Wednesday, February 20, 2019

ಸಿಂಪಲ್ಲಾಗೊಂದು ಕಪೂರ್ ಸ್ಟೋರಿ..!

ವಾವ್, ಏನ್ ಸೀನ್ ಸರ್ ಅದು. ಸಿಟ್ಟು, ಮದ, ಮತ್ಸರದಿಂದ ಕೂಡಿದ ಆರಡಿ ಉದ್ದದ ಕ್ಯಾರೆಕ್ಟರ್ ಒಂದೆಡೆಯಾದರೆ, ನ್ಯಾಯ, ನೀತಿ ಹಾಗು ಘನತೆಯನೊತ್ತ ಕೀರ್ತಿಪುರುಷ ಇನ್ನೊಂದೆಡೆ. ಸುಳ್ಳು ಸತ್ಯಗಳ ಈ ಎರಡು ವ್ಯಕ್ತಿತ್ವಗಳ ತಿಕ್ಕಾಟದಲ್ಲಿ ನರಳುತಿರುವಾಕೆ ಎರಡಕ್ಕೂ ಜನ್ಮವಿತ್ತ ಮಹಾಮಾತೆ. ನಶ್ವರ ಜಗತ್ತಿನ ನೋಟಿನ ಮೂಲಕ ತನ್ನ ಹೆತ್ತ ತಾಯಿಗೆ ಬೆಲೆಕಟ್ಟಲೋಗಿ ಮುಂದಿದ್ದ ತನ್ನ ತಮ್ಮನ ಬಳಿ 'ತೇರೇ ಪಾಸ್ ಕ್ಯಾ ಹೈ 'ಎಂದಾಗ ಇಡೀ ಚಿತ್ರಮಂದಿರವೇ ಕುಣಿದು ಕುಪ್ಪಳಿಸುವಂತೆ ಆಡುವ 'ಮೇರೇ ಪಾಸ್ ಮಾ ಹೈ' ಎಂಬ ಆ ಡೈಲೌಗ್ ಕೇವಲ ಡೈಲೌಗ್ ಆಗಿರದೆ ಆಧುನಿಕ ಜಗತ್ತಿನ ಇಡೀ ಮಾನವ ಕುಲಕ್ಕೇ ಇಡಿದ ಕೈಗನ್ನಡಿಯಂತಿತ್ತು. ಜಗತ್ತಿನ ಸರ್ವ ಐಶ್ವರ್ಯವೆಲ್ಲವೂ ತಾಯಿಯೆಂಬ ಅಘಾಧತೆಯ ಮುಂದೆ ಅದೆಷ್ಟು ಕನಿಷ್ಠವಾಗುತ್ತದೆ ಎಂಬುದನ್ನು ನಾಲ್ಕೇ ಪದಗಳ ವಾಕ್ಯದಲ್ಲಿ ತೋರಿಸಿಕೊಟ್ಟ ಚತುರತೆಯಂತೂ ಫೆಂಟಾಸ್ಟಿಕ್! ಆಗ ಮಾತುಬಾರದ ಕಲ್ಲಿನಂತಾದ ಅಮಿತಾಬ್ ತನ್ನ ಸಣ್ಣ ತಮ್ಮನ ಮುಂದೆ ಮತ್ತೂ ಸಣ್ಣವನಾಗುತ್ತಾನೆ.

ಆ ಡೈಲೌಗಿಗೆ ಜೀವ ಬರಲು/ತರಲು ಚಿತ್ರಕತೆಗಾರರಾದ ಸಲೀಮ್-ಜಾವೇದ್ರ ಕ್ರಿಯೇಟಿವಿಟಿಯೊಟ್ಟಿಗೆ ಎದೆಯುಬ್ಬಿಸಿಕೊಂಡು ಆತ್ಮವಿಶ್ವಾಸದಿಂದ ಆಡಿದ ಆ ಮುಗ್ದ ಮಾತುಗಳೂ ಕಾರಣವಾಗಿರುತ್ತವೆ. ಅಂದಿಂಗೂ, ಇಂದಿಗೂ. ಕಣ್ಣುಗಳಲ್ಲಿನ ಆ ದೃಢತೆಯ ಜೊತೆಗೆ ಮುಖದ ಮೇಲೆ ಆ ಗಾಂಭೀರ್ಯತೆಯನ್ನೊತ್ತು ಸಂಭಾಷಣೆಯನ್ನು ಹೇಳಿದ ಆ ವ್ಯಕ್ತಿಯ ಹೆಸರೇ ದ ಒನ್ & ಓನ್ಲಿ Mr.ಶಶಿ ಕಪೂರ್. ಒಂದು ಕಾಲಕ್ಕೆ ಕಪೂರ್ ಮನೆತನದಲ್ಲಿ ಹ್ಯಾಂಡ್ಸಮ್ ಕಪೂರ್ ಎಂದು ಕರೆಯಲಾಗುತ್ತಿದ್ದ ಈತ ಇತರೆ ಬಹಳಷ್ಟು ನಟ ನಟಿಯರಂತೆ ಇಲ್ಲ ಸಲ್ಲದ ಕಾರಣಗಳಿಂದಾಗಿ ಪ್ರಸಿದ್ದಿ ಹೊಂದಲಿಲ್ಲ. ತಾನು ಹಾಗು ಸಿನಿಮಾ ಎಂದುಕೊಂಡು ಬದುಕಿದ ಈ ಜೀವ ಹೂವರಳಿ ಕೊನೆಯಾಗುವಂತೆ ಸದ್ದಿಲ್ಲದೆ ಮರೆಯಾಯಿತು. ಬಹುಷಃ ಆದರಿಂದಲೇನೋ ಪ್ರಶಸ್ತಿ ಪುರಸ್ಕಾರಗಳೂ ಸಹ ಈತನ ಮನೆಯ ಹಾದಿಯನ್ನು ಮರೆತವು.

ಅವತಾರ ಪುರುಷರಂತೆ ನಟರನ್ನು ಬಿಂಬಿಸಿ ಅವರ ಸುತ್ತಲೇ ಸುತ್ತುವಂತಹಃ, ನಿಜಜೀವನಕ್ಕೆ Infinity ಕಿಲೋಮೀಟರ್ಗಳಷ್ಟು ದೂರದಂತಹ ಕ್ಯಾರೆಕ್ಟರ್ ಹಾಗು ಕತೆಯನ್ನು ನೋಡುಗರಿಗೆ ನೀಡುತ್ತಿದ್ದ ಕಾಲದಲ್ಲಿ ಪಕ್ಕಾ ಕ್ಲಾಸಿಕ್ ಸಿನಿಮಾಗಳನ್ನು ಒಂದರಿಂದೊಂದರಂತೆ ನೀಡುತ್ತಾ, ಬೆರಳೆಣಿಕೆಯ ಪ್ರೇಕ್ಷಕರಾದರೂ ದೃತಿಗೆಡದೆ ಮತ್ತದೇ ಅರ್ಥಪೂರ್ಣ ಚಿತ್ರಗಳನ್ನು ಮಾಡುತ್ತ ಕಣ್ಣು ಮುಚ್ಚಿ ನೆಡೆಯುವ ಸಾಲಿನಲ್ಲಿ ವಿಭಿನ್ನರಾಗಿ ಕಾಣಿಸಿಕೊಳ್ಳತೊಡಗಿದ ವ್ಯಕ್ತಿ ಈ ಶಶಿ ಕಪೂರ್. ಭಾರತೀಯ ಸಿನಿಮಾವನ್ನು ಒಂದು ಮಜಲು ಎತ್ತರಕ್ಕೆ ಕೊಂಡೊಯ್ದ ಹಲವಾರು ಸೈಲೆಂಟ್ ಪೆರ್ಸನಾಲಿಟಿಗಳಲ್ಲಿ ಒಬ್ಬರು ಈ ಶಶಿ ಕಪೂರ್.. ಇವೆಲ್ಲ ಅಂಶಗಳ ಹೊರತಾಗಿ ಶಶಿ ಕಪೂರ್ ಎಂಬ ದಿಗ್ಗಜ ಹಲವರಿಗೆ ಇಷ್ಟವಾಗುವುದು ತನ್ನ ಆಫ್ ಸ್ಕ್ರೀನ್ ಪ್ರೇಮ ಕತೆಯಿಂದ. ಆಫ್ ಸ್ಕ್ರೀನ್ ಎಂದ ಮಾತ್ರಕ್ಕೆ ಯಾರೋ ಬೇರೊಬ್ಬ ವ್ಯಕ್ತಿ ಅಂದುಕೊಳ್ಳಬೇಡಿ. ಅದು ಸ್ವತಃ ಅವರ ಪತ್ನಿ ಜೆನ್ನಿಫರ್. ಮೀಸೆ ಚಿಗುರುವ ವಯಸ್ಸಿಗೆ ತನಗಿಂತಲೂ ಮೂರು ವರ್ಷ ದೊಡ್ಡವಳಾದ ಈಕೆಯನ್ನು ಭೇಟಿಯಾಗಿ ಮದುವೆಯ ಪ್ರಸ್ತಾಪ ವನಿಟ್ಟು, ವಿದೇಶಿ ಮಾವ ಹಾಗು ದೇಶೀ ಅಪ್ಪ(ಪೃಥ್ವಿರಾಜ್ ಕಪೂರ್) ನೊಟ್ಟಿಗೆ ಹೋರಾಡಿ, ಪ್ರೀತಿಗಾಗಿ ಸಿಂಗಾಪೂರದವರೆಗೂ ಹೋಗಿ ಕೊನೆಗೆ ಅಂದಿನ ಕಾಲಕ್ಕೆ ಬಹುಪಾಲು ಮಂದಿಗೆ ಅರಗಿಸಿಕೊಳ್ಳಲಾಗದಂತಹ ಜೋಡಿಯಾಗಿ ಹೊರಹೊಮ್ಮಿದರು ಇವರು. ಆದರೆ ವಿದೇಶಿ ಲವ್ ಸ್ಟೋರಿ ಹೆಚ್ಚು ದಿನ ನಡೆಯಲ್ಲ ಬಿಡಿ ಅಂದುಕೊಂಡವರಿಗೆ ಇವರ ಜೀವನ ಮಾತ್ರ ಒಂದು ನೀತಿಪಾಠವಾಯಿತು. ಮನಸ್ಸು ಮಾಡಿದ್ದರೆ ತನಗೆ ಸಿಗದ ತ್ರಿಪುರ ಸುಂದರಿ ಯಾರು ಎಂಬಂತಿದ್ದ ಕಾಲದಲ್ಲಿ ಶಶಿ ಎಲ್ಲಿಯೂ ತನ್ನ ಹಾಗು ಜೆನ್ನಿಫರ್ ನ ಸಂಬಂಧಕ್ಕೆ ಧಕ್ಕೆ ಬಾರದಂತೆ ನೋಡಿಕೊಂಡರು. ಹಾಗೊಮ್ಮೆ ಈಗೊಮ್ಮೆ ತಮ್ಮ ಹಾಗು ಇತರ ನಟಿಯರ ಬಗ್ಗೆ ಕಲ್ಪಿಸಿ ಮೂಡುವ ಕತೆಗಳೂ ಇವರ ಗಟ್ಟಿ ಸಂಬಂಧದ ಮುಂದೆ ಕ್ಷೀಣಿಸಿಹೋದವು. ಶಶಿ ತನ್ನಾಕೆಯನ್ನು ಅದೆಷ್ಟು ಇಷ್ಟಪಟ್ಟಿದ್ದರೆಂದರೆ ಅಂದು (1984) ರಲ್ಲಿ ಆಕೆ ಕ್ಯಾನ್ಸರ್ ನಿಂದ ಕಾಲವಾದ ನಂತರವೂ ಇವರು ಯಾರೊಬ್ಬರ ಸಂಗಡವನ್ನು ಬಯಸದೆ ತಮ್ಮ ಕೊನೆಯುಸಿರಿರುವರೆಗೂ ಏಕಾಂಗಿಯಾಗಿಯೇ ಆಕೆಯ ನೆನಪಲ್ಲೇ ಜೀವನ ಕಳೆದರು. ಬಹುಷಃ ಆ ಸ್ಥಾನವನ್ನು ತುಂಬುವ ಬೇರ್ಯಾರು ಇಲ್ಲಿ ಸಿಗಲಿಲ್ಲವೇನೋ? ಒಂದು ಪಕ್ಷ ಸಿಕ್ಕರೂ ಅದು ಬಹುಷಃ ಆ ಹೊಸ ವ್ಯಕ್ತಿಗೆ ಉಳಿದುಕೊಳ್ಳಲು ಶಶಿಯ ಹೃದಯದಲ್ಲಿ ಜಾಗವಿರಲಿಲ್ಲವೇನೋ?!

ಆಸೆಗೆ ಪ್ರೇಮವೆಂಬ ಹೆಸರು ಕಟ್ಟಿ, ಮೂರು ಗಂಟಿನ ಸಂಬಂಧಕ್ಕೆ ಮೂರುಕಾಸಿನ ಬೆಲೆಯನ್ನೂ ಕೊಡದೆ ಎಡಕ್ಕೂ ಬಲಕ್ಕೂ Swipe ಮಾಡುತ್ತ ಜೀವನದ ಸಾತಿಯ(ರ)ನ್ನು ಅರಸುವ ಈ ಕಾಲದಲ್ಲಿ ಶಶಿ ಕಪೂರ್ ತೀರಾ ಭಿನ್ನವಾಗಿ ಹಾಗು ಮಾದರಿಯಾಗಿ ಕಾಣುತ್ತಾರೆ. That's it.

'ಮೇರೇ ಪಾಸ್ ಮಾ ಹೈ' ಎಂದ ಗುಳಿಕೆನ್ನೆಯ ಆ ಲೆಜೆಂಡರಿ ವ್ಯಕ್ತಿ ಮೊನ್ನೆ ಡಿಸೆಂಬರ್ ಗೆ ಇಹಲೋಕ ತ್ಯೆಜಿಸಿ ಆಗಲೇ ಒಂದು ವರ್ಷವೇ ಸಂದಿದೆ. ನಗುಮೊಗದ ಯುವ ಚೆಲುವನಾಗಿ ನೋಡುಗರನ್ನು ರಂಜಿಸಿದ ಆ ಶಶಿಗೂ, ಬಾಡಿದ ಹಣ್ಣಿನಂತಾಗಿ ನೆಡೆಯಲೂ ಶಕ್ತನಿರದೆ ವೀಲ್ ಚೇರಿನ ಮೇಲೆಯೇ ತನ್ನ ಕೊನೆದಿನಗಳನ್ನು ತಳ್ಳಿದ ಶಶಿಯನ್ನು ನೋಡಿದರೆ ಕಾಲದ ಮೇಲೆ ಸಿಟ್ಟು ಬರುವುದಂತೂ ಸುಳ್ಳಲ್ಲ. ಏನಿಲ್ಲವಾದರೂ ಏನೊಂದಕ್ಕಾದರೂ ಇಂತಹ ವ್ಯಕ್ತಿಗಳು ಆಗೊಮ್ಮೆ ಈಗೊಮ್ಮೆ ನೆನಪಾಗುತ್ತಲೇ ಇರಬೇಕು. ಆದರೆ ಆ ಏನೊಂದು ಏನೆಂಬುದು ಮಾತ್ರ ನಮ್ಮ ನಿಮ್ಮ ವಿವೇಕ ಹಾಗು ವಿವೇಚನೆಗೆ ಬಿಟ್ಟ ವಿಷಯ.

ಕಾಲುಶತಮಾನ ಜನಮಾನಸವನ್ನಾಳಿದ ಕತೆಯೊಂದರ ಕತೆ!

ಭಾರತೀಯರ ಸಿನಿಮಾ ಕ್ರೆಝೇ ಅಂತಹದ್ದು. ಜನಜೀವನದ ವಿವಿಧ ಸ್ತರಗಳಲ್ಲಿ ಸಿಕ್ಕಾಬಟ್ಟೆ ಹಾಸುಹೊಕ್ಕಿರುವ ಈ ಸಿನಿಮಾ ಎಂಬ ಮಾಹೆ ಒಂಥರ ಊಟಕ್ಕೆ ಬೇಕಾದ ಉಪ್ಪಿನಕ್ಕಾಯಿಯಂತೆ. ಉಪ್ಪಿನಕ್ಕಾಯಿ ಇಲ್ಲದೆಯೇ ಊಟ ಮಾಡಬಹುದಾದರೂ ನಮ್ಮಲ್ಲಿ ಕೆಲವೆಡೆ ಅದೇ ಊಟವಾಗಿಬಿಡುತ್ತದೆ! ಜೀವನದ ಅಷ್ಟೂ ಸಂಕಷ್ಟಗಳಿಗೆ ಆಧ್ಯಾತ್ಮದ ಮೊರೆ ಹೋಗುವ ಗುಂಪು ಒಂದೆಡೆಯಾದರೆ ಅದಕ್ಕಿಂತಲೂ ನೂರು ಪಟ್ಟು ದೊಡ್ಡ ಗುಂಪು ತಮ್ಮ ತಮ್ಮ ಕಷ್ಟ ದುಃಖಗಳಿಗೆ ಆ ಸಿನಿಮಾಗಳ ಹಿಂದೆ ಬೀಳುವುದನ್ನು ಇಲ್ಲಿ ಅಲ್ಲಗೆಳೆಯಲಾಗುವುದಿಲ್ಲ. ಅದ್ಯಾವುದೋ ಕ್ರಿಸ್ತ ಪೂರ್ವ ಜಮಾನದಲ್ಲಿ ಕೈಕೊಟ್ಟ ಹುಡುಗಿಯ ನೆನಪಲ್ಲಿ ಮೀಯಲು ಅಥವಾ ಗುಡುಗು ಸಿಡಿಲುಗಳ ಆರ್ಭಟದ ನಡುವೆಯೂ ಕಿಲೋಮೀಟರ್ಗಟ್ಟಲೆ ದೂರ ನಿಂತು ಪ್ರೀತಿ ನಿವೇದನೆ ಮಾಡುವ ಮ್ಯಾಜಿಕನ್ನು ಕಂಡು ಬೆರಗಾಗಲು ಅಥವ ಪಠ್ಯ ಪುಸ್ತಕಗಳ ಬದನೇಕಾಯಿ ಎನುತ ಮೂರು ನಿಮಿಷದಲ್ಲಿ ಕೋಟ್ಯಾದಿಪತಿಯಾಗುವ 'ಇಸ್ಟೈಲ'ನ್ನು ನೋಡಿ inspire ಆಗಲು ಅಥವಾ ಆಫೀಸಿನಲ್ಲಿ ತನ್ನ ಬಾಸಿನ ಮೇಲಿನ ಸಿಟ್ಟನ್ನು ಇಲ್ಲಿ ಹೀರೊ ವಿಲ್ಲೈನ್ಸ್ ಗಳಿಗೆ ತದುಕುವ ಪೆಟ್ಟುಗಳಲ್ಲಿ ದಮನಮಾಡಿಕೊಳ್ಳಲು ಅಥವಾ ವಯಸ್ಸಿನ ಹುಡುಗ ಹುಡುಗಿಯರಿಗೆ ಆ ಹೊರಗಿನ ಕೆಟ್ಟ ಜಗತ್ತಿನಲ್ಲಿ ಕಪ್ಪುಕೋಣೆಯ ನಾಲ್ಕಡಿ ಜಾಗ ಸ್ವರ್ಗಲೋಕವಾಗಲು.. ಒಂದೇ ಎರಡೇ ಇಂತಹ ಹಲವಾರು ಕಾರಣಗಳಿಂದ ಸಿನಿಮಾ ಹಾಗು ಥಿಯೇಟರ್ ಗಳು ನಮ್ಮವರಿಗೆ ವಿಪರೀತ ಹತ್ತಿರವಾಗಿವೆ. ಇನ್ನು ನಟ ನಟಿಯರ ವಿಚಾರಕ್ಕೆ ಬಂದರಂತೂ ಕತೆಬರೆದು, ಸೆಟ್ ಹಾಕಿ, ಸಂಗೀತ ಕರೆದು, ಹಾಡಿ, ಹಣ ಸುರಿದು, ಬೆಳಕಿಡಿದು ದುಡಿಯುವ ನೂರಾರು ಜನರನ್ನೂ ಮರೆತು ಕ್ಯಾಮರಾದ ಮುಂದೆ ಕಾಣುವ ಆ ಒಂದು ಚಹರೆಗೆ ಕಠೋರ ತಪಸ್ಸಿಗೆ ದೊರಕುವ ಭಗವಂತನ ದರ್ಶನದಂತೆ ಆಡುವ ಜನರ ಗುಂಪು ಒಂದೆಡೆಯಾದರೆ ಕೆಲವೆಡೆ ಅಂತಹ ಚಹರೆಗಳು ಅಂತಹ ದೇವರೆಂಬ ಪವರ್ಫುಲ್ ಶಕ್ತಿಗೇ ಒಂದು ಗೇಣು ಕೀಳು! ಇಂತಹ ಹತ್ತಾರು ನೂರಾರು ಕಾರಣಗಳಿಂದಲೇ ಇಂದು ಭಾರತೀಯ ಸಿನಿಮಾ ಇಂಡಸ್ಟ್ರಿ ಇಡೀ ವಿಶ್ವದಲ್ಲಿಯೇ ಅತಿ ಶ್ರೀಮಂತ ಇಂಡಸ್ಟ್ರಿ ಎನಿಸಿಕೊಂಡಿದೆ. ಇದು ವಿಪರ್ಯಾಸವೋ, ಹಾಸ್ಯವೋ ಅಥವಾ ಆಯಾಸವವೋ ಹೇಳುವುದು ಕಷ್ಟ. ಆದರೆ ಒಂದು ಮಾತ್ರ ಸತ್ಯ. ಒಂದು ಕಾಲು ಬಿಲಿಯನ್ ಜನರ ನಮ್ಮ ದೇಶದಲ್ಲಿ ಒಬ್ಬೊಬ್ಬರಿಗೆ ಇರುವ ಹತ್ತಾರು ಕನಸುಗಳು ನನಸಾಗದ ನೋವುಗಳಿಗೆ, ಹತಾಶೆಗಳಿಗೆ ತೆರೆಯ ಮೇಲೆ ಕಾಣುವ ಆ ಕಾಲ್ಪನಿಕ ಚಿತ್ರ ಒಂದು ಬಗೆಯ ಸಾಂತ್ವಾನವನ್ನು ನೀಡಬಲ್ಲದು. ಅದಕ್ಕೆ ಆ ಶಕ್ತಿ ಇದೆ! ಕೆಲಚಿತ್ರಗಳನಂತೂ ನಮ್ಮವರು ಅದ್ಯಾವ ಪರಿ ಹಚ್ಚಿಕೊಳ್ಳುತ್ತಾರೆ ಎಂದರೆ ದಶಕಗಳವರೆಗೂ ಅದನ್ನು ಥಿಯೇಟರ್ ಗಳಿಂದ ತೆಗೆಯಲು ಬಿಡುವುದಿಲ್ಲ. ಯಸ್ ದಶಕ I mean ಡೇಕೇಡ್ಸ್!

ಈ ಚಿತ್ರ ರಿಲೀಸಾಗಿ ಇಂದಿಗೆ ಹೆಚ್ಚುಕಡಿಮೆ 25 ವರ್ಷಗಳಾಗಿವೆ. ಇಲ್ಲಿ ಮೇಲೆ ಹೇಳಿದ ಪವರ್ ಫುಲ್ ಚಹರೆಗಳಾಗಲಿ, ಕಾಲಿಟ್ಟ ಮಾತ್ರಕ್ಕೆ ಇಡೀ ಭೂಮಂಡಲವೇ ನಡುಗಿ ಗುಡುಗಿ ಸಿಡಿಯುವ ದೃಶ್ಯಗಳಾಗಲಿ ಅಥವಾ Massness ನ ಮತ್ಯಾವುದೇ ಅಂಶಗಳಾಗಲಿ ಇರಲಿಲ್ಲ. ತೊಂಬತ್ತರ ದಶಕದಲ್ಲಿ ಇಂತಹ ಎಲಿಮೆಂಟ್ಸ್ ಗಳು ಇಲ್ಲದೆಯೇ ಒಂದು ಚಿತ್ರವನ್ನು ಗೆಲ್ಲಿಸುವುದು ಸಾಧ್ಯಕ್ಕೆ ದೂರವಾದ ಮಾತಾಗಿದ್ದಿತು. ದೂರವೆನು, ಅಸಾಧ್ಯವೆಂದೇ ಹೇಳಬಹುದಿತ್ತು. ಆದರೆ ಸೋಜಿಗದ ಸಂಗತಿ ಎಂದರೆ ಈ ಮಾತ್ರ ಚಿತ್ರ ಗೆದ್ದಿತು! ಆ ಗೆಲುವಿನ ಕಂಪು ದೇಶ ವಿದೇಶಗಳೆಲ್ಲೆಲ್ಲೂ ಪಸರಿಸಿತು. ತಿಂಗಳು, ವರ್ಷ, ದಶಕಗಳಾಚೆಗೂ ಅದು ತನ್ನ ಛಾಪನ್ನು ಮೂಡಿಸಿತು. ಚಿತ್ರನಿರ್ಮಾಣದಲ್ಲಿ ಈ ಸಿನಿಮಾ ಟ್ರೆಂಡ್ ಸೆಟ್ಟರಾಯಿತು. ತೀರಾ ಸಾಧಾರಣವೆನಿಸಿಕೊಂಡಿದ್ದ ಇಂಡಸ್ಟ್ರಿಯ ಯಂಗ್ ಗ್ರೂಪೊಂದು ಅಂದು ಭಾರತೀಯ ಸಿನಿಮಾ ಇತಿಹಾಸದಲ್ಲಿ ಮೈಲಿಗಲ್ಲೊಂದನ್ನು ಸ್ಥಾಪಿಸಿತು.

ಹಾಗಾದರೆ ಅಂತಹ ಯಾವ ಅಂಶ ಚಿತ್ರವನ್ನು ಈ ಪರಿಯಾಗಿ ಗೆಲ್ಲಿಸಿತು? ಇಷ್ಟು ಕಾಲ ನೋಡಿದರೂ ಏಕೆ ಜನರ ಬಯಕೆ ಇನ್ನೂ ಕೊನೆಗೊಳ್ಳುತ್ತಿಲ್ಲ? ಅಂದಿನ ಜನರಿಗಷ್ಟೇ ಅಲ್ಲದೆ ಟಿಂಡರ್, ಇನ್ಸ್ಟಾ ಎನುವ ಪ್ರಸ್ತುತ ಯುವಪೀಳಿಗೆಗೂ ಈ ಚಿತ್ರ ಇಷ್ಟವಾಗಲು ಕಾರಣವೇನು?

ಚಿತ್ರಕಥೆ. ಚಿತ್ರರಸಿಕರ ಮನಸ್ಥಿತಿಯನ್ನು ಅರಿತು ಹದವಾಗಿ ಹಣೆದಿದ್ದ ಕಥೆ ಚಿತ್ರವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿತು. ಗೊತ್ತು ಗುರಿ ಇಲ್ಲದ ನಾಯಕ ರಾಜ್, ಕಪ್ಪೆಚಿಪ್ಪಿನ ಮುತ್ತಿನಂತೆ ವಿದೇಶದಲ್ಲಿದ್ದೂ ಆಚಾರವಿಚಾರಗಳ ಗೊಡೊಳಗಿರುವ ಮುದ್ದಾದ ಹೆಸರಿನ ನಾಯಕಿ, ವಿದೇಶದ ಲವ್ ಸ್ಟೋರಿ, ವಿರುದ್ಧ ಧ್ರುವಗಳಂತಹ ಹೀರೊ ಹಾಗು ಹೀರೋಯಿನ್ ನ ಅಪ್ಪಂದಿರು ಹಾಗು ಚಿತ್ರದ ಕೊನೆಯವರೆಗೂ ನೋಡುಗರನ್ನು ಕತೆಯಲ್ಲಿ ಹಿಡಿದಿಡುವ ಆ ಚಿತ್ರಕಥೆ ಆಗಿನ ಕಾಲಕ್ಕೆ ಅತಿ ಭಿನ್ನ ಹಾಗು ಶುದ್ಧ ಚಿನ್ನದಂತಿದ್ದಿತು. ಇಲ್ಲಿ ನಿರ್ಮಲ ಪ್ರೀತಿಯಿದೆ, ಅತ್ತು ಸುಖಪಡುವ ದುಃಖವಿದೆ, ತನ್ನ ಯವ್ವನವನ್ನು ನನ್ನ ಮಗ ಅನುಭವಿಸಲಿ ಎಂಬ ಅಪ್ಪ ಒಂದೆಡೆಯಾದರೆ, ತನ್ನ ಜೀವಮಾನದಲ್ಲೇ ಎಂದಿಗೂ ಕಾಣದ ಹುಡುಗನಿಗೆ ತನ್ನ ಮಗಳನ್ನು ಕಟ್ಟಲಿಚ್ಚಿಸುವ ಅಪ್ಪ ಇನ್ನೊಂದೆಡೆ. ಇಲ್ಲಿ ಕುಣಿದು ಕುಪ್ಪಳಿಸುವಂತಹ ಸಂಗೀತವಿದೆ, ಯೂರೋಪಿನ ಚಳಿಯಲ್ಲಿ ಕಾಲೆಳೆದು, ಬೈದಾಡಿ, ಗುಂಪಿನಿಂದ ಬೇರೆಯಾಗಿ, ನೆಡೆಯುತ್ತಲೇ ಸಾಗುವ ಮುದ್ದಾದ ಜೋಡಿಯಿದೆ, ಎಲ್ಲಕ್ಕೂ ಮಿಗಿಲಾಗಿ ಅತಿರೇಕವೆನಿಸದ ಸಹಜತೆ ಚಿತ್ರದ ಪ್ರತಿ ಫ್ರೇಮಿನಲ್ಲೂ ಬೇರುಬಿಟ್ಟಿದೆ. ಮಾನವ ಜೀವನದ ಎಲ್ಲ ಭಾವಗಳು ಮಿಳಿತಗೊಂಡಿರುವ ಸುಂದರ ಕಲ್ಪನೆಯ ಕತೆಯಿರದೆ ಹೋಗಿದ್ದರೆ ಚಿತ್ರ ಈ ಮಟ್ಟಿನ ಯಶಸ್ಸನ್ನು ಗಿಟ್ಟಿಸಿಕೊಳ್ಳುತ್ತಿರಲಿಲ್ಲವೇನೋ. ಪೀಳಿಗೆಗಳನ್ನು ಮರೆತು ಎಲ್ಲರಲ್ಲಿ ಬೆರೆಯುತ್ತಿರಲಿಲ್ಲವೇನೋ?

ಈ ಚಿತ್ರದ ಕತೆ, ನಿರ್ದೇಶನ, ನಿರ್ಮಾಣ ಎಲ್ಲವೂ ಹಿಂದಿ ಚಿತ್ರರಂಗದ ದಂತಕತೆ ಯಶ್ ಚೋಪ್ರರ ಮಗ ಆದಿತ್ಯ ಚೋಪ್ರಾನದು. ಮೊದಲು ಹಾಲಿವುಡ್ ನ ಟಾಮ್ ಕ್ರೂಸ್ ನನ್ನು ನಾಯಕನನ್ನಾಗಿ ಮಾಡಲು ಯೋಚಿಸಿದ್ದ ಆದಿ (!) ಒಂದು ಟ್ರೆಂಡ್ ಸೆಟ್ಟಿಂಗ್ ಚಿತ್ರವನ್ನು ಮಾಡಲೆಂದೇ ಆಕ್ಷನ್ ಕಟ್ ಹೇಳಿದಂತಿದೆ. ಕೇವಲ ಮೂರ್ನಾಲ್ಕು ವಾರದಲ್ಲೇ ಬರೆದು ಮುಗಿಸಿದ ಕತೆ ಅಂದು ಚಿತ್ರದಲ್ಲಿ ತೊಡಗಿದ ಅಷ್ಟೂ ಜನರ ಜೀವನನ್ನೇ ಬದಲಿಸಿತು. ಶಾರುಖ್ ಖಾನ್, ಕಾಜೋಲ್ರ ಜೋಡಿ ಭಾರತೀಯರ ಮಗಳು ಅಳಿಯರಂತಾದರು. ನಾಲ್ಕು ಕೋಟಿ ಸುರಿದು ನಿರ್ಮಿಸಿದ ಸಿನಿಮಾ ನೂರು ಕೋಟಿಗೂ ಹೆಚ್ಚಿನ ವಹಿವಾಟನ್ನು ನೆಡೆಸಿತು. ಚಿತ್ರದ ಹುಚ್ಚು ಅದ್ಯಾವ ಮಟ್ಟಿಗೆ ಜನಮಾನಸದಲ್ಲಿ ಹಬ್ಬಿತೆಂದರೆ ಚಿತ್ರದ ನಾಯಕ ನಾಯಕಿಯರು ಬಳಸಿದ ಬಟ್ಟೆಯ ಶೈಲಿಗಳೆಲ್ಲವೂ 'ಸಿಮ್ರಾನ್' ಹಾಗು 'ರಾಜ್' ನ ಹೆಸರಿನ ಬ್ರಾಂಡ್ಗಳಾಗಿ ಮಾರುಕಟ್ಟೆಗೆ ಬಂದವು. ಮುಂಬೈ ಸೆಂಟ್ರಲ್ ನ ಬಳಿ ಇರುವ ಮರಾಠ ಮಂದಿರ್ ಚಿತ್ರಮಂದಿರದಲ್ಲಿ ಚಿತ್ರ ಕಳೆದ ವರ್ಷದವರೆಗೂ ಓಡಿತು. ಈ ಪರಿ ಬರೋಬ್ಬರಿ 22 ವರ್ಷಗಳ ಕಾಲ ಚಿತ್ರವೊಂದು ನಡೆದಿರುವ ಉದಾಹರಣೆ ಭಾರತದಲ್ಲೇನು ಇಡೀ ವಿಶ್ವದಲ್ಲಿಯೇ ಇಲ್ಲ! ಕತೆ, ನಿರ್ದೇಶನ, ಸಂಗೀತ ಹಾಗು ನಟನೆ ಇತ್ತಕಡೆ ಹೆಚ್ಚೆನಿಸದೆ ಅತ್ತಕಡೆ ಕಡಿಮೆಯೂ ಎನಿಸದ ಫಾರ್ಮುಲಾ ಚಿತ್ರವನ್ನು ಗೆಲ್ಲಿಸಿತು. ಜನರ ಮನವನ್ನು ಗೆದ್ದಿತು. ಸ್ಕೂಲು ಕಾಲೇಜು Function ಗಳಲ್ಲಿ, ಮದುವೆ ಸಮಾರಂಭಗಳಲ್ಲಿ, ಜಾತ್ರೆ ಹಬ್ಬಗಳಲ್ಲಿ ಮೂಡುವ ಈ ಚಿತ್ರದ ಹಾಡುಗಳು ತಿಳಿದೋ ತಿಳಿಯದೆಯೋ ನೂರಾರು ಕೋಟಿ ಜನರ ತುಟಿಗಳಲ್ಲಿ ರಾರಾಜಿಸಿರುವುದಂತೂ ಸುಳ್ಳಲ್ಲ.

'ಜಾ .. ಸಿಮ್ರಾನ್ .. ಜಾ .. ಜೀಲೇ Apni ಜಿಂದಗಿ' ಎಂಬ ಅಂಬರೀಷ್ ಪೂರಿಯ ಡೈಲಾಗ್ ತೆರೆಯ ಮೇಲೆ ಬರುವವರೆಗೂ ಪಿನ್ ಡ್ರಾಪ್ ಸೈಲೆಂಟ್ ಆಗುವ ಚಿತ್ರಮಂದಿರ, ಸಿಮ್ರಾನ್ ಓಡಿ ರಾಜ್ ನ ತೆಕ್ಕೆಯನ್ನು ಸೇರಿದಾಗಂತೂ ಸಿಳ್ಳೆ ಚಪ್ಪಾಳೆಗಳ ಕಹಳೆಯನ್ನು ಎಲ್ಲೆಲ್ಲೂ ಮೂಡಿಸುತ್ತದೆ. ಎಲ್ಲರ ಮನದೊಳಗೂ ಅಡಗಿರುವ ಒಂದೊಂದು ಬಗೆಯ ರಾಜ್ ಹಾಗು ಸಿಮ್ರಾನ್ ರ ಕ್ಯಾರೆಕ್ಟರ್ ಹೊರಬಂದು ಅಲ್ಲಿ ನಲಿಯತೊಡಗುತ್ತದೆ. 'ದಿಲ್ ವಾಲೆ ದುಲ್ಹನಿಯಾ ಲೇ ಜಾಯೆಂಗೆ' ಎಂದು ಹಾಡುತ್ತದೆ!

Friday, February 8, 2019

ಮೆಹ್ತಾ Killed ಮೆಹ್ತಾ! - Part 4

Continued...

'Deepak Mehtha is gone!!.. ಆಸಾಮಿ ಇನ್ನು ಒಂದ್ ವಾರ ಲೇಟಾಗಿ ಬರ್ತಾನೆ ಅಂತ ಹೇಳಿ ಇವತ್ತೇ ಬಂದ, ಸೊ ವಿಥ್ ಮಿನಿಮಲ್ ಟೈಮ್ ನಾನೇ ಎಲ್ಲ ಕೆಲ್ಸ ಮುಗ್ಸಿದ್ದೀನಿ.. ಬಾಡಿ ನಿಮ್ ಕ್ಯಾಬಿನ್ ನ ಫ್ರಿಡ್ಜ್ ನ ಕಂಪಾರ್ಟ್ ಮೆಂಟ್ ಒಳಗೇ ಇದೆ.. ಇನ್ನು So many documents need his Thumb Impression.. ನೀವ್ ಯಾವಾಗ ಬರೋದು..? ‘ಎಂಬ ಮೆಸೇಜ್ ಹೋದ ಕೂಡಲೇ ಅತ್ತಕಡೆಯಿಂದ ಹತ್ತಾರು ಕಾಲ್ಸ್ ಗಳು ಬಂದರೂ ಒಂದನ್ನು ಸಹ ನಾನು ತೆಗೆಯಲಿಲ್ಲ.



ಕೊನೆಯದಾಗಿ ಬರಿ ದಿನಾಂಕವಿರುವ ಒಂದು ಮೆಸೇಜ್ ಬಂದಿತು.



ಭುಜಂಗ ಬರುವ ದಿನವನ್ನು ಸರಿಯಾಗಿ ನೋಡಿಕೊಂಡು ಅಲ್ಲಿಯವರೆಗೂ ಕೆಮಿಕಲ್ ಹಾಕಿ ಸಂರಕ್ಷಿಸಿಟ್ಟಿದ್ದ ಹೆಣವನ್ನು ರಾತ್ರಿಯೇ ಮೇಲೆ ಸಾಗಿಸಿ ಆತ ಆಫೀಸಿಗೆ ಬರುವ ಕೆಲಹೊತ್ತಿನ ಮುಂಚೆಯೇ ಹೊರಗೆಸೆದು ಕಂಪನಿಯ ಹಿಂದಿನಿಂದ ಇಳಿದು ಹೊರನೆಡೆದೆ. ಭುಜಂಗ ಬಂದವನೇ ಆದು ತನ್ನ ಸ್ವಂತ ಮಗನ ದೇಹವೆಂಬುದನ್ನೂ ಅರಿಯದೆ ಕೇಸನ್ನು ಮುಚ್ಚಿಸಿ ಹಾಕಿದ.



ಮೊನ್ನೆ ನಾನು ಬೆಳಗಿನ ಹೊತ್ತಿಗೆ ಆಫೀಸಿಗೆ ಹೋದಾಗ ನನ್ನನ್ನು ಆತನ ಮಗನೆಂದೇ ಭಾವಿಸಿ ಎದ್ದು ನಿಂತು ನನ್ನ ಕೆನ್ನೆಗೆ ಛಟಾರನೆ ಭಾರಿಸಿದ. 'ಬಡ್ಡಿ ಮಗ್ನೆ .. ಅಷ್ಟ್ ದಿನದಿಂದ ಫೋನ್ ಮಾಡ್ತಾ ಇದ್ದೀನಿ.. ತೆಗೆಯೋಕ್ಕೆ ಏನ್ ರೋಗ ನಿಂಗೆ ..?' ಎಂಬ ಸಿಡುಕಿನ ಧ್ವನಿಯಲ್ಲಿ ಅರಚಿದ ಆತನಿಗೆ ಸಹಜವಾಗಿಯೇ ತನ್ನ ಮಗನ ಮೇಲಿನ ಕಾಳಜಿಯಿತ್ತು. ಒಂದಿನಿತು ಕುಗ್ಗಿದ ಮನಸ್ಸಿಗೆ ಕೂಡಲೇ ನನ್ನ ತಂದೆಯ ನೆನಪು ಬಂದಿತು. ಅಲ್ಲದೆ ರಕ್ತದ ಮಡುವಿನಲ್ಲಿ ನರಳುತ್ತಿದ್ದ ನನ್ನ ಅಮ್ಮನ ತಾಳಿಯನ್ನೂ ಕಿತ್ತು ಪಾರಾಯಿಯಾಗಿದ್ದ ಕಿರಾತಕನ ವೇಷ ನನ್ನ ಕಣ್ಣ ಮುಂದೆ ಕಂಡಿತು. ಅಂದೇ ಪ್ರತಿಜ್ಞೆ ಮಾಡಿಕೊಂಡಂತೆ ತಾಯಿಯ ಚಿನ್ನವನ್ನು ಕದ್ದು ಕಟ್ಟಿದ ಚಿನ್ನದ ಅಂಗಡಿಗಳ ಚಿನ್ನದ ಗುಂಡಿನಿಂದಲೇ ನಿನ್ನ ಸಾಯಿಸುವೆ ಎಂಬ ಮಾತಿನಂತೆ 'ನಿನ್ ಮಗ ನಿನಗಿಂತ ಮೊದಲೇ ಹೋದ ಭುಜಂಗ.. ಇವಾಗ ನಿನ್ನ ಬಾರಿ .. ' ಎನುತ ನಿಖಿಲ್ ನ ಮುಖವಾಡವನ್ನು ತೆಗೆಯತೊಡಗಿದೆ. ಬುಡಕಡಿದ ಮರದಂತಾಗಿ ತರತರನೆ ನಡುಗತೊಡಗಿದ ಭುಜಂಗ. ಆತನ ಮುಖದ ಮೇಲೆ ಮೂಡಿದ ಆ ಗೊಂದಲ ಹಾಗು ವಿಪರೀತ ಭಯ, ಆಹಾ.. ಸಾವಿರ ಜನ್ಮಕ್ಕೆ ಸಾಕಾಗುವಷ್ಟು ನೆಮ್ಮದಿಯನ್ನು ನನಗೆ ನೀಡಿತು. ಆತ ತನ್ನ ಪೋಷಕರ ಕೊಲೆಗಾರನೆಂದೂ, ಆಸ್ತಿಯನ್ನು ಲಪಟಾಯಿಸಿದ್ದರ ಬಗ್ಗೆ, ಕಳೆದ ಇಪ್ಪತ್ತು ವರ್ಷಗಳಿಂದ ತಾನು ಈತನ ಒಂದೊಂದೇ ನಡೆಯನ್ನು ಗಮನಿಸುತ್ತಿದ್ದ ಬಗೆಯನ್ನು, ಎಲ್ಲವನ್ನು ಆ ಬೆವತ ಮುಖಕ್ಕೆ ಹೇಳತೊಡಗಿದೆ. ಕೂಡಲೇ ತನ್ನ ಫೋನಿನ ಮೇಲೆ ಕೈಹಾಕಹೋದ ಆತನನ್ನು ಕಂಡು ಗನ್ನಿನ ಟ್ರಿಗರ್ ಅನ್ನು ಒತ್ತಿಯೇ ಬಿಟ್ಟೆ. ಹಣೆಗೆ ತಗುಲಿದ ಚಿನ್ನದ ಗುಂಡು ಬಿಕ್ಕಿನ ಕಣ್ಣಿನ ಭುಜಂಗನನ್ನು ಕ್ಷಣಮಾತ್ರದಲ್ಲಿ ಮುಗಿಸಿತು. ತೆರೆದ ಬಾಯನ್ನು ಮುಚ್ಚದೆಯೇ ಪರಲೋಕಕ್ಕೆ ಸೇರಿದ ಭುಜಂಗ. ದಶಕಗಳ ಕಾಲ ನನ್ನ ಎದೆಯಲ್ಲಿ ಮನೆಮಾಡಿದ್ದ ಸಿಟ್ಟಿನ ಜ್ವಾಲೆಯೊಂದು ಅಂದು ಕೊನೆಯಾಯಿತು.. ಪೋಷಕರ ಆತ್ಮಕ್ಕೆ ಶಾಂತಿ ಸಿಕ್ಕಿತು' ಎಂದೇಳಿ ಸುಮ್ಮನಾದ ದೀಪಕ್ ಮೆಹ್ತಾ.



ಕಣ್ಣನ್ನು ಮುಚ್ಚದೆಯೇ ನಿರ್ಜೀವ ವಸ್ತುಗಳಂತೆ ಕೂತಿದ್ದ ಜನಸ್ತೋಮವನ್ನು ಜಡ್ಜಿನ ಮಾತು ಎದ್ದೇಳಿಸಿತು. ಜಡ್ಜ್ ಮಾತನಾಡಿ 'ದೀಪಕ್ ಮೆಹ್ತಾ ತಾನೇ ಭುಜಂಗ ರಾವ್ ಹಾಗು ಅವರ ಮಗ ನಿಖಿಲ್ ನನ್ನು ಕೊಂದಿರುವುದಾಗಿ ಒಪ್ಪಿಕೊಂಡಿರುವುದರಿಂದ, ಅಲ್ಲದೆ ಅದಕ್ಕೆ ಪೂರಕವಾದ ಸಾಕ್ಷದಾರಗಳೂ ಇರುವುದರಿಂದ ಕೇಸು ಇಲ್ಲಿಗೆ ಮುಗಿದಂತೆಯೇ ಸರಿ' ಎಂದೇಳಿ ಇನ್ನೇನು ಶಿಕ್ಷೆಯನ್ನು ಪ್ರಕಟಿಸಬೇಕು ಎನಿಸುವಷ್ಟರಲ್ಲಿ ಅಜಯ್ ಮತ್ತೊಮ್ಮೆ ಮಾತನಾಡಿ 'ಸಾರ್, ಒಂದು ನಿಮಿಷ' ಎನ್ನುತ್ತಾನೆ….!



ಒಂದಿನಿತು ಸಂಶಯವಿರದ ದಾಖಲೆಗಳನ್ನು ನೀಡಿ ಮಾತುಮರೆತು ನಿಂತಿದ್ದ ದೀಪಕ್ ಮೆಹ್ತಾರನ್ನೂ ಮಾತಿಗಿಳಿಸಿ ಸತ್ಯವನ್ನು ಹೊರಹಾಕಿದ ವ್ಯಕ್ತಿಯ ಮಾತನ್ನು ನಿರಾಕರಿಸದೆ ಜಡ್ಜ್ ಮಾತನಾಡುವಂತೆ ಹೇಳುತ್ತಾರೆ. ಮುಗಳ್ನಗುತ್ತಾ ದೀಪಕ್ ಮೆಹ್ತಾ ನಿಂತಿದ್ದ ಕಟಕಡೆಯ ಬಳಿಗೆ ಬಂದ ಅಜಯ್, ದೀಪಕ್ ಮೆಹ್ತಾರ ಕಣ್ಣುಗಳನ್ನೇ ನೋಡುತ್ತಾ,

'ಮಿಸ್ಟರ್ ದೀಪಕ್, ನೀವು ಕೊಲೆಮಾಡಿರುವುದು ಅಕ್ಷರ ಸಹ ಸತ್ಯ. ಅಂತೆಯೆ ತಾವು ಕೊಲೆಯಾಗದಿರುವುದೂ ಅಷ್ಟೇ ಸತ್ಯ.But, ನಿಮ್ಮಿಂದ ನೆಡೆದಿರುವ ಕೊಲೆಗಳ ಸಂಖ್ಯೆ ಎರಡಲ್ಲ….' ಎಂದು ಹೇಳಿ ತನ್ನ ದೃಷ್ಟಿಯನ್ನು ದೀಪಕ್ ಮೆಹ್ತಾರ ಚಹರೆಯಿಂದ ಸರಿಸಿ ಪಕ್ಕದಲ್ಲಿ ನಿಂತಿದ್ದ ದಪ್ಪ ಮೀಸೆಯ ಸಬ್ ಇನ್ಸ್ಪೆಕ್ಟರ್ ನ ಮೇಲೆ ಇರಿಸುತ್ತಾನೆ.

'ಓನ್ಲಿ ಒನ್!!'

'ವಾಟ್..?' ಪೊಲೀಸ್ ಹಾಗು ದೀಪಕ್ ಮೆಹ್ತಾರಿಬ್ಬರಿಂದ ಏಕಕಾಲದಲ್ಲಿ ಪ್ರೆಶ್ನೆ ಮೂಡಿತು.ಕಪ್ಪು ಬಣ್ಣದ ಸಬ್ ಇನ್ಸ್ಪೆಕ್ಟರ್ ನ ಮುಖ ಕರಿದ ಎಣ್ಣೆಯ ಬಣ್ಣಕ್ಕೆ ತಿರುಗಿತು. ಕೋರ್ಟಿನ ತುಂಬಾ ಮತ್ತೊಮ್ಮೆ ಗುಜುಗುಜು ಸದ್ದು.



'ಆರ್ಡರ್ .. ಆರ್ಡರ್'

'ಸರ್, ಅಂದು ನಿಖಿಲ್ ನ ಹೆಣವನ್ನು ಆಸ್ಪತ್ರೆಗೆ ಕೊಂಡೊಯ್ದದ್ದಾಗಲಿ, ಪೋಸ್ಟ್ ಮಾರ್ಟಮ್ ನ ಉಸ್ತುವಾರಿಯನ್ನು ವಹಿಸಿದ್ದಾಗಲಿ, ,ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾಗಲಿ, Infact ನಿಖಿಲ್ ರಾವ್ ನ ನಿಜವಾದ ಕೊಲೆಗಾರನೂ ಸಹ ಇದೆ ಸಬ್ ಇನ್ಸ್ಪೆಕ್ಟರ್, ನೀರಜ್ ಮಲ್ಹೋತ್ರ!!'



ತನ್ನ ಹೆಸರನ್ನು ಕೇಳಿದ ಕೂಡಲೇ ಕಕ್ಕಾಬಿಕ್ಕಿಯಾದ ನೀರಜ್ ಕೂಡಲೇ ತನ್ನ ರಿವಾಲ್ವರನ್ನು ಹೊರಗೆಳೆದು ಅಜಯ್ ಎಡೆಗೆ ಶೂಟ್ ಮಾಡಲೆತ್ನಿಸುತ್ತಾನೆ. ಆದರೆ ಆತನ ಪ್ರಯತನವನ್ನು ಕಟಕಡೆಯ ಮೇಲಿದ್ದ ದೀಪಕ್ ರಾವ್ ತಡೆಯಲೊಗುತ್ತಾನೆ. ಆದರೂ ಹಾರಿದ ಗುಂಡು ಮೆಹ್ತಾನ ತೋಳನು ಸವರಿಕೊಂಡು ಹೋಗಿ ಕೊಂಚ ಗಾಯವನ್ನೂ ಜೊತೆಗೆ ರಕ್ತವನ್ನು ಚಿಮ್ಮಿಸುತ್ತದೆ. ಕೂಡಲೇ ನೀರಜ್ ಮಲ್ಹೋತ್ರನನ್ನು ಸುತ್ತುವರೆದ ಇತರ ಪೊಲೀಸರು ಆತನ ಕೈಲಿದ್ದ ರಿವಾಲ್ವರನ್ನು ಕಸಿದುಕೊಂಡರು. ತಂಡದಲ್ಲಿದ್ದ ಮತ್ತೋರ್ವ ಸಬ್ ಇನ್ಸ್ಪೆಕ್ಟರ್ ಆತನ ಬೆನ್ನಿನ ಹಿಂದಕ್ಕೆ ತನ್ನ ರಿವಾಲ್ವರನ್ನು ಹಿಡಿದು ಅಲುಗಾಡದಂತೆ ನಿಲ್ಲಲು ಹೇಳುತ್ತಾರೆ. ಮೆಹ್ತಾನ ವಿರುದ್ಧವಾಗಿ ವಾದಿಸುತ್ತಿದ್ದ ಒಬ್ಬನೇ ಲಾಯರ್ ಕೂಡ ಸದ್ದುಗದ್ದಲವಿಲ್ಲದೆ ಕೂರುತ್ತಾನೆ.



'ಥಾಂಕ್ ಯು ಮಿಸ್ಟರ್ ಮೆಹ್ತಾ.. anyone please treat his wound' ಎಂದಾಗ ವ್ಯಕ್ತಿಯೊಬ್ಬ ಮೆಡಿಕಲ್ ಕಿಟ್ಟೊಂದನ್ನು ಹಿಡಿದು ತಂದು ಕಟಕಟೆಯಲ್ಲೇ ಆತನ ಗಾಯಕ್ಕೆ ಬ್ಯಾಂಡೇಜ್ ಅನ್ನು ಕಟ್ಟುತ್ತಾನೆ.



ನಂತರ ಮಾತು ಮುಂದುವರೆಸಿದ ಅಜಯ್,

'Till this Very moment ನನಗೆ ನೀರಜ್ ಮಲ್ಹೋತ್ರ ನ ಮೇಲೆ ಪೂರ್ಣ ಸಂಶಯ ಇರಲಿಲ್ಲ. His gun shot made all things clear. ಅಂದು ನಿಖಿಲ್ ಸತ್ತ ಮೂರು ಗಂಟೆಯ ನಂತರ ಅಂದರೆ ಮಧ್ಯರಾತ್ರಿ ಒಂದುವರೆಯ ಸುಮಾರಿಗೆ ನಿಖಿಲ್ ರಾವ್ ನ ಹಸ್ತಾಕ್ಷರ ನೀರಜ್ ಮಲ್ಹೋತ್ರ ರಾತ್ರಿ ಡ್ಯೂಟಿ ಮಾಡುತ್ತಿದ್ದ ಪೊಲೀಸ್ ಸ್ಟೇಷನ್ ನ ಎಂಟ್ರಿ ಬುಕ್ಕಿನಲ್ಲಿ ರೆಕಾರ್ಡ್ ಆಗಿರುತ್ತದೆ. ಅಲ್ಲಿಗೆ ದೀಪಕ್ ಅಂದುಕೊಂಡ ಹಾಗೆ ನಿಖಿಲ್ ಪಾಯಿಸನ್ ನಿಂದ ಸಾಯಲಿಲ್ಲ. ಧೈರ್ಯ ಮಾಡಿ ನಾನೇ ಒಂದು ಸಣ್ಣ ಇನ್ವೆಸ್ಟಿಗೇಷನ್ ಮಾಡಿದೆ. ಲಂಚಬರಿತ ಈ ಕಾಲದಲ್ಲಿ ಎಂತಹ ಸತ್ಯವನ್ನೂ ಹೊರಗೆಳೆಯಬಹುದು ಬಿಡಿ.. ಪೊಲೀಸ್ ಗೌರ್ಡ್, ಪೋಸ್ಟ್ ಮೊರ್ಟ್ನಮ್ ಸಿಬ್ಬಂದಿ etc etc .. ಎಲ್ಲರಲ್ಲೂ ಇಂಚಿಚ್ಛೇ ಸತ್ಯ ಅಡಗಿದ್ದಿತು. ದೀಪಕ್ ಮೆಹ್ತಾ ನಿಖಿಲ್ ನ ಬಾಡಿಯನು ಫ್ರಿಡ್ಜ್ ನ ಒಳಗೆ ತಳ್ಳಿ ಹೋದ ಕೆಲಸಮಯದ ನಂತರ ನಿಖಿಲ್ ಗೆ ಪ್ರಜ್ಞೆ ಬಂದೂ ಕಷ್ಟಪಟ್ಟು ಫ್ರಿಡ್ಜ್ ನಿಂದ ಹೊರಬಂದು ತೂರಾಡುತ್ತಾ ನೀರಜ್ ಮಲ್ಹೋತ್ರ ನ ಸ್ಟೇಷನ್ ಅನ್ನು ತಲುಪುತ್ತಾನೆ. ನೀರಜ್ ನೆಡೆದ ವಿಷಯವನ್ನೆಲ್ಲ ತಿಳಿದ ಕೂಡಲೇ ತನ್ನೊಳಗೆ ಒಂದು ಮಾಸ್ಟರ್ ಪ್ಲಾನನ್ನು ಮಾಡುಕೊಳ್ಳುತ್ತಾನೆ. ಅಸಲಿಗೆ ದೀಪಕ್ ಮೆಹ್ತಾ ತಾನೇ ನಿಖಿಲ್ ನನ್ನು ಕೊಂದಿದ್ದಾನೆ ಎಂದುಕೊಂಡಿದ್ದಾನೆ. ಒಂದು ಪಕ್ಷ ನಾನು ನಿಖಿಲ್ ನನ್ನು ನಿಜವಾಗಿಯೂ ಮುಗಿಸಿದರೆ ಫಾರಿನ್ ರಿಟರ್ನ್ ದೀಪಕ್ ನನ್ನು ಬ್ಲಾಕ್ ಮೇಲ್ ಮಾಡಿ ಜೀವನಪೂರ್ತಿ ಹಣವನ್ನು ದೋಚಬಹುದೆಂಬ ಲೆಕ್ಕಾಚಾರ ಅವನದಾಗಿರುತ್ತದೆ!'

ಹೇಗೋ ಪುಸಲಾಯಿಸಿ ಸುಸ್ತಾಗಿದ್ದ ನಿಖಿಲ್ ನನ್ನು ಪುನ್ಹ ಅದೇ ಆಫೀಸಿಗೆ ಕರೆದುಕೊಂಡು ಬಂದ ನೀರಜ್ ತನ್ನ ರಿವಾಲ್ವರ್ನಿಂದ ಎದೆಯ ಕೆಳಗೆ ಮೂರು ಗುಂಡುಗಳನ್ನು ಹಾರಿಸಿ ಆತನನ್ನು ಸಾಯಿಸುತ್ತಾನೆ. ರಕ್ತ ಮಡುಗಟ್ಟುವಂತೆ ಮಾಡಿ, ಮತ್ತದೇ ಕೋಟನ್ನು ಕೃತಕ ಮುಖವಾಡವನ್ನೂ ಫ್ರಿಡ್ಜ್ ನ ಒಳಗೆ ತೂರಿಸುತ್ತಾನೆ. ಭುಜಂಗರಾವ್ ಬರುವ ದಿನ ದೀಪಕ್ ಮೆಹ್ತಾ ಅದು ತಾನೇ ಕೊಂದ ಹೆಣವೆಂದು ಭಾವಿಸಿ ಮೇಲಿಂದ ಎಸೆದು ಪರಾರಿಯಾಗುತ್ತಾನೆ. ಆಗ ತಾನೇ ಖುದ್ದಾಗಿ ಕೇಸಿನ ಜವಾಬ್ದಾರಿಯನ್ನು ಹೊತ್ತು ನೀರಜ್ ತನ್ನ ಗೇಮನ್ನು ಆಡುತ್ತಾನೆ. ಆದರೆ ಯಾವಾಗ ಕೇಸು ಹಿರಿಯ ಅಧಿಕಾರಿಗಳ ಗಮನ ಸೆಳೆಯಿತೋ ಆಗ ಒಮ್ಮೆ ಕೇಸು ಮುಗಿಯಲಿ ಎನುತ ತರಾತುರಿಯಲ್ಲಿ ದೀಪಕ್ ಮೆಹ್ತಾನನ್ನು ತಪ್ಪಿತಸ್ಥನನ್ನಾಗಿ ನಿರೂಪಿಸಿ ಜಾಗ ಕೀಳುವ ಸಂಚು ಅವನದಾಗಿರುತ್ತದೆ' ಎಂದು ಸುಮ್ಮನಾದಾಗ ನೀರಜ್ ಮೆಹ್ತಾ ತನ್ನ ತಲೆಯನ್ನು ತಗ್ಗಿಸಿಕೊಂಡಿರುತ್ತಾನೆ. ಆತನ ಆ ಸುಮ್ಮನಿರುವಿಕೆಯೇ ಎಲ್ಲ ಸಂಶಯಗಳಿಗೂ ಉತ್ತರವಾಗಿರುತ್ತದೆ. ಕೋರ್ಟನ್ನು ಮಹಾಮೌನವೊಂದು ಮತ್ತೊಮ್ಮೆ ಆವರಿಸಿರುತ್ತದೆ.

ಹೈ ಪ್ರೊಫೈಲ್ ಡಬಲ್ ಮರ್ಡರ್ ಕೇಸ್ ನ ಅಂತ್ಯ ಅಲ್ಲಿಗೆ ಪೂರ್ತಿಯಾಗಿರುತ್ತದೆ. ಅಲ್ಲಿಯವರೆಗೂ ತುಟಿಕ್ ಪಿಟಿಕ್ ಎನ್ನದ ಮಹೇಶ ಎದ್ದು ನಿಂತು ಚಪ್ಪಾಳೆಯ ಸುರಿಮಳೆಗೈಯ್ಯುತ್ತಾನೆ. ಆದರೆ ಜಡ್ಜಿನ ಕೆಮ್ಮಿನ ಸದ್ದೇ ಆತನನ್ನು ಪುನಃ ತನ್ನ ಸ್ವಸ್ಥಾನದಲ್ಲಿ ಕೂರುವಂತೆ ಮಾಡುತ್ತದೆ....



The End ....


ಮೆಹ್ತಾ Killed ಮೆಹ್ತಾ! - Part 3

Continued..


ಹಣೆಗೆ ಗುರಿಯಿಟ್ಟು ಹೊಡೆದ ಆ ಹೊಡೆತ ಕ್ಷಣಮಾತ್ರದಲ್ಲೇ ದೇಹವನ್ನು ಹೆಣವನನ್ನಾಗಿಸುತ್ತದೆ! ಆತನ ಕೈ ಮಾತ್ರ ಒಂದೇ ಸಮನೆ ನಡುಗಹತ್ತುತ್ತದೆ.

ಆ ದಿನ ಕಂಪನಿಯ ಪ್ರತಿಯೊಬ್ಬರನ್ನೂ ಆಫೀಸಿನ ಒಳಗೆಯೇ ಇರುವಂತೆ ಸೂಚಿಸಲಾಗಿದ್ದಿತು. ಸತ್ತು ಬಿದ್ದಿದ್ದ ಭುಜಂಗ್ ರಾವಿನ ಹೆಣವನ್ನು ತೆಗೆದ ನಂತರ ಪೊಲೀಸರು ದೀಪಕ್ ಮೆಹ್ತಾನನ್ನೂ ಅರೆಸ್ಟ್ ಮಾಡಿ ಕರೆದೊಯ್ದರು. ಆ ವಿಚಿತ್ರ ಘಟನೆಯನ್ನು ಕಂಡು ನಾಲ್ಕೈದು ಜನರು ಮೂರ್ಛೆ ತಪ್ಪಿ ಆಸ್ಪತ್ರೆ ತಲುಪಿದ್ದೂ ಉಂಟು! ನಂತರ ಒಬ್ಬೊಬ್ಬರನ್ನೇ ಕರೆದು ಇನ್ವೆಸ್ಟಿಗೇಷನ್ ಶುರುಮಾಡಿದ ಪೊಲೀಸರು ಅದನ್ನು ಮುಗಿಸುವಷ್ಟರಲ್ಲಿ ರಾತ್ರಿ ಹತ್ತಾಗಿದ್ದಿತು. ಆಗ ತಿಳಿದ ಮಹತ್ವದ ವಿಷಯವೇನೆಂದರೆ ಕಳೆದ ಎರಡು ವಾರಗಳಿಂದ ಸಿಸಿಟಿವಿ ಕ್ಯಾಮರಗಳೆಲ್ಲವೂ ಆಫ್ ಆಗಿದ್ದೂ ವಿಷಯವನ್ನು ಬುಜಂಗ್ರಾವಿನ ಗಮನಕ್ಕೆ ಹಲವು ಬಾರಿ ತಂದರೂ ಆತ ಬೇಕಂತಲೇ ಅದನ್ನು ಸರಿಪಡಿಸದಿದ್ದದು.

ಘಟನೆ ನೆಡೆದು ಎರಡು ದಿನಗಳ ನಂತರ ಜಡ್ಜಿನ ಆದೇಶದಂತೆ ಕಂಪನಿಯ ಎಲ್ಲರನ್ನೂ ಮತ್ತೊಂದು ಸುತ್ತಿನ ವಿಚಾರಣೆಗೆ ಕೋರ್ಟಿಗೆ ಬರುವಂತೆ ಹೇಳಲಾಗುತ್ತದೆ. ಹಲವಾರು ಸಾಕ್ಷಿಗಳನ್ನು ನ್ಯಾಯಮೂರ್ತಿಗಳ ಮುಂದೆಯೇ ವಿಚಾರಿಸಬೇಕೆಂದು ಆಜ್ಞೆಯಾಗಿರುತ್ತದೆ. ಜೀವ ಹೋದರೂ ನಾ ಕೋರ್ಟ್ ಗೆ ಬರೆನು ಎಂದು ಕೂತ ಮಹೇಶನನ್ನು ಮಕ್ಕಳನ್ನು ಮೊದಲ ಬಾರಿಗೆ ಶಾಲೆಗೆ ಸೇರಿಸುವ ಹಾಗೆ ಅಜಯ್ ಕಾಡಿ ಬೇಡಿ ಕರೆತಂದಿದ್ದ . ವಿಚಾರಣೆ ಶುರುವಾಗಿ ಬಹಳ ಸಮಯ ಕಳೆದರೂ ಯಾರೊಬ್ಬರಿಗೂ ಕೊಲೆಯ ಹಾಗು ಸಾವಿನ ಹಿಂದಿದ್ದ ನಿಖರ ಉತ್ತರ ತಿಳಿಯಲಿಲ್ಲ. ಅತ್ತ ಕಡೆ ಮೆಹ್ತಾ ಒಂದೂ ಪದವನ್ನು ಮಾತನಾಡದೆ ಕಲ್ಲುಗುಂಡಿನಂತೆ ನಿಂತಿದ್ದ. ಅಲ್ಲದೆ ಆತ ಮಾನವನೋ ಅಥವ ಸತ್ತ ಹೆಣಕ್ಕೆ ಆತ್ಮ ಸೇರಿ ನೆಡೆಸುತ್ತಿರುವ ಕೃತ್ಯವೋ ಎಂಬ ಭಯದೊಂದಿಗೆ ಯಾರೊಬ್ಬರೂ ಅವನ ವಿರುದ್ಧವಾಗಿ ಒಂದಿನಿತೂ ಕೆಟ್ಟದಾಗಿ ಹೇಳಿಕೆಯನ್ನು ಕೊಡಲಿಲ್ಲ. ಹತ್ತಿರವೂ ಸುಳಿಯಲಿಲ್ಲ. 'ತುಂಬಾ ಒಳ್ಳೆಯ ವ್ಯಕ್ತಿ', 'ಯಾರಿಗೂ ನಿಂದಿಸುತ್ತಿರಲಿಲ್ಲ', 'ಎಲ್ಲರನ್ನೂ ಸಮನಾಗಿ ಕಾಣುತ್ತಿದ್ದರು' ಎಂಬ ಗೌರವ ಸೂಚಕಗಳೇ ಎಲ್ಲರ ಹೇಳಿಕೆಗಳಲ್ಲೂ!

ತನ್ನ ಸರದಿ ಬರುತ್ತದೆ ಎಂದು ಕಾದು- ಕಾದು ಹೈರಾಣಾದ ಅಜಯ್ ಯಾವಾಗ ತನ್ನ ಹೆಸರನ್ನು ಕರೆಯಲಿಲ್ಲವೋ ಆಗ ಕೊಂಚ ಕುಪಿತಗೊಂಡವಂತೆ ಕೂಡಲೇ ಎದ್ದು ನಿಂತು ಅರಚಿತ.

'Would you please stop this Nonsense?!!'

ಗುಜುಗುಜುಗುಡುತ್ತಿದ್ದ ಸದ್ದು ಒಮ್ಮೆಲೇ ತಣ್ಣಗಾಗುತ್ತದೆ. ತಲೆತಗ್ಗಿಸಿಕೊಂಡು ನಿಂತಿದ್ದ ಮೆಹ್ತಾ ಕೂಡ ಅಜಯ್ ನನ್ನು ಒಮ್ಮೆ ನೋಡಿದ.

'ರೀ ಮಿಸ್ಟರ್, ಯಾರ್ರೀ ನೀವು? ನಿಮಗೇನಾದ್ರೂ ಹೇಳೋದಿದ್ರೆ ಕಟಕಟೆಯ ಮುಂದೆ ಬಂದು ಹೇಳಿ. Its not a Fish Market!' ಎಂದ ಜಡ್ಜಿನ ಮಾತಿಗೆ ಉತ್ತರಿಸುವಂತೆ, ಸಿಟ್ಟಿನ ಚಹರೆಯಲ್ಲಿಯೇ ಕಟಕಟೆಗೆ ಬಂದು ನಿಂತ ಅಜಯ್ ಕೊಂಚ ಹೊತ್ತು ಸುಮ್ಮನಾಗಿ ದೀಪಕ್ ಮೆಹ್ತಾನನ್ನೂ ಹಾಗು ಕೆಳಗೆ ನಿಂತಿದ್ದ ಸಬ್ ಇನ್ಸ್ಪೆಕ್ಟರ್ ಒಬ್ಬನನ್ನು ನೋಡಿದ.

'Your Honor, ನಾನು ಹೀಗ ಹೇಳಹೊರಟಿರುವ ವಿಷಯದ ಬಗ್ಗೆ ನನ್ನ ಬಳಿ ಸಂಪೂರ್ಣ ಸಾಕ್ಷ್ಯಾಧಾರಗಳಿವೆ ಹಾಗು ಯಾವುದನ್ನೂ ಊಹಿಸಿಕೊಂಡಾಗಲಿ, ಕಲ್ಪಿಸಿಕೊಂಡಾಗಲಿ ನಾನು ಹೇಳುತ್ತಿಲ್ಲ' ಎನ್ನುತ್ತಾನೆ.

'For your kind Information, ಅಂದು ಕಂಪನಿಯ ಮೇಲಿಂದ ಬಿದ್ದು ಸತ್ತದ್ದು ಬೇರ್ಯಾರು ಅಲ್ಲ ಅದು ಬುಜಂಗ್ ರಾವಿನ ಒಬ್ಬನೇ ಮಗ ನಿಖಿಲ್ ರಾವ್!!’’

ಕೋರ್ಟ್ನ ತುಂಬಾ ಮತ್ತೊಮೆ ಗುಸು ಗುಸು ಶುರುವಾಯಿತು. ಮಹೇಶ ತನ್ನ ಕಣ್ಣುಗಳನ್ನು ಸಾಧ್ಯವಾದಷ್ಟು ಹಿಗ್ಗಿಸಿ ಅಜಯ್ ನನ್ನೇ ನೋಡುತ್ತಿದ್ದ. ಮಗುವೊಂದಕ್ಕೆ ಮೊದಲ ಬಾರಿಗೆ ಜಾದೂವನ್ನು ತೋರಿಸಿದಂತೆ.

‘ಅಲ್ಲದೆ ಅದು ಯಾವುದೇ ಬಗೆಯ ಆತ್ಮಹತ್ಯೆಯಾಗಲಿ ಎಂತಹದ್ದು ಇಲ್ಲ! That was a pure Murder!’

'ಸತ್ತ್ತಿದ್ದು ದೀಪಕ್ ಮೆಹ್ತಾ ಎಂಬ ಪೊಲೀಸ್ ರಿಪೋರ್ಟ್ ಇದಿಯಲ್ರಿ'

'ಹೌದು ಸಾರ್, ಪೊಲೀಸ್ ರಿಪೋರ್ಟ್ ಹೇಳಿದ್ದ ಮಾತ್ರಕ್ಕೆ ಸತ್ಯ ಸುಳ್ಳಾಗೋದಿಲ್ಲ'

ಜಡ್ಜ್ 'ಆರ್ಡರ್ .. ಆರ್ಡರ್ ' ಎಂದ ನಂತರ ಅಜಯ್ ಮುಂದುವರೆಸಿ ತಾನು ಆ ದಿನ ರಾತ್ರಿ ಚೇರಿನ ಮೇಲೆ ಮಲಗಿ ತಡವಾದರಿಂದ ಆಫೀಸಿನಲ್ಲಿಯೇ ಕಳೆಯಬೇಕಾಗಿ ಬಂದು, ಹೊರಡುವ ಸಮಯಕ್ಕೆ ಆಕೃತಿಯೊಂದು ಭುಜಂಗರಾವಿನ ಕೋಣೆಯ ಒಳಗೆ ವಿಚಿತ್ರವಾಗಿ ಸದ್ದನು ಮಾತನಾಡುತ್ತಾ ಏನನ್ನೋ ಮಾಡುತ್ತಿರುವುದ ಕಾಣುತ್ತಾನೆಂದು ಹೇಳುತ್ತಾನೆ. ಮಾರನೇ ದಿನ ಅದು ಏನೆಂದು ತಿಳಿಯಲು ಇಂದೂ ಆ ಆಕೃತಿ ಬರಬಹುದೆಂಬ ಊಹೆಯ ಮೇರೆಗೆ ಒಂದೆರೆಡು ಸಣ್ಣ ಕ್ಯಾಮೆರಾ ಹಾಗು ಮೈಕ್ರೋಫೋನನ್ನು ಭುಜಂಗರಾವ್ ಬರುವ ಮೊದಲೇ ಆತನ ಕ್ಯಾಬಿನಲ್ಲಿ ಯಾರಿಗೂ ಕಾಣಿಸದಂತೆ ಅಳವಡಿಸುತ್ತಾನೆ.

ಕೆಲದಿನಗಳ ಹಿಂದೆ ಅವನ್ನು ತಂದು ತನ್ನ ಲ್ಯಾಪ್ಟಾಪ್ ಗೆ ಹಾಕಿ ನೋಡಿದಾಗ…..

ಆ ದಿನ ಬೆಳಗ್ಗೆ ಭುಜಂಗರಾವ್ ಆಫೀಸಿಗೆ ಬಂದ ಸ್ವಲ್ಪ ಸಮಯದಲ್ಲೆ ದೀಪಕ್ ಮೆಹ್ತಾ ಕೂಡ ಆಫೀಸಿಗೆ ಬರುತ್ತಾರೆ. ಆದರೆ ಬಂದ ದೀಪಕ್ ಕೂಡಲೇ ತನ್ನ ಮುಖದ ಮೇಲಿದ್ದ ಪೌಡರು ಮೆತ್ತಿದ್ದ ಚರ್ಮದ ಮುಖವಾಡವನ್ನು ತೆಗೆದು 'ಡ್ಯಾಡ್, ನನ್ನ್ ಕೈಯಲ್ಲಿ ಆಗಲ್ಲ.. ಇನ್ನು ಎಷ್ಟ್ ದಿನ ಅಂತ ಇದೆಲ್ಲ. ಬೇಗ ಅದೇನ್ ಡಾಕ್ಯುಮೆಂಟ್ಸ್ ಇದ್ದವೊ ಎಲ್ಲ ಮುಗ್ಸು..' ಎಂದು ಹೇಳಿದಾಗ ಭುಜಂಗ ರಾವ್, ದೀಪಕ್ ಮೆಹ್ತಾ ಫಾರಿನ್ ನಿಂದ ಬರಲು ಇನ್ನೂ ಸ್ವಲ್ಪ ದಿನ ಆಗುತ್ತೆ, ಬಂದ ದಿನವೇ ಆತನನ್ನು ಮುಗಿಸಬೇಕೆಂದು ಹೇಳುತ್ತಾನೆ. ನಂತರ ಆತನ ಹೆಣವನ್ನು ತಂದು ಆದರ ಥಂಬ್ ಇಂಪ್ರೆಷನ್ ಎಲ್ಲವನ್ನು ತೆಗೆದುಕೊಂಡು ಇಡೀ ಕಂಪನಿಯ ಮಾಲೀಕತ್ವವನ್ನು ತಮ್ಮದಾಗಿಸಿಕೊಂಡು ಆ ಹೆಣವನ್ನು ಆಫೀಸಿನ ಮೇಲ್ಚಾವಣಿಯಿಂದ ದಬ್ಬುವುದಾಗಿಯೂ ಹಾಗು ಅದು ಆತ್ಮಹತ್ಯೆ ಎಂಬುವಂತೆ ತೋರಿಸುವುದಾಗಿಯೂ ಸಂಚನ್ನು ರೂಪಿಸುತ್ತಾರೆ.

ಇತ್ತಕಡೆ ತಾನು ಹೇಳಿದ ದಿನಕ್ಕಿಂತ ಮೊದಲೇ ಬಂದ ದೀಪಕ್ ಹೋಟೆಲೊಂದರಲ್ಲಿ ಉಳಿದುಕೊಳ್ಳುತ್ತಾರೆ. ದಿನ ರಾತ್ರಿ ಆಫೀಸಿಗೆ ಬರುವುದು ಹಾಗು ದೀಪಕ್ ಮೆಹ್ತಾನ ಅಕೌಂಟ್ನಿಂದ Purchase Order ಗಳನ್ನು ಅನುಮೋದಿಸಿ ಅವನ್ನು ಮಾರಿ ಬಂದ ಹಣವನ್ನೂ ಕಂಪನಿಯ ಉದ್ಯೋಗಿಗಳಿಗೇ ಬೋನಸ್ ರೂಪದಲ್ಲಿ ನೀಡತೊಡಗುತ್ತಾರೆ. ನಿಖಿಲ್ ಹೇಗೆ ಸತ್ತನೋ I Dont know. ಅಂದು ನಿಖಿಲ್ ನ ಹೆಣ ಕೆಳಗ್ಗೆ ಬಿದ್ದ ಸಮಯಕ್ಕೆ ಸರಿಯಾಗಿ ಆಫೀಸಿಗೆ ಬಂದ ಬುಜಂಗ್ ರಾವ್ ಅದು ತನ್ನ ಸ್ವಂತ ಮಗನ ಹೆಣವೆಂಬುದನ್ನೂ ಅರಿಯದೇ ಪೊಲೀಸರನ್ನು ಒಳ ಕರೆದುಕೊಂಡು ಯಾವುದೇ ಇನ್ವೆಸ್ಟಿಗೇಷನ್ ಇಲ್ಲದೆಯೆ ಸ್ಯುಸೈಡ್ ಕೇಸಿನಲ್ಲಿ ವಿಚಾರಣೆಯನ್ನು ಮುಗಿಸಬೇಕೆಂದು ಒಪ್ಪಿಸುತ್ತಾನೆ. ಭುಜಂಗ್ ರಾವ್ ಹಾಗು ಮಗ ನಿಖಿಲ್ ಕೊಲೆಯ ಸಂಚನ್ನು ರೂಪಿಸಿದರ ಬಗ್ಗೆ ದೀಪಕ್ ಮೆಹ್ತಾಗೆ ಹೇಗೆ ತಿಳಿಯಿತೋ ನಾ ಕಾಣೆ. ಅಲ್ಲದೆ ದೀಪಕ್ ಮೆಹ್ತಾ ಕೂಡ ದಿನ ರಾತ್ರಿ ಬುಜಂಗ್ ರಾವಿನ ಚಿನ್ನದ ಅಂಗಡಿಗಳಿಗೆ ಮಾರುವೇಷದಲ್ಲಿ ತೆರಳಿ ಪ್ರತಿದಿನ ಚೂರು ಚೂರೇ ಚಿನ್ನದ ಪುಡಿಯಗಳನ್ನು ಕದ್ದು ಅದರಿಂದ ಗುಂಡೊಂದನ್ನು ತಯಾರಿಸಿದನ್ನು ತಾನು ಸ್ವತಃ ಅವರನ್ನು ಹಿಂಬಾಲಿಸಿ ರೆಕಾರ್ಡ್ ಮಾಡಿದ್ದಾಗಿಯೂ ಹಾಗು ನಿನ್ನೆ ಭುಜಂಗರಾವಿನ ತಲೆಯನ್ನೊಕ್ಕಿದ್ದು ಅದೇ ಚಿನ್ನದ ಗುಂಡೆಂದು ಹೇಳಿ ಅಜಯ್ ತನ್ನ ಬಳಿ ಇದ್ದ ಎಲ್ಲ ವಿಡಿಯೋ ಕ್ಲಿಪ್ ಗಳನ್ನು, ಇತರೆ ಸಾಕ್ಷಾಧಾರಗಳನ್ನು ಕೋರ್ಟಿನಲ್ಲಿ ಹಾಜರುಪಡಿಸುತ್ತಾನೆ.

ಅಲ್ಲಿಯವರೆಗೂ ಸುಮ್ಮನೆ ನಿಂತಿದ್ದ ದೀಪಕ್ ಮೆಹ್ತಾ ಕೂಡಲೇ ಕಟಕಟನೆ ಹಲ್ಲನ್ನು ಕಡಿಯ ಹತ್ತುತ್ತಾನೆ. ಚೂರಿ ಮಸೆಯುವಂತಹ ಆ ಭಯಂಕರ ಸದ್ದನ್ನು ಕೇಳಿದ ಜನರು ಅಕ್ಷರಸಹ ಕಲ್ಲಿನ ವಿಗ್ರಹವಾಗುತ್ತಾರೆ.

'Yes….!! ನಾನೇ ಆ ಬುಜಂಗನನ್ನು ಸಾಯಿಸಿದ್ದು !!' ಎಂದು ಭಯಂಕರವಾಗಿ ಚೀರಿದಾಗ ಜಡ್ಜ್ ಕೂಡ 'ಆರ್ಡರ್ .. ಆರ್ಡರ್' ಎಂದೇಳಿ ಆತನನ್ನು ಶಾಂತವಾಗಿಸುವುದನ್ನು ಮರೆತರು. ಇಡೀ ಕೋರ್ಟಿನ ಕೋಣೆಯೇ ಪ್ರತದ್ವನಿಸುವಂತಿದ್ದ ಆ ಸದ್ದನ್ನು ಕೇಳಿ ಹೊರಗಡೆಯಿದ್ದ ಜನರೂ ಒಳಬಂದು ಜಮಾವಣೆಗೊಳ್ಳತೊಡಗಿದರು.

'ಬ್ಲಡಿ ಭುಜಂಗ .. ನಮ್ಮ ಮನೆ ಅನ್ನ ತಿಂದು ನಮ್ಮ ಮನೆಗೇ ದ್ರೋಹ ಬಗೆದ Scoundrel.. ಇಪ್ಪತ್ತು ವರ್ಷದ ಹಿಂದೆ ನಾನು ಓದಲು ಹೊರದೇಶಕ್ಕೆ ಹೋದಾಗ ನಮ್ಮ ಮನೆಯ ಮ್ಯಾನೇಜರ್ ಆಗಿದ್ದ ಈತ ಸಿಗ್ನೇಚರ್ ಫೋರ್ಜರಿ ಮಾಡಿ ನಮ್ಮ ಮನೆ, ತೋಟ ಹಾಗು ಕಂಪನಿಯನ್ನೂ ತನ್ನ ಹೆಸರಿಗೆ ಮಾಡಿಕೊಂಡು, ಅಪ್ಪನನ್ನು ಕೊಂದು ಅಮ್ಮನಿಗೂ ಚೂರಿ ಹಾಕಿದ.. ಆ ನೋವಿನಲ್ಲೂ ಅಮ್ಮ ಮೈಕ್ ರೆಕಾರ್ಡರ್ ಅನ್ನು ಆನ್ ಮಾಡಿ ಎಲ್ಲ ವಿಷಯವನ್ನು ರೆಕಾರ್ಡ್ ಮಾಡಿ ಆ ಕ್ಯಾಸೆಟ್ ಅನ್ನು ಬಚ್ಚಿಟ್ಟಳು. ಆಕೆಯನ್ನು ಆಸ್ಪತ್ರೆಗೆ ಸೇರಿಸಲು ಪ್ರಯತ್ನಿಸಿದರೂ ಅದು ಪ್ರಯೋಜನವಾಗದೇ ಮಾರ್ಗ ಮಧ್ಯದಲ್ಲಿಯೇ ಆಕೆ ಕೊನೆಯುಸಿರೆಳೆದಳು. ಯಾರೊಬ್ಬರಿಗೂ ಆ ಕೊಲೆಯನ್ನು ಮಾಡಿದ್ದು ಭುಜಂಗನೇ ಎಂದು ತಿಳಿಯಲೇ ಇಲ್ಲ. ಅಪ್ಪಅಮ್ಮರ ಅಂತ್ಯ ಸಂಸ್ಕಾರಕ್ಕೆ ಬಂದು ಎದೆಬಡಿಕೊಂಡು ಅಳುತ್ತಿದ್ದ ನನಗೆ ಆ ಕ್ಯಾಸೆಟ್ ದೊರೆತರೂ ಅದನ್ನು ನಾನು ತಿಂಗಳುಗಳ ನಂತರ ವಿದೇಶಕ್ಕೆ ತೆರಳಿದ ಮೇಲೆಯೆ ಹಾಕಿ ಕೇಳಿದೆ. ಕೇಳಿ ರಕ್ತ ಕುದಿಯತೊಡಗಿತು. ಜೊತೆಗೆ ಅಮ್ಮನ ಕೊನೆಯ ಪದಗಳ ತೊದಲು ನುಡಿಗಳು. ದುಃಖ ಸಿಟ್ಟನ್ನು ಹುಟ್ಟುಹಾಕಿತು. ಆದರೆ ಸಿಟ್ಟು ಬೇಕಾಬಿಟ್ಟಿಯಾಗಿರದೆ ಗುರಿಯನ್ನು ಸ್ಪಷ್ಟವಾಗಿಸಿತು. ಆಗ ಒಂದು ವಿಷಯವನ್ನು ತೀರ್ಮಾನಿಸಿದೆ. ಇದನ್ನು ಪೊಲೀಸರಿಗೆ ತಿಳಿಸಿ ಆತನನ್ನು ಜೈಲಿಗೆ ಅಟ್ಟುವುದ ಬಿಟ್ಟು ಅಪ್ಪಅಮ್ಮರ ಮಗನಾಗಿ ಆತನನ್ನು ಕೊಂದೇ ನನ್ನ ಸೇಡನ್ನು ತೀರಿಸಿಕೊಳ್ಳುತ್ತೀನಿ ಹಾಗು ಅಪ್ಪ ಮಾಡಿಟ್ಟ ಅಷ್ಟೂ ಆಸ್ತಿಯನ್ನು ಹಾಗೆಯೆ ವಾಪಸ್ಸು ಪಡೆಯುತ್ತೀನಿ ಎಂದುಕೊಂಡು. ಅಂದು ಅಂತ್ಯಸಂಸ್ಕಾರಕ್ಕೆ ಹೋಗಿದ್ದಾಗ ತನ್ನ ಸ್ವಂತ ಪೋಷಕರನ್ನೇ ಕಳೆದುಕೊಂಡ ಮಕ್ಕಳಂತೆ ಅತ್ತು ನಟಿಸುತ್ತಿದ್ದ ಭುಜಂಗರಾವನ್ನು ಕಂಡು ಅಯ್ಯೋ ಎಂದುಕೊಂಡಿದ್ದೆ ಅಲ್ಲದೆ ಆತ ಹೇಳಿದ ಕಾಗದ ಪತ್ರಗಳೆಲ್ಲ ಮೇಲೆಯೂ ಸಹಿ ಹಾಕಿದೆ. ನಂತರವೇ ತಿಳಿದದ್ದು ಆತ ನಮ್ಮ ಅಷ್ಟೂ ಆಸ್ತಿಯ ಪಾಲುದಾರನಾಗಿದ್ದನೆಂದು ! ಆದರೆ ಆತ ಅದನ್ನು ಎಲ್ಲಿಯೂ ಹೇಳದೆ ಇಲ್ಲಿಯವರೆಗೂ ಗೌಪ್ಯವಾಗಿಟ್ಟುಕೊಂಡು ಬಂದಿದ್ದ. ಊರ ಆಸ್ತಿಗೆ ಮತ್ತೊಬ್ಬ ಮ್ಯಾನೇಜರ್ ಅನ್ನು ನೇಮಿಸಿ ಸಿಟಿಯ ಈ ಕಂಪನಿಯನ್ನು ತಾನೇ ಖುದ್ದಾಗಿ ನೆಡೆಸತೊಡಗಿದ. ನಾನೂ ಕಾದೆ. ಹತ್ತು ಕೋಟಿ ಬೆಲೆಬಾಳುವ ಕಂಪನಿಯಯನ್ನು ನೂರು ಕೋಟಿಗೆ ತಂದು ನಿಲ್ಲಿಸಿದ ಆತನ ಚತುರತೆಯನ್ನು ಮಾತ್ರ ಮೆಚ್ಚಲೇಬೇಕು. ನಾನು ಎಲ್ಲಿಯವರೆಗು ಬದುಕಿರುತ್ತೇನೆಯೋ ಅಲ್ಲಿಯವರೆಗೂ ಅರ್ಧ ಆಸ್ತಿಯ ಒಡೆಯನಾಗಿಯೇ ಇರದನ್ನು ಸಹಿಸಲಾರದ ಆತ ನನ್ನನ್ನು ಭಾರತಕ್ಕೆ ಕರೆಸಿ ಮುಗಿಸಿಬಿಡುವ ನಾಟಕವನ್ನು ಆಡುತ್ತಾನೆ. ಆದರೆ ನಾನು ಇಪ್ಪತ್ತು ವರ್ಷದಿಂದ ಈತನ ಒಂದೊಂದು ನಡೆಯನ್ನೂ ಕೂಲಂಕುಷವಾಗಿ ಗಮನಿಸಲು ಒಂದು ನೆಟ್ವರ್ಕ್ ಅನ್ನೇ ಸೃಷ್ಟಿಸಿಕೊಂಡಿದ್ದೆ. ಬೇಕಂತೆಲೆ ನನ್ನ ವಿದೇಶಿ ಬಿಸಿನೆಸ್ ನಷ್ಟಗೊಂಡಿದೆ ಎಂದು, ಸಾಲ ಹೆಚ್ಚಾಗಿ ಭಾರತಕ್ಕೆ ಮರಳುತ್ತಿದ್ದೇನೆಂದು ಹುಸಿ ಸುದ್ದಿಯನ್ನು ಹಬ್ಬಿಸಿದೆ. ಅದನ್ನು ನಂಬಿದ ಭುಜಂಗ ನಾನು ಬರುವ ದಿನದಂದೇ ನನ್ನನ್ನು ಮುಗಿಸುವ ಪ್ಲಾನನ್ನು ಮಗನೊಟ್ಟಿಗೆ ಸೇರಿ ಮಾಡಿಕೊಳ್ಳುತ್ತಾನೆ. ಆದರೆ ನಾನು ಬರುವ ಮೊದಲೇ ವಿದೇಶದಲ್ಲಿದ್ದ ಹೆಚ್ಚು ಕಡಿಮೆ ನನ್ನದೇ ವಯಸ್ಸಿನ ಆತನ ಮಗನನ್ನು ಕರೆಸಿ ಆತನಿಗೆ ನನ್ನನ್ನು ಹೋಲುವ ಮುಖವಾಡವನ್ನು ಹಾಕಿ ಪ್ರತಿದಿನ ಆಫೀಸಿಗೆ ಕರೆಸಿ ಆತನೇ ದೀಪಕ್ ಮೆಹ್ತಾ ಎಂದು ಎಲ್ಲರಲ್ಲೂ ನಂಬಿಕೆ ಹುಟ್ಟಿಸುತ್ತಾನೆ. ಅಂತಹ ಹತ್ತಾರು ನನ್ನನ್ನು ಹೋಲುವ ಮುಖವಾಡಗಳನ್ನು ಮಾಡಿಸಿ ಇಟ್ಟುಕೊಂಡಿರುತ್ತಾನೆ. ಹಾಗು ಬೋರ್ಡ್ ಮೀಟಿಂಗ್ ನಲ್ಲಿ ನಾನು ಕಂಪನಿಯ ಎಲ್ಲ ಷೇರನ್ನು ಮೆಹ್ತಾನಿಗೆ ಮಾರಿ ಹಣವನ್ನು ವಿದೇಶದಲ್ಲಿರುವ ಸಾಲವನ್ನು ತೀರಿಸಲು ವಿನಿಯೋಗಿಸುವುದಾಗಿ ಹೇಳಿಸುತ್ತಾನೆ. ಅಂತೆಯೇ ನನ್ನ ಸಹಿಯನ್ನು ನಕಲು ಮಾಡಿ ಕಾಗದ ಪತ್ರವನ್ನೆಲ್ಲವನ್ನೂ ತಯಾರಿಸಿದ. ಆಗ ಹೆಚ್ಚುಕಡಿಮೆ ಕಂಪನಿ ಭುಜಂಗಾರವಿನದ್ದೆ ಆಗಿದ್ದಿತು. ನಾನು ಬರುವ ದಿನ ಏರ್ಪೋರ್ಟಿನಿಂದ ರಾತ್ರಿಯೇ ಏನಾದರು ಕಾರಣ ಹೇಳಿ ಆಫೀಸಿಗೆ ಕರೆಸಿ, ಸಾಯಿಸಿ, ಮುಂದಕ್ಕೆ ಬೇಕಾಗುವ ಬೆರಳ ಗುರುತು ಇತ್ಯಾದಿಗಳೆಲ್ಲವನ್ನು ಕಾಗದ ಪತ್ರಗಳ ಮೇಲೆ ಹಾಕಿಸಿ ಕೊನೆಗೆ ಸತ್ತ ಹೆಣವನ್ನೇ ಕೆಳಗೆ ತಳ್ಳಿ ಆತ್ಮಹತ್ಯೆಯ ಪಟ್ಟಿಯನ್ನು ಕಟ್ಟುವುದು ಅವರುಗಳ ಪ್ಲಾನ್ ಆಗಿದ್ದಿತು! ಆದರೆ ನಾನು ಅದಾಗಲೇ ಭಾರತಕ್ಕೆ ಬಂದಿರುವುದಾಗಲಿ, ಹೋಟೆಲಿನಲ್ಲಿ ತಂಗಿ ಅವರನ್ನು ಇಂಚಿಂಚ್ಚು ನಡೆಯನ್ನು ಗಮನಿಸುತ್ತಿರುವುದಾಗಲಿ ಅವರಿಗೆ ತಿಳಿದಿರಲಿಲ್ಲ. ನಾನೇ ವೇಷಮರೆಸಿ ಪ್ರತಿದಿನ ಆಫೀಸಿಗೆ ರಾತ್ರಿಯ ಸಮಯದಲ್ಲಿ ನುಗ್ಗಿ ಭುಜಂಗನ ಕಂಪ್ಯೂಟರನ ಒಳಹೊಕ್ಕು ಅಷ್ಟೂ ದಾಖಲೆಗಳನ್ನು ನಕಲು ಮರುಸೃಷ್ಟಿಸಿದೆ. ಎಲ್ಲಿಯವರೆಗೂ ಎಂದರೆ ಇಂದು ಇಡೀ ಕಂಪನಿಯ ಒಡೆಯನ ಹೆಸರು ನನ್ನದೇ ಆಗಿದೆ. ಪಾಪ ಭುಜಂಗನಿಗೆ ಸಾಯುವಾಗಲೂ ಆ ವಿಷಯ ತಿಳಿಯಲಿಲ್ಲ ಎಂದು ಗಹಗಹನೇ ನಗುತ್ತಾನೆ.

ನಂತರ ಮುಂದುವರೆಸಿ, ನಮ್ಮ ತಂದೆ ಮಹಾ ತ್ಯಾಗಮಯಿ. ಅಂದು ತಿನ್ನಲು ಕೂಳಿಲ್ಲದೆ ಹಳ್ಳಿಯಲ್ಲಿ ಅಲೆಯುತ್ತಿದ್ದ ಭುಜಂಗನನ್ನು ಕರೆಸಿ ಕೆಲಸಕೊಟ್ಟು ಮ್ಯಾನೇಜರ್ನ ಹುದ್ದೆಯನ್ನು ಕೊಟ್ಟರೂ ತನ್ನ ನಾಯಿಬುದ್ಧಿಯನ್ನು ತೋರಿಸಿದ ಆತ. ಆದರಿಂದ ನಾನೇ ಖುದ್ದಾಗಿ ಕಂಪನಿಯ ಹಣದಲ್ಲೇ ಉದ್ಯೋಗಿಗಳಿಗೆ ಎರಡು ವರ್ಷದ ಬೋನಸ್ ಅನ್ನು ಒಮ್ಮೆಲೇ ಬರುವಂತೆ ಮಾಡಿದೆ.

ಅಂದು ನಾನು ವಿದೇಶದಿಂದ ಬರುತ್ತೇನೆ ಎಂಬುದನ್ನು ತಿಳಿಸಿ ಭೇಟಿಯಾಗೋಣ ಎಂದು ಕಳಿಸಿದ ಮೆಸೇಜ್ಗೆ ಸೀದಾ ಆಫೀಸ್ಸೆ ಹೋಗೋಣ ನಾನೇ ಪಿಕ್ ಮಾಡ್ತೀನಿ ಎಂದ ಭುಜಂಗನ ಮಗ. ಅಪ್ಪ ಸೇರಾದರೆ ಮಗ ಸವಾ ಸೇರು. ಕಾರಿನಲ್ಲೇ, 'ನೋಡ್ರಿ ನಮ್ಮಪ್ಪ ಕಷ್ಟ ಪಟ್ಟು ಮಾಡಿದ ಕಂಪನಿ ಇದು.. ಅವ್ರ್ ಇಲ್ದೆ ಇದ್ರೆ ಇಷ್ಟೆಲ್ಲಾ ಬೆಳೀತಾನೆ ಇರ್ತಿರ್ಲಿಲ್ಲ..' ಎನುತ ಪರೋಕ್ಷವಾಗಿ ಹೆದರಿಸತೊಡಗಿದ. ಅಂದುಕೊಂಡಂತೆಯೇ ಕೊಲ್ಲಲು ಸಿದ್ದವಾಗಿ ಬಂದಿದ್ದನಾತ! ರಾತ್ರಿ ಹತ್ತುವರೆಗೆ ಆಫೀಸಿಗೆ ಬಂದ ಕೂಡಲೇ ಗನ್ ಒಂದನ್ನು ತೆಗೆದು ನನ್ನ ಹಣೆಯ ಮೇಲಿಟ್ಟು ಟೇಬಲ್ಲಿನಲ್ಲಿದ ಕಾಗದ ಪತ್ರಗಳ ಮೇಲೆ ಸಹಿ ಮಾಡುವಂತೆ ಹೇಳಿದ. ಅಂತೆಯೇ ನಾನು ನನ್ನ ನಕಲಿ ಸಹಿಯನ್ನು ಮಾಡಿ ಇನ್ನೇನು ತಲೆಯೆತ್ತಬೇಕುವನ್ನುವಷ್ಟರಲ್ಲಿ ಆತನ ಗನ್ನನ್ನು ತಳ್ಳಿ ಆಣೆಯ ನೇರಕ್ಕೆ ಒಂದು ಬಲವಾದ ಗುದ್ದನು ಕೊಟ್ಟೆ. ಸೇಫ್ಟಿಗೆಂದು ತಂದಿದ್ದ ವಿಷ ಸಿಂಪಡಿಸಿದ ಕರ್ಚಿಫನ್ನು ಆತನ ಮೂಗಿನ ನೇರಕ್ಕೆ ಇರಿಸಿ ಪ್ರಜ್ಞೆ ತಪ್ಪಿಸಿದೆ. ಆದರೆ ವಿಷದ ಮತ್ತೊ ಅಥವ ಆತನ ಕೆಟ್ಟ ಗಳಿಗೆಯೋ ನಿಮಿಷಮಾತ್ರದಲ್ಲಿ ಆತನ ಪ್ರಾಣಪಕ್ಷಿ ಹಾರಿಹೋಯಿತು!! ಅಪ್ಪನನ್ನು ಸಾಯಿಸಲು ಹೋಗಿ ಮಗನನ್ನೇ ಪರಲೋಕಕ್ಕೆ ಕಳುಯಿಸಿದ ನನ್ನ ಎದೆ ನಡುಗತೊಡಗಿತು. ಕೆಲನಿಮಿಷಗಳಲ್ಲೇ ಇಹಸ್ಥಿತಿಗೆ ಬಂದ ನಾನು ಆತನ ಹೆಣವನ್ನು ಕಟ್ಟಿ ಊರೇ ಮಲಗಬಹುದಾದಷ್ಟು ದೊಡ್ಡದಾದ ಫ್ರಿಡ್ಜ್ ನ ಕೆಳ ಕಂಪಾರ್ಟ್ ಮೆಂಟ್ನ ಒಳಗೆ ತೂರಿಸಿ, ಗಟ್ಟಿಯಾದ ಕಲ್ಲಿನಂತೆ ಅಂಟುವ ಲಿಕ್ವಿಡ್ ನಿಂದ ನನ್ನದೇ ನಕಲಿ ಮುಖ ಚಹರೆಯನ್ನು ಆತನ ಮುಖಕ್ಕೆ ಅಂಟಿಸಿ ಫ್ರಿಡ್ಜ್ ನ ಕೀಲಿಯನ್ನು ಹಾಕಿದೆ.


ಆತನ ಮೊಬೈಲಿಂದ ಭುಜಂಗನಿಗೆ ಮೆಸೇಜ್ ಮಾಡಿದೆ.

Will be Continued...
 

Wednesday, January 23, 2019

ಮೆಹ್ತಾ Killed ಮೆಹ್ತಾ! - Part 2

ಶೌಚಾಲಯದ ಪೈಪುಗಳ ಮೂಲಕ ಮೇಲೇರಿದ ಅದು ಕಿಟಕಿಯ ಮುಖೇನ ಸೀದಾ ಆಫೀಸಿನೊಳಗೆ ನುಗ್ಗಿತು. ಆ ಕಡು ಕತ್ತಲೆಯಲ್ಲೂ ಒಂದಿನಿತೂ ದಾರಿ ತಪ್ಪದೆ ಕೂಡಲೇ ಭುಜಂಗರಾವ್ನ ಕೋಣೆಯಳೊಗೆ ಹೋಗಿ ಕಂಪ್ಯೂಟರ್ ಅನ್ನು ಆನ್ ಮಾಡಿ ಬಹಳದಿನಗಳಿಂದ ಕಾಯುತ್ತಿದ್ದ ಕೆಲಸವನ್ನು ಅದು ಮುಗಿಸಿಕೊಂಡಿತು. ನಕಲಿ Purchase Order ಗಳನ್ನು ಭುಜಂಗರಾವ್ ನ ಐಡಿಯಿಂದ ಅನುಮೋದಿಸಿ ಅದರ ಒಂದು ಕಾಪಿಯನ್ನು ಇಮೇಲ್ ಮೂಲಕ ತನ್ನ ಐಡಿಯೊಂದಕ್ಕೆ ಕಳಿಸಿಕೊಂಡಿತು. ನಕಲಿ Purchase Orderಗಳನ್ನು ಮಾರುಕಟ್ಟೆಯಲ್ಲಿ ಅಸ್ತಿತ್ವದಲ್ಲಿರುವ ವ್ಯಾಪಾರಿಗಳೊಟ್ಟಿಗೆ ಚಲಾವಣೆಗೊಳಿಸಿ ಅವರಿಂದ ಕ್ರೆಡಿಟ್ ನಲ್ಲಿ ಸಿಗುವ ಮಾಲುಗಳನು ಮತ್ತೊಬ್ಬ ವ್ಯಾಪಾರಿಗೆ ಅದರ ಅರ್ಧದಷ್ಟು ಹಣದಲ್ಲಿ ಮಾರಿ ಹಣವನ್ನು ಗಳಿಸಿಕೊಳ್ಳುತ್ತಿತ್ತು ಆ ಕ್ರಿಮಿನಲ್ ಆಕೃತಿ. 'ಭುಜಂಗ ..' ಎಂದು ಕಟಕಟನೆ ಹಲ್ಲು ಕಡಿದ ಅದು ತನ್ನ ಕೆಲಸ ಮುಗಿದ ನಂತರ ಚಂಗನೆ ಕಿಟಕಿಯ ಬಳಿಗೆ ಹಾರಿತಾದರೂ ಕೂಡಲೇ ಏನೋ ಅದಕ್ಕೆ ನೆನಪಾಯಿತು. ಪುನಃ ಭುಜಂಗ್ರಾವಿನ ಕೊಣೆಯೊಳಗೆ ಬಂದು ಟೇಬಲ್ಲಿನ ಕೆಳಗೆ ಏನೋ ಕಂಡಂತಾದ ವಸ್ತುವನ್ನು ಎಳೆದು ತೆಗೆಯಿತು. ಬೆಳಕು ಬಿಟ್ಟು ನೋಡಿದರೆ, ತಲೆಸುತ್ತು ಬೀಳುವಂತಹ ದೃಶ್ಯ ಆ ಕಪ್ಪು ಕೈಗಳ ಮೇಲೆ!!

**

'ಅಜಯ್..! ಏನ್ರಿ ನಿಮ್ದು. ಡೆಲಿವರಿ ಡೇಟ್ ಮುಗಿದ್ ಹೋದ್ರೂ ಯಾಕ್ರೀ ಇನ್ನು ಶಿಪಿಮೆಂಟ್ ಕಸ್ಟಮರ್ ಗೆ ಮುಟ್ಟಿಲ್ಲ..?' ಸಹಜವಾದ ಸಿಡುಕಿನ ಧ್ವನಿಯಲ್ಲಿ ಕೇಳಿದ ಭುಜಂಗರಾವ್. ಬಿಳಿಕೂದಲಿನ ಅರ್ವತ್ತು ವಯಸ್ಸಿನ ಆತನ ಆ ಬೆಕ್ಕಿನ ಕಣ್ಣುಗಳು ಭಯಾನಕ ಭಯವನ್ನುಂಟುಮಾಡುತ್ತಿದ್ದವು. ಅಜಯ್ ಏನನ್ನೂ ಮಾತನಾಡದೆ ತಲೆ ತಗ್ಗಿಸಿಕೊಂಡು ನಿಂತಿದ್ದ. ಭುಜಂಗರಾವ್ರ ಪಕ್ಕದಲ್ಲಿ ಕೂತಿದ್ದ ದೀಪಕ್ ಮೆಹ್ತಾ, 'ಲುಕ್ ಮಿಸ್ಟರ್, ನಾವೇನ್ ಇಲ್ಲಿ ಚಾರಿಟಿ ವರ್ಕ್ ಮಾಡ್ತಾ ಇಲ್ಲ. ನಿಮ್ಮ್ ಒಂದೊಂದು ತಪ್ಪು ನಾವ್ ಕಷ್ಟ ಪಟ್ಟು ಕಟ್ಟಿದ ಕಂಪನಿಗೆ ಹೊರೆಯಾಗುತ್ತೆ. ದಿಸ್ ಇಸ್ ದಿ ಫೈನಲ್ ವಾರ್ನಿಗ್!’ ಎಂದ ಧ್ವನಿಯಲ್ಲಿ ಏನೋ ಒಂದು ಬಗೆಯ ಅಸಹಜತೆ…ಕಳೆದ ತಿಂಗಳವರೆಗೂ ಕಂಪನಿಯ ಸ್ಲೀಪಿಂಗ್ ಪಾರ್ಟರ್ ಆಗಿದ್ದ ದೀಪಕ್ ಮೆಹ್ತಾರನ್ನು ಕಂಪನಿಯ ಯಾರೊಬ್ಬರೂ ಅಷ್ಟಾಗಿ ನೋಡಿಯಾಗಲಿ ಮಾತಾಡಿಯಾಗಿ ಬಲ್ಲವರಾಗಿರಲಿಲ್ಲ. ಹೊರದೇಶದಲ್ಲೆಲ್ಲೋ ಒಬ್ಬ ದೀಪಕ್ ಮೆಹ್ತಾ ಎಂಬ ವ್ಯಕ್ತಿ ನಮ್ಮ ಕಂಪನಿಯ ಇಂತಿಷ್ಟು ಷೇರುಗಳ ಒಡೆಯ ಎಂದಷ್ಟೇ ಅಲ್ಲಿನ ಉದ್ಯೋಗಿಗಳಿಗೆ ತಿಳಿದ್ದಿತ್ತು. ಈಗ ತನ್ನ ಹೊರದೇಶದ ಬಿಸಿನೆಸ್ ನಷ್ಟ ಕಂಡ ಪರಿಣಾಮ ಆತ ಇಲ್ಲಿಗೆ ಬಂದಿದ್ದೂ ದಿನೇ ದಿನೇ ಕಂಪನಿಯ ಒಂದೊಂದೇ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳತೊಡಗಿದ.. ಬುಜಂಗ್ರಾವಿನ ಸಿಟ್ಟಿನ ಆ ರಣ ಕಣ್ಣುಗಳು ಆತ ಡೋರನ್ನು ದಾಟುವವರೆಗೂ ನೋಡುತ್ತಲೇ ಇದ್ದವು.

ಅಜಯ್ ನಿಂತ ಅಷ್ಟೂ ಸಮಯವನ್ನು ದೀಪಕ್ ಮೆಹ್ತಾರವರ ಚಹರೆಯನ್ನೇ ಇಣುಕಿಣುಕಿ ನೋಡತೊಡಗಿದ್ದ. ಹೊರಬಂದವನೇ ಮಹೇಶನನ್ನು ಕುರಿತು 'ಆ ಮೆಹ್ತಾ ಹೇಳೋಕ್ಕಷ್ಟೇ ನಲವತ್ತು ವರ್ಷ ರೀ , ಮೇಕ್ ಅಪ್ ಮಾತ್ರ ಒಳ್ಳೆ ಟೀನೇಜ್ ಹುಡ್ಗೀರ್ ತರ ಮಾಡ್ಕೊಂತಾರೆ. ಅದೆಷ್ಟು ಪೌಡರ್ ಮುಖಕ್ಕೆ ಆಕೊಂಡ್ಡಿದ್ದಾರೆ ನೋಡಿದ್ರ.. ಒಳ್ಳೆ ಕಾರ್ಟೂನ್ ಕ್ಯಾರೆಕ್ಟರ್ ನೋಡ್ದ ಹಾಗೆ ಆಗುತ್ತೆ' ಎಂದು ಗಹಗಹನೇ ನಗಹತ್ತಿದ್ದ. ಕೆಲ ನಿಮಿಷಗಳಲ್ಲಿಯೇ ‘ನಿದ್ರೆ ಇಲ್ಲ ರೀ’ ಎನುತ ತೂಕಡಿಸತೊಡಗಿದ,'ರೀ ಅಜಯ್, ಭುಜಂಗ ಬಂದ್ರೆ ಇವತ್ತ್ ನಿಮ್ ಕಥೆ ಮುಗ್ದ್ ಹಾಗೆ..ಏಳ್ರಿ' ಎಂದ ಮಹೇಶನ ಮಾತನ್ನೂ ಲೆಕ್ಕಿಸದೆ ಕುರ್ಚಿಯನ್ನು ಸಾಧ್ಯವಾದಷ್ಟು ಕೆಳಗೊಳಿಸಿ ನಿದ್ರೆಗೆ ಜಾರಿದ.

ಕುರ್ಚಿಯ ಮೇಲೆಯೇ ಘಾಡ ನಿದ್ರೆಗೆ ಜಾರಿದ ಅಜಯ್ ಕಣ್ಣು ಬಿಡುವಷ್ಟರಲ್ಲಿ ಆಫೀಸಿನ ತುಂಬಾ ಕತ್ತಲೆಯದೆಯೇ ಕಾರುಬಾರು. ಅಲ್ಲೊಂದು ಇಲ್ಲೊಂದು ಎಮರ್ಜೆನ್ಸಿ LED ಲೈಟುಗಳನ್ನು ಬಿಟ್ಟರೆ ಆತನ ಕಣ್ಣುಗಳಿಗೆ ಏನೇನೂ ಗೋಚರಿಸದು. ಸಂಜೆ ಮಹೇಶ ‘ಏಳ್ರಿ ಹೋಗಣ’ ಎಂದಾಗಲೂ ಹೊರಳಾಡಿ ಮಲಗಿದ ತುಸು ನೆನಪು ಬಿಟ್ಟರೆ ಬೇರೇನೂ ಸಹ ಆತನ ನೆನೆಪಿಗೆ ಬರುತ್ತಿಲ್ಲ. ಮೊಬೈಲನ್ನು ಜೇಬಿನಿಂದ ತೆಗೆದು ನೋಡುತ್ತಾನೆ. ಘಂಟೆ ಆಗಲೇ ಹನ್ನೆರಡರ ಸಮೀಪ! ಆಕ್ಸೆಸ್ ಕಾರ್ಡ್ ಇದ್ದಿದ್ದರಿಂದ ಬಚಾವು ಎಂದುಕೊಂಡು ಎದೆಯ ಜೇಬಿನಿಂದ ಆಕ್ಸೆಸ್ ಕಾರ್ಡ್ ನ್ನು ತೆಗೆದು ಇನ್ನೇನು ಎದ್ದು ಹೊರಡಬೇಕು ಎನ್ನುವಷ್ಟರಲ್ಲಿ ಭುಜಂಗ್ ರಾವ್ನ ಕ್ಯಾಬಿನಿಂದ ಏನೋ ನೆಡೆದಾಡುವ ಸದ್ದು!! ನಿಂತಿದ್ದ ಅಜಯ್ ಕೂಡಲೇ ಕುಕ್ಕರುಗಾಲಿನಲ್ಲಿ ಕೆಳಗೆ ಕೂರುತ್ತಾನೆ. ಬೆಂಕಿಪೊಟ್ಟಣದಂತಿದ್ದ ಆ ಹತ್ತಾರು ಕ್ಯಾಬಿನುಗಳ ನಡುವೆ ಕೂತ ಅಜಯ್ ಮೆಲ್ಲಗೆ ಆ ಸದ್ದನ್ನು ಅಳಿಸತೊಡಗಿದ. ಏನೇನೋ ಪದಗಳ ಉಚ್ಚಾರಣೆಯಿಂದ ಅತ್ತಿಂದಿತ್ತ ಇತ್ತಿಂದಂತ್ತ ನೆಡೆಯುತ್ತಿದ್ದ ಅದು ಬುಜಂಗ್ರಾವ್ ನ ಧ್ವನಿಯಂತೂ ಅಲ್ಲವೇ ಅಲ್ಲ! ಕೊಂಚ ಕಿವಿಯಿಟ್ಟು ಆಲಿಸಹೋದಗ ಕೂಡಲೇ ಕಟಕಟನೆ ಹಲ್ಲುಕಡಿಯುವ ಸದ್ದು ಭಾರಿ ಗಾತ್ರದ ಕಲ್ಲನ್ನು ಅಷ್ಟೇ ಗಾತ್ರದ ಇನ್ನೊಂದು ಕಲ್ಲಿಗೆ ಉಜ್ಜಿದಾಗ ಮೂಡುವ ಸದ್ದಿನಂತೆ ಮೂಡುತ್ತದೆ! ಆ ಭಯಾನಕ ಸದ್ದಿಗೆ ಎದೆ ಜಲ್ ಎಂದ ಅಜಯ್ ಕುಕ್ಕರುಗಾಲಿನಿಂದ ಒಮ್ಮೆಲೇ ಹಿಂದಕ್ಕೆ ಬೀಳುತ್ತಾನೆ. ಆಗ ಆತನ ಬೆನ್ನು ತನ್ನ ಕುರ್ಚಿಗೆ ತಾಗಿ, ಕುರ್ಚಿ ಕ್ಯಾಬಿನ್ನ ಚೌಕಕ್ಕೆ ತಾಗಿ ನಿಶ್ಯಬ್ಧವಾಗಿದ್ದ ಆಫೀಸಿನ ತುಂಬಾ ಒಮ್ಮೆಲೆ ಸದ್ದು ಮೂಡುತ್ತದೆ. ಅಲ್ಲಿಯವರೆಗೂ ಬುಜಂಗ್ ರಾವಿನ ಕ್ಯಾಬಿನಿಂದ ಒಂದೇ ಸಮನೆ ಮೂಡುತ್ತಿದ್ದ ಸದ್ದು ಕುರ್ಚಿಯ ಸದ್ದುಕೇಳಿ ನಿಂತುಬಿಡುತ್ತದೆ. ಪುನ್ಹ ಮತ್ತೊಂದು ಮಹಾಮೌನ! ಅಜಯ್ ನ ಎದೆ ಡವ-ಡವ ಬಡಿದುಕೊಳ್ಳುತ್ತಿರುತ್ತದೆ. ಅದರ ಸದ್ದು ಕಿವಿಗೆ ಕೇಳುವಷ್ಟು ಜೋರು. ಹಣೆಯಲ್ಲಿ ಬೆವರಿನ ನದಿಯೇ ಹರಿದು ನೆಲದಮೇಲೆ ಹನಿಗೂಡುತ್ತಿರುತ್ತದೆ. ಕೆಲಕ್ಷಣಗಳಲ್ಲೇ ಕ್ಯಾಬಿನಿನ ಬಾಗಿಲನ್ನು ತೆರೆದ ಆ ಸದ್ದು ತನ್ನ ಬೂಟುಗಾಲಿನಿಂದ ಆಫೀಸಿನ ತುಂಬೆಲ್ಲ ನೆಡೆಯುತ್ತದೆ. ಆ ರಾಜನೆಡಿಗೆಯ ಹೆಜ್ಜೆಗಳ ನಡುವಿನ ಅಂತರ ಅದರಲ್ಲಿ ಯಾವುದೇ ಭಯವಿರದ ಭಾವವನ್ನು ತಿಳಿಸುತ್ತಿರುತ್ತದೆ. ಅಜಯ್ ತನ್ನ ಕಣ್ಣು ಕಣ್ಣನ್ನು ಗಟ್ಟಿಯಾಗಿ ಮುಚ್ಚಿಕೊಂಡು ತಲೆಕೆಳಗು ಮಾಡಿ ಕೂತಿರುತ್ತಾನೆ. ಕೆಲನಿಮಿಷಗಳ ನಂತರ ಆ ಸದ್ದು ಆಫೀಸಿನ ಕಿಟಕಿಯನ್ನು ಇಳಿದು ಮರೆಯಾಗದಿದ್ದರೆ ಅಜಯ್ ಕೂತಲ್ಲಿಯೇ ಎದೆಯೊಡೆದು ಸಾಯುವುದು ಖಚಿತವಾಗಿದ್ದಿತು....!

**

'ಅರ್ರೆ!! ಏನ್ರಿ ಇದು .. ದೀಪಾವಳಿ ಬೋನಸ್ ಮೂರ್ ತಿಂಗ್ಳು ಮೊದ್ಲೇ ಬಂತರ್ಲಿ..' ಎಂದು ಮೊಬೈಲನ್ನು ನೋಡಿ ಕೂಗಹತ್ತಿದ ಮಹೇಶ. ಆತ ಹೇಳಿದಂತೆಯೇ ಆಫೀಸಿನ ಎಲ್ಲರ ಸ್ಯಾಲರಿ ಅಕೌಂಟಿಗೆ ಒಂದೇ ಸಮನಾದ ಹಣ ಜಮಾವಣೆಯಾಗಲ್ಪಟ್ಟಿರುತ್ತದೆ. ಎದ್ದು ನಿಂತ ಎಲ್ಲರು ಮಿಕ ಮಿಕ ಕಣ್ಣುಗಳನ್ನು ಬಿಟ್ಟು ಒಬ್ಬರನ್ನೊಬ್ಬರು ನೋಡತೊಡಗಿದರು. 'ಬುಜಂಗ್ ರಾವ್ ಯಾವಾಗ ಇಷ್ಟು ಬದಲಾದ?' ಎಂಬ ಪ್ರೆಶ್ನೆಯೊಂದೇ ಆ ಎಲ್ಲ ನೋಟಗಳಲ್ಲೂ.

**

ಆ ದಿನ ರಾತ್ರಿ ಪುನ್ಹ ತನ್ನ ಹೋಟೆಲಿನ ಕೋಣೆಯಿಂದ ಹೊರಟ ಆ ಆಕೃತಿ ಸಿಟಿಯ ಮೂಲೆಯಲ್ಲಿದ್ದ ಭುಜಂಗ್ ರಾವಿನ ಮತ್ತೊಂದು ಚಿನ್ನದ ಅಂಗಡಿಗೆ ನೆಡೆಯಿತು. ಎಂದಿನಂತೆ ಹತ್ತಾರು ಚಿನ್ನದ ಆಭರಣಗಳನ್ನು ಪಡೆದ ಅದು ಸಾದ್ಯವಾದಷ್ಟು ತನ್ನ ಕೈಗಳ ಮೇಲೆ ಹರಿದಾಡಿಸಿ ಇನ್ನೇನು ಹೊರನೆಡೆಯಬೇಕು ಎನ್ನುವಷ್ಟರಲ್ಲಿ ಅಲ್ಲಿ ಕೆಲಸಕ್ಕಿದ್ದ ಒಬ್ಬ ಹುಡುಗ 'ನಮಸ್ಕಾರ ಸಾರ್' ಎಂದು ಸಲಾಂ ಮಾಡಿದ. ಕಕ್ಕಾಬಿಕ್ಕಿಯಾದ ಆ ಆಕೃತಿ ಒಂದು ಕ್ಷಣವೂ ಅಲ್ಲಿ ನಿಲ್ಲದೆ, ಏನನ್ನೂ ಮಾತನಾಡದೆ ಬಿರಬಿರನೆ ಹೊರಬಂದಿತು. ರೂಮಿಗೆ ಬಂದ ಕೂಡಲೇ ಕೈಗೆ ಅಂಟಿಕೊಂಡಿದ್ದ ಚಿನ್ನದ ಪುಡಿಯನ್ನು ತೊಳೆದು ಫೋಟೋವಿನ ಮುಂದಿದ್ದ ಪೊಟ್ಟಣದ ಒಳಗೆ ಸುರಿಯಿತು. ಹೆಚ್ಚುಕಡಿಮೆ ಆ ಸಣ್ಣ ಪೊಟ್ಟಣದ ಅರ್ಧದಷ್ಟು ತುಂಬಿದ ಚಿನ್ನದ ಪುಡಿಯನ್ನು ಇಂದು ಒಂದು ದಪ್ಪ ಕಬ್ಬಿಣದ ಸಣ್ಣ ಪಾತ್ರೆಯಲ್ಲಿ ಸುರಿದು ಗ್ಯಾಸಿನ ಮೇಲಿಟ್ಟು ಕಾಯಿಸತೊಡಗಿತು. ಹೆಚ್ಚುಕಡಿಮೆ ಒಂದೆರಡು ತಾಸಿನ ಚಟುವಟಿಕೆಯ ನಂತರ ತನ್ನ ಬಹುದಿನದ ಕನಸ್ಸನ್ನು ನನಸ್ಸಾಗಿಸಿದ ಖುಷಿಯಲ್ಲಿ ಸಣ್ಣ ಬುಲೆಟ್ ಆಕಾರದ ಚಿನ್ನದ ಗುಂಡನ್ನು ತಯಾರಿಸಿ ಆ ಫೋಟೋವಿನ ಮುಂದಿರಿಸಿ ಅದರ ಪಕ್ಕಕ್ಕೆ ತನ್ನ ಜೇಬಿನಲ್ಲಿದ್ದ ಪಿಸ್ತೂಲನ್ನೂ ಇಟ್ಟು ಒಂದೇ ಸಮನೆ ಬಿಕ್ಕಿ ಬಿಕ್ಕಿ ಅಳತೊಡಗಿತು. ಕೂಡಲೇ ಹೊರಗಿನ ಹಾಲಿನಿಂದ ಬಂದ ಸದ್ದು ಆಕೃತಿಯನ್ನು ಜಾಗೃತಗೊಳಿಸಿತು. ಆದರೆ ಹೊರಬಂದು ನೋಡಿದರೆ ಅಲ್ಲಿ ಏನೇನೂ ಕಾಣದು. ನಂತರ ಪುನ್ಹ ಎಂದಿನಂತೆ ತನ್ನ ಹೋಟೆಲು ಕೋಣೆಯಿಂದ ಹೊರನೆಡೆದು ಭುಜಂಗರಾವಿನ ಆಫೀಸ್ಸಿನ ಹಿಂಬಾಗಿಲನ್ನು ಅದು ತಲುಪಿತು. ಆತನ ಕಂಪ್ಯೂಟರ್ ಅನ್ನು ತೆರೆದು ತನ್ನ ಕೆಲಸವನ್ನು ಪ್ರಾರಂಭಿಸಿತು.



******************



                                                              Present Day.. 


ದೀಪಕ್ ಮೆಹ್ತಾ ಸತ್ತು ಅಲ್ಲಿಗೆ ಹತ್ತು ದಿನಗಳು ಕಳೆದಿದ್ದವು. ಪೊಲೀಸರ ಖಾಸಾವಾಗಿದ್ದ ಭುಜಂಗರಾವ್ ಅದು ಆತ್ಮಹತ್ಯೆ ಎಂದು ರಿಪೋರ್ಟ್ ಕೊಡುವಂತೆ ಅವರುಗಳಿಗೆ ತಿಳಿಸುತ್ತಾನೆ! ಅಂತೆಯೇ ವಿದೇಶದ ಬಿಸಿನೆಸ್ ಅಲ್ಲಿ ಸೋತು, ತನ್ನ ಇಲ್ಲಿಯ ಕಂಪನಿಯ ಅಷ್ಟೂ ಷೇರನ್ನು ಬುಜಂಗ್ ರಾವಿಗೆ ಮಾರಿಬಂದ ಹಣದಿಂದ ಅಲ್ಲಿಯ ಸಾಲವನ್ನು ತೀರಿಸಲು ಪ್ರಯತ್ನಿಸಿದರೂ ಇನ್ನೂ ಬೆಟ್ಟದಷ್ಟು ಬಾಕಿ ಉಳಿದಿದ್ದರಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬ ಕೊನೆಯ ರಿಪೋರ್ಟ್ ನಲ್ಲಿ ಪೋಸ್ಟ್ ಮಾರ್ಟಮ್ ರಿಪೋರ್ಟ್ ನ ಕೆಲ ಅಂಶಗಳನ್ನು ಬೇಕಂತಲೇ ತೆಗೆದು ಹಾಕಲಾಗಿತ್ತು. ಅದರಲ್ಲಿದ್ದ ಪ್ರಮುಖ ಅಂಶವೇನೆಂದರೆ ಘಟನೆ ನೆಡೆದ ದಿನದಿಂದ ಎರಡು ವಾರಗಳ ಮೊದಲೇ ದೀಪಕ್ ಮೆಹ್ತಾನ ಜೀವ ಹೋಗಿದೆ ಎಂಬ ಎದೆಯೊಡೆಯುವ ವಿಷಯ. ಅಲ್ಲದೆ ವಿದೇಶದಲ್ಲಿ ಮದುವೆಯಾಗಿ ನಂತರ ಡೈವೋರ್ಸ್ ಆದದ್ದರಿಂದ ಹಾಗು ಪೋಷಕರು ಮೊದಲೇ ತೀರಿಕೊಂಡಿದ್ದರಿಂದ ಆ ಬಗ್ಗೆ ಪ್ರೆಶ್ನಿಸುವುದಾಗಲಿ, ವಿಚಾರಿಸಲಾಗಲಿ ದೀಪಕ್ ರಾವ್ಗೆ ಯಾರೊಬ್ಬರೂ ಇರಲಿಲ್ಲ. ಬರಲಿಲ್ಲ.

**

'ನಿಖಿಲ್..!! Shit.. Shit..Shit!!' ಎಂದು ಸಿಟ್ಟಿನಿಂದ ಅರಚುತ್ತಾ ತಾನು ಕೂತಿದ್ದ ಟೇಬಲ್ಲನ್ನು ಒಂದೇ ಸಮನೆ ಬಡಿಯತೊಡಗಿದ ಭುಜಂಗರಾವ್. ತನ್ನ ಮಗನ ಫೋನು ಕಳೆದ ಎರಡು ವಾರದಿಂದ ನಾಟ್ ರೀಚ್ಯೆಬಲ್.. ಎಲ್ಲ ಪ್ಲಾನ್ನಂತೆ ನೆಡೆದಿದ್ದರೆ ಇಂದು ಆತ ಇಲ್ಲಿ ಬರಲೇಬೇಕಿತ್ತಲ್ಲ, ಎಲ್ಲಿ ಹೋದ ಆಸಾಮಿ ಎನುತ ಒಳಗೊಳಗೇ ಯೋಚಿಸತೊಡಗಿದ.

ಅದು ಬೆಳಗ್ಗೆ ಹತ್ತರ ಆಸುಪಾಸು. ಎಂದಿನಂತೆಯೇ ಲೇಟಾಗಿ ಕೆಲಸಕ್ಕೆ ಬಂದ ಅಜಯ್ ನನ್ನು ಕಂಡು ಮಹೇಶ,

'ರೀ ಅಜಯ್ , ಇವತ್ತು ಭುಜಂಗ ನಿಮಗಿಂತ ಬೇಗ ಬಂದಿದ್ದಾನೆ. ನೀವ್ ಎಲ್ಲಿ ಅಂತಾನೂ ಕೇಳ್ದ..!'

'ಕೇಳ್ಲಿ ಬಿಡ್ರಿ.. ಅವ್ನ್ ಯಾಕೆ ಬೇಗ ಬರೋದು, ಲೇಟಾಗಿ ಹೋಗೋದು ನಂಗೆ ಎಲ್ಲ ಗೊತ್ತು, ಅಪ್ಪ ಮಕ್ಳ ಬಿಸಿನೆಸ್.. '

'ಅಪ್ಪ ಮಗನ ?.. ಯಾರಿ ಅಪ್ಪ, ಮಗ ಯಾರ್ರೀ?'

'ಜಸ್ಟ್ ವೇಟ್ ಅಂಡ್ ವಾಚ್ ಮಹೇಶ್.. ಇನ್ ಕೆಲ್ವೇ ದಿನಗಳಲ್ಲಿ ಎಲ್ಲ ಕ್ಲಿಯರ್ ಆಗುತ್ತೆ' ಎಂದು ಹೇಳಿ ತನ್ನ ಲ್ಯಾಪ್ಟಾಪ್ ಬ್ಯಾಗನ್ನು ಟೇಬಲ್ಲಿನ ಮೇಲೆ ಇಟ್ಟನಷ್ಟೇ

'ಪಟಾರ್..!' ಎಂಬ ಪಟಾಕಿ ಸಿಡಿದಂತ ಭಯಂಕರ ಸದ್ದು ಭುಜಂಗ್ ರಾವಿನ ಕ್ಯಾಬಿನ್ ಒಳಗಡೆಯಿಂದ ಬಂದಿತು! ಉದ್ಯೋಗಿಗಳೆಲ್ಲ ಕೂಡಲೇ ಎದ್ದು ನಿಂತು ಒಳಗೇನಾಯಿತೆಂದು ಬಾಗಿಲು ತೆರೆದು ನೋಡುತ್ತಾರೆ, ಬೆಚ್ಚಿ ಬೀಳಿಸುವಂತಹಃ ದೃಶ್ಯ ಅಲ್ಲಿದವರೆಲ್ಲರ ನಿಂತ ನೆಲವನ್ನೇ ಕಂಪಿಸುವಂತೆ ಮಾಡುತ್ತದೆ. 'ಹೂ..!' ಎನುತ ವಿಕಾರವಾಗಿ ಕೂಗುತ್ತಾ ಅರಚುತ್ತಾ ಹಲವರು ಅಲ್ಲಿಂದ ಓಟ ಕಿತ್ತರೆ ಕೆಲವರು ಆ ದೃಶ್ಯವನ್ನು ನೋಡಿ ನಿಂತಲ್ಲೇ ತಲೆಸುತ್ತು ಬಂದು ಕೆಳಗೆ ಬಿದ್ದರು.ಕೆಲದಿನಗಳ ಹಿಂದಷ್ಟೇ ತನ್ನ ಕಣ್ಣ ಗುಡ್ಡೆ ಹೊರಬಂದು ವಿಕಾರವಾಗಿ ಸತ್ತು, ಚಿತೆಯಲ್ಲಿ ಸುಟ್ಟು ಭಸ್ಮವಾಗಿದ್ದ ದೀಪಕ್ ರಾವ್ ಭುಜಂಗರಾವಿನ ಕ್ಯಾಬಿನ್ನೊಳಗೆ ಪ್ರತ್ಯಕ್ಷನಾಗಿದ್ದಾನೆ!! ದೀಪಕ್ ಮೆಹ್ತಾನ ಕೈ ಗಳು ಗನ್ ಒಂದನ್ನು ಹಿಡಿದು ರಕ್ತದ ಮಡುವಿನಲ್ಲಿ ಮಲಗಿದ್ದ ಬುಜಂಗ್ ರಾವಿನ ಕಡೆಗೆ ಬೊಟ್ಟುಮಾಡಿರುತ್ತದೆ!

**

Friday, January 18, 2019

ಮೆಹ್ತಾ Killed ಮೆಹ್ತಾ! - Part 1

ಇದ್ದಕ್ಕಿಂದಂತೆ ಶುಭ್ರ ನೀಲಾಕಾಶವನ್ನು ಕರಿಮೋಡಗಳ ಹಿಂಡು ಮುಗಿಬಿದ್ದು ಅವರಿಸತೊಡಗಿದವು. ಅಲ್ಲಿಯವರೆಗೂ ಚಿಲಿಪಿಲಿಗುಡುತ್ತಿದ್ದ ಹಕ್ಕಿಗಳೂ ಸಹ ತಮ್ಮ ತಮ್ಮ ಗೂಡನ್ನು ಸೇರುವ ನೆಪದಲ್ಲಿ ಒಂದೊಂದಾಗಿಯೇ ಕಣ್ಮರೆಯಾಗತೊಡಗಿದವು. ಹೊಂಚು ಹಾಕಿ ಅಡಗಿ ಕೂತಂತಿದ್ದ ಗಾಳಿ ಎಲ್ಲಿಂದಲೋ ರಭಸವಾಗಿ ಬೀಸತೊಡಗಿತು.

ನಂತರದ ಕೆಲ ಕ್ಷಣ ಒಂದು ಮಹಾ ಮೌನ.

'ಇದೆಂತಾ ಕ್ಲೈಮೇಟ್ ಅಜಯ್.. ಪಕ್ಕಾ ಮಳೆ.. ಆಫೀಸ್ನಿಂದ ಬೇಗ ಹೊರ್ಟ್ವೋ, ಬದ್ಕೋತೀವಿ.. ಇಲ್ಲ ಅಂದ್ರೆ ನಾಳೆ ಮೋರಿಲೋ ಕೆರೀಲೋ ಬಿದ್ದಿರ್ತಿವಿ ನೋಡಿ'

'ರೀ , ಯಾಕ್ರೀ ಮಳೆ ಅಂದ್ರೆ ಅಷ್ಟ್ ಎದ್ರುತ್ತಿರ ನೀವು.. ಏನ್ ಒಂಚೂರು ಮಳೆ ಬಂದ್ ಮಾತ್ರಕ್ಕೆ ಊರೇ ಮೂಳ್ಗೋಗುತ್ತಾ.. ಒಳ್ಳೆ ಮಕ್ಳ್ ತರ ಆಡ್ಬೇಡಿ, ತಗೋಳಿ' ಏನುತಾ ಮಹೇಶನ ತುಟಿಯ ಮೇಲಿದ್ದ ಸಿಗರೇಟಿನ ತುದಿಗೆ ಲೈಟರ್ರನ್ನು ಹಿಟ್ಟು ತಾನೂ ಒಂದು ಸಿಗರೇಟನ್ನು ಹೊತ್ತಿಸುತ್ತಾನೆ ಅಜಯ್ ರಾವ್.

'ಹಾಗೇನಿಲ್ಲ ಅಜಯ್, ಈ ಬೇವರ್ಸಿ ಮಳೆ ಬಂದು ಮಾಡೋ ಅನಾಹುತ ಒಂದೋ ಎರಡೂ ಹೇಳಿ. ಆ ಕಡೆ ಹಳ್ಳಿ-ಗಿಳ್ಳಿ ಕಡೆ ಬಂದ್ರೆ ಅದೊಂತರ. ಅದ್ ಬಿಟ್ಟು ಈ ಕಾಂಕ್ರೀಟ್ ಸಿಟಿಗ್ ಬಂದು ಮಾಡೋದು ಏನಿದೆ ಇದ್ರ ಪಿಂಡ' ಏನುತಾ ನಾಲ್ಕೇ ದಮ್ಮಿನಲ್ಲಿ ಎರಡಿಂಚಿನ ಸಿಗರೇಟನ್ನು ಎಳೆದು ಬಿಸಾಕಿದ.

'ತತ್, ರೀ ಅದು ಸಿಗರೇಟ್ ಕಣ್ರೀ .. ಹೆಲ್ತ್ ಮೇಲೆ ನಿಗಾ ಇರ್ಲಿ'

'ಗೊತ್ತು ಬಿಡ್ರಿ ಕಂಡಿದ್ದಾರೆ.. ಏನ್ ಇವತ್ತ್ ಎಳೀತಿಲ್ಲ.. ಬನ್ನಿ ಆಕಡೆ ಹೋಗಿ ಒಂದೆರ್ಡು ಕಪ್ಪ್ ಕಾಫಿ ಕುಡ್ಕೊಂಡ್ ಬರೋಣ.. ಬಂದು ಹೋರ್ಡನ..' ಎಂದು ಇಬ್ಬರೂ ಕಂಪನಿಯ ಗ್ರೌಂಡ್ ಫ್ಲೋರ್ ನಿಂದ ಕೆಲವೇ ಮೀಟರ್ ದೂರದಲ್ಲಿದ್ದ ಗೂಡಂಗಡಿಯ ಕಡೆಗೆ ನೆಡೆಯುತ್ತಾರೆ.

ಗಾಳಿಯ ಬಿರುಸಿಗೆ ಅಜಯ್ ತಾನು ಎಳೆದು ಬಿಡುತ್ತಿದ್ದ ಸಿಗರೇಟಿನ ಹೊಗೆ ಬಾಯಿಂದ ಹೊರಬಾರದೆಯೇ ಎದೆಯೊಳಗೆಯೇ ಅಂತರ್ದಹನವಾಗುತ್ತಿತ್ತು. ಕಪ್ಪು ಮೋಡಗಳ ರಾಶಿ ಮಳೆಗಾಲದ ದಿನಗಳನ್ನು ನೆನೆಸುವಂತಿದ್ದವು. ಗೂಡಂಗಂಡಿಯ ಕಡೆಗೆ ನೆಡೆಯುತ್ತಾ ಎರಡೆಜ್ಜೆ ಹಿಟ್ಟಿರಬಹದಷ್ಟೇ, ಆರು ಅಂತಸ್ತಿನ ಆಫೀಸಿನ ಕಟ್ಟಡದಿಂದ ಒಮ್ಮೆಲೇ ಏನೋ ಕೆಳಗೆ ಬೀಳುತ್ತಿರುವ ಹಾಗೆ ಅಜಯ್ ಗೆ ಅನಿಸುತ್ತದೆ. ಇನ್ನೇನು ಆತ ತಲೆ ಮೇಲೆತ್ತಿ ನೋಡಬೇಕು ಅನ್ನುವಷ್ಟರಲ್ಲಿ ದೊಪ್ಪನೆ ಬಿದ್ದ ಆ ದೇಹ ಛಿದ್ರ ವಿಛಿದ್ರವಾಗಿ ಮುರುಟಿಗೊಂಡಿತು! ಬಿದ್ದ ರಭಸಕ್ಕೆ ಅದರ ಧೈತ್ಯ ಕಣ್ಣಗುಡ್ಡೆಯೊಂದು ಹೊರಬಂದಿದ್ದರೆ ಕೈಕಾಲುಗಳೆಲ್ಲವೂ ಅಷ್ಟ ದಿಕ್ಕುಗಳಿಗೆ ತಿರುಚಿಗೊಂಡಿದ್ದವು. ಕ್ಷಣಮಾತ್ರದಲ್ಲಿ ಜರುಗಿದ ಈ ಘಟನೆಯನ್ನು ಕಂಡ ಮಹೇಶ ಅಕ್ಷರ ಸಹ ಮಾತಿಗೆಟ್ಟವನಂತೆ ವಿಕಾರವಾಗಿ ಅರಚುತ್ತಾ ಆಫೀಸಿನ ಒಳಗೋಡಿದ. ಅಜಯ್ ಮಾತ್ರ ನಿಂತ ನೆಲದಿಂದ ಕದಲಲಿಲ್ಲ. ತನ್ನ ತುಂಡು ಸಿಗರೇಟಿನ ಕೊನೆಯ ಧಮ್ಮನ್ನು ಎಳೆಯುತ್ತಾ ಆರನೇ ಅಂತಸ್ತಿನಿಂದ ಬಿದ್ದರೂ ಒಂದು ತೊಟ್ಟು ರಕ್ತ ಬಾರದ ತನ್ನ ಕಂಪನಿಯ ಮಾಲೀಕನ ಶವವನ್ನು ಸಂಶಯಗಣ್ಣಿನಿಂದ ನೋಡತೊಡಗಿದ!

ಚಿಟಪಟ ಮಳೆಯ ಸದ್ದು ಹೆಚ್ಚಾಗುತ್ತಿದ್ದಂತೆ ಅಜಯ್ ನ ಮೊಗದ ಮೇಲೊಂದು ವಿಚಿತ್ರವಾದೊಂದು ಮಂದಹಾಸ ಮೂಡಿತು. ಅದಾಗಲೇ ಕಂಪನಿಯ ಜಂಟಿ ಮಾಲೀಕ ಮಿಸ್ಟರ್ ದೀಪಕ್ ಮೆಹ್ತಾರ ಸಾವಿನ ಸುದ್ದಿಯನ್ನು ಕೇಳಿ ನೂರಾರು ತಲೆಗಳು ಅಲ್ಲಿ ಬಂದು ಅವರಿಸಿದವು. ''ಅಯ್ಯೋ ದೇವರೇ', 'ಛೆ', 'ಪಾಪ' ಎಂಬ ಆಶ್ಚರ್ಯ ಸೂಚಕಗಳನ್ನು ಬಿಟ್ಟರೆ ಛಿದ್ರಗೊಂಡಿದ್ದ ಆ ದೇಹದ ಬಳಿಗೆ ಮಾತ್ರ ಯಾರೊಬ್ಬರೂ ಸುಳಿಯಲಿಲ್ಲ. ಕಪ್ಪು ಬಣ್ಣದ ಕೋಟಿನ ಮೇಲೆ ಮೊಡವೆ ಒಡೆದಂತೆ ಆ ನಲವತ್ತು ವರ್ಷದ ಕೇಶರಹಿತ ತಲೆ ನೋಡುಗರಿಗೆ ಗೋಚರಿಸುತ್ತಿತ್ತು. ಭಯ ಹುಟ್ಟಿಸುವಂತಿತ್ತು.

'ಎಂಥಾ ಬಾಸ್ ಸರ್ ಇವ್ರು.. ಕಂಪನಿಯ ಅಷ್ಟೋ ಷೇರನ್ನು ಭುಜಂಗರಾವ್ ರಿಗೆ ಮಾರಿ ಸಾಯೋ ಅಂಥದ್ದು ಏನು ಬಂದಿತ್ತೋ ನಾ ಕಾಣೆ ' ಅಳುವ ಧ್ವನಿಯಲ್ಲಿ ಎಂದ ಮಹೇಶನ ಮಾತಿಗೆ ಏನನ್ನೂ ಉತ್ತರಿಸದೆ ನಿಂತ ಅಜಯ್. ಆತನ ತಲೆಯಲ್ಲಿ ಅದಾಗಲೇ ಮುಂದಿನ ಹಾಗುಹೋಗುಗಳು ಗೋಚರಿಸತೊಡಗಿದ್ದವು. ಅವುಗಳಲ್ಲಿ ತನ್ನ ಪಾತ್ರವನ್ನು ಆತ ಗಟ್ಟಿಯಾಗಿಸಿಕೊಳ್ಳತೊಡಗಿದ! ಕೆಲಸಮಯದಲ್ಲೇ ಬಂದ ಪೊಲೀಸ್ ನೆರೆದಿದ್ದ ಜನರನ್ನು ದೂರ ಸರಿಸಿ ಅಲ್ಲಿದ್ದ ಕೆಲವರನ್ನು ವಿಚಾರಿಸತೊಡಗಿದರು.

ಕಂಪನಿಯ ಇನ್ನೋರ್ವ ಮಾಲೀಕ ಭುಜಂಗರಾವ್. ಬಿಸಿನೆಸ್ ಟ್ರಿಪ್ ಗೆ ಹೊರದೇಶಕ್ಕೆ ಹೋಗಿ ಸೀದಾ ಏರ್ಪೋರ್ಟ್ ನಿಂದ ಆಫೀಸಿಗೆ ಬಂದಿದ್ದ. ಕಳೆದ ಎರಡು ತಾಸಿನಿಂದ ತದೇಕಚಿತ್ತದಿಂದ ಕತ್ತಲೆಯ ಮಳೆಯಲ್ಲಿ ತೋಯುತ್ತಿದ್ದ ಶವವನ್ನೇ ನೋಡುತ್ತಿದ್ದ ಆತನನ್ನು ಯಾರೊಬ್ಬರೂ ಮಾತನಾಡಿಸುವ ಧೈರ್ಯವನ್ನು ಮಾಡಲಿಲ್ಲ. ಆದರೆ ಅಲ್ಲಿ ಬಿದ್ದಿದ್ದ ಆ ಶವಕ್ಕೂ ತನಗೂ ಇರುವ ಸಂಬಂಧದ ನಿಜಸತ್ಯವನ್ನೇನಾದರೂ ತಿಳಿದಿದ್ದರೆ ನಿಂತಲ್ಲಿಯೇ ಆತನ ಪ್ರಾಣಪಕ್ಷಿ ಹಾರಿಹೋಗಿದ್ದರೂ ಆಶ್ಚರ್ಯವಾಗುತ್ತಿರಲಿಲ್ಲ!! ಆ ಸಿಡುಕು ಮೊಗದ ಮೇಲೆ ಸಿಟ್ಟಿನ ಛಾಪೊಂದನ್ನು ಬಿಟ್ಟರೆ ಬೇರ್ಯಾವ ಭಾವವನ್ನೂ ಎಂದೂ ಯಾರೊಬ್ಬರೂ ಕಂಡಿರಲಿಲ್ಲ. ಇಂದೂ ಸಹ ಅದೇ ಸಿಡುಕು ಮೊರೆ ಶವವನ್ನು ತೀಕ್ಷ್ಣ ದೃಷ್ಟಿಯಿಂದ ನೋಡುತ್ತಿತ್ತು. ಪೋಲಿಸಿನವರು ಎಲ್ಲರನ್ನು ವಿಚಾರಿಸಿ ಕೊನೆಗೆ ಆತನ ಬಳಿಗೆ ಬಂದರು. ಆತ ಅವರನ್ನು ಕರೆದುಕೊಂಡು ಆಫೀಸಿನೊಳಗೆ ನೆಡೆದ. ಆಂಬುಲೆನ್ಸ್ ಬಂದು ಶವವನ್ನು ಹೊತ್ತೊಯ್ಯುವಷ್ಟರಲ್ಲಿ ರಾತ್ರಿ ಹತ್ತಾಗಿದ್ದಿತು.

ಅದಾದ ಕೆಲದಿನಗಳ ನಂತರ ಮಹೇಶ ಆಫೀಸಿಗೆ ಬಂದವನೇ ರೋಧಿಸತೊಡಗಿದ.

'ಸಾರ್.. ಸಾರ್' ಅಕ್ಷರಸಹ ಅಳುತ್ತಾ ಬಂದ ಮಹೇಶನನ್ನು ಕಂಡು ಕೋಪಗೊಂಡ ಅಜಯ್,

'ತತ್ತ್ ನಿಮ್ಮ.. ರೀ ಏನ್ರಿ ನಿಮ್ದು ಪ್ರಾಬ್ಲಮ್ಮು.. ಮೂವತ್ತು ವರ್ಷ ಆದ್ರೂ ಒಳ್ಳೆ ಮಕ್ಳ್ ತರ ಆಡ್ತೀರಾ..'

'ಸಾರ್ .. ಸಾ.. ರ್..'

'ರೀ! ನನ್ನ ಸರ್ ಅಂತ ಕರಿಯೋಕ್ಕೆ ಯಾರ್ರೀ ಹೇಳಿದ್ದು ನಿಮ್ಗೆ.. ಮುಚ್ಚ್ಕೊಂಡು ಹೆಸ್ರಿಟ್ಟು ಕರೀರಿ' ಎಂದ ಕೂಡಲೇ ಹೆಚ್ಚು ಕಡಿಮೆ ತನ್ನ ಅಣ್ಣನ ವಯಸ್ಸಿನ ವ್ಯಕ್ತಿಗೆ ಹೀಗೆನ್ನಬಾರದಿತ್ತು ಎನಿಸಿತು ಅಜಯನಿಗೆ. ತನ್ನ ಜೂನಿಯರ್ ಆಗಿ ಬಂದು ಇಂದು ತನಗೆ ಮುಚ್ಚ್ಕೊಂಡಿರ್ರಿ ಎಂದ ಮಾತಿಗೆ ಜಾಗೃತನಾದ ಮಹೇಶನೂ ಆಗ ಕೊಂಚ ಅಳುವುದ ನಿಲ್ಲಿಸಿದ. ಆದರೆ ನಂತರದ ಕೆಲವೇ ಕೆಲಕ್ಷಣದಲ್ಲಿ ಪುನ್ಹ ಅಳಲು ಶುರುವಿಟ್ಟುಕೊಂಡ. ಆತನಿಗೆ ಏನೇಳಿದರೂ ಅದು ತನ್ನ ಶಕ್ತಿಪೋಲು ಎಂದುಕೊಂಡು ಅಜಯ್ ತನ್ನ ಕೆಲಸದಲ್ಲಿ ಮಗ್ನನಾದ.

'ರೀ ಅಜಯ್.. ದೀಪಕ್ ಮೆಹ್ತಾ ಸರ್ ಅವ್ರ ಪೋಸ್ಟ್ ಮೊರ್ಟಮ್ ರಿಪೋರ್ಟ್ ಬಂತಂತೆ ರೀ…'

'ಸರಿ ಏನಿವಾಗ?'

'ಏನು ಅಂತೀರಾ , ಮೊನ್ನೆ ತಾನೇ ಅವ್ರು ಬಿದ್ದು ಸತ್ತೋಗಿದ್ದು?'

'ರೀ .. ಅದ್ ನಿಮ್ಗೆನು ಗೊತ್ತಿಲ್ವ?!'

'ಆದ್ರೆ ಪೋಸ್ಟ್ ಮಾರ್ಟಮ್ ರಿಪೋರ್ಟ್ ಪ್ರಕಾರ ಜೀವ ಹೋಗಿ ಕನಿಷ್ಠ ಅಂದ್ರೂ 2 ವಾರ ಆಗಿದೆಯಂತೆ ಸಾರ್!!' ಎಂದು ಮತ್ತೆ ಅಳುತ್ತ ಇಹಲೋಕವನ್ನೇ ಮರೆತ. ಯಾವುದೇ ಭಾವಗಳೂ ಸಹ ಅಜಯ್ನ ಮೊಗದ ಮೇಲೆ ಮೂಡಲಿಲ್ಲ. ಕೀಲಿಮಣೆಗಳ ಟಕಗುಡುವ ಸದ್ದು ಮಾತ್ರ ವಿಪರೀತವಾಯಿತು.

ಕೆಲವಾರಗಳ ಕೆಳಗೆ….

ಮಧ್ಯರಾತ್ರಿಯಾದರೂ ಮಲಗದ ಆ ಸಿಟಿಯ ಹೋಟೆಲೊಂದರಿಂದ ವ್ಯಕ್ತಿಯ ಆಕೃತಿಯೊಂದು ಹೊರಬರುತ್ತದೆ. ತಲೆಯ ತುಂಬಾ ಕಪ್ಪಾದ ಕವರ್ ಆಲ್ ಒಂದನ್ನು ತೊಟ್ಟು, ಕಣ್ಣಿಗೆ ದೊಡ್ಡ ಗಾಜಿನ ವೃತ್ತಾಕಾರದ ಕನ್ನಡಕದ ಜೊತೆಗೆ ಕೈಗಳೆರಡನ್ನು ತನ್ನ ಜೇಬಿನೊಳಗೆ ತೂರಿಸಿ ನೆಡೆಯುವ ಆ ಆಕೃತಿ ಪ್ರತಿದಿನ ಭುಜಂಗರಾವ್ ನ ಚಿನ್ನದ ಅಂಗಡಿಗಳ ಒಳಗೆ ಬರುತ್ತದೆ. ಒಂದಿನಿತೂ ಚಿನ್ನವನ್ನು ಖರೀದಿಸದೆ ಪ್ರತಿಬಾರಿಯೂ ಹತ್ತಾರು ಚಿನ್ನದ ಆಭರಣಗಳನ್ನು ಪಡೆದು ಮುಟ್ಟಿ ಇಟ್ಟು ಕೈಗೆ ಕೊರಳಿಗೆ ಹಾಕಿಕೊಂಡು ಒಂದರ್ಧ ತಾಸಿನ ನಂತರ ಏನನ್ನೂ ಕೊಳ್ಳದೆ ಮರೆಯಾಗುತ್ತಿತು. ನಂತರ ರೂಮಿಗೆ ವಾಪಸ್ಸಾಗುತ್ತಿದ್ದ ಅದು ಜೇಬಿನೊಳಗೆ ಮುಷ್ಠಿ ಮಾಡಿ ಇರಿಸಿಕೊಂಡಿದ್ದ ಕೈಗಳನ್ನು ಹೊರತೆಗೆದು ಪಾತ್ರೆಯೊಂದರಲ್ಲಿ ಇರಿಸಿದ್ದ ನೀರಿನಂತಿದ್ದ ಕೆಮಿಕಲ್ ನೊಳಗೆ ತೊಳೆಯುತ್ತದೆ. ನೋಡ ನೋಡುತ್ತಲೇ ಮಿರಿ ಮಿರಿ ಮಿರುಗುವ ಸಣ್ಣ ಸಣ್ಣ ಚಿನ್ನದ ಕಣಗಳು ಆ ಪಾತ್ರೆಯ ತಳ ಸೇರುತ್ತವೆ! ಸಿಟಿಯ ಎಲ್ಲೆಡೆ ಇದ್ದ ಭುಜಂಗರಾವ್ ನ ಹತ್ತಾರು ಅಂಗಡಿಗಳಿಗೂ ಪ್ರತಿದಿನ ಒಂದರಂತೆ ಹೋಗಿ ದಿನಕ್ಕೆ ಕೆಮಿಕಲ್ ಮೆತ್ತಿದ ತನ್ನ ಕೈಗಳಿಂದ ಕನಿಷ್ಠವೆಂದರೂ ಕಾಲು ಗ್ರಾಂ ಚಿನ್ನವನ್ನು ಲಪಟಾಯಿಸುತ್ತಿತ್ತು ಆ ಆಕೃತಿ. ಹೀಗೆ ಸೋಸಿ ತೆಗೆಯಿತ್ತಿದ್ದ ಚಿನ್ನವನ್ನು ಒಂದು ಸಣ್ಣ ಪೊಟ್ಟಣದೊಳಗೆ ತುಂಬಿ ಆ ಪೊಟ್ಟಣವನ್ನು ದಂಪತಿಗಳಿಬ್ಬರ ಫೋಟೋವಿನ ಮುಂದಿರಿಸುತಿತ್ತು ಮತ್ತು ಕೆಲಕಾಲ ಮೌನವಾಗುತ್ತಿತ್ತು. ನಂತರದ ಕೆಲಹೊತ್ತಿನಲ್ಲಿಯೇ ಬೇರೋದು ಕಾರ್ಯದ ನಿಮಿತ್ತ ರಾತ್ರಿಯೇ ಬುಜಂಗ್ ರಾವಿನ ಆಫೀಸಿನ ಹಿಂಬಾಗಿಲನ್ನು ತಲುಪುತ್ತಿತ್ತು!

Continued ....

Tuesday, January 1, 2019

ಹಸಿರ ಪಯಣ …

ಶಾಂತ ಸಂಜೆಯ ತಿಳಿತಂಪಿನ ಹಿತಕ್ಕೆ ಭಂಗ ತರುವಂತೆ ಬಿಸಿಯಾದ ಗಾಳಿ ಒಮ್ಮೆಲೇ ಬೀಸತೊಡಗಿತ್ತು. ಗಾಳಿಯ ಬೀಸುವಿಕೆಯ ದಿಕ್ಕನ್ನು ಪರಿಗಣಿಸದೆಯೆ ಹಕ್ಕಿಗಳ ಗುಂಪು ತಮ್ಮ ತಮ್ಮ ಗೂಡುಗಳೆಡೆಗೆ ಮುಖಮಾಡಿ ಹಾರತೊಡಗಿದ್ದವು. ಕಪ್ಪು ಬಣ್ಣದ ಟ್ರ್ಯಾಕ್ ಪ್ಯಾಂಟ್, ಅದೇ ಬಣ್ಣದ ಟಿ ಶರ್ಟ್ ಹಾಗು ಅತಿ ಧುಬಾರಿಯಾದೊಂದು ಸ್ಪೋರ್ಟ್ಸ್ ಶೋವನ್ನು ಧರಿಸಿ ಮೋಹನ ಜಾಗಿಂಗ್ ಗೆ ಇಳಿದಿದ್ದ. ವಾಹನಗಳಿಗೆ ಪಾರ್ಕ್ ಮಾಡಲೂ ಸರಿಯಾದ ಸ್ಥಳ ಸಿಗದಿರುವ ಸಿಟಿಯಲ್ಲಿ ಆಟೋಟ, ವ್ಯಾಯಾಮಗಳಿಗೆ ಜಾಗವನ್ನು ಕೊಡುವವರ್ಯಾರು? ವಾಹನಗಳೊಟ್ಟಿಗೆಯೇ ರಸ್ತೆಯ ಪಾದಚಾರಿ ಮಾರ್ಗದ ಮೇಲೆಯೇ ಈತನ ಪ್ರತಿದಿನದ ಓಟ. ಹೃದಯ ಸಿಡಿದು ಹೊರಬರುವವರೆಗೂ ಓಡುವುದ ನಿಲ್ಲಿಸಲಾರೆ ಎಂಬುವಂತಿರುತ್ತದೆ ಈತನ ಓಟದ ಧಾಟಿ. ಸುಮಾರು ಮೂರ್ನಾಲ್ಕು ಕಿಲೋಮೀಟರ್ನಷ್ಟು ಓಡಿದ ನಂತರ ಕಾಫಿ ಶಾಪೊಂದರ ಮುಂದೆ ಕೂತು ಕೊಂಚ ದಣಿವಾರಿಸಿಕೊಳ್ಳುತ್ತಾನೆ. ಅಲ್ಲೂ ತನ್ನ ಮೊಬೈಲನ್ನು ಹೊರಗೆಳೆದು ಆಫೀಸಿನ ಇಮೇಲ್ ಗಳನ್ನು ನೋಡತೊಡಗುತ್ತಾನೆ. ಆಗಷ್ಟೇ ಡವಡವ ಬಡಿದು ಶಾಂತವಾಗಿದ್ದ ಹೃದಯ, ಕ್ಲೈಂಟ್ ಒಬ್ಬನ ಇಮೇಲ್ ಅನ್ನು ಕಂಡು ಪುನಃ ಬಡಿಯಹತ್ತಿತು. ಇನ್ನೊಂದು ಸುತ್ತು ಓಡಲು ಬಾಕಿ ಇದ್ದರೂ ತನ್ನ ರೂಮಿನೆಡೆ ಧಾಪುಗಾಲು ಹಾಕುತ್ತಾನೆ ಮೋಹನ. ರೂಮಿಗೆ ಬಂದವನೆ ಬೆವರಿನ ದಸೆಯಿಂದ ಅಂಟು-ಅಂಟಾಗಿದ್ದ ಬಟ್ಟೆಯನ್ನೂ ಲೆಕ್ಕಿಸದೆ ತನ್ನ ಆಫೀಸಿನ ಲ್ಯಾಪ್ಟಾಪ್ ಅನ್ನು ಹೊರಗೆಳೆದು ಕೆಲಸದಲ್ಲಿ ನಿರತನಾಗುತ್ತಾನೆ. ನೆಟ್ಟ ದೃಷ್ಟಿಯನ್ನು ಒಂತಿಷ್ಟೂ ಕದಲಿಸದೆ, ಕೀಲಿಮಣೆಗಳ ಮೇಲೆ ಸುಮಾರು ಎರಡು ಗಂಟೆಗಳ ಕಾಲ ಟಕಟಕ ಕುಟ್ಟಿದ ನಂತರ ಗಡಿಯಾರವನ್ನು ನೋಡುತ್ತಾನೆ, ಸಮಯ ಅದಾಗಲೇ ರಾತ್ರಿ ಹನ್ನೊಂದು! ಕೂಡಲೇ ಎದ್ದು ಪಕ್ಕದ ಹೋಟೆಲಿನಿಂದ ಊಟವೊಂದಕ್ಕೆ ಆರ್ಡರ್ ಕೊಟ್ಟು, ಸ್ನಾನಾದಿಗಳನ್ನು ಮುಗಿಸಿ ಹೊರಬಂದು ಊಟವನ್ನು ಮುಗಿಸುವಷ್ಟರಲ್ಲಿ ಮಧ್ಯರಾತ್ರಿ 12! ಒಂತಿಷ್ಟು ಸುದ್ದಿ ಸಮಾಚಾರಗಳನ್ನು ನೋಡಲು ಟಿವಿಯನ್ನು ಆನ್ ಮಾಡಿದ ಕೂಡಲೇ ಕಣ್ಣುಗಳ ರೆಪ್ಪೆಗಳು ಒಂದನ್ನೊಂದು ತಬ್ಬಿಕೊಳ್ಳತೊಡಗುತ್ತವೆ. ಅದೆಷ್ಟೋ ಬಾರಿ ಹೀಗೆಯೇ ಸೋಫಾದ ಮೇಲೆಯೇ ಬೆಳಗಿನವರೆಗೂ ಕೂತೇ ನಿದ್ರಿಸಿರುವುದುಂಟು! ಬೆಳಗೆದ್ದು ಮತ್ತದೇ ಓಟದ ಜೀವನ. ವಾರ, ವಾರಾಂತ್ಯ ಎಂಬ ಯಾವುದೇ ವ್ಯತ್ಯಾಸಗಳಿಲ್ಲದೆ 24X7 ಕಾಲದ ಕೆಲಸ. ಮೊದ ಮೊದಲು ಕಿರಿಕಿರಿಗುಡುತ್ತಿದ್ದ ಮೋಹನ ಕಾಲ ಕಳೆದಂತೆ ಇದೆ ಜೀವನಕ್ಕೆ ಒಗ್ಗಿಕೊಂಡಿದ್ದಾನೆ. ಅದೆಷ್ಟರ ಮಟ್ಟಿಗೆಂದರೆ ಆಗೊಮ್ಮೆ ಈಗೊಮ್ಮೆ ಸಿಗುವ ರಜೆಯ ಸಮಯವನ್ನೂ ಮನೆಯಲ್ಲಿ ಕಳೆಯಲಾಗದೆ ಆಫೀಸಿಗೆ ಬಂದು ಒಬ್ಬನೇ ಕೆಲಸ ಮಾಡುವುದುಂಟು!

ಇಂದು ಟಿವಿಯಲ್ಲಿ ಸುದ್ದಿಯನ್ನು ನೋಡುವಾಗ ನಟನೊಬ್ಬ ಕೃಷಿಕನಾದುದರ ಬಗ್ಗೆ ಕಾರ್ಯಕ್ರಮವೊಂದು ಬರುತ್ತಿರುತ್ತದೆ. ನಿದ್ದೆಗಟ್ಟುತ್ತಿದ್ದ ಕಣ್ಣುಗಳೂ ಒಮ್ಮೆಲೇ ತದೇಕಚಿತ್ತದಿಂದ ಎಂಬಂತೆ ಆ ಸುದ್ದಿಯನ್ನು ನೋಡತೊಡಗುತ್ತವೆ. ವೃತ್ತಿಜೀವನದ ಉತ್ತುಂಗದಲ್ಲಿದ್ದ ಆತ ನಟನೆಯನ್ನು ಬಹುವಾಗಿ ಕಡಿಮೆಗೊಳಿಸಿ ಸಿಟಿಯಿಂದ ತುಸು ದೂರದೊಂದು ಊರಿನಲ್ಲಿ ಜಮೀನನ್ನು ಖರೀದಿಸಿ ಪಕ್ಕಾ ಸಾವಯವ ಕೃಷಿಯನ್ನು ಮಾಡುತ್ತಾ, ಕೊಂಚ ಆನ್ಲೈನ್ ಮಾರುಕಟ್ಟೆಯ ಲಾಭವನ್ನೂ ಬಳಸಿಕೊಂಡು ಬೆಳೆದ ಬೆಳೆಗಳನ್ನು ಮಾರುತ್ತಿರುವ ವಿವರಣೆಯನ್ನು ಎಳೆಎಳೆಯಾಗಿ ಬಿತ್ತರಿಸಲಾಗುತ್ತಿತ್ತು. ಜಮೀನಿನಲ್ಲಿ ನಿಂತು ಕ್ಯಾಮೆರಾದ ಮುಂದೆ ತನ್ನ ಕತೆಯನ್ನು ಹೇಳಿಕೊಳ್ಳುತ್ತಿದ್ದ ಆ ನಟನ ಮುಖದಲ್ಲಿ ನೆಮ್ಮದಿಯ ಛಾಯೆ ಎದ್ದುಕಾಣುತ್ತಿತ್ತು.

ಆ ಪ್ರೋಗ್ರಾಮಿನ ಬಹಳ ದಿನಗಳವರೆಗೂ ಮೋಹನ ಆ ನಟನ ಬಗ್ಗೆ ಹಾಗು ಆತನ ಕೃಷಿಜೀವನದ ಬಗ್ಗೆಯೇ ಯೋಚಿಸತೊಡಗಿದ. ವರ್ಷಕ್ಕೆ ಕೋಟ್ಯಂತರ ರೂಪಾಯಿಗಳ ಜೊತೆಗೆ ಲಕ್ಷಕೊಬ್ಬರಿಗೂ ಸಿಗದ ಸ್ಟಾರ್ಡಮ್ ಅನ್ನು ತಂದುಕೊಡುವ ವೃತ್ತಿಯನ್ನು ಬಿಟ್ಟು ಆತ ಕೃಷಿಕನಾಗಲು ಮನಸ್ಸು ಮಾಡಿದಾದರೂ ಹೇಗೆ? ಜಮೀನಿನಲ್ಲಿ ದಿನವಿಡೀ ದುಡಿದು ದಣಿದರೂ ಆತನ ಮುಖದಲ್ಲಿದ್ದ ಆ ನೆಮ್ಮದಿ ಭರಿತ ಮಂದಹಾಸ ತನ್ನ ಗೆಳೆಯರಲ್ಲಿ, ಸಹೋದ್ಯೋಗಿಗಳಲ್ಲಿ ಅಷ್ಟೇ ಏಕೆ ಇಡೀ ಸಿಟಿಯಲ್ಲೇ ಯಾರೊಬ್ಬರ ಮುಖದಲ್ಲೂ ಆತ ಕಂಡಿರುವುದಿಲ್ಲ! ಅಂತಹ ಏನನ್ನು ಆ ಜಮೀನಿನಲ್ಲಿ ಆತ ಪಡೆದಿರಬಹುದು? ಕೃಷಿ ಅರ್ಧ ಘಂಟೆಯ ಆ ಪ್ರೋಗ್ರಾಮಿನಲ್ಲಿ ತೋರಿಸಿದಷ್ಟು ಸುಲಭವೆ? ಪ್ರೆಶ್ನೆ ಮೋಹನನ ತಲೆಯನ್ನು ಕೊರೆಯಲಾರಂಭಿಸಿತು.

ಗೊತ್ತುಗುರಿ ಇಲ್ಲದೆಯೇ ಎಂಬಂತೆ ಓಡುತ್ತಿತ್ತು ಮೋಹನನ ಜೀವನ. ಸುಂದರ ಬದುಕಿನ ಒಂತಿಷ್ಟೂ ರಸಾಸ್ವಾಧನೆಯನ್ನೂ ಮಾಡದೆಯೇ ಅರ್ಥಹೀನ ಬದುಕಿನ ಬಂಡಿಯನ್ನು ಸವೆದ ಅದೆಷ್ಟೋ ಮಂದಿಯ ಸಾಲಿನಲ್ಲಿ ನಾನೂ ನಿಲ್ಲುತ್ತೇನೆಯೇ?! ಎಂಬ ಭಯದ ಪ್ರೆಶ್ನೆಯೊಂದು ಆತನನ್ನು ಬಾಧಿಸತೊಡಗಿತು. ಹಾಗಾದರೆ ಏನು ಮಾಡುವುದು? ಎಲ್ಲಕ್ಕೂ ಒಂದು ಅಲ್ಪವಿರಾಮವನ್ನು ಜಡಿದು ತಿಂಗಳುಗಳ ಕಾಲ ಪ್ರಪಂಚಪರಿಹಟನೆ ಮಾಡುವುದೆಂದು ಯೋಚಿಸುತ್ತಾನೆ. ಆದರೆ ತದಾನಂತರ ಮತ್ತದೇ ಖೈದಿಯ ಜೀವನದ ಪಾಡು. ಈ ಸಮಸ್ಯೆಗೆ ಪರಿಹಾರ ಪೂರ್ಣಾವಧಿಯದ್ದಾಗಿರಬೇಕು. ಜೊತೆಗೆ ಬದುಕೂ ಆರ್ಥಮಯವಾಗಿದ್ದಿರಬೇಕು. ಆದರೆ ಬೆಂಬಿಡದ ನೆರಳಿನಂತಾಗಿರುವ ಕೆಲಸದ ಗೀಳು ಅಷ್ಟು ಸುಲಭವಾಗಿ ಜಾರಬಲ್ಲದೇ! ಇಂದು ಸರಿಯೆನಿಸಿದರೂ ನಾಳೆ ಒಂದಲ್ಲ ಒಂದು ಕಾರಣಕ್ಕೆ ನನ್ನ ನಿರ್ಧಾರವನ್ನು ನಾನು ಜರಿದುಕೊಳ್ಳಬಾರದು ಎಂದುಕೊಳ್ಳುತ್ತಾನೆ.

ಆರೋಗ್ಯದ ಬಗ್ಗೆ ಅತ್ಯಧಿಕ ಕಾಳಜಿಯನ್ನು ವಹಿಸುವ ಮೋಹನ ಆಹಾರಾದಿಗಳನ್ನು ಸೇವಿಸುವ ಮುನ್ನ ತುಂಬಾನೇ ಜಾಗರೂಕನಾಗಿರುತ್ತಾನೆ. ಅಂದೊಮ್ಮೆ ದೇಶದಲ್ಲಿ ಕ್ರಿಮಿನಾಶಕಗಳ ಬಗ್ಗೆ ಸರ್ಕಾರಗಳಿಗಿರುವ ಅಸಡ್ಡೆಯ ಬಗ್ಗೆ ಚರ್ಚೆಯಾಗುತ್ತಿದ್ದದ್ದನು ಟಿವಿಯಲ್ಲಿ ನೋಡುತ್ತಾನೆ. ಮುಂದುವರೆದ ಅದೆಷ್ಟೋ ದೇಶಗಳಲ್ಲಿ ಇಂದು ಯಾವುದೇ ರಾಸಾಯನಿಕಗಳಿಲ್ಲದೆ ಶುದ್ಧ ಜೈವಿಕ ಕೃಷಿಯನ್ನು ಅನುಸರಿಸಿ ಮಿಕ್ಕಿ ಉಳಿಯುವಷ್ಟು ಆರೋಗ್ಯಕರ ಆಹಾರವನ್ನು ಬೆಳೆಯುವ ಉದಾಹರಣೆಗಳಿದ್ದರೂ ಜೈವಿಕ ಕೃಷಿಯ ತವರೂರಾದ ನಮ್ಮಲ್ಲೇ ಅದರ ಬಗ್ಗೆ ಆಸಕ್ತಿ ಇಲ್ಲದಿರುವುದು, ಜೊತೆಗೆ ಇಂದಿನ ಬಹುತೇಕ ''ಆಧುನಿಕ' ರೈತರೆಂದೆನಿಸಿಕೊಂಡವರು ಕೇವಲ ಹಣದ ಉದ್ದೇಶದ ವಿನಃ ಯಾವುದೇ ಪರಿಸರ ಕಾಳಜಿ ಇಲ್ಲದೆಯೇ ಮಾಡುವ ಕೃಷಿ, ಅಲ್ಲದೆ ಇಂದು ಸಸಿಯಿಂದಿಡಿದು ಪೈರಿನವರೆಗೂ ಬೆಳೆಸುವ ಕೀಟನಾಶಕಗಳು ರೈತರಷ್ಟೇ ಅಲ್ಲದೆ ಗ್ರಾಹಕರ ಆರೋಗ್ಯವನ್ನೂ ಹಾಳುಗೆಡವುತ್ತಿದ್ದರೂ ಸರ್ಕಾರಗಳು ಅಂತಹ ಕೀಟನಾಶಕಗಳನ್ನು ರದ್ದುಪಡಿಸುವ ಬದಲು ಅಂತಹ ಕಂಪನಿಗಳನ್ನು ಬೆಳೆಸಿಕೊಂಡು ಬರುತ್ತಿವೆ ಎಂಬ ವಿಷಯಗಳ ಬಗ್ಗೆ ಗಹನವಾಗಿ ಚರ್ಚೆಯಾಗುತ್ತಿತ್ತು. ಹೀಗೆ ಪರೋಕ್ಷವಾಗಿ ದೇಹವನ್ನು ಸೇರುತ್ತಿರುವ ವಿಷಪೂರಿತ ಆಹಾರವನ್ನು ನಾವು ದಿನನಿತ್ಯ ಸೇವಿಸುತ್ತಿದ್ದೇವೆ ಎಂದು ಕೇಳಿದಾಗ ಮೋಹನನಿಗೆ ತಳಮಳವಾಗತೊಡಗಿತು. ದೇಹಕ್ಕೆ ಸೇರುವ ವಿಷವನ್ನೇ ಗುರುತಿಸಲಾಗದ ಮೇಲೆ ನಾವು ಆಧುನಿಕರೆಂದು ಕರೆಸಿಕೊಂಡರೂ ಏನು ಪ್ರಯೋಜನ? ಬಹುದಿನಗಳಿಂದ ಪಕ್ವಗೊಳ್ಳುತ್ತಿದ್ದ ನಿರ್ಧಾರ ಇಂದು ದೃಢವಾಯಿತು. ಏನಾದರಾಗಲಿ ಜಮೀನೊಂದನ್ನು ಖರೀದಿಸಿ ನನ್ನ ಆಹಾರವನ್ನು ನಾನೇ ಬೆಳೆದುಕೊಳ್ಳಬೇಕು. ಉತ್ಕೃಷ್ಟ ಮಟ್ಟದ ಜೈವಿಕ ಕೃಷಿಯನ್ನು ಅನುಸರಿಸಿ ಇತರರಿಗೆ ಮಾದರಿಯಾಗಬೇಕು. ಕೂಡಲೇ ಪೋಷಕರಿಗೆ ಫೋನಾಯಿಸಿ ಊರಿನ ಬಳಿ ಯಾವುದಾದರೊಂದು ಸಾಧಾರಣ ಬೆಲೆಯ ಜಮೀನನ್ನು ನೋಡಲು ಹೇಳುತ್ತಾನೆ.

ದಾರಿ ಕಷ್ಟಕರವಾಗಿದೆಯೆನಿಸಿದರೂ ನಡೆ ಆತನಿಗೆ ಸ್ಪಷ್ಟವಾಗಿತ್ತು. ಆ ಸ್ಪಷ್ಟತೆಯಲ್ಲಿಯೇ ವರ್ಣಾತೀತವಾದೊಂದು ನೆಮ್ಮದಿ ಮನೆಮಾಡಿತ್ತು.ಮೋಹನ ಕೆಲಸ ಬಿಡುತ್ತಿರುವ ಕಾರಣವನ್ನು ಕೇಳಿ ದಂಗಾದ ಕಂಪನಿಯ ಮಾಲೀಕ ಆತನಿಗೆ ಮನೆಯಿಂದ ಕೂತೆ ಕೆಲಸವನ್ನು ಮಾಡುವಂತೆ ಕೇಳಿಕೊಳ್ಳುತ್ತಾನೆ ಹಾಗು ಆತನ ನೆಡೆಗೆ ಮೆಚ್ಚುಗೆಯನ್ನೂ ಸೂಚಿಸುತ್ತಾನೆ. ನೋಡನೋಡುತ್ತಲೇ ಮೋಹನ ಸಿಟಿಯ ಒತ್ತಡದ ಜೀವನಕ್ಕೆ ಪೂರ್ಣವಿರಾಮವನ್ನು ಜಡಿದು ತನ್ನ ಊರನ್ನು ಸೇರುತ್ತಾನೆ. ಅಮ್ಮನ ಕೈಯಡುಗೆಯ ಊಟ, ಬೇಸಿಗೆಯಲ್ಲೂ ತಂಪು ಗಾಳಿಯನ್ನು ಬೀಸುವ ಪರಿಸರ, ಅಲ್ಲೊಂದು ಇಲ್ಲೊಂದು ಮೂಡುವ ವಾಹನಗಳ ಸದ್ದನ್ನೂ ಹತ್ತಿಕ್ಕುವ ಹಕ್ಕಿಗಳ ಚಿಲಿಪಿಲಿ ನಾದ, ಅಷ್ಟ ದಿಕ್ಕುಗಳಿಗೂ ಹರಡಿರುವ ಹಸಿರ ನೇಸರ ಮನಸ್ಸಿಗೆ ಮಹಾನೆಮ್ಮದಿಯನ್ನು ನೀಡುತ್ತಿದ್ದವು. ಕೆಲದಿನಗಲ್ಲೇ ಮನೆಯಿಂದ ಕೊಂಚದೂರದಲ್ಲಿ ಮೂರೆಕರೆ ಗದ್ದೆಯನ್ನು ಖರೀದಿಮಾಡಿದ. ಜಮೀನು ಖಾಲಿಯಾಗಿದ್ದರಿಂದ ಮೋಹನ ತನಗೆ ಬೇಕೆನಿಸಿದ ಹಾಗೆ ಕೃಷಿಯನ್ನು ಶುರುವಿಟ್ಟುಕೊಳ್ಳಬಹುದೆಂಬ ಲೆಕ್ಕಾಚಾರ.

ನಿಸರ್ಗದ ಸಹಜ ಸುಂದರತೆಯನ್ನು ಸವಿಯಲು ಎಂಬಂತೆ ಮೂಡಣದಲ್ಲಿ ಬೆಳಕು ಮೂಡುವುದರೊಳಗೆ ಎದ್ದು ರೆಡಿಯಾಗಿ, ಯೋಗಾದಿಗಳನ್ನು ಮಾಡಿ, ಕೈಯಲ್ಲಿ ಕಾಫಿಯ ಕಪ್ಪೊಂದನ್ನು ಹಿಡಿದು ಹಕ್ಕಿಗಳ ಇಂಚರ ಹಾಗು ಮುಂಜಾವಿನ ಹಿಂದೂಸ್ತಾನಿ ರಾಗಗಳ ಹಿನ್ನಲೆಯಲ್ಲಿ ಸೂರ್ಯದೇವ ನಿಧಾನವಾಗಿ ವಿಸ್ತರಿಸುವುದನ್ನು ನೋಡುತ್ತಾ ನಿಂತರೆ ಆ ನಯನ ಮನೋಹರ ದೃಶ್ಯದಲ್ಲಿ ಅಕ್ಷರ ಸಹ ನಿಂತ ಕಲ್ಲಾಗಿಬಿಡುತ್ತಾನೆ ಮೋಹನ. ಅದೆಷ್ಟೋ ಹೊತ್ತಿನ ನಂತರ ಅಮ್ಮನ ಕೂಗುವಿಕೆಗೆ ಓಗೊಟ್ಟು, ಕೆಳಗಿಳಿದು ಬಂದು ತಿಂಡಿಯನ್ನು ತಿಂದು, ಆಫೀಸಿನ ಇಮೇಲ್ ಗಳ ಮೇಲೆ ಹಾಗೆಯೇ ಒಮ್ಮೆ ಕಣ್ಣಾಯಿಸಿ, ಗುದ್ದಲಿಯನ್ನಿಡಿದು ಗದ್ದೆಗೆ ಹೊರಟರೆ ವಾಪಸ್ಸು ಬರುತ್ತಿದ್ದದ್ದು ಮದ್ಯಾಹ್ನದ ಊಟಕ್ಕೆ. ಗದ್ದೆಯ ಸುತ್ತಲೂ ಬೇಲಿಯನ್ನು ಹಾಕಿ, ನೆಲವನು ಹಗೆದು 'ಕಾವೇರಿ' ತಳಿಯ ಕಾಫಿ ಗಿಡಗಳನ್ನು ಮತ್ತು ಪಕ್ಕದ ಒಂದೆಕರೆ ಜಮೀನಿನಲ್ಲಿ ಭತ್ತವನ್ನು ಹಾಗು ಮನೆಗೆ ಸಾಕಾಗುವಷ್ಟು ಸೊಪ್ಪು ತರಕಾರಿಗಳನ್ನು ಬೆಳೆಯುವುದಾಗಿಯೂ ಯೋಜನೆಯನ್ನು ಹಾಕಿಕೊಂಡಿರುತ್ತಾನೆ. ಅಷ್ಟರಲ್ಲಾಗಲೇ ಜೈವಿಕ ಕೃಷಿ ಹಾಗು ಅದಕ್ಕೆ ಬಳಸುವ ನೈಸರ್ಗಿಕ ಗೊಬ್ಬರಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ್ದ ಆತ ಗಿಡಗಳನ್ನು ನೆಡುವ ಮೊದಲು ನೆಲವನ್ನು ಪೋಷಕಾಂಶಭರಿತ ನೆಲವನ್ನಾಗಿ ಪರಿವರ್ತಿಸಲು ಯೋಜಿಸಿರುತ್ತಾನೆ. ಇಂದು ಬೆಳಗ್ಗೆ ಜಮೀನಿಗೆ ಬಂದವನೇ ಪಕ್ಕದ ಊರಿನಿಂದ ಬಂದ ಕೆಲಸಗಾರರೊಡಗೂಡಿ ಸಗಣಿ ಹಾಗು ಇತರೆ ನೈಸರ್ಗಿಕ ವಸ್ತುಗಳಿಂದ ಮಾಡಿದ್ದ ಕಾಂಪೋಸ್ಟ್ ಗೊಬ್ಬರವನ್ನು ಜಮೀನಿನ ಪೂರಾ ಚೆಲ್ಲತೊಡಗುತ್ತಾನೆ. ಗೊಬ್ಬರದ ನಾತ ಮೂಗಿಗೆ ದೊಪ್ಪನೆ ಬಡಿಯುತ್ತಿದ್ದರೂ ಮೋಹನ ಅವುಗಳಿಗೆಲ್ಲ ಒಗ್ಗಿಕೊಂಡಿರುವಂತೆ ಕಾಣುತ್ತದೆ. ಒಂದೆರೆಡು ಹದದ ಬೇಸಿಗೆಯ ಮಳೆಯೂ ಬಂದ್ದಿದ್ದರಿಂದ ಮಣ್ಣು ಗೊಬ್ಬರವನ್ನೆಲ್ಲ ಚೆನ್ನಾಗಿ ತನ್ನಲ್ಲಿ ಬೆರೆಸಿಕೊಂಡಿತು.

ಊರ ಮೇಲ್ಮನೆಯ ದೊಡ್ಡೇಗೌಡ ಮೋಹನ ಊರಿಗೆ ವಾಪಸ್ಸಾಗಿನಿಂದಲೂ ಈತನ ಚಲನವಲನಗಳನ್ನೇ ಗಮನಿಸುತ್ತಿರುತ್ತಾನೆ. ಸಣ್ಣವನಿಂದಲೂ ಊರ ಹೊರಗೆಯೇ ಬೆಳೆದ ಮೋಹನನನ್ನು ಅಷ್ಟಾಗಿ ಬಲ್ಲದ ಆತ ಪ್ರತಿಬಾರಿಯೂ ಮಾತನಾಡಲು ಅಂಜಿಕೆ ಪಡುತ್ತಿರುತ್ತಾನೆ. ಊರಿಗೆ ಹಿರಿಕನಾದ ಆತ ಪ್ರತಿದಿನ ಬೆಳಗೆದ್ದು ತನ್ನ ಮನೆಯ ದನಕರುಗಳನ್ನು ಊರಿನ ಗೋಮಾಳಕ್ಕೆ ತಂದು ಬಿಡುವುದು ನಂತರ ಮಧ್ಯಾಹ್ನದವರೆಗೂ ಇತರೆ ರೈತರ ಕಷ್ಟ ಸುಖಗಳನ್ನು ಆಲಿಸುವುದು, ತನ್ನ ಅನುಭವದ ವಿಚಾರಧಾರೆಯನ್ನು ಅವರಲ್ಲಿ ಅಂಚಿಕೊಳ್ಳುವುದು ಮಾಡುತ್ತಿರುತ್ತಾನೆ. ಭಾಗಶಃ ಸಿಟಿಯಲ್ಲೇ ಬೆಳೆದಿದ್ದ ಮೋಹನನ ಕೃಷಿಯಾಸಕ್ತಿಗೆ ಖುಷಿಪಟ್ಟ ದೊಡ್ಡೇಗೌಡ ಇಂದು ಏನಾದರಾಗಲಿ ಆತನನ್ನು ಮಾತನಾಡಿಸಲೇಬೇಕೆಂಬ ಹಠದಿಂದ ಉಳುಮೆ ಮಾಡುತ್ತಿದ್ದ ಗದ್ದೆಯ ಬಳಿ ಬಂದು ನಿಲ್ಲುತ್ತಾನೆ. ಬಿಳಿಯಾದ ಧೋತಿ ಕಪ್ಪು ಕೋಟು ಹಾಗೆ ತಲೆಗೊಂದು ಹತ್ತಿಯ ಟೋಪಿಯನ್ನು ಧರಿಸಿ ಊರುಗೋಲನ್ನು ಕಾಟಾಚಾರಕ್ಕೆ ಎಂಬಂತೆ ಹಿಡಿದುಕೊಂಡಿದ್ದ ದೊಡ್ಡೇಗೌಡನನ್ನು ನೋಡಿ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ಬಳಿಗೆ ಬರುತ್ತಾನೆ ಮೋಹನ.

'ಹ್ಯಾಗಿದ್ದೀಯಪ್ಪ.. ಮೋನಾ.. ನಾ ಯಾರ್ ಗೊತ್ತೈತ' ಎಂದು ದೊಡ್ಡೇಗೌಡರು ಕೇಳಿದಾಗ,

'ಗೊತ್ತು ಗೌಡ್ರೆ.. ನಮ್ಮಪ್ಪ ನಿಮ್ ಬಗ್ಗೆ ಬಹಳಾನೇ ಹೇಳ್ತಿರ್ತಾರೆ.. ರೈತ್ರ ಪರವಾಗಿ ಮಾಡಿದ ಕೆಲ್ಸಕ್ಕೆ ಸರ್ಕಾರ ನಿಮ್ಗೆ ಸನ್ಮಾನವನ್ನು ಮಾಡಿದೆಯಂತೆ' ಎನ್ನುತ್ತಾನೆ.

'ಹೊ, ಅದಾಗಿ ಆಗ್ಲೇ ಏಟ್ ವರ್ಷ ಆತೋ. ಅದೂ ಒಂದ್ ಕಾಲನೇ ಬಿಡು.' ಎಂದು ನಿಟ್ಟುಸಿರು ಬಿಡುತ್ತಾ ಮೋಹನನ ಬಗ್ಗೆ, ಆತನ ಈ ನಿರ್ಧಾರದ ಬಗ್ಗೆ, ಕೃಷಿಗೆ ಅನುಸರಿಸುತ್ತಿರುವ ವಿಧಾನಗಳ ಬಗ್ಗೆ ಅವರು ತಿಳಿಯತೊಡಗುತ್ತಾರೆ. ಎಲ್ಲವನ್ನೂ ಕೂಲಂಕುಷವಾಗಿ ಕೇಳಿ ತಿಳಿದ ಮೇಲೆ ಗೌಡರು ಹೆಮ್ಮೆಯಿಂದ ಮೋಹನನ್ನು ಹೊಗಳುತ್ತಾರೆ. ಈತನ ಆಸಕ್ತಿಯ ಕಿಂಚಿತ್ತಾದರೂ ಊರ ಯುವಕರಿಗೆ ಇದ್ದಿದ್ದರೆ ರಾಶಿ ರಾಶಿಯಷ್ಟು ಜಮೀನು ಹೀಗೆ ಹಾಳುಬಿಳುತ್ತಿರಲಿಲ್ಲ ಅಲ್ಲದೆ ಅವರಿಗೆಲ್ಲ ಇಂದು ಜಮೀನೆಂದರೆ ಕೇವಲ ಬ್ಯಾಂಕುಗಳಲ್ಲಿ ಸಾಲವನ್ನು ಪಡೆಯುವುದು ಹಾಗು ಮುಂದಿನ ವರ್ಷ ಆ ಸಾಲ ಮನ್ನವಾಗುವುದನ್ನೇ ಕಾಯುಯುವುದಷ್ಟೇ ಆಗಿದೆ ಎಂದು ತಮ್ಮ ಹತಾಶೆಯನ್ನು ವ್ಯಕ್ತಪಡಿಸುತ್ತಾರೆ.

ತಾವು ಅಟ್ಟಿಕೊಂಡು ಬಂದಿದ್ದ ದನಗಳೆಲ್ಲ ಅದಾಗಲೇ ದೂರ ಸಾಗಿದ್ದರೂ ಕಪ್ಪು ಬಣ್ಣದ ಮೇಲೆ ಬಿಳಿಯ ಕಲೆಗಳಿದ್ದ ಹಸುವೊಂದು ಮೋಹನ ದಾಟಿ ಬಂದ ಬೇಲಿಗಂಡಿಯ ಬಳಿಗೂಗಿ ನಿಂತಿತ್ತು. ಅತ್ಯಂತ ಶಿಸ್ತಿನ ಬಂಗಿಯಲ್ಲಿ ನಿಂತಿದ್ದ ಅದು ಮೋಹನನ ಗದ್ದೆಯ ಏರಿಯ ಮೇಲಿದ್ದ ಹಸಿರು ಹುಲ್ಲನ್ನೇ ನೋಡುತ್ತಾ ತನ್ನ ಕೊರಳ ಘಂಟೆಯನ್ನು ಅಲುಗಾಡಿಸುತಿತ್ತು. ಹಸುವನ್ನು ನೋಡಿದ ಗೌಡರು 'ನೋಡಪ್ಪ, ನಿಮ್ಮನೆಗೆ ದಿನ ಹಾಲು ಕೊಟ್ಟು ಇವಾಗ ಹುಲ್ಲ್ ಬೇಕು ಅಂತ ನಿಂತಿದೆ' ಎಂದು, ಜಿನ್ನಿ ಎಂದು ಕರೆಯುತ್ತಿದ್ದ ಆ ಹಸುವನ್ನು ತೋರಿಸುತ್ತಾರೆ. ಅದು ಹಾಲಿನ ಸ್ವಾದವೋ ಅಥವಾ ಕಾಫಿಯ ಮಹಿಮೆಯೋ ಒಟ್ಟಿನಲ್ಲಿ ಮುಂಜಾವಿನಲ್ಲೊಂದು ಹಾಲಿನ ಕಾಫಿಯನ್ನು ಬಿಡಲಾರದೇನೋ ಎಂಬಂತಾಗಿದ್ದ ಮೋಹನ ಜಿನ್ನಿಯ ಬಳಿಗೋಗಿ ಆಕೆಯ ತಲೆಯನೊಮ್ಮೆ ಸವರುತ್ತಾನೆ. ತನ್ನ ಕಿವಿ ಚಟ್ಟೆಗಳೆರಡನ್ನೂ ಸರ್ರನೆ ಹಿಂದಕ್ಕೆ ಸರಿಸಿ ಬಾಲವನ್ನು ಅತ್ತಿಂದಿತ್ತಾ ಇತ್ತಿಂದತ್ತ ಅಲುಗಾಡಿಸಿದ ಸೂಚನೆಯನ್ನು ಅರಿತ ಮೋಹನ ಕೂಡಲೇ ಗದ್ದೆಗಿಳಿದು ಎತೇಚ್ಚವಾಗಿ ಬೆಳೆದಿದ್ದ ಎಳೆಯ ಹಸಿರು ಹುಲ್ಲನ್ನು ಒಂದು ಹೊರೆಯಷ್ಟಾಗುವಷ್ಟು ತಂದು ಆಕೆಗೆ ತಿನ್ನಿಸತೊಡಗುತ್ತಾನೆ. ಉಲ್ಲಾಸದಿಂದ ಹುಲ್ಲನ್ನು ತಿಂದ ಜಿನ್ನಿ ಪಕ್ಕದ ಹಳ್ಳದಲ್ಲಿ ನೀರೊಂದಿಷ್ಟನ್ನು ಹೀರಿ ಪುನ್ಹ ಇತರೆ ದನಗಳ ಹಾದಿಯನ್ನು ಹಿಡಿದಳು.

ಅಂದಿನಿಂದ ಪ್ರತಿದಿನವೂ ಗೌಡರ ಬಳಿ ಒಂದಿಷ್ಟು ಲೋಕಾರೂಢ ಮಾತು, ಜಿನ್ನಿಗೆ ಹುಲ್ಲು ತಿನ್ನಿಸುವುದು ಮೋಹನನ ದಿನಚರಿಯಲ್ಲಿ ಸೇರಿಕೊಂಡಿತ್ತು. ಹೊಸ ಗಿಡಗಳಿಗೆ ಬೇಕಾದ ಹಾರೈಕೆ ಹಾಗು ಗದ್ದೆಯ ನಾಟಿ ಹಾಗು ಇನ್ನಿತರ ಕೆಲಸಗಳಿಗೆ ಗೌಡರ ಮಾರ್ಗದರ್ಶನ ಮೋಹನನಿಗೆ ವಿಪರೀತವಾಗಿ ಇಷ್ಟವಾಯಿತು. ಜೊತೆಗೆ ಮೋಹನನೂ ಗೌಡರನ್ನು ಆಗಿಂದಾಗೆ ಮನೆಗೆ ಕರೆದುಕೊಂಡು ಹೋಗಿ ಜೈವಿಕ ಕೃಷಿ, ಹನಿ ನೀರಾವರಿ ಪದ್ಧತಿ, ಮಳೆ ನೀರಿನ ಸಂಗ್ರಹಣೆ ಹಾಗು ಇನ್ನಿತರ ವಿಷಯಗಳ ಬಗ್ಗೆ ತನ್ನ ಲ್ಯಾಪ್ಟಾಪಿನ ಮೂಲಕ ತೋರಿಸುತ್ತಿದ್ದ. ಅಲ್ಲದೆ ಅವರ ಕಲಿಕಾ ಸಾಮರ್ಥ್ಯವನ್ನು ಹಾಗು ಅವರ ತರ್ಕಬದ್ಧ ಪ್ರೆಶ್ನೆಗಳ ಚೂಬಾಣಗಳಿಗೆ ವಿಸ್ಮಿತನೂ ಆಗುತ್ತಿದ್ದ. ಅದೆಷ್ಟೋ ಭಾರಿ ಆಧುನಿಕ ಕೃಷಿಯೆಂದು ವಿವರಿಸುತ್ತಿದ್ದ ವಿಷಯಗಳಿಗೆ ತದ್ವಿರುದ್ದವಾಗಿ ಮೂಡುತ್ತಿದ್ದ ಗೌಡರ ಪ್ರೆಶ್ನೆಗಳಿಗೆ ಮೋಹನನಲ್ಲಿ ಉತ್ತರವೇ ಇರುತ್ತಿರಲಿಲ್ಲ! ಆಗ ಘಂಟೆಗಳ ಕಾಲ ಅವರ ವಾದಸರಣಿ ಜರುಗುತ್ತಿತ್ತು. ಹೀಗೆ ಒಂದು ದಿನವೂ ಗೌಡರನ್ನಾಗಲಿ ಜಿನ್ನಿಯನ್ನಾಗಲಿ ಕಾಣದೆ, ಅವರೊಟ್ಟಿಗೆ ಮಾತನಾಡಿಸದೆ ಇರಲಾಗುತ್ತಿರಲಿಲ್ಲ ಮೋಹನನಿಗೆ. ಜಿನ್ನಿಗೆ ಒಂದಿಷ್ಟು ಹುಲ್ಲನ್ನು ತಿನ್ನಿಸಿ ಆಕೆಯ ತಲೆಯನ್ನೊಮ್ಮೆ ಸವರದಿದ್ದರೆ ಅದೇನೋ ಒಂದು ಅಮೂರ್ತ ಭಾವದ ಕೊರತೆ ಆತನಿಗೆ ಕಾಡುತ್ತಿತ್ತು. ಒಂದೊಮ್ಮೆ ಗೌಡರೇನಾದರೂ ಇತ್ತ ಕಡೆ ಬಾರದಿದ್ದರೆ ಈತನೇ ಖುದ್ದಾಗಿ ಅವರ ಮನೆಯ ಬಳಿಗೋಗಿ ಅವರನ್ನು ವಿಚಾರಿಸಿಕೊಂಡು ಬರುತಿದ್ದ. ಆ ಹಿರಿಯ ಹಾಗು ಕಿರಿಯ ಗೆಳೆಯರಿಬ್ಬರನ್ನು ಕಂಡು ಊರಿನವರಿಗಂತೂ ಮಹದಾಶ್ಚರ್ಯ!

ದಿನ ಕಳೆದಂತೆ ಮೋಹನನ ಜಮೀನು ಹಸಿರಿನಿಂದ ಕಂಗೊಳಿಸತೊಡಗಿತ್ತು. ಒಂದೆಡೆ ತಮ್ಮ ಪುಟ್ಟಪುಟ್ಟ ಎಲೆಗಳನ್ನು ಹೊರಬಿಡುತ್ತಾ ಚಿಗುರುತ್ತಿದ್ದ ಎಳೆಯ ಕಾಫಿ ಸಸಿಗಳು, ಮತ್ತೊಂದೆಡೆ ತಿಳಿಹಸಿರ ಚಿನ್ನದಂತಹ ಭತ್ತದ ಪೈರು ನಯನಗಳಷ್ಟೇ ಅಲ್ಲದೆ ಮನಸ್ಸಿಗೂ ಮುದವನ್ನು ನೀಡುತ್ತಿದ್ದವು. ಕೆಲತಿಂಗಳ ಹಿಂದಷ್ಟೇ ಕಾಂಕ್ರೀಟ್ ನಾಡಿನಲ್ಲಿ ಗಾಳಿ ಬೆಳಕಿರದ ಜೈಲಿನೊಳಗೆ ತಳ್ಳುವಂತಹ ಜೀವನವನ್ನು ಸಾಗಿಸುತ್ತಿದ್ದ ಮೋಹನ ಇಂದು ಅಕ್ಷರ ಸಹ ಹಾರುವ ಹಕ್ಕಿಯಂತಾಗಿದ್ದಾನೆ. ಪೈರುಗಳು ಆತನಿಗೆ ಇಳುವರಿಯನ್ನು ತಂದುಕೊಡುವ ಸರಕೆನಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ತಾನೇ ಹೆತ್ತು ಹೊತ್ತು ಬೆಳೆಸಿದ ಮಕ್ಕಳೇನೋ ಎಂಬ ಭಾವ ಆತನಿಗೆ ಬೆಳೆದಿರುತ್ತದೆ. ಅಲ್ಲದೆ ಅಷ್ಟೊಂದು ಪ್ರೀತಿ ಕಾಳಿಜಿಯಿಂದ ಬೆಳೆಸಿದ ಭತ್ತದ ಪೈರನ್ನು ಕೇವಲ ಒಂತಿಷ್ಟು ಅಕ್ಕಿಯ ಕಾಳುಗಳ ಆಸೆಯಲ್ಲಿ ಕತ್ತನು ಕತ್ತರಿಸುವುದೇ?! ಏನಾದರಾಗಲಿ, ಯಾರಾದರು ಏನನ್ನನಾದರೂ ಮಾತಾಡಿಕೊಳ್ಳಲ್ಲಿ, ಈ ಬಾರಿ ಭತ್ತದ ಪೈರ ಕಟಾವು ಮಾಡಲೇ ಬಾರದೆಂದು ಆತ ತನ್ನಲ್ಲೇ ತೀರ್ಮಾನಿಸಿರುತ್ತಾನೆ! ಆ ನಿಶ್ಚಯ ಆತನಲ್ಲಿ ದೃಢವಾಗಿರುತ್ತದೆ. ಇತ್ತೀಚಿಗೆ ಅತ್ತಕಡೆಯಿಂದ ಇತರ ದನಕರುಗಳೊಡಗೂಡಿ ಬರುವ ಜಿನ್ನಿಯೂ ಸಹ ಮೋಹನನ ಆರೈಕೆಗೋ ಏನೋ ಎಂಬಂತೆ ಆತನ ಜಮೀನಿನ ಮುಂದಿನ ಹಾದಿಯನು ಹಿಡಿಯುತ್ತಿರಲೇ ಇಲ್ಲ. ಅದೆಷ್ಟೇ ಹುಲ್ಲನ್ನು ತಂದು ಹಾಕಿದರೂ ಎಲ್ಲವನ್ನು ತಿಂದು ಮೋಹನನ ಕೈಗಳೆನ್ನೆ ನೆಕ್ಕುತ್ತಾ ಅಲ್ಲೇ ಒಂದು ಮರದ ನೆರಳಿನಲ್ಲಿ ದಣಿವಾರಿಸಿಕೊಂಡು ಸಂಜೆ ಬರುವ ಮತ್ತದೇ ದನಕರುಗಳ ಸಾಲಿಗೆ ಸೇರಿಕೊಳ್ಳುತ್ತದೆ. ಮೋಹನನಿಗೂ ತನ್ನ ಮಾತುಗಳನ್ನು ಪ್ರೆಶ್ನಿಸದೆ ಸುಮ್ಮನೆ ಕೇಳುವ ಯಾರೊಬ್ಬರಾದರೂ ಬೇಕಿದ್ದರಿಂದ ಆಕೆಯನ್ನು ಜಮೀನಿನೊಳಗೆಯೆ ಹುಲ್ಲನ್ನು ಮೇಯಲು ಬಿಡುತ್ತಿದ್ದ.

ಮಧ್ಯಾಹ್ನದ ಬಿಸಿಲಿಗೆ ಪಕ್ಕದಲ್ಲಿ ಮಲಗಿದ್ದ ಜಿನ್ನಿಯ ಕುತ್ತಿಗೆಯನ್ನು ಸವರುತ್ತಾ, ಮತ್ತೊಂದು ಕೈಯಲ್ಲಿ ಪುಸ್ತಕವೊಂದನ್ನು ಹಿಡಿದು ಓದುತ್ತಾ ದಣಿವಾರಿಸಿಕೊಳ್ಳುತ್ತಿದ್ದ ಮೋಹನನಿಗೆ ಜನರ ಮಿಜಿಗುಡುವ ಸದ್ದು ಕೇಳಿತು. ಹತ್ತರಿಂದ ಹದಿನೈದು ಜನರ ಗುಂಪು ತಮ್ಮ ತಮ್ಮಲ್ಲೇ ಏನನ್ನೋ ಮಾತಾನಾಡಿಕೊಳ್ಳುತ್ತಾ ಮೋಹನ ಕೂತಿರುವೆಡೆಗೇ ಬರತೊಡಗಿತ್ತು. ಪುಸ್ತಕವನ್ನು ಕೂಡಲೇ ಮಡಚಿಟ್ಟು ಎದ್ದು ನಿಂತ ಮೋಹನನ ಬಳಿಗೆ ಬಂದ ಗುಂಪಿನ ಎಲ್ಲರೂ ಆತನಿಗೆ ನಮಸ್ಕರಿಸಿದರು ಹಾಗು ತಾವು ಬಂದ ವಿಚಾರವನ್ನು ಹೇಳತೊಡಗಿದರು. ವರ್ಷಾನುವರ್ಷದಿಂದ ಕೃಷಿಯನ್ನು ಮಾಡಿಕೊಂಡು ಬರುತ್ತಿರುವ ಅವರುಗಳು ಮೋಹನನ ಜಮೀನಿನಲ್ಲಿ ಬೆಳೆದ ಕೀಟರಹಿತ, ರೋಗರಹಿತ ಸಮೃದ್ಧ ಗಿಡಗಳನ್ನು ನೋಡಿಯೇ ಇರಲಿಲ್ಲವಂತೆ. ಅಲ್ಲದೆ ಹಳ್ಳಿಯ ರೈತರು ಬಳಸುವ ಯಾವುದೇ ಕೆಮಿಕಲ್ ಪೂರಿತ ಗೊಬ್ಬರಗಳನ್ನು ಬಳಸದೆಯೇ ಅವರುಗಳ ಖರ್ಚಿನ ಅರ್ಧಕ್ಕಿಂತ ಕಡಿಮೆ ಹಣದಲ್ಲಿ ಈತ ಜಮೀನನ್ನು ನಿರ್ವಹಿಸುತ್ತಿರುವುದರ ಬಗ್ಗೆ ಕೇಳಿ ತಿಳಿದುಕೊಳ್ಳಬೇಕೆಂಬ ಕೂತುಹಲದಿಂದ ಬಂದಿರುವೆವು ಎನ್ನುತ್ತಾರೆ. ರೈತರ ಆಸಕ್ತಿಯನ್ನು ಕಂಡು ಸಂತೋಷಗೊಂಡ ಮೋಹನ ಸಾವಯವ ಕೃಷಿ, ಜೈವಿಕ ಕೃಷಿ, ಹನಿ ನೀರಾವರಿ, ಮಣ್ಣಿನಲ್ಲಿ ನೀರಿನ ಸಾಂಧ್ರತೆಯನ್ನು ಹೆಚ್ಚಿಸುವ ಬಗೆ, ಗಿಡಗಳ ನಡುವಿನ ನಿಖರವಾದ ಅಂತರ ಅಲ್ಲದೆ ಕ್ರಿಮಿನಾಶಕ ಹಾಗು ರಾಸಾಯನಿಕಪೂರಿತ ಗೊಬ್ಬರಗಳಿಂದ ಪ್ರಾಣಿ ಪಕ್ಷಿಗಳಿಗೆ, ಜಮೀನಿನ ನೆಲಕ್ಕೆ, ಮಾನವರಿಗೆ ಆಗುತ್ತಿರುವ ದುಷ್ಪರಿಣಾಮಗಳ ಬಗೆಗೆ ತನಗೆ ಗೊತ್ತಷ್ಟು ವಿಚಾರವನ್ನು ತಿಳಿಸುತ್ತಾನೆ. ಇಂದು ಜೈವಿಕ ಇಂಧನದಿಂದ ಏರೋಪ್ಲೇನುಗಳನ್ನೇ ಓಡಿಸುತ್ತಿರುವಾಗ ಕೃಷಿಕರಾದ ನಾವುಗಳು ಏಕೆ ಇಂತಹ ಪರಿಸರ ಸ್ನೇಹಿ ವಿಧಾನಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಬಾರದು? ಎಂದಾಗ ರೈತರಲ್ಲಿ ಉತ್ತರವೇ ಇರುವುದಿಲ್ಲ. ಹಲವರು ಈತನ ವಿವರಣೆಯನ್ನು ಮೆಚ್ಚಿದರೆ ಇನ್ನು ಕೆಲವರು ಇವೆಲ್ಲ ಹಾಗಿಹೋಗುವ ವಿಚಾರವಲ್ಲ ಎಂಬಂತೆ ಮುಗುಳ್ನಗುತ್ತಿರುತ್ತಾರೆ. ಗುಂಪಲ್ಲಿ ಯಾರೋ ಒಂದಿಬ್ಬರು 'ಈ ಬಾರಿ ಸರ್ಕಾರ ಎಷ್ಟ್ ಸಾಲ ಮಾಡುತ್ತೆ ಸಾಮಿ, ಅಷ್ಟ್ ಹೇಳಿ ನಮಿಗೆ ಸಾಕು' ಎನ್ನುತ್ತಾ ಗೊಳ್ ಎಂದು ನಗುತ್ತಾರೆ.

ಇವರ ವಿಚಾರಸರಣಿಯನ್ನೇ ದೂರದಲ್ಲಿ ನಿಂತು ಕೇಳುತ್ತಿದ್ದ ದೊಡ್ಡೇಗೌಡರು 'ಥು ನಿಮ್ ಮಕುಕ್ಕೆ, ಸಾಲಮನ್ನಕ್ಕ್ ಕಾಯೋ ಸೋಂಬೇರಿಗಳ, ಹೋಗಿ ಪಕ್ಕದ್ ಊರಲ್ಲಿ ಕಾಳ ಈ ಸಾರಿ ಸರ್ಕಾರ ಸಾಲ ಮನ್ನಾ ಮಾಡಲ್ಲ ಅನ್ನೋದ ಕೇಳಿ ಕೆರೆಗ್ ಹಾರಿ ಸತ್ತೋಗ್ಯಾವ್ನಂತೆ! ಸಾಲ ಮನ್ನಾ ಬೇಕಾ ನಿಮುಗೆ, ಹೋಗಿ ಆ ಎಳೆ ಮಕ್ಳ ಅಳೋದ ನೋಡಿ. ಮೈ ಬಗ್ಸಿ ದುಡಿದ್ರೆ ಭೂಮವ್ವ ಕೊಟ್ಟೆ ಕೊಡ್ತಾವ್ಲೇ. ಬ್ಯಾಸಾಯ ಮಾಡೋದು ಬರಿ ದುಡ್ಡ್ ಮಾಡೋ ಗ್ಯಾಮೆ ಆಗಿರ್ವಾಗ ನಿಮ್ಗೆ ಕೃಷಿ ಅಂದ್ರೆ ಸಾಲ ಮನ್ನಾ ಅನ್ನೋದ್ ಬಿಟ್ರೆ ಬ್ಯಾರೇನು ಅಲ್ಲ!' ಎನ್ನುತ್ತಾರೆ. ಪಕ್ಕದೂರಿನ ಕಾಳನನ್ನು ಬಲ್ಲ ಕೆಲವರು ಆತನ ಸಾವಿನ ಸುದ್ದಿಯನ್ನು ಕೇಳಿ ದಬದಬನೆ ಆ ಕಡೆ ಓಡತೊಡಗುತ್ತಾರೆ. ಅವರುಗಳೆಲ್ಲ ಅಲ್ಲಿಂದ ಹೋದನಂತರ ಗೌಡರು ಕಾಳನ ಬಗ್ಗೆ ಹೇಳುತ್ತಾ, ಆತ ಸರ್ಕಾರ ಪೂರಾ ಸಾಲವನ್ನು ಮನ್ನಾ ಮಾಡೇ ಮಾಡುತ್ತದೆ ಎಂಬ ಹುಮ್ಮಸ್ಸಿನಲ್ಲಿ ತೀರಿಸಲು ಅಸಾಧ್ಯವಾದ ಹಣವನ್ನು ಬ್ಯಾಂಕುಗಳಿಂದ ಪಡೆದದ್ದಾಗಿಯೂ ನೆನ್ನೆ ಸರ್ಕಾರ ಕೇವಲ ಅಲ್ಪಪ್ರಮಾಣದ ಸಾಲವನ್ನು ಬಿಟ್ಟು ಉಳಿದ ಎಲ್ಲಾ ಬಗೆಯ ಸಾಲವನ್ನು ಮನ್ನಾ ಮಾಡುವುದಿಲ್ಲವೆಂದು ಘೋಷಿಸಿದಾಗ ಹುಚ್ಚನಂತೆ ಚೀರಿಕೊಳ್ಳುತ್ತಾ ಕೆರೆಗೆ ಹಾರಿ ಜೀವ ಕಳೆದುಕೊಂಡ ಎನ್ನುತ್ತಾರೆ. ಅಲ್ಲದೆ ಇನ್ನೊಬ್ಬ ರೈತನ ಉದಾಹರಣೆಯನ್ನು ನೀಡುತ್ತಾ ಬ್ಯಾಂಕು ವಹಿವಾಟುಗಳ ಅರಿವಿಲ್ಲದ ಆತ ತನ್ನ ಹೆಚ್ಚಿನ ಸಾಲವನ್ನು ಬರಿ ಅವರಿವರಲ್ಲಿ ಕೈಸಾಲವಾಗೇ ಮಾಡಿದ್ದರಿಂದ ಕಳೆದ ಬಾರಿ ಸರ್ಕಾರ ರಾಷ್ಟ್ರೀಕೃತ ಹಾಗು ಸಹಕಾರಿ ಬ್ಯಾಂಕುಗಳ ಸಾಲವನ್ನು ಮನ್ನಾ ಮಾಡಿದರೂ ಈತನಿಗೆ ಅದು ಪ್ರಯೋಜನವಾಗದೇ ಅದೇ ಖಿನ್ನತೆಯಲ್ಲಿ ಪ್ರಾಣವನ್ನು ಕಳೆದುಕೊಂಡ ಎನ್ನುತ್ತಾರೆ. 'ಈಗೆಲ್ಲ ಕೃಷಿ ಹೊಂಡ, ಇತರ ನೀರಾವರಿ ವ್ಯವಸ್ಥೆ, ಕೃಷಿ ಮಾಡೋ ಹತಾರಗಳನ್ನು ಬಾಡಿಗೆಗೆ ನೀಡುವುದು, ಬೆಂಬಲ ಬೆಲೆ, ಮುಕ್ತ ಮಾರುಕಟ್ಟೆ, ಎಪಿಎಂಸಿ, ಅಲ್ಲದೆ ಸಾಲದ ಜೊತೆಗೆ ಆ ಸಾಲಕ್ಕೆ ಇನ್ಶೂರೆನ್ಸ್ ಅನ್ನೂ ಸರ್ಕಾರ ಮಾಡಿ ಕೊಡ್ತಿದ್ರೂ ಇವ್ರುಗಳಿಗೆ ಕೃಷಿ ಅಂದ್ರೆ ಅಸಡ್ಡೆ. ಅಲ್ಲ ಮಗ, ನಮ್ಮಜ್ಜ ನಮ್ಮಪ್ಪನೂ ಕೃಷಿ ಮಾಡೇ ಜೀವನ ಸಾಗ್ಸ್ಡೂರು, ಏನೇ ಮಳೆ ಬರ್ಲಿ, ಅದೆಂತದೆ ರೋಗ ಬರ್ಲಿ, ಅವಾಗೆಲ್ಲ ಅವ್ರು ಬ್ಯಾಸಾಯನ ಮಾಡ್ಲಿಲ್ವಾ? ನಮ್ಮ್ನೆಲ್ಲಾ ಸಾಕ್ಲಿಲ್ವ? ಅವಾಗೆಲ್ಲ ಅದ್ಯಾವ ಸರ್ಕಾರ ಸಾಲ ಕೊಡಕ್ಕ್ ಬರೋದು ಹೇಳು. ' ಎಂದಾಗ ಮೋಹನನಿಗೆ ಉತ್ತರ ಕಾಣದಾಯಿತು.

ಇನ್ನೂ ಕೆಲ ದಿನಗಳು ಕಳೆದವು. ಈ ಬಾರಿಯ ಮಳೆ ಅದೇಕೋ ಊರನ್ನೇ ಮುಳುಗಿಸಿಬಿಡುತ್ತದೆಯೋ ಎಂಬ ರೀತಿಯಲ್ಲಿ ಸುರಿಯತೊಡಗಿತ್ತು. ಮಳೆಯಲ್ಲಿ ಕೆಲಸ ಮಾಡಬೇಡೆಂದು ಮನೆಯವರು ಅದೆಷ್ಟು ಹೇಳಿದರೂ ಮೋಹನ ಯಾರ ಮಾತನ್ನು ಕೇಳದೆ ಜಮೀನಿಗೆ ಹೋಗುತ್ತಿರುತ್ತಾನೆ. ಒಂದೇ ಸಮನೆ ಬೀಳುತ್ತಿದ್ದ ಆ ಮೆಳೆಯಲ್ಲಿ ಕೆಲಸ ಮಾಡುವುದೆಂದರೆ ಆತನಿಗೆ ಬಲು ಇಷ್ಟದ ಕಾಯಾಕ. ಆದರೆ ಇಂದು ರಾತ್ರಿ ಬಂದ ಮಹಾಮಳೆಗೆ ಮೋಹನನ ಮನೆಯ ಸುತ್ತಲ ಗಿಡಮರಗಳೆಲ್ಲ ಚಿತ್ರ ವಿಚಿತ್ರವಾಗಿ ತಿರುಗಿ ಮುರುಟಿಗೊಂಡಿದ್ದವು. ಬೆಳಗಿನ ಮುಂಜಾವಿನ ಚಿಲಿಪಿಲಿ ಸದ್ದುಗಳೂ ಮೌನವಾಗಿದ್ದವು. ಮೋಡ ಕವಿದ ಮಂಕಾದ ಆ ಮುಂಜಾವು ಏನೋ ಒಂದು ಬಗೆಯ ಆಘಾತದ ಮುನ್ಸೂಚನೆಯನ್ನು ನೀಡುವಂತಿತ್ತು. ರಾತ್ರಿ ಸುರಿದ ಮಳೆಗೆ ಊರಿನ ಹಲವಾರು ಮನೆಗಳು ಬಿದ್ದವೆಂದು ಊರ ಹೊರಗೆ ಅಲ್ಲಲ್ಲಿ ಭೂಕುಸಿತವಾಗಿದೆ ಎಂಬ ಮಾತನ್ನು ಅಮ್ಮನಿಂದ ತಿಳಿದ ಕೂಡಲೇ ಗಾಬರಿಕೊಂಡ ಮೋಹನ ಬರಿಗಾಲಿನಲ್ಲಿಯೇ ಜಮೀನಿನೆಡೆಗೆ ಓಡುತ್ತಾನೆ. ಕೊಂಚ ತಗ್ಗು ಪ್ರದೇಶದಲ್ಲಿದ್ದ ತನ್ನ ಜಮೀನನ್ನು ಬಂದು ನೋಡಿದರೆ ಅಕ್ಷರ ಸಹ ಗುರುತು ಹಿಡಿಯದ ಭೂಮಿಯಾಗಿ ಅದು ಮಾರ್ಪಾಡಾಗಿರುತ್ತದೆ! ಗದ್ದೆಗೆ ಅಂಟಿಕೊಂಡಿದ್ದ ಗುಡ್ಡದ ಒಂದು ಪಾರ್ಶ್ವ ಮಳೆಯ ಹೊಡೆತಕ್ಕೆ ಜರಿದು ಕಾಫಿ ಸಸಿಗಳು ಹಾಗು ಭತ್ತದ ಪೈರನ್ನು ಸಂಪೂರ್ಣವಾಗಿ ಮುಚ್ಚಿ ಹಾಕಿರುತ್ತದೆ! ಮೋಹನ ತಾನು ನಿಂತಲ್ಲಿಯೇ ಕುಸಿಯುತ್ತಾನೆ. ತನ್ನ ಒಡಲಲ್ಲಿ ಹುಟ್ಟಿದ ಮಕ್ಕಳೇನೋ ಎಂಬಂತೆ ಬೆಳೆಸಿದ್ದ ಗಿಡಗಳ ಶವವನ್ನು ಕಂಡು ದುಃಖ ಉಲ್ಬಣಿಸಿ ಬಂದು ಜೋರಾಗಿ ಅಳತೊಡಗುತ್ತಾನೆ. ಗೊಂಚಲು ಭತ್ತದ ಸಮೇತ ನೀರಿನಲ್ಲಿ ಮುಳುಗಿಹೋಗಿದ್ದ ಸಸಿಯೊಂದನ್ನು ಕಂಡು ಆತನ ಸಂಕಟ ಇನ್ನೂ ವಿಪರೀತವಾಯಿತು. ಅದು ತನ್ನ ಅತ್ಯಾಪ್ತರೊಬ್ಬರನ್ನು ಕಳೆದುಕೊಂಡಾಗ ಉಂಟಾಗುವ ದುಃಖವಾಗಿದ್ದಿತು. ಜಗತ್ತೇ ಬೇಡವೆನಿಸುತ್ತದೆ ಆತನಿಗೆ.

ಮುನಿದು ಅಕ್ಷರಸಹ ರುದ್ರಕಾಳಿಯಂತಾಗಿದ್ದ ಪರಿಸರವನ್ನು ತನ್ನ ಅಳುವ ಕಣ್ಣುಗಳಲ್ಲೇ ನೋಡುತ್ತಾ ನಿಂತಿದ್ದ ಮೋಹನನಿಗೆ ಪಕ್ಕದ ಹಳ್ಳವು ತನ್ನ ಮಿತಿಯನ್ನು ಮೀರಿ ನದಿಯಂತೆ ಹರಿಯುತ್ತಿದ್ದದ್ದು ತಿಳಿಯುವುದಿಲ್ಲ. ಕಾಲುಜಾರಿ ದೊಪ್ಪನೆ ನೀರಿನೊಳಗೆ ಬಿದ್ದುಬಿಡುತ್ತಾನೆ. ನೀರಿನ ರಭಸ ಕೂಡಲೇ ಆತನನ್ನು ದೂರಕ್ಕೆ ಎಳೆದುಕೊಂಡು ಹೋಗುತ್ತದೆ. ಒಂತಿಷ್ಟು ಈಜು ಬರುತ್ತಿದ್ದರೂ ಆ ರಭಸಭರಿತ ನೀರಿನಲ್ಲಿ ಏನೂ ಮಾಡಲೂ ಆಗುವುದಿಲ್ಲ. ಮೋಹನ ಜೋರಾಗಿ ಕೂಗಿಕೊಳ್ಳುತ್ತಾನೆ. ಯಾರೊಬ್ಬರೂ ಕಾಣುವುದಿಲ್ಲ! ಅಡ್ಡಡ್ಡ ಬಿದ್ದಿದ್ದ ಮರದ ಕಾಂಡಗಳು, ಕಲ್ಲಿನ ಚೂರುಗಳು ಕೈಕಾಲುಗಳಿಗೆ ತಗುಲಿ ಅಲ್ಲಲ್ಲಿ ರಕ್ತ ಸುರಿದು ನೋವು ಹೆಚ್ಚಾಗತೊಡಗುತ್ತದೆ. ತನ್ನ ಜಮೀನಿನೊಟ್ಟಿಗೆ ತನ್ನ ಅಂತ್ಯಗಾಲವೂ ಬಂತೆಂದು, ಬರುವ ಮುನ್ನ ಪೋಷಕರಿಗಾದರೂ ಒಮ್ಮೆ ಹೇಳಿ ಬರಬೇಕಿತ್ತೆಂದುಕೊಳ್ಳುತ್ತಾನೆ. ನೀರು ಮೂಗಿನ ಮೂಲಕ ತಲೆಗೆ ಏರಿ ಕಮ್ಮು ಬರತೊಡಗಿ ಸಂಕಟ ವಿಪರೀತವಾಗುತ್ತದೆ. ನಾಲ್ಕೈದು ಕಿಲೋಮೀಟರ್ ದೂರದಲ್ಲಿರುವ ನದಿಗೆ ಸೇರುವ ಹಳ್ಳ ಹೆಚ್ಚಾಗಿ ಕಾಡಿನೊಳಗೆಯೇ ಹರಿಯುವುದರಿಂದ ಯಾರೊಬ್ಬ ಮಾನವರೂ ಅದರ ಪಾತ್ರದಲ್ಲಿ ಕಾಣಸಿಗರು…

ಜೀವ ಭಯದಿಂದ ತತ್ತರಿಸಿ ಹೋಗಿದ್ದ ಮೋಹನನಿಗೆ ಒಮ್ಮೆಲೇ ಘಂಟೆಯ ಸದ್ದೊಂದು ಆ ಹರಿವಿನ ರಭಸದ ಸದ್ದಿನಲ್ಲೂ ಕೇಳತೊಡಗುತ್ತದೆ. ಕ್ಷಣಮಾತ್ರದಲ್ಲಿ ಅದು ಜಿನ್ನಿಯ ಕೊರಳಘಂಟೆಯ ಸದ್ದೆಂದು ಗುರುತಿಸಿದ ಮೋಹನನಿಗೆ ಮೈಯ ತುಂಬೆಲ್ಲ ಶಕ್ತಿಸಂಚಯನವಾದಂತಹ ಅನುಭವವಾಯಿತು. 'ಅಂಬಾ..' ಎಂಬ ಸದ್ದಿನೊಂದಿಗೆ ಕೂಗಿಕೊಳ್ಳುತ್ತಾ ಬಂದ ಜಿನ್ನಿ ಮೋಹನ ತೇಲುತ್ತಿದ್ದ ದಿಕ್ಕಿನೆಡೆಗೆ ಜೋರಾಗಿ ಓಡತೊಡಗಿದಳು. ಮೋಹನನ ಜಮೀನಿನ ಬೇಲಿಯನ್ನು ರಭಸವಾಗಿ ಹಾರಿ ಬಂದಿದ್ದರಿಂದ ಆಕೆಯ ಮೈಯ ಒಂದೆಡೆ ಸಿಗಿದು ಕೆಂಪಾಗಿರುತ್ತದೆ. ಕೊರಳ ಹಗ್ಗದೊಟ್ಟಿಗೆ ಮರದ ಕುಣಿಕೆಯನ್ನೂ ಕಿತ್ತುಕೊಂಡು ಬಂದಿದ್ದ ಜಿನ್ನಿ ಮೋಹನನಿಗಿಂತ ತುಸು ಮುಂದೋಗಿ, ಹಳ್ಳದ ನೀರು ತನ್ನ ಆಕೆಯ ಕುತ್ತಿಗೆಯ ಮಟ್ಟಕ್ಕೆ ತಲುಪವರೆಗೂ ಮುಂದೆ ಚಲಿಸಿ 'ಅಂಬಾ..' ಎಂದು ಕೂಗುತ್ತಾ ಮೋಹನ ತೇಲಿ ಬರುವುದನ್ನೇ ನೋಡುತ್ತಾ ನಿಂತಳು. ಕೊರಳ ಹಗ್ಗ ಕೊಂಚ ಉದ್ದವಾಗಿದ್ದರಿಂದ ಅದು ನೀರಿನಲ್ಲಿ ಬಹು ದೂರದವರೆಗೂ ತೇಲತೊಡಗಿತು. ಅಲ್ಲದೆ ಅದರ ಒಂದು ತುದಿಗೆ ಮರದ ಕುಣಿಕೆಯೂ ತೇಲುತ್ತಿದ್ದರಿಂದ ಮೋಹನನಿಗೆ ಹಗ್ಗವನ್ನು ಹಿಡಿದುಕೊಳ್ಳುವುದು ಕಷ್ಟಕರವಾಗಲಿಲ್ಲ. ಕೂಡಲೇ ಹಗ್ಗವನ್ನು ಹಿಡಿದುಕೊಂಡು ಎಳೆದುಕೊಳ್ಳುತ್ತಾ ದಡಕ್ಕೆ ಬಂದ ಮೋಹನ ಜಿನ್ನಿಯನ್ನು ತಬ್ಬಿ ಬಿಕ್ಕಿ ಬಿಕ್ಕಿ ಅಳತೊಡಗುತ್ತಾನೆ. ಅದು ಮೂಕಪ್ರಾಣಿಯ ಪ್ರೀತಿಯ ಮಹಿಮೆಯೋ ಅಥವಾ ನಿಸರ್ಗದ ಚಮತ್ಕಾರವೋ ಏನೋ ಮೋಹನ ನೀರಿಗೆ ಬೀಳುವದ ಮೊದಲೇ ಅರಿತಿತ್ತೇನೋ ಎಂಬಂತೆ ಜಿನ್ನಿ ಆತನನ್ನು ಕಾಪಾಡಲು ಓಡೋಡಿ ಬಂದಿರುತ್ತದೆ! ಅಷ್ಟರಲ್ಲಾಗಲೇ ಛತ್ರಿಯೊಂದನ್ನಿಡಿದುಕೊಂಡು 'ಅಂಬಾ.. ಜಿನ್ನಿ..' ಎಂದು ಕೂಗುತ್ತಾ ಜಿನ್ನಿಯ ಹುಡುಕಿಕೊಂಡು ಬಿರಬಿರನೆ ಬಂದ ಗೌಡರು, ಮೋಹನನ ಸ್ಥಿತಿಯನ್ನು ಕಂಡು ಹೌಹಾರಿದರು. ನೆಡೆದ ಘಟನೆಯನ್ನು ಕೇಳಿ ಕೊಂಚ ಕಾಲ ಸುಮ್ಮನಿದ್ದು 'ನೋಡಪ್ಪ ಮೋನ, ಎಲ್ಲಾನು ಕಳ್ಕೊಂಡ್ವು ಅನ್ನೋರಿಗೆ ಈ ನಿಸರ್ಗ ಮಾತೇನೇ ಮತ್ತೊಂದು ಅವ್ಕಾಶ ಕೊಡ್ತಳೇ. ಈಗ ನಿನ್ನ ಬದ್ಕಸೋಕೆ ಜಿನ್ನಿನೆ ನಿನ್ನ್ ಬಳಿ ಕಳ್ಸಿದ್ದಾಳೆ ನೋಡು. ಅಂತ ಭೂಮಾತೆ ನೀನ್ ಬೆಳ್ದ ಗದ್ದೇನ ಅಷ್ಟ್ ಸುಲಬಾಗಿ ಮುಚ್ಚಾಕಲ್ಲ ಕಣಪ್ಪ. ಮರಳಿ ಯತ್ನ ಮಾಡು ಮಗ. ಆಕೆ ಹಿಂಗ್ ಮಾಡಿರೋ ಹಿಂದೇನೂ ಏನೋ ಒಂದು ಕಾರ್ಣ ಇರುತ್ತೇ. ನಮ್ಮಂತ ಮಂಕ್ ಜೀವಗಳಿಗೆ ಅದು ಅರ್ಥ ಆಗಕಿಲ್ಲ. ಕೃಷಿ ಮಾಡೋರು ಈವೆಲ್ಲ ಕಷ್ಟ ನಷ್ಟಗಳಿಗೆ ತಯಾರಾಗಿರ್ಬೇಕು..ನಾವಾದ್ರೂ ಹೇಗೂ ನಡಿಯುತ್ತೆ. ಪಾಪ ಗದ್ದೆ ಒಳಗೇ ಗುಡಿಸಲನ್ನ ಕಟ್ಟಿಕೊಂಡು ಇರೋ ಒಂದೆಕ್ರೆ ಜಮೀನನಲ್ಲೇ ಗಂಜಿ ಕಣೋರ ಕಷ್ಟ ನೋಡಾಕ್ ಆಗಲ್ಲ ಕಾಣಪ್ಪಾ’ ಎನ್ನುತ್ತಾ ಆತನನ್ನು ಸಮಾಧಾನಿಸಿ ಹಿಂದಕ್ಕೆ ಕರೆದುಕೊಂಡು ಹೋಗುತ್ತಾರೆ.

ಅಷ್ಟ ದಿಕ್ಕುಗಳಿಂದಲೂ ರಭಸವಾದ ಗಾಳಿ ಛೇಡಿಸುವಂತೆ ಒಂದೇ ಸಮನೆ ಬೀಸುತ್ತಿರುತ್ತದೆ.ಅಷ್ಟರಲ್ಲಾಗಲೇ ಮೋಹನನ ಜಮೀನು ಬರುತ್ತದೆ.ಸಮಾಧಿಯಂತಾಗಿದ್ದ ಜಮೀನನ್ನು ಕಂಡು ದುಃಖ ಮತ್ತೊಮ್ಮೆ ಉಲ್ಬಣಿಸಿ ಬಂದರೂ ತಡೆದುಕೊಂಡು ಆತ ಗದ್ದೆಯ ಮೂಲೆಯಲ್ಲಿ ಇಟ್ಟಿದ್ದ ಹಾರೆಯನ್ನು ಕೈಗೆತ್ತಿಕೊಳ್ಳುತ್ತಾನೆ. ಅದು ತನ್ನೊಬ್ಬನ ಜಮೀನನ್ನು ಮರುನಿರ್ಮಿಸುವ ನಡೆಗಿಂತ ಹೆಚ್ಚಾಗಿ ಅವೈಜ್ಞಾನಿಕ ಕೃಷಿಯಿಂದ ಭೂಮಿಯನ್ನು ಹಾಳುಗೆಡವಿದ ಇಡೀ ಊರ ಜಮೀನುಗಳನ್ನೇ ಮರುನಿರ್ಮಿಸುವ ಸಂಕಲ್ಪವಾಗಿರುತ್ತದೆ…