Friday, February 23, 2018

ನಂಬುಗೆಯೆಂಬ ಪಾತ್ರೆಯ ಒಳಗೆ ಸುಳ್ಳುಸುದ್ದಿಗಳ ಜಾತ್ರೆ!

ಇಲ್ಲಿ ಸರ್ವವೂ ಇಂಟರ್ನೆಟ್ಮಯ. ಇಲ್ಲಿ ಕ್ಷಣಮಾತ್ರದಲ್ಲಿ ಕಣ್ಣೊಡೆದು ಕೋಟಿ ಜನರ ಕನಸಿನ ರಾಣಿಯಾಗಲೂಬಹುದು ಅಂತೆಯೇ ಸುಳ್ಳಿನ ಕಂತೆಯಿಂದ ಕಟ್ಟಿರುವ ರಾಜಪಟ್ಟದ ಉತ್ತುಂಗದಿಂದ ಕಣ್ಮುಚ್ಚಿ ಬಿಡುವಷ್ಟರಲ್ಲಿ ನೆಲದ ಮೇಲೆ ವಿವಸ್ತ್ರನಾಗಿ ಬೀಳಲೂಬಹುದು. ಇಲ್ಲಿ ಸತ್ಯ, ಮಿಥ್ಯ, ಸರಿ, ತಪ್ಪು, ಅಂತೆ, ಕಂತೆ ಎಂಬೆಲ್ಲಾ ಗ್ರಹಿಕೆಗಳು ನಿಂತಿರುವುದು ಕೇವಲ ಒಂದು ಮಾತ್ರದ ಅಂಶದ ಮೇಲೆ. ಅದು ಪ್ರಸ್ತುತ ಇಂಟರ್ನೆಟ್ ಬಳಕೆದಾರನ ಬಳಿಯಿರುವ ಏಕೈಕ ಮಾಪನ. ಹೆಸರು ನಂಬುಗೆ. ಇಂದಿನ ಸಾಮಾಜಿಕ ಜಾಲತಾಣಗಳ ಸರೋವರದಲ್ಲಿ ಕಾಣಸಿಗುವ ಪ್ರತಿಯೊಂದು ಸುದ್ದಿಯನ್ನು ಹಿಂದೂ-ಮುಂದೂ ನೋಡದೆ ಅವುಗಳ ಅಳೆತ್ತರವನ್ನೂ ಅರಿಯದೆ ಕಾದ ಎಣ್ಣೆಗೆ ಬಿದ್ದ ಒಣ ಹಪ್ಪಳದಂತೆ ಹಿರಿ ಹಿರಿ ಹಿಗ್ಗುವ ಜನಕೋಟಿಯ ವಿಚಾರಗ್ರಹಿಕೆ ತಾವು ಕಂಡ ಸುದ್ದಿಯನ್ನು ಒರೆಹಚ್ಚಿ ಪರೀಕ್ಷಿಸಿಕೊಳ್ಳುವುದು ಈ ನಂಬುಗೆ ಎಂಬ ಸೂಕ್ಷ್ಮ ಎಳೆಯ ಮೇಲೆಯೇ.

ಫೇಸ್ಬುಕ್, ಟ್ವಿಟ್ಟರ್, ವಾಟ್ಸ್ಅಪ್ ಅಥವಾ ಇನ್ನ್ಯಾವುದೇ ಸಾಮಾಜಿಕ ಜಾಲತಾಣಗಳಾಗಿರಲಿ ಇಂದು ಅವುಗಳಲ್ಲಿ ಕಾಣಬೇಕಿದ್ದ ಸುಂದರ ಸಂವಹನ, ಒಂದಿಷ್ಟು ಸಾಂದರ್ಭಿಕ ಮಾತುಕತೆಗಳಿಗಿಂತ ಹೆಚ್ಚಾಗಿ ಇಂದು ಬ್ರೆಕಿಂಗ್ ನ್ಯೂಸ್ಗಳು, ಸಿಕ್ಕ ಸಿಕ್ಕ ವ್ಯಕ್ತಿತ್ವಗಳ ಕಾಲೆಳೆತಗಳು, ಬೈಗುಳಗಳು, ಬೆದರಿಕೆಗಳೇ ಕಾಣಸಿಗುತ್ತವೆ. ಅಲ್ಲದೆ ಹಿತ್ತಾಳೆ ಕಿವಿಯ ಬಯಕೆಯಂತೆ ಸುಳ್ಳು ಸುದ್ದಿಗಳ (Hoax) ಉಗಮವಾಗುವಿಕೆಗೂ ಇಲ್ಲಿ ಕೊನೆಯಿಲ್ಲ. ಈ ಸುಳ್ಳು ಸುದ್ದಿಗಳ ಜಾತ್ರೆಯಲ್ಲಿ ಹೆಚ್ಚಾಗಿ ಸಿಲುಕಿ ಗೋಳಾಡುವವರು ಮಾತ್ರ ಜನಮಾನಸದಲ್ಲಿ ಪ್ರಸಿದ್ದಿ ಹೊಂದಿ ಎಲ್ಲರಿಂದ ಸೆಲೆಬ್ರಿಟಿ ಎಂದು ಕರೆಸಿಕೊಳ್ಳುವವರು. ಇಲ್ಲಿ ಆತ ಬಿದ್ದು, ಎದ್ದು, ಸತ್ತು, ಅತ್ತು, ಸನ್ಯಾಸಿಯಾಗಿ, ಯೋಗಿಯಾಗಿ ದಿನಕೊಂದು ಹೊಸ ಸ್ಥಿತಿಯನ್ನು ರೂಪವನ್ನು ಪಡೆಯುತ್ತಿರುತ್ತಾನೆ.ಅಸಲಿಗೆ ಆತ AC ಕೋಣೆಯೊಳಗೆ ಬೆಚ್ಚಗೆ ಸುಖನಿದ್ರೆಯನು ಸವಿಯುತ್ತಿರುತ್ತಾನೆ! ಎದ್ದು ಒಮ್ಮೆ ಇಂತಹ ಸುದ್ದಿಯೇನಾದರೂ ನೋಡಿದರೆ ಆತ/ಅವಳು ನಿಜವಾಗಿಯೂ ಎದೆಹೊಡೆದುಕೊಂಡು ಪ್ರಾಣಬಿಡಬಹುದೇನೋ!

ಈ ಪಟ್ಟಿಗೆ ತೀರಾ ಇತ್ತೀಚಿನ ಸೇರ್ಪಡೆ ನಟ, ನಿರ್ದೇಶಕ, ಕತೆಗಾರ, ಛಲಗಾರ, ದಿ ಲೆಜೆಂಡ್ ಸಿಲ್ವಿಸ್ಟರ್ ಸ್ಟ್ಯಾಲಿನ್. 'ಯೊ ಅಡ್ರಿಯನ್..' ಎನ್ನುತ್ತಾ ತೆರೆಯ ಮೇಲೆ ಕಾಲಿಟ್ಟು ನೋಡುಗರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದ ಅಮೇರಿಕಾದ ಈ ನಟಭೂಪ ಕೆಲದಿನಗಳ ಹಿಂದಷ್ಟೇ ಪ್ರೊಸ್ಟೇಟ್ ಕ್ಯಾನ್ಸರ್ ನಿಂದ ವಿಧಿವಶನಾಗಿದ್ದಾನೆ ಎಂಬೊಂದು ಸುದ್ದಿ ರಾತ್ರಿ ಕಳೆದು ಹಗಲು ಮೂಡುವುದರೊಳಗೆ ಜಾಲತಾಣಗಳೆಲ್ಲಡೆ ಲೀಲಾಜಾಲವಾಗಿ ಹರಿದಾಡತೊಡಗಿತು. ಸುದ್ದಿಗಳನ್ನು ನೋಡಿ (ಸುದ್ದಿಯೊಟ್ಟಿಗೆ ಆತನ ಎಲ್ಲಿಂದಲೋ ಸಂಗ್ರಹಿಸಿದ ಒಂದೆರೆಡು ಫೋಟೋಗಳನ್ನೂ ಕೊಂಚ ಎಡಿಟ್ ಮಾಡಿ ಬಳಲುತ್ತಿರುವಂತೆ ತೋರಿಸಿ ಹಾಕಲಾಗಿದ್ದಿತು.) ಆತನ ಕೋಟ್ಯಾನುಕೋಟಿ ಅನುಯಾಯಿಗಳು ದುಃಖಿಸತೊಡಗಿದರು. ತಮ್ಮ ತಮ್ಮ ಪೇಜ್ಗಳ ಮೇಲೂ ಸುದ್ದಿಯನ್ನು ಷೆರ್ ಮಾಡತೊಡಗಿದರು. ಕೆಲತಿಂಗಳ ಹಿಂದಷ್ಟೇ ‘ಗಾರ್ಡಿಯನ್ ಆಫ್ ಗ್ಯಾಲಕ್ಸಿ Vol.2’ ಎಂಬ ಚಿತ್ರದಲ್ಲಿ ನಟಿಸಿದ್ದ ವ್ಯಕ್ತಿ ಅದೇಗೆ ಕೆಲವೇ ತಿಂಗಳಲ್ಲಿ ಕ್ಯಾನ್ಸರ್ ನಿಂದ ಕೃಶನಾಗಿ ತೀರಿಕೊಂಡ ಎಂಬೊಂದು ಸಾಮಾನ್ಯ ಪ್ರೆಶ್ನೆಯನ್ನೂ ಕೇಳಿಕೊಳ್ಳದೆ ಸುದ್ದಿಯನ್ನು ಜನ ನಂಬಿಬಿಟ್ಟರು. ಸಾವಿನ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತು. ಸಿಲ್ವೆಸ್ಟರ್ ಬೆಳಗೆದ್ದು ನೋಡಿದಾಗಲೇ ತಿಳಿದದ್ದು ಆತನನ್ನು ಇಂಟೆಟ್ನೆಟ್ ಲೋಕ ಪರಲೋಕಕ್ಕೆ ತಳ್ಳಿಬಿಟ್ಟಿದೆ ಎಂದು! ಕೂಡಲೇ ಟ್ವಿಟ್ಟರ್ ಮೂಲಕ ತನ್ನ ಇರುವಿಕೆಯ ಸಂದೇಶವನ್ನು ಹರಿಬಿಟ್ಟ ಆತ ಅಲ್ಲಿಯವರೆಗೂ ಅರಿದಾಡುತ್ತಿದ್ದ ಊಹಾಪೋಹಗಳಿಗೆ ತೆರೆ ಎಳೆದುಬಿಟ್ಟ.

ಹುಟ್ಟುವಾಗಲೇ ಮುಖದ ಒಂದು ಬದಿ ಪಾರ್ಶ್ವವಾಯುವಿನಿಂದ ಸಟೆದುಕೊಂಡು, ಧ್ವನಿಯೂ ಕೊಂಚ ವಿಲಕ್ಷಣಗೊಂಡು, ಇರಲು ನೆಲೆಯಿಲ್ಲದೆ ದಾರಿಬದಿಯಲ್ಲೂ ಮಲಗೆದ್ದು, ಹೊಟ್ಟೆಪಾಡಿಗಾಗಿ ನೀಲಿಚಿತ್ರಗಳಲ್ಲೂ ಅಭಿನಯಿಸಿ ಅಲೆದಾಡುತ್ತಿದ್ದ ಯುವಕನೊಬ್ಬ ಕೆಲವೇ ತಿಂಗಳುಗಳಲ್ಲಿ ಕೋಟಿ ಜನರ ಸ್ಪೂರ್ತಿಯ ವ್ಯಕ್ತಿತ್ವವೆನಿಸಿಕೊಳ್ಳುವ ಮಟ್ಟಿಗೆ ಬೆಳೆದ ಪರಿಯೇ ಆತನಿಗೆ ಕೋಟ್ಯಾನುಕೋಟಿ ಅಭಿಮಾನಿಗಳನ್ನು ವಿಶ್ವದೆಲ್ಲೆಡೆ ಸೃಷ್ಟಿಕೊಟ್ಟಿತು. ಅದಕ್ಕೆ ಇಂಬುಕೊಡುವ ಆತನ ಚಿತ್ರಗಳು, ರಾಕಿ ಬಾಲ್ಬೋಹ, ರಾಂಬೊವಿನಂತಹ ಪಾತ್ರಗಳು ಕಳೆದ ಐದು ದಶಕಗಳಿಂದ ಅಭಿಮಾನಿಗಳ ಮನದಲ್ಲಿ ಮನೆಮಾಡಿಕೊಂಡಿವೆ. ಇಂತಹ ಒಂದು ವ್ಯಕ್ತಿತ್ವ ಇದ್ದಕ್ಕಿದಂತೆ ಕಾಣೆಯಾಯಿತು ಎಂದರೆ ಸೃಷ್ಟಿಯಾಗುವ ಅಲ್ಲೊಲ್ಲ ಕಲ್ಲೋಲಗಳು ತೀರ ಸಹಜವೇ.

ಆದರೆ ಇಲ್ಲಿ ಕೇಳಿಕೊಳ್ಳಬೇಕಾದ ಪ್ರೆಶ್ನೆ, ಒಣಸೀಗೆಯಂತೆ ಎಲ್ಲೆಡೆ ಹಬ್ಬಿಕೊಂಡಿರುವ ಇಂದಿನ ಇಂಟರ್ನೆಟ್ ಯುಗದಲ್ಲಿ ನಂಬಬಾರದ ಹಾಗು ನಂಬಲೇಬೇಕಾದ ಸುದ್ದಿಗಾಳವುವು ಎಂಬುದು. ಯಾವುದೇ ಅಡೆತಡೆಗಳಿಲ್ಲದೆ ಬೇಕಾಬಿಟ್ಟಿ ಸೃಷ್ಟಿಸಿ ತೇಲಿಬಿಡುವ ಸುದ್ದಿಗಳನ್ನು ಇಲ್ಲಿ ಅಳೆದು ತೂಗುವುದಾದರೂ ಹೇಗೆ? ಅದಕ್ಕೂ ಮೊದಲು ನಾವುಗಳು ಕೇಳಿಕೊಳ್ಳಬೇಕಾದ ಮತ್ತೊಂದು ಅತಿಮುಖ್ಯ ಪ್ರೆಶ್ನೆಯೆಂದರೆ ಜಾಲತಾಣಗಳ ಸುದ್ದಿ ಅದೇನೇ ಇರಲಿ ಕನಿಷ್ಠ ಒಮ್ಮೆಯಾದರೂ ಅಂತಹ ವಿಷಯಗಳನ್ನು ಬೇರೊಂದೆಡೆ ದೃಢಪಡಿಸಿಕೊಳ್ಳಬೇಡವೇ ಎಂಬುದು. ಇಲ್ಲದೆ ಹೋದರೆ ನಂಬುಗೆ ಎಂಬ ನೋಟವನ್ನು ನಾವುಗಳೇ ಕಿತ್ತು ಬದಿಗಿಟ್ಟಂತೆ! ಮೇಲಾಗಿ ಇದು ಸಾವು ಬದುಕಿನ ಸುದ್ದಿಗಳು. ನಮ್ಮವರಲ್ಲೇ ಒಬ್ಬ ಅತ್ಯಾಪ್ತರನ್ನು ಅಥವಾ ಯಾರೋ ನಮ್ಮ ಸಾವನ್ನೇ ಸುದ್ದಿಯಾಗಿ ಹಬ್ಬಿಸಿ ಎಲ್ಲೆಡೆ ಹರಿಯಬಿಟ್ಟರೇ ನಮಗೆ ಏನನಿಸಬಹುದು? ಅದೆಂತಹ ವಿಧ -ವಿಧವಾದ ದುಃಖಭಾವಗಳು ಮನದಲ್ಲಿ ಮೂಡಬಹುದು? ಸೆಲೆಬ್ರಿಟಿಗಳೇನು ಮನುಷ್ಯರಲ್ಲವೇ? ಜನರು ಒಬ್ಬ ವ್ಯಕ್ತಿಯನ್ನು ಎನ್ನುವುದಕ್ಕಿಂತ ಹೆಚ್ಚಾಗಿ ಒಂದು ವ್ಯಕ್ತಿತ್ವವನ್ನು ಸಾಯಿಸಿ ಅಂತಹ ಒಂದು ಸುದ್ದಿಯನ್ನು ಹರಿಬಿಟ್ಟು ಫೇಮಸ್ ಆಗಬಯಸುತ್ತಾರೆ ಎಂದರೆ ಹೆಸರು ಗಳಿಕೊಳ್ಳಬೇಕು ಎಂಬ ಗೀಳು ಹಾಗು ಅಂತಹ ಗೀಳಿಗೆ ತುಳಿಯುವ ಹಾದಿ ಇಂದು ಅದೆಂಥಹ ಮಟ್ಟತಲುಪಿದೆ ಎಂಬುದು ತಿಳಿದುಬರುತ್ತದೆ. ಇದು ಕೇವಲ ಸುಳ್ಳು ಸುದ್ದಿಯನ್ನು ಹರಡುವುದಷ್ಟೇ ಅಲ್ಲದೆ ಒಂದು ವಿಡಿಯೋ ತುಣುಕಿನ ಸಂಭಾಷಣೆಯನ್ನೇ ತಿರುಚುಚುವುದು, ಇತಿಹಾಸ ಪ್ರಸಿದ್ಧ ಫೋಟೋಗಳನ್ನು ಮನಬಂದಂತೆ ಕಲಸಿ ನೋಡುಗರ ಮುಂದೆ ಇರಿಸುವುದು, ಪಕ್ಷಪಾತೀಯ ಸಮೀಕ್ಷೆಗಳನ್ನು ನೆಡೆಸಿ ಜನರ ಹಾದಿತಪ್ಪಿಸುವುದು ಅತಿ ಸಾಮಾನ್ಯವಾಗಿಬಿಟ್ಟಿದೆ. ಒಟ್ಟಿನಲ್ಲಿ ಸರ್ವವೂ ಇಂಟರ್ನೆಟ್ಮಾಯವಾಗಿರುವ ಕಾಲದಲ್ಲಿ ಜರುಗುವ ಇಂತಹ ಹಲವು ವಿಕೃತಿಗಳಿಗೆ ಪ್ರೆಶ್ನೆ ಹಾಕುವವರೇ ಇಲ್ಲದಂತಾಗಿದೆ.

ಇದು ಅಮೆರಿಕದಲ್ಲಷ್ಟೇ ಅಲ್ಲದೆ ಭಾರತದಲ್ಲೂ ಲತಾ ಮಂಗೇಶ್ಕರ್, ಅಮಿತಾಬ್ ಬಚ್ಚನ್, ದಿಲೀಪ್ ಕುಮಾರ್ ರಂತಹ ಹಲವು ದಿಗ್ಗಜರ ಸಾವಿನ ಸುದ್ದಿಗಳು ಈಗಾಗಲೇ ಎಲ್ಲೆಡೆ ಹರಿದಾಡಿ ಮರೆಯಾಗಿವೆ. ಸಾವು ಎಲ್ಲರಿಗು ಸಹಜವೇ ಆದರೆ ಹೀಗೆಯೇ ಮುಂದುವರೆದರೆ ಬದುಕಿರುವಾಗಲೇ ಸತ್ತು ಮತ್ತೊಮ್ಮೆ ಆತನೇ ತನ್ನ ಬದುಕಿರುವಿಕೆಗೆ ಕೋರ್ಟ್ಗಳಿಗೆ ಪುರಾವೆಗಳನ್ನು ಒದಗಿಸಬೇಕಾದ ಕಾಲವೊಂದು ಬಂದರೂ ಆಶ್ವರ್ಯ ಪಡಬೇಕಾಗಿಲ್ಲ! ಅಲ್ಲದೆ ಹಲವು ಬಾರಿ ಇಂತಹ ಗಾಳಿಸುದ್ದಿಗಳೇ ಬ್ರೇಕಿಂಗ್ ನ್ಯೂಸ್ಗಳಾಗಿ ಮುಖ್ಯವಾಹಿನಿಗಳಲ್ಲಿ, ಪತ್ರಿಕೆಗಲ್ಲಿ ಪ್ರಸಾರವಾಗಿರುವುದೂ ಉಂಟು. ಈ ನಿಟ್ಟಿನಲ್ಲಿ ಪರ್ತಿಕೆ, ದೂರದರ್ಶನ, ರೇಡಿಯೋ ಹೀಗೆ ಒಂದೊಂದೇ ಸುದ್ದಿಯ ಮೂಲಗಳನ್ನು ಆಕ್ರಮಿಸಕೊಂಡು ಬರುತ್ತಿರುವ ಇಂಟರ್ನೆಟ್ ಎಂಬ ದೈತ್ಯಶಕ್ತಿಯ ಮುಂದೆ ನಿಖರತೆಯ, ಶುದ್ಧ ಸುದ್ದಿ ಸಮಾಚಾರಗಳನ್ನು ಜನಮಾನಸಕ್ಕೆ ಒದಗಿಸುವ ಸವಾಲು ಮಾತ್ರ ಅಳಿದುಳಿದಿರುವ ಸುದ್ದಿ ಮಾಧ್ಯಮಗಳ ಮುಂದಿದೆ.

Sunday, February 18, 2018

42 ವರ್ಷಗಳ ಕೆಳಗೆ...

ಹೊಟ್ಟೆಬಿರಿದು ತೇಗುತ್ತಿರುವವನ ಬಾಯಿಗೆ ಕಡುಬು ಗಿಡುಗಿದಂತಹ ಸ್ಥಿತಿ ಇಂದು ವಿಶ್ವ ಕ್ರಿಕೆಟ್ನದ್ದು. ಇಂದು ESPN ಕ್ರಿಕೆಟ್ ವೆಬ್ಸೈಟ್ ಅನ್ನು ಒಮ್ಮೆ ಇಣುಕಿ ನೋಡಿದರೆ ಕಡೆ ಪಕ್ಷ ಒಂದೆರೆಡು ಡಜನ್ ಪಂದ್ಯಗಳಾದರೂ ಏಕಕಾಲಕ್ಕೆ ವಿಶ್ವದ ವಿವಿದೆಡೆ ಜರುಗುತ್ತಿರುತ್ತವೆ. ಇನ್ನು ವಾರ, ತಿಂಗಳು ಹಾಗು ವರ್ಷಗಳನ್ನು ಗಣನೆಗೆ ತೆಗೆದುಕೊಂಡು ಲೆಕ್ಕಹಾಕಿದರೆ ಸಾಗರೋಪಾದಿಯಲ್ಲಿ ಇವುಗಳ ಸಂಖ್ಯೆ ಮೂಡುತ್ತವೆ. ಸಾಕು ಸಾಕಪ್ಪ ಅನ್ನುವಷ್ಟು. ಆಡುವ ಪ್ರತಿಯೊಂದು ಪಂದ್ಯಗಳನ್ನು ನೆನಪಿರಿಸಿ, ಚರ್ಚಿಸುವ ಕಾಲವೂ ಇಂದಿಲ್ಲ. ಪಂದ್ಯಗಳೂ ಅಂತಹ ಚರ್ಚಿಸುವ ಸಮಯವನ್ನು ಒದಗಿಸಿದರೆ ತಾನೆ. ಹೀಗೆ ಸಾಗರದ ಅಲೆಗಳಂತೆ ಒಂದರ ಬೆನ್ನಿಗೊಂದು ತಳ್ಳಿಕೊಂಡು ಬರುತ್ತಲೇ ಇರುತ್ತವೆ. ಪರಿಣಾಮ ಪ್ರಸ್ತುತ ಯುಗ ರೆಕಾರ್ಡ್ ಬ್ರೇಕಿಂಗ್ ಗಾಗಿಯೇ ಮೂಡಿರುವಂತಿದೆ. ಇಲ್ಲಿ ಮೂಡುವ, ಮುರಿಯುವ ದಾಖಲೆಗಳಿಗೆ ಆಕಾಶವೇ ಕೊನೆ!

ಅದೊಂದು ಕಾಲವಿತ್ತು. ಹೆಚ್ಚೇನೂ ಇಲ್ಲ, ಕೇವಲ ಎರಡು ಮೂರು ದಶಕಗಳ ಕೆಳಗೆ. ವಿದೇಶಿ ತಂಡಗಳು ನಮ್ಮಲ್ಲಿ ಆಟವಡಾಲು ಬಂದವೆಂದರೆ ಆ ಸರಣಿ ಮುಗಿಯುವವರೆಗೂ ಹಬ್ಬದ ವಾತಾವರಣ ಎಲ್ಲೆಡೆ. ಕೇಳರಿಯದ ಆಂಗ್ಲ ಅಥವಾ ಮತ್ಯಾವುದೂ ಭಾಷೆಯ ನಾಮಪದಗಳೆಲ್ಲ ಬಾಯಿಪಾಠ ಮಕ್ಕಳಿಗೆ. ಭಾನುವಾರದ ನಾಲ್ಕು ಘಂಟೆಯ ಚಲಚಿತ್ರಕ್ಕಿಂತಲೂ ಅಂದು ಹೆಚ್ಚಾಗಿ ಚರ್ಚಿಸಲ್ಪಡುತ್ತಿದ್ದದ್ದು ಕ್ರಿಕೆಟ್ ಪಂದ್ಯದ ಆಳೆತ್ತರಗಳೇ. ಅತ್ತ ಪಂದ್ಯ ನೋಡದಿರುವವರು (ಹೆಚ್ಚಾಗಿ ಅಮ್ಮ, ಅಕ್ಕ, ಅಜ್ಜ, ಅಜ್ಜಿಯರು) ಲೊಟ-ಲೊಟ ಶಾಪವನ್ನು ಹಾಕುತ್ತ 'ನಿಮ್ ಹಾಳಾದ್ ಟಿಕೆಟ್ ಮುಗಿತಾ' ಎನ್ನುತ್ತಾ ಭಾನುವಾರ ಪೂರ್ತಿ ಶಬರಿಯ ತಪಸ್ಸನ್ನು ಮಾಡಿ ರಾತ್ರಿಯಾದರೂ ಕಪ್ಪು ಬಿಳುಪಿನ ಟಿವಿಯ ಮುಂದೆ ಅಂಟಿಕೊಂಡಿರುವ ಗುಂಪನ್ನು ಕಂಡು ಖಿನ್ನರಾಗಿ ತಾವು ಮಲಗುವ ಕೋಣೆಯೊಳಗೆ ಧಾವಿಸುತ್ತಿದ್ದರು. ಇನ್ನು ಸಚಿನ್, ಗಂಗೂಲಿ, ದ್ರಾವಿಡ್, ಕಪಿಲ್, ಗವಾಸ್ಕರ್ ರಂತಹ ದಿಗ್ಗಜರು ಸೆಂಚುರಿಯನ್ನೇನಾದರೂ ಬಾರಿಸಿದರಂತೂ ಮಕ್ಕಳಿಗೆ ತಾವು ಕಲಿತ ಮಗ್ಗಿ, ಕಾಗುಣಿತ, ಗುಣಾಕಾರ, ಭಾಗಕಾರಗಳೆಲ್ಲವೂ ಮಂಗಮಾಯವಾಗಿ ಆ ಜಾಗದಲ್ಲಿ ಪ್ರತಿಷ್ಠಾಪಿಸಲ್ಪಡುತ್ತಿದ್ದದ್ದು ಅವರುಗಳ ಸಿಕ್ಸು, ಫೋರು, ಆವರೇಜ್ ಹಾಗು ಸ್ಟ್ರೈಕ್ ರೇಟ್ ಗಳೆಂಬ ರಂಜನೆಯ ಸಂಖ್ಯಾಶಾಸ್ತ್ರಗಳೇ! ಇನ್ನು ಸರ್ಕಾರಗಳ ಪವರ್ ಪ್ರಾಬ್ಲಮ್ ಗಳನ್ನು ಅಲ್ಲಿ ಯಾರು ಆಲಿಸುತ್ತಿದ್ದರು? ಹೊಟ್ಟೆಕಿಚ್ಚಿಗೋ ಏನೋ ಎಂಬಂತೆ ವಾರಕ್ಕೊಮ್ಮೆಯೂ ಕೊಂಚ ರಿಯಾಯ್ತಿಯನ್ನು ನೀಡದೆ ವಿದ್ಯುತ್ತನ್ನು ತುಂಡರಿಸುತ್ತಿದ್ದ ಪಾಪದ ಲೈನ್ ಮ್ಯಾನ್ಗಳ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜಾಕುತ್ತಾ, ಘಂಟೆಗಳ ನಂತರ ಬರುತ್ತಿದ್ದ ವಿದ್ಯುತ್ತ್ರಾಯನಿಗೆ ಕೈ ಮುಗಿದು ಮತ್ತೊಮ್ಮೆ ಟಿವಿಯನ್ನು ಆನ್ ಮಾಡಿ ಬಿಟ್ಟರೆ ಮತ್ತದೇ ಕಲ್ಲು ಬಂಡೆಯಂತೆ ಅಲ್ಲಲ್ಲೇ ತಟಸ್ಥವಾಗಿಬಿಡುತ್ತಿದ್ದರು. ಒಂದು ವೇಳೆ ವಿದ್ಯುತ್ತ್ ಕಾಣೆಯಾದ ಈ ಮೂರ್ನಾಲ್ಕು ಘಂಟೆಗಳಲ್ಲಿ ಭಾರತ ತೀರಾ ಕಳಪೆ ಪ್ರದರ್ಶನವೇನಾದರೂ ಮಾಡಿದ್ದರೆ ಅಥವಾ ಪಂದ್ಯವೇನಾದರೂ ಸೋತಿದ್ದರೆ ದೋಷವೆಲ್ಲವನ್ನೂ ಲೈನ್ ಮ್ಯಾನ್ ಒಬ್ಬನ ಮೇಲೆ ಒರಿಸಿ ಆತನೇ ತಂಡವನ್ನು ಸೋಲಿಸಿದನೇನೋ ಎಂಬಂತೆ ಅಟ್ಟಾಡಿಸಿಕೊಂಡು ಒಡೆಯಲೂ ಹಿಂಜರಿಯುತ್ತಿರಲಿಲ್ಲ, ತಮ್ಮನ್ನೇ ತಾವು ಭಾರಿ ಅಭಿಮಾನಿಗಳೆಂದುಕೊಳ್ಳುತ್ತಿದ್ದ ಎಳೆಯ ಮರಿಗಳು.

ಇದೆಲ್ಲ ಆಗಿನ ಕಾಲ. ಇಂದು ದಿನದ ಇಪ್ಪತ್ನಾಲ್ಕು ಘಂಟೆಯೂ ವಿದ್ಯುತ್ತು. ಇಲ್ಲವಾದರೆ ಯು.ಪಿ.ಎಸ್. ಜೊತೆಗೆ ಮೊಬೈಲ್ ಹಾಗು ಇಂಟರ್ನೆಟ್ಗಳ ಲೈವ್ ಅಪ್ಡೇಟ್ಸ್. ಇಷ್ಟೆಲ್ಲಾ ಇದ್ದರೂ ಅಂದಿನ ಖುಷಿಯ ಒಂದಿನಿತೂ ಇಂದಿಲ್ಲ. ದಿನಕ್ಕೊಂದು ನಾಲ್ಕಾರು ಸರಣಿಗಳು. ಪೊರು ಸಿಕ್ಸರ್ ಗಳ ಸುರಿ ಮಳೆ. ಅಂದು ಪಂದ್ಯಕ್ಕೊಂದೋ ಎರಡೂ ಕಾಣಸಿಗುತ್ತಿದ್ದ ಸಿಕ್ಸರ್ಗಳು ಇಂದು ಪ್ರತಿ ಒವೇರ್ಗಳಲ್ಲೂ ಸಿಡಿಯಲ್ಪಡುತ್ತವೆ. ಟಿ20 ಪಂದ್ಯಗಳು ಶುರುವಾದ ಮೇಲಂತೂ ಇಂತಹ ಸಿಕ್ಸರ್ಗಳ ರಸಸ್ವಾದನೆಯ ಖುಷಿಯೇ ಇಲ್ಲದಂತಾಗಿದೆ. ಆತುರದ ಜೀವನಶೈಲಿಯಲ್ಲಿ, ಹಣದ ಹೊಳೆಯಲ್ಲಿ ಇಂದು ಚುಟುಕು ಪಂದ್ಯಗಳು ಇಪ್ಪತ್ತರಿಂದ ಹತ್ತು, ಐದು ಓವರ್ಗಳಿಗೆ ಬಂದು ಮುಟ್ಟಿವೆ.

ಟೆಸ್ಟ್ ಕ್ರಿಕೆಟ್ನಲ್ಲಿ ಇಂದಿನ ಅದೆಷ್ಟೋ ತಂಡಗಳ ಕಳಪೆ ಪ್ರದರ್ಶನಗಳಿಗೂ ಚುಟುಕು ಮಾದರಿಯ ಇಂತಹ ಪಂದ್ಯಗಳೇ ಕಾರಣವೆಂಬುದು ಬಿಡಿಸಿ ಹೇಳಬೇಕಾಗಿಲ್ಲ. ವೆಸ್ಟ್ ಇಂಡೀಸ್ ತಂಡ 2012 ಹಾಗು 2016 ರ ಟೀ20 ವಿಶ್ವಕಪ್ ಅನ್ನು ಗೆದ್ದರೂ ಟೆಸ್ಟ್ ಶ್ರೇಯಾಂಕದಲ್ಲಿ ತಳಮಟ್ಟದಲ್ಲಿಯೇ ಉಳಿದಿದ್ದಿತು. ಇಂತಹ ಕಾಲದಲ್ಲಿ ಟೆಸ್ಟ್ ಕ್ರಿಕೆಟ್ ಗಳನ್ನು ಐದೈದು ದಿನಗಳ ಕಾಲ ಸಾವಕಾಶವಾಗಿ ಕಾದು ನೋಡುವವರಾದರೂ ಯಾರು? ಆ ಮಟ್ಟಿನ ತಾಳ್ಮೆಯಾಗಲಿ, ಸಮಯವಾಗಲಿ ಇಂದಿನ ಜನಮಾನಸದಲ್ಲಿಲ್ಲ ಎಂಬುದು ಜಗಜ್ಜಾಹೀತ ವಿಷಯವೇ. ಅಲ್ಲದೆ ಇಂದು ಟೆಸ್ಟ್ ಪಂದ್ಯಗಳು ಸಂಪೂರ್ಣ ಐದು ದಿನಗಳೂ ಎಲ್ಲಿ ನೆಡೆಯುತ್ತವೆ. ಹೊಡಿ ಬಡಿ ಆಟದಲ್ಲಿ ಮೂರೋ ಅಥವಾ ನಾಲ್ಕೇ ದಿನಗಳಲ್ಲಿ ಪಂದ್ಯಗಳು ಕೊನೆಗೊಳ್ಳುವುದು ಸಾಮಾನ್ಯದ ಸಂಗತಿ. ಪ್ರಸ್ತುತ ದಕ್ಷಿಣ ಆಫ್ರಿಕಾದ ಟೆಸ್ಟ್ ಸರಣಿಯಲ್ಲೂ ಭಾರತ ತಂಡದ ಪ್ರದರ್ಶನ ಇಂತಹ ಅಂಶಗಳನ್ನೇ ಎತ್ತಿ ಹಿಡಿಯುತ್ತಿತ್ತು. ನಮ್ಮ ನೆಲದಲ್ಲಿ ಅದೆಷ್ಟೇ ಹಾರಾಡಿ ಅರಚಾಡಿದರೂ ವಿದೇಶಿ ನೆಲದಲ್ಲಿ ತಂಡದ ಸಾಧನೆ ಅಷ್ಟಕಷ್ಟೇ ಎಂಬ ಅಪವಾದ ಭಾರತ ತಂಡದ ಮೇಲೆ ದಶಕಗಳಿಂದ ಇದೆ. ಇಂದು ಮೇನ್ ಕೋಚ್, ಬ್ಯಾಟಿಂಗ್ ಕೋಚ್, ಬೌಲಿಂಗ್ ಕೋಚ್, ಫೀಲ್ಡಿಂಗ್ ಕೋಚ್, ಭೌತಚಿಕಿತ್ಸಕ (Physiotherapist ) ಎಂಬ ಮತ್ತೊಂದು ಮಗದೊಂದು ಬೆಂಬಲ ತುಂಬುವ, ದಾರಿ ತೋರುವ ಕೈಗಳಿದ್ದರೂ ಕೆಲವೊಮ್ಮೆ ತಂಡ ತೀರ ಹೀನಾಯ ಪ್ರದರ್ಶನವನ್ನು ನೀಡುತ್ತದೆ.

ಟೆಸ್ಟ್ ಪಂದ್ಯಗಳನ್ನೂ ಟೀ20 ಪಂದ್ಯಗಳಂತೆ ಆಡುವ ಪ್ರಸ್ತುತ ಕಾಲದಲ್ಲಿ ಅಂದೊಂದು ದಿನ ಭಾರತ - 1983 ರ ವಿಶ್ವಕಪ್ ಗೆಲ್ಲುವ ಮೊದಲು - ನಾಲ್ಕನೇ ಇನ್ನಿಗ್ಸ್ ನಲ್ಲಿ ವಿಶ್ವದ ಯಾವುದೇ ಘಟಾನುಘಟಿ ತಂಡಗಳು ಪೇರಿಸಿರದ ಮೊತ್ತವನ್ನು ಪೇರಿಸಿ ಗೆಲುವನ್ನು ಮುಡಿಗೇರಿಸಿಕೊಂಡಿತ್ತು. ಕೊನೆಯ ದಿನದ ಕೊನೆಯ ಕೆಲ ನಿಮಿಷಗಳವರೆಗೂ ನೋಡುಗರನ್ನು ಹಾಗು ಕೇಳುಗರನ್ನು ಕಾಲ ತುದಿಯ ಮೇಲೆ ನಿಲ್ಲಿಸಿದ್ದ ಪಂದ್ಯಕ್ಕೆ ಇಂದಿಗೆ ಸುಮಾರು 42 ವರ್ಷಗಳು ತುಂಬಿವೆ!

ವಿಂಡೀಸ್ ತಂಡವೆಂದರೆ ಇತರ ತಂಡಗಳು ಬಾಡಿ ಬೆಂಡಾಗಿ ಹೋಗುತ್ತಿದ್ದ ಕಾಲವದು. ಭಾರತ ನಾಲ್ಕು ಪಂದ್ಯಗಳ ಸರಣಿಗೆ ವೆಸ್ಟ್ ಇಂಡೀಸ್ ನನ್ನು ತಲುಪಿ ಕೊನೆಯಲ್ಲಿ ಸರಣಿಯನ್ನು 2-1 ರ ಅಂತರದಲ್ಲಿ ಸೋತಿತ್ತಾದರೂ ಈ ಸರಣಿ ಭಾರತಕ್ಕೆ ಅವಿಸ್ಮರಣೀಯವಾದದ್ದು. ಟೆಸ್ಟ್ ಕ್ರಿಕೆಟನ್ನು ಆಡಲು ಶುರುವಿಟ್ಟ 8 ದಶಕಗಳಲ್ಲಿ ಭಾರತ ನಾಲ್ಕನೇ ಇನ್ನಿಂಗ್ಸ್ ನಲ್ಲಿ ಗಳಿಸಿ ಗೆದ್ದಿರುವ ಗರಿಷ್ಟ ಮೊತ್ತ 406. ಇಂದಿಗೂ ಇದು ವಿಶ್ವದಲ್ಲೇ ಮೂರನೇ ಅತಿ ಹೆಚ್ಚಿನ ರನ್ ಚೇಸ್. ಆಗಿನ ಕಾಲಕ್ಕೆ ನಂಬರ್ ಒನ್! ಇಂತಹ ಬೃಹತ್ ಮೊತ್ತವನ್ನು ಕಲೆಹಾಕಿ ಗೆದ್ದ ಪಂದ್ಯವೇ ಈ ಸರಣೀಯ ಮೂರನೇ ಪಂದ್ಯ. ಮೊದಲ ಪಂದ್ಯವನ್ನು ಸೋತು, ಎರಡನೇ ಪಂದ್ಯವನ್ನು ಡ್ರಾ ನಲ್ಲಿ ಕೊನೆಗೊಳಿಕೊಂಡಿದ್ದ ಭಾರತ ಸರಣಿಯಲ್ಲಿ ಜೀವಂತವಾಗಿರಲು ಮೂರನೇ ಪಂದ್ಯವನ್ನು ಗೆಲ್ಲುವ ಅನಿವಾರ್ಯತೆಯಲ್ಲಿದ್ದಿತು. ವಿದೇಶಿ ನೆಲ, ಹೊತ್ತಿ ಉರಿಯುವ ರಣ ಬಿಸಿಲು, ಕೋಚ್, ತೆರಪಿಸ್ಟ್ ಗಳೆಂದರೇ ಏನೆಂದು ಅರಿಯದ ಪಡೆ, ಆಡಲೊ ಅಥವ ಒಡೆಯಲೋ ಎಂಬಂತೆ ದಾಳಿ ನೆಡೆಸುವ ದೈತ್ಯ ವಿಂಡೀಸ್ ಬೌಲರ್ಗಳು, ಅವರುಗಳ ಕುಹಕ ನುಡಿಗಳು ಇವೆಲ್ಲವನ್ನು ನೀಗಿ ಭಾರತ ಅಡಿಯಿಡಬೇಕಿದ್ದಿತು. ಪೋರ್ಟ್ ಆಫ್ ಸ್ಪೇನ್ನಲ್ಲಿ ಅಂದು ಬಿಷನ್ ಸಿಂಗ್ ಬೇಡಿ ನೇತೃತ್ವದ ತಂಡ ಬಹುಶಃ ಕನಸಿನಲ್ಲಿಯೂ ಅವೊಂದು ಬಗೆಯ ಫಲಿತಾಂಶವನ್ನು ಕೊನೆಯಲ್ಲಿ ನಿರೀಕ್ಷಿಸಿರಲಿಲ್ಲ. ಮೊದಲನೇ ಇನ್ನಿಂಗ್ಸ್ ನಲ್ಲಿ ವಿಂಡೀಸ್ ತಂಡದ 359 ರನ್ ಗಳನ್ನು ಬೆನ್ನತ್ತಿದ ಭಾರತ 228 ರನ್ ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಒಪ್ಪಿಸಿಕೊಂಡಿತು. ಎರಡನೇ ಇನ್ನಿಂಗ್ಸ್ನಲ್ಲಿ ಮತ್ತೊಮ್ಮೆ ಬ್ಯಾಟ್ ಬೀಸಿದ ವಿಂಡೀಸ್ ತಂಡ 271 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡು 403 ರನ್ ಗಳ ಬೃಹತ್ ಮೊತ್ತವನ್ನು ಭಾರತದ ಮುಂದಿಟ್ಟಿತು. ಸರಣಿ ತನ್ನದೇ ಎಂಬಂತೆ ಅದು ನಿರಾಳವಾಯಿತು. ಭಾರತಕ್ಕೆ ಅದು ಮಾಡು ಇಲ್ಲವೇ ಮಡಿ ಪಂದ್ಯ. ಟೆಸ್ಟ್ ಇತಿಹಾಸದ ಹಿಂದೆಂದೂ ಈ ಮಟ್ಟಿನ ಒಂದು ಮೊತ್ತವನ್ನು ಪೇರಿಸಿ ಗೆದ್ದಿರುವ ಉದಾಹರಣೆಗಳೇ ಇದ್ದಿರಲಿಲ್ಲ. ಸುನಿಲ್ ಗವಾಸ್ಕರ್ ಹಾಗು ಅಂಶುಮಾನ್ ಗಾಯಕ್ವಾಡ್ರ ಜೋಡಿ ಆಟದ ಅಂಗಳಕ್ಕೆ ಇಳಿಯಿತು. ನಾಲ್ಕನೇ ದಿನದ ಕೊನೆಯ ಕೆಲ ಘಂಟೆಗಳು ಹಾಗು ಮಾರನೇಯ ಇಡೀ ದಿನವಷ್ಟೇ ಉಳಿದ ಸಮಯ. ಇಂದಿನ ಅಬ್ಬರಿಸಿ ಬೊಬ್ಬೆಯೊಡೆಯುವ ಯುಗದಲ್ಲೂ ಇಂತಹ ಒಂದು ಮೊತ್ತವನ್ನು ಪೇರಿಸಲು ತಿಣುಕಾಡಯುವ ಕಾಲದಲ್ಲಿ ಭಾರತ ಅಂದು ಡ್ರಾ ದೂರದ ಮಾತು, ಪಂದ್ಯವನ್ನು ಗೆದ್ದೇ ತೀರುತ್ತೇನೆಂಬತೆ ಬ್ಯಾಟ್ ಬೀಸಿತು. ಮೊದಲ ಜೋಡಿ 69 ರನ್ ಗಳ ಜೊತೆಯಾಟವನ್ನು ಮಾಡಿತು. ವಿಂಡೀಸ್ ಬೌಲರ್ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಲು ಈ ಜೊತೆಯಾಟ ಮಹತ್ವದಾಗಿದ್ದಿತು. ಅಲ್ಲಿಂದ ಮುಂದೆ ಗವಾಸ್ಕರ್ ಹಾಗು ಗುಂಡಪ್ಪ ವಿಶ್ವನಾಥ್ ರ ಶತಕ ಹಾಗು ಮಹೇಂದ್ರ್ ಅಮರನಾಥ್ ಹಾಗು ಬೃಜೇಶ್ ಪಟೇಲ್ರ ಸಮಯೋಚಿತ ಆಟದ ಮೂಲಕ ಭಾರತ ಆರು ಓವರ್ಗಳು ಬಾಕಿ ಇರುವಂತೆಯೇ ಗೆಲುವನ್ನು ತನ್ನ ಮುಡಿಗೇರಿಸಿಕೊಂಡಿತು. ಈ ಗೆಲುವು ಮುಂದೆ ಭಾರತವನ್ನು ವಿಶ್ವ ಚಾಂಪಿಯನ್ ತಂಡವಾಗಿ ಮಾರ್ಪಡಿಸುವಲ್ಲಿ ಮಹತ್ತರವಾದ ಪಾತ್ರವನು ವಹಿಸಿತು. ವಿಶ್ವವೇ ಭಾರತದ ಈ ಸಾಧನೆಯತ್ತ ಹುಬ್ಬೇರಿಸಿ ನೋಡುವಂತೆ ಮಾಡಿತು. ಏಪ್ರಿಲ್ 12 ರ ಆ ದಿನ ಭಾರತಕ್ಕೆ ಅವಿಸ್ಮರಣೀಯ ದಿನವಾಯಿತು. ಭಾರತದ ಸಾಮರ್ಥ್ಯ ವಿಶ್ವಕ್ರಿಕೆಟ್ ಗೆ ಮನವರಿಕೆಯಾಯಿತು. ಆದರೆ ನಂತರದ ಪಂದ್ಯದ ಸೋಲು ಭಾರತಕ್ಕೆ ಸರಣಿ ಸೋಲಿನ ಆಘಾತವನ್ನು ನೀಡಿತ್ತಾದರೂ ಅಂದಿನ ಕ್ರಿಕೆಟ್ ಪ್ರೇಮಿಗಳಿಗೆ ಈ ಮ್ಯಾಚ್ ಮಾತ್ರ ತಮ್ಮ ಆಲ್ ಟೈಮ್ ಫೆವೋರೇಟ್ ಗಳಲ್ಲಿ ಒಂದಾಯಿತು.

ಇಂದು ಭಾರತ ವಿಶ್ವ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದರೂ ಪುಟಿದೇಳುವ ವಿದೇಶಿ ಪಿಚ್ಗಳಲ್ಲಿ ಪಳಗಬೇಕಾದ ಅನಿವಾರ್ಯತೆ ಇನ್ನೂ ಹೆಚ್ಚಿದೆ. ಪ್ರಮುಖವಾಗಿ ಟೆಸ್ಟ್ ಪಂದ್ಯಗಳಲ್ಲಿ. ಅಲ್ಲದೆ ಅಂದಿನ ಘಟಾನುಘಟಿ ದೈತ್ಯ ಆಟಗಾರರ ನಡುವೆ ಸೆಣೆಸಿ ಗಳಿಸಿಕೊಳ್ಳುತ್ತಿದ್ದ ಗೆಲುವು ಇಂದು ಮೀಸೆ ಚಿಗುರುವ ಪೋರರ ಮೇಲೆ ಸ್ಥಾಪಿಸಿದಷ್ಟು ಸುಲಭವಾಗಿರಲಿಲ್ಲ. ಅದೆಷ್ಟೋ ಬಾರಿ ವೆಂಡಿಸ್ ಬೌಲರ್ಗಳ ಕಾಯಕ ಎದುರುಬದಿಯ ಬ್ಯಾಟ್ಸ್ಮನ್ಗಳ ಮುಖ ಮೂತಿಯನ್ನೂ ಲಿಕ್ಕಿಸದೆ ಬಾಲನ್ನು ಎಸೆಯುವುದೇ ಆಗಿದದ್ದಿತ್ತು. ಅಂತಹ ಕಾಲದಲ್ಲೂ ಸಾವಿರಾರು ಕಿಲೋಮೀಟರ್ ಸಮುದ್ರಮಾರ್ಗವಾಗಿ ಚಲಿಸಿ, ಅಲ್ಲಿನ ವಾತಾವರಣಕ್ಕೆ ಒಗ್ಗಿಕೂಂಡು, ತಮಗೆ ತಾವೇ ಕೋಚ್, ಫಿಸಿಸಿಸ್ಟ್ಗಳಾಗಿ ಪಡೆಯುತ್ತಿದ್ದ ಗೆಲುವು ಮೌಂಟ್ಎವರೆಸ್ಟ್ ಅನ್ನು ಏರಿ ದಣಿದ ನಗೆಯನ್ನು ಬೀರಿದಂತೆ ಅಮೋಘ, ಅವಿಸ್ಮರಣೀಯ!

ಒಂದು ಕೋನದಲ್ಲಿ ನೋಡಿದರೆ ಈ ಮಟ್ಟಿನ ಸಾಧನೆಗಳು ಅಂದು ಮೂಡಲು ಕಾರಣ ಆಟವನ್ನು ಆಟವಾಗಿಯೇ ಆಡಲಾಗುತ್ತಿದ್ದದ್ದು. ಇಂದು ಆಟವೆಂಬುದು ಭಾರಿ ಪ್ರೊಫೆಷನ್. ಡಯಟ್, ಆವರೇಜ್, ಸ್ಟ್ರೈಕ್ ರೇಟ್, ಸ್ಪೀಡ್ ಎಂಬ ಇಲ್ಲ ಸಲ್ಲದ ಅಂಕಿ ಅಂಶಗಳ ಸುತ್ತ ಸುತ್ತುವ ಆಟಗಾರರು ಹಾಗು ಅವರ ಪಂದ್ಯಗಳು ಒಂದು ತರಹ ಪರೀಕ್ಷೆಗಳಿಗೆ ತಲ್ಲಣಗೊಂಡು ತಯಾರಾಗುವ ವಿದ್ಯಾರ್ಥಿಗಳಂತೆ ಆಗಿದೆ. ಇದು ಕ್ರಿಕೆಟ್ ನಷ್ಟೇ ಅಲ್ಲದೆ ಭಾಗಶಃ ಇತರೆ ಎಲ್ಲ ಬಗೆಯ ಆಟೋಟವನ್ನೂ ಆವರಿಸಿದೆ. ಮನೋಲ್ಲಾಸಕ್ಕೆ ಆಡುತ್ತಿದ್ದ ಆಟಗಳಿಂದು ಮನೋಖಿನ್ನತೆಯನ್ನೂ ಮೂಡಿಸುತ್ತಿವೆ. ಉತ್ತರ ಕೊರಿಯದ ದೊರೆ ಕಿಮ್ ಜೊಂಗ್ ಒಲಿಂಪಿಕ್ಸ್ ನಲ್ಲಿ ಪದಕಗಳನ್ನು ತರದಿದ್ದರೆ ಆಟಗಾರನ್ನು ಜೈಲಿಗೆ ತಳ್ಳುವ, ಕಾರ್ಖಾನೆಗಳಲ್ಲಿ ದುಡಿಸುವ ಬೆದರಿಕೆಯನ್ನು ಹಾಕುತ್ತಾನೆ. ಹೀಗೆ ಆಟಗಾರರನ್ನು ಒತ್ತಡದ ಕೂಪದೊಳಗೆ ನೂಕಿ ಗೆದ್ದರೂ ಅದೆಂತಹ ಗೆಲುವು ಸ್ವಾಮಿ? ಸೋಲಲ್ಲೂ ಗೆಲುವನ್ನು ಕಾಣದ ಈ ಪೀಳಿಗೆ ಕೇವಲ ಗೆಲುವನ್ನೇ ಜಪಿಸುತ್ತಾ ಸಾಗುವುದು ನಿಜವಾಗಿಯೂ ಆತಂಕಕರ.

ಇವೆಲ್ಲವುಗಳ ಹಿನ್ನಲೆಯಲ್ಲಿ ತಾಳ್ಮೆ ಎಂಬ ಜೊತೆಗಾರನನ್ನು ಮರತೇ ಬಿಟ್ಟಂತೆ ಆಗಿರುವ ಆಟಗಾರರು, ತಂಡಗಳು ಅದೆಂದಿನವರೆಗೆ ಟೆಸ್ಟ್ ಪಂದ್ಯಗಳ ಸೊಗಡನ್ನು ಕಾಪಾಡುತ್ತವೆ ಎಂಬುದನ್ನು ಮಾತ್ರ ಕಾದು ನೋಡಬೇಕು.

Friday, February 9, 2018

30 ಇಯರ್ಸ್ ಆಫ್ 1987.

ಕಾಲದ ಗಾಲಿ ಎಂದಿಗಾದರೂ ನಿಲ್ಲಬಹುದೇ? ಎಂಬ ಮೂರ್ಖ ಪ್ರೆಶ್ನೆಯನ್ನು ಮಾನವ ಅದೆಷ್ಟು ಬಾರಿ ತನ್ನನ್ನೇ ತಾನು ಕೇಳಿದ್ದಾನೆಯೋ. ಅದೆಷ್ಟು ಬಾರಿ ಅದು ನಿಂತಿದೆ ಎಂದೇ ಭಾವಿಸಿ ಮೋಹಪರವಶನಾಗಿ, ಅಸೂಹಿಯಾಗಿ, ಸಕಲವೂ ನನ್ನದೇ ನಾನೇ ಒಡೆಯ ಎಂಬಂತೆ ಅದೆಷ್ಟು ಬಾರಿ ವರ್ತಿಸಿ ಕುಣಿದು ಮತ್ತೆ ಯಥಾ ಪ್ರಕಾರ ಅದೇ ಕಾಲದ ಗಾಲಿಯೊಳಗೆಯೇ ಮರೆಯಾಗಿದ್ದಾನೆಯೋ? ಅಂದಿನಿಂದ ಇಂದಿನವರೆಗೂ ಮಾನವ ಮೂರ್ಖನೇ. ಗಳಿಕೊಂಡಿರುವ ಒಂದೆರೆಡು ದಿನಗಳನ್ನು ಹಾಯಾಗಿ ಬದುಕಿ ನಕ್ಕು ನಲಿದು ಮರೆಯಾಗುವ ಬದಲು ಇಲ್ಲ ಸಲ್ಲದ ತಾಪತ್ರಯವನ್ನೆಲ್ಲ ತನ್ನ ಮೇಲೆರೆದುಕೊಂಡು ಸುಖಾಸುಮ್ಮನೆ ಗೋಳಾಡಿ ಗೊಣಗಾಡಿ ಅತ್ತು ಒದ್ದಾಡಿ ಮರೆಯಾಗುತ್ತಾ ಬಂದಿದ್ದಾನೆ. ಅಷ್ಟೆಲ್ಲ ಸರ್ಕಸ್ ಗಳನ್ನೂ ಮಾಡಿಯೂ ಆತ ಕಾಲದ ಗಾಲಿಯನ್ನು ತಡೆದು ನಿಲ್ಲಿಸಿದನೇ? ನಿಲ್ಲಿಸಬಲ್ಲನೆ?




ಈಗ ಮೊನ್ನೆ ಮೊನ್ನೆ ಮರೆಯಾಗಿರುವಂತಹ ಇಸವಿ 1987ನನ್ನೇ ತೆಗೆದುಕೊಳ್ಳಿ. 'ಅಲ್ಲಾ ಗುರು, ನೆನ್ನೆ ಮೊನ್ನೆ ತಾನೇ ಚಡ್ಡಿ ಹಾಕೊಂಡು ಆಡ್ದಡ್ತಾ ಇದ್ದವ ಈಗ ಅವ್ನ ಕಾರು ನೋಡು!' ಎಂದು ಮೂವತ್ತು ವರ್ಷವನ್ನು ಬರೇ ಮೂರೇ ದಿನಗಳಿಗೆ ಸಮವಾಗಿಸಿ ಬಿಡುತ್ತಾರೆ ಕಾಲದ ಓಟದಲ್ಲಿ ಭಾಗಿಯಾಗಿರುವ ಅನೇಕರು. ಆದರೂ ಎಲ್ಲೋ ಒಂದೆಡೆ ಈ ಮೂರು ದಶಕಗಳು ಮಾನವನ ಓಟದ ದಿಕ್ಕನ್ನೇ ಬದಲಿಸಿದವು ಎಂದರೆ ತಪ್ಪಾಗದು. ಓಟ ಮಾನವನ ಸಹಜ ಗುಣ. ಇಂದು ಬೈಸಿಕಲ್ಲ ತುಳಿಯುವ ಆತ ನಾಳೆ ಬೈಕ ಕ್ಲಚ್ ಅನ್ನು ಹಿಂಡದಿರುತ್ತಾನೆಯೇ? ಅಂತೆಯೇ ಇಂದು ಏನಿದೆಯೋ ನಾಳೆ ಅದನ್ನು ಮಹತ್ತರವಾದ ಮತ್ತೊಂದಾಗಿ ಕಾಣಲು ಆತ ಬಯಸುತ್ತಾನೆ. ನಾಳೆಯ ಅದನ್ನು ನಾಡಿದ್ದು ಮತ್ತೆಂದದ್ದೋ ಆಗಿ ಕಾಣಬಯಸುತ್ತಾನೆ. ಒಟ್ಟಿನಲ್ಲಿ ಕಾಲವನ್ನು ತಡೆಯಲಾಗದವನು ಹೆಚ್ಚೆಂದರೆ ಅದನ್ನು ಬದಲಾಯಿಸಬಹುದಷ್ಟೇ. ಬದಲಾಯಿಸತೊಡಗುತ್ತಾನೆ. ಬದಲಾವಣೆಯ ಬರದಲ್ಲಿ ಆತ ಬದಲಾಯಿಸುತ್ತಿರುವುದು ಕಾಲವನ್ನೇ ಅಥವಾ ತನ್ನನ್ನೇ ಎಂಬುದ ಮಾತ್ರ ಅರಿಯದವನಾಗಿದ್ದಾನೆ!




ಹಾಡುಗಳೆಂದರೆ ಕಿಶೋರ್ ಕುಮಾರ್ ಎಂದುಕೊಂಡವರಿಗೆ ಆತನ ಕೊನೆಯ ಘಳಿಗೆಯನ್ನು ಕಂಡ ವರ್ಷವದು. ಹುಚ್ಚೆದ್ದು ಕುಣಿದಾಡುವಂತೆ ಮಾಡುತಿದ್ದ R D ಬರ್ಮನ್ ರ ಹವಾ ಕೊಂಚ ಕೊಂಚವಾಗಿ ಕ್ಷೀಣಿಸತೊಡಗಿತ್ತು. ಆಂಗ್ರಿ ಯಂಗ್ ಮ್ಯಾನ್ ನ ಗಡ್ಡವೂ ಬಿಳಿಯಾಗತೊಡಗಿದ್ದಿತು! ರಾಜ್ಕುಮಾರ್ ರ ತಲೆಗೂ ವಿಗ್ ಬಂದಿದ್ದಿತು. ಅದೆಲ್ಲೋ ಮುಂಬೈಯ ಮೂಲೆಯಲ್ಲಿ ಕ್ರಿಕೆಟ್ ನ ದೇವರೆಂದು ಕರೆಸಿಕೊಳ್ಳುವ ವ್ಯಕ್ತಿಯ ವ್ಯಕ್ತಿತ್ವದ ನಿರ್ಮಾಣಕ್ರಿಯೆ ಜರುಗುತ್ತಿತ್ತು. ಓವರ್ ಗೆ ಮೂರರಿಂದ ನಾಲ್ಕರ ಸರಾಸರಿಯಲ್ಲಿ ರನ್ ಗಳಿಸುತ್ತಿದ್ದ ತಂಡಗಳು ಆರು ಬಾಲಿಗೆ ಆರು ರನ್ಗಳನ್ನು ಕಬಳಿಸಲು ಶುರುವಚ್ಚಿಕೊಂಡವು. ದೇಶ ಕಂಡ ಮೊದಲ ಮಹಿಳಾ ಪ್ರಧಾನಿಯ ನೆನಪು ಇಂಚಿಚ್ಚೇ ಮಾಸಲು ಶುರುವಾಗಿದ್ದಿತು. ಅಮೇರಿಕವೆಂಬ ದೈತ್ಯ ರಾಷ್ಟ್ರಕ್ಕೆ ಸಡ್ಡು ಹೊಡೆದು ದೇಶೀ ನಿರ್ಮಾಣದ ಸೂಪರ್ ಕಂಪ್ಯೂಟರ್ಗಳನ್ನು ನಿರ್ಮಿಸಲು ದೇಶ ಚಿಂತಿಸುತ್ತಿತ್ತು. ಕುಡಿದು ಕುಣಿದು ಬರಲು ಬ್ಯಾಚುಲರ್ಗಳ ಸ್ವರ್ಗವಾದ ಗೋವಾಕ್ಕೆ ರಾಜ್ಯದ ಸ್ಥಾನಮಾನವನ್ನು ನೀಡಲಾಯಿತು. ಅಲ್ಲದೆ ಕೆಂಪು ಸೊಡ್ಡಿನ ಚೀನಾ ಆಗಲೂ ಅರುಣಾಚಲದ ವಿಷಯದಲ್ಲಿ ಮೂಗು ತೋರಿ ಮಾತು ಯುದ್ಧದವರೆಗೂ ಬೆಳೆದಿದ್ದಿತು.




ಇವೆಲ್ಲ ಘಟನೆಗಳು ಕಾಲದ ಗಾಲಿಯೊಳಗೆ ಕರಗಿ ಅದಾಗಲೇ ಮೂವತ್ತು ಬೇಸಿಗೆಗಳಾಗಿವೆ. ಬಿಸಿಲಿಗೆ ಬೆಂದ ಮನಗಳು ಮಾತ್ರ ದಣಿಯದೆ, ಧಣಿಗಳಾಗಿವೆ! ಸರ್ವವೂ ಕೈಗೆಟುಕುವ ಪ್ರಸ್ತುತ ಕಾಲದಲ್ಲಿ ಅವುಗಳು ಸಾಧಿಸುವುದಾದರೂ ಏನು?




ಮೂವತ್ತು ವಸಂತಗಳ ಮೊದಲು ಕಿಶೋರ್ ಕುಮಾರ್ರ ಘನ ಸ್ವರವನ್ನು ಅಮಿತಾಬ್ ಬಚ್ಚನ್ ನ ಹಾಡೊಂದಕ್ಕೆ ಬೆರೆಸಿ ಮೂಡಿಸಿದ ಹಾಡಿನ ಇಂಪನ್ನು ಗುನುಗುತ್ತಾ, ರಾಜಕೀಯ, ಕ್ರಿಕೆಟ್, ದೇಶ ವಿದೇಶಗಳ ಬಗ್ಗೆ ಚರ್ಚಿಸುತ್ತಾ ದೂರದ ಮುಂಬೈಯನ್ನು ಸೇರಲು ಗೋವಾದ ಮೂಲಕ ಹಾದು ಹೋಗುತ್ತಾ, ಅಲ್ಲಿನ ಪರಕೀಯತೆಯನ್ನು ಕಿಟಕಿಯಲ್ಲಿಯೇ ಒಮ್ಮೆ ನೋಡಿ 'ಏನ್ ಕಾಲ ಬಂತಪ್ಪ' ಎನ್ನುತ್ತಾ ಮತ್ತದೇ ಕಾಲವನ್ನು ಶಪಿಸುತ್ತಾ, ಸೇರಬೇಕಾದ ಜಾಗಕ್ಕೆ ಸೇರಿ, ವರ್ಷಪೂರ್ತಿ ದುಡಿದು, ಕಣ್ಣರಳಿಸಿ ಕಾಯುವ ಮಕ್ಕಳಿಗೆ ಒಂದೆರೆಡು ಆಟಿಕೆಗಳನ್ನು ಕೊಂಡು ಮತ್ತದೇ ಹಳೆಯ ಹಾಡುಗಳನ್ನು ಗುನುಗುತ್ತ, ಅರೆಬೆತ್ತಲೆಯಾದ ಗೋವಾವನ್ನು ಶಪಿಸುತ್ತಾ ಊರಿಗೆ ಬಂದು ಸೇರುತ್ತಿದ್ದ ಅಪ್ಪಂದಿರುಗಳು....

ಹೆಚ್ಚೆಂದರೆ ಯಾರೋ ನೆಂಟರಿಷ್ಟರು ಕೊಟ್ಟ ಒಂದು ರೂಪಾಯಿಯ ಬಿಲ್ಲೆ. ಅದನ್ನೂ ಎಲ್ಲೂ ಖರ್ಚು ಮಾಡದೆ ಒಂದೆಡೆ ಕೂಡಿಸಿ, ಆದ ಚಿಲ್ಲರೆಯ ಜಲ್ ಜಲ್ ಸದ್ದಿನಲ್ಲಿ ಆಕಾಶಕ್ಕೇ ಮಹಡಿಯನ್ನು ಕಟ್ಟುವ ಕನಸ್ಸನ್ನು ಹೆಣೆಯುತ್ತಾ, ದಿನ ಬೆಳಗಾದರೆ ತಮ್ಮ ತೂಕದ ಸರಿ ಸಮಾನದಷ್ಟೇ ಭಾರವಿರುವ ಶಾಲೆಯ ಬ್ಯಾಗನ್ನು ಹೊತ್ತು, ಅರಚಿದರೆ ಚಡ್ಡಿಯೇ ಒದ್ದೆಯಾಗುವ ಶಿಕ್ಷಕರ ಭಯದಿಂದಲೋ ಏನೋ ಸರಿಯಾದ ಸಮಯಕ್ಕೆ, ಹೇಳಿದ ಪಾಠವನ್ನು ಕಲಿತು, ಕೊಟ್ಟ ಮನೆಗೆಲಸವನ್ನು ಮಾಡಿಯೂ ಭಯದ ಎಳೆಯನ್ನು ಜೊತೆಗಿರಿಸಿಕೊಂಡೇ ಶಾಲೆಯನ್ನು ಸೇರುತ್ತಿದ್ದ ಮಕ್ಕಳು.....ಕೆಲವೊಮ್ಮೆ ಕೋಳಿಯೂ ಕಣ್ಣು ಬಿಟ್ಟಿರದ ಸಮಯಕ್ಕೆ ಎದ್ದು ಮನೆಯನ್ನು ಶುಚಿಗೊಳಿಸಿ, ಪೂಜೆ, ಕಾಫಿ, ತಿಂಡಿ, ಊಟ ಎಲ್ಲವನು ಅಕ್ಷರ ಸಹಃ ಯಂತ್ರಗಳಂತೆಯೇ ಮಾಡಿ, ಮಕ್ಕಳನ್ನು, ಮಕ್ಕಳಂತಿದ್ದ ಗಂಡನನ್ನೂ ಎಬ್ಬಿಸಿ, ತಯಾರುಗೊಳಿಸಿ, ಮನೆಯಿಂದ ಹೊರಗಟ್ಟಿ, ಮತ್ತೊಮ್ಮೆ ಮನೆಗುಡಿಸಿ, ಹೂವಿನ ಗಿಡಗಳನ್ನೂ ಒಮ್ಮೆ ಮಾತಾಡಿಸಿ, ಬೀರುವಿನ ಮೇಲಿಟ್ಟಿರುವ ವೀಣೆಯನ್ನು ಹೊರಗೆಳೆದು ಅದರಿಂದ ಒಂದೆರೆಡು ರಾಗಗಳನ್ನು ಗುನುಗಿಸಿ ಮತ್ತೊಮ್ಮೆ ಸಂಜೆಯಾಗುತ್ತಿದ್ದಂತೆ Vesrsion 2.0ವಿನಂತೇ ಮನೆ ಗೆಲಸದಲ್ಲಿ ತೊಡಗಿಕೊಳ್ಳುತ್ತಿದ್ದ ಅಮ್ಮಂದಿರುಗಳು....




ಇಂದು ಅದೇ ಅಪ್ಪಂದಿರುಗಳು ಅಜ್ಜಂದಿರಾಗಿ, ಮಕ್ಕಳು ಅಪ್ಪಂದಿರಾಗಿ, ಅಮ್ಮಂದಿರು ಅಜ್ಜಿಯರಾಗಿದ್ದರೆ. ಅವರೆಲ್ಲರೂ ಹೇಳುವ, ಕೇಳಬಯಸುವ ಒಂದೇ ಮಾತು 'ನಮ್ಮ್ ಕಾಲನೇ ಎಷ್ಟೋ ಚೆನ್ನಾಗಿತ್ತು' ಎಂದು!




ಹಾಗಾದರೆ ಕಾಲ ಬದಲಾಗಿದೆ. ಅಂದು ಅಷ್ಟೆಲ್ಲ ಕಷ್ಟಪಟ್ಟರೂ ಎಂದೂ ಕೊರಗದ, ಗೊಣಗದ ಮನಸ್ಥಿತಿ ಇಂದು ಏನಾಗಿದೆ? ಲಕ್ಷ ಖರ್ಚು ಮಾಡಿ ಮಕ್ಕಳನ್ನು ಸ್ಕೂಲುಗಳಿಗೆ ದಬ್ಬಿಬಿಟ್ಟರೆ ಸಾಕೆ? ಕೈಗೊಂದು ಮೊಬೈಲನ್ನು ಪಡೆದು ಜಗತ್ತನೇ ಜಯಿಸಿ ಬಾ ಎಂಬಂತೆ ಅವರನ್ನು ಮನೆಯಿಂದ ಹೊರಗಟ್ಟಿದರೆ ಸಾಕೆ? ಜಗತ್ತಿನ ಓಟದಲ್ಲಿ ಅಪ್ಪ ಬ್ಯುಸಿ, ಅಮ್ಮನೂ ಬ್ಯುಸಿ. ರಣಓಟಕ್ಕೇ ಒಗ್ಗಿಕೊಳ್ಳದೆ ಎಂಬಂತೆ ಅಜ್ಜ ಅಜ್ಜಿಯರಂತೂ ಅನಾಥಾಶ್ರಮಕ್ಕೆ ಪ್ರಿಯರಾಗಿ ಅದೆಷ್ಟೋ ವರ್ಷಗಳಾಗಿವೆ! ಭಯವೆಂಬ ಬ್ರೇಕನ್ನು ಮಕ್ಕಳಿಗಿಂದು ಶಿಕ್ಷಕರಿಂದಲೂ ಹಾಕಲಾಗದು. ಶಿಕ್ಷಿಸುವ ಮಾತು ಒಂದೆಡೆ ಇರಲಿ ಅಪ್ಪಿ ತಪ್ಪಿ ಗದರಿಸಿದರೂ ನಾಳೆ ಅವರುಗಳೇ ಮಕ್ಕಳ ಕಾಲಿಗೆ ಬಿದ್ದು ಕ್ಷಮೆಯಾಚಿಸಬೇಕಾಗಿ ಬಂದಿದೆ. ಇನ್ನು ಮನೆಯಲ್ಲಿ ಅಪ್ಪ ಅಮ್ಮರಿರದೆ, ಅಜ್ಜ ಅಜ್ಜಿಯರಿರದೆ, ಬೆಳೆಯುವ ಮಕ್ಕಳಿಗೆ 'ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು' ಎಂಬ ಮಾತು ಮರೀಚಿಕೆಯೇ. ಇಂತಹ ಮನಸ್ಥಿತಿ ಒಬ್ಬ ಕೃಷಿಕನನ್ನಾಗಲಿ, ಸಂಗೀತಗಾರನನ್ನಾಗಲಿ, ಸಾಹಿತ್ಯವನ್ನು ರಚಿಸುವವನ್ನನ್ನಾಗಲಿ ಅಥವಾ ಇತಿಹಾಸ, ಸಂಸ್ಕೃತಿ, ಆಚರಣೆ, ಐಕ್ಯತೆ, ಅನ್ಯೂನತೆಯಂತಹಯಂತಹ ಜವಾಬ್ದಾರಿಯುತ ಅಲ್ಲದೆ ಸಮಾಜದ ಒಳಿತಿಗೆ ಹಾಗು ಉಳಿವಿಗೆ ಅತ್ಯಗತ್ಯವಾದ ಗುಣಗಳನ್ನು ಬೆಳೆಸಬಲ್ಲದೇ? ನಾವುಗಳು ಖಂಡಿತವಾಗಿಯೂ ಉತ್ತರಿಸಿಕೊಳ್ಳಬೇಕು.




ಮೂವತ್ತು ವರ್ಷದ ಕೆಳಗೂ ಒಂದು ಓಟವಿತ್ತು. ಆ ಓಟಕ್ಕೆ ಒಂದಿನಿತಾದರೂ ಗುರಿ ಎಂಬುದಿತ್ತು. ನಾವುಗಳು ಅಂದಿನ ಎಲ್ಲ ಗುರಿಗಳನ್ನೂ ತಲುಪಿದರೂ ಇಂದು ಮತ್ತದೇ ಓಟದ ವೇಗದಲ್ಲಿ ಭಾಗಿಯಾಗಿದ್ದೇವೆ. ಎಲ್ಲಿಗೆ, ಏತಕ್ಕೆ, ಎಂಬುದು ಮಾತ್ರ ತಿಳಿದಿಲ್ಲ! ಬೇಕಿರುವುದೆಲ್ಲವ ಬಿಟ್ಟು ಬೇಡದಿರುವ ಎಲ್ಲೆಡೆಗೆ ಓಡುವ ನಾವುಗಳು ಹೇಳುವುದು ಮಾತ್ರ 'ಕಾಲ ಬದಲಾಗಿದೆ’ ಎಂದು. ಕಾಲ ನಿಜವಾಗಿಯೂ ಬದಲಾಗಿದೆಯೇ ಅಥವ ನಾವುಗಳು ಮಾತ್ರ ಬದಲಾಗಿ ಕಾಲವನ್ನಷ್ಟೇ ಧೊಷಿಸುತ್ತಿದ್ದೇವೆಯೇ? ಉತ್ತರ ಮಾತ್ರ ಅಸ್ಪಷ್ಟ.






Friday, February 2, 2018

ನ್ಯೂಟನ್ ಹಾಗು ಲೆಬ್ನಿಸ್ ರಿಬ್ಬರಿಗೂ 'ಬಾಸ್'ಕರನೀತ.. !

ಕಾಲ ಸುಮಾರು ಹನ್ನೆರಡನೆಯ ಶತಮಾನದ ಮಧ್ಯಭಾಗ. ಖಗೋಳಶಾಸ್ತ್ರ ಹಾಗು ಗಣಿತದ್ಯಾಯನದಲ್ಲಿ ಪರಿಣಿತಿಯನ್ನೊಂದಿದ್ದ ಈತ ತನ್ನ ಮಗಳ ಮದುವೆಯ ಕುರಿತು ಚಿಂತಾಗ್ರಸ್ತನಾಗಿರುತ್ತಾನೆ. ಕಾರಣ, ಮಗಳ ಜಾತಕದ ಪ್ರಕಾರ ಆಕೆ ಕೈಯಿಡಿಯುವ ಗಂಡು ಮದುವೆಯಾದ ಕೆಲವೇ ದಿನಗಳ ಒಳಗೆ ಜೀವ ಕಳೆದುಕೊಳ್ಳುತ್ತಾನೆಂಬುದಾಗಿರುತ್ತದೆ. ಆಕೆಯ ಮದುವೆಯ ಭಾಗ್ಯವೇ ಹಾಗಿರುವಾಗ ಯಾರು ತಾನೇ ಏನನ್ನು ಮಾಡಲು ಸಾಧ್ಯ. ದಿನಗಳು ಕಳೆದವು. ಆದರೆ ಅಪ್ಪ ತನ್ನ ಛಲವನ್ನು ಕಳೆದುಕೊಳ್ಳಲಿಲ್ಲ. ತನ್ನ ವಿದ್ಯಾಪರಿಣಿತಿಯ ತಂತ್ರವೆನ್ನೆಲ್ಲಾ ಬಳಸಿ ಈ ಸಮಸ್ಯೆಗೊಂದು ಪರಿಹಾರವನ್ನು ಆತ ಕಂಡುಕೊಳ್ಳುತ್ತಾನೆ. ಮದುವೆಯ ಮೂಹೂರ್ತ ಒಂದು ಪಕ್ಷ ಈತ ಗೊತ್ತುಮಾಡಿದ ಸುಸಮಯಕ್ಕೆ ಕರಾರುವಕ್ಕಾಗಿ (ಸೆಕೆಂಡುಗಳ ಮಟ್ಟದಲ್ಲಿ ಎನ್ನಬಹುದು) ನೆಡೆದರೆ ಮುಂದೆ ಬಂದೊದಗುವ ಅಪಾಯ ತಪ್ಪಿ ಮಗಳು ಸುಖವಾಗಿರುತ್ತಾಳೆ ಎಂಬ ಲೆಕ್ಕಾಚಾರ ಅಪ್ಪನದು. ಆದರೆ ಸಮಯವನ್ನು ನಿಮಿಷ ಹಾಗು ಸೆಕೆಂಡುಗಳ ಮಟ್ಟದಲ್ಲಿ ಗುರುತು ಹಾಕಿಕೊಂಡು ಮೂಹೂರ್ತದ ಸಮಯವನ್ನು ಗೊತ್ತುಮಾಡುವುದಾದರೂ ಹೇಗೆ? ಅದು ಹನ್ನೆರಡನೆಯ ಶತಮಾನ. ಹೆಚ್ಚೆಂದರೆ ಸೂರ್ಯನ ಸ್ಥಾನಪಲ್ಲಟಗನುಗುಣವಾಗಿ ಘಳಿಗೆಯನ್ನು ನಿಗಧಿ ಮಾಡಲಾಗುತ್ತಿತ್ತೆ ವಿನಹಃ ಸೆಕೆಂಡು ಮಿಲಿ ಸೆಕೆಂಡುಗಳಲ್ಲಲ್ಲ. ದೃತಿಗೆಡದ ಅಪ್ಪ ಕಾಲವನ್ನು ಕರಾರುವಕ್ಕಾಗಿ ಅಳೆಯಲು ಮಾಪನವೊಂದನ್ನು ತಯಾರು ಮಾಡುತ್ತಾನೆ! ಲೋಟವೊಂದನ್ನು ತೆಗೆದುಕೊಂಡು ಅದರ ತಳಕ್ಕೆ ರಂಧ್ರವೊಂದನ್ನು ಕೊರೆದು ಅದನ್ನು ನೀರಿರುವ ಪಾತ್ರೆಯೊಂದರಲ್ಲಿ ಒಂದು ವಿಶಿಷ್ಟ ಬಗೆಯಲ್ಲಿ ಜೋಡಿಸಿ ನೀರು ಆ ರಂಧ್ರದ ಮೂಲಕ ಲೋಟದೊಳಗೆ ಹೋಗಿ ಅದು ಪಾತ್ರೆಯ ತಳ ಸೇರುವ ಸಮಯಕ್ಕೆ ಸರಿಯಾಗಿ ಮಗಳ ಮದುವೆ ಜರುಗಬೇಕೆಂದಾಗಿರುತ್ತದೆ. ಮದುವೆಯ ದಿನ ಪಾತ್ರೆಯೊಂದರಲ್ಲಿ ಆವೊಂದು ಮಾಪನವನ್ನು ಮಾಡಿ ಯಾರಿಗೂ ಅದರ ಬಳಿಗೆ ಹೋಗದಂತೆ ಕಟ್ಟಪ್ಪಣೆ ಮಾಡುತ್ತಾನೆ. ವಿಶೇಷವಾಗಿ ಮಧುವಣಗಿತ್ತಿಯಾದ ತನ್ನ ಮಗಳಿಗೆ. ಆದರೆ ಸಹಜ ಕುತೂಹಲ ತಡೆಯಲಾರದೆ ಆಕೆ ಅಪ್ಪನಿರದಿದ್ದ ಸಮಯವನ್ನು ನೋಡಿ ಆ ಪಾತ್ರೆಯ ಬಳಿಗೋಗಿ ಇಣುಕಿ ನೋಡುತ್ತಾಳೆ. ಹಾಗೆ ನೋಡುವಾಗ ಮುಗುತ್ತಿಯ ಒಂದು ಮುತ್ತು ಜಾರಿ ಲೋಟದ ಒಳಗೆ ಬೀಳುತ್ತದೆ. ಹೆದರಿಯೋ ಏನೋ ಯಾರಿಗೂ ಆ ವಿಷಯವನ್ನು ಆಕೆ ತಿಳಿಸಲಿಲ್ಲ. ಮದುವೆ ಜರುಗಿತು. ಕೆಲದಿನಗಳ ತರುವಾಯ ಮಗಳ ಗಂಡ ವಿದಿವಶನಾಗುತ್ತಾನೆ! ವಿಚಾರಿಸಿದಾಗ ಮಗಳ ಮುಗುತ್ತಿಯ ಮುತ್ತು ಲೋಟದೊಳಗೆ ಬಿದ್ದಿದ್ದರಿಂದ ಘಳಿಗೆಯ ಮಾಪನ ಏರುಪೇರಾಗಿ ಮದುವೆಯ ಮುಹೂರ್ತ ನಿಗದಿಪಡಿಸಿದ ಸಮಯಕ್ಕೆ ಜರುಗದೆ ಬೇರೆ ಸಮಯದಲ್ಲಿ ಜರುಗಿರುತ್ತದೆ! ಮದುವೆಯ ಕೆಲ ದಿನಗಲ್ಲೇ ವಿಧವೆಯಾದ ಕಾರಣ ಮಗಳು ಖಿನ್ನಳಾದರೆ ಮಗಳ ಬರಡು ಬಿದ್ದ ಭವಿಷ್ಯವನ್ನು ಕಂಡು ಅಪ್ಪ ಕೊರಗುತ್ತಾನೆ. ಆದರೆ ಖಿನ್ನತೆಯಲ್ಲಿಯೇ ಮುಳುಗುವುದಿಲ್ಲ. ಮತ್ತೊಮ್ಮೆ ಆತ ಛಲವನ್ನು ಕಟ್ಟಿಕೊಳ್ಳುತ್ತಾನೆ. ಮಗಳನ್ನು ಸಂತೋಷಪಡಿಸಲು ಆಕೆಗೆ ಗಣಿತದ ಸುಖಸಿಹಿಯನ್ನು ಉಣಬಡಿಸುತ್ತಾನೆ. ಅಪ್ಪನ ಕ್ಲಿಷ್ಟಕರ ಪ್ರೆಶ್ನೆಗಳನ್ನು ಬಿಡಿಸುತ್ತಾ ಮಗಳು ತನ್ನೆಲ್ಲ ದುಃಖ ದುಮ್ಮಾನಗಳನ್ನು ಮರೆಯತೊಡಗುತ್ತಾಳೆ. . ಮುಂದೆ ಅಪ್ಪನಂತೆಯೇ ಗಣಿತಜ್ಞೆಯಾಗಿ ಬೆಳೆಯುತ್ತಾಳೆ. ಮುಂದೊಂದು ದಿನ ನಿತ್ಯದ ಜನಸಾಮಾನ್ಯರ ವ್ಯಾಪಾರ ವಹಿವಾಟುಗಳಿಗೆ ಅನುಕೂಲವಾಗುವ ಹಾಗು ಗಣಿತದ ಇನ್ನಿತರ ಮಹೋನ್ನತ ಸಂಶೋಧನೆಗಳನ್ನೊಳಗೊಂಡ 'ಲೀಲಾವತಿ' ಎಂಬ ಆಕೆಯ ಹೆಸರಿನ ಪುಸ್ತಕವೊಂದನ್ನೇ ಅಪ್ಪ ಬರೆಯುತ್ತಾನೆ.( ಲೀಲಾವತಿ 'ಸಿದ್ದಾರ್ಥ ಶಿರೋಮಣಿ' ಮಹಾಗ್ರಂಥದ ನಾಲ್ಕು ಅದ್ಯಾಯಗಳಲ್ಲಿ ಒಂದು ಅದ್ಯಾಯ. ಮೇಲಿನ ಕತೆ ಹದಿನಾರನೇ ಶತಮಾನದಲ್ಲಿ ಪರ್ಷಿಯನ್ ಭಾಷೆಗೆ ಅನುವಾದಗೊಂಡ ಲೀಲಾವತಿ ಪುಸ್ತಕದಲ್ಲಿ ಕಂಡುಬಂದಿದೆ) ನಂತರ ಸುಮಾರು ಐದಾರು ಶತಮಾನಗಳವರೆಗೂ (ಬ್ರಿಟಿಷರ ಆಗಮನದವರೆಗೂ) ಅಂದಿನ ಭಾರತದಲ್ಲಿ ಗಣಿತಾಧ್ಯಾಯದ ಅತಿಪ್ರಮುಖ ಹೊತ್ತಿಗೆಗಳಲ್ಲಿ ಈ ಪುಸ್ತಕ ಒಂದಾಗಿದ್ದಿತು ಎಂಬುದು ಸೋಜಿಗದ ಸಂಗತಿ.

ಮೇಲಿನ ಕತೆಯ ಅಪ್ಪನೇ ಹನ್ನೆರಡನೆಯ ಶತಮಾನದ ಗಣಿತಜ್ಞ ಹಾಗು ಖಗೋಳಶಾಸ್ತ್ರಜ್ಞ ಭಾಸ್ಕರ ಅಥವಾ ಭಾಸ್ಕರಚಾರ್ಯ. ಚಿಕ್ಕನಿಂದಲೇ ಗಣಿತಪ್ರಿಯರಾಗಿದ್ದರೆ ಒಮ್ಮೆಯಾದರೂ ಈತನ ಹೆಸರನ್ನು ಕೇಳಿರುವುದುಂಟು. (ಸುಮಾರು ಆರನೆಯ ಶತಮಾನದಲ್ಲೂ ಮತ್ತೊಬ್ಬ ಭಾಸ್ಕರ ಎಂಬ ಗಣಿತಜ್ಞನಿದ್ದ, ಕೆಲವೊಮ್ಮೆ ಅವನನ್ನು ಭಾಸ್ಕರ-I ಅಂತಲೂ ಸಂಭೋದಿಸುವುದುಂಟು). ಕರ್ನಾಟಕದ ಈಗಿನ ಬಿಜಾಪುರದಲ್ಲಿ ಜನಿಸಿದ ಈತ (ಕ್ರಿಸ್ತಶಕ 1114) ಗಣಿತಶಾಸ್ತ್ರದಲ್ಲಿ ಅದೆಷ್ಟರ ಮಟ್ಟಿಗೆ ಪರಿಣಿತಿಯನ್ನೊಂದಿದ್ದನೆಂದರೆ ಈತನ ಸಮೀಕರಣಗಳು ಹಾಗು ಅವುಗಳ ಸಮಸ್ಯೆಗಳನ್ನು ಬಿಡಿಸುವ ಚತುರತೆಯ ಪರಿಣಿತಿಯ ಮಟ್ಟಕೆ ಬೆಳೆಯಲು ಆಂಗ್ಲ ಗಣಿತಜ್ಞರಿಗೆ ನಂತರದ ನೂರಾರು ವರ್ಷಗಳೇ ಬೇಕಾಯಿತು. ನ್ಯೂಟನ್ ಹಾಗು ಲೆಬ್ನಿಸ್ ರ ಮೊದಲೇ Calculas (ಕಲನಶಾಸ್ತ್ರ) ಮೇಲಿನ ಈತನ ಮಹೋನ್ನತವಾದ ಕೆಲಸ ಹಾಗು ಸಂಶೋಧನೆ ಭಾರತೀಯರಾದ ನಮಗೆ ಹೆಮ್ಮೆಯನ್ನು ಹುಟ್ಟಿಸಿದರೆ, ನಾನು ನಾನೆಂದು ಬೊಬ್ಬೆಯೊಡೆಯುವ ಇತರರನ್ನು ಮಹಾನ್ ಆಶ್ಚರ್ಯಕ್ಕೆ ಸಿಲುಕಿಸುವುದಂತೂ ಸುಳ್ಳಲ್ಲ. ತಮಾಷೆಯ ವಿಷಯವೆಂದರೆ ಹದಿನೇಳನೇಯ ಶತಮಾನದಲ್ಲಿ ನ್ಯೂಟನ್ ಹಾಗು ಲೆಬ್ನಿಸ್ ಇಬ್ಬರು ಕಲನಶಾಸ್ತ್ರವನ್ನು ತಾವೇ ಮೊದಲು ಕಂಡುಹಿಡಿದೆವೆಂದು ಒಬ್ಬರ ಮೇಲೊಬ್ಬರು ಕೆಸರೆರಚಿ ಬೊಬ್ಬೆಯೊಡೆದುಕೊಂಡು ಸುದ್ದಿಯನ್ನು ಮಾಡಿದರೆ ವಿನಹಃ ಒಮ್ಮೆ ಭಾರತದೆಡೆಗೂ ತಿರುಗಿ ಭಾಸ್ಕರನೆಂಬ ಮೇಧಾವಿ ತಮ್ಮ ತಾತರ ಮುತ್ತಾತರ ಕಾಲಕ್ಕೂ ಮೊದಲೇ ಈ ವಿಷಯವನ್ನು ಕಲಿತು, ಬರೆದು ಮರೆಯಾಗಿದ್ದಾನೆ ಎಂದರೆ ತೆಪ್ಪಗಾಗುತ್ತಿದರೋ ಏನೋ. ವಿಪರ್ಯಾಸವೆಂಬಂತೆ ಆಧುನಿಕ ಗಣಿತಲೋಕ ಕಲನಶಾಸ್ತ್ರದ ಕತೃ ನ್ಯೂಟನ್ ಮಹಾಶಯನೊಬ್ಬನೇ ಮಾತ್ರ ಎನ್ನುತ್ತದೆ ವಿನಹ ಕನಿಷ್ಠ ಗೌರವಕ್ಕಾದರೂ ಭಾಸ್ಕರನ ಹೆಸರನ್ನು ಅದು ಎಲ್ಲಿಯೂ ಪ್ರಸ್ತಾಪಿಸುವುದಿಲ್ಲ. ಖಗೋಳ ವಿಜ್ಞಾನದಲ್ಲಿಯೂ ಪರಿಣಿತಿಯನ್ನು ಹೊಂದಿದ್ದ ಭಾಸ್ಕರ ಗ್ರಹಣ, ತಾರಾ ವರ್ಷ (Sidereal Year), ಗ್ರಹಗಳ ಚಲನೆ ಅವುಗಳ ರೇಖಾಂಶ ಇವುಗಳ ನಿಖರವಾದ ಮಾಹಿತಿಯನ್ನೊಳಗೊಂಡ ಗೋಲದ್ಯಾಯ ಎಂಬ ಪುಸ್ತಕವನ್ನು (ಇದೂ ಕೂಡ ಸಿದ್ದಾರ್ಥ ಶಿರೋಮಣಿಯ ಒಂದು ಅದ್ಯಾಯ) ಬರೆಯುತ್ತಾನೆ. 1979 ರಲ್ಲಿ ಭಾರತ ಹಾರಿಸಿದ ತನ್ನ ಎರಡನೆಯ ಉಪಗ್ರಹಹಕ್ಕೆ ಈತನ ಹೆಸರನ್ನೇ ಇರಿಸಿತ್ತು.

ಶ್ಲೋಕಗಳ ಮೂಲಕ ಸಮಸ್ಯೆ ಹಾಗು ಅವೇ ಶ್ಲೋಕಗಳ ಮೂಲಕ ಸಮಸ್ಯೆಗೊಂದು ಉತ್ತರ. ಸಮಸ್ಯೆಗಳನ್ನು ಅದೆಷ್ಟು ಸರಳವಾಗಿ ಹೇಳಿ ಮತ್ತದೇ ಸರಳತೆಯಲ್ಲಿ ಉತ್ತರವನ್ನು ಕೊಡುತ್ತಿದ್ದ ಎನ್ನುವುದಕ್ಕೆ ಆತನ ಲೀಲಾವತಿ ಪುಸ್ತಕದ ಒಂದು ಸಮಸ್ಯೆಯನ್ನು ನೋಡೋಣ.

ನವಿಲೊಂದು 9 ಅಡಿ ಎತ್ತರದ ಸ್ತಂಭವೊಂದರಲ್ಲಿ ಕೂತಿದೆ. ಆ ಸ್ತಂಭದ ಬುಡದಲ್ಲಿರುವ ರಂಧ್ರದ ಬಳಿಗೆ ಹಾವೊಂದು ಬರುತ್ತಿದ್ದೆ. ಹಾವು ಹಾಗು ರಂಧ್ರದ ನಡುವಿನ ಅಂತರ ಸ್ತಂಭದ ಮೂರು ಪಟ್ಟು ಅಂದರೆ 27 ಅಡಿ. ಹಾವನ್ನು ಕಂಡ ನವಿಲು ಅದನ್ನು ಹಿಡಿದು ಭಕ್ಷಿಸಲು ಅದರೆಡೆಗೆ ಹಾರುತ್ತದೆ.

ಪ್ರೆಶ್ನೆ : ನವಿಲು ಹಾವನ್ನು ಹಿಡಿಯುವ ಸ್ಥಳ ಸ್ತಂಭದಿಂದ ಎಷ್ಟು ದೂರದಲ್ಲಿದೆ?

ನಾವುಗಳಾದರೆ ಹಾವು, ನವಿಲು ಹಾಗು ರಂಧ್ರದ ಸ್ಥಳದಲ್ಲಿ ಮೂರು ಚಿಕ್ಕೆಗಳನಿಟ್ಟು, ಪೈಥಾಗೊರಸ್ ನ ನಿಯಮವನ್ನು ಜಡಿದು, ಚತುರ್ಭುಜ ಸಮೀಕರಣಗಳನ್ನು ಸೃಷ್ಟಿಸಿ, ಬಿಡಿಸಿ ಕೊನೆಯದಾಗಿ 12 ಅಡಿ ಎಂದು ಉತ್ತರಿಸುತ್ತೇವೆ. ಆದರೆ ಭಾಸ್ಕರನ ಹಾದಿ ಇನ್ನು ಸರಳ ಹಾಗು ಸುಂದರ. ಸ್ತಂಭದ ವರ್ಗಮೂಲವನ್ನು ( 81 ) ಹಾವಿನ ದೂರದಿಂದ (27) ಭಾಗಿಸಿ ಬಂದ ಭಾಗಲಬ್ಧವನ್ನು (3) ಹಾವಿನ ದೂರದಿಂದ (27) ಕಳೆದು ಬಂದ ಉತ್ತರವನ್ನು (24) ಸಮವಾಗಿ ತುಂಡರಿಸಿದರೆ ಬರುವ ಉತ್ತರವೇ (12) ನವಿಲು ಹಾವನ್ನು ಹಿಡಿಯುವ ಸ್ಥಳ. ಇಂತಹ ಸಾವಿರಾರು ಉದಾಹರಣೆಗಳೊಂದಿಗೆ ಅಂದು ಗಣಿತವನ್ನು ಸಾಮಾನ್ಯರಿಗೂ ಅರಿವಾಗುವತೆ ತಿಳಿಯಪಡಿಸುತಿದ್ದ.

ಭಾಸ್ಕರನ ಸಂಶೋಧನೆಗಳು ಆತನ ಕಾಲಕ್ಕೆ ಅದೆಷ್ಟೋ ವರ್ಷಗಳು ಮುಂದಿದ್ದವು ಎಂಬುದರಲ್ಲಿ ಎರಡು ಮಾತಿಲ್ಲ. ಆತನ ಪ್ರತಿಭೆಯನ್ನು ಅಳೆಯಲು ನಮ್ಮಲ್ಲಿ ಉಳಿದಿರುವುದು ಆತನ ಕೇವಲ ಒಂದೆರೆಡು ಪುಸ್ತಕಗಳಷ್ಟೇ. ಒಂದು ಪಕ್ಷ ಆಗಿನ ಕಾಲದಲ್ಲಿ ಮುದ್ರಣಾಲಯ, ಇಂಕು, ಪೇಪರ್ಗಳೆಂಬ ಸಂಸ್ಕರಣ ವ್ಯವಸ್ಥೆಗಳಿದ್ದರೆ ಇನ್ನೂ ಅವೆಷ್ಟೋ ಬರಹಗಳು, ಶೋಧನೆಗಳು ನಮಗೆ ಸಿಗುತ್ತಿದ್ದವೋ ಏನೋ? ಇತಿಹಾಸದ ಕಾಲಘಟ್ಟವನ್ನು ನೋಡಿದರೆ ಭಾಸ್ಕರನ (12ನೆಯ ಶತಮಾನ) ನಂತರ ಯಾವುದೇ ಪ್ರಮುಖ ಭಾರತೀಯ ಗಣಿತಜ್ಞರು ಬೆಳೆಯುವುದು ಕಾಣಸಿಗುವುದಿಲ್ಲ. ಪರಕೀಯರ ದಾಳಿ ಹಾಗು ಲೂಟಿ ಹುಟ್ಟಿಕೊಂಡ ದಿನಗಳವು. ಭಾರತೀಯ ಗಣಿತಜ್ಞರಾಗಲಿ ಅಥವಾ ಇನ್ಯಾವ ಮೇಧಾವಿಗಳಾಗಲಿ ತಮ್ಮ ಸಂಶೋಧನೆಯ ಬರಹಗಳನ್ನು ಉಳಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ತಮ್ಮ ಜೀವವನ್ನು ಉಳಿಸಿಕೊಂಡರೆ ಸಾಕಪ್ಪ ಅನ್ನುವಂತ ಕಾಲವದು. ಅಷ್ಟೆಲ್ಲ ಅನಾಚಾರದ ನಡುವೆಯೂ ಭಾಸ್ಕರರಂತಹ ಮೇಧಾವಿಗಳ ಹೆಸರು ಇನ್ನೂ ಜನರ ಬಾಯಿಯಲ್ಲಿ ರಾರಾಜಿಸುತ್ತಿದೆ ಎಂದರೆ ಅದು ಖಂಡಿತ ಹೆಮ್ಮೆಯ ವಿಷಯ. ಜ್ಞಾನ ವಿಜ್ಞಾನಗಳ ತಪೋಭೂಮಿಯಾಗಿದ್ದ ನೆಲದಲ್ಲಿ ಹೀಗೆ ಅಳಿದುಳಿದು ಬದುಕಿರುವವರು ಕೆಲವರು. ಶಿಖರದಷ್ಟೆತ್ತರದ ಸಾಧನೆಯನ್ನು ಮಾಡಿ ಇತಿಹಾಸದ ಪುಟಗಳಲ್ಲಿ ಗುಲಗಂಜಿಯಷ್ಟೂ ಉಳಿಯದೆಯೇ ಕಣ್ಮರೆಯಾದ ಮಹನೀಯರು ಇನ್ನೆಷ್ಟೋ!

ಭಾಸ್ಕರಾಚಾರ್ಯನ ಇನ್ನಷ್ಟು ಮಾಹಿತಿಗೆ :

https://www.thefamouspeople.com/profiles/bhskara-ii-6835.php

Friday, January 26, 2018

ಸುಪ್ರೀ ಕೋರ್ಟಿನ ನ್ಯಾಯಾಧೀಶರನ್ನೇ ಪ್ರೆಶ್ನಿಸಬಹುದಾದರೆ ಡಾರ್ವಿನ್ ನ ವಿಕಸನವಾದವನ್ನೇಕಲ್ಲ?

ವರ್ಷ ಕ್ರಿಸ್ತ ಶಕ 1917. ಸಾಪೇಕ್ಷತಾ ಸಿದ್ಧಾಂತವೆಂಬ (Theory of Relativity) ಮಹಾನ್ ವೈಜ್ಞಾನಿಕ ಸಿದ್ಧಾಂತವನ್ನು ಮಂಡಿಸಿದ್ದ ಐನ್ಸ್ಟೀನ್ ಎಂದರೆ ಇಡೀ ವಿಶ್ವವೇ ತಲೆಬಾಗುತಿದ್ದ ಕಾಲ. ಆನೆ ನೆಡೆದಿದ್ದೆ ದಾರಿ ಎಂಬಂತೆ ಆಂದು ಐನ್ಸ್ಟೀನ್ ಮಂಡಿಸುತಿದ್ದ ಸಿದ್ಧಾಂತಗಳೆಲ್ಲವೂ ಸಂಶೋಧನಾ ವಲಯದಲ್ಲಿ ಅಲ್ಲಿಯವರೆಗೂ ನಂಬಿಕೊಂಡು ಬಂದಿದ್ದ ವೈಜ್ಞಾನಿಕ ಸೂತ್ರಗಳನೆಲ್ಲವನ್ನೂ ತಲೆಕೆಳಗಾಗಿಸುತ್ತಿದ್ದವು. ವಿಜ್ಞಾನವೆಂದರೆ ಹಾಗೆಯೆ ಅಲ್ಲವೇ ಮತ್ತೆ? ಹೀಗೆ ಅಣು, ಪರಮಾಣು, ಭೂಮಿ, ಸೌರಮಂಡಲ, ಜಗತ್ತು ಎಂಬ ಸೂಕ್ಷ್ಮದಿಂದಿಡಿದು ಸಮಗ್ರದವರೆಗೂ ಆತನ ಸಂಶೋಧನೆಗಳು ಜರುಗುತ್ತಿದ್ದವು. ಅಂತಹದೇ ಸಂಶೋಧನೆಗಳಲ್ಲಿ ವಿಶ್ವದ ರಚನೆಯ ಸಂಶೋದನೆಯೂ ಕೂಡ ಒಂದು. ಐನ್ಸ್ಟೀನ್ನ ಪ್ರಕಾರ ಸಕಲ ವಿಶ್ವದ (ಬ್ರಹ್ಮಾಂಡ) ಆಕಾರವು ಜಡ ವಸ್ತುವಿನಂತೆ ಸ್ಥಿರವಾಗಿದ್ದೂ ಗೋಳಾಕಾರದ ರಚನೆಯನ್ನು ಹೊಂದಿದೆ ಎಂಬುದಾಗಿತ್ತು (Static Universe). ಆದರೆ ಅಷ್ಟೊತ್ತಿಗಾಗಲೇ ಕೆಲ ವಿಜ್ಞಾನಿಗಳು ವಿಶ್ವವು ಸ್ಥಿರವಾಗಿರದೆ ದಿನದಿಂದ ದಿನಕ್ಕೆ ಹಿಗ್ಗುತ್ತಿದೆ ಎಂಬ ವಾದವನ್ನು ಮಂಡಿಸಿರುತ್ತಾರೆ. ಅದನ್ನು ಸಾಧಿಸಿ ತೋರಿಸುವ ಸನಿಹದಲ್ಲೂ ಇರುತ್ತಾರೆ. ಆದರೆ ಐನ್ಸ್ಟೀನ್ನ್ನಿನ ಸ್ಥಿರವಾದದ ನಂತರ ಅವರೆಲ್ಲರ ವಾದಗಳು ಕೊಂಚ ಮಂಕಾಗತೊಡಗುತ್ತವೆ. ಅಂದಿನ ವಿಜ್ಞಾನ ವಲಯ ಕ್ರಮೇಣವಾಗಿ ಐನ್ಸ್ಟೀನ್ ನ್ನಿನ Static Universe ವಾದವನ್ನು ಒಪ್ಪಿಕೊಳ್ಳತೊಡಗಿತು. ಅದು ವರ್ಷ 1929. ಅಮೇರಿಕಾದ ಖಗೋಳಶಾಸ್ತ್ರಜ್ಞ ಎಡ್ವಿನ್ ಹಬಲ್ ವಿಶ್ವದ ರಚನೆಯ ಬಗ್ಗೆ ಐನ್ಸ್ಟೀನ್ ನ್ನಿನ ವಾದಕ್ಕೆ ವಿರುದ್ಧವಾಗಿರುವ ಸಿದ್ಧಾಂತವೊಂದನ್ನು ಮಂಡಿಸುತ್ತಾನೆ ಅಲ್ಲದೆ ಅದನ್ನೂ ಸಾಧಿಸಿಯೂ ತೋರುತ್ತಾನೆ. ಆತನ ಪ್ರಕಾರ ಗ್ಯಾಲಕ್ಸಿಗಳ (ತಾರಾಗಣ) ದೂರ ಅವುಗಳ ಸ್ಥಾನಪಲ್ಲಟದೊಟ್ಟಿಗೆ ನೇರ ಸಂಬಂಧವನ್ನು ಹೊಂದಿರುತ್ತವೆ ಎಂಬುದಾಗಿರುತ್ತದೆ. ಅರ್ಥಾತ್ ಪ್ರಸ್ತುತ ಕಾಣಸಿಗುವ ಗ್ಯಾಲಕ್ಸಿಗಳು ದೂರಸರಿಯುತ್ತಿದು ವಿಶ್ವವು ಹಿಗ್ಗುತ್ತಿದೆ ಎಂಬುದಾಗಿರುತ್ತದೆ. ಹಬಲ್ನ ಸಿದ್ದಾಂತ ನಿಜವಾದ ಸುದ್ದಿಯನ್ನು ಕೇಳಿದ ಕೂಡಲೇ ಐನ್ಸ್ಟೀನ್ ತನ್ನ Static Universe ಸಿದ್ದಾಂತವನ್ನು ಕೈಬಿಡುತ್ತಾನೆ ಅಲ್ಲದೆ ಮುಂದೊಂದು ದಿನ ಆತ ತನ್ನ ಜೀವನದಲ್ಲಿ ಜರುಗಿದ ಅತಿ ದೊಡ್ಡ ಪ್ರಮಾದಗಳಲ್ಲಿ Static Universe ಸಿದ್ಧಾಂತವೂ ಒಂದು ಎಂಬುದನ್ನು ಒಪ್ಪಿಯೂಕೊಳ್ಳುತ್ತಾನೆ. ಮತ್ತೊಮೆ ವಿಜ್ಞಾನವೆಂಬುದು ನಿಂತ ನೀರಲ್ಲ ಎಂಬುದು ಸಾಬೀತಾಗುತ್ತದೆ.

ಇನ್ನು ನಮ್ಮ ವಿಷಯಕ್ಕೇ ಬಂದರೆ ಸಹಸ್ರಾರು ಶತ್ರಮಾನಗಳ ಮೊದಲು ಜರುಗಿದ ರಾಮಾಯಣ, ಮಹಾಭಾರತವನ್ನು ಅಲ್ಲಗೆಳೆಯುತ್ತಿದ್ದ ಹಲವರು ಇಂದು ಬಿಬಿಸಿ ಚಾನೆಲ್ಲಿನಲ್ಲಿ ರಾಮಸೇತುವಿನ ಸಮಗ್ರ ವರದಿ ಹಾಗು ಅದು ನೈಸರ್ಗಿಕವಲ್ಲವೆಂದು ತೋರಿಸಿದ ಪುರಾವೆಗಳಿಗೆ ಮುಖ ಕೆಂಪಾಗಿಸಿಕೊಳ್ಳತೊಡಗಿದ್ದಾರೆ. ಈಗ ರಾಮಸೇತುವನ್ನು ರಾಮ ಹಾಗು ಅವನ ಸಂಗಡಿಗರು ನಿರ್ಮಿಸಿದರು ಎಂಬುದನ್ನು ಒಪ್ಪಿಕೊಂಡಮೇಲೆ ರಾಮಾಯಣದ ಇತರ ಪಾತ್ರಗಳು, ಘಟನೆಗಳನ್ನು ಅಲ್ಲಗೆಳೆಯಬಲ್ಲರೆ? ಹಾಗೆ ಅಲ್ಲೆಗೆಳೆಯಲು ಅವರಲ್ಲಿ ಇರುವ ಪುರಾವೆಗಳಾದರೂ ಎಂತಹದ್ದು?

ಏಕೆ ಈ ವಿಷಯಗಳನ್ನು ಇಲ್ಲಿ ಚರ್ಚಿಸಲಾಗುತ್ತಿದೆ ಎಂದರೆ ಮೊನ್ನೆ ಮೊನ್ನೆಯಷ್ಟೇ ಉನ್ನತ ಶಿಕ್ಷಣ ಸಚಿವರಾಗಿದ್ದ (MoS) ಸತ್ಯಪಾಲ್ ಸಿಂಗ್ ರವರು 'ಡಾರ್ವಿನ್ನ್ನ ವಿಕಸನ' ಸಿದ್ದಾಂತವನ್ನು ಅಲ್ಲಗೆಳೆದು ಅದನ್ನು ಪಠ್ಯಪುಸ್ತಕಗಳಿಂದಲೂ ತೆಗೆಯಬೇಕೆಂಬ ಒಂದು ಆತುರದ ಹೇಳಿಕೆಯನ್ನು ನೀಡಿದ್ದರು. ಅವರ ಪ್ರಕಾರ ನಮ್ಮಿ ಸಮಗ್ರ ಇತಿಹಾಸದಲ್ಲಿ ಎಲ್ಲಿಯೂ ಸಹ ಮಂಗನಿಂದ ಮಾನವರರಾಗುತ್ತಿದ್ದ ಜೀವಿಗಳನ್ನು (Ape) ಕಂಡಿರುವ ಪುರಾವೆಗಳಾಗಲಿ, ಬರವಣಿಗೆಯಾಗಲಿ ಅಥವಾ ಯಾವುದೇ ಆಡು ಮಾತಿನಲ್ಲೂ ಅವುಗಳ ಉಲ್ಲೇಖವಿರದ ಕಾರಣ ವಿಕಸನ ಸಿದ್ದಾಂತ ನಿಜವೆಂದು ಹೇಳಲಾಗದು ಎಂದಿದ್ದಾರೆ. ನಮ್ಮ ದೇಶೀ ಪುರಾಣಗಳ ಉಲ್ಲೇಖವನ್ನೂ ಮಾಡುವುದ ಅವರು ಅಲ್ಲಿ ಮರೆಯಲಿಲ್ಲ. ಸಹಸ್ರಾರು ವರ್ಷಗಳ ಇತಿಹಾಸವಿರುವ ನಮ್ಮ ಯಾವುದೇ ಪುರಾಣಗಳಲ್ಲಿಯಾದರು ಇಂತಹ ಜೇವಿಗಳ ಉಲ್ಲೇಖವಿದೆಯೇ, ಯಾವುದಾದರೂ ಕತೆಗಳಲ್ಲಿ ಅಂತಹ ಪಾತ್ರಗಳಿವೆಯೇ ಎಂಬುದನ್ನು ಕೇಳುತ್ತಾರೆ. ಇಂದಿಗೂ ವಿಶ್ವದಲ್ಲಿ ಹಲವಾರು ವಿಜ್ಞಾನಿಗಳು ಅಲ್ಲದೆ ದಿ ಗ್ರೇಟ್ ಐನ್ಸ್ಟೀನ್ ಕೂಡ ಡಾರ್ವಿನ್ ನ ಈ ಸಿದ್ದಾಂತಕ್ಕೆ ವಿರುದ್ದವಾಗಿದ್ದನು ಎಂಬುದನ್ನು ತಿಳಿಸುತ್ತಾರೆ.ಅಲ್ಲದೆ ಡಾರ್ವಿನ್ ನ ಸಿದ್ದಾಂತವನ್ನು ನಿಜವೆಂದು ಪ್ರತಿಪಾದಿಸುವವರಿಗೆ ಹಾಗು ಅದನ್ನು ವಿರೋಧಿಸುವವರಿಗೂ ಒಂದು ಸೂಕ್ತ ವೇದಿಕೆಯನ್ನು ನೀಡುವ ಅಂತರಾಷ್ಟ್ರಿಯ ಸಮ್ಮೇಳನವನ್ನೂ ಆಯೋಜಿಸುವುದಾಗಿ ಹೇಳುತ್ತಾರೆ.

ಸತ್ಯಪಾಲ್ ಸಿಂಗ್ರವರ ಹೇಳಿಕೆಯನ್ನು ಕೇಳಿದ ಕೂಡಲೇ ಕನಿಷ್ಠ ಅಂಕ ಪಡೆಯುವ ವಿದ್ಯಾರ್ಥಿಯನ್ನು ಕಿಚಾಯಿಸುವ ಗುಂಪಿನಂತಾದ ನಮ್ಮ ಮಾಧ್ಯಮಗಳು, ಚಿಂತಕರು ಹತ್ತಾರು ವಿಧಗಳಿಂದ ಅವರನ್ನು ಹೀಯಾಳಿಸತೊಡಗಿದರೆ ವಿನಃ ಕನಿಷ್ಠ ಕುತೂಹಲಕ್ಕಾದರೂ ಆ ಹೇಳಿಕೆಯ ಇನ್ನೊಂದು ಮಗ್ಗಲನ್ನು ನೋಡಲು ಬಯಸಲಿಲ್ಲ. ಅಂದು ರಾಮಸೇತುವನ್ನು ಮಾನವ ನಿರ್ಮಿತವೆಂದು ಹೇಳಿದಾಗ ಹೀಗೆಯೇ ಬೊಬ್ಬೆಯೊಡೆದು ಇಂದು ಅದು ನಸರ್ಗಿಕವಲ್ಲದೆಂಬ ವಾದವನ್ನು ಹರಳೆಣ್ಣೆ ಮುಖವನ್ನು ಮಾಡಿ ಒಪ್ಪಿಕೊಳ್ಳುವವರು.

ಮಾನವನ ಅಷ್ಟೇ ಏಕೆ ಇಡೀ ಜೀವ ಸಂಕುಲದ ವಿಕಸನಕ್ಕೆ ಕಾರಣವಾಗಿದ್ದ ಡಾರ್ವಿನ್ ನ ಸಿದ್ಧಾಂತವನ್ನು ಜಗತ್ತು ಒಪ್ಪಿಕೊಂಡಿತ್ತು. 1809 ರಲ್ಲಿ ಇಂಗ್ಲೆಂಡಿನಲ್ಲಿ ಜನಿಸಿದ ಡಾರ್ವಿನ್ ಚಿಕ್ಕನಿಂದಲೇ ನಿಸರ್ಗದ ಆಗಾಧತೆಯನ್ನು ಕುತೂಹಲದಿಂದ ನೋಡುತ್ತಾ ಬೆಳೆಯುತ್ತಾನೆ. ಓದಿನಲ್ಲೂ ನಿಸರ್ಗ ವಿಜ್ಞಾನ (Natural Science) ವಿಷಯವನ್ನೇ ಆಯ್ದುಕೊಂಡ ಆತ 1831 ರಲ್ಲಿ HMS Beagle ಎಂಬ ಹಡಗಿನಲ್ಲಿ ವಿಶ್ವ ಪರಿಹಟನೆ ಮಾಡುವ ಅವಕಾಶವನ್ನು ಪಡೆದು ಸತತ 5 ವರ್ಷಗಳ ಕಾಲ ತನ್ನ ಸಂಶೋಧನೆಯನ್ನು ನೆಡೆಸುತ್ತಾನೆ. ಆಗ ಆತ ಗಳಿಕೊಂಡಿದ್ದ ಪುರಾವೆಗಳನ್ನು ನಂತರದ ಹಲವಾರು ವರ್ಷಗಳ (ದಶಕಗಳ ) ಕಾಲ ಉಜ್ಜಿ, ಒರೆಹಚ್ಚಿ, ಚರ್ಚಿಸಿ, ಅವಲೋಕಿಸಿ ಕೊನೆಗೆ 1859 ರಲ್ಲಿ 'ದಿ ಒರಿಜಿನ್ ಆಫ್ ಸ್ಪೀಷೀಸ್' ಎಂಬ ಪುಸ್ತಕವನ್ನು ಪ್ರಕಟಗೊಳಿಸುತ್ತಾನೆ. ಈ ಪುಸ್ತಕವೇ ಸಮಗ್ರ ಜೀವಿಗಳ ಹುಟ್ಟು ಹಾಗು ಬೆಳೆವಣಿಗೆಯ ಬಗೆಗಿನ ಜಗತ್ತಿನ ಹಲವಾರು ಪ್ರೆಶ್ನೆಗಳಿಗೆ ಉತ್ತರವನ್ನು ಗಳಿಸಿಕೊಟ್ಟಿತ್ತು.

ಡಾರ್ವಿನ್ ನ ಪ್ರಕಾರ ಮಿಲಿಯನ್ ಗಟ್ಟಲೆ ವರ್ಷಗಳಿಂದ ಜೀವಿಗಳು ದಿನದಿಂದ ದಿನಕ್ಕೆ ವಿಕಸನಹೊಂದುತ್ತ ಬೆಳೆದು ಪ್ರಸ್ತುತ ಕಾಣಸಿಗುವ ರೂಪಕ್ಕೆ ಬಂದು ನಿಂತಿವೆ ಎಂಬುದಾಗಿರುತ್ತದೆ. ಹೀಗೆ ಜೀವಿಗಳು ವಿಕಸನಹೊಂದಲು ಅವುಗಳ ನೈಸರ್ಗಿಕ ಆಯ್ಕೆ (ನ್ಯಾಚುರಲ್ ಸೆಲೆಕ್ಷನ್) ಎಂಬ ಕ್ರಿಯೆ ಬಹಳ ಮಹತ್ವವನ್ನು ಪಡೆಯುತ್ತದೆ ಎನ್ನುತ್ತಾನೆ. ಮಂಗನಿಂದ ಮಾನವನಾದ ಬಗ್ಗೆ, ಜಿರಾಫೆಗಳ ಕತ್ತು ಉದ್ದವಾದ ಬಗ್ಗೆ, ಹಕ್ಕಿಗಳ ಕೊಕ್ಕು ಮಾರ್ಪಾಡಾದ ಬಗ್ಗೆ ಹೀಗೆ ಇನ್ನು ಹಲವಾರು ಉದಾಹರಣೆಗಳ ಮೂಲಕ ಆತ ತನ್ನ ಸಿದ್ಧಾಂತವನ್ನು ಎತ್ತಿ ಹಿಡಿಯುತ್ತಾನೆ. ಜೀವಿಗಳು ತಮ್ಮ ಅನುಕೂಲತೆಗೆ ತಕ್ಕಂತೆ (ಓಡಲು, ಹಾರಲು, ರಕ್ಷಣೆಗಾಗಿ) ತಮ್ಮ ದೇಹದ ಅಂಗಾಂಗಗಳನ್ನು ಬಳಸುವುದರಿಂದ ಅವುಗಳು ಕ್ರಮೇಣವಾಗಿ ಮಾರ್ಪಾಡು ಹೊಂದಿ ಒಂದು ಹೊಸಬಗೆಯ ಜೀವಿಯೇ ಸೃಷ್ಟಿಯಾಗಬಲ್ಲದು ಎಂಬುದಾಗಿರುತ್ತದೆ ಆತನ ವಾದ. ಇದನ್ನೇ ನಾವು ನೀವುಗಳೆಲ್ಲ ಓದಿ, ಕಲಿತು, ಬರೆದು ಬೆಳೆದವರು. ಒಟ್ಟಿನಲ್ಲಿ ಕ್ಯಾಮೆರಾಗಳಿಲ್ಲದ ಕಾಲಕ್ಕೆ ತನ್ನ ತಲೆದೂರಿ ಕತೆಯನ್ನು ಹೇಳುವ ಸಂಜಯನಂತೆ ಡಾರ್ವಿನ್ ನ್ನಾದರೆ, ಹೇಳಿದ್ದನ್ನೆಲ್ಲ ಭಕ್ತಿಯಿಂದ ಕೇಳುವ ದೃತರಾಷ್ಟ್ರನಂತಾದೇವು ನಾವುಗಳೆಲ್ಲ!

ಆದರೆ ಕಳೆದ ಒಂದೂವರೆ ಶತಮಾನಗಳಿಂದಲೂ ಡಾರ್ವಿನ್ನ ಈ ವಿಕಸನವಾದವನ್ನು ಪ್ರೆಶ್ನಿಸುತ್ತಲೇ ಬಂದಿರುವವರೂ ಹಲವರಿದ್ದಾರೆ. ವಿಜ್ಞಾನಿಗಳು, ಚಿಂತಕರು, ಇತಿಹಾಸಕಾರರು ಹೀಗೆ ಇನ್ನು ಹಲವರ ಪ್ರೆಶ್ನೆಗಳೇನು ಅತ್ತ ಕಿವಿಯಿಂದ ಕೇಳಿ ಇತ್ತ ಕಿವಿಯಿಂದ ಬಿಡುವಂತವುಗಳೇನಲ್ಲ. ಅವರ ಹೇಳಿಕೆಗಳೂ ಬಾಲಿಶವಾದವುಗಳೇನಲ್ಲ. ಅಂತಹ ಹಲಕೆಲವು ಪ್ರೆಶ್ನೆ, ವಾದಗಳನ್ನು ಇಲ್ಲಿ ಚರ್ಚಿಸಲಾಗಿದೆ.



೧. ಹಕ್ಕಿಗಳ ಮೋಟು ರೆಕ್ಕೆಗಳು :
ಸಂಶೋಧಕರ ಪ್ರಕಾರ ಲಕ್ಷಾಂತರ ವರ್ಷಗಳ ಹಿಂದೆ ಹಕ್ಕಿಗಳ ರೆಕ್ಕೆಗಳು ಅತ್ತ ಹಾರಲು ಆಗದೆ ಇತ್ತ ಓಡಲೂ ತಡೆಯೊಡ್ಡುತ್ತಿದ್ದ ಅಂಗಗಳಾಗಿದ್ದವು. ವಿಕಸನವಾದಿಗಳ ಪ್ರಕಾರ ಹಕ್ಕಿಗಳು ಈ ಮೋಟುರೆಕ್ಕೆಗಳೆನ್ನೇ ಹಾರಲು ಬಳಸಿ ಬಳಸಿ ಕ್ರಮೇಣವಾಗಿ ಅವುಗಳು ಪ್ರಸ್ತುತ ರೆಕ್ಕೆಗಳ ಸ್ವರೂಪವನ್ನು ಪಡೆದವು, ಹಕ್ಕಿಗಳು ಹಾರಾಡಲು ಶುರುಮಾಡಿದವು ಎನ್ನುವುದಾಗಿದೆ. ಆದರೆ ನೈಸರ್ಗಿಕ ಆಯ್ಕೆಯ (ನ್ಯಾಚುರಲ್ ಸೆಲೆಕ್ಷನ್) ಪ್ರಕಾರ ಮೋಟು ರೆಕ್ಕೆಯ ಹಕ್ಕಿಗಳು ಅಥವಾ ರೆಕ್ಕೆಗಳಿರದ ಹಕ್ಕಿಗಳೇ ಬದುಕುಳಿಯುವ ಸಂಭವ ಹೆಚ್ಚು. ಏಕೆಂದರೆ ರೆಕ್ಕೆ ಚಿಕ್ಕದಾದಷ್ಟು ದೇಹದ ತೂಕ ಕಡಿಮೆಯಾಗಿ, ಓಡುವಾಗ ಬಂದೊದಗುತಿದ್ದ ಅಡಚಣೆಗಳೂ ಕಡಿಮೆಯಾಗುತ್ತಿದ್ದವು.ಅಲ್ಲದೆ ಇಂದಿಗೂ ಹಕ್ಕಿಗಳು ಚಲನೆಗಾಗಿ ಹೆಚ್ಚಾಗಿ ಕಾಲುಗಳನ್ನೇ ಬಳಸಲು ಪ್ರಯತ್ನಿಸುತ್ತಾವೆ ವಿನ್ಹಾ ರೆಕ್ಕೆಗಳನ್ನಲ್ಲ. (https://www.youtube.com/watch?v=JMuzlEQz3uo&t=333s) ಹಾಗಾಗಿ ನೈಸರ್ಗಿಕವಾಗಿ ಹಕ್ಕಿಗಳ ಆಯ್ಕೆ ರೆಕ್ಕೆರಹಿತ ದೇಹದ ರಚನೆಯಾಗಿದ್ದಿತೇ ವಿನ್ಹಾ ರೆಕ್ಕೆಸಹಿತವಾಗಿದ್ದಿರಲಿಲ್ಲ. ಹಾಗಾದರೆ ಹೆಬ್ಬೆರೆಳಿನಂತಿದ್ದ ಮೋಟು ರೆಕ್ಕೆಗಳು ಮುಂದೆ ವಿಕಸನವನ್ನು ಹೊಂದಿದವೇ ಅತವಾ ಪ್ರಸ್ತುತ ಕಾಣಸಿಗುವ ಹಕ್ಕಿಗಳ ಪೂರ್ವಿಕರು ಮೋಟು ರೆಕ್ಕೆಗಳ ಹಕ್ಕಿಗಳಲ್ಲವೇ ಎಂಬುದು ಚರ್ಚೆಯಲ್ಲಿರುವ ವಿಷಯ.


2. ಮೀನುಗಳ ವಿಕಸನ :
ವಿಕಾಸನವಾದಿಗಳ ಪ್ರಕಾರ ನೆಲದ ಮೇಲಿನ ಹಲವಾರು ಜೀವಿಗಳ ಉಗಮ ನೀರಿನ ಒಳಗಿಂದಲೇ ಆಗಿದೆ. ಅರ್ಥಾತ್ ಮೀನುಗಳು ವಿಕಸನಹೊಂದಿ ಕ್ರಮೇಣವಾಗಿ ಭೂಜೀವಿಗಳಾಗಿ ಮಾರ್ಪಾಡಾದವು ಎಂಬುದಾಗಿದೆ. ಆದರೆ ಮೀನಿನ ಕಿವಿರುಗಳು ನೀರಿನಿಂದ ಆಮ್ಲಜನಕವನ್ನು ಹೀರಿಕೊಳ್ಳಲು ಸೂಕ್ತವಾಗಿವೆಯೇ ವಿನ್ಹಾ ಗಾಳಿಯಿಂದಲ್ಲ. ಹಾಗಿರುವಾಗ ನೀರಿನೊಳಗೆ ಹಾಯಾಗಿ ಹೀಜಿಕೊಂಡು ಬದುಕುತ್ತಿದ್ದ ಜೀವಿಗಯೊಂದು ಕಾಲಕಾಲಕ್ಕೂ ನೆಲದ ಮೇಲೆ ಬಂದು ಜೀವನ್ಮರಣ ಹೋರಾಟ ನೆಡೆಸಿ ಪುನ್ಹ ನೀರಿನೊಳಗೆ ಜಿಗಿಯುತ್ತಿದ್ದಿತೇ? ಹೀಗೆ ಮಾಡಿದರಷ್ಟೇ ನೀರಿನೊಳಗಿನ ಮೀನಿನ ಕಿವಿರುಗಳು ಭೂವಾಸಿ ಜೀವಿಗಳ ಶ್ವಾಸಕೋಶಗಳಂತೆ ಮಾರ್ಪಾಡಾಗುವುದು. ಕ್ರಮೇಣವಾಗಿ ನೆಲದ ಮೇಲೆ ವಾಸಿಸಲು ಸೂಕ್ತವಾದ ಜೀವಿಯ ದೇಹವೊಂದು ರಚನೆಯಾಗುವುದು. ಆದರೆ ಜೀವವೇ ಹಾರಿಹೋಗುವಂತಹ ಕ್ರಿಯೆಯಿಂದ ಜಲಚರಗಳು ವಿಕಸನ ಹೊಂದಿದವೇ? ಇದು ನ್ಯಾಚುರಲ್ ಸೆಲೆಕ್ಷನ್ನಿನ ಕೆಟಗರಿಯೊಳಗೆ ಬರುತ್ತದೆಯೇ ಎಂಬುದು ಮತ್ತೊಂದು ಪ್ರೆಶ್ನೆ?



3. ದೈತ್ಯ ಡೈನೋಸಾರ್ಗಳ ವಿಕಸನ :
ವಿಕಾಸನವಾದ ಪ್ರಕಾರ ಉದ್ದಕತ್ತಿನ ದೈತ್ಯ ಸಸ್ಯಾಹಾರಿ ಡೈನೋಸಾರ್ಗಳು (Cetiosaurus ) ಮರಗಳ ಮೇಲಿನ ಹೂವು ಹಣ್ಣುಗಳನ್ನು ತಿನ್ನಲು ವಿಕಸನ ಹೊಂದಿ ಮಾರ್ಪಾಡಾದ ಜೀವಿಗಳು ಎಂಬುದಾಗಿದೆ. ಇದೆ ತತ್ವ ಜಿರಾಫೆಗಳಿಗೂ ಅನ್ವಹಿಸುತ್ತದೆ. ಆದರೆ ಕೆಲಸಮಯದ ಇತ್ತೀಚಿಗೆ ದೊರೆತ ಪಳೆಯುಳಿಕೆಗಳ ಪ್ರಕಾರ ಅಂತಹ ಡೈನೋಸಾರ್ಗಳ ಕುತ್ತಿಗೆಯ ಕಶೇರುಖಂಡವು (Vertebrae) ಸಮತಲವಾಗಿ (Horizontal) ಚಲಿಸಬಲ್ಲ ರಚನೆಯನ್ನು ಹೊಂದಿದ್ದೀತೆ ವಿನಹ ಲಂಬರೇಖೆಯ (vertical) ಪತದಲ್ಲಿ ಚಲಿಸುವ ಆಕಾರವಾಗಿರಲಿಲ್ಲ. ಅಂದರೆ ಅಂತಹ ಡೈನೋಸಾರ್ಗಳು ನೆಲದ ಮೇಲಿನ ಹುಲ್ಲು ಹಣ್ಣುಗಳನ್ನು ತಿನಲ್ಲು ಮಾತ್ರ ಸೀಮಿತವಾಗಿದ್ದವು ಎಂಬುದಾಗಿದೆ. ಹೀಗಿರುವಾಗ ಅಂತಹ ಉದ್ದಕತ್ತಿನಿಂದ ಅವುಗಳಿಗೆ ಉಪಯೋಗಕ್ಕಿಂತ ತೊಂದರೆಯೇ ಹೆಚ್ಚಾಗಿದೆ ಎಂಬುದಾಗಿದ್ದಿತು. ಹಾಗಾದರೆ ಕ್ರಮೇಣವಾಗಿ ಉದ್ದಕತ್ತುಗಳು ನಶಿಸಬೇಕಿದ್ದಿತು. ಆದರೆ ವಿಕಾಸನವಾದದ ಪ್ರಕಾರ ಹಾಗಾಗುವುದಿಲ್ಲ!


4. ಮಾನವನೊಬ್ಬನನ್ನು ಬಿಟ್ಟು ಇತರ ಯಾವುದೇ ಜೀವಿಗಳ ಮಧ್ಯಂತರ ಪಳೆಯುಕೆಗಳು ಸಿಗದಿರುವುದು.

'ಮಂಗನಿಂದ ಮಾನವ' ಎಂಬ ವಿಕಾಸನವಾದಕ್ಕೆ ಸಾಕಷ್ಟು ಪುರಾವೆಗಳನ್ನು ವಿಕಾಸನವಾದಿಗಳು ನೀಡುತ್ತಾರೆ. ಆದರೆ ಇತರ ಪ್ರಾಣಿಗಳ ವಿಷಯಕ್ಕೆ ಬಂದಾಗ ಈ ಪುರಾವೆಗಳ ಕೊರತೆ ಯಥೇಚ್ಛವಾಗಿ ಕಾಣುತ್ತದೆ. ಇಂತಹ ಇತರ ಜೀವಿಗಳ ಮಧ್ಯಂತರ ಪಳೆಯುಳಿಕೆಗಳು ಸಿಗದೇ ವಿಕಸನವಾದವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರೆ ಹಲವು ವಿಜ್ಞಾನಿಗಳು. ಸತ್ಯಪಾಲ್ ಸಿಂಗ್ರವರ ಹೇಳಿಕೆಯೂ ಒಂತಿಷ್ಟು ಇದೆ ವಾದಕ್ಕೆ ಪೂರಕವಾಗಿರುತ್ತದೆ. ಡಾರ್ವಿನ್ ಕೂಡ ಇಂತಹ ಒಂದು ಮಧ್ಯಂತರ ಜೀವಿಯ ಪಳೆಯುಳಿಕಗಾಗಿ ಕಾದರೂ ಕೊನೆಯವರೆಗೂ ಯಾವುದೊಂದು ಅಂತಹ ಪಳೆಯುಳಿಕೆಗಳು ಸಿಗದಿದ್ದದ್ದು ಮಾತ್ರ ಸೋಜಿಗದ ಸಂಗತಿ.


5. ಸಾಧ್ಯವಿರದ DNA ಮಾರ್ಪಾಡು :
ಸಂಶೋಧನೆಗಳ ಪ್ರಕಾರ ಯಾವುದೇ ಜೀವಿಯ DNA ವಿಕಸನ ಹೊಂದಲು ಅಥವಾ ಮಾರ್ಪಾಡಾಗಲು ಸಾಧ್ಯವಿರುವುದಿಲ್ಲ, ಹಾಗೇನಾದರೂ DNA ಮಾರ್ಪಾಡು ಹೊಂದಲು ಪ್ರಯತ್ನಿಸಿದರೂ ಅದರ ಆ ಮಾರ್ಪಾಡುಗೊಳ್ಳುವಿಕೆ ಕೂಡಲೇ ನಿಲ್ಲುತ್ತದೆ ಅಥವಾ ವ್ಯತಿರಿಕ್ತವಾಗಿರುತ್ತದೆ. ಒಂದು ಪಕ್ಷ ವಿಕಾಸನವಾದದ ಪ್ರಕಾರ ಜೀವಿಯೊಂದು ಮಾರ್ಪಾಡು ಹೊಂದಿ ಹೊಸ ಜೀವಿಯೊಂದು ಹುಟ್ಟಿಕೊಂಡರೂ ಆ ಹೊಸ ಜೀವಿಯ DNA ತನ್ನ ಹಳೆಯ ಜೀವಿಗೆ ಹೋಲುವುದಿಲ್ಲ. ಹಾಗಾದರೆ ಹೊಸ ದೇಹದ ರಚನೆ, ಆಕಾರ ಎಲ್ಲವುಗಳಿಗೂ ಕಟ್ಟಿಕೊಂಡಿರುವ ಹೊಸ DNA ವಿಕಸನ ಹೊಂದಿದಾದರೂ ಹೇಗೆ?!

ಇಂತಹ ಹಲವಾರು ಪ್ರೆಶ್ನೆಗಳನ್ನು ಹಲವಾರು ಜನರು ಕಾಲಕಾಲಕ್ಕೆ ಕೇಳಿಕೊಂಡೆ ಬಂದಿದ್ದಾರೆ. ಮಂಗನಿನ ಮಾನವನಾದರೆ ಮಂಗಗಳು ಇನ್ನೂ ಏಕೆ ಕಾಣಸಿಗುತ್ತವೆ? ವಿಕಾಸನವಾದದ ನೂರೈವತ್ತು ವರ್ಷಗಳ ನಂತರವೂ ಅ ವಾದಕ್ಕೆ ಪೂರಕವಾದ ಪಳೆಯುಳಿಕೆಗಳು ಸಿಗಲಿಲ್ಲವೇಕೆ? ಮಾನವ ವಿಕಸನ ಹೊಂದುತ್ತಾ ಬಂದಿದ್ದರೆ ಇಂದಿಗೂ ಆತನ ಆಕಾರವೇಕೆ ಹಾಗೆಯೆ ಉಳಿದಿದೆ? ಇತಿಹಾಸದ ಗ್ರಂಥಗಳಲ್ಲಿ, ಪುರಾಣಗಳಲ್ಲಿ (ಹನುಮಂತನಂತಹ ಪಾತ್ರಗಳನ್ನು ಅಲ್ಲಗೆಳೆಯಲಾಗುವುದಿಲ್ಲ) ಅಲ್ಲದೆ ಸಾವಿರಾರು ವರ್ಷಗಳ ವೈಜ್ಞಾನಿಕ ಇತಿಹಾಸವಿರುವ ಭಾರತೀಯ ಯಾವುದೇ ಪುಸ್ತಕಗಳಲ್ಲೂ ಏಕೆ ಇಂತಹ ಜೀವಿಗಳ ಅಥವ ತತ್ವಗಳ ವಿಚಾರವಿಲ್ಲ? ಇಂತಹ ನೂರಾರು ಪ್ರೆಶ್ನೆಗಳು ಸಾಮಾನ್ಯರಾದ ನಮ್ಮಲ್ಲೇ ಮೂಡುವಾಗ ಜೀವನಪೂರ್ತಿ ಇಂತಹ ಒಂದೆರೆಡು ವಿಷಯಗಳ ಬಗ್ಗೆಯೇ ಅಧ್ಯಯನ ಮಾಡುವ ವಿಜ್ಞಾನಿಗಳಲ್ಲಿ ಅದೆಷ್ಟು ಮೂಡಿರುವುದಿಲ್ಲ?! ಇಂತಹ ಒಂದು ಚರ್ಚೆಯನ್ನೇ ಸತ್ಯಪಾಲ್ ಸಿಂಗ್ ರವರು ಆಶಿಸಿದ್ದು. ಅಲ್ಲದೆ ವಿಕಸನವಾದವನ್ನು ಒಪ್ಪಿಕೊಳ್ಳದ ಸತ್ಯಪಾಲ್ ಸಿಂಗ್ ಏನು ಮೂರನೇ ತರಗತಿ ಪಾಸುಮಾಡಿದ ಮಂತ್ರಿಗಳಂತಲ್ಲ. ‘President's Police Medal’ ಪದಕವನ್ನುಪಡೆದ, ಎರಡೆರಡು ಪುಸ್ತಕಗಳನ್ನೂ ಬರೆದು ಹೆಸರು ಮಾಡಿರುವ ದಕ್ಷ IPS ಅಧಿಕಾರಿ. ಅವರ ಹೇಳಿಕೆಯನ್ನು 'ಮೂರ್ಖವಾದ' ಎನ್ನುವ ಹಲವರು ಇಂತಹ ಅದೆಷ್ಟೋ ಪಶ್ಚಿಮದ ವಾದಗಳು ಕೊನೆಗೊಂದು ದಿನ ಟೊಳ್ಳುವಾದವಾದವನ್ನು ಕಣ್ಣ ಮುಂದೆಯೇ ಕಂಡಿದ್ದಾರೆ. ಅಲ್ಲಿ ಮಾನವರು ಹಸಿದ ಮಾಂಸವನ್ನು ಬೇಯಿಸಿ ತಿನ್ನಲು ಶುರುವಿಟ್ಟ ಕಾಲದಲ್ಲಿ ನಮ್ಮಲ್ಲಿ ಅಂತರಿಕ್ಷದ ಬಗೆಗಿನ ಸಂಶೋಧನೆಗಳನ್ನು ಜರುಗಿಸುತಿದ್ದ ವಿಜ್ಞಾನಿಗಳೇ ಇಂತಹ ಒಂದು ವಿಕಸನವಾದವನ್ನು ಹೇಳದಿದ್ದಾಗ ಒಂದಿನಿತಾರು ನಾವುಗಳು ಈ ವಿಷಯದ ಬಗ್ಗೆ ಚರ್ಚಿಸಬೇಕಿದೆ ಅಲ್ಲವೇ? ಎಷ್ಟಿದ್ದರೂ ವಿಜ್ಞಾನವೆಂಬುದು ಹರಿಯುವ ನೀರಲ್ಲವೇ?

ಸುಪ್ರೀ ಕೋರ್ಟಿನ ನ್ಯಾಯಾಧೀಶರನ್ನೇ ನಾವುಗಳು ಪ್ರೆಶ್ನಿಸಬಹುದಾದರೆ ಡಾರ್ವಿನ್ ನ ವಿಕಸನವಾದವನ್ನು ಪ್ರೆಶ್ನಿಸುವುದರಲ್ಲಿ ತಪ್ಪೇನಿದೆ ಹೇಳಿ.

Friday, January 19, 2018

ಅವರು ವಿಜ್ಞಾನಕ್ಕೆ ಅಂಬೆಗಾಲಿಡುವ ಕಾಲಕ್ಕೆ ಇವನು ಶನಿಗ್ರಹದ ಉಪಗ್ರಹಗಳ ಮೇಲೆ ತನ್ನ ದೃಷ್ಟಿಯನ್ನು ಇಟ್ಟಿದ್ದನು!!

ಸೌರಮಂಡಲ, ಗ್ರಹಗಳ ಚಲನೆ, ಅವುಗಳ ಅವುಗಳ ನಡುವಿನ ಅಂತರ, ಚಂದಿರನ ಕಾಂತಿ, ಬೆಳಕಿನ ವೇಗ, ಭೂಮಿಯ ಸುತ್ತಳತೆ, ಗುರುತ್ವಾಕರ್ಷಣೆ ಇತ್ಯಾದಿ ಇತ್ಯಾದಿಗಳ ಸಂಶೋಧಕರನ್ನು ಹೆಸರಿಸುತ್ತಾ ಹೋದಂತೆ ಕಲಿಯುಗದ ವಿಜ್ಞಾನದ ಪುಸ್ತಕಗಳನಷ್ಟೇ ಓದುತ್ತಾ, ಕಲಿಯುತ್ತಾ ಬೆಳೆದ ನಮಗೆ ಬೆಳ್ಳನೆಯ ಕೂದಲಿನ ಬಿಳಿಯ ವಿಜ್ಞಾನಿಗಳೇ ಕಣ್ಣ ಮುಂದೆ ಬರುತ್ತಾರೆಯೇ ವಿನಃ ಆ ಬೆಳ್ಳನೆಯ ಕೂದಲಿನ ಆಯಸ್ಸಿನ ಸಹಸ್ರಾರು ವರ್ಷಗಳ ಹಿಂದೆಯೇ ಇಂತಹ ನೂರಾರು ಸಂಶೋಧನೆಗಳನ್ನೂ,ಸಿದ್ದಾಂತಗಳನ್ನೂ ಕಂಡುಹಿಡಿದು ಸರ್ವವಲ್ಲಭ ಪಂಡಿತರಾಗಿದ್ದ ನಮ್ಮ ದೇಶೀ ಮಹಾನುಭಾವರು ಅರಿವಿಗೆ ಬಾರರು. ತಿಳಿಸುವವರೇ ತಿಳಿಯದ ಮೇಲೆ ಇನ್ನು ಕಲಿಯುವವರು ಹೇಗೆ ಕಲಿವರು? ಇಂದು ಜಯಂತಿ, ಆಚರಣೆ, ಕಸ ಕಡ್ಡಿ ಎನ್ನುತ್ತಾ ಅತ್ತ ಆರಕ್ಕೂ ಏರದ ಇತ್ತ ಮೂರಕ್ಕೂ ಇಳಿಯದ ವಿಚಾರಗಳ ಬಗೆಯುವಿಕೆಯನ್ನೇ ತಿರುಚಿರುವ ಇತಿಹಾಸಕ್ಕೆ ಸಲ್ಲಿಸಬಹುದಾದ ನ್ಯಾಯವೆಂದುಕೊಂಡು ಬೊಬ್ಬೆಯೊಡೆಯುವವರಿಗೆ ಇತಿಹಾಸದ ಕಾಲಘಟ್ಟದ ಇಂತಹ ಮಹಾನ್ ತಿರುಚುವಿಕೆಗಳು ಕಣ್ಣಿಗೆ ಕಾಣವೇ? ಜಗತ್ತಿನ ಅತಿದೊಡ್ಡ ವಿಶ್ವವಿದ್ಯಾಲಯವೆನಿಸಿಕೊಂಡಿದ್ದ ನಳಂದ ವಿಶ್ವವಿದ್ಯಾಲಯವನ್ನು ಹಾಳುಗೆಡವಿ ಅಲ್ಲಿದ್ದ ನೂರಾರು ವಿಶ್ವಪ್ರಸಿದ್ಧ ಸಂಶೋಧನಾ ಗ್ರಂಥಗಳನ್ನೂ, ಖಗೋಳ ವೀಕ್ಷಣಾಲವನ್ನೂ ಸುಟ್ಟು ಕರಕಲಾಗುವಂತೆ ಮಾಡಿದ ರಾಜರುಗಳಾಗಲಿ, ಏರೋಪ್ಲೈನ್ನಿಂದಿಡಿದು ಬೆಳಕಿನ ವೇಗದ ಬಗೆಗೂ ರಚಿಸಿದ ದೇಶಿಯ ಸಿದ್ಧಾಂತಗಳನ್ನು ಮೂಲೆಗುಂಪಾಗಿಸಿ ಪರಕೀಯರೇ ಪರಮಜಾಣರು ಎಂಬಂತೆ ಬಿಂಬಿಸಿದ ಇತಿಹಾಸಕಾರರಾಗಲಿ, ಸುಮಾರು ಎರಡೂವರೆ ಶತಮಾನಗಳಿಗೂ ಹೆಚ್ಚಿನ ಕಾಲ ಭಾರತವನ್ನು ದೋಚಿ, ಹಸಿವೆಯಲ್ಲೂ ಒಂತಿಷ್ಟೂ ಆಹಾರವನ್ನು ಕೊಡಲೊಪ್ಪದೆ ನಲ್ವತ್ತು ಲಕ್ಷ ಭಾರತೀಯರ ಮರಣ ಮೃದಂಗಕ್ಕೆ ಇಂಬುಕೊಟ (1943 ರ ಬೆಂಗಾಲದ ಕ್ಷಾಮ) ಬಿಳಿಯರ ವಿಕೃತ ಕಾರ್ಯಗಳಾಗಲಿ ಇವುಗಳನ್ನೆಲ್ಲ ಪ್ರಶ್ನಿಸುವವರ್ಯಾರು? ಇಂತಹ ವಿಷಯಗಳಿಗೂ ನಾವುಗಳು ಬೀದಿಗೆ ಬಂದು ಹೋರಾಟ ಮಾಡಬಾರದೇಕೆ? ನ್ಯಾಯ ಅಥವಾ ಪರಿಹಾರವನ್ನು ಕೊಡುವಂತೆ ಅಂತಾರಾಷ್ಟ್ರೀಯ ನ್ಯಾಯಾಲಯವನ್ನು ಕೇಳಬಾರದೇಕೆ?

ಅದೇನೇ ಇರಲಿ ಸದ್ಯಕಂತೂ ಆಗದ ಕಾರ್ಯಗಳ ಬಗ್ಗೆ ಚಿಂತಿಸುವ ಬದಲು ಮೂಲ ವಿಚಾರದ ಬಗೆಗೆ ಗಮನವನ್ನು ಹರಿಸೋಣ. ಸಹಸ್ರ ವರ್ಷಗಳ ಮೊದಲೇ ಮೆದುಳಿನ ಶಸ್ತ್ರಚಿಕೆತ್ಸೆಯನ್ನು ಮಾಡಬಲ್ಲ ಕ್ಷಮತೆಯನ್ನು ಹೊಂದಿದ್ದ ಭಾರತೀಯರು ನಂತರಬಂದ ಸಹಸ್ರಾರು ವರ್ಷಗಳವರೆಗೂ ಇನ್ನೂ ಏನೆಲ್ಲಾ ಸಂಶೋಧನೆ, ಆವಿಷ್ಕಾರಗಳನ್ನು ಮಾಡಿರಬಹುದು ಎಂದು ಯೋಚಿಸುತ್ತಾ ಹೋದಂತೆ ನಮ್ಮಲ್ಲಿ ಕುತೂಹಲ ಬೆಟ್ಟದಷ್ಟಾಗುವುದಂತೂ ಸುಳ್ಳಲ್ಲ. ಅಂತಹ ಅದ್ಭುತ ಹೆಮ್ಮರವನ್ನು ಬಡಿದು, ಕಡಿದು ಕೊನೆಗೆ ಕಟ್ಟಿಗೆಯ ಕೋಲಿನಂತೆ ಮಾಡಿ ದಂಡೆತ್ತಿ ಬಂಡ ಮೊಂಡ ಜನಗಳ ಮುಂದೆ ಹಾವಾಡಿಗರು ಎಂದೆನಿಸಿಕೊಂಡೆವೆಂದರೆ ಅದು ನಮ್ಮೆಲ್ಲರ ವಿಪರ್ಯಾಸ. ಅದು ದೇಶವನ್ನಾಳುವ ರಾಜ ಮಾರನೇ ದಿನ ಕಸಗುಡಿಸುವ ಕೂಲಿಯವನಾದಂತೆ! ಸಿಹಿಯ ಕಲ್ಪನೆಯಿದ್ದರೂ ಅನುಭವಿಸಲು ನಾಲಿಗೆಯಿಲ್ಲದಂತೆ ಅಂದು ನಮ್ಮ ಇತಿಹಾಸದ ದಿನಗಳು ಮಾರ್ಪಾಡಾದವು!

ಆದರೆ ಇಂದಿಗೂ ಸಹ ಅದೇ ಇತಿಹಾಸವನ್ನು ಕೆದಕಿದರೆ, ಭಾರತೀಯ ಪಂಡಿತರ ಬದುಕುಳಿದ ಕೆಲವೇ ಕೆಲವು ಬರಹಗಳನ್ನು ಗಮನಿಸಿದರೆ ವಿಶ್ವದ ಏಳು ಅದ್ಭುತಗಳಿಗೆ ಇಂತಹ ನೂರಾರು ವಿಷಯಗಳು, ಪಂಡಿತರು ಸೇರಬಹುದೇನೋ?!

ಆರ್ಯಭಟ. ಈ ಹೆಸರನ್ನು ಕೇಳದಿರುವವರು ಇರಬಹುದೇ? ಅದೇ ರೀ, ನಮ್ಮ ದೇಶ ಮೊದಲು ಹಾರಿಸಿದ ಉಪಗ್ರಹದ ಹೆಸರು, 1975 ರಲ್ಲಿ ಎನ್ನುವವರನ್ನು ಕೇಳಬಹುದು. ಅಷ್ಟೇ ಅಲ್ಲ ರೀ, ಸೊನ್ನೆಯನ್ನು ಕಂಡುಹಿಡಿದವನೂ ಅವನೇ ಅಂತೇ?! ಎಂದು ಮತ್ತೊಬ್ಬ ಹೇಳಿದರೆ ಇತ್ತಕಡೆ ಗೊಳ್ಳೆಂದು ನಗುವವರು ಹಲವರು. ಸೊನ್ನೆ ಎಂದರೆ ಅಷ್ಟು ತಿರಸ್ಕಾರ ಇರುವಂತವರು. ಅಲ್ಲಿಗೆ ಆರ್ಯಭಟನ ಬಗೆಗಿನ ಸಾಧನೆಯಷ್ಟನ್ನೂ ಕಲಿತು ಬೀಗಿದಂತೆಯೇ ಸರಿ. ಸುಮಾರು ಹದಿನೈದು ಶತಮಾನಗಳ ಮೊದಲೇ ಶನಿಗ್ರಹದ ಸುತ್ತ ಉಪಗ್ರಹಗಳು ಸುತ್ತುತಿವೆ ಎಂಬುದನ್ನು ಖಚಿತವಾಗಿ ಹೇಳಬಲ್ಲ, ಭೂಮಿಯ ವಿಸ್ತೀರ್ಣವನ್ನು ಅಷ್ಟೇ ಏಕೆ ಯಾವುದೇ ವೃತ್ತದ/ಗೋಲದ ಪರಿಧಿಯನ್ನು ಕಂಡುಹಿಯಲು 'ಪೈ' ಯ ನಿಖರ ಮೌಲ್ಯವನ್ನು ಗೊತ್ತುಮಾಡಿದ, ಸಂಖ್ಯಾಶಾಸ್ತ್ರಕ್ಕೆ ಶೂನ್ಯವನ್ನು ಪರಿಚಯಿಸಿದ (ಶೂನ್ಯದ ಕಲ್ಪನೆ ಮೊದಲೇ ಇದ್ದರೂ ಅದನ್ನು ಅಂಕೆಗಳ ಮೂಲಕ ಬಳಸಲು ಮೊದಲು ಮಾಡಿದ್ದು ಮಾತ್ರ ಆರ್ಯಭಟ), ವರ್ಷದ ದಿನಗಳನ್ನು ನಿಖರವಾಗಿ ಹೇಳಿದ್ದ, ಗುರುತ್ವಾಕರ್ಷಣೆಯ ಬಗೆಗೆ ಬರೆದಿದ್ದ(!), ಸೂರ್ಯನ ಸುತ್ತ ಗ್ರಹಗಳ ಚಲನೆಯನ್ನು ವಿವರಿಸಿದ್ದ, ಸೂರ್ಯ ಹಾಗು ಇತರ ಗ್ರಹಗಳ ನಡುವಿನ ಅಂತರವನ್ನು ಕಂಡುಹಿಡಿದಿದ್ದ, ಭೂಮಿ ತನ್ನ ಅಕ್ಷದ ಮೇಲೆಯೇ ಸುತ್ತುತ್ತದೆ ಎಂದೇಳಿ ಆಗಿನ ಕಾಲಕ್ಕೆ ಕೇಳಿದವರನ್ನು ದಂಗು ಬಡಿಸುತ್ತಿದ್ದ ಒಬ್ಬನಿದ್ದನೆಂದರೆ ಅದು ಆರ್ಯಭಟ. ಆತನ ಜೀವಿತಾವಧಿಯ ಸಾವಿರಾರು ವರ್ಷಗಳ ನಂತರ ಕಂಡುಹಿಡಿದೋ ಅಥವಾ ಕಾಪಿ ಹೊಡೆದೋ ಇದು ನನ್ನದು ಎಂದು ವಿಶ್ವವನ್ನೇ ಗೆದ್ದವರಂತೆ ಆಡುವವರು ಆರ್ಯಭಟನ ಹೆಸರನ್ನು ಕೇಳಿಯೂ ಕೇಳದವರಂತೆ ಇದ್ದರೆನ್ನಬಹುದು!


ಕ್ರಿಸ್ತಶಕ ಸುಮಾರು 476 ರಲ್ಲಿ ಜನಿಸಿರಬಹುದಾದ ಈತನ ಜನ್ಮ ಸ್ಥಳ ಈಗಿನ ಬಿಹಾರ ರಾಜ್ಯದ ಪಟ್ನಾ ಎಂದು ಅಂದಾಜಿಸಲಾಗಿದೆ. ತನ್ನ 24 ನೇ ವಯಸ್ಸಿಗೇ 'ಆರ್ಯಭಟೀಯ' ಎಂಬ ಖಗೋಳ ಆಧ್ಯಯನ ಗ್ರಂಥವನ್ನು ಈತ ಬರೆಯುತ್ತಾನೆ. ಸುಮಾರು121 ಗದ್ಯಮಾಲೆಗಳಿರುವ ಈ ಮಹಾನ್ ಪುಸ್ತಕ ಕಾಲವನ್ನು ಅಳೆಯುವ ಪ್ರಮಾಣಗಳು (ಕಲ್ಪ, ಮನ್ವಂತರ, ಯುಗ), ಕ್ಷೇತ್ರಗಣಿತ, ಅಂಕಗಣಿತ ಹಾಗು ರೇಖಾಗಣಿತದ ಪ್ರಗತಿ (Progression), ಗ್ರಹಗಳ ಗತಿ ಹಾಗು ಸ್ಥಾನಪಲ್ಲಟ, ಗ್ರಹಣ, ಸಮಭಾಜಕ ವೃತ್ತ, ಭೂಮಿಯ ಆಕಾರ ಹೀಗೆ ಖಗೋಳಗಣಿತದ ವಿಸ್ತೃತ ರೂಪವನ್ನು ಪ್ರಸ್ತುತ ಪಡಿಸುತ್ತಾ ಸಾಗುತ್ತದೆ. ಅಷ್ಟೇ ಅಲ್ಲದೆ ತ್ರಿಕೋನದ ವಿಸ್ತೀರ್ಣವನ್ನು ಕಂಡುಹಿಡಿಯುವ ಸೂತ್ರವನ್ನು, ಸೈನ್ ವೇವ್ (!) ಗಳ ಬಗ್ಗೆ, ಭೂಮಿ ತನ್ನ ಅಕ್ಷದ ಸುತ್ತ ಸುತ್ತುವಿಕೆ, ಗ್ರಹಗಳ ಅಂಡಾಕಾರದ (ಎಲಿಪ್ಸ್) ರಚನೆ ಹೀಗೆ ಕೇಳಿದವನು ನಂಬಲಸಾಧ್ಯವಾದಂತಹ ಸಂಶೋಧನೆಗಳನ್ನು ಆತ ಅಂದಿನ ಕಾಲಕ್ಕ ರಚಿಸಿ, ಸಾಧಿಸಿ ತೋರಿಸಿದ್ದ.

ಯಂತ್ರಗಳ ಬಗೆಗೆ ಅತೀವ ಆಸಕ್ತಿ ಹಾಗು ದೂರದೃಷ್ಟಿಯನ್ನೊಂದಿದ್ದ ಆರ್ಯಭಟ ಅವುಗಳ ಮಹತ್ವವನ್ನೂ ಆಗಿನ ಕಾಲಕ್ಕೇ ಬಹುಮಟ್ಟಿಗೆ ಅರಿತಿರುತ್ತಾನೆ. ಇಲ್ಲವಾದರೆ ಅದೆಷ್ಟೋ ಜ್ಯೋತಿರ್ವರ್ಷಗಳ ದೂರದ ಗ್ರಹಗಳಾಗಲಿ, ಅವುಗಳ ಉಪಗ್ರಹಗಳ ಬೆಗೆಗಾಗಲಿ ಕನಸು ಬಿದ್ದವನಂತೆ ಕರಾರುವಕ್ಕಾಗಿ ಹೇಗೆ ಹೇಳುವುದು? (ನಳಂದ ವಿಶ್ವವಿದ್ಯಾಲಯದಲ್ಲಿದ್ದ ಖಗೋಳ ವೀಕ್ಷಣಾಲಯಗಳನ್ನೂ ಇಲ್ಲಿ ಸ್ಮರಿಸಬಹುದು.) ಆದರೆ ವೀಕ್ಷಣಾಲಯವೊಂದು ಇದ್ದ ಮಾತ್ರಕ್ಕೆ, ದೂರದ ಗ್ರಹಗಳನ್ನು ನೋಡಿದ ಮಾತ್ರಕ್ಕೆ ಅವುಗಳ ಅಂತರ, ಗತಿ, ಆಕಾರ ಇವುಗಳನ್ನೆಲ್ಲ 'ಕರಾರುವಕ್ಕಾಗಿ' ಅದೂ ಸಹ ಇಂದಿನ ಆಧುನಿಕ ಯಂತ್ರಗಳಿಗೆ ಸರಿಸಮಾನವಾಗುವಂತೆ ಹೇಳಲು ಸಾಧ್ಯವಾದದ್ದು ಹೇಗೆ ಎಂಬುದು ಮಾತ್ರ ಕುತೂಹಲದ ಸಂಗತಿ. ಆರ್ಯಭಟನ ಅಂತಹ ಕೆಲವು ಸಂಶೋಧನೆಗಳನ್ನು ಇತ್ತೀಚಿನ ಅಂಕಿ ಅಂಶಗಳೊಟ್ಟಿಗೆ ತಾಳೆ ಹಾಕಿ ನೋಡಿದರೆ ಈ ಕುತೂಹಲ ದ್ವಿಗುಣವಾಗುವುದಂತೂ ಸುಳ್ಳಲ್ಲ!



ಆರ್ಯಭಟನ  ಅಂಕಿಅಂಶಗಳು
ಪ್ರಸ್ತುತ ಅಂಕಿಅಂಶಗಳು
ಭೂಮಿಯ ಸುತ್ತಳತೆ
39,968.05 KMs
40,075.01 KMs
ವಾಯುಮಂಡಲದ  ಎತ್ತರ
80 KMs
80 KMs*
ಸೂರ್ಯನಿಂದ ಭುದ ಗ್ರಹಕ್ಕಿರುವ ದೂರ
0.375 AU*
0.387 AU
ಸೂರ್ಯನಿಂದ ಶುಕ್ರ
0.725 AU
0.723 AU
ಸೂರ್ಯನಿಂದ  ಮಂಗಳ 
1.538 AU
1.523 AU
ಸೂರ್ಯನಿಂದ  ಗುರು 
4.16 AU
4.20 AU
ಸೂರ್ಯನಿಂದ  ಶನಿ
9.41 AU
9.54 AU
ವರ್ಷದ ಒಟ್ಟು ದಿನಗಳು
365.25868 Days
365.25636 Days
ಚಂದಿರ ಭೂಮಿಯ ಸುತ್ತ ಸುತ್ತಲು ತೆಗೆಯುವ ಸಮಯ
27.32167 Days
27.32166 Days

* ಪ್ರಸ್ತುತ ಅಂಕಿ ಅಂಶಗಳ ಪ್ರಕಾರ ವಾಯುಮಂಡಲದ ಎತ್ತರ 80 ಕಿಲೋಮೀಟರ್ಗಿಂತಲೂ ಹೆಚ್ಚಿದೆ ಆದರೆ ಭಾಗಶಃ ವಾಯುಮಂಡಲದ ಎತ್ತರ ಭೂಮಿಯ ಮೇಲ್ಮೈಯ 80 ಕಿಲೋಮಿಟರ್ನೊಳಗೆಯೇ ಬರುತ್ತದೆ. ಉಳಿದಂತೆ ಬರುವುದು ಅದರ ಅಳಿದುಳಿದ ಅಂಶ ಮಾತ್ರ.

*AU (Astronomical Unit) : ಭೂಮಿ ಮತ್ತು ಸೂರ್ಯನ ನಡುವಿರುವ ಸರಾಸರಿ ದೂರ - 150 ಮಿಲಿಯನ್ ಕಿಲೋಮೀಟರ್ ಗಳು.



ಇಂದು ಕಾಪರ್ನಿಕಸ್, ನ್ಯೂಟನ್, ಜೋಸೆಫ್ ಪೋರಿಯರ್, ಕ್ರಿಸ್ಟಿಯನ್ ಯುಗೇನ್ ಎಂಬ ಹಲವು ಆಧುನಿಕ ವಿಜ್ಞಾನಿಗಳ ಹೆಸರುಗಳನ್ನೇ ಅರೆಬರೆಯಾಗಿ ತೊದಲು-ತೊದಲು ಬಾಯಿಪಾಠ ಮಾಡಿ ಕಲಿಯುವ ಪೀಳಿಗೆಗೆ ಇವರೆಲ್ಲರ ಹೆಸರುಗಳನ್ನೂ ಸಮೀಕರಿಸಿ ಆರ್ಯಭಟನೆಂಬೋದು ಹೆಸರನ್ನು ಆ ಸ್ಥಾನದಲ್ಲಿ ಇರಿಸಿ ತೋರಿಸಬೇಕಿದೆ. ಇತಿಹಾಸದ ಪುಟಗಳಲ್ಲಿ ಇಂತಹ ಇನ್ನೂ ಹಲವು ಮಹಾನುಭಾವರಿಗೂ ಅವರವರ ಮಹಾನತೆಗನುಗುಣವಾಗಿ ಸ್ಥಾನ ದೊರಕಿಸಬೇಕಿದೆ. ಆದರೆ ದಶಕಗಳಿಂದ ಬೆಳೆಸಿಕೊಂಡು ಬಂದಿರುವ ಚಾಳಿಗೆ ಲಗಾಮು ಹಾಕುವವರ್ಯಾರು? ವೇದ ಉಪನಿಷತ್ತುಗಳು ಭಾರತದ ಬಹುಮುಖ್ಯ ಹಳೆಯ ಗ್ರಂಥಗಳು ಎಂದಷ್ಟೇ ಅಲ್ಲದೆ ಅವುಗಳು ವೈಚಾರಿಕತೆ ಹಾಗು ವೈಜ್ಞಾನಿಕತೆಯ ಅಕ್ಷಯ ಪಾತ್ರೆಗಳಂತೆ ಎಂಬುದನ್ನು 'ಅರಿತು' ತಿಳಿಸುವವರ್ಯಾರು? ಇಂದು ಅಂತರಿಕ್ಷ, ಖಗೋಳಶಾಸ್ತ್ರವೆಂದರೆ ದೊಡ್ಡ ದೊಡ್ಡ ಕಟ್ಟಡಗಳ ಒಳಗೆ ಬಿಳಿಯ ಬಟ್ಟೆಗಳನ್ನು ಧರಿಸಿಕೊಂಡು ರಾಕೆಟ್, ಸ್ಯಾಟಲೈಟ್, ಸ್ಪೇಸ್ ಸ್ಟೇಷನ್ ಎಂಬ ಆಧುನಿಕ ತಂತ್ರಜ್ಞಾನಗಳೊಟ್ಟಿಗೆ ಅತ್ತಿಂದಿತ್ತ ಇತ್ತಿಂದತ್ತ ಓಡಾಡುವ ವಿಜ್ಞಾನಿಗಳ ಚಮತ್ಕಾರಗಳು ಎಂಬಂತೆ ಅರಿತಿರುವ ನಮ್ಮಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ದೇಶದ ಸುಂದರ ನಿರ್ಮಲ ಪರಿಸರದಲ್ಲಿ, ಹಕ್ಕಿ ಪಕ್ಷಿಗಳ ಮಧುರ ಸ್ವರಗಳ ನಡುವೆಯೇ ಆಧುನಿಕ ಜಗತ್ತು 'ಮಾರ್ವೆಲಸ್' ಎಂಬುವ ಅದೆಷ್ಟೋ ಸಂಶೋಧನೆಗಳನ್ನು ಮಾಡಿ ಜಗತ್ತನೇ ನಿಬ್ಬೆರಗಾಗಿಸಿದ ಆರ್ಯಭಟನೆಂಬ ಹೆಸರು ಮರೆಯಾಗತೊಡಗಿದೆ. ಹಿರಿಯರ ಜ್ಞಾನದಿಂದಷ್ಟೇ ಅಲ್ಲದೆ ಕಿರಿಯರ ಪಠ್ಯ ಪುಸ್ತಕಗಳಿಂದಲೂ! ಸಂಪೂರ್ಣವಾಗಿ ಮರೆಯಾಗುವ ಮೊದಲು ಅದರ ಉಳಿವಿಕೆ ಹಾಗು ಬೆಳೆಯುವಿಕೆಯ ಬಗ್ಗೆ ಜಾಗೃತರಾಗಬೇಕಿದೆ. ದೇಶೀ ಸಾಧನೆಗಳ ಇಂತಹ ಹಲವು ಸಾಧಕರನ್ನು ಪರಿಚಯಿಸಿಕೊಳ್ಳಬೇಕಿದೆ.

ಮುಂದಿನ ಅಂಕಣದಲ್ಲಿ ಇಂತಹ ಮಗದೊಂದು ದೇಶೀ ವಿಜ್ಞಾನಿ ಹಾಗು ಅವನ ಸಂಶೋದನೆಗಳೊಟ್ಟಿಗೆ ಭೇಟಿಯಾಗೋಣ.

Monday, January 1, 2018

ಮನೋರೂಪ...

'ಅಲ್ಲ ಸಾರ್….' ಎಂದು ತನ್ನ ಕೊನೆಯ ವಾದವನ್ನು ಮಂಡಿಸಲು ಶುರುಮಾಡಿದ ರಾಹುಲ್ ಕೂಡಲೇ ಮಾತೇ ನಿಂತವನಂತೆ ಸುಮ್ಮನಾಗುತ್ತಾನೆ. ವಾರಾಂತ್ಯದ ನೇರ ಪ್ರಸಾರದ ಚರ್ಚಾಕೂಟಕ್ಕೆ ಸ್ಟುಡಿಯೋಗೆ ಆಗಮಿಸಿದ್ದ ಆತ ಅರ್ಧಘಂಟೆಯ ಕಾರ್ಯಕ್ರಮದಲ್ಲಿ ಅದಾಗಲೇ ತನ್ನ ಮುಂದಿದ್ದ ಸಿನಿಮಾರಂಗದ, ಸಮಾಜಸೇವೆಯ, ಸಾಹಿತ್ಯಲೋಕದ ಅತಿರಥ ಮಹಾರಥಿಗಳ ಬೆವರನ್ನು ಇಳಿಸಿದ್ದ! ಅವರುಗಳ ಒಂದೊಂದು ವಾದಕ್ಕೂ ಈತ ತನ್ನೆಲ್ಲ ಸಾಮಾನ್ಯಜ್ಞಾನವನ್ನು, ಒಂತಿಷ್ಟು ದುಬಾರಿ ಇಂಗ್ಲಿಷ್ ಪದಗಳನ್ನು ಬಳಸಿ ತದ್ವಿರುದ್ದವಾಗಿಯೇ ವಾದವನ್ನು ಮಂಡಿಸುತಿದ್ದ. ಏಕೋ ತನ್ನ ಕೊನೆಯ ವಾದವನ್ನು ಮಂಡಿಸುವಾಗ ಆತನ ಮಾತುಗಳು ಇದ್ದಕ್ಕಿದಂತೆ ನಿಂತಿತು. ಮುಂದೊಂದು ಪದವನ್ನೂ ಹೇಳುವ ಮುನ್ನ ಮನಸ್ಸೇಕೋ ತಪ್ಪಿತಸ್ಥ ಭಾವವನ್ನು ತಳೆಯಿತು. ಒಮ್ಮೆಲೇ ತನ್ನ ಕಾಲೇಜಿನ ಕಾರ್ಯಕ್ರಮವೊಂದರ ನೆನಪು ಆತನ ಕಣ್ಮುಂದೆ ಬಂದುಬಿಡುತ್ತದೆ.

****

ಕಿಕ್ಕಿರಿದು ತುಂಬಿದ್ದ ಆಡಿಟೋರಿಯಂನಲ್ಲಿ ಅಂದು ಸಂಗೀತ ಹಾಗು ಚಿತ್ರಕಲೆಯ ಬಗೆಗಿನ ಕಾರ್ಯಕ್ರಮಗಳಿದ್ದವು. ಕಾರ್ಯಕ್ರಮಗಳು ಯಾವುದಿದ್ದರೂ ಕ್ಲಾಸ್ಸಿಗೆ ಬಂಕಾಕುವ ಕಾರ್ಯಕ್ರಮವಂತೂ ಬಹಳಷ್ಟು ಮಂದಿ ವಿದ್ಯಾರ್ಥಿಗಳಿಗೆ ಪರಿಪಾಠವಾಗಿದ್ದಿತು. ಆದರೆ ಹೀಗೆಯೇ ಬಂಕಾಕಿ ಕ್ಯಾಂಪಸ್ನ ಕ್ಯಾಂಟೀನಿನಲ್ಲಿ ಹಳಸಲು ಹವಣಿಸುತ್ತಿದ್ದ ಬಜ್ಜಿ ಹಾಗು ನೀರಿಗೆ ಹಾಲನು ಬೆರೆಸಿದ್ದ ಟೀಯನ್ನು ಕುಡಿಯುವ ಕಾಯಕದಲ್ಲಿ ಮಗ್ನರಾಗಿದ್ದ ಗುಂಪೊಂದನ್ನು ಕಾಲೇಜಿನ ಶಿಕ್ಷಕರ ಇಲಾಖೆ ರೆಡ್ ಹ್ಯಾಂಡಿನಲ್ಲಿ ಹಿಡಿದಾಗಿನಿಂದಲೂ ಬಂಕ್ ಮಾಡುವ ವಿದ್ಯಾರ್ಥಿ ಮಹಾಶಯರುಗಳೆಲ್ಲ ಹೀಗೆಯೇ ಆಡಿಟೋರಿಯಂನಲ್ಲಿ ಅವಿತು ಕೂರುವುದುಂಟು. ಆದರೆ ಅಂದಿನ ಕಿಕ್ಕಿರಿದ ಜನಸ್ತೋಮದಲ್ಲಿ ವಿದ್ಯಾರ್ಥಿಗಳಲ್ಲದೆ ಶಿಕ್ಷಕರೂ ಬಂದಿದ್ದದ್ದು ವಿದ್ಯಾರ್ಥಿಗಳಿಗೆ ಒಂದು ಬಗೆಯ ನೈತಿಕ ಸ್ಥೈರ್ಯದೊಟ್ಟಿಗೆ ಬಂಡ ಆತ್ಮವಿಶ್ವಾಸವನ್ನೂ ಮೂಡಿಸಿತ್ತು. ಆದುದರಿಂದಲೋ ಏನೋ ಗಾಯಕರ ಗಾಯನಕ್ಕೆ 'ವಾ, ವ್ಹಾ..' ಎನ್ನುತಲೂ, ಚಿತ್ರಕಾರರ ಚಿತ್ರಗಳಿಗೆ ಎದ್ದುನಿಂತು ರಾಜಗಾಂಭೀರ್ಯದ ಚಪ್ಪಾಳೆಯನ್ನು ತಟ್ಟುತ್ತ ಶಿಕ್ಷಕರ 'ಸಿಂಪತಿ'ಯನ್ನು ಗಿಟ್ಟಿಸಿಕೊಳ್ಳಲು ಹವಣಿಸುತ್ತಿದ್ದರು.


ಕಾರ್ಯಕ್ರಮದ ಕೊನೆಯಲ್ಲಿ ಸ್ಟೇಜಿನ ಮೇಲೆ ಬಂದ ಕೊನೆಯ ಸೆಮಿಸ್ಟರ್ನ ರೂಪ ಎಲ್ಲರಿಗೂ ವಂದಿಸುತ್ತಾ ಆಕೆ ತಾನು ಪ್ರಸ್ತುತಪಡಿಸಲೊಗುತ್ತಿರುವ ಕಾರ್ಯಕ್ರಮದ ಬಗೆಗೆ ವಿವರಿಸತೊಡಗುತ್ತಾಳೆ. ಕಾರ್ಯಕ್ರಮದ ಶುರುವಿನಲ್ಲಿ ಕಲಾರಸಿಕರಂತೆ ನಟಿಸುತ್ತಾ, ನಡುವಿನಲ್ಲಿ ಹುಡುಗಿಯರ ಗುಂಪಿನೆಡೆಗೆ ಚೇಷ್ಟೆಯನ್ನು ಮಾಡುತ್ತಾ, ಕೊನೆ ಕೊನೆಗೆ ಮುಂದಿನ ಕಾರ್ಯಕ್ರಮದ ರಸಸೊಗಸ್ಸನ್ನೇ ಬದಿಗಿರಿಸಿ ತಮ್ಮ ತನುಮನವನ್ನೆಲ್ಲ ಗಲಭೆಯ ಲೋಕವೊಂದರಲ್ಲಿ ಮುಳುಗಿಸಿ ಕಾಲಹರಣ ಮಾಡುತ್ತಿದ್ದ ವಿದ್ಯಾರ್ಥಿಗಳ ಗುಂಪು ಹುಡುಗಿಯೊಬ್ಬಳ ಮಧುರವಾಣಿಗೆ ಕೊಂಚ ಎಚ್ಚೆತ್ತಿದಂತೆ ಕಂಡಿತು. ಆಕೆ ಮುಂದುವರೆಸಿ ತಾನು ಸ್ಟೇಜಿನ ಮೇಲೆ ಮೊದಲು ಮೂರು ಬಗೆಯ ಚಿತ್ರಪಟಗಳನ್ನೂ ತದಾನಂತರ ಮೂರು ಬಗೆಯ ಶಾಸ್ತ್ರೀಯ ಸಂಗೀತವನ್ನೂ ಕೇಳಿಸುವುದಾಗಿ ಕೊನೆಯಲ್ಲಿ ಅವುಗಳ ರಚನಕಾರು ಯಾರೆಂದು ನೆರೆದಿರುವವರು ತಿಳಿಸಬೇಕಾಗಿ ಹೇಳುತ್ತಾಳೆ. ಅಲ್ಲಿಯವರೆಗೂ ಗುಜುಗುಡುತ್ತಿದ್ದ ಗುಂಪು ತರಗತಿಯಂತೆ ಇಲ್ಲಿಯೂ ಪ್ರೆಶ್ನೋತ್ತರದ ಪ್ರಸಂಗ ಎದುರಾಗಬಹುದೇನೋ ಎಂದು ಕೊಂಚ ಚಕಿತಗೊಂಡಿತು. ಎಲ್ಲಿ ರೂಪ ತಮ್ಮ ಬಳಿ ಬಂದು ಅದು ಯಾವ ರಾಗ, ಯಾವ ತಾಳ, ಗಾಯಕರು ಯಾರು, ಚಿತ್ರದ ಸಂದೇಶವೇನು ಎಂಬುದನ್ನು ಕೇಳುತ್ತಾಳೋ ಎಂದು ದಿಗಿಲುಬಿದ್ದರು. ನೆಲದೊಳಗೆ ಹುದುಗಿಕೊಂಡ ಇಲಿಯಂತಾದ ತಲೆಗಳನ್ನು ನೋಡಿಯೇನೋ ಎಂಬಂತೆ ನಗುತ್ತ ಆಕೆ ತಾನು ಯಾರನ್ನೂ ಬೊಟ್ಟು ಮಾಡಿ ಉತ್ತರವನ್ನು ಕೇಳುವುದಿಲ್ಲ, ಗೊತ್ತಿರುವವರು ನಿಂತೋ ಅಥವಾ ಕುಳಿತಲ್ಲಿಯೆ ಉತ್ತರವನ್ನು ಹೇಳಬಹುದು ಎಂದಾಗಲೇ ಗುಂಪಿಗೆ ಕೊಂಚ ಜೀವಬಂದತಾದುದು. ಮೊದಲು ಮೂರು ಹಿಂದೂಸ್ತಾನಿ ರಾಗಗಳನ್ನು ಹಾಕಿ ಗಾಯಕರನ್ನು ಗುರುತಿಸಿ ಎಂದಾಗ ಶಿಕ್ಷಕರ ಗುಂಪಿನಿಂದ ಒಂದೆರೆಡು ಸರಿ ಉತ್ತರಗಳು ಬಂದದ್ದು ಬಿಟ್ಟರೆ ಸಾವಿರ ಸಂಖ್ಯೆಯ ಆ ಮಹಾ ಗುಂಪಿನಲ್ಲಿ ಬೇರ್ಯಾವ ಉತ್ತರಗಳೂ ಮೂಡಲಿಲ್ಲ. ಮೂಡಿದರೂ ಅದು ಹಳೆ ಸಿನಿಮಾ ಹಾಡುಗಳನ್ನೇ ಶಾಸ್ತ್ರೀಯ ಸಂಗೀತವೆಂದುಕೊಂಡು ಆಶಾ ಬೋಸ್ಲೆ, ಲತಾ ಮಂಗೇಶ್ಕರ್ ಎಂಬ ತಿಳಿದವನು ಕಕ್ಕಾಬಿಕ್ಕಿಯಾಗುವ ಉತ್ತರಗಳಾಗಿದ್ದವೇ ವಿನ್ಹಾ ಅದು ಕೇಸರ್ ಬಾಯಿ ಕೇರ್ಕರ್ ನಿಂದ ಒಳಗೊಂದು ಗಿರಿಜಾ ದೇವಿ ಎಂಬುದಾಗಿರಲಿಲ್ಲ! ಇನ್ನು ಚಿತ್ರಪಟದ ಪ್ರೆಶ್ನೆಯಲ್ಲಿಯೂ ಅದೇ ಉಡಾಫೆಯ ಉತ್ತರಗಳು. ರವಿವರ್ಮನ ಚಿತ್ರಪಟವೊಂದನ್ನು ಯಾವನೋ ಹೋಲಿಕೆಯಿಲ್ಲದ ವ್ಯಕ್ತಿಯೊಟ್ಟಿಗೆ ತುಲನೆ ಮಾಡಿ ಇದು ಆತನ ಚಿತ್ರವೆಂದು ಹೇಳಿ ಗೊಳ್ ಎಂದು ನಕ್ಕಿದ ಗುಂಪನ್ನು ಕಂಡು ಸಿಟ್ಟು, ದುಃಖ, ಹತಾಶೆಗಳು ಒಟ್ಟೊಟ್ಟಿಗೆ ರೂಪಳಲ್ಲಿ ಮೂಡಿದವು. ಕೂಡಲೇ ಸ್ಟೇಜಿನ ಮೇಲೆ ಬಂದ ಆಕೆ 'ನಿಮಗೆಲ್ಲ ಕಲೆ, ಚಿತ್ರಕಲೆ ಎಂಬುದರ ಗುಲಗಂಜಿಯಷ್ಟು ತಿಳುವಳಿಕೆ ಅಥವಾ ಆಸಕ್ತಿ ಇರದಿರುವುದು ಮೊದಲೇ ತಿಳಿದಿದ್ದರೆ ಖಂಡಿತಾವಾಗಿಯೂ ನಾನು ಈ ಕಾರ್ಯಕ್ರಮವನ್ನು ನೆಡೆಸುತ್ತಿರಲಿಲ್ಲ. ನಮ್ಮ ದೇಶೀ ಕಲೆಗಳ ಮುಂದಿನ ಭವಿಷ್ಯವನ್ನು ನಾನಿಂದು ಕಣ್ಣಾರೆ ನೋಡಿದೆ. ಅಲ್ಲದೆ ಮತ್ತೊಂದು ವಿಷಯ, ಇದು ಎಲ್ಲರಿಗೂ ಉಪಯುಕ್ತವಾಗಬಹುದು ಕೇಳಿ. ನೀವು ಜನಸ್ತೋಮ ಒಂದಕ್ಕೆ ಯಾವುದಾದರೊಂದು ವಿಷಯವನ್ನು ಪ್ರಸ್ತುತಪಡಿಸುವಾಗ ನಿಮ್ಮ ಮುಂದಿರುವ ಆ ಗುಂಪು ನಿಮ್ಮ ವಿಚಾರಧಾರೆಯನ್ನು ಒಂದಿನಿತು ತಿಳಿಯಬಲ್ಲದಾಗಿರಬೇಕು, ನಿಮ್ಮ ಯೋಚನಾಲಹರಿಗೆ ಕೊಂಚವಾದರೂ ಸರಿಹೊಂದುವಂತಿರಬೇಕು. ಇಲ್ಲವೇ ನೀವುಗಳು ಆ ತಳಮಟ್ಟಕ್ಕೆ ತಲುಪಿ ನಿಮ್ಮ ವಿಷಯವನ್ನುಅವುಗಳಿಗೆ ತಿಳಿಸಬೇಕು. ಇಲ್ಲವಾದರೆ ಅದು ನಾನೊಬ್ಬನೇ ಬಲ್ಲವನು ಎಂಬೊಂದು ಕೆಟ್ಟ ಅಹಂನನ್ನು ಹುಟ್ಟುಹಾಕುವುದಲ್ಲದೆ ಪ್ರೇಕ್ಷಕರನ್ನೂ ಅಂಧಕಾರದಲ್ಲಿಯೇ ಇರಿಸುತ್ತದೆ' ಎಂದು ಹೇಳಿ ಸ್ಟೇಜಿನಿಂದ ಇಳಿದು ಹೊರನೆಡಯುತ್ತಾಳೆ. ಮೂರು ಘಂಟೆಯ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಮಹಾಮೌನವೊಂದು ಆಡಿಟೋರಿಯಂನನ್ನು ಆವರಿಸುತ್ತದೆ.

****

'ಹಲೋ.. ರಾಹುಲ್' ಎಂದ ಪಕ್ಕದ ಪಾನಾಲಿಸ್ಟ್ ನ ಸದ್ದಿಗೆ ವಿಚಲಿತನಾದ ರಾಹುಲ್ ಒಂದು ಕ್ಷಣ ಏನೇಳಬೇಕೆಂದು ಆರಿಯದಾಗುತ್ತಾನೆ. ತನ್ನ ಮುಂದಿದ್ದ ಗಾಜಿನ ಲೋಟದಿಂದ ಒಂದೆರೆಡು ಗುಟುಕು ನೀರನ್ನು ಕುಡಿದು, 'ಆಸೀನರಿರುವ ಎಲ್ಲ ಗಣ್ಯರಲ್ಲೂ ನಾನು ಕ್ಷಮೆಯಾಚಿಸಬಯಸುತ್ತೇನೆ. ನಾನು ಇಲ್ಲಿಯವರೆಗೂ ಹೇಳಿದ್ದನ್ನೆಲ್ಲ ಶುದ್ಧ ಅಪ್ರಭುದ್ದ ವಾದವೆಂದು ತಿಳಿದು ನನ್ನನ್ನು ಕ್ಷಮಿಸಬೇಕು. ಸೋಲಿಸುವ ಭರದಲ್ಲಿ, ಕೇಳುಗರಿಗೆ ರಂಜಿಸುವ ದೃಷ್ಟಿಯಿಂದಲೂ ಏನೋ ಸರಿ ತಪ್ಪು ಎಂದೆಣಿಸದೆ ವಾದವನ್ನು ಮಂಡಿಸಿದೆ. ನನ್ನ ಆತ್ಮಸಾಕ್ಷಿ ಏನೇಳಬಯಸುತ್ತಿದೆ ಎಂದು ನಾನು ಯೋಚಿಸಲೂ ಹೋಗಲಿಲ್ಲ. ನಾನು ಹೀಗೆ ಮಾಡದಿದ್ದರೆ ನಾನೊಬ್ಬನೇ ಬಲ್ಲವನು ಎಂಬೊಂದು ಕೆಟ್ಟ ಅಹಂನನ್ನು ಹುಟ್ಟುಹಾಕುವುದಲ್ಲದೆ ಪ್ರೇಕ್ಷಕರನ್ನೂ ಅಂಧಕಾರದಲ್ಲಿಯೇ ಇರಿಸುತ್ತದೆ ನನ್ನೀ ವಾದ. ತೋರ್ಪಡಿಕೆಗಷ್ಟೇ ಮಾಡುವ ಕಾರ್ಯದಿಂದ ನಮಗೆ ಮಜವೆನಿಸಬಹುದು ಆದರೆ ನೆಮ್ಮದಿ ಇರದ ಕಾರ್ಯ ಅದಾಗುತ್ತದೆ' ಎಂದು ಹೇಳಿ ಯಾರೊಬ್ಬರ ಮರುತ್ತರವನ್ನೂ ಕೇಳಿಸಿಕೊಳ್ಳದೆ ಅಲ್ಲಿಂದ ಎದ್ದು ಹೊರಡುತ್ತಾನೆ!!

ವಾರವೊಂದು ಸರಿಯಿತು. ಕಾಲೇಜು ಕ್ಯಾಂಪಸ್ಸಿನ ಹುಲ್ಲುಹಾಸಿನ ಮೇಲೆ ಕುಳಿತಿದ್ದ ಗುಂಪು ಅತ್ತ ಕಾಲೇಜಿನ ಒಳಗೂ ಹೊರಗು ಹೋಗುತ್ತಿದ್ದ ಹುಡುಗಿಯರ ಬಗ್ಗೆ ಚರ್ಚಿಸುತ್ತಾ ತನ್ನೊಳಗೆ ತಾನು ಮಗ್ನವಾಗಿದ್ದಿತು. ಗುಂಪಿನಲ್ಲಿ ಒಬ್ಬನಾಗಿದ್ದರೂ ಉಳಿದ ಸದಸ್ಯರಂತೆ ವ್ಯರ್ಥ ಕಾಲಹರಣ ಮಾಡದೇ ತೇಜಸ್ವಿಯವರ ಬುಕ್ಕೊಂದನ್ನು ಹಿಡಿದು ಓದುತ್ತಾ ಅಂಗಾತ ಮಲಗಿದ್ದ ರಾಹುಲ್. ಸ್ವಲ್ಪ ಸಮಯದ ನಂತರ ದೂರದಿಂದ ಬರುತ್ತಿದ್ದ ತರಗತಿಯ ಹುಡುಗೀಯರ ಗುಂಪನ್ನು ಕಂಡು ಒಬ್ಬರ ಮೇಲೊಬ್ಬರು ಬಿದ್ದಂತೆ ಹುಡುಗರ ಗುಂಪು ಅವರಲ್ಲಿಗೆ ಧಾವಿಸಿ ಮಾತಿಗಿಳಿಯತೊಡಗಿತು. ನೆನ್ನೆಯ ಕ್ಲಾಸಿನ ನೋಟ್ ಪುಸ್ತಕವೋ, ಜೀವಮಾನದಲ್ಲೇ ಕೇಳರಿಯದ ಗಣಿತದ ಸೂತ್ರವೊಂದರ ಅರ್ಥವೋ, ಲ್ಯಾಬ್ ರಿಪೋರ್ಟ್ ನ ಕಾಪಿಯೂ ಹೀಗೆ ಒಂದೊಂದೇ ಇಲ್ಲದ ಸಲ್ಲದ ನೆಪವನ್ನು ಒಡ್ಡಿ ಅಂದವಾಗಿ ಕಾಣುತ್ತಿದ್ದ ಗುಂಪಿನ ಹುಡುಗಿಯರನ್ನು ಸುತ್ತುವರೆಯಿತು ಪಡೆ. ರೂಪ ತರಗತಿಯಲ್ಲಿಯೇ ಮೊದಲು ಬರುವವಳಾಗಿದ್ದರೂ, ಯಾವೊಂದು ಕ್ಲಾಸ್ಸನ್ನೂ ಇಲ್ಲಿಯವರೆಗೆ ತಪ್ಪಿಸಿರಳಾದರೂ ಯಾರೊಬ್ಬರೂ ಗುಂಪಿನಲ್ಲಿದ್ದ ಆಕೆಯನ್ನು 'ಪೀಡಿಸ'ತೊಡಗದಿದ್ದರಿಂದ ಆಕೆ ರಾಹುಲ್ ಪುಸ್ತಕವನ್ನು ಓದುತ್ತಿದ್ದಲ್ಲಿಗೆ ಬಂದು ಕೂರುತ್ತಾಳೆ. ತೇಜಸ್ವಿಯರ ಕರ್ವಾಲೋ ಪುಸ್ತಕವನ್ನು ನೋಡಿ ಸಂತೋಷಗೊಂಡು, ಪುಸ್ತಕದ ಬಗ್ಗೆ, ಬರಹಗಾರರ ಬಗ್ಗೆ ತನ್ನ ಒಂದೆರೆಡು ಅಭಿಪ್ರಾಯವನ್ನೂ ಹೇಳುತ್ತಾಳೆ. ಟೀವಿ ಕಾರ್ಯಕ್ರಮಗಳಲ್ಲಿ ಬರುತ್ತಿದ್ದರಿಂದ ರಾಹುಲ್ ಕಾಲೇಜಿನ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಚಿರಪರಿಚಿತ. ಅದರಿಂದಲೋ ಏನೋ ಒಂದು ಬಗೆಯ ಸಂಕೋಚ ರೂಪಾಳ ಮಾತುಗಳಲ್ಲಿ ಕಾಣುತ್ತಿದ್ದವು. ಇಬ್ಬರು ಒಂದೇ ತರಗತಿಯವರಾದರೂ ಪಠ್ಯವಿಷಯಗಳ ವಿನ್ಹಾ ಬೇರೇನೂ ಮಾತಾಡಿರುವುದು ತೀರಾ ಅಪೂರ್ವ.

'ಮೊನ್ನೆ ನಿಮ್ಮ ಕಾರ್ಯಕ್ರಮ ನೋಡಿದೆ..ಅಷ್ಟ್ ಚೆನ್ನಾಗಿ ವಾದ ಮಂಡಿಸ್ತಾ ಇದ್ದೋರು ಅಚಾನಕ್ ಆಗಿ ಏಕೆ ಎದ್ದು ನೆಡೆದಿರಿ?' ಎಂದು ಕೇಳುತ್ತಾಳೆ.

ಕೆಲಕಾಲ ಸುಮ್ಮನಿದ್ದ ರಾಹುಲ್ 'ಅದಕ್ಕೆ ಕಾರಣ ನೀವೇ!' ಎನ್ನುತ್ತಾನೆ. ಪುಸ್ತಕದ ಮೇಲಿಟ್ಟಿದ್ದ ನೋಟವನ್ನು ಮಾತ್ರ ಒಂದಿನಿತೂ ಕದಲಿಸುವುದಿಲ್ಲ.

'ನಾನೇ?!' ಎಂದ ರೂಪಳ ಪ್ರೆಶ್ನೆಯಲ್ಲಿ ಕೂತುಹಲ ಹಾಗು ಆಶ್ಚರ್ಯ ಒಮ್ಮೆಲೇ ಮೂಡಿದವು. ಜೊತೆಗೆ ಎದೆಬಡಿತವೂ ಮುಗಿಲು ಮುಟ್ಟುವಂತೆ ಸದ್ದು ಮಾಡುತ್ತಿದ್ದದ್ದು ಆಕೆಗೆ ತಿಳಿಯಲೇ ಇಲ್ಲ.

'ನಿಮ್ಮ ಕಳೆದ ವಾರದ ಪೇಂಟಿಂಗ್ ಅಂಡ್ ಮ್ಯೂಸಿಕ್ ಪ್ರೋಗ್ರಾಮ್.. ಇಟ್ ಟಾಟ್ ಮಿ ಎ ಲಾಟ್' ಎನ್ನುತ್ತಾ ರಾಹುಲ್ ತನ್ನ ಓದನ್ನು ಮುಂದುವರೆಸುತ್ತಾನೆ.

ಕೊಂಚ ಸಮಯದ ನಂತರ 'ಕಲೆ ಎಂಬುದು ಸರ್ವರಿಗೂ ಏಕವಾಗಿರುವ ಹೊಂಗಿರಣ. ಆದರೆ ಎಲ್ಲರೂ ಒಮ್ಮೆಯೇ ಎಲ್ಲವನ್ನು ಕಲಿತು ಪಂಡಿತರಾಗಲಂತೂ ಸಾಧ್ಯವಿಲ್ಲ. ಹುಟ್ಟು, ಕುಟುಂಬ, ಸಮಾಜ, ಪರಿಸ್ಥಿತಿ ಹೀಗೆ ಹಲವಾರು ಅಂಶಗಳು ಒಂದು ಮನಸ್ಸಿನ ವಿಕಸದಲ್ಲಿ ಮುಖ್ಯಪಾತ್ರವನ್ನು ವಹಿಸುತ್ತವೆ. ನೀವು ರವಿವರ್ಮರ ಚಿತ್ರಪಟವೊಂದನ್ನು ತಂದು ಇದನ್ನು ಗುರುತಿಸಿ ಎಂದರೆ ಸಾಮನ್ಯರಾದ ನಮಗೆ ಹೇಗೆ ತಿಳಿಯಬೇಕು. ಜೀವಮಾನದಲ್ಲೇ ಕೇಳರಿಯದ ಕೇಸರ್ ಬಾಯಿ ಕೇರ್ಕರ್ ಅವರ ಧ್ವನಿಯನ್ನು ಪ್ರಸ್ತುತ ಪಡಿಸಿ ರಾಗವನ್ನು ಹೇಳಿ ಎಂದರೆ ದಿನವಿಡಿ ವಾಟ್ಸ್ ಆಪ್, ಫೇಸ್ಬುಕ್ ಎನ್ನುತ್ತಾ ಅಲೆದಾಡುವ ಯುವ ಸಮಾಜಕ್ಕೆ ರಾಗಗಳ ಸೂತ್ರಗಳು ಹೇಗೆ ಅರಿಯಬೇಕು? Infact, ಇಂದಿನ ಬಹುಪಾಲು ಚರ್ಚೆಗಳು, ಭಾಷಣಗಳು ಹೀಗೆಯೇ ಇರುತ್ತವೆ. ಎಲ್ಲೋ ಒಂದಿಷ್ಟು ಸೊ ಕಾಲ್ಡ್ ಬುದ್ದಿಜೀವಿಗಳು ದೇಶದ ರಾಜಧಾನಿಯ ಐಷಾರಾಮಿ ಹೋಟೆಲೊಂದರಲ್ಲಿ ಬಡವರ ಬಗ್ಗೆ, ಹಸಿದವರ ಬಗ್ಗೆ, ವಿಧವೆಯರ ಬಗ್ಗೆ, ದೇವಧಾಸಿಯರ ಬಗ್ಗೆ ಅಥವಾ ಸೈನ್ಯ ಹಾಗು ಸೈನಿಕರ ಬಗ್ಗೆ ಧುಬಾರಿ ಇಂಗ್ಲಿಷ್ ಪದಗಳಲ್ಲೇ ಮಾತನಾಡಿ ಮರೆಯಾಗುತ್ತಾರೆ. ಆ ಕಾರ್ಯಕ್ರಮವು ನಿಜವಾಗಿಯೂ ಹಸಿದ ಬಡವರಿಗಾಗಿ , ದೇವಧಾಸಿಯಾರಾದ ವಿಧವೆಯರಿಗಾಗಿ, ದೇಶಕ್ಕಾಗಿ ಪ್ರಾಣ ತೆತ್ತುವ ಸೈನಿಕರಿಗಾಗಿ ಆಗಿದ್ದರೆ ಕಾರ್ಯಕ್ರಮದ ಸಂದೇಶವನ್ನು ಅಂತವರಿಗೆ ತಲುಪಿಸುವ ಬಗೆಗೆ ಮೊದಲು ಯೋಚಿಸುತ್ತಿದ್ದರು. ಅವರ ಆ ಧುಬಾರಿ ಚರ್ಚೆಗಳು ಸಾಮನ್ಯರಾದವರಿಗೆ ಹೇಗೆ ತಿಳಿಯಬೇಕು? ಹತ್ತಿಪ್ಪತ್ತು ಜನ ಪ್ಯಾಶನ್ ಷೋ ಗಳ ಉಡುಪುಗಳನ್ನು ಧರಿಸಿ, ವಾದ ಮಂಡಿಸಿ, ಚರ್ಚಿಸಿ, ಕೊನೆಗೆ ಮನೆಗೆ ವಾಪಸ್ಸಾಗುವುದಾದರೆ ಏನು ಬಂತು? ಬದಲಾವಣೆ ಮೊದಲು ಆಡುವವರಲ್ಲಿ ಬಂದರಷ್ಟೇ ಅದು ನಂತರ ಕೇಳುವವರಲ್ಲಿ, ನೋಡುವವರಲ್ಲಿ ಮಿಳಿತಗೊಳ್ಳುತ್ತದೆ' ಎನ್ನುತ್ತಾನೆ.

ಅನತಿ ದೂರದಲ್ಲಿ ತನ್ನ ಗೆಳೆಯರ ಗುಂಪು ಸುಂದರ ಹುಡುಗಿಯರನ್ನು ನಿಮ್ಮ ಬಿಡಲೊಲ್ಲೆವು ಎಂಬಂತೆ ಸುತ್ತುವರೆದು ಮಾತಿಗಿಳಿದಿರುತ್ತಾರೆ.ರಾಹುಲ್ ನ ಉತ್ತರವನ್ನು ಅಥೈಸಿಕೊಂಡ ರೂಪ ಮತ್ತೇನು ಹೆಚ್ಚಾಗಿ ಆ ವಿಷಯದ ಬಗ್ಗೆ ಚರ್ಚಿಸುವುದಿಲ್ಲ.

ರಾಹುಲ್ ಮುಂದುವರೆಸಿ 'ಆ ದಿನ ಚಿತ್ರಕಲೆಯಲ್ಲಿ ಎರಡು ರವಿವರ್ಮನ ಚಿತ್ರಗಳಿದ್ದವು. ಮತ್ತೊಂದು ಆ ಮಟ್ಟಿನಲ್ಲದ್ದಾದರೂ ಇಷ್ಟವಾಗಿದ್ದಿತು. ನಿಮ್ಮಲ್ಲಿ ಆ ಚಿತ್ರಪಟ ಇದೆಯೇ, ಒಮ್ಮೆ ನೋಡಬೇಕು' ಎಂದು ಕೇಳುತ್ತಾನೆ. ಇದೆ ಎಂಬಂತೆ ರೂಪ ತಲೆಯನ್ನು ಆಡಿಸುತ್ತಾಳೆ.

'ಏನು.. ನಿಮ್ಮನ್ನು ಯಾವ ಹುಡುಗನೂ ಪ್ರೆಶ್ನೆ ಕೇಳೋದಿಲ್ವ' ಎಂದ ನಗುತ್ತಾ ಕೇಳಿದ ರಾಹುಲ್ನ ಪ್ರೆಶ್ನೆಗೆ ಏನು ಉತ್ತರಿಸಬೇಕೆಂದು ರೂಪಾಳಿಗೆ ತಿಳಿಯದಾಗುತ್ತದೆ. ಅಲ್ಲಿ ನೆಡೆಯುತ್ತಿದದ್ದು ಕೇವಲ ಸುಂದರತೆಯ ವ್ಯಾಮೋಹದ ಸಂಭಾಷಣೆ ಎಂಬುದು ಇಬ್ಬರಿಗೂ ತಿಳಿದಿರುತ್ತದೆ. ಬಣ್ಣ ಕೊಂಚ ಕಪ್ಪಾಗಿದ್ದು, ಮುಖದ ಮೇಲೆ ಅಲ್ಲಲ್ಲಿ ಮೊಡವೆಗಳಾಗಿ ತೀರಾ ಸಾಧಾರಣವಾಗಿ ಕಾಣುತಿದ್ದ ರೂಪಳ ರೂಪ ಸಾಮಾನ್ಯವಾಗಿಯೇ ಹುಡುಗರಿಗೆ ಅಷ್ಟೇನೂ ಹಿಡಿಸುತ್ತಿರಲಿಲ್ಲ. ಕೂಡಲೇ ಏನೋ ಅನಿಸಿದಂತಾಗಿ 'ಸಾರಿ, ನೀವ್ ಕೂತಿದ್ರೂ ನಾನ್ ಮಲ್ಕೊಂಡೆ ಇದ್ದೆ' ಎನ್ನುತ್ತಾ ಎದ್ದು ಕೂರುತ್ತಾನೆ. ಕೊಂಚ ಕಾಲ ಲೋಕಾರೂಢ ಮಾತುಕತೆಯನ್ನು ಆಡುತ್ತಾರೆ. ಇಬ್ಬರಲ್ಲೂ ಇದ್ದ ಕಲೆಯ ಬಗೆಗಿನ ಆಸಕ್ತಿ ಮಾತುಕತೆಯನ್ನು ಬಹಳ ಸಮಯದವರೆಗೆ ಮುಂದುವರೆಸಿಕೊಂಡು ಹೋಗುತ್ತದೆ. ಅಂತೂ ಯುದ್ಧವನ್ನು ಗೆದ್ದಷ್ಟೇ ಖುಷಿಯನ್ನು ಗಳಿಸಿಕೊಂಡು ಬಂದಿತು ಹುಡುಗಿಯರನ್ನು ಸುತ್ತುವರೆದಿದ್ದ ಗುಂಪು. ಪರಿಸ್ಥಿತಿ ಸಮ್ಮತಿಸಿದ್ದರೆ ಸಂಜೆಯವರೆಗೂ ರೂಪಾಳೊಟ್ಟಿಗೆ ಸಂಭಾಷಣೆಯಲ್ಲಿ ತೊಡಗುತ್ತಿದ್ದ ರಾಹುಲ್ ತನ್ನ ಗುಂಪಿನ ಸದಸ್ಯರು ಬಂದಾಗಲೇ ಕೊಂಚ ಮುಜುಗರ ಪಡುತ್ತಾನೆ. ಅಂತೆಯೇ ಆಕೆಯೂ ಮತ್ತೊಮ್ಮೆ ಸಿಗುವ ಎನ್ನುತ್ತಾ ಅಲ್ಲಿಂದ ಎದ್ದು ನೆಡೆಯುತ್ತಾಳೆ. ರೂಪ ಅತ್ತ ಕಡೆ ಹೋಗುವುದನ್ನೇ ಕಾಯುತಿದ್ದ ಗುಂಪಿನ ಒಬ್ಬ 'ಏನ್ ಆಟಿಟ್ಯೂಡ್ ಗುರು ಇವ್ಳಿಗೆ, ಏನ್ ಇವ್ಳ್ ಕೇಳಿದ್ದ್ ಪ್ರೆಶ್ನೆಗೆಲ್ಲ ಉತ್ತರ ಹೇಳ್ಬೇಕಂತೆ, ಇಲ್ಲಾ ಅಂದ್ರೆ ಎಲ್ಲರು ವೇಸ್ಟ್ ಅಂತೇ! ಒಳ್ಳೆ ಹಾಲ್ ಕುಡಿಯೋ ಮಕ್ಳು ಪೈಂಟ್ನ ಉಜ್ಜಾಡಿರೋ ಹಾಗೆ ಇರೋ ಫ್ರೇಮ್ ಅನ್ನು ಅದ್ ಏನ್ ಹೇಳುತ್ತದೆ, ಯಾರ್ ಬರೆದಿದ್ದು ಅಂತಾ ಗುರ್ತಿಸಬೇಕಂತೆ. ಸತ್ತವರ ಮುಂದೆ ಗೊಳೋ ಎಂದು ಅಳುವಂತೆ ಕೊಗುವ ಸದ್ದನ್ನು ರಾಗವೆಂದು ಅರ್ಥೈಸಿಕೊಂಡು ಅದನ್ನು ಕಂಡುಹಿಡಿಯಬೇಕಂತೆ. ಏನ್ ಕಾಮಿಡಿಯಪ್ಪ ಇವ್ಳದ್ದು' ಎಂದು ನಗುತ್ತಾನೆ. ಮತ್ತೊಬ್ಬ ಮುಂದುವರೆಸಿ 'ಈ ರೀತಿ ಇದ್ದೆ ಹೀಗೆ, ಇನ್ನೇನಾದರೂ ಸ್ವಲ್ಪ ಬೆಳ್ಳಗೆ, ತೆಳ್ಳಗೆ ಇದ್ದಿದ್ದ್ರೆ ಹಿಡಿಯೋಕ್ ಆಗ್ತಿರ್ಲಿಲ್ಲ' ಎಂದು ಈಗಷ್ಟೇ ಸುಂದರ ಹುಡುಗಿಯರ ಮಾತಿನ ಮೋಡಿಯಲ್ಲಿ ಮಿಂದೆದ್ದು ಬಂದ ಮೋಹದಲ್ಲಿ ಹೇಳುತ್ತಾನೆ. ಅಷ್ಟರಲ್ಲಾಗಲೇ ಸಿಟ್ಟಿನಿಂದ ಕುಪಿತಗೊಂಡಿದ್ದ ರಾಹುಲ್,
'ನಿನ್ನ ಅಕ್ಕನೋ ಅಮ್ಮನೋ ಅವಳ ಹಾಗೆ ಇದ್ದಿದ್ದರೆ ನೀನು ಈ ಮಾತನ್ನು ಹೇಳ್ತಾ ಇದ್ದೆಯಾ?! ಸ್ವಲ್ಪ ಮುಂಚೆ ಅಷ್ಟೂ ದಂತಪಂಕ್ತಿಯನ್ನು ತೋರುತ್ತಾ ನುಲಿಯುತ್ತಾ ಮಾತಾಡುತ್ತಿದ್ದೆಯಲ್ಲ ಅವರಲ್ಲಿ ಯಾರೊಬ್ಬರಿಗಾದರು ಸಾಹಿತ್ಯ, ಸಂಗೀತದ ಗಂಧ ಗಾಳಿ ಗೊತ್ತಿದೆಯೇ ಕೇಳು. ರಾಗ ಯಾವುದೆಂದು ಕೇಳಿದರೆ ಗೊತ್ತಿದ್ದರೆ ಹೇಳಬೇಕು, ಗೊತ್ತಿಲ್ಲದಿದ್ದರೆ ಸುಮ್ಮನಿರಬೇಕು. ಅದನ್ನು ಬಿಟ್ಟು ತಳ ಬುಡ ಇರದ ಉಢಾಫೆಯ ಉತ್ತರವನ್ನು ಕೇಳಿದರೆ ಸಂಗೀತವೇ ಸರ್ವಸ್ವ ಎಂದಂದುಕೊಂಡವರಿಗೆ ಸಿಟ್ಟು ಬರುವುದಿಲ್ಲವೇ? ಆಕೆ ಅಂದವಾಗಿಲ್ಲದಿರಬಹುದು ಆದರೆ ಆಕೆಯ ಜ್ಞಾನ ಸಂಪತ್ತು ನಮ್ಮೆಲ್ಲರಿಗಿಂತಲೂ ಅಂದವಾಗಿದೆ ಹಾಗು ಎತ್ತರದಲ್ಲಿದೆ. ಅದರಿಂದಲೇ ಅವಳ ಕಾನ್ಫಿಡೆನ್ಸ್ ನಿಮ್ಗೆಲ್ಲಾ ಆಟಿಟ್ಯೂಡ್ ನಂತೆ ಕಾಣೋದು' ಎನ್ನುತ್ತಾ ಅಲ್ಲಿಂದ ನೆಡೆಯುತ್ತಾನೆ.

ಅಂದಿನಿಂದ ರಾಹುಲ್ ಬೇಕಂತೆಲೆ ರೂಪಳ ಸಲುಗೆಯನ್ನು ಬಯಸತೊಡಗುತ್ತಾನೆ. ಓದು, ಸಾಹಿತ್ಯ, ಸಂಗೀತ ಹೀಗೆ ಎಲ್ಲದರದಲ್ಲೂ ಮುಂದಿದ್ದ ಆಕೆ ತನ್ನ ಚರ್ಮದ ಬಣ್ಣದಿಂದ ಮಾತ್ರವಷ್ಟೇ ಬೇಕು ಬೇಡವಾಗಿದ್ದಾಳೆಯೇ? ಬಣ್ಣ ಕಪ್ಪಾದ ಮಾತ್ರಕ್ಕೆ ನಾವು ಒಬ್ಬರನ್ನು ನೋಡುವ ದೃಷ್ಟಿಯೇ ಬದಲಾಗುತ್ತದೆಯೇ? ಅವೊಂದು ಕಾರಣದಿಂದ ಮಾತ್ರವೇ ಆ ವ್ಯಕ್ತಿಯಲ್ಲಿನ ಬೇರೆಲ್ಲಾ ವಿಚಾರಗಳು ಗೌಣವಾಗುತ್ತವೆಯೇ? ಅಹಿರ್ ಭೈರವ ರಾಗವನ್ನು ಸತ್ತವರ ಮುಂದೆ ರೋಧಿಸುವ ಸದ್ದಿಗೆ ಹೋಲಿಸುವ ‘ಅಪ್ರಬುದ್ದತೆಯೇ’ ಸುಂದರತೆಯನ್ನು ಕೇವಲ ಬಿಳಿಯ ಬಣ್ಣದಿಂದ ಅಳೆಯುವಂತೆ ಮಾಡುತ್ತದೆಯೇ? ಆತ ಯೋಚಿಸತೊಡಗುತ್ತಾನೆ. ಪ್ರತಿಭಾರಿಯೂ ಆಕೆಯೊಟ್ಟಿಗಿನ ಭೇಟಿ ಅವನಿಗೆ ಹೊಸತೊಂದು ವಿಚಾರಗಳನ್ನು ಕಲಿಸತೊಡಗುತ್ತದೆ. ದಿನ ಕಳೆದಂತೆ ರೂಪ ರಾಹುಲ್ನ ಆಪ್ತ ಗೆಳತಿಯಲ್ಲೊಬ್ಬಳಾಗುತ್ತಾಳೆ.

ಆ ದಿನದ ನೇರಪ್ರಸಾರದ ಕಾರ್ಯಕ್ರಮದಲ್ಲಿ ರಾಹುಲ್ ಫೇರ್ ನೆಸ್ ಕ್ರೀಮ್ಗಳ ವಿರುದ್ಧವಾಗಿ ವಾದವೊಂದನ್ನು ಮಂಡಿಸುತ್ತಿರುತ್ತಾನೆ. ಕಪ್ಪಿರುವ ಚರ್ಮದ ಬಣ್ಣವನ್ನು ಬಿಳಿಯಾದಂತೆ ತೋರಿಸಿ ನೋಡುಗರಲ್ಲಿ ಕಪ್ಪು ಎಂದರೆ ಒಂದು ತಪ್ಪಿನ ಭಾವನೆ ಮೂಡುವಂತೆ ಇಂದು ಸಮಾಜ ಪರಿವರ್ತನೆಗೊಳ್ಳುತ್ತಿದ್ದೆ. ಇದಕ್ಕೆ ಬಹುಮುಖ್ಯ ಕಾರಣ ಇಂತಹ ಫೇರ್ ನೆಸ್ ಕ್ರೀಮ್ಗಳ ಜಾಹಿರಾತುಗಳು ಜೊತೆಗೆ ಹಣದ ಆಸೆಗೆ ಏನಕ್ಕೂ ಸೈ ಎನ್ನುವ ನಟ ನಟಿಯರು. ಇಂತಹ ಅರ್ಥಹೀನ ಜಾಹಿರಾತುಗಳನ್ನು ಕೂಡಲೇ ನಿಲ್ಲಿಸಬೇಕು.ಎಲ್ಲದಕ್ಕೂ ಮೊದಲು ಬದಲಾವಣೆ ಎಂಬುದು ನಮ್ಮೊಳಗೇ ಮೊದಲು ಬರಬೇಕು. ಇದು ಟಿವಿ ಸ್ಟುಡಿಯೋದಲ್ಲಿ ಕುಳಿತು ನಾವು ನೀವು ಚರ್ಚೆಮಾಡಿ ನಾಳೆ ಮರೆತುಹೋಗುವ ವಿಷಯವಂತೂ ಆಗಲೇ ಕೂಡದು.

ಇತ್ತಕಡೆ ರಾಹುಲ್ ನ ಸಾನಿಧ್ಯದಲ್ಲಿ ಅಕ್ಷರ ಸಹ ಅರಳಿದ ಹೂವಾಗಿದ್ದಂತಿದ್ದ ರೂಪಾಳ ಮನಸ್ಸು ಎಷ್ಟು ಆಶಾವಾದಿಯಾಗಿದ್ದಿತೋ ಅಷ್ಟೇ ಭಯಪೀಡಿತವೂ ಆಗಿದ್ದಿತು. ಎಲ್ಲಿಯಾದರೂ ಇದು ಪ್ರೀತಿ, ಪ್ರೇಮಕ್ಕೆ ತಿರುಗಿ ತನಗೆ ಆಶಾಭಂಗವಾಗುತ್ತದೆಯೋ ಎಂಬುದೇ ಆ ಭಯದ ಹಿಂದಿದ್ದ ಬಹುಮಖ್ಯ ಕಾರಣವಾಗಿದ್ದಿತು. ಆ ದಿನದ ನೇರಪ್ರಸಾರದ ಕಾರ್ಯಕ್ರಮದಲ್ಲಿ ರಾಹುಲ್ನ ವಾದವನ್ನು ಕಂಡು ಅಕ್ಷರ ಸಹ ನಲಿಯುವ ನವಿಲಿನಂತಾಯಿತು ಆಕೆಯ ಮನ. ತನಗರಿಯಂತೆ ರಾಹುಲ್ನನ್ನು ಮನಸ್ಸಾರೆ ಆಕೆ ಬಯಸತೊಡಗಿದಳು. ಆದರೂ ಎಲ್ಲೋ ಒಂದು ಬಗೆಯ ಅಂಜಿಕೆ, ಆತಂಕ ಅವಳಲ್ಲಿ. ಹೇಳುವವರು ಹಲವರಿರಬಹುದು ಆದರೆ ಹೇಳಿದಂತೆ ನಡೆದುಕೊಳ್ಳುವವರು ಕೆಲವರು ಮಾತ್ರ. ಆದೇನೇ ಆದರೂ ರಾಹುಲ್ ನನ್ನಂತಹ ಅಸುಂದರಿಯನ್ನು ಬಯಸನು. ಆತನ ಗುಣರೂಪಗಳಿಗೆ ಒಗ್ಗುವ ಹತ್ತಾರು ಸ್ಪುರದ್ರೂಪಿ ಹುಡುಗಿಯರು ಆತನಿಗೆ ಸಿಗಬಲ್ಲರು. ಏನಾದರಾಗಲಿ, ನಾನು ಮಾತ್ರ ಪ್ರೀತಿ ನಿವೇದನೆಯನ್ನು ಆತನ ಮುಂದೆ ಎಂದಿಗೂ ಮಾಡಲಾರೆ.ನನ್ನಂತವರು ಸುಂದರ ಹುಡುಗರನ್ನು ಬಾಳಸಂಗಾತಿಯಾಗಲು ಬಯಸಬಲ್ಲೆವಾ? ಸುಂದರ ಹೊರನೋಟವನ್ನು ಅಳೆಯುವಂತೆ ಮನಸ್ಸೆಂಬ ಒಳನೋಟವನ್ನು ಅಳೆಯುವ ಮಾಪನ ಯಾವುದು. ಮನಸ್ಸೆಂಬ ಒಳದೇಹವನ್ನು ಬಿಳುಪು ಮಾಡುವ ಫೇರ್ ನೆಸ್ ಕ್ರಿಮ್ ಎಂಬುದು ಯಾವುದು?!

ದಿನಗಳು ಕಳೆದರೂ ರೂಪ ತನ್ನ ಪ್ರೀತಿಯನ್ನು ರಾಹುಲ್ ನ ಬಳಿ ಹೇಳಿಕೊಳ್ಳುವುದೇ ಇಲ್ಲ. ಎಲ್ಲೋ ಒಂದೆಡೆ ಆಕೆಗೆ ರಾಹುಲ್ ಖುದ್ದಾಗಿಯೇ ಪ್ರೀತಿ ನಿವೇದನೆಯನ್ನು ಮಾಡುತ್ತಾನೆ ಎಂದನಿಸುತ್ತಿರುತ್ತದೆ. ಆದರೆ ಅದು ಎಂದಿಗೂ ಸಾಧ್ಯವಾಗುವತೆ ಕಾಣುವುದಿಲ್ಲ. ಪರೀಕ್ಷೆಯ ಸಮಯವಾದರಿಂದ ಎಲ್ಲರೂ ಓದಿನಲ್ಲಿ ಮಗ್ನರಾದರು, ರೂಪಾಳೊಬ್ಬಳನ್ನು ಬಿಟ್ಟು! ಪರೀಕ್ಷೆಯ ನಂತರ ವಿದ್ಯಾರ್ಥಿಗಳೆಲ್ಲ ರಜೆಗೆ ಮನೆಗೆ ಹೊರಡುವ ಮುನ್ನ ಕೊನೆಯ ಬಾರಿ ಸಿಗಲು ಕಾಲೇಜಿನ ಹುಲ್ಲುಹಾಸಿನ ಮೇಲೆ ಭೇಟಿಯಾದಾಗ ರೂಪ ರಾಹುಲ್ನಿಗಾಗಿ ಎರಡು ಪೇಂಟಿಂಗ್ಗಳನ್ನು ಪ್ಯಾಕ್ ಮಾಡಿ ತಂದಿದ್ದಳು. ಅವೆರಡನ್ನೂ ರಾಹುಲ್ನಿಗೆ ಕೊಟ್ಟು, ಒಂದು ಆತ ಆ ದಿನ ಕೇಳಿದ ಪೇಂಟಿಂಗ್ ಎಂದೂ ಮತ್ತೊಂದು ಅದಕ್ಕೆ ಪೂರಕವಾದ ಪೇಂಟಿಂಗ್ ಎಂದೂ ಎರಡನ್ನೂ ಅವನ ಕೈಯ ಮೇಲಿಡುತ್ತಾಳೆ. ಆಕೆಯ ಮಾತುಗಳಲ್ಲಿನ ಕಂಪನ ರಾಹುಲ್ಗೆ ಕಂಡುಬಂದರೂ ಆತ ಸುಮ್ಮನಾಗುತ್ತಾನೆ. ಆತ ಏನೋ ಕೇಳಬೇಕೆಂದುಕೊಂಡು ಪುನ್ಹ ಮೌನಿಯಾಗುತ್ತಾನೆ. ಏಕೋ ಆತನ ಮನ ರೂಪಾಳ ಸಾನಿಧ್ಯವಿರದೆ ಇರಲಾರದು ಎಂಬಂತೆ ಮಿಡಿಯತೊಡಗುತ್ತದೆ.

ಅಂತೂ ಎಲ್ಲರೊಂದಿಗೆ ಬೀಳ್ಕೊಟ್ಟು ಊರಿಗೆ ಬಂದ ರಾಹುಲ್ ಮೊದಲು ಮಾಡಿದ ಕೆಲಸವೆಂದರೆ ಎರಡೂ ಪೇಂಟಿಂಗ್ಗಳನ್ನು ಬಿಚ್ಚಿ ನೋಡುವುದು. ಮೊದಲನೆಯ ಪೇಂಟಿಂಗ್ ಅಂದಿನ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಿದ್ದ ಚಿತ್ರವಾಗಿಯೇ ಇದ್ದಿತು. ಕಪ್ಪುಬಣ್ಣದ ಹುಡುಗಿಯಿಬ್ಬಳು ಶ್ವೇತವರ್ಣದ ಬಟ್ಟೆಯನ್ನು ಧರಿಸಿ ಕಣ್ಣು ಹಾಗು ಬಾಯಿಯಷ್ಟನ್ನೇ ಬಟ್ಟೆಯಿಂದ ಕಟ್ಟಿಕೊಂಡು ಜನಜಂಗುಳಿಯ ನಡುವಿನಲ್ಲಿ ನಿಂತಿರುವಂತಹ ಚಿತ್ರ. ಮತ್ತೊಂದು ಸಂಪೂರ್ಣ ಬಿಳಿಯ ಹಾಳೆಯ ಮೇಲೆ ಕಪ್ಪುಬಣ್ಣದ ಗುಲಾಬಿ! ಕೆಲಕಾಲ ಹಾಗೆಯೆ ಅವುಗಳನ್ನು ನೋಡುತ್ತಾ ಕುಳಿತ ರಾಹುಲ್ನಿಗೆ ಚಿತ್ರಪಟಗಳ ಅರ್ಥ ಅರಿಯತೊಡಗುತ್ತದೆ. ಇದ್ದಕಿದ್ದಂತೆ ಆತನ ಕಣ್ಣುಗಳು ತೇವವಾದವು. ಅಂದುಕೊಂಡಂತೆ ಆ ಎರಡೂ ಚಿತ್ರಪಟಗಳ ರಚನಾಕಾರರು ರೂಪಳೇ ಆಗಿರುತ್ತಾಳೆ! ಮಾತುಗಳು ಬಣ್ಣಿಸದ್ದನು ಚಿತ್ರಪಟವೊಂದು ರಾಹುಲ್ನಿಗೆ ತಿಳಿಸುತ್ತದೆ! 'ಹುಚ್ಚು ಹುಡುಗಿ' ಎಂದು ನಗುತ್ತಾ ರಾಹುಲ್ ಅಂದೇ ರೂಪಾಳ ಊರಿಗೆ ಪ್ರಯಾಣ ಬೆಳೆಸುತ್ತಾನೆ.

ವರ್ಷಗಳು ಕಳೆದವು. ಗಂಧದಿಂದ ತೇಯ್ದು ಮಾಡಿರುವಂತಿರುವ ದೇಹಸೇರಿಯ ಮಗುವೊಂದು ಕಪ್ಪುವರ್ಣದ ಮತ್ತೊಂದು ಮಗುವಿನೊಟ್ಟಿಗೆ ಕಡಲತೀರದಲ್ಲಿ ಆಡುತ್ತಾ ಕುಳಿತ್ತಿದ್ದಿತು. ಕಪ್ಪು-ಬಿಳುಪು, ಮೇಲು-ಕೀಳು, ಬಡವ-ಬಲ್ಲಿದ ಎಂಬ ಭೇದಭಾವಗಳಿರದ ಮಕ್ಕಳಂತೆಯೇ ಸಮುದ್ರದ ಅಲೆಗಳು ಒಂದರಿಂದೊಂದು ಅವುಗಳನ್ನು ಅಪ್ಪಳಿಸುತ್ತಿದ್ದವು. ಕೊಂಚ ಸಮಯದಲ್ಲಿಯೇ ಕಪ್ಪುವರ್ಣದ ಮಗುವಿನ ಅಮ್ಮ ತನ್ನ ಮಗುವನ್ನು ಕರೆದುಕೊಂಡು ಹೋಗಲು ಬಂದಾಗ ಯಾರೋ ತನ್ನ ಅತ್ಯಾಪ್ತವಾದ ಆಟಿಕೆಯನ್ನು ಕಸಿದುಕೊಂಡಂತೆಯೇ ಆ ಮಗು ಅಳತೊಡಗುತ್ತದೆ. ಅದು ಅಳುವುದನ್ನು ನೋಡಿ ಅಮ್ಮನ ಕಂಕುಳದಲ್ಲಿದ್ದ ಮಗುವೂ ಅಳಲು ಶುರುಮಾಡುತ್ತದೆ. 'ಎಂಥಾ ಮುಗ್ದತೆ ಅಲ್ವ...?' ಎಂದ ರೂಪ ನಿಸರ್ಗಮಯ ಆ ದೃಶ್ಯವನ್ನು ನೋಡಿ ರಾಹುಲ್ನ ಹೆಗಲಮೇಲೆ ತನ್ನ ತಲೆಯನ್ನು ಇರಿಸಿದಳು. 'ಹೌದು, ಮಾನವ ಹುಟ್ಟುವಾಗ ಮುಗ್ದ ಪ್ರಾಣಿಯಾಗಿಯೇ ಹುಟ್ಟುತ್ತಾನೆ. ಸಮಾಜ ಆ ಮುಗ್ದತೆಯನ್ನು ಪೋಷಿಸಿ ಬೆಳೆಸುವುದ್ರಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತೆ . ಸಮಾಜವನ್ನು ನಾವು ಬದಲಾಹಿಸಲಾಗದು. ಬದಲಾವಣೆ ಮೊದಲು ನಮ್ಮ ಮನದಲ್ಲೇ ಬರಬೇಕು' ಎನುತ್ತಾನೆ. ಅಷ್ಟರಲ್ಲಿಯೇ ತಾನು ಒಬ್ಬಂಟಿಯಾದರಿಂದ 'ಅಮ್ಮಾ...' ಎಂದು ಬಿಕ್ಕಳಿಸಿ ಅಳುತ್ತಾ ಬಂದ ಮಗು ರೂಪಳ ತೊಡೆಯ ಮೇಲೆ ಗೋಗರೆಯುತ್ತದೆ. ತಮ್ಮ ಮಗುವಿನ ನಿರ್ಮಲ ಪ್ರೀತಿಗೆ ಸೋತೋ ಏನೊ ರಾಹುಲ್ ಹಾಗು ರೂಪಾರಿಬ್ಬರ ಕಣ್ಣುಗಳು ಹನಿಗೂಡುತ್ತವೆ....