Monday, October 8, 2018

ಆಗಸಕ್ಕೆ ಏಣಿ ಹಾಕಿದ ನಾಯಕರಿವರು...

ರಿಚರ್ಡ್ ಬ್ರಾನ್ಸನ್ :
ಆತನ ವಯಸ್ಸು 16. ಬಾಲ್ಯವೆಲ್ಲ ಡಿಸ್ಲೆಕ್ಸಿಯಾ ಸಮಸ್ಯೆಯಿಂದ ನರಳಿದ ಆತ ತನ್ನ ಜೀವನದ ಅತಿ ಮಹತ್ವದ ಘಟ್ಟದಲ್ಲಿ ನಿಂತಿದ್ದಾನೆ. ಓದಲು, ಕಲಿಯಲು ಮನಸ್ಸಿದ್ದರೂ ದೇಹ ಸಾಥ್ ನೀಡುತ್ತಿಲ್ಲ. ಹಿಂದಿಯ 'ತಾರೆ ಝಮೀನ್ ಪರ್' ಚಿತ್ರವನ್ನು ನೋಡಿದವರಿಗೆ ಈ ಸಮಸ್ಯೆಯ ಆಳ ಒಂದಿಷ್ಟು ಅರಿಯಬಹುದು. ಅಂದು ಆತನ ಶಾಲೆಯ ಕೊನೆ ದಿನ . ಓದಲು ಬರೆಯಲು ಆಗದು ಎಂದರಿತ ಪೋಷಕರು ಆತನನ್ನು ಶಾಲೆಯಿಂದ ತೆಗೆಯುವ ನಿರ್ಧಾರವನ್ನು ಮಾಡಿದ್ದಾರೆ. ಆ ಎಳೆಯ ಹುಡುಗ ತನ್ನ ಸ್ನೇಹಿತರಿಂದ, ಶಾಲೆಯಿಂದ ದೂರವಾಗುತ್ತಿದ್ದಾನೆ. ಶಿಕ್ಷಕರಲೊಬ್ಬರು ಈತ ಹೊರಡುವಾಗ 'ನೀನು ಮುಂದೆ ಒಂದೋ ಅಪರಾದಿಯಾಗಿ ಜೈಲಿನಲ್ಲಿ ಕೊಳೆಯುತ್ತೀಯ ಇಲ್ಲವಾದರೆ ಒಬ್ಬ ಕೋಟ್ಯಧಿಪತಿಯಾಗಿ ಬೆಳೆಯುತ್ತೀಯ' ಎಂದು ದ್ವಂದ್ವದ ಹಾರೈಕೆಯೊಂದನ್ನು ನೀಡಿ ಬೀಳ್ಕೊಟ್ಟರು. ಹೇಳಿದ ಮಾತಿನ ಅರ್ಥವನ್ನು ಅರಿಯುವುದು ಹಾಗಿರಲಿ ಕಡೆಯ ಪಕ್ಷ ದಿನನಿತ್ಯದ ಕೆಲಸಕಾರ್ಯಗಳನ್ನೂ ಸರಿಯಾಗಿ ಮಾಡಲಾಗದ ಹುಡುಗನೊಬ್ಬ ಆತನ ಶಿಕ್ಷಕನ ಮಾತಿನಂತೆ ಇಂದು ಏನಾಗಿರಬಹುದು? ಅದು ಶಿಕ್ಷಕನ ಕುಹಕ ನುಡಿಯೂ ಅಥವಾ ಪ್ರೋತ್ಸಾಹಭರಿತ ಮಾತೋ, ಆತ ಮಾತ್ರ ಇಂದು ಜಗತ್ತಿನಾದ್ಯಂತ ಇರುವ ಸುಮಾರು 400 ಕಂಪನಿಗಳ ಒಡೆಯ! ಹೆಸರು ರಿಚರ್ಡ್ ಬ್ರಾನ್ಸನ್. ವರ್ಜಿನ್ ಗ್ರೂಪ್ಸ್ ಎಂಬ ವಿಶ್ವದ ಪ್ರಖ್ಯಾತ ಸಂಘಟಿತ ಸಂಸ್ಥೆಯ ಮಾಲೀಕನಾದ ಈತ ಬೆಳೆದು ಬಂದ ಹಾದಿ ಯಾವ ಚಿತ್ರಕತೆಗೂ ಕಮ್ಮಿ ಇಲ್ಲ. ಮಧ್ಯಮವರ್ಗದ ಕುಟುಂಬದಲ್ಲಿ ಬೆಳೆದ ಈತನ ಪೋಷಕರು ಈತನೊಬ್ಬ ಸಹಜ ಮಾನವ ಜೀವಿಯಾದರೆ ಸಾಕೆಂದಷ್ಟೇ ಅರಸಿದರು. ಹೊರಜಗತ್ತಿಗೆ ಈತ ಒಬ್ಬ ವಿಕಲಚೇತನನಂತೆ ಕಂಡರೂ ಈತನ ಒಳಜಗತ್ತು ಜಗತ್ತನೇ ಗೆಲ್ಲುವ ತವಕದಲ್ಲಿತ್ತು. ಆದುದರಿಂದಲೇ ಏನೋ ಅಂದು ಶಾಲೆಯಿಂದ ಹೊರಬಂದ ಬ್ರಾನ್ಸನ್ 'ಸ್ಟೂಡೆಂಟ್' ಎಂಬ ಹೆಸರಿನ ಮ್ಯಾಗಜಿನ್ ಒಂದನ್ನು ತೆರೆದೇಬಿಟ್ಟ! ತನ್ನ ಕ್ರಿಯಾಶೀಲತೆಯನ್ನೆಲ್ಲ ಆ ಮ್ಯಾಗಜಿನ್ ನ ಮೇಲೆತ್ತುವಿಕೆಯಲ್ಲೇ ಹರಿಸಿ ನೋಡನೋಡುತ್ತಿದ್ದಂತೆಯೇ ತನ್ನ ಒಡೆತನದ ರೆಕಾರ್ಡಿಂಗ್ ಸ್ಟುಡಿಯೋ ಒಂದನ್ನು ಆತ ತೆರದ. ಅಲ್ಲಿಂದ ಮುಂದೆ ಈತನನ್ನು ಯಾರೊಬ್ಬರೂ ಸಹ ಹಿಡಿದು ನಿಲ್ಲಿಸಲಾಗಲಿಲ್ಲ, ಸ್ವತಃ ಆತನ ಡಿಸ್ಲೆಕ್ಸಿಯಾ ಸಮಸ್ಯೆ ಕೂಡ! ಇಂದು 5.1 ಬಿಲಿಯನ್ ಡಾಲರ್ ಸಂಪತ್ತಿನ ಒಡೆಯನಾಗಿರುವ ರಿಚರ್ಡ್ ಬ್ರಾನ್ಸನ್ ನ ‘ವರ್ಜಿನ್ ಮೀಡಿಯಾ’ , ‘ವರ್ಜಿನ್ ಹಾಲಿಡೇಸ್’, ‘ವರ್ಜಿನ್ ಮ್ಯೂಸಿಕ್’ , ‘ವರ್ಜಿನ್ ಗಲಾಟಿಕ್’ ಎಲ್ಲವೂ ವಿಶ್ವದಾದ್ಯಂತ ಚಿರಪರಿಚಿತವಾಗಿರುವ ಬ್ರಾಂಡ್ ಗಳು.

ಜೆಫ್ ಬೆಝೋಸ್ :

ಬಿಲ್ ಗೇಟ್ಸ್ ಹಾಗು ವಾರೆನ್ ಬಫೆಟ್ ರನ್ನು ಹಿಂದಕ್ಕೆ ಹಾಕಿದ ಈತ ಇಂದು ವಿಶ್ವದ ಅಗ್ರಮಾನ್ಯ ಶ್ರೀಮಂತರ ಪಟ್ಟಿಯಲ್ಲಿ ಮೊದಲಿಗ. ಹೆಚ್ಚು ಕಡಿಮೆ ಪ್ರಸ್ತುತ ಪ್ರತಿಯೊಬ್ಬರೂ ಕೇಳಿರುವ ಅಮೆಜಾನ್ ಎಂಬ ಧೈತ್ಯ ಸಂಸ್ಥೆಯ ಮಾಲೀಕನಾದ ಈತ ಮೂವತ್ತು ವರ್ಷಗಳ ಹಿಂದೆ ನಮ್ಮ ನಿಮ್ಮಂತೆಯೇ ಬೆಳಗಿನಿಂದ ಸಂಜೆಯವರೆಗೆ ದುಡಿಯುವ ಒಬ್ಬ ಸಾಧಾರಣ ನೌಕರ. ಆದರೆ ತನ್ನ ಮೂರನೇ ವಯಸ್ಸಿಗೆ ಸ್ಕ್ರೂ ಡ್ರೈವರ್ ಒಂದನ್ನು ಹಿಡಿದು ತನ್ನನ್ನು ಕಟ್ಟಿ ಹಾಕುತಿದ್ದ ತೊಟ್ಟಿಲನ್ನೇ ಬಿಚ್ಚಲು ಹೊರಟಿದ್ದ ಮಗುವೊಂದು ಹೀಗೆ ಜೀವನವಿಡೀ ಖಾಸಗಿ ಕಂಪನಿಗಳಿಗೆ ದುಡಿಯುವ ಸಂಭವ ತೀರಾ ಕಡಿಮೆ. ಅಂತೆಯೇ ಕೆಲವರ್ಷಗಳ ಕಾಲ ಖಾಸಗಿ ಕಂಪನಿಗಳಿಗೆ ದುಡಿದ ಜೆಫ್ 1994 ರಲ್ಲಿ ಅಮೆಜಾನ್ ಎಂಬ ಆನ್ಲೈನ್ ಪುಸ್ತಕ ಮಳಿಗೆಯನ್ನು ತೆರೆದ. ಅದು ಇಂಟರ್ನೆಟ್ ಎಂಬ ಹೆಮ್ಮರ ಚಿಗುರೊಡೆಯುತ್ತಿದ್ದ ಕಾಲ. ಅದರ ಮುನ್ಸೂಚನೆ ಜೆಫ್ ನ ಬಡಿದೆಬ್ಬಿಸಲು ಹೆಚ್ಚು ಸಮಯ ಹಿಡಿಯಲಿಲ್ಲ. ಪುಸ್ತಕಗಳೊಟ್ಟಿಗೆ ಮ್ಯೂಸಿಕ್ ವಿಡಿಯೋ ಗಳು ಹಾಗು ಇತರೆ ಗೃಹಪಯೋಗಿ ವಸ್ತುಗಳನ್ನೂ ಅಲ್ಲಿ ಮಾರಲು ಆತ ಶುರುವಿಟ್ಟನು. ಆದರೆ ಹಿಂದೆಂದೂ ಕಾಣದ ಹೊಸ ಮಾದರಿಯ ವಹಿವಾಟನ್ನು ಗಮನಿಸಿ ಹಲವರು ಈತನಿಗೆ ಹೆಚ್ಚರಿಸಿದ್ದೂ ಉಂಟು. ಆದರೆ ಗುರಿ ಸ್ಪಷ್ಟವಾಗಿದ್ದು ನಮ್ಮ ಪ್ರಯತ್ನವೂ ಅದಕ್ಕೆ ಪೂರಕವಾಗಿದ್ದರೆ ಹೆದರುವ ಮಾತೆಲ್ಲಿಂದ? ಜೆಫ್ ತನ್ನ ವೇಗವನ್ನು ಹೆಚ್ಚಿಸಿದ. ನೋಡ ನೋಡುತ್ತಲೇ ಅಮೆಜಾನ್ ಮನೆ-ಮನೆಯ ಮಾತಾಯಿತು. ಜೆಫ್ನ ಸಾಧನೆ ನೆಟ್ಟಿನಲ್ಲಿ ಹರಿದಾಡತೊಡಗಿತು. Souq.com, ಗುಡ್ ರೀಡ್ಸ್, IMDb, ಶತಮಾನಗಳ ಇತಿಹಾಸ ವಿರುವ ‘ದಿ ವಾಷಿಂಗ್ ಟನ್ ಟೈಮ್ಸ್ ಪತ್ರಿಕೆ’ ,ಬ್ಲೂ ಆರಿಜಿನ್ ಎಂಬ ಒಟ್ಟು ಹದಿನಾಲ್ಕು ಕಂಪನಿಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡು ಮುನ್ನೆಡೆದ ಈತ ಇಂದು ಒಟ್ಟು 112 ಬಿಲಿಯನ್ ಡಾಲರ್ ಗಳ ಒಡೆಯ!

ಎಲಾನ್ ಮಸ್ಕ್ :
ಈತನಿಗೆ ಕಂಪ್ಯೂಟರ್ ಪ್ರೋಗ್ರಾಮಿಂಗ್ ನ ಹುಚ್ಚು ಅದೆಷ್ಟಿತ್ತೆಂದರೆ ತನ್ನ ಹತ್ತನೇ ವಯಸ್ಸಿಗೇ ಯಾವುದೇ ಶಾಲಾ ಕಾಲೇಜುಗಳ ತರಗತಿಗಳ ಅವಶ್ಯಕೆತೆ ಇಲ್ಲದೆಯೇ, ಮನೆಯಲ್ಲಿದ್ದ ಪುಸ್ತಕಗಳ ಓದಿನಿಂದಲೇ ವಿಡಿಯೋ ಗೇಮಿನ ಪ್ರೋಗ್ರಾಮ್ ಒಂದನ್ನು ಬರೆಯುತ್ತಾನೆ. ಅದು ಯಶಸ್ವಿಯೂ ಆಗುತ್ತದೆ. ನಂತರ ಆ ಗೇಮನ್ನು ಕೆಲವೇ ನೂರು ಡಾಲರ್ಗೆ ಕಂಪನಿಯೊಂದಕ್ಕೆ ಆತ ಮಾರಿಯೂ ಬಿಡುತ್ತಾನೆ! ಬಹುಷಃ ಈ ಒಂದು ವಹಿವಾಟೇ ಆತನಿಗೆ ಹೊಸತೊಂದನ್ನು ಹುಟ್ಟುಹಾಕಿ, ಬೆಳೆಸಿ ಅದನ್ನು ಮಾರಿ ಮಗದೊಂದು ಸಾಹಸಕ್ಕೆ ಕೈಯಾಕುವ ಧೈರ್ಯವನ್ನು ಅಂದು ಬೆಳೆಸಿರಬೇಕು. ಬ್ಯುಸಿನೆಸ್ ವಲಯದ ಐರನ್ ಮ್ಯಾನ್ ಎಂದೇ ಪ್ರಖ್ಯಾತಿ ಹೊಂದಿರುವ ಇಲಾನ್ ಮಸ್ಕ್ ಮುಂದೆ ಬೆಳೆದ ಹಾದಿ ಆತನ ಈ ನೆಡೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಸಾಕಷ್ಟು ಏಳುಬೀಳುಗಳ ನಂತರ 1995 ರಲ್ಲಿ Jip-2 ಎಂಬ ಆನ್ಲೈನ್ ಸಿಟಿ ಗೈಡ್ ವೆಬ್ಸೈಟ್ ಅನ್ನು ತೆರೆದ ಈತ ಕೆಲವೇ ವರ್ಷಗಳ ನಂತರ ಅದನ್ನು ಬೇರೊಂದು ಕಂಪನಿಗೆ ಮಾರಿ ಬರೋಬ್ಬರಿ 22 ಮಿಲಿಯನ್ ಡಾಲರ್ ಗಳನ್ನು ಗಳಿಸಿಕೊಳ್ಳುತ್ತಾನೆ. ದೊರೆತ ಹಣದಿಂದ X.com ಎಂಬ ಆನ್ಲೈನ್ ಬ್ಯಾಂಕಿಂಗ್ ಕಂಪನಿಯನ್ನು ತೆರೆದ ಈತ ಮುಂದೆ ಅದನ್ನು ‘ಕಾನ್ಫಿನಿಟಿ’ ಎಂಬ ಕಂಪೆನಿಯೊಟ್ಟಿಗೆ ವಿಲೀನಗೊಳಿಸಿ ಸ್ಥಾಪಿಸಿದ ಹೊಸ ಕಂಪನಿಯೇ ವಿಶ್ವವಿಖ್ಯಾತ 'Paypal.com'. ಮುಂದೆ Paypal ಅನ್ನು Ebay.com ಕಂಪನಿಗೆ 1.5 ಬಿಲಿಯನ್ ಡಾಲರ್ ಗೆ ಮಾರಿ ತನ್ನ ಷೇರಿನ ಮೊತ್ತ 165 ಮಿಲಿಯನ್ ಡಾಲರ್ ಗಳನ್ನು ಕಿಸೆಗೆ ಹಾಕಿಕೊಳ್ಳುತ್ತಾನೆ. ಬಂದ ಹಣದಿಂದ ಈತ ಸ್ಥಾಪಿಸಿದ ಮಗದೊಂದು ಕಂಪನಿ ಅಕ್ಷರ ಸಹ ಈತನ ಮೂರ್ಖ ನಡೆಯಂತೆ ಅಂದು ಎಲ್ಲರಿಗೂ ಭಾಸವಾಯಿತು. ಏಕೆಂದರೆ ಈತ ದೊರೆತ ಆ ದೊಡ್ಡ ಮೊತ್ತದ ಹಣವನ್ನು ಬಳಸಿಕೊಂಡಿದ್ದು ಅಂತರಿಕ್ಷ ವಾಹನಗಳ ಬಿಡಿಭಾಗಗಳ ನಿರ್ಮಾಣ ಹಾಗು ಬಾಹ್ಯಾಕಾಶಕ್ಕೆ ಚಲಿಸುವ ವಾಹನಗಳ ನಿರ್ಮಾಣದ SpaceX ಎಂಬ ಸಂಸ್ಥೆ! ಸರಿ ಆತನ ದುಡ್ಡು ಆತನ ಬುದ್ದಿ ಎಂದು ಸುಮ್ಮನಾದ ಈತನ ಹಿತೈಷಿಗಳಿಗೆ ಆತನ ಓಟದ ಗುರಿ ಇನ್ನೂ ತಿಳಿದಿರಲಿಲ್ಲ. ಮುಂದೆ ಟೆಸ್ಲಾ ಮೋಟಾರ್ಸ್ ಎಂಬ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವ ಕಂಪನಿ, ಸೋಲಾರ್ ಪ್ಯಾನೆಲ್ ಗಳನ್ನು ನಿರ್ಮಿಸುವ ಸೋಲಾರ್ ಸಿಟಿ ಎಂಬ ಕಂಪನಿ, OpenAI ಎಂಬ ಲಾಭರಹಿತ ಸಂಶೋಧನಾ ಸಂಸ್ಥೆಯನ್ನು ತೆರೆದು ಕೃತಕ ಬುದ್ದಿವಂತಿಕೆಗೆ ಉತ್ತೇಜನ, ಘಂಟೆಗೆ 2000 ಕಿಲೋಮೀಟರ್ ವೇಗವನ್ನು ತಲುಪುವ ಹೈಪರ್ ಲೂಪ್ ಎಂಬ ಸಾರಿಗೆ ವ್ಯವಸ್ಥೆಯನ್ನು ತನ್ನ ‘ದ ಬೋರಿಂಗ್’ ಕಂಪನಿಯ ಮೂಲಕ ಸಾಧಿಸಲು ಗುರಿಯನ್ನು ಹಾಕಿಕೊಂಡಿರುವ ಈತನದು ಇಂದು ಬೆಳೆಯುತ್ತಿರುವ ಹಲವು ಯುವ ಉದ್ಯಮಿಗಳಿಗೆ ಸ್ಪೂರ್ತಿದಾಯಕ ವ್ಯಕ್ತಿತ್ವ.

ಇಲ್ಲಿ ಏಕೆ ಈ ಮೂವರ ಬಗ್ಗೆ ಇಂದು ಚರ್ಚಿಸಲಾಗುತ್ತಿದೆ ಎಂಬ ಪ್ರೆಶ್ನೆಗೆ ಉತ್ತರ ಖಂಡಿತಾವಾಗಿಯೂ ಇದೆ. ಈ ಮೂವರ ಯೋಚನೆಯಲ್ಲೂ ಹಾಗು ಯೋಜನೆಯಲ್ಲೂ ಅತಿ ಕಾಮನ್ ಅಂಶ ಒಂದಿದೆ. ಅದೇ ಬಾಹ್ಯಾಕಾಶ. ಮಗುವೊಂದಕ್ಕೆ ತನ್ನ ಎಳೆತನದಲ್ಲಿ ಅಂತರಿಕ್ಷಕ್ಕೆ ಜಿಗಿಯುವ ಪ್ಲೈನು ರಾಕೆಟ್ಗಳನ್ನು ನೋಡಿ ನಾನೂ ಕೂಡ ಅಂತಹದೊಂದು ಸಾಧನೆಯನ್ನು ಮಾಡಬೇಕೆಂದು ಕನಸ್ಸು ಕಾಣುವುದು ತೀರಾ ಸಹಜವೇ.ಈ ತ್ರಿವಳಿಗಳೂ ಅಂತಹದ್ದೇ ಆದ ಕನಸ್ಸನ್ನು ತಮ್ಮ ಎಳೆಯ ವಯಸ್ಸಿನಲ್ಲಿ ಕಂಡಿದ್ದರು. ಸಮಯ ಹಾಗು ಸಂಧರ್ಭ ತಮ್ಮ ಕನಸ್ಸಿಗೆ ಪೂರಕವಾಗಿರಲಿಲ್ಲವಷ್ಟೇ. ಆದರೆ ಆ ಕನಸ್ಸು ಕಾಲದ ಗಾಲಿಯಲ್ಲಿ ಸವೆಯಲಿಲ್ಲ. ಅಳಿಸಲಿಲ್ಲ. ಒಳಗೊಳಗೇ ಅದು ಗಟ್ಟಿಗೊಂಡಿತ್ತು. ಎಂದು ಇವರುಗಳು ಯಶಸ್ಸಿನ ಉತ್ತುಂಗವನ್ನು ಹತ್ತಿದರೋ ಅಂದೇ ತಮ್ಮ ವಿಶಿಷ್ಟ ಕನಸ್ಸಿಗೆ ರೆಕ್ಕೆಯನ್ನು ಕಟ್ಟಲಾಂಬಿಸಿದರು. ರಿಚರ್ಡ್ ಬ್ರಾನ್ಸನ್ 2004 ರಲ್ಲಿ ವರ್ಜಿನ್ ಗಲಾಟಿಕ್ ಎಂಬ ಅಂತರಿಕ್ಷ ವಾಹನಗಳನ್ನು ತಯಾರಿಸುವ ಕಂಪನಿಯನ್ನು ಸ್ಥಾಪಿಸಿದ. ಎರಡು ಟೆಸ್ಟ್ ಫ್ಲೈಟ್ ಗಳನ್ನೂ ನಭಕ್ಕೆ ಚಿಮ್ಮಿಸಿ ಯಶಸ್ವಿಯೂ ಆಗಿರುವ ಕಂಪನಿ ಈಗ ಮಾನವ ಸಹಿತ ತನ್ನ ಚೊಚ್ಚಲ ಸ್ಪೇಸ್ ಶಿಪ್ ಅನ್ನು ಹಾರಿಸುವ ಸನಿಹದಲ್ಲಿದೆ. ಈ ಸಾಹಸಕ್ಕೆ ಸಾಕ್ಷಿಯಾಗುವ 'ಯಾತ್ರಿ' ಗಳಿಂದ ಅರ್ಜಿಯನ್ನು ಸ್ವೀಕರಿಸಿ ಹಲವರನ್ನು ಅಂತಿಮಗೊಳಿಸಿಯೂ ಆಗಿದೆ. ಅಲ್ಲದೆ ಅಂತಹ ಕೆಲ ನಿಮಿಷಗಳ ಯಾತ್ರೆಗೆ ಅವರುಗಳು ತೆರಬೇಕಾದ ಮೊತ್ತ ಹತ್ತಿರ ಹತ್ತಿರ 2 ಕೋಟಿ ರೂಪಾಯಿಗಳು! ಅಲ್ಲದೆ ಸ್ವತಃ ಬ್ರಾನ್ಸನ್ ಈ ಯಾತ್ರೆಯ ಮೊದಲ ಪ್ರಯಾಣಿಕನಾಗಲಿದ್ದಾನೆ. ಇನ್ನು ಜೆಫ್ ಬೆಝೋಸ್ನ ಬ್ಲೂ ಆರಿಜಿನ್ (ಕ್ರಿ ಶ 2000)ಕಂಪನಿಯೂ ಸಹ ಅಂತರಿಕ್ಷ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಿದೆಯಲ್ಲದೆ ಅಮೇರಿಕಾದ ನಾಸಾ ಸಂಸ್ಥೆಯ ರಾಕೆಟ್ಗಳನ್ನು ಹಾಗು ಹೊಸ ಟೆಕ್ನಾಲಾಜಿಗಳನ್ನು ಪರೀಕ್ಷಿಸುವ ಒಪ್ಪಂದವನ್ನೂ ಅದು ಮಾಡಿಕೊಂಡಿದೆ. ಈ ಮೂಲಕ ಖಾಸಗಿ ಅಂತರಿಕ್ಷ ಸಂಸ್ಥೆಗಳ ಹೊಸ ಯುಗಕ್ಕೆ ನಾಂದಿಯನು ಹಾಡಿದೆ. ನಿಧಾನವಾದರೂ ಅಚ್ಚುಗಟ್ಟಾಗಿ ಗಟ್ಟಿಯಾದ ಒಂದೊಂದೇ ಹೆಜ್ಜೆಯನ್ನು ಇಡುತ್ತಿರುವ ಬ್ಲೂ ಆರಿಜಿನ್ ಅಂತರಿಕ್ಷ ವಲಯದಲ್ಲಿ ಗಟ್ಟಿಗನೆಂಬುದರಲ್ಲಿ ಸಂಶಯವಿಲ್ಲ. ಇನ್ನು ಎಲಾನ್ ಮಸ್ಕ್ ನ SpaceX ಸಂಸ್ಥೆಯ ವಿಚಾರಕ್ಕೆ ಬಂದರೆ ಆತನ ಕನಸ್ಸು ಇನ್ನು ಒಂದೆಜ್ಜೆ ಮುಂದಿದೆ ಎನ್ನಬಹುದು. ಆತ ಯಾತ್ರಿಕರನ್ನು ನಿಮಿಷಮಾತ್ರಕ್ಕೆ ಗಗನಕ್ಕೆ ಕಳುಹಿಸಿ ವಾಪಸ್ಸು ಕರೆತರುವ ಯೋಜನೆಯಷ್ಟೇ ಅಲ್ಲದೆ ದೈನಂದಿನ ವಿಮಾನಯಾನಗಳಂತೆ ‘ಬಾಹ್ಯಾಕಾಶಯಾನ’ವನ್ನೂ ಮಾಡಿಸುವುದಾಗಿದೆ. ಅರ್ಥಾತ್ ಭೂಮಿಯ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಬಾಹ್ಯಾಕಾಶದ ಮುಖೇನ ಜಿಗಿಯುವ ಯೋಜನೆ. ಮುಂದೊಂದು ದಿನ ಈ ಯೋಜನೆ ಸಫಲಗೊಂಡರೆ ಇಡೀ ಭೂಮಿಯ ಯಾವ ಮೂಲೆಗೂ ಕೇವಲ ಅರ್ವತ್ತು ನಿಮಿಷಗಳೊಳಗೆ ತಲುಪಬಹುದಾಗಿದೆ! ಅಲ್ಲದೆ ಎಲಾನ್ ಮಸ್ಕ್ ಮಂಗಳ ಗ್ರಹದಲ್ಲಿ ಮಾನವರನ್ನು ಇಳಿಸುವ ತನ್ನ ಬಾಲ್ಯದ ಕನಸ್ಸನ್ನೂ ನನಸ್ಸಾಗಿಸುವ ಸನಿಹದಲ್ಲಿದ್ದಾನೆ. ಈ ಯೋಜನೆಗೆ ಅದಾಗಲೇ BFR (Big Falcon Rocket) ಎಂಬ ಮರುಬಳಕೆ ಮಾಡಬಹುದಾದ ಸ್ಪೇಸ್ ಕ್ರಾಫ್ಟ್ ಅನ್ನೂ ಅಭಿವೃದ್ಧಿ ಪಡಿಸಲಾಗುತ್ತಿದೆ.

ಒಟ್ಟಿನಲ್ಲಿ ಸಾಮಾನ್ಯ ಕುಟುಂಬದಲ್ಲೆ ಹಲವಾರು ಕಷ್ಟ, ದುಃಖ ಹಾಗು ನ್ಯೂನ್ಯತೆಗಳೊಟ್ಟಿಗೆ ನಮ್ಮ ನಿಮ್ಮಂತೆಯೇ ಹುಟ್ಟಿ ಬೆಳೆದ ಈ ಮೂವರು ಇಂದು ಇಡೀ ವಿಶ್ವದಲ್ಲೇ ತಮ್ಮ ಹೆಸರಿನ ಬ್ರಾಂಡನ್ನು ಕಟ್ಟಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಹೇಳಿಕೊಳ್ಳುವ ಮಹತ್ತರವಾದ ಡಿಗ್ರಿಗಳಿರದಿದ್ದರೂ ಅಂತರಿಕ್ಷ ವಲಯದಲ್ಲಿ ದೊಡ್ಡ ದೊಡ್ಡ ಹೆಸರಿನ ಸಂಸ್ಥೆಗಳೇ ಇವರ ಕಂಪನಿಯ ಟೆಕ್ನಾಲಜಿಗಳ ಮುಂದೆ ತಲೆಬಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಹಣವನ್ನು ಯಾರಾದರೂ ಗಳಿಸಬಹುದು. ಅದಕ್ಕೆ ಸಾವಿರಾರು ಮಾರ್ಗಗಳಿವೆ. ಆದರೆ ಗಳಿಸಿದ ನಂತರ ಇಡುವ ಹೆಜ್ಜೆ ಇದೆಯಲ್ಲ ಅದು ಆತನ ಅಥವಾ ಅವಳ ಸ್ವಭಾವವನ್ನು ಹಾಗು ಶಕ್ತಿಯನ್ನು ಜಗತ್ತಿಗೆ ತೋರಿಸುತ್ತದೆ. ಸೋಲು ಖಚಿತವೆಂದು ದೇವರೇ ಬಂದು ಹೇಳಿದರೂ ಇವರುಗಳು ಮಾತ್ರ ಪ್ರಯತ್ನಿಸುವುದ ಬಿಡಲಿಲ್ಲ. ಹಣದ ಹೊಳೆಯೇ ಪೋಲಾದರೂ ದೃತಿಗೆಡಲಿಲ್ಲ. ಅವರ ಪ್ರತಿ ಸೋಲೂ ಪ್ರಗತಿಯಾಗಿದ್ದಿತೇ ವಿನಃ ಕೇವಲ ನಡೆಯಾಗಿರಲಿಲ್ಲ. ಇಲ್ಲವಾದರೆ ತಿಂಗಳ ಕೊನೆಗೆ ಸಿಗುವ ಸಂಬಳಕ್ಕೆ ದುಡಿಯುವ ನೌಕರನೊಬ್ಬ ನಾಸಾದಂತಹ ಧೈತ್ಯ ಅಂತರಿಕ್ಷ ಸಂಸ್ಥೆಗಳಿಗೆ ರಾಕೆಟ್ ಗಳನ್ನು ಮಾಡಿ ಕೊಡುವ ಪ್ರಪೋಸಲ್ ಅನ್ನು ಇಡಲು ಸಾಧ್ಯವಾದೀತೆ? ಒಮ್ಮೆ ಯೋಚಿಸಿ. ಇವರುಗಳ ನಡುವೆ ಅದೆಂತಹ ಪೈಪೋಟಿಯೇ ಇರಬಹುದು ಆದರೆ ಸೋಲನ್ನು ಸೋಲಿಸಿ ಆಗಸಕ್ಕೆ ಏಣಿಯಿಟ್ಟವರಿವರು. ನಮ್ಮ ನಿಮ್ಮ ಸುತ್ತಲೂ ಇಂತಹ ಹತ್ತಾರು ನೂರಾರು ಅರಬ್ ಪತಿಗಳು, ಕೋಟ್ಯಾಧಿಪತಿಗಳು ಕಾಣಸಿಗುತ್ತಾರೆ. ಕೂತು ತಿಂದರೂ ಕೊಳೆಯುವಷ್ಟು ಹಣವಿರುವ ಶ್ರೀಮಂತರಿದ್ದಾರೆ. ವಿಶ್ವದ ಪಟ್ಟಿಯಲ್ಲಿ ಅಗ್ರಮಾನ್ಯರೆನಿಸಿಕೊಂಡವರಿದ್ದಾರೆ. ಆದರೆ ಅದರಲ್ಲಿ ಅದೆಷ್ಟು ಜನ ಇಂತಹ ಸಾಹಸದ ಕಾರ್ಯಕ್ಕೆ ಕೈಯಾಕಬಲ್ಲರು?. ಅವರಲ್ಲಿ ಅದೆಷ್ಟು ಮಂದಿಗೆ ಇಂತಹ ಡೇರಿಂಗ್ ವಲಯಗಳನ್ನು ಪ್ರವೇಶಿಸುವ ತಾಕತ್ತು ಹಾಗು ಆ ತಾಕತ್ತಿಗೆ ಬೇಕಾದ ವಿದ್ವತ್ತು ಇರಬಹುದು? ಉತ್ತರ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅತಿ ಮಹತ್ವವಾದದ್ದು!



Friday, September 28, 2018

ಇರುವುದೆಲ್ಲಿ..? 'ಆ ಮನೆ' ವಿಶ್ವದ ಅನಂತತೆಯಲ್ಲಿ....

ಭೂಮಿಯ ಮೇಲೆ ತನ್ನ ಪಾದಾರ್ಪಣೆಯದಾಗಿನಿಂದಲೂ ಮಾನವ ಒಂದಿಲ್ಲೊಂದು ಬಗೆಯಲ್ಲಿ ತನ್ನ ಸುತ್ತಲಿನ ಪರಿಸರವನ್ನು ಅನ್ವೇಷಿಸುತ್ತಿದ್ದಾನೆ. ಈ ಅನ್ವೇಷಣೆ ಆತನ ಹಸಿವು,ರಕ್ಷಣೆ ಹಾಗು ಮೈಗಳ್ಳತನಕ್ಕೆ ಪೂರಕವಾಗಿತ್ತಲ್ಲದೆ ಆತನ ಕುತೂಹಲ ಚಿಂತನೆಗಳಿಗೂ ದಾರಿಯನ್ನು ತೋರಿಸಿತು. ಆದ ಕಾರಣವೇ ಇತರೆ ಪ್ರಾಣಿಗಳೊಟ್ಟಿಗೆ ಗೆಡ್ಡೆ ಗೆಣಸು ಹಾಗು ಹಸಿ ಮಾಂಸವನ್ನು ತಿಂದು ಎಲ್ಲೆಂದರಲ್ಲಿ ಎದ್ದು ಬಿದ್ದು ಬೆಳೆಯುತ್ತಿದ್ದ ಜೀವಿಯೊಂದು ಇಂದು ತನ್ನ ಸಹವರ್ತಿ ಜೀವಿಗಳನೆಲ್ಲ ಬಿಟ್ಟು ಬಹಳಷ್ಟು ದೂರಕ್ಕೆ ಸಾಗಿರುವುದು. ಇಂದು ಆ ಜೀವಿಯ ನಡೆ ಕೇವಲ ಭೂಮಿಯ ಮೇಲೆ ಸಮಾಜವನ್ನು ನಿರ್ಮಿಸಿ ಬಾಳಿ ಬದುಕುವುದಲ್ಲದೆ ಪ್ರಚಂಡದೂರಗಳಲ್ಲಿರುವ ಗ್ರಹ, ಗ್ಯಾಲಕ್ಸಿಗಳ ಅಧ್ಯಯನವನ್ನೂ ಒಳಗೊಂಡಿದೆ. ಕತ್ತಲೆಯ ರಾತ್ರಿಯಲ್ಲಿ ಮಿನುಗುವ ಅಗಣಿತ ನಕ್ಷತ್ರಗಳ ನಡುವೆ ಗ್ರಹಗಳನ್ನು ಗುರುತಿಸಿ ಅದರ ಮುಖೇನ ಸೌರಮಂಡಲ, ಅಲ್ಲಿರುವ ಗ್ರಹಗಳು, ಅವುಗಳ ರಚನೆ, ತೂಕ, ಹಾಗು ತಾಪಮಾನವಲ್ಲದೆ ಅವುಗಳಿಗಿರುವ ನೈಸರ್ಗಿಕ ಉಪಗ್ರಹಗಳ ಬಗೆಗೂ ಈತ ಕೂತಲ್ಲೇ ಲೆಕ್ಕಾಚಾರ ಹಾಕತೊಡಗಿದ. ದಿನಗಳು ಕಳೆದಂತೆ, ವಿಜ್ಞಾನ ಬೆಳೆದಂತೆ ಈತನಿಗೆ ಅವುಗಳ ಮೇಲೂ ಕಾಲೂರಬೇಕೆಂಬ ತವಕ ವಿಪರೀತವಾಯಿತು. ಮಾನವನ ಈ ತವಕ ಏತಕೆ? ಅದನ್ನು ಆತನ ಮಸ್ತಿಷ್ಕದೊಳಗೆ ತುಂಬಿದವರ್ಯಾರು? ಭೂಮಿಯ ಮೇಲೆ ಬದುಕಲಿ ಎನುತ ಗಾಳಿ, ನೀರು ಎಲ್ಲವನ್ನೂ ಕೊಟ್ಟರೂ ಪಕ್ಕದ ಮನೆಯ ಮೇಲ್ಯಾಕೆ ಈತನಿಗೆ ಕಣ್ಣು ಎಂಬ ಪ್ರೆಶ್ನೆಗೆ ಉತ್ತರ ಮಾತ್ರ ನಾವುಗಳೇ ಹುಡುಕಿಕೊಳ್ಳಬೇಕು.

ಮಾನವ ಹೀಗೆ ಸೌರಮಂಡಲದಲ್ಲಿರುವ ಅಷ್ಟೂ ಗ್ರಹಗಳ ಆಳೆತ್ತರಗಳನ್ನು ಅರಿತು ಕೊನೆಗೆ ಹೆಚ್ಚುಕಡಿಮೆ ಯಾವ ಗ್ರಹಗಳ ಮೇಲೂ ಜೀವಿಗಳಿರುವುದು ಸಾಧ್ಯವಿಲ್ಲವೆಂಬುದನ್ನು ಅರಿತಮೇಲೆ ಆತನ ದೃಷ್ಟಿ ಸೌರಮಂಡಲದಾಚೆ ಇರುವ ಅನಂತ ವಿಶ್ವದ ಕಡೆಗೆ ನೆಟ್ಟಿತು. ನಮ್ಮ ಸೌರಮಂಡಲದಂತಹ ಕೋಟಿ ಕೋಟಿ ಸೌರಮಂಡಲಗಳಿರುವ ಅಗಾಧ ವಿಶ್ವದಲ್ಲಿ ಇತರೆ ಜೀವಿಗಳ ಇರುವಿಕೆಯನ್ನು ಅಲ್ಲಗೆಳೆಯಲಾಗುವುದಿಲ್ಲ ಎಂಬುದನ್ನರಿತು ತನ್ನ ಸಂಶೋಧನೆಯನ್ನು ಮುಂದುವರೆಸಿದರೂ ಇಂದಿಗೂ ಆತನಿಗೆ ಹೇಳಿಕೊಳ್ಳುವಂತಹ ಯಾವುದೇ ಪುರಾವೆಗಳು ಸಿಗದಿರುವುದು ವಿಪರ್ಯಾಸವೇ ಸರಿ. ಆದರೆ ಮುಂದೊಂದು ದಿನ ಇದು ಸಾಧ್ಯವಾಗದು ಎಂದು ಖಡಾಖಂಡಿತವಾಗಿ ಹೇಳಲೂ ಆಗದು. ಆದರೆ ಆ ಸಮಯದವರೆಗೆ ಮಾನವ ಬದುಕಿರಬೇಕು. ಆದರೆ ಇನ್ನು ಕೆಲವು ದಶಕಗಳಲ್ಲೇ ಸಾವಿರ ಕೋಟಿ ಜನಸಂಖ್ಯೆಯನ್ನು ಹಾಗು ಅವರುಗಳ ಉಪಟಳವನ್ನು ಸಹಿಸಿಕೊಳ್ಳಬೇಕಾದ ಭೂಮಿಯ ಕತೆ ಏನಾಗುತ್ತದೋ ಎಂಬುದನ್ನು ಯಾವೊಬ್ಬ ವಿಜ್ಞಾನಿಯೂ ನಿಖರವಾಗಿ ಹೇಳಲಾರ. ಈವೊಂದು ಕಾರಣಕ್ಕಾದರೂ ಮಾನವನಿಗೆ ತನ್ನ ಸೌರಮಂಡಲದ ಇತರ ಗ್ರಹಗಳ ವಿವರವಾದ ಅಧ್ಯಯನ ಅವಶ್ಯಕ. ಹಾಗೆ ಯೋಚಿಸುತ್ತಾ ಹೋದ ಮಾನವನಿಗೆ ತಕ್ಷಣ ಹೊಳೆದ ಗ್ರಹವೇ ಮಂಗಳ ಗ್ರಹ.

ಭೂಮಿ ಸೂರ್ಯನಿಂದ 93 ಮಿಲಿಯನ್ ಮೈಲುಗಳ ದೂರದಲ್ಲಿದ್ದರೆ ಮಂಗಳ ಸೂರ್ಯನಿಂದ 142 ಮಿಲಿಯನ್ ಮೈಲುಗಳಷ್ಟು ದೂರದಲ್ಲಿದೆ. ಹಾಗಾಗಿ ಅದು ಸೂರ್ಯನ ಸುತ್ತ ಸುತ್ತಲು ಭೂಮಿಗಿಂತಲೂ ಎರಡು ಪಟ್ಟು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ. ಅಂದರೆ ಅಲ್ಲಿನ ಇಂದು ವರ್ಷ ನಮ್ಮಯ ಎರಡು ವರ್ಷಕ್ಕೆ ಸಮ. ಆದರೆ ಕೆಲವು ನಿಮಿಷಗಳ ಅಂತರವನ್ನು ಬಿಟ್ಟರೆ ದಿನದ ಘಂಟೆಗಳು ಎರಡೂ ಗ್ರಹಗಳಲ್ಲೂ ಒಂದೇಯಾಗಿರುತ್ತದೆ. ಅಲ್ಲಿಯ ಸರಾಸರಿ ತಾಪಮಾನವೂ 30 ಡಿಗ್ರಿಗಳ ಒಳಗೆ ಇರುತ್ತದೆ. ವಾತವರಣ ಇಂಗಾಲದ ಡೈ ಆಕ್ಸೈಡ್ ಹಾಗು ಇತರ ಅನಿಲಗಳಿಂದ ಕೂಡಿದೆ. ಹೀಗೆ ಭಾಗಶಃ ಭೂಮಿಯ ಮೇಲ್ಮೈಯನ್ನೇ ಹೋಲುವ ಮಂಗಳ ಗ್ರಹ ಸಧ್ಯಕ್ಕೆ ಮಾನವನ ಲೆಕ್ಕಾಚಾರದಲ್ಲಿ ಜೀವಿಗಳ ಇರುವುಕೆಗೆ ಪೂರಕವಾಗಿರುವ ಗ್ರಹ. ಇದಲ್ಲದೆ ನಮ್ಮ ಸೌರಮಂಡಲದ ಅತಿದೊಡ್ಡ ಗ್ರಹವೆನಿಸಿಕೊಂಡ ಗುರುಗ್ರಹ ಸುಮಾರು ಎಂಬತ್ತು ಉಪಗ್ರಹಗಳನ್ನು ಒಳಗೊಂಡಿದೆ. ಆ ಉಪಗ್ರಹಗಳಲ್ಲಿ ಭೂಮಿಯ ಕಾಲು ಭಾಗದಷ್ಟು ದೊಡ್ಡದಾದ ‘ಯುರೋಪಿಯಾ’ ಎಂಬ ಉಪಗ್ರಹ ಒಂದಿದೆ. ಇದನ್ನು ಕ್ರಿಸ್ತ ಶಕ 1610 ರಲ್ಲಿ ಗೆಲಿಲಿಯೋ ತನ್ನ ಟೆಲಿಸ್ಕೋಪ್ ನ ಮೂಲಕ ಕಂಡುಹಿಡಿದ.(!) ಹೀಗೆ ಪತ್ತೆಯಾದ ಉಪಗ್ರಹದ ಮೇಲ್ಮೈ ದಟ್ಟವಾದ ಮಂಜುಗೆಡ್ಡೆಯಿಂದ ಕೂಡಿದ್ದೂ ಆ ಪದರದ ಕೆಳಗೆ ಅಗಾಧವಾದ ನೀರಿನ ಸಾಗರಗಳಿವೆ ಎಂಬುದನ್ನು ವಿಜ್ಞಾನಿಗಳು ಇತ್ತೀಚಿಗೆ ಪತ್ತೆಹಚ್ಚಿದ್ದಾರೆ. ಒಂದು ಪಕ್ಷ ಮಂಗಳವೇನಾದರೂ ಬದುಕಲು ಯೋಗ್ಯವಲ್ಲದ ನೆಲವಾದರೆ ಇಡೀ ಸೌರಮಂಡಲದಲ್ಲಿ ಬಹುಶಃ ಬದುಕಲು ಯೋಗ್ಯವಾದ ಮತ್ತೊಂದು ಗ್ರಹವೊಂದಿದ್ದರೆ ಅದು ಯುರೋಪಿಯಾ ಗ್ರಹವಾಗಬಹುದು ಎಂಬುದು ಸದ್ಯಕ್ಕೆ ಹಲವು ವಿಜ್ಞಾನಿಗಳ ಲೆಕ್ಕಾಚಾರ.

ಎರಡನೇ ವಿಶ್ವಯುದ್ಧದ ನಂತರ ವಿಶ್ವದ ಎರಡು ಮಹಾಶಕ್ತಿಗಳಾದ ಅಮೇರಿಕ ಹಾಗು ರಷ್ಯಾಗಳ ನಡುವೆ ನೆಡೆದ ಶೀತಲ ಸಮರದಲ್ಲಿ ಅಂತರಿಕ್ಷದ ಬಗೆಗಿನ ಅನ್ವೇಷಣೆಗಳು ವೇಗೋತ್ಕರ್ಷದ ಹಾದಿಯನ್ನು ಹಿಡಿದವು. ಈ ಸಮರದಲ್ಲಿ ನಾ ಮುಂದು ತಾ ಮುಂದು ಎನುತ ಮಂಗಳ ಗ್ರಹದ ಮೇಲೆ ಕಾಲಿಡಬಯಸಿದ ಎರಡು ದೇಶಗಳಲ್ಲಿ ಸಾಕಷ್ಟು ಕಷ್ಟ ನಷ್ಟಗಳ ನಂತರ ಅಮೆರಿಕದ ಮರಿನಾರ್-4 ಎಂಬ ಬಾಹ್ಯಾಕಾಶ ನೌಕೆ ಮೊದಲು (1965) ಮಂಗಳನ ಕಕ್ಷೆಯನ್ನು ಸೇರಲು ಸಫಲವಾಯಿತು. ಅಲ್ಲಿಂದ ಮುಂದೆ ಅದೇ ಅಮೇರಿಕ ಒಟ್ಟು ನಾಲ್ಕು ರೋವರ್ (ಮಂಗಳದ ನೆಲದ ಮೇಲೆ ಇಳಿದ ಯಂತ್ರಗಳು) ಗಳನ್ನು ಮಂಗಳ ಅಂಗಳದ ಮೇಲೆ ಇಳಿಸಿ ಇತಿಹಾಸವನ್ನು ಸೃಷ್ಟಿಸಿತು. ಕ್ಯೂರಿಯಾಸಿಟಿ (2011) ಹಾಗು ಆಪರ್ಚುನಿಟಿ (2003) ಎಂಬ ಎರಡು ರೋವರ್ಗಳು ಇಂದಿಗೂ ಭೂಮಿಯ ಪ್ರತಿನಿಧಿಗಳಾಗಿ ಮಂಗಳನಲ್ಲಿ ಕಾರ್ಯನಿರ್ವಹಿಸುತ್ತಿವೆ. ಇನ್ನು ಭಾರತದ ವಿಷಯಕ್ಕೆ ಬಂದರೆ ತನ್ನ ಮೊದಲ ಉಡಾವಣೆಯಲ್ಲೇ ಯಶಸ್ವೀಯಾದ ವಿಶ್ವದ ಏಕೈಕ ದೇಶವಾಗಿ ಅಲ್ಲದೆ ವಿಶ್ವದಲ್ಲೇ ಅತೀ ಅಗ್ಗವಾದ ಮಂಗಳಯಾನ (MOM) ಪ್ರೋಬನ್ನು 2013 ರಲ್ಲಿ ಗಗನಕ್ಕೆ ಹಾರಿಸಿ ಕಕ್ಷೆಯನ್ನು ತಲುಪಿಸಿದ ಕೀರ್ತಿ ನಮ್ಮ ಇಸ್ರೋ ಸಂಸ್ಥೆಗೆ ಸೇರುತ್ತದೆ. ಈ ಮೂಲಕ ಏಷ್ಯಾದಲ್ಲೇ ಮಂಗಳವನ್ನು ತಲುಪಿದ ಮೊದಲ (ವಿಶ್ವದಲ್ಲಿ ನಾಲ್ಕನೇ) ದೇಶವೆಂಬ ಹೆಗ್ಗಳಿಕೆಗೂ ಅದು ಪಾತ್ರವಾಗಿದೆ.

ಎಲ್ಲ ನಕ್ಷತ್ರಗಳಂತೆ ನಮ್ಮ ಸೂರ್ಯನೂ ಒಂದು ದಿನ ನಶಿಸಲೇಬೇಕು. ಅದರಲ್ಲಿರುವ ಹೈಡ್ರೋಜೆನ್ ಹಾಗು ಹೀಲಿಯಂ ಒಂದಿಷ್ಟೂ ಬಿಡದೆ ಖಾಲಿಯಾದ ನಂತರ ಕೆಂಡಂತಹ ದೈತ್ಯ ಸೂರ್ಯ ತನ್ನ ಹತ್ತಿರವಿರುವ ಗ್ರಹಗಳನೆಲ್ಲ ನುಂಗಿ ಹಾಕಲಿದೆ. ಇದಕ್ಕೆ ಕಾರಣ ಗುರುತಾಕರ್ಷಣೆಯಷ್ಟೇ ಅಲ್ಲದೆ ಆ ಸಮಯಕ್ಕೆ ಸೂರ್ಯ ಅದೆಷ್ಟರ ಮಟ್ಟಿಗೆ ದೊಡ್ಡವನಾಗಿರುತ್ತಾನೆ ಎಂದರೆ ಆದರ ಪ್ರಸ್ತುತ ಪರಿಧಿ ಹೆಚ್ಚು ಕಡಿಮೆ ಭೂಮಿಯ ಬಳಿಗೆ ಬಂದಿರುತ್ತದೆ!. ಆದರೆ ಇದು ಜರುಗಲು ಇನ್ನು 5 ಬಿಲಿಯನ್ ವರ್ಷಗಳಿಗೂ ಹೆಚ್ಚಿನ ಕಾಲವಿದೆ. ಅಷ್ಟೊತ್ತಿಗಾದರೂ ಮಾನವನಿಗೆ ಶತಾಯ ಗತಾಯ ಅಂತರಿಕ್ಷದಲ್ಲೊಂದು ಹೊಸ ಮನೆಯನ್ನು ಹುಡುಕುವ ಅವಶ್ಯಕೆತೆಯಿದೆ.ಆದರೆ ಸೂರ್ಯನ ಕಾಲಾವಧಿ ಹೀಗೆ ಮುಗಿದ ನಂತರ ನಮ್ಮ ಇಡೀ ಸೌರಮಂಡಲವೇ ಬದುಕನ್ನು ಕಳೆದುಕೊಳ್ಳುವಾಗ ಇಲ್ಲಿಯ ಯಾವುದೇ ಗ್ರಹಗಳ ಮೇಲೂ ಆತ ಶಾಶ್ವತವಾದೊಂದು ಮನೆಯನ್ನು ನಿರ್ಮಿಸಿಕೊಳ್ಳಲಾರ. ಹಾಗಾಗಿ ಆತನ ಅರಸುವ ಗುರಿಯೇನಿದ್ದರೂ ಅಂತರಿಕ್ಷದಲ್ಲಿ ಮತ್ತೊಂದು ಜೀವಿಸಲೋಗ್ಯವಾದ ಸಂಪೂರ್ಣ ಸೌರಮಂಡಲಗಳೇ ಆಗಿದೆ.

ಹೀಗೆ ದಿನದಿಂದ ದಿನಕ್ಕೆ ಆಗಸದೆಡೆಗೆ ದಾಪುಗಾಲಿಡುತ್ತಿರುವ ಮಾನವನ ಪ್ರಯತ್ನದ ಫಲಿತಾಂಶ ಅದೆಷ್ಟರ ಮಟ್ಟಿಗೆ ಸಫಲವಾಗಲಿದೆ? ಮಂಗಳ ಗ್ರಹದಲ್ಲಿ ತನ್ನ ಎರಡನೆಯ ಮನೆಯನ್ನು ಕಾಣುವ ಆತನ ಕನಸ್ಸು ನನಸಾಗಲಿದೆಯೇ ? ಬ್ರಹ್ಮಾಂಡದ ಅಲ್ಲೆಲ್ಲೋ ನಮ್ಮಂತೆಯೇ ಹೋಲುವ ಜೀವಿಗಳೋ ಅಥವಾ ಭೂಮಿಯೊಂದು ಸಿಗುವ ಲಕ್ಷಣಗಳೆಷ್ಟಿವೆ? ಇಂದು ಒಂದು ಗ್ರಹದಿಂದ ಮತ್ತೊಂದು ಗ್ರಹಕ್ಕೇ ಹೋಗಲು ಪರದಾಡುವ ಮಾನವನಿಗೆ ಅಂತಹ ಅನಂತ ದೂರದ ಪ್ರಯಾಣಕ್ಕೆ ಬೇಕಾಗುವ ವಾಹಕಗಳಾದರೂ ಎಂತಹದ್ದು? ಆದರೆ ಅಂತಹ ಜಾಗವೊಂದು ಅನಂತ ವಿಶ್ವದ ಅದ್ಯಾವ ಮೂಲೆಯಲ್ಲಿದೆ. ಅದನ್ನು ಹುಡುಕುವ ಬಗೆಯಾದರೂ ಎಂತಹದ್ದು?ಇದು ಖಂಡಿತವಾಗಿಯೂ ಸಾಧ್ಯವೇ? ಎಂಬ ಹಲವಾರು ಪ್ರೆಶ್ನೆಗಳು ನಮ್ಮೊಳಗೇ ಮೂಡುತ್ತವೆ.

ಐನ್ಸ್ಟಿನ್ ನ ಟೈಮ್-ಸ್ಪೇಸ್ ಥಿಯರಿ, ಟೈಮ್ ಮಷೀನ್, ಬ್ಲಾಕ್ ಹೋಲ್ಸ್, ಏಲಿಯನ್ಸ್ ಅಥವಾ ಇನ್ನಾವುದೇ ಥಿಯರಿಗಳೂ ಸದ್ಯಕಂತೂ ಈ ಪ್ರೆಶ್ನೆಗಳಿಗೆ ಪೂರಕವಾದಂತಹ ಉತ್ತರವನ್ನು ನೀಡಲಾರವು. ಹಾಗಾದರೆ ಬೇರ್ಯಾವ ಬಗೆಯಲ್ಲಿ ಈ ಕಾರ್ಯವನ್ನು ಸಿದ್ಧಿಗೊಳಿಸಬಹುದು? ದೀಪದ ಬೆಳಕು ತನ್ನ ಬುಡಕ್ಕೇ ಕತ್ತಲನೆಯನ್ನು ತಂದಂತೆ ನಾವುಗಳು ವಿಶ್ವದ ಸರ್ವವನ್ನೂ ಪಶ್ಚಿಮದ ಕನ್ನಡಕ ಒಂದರಲ್ಲೇ ನೋಡಲಿಚ್ಛಿಸುತ್ತೇವೆ. ನಮ್ಮ ವೇದ ಉಪನಿಷತ್ತುಗಳಲ್ಲಿ ತಿಳಿಸಿರುವ ಫಾರ್ಮುಲಾಗಳ ಮೇಲೂ ಒಮ್ಮೆ ಕಣ್ಣಾಯಿಸಿದರೆ ಬಹುಷಃ ಇನ್ನೊಂದು ಬಗೆಯ ಸಂಶೋಧನೆಯನ್ನು ಹುಟ್ಟುಹಾಕಬಹುದೇನೋ. ಮಹಾಭಾರತದದಲ್ಲಿ ಬಳಸಲಾದ ಬ್ರಹ್ಮಾಸ್ತ್ರ, ವಿಮಾನ, ವಿಷ್ಣವಾಸ್ತ್ರ ಎಂಬ ಹಲವು ಪದಗಳಾಗಲಿ, ಕಾಪರ್ನಿಕಸ್ ನಿಗಿಂತಲೂ ಸಹಸ್ರ ವರ್ಷಗಳ ಮುಂಚೆಯೇ ಸೌರಮಂಡಲ, ಗ್ರಹಗಳು, ಅವುಗಳ ಚಲನೆ, ದೂರದ ನಕ್ಷತ್ರಗಳು, ಗ್ರಹಣ ಇವುಗಳ ಬಗ್ಗೆ ವಿವರಿಸಿರುವ ವೇದ ಉಪನಿಷತ್ತುಗಳಾಗಲಿ ಎಲ್ಲವೂ ನಮ್ಮ ಪೂರ್ವಜರ ವೈಜ್ಞಾನಿಕ ಜ್ಞಾನದ ಆಳವನ್ನು ತೋರಿಸುತ್ತದೆ. ಇಂತಹ ಭಾರತೀಯ ವಿಜ್ಞಾನದ ನಿಟ್ಟಿನಲ್ಲೇನಾದರೂ ಸಂಶೋಧನೆ ನೆಡೆಸಿದರೆ ಬಹುಷಃ ಮೇಲಿನ ಕೆಲವು ಪ್ರೆಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಬಹುದೇನೋ. ಹಾಗಾದರೆ ಆ ಕಾಲಕ್ಕೆ ಭಾರತದ ವಿಜ್ಞಾನ ಅಷ್ಟೊಂದು ಮುಂದುವರೆದಿದ್ದರೆ ಇಂದಿಗೆ ನಾವುಗಳು ನಮ್ಮಂತೆಯೇ ಹೋಲುವ ಅದೆಷ್ಟೋ ಗ್ರಹಗಳನ್ನು ಕಂಡುಹಿಡಿಯಬಹುದಿತ್ತು, ಅದೇಕೆ ಸಾಧ್ಯವಾಗಲಿಲ್ಲ ಎಂಬ ಪ್ರೆಶ್ನೆ ಉದ್ಭವಿಸುವುದು ಸಹಜ. ಆದರೆ ಹಿಂದೂ ವಿಶ್ವವಿಜ್ಞಾನ (Hindu Cosmology) ದ ಪ್ರಕಾರ ಇಡೀ ಬ್ರಹ್ಮಾಂಡವು ಹುಟ್ಟುವ ಮತ್ತು ಸಾಯುವ ಆವರ್ತ ನಿಯಮವನ್ನು ಅನುಸರಿಸುತ್ತದೆ. ಈ ನಿಯಮವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಇಡೀ ಬ್ರಹ್ಮಾಂಡವೇ ಇಂತಹ ಹುಟ್ಟು ಸಾವುಗಳ ನಡುವೆ ಚಲಿಸುತ್ತಿದ್ದರೆ ಮಾನವ ಹೊಸ ಗ್ರಹವೊಂದನ್ನು ಹುಡುಕಿದರೆಷ್ಟು ಅಥವ ಬಿಟ್ಟರೆಷ್ಟು. ಪಡೆದುಕೊಂಡಿರುವ ನಿಸರ್ಗವನ್ನು ಹಾಳುಗೆಡವದೆ ಮನೆಯಲ್ಲಿಯೇ ಬದುಕಿ ನಮ್ಮ ಮನೆಯಲ್ಲಿಯೇ ಕೊನೆಯುಸಿರೆಳೆವುದು ನೆಮ್ಮದಿಯ ಕಾರ್ಯ. ಆದರಿಂದಲೇ ಏನೋ ನಮ್ಮ ಹಿರಿಕರು ವೈಜ್ಞಾನಿಕವಾಗಿ ಅದೆಷ್ಟೇ ಮುಂದುವರೆದಿದ್ದರೂ ಆ ವಿಜ್ಞಾನವನ್ನು ಬೇರೊಂದು ಗ್ರಹದ ಅನ್ವೇಷಣೆಗೆ ಬಳಸಿ ಅದನ್ನೂ ಹಾಳುಗೆಡಹುವ ಕಾರ್ಯಕ್ಕೆ ಕೈಯಾಕದಿದ್ದದ್ದು.

ಒಟ್ಟಿನಲ್ಲಿ ಅಂಬೆಗಾಲಿಡುತ ಬೆಳೆವ ಮಗುವಿಗೆ ಪ್ರತಿದಿನವೂ ಕುತೂಹಲ ಹಾಗು ಬೆರಗನ್ನು ನೀಡುವ ಪರಿಸರದಂತೆ ಇಂದು ವಿಶ್ವವು ಮಾನವನಿಗೆ ಗೋಚರವಾಗುತ್ತಿದೆ. ಈ ಅನಂತ ಸಮುದ್ರದಲ್ಲಿ ಆತನಿಗೆ ಕಲಿತಷ್ಟೂ, ತಿಳಿದಷ್ಟೂ ಕಡಿಮೆಯೇ. ಸೃಷ್ಟಿಯ ಮುಂದೆ ಇದು ಆತನ ಕುಬ್ಜತೆಯನ್ನು ತೋರಿಸುತ್ತದೆ. ಇದು ಮಹತ್ವಾಕಾಂಕ್ಷಿ ಮಾನವನಿಗೆ ಸುಮ್ಮನಿರದಿರಲು ವಿಷಯವೊಂದನ್ನು ಮಾತ್ರ ಸದಾ ತೆರೆದಿರುತ್ತದೆ. ಒಟ್ಟಿನಲ್ಲಿ ಮಾನವನ ಹೊಟ್ಟೆಗೆ ಹಿಟ್ಟು ಖಾಲಿಯಾಗುವ ಮುನ್ನ ಪಕ್ಕದ ಮನೆಯನ್ನು ಹುಡುಕುವ ಆತನ ಹುಚ್ಚು ಅದೆಂದು ಸಾಧ್ಯವಾಗಲಿದೆ ಎಂಬುದನ್ನು ಕಾದು ನೋಡಲೂ ನಮಗೆ ಸಾಧ್ಯವಾಗದೇನೋ?!!

Wednesday, September 19, 2018

ಕೊಡುವ ಮೂರಾಣೆಗೇನು ಇವನ ಹೆಗಲ ಮೇಲೊತ್ತು ಸುತ್ತಬೇಕೇನು?

ಜಾಗತಿಕ ಮಟ್ಟದಲ್ಲಿ ಇಂದು ನಾಲ್ಕು ರೀತಿಯ ದೇಶಗಳನ್ನು ಕಾಣುತ್ತೇವೆ. ಅವುಗಳಲ್ಲಿ ಮೊದಲನೆಯವು ಇತರೆ ದೇಶಗಳ ಸಂಕಷ್ಟಗಳಿಗೆ ಸ್ಪಂಧಿಸಿ ಅಲ್ಪವೋ ಅಪಾರವೋ ತಮ್ಮ ಕೈಲಾದ ನೆರವನ್ನು ನೀಡುವ ದೇಶಗಳು, ಕೆಲವು ಕೊಡುವವರಿಗೆ ನಮ್ರತೆಯಿಂದಲೇ ಬೇಡವೆಂದು ಕಷ್ಟಗಾಲದಲ್ಲಿ ತಮಗೆ ತಾವೇ ನೆರವಾಗುವ ದೇಶಗಳು, ನಂತರದವು ಸ್ವಪ್ರತಿಷ್ಠೆ, ಆತ್ಮಗೌರವ ಎಂಬುದನ್ನೆಲ್ಲವನ್ನು ಬಿಟ್ಟು ಎಷ್ಟೂ ಕೊಟ್ಟರೂ ಸಾಲದೆನುತ ಕೈಚಾಚುವು, ಮತ್ತುಳಿದವು ನೆರವನ್ನು ಕೊಟ್ಟೂ, ಮೂರನ್ನು ಬಿಟ್ಟು ಅಯ್ಯೋ ಕೊಟ್ಟೆನೆಲ್ಲಾ ಎಂಬ ಸಣ್ಣತನವನ್ನು ತೋರಿಸುವ ದೇಶಗಳು. ತಿಳಿದೋ ತಿಳಿಯದೆಯೋ ಯಾವೊಂದು ದೇಶವೂ ಸಹ ಈ ನಾಲ್ಕನೇ ಕೆಟಗರಿಗೆ ಬರಲಿಚ್ಚಿಸುವುದಿಲ್ಲ. ಅದು ಒಂತರ ಭಂಡತನದ ಪರಮಾವಧಿ ಎನ್ನುತ್ತಾರಲ್ಲ ಹಾಗೆ. ಮೇಲುಕೀಳೆಂಬ ಅಸಹನೆ, ನಾನು ನಾನೆಂಬ ಆಹಂ, ಕುತಂತ್ರಿ ತಂತ್ರಗಳೇ ತುಂಬಿ ತುಳುಕಾಡುವ ದೇಶವೊಂದು ಮಾತ್ರ ಈ ಬಗೆಯ ಕೊಟ್ಟು ಕೈ-ಕೈ ಹಿಸುಕುಕಿಕೊಳ್ಳುವ ಗುಂಪಿಗೆ ಸೇರುತ್ತದೆ.

ಪ್ರಸ್ತುತ ಟ್ರಂಪ್ ಮಹಾಶಯ ದಿ ಗ್ರೇಟ್ ಎಂದು ಕರೆಸಿಕೊಳ್ಳುವ ಅಮೇರಿಕವನ್ನು ಈ ನಾಲ್ಕನೇ ಕೆಟಗರಿಯ ದೇಶದ ಪಟ್ಟಿಯಲ್ಲಿ ತಂದು ನಿಲ್ಲಿಸಿದ್ದಾನೆ. ಕೊಟ್ಟ ಮೂರಾಣೆ ದುಡ್ಡಿನ ಗರ್ವದಿಂದ ನಾವು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹಣದ ನೆರವನ್ನು ನೀಡುತ್ತಾ ತಪ್ಪುಮಾಡುತ್ತಿದ್ದೇವೆ ಎನುತ ಸಣ್ಣತನದ ಮಾತನಾಡುತ್ತಾನೆ. ತಾನೇ ರಾಜನೆಂಬಂತೆ ಸಿಕ್ಕ ಸಿಕ್ಕ ಅಂತಾರಾಷ್ಟ್ರೀಯ ವಾಗ್ವಾದಗಳಿಗೆ ಮೂಗನ್ನು ತೂರಿಸುತ್ತಾ, ದ್ವೇಷದ ಜ್ವಾಲೆಯನ್ನು ಹೊತ್ತಿಸುತ್ತಾ, ತನ್ನ ಕಳ್ಳತನವನ್ನು ಮರೆಮಾಚಿಕೊಳ್ಳಲು ಇತರ ದೇಶಗಳ ಮೇಲೆ ಗೂಬೆಯನ್ನು ಕೂರಿಸುತ್ತಾ, ಅರಚುತ್ತಾ, ಬೆದರಿಸುತ್ತ, ಶ್ರೀಮಂತ ಅಪ್ಪನ ಪುಡಾರಿ ಮಗನಂತನಾಗಿದೆ ಇಂದು ಟ್ರಂಪ್ ಆಡಳಿತ. ಇಡೀ ಭೂಮಂಡಲವನ್ನೇ ತನ್ನ ನೌಕಾನೆಲೆಯ ತುಣುಕುಗಳನ್ನಾಗಿ ಮಾಡಿಕೊಳ್ಳುವ ಸಲುವಾಗಿಯೂ, ತನ್ನ ದೇಶದ ತೈಲಕ್ಕೆ ಅಂತರಾಷ್ಟ್ರಿಯ ಮಟ್ಟದಲ್ಲಿ ಬೇಡಿಕೆ ಹೆಚ್ಚಾಗಿಸಿಕೊಳ್ಳಲೋ, ನಾನಿದ್ದರೆ ಮಾತ್ರ ಇಂದು ವಿಶ್ವಮಾರುಕಟ್ಟೆ ನೆಡೆಯುವುದು ಎಂಬ ಭ್ರಮೆಯನ್ನು ಹುಟ್ಟುಹಾಕಲು ಅವಣಿಸುತ್ತಿರುವ ಈ ಆಸಾಮಿ ಕೊನೆಗೆ ಇದು ಸಾಧ್ಯವಿಲ್ಲ ಎಂಬುದನ್ನು ಮನಗಂಡಾಗ ಬಳಸುತ್ತಿರುವ ಕೊನೆಯ ಅಸ್ತ್ರಗಳೇ 'ಆರ್ಥಿಕ ದಿಗ್ಬಂಧನ' ಹಾಗು 'ಆರ್ಥಿಕ ನೆರವಿನ ಮೊಟಕುಗೊಳಿಸುವಿಕೆ'. ಅದರಲ್ಲೂ ಆರ್ಥಿಕ ನೆರವಿನ ಮೊಟಕುಗೊಳಿಸುವಿಕೆಯನ್ನು ಆತ ಹೇಳುವ ರೀತಿಯನ್ನು ನೋಡಿದರೆ ಇಂದು ವಿಶ್ವದ ಬಡದೇಶಗಳಿಗೆಲ್ಲವೂ ಈತನೊಬ್ಬನೇ ಅನ್ನಧಾತನೇನೋ ಎನ್ನುವ ಧಾಟಿಯದ್ದಾಗಿರುತ್ತದೆ. ಅಷ್ಟಾಗಿಯೂ ಇಂದು ಅಮೇರಿಕ ವಿದೇಶಗಳಿಗೆ ಕೊಡುವ ಆರ್ಥಿಕ ನೆರವು ಎಷ್ಟಂತೀರಾ, ಅದು ತನ್ನ ಒಟ್ಟು ಜಿಡಿಪಿಯ 0.7% ಮಾತ್ರ! ಇದು ಆರ್ಥಿಕವಾಗಿ ಸಣ್ಣವರಾದರೂ ಮನಸ್ಸಿನಿಂದ ದೊಡ್ಡವರಾದ ಸ್ವೀಡನ್, ನಾರ್ವೆಯ ಶೇಕಾಡುವರುವಿಗೆ ಹೋಲಿಸಿದರೆ ತೀರಾನೇ ಕಡಿಮೆ ಎಂಬುದು ಅಮೇರಿಕಾದ ಅಧ್ಯಕ್ಷನಿಗೇನು ತಿಳಿಯದ ವಿಚಾರವಲ್ಲ. ಅಷ್ಟಾಗಿಯೂ ಈತ ಸಾಕು ಮಕ್ಕಳಿಗೆ ಆಸ್ತಿಯ ಹಕ್ಕಿಲ್ಲವೇನೋ ಎಂಬಂತೆ ಅಭಿವೃದ್ದಿಶೀಲ ರಾಷ್ಟ್ರಗಳಿಗೆ ನಮ್ಮ ಆರ್ಥಿಕ ನೆರವನ್ನು ಮೊಟಕುಗೊಳಿಸಬೇಕು ಎಂಬಂತಹ ಬಾಲಿಶ ಹೇಳಿಕೆಗಳನ್ನು ಕೊಡುವಾಗ ಈತನ ಬೆಂಬಲಿಗರು ಕುಡಿದು ಕುಪ್ಪಳಿಸಲು ಖರ್ಚು ಮಾಡುವ ಒಟ್ಟು ಹಣದಿಂದಲೇ ಆಫ್ರಿಕಾದ ಯಾವುದಾದರೊಂದು ಜಿಲ್ಲೆಯನ್ನು ವರ್ಷವಿಡೀ ಬೆಳಗಬಹುದೇನೋ?!

ಅದು ಹಾಗಿರಲಿ. ಇಂದು ಜಾಗತಿಕವಾಗಿ ಜರುಗುತ್ತಿರುವ ವಿಶ್ವದ ಹತ್ತಾರು ಯುದ್ಧಗಳಲ್ಲಿ ಕನಿಷ್ಠ ಒಂದರಲ್ಲಿಯೂ ಅಮೇರಿಕಾದ ಪಾತ್ರ ಇಲ್ಲದಂತಿಲ್ಲ. ಅಲ್ಲದೆ ಕೈಕುಲುಕಿ ಚರ್ಚಿಸಿ ಕೊನೆಗೊಳ್ಳಬಹುದಾದ ಅದೆಷ್ಟೋ ವಿವಾದಗಳಿಗೆ ಈ ದೇಶ ಬೆಂಕಿ ಹಚ್ಚಿ ಕಾಲುಕಿತ್ತಿರುವ ಹತ್ತಾರು ನಿದರ್ಶನಗಳು ಇಂದು ನಮ್ಮ ಮುಂದಿವೆ. ಒಂದೆಡೆ ಯುದ್ದಗುಂಡುಗಳ ಸುರಿಮಳೆಯನ್ನು ಸುರಿಸುತ್ತಾ ತಕಥೈ ಕುಣಿಯುವ ದೇಶದಿಂದ ಶಾಂತಿ ನೆಮ್ಮದಿಯ ಮಾತುಗಳು ದುಸ್ವಪ್ನವೇ ಸರಿ. ಇಂತಹ ಯುದ್ಧಪ್ರಿಯ ನಾಯಕನ ಆಡಳಿತದ ಪ್ರಸ್ತುತ ಅಮೇರಿಕ, ತಾನು ಹೋದಲೆಲ್ಲ ಗುಡುಗಿ ಗುಂಡಾಂತರ ಮಾಡಿ ಅಲ್ಲಿನ ಜನಜೀವನವೆನ್ನಲ್ಲದೆ ಸಸ್ಯ ಸಂಕುಲವನ್ನೂ ಕಪ್ಪು ಹೊಗೆಯೊಳಗೆ ತಳ್ಳಿ ಬರುವುದು ಸಾಮನ್ಯವಾದ ಸಂಗತಿಯಾಗಿದೆ. ಈ ದೇಶ ಅಂತಹ ದೇಶಗಳ ಅಭಿವೃದ್ಧಿಗೆ ಅದೆಷ್ಟೇ ಪರಿಹಾರವನ್ನು ಕೊಟ್ಟರು ಸಾಲದು. 60ರ ದಶಕದ ವಿಯೆಟ್ನಾಂ ಯುದ್ಧದಲ್ಲಿ ಸ್ಥಳೀಯ ಪಡೆಗಳ ಹಲವು ಬಗೆಗಳ ಕಾಡಿನ ಯುದ್ಧವನ್ನು ಎದುರಿಸಲಾಗದೆ ನರಿಬುದ್ದಿಯನ್ನು ಅನುಸರಿಸಿದ ಅಮೇರಿಕ ವಿಯೆಟ್ನಾಂ ಸೈನಿಕರು ಅಡಗಿ ಕುಳಿತಿದ್ದ ಕಾಡಿನ ಮೇಲೆಲ್ಲಾ ‘ಏಜೆಂಟ್ ಆರೆಂಜ್’ ಎಂಬ ರಾಸಾಯನಿಕವನ್ನು ಸುರಿದು ಮಾಡಿರುವ ಅನಾಹುತವನ್ನು ಕಲ್ಪಿಸಲು ಸಾಧ್ಯವಲ್ಲ. ಆ ರಾಸಾಯನಿಕ ಅಂದು ಸಾವಿರಾರು ವಿಯೆಟ್ನಿಗರ ಜೀವ ಬಲಿಯನ್ನು ಪಡೆದುಕೊಂಡಿತಲ್ಲದೆ ಲಕ್ಷಾಂತರ ಜನರನ್ನು ಕ್ಯಾನ್ಸರ್ ಹಾಗು ಚರ್ಮದ ಖಾಯಿಲೆಗಳೊಟ್ಟಿಗೆ ಮಾನಸಿಕವಾಗಿಯೂ ಹಿಂಸಿಸಿತು. ಅದಕ್ಕಿಂತ ಮಿಗಿಲಾಗಿ ಅಂದು ಈ ರಾಸಾಯನಿಕದಿಂದ ಹೇಳಹೆಸರಿಲ್ಲದೆ ಮರೆಯದ ಹಸಿರುಗಾಡಿನ ಪ್ರದೇಶ ಬರೋಬ್ಬರಿ 31 ಲಕ್ಷ ಹೆಕ್ಟರ್!! ಅಲ್ಲದೆ ಎರಡನೇ ಮಹಾಯುದ್ಧದಲ್ಲಿ ಜಪಾನಿನ ಹಿರೋಷಿಮಾ ಹಾಗು ನಾಗಸಾಕಿ ನಗರಗಳ ಮೇಲೆ ಮಾನವೀಯತೆಯ ಎಲ್ಲ ಎಲ್ಲೆಯನ್ನು ಮೀರಿ ಅಣುಬಾಂಬನ್ನು ಎಸೆದು ನೆಡೆಸಿದ ಮಿಲಿಯನ್ಗಟ್ಟಲೆ ಜೀವಹಾನಿಗಳನ್ನು ಮುಂದೆ ಸಾವಿರವರ್ಷಗಳ ನಂತರವೂ ಖಂಡಿಸಲಾಗುತ್ತದೆ. ಇನ್ನು ಅಫ್ಘಾನಿಸ್ಥಾನ, ಸಿರಿಯಾ ಹಾಗು ಮಧ್ಯಪ್ರಾಚ್ಯದ ಹಲವೆಡೆ ಅಮೇರಿಕಾದ ಸೇನೆಗಳು ನೆಡೆಸಿರುವ ಧಾಂದಲೆಯ ಪುರಾವೆಗಳು ಒಂದೇ ಎರಡೇ. ಇಂತಹ ಅಮೆರಿಕವನ್ನು 'MAKE AMERICA GREAT AGAIN! ' ಎಂಬ ಸ್ಲೋಗನ್ನಿನೊಟ್ಟಿಗೆ ಗೆದ್ದ ಟ್ರಂಪ್ ನ ಪ್ರಕಾರ ರಾಶಿ ಕೋಟಿ ಜೀವಗಳನ್ನು ಬಲಿಪಡೆದು ದೊಡ್ಡವನು ಎನಿಸಿಕೊಂಡ ಹಾಗೆ ಮತ್ತದೇ ನರಯಜ್ಞವನ್ನು ಮಾಡಿ ಮಗದೊಮ್ಮೆ ಗ್ರೇಟ್ ಎಂದು ಕರೆಸಿಕೊಳ್ಳುದಾಗಿದೆ ಎನಿಸುತ್ತದೆ. ಇಂತಹ ನಿರ್ಧಯಿ ದೇಶದಿಂದ ಇಂದು ವಿಶ್ವದ ಮೂಲೆ ಮೂಲೆಗಳಲ್ಲಿಯೂ ಜರುಗಿದ ಅನಾಹುತಗಳಿಗೆ ಪರಿಹಾರವನ್ನು ಪರಿಹಾರವಲ್ಲದೆ ದಂಡದ ರೂಪದಲ್ಲಿ ಪಡೆಯಬೇಕು. ಕೊಡದಿದ್ದರೆ ಕೊಬ್ಬಿರುವ ದೇಹದಿಂದ ಕಕ್ಕಿಸಬೇಕು!

ಇನ್ನು ಇಂತಹ ದೇಶಗಳು ಕೊಡುವ ತೃಣಮಾತ್ರದ ಆರ್ಥಿಕ ಸಹಾಯ ಯಾವ ದೇಶವನ್ನಾಗಲಿ ಇಂದು ಅಭಿವೃದ್ಧಿಯ ಉತ್ತುಂಗಕ್ಕೆ ತಂದು ನಿಲ್ಲಿಸಿದೆ? ಅಭಿವೃದ್ಧಿ ಹೊಂದುತ್ತಿರುವ ದೇಶಗಳೆಂದರೆ ಹೆಚ್ಚಾಗಿ ಅದು ಅಧಿಕಾರಿಗಳ ಮೋಸ, ಕಪಟ, ಲಂಚಗುಳಿತನ ಹಾಗು ಭ್ರಷ್ಟತೆಯ ವಿರುದ್ದದ ಹೋರಾಟವೇ ಆಗಿರುತ್ತದೆ. ಇಂತಹ ದೇಶಗಳಿಗೆ 'ಇಗೋ ತಗೋಳಿ' ಎನುತ ಜಾತ್ರೆಗೆ ಹೊರಡುವ ಹುಡುಗರ ಕೈಗೆ ಚಿಲ್ಲರೆಯನ್ನು ಸುರಿದಂತಹ ನೆರವನ್ನು ಕೊಟ್ಟರೆ ಆದರ ಪೂರ್ಣ ಪ್ರಮಾಣದ ಸದ್ಭಳಕೆಯಾಗದಿರುವುದು ಬೇರೆಯ ವಿಚಾರವೇ. ಆದರೆ ಅಭಿವೃದ್ಧಿ ಹೊಂದಿದ ಬಹಳಷ್ಟು ದೇಶಗಳು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೀಗೆ ನೆರವನ್ನು ಕೊಡುವ ಹಿಂದಿರುವ ಚಾಣಾಕ್ಷ ನೀತಿ ಇಂದು ಯಾರಿಗೂ ಗೊತ್ತಿರದ ವಿಷಯವೇನಲ್ಲ. ನನಗೊಂದು ನೌಕಾನೆಲೆ ಆಗಬೇಕು, ಯುದ್ಧ ಸಮಯದಲ್ಲಿ ತುರ್ತು ಸಹಾಯ ಸಿಗಬೇಕು, ವೀಸಾ ನಿಯಮಾವಳಿಗಳಲ್ಲಿ ನಮ್ಮವರಿಗೆ ರಿಯಾಯಿತಿ ದೊರಕಬೇಕು, ಆ ದೇಶದೊಟ್ಟಿಗೆ ವ್ಯಾಪಾರವನ್ನು ಮಾಡಬಾರದು, ಈ ದೇಶದಿಂದ ತೈಲವನ್ನು ಆಮದುಮಾಡಿಕೊಳ್ಳಬಾರದೆಂಬ ಸಾಲು ಸಾಲು ಕಂಡೀಷನ್ಗಳು ಆ ಮುಖೇನ ಉದ್ಭವಿಸುತ್ತವೆ. ಇನ್ನು ಹಣವೆಂದರೆ ಊಟ ಕಾಣದೆ ಎಷ್ಟು ದಿನಗಳಾದವೋ ಎಂಬಂತೆ ಬಾಯಿ ಬಿಡುವ ದೇಶಗಳು ಮುಂದೊಂದು ದಿನ ಬಂದೆರಗುವ ಆಪತ್ತನ್ನೂ ಲೆಕ್ಕಿಸದೆ 'ಜೈ' ಎನುತ ಅಂತಹ ದೇಶಗಳು ವಿಧಿಸುವ ಷರತ್ತುಗಳಿಗೆಲ್ಲಕ್ಕೂ ಒಪ್ಪಿಬಿಡುತ್ತವೆ. ಪರೋಕ್ಷವಾಗಿ ಜಗತ್ತನ್ನು ಆಕ್ರಮಿಸುವ ಜಾಣತನ ಇದಕ್ಕಿಂತ ಬೇರೊಂದಿದೆಯೇ? ಒಟ್ಟಿನಲ್ಲಿ ಆರ್ಥಿಕ ನೆರವು ಎಂಬ ಹೆಸರಿನಲ್ಲಿ ತನ್ನ ಇರುವಿಕೆಯನ್ನು ಗಟ್ಟಿಗೊಳಿಸಿಕೊಂಡು ಬೆಳೆಯುತ್ತಿರುವ ಅಮೇರಿಕ ಇಂದು ದೇಶಗಳ ಮೇಲೆ ಮಾಡಿರುವ ಆ ಡಿಪಾಸಿಟ್ ಗಳ ಪೂರ್ಣ ಪ್ರಮಾಣದ ನೆರವನ್ನು ಪಡೆಯುತ್ತಿದೆ ಅಷ್ಟೇ. ಇಂದು ಭಾರತಕ್ಕೆ ಅದು ಕೊಡುತ್ತಿರುವ ಆರ್ಥಿಕ ಸಹಾಯವನ್ನು ಮೊಟಕುಗೊಳಿಸಬೇಕು ಎನ್ನುತ್ತಿದೆ. ಆದರೆ ಸುಮಾರು ಆರೇಳು ವರ್ಷಗಳ ಹಿಂದೆ ಮನಮೋಹನ್ ಸಿಂಗ್ರ ಸರ್ಕಾರವಿದ್ದಾಗ ಕಡ್ಡಿ ಮುರಿದಂತೆ 'ನಿಮ್ಮ ನೆರವು ನಮಗೆ ಬೇಕಾಗಿಲ್ಲ' ಎಂದರೂ ಇಂದಿನವರೆಗೂ ಹಣವನ್ನು ನೀಡುತ್ತಾ ಬಂದಿದೆ ಎಂದರೆ ಈ ಕಪಟ ನೆರವಿನ ಹಿಂದಿರುವ ಸ್ವಹಿತಾಸಕ್ತಿ ಎಷ್ಟಿದೆ ಎಂದು ನಾವು ಅರಿಯಬೇಕು.

ಅಲ್ಲದೆ ಅಮೇರಿಕಾದ ಈ ನೀತಿ ಅಭಿವೃದ್ಧಿಹೊಂದಿದ ದೇಶಗಳೊಟ್ಟಿಗಾದರೆ ಅದೇ ರಷ್ಯಾ, ಚೀನಾ,ಆಸ್ಟ್ರೇಲಿಯಾದಂತಹ ದೇಶಗಳೊಟ್ಟಿಗೆ ಬೇರೇನೇ ತರಹದ್ದಾಗಿರುತ್ತದೆ. ಎಷ್ಟಿದ್ದರೂ ಅವು ಮುಂದುವರೆದ ದೇಶಗಳೆಂದು ಬಲ್ಲ ಅಮೇರಿಕ ಅಂತಹ ದೇಶಗಳನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಲು ಬಳಸುವ ಅಸ್ತ್ರ ಅಲ್ಲಿಂದ ಆಮದಾಗುವ ವಸ್ತುಗಳ ಮೇಲೆ ಎರಾಬಿರಿ ಸುಂಕವನ್ನು ಜಡಿಯುವುದು. ಆದರೆ ಆ ಸುಂಕ ಜಡಿದ ಕತೆಯ ಹಿಂದಿನ ಅಸಲಿಯತ್ತು ಬೇರೇನೇ ಇರುತ್ತದೆ. ಎಲ್ಲಿಯವರೆಗೂ ಆ ದೇಶ ತನ್ನ ತಾಳಕ್ಕೆ ತಕ್ಕಂತೆ ಕುಣಿಯುವುದಿಲ್ಲವೋ ಅಲ್ಲಿಯವರೆಗೂ ಇಂತಹ ಇತ್ತಲಬಾಗಿಲ ಕೆಲಸವನ್ನೇ ಅಮೇರಿಕ ಅದರಲ್ಲೂ ಟ್ರಂಪ್ ಆಡಳಿತ ಮಾಡಿಕೊಂಡು ಬಂದಿದೆ. ಅಂದರೆ ವಿಶ್ವದ ಯಾವುದೇ ದೇಶವೂ ತನ್ನ ಸಮನಾಗಿ ಬೆಳೆಯಬಾರದು, ನನ್ನ ನೆಡೆಯನ್ನು ಪ್ರೆಶ್ನಿಸಬಾರದು ಎಂಬುದಷ್ಟೇ ಆಗಿದೆ. ಇಲ್ಲವಾದರೆ 'ಆರ್ಥಿಕ ದಿಗ್ಬಂದನ' 'ನೆರವಿನ ಮೊಟಕುಗೊಳಿಸುವಿಕೆ' 'ಸುಂಕ ಏರಿಕೆ' ಎಂಬ ಪೆಟ್ಟುಗಳಲಿಂದ ಅದನ್ನು ಸದೆಬಡಿಯುತ್ತದೆ.

ಇಂತಹ ಕಿರಾತಕ ದೇಶಗಳ ನಡುವೆ ವಿಶ್ವಶಾಂತಿ, ಸಕಲಲೋಕಕಲ್ಯಾಣ ಎನುತ ನೆಡೆಯುತ್ತಿರುವ ಭಾರತದಂತಹ ದೇಶಗಳಿಗೆ ಎದುರಾಗುವ ಸಂದಿಘ್ನ ಸನ್ನಿವೇಶಗಳು ಒಂದೆರಡಲ್ಲ. ಅಸಲಿಯತ್ತು ಹೀಗಿರುವಾಗ ಪ್ರಸ್ತುತ ಕಾಲದಲ್ಲಿ ನಾವುಗಳು ಸ್ವಾವಲಂಬಿಗಳಾಗುವ ಜರೂರು ಅದೆಷ್ಟರಮಟ್ಟಿಗಿದೆ ಎಂಬುದನ್ನು ತಿಳಿಸಿ ಹೇಳಬೇಕಾಗಿಲ್ಲ. ಅತಿವೃಷ್ಟಿ ಹಾಗು ಅನಾವೃಷ್ಟಿಯ ಸಂದರ್ಭದಲ್ಲಷ್ಟೇ ನಾವುಗಳು ಇತರ ದೇಶಗಳ ನೆರವು ಬೇಡವೆಂದರೆ ಸಾಲದು. ಯುದ್ದೋಪಕರಣಗಳಿನಿಂದಿಡಿದು ಒಂದು ಅತ್ಯಾಧುನಿಕ ತಂತ್ರಜ್ಞಾನಗಳಿಗೂ ಇತರೆ ದೇಶಗಳನ್ನು ಅವಲಂಬಿಸುವುದನ್ನೂ ನಾವು ಮೊಟಕುಗೊಳಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರಗಳು ಯಾವುದೇ ಇರಲಿ, ಸ್ವಾವಲಂಬಿ ಯೋಜನೆಗಳಿಗೆ ಚಿಂತಿಸತೊಡಗಿದರೆ ಅವುಗಳನ್ನು ಮುಕ್ತವಾಗಿ ಬೆಂಬಲಿಸಬೇಕು. ಇಲ್ಲವಾದಲ್ಲಿ ಪ್ರಸ್ತುತ ಕಪಟ ದೊಡ್ಡಣ್ಣನ ಜಮಾನದಲ್ಲಿ ನಾವುಗಳು ಮೂರನೇ ಕೆಟಗರಿಯ ದೇಶವಾಗಿ ಪರದಾಡುವ ಸನ್ನಿವೇಶ ಬರಬಾರದಂತೇನಿಲ್ಲ!




Friday, September 7, 2018

ಬ್ರಿಟನ್ನಿಗರ ತಪ್ಪನ್ನೇ ಪುನರಾವರ್ತಿಸಿದರೆ ಅಮೇರಿಕನ್ನರು?!

ಜೂನ್ 23, 2016. ಎಡಮಗ್ಗುಲಲ್ಲಿ ಎದ್ದ ಬ್ರಿಟನ್ ಅಂದು ಮಹತ್ವದಾದೊಂದು ಜನಾದೇಶವನ್ನು ಸಂಗ್ರಹಿಸಿತು . ಇಡೀ ವಿಶ್ವದಾದ್ಯಂತ ದಿಗಿಲು ಹುಟ್ಟಿಸಿದ ಸುದ್ದಿಯೊಂದು ತನ್ನ ತಾರ್ಕಿಕ ಕೊನೆಯನ್ನು ತಲುಪುವ ಹಂತದಲ್ಲಿತ್ತು. ಬ್ರಿಟನ್, ಯೂರೋಪಿಯನ್ ಯೂನಿಯನ್ (EU) ನಿಂದ ಹೊರಬರಬೇಕೋ ಬೇಡವೋ ಎಂಬ ವಿಷಯದ ಕುರಿತಾಗಿದ್ದ ಜನಾದೇಶದ ಆ ಫಲಿತಾಂಶ ಮಾತ್ರ ಇಡೀ ವಿಶ್ವವನ್ನಲ್ಲದೆ ಸ್ವತಃ ಬ್ರಿಟನ್ ದೇಶದ ಪ್ರಧಾನಿಯನ್ನೇ ಬೆಚ್ಚಿ ಬೀಳುವಂತೆ ಮಾಡಿತು. ಸುಮಾರು ಅರ್ಧಕ್ಕಿಂತ ಹೆಚ್ಚಿನ ಪ್ರಜೆಗಳು ಅಂದು ಹೊರಬರುವ (BREXIT) ನಿರ್ಧಾರಕ್ಕೆ ಹಸಿರುನಿಶಾನೆಯನ್ನು ತೋರಿಸಿದರು. ಡೇವಿಡ್ ಕಮೆರೋನ್ ಕೂಡಲೇ ತನ್ನ ಪ್ರಧಾನಿ ಸ್ಥಾನಕ್ಕೆ ರಾಜಿನಾಮೆಯನ್ನು ನೀಡಿ ಸದ್ದಿಲ್ಲದೇ ತೆರೆಮರೆಗೆ ಸರಿದ. ಆಗ ಶುರುವಾದದ್ದು ನೋಡಿ ನಿಜವಾದ ಹಗ್ಗಜಗ್ಗಾಟ. ಗುಂಡು ನಳಿಕೆಯಿಂದ ಹಾರಿದ ಮೇಲೆ ತಪ್ಪಾಯಿತೇನೋ ಎಂಬಂತೆ ಹಣೆಯನ್ನು ಚಚ್ಚಿಕೊಂಡವರ ಸಾಲಿಗೆ ಸೇರಿದರು, ಜನಾದೇಶವನ್ನು ನೀಡಿದ ಜೇಂಟಲ್ಮ್ಯಾನ್ ಗಳು. ಅದಾಗಿ ಇಂದಿಗೆ ಎರಡು ವರ್ಷಗಳು ಕಳೆದಿವೆ. ಇಷ್ಟರಲ್ಲಾಗಲೇ ತನ್ನ ನಿರ್ಧಾರಕ್ಕೆ ಪೂರಕವಾಗಿ ಗುಂಪಿನಿಂದ ಹೊರಬಂದಿರಬೇಕಿದ್ದ ಬ್ರಿಟನ್ ಇನ್ನೂ ಕೂಡ ಮೀನಾಮೇಷ ಎಣಿಸುತ್ತಲಿದೆ. ನೀರಿನ ಮೇಲಿನ ಗುಳ್ಳೆಯಂತೆ ಕ್ಷಣಮಾತ್ರದಲ್ಲಿ ಹುಬ್ಬಿಕೊಂಡ ಬ್ರಿಟನ್ನಿಗರ ಹುಮ್ಮಸ್ಸು ಇಂದು ಏನಾಗಿದೆ? 'ಜೋಷ್' ನಲ್ಲಿ ಕಳೆದುಕೊಂಡ 'ಹೊಷ್' ಈಗ ಬಂದರೆಷ್ಟು ಹೋದರೆಷ್ಟು? ನಾನು, ನನ್ನದು ಎನುತ ಎಲ್ಲರಿಂದ ಪ್ರತ್ಯೇಕವಾಗಬಯಸಿದ ನಿರ್ಧಾರ ಅದೆಷ್ಟರ ಮಟ್ಟಿಗೆ ಸರಿಯೋ ಕಾದು ನೋಡಬೇಕು.

BREXIT ನ ಕೆಲವೇ ತಿಂಗಳ ಅವಧಿಯಲ್ಲಿ ಅಮೆರಿಕದಲ್ಲೊಂದು ನೆಲ ‘ಕಂಪಿಸದ’ ಭೂಕಂಪವೊಂದು ಜರುಗಿತು! 2016 ರ ಅಧ್ಯಕ್ಷರ ಚುನಾವಣೆಯಲ್ಲಿ ರಿಪಬ್ಲಿಕ್ ಪಕ್ಷದ ಡೊನಾಲ್ಡ್ ಟ್ರಂಪ್ ಮರಳುಗಾಡಿನ ಮಾನ್ಸೂನ್ ನಂತೆ ಹುಚ್ಚು ಮತಗಳ ಹೆಚ್ಚು ಸಂಖ್ಯೆಯಲ್ಲಿ ಜಯಗಳಿಸಿದ. ಕೆಲವರಿಗಂತು ಅದು ಇಂದಿಗೂ ನಂಬಲಾರದ ವಿಷಯವೇ ಸರಿ. ರಿಯಾಲಿಟಿ ಷೋ ನಲ್ಲಿ ಡೊಂಬರಾಟ ಕುಣಿಯುವ ಕ್ಯಾರೆಕ್ಟರ್ ಒಂದರ ನಕಲೆನಿಸುವ ಈತನೂ ಒಬ್ಬ ಅಧ್ಯಕ್ಷ ಆಕಾಂಕ್ಷಿಯೇ ಎಂದು ಅಂದು ರಿಪಬ್ಲಿಕ್ ಪಕ್ಷವನ್ನು ಕೇಳಿದವರೆಷ್ಟೋ. ಲಿಂಕನ್, ರೂಸ್ವೆಲ್ಟ್, ಬುಷ್ ರಂತಹ ನಾಯಕರನ್ನು ಕೊಟ್ಟ ಈ ಪಕ್ಷಕ್ಕೆ ಇಂತಹ ಒಬ್ಬ ವ್ಯಕ್ತಿಯ ಬಲದಲ್ಲಿ ಚುನಾವಣೆಯನ್ನು ಗೆಲ್ಲುವ ದುಸ್ಥಿತಿ ಬರಬಾರದಿತ್ತು ಎಂದವರು ಮತ್ತೆಷ್ಟು ಮಂದಿಯೋ. ಅದೇನೇ ಇದ್ದರು ಅಂದು ಜನರು ಮಣೆಹಾಕಿದ್ದು 'ಔಟ್ ಆಫ್ ದ ಬಾಕ್ಸ್' ಟ್ರಂಪ್ ಎಂಬ ಮುದುಕನಿಗೆಯೇ. 'ಅಮೇರಿಕ ಫಸ್ಟ್' ಎಂಬ ಎರಡಕ್ಷರದ ಪದಗಳ ಬಲದ್ಲಲ್ಲಿಯೇ ಅಂದು ಆತ ಚುನಾವಣೆಯನ್ನು ಗೆದ್ದ. ಅದೂ ಕೂಡ ಅಮೆರಿಕವನ್ನು ಮೊದಲುಗೊಳಿಸುವ, ಎಲ್ಲ ದೇಶಗಳಿಂದ ಪ್ರತ್ಯೇಕಿಸುವ, ನಾನು ನಾನೆಂಬ ಮೊಂಡುತನದ ಚುನಾವಣಾ ಪ್ರಚಾರವಾಗಿದ್ದಿತು. ಜನಗಳಿಗೂ ಹಳೆಯ ರಾಗ ಮತ್ತದೇ ತಾಳವನ್ನು ಕೇಳಿ 'ಬೋರ್' ಆಗಿತ್ತೇನೋ ಎಂಬಂತೆ ಬಹುಪಾಲು ಮಂದಿ ಹಿರಿ ಮುದುಕನೊಬ್ಬನಿಗೆ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲು ಕೊಟ್ಟರು. ಆದರೆ ಅಂದು ಈತನಿಗೆ ಬಿದ್ದ ಓಟುಗಳಲ್ಲಿ ವಿಮರ್ಶಕರು ಹಾಗು ವಿಚಾರವಂತರ ಓಟುಗಳೆಷ್ಟು, ಹಿರಿಯ ನಾಗರೀಕರ ಓಟುಗಳೆಷ್ಟು, ಬಿಸಿನೆಸ್ ಮ್ಯಾನ್ಗಳ ಓಟುಗಳೆಷ್ಟು, ನೌಕರರ ಓಟುಗಳೆಷ್ಟು ಹಾಗು ಪುಂಡ ಪೋಕರಿಗಳ ಓಟುಗಳೆಷ್ಟು ಎಂಬುದನ್ನು ಪ್ರತ್ಯೇಕಿಸಿ ಎಣಿಸಿ ನೋಡಿದರೆ ಬಹುಷಃ ಅಮೇರಿಕಾದ ಭವಿಷ್ಯವನ್ನು ನಿರ್ಧರಿಸಿದವರ್ಯಾರು ಎಂಬುದು ತಿಳಿಯುತ್ತದೇನೋ!

ವಿಶ್ವದಲ್ಲೇ ಅತಿಹೆಚ್ಚಿನ ಹಣವನ್ನು (ಭಾರತದ ಐದು ಪಟ್ಟು - 140 ಲಕ್ಷ ಕೋಟಿಗಳು) ತನ್ನ ಮಿಲಿಟರಿಗಾಗಿಯೇ ಸುರಿಯುವ ಧನವಂತ ದೇಶದ ಅಧಿಕಾರದ ಚುಕ್ಕಾಣಿಯನ್ನು WWE ಬಡಿದಾಟದ ಕಚ್ಚಾಟದಲ್ಲಿ ಹುಚ್ಚನಂತಾಗುತ್ತಿದ್ದ ವ್ಯಕಿಯೊಬ್ಬನ ಕೈಗೆ ಕೊಟ್ಟ ಅಲ್ಲಿನ ಬಹುಪಾಲು ಸತ್ಪ್ರಜೆಗಳೂ ಸಹ ಬ್ರಿಟನ್ನಿನ ಪ್ರಜೆಗಳಂತೆಯೇ ಇಂದು ಕೈ-ಕೈಯನ್ನು ಹಿಸುಕಿಕೊಳ್ಳುತ್ತಿದ್ದಾರೆ. ಮುಸ್ಲಿಂ ಜನಾಂಗ ಹಾಗು ಅಂತಹ ದೇಶಗಳ ವಿರುದ್ಧ ಆಕ್ರೋಶ, ನ್ಯೂಕ್ಲಿಯರ್ ಸುಸಜ್ಜಿತ ದೇಶಗಳ ಜೊತೆಗೆ ವೈಮಸಸ್ಸು, ಇಂದೂ ಮುಂದೂ ನೋಡದ ದೇಶ ದೇಶಗಳನ್ನು ಜರಿಯುವ ಬೇಕಾಬಿಟ್ಟಿ ಟ್ವೀಟ್ ಗಳು, ಇರಾನ್ ಹಾಗು ಚೀನಾದೊಟ್ಟಿಗಿನ ಟ್ರೇಡ್ ವಾರ್, ತಟಸ್ಥ ಭಾರತಕ್ಕೇ ಬುದ್ದಿ ಹೇಳುವಂತ ಹುಂಬತನ, ವಿಶ್ವವೇ ಸಮ್ಮತಿಸಿದ ಪ್ಯಾರಿಸ್ ಒಪ್ಪಂದದಿಂದ ಹೊರಬರುವಿಕೆ ಹಾಗು ಮಾಲಿನ್ಯವನ್ನು ಹೆಚ್ಚುಮಾಡುವ ಕಾರುಗಳ ತಯಾರಿಕೆಗೂ ಅನುಮತಿ ನೀಡುವಿಕೆ, ಆರೋಗ್ಯ ವಿಮೆಯನ್ನು ಮೊಟಕುಗೊಳಿಸಿವಿಕೆ, ವೈಟ್ ಹೌಸ್ ನ ಹಿರಿಯ ಅಧಿಕಾರಿಗಳೊಟ್ಟಿಗೆ ವೈಮನಸ್ಸು, ಅವರುಗಳ ರಾಜೀನಾಮೆ, ದೇಶದ ನ್ಯಾಯಾಧೀಶರೊಟ್ಟಿಗೆ, ಕೋರ್ಟುಗಳೊಟ್ಟಿಗೆ ವಾಗ್ವಾದ, ರಾಜಕೀಯವೇನೆಂದೇ ಅರಿಯದ ಮಗ, ಮಗಳು, ಅಳಿಯರೆಲ್ಲರಿಗೂ ವೈಟ್ ಹೌಸಿನ ಕೀಗುಚ್ಛವನ್ನು ನೀಡಿ ರಾಜಾಂತ್ರಿಕ ಧೂತರನ್ನಾಗಿ ದೇಶಾದಿಗಳಿಗೆ ಕಳುಹಿಸುವುದು... ಒಂದೇ ಎರಡೇ. ಅಧ್ಯಕ್ಷನಾದ ಕೇವಲ ಕೆಲವೇ ತಿಂಗಳುಗಲ್ಲಿ ಸಾಕು ಸಾಕಪ್ಪ ಎಂಬ ಮಟ್ಟಿಗೆ ಅಮೆರಿಕದವರನ್ನು ಆತಂಕಕ್ಕೆ ಗುರಿಮಾಡಿದನೀತ. ಉತ್ತರ ಕೊರಿಯದೊಟ್ಟಿಗೆ ನ್ಯೂಕ್ಲಿಯರ್ ವಾರ್ ಜರುಗಿ ದೇಶದ ಹವಾಯಿ ನಗರಕ್ಕೆ ಇನ್ನೇನು ಕಂಟಕ ಬಂದೆರಗಿತು ಎಂಬಂತೆ ಜನತೆಯ ಜೀವವನ್ನು ಬಾಯಿಗೆ ತಂದು ನಂತರ ತೆಪ್ಪಗಾದ ಈತನಿಂದ ವಿಶ್ವ ಇನ್ನು ಏನೇನನ್ನು ನೋಡುತ್ತದೆಯೋ ಸದ್ಯಕಂತು ತಿಳಿಯದು.

It was expected!


ಅಮೇರಿಕ ಒನ್, ಅಮೇರಿಕ ಫಸ್ಟ್, ಅಮೇರಿಕ ಗ್ರೇಟ್ ಎಂಬ ಅರಚುವಿಕೆಯಲ್ಲೇ ಗೆದ್ದ ಟ್ರಂಪ್ ನಿಂದ ಇವೆಲ್ಲ ಅತಿರೇಕಗಳು ಜರುಗಲೇ ಬೇಕಿದ್ದವು. ಹುಚ್ಚಾಸ್ಪತ್ರೆಯಲ್ಲಿ ಹುಚ್ಚನೊಬ್ಬ ಹುಚ್ಚನಂತೆ ವರ್ತಿಸದಿದ್ದರೆ ಆಸ್ಪತ್ರೆಗೆ ಬೆಲೆಯಿದೆಯೇ?! ಅಂತೆಯೇ ಅಮೇರಿಕವೆಂದರೆ ಅದ್ಯಾವುದೋ ಅನ್ಯ ಗ್ರಹದಲ್ಲಿರುವ ದೇವತೆಗಳ ದೇಶಗಳೇನೋ ಎಂಬಂತೆ ಬಿತ್ತರಿಸಿತೊಡಗಿದನೀತ. ಇಲ್ಲಿಗೆ ಬರುವವರು, ಹೋಗುವವರು, ಇರುವವರು, ಸಾಯುವವರು ಎಲ್ಲರನ್ನು ಸಂಶಯ ದೃಷ್ಟಿಯಿಂದಲೇ ನೋಡುವ ಈತ ತನ್ನ ದೇಶವನ್ನು ಒಂದು ಕಾರ್ಪೊರೇಟ್ ಕಂಪನಿಯಂತೆ ಬದಲಾಗಿಸತೊಡಗಿದ್ದಾನೆ. ಆ ಬುಡ ಗಟ್ಟಿಯಿಲ್ಲದ ಕಂಪನಿಯಲ್ಲಿ ಜರುಗುವ ನಿರ್ಧಾರಗಳೆಲ್ಲವೂ ಕೇವಲ ಲಾಭ ನಷ್ಟಗಳ ಸಮೀಕರಣಗಳಷ್ಟೇ. ಮೂಲತಃ ಬಿಸಿನೆಸ್ ಪರಿವಾರದವನಾದ ಟ್ರಂಪ್ ದೇಶವನ್ನು ನೆಡೆಸುವುದೆಂದರೆ ಕೇವಲ ಕೊಡುವುದು ಹಾಗು ಕೊಟ್ಟ ದುಡ್ಡಿಗೆ ಲಾಭವನ್ನು ಪಡೆಯುವುದೆಂದಷ್ಟೇ ತಿಳಿದಿರುವ ಹಾಗಿದೆ. 'ಹಸಿರು ಮನೆ ಪರಿಣಾಮದಿಂದ' ಹೊತ್ತಿ ಉರಿಯುವಂತಾಗಿರುವ ಧರೆಯನ್ನು ತಂಪಾಗಿಸಲು ವಿಶ್ವದ ದೇಶಗಳೆಲ್ಲವೂ ಜಾತಿ, ಪಂಥ, ದ್ವೇಷ ಅಸೂಯೆಗಳೆಲ್ಲವನ್ನೂ ಮರೆತು ಒಂದಾಗಿ 'ಪ್ಯಾರಿಸ್ ಒಪ್ಪಂದ' ಎಂಬ ಮಹತ್ವದ ಒಪ್ಪಂದವನ್ನು ಮಾಡಿಕೊಂಡು ಮುನ್ನೆಡೆಯಬಯಸಿದರೆ ಟ್ರಂಪ್ ಅಧ್ಯಕ್ಷನಾದ ಕೂಡಲೇ ಚೀನಾ, ಭಾರತ ಹಾಗು ಇನ್ನಿತರ ಅಭಿವೃದ್ಧಿಶೀಲ ರಾಷ್ತ್ರಗಳ ಮಾಲಿನ್ಯ ವಿಪರೀತವಾಗಿದ್ದು ಅವುಗಳಿಗೆ ಇನ್ನೂ ಹೆಚ್ಚಿನ ನಿಯಮಗಳನ್ನು ಜಡಿಯಬೇಕು, ಅದಿಲ್ಲದೆ ಈ ಒಪ್ಪಂದ ಅಮೆರಿಕಕ್ಕೆ ಮೋಸ ಬಗೆದಂತೆ ಎಂಬ ಭಂಡ ಸಬೂಬನನ್ನು ನೀಡಿ ಒಪ್ಪಂದದಿಂದ ಹೊರಬಂದ. 'ಅಮೆರಿಕಕ್ಕೆ ಮೋಸ' ಎಂಬ ಮಾತುಗಳನ್ನು ಕೇಳಿಯೇ ಶಿಳ್ಳೆ ಚಪ್ಪಾಳೆಗಳಿಂದ ಈತನ ನಿರ್ಧಾರವನ್ನು ಅಲ್ಲಿನ ಬಹುಪಾಲು ಜನತೆಯೂ ಸ್ವಾಗತಿಸಿದರು ಮತ್ತು ವಿಶ್ವದ ಯಾವ ಮಾನದಂಡಗಳಿಲ್ಲದೆಯೇ ಪರಿಸರವನ್ನು ನಾನಾಬಗೆಯಲ್ಲಿ ಮಾಲಿನ್ಯಮಾಡತೊಡಗಿದರು.

ಡೆಮೋಕ್ರೆಟ್ ಪಕ್ಷ ಹಾಗು ಹಿಂದಿನ ಅಧ್ಯಕ್ಷ ಬರಾಕ್ ಒಬಾಮನೆಂದರೆ ನಿಂತ ನೆರಳಿಗೆ ಆಗದ ಈತನಿಗೆ ಅವರ ಪ್ರತಿಯೊಂದು ನಿರ್ಧಾರಗಳನ್ನು ತುಂಡರಿಸುವುದು ಅಥವಾ ಅದರ ತದ್ವಿರುದ್ಧವಾಗಿ ಬೇರೊಂದು ತಲೆಬುಡವಿಲ್ಲದ ನಿಯಮವನ್ನು ಜಾರಿತರುವುದಷ್ಟೇ ಕಾಯಕವಾಗಿಬಿಟ್ಟಿತು. ಕೋಟ್ಯಾನುಕೋಟಿ ಜನರ ಅರೋಗ್ಯ ವಿಮೆ (ಒಬಾಮ ಹೆಲ್ತ್ ಕೇರ್)ಯನ್ನು ಮೊಟಕುಗೊಳಿಸಿ ಆಟಕುಂಟು ಲೆಕ್ಕಕಿಲ್ಲದಂತಹ ಮತ್ತೊಂದು ವಿಮೆಯನ್ನು ಜಾರಿಗೊಳಿಸಿದ ನಂತರ ಏನುಮಾಡಬೇಕೆಂದು ಯೋಚಿಸುತ್ತ ಕುಳಿತ ಟ್ರಂಪ್ ಗೆ ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂತಿಷ್ಟು ಜಗಳವಾಡಬೇಕೆಂಬ ಬಯಕೆ ಹೆಚ್ಚಾಯಿತೆನಿಸುತ್ತದೆ. ಕೂಡಲೇ ತೈಲ ಸಂಪತ್ಭರಿತ ಮಧ್ಯಪ್ರಾಚ್ಯಾದ ದೇಶ ಇರಾನ್ನ ಮೇಲೆ ಮುಗಿಬಿದ್ದ ಟ್ರಂಪ್ ಪಡೆ ಇರಾನ್ ಈಗಲೂ ಕೂಡ ಅಲ್ಲೊಂದು ಇಲ್ಲೊಂದು ನ್ಯೂಕ್ಲಿಯರ್ ಮಿಸೈಲ್ ಗಳನ್ನು ಪರೀಕ್ಷಿಸುತ್ತಿದೆ ಹಾಗು ಇದು ಹಿಂದಿನ ಸರ್ಕಾರ ಮಾಡಿಕೊಂಡ 'ನ್ಯೂಕ್ಲಿಯರ್ ಡೀಲ್' ಗೆ ವಿರುದ್ಧವಾಗಿದ್ದು ಕೂಡಲೇ ಇರಾನ್ ನ ಮೇಲೆ ಆರ್ಥಿಕ ದಿಗ್ಬಂದನವನ್ನು ಹೇರಿ ಅದನ್ನು ಎಲ್ಲರಿಂದ ಪ್ರತ್ಯೇಕಿಸಬೇಕೆಂದು ಅರಚತೊಡಗಿದ ಅಲ್ಲದೆ ಹಾಗೆ ಮಾಡಿಯೂ ಬಿಟ್ಟ! ಸರಿ ಒಂದುಪಕ್ಷ ಇರಾನ್ ನ್ಯೂಕ್ಲಿಯರ್ ಮಿಸೈಲ್ ಗಳನ್ನು ತಯಾರುಮಾಡಿಕೊಂಡಿದೆ ಅಂದುಕೊಳ್ಳೋಣ. ಮಿಡಲ್ ಈಸ್ಟ್ ಎಂದರೆ ಇಂದು ಯುದ್ಧದ ಗೂಡಾಗಿರುವ ಪ್ರದೇಶದಲ್ಲಿ ಸ್ವಂತ ರಕ್ಷಣೆಗೆ ದೇಶವೊಂದು ಸುಸಜ್ಜಿತವಾಗುವುದರಲ್ಲಿ ತಪ್ಪೇನಿದೆ? ದೇಶ ಸುಸಜ್ಜಿತವಾಗುವುದಕ್ಕೆ ಪ್ರಸ್ತುತ ಕಾಲದಲ್ಲಿ ನೂರಾರು ಸಾವಿರಾರು ತಂತ್ರಜ್ಞಾನಗಳು, ಯುದ್ದೋಪಕರಣಗಳು ಇದ್ದರೂ ನ್ಯೂಕ್ಲಿಯರ್ ಮಿಸೈಲ್ಗಳೇ ಏಕೆ ಬೇಕೆಂಬುದು ಸಹಜವಾದ ಪ್ರೆಶ್ನೆಯೇ. ಆದರೆ ಹೀಗೆ ಪ್ರೆಶ್ನೆಯನ್ನು ಕೇಳುವ ಅಮೇರಿಕ ಅದೆಷ್ಟರ ಮಟ್ಟಿಗೆ ಸಾಚಾ? ಸಮೀಕ್ಷೆಯೊಂದರ ಪ್ರಕಾರ ಇಂದು ವಿಶ್ವದಲ್ಲೇ ಅತಿಹೆಚ್ಚಿನ ನ್ಯೂಕ್ಲಿಯರ್ ಬಾಂಬುಗಳು, ಮಿಸೈಲ್ಗಳು ಅಮೆರಿಕವೊಂದರಲ್ಲಿಯೇ ಇವೆಯಂತೆ! ವಸ್ತುಸ್ಥಿತಿ ಹೀಗಿರುವಾಗ ಇನ್ನೊಂದು ದೇಶಕ್ಕೆ ಬುದ್ಧಿಹೇಳುವ ಕಾಯಕವಾದರೂ ಅದಕ್ಕೆ ಏಕೆ? ಹೋಗಲಿ ಇದು ಆ ಎರಡು ದೇಶಗಳ ಹಣೆಬರಹ ನಾವೇಕೆ ಮೂಗು ತೂರಿಸಬೇಕೆಂದು ಸುಮ್ಮನಿಯಬಹುದು. ಆದರೆ ಈ ಯಪ್ಪಾ ಅಮೇರಿಕ ಇರಾನೊಟ್ಟಿಗೆ ಮಾತುಬಿಟ್ಟರೆ ನೀವು ಕೂಡ ಮಾತು ಬಿಡಬೇಕು ಎಂದರೆ ಕೇಳಲಾಗುತ್ತದೆಯೇ ಸ್ವಾಮಿ? ವಿಶ್ವಮಾರುಕಟ್ಟೆ ಏನು ಅಮೇರಿಕವೊಂದೇ ಬೆವರು ಸುರಿಸಿ ಬೆಳೆಸಿದ ವಲಯವೇ? ಈ ಮಾರುಕಟ್ಟೆಯಲ್ಲಿ ಎಲ್ಲರಿಗೂ ಮುಕ್ತ ಅವಕಾಶವಿದೆ. ಇಲ್ಲಿ ಎಲ್ಲರೂ ಒಂದೇ ಎನ್ನುವಾಗ ಟ್ರಂಪ್ ಎಂಬ ದೊಣ್ಣೆ ನಾಯಕನ ಅನುಮತಿ ಯಾರಿಗೆ ತಾನೇ ಬೇಕು?

ಇದೆ ದ್ವೇಷರಾಜಕಾರಣವನ್ನು ವಿಶ್ವಮಾರುಕಟ್ಟೆಯ ಕಿಂಗ್ ಚೀನಾದ ಮೇಲೂ ಬಳಸಿ ಅಲ್ಲಿಂದ ತರುವ ಅಲ್ಯೂಮಿನಿಯಂ ಹಾಗು ಉಕ್ಕಿನ ಮೇಲೆ ಅಗಾಧವಾಗ (35%) ಸುಂಕವನ್ನು ಜಡಿದ. ಕೂಡಲೇ ಹೆಚ್ಚೆತ್ತುಕೊಂಡ ಚೀನಾವೂ ಅಮೆರಿಕದದಿಂದ ಬರುವ ವಸ್ತುಗಳ ಮೇಲೆ ಅದೇ ಪ್ರಮಾಣದ ಸುಂಕವನ್ನು ಜಡಿಯಲು ಶುರುವಿಟ್ಟಾಗ ಅಯ್ಯಯೋ.. ಎನುತ ಒಳಗೊಳಗೇ ನಾಲಿಗೆಯನ್ನು ಕಚ್ಚಿಕೊಂಡರೂ ಹೊರಗೆಲ್ಲೂ ಅದನ್ನು ತೋರಿಕೊಳ್ಳಲಿಲ್ಲ!

ಭಾಗಶಃ ಎಲ್ಲ ದೇಶಗಳೊಟ್ಟಿಗೂ ಶಾಂತಿಯ ಸಂಬಂಧವನ್ನು ಬೆಳೆಸಿಕೊಂಡಿರುವ ಭಾರತದಂತಹ ದೇಶಕ್ಕೆ ನೀವು ರಷ್ಯಾದಿಂದ ಯುದ್ದೋಪಕರಣವನ್ನು ಖರೀದಿಸಬಾರದು, ಇರಾನ್ ನಿಂದ ತೈಲವನ್ನು ಆಮದುಮಾಡಿಕೊಳ್ಳಬಾರದು, ಪರಮಾಣು ಪರೀಕ್ಷೆಯನ್ನು ಮಾಡಿಕೊಳ್ಳಬಾರದು ಎಂಬ ಪಾಠವನ್ನು ಹೇಳುವ ಟ್ರಂಪ್ ಅಜ್ಜಪ್ಪನಿಗೆ ನಾವುಗಳು ಇಂದಿಗೂ ಸಹ ಅವರ ತಾಳಕ್ಕೆ ಕುಣಿಯುವ ಕೀಲುಗೊಂಬೆಗಳು ಎಂಬ ನಿಲುವೇ ತಲೆಯಲ್ಲಿದ್ದಂತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ವಿಷಯ ಅದೆಷ್ಟೇ ಮಹತ್ವದಾಗಿದ್ದರೂ ಭಾರತದಂತಹ ದೇಶಗಳ ಖಡಕ್ ಉತ್ತರಗಳು ಅಮೆರಿಕಕ್ಕೆ ಮುಟ್ಟಿಕೊಳ್ಳುವಂತೆ ತಟ್ಟುತ್ತಿವೆ. ದೊಡ್ಡಣ್ಣ, ಹಿರಿಯಣ್ಣ, ದೈತ್ಯ, ನಾಯಕ ಎಂಬ ಪದಗಳಿಂದ ಕೂಡಿದ ಉಪಮೇಯಗಳ ಹೊಗಳಿಕೆಗಳ ಕಾಲ ಮುಗಿದು ಇಂದಿಗೆ ದಶಕಗಳೇ ಕಳೆದಿವೆ. 10% ಅಮೇರಿಕ ಒಂದೆಡೆಯಾದರೆ 90% ವಿಶ್ವದ ಇತರ ದೇಶಗಳು ಇನ್ನೊಂದೆಡೆ ಎಂಬುದ ಅದು ಮನವರಿಕೆ ಮಾಡಿಕೊಳ್ಳಬೇಕು.

ಟ್ರಂಪ್ ಚುನಾವಣೆಯಲ್ಲಿ ಅಬ್ಬರಿದ ಮಾತ್ರಕ್ಕೆ, ಆತ ಆ ಮಾತುಗಳಿಗೆ ಪೂರಕವಾಗಿ ನೆಡೆದುಕೊಳ್ಳುತ್ತಿರುವ ಮಾತ್ರಕ್ಕೆ ವಿಶ್ವವೇಕೆ ಆ ತಾಳಕ್ಕೆ ತಕ್ಕಂತೆ ಕುಣಿಯಬೇಕು? ಇಂದು ನಮಗೆ ಬೇರ್ಯಾವ ದೇಶಗಳ ಅನಿವಾರ್ಯವಿಲ್ಲವೆನುವವರು ಮೂರ್ಖರಲ್ಲದೆ ಬೇರ್ಯಾರು ಅಲ್ಲ. ಮನೆಗೆ ಬಂದುಹೋಗುವ ನೆರೆವೊರೆಯವರು ಅವರು ಕೇವಲ ನಮ್ಮ ಮನೆಯನ್ನು ಕೊಳ್ಳೆಹೊಡೆಯಲೇ ಬರುತ್ತಾರೆಂಬ ಮಾತು ಅದೆಷ್ಟರ ಮಟ್ಟಿಗೆ ಸರಿ? ಹಾಗೆನುತ ಅದೆಂದಿನವರೆಗೆ ನಾವುಗಳು ಅವರ ಮುಖವನ್ನು ನೋಡದೆ ಇರುವುದು? ಈ ಕಾರಣಕ್ಕಾಗಿಯೇ ಹಿಂದಿನ ಒಬಾಮ ಆಡಳಿತ ವಿಶ್ವದ ಪ್ರತಿಯೊಂದು ದೇಶಗಳೊಟ್ಟಿಗೂ ಒಂದಲ್ಲ ಒಂದು ಬಗೆಯಲ್ಲಿ ಉತ್ತಮ ಸಂಬಧವನ್ನು ಬೆಳೆಸಲು ಇಚ್ಛಿಸುತ್ತಿತ್ತು. ಆದರೆ ಈ ಒಂದು ಸರಳ ಫಾರ್ಮುಲಾ ಟ್ರಂಪ್ ಅಭಿಮಾನಿಗಳಿಗೆ ತಿಳಿಯಲಿಲ್ಲ. ಅಂದು ಒತ್ತಲು ಬಟನ್ ಒಂದಿದೆ ಏನುತಾ ಏಕಾಏಕಿ ಬ್ರಿಟನ್ ಅನ್ನು ಅತಂತ್ರ ಸ್ಥಿತಿಗೆ ತಂದ ಜನಗಳಂತೆಯೇ ಅಮೆರಿಕದ ಜನರೂ ಮಾಡಿದರು. ಟ್ರಂಪ್ ಅಧ್ಯಕ್ಷನಾದ ಎರಡು ವರ್ಷಗಳಲ್ಲಿಯೇ ಇಷ್ಟೆಲ್ಲಾ ಅನಾಹುತಗಳು ಜರುಗಿರುವಾಗ ಇನ್ನೊಂದೆರಡು ವರ್ಷಗಳಲ್ಲಿ ಅದ್ಯಾವ ಬಗೆಯ ಪ್ರಳಯ ಅಮೇರಿಕಾದ ನೆಲದಲ್ಲಿ ನೆಡೆಯುತ್ತದೆಯೋ ಕಾದು ನೋಡಬೇಕು.

Tuesday, August 21, 2018

ಸೃಷ್ಟಿಯ ಅಗಾಧತೆಗೆ ಸವಾಲೆಸೆಯುವ ಮುನ್ನ..!

ಇಡೀ ಭೂಖಂಡವೇ ತನ್ನದೆಂದುಕೊಂಡು ಒಂತಿಷ್ಟು ತಂತ್ರಜ್ಞಾನದ ಉನ್ನತಿಯ ಶಿಖರದ ಹಿನ್ನಲೆಯಲ್ಲಿ ಬೀಗುವ ಮಾನವ ನಿಸರ್ಗದ ಅಗಾಧತೆಯ ಮುಂದೆ ತಾನು ಅದೆಷ್ಟು ಕುಬ್ಜ ಕನಿಷ್ಠ ಎಂಬುದು ಇತ್ತೀಚಿಗೆ ಜರುಗುತ್ತಿರುವ ಪ್ರವಾಹ ಪ್ರಳಯಗಳ ಹಿನ್ನಲೆಯಲ್ಲಿ ಗಮನಿಸಿದರೆ ಬಹಳ ಸವಿವರವಾಗಿ ತಿಳಿಯುತ್ತದೆ. 4ಜಿ ಸ್ಪೀಡಿನ ಇಂಟೆರ್ನೆಟ್ಟು, ಜಗತ್ತನೇ ತನ್ನ ಮುಷ್ಠಿಯೊಳಗೆ ಭದ್ರವಾಗಿಸಿರುವ ಸ್ಮಾರ್ಟ್ ಫೋನುಗಳು, ಜನರೇಟರ್ ಗಳು, ಯುಪಿಎಸ್ಗಳು, ದೇಶದ ಮೂಲೆ ಮೂಲೆಯನ್ನು ಜೋಡಿಸುವ ಹೈ ಸ್ಪೀಡ್ ಟ್ರೈನುಗಳು, ಸಾಗರದ ಆಳೆತ್ತರಕ್ಕೆ ಹತ್ತಿಳಿಯುವ ಹಡಗುಗಳು ಹೀಗೆ ಪ್ರಸ್ತುತ ತಂತ್ರಜ್ಞಾನದ ಲೋಕದಲ್ಲಿ ಇರದಿರುವ ವಸ್ತುಗಳ್ಯಾವುವು? ಇಷ್ಟೆಲ್ಲಾ ಆಧುನಿಕ ಪರಿಕರಗಳ ನಡುವೆ ಅಮೃತವಿಲ್ಲದೆಯೇ ಸಕಾಲಕ್ಕೂ ಅಮರನಾಗಿಬಿಡುವ ಮಾನವ ಇಂದು ಆಗಿರುವುದಾದರೂ ಏನು ಸ್ವಾಮಿ. ಕೇವಲ ನಾಲ್ಕೇ ನಾಲ್ಕು ದಿನದ ಮಳೆಗೆ ಆತ ಗುಡಿ ಗೋಪುರಾದಿಗಳನ್ನು ತರಗಲೆಗಳಂತೆ ಕಳೆದುಕೊಂಡು ಅಕ್ಷರಸಹ ಅನಾಥನಾಗುತ್ತಿರುವ ದೃಶ್ಯಾವಳಿಗಳನ್ನು ನೋಡಿದರೆ ದುಃಖ ಹಾಗು ಎದೆನಡುಕಗಳು ಒಟ್ಟೊಟ್ಟಿಗೆ ಮೂಡುತ್ತವೆ. ಪ್ರಸ್ತುತ ಜರುಗತ್ತಿರುವ ಪ್ರಕೃತಿ ವಿಕೋಪಗಳಿಗೆ ಕೇವಲ ಮಳೆಯೊಂದೇ ಕಾರಣವಲ್ಲದಾದರೂ ಇತರೆ ಮತ್ಯಾವುದೇ ಕಾರಣಗಳಾದರೂ ಅದಕ್ಕೆ ಮಾನವನೊಬ್ಬನೇ ನೇರ ಹೊಣೆಗಾರನಾಗುತ್ತಾನೆ ಎಂಬುದರಲ್ಲಿ ಸಂಶಯವೇ ಬೇಡ. ಸೃಷ್ಟಿಯ ಸಮಷ್ಟಿಯಲ್ಲಿ ನಾನೂ ಒಬ್ಬನೇ ಹೊರತು ನಾನೇ ಬೇರೆ, ಪ್ರಕೃತಿಯೇ ಬೇರೆ, ಇಡೀ ಭೂಮಿಯೇ ನನ್ನ ಅನುಭೋಕಕ್ಕೆ ಮಾತ್ರ ಎಂಬ ಭ್ರಮೆಯಲ್ಲಿ ಬದುಕುತ್ತಿರುವ ನಾವುಗಳಿಗೆ ನೇಸರ ಆಗೊಮ್ಮೆ ಹೀಗೊಮ್ಮೆ ಹೀಗೆ ಚಾಟಿ ಏಟನ್ನು ಬೀಸುತ್ತಿರುತ್ತದೆ. ಎಚ್ಚರಿಸುತ್ತಿರುತ್ತದೆ. ಏಟಿನಿಂದ ಕಲಿಯುತ್ತೇವೆಯೋ ಅಥವಾ ಮತ್ತದೇ ನನ್ನದೇ ಎಲ್ಲವೆಂಬ ಅಮಲಿನಲ್ಲಿ ಕುಣಿಯುತ್ತೇವೆಯೋ ಅದು ನಮ್ಮ್ ನಮ್ಮ ನಾಗರೀಕತೆಯ ವಿವೇಕಕ್ಕೆ ಬಿಟ್ಟ ವಿಚಾರ.

'ನದಿ ಎಂಬ ಪ್ರಿಯತಮೆಯನ್ನು ಕೊಂದರೆ ಮಳೆ ಎಂಬ ಪ್ರಿಯಕರನನ್ನು ಮರೆಯಬೇಡಿ' ಎಂಬ ಮಾತಿದೆ. ಮಾನವನ ಹಿಂಗದ ಧಾಹಕ್ಕೆ ನದಿ ತೊರೆಗಳನ್ನು ಮನಸ್ಸಾಇಚ್ಛೆ ತಿರುಗಿಸಿ ಬಾಗಿ ಬೆಂಡಾಗಿಸುವ ಆತ ಬಾಕಿ ಉಳಿದಷ್ಟೂ ಜಾಗದಲ್ಲಿ ಮನೆ ಮಠಗಳನ್ನು ನಿರ್ಮಿಸಿಕೊಂಡು ಆರಾಮಾಗಿರುತ್ತಾನೆ. ಕಾಲಚಕ್ರದಲ್ಲಿ ಕೆಲಸಮಯ ಮೋಡವಾಗಿ ಕಾಣೆಯಾಗುವ ನದಿಯ ಪ್ರಿಯತಮ ಮತ್ತೊಮ್ಮೆ ಇಳೆಗೆ ಇಳಿದು ಬಂದು ನೋಡಿದರೆ ತಾನು ಕಾಣ ಬಯಸುವ ಮುದ್ದಿನ ಪ್ರಿಯತಮೆ ಕಾಣೆಯಾಗಿರುತ್ತಾಳೆ! ಆದರೆ ಅವರುಗಳ ಪ್ರೇಮ ಪ್ರಸ್ತುತ ಕಾಲದ ಮಿಲಿಸೆಕೆಂಡುಗಳ ಪ್ರೇಮಕಾವ್ಯವಲ್ಲ. ಅದು ಕಾಲಾತೀತವಾದದ್ದು. ಅಮರವಾದದ್ದು! ಹಾಗೆ ವರುಷಗಳ ನಂತರ ಧರೆಗಿಳಿದು ಬರುವ ಧಾರೆ ತನ್ನ ಪ್ರಿಯತಮೆಯ ಹುಡುಕಾಟದಲ್ಲಿ ಅಕ್ಷರ ಸಹ ಹುಚ್ಚನಂತಾಗಿಬಿಡುತ್ತದೆ. ಮತ್ತದೇ ಜಾಗದಲ್ಲಿ, ಆಕೆ ಹರಿಯುತಿದ್ದ ದಿಕ್ಕಿನಲ್ಲಿಯೇ ರುಧ್ರಾವೇಷದಲ್ಲಿ ಮುನ್ನುಗ್ಗಿ ಸಾಗುತ್ತದೆ. ಇದನ್ನೇ ಆಧುನಿಕ ನಾವುಗಳು ಪ್ರವಾಹ, ಪ್ರಳಯ ಎಂದುಕೊಂಡು ದೇವರನ್ನು ದ್ವೇಷಿಸುವುದು. ನಿಸರ್ಗದ ಜೀವನಚರಿಯನ್ನು ಅರಿಯಲಾಗದ ನಾವುಗಳಿಗೆ ಅದೊಂದು ಪ್ರವಾಹವಾಗಿಯೇ ಕಾಣುತ್ತದೆ ವಿನಹಃ ತನ್ನಾಕೆಯನ್ನು ಕಳೆದುಕೊಂಡ ಭಗ್ನಪ್ರೇಮಿಯ ರೋಧನೆ ಕಾಣಿಸುವುದಿಲ್ಲ. ಪ್ರಸ್ತುತ ವಿಶ್ವದಲ್ಲಿ ಜರುಗುತ್ತಿರುವ ಹೆಚ್ಚಿನ ಜಲಪ್ರವಾಹಗಳಿಗೆ ಮಾನವ ಹೀಗೆ ನದಿಯ ನೀರನ್ನು ತನ್ನ ಅನುಕೂಲಕ್ಕೆ ತಕ್ಕಂತೆ ದಿಕ್ಕುಬದಲಿಸಿಕೊಳ್ಳುತ್ತಿರುವದೇ ಮೊದಲ ಮಹತ್ವದ ಕಾರಣ. ಇದೇ ವಿಷಯವಾಗಿ ಹಲವು ವೇಳೆ ಪರಿಸರವಾದಿಗಳ ಕೂಗಾಟ ನಮಗೆ ಎಡಪಂಥೀಯ ಬುದ್ದಿಜೀವಿಗಳ ಅರಚಾಟದಂತೆ ಕಾಣುತ್ತದೆ. ಅವರ ಕೂಗಾಟವನ್ನು ನಾವು ಗಂಭೀರ ಸಮಸ್ಯೆಗಳೆಂದು ಎಲ್ಲಿಯವರೆಗೂ ಅರಿವಿಯುವುದಿಲ್ಲವೋ ಅಲ್ಲಿಯವರೆಗೂ ಯಾವ ಕಾಲದಲ್ಲ್ಲೂ ಯಾವುದೇ ಬಗೆಯ ನೈಸರ್ಗಿಕ ವಿಕೋಪಗಳಿಗೆ ನಾವುಗಳು ರೆಡಿಯಾಗಿರಬೇಕು. ಪರಿಸರವಾದಿಗಳಷ್ಟೇ ಅಲ್ಲದೆ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶರ ಸೂಚನೆಗಳನ್ನೇ ಲಘುವಾಗಿ ಪರಿಣಮಿಸಿ ಇಂದು ವಿಪತ್ತನ್ನು ಎದುರಿಸುತ್ತಿರುವ ಕೇರಳ ಸರ್ಕಾರದ ಹಿನ್ನಲೆಯಲ್ಲಿ ಇಡೀ ದೇಶದ ನೀರಿನ ಸಮಸ್ಯೆಗಳಿಗೆ ಒಂದೇ ಹೆಜ್ಜೆಯಲ್ಲಿ ಪರಿಹಾರವನ್ನು ಕರುಣಿಸುವ ಕೇಂದ್ರ ಸರ್ಕಾರದ ''ಗಂಗಾ-ಕಾವೇರಿ' ನದಿ ಜೋಡಣೆ ಸಾಹಸವನ್ನು ಇನ್ನಾದರೂ ಕೊಂಚ ಯೋಚಿಸಿ ಕೈಗೆತ್ತುಕೊಳ್ಳಬೇಕು. ಅಂದು ಬೆಂಗಳೂರಿನಲ್ಲಿ ಬಂದ ಮಹಾಮಳೆಗೆ ರಾಜಕಾಲುವೆಗಳ ನೀರೂ ಹೀಗೆ ಎಲ್ಲೆಂದರಲ್ಲಿ ನುಗ್ಗಿ ಮಾಡಿದ ಅನಾಹುತ ನಮ್ಮ ಕಣ್ಣ ಮುಂದೆಯೇ ಇರುವಾಗ ಹೀಗೆ ದಿಕ್ಕುಬದಲಿಸಿದ ನದಿಗಳ ದಂಡೆಗಳಲ್ಲಿ ಅಥವಾ ಆ ನದಿಯ ಹಿಂದಿನ ಹರಿವಿನ ಜಾಗದಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿಕೊಡುವ ಬುದ್ದಿವಂತರನ್ನು ಹೀಗೆ ಪ್ರವಾಹಗಳಿಂದ ಮನೆಮಠಗಳನ್ನು ಕಳೆದುಕೊಂಡು ಪರದಾಡುವ ಜನರ ಮುಂದೆ ತಂದು ನಿಲ್ಲಿಸಬೇಕು. ಹೀಗೆ ತಮ್ಮದೇ ಸಮಾಧಿಯ ಜಾಗಕ್ಕೆ ಏನೋ ಎಂಬಂತೆ ಮನೆಗಳನ್ನು ಮಾರುವ ಅವರಿಗೆ ಹಾಗು ಖರೀದಿಸುವ ನಮಗೆ ತಿಳಿಹೇಳುವರ್ಯಾರು.

ಅಲ್ಲಿ ವರುಣದ ಆರ್ಭಟವಾದರೆ ನಮ್ಮಲ್ಲಿ (ಕೊಡಗು ಹಾಗು ಇತರೆ ಮಲೆನಾಡು ಪ್ರದೇಶ) ಬೆಟ್ಟಗುಡ್ಡಗಳೇ ಕುಸಿದು ಪ್ರಪಾತವನ್ನು ನಿರ್ಮಿಸುತ್ತಿರುದು. ಜಾರುವ ಬಂಡೆಗಳಿಂದ ನಿರಾಯಾಸವಾಗಿ ಜಾರುವಂತೆ ಜಾರಿ ಪ್ರಪಾತಕ್ಕೆ ಬೀಳುವ ಮನೆಗಳು, ಕ್ಷಣಮಾತ್ರದಲ್ಲಿ ಇಡೀ ಹಳ್ಳಿಗೆ ಹಳ್ಳಿಯೇ ಉದುಗಿಹೋಗಿ ಕಣ್ಮರೆವಾಗುವ ದೃಶ್ಯಗಳು, ಕಲ್ಲುಗುಡ್ಡದ ಒಂದಿಡೀ ಬಾಗವೇ ಕುಸಿದು ಭೂಕಂಪನವನ್ನು ಹುಟ್ಟುಹಾಕುವ ವಿಡಿಯೋಗಳನ್ನು ನೋಡಿದರೆ ಕಲಿಯುಗದ ಅಂತ್ಯಕಾಲ ಸಮೀಪಿಸಿತೇನೋ ಎಂದನಿಸುವುದು ಸುಳ್ಳಲ್ಲ. ಆದರೆ ಇಲ್ಲಿ ವಿಚಾರಕ್ಕೊಳಪಡಿಸುವ ವಿಷಯವೇನೆಂದರೆ, ಈಗ ಬರುತ್ತಿರುವ ಮಳೆಯ ಪ್ರಮಾಣವೇನು ಹಿಂದೆಂದೂ ಬಾರದಿದ್ದ ಮಟ್ಟದ್ದೇನಲ್ಲ. ಇದಕ್ಕಿಂತಲೂ ಹೆಚ್ಚಿನ ಅಗಾಧವಾದ ಮಳೆಯನ್ನು ಇಲ್ಲಿನ ನೆಲ ಕಂಡಿದೆ. ಆಗ ನೋಡುಗರಿಗೆ ಅದು ರಮ್ಯಾ ರಮಣೀಯ ನೋಟವನ್ನು ಕೊಡುತ್ತಿತ್ತೇ ವಿನಃ ಹೀಗೆ ರುಧ್ರಕಾಳಿಯಂತೆ ಕುಣಿದು ಭಯಬೀಳಿಸುತ್ತಿರಲಿಲ್ಲ. ಹಾಗಾದರೆ ಎರಡು ದಿನದ ಮೋಜಿಗೆ ಗುಡ್ಡಗಳನ್ನು ಕಡಿದು ಕಾಡನ್ನು ಹಾಳುಗೆಡಗುವ ಹೋಂ ಸ್ಟೇಗಳು, ಪೋಷಿಸಿ ಬೆಳೆಸಿದ ಭೂಮಾತೆಯ ಒಡಲನ್ನೇ ಬಗೆದು ನೆಡೆಸುವ ಗಣಿಗಾರಿಕೆ, ಸಿಕ್ಕ ಸಿಕ್ಕ ಜಾಗಗಳಲ್ಲಿ ಅವೈಜ್ಞಾನಿಕವಾಗಿ ಜರುಗುವ ಮನೆ ನಿರ್ಮಾಣಗಳೇ ಇಂದು ನಮ್ಮ ಹಸಿರು ಜಿಲ್ಲೆಗಳ ಕುಸಿತಕ್ಕೆ ನಿಜವಾದ ಕಾರಣವೇ? ಉತ್ತರ ಇಲ್ಲ ಎನ್ನುವವರು ಮಾತ್ರ ಶತಮೂರ್ಖರು!

ಜಲವಿಕೋಪಗಳು ವಿಶ್ವದಲ್ಲಿ ಜರುಗುವುದು ಇಂದು ಹೊಸತೇನಲ್ಲ. ಮಾನವ ಒಂದೆಡೆ ನೆಲೆಸಿ ವ್ಯವಸಾಯ ಮಾಡಲು ಶುರುವಿಟ್ಟಾಗಿನಿಂದಲೂ ಒಂದಲ್ಲ ಒಂದು ಬಗೆಯಲ್ಲಿ ನದಿಗಳಿಗೆ, ಹಳ್ಳಗಳಿಗೆ ಅಡ್ಡಗಟ್ಟಿ ಅವುಗಳ ಹರಿವಿನ ವಿರುದ್ಧ ಆಟವಾಡುತ್ತಾ ಬಂದಿದ್ದಾನೆ. ಚೋಳರ ಕಾಲದಲ್ಲಿ (ಒಂದನೇ ಶತಮಾನ) ನಿರ್ಮಿತವಾದ ಇಂದಿಗೂ ಕಾರ್ಯನಿರ್ವಾಹಿಸುತ್ತಿರುವ (!) ತಮಿಳುನಾಡಿನ ಕಲ್ಲಣೈ ಆಣೆಕಟ್ಟು ವಿಶ್ವದಲ್ಲೇ ಅತಿ ಪುರಾತನವಾದ ಆಣೆಕಟ್ಟು ಎಂದನಿಸಕೊಂಡಿದೆ. ತಂತ್ರಜ್ಞಾನಗಳು ಬೆಳೆದಂತೆ ಹೀಗೆ ಕಟ್ಟಿದ ಅಣೆಕಟ್ಟುಗಳ ನಿರ್ವಹಣೆಯಲ್ಲೂ ಸಾಕಷ್ಟು ಸುಧಾರಣೆಗಳು ಬಂದಿವೆ. ಆದರೆ ಇಂದು ಇತರೆ ದೇಶಗಳಲ್ಲಿ ನೆಡೆಯುವ ದುರಂತಗಳು ನಮ್ಮಲಿ ಜರುಗುವುದಕ್ಕಿಂದಲೂ ಅದೆಷ್ಟೋ ಪಟ್ಟು ಭಯಾನಕ ಹಾಗು ಭೀಕರವಾಗಿರುತ್ತವೆ. ಆದರೂ ಅಲ್ಲಿನ ಸಾವು-ನೋವು, ಕಷ್ಟ-ನಷ್ಟಗಳನ್ನು ನಮಗೆ ಹೋಲಿಸಿದರೆ ತೀರಾ ಕನಿಷ್ಠವಾಗಿಯೇ ಇರುತ್ತದೆ. ಕಾರಣ ನಮ್ಮಲ್ಲಿ ಅನಾಹುತಗಳು ಜಗುಗುವ ಮೊದಲು ಹಾಗು ಜರುಗಿದ ನಂತರವೂ ಸರಕಾರಗಳನ್ನು ಧೊಷಿಸುವ ಏಕಮಾತ್ರ ಕಾರ್ಯವೊಂದನ್ನು ಬಿಟ್ಟರೆ ಬೇರೇನೂ ಆಗುವುದೇ ಇಲ್ಲ. ಕನಿಷ್ಠ ಬೆಲೆಗೆ ಸಿಕ್ಕ ಜಾಗವೆನುತ ನದಿ, ಅಣೆಕಟ್ಟುಗಳ ಪ್ರದೇಶವೆನ್ನುವುದನ್ನೂ ಲೆಕ್ಕಿಸದೆ ಮನೆ ಮಠಗಳನ್ನು ಖರೀದಿಸುವ ನಮಗೆ ಹೀಗೆ ಪ್ರವಾಹದ ಪಾಠ ದೊರೆತರೂ ಅದರಿಂದ ಕಲಿಯುವುದ ಬಿಟ್ಟು ಬಿಸ್ಕತ್ತನ್ನು ಎಸೆಯುವ ರಾಜಕಾರಣಿ ಹಾಗು ಅವನ ಸರ್ಕಾರಗಳ ದೋಷಣೆಯಲ್ಲೇ ನಮ್ಮ ಸಿಟ್ಟನ್ನು ಶಮನಮಾಡಿಕೊಳ್ಳುತ್ತೇವೆ. ಅಲ್ಲದೆ ಇತ್ತೀಚಿನ ವರದಿಯೊಂದರ ಪ್ರಕಾರ ನೀರಿಗಿಂತ ಹೆಚ್ಚಾಗಿ ಹೂಳೇ ತುಂಬಿಕೊಂಡಿರುವ ಕೇರಳದ ಪ್ರತಿಯೊಂದು ಅಣೆಕಟ್ಟುಗಳನ್ನು ಮಾನ್ಸೂನ್ ಶುರುವಾಗುವ ಮೊದಲೇ ಬರಿದುಗೊಳಿಸಿ ಹೂಳನ್ನು ತೆಗೆಯುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದರೆ ಬಹುಷಃ ಈ ಮಟ್ಟಿನ ಸಾವುನೋವುಗಳು ಸಂಭವಿಸುತ್ತಿರಲಿಲ್ಲವೆಂಬುದು. ಅಲ್ಲದೆ ಅಣೆಕಟ್ಟುಗಳ ಸಂಖ್ಯೆಯಲ್ಲಿ USA ಹಾಗು ಚೈನಾದ ನಂತರದ ಸ್ಥಾನದಲ್ಲಿರುವ ಭಾರತ (ಸುಮಾರು 3000 ಕಿಂತಲೂ ಹೆಚ್ಚು) ದಲ್ಲಿನ ಅಣೆಕಟ್ಟುಗಳಲ್ಲಿ ಪ್ರವಾಹವನ್ನು ನಿಯಂತ್ರಿಸಬಹುದಾದ ವ್ಯವಸ್ಥೆ ಇರುವುದು ಕೇವಲ ಬೆರಳೆಣಿಕೆಯಷ್ಟರಲ್ಲಿ ಮಾತ್ರ(25-30 ಅಣೆಕಟ್ಟುಗಳಲ್ಲಿ ಮಾತ್ರ). ಬದಲಾಗುತ್ತಿರುವ ಹವಾಮಾನ ವೈಪರಿತ್ಯದಲ್ಲಿ ಹೀಗೆ ಮುಲಾಜಿಲ್ಲದೆ ಬರುವ ಮಳೆಯ ಹಿನ್ನಲೆಯಲ್ಲಿ ಉಳಿದಂತೆ ಇರುವ ಅಷ್ಟೂ ಅಣೆಕಟ್ಟುಗಳ ಬಗ್ಗೆ ಚಿಂತಿಸಬೇಕಾದ ಅನಿವಾರ್ಯತೆ ಕೇವಲ ಸರಕಾರಗಳಿಗೆ ಇದ್ದರೆ ಸಾಲದು.

ದೂರುಗಳಲ್ಲೆಯೇ ಕಾಲಹರಣ ಮಾಡುವ ನಮ್ಮವರು 'ಮುಲ್ಲಪೆರಿಯಾರ್' ಅಣೆಕಟ್ಟಿನ ಬಗ್ಗೆಯೂ ಕೊಂಚ ತಿಳಿದುಕೊಳ್ಳುವುದು ಲೇಸು. ಇಂದು ನೆನೆದ ಹಸಿಮುದ್ದೆಯಂತಾಗಿರುವ ಧಕ್ಷಿಣ ಭಾರತದ ನೆಲದ ಭಾಗಶಃ ಅಣೆಕಟ್ಟುಗಳು ತುಂಬಿತುಳುಕುತ್ತಿವೆ. ಆದರೆ ಕೇರಳದ ಪೆರಿಯಾರ್ ನದಿಗೆ ಅಡ್ಡಲಾಗಿ ನಿರ್ಮಿಸಿರುವ ನೂರಿಪ್ಪತ್ತು ವರ್ಷಗಳ ಪುರಾತನವಾದ ಮುಲ್ಲಾ ಪೆರಿಯಾರ್ ಆಣೆಕಟ್ಟು ತುಂಬಿತೆಂದರೆ ಕೇರಳದ ನಾಲ್ಕೈದು ಜಿಲ್ಲೆಗಳ ಜನರಿಗೆ ಜಲಬಾಂಬೊಂದು ಸ್ಪೋಟಗೊಳ್ಳುವ ಭಯ ಆವರಿಸಿಕೊಳ್ಳುತ್ತದೆ. ಅಂದು ಬ್ರಿಟಿಷರು ಕೇವಲ ಐವತ್ತು ವರ್ಷ ಆಯಸ್ಸಿಗೆ ಎನ್ನುವಂತೆ ನಿರ್ಮಿಸಿದ ಆಣೆಕಟ್ಟನ್ನು ಇಂದು ನೂರು ವರ್ಷಗಳು ಕಳೆದರೂ ದುಡಿಸಿಕೊಂಡು ಬಂದಿದ್ದಾರೆ. ಕಾರಣ ಪೆರಿಯಾರ್ ನದಿಯ ಹೆಚ್ಚಿನ ಭಾಗದ ಹರಿವು ಕೇರಳ ರಾಜ್ಯದಲ್ಲೇ ಆದರೂ ಅದರ ಉಗಮಸ್ಥಾನ ತಮಿಳುನಾಡಿನ ಸಿವಗಿರಿ ಅರಣ್ಯ ಪ್ರದೇಶಗಳಲ್ಲಿ. ಅಂದು ಬ್ರಿಟಿಷರ ತಪ್ಪುನಿರ್ಧಾರದಿಂದಲೂ ಅಥವಾ ಎಪ್ಪತ್ತರ ದಶಕದಲ್ಲಿ ಕೇರಳ ಹಾಗು ತಮಿಳುನಾಡು ಸರ್ಕಾರಗಳ ಒಪ್ಪಂದದಿಂದಲೋ ಏನೋ ಇಂದಿಗೂ ಈ ಅಣೆಕಟ್ಟಿನ ಸಂಪೂರ್ಣ ಅಧಿಕಾರ ತಮಿಳುನಾಡು ಸರ್ಕಾರದ ಬಳಿಯೇ ಉಳಿದಿದೆ. ಯಾವುದೇ ವಿಪತ್ತಿಲ್ಲದೆ ಎತೇಚ್ಛವಾಗಿ ಸಿಗುವ ನೀರು, ವಿದ್ಯುತ್ತ್ ನನ್ನು ಅನುಭವಿಸುವ ತಮಿಳರು ಇಲ್ಲಿಯೂ ಸಹ ಕೇರಳ ಸರಕಾರದೊಟ್ಟಿಗಿನ ಅಮಾನವೀಯತನದಿಂದಲೇ ನಿಂದನೆಗೊಳಗಾಗುತ್ತಿದ್ದರೆ. ಒಂತಿಷ್ಟು ಹಣವನ್ನು ಖರ್ಚುಮಾಡಿ ಇರುವ ಅಣೆಕಟ್ಟಿನ ಪಕ್ಕಕ್ಕೆ ಹೊಸತೊಂದು ಅಣೆಕಟ್ಟನ್ನು ಕಟ್ಟಿ ಮುಂದೊಂದು ದಿನ ಬಂದೊದಗುವ ಅಪಾಯವನ್ನು ತಪ್ಪಿಸಬಹುದಲ್ಲ ಎಂದರೆ 136 ಅಡಿಗಳಿಷ್ಟಿದ್ದ ಗರಿಷ್ಟ ಮಟ್ಟವನ್ನು 142 ಅಡಿಗೆ ಏರಿಸಿ 'ಮುಲ್ಲಾ ಪೆರಿಯಾರ್ ಆಣೆಕಟ್ಟು ಇನ್ನೂ ಹೆಚ್ಚಿನ ನೀರನ್ನು ಹಿಡಿದಿಟ್ಟುಕೊಳ್ಳಬಹುದೆಂಬ' ಬಾಲಿಶ ಹೇಳಿಕೆಯನ್ನು ಕೊಡುತ್ತಿದ್ದಾರೆ ಒಬ್ಬ ಸಾಮಾನ್ಯ ಮುಖ್ಯಮಂತ್ರಿಯನ್ನು ದೇವರಿಗಿಂತಲೂ ಮಿಗಿಲಾದವರಂತೆ ಪೂಜಿಸಿ ಬಿದ್ದು ಒರಳಾಡುವ ತಮಿಳುನಾಡಿನ ಅಂಧ ರಾಜಕಾರಣಿಗಳು. ಒಂದೊಮ್ಮೆ ಮುಲ್ಲಾ ಪೆರಿಯಾರ್ ಆಣೆಕಟ್ಟು ಒಡೆದು ಅದರಲ್ಲಿನ ನೀರೇನಾದರೂ ಒಳನುಗ್ಗಿದರೆ ನಿಮಿಷಮಾತ್ರದಲ್ಲಿ ನಾಲ್ಕು ಜಿಲ್ಲೆಗಲ್ಲಿ ಒಂದು ನರಪಿಳ್ಳೆಯೂ ಬದುಕುವುದು ಕಷ್ಟಕರವೆನುತದೆ ಸಂಶೋಧನೆಗಳು! ಅಲ್ಲದೆ ಸುಣ್ಣ ಹಾಗು ಸಿಮೆಂಟಿನಿಂದ ಮಾಡಿದ ಈ ಪುರಾತನ ಅಣೆಕಟ್ಟಿನ ಅಲ್ಲಲ್ಲಿ ಬಿರುಕುಗಳು ಮೂಡುತ್ತಿದ್ದರೂ ಇಂತಹ ಬಂಡ ಹೇಳಿಕೆಗಳನ್ನು ನೀಡುವ ರಾಜಕಾರಣಿಗಳನ್ನು ಆರಿಸಿ ಸರ್ಕಾರವನ್ನು ನೆಡೆಸಲು ಕಳಿಸುವ ಜನರ ವಿಚಾರಶಕ್ತಿಯನ್ನೂ ಮೆಚ್ಚಲೇಬೇಕು!

ನಾವು, ನಮ್ಮ ದೇಶ ಎನುತ ಕೆಲದಿನಗಳ ಹಿಂದಷ್ಟೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಕೊಂಡ ಭಾರತೀಯರು ನೀರಿನ ವಿಚಾರ ಬಂದಾಗ ಅಕ್ಷರ ಸಹ ಸ್ವಾರ್ಥಿಗಳಾಗುತ್ತೇವೆ. ಒಂದೆಡೆ ನೀರು ಬೇಕೆಂದು ಕೋರ್ಟ ಮೆಟ್ಟಿಲನ್ನು ಏರಿದರೆ ಮತ್ತೊಂದೆಡೆ ನೀರು ಬೇಡವೆಂದು ವಾದವನ್ನು ಮಂಡಿಸುತ್ತೇವೆ. ಅದು ಕೇರಳ ತಮಿಳುನಾಡಿನ ಸರ್ಕಾರಗಳ ವಿಷಯವಷ್ಟೇ ಅಲ್ಲ. ಹಸಿವು, ನೋವು, ದುಃಖ ದುಮ್ಮಾನಗಳಲ್ಲೇ ಬಾಡಿ ಬೆಂಡಾಗಿ ಹೋಗಿರುವ ಅಮಾಯಕ ಜನರ ಜೀವನದ ಪ್ರೆಶ್ನೆ. ಇಂದು ಪರಿಹಾರ ಕಾರ್ಯ, ದೇಣಿಗೆ, ದಾನ ಎನುತ ಕೊಡುವುದಕ್ಕಿಂತ ಹೆಚ್ಚಾಗಿ 'ತೋರಿಸಿಕೊಳ್ಳುವ' ಜನ ಹೀಗೆ ಮುಂದೊಂದು ದಿನ ಬಂದೆರಗಬಹುದಾದ ಭೀಕರ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಜಾತಿ, ಭೇದ, ವರ್ಣ, ರಾಜ್ಯ,ಬೇಲಿಯನ್ನು ಮರೆತು ಕೈಜೋಡಿಸಬೇಕು. ಪೆಟ್ಟುತಿಂದ ನೇಸರರಾಜ ಮುನಿದು ಶಿಕ್ಷಿಸುವ ಮೊದಲೇ ನಮ್ಮ ಟೆಕ್ನಾಲಜಿ ಎಂಬ ಕೊಂಬುಗಳನ್ನು ಬದಿಗಿಟ್ಟು ನೇಸರ ನನ್ನು ಬದುಕಿಸಿ ನಾವುಗಳೂ ಬದುಕುವ ಹಾದಿಯನ್ನು ಕಂಡುಕೊಳ್ಳಬೇಕು.

Friday, August 17, 2018

ಆಟವೆಂಬುದು ಕ್ರೀಡೆಯಾಗಬೇಕಾದರೆ ..

ಕತ್ತಿಮಸೆಯುವ ದೇಶಗಳ ಎದೆಯಲ್ಲಿ ನಡುಕಹುಟ್ಟಿಸಿ ದೇಶದ ತಲೆಯನೆತ್ತಿ ನಿಲ್ಲುವಂತೆ ಮಾಡಿದ ದೇಶದ ಮಾಜಿ ಪ್ರಧಾನಿ, ಭಾರತರತ್ನ, ದೇಶದ ರಾಜಕೀಯ ಇತಿಹಾಸದ ಅಜಾತಶತ್ರು ಅಟಲ್ ಬಿಹಾರಿ ವಾಜಿಪೇಯಿ, ವೆಸ್ಟ್ ಇಂಡೀಸ್ ವಿರುದ್ಧ ಅವರದ್ದೇ ನೆಲದಲ್ಲಿ ಮೊದಲ ಟೆಸ್ಟ್ ಸರಣಿಯ ಸಿಹಿಯನ್ನು ಗಳಿಸಿಕೊಟ್ಟ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅಜಿತ್ ವಾಡೇಕರ್, ಮಾಜಿ ಲೊಕಸಭಾ ಸ್ಪೀಕರ್ ಸೋಮನಾಥ ಚಟರ್ಜಿ, ದ್ರಾವಿಡ ಚಳುವಳಿಯ ಅಸ್ಮಿತೆಯ ಪ್ರತೀಕ ಹಾಗು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಹಾಗು ಶತಮಾನದ ಮಹಾ ಜಲಪ್ರಳಯದ ರೌದ್ರಾವತಾರಕ್ಕೆ ಕೇರಳ ಹಾಗು ದೇಶದ ಹಲವೆಡೆ ಬಲಿಯಾದ ಎಲ್ಲ ಜೀವಗಳಿಗೂ ಶಾಂತಿಯನ್ನು ಕೋರುತ್ತಾ....

ಕೆಲದಿನಗಳ ಹಿಂದೆ ಹಿಮಾದಾಸ್ ಎಂಬ ಹೆಸರೊಂದು ಎಲ್ಲಡೆ ಸದ್ದು ಮಾಡಿತ್ತು. 46 ವರ್ಷಗಳ ಇತಿಹಾಸವಿರುವ ‘IAAF ವಿಶ್ವ ಚಾಂಪಿಯನ್ ಶಿಪ್’ ನಲ್ಲಿ 51.46 ಸೆಕೆಂಡುಗಳಲ್ಲಿ 400 ಮೀಟರ್ ಓಟವನ್ನು ಜಿಂಕೆಯಂತೆ ಕ್ರಮಿಸಿ ಭಾರತಕ್ಕೆ ಮೊಮ್ಮದಲ ಚಿನ್ನದ ಪದಕವನ್ನು ಗಳಿಸಿ ಇತಿಹಾಸವನ್ನು ಬರೆದ ಈಕೆ ಕತ್ತಲು ಕಳೆಯುವ ಮುನ್ನ ಅರಳಿದ ತಾವರೆಯಂತಾಗಿದ್ದಳು. ಭಾರತೀಯ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ವಿಜೃಂಭಿಸುವಂತೆ ಮಾಡಿದ ಆಕೆಯ ಸಾಧನೆಯ ಗುಣಗಾನವನ್ನು ಮಾಡದಿರುವವರಿಲ್ಲ. ರಾಶಿ ರಾಶಿ ಶೇರು, ಲೈಕು ಹಾಗು ಕಾಮೆಂಟುಗಳು, ಇತರ ನಟ ನಟಿಯರನ್ನು ಈಕೆಗೆ ಹೋಲಿಸಿ ಅವರನ್ನು ಜರಿಯುವ ಪೋಸ್ಟುಗಳು, ಸೋತರೂ, ಗೆದ್ದರೂ ರಾಜಕಾರಣಿಗಳಿಗೆ ಹಾಗು ಸರ್ಕಾರಗಳಿಗೆ ನೆಡೆಯುವ ಮಂಗಳಾರತಿಗಳು, ಚಿನ್ನ ಬಂದರೂ ಜಾತಿ ಬಿಡದ ಸರ್ಚುಗಳು, ಅವುಗಳಿಂದ ವಿಶ್ವಮಟ್ಟದಲ್ಲಿ ತಲೆಕೆಳಗು ಮಾಡುವಂತಾದ ಕಾಮೆಂಟುಗಳು, ಒಂದೇ ಎರಡೇ. ಬಿರುಗಾಳಿಯಂತೆ ಎತ್ತಲಿಂದಲೋ ಬಂದು ಅಲ್ಲೊಲ್ಲ ಕಲ್ಲೋಲವಾಗಿಸಿ ಧೂಳೆಬ್ಬಿಸಿಬಿಟ್ಟಿತು ಈ ಸುದ್ದಿಯೊಂದು.

ಈಗ ಆ ಸುದ್ದಿ ಶಾಂತವಾಗಿದೆ. ಭೋರ್ಗರೆಯುವ ನದಿಯ ಸಿಹಿ ನೀರು ಸಮುದ್ರ ಸರೋವರಗಳನ್ನು ಸೇರಿ ತನ್ನ ಸಿಹಿತನವನ್ನು ಕಳೆದುಕೊಳ್ಳುವಂತೆ ಆ ಸುದ್ದಿಯ ವಿಶಿಷ್ಟತೆಯೂ ಇಂದೂ ಗೌಣವಾಗಿದೆ. ಅರೆಹೊಟ್ಟೆಯಲ್ಲೇ ಆಕೆ ಬೆವರು ಸುರಿಸಿ ಓಡಲತ್ತಿದಾಗ ಆಕೆಯ ಕಷ್ಟಗಳನ್ನು ಕಾಣದ ಕೈಗಳಿಗೆ ಇಂದು ಚಿನ್ನದ ಬಿಲ್ಲೆಯೊಂದು ಆ ಎಳೆಯ ಕೊರಳಮೇಲೆ ರಾರಾಜಿಸಿದ ಕೂಡಲೇ ಜ್ಞಾನೋದಯವಾಗುತ್ತದೆ. ಆ ಸ್ಕಾಲರ್ಶಿಪ್ಗಳೇನು, ಆ ಕೋಟಿ ಕೋಟಿ ರೂಪಾಯಿಗಳ ಜಾಹಿರಾತುಗಳ ಒಪ್ಪಂದಗಳೇನು, ಸರ್ಕಾರಗಳ ಪ್ರೋತ್ಸಹ ಧನಗಳೇನು ಹಾಗು ಸರ್ಕಾರೀ ಹುದ್ದೆಗಳೇನು! ಇಲ್ಲಿ ಕ್ರೀಡೆ, ದೇಶ ಹಾಗು ಹೆಮ್ಮೆ ಎನ್ನುವ ಅಭಿಮಾನಕ್ಕಿಂತ ಹೆಚ್ಚಾಗಿ ತಮ್ಮ ತಮ್ಮ ಒಂದಿಷ್ಟು ಬೇಳೆಯನ್ನು ಬೇಯಿಸಿಕೊಳ್ಳುವ ಚತುರತೆಯನ್ನು ಬಿಟ್ಟರೆ ಇಲ್ಲಿ ಬೇರೇನು ಕಾಣುವುದಿಲ್ಲ.ಈಕೆಯ ಸಾಧನೆಗೆ ನೀಡಿದ ಅಷ್ಟೇ ಕೋಟಿಗಳನ್ನು ಅಲ್ಲಿ ಬಿಸಿಲ ಧಗೆಯಲ್ಲಿ 'ಕುಟುಂಬವೋ ಅಥವಾ ದೇಶವೋ' ಎಂಬ ದ್ವಂದ್ವದಲ್ಲಿ ಕಾಲ ತಳ್ಳುವ ಇತರೆ ಮಕ್ಕಳಿಗೂ ನೀಡಲಾಗುವುದಿಲ್ಲವೇ? ಅಷ್ಟಿಲ್ಲದಿದ್ದರೂ ಇಷ್ಟಾದರೂ ಕ್ರೀಡಾ ಸ್ಕಾಲರ್ಶಿಪ್ಗಳು ಇಂದು ಅದೆಷ್ಟು ವಿದ್ಯಾರ್ಥಿಗಳಿಗೆ ದೊರೆಯುತ್ತಿದೆ? ಅಲ್ಲೊಬ್ಬ ಐಎಎಸ್ ಆಕಾಂಕ್ಷಿಯ ಹುದ್ದೆಯನ್ನು ಕ್ಷಣಮಾತ್ರದಲ್ಲಿ ಕಿತ್ತು ಪದಕವನ್ನು ಪಡೆಯುವ ಇವರಿಗೆ ಕೊಟ್ಟು 'ಅತ್ತ ಕ್ರೀಡೆಯೂ ಇಲ್ಲ, ಇಲ್ಲಿ ಅಧಿಕಾರಿಯೂ ಅಲ್ಲ' ಎಂಬ ಗೊಂದಲದ ಗೋಜಲಿಗೆ ತಳ್ಳುವ ವಿಪರ್ಯಾಸವಾದರೂ ಏತಕ್ಕೆ? ಪದಕಗಳ ನಂತರ ಹರಿಯುವ ಹಣದ ಹೊಳೆ ಆಟದ ಮೊದಲೇ ಹುಟ್ಟುವುದಿಲ್ಲವೇಕೆ?

ಇದೇ ಬೈಗುಳಗಳು ಮತ್ತದೇ ಮಾತುಗಳು. ಹೇಳಿ ಕೇಳಿ ‘ಸಾಕಾಗಿದೆ’ ಎಂಬುದು ಮಾತ್ರ ಕಹಿಸತ್ಯ. ಹೇಳುವ ನಾವುಗಳೂ ಮಿಲ್ಕಾ ಸಿಂಗ್ ಗಳೇನಲ್ಲ ಅಥವಾ ಪಿ ವಿ ಸಿಂಧುಗಳೂ ಅಲ್ಲ. ಸರ್ಕಾರ ಅಥವಾ ಸಂಸ್ಥೆಗಳಿಗೆ ಹಾಗಲ್ಲ ಹೀಗೆ ಮಾಡಿ ಎನ್ನುವ ನೈತಿಕ ಹಕ್ಕು ನಮಗಿಲ್ಲದಿದ್ದರೂ ನಮ್ಮ ನಮ್ಮ ಮನೆಯಲ್ಲೇ ನೆಡೆಯುವ ತಿರುಗುದಾರಿಗಳನ್ನು ಸರಿಪಡಿಸಿಕೊಳ್ಳಬಲ್ಲೆವು. ಉದಾಹರಣೆಗೆ ಇಂದು ಎಲ್ಲಾ ಸೌಲಭ್ಯಗಳೂ ಇದ್ದೂ ಅದರ ಒಂತಿಷ್ಟೂ ಸದುಪಯೋಗ ಮಾಡಿಕೊಳ್ಳದ ನಾವುಗಳೇ 'ಸರ್ಕಾರಗಳ ನಿರ್ಲಕ್ಷ್ಯತನದಿಂದ' ಇಂದು ದೇಶದ ಕ್ರೀಡೆಗಳು ನೆಲಕಚ್ಚಿವೆ ಎನ್ನುತ್ತೀವಿ. ಆದರೆ ನಮ್ಮದೇ ಮಕ್ಕಳನ್ನು ಡಿಗ್ರಿ ಮುಗಿದ ಕೂಡಲೇ ಅಥವಾ ಮುಗಿಯುವ ಮೊದಲೇ ಉನ್ನತ ವ್ಯಾಸಂಗಕ್ಕೆ ಎಂದು ವಿದೇಶಗಳಿಗೆ ಹಾರಲು ವಿಮಾನಗಳ ಟಿಕೆಟ್ಟುಗಳನ್ನು ಕಾಯ್ದಿರಿಸುತ್ತೀವಿ! ಆಕೆಯ ಅಥವಾ ಆತನ ಆಟವನ್ನು ನೋಡಿ 'ಛೆ..ಥು' ಎಂದು ಜರಿಯುತ್ತೀವಿ. ಆದರೆ ಕ್ರೀಡೆ ದೂರದ ಮಾತು ಕನಿಷ್ಠ ಪಕ್ಷ ಎದ್ದು ಅತ್ತಿಂದಿತ್ತ ನೆಡೆಯಲೂ ಆಗದೆ ಕೂತ ಸ್ಥಳಕ್ಕೆ ದೇಹವನ್ನು ಅಂಟಿಸಿಕೊಂಡು ಕೈಕಾಲುಗಳಿದ್ದೂ ಅಂಗವಿಕಲರಾಗುತ್ತೀವಿ. ಏನೂ ಇಲ್ಲದೆ ಆಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದನ್ನು ನೋಡಿ ಕೊಂಡಾಡುತ್ತಿವಿ. ಆದರೆ ಸಾಧಿಸಲು ಸಕಲವೂ ಇದ್ದೂ ಕೇವಲ ನ್ಯೂನ್ಯತೆಗಳನ್ನೇ ದೊಡ್ಡದಾಗಿಸಿ ಕೊಂಡು ಕುಯಿಂಗುಡುತ್ತಿವಿ.

ಆಟ ನನಗೋ, ದೇಶಕ್ಕೋ ಅಥವಾ ಹಣಕ್ಕೋ ಎಂಬ ಅಸ್ಪಷ್ಟ ಗುರಿಗಳಿಂದಲೆಯೇ ಅರಳುವ ಕ್ರೀಡಾಪಟುಗಳು ಇಂದು ಘಮಿಕರಿಸುವ ಮೊದಲೇ ಕಮರುವುದು. ಅಲ್ಲಿ ಆಟವೆಂಬುದು ಪ್ಯಾಶನ್ ಅಥವಾ ಇಚ್ಛಿಸಿ ಪಡೆಯುವ ಪ್ರೊಫೆಶನ್. ಇಲ್ಲಿ ಆಟವೆಂಬುದು ಒಂದೋ ಹಣ ಇಲ್ಲವೆಂದರೆ ರೆಕ್ಕೆ ಕತ್ತರಿಸಿದ ನೊಣ! ಇಲ್ಲಿ ಎರಡು ಮುಖ್ಯ ವಿಚಾರಗಳನ್ನು ಗಮನಿಸಬೇಕು. ಒಂದು ದೇಶಕ್ಕೆ ಕೀರ್ತಿಯನ್ನು ಗಳಿಸಿಕೊಡಬೇಕೆಂಬ ಅಥವಾ ಹೆಸರು ಗಿಟ್ಟಿಸಿಕೊಳ್ಳಬೇಕೆಂಬ ಹಪಾಹಪಿ. ಎರಡನೆಯದು ನಿಖರತೆಯಿಲ್ಲದ ಕ್ರೀಡಾ ಹಾದಿಯಲ್ಲಿ ಆರ್ಥಿಕವಾಗಿ ಮುಗ್ಗರಿಸಿ ಮಕಾಡೆ ಬಿದ್ದು ಎದ್ದೇಳಲೇ ಆಗದೇನೋ ಎಂಬ ಭಯ. ಭಾರತದಂತಹಃ ಅಭಿವೃದ್ಧಿಶೀಲ ರಾಷ್ಟ್ರದ ಬಹುಸಂಖ್ಯೆಯ ಮಾಧ್ಯಮವರ್ಗದ ಜನರು ಎರಡನೆಯ ವಿಚಾರದ ತೂಕದಲ್ಲಿ ಮೊದಲನೇ ಸಂಗತಿಯನ್ನು ಹತ್ತಿಕ್ಕಿಕೊಳ್ಳುತ್ತಾರೆ. ಭಯ. ನನ್ನದೇಗೋ ಆಯಿತು ನನ್ನ ಮಗುವಿನ ಭವಿಷ್ಯ ಸುಭದ್ರವಾಗಿರಬೇಕೆಂಬ ಕನಸ್ಸನ್ನು ಕಾಣುವ ಮಾಧ್ಯಮವರ್ಗದ ಪೋಷಕರಿಗೆ ಆ ಸುಭದ್ರತೆಯ ಕಲ್ಪನೆಯೆಯೆಂದರೆ ಮಗ ಅಥವಾ ಮಗಳು ಬೆಳಗ್ಗೆ ಒಂಬತ್ತಕ್ಕೆ ಮನೆ ಬಿಟ್ಟು ಸಂಜೆ ಆರಕ್ಕೆ ಮನೆ ತಲುಪಿ, ತಿಂಗಳ ಕೊನೆಯಲ್ಲಿ ತಮಗಿಲ್ಲದಿದ್ದರೂ ಸರಿಯೇ ಅವರುಗಳು ಮಾತ್ರ ಒಳ್ಳೆಯ ಸಂಬಳವನ್ನು ಪಡೆದು, ಮದುವೆಯೊಂದಾಗಿ, ಮಕ್ಕಳು ಮರಿಗಳನ್ನು ಬೆಳೆಸಿ ಆ ನೆಮ್ಮದಿಯಲ್ಲೇ ತಾವು ಕಣ್ಣು ಮುಚ್ಚಿಕೊಂಡರೆ ಎಂಬ ಕನಸ್ಸಿನಲ್ಲಿಯೇ ಇರುತ್ತದೆ. ಅಲ್ಲದೆ ಭಾಗಶಃ ಜನರು ಇಂದು ಈ 'ಸಾಧನೆ'ಯನ್ನು ಸಾಧಿಸಿಯೇ ತೀರುತ್ತಾರೆ. ಇದರಲ್ಲಿ ಎಳ್ಳಷ್ಟೂ ತಪ್ಪಿಲ್ಲ. ಸ್ವಾಭಾವಿಕವಾಗಿ ಚಿಂತಿಸುವವರ ಸ್ವಾಭಾವಿಕ ಸ್ವಭಾವವಿದು. ಇಂತಹ ಸ್ವಾಭಾವಿಕತೆಯಲ್ಲಿ ಕ್ರೀಡೆ, ದೇಶ, ದೇಶಪ್ರೇಮವೆಂಬುದು ಅಸ್ವಾಭಾವಿಕವಾಗಿಯೇ ಅವರಲ್ಲಿ ಮೂಡಬೇಕು. ಮೋಡಕವಿದ ಆಗಸದಲ್ಲಿ ಇದ್ದಕ್ಕಿದಂತೆ ರವಿಯ ಕಿರಣಗಳು ಹೊಳೆದಂತೆ.



ಇಂತಹ ಮನಸ್ಥಿತಿಯ ಸಮಾಜದಲ್ಲಿ ಪ್ರತಿಭಾರಿಯ ಒಲಿಂಪಿಕ್ಸ್ ನಲ್ಲಿ ಕೇವಲ ಬೆರಳೆಣಿಕೆಯ ಪದಕಗಳನ್ನು ಗಳಿಸಿಬರುವ ನಮ್ಮವರ ಜರಿಯುವ ಹಕ್ಕು ನಮಗೆ ಎಳ್ಳಷ್ಟೂ ಇರುವುದಿಲ್ಲ ಎಂಬುದನ್ನು ನಾವು ಮನಗಾಣಬೇಕು. ಹಿಮಾದಾಸ್ ಗೆದ್ದರೆ ಅದು ಹೆಮ್ಮೆಯ ವಿಚಾರ. ಆದರೆ ಆ ಹೆಮ್ಮೆಯನ್ನು ಇತರೆ ನಟ ನಟಿಯರಿಗೆ ಹೋಲಿಸಿ ಜರಿಯುವುದು ಮಾತ್ರ ನಮ್ಮ ಕಮ್ಮಿ ಬುದ್ದಿಯ ಸಂಕೇತ. ಒಂದೂ ಮಾಡಿ ತೋರಿಸೋಣ ಅಥವ ಮಾಡುವವರಿಗೆ ಪ್ರೋತಾಹಿಸೋಣ. ಎರಡನ್ನೂ ಬಿಟ್ಟು ಕೇವಲ ಫೇಸ್ಬುಕ್ ಪೋಸ್ಟ್ಗಳನ್ನು ಶೇರ್ ಮಾಡುತ್ತಾ, ಆಟದ ಹಿರಿಮೆಯನ್ನು ಮರೆತು ಜಾತಿಯ ಹಿರಿಮೆಯನ್ನು ತಿಳಿಯಬಯಸಿದರೆ ಅದು ಕೇವಲ ಆಟವಾಗಿ ಉಳಿಯುತ್ತದೆಯೇ ವಿನಃ ಕ್ರೀಡೆಯಾಗಲು ಹೇಗೆ ತಾನೆ ಸಾಧ್ಯ?!

Friday, August 10, 2018

ಬಾಡದ ಹೂವು...

ಹತ್ತು ವರ್ಷದ ಮೊಮ್ಮಗನಿಂದ ಇಂದು ಬೆಳ್ಳಂಬೆಳಗ್ಗೆ ಬಂದ ಸುದ್ದಿಯನ್ನು ಕೇಳಿ ಜೀವ ಹಿಂಡಿಹೋದಂತಾಯಿತು. ಹಿಡಿದಾದ ಒಂದು ನಿಟ್ಟಿಸಿರು. ಆ ಉಸಿರಿನಲ್ಲಿ ದಶಕಗಳ ಕಾಲ ಎದೆಯಾಳದಲ್ಲಿ ಅವಿತು ಕಲೆತು ಪಳೆಯುಳಿಕೆಯಾದಂತಹ ಪ್ರೀತಿ, ಸಿಟ್ಟು, ಕೋಪ, ದುಃಖ ದುಮ್ಮಾನಗಳು ಒಮ್ಮೆಲೇ ಒಟ್ಟೊಟ್ಟಿಗೆ ಮೂಡಿದ್ದವು. ಕೆಲಕಾಲ ಕಣ್ಣು ಮುಚ್ಚಿ ಮೌನಿಯಾದೆ. ಮನವನ್ನೂ ಮಾತಾಡಲು ಬಿಡದೆ ಸುಮ್ಮನಿರಿಸಿದೆ.

ಜೀವನ. ಎಪ್ಪತ್ತೇಳು ವರ್ಷಗಳ ಈ ಜೀವನ ಮೊದಲು ಏಳು ವರ್ಷಗಳಷ್ಟೇ ಆಕೆಯನ್ನು ಗುರುತಿಸದು. ಅದು ಮೂರನೇ ತರಗತಿಯ ಮೊದಲ ಸಾಲ ಕೊನೆಯ ಸೀಟು. ಎಣ್ಣೆಯಚ್ಚಿದ ಕೂದಲ ನೀಳವಾದ ಜಡೆಯೆರಡನ್ನು ಅಂದವಾಗಿ ಕಟ್ಟಿ, ಹಿಂದಿನ ದಿನವೇಳಿದ ಮನೆಗೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಬಂದಿರುವಳೋ ಎಂಬ ಧಾಟಿಯಲ್ಲಿ ಕಿಟಕಿಯ ಪಕ್ಕಕ್ಕೆ ಆಕೆ ಕುಳಿತಿದ್ದಾಳೆ. ಮೊಣಕೈಯೆರಡು ಆಕೆಯ ಮಂಡಿಗಳ ಮೇಲೆ, ಕೈಯ ಅಸ್ತಗಳೆರೆಡು ಎಳೆಯ ಕೆನ್ನೆಗಳ ಮೇಲೆ. ಯಾರೊಟ್ಟಿಗೂ ತುಟಿಕ್ ಪಿಟಿಕ್ ಅನ್ನದೆ ಏನೋ ಒಂದು ಆಲೋಚನೆಯಲ್ಲಿ ಮಗ್ನಳಾಗಲಿದ್ದಾಳೆ. ತರಗತಿಯ ಮಕ್ಕಳೆಲ್ಲ ಜೀವವನ್ನೇ ಪಣಕ್ಕಿಟ್ಟು ಅರಚಿ ಗುಂಡಾಂತರ ಮಾಡುತ್ತಿರುವಾಗ ಈಕೆ ಮೌನಗೌರಿಯ ಮುಖವಾಡವನ್ನು ಹಾಕಿಕೊಂಡಿದ್ದಾಳೆ. ಚೋಟುದ್ದದ ಕಾಲುಗಳ್ನು ನಿಧಾನವಾಗಿ ಇಡುತ್ತಾ ಆಕೆಯ ಹಿಂಬದಿಗೆ ಬಂದು 'ಹೂ...' ಎಂದು ಕೂಗಿದ ಸದ್ದಿಗೆ ಆಕೆ ತನ್ನ ಕೈಗಳೆರಡನ್ನು ಕಿವಿಯ ಮೇಲಿರಿಸಿ ಭಯದಿಂದ ನನ್ನ ಮೊದಲ ಬಾರಿಗೆ ನೋಡಿದ್ದನ್ನ ನಾನು ಇಂದಿಗೂ ಮರೆತಿಲ್ಲ. ಎಂದೆಂದಿಗೂ ಮರೆಯುವುದಿಲ್ಲ.

'ತಾತ, ಅಪ್ಪ ತಿಂಡಿಗೆ ಆನ್ಲೈನ್ ಆರ್ಡರ್ ಮಾಡಿ ಆಗಿದೆ ಅಂತೇ. ಪಾಸ್ತಾ.. ಬೇಗ ತಿನ್ನು, ನಾನು ಲಂಚ್ ಬ್ರೇಕ್ ಗೆ ವಿಡಿಯೋ ಕಾಲ್ ಮಾಡ್ತೀನಿ' ಎಂದ ಮೊಮ್ಮಗನ ಮೆಸೇಜುಗಳು ಗೋಡೆಯ ಮೇಲೆ ಒಂದೊಂದಾಗೆ ಮೂಡತೊಡಗಿದವು.ಎಲ್ಲರೂ ಇದ್ದೂ ಯಾರೂ ಇಲ್ಲದ ಇಂದಿನ ಮುದಿ ಜೀವಗಳಿಗೆ ಓಲ್ಡ್ ಏಜ್ ಹೋಮುಗಳೇ ಜೀವನದ ಕೊನೆಯ ಛಾವಣಿ. ನಾನಿಲ್ಲಿಗೆ ಬಂದು ಅದಾಗಲೇ ಏಳು ವರ್ಷಗಳಾಗಿವೆ. ಇನ್ನೆಷ್ಟು ದಿವಸ ಈ ಜೀವನದ ಬಂಡಿಯನ್ನು ಸವೆಸಬೇಕೋ. ಆಕೆಯೊಟ್ಟಿಗೆ ನಾನೂ ಹೊರಟಿದ್ದರೆ? ಆ ಮಧುರ ಯಾನದಲ್ಲಿ ನಾನು ಹಾಗು ಆಕೆ. ಇಬ್ಬರೇ. ಸೂರ್ಯ. ಚಂದ್ರ, ನಕ್ಷತ್ರಾದಿಗಳಾಚೆಗೆ ಚಲಿಸುತ್ತ ಗೊತ್ತಿರದ ಗುರಿಯನ್ನು ಅನ್ವೇಷಿಸುತ್ತಾ ಆ ಅನಂತ ನಡಿಗೆಯಲ್ಲಿ.. ನಾನು ಹಾಗು ಅವಳು….

ಕಲ್ಲಾಟ. ಬಿಡುವು ಸಿಕ್ಕಾಗೆಲ್ಲ ಆಕೆ, ನಾನು ಜೊತೆಗೆ ಹತ್ತಾರು ಕಲ್ಲುಗಳು. ಕರ ಕರ ಸದ್ದನ್ನು ಮಾಡುತ್ತಾ, ಒಂದೊಂದೇ ಕಲ್ಲನ್ನು ಗಾಳಿಗೆ ಎಸೆಯುತ್ತಾ, ಕೈ ಬೆವತು ನೆಲದ ಮೇಲಿದ್ದ ದೂಳೆಲ್ಲ ಸೇರಿ ಕೊಳಕು ಕೊಳಕುಗೊಂಡ ಕೈಗಳಲ್ಲೇ ಆಡಿದ ಆಟಗಳು ಅದೆಷ್ಟೋ! ಅಂದಿನ ಒಂದೆರೆಡು ಕಲ್ಲುಗಳನ್ನು ನಾನು ಇಂದಿಗೂ ಕಾಪಾಡಿಕೊಂಡು ಬರಬೇಕಿತ್ತು. ಆಕೆಯ ನೆನಪಿಗೆ. ಅಲ್ಲ, ಅಲ್ಲ, ಆ ನೆನಪಿನ ಬಯಕೆಗೆ….

ಎಳೆಯ ವಯಸ್ಸಿನ ಗೆಳೆತನವೇ ಹಾಗೆ. ಹುಡುಗಿ ಅಂದವಾಗಿದ್ದು ಹಲವು ವರ್ಷಗಳ ನಂತರ ಕಾಲೇಜಿನಲ್ಲೋ, ಆಫೀಸಿನಲ್ಲೋ ಮಗದೊಮ್ಮೆ ಸಿಕ್ಕರೆ ಮುಗ್ದ ಗೆಳೆತನದ ನೆನಪಿನ ಗೂಡು ಪ್ರೀತಿ ಪ್ರೇಮ ಎಂಬ ಹಲವಾರು ಸಂಬಂಧಗಳಿಗೆ ದಾರಿಮಾಡಿಕೊಡುತ್ತದೆ. ಅದು ವಯಸ್ಸಿನ ಮಾಹೆಯೋ ಅಥವಾ ತಿಳಿದೇ ಜರುಗುವ ತಪ್ಪೋ ಗೊತ್ತಿಲ್ಲ. ಆದರೆ ಪ್ರಾಥಮಿಕ ಶಾಲೆಯ ನಂತರ ಆಕೆಯ ನೆನಪು ಅದೆಷ್ಟು ಕಾಡಿತು ನನಗೆ. ಆಕೆಯೆಲ್ಲೋ, ನಾನೆಲ್ಲೋ. ಏಳನೇ ತರಗತಿಯ ಪಬ್ಲಿಕ್ ಪರೀಕ್ಷೆಯ ನಂತರ ಮಾರ್ಕ್ಸ್ ಶೀಟ್ಗಳನ್ನು ತೆಗೆದುಕೊಳ್ಳಲು ಕೊನೆಯಬಾರಿ ಹೋದಾಗ ಕಾಕತಾಳೀಯವೆಂಬಂತೆ ಆಕೆಯೂ ಅದೇ ಸಮಯಕ್ಕೆ ಬಂದಿದ್ದಳು. ಕಪ್ಪು ಬಣ್ಣದ ಬಟ್ಟೆಯ ಮೇಲೆ ಹರಿಶಿನ ಬಣ್ಣದ ನಕ್ಷತ್ರಗಳೂ ಅಥವಾ ಹರಿಶಿನ ಬಣ್ಣದ ಬಟ್ಟೆಯ ಮೇಲೆ ಕಪ್ಪು ಬಣ್ಣದ ಚಿಟ್ಟೆಗಳೋ ನೆನಪಿಗೆ ಬರುತ್ತಿಲ್ಲ. ಆದರೆ ಆ ಕೊನೆ ಕ್ಷಣವನ್ನು ಮುಂದೆ ನಾನು ಪ್ರತಿದಿನ ನೆನೆದುಕೊಳ್ಳುತ್ತಿದ್ದೆ. ಆದದ್ದಾಗಲಿ ಆಕೆ ಇರುವ ಶಾಲೆ ಯಾವುದೆಂದು ತಿಳಿದು ನಾನೂ ಅಲ್ಲಿಗೆ ಸೇರಿಕೊಂಡರೆ? ಆಕೆ ಎಲ್ಲಿದ್ದಾಳೆ? ಆಕೆ ಸಿಕ್ಕರೂ ಶಾಲೆಗೆ ಸೇರಿಸಲು ಮನೆಯವರು ಒಪ್ಪುವರೇ? ಗೊತ್ತಿರಲಿಲ್ಲ. ಆದರೂ ಹುಡುಕಿದೆ! ಸ್ಥಳಗುರುತ್ತಿದ್ದ ಆಕೆಯ ಮನೆಯನ್ನು ಹುಡುಕಿ ಹೋಗಿ ಕೇಳಿದರೆ ಅಂದು ಆಕೆ ಮನೆಯಲ್ಲಿರಲಿಲ್ಲ. ಮತ್ತೊಮೆ ಹೋಗಲು ಧೈರ್ಯವೇ ಸಾಲಿರಲಿಲ್ಲ! ನೆನಪುಗಳು ಚಟಪಟಗುಡುತ್ತಿದ್ದವು. ಕಾಲ ಓಡತೊಡಗಿತ್ತು. ಮಾರ್ಕ್ ಝುಕರ್ಬರ್ಗ್ ಕೂಡ ಕೊಂಚ ಲೇಟಾಗೆ ಫೇಸ್ಬುಕ್ಕನ್ನು ಅನ್ವೇಷಿಸಿದ. ಅದೆಷ್ಟು ಬೇಗ ಆತನೂ ಮುದುಕನಾದ! ಕಲಿಯುಗದ ಪ್ರೇಮದೇವತೆಗಳ ಸಾಲಿಗೆ ಸೇರುವ ಆತನ ಅನ್ವೇಷಣೆಯ ಐದಾರು ವರ್ಷಗಳ ನಂತರ ಆಕೆ ಮತ್ತೊಮೆ ನನಗೆ ಸಿಕ್ಕಳು ಅಥವಾ ನಾನು ಆಕೆಗೆ ಸಿಕ್ಕನೆ? ಇಲ್ಲ, ಆಕೆಯೇ ನನಗೆ ಸಿಕ್ಕಳು. ಅದೆಂತಹ ಆನಂದ! ಸಣ್ಣವನಿದ್ದಾಗ ಕಳೆದುಕೊಂಡ ಆಟಿಕೆಯೊಂದು ಪುನ್ಹ ಸಿಕ್ಕಂಥ, ಅಂಗನವಾಡಿಗೆ ಸೇರಿಸಿದ ಮೊದಲನೇ ದಿನ ಅಮ್ಮನ ದಾರಿಯನ್ನೇ ವರುಷಗಳಂತೆ ಕಾದು, ಅತ್ತು, ಬೇಸತ್ತು ಕೊನೆಗೆ ದೂರದಿಂದ ಆಕೆ ಬರವುದ ಕಂಡಾಗ ಮೂಡುತ್ತಿದ್ದ ಸಂತೋಷದ ಬುಗ್ಗೆಗಳ ಅನುಭವದಂತೆ ಅಂದು ಈಕೆಯೊಟ್ಟಿಗೆ ಮೊದಲ ಬಾರಿಗೆ ಫೋನಿನಲ್ಲಿ 'ಹಲೋ' ಎಂದಾಗ ಆಗಿದ್ದಿತು.

ವರುಷಗಳ ತಪ್ಪಸ್ಸಿಗೆ ಏನೋ ಎಂಬಂತೆ ದೊರೆತ ಆಕೆಯ ಮಾತುಗಳ ಮುಂದೆ ಏನೇನೂ ಬೇಡವಾಯಿತು. ಸ್ಕೂಲು, ಕಾಲೇಜು, ಪ್ರೀತಿ, ಗೆಳೆತನ, ಇಷ್ಟ ಕಷ್ಟಗಳಿಂದಿಡಿದು, ಸಾವು, ನೋವು, ಜೀವ ಜನ್ಮಜನ್ಮಾಂತರಗಳವರಗೆ ಘಂಟೆಗಟ್ಟಲೆ ಮಾತು, ನೂರಾರು ಮೆಸೇಜುಗಳು, ಆಗೊಮ್ಮೆ ಈಗೊಮ್ಮೆ ವಿನಿಮಯ ಮಾಡಿಕೊಳ್ಳುತ್ತಿದ್ದ ಗಿಫ್ಟುಗಳು ಏನೋ ಒಂದು ಅಕಲ್ಪಿತ ಲೋಕವನ್ನೇ ನನ್ನಲ್ಲಿ ಸೃಷ್ಟಿಸಿಬಿಟ್ಟಿದ್ದವು. ಕೆಲವೊಮ್ಮೆ ಪ್ರತಿಭಾರಿಯ ಕನಸ್ಸಿನಂತೆ ಇದೂ ಕೂಡ ಕನಸ್ಸಿರಬಹುದೇ ಎಂದನಿಸಿದ್ದು ಮಾತ್ರ ಸುಳ್ಳಲ್ಲ. ಆದರೂ ಅದೆಷ್ಟೋ ಭಾರಿ ಅದು ನಿಜವಾಗದಿರಲೆಂದು ಬೇಡಿಕೊಂಡು ಪರಿತಪಿಸುತ್ತಿದ್ದೆ. ಎಲ್ಲಿಯೂ ತೋರ್ಪಡಿಕೆಗೆ ಅವಕಾಶವಿಯಲಿಲ್ಲ. ನಟಿಸಿ ಭ್ರಮಿಸಿ ಗಳಿಸುವ ಜರೂರು ನನಗೆ ಅಂದಿಗೂ ಇರಲಿಲ್ಲ. ಇಂದೂ ಬೇಕಿಲ್ಲ! ಹೆಚ್ಚು ಕಡಿಮೆ ನನ್ನ ಗುಣಸ್ವಭಾವ ಅಂದು ಹೇಗಿದ್ದಿತೋ ದಶಕಗಳ ನಂತರ ಇಂದಿಗೂ ಹಾಗೆಯೇ ಇದೆ. ಮಾತಿನ ವಕ್ಕಣಿಯಲ್ಲೋ, ಮುಖಪುಟಗಳಲ್ಲೋ ಮತ್ತೆಲ್ಲೋ ತಾನೊಬ್ಬ ಸುಂದರಾಂಗ, ಸಾತ್ವಿಕ, ಸ್ನೇಹಿತರಿಂದ ಸುತ್ತುವರೆದ ಸೊಗಸುಗಾರನೆಂದು ತೋರ್ಪಡಿಸಿಕೊಂಡು ಪ್ರೀತಿಯನ್ನು ಗಿಟ್ಟಿಸಿಕೊಳ್ಳುವುದು ಕಷ್ಟದ ವಿಚಾರವಾಗಿರಲಿಲ್ಲ. ಆದರೆ ನಾನೆಂದೂ ಆ ಹಾದಿಯನ್ನು ಹಿಡಿಯಲಿಲ್ಲ. ಹಾಗಂತ ನನ್ನಲ್ಲಿ ನ್ಯೂನ್ಯತೆಗಳೇನು ಇರಲಿಲ್ಲ ಎಂದಲ್ಲ. ಆದರೆ ಪಡೆದುಕೊಳ್ಳುವ ಆಸೆಗೆ ಬಲಿಯಾಗಿ ನಾನೆಂದು ಅವುಗಳನ್ನು ಬಚ್ಚಿಡಲಿಲ್ಲ. ಹೀಗೆ ತಂತ್ರಜ್ಞಾನದ ನೆರಳಲ್ಲೇ ಅರಳಿದ ನಮ್ಮಿಬ್ಬರ ಸಂವಹನ ಕೇವಲ ಕಾಣದೆ ಆಡದ ಮಾತುಗಳು ಹಾಗು ಟಕಟಕ ಕುಟ್ಟುವ ಮೆಸೇಜುಗಳಿಗೆ ಸೀಮಿತವಾಗಿದ್ದವು. ಪ್ರತಿದಿನ ರಾತ್ರಿ ಹತ್ತರ ಸುಮಾರಿಗೆ ಶಬರಿಯಂತೆ ಕಾದು ಮನೆಯ ಮೇಲ್ಚಾವಣಿಯ ಮೇಲೆ ತಂಪಾದ ಗಾಳಿಗೆ ಮುಖವೊಡ್ಡಿ ಆಕೆಯ ನಂಬರಿಗೆ ರಿಂಗಾಯಿಸಿದಾಗ ನನ್ನ ಮನದಲ್ಲಿ ಮೂಡುತ್ತಿದ್ದ ಸಂತೋಷದ ಅಲೆಗಳನ್ನಾಗಲಿ, ನಂತರ ಆಕೆಯ 'ಹಲೋ' ಎಂಬ ಉದ್ವೇಗಭರಿತ ಎರಡಕ್ಷರವನ್ನು ಕೇಳಿ ದಿನದ ಜಂಜಾಟವೆಲ್ಲ ಮರೆಯಾಗಿ ಮಂದಹಾಸದಿಂದ ಅರಳುತ್ತಿದ್ದ ನನ್ನ ಮುಖಭಾವವನ್ನಾಗಲಿ ಆಕೆ ಕಾಣಲಿಲ್ಲ. ಆಕೆಯ ಮಾತುಗಳನ್ನು ಅರೆಕಿವುಡನಿಗೆ ಕೇಳುವ ಅಮೂಲ್ಯ ಪದಗಳಂತೆ ಅಷ್ಟನ್ನೂ ನನ್ನ ಮನದೊಳಗೆ ಇಳಿಸಿ ರಾಶಿಯಾಕಿಕೊಳ್ಳುತ್ತಿದ್ದೆ. ಆ ಮಾತುಗಳ ರಾಶಿ ಇಂದಿಗೂ ಹಾಗೆಯೆ ಇವೆ. ಆಗೊಮ್ಮೆ ಈಗೊಮ್ಮೆ ತೀರಾ ಒಬ್ಬಂಟಿ ಎನಿಸಿದಾಗ ಬಂದು ಮಾತಾಡಿಸುತ್ತವೆ. ಭಾರವಾದ ಎದೆಯನ್ನು ಹಗುರಾಗಿಸುತ್ತವೆ. ನನ್ನನು ಆಕೆ ಹೆಚ್ಚಾಗಿ ಇತ್ಯರ್ಥಿಸಿದ್ದು ಈ ತಂತ್ರಜ್ಞಾನದ ಕೊಂಡಿಗಳಲ್ಲಿಯೇ. ಭಾವನೆಗಳನ್ನು ಪದಗಳಲ್ಲಿ ವ್ಯಕ್ತಪಡಿಸಲಾಗದ, ಹಾಗೆ ವ್ಯಕ್ತಪಡಿಸಲೊಗಿ ದ್ವಂದ್ವರ್ಥವನ್ನು ಹುಟ್ಟು ಹಾಕಿಕೊಂಡು ಪೇಚಾಡುತ್ತಿದ್ದ ನನ್ನನ್ನು ಆಕೆ ಬಹುವಾಗಿಯೇ ತಪ್ಪು ತಿಳಿದಳು.

ಅಷ್ಟರಲ್ಲಾಗಲೇ ಗಿರ್ರನೆ ತೇಲಿಬಂದ ಜೇಡದ ದೇಹದಂತಿದ್ದ ಡ್ರೋನ್ ಒಂದು ಕಾಗದದ ಪೊಟ್ಟಣವನ್ನು ಹಿಡಿದು ತಂದಿತು. ಅದರ ಕೈಯಿಂದ ಪಡೆದ ಪಾಸ್ತಾವನ್ನು ಪ್ಲೇಟೊಂದಕ್ಕೆ ಸುರಿದುಕೊಂಡೆ. ತಿನ್ನಲ್ಲು ಮಾತ್ರ ಮನಸ್ಸಾಗಲ್ಲಿಲ್ಲ. ಸಣ್ಣವನಿದ್ದಾಗ ದಿನಕ್ಕೆ ನಾಲ್ಕು ಅಕ್ಕಿರೊಟ್ಟಿ, ತುಪ್ಪ ಹಾಗು ಸಾರನ್ನು ಕಲಸಿ ಭಾರಿಸುತ್ತಿದ್ದ ನನಗೆ ಇಂದು ಒಂದು ಗುಕ್ಕೂ ಒಳಗೆ ಸೇರಿಸಲು ಹೆಣಗಾಡುವಂತಾಗಿದೆ. ಇಂದು ಅಂತಹ ಅಕ್ಕಿರೊಟ್ಟಿಯನ್ನು ಮಾಡಿ ಮುದ್ದಿಸಿ ತುಪ್ಪವನ್ನು ಸುರಿದುಕೊಡುವವರ್ಯಾರು. ನನ್ನವರು ಯಾರು. ಕಾಲ ಎಲ್ಲರನ್ನು ಏಕೆ ಅನಂತವಾಗಿಸಲಿಲ್ಲ. ಏಕೆ ಹುಟ್ಟು, ಅದ್ಯಾಕೆ ಸಾವು?

ಆಕೆ ನನ್ನೋಟ್ಟಿಗೆ ಮುನಿಸಿಕೊಳ್ಳತೊಡಗಿದ್ದು ಏಕಿರಬಹದು? ಇಂದಿಗೂ ಉತ್ತರ ತಿಳಿದಿಲ್ಲ. ನನ್ನ ತಳಬುಡ ಇಲ್ಲದ ಮಾತಿಗೂ ಅಥವ ವಿಪರೀತ ಸಲುಗೆಗೋ, (ಸ್ನೇಹದಲ್ಲಿ ಕಡಿಮೆ ವಿಪರೀತ ಎಂಬುವ ಮಾತೆಲ್ಲಿ, ನಾನು ಇದನ್ನು ಒಪ್ಪೆನು), ಅಥವ ನನ್ನ ಜಾತಿಗೋ ಅಥವ ಏಳಿಗೆಗೂ. ಗೊತ್ತಿಲ್ಲ! ಆದರೆ ನನ್ನ ಮೇಲಿನ ಆಕೆಯ ಮುನಿಸು ತಿಳಿಯದಂತೆ ಬೆಳೆಯಿತು. ಅದೊಂದು ದಿನ ತಲೆಗೆಟ್ಟವನಂತೆ ಮೊದಲ ಬಾರಿಗೆ ಆಕೆಯ ಪರೀಕ್ಷಾದಿನವೆಂದೂ ತಿಳಿಯದೆ ತಡರಾತ್ರಿ ಪ್ರೀತಿಯ ನಿವೇಧನೆಯನ್ನು ಮಾಡಿದೆ. ಪಾಪದ ಜೀವಕ್ಕೆ ಸಿಡಿಲು ಬಂದೆರಗಿದ ಅನುಭವವಾಗಿರಬೇಕು! ಅಲ್ಲಿಯವರೆಗೂ ಒಬ್ಬ ಅತ್ಯಾಪ್ತ ಗೆಳೆಯನೆಂಬ ಸಲುಗೆಯಿಂದಿದ್ದ ಆಕೆ ನನ್ನಿಂದ ಇಂತಹ ಕೀಳುಮಟ್ಟದ ಭಾವನೆಯನ್ನು ನಿರೀಕ್ಷಿಸಿರುವುದಕ್ಕೆ ಸಾಧ್ಯವಿಲ್ಲ (ಆದರೆ ನನ್ನ ಮನಮಾತ್ರ ಆ ಮಧುರ ಭಾವನೆಯನ್ನು ಕೀಳುಮಟ್ಟದ್ದು ಎಂದು ಇಂದಿಗೂ ಒಪ್ಪಿಕೊಂಡಿಲ್ಲ, ಅದೆಷ್ಟೇ ಪ್ರಯತ್ನಪಟ್ಟರೂ!) ಆ ಸಂಧಿಘ್ನ ಘಳಿಗೆಯಲ್ಲೂ ಆಕೆ ಕೋಪಗೊಳ್ಳದೆ ನನ್ನನ್ನು ನಯವಾಗಿ ಸಮಾಧಾನಪಡಿಸಿದಳು. ಎದೆಯೊಳಗೆ ನೋವಿನ ಜ್ವಾಲಾಮುಖಿಯೇ ಸ್ಪೋಟಿಸುತ್ತಿದ್ದಾರೂ ನಾನು ಸುಮ್ಮನೆ ಆಕೆಯ ಮಾತನ್ನು ಆಲಿಸತೊಡಗಿದೆ. ಆದರೆ ಯಾವೊಂದು ಮಾತುಗಳೂ ನನಗೆ ಸಾಂತ್ವನವನ್ನು ನೀಡಲಿಲ್ಲ. ಕೊನೆಗೆ 'ಗೆಳೆಯರಾಗಿರುವ' ಎಂಬ ಮಾತನ್ನು ಹೇಳಿ ಫೋನನ್ನು ತುಂಡರಿಸಿದಳು! ಆಕೆ ಒಪ್ಪಿಕೊಳ್ಳದಿದ್ದರೂ ಸರಿ ಆಕೆಯ ಮಾತುಗಳು ಹೀಗೆಯೇ ನನ್ನ ಕಿವಿಯ ಮೇಲೆ ಬೀಳುತ್ತಿರಲಿ ಎಂದು ಮನವು ಚೀರಾಡತೊಡಗಿತು. ಆ ನಡುರಾತ್ರಿಯಲ್ಲೂ ನಾ ಇತ್ತಕಡೆಯಿಂದ ಫೋನಾಯಿಸಿದೆ. ಆಕೆ ಉತ್ತರಿಸಲಿಲ್ಲ. ಅಲ್ಲಿನ ನಂತರದ ಮೂರುದಿನಗಳ ಕಾಲ ಆ ಚಿಗುರು ಜೀವನದ ಮೊಮ್ಮೊದಲ ನೋವಿನ ದಿನಗಳನ್ನು ಕಂಡೆ. ಅಲ್ಲಿಯವರೆಗೂ ಪರೀಕ್ಷೆಯಲ್ಲಿ ಕಡಿಮೆ ಅಂಕವನ್ನು ಪಡೆಯುವುದು ಅಥವ ಕ್ರಿಕೆಟ್ ಆಡುವಾಗ ಶೂನ್ಯ ರನ್ನಿಗೆ ಔಟ್ ಆಗುವುದು ಅಥವಾ ಹಣದ ಅಭಾವದಿಂದ ಸ್ನೇಹಿತರೊಟ್ಟಿಗೆ ಪ್ರವಾಸಕ್ಕೆ ಹೋಗಲಾಗದಿರುವುದೇ ದುಃಖವೆಂದು ತಿಳಿದವನಿಗೆ ತೀರಾ ಹಚ್ಚಿಕೊಂಡ ವ್ಯಕ್ತಿಯೊಬ್ಬರ ದೂರಾಗುವಿಕೆ ಈ ಮಟ್ಟಿನ ನೋವನ್ನು ತಂದುಕೊಡುತ್ತದೆ ಎಂದು ತಿಳಿದಿರಲಿಲ್ಲ. ಎದೆಯ ಮಧ್ಯಭಾಗದಲ್ಲಿ ಮೂಡುತ್ತಿದ್ದ ಆ ಸಂಕಟ ಎಳೆಯ ವಯಸ್ಸಿಗೆ ಸಾಕು ಸಾಕಾಗಿದ್ದಿತು. ಎಣಿಸಿದಂತೆ ಕೆಲದಿನಗಳ ನಂತರ ಆಕೆಯ ಮೆಸ್ಸೇಜು ಬಂದಿತು. 'ಹೇಗಿದ್ದೀಯ' ಎಂಬ ಆ ನಾಲ್ಕಕ್ಷರದ ಪದಗಳನ್ನು ಕಂಡು ಕಣ್ಣು ತುಂಬಿ ಬಂದಿತು. ಅದ್ಯಾವ ಜನ್ಮದ ಮೈತ್ರಿಯೋ ಕಾಣೆ, ಆಕೆಯೆಂದರೆ ಅದೇನೋ ಒಂದು ವರ್ಣಿಸಲಾಗದ ನವಿರಾದ ಅನುಭವ.

ನಂತರದ ಆಕೆಯ ಮಾತಿನ ವರಸೆ ಬಹುವಾಗಿಯೇ ಬದಲಾಗಿದ್ದಿತು. ಗೆಳೆಯನೆಂಬ ಆಪ್ತತೆ ಮಾತ್ರ ಎಂದಿನಂತೆಯೇ ಇದ್ದರೂ ಆಕೆ ನಮ್ಮ ಸಂಭದಕ್ಕೆ ಇಂತಿಷ್ಟೇ ಎಂಬೊಂದು ಬೇಲಿಯನ್ನು ಹಾಕಲು ಬಯಸಿದಂತೆ ಕಾಣುತ್ತಿದ್ದಳು. ನಾನು ಅವಳನ್ನು ಇಷ್ಟಪಟ್ಟಂತೆ ಆಕೆಯೂ ಒಬ್ಬನನ್ನು ಇಷ್ಟ ಪಡುತ್ತಿರುವಳೆಂದೂ ಹೇಳತೊಡಗಿದಳು. 'ನಿನ್ನನು ಪ್ರೀತಿಸೆನು' ಎಂದಾಗ ಆದ ದುಃಖಕ್ಕಿಂತ 'ನಾನು ಇನ್ನೊಬ್ಬನ್ನನ್ನು ಇಷ್ಟಪಡುತ್ತಿರುವೆ' ಎಂಬ ಮಾತಿನಿಂದ ಆದ ನೋವು ಮಾತ್ರ ಚೂರಿಯಿಂದ ಎದೆಗೆ ಚುಚ್ಚಿದಂತಿತ್ತು. ಆದರೂ ಸಂಬಾಳಿಕೊಂಡೇ. ನನ್ನ ಪ್ರೀತಿಯಷ್ಟೇ ಆಕೆಯದೂ ಅಮೂಲ್ಯವಾದದು. ಮಧುರವಾದುದು. ಆತ ಆಕೆಗೆ ಸಿಕ್ಕಿ ಇಬ್ಬರು ಸಂತೋಷವಾಗಿರಲಿ ಎಂದುಕೊಂಡು ಸಮಾಧಾನ ತಂದುಕೊಂಡೆ. ಆದರೆ ಆಕೆಯದೂ ನನ್ನ ಪಾಡೇ! ಅವಳಿಷ್ಟ ಪಡುವ ಹುಡುಗನೂ ಬೇರೊಬ್ಬಳನ್ನು ಇಷ್ಟ ಪಡುತ್ತಿರುವನೆಂದು ಆಕೆ ನೊಂದಿದ್ದಳು. ಜಾತಿಯಲ್ಲಿ ಆಕೆಯದೇ ಆದ ಅವನನ್ನು ಆಕೆ ಇಷ್ಟ ಪಟ್ಟಿದ್ದೇ ಯಾಕೋ ನನಗೆ ಒಂದು ಆಶ್ಚರ್ಯಕರ ಸಂಗತಿ. 'ನಿಜವಾದ ಪ್ರೀತಿ ಎಂದೂ ಸೋಲದು, ಸಮಾಧಾನ ತಂದುಕೊ' ಎಂದು ತಿಳಿಹೇಳತೊಡಗಿದೆ. ಆಕೆಯ ನೋವಿನಲ್ಲಿ ಭಾಗಿಯಾಗಲು ಪ್ರಯತ್ನಿಸಿದೆ. ಅಳುತ್ತಲೇ ನಗತೊಡಗಿದೆ. ಆದರೆ ಮೊದಲ ಬಾರಿಗೆ ನನಗೆ ಆಕೆಯ ಮೇಲೆ ಮುನಿಸು ಬರತೊಡಗಿದ್ದು ಕೆಲತಿಂಗಳ ಅಂತರದಲ್ಲಿಯೇ ಆಕೆ ಈತನನ್ನು ಮರೆತು ಮತ್ತೊಬ್ಬನ್ನನ್ನು ಇಷ್ಟಪಡುತ್ತಿರುವೆನೆಂದು ಹೇಳಿದಾಗ! ತನ್ನ ಮೊದಲ ಪ್ರೀತಿಯನ್ನು ಇಷ್ಟು ಬೇಗ ಮರೆತು ಮತೊಬ್ಬ ತನ್ನನು ಪ್ರಪೋಸ್ ಮಾಡಿದ ಎಂದಾಗ ನನ್ನ ಮೈಯೆಲ್ಲ ಹುರಿದುಹೋಯಿತು. ಸಿಕ್ಕರೂ ಸಿಗದಿದ್ದರೂ ತಾವು ಮೊದಲ ಪ್ರೀತಿಯನ್ನು ಅಷ್ಟು ಸುಲಭವಾಗಿ ಬಿಟ್ಟುಗೂಡಕೂಡದು ಎಂಬ ನನ್ನ ತರ್ಕರಹಿತ ನೀತಿಗೆ ಅವಳನ್ನೂ ಒಳಪಡಿಸಿದೆ. ಸಿಟ್ಟು ಜಗಳಕ್ಕೆ ಹಾದಿಯಾಯಿತು. ಮನಸ್ತಾಪ ವಿಪರೀತವಾಯಿತು. ಅಷ್ಟಾದರೂ ನಾನೇ ಆಕೆಯ ಹಿಂದೋಗಿ ಕ್ಷಮೆಯಾಚಿಸುತ್ತಿದ್ದೆ. ಹಲವು ಭಾರಿಯ ನಂತರ ಅದು ನನ್ನ ಸ್ವಾಭಿಮಾನಕ್ಕೆ ಧಕ್ಕೆ ತರುವಂತಿತ್ತು. ಮುಂಗಾರು ಮಳೆಯಂತೆ ಬಿಡದಂತೆ ಉದುರುತ್ತಿದ್ದ ನಮ್ಮ ಮಾತುಗಳು ಕ್ಷೀಣಿಸತೊಡಗಿದವು.

ಬೇಕಂತಲೇ ಏನೋ ಇಂದು ಸೆಕೆ ಕಡಿಮೆಯಾಗಿದೆ. ಮೋಡಗಳೂ ಕನೆ ಮೊಸರಂತೆ ಅಲ್ಲಲಿ ಚಲ್ಲಿವೆ. ಆಕೆಯ ಮನೆಯೂ ನಾನಿರುವ ಜಾಗದಿಂದ ಹೆಚ್ಚೇನು ದೂರವಿರಲಿಲ್ಲ. ಜೀವಮಾನದಲ್ಲೇ ಒಮ್ಮೆಯೂ ಹೋಗದ ಅಲ್ಲಿಗೆ ಇಂದು ಏಕೋ ಹೋಗುವ ಮನಸ್ಸಾಯಿತು. ಸ್ವಯಂಚಾಲಿತ ಕುರ್ಚಿಯಿಂದ ನಿಧಾನವಾಗಿ ಆಕೆಯ ಮನೆಯ ಹಾದಿಯನ್ನಿಡಿದೆ. ಊರಿನಲ್ಲಿದ್ದ ಮನೆಯಿಂದ ಬೈಕಿನಲ್ಲಿ ಪೇಟೆಗೆ ಬಂದರೆ ಸುತ್ತಿ ಬಳಸಿ ಅದೆಷ್ಟು ಸಾರಿ ಈಕೆಯ ಮನೆಯ ಮುಂದೆ ಹಾದು ಹೋಗುತ್ತಿರಲಿಲ್ಲ. ಇಳಿಸಂಜೆಯ ಕಣ್ತುಂಬಿಕೊಳ್ಳಲು ಬೆಟ್ಟದ ಬಳಿಗೆ ಹೋಗುವಾಗ, ಅಲ್ಲಿಂದ ವಾಪಸ್ಸು ಬರುವಾಗ, ಯಾವುದೊ ಮೂಲೆಯಲ್ಲಿರುವ ಮಾರ್ಕೆಟಿನ ಹಾದಿಯನ್ನು ಹಿಡಿದಾಗ, ದೇವಸ್ಥಾನಕ್ಕೆ ಹೋಗುವಾಗ ಅಥವಾ ಆಕೆಯ ನೆನೆಪು ಅತಿಯಾಗಿ ಕಾಡಿದಾಗ ಹೀಗೆ ಇಲ್ಲದ ಸಲ್ಲದ ಕಾರಣಗಳನಿಟ್ಟುಕೊಂಡು ನಾನು ಆಕೆಯ ಮನೆಯ ಮುಂದೆ ಅಗಣಿತ ಸಂಖ್ಯೆಯಲ್ಲಿ ಹಾದುಹೋಗಿರುವೆ. ಬಹುತೇಕ ನನ್ನೊಟ್ಟಿಗೆ ಮಾತನ್ನು ನಿಲ್ಲಿಸೇಬಿಟ್ಟಿದ್ದ ನನ್ನ ಪ್ರಾಣಸ್ನೇಹಿತೆಯನ್ನು ಕಾಣಲು ಕಣ್ಣುಗಳು ಹಾತೊರೆಯುತ್ತಿದ್ದವು. ಆದರೆ ವಿಧಿಯಾಟವೋ ಏನೋ ಒಮ್ಮೆಯೂ ಅದು ಸಾಧ್ಯವಾಗಲ್ಲಿಲ್ಲ. ಅಲ್ಲದೆ ಟ್ರಾಫಿಕ್ ರೂಲ್ಸ್ ಎನ್ನುತ ತಲೆಯ ತುಂಬಾ ISI ಮಾರ್ಕಿನ ಹೆಲ್ಮೇಟುಗಳೇ ಮುಖದ ತುಂಬಾ ಅಂಟಿಸಿಕೊಂಡಿರುವಾಗ ಒಂದು ಪಕ್ಷ ಆಕೆಯೇ ನನ್ನ ಕಂಡರೂ ಗುರುತಿಸಿಲಾರಳು!

ಒಂದೇ ಒಂದು ದಿನವೂ ತಪ್ಪದೆ ವರ್ಷಗಳ ಕಾಲ ಹರಟಿದ್ದ ನಾವುಗಳು ವರ್ಷಕೊಂದು ಹುಟ್ಟುಹಬ್ಬಕ್ಕೆ ಹಾರೈಸುವ ಗೆಳೆಯರೇನೋ ಎಂಬ ಮಟ್ಟಿಗೆ ಬದಲಾದೆವು. ಕಾಲದ ಮಾಹೆಯೇ ಹಾಗೆ! ಯಾರನ್ನು ಎಂತವರನ್ನಾಗಿಯೂ ಬದಲಾಗಿಸುತ್ತದೆ. ಆದರೆ ನನ್ನ ಮನದಲ್ಲಿ ಮೊದಲ ಪ್ರೀತಿಯ ಚಿಗುರು ಕೊನೆಯುಸಿರನ್ನೆಳೆಯದಿದ್ದರೂ ನನ್ನ ಕೆಲವೇ ಕೆಲವು ಅತ್ಯಾಪ್ತ ಸ್ನೇಹಿತರಲ್ಲಿ ಆಕೆಯೂ ಒಬ್ಬಳು ಎಂಬುದ ಅದು ಮರೆತಿರಲಿಲ್ಲ. ನನ್ನ ಕಷ್ಟ ದುಃಖಗಳಿಗೆ ಸಾಂತ್ವನ ಹೇಳಲು, ಸುಖ ಸಂತೋಷಗಳನ್ನು ಹಂಚಿಕೊಳ್ಳಲು, ವಿಪರೀತವಾಗಿ ಕಾಡಿದ ಖಿನ್ನತೆ ಹಾಗು ಆತಂಕವನ್ನು ನಿವಾರಿಸಿಕೊಳ್ಳಲು ನನಗೆ ನನ್ನ ಗೆಳತಿಯ ಜರೂರು ಇದ್ದಿತು. ಪ್ರತಿದಿನ ಬಿಡುವು ದೊರೆತಾಗಲೆಲ್ಲ ಅದು ನೆನೆನೆದು ಮರುಗುತ್ತಿತ್ತು. ತನ್ನ ಪ್ರೀತಿ ಪ್ರೇಮವೆಂಬ ಎಲ್ಲಾ ತರಹದ ಭಾವನೆಗಳನ್ನು ಅತ್ತಿಕ್ಕಿಕೊಂಡು ಕೊನೆಯ ಪಕ್ಷ ಕೇವಲ ಸ್ನೇಹಿತರಾಗಿಯೇ ಇರಲು ಅದು ಬಯಸತೊಡಗಿತು. ಜೀವದ ಗೆಳತಿಯನ್ನು ಅದು ಪರಿತಪಿಸುತ್ತಿತ್ತು. ಆದರೆ ಆಕೆಗೆ ಅದ್ಯಾವುದೂ ಗೊತ್ತಿರಲೇ ಇಲ್ಲ. ಕೊನೆಕೊನೆಗೆ ವರ್ಷಕ್ಕೊಮ್ಮೆ ಬರುವ ನನ್ನ ಹುಟ್ಟುಹಬ್ಬಕ್ಕೂ ಸಂದೇಶವನ್ನು ಕಳಿಸುವುದನ್ನ ನಿಲ್ಲಿಸಿದಳಾಕೆ. ಅಷ್ಟಾಗಿ ಬೇಡವಾದನೆ ಆಕೆಗೆ ನಾನು?

ವರುಷಗಳು ಕಳೆದವು. ಆಕೆಯೊಟ್ಟಿಗಿನ ಕೆಲದಿನಗಳ ನೆನಪು ನನ್ನಲ್ಲಿ ಹೆಮ್ಮರವಾಗಿ ಬೆಳೆದು ನಿಂತಿತ್ತು. ಅದೊಂದು ದಿನ ತಟ್ಟನೆ ಬಂದ ಆಕೆಯ ಮೆಸೇಜೊಂದನ್ನು ತೆರೆಯುವ ಮೊದಲೇ ಮನಸ್ಸು ಅದೇನೆಂದು ಊಹಿಸಿತು! ಆಕೆಯ ಮದುವೆಯ ಆಮಂತ್ರಣ ಪ್ರತಿಯ ಫೋಟೋ. ಸಂತೋಷದ ಸಂಗತಿಯೆಂದರೆ ಹುಡುಗ ಆಕೆಯ ಎರಡನೆಯ ಪ್ರೀತಿ. ಯಾವುದೊ ಆನ್ಲೈನ್ ವೆಬ್ಸೈಟಿನಲ್ಲಿ ತಯಾರು ಮಾಡಿ ಕಳಿಸಿದ್ದ ಆ ಫೋಟೋ ನನ್ನ ವರುಷಗಳ ತುಮುಲಗಳಿಗೆ ಕೊನೆಗೂ ಪೂರ್ಣವಿರಾಮವೊಂದನ್ನು ಜಡಿದಿತ್ತು. ಕಡೆ ಪಕ್ಷ ಖುದ್ದಾಗಿಯೇ ಒಂದೆರೆಡು ಪದಗಳನ್ನು ಟೈಪ್ ಮಾಡಿ ಕಳಿಸಲಾಗದ ಆಕೆ ನನ್ನ ಅದೆಷ್ಟು ದೂರವಾಗಿಸಿದ್ದಾಳೆ ಎನ್ನುವುದು ಅರಿವಾಯಿತು. ಅದಾದೆಲ್ಲ ಆಯಿತು, ನನ್ನ ಪರಮಾಪ್ತ ಗೆಳತಿಯವಳು. ಒಂದೆರೆಡು ದಿನ ಮೊದಲೇ ಹೋಗಿ ಮದುವೆಯ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿ ಈ ನೆನಪುಗಳ ಬುತ್ತಿಗೆ ಇನ್ನಷ್ಟು ಸವಿನೆನಪುಗಳ ರಾಶಿಗಳನ್ನು ಸುರಿದುಕೊಳ್ಳಬೇಕೆನ್ನುವ ಆಸೆಗೂ ತಣ್ಣೀರೆರಚಲಾಯಿತು. ಒಂದು ಫೋನಾಯಿಸಿ ಅಥವಾ ತುಸುದೂರದಲ್ಲೇ ಇದ್ದ ಮನೆಗೊ ಬಂದು ಆಮಂತ್ರಣ ಪ್ರತಿಯನ್ನು ಕೊಡಲಾಗದ ಆಕೆಯ ಮದುವೆಗೆ ನಾನ್ಯಾಕೆ ಹೋಗಲಿ!? ಸ್ವಾಭಿಮಾನ ಹೆಚ್ಚೆತ್ತಿತು.

ಸರ್ವವೂ ಯಂತ್ರಮಯವಾಗಿರುವ ಈ ಕಾಲದಲ್ಲಿ ಮೆನೆಯ ವಿಳಾಸವನ್ನು ಹೇಳಿದರೇನೇ ತಂದು ಬಿಡುವ ವೀಲ್ಚೇರು ನನ್ನನ್ನು ಆಕೆಯ ಮನೆಯ ಮುಂದೆ ತಂದು ನಿಲ್ಲಿಸಿದ್ದೆ ತಿಳಿಯಲಿಲ್ಲ. ಮೆನೆಯ ಹೊರಗೊಳಗೆ ಓಡಾಡುತ್ತಿದ್ದ ಅಲ್ಲಿನ ಯಾರೊಬ್ಬರಲ್ಲೂ ದುಃಖದ ಛಾಯೆಯಾಗಲಿ, ಅಗಲಿಕೆಯ ನೋವಾಗಲಿ ಕಾಣುತ್ತಿರಲಿಲ್ಲ. ಬದಲಾಗಿ ಯಾವುದೊ ಕಾರ್ಯಕ್ರಮಕ್ಕೂ ಏನೋ ಎಂಬಂತೆ ಸಂತೋಷದ ತಯಾರಿ ನೆಡೆಯುತ್ತಿತು. ಮಾನವ ಜೀವಿಗಳಿಗಿಂತ ಹೆಚ್ಚಾಗಿ ಡ್ರೋನ್ಗಳೇ ಝುಯಿಂಗುಡುತ್ತಾ ಹಾರಾಡುತ್ತಿದ್ದವು. ಓಲ್ಡ್ ಏಜ್ ಹೋಮಿನಲ್ಲಿದ್ದರೂ ಸಮಾಜದಲ್ಲಿ ತುಸುವಾಗಿ ಗುರುತಿಸಿಕೊಂಡಿದ್ದ ನನ್ನನು ಹೆಣ್ಣುಮಗಳೊಬ್ಬಳು ಮನೆಯೊಳಗೇ ಬರಮಾಡಿಕೊಂಡಳು. ಒಂದೆರೆಡು ಮಾತಿನ ನಂತರ ಈಕೆ ಆಕೆಯ ಮೊಮ್ಮಗಳೆಂಬುದು ತಿಳಿಯಿತು. ತುಸು ಸಮಯದಲ್ಲಿ ಆಕೆ ಬೇರೇನೋ ಕೆಲಸದ ನಿಮಿತ್ತಾ ಅಲ್ಲಿಂದ ಎದ್ದುಹೋದಳು. ನಾನು ನನ್ನ ವೀಲ್ಚೇರಿನಿಂದ ಎದ್ದು ಪಕ್ಕದಲ್ಲಿದ್ದ ಸೋಫಾದ ಮೇಲೆ ಆಸೀನನಾದೆ. ಮೊದಲ ಬಾರಿ ಆಕೆಯ ಮನೆಗೆ ಬಂದರೆ ಇಂದು ಆಕೆಯೇ ಇಲ್ಲ. ಇದ್ದಿದ್ದರೆ ಸಂತೋಷಪಡುತ್ತಿದ್ದಳೋ, ಮುನಿದುಕೊಳ್ಳುತ್ತಿದ್ದಳೋ ಅಥವಾ ಗುರುತೇ ಹಿಡಿಯದಿರುತ್ತಿದ್ದಳೋ ತಿಳಿಯದು. ಹಾಲಿನ ಒಂದು ಮೂಲೆಯಲ್ಲಿದ್ದ ರೂಮಿನ ಬಾಗಿಲಿಗೆ ಒರಗಿ ಐದಾರು ವರ್ಷದ ಹೆಣ್ಣುಮಗುವೊಂದು ನನ್ನನ್ನೇ ನೋಡುತ್ತಾ ನಿಂತಿತ್ತು. ಮೊದಲಬಾರಿಗೆ ಆಕೆಯನ್ನು ಕಂಡ ಚಿತ್ರ ಒಮ್ಮೆಲೇ ನನ್ನ ಕಣ್ಣ ಮುಂದೆ ಹಾದುಹೋದಂತಾಯಿತು. ಅದೇ ಬಣ್ಣ, ಅದೇ ಕಣ್ಣು, ಅದೇ ಮೂಗು, ಅದೇ ಘಾಡ ಕಪ್ಪುಬಣ್ಣದ ಕೂದಲು! ಕೈಬೀಸಿ ಆಕೆಯನ್ನು ನನ್ನ ಬಳಿಗೆ ಬರುವಂತೆ ಕರೆದೆ. ಮೊದಲು ಬರಲೊಲ್ಲೆ ಎಂದು ತಲೆಯಾಡಿಸಿದ ಆಕೆ ನಂತರ ನಿಧಾನವಾಗಿ ಒಂದೊಂದೇ ಹೆಜ್ಜೆಯನ್ನು ಪೋಣಿಸುತ ನನ್ನ ಬಳಿಗೆ ಬಂದಳು. ಆಕೆಯನ್ನು ಬಳಿಗೆ ಕರೆದು ಕೂರಿಸಿಕೊಂಡು ವಿಚಾರಿಸಿದೆ. ಈಕೆ ಆಕೆಯ ಮರಿಮಗಳು! ಕೆಲಕ್ಷಣಗಳ ಮೊದಲು ಮಾತಾಡಿದ ಹೆಣ್ಣುಮಗಳ ಮಗಳಿವಳು. 'ನೀನು ನಿನ್ನ ದೊಡ್ಡಜ್ಜಿಯಂತೆಯೇ ಇದ್ದೀಯ' ಎಂದು ಇಂಗ್ಲೀಷಿನಲ್ಲಿ ಹೇಳಿದಾಗ ನಾಚಿದ ಆಕೆ ನಾನು ಯಾರು, ನನ್ನ ಹೆಸರೇನೆಂದು ಕೇಳಿದಳು.

ಹಾಗೆಯೆ ಮಾತಾಡುವಾಗ ನನ್ನ ದೃಷ್ಟಿ ಗೋಡೆಯ ಮೇಲೆ ತೂಗುಹಾಕಿದ ಮರದ ಪೇಂಟಿಂಗ್ ಒಂದರ ಮೇಲೆ ಬಿದ್ದಿತು. ಕೆಲಕಾಲ ಅದನ್ನೇ ನೋಡುತ್ತಿದ್ದ ನನ್ನ ಕಣ್ಣುಗಳಲ್ಲಿ ಇದ್ದಕ್ಕಿಂದಂತೆ ನೀರು ಗಳಗಳನೆ ಹರಿಯತೊಡಗಿತು! ಆಕೆಯ ಮರಿಮಗಳ ಪುಟ್ಟ ಕೈಗಳು ನನ್ನ ಕಣ್ಣುಗಳನ್ನು ಒರೆಸತೊಡಗಿದವು. ಆಕೆಯೇ ಬಂದು ನನ್ನ ಸಮಾಧಾನಮಾಡಿದ ಅನುಭವವಾಯಿತು. ಗೋಡೆಯಲ್ಲಿ ನೇತಾಕಿದ್ದ ಪಟ ನಾನು ಆಕೆಗೆ ಕೊನೆಯ ಬಾರಿಗೆ ಕೊಟ್ಟ ಉಡುಗೊರೆಯಾಗಿದ್ದಿತು. ನನ್ನ ಕಂಡರೂ ಗುರುತಿಡಿಯಲಾರಳು ಎಂದುಕೊಂಡಿದ್ದ ನಾನು ಐವತ್ತು ವರ್ಷಗಳಿಗೂ ಮಿಗಿಲಾದ ನನ್ನ ಉಡುಗೊರೆಯನ್ನು ಹಾಗೆಯೆ ಸಂರಕ್ಷಿಸಿಕೊಂಡು ಬಂದಿದ್ದಾಳೆ ಎಂಬುದ ಕಂಡು ದುಃಖ ಉಮ್ಮಳಿಸಿ ಬಂದಿತು. ತಕ್ಷಣ ಏನೋ ನೆನಪಾಗಿ ಆ ಮಗುವಿಗೆ ಪಟವನು ಬಿಚ್ಚಿ ತರಲು ಕೇಳಿದೆ. ದಶಕಗಳ ಹಳೆಯ ಪಟ ನನ್ನ ಕೈಸೇರಿತು. ಅಂದು ಈ ಉಡುಗೊರೆಯನ್ನು ಆಕೆಗೆ ಕೊಡುವ ಮುನ್ನ ಒಂದಿಷ್ಟು ಸಾಲುಗಳನ್ನು ಆಕೆಗಾಗಿ ಬರೆದು ಯಾರಿಗೂ ಕಾಣದಂತೆ ಅದರ ಹಿಂದಕ್ಕೆ ಇರಿಸಿದ್ದೆ. ನಿಧಾನವಾಗಿ ಪಟವನ್ನು ಬಿಚ್ಚಿ, ಮಡಚಿ ಇಟ್ಟಿದ್ದ ಆ ಕಾಗದದ ಚೂರನ್ನು ದಶಗಳಗಳ ನಂತರ ಮೊದಲ ಭಾರಿಗೆ ಹೊರತೆಗೆದೆ. ಅದು ಕಂದು ಬಣ್ಣಕ್ಕೆ ತಿರುಗಿ ಒಣಗಿದ ಹಪ್ಪಳದಂತಾಗಿದ್ದಿತು. ನಿಧಾನವಾಗಿ ಅದನ್ನು ಬಿಡಿಸಿ ಓದ ತೊಡಗಿದೆ...

'ಹಲೋ.. ಎಂಬ ಉದ್ವೆಗಭರಿತ ನಿನ್ನ ಆ ಎರಡಕ್ಷರದ ಛಾಯೆ ನನ್ನ ಮೇಲೆ ಅದೆಷ್ಟಿದೆ ಎಂದರೆ ಇಡೀ ಜೀವಮಾನಪೂರ್ತಿ ನಿನಗೆ ಫೋನಾಯಿಸಬೇಕೆಂಬ ಹೆಬ್ಬಯಕೆ ನನ್ನದು. ನನ್ನ ಸರ್ವ ದುಃಖದುಮ್ಮಾನಗಳಿಗೂ ನಿನ್ನ ಹಲೋ ಎಂಬ ಆ ಎರಡಕ್ಷರದ ಪದವೇ ಔಷಧ ಎಂಬುದು ನಿನಗೆ ತಿಳಿದಿರುವುದಿಲ್ಲ. ಇದು ಉತ್ಪ್ರೇಕ್ಷೆಯಲ್ಲ. ತೋರ್ಪಡಿಕೆಯ ಪ್ರೀತಿಯೂ ಅಲ್ಲ. ಸೂರ್ಯಕಾಂತಿ ಹೂವಿಗೆ ಸೂರ್ಯನ ದರ್ಶನವಾದಂತೆ, ಹಸಿದ ಕರುವಿಗೆ ಅಮ್ಮನ ಕೊರಳಘಂಟೆಯ ಸದ್ದು ಕೇಳಿಸಿದಂತೆ, ಬಿರಿದ ನೆಲಕ್ಕೆ ಮಳೆಯ ಸಿಹಿಸಿಂಚನವಾದಂತೆ, ನೀನು ನನಗೆ. ಇದು ಮಾನವ ಸಂಬಂಧದ ಯಾವ ಕೆಟಗರಿಯೂ ಅಲ್ಲ. ಇದು ಕೇವಲ ಭಾವಸಂಭಂದದ ವರ್ಣನಾತೀತವಾದ ಬೆಸುಗೆ. ಇದು ನಿನಗೆ ಅರಿಯದು. ನಿನ್ನ ಉಪಸ್ಥಿತಿಯಿಂದ ನನ್ನಲ್ಲಿ ಹೀಗೆ ಮೂಡುತಿದ್ದ ಜೀವನೋತ್ಸಹದ ಅಲೆಗಳಿಂದಾಗಿಯೇ ನೀನು ನನಗೆ ಇಷ್ಟವಾಗುತ್ತೀಯ ವಿನಃ ಪ್ರೀತಿ ಪ್ರೇಮ ಅಂದ ಚೆಂದಗಳೆಂಬ ಮಾಹೆಗಳಿಂದಲ್ಲ... ' ಎಂದು ಬರೆದಿದ್ದ ನಾಲ್ಕಾರು ಸಾಲುಗಳನ್ನು ಓದುವಷ್ಟರಲ್ಲಿ ನನ್ನ ಕಪೋಲಗಳೆರಡೂ ಒದ್ದೆಯಾಗಿದ್ದವು.

ಎಲ್ಲಿಂದಲೋ ಬೀಸಿದ ತಂಗಾಳಿ ನನ್ನ ಬಂದು ಅಪ್ಪಳಿಸಿತು. ಆರು ವರ್ಷದ ಆಕೆಯ ಮರಿಮಗಳು ಅಷ್ಟರಲ್ಲಾಗಲೇ ನನ್ನ ಎದೆಯ ಮೇಲೆ ತಲೆಯೊರಗಿ ನಿದ್ರೆಗೆ ಜಾರಿದ್ದಳು.......