು ವರ್ಷಗಳ ಕಲಿಕೆಯಲ್ಲಿ ಕಲಿತು ಏನು ಪ್ರಯೋಜನ? ಇಂದು ಬಹುಪಾಲು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಗೋಳು ಇದೆಯೇ. ಓದುವುದು ಒಂದು ಮಾಡುವುದು ಬೇರೊಂದು! ಇಲ್ಲಿ ಶುರುವಾಗುವ ಇನ್ಸ್ಟಿಟ್ಯೂಟ್, ಕಂಪನಿಗಳಿಂದ ಕರಾರುವಕ್ಕಾಗಿ ಡೇಟಾಗಳನ್ನು ಸಂಗ್ರಹಿಸಿ ಅವರವರ ಐಚ್ಚಿಕ ವಿಷಯಗಳಲ್ಲೇ ತರಬೇತಿಯನ್ನು ನೀಡುತ್ತದೆ. ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅವರ ವಲಯದಲ್ಲಿನದೇ ಕಂಪನಿಗಳ ಅಗತ್ಯದ ಮೇರೆಗೆ ತರಬೇತಿಯನ್ನು ನೀಡುತ್ತದೆ. ಅದೂ ಸಹ ಕೆಲಸ ದೊರೆತ ಮೊದಲ ಆರು ತಿಂಗಳು ಕಂಪೆನಿಗಳಲ್ಲಿ ನೀಡುವ ತರಬೇತಿಯಂತೆಯೆ. ಸಾದ್ಯವಾದರೆ ಈ ತರಬೇತಿಯಲ್ಲಿ ವಿದ್ಯಾರ್ಥಿಗಳು ತಮ್ಮ ಕೊನೆಯ ವರ್ಷದ ಪ್ರೊಜೆಕ್ಕ್ಟ್ ಅನ್ನೂ ಸಹ ಮಾಡಿಕೊಳ್ಳಬಹುದು.

ಈಗ ಸಂಸ್ಥೆಯ ಪ್ರಯೋಜನಕ್ಕೆ ಬಂದರೆ, ಮೊದಲು ವಿದ್ಯಾರ್ಥಿಗಳು ಅವರವರ ಐಚ್ಚಿಕ ವಿಷಯಗಳಲ್ಲೇ ವೃತ್ತಿ ಆಧಾರಿತ ತರಬೇತಿಯನ್ನು ಪಡೆದು ವರ್ಷಾಂತ್ಯದ ಹೊತ್ತಿಗೆ ಏಕ್ದಂ ರೆಡಿಯಾಗಿರುತ್ತಾರೆ. ಇದರಿಂದ ಕಂಪನಿಗಳಿಗೂ ತರಬೇತಿಯ ಹೊರೆ ಕಡಿಮೆಯಾಗಿ ಅವರಿಗಿಚ್ಚಿಸಿದ ವಿದ್ಯಾರ್ಥಿಗಳೇ ಪ್ಲೇಸ್ಮೆಂಟ್ ಸಮಯದಲ್ಲಿ ಇಲ್ಲಿ ತಯಾರಾಗಿ ನಿಂತಿರುತ್ತಾರೆ. ಎಲ್ಲಾ ಬಗೆಯ ಕಂಪನಿಗಳು ತಾವು ನಿರಾಳವಾಗಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಬಹುದು. ಅಲ್ಲದೆ ಪ್ರೊಬೇಷನ್ ಪಿರಿಯಡ್ ಅದು ಇದು ಏನದೆ ಮೊದಲ ದಿನದಿಂದಲೇ ಉದ್ಯೋಗಿಗಳ ಪೂರ್ಣ ಲಾಭವನ್ನು ಪಡೆಯಬಹುದು. ಒಂದು ಪಕ್ಷ ವಿದ್ಯಾರ್ಥಿಗಳು ಕಾಲೇಜಿಗೆ ಬರುವ ಕಂಪನಿಗಳಲ್ಲಿ ಆಯ್ಕೆಯಾಗದಿದ್ದರೂ ಅವರಿಗೊಂದು ವೃತ್ತಿ ಆಧಾರಿತ ತರಬೇತಿ ಅದಾಗಲೇ ಆಗಿರುತ್ತದೆ. ಇದು ಕೇವಲ ಪದವಿ ಪ್ರಮಾಣಪತ್ರವನ್ನು ಹಿಡಿದು ಕೆಲಸವನ್ನು ಅರಸುವುದಕಿಂತ ಎಷ್ಟೋ ಪಾಲು ವಾಸಿ ಅಲ್ಲವೇ? ಅಲ್ಲದೆ ಹಳ್ಳಿಗಳ ಕಾಲೇಜುಗಳಿಗೂ ಹೆಚ್ಚೆಚ್ಚು ಕಂಪನಿಗಳು ಬರುವುದರಿಂದ ಕಾಲೇಜಿಗೂ ಒಳ್ಳೆಯ ಹೆಸರು, ಹಳ್ಳಿಯ ವಿದ್ಯಾರ್ಥಿಗಳಿಗೂ ಒಂದೊಳ್ಳೆಯ ಅವಕಾಶ ದೊರೆತಂದಾಗುತ್ತದೆ.’ ಎಂದು ಸುಮ್ಮನಾಗುತ್ತಾನೆ.

ಪ್ಲೇಸ್ಮೆಂಟ್ ಎಂಬ ಪದವನ್ನು ಕೇಳಿಯೋ ಏನೋ ಇಡೀ ಕ್ಲಾಸೇ ಎಲ್ಲಿಲ್ಲದ ಒಂದು ಮೌನದಲ್ಲಿ ಲೀನವಾಯಿತು. ಗರಗರನೆ ತಿರುಗುತ್ತಿದ್ದ ಸೀಲಿಂಗ್ ಫ್ಯಾನ್ ಒಂದನ್ನು ಬಿಟ್ಟು.

'ವಾವ್.. What a concenpt .. ಬ್ರಿಲಿಯೆಂಟ್..!! ಎನುತ ನಿಂತು ಚಪ್ಪಾಳೆಯನ್ನು ಹೊಡೆಯ ತೊಡಗಿದಳು ಉಷಾ! ಆಕೆಯನ್ನು ಇಡೀ ಕ್ಲಾಸೇ ಅನುಕರಿಣಿಸಿತು. ಯಾರಿಗೂ ಬೇಡವಾದ ಪಾಪದ ಕೂಸಾಗಿ ನಾನು ಏನು ಮಾಡುವುದೆಂದು ತಿಳಿಯದೆ ಸುಮ್ಮನೆ ನಿಂತೆ.

ಕೂಡಲೇ ಉಷಾ ಕ್ಲಾಸಿನೆಡೆಗೆ ಮುಖ ಮಾಡಿ,

'ಹಲೋ, will you guys stop clapping please?! ಅಲ್ಲರೀ ಇದನ್ನ ಯಾರಾದ್ರೂ ಬಿಸಿನೆಸ್ ಅಂತಾರ? ಎಂದು ಕ್ಲಾಸನ್ನು ಒಮ್ಮೆ ನೋಡಿದಳು. ‘ನಮ್ಮೂರಲ್ಲಿ ಸೀಬೆಕಾಯಿ ಮಾರೋನು ಸಹ ಇದಕ್ಕಿಂತ ಒಳ್ಳೆ ಬಿಸಿನೆಸ್ ಮಾಡ್ತಾನೆ. ಇವನ್ಯಾರೊ ಹೇಳ್ದ , ಇವ್ರ್ ಕೇಳಿದ್ರು' ಎಂದು ಮುಖಕ್ಕೆ ಬಡಿದಂತೆ ಆಕೆ ಹೇಳಿದಳು. ಉಷಾಳ ಶಾಖವನ್ನು ಕಂಡು ತಬ್ಬಿಬ್ಬಾದ ಲೋಕೇಶ ನನ್ನೆಡೆ ನೋಡಿದ. ಪ್ರತ್ಯುತ್ತರವಾಗಿ ನನ್ನ ಹನ್ನೆರೆಡು ಹಲ್ಲುಗಳು ಆತನನ್ನು ನೋಡಿ ನಲಿದವು. ನಂತರ ಉಷಾ ಲೆಕ್ಚರರ್ ನ ಬಳಿಗೊಗಿ 'Mom, Come on .. Will go out and Complain Princi' ಎಂದಾಗ ನನ್ನ ಜಂಘಾಬಲವೇ ನಡುಗಿಹೋಯಿತು! ಕಾಲೇಜಿಗೆ ಸೇರಿ ಆರು ತಿಂಗಳಾದರೂ ಯಾರು ಯಾರ ಮಗಳು ಯಾರು ಯಾರ ಅಮ್ಮ ಎಂದರಿಯದ ಸಾಮಾನ್ಯ ಜ್ಞಾನ ನಮಗಿಂದು ಕೈಕೊಟ್ಟಿತು. ಆದರೆ ಲೆಕ್ಚರರ್ಗೆ ಕೂತಲ್ಲೇ ಹೃದಯಾಘಾತವಾಗಿ ಏನೋ ಹೆಚ್ಚು-ಕಡಿಮೆಯಾಗಿರಬೇಕೆಂದು ಊಹಿಸಿದ ನನಗೆ ತುಸು ಸಮಾಧಾನವಾಯಿತು. ಅಸಲಿಗೆ ನಮ್ಮ ಕ್ಲಾಸ್ ರೂಮಿನ ಏಕೈಕ ಫ್ಯಾನಿನ ಮಹಿಮೆಗೆ ಆ ತಾಯಿ ಕೂತಲ್ಲೇ ನಿದ್ರೆಗೆ ಜಾರಿದ್ದರು!! ಮಧ್ಯಾಹ್ನದ ನಿದ್ರೆಯ ಮತ್ತಿನಿಂದ ನಾವುಗಳು ಪರದಾಡುವುದು ಇಂದು ಆಕೆಗೂ ತಿಳಿದಿರಬಹುದು. ಉಷಾಳ ಮಾತನ್ನು ಕೇಳಿ ಎದ್ದು ಕೊಸರಾಡಿಕೊಳುತ್ತಾ ಏನನ್ನೂ ಮಾತನಾಡದೆ ಕ್ಲಾಸ್ ರೂಮಿನಿಂದ ಹೊರನೆಡೆದರು. ಅವರುಗಳು ಹೋದ ನಂತರ ಇಡೀ ಕ್ಲಾಸೇ ಶಿಳ್ಳು ಚಪ್ಪಾಳೆಗಳಿಂದ ಕೇಕೆ ಹಾಕಿತು. ಲೆಕ್ಚರರ್ನ್ನು ನಿದ್ರೆಗೆ ಜಾರಿಸಿದ ನಮ್ಮ ಯಶೋಗಾಥೆ ಮುಂದಿನ ಹಲವು ದಿನಗಳವರೆಗೂ ಕಾಲೇಜಿನ ಕ್ಯಾಂಪಸ್ ನಲ್ಲಿ ರಾರಾಜಿಸಿತು...


ಮುಂದುವರೆಯುವುದು..

Sunday, May 24, 2020

ಕಾದಂಬರಿ : ಪಯಣ -1

ಕ್ಯಾನ್ಬೆರಾ, ಆಸ್ಟ್ರೇಲಿಯ.

ಸಾವಿರಾರು ಕಿಲೋಮೀಟರ್ ದೂರ ದ್ವೀಪದೇಶದ, ಸುಂದರ ರಾಜಧಾನಿಯ, ನಗರವೊಂದರ ಗಜಿಬಿಜಿಗುಡುವ ರಸ್ತೆಯ, ಕಡೆಯ ತಿರುವಿನ, ಕೊನೆಯ ಅಪಾರ್ಟ್ಮೆಂಟಿನ ತುತ್ತತುದಿಯ ಫ್ಲೋರಿನ ನಾಲ್ಕನೇ ಮನೆಯ ಎರಡನೇ ರೂಮಿನ ಮೂಲೆಗೆ ಅಂಟಿಕೊಂಡಿರುವ ಬೆಡ್ಡಿನ ಬೆಚ್ಚಗಿನ ಹೊದಿಕೆಯ ಹಿತಾನಭಾವವನ್ನು ಆಸ್ವಾದಿಸುತ್ತಾ ಮಲಗಿದ್ದಳು ಇಶಾ.

ಚಳಿಗಾಲದ ಆ ಬೆಳಗು ತನ್ನೂರಿನ ಬೆಣ್ಣೆಯಂತಹ ಮಂಜಿನ ಸವಿನೆನಪನ್ನು ಹೊತ್ತು ತಂದು ಮತ್ತೊಂದು ಸುತ್ತಿನ ನಿದ್ರೆಗೆ ಜಾರಿಸಿ ಕೊನೆಗೂ ಆಕೆಯನ್ನು ಎಚ್ಚರಿಸಿದಾಗ ಘಂಟೆ ಒಂಬತ್ತು. ದಡಬಡನೆ ಎದ್ದು ರೆಡಿಯಾಗಿ ನಾಲ್ಕೈದು ನಿಮಿಷ ಬಾಲ್ಕನಿಯಲ್ಲಿ ಧಾನ್ಯವನ್ನು ಮಾಡಿ ತನ್ನ ಕಪ್ಪನೆಯ ನೀಳ ಕೂದಲನ್ನು ಹಾಗೆಯೇ ಹಿಂದಕ್ಕೆ ಇಳಿಬಿಟ್ಟು ಪ್ರಾಜೆಕ್ಟ್ ಥಿಸಿಸ್ನ ಹಾಳೆಗಳನ್ನು ಗಡಿಬಿಡಿಯಲ್ಲಿ ಜೋಡಿಸಿಕೊಂಡು ಫ್ರಿಜ್ಜಿನ ಬಳಿ ಬಂದು ನಿಂತರೆ ಮೊಟ್ಟೆ , ಹಾಲು , ಕಾರ್ನ್ ಫ್ಲಿಕ್ಸ್ ಹಾಗು ಹಲವು ಬಗೆಯ ತರಕಾರಿ ಹಣ್ಣುಗಳು. ಅವಸರದಲ್ಲಿ ಏನು ಮಾಡಬೇಕೆಂದು ತೋಚದೆ ಕೊನೆಗೆ ಹಸಿರು ಸೊಪ್ಪುಗಳ ನಡುವೆ ಏಕಾಂತವಾಗಿ ಬಿದ್ದಿದ್ದ ಸೇಬೊಂದನ್ನು ಕೈಗೆತ್ತಿಕೊಂಡು ರೂಮಿನಿಂದ ಹೊರನೆಡೆದಳು.

'ಇಶಾ.. ನಿಲ್ಲೆ .. ನಾನೂ ಬರ್ತಾ ಇದ್ದೀನಿ..' ಪಕ್ಕದ ಮನೆಯಿಂದ ಇಡೀ ಕಟ್ಟಡವೇ ನಡುಗುವಂತೆ ಅರಚಿದಳು ಅಮೆಲಿ. ದೂರದ ನ್ಯೂಯಾರ್ಕ್ನವಳು. ನ್ಯೂಯಾರ್ಕ್ ಹಾಗು ಕನ್ನಡ ? ಹೌದು.  ಪಿಎಚ್ಡಿ ಮಾಡಲು ಬಂದ ಈಕೆ ಮೊದಲ ವರ್ಷದ ನೈಟ್ ಔಟ್ ಪಾರ್ಟಿಯಲ್ಲಿ ದೇಶ ಭಾಷೆಗಳ ಬಗೆಗೆ ಇಶಾಳೊಟ್ಟಿಗೆ ಘೋರ ವಾಗ್ವಾದಕ್ಕೆ ಇಳಿದು, ಸೋತು, ಇನ್ನು ಆರೇ ತಿಂಗಳಲ್ಲಿ ಕನ್ನಡವನ್ನು ಓದುವುದು ಹಾಗು ಬರೆಯುವುದನ್ನು ಕಲಿಯುವುದಾಗಿ ಹೇಳಿ ಅಂತೆಯೇ ಈಗ ಮೂರು ವರ್ಷಗಳ ನಂತರ ಇಶಾಳನ್ನೂ ನಾಚಿಸುವಂತಹ ಕನ್ನಡವನ್ನು ಕಲಿತಿದ್ದಾಳೆ. ಸದ್ಯಕ್ಕೆ ಇಶಾಳ ಬೆಸ್ಟ್ ಫ್ರೆಂಡ್ ಕಮ್ ಫ್ಲೋರ್ ಮೇಟ್.

'ಏನೇ .. ನೀನೂ ಇನ್ನೂ ಹೊರ್ಟಿಲ್ವ..?' ಅಪಾರ್ಟ್ ಮೆಂಟಿನ ಕಿಟಕಿಯಯನ್ನು ಇಣುಕುತ್ತಾ ಕೇಳಿದಳು ಇಶಾ.

ಅಚ್ಚುಗಟ್ಟಾದ ಚಿನ್ನದ ಬಣ್ಣದ ಕೂದಲಿನ ತಿರುಬನ್ನು ಹಿಂದಕ್ಕೆ ಕಟ್ಟಿ ಅದಕೊಂಡು ಚಂದದ ಹೂವನ್ನು ಮುಡಿದು ಬೆಳ್ಳನೆಯ ಸೀರೆಯನುಟ್ಟು ಹೊರಬಂದ ಅಮೆಲಿ,

'ಸೀ .. ಪಕ್ಕಾ ಇಂಡಿಯನ್ ಹುಡ್ಗಿತರ ಕಾಣ್ತಾ ಇದೀನಿ ಆಲ್ವ..' ಎಂದು ಎಡಕ್ಕೂ ಬಲಕ್ಕೂ ತಿರುಗಿ ತನ್ನ ಕೆಂದಾವರೆ ಬಣ್ಣದ ಸೌಂದರ್ಯವನ್ನು  ಪ್ರದರ್ಶಿಸತೊಡಗಿದಳು. ರಸಿಕರ ಕಣ್ಣಿಗೆ ಮಲ್ಲಿಗೆ ಹೂವಿನಂತೆ ಕಾಣುವ ಆಕೆಯ ಸೌಂದರ್ಯ ಇಶಾಳಿಗೆ ಕಿಂಚಿತ್ತೂ ಕ್ಯಾರೆ ಎನಿಸಲಿಲ್ಲ.

'ಹುಂ ಬಾರಮ್ಮ .. ನ್ಯೂಯಾರ್ಕಿನ ಗೌರಮ್ಮ ..ಹನ್ನೊಂದ್ ಘಂಟೆಯೊಳಗೆ ಥೀಸಿಸ್ ಸಬ್ಮಿಟ್ ಮಾಡ್ಬೇಕು..ನೆನ್ಪ್ ಇದ್ಯಾ..' ಎನುತ ತನ್ನೊಳಗಿನ ವಯೋಸಹಜ ಹೆಣ್ಣಿನ ಸಣ್ಣದಾದ ಅಸೂಯೆಯನ್ನು ಹತ್ತಿಕ್ಕಿಕೊಂಡು ಆಕೆ ಹೇಳಿದಳು.

'ಎಕ್ಸ್ ಕ್ಯೂಸ್ ಮೀ .. ರಾತ್ರಿ ಎಷ್ಟ್ ಬಿಯರ್ ಕುಡಿದಿ ಡಿಯರ್..? ಥೀಸಿಸ್ ಸಬ್ಮಿಶನ್ ಡೇಟ್ ಪೋಸ್ಟ್ ಪೊನ್ಡ್ ಆಗಿದೆ ಅಂತ ನಿನ್ನೇನೆ ಅನೌನ್ಸ್ ಮಾಡಿದ್ರಲ್ಲ ..' ಹಾಲುಬಿಳುಪಿನ ತನ್ನ ಸೊಂಟದ ಮೇಲೆ ಕೈಯಿಟ್ಟು ಕೇಳಿದಳು ಅಮೆಲಿ.

ಒಮ್ಮೆಲೇ ಇಶಾಳಿಗೆ ತನ್ನ ಮರುವಿನ ಅರಿವಾಯಿತು. ನೆನ್ನೆ ಇಡೀ ಕ್ಲಾಸಿಗೆ ಕ್ಲಾಸೇ ಈ ಬಗ್ಗೆ ಹೇಳಿಕೊಂಡು ಸಂಭ್ರಮಿಸಿದ ಕ್ಷಣಗಳೇ ಆಕೆಯಿಂದ ಮರೆಯಾಗಿವೆ. ಅದೇನೋ ತಿಳಿದಿಲ್ಲ. ಇತ್ತೀಚಿಗೆ ಈ ಬಗೆಯ ಮರೆಯುವಿಕೆ ಆಕೆಗೆ ಸರ್ವೇ ಸಾಮಾನ್ಯ ವಿಷಯವಾಗಿಬಿಟ್ಟಿದೆ.

'ಒಹ್ ಗಾಡ್ .. ನನ್ ಮೆಮೋರಿಗೂ ಏನಾಗಿದೆ ಇತ್ತೀಚೆಗೆ ಅಂತ..' ಎಂದು ಕೈಲಿದ್ದ ಅರೆತಿಂದ ಸೇಬಿನಿಂದ ತನ್ನ ಹಣೆಯ ಮೇಲೆ ಚಚ್ಚಿಕೊಂಡು ಬಾಲನಗೆಯನ್ನು ಬೀರಿದ ಇಶಾ ದೊಡ್ಡ ಹೊರೆಯೊಂದು  ಹೆಗಲಮೇಲಿಂದ ಕೆಳಗಿಳಿದಂತೆ ಪಕ್ಕದ ಗೋಡೆಗೆ ಒರಗಿ ನಿಂತಳು.

'ಮೇ ಬಿ ಥೀಸಿಸ್ ಸಬ್ಜೆಕ್ಟ್ ಅನ್ನೇ ನೀನು ಚೇಂಜ್ ಮಾಡ್ಬೇಕು ಅನ್ಸುತ್ತೆ ..' ಎಂದ ಅಮೆಲಿ .. 'ಫ಼ಾರ್ಗಾಟ್ ಟು ಇನ್ಫಾರಂ .. ನೆನ್ನೆ ಇಂಡಿಯಾದಿಂದ ನಿನಗೆ ಕೋರಿಯರ್  ಏನೋ ಬಂದಿದೆ ಅಂತ ವಾಚ್ ಮ್ಯಾನ್ ಹೇಳ್ತಾ ಇದ್ದಾ .. Check it out ' ಎಂದು ಕನ್ನಡಿಯ ಮುಂದೆ ಬಾಗಿ ತನ್ನ ನುಣುಪಾದ ಕೆನ್ನೆಗಳಿಗೆ ಮೇಕಪ್ಪಿನ ಫೈನಲ್ ಟಚ್ಚನ್ನು ಕೊಡತೊಡಗಿದಳು.

'ಕೊರಿಯರ..?' ಎಂದು ಸಂಶಯದಿಂದ ಕೇಳಿದ ಇಶಾ ಕೂಡಲೇ ಲಿಫ್ಟಿನಿಂದ ಕೆಳಗಿಳಿದು ಸ್ವಲ್ಪ ಸಮಯದ ನಂತರ ಬಿಳಿಯ ಕವರಿನ ಒಂದು ಲಕೋಟೆಯನ್ನು ಕೈಯಲ್ಲಿಡಿದು ತಂದಳು.

ಕಣ್ಣುಗಳಿಗೆ ಘಾಡವಾದ ಕಪ್ಪನ್ನು ಮೆತ್ತಿಕೊಳ್ಳುತ್ತಾ ಯಾವುದೊ ಒಂದು ಹಿಂದಿ ಹಾಡನ್ನು ಗುನುಗುತ್ತಿದ್ದ ಅಮೆಲಿ 'ಏನದು..' ಎಂಬಂತೆ ಕಣ್ ಸನ್ನೆಯಲ್ಲಿಯೇ ಕೇಳಿದಳು. ಇಶಾ ಕಾರಿಡಾರಿನಲ್ಲಿಯೇ ಲಕೋಟೆಯನ್ನು ಒಡೆದು ವಿಳಾಸವನ್ನು ಓದಿ ನಂತರ ಕೆಲಕ್ಷಣ ಮೌನವಾಗಿ 'ಹಿ ಡಿಡ್ ಇಟ್.. ಯಸ್ .. ಐ ನ್ಯೂ ಇಟ್' ಎಂದು ಖುಷಿಯಿಂದ ಹೇಳುತ್ತಾ ಅದರೊಳಗಿದ್ದ ನೂರಾರು ಪುಟಗಳ ಹಾಳೆಗಳನ್ನು ಹೊರತೆಗೆದಳು.

'ಇಶಾ .. ಥೀಸಿಸ್ ಅನ್ನೂ ನೀನು ಬೇರೆಯವರ ಕೈಲಿ ಬರ್ಸೊದ... ಏನಾಗಿದೆ ನಿಂಗೆ ..By the way, who is that he ..?' ಎಂದು ಛೇಡಿಸುವಂತೆ ಕೇಳಿದಾಗ,

'ಸುಮ್ನಿರಮ್ಮ .. ನಾನೇನ್ ನೀನ್ ಕೆಟ್ಟೋದ್ನ... ಇದು ನನ್ನ ಸ್ಟೂಡೆಂಟ್ , Sorry , ಫ್ರೆಂಡೊಬ್ಬ ಬರ್ದಿರೋ ಡ್ರಾಫ್ಟ್ ನಾವೆಲ್.. ಓದಿ ಅಂತ ನನ್ಗೆ ಮೊದಲ ಕಾಪಿ ಕಳ್ಸಿದ್ದಾನೆ.. ' ಎಂದಳು.

'ನಾನೇನ್ ನೀನ್ ಕೆಟ್ಟೋದ್ನ..' ಎಂಬ ವಾಕ್ಯದ ಅರ್ಥ ಅರಿಯದಾದರೂ 'ಪರ್ವಾಗಿಲ್ಲ ಮೇಡಂ.. ತಮಗೆ ನಾವೆಲ್ ಎಡಿಟ್ ಮಾಡೋ ಕ್ಯಾಪಾಸಿಟಿ ಅಂತ ನನಗೆ ಗೊತ್ತಿರ್ಲಿಲ್ಲ.. ಎನಿವೇಸ್, ನೀನ್ ಓದಿ ಆದ್ಮೇಲೆ ವಿಥ್ ಯುವರ್ ಸ್ಟೂಡೆಂಟ್ ಕಮ್  ಫ್ರೆಂಡ್ ಪರ್ಮಿಷನ್ ಇದ್ರೆ ನಾನು ಸ್ವಲ್ಪ ಓದುತ್ತೀನಿ.. ಕೊಡ್ತಿಯಾ ' ಎಂದು ತನಗೂ ಕನ್ನಡವನ್ನು ಓದಲು ಬರುತ್ತದೆ ಎಂಬುದನ್ನು ಇಶಾಳಿಗೆ ಮನದಟ್ಟು ಮಾಡಿದಳು.  ಹೀಗೆ ಒಬ್ಬರನ್ನೊಬ್ಬರು ಛೇಡಿಸಿಕೊಂಡು  ಇನ್ನೇನು ಇಬ್ಬರು ಹೊರಟು ಕಾಲೇಜಿಗೆ ನೆಡೆಯಬೇಕು ಎನ್ನುವಷ್ಟರಲ್ಲಿ ಇಶಾ ಆಕೆಯನ್ನು ತಡೆದು,

'ಅಮಿ .. ನೀನ್ ಹೋಗು .. ಹೇಗೂ ಥೀಸಿಸ್ ಸಬ್ಮಿಶನ್ ಇಲ್ಲ .. ನಂಗೆ ಯಾಕೋ ಕ್ಲಾಸ್ಸಲ್ಲಿ ಕೂರಕ್ಕೆ ಮನ್ಸ್ ಇಲ್ಲ .. ' ಎಂದಳು.

ಕೆಲ ಸೆಕೆಂಡುಗಳಲ್ಲಿಯೇ ಬದಲಾದ ಇಶಾಳ ನಿರ್ಧಾರವನ್ನು ಕಂಡು ಕೊಂಚ ಸಂಶಯಗೊಂಡ ಅಮೆಲಿ ನಗುತ್ತಲೇ 'ಕುಚ್ ತೊ ಹೂಹ ಹೇ .. ಕುಚ್ ಹೊ ಗಯಾ ಹೆ..' ಎಂದು ಬರೋಬ್ಬರಿ ಇಪ್ಪತ್ತು ಬಾರಿ ನೋಡಿರುವ ‘ಕಲ್ ಹೊ ನಾ ಹೊ’ ಚಿತ್ರದ ಹಾಡನ್ನು ಅಣಕಿಸುವಂತೆ ಆಕೆಯ ಬಳಿಗೆ ಬಂದು ಹಾಡತೊಡಗಿದಳು. ಅರ್ಥವಾಗದ ಹಳೆಗನ್ನಡ ಪದಗಳ ಬಳಕೆಯನ್ನು ಮಾಡಿ ಹೇಗೋ ಆಕೆಯನ್ನು ಕಾಲೇಜಿಗೆ ತಳ್ಳಿದ ಮೇಲೆ ರೂಮಿಗೆ ವಾಪಸ್ಸಾದ ಇಶಾ ತನ್ನ ಸಂಯಮದ ಕಟ್ಟೆ ಒಡೆದಂತೆ ಹಾಕಿರುವ ಚಪ್ಪಲಿಯನ್ನೂ ಕಳಚದೆ ಮೊದಲ ಹಾಳೆಯನ್ನು ತೆರೆದು ಒಂದೇ ನಿಮಿಷದಲ್ಲಿ ಓದುವಂತೆ ಅಷ್ಟೂ ಹಾಳೆಗಳನ್ನು ಪಟಪಟನೆ ತಿರುವತೊಡಗಿದಳು.

ಮೂರ್ನಾಲ್ಕು ಭಾರಿ ಅಳಿಸಿ, ಮತ್ತೆರೆಡು ಬಾರಿ ನಗಿಸಿ, ಭಯ, ಖುಷಿ , ಹಠ , ಅಸೂಹೆ , ಹಾಗು ರೋಚಕತೆಯಿಂದ ಕೂಡಿದ ಕಥೆ ಒಮ್ಮೆಲೇ ಏನೆಂದು ಅರಿವಾಗದಿದ್ದರೂ ಕೊನೆಯ ಕೆಲ ಪುಟವನ್ನು ಓದಿದಾಗಲೇ ಅವಳಿಗೆ ಅದರ ಭಾಗಶಃ ರೂಪ ಗೋಚರಿಸತೊಡಗಿದ್ದು.  ಬೆಳಗಿನಿಂದ ರಾತ್ರಿಯವರೆಗೂ ಒಂದೇ ಗುಕ್ಕಿನಲ್ಲಿ ಓದುವಂತೆ ಮಾಡಿದ ಆ ಹಾಳೆಗಳು ಕತೆಯ ಅಂತ್ಯವನ್ನು ಮಾತ್ರ  ಕಾಣಿಸಿರಲಿಲ್ಲ. ಏಕೆಂದು ಆತನಿಗೆ ಕೂಡಲೇ ಇಮೇಲ್ ಮಾಡಿ ಕೇಳಿಬಿಡಬೇಕೆಂಬ ಮನಸ್ಸಾಯಿತಾದರೂ ಏಕೋ ಆಕೆ ಸುಮ್ಮನಾದಳು. ಅಂತ್ಯದ ಆತುರಕಿಂತಲೂ ಇಶಾಳ ಮನಸ್ಸು ಆಗ ಏಕಾಂತದ ಮೊರೆಯನ್ನು ಬಯಸಿತು. ಇಲ್ಲವಾದರೆ ಬೆಳಗಿನಿಂದ ಸಂಜೆಯ ತನಕ ಗ್ರಹಿಸಿದ ಅಮೂಲ್ಯವಾದ ಜೀವನ ಪಾಠವೊಂದು ಕರಗಿ ನೀರಾಗಿ ಹೋಗಬಹುದೆಂಬ ಭಾವ. ಕೂಡಲೇ ಮೇಲೆದ್ದು ಮೊಬೈಲಿನಲ್ಲಿ ಸಮಯವನ್ನು ನೋಡಿದಳು. ಅದಾಗಲೇ ರಾತ್ರಿ ಎಂಟರ ಆಸುಪಾಸು. ಸ್ನಾನಾದಿಗಳನ್ನು ಮುಗಿಸಿ ಒಂದರೆ ಹೊತ್ತು ಧ್ಯಾನವನ್ನು ಮಾಡಿದರೂ ಮನಸ್ಸು ಶಾಂತವಾಗಲಿಲ್ಲ. ಓದಿದ್ದ ಹಾಳೆಗಳೆಲ್ಲವನ್ನು ಜೋಡಿಸಿ ಅಮೆಲಿಯ ರೂಮಿನ ಟೇಬಲ್ಲಿನ ಮೇಲಿಟ್ಟು ಕೂಡಲೇ ಹತ್ತಿರದ ಕೃಷ್ಣನ ದೇವಾಯಲಯಕ್ಕೆ ಹೋಗಲು ನಿರ್ಧರಿಸಿದರು. ಕೈತುಂಬ ಮುಚ್ಚುವ ನೀಳವಾದ ಸ್ವೇಟ್ಟರು ಹಾಗು ತಲೆಗೆ ಒಂದು ಕಪ್ಪಾದ ಟೋಪಿಯೊಂದನ್ನು ತೊಟ್ಟು ದೇವಾಲಯದ ಬಳಿಗೆ ಹೆಜ್ಜೆಯಿಟ್ಟಳು.

ನಡುಗಹುಟ್ಟಿಸುವ ಆ ಚಳಿಯಲ್ಲಿ ಒಂದರೆಕಿಲೋಮೀಟರ್ ನಡೆಯುವಷ್ಟರಲ್ಲಿಯೇ ದೇವಾಲಯದ ಘಂಟೆಗಳ ಸದ್ದು ಕೇಳತೊಡಗಿದವು. ಇಡೀ ನಗರದಲ್ಲೇ ಇರುವ ಕೆಲವೇ ಕೆಲವು ದೇವಾಲಗಳಲ್ಲಿ ಕೃಷ್ಣನ ಈ ದೇವಾಲಯ ಕೆಲವೊಮ್ಮೆ ರಾತ್ರಿಯಿಡಿ ತೆರೆದಿರುತ್ತದೆ ಹಾಗು ಸಾಮೂಹಿಕ ಭಜನೆ ಮತ್ತಿತರ ಕಾರ್ಯಕ್ರಮಗಳು ನೆಡೆಯುತ್ತವೆ. ಬಿಳಿಯರು, ಕರಿಯರು, ಮೇಲು, ಕೀಳು ಎಂದಿರದೆ ವಿಶ್ವದ ಎಲ್ಲ ಸಮುದಾಯದ ಜನ ಅಲ್ಲಿ ಬೆರೆಯುತ್ತಾರೆ. ತಮಗೆ ತಿಳಿದ ಮಟ್ಟಿಗೆ ದೇವರನ್ನು ಆರಾಧಿಸುತ್ತಾರೆ. ವಾರಕ್ಕೆ ಒಂದೆರೆಡು ಬಾರಿ ಅಮೆಲಿಯೊಟ್ಟಿಗೆ ಬರುವ ಇಶಾ ತನ್ನೂರಿನ ದೇವಾಲಯದೊಳಗಿನ ತನ್ಮಯತೆಯನ್ನೇ ಇಲ್ಲಿಯೂ ಕಂಡಿದ್ದಾಳೆ.  ‘ದೇಶಯಾವುದಾದರೇನು, ಕೋಶ ಯಾರುಬರೆದರೇನು, ಭಕ್ತಿ ಇರಲು ಇಲ್ಲಿ  ಬಾರನೇನು ಅವನು?’ ಎಂದು ತನ್ನೊಳಗೆ ಅನೇಕ ಬಾರಿ ಹೇಳಿಕೊಳ್ಳುವ ಇಶಾ ದೇವಾಲಯದ ಬೃಹತ್ ದ್ವಾರದ ಮುಂದೆ ಬಂದು ನಿಂತಳು. ಚಪ್ಪಲಿಗಳನ್ನು ಪ್ರಾಂಗಣದವರೆಗೂ ಹಾಕಿಕೊಂಡು ಹೋಗಬಾಹುದಾದರೂ ಎಂದಿನಂತೆಯೇ ಅವುಗಳನ್ನು ಅಲ್ಲಿಯೇ ಬಿಟ್ಟು ಬಿಳಿಯ ಗ್ರಾನೈಟ್ ಕಲ್ಲುಗಳಿಂದ ಮಾಡಿದ ಮೆಟ್ಟಿಲುಗಳನ್ನು ಒಂದೊಂದಾಗಿಯೇ ಹತ್ತತೊಡಗಿದಳು. ಶ್ರೀಕೃಷ್ಣನಿಗೆ ಕೈ ಮುಗಿದು ತಾನು ಎಂದಿನಂತೆ ಕೂರುವ ಸ್ಥಳಕ್ಕೆ ಬಂದು ಕಂಬಒರಗಿ ಕೂತರೆ ತಲೆ ಯಾಕೋ ಭಾರವಾಗತೊಡಗಿತು.. ಅಲ್ಲಿ ಸಂಚರಿಸುತ್ತಿದ್ದ ಬಹುಷಃ ಎಲ್ಲ ಜಾತಿಯ ಹಾಗು ವರ್ಣದ ಜನರ ಗುಂಪಿನಲ್ಲಿ ಅವರಿಗೆ ತಾನು ಓದಿದ ಕತೆಯ ಒಂದು ಚಹರೆ ಬಹುವಾಗಿ ಕಾಡತೊಡಗಿತು.

ನಿಮಿಷಮಾತ್ರದಲ್ಲಿ ಕಣ್ಣೀರ ಧಾರೆ ಅವಳ ಕಪೋಲಗಳೆರಡನ್ನು  ತೊಯ್ಸತೊಡಗಿದವು. 

**

ಪಾಠ ಕಲಿಸುವ ಶಿಕ್ಷಕರೊಟ್ಟಿಗೆ ವಾಗ್ವಾದದಕ್ಕೆ ಇಳಿಯುವುದರ ಹುಚ್ಚು ಅದೆಂತಹದ್ದು ಎಂದು ಅಮೆಲಿಯನ್ನು ನೋಡಿ ಕಾಣಬೇಕು. ಅದು ಶಿಕ್ಷಣಕ್ಕೆ ಪೂರಕವಾದ ತಾರ್ಕಿಕ ಚರ್ಚೆಯೇ ಆಗಿದ್ದರೂ ಟಾಮ್ ಅಂಡ್ ಜೆರ್ರಿಯ ಇಲಿಯನ್ನು ಅಟ್ಟಾಡಿಸುವ ಆ ಆ ಪುಡಾರಿ ಬೆಕ್ಕಿನಂತೆ ಈಕೆ ತಮ್ಮ ಶಿಕ್ಷಕರನ್ನು ಪ್ರೆಶ್ನೆಗಳ ಸುರಿಮಳೆಯಲ್ಲಿ ಮೀಯಿಸಿ ಸತಾಯಿಸುತ್ತಾಳೆ. ಬಹುಷಃ ಆಕೆಯ ಕಲಿಕೆಯ ಶೈಲಿಯೇ ಹಾಗಿರಬಹುದು . ಆದರೆ ಕೆಲವೊಮ್ಮೆ ತನನ್ನು ಒಬ್ಬ ಪ್ರಚಂಡ ವಾಗ್ಮಿ ಎಂದು ಭ್ರಮಿಸಿಕೊಂಡು ಇನ್ನಿಲ್ಲದಂತೆ ಸೋತು ಅವರು ಹೇಳುವ ಯಾವ ಕಾರ್ಯಕ್ಕೂ ಸೈ ಎನ್ನುವ ಹುಡುಗಿ. ಆಕೆಯ ಕನ್ನಡ ಕಲಿಕೆಯೇ ಅದಕ್ಕೊಂದು ಉತ್ತಮ ಉದಾಹರಣೆ.

ಇಂದೂ ಸಹ ಕಾಲೇಜಿನಲ್ಲಿ ನೈಜೀರಿಯದ ಶಿಕ್ಷಕರೊಬ್ಬರಿಗೆ ಪ್ರೆಶ್ನೆಯನ್ನು ಕೇಳಿ , ಆ ಪ್ರೆಶ್ನೆ ಚರ್ಚೆಯಾಗಿ , ಚರ್ಚೆ ವಾದವಾಗಿ , ವಾದ ಬೈಗುಳವಾಗಿ , ಶಾಪವಾಗಿ ಕೊನೆಗೆ ಮುಗಿಯುವಷ್ಟರಲ್ಲಿ ಘಂಟೆ ರಾತ್ರಿಯ ಹನ್ನೊಂದು. ಆ ಆಸಾಮಿಯೂ ತಾನೇನು ಕಮ್ಮಿ ಇಲ್ಲವೆನ್ನುವಂತೆ ಈಕೆಯ ಮಾತಿಗೆ ಮಾತು ಬೆಳಸಿ ಕೊನೆಗೆ ತನ್ನ ಜೀವನದ ಮೇಲೆಯೇ ಜಿಗುಪ್ಸೆ ಬರುವಂತೆ ಬೈಸಿಕೊಂಡು ಹ್ಯಾಪೆ ಮೊರೆಯನ್ನು ಹಾಕಿಕೊಂಡು ಹೊರಟುಹೋದ.

ಇಶಾಳೊಟ್ಟಿಗೆ ಹೊರಗೆ ಊಟ ಮಾಡಿದಾರಾಯಿತು ಎಂದು ಬೇಗ ಬೇಗನೆ ಮನೆಗೆ ಬಂದ ಅಮೆಲಿಗೆ ಇಶಾ ಕಾಣಲಿಲ್ಲ. ಆಕೆಯ ಫೋನಂಬರಿಗೆ ಕೂಡಲೇ ಡಯಲ್ ಮಾಡಿದಳು. 'Dont disturb ..I’m in temple' ಎಂಬ ಆಟೋ ರಿಪ್ಲೈ ಮೆಸೇಜ್ ಬಂದ ಮೇಲೆ ತನ್ನ ರೂಮಿನೊಳಗೆ ಬಂದ ಆಕೆಗೆ ಡೆಸ್ಕಿನ ಮೇಲೆ ಇಡಲಾಗಿದ್ದ ಕಾದಂಬರಿಯ ಹಾಳೆಗಳ ಮೇಲೆ ದೃಷ್ಟಿ ನೆಟ್ಟಿತು. ಇಶಾ ಇಷ್ಟು ಬೇಗ ಕಾದಂಬರಿಯನ್ನು ಓದಿರುವಳೇ ಎಂಬ ಒಂದು ಸಣ್ಣ ಸಂಶಯ ಆಕೆಯಲ್ಲಿ ಮೂಡಿತು.

ಅದು ಭಾಷೆಯ ಆಕರ್ಷಣೆಯೋ ಏನೋ, ಬೆಡ್ಡಿನ ಮೇಲೆ ದೊಪ್ಪನೆ ಬಿದ್ದವಳೇ ಹಾಳೆಗಳ ಪುಟಗಳನ್ನು ಪಕ್ಕಕ್ಕೆ ಇರಿಸಿ ಅವುಗಳ ಮಧ್ಯದ ಯಾವುದೊ ಒಂದು ಪುಟವನ್ನು ತೆರೆದು ಸುಮ್ಮನೆ ಓದಿದಳು. ಒಂದೆರೆಡು ನಿಮಿಷದಲ್ಲಿಯೇ ಆಕೆಗೆ ಏನೋ ಒಂದು ಬಗೆಯ ಕೂತುಹಲ ಮೂಡಿದಂತಾಗಿ ಕೂಡಲೇ ಎದ್ದು ಬಿಸಿ ನೀರಿನ ಜಳಕನ್ನು ಮುಗಿಸಿ ಇನ್ಸ್ಟಾ ಮ್ಯಾಗ್ಗಿ ಪ್ಯಾಕನ್ನು ಒಡೆದು ನೀರಿನಲ್ಲಿ ಬೆರೆಸಿ ಅದನ್ನು ಪ್ಲೇಟಿಗೆ ಹಾಕಿ ತಂದಳು. ಪಬ್ಲಿಕ್ ಪರೀಕ್ಷೆಗೆ ಓದುವ ಗಂಭೀರ ವಿದ್ಯಾರ್ಥಿಯಂತೆ ಕಾಲುಗಳನ್ನು ಮಡಚಿ ಮೊದಲ ಪುಟವನ್ನು ಕೈಗೆತ್ತಿಕೊಂಡಳು. ಅದಕ್ಕೂ ಮೊದಲು ಇಶಾಳ ಪ್ಲಾಟಿಗೋಗಿ ಕನ್ನಡ ಡಿಕ್ಷನರಿಯನ್ನು ಪಕ್ಕಕ್ಕೆ ತಂದಿಡುವುದ ಮರೆಯಲಿಲ್ಲ.

 

*******************************************************************************************

                                                             

ಪುಟ-೧. 

ಅದು ಬೆಳಗಿನ ಜಾವ ಸುಮಾರು ಆರರ ಆಸುಪಾಸು. ಜಾಗಿಂಗ್ ಮಾಡುತ್ತಲೇ ಓಡೋಡಿ ಬಂದ ಲೋಕೇಶ ಒಂದೇ ಸಮನೆ ಬಾಗಿಲನ್ನು ಬಡಿಯತೊಡಗಿದ. ಬೆಳಗಿನ ಜಡತ್ವದ ಕೋಟೆಯನ್ನು ಭೇದಿಸುವ ಸೈನಿಕನ ಸದ್ದಿನಂತೆ ಆತ ಅರಚತೊಡಗಿದ. ಬೊಬ್ಬಿ ಗೀಳಿಡುವ ಸಂತೆಯಾಗಿರುವ ಪ್ರಪಂಚದಲ್ಲಿ ಚಿಂತೆ ಇರದೇ ಸುಖವನ್ನು ಕಾಣುವ ನಿದ್ರೆಯೆಂಬ ಮಹಾತಪಸ್ಸಿಗೆ ಇಳಿದಿದ್ದ ನನಗೆ ಆತನ ಅರಚುವಿಕೆ ಎಲ್ಲಿಲ್ಲದ ಕೋಪವನ್ನು ತಂದಿತು. ಘಾಡ ನಿದ್ದೆಯಲ್ಲೂ ಕಷ್ಟಪಟ್ಟು ಎದ್ದು ಬಾಗಿಲನ್ನು ತೆರೆದ ನನ್ನನ್ನು ಪಕ್ಕಕ್ಕೆ ತಳ್ಳಿ  ಫ್ರಿಡ್ಜ್ ನಲ್ಲಿದ್ದ ತಣ್ಣೀರನ್ನು ಹೊರತೆಗೆದು ಗಟಗಟನೆ ಕುಡಿದು,

'ಮಚಿ, ಅರ್ಜೆಂಟ್ ಆಗಿ ಒಂದು ಹತ್ತು ಸಾವಿರ ದುಡ್ಡ್ ಬೇಕೋ. ಒಳ್ಳೆ ಒಂದು ಬಿಸಿನೆಸ್ ಪ್ರಪೋಸಲ್ ಬಂದಿದೆ. ಪಕ್ಕದ ಊರಲ್ಲಿ ಓಪನ್ ಗ್ರೌಂಡ್ ಮೀಟಿಂಗ್ ಇದ್ಯಂತೆ, ಇವತ್ತೇ ಹೊರಡ್ಬೇಕು..' ಎಂದು ಬೆವರು ಮೆತ್ತಿದ ಉದ್ದನೆಯ ಕೂದಲನ್ನು ತನ್ನ ಎರಡೂ ಕೈಗಳಿಂದ ಹಿಂದಕ್ಕೆ ಸರಿಸುತ್ತಾ ಬಡಬಡನೆ ಒದರುತ್ತಾನೆ. ಎತ್ತರ ಆರಡಿ ಇರದಿದ್ದರೂ, ಮೈಯ ಬಣ್ಣ ಹಾಲಿನಂತೆ ಹೊಳೆಯದಿದ್ದರೂ ಜಡೆ ಕಟ್ಟಬಹುದಾದಂತಹ ಆತನ ನೀಳ  ಕೇಶ ರಾಶಿ ಏನೋ ಒಂದು ಮೆರುಗನ್ನು ಆತನಿಗೆ ತಂದಿಟ್ಟಿತು. ಓದು ಮುಗಿಯುವುದರೊಳಗೆ ತನ್ನದೇ ಏನೋ ಒಂದು ಸ್ಟಾರ್ಟಪ್ಪನ್ನು ನೆಡೆಸಬೇಕೆಂಬ ಅದಮ್ಯ ಹಠದೊಂದಿಗೆ ಗುಂಡಿಗೆ ಬೀಳಲು ಹವಣಿಸುವ ಹಲವರಲ್ಲಿ ಮೊದಲಿಗ ನಮ್ಮ ಲೋಕೇಶ. ಓದಿನಲ್ಲಿ ಹಿಂದಿದ್ದರೂ 'ಅಂಬಾನಿ ಏನು ಡಿಗ್ರಿ ತಗೊಂಡೆ ಬಿಲೇನಿಯರ್ ಆದ್ನಾ?' ಎಂದುಕೊಂಡೆ ತನ್ನೆಲ್ಲಾ ಘನಕಾರ್ಯಗಳನ್ನು ನಮ್ಮೊಟ್ಟಿಗೆ ಸಮರ್ಥಿಸಿಕೊಳ್ಳುತ್ತಿದ್ದ. ಆಗಲೇ ಲಕ್ಷ ದುಡ್ಡಿನ ಸಾಲಗಾರನಾಗಿರುವ ಈತ ಅಂಬಾನಿ ಆಗ್ತಾನೋ ಅಥವ ಮಹಾ ಮೋದಿಯ ತದ್ರೂಪಿಯಾಗುತ್ತಾನೋ ಎಂಬುದೇ ಸದ್ಯ ಫ್ರೆಂಡ್ ಸರ್ಕಲ್ ಗಳಲ್ಲಿ ಇತ್ತೀಚಿಗೆ ನೆಡೆಯುತ್ತಿರುವ ಚರ್ಚೆ.

'ನೋಡಪ್ಪ ನೆಕ್ಸ್ಟ್ ಮಂತ್ ಶುರುವಲ್ಲೇ ನಂಗೆ ದುಡ್ಡ್ ವಾಪಸ್ ಬೇಕು. ನನ್ನ್ ಪಾರ್ಟ್ ಟೈಮ್ ಕೆಲ್ಸದ ಸೇವಿಂಗ್ಸ್ ಅದು. ನನ್ನ್ ಮಕ್ಳ ಬರಿ ತಗೋಣೋದೆ ಮಾಡ್ತಿರಲ್ಲ, ಯಾವಾಗ್ಲಾದ್ರೂ ಕೊಡೋದೂ ಕಲಿರೋ'  ನಾನೆಂದೆ.

'ಬಂದ ಹಾಜಿರ್ ಹೈ ಹುಕುಂ .. ಆಪ್ ಕೆ ಲಿಯೆ ಜಾನ್ ಬಿ ತೈಯಾರ್ ಹೈ.. ಈ ದುಡ್ಡು ಗಿಡ್ಡು ಎಲ್ಲ ಯಾವ್ ಮಹಾ ಲೆಕ್ಕ ' ಎನುತ ಸಾರ್ಕ್ಯಾಸ್ಟಿಕ್ ಆಗಿ ನಟಿಸತೊಡಗಿದ .

ಮಧ್ಯದ ಬೆರಳನ್ನು ತೋರಿಸಿದ ನಾನು ರೂಮಿನೊಳಗೋಗಿ ಡೆಬಿಟ್ ಕಾರ್ಡನ್ನು ತಂದು ಅವನ ಕೈಮೇಲಿಟ್ಟು,

 ‘ವಾಪಾಸ್ ಇಟ್ಟೋಗು.. ನನ್ನ ಎಬ್ಬಿಸ್ಬೇಡ..' ಎಂದೆ.

'ಥಾಂಕ್ ಯು ಮಚಿ..' ಎನುತ ತನ್ನ ಬೆವರಿನ ಮೈಯಲ್ಲೇ ನನ್ನನ್ನು ಬಾಚಿ ತಬ್ಬಿಕೊಂಡ ಆತನನ್ನು ನಾನು ಸಾಧ್ಯವಾದಷ್ಟು ದೂರಕ್ಕೆ ತಳ್ಳಿದೆ.

**

'ಡಿಯರ್ ಫ್ರೆಂಡ್ಸ್, ವೆಲ್ಕಮ್ ಯು ಆಲ್..' ಎಂದ ಧ್ವನಿವರ್ಧಕದ ಕರ್ಕಶ ಸದ್ದು ಆಗಷ್ಟೇ ಮುಸುಕುಹಾಕುತ್ತಿದ್ದ  ಸುಖನಿದ್ದೆಗೆ ಭಂಗ ತರುವಂತಿತ್ತು. ಊರಿನ ಸಂತೇಮಾಳದಲ್ಲಿ ಮದುವೆಗೆ ಬಳಸುವ ಶಾಮಿಯಾನವನ್ನು ಕಟ್ಟಿ, ಕಂಗೆಟ್ಟ ಕೆಂಪು ಹಾಗು ಜಿಡ್ಡುಗಟ್ಟಿದ್ದ ಬಿಳಿಯ ಬಣ್ಣದ ಚೇರುಗಳನ್ನು ಮನಬಂದಂತೆ ಅಸ್ತವ್ಯಸ್ತವಾಗಿ ಜೋಡಿಸಿ, ಪ್ರೈಮರಿ ಶಾಲೆಯ ಮಕ್ಕಳನ್ನು ನಿಗ್ರಹಿಸುವ ಶಿಕ್ಷಕಿಯರಂತಹ ಹಠಮಾರಿ ಹುಡುಗಿಯರಿಬ್ಬರನ್ನು ಮ್ಯಾನೇಜರ್ ಗಳಾಗಿ ನೇಮಿಸಿ ಓಪನ್ ಗ್ರೌಂಡ್ ಮೀಟಿಂಗನ್ನು ಆಯೋಜಿಸಲಾಗಿತ್ತು. ಬಂದವರನ್ನೆಲ್ಲ ಜೋರು ಮಾಡಿ ಅಲ್ಲಲ್ಲೇ ಕೂರಿಸುತಿದ್ದ ಆ ಸಮಾರಂಭ ಒಂತರ ಜನರೇಟರ್ನ ಶಕ್ತಿಯಲ್ಲಿ ಹಳ್ಳಿಮೂಲೆಯೊಂದರಲ್ಲಿ ರಾತ್ರಿಯ ಚಿತ್ರವನ್ನು ತೋರಿಸಿದಂತಿತ್ತು. ಆ ಹುಡುಗಿಯರೂ ತಾವೇ ಭವಿಷ್ಯದ ಪಿಯಮ್ಮೋ ಅಥವಾ ಸಿಯಮ್ಮು  ಕ್ಯಾಂಡಿಡೇಟುಗಳೋ ಎಂಬಂತೆ ತುಸು ಜಾಸ್ತಿಯೇ ಕುಣಿಯುತ್ತಿದ್ದರು. ಓಪನ್ ಗ್ರೌಂಡ್ ಮೀಟಿಂಗ್ ನಲ್ಲಿ ನೆರೆದಿದ್ದ  ಹತ್ತಿಪ್ಪತ್ತು ಮಂದಿಯೂ ಮೀಸೆ ಚಿಗುರದ ಅಮಾಯಕ ಹುಡುಗರು. ಜೊತೆಗೆ ಒಂದಿಬ್ಬರು ಕುಡಿದರೂ ಕುಡಿಯದಂತೆ ನಟಿಸಲಿಚ್ಚಿ ಫೇಲಾದ ವಾಗ್ಮಿಗಳು ಹಾಗು 'ಪ್ಯಾಟೆ'ಯ ಎಲ್ಲೆಂದರಲ್ಲಿ ಸಮಯ ಹರಣ ಮಾಡದೆ ಜೀವನ ನೆಡೆಸುವ ಒಂದಷ್ಟು ಪ್ರಜ್ಞಾವಂತ ನಾಗರಿಕರು. ಧ್ವನಿವರ್ಧಕದ ಸದ್ದನ್ನುಕೇಳಿ ವಿಚಲಿತನಾದ ಲೋಕೇಶ ತನ್ನೆರಡು ಅಸ್ತಗಳಿಂದ ಕಣ್ಣುಗಳನ್ನು ಉಜ್ಜಿಕೊಳ್ಳುತ್ತಾ ಎದ್ದೇಳತೊಡಗಿದ. ಮಲಗಿದ್ದು ಒಂದತ್ತೇ ನಿಮಿಷವಾದರೂ ಕೋಟ್ಯಧಿಪತಿಯಾಗುವ ಕನಸ್ಸನ್ನು ಕಂಡು ಸ್ವರ್ಗಲೋಕಕ್ಕೆ ಒಂದು ವಾಕನ್ನು ಹೋಗಿ ಬಂದತಿದ್ದ. ಸುತ್ತ ನೆರೆದಿದ್ದ ಹತ್ತು ಮತ್ತೊಂದು ಜನರನ್ನು ಕಂಡು ಉಳಿದವರು ಎಲ್ಲಿ ಎಂದು ಭವಿಷ್ಯದ ಸಂಭಾವ್ಯ ಪಿಯಮ್ ಅಥವಾ ಸಿಯಮ್ ಗಳಿಬ್ಬರನ್ನು ಕೇಳಿ,

'ರೀ, ಸಾರ್ ಭಾಷ್ಣ ಕೇಳ್ರಿ ಮೊದ್ಲು..' ಎಂದ ಒಬ್ಬಾಕೆಯನ್ನು ಹಾಗೆಯೆ ದುರುಗುಟ್ಟಿ ನೋಡಿ ಸುಮ್ಮನಾದ.

'ಹಾದರಿಂದ, ನೀವುಗಳೂ ಸಹ ದಿ ಗ್ರೇಟ್ ಅಂಟೋನಿಯೋ ರಂತಾಗಲು ಈ ಕೂಡಲೇ ನಮ್ಮ ಬಿಸಿನೆಸ್ ಅನ್ನು ಸೇರಿಕೊಳ್ಳಿ. ಈ ಅವಕಾಶ ನಿಮುಗೆ ಭಾರಿ ಭಾರಿ ಭರೋದಿಲ್ಲ! ಭಂದಾಗ ಭಿಡಭೇಡಿ.. ಕಮೋನ್, ಏನ್ ಯೋಚಿಸ್ತ್ತಿದ್ದೀರಾ, ಬನ್ನಿ ಫ್ರೆಂಡ್ಸ್, ನಮ್ಮನ ಸೇರಿಕೊಳ್ಳಿ..' ಎಂದು ಮೈಕನ್ನು ಹಿಡಿದು ಧೀರ್ಘಾಕ್ಷರಗಳನ್ನು ಕಚ್ಚಿ-ಕಚ್ಚಿ  ಅರಚುತ್ತಿದ್ದ ಐದಡಿಯ ವ್ಯಕ್ತಿಯೊಬ್ಬನನ್ನು ಕಂಡು ಹೌಹಾರಿ ಕಕ್ಕಾಬಿಕ್ಕಿಯಾದರು ದೂರದ ಬಳ್ಳಾರಿಯಿಂದ ಬಂದ ಹೈದರಿಬ್ಬರು.

'ಏನ್ ಹೇಳಕ್ಕಾತ್ತವ್ನೆಲೇ ಇವ್ನು, ಹುಚ್ಚ್ ಮಂಗ್ಯಾ' ಎಂದು ತನ್ನ ಸಣಕಲು ದೇಹದ ದೊಡ್ಡ ಕಣ್ಣುಗಳನ್ನು ನಿಮಿರಿಸಿ ಹೇಳಿದ ಒಬ್ಬಾತನಿಗೆ ಮತ್ತೊಬ್ಬ 'ಈ ಸೂಳಿಮಗನೆ ಅನ್ಸುತ್ತೆ ಅವತ್ತ್ ಫೋನಾಗ ನನ್ನ್ ಹತ್ರ ಐವತ್ ಕೋಟಿ ದುಡ್ಡಾತ ಅಂದದ್ದು. ಆ ಮುಖಾ ನೋಡ್ಲೆ, ಹತ್ತಾಣೆ ಕೊಟ್ಟ್ ಒಂದ್ ಸಾಬೂನ್ ತಗಣಕ್ಕ್ ಗತಿಯಿಲ್ಲ, ಐವತ್ ಕೋಟಿ ಈತಂತೆ. ' ಎಂದು ವ್ಯಂಗ್ಯವಾಗಿ ಹೇಳಿದನು.

ಆ ವ್ಯಕ್ತಿ  ಭಾಷಣ ಮಾಡುತ್ತಿದ್ದ ಪಕ್ಕಕೆ ಹಂದಿಗಳ ಹಿಂಡುಗಳು ಬಂದು ಗುಟುರತೊಡಗಿದವು. ಭಾಷಣಗಾರನ ಭಾಷಣಕ್ಕೆ ತೀರಾನೇ ಉಪಟಳವಾದಂತಾಗಿ ಕೊನೆಗೂ ತಾಳಲಾರದೆ ಆತ ಪಕ್ಕದಲ್ಲಿದ್ದ ಕಲ್ಲೊಂದನ್ನು ತೆಗೆದುಕೊಂಡು ಹಂದಿಯೊಂದರ ಹೊಟ್ಟೆಗೆ ಬೀಳುವಂತೆ ತನ್ನ ಶಕ್ತಿಯಲ್ಲವನ್ನು ಬಿಟ್ಟು ಎಸೆದ. ಆ ಹೊಡೆತದಲ್ಲಿ ಈ ಮಹಾಸಭೆಗೆ ತಾನು ನೂರು ಜನರನ್ನು ಕರೆದುತಂದು  ಪಕ್ಕದಲ್ಲಿ ಕೋಟು ತೊಟ್ಟು ಕೂತಿದ್ದ ಮೂರ್ನಾಲ್ಕು ಪ್ರತಿಷ್ಠಿತ ವ್ಯಕ್ತಿಗಳಿಂದ ಶಹಬಾಸ್ ಗಿರಿಯನ್ನು ಪಡೆಯುವ ಕನಸ್ಸು ಹಾಳಾದ ಸಿಟ್ಟೂ ಸಹ ಸೇರಿದಂತಿತ್ತು. 'ಡಬ್ಬ್..' ಎಂದು ಮಾಗಿದ ಹಲಸಿನ ಹಣ್ಣಿಗೆ ಬಡಿದಂತಹ ಬಂದ ಆ ಸದ್ದಿಗೆ ಹಂದಿಗಳೆಲ್ಲ ಹುಂಕರಿಸುತ್ತಾ ಅಲ್ಲಿಂದ ಜಾಗ ಕಿತ್ತವು.  ಖಾಲಿ ಚೇರಿನ ಕೊನೆಯಲ್ಲಿ ನಿಂತಿದ್ದ, ಸಮಯ ಹರಣ ಮಾಡದೆ ಜೀವನ ನೆಡೆಸುವ ಒಂದಷ್ಟು ಪ್ರಜ್ಞಾವಂತ ನಾಗರಿಕರು ಈ ದೃಶ್ಯವನ್ನು ಕಂಡು ನಗತೊಡಗಿದರು…

'ಸೊ ಫ್ರೆಂಡ್ಸ್ .. ಖ್ಖಷ್ಟಗಳು ಯಾರಿಗೆ ಬರುದಿಲ್ಲ.. ನಾವೆಲ್ಲ ಖ್ಖಷ್ಟಗಳನ್ನೇ ಹುಂಡು ಬಂದೋರು.. ಬನ್ನಿ ಫ್ರೆಂಡ್ಸ್.. ಅಲ್ಲಿ ನಮ್ಮ ಅಕೌಂಟ್ ಡಿಪಾರ್ಟ್ಮೆಂಟ್ ಇದೆ' ಎನುತ ಮತದಾನ ಬೂತಿನಂತಹ ನೀಲಿ ಬಟ್ಟೆಯಿಂದ ಒಂದು ಚೌಕಾಕಾರದ ಕೋಣೆಯನ್ನು ತೋರಿಸಿ ಅದರೊಳಗೆ ಹೋಗಿ ಅಲ್ಲಿರುವ ಒಬ್ಬ ವ್ಯಕ್ತಿಯ ಕೈಯಲ್ಲಿ ತಮ್ಮ ಹಣವನ್ನು ಡಿಪಾಸಿಟ್ ಮಾಡಿ ಬರುವಂತೆ ಹೇಳುತ್ತಾನೆ. ಚೌಕದ ಸುತ್ತಲೂ ಮತ್ತದೇ ಹಂದಿಗಳು ಬಂದು ಗುಟುರುತ್ತಿದ್ದವು. ಸ್ಟೇಜಿನ ಮೇಲೆ ಕೂತ ಮೂವರು ಬಾಡಿಗೆ ವ್ಯಕ್ತಿಗಳು ತಮ್ಮ ಮುಂದಿದ್ದ ಬಿಸ್ಕತ್ತು, ಕಾಫಿಯನ್ನು ಡಾಳಾಗಿ ಸೇವಿಸುತ್ತಾ ತಮಗೂ ಹಾಗು ಕುಳ್ಳ ಅರಚುತ್ತಿರುವ ಮಾತಿಗೂ ಎಳ್ಳಷ್ಟೂ ಸಂಬಧವಿಲ್ಲವೇನೋ ಎಂಬಂತೆ ವರ್ತಿಸುತ್ತಿದ್ದರು. ಬಳ್ಳಾರಿಯ ಹೈದರು ಇನ್ನು ಇಲ್ಲಿ ಕೂತರೆ ತಮಗೆ ಉಳಿಗಾಲವಿಲ್ಲ ಎನುತ ತಮ್ಮ ಜಾಗವನ್ನು ಕೀಳಲು ಆವಣಿಸುತ್ತಿದ್ದರು.

'ಬೋಸುಡಿಮಗ ಫೋನ್ ಮಾಡ್ಲಿ ಇವಾಂಗ್ ಐತಿ..' ಏನುತಾ ಎದ್ದು ನಿಂತರೆ, ಪ್ರೈಮರಿ ಸ್ಕೂಲಿನ ಹೆಡ್ಮೇಡಂಗಳಂತೆ ಕಣ್ಕೆರಳಿಸಿಕೊಂಡು ಯಾರೊಬ್ಬರೂ ಎದ್ದು ಹೋಗದಂತೆ ಕಾವಲು ಕಾಯುತಿದ್ದ ದ್ವಾರಪಾಲಕೆಯರು ಎದುರಾದದ್ದನ್ನು ಕಂಡು ಬೆಚ್ಚಿಬಿದ್ದರು. ಆ ರಣಕಣ್ಣುಗಳಲ್ಲಿ ತಮ್ಮ ಗಂಡಸುತನದ ಧೈರ್ಯ ಕಾಣದಂತೆ ಮರೆಯಾಯಿತು.

'ಲೇ, ಆ ಅಕ್ಕಂದಿರ್ ನೋಡ್ಲೆ. ಎದ್ದ್ ಹೋದ್ರ ದನಿಗ್ ಹೊಡ್ದನ್ಗೆ ಹೊಡಿಬಹುದು.. ಇನ್ ಸ್ವಲ್ಪ ಹೊತ್ತ್ ಕೂರ್ಲೇ.. ಅಮೇಗ್ ಹೋಗಣ' ಎಂದು ತಮ್ಮ ತಮ್ಮಲ್ಲೇ ಮಾತನಾಡಿಕೊಂಡರು.

ಇದು ಯಾವ ಬಗೆಯ ಬಿಸಿನೆಸ್, ಏನನ್ನು ಮಾರಬೇಕು, ಇವುಗಳ ಶಾಖೆಗಳು ಎಲ್ಲಿವೆ ಎಂಬುದನ್ನು ಒಂದಿನಿತೂ ಹೇಳದೆ ಕೋಟಿ ಗಳಿಸುವ ಕನಸಿನ ಗೋಪುರವನ್ನಷ್ಟೇ ಕಟ್ಟಿ ಇಷ್ಟಿಷ್ಟು ದುಡ್ಡು ಕೊಡಬೇಕು ಎಂದರೆ ನಿಯತ್ತಿನ ನಾಗರಿಕರಿಗೆ ಸಿಟ್ಟು ಬಾರದೆ ಇರುತ್ತದೆಯೇ. ಲೋಕೇಶ ರೆಬಲ್ ನಂತಾದ. 'ರೀ ಮಿಸ್ಟರ್, ಬನ್ರೀ ಇಲ್ಲಿ..' ಎನುತ ತಾನು ಕೂತ ಜಾಗದಿಂದ ಒಂದಿಷ್ಟೂ ಕದಲದೆ ಭಾಷಣ ಮಾಡುತ್ತಿದ್ದ ವ್ಯಕ್ತಿಯನ್ನು ಕರೆದ. ಲೋಕೇಶ ಕೂತಲ್ಲೇ ಕೈಸನ್ನೆ ಮಾಡಿ ತನ್ನನ್ನು ಕರೆದದನ್ನು ಅವಮಾನವೆಂದು ಭಾವಿಸಿದ ಆ ವ್ಯಕ್ತಿ, ಕೂಡಲೇ ತನ್ನ ಸಿಟ್ಟಿನ ಕಣ್ಣುಗಳನ್ನು ರಣಚಂಡಿಯರಂತೆ ನಿಂತಿದ್ದ ಹೆಣ್ಣುಗಳ ಮೇಲೆ ಬೀರಿದ. ಕೂಡಲೇ ದೈವೀಶಕ್ತಿಯೊಂದು ತಮ್ಮ ಮೈಮೇಲೆ ಆವಾಹನೆಯಾದಹಾಗೆ ಚೀರುತ್ತಾ ಬಂದ ಅವರುಗಳು,

'ಏಯ್.. ಎನ್ನು..ಹ.. ಹೆಂಗಿದೆ ಮೈಗೆ.. ಅವ್ರ್ ಯಾರ್ ಗೊತ್ತಾ..?' ಎನುತ ತಮ್ಮ ಹೆಣ್ಣುದೇಹದೊಳಗಿದ್ದ ಗಂಡಸರನ್ನು ಮಾತಿಗಿಳಿಸಿದರು. ಅದಾಗಲೇ ಸಿಟ್ಟು ವಿಪರೀತವಾಗಿ ತನ್ನ ಸಹನೆಯನ್ನು ಕಳೆದುಕೊಂಡಿದ್ದ ಲೋಕೇಶ ಕೂಡಲೇ ತನ್ನ ಪಕ್ಕದಲ್ಲಿದ್ದ ಚೇರೊಂದನ್ನು ತನ್ನ ಬಲಗೈಯಲ್ಲಿ ಮೇಲಕೆತ್ತಿ ಮುಂದಿದ್ದ ಇನ್ನೊಂದು ಚೇರಿನ ಮೇಲೆ ರಭಸವಾಗಿ ಹೊಡೆದ. ಆ ಹೊಡೆತಕ್ಕೆ ಎರಡೂ ಚೇರುಗಳು ಸೀಳಿ ಮುರುಟಿಬಿದ್ದವು!  ಲೌಡ್ ಸ್ಪೀಕರ್ನ ಧ್ವನಿಯನ್ನೂ ಮೀರಿಸುವಂತೆ ಬಂದ ಆ ಸದ್ದಿಗೆ ರಣಚಂಡಿಯರಿಬ್ಬರು ವಿರುದ್ಧ ದಿಕ್ಕಿನಲ್ಲಿ ಕಕ್ಕಾಬಿಕ್ಕಿಯಾಗಿ ಓಡಿ ತಮ್ಮ ಪಿಳಪಿಳ ಕಣ್ಣನ್ನು ಬಿಡುತ್ತಾ ದೂರದಲ್ಲಿ ನಿಂತರು. ಬಳ್ಳಾರಿಯ ಹೈದರಿಬ್ಬರು ಇದೆ ಸುಸಮಯವೆಂದುಕೊಂಡು ತಮ್ಮ ಕಿರುಬೆರಳುಗಳೆರಡನ್ನು ಭಾಷಣಮಾಡುತ್ತಿದ್ದ ವ್ಯಕ್ತಿಗೆ ತೋರಿಸುತ್ತಾ ಹಂದಿಗಳು ಗುಟುರುತ್ತಿದ್ದ ಜಿಗ್ಗಿನೆಡೆಗೆ ನೆಡೆದು ಪವಾಡಸದೃಶ್ಯ ರೀತಿಯಲ್ಲಿ ಅವುಗಳ ಒಳಗೆ ತೂರಿಕೊಂಡೇ ಮಾಯಯಾಗಿಬಿಟ್ಟರು!

ತನ್ನ ಕೈಚಿಟಕಿಯನ್ನು ಹೊಡೆದು ಸನ್ನೆಯಲ್ಲೇ ತನ್ನ ಮುಂದೆ ಬರುವಂತೆ ಮತ್ತೊಮ್ಮೆ ಆಜ್ಞಾಪಿಸಿದ ಲೋಕೇಶನನ್ನು ಕಂಡು ಐದಡಿಯ ವ್ಯಕ್ತಿ ಉಗುಳನ್ನೇ ಗಟಗಟ ನುಂಗುತ್ತಾ ಹುಸಿನಗೆಯನ್ನು ಬೀರಿ ಮುಂಬಂದು ನಿಂತ.

'ಏನ್ರಿ ಇದು..?' ಲೊಕೇಶನ ಕಣ್ಣುಗಳು ಕಾದ ಕೆಂಡದಂತೆ ಕೆಂಪಾಗಿದ್ದವು.

'ಸಾರ್.. ಅದು..ಮಾರ್ಕೆಟಿಂಗ್ ಬಿಸಿನೆಸ್..' ಎಂದಷ್ಟೇ ಹೇಳಲು ಸಶಕ್ತನಾದ ಆತ ಲೊಕೇಶನ ಆ ತೀಕ್ಷ್ಣ ದೃಷ್ಟಿಯನ್ನು ನೋಡಲಾಗದೇನೋ ಎಂಬಂತೆ ತನ್ನ ಮೂರ್ಛೆಹೋಗುವ ನಾಟಕವನ್ನು ಆಡಿದ.

'ಓ ಧೇವನೇ' ಎಂದು ಹಾಸಿಗೆಯ ಮೇಲೆ ಮಲಗುವಂತೆ ಮಲಗಿದ ಆತನನ್ನು ಕಂಡು ಕಾಫಿ ಬಿಸ್ಕತ್ತಿನಲ್ಲೇ ಊಟವನ್ನು ಮಾಡುತ್ತಿದ್ದ ಕಪ್ಪು ಕೋಟಿನ ವ್ಯಕ್ತಿಗಳು ನಿಧಾನವಾಗಿ ಎದ್ದು ನಿಂತರು. ಅಷ್ಟರಲ್ಲಾಗಲೇ ನೆರೆದಿದ್ದ ಜನರಲ್ಲಿ ಗುಜುಗುಜು ಶುರುವಾಗತೊಡಗಿತು. ಲೋಕೇಶ ಸೀದಾ ಮೈಕಿನ ಬಳಿಗೋಗಿ ನೆರೆದಿದ್ದ ಜನರನ್ನು ಉದ್ದೇಶಿಸಿ ಇದೊಂದು ಬಗೆಯ ಸ್ಕ್ಯಾಮ್ ಎಂದೂ , ಅಮಾಯಕ ಜನರ ಹಣವನ್ನು ಲೂಟಿಮಾಡುವ ಷಡ್ಯಂತ್ರವೆಂದೂ ಹೇಳಿ ಎಲ್ಲರನ್ನು ಅಲ್ಲಿಂದ ತೆರಳುವಂತೆ ಹೇಳಿದ. ಹಾಗೆಯೆ ನೆರೆದಿದ್ದ ಪ್ರಜ್ಞಾವಂತ ಊರಿನ ಜನರಲ್ಲಿ ಕೂಡಲೇ ಹತ್ತಿರದ  ಪೊಲೀಸ್ ಠಾಣೆಗೆ ಪೋನಾಹಿಸಬೇಕೆಂದೂ ಆಜ್ಞಾಪಿಸಿದ. ಅಲ್ಲಿಯವರೆಗೂ ಕೂತಲ್ಲಿಯೇ ನೆಡೆಯುತ್ತಿದ್ದ ಎಲ್ಲವನ್ನೂ ಸಾವಧಾನವಾಗಿ ನೋಡತೊಡಗಿದ ಕಪ್ಪುಕೋಟಿನ ವ್ಯಕ್ತಿಗಳು ಯಾವಾಗ ಪೋಲೀಸರ ಹೆಸರನ್ನು ಕೇಳಿದರೋ ಕೂಡಲೇ ನೆಲಗೊಳಗೆ ಉದುಗಿಕೊಳ್ಳುವ ಇಲಿಮರಿಗಳಂತೆ ಒಬ್ಬೊಬ್ಬರಾಗಿಯೇ ಅಲ್ಲಿಂದ ಜಾಗ ಕೀಳತೊಡಗಿದರು. ಆಶ್ಚರ್ಯವೆಂಬಂತೆ ಕೆಲಸೆಕೆಂಡುಗಳ ಮೊದಲು ಮೂರ್ಛೆ ಬಿದ್ದಿದ್ದ ವ್ಯಕ್ತಿಯೂ ಯಾರಿಗೂ ತಿಳಿಯದಂತೆ ಅಲ್ಲಿಂದ ಕಾಣೆಯಾಗಿದ್ದ. ಇನ್ನು ರಣಚಂಡಿಯರಿಬ್ಬರು ಬಹುಷಃ ತಮ್ಮ ಊರ ದಾರಿ ಮರೆಯುವಂತಯೇ ಓಟ ಕಿತ್ತಿರೆನೊ ಎಂಬುದು ತಿಳಿಯಲಿಲ್ಲ.
 
 
ಮುಂದುವರೆಯುವುದು..