Tuesday, January 1, 2019

ಹಸಿರ ಪಯಣ …

ಶಾಂತ ಸಂಜೆಯ ತಿಳಿತಂಪಿನ ಹಿತಕ್ಕೆ ಭಂಗ ತರುವಂತೆ ಬಿಸಿಯಾದ ಗಾಳಿ ಒಮ್ಮೆಲೇ ಬೀಸತೊಡಗಿತ್ತು. ಗಾಳಿಯ ಬೀಸುವಿಕೆಯ ದಿಕ್ಕನ್ನು ಪರಿಗಣಿಸದೆಯೆ ಹಕ್ಕಿಗಳ ಗುಂಪು ತಮ್ಮ ತಮ್ಮ ಗೂಡುಗಳೆಡೆಗೆ ಮುಖಮಾಡಿ ಹಾರತೊಡಗಿದ್ದವು. ಕಪ್ಪು ಬಣ್ಣದ ಟ್ರ್ಯಾಕ್ ಪ್ಯಾಂಟ್, ಅದೇ ಬಣ್ಣದ ಟಿ ಶರ್ಟ್ ಹಾಗು ಅತಿ ಧುಬಾರಿಯಾದೊಂದು ಸ್ಪೋರ್ಟ್ಸ್ ಶೋವನ್ನು ಧರಿಸಿ ಮೋಹನ ಜಾಗಿಂಗ್ ಗೆ ಇಳಿದಿದ್ದ. ವಾಹನಗಳಿಗೆ ಪಾರ್ಕ್ ಮಾಡಲೂ ಸರಿಯಾದ ಸ್ಥಳ ಸಿಗದಿರುವ ಸಿಟಿಯಲ್ಲಿ ಆಟೋಟ, ವ್ಯಾಯಾಮಗಳಿಗೆ ಜಾಗವನ್ನು ಕೊಡುವವರ್ಯಾರು? ವಾಹನಗಳೊಟ್ಟಿಗೆಯೇ ರಸ್ತೆಯ ಪಾದಚಾರಿ ಮಾರ್ಗದ ಮೇಲೆಯೇ ಈತನ ಪ್ರತಿದಿನದ ಓಟ. ಹೃದಯ ಸಿಡಿದು ಹೊರಬರುವವರೆಗೂ ಓಡುವುದ ನಿಲ್ಲಿಸಲಾರೆ ಎಂಬುವಂತಿರುತ್ತದೆ ಈತನ ಓಟದ ಧಾಟಿ. ಸುಮಾರು ಮೂರ್ನಾಲ್ಕು ಕಿಲೋಮೀಟರ್ನಷ್ಟು ಓಡಿದ ನಂತರ ಕಾಫಿ ಶಾಪೊಂದರ ಮುಂದೆ ಕೂತು ಕೊಂಚ ದಣಿವಾರಿಸಿಕೊಳ್ಳುತ್ತಾನೆ. ಅಲ್ಲೂ ತನ್ನ ಮೊಬೈಲನ್ನು ಹೊರಗೆಳೆದು ಆಫೀಸಿನ ಇಮೇಲ್ ಗಳನ್ನು ನೋಡತೊಡಗುತ್ತಾನೆ. ಆಗಷ್ಟೇ ಡವಡವ ಬಡಿದು ಶಾಂತವಾಗಿದ್ದ ಹೃದಯ, ಕ್ಲೈಂಟ್ ಒಬ್ಬನ ಇಮೇಲ್ ಅನ್ನು ಕಂಡು ಪುನಃ ಬಡಿಯಹತ್ತಿತು. ಇನ್ನೊಂದು ಸುತ್ತು ಓಡಲು ಬಾಕಿ ಇದ್ದರೂ ತನ್ನ ರೂಮಿನೆಡೆ ಧಾಪುಗಾಲು ಹಾಕುತ್ತಾನೆ ಮೋಹನ. ರೂಮಿಗೆ ಬಂದವನೆ ಬೆವರಿನ ದಸೆಯಿಂದ ಅಂಟು-ಅಂಟಾಗಿದ್ದ ಬಟ್ಟೆಯನ್ನೂ ಲೆಕ್ಕಿಸದೆ ತನ್ನ ಆಫೀಸಿನ ಲ್ಯಾಪ್ಟಾಪ್ ಅನ್ನು ಹೊರಗೆಳೆದು ಕೆಲಸದಲ್ಲಿ ನಿರತನಾಗುತ್ತಾನೆ. ನೆಟ್ಟ ದೃಷ್ಟಿಯನ್ನು ಒಂತಿಷ್ಟೂ ಕದಲಿಸದೆ, ಕೀಲಿಮಣೆಗಳ ಮೇಲೆ ಸುಮಾರು ಎರಡು ಗಂಟೆಗಳ ಕಾಲ ಟಕಟಕ ಕುಟ್ಟಿದ ನಂತರ ಗಡಿಯಾರವನ್ನು ನೋಡುತ್ತಾನೆ, ಸಮಯ ಅದಾಗಲೇ ರಾತ್ರಿ ಹನ್ನೊಂದು! ಕೂಡಲೇ ಎದ್ದು ಪಕ್ಕದ ಹೋಟೆಲಿನಿಂದ ಊಟವೊಂದಕ್ಕೆ ಆರ್ಡರ್ ಕೊಟ್ಟು, ಸ್ನಾನಾದಿಗಳನ್ನು ಮುಗಿಸಿ ಹೊರಬಂದು ಊಟವನ್ನು ಮುಗಿಸುವಷ್ಟರಲ್ಲಿ ಮಧ್ಯರಾತ್ರಿ 12! ಒಂತಿಷ್ಟು ಸುದ್ದಿ ಸಮಾಚಾರಗಳನ್ನು ನೋಡಲು ಟಿವಿಯನ್ನು ಆನ್ ಮಾಡಿದ ಕೂಡಲೇ ಕಣ್ಣುಗಳ ರೆಪ್ಪೆಗಳು ಒಂದನ್ನೊಂದು ತಬ್ಬಿಕೊಳ್ಳತೊಡಗುತ್ತವೆ. ಅದೆಷ್ಟೋ ಬಾರಿ ಹೀಗೆಯೇ ಸೋಫಾದ ಮೇಲೆಯೇ ಬೆಳಗಿನವರೆಗೂ ಕೂತೇ ನಿದ್ರಿಸಿರುವುದುಂಟು! ಬೆಳಗೆದ್ದು ಮತ್ತದೇ ಓಟದ ಜೀವನ. ವಾರ, ವಾರಾಂತ್ಯ ಎಂಬ ಯಾವುದೇ ವ್ಯತ್ಯಾಸಗಳಿಲ್ಲದೆ 24X7 ಕಾಲದ ಕೆಲಸ. ಮೊದ ಮೊದಲು ಕಿರಿಕಿರಿಗುಡುತ್ತಿದ್ದ ಮೋಹನ ಕಾಲ ಕಳೆದಂತೆ ಇದೆ ಜೀವನಕ್ಕೆ ಒಗ್ಗಿಕೊಂಡಿದ್ದಾನೆ. ಅದೆಷ್ಟರ ಮಟ್ಟಿಗೆಂದರೆ ಆಗೊಮ್ಮೆ ಈಗೊಮ್ಮೆ ಸಿಗುವ ರಜೆಯ ಸಮಯವನ್ನೂ ಮನೆಯಲ್ಲಿ ಕಳೆಯಲಾಗದೆ ಆಫೀಸಿಗೆ ಬಂದು ಒಬ್ಬನೇ ಕೆಲಸ ಮಾಡುವುದುಂಟು!

ಇಂದು ಟಿವಿಯಲ್ಲಿ ಸುದ್ದಿಯನ್ನು ನೋಡುವಾಗ ನಟನೊಬ್ಬ ಕೃಷಿಕನಾದುದರ ಬಗ್ಗೆ ಕಾರ್ಯಕ್ರಮವೊಂದು ಬರುತ್ತಿರುತ್ತದೆ. ನಿದ್ದೆಗಟ್ಟುತ್ತಿದ್ದ ಕಣ್ಣುಗಳೂ ಒಮ್ಮೆಲೇ ತದೇಕಚಿತ್ತದಿಂದ ಎಂಬಂತೆ ಆ ಸುದ್ದಿಯನ್ನು ನೋಡತೊಡಗುತ್ತವೆ. ವೃತ್ತಿಜೀವನದ ಉತ್ತುಂಗದಲ್ಲಿದ್ದ ಆತ ನಟನೆಯನ್ನು ಬಹುವಾಗಿ ಕಡಿಮೆಗೊಳಿಸಿ ಸಿಟಿಯಿಂದ ತುಸು ದೂರದೊಂದು ಊರಿನಲ್ಲಿ ಜಮೀನನ್ನು ಖರೀದಿಸಿ ಪಕ್ಕಾ ಸಾವಯವ ಕೃಷಿಯನ್ನು ಮಾಡುತ್ತಾ, ಕೊಂಚ ಆನ್ಲೈನ್ ಮಾರುಕಟ್ಟೆಯ ಲಾಭವನ್ನೂ ಬಳಸಿಕೊಂಡು ಬೆಳೆದ ಬೆಳೆಗಳನ್ನು ಮಾರುತ್ತಿರುವ ವಿವರಣೆಯನ್ನು ಎಳೆಎಳೆಯಾಗಿ ಬಿತ್ತರಿಸಲಾಗುತ್ತಿತ್ತು. ಜಮೀನಿನಲ್ಲಿ ನಿಂತು ಕ್ಯಾಮೆರಾದ ಮುಂದೆ ತನ್ನ ಕತೆಯನ್ನು ಹೇಳಿಕೊಳ್ಳುತ್ತಿದ್ದ ಆ ನಟನ ಮುಖದಲ್ಲಿ ನೆಮ್ಮದಿಯ ಛಾಯೆ ಎದ್ದುಕಾಣುತ್ತಿತ್ತು.

ಆ ಪ್ರೋಗ್ರಾಮಿನ ಬಹಳ ದಿನಗಳವರೆಗೂ ಮೋಹನ ಆ ನಟನ ಬಗ್ಗೆ ಹಾಗು ಆತನ ಕೃಷಿಜೀವನದ ಬಗ್ಗೆಯೇ ಯೋಚಿಸತೊಡಗಿದ. ವರ್ಷಕ್ಕೆ ಕೋಟ್ಯಂತರ ರೂಪಾಯಿಗಳ ಜೊತೆಗೆ ಲಕ್ಷಕೊಬ್ಬರಿಗೂ ಸಿಗದ ಸ್ಟಾರ್ಡಮ್ ಅನ್ನು ತಂದುಕೊಡುವ ವೃತ್ತಿಯನ್ನು ಬಿಟ್ಟು ಆತ ಕೃಷಿಕನಾಗಲು ಮನಸ್ಸು ಮಾಡಿದಾದರೂ ಹೇಗೆ? ಜಮೀನಿನಲ್ಲಿ ದಿನವಿಡೀ ದುಡಿದು ದಣಿದರೂ ಆತನ ಮುಖದಲ್ಲಿದ್ದ ಆ ನೆಮ್ಮದಿ ಭರಿತ ಮಂದಹಾಸ ತನ್ನ ಗೆಳೆಯರಲ್ಲಿ, ಸಹೋದ್ಯೋಗಿಗಳಲ್ಲಿ ಅಷ್ಟೇ ಏಕೆ ಇಡೀ ಸಿಟಿಯಲ್ಲೇ ಯಾರೊಬ್ಬರ ಮುಖದಲ್ಲೂ ಆತ ಕಂಡಿರುವುದಿಲ್ಲ! ಅಂತಹ ಏನನ್ನು ಆ ಜಮೀನಿನಲ್ಲಿ ಆತ ಪಡೆದಿರಬಹುದು? ಕೃಷಿ ಅರ್ಧ ಘಂಟೆಯ ಆ ಪ್ರೋಗ್ರಾಮಿನಲ್ಲಿ ತೋರಿಸಿದಷ್ಟು ಸುಲಭವೆ? ಪ್ರೆಶ್ನೆ ಮೋಹನನ ತಲೆಯನ್ನು ಕೊರೆಯಲಾರಂಭಿಸಿತು.

ಗೊತ್ತುಗುರಿ ಇಲ್ಲದೆಯೇ ಎಂಬಂತೆ ಓಡುತ್ತಿತ್ತು ಮೋಹನನ ಜೀವನ. ಸುಂದರ ಬದುಕಿನ ಒಂತಿಷ್ಟೂ ರಸಾಸ್ವಾಧನೆಯನ್ನೂ ಮಾಡದೆಯೇ ಅರ್ಥಹೀನ ಬದುಕಿನ ಬಂಡಿಯನ್ನು ಸವೆದ ಅದೆಷ್ಟೋ ಮಂದಿಯ ಸಾಲಿನಲ್ಲಿ ನಾನೂ ನಿಲ್ಲುತ್ತೇನೆಯೇ?! ಎಂಬ ಭಯದ ಪ್ರೆಶ್ನೆಯೊಂದು ಆತನನ್ನು ಬಾಧಿಸತೊಡಗಿತು. ಹಾಗಾದರೆ ಏನು ಮಾಡುವುದು? ಎಲ್ಲಕ್ಕೂ ಒಂದು ಅಲ್ಪವಿರಾಮವನ್ನು ಜಡಿದು ತಿಂಗಳುಗಳ ಕಾಲ ಪ್ರಪಂಚಪರಿಹಟನೆ ಮಾಡುವುದೆಂದು ಯೋಚಿಸುತ್ತಾನೆ. ಆದರೆ ತದಾನಂತರ ಮತ್ತದೇ ಖೈದಿಯ ಜೀವನದ ಪಾಡು. ಈ ಸಮಸ್ಯೆಗೆ ಪರಿಹಾರ ಪೂರ್ಣಾವಧಿಯದ್ದಾಗಿರಬೇಕು. ಜೊತೆಗೆ ಬದುಕೂ ಆರ್ಥಮಯವಾಗಿದ್ದಿರಬೇಕು. ಆದರೆ ಬೆಂಬಿಡದ ನೆರಳಿನಂತಾಗಿರುವ ಕೆಲಸದ ಗೀಳು ಅಷ್ಟು ಸುಲಭವಾಗಿ ಜಾರಬಲ್ಲದೇ! ಇಂದು ಸರಿಯೆನಿಸಿದರೂ ನಾಳೆ ಒಂದಲ್ಲ ಒಂದು ಕಾರಣಕ್ಕೆ ನನ್ನ ನಿರ್ಧಾರವನ್ನು ನಾನು ಜರಿದುಕೊಳ್ಳಬಾರದು ಎಂದುಕೊಳ್ಳುತ್ತಾನೆ.

ಆರೋಗ್ಯದ ಬಗ್ಗೆ ಅತ್ಯಧಿಕ ಕಾಳಜಿಯನ್ನು ವಹಿಸುವ ಮೋಹನ ಆಹಾರಾದಿಗಳನ್ನು ಸೇವಿಸುವ ಮುನ್ನ ತುಂಬಾನೇ ಜಾಗರೂಕನಾಗಿರುತ್ತಾನೆ. ಅಂದೊಮ್ಮೆ ದೇಶದಲ್ಲಿ ಕ್ರಿಮಿನಾಶಕಗಳ ಬಗ್ಗೆ ಸರ್ಕಾರಗಳಿಗಿರುವ ಅಸಡ್ಡೆಯ ಬಗ್ಗೆ ಚರ್ಚೆಯಾಗುತ್ತಿದ್ದದ್ದನು ಟಿವಿಯಲ್ಲಿ ನೋಡುತ್ತಾನೆ. ಮುಂದುವರೆದ ಅದೆಷ್ಟೋ ದೇಶಗಳಲ್ಲಿ ಇಂದು ಯಾವುದೇ ರಾಸಾಯನಿಕಗಳಿಲ್ಲದೆ ಶುದ್ಧ ಜೈವಿಕ ಕೃಷಿಯನ್ನು ಅನುಸರಿಸಿ ಮಿಕ್ಕಿ ಉಳಿಯುವಷ್ಟು ಆರೋಗ್ಯಕರ ಆಹಾರವನ್ನು ಬೆಳೆಯುವ ಉದಾಹರಣೆಗಳಿದ್ದರೂ ಜೈವಿಕ ಕೃಷಿಯ ತವರೂರಾದ ನಮ್ಮಲ್ಲೇ ಅದರ ಬಗ್ಗೆ ಆಸಕ್ತಿ ಇಲ್ಲದಿರುವುದು, ಜೊತೆಗೆ ಇಂದಿನ ಬಹುತೇಕ ''ಆಧುನಿಕ' ರೈತರೆಂದೆನಿಸಿಕೊಂಡವರು ಕೇವಲ ಹಣದ ಉದ್ದೇಶದ ವಿನಃ ಯಾವುದೇ ಪರಿಸರ ಕಾಳಜಿ ಇಲ್ಲದೆಯೇ ಮಾಡುವ ಕೃಷಿ, ಅಲ್ಲದೆ ಇಂದು ಸಸಿಯಿಂದಿಡಿದು ಪೈರಿನವರೆಗೂ ಬೆಳೆಸುವ ಕೀಟನಾಶಕಗಳು ರೈತರಷ್ಟೇ ಅಲ್ಲದೆ ಗ್ರಾಹಕರ ಆರೋಗ್ಯವನ್ನೂ ಹಾಳುಗೆಡವುತ್ತಿದ್ದರೂ ಸರ್ಕಾರಗಳು ಅಂತಹ ಕೀಟನಾಶಕಗಳನ್ನು ರದ್ದುಪಡಿಸುವ ಬದಲು ಅಂತಹ ಕಂಪನಿಗಳನ್ನು ಬೆಳೆಸಿಕೊಂಡು ಬರುತ್ತಿವೆ ಎಂಬ ವಿಷಯಗಳ ಬಗ್ಗೆ ಗಹನವಾಗಿ ಚರ್ಚೆಯಾಗುತ್ತಿತ್ತು. ಹೀಗೆ ಪರೋಕ್ಷವಾಗಿ ದೇಹವನ್ನು ಸೇರುತ್ತಿರುವ ವಿಷಪೂರಿತ ಆಹಾರವನ್ನು ನಾವು ದಿನನಿತ್ಯ ಸೇವಿಸುತ್ತಿದ್ದೇವೆ ಎಂದು ಕೇಳಿದಾಗ ಮೋಹನನಿಗೆ ತಳಮಳವಾಗತೊಡಗಿತು. ದೇಹಕ್ಕೆ ಸೇರುವ ವಿಷವನ್ನೇ ಗುರುತಿಸಲಾಗದ ಮೇಲೆ ನಾವು ಆಧುನಿಕರೆಂದು ಕರೆಸಿಕೊಂಡರೂ ಏನು ಪ್ರಯೋಜನ? ಬಹುದಿನಗಳಿಂದ ಪಕ್ವಗೊಳ್ಳುತ್ತಿದ್ದ ನಿರ್ಧಾರ ಇಂದು ದೃಢವಾಯಿತು. ಏನಾದರಾಗಲಿ ಜಮೀನೊಂದನ್ನು ಖರೀದಿಸಿ ನನ್ನ ಆಹಾರವನ್ನು ನಾನೇ ಬೆಳೆದುಕೊಳ್ಳಬೇಕು. ಉತ್ಕೃಷ್ಟ ಮಟ್ಟದ ಜೈವಿಕ ಕೃಷಿಯನ್ನು ಅನುಸರಿಸಿ ಇತರರಿಗೆ ಮಾದರಿಯಾಗಬೇಕು. ಕೂಡಲೇ ಪೋಷಕರಿಗೆ ಫೋನಾಯಿಸಿ ಊರಿನ ಬಳಿ ಯಾವುದಾದರೊಂದು ಸಾಧಾರಣ ಬೆಲೆಯ ಜಮೀನನ್ನು ನೋಡಲು ಹೇಳುತ್ತಾನೆ.

ದಾರಿ ಕಷ್ಟಕರವಾಗಿದೆಯೆನಿಸಿದರೂ ನಡೆ ಆತನಿಗೆ ಸ್ಪಷ್ಟವಾಗಿತ್ತು. ಆ ಸ್ಪಷ್ಟತೆಯಲ್ಲಿಯೇ ವರ್ಣಾತೀತವಾದೊಂದು ನೆಮ್ಮದಿ ಮನೆಮಾಡಿತ್ತು.ಮೋಹನ ಕೆಲಸ ಬಿಡುತ್ತಿರುವ ಕಾರಣವನ್ನು ಕೇಳಿ ದಂಗಾದ ಕಂಪನಿಯ ಮಾಲೀಕ ಆತನಿಗೆ ಮನೆಯಿಂದ ಕೂತೆ ಕೆಲಸವನ್ನು ಮಾಡುವಂತೆ ಕೇಳಿಕೊಳ್ಳುತ್ತಾನೆ ಹಾಗು ಆತನ ನೆಡೆಗೆ ಮೆಚ್ಚುಗೆಯನ್ನೂ ಸೂಚಿಸುತ್ತಾನೆ. ನೋಡನೋಡುತ್ತಲೇ ಮೋಹನ ಸಿಟಿಯ ಒತ್ತಡದ ಜೀವನಕ್ಕೆ ಪೂರ್ಣವಿರಾಮವನ್ನು ಜಡಿದು ತನ್ನ ಊರನ್ನು ಸೇರುತ್ತಾನೆ. ಅಮ್ಮನ ಕೈಯಡುಗೆಯ ಊಟ, ಬೇಸಿಗೆಯಲ್ಲೂ ತಂಪು ಗಾಳಿಯನ್ನು ಬೀಸುವ ಪರಿಸರ, ಅಲ್ಲೊಂದು ಇಲ್ಲೊಂದು ಮೂಡುವ ವಾಹನಗಳ ಸದ್ದನ್ನೂ ಹತ್ತಿಕ್ಕುವ ಹಕ್ಕಿಗಳ ಚಿಲಿಪಿಲಿ ನಾದ, ಅಷ್ಟ ದಿಕ್ಕುಗಳಿಗೂ ಹರಡಿರುವ ಹಸಿರ ನೇಸರ ಮನಸ್ಸಿಗೆ ಮಹಾನೆಮ್ಮದಿಯನ್ನು ನೀಡುತ್ತಿದ್ದವು. ಕೆಲದಿನಗಲ್ಲೇ ಮನೆಯಿಂದ ಕೊಂಚದೂರದಲ್ಲಿ ಮೂರೆಕರೆ ಗದ್ದೆಯನ್ನು ಖರೀದಿಮಾಡಿದ. ಜಮೀನು ಖಾಲಿಯಾಗಿದ್ದರಿಂದ ಮೋಹನ ತನಗೆ ಬೇಕೆನಿಸಿದ ಹಾಗೆ ಕೃಷಿಯನ್ನು ಶುರುವಿಟ್ಟುಕೊಳ್ಳಬಹುದೆಂಬ ಲೆಕ್ಕಾಚಾರ.

ನಿಸರ್ಗದ ಸಹಜ ಸುಂದರತೆಯನ್ನು ಸವಿಯಲು ಎಂಬಂತೆ ಮೂಡಣದಲ್ಲಿ ಬೆಳಕು ಮೂಡುವುದರೊಳಗೆ ಎದ್ದು ರೆಡಿಯಾಗಿ, ಯೋಗಾದಿಗಳನ್ನು ಮಾಡಿ, ಕೈಯಲ್ಲಿ ಕಾಫಿಯ ಕಪ್ಪೊಂದನ್ನು ಹಿಡಿದು ಹಕ್ಕಿಗಳ ಇಂಚರ ಹಾಗು ಮುಂಜಾವಿನ ಹಿಂದೂಸ್ತಾನಿ ರಾಗಗಳ ಹಿನ್ನಲೆಯಲ್ಲಿ ಸೂರ್ಯದೇವ ನಿಧಾನವಾಗಿ ವಿಸ್ತರಿಸುವುದನ್ನು ನೋಡುತ್ತಾ ನಿಂತರೆ ಆ ನಯನ ಮನೋಹರ ದೃಶ್ಯದಲ್ಲಿ ಅಕ್ಷರ ಸಹ ನಿಂತ ಕಲ್ಲಾಗಿಬಿಡುತ್ತಾನೆ ಮೋಹನ. ಅದೆಷ್ಟೋ ಹೊತ್ತಿನ ನಂತರ ಅಮ್ಮನ ಕೂಗುವಿಕೆಗೆ ಓಗೊಟ್ಟು, ಕೆಳಗಿಳಿದು ಬಂದು ತಿಂಡಿಯನ್ನು ತಿಂದು, ಆಫೀಸಿನ ಇಮೇಲ್ ಗಳ ಮೇಲೆ ಹಾಗೆಯೇ ಒಮ್ಮೆ ಕಣ್ಣಾಯಿಸಿ, ಗುದ್ದಲಿಯನ್ನಿಡಿದು ಗದ್ದೆಗೆ ಹೊರಟರೆ ವಾಪಸ್ಸು ಬರುತ್ತಿದ್ದದ್ದು ಮದ್ಯಾಹ್ನದ ಊಟಕ್ಕೆ. ಗದ್ದೆಯ ಸುತ್ತಲೂ ಬೇಲಿಯನ್ನು ಹಾಕಿ, ನೆಲವನು ಹಗೆದು 'ಕಾವೇರಿ' ತಳಿಯ ಕಾಫಿ ಗಿಡಗಳನ್ನು ಮತ್ತು ಪಕ್ಕದ ಒಂದೆಕರೆ ಜಮೀನಿನಲ್ಲಿ ಭತ್ತವನ್ನು ಹಾಗು ಮನೆಗೆ ಸಾಕಾಗುವಷ್ಟು ಸೊಪ್ಪು ತರಕಾರಿಗಳನ್ನು ಬೆಳೆಯುವುದಾಗಿಯೂ ಯೋಜನೆಯನ್ನು ಹಾಕಿಕೊಂಡಿರುತ್ತಾನೆ. ಅಷ್ಟರಲ್ಲಾಗಲೇ ಜೈವಿಕ ಕೃಷಿ ಹಾಗು ಅದಕ್ಕೆ ಬಳಸುವ ನೈಸರ್ಗಿಕ ಗೊಬ್ಬರಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ್ದ ಆತ ಗಿಡಗಳನ್ನು ನೆಡುವ ಮೊದಲು ನೆಲವನ್ನು ಪೋಷಕಾಂಶಭರಿತ ನೆಲವನ್ನಾಗಿ ಪರಿವರ್ತಿಸಲು ಯೋಜಿಸಿರುತ್ತಾನೆ. ಇಂದು ಬೆಳಗ್ಗೆ ಜಮೀನಿಗೆ ಬಂದವನೇ ಪಕ್ಕದ ಊರಿನಿಂದ ಬಂದ ಕೆಲಸಗಾರರೊಡಗೂಡಿ ಸಗಣಿ ಹಾಗು ಇತರೆ ನೈಸರ್ಗಿಕ ವಸ್ತುಗಳಿಂದ ಮಾಡಿದ್ದ ಕಾಂಪೋಸ್ಟ್ ಗೊಬ್ಬರವನ್ನು ಜಮೀನಿನ ಪೂರಾ ಚೆಲ್ಲತೊಡಗುತ್ತಾನೆ. ಗೊಬ್ಬರದ ನಾತ ಮೂಗಿಗೆ ದೊಪ್ಪನೆ ಬಡಿಯುತ್ತಿದ್ದರೂ ಮೋಹನ ಅವುಗಳಿಗೆಲ್ಲ ಒಗ್ಗಿಕೊಂಡಿರುವಂತೆ ಕಾಣುತ್ತದೆ. ಒಂದೆರೆಡು ಹದದ ಬೇಸಿಗೆಯ ಮಳೆಯೂ ಬಂದ್ದಿದ್ದರಿಂದ ಮಣ್ಣು ಗೊಬ್ಬರವನ್ನೆಲ್ಲ ಚೆನ್ನಾಗಿ ತನ್ನಲ್ಲಿ ಬೆರೆಸಿಕೊಂಡಿತು.

ಊರ ಮೇಲ್ಮನೆಯ ದೊಡ್ಡೇಗೌಡ ಮೋಹನ ಊರಿಗೆ ವಾಪಸ್ಸಾಗಿನಿಂದಲೂ ಈತನ ಚಲನವಲನಗಳನ್ನೇ ಗಮನಿಸುತ್ತಿರುತ್ತಾನೆ. ಸಣ್ಣವನಿಂದಲೂ ಊರ ಹೊರಗೆಯೇ ಬೆಳೆದ ಮೋಹನನನ್ನು ಅಷ್ಟಾಗಿ ಬಲ್ಲದ ಆತ ಪ್ರತಿಬಾರಿಯೂ ಮಾತನಾಡಲು ಅಂಜಿಕೆ ಪಡುತ್ತಿರುತ್ತಾನೆ. ಊರಿಗೆ ಹಿರಿಕನಾದ ಆತ ಪ್ರತಿದಿನ ಬೆಳಗೆದ್ದು ತನ್ನ ಮನೆಯ ದನಕರುಗಳನ್ನು ಊರಿನ ಗೋಮಾಳಕ್ಕೆ ತಂದು ಬಿಡುವುದು ನಂತರ ಮಧ್ಯಾಹ್ನದವರೆಗೂ ಇತರೆ ರೈತರ ಕಷ್ಟ ಸುಖಗಳನ್ನು ಆಲಿಸುವುದು, ತನ್ನ ಅನುಭವದ ವಿಚಾರಧಾರೆಯನ್ನು ಅವರಲ್ಲಿ ಅಂಚಿಕೊಳ್ಳುವುದು ಮಾಡುತ್ತಿರುತ್ತಾನೆ. ಭಾಗಶಃ ಸಿಟಿಯಲ್ಲೇ ಬೆಳೆದಿದ್ದ ಮೋಹನನ ಕೃಷಿಯಾಸಕ್ತಿಗೆ ಖುಷಿಪಟ್ಟ ದೊಡ್ಡೇಗೌಡ ಇಂದು ಏನಾದರಾಗಲಿ ಆತನನ್ನು ಮಾತನಾಡಿಸಲೇಬೇಕೆಂಬ ಹಠದಿಂದ ಉಳುಮೆ ಮಾಡುತ್ತಿದ್ದ ಗದ್ದೆಯ ಬಳಿ ಬಂದು ನಿಲ್ಲುತ್ತಾನೆ. ಬಿಳಿಯಾದ ಧೋತಿ ಕಪ್ಪು ಕೋಟು ಹಾಗೆ ತಲೆಗೊಂದು ಹತ್ತಿಯ ಟೋಪಿಯನ್ನು ಧರಿಸಿ ಊರುಗೋಲನ್ನು ಕಾಟಾಚಾರಕ್ಕೆ ಎಂಬಂತೆ ಹಿಡಿದುಕೊಂಡಿದ್ದ ದೊಡ್ಡೇಗೌಡನನ್ನು ನೋಡಿ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ಬಳಿಗೆ ಬರುತ್ತಾನೆ ಮೋಹನ.

'ಹ್ಯಾಗಿದ್ದೀಯಪ್ಪ.. ಮೋನಾ.. ನಾ ಯಾರ್ ಗೊತ್ತೈತ' ಎಂದು ದೊಡ್ಡೇಗೌಡರು ಕೇಳಿದಾಗ,

'ಗೊತ್ತು ಗೌಡ್ರೆ.. ನಮ್ಮಪ್ಪ ನಿಮ್ ಬಗ್ಗೆ ಬಹಳಾನೇ ಹೇಳ್ತಿರ್ತಾರೆ.. ರೈತ್ರ ಪರವಾಗಿ ಮಾಡಿದ ಕೆಲ್ಸಕ್ಕೆ ಸರ್ಕಾರ ನಿಮ್ಗೆ ಸನ್ಮಾನವನ್ನು ಮಾಡಿದೆಯಂತೆ' ಎನ್ನುತ್ತಾನೆ.

'ಹೊ, ಅದಾಗಿ ಆಗ್ಲೇ ಏಟ್ ವರ್ಷ ಆತೋ. ಅದೂ ಒಂದ್ ಕಾಲನೇ ಬಿಡು.' ಎಂದು ನಿಟ್ಟುಸಿರು ಬಿಡುತ್ತಾ ಮೋಹನನ ಬಗ್ಗೆ, ಆತನ ಈ ನಿರ್ಧಾರದ ಬಗ್ಗೆ, ಕೃಷಿಗೆ ಅನುಸರಿಸುತ್ತಿರುವ ವಿಧಾನಗಳ ಬಗ್ಗೆ ಅವರು ತಿಳಿಯತೊಡಗುತ್ತಾರೆ. ಎಲ್ಲವನ್ನೂ ಕೂಲಂಕುಷವಾಗಿ ಕೇಳಿ ತಿಳಿದ ಮೇಲೆ ಗೌಡರು ಹೆಮ್ಮೆಯಿಂದ ಮೋಹನನ್ನು ಹೊಗಳುತ್ತಾರೆ. ಈತನ ಆಸಕ್ತಿಯ ಕಿಂಚಿತ್ತಾದರೂ ಊರ ಯುವಕರಿಗೆ ಇದ್ದಿದ್ದರೆ ರಾಶಿ ರಾಶಿಯಷ್ಟು ಜಮೀನು ಹೀಗೆ ಹಾಳುಬಿಳುತ್ತಿರಲಿಲ್ಲ ಅಲ್ಲದೆ ಅವರಿಗೆಲ್ಲ ಇಂದು ಜಮೀನೆಂದರೆ ಕೇವಲ ಬ್ಯಾಂಕುಗಳಲ್ಲಿ ಸಾಲವನ್ನು ಪಡೆಯುವುದು ಹಾಗು ಮುಂದಿನ ವರ್ಷ ಆ ಸಾಲ ಮನ್ನವಾಗುವುದನ್ನೇ ಕಾಯುಯುವುದಷ್ಟೇ ಆಗಿದೆ ಎಂದು ತಮ್ಮ ಹತಾಶೆಯನ್ನು ವ್ಯಕ್ತಪಡಿಸುತ್ತಾರೆ.

ತಾವು ಅಟ್ಟಿಕೊಂಡು ಬಂದಿದ್ದ ದನಗಳೆಲ್ಲ ಅದಾಗಲೇ ದೂರ ಸಾಗಿದ್ದರೂ ಕಪ್ಪು ಬಣ್ಣದ ಮೇಲೆ ಬಿಳಿಯ ಕಲೆಗಳಿದ್ದ ಹಸುವೊಂದು ಮೋಹನ ದಾಟಿ ಬಂದ ಬೇಲಿಗಂಡಿಯ ಬಳಿಗೂಗಿ ನಿಂತಿತ್ತು. ಅತ್ಯಂತ ಶಿಸ್ತಿನ ಬಂಗಿಯಲ್ಲಿ ನಿಂತಿದ್ದ ಅದು ಮೋಹನನ ಗದ್ದೆಯ ಏರಿಯ ಮೇಲಿದ್ದ ಹಸಿರು ಹುಲ್ಲನ್ನೇ ನೋಡುತ್ತಾ ತನ್ನ ಕೊರಳ ಘಂಟೆಯನ್ನು ಅಲುಗಾಡಿಸುತಿತ್ತು. ಹಸುವನ್ನು ನೋಡಿದ ಗೌಡರು 'ನೋಡಪ್ಪ, ನಿಮ್ಮನೆಗೆ ದಿನ ಹಾಲು ಕೊಟ್ಟು ಇವಾಗ ಹುಲ್ಲ್ ಬೇಕು ಅಂತ ನಿಂತಿದೆ' ಎಂದು, ಜಿನ್ನಿ ಎಂದು ಕರೆಯುತ್ತಿದ್ದ ಆ ಹಸುವನ್ನು ತೋರಿಸುತ್ತಾರೆ. ಅದು ಹಾಲಿನ ಸ್ವಾದವೋ ಅಥವಾ ಕಾಫಿಯ ಮಹಿಮೆಯೋ ಒಟ್ಟಿನಲ್ಲಿ ಮುಂಜಾವಿನಲ್ಲೊಂದು ಹಾಲಿನ ಕಾಫಿಯನ್ನು ಬಿಡಲಾರದೇನೋ ಎಂಬಂತಾಗಿದ್ದ ಮೋಹನ ಜಿನ್ನಿಯ ಬಳಿಗೋಗಿ ಆಕೆಯ ತಲೆಯನೊಮ್ಮೆ ಸವರುತ್ತಾನೆ. ತನ್ನ ಕಿವಿ ಚಟ್ಟೆಗಳೆರಡನ್ನೂ ಸರ್ರನೆ ಹಿಂದಕ್ಕೆ ಸರಿಸಿ ಬಾಲವನ್ನು ಅತ್ತಿಂದಿತ್ತಾ ಇತ್ತಿಂದತ್ತ ಅಲುಗಾಡಿಸಿದ ಸೂಚನೆಯನ್ನು ಅರಿತ ಮೋಹನ ಕೂಡಲೇ ಗದ್ದೆಗಿಳಿದು ಎತೇಚ್ಚವಾಗಿ ಬೆಳೆದಿದ್ದ ಎಳೆಯ ಹಸಿರು ಹುಲ್ಲನ್ನು ಒಂದು ಹೊರೆಯಷ್ಟಾಗುವಷ್ಟು ತಂದು ಆಕೆಗೆ ತಿನ್ನಿಸತೊಡಗುತ್ತಾನೆ. ಉಲ್ಲಾಸದಿಂದ ಹುಲ್ಲನ್ನು ತಿಂದ ಜಿನ್ನಿ ಪಕ್ಕದ ಹಳ್ಳದಲ್ಲಿ ನೀರೊಂದಿಷ್ಟನ್ನು ಹೀರಿ ಪುನ್ಹ ಇತರೆ ದನಗಳ ಹಾದಿಯನ್ನು ಹಿಡಿದಳು.

ಅಂದಿನಿಂದ ಪ್ರತಿದಿನವೂ ಗೌಡರ ಬಳಿ ಒಂದಿಷ್ಟು ಲೋಕಾರೂಢ ಮಾತು, ಜಿನ್ನಿಗೆ ಹುಲ್ಲು ತಿನ್ನಿಸುವುದು ಮೋಹನನ ದಿನಚರಿಯಲ್ಲಿ ಸೇರಿಕೊಂಡಿತ್ತು. ಹೊಸ ಗಿಡಗಳಿಗೆ ಬೇಕಾದ ಹಾರೈಕೆ ಹಾಗು ಗದ್ದೆಯ ನಾಟಿ ಹಾಗು ಇನ್ನಿತರ ಕೆಲಸಗಳಿಗೆ ಗೌಡರ ಮಾರ್ಗದರ್ಶನ ಮೋಹನನಿಗೆ ವಿಪರೀತವಾಗಿ ಇಷ್ಟವಾಯಿತು. ಜೊತೆಗೆ ಮೋಹನನೂ ಗೌಡರನ್ನು ಆಗಿಂದಾಗೆ ಮನೆಗೆ ಕರೆದುಕೊಂಡು ಹೋಗಿ ಜೈವಿಕ ಕೃಷಿ, ಹನಿ ನೀರಾವರಿ ಪದ್ಧತಿ, ಮಳೆ ನೀರಿನ ಸಂಗ್ರಹಣೆ ಹಾಗು ಇನ್ನಿತರ ವಿಷಯಗಳ ಬಗ್ಗೆ ತನ್ನ ಲ್ಯಾಪ್ಟಾಪಿನ ಮೂಲಕ ತೋರಿಸುತ್ತಿದ್ದ. ಅಲ್ಲದೆ ಅವರ ಕಲಿಕಾ ಸಾಮರ್ಥ್ಯವನ್ನು ಹಾಗು ಅವರ ತರ್ಕಬದ್ಧ ಪ್ರೆಶ್ನೆಗಳ ಚೂಬಾಣಗಳಿಗೆ ವಿಸ್ಮಿತನೂ ಆಗುತ್ತಿದ್ದ. ಅದೆಷ್ಟೋ ಭಾರಿ ಆಧುನಿಕ ಕೃಷಿಯೆಂದು ವಿವರಿಸುತ್ತಿದ್ದ ವಿಷಯಗಳಿಗೆ ತದ್ವಿರುದ್ದವಾಗಿ ಮೂಡುತ್ತಿದ್ದ ಗೌಡರ ಪ್ರೆಶ್ನೆಗಳಿಗೆ ಮೋಹನನಲ್ಲಿ ಉತ್ತರವೇ ಇರುತ್ತಿರಲಿಲ್ಲ! ಆಗ ಘಂಟೆಗಳ ಕಾಲ ಅವರ ವಾದಸರಣಿ ಜರುಗುತ್ತಿತ್ತು. ಹೀಗೆ ಒಂದು ದಿನವೂ ಗೌಡರನ್ನಾಗಲಿ ಜಿನ್ನಿಯನ್ನಾಗಲಿ ಕಾಣದೆ, ಅವರೊಟ್ಟಿಗೆ ಮಾತನಾಡಿಸದೆ ಇರಲಾಗುತ್ತಿರಲಿಲ್ಲ ಮೋಹನನಿಗೆ. ಜಿನ್ನಿಗೆ ಒಂದಿಷ್ಟು ಹುಲ್ಲನ್ನು ತಿನ್ನಿಸಿ ಆಕೆಯ ತಲೆಯನ್ನೊಮ್ಮೆ ಸವರದಿದ್ದರೆ ಅದೇನೋ ಒಂದು ಅಮೂರ್ತ ಭಾವದ ಕೊರತೆ ಆತನಿಗೆ ಕಾಡುತ್ತಿತ್ತು. ಒಂದೊಮ್ಮೆ ಗೌಡರೇನಾದರೂ ಇತ್ತ ಕಡೆ ಬಾರದಿದ್ದರೆ ಈತನೇ ಖುದ್ದಾಗಿ ಅವರ ಮನೆಯ ಬಳಿಗೋಗಿ ಅವರನ್ನು ವಿಚಾರಿಸಿಕೊಂಡು ಬರುತಿದ್ದ. ಆ ಹಿರಿಯ ಹಾಗು ಕಿರಿಯ ಗೆಳೆಯರಿಬ್ಬರನ್ನು ಕಂಡು ಊರಿನವರಿಗಂತೂ ಮಹದಾಶ್ಚರ್ಯ!

ದಿನ ಕಳೆದಂತೆ ಮೋಹನನ ಜಮೀನು ಹಸಿರಿನಿಂದ ಕಂಗೊಳಿಸತೊಡಗಿತ್ತು. ಒಂದೆಡೆ ತಮ್ಮ ಪುಟ್ಟಪುಟ್ಟ ಎಲೆಗಳನ್ನು ಹೊರಬಿಡುತ್ತಾ ಚಿಗುರುತ್ತಿದ್ದ ಎಳೆಯ ಕಾಫಿ ಸಸಿಗಳು, ಮತ್ತೊಂದೆಡೆ ತಿಳಿಹಸಿರ ಚಿನ್ನದಂತಹ ಭತ್ತದ ಪೈರು ನಯನಗಳಷ್ಟೇ ಅಲ್ಲದೆ ಮನಸ್ಸಿಗೂ ಮುದವನ್ನು ನೀಡುತ್ತಿದ್ದವು. ಕೆಲತಿಂಗಳ ಹಿಂದಷ್ಟೇ ಕಾಂಕ್ರೀಟ್ ನಾಡಿನಲ್ಲಿ ಗಾಳಿ ಬೆಳಕಿರದ ಜೈಲಿನೊಳಗೆ ತಳ್ಳುವಂತಹ ಜೀವನವನ್ನು ಸಾಗಿಸುತ್ತಿದ್ದ ಮೋಹನ ಇಂದು ಅಕ್ಷರ ಸಹ ಹಾರುವ ಹಕ್ಕಿಯಂತಾಗಿದ್ದಾನೆ. ಪೈರುಗಳು ಆತನಿಗೆ ಇಳುವರಿಯನ್ನು ತಂದುಕೊಡುವ ಸರಕೆನಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ತಾನೇ ಹೆತ್ತು ಹೊತ್ತು ಬೆಳೆಸಿದ ಮಕ್ಕಳೇನೋ ಎಂಬ ಭಾವ ಆತನಿಗೆ ಬೆಳೆದಿರುತ್ತದೆ. ಅಲ್ಲದೆ ಅಷ್ಟೊಂದು ಪ್ರೀತಿ ಕಾಳಿಜಿಯಿಂದ ಬೆಳೆಸಿದ ಭತ್ತದ ಪೈರನ್ನು ಕೇವಲ ಒಂತಿಷ್ಟು ಅಕ್ಕಿಯ ಕಾಳುಗಳ ಆಸೆಯಲ್ಲಿ ಕತ್ತನು ಕತ್ತರಿಸುವುದೇ?! ಏನಾದರಾಗಲಿ, ಯಾರಾದರು ಏನನ್ನನಾದರೂ ಮಾತಾಡಿಕೊಳ್ಳಲ್ಲಿ, ಈ ಬಾರಿ ಭತ್ತದ ಪೈರ ಕಟಾವು ಮಾಡಲೇ ಬಾರದೆಂದು ಆತ ತನ್ನಲ್ಲೇ ತೀರ್ಮಾನಿಸಿರುತ್ತಾನೆ! ಆ ನಿಶ್ಚಯ ಆತನಲ್ಲಿ ದೃಢವಾಗಿರುತ್ತದೆ. ಇತ್ತೀಚಿಗೆ ಅತ್ತಕಡೆಯಿಂದ ಇತರ ದನಕರುಗಳೊಡಗೂಡಿ ಬರುವ ಜಿನ್ನಿಯೂ ಸಹ ಮೋಹನನ ಆರೈಕೆಗೋ ಏನೋ ಎಂಬಂತೆ ಆತನ ಜಮೀನಿನ ಮುಂದಿನ ಹಾದಿಯನು ಹಿಡಿಯುತ್ತಿರಲೇ ಇಲ್ಲ. ಅದೆಷ್ಟೇ ಹುಲ್ಲನ್ನು ತಂದು ಹಾಕಿದರೂ ಎಲ್ಲವನ್ನು ತಿಂದು ಮೋಹನನ ಕೈಗಳೆನ್ನೆ ನೆಕ್ಕುತ್ತಾ ಅಲ್ಲೇ ಒಂದು ಮರದ ನೆರಳಿನಲ್ಲಿ ದಣಿವಾರಿಸಿಕೊಂಡು ಸಂಜೆ ಬರುವ ಮತ್ತದೇ ದನಕರುಗಳ ಸಾಲಿಗೆ ಸೇರಿಕೊಳ್ಳುತ್ತದೆ. ಮೋಹನನಿಗೂ ತನ್ನ ಮಾತುಗಳನ್ನು ಪ್ರೆಶ್ನಿಸದೆ ಸುಮ್ಮನೆ ಕೇಳುವ ಯಾರೊಬ್ಬರಾದರೂ ಬೇಕಿದ್ದರಿಂದ ಆಕೆಯನ್ನು ಜಮೀನಿನೊಳಗೆಯೆ ಹುಲ್ಲನ್ನು ಮೇಯಲು ಬಿಡುತ್ತಿದ್ದ.

ಮಧ್ಯಾಹ್ನದ ಬಿಸಿಲಿಗೆ ಪಕ್ಕದಲ್ಲಿ ಮಲಗಿದ್ದ ಜಿನ್ನಿಯ ಕುತ್ತಿಗೆಯನ್ನು ಸವರುತ್ತಾ, ಮತ್ತೊಂದು ಕೈಯಲ್ಲಿ ಪುಸ್ತಕವೊಂದನ್ನು ಹಿಡಿದು ಓದುತ್ತಾ ದಣಿವಾರಿಸಿಕೊಳ್ಳುತ್ತಿದ್ದ ಮೋಹನನಿಗೆ ಜನರ ಮಿಜಿಗುಡುವ ಸದ್ದು ಕೇಳಿತು. ಹತ್ತರಿಂದ ಹದಿನೈದು ಜನರ ಗುಂಪು ತಮ್ಮ ತಮ್ಮಲ್ಲೇ ಏನನ್ನೋ ಮಾತಾನಾಡಿಕೊಳ್ಳುತ್ತಾ ಮೋಹನ ಕೂತಿರುವೆಡೆಗೇ ಬರತೊಡಗಿತ್ತು. ಪುಸ್ತಕವನ್ನು ಕೂಡಲೇ ಮಡಚಿಟ್ಟು ಎದ್ದು ನಿಂತ ಮೋಹನನ ಬಳಿಗೆ ಬಂದ ಗುಂಪಿನ ಎಲ್ಲರೂ ಆತನಿಗೆ ನಮಸ್ಕರಿಸಿದರು ಹಾಗು ತಾವು ಬಂದ ವಿಚಾರವನ್ನು ಹೇಳತೊಡಗಿದರು. ವರ್ಷಾನುವರ್ಷದಿಂದ ಕೃಷಿಯನ್ನು ಮಾಡಿಕೊಂಡು ಬರುತ್ತಿರುವ ಅವರುಗಳು ಮೋಹನನ ಜಮೀನಿನಲ್ಲಿ ಬೆಳೆದ ಕೀಟರಹಿತ, ರೋಗರಹಿತ ಸಮೃದ್ಧ ಗಿಡಗಳನ್ನು ನೋಡಿಯೇ ಇರಲಿಲ್ಲವಂತೆ. ಅಲ್ಲದೆ ಹಳ್ಳಿಯ ರೈತರು ಬಳಸುವ ಯಾವುದೇ ಕೆಮಿಕಲ್ ಪೂರಿತ ಗೊಬ್ಬರಗಳನ್ನು ಬಳಸದೆಯೇ ಅವರುಗಳ ಖರ್ಚಿನ ಅರ್ಧಕ್ಕಿಂತ ಕಡಿಮೆ ಹಣದಲ್ಲಿ ಈತ ಜಮೀನನ್ನು ನಿರ್ವಹಿಸುತ್ತಿರುವುದರ ಬಗ್ಗೆ ಕೇಳಿ ತಿಳಿದುಕೊಳ್ಳಬೇಕೆಂಬ ಕೂತುಹಲದಿಂದ ಬಂದಿರುವೆವು ಎನ್ನುತ್ತಾರೆ. ರೈತರ ಆಸಕ್ತಿಯನ್ನು ಕಂಡು ಸಂತೋಷಗೊಂಡ ಮೋಹನ ಸಾವಯವ ಕೃಷಿ, ಜೈವಿಕ ಕೃಷಿ, ಹನಿ ನೀರಾವರಿ, ಮಣ್ಣಿನಲ್ಲಿ ನೀರಿನ ಸಾಂಧ್ರತೆಯನ್ನು ಹೆಚ್ಚಿಸುವ ಬಗೆ, ಗಿಡಗಳ ನಡುವಿನ ನಿಖರವಾದ ಅಂತರ ಅಲ್ಲದೆ ಕ್ರಿಮಿನಾಶಕ ಹಾಗು ರಾಸಾಯನಿಕಪೂರಿತ ಗೊಬ್ಬರಗಳಿಂದ ಪ್ರಾಣಿ ಪಕ್ಷಿಗಳಿಗೆ, ಜಮೀನಿನ ನೆಲಕ್ಕೆ, ಮಾನವರಿಗೆ ಆಗುತ್ತಿರುವ ದುಷ್ಪರಿಣಾಮಗಳ ಬಗೆಗೆ ತನಗೆ ಗೊತ್ತಷ್ಟು ವಿಚಾರವನ್ನು ತಿಳಿಸುತ್ತಾನೆ. ಇಂದು ಜೈವಿಕ ಇಂಧನದಿಂದ ಏರೋಪ್ಲೇನುಗಳನ್ನೇ ಓಡಿಸುತ್ತಿರುವಾಗ ಕೃಷಿಕರಾದ ನಾವುಗಳು ಏಕೆ ಇಂತಹ ಪರಿಸರ ಸ್ನೇಹಿ ವಿಧಾನಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಬಾರದು? ಎಂದಾಗ ರೈತರಲ್ಲಿ ಉತ್ತರವೇ ಇರುವುದಿಲ್ಲ. ಹಲವರು ಈತನ ವಿವರಣೆಯನ್ನು ಮೆಚ್ಚಿದರೆ ಇನ್ನು ಕೆಲವರು ಇವೆಲ್ಲ ಹಾಗಿಹೋಗುವ ವಿಚಾರವಲ್ಲ ಎಂಬಂತೆ ಮುಗುಳ್ನಗುತ್ತಿರುತ್ತಾರೆ. ಗುಂಪಲ್ಲಿ ಯಾರೋ ಒಂದಿಬ್ಬರು 'ಈ ಬಾರಿ ಸರ್ಕಾರ ಎಷ್ಟ್ ಸಾಲ ಮಾಡುತ್ತೆ ಸಾಮಿ, ಅಷ್ಟ್ ಹೇಳಿ ನಮಿಗೆ ಸಾಕು' ಎನ್ನುತ್ತಾ ಗೊಳ್ ಎಂದು ನಗುತ್ತಾರೆ.

ಇವರ ವಿಚಾರಸರಣಿಯನ್ನೇ ದೂರದಲ್ಲಿ ನಿಂತು ಕೇಳುತ್ತಿದ್ದ ದೊಡ್ಡೇಗೌಡರು 'ಥು ನಿಮ್ ಮಕುಕ್ಕೆ, ಸಾಲಮನ್ನಕ್ಕ್ ಕಾಯೋ ಸೋಂಬೇರಿಗಳ, ಹೋಗಿ ಪಕ್ಕದ್ ಊರಲ್ಲಿ ಕಾಳ ಈ ಸಾರಿ ಸರ್ಕಾರ ಸಾಲ ಮನ್ನಾ ಮಾಡಲ್ಲ ಅನ್ನೋದ ಕೇಳಿ ಕೆರೆಗ್ ಹಾರಿ ಸತ್ತೋಗ್ಯಾವ್ನಂತೆ! ಸಾಲ ಮನ್ನಾ ಬೇಕಾ ನಿಮುಗೆ, ಹೋಗಿ ಆ ಎಳೆ ಮಕ್ಳ ಅಳೋದ ನೋಡಿ. ಮೈ ಬಗ್ಸಿ ದುಡಿದ್ರೆ ಭೂಮವ್ವ ಕೊಟ್ಟೆ ಕೊಡ್ತಾವ್ಲೇ. ಬ್ಯಾಸಾಯ ಮಾಡೋದು ಬರಿ ದುಡ್ಡ್ ಮಾಡೋ ಗ್ಯಾಮೆ ಆಗಿರ್ವಾಗ ನಿಮ್ಗೆ ಕೃಷಿ ಅಂದ್ರೆ ಸಾಲ ಮನ್ನಾ ಅನ್ನೋದ್ ಬಿಟ್ರೆ ಬ್ಯಾರೇನು ಅಲ್ಲ!' ಎನ್ನುತ್ತಾರೆ. ಪಕ್ಕದೂರಿನ ಕಾಳನನ್ನು ಬಲ್ಲ ಕೆಲವರು ಆತನ ಸಾವಿನ ಸುದ್ದಿಯನ್ನು ಕೇಳಿ ದಬದಬನೆ ಆ ಕಡೆ ಓಡತೊಡಗುತ್ತಾರೆ. ಅವರುಗಳೆಲ್ಲ ಅಲ್ಲಿಂದ ಹೋದನಂತರ ಗೌಡರು ಕಾಳನ ಬಗ್ಗೆ ಹೇಳುತ್ತಾ, ಆತ ಸರ್ಕಾರ ಪೂರಾ ಸಾಲವನ್ನು ಮನ್ನಾ ಮಾಡೇ ಮಾಡುತ್ತದೆ ಎಂಬ ಹುಮ್ಮಸ್ಸಿನಲ್ಲಿ ತೀರಿಸಲು ಅಸಾಧ್ಯವಾದ ಹಣವನ್ನು ಬ್ಯಾಂಕುಗಳಿಂದ ಪಡೆದದ್ದಾಗಿಯೂ ನೆನ್ನೆ ಸರ್ಕಾರ ಕೇವಲ ಅಲ್ಪಪ್ರಮಾಣದ ಸಾಲವನ್ನು ಬಿಟ್ಟು ಉಳಿದ ಎಲ್ಲಾ ಬಗೆಯ ಸಾಲವನ್ನು ಮನ್ನಾ ಮಾಡುವುದಿಲ್ಲವೆಂದು ಘೋಷಿಸಿದಾಗ ಹುಚ್ಚನಂತೆ ಚೀರಿಕೊಳ್ಳುತ್ತಾ ಕೆರೆಗೆ ಹಾರಿ ಜೀವ ಕಳೆದುಕೊಂಡ ಎನ್ನುತ್ತಾರೆ. ಅಲ್ಲದೆ ಇನ್ನೊಬ್ಬ ರೈತನ ಉದಾಹರಣೆಯನ್ನು ನೀಡುತ್ತಾ ಬ್ಯಾಂಕು ವಹಿವಾಟುಗಳ ಅರಿವಿಲ್ಲದ ಆತ ತನ್ನ ಹೆಚ್ಚಿನ ಸಾಲವನ್ನು ಬರಿ ಅವರಿವರಲ್ಲಿ ಕೈಸಾಲವಾಗೇ ಮಾಡಿದ್ದರಿಂದ ಕಳೆದ ಬಾರಿ ಸರ್ಕಾರ ರಾಷ್ಟ್ರೀಕೃತ ಹಾಗು ಸಹಕಾರಿ ಬ್ಯಾಂಕುಗಳ ಸಾಲವನ್ನು ಮನ್ನಾ ಮಾಡಿದರೂ ಈತನಿಗೆ ಅದು ಪ್ರಯೋಜನವಾಗದೇ ಅದೇ ಖಿನ್ನತೆಯಲ್ಲಿ ಪ್ರಾಣವನ್ನು ಕಳೆದುಕೊಂಡ ಎನ್ನುತ್ತಾರೆ. 'ಈಗೆಲ್ಲ ಕೃಷಿ ಹೊಂಡ, ಇತರ ನೀರಾವರಿ ವ್ಯವಸ್ಥೆ, ಕೃಷಿ ಮಾಡೋ ಹತಾರಗಳನ್ನು ಬಾಡಿಗೆಗೆ ನೀಡುವುದು, ಬೆಂಬಲ ಬೆಲೆ, ಮುಕ್ತ ಮಾರುಕಟ್ಟೆ, ಎಪಿಎಂಸಿ, ಅಲ್ಲದೆ ಸಾಲದ ಜೊತೆಗೆ ಆ ಸಾಲಕ್ಕೆ ಇನ್ಶೂರೆನ್ಸ್ ಅನ್ನೂ ಸರ್ಕಾರ ಮಾಡಿ ಕೊಡ್ತಿದ್ರೂ ಇವ್ರುಗಳಿಗೆ ಕೃಷಿ ಅಂದ್ರೆ ಅಸಡ್ಡೆ. ಅಲ್ಲ ಮಗ, ನಮ್ಮಜ್ಜ ನಮ್ಮಪ್ಪನೂ ಕೃಷಿ ಮಾಡೇ ಜೀವನ ಸಾಗ್ಸ್ಡೂರು, ಏನೇ ಮಳೆ ಬರ್ಲಿ, ಅದೆಂತದೆ ರೋಗ ಬರ್ಲಿ, ಅವಾಗೆಲ್ಲ ಅವ್ರು ಬ್ಯಾಸಾಯನ ಮಾಡ್ಲಿಲ್ವಾ? ನಮ್ಮ್ನೆಲ್ಲಾ ಸಾಕ್ಲಿಲ್ವ? ಅವಾಗೆಲ್ಲ ಅದ್ಯಾವ ಸರ್ಕಾರ ಸಾಲ ಕೊಡಕ್ಕ್ ಬರೋದು ಹೇಳು. ' ಎಂದಾಗ ಮೋಹನನಿಗೆ ಉತ್ತರ ಕಾಣದಾಯಿತು.

ಇನ್ನೂ ಕೆಲ ದಿನಗಳು ಕಳೆದವು. ಈ ಬಾರಿಯ ಮಳೆ ಅದೇಕೋ ಊರನ್ನೇ ಮುಳುಗಿಸಿಬಿಡುತ್ತದೆಯೋ ಎಂಬ ರೀತಿಯಲ್ಲಿ ಸುರಿಯತೊಡಗಿತ್ತು. ಮಳೆಯಲ್ಲಿ ಕೆಲಸ ಮಾಡಬೇಡೆಂದು ಮನೆಯವರು ಅದೆಷ್ಟು ಹೇಳಿದರೂ ಮೋಹನ ಯಾರ ಮಾತನ್ನು ಕೇಳದೆ ಜಮೀನಿಗೆ ಹೋಗುತ್ತಿರುತ್ತಾನೆ. ಒಂದೇ ಸಮನೆ ಬೀಳುತ್ತಿದ್ದ ಆ ಮೆಳೆಯಲ್ಲಿ ಕೆಲಸ ಮಾಡುವುದೆಂದರೆ ಆತನಿಗೆ ಬಲು ಇಷ್ಟದ ಕಾಯಾಕ. ಆದರೆ ಇಂದು ರಾತ್ರಿ ಬಂದ ಮಹಾಮಳೆಗೆ ಮೋಹನನ ಮನೆಯ ಸುತ್ತಲ ಗಿಡಮರಗಳೆಲ್ಲ ಚಿತ್ರ ವಿಚಿತ್ರವಾಗಿ ತಿರುಗಿ ಮುರುಟಿಗೊಂಡಿದ್ದವು. ಬೆಳಗಿನ ಮುಂಜಾವಿನ ಚಿಲಿಪಿಲಿ ಸದ್ದುಗಳೂ ಮೌನವಾಗಿದ್ದವು. ಮೋಡ ಕವಿದ ಮಂಕಾದ ಆ ಮುಂಜಾವು ಏನೋ ಒಂದು ಬಗೆಯ ಆಘಾತದ ಮುನ್ಸೂಚನೆಯನ್ನು ನೀಡುವಂತಿತ್ತು. ರಾತ್ರಿ ಸುರಿದ ಮಳೆಗೆ ಊರಿನ ಹಲವಾರು ಮನೆಗಳು ಬಿದ್ದವೆಂದು ಊರ ಹೊರಗೆ ಅಲ್ಲಲ್ಲಿ ಭೂಕುಸಿತವಾಗಿದೆ ಎಂಬ ಮಾತನ್ನು ಅಮ್ಮನಿಂದ ತಿಳಿದ ಕೂಡಲೇ ಗಾಬರಿಕೊಂಡ ಮೋಹನ ಬರಿಗಾಲಿನಲ್ಲಿಯೇ ಜಮೀನಿನೆಡೆಗೆ ಓಡುತ್ತಾನೆ. ಕೊಂಚ ತಗ್ಗು ಪ್ರದೇಶದಲ್ಲಿದ್ದ ತನ್ನ ಜಮೀನನ್ನು ಬಂದು ನೋಡಿದರೆ ಅಕ್ಷರ ಸಹ ಗುರುತು ಹಿಡಿಯದ ಭೂಮಿಯಾಗಿ ಅದು ಮಾರ್ಪಾಡಾಗಿರುತ್ತದೆ! ಗದ್ದೆಗೆ ಅಂಟಿಕೊಂಡಿದ್ದ ಗುಡ್ಡದ ಒಂದು ಪಾರ್ಶ್ವ ಮಳೆಯ ಹೊಡೆತಕ್ಕೆ ಜರಿದು ಕಾಫಿ ಸಸಿಗಳು ಹಾಗು ಭತ್ತದ ಪೈರನ್ನು ಸಂಪೂರ್ಣವಾಗಿ ಮುಚ್ಚಿ ಹಾಕಿರುತ್ತದೆ! ಮೋಹನ ತಾನು ನಿಂತಲ್ಲಿಯೇ ಕುಸಿಯುತ್ತಾನೆ. ತನ್ನ ಒಡಲಲ್ಲಿ ಹುಟ್ಟಿದ ಮಕ್ಕಳೇನೋ ಎಂಬಂತೆ ಬೆಳೆಸಿದ್ದ ಗಿಡಗಳ ಶವವನ್ನು ಕಂಡು ದುಃಖ ಉಲ್ಬಣಿಸಿ ಬಂದು ಜೋರಾಗಿ ಅಳತೊಡಗುತ್ತಾನೆ. ಗೊಂಚಲು ಭತ್ತದ ಸಮೇತ ನೀರಿನಲ್ಲಿ ಮುಳುಗಿಹೋಗಿದ್ದ ಸಸಿಯೊಂದನ್ನು ಕಂಡು ಆತನ ಸಂಕಟ ಇನ್ನೂ ವಿಪರೀತವಾಯಿತು. ಅದು ತನ್ನ ಅತ್ಯಾಪ್ತರೊಬ್ಬರನ್ನು ಕಳೆದುಕೊಂಡಾಗ ಉಂಟಾಗುವ ದುಃಖವಾಗಿದ್ದಿತು. ಜಗತ್ತೇ ಬೇಡವೆನಿಸುತ್ತದೆ ಆತನಿಗೆ.

ಮುನಿದು ಅಕ್ಷರಸಹ ರುದ್ರಕಾಳಿಯಂತಾಗಿದ್ದ ಪರಿಸರವನ್ನು ತನ್ನ ಅಳುವ ಕಣ್ಣುಗಳಲ್ಲೇ ನೋಡುತ್ತಾ ನಿಂತಿದ್ದ ಮೋಹನನಿಗೆ ಪಕ್ಕದ ಹಳ್ಳವು ತನ್ನ ಮಿತಿಯನ್ನು ಮೀರಿ ನದಿಯಂತೆ ಹರಿಯುತ್ತಿದ್ದದ್ದು ತಿಳಿಯುವುದಿಲ್ಲ. ಕಾಲುಜಾರಿ ದೊಪ್ಪನೆ ನೀರಿನೊಳಗೆ ಬಿದ್ದುಬಿಡುತ್ತಾನೆ. ನೀರಿನ ರಭಸ ಕೂಡಲೇ ಆತನನ್ನು ದೂರಕ್ಕೆ ಎಳೆದುಕೊಂಡು ಹೋಗುತ್ತದೆ. ಒಂತಿಷ್ಟು ಈಜು ಬರುತ್ತಿದ್ದರೂ ಆ ರಭಸಭರಿತ ನೀರಿನಲ್ಲಿ ಏನೂ ಮಾಡಲೂ ಆಗುವುದಿಲ್ಲ. ಮೋಹನ ಜೋರಾಗಿ ಕೂಗಿಕೊಳ್ಳುತ್ತಾನೆ. ಯಾರೊಬ್ಬರೂ ಕಾಣುವುದಿಲ್ಲ! ಅಡ್ಡಡ್ಡ ಬಿದ್ದಿದ್ದ ಮರದ ಕಾಂಡಗಳು, ಕಲ್ಲಿನ ಚೂರುಗಳು ಕೈಕಾಲುಗಳಿಗೆ ತಗುಲಿ ಅಲ್ಲಲ್ಲಿ ರಕ್ತ ಸುರಿದು ನೋವು ಹೆಚ್ಚಾಗತೊಡಗುತ್ತದೆ. ತನ್ನ ಜಮೀನಿನೊಟ್ಟಿಗೆ ತನ್ನ ಅಂತ್ಯಗಾಲವೂ ಬಂತೆಂದು, ಬರುವ ಮುನ್ನ ಪೋಷಕರಿಗಾದರೂ ಒಮ್ಮೆ ಹೇಳಿ ಬರಬೇಕಿತ್ತೆಂದುಕೊಳ್ಳುತ್ತಾನೆ. ನೀರು ಮೂಗಿನ ಮೂಲಕ ತಲೆಗೆ ಏರಿ ಕಮ್ಮು ಬರತೊಡಗಿ ಸಂಕಟ ವಿಪರೀತವಾಗುತ್ತದೆ. ನಾಲ್ಕೈದು ಕಿಲೋಮೀಟರ್ ದೂರದಲ್ಲಿರುವ ನದಿಗೆ ಸೇರುವ ಹಳ್ಳ ಹೆಚ್ಚಾಗಿ ಕಾಡಿನೊಳಗೆಯೇ ಹರಿಯುವುದರಿಂದ ಯಾರೊಬ್ಬ ಮಾನವರೂ ಅದರ ಪಾತ್ರದಲ್ಲಿ ಕಾಣಸಿಗರು…

ಜೀವ ಭಯದಿಂದ ತತ್ತರಿಸಿ ಹೋಗಿದ್ದ ಮೋಹನನಿಗೆ ಒಮ್ಮೆಲೇ ಘಂಟೆಯ ಸದ್ದೊಂದು ಆ ಹರಿವಿನ ರಭಸದ ಸದ್ದಿನಲ್ಲೂ ಕೇಳತೊಡಗುತ್ತದೆ. ಕ್ಷಣಮಾತ್ರದಲ್ಲಿ ಅದು ಜಿನ್ನಿಯ ಕೊರಳಘಂಟೆಯ ಸದ್ದೆಂದು ಗುರುತಿಸಿದ ಮೋಹನನಿಗೆ ಮೈಯ ತುಂಬೆಲ್ಲ ಶಕ್ತಿಸಂಚಯನವಾದಂತಹ ಅನುಭವವಾಯಿತು. 'ಅಂಬಾ..' ಎಂಬ ಸದ್ದಿನೊಂದಿಗೆ ಕೂಗಿಕೊಳ್ಳುತ್ತಾ ಬಂದ ಜಿನ್ನಿ ಮೋಹನ ತೇಲುತ್ತಿದ್ದ ದಿಕ್ಕಿನೆಡೆಗೆ ಜೋರಾಗಿ ಓಡತೊಡಗಿದಳು. ಮೋಹನನ ಜಮೀನಿನ ಬೇಲಿಯನ್ನು ರಭಸವಾಗಿ ಹಾರಿ ಬಂದಿದ್ದರಿಂದ ಆಕೆಯ ಮೈಯ ಒಂದೆಡೆ ಸಿಗಿದು ಕೆಂಪಾಗಿರುತ್ತದೆ. ಕೊರಳ ಹಗ್ಗದೊಟ್ಟಿಗೆ ಮರದ ಕುಣಿಕೆಯನ್ನೂ ಕಿತ್ತುಕೊಂಡು ಬಂದಿದ್ದ ಜಿನ್ನಿ ಮೋಹನನಿಗಿಂತ ತುಸು ಮುಂದೋಗಿ, ಹಳ್ಳದ ನೀರು ತನ್ನ ಆಕೆಯ ಕುತ್ತಿಗೆಯ ಮಟ್ಟಕ್ಕೆ ತಲುಪವರೆಗೂ ಮುಂದೆ ಚಲಿಸಿ 'ಅಂಬಾ..' ಎಂದು ಕೂಗುತ್ತಾ ಮೋಹನ ತೇಲಿ ಬರುವುದನ್ನೇ ನೋಡುತ್ತಾ ನಿಂತಳು. ಕೊರಳ ಹಗ್ಗ ಕೊಂಚ ಉದ್ದವಾಗಿದ್ದರಿಂದ ಅದು ನೀರಿನಲ್ಲಿ ಬಹು ದೂರದವರೆಗೂ ತೇಲತೊಡಗಿತು. ಅಲ್ಲದೆ ಅದರ ಒಂದು ತುದಿಗೆ ಮರದ ಕುಣಿಕೆಯೂ ತೇಲುತ್ತಿದ್ದರಿಂದ ಮೋಹನನಿಗೆ ಹಗ್ಗವನ್ನು ಹಿಡಿದುಕೊಳ್ಳುವುದು ಕಷ್ಟಕರವಾಗಲಿಲ್ಲ. ಕೂಡಲೇ ಹಗ್ಗವನ್ನು ಹಿಡಿದುಕೊಂಡು ಎಳೆದುಕೊಳ್ಳುತ್ತಾ ದಡಕ್ಕೆ ಬಂದ ಮೋಹನ ಜಿನ್ನಿಯನ್ನು ತಬ್ಬಿ ಬಿಕ್ಕಿ ಬಿಕ್ಕಿ ಅಳತೊಡಗುತ್ತಾನೆ. ಅದು ಮೂಕಪ್ರಾಣಿಯ ಪ್ರೀತಿಯ ಮಹಿಮೆಯೋ ಅಥವಾ ನಿಸರ್ಗದ ಚಮತ್ಕಾರವೋ ಏನೋ ಮೋಹನ ನೀರಿಗೆ ಬೀಳುವದ ಮೊದಲೇ ಅರಿತಿತ್ತೇನೋ ಎಂಬಂತೆ ಜಿನ್ನಿ ಆತನನ್ನು ಕಾಪಾಡಲು ಓಡೋಡಿ ಬಂದಿರುತ್ತದೆ! ಅಷ್ಟರಲ್ಲಾಗಲೇ ಛತ್ರಿಯೊಂದನ್ನಿಡಿದುಕೊಂಡು 'ಅಂಬಾ.. ಜಿನ್ನಿ..' ಎಂದು ಕೂಗುತ್ತಾ ಜಿನ್ನಿಯ ಹುಡುಕಿಕೊಂಡು ಬಿರಬಿರನೆ ಬಂದ ಗೌಡರು, ಮೋಹನನ ಸ್ಥಿತಿಯನ್ನು ಕಂಡು ಹೌಹಾರಿದರು. ನೆಡೆದ ಘಟನೆಯನ್ನು ಕೇಳಿ ಕೊಂಚ ಕಾಲ ಸುಮ್ಮನಿದ್ದು 'ನೋಡಪ್ಪ ಮೋನ, ಎಲ್ಲಾನು ಕಳ್ಕೊಂಡ್ವು ಅನ್ನೋರಿಗೆ ಈ ನಿಸರ್ಗ ಮಾತೇನೇ ಮತ್ತೊಂದು ಅವ್ಕಾಶ ಕೊಡ್ತಳೇ. ಈಗ ನಿನ್ನ ಬದ್ಕಸೋಕೆ ಜಿನ್ನಿನೆ ನಿನ್ನ್ ಬಳಿ ಕಳ್ಸಿದ್ದಾಳೆ ನೋಡು. ಅಂತ ಭೂಮಾತೆ ನೀನ್ ಬೆಳ್ದ ಗದ್ದೇನ ಅಷ್ಟ್ ಸುಲಬಾಗಿ ಮುಚ್ಚಾಕಲ್ಲ ಕಣಪ್ಪ. ಮರಳಿ ಯತ್ನ ಮಾಡು ಮಗ. ಆಕೆ ಹಿಂಗ್ ಮಾಡಿರೋ ಹಿಂದೇನೂ ಏನೋ ಒಂದು ಕಾರ್ಣ ಇರುತ್ತೇ. ನಮ್ಮಂತ ಮಂಕ್ ಜೀವಗಳಿಗೆ ಅದು ಅರ್ಥ ಆಗಕಿಲ್ಲ. ಕೃಷಿ ಮಾಡೋರು ಈವೆಲ್ಲ ಕಷ್ಟ ನಷ್ಟಗಳಿಗೆ ತಯಾರಾಗಿರ್ಬೇಕು..ನಾವಾದ್ರೂ ಹೇಗೂ ನಡಿಯುತ್ತೆ. ಪಾಪ ಗದ್ದೆ ಒಳಗೇ ಗುಡಿಸಲನ್ನ ಕಟ್ಟಿಕೊಂಡು ಇರೋ ಒಂದೆಕ್ರೆ ಜಮೀನನಲ್ಲೇ ಗಂಜಿ ಕಣೋರ ಕಷ್ಟ ನೋಡಾಕ್ ಆಗಲ್ಲ ಕಾಣಪ್ಪಾ’ ಎನ್ನುತ್ತಾ ಆತನನ್ನು ಸಮಾಧಾನಿಸಿ ಹಿಂದಕ್ಕೆ ಕರೆದುಕೊಂಡು ಹೋಗುತ್ತಾರೆ.

ಅಷ್ಟ ದಿಕ್ಕುಗಳಿಂದಲೂ ರಭಸವಾದ ಗಾಳಿ ಛೇಡಿಸುವಂತೆ ಒಂದೇ ಸಮನೆ ಬೀಸುತ್ತಿರುತ್ತದೆ.ಅಷ್ಟರಲ್ಲಾಗಲೇ ಮೋಹನನ ಜಮೀನು ಬರುತ್ತದೆ.ಸಮಾಧಿಯಂತಾಗಿದ್ದ ಜಮೀನನ್ನು ಕಂಡು ದುಃಖ ಮತ್ತೊಮ್ಮೆ ಉಲ್ಬಣಿಸಿ ಬಂದರೂ ತಡೆದುಕೊಂಡು ಆತ ಗದ್ದೆಯ ಮೂಲೆಯಲ್ಲಿ ಇಟ್ಟಿದ್ದ ಹಾರೆಯನ್ನು ಕೈಗೆತ್ತಿಕೊಳ್ಳುತ್ತಾನೆ. ಅದು ತನ್ನೊಬ್ಬನ ಜಮೀನನ್ನು ಮರುನಿರ್ಮಿಸುವ ನಡೆಗಿಂತ ಹೆಚ್ಚಾಗಿ ಅವೈಜ್ಞಾನಿಕ ಕೃಷಿಯಿಂದ ಭೂಮಿಯನ್ನು ಹಾಳುಗೆಡವಿದ ಇಡೀ ಊರ ಜಮೀನುಗಳನ್ನೇ ಮರುನಿರ್ಮಿಸುವ ಸಂಕಲ್ಪವಾಗಿರುತ್ತದೆ…

Sunday, December 23, 2018

ಕನ್ನಡಿಗನೊಬ್ಬನ ಕ್ಲಾಸಿಕ್ ವಿಮಾನಗಳು ಆಗಸದಲ್ಲಿ ಹಾರುವುದನ್ನು ನೋಡಲು ಇನ್ನೆಷ್ಟು ದಶಕಗಳು ಕಾಯಬೇಕೋ?!

'ಈತ ನಮ್ಮ ನೂರು ಬಿಲಿಯನ್ ಕಂಪನಿಯ ಚೇರ್ಮ್ಯಾನ್. ಅಪ್ಪನ ಕಂಪನಿಯನ್ನು ಮುನ್ನೆಡಿಸಿಕೊಂಡು ಬಂದು ಎದ್ವಾ ತದ್ವಾ ಸಾಲವನ್ನು ಮಾಡಿ ತೀರಿಸಲಾಗದೆ ಇಂದು ವಿದೇಶದಲ್ಲಿ ಅಡಗಿ ಕೂತಿದ್ದಾನೆ. ಆತ ಮಾಡಿರುವ ಸಾಲದ ಮೊತ್ತ ಹೆಚ್ಚು ಕಡಿಮೆ ನಮ್ಮ ಇಡೀ ಕಂಪನಿಯ ರೆವೆನ್ಯೂ ಮೊತ್ತಕ್ಕೆ ಸಮ. ನಮ್ಮ ಕಂಪನಿಯನ್ನಷ್ಟೇ ಅಲ್ಲದೆ ನಮ್ಮನ್ನು ನಂಬಿಕೊಂಡು ಕೂತಿರುವ ಇನ್ನೂ ಹತ್ತಾರು ಕಂಪನಿಗಳ ಭವಿಷ್ಯದೊಟ್ಟಿಗೆ ಚೆಲ್ಲಾಡಿ ಮರೆಯಾದವನಿವ' ಎಂಬಮಾತುಗಳಿಗೆ ಪೂರಕವಾಗಿರುವ ಹಾಗು ಅದೇ ಪೇಜಿನಲ್ಲಿ ಕಂಪನಿಯ ಇತರ ಉದ್ಯೋಗಿಗಳನ್ನು Mr. ಅಥವ Mrs. ಎಂಬ ಗೌರವ ಸೂಚಕಗಳನ್ನು ಬಳಸಿ ಸಂಭೋದಿಸಿ ಆದರೆ ಕಂಪನಿಯ ಚೇರ್ಮ್ಯಾನ್ ನನ್ನು ಕೇವಲ ಹೆಸರಿನಿಂದಷ್ಟೇ ಕರೆಯುವ ಕಂಪನಿಯ ವೆಬ್ಸೈಟ್ ಅನ್ನು ಎಲ್ಲಿಯಾದರೂ ಕಂಡಿರುವಿರಾ? ಇಲ್ಲವಾದರೆ ಒಂದು ಕಾಲಕ್ಕೆ ಇಡೀ ವಿಶ್ವದಲ್ಲೇ ಟಾಪ್ ಸ್ಪಿರಿಟ್ ಕಂಪನಿಗಳಲ್ಲಿ ಒಂದಾಗಿ ಇಂದು ಅಕ್ಷರ ಸಹ ತನ್ನ ಉಳಿವಿಗಾಗಿ ಪರದಾಡುತ್ತಿರುವ ಯುಬಿ.ಗ್ರೋಪ್ಸ್ ನ ವೆಬ್ಸೈಟ್ ಗೆ ಒಮ್ಮೆ ಭೇಟಿ ಕೊಡಿ. ತನಗೆ ಅನ್ನ ಕೊಟ್ಟ ಒಡೆಯನಾದರೂ, ತಪ್ಪು ಮಾಡಿದಾಗ ಆತನನ್ನು ಕಳ್ಳನೆಂದೇ ಕರೆಯುತ್ತೀವಿ ಎಂಬಂತಿದ್ದೆ ಅಲ್ಲಿಯ ಬೋರ್ಡ್ ಆಫ್ ಡೈರೆಕ್ಟರ್ ಗಳ ಮಾತುಗಳು.

ಯುಬಿ.ಗ್ರೋಪ್ಸ್. ವಿಠ್ಠಲ್ ಮಲ್ಯರಿಂದ ಹಿರಿದಾಗುತ್ತಾ ಬೆಳೆದುಬಂದ ಮದ್ಯದ ಈ ಸಂಸ್ಥೆ ಎಂಬತ್ತರ ದಶಕದಷ್ಟೊತ್ತಿಗೆ ದೇಶದ ಅತ್ಯುನ್ನತ ಸ್ಪಿರಿಟ್ ಕಂಪೆನಿಗಳಲ್ಲಿ ಒಂದೆನಿಸಿಕೊಂಡಿತ್ತು. ತಾನು ಕಟ್ಟಿದ ಭವ್ಯ ಕೋಟೆಯನ್ನು ಇನ್ನೂ ಹಿರಿದಾಗಿಸುವ ಕನಸ್ಸು ವಿಠ್ಠಲ್ ಮಲ್ಯರದು. ಆ ಕನಸ್ಸಿನ ಮೂಲಬೇರು ತನ್ನ ಏಕೈಕ ಸುಪುತ್ರ. ವಿದೇಶದಲ್ಲೇ ನೆಲೆಯೂರಿದ್ದ ಆತನನ್ನು ಇಲ್ಲಿಗೆ ಕರೆತರುವ ಮೊದಲು ಆತನ ಚಿಗುರು ಮೀಸೆಯ ಕಾಲದಲ್ಲೇ ತನ್ನದಲ್ಲದ ಬೇರೊಂದು ಕಂಪನಿಯಲ್ಲಿ (Hoechst Corporation ) ಕೆಲಸಮಾಡಲು ಸೂಚಿಸುತ್ತಾರೆ. ಕಾರಣ ವ್ಯವಹಾರಗಳ ಹಾಗು ಮಾರುಕಟ್ಟೆಯ ಹಾಗುಹೋಗುಗಳ ತಿಳುವಳಿಕೆ. ಇದು ಒಬ್ಬ ಕೋಟ್ಯಧಿಪತಿ ಅಪ್ಪನಿಗೆ ಇರುವ ಸಹಜ ತುಮುಲಾ. ತಾನು ಬೆಳೆಸಿಕೊಂಡು ಬಂದ ಸಾಮ್ರ್ಯಾಜ್ಯವನ್ನು ಮುನ್ನೆಡೆಸಿಕೊಂಡು ಒಯ್ಯುವ ಒಬ್ಬ ಸಾರಥಿ ನನ್ನ ಮಗನಾದರೆ ಸಾಕೆಂದು ಅವರ ಆಶಯವಿತ್ತೇನೋ. ಆದರೆ ಇತ್ತಕಡೆ ಖಾಸಗಿ ಕಂಪನಿಯಲ್ಲಿ ಸಾಮಾನ್ಯ ನೌಕರನಾಗಿ (ಊಹೆಯಷ್ಟೇ!) ದುಡಿಯುತ್ತಿದ್ದ ಬಿಸಿರಕ್ತದ ಆ ಮಗನಿಗೆ ವಯೋಸಹಜವಾದ ಅದೇನೇ ಶೋಕಿಗಳಿದ್ದರೂ ಕಂಪನಿಯನ್ನು ವಿಶ್ವಮಟ್ಟದಲ್ಲಿ ಮಿಂಚುವಂತೆ ಮಾಡುವ ಮಹಾದಾಸೆಯಿದ್ದಿತು. ಅಂತೆಯೇ 1983 ರಲ್ಲಿ ವಿಠ್ಠಲ್ ಮಲ್ಯರ ಕಾಲವಾದ ನಂತರ ಸಂಸ್ಥೆಯ ಆಡಳಿತ ಚುಕ್ಕಾಣಿಯನ್ನು ಹಿಡಿದ ಮಗ ನೋಡ ನೋಡುತ್ತಲೇ ದೇಶವೇ ಬೆರಗಾಗುವಂತಹ ಸಾಮ್ರಾಜ್ಯನು ಕಟ್ಟಿದ. ಕೇವಲ ಸ್ಪಿರಿಟ್ ಉದ್ಯಮವೊಂದೇ ಅಲ್ಲದೆ, ಇಂಜಿನಿಯರಿಂಗ್, ಟ್ರೇಡಿಂಗ್, ಕೆಮಿಕಲ್ಸ್, ಫಾರ್ಮುಲಾ ಒನ್ ರೇಸ್, ಐಪಿಎಲ್, IT Consulting ನಂತಹ ಹತ್ತಾರು ವಲಯಗಳನ್ನು ಆಕ್ರಮಿಸಿಕೊಳ್ಳುತ್ತಾ, ನಷ್ಟ ಹೊಂದುತ್ತಿದ್ದ ಕೆಲ ಸಂಸ್ಥೆಗಳನ್ನು ಮಾರುತ್ತಾ, ಅಪ್ಪನಿಂದ ಬಂದ ಸಂಸ್ಥೆಯ ವಹಿವಾಟನ್ನು ಒಂದಲ್ಲ ಎರಡಲ್ಲ ಬರೋಬ್ಬರಿ 64% ನಷ್ಟು ಹೆಚ್ಚಿಸಿ ತೋರಿಸುತ್ತಾನೆ. ಅದೂ ಸಹ ಕೇವಲ 15 ವರ್ಷಗಳ ಅಂತರದೊಳಗೆ. ಮುಂದೆ ಯುಬಿ.ಗ್ರೋಪ್ಸ್ ಕೇವಲ ಸ್ಪಿರಿಟ್ ಸಂಸ್ಥೆಯಂದಷ್ಟೇ ಅಲ್ಲದೆ ದೇಶದ ಅತ್ಯುನ್ನತ ಸಂಘಟಿತ ಸಂಸ್ಥೆಗಳಲ್ಲಿ ಒಂದಾಯಿತು.

ಹೆಸರು ವಿಜಯ್ ವಿಠ್ಠಲ್ ಮಲ್ಯ. ಬ್ರಾಹ್ಮಣನೆಂಬ ಗರಿ ಹೆಸರಿಗೆ ಮಾತ್ರ. ಉಳಿದಂತೆ ಮನುಷ್ಯ ಏಕ್ದಂ ಮಾಸ್ ವಿಥ್ ಕ್ಲಾಸ್. ಆ ರಂಗು ರಂಗಿನ ಬಟ್ಟೆಗಳೇನು, ಕೋಟಿ ಬೆಲೆಬಾಳುವ ವಾಚು ಶೆಡ್ಗಳೇನು, ಕೈಯಲೊಂದು ಎಣ್ಣೆಯ ಬಾಟಲು, ಸೊಂಟದ ಪಕ್ಕಕೊಬ್ಬಳು ರಂಬೆಯಂತಹ ಬೆಡಗಿ. 'ಕಿಂಗ್ ಆಫ್ ಗುಡ್ ಟೈಮ್ಸ್' ಎಂಬ ಮಾತಿಗೆ ಪಕ್ಕಾ ಅನ್ವರ್ಥ ನಾಮವಾಗಿದ್ದಿತು ಆತನ ವಿಲಾಸಿ ಜೀವನ. Hopefully ಹೀಗಲೂ ಹೆಚ್ಚು ಕಡಿಮೆ ಹಾಗೆಯೆ ಇದೆ. ಆತ ತೆರೆಯ ಹಿಂದೆ ಅದೇನೇ ಮಾಡಲಿ, ಆದರೆ ಮಾರುಕಟ್ಟೆಯ ತೆರೆಯ ಮುಂದೆ ಆತನೊಬ್ಬ ಪಕ್ಕಾ ಬಿಸಿನೆಸ್ ಮ್ಯಾನ್. ಜನ ಯಾವುದನ್ನು ಆತನ ಶೋಕಿ ಎಂದು ಕರೆಯುತ್ತಿದರೋ ಅವುಗಳೆಲ್ಲವೂ ಇಂದು ವಿಶ್ವಪ್ರಖ್ಯಾತ ಬ್ರಾಂಡ್ ಗಳಾಗಿ ಕೋಟ್ಯಂತರ ಜನರ ಮನೆಮಾತಾಗಿವೆ. ಬ್ರಾಂಡ್ ಎಂಬ ಪದದ ನಿಜ ಅರ್ಥ ತಿಳಿದವರಿಗಷ್ಟೇ ಗೊತ್ತು ಒಂದು ಬ್ರಾಂಡನ್ನು ಕಟ್ಟುವುದೆಷ್ಟು ಕಷ್ಟವೆಂದು. ಈಗಂತೂ ಕಟ್ಟುವುದೆಂದರೆ ಪಂಚೆ ಉಡುವ ಮೇಸ್ಟ್ರಿಯೂ ಕಟ್ಟುತ್ತಾನೆ. ಆದರೆ ಕಟ್ಟಿದ ಆ ಬ್ರಾಂಡನು ಜಗತ್ತಿನ ಮೂಲೆ ಮೂಲೆ ಗಳ ಕೋಟಿ ಕೋಟಿ ಜನರ ನೆಚ್ಚಿನ ಪ್ರಾಡಕ್ಟ್ ಆಗಿ ಪರಿವರ್ತಿಸುವ ಕಾರ್ಯದಲ್ಲಿರುವ ಆ ಚಾಣಾಕ್ಷತನ ಕೇವಲ ಕುಡಿದು ತಿಂದು ತೇಗುವ ಡೊಳ್ಳೊಟ್ಟೆಗಳಿಗಳಿಗೆ ಬರುವಂತಹದಲ್ಲ. ಮಲ್ಯ ಈ ಮಾತಿಗೆ ಅಪವಾದ! ಅರ್ತಾಥ್ ಅಪ್ಪನಿಂದ ಬಳುವಳಿಯಾಗಿ ಪಡೆದ ಕೋಟೆಯೊಂದು ಇದ್ದಿದಂತೂ ನಿಜ. ಆದರೆ ಆ ಕೋಟೆಯನ್ನು ಸಾಮ್ರಾಜ್ಯವನ್ನಾಗಿ ಮಾಡಿ ತೋರಿಸಿದ ನಡೆಯಲ್ಲಿ ಆತನ ಮೋಜು ಮಸ್ತಿಯ ಆಟಗಳೆಲ್ಲವೂ ಗೌಣವಾಗುತ್ತವೆ. ಇಲ್ಲಿ ಮುಖದ ಮೇಲಿರುವ ಕಲೆಯೊಂದರಿಂದಷ್ಟೇ ಆ ವ್ಯಕ್ತಿತ್ವವನ್ನು ಅಳೆಯಾಲಾಗುತ್ತದೆಯೇ ವಿನಃ ಆದರ ಸುತ್ತಿರುವ ಆಕರ್ಷಕ ವ್ಯಕ್ತಿತ್ವದಿಂದಲ್ಲ.. ದೇಶವೆಂದರೆ ಟಾಟಾ, ಬಿರ್ಲಾ, ಅಂಬಾನಿ ಎಂದುಕೊಂಡವರಿಗೆ ಠಕ್ಕರ್ ಕೊಡುವ ಖಾಸಗಿ ಕಂಪನಿಯಾಗಿ ಯುಬಿ.ಗ್ರೋಪ್ಸ್ ಮಾರ್ಪಾಡಾಗತೊಡಗಿತು. ಅದು ಕೇವಲ ಕೊಟ್ಟು ಗಳಿಸುವ ವ್ಯವಹಾರವಷ್ಟೇ ಅಲ್ಲದೆ 'ವಾವ್' ಎಂಬ ಹ್ಯಾಪಿ ಫೀಡ್ಬ್ಯಾಕ್ ಗಳನ್ನು ಗ್ರಾಹಕರಿಂದ ಪಡೆಯುವ ಕಂಪೆನಿಯಾಯಿತು. ಎಲ್ಲ ಅಂದುಕೊಂಡಂತೆಯೇ ನೆಡೆಯುತ್ತಿತ್ತು. ಆಗ ಎಲ್ಲವೂ ಸರಿಯಾಗಿದ್ದಿತು.

ಅದು ವರ್ಷ 2003. ತನ್ನ ಬಹುವರ್ಷದ ಕನಸ್ಸೊಂದು ನನಸಾಗಿದ ದಿನವದು. ಮದ್ಯದ ಬಾಟಲಿಗಳ ಮೇಲೆ ಮೂಡಿ ಜಗತ್ಪ್ರಸಿದ್ದಿ ಹೊಂದಿದ ಅಕ್ಷರಗಳು ಈಗ ವಿಮಾನಯಾನ ವಲಯಕ್ಕೆ ಕಾಲಿರಿಸಿದವು. KFA (ಕಿಂಗ್ ಫಿಷರ್ ಏರ್ಲೈನ್ಸ್). ಆದರೆ ಸಂಸ್ಥೆ ತನ್ನ ವಿಮಾನವನ್ನು ಗಗನಕ್ಕೆ ಚಿಮ್ಮಿಸಲು ಬರೋಬ್ಬರಿ ಎರಡು ವರ್ಷ ಕಾಯಬೇಕಾಯಿತು. ಕೊನೆಗೂ ಮೇ 9, 2005 ರಲ್ಲಿ ಮುಂಬೈಯಿಂದ ಹೊರಟ Airbus A-320 ದೆಹಲಿ ವಿಮಾನ ನಿಲ್ದಾಣವನ್ನು ತಲುಪಿದಾಗ ಮಲ್ಯನ ಖುಷಿಗೆ ಪಾರವೇ ಇರಲಿಲ್ಲ. ಆದರೆ ಆ ಆಸಾಮಿಯ ಕನಸ್ಸು ಅಲ್ಲಿಗೆ ನಿಲ್ಲಲಿಲ್ಲ. ತನ್ನ ಕಂಪು ಬಿಳಿಪಿನ ಸೂಪರ್ ಕೂಲ್ ವಿಮಾನಗಳು ದೇಶವಿದೇಶಗಳ ನೆಲವನ್ನೂ ತಲುಪಬೇಕೆಂಬ ಮಹದಾಸೆ ಆತನದು. ಆದರೆ ನಮ್ಮ ದೇಶದ ಕಾನೂನಿನ ಪ್ರಕಾರ ಯಾವುದೇ ವಿಮಾನ ರಾಷ್ಟ್ರ ಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟಕ್ಕೆ ಹಾರಲು ಇಚ್ಛಿಸಿದರೆ ಆ ಸಂಸ್ಥೆಯ ಆಯುಷ್ಯ ಕಡಿಮೆ ಎಂದರೂ 5 ವರ್ಷಗಳಾಗಿರಬೇಕು.

ಮಲ್ಯ ಯೋಚಿಸಿದ. ಯೋಜಿಸಿದ. ಅದು ಬಡಜನರ ಏರ್ಲೈನ್ ಎಂದೇ ಪ್ರಸಿದ್ದಿ ಹೊಂದಿದ್ದ, ಸಾಮಾನ್ಯರಲ್ಲಿ ಅತಿ ಸಾಮನ್ಯನೊಬ್ಬನೂ ಮನಸ್ಸು ಮಾಡಿದರೆ ವಿಮಾನಯಾನ ಸಂಸ್ಥೆಯನ್ನೇ ಹುಟ್ಟುಹಾಕಬಹುದೆಂಬುದನ್ನು ತೋರಿಸಿಕೊಟ್ಟಿದ್ದ ಕ್ಯಾಪ್ಟನ್ ಗೋಪಿನಾಥ್ ರವರ ಡೆಕ್ಕನ್ ಏವಿಯೇಷನ್ ಸಂಸ್ಥೆ ನಷ್ಟದಲ್ಲಿ ಸಾಗುತ್ತಿದ್ದ ಕಾಲ. ಧುಬಾರಿ ತೈಲ ಬೆಲೆ ಹಾಗು ಅಷ್ಟೇ ಧುಬಾರಿಯಾದ ನಿರ್ವಹಣ ವೆಚ್ಚವನ್ನು ಭರಿಸಲಾಗದೆ ಕುಂಟುತ್ತಿದ್ದ ಡೆಕ್ಕನ್ ಏವಿಯೇಷನ್ ಮಲ್ಯನ ಕಣ್ಣಿಗೆ ಚಿನ್ನದ ಕೋಳಿಯಾಗಿ ಕಾಣತೊಡಗಿತು. ಕಾರಣ ಒಂದು ಪಕ್ಷ ತಾನೇನಾದರೂ ಆ ಸಂಸ್ಥೆಯ ಬಹುಪಾಲು ಷೇರನ್ನು ಖರೀದಿಸಿದರೆ ಅದಾಗಲೇ ಹತ್ತು ವರ್ಷಗಳನ್ನು ಪೂರೈಸಿದ್ದ ಡೆಕ್ಕನ್ ಏವಿಯೇಷನ್ ಕಿಂಗಫಿಶರ್ ಏರ್ಲೈನ್ಸ್ ನ ವಿಮಾನಗಳಿಗೆ ವಿದೇಶದ ಟಿಕೆಟ್ ಆಗಿ ಪರಿಣಮಿಸುತ್ತಿತ್ತು. ಹುಮ್ಮಸ್ಸಿನ ವಿಜಯ್ ಅಂದು ಹಿಂದೂ ಮುಂದೂ ನೋಡದೆ ಡೆಕ್ಕನ್ ಏವಿಯೇಷ ನ್ನಿನ 26% ಷೇರುಗಳನ್ನು ಖರೀದಿಸಿದ. ಕಿಂಗ್ ಫಿಷರ್ ಪರದೇಶದ ನೆಲವನ್ನೂ ಸ್ಪರ್ಶಿಸಿತು.

ಗುರಿಯೇನೋ ಸ್ಪಷ್ಟವಾಗಿದ್ದಿತು. ಆತನ ಆ ಸಾಧನೆ ಆತನೊಬ್ಬನದೇ ಅಲ್ಲದೆ ಇಡೀ ಕಂಪನಿಯನ್ನು, ಒಂದು ಕೋನದಲ್ಲಿ ದೇಶವನ್ನೂ ಹೆಮ್ಮೆ ಪಡುವಂತೆ ಮಾಡಿತ್ತು. ಆದರೆ ಈ ಬಾರಿ ಕಾಲ ಮಾತ್ರ ಕೈಕೊಟ್ಟಿತ್ತು. ವಿಮಾನಯಾನ ಶುರುವಾದ ಮೊದಲ ವರ್ಷದಿಂದಲೂ ಕೇವಲ ನೆಗೆಟಿವ್ ನಿವ್ವಳ ಲಾಭವಷ್ಟೇ ಕಂಪನಿಯ ಪಾಲಾಗತೊಡಗಿತು. ಒಂದು ಸಮಯದಲ್ಲಿ ದೇಶದ ಎರಡನೇ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾಗಿ ಬೆಳೆದರೂ ಗುಡ್ಡದಂತೆ ಬೆಳೆಯುತ್ತಿದ್ದ ನಷ್ಟವನ್ನು ಮಾತ್ರ ಯಾರೊಬ್ಬರಿಂದಲೂ ತಪ್ಪಿಸಲಾಗಲಿಲ್ಲ. ಸಂಸ್ಥೆಯ ಉಳಿವಿಗಾಗಿ ರಾಶಿ ರಾಶಿ ಸಾಲದ ಹೊರೆ. ಕಿಂಗ್ ಆಫ್ ಗುಡ್ ಟೈಮ್ಸ್ ನ ಬ್ಯಾಡ್ ಟೈಮ್ ಶುರುವಾಯಿತು.

ಮುಂದೆ ನೆಡೆದ ವಿಷಯಗಳೆಲ್ಲ ನಮ್ಮ ಮಾಧ್ಯಮಗಳು ನಮ್ಮೆಲ್ಲರ ತಲೆಯಲ್ಲಿ ಅಳಿಸದಂತೆ ಹಚ್ಚೋತ್ತಿವೆ. ಕಳ್ಳ, ಸುಳ್ಳ, ಮೋಸಗಾರ, ಬಂಡ, ಪುಕ್ಕಲ etc etc. ಅಲ್ಲಿಯವರೆಗೂ ತನ್ನ ಅಣ್ತಮ್ಮ ಎಂದು ಹೆಮ್ಮೆಯಿಂದ ಹೆಸರಿಸಿಕೊಳ್ಳುತ್ತಿದ್ದ ಪಕ್ಷಗಳೂ 'ನಂದಲ್ಲ ನಿಂದು, ನಿಂದಲ್ಲ ನಂದು' ಏನುತಾ ಕೆಸರಾಟವನ್ನು ಆಡತೊಡಗಿದವು. ಅತ್ತ ಕಡೆ ನೋಡಿದರೆ ಅಸಲಿನ ಮೇಲೆ ಬಡ್ಡಿಯ ತೂಕ ಹೆಚ್ಚಾಗತೊಡಗಿತು. ನೌಕರರಿಗೆ ತಿಂಗಳ ಸಂಬಳ ಕೊಡಲು ಹಣವಿರಲಿಲ್ಲ. ನೌಕರರು ಮುಷ್ಕರಕ್ಕೆ ಕೂತರು. ವಿಮಾನಗಳ ಹಾರಾಟ ಕ್ಷೀಣಿಸತೊಡಗಿತು. ಇತ್ತ ಕಡೆ ನೌಕರರು ಅತಂತ್ರರಾಗಿ ಪರದಾಡುತ್ತಿದ್ದರೆ ಅತ್ತ ಕಡೆ ಮಲ್ಯ ಕೋಟಿ ಕೋಟಿ ಹಣವನ್ನು ಐಪಿಎಲ್ ಹಾಗು ತನ್ನ ಬರ್ತ್ಡೇಯ ವಿಜೃಂಭಣೆಯಲ್ಲಿ ಸುರಿಯತೊಡಗಿದ. ಭವ್ಯ ಭಾರತದ MP ಯಾಗಿ ತನ್ನ ನೌಕರರನ್ನು ನಡುನೀರಿನಲ್ಲಿ ಬಿಟ್ಟು ಮೋಜು ಮಸ್ತಿ ಮಾಡಿದನ್ನು ಮಾತ್ರ ಯಾರು ಕೂಡ ಕ್ಷಮಿಸಲಾರರು. ಬಹುಷಃ ಇದೆ ಶಾಪ ‘ರಿಚರ್ಡ್ ಬ್ರಾನ್ಸನ್ ಆಫ್ ಇಂಡಿಯ’ ಎಂದೆನಿಸಿಕೊಂಡಿದ್ದ ಮಲ್ಯನನ್ನು ಬಲವಾಗಿ ತಟ್ಟಿರಬೇಕು.

ಸರಿ ಸುಮಾರು ಮೂರು ದಶಕಗಳ ತನ್ನ ಬಿಸಿನೆಸ್ ಮಂತ್ರವನ್ನು ಮಲ್ಯ ಕಿಂಗ್ಫಿಷರ್ ಏರ್ಲೈನ್ಸ್ ಅನ್ನು ಮುನ್ನೆಡುಸುವಲ್ಲಿ ಏಕೋ ಮರೆತಿದ್ದ. ಅಲ್ಲ ಸ್ವಾಮಿ, ಒಂದಲ್ಲ ಎರಡಲ್ಲ ಬರೋಬ್ಬರಿ 8 ವರ್ಷಗಳಾದರೂ ಒಂದು ನಯಾ ಪೈಸೆ ಲಾಭವನ್ನು ಸಂಸ್ಥೆ ಗಳಿಸುತ್ತಿಲ್ಲವೆಂದರೆ ಅಲ್ಲಿ ಏನೋ ತೊಡಕಿದೆ ಎಂದರ್ಥ. ಆಗ ಮಾಲೀಕನಾಗಿ ಸಂಸ್ಥೆಯ ಮಾಡೆಲ್ ಅಥವಾ ಸ್ಟ್ರಾಟರ್ಜಿಯನ್ನು ಬದಲಿಸುವುದ ಬಿಟ್ಟು ಮತ್ತೂ ರಾಶಿ ರಾಶಿ ಹಣವನ್ನು ತಂದು ಸುರಿಯತೊಡಗಿದರೆ ಏನಾದೀತು?. ಅದು ಬ್ಯಾಂಕುಗಳ ಮರ್ಮವೊ ಅಥವಾ ಕರ್ಮವೋ, ಇಂದಲ್ಲ ನಾಳೆ ಏರ್ಲೈನ್ಸ್ ನ ಟೈಮ್ ಬದಲಾಗುತ್ತದೆ ಎಂದು ಕಾದು ಕುಳಿತದಷ್ಟೇ ಬಂತು ಅವುಗಳ ಪಾಲಿಗೆ. ಆತನ ಸಾಲದ ಮೊತ್ತ ಸಚಿನ್ ತೆಂಡುಲ್ಕರ್ನ ರನ್ನುಗಳಂತೆ ಬೆಳೆಯುತ್ತಲೇ ಹೋಯಿತು. ಅತ್ತ ಕಡೆ ಸಚಿನ್ ರನ್ ಗಳ ರಾಶಿಯನ್ನು ಹೊತ್ತು ನೆಮ್ಮದಿಯಿಂದ ನಿವೃತ್ತಿ ಹೊಂದಿದರೆ ಇತ್ತ ಕಡೆ ಮಲ್ಯ ಸಾಲದ ಹೊರೆಯನ್ನು ಹೊರಲಾರದೆ ಏರ್ಲೈನ್ ಬಿಸಿನೆಸ್ ನಿಂದ ನಿವೃತ್ತಿ ಹೊಂದತೊಡಗಿದ.

ತಾನು ಕಟ್ಟಿ ಬೆಳೆಸಿದ ಸಂಸ್ಥೆ ಹುಟ್ಟಿಸಿದ ಮಕ್ಕಳಿಗಿಂತಲೂ ಬಲು ಹತ್ತಿರ. ಆದರಿಂದಲೇನೋ ಅಂದು ಇತರೆ ವಿದೇಶಿ ಏರ್ಲೈನ್ ಸಂಸ್ಥೆಗಳು KFA ಯನ್ನು ಖರೀದಿಸಲು ಬಂದಾಗಲೂ ಮಲ್ಯ ಒಂತಿಷ್ಟೂ ಮನಸು ಮಾಡಲಿಲ್ಲ. ಒಂದು ಪಕ್ಷ ಆತ ಸಂಸ್ಥೆಯನ್ನು ಮಾರಿ ಸುಮ್ಮನಾಗಿದ್ದರೂ ಸಾಲವೆಲ್ಲ ತೀರಿ ಇನ್ನೂ ರಾಶಿ ಕೋಟಿಗಳು ಆತನ ಬ್ಯಾಂಕಿನ ಖಾತೆಯಲ್ಲಿ ಉಳಿಯುತ್ತಿತೇನೋ. ಆದರೆ ಆತ ಸೋಲೊಪ್ಪಿಕೊಳ್ಳಲಿಲ್ಲ. ನಡೆ ತಪ್ಪಾಗಿದ್ದಿತು, ಆದರೆ ಗುರಿ ಸಂಸ್ಥೆಯನ್ನು ಉಳಿಸಿಕೊಳ್ಳುವುದಾಗಿದ್ದಿತು. ಸಾಲ ಮಾಡಿ ಮನೆ ಕಟ್ಟಿ ಕೊನೆಗೆ ಹಣಹೊಂದಿಸಲಾಗದೆ ಮನೆಯನ್ನೇ ಮಾರಬೇಕೆಂದಾಗ ಎದುರಾಗುವ ಸ್ಥಿತಿಯೇ ಅಂದು ಆತನದು. ಉದ್ಯಮಿಗಳಿಗೆ ತಮ್ಮ ಜೀವಮಾನದ ಒಂದಿಲ್ಲೊಂದು ಘಳಿಗೆಯಲ್ಲಿ ಈ ಸ್ಥಿತಿ ಎದುರಾಗುತ್ತದೆ. ಕನಸ್ಸು ಬಿತ್ತಿ ಕಟ್ಟಿದ ಮನೆಯನ್ನು ಮಾರಬೇಕೋ ಅಥವ ಬೇರೆ ದಾರಿ ಕಾಣದೆ ಮರುಗಬೇಕೋ ಆಗ ಅದರ ಉತ್ತರ ಮಾತ್ರ ಪ್ರರಿಸ್ಥಿತಿಯ ಹತ್ತಿರ! ಅಂದಹಾಗೆ ಮಲ್ಯ ವಿದೇಶಕ್ಕೆ ಹಾರಿ ಹೋದರೂ ಈ ವರ್ಷದ ಶುರುವಿನಲ್ಲಿ ಸುಮಾರು 6000 ಕೋಟಿ ರೂಪಾಯಿಗಳ ಸಾಲವನ್ನು ಮೊದಲ ಕಂತಿನಲ್ಲಿ ತೀರಿಸುವೆನು ಎಂದದ್ದೂ ಉಂಟು. ಆದರೆ ಬ್ಯಾಂಕುಗಳು ಕೇಳಲಿಲ್ಲ. ಕೊಟ್ಟರೆ ಅಸಲು ಬಡ್ಡಿ ಸಮೇತ ಎಲ್ಲವೂ ಬೇಕೆನುತ ಹಠಹಿಡಿದವು.

ಮೊನ್ನೆ ಮೊನ್ನೆಯಷ್ಟೇ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ 'ದಶಕಗಳಿಂದ ಸಾಲವನ್ನು ಮರುಪಾವತಿ ಮಾಡಿಕೊಂಡು ಬಂದು ಇಂದು ಬ್ಯುಸಿನೆಸ್ ನಲ್ಲಿ ನಷ್ಟವನ್ನು ಅನುಭವಿಸಿ ಸಾಲತೀರಿಸಲಾಗದಿದ್ದ ಮಾತ್ರಕ್ಕೆ ಅವರನ್ನು ಮೋಸಗಾರರು ಎಂಬುವುದು ತಪ್ಪಾಗುತ್ತದೆ' ಎಂದರು. ಇದೇ ಮಾತನ್ನು ಒಂದು ಪಕ್ಷ ಐದಾರು ವರ್ಷಗಳ ಹಿಂದೆ ದೇಶದ ಹೆಮ್ಮೆಯ ಪ್ರತೀಕವಾಗಿದ್ದ ವಿಮಾನಸಂಸ್ಥೆಯೊಂದು ಮುಚ್ಚುವಾಗ ಹೇಳಿದ್ದರೆ ಬಹುಶಃ ಚೆನ್ನಾಗಿರುತ್ತಿತ್ತು. ಅರ್ಥಪೂರ್ಣವಾಗಿರುತ್ತಿತು. ಅಲ್ಲ ಸರ್, ಇಂದು ಸರ್ಕಾರವೇ ತನ್ನ ಉಮೇದುವಾರಿಕೆಯಲ್ಲಿ ನೆಡೆಸುವ ದೇಶದ ಅತಿ ದೊಡ್ಡ ವಿಮಾನ ಸಂಸ್ಥೆಯೇ ಪ್ರತಿಕೂಲ ಮಾರುಕಟ್ಟೆಯ ಹೊಡೆತಕ್ಕೆ ಸಿಕ್ಕಿ ಡೋಲಾಯಮಾನವಾಗುವ ಸ್ಥಿತಿಯಲ್ಲಿರುವಾಗ ನಷ್ಟದಲ್ಲಿದ್ದ ಉದ್ಯಮಿಗಳ ಸಂಸ್ಥೆಗಳ ಕತೆ ಇನ್ನು ಹೇಗಿರಬಹುದು? ಕಿಂಗ್ ಫಿಷರ್ ಏರ್ಲೈನ್ಸ್ ಮುಚ್ಚಲು ಮಲ್ಯನ ಪೆದ್ದುತನ ಎಷ್ಟಿದ್ದಿತೋ ಅಷ್ಟೇ ಹುಂಬತನ ಸರ್ಕಾರದ್ದೂ ಇದ್ದಿತು. ಸಂಸ್ಥೆಯೊಂದನ್ನು ಮುಚ್ಚಿಸುವಾಗ ಸಿಗುವ ಖುಷಿ ಅದನ್ನು ಉಳಿಸಿ ಕೊಡುವುದರಿರಲಿಲ್ಲ. ಯಾರೋ ಮಾಡಿದ್ದ ತಪ್ಪಿಗೆ ಸರಕಾರವೇಕೆ ದಂಡ ತೆತ್ತಬೇಕು ಎಂಬ ಮಾತು ಸರಿಯೇ. ಆದರೆ ಮುಚ್ಚಿದ ಒಂದು ಬ್ರಾಂಡಿನ ಸರಿಸಮನಾದ ಮತ್ತೊಂದು ಬ್ರಾಂಡನ್ನು ಕಟ್ಟಲು, ಸಾವಿರಾರು ಜನರಿಗೆ, ದೇಶಕ್ಕೆ ಪರೋಕ್ಷವಾಗಿಯಾದರೂ ಆದಾಯವನ್ನು ಗಳಿಸಿಕೊಡುವ ಮತ್ತೊಂದು ಸಂಸ್ಥೆಯೊಂದನ್ನು ನಿಮಿಷಮಾತ್ರದಲ್ಲಿ ಕಟ್ಟಲ್ಲಂತೂ ಸಾಧ್ಯವೇ ಇಲ್ಲ. ಅದರಲ್ಲೂ ಕಿಂಗ್ ಫಿಷರ್ ಎಂಬ ಕನ್ನಡಿಗನೊಬ್ಬನ ಕ್ಲಾಸಿಕ್ ವಿಮಾನಗಳು ಆಗಸದಲ್ಲಿ ಹಾರಾಡುವುದನ್ನು ನೋಡಲು ಇನ್ನೆಷ್ಟು ದಶಕಗಳು ಬೇಕೋ ಯಾರು ಬಲ್ಲರು?


Saturday, December 15, 2018

820 ಗುಳಿಗೆಗಳನ್ನು ತಿನ್ನಿಸಿ ಪರಾರಿಯಾದ 420 ಅಮಾಯಕ!

ತಿಹಾರ್ ಜೈಲು. ಬಹುಷಃ ಈ ಹೆಸರನ್ನಿಂದು ಕೇಳಿರದವರಿರಲು ಸಾಧ್ಯವೇ ಇಲ್ಲ. ದೇಶ-ವಿದೇಶದ ಹೈ ಪ್ರೊಫೈಲ್ ನಟೋರಿಯಸ್ ಕ್ರಿಮಿನಲ್ ಗಳನ್ನು ಬಂಧಿಸುವ ಈ ಕಾರಾಗೃಹ ದೇಶದ ಅಷ್ಟೂ ಜೈಲುಗಳಲ್ಲಿಯೂ ಅತಿ ಹೆಚ್ಚಿನ ಭದ್ರತೆಯನ್ನೊಳಗೊಂಡ ಚಕ್ರವ್ಯೂಹವೆಂದೇ ಹೇಳಬಹುದು! ಅಪ್ಪಿ-ತಪ್ಪಿ ಒಂದು ಇಲಿಮರಿಯೂ ಸಹ ಒಳಹೊಕ್ಕರೆ ಹೊರಬಾರಲು ಪೇಚಾಡುವಂತಹ ಭದ್ರತೆಯ ಈ ಜೈಲಿನಿಂದ ಎಸ್ಕೇಪ್ ಆಗುವುದೆಂದರೆ ಆತ ಒಬ್ಬ ದೇವದೂತನಾಗಿರಬೇಕೇ ವಿನಃ ಸಾಮಾನ್ಯ ವ್ಯಕ್ತಿಯಾಗಿರಲಂತೂ ಸಾಧ್ಯವೇ ಇಲ್ಲ! ಆದರೂ, ಅಲ್ಲೊಬ್ಬಇಲ್ಲೊಬ್ಬ ಕೋಟಿಗೊಬ್ಬನಂತಹ ಕಿಲಾಡಿಗಳು ಇಲ್ಲೂ ಸಹ ತಮ್ಮ ಕೈಚಳಕವನ್ನು ತೋರಿ ಅಂತಹ ಭಾರಿ ಭದ್ರತೆಯ ಕೋಟೆಯನ್ನೇ ಮೀಟಿ ಪರಾರಿಯಾದದ್ದುಂಟು. ಇಂತಹ ಪ್ರತಿಭಾನ್ವಿತ ದೇಹದೂತರ ಕೆಲ ರೋಚಕ ಕತೆಗಳು ದೇಶದ ಇತಿಹಾಸದಲ್ಲಿ ಇಂದು ಹಚ್ಚಳಿಯಾಗಿ ಉಳಿದುಕೊಂಡಿವೆ. ಆ ಪ್ರತಿಭಾನ್ವಿತ ಕ್ರಿಮಿನಲ್ಗಳ ದೇಶೀ / ವಿದೇಶಿ ಕ್ಯಾರೆಕ್ಟರ್ ಗಳು ಇಂದು ದೇಶ ವಿದೇಶದ ಹಲವಾರು ಚಿತ್ರಗಳಲ್ಲಿ ನಾಯಕನಟರಾಗಿ ನಟಿಸಿ ಹಲವೆಡೆ 'ಸ್ಫೂರ್ತಿ'ದಾಯಕವೂ ಆಗಿವೆ ಎಂದರೆ ಅದು ನಮ್ಮೆಲ್ಲರ ವಿಪರ್ಯಾಸವೇ ಸರಿ!

ಹೆಸರು ಚಾರ್ಲ್ಸ್ ಶೋಭ್ರಾಜ್. ಸೈಕೋಪಾಥ್ , ಸೀರಿಯಲ್ ಕಮ್ ಬಿಕಿನಿ ಕಿಲ್ಲರ್, ವಂಚಕ, ದಿ ಸರ್ಪೆಂಟ್ , ಚತುರ ಸುಳ್ಳುಗಾರ ಹಾಗು ಒಬ್ಬ ಭಯಾನಕ ಎಸ್ಕೇಪಿಸ್ಟ್ etc etc ಎಂಬುದೆಲ್ಲ ಈತ ಕಷ್ಟಪಟ್ಟು ಗಳಿಸಿಕೊಂಡ ಅನ್ವರ್ಥನಾಮಗಳು! ವಿಯೆಟ್ನಾಂ ನಲ್ಲಿ ಹುಟ್ಟಿ ಫ್ರಾನ್ಸ್ನಲ್ಲಿ ಬೆಳೆದು, ತನ್ನ ಕುಕೃತ್ಯಗಳಿಂದ ವಿಶ್ವದಾದ್ಯಂತ ಪ್ರಸಿದ್ದಿ ಪಡೆದು ಸದ್ಯಕ್ಕೆ ನೇಪಾಳದ ಜೈಲಿನಲ್ಲಿ ಶಿಕ್ಷೆಯನ್ನನುಭವಿಸುತ್ತಿರುವ ಈತನ ಹೆಸರನ್ನು ಕೇಳಿದ್ದರೆ ಅಂದು ವಯಸ್ಸಿನ ಹುಡುಗಿಯರಷ್ಟೇ ಅಲ್ಲದೆ ಕಲ್ಲುಗುಂಡಿನಂತ ಪೊಲೀಸರೂ ಬೆಚ್ಚಿಬೀಳುತ್ತಿದ್ದರು. 1944 ರಲ್ಲಿ ಭಾರತೀಯ ಸಿಂಧಿ ಮೂಲದ ಅಪ್ಪನಿಗೆ (ಶೋಬ್ರಾಜ್) ಜನಿಸಿದ ಚಾರ್ಲ್ಸ್ ನ ಬಾಲ್ಯ ಇತರೆ ಎಲ್ಲ ಮಕ್ಕಳಂತಿರಲಿಲ್ಲ. ಈತನ ಅಮ್ಮನೊಟ್ಟಿಗೆ ಲಿವಿಂಗ್ ರಿಲೇಶನ್ಶಿಪ್ ನಲ್ಲಿದ್ದ ಅಪ್ಪ ಅದೊಂದು ದಿನ ಕುಟುಂಬವನ್ನು ಬಿಟ್ಟು ಬೇರೊಂದು ಸಂಸಾರವನ್ನು ಹೂಡಿದಾಗ ಚಾರ್ಲ್ಸ್ ಗೆ ಐದಾರು ವರ್ಷಗಳಿರಬಹುದು. ನಂತರ ಅಮ್ಮ ಮತ್ತೊಬ್ಬ ಬಾಯ್ ಫ್ರೆಂಡನ್ನು ಮಾಡಿಕೊಂಡು ಸುತ್ತತೊಡಗುವುದನ್ನು ನೋಡಿ ಸಹಿಸಲಾರದೆಯೋ ಅಥವಾ ಹೇಳುವವರು ಕೇಳುವವರಿಲ್ಲದಿದ್ದರಿಂದೇನೊ ಚಾಲ್ಸ್ ಮನಬಂದ ಕುಕೃತ್ಯಗಳನ್ನು ರಾಜಾರೋಷವಾಗಿ ಮಾಡತೊಡಗಿದ. ಅದು ಆತನ ಜೀವನದ ದಿಕ್ಕನ್ನೇ ಬುಡಮೇಲು ಮಾಡಿತು. ಪರಿಣಾಮ ಎಳೆಯ ವಯಸ್ಸಿನಲ್ಲಿಯೇ ಜೈಲು ಸೇರಿ ಶಿಕ್ಷೆಯನ್ನನುಭವಿಸುತ್ತಾನೆ. ಇಷ್ಟೆಲ್ಲದರ ನಡುವೆಯೂ ಆ ಹುಡುಗನಿಗೆ ಒಂದು ಹವ್ಯಾಸ ಮಾತ್ರ ವಿಪರೀವಾಗಿದ್ದಿತು. ಪುಸ್ತಕಗಳ ಓದು. ಎಲ್ಲ ಬಗೆಯ ಪುಸ್ತಕಗಳನ್ನು ಅದರಲ್ಲೂ ಮನಶಾಸ್ತ್ರದ ಬಗೆಗಿನ ಪುಸ್ತಕಗಳನ್ನು ಹೆಚ್ಚಾಗಿ ಓದುತ್ತಿದ್ದ ಚಾಲ್ಸ್ ತನ್ನ ಮುಂದಿರುವವರ ಗುಣನಡತೆ ಇಷ್ಟ ಕಷ್ಟಗಳಿಂದಿಡಿದು ಸೂಕ್ಷ್ಮತೆ ಹಾಗು ನ್ಯೂನ್ಯತೆಗಳೆಲ್ಲವನ್ನು ಕೂಡಲೇ ಅರಿತು ಅದಕ್ಕೆ ಪೂರಕವಾದೊಂದು ಏನಾದರು ತಂತ್ರವನ್ನು ಹೂಡಿ ಅವರ ವಿಶ್ವಾಸ ಗಿಟ್ಟಿಸಿಕೊಂಡು ಅವರಿಗೇ ದ್ರೋಹ ಬಗೆಯುವ ಕಲೆಯನ್ನು ನಿಧಾನವಾಗಿ ಈತ ಕರಗತಮಾಡತೊಡಗಿದ.

ಜೈಲಿನಿಂದ ಹೊರಬಂದ ಬಿಸಿರಕ್ತದ ಚಾಲ್ಸ್ ಕೋಟ್ಯಧಿಪತಿ ಕುಳಗಳೇ ತುಂಬಿ ತುಳುಕುತ್ತಿದ್ಧ ಫ್ರಾನ್ಸ್ ಗೆ ತೆರಳಿ ತಾನು ಅಲ್ಲಿಯವರೆಗೂ ಸಂಪಾದಿಸಿದ್ದ ಜ್ಞಾನವನ್ನೆಲ್ಲ ಧಾರೆಯೆರೆದು ವಿಶ್ವವನ್ನೇ ಲೂಟಿದ ಪ್ರೆಂಚರನ್ನು ನಿರಾಯಾಸವಾಗಿ ಲೂಟಿಮಾಡತೊಡಗುತ್ತಾನೆ. ಆದರೆ ಆತನ ಹಾವಳಿ ಹೆಚ್ಚು ಕಾಲ ನಡೆಯಲಿಲ್ಲ. ಅಲ್ಲಿನ ಪೊಲೀಸರಿಗಾಗಲೇ ಆ ಬಗ್ಗೆ ಸುಳಿವು ಸಿಕ್ಕು ಆತನನ್ನು ಹಿಡಿಯಲು ಬಲೆಯನ್ನು ಬೀಸುತ್ತಾರೆ. ಏತನ್ಮದ್ಯೆ ಪರ್ಷಿಯಾದ ಒಬ್ಬಾಕೆಯನ್ನು ಮದುವೆಯೂ ಆಗಿದ್ದ ಆತ ಪೊಲೀಸರಿಂದ ಸಂಸಾರ ಸಮೇತ ಪರಾರಿಯಾಗತೊಡಗಿದ. ಸಾಮನ್ಯದ ಕಳ್ಳಕಾಕರಾದರೆ ಸಿಟಿಯ ಅಥವಾ ಹಳ್ಳಿಯ ಅಲ್ಲೋ ಇಲ್ಲೋ ತಲೆಮರೆಸಿಕೊಂಡು ಕೆಲಕಾಲದ ನಂತರ ಹೊರಬಂದು ಬದುಕುತ್ತಿದ್ದರು. ಆದರೆ ಈ ಪ್ರಚಂಡ ವಂಚಕ ಮಾತ್ರ ತಾನು ಮಾಡಿರುವ ಕುಕೃತ್ಯಗಳ ಸಲುವಾಗಿಯೋ ಅಥವ ವಿಶ್ವವನ್ನೇ ದೋಚಿ ಮೆರೆಯುವ ಆಸೆಯಿಂದಲೋ ಏನೋ ಫ್ರಾನ್ಸ್ ಅನ್ನು ಬಿಟ್ಟು ಪರಾರಿಯಾದದ್ದು ಸೀದಾ ಮುಂಬೈಯಿಗೆ. ಪೋಲೀಸರ ಸರ್ಪಗಾವಲಿನಲ್ಲಿಯೂ ಅದೇಗೆ ಈತ ಎಸ್ಕೇಪ್ ಆತ ಎಂಬುದು ಆತನೊಬ್ಬನಿಗೆ ಮಾತ್ರ ಗೊತ್ತು! ಅದು 1970. ದೇಶದ ರಾಜಕೀಯ ಸ್ಥಿತಿ ಅಲ್ಲೊಲ್ಲ ಕಲ್ಲೋಲವಾಗುವ ಎಲ್ಲಾ ಮುನ್ಸೂಚನೆಗಳು ಮೂಡುತ್ತಿದ್ದ ಸಂಧಿಘ್ನ ಕಾಲ. ಮುಂಬೈಗೆ ಬಂದಿಳಿದ ಚಾಲ್ಸ್ ಕೆಲಸಮಯದಲ್ಲಿ ಹೆಣ್ಣುಮಗಳೊಬ್ಬಳ ತಂದೆಯೂ ಆಗುತ್ತಾನೆ. ಆದರೆ ಊರು ಬಿಟ್ಟ ಸಂಸಾರಿ ಹೊರ ಊರಿನಲ್ಲಿ ಕುಟುಂಬವನ್ನು ಪೊರೆಯುವದ ಬಿಟ್ಟು ಮತ್ತದೇ ದೋಚುವ ಚಾಳಿಗೆ ಮೈಯೊಡ್ಡುತ್ತಾನೆ. ಕ್ರಮೇಣವಾಗಿ ಆತನ ಪತ್ನಿಯೂ ಒಲ್ಲದ ಮನಸ್ಸಿನಿಂದ ಆತನ ದುಷ್ಕೃತ್ಯಗಳಿಗೆ ಸಾಥ್ ನೀಡಬೇಕಾಗುತ್ತದೆ. ಇನ್ನು 2008 ರಲ್ಲೇ ಮುಂಬೈಯ ಭದ್ರತೆ ಹಾಗಿರುವಾಗ ಮೂವತ್ತು-ನಲ್ವತ್ತು ವರ್ಷಗಳ ಹಿಂದೆ ಹೇಗಿದ್ದಿರಬಹದು?! ಚಾಲ್ಸ್ ನಂತ ಖದೀಮರಿಗೆ ಅದು ಸ್ವರ್ಗದ ತಾಣವಾಗಿದ್ದಿತೇನೋ. ಅಂತಹ ಸ್ವರ್ಗದಲ್ಲಿ ಸ್ಮಗ್ಲಿಂಗ್, ಗ್ಯಾಂಬ್ಲಿಂಗ್ ಹಾಗು ಟೂರಿಸ್ಟ್ ಗಳಾಗಿ ಬರುತ್ತಿದ್ದ ವಿದೇಶಿಗರನ್ನು ಲೂಟುತ್ತಿದ್ದ ಈ ಆಸಾಮಿ ಕೊನೆ ಕೊನೆಗೆ ಹಾಡ ಹಗಲೇ ಬ್ಯಾಂಕ್ಗಳ ದರೋಡೆಗೆ ಹ ಇಳಿಯುತ್ತಾನೆ. ಕೊನೆಗೂ ನಮ್ಮ ಪೊಲೀಸ್ ಮಹಾಶಯರ ಕೈಗೆ ಸಿಕ್ಕಿಕೊಂಡ ಈತ ಅಲ್ಲೂ ಸಹ ಪವಾಡಸದೃಶ್ಯ ರೀತಿಯಲ್ಲಿ ಪಾರಾಗುತ್ತಾನೆ. ನಂತರದ ಈತನ ಲೂಟಿಯಾತ್ರೆ ಉತ್ತರದ ಆಫ್ಘಾನಿಸ್ತಾನದೆಡೆಗೆ. ಕಾಬುಲ್ ನಲ್ಲಿ ಪ್ರವಾಸಿಗರ ವಿಪರೀತ ಲೂಟಿ ಕೂಡಲೇ ಅಲ್ಲಿನ ಅಧಿಕಾರಿಗಳನ್ನೂ ಜಾಗೃತಗೊಳಿಸಿತು. ಅಲ್ಲಿಯೂ ಸಿಕ್ಕಿಹಾಕಿಕೊಂಡ ಈತ ಮತ್ತೊಮ್ಮೆ ಅಧಿಕಾರಿಗಳಿಗೆ ಚಳ್ಳೆಹಣ್ಣನು ತಿನ್ನಿಸಿ ಇರಾನ್ ಗೆ ಪರಾರಿಯಾಗುತ್ತಾನೆ. ಆದರೆ ಈ ಬಾರಿ ಕೇವಲ ಜೈಲಿನಿಂದಷ್ಟೇ ಪರಾರಿಯಾಗುವುದಲ್ಲದೆ ತನ್ನ ಪುಟ್ಟ ಸಂಸಾರವನ್ನು ನಡುನೀರಿನಲ್ಲಿ ಬಿಟ್ಟು ಪಲಾಯನಗೈದಿರುತ್ತಾನೆ. ಕೆಲ ಸಮಯದ ನಂತರ ಅಣ್ಣನ ಹಿರಿಮೆಯ ಸುದ್ದಿಗೆ ಮನಸೋತು ಇದ್ದೂ ಸತ್ತಂತಿದ್ದ ಆತನ ತಮ್ಮ ಎಲ್ಲಿಂದಲೋ ಅಣ್ಣನನ್ನು ಅರಸಿಕೊಂಡು ಹೋಗಿ ಆತನ ಪಾದಾರವಿಂದಗಳಿಗೆರಗಿ ತನ್ನನೂ ಈ ಮಾರ್ವೆಲಸ್ ಬಿಸಿನೆಸ್ಗೆ ಸೇರಿಸಿಕೊಳ್ಳಬೇಕೆಂದು ಬೇಡಿಕೊಳ್ಳುತ್ತಾನೆ. ಅಣ್ಣ ತಥಾಸ್ತು ಎನ್ನುತ್ತಾನೆ! ಮುಂದೆ ಶುರುವಾದ ಅಣ್ಣ ತಮ್ಮಂದಿರ ಕೈಚಳಕ ಹೆಚ್ಚು ಕಡಿಮೆ ಅಷ್ಟೂ ಮಧ್ಯಪ್ರಾಚ್ಯಾದೇಶಗಳನ್ನು ಒಳಹೊಕ್ಕು ದೂರದ ಗ್ರೀಸ್ನ ವರೆಗೂ ವ್ಯಾಪಿಸುತ್ತದೆ. ಕೊನೆಗೆ ಸಹೋದರರ ಸವಾಲನ್ನು ಸ್ವೀಕರಿಸಿದ ಅಥೆನ್ಸ್ ನ ಅಧಿಕಾರಿಗಳು ಜೋಡಿಯನ್ನು ಹಿಡಿದು ಜೈಲಿನೊಳಗೆ ದಬ್ಬುತ್ತಾರೆ. ಆದರೆ ಅವರಿಗೇನು ಗೊತ್ತಿತ್ತು ತಾವು ಹಿಡಿದ ವ್ಯಕ್ತಿ ಕಟ್ಟಿ ಕೂರಿಸಲಾಗದ ಗಾಳಿಯಂತವನೆಂದು! ಅಲ್ಲಿನ ಅಧಿಕಾರಿಗಳೇ ಕಕ್ಕಾಬಿಕ್ಕಿಯಾಗುವಂತೆ ಅಣ್ಣ, ತಮ್ಮನ ಐಡೆಂಟಿಯನ್ನೇ ಬದಲಿಸುತ್ತಾನೆ. ಅರ್ಥಾತ್ ತಾನೇ ಸಣ್ಣವನೆಂದು ಹಾಗು ಅಸಲಿಯ ತಮ್ಮನೇ ಚಾರ್ಲ್ಸ್ ಎಂದು ಅಧಿಕಾರಿಗಳಿಗೆ ಮಣ್ಣು ಮುಕ್ಕಿಸುತ್ತಾನೆ. ಅದೂ ಸಹ ಒಂದು ಕಲೆ. ಒಟ್ಟಿನಲ್ಲಿ ಒಳಗಿದ್ದ ಆತನ ತಮ್ಮನಿಗೆ 18 ವರ್ಷದ ಕಾರಾಗೃಹ ಶಿಕ್ಷೆಯಾದಾಗಲೇ ಜಗತ್ತಿಗೆ ತಿಳಿದಿದ್ದು ಅಣ್ಣ ಚಾಲ್ಸ್ ಅದಾಗಲೇ ದೇಶವನ್ನು ಬಿಟ್ಟು ಪರಾರಿಯಾಗಿದ್ದನೆಂದು!

ದೇಶವಿದೇಶಗಳ ಹಲವಾರು ಭಾಷೆಗಳಲ್ಲಿ ನಿಪುಣನಾಗಿದ್ದ ಈತನ ಹೆಚ್ಚಿನ ಟಾರ್ಗೆಟ್ 20-25 ರ ವಯಸ್ಸಿನ ಪ್ರವಾಸಿ ಹುಡುಗಿಯರು. ತನ್ನ ಅಂದವಾದ ಮೈಮಾಟದಿಂದ ಹುಡುಗಿಯರನ್ನು ಸೆಳೆದು ಡ್ರಗ್ಸ್ ನ ನಶೆಯನ್ನು ಹತ್ತಿಸಿ ಅವರನ್ನು ಲೂಟಿ ಮಾಡುತ್ತಿದ್ದನಲ್ಲದೆ ವಿಚಿತ್ರ ರೀತಿಯಲ್ಲಿ ಅವರನ್ನು ಕೊಂದು ಸಾಯಿಸಿರುವುದೂ ಉಂಟು! ಎಪ್ಪತನೆ ದಶಕದ ಮೊದಲಾರ್ದದಲ್ಲೇ ಸುಮಾರು 15 ರಿಂದ 20 ಕೊಲೆಗಳನ್ನು ಮಾಡಿದ್ದ ಕೀರ್ತಿ ಈತನ ಹೆಸರಿನಲ್ಲಿದ್ದಿತು! ಡಜನ್ ಗಟ್ಟಲೆ ದೇಶಗಳಲ್ಲಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಎಂಬ ಪಟ್ಟವೂ ಈತನದೇ ಆಗಿದ್ದಿತು.

ಎತನ್ಮದ್ಯೆ 1976 ರಲ್ಲಿ ಈತ ಭಾರತದ ಅಧಿಕಾರಿಗಳ ಬಲೆಗೆ ಸಿಕ್ಕಿಹಾಕಿಕೊಳ್ಳುತ್ತಾನೆ. ಅದು ಪೊಲೀಸ್ ಅಧಿಕಾರಿಗಳು ಆತನಿಗಾಗಿ ಬೀಸಿದ ಬಲೆಯೊ ಅಥವ ಆತನೇ ತನಗಾಗಿ ರಚಿಸಿದ ತಂತ್ರವೋ, ಉತ್ತರ ಕಾಣಲು ಪೊಲೀಸರಿಗೆ ಎರಡು ದಶಕಗಳು ಬೇಕಾಯಿತು! ದೆಹಲಿಯ ಹೈ ಪ್ರೊಫೈಲ್ ಪಾರ್ಟಿಯೊಂದಲ್ಲಿ ನೆರೆದಿದ್ದ ಹಲವಾರು ಪ್ರೆಂಚ್ ಪ್ರಜೆಗಳಿಗೆ ಡ್ರಗ್ಸ್ ಕೊಟ್ಟು ಲೂಟಿಮಾಡಲು ಪ್ರಯತ್ನಿಸಿ ಪೊಲೀಸರಿಗೆ ಸಿಕ್ಕಿಹಾಕಿಕೊಂಡ ಈತ ತನ್ನ ಹಳೆಯ ಅಳಿದುಳಿದ ಕರ್ಮಕಾಂಡಗಳೆಲ್ಲದರ ಫಲವಾಗಿ ಬರೋಬ್ಬರಿ 11 ವರ್ಷ ಕಾರಾಗೃಹ ಶಿಕ್ಷೆಯನ್ನು ‘ವಿಧಿಸಿಕೊಳ್ಳುತ್ತಾನೆ’. ಅದಾಗಲೇ ಭಾರತದಲ್ಲಿ ಎರಡೆರಡು ಭಾರಿ ಜೈಲ್ ಬ್ರೇಕ್ಗಳ ಹೆಗ್ಗಳಿಕೆಗೆ ಹೆಸರುವಾಸಿಯಾಗಿದ್ದ ಈತನನ್ನು ಇಟ್ಟರೆ ತಿಹಾರ್ ಜೈಲೇ ಬೇಕೆಂದು ಅಧಿಕಾರಿಗಳು ಅಂದು ತೀರ್ಮಾನಿಸಿದರು. ಅಲ್ಲಿಗೆ 1976 ರಿಂದ 1986 ರ ವರೆಗಿನ ಜೈಲುವಾಸ ಆತನಿಗೆ ಫಿಕ್ಸ್ ಆಗುತ್ತದೆ. ಆದರೆ ಈ ಆಸಾಮಿಗೆ ತಿಹಾರ್ ಜೈಲುವಾಸ ಅದೆಷ್ಟು ಪ್ರಿಯವಾಗಿತೆಂದರೆ 1986 ರಿಂದ ಮತ್ತೂ 10 ವರ್ಷ ಅಲ್ಲೇ ಇರಬೇಕೆಂದು ತೀರ್ಮಾನಿಸುತ್ತಾನೆ! ದಿನ ಅದೇ ಕಂಬಿಗಳು, ಅದೇ ಗೋಡೆಗಳು, ಅದೇ ಪರಿಸರ ಮತ್ತದೇ ಊಟವನ್ನು ತಿಂದು ಜೀವನವೇ ನರಕವೆನಿಸುವ ಜೈಲಿನಂತಹ ಜಾಗದಲ್ಲೂ ದಶಕಗಳ ಕಾಲ ಜೀವನ ನೆಡೆಸಿ ಮತ್ತದೇ ಜಾಗಕ್ಕೆ ಬರಲಿಚ್ಛಿಸುವ ವ್ಯಕ್ತಿ ಹುಚ್ಚನೇ ಸರಿ. ಆದರೆ ಚಾಲ್ಸ್ ಒಂಥರಾ ಬುದ್ದಿವಂತ ಹುಚ್ಚ. ಆತನ ಈ ಎಕ್ಸ್ಟೆಂಡೆಡ್ ಜೈಲುವಾಸದ ಪ್ಲಾನ್ ಶತಾಯ ಗತಾಯ ಸಾಧಿಸಿಯೇ ತೀರಬೇಕಾಗಿರುತ್ತದೆ. ಕಾರಣ ಮಾತ್ರ ಬಹುಷಃ ಅಲ್ಲಿನ ಯಾರೊಬ್ಬರಿಗೂ ತಿಳಿದಿರಲು ಸಾಧ್ಯವಿಲ್ಲ! ಅದಕ್ಕಾಗಿ ಆತ ಮಾಡಿದ ಪ್ಲಾನ್ ಪ್ರಿಸನ್ ಬ್ರೇಕ್ ಅರ್ಥಾತ್ ಜೈಲಿನಿಂದ ಎಸ್ಕೇಪ್ ಆಗುವುದು! ಇಲ್ಲಿ ಕೊಂಚ ದ್ವಂದ್ವಕ್ಕೊಳಗಾಗುವುದು ಅತಿ ಸಹಜವೇ. ಆದರೆ ಮೊದಲೇ ಹೇಳಿದಂತೆ ಈತ ಬುದ್ದಿವಂತ ಹುಚ್ಚ.

ಇಡೀ ಭೂಮಂಡಲವನ್ನೇ ತನ್ನ ಕ್ರೈಂ ಅಡ್ಡವಾಗಿಸಿಕೊಂಡಿದ್ದ ಈತನಿಗೆ ಹೊದಡೆಯಲ್ಲ ಪೋಲೀಸರ ಹಾಗು ಕೋರ್ಟುಗಳ ‘ರಾಜಾತಿಥ್ಯ’ ದೊರೆಯುತ್ತಿತ್ತು. ಹಾಗೆಯೆ ಥೈಲ್ಯಾಂಡಿನ ಸರ್ಕಾರ ಕೊಲೆ ಕೇಸೊಂದರಲ್ಲಿ ಈತನನ್ನು ವಿಚಾರಣೆಗೊಳಿಸಬೇಕಿತ್ತು. ಒಂದು ವೇಳೆ ಈತನ ವಿರುದ್ದದ ಅಲ್ಲಿಯ ಅಪರಾದಗಳೆಲ್ಲ ಸಾಬೀತಾದಾರೆ ಅಲ್ಲಿನ ಸರ್ಕಾರ ಈತನಿಗೆ ಮರಣದಂಡಣೆಯನ್ನು ನೀಡಿದರೂ ಆಶ್ಚರ್ಯಪಡಬೇಕಾಗಿರಲಿಲ್ಲ. ಆದರೆ ಆ ದೇಶದಲ್ಲಿ ಒಂದು ಕಾನೂನಿದೆ. ಒಂದು ವೇಳೆ ಕೇಸೊಂದರ ಕುರಿತು ಅಧಿಕಾರಿಗಳು ಮೂಲ ಅಪರಾಧಿಯನ್ನು 20 ವರ್ಷಗಳ ಒಳಗೆ ವಿಚಾರಣೆಗೆ ಒಳಪಡಿಸದಿದ್ದರೆ, ಅಥವ ಆ ಕೇಸಿನ ಬಗ್ಗೆ ಒಂದಿಷ್ಟೂ ವಿಚಾರಣೆ ನೆಡೆಯದಿದ್ದರೆ ಆ ಕೇಸನ್ನು ಮುಚ್ಚಿಹಾಕಲಾಗುತ್ತದೆ. ಎಲ್ಲವನ್ನೂ ಪಕ್ಕ ಲೆಕ್ಕಾಚಾರದಲ್ಲಿ ಮಾಡುವ ಚಾರ್ಲ್ಸ್ ಈ ವಿಷಯವನ್ನು ಚೆನ್ನಾಗಿ ಅರಿತಿದ್ದ. 1975 ರಲ್ಲಿ ಆರಂಭವಾದ ಆ ಕೇಸು ಒಂದು ವೇಳೆ 1995ರ ವರೆಗೂ ಯಾವುದೇ ಆಂತ್ಯವನ್ನು ಕಾಣದಿದ್ದರೆ ಅದು ಮುಚ್ಚಲ್ಪಡುತ್ತಿತ್ತು. ಅದಾಗಲೇ ಹನ್ನೊಂದು ವರ್ಷಗಳ ಜೈಲುವಾಸವನ್ನು ಅನುಭವಿಸದ ಚಾಲ್ಸ್ ನಮ್ಮ ದೇಶದ ಅಧಿಕಾರಿಗಳು ಆತನನ್ನು ಥೈಲ್ಯಾಂಡಿನ ಅಧಿಕಾರಿಗಳಿಗೆ ವರ್ಗಾವಣೆ ಮಾಡುವ ಮೊದಲೇ ಈತ ಭಾರತದಲ್ಲೇ ಮತ್ತೊಂದು ಕ್ರೈಂ ಅನ್ನು ಮಾಡಬೇಕು ಹಾಗು ಅದರ ಶಿಕ್ಷೆಯ ಅವಧಿ ಕನಿಷ್ಠ ಹತ್ತು ವರ್ಷಕ್ಕೂ ಮಿಗಿಲಾಗಿರಬೇಕು! ಜೈಲಿನಲ್ಲಿದ್ದೇ ಮತ್ತೆ ಜೈಲು ಸೇರುವ ಸಾಹಸವನ್ನು ಮಾಡಬೇಕೆಂದರೆ ಇರುವ ಒಂದೇ ಉಪಾಯ ಜೈಲಿನಿಂದ ಕದ್ದು ಓಡುವುದು ಹಾಗು ಕೆಲದಿನಗಳ ನಂತರ ಪುನಃ ಪೊಲೀಸರಿಗೆ ಸಿಕ್ಕಿಹಾಕಿಕೊಳ್ಳುವುದು. ಕ್ರಿಮಿನಲ್ ಮೈಂಡ್ ಎಂದರೆ ಇದಕ್ಕೆ ಹೇಳುವುದೇನೋ. ಹೀಗೆ ಮಾರ್ಚ್ 16, 1986 ರ ರಾತ್ರಿ ಏಷ್ಯಾದಲ್ಲೇ ಅತಿ ಹೆಚ್ಚಿನ ಭದ್ರತೆಯ ಜೈಲೊಂದರಿಂದ ಪುಟಗೋಸಿಯಂತಿದ್ದ ಚಾರ್ಲ್ಸ್ ಓಟ ಕಿತ್ತಿರುತ್ತಾನೆ. ಆದರೆ ಅಂತಹ ಭದ್ರತೆಯ ಜೈಲಿಂದ ನೈಟ್ ವಾಕಿಗೆ ಹೋಗುವಂತೆ ನಿರಾಯಾಸವಾಗಿ ಈತ ಹೊರಬಂದಿದ್ದಾದರೂ ಹೇಗೆ?!

ಜೈಲೆಂದರೆ ಹೆಚ್ಚಾಗಿ ಪಾಪಿ ಜೀವಗಳೇ ತುಂಬಿ ತುಳುಕುವ ಭಯಾನಕ ಅಡ್ಡ. ಅಂತಹ ಜಾಗದಲ್ಲಿ ಹುಟ್ಟು ಗುಣ ಸತ್ತರೂ ಹೋಗದಂತಹ ಅಸಾಮಿಗಳನ್ನೇನು ಹುಡುಕುವುದು ಕಷ್ಟವೇ? ಇದನ್ನು ಅರಿತಿದ್ದ ಚಾರ್ಲ್ಸ್ , ಜೈಲಿನೊಗಳೇ ಡ್ರಗ್ಸ್ ಸಾಗಾಣಿಕೆಯಿಂದ ಸಿಕ್ಕಿಬಿದ್ದು ಕೊಳೆಯುತ್ತಿದ್ದ ಬಿಳಿಯನೊಬ್ಬನ ಪರಿಚಯವನ್ನು ಮಾಡಿಕೊಳ್ಳುತ್ತಾನೆ. ಹೆಸರು ಡೇವಿಡ್ ಹಾಲ್. ಮೊದಲೇ ಪಕ್ಕ ಮನಶಾಸ್ತ್ರವನ್ನು ಅರೆದು ಕುಡಿದವನಾಗಿದ್ದ ಚಾರ್ಲ್ಸ್ ಡೇವಿಡ್ ನ ಸಂಪೂರ್ಣ ಗುಣನಡತೆಯನ್ನು ತಿಳಿಯುತ್ತಾನೆ. ಎಲ್ಲೆಲ್ಲಿ ಆತನ ವೀಕ್ ಪಾಯಿಂಟ್ ಗಳಿದ್ದವೊ ಅಲ್ಲೆಲ್ಲ ತನ್ನ ನರಿ ಬುದ್ದಿಯನ್ನು ಬಳಸಿ ಆತನನ್ನು ಒಂತರ ಎಮೋಷನಲ್ ಬ್ಲಾಕ್ ಮೇಲ್ಗೆ ಒಳಪಡಿಸುತ್ತಾನೆ. ಕೆಲ ಸಮಯದ ನಂತರ ಆತನನ್ನು ತನ್ನ ಆಟಿಕೆಯಂತಾಗಿ ಮಾಡಿಕೊಂಡು ಮೊದಲು ಆತನನ್ನು ಜೈಲಿನಿಂದ ಹೊರಕಳಿಸಿ ನಂತರ ಅವನ ಮೂಲಕ ತನ್ನ ಕಾರ್ಯವನ್ನು ಸಿದ್ಧಿಸಿಕೊಳ್ಳುವ ಪ್ಲಾನ್ ಈತನದ್ದು. ಡೇವಿಡ್ ಎಂಬ ಮಂಕನೂ ಈತನ ಮಾತಿಗೆ ಬೆಲೆಕೊಟ್ಟು ಹೇಳಿದಂತೆಯೇ ನೆಡೆದುಕೊಳ್ಳುತ್ತಾನೆ. ಅದೇಗೆ ಮಾನವನ ಅಂಗಾಗಗಳ ಬಗ್ಗೆ ತಿಳಿದಿದ್ದನೋ ಏನೋ ಆಸ್ಪತ್ರೆಗೆ ಬಂದ ಡಾಕ್ಟರ್ ರಿಂದಲೇ ಡೇವಿಡ್ ಗೆ ಕಿಡ್ನಿ ಸಮಸ್ಯೆ ಇದೆ ಎಂದು ನಂಬುವಂತೆ ಮಾಡಿ ಅವರಿಂದಲೇ ಈತನನ್ನು ಜಾಮೀನಿನ ಮೇಲೆ ಬಿಡುವಂತೆ ಮಾಡುತ್ತಾನೆ ಚಾರ್ಲ್ಸ್! ಜೈಲಿನಿಂದ ಹೊರಬಂದ ಡೇವಿಡ್ ಸೀದಾ ತನ್ನ ದೇಶದ ವಿಮಾನವನ್ನು ಹತ್ತುವುದನ್ನು ಬಿಟ್ಟು ಕೀಲುಗೊಂಬೆಯಂತೆ ಚಾಲ್ಸ್ ನ ಎಸ್ಕೇಪ್ ಪ್ಲಾನ್ ಗೆ ಕಾರ್ಯೋನ್ಮುಖನಾಗುತ್ತಾನೆ.

ಅದಕ್ಕಾಗಿ ಬೇಕಾಗಿದ್ದ ಜನರನ್ನು ಉಪಕರಣಗಳನ್ನು ಡೇವಿಡ್ ಒಟ್ಟುಗೂಡಿಸತೊಡಗುತ್ತಾನೆ. ಇತ್ತ ಕಡೆ ಖದೀಮ ಚಾರ್ಲ್ಸ್ ಜೈಲಿನೊಳಗೇ ಇನ್ನೂ ಮೂವರ ಗುಂಪೊಂದನ್ನು ಕಟ್ಟಿಕೊಂಡು, ಅವರನ್ನೂ ಜೈಲಿನಿಂದ ಪರಾರಿಯಾಗಿಸುವ ಮಾತನ್ನು ಕೊಟ್ಟು ಅವರ ಮೂಲಕ ಡೇವಿಡ್ ಗೆ ಪ್ರಿಸನ್ ಬ್ರೇಕ್ ನ ಬಗ್ಗೆ ನಿರ್ದೇಶನವನ್ನು ನೀಡುತ್ತಿರುತ್ತಾನೆ. ಇವೆಲ್ಲ ಈತನ ಪ್ಲಾನ್ ಬಿ. ಆತನ ಪ್ಲಾನ್ ಎ ಬೇರೆಯೇ ಇರುತ್ತದೆ! ಅಲ್ಲದೆ ಅದು ಸಿಕ್ಕಾಬಟ್ಟೆ 'ಸ್ವೀಟ್' ಹಾಗು ವೆರಿ ವೆರಿ ಸಿಂಪಲ್ ಕೂಡ ಆಗಿರುತ್ತದೆ. ಎಸ್ಕೇಪ್ ಪ್ಲಾನಿನ ಕೆಲವು ತಿಂಗಳುಗಳ ಮೊದಲಿಂದಲೇ ಇಲ್ಲಸಲ್ಲದ ಕಾರಣಗಳನ್ನು ಹೇಳಿ ತಿಂಡಿ ಹಣ್ಣುಗಳನ್ನು ತರಿಸಿ ಜೈಲಿನವರಿಗೆಲ್ಲವೂ ಸಾಕೆನಿಸುವಷ್ಟು ಹಂಚುತ್ತಿದ್ದ ಚಾರ್ಲ್ಸ್. ಅಂದ ಹಾಗೆ ಈತ ಆ ಕಾಲದ ದಿ ಮೋಸ್ಟ್ ರಿಚ್ಚೆಸ್ಟ್ ಕ್ರಿಮಿನಲ್! ತನ್ನ ಬಗೆಗೆ ಪುಸ್ತಕ ಬರೆಯುವರಿಗೆ, ಚಲನಚಿತ್ರಗಳನ್ನು ಮಾಡುವವರಿಗೆ, ಇಂಟರ್ವ್ಯೂ ಮಾಡಲು ಬರುವ ಟಿವಿ ಚಾನೆಲ್ ಗಳಿಗೆ ಎರ್ರಾಬಿರಿ ಚಾರ್ಜ್ ಮಾಡುತ್ತಿದ್ದ ಚಾರ್ಲ್ಸ್ ಆಗಿನ ಕಾಲಕ್ಕೆ ಒಬ್ಬ ಕೋಟ್ಯಧಿಪತಿ. ಮೇಲಾಗಿ ದೊಡ್ಡ ದೊಡ್ಡ ಕುಳಗಳನೆಲ್ಲ ದೋಚಿ ಈತ ಮಾಡಿಟ್ಟಿರುವ ಹಣವೇ ಎಷ್ಟಿದೆಯೆಂದು ಇಂದಿಗೂ ಸಹ ಯಾರಿಗೂ ತಿಳಿದಿಲ್ಲ. ಒಟ್ಟಿನಲ್ಲಿ ಅನಾಮಿಕವಾಗಿದ್ದ ತನ್ನ ಅಕೌಂಟಿನಿಂದ ಈ ಎಲ್ಲ ಕಾರುಬಾರುಗಳು ಈತನಿಗೆ ಜೈಲಿನೊಳಗಿಂದಲೇ ಸಾದ್ಯವಾಗುತ್ತಿದ್ದವು. ಮಾರ್ಚ್ 16 ರ ಭಾನುವಾರ ತನ್ನ ಹುಟ್ಟುಹಬ್ಬವೆಂದು ಭರ್ಫಿ ಹಾಗು ದ್ರಾಕ್ಷಿಯನ್ನು ತರಿಸಿದ ಈತ ಎಲ್ಲರಿಗೂ ಬಾಯಿ ತುಂಬುವಷ್ಟು ನೀಡಿ ಖುಷಿಪಡತೊಡಗಿದ. ಜೈಲಿನ ಗಾರ್ಡುಗಳೂ ಯಾವುದೇ ಸಂಶಯವಿಲ್ಲದೆ ಆತ ನೀಡಿದ ಸಿಹಿಯನ್ನು ತಿಂದು ತೇಗಿದರು. ಆದರೆ ಆ ತೇಗು ಸಾಮನ್ಯದ ತೇಗಾಗಿರಲಿಲ್ಲ. ತಿಂದ ಕೆಲ ಹೊತ್ತಿನಲ್ಲಿಯೇ ಎಲ್ಲಿಲ್ಲದ ನಿದ್ರೆ ಅವರನ್ನು ಆವರಿಸತೊಡಗಿತು. ಕಾರಣ ಈತ 'ಲಾರ್ಪೊಸ್' ಎಂಬ ನಿದ್ರೆ ಮಾತ್ರೆಯ ಒಟ್ಟು 820 ಸಣ್ಣ ಸಣ್ಣ ಗುಳಿಗೆಗಳನ್ನು ಆ ಸಿಹಿಗಳಲ್ಲಿ ಸೇರಿಸಿದ್ದನ್ನು! ತಿಂದು ನಿದ್ರೆಹೋಗುವುದು ಹಾಗಿರಲಿ ಬಹುಷಃ ಆ ಮಟ್ಟಿನ ಡೋಸ್ಗೆ ವಾಸನೆ ಕುಡಿದೇ ಹಲವರು ಮೂರ್ಛೆ ಹೋಗಿರಬಹುದು. ಆದರೆ ಗುಳಿಗೆಗಳು 820 ಆಗಿದ್ದರೆ ಚಾರ್ಲ್ಸ್ ಮಾತ್ರ ಪಕ್ಕಾ 420! ಅಷ್ಟು ಗುಳಿಗೆಗಳಿದ್ದರೂ, ಅದೆಷ್ಟೇ ಅವುಗಳನ್ನು ತಿಂದರೂ ಬರೋಬ್ಬರಿ ಮೂವತ್ತು ನಿಮಿಷಗಳವರೆಗೂ ಯಾವುದೇ ಪರಿಣಾಮ ಬೀರದಂತೆ ಡೋಸ್ ಗಳನ್ನು ಮಾಡಿದ್ದ ಈ ಡ್ರಗ್ ಪರಾಕ್ರಮಿ. ಮುಂದಿನ್ನೇನು. ಸರಿಯಾಗಿ ಮೂವತ್ತು ನಿಮಿಷಗಳ ನಂತರ ಗೇಟಿನ ದ್ವಾರಪಾಲಕರೆಲ್ಲರೂ ತಮ್ಮ ಬಾಯಿಗಳನ್ನು ತೆರೆದುಕೊಂಡು ಗನ್ನುಗಳನ್ನು ತಬ್ಬಿಕೊಂಡು ಸುಖ ನಿದ್ರೆಗೆ ಜಾರಿದ್ದರು. ರಾಜಾರೋಷವಾಗಿ ಹೊರನೆಡೆದರು ಚಾರ್ಲ್ಸ್ ಹಾಗು ಆತನ ದೇಸಿ ಸಂಗಡಿಗರು.

ಇದು ಭಾರತದ ಕಳ್ಳ ಪೋಲೀಸರ ಇತಿಹಾಸದಲ್ಲಿ ಹಚ್ಚಳಿಯಾಗಿ ಉಳಿದ ಬೆಚ್ಚಿಬೀಳಿಸುವ ಕಥನ. ನಮ್ಮ ವ್ಯವಸ್ಥೆ ಅದೆಷ್ಟೇ ಉತ್ಕೃಷ್ಟವಾಗಿದ್ದರೂ ಜೈಲುಗಳು ಅದೆಂತಹದ್ದೇ ಭದ್ರತೆಯನ್ನು ಒಳಗೊಂಡಿದ್ದರೂ ಕಳ್ಳನನ್ನು ಕೂಡಿಡುವಾಗ ಕಳ್ಳನಂತೆಯೇ ಯೋಚಿಸಬೇಕೆಂಬ ಪಾಠವನ್ನು ಇದು ಅಧಿಕಾರಿಗಳಿಗೆ ನೀಡಿತು. ಅಲ್ಲಿಂದ ಮುಂದೆ ಚಾರ್ಲ್ಸ್ ತನಗಾದ ಎಲ್ಲ ಬಗೆಯ ಸುಳಿವುಗಳನ್ನು ನೀಡುತ್ತಾ ಪೊಲೀಸರೇ ಅವನ ಬಳಿಗೆ ಬರುವಂತೆ ಮಾಡಿಕೊಳ್ಳುತ್ತಾನೆ. ಗೋವಾದ ಹೋಟೆಲೊಂದರಲ್ಲಿ ಬಂದಿಯಾದ ಆತ ಅಂದುಕೊಂಡಂತೆ ಪ್ರಿಸನ್ ಬ್ರೇಕಿನ ಸಲುವಾಗಿ ಮುಂದಿನ 10 ವರ್ಷ ಅಂದರೆ 1997 ರ ವರೆಗೂ ಜೈಲುವಾಸವನ್ನನುಭವಿಸಿ ಕೊನೆಗೂ ಥೈಲ್ಯಾಂಡಿನ ಅಧಿಕಾರಿಗಳಿಗೆ ಸಿಗದಂತೆ ಬಚಾವಾಗುತ್ತಾನೆ. ಇಂತಹ ಒಬ್ಬ ಕೊಲೆಪಾತಕೀಗೂ ನಮ್ಮಲ್ಲಿ ಆತ್ಮಸ್ಟ್ರೈರ್ಯ ವನ್ನು ತುಂಬಿ ಆತನ ಪರವಾಗಿ ಕಾಯ-ವಾಚಾ-ಮನಸಾ ವಾದಿಸುತ್ತಾ ಹೋರಾಟ ನೆಡೆಸಿ ದೇಶಕ್ಕಾಗಿ ಕಾದಾಡಿದ ಯೋಧನೊಬ್ಬನ್ನು ಬೀಳ್ಕೊಡುವಂತೆ ವಿಮಾನ ಹಚ್ಚುವ ನಮ್ಮ ಲಾಯರುಗಳಿಗೂ ಪ್ರಶಸ್ತಿಯನ್ನು ತಂದು ನೀಡಬೇಕು! ಭಾರತದಿಂದ ಪ್ಯಾರಿಸ್ ಗೆ ಹಾರಿದ ಚಾರ್ಲ್ಸ್ ತಾನು ದೋಚಿದ ಹಣದಿಂದ ಅಲ್ಲಿ ಒಬ್ಬ ಸೆಲೆಬ್ರಿಟಿಯ ಐಷಾರಾಮಿ ಜೀವನವನ್ನು ನೆಡೆಸುತ್ತಾನೆ. ಆದರೆ ವಿಧಿಯಾಟದ ಮುಂದೆ ಯಾರು ದೊಡ್ಡವರು? ಅಲ್ಲಿಂದ 5 ವರ್ಷದ ನಂತರ ನೇಪಾಳದಲ್ಲಿ ಸೆರೆಸಿಕ್ಕ ಚಾರ್ಲ್ಸ್ ಅಲ್ಲಿನ ಯಾವುದೊ ಹಳೆಯ ಕೊಲೆಕೇಸಿನಲ್ಲಿ ಪುನ್ಹ ಬಂಧಿತನಾಗಿ ಜೀವಾವಧಿ ಶಿಕ್ಷೆಯನ್ನನುಭವಿಸುತ್ತಾನೆ. ಆದರೆ ಅರ್ವತ್ತು ವರ್ಷದ ಮುದುಕ ಚಾರ್ಲ್ಸ್ ಪೆನ್ನಿನ ನಿಬ್ ಗಳ ಮೂಲಕ ಡ್ರಗ್ಸ್ ಗಳನ್ನು ತರಿಸಿ ಅಲ್ಲಿಯೂ ಪರಾರಿಯಾಗುವ ಖತರ್ನಾಕ್ ಸ್ಕೆಚನ್ನು ಮತ್ತೊಮ್ಮೆ ರೂಪಿಸುತ್ತಾನೆ. ಆದರೆ ಈ ಭಾರಿ ಅಲ್ಲಿನ ಪೊಲೀಸರಿಗೆ ರೆಡ್ ಹ್ಯಾಂಡಿನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ ಹಾಗು ಇಂದಿಗೂ ಅಲ್ಲಿಯೇ ಕೊಳೆಯುತ್ತಿದ್ದಾನೆ..

ಬರೆಯುತ್ತ ಹೋದರೆ ಇಂಥ ಸಮಾಜಘಾತುಕ ವ್ಯಕ್ತಿತ್ವಗಳು ಅಗಣಿತ ಸಂಖ್ಯೆಯ ಸರಕುಗಳನ್ನು ನೀಡುತ್ತಾ ಹೋಗುತ್ತವೆ. ಆದರೆ ಇದರಿಂದ ಸಮಾಜಕ್ಕೆ ಒಳಿತಾಗುವ ವಿಚಾರಗಳಂತೂ ಎಳ್ಳಷ್ಟೂ ಇರುವುದಿಲ್ಲ. ಆದರೆ ಒಂದು ವಿಷಯ ಮಾತ್ರ ಧಿಟ. ಪ್ರತಿಭೆಯೆಂಬ ಮಾಯಕುದುರೆಗೆ ಲಂಗು ಲಗಾಮೆಂಬ ಮೂಗುದಾರವನ್ನು ತೊಡಿಸದಿದ್ದರೆ ಅದರ ಓಟ ಅದೆಷ್ಟೇ ಥ್ರಿಲ್ಲಿಂಗಾದರೂ ಅಂತ್ಯ ಮಾತ್ರ ಅಷ್ಟೇ ಘೋರವಾಗಿರುತ್ತದೆ.

Friday, November 30, 2018

ಬಾರ್ಡರ್-ಗವಾಸ್ಕರ್ ಸರಣಿ : ಅಂದು - ಇಂದು!


ಸ್ಥಳ : ಕೊಲ್ಕತ್ತಾ. ಮಾರ್ಚ್ 15, 2001.

ಮೊದಲ ಇನ್ನಿಂಗ್ಸ್
:
ಆಸ್ಟ್ರೇಲಿಯ : 445/10
ಭಾರತ : 212/10

ಎರಡನೇ ಇನ್ನಿಂಗ್ಸ್ : (ಫಾಲೋ ಆನ್)
ಭಾರತ : 657/7 (D)
ಆಸ್ಟ್ರೇಲಿಯ : 171/10



ಆ ದಿನದ ಸೂರ್ಯ ಪಶ್ಚಿಮದಲ್ಲಿ ಮರೆಯಾಗುತ್ತಾ ಕ್ರಿಕೆಟ್ ಲೋಕದ ಮಹಾ ಅಚ್ಚರಿಯೊಂದಕ್ಕೆ ಸಾಕ್ಷಿಯಾದನು. ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದ ಆ ಟೆಸ್ಟ್ ಭಾರತದ ಪಾಲಿಗಂತೂ ವಿಶ್ವಕಪ್ನನ್ನೇ ಗೆದ್ದು ಬೀಗಿದ ಅನುಭವವನ್ನು ನೀಡಿತು. ಅಂದು ಕೋಲ್ಕತ್ತದ ಆಗಸ ರಂಗು ರಂಗಿನ ಪಟಾಕಿಗಳಿಂದ ಶೃಂಗಾರಗೊಳ್ಳುತ್ತಿದ್ದರೆ ಇತ್ತ ಕಡೆ ಇಡೀ ದೇಶವೇ ಹಬ್ಬದ ವಾತಾವರಣವೇನೋ ಎಂಬ ಸಂಭ್ರಮದಲ್ಲಿ ನಲಿಯಿತು. VVS ಲಕ್ಷ್ಮಣ್, ಹರ್ಭಜನ್ ಸಿಂಗ್ ಹಾಗು ರಾಹುಲ್ ದ್ರಾವಿಡ್ ಅಂದು ಖಾನ್, ರೋಷನ್ ಹಾಗು ಬಚ್ಚನ್ ರೆಲ್ಲರನ್ನೂ ಹಿಂದಿಕ್ಕಿ ದೇಶದ ಜನಮಾನಸದಲ್ಲಿ ಹೀರೋಗಳಾಗಿಬಿಟ್ಟರು. ಒಟ್ಟು 557 ರನ್ಗಳು ಹಾಗು 13 ವಿಕೆಟ್ಗಳ ಈ ಮೂವರ ಆಟ ಅಂದು ವಿಶ್ವ ಕ್ರಿಕೆಟ್ನಲ್ಲಿ ಮ್ಯಾಚ್ ಫಿಕ್ಸಿಂಗ್ ಎಂಬ ಸ್ಲೋ ಪಾಯಿಸನ್ನಿಂದ ನೇಪಥ್ಯಕ್ಕೆ ಸೇರುತ್ತಿದ್ದ ಭಾರತೀಯ ಕ್ರಿಕೆಟ್ನ ಪುನರ್ಜನ್ಮಕ್ಕೆ ಕಾರಣವಾಯಿತು. ಹೈಡೆನ್, ಲ್ಯಾಂಗರ್, ಪಾಂಟಿಂಗ್, ವಾ ಬ್ರದರ್ಸ್, ಗಿಲ್ಕ್ರಿಸ್ಟ್, ವಾರ್ನ್, ಗಿಲ್ಲೆಸ್ಪಿ, ಮೆಗ್ರಾತ್ ಎಂಬ ಕ್ರಿಕೆಟ್ ದಂತಕತೆಗಳೇ ತುಂಬಿದ್ದ ತಂಡವೊಂದನ್ನು ಫಾಲೋ ಆನ್ ನ ಹೊರತಾಗಿಯೂ ಸಿನಿಮೀಯ ರೀತಿಯಲ್ಲಿ ಸೋಲಿಸುವುದು ಅಂದಿನ ಕಾಲಕಷ್ಟೆ ಅಲ್ಲದೆ ಇಂದಿಗೂ ಸಹ ಸಾಮಾನ್ಯದ ಮಾತಲ್ಲ. ಮೊದಲ ಟೆಸ್ಟ್ ನಲ್ಲಿ ಸೋತು ಎರಡನೇ ಟೆಸ್ಟನ್ನು ಇಲ್ಲಿ ದಾಖಲೆಯ ಅಂಕಿ ಅಂಶಗಳೊಟ್ಟಿಗೆ ಗೆದ್ದ ಭಾರತ ಅದೇ ಆತ್ಮವಿಶ್ವಾಸದಲ್ಲಿ ಮೂರನೆಯ ಹಾಗು ಅಂತಿಮ ಟೆಸ್ಟನ್ನು ಗೆದ್ದು ಸರಣಿಯನ್ನು ವಶಪಡಿಸಿಕೊಂಡಿತು. ಆ ಮೂಲಕ ಭಾರತದ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಕಾಂಗರೂಗಳ ಮೂರು ದಶಕದ ಕನಸಿಗೆ ತಣ್ಣಿರೆರಚಿತು!

ಹೆಸರು 'ಬಾರ್ಡರ್-ಗವಾಸ್ಕರ್' ಸರಣಿ. ಇಂಗ್ಲೆಂಡ್ ಹಾಗು ಆಸ್ಟ್ರೇಲಿಯಾ ಟೆಸ್ಟ್ ಪಂದ್ಯಗಳು ಎಂದಾಕ್ಷಣ ಹೇಗೆ 'ASHES' ನ ಹೆಸರು ಬರುತ್ತದೆಯೋ ಅಂತೆಯೇ ಭಾರತ ಹಾಗು ಆಸ್ಟ್ರೇಲಿಯಾ ಟೆಸ್ಟ್ ಎಂದಾಕ್ಷಣ ಕಣ್ಣ ಮುಂದೆ ಬರುವ ಹೆಸರೇ 'ಬಾರ್ಡರ್-ಗವಾಸ್ಕರ್' ಸರಣಿ. ಟೆಸ್ಟ್ ಕ್ರಿಕೆಟ್ ನಲ್ಲಿ ಹತ್ತುಸಾವಿರ ರನ್ ಗಳ ಕಿರೀಟವನ್ನು ಮೊದಲು ತೊಟ್ಟ ಸುನಿಲ್ ಗವಾಸ್ಕರ್ (1987) ಹಾಗು ಆಸ್ಟ್ರೇಲಿಯಾದ ಅಲನ್ ಬಾರ್ಡರ್ (1993) ದಿಗ್ಗಜದ್ವಯರ ಹೆಸರಿನಲ್ಲಿ ಕ್ರಮವಾಗಿ ಎರೆಡೆರೆಡು ವರ್ಷಕ್ಕೊಮ್ಮೆ ಭಾರತ ಹಾಗು ಆಸ್ಟ್ರೇಲಿಯಾ ತಂಡಗಳ ನಡುವೆ ನೆಡೆಯುವ ಹಣಾಹಣಿ. 1996 ರಲ್ಲಿ ಮೊದಲುಗೊಂಡು ಇಲ್ಲಿಯವರೆಗೂ ಒಟ್ಟು 13 ಸರಣಿಗಳನ್ನು ಆಡಿರುವ ಎರಡು ತಂಡಗಳಲ್ಲಿ ಭಾರತ 7 ಬಾರಿ, ಆಸ್ಟ್ರೇಲಿಯ 5 ಹಾಗು ಒಮ್ಮೆ (2003) ಸರಣಿ ಡ್ರಾ ನಲ್ಲಿ ಅಂತ್ಯ ಕಂಡಿದೆ. ಅಲ್ಲದೆ ಅತಿ ಹೆಚ್ಚು ರನ್ಗಳು (ಸಚಿನ್ ತೆಂಡೂಲ್ಕರ್) ಹಾಗು ಅತಿ ಹೆಚ್ಚಿನ ವಿಕೆಟ್ ಗಳ (ಅನಿಲ್ ಕುಂಬ್ಳೆ) ದಾಖಲೆಯೂ ಭಾರತೀಯರ ಹೆಸರಿನಲ್ಲಿಯೇ ಇದೆ ಎಂಬುದು ಹೆಮ್ಮೆಯ ವಿಷಯ.

2000-01ರ ಆಸ್ಟ್ರೇಲಿಯದ ಭಾರತ ಪ್ರವಾಸ ಹಾಗು 2003-04ರ ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸ. ಈ ಎರಡೂ ಸರಣಿಗಲ್ಲಿದ್ದ ರೋಚಕತೆ, ಹಠ ಹಾಗು ಉಭಯ ತಂಡಗಳ ಸಾಬೀತುಪಡಿಸುವಿಕೆಯ ಹಪಾಹಪಿ ಬಹುಷಃ ಬೇರ್ಯಾವ ಸರಣಿಯಲ್ಲಿಯೂ ಕಾಣಸಿಗದು. ಕಾರಣ ವಿಶ್ವವನ್ನೇ ಬಗ್ಗುಬಡಿದು ಮೆರೆಯುತ್ತಿದ್ದ ಆಸ್ಟ್ರೇಲಿಯಕ್ಕೆ ಕಬ್ಬಿಣದ ಕಡಲೆಯಾಗಿ ಅಂದು ಭಾರತ ತಂಡ ಮಾರ್ಪಾಡಾಗುತ್ತಿತ್ತು. ಹೋದಲೆಲ್ಲಾ ವಿಜಯಪತಾಕೆಯನ್ನು ಹಾರಿಸಿಯೇ ಬರುತ್ತಿದ್ದ ಧೈತ್ಯ ಕಾಂಗರು ಬಳಗದ ಎದುರು ಸಟೆದು ನಿಲ್ಲಬಲ್ಲ ತಂಡವೊಂದಿತ್ತೆಂದರೆ ಅದು ಭಾರತ ತಂಡ. ಈ ಎರಡೂ ಸರಣಿಗಳು ಟೆಸ್ಟ್ ಕ್ರಿಕೆಟ್ನಲ್ಲಿ ಕುಸಿಯುತ್ತಿದ್ದ ಭಾರತದ ವರ್ಚಸ್ಸನ್ನು ಮೇಲೆತ್ತಿ ನಿಲ್ಲಿಸಿದವಲ್ಲದೆ ವಿದೇಶಿ ನೆಲದಲ್ಲಿ ತಂಡವನ್ನು ಪಳಗಿಸುವ ಕಲೆಯನ್ನು ಪ್ರತಿಯೊಬ್ಬ ಆಟಗಾರನಲ್ಲೂ ಮೂಡಿಸಿದವು. ಇದರ ಸಂಪೂರ್ಣ ಕೀರ್ತಿ ಅಷ್ಟೂ ತಂಡಕ್ಕೂ ಸಲ್ಲಬೇಕಾದರೂ ಅದರ ಬಹುಪಾಲು ಕ್ರೆಡಿಟ್ ಡೇರಿಂಗ್ ಅಂಡ್ ಡ್ಯಾಶಿಂಗ್ ನಾಯಕನಾದ ಸೌರವ್ ಗಂಗೂಲಿಗೆ ಸೇರಬೇಕು ಎಂಬುದು ಹಲವರ ಅನಿಸಿಕೆ. ನಾಯಕನ ಹೆಚ್ಚಿನ ಹೊರೆಯ ನಂತರ 2000 ವರ್ಷದಿಂದಾಚೆಯ ಮ್ಯಾಚುಗಳಲ್ಲಿ ತನ್ನ ಬ್ಯಾಟಿಂಗ್ ನ ಹೊಳಪನ್ನು ಆತ ಕೊಂಚ ಕಳೆದುಕೊಂಡನಾದರೂ ನಾಯಕತ್ವದ ನೆಡೆಯಲ್ಲಿ ಮಾತ್ರ ನಿಸ್ಸಿಮನಾಗಿದ್ದ. ದೇಶೀ ನೆಲದಲ್ಲಿ ಭಾರತ ಅದೇನೇ ಸಾಧನೆ ಮಾಡಿದ್ದರೂ ವಿದೇಶಿ ನೆಲದಲ್ಲಿ ಅದರ ಸಾಧನೆ ಸೊನ್ನೆ ಎನ್ನುವ ಬಿಳಿಯರ ಮುಖ ಕೆಂಪಾಗುವಂತೆ ಅದೇ ನೆಲದಲ್ಲಿ ಅವರನ್ನೇ ಚಚ್ಚಿಕೆಡವಿ NatWest ಏಕದಿನ ಸರಣಿಯನ್ನು ವಶಪಡಿಸಿಕೊಂಡ ಗಂಗೂಲಿ ವಿಶ್ವವನ್ನೇ ಗೆಲ್ಲಲು ಬೇಕಾದ ತಂಡವನ್ನು ಕಟ್ಟಿದ್ದ. ಸೌತ್ ಆಫ್ರಿಕಾದ ನೆಲದಲ್ಲಿ 2003 ರ ವಿಶ್ವಕಪ್ ನ ಫೈನಲ್ ವರೆಗೂ ಬಂದು ಸರಣಿಯ ಪೂರ್ತಿ ಆಸ್ಟ್ರೇಲಿಯ ಒಂದನ್ನು ಹೊರತುಪಡಿಸಿ ಬೇರ್ಯಾವ ತಂಡಕ್ಕೂ ಮಣಿಯದ ಭಾರತ ತಂಡದ ಆ ಸಾಧನೆ ವಿಶ್ವದ ಹುಬ್ಬೇರುವಂತೆ ಮಾಡಿತ್ತು. ಇಂದಿಗೂ ವಿದೇಶಿ ನೆಲದಲ್ಲಿ ಭಾರತದ ಸಾಧನೆಯ ವಿಷಯ ಬಂದಾಗ ಗಂಗೂಲಿ ಹಾಗು ಆತನ ತಂಡದ ಸಾಹಸಗಳೇ ಮೊದಲ ಸಾಲಿನಲ್ಲಿ ಬರುತ್ತವೆ.

2001ರ ಬಾರ್ಡರ್-ಗವಾಸ್ಕರ್ ಸರಣಿ ಭಾರತದ ಪಾಲಿಗೆ ಗೆಲುವಿನ ನಗೆಯನ್ನು ತಂದಿತಾದರೂ ಆಸ್ಟೇಲಿಯ ನೆಲದ ಫಾಸ್ಟ್ ಪಿಚ್ ಗಳಲ್ಲಿ ತಮ್ಮ ತಾಕತ್ತನ್ನು ಒರೆಹಚ್ಚಿಕೊಳ್ಳುವ ಕೆಲಸ 2003ರ ತಂಡದ ಅಷ್ಟೂ ಆಟಗಾರರಿಗಿದ್ದಿತ್ತು. ಅಲ್ಲದೆ ಅದು ಆಸ್ಟ್ರೇಲಿಯಾದ ಲೆಜೆಂಡರಿ ಆಟಗಾರ ಸ್ಟೀವ್ ವಾ ನ ಕೊನೆಯ ಸರಣಿಯೂ ಆದದ್ದರಿಂದ ಕಾಂಗರೂ ಬಳಗ ಆತನ ಬೀಳ್ಕೊಡಿಗೆಯ ಕಾಣಿಕೆಯಾಗಿ ಶತಾಯ ಗತಾಯ ಟ್ರೋಫಿಯನ್ನು ಗೆದ್ದು ಕೊಡುವ ತವಕದಲ್ಲಿದ್ದಿತು. ಆಸ್ಟ್ರೇಲಿಯ ನೆಲದಲ್ಲಿ ಭಾರತದ ಗೆಲುವಿನ ಸಾಧನೆ ಕೇವಲ 11%. ಅರ್ಥಾತ್ 70 ವರ್ಷಗಳ ಉಭಯತಂಡಗಳ ಮುಖಾಮುಖಿಯಲ್ಲಿ ಭಾರತ ಆಸ್ಟ್ರೇಲಿಯವನ್ನು ಅದರದ್ದೇ ನೆಲದಲ್ಲಿ ಸೋಲುಣಿಸಿರುವುದು ಕೇವಲ 5 ಟೆಸ್ಟ್ ಗಳಲಷ್ಟೇ! 2003-04 ರ ಸರಣಿಯ ಹೊತ್ತಿಗೆ ಆ ಸಂಖ್ಯೆ ಕೇವಲ 3 ಮಾತ್ರವಾಗಿದ್ದಿತ್ತು! ಆದ ಕಾರಣ ಸರಣಿ ಭಾರತ ತಂಡಕ್ಕೆ ಆತ್ಮಗೌರವದ ಪ್ರತೀಕವಾಗಿತ್ತಷ್ಟೆ ಅಲ್ಲದೆ ಗೆದ್ದೇ ಬೀಗಬೇಕೆಂದು ಹಠಕ್ಕೆ ಬಿದ್ದಿದ್ದ ಆಸೀಸ್ ವೇಗಿಗಳ ಬಲಿಷ್ಠ ಆಕ್ರಮಣವ ದ ಜೊತೆಗೆ ಸ್ಲೆಡ್ಗಿಂಗ್ ಚಾಳಿಯನ್ನೂ ದಿಟವಾಗಿ ಎದುರಿಸುವುದಾಗಿದ್ದಿತು. ಗಾಯದ ಸಮಸ್ಯೆಯಿಂದ ಮೆಗ್ರಾಥ್ ಹಾಗು ಶೆರ್ನ್ ವಾರ್ನ್ ಸರಣಿಯಿಂದ ಹೊರಗುಳಿದದ್ದೂ ಸಹ ಭಾರತಕ್ಕಂದು ಪ್ಲಸ್ ಪಾಯಿಂಟ್.


ಮೊದಲ ಪಂದ್ಯ : ದ ಗಬ್ಬಾ ಕ್ರಿಕೆಟ್ ಮೈದಾನ, ಬ್ರಿಸ್ಬೈನ್. (4-8 Dec 2003)

ಮೋಡಗಳ ಕರಿಛಾಯೆಯಲ್ಲೇ ಶುರುವಾದ ಆಟ ಮೊದಲು ಆಸ್ಟ್ರೇಲಿಯಾದ ಬಿಗಿ ಹಿಡಿತದಲ್ಲಿಯೇ ಸಾಗಿತು. ನಂತರ 323 ರನ್ ಗಳ ಆಸೀಸ್ ನ ಮೊತ್ತವನ್ನು ಬೆನ್ನಟ್ಟಿದ ಭಾರತ 63 ರನ್ಗಳಿಗೆ 3 ವಿಕೆಟ್ ಗಳನ್ನು ಕಳೆದುಕೊಂಡು ಪರದಾಡತೊಡಗಿತ್ತು. ಇನ್ನೊಂದೆರೆಡು ವಿಕೆಟ್ಗಳು ಉರುಳಿದರೆ ಇಡೀ ಸರಣಿಗೆ ಬೇಕಿದ್ದ ಆರಂಭಿಕ ಆತ್ಮಸೈರ್ಯವೂ ಉರುಳುತ್ತಿತ್ತು. ಇನ್ನಿಂಗ್ಸ್ ಲೀಡ್ ಕೊಡಲಾಗದಿದ್ದರೂ ಟಪಟಪನೆ ಉದುರುತ್ತಿದ್ದ ವಿಕೆಟ್ಗಳನ್ನಾದರೂ ಕೂಡಲೇ ತಡೆದು ನಿಲಿಸಬೇಕಿತ್ತು. ಆಗ ಜೊತೆಯಾದ ಗಂಗೂಲಿ ಹಾಗು ಲಕ್ಷ್ಮಣ್ ಜೋಡಿ ಶೀತಬರೀತ ಆ ನೆಲದಲ್ಲೂ ಕಾಂಗರೂಗಳ ಬೆವರನ್ನು ಇಳಿಸಿದರು. ಆ ಇನ್ನಿಂಗ್ಸ್ ನ ಅದ್ಭುತ ಹೈಲೈಟ್ ಸೌರವ್ ಗಂಗೂಲಿಯ 196 ಎಸೆತಗಳ 144 ರನ್ಗಳು. ತಮ್ಮ ಬೌನ್ಸರ್ ಹಾಗು ಯಾರ್ಕ್ ರ್ ಗಳಿಂದ ವಿಸಿಟಿಂಗ್ ತಂಡದ ನಾಯಕನನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡುವ ಆಸ್ಟ್ರೇಲಿಯನ್ನರ ತಂತ್ರಗಾರಿಕೆಯನ್ನು ಬುಡಮೇಲು ಮಾಡಿದ ಗಂಗೂಲಿ ಆಸೀಸ್ ನೆಲದಲ್ಲಿ ಶತಕವನ್ನು ಸಿಡಿಸಿದ ಭಾರತದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಾನೆ. ಜೊತೆಗೆ ಆಸ್ಟ್ರೇಲಿಯನ್ನರೆಂದರೆ ರನ್ಗಳ ಸುರಿಮಳೆಗೈಯುವ ಲಕ್ಷ್ಮಣ್ 75 ರನ್ ಗಳಿಸಿ ಭಾರತದ ಮೊತ್ತವನ್ನು 400 ರ ಗಡಿಯನ್ನು ದಾಟಿಸಲು ನಿರ್ಣಾಯಕ ಪಾತ್ರವನ್ನು ವಹಿಸಿದ. ಅಷ್ಟರಲ್ಲಾಗಲೇ ಮಳೆಯ ಕಾರಣ ಪಂದ್ಯದ ನಾಲ್ಕು ದಿನಗಳು ಮುಗಿದ್ದಿದ್ದವು. ಯಾವ ಆಟವನ್ನೂ ಆಡಿದರೂ ಸಹ ಪಂದ್ಯ ಡ್ರಾನಲ್ಲಿ ಅಂತ್ಯ ಕಾಣುವುದರಲ್ಲಿ ಸಂಶಯವೇ ಇರಲಿಲ್ಲ. ಆದರೆ ಆಸೀಸ್ ನೆಲದಲ್ಲಿ ಭಾರತದ ಬ್ಯಾಟಿಂಗ್ ಹಾಗು ಬೌಲಿಂಗ್ ನ ಪರೀಕ್ಷೆಯ ಮೊದಲ ಪಂದ್ಯ ಅದಾಗಿದ್ದಿತು. ನಾಲ್ಕೈದು ಆಟಗಾರರನ್ನು ಬಿಟ್ಟರೆ ಉಳಿದೆಲ್ಲ ಚಿಗುರು ಮೀಸೆಯ ಆಟಗಾರರಿಗೆ ಅದು ಚೊಚ್ಚಲ ಆಸೀಸ್ ಪ್ರವಾಸ ಬೇರೆ. ಪಂದ್ಯದಲ್ಲಿ ಭಾರತದ ದಿಟ್ಟ ಉತ್ತರ ಸರಣಿ ರೋಚಕವಾಗುವ ಎಲ್ಲ ಮುನ್ಸೂಚನೆಯನ್ನೂ ಪ್ರೇಕ್ಷಕರಿಗೆ ನೀಡಿದವು. ಅಂದುಕೊಂಡಂತೆಯೇ ಮ್ಯಾಚ್ ಡ್ರಾ ನಲ್ಲಿ ಅಂತ್ಯಕಂಡಿತು.


ಎರಡನೇ ಪಂದ್ಯ : ಓವಲ್ ಕ್ರಿಕೆಟ್ ಮೈದಾನ, ಅಡಿಲೇಡ್. ( 12-16 Dec 2003)

ಭಾರತದ ಟೆಸ್ಟ್ ಇತಿಹಾಸದ ಮತ್ತೊಂದು ಐತಿಹಾಸಿಕ ಪಂದ್ಯಕ್ಕೆ ಸಾಕ್ಷಿಯಾಗುವುದರಲಿತ್ತು ಓವಲ್. ಹೆಚ್ಚುಕಡಿಮೆ 2001ರ ಕೋಲ್ಕತ್ತಾ ಟೆಸ್ಟ್ ಪಂದ್ಯವೇ ಮರುಕಳಿಸುವಂತಹ ಪ್ರದರ್ಶನ ಅಂದು ಆಸೀಸ್ ನೆಲದಲ್ಲಿ ಕಂಡಿತು. ಅಂದಿನಂತೆಯೇ ಇಂದೂ ಸಹ ಲಕ್ಷ್ಮಣ್ ಹಾಗು ದ್ರಾವಿಡ್ ಮುಳುಗುತಿದ್ದ ತಂಡವನ್ನು ಗೆಲುವಿನ ದಡ ತಲುಪಿಸಿದರು. ಹಾಗು ಅದು ಇರ್ಫಾನ್ ಪಠಾಣ್ ಎಂಬ ಸ್ವಿಂಗ್ ಮಾಂತ್ರಿಕನ ಡೆಬ್ಯು ಮ್ಯಾಚ್ ಕೂಡ. ಬೌಲರ್ಗಳಿಗೆ ಅಷ್ಟೇನೂ ನೆರವಾಗದ ಫ್ಲಾಟ್ ಪಿಚ್ ನಲ್ಲಿ ಪಠಾಣ್ ತನ್ನ ಚೊಚ್ಚಲ ವಿಕೆಟ್ ರೂಪದಲ್ಲಿ ಹಡೆನ್ ನನ್ನು ಹೊರಗಟ್ಟಿದ ಆ ಕ್ಷಣವಂತೂ ವಿಶ್ವದ ಯಾವುದೇ ಮೂಲೆಗೊದರೂ ಸಾವಿರ ಸಾವಿರ ಸಂಖ್ಯೆಯಲ್ಲಿ ಜಮಾವಣೆಗೊಂಡು ತಂಡವನ್ನು ಹುರಿದುಂಬಿಸುವ ಭಾರತೀಯರ ಸಂತಸ ಮುಗಿಲು ಮುಟ್ಟುವಂತೆ ಮಾಡಿತು. ಆದರೆ ಆ ಸಂತಸ ಬಹಳಷ್ಟು ಹೊತ್ತು ಉಳಿಯಲಿಲ್ಲ. ಆ ವರ್ಷದ ತನ್ನ ಎರಡನೇ ಡಬಲ್ ಸೆಂಚೂರಿಯನ್ನು ಪೂರ್ತಿಗೊಳಿಸಲು ಆಡಲಿಳಿದ್ದಿದ್ದ ರಿಕ್ಕಿ ಪಾಂಟಿಂಗ್ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿ ಭಾರತದ ಬೌಲರ್ಗಳ ಗಟ್ಟಿ ತೋಳುಗಳನ್ನು ಸೋಲಿಸಿದ. ಆತ ಗಳಿಸಿದ ಸ್ಕೋರ್ 242 ರನ್ನುಗಳು. ತಂಡದ ಮೊತ್ತ 556! ನಂತರ ಇನ್ನಿಂಗ್ಸ್ ಆರಂಭಿಸಿದ ಭಾರತದ ಪಾಲಿಗೆ ಉತ್ತಮ ಆರಂಭವವೇ ದೊರೆಯಿತು. ಏಕದಿನ ಪಂದ್ಯಗಳಂತೆ ಬ್ಯಾಟ್ ಬೀಸಿದ ಸೆಹ್ವಾಗ್ ತನ್ನ ಹಾಫ್ ಸೆಂಚೂರಿ ತಲುಪುವ ಕ್ಷಣಮಾತ್ರದಲ್ಲಿ ಬಿಚೆಲ್ ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದ. ಅತ್ತ ಕಡೆಯಿಂದ ಬಂದ ಗಂಗೂಲಿ ಹಾಗು ಸಚಿನ್ ತಮ್ಮ ಸ್ಕೋರು ಎರಡಂಕಿ ತಲುಪುವ ಮೊದಲೇ ಅದೇ ಹಾದಿಯನ್ನು ಹಿಡಿದರು. ಆಗ ತಂಡದ ಮೊತ್ತ 84/4. ಆಸ್ಟ್ರೇಲಿಯನ್ನರ ರನ್ ಗಡಿ ದಾಟಿ ಮುನ್ನುಗ್ಗಲು ಇನ್ನು ೪೭೨ ರನ್ ಗಳು ಬೇಕಿದ್ದಿತು. ಭಾರತದ ಬಳಿ ಉಳಿದ ವಿಕೆಟ್ಗಳು ಕೇವಲ ಆರೇ ಆರು. ಅಷ್ಟರಲ್ಲಾಗಲೇ ಫಾಲೋ ಆನ್ ತಪ್ಪಿಸಿಕೊಳ್ಳುವ, ಟೆಸ್ಟ್ ಡ್ರಾ ಮಾಡಿಕೊಳ್ಳುವ ಮಾತುಗಳು ಕಾಮೆಂಟರಿ ಕ್ಯಾಬಿನ್ ಇಂದ ಬರತೊಡಗಿದವು. ಸ್ಕ್ರೀಸ್ ನಲ್ಲಿ ಇದ್ದವರು ಭಾರತ ತಂಡದ ರಾಮಲಕ್ಷ್ಮಣ ಜೋಡಿಯಂದೆನ್ನಬಹುದಾದ ವೆರಿ ವೆರಿ ಸ್ಪೆಷಲ್ ಲಕ್ಷ್ಮಣ್ ಹಾಗು ದ ವಾಲ್ ದ್ರಾವಿಡ್. ಜೋಡಿ ಆಸ್ಟ್ರೇಲಿಯ ನೆಲದಲ್ಲಿ ಮಗದೊಂದು ಇತಿಹಾಸ ಬರೆಯಲು ಅಣಿಯಾಗತೊಡಗಿತು. ಭಾರತದ ನಿಜವಾದ ಟೆಸ್ಟ್ ಶುರುವಾದದ್ದು ಆಗೆನ್ನಬಹುದು. ಬೆಣ್ಣೆಯ ಮೇಲಿನ ಕಸವನ್ನು ತೆಗೆದಂತೆ ನಿರಾಯಾಸವಾಗಿ ಬೌಂಡರಿಗಳಿಗೆ ಚೆಂಡನ್ನು ಅಟ್ಟುತ್ತಾ ಮೋಹಕ ಇನ್ನಿಂಗ್ಸ್ ಕಟ್ಟಿದ್ದ ಜೋಡಿ ಬರೋಬ್ಬರಿ 303 ರನ್ ಗಳ ಸ್ಮರಣೀಯ ಜೊತೆಯಾಟವನ್ನು ನೀಡಿತು. ದ್ರಾವಿಡ್ ಟೆಸ್ಟ್ ಕ್ರಿಕೆಟ್ನ ದಿ ಬೆಸ್ಟ್ 233 ರನ್ಗಳನ್ನು ಸಿಡಿಸಿದರೆ, VVS ತಮ್ಮ ಸ್ಪೆಷಲ್ 148 ರನ್ಗಳನ್ನು ಕಲೆಹಾಕಿ ವಿಕೆಟನ್ನು ಒಪ್ಪಿಸಿದರು. ಈ ಜೊತೆಯಾಟ ಇಂದಿಗೂ ಟೆಸ್ಟ್ ಇತಿಹಾಸದಲ್ಲಿ ಗ್ರೇಟೆಸ್ಟ್ ಜೊತೆಯಾಟಗಳ ಸಾಲಿನಲ್ಲಿ ಒಂದಾಗಿ ಪರಿಗಣಿಸಲ್ಪಡುತ್ತದೆ. ಪಿಚ್ ನಿಧಾನವಾಗಿ ಬೌಲಿಂಗ್ಗೆ ಪೂರಕವಾಗತೊಡದಿದ್ದರೆ ಆತ್ತ ಕಡೆ ಭಾರತದ ಸ್ಕೋರು 500 ರ ಗಡಿಯನ್ನು ದಾಟಿತ್ತು. 33 ರನ್ ಗಳ ಲೀಡ್ ನೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಆಸೀಸನ್ನು ತನ್ನ ಮಾರಕ 6 ವಿಕೆಟ್ಗಳ ದಾಳಿಯಿಂದ 196 ರನ್ಗಳಿಗೆ ಹೆಡೆಮುರಿಕಟ್ಟಿದ ಅಗರ್ಕರ್ ಆ ದಿನದ ಹೀರೊ ನಂಬರ್ ಒನ್. ನಂತರ ದೊರೆತ 229 ರನ್ಗಳ ಮೊತ್ತ ದ ಗುರಿಯನ್ನು ಭಾರತ ಆಯಾಸಪಡುತ್ತಲೇ ಆರು ವಿಕೆಟ್ ಗಳನ್ನು ಕಳೆದುಕೊಂಡು ತಲುಪಿತು. ಗೆಲುವು ಖಚಿತವಾಗುವವರೆಗೂ ಆಗಲೂ ವಿಕೆಟ್ನ ಇನ್ನೊಂದೆಡೆ ಗಟ್ಟಿಗಲ್ಲಿನಂತೆ ನಿಂತ ವ್ಯಕ್ತಿ ಮತ್ತದೇ ರಾಹುಲ್ ದ್ರಾವಿಡ್. ಟೆಸ್ಟ್ ನ ಗೆಲುವು ಆಸೀಸ್ ನೆಲದಲ್ಲಿ ಭಾರತದ 22 ವರ್ಷಗಳ ಗೆಲುವಿನ ಬರವನ್ನು ನೀಗಿಸಿತಲ್ಲದೆ ಸರಣಿ ಗೆಲುವನ್ನೂ ಸಾಧಿಸಲೇಬೇಕೆಂಬ ಹುರುಪಿನಲ್ಲಿ ನಂತರದ ಟೆಸ್ಟ್ ಅನ್ನು ಎದುರುನೋಡಿತು.


ಮೂರನೇ ಪಂದ್ಯ : ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (26-30 Dec 2003)

ಟಾಸ್ ಗೆದ್ದು ಬ್ಯಾಟಿಂಗನ್ನು ಆಯ್ದುಕೊಂಡ ಗಂಗೂಲಿಯ ನಿರ್ಧಾರವನ್ನು ಅಕ್ಷರ ಸಹ ಸದುಪಯೋಗ ಮಾಡಿಕೊಂಡ ಚೋಪ್ರಾ ಹಾಗು ಸೆಹ್ವಾಗ್ ಜೋಡಿ ಕಳೆದ ಹತ್ತು ವರ್ಷಗಳಲ್ಲೇ ಮೊದಲ ಬಾರಿಗೆ ಆಸೀಸ್ ನೆಲದಲ್ಲಿ ಭಾರತೀಯ ಓಪನರ್ಗಳು ಗಳಿಸದ ಅತ್ಯಧಿಕ ಪಾರ್ಟ್ನರ್ ಶಿಪನ್ನು ಕಲೆಹಾಕಿದರು. 141 ರನ್ ಗಳ ಮೆಗಾ ಪಾರ್ಟರ್ಶಿಪ್ನ ನಂತರ ದ್ರಾವಿಡ್ನ ಜೊತೆಗೂಡಿದ ಸೆಹ್ವಾಗ್ ಬಿರುಸಿನ ಆಟವಾಡಿದನು. ಚೆಂಡನ್ನು ಬೌಂಡರಿ ಗೆರೆಗೆ ಅಟ್ಟುವ ಮೂಲಕ ಆಸ್ಟ್ರೇಲಿಯನ್ನರ ವಿರುದ್ಧ ತನ್ನ ಚೊಚ್ಚಲ ಸೆಂಚೂರಿಯನ್ನು ಪೂರೈಸಿದ. ಮುಂದಿನ್ನೇನು, ಸ್ಪಿನ್ ಹಾಗು ಪಾಸ್ಟ್ ದಾಳಿಗಳೆರಡೂ ಕಕ್ಕಾಬಿಕ್ಕಿಯಾಗುವಂತೆ ಬ್ಯಾಟ್ ಬೀಸಿ ತಂಡದ ಮೊತ್ತ 278/1 ತಲುಪುವಂತೆ ಮಾಡಿದ. ಆದರೆ ಅಲ್ಲಿಂದ ಮುಂದೆ ಒಂದರಿಂದೊಂದು ವಿಕೆಟ್ಗಳು ಉರುಳತೊಡಗಿದವು. ಸೆಹ್ವಾಗ್ 195 ರಲ್ಲಿ ಆಡುತ್ತಿದ್ದಾಗ ಬೌಂಡರಿಯ ಮೂಲಕ ತನ್ನ ಮೊದಲ ದ್ವಿಶತಕವನ್ನು ಪೂರೈಸುವ ಜೋಶಿನಲ್ಲಿ ಕ್ಯಾಟಿಚ್ ನ ಕೈಗೆ ಕ್ಯಾಚಿತ್ತು ಪೆವಿಲಿಯನ್ ನೆಡೆಗೆ ಹೆಜ್ಜೆ ಹಾಕುತ್ತಿದ್ದರೆ ಅಲ್ಲಿಯವರೆಗೂ ಕುಣಿದು ಕುಪ್ಪಳಿಸುತ್ತಿದ್ದ ಭಾರತೀಯ ಪ್ರೇಕ್ಷಕರು ಘಾಡ ಮೌನಕ್ಕೆ ಜಾರಿದರು. ಅಲ್ಲಿಗೆ ಭಾರತದ ಮೊದಲ ಇನ್ನಿಂಗ್ಸ್ ಕ್ಷೀಣಿಸಿತೆಂದೇ ಹೇಳಬೇಕು. ಕಾರಣ 278 ರನ್ಗಳಿಗೆ ಒಂದು ವಿಕೆಟ್ಗಳನ್ನು ಕಳೆದುಕೊಂಡಿದ್ದ ಭಾರತ ನಂತರದ 88 ರನ್ ಗಳಿಗೆ ಸರ್ವಪತನವನ್ನು ಕಂಡಿತು! ಎಲ್ಲೋ ಒಂದೆಡೆ ಈ ಪತನ ಸರಣಿಯ ಫಲಿತಾಂಶ ಭಾರತದ ಪರ ವಾಲಾಡಿರಲು ಪ್ರಮುಖ ಪರಿಣಾಮ ಬೀರಿತೆಂದೇ ಹೇಳಬಹುದು. ಸೊಗಸಾದ ಆರಂಭವನ್ನು ಪಡೆದು ಮೊದಲ ದಿನದ ಮೇಲುಗೈ ಸಾಧಿಸಿದ ಭಾರತ ಕೆಲವೇ ತಾಸುಗಳ ಹಾದಿಯಲ್ಲಿ ಮುಗ್ಗರಿಸಿತು. ಅಲ್ಲಿಂದ ಮುಂದೆ ಆಸೀಸ್ ಆಟಗಾರ ಘರ್ಜನೆ ಆರಂಭಗೊಂಡಿತು. ವೇಗವಾಗಿ ಬ್ಯಾಟ್ ಬೀಸಿದ ಹೈಡೆನ್ 136 ರನ್ ಗಳನ್ನು ಮಾಡಿದರೆ ಮಗದೊಂದು ದ್ವಿಶತಕವನ್ನು ಭಾರಿಸಿ ದಾಖಲೆ ಸೃಷ್ಟಿಸಿದ ಪಾಂಟಿಂಗ್ 257 ರನ್ಗಳ ಅದ್ಭುತ ಆಟವನ್ನು ಆಡಿದ. ಮೊದಲ ಇನ್ನಿಂಗ್ಸ್ ನ ಬಿರುಸುತನ ಎರಡನೇ ಇನ್ನಿಂಗ್ಸ್ ನಲ್ಲಿ ಭಾರತದ ಆಟದಲ್ಲಿ ಕಾಣಲಿಲ್ಲ. 286 ರನ್ ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡು 94 ರನ್ ಗಳ ಸಾಧಾರಣ ಟಾರ್ಗೆಟ್ ಅನ್ನು ಆಸೀಸ್ ಬಳಗಕ್ಕೆ ನೀಡಿ ಅದು ಸೋಲಿನ ಕಹಿಯನ್ನನುಭವಿಸಿತು. ಆದರೆ ಟೆಸ್ಟ್ ಸೋತರೂ ಭಾರತದ ಮೊದಲ ಇನ್ನಿಂಗ್ಸ್ ಅದರಲ್ಲೂ ಆ ಮೊದಲ ದಿನದಾಟ ನಮ್ಮವರ ಹುಮ್ಮಸ್ಸನ್ನು ಹೆಚ್ಚಿಸಿತು. ಅದರಲ್ಲೂ ಸೆಹ್ವಾಗ್ ಎಂಬ ರೋರಿಂಗ್ ಓಪನರ್ ನ ಭಯ ಅಲ್ಲಿಂದ ಮುಂದೆ ಆಸೀಸ್ ಬೌಲರ್ಗಳಿಗೆ ಕಾಡತೊಡಗಿತು.


ನಾಲ್ಕನೇ ಹಾಗು ಅಂತಿಮ ಪಂದ್ಯ : ಸಿಡ್ನಿ ಕ್ರಿಕೆಟ್ ಗ್ರೌಂಡ್ ( 2-6 Jan 2004 )

ಹೊಸವರ್ಷವನ್ನು ಆಸ್ಟ್ರೇಲಿಯಾದ ಅಂಗಳದಲ್ಲಿ ಆಚರಿಸಿಕೊಂಡ ಭಾರತೀಯ ಪಡೆ ಬಾರ್ಡರ್-ಗವಾಸ್ಕರ್ ಟ್ರೋಫಿಯ ಅಂತಿಮ ಹಣಾಹಣಿಗೆ ಸಜ್ಜಾಗಿದ್ದಿತು. ಸರಣಿ 1-1 ರಲ್ಲಿ ಸಮಭಲಗೊಂಡಿದ್ದರಿಂದ ಎರಡೂ ತಂಡಗಳಿಗೂ ಅದು ನಿರ್ಣಾಯಕ ಟೆಸ್ಟ್. ಆಸ್ಟ್ರೇಲಿಯನ್ನರಿಗೆ ತಮ್ಮ ಹೀರೋ ಸ್ಟೀವ್ ವಾ ನ ಅಂತಿಮ ಸರಣಿಯ ಬಿಳ್ಕೊಡುಗೆಯ ಕಾಣಿಕೆಯಾಗಿ ಪ್ರಶಸ್ತಿಯನ್ನು ಗೆದ್ದುಕೊಡಬೇಕೆಂಬ ಹಠವಿದ್ದರೆ ಭಾರತೀಯರಿಗೆ ತಮ್ಮ ಚೊಚ್ಚಲ ಟೆಸ್ಟ್ ಸರಣಿಯನ್ನು ಆಸೀಸ್ ಅಂಗಳದಲ್ಲಿ ಗೆದ್ದು ಇತಿಹಾಸ ಸೃಷ್ಟಿಸುವ ತವಕ. ವಾ ನ ಕೊನೆಯ ಪಂದ್ಯಕ್ಕಾಗಿ ಭರ್ಜರಿ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದ ಹೋಂ ಕ್ರೌಡ್ ನ ಭರಪೂರ ಸಪೋರ್ಟ್ ಆಸ್ಟ್ರೇಲಿಯನ್ನರಿಗೆ. ಇವೆಲ್ಲವೂ ಭಾರತಕ್ಕೆ ಪ್ರತಿಕೂಲ ವಾತಾವರಣೆವನ್ನೇ ಸೃಷ್ಟಿಸಿದ್ದವು. ಆದರೆ ಪ್ರತೀ ಪಂದ್ಯದಲ್ಲೂ ಒಂದಿಲ್ಲೊಬ್ಬ ಭಾರತೀಯ ಆಟಗಾರರು ಮಿಂಚುತಿದ್ದರೂ ದಿ ಗ್ರೇಟ್ ಸಚಿನ್ ನ ಪಾಲಿಗೆ ಸರಣಿ ಏಕೋ ರನ್ ಗಳಿಲ್ಲದ ಮರುಭೂಮಿಯಾಗಿದ್ದಿತು. ಸರಣಿಯ ಆರು ಇನ್ನಿಂಗ್ಸ್ ನಲ್ಲಿ ಆತ ಗಳಿಸಿದ್ದು ಕೇವಲ 83 ರನ್ ಗಳು. ಜೊತೆಗೆ ಎರೆಡೆರಡು ಡಕ್ ! ಆಸ್ಟ್ರೇಲಿಯಾದ ಲೋವರ್ ಆರ್ಡರ್ ಬ್ಯಾಟ್ಸ್ಮನ್ಗಳಿಗಿಂತಲೂ ಕನಿಷ್ಠ ರನ್ ಗಳನ್ನು ಗಳಿಸಿದ್ದ ಸಚಿನ್ಗೆ ತನ್ನ ಅಗಾಧತೆಯನ್ನು ತೋರಿಸಿಕೊಳ್ಳಲು ಉಳಿದದ್ದು ಕೇವಲ ಸಿಡ್ನಿ ಟೆಸ್ಟ್ ಮಾತ್ರ. ವಿಶ್ವದಾದ್ಯಂತ ಬೌಲರ್ಗಳ ನಿದ್ದೆ ಕೆಡಿಸುತ್ತಿದ್ದ ಮಾಸ್ಟರ್ ಬ್ಲಾಸ್ಟರ್ ಆಸ್ಟ್ರೇಲಿಯಾದ ನೆಲದಲ್ಲಿ ಮಿಂಚದೆ ಬರುವುದುಂಟೇ? ಬಹುಷಃ ಆತನ ಆಷ್ಟೂ ಆಟವೂ ಈ ಒಂದು ಟೆಸ್ಟ್ ಗಾಗಿಯೇ ಮೀಸಲಿತ್ತೇನೋ. ಕಾರಣ, ಟೆಸ್ಟ್ ಮುಗಿಯುವುದರೊಳಗೆ ಆತನ ಜೋಳಿಗೆಯಲ್ಲಿ ಒಂದು ಡಬಲ್ ಸೆಂಚೂರಿ ಹಾಗು ಒಂದು ಫಿಫ್ಟಿಯೊಟ್ಟಿಗೆ ಇದ್ದ ಒಟ್ಟು ರನ್ ಗಳು ಮುನ್ನೂರರ ಗಡಿಯನ್ನು ದಾಟಿದ್ದವು!

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತದ ಓಪನರ್ ಗಳು ಸ್ವಿಂಗ್ ಹಾಗು ಬೌನ್ಸರ್ ಗಳ ಹೊರತಾಗಿಯೂ ಮಗದೊಂದು ಉತ್ತಮ ಓಪನಿಂಗನ್ನು ನೀಡಿದರು. 194ಕ್ಕೆ ಮೂರು ವಿಕೆಟ್ ಗಳನ್ನು ಕಳೆದುಕೊಂಡಿದ್ದ ಭಾರತದ ನಾಲ್ಕನೇ ವಿಕೆಟ್ ಉರುಳಿದಾಗ ಪರದೆಯ ಮೇಲೆ ಮೂಡಿದ್ದ ಸ್ಕೋರ್ 547 ರನ್ಗಳು! ಸಚಿನ್ ಹಾಗು ಲಕ್ಷ್ಮಣ್ ಜೋಡಿ ಬರೋಬ್ಬರಿ 303 ರನ್ ಗಳ ಜೊತೆಯಾಟವನ್ನು ಅಲ್ಲಿ ನೀಡಿತು. ಲಕ್ಷ್ಮಣ್ 178 ರನ್ ಗಳನ್ನು ಮಾಡಿ ಔಟಾದರೆ ಸಚಿನ್ ಇನ್ನಿಂಗ್ಸ್ ನ ಕೊನೆಯವರೆಗೂ ತಂಡವನ್ನು ಮುನ್ನೆಡೆಸುತ್ತಾ 241 ರನ್ ಗಳನ್ನು ಗಳಿಸಿ ಅಜೇಯನಾಗಿ ಉಳಿದ. ಆಗ ತಂಡದ ಮೊತ್ತ 7 ವಿಕೆಟ್ ನಷ್ಟಕ್ಕೆ 705 ರನ್ ಗಳು. ಅದು ಇಂದಿಗೂ ಆಸ್ಟ್ರೇಲಿಯ ನೆಲದಲ್ಲಿ ಇನ್ನಿಂಗ್ಸ್ ಒಂದರ ಭಾರತದ ಅತ್ಯಧಿಕ ಮೊತ್ತ.

ಸರಣಿಗೂ ಮೊದಲು ಆಯ್ಕೆದಾರರ ಜೊತೆಗೆ ವಾಗ್ವಾದ ನೆಡೆಸಿದ್ದ ಗಂಗೂಲಿ ತಾನು ಬಯಸಿದ ಟೀಮನ್ನು ಕೊಡದಿದ್ದಲ್ಲಿ ತಾನೇ ತಂಡದಿಂದ ಹೊರಗುಳಿಯುವೆನು ಎಂದು ಹಠಹಿಡಿದಿದ್ದ. ಆ ಹಠದ ಹಿಂದಿದ್ದ ಏಕಮಾತ್ರ ಹೆಸರು ಅನಿಲ್ ಕುಂಬ್ಳೆ. ಆಸ್ಟ್ರೇಲಿಯಾದ ಫಾಸ್ಟ್ ಪಿಚ್ ಗಳಿಗೆ ಸ್ಪಿನ್ ಬೌಲಿಂಗ್ ಅಷ್ಟೇನೂ ಸೂಕ್ತವಲ್ಲವಾದರೂ ಒಂದೆರೆಡು ಸ್ಪಿನ್ನರ್ ಗಳು ತಂಡಕ್ಕೆ ಬೇಕಾಗಿಯೇ ಇದ್ದರು ಬಹಳಷ್ಟು ಯುವ ಸ್ಪಿನ್ನರ್ಗಳು ಅಂದು ಗಂಗೂಲಿಯ ಆಪ್ತವಲಯದಲ್ಲಿ ಕಾಣಿಸಿಕೊಂಡರೂ ನಾಯಕ ಮೊಗಮಾಡಿದ್ದು ಮಾತ್ರ ಜಂಬೊ ಕುಂಬ್ಳೆಯಡೆಗೆ. ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ ನ ಒಟ್ಟು ಎಂಟು ವಿಕೆಟ್ ಗಳನ್ನು ಕಬಳಿಸಿದ ಕುಂಬ್ಳೆ ತನ್ನ ಆಯ್ಕೆಯನ್ನು ದಾಖಲೆಯ ಅಂಕಿ ಅಂಶಗಳೊಟ್ಟಿಗೆ ಸಮರ್ಥಿಸಿಕೊಂಡ. ಅಲ್ಲದೆ ಇಡೀ ಸರಣಿಯಲ್ಲಿ ಅತಿಹೆಚ್ಚು ವಿಕೆಟ್ ಗಳನ್ನು(24) ಉರುಳಿಸಿ ಗಂಗೂಲಿಯ ನಂಬಿಕೆಯನ್ನು ಉಳಿಸಿಕೊಂಡ.

ಎರಡನೇ ಇನ್ನಿಂಗ್ಸ್ ನಲ್ಲಿ ಲ್ಯಾಂಗರ್ ಹಾಗು ಕ್ಯಾಟಿಚ್ನ ಸೆಂಚೂರಿಗಳ ಹೊರತಾಗಿಯೂ 474 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡ ಆಸ್ಟ್ರೇಲಿಯ ಭಾರತಕ್ಕೆ 231 ರನ್ಗಳ ಮುನ್ನಡೆಯನ್ನು ನೀಡಿತ್ತು. ನಂತರ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಭಾರತ ದ್ರಾವಿಡ್ ಹಾಗು ತೆಂಡೂಲ್ಕರ್ರ ಶತಕದ ಜೊತೆಯಾಟದ ನೆರವಿನಿಂದ ಹೆಚ್ಚು ಕಡಿಮೆ 5 ರನ್ ಗಳ ಸರಾಸರಿಯಲ್ಲಿ 211 ರನ್ ಗಳನ್ನು ಕಲೆಹಾಕಿತು. ನಾಲ್ಕನೇ ದಿನದಾಟದ ಇನ್ನು ನಾಲ್ಕು ಓವರ್ಗಳು ಬಾಕಿ ಇರುವಂತೆ ಡಿಕ್ಲೆರ್ ಮಾಡಿಕೊಂಡು ಆಸ್ಟ್ರೇಲಿಯನ್ನರಿಗೆ 443 ರನ್ ಗಳ ಬೃಹತ್ ಟಾರ್ಗೆಟನ್ನು ನೀಡಿತು. ತಮ್ಮ ತವರು ನೆಲದಲ್ಲೇ ಕೊನೆಯ ಟೆಸ್ಟ್ ನ ಕೊನೆಯ ಇನ್ನಿಂಗ್ಸ್ ನ ವರೆಗೂ ಆಸ್ಟ್ರೇಲಿಯನ್ನರನ್ನು ಈ ಮಟ್ಟಿಗೆ ಕಾಡಿರುವ ತಂಡ ಅಂದಿಗೆ ಬಹುಷಃ ಬೇರೊಂದಿರಲು ಸಾಧ್ಯವಿಲ್ಲ. ಅಲ್ಲಿದ್ದ ಆಟಗಾರರಿಂದಿಡಿದು ನೆರೆದಿದ್ದ ಪ್ರತಿಯೊಬ್ಬ ಪ್ರೇಕ್ಷಕನಿಗೂ ಭಾರತದ ಈ ಮಟ್ಟಿನ ಹೋರಾಟ ಸಹಜವಾಗಿಯೇ ದಿಗ್ಬ್ರಮೆಯನ್ನುಂಟುಮಾಡಿತ್ತು. ಭಾರತಕ್ಕು ಸರಣಿ ಗೆಲುವಿಗೂ ಇದ್ದ ಅಂತರ ಕೇವಲ ಹತ್ತು ವಿಕೆಟ್ಗಳಷ್ಟೇ. ಆದರೆ ಆಸ್ಟ್ರೇಲಿಯನ್ನರಿಗೆ ಅದು 443 ರನ್ಗಳ ದೂರದ ಪಯಣ. ಮೇಲಾಗಿ ಟೆಸ್ಟ್ ಇತಿಹಾಸದಲ್ಲೇ ಈವೊಂದು ಬೃಹತ್ ಮೊತ್ತವನ್ನು ನಾಲ್ಕನೇ ಇನ್ನಿಂಗ್ಸ್ ನಲ್ಲಿ ಗಳಿಸಿದ್ದ ಪುರಾವೆಗಳೇ ಇಲ್ಲ. ಆದರೇನಂತೆ. ಅಷ್ಟು ಸಲೀಸಾಗಿ ಸೋಲೊಪ್ಪಿಕೊಳ್ಳುವ ಜಾಯಮಾನ ಆಸ್ಟ್ರೇಲಿಯನ್ನರದಲ್ಲ. ಈಗಿನ ತಂಡ ಅದೇನೇ ಇರಬಹದು ಆದರೆ ಅಂದಿನ ಸ್ಟೀವ್ ವಾ ಬಳಗಗಂತೂ ಅದನ್ನು ಅರಗಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಮೇಲಾಗಿ ಅದು ಪ್ರತಿಷ್ಠೆಯ ಪ್ರೆಶ್ನೆ. ವಿಶ್ವಕಪ್ ಅನ್ನು ಗೆದ್ದ ತಂಡ ತನ್ನದೇ ನೆಲದಲ್ಲಿ ವಿದೇಶಿ ತಂಡದಿಂದ ಸರಣಿ ಸೋಲನ್ನು ಕಾಣುವುದು ಕಾಂಗರೂಗಳಿಗೆ ಕಲ್ಪನೆಗೂ ಮೀರಿದ ಸಂಗತಿಯಾಗಿದ್ದಿತು. ಆದ ಕಾರಣ ಏಕದಿನ ಪಂದ್ಯದಂತೆ ಬ್ಯಾಟ್ ಬೀಸಿದ ಆಸೀಸ್ ಪಡೆ ಶತಾಯಗತಾಯ ಗೆದ್ದೇ ತೀರುತ್ತೇವೆಂಬ ಅಚಲ ವಿಶ್ವಾಸದಿಂದ ಮುನ್ನೆಡಿಯಿತು. ಮೊದಲ ಇನ್ನಿಂಗ್ಸ್ ನಲ್ಲಿ 8 ವಿಕೆಟ್ ಗಳನ್ನು ಕಬಳಿಸಿದ ಕುಂಬ್ಳೆ ಎರಡನೇ ಇನ್ನಿಂಗ್ಸ್ ನಲ್ಲೂ ಅದೇ ಬಗೆಯ ಪ್ರದರ್ಶನವನ್ನು ತೋರಿ ಒಟ್ಟು 4 ವಿಕೆಟ್ಗಳನ್ನು ಒಡೆದುರುಳಿಸಿದ.

ಒತ್ತಡದ ಸ್ಥಿತಿಯಲ್ಲೂ ಮನೋಜ್ಞವಾಗಿ ಬ್ಯಾಟ್ ಬೀಸತೊಡಗಿದ ಆಸೀಸ್ ಬ್ಯಾಟ್ಸಮನ್ಗಳ ಆಟವನ್ನು ನೋಡಿದವರಿಗೆ ಅದು ಗೆಲುವಿನ ಓಟವೆಂದೇ ಎನಿಸಿತು. ಆದರೆ ಪಂದ್ಯದ ಕೊನೆಯ 30 ಓವರ್ ಗಳು ಬಾಕಿ ಇರುವಾಗ ಪಾಂಟಿಂಗ್ ನ ರೂಪದಲ್ಲಿ 4ನೇ ವಿಕೆಟ್ ಯಾವಾಗ ಬಿದ್ದಿತೋ ಆಗ ಮಾತ್ರ ಭಾರತೀಯ ಪಡೆಯಲ್ಲಿ ಗೆಲುವಿನ ವಿಶ್ವಾಸ ಚಿಗುರೊಡೆಯತೊಡಗಿದ್ದು. ಪಾಂಟಿಂಗ್ ಪೆವಿಲಿಯನ್ ಗೆ ಸೇರಿದ ಕೆಲಕ್ಷಣ ಮೌನವಾದ ಸಿಡ್ನಿ ಮೈದಾನ ಅಷ್ಟೂ ಜನರನ್ನು ಎದ್ದು ನಿಲುವಂತೆ ಮಾಡಿತು. ಕೂಡಲೇ ಚಟಚಟ ಸದ್ದಿನ ಚಪ್ಪಾಳೆಯ ರಣಕಹಳೆ ಮೊಳಗಿ ಮಾರ್ಧನಿಸತೊಡಗಿತು. ಕಾರಣ ತಮ್ಮ ಹೀರೊ, ಹೆಚ್ಚು ಕಡಿಮೆ 20 ವರ್ಷಗಳ ಕಾಲ ದೇಶಕ್ಕಾಗಿ ಆಡಿದ ದಂತಕತೆ ಸ್ಟೀವ್ ವಾ ಕೊನೆಯ ಬಾರಿಗೆ ಆಸೀಸ್ ಜೆರ್ಸಿಯನ್ನು ತೊಟ್ಟು ಆಡಲು ಇಳಿಯುತಿದ್ದ. ನೋಡುಗರ ಮೈ ರೋಮಾಂಚನಗೊಳ್ಳುವಂತೆ ಮೂಡಿದ ಆ ಸ್ವಾಗತದ ಮೊರೆತ ಆತ ಸ್ಕಿರ್ಸ್ ನ ಮೇಲೆ ಬಂದು ನಿಂತರೂ ಸಹ ನಿಲ್ಲಲಿಲ್ಲ. ಅಂತಹ ಒಂದು ಸೂಪರ್ ಮ್ಯಾನ್ ನಾಯಕನ ಕೊನೆಯ ಪಂದ್ಯದ ಫಲಿತಾಂಶವೂ ಆತನ ಹೆಗಲ ಮೇಲೆಯೇ ಕುಳಿತಿತ್ತು. ಮೂವತ್ತು ಓವರ್ಗಳು. ಇನ್ನೊಂದೆರೆಡು ವಿಕೆಟ್ ಉರುಳಿದರೆ ಭಾರತದ ದಶಕಗಳ ಕನಸು ನನಸು. 242 ರನ್ ಗಳನ್ನು ಗಳಿಸಿದರೆ ಆಸ್ಟ್ರೇಲಿಯನ್ನರ ಕನಸು ನನಸು. ಇಂತಹ ಸಂಧಿಘ್ನ ಪರಿಸ್ಥಿಯಲ್ಲಿ ಆಡಲತ್ತಿದ ವಾ ಹಾಗು ಕ್ಯಾಟಿಚ್ ಜೋಡಿ ಪಂದ್ಯವನ್ನು ಗೆದ್ದೇ ತೀರಬೇಕೆಂಬ ದೃಢ ನಿರ್ಧಾರದಲ್ಲಿ ಮುನ್ನುಗ್ಗಿದಂತಿತ್ತು. ಭಾರತದ ಬೌಲರ್ ಗಳ ಯಾವ ತಂತ್ರಮಂತ್ರಕ್ಕೂ ಬಗ್ಗದ ವಾ, ಕ್ಯಾಟಿಚ್ನ ಜೊತೆಗೂಡಿ ಬರೊಬ್ಬರಿ 142 ರನ್ ಗಳ ಜೊತೆಯಾಟವನ್ನು ನೀಡಿದ. ತನ್ನ 80 ರನ್ ಗಳ ಅಮೋಘ ಆಟದಿಂದ ಕೊನೆಯ ಟೆಸ್ಟ್ ಪಂದ್ಯವನ್ನು ಸೋಲಿನ ದವಡೆಯಿಂದ ಪಾರುಮಾಡಿ ಆಸ್ಟ್ರೇಲಿಯನ್ನರ ಸರಣಿ ಸೋಲನ್ನು ತಡೆದನಾತ. ಸರಣಿಯ ಕೊನೆಯ ಟೆಸ್ಟ್ ನ ಕೊನೆಯ ಓವರ್ನನಲ್ಲಿ ಕುಂಬ್ಳೆಯ ಬೌಲಿಂಗ್ ಗೆ ಕ್ಯಾಚನಿತ್ತು ಆತ ಔಟಾದಾಗ ನೆರೆದಿದ್ದ ಅಷ್ಟೂ ಜನರು ಕೆಲಕ್ಷಣ ಮೌನವಾದರು. ಸಿಡ್ನಿ ಮೈದಾನ ಮತ್ತೊಮ್ಮೆ ಚಪ್ಪಾಳೆಯ ಸದ್ದಿನಲ್ಲಿ ಮುಳಿಗಿತು. ಸೂರ್ಯ ಪಶ್ಚಿಮದ ಆಗಸದಲ್ಲಿ ಕಣ್ಮರೆಯಾಗತೊಡಗಿದ್ದ. ಸರಣಿ ಸೋಲನ್ನು ತಪ್ಪಿಸಿದ ಆತ್ಮತೃಪ್ತಿಯೊಂದಿಗೆ ತನ್ನ ಕೊನೆಯ ಹೆಜ್ಜೆಗಳನ್ನು ಇಡುತ್ತಾ ಸ್ಟೀವ್ ವಾ ಡ್ರೆಸ್ಸಿಂಗ್ ರೂಮಿನೆಡೆ ಸಾಗಿದ. 90 ನೇ ಓವರ್ನ ಕೊನೆಯ ಒಂದು ಎಸೆತ ಬಾಕಿ ಇರುವಾಗ ಗಿಲ್ಕ್ರಿಸ್ಟ್ ವಿಕೆಟ್ ಅನ್ನು ಉರುಳಿಸಿದ ಭಾರತಕ್ಕೆ ಟೆಸ್ಟ್ ಗೆಲ್ಲಲು ಬಾಕಿ ಉಳಿದ ಒಂದು ಎಸೆತದದಲ್ಲಿ 4 ವಿಕೆಟ್ಗಳನ್ನು ಉರುಳಿಸಬೇಕಿದ್ದರೆ ಆಸ್ಟ್ರೇಲಿಯನ್ನರಿಗೆ 86 ರನ್ಗಳ ಅವಶ್ಯಕತೆ ಇದ್ದಿತು. ಸರಿಯಾಗಿ 90 ಓವರ್ಗಳಿಗೆ ಮುಗಿಯಬೇಕಿದ್ದ ಮ್ಯಾಚು ಇನ್ನೂ 4 ಓವರ್ಗಳಿಗೆ ವಿಸ್ತರಿಸಲ್ಪಟ್ಟಿತ್ತಾದರೂ ಫಲಿತಾಂಶ ಅಂದುಕೊಂಡಂತೆಯೇ ಡ್ರಾ ನಲ್ಲಿ ಕೊನೆಗೊಂಡಿತು. ಕಳೆದ ಸರಣಿ (2001) ಭಾರತದ ಪಾಲಾದರಿಂದ ಪ್ರಸ್ತುತ ಟ್ರೋಫಿ ಭಾರತದ ಬಳಿಯೇ ಉಳಿಯಿತು. ಸರಣಿ ಸಮಬಲದಲ್ಲಿ ಅಂತ್ಯಕಂಡರೂ ಗೆದ್ದಷ್ಟೇ ಖುಷಿ ಮಾತ್ರ ಭಾರತದ ಪಾಳಯದಲ್ಲಿ ಮನೆ ಮಾಡಿತ್ತು. ಕಾರಣ ಆ ಫಲಿತಾಂಶ ಆಸೀಸ್ ನೆಲದಲ್ಲಿ ಭಾರತದ ಅಲ್ಲಿಯವರೆಗಿನ ದಿ ಬೆಸ್ಟ್ ಆಗಿದ್ದಿತು. ಇಂದಿಗೂ ಕೂಡ! ಒಂದುಪಕ್ಷ ಉತ್ತಮ ಆರಂಭವನ್ನು ಪಡೆದಿದ್ದ ಮೂರನೇ ಟೆಸ್ಟ್ ಅನ್ನು ಗೆದ್ದಿದ್ದರೆ ಅಥವಾ ಡ್ರಾ ಮಾಡಿಕೊಂಡಿದ್ದರೂ ಸರಣಿ ಗೆಲುವಿನ ಹಿರಿಮೆ ಅಂದು ಭಾರತದಾಗಿರುತ್ತಿತ್ತು. ರಾಹುಲ್ ದ್ರಾವಿಡ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಬಾಜನನಾದರೆ ಕುಂಬ್ಳೆ ಸರಣಿಯ ಅತಿ ಹೆಚ್ಚು ವಿಕೆಟನ್ನು (24) ಬರೆದು ದಾಖಲೆ ಬರೆದ. ಸೆಹ್ವಾಗ್, ದ್ರಾವಿಡ್, ಸಚಿನ್, ಗಂಗೂಲಿ. ಲಕ್ಷ್ಮಣ್ ಹಾಗು ಕುಂಬ್ಳೆ ಇಂದು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅಜರಾಮರರಾಗಲು ಈ ಸರಣಿ ಪ್ರಮುಖ ಪಾತ್ರವನ್ನು ವಹಿಸಿತು.

ಇಂದು ಆ ಸರಣಿ ಮುಗಿದು ಒಂದೂವರೆ ದಶಕಗಳೇ ಕಳೆದಿವೆ. ಪ್ರಸ್ತುತ 10 ಓವರ್ಗಳ ಕ್ರಿಕೆಟ್ ಪಂದ್ಯಗಳಲ್ಲಿ ಟೆಸ್ಟ್ ಕ್ರಿಕೆಟ್ ನ ಹೊಳಪು ಕಾಣೆಯಾಗುತ್ತಿರುವುದು ಒಂದೆಡೆಯಾದರೆ ನೆಡೆಯುವ ಟೆಸ್ಟ್ ಪಂದ್ಯಗಳ ಹೆಚ್ಚಿನ ಆಯುಷ್ಯ ಹೆಚ್ಚೆಂದರೆ ಮೂರುದಿನಗಳಿಗಷ್ಟೇ ಕೊನೆಯಾಗುತ್ತಿದೆ. ಟೆಸ್ಟ್ ರಾಂಕಿಂಗ್ನಲ್ಲಿ ಇಂದು ಭಾರತ ನಂಬರ್ 1 ಸ್ತಾನದಲ್ಲಿದ್ದರೂ, ನಂಬರ್ 1 ಬ್ಯಾಟ್ಸಮನ್ಗಳೆಲ್ಲರೂ ನಮ್ಮವರೇ ಆದರೂ, ಎದುರಾಳಿ ಪಾಳಯಗಳಲ್ಲಿ ದಂತಕತೆಗಳೆನ್ನುವ ಅಂದಿನ ಆಟಗಾರರ್ಯಾರು ಇರದಿದ್ದರೂ ಆಸ್ಟ್ರೇಲಿಯಾ ಹಾಗು ಸೌತ್ ಆಫ್ರಿಕಾದ ನೆಲಗಳಲ್ಲಿ ಟೆಸ್ಟ್ ಸರಣಿ ಗೆಲ್ಲುವ ಭಾರತದ ಕನಸು ಇನ್ನೂ ಕನಸಾಗಿಯೇ ಉಳಿದಿದೆ. ಪ್ರಸ್ತುತ ಬಾರ್ಡರ್-ಗವಾಸ್ಕರ್ ಸರಣಿ ಸೊರಗಿ ಸುಣ್ಣವಾಗಿರುವ ಆಸ್ಟ್ರೇಲಿಯ ತಂಡವನ್ನು ಬಗ್ಗು ಬಡಿದು ಭಾರತ ಆ ಮೈಲಿಗಲ್ಲನ್ನು ತಲುಪುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಆದರೆ ದೇಸಿ ಪಿಚ್ ಗಳಲ್ಲಿ ಅದೇನೇ ಕುಣಿದರು ತನ್ನ ಸಾಮರ್ಥ್ಯ ಹಾಗು ಬಂಡವಾಳವನ್ನು ವಿದೇಶಿ ನೆಲದಲ್ಲಿ ತೋರಿಸುವ ಚಾಲೆಂಜ್ ತಂಡದ ಅಷ್ಟೂ ಆಟಗಾರರ ಮುಂದಿದೆ.


Friday, November 16, 2018

ಸಂಸದರ ಸಮೇತ ಇಡೀ ಪಾರ್ಲಿಮೆಂಟನ್ನೇ ಮಾರಿದ ಭೂಪನೀತ!!

ಪ್ರತಿಭೆ. ಎಲ್ಲೆಂದರಲ್ಲಿ ಎಲ್ಲರಿಗೂ ಸಿಗುವ ವಸ್ತುವಂತು ಇದು ಅಲ್ಲವೇ ಅಲ್ಲ. ಹುಟ್ಟುತ್ತಲೇ ಬರುವ ಪ್ರತಿಭೆಯನ್ನು ಹೇಗೆ ಪ್ರತಿಭೆಯೆಂದೆನ್ನಲಾಗದೋ ಹಾಗೆಯೇ ಕಷ್ಟ ಪಟ್ಟು ಗಿಟ್ಟಿಸಿಕೊಳ್ಳುವ ಪ್ರತಿಭೆಯನ್ನು ಪ್ರತಿಭೆಯೆಂದೆನ್ನಲಾಗದಿರದು! ಹಾಗೆ ಅದನ್ನು ಅದನ್ನು ಗಿಟ್ಟಿಸಿಕೊಳ್ಳಲು ಸವೆಸಬೇಕಾದ ಹಾದಿಯೂ ಸಹ ಬಲು ದುರ್ಘಮ. ಒಮ್ಮೆ ದೊರೆತರೆ ಮೇಲು-ಕೀಳು, ಬಡವ-ಬಲ್ಲಿದ, ಕಳ್ಳ ಕಾಕರ್ಯಾರನ್ನೂ ಸಹ ಅದು ಪರಿಗಣಿಸುವುದಿಲ್ಲ. ಕಾರ್ಯಗಳು ಒಳ್ಳೆವೋ, ಕೆಟ್ಟವೋ ಅಥವ ಉಪಯೋಗ ದುಷ್ಪಾರಿಣಾಮಗಳೇನೇ ಇದ್ದರೂ ಲೆಕ್ಕಿಸದೆ ಆಡಿಸುವವನ ಕೈಚಳಕದಲ್ಲಿ ಪ್ರತಿಭೆಯೂ ಕೂಡ ಆಡತೊಡಗುತ್ತದೆ. ವಿಶ್ವೇಶ್ವರೈಯ್ಯ, ಸತ್ಯಜಿತ್ ರೇ, ವಿರಾಟ್ ಕೊಹ್ಲಿ ಅಥವಾ ಧೀರೂಭಾಯಿ ಅಂಬಾನಿಯಂತಹ ಹಲವರೊಟ್ಟಿಗಿದ್ದ/ಇರುವ ವಿಭಿನ್ನ ಹಾಗು ವಿಶಿಷ್ಟ ಪ್ರತಿಭೆಯೇ ಅವರನ್ನು ಇಂದು ದೇಶದ ಇತಿಹಾಸದಲ್ಲಿ ದಂತಕತೆಗಳನ್ನಾಗಿ ಮಾಡಿದೆ. ಅಂತೆಯೇ ವೀರಪ್ಪನ್ , ಸದ್ದಾಂ ಹುಸೇನ್, ಒಸಾಮಾ ಬಿನ್ ಲಾಡೆನ್ರಂತಹ ನರರಾಕ್ಷಸರ ಕೈಯ ಬೆಂಕಿಯ ಉಂಡೆಯಂತೆಯೂ ಅದು ಸಾವಿರಾರು ಜನರ ವಂಚನೆ ಹಾಗು ಮಾರಣಹೋಮದಲ್ಲಿ ಪರೋಕ್ಷವಾಗಿಯೂ ಸಹಕರಿಸಿದೆ! ಇಂತಹದ್ದೇ ಪ್ರತಿಭೆಯನ್ನು ಬೆಳೆಸಿಕೊಂಡು ಬಂದ ಹಲವರು ದೇಶದ ನಾನಾ ಜೈಲುಗಲ್ಲಿ ಬಂದಿಯಾಗಿ, ಶಿಕ್ಷೆಗಳೆಲ್ಲವನ್ನೂ ಅನುಭವಿಸಿದರೆ ಕೆಲವರು ಅಲ್ಲಿಯೇ ಕೊಳೆತು ಕೊನೆಯುಸುರೆಳೆದಿದ್ದಾರೆ. ಇನ್ನು ಕೆಲವರು ತಮ್ಮ ಕೊನೆಗಾಲದಲ್ಲಿ ಕುಂಟುತ್ತಾ ಕೊರಗುತ್ತಾ ಹೊರಬರುತ್ತಾರೆ ಮತ್ತೂ ಕೆಲವರು ಮಾತ್ರ ಒಂದಲ್ಲ, ಎರಡಲ್ಲ ಹತ್ತಾರು ಭಾರಿ ಅಂತಹ ಭಾರಿ ಜೈಲುಗಳಿಗೇ ಚಳ್ಳೆಹಣ್ಣನು ತಿನ್ನಿಸಿ ಹೊರ ಓಡಿರುವುದೂ ಉಂಟು. ಅಲ್ಲೂ ಇದ್ದ ಆ ಅಮೂಲ್ಯ ಅಂಶವೇ ಪ್ರತಿಭೆ! ಇಂತಹ ಪ್ರತಿಭೆಗಳ ಮಾಸ್ಟರ್ ಗೇಮ್ಗಳನ್ನು ನಾವು ಹಲವಾರು ಚಿತ್ರಗಳಲ್ಲಿ ಕಂಡು ಬೆರಗಾಗಿದ್ದೇವೆ. ಅಂತಹ ಪ್ರತಿಭೆಯುಳ್ಳವನು ಒಬ್ಬ ವಿಲನ್ ನಂತಾದರೂ ನೋಡುಗರನೇಕರಿಗೆ ಮಾತ್ರ ನಾಯಕಶ್ರೇಷ್ಠ!


ನಟ್ವರ್ಲಾಲ್ :

ಸ್ವಾತಂತ್ರ್ಯಪೂರ್ವ ಭಾರತದಿಂದ ಇತ್ತೀಚಿನ ಕೆಲದಶಕಗಳವರೆಗೂ ಈ ಒಂದು ಹೆಸರು ತುಂಬಾನೇ ಹೆಸರು ಮಾಡಿದ್ದಿತು. ಕಳ್ಳತನವನ್ನು ಪ್ರತಿಭೆಯೆಂದುಕೊಂಡವರಿಗೆ ಆ ಪ್ರತಿಭೆಗೆ ಕೊಡುವ ಉತ್ಕೃಷ್ಟ ಬಿರುದೇನೋ ಎಂಬುವಂತೆ ನಟ್ವರ್ಲಾಲ್ನ ಹೆಸರನ್ನು ಬಳಸಲಾಗುತ್ತಿತ್ತು. ನೂರಕ್ಕಿಂತ ಹೆಚ್ಚಿನ ಕೇಸುಗಳ ಫಲದಿಂದ 113 ವರ್ಷಗಳ ಸಜೆಗೆ ಒಳಗಾಗಿದ್ದ , 8 ರಾಜ್ಯದ ಪೊಲೀಸರಿಗೆ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿ, 50 ಕಿಂತ ಹೆಚ್ಚಿನ ಅನ್ವರ್ಥ ನಾಮಗಳನ್ನು ಒಳಗೊಂದು, ಟಾಟಾ, ಬಿರ್ಲಾ ಹಾಗು ಅಂಬಾನಿಯರಂತಹ ಹತ್ತಾರು ಉದ್ಯಮಪತಿಗಳಿಗೆ ಮಂಕುಬುದ್ದಿಯನ್ನೆರಚಿ, ರಾಷ್ಟ್ರಪತಿಗಳ ಹಸ್ತಾಕ್ಷರವನ್ನೇ ನಕಲು ಮಾಡಿದ್ದ, ಮೂರು ಬಾರಿ ತಾಜ್ ಮಹಲ್ ಅನ್ನು, ರಾಷ್ಟ್ರಪತಿಭವನ ಅಷ್ಟೇ ಏಕೆ ನಮ್ಮ ಇಡೀ ಪಾರ್ಲಿಮೆಂಟನ್ನೇ ಅಷ್ಟೂ ಸಂಸದರೊಟ್ಟಿಗೆ( !) ವಿದೇಶಗರಿಗೆ ಮಾರಿದವನೀತ ಎಂದರೆ ನಮಗೆ ಅಚ್ಚರಿಯಾಗದಿರದು. ಇಂದು ದಿನವಿಡಿ ಅರಚಾಡಿ ಕಚ್ಚಾಡಿ ಸಂತೆಯಂತಾಗುತ್ತಿರುವ ನಮ್ಮ ವ್ಯವಸ್ಥೆಯನ್ನು ಮಾರುವ ಇಂಥವರು ಇಂದಿಗೂ ಇದ್ದಿದ್ದರೆ ಬಹುಷಃ ಒಳಿತಾಗುತ್ತಿತ್ತೇನೋ. ಅದಿರಲಿ. ಇಷ್ಟೆಲ್ಲಾ ಕೃತ್ಯಗಳನ್ನು ಎಸಗಿ ಸಿಕ್ಕಿಹಾಕಿಕೊಂಡ ಈತ ತನ್ನ ನೂರಾರು ವರ್ಷದ ಸೆರೆವಾಸದಲ್ಲಿ ಅನುಭವಿಸಿದ್ದು ಮಾತ್ರ ಹೆಚ್ಚೆಂದರೆ 20 ವರ್ಷಗಳಷ್ಟೇ. ಬಾಕಿ ಅಷ್ಟೂ ಬಾರಿಯೂ ಒಂದಲ್ಲ ಒಂದು ಬಗೆಯಲ್ಲಿ ಪೊಲೀಸರಿಗೆ ಚಳ್ಳೆಹಣ್ಣನು ತಿನ್ನಿಸಿ ಪರಾರಿಯಾಗಿರುತ್ತಾನೆ. ಈತನ ಕಟ್ಟ ಕಡೆಯ ಎಸ್ಕೇಪ್ ನೆಡೆದದ್ದು 1996 ರಲ್ಲಿ. ಆತನಿಗಾದ ಬರೋಬ್ಬರಿ 84 ವರ್ಷ!

ಮೋಸಮಾಡಿ ಹಣಗಳಿಸುವ ಹವ್ಯಾಸ ಈತನಿಗೆ ತನ್ನ ಓದಿನ ದಿನಗಳಿಂದಲೇ ಮೈಹತ್ತಿತ್ತು. ಪರಿಚಯದವರೊಬ್ಬರು ಬ್ಯಾಂಕ್ ಡ್ರಾಫ್ಟ್ ಗಳನ್ನು ಬ್ಯಾಂಕಿಗೆ ಜಮಾವಣೆ ಮಾಡಲು ಈತನನ್ನು ಕಳಿಸುವಾಗ ಅವರುಗಳ ಹಸ್ತಾಕ್ಷರಗಳನ್ನು ನೋಡುತ್ತಾ ಪಕ್ಕಾ ಒರಿಜಿನಲ್ ಹಸ್ತಾಕ್ಷರಗಳಂತೆಯೇ ನಕಲು ಮಾಡುವುದನ್ನು ಕಲಿತು ಅಂದಿಗೇ ಸಾವಿರಾರು ರೂಪಾಯಿಗಳನ್ನು ಬ್ಯಾಂಕಿನಿಂದ ಪಡೆದು ಪರಾರಿಯಾದನಾತ. ಅಲ್ಲಿಂದ ಶುರುವಾದ ಈತನ ಕಳ್ಳತನದ ಪ್ರತಿಭೆ, ಒಂದು ಮೂಟೆ ಅಕ್ಕಿಯನ್ನು ದೇಶದ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಕಳಿಸಿ ಸಿಗುವ ಬಿಲ್ಲಿನಲ್ಲಿ ಒಂದರ ಮುಂದೆ ಎರಡು ಸೊನ್ನೆಯನ್ನು ಸುತ್ತಿ ತಾನೊಬ್ಬ ದೊಡ್ಡ ಅಕ್ಕಿವ್ಯಾಪಾರೀ ಎಂದು ತೋರಿಸಿಕೊಂಡು ಬ್ಯಾಂಕುಗಳಿಗೆ ಮೋಸ ಮಾಡುವವರೆಗೂ ಮುಂದುವರೆಯಿತು. ಅಲ್ಲದೆ ಕೇಂದ್ರ ಸರ್ಕಾರದ ಉನ್ನತ ಸಚಿವರ PA ಎಂದು ನಂಬಿಸಿ ನಮ್ಮ ಪಕ್ಷದ ರಾಜಕಾರಣಿಗಳಿಗೆ ಉತ್ಕೃಷ್ಟ ಮಟ್ಟದ ವಾಚುಗಳು ಬೇಕೆಂದು ಅವುಗಳನ್ನು ಉದ್ಯಮಿಗಳಿಂದ ಖರೀದಿಸಿ ನಕಲು ಚೆಕ್ ಗಳನ್ನು ಬರೆದು ಪರಾರಿಯಾದ ಕೇಸುಗಳೇ ಇವನ ಹೆಸರಲ್ಲಿ ಹತ್ತಾರಿವೆ. ಅಲ್ಲದೆ ವೇಶ್ಯೆಯರಿಗೆ ಮತ್ತಿನ ಮಾತ್ರೆಯನ್ನು ತಿನ್ನಿಸಿ ಅವರ ಆಭರಣಗಳ ಲೂಟಿ, ರೈಲ್ವೆ ಆರ್ಡರ್ಗಳನ್ನು ಸೃಷ್ಟಿಸಿ ವಸ್ತುಗಳನ್ನು ರಾಜಾರೋಷವಾಗಿ ಪಡೆದು ಪರಾರಿಯಾಗುವಿಕೆ ಎಲ್ಲವು ಅಂದಿನ ಕಾಲಕ್ಕೆ ಕೇಳುಗರಿಗೆ ರೋಮಾಂಚನಕಾರಿಯಾದ ಸುದ್ದಿಗಳಾಗಿದ್ದವು. ಇನ್ನು ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ರ ಹಸ್ತಾಕ್ಷರವನ್ನು ನಕಲು ಮಾಡಿ ದೇಶದ ಭವ್ಯ ಸ್ಮಾರಕಗಳನ್ನು ಮಾರಿರುವ ಕತೆಗಳಂತೂ ಈತ ಹುಟ್ಟಿರುವುದೇ ಫೋರ್ಜರಿ ಮಾಡುವ ಸಲುವಾಗೇ ಎಂದನಿಸದಿರದು.



1957, ಕಾನ್ಪುರ ಜೈಲು: 

ತನ್ನ ಕುಕೃತ್ಯಗಳಿಂದ ದೇಶವ್ಯಾಪಿ ಹೆಸರಾಗಿ ಕೊನೆಗೂ ಪೋಲೀಸರ ದಿವ್ಯಹಸ್ತಗಳಿಗೆ ದೊರೆತ ಈತ ಕಾನ್ಪುರ ಜೈಲಿನಲ್ಲಿ ಶಿಕ್ಷೆಯನ್ನನುಭವಿಸಬೇಕಾಯಿತು. ಆದರೆ ತನ್ನ ಮಧ್ಯ ವಯಸ್ಸಿನಲ್ಲಿದ್ದ ನಟ್ವರ್ಲಾಲ್ (ಅಂದಹಾಗೆ ಆತನ ಅಸಲಿ ಹೆಸರು ಮಿಥಿಲೇಶ್ ಕುಮಾರ್ ಶ್ರೀವತ್ಸವ!) ಹೇಗೆ ತಾನೇ ತನ್ನನು ನಾಲ್ಕು ಕೋಣೆಗಳ ರೂಮಿನೊಳಗೆ ಬಂದಿರಿಸಿಕೊಳ್ಳಲು ಸಾಧ್ಯ? ಆತನ ಮನಸ್ಸು ಸದಾ ಹೊರ ಜಗತ್ತನ್ನೇ ಹಾತೊರಿಯುತ್ತಿತ್ತು . ಹೊರಬಂದು ಮತ್ತಷ್ಟು ದೊಡ್ಡ ದೊಡ್ಡ ಕುಳಗಳ ಜೇಬಿಗೆ ಕತ್ತರಿಯನ್ನು ಹಾಕುವ ವಿಧವಿಧವಾದ ಯೋಜನೆಗಳು ಆತನ ತಲೆಯೊಳಗೆ ತಯಾರಾಗಿ ಕಾರ್ಯರೂಪಕ್ಕೆ ಬರಲು ಹವಣಿಸುತ್ತಿದ್ದವು. ಅಂದು ತನ್ನ ಕಿಲಾಡಿ ಬುದ್ದಿಯನ್ನು ಬಳಸಿ ಪೋಲೀಸ್ ಸಮವಸ್ತ್ರ ಒಂದನ್ನು ಕದ್ದ ಈತ ಅದನ್ನು ತನ್ನ ಕೋಣೆಯೊಳಗೆ ಯಾರಿಗೂ ಕಾಣದಂತೆ ಮುಚ್ಚಿಡುತ್ತಾನೆ. ನಂತರ ತನ್ನ ರೂಮಿನ ದ್ವಾರಪಾಲಕರನ್ನು ನಯವಾಗಿ ಪಾಟಯಿಸಿಕೊಂಡಿದ್ದ ಆತ ಹಣ ತುಂಬಿದ ಎರಡು ಬ್ಯಾಗುಗಳನ್ನು ಅವರಿಗೆ ನೀಡಿ ಅಂದು ರಾತ್ರಿ ತನ್ನ ಕೋಣೆಯ ಬಾಗಿಲನ್ನು ಮುಚ್ಚದಂತೆ ಕೇಳಿಕೊಳ್ಳುತ್ತಾನೆ. ಅಷ್ಟು ದೊಡ್ಡ ನೋಟಿನ ಗಂಟನ್ನು ಕಂಡ ದ್ವಾರಪಾಲಕರು ತಮ್ಮ ಕೆಲಸ ಹೋದರೂ ಚಿಂತೆಯಿಲ್ಲವೆಂಬಂತೆ ಆತನ ಬಾಗಿಲನ್ನು ತೆರೆದು ಬಿಟ್ಟರು. ಕದ್ದ ಪೊಲೀಸ್ ಸಮವಸ್ತ್ರವನ್ನು ನೀಟಾಗಿ ಧರಿಸಿ ರಾಜಾರೋಷವಾಗಿ ಹೊರಬಂದ ಅವನನ್ನು ಕಂಡ ಕಾನ್ಸ್ಟೇಬಲ್ ಗಳು ನಮಸ್ಕರಿಸುತ್ತಾ ಜೈಲಿನ ಹೊರಗೇಟನ್ನು ತೆರೆದರು. ಬಹುಷಃ ಆತನ ಆ ಪರ್ಸನಾಲಿಟಿ ಯಾವೊಬ್ಬ ಪೊಲೀಸ್ ಅಧಿಕಾರಿಗೂ ಕಡಿಮೆ ಇದ್ದಿರಲು ಸಾಧ್ಯವಿಲ್ಲ. ಜೈಲಿನಿಂದ ಹೊರಬಂದ ಆತ ನೇರವಾಗಿ ದೂರದಲ್ಲಿದ್ದ ಪೊಲೀಸ್ ಜೀಪಿನೊಳಗೆ ಕೂರುತ್ತಾನೆ. ಆದರೆ ಚಾಲಕನಿಗೂ ಅದೇನು ಮಂಕು ಕವಿದಿತ್ತೋ ಅಥವಾ ಆತನೂ ಈ ಹೊಸ ಅಧಿಕಾರಿಯ ರಗಡ್ ಲುಕ್ಕಿಗೆ ಹೆದರಿಯೋ ಏನೋ ಕೂಡಲೇ ಜೀಪನ್ನು ಶುರುಮಾಡಿ ಆತ ಹೇಳಿದ ಕಡೆ ಚಲಾಯಿಸಿಕೊಂಡು ಹೋಗುತ್ತಾನೆ! ಇತ್ತ ಕಡೆ ಹಣದ ಗಂಟಿನ ಖುಷಿಯಲ್ಲಿದ್ದ ದ್ವಾರಪಾಲಕರು ಗಂಟನ್ನು ಬಿಚ್ಚಿ ನೋಡಿದರೆ ಕಾಣಸಿಕ್ಕ ರಾಶಿ ರಾಶಿ ಬಿಳಿಯ ಹಾಳೆಗಳನ್ನು ನೋಡಿ ಎದೆಬಡಿದುಕೊಂಡು ಅಳತೊಡಗಿದರು. ದೇಶದ ಇತಿಹಾಸದಲ್ಲಿ ಇಂದಿಗೂ ದಿ ಗ್ರೇಟ್ ಎಸ್ಕೇಪ್ ಗಳ ಸಾಲಿನಲ್ಲಿ ನಟ್ವರ್ಲಾಲ್ನ ಈ ಸಾಹಸ ಮೊದಲಾಗಿ ಬರುತ್ತದೆ.

ತನ್ನ ಜೀವನವೆಲ್ಲ ಕಳ್ಳ ಪೊಲೀಸ್ ಆಟದಲ್ಲಿಯೇ ಕಳೆದ ಈತ ತನ್ನ ಎಂಬತ್ತರ ವಯಸ್ಸಿನಲ್ಲಿ ಇಂದೋರ್ ಜೈಲಿನಲ್ಲಿ ಸೆರೆಸಿಕ್ಕು ಕಾಲವನ್ನು ತಳ್ಳುತ್ತಿರುತ್ತಾನೆ. ಆದರೆ ತನ್ನ ಜೀವಮಾನದ ಪಾಪವನ್ನೆಲ್ಲ ಹೊತ್ತುಕೊಂಡು ಸುತ್ತುತ್ತಿದ್ದ ಈ ಹಣ್ಣು ಹಣ್ಣು ಮುದುಕನನ್ನು ಮಹಾರಾಷ್ಟ್ರ ಪೊಲೀಸರು ಬಾಕಿ ಉಳಿದಿದ್ದ ಹಲವಾರು ಕೇಸುಗಳ ಸಲುವಾಗಿ 1996 ರಲ್ಲಿ ಮುಂಬೈಗೆ ಕರೆಸಿಕೊಳ್ಳುತ್ತಾರೆ. ನೆಡೆಯಲೂ ಶಕ್ತವಿರದ ಮುದುಕ ನಟ್ವರ್ಲಾಲ್ ವೀಲ್ ಚೀರಿನ ಮೂಲಕ ಓಡಾಡುತ್ತಿರತ್ತಾನೆ. ಮುಂಬೈಗೆ ಬಂದ ಆತ ತನಗೆ ಕಿಡ್ನಿ ಸಮಸ್ಯೆ ಇದೆ ಎನುತ ಆಸ್ಪತ್ರೆಗೆ ಸೇರಿಕೊಳ್ಳುವ ನೆಪವೊಡ್ಡಿ ಆಸ್ಪತ್ರೆಗೆ ತೆರಳುತ್ತಾನೆ. ಇಬ್ಬರು ಕಾನ್ಸ್ಟೇಬಲ್ಗಳನ್ನು ಜೊತೆಮಾಡಿ ನೆಡೆದಾಡಲು ಶಕ್ಯವಿರದ ಮುದುಕನೊಬ್ಬನ್ನು ಆಸ್ಪತ್ರೆಗೆ ಕಳುಹಿಸುತ್ತಾರೆ ಅಲ್ಲಿನ ಅಧಿಕಾರಿಗಳು. ಮಾರ್ಗಮಧ್ಯದಲ್ಲಿ ದೆಹಲಿಯ ರೈಲ್ವೆ ಸ್ಟೇಷನ್ ನಲ್ಲಿ ತನ್ನೊಟ್ಟಿಗಿದ್ದ ಕಾನ್ಸ್ಟೇಬಲ್ ರಿಗೆ ಕುಡಿಯಲು ಚಹಾವನ್ನು ತರುವಂತೆ ಹೇಳಿ ಅಲ್ಲಿಯೂ ವಿಸ್ಮಯವೆನ್ನುವ ರೀತಿ ಈತ ಪರಾರಿಯಾಗುತ್ತಾನೆ. ಅದೇ ಆತನ ಕೊನೆಯ ಸುದ್ದಿ. ಅಲ್ಲಿಂದ ಮುಂದೆ ನಟ್ವರ್ಲಾಲ್ ಯಾರಿಗೂ ಎಲ್ಲಿಯೂ ಸಿಗುವುದಿಲ್ಲ. ಆದರೆ ಆತನ ದಂತಕಥೆಗಳು ಮಾತ್ರ ಇಂದಿಗೂ ಜೀವಂತವಾಗಿವೆ. ಅಲ್ಲದೆ ಆತನ ಸಾವೂ ಕೂಡ ಕೊನೆಗೆ ಪ್ರೆಶ್ನೆಯಾಗಿಯೇ ಉಳಿಯಿತು. ಕಾರಣ 2009ರಲ್ಲಿ ಆತನ ವಕೀಲ ನಟ್ವರ್ಲಾಲ್ ಆ ವರ್ಷ ಸತ್ತನೆಂದು ಆತನ ವಿರುದ್ದವಿದ್ದ ನೂರಾರು ಕೇಸುಗಳನ್ನು ತೆರವುಗೊಳಿಸಬೇಕೆಂದು ಕೇಳಿಕೊಳ್ಳುತ್ತಾನೆ. ಆದರೆ ನಟ್ವರ್ಲಾಲ್ನ ತಮ್ಮ 1996 ರಲ್ಲಿಯೇ ಆತ ಸತ್ತನೆಂದು ತಾನಾಗಿಯೇ ಖುದ್ದಾಗಿ ಆತನ ಅಂತ್ಯಕ್ರಿಯೆಯನ್ನು ಮಾಡಿರುವುದಾಗಿಯೂ ಹೇಳುತ್ತಾನೆ. 1996 ರಲ್ಲಿಯೇ ಆತ ಸತ್ತರೆ 2009 ರಲ್ಲಿ ಆತನ ವಿರುದ್ದದ ಕೇಸುಗಳನ್ನು ಖುಲಾಸೆ ಮಾಡಬೇಕೆನ್ನುವ ವಕೀಲರ ವಾದದ ಪ್ರಕಾರ ಆತ ಅಂದಿಗೂ ಜೀವಂತವಿದ್ದನು ಎಂಬ ಸಂಶಯ ಮಾತ್ರ ಬಾರದಿರದು.

ಹೀಗೆ ಪ್ರತಿಭೆ ಎಂಬ ಹುಚ್ಚು ಕುದುರೆಯ ಓಟದ ಹಾದಿ ಕೇವಲ ಅದನ್ನು ಓಡಿಸುವವನ ಮನದಲ್ಲಿ ಮೂಡಿದಂತಿರುತ್ತದೆ. ಅದೇ ಪ್ರತಿಭೆಯನ್ನು ಸಮಾಜ ಕಟ್ಟುವ ಕೆಲಸಗಳಿಗೆ ಬಳಸಿಕೊಂಡಿದ್ದರೆ ನಟ್ವರ್ಲಾಲ್ನ ಹೆಸರನ್ನು ಇಂದು ಬೇರೊಂದು ರೀತಿಯಾಗಿಯೇ ಬಳಸಿಕೊಳ್ಳಲಾಗುತ್ತಿತ್ತು. ತನ್ನನ್ನು ದೇಶೀ ರಾಬಿನ್ ಹುಡ್ ಎಂದೇ ಕರೆದುಕೊಂಡು ಮೆರೆಯುತ್ತಿದ್ದ ಈತ ಒಂದು ಉತ್ಕೃಷ್ಟ ಪ್ರತಿಭೆಯನ್ನು ಪೋಲುಮಾಡಿದ ಉದಾಹರಣೆಯಾಗಿ ಮಾತ್ರವಷ್ಟೇ ಇತಿಹಾಸದಲ್ಲಿ ಕಾಣಸಿಗುತ್ತಾನೆ. ಇಂಥಹದ್ದೇ ಚಾಣಾಕ್ಷ ಬುದ್ದಿಯ ಮತ್ತೊಬ್ಬ ದೇಶದ ಅತಿ ಸುರಕ್ಷಿತ ಜೈಲೆಂಬ ಹೆಗ್ಗಳಿಕೆಗೆ ಪಾತ್ರವಾಗುವ ತಿಹಾರ್ ಜೈಲಿನಿಂದ ಪಾರಾರಿಯಾಗಿ ಪೋಲಿಸರ ತಲೆತಗ್ಗುವಂತೆ ಮಾಡುತ್ತಾನೆ. ನಂತರ ಹಾಗೂ ಹೀಗೋ ಸೆರೆಸಿಕ್ಕ ಆತ ತಾನು ತಪ್ಪಿಸಿಕೊಳ್ಳುವುದು ಹಾಗು ಮತ್ತೊಮೆ ಹೀಗೆ ಸೆರೆಸಿಕ್ಕುವುದು ಎಲ್ಲವೂ 'ಪಾರ್ಟ್ ಆಫ್ ಮೈ ಪ್ಲಾನ್' ಎಂದು ವಿಚಾರಣಾಧಿಕಾರಿಗಳು ಕಕ್ಕಾಬಿಕ್ಕಿಯಾಗುವಂತೆ ಮಾಡುತ್ತಾನೆ. ಆತ ಜೈಲಿನಿಂದ ತಪ್ಪಿಸಿಕೊಂಡಿದ್ದೇಕೆ, ತಪ್ಪಿಸಿಕೊಂಡು ಮತ್ತೊಮ್ಮೆ ಸೆರೆ ಸಿಕ್ಕಿದಾದರೂ ಏತಕ್ಕೆ? ವಿದೇಶಿ ಪೋರನ ಆ ದೇಶೀ ಎಸ್ಕೇಪ್ ಸ್ಟೋರಿ ಮುಂದಿನ ಅಂಕಣದಲ್ಲಿ...

Friday, October 26, 2018

#MeToo, ಒಂದೆರಡು ಪ್ರೆಶ್ನೆಗಳು from Me Too...!

ಸ್ಥಳ ವರ್ಲಿ, ಮುಂಬೈ. ಅದು ಕಡುಕಪ್ಪು ಕೋಟುಗಳು ಹಾಗು ಎಲ್ಲೆಂದರಲ್ಲಿ ಸೀಳಿಕೊಂಡು ಗಾಳಿಗೆ ಹಾರಾಡುತ್ತಿರುವ ಡ್ರೆಸ್ಸುಗಳೇ ತುಂಬಿ ತುಳುಕುತ್ತಿರುವ ಸ್ಟಡಿಯಂ. ಸೇರಿರುವರೆಲ್ಲ ಸಿನಿಮಾರಂಗದಲ್ಲಿ ಒಂದಿಲ್ಲೊಂದು ಬಗೆಯಲ್ಲಿ ಗುರುತಿಸಿಕೊಂಡಿರುವ ದೂಡ್ಡ ದೊಡ್ಡ ಹಸ್ತಿಗಳು. ಘಾಡ ಮೌನದ ಸೀರಿಯಸ್ನೆಸ್ ಅನ್ನು ಒಳಗೊಂಡ ಆ ಮುಖಗಳನ್ನು ಗಮನಿಸಿದಾಗ ಮುಂದಿದ್ದ ಸ್ಟೇಜಿನ ಮೇಲೆ ಇಂದು ತೀರಾಸಾಮನ್ಯವೆನಿಸಿಕೊಂಡಿರುವಂತೆ ಕೇಂದ್ರ ಸರ್ಕಾರಗಳ ನೆಡೆಯ ವಿರುದ್ಧವೋ, ದೇವಸ್ಥಾನಗಳಿಗೆ ಮಹಿಳೆಯ ಪ್ರವೇಶ ಬೇಕೆಂಬುದ್ದರ ಬಗ್ಗೆಯೂ ಅಥವಾ ಜೀವ ಪಣವಿಟ್ಟು ಕಾದಾಡುವ ಸೈನಿಕರ ನಡೆಗಳ ಬಗ್ಗೆಯೂ ಜನತೆಗೆ ಅರ್ಥವಾಗದ ದುಬಾರಿ ಭಾಷೆಯಲ್ಲಿ ಅವರವರೇ ಚರ್ಚಿಸಿ, ಮಧ್ಯದಲ್ಲಿ ಒಂದೆರೆಡು ಮದ್ಯಗಳನ್ನು ಏರಿಸಿ, ಕೊನೆಗೆ ತೂರಾಡುತ್ತಾ ಮನೆಗೆ ತೆರಳುವ ಹೈ ಪ್ರೊಫೈಲ್ ಪ್ರಗತಿಪರರ ಕಾರ್ಯಕ್ರಮವೇನೋ ಎಂದೆನಿಸುತ್ತಿತ್ತು. ಆದರೆ ಅಂದು ಅಲ್ಲಿ ನೆಡೆದದ್ದೇ ಬೇರೆ. ಮುಂದಿನ ಮೂರ್ನಾಲ್ಕು ಘಂಟೆ ಅಲ್ಲಿ ನೆಡೆದ ಪ್ರಹಸನ ಇಡೀ ದೇಶಕ್ಕೆ ದೇಶವೇ ಹುಚ್ಚೆದ್ದು ಚರ್ಚಿಸುವ ವಿಷಯವಾಯಿತು. ಸ್ಲೇಟೊಂದನ್ನು ಹಿಡಿದು ಅರೆನಗ್ನಗೊಂಡ ಪಬ್ಲಿಸಿಟಿಯನ್ನೇ ಸಾಧನೆ ಎಂದುಕೊಂಡು ಅರಚಾಡುವ ಕೆಟಗರಿಯ ಮೂವರು, ವಾನರರ ಸೈನ್ಯದ ಕಿರಾತಕರಂತಿರುವ ಆರೇಳು ಜನರನ್ನು ಸ್ಟೇಜಿನ ಮೇಲೆ ಕರೆಸಿ ಅವರ ಮೂರು ತಲೆಮಾರಿನ ಕುಟುಂಬವನ್ನು ಜಾತಿ ವರ್ಣವೆನ್ನದೇ ಮುಖದಿಂದ ಹಿಡಿದು ಮರ್ಮಾಂಗದವರೆಗೂ ಅಣಕಿಸಿ, ಹೀಯಾಳಿಸಿ ತಮ್ಮ ವಿಷಯ ದಾಹದ ತೃಷೆಯನ್ನು ತೀರಿಸಿಕೊಂಡಿದ್ದನ್ನು ಅಲ್ಲಿ ನೆರೆದಿದ್ದ ಜೆಂಟಲ್ ಮ್ಯಾನ್ ಡ್ರೆಸ್ಸಿನ ಸೆಲೆಬ್ರಿಟಿಗಳು ಎದ್ದು ಬಿದ್ದು ನಗುತ್ತಾ ಸ್ವಾಗತಿಸಿದರು. ಕೇಕೆಹಾಕುತ್ತ ಕುಣಿದು ಕುಪ್ಪಳಿಸಿದರು. ಅಲ್ಲಿ ನೆರೆದಿರುವರಷ್ಟೇ ಅಲ್ಲದೆ ಬಾರದಿರುವರನ್ನೂ ಮಾತಿನಲ್ಲಿ ಅಳಿದು ಜಾಡಿಸಿದರು. ಹಿರಿಯರು ಕಿರಿಯರು ಎಂಬೋದನ್ನು ಲೆಕ್ಕಿಸದೆ ನೆಡೆದ ಆ 'A' ಕೆಟಗರಿಯ ಕಾರ್ಯಕ್ರಮವನ್ನು ಪ್ರೆಶ್ನಿಸಹೊರಟವರಿಗೆ 'ಅಭಿವ್ಯಕ್ತಿ' ಸ್ವಾತಂತ್ರ್ಯದ ಬಾವುಟವನ್ನು ಹಾರಿಸುತ್ತ ನಂತರ ನುಳಚಿಕೊಂಡರು. ಯಾವುದೇ ಹ್ಯಾಷ್ ಟ್ಯಾಗ್ ಗಳಾಗಲಿ, ಪಿಟಿಷನ್ಗಳ ಅಭಿಯಾನಗಳಾಗಲಿ ಅಂದು ಕಾಣಲಿಲ್ಲ. ಅಲ್ಲಿ ನೆರೆದಿದ್ದ ಯಾವೊಬ್ಬ ಸೆಲೆಬ್ರೆಟಿಯೂ ನನ್ನ ಮಾನ ಹರಾಜಾಯಿತು ಏನುತಾ ಮಾನನಷ್ಟ ಮೊಕದ್ದಮ್ಮೆಯನ್ನು ಊಡಲಿಲ್ಲ.... ಏಕೆ?

ಅದು ಟ್ರಡಿಷನಲ್ ಚಿತ್ರಗಳ ಓಟವನ್ನು ತಡೆಯಿಡಿದು, ಬಡಿದು, ತುಳಿದು ಬೆಳೆಯಲೆತ್ನಿಸುತಿದ್ದ ಕಮರ್ಷಿಯಲ್ ಚಿತ್ರಗಳ ಜಮಾನ. ಆದರೆ ಅದೆಷ್ಟೇ ಕಮರ್ಷಿಯಾಲಿಟಿ ಚಿತ್ರದಲ್ಲಿ ಇದ್ದರೂ ಕ್ಲಾಸಿಕ್ ಚಿತ್ರಗಳ ಹೊಳಪಿನ ಮುಂದೆ ಆವುಗಳು ತೀರಾನೇ ಮಂಕಾಗುತ್ತಿದ್ದವು. ಕ್ರಿಯೆಟಿವಿಟಿ ಏನೆಂಬುದೇ ಅರಿಯದ ಅಮಾಯಕ ನಿರ್ದೇಶಕ ಆಗ ಬೇರೆದಾರಿ ಕಾಣದೆ ಕೆಲವು ವಯಸ್ಕ ಸೀನ್ಗಳನ್ನು ಚಿತ್ರಗಳಲ್ಲಿ ತೂರಿಸಬೇಕಾಯಿತು. ನಾವು ನಟರು, ಡೈರೆಕ್ಟರ್ ಸಾಹೇಬರ ಕೈಯಲ್ಲಿ ನಲಿಯುವ ಗೊಂಬೆಗಳು, ಅವರು ಆಡಿಸಿದ ಆಟವನ್ನು ಆಟವಾಡುವವರು ಎಂಬ ಸ್ಟೇಟ್ಮೆಂಟ್ ಗಳನ್ನು ನೀಡುತ್ತಾ ನಟ ನಟಿಯರೂ ತಮ್ಮ ಮೂರು ಕಾಸಿನ ಮರ್ಯಾದೆಯ ಹರಾಜನ್ನು ಕೊಂಚ ಡೈರೆಕ್ಟರ್ಗಳಿಗೂ ಹೊರಿಸಿ, ನಟಿಸಿ, ಹಣವನ್ನು ಗಳಿಸಿ ಅಲ್ಲಿಂದ ಪಾರಾಗುತ್ತಿದ್ದರು. ಹೆಚ್ಚಾಗಿ ತಮ್ಮ ವೃತ್ತಿಜೀವನದ ಆದಿಯಲ್ಲಿರುತ್ತಿದ್ದ ಅವರುಗಳು ಹಣ ಹಾಗು ಪಬ್ಲಿಸಿಟಿಗಳು ಸಿಗುವ ಕ್ರ್ಯಾಶ್ ಕೋರ್ಸ್ ಗಳ ಶಾರ್ಟ್ಕಟ್ಟನು ಹಿಡಿದ್ದಿದ್ದರು. ಆಗ ಎಲ್ಲವೂ ಸರಿ. ಎಲ್ಲರೂ ತನ್ನ ಜೀವನವನ್ನು ಕಟ್ಟಿ ಬೆಳೆಸುವ ಮಾರ್ಗದರ್ಶಕರು. ಅದಕ್ಕಾಗಿ ಚಿತ್ರದಲ್ಲಿ ಎಂತಹ ಸೀನ್ಗಳನ್ನೂ ಮಾಡಲು ಸಿದ್ದ. ಏನೂ ಮಾಡಲೂ ಸಿದ್ದ. ಏಕೆಂದರೆ ಅದು 'ಬೋಲ್ಡ್' ಕ್ಯಾರೆಕ್ಟರ್. ಅಲ್ಲದೆ ಅದೊಂದು ಆರ್ಟ್. ದುರ್ಬಿನ್ ಇಟ್ಟು ಕಣ್ಣರಳಿಸಿ ನೋಡಿದರೂ ಎಳ್ಳಷ್ಟೂ ನಟನೆಯ ಅಂಶವನ್ನು ಕಾಣದ ಆ ಮುಖಗಳು ಆರ್ಟ್ ಅಂಡ್ ಕ್ಯಾರೆಕ್ಟರ್ ಗಳ ಬಗ್ಗೆ ಮಾತನಾಡುವಾಗ ಅಂದು ಕಿವಿಯಿಟ್ಟು ಕೇಳುತ್ತಾ ಸಿಳ್ಳೆ ಚಪ್ಪಾಳೆಗಳನ್ನು ಬಾರಿಸಿದ ಗುಂಪನ್ನೂ ಶ್ಲಾಘಿಸಲೇ ಬೇಕು ಬಿಡಿ. ಅದೇನೇ ಇರಲಿ. ಈಗ ದಶಕಗಳ ನಂತರ ಮತ್ತದೇ ಕ್ಯಾರೆಕ್ಟರ್ಗಳು ತಲೆಯೆತ್ತಿವೆ. ತಮ್ಮ ನಟನ ಕೌಶ್ಯಲ್ಯದ ಹಿರಿಮೆಗೆ ಮೂರು ದಿನದ ಮಟ್ಟಿಗೆ ನೆಟ್ಟಗೆ ಚಿತ್ರರಂಗದಲ್ಲಿ ನೆಲೆಯೂರಲಾಗದ ಅವುಗಳು ಈಗ ಮತ್ತೊಮ್ಮೆ ಟಿವಿ ಪರದೆಯ ಮೇಲೆ ಬಂದಿವೆ. ಕೈಗೊಂದು ಕಾಲಿಗೊಂದು ಸಿಗುವ ರಿಯಾಲಿಟಿ ಷೋಗಳ ದೃಷ್ಟಿ ತಮ್ಮೆಡೆ ಹರಿಯಲೋ ಅಥವಾ ಮತ್ತದೇ ಪುಕ್ಕಟೆ ದೊರೆಯುವ ಹಣ ಹಾಗು ಪಬ್ಲಿಸಿಟಿಯ ಧಾಹಕ್ಕೋ ಆತೊರೆಯುವ ಅವುಗಳ ಹಪಾಹಪಿ ಪ್ರೆಸ್ ಕಾನ್ಫೆರೆನ್ಸ್ ಒಂದನ್ನು ಕರೆಸಿ ದಶಕಗಳ ಹಿಂದೆ ಜರುಗಿದ ಶೋಷಣೆಯನ್ನು ಊರು ಬಿದ್ದರೂ ಕ್ಯಾರೇ ಎನ್ನದೆ ಸೆಲೆಬ್ರಿಟಿಗಳ ಬಾಲದ ಹಿಂದೆ ಅಲೆಯುವ ಕೆಲ ಮಾಧ್ಯಮಗಳ ಮುಂದೆ ಕಾಣುತ್ತದೆ. ಅದೊಂದು ದಿನ, ಅದೆಲ್ಲೋ, ಅದೆಷ್ಟೊತ್ತಿಗೋ ನನ್ನ ಮೇಲೆ ಆತ ಅಸಭ್ಯವಾಗಿ ವರ್ತಿಸಿದ, ಹೇಳಬಾರದ ಮಾತನ್ನು ಹೇಳಿದ, ಶೋಷಿಸಿದ ಎಂದೆಲ್ಲಾ ಒದರುತ್ತಾ ನೆರೆದಿರುವವರ ಸಿಂಪತಿಯನ್ನು ಪಡೆಯಲೆತ್ನಿಸುವ ಅವುಗಳ ಪ್ರಸ್ತುತ ಆಟ ಯಾರಿಗೇನು ತಿಳಿಯದಂತಲ್ಲ. ಕ್ರಿಕೆಟ್ ದಿಗ್ಗಜರಿಂದಿಡಿರು ಪ್ರಸಿದ್ಧ ನಟ ನಿರ್ದೇಶಕರವರೆಗೆ ಬೊಟ್ಟು ಮಾಡುತ್ತಾ ಜೀವನದ ಗೊತ್ತು ಗುರಿ ಇಲ್ಲದೆ ಅಲೆಯುವ ಅವುಗಳ ಸ್ಟೇಟ್ಮೆಂಟ್ ಗಳನ್ನು ಪರೀಕ್ಷೆ ಹಾಗು ಪರಾಮರ್ಶೆಗೆ ಒಳಪಡಿಸದೆ ಮುಖ್ಯವಾಹಿನಿಯಲ್ಲಿ ಬಿತ್ತರಿಸಲಾಗುತ್ತದೆ. ಹೀಗೆ ಅಂದು ಯಾವುದೇ ನೀಲಿ ಚಿತ್ರಗಳಿಗೂ ಕಡಿಮೆ ಎನಿಸದ, ಎಂತಹ ವಯಸ್ಕ ಸೀನ್ಗಳನ್ನೂ ನೀರು ಕುಡಿದಂತೆ ಮಾಡಿ, ಒಂದು ಮಾತನ್ನು ತುಟಿಕ್ ಪಿಟಿಕ್ ಅನ್ನದೆ ಇಂದು ಅದೆಲ್ಲೋ ಆತ ಆಗಂದ,ಇವರು ಹೀಗೆಂದರು, ಈತ ಅಲ್ಲಿಗೆ ಕರೆದ, ಕಣ್ಸನ್ನೆ ಮಾಡಿದ ಹಾಗಾಗಿ ನನ್ನ ಮೇಲೆ ಶೋಷಣೆಯಾಗಿದೆ ಎಂಬ ಮಾತುಗಳಿಗೆ ಆ ಮಟ್ಟಿನ ಪ್ರಾಮುಖ್ಯತೆಯನ್ನು ಕೊಡುವ ಮಾಧ್ಯಮಗಳ ಬಗೆಯನ್ನು ಪ್ರೆಶ್ನಿಸುವರೇ ಇಲ್ಲ, ಏಕೆ?

ಅದೊಂದು ಕಾಲವಿತ್ತು. ಸಿನಿಮಾದಲ್ಲಿ ನಟಿಸುವ ನಾಯಕ ಹಾಗು ನಾಯಕಿಯರ ಆಧಾರದ ಮೇಲೆ ಪೋಷಕರು ತಮ್ಮ ಮಕ್ಕಳನ್ನು ಅಂತಹ ಸಿನಿಮಾಗಳಿಗೆ ಕರೆದುಕೊಂಡು ಹೋಗಬೇಕೋ ಬೇಡವೋ ಎಂಬುದನ್ನು ನಿರ್ಧರಿಸುತ್ತಿದ್ದರು. ಆ ನಾಯಕ ನಾಯಕಿರಿಯರೂ ಸಹ ತಮ್ಮ-ತಮ್ಮ ಸ್ಥಾನದ ಜವಾಬ್ದಾರಿಯನ್ನು ಅರಿತು ಸಿಗುವ ಪಾತ್ರಗಳನ್ನು ಕೇಳಿ, ಕಲ್ಪಿಸಿ, ಬೇಡವಾದಾದನ್ನು ತಿರಸ್ಕರಿಸಿ ಬೇಕಾದನ್ನು ಮಾರ್ಪಡಿಸಿ ಒಟ್ಟಿನಲ್ಲಿ ಎಲ್ಲಿಯೂ ತನ್ನ ಗೌರವಕ್ಕೆ ಹಾಗು ಜನತೆಯ ನಂಬುಗೆಗೆ ದಕ್ಕೆ ಬಾರದಂತಹ ಪಾತ್ರಗಳನ್ನು ಮಾಡುತ್ತಾ ನಟಿಸಿ ರಂಜಿಸುತ್ತಿದ್ದರು. ಆದರೆ ಕಾಲ ಕಳೆದಂತೆ ಹಣದ ಹುಚ್ಚುಹೊಳೆಯಲ್ಲಿ ಪ್ರಸ್ತುತ ಬಹುಪಾಲು ನಟನಟಿಯರು ಸಾಮಾಜಿಕ ಜವಾಬ್ದಾರಿ, ಅಭಿಮಾನಿಗಳ ಬಗೆಗಿನ ಕಳಕಳಿ ಎಂಬೆಲ್ಲ ನಿಯಮಗಳನ್ನು ಯಾವುದೇ ಮುಲಾಜಿಲ್ಲದೆ ಮುರಿದು 'ಫೇಮ್' ಎಂಬ ಕಿರೀಟದ ಧಾಹದಲ್ಲಿ ದೈಹಿಕವಷ್ಟೇ ಅಲ್ಲದೆ ಮಾನಸಿಕವಾಗಿಯೂ ನಗ್ನಗೊಳ್ಳುತ್ತಿದ್ದಾರೆ. ಪ್ರಸ್ತುತ ಕಾಲದ ಇಂತಹ ಬಹುಮಂದಿ ನಟ ನಟಿಯರಿಗೆ ಶೋಷಣೆಯ ಹೆಸರಿನಲ್ಲಿ ಇನ್ನೊಬ್ಬರ ಮೇಲೆ ಬೊಟ್ಟು ಮಾಡುವ ನೈತಿಕ ಹಕ್ಕು ನಿಜವಾಗಿಯೂ ಇದೆಯೇ ಎಂಬ ಪ್ರಶ್ನೆ ಉದ್ಭವಿಸದಿರದು. ಅಲ್ಲದೆ ಎಂದು 'ಚಿತ್ರಮಾಧ್ಯಮ'ಗಳು 'ಫಿಲ್ಮ್ಇಂಡಸ್ಟ್ರಿ'ಗಳಾದವೋ ಅಂದೇ ಕಲೆ, ಸಂಗೀತ, ಸಾಹಿತ್ಯ ಎಂಬ ಬೇಕಾದ ಅಂಶಗಳು ಅಲ್ಲಿಂದ ದೂರವಾದವು. ಇಂದು ಸಿನಿಮರಂಗವೇನಿದ್ದರೂ ಇತ್ತಕಡೆಯಿಂದ ನೂರು ರೂಪಾಯಿ ತಳ್ಳಿ ಅತ್ತ ಕಡೆಯಿಂದ ಕೋಟಿ ಪಡೆಯುವ ಯಂತ್ರವಷ್ಟಾಗಿ ನಿಂತಿದೆ. ಇಲ್ಲಿ ಎಲ್ಲವು ಹಣಮಯವಾಗಿರುವಾಗ ಸರಿ-ತಪ್ಪು, ಸುಳ್ಳು-ನಿಜ, ಕಪ್ಪು-ಬಿಳುಪೆಂಬ ಭಾವಗಳಿಗೆ ಎಲ್ಲಿಯ ಬೆಲೆ?

ಒಟ್ಟಿನಲ್ಲಿ ಲಂಗು ಲಗಾಮಿಲ್ಲದೆ ನ್ಯಾಯಮೂರ್ತಿಗಳಂತೆ ವರ್ತಿಸುವ ಮಾಧ್ಯಮಗಳು, ಹೊಲಸು ಪದಗಳ ಸರಮಾಲೆಯನ್ನೇ ಹಾಸ್ಯವೆಂದು ಪರಿಗಣಿಸಿ ನೋಡುಗರನ್ನು ರಂಜಿಸಲೆತ್ನಿಸುವ ಯುವ ಜನಾಂಗ, ಸಾಮಜಿಕ ಬದ್ಧತೆಯನ್ನು ಕಳೆದುಕೊಂಡಿರುವ ಪ್ರಸ್ತುತ ಚಿತ್ರರಂಗಳ ಹಿನ್ನಲೆಗಳಲ್ಲಿ ಇಂದು ಶೋಷಣೆ ಎಂಬ ಪದ ತನ್ನ ನಿಜತ್ವವನ್ನು ಕಳೆದುಕೊಳ್ಳುವಂತೆ ತೋರುತ್ತಿದೆ. ಬೇಕಾಬಿಟ್ಟಿ ಸಿಕ್ಕ ಸಿಕ್ಕಲೆಲ್ಲ ಬಳಕೆಯಾಗಿ ತನ್ನ ನೈಜ ಶಕ್ತಿಯನ್ನು ಕ್ಷಿಣೀಸಿಕೊಳ್ಳುತ್ತಿದೆ. ಮುಖವನ್ನು ಬಣ್ಣಮೆತ್ತುವ ಪೈಂಟ್ ಬೋರ್ಡಿನಂತೆ ಮಾಡಿಕೊಂಡು, ಲಕ್ಷಬೆಲೆಬಾಳುವ ಚಿನ್ನಾಭರಣಗಳನ್ನು ಕಷ್ಟಪಟ್ಟು ಹೊತ್ತುಕೊಂಡು, ಸರಿಯೋ ತಪ್ಪೋ, ನಿಜವೋ ಸುಳ್ಳೋ ಏನಾದರಾಗಲಿ ಮೇರು ವ್ಯಕ್ತಿತ್ವವೊಂದರ ಮಾನಹರಣ ಕಾರ್ಯಕ್ರಮವೆಂದರೆ ತಮ್ಮೆಲ್ಲ ಕೆಲಸಕಾರ್ಯಗಳನ್ನು ಬಿಟ್ಟು ಡೇರೆ ಹೂಡುವ ಕೆಲವು ಮಾನವಪ್ರಾಣಿಗಳನ್ನು ಒಳಗೊಂಡು 'ಶೋಷಣೆ' ಎನುತ ನುಲಿಯುವ ಗುಂಪಿಗೆ ಅಲ್ಲಿ ಸ್ಕೂಲು, ಕಾಲೇಜು, ಆಸ್ಪತ್ರೆ, ಕಚೇರಿಗಳಷ್ಟೇ ಅಲ್ಲದೆ ಆಶ್ರಮ ಅನಾಥಯಲಯಗಳಲ್ಲೂ ನಡೆಯುವ (!)ಶೋಷಣೆ ಶೋಷಣೆ ಎನಿಸುವುದಿಲ್ಲವೇ? ಅವುಗಳ ಧ್ವನಿಗೂ ಧ್ವನಿಗೂಡಿಸಬೇಕೆನಿಸುವುದಿಲ್ಲವೇ? ಸ್ಟಾರ್ಗಿರಿ ಇದ್ದ ಮಾತ್ರಕ್ಕೆ ಇಂದು ಊರಿಗೆ ಊರೇ ಈಕೆಗೆ ಬೆಂಬಲ ಕೊಡಬಹುದು. ಮುಖಕ್ಕೆ ಮಸಿಯನ್ನು ಮೆತ್ತಿಕೊಂಡು ಅಡುಗೆ ಮನೆಯಲ್ಲೆ ಕಾಲ ತಳ್ಳುವ ಅದೆಷ್ಟೋ ಮೂಕ ಜೀವಗಳಿಗೆ ಬೆಂಬಲ ಕೊಡುವವರ್ಯಾರು? ಮೇಲಾಗಿ ಇಂದು ಶೋಷಣೆ ಎಂಬುದು ಕೇವಲ ಮಹಿಳೆಯೊಬ್ಬಳ ಮಾತ್ರದ ಅನ್ಯಾಯದ ಭಾಗವೇ? ಅದೇ ಇಂಡಸ್ಟ್ರಿಯಲ್ಲಿ ಪುರುಷರೊಟ್ಟಿಗೂ ಜರುಗುವ ಶೋಷಣೆಗೆ ಏನೆಂದು ಕರೆಯುತ್ತಾರೆ? ಅಷ್ಟಾಗಿಯೂ ಕೆಲ ಹೆಂಗಸರಿಗೆ ಅದು ಶೋಷಣೆಯ ನಿಜ ರೂಪವೆಂದೇ ಎನಿಸಿದಲ್ಲಿ ನಮ್ಮ ಪೊಲೀಸ್ ಸ್ಟೇಷನ್ ಗಳು, ಕೋರ್ಟು ಕಛೇರಿಗಳೇನು ಸರ್ಕಾರದ ಬೆಂಚು ಬಿಸಿ ಮಾಡಲಿಕ್ಕಿರುವ ಸಂಸ್ಥೆಗಳೇ? ಹೋಗಿ, ನಿಮ್ಮ ಅಳಲನ್ನು, ನೋವನ್ನು, ಜಿಗುಪ್ಸೆಯನ್ನು ಪುರಾವೆಯ ಸಹಿತ ಅಲ್ಲಿ ಬಿಚ್ಚಿಡಿ. ಅದನ್ನು ಬಿಟ್ಟು ಸ್ವಘೋಷಿತ ನ್ಯಾಯಮೂರ್ತಿಗಳೆನಿಸಿರುವ ಟಿವಿ ಚಾನೆಲ್ಲುಗಳನ್ನು ಕರೆದು ಬಾಯಿಗೆ ಬಂದಂತೆ ಅರಚಿದರೆ ಅಪರಾಧಿಗೆ ಶಿಕ್ಷಿಸುವ ನಿಮ್ಮ ಪ್ರಯತ್ನ ನಿಜವಾಗಿಯೂ ಸಫಲವಾಗುತ್ತದೆಯೇ?

ಒಂದಂತು ನಿಜ. ಇಂದು ನೆಡೆಯುತ್ತಿರುವ #MeToo ಅಭಿಯಾನ ಮುಂದಿನ ದಿನಗಳಲ್ಲಿ ಮುಗ್ದ ಜೀವಗಳನ್ನು ಚಿತ್ರದ ಆಮಿಷವೊಡ್ಡಿ ತಮಗೆ ಬೇಕಂತೆ ಬಳಸಲಿಚ್ಛಿಸುವ ಅದೆಷ್ಟೋ ಮನಸ್ಸುಗಳಿಗೆ ಮರ್ಮಾಘಾತವನ್ನು ಉಂಟುಮಾಡುವದಂತು ಸುಳ್ಳಲ್ಲ. ಈ ಅಭಿಯಾನ ಕೇವಲ ಸಿನಿಮಾ ಇಂಡಸ್ಟ್ರಿಯಷ್ಟೇ ಅಲ್ಲದೆ ಇತರೆ ಎಲ್ಲಾ ವಲಯಗಳನ್ನು ಪ್ರವೇಶಿಸಬೇಕು. ಆದರೆ ಇಂದು ಸಮ್ಮತಿಸಿ ನಾಳೆ ದೂರುವಂತಹ ಅಥವಾ ನೋಡಿದ ಮಾತ್ರಕ್ಕೆ ತನ್ನ ಚಾರಿತ್ರವೇ ಹಾಳಾಯಿತ್ತೆನ್ನುವ ಬಾಲಿಶ ಹೇಳಿಕೆಗಳಿಗೆ ಪರಮಾರ್ಶೆಯ ಫಿಲ್ಟರ್ ಅನ್ನು ತೊಡಿಸದೆಯೇ ಸೊಪ್ಪು ತಿನ್ನಿಸುವುದನ್ನು ಮಾತ್ರ ಮಾಧ್ಯಮಗಳು ನಿಲ್ಲಿಸಲೇಬೇಕು. ಅಲ್ಲದೆ ಇವುಗಳೆಲ್ಲದರ ಅಖಾಡವಾಗಿರುವ ಸಿನಿಮಾ ರಂಗ ಕೊಂಚವಾದರೂ ಬದಲಾಗಬೇಕು. ಅರೆ ಬೆತ್ತಲ ಫೋಟೊಶೂಟ್ಗಳ ಮಾಧಕ ಪೋಸುಗಳಿಗೆ ನೋಡುಗರೇನು ಕಾಯಿ ಒಡೆದು ಪೂಜೆಮಾಡುವಿದಿಲ್ಲ ಸ್ವಾಮಿ. ನಿಜವಾದ ಅಭಿಯಾನ ಮೊದಲು ಕ್ರಿಯೇಟಿವಿಟಿಯ ಹೆಸರಿನಲ್ಲಿ ಫ್ಯಾಮಿಲಿ ಫಿಲಂ ಎಂದು ಪಬ್ಲಿಸಿಟಿಯನ್ನು ನೀಡಿ ‘ಇಂಟಿಮೇಟ್ ಸೀನ್ಗಳು ’ 'ಐಟಂ ಸಾಂಗ್ ಗಳು' 'ಹಾಟ್ ಸೀನ್'ಗಳು ಎಂಬ ಬಾಯಿಚಪ್ಪರಿಸುವ ದೃಶ್ಯಗಳನ್ನು ತೋರಿಸುವವರ ವಿರುದ್ದವೂ ಇರಲಿ. ಇಲ್ಲವಾದರೆ ಕೆಸರನ್ನು ತಿನ್ನುವ ಪ್ರಾಣಿಯನ್ನು ಕೆಸರಿಗೇ ಒಗೆದಂತೆ ಶೋಷಣೆಯೆನುತ ಒದರುವ ಮಾತುಗಳು ಅತ್ತ ಆರಕ್ಕೂ ಏರದ ಮೂರಕ್ಕೂ ಇಳಿಯದ ಗಾಳಿಪದಗಳಾಗಿ ಕಾಣೆಯಾಗಬಲ್ಲವು.

Friday, October 19, 2018

ಆಲಾಪ..

'ಎಕ್ಸ್ ಕ್ಯೂಸ್ ಮೀ .. ನೀವು ರಿಸೆರ್ವ್ಡ್ ಸೀಟಲ್ಲಿ ಕೂತಿದ್ದೀರಾ ಅನ್ಸುತ್ತೆ?'

'ಇಸ್ ಇಟ್?.. ಸ್ವಲ್ಪ ತಾಳಿ, ಒಮ್ಮೆ ಚೆಕ್ ಮಾಡ್ಕೊಬಿಡ್ತೀನಿ' ಎನುತ ಆಕೆ ಮೊಬೈಲ್ ಅನ್ನು ಹೊರಗೆಳೆದಳು

'ಓ ಗಾಡ್, ಮೊಬೈಲ್ ಸ್ವಿಚ್ ಆಫ್ ಬರ್ತಾ ಇದೆ. ಏನ್ ಹುಡುಗ್ರಪ್ಪ ಇವ್ರು…ಎನಿವೇಸ್ ಐಮ್ ಸಾರೀ..ನೀವ್ ಬಂದ್ ಕೂತ್ಕೊಳ್ಳಿ' ಎಂದು ಕೂಡಲೇ ಆಕೆ ಎದ್ದು ಕಾಫಿ ಡೇಯಿಂದ ಹೊರನೆಡೆದಳು.

ಈತನಿಗೆ ಅಷ್ಟರಲ್ಲಾಗಲೇ ತನ್ನ ಅನುಮಾನ ನಿಜವೆನಿಸಿದ್ದರಿಂದ ಒಂದರೆಕ್ಷಣ ಮಾತು ಬಾರದಂತಾಗುತ್ತದೆ. ತನ್ನ ಮೊಬೈಲ್ ಅನ್ನು ಹೊರಗೆಳೆದು ಸ್ವಿಚ್ ಆನ್ ಮಾಡಿದ ಕೂಡಲೇ ಆಕೆಯ ನಂಬರ್ ಎಂದು ಕಳಿಸಲ್ಪಟ್ಟಿದ್ದ ನಂಬರ್ನಿಂದ ಎರಡು ಮಿಸ್ಸೇಡ್ ಕಾಲ್ ಗಳು ಬಂದಿರುತ್ತವೆ. ಇದೇಗೆ ಸಾಧ್ಯ!? ಅದೆಷ್ಟೇ ಯೋಚಿಸಿದರೂ ಉತ್ತರ ಹೊಳೆಯಲಿಲ್ಲ. ಕೂಡಲೇ ಆಕೆಯ ಅಪ್ಪನಿಗೆ ಫೋನಾಯಿಸಿ ನಾಲ್ಕು ಬೈದುಬಿಡಬೇಕೆಂಬ ಮನಸ್ಸಾದರೂ ಏಕೋ ಸುಮ್ಮನಾಗುತ್ತಾನೆ. 'ಐಮ್ ಸಾರೀ..ನೀವ್ ಬಂದ್ ಕೂತ್ಕೊಳ್ಳಿ' ಎಂದ ಆಕೆಯ ಮಾತುಗಳಲ್ಲಿ ಅದೇನೋ ಒಂದು ಬಗೆಯ ಮುಗ್ದತೆ ಆತನನ್ನು ಕಾಡಿತು. ಅಂತಃಕರಣ ರೋಧಿಸಿತು. ತಾನು ಫೋಟೋದಲ್ಲಿ ನೋಡಿದ ಚಲುವೆ ನಿಜವಾಗಿಯೂ ಇವಳೇನಾ ಏನುತಾ ಆಕೆಯ ಫೋಟೋಗಳನ್ನೇ ಒಂದೊಂದಾಗೆ ನೋಡತೊಡಗಿದ.

.

.


ಆ ಕಿಕ್ಕಿರಿದ ಜನಸ್ತೋಮದಲ್ಲೂ ಸಣ್ಣ ಭೂಕಂಪನವನ್ನೇ ಸೃಷ್ಟಿ ಮಾಡಿದ್ದವು ಮಾನಸನ ಆ ಡ್ರಮ್ ಬೀಟ್ಸ್ ಗಳು. ಮಿರಿಮಿರಿ ಮಿರುಗುವ ಕಪ್ಪಾದ ಲೆದರ್ ಜಾಕೆಟ್, ಮುಖವನ್ನು ಅರೆ ಮುಚ್ಚುವಷ್ಟು ದೊಡ್ಡದಾದ ತಲೆಯ ಕ್ಯಾಪು, ಕಪ್ಪಾದ ಝರಿಯಂತೆ ಕೆಳಗಿಳಿದು ಬೆನ್ನಿನವರೆಗೂ ಬೆಳೆದಿರುವ ಆ ನೀಳ ಕೂದಲು, ಕಣ್ಣಿಗೊಂದು ಘಾಡ ಕೆಂಪಿನ ಕನ್ನಡಕ, ಕಪ್ಪು ಜೀನ್ಸಿನ ಕೆಳಗೆ ಬೆಳ್ಳಗೆ ಹೊಳೆಯುವ ಶೂಗಳೊಟ್ಟಿಗೆ ಡ್ರಮ್ ಸ್ಟಿಕ್ ಗಳೆರಡನ್ನು ಹಿಡಿದು ಈತ ಬಡಿಯುತ್ತಾ ಹೋದರೆ ಅಲ್ಲಿ ಸೇರುವ ಸಮಸ್ತ ಜನಸ್ತೋಮ ಹುಚ್ಚೆದ್ದು ಕುಣಿಯತೊಡಗುತ್ತದೆ. ಅದು ಆತನ ಸಂಗೀತ ಜ್ಞಾನವೂ ಅಥವಾ ಸಂಗೀತವೇನೆಂದೇ ಅರಿಯದ ಜನಸ್ತೋಮದ ರಂಜನೆಯೋ ಅಥವಾ ತನ್ನ ದುಃಖ, ನೋವು, ಹತಾಶೆ ಹಾಗು ಅವಮಾನವನ್ನು ಹೊರಹಾಕುವ ಪ್ರಕ್ರಿಯೆಯೋ ಒಟ್ಟಿನಲ್ಲಿ ವಾರಕ್ಕೊಂದೆರಡು ಬಾರಿ ಹೀಗೆ ತಡರಾತ್ರಿಯವರೆಗೆ ಪಬ್ಬಿನಲ್ಲಿ ಡ್ರಮ್ಸ್ಗಳನ್ನು ಚಚ್ಚಿ ಕೆಡವುವಂತೆ ಭಾರಿಸಿ ಮನಸ್ಸಿನ ತನ್ನೆಲ್ಲ ಭಾರವನು ಕರಗಿಸಿಕೊಳ್ಳುತ್ತಿದ್ದ ಮಾನಸ್. ರಂಜನೆ ಹವ್ಯಾಸವಾಗಿ, ಹವ್ಯಾಸ ರೂಟಿನ್ ನಂತಾಗಿ ಈಗ ಅದು ಒಂತರ ಚಟವಾಗಿಬಿಟ್ಟಿದೆ ಎಂದರೆ ತಪ್ಪಾಗದು. ಒಂದು ಪಕ್ಷ ಆತ ಬಿಯರ್ ಹಾಗು ಸಿಗರೇಟನ್ನೂ ಬಿಟ್ಟರೂ ಹೀಗೆ ವಾರಕೊಂದೆರಡು ಬಾರಿ ಡ್ರಮ್ ಗಳನ್ನು ಬಡಿಯದೇ ಇರುತ್ತಿರಲಾರ. ಇಲ್ಲವಾದರೆ ಏನನ್ನೋ ಕಳೆದುಕೊಂಡ ಶೂನ್ಯಭಾವ ಆತನ ಮನಸ್ಸನ್ನು ಆವರಿಸುತ್ತಿತ್ತು.

ಇಂದು ರಾತ್ರಿ ಹನ್ನೆರಡರ ಸುಮಾರಿಗೆ ಪುಬ್ಬಿನಿಂದ ಹೊರಬಂದ ಮಾನಸ್ ತನ್ನ ಕಾರಿನೊಳಗೆ ಕೂರುವ ಮುನ್ನ ಸಿಗರೇಟನ್ನು ಹೊತ್ತಿಸಲು ಲೈಟರ್ ಹೊರತೆಗೆದ. ಕೂಡಲೇ ರ್ರುಮ್ ರ್ರುಮ್ ಎಂದು ಸದ್ದು ಮಾಡುತ್ತಾ ಸೈಲೆಂಟ್ ಮೋಡಿನಲ್ಲಿದ್ದ ಆತನ ಮೊಬೈಲು ಅಲುಗಾಡತೊಡಗಿತು. ಟಪ್ ಟಪ್ ಎಂದು ಬಂದ ನಾಲ್ಕೈದು ಮೆಸೇಜ್ ಗಳನ್ನು ಆತ ಕಣ್ಣರಳಿಸಿ ನೋಡತೊಡಗಿದ. ಅದೆಂದೋ ಕಾಲೇಜಿನ ದಿನಗಳಲ್ಲಿ ತೆರೆದಿದ್ದ ಮ್ಯಾರೇಜ್ ಆಪ್ (!) ನಿಂದ ಯಾರೋ ಹುಡುಗಿ ಕಳುಹಿಸಿದ ಸಂದೇಶಗಳಾಗಿದ್ದವು. ಅಂತಹ ಅದೆಷ್ಟೋ ಮೆಸೇಜ್ ಗಳೂ ಬಂದಿದ್ದರೂ, ಅವುಗಳಿಗೆಗೆ ಗುಲಗಂಜಿಯಷ್ಟೂ ಗಮನವನ್ನು ನೀಡದ ಆತನಿಗೆ ಅದ್ಯಾಕೋ ಈಕೆ ಮನಸ್ಸಿಗೆ ತೀರಾ ಹಿಡಿಸಿದಳು. ಹುಡುಗಿ ನೋಡಲು ಹಾಲಿನ ಗೊಂಬೆಯಂತೆ ಸುಂದವಾಗಿದ್ದಾಳೆ. ಆ ಕಪ್ಪಾದ ಕಣ್ಣುಗಳು, ಕೆಂಪಾದ ತುಟಿ, ಘಾಡ ಕಪ್ಪು ಕೂದಲಿಗೆ ಹೊಂದುವಂತೆ ಹಚ್ಚೋತ್ತಿದಂತರಿರುವ ಆ ಹಣೆಯ ಹುಬ್ಬುಗಳು ಹಾಗು ಚೊಕ್ಕವಾದ ಒಂದು ಹಣೆಯ ಬೊಟ್ಟು ಆಕೆಯನ್ನು ಅಪ್ಸರೆಯ ಮಗಳೇನೋ ಎಂಬಂತೆ ಮಾಡಿದ್ದವು. ಪ್ರೀತಿ, ಪ್ರೇಮ, ಸಲುಗೆ, ಸಂಬಂಧ ಎಂದರೆ ಬೇಡವಾಗಿಬಿಟ್ಟಿದ್ದ ಮಾನಸನಿಗೆ ಅದೆಷ್ಟೇ ಪ್ರಯತ್ನಿಸಿದರೂ ಇಂದು ಆಕೆಗೆ ಪ್ರತಿಕ್ರಿಯಿಸದೆ ಇರಲಾಗಲಿಲ್ಲ.

**********************************************

ರೂಪ ಅತಿಸುಂಧರಿಯಾಗದಿದ್ದರೂ ಗುಣವಂತೆ. ಆಕೆಯ ಸನ್ನಡತೆ ಬೇರೆಯ ಯಾವುದೇ ನ್ಯೂನ್ಯತೆಗಳನ್ನೂ ಬದಿಗಿರಿಸುವಂತಿತ್ತು. ಆ ಸಣ್ಣ ಕಂಠದ ಮಾತುಗಳು, ಮಾತಿಗಿಂತ ಆ ಮಾತಿನ ಭಾವವನ್ನರಿತು ಪ್ರತಿಕ್ರಿಯಿಸುವ ಆಕೆಯ ಪ್ರೌಢಿಮೆ, ನವಿರಾದ ಹಾಸ್ಯಪ್ರಜ್ಞೆ, ಸ್ನಾತಕೋತರ ಪದವಿಗಳಿದ್ದರೂ ಅಹಂ ಇಲ್ಲದ ಆಕೆಯ ಕ್ಯಾರೆಕ್ಟರ್, ವಿಶಾಲ ಮನೋಭಾವ, ಇವೆಲ್ಲವೂ ಆಕೆಯನ್ನು ಒಂದು ಆಕರ್ಷಣ ಕೇಂದ್ರವನ್ನಾಗಿ ಮಾಡಿದ್ದವು. ಆದ್ದರಿಂದಲೇ ಏನೋ ದಶಕಗಳ ಹಿಂದಿನ ಅಂಗನವಾಡಿಯ ಗೆಳೆಯರೂ ಆಕೆಯ ಸಂಪರ್ಕದಲ್ಲಿದ್ದಾರೆ. ವರ್ಷಕೊಮ್ಮೆ ಕನಿಷ್ಠವಾದರೂ ಒಮ್ಮೆಯಾದರೂ ಆಕೆಯನ್ನು ನೆನೆದು ಫೋನಾಯಿಸುತ್ತಾರೆ. ತುಸು ಕಪ್ಪು ಬಣ್ಣ, ಕೋಲುಮುಖ ಹಾಗು ಕಣ್ಣಿಗೆ ದಪ್ಪದಾದೊಂದು ಕನ್ನಡಕವನ್ನು ಧರಿಸುವ ಆಕೆಗೆ ‘ಸಹಜ’ವಾಗಿಯೇ ಯಾವುದೇ ಪ್ರೀತಿ ಪ್ರೇಮ ಹಾಗು ಬಾಯ್ ಫ್ರೆಂಡ್ ಗಳೆಂಬ ನಂಟಿರಲಿಲ್ಲ. ರೂಪಳ ಪೋಷಕರಿಗೆ ಆಕೆ ಇಪ್ಪತೈದಾದಂತೆಯೇ ಮದುವೆಯ ಶಾಸ್ತ್ರವನ್ನು ಮಾಡಿ ಮುಗಿಸಬೇಕಂಬ ಚಿಂತೆ ಕಾಡತೊಡಗಿತ್ತು. ಕಳೆದ ಕೆಲ ವರ್ಷಗಳಿಂದ ಆಕೆಯನ್ನು ಕಾಡಿ-ಬೇಡಿ ಕೊನೆಗೆ 'ನೀವ್ ಯಾರನ್ನು ಹೇಳಿದ್ರು ನಾನ್ ಮದುವೆ ಆಗ್ತೀನಿ. ಆದ್ರೆ ಒಂದೇ ಕಂಡೀಶನ್, ಆತನಿಗೆ ಕುಡಿಯುವ ಚಟ ಮಾತ್ರ ಇರಬಾರದು' ಎಂದು ಆಕೆಯಿಂದ ಹೇಳಿಸಿಯೂ ಆಗಿದೆ.

ಪ್ರಸ್ತುತ ಕಾಲದಲ್ಲಿ ಇಂಟೆರ್ನೆಟ್ಟೇ ಎಲ್ಲ ಆಗಿರುವಾಗ ಇಂತಹ ಹುಡುಗನನ್ನು ಹುಡುಕಿಕೊಂಡು ಹೋಗುವುದು ಎಲ್ಲಿಗೆ. ರೂಪಾಳ ತಂದೆ ಉಪಾಯವೊಂದನ್ನು ಮಾಡಿ ಮ್ಯಾರೇಜ್ ಸೈಟಿನಲ್ಲಿ ತಮ್ಮ ಮಗಳ ಅಕೌಂಟ್ ಒಂದನ್ನು ತೆರೆದರು. ಅಲ್ಲಿ ಈಕೆಯ ಒಂದೇ ಕಂಡೀಶನ್ ಅನ್ನು ಸೇರಿಸಿ, ಒಂದೆರೆಡು ಫೋಟೋವನ್ನೂ ಅಪ್ಲೋಡ್ ಮಾಡಿದ್ದರು. ಇದಾದ ನಂತರ ಕೆಲದಿನಗಳ ಕಾಲ ತನ್ನ ಮಗಳಿಗೆ ಸರಿಹೊಂದುವ, ಅತಿ ಸುಂದರನೂ ಅಲ್ಲದ ಅತಿ ಕುರೂಪಿಯೂ ಎಂದನಿಸದ ಹುಡುಗನೊಬ್ಬನನ್ನು ಹುಡುಕತೊಡಗಿದರು. ಅದೆಷ್ಟೇ ಹುಡುಕಿದರೂ, ಅದೆಂತಹದ್ದೇ ಮೆಸೇಜ್ ಗಳನ್ನು ಹರಿಬಿಟ್ಟರೂ ಅತ್ತ ಕಡೆಯಿಂದ ಪ್ರತ್ಯುತ್ತರ ಮಾತ್ರ ಬರುತ್ತಿರಲಿಲ್ಲ. ಇಂತಹ ಗುಣವಂತ ಹುಡುಗಿಗೆ ಒಬ್ಬ ವರನೂ ಸಿಗಲಾರನೇ? ಬಣ್ಣ ಕೊಂಚ ಕಪ್ಪಾದ ಮಾತ್ರಕ್ಕೆ ಗುಣನಡತೆಗೆ ಬೆಲೆಯೇ ಇಲ್ಲವೇ? ಅಪ್ಪ ತಮ್ಮ ನೋವನ್ನು ಒಳಗೇ ಬಚ್ಚಿಟ್ಟು ರೋಧಿಸುತ್ತಿದ್ದರು. ರೂಪಾಳಿಗೆ ಅದರ ಬಗ್ಗೆ ಏನನ್ನು ಹೇಳುತ್ತಿರಲಿಲ್ಲ. ಒಂದು ಪಕ್ಷ ಹೇಳಿದ್ದರೂ ಆಕೆ ಇಂತಹ ಸಣ್ಣ ಪುಟ್ಟ ವಿಚಾರಗಳಿಗೆಲ್ಲ ಚಿಂತಿಸುತ್ತಿರಲಿಲ್ಲವೆಂಬುದು ಅವರಿಗೂ ತಿಳಿದಿತ್ತು. ಆದರೆ ತಂದೆಯ ಹೃದಯ, ಕೇಳಬೇಕಲ್ಲ. ತನ್ನ ಒಬ್ಬಳೇ ಮಗಳನ್ನು ಯಾರಾದರೂ ರಿಜೆಕ್ಟ್ ಮಾಡಿದರೆ ಅಥವಾ ಒಪ್ಪಿಕೊಳ್ಳದಿದ್ದರೆ ಅದು ಅವರ ಎದೆಗೇ ಭಲವಾದ ಗುದ್ದನ್ನು ನೀಡಿದಂತಾಗುತ್ತಿತ್ತು.

.

.


'ಸರ್, ನೀವು ಮಾನಸ್ ಅಲ್ವ?' ಎನುತ ತಾನು ಕೂತಿದ್ದ ಟೇಬಲ್ಲಿನ ಮುಂದೆ ಬಂದು ಕೂತರು, ಸುಮಾರು ಅರ್ವತ್ತು ವರ್ಷದ ಅವಳ ತಂದೆ. ತಪ್ಪು ಮಾಡಿರುವ ಅಮಾಯಕನ ನಗುವನ್ನು ಬೀರುತ್ತಾ ಕೂತ ಅವರನ್ನು ನೋಡಿ 'ಅಂಕಲ್, ಪ್ಲೀಸ್. ನನ್ನನ್ನ ಮಾನಸ್ ಅಂತಾನೆ ಕರೀರಿ.' ಎನುತ, ಅವರ ಮೇಲಿನ ಕೋಪ ಇನ್ನೂ ಆರಿರದಿದ್ದರೂ ಕುಡಿಯಲು ಏನಾದರು ಬೇಕೆಂದು ಕೇಳುತ್ತಾನೆ. ಏನೂ ಬೇಡೆಂದು ನಿರಾಕರಿಸಿದ ಅವರು ತುಸು ಮೊದಲು ಹೊರಟುಹೋದ ರೂಪಾಳ ಪರವಾಗಿ ಮಾನಸ್ನ ಕೈಗಳೆರಡನ್ನು ಬಿಗಿಯಾಗಿ ಹಿಡಿದುಕೊಂಡು 'ನನ್ನನ್ನು ಕ್ಷಮಿಸಿ…' ಎನುತ ಸಣ್ಣದಾಗಿ ಅಳತೊಡಗುತ್ತಾರೆ! ಅವರ ಕೈಗಳ ಕಂಪನ ಮಾನಸ್ನ ಅರಿವಿಗೆ ಸ್ಪಷ್ಟವಾಗಿ ಬರುತ್ತಿರುತ್ತದೆ. ಕೂಡಲೇ ಎದ್ದು ನಿಂತ ಮಾನಸ್ ಅವರನ್ನು ಸಮಾಧಾನಪಡಿಸುತ್ತಾ, 'ಅಂಕಲ್, ಈಗ ಏನಾಯಿತು ಅಂತ ನೀವ್ ಅಳ್ತಾ ಇದ್ದೀರಾ? ನನ್ಗೆ ಏನೊಂದು ಇಲ್ಲಿ ಅರ್ಥ ಆಗ್ತಿಲ್ಲ. ಪ್ಲೀಸ್ ಅಳ್ಬೇಡಿ' ಎನ್ನುತ್ತಾನೆ.

‘ಹುಟ್ಟಿ ಬೆಳೆಸಿದ ತಂದೆ ಕಾಣಪ್ಪಾ. ದೇವ್ರು ನನ್ನ್ ಮಗಳಿಗೆ ಎಲ್ಲವನ್ನೂ ಕೊಟ್ಟ, ಅಂದ ಅನ್ನೋ ಒಂದು ಕಳಶವನ್ನು ಬಿಟ್ಟು! ಆದರೆ ನನ್ನ್ ಮಗಳು ಯಾವುದೇ ರೀತಿಯಲ್ಲೂ ಅಸುಂದರೆಯಲ್ಲ. ಆಕೆಯ ಪ್ರತಿಯೊಂದು ಗುಣನಡತೆಯೂ ಅಪ್ಪಟ ಚಿನ್ನ ಕಾಣಪ್ಪಾ. ಆದರೆ ಈ ಸ್ವಾರ್ಥಿ ಜಗತ್ತಿಗೆ ಅದು ಅರಿವಿಗೆ ಬರುತ್ತಿಲ್ಲವಷ್ಟೇ’. ಮ್ಯಾರೇಜ್ ಸೈಟಿನಲ್ಲಿ ಅವಳ ಪರವಾಗಿ ನಾನೇ ಪ್ರೊಫೈಲ್ ಅನ್ನು ತೆರೆದಿದ್ದು ಎನ್ನುತ್ತಾರೆ.ಅದೆಷ್ಟೋ ದಿನಗಳ ನಂತರ ಆಕೆಯ ಪ್ರೊಫೈಲಿಗೆ ಯಾವುದೇ ಪ್ರತಿಕ್ರಿಯೆಯೂ ಬಾರದಿದ್ದಾಗ ಇವರು ಆಕೆಯ ಫೋಟೋಗಳನ್ನು ಎಡಿಟ್ ಮಾಡಿ ಕೃತಕ ಫಿಲ್ಟರ್ಗಳನ್ನು ಬಳಸಿ, ಒಬ್ಬ ವಿಭಿನ್ನ ಹುಡುಗಿಯೋ ಎಂಬುವಂತೆ ಕಾಣಿಸಿ ಬಂದ ಫೋಟೋವನ್ನು ಅಪ್ಲೋಡ್ ಮಾಡಿರುತ್ತಾರೆ. ಹಾಗು ತೀರಾ ಸಾಮನ್ಯವಾಗಿ ಕಾಣುತಿದ್ದ ಮಾನಸನ ಪ್ರೊಫೈಲ್ ಒಂದಕ್ಕೆ ಒಂದೆರಡು ಮೆಸೇಜ್ಗಳನ್ನು ಕಳಿಸಿ ಸುಮ್ಮನಾಗಿರುತ್ತಾರೆ.

'ಆದರೆ ನೀವೂ ಕೂಡ ಆ ಫೋಟೋದಲ್ಲೇ ಒಂತರ ಇದ್ದೀರಾ, ಇಲ್ಲಿ ಬೇರೇನೇ ಕಾಣ್ತಿರಲ್ಲ' ಎಂದ ಅವರ ಪ್ರೆಶ್ನೆಗೆ ಮಾನಸ್,

'ಅಂಕಲ್, ಅದು ನನ್ನ ಕಾಲೇಜು ದಿನಗಳ ಫೋಟೋ. ಹುಡುಗಾಟಿಕೆಯೂ ಮತ್ತೊಂದೋ ಒಂದು ಪ್ರೊಫೈಲ್ ಅನ್ನು ಕ್ರಿಯೇಟ್ ಮಾಡಿ ಅದ್ವಾನ ಮಾಡಿಕೊಂಡುಬಿಟ್ಟೆ. ಹಾಗೆಯೆ ಇದ್ದ ಆ ಪ್ರೊಫೈಲ್ ನಲ್ಲಿ ಆಗೊಮ್ಮೆ ಈಗೊಮ್ಮೆ ಮೆಸೇಜ್ಗಳು ಬರುತ್ತಿದ್ದರೂ ಏಕೋ ನಿಮ್ಮ ಮಗಳ ಪ್ರೊಫೈಲ್ ಇಷ್ಟವಾಯಿತು ' ಎಂದು ಸುಮ್ಮನಾಗುತ್ತಾನೆ.

ತನ್ನ ಮಗಳನ್ನು ಸುಂದರವಾಗಿ ಕಾಣಲು ಆಕೆಯ ಕನ್ನಡಕ ರಹಿತ ಫೋಟೋವೊಂದನ್ನು ಎಡಿಟ್ ಮಾಡಿ ಅಪ್ಲೋಡ್ ಮಾಡಿರುತ್ತಾರೆ ರೂಪಾಳ ತಂದೆ. ಆ ಫೋಟೋಗಳನ್ನು ನೋಡಿ ಅದೇನೋ ಒಂದು ಬಗೆಯ ಆಕರ್ಷಣೆ ಮಾನಸ್ನಿಗೆ ಅವಳ ಮೇಲೆ ಮೂಡಿರುತ್ತದೆ. ಅವರ ಮೆಸ್ಸೇಜಿಗೆ ಖುದ್ದು ಹುಡುಗಿಯೇ ಕೇಳಿಕೊಳ್ಳುತ್ತಿರುವಳು ಎಂದುಕೊಂಡು ತಿಳಿಸಿದ ಕಫೆ ಡೇ ಗೆ ಬಂದು, ಇಬ್ಬರಿಗೂ ಒಬ್ಬರನೊಬ್ಬರು ಗುರುತು ಹಿಡಿಯದಂತಾಗಿ ರೂಪ ಅಲ್ಲಿಂದ ಹೋದ ನಂತರ ಮಾನಸ್ ಅಲ್ಲೇ ಕೂತಿರುತ್ತಾನೆ.

ಅಷ್ಟರಲ್ಲಾಗಲೇ ರೂಪಾಳ ತಂದೆಯ ಕಣ್ಣೇರು ಒಣಗಿ ಕೆನ್ನೆಗಳ ಮೇಲೆ ತಮ್ಮ ಅಚ್ಚನ್ನು ಮೂಡಿಸಿದ್ದವು. ಮಾನಸ್ನಿಗೆ ಮುಂದೇನೂ ಹೇಳಲು ಪದಗಳೇ ತೋಚುವುದಿಲ್ಲ. 'ಸರಿ ಬಿಡಪ್ಪ.. ಅವ್ರ್ ಅವ್ರ ಹಣೇಲಿ ಏನೇನ್ ಬರ್ದಿರುತ್ತೋ ಅದ್ ಹಾಗೆ ಆಗುತ್ತೆ. ಆಲ್ ದ ಬೆಸ್ಟ್ ಫಾರ್ ಯುವರ್ ಫ್ಯೂಚರ್' ಎಂದು ಅವರು ಅಲ್ಲಿಂದ ಬೀಳ್ಗೊಂಡರು.

ಆ ದಿನದಿಂದ ಅದೇನೋ ಒಂದು ಬಗೆಯ ಹತಾಶೆ ಮಾನಸನನ್ನು ಆವರಿಸುತ್ತದೆ. ತನ್ನ ನೀಳ ಕೂದಲು, ಟ್ರಿಮ್ ಮಾಡದ ಗಡ್ಡ, ಬೀಯರ್ ಹಾಗು ಸಿಗರೇಟುಗಳಿಗೆ ಕಾರಣವಾಗಿದ್ದ ಕಹಿಘಟನೆಗಳು ಇನ್ನೂ ಮನಸ್ಸಿಂದ ಮಾಸುವ ಮುನ್ನವೇ ಮತ್ತೊಂದು ವಿಪರೀತವಾದಂತಹ ನೋವು ಅವರಿಸತೊಡಗುತ್ತದೆ. ಕಣ್ಣೇರಿರದೆ ಅಳುತ್ತಿದ್ದ ಆತನ ಕಣ್ಣುಗಳು ಇಂದು ತುಂಬಿ ಬಂದಿವೆ. ಹಳೆಯ ನೋವುಗಳಿಗೆ ಯಾರೋ ಬೆಂಕಿ ಗೀರಿ ಹಚ್ಚಿದಂತಾಗಿತ್ತು. ತಾನು ಹಾಗು ತನ್ನ ಜೀವನ ಎಂದುಕೊಂಡಿದ್ದವನಿಗೆ ಆ ಒಂದು ಕ್ಷಣಮಾತ್ರದ ಭೇಟಿ ಈ ಬಗೆಯ ನೋವನ್ನು ತರುತ್ತದೆ ಎಂದುಕೊಂಡಿರಲಿಲ್ಲ. ಚಲುವೆನ್ನೆ ನಾಚಿಸುವ ಅವಳ ನಡತೆ, ಅಸಹಾಯಕ ಅಪ್ಪ, ಅವರ ಕಣ್ಣೀರು.. ಪದೇ ಪದೇ ಆತನನ್ನು ಕಾಡತೊಡಗಿದವು.

ಭಾರಿಸುತ್ತಿದ್ದ ಡ್ರಮ್ ಗಳ ಸದ್ದು ಕೇಳುಗರಿಗೆ ನಡುಕವನ್ನುಂಟುಮಾಡುತ್ತಿರುತ್ತವೆ. ಬದಲಾವಣೆ ಬೇಕೆಂದು ಅವುಗಳು ಚೀರುತ್ತಿರುತ್ತವೆ.

ಹೆಳೆಯ ದಿನಗಳ ಮಾನಸ್ ಪುನ್ಹ ಹುಟ್ಟತೊಡಗುತ್ತಾನೆ. ಜಗತ್ತನೇ ಗೆಲ್ಲುವ ಮಹತ್ವಕಾಂಕ್ಷೆಯ, ಸಂಗೀತ ಲೋಕದಲ್ಲಿ ದಿಗ್ಗಜನಾಗುವ ಆ ಎಳೆಯ ಪೋರ ಡ್ರಮ್ ಭಿಟ್ಸ್ಗಳ ಸದ್ದಿನಲ್ಲಿ ಕಾಣೆಯಾಗಿಹೋದದ್ದೇ ತಿಳಿದಿರುವುದಿಲ್ಲ. ಕೆಲದಿನಗಲ್ಲೇ ನೀಳ ಕೂದಲಿಗೆ, ಕುರುಚಲು ಗಡ್ಡಕ್ಕೆ ಕತ್ತರಿಯನ್ನು ಹಾಕಿ ತನ್ನ ನೆಚ್ಚಿನ ಸಿತಾರ್ ಅನ್ನು ಹೊರತೆಗೆದ. ವರ್ಷಗಳ ಧೂಳು ಹಿಡಿದು ಜಡಗಟ್ಟಿ ಹೋದರೂ ಅದರ ತಂತಿಗಳನ್ನು ಮೀಟಿದಾಗ ಮೂಡುತ್ತಿದ್ದ ಸ್ವರಗಳು ಅದೇ ಆನಂದಭಾಷ್ಪವನ್ನು ಆತನಲ್ಲಿ ಮೂಡಿಸುತ್ತಿದ್ದವು. ಸಂಗೀತದ ತಾಲೀಮು ಮಗದೊಮ್ಮೆ ಆರಂಭವಾಯಿತು. ದಿನ ಬೆಳಗ್ಗೆ ಹಾಗು ಸಂಜೆ ಸರಸ್ವತಿ ಪಠಕ್ಕೆ ಪೂಜಿಸಿ ಸೀತಾರನ್ನು ನುಡಿಸತೊಡಗಿದ. ಮಂದಹಾಸ ಆತನ ಮುಖದಲ್ಲಿ ಮನೆಮಾಡಿತು. ಆ ಮಂದಹಾಸದ ಹಿಂದಿದ್ದ ಚಹರೆಯೇ ಕೆಲತಿಂಗಳ ಹಿಂದೆ ಕ್ಷಣಮಾತ್ರಕ್ಕೆ ಸಿಕ್ಕಿ ಮರೆಯಾದ ರೂಪ. ಮೇಲು-ಕೀಳು, ಭೇದಭಾವ, ಅಂದ-ಚಂದಳಿಗೆ ಒಂದಿಷ್ಟು ಜಾಗವಿರದ ಆಕೆಯ ಚಹರೆ ಮಾನಸನಿಗೆ ಕೆಲವೇ ಕ್ಷಣಗಳಾದರೂ ಜೀವನಕ್ಕಾಗುವಷ್ಟು ಕಲಿಕೆಯನ್ನು ಕಳಿಸಿದವು. ಆ ಗುಂಗಿನಲ್ಲೇ ಆತ ಮುಂದುವರೆದ.

ಅಂದಿನಿಂದ ಅದೆಷ್ಟೋ ಬಾರಿ ರೂಪಾಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಆತನಿಗೆ ಅದು ಸಾಧ್ಯವಾಗಲೇ ಇಲ್ಲ. ಯಾವುದೇ ಸಾಮಾಜಿಕ ಮಾಧ್ಯಮಗಳಲ್ಲೂ ಆಕೆಯ ಸುಳಿವು ಸಿಗಲಿಲ್ಲ. ಅಪ್ಪ ಮಗಳ ನಂಬರುಗಳೆರಡೂ ಸ್ವಿಚ್ ಆಫ್ ಬರುತ್ತಿದ್ದವು. ಆದರೆ ಆತನ ಅರಸುವಿಕೆ ಮಾತ್ರ ನಿಲ್ಲಲಿಲ್ಲ. ಇತ್ತೀಚಿಗೆ ಸಂಗೀತ ಕಚೇರಿಗಳನ್ನು ನೆಡೆಸಿಕೊಡಲು ಆತನಿಗೆ ಆಮಂತ್ರಣಗಳು ಬರತೊಡಗಿದವು. ಹೊಡದೆಯಲ್ಲ ಜನಸ್ತೋಮದಲ್ಲಿ ಆಕೆಯ ಚಹರೆಯನ್ನೇ ಆತ ಹುಡುಕುತ್ತಾನೆ. ಮೇಕಪ್ಪು ಬಳಿದು ಪಳಪಳ ಹೊಳೆಯುವ ಮುಖಗಳ ನಡುವೆ ಆ ಮುಗ್ದ ಮಧುರ ಚಹರೆ ಅದೆಷ್ಟೇ ಹುಡುಕಿದರೂ ಕಾಣುವುದಿಲ್ಲ. ಇತ್ತ ಕಡೆ ರೂಪಾಳೂ ಅಂದಿನಿಂದ ತನಗೆ ಹುಡುಗರನ್ನು ಹುಡುಕುವುದು ಬಿಡಬೇಕೆಂದೂ, ತಾನು ಇನ್ನೂ ಹೆಚ್ಚಿನ ಓದನ್ನು ಮಾಡುತ್ತಿರುವೆನೆಂದು ಅಪ್ಪನಿಗೆ ತಿಳಿಸುತ್ತಾಳೆ. ಮೊದಲ ಭಾರಿಗೆ ಹುಡುಗನೊಬ್ಬ ಇಷ್ಟವಾಗಿ ಸಿಗಲು ಹೋದರೆ ಆತ ಮೊಬೈಲನ್ನು ಸ್ವಿಚ್ ಆಫ್ ಮಾಡಿ ಬಾರಲೇ ಇಲ್ಲವೆಂದು ಕುಪಿಸಿಕೊಂಡು ಹುಡುಗರ ಮೇಲೆಯೇ ಒಂದು ಬಗೆಯ ಆಲಸ್ಯ ಅವಳಲ್ಲಿ ಮೂಡಿರುತ್ತದೆ.ಎಲ್ಲೆಂದರಲ್ಲಿ ಹರಿಬಿಟ್ಟಿದ್ದ ತನ್ನ ಹಾಗು ಅಪ್ಪನ ನಂಬರುಗಳೆರಡನ್ನೂ ಆಕೆ ಬದಲಿಸುತ್ತಾಳೆ.

ದಿನಗಳು ಕಳೆದವು...

ಅಂದು ತನ್ನ ಕಾಲೇಜಿನ ವಾರ್ಷಿಕೋತ್ಸವಕ್ಕೆ ಹಿಂದೂಸ್ತಾನಿ ಸಂಗೀತ ಕಚೇರಿಯನ್ನು ನೆಡೆಸುತ್ತಾರೆ ಎಂದು ತಿಳಿದು ರೂಪ ಎಲ್ಲರಿಗಿಂತ ಮೊದಲೇ ಆಡಿಟೋರಿಯಂನಲ್ಲಿ ಆಸೀನಳಾಗುತ್ತಾರೆ. ಸಂಗೀತದ ವ್ಯಾಕರಣ ಆಕೆಗೆ ಬಲ್ಲದು, ಆದರೆ ಸಂಗೀತವೆಂಬುದು ಭಾವಪದಗಳ ಸುಂದರ ಭಾಷೆ ಎಂಬುದು ಆಕೆಯ ಅಭಿಮತ. ಸಂಜೆ ಸರಿಯಾಗಿ ಏಳಕ್ಕೆ ಶುರುವಾದ ಸಂಗೀತ ಕಚೇರಿಗೆ ಹೇಳಿಕೊಳ್ಳುವ ಮಟ್ಟಿನ ಪ್ರೇಕ್ಷಕರೇನೂ ಸೇರಿರಲಿಲ್ಲ. ಕೊಳಲು ಹಾಗು ತಬಲದ ಜುಗಲ್ಬಂಧಿಯ ನಂತರ ಸೀತಾರ್ ವಾದಕ ಶ್ರೀಯುತ ಮಾನಸ್ ಎಂದು ಸಂಭೋದಿಸುತ್ತಾ ಆಹ್ವಾನಿಸಿದ ನಿರೂಪಕಿಯ ಮಾತನ್ನು ಕೇಳಿ ರೂಪಾಳ ಎದೆ ಒಮ್ಮೆಲೇ ಜಲ್ ಎನಿಸುತ್ತದೆ. ಮಾನಸ್ ಸ್ಟೇಜಿನ ಮೇಲೆ ಬಂದು ನೆರೆದವರಿಗೆಲ್ಲ ವಂದಿಸಿ ತನ್ನ ಸೀತಾರನ್ನು ನುಡಿಸತೊಡಗಿದಾಗ ಗುಸುಗುಸುಗುಡುತ್ತಿದ್ದ ಜನಸ್ತೋಮ ಕಲ್ಲಿನಂತೆ ಸ್ತಬ್ದವಾಗಿಬಿಡುತ್ತದೆ. ಆ ರಾಗಗಳ ಆಳೇತ್ತರ ಎಂತವರನ್ನೂ ಸಂಗೀತದ ಸುಧೆಯಲ್ಲಿ ತೇಲಾಡಿಸಿಬಿಡುವಂತಿತ್ತು. ಈತ ಇಷ್ಟು ಮಹಾನ್ ಕಲಾವಿದನಾಗಿರುವುದಕ್ಕೆ ಅಂದು ನನ್ನಂತ ಸಾಧಾರಣ ಹುಡುಗಿಯನ್ನು ಆತ ಭೇಟಿಯಾಗಲು ನಿರಾಕರಿಸಿದ್ದು. ಅವನೆಲ್ಲಿ, ನಾನೆಲ್ಲಿ?! ಆತ ಅಂದು ನನನ್ನು ಭೇಟಿಯಾಗದಿದ್ದದ್ದೇ ಒಳ್ಳೆಯದಾಯಿತು ಎಂಬ ಕೀಳರಿಮೆ ಆತನ ಸಂಗೀತವನ್ನು ಕೇಳಿ ರೂಪಾಳಲ್ಲಿ ಮೂಡುತ್ತದೆ. ಆ ಅದ್ಭುತ ಸಂಗೀತಕ್ಕೆ ಅಲ್ಲಿ ಮನಸೋತ ಪ್ರೇಕ್ಷಕರಿರಲಿಲ್ಲ. ಸಂಗೀತ ಬಲ್ಲವರು, ಬಾರದವರು ಎಲ್ಲರು ಗಮನವಿಟ್ಟು ಸಂಗೀತವನ್ನು ಕೇಳುತ್ತಿರಬೇಕಾದರೆ ರೂಪ ಮಾತ್ರ ಎದ್ದು ಸ್ಟೇಜಿನ ಮುಂದೆಯೇ ಹಾದು ಹೊರನೆಡುತ್ತಾಳೆ.

ಕಳೆದ ಒಂದು ವರ್ಷದಿಂದ ಹೊಡದೆಯಲ್ಲ ಹುಡುಕುತ್ತಿದ್ದ ಆ ಒಂದು ಚಹರೆ ಸಿಗದೆ ಮಾನಸನ ಮನಸ್ಸು ದುಃಖ ತುಂಬಿದ ಕಟ್ಟೆಯಂತಾಗಿದ್ದಿತು. ಅದೇನೋ ಈ ಬಾರಿ ಆತನಿಗೆ ತಡೆಯಲಾಗಲಿಲ್ಲ. ಸಂಗೀತದ ಸಾಗರದಲ್ಲಿ ಮುಳುಗಿದ್ದ ಆತನ ಕಣ್ಣುಗಳಿಂದ ಗಳಗಳನೆ ಅಶ್ರುಧಾರೆಗಳು ಮೂಡತೊಡಗಿದವು. ಆದರೆ ಸ್ವರಾಲಾಪನೆ ಮಾತ್ರ ಎಲ್ಲಿಯೂ ತಪ್ಪಲಿಲ್ಲ. ಅತ್ತು ಮಂಜುಗಟ್ಟಿದ್ದ ಕಣ್ಣುಗಳಿಗೆ ತನ್ನ ಎದುರಿಗೆ ಹಾದುಹೊದ 'ಆ' ಚಹರೆ ಕಾಣದಾಯಿತು. ಸಂಗೀತದ ಆಲಾಪ ಮುಗಿಲುಮುಟ್ಟಿತು.....