Thursday, June 22, 2017

ಸಾಲಮನ್ನಾ...ಮಾಡುವ ಮುನ್ನ...


ವಿಷಯ ಅದಲ್ಲ. ಸಾಲ ಮನ್ನಾ ಅಂದಾಕ್ಷಣ ಹೇಗೆ, ಎಷ್ಟು, ಎಲ್ಲಿ ಎಂಬ ಪ್ರೆಶ್ನೆಗಳೇ ಹೆಚ್ಚಾಗಿ ನಮ್ಮಲ್ಲಿ ಮೂಡುತ್ತವೆ ಅಲ್ಲವೇ? ರೈತರಾದರೆ ಆಫ್-ಕೋರ್ಸ್ ಯಸ್. ರೈತನ ಕನಸ್ಸು ಮನಸಲ್ಲೂ ಸದ್ಯಕ್ಕೆ ಹರಿದಾಡುತ್ತಿರುವ ಏಕೈಕ ಪದವೆಂದರೆ ಅದು 'ಸಾಲಮನ್ನಾ'. ಆದರೆ ಈ ಪ್ರೆಶ್ನೆಗಳು ಒಂದು ವಿಧದಲ್ಲಿ ಪ್ರೆಶ್ನೆಗಳೇ ಅನಿಸಿಕೊಳ್ಳುವುದಿಲ್ಲ ಅಂದರೆ!? ಇನ್ ಫ್ಯಾಕ್ಟ್ ಇವು ಒಂತರ ಪಂದ್ಯದ ಮೊದಲೇ ಸೋಲೊಪ್ಪಿಕೊಂಡ ಮನೋಭಾವದ ಸಂಕೇತಗಳೆಂದರೂ ತಪ್ಪಾಗುವುದಿಲ್ಲ. ನಾ ಮಾಡಿದ ನಿರ್ಧಾರ ತಪ್ಪೆಂದು ಬೇರೆಯವರ ಮೇಲೆ ಗೂಬೆ ಕೂರಿಸಿ, ಇನ್ಯಾರಿಂದಲೋ ಅದಕ್ಕೊಂದು ಪರಿಹಾರವನ್ನು ಬಯಸುತ್ತ, ಕಾಯುತ್ತ, ಕೊನೆಗೆ ಹಿಂದಿನಕ್ಕಿಂತಲೂ ಮತ್ತೊಂದು ಬಾಲಿಶ ನಿರ್ಧಾರವನ್ನು ಕೈಗೊಂಡು ಇಡೀ ಸಂಸಾರವನ್ನು ನಡು ನೀರಿನಲ್ಲಿ ಕೈ ಬಿಟ್ಟು, ಯಾರೋ ಮಾಡಿಟ್ಟ ಚಟ್ಟವನ್ನು ಹತ್ತುವುದು ಯಾವ ಸೀಮೆಯ ಪುರುಷಾರ್ಥ?

ಇಂದು ಬರಡು ಭೂಮಿಯೊಂದನ್ನು ಯಾವುದೇ ಯಂತ್ರಗಳ ಸಹಾಯವಿಲ್ಲದೆ ಅಗೆದು, ಗುದ್ದಿ ಹಸಿರನ್ನು ಹೊತ್ತಿಸಿ ಸಾವಿರ ಜನರ ಹಸಿವನ್ನು ನೀಗಿಸಬಲ್ಲ ಒಂದಾದರೂ ಪೇಟೆಯ ಕಂಪನಿಗಳನ್ನು ತೋರಿಸಿ ನೋಡುವ.? ಇವುಗಳು ನೂರು ಕೋಟಿ ಸುರಿದು ಸಾವಿರ ಕೋಟಿ ಮಾಡುವ ಮನಿ ಮೈಂಡ್ಸ್ ಗಳೇ ಹೊರತು ಬಿಡಿಗಾಸು ಹಣವಿಲ್ಲದೆ ಬೆವರನ್ನು ಬಸಿದು ಹಸಿವನ್ನು ನೀಗಿಸಬಲ್ಲ ನಮ್ಮ ರೈತನೆಂಬ ನೈಸರ್ಗಿಕ ಕಂಪೆನಿಗಳಂತಲ್ಲ. ಅಂತಹ ಎದೆಗಾರಿಕೆಯ ರೈತನೆಂಬ ಶಕ್ತಿ ಇಂದು 'ಆತ್ಮಹತ್ಯೆ' ಹಾಗು 'ಸಾಲಮನ್ನಾ' ಎಂಬೆರೆಡೇ ಪದಗಳಿಗೆ ಮೀಸಲಾಗಿರುವುದೇಕೆ? ಆತ್ಮಹತ್ಯೆ ಎಂಬುದು ಜೀವನದ ಅತಿ ಸಹಜ ಸವಾಲಿಗೆ ಹೆದರಿ ಓಟಕೀಳುವಂತಹ ಮನೋಭಾವವಾದರೆ, ಸಾಲಮನ್ನಾ ಎಂಬುದು ಎಲ್ಲವೂ ಇದ್ದು ಮತ್ತೊಬ್ಬರ ಮುಂದೆ ಕೈಯೊಡ್ಡಿದಂತೆ! ಕುಂಟುತ್ತಿದ್ದ ದೇಶದ ಆರ್ಥಿಕತೆಗೇ ಬೆನ್ನೆಲುಬಾಗಿ ನಿಲ್ಲಬಲ್ಲ ತಾಕತ್ತಿದ್ದ ರೈತನೆಂಬ ಚೇತನ ಇಂದು ಸಾಲವೆಂಬ ಪುಡಿಗಾಸಿಗೆ ನಿಜವಾಗಿಯೂ ಹೆದರಬೇಕೇ? ಒಂದುಪಕ್ಷ ವಿಷಯ ಇಷ್ಟು ಸರಳವಲ್ಲ ಎಂದೇ ಇಟ್ಟುಕೊಳ್ಳೋಣ. ಸರಿ, ಸಾಲ ಎಂಬ ವಿಷಸರ್ಪವನ್ನು ಆತ ಕೆಣಕಿದ್ದಾದರೂ ಏತಕ್ಕೆ? ಗೊಬ್ಬರ ಕೊಳ್ಳಲು? ಜಮೀನಿನಲ್ಲಿ ದುಡಿಯುವ ಕಾರ್ಮಿಕರಿಗಾಗಿ? ನೀರಿಗಾಗಿ ? ಅಥವಾ ತನ್ನ ಸ್ವಂತ ಭೋಗಕ್ಕಾಗಿ? ವಿಷಯವಿರುವುದೇ ಇಲ್ಲಿ. ಕೃಷಿಯ ಯಾವುದೊ ಸಮಸ್ಯೆಯನ್ನು ಹೊತ್ತು ತನ್ನಲ್ಲಿಗೆ ಬರುವ ರೈತನಿಗೆ ಕೃಷಿಸಾಲವೆಂಬ ವಿಷ ಮುಲಾಮನ್ನು ಸವರುವುದೇ ಈ ಸರ್ಕಾರಗಳು. ಅವರ ಸಮಸ್ಯೆಗಳಿಗೊಂದು ಸೂಕ್ತ ಪರಿಹಾರವನ್ನು ಆಲೋಚಿಸುವುದ ಬಿಟ್ಟು ತೋರ್ಪಡಿಕೆಯ ಪ್ರೀತಿಗೆ ದುಡ್ಡಿನ ಅಮಲೇರಿಸಿ ಮಕ್ಕಳು ಹಾಳಾದಾಗ ಮುಂದೇನು ಮಾಡುವುದೆಂದು ಕೈ ಕೈ ಹಿಸುಕಿಕೊಳ್ಳುವ ಪೋಷಕರಂತಾಗಿದೆ ಇಂದಿನ ಸರ್ಕಾರಗಳ ವಸ್ತುಸ್ಥಿತಿ.



ಅಂಕಿ ಅಂಶಗಳ ಪ್ರಕಾರ ಪ್ರಸ್ತುತ ದೇಶದ ಮೇಲಿರುವ ಕೃಷಿ ಸಾಲ ಸುಮಾರು ಹದಿಮೂರು ಲಕ್ಷ ಕೋಟಿ ರೂಪಾಯಿಗಳು! ಇಡೀ ದೇಶದ ಈ ಬಾರಿಯ ಬಜೆಟ್ ನ ಮೊತ್ತವೇ 21 ಲಕ್ಷ ಕೋಟಿಗಳಿರುವಾಗ ಘಂಟೆ ಅಲ್ಲಾಡಿಸಿದಂತೆ ಸಿಕ್ಕ ಸಿಕ್ಕ ಕಡೆಯೆಲ್ಲ ಸಾಲಮನ್ನದ ಭಾಗ್ಯವನ್ನು ಕರುಣಿಸುತ್ತಾ ಹೋದರೆ ದೇಶದ ನಾಳಿನ ಸ್ಥಿತಿ ಏನಾಗಬಹುದೆಂದು ನೀವೇ ಊಹಿಸಬಹುದು. ಮೇಲಾಗಿ ಸಾಲ ಮನ್ನ ಅಂದಾಕ್ಷಣ ಬ್ಯಾಂಕುಗಳೇನು ಲೆಕ್ಕ ಪತ್ರಗಳನ್ನು ಹರಿದು ರೈತರ ಕಲ್ಯಾಣವೇ ನಮ್ಮ ಧ್ಯೇಯ ಎಂದು ಎಂದಿಗೂ ಹೇಳವು. ಅವು ಸರ್ಕಾರದ ಬೊಗಸೆಯಿಂದ ಹಣದ ರಾಶಿ ತಮ್ಮ ಜೋಳಿಗೆಗೆ ಬೀಳುವ ತನಕ ಸುಮ್ಮನಿರವು. ಆಗ ಬರಿದಾದ ಸರ್ಕಾರದ ಜೋಳಿಗೆಯನ್ನು ತುಂಬಲು ದೇಶದ ಇತರೆ ನಾಗರಿಕರೊಂದಿಗೆ ರೈತನೂ ತನ್ನ ನೊಂದ ಹೆಗಲನ್ನು ನೀಡಬೇಕು ಎಂಬವುದ ಮರೆಯಬಾರದು. ಸರಿ, ಈ ಪ್ರಕ್ರಿಯೆಯಲ್ಲಿ ರಾಜ್ಯಸರಕಾರಗಳೂ ಕೈ ಜೋಡಿಸಿ ಒಂದು ಪಕ್ಷ ಅಷ್ಟೂ ಸಾಲವನ್ನು ಮನ್ನ ಮಾಡಿ ರೈತನನ್ನು ಉಳಿಕೊಂಡರೆ ಸಂತೋಷದ ಸಂಗತಿಯೇ. ಆದರೆ ಇಂದು ಸಾಲ ಮನ್ನ ಮಾಡಿ ನಾಳೆ ಪುನಃ ಸಾಲ ಕೊಳ್ಳುವಂತೆ ರೈತರಿಗೆ ತೆರೆದುಕೊಳ್ಳುವುದು ಮಾತ್ರ ಸಹಿಸಲಾಗದ ವಿಷಯವಾಗುತ್ತದೆ.



ಹಿಂದೆ 1990 ಹಾಗು 2008 ರಲ್ಲಿ ಅಂದಿನ ಕೇಂದ್ರ ಸರ್ಕಾರಗಳು ರೈತರ ಸಾಲಮನ್ನವೆಂಬ ಯಜ್ಞವನ್ನು ಮಾಡಿವೆಯಾದರು ಇಂದಿಗೂ ರೈತನ ಸ್ಥಿತಿ ಅರೆಬೆಂದ ಅನ್ನದಂತಾಗಿಯೇ ಉಳಿದಿದೆ ಎಂದರೆ ಸುಳ್ಳಾಗದು. ಸರ್ಕಾರಗಳೇನೋ ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್ ಗಳ ಸಾಲವನ್ನು ಮನ್ನಾ ಮಾಡುತ್ತವೆ. ಆದರೆ ನಮ್ಮ ನಿಮ್ಮೆಲ್ಲರ ಮನೆಯ ಸುತ್ತೊಮ್ಮೆ ಕಣ್ಣು ಹಾಯಿಸಿದರೆ ಸಿಗುವ ಹೆಚ್ಚಿನ ರೈತರ ಸಾಲಗಳು ಕೈಸಾಲವೋ ಅಥವಾ ಚಿನ್ನವನ್ನು ಅಡವಿಟ್ಟು ಮಾಡಿರುವ ಸಾಲವೋ ಆಗಿರುತ್ತದೆ. ಇಂತಹ ಸಾಲಗಳ ಮನ್ನಾ ಯಾರಿಂದ ಸಾಧ್ಯ? 2008 ರಲ್ಲಿ ಕೇಂದ್ರ ಸರ್ಕಾರ 65,000 ಕೋಟಿ ಸಾಲ ಮನ್ನ ಮಾಡಿ ಮುಂದಿನ ವರ್ಷ ಬಂದ ಲೋಕಸಭಾ ಚುನಾವಣೆಗೆ ಭದ್ರ ಬುನಾದಿಯನ್ನೇನೋ ಹಾಕಿಕೊಂಡಿತ್ತು. ನಂತರ ತಿಳಿದು ಬಂದ ವಿಷಾದದ ವಿಷಯವೆಂದರೆ ಅಂದು ಸಾಲಮನ್ನದಿಂದ ಪ್ರಯೋಜನಕ್ಕೊಳಪಟ್ಟವರು ಕೇವಲ ಸ್ಥಿತಿವಂತ ರೈತರೇ ವಿನಃ ಉಡಲು ಕನಿಷ್ಠ ಬಟ್ಟೆ ಇರದ ಗುಡಿಸಲು ಮನೆಯಲ್ಲಿ ವಾಸಿಸುವ ರೈತರಾಗಿರಲಿಲ್ಲ. ಕಾರಣ ,ಬಡಪಾಯಿ ರೈತರೆಲ್ಲ ಅಂದು ಅವಲಂಬಿಸಿದ್ದು ಹೆಚ್ಚಾಗಿ ಕೈಸಾಲವನ್ನೇ! ಇಲ್ಲದಿದ್ದರೆ ಸಾಲ ಮನ್ನದ ನಂತರವೂ ರಾಶಿ ರಾಶಿ ರೈತರರ ತಲೆಗಳು ಹಗ್ಗದ ಕುಣಿಕೆಗೇಕೆ ಬೀಳುತ್ತಿದ್ದವು?! ಇಷ್ಟೇ. ಕೇವಲ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಯಾರೋ ಊದಿದ ಪೀಪಿಗೆ ತಲೆಯಲ್ಲಾಡಿಸುತ್ತ ಎಡಬಿಡಂಗಿ ನಿರ್ಧಾರಗಳನ್ನು ಕೈಗೊಳ್ಳುವ ಸರ್ಕಾರಗಳು ಆರಕ್ಕೂ ಏರದ ಮೂರಕ್ಕೂ ಇಳಿಯದ ಸ್ಥಿತಿಯಲ್ಲಿ ರೈತರನ್ನು ಹಾಗು ಹೊತ್ತಷ್ಟು ಮತ್ತೂ ಹೊರುವ ಕತ್ತೆಗಳಂತೆ ಸಾಮಾನ್ಯ ಜನರನ್ನು ಮಾಡಿಬಿಡುತ್ತವೆ.



ಕೃಷಿ ಎಂದರೆ ಸಾಲ ಎಂದಾಗಿರುವ ಇಂದಿನ ಕಾಲದಲ್ಲಿ ಸಾಲದ ವಿನಃ ಬೆಳೆಯನ್ನು ಬೆಳೆಯಲು, ದೇಶದ ಹಸುವೆಯನ್ನು ನೀಗಿಸಲು ಸಾಧ್ಯವಿಲ್ಲವೇ ಎಂಬುದನ್ನು ವಿಮರ್ಷೆ ಮಾಡಲು ಇದು ಸೂಕ್ತ ಕಾಲ. ಆಧುನಿಕ ಕೃಷಿ ಪದ್ದತಿಯನ್ನು ಒಮ್ಮೆ ಅವಲೋಕಿಸಿದಾಗ ಕೆಲವು ವಿಷಯಗಳು ನಮಗೆ ಸ್ಪಷ್ಟವಾಗುತ್ತವೆ. ಕೃಷಿಗಾಗಿಯೇ ಪಡೆಯುವ ಸಾಲವನ್ನು ರೈತ ಹೆಚ್ಚಾಗಿ ಬಳಸುವುದು ರಸಗೊಬ್ಬರಗಳ, ಕೀಟನಾಶಕಗಳ ಖರೀದಿಗೆ. ಯೂರಿಯಾ, ಪೊಟ್ಯಾಷ್, ರಂಜಕ ಇತ್ಯಾದಿ ಇತ್ಯಾದಿಗಳಿಲ್ಲದೆ ಇಂದು ಕೃಷಿ ಎಂಬುದು ಸಾಧ್ಯವೇ ಇಲ್ಲವೇ? ಸಾವಿರಾರು ವರ್ಷಗಳಿಂದ ಅದೇ ನೆಲದಲ್ಲಿ ರಾಶಿ ರಾಶಿ ದವಸ ಧಾನ್ಯಗಳನ್ನು ಬೆಳೆದ ನಮ್ಮ ಹಿರಿಯರು ಅಂದೂ ಸಹ ಯೂರಿಯಾ, ಪೊಟ್ಯಾಷ್ ಗಳಿಗೇ ಅಂಟಿಕೊಂಡಿದ್ದರೆ? ಹಾಗಾದರೆ ಅಚ್ಚುಕಟ್ಟಾಗಿ ಮಾಡಿಕೊಂಡಿದ್ದ ಸಾವಯವ ಕೃಷಿಗೆ ಈ ರಾಸಾಯನಿಕ ಗೊಬ್ಬರಗಳ, ಕೀಟನಾಶಕಗಳ ಗೀಳು ಹುಟ್ಟಿಕೊಂಡಿದ್ದಾದರೂ ಏತಕ್ಕೆ? ಉತ್ತರ ನಮ್ಮಲಿಯೇ ಇದೆ. ಅದೇ ಅತಿಯಾಸೆ! ಹೌದು. ಒಂದು ಬೊಗಸೆ ಮಣ್ಣಿನಲ್ಲಿ ನಿಮಗೆ ಸಾವಿರ ಕೇಜಿಯಷ್ಟು ಆಹಾರವನ್ನು ಬೆಳೆಸಿಕೊಡುತ್ತೇವೆ ಎಂಬ ಭ್ರಮೆಯನ್ನು ಹುಟ್ಟಿಸಿದ ವಿದೇಶಿ ಕಂಪನಿಗಳ ವ್ಯಮೋಹಕ್ಕೆ ಬಲಿಯಾದ ನಮ್ಮ ರೈತ ಅಂದು ತನ್ನ ಕೈಯ ಅಸ್ತ ಸುಟ್ಟಾದರೂ ಸರಿಯೇ ಜಮೀನಿಗೆ ರಾಸಾಯನಿಕಗಳನ್ನು ಹಾಕಿಯೇ ತೀರುತ್ತೇನೆಂಬ ಹಠಕ್ಕೆ ಬಿದ್ದ. ಮುಂದಿನ ಒಂದೆರೆಡು ವರ್ಷ ಒಮ್ಮೆಲೇ ಊದಿದ ಬಲೂನಿನಂತೆ ಫಸಲು ಸೊಗಸಾಗಿಯೇ ಬಂದಿತು. ಆದರೆ ಸಮಯ ಕಳೆದಂತೆ ಆ ಬಲೂನಿನ ಗಾಳಿ ಮಾತ್ರ ಮಾಯವಾಗತೊಡಗಿತ್ತು. ಪರಿಣಾಮ ಈಗ ನಮ್ಮ ರೈತ ಬೇಡವೆಂದರೂ ರಸಗೊಬ್ಬರಗಳನ್ನು ಬಿಟ್ಟಿರಲಾರ. ಈ ರಸಗೊಬ್ಬರಗಳು ನೆಲದ ಸತ್ವವನ್ನು ಹೀರಿ ಹಿಪ್ಪೆ ಮಾಡುವುದು ಒಂದೆಡೆಯಾದರೆ, ಕೇಜಿಗಟ್ಟಲೆ ಕೆಮಿಕಲ್ ಗಳನ್ನು ಕಾಲಕಾಲಕ್ಕೆ ಜಮೀನಿಗೆ ಸುರಿಯದಿದ್ದರೆ ಆ ಭಾರಿಯ ಫಸಲೇ ಗೋತಾ! ಇಂತಹ ಕೆಮಿಕಲ್ ಪೂರಿತ ಆಹಾರ ಸವೆನೆಯಿಂದ ದೇಹಗಳಿಗಾಗುವ ಘಾಸಿ ಹೇಳತೀರದು. ಅಂದು ಒಂದಿಷ್ಟೂ ಖರ್ಚಿಲ್ಲದೆ ನೆಮ್ಮದಿಯಾಗಿ ಕೃಷಿಯನ್ನು ಮಾಡಿಕೊಂಡಿದ್ದ ರೈತ ಇಂದು ಹೆಚ್ಚಿನ ಹಣವನ್ನು ಇಂತಹ ರಸಗೊಬ್ಬರಗಳ ಕೊಳ್ಳುವಿಕೆಗೇ ಸುರಿಯುತ್ತಿದ್ದಾನೆ. ಮೇಲಾಗಿ ಭಾರತ ಒಂದರಲ್ಲೇ ಅದೆಷ್ಟೋ ಸಾವಿರ ಕೋಟಿಯಷ್ಟು ಹಣ ರಸಗೊಬ್ಬರ, ರಾಸಾಯನಿಕಗಳ ವಹಿವಾಟಿನಿಂದಲೇ ವಿದೇಶಿ ಕಂಪನಿಗಳ ಜೋಳಿಗೆಯನ್ನು ಸೇರುತ್ತಿದೆ. ಅಂತಹ ಒಂದು ಉದ್ಯಮವನ್ನು ಮಟ್ಟ ಹಾಕಿ ಸಾವಯವ ಕೃಷಿಗೆ ಆದ್ಯತೆಯನ್ನು ನೀಡುವುದು ಸದ್ಯದ ಊಸರವಳ್ಳಿ ಸರಕಾರಗಳಿಂದಂತೂ ಸಾಧ್ಯವಿಲ್ಲ.

ಮರ್ಕಟ ಮನಸ್ಸಿನ ಇತ್ತೀಚಿನ ಮಳೆರಾಯನನ್ನು ನಂಬಲಾಗದ ರೈತ ಅಕ್ಷರ ಸಹ ನೀರಿನ ವಿಚಾರದಲ್ಲಿ ಕಂಗಾಲಾಗುತ್ತಿದ್ದಾನೆ. ಪಡೆಯುವ ಸಾಲದಿಂದ ಒಂದು ಕೃಷಿ ಹೊಂಡವೋ ಅಥವಾ ಕೊಳವೆ ಭಾವಿಯನ್ನೋ ತೊಡಲು ಹೋಗುವ ಆತ ಭಾಗಶಃ ಈ ಕಾರ್ಯದಲ್ಲಿ ಕೈ ಸುಟ್ಟುಕೊಳ್ಳುತ್ತಿದ್ದಾನೆ. ಸಾವಿರ ಅಡಿ ಆಳ ಕೊರೆದರೂ ನೀರು ಸಿಗದ ಈ ಕಾಲದಲ್ಲಿ ಸಾಲವೆಂಬ ಭಾರವನ್ನು ಹೆಗಲ ಮೇಲೆ ಹೊತ್ತ ಆತನಿಗೆ ನಷ್ಟವಾದರೆ ಭರಿಸಿಕೊಡುವವರ್ಯಾರು? ಈ ನಿಟ್ಟಿನಲ್ಲಿ ನಮ್ಮ 'ಸಾಲಮನ್ನ ಸರ್ಕಾರ'ಗಳ ಯೋಚನೆಗಳು ಏನಿವೆ? ಬಾರದ ಮಳೆಯನ್ನೇನೋ ಜಪ ಮಾಡಿ ತರಲಾಗುವುದಿಲ್ಲ ಆದರೆ ಬೀಳುವ ಮಳೆಯನ್ನಾದರೂ ಶೇಖರಿಸಿಡುವ ಕಾರ್ಯ ಅದೆಷ್ಟು ಸರ್ಕಾರಗಳ ಕಾರ್ಯತಂತ್ರದಲ್ಲಿ ಇದೆ? ಪ್ರತಿ ವರ್ಷದ ಆಯವ್ಯಯದಲ್ಲಿ ಅದೆಷ್ಟು ನೀರಾವರಿ ಯೋಜನೆಗಳು ಜಾರಿಯಾಗುತ್ತಿವೆ. ನದಿ ಜೋಡಣೆಯ ವಿಚಾರ ಎಲ್ಲಿಯವರೆಗೆ ಬಂದಿದೆ? ಬ್ಯಾಂಕುಗಳಿಗೆ ಸಾಲವನ್ನು ಕೊಡಲೇಳುವ ಮುನ್ನ ಇಂತಹ ಪ್ರೆಶ್ನೆಗಳನ್ನು ಸರ್ಕಾರಗಳು ಕೇಳಿಕೊಳ್ಳಬೇಡವೇ?

ಹೀಗೆ ರೈತನ ಸಾಲ ಹಾಗು ಸಾವುಗಳಿಗೆ ಪರಿಹಾರ ಕೇವಲ ಸಾಲಮನ್ನವೇ ಪರಿಹಾರವೆಂಬುದು ಅಕ್ಷರ ಸಹ ತಪ್ಪು ಕಲ್ಪನೆ. ಆತ ಬೆಳೆಯುವ ಫಸಲಿಗೆ ದಳ್ಳಾಳಿಗಳಿಲ್ಲದ ಒಂದು ಮುಕ್ತ ಮಾರುಕಟ್ಟೆಯನ್ನು ಶುರುಮಾಡುವುದು ಎಂದಿಗೆ? ಡಿಜಿಟಲ್ ಯುಗದಲ್ಲಿ ಆನ್ಲೈನ್ ಮುಖಾಂತರವೇ ತಾವು ಬೆಳೆದ ಫಸಲನ್ನು ಗ್ರಾಹಕರಿಗೆ ನೇರವಾಗಿ ಮಾರುವ ವ್ಯವಸ್ಥೆಯ ಉದ್ಘಾಟನೆ ಎಂದು? ಮುಂದೊಮ್ಮೆ ಅದು ಸಾದ್ಯವಾದರೂ ಅದರ ಬಗೆಗಿನ ತಿಳುವಳಿಕೆ ಅತಿಸಾಮಾನ್ಯ ರೈತನೊಬ್ಬನಿಗೆ ಮೂಡಿಸುವುದು ಹೇಗೆ? ಮುಕ್ತಮಾರುಕಟ್ಟೆಯ ಪ್ರಾರಂಭದಿಂದ ಕೊನೆ ಪಕ್ಷ ಹಿಂಗಾರು ಹಾಗು ಮುಂಗಾರಿನ ಕೊರತೆಯಲ್ಲಿಯೂ ಬಂದ ಕೊಂಚ ಬೆಳೆಯಲ್ಲೇ ಉತ್ತಮ ಆದಾಯವನ್ನು ರೈತ ಗಳಿಸಿಕೊಳ್ಳಬಹುದಲ್ಲವೇ?. ಅಲ್ಲದೆ ಈಗಾಗಲೇ ಬಹಳಷ್ಟು ಬಗೆಯ ಕೃಷಿ ವಿಮೆಗಳು ಜಾರಿಯಿದ್ದರೂ ರೈತಾಪಿ ವರ್ಗಕ್ಕೆ ಅದು ಗೊತ್ತಿರುವುದು ಬಹಳಾನೇ ವಿರಳ. ಕಾರಣ, ನಷ್ಟವೆಂಬುದು ಕಟ್ಟಿಟ್ಟ ಬುತ್ತಿಯಾಗಿರುವ ಇಂದಿನ ಕೃಷಿಯಲ್ಲಿ ಸರ್ಕಾರ ರೂಪಿಸುವ ಅಷ್ಟೂ ವಿಮೆಗಳನ್ನು ಚಾಚೂತಪ್ಪದೆ ಪ್ರತಿ ರೈತನಿಗೂ ಮಾಡಿಕೊಟ್ಟರೆ ವರ್ಷ ಪೂರ್ತಿ ಅವರ ಪರಿಹಾರದ ಹಣವನ್ನು ಹೊಂದಿಸುವುದರಲ್ಲೇ ಆಗಿಹೋಗಬಹುದೇನೋ ಎಂಬ ಭಯವೂ ಅದರ ಹಿಂದೆ ಅಡಗಿಕೊಂಡಿರುತ್ತದೆ. ಆದ ಕಾರಣ ಅರ್ಥಪೂರ್ಣ ವಿಮೆ ಯೋಜನೆಗಳನ್ನು ಜಾರಿಗೊಳಿಸುವುದಲ್ಲದೆ ಅದನ್ನು ರೈತಸಾಮಾನ್ಯನ ಮನೆಮನೆಗೂ ತಲುಪುವಂತೆ ನೋಡಿಕೊಳ್ಳಬೇಕಲ್ಲವೇ?

ಒಟ್ಟಿನಲ್ಲಿ ಯಾವುದೇ ಲಂಗು ಲಗಾಮಿಲ್ಲದೆ ಸಾಲಮನ್ನ ಎಂದು ಕೋಟಿ ಕೋಟಿಗಳಷ್ಟು ಹಣದ ಹೊರೆಯನ್ನು ಜನರ ಹೆಗಲ ಮೇಲೆ ಹೊರಿಸುವ ಸರ್ಕಾರಗಳು ಸಾಲಮನ್ನದ ನಂತರ ಅಥವಾ ಸಾಲಮನ್ನದ ಮೊದಲು ಹಣಕ್ಕಿಂತಲೂ ಪರ್ಯಾಯವಾಗಿ ಯಾವ್ಯಾವ ವ್ಯವಸ್ಥೆಯನ್ನು ರೈತರಿಗೆ ಮಾಡಿಕೊಡಬೇಕು ಎಂದು ಆಲೋಚಿಸಬೇಕು. ಅಲ್ಲದೆ ಹಣವೆಂದರೆ ಸರ್ವಸ್ವವೇ ಆಗಿರುವ ಇಂದಿನ ಕಾಲದಲ್ಲಿ ಸಾಲಪಡೆದವರೆಲ್ಲರೂ ಕಡುಬಡವ ರೈತರೆಂದು ತಿಳಿಯುವುದೂ ಮೂರ್ಖತನದ ಕೆಲಸ. ಬಲು ಹತ್ತಿರದಲ್ಲೇ ಕಂಡಿರುವಂತೆ ಸರ್ಕಾರ ಸಾಲ ಮನ್ನ ಮಾಡುತ್ತದೆ ಎಂಬ ಅದಮ್ಯ ಭರವಸೆಯಲ್ಲೇ ಲಕ್ಷ ಲಕ್ಷ ಸಾಲವನ್ನು ಬ್ಯಾಂಕುಗಳಿಂದ ಪಡೆದು ತಿಂದು ತೇಗಿರುವವರೂ ಉಂಟು.

ಒಟ್ಟಿನಲ್ಲಿ ವಿಶ್ವಬ್ಯಾಂಕಿನ ಅತಿ ಹೆಚ್ಚು ಸಾಲ ಪಡೆದಿರುವ ನಂಬರ್ ಒನ್ ದೇಶವಾಗಿರುವ ಭಾರತ ಅಭಿವೃದ್ಧಿಯ ಮಂತ್ರ ಜಪಿಸುತ್ತ ಇಂತಹ ಮನಸಾ ಇಚ್ಛೆ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದರೆ ಸ್ವತಂತ್ರವಾಗಿಯೂ ಅತಂತ್ರವಾಗುವ ಕಾಲ ದೂರವಿಲ್ಲವೆಂದೆನಿಸುತ್ತಿದೆ.

Thursday, June 15, 2017

ಅಮ್ಮ, ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು….

ಇವು ಚಿತ್ರಕಥೆಯೂ, ಕಟ್ಟುಕಥೆಯೋ, ನಿಜವೋ ಅಥವ ಶುದ್ಧ ಸುಳ್ಳೋ ಸದ್ಯಕ್ಕೆ ಮಾತ್ರ ಎಲ್ಲವೂ ಗೋಜಲು.

ಆತ ತಮಿಳಿನ ಸುಪ್ರಸಿದ್ದ ನಟ. ಹೆಸರು ಧನುಷ್. ಗಡ್ಡವನ್ನು ತೆಳುವಾಗಿ ಬಿಟ್ಟು, ಕಪ್ಪಗೆ ತೆಳ್ಳಗೆ ಇರುವ ಈತ ಒಮ್ಮೆಲೇ ಹೀರೋ ಮೆಟೀರಿಯಲ್ ಎಂದರೆ ಯಾರಾದರೂ ಮೇಲೆ ಕೆಳಗೆ ನೋಡಿಯಾರು. ಆಗ ಈತ ಒಬ್ಬ ಅದ್ಬುತ ನಟ, ನಿರ್ದೇಶಕ, ಹಾಡುಗಾರ ಅಲ್ಲದೆ ಒಬ್ಬ ನಿರ್ಮಾಪಕನೂ ಹೌದು ಎಂದರೆ ಒಮ್ಮೆ ಕೇಳಿದವರು ಕಕ್ಕಾಬಿಕ್ಕಿಯಾಗುವರು. 'ತಮಾಷೆ ಮಾಡಬೇಡಿ ಸುಮ್ನಿರಿ ಸಾರ್' ಎಂದು ನಗುತ್ತಾ ಮುಂದೆ ಸಾಗುವರು. ಅದೂ ನಿಜ. ಬಹುಪಾಲು ಪ್ರೇಕ್ಷಕರಿಗೆ ನಟ ಎಂದಾಕ್ಷಣ ಸದೃಢ ಕಾಯ, ಭಿನ್ನ ಬಗೆಯ ಉಡುಗೆ, ಕಣ್ಣಿಗೊಂದು ಗ್ಲಾಸು, ಗಡುಸಾದ ಧ್ವನಿ, ಇತ್ಯಾದಿ ಇತ್ಯಾದಿಗಳೇ ಕಲ್ಪನೆಯಲ್ಲಿ ಮೂಡುತ್ತಿದ್ದವು. ಅಂತಹದರಲ್ಲಿ ಧನುಷನ ಭಾಹ್ಯ ದೇಹಕಾಯ ಇವೆಲ್ಲ ಹೀರೊ ಫ್ಯಾಕ್ಟರ್ಗಳಿಗೆ ಪ್ರೆಶ್ನಾರ್ಥಕವಾಗಿದಿತ್ತು. ಹೀಗೆ ಅಸಾಧ್ಯವೆಂಬ ಸರೋವರದಲ್ಲಿ ಸಾಧ್ಯವೆಂಬ ಹಡಗನ್ನು ಹರಿಬಿಟ್ಟ ಪರಿಯನ್ನು ಕಂಡು ಕೋಟಿ ಕೋಟಿ ಜನರು ಈತನ ಅಭಿಮಾನಿಗಳಾದರು. ನಟನೆಯನ್ನೇ ಅತಿದೊಡ್ಡ ಬಂಡವಾಳವಾಗಿಸಿಕೊಂಡು ಈತ ಬೆಳೆದದ್ದು ಇಂದಿಗೆ ಇತಿಹಾಸ.ಸದ್ಯಕ್ಕೆ ಈತನ ಬಗ್ಗೆ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿ ಈತನ ಪೋಷಕರ ಕುರಿತಾಗಿ ಎಂಬುದನ್ನು ಹಲವರು ಬಲ್ಲರು. ಆತನ ವಿಕಿಪೀಡಿಯ ಪೇಜ್ ಅನ್ನು ಒಮ್ಮೆ ಇಣುಕಿ ನೋಡಿದಾಗ ಆತನ ಹುಟ್ಟೆಸರು ವೆಂಕಟೇಶ ಪ್ರಭುವೆಂದು, ತಂದೆ ತಮಿಳಿನ ನಿರ್ಮಾಪಕ ಕಸ್ತೂರಿ ರಾಜ ಹಾಗು ತಾಯಿ ವಿಜಯಲಕ್ಷ್ಮಿ ಎಂದು ತಿಳಿಯುತ್ತದೆ. ಆದರೆ ಧಿಡೀರನೆ ಒಂದು ದಿನ ತಮಿಳುನಾಡಿನ ಯಾವುದೊ ಮೂಲೆಯಲ್ಲಿ ಜೀವನ ಸಾಗಿಸುತ್ತಿದ್ದ ಹಿರಿಯ ಜೀವಗಳೆರಡು ಧನುಷ್ ತಮ್ಮ ಮಗನೆಂದೂ, ಆತನ ಹುಟ್ಟೆಸರು ಕೇಲೈಸೆಲ್ವನ್ ಎಂದೂ ಹಾಗು ಅದಕ್ಕೆ ಪೂರಕವಾದ ಸಾಕ್ಷಿಗಳು ತಮ್ಮ ಬಳಿ ಇವೆಯೆಂದು ಹೇಳಿಕೊಂಡು ಕೋರ್ಟ ಮೆಟ್ಟಿಲನ್ನು ಏರುತ್ತವೆ. ಮಗನನ್ನು ಕಾಣದ ಅವರುಗಳು ಕೊನೆಪಕ್ಷ ಜೀವನ ನಿರ್ವಹಣೆಗಾಗಿ ಕರಾರುವಕ್ಕಾಗಿ 65 ಸಾವಿರ ರೂಗಳನ್ನು ಮಾಸಿಕವಾಗಿ ಕೊಡಬೇಕೆಂದು ಕೇಳಿಕೊಳ್ಳುತ್ತವೆ. ಕರುಳು ಚುರ್ರ್ ಎನ್ನುವ ಅವರ ಮುಗ್ದ ಮುಖಗಳು ಟಿವಿ ಪರದೆಯ ಮೇಲೆ ಮೂಡುತ್ತವೆ. ಅರೆಬೆಂದ ಸುದ್ದಿಗಳನ್ನೇ ಮೃಷ್ಟಾನ್ನ ಭೋಜನದಂತೆ ಮಾಧ್ಯಮಗಳೂ ಅವುಗಳನ್ನು ನೋಡುಗರಿಗೆ ಉಣಬಡಿಸುತ್ತವೆ.



ಇನ್ನೊಂದೆಡೆ ತಮಿಳುನಾಡಿನ ಅಮ್ಮಳೆನಿಸಿಕೊಂಡ ಜಯಲಲಿತಾಳ ಸಾವಿನ ಕಣ್ಣೀರು ಆಕೆಯ ಅಭಿಮಾನಿಗಳಲ್ಲಿ ಇನ್ನೂ ಒಣಗುವುದರ ಒಳಗೆಯೇ ಇತ್ತಕಡೆ ಬಿಳಿ ಶಿರ್ಟ್ ಹಾಗು ಪಂಚೆಯನ್ನು ತೊಟ್ಟು, ಮುಖದ ಮೇಲೊಂದು ಮಂದಹಾಸದ ನಗೆಯನ್ನುಟ್ಟು ಮಾಯಾಲೋಕದಿಂದ ಇಳಿದುಬಂದ ಗಂಧರ್ವನಂತೆ ವ್ಯಕ್ತಿಯೊಬ್ಬ ಕೋರ್ಟನ ಮುಂದೋಗಿ ತಾನು ಜಯಲಲಿತಾ ಹಾಗು ತಮಿಳು ಚಿತ್ರರಂಗದ ಇನ್ನೊಬ್ಬ ನಟನಿಗೆ ಹುಟ್ಟಿದ ಸುಪುತ್ರನೆಂದೂ, ಅದನ್ನು ಸಾಬೀತುಪಡಿಸುವ ದಾಖಲೆಗಳು ತನ್ನ ಬಳಿ ಇವೆಯೆಂದೂ, ಆದರಿಂದ ಆಕೆಯ ಸಮಗ್ರ ಆಸ್ತಿಯೂ ತನಗೆ ಸೇರಬೇಕೆಂದು ಅನಾಥನಂತೆ ಅವಲತ್ತು ತೋಡಿಕೊಳ್ಳುತ್ತಾನೆ. ಆಡುವ ಮಕ್ಕಳ ದೂರುಗಳಂತಿರುವ ಕೇಸ್ ಗಳಿಗೆ ತೀರ್ಪುಗಾರರಬೇಕಾದ ಅನಿವಾರ್ಯತೆಯಲ್ಲಿ ಯಾವಾಗ ಈತನು ಕೋರ್ಟ್ ಗೆ ಪ್ರಸ್ತುತ ಪಡಿಸಿದ ದಾಖಲೆಗಳು ಸುಳ್ಳೆಂದು ಸಾಬೀತಾದವೋ ಕೆಂಡಾಮಂಡಲವಾದ ನ್ಯಾಯಾಧೀಶರು ಕೂಡಲೇ ಅವನನ್ನು ಜೈಲಿಗಟ್ಟುವಂತೆ ಆಗ್ರಹಿಸಿದರಂತೆ!

ಆಸೆ ಮಾನವನ ಸಹಜ ಗುಣಗಳಲ್ಲೊಂದು. ಒಪ್ಪೋಣ. ಮಮತೆಯೂ ಈ ವಾದಕ್ಕೆ ಪೂರಕವಾಗಿರಬಹುದು ಎಂದುಕೊಳ್ಳೋಣ. ಆದರೆ ಹುಟ್ಟಿಸಿದ ಮಕ್ಕಳ ಮೇಲಿನ ಅಥವಾ ಹೆತ್ತ ತಾಯಿಯ ಮಡಿಲಿನ ಮಮತೆ ಎಂಬುದು ಆಸೆಯಿಂದ ಹುಟ್ಟುವ ಭಾವಗಳಂತೂ ಅಲ್ಲವೇ ಅಲ್ಲ. ಅದು ಗಾಳಿಯಲ್ಲಿರುವ ಉಸಿರಿನಷ್ಟೇ ಸಹಜ. ಅದರಲ್ಲೂ ಹಣದ ಮೇಲಿನ ಆಸೆಗೋ ಅಥವಾ ವ್ಯಮೋಹಕ್ಕೋ ಒಳಗಾಗಿ ಇಂದು ಸಿಕ್ಕ ಸಿಕ್ಕವರನ್ನೆಲ್ಲ ಇವ ನನ್ನ ಮಗ, ಅವಳು ನನ್ನ ತಾಯಿ ಎನ್ನುವುದು ತಮ್ಮ ಕೆನ್ನಗೆ ತಾವೇ ರಪರಪನೆ ಭಾರಿಸಿಕೊಂಡಷ್ಟು ಹೀನ. ಒಂದು ಪಕ್ಷ ಮೇಲಿನ ವಾದಗಳು ನಿಜವೆಂದೇ ಇಟ್ಟುಕೊಂಡರು ಇಷ್ಟು ವರ್ಷಗಳ ಕಾಲ ಅಡಗಿಕೊಂಡಿದ್ದ ಆ ಬಾಂಧವ್ಯ ಧಿಡೀರನೆ ಜಾಗೃತಗೊಳ್ಳಲು ಕಾರಣವಾದರು ಏನು? ಅಂದು ಕೇಲೈಸೆಲ್ವನ್ ಮನೆ ಬಿಟ್ಟು ಓಡಿ ಹೋದಾಗ ಇರದ ಕೋರ್ಟು ಕಚೇರಿಗಳು ಇಂದು ಆತ ಕೋಟಿಗಳೊಡನೆ ಆಡಲು ಶುರುಮಾಡಿಕೊಂಡಾಗ ಒಮ್ಮೆಲೇ ಕಾಣಸಿಗುತ್ತವೆ ಏಕೆ ? ಈಕೆಯೇ ನನ್ನ ಅಮ್ಮ ಎಂದು ಹೇಳಿಕೊಳ್ಳಲು ಅವನಿಗೆ ಕಾಗದ ಪತ್ರಗಳ ಸಬೂತೆ ಏಕೆ ಬೇಕಾಗುತ್ತದೆ?. ಎಲ್ಲಿಯ ಪ್ರೀತಿ, ಅದೆಲ್ಲಿಯ ಮಮತೆ?. ಒಂದಂತೂ ನಿಜ. ಹಣವೆಂಬ ಆಸೆಯನ್ನು ತಾಯಿಯ ಮಮತೆಯ ಸ್ಥರಕ್ಕೆ ಏರಿಸಲಾಗದಿದ್ದರೂ ಅಂತಹ ಮಿಗಿಲಾದ ಒಂದು ಭಾವವನ್ನು ಇಂದು ಮಾನವ ನೋಟಿನ ಹಾಳೆಗಳೊಟ್ಟಿಗೆ ತುಲನೆ ಹಾಕುವ ಮಟ್ಟಿಗೆ ಕೆಳಗೆಳೆದು ತಂದು ನಿಲ್ಲಿಸಿದ್ದಾನೆ. ಈಗ ಎಲ್ಲವೂ ಹಣಮಯ. ಹುಟ್ಟಿ ಒದ್ದಾಡಿ ಕೊಸರಾಡುವ ಎಳೆಯ ಕಾಲುಗಳು ಎಂದು ಬಲಿತು ಜಗದ ಸಂತೆಯನ್ನು ಸೇರುತ್ತವೋ ಅಂದೇ ಅಸೆ ಎಂಬೊಂದು ಕವಚ ಅವುಗಳನ್ನು ಭದ್ರವಾಗಿ ಆವರಿಸಿಬಿಡುತ್ತದೆ. ಮುಂದೆ ಏನಿದ್ದರೂ ಅವುಗಳ ಓಟ ಆ ಆಸೆಯ ಗಮ್ಯದೆಡೆಗೆ. ದಾರಿಯಲ್ಲಿ ಸಿಗುವ ಭಾಂದವ್ಯಗಳೆಲ್ಲ ಆ ಓಟಕ್ಕೆ ನಗಣ್ಯ. ಇಲ್ಲವಾದಲ್ಲಿ ಇಷ್ಟು ವರ್ಷಗಳ ನಂತರ ಸಿಕ್ಕ ಮಗನಿಂದ ಒಂದಿಷ್ಟು ಪ್ರೀತಿ ದೊರೆತರೆ ಸಾಕಪ್ಪ ಎಂಬುದ ಬಿಟ್ಟು ಬರೋಬ್ಬರಿ 65 ಸಾವಿರ ನೋಟಿನ ಹಾಳೆಗಳೇ ಬೇಕೆನ್ನುವ ಆಸೆಯನ್ನು ಮಮತೆ ಎನ್ನಲಾಗುತ್ತದೆಯೇ?

ತನ್ನೆಲ್ಲವನ್ನು ಕಳೆದುಕೊಂಡು ಪರದೇಶಿಯಾದ ಜೀವವೊಂದಕ್ಕೆ ನೆನಪಾಗಾಗುವುದು ಅಮ್ಮನ ಮಡಿಲೇ ಅಂದರೆ ಅದು ಆ ಜೀವ ಮರುಹುಟ್ಟಿಗೆ ಹಾತೊರೆದಂತೆ. ತನ್ನೆಲ್ಲ ಪಾಪ ನಿವಾರಣೆಯ ಕೇಂದ್ರವೇನೋ ಎಂಬಂತೆ ತಾಯಿಯ ಮಡಿಲು ಆ ಜೀವಕ್ಕೆ ಕಾಣತೊಡಗುತ್ತದೆ.ತಾನು ಅದೆಷ್ಟೇ ನೀಚ ಕಾರ್ಯವನ್ನು ಮಾಡಿದ್ದರೂ, ಜಗತ್ತಿನ ಕಣ್ಣಿನಲ್ಲಿ ಇನ್ನೆಂದೂ ಮೇಲೇಳಲಾಗದ ಮಟ್ಟಿಗೆ ಕುಸಿದರೂ ಅಮ್ಮನ ಮಡಿಲು ಮಗುವನ್ನು ಕೈ ಬೀಸಿ ಕರೆಯುತ್ತದೆ. ಬಿ. ಆರ್. ಲಕ್ಷ್ಮಣ ರಾವ್ ಅವರ ‘ಅಮ್ಮ ನಿನ್ನ ಎದೆಯಾಳದಲ್ಲಿ’ ಎಂಬ ಅದ್ಭುತ ಸಾಲುಗಳಲ್ಲಿ ಹೊರಲೋಕಕ್ಕೆ ಬರಲು ಹಾತೊರೆಯುವ ಆ ಮಗು ಹೊರಬಂದು, ಜಗವೆಲ್ಲ ಜಾಲಾಡಿ ಆಯಾಸಗೊಂಡು ಕೊನೆಗೆ ಅಮ್ಮನ ಮಮತೆಯ ಮಡಿಲಿನ ಆಸರೆಯನ್ನೇ ಆಶಿಸುತ್ತದೆ. ಭಾವಗೀತೆಯ ಆ ಸಾಲುಗಳು ಅದೆಷ್ಟೇ ಅಪ್ಪಟ ಸತ್ಯವೆನಿಸಿದರೂ ನಿಜ ಜೀವನದಲ್ಲಿ 'ಕೊನೆಗೆ' ಎಂಬ ಘಳಿಗೆಯಲ್ಲಿ ಅಮ್ಮನ ಮಡಿಲ ನೆನಪನ್ನು ತರಿಸಿಕೊಳ್ಳುವ ಜೀವಗಳು ವಿರಳವಾಗತೊಡಗಿವೆ. ಅಂತಹ ವಿರಳತೆಯ ಹಿಂದಿರುವ ಕರಾಳ ಕೈಗಳು ಮಾತ್ರ ಅನೇಕ.

‘ದುಡ್ಡಿಗಿಂತ ಮಗನೆ, ನಿನ್ನ ಒಂದು ಬಿಗಿದಪ್ಪುಗೆ ನಮಗೆ ಸಾಕು. ಎಂದಿಗೂ ನೀನೆ ನಮ್ಮ ಮಗ.’ ಎಂದಿದ್ದರೂ ಧನುಷನೇ ಅತ್ತು ಅವರನ್ನು ಅಪ್ಪಿಕೊಳ್ಳುತ್ತಿದ್ದ್ದನೇನೋ, ಯಾರು ಬಲ್ಲರು? ತಿಂಗಳಿಗೆ 65 ಸಾವಿರ ಕೊಡುವುದು ಕೋಟಿಗಳಲ್ಲಿ ಆಡುವ ನಟನೊಬ್ಬನಿಗೆ ದೊಡ್ಡ ವಿಷಯವೇನಲ್ಲ. ಒಂದು ಪಕ್ಷ ಆದದ್ದು ಆಗಲಿ ಇನ್ನು ಮುಂದಿನ ಇಪ್ಪತ್ತು ವರ್ಷಕ್ಕಾಗುವ ದುಡ್ಡನ್ನು ಒಮ್ಮೆಲೇ ಕೊಟ್ಟು ಕೈ ತೊಳೆದುಕೊಂಡರೂ ಸಹ ಈತ ಪರೋಕ್ಷವಾಗಿ ಆ ಹಿರಿಯ ಜೀವಗಳ ವಾದವನ್ನು ಒಪ್ಪಿಕೊಂಡಂತಾಗುತ್ತದೆ. ಮುಂದೆ ಹಣದ ಆಸೆಯಲ್ಲಿ ಹೆತ್ತ ಪೋಷಕರನ್ನೇ ವಂಚಿಸಿ ಬಾಳುವ ಈತ ಯಾವ ಸೀಮೆಯ ನಾಯಕ ಎಂದು ತಮಿಳರು ಈತನನ್ನು ತಿರಸ್ಕರಿಸಿಯಾರು. ಅಥವಾ ಆ ಹಿರಿಯ ಜೀವಗಳ ವಾದದಂತೆ ಈತ ನಿಜವಾಗಿಯೂ ಅವರ ಮಡಿಲಲ್ಲೇ ಅತ್ತು ಒದ್ದಾಡಿ ಬೆಳೆದಿರಬಹುದಾ? ಅದೂ ನಿಜವಾದರೆ ಹೆತ್ತ ತಾಯಿ ಹಾಗು ಸಾಕು ತಾಯಿಯ ಪ್ರೀತಿಯಲ್ಲಿ ಯಾವುದು ಗೆಲ್ಲಬಹುದು? ಇಂತಹ ಸಂಧಿಘ್ನ ಘಳಿಗೆಯ ಚಿತ್ರಗಳಲ್ಲಿ ನಟಿಸಬೇಕಾದ ನಟನೊಬ್ಬ ತನ್ನ ಜೀವನವನ್ನೇ ಇಂದು ಅಂತಹ ಉದಾಹರಣೆಯಾಗಿ ಸಾಬೀತುಪಡಿಸಬೇಕಿದೆ. ಇದಕ್ಕೆಲ್ಲ ಉತ್ತರ, ಕಪ್ಪು ಬಿಳುಪಿನ ತೀರ್ಪು ಕೋರ್ಟ್ನಿಂದ ಹೊರಬಿದ್ದ ನಂತರವೇ.


ಒಟ್ಟಿನಲ್ಲಿ ತಮಿಳುನಾಡಿನ ಇತ್ತೀಚಿನ ಕೆಲ ವಿದ್ಯಮಾನಗಳಲ್ಲಿ ಹೆತ್ತವರ ಹಾಗು ಮಕ್ಕಳ ನಡುವಿನ ಹಗ್ಗ ಜಗ್ಗಾಟ ತುಸು ಹೆಚ್ಚಾಗಿಯೇ ಸುದ್ದಿಯಾಗಿತ್ತು. ನೀನೆ ನಮ್ಮ ಮಗ ಎಂಬ ವಾದ ಒಂದೆಡೆಯಾದರೆ, ಅವಳೇ ನನ್ನ ಅಮ್ಮ ಎನ್ನುವನ ವಾದ ಇನ್ನೊಂದೆಡೆ. ಹುಟ್ಟಿಸಿದ ಮಕ್ಕಳನ್ನು ಮತ್ತೊಮ್ಮೆ ಹೆತ್ತವರ ತೆಕ್ಕೆಗೆ ಹಾಕುವ ಕಾರ್ಯವನ್ನು ಅಲ್ಲಿಯ ಕೋರ್ಟುಗಳು ಮಾಡಬೇಕಿವೆ. ಆದರೆ ಹುಟ್ಟು ಮತ್ತು ಸಾವುಗಳ ಪರಿಧಿಯಿಂದಾಚೆಗೆ ಅನಂತವಾಗಿ ಸಾಗುವ ಆತ್ಮವೆಂಬ ಜ್ವಾಲೆಯನ್ನು ಹಿಡಿದು ಪ್ರೆಶ್ನೆಯನ್ನು ಕೇಳುವ ಕ್ಷಮತೆ ಭೂ ಲೋಕದ ಯಾವ ಕೋರ್ಟುಗಳಿಗೆ ಇದೆ? ಅದು ಸಾದ್ಯವಾಗುವುದಾಗಿದ್ದಿದ್ದರೆ ಅದೆಷ್ಟು ಕಪಟ ಮುಖಗಳು ಉದುರಿ ಬೀಳುತ್ತಿದ್ದವೋ ಏನೋ! ಒಂದು ಪಕ್ಷ ಸಾದ್ಯವಾಗಬಹುದಾಗಿದ್ದರೂ ಆತ್ಮಗಳನ್ನೂ ಸುಳ್ಳುಗಾರನನ್ನಾಗಿ ಮಾಡುವ ಕಲೆ ಮಾನವನಿಗೆ ದೊಡ್ಡದೇನಲ್ಲ ಬಿಡಿ. ಒಟ್ಟಿನಲ್ಲಿ ಮದರ್ಸ್ ಡೇ ಎನ್ನುತ ಕಂಪ್ಯೂಟರ್ನ ಕೀಲಿಗಳಿಂದ ಜಗತ್ತಿನ ಮುಂದೆ ಹಚ್ಚೊತ್ತುವ ಜನರು ತಮ್ಮಲಿರುವ ಆ ನಿಷ್ಕಲ್ಮಶ ಪ್ರೀತಿಯನ್ನು ಅದೆಂದಿನವರೆಗೆ ಎದೆಯ ಮಡಿಲಲ್ಲಿ ಕಾಪಾಡಿಕೊಳ್ಳುತ್ತಾರೆ ಎಂಬುದರಲ್ಲೇ ಆಧುನಿಕ ಜಗತ್ತಿನ ನಿಜಬಣ್ಣ ಅಡಗಿದೆ.

Thursday, June 8, 2017

'ಬಿಸಿಸಿಐ' ಬೆಳಕ ಹೊತ್ತಿಸದ ಶಶಾಂಕ!

ಕೆಲವಾರಗಳ ಹಿಂದಷ್ಟೆಯೇ ಬಿಸಿಸಿಐ (ಭಾರತೀಯ ಕ್ರಿಕೆಟ್ ಕೌನ್ಸಿಲ್) ಕ್ರಿಕೆಟ್ ಅಭಿಮಾನಿಗಳ ನಿದ್ದೆಗೆಡಿಸುವ ಸುದ್ದಿಯೊಂದನ್ನು ಹೊರಹಾಕಿತ್ತು. 'ಈ ಬಾರಿ ಟೀಮ್ ಇಂಡಿಯ ಚಾಂಪಿಯನ್ಸ್ ಟ್ರೋಪಿಯಲ್ಲಿ ಆಡುವುದು ಅನುಮಾನ' ಎಂಬೊಂದು ಅಣೆಬರಹದ ಹೇಳಿಕೆಗಳು ಕೇಳಿಬರತೊಡಗಿದವು. ಸುದ್ದಿಯನ್ನು ಕೇಳಿ ಅಭಿಮಾನಿ ಕೆಂಡಮಂಡಲವಾಗತೊಡಗಿದ್ದ. ಮಾಧ್ಯಮಗಳು ಬಿಸಿಸಿಐಯ ನಿರ್ಧಾರವನ್ನು ತರಾಟೆಗೆ ತೆಗೆದುಕೊಂಡವು. ಚರ್ಚೆಗಳ ಮೇಲೆ ಚರ್ಚೆಗಳು, ಕವರ್ ಸ್ಟೋರಿಗಳು, ದೋಷಾರೋಪಗಳು ಹೆಚ್ಚತೊಡಗಿದವು. ಬಿಸಿಸಿಐ ಮಾತ್ರ ತನ್ನ ಪಟ್ಟನ್ನು ಸಡಿಲಿಸಲಿಲ್ಲ. ಕೆಲದಿನಗಳ ನಂತರ ಅಸಲಿ ವಿಷಯ ಅಂಕಿ ಅಂಶಗಳ ಸಮೇತ ಹೊರಬರತೊಡಗಿದಾಗ ಬಹುಪಾಲು ಭಾರತೀಯರಿಗೆ ಬಿಸಿಸಿಐಯ ನಿರ್ಧಾರ ಸಮಂಜಶವಾಗಿದೆ ಎನಿಸತೊಡಗಿತು. ಆದರೆ ವಿಷಯವನ್ನು ಅರೆದು ಕುಡಿದ ನೋಡುಗನ ಮನದಲ್ಲಿ ಕೊನೆಗೆ ಒಂದು ಪ್ರೆಶ್ನೆ ಮಾತ್ರ ಉತ್ತರಿಸಲಾಗದೆ ಮೆತ್ತಗಾಯಿತು. ಬಿಸಿಸಿಐ ವಾದಕ್ಕಿಳಿದಿರುವ ICC (ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ಯ ಅಧ್ಯಕ್ಷ ಅಪ್ಪಟ ಭಾರತೀಯ ಹಾಗು ಮಾಜಿ ಬಿಸಿಸಿಐ ಅಧ್ಯಕ್ಷನಾಗಿದ್ದ ಶಶಾಂಕ್ ಮನೋಹರ್. ದೇಶೀ ಕ್ರಿಕೆಟ್ ಸಂಸ್ಥೆಗೆ ಬಲ ತುಂಬಲೆಂದೇ ಅಂದು ಖುದ್ದು ಬಿಸಿಸಿಐ ಶಶಾಂಕ್ ರವರನ್ನು ICC ಯ ಅಧ್ಯಕ್ಷಗಿರಿಗೆ ಹೆಸರಿಸಿ ಆ ಕುರ್ಚಿಯ ಮೇಲೆ ಕೂರಿಸಿಯೂ ಬಂದಿತ್ತು. (ಆತನ ಆಯ್ಕೆ ಇಂಡಿಪೆಂಡೆಂಟ್, ಅಂದರೆ ಯಾವುದೇ ಮಂಡಳಿಯ ಮುಖೇನ ಆರಿಸಿ ಬಂದಿರದಂತಹ ಆಯ್ಕೆ. ಆದರೂ ಒಂದಲ್ಲ ಒಂದು ಬಗೆಯಲ್ಲಿ ಬಿಸಿಸಿಐ ತನ್ನ ಪ್ರಭಾವವನ್ನು ಈ ಆಯ್ಕೆಯಲ್ಲಿ ಬೀರಿತ್ತು ಎಂದರೆ ಸುಳ್ಳಾಗದು) ಅಂತಹ ಒಬ್ಬ ವ್ಯಕ್ತಿ ಇಂದು ದೇಶಕ್ಕೇ ದ್ರೋಹ ಬಗೆಯುವಂತಹ ಕೆಲಸವೇತಕ್ಕೆ ಮಾಡುತ್ತಿದ್ದಾನೆ? ಅಷ್ಟಕ್ಕೂ ಆತನ ಈ ನಿಲವು ದೇಶಕ್ಕೆ ಮಾಡುತ್ತಿರುವ ದ್ರೋಹವೇ ಅಥವಾ ಜವಾಬ್ದಾರಿಯುತ ಸ್ಥಾನದಲ್ಲಿ ಕೂತು ಮಾಡುತ್ತಿರುವ ನಿಷ್ಕಳಂಕ ಕಾರ್ಯವೇ?

ICC ರೂಪಿಸುವ ತನ್ನ ಆಧಾಯ ಹಂಚಿಕೆ ಮಾದರಿಯೇ (ರೆವೆನ್ಯೂ ಶೇರಿಂಗ್ ಮಾಡೆಲ್) ಸದ್ಯಕ್ಕೆ ಇಷ್ಟೆಲ್ಲಾ ಚರ್ಚೆಗೆ ಕಾರಣವಾಗಿರುವುದು. ಆ ಮಾದರಿಯ ಪ್ರಕಾರ ICC ಯ ಅಧೀನಕ್ಕೊಳಪಡುವ ತಂಡಗಳ ನಡುವಿನ ಅಂತಾರಾಷ್ಟ್ರೀಯ ಪಂದ್ಯ/ಸರಣಿಗಳಿಂದ ಬಂದ ಲಾಭವನ್ನು ತಂಡಗಳಿಗೆ ಅವುಗಳ ಪ್ರಸಿದ್ಧತೆ ಹಾಗು ICC ಯ ಜೋಳಿಗೆಗೆ ಆದಾಯವನ್ನು ಗಳಿಸಿ ಕೊಡುವ ಆದರದ ಮೇಲೆ ಹಂಚಿಕೆ ಮಾಡಲಾಗುತ್ತದೆ. ಪ್ರಸಿದ್ದತೆಯ ವಿಷಯ ಬಂದಾಗ ನೂರಾರು ಧರ್ಮಗಳೊಟ್ಟಿಗೆ ಕ್ರಿಕೆಟ್ ಅನ್ನೂ ತನ್ನ ಇನ್ನೊಂದು ಧರ್ಮವೆಂದೇ ಪರಿಗಣಿಸಿರುವ ಭಾರತವನ್ನು ಹಿಂದಿಕ್ಕುವ ದೇಶ ಮತ್ತೊಂದಿಲ್ಲ. ಪರಿಣಾಮ ಭಾರತ ವಿಶ್ವದ ಅದ್ಯಾವ ಮೂಲೆಗೆ ಹೋದರೂ ಅಲ್ಲಿ ಹಣದ ಹೊಳೆಯನ್ನೇ ಹರಿಸಿ ಪ್ರೇಕ್ಷಕರನ್ನು ರಂಜಿಸಿಯೇ ಬರುತ್ತದೆ. ಆದಕಾರಣ ಒಟ್ಟು ಆದಾಯದ ಬಹುಪಾಲು ಹಕ್ಕು ಬಿಸಿಸಿಐ ಎಂಬ ದೈತ್ಯನಿಗೇ ಸಲ್ಲುತ್ತದೆ ಹಾಗು ಇದು ಸಮಂಜಶವೂ ಕೂಡ. ಉಳಿದಂತೆ ಇಂಗ್ಲೆಂಡ್ ಹಾಗು ಆಸ್ಟ್ರೇಲಿಯಾ ತಂಡಗಳು ಈ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿವೆ. 2013 ರಲ್ಲಿ ರೂಪಿಸಲ್ಪಟ್ಟ ಆಧಾಯ ಹಂಚಿಕೆ ಮಾದರಿಯ ಪ್ರಕಾರ ಭಾರತ, ಇಂಗ್ಲೆಂಡ್ ಹಾಗು ಆಸ್ಟ್ರೇಲಿಯಾ ತಂಡಗಳನ್ನು 'ಬಿಗ್ 3' ತಂಡಗಳೆಂದು ಪರಿಗಣಿಸಿ ICC ತಾನು ಗಳಿಸಿದ ಬಹುಪಾಲು ಲಾಭವನ್ನು ಈ ಮೂರು ತಂಡಗಳಿಗೂ, ಉಳಿದ ಹಣವನ್ನು ಇತರೆ ಸದಸ್ಯ ತಂಡಗಳಿಗೂ ಹಂಚಿಕೆ ಮಾಡುತ್ತಿದ್ದರೂ ಯಾವೊಬ್ಬ ದೇಶವೂ ಈ ನಿಯಮದ ವಿರುದ್ಧ ತಕರಾರು ಎತ್ತಲಿಲ್ಲ. ಒಂದು ಪಕ್ಷ ಅಂತಹ ಒಂದು ತಂಡ ಈ ನಿಯಮವನ್ನು ಪ್ರೆಶ್ನಿಸ ಹೊರಟರೂ, ಒಂದೋ ಬಿಸಿಸಿಐ ಗಳಿಸಿ ಕೊಡುತ್ತಿದ್ದ ಆದಾಯದ ಮುಂದೆ ಅಂತಹ ತಂಡದ ಆದಾಯ ಪುಡಿಗಾಸಿಗೂ ಸಮವಿರುತ್ತಿರಲಿಲ್ಲ ಅಥವಾ ಇದರಿಂದ ಬಿಸಿಸಿಐ ಕುಪಿತಗೊಂಡು ಇನ್ನು ಮುಂದೆ ತಾನು ಆ ತಂಡದೊಂದಿಗೆ ಪಂದ್ಯಗಳನ್ನೇ ಆಡದೇ ಬರುವ ಕಾಸನ್ನೂ ಕೈಚೆಲ್ಲಿ ಕೂರಬೇಕು ಎಂಬ ಒಳಭಯ. ಆ ಮಟ್ಟಿನ ಬಿಗಿಹಿಡಿತ ಅಂದು ಬಿಸಿಸಿಐ ವಿಶ್ವಕ್ರಿಕೆಟ್ ನಲ್ಲಿ ಮೂಡಿಸಿತ್ತು. ಈ ನಿಯಮದ ಹಿಂದಿದ್ದ ಮತ್ತೊಂದು ಬಲವಾದ ಕಾರಣ ICC ತನ್ನ ಒಟ್ಟು ಆದಾಯದ ಪ್ರತಿಶತ 80 ರಷ್ಟು ಈ ಮೂರು ತಂಡಗಳಿಂದಲೇ ಗಳಿಸುತ್ತಿರುವುದು. ಅಂದರೆ ಉಳಿದ ಅಷ್ಟೂ ತಂಡಗಳಿಂದ ICC ಯ ಜೋಳಿಗೆಯ ಭರ್ತಿ ಕೇವಲ 20% ನಷ್ಟು ಮಾತ್ರ. ಆದ ಕಾರಣ 2015 ರಿಂದ 2023 ರ ವರೆಗೆ ಭಾರತ ಒಟ್ಟು ಆದಾಯದ ನಿಂಹಪಾಲು ಅಂದರೆ ಸುಮಾರು 570 ಮಿಲಿಯನ್ ಡಾಲರ್(20.3%), ಉಳಿದಂತೆ ಇಂಗ್ಲೆಂಡ್ ಹಾಗು ಆಸ್ಟ್ರೇಲಿಯಾ ತಂಡಗಳು ಕ್ರಮವಾಗಿ 143 (4.4%) ಮತ್ತು 132 (2.7%) ಮಿಲಿಯನ್ ಡಾಲರ್ ಹಣವನ್ನು ಪಡೆಯಬೇಕು ಎಂಬುದು ಆ ಮಾದರಿಯ ಒಟ್ಟು ಸಮ್ಮತಿಯಾಗಿದ್ದಿತು. ಒಟ್ಟಿನಲ್ಲಿ ಹೆಚ್ಚು ಅಧಾಯವನ್ನು ಗಳಿಸಕೊಡುವವನು ಹೆಚ್ಚು ಪಡೆದುಕೊಳ್ಳುವನು ಎಂಬ ತಿಳಿಯಾದ ಸೂತ್ರ.

ಏತನ್ಮದ್ಯೆ ಚೆನ್ನೈ ಸೂಪರ್ ಕಿಂಗ್ಸ್ ನ ಒಡೆಯ ಹಾಗು ICCಯ ಅಂದಿನ ಚೇರ್ಮನ್ಗಿರಿಯನ್ನು ಅಲಂಕರಿಸಿದ್ದ ಶ್ರೀನಿವಾಸನ್ (ಇದೇ ಶ್ರೀನಿವಾಸನ್ ಅಂದಿನ ಬಿಗ್ ೩ ಫಾರ್ಮುಲಾ ದ ಜನಕ ಎಂಬುದು ಮತ್ತೊಂದು ಗಮನಾರ್ಹ ಹಾಗು ಅಷ್ಟೇ ಕುತೂಹಲವಾದ ಸಂಗತಿ) ಅವರು ವಿವಾದಗಳ ಸುಳಿಯಲ್ಲಿ ಸಿಲುಕಿ ತಮ್ಮ ಸ್ಥಾನದಿಂದ ಕೆಳಗಿಳಿದಾಗ, ಶಾಂತ ಹಾಗು ಅಷ್ಟೇ ಖಡಕ್ ವ್ಯಕ್ತಿತ್ವದ, ಮಾಜಿ ಬಿಸಿಸಿಐ ಅಧ್ಯಕ್ಷರೂ ಆಗಿದ್ದ ಶಶಾಂಕ್ ಮನೋಹರ್ ಅವರನ್ನು ಆ ಸ್ಥಾನಕ್ಕೆ ಆರಿಸಿ ಕಳುಹಿಸಿತು. ಐಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾದ ಆರೋಪವಿದ್ದ ಶ್ರೀನಿವಾಸನ್ ಅವರ ತಕರಾರುಗಳ ಹಿನ್ನಲೆಯಲ್ಲಿ ಭಾರತ ವಿಶ್ವ ಕ್ರಿಕೆಟ್ ನಲ್ಲಿ ಎಲ್ಲಿ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತದೆಯೋ ಎನ್ನುವಾಗ ಆಯ್ಕೆಯಾದ ಶಶಾಂಕ್ ಮನೋಹರ್ ಅವರಿಗೆ ದೇಶದ ಜೊತೆಗೆ ಅದರ ಕ್ರಿಕೆಟ್ ಮಂಡಳಿಯ ಘನತೆಯನ್ನೂ ಎತ್ತಿ ಹಿಡಿಯುವ ಗುರುತರ ಜವಾಬ್ದಾರಿ ಇದ್ದಿತು. ಅಂತೆಯೇ ಆತ ಆಯ್ಕೆಯಾದ ಕೆಲವೇ ದಿನಗಳಲ್ಲಿ ಅದೇ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಿ ಸ್ವದೇಶ, ಪರದೇಶ ಎನ್ನದೆ ತಾನು ಅಲಂಕರಿಸಿದ್ದ ಸ್ಥಾನಕ್ಕೆ ಪೂರಕವಾಗಿ ಯೋಚಿಸತೊಡಗಿದರು. ಅದರ ಪ್ರತಿಫಲವೇ ಎನ್ನಬಹುದು ಈ ‘ನವೀಕರಿಸಲಾದ’ ರೆವೆನ್ಯೂ ಶೇರಿಂಗ್ ಮಾಡೆಲ್. ಅಲ್ಲಿಯವರೆಗೂ ಸುಖದ ಕನಸನ್ನು ಕಾಣುತ್ತಿದ್ದ ಬಿಸಿಸಿಐ ಒಮ್ಮಿಂದೊಮ್ಮೆಗೆ ಬೆಚ್ಚಿ ಬೀಳುವ ಸುದ್ದಿಯನ್ನು ಕೇಳತೊಡಗಿತು. ಈ ಹೊಸ ಮಾದರಿಯಲ್ಲಿ ICC, ವಿಶ್ವ ಕ್ರಿಕೆಟ್ ನ ಏಳಿಗೆಯಷ್ಟನ್ನೇ ಗಮನದಲ್ಲಿಟ್ಟುಕೊಂಡು ಹಳೆಯ ಮಾದರಿಗೆ ಹೊಸ ರೂಪವನ್ನು ಕೊಟ್ಟಿತ್ತು. ಅದರ ಪ್ರಕಾರ ಭಾರತದ ಹಿಂದಿನ 20.9 % ಪಾಲನ್ನು ಕುಗ್ಗಿಸಿ 10.3% ನಷ್ಟು ಮಾಡಿದ್ದಿತು. ಸುಮಾರು 570 ಮಿಲಿಯನ್ ಡಾಲರ್ ಬರುವ ಜಾಗಕ್ಕೆ ಭಾರತಕ್ಕೆ ಈಗ ಸಿಗುತ್ತಿರುವು ಕೇವಲ 290 ಮಿಲಿಯನ್ ಡಾಲರ್. ಭಾರತವನ್ನು ಬಿಟ್ಟರೆ ಕೊಂಚ ನಷ್ಟವನ್ನು ಕಂಡ ಮತ್ತೊಂದು ಮಂಡಳಿ ಇಂಗ್ಲೆಂಡ್. ಆದರೆ ಅದರ ನಷ್ಟ ಕೇವಲ 20 ಮಿಲಿಯನ್. ಆದರೆ ಮಿಕ್ಕ ಅಷ್ಟೂ ದೇಶಗಳು ಈ ಹೊಸ ಮಾದರಿಯ ಪ್ರಕಾರ ಯಾವುದೇ ಲೆಕ್ಕಧಾರವಿಲ್ಲದೆಲ್ಲದೆ ಸುಮಾರು 110 ರಿಂದ 140 ಮಿಲಿಯನ್ ಡಾಲರ್ ವರೆಗೂ ಗಳಿಸಿಕೊಳ್ಳುತ್ತವೆ. ಅದೂ ಸಾಲದಕ್ಕೆ ಹೊಸತಾಗಿ ಸುಮಾರು 280 ಮಿಲಿಯನ್ ಡಾಲರ್ ನಷ್ಟು ಹಣವನ್ನು ಇತರೆ ಕ್ರಿಕೆಟ್ ಮಂಡಳಿಗಳ (ಐರ್ಲೆಂಡ್ , ಆಫ್ಘಾನಿಸ್ಥಾನ್ ಇತ್ಯಾದಿ) ಅಭಿವೃದ್ಧಿಗೆ ಇಲ್ಲಿ ಮೀಸಲಿಡಲಾಗಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಮೇಲಿನ 280 ಮಿಲಿಯನ್ ಡಾಲರ್ ಹಣದ ಸಂಪೂರ್ಣ ಪಾಲು ಭಾರತದ್ದೇ ಆಗಿರುತ್ತದೆ. ಅಂದರೆ ವಿಶ್ವದ ಇತರೆ ಕ್ರಿಕೆಟ್ ಮಂಡಳಿಗಳ ಅಭಿವುದ್ಧಿಗೆ ಬಿಸಿಸಿಐ ತಾನು ಗಳಿಕೊಡುವ ಕೂಳೆ ಬೇಕು ಎಂದಾಯಿತು. ಅಂದರೆ ಉಳಿದ ಏಳೆಂಟು ಕ್ರಿಕೆಟ್ ಮಂಡಳಿಗಳು ಇರುವುದಾದರೂ ಏತಕ್ಕೆ? ಅವುಗಳ ನಯಾ ಪೈಸೆಯೂ ವಿಶ್ವ ಕ್ರಿಕೆಟ್ ನ ಅಭಿವೃದ್ಧಿಗೆ ಖರ್ಚಾಗಬಾರದ್ದೇಕೆ? ಇದ್ಯಾವ ಸೀಮೆಯ ನ್ಯಾಯ?

ಸುಮಾರು ಇದೇ ವೇಳೆಗೆ ಬಿಸಿಸಿಐ ತನ್ನ ಅಂತಃಕಲಹ ಹಾಗು ಅಪಾರದರ್ಶಕ ಆಡಳಿತದಿಂದ ಸುಪ್ರೀಂಕೋರ್ಟಿನ ಚಾಟಿ ಏಟಿನ ಪೆಟ್ಟಿನಿಂದ ಸುಧಾರಿಸಿಕೊಳ್ಳುತ್ತಿತ್ತು. ಹೊಂಚು ಹಾಕಿ ಗಾಳ ಎಸೆದಂತೆ ಚಾಟಿ ಏಟಿನ ಜೊತೆಗೆ ಹೊಸ ಅಧಾಯದ ಮಾದರಿಯ ವಿಷಯದಲ್ಲಿ ಸಿಲುಕಿ ಅದು ಕಕ್ಕಾಬಿಕ್ಕಿಯಾಗತೊಡಗಿತು. ಆಗ ಅದರ ಮುಂದೆ ಕಂಡ ದೊಡ್ಡ ಅಸ್ತ್ರ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿಯುವುದು. ಕೂಡಲೇ ಆ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತು. ಹಣದ ವಿಷಯ ಒಂದೆಡೆಯಾದರೆ ಕಳೆದ ಬಾರಿಯ ಚಾಂಪಿಯನ್ಸ್ ಪಟ್ಟವನ್ನು ಉಳಿಸಿಕೊಳ್ಳುವ ಛಲ ಟೀಮ್ ಇಂಡಿಯ ಹಾಗು ಅದರ ಅಭಿಮಾನಿಗಳದ್ದು. ವಿಶ್ವ ಕ್ರಿಕೆಟ್ ನಲ್ಲಿ ಭಾರತದ ತೂಕವನ್ನು ಅರಿತ್ತಿದ್ದ ICC ಕೂಡಲೇ ದುಬೈನಲ್ಲಿ ಮೀಟಿಂಗ್ ಒಂದನ್ನು ಏರ್ಪಡಿಸಿ ಬಿಸಿಸಿಐ ಯನ್ನು ಮಾತುಕತೆಗೆ ಆಹ್ವಾನಿಸಿತು. ತಕ್ಷಣ ದುಬೈಯ ವಿಮಾನ ಹಿಡಿದವರು ಬಿಸಿಸಿಐ ಯ ಜಂಟಿ ಕಾರ್ಯದರ್ಶಿ ಅಮಿತಾಬ್ ಚೌದರಿ. ಆ ಮೀಟಿಂಗಿಗೂ ಮುನ್ನ ICC ತನ್ನ ಹೇಳಿಕೆಯಲ್ಲಿ ಅಧಾಯದ ಹಿರಿಯನಾದ ಭಾರತಕ್ಕೆ, ಸದ್ಯಕ್ಕೆ ನೀಡುತ್ತಿರುವ 290 ಮಿಲಿಯನ್ ಡಾಲರ್ ಜೊತೆಯಾಗಿ ಇನ್ನೂ 100 ಮಿಲಿಯನ್ ಡಾಲರ್ ಅನ್ನು ಹೆಚ್ಚುವರಿಯಾಗಿ ನೀಡಲಾಗುವ ಒಂದು ಆಫರ್ ಅನ್ನು ಮುಂದಿಟ್ಟಿತ್ತು. ಆದರೆ ಬಿಸಿಸಿಐ ಇದಕ್ಕೆ ಕೊಂಚವೂ ಸಮ್ಮತಿಸದೆ ತನ್ನ ಹಕ್ಕನ್ನು ಪಡೆದೇ ತೀರುತ್ತೇನೆಂದು ಪಟ್ಟು ಹಿಡಿಯಿತು. ಅಲ್ಲದೆ ICCಯ ಇತರೆ ಸದಸ್ಯ ದೇಶಗಳಿಗೆ ಓಟಿನ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಲು ಮನವಿ ಮಾಡಿತು. ಆದರೆ ಓಟಿಂಗ್ ಪ್ರಕ್ರಿಯೆಗೆ ಸುತರಾಂ ಒಪ್ಪದ ICC ಒಂದು ಪಕ್ಷ ಓಟಿಂಗ್ ಆಗಲೇಬೇಕಾದರೆ, ಅದರಲ್ಲಿ ಬಿಸಿಸಿಐ ಕನಿಷ್ಠ ನಾಲ್ಕು ಓಟುಗಳನ್ನಾದರೂ ಪಡೆಯಲೇಬೇಕು. ಅದಕ್ಕಿಂತಲೂ ಕಡಿಮೆ ಓಟುಗಳನ್ನು ಪಡೆದರೆ ಸದ್ಯಕ್ಕೆ ನೀಡಲಾಗುತ್ತಿರುವ 100 ಮಿಲಿಯನ್ ಹೆಚ್ಚುವರಿ ಹಣವನ್ನೂ ವಾಪಾಸ್ ಪಡೆಯಲಾಗುವುದು ಎಂದು ಹೇಳಿಕೆಯನ್ನು ಕೊಟ್ಟಿತ್ತು. ಆಸ್ಟ್ರೇಲಿಯಾ, ಶ್ರೀಲಂಕಾ ಹಾಗು ಜಿಂಬಾಂಬೆ ತಂಡಗಳ ಮೇಲಿದ್ದ ಅತಿಯಾದ ನಂಬುಗೆಯಿಂದ ಅಂದು ಅಭಿಷೇಕ್ ಚೌದರಿ ಓಟಿಂಗ್ ಪ್ರಕ್ರಿಯೆಗೆ ಅಸ್ತು ಎಂದರು. ಆದರೆ ಫಲಿತಾಂಶ ಮಾತ್ರ ಅಕ್ಷರ ಸಹ ಅವರ ನಿಂತ ನೆಲವನ್ನೇ ಅದುರಿಸಿತ್ತು. ಇದ್ದ ಹತ್ತು ಓಟುಗಳಲ್ಲಿ ಭಾರತ ಪಡೆದದ್ದು ಕೇವಲ ಒಂದೇ ಓಟು, ಅದು ತನ್ನದೇ ಓಟು! 'ಕೆಲಸ ಇರದ ಆಚಾರಿ ಸುಮ್ನೆ ಇರದೇ ಅದೇನೋ ಮಾಡ್ದ' ಅನ್ನೋ ಹಾಗೆ ಸಿಗುತ್ತಿದ್ದ ಒಂದು ಉತ್ತಮ ಮೊತ್ತವನ್ನೂನಂಬಿಗಸ್ತರೆಂದು ತೋರ್ಪಡಿಸಿಕೊಳ್ಳುವ ಗೆಳೆಯರನ್ನು ನಂಬಿ ಬಿಸಿಸಿಐ ಕೈ ಚೆಲ್ಲಿ ಕೂತಿತು.


ಪ್ರಸ್ತುತ ಸ್ಥಿತಿಯಲ್ಲಿ ಶಶಾಂಕ್ ಮನೋಹರ್ ಬಿಸಿಸಿಐಯ ಪಾಲಿಗೆ ತೆರೆಮರೆಯ ವಿಲನ್ ನಂತೆ ಕಂಡರೂ ವಿಶ್ವ ಕ್ರಿಕೆಟ್ ನ ಭವಿಷ್ಯವನ್ನು ಗಮನದಲ್ಲಿಟ್ಟು ಯೋಚಿಸಿದಾಗ ಅವರ ಆಲೋಚನೆಗಳು ಶುಭ್ರವಾಗಿದೆ ಎನಿಸದಿರುವುದಿಲ್ಲ. 2013 ರ ಐಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣದ ನಂತರ ಪ್ರತಿ ಐಪಿಎಲ್ ಮ್ಯಾಚ್ ಗಳೂ ಇನ್ನು ಮುಂದೆ ತನಿಖೆಗೆ ಒಳಪಡಬೇಕು ಎಂದು ವಾದಿಸಿದರಲ್ಲದೆ ಅಂದಿನ ಬಿಸಿಸಿಐ ಅಧ್ಯಕ್ಷರಾಗಿದ್ದ ಶ್ರೀನಿವಾಸನ್ ಅವರ ಹೆಸರು ಫಿಕ್ಸಿಂಗ್ ಮಾಫಿಯಾ ದಲ್ಲಿ ಕೇಳಿಬಂದಾಗ ಅವರನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡ ಯಾರಿಗೂ ಭಯಪಡದ ಸ್ವಭಾವದ ಮನುಷ್ಯನೀತ. ಅಲ್ಲದೆ 2008 ರಿಂದ 2011 ರ ವರೆಗೆ ಬಿಸಿಸಿಐ ಅಧ್ಯಕ್ಷರಾಗಿ ದೇಶೀ ಕ್ರಿಕೆಟ್ ನ ಉನ್ನತಿಗೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಂಡ ಕಳಂಕ ರಹಿತ ವ್ಯಕ್ತಿತ್ವ ಅವರದ್ದಾಗಿತ್ತು. ಅಂತಹ ಒಬ್ಬ ವ್ಯಕ್ತಿ ಯಾವುದೇ ಕಾರಣವಿಲ್ಲದೆ ಕೇವಲ ಒಂದೇ ಮಂಡಳಿಯ ವಿರುದ್ಧ ಹಗೆ ಸಾದಿಸುತ್ತಾನೆಂದರೆ ಅದು ನಂಬುಗೆಗೆ ದೂರವಾದ ಮಾತು . ಆದರೆ ಇವರ ಅಂತಹ ದೃಢ ನಿರ್ಧಾರಗಳೇ ಅವರಿಗೆ ಸಾಕಷ್ಟು ವೈರಿಗಳನ್ನು ಸೃಷ್ಟಿಸಿಕೊಟ್ಟಿತ್ತು. ಈ ಮದ್ಯೆ ಇದೇ ಮಾರ್ಚ್ ನಲ್ಲಿ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟದ್ದೂ ಉಂಟು!. ಆದರೆ ಹಲವರ ಸಂಧಾನದಿಂದ ಪುನ್ಹ ಮತ್ತೊಮ್ಮೆ ಅವರು ಅಧ್ಯಕ್ಷಗಿರಿಯ ಸ್ಥಾನದಲ್ಲಿ ಕೂರಲು ಸಮ್ಮತಿಸಿದ್ದಾರೆ. ಆದರೆ ಹೊಸ ರೆವೆನ್ಯೂ ಮಾಡೆಲ್ ನ ಅವರ ನಿರ್ಧಾರ ಇನ್ನೂ ಅಚಲವಾಗಿಯೇ ಇದೆ ಎಂದರೆ ಆತ ಅದೆಂಥಹ ಗಟ್ಟಿ ಮನುಷ್ಯ ಎಂದು ಊಹಿಸಬಹುದು. ಸದ್ಯಕ್ಕೆ ಬಿಸಿಸಿಐ ದೊಡ್ಡ ಮನಸ್ಸು ಮಾಡಿ ICC ಯ ನಿರ್ಧಾರವನ್ನು ಒಪ್ಪಿಕೊಳ್ಳುವುದು ಹಾಗು ವಿಶ್ವ ಕ್ರಿಕೆಟ್ನಲ್ಲಿ ಹಿರಿಯಣ್ಣನೆನಿಸಿಕೊಂಡಿರುವಾಗ ಆ ಅಣ್ಣನ ಸ್ಥಾನದ ಜವಾಬ್ದಾರಿ ಇದೆಂದು ಭಾವಿಸಿ ಎಲ್ಲರೊಟ್ಟಿಗೂ ಮುನ್ನೆಡೆದು ತನ್ನ ದೊಡ್ಡತನವನ್ನು ಸಾರಬೇಕಿದೆ. ಪ್ರತಿ ವರ್ಷ ನೆಡೆಸುವ ಐಪಿಎಲ್ ನಿಂದಲೇ ಅದು ಗಳಿಸಿಕೊಳ್ಳುವ ಲಾಭ ಸುಮಾರು 400 ಮಿಲಿಯನ್ ಡಾಲರ್ ನ ಗಡಿಯನ್ನು ದಾಟುತ್ತದೆ ಎಂದರೆ ತನ್ನ ಅತಿಯಾಸೆಯನ್ನು ಕೊಂಚ ಅದುಮಿಟ್ಟಿಕೊಂಡರೆ ನಷ್ಟವೇನೂ ಇಲ್ಲ, ಎಂದು ಅನಿಸದಿರುವುದಿಲ್ಲ!

Thursday, June 1, 2017

ರಾತ್ರಿ ಕಂಡ ಭಾವಿಗೆ ಹಗಲು ಬಿದ್ದವರ್ಯಾರು?!

ಡೊನೊಲ್ಡ್ ಟ್ರಂಪ್. ಇತ್ತೀಚಿನ ದಿನಗಳಲ್ಲಿ ಈ ಹೆಸರನ್ನು ಯಾರು ತಾನೇ ಕೇಳಿರಲಿಕ್ಕಿಲ್ಲ. ಒಂದು ಪಕ್ಷ ನಮ್ಮ ದೇಶದ ರಾಷ್ಟ್ರಪತಿಯ ಹೆಸರೇ ತಿಳಿಯದಿದ್ದರೂ ಸಾಗರಗಳಾಚೆಗಿರುವ ಈ ಟ್ರಂಪ್ ಯಾರು, ಆತನ ಸುಂದರ ಮಗಳ ಹೆಸರೇನು, ಅವನ ಆಸ್ತಿಯ ಓಟ್ಟು ಮೊತ್ತವೆಷ್ಟು ಎಂಬೆಲ್ಲ ವಿಚಾರಗಳು ಸಾರಸಗಟಾಗಿ ಹೇಳಬಲ್ಲ ಬುದ್ದಿವಂತರಿದ್ದಾರೆ ನಮ್ಮಲ್ಲಿ. ಎಲ್ಲೋ ಒಂದೆಡೆ ಇದು ಪಾಶ್ಚಿಮಾತ್ಯೀಕರಣದ ಮತ್ತೊಂದು ಮುಖವೆಂದರೂ ಸುಳ್ಳಾಗದು.

ಅದೇನೇ ಇರಲಿ. ಸದ್ಯಕ್ಕೆ ಅಮೇರಿಕಾದ ನಲ್ವತ್ತೈದನೆಯ ಅಧ್ಯಕ್ಷ ಮತ್ತೊಮ್ಮೆ ಭಾರಿ ಸುದ್ದಿಯಲ್ಲಿ ಬಂದದ್ದು ಅಮೇರಿಕ ಹಾಗು ಸೌದಿ ಅರೇಬಿಯಾದ ನಡುವಿನ 110 ಬಿಲಿಯನ್ ಡಾಲರ್ ಗಳ ಶಸ್ತ್ರಾಸ್ತ್ರ ಒಪ್ಪಂದವಾದಾಗ. ಇದು ಅಮೇರಿಕ ಇಲ್ಲಿಯವರೆಗೂ ಇತರ ಯಾವುದೇ ದೇಶದೊಟ್ಟಿಗೂ ಮಾಡಿಕೊಂಡಿರದ ಅತಿ ದೊಡ್ಡ ಶಸ್ತ್ರಾಸ್ತ್ರ ಒಪ್ಪಂದ! ತನ್ನ ಅಧ್ಯಕ್ಷೀಯ ಚುನಾವಣಾ ಪ್ರಚಾರದುದ್ದಕ್ಕೂ ಸೌದಿಯನ್ನು ಕಾಯ ವಾಚಾ ಮಾನಸ ತೆಗಳುತ್ತಲೇ ಸಾಗಿಬಂದ ಟ್ರಂಪ್ ತಾನು ಅಧ್ಯಕ್ಷನಾದ ಮೇಲೆ ವಿಶ್ವದ ಬೇರ್ಯಾವ 'ಇಂಪಾರ್ಟೆಂಟ್' ಎನ್ನುವ ದೇಶಗಳ ಪ್ರವಾಸಕ್ಕೂ ಮುನ್ನವೇ ಸೌದಿ ರಾಜರ ಜೊತೆಗೂಡಿ ಕುಣಿಯುತ್ತಿದ್ದದ್ದನ್ನು ಕಂಡು ಜಗತ್ತು ಕೆಲಕಾಲ ತಲೆ ಕೆರೆದುಕೊಂಡಿತ್ತು. ಒಬಾಮ ಅದೇನೇ ಮಾಡಿದ್ದರೂ ನಾನು ಅದರ ತದ್ವಿರುದ್ದವಾಗಿಯೇ ಮಾಡಬೇಕೆಂದು ಹಠ ಹಿಡಿದ ಮಕ್ಕಳಂತೆ ಈತ ವರ್ತಿಸುತ್ತಿರುವುದು ಜಗಜ್ಜಾಹಿತ ವಿಷಯ. ಒಬಾಮ ಆಡಳಿತ ಯಾವುದನ್ನು ವಿಶ್ವದ ಕಂಟಕ ಎಂದು ಕರೆಯುತ್ತಿತ್ತೋ ಅಂತಹ ಒಂದು ನಿರ್ಧಾರವನ್ನು ನೀರು ಕುಡಿದಂತೆ ಟ್ರಂಪ್ ಆಡಳಿತ ಅಂದು ತೆಗೆದುಕೊಂಡಿತ್ತು. ತನ್ನ ಎಲ್ಲ ನಿರ್ಧಾರವನ್ನು ಎಕ್ಸಲೆಂಟ್ ಎಂದು ತೋರಿಸುವ ಬರದಲ್ಲಿ ಮದ್ಯಪ್ರಾಚ್ಯಾ ದೇಶಗಳ ನಿದ್ದೆಯನ್ನಾಳುವಮಾಡುವ ಕುತಂತ್ರವೇನಾದರೂ ಇದರ ಹಿಂದೆ ಅಡಗಿದ್ದರೆ ಈಗಾಗಲೇ ಮದ್ದುಗುಂಡುಗಳ ಕಪ್ಪು ಹೊಗೆಯಿಂದ ಕರಕಲಾಗಿ ಹೋಗುತ್ತಿರುವ ಇಲ್ಲಿಯ ನೆಲ ಅಕ್ಷರ ಸಹ ಬೂದಿಯ ಗುಡ್ಡೆಯಾಗುವ ಮಾತು ಸುಳ್ಳಾಗುವುದಿಲ್ಲ. ಅಷ್ಟಕ್ಕೂ ಈ ಶಸ್ತಾಸ್ತ್ರ ಒಪ್ಪಂದವನ್ನು ಒಬಾಮ ಆಡಳಿತ ಹಿಡಿತಗೊಳಿಸಿದ್ದೇಕ್ಕೆ? ಟ್ರಂಪ್ ಸರ್ಕಾರಕ್ಕೆ ಇದರಿಂದ ಆಗುವ ಲಾಭವಾದರೂ ಏನು? ಶಿವನ ಪೂಜೆಯಲ್ಲಿ ಕರಡಿಗೇನು ಕೆಲಸ ಎಂದುಕೊಂಡು ಹಾಯಾಗಿ ಮಲಗಿಕೊಂಡಿರುವ ಜಗತ್ತಿಗೆ ಇದರಿಂದ ಆಗುವ ಪರಿಣಾಮಗಳೇನು?

ವಿಶ್ವವನ್ನೇ ತನ್ನ ತೈಲ ಶಕ್ತಿಯಿಂದ ಕುಣಿಸುವ ತಾಕತ್ತಿರುವ ಸೌದಿ ದೇಶಕ್ಕೆ ಪಕ್ಕದಲ್ಲಿರುವ ಇರಾನ್ ನ ಕಂಡರೆ ಕೆಂಡವನ್ನು ಮೈಯ್ಯ ಮೇಲೆ ಸುರಿದುಕೊಂಡಂತೆ ಆಡುತ್ತದೆ. ಎಂದಿಗೂ ಆ ದೇಶದ ಮೇಲೆ ತನ್ನ ಒಂದು ಹದ್ದಿನ ಕಣ್ಣನ್ನು ಇರಿಸಿಗೊಂಡಿರುತ್ತದೆ. ಹೆಚ್ಚುಕಡಿಮೆ ತನ್ನಷ್ಟೇ ತೈಲವನ್ನು ಉತ್ಪಾದಿಸಬಲ್ಲ ಸಾಮರ್ಥ್ಯವಿರುವ, ವಿಶ್ವ ಮಾರುಕಟ್ಟೆಯಲ್ಲಿ ತನ್ನ ಬಾಸ್-ಗಿರಿಗೇ ಸಡ್ಡು ಹೊಡೆಯಬಲ್ಲ ದೇಶವಾವದರಿಂದ ಅದು ರಕ್ಷಣಾತ್ಮಕವಾಗಿ ತೆಗೆದುಕೊಳ್ಳುವ ಪ್ರತಿ ಹೆಜ್ಜೆಗಿಂತಲೂ ತಾನು ಎರಡೆಜ್ಜೆ ಮುಂದೆ ಇರಬೇಕಂಬ ಧರ್ಪ ಸೌದಿಯರದ್ದು. ಇರಾನ್ ಅದಾಗಲೇ ಅತ್ಯುತ್ತಮ ಸಾಮರ್ಥ್ಯದ ಮಿಸೈಲ್ ಗಳನ್ನೂ ಹೊಂದಿರುವುದಲ್ಲದೆ ತನ್ನ ರಕ್ಷಣಾ ವ್ಯವಸ್ಥೆಗೆ ಏನು ಬೇಕೋ ಅದೆಲ್ಲವನ್ನು ಹೆಚ್ಚಿನ ಆಸ್ಥೆಯಿಂದ ಅಚ್ಚುಕಟ್ಟಾಗಿ ಮಾಡಿಕೊಂಡು ಬಂದಿದೆ. ನೆಲ ಬಗೆದು ಎಣ್ಣೆಯನ್ನು ಎತ್ತುವ ಮಟ್ಟಿನ ಚತುರತೆ ಹೊಂದಿರುವ ಸೌದಿ ಅರೇಬಿಯಾ ಮಾತ್ರ ತನ್ನ ಮಿಲಿಟರಿ ಕಾರ್ಯಾಚರಣೆಗಳಿಗೆ/ ಕಾರ್ಯಕ್ರಮಗಳಿಗೆ ಬೇಕಾಗುವ ಅವಶ್ಯಕ ಯುದ್ಧ ಸಾಮಗ್ರಿಗಳಿಗೆ ಹೆಚ್ಚಾಗಿ ಇತರೆ ದೇಶಗಳನ್ನೇ ಅವಲಂಬಿಸಿರುತ್ತದೆ. ವರ್ಷಕ್ಕೆ ಒಮ್ಮೆ ಹಬ್ಬಕ್ಕೋ ಜಾತ್ರೆಗೋ ಶಾಪಿಂಗ್ ಗೆ ಹೋದಂತೆ ಒಂದಿಷ್ಟು ಬಿಲಿಯನ್ ಡಾಲರ್ ದುಡ್ಡನ್ನು ಸುರಿದು ತನಗೆ ಇಷ್ಟ ಬಂದ ಯುದ್ಧ ಸಾಮಗ್ರಿಗಳನ್ನು ಕೊಂಡು ತಂದರೆ ಇಲ್ಲಿನ ರಕ್ಷಣಾ ಸಚಿವಾಲಯಕ್ಕೆ ನೆಮ್ಮದಿಯ ನಿಟ್ಟುಸಿರು. ಹೀಗೆ ಯುದ್ಧ ಸಾಮಗ್ರಿಗಳ ಶಾಪಿಂಗ್ ಹೊರಡುವ ಸೌದಿ ದೊರೆಗಳು ಹೆಚ್ಚಾಗಿ ತಟ್ಟುವುದು ವಿಶ್ವದ ದೊಡ್ಡಣ್ಣ ಅಮೇರಿಕಾದ ಬಾಗಿಲು.

ಸೌದಿ ಹಾಗು ಅಮೇರಿಕ ನಡುವಿನ ಸಂಬಂಧ ದಶಕಗಳ ಕಾಲ ಹಳೆಯದು. ಮಧ್ಯದಲ್ಲಿ ಕೊಂಚ ಇರುಸು ಮುರುಸು ಉಂಟಾದರೂ ಸಂಬಂಧದ ಗಟ್ಟಿತನವೇನು ಅಷ್ಟಾಗಿ ಕ್ಷೀಣಿಸಲಿಲ್ಲ. 2001 ರ WTC ಧಾಳಿಯ ಹಿಂದೆ ಸೌದಿಯ ಕೈಚಳಕ ಇದೆಯೆಂಬ ಸುದ್ದಿಗಳು ಇದ್ದರೂ ಅಮೇರಿಕ ಅಷ್ಟಾಗಿ ತನ್ನ ವಕ್ರ ದೃಷ್ಟಿಯನ್ನು ಈ ವಿಷಯದ ಮೇಲೆ ಹರಿ ಬಿಡಲಿಲ್ಲ. ವರ ಕೊಡುವ ದೇವರನ್ನೇ ಹಿಡಿದು ಜೈಲಿನಲ್ಲಾಕಲಾದಿತೇ?! ಪರಿಣಾಮ ಅದೇನೇ ಕಷ್ಟ-ನಷ್ಟಗಳಿದ್ದರೂ ತೈಲದ ಧಾಹಕ್ಕೆ ಮಣಿದು ತಣ್ಣಗಿರಲೇಬೇಕಾದ ಅನಿವಾರ್ಯದ ಸ್ಥಿತಿ ಅಮೆರಿಕದಾಯಿತು. ಆದರೆ ಎಂದು ಅಮೇರಿಕ ‘ಷೇಲ್ ‘ತೈಲವನ್ನು (Shale Oil - ಒಂದು ಭಿನ್ನ ಬಗೆಯ ಕಲ್ಲಿನಿಂದ ತೈಲವನ್ನು ಉತ್ಪಾದಿಸುವ ವಿಧಾನ) ಉತ್ಪಾದಿಸಲು ಪ್ರಾರಂಭಿಸಿತೋ, ತೈಲದ ವಿಚಾರದಲ್ಲಿ ಸ್ವಾವಲಂಬಿಯಾಗುವ ಕನಸು ಕಂಡಿತೋ ಅಂದೇ ಈ ವಿಚಾರ ಕುರಿತು ಸೌಧಿ ದೇಶಕ್ಕೆ ಸಡ್ಡೋಡೇಯಲು ಶುರು ಮಾಡಿದ್ದು. ವಾಡಿಕೆಯಂತೆ ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ, ತೈಲದ ಬೆಲೆ ಕುಸಿತವನ್ನು ತಡೆಯಲು ವಿಶ್ವದ ತೈಲ ಉತ್ಪಾದಿಸುವ ಎಲ್ಲಾ ದೇಶಗಳು ಕೆಲಕಾಲ ತೈಲ ಗಣಿಗಾರಿಕೆಯನ್ನು ಕಡಿಮೆ ಮಾಡುತ್ತವೆ. ಇದು ಪೂರೈಕೆ ಕಡಿಮೆಯಾದಷ್ಟು ಕೋರಿಕೆ ಹೆಚ್ಚಾಗಿ ಬೆಲೆ ಕುಸಿಯತಂತೆ ತಡೆಯುವ ಸರಳ ಸೂತ್ರ. OPEC (Organization of Petrolium Exporting Companies) ಎಂಬ ವಿಶ್ವದ ಅತಿ ಹೆಚ್ಚು ತೈಲ ಉತ್ಪಾದಿಸುವ ದೇಶಗಳ ಸಂಘದ ಅಧ್ಯಕ್ಷನಾಗಿರುವ ಸೌದಿ, 2014 ರ ನವೆಂಬರ್ನಲ್ಲಿ ವಾಡಿಕೆಯಂತೆ ಉತ್ಪಾದನೆಯನ್ನು ನಿಲ್ಲಿಸದೆ ತೈಲದ ಬೆಲೆಯಲ್ಲಿ ಭಾರಿ ಅಲ್ಲೊಲ್ಲ ಕಲ್ಲೊಲ್ಲವನ್ನು ಉಂಟುಮಾಡಿತ್ತು. ಈ ಕಿತಾಪತಿಯ ಹಿಂದಿದ್ದ ಮುಖ್ಯ ಕಾರಣ ಅಮೆರಿಕದ ಷೇಲ್ ತೈಲವನ್ನು ಉತ್ಪಾದಿಸುವ ಕಂಪನಿಗಳನ್ನು ಪಾಪರ್ ಮಾಡುವುದು ಹಾಗು ಜಾಗತಿಕ ಇಂಧನ ಉತ್ಪಾದಕರ ಕುರ್ಚಿಯಲ್ಲಿ ಅಮೆರಿಕವನ್ನು ಕೂರದಂತೆ ಮಾಡುವುದು. ಅಲ್ಲಿಯವರೆಗೂ ತೆಪ್ಪಗೆ ಕೂತಿದ್ದ ರಷ್ಯಾವೂ ಕೂಡ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತೆ ಎಡೆಬಿಡದೆ ತೈಲವನ್ನು ಉತ್ಪಾದಿಸಲು ಶುರುಮಾಡಿದಾಗಲೇ ನೋಡಿ ಪೆಟ್ರೋಲ್ ಡೀಸೆಲ್ ಗಳ ಬೆಲೆ ಊಹಿಸಲಾಗದ ಮಟ್ಟಿಗೆ ಕ್ಷೀಣಿಸಿದ್ದು. ಪರಿಣಾಮ ಜಾಗತಿಕ ಮಟ್ಟದಲ್ಲಿ 110 ರಿಂದ 120 ಡಾಲರ್ ಪ್ರತಿ ಬ್ಯಾರೆಲ್ ಇದ್ದ ತೈಲದ ಬೆಲೆ ಒಂದು ಹಂತದಲ್ಲಿ 20 ಡಾಲರ್ ಪ್ರತಿ ಬ್ಯಾರೆಲ್ ಬರುವ ಸನಿಹದಲಿತ್ತು! ತೈಲದ ಬೆಲೆ ಏನೋ ಕುಸಿಯಿತು. ಅಮೆರಿಕದ ಹಲವು ತೈಲ ಕಂಪನಿಗಳ ಜೋಳಿಗೆಗಳು ಬರಿದೂ ಕೂಡ ಆದವು. ಆದರೆ ಜೊತೆ ಜೊತೆಗೆ ಕುಸಿಯತೊಡಗಿದ್ದು ಸೌದಿಯ ತೈಲ ಕಂಪನಿಗಳು! ಕುರುಡು ಕಾಂಚಾಣ ಕುಣಿಯುವ ಭರದಲ್ಲಿ ತನ್ನವರನ್ನೇ ತುಳಿದು ಅಪ್ಪಚ್ಚಿ ಮಾಡತೊಡಗಿತ್ತು. ಪರಿಣಾಮ ಬಹಳಷ್ಟು ತೈಲ ಕಂಪನಿಗಳು ಸೌದಿಯ ನೆಲದಿಂದ ಕಾಲುಕಿತ್ತವು. (ಈ ಸಂದರ್ಭದಲ್ಲಿ ತೈಲದ ಬೆಲೆ ಅರ್ಧಕ್ಕಿಂತ ಹೆಚ್ಚು ಕುಸಿದರೂ ಭಾರತದಲ್ಲಿ ಮಾತ್ರ ಅದು ಪೈಸೆಗಳಲ್ಲಿ ಇಳಿತ ಕಂಡಿದ್ದು ಮಾತ್ರ ಚಿದಂಬರ ರಹಸ್ಯವೇ ಸರಿ.) ತನ್ನ ತುಘಲಕ್ ಬುದ್ದಿಯ ಅರಿವು ಕೊನೆಗೂ ಆದ ಮೇಲೆ ಒಮ್ಮಿಂದೊಮ್ಮೆಗೆ ಸೌಧಿಯ ತೈಲ ಸಚಿವ ಅಮೆರಿಕದ ಕದವನ್ನು ತಟ್ಟಿ ಆದದ್ದೆಲ್ಲ ಆಗಿಹೋಯಿತು, ಇನ್ಮುಂದೆ ಇಂಥ ತಲೆಕೆಡುಕ ವಿಚಾರಗಳು ಬಂದಾಗ ವಿಚಾರ ವಿಮರ್ಶೆ ಮಾಡಿ ಸಾಗೋಣ ಎಂಬಂತೆ ಪತ್ರಿಕಾ ಹೇಳಿಕೆಯನ್ನು ನೀಡಿದ್ದು.

ಇಷ್ಟೆಲ್ಲಾ ಹಿನ್ನಲೆಯೊಂದಿಗೆ 2016 ರ ಅಧ್ಯಕ್ಷೀಯ ಚುನಾವಣೆಯಲ್ಲಿ ದೇಶದ ಕಡುಬದ್ದ ವೈರಿಗಳಲ್ಲಿ ಒಂದಾಗಿ ಮಾಡಿಕೊಂಡಿದ್ದ ಟ್ರಂಪ್ ಅಧ್ಯಕ್ಷ ಗಾದಿಯನ್ನು ಏರಿದ ದಿನವಂತೂ ಸೌದಿಗರ ಪಾಲಿಗೆ ನೆಲವೇ ಅದುರಿ ಹೋಗಿತ್ತು.

ಸೌದಿ ಹಾಗು ಅಮೇರಿಕಾದ ನಡುವಿನ ಶಸ್ತ್ರಾಸ್ತ್ರ ಒಪ್ಪಂದ ಹೊಸತೇನಲ್ಲ. ಒಬಾಮ ಆಡಳಿತದಲ್ಲೇ ಈ ಒಪ್ಪಂದಕ್ಕೆ ಹಸಿರು ನಿಶಾನೆಯನ್ನು ತೋರಲಾಗಿತ್ತಾದರೂ ಕೆಲ ಅಂಶಗಳನ್ನು ಆ ಒಪ್ಪಂದದಲ್ಲಿ ಸೇರಿಸಲೇ ಬೇಡವೆಂಬ ವಾದ ಬಿಗಿಯಾಗಿದ್ದಿತು. ತಿಳಿದವನು ಬಲ್ಲನೆಂಬುವಂತೆ ಸೌದಿ ತಾನು ಆಮದು ಮಾಡಿಕೊಳ್ಳುವ ಹೆಚ್ಚಿನ ಯುದ್ಧ ಸಾಮಗ್ರಿಗಳನ್ನು ಅಲ್-ಖೈದಾ ಹಾಗು ಇತರ ಭಯೋತ್ಪಾದಕ ಗುಂಪಿಗೆ ಸರಬರಾಜು ಮಾಡಿರುವ ಸುಳಿವುಗಳಿದ್ದವು. ಅಲ್ಲದೆ ತನ್ನ ರಕ್ಷಣೆಗಿಂತ ಇತರರ ಮೇಲೆ ಆಕ್ರಮಣ ಮಾಡಲೇ ಈ ಯುದ್ಧ ಸಾಮಗ್ರಿಗಳು ಬಳಕೆಯಾಗಿರುವುದಕ್ಕೂ ಪುರಾವೆಗಳು ಸಿಕ್ಕವು. ಕೂಡಲೇ ಒಬಾಮ ಆಡಳಿತ ಒಪ್ಪಂದದಲ್ಲಿ ಕೆಲ ಯುದ್ಧ ಸಾಮಗ್ರಿಗಳನ್ನು ತೆಗೆದು ಹಾಕಿ ಇಂತಿಷ್ಟೇ ಸಾಮಗ್ರಿಗಳನ್ನು ‘ಬೇಕಾದರೆ ಖರೀದಿಸಬಹು’ ಎಂದು ಬೇಕು ಬೇಡವಾಗಿ ಹೇಳತೊಡಗಿತು. ಕೈಗೆ ಬಂದ ತುತ್ತು ಬಾಯಿಗೆ ಬರದೇ ಸೌದಿಗರ ಕೋಪಕ್ಕೆ ಕಾರಣವಾಯಿತು. ಪರಿಣಾಮ ಎಂದೋ ಆಗಿ ಹೋಗಬೇಕಿದ್ದ ಒಪ್ಪಂದ ಕುಂಟಲು ಶುರುವಾಹಿತು. ನಂತರ ಟ್ರಂಪ್ ಅಧಿಕಾರಕ್ಕೇರಿದ ಮೇಲಂತೂ ಅಮೆರಿಕದೊಡಗಿನ ಶಸ್ತ್ರಾಸ್ತ್ರ ಒಪ್ಪಂದ ಇನ್ನು ಕನಸೇ ಎನಿಸಿಕೊಂಡಿದ್ದ ಸೌದಿ ರಾಜರುಗಳಿಗೆ ಈಗ ಒಮ್ಮಿಂದೊಮ್ಮೆಲೆ ವೈಟ್ ಹೌಸ್ ನ ಮುದ್ರೆ ಅಕ್ಷರ ಸಹ ಸಿಹಿ ಕಡಲಿನಲ್ಲಿ ಮುಳುಗಿಸೆಬ್ಬಿಸಿದೆ. ಈ ಒಪ್ಪಂದದಲ್ಲಿ ಒಬಾಮ ಆಡಳಿತ ನಿಷೇದಿಸಿದ ಯುದ್ಧ ಸಾಮಗ್ರಿಗಳ ಜೊತೆಗೆ ಇನ್ನೂ ಹೆಚ್ಚಿನ ಅತ್ಯಾಧುನಿಕ ಶಸ್ತ್ರಾಸ್ತ್ರ ಗಳನ್ನು ಸೌದಿ ಅರೇಬಿಯಾಕ್ಕೆ ಅಮೇರಿಕ ಪೂರೈಸಲಿದೆ. ಪ್ರತಿಯಾಗಿ ಸೌದಿ ದೊರೆಗಳು ಅಮೆರಿಕದಲ್ಲಿ ಸುಮಾರು 40 ಬಿಲಿಯನ್ ಡಾಲರ್ ನಷ್ಟು ಹಣವನ್ನು ಇನ್ಫ್ರಾಸ್ಟ್ರಕ್ಚರ್ ಕ್ಷೇತ್ರದಲ್ಲಿ ಊಡುವ ಕನಸ್ಸನ್ನು ಬಿತ್ತಿ ಟ್ರಂಪ್ ನನ್ನ ಹಿರಿ ಹಿರಿ ಹಿಗ್ಗಿಸಿದ್ದಾರೆ.

'ಥಿಂಗ್ ಬಿಗ್' ಎಂಬೊಂದೇ ಘೋಷವಾಕ್ಯವನ್ನು ಜಪಿಸುತ್ತ ಸಾಗುತ್ತಿರುವ ಟ್ರಂಪ್ ನ ನಿರ್ಧಾರಗಳು ಅದೆಷ್ಟು ಪಕ್ವಗೊಂಡ ನಿರ್ಧಾರಗಳು ಎಂಬುದನ್ನು ಜಗತ್ತು ಕಾದು ನೋಡಬೇಕಿದೆ. ನೀವು ಮಾರುತ್ತಿರುವ ಯುದ್ಧ ಸಾಮಗ್ರಿಗಳನ್ನು ಸೌದಿ ಉಗ್ರ ಸಂಘಟನೆಗಳಿಗೆ ರವಾನಿಸುತ್ತಿದೆಯಲ್ಲ ಎಂದು ಪ್ರೆಶ್ನಿಸಿದರೆ 'ನೋ ವೇಸ್, ಇವುಗಳೆಲ್ಲ ಆ ದೇಶದ ಗಡಿ ರಕ್ಷಣೆಗೆ ಹಾಗು ISIS ನಂತಹ ಉಗ್ರ ಸಂಘಟನೆಗಳ ವಿರುದ್ಧ ಹೊರಡುವುದಕ್ಕೆ' ಎಂದು ಆತ ಸೌದಿಗರ ಪಕ್ಷವನ್ನೇ ತೆಗೆದುಕೊಳ್ಳುತ್ತಾನೆ. ಇರಾನ್ ನೊಟ್ಟಿಗಿನ ತನ್ನ ಸಂಬಂಧ ಎಣ್ಣೆ ಸೀಗೆಕಾಯಿ ಆಗಿರುವಾಗ, ಅಲ್ಲದೆ ಸೌದಿ ಹಾಗು ಇರಾನ್ ನ ಮಾತುಕತೆಗಳು ಭಾಗಶಃ ಮುನಿಸೇಕೊಂಡಿರುವ ಸೂಕ್ತ ಸಂದರ್ಭದಲ್ಲಿ ಇರಾನ್ ನ ಮೇಲಿನ ತನ್ನ ಹಳೆಯ ಸೇಡನ್ನು ಸೌದಿ ಮುಖಾಂತರ ತೀರಿಸಿಕೊಳ್ಳುವ ಹುನ್ನಾರವೂ ಇದರಿಂದೆ ಇರಬಹುದು. ಇಲ್ಲಿಯವರೆಗೂ ಸುಮಾರು ಹತ್ತರಿಂದ ಹನ್ನೆರೆಡು ಯುದ್ಧಗಳಲ್ಲಿ ಸೆಣೆಸಿ ಒಮ್ಮೆಯೂ ಸೋಲನ್ನು ಕಾಣದ ಇರಾನ್ ಎಂಬ ಭಲಿಷ್ಟ ದೇಶಕ್ಕೆ ಇದು ಅಷ್ಟೇನೂ ದೊಡ್ಡ ತಲೆನೋವೆನಿಸದಿದ್ದರೂ ಸುಖಾಸುಮ್ಮನೆ ಇಂತಹ ಕಲಹಗಳನ್ನು ಹುಟ್ಟುಹಾಕಿಕೊಳ್ಳಲು ಅದು ಬಯಸುವುದಿಲ್ಲ.



ಈ ಹಿಂದೆ ದ್ವಿತೀಯ ವಿಶ್ವಯುದ್ದಕ್ಕೆ ಕಾರಣವಾಗಿದ್ದ ಜಪಾನಿನ ಪರ್ಲ್ ಹಾರ್ಬರ್ ಧಾಳಿ ಅಮೇರಿಕ ಹೇಳಿ ಮಾಡಿಸಿಕೊಂಡಿತ್ತು ಎಂಬೊಂದು ಕಾನ್ಸ್ಪಿರಸಿ ಥಿಯರಿ ಇದೆ. ಆ ಮೂಲಕ ಅಮೇರಿಕ ಎಲ್ಲಡೆ ಕೋಲಾಹಲವನ್ನು ಹಬ್ಬಿಸಿ, ಯುದ್ಧ ಸಾಮಗ್ರಿಗಳ ಬೇಡಿಕೆಯನ್ನು ಹೆಚ್ಚಿಸಿ ವಿಶ್ವವನ್ನೇ ತನ್ನ ಮರುಕಟ್ಟೆಯನ್ನಾಗಿ ಮಾಡಿಕೊಂಡಿತು ಎಂಬೊಂದು ವಾದವಿದೆ. ಈ ಥಿಯರಿ ನಿಜವೋ ಸುಳ್ಳೋ ಆದರೆ ಅಮೇರಿಕಾದದ ನಗುಮುಖದ ಹಿಂದಿರುವ ಚಾಣಾಕ್ಷ ಬುದ್ದಿಯನ್ನು ಅಲ್ಲಗೆಳೆಯಲಾಗುವುದಿಲ್ಲ. ಪ್ರಸ್ತುತ ಟ್ರಂಪ್ ಆಡಳಿತವೂ ಇಂತದೆ ಒಂದು ಒಪ್ಪಂದವನ್ನು ಮಾಡಿಕೊಂಡು ಸೌದಿ ದೊರೆಗಳ ಹಣವನ್ನು ಪೀಕತೊಡಗಿದೆ. ಆದರೆ ಕೇವಲ ಬಡಾಯಿ ಕೊಚ್ಚುವುದಷ್ಟೇ ಟ್ರಂಪ್ ನ ಸಾಮರ್ಥ್ಯ ವೆಂದು ಅರಿತಿದ್ದ ಜಗತ್ತಿಗೆ ಆತನ ಇತ್ತೀಚಿನ ಕೆಲವು ನಿರ್ಧಾರಗಳು ಅಕ್ಷರ ಸಹ ಕಾದ ತುಪ್ಪವಾಗಿದೆ. ಇತ್ತಕಡೆ ಯುದ್ಧ ಸಾಮಗ್ರಿಗಳನ್ನು ಗೆದ್ದ ಖುಷಿಯಲ್ಲಿ ಬೀಗುತ್ತಿರುವ ಸೌದಿ ಅರೇಬಿಯಾ ತಾನೊಂದು ಕಾಣದ ಗುಂಡಿಯೊಳಗೆ ಬಿದ್ದಿರಬಹುದೇ ಎಂಬುದನ್ನೂ ಸಾವಕಾಶವಾಗಿ ಕೂತು ವಿಶ್ಲೇಷಿಸಬೇಕಿದೆ.

Thursday, May 25, 2017

ಆಸ್ಕರ್ ನಾಮಾಂಕಿತ ಇವನ ಚಿತ್ರಗಳನ್ನು ವಿದೇಶಗಳಲ್ಲಿ ತೋರಿಸಿ ನಮ್ಮ ಮಾನ ಕಳೆಯಬೇಡಿ ಎಂದಿದ್ದರು...!!

ಇಂದಿಗೆ ಸುಮಾರು 65 ವರ್ಷಗಳ ಹಿಂದೆ ಮೂವತ್ತು ವರ್ಷದ ಯುವಕನೊಬ್ಬ ಬಂಗಾಳಿ ಬರಹಗಾರರಾದ ಭೀಹುತಿ ಭೂಷಣ್ ಬಂಡೋಪಾಧ್ಯಾಯ್ ಅವರ ಕಾದಂಬರಿಯನ್ನು ಆಧರಿಸಿ ಚಿತ್ರವೊಂದನ್ನು ನಿರ್ದೇಶಿಸುವ ಕನಸನ್ನು ಕಟ್ಟಿಕೊಳ್ಳತೊಡಗುತ್ತಾನೆ. ಚಿತ್ರಕಥೆ ಬರೆಯುವುದು ಆತನ ಫ್ಯಾಂಟಸಿ ಎನ್ನುವುದಾದರೆ ಚಿತ್ರನಿರ್ದೇಶನ ಅವನ ಬಹು ಕಾಲದ ಕನಸು. ಕನಸೇನೋ ಸರಿ, ಸಾಧಿಸುವುದೂ ಬಲು ದಿಟ, ಆದರೆ ತನ್ನ ಮೊದಲ ಆರಂಭಕ್ಕೆ ಬೇರೊಬ್ಬರ ಕೃತಿಯೇ ಏಕಾಗಬೇಕು? ಸ್ವಂತ ಕಲ್ಪನೆ ಹಾಗು ಸೃಜನಶೀಲತೆಯಿಂದ ಒಂದೊಳ್ಳೆ ಕಥೆಯನ್ನು ಕಟ್ಟಲು ನಿನಗೆ ಸಾಧ್ಯವಿಲ್ಲವೇ? ಒಂದು ಪಕ್ಷ ಚಿತ್ರ ಗೆದ್ದರೂ ಅದರ ಬಹುಪಾಲು ಶ್ರೇಯ ಮೂಲ ಕತೆಗಾರನಿಗೆ ಹೋಗುತ್ತದೆ. ಎಂಬೆಲ್ಲ ಪ್ರೆಶ್ನೆ, ಸಲಹೆಗಳನ್ನು ಎಳೆದುಕೊಂಡು ಮುನ್ನೆಡೆದ ಆತ ಯಾವುದೇ ಅನ್ಯ ಕಾರಣಗಳಿಗೂ ತನ್ನ ನಿರ್ಧಾರವನ್ನು ಬದಲಿಸಲಿಲ್ಲ. ಚಿತ್ರ ಸೆಟ್ಟೇರಿತು. ಅಲ್ಲಿನ ರಾಜ್ಯಸರ್ಕಾರವೇ ಅಂದು ಚಿತ್ರ ನಿರ್ಮಾಣದ ಹೊಣೆಯನ್ನು ಹೊತ್ತಿತು! ಆದರೇನಂತೆ, ಚಿತ್ರ ಶುರುವಾದ ಕೆಲವೇ ದಿನಗಳಲ್ಲಿ ಹಣಕಾಸಿನ ಸಮಸ್ಯೆ ಚಿತ್ರದ ಬಗ್ಗೆ ಹಲವರಿಗಿದ್ದ ನಿರುತ್ಸಾಹಗಳಿಗಿಂತ ಹೆಚ್ಚಾಯಿತು. ಆದರೆ ದೃತಿಗೆಡದ ಆತ ತಂಡವನ್ನು ಮುನ್ನೆಡೆಸಿ ಚಿತ್ರವನ್ನು ಪೂರ್ಣಗೊಳಿಸಿಯೇ ತೀರುತ್ತಾನೆ. ಅಂತೂ ಆಗಸ್ಟ್ 25, 1955 ಕ್ಕೆ ಚಿತ್ರ ಬಿಡುಗಡೆಗೆ ಸಿದ್ಧಗೊಂಡಿತು. ದೇಶದ ಪ್ರಧಾನಿ ನೆಹರು ಹಾಗು ಪಶ್ಚಿಮ ಬಂಗಾಳದ ಅಂದಿನ ಮುಖ್ಯಮಂತ್ರಿ ಬಿಧಾನ್ ಚಂದ್ರ ರಾಯ್ ಅವರು ಖುದ್ದಾಗಿ ಚಿತ್ರವನ್ನು ವೀಕ್ಷಿಸಲು ಬಂದಿದ್ದರು. ಇಷ್ಟೆಲ್ಲಾ ಸವಾಲುಗಳನ್ನು ಜಹಿಸಿ ಜೀವಪಡೆದ ಚಿತ್ರವೊಂದು ಜನಮಾನಸದಲ್ಲಿ ಬದುಕುತ್ತದೆಯೇ ಎಂಬ ಪ್ರೆಶ್ನೆ ಒಂದೆಡೆಯಾದರೆ, ಹಾಕಿರುವ ದುಡ್ಡು ವಾಪಾಸ್ ಬಂದರೆ ಸಾಕಪ್ಪ ಎಂಬುದು ಅದೆಷ್ಟೋ ಸರ್ಕಾರೀ ಅಧಿಕಾರಿಗಳ ಹರಕೆ. ಆಗಿನ ಮೇನ್ ಸ್ಟ್ರೀಮ್ ಚಿತ್ರಗಳಿಗೆ ಹೋಲಿಸಿದರೆ ತೀರಾ ಬಿನ್ನವಾಗಿದ್ದ ಚಿತ್ರ ಗೆಲ್ಲುವುದು ಕಷ್ಟ-ಕಷ್ಟ ಎಂಬುದು ಅಂದಿನ ಕೆಲ ವಿಮರ್ಶಕರ ಅಭಿಪ್ರಾಯವಾಗಿದ್ದಿತು. ಆದರೆ ದೇಶದ ಚಿತ್ರರಂಗಕ್ಕೇ ಒಂದು ಗಟ್ಟಿ ಬುನಾದಿಯನ್ನು ಹಾಕಲು ಆ ಚಿತ್ರ ಹೊರಟಿದೆಯೆಂದು ಅಂದು ಯಾರೊಬ್ಬರೂ ಊಹಿಸಲೂ ಸಾದ್ಯವಿರಲಿಲ್ಲ. ನಿರೀಕ್ಷೆಗೂ ಮೀರಿ ಚಿತ್ರ ಗೆದ್ದಿತು! ರಾಷ್ಟ ಮಟ್ಟದಲ್ಲಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಿಂಚನ್ನು ಹರಿಸಿತು. ಫ್ಯಾನ್ಸ್, ಇಟಲಿ, ಸ್ಕಾಟ್ಲೆಂಡ್, ಮನಿಲಾ, ಬರ್ಲಿನ್, ಕೆನೆಡಾ, ಅಮೇರಿಕ, ಜಪಾನ್ ಹೀಗೆ ಹೊದಡೆಯಲ್ಲ (ಫಿಲಂ ಫೆಸ್ಟಿವಲ್ನ) ಒಂದಲ್ಲೊಂದು ಪ್ರಶಸ್ತಿಯನ್ನು ಗೆದ್ದೇ ಬರುತ್ತಿತ್ತು. ಸ್ವಾತಂತ್ರ್ಯ ದಕ್ಕಿದ ದಶಕದೊಳಗೇ ಭಾರತದ ಚಿತ್ರರಂಗವನ್ನು ವಿಶ್ವದ ಎಲ್ಲೆಡೆಗೂ ಪಸರಿಸಿದ ಖ್ಯಾತಿ ಈ ಚಿತ್ರಕ್ಕೆ ಸಲ್ಲಬೇಕು. ಅಂದು ಮೂವತ್ತು ವರ್ಷದ ಆ ಯುವಕನ ಕನಸು, ನಿರ್ದೇಶನ, ಚಿತ್ರಕಥೆ ಎಲ್ಲಕ್ಕೂ ಮಿಗಿಲಾಗಿ ಆತನ ಆಯ್ಕೆ ನಿಜವಾಗಿಯೂ 'ಎಕ್ಸಲೆಂಟ್' ಎಂದು ಜನರು ಕೊಂಡಾಡಿದರು. ಆ ಲೆಜೆಂಡರಿ ಚಿತ್ರದ ಹೆಸರೇ 'ಪಥೇರ್ ಪಾಂಚಾಲಿ'. ನಿರ್ದೇಶಕ, ಮುಂದೆ ಭಾರತದಲ್ಲೇಕೆ  ವಿಶ್ವದಲ್ಲೇ ಮಹಾನ್ ನಿರ್ದೇಶಕರಲೊಬ್ಬನೆನಿಸಿಕೊಂಡ ಸತ್ಯಜಿತ್ ರೇ ಅಥವಾ ಬೆಂಗಾಲಿಗರ ನೆಚ್ಚಿನ ಮಾಣಿಕ್ -ದಾ.

ಸತ್ಯಜತ್ ಹುಟ್ಟಿ (1921) ಬೆಳೆದದ್ದೆಲ್ಲ ಬಂಗಾಳದ ನೆಲದಲ್ಲೇ. ಸಣ್ಣವನಿದ್ದಾಗಲೇ ತಂದೆಯ ಅಕಾಲಿಕ ಮೃತ್ಯು. ತಾಯಿಯ ಪ್ರೋತ್ಸಾಹದ ಮೇರೆಗೆ ಹೆಚ್ಚಿನ ವಿದ್ಯಾಭ್ಯಾಸ. ಅದೂ ಸಹ ‘ಗೀತಾಂಜಲಿ ಕವಿ’ ರವೀಂದ್ರನಾಥ್ ಠಾಗೂರರ ಶಾಂತಿನಿಕೇತನದಲ್ಲಿ. ಬತ್ತಿದ ಕೆರೆಯಲ್ಲಿ ವಿಲ-ವಿಲ ಹೊದ್ದಾಡುತ್ತಿದ್ದ ಜೀವಕ್ಕೆ ಚೈತನ್ಯದ ಮಳೆ ಸುರಿದ ಅನುಭವ. ಚಿಗುರೊಡೆಯುತ್ತಿದ್ದ ಹಸಿರಿಗೆ ಹೆಮ್ಮರವಾಗುವ ಕನಸ್ಸನ್ನು ಸತ್ಯಜಿತ್ ಕಂಡಿದ್ದೆ ಶಾಂತಿನಿಕೇತನದಲ್ಲಿ. ಕಲೆ ಹಾಗು ಸಾಹಿತ್ಯದ ಆಳವಾದ ಅಧ್ಯಯನ, ಚಿತ್ರಕಲೆ ಹಾಗು ಸಂಗೀತವನ್ನೂ ಕಲಿಯುವಂತೆ ಪ್ರೇರೇಪಿಸಿತು. 1942 ರ ಸುಮಾರಿಗೆ ಯುವ ಸತ್ಯಜಿತ್ ಕ್ರಿಯಾಶೀಲ ಕಲೆಗಾರನಾಗಿ ಅಲ್ಲಿಂದ ಹೊರಬರುತ್ತಾನೆ. ಚಿತ್ರಕಥೆ, ಚಿತ್ರ ನಿರ್ದೇಶನ ಎಂಬುದು ಆತನ ನಾಡಿ-ನಾಡಿಗಳಲ್ಲಿ ಸಂಚರಿಸಲ್ಪಡುತ್ತಿರುತ್ತದೆ. ಅಷ್ಟರಲ್ಲಾಗಲೇ ಬಂಗಾಳದಲ್ಲಿ ತನ್ನ ಸ್ನೇಹಿತರೊಳಗೂಡಿ ನಗರದಲ್ಲಿ ಚಲನಚಿತ್ರಗಳನ್ನು ಪ್ರದರ್ಶಿಸುವುದು, ಚಿತ್ರಗಳನ್ನು ವಿಮರ್ಶಿಸುವುದು ಹಾಗು ಅವುಗಳ ಬಗ್ಗೆ ಸಾಧ್ಯವಾದಷ್ಟು ಮಟ್ಟಿನ ಅದ್ಯಯನವನ್ನು ಮಾಡುವುದನ್ನೂ ಬೆಳೆಸಿಕೊಂಡಿರುತ್ತಾನೆ. ಮುಂದೆ ಖಾಸಗಿ ಕಂಪನಿಯೊಂದರಲ್ಲಿ ‘ಗ್ರಾಫಿಕ್ ಡಿಸೈನರ್' ಆಗಿ ಕೆಲಸ. ಅದು ಮೂಲತಃ ಬ್ರಿಟನ್ ದೇಶಕ್ಕೆ ಸೇರಿದ ಕಂಪೆನಿಯಾದ್ದರಿಂದ ಇದೆ ಕಂಪನಿ ಮುಂದೆ ಸತ್ಯಜಿತ್ ಅವರನ್ನು ಕೆಲಕಾಲಕ್ಕೆ ಬ್ರಿಟನ್ ಗೂ ಕಳುಹಿಸುತ್ತದೆ. ಬ್ರಿಟನ್ನಿನ ಐಷಾರಾಮತೆಯ ಸುಯೋಗದಲ್ಲಿ ಈತ ಮಾಡಿದ್ದು ಕೇವಲ ಚಲನ ಚಿತ್ರ ವೀಕ್ಷಣೆ. ಅದೂ ವಿವಿಧ ದೇಶಗಳ ಸುಮಾರು ನೂರು ಚಿತ್ರಗಳು! ಪಾಶ್ಚಾತ್ಯ ಚಿತ್ರ ನಿರ್ಮಾಣದದಿಂದ ಪ್ರಭಾವಿತನಾಗಲು ಮುಂದೆ ಹೆಚ್ಚೇನೂ ಈತನಿಗೆ ಬೇಕಾಗಲಿಲ್ಲ. ಏತನ್ಮದ್ಯೆ ಫ್ರಾನ್ಸ್ ನ ಪ್ರಸಿದ್ಧ ಚಿತ್ರ ನಿರ್ದೇಶಕ ಜೀನ್ ರೆನೊಯ್ರ್ ಅವರ ಪರಿಚಯ ಹಾಗು ಪ್ರೋತ್ಸಾಹ ಇವನ್ನಲ್ಲಿ ಚಿತ್ರ ನಿರ್ಮಾಣದದ ಬೆಗ್ಗೆ ಇನ್ನಷ್ಟು ಒಲವನ್ನು ಮೂಡಿಸುತ್ತದೆ. ನಂತರದ ಕೆಲವೇ ವರ್ಷಗಳಲ್ಲಿ ಎಳೆ ಹುಡುಗರ ತಂಡವೊಂದನ್ನು ಕಟ್ಟಿ 1952 ರ ಚಳಿಗಾಲದಲ್ಲಿ ತನ್ನ ಮೊದಲ ಚಿತ್ರದ ಚಿತ್ರೀಕರಣಕ್ಕೆ ಆರಂಭವನ್ನು ಹಾಡುತ್ತಾನೆ. 'ಪಥೇರ್ ಪಾಂಚಾಲಿ' ಚಿತ್ರ ನಿರ್ಮಾಣಕ್ಕೆ ತಗುಲಿದ ಸಮಯ ಬರೋಬ್ಬರಿ ಮೂರು ವರ್ಷ. ಚಿತ್ರದ ವೆಚ್ಚ ಲಕ್ಷದ ಗಡಿ ದಾಟಲಿಲ್ಲ.

ಪಥೇರ್ ಪಾಂಚಾಲಿ ಚಿತ್ರವನ್ನು ಬೆಂಗಾಲ ಸರ್ಕಾರ ನಿರ್ಮಿಸಲು ಒಪ್ಪುವುದಕ್ಕೂ ಮುನ್ನ ಸತ್ಯಜಿತ್ ನ ಚಿತ್ರಕ್ಕೆ ಹಣ ಸುರಿಯಲು ಒಂದು ನರಪಿಳ್ಳೆಯೂ ಮುಂದೆ ಬಂದಿರಲಿಲ್ಲ. ಬಂದರೂ ಒಂದಲ್ಲೊಂದು ನೆಪವನ್ನು ಹೇಳಿ ಜಾರಿಕೊಳ್ಳುತ್ತಿದ್ದರು. ಹೆಂಡತಿಯ ಒಡವೆ, ತನ್ನ ನೆಚ್ಚಿನ ಗ್ರಾಮಫೋನ್ ಗಳು ಹಾಗು ಮನೆಯ ಇನ್ನೂ ಹಲವು ವಸ್ತುಗಳನ್ನು ಸತ್ಯಜಿತ್ ಮಾರತೊಡಗಿದರು. ಆದರೆ ಅದರಿಂದ ಬಂದ ಹಣ ಮಾತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಿರುತ್ತಿತ್ತು. ಚಿತ್ರ ಕೀಲು ತಪ್ಪಿದ ಗಾಲಿಯಂತೆ ಅದ್ರಂಬರ್ದ ಮೂಡತೊಡಗಿತು. ಆದ ಕಾರಣ ಆತ ತನ್ನ ಗ್ರಾಫಿಕ್ ಡಿಸೈನರ್ ವೃತ್ತಿಯನ್ನು ಬಿಡಲಾಗಲಿಲ್ಲ. ವರ್ಷಾನುಗಟ್ಟಲೆ ಕುಂಟತೊಡಗಿದ ಚಿತ್ರಕ್ಕೆ ತಗುಲಿದ ಮತ್ತೊಂದು ಸಮಸ್ಯೆ ಅದರಲ್ಲಿನ ಮೂರು ಪಾತ್ರಗಳದ್ದು. ಒಂದು ಪುಟ್ಟ ಬಾಲಕ ಅಪ್ಪು, ಮತ್ತೊಂದು ಎಳೆಯ ವಯಸ್ಸಿನ ಹುಡುಗಿ ದುರ್ಗಾ ಹಾಗು ಅಜ್ಜಿ ಇಂದಿರ್ ಠಾಕುರನ್. ಬೆಳೆಯುವ ಅಪ್ಪುವಿನ ಧ್ವನಿ ಈ ಮೂರು ವರ್ಷದಲ್ಲಿ ಒಡೆದಿದ್ದರೆ ಬೇರೊಂದು ಧ್ವನಿಯನ್ನು ಚಿತ್ರಕ್ಕೆ ಅಳವಡಿಸುವುದು ಆಗಿನ ಕಾಲಕ್ಕಂತೂ ಅಸಾಧ್ಯವಾದ ಕೆಲಸವಾಗಿದ್ದಿತು. ಅಂತೆಯೇ ದುರ್ಗಾಳ ಹರೆಯ ಮೈ ನೆರೆಯುವಿನ ಆಸುಪಾಸು. ಇದೂ ಸಹ ಚಿತ್ರದ ಕಥೆಯ ಕೋರಿಕೆ. ಆದರೆ ವಯಸ್ಸಿನಲ್ಲಿ ಎಂಬತ್ತರ ಆಸುಪಾಸಿನಲ್ಲಿದ್ದ ಅಜ್ಜಿ ಇಂದಿರ್ ಠಾಕುರನ್ ಮಾತ್ರ ಒಮ್ಮೆ ಕೆಮ್ಮಿದರೂ  ಚಿತ್ರ ತಂಡದ ಜೀವವೇ ಹಾರಿಹೋದಂತಾಗುತ್ತಿತ್ತು! ಅದೃಷ್ಟವಶಾತ್ ಎಲ್ಲವೂ ನಿರ್ದೇಶಕ ಬಯಸಿದಂತೆ ನೆಡೆದವು.

ಸತ್ಯಜಿತ್ ತಮ್ಮ ಜೀವನದ ಸುಮಾರು ನಾಲ್ಕು ದಶಕಗಳನ್ನು ಚಿತ್ರ ನಿರ್ಮಾಣಕ್ಕಾಗಿಯೇ ಮೀಸಲಿಟ್ಟರು. ಪ್ರತೀ ಚಿತ್ರವೂ ಮತ್ತೊಂದಕ್ಕಿಂತ ತೀರಾ ಭಿನ್ನ ಹಾಗು ಅಷ್ಟೇ ಆಳವಾಗಿರುತ್ತಿದ್ದವು ಹಾಗು ಸಾಮಾನ್ಯನ ಮನ ಕುಲುಕುವಂತಿರುತ್ತಿದ್ದವು. ದಿ ಗೋಲ್ಡನ್ ಫೋರ್ಟ್ರೆಸ್, ಪಥೇರ್ ಪಾಂಚಾಲಿ, ದಿ ಬಿಗ್ ಸಿಟಿ, ಅಭಿಜಾನ್, ದ ವರ್ಲ್ಡ್ ಆಫ್ ಅಪು, ಚಾರುಲತಾ, ಅಪರಾಜಿತೋ ಇನ್ನು ಹಲವು ಚಿತ್ರಗಳು ಈ ಮಾತಿಗೆ ಕೆಲ ಉದಾಹರಣೆಗಳು. ಕಥೆ ಹಾಗು ಪಾತ್ರದ ಆಳವನ್ನು ಅರಿಯಬಲ್ಲವನಾಗಿದ್ದ ಅಂದಿನ ಬಂಗಾಲಿ ಪ್ರೇಕ್ಷಕ ಸತ್ಯಜಿತ್ ರ ಮೊದಲ ಕ್ರಿಯಾಕ್ಷೇತ್ರ. ತಾನು ಮಾಡುವ ಚಿತ್ರಗಳು ಅತಿ ನಿಧಾನ ಹಾಗು ನೋಡುಗರ ತಾಳ್ಮೆಯನ್ನು ಪರೀಕ್ಷಸಿಸುತ್ತದೆ ಎಂಬ ವಾದ ಒಂದೆಡೆಯಾದರೆ, ಪ್ರತೀ ಚಿತ್ರಗಳು ದೇಶವಿದೇಶಗಳಲ್ಲಿ ಪ್ರಶಸ್ತಿಗಳನ್ನು ಗೆದ್ದು ತರುತ್ತಿದ್ದದ್ದು ರಾಜಕೀಯ ನಾಯಕರಿಗೆ, ನಟರಿಗೆ ನಾಚಿಕೆಯನ್ನು ತರುತ್ತಿದ್ದದ್ದು ಮತ್ತೊಂದೆಡೆ. ಕಾರಣ ಈತ ದೇಶದ ಬಡ ಪರಿಸ್ಥಿಯನ್ನು, ಅಂದಿನ ಒಬ್ಬ ಸಾಮನ್ಯನ ಜೀವನದ ವೇತನೆಯನ್ನು ಅದ್ಯಾವ ಪರಿಗೆ ಚಿತ್ರದಲ್ಲಿ ಕಟ್ಟುತ್ತಿದ್ದನೆಂದರೆ ತಂಪು ಕೋಣೆಯಲ್ಲಿ ಪಾನೀಯಗಳೊಟ್ಟಿಗೆ ಸೂಟು ಬೂಟುಗಳಲ್ಲಿ ಚಿತ್ರವನ್ನು ನೋಡುವ ವಿದೇಶಿ ಪ್ರೇಕ್ಷಕನಿಗೆ ಕಡುಗಷ್ಟವೆಂದರೆ ಇದೇನಾ? ಭಾರತವೆಂದರೆ ಇಷ್ಟೇನಾ? ಎಂಬೊಂದು ಕೀಳರಿಮೆಯನ್ನು ತಂದಿಡುತ್ತಿತ್ತು. ಇದನ್ನು ಎದುರಿಸಲಾಗದೆ ನಮ್ಮ ಅಂದಿನ ಕೆಲನಟ ಮಣಿಯರು, ಘನ ರಾಜಕಾರಣಿಗಳು  ತಮ್ಮ ಸ್ಥಾನ , ಮಾನಕ್ಕೆ ಎಲ್ಲಿ ಕುತ್ತು ಬಂದಿತೆಂದು ಚಿತ್ರವನ್ನು ಬೇರ್ಯಾವ ದೇಶದಲ್ಲೂ ತೋರಿಸಬಾರದೆಂದು ಬೊಬ್ಬೆಯೊಡೆಯುತ್ತಿದ್ದರು. ಆದರೆ ಕಲೆಗೆ ಯಾವ ತಡೆ? ಜಗತ್ತು ಸತ್ಯಜಿತ್ ಅವರ ಕಲೆಯನ್ನು ಗುರುತಿಸಲು ಹೆಚ್ಚೇನು ಸಮಯ ತೆಗೆದುಕೊಳ್ಳಲಿಲ್ಲ. ತಮ್ಮ ಗ್ರಾಫಿಕ್ ಡಿಸೈನರ್ ವೃತ್ತಿಯ ತಂತ್ರಗಾರಿಕೆ, ಪಾಶ್ಚಾತ್ಯ ಚಿತ್ರ ನಿರ್ಮಾಣದ ಪ್ರಭಾವಳಿ ಹಾಗು ಅದಕ್ಕೆ ಪೂರಕವಾದ ಓದು, ಸಂಗೀತ ಹಾಗು ಬರವಣಿಗೆ ಸತ್ಯಜಿತ್ ರನ್ನು ನಿರ್ದೇಶಕರ ಸಾಲಿನಲ್ಲಿ ತೀರಾ ಭಿನ್ನವಾಗಿಸಿತು. ಸತ್ಯದ ನೆರಳಿನಲ್ಲಿ, ಯಾವುದೇ ಕಪೋಕಲ್ಪಿತ ಅವೈಜ್ಞಾನಿಕ ಕತೆಗಳಿಗೆ ಜೋತುಬೀಳದೆ ಸತ್ಯಜಿತ್ ಒಬ್ಬ ಜನಸಾಮನ್ಯನ ನೈಜ ದೃಷ್ಟಿಕೋನದಲ್ಲಿ ಚಿತ್ರವನ್ನು ನಿರ್ಮಿಸುತ್ತಿದ್ದರು.

ಟ್ರೈಲಾಜಿ ( ಕ್ರಮಾನುಗತ ತ್ರಿವಳಿ ಕಥೆಗಳು / ಚಿತ್ರಗಳು ) ಇಂದಿನ ಕಾಲದ ಪುಸ್ತಕ ಬರಹಗಾರರ ಟ್ರೆಂಡ್ ಎನ್ನಬಹುದು. ಆದರೆ ಆಗಿನ ಕಾಲಕ್ಕೆ ಅದನ್ನು ಚಿತ್ರದ ಮೂಲಕ ಸಾಧಿಸಿ ತೋರಿಸಿದವರು ಸತ್ಯಜಿತ್. 'ಪಥೇರ್-ಪಾಂಚಾಲಿ', 'ಅಪಾರ್ಜಿತೋ' ಹಾಗು 'ಅಪುರ್-ಸಂಸಾರ್' ಎಂಬ ಟ್ರೈಲಾಜಿ ಚಿತ್ರಗಳು ಕೇವಲ ಚಿತ್ರಗಳಾಗಿರದೆ ಬಂಗಾಳಿ ಹಾಗು ಭಾರತೀಯ ಸಿನಿಮಾಗಳ ದಂತಕಥೆಗಳೆನಿಸಿದವು. ಮೊದಲೇ ಹೇಳಿದಂತೆ ಕೇವಲ ಒಂದೇ ಕಥೆಗೆ ಅಥವಾ ವರ್ಗಕ್ಕೆ ಸೇರದ ವರ್ಸಾಟೈಲಿಟಿ ಸತ್ಯಜಿತ್ ರ ವ್ಯಕ್ತಿತ್ವದಾಗಿದ್ದಿತು.. ಅರ್ವತ್ತರ ದಶಕದಲ್ಲಿ ಬಂಗಾಲದ ಪೋರರ ಹರಟೆಗಳಲ್ಲಿ ಹಾಗು ಓದುಗಳಲ್ಲಿ ಹೆಚ್ಚಾಗಿ ಇರುತ್ತಿದ್ದದ್ದು ಪ್ರೊಫೆಸರ್ ಶೊನ್ಕು, ಫೆಲ್ಯೂಡ ಎಂಬ ಹಲವು ಪತ್ತೇದಾರಿ ಪಾತ್ರಗಳು ಹಾಗು ಅವುಗಳನ್ನು ಆಧರಿಸಿದ ಕಥೆಗಳು. ಆ ಕಥೆಗಳು ಅಂದಿನ ಕಾಲದ ಓದುಗರ ಕಲ್ಪನೆಗೂ ಮೀರಿದ ಧಾಟಿಯಲ್ಲಿ ಹಣೆಯಲ್ಪಡುತ್ತಿದ್ದವು ಹಾಗು ಅಷ್ಟೇ ಕುತೂಹಲಭರಿತವಾಗಿದ್ದವು. ಹಾಗಾಗಿ ಆ ಪಾತ್ರಗಳು ಇಂದಿಗೂ ಬಂಗಾಳದಲ್ಲಿ ಚಿರಪರಿಚಿತ. ಒಂತರ ಕನ್ನಡಿಗರಿಗೆ ಮಾಲ್ಗುಡಿ ಡೇಸ್ ಇದ್ದ ಹಾಗೆ. ಅಂತಹ ಪಾತ್ರಗಳ ಸೂತ್ರದಾರಿಯೇ ಈ ಸತ್ಯಜಿತ್. ಇವರ ಈ ಮಟ್ಟಿನ ಬಹುಮುಖ ಪ್ರತಿಭೆಗೆ 1967 ರಲ್ಲೇ ' ದಿ ಏಲಿಯನ್' ಎಂಬ ಇಂಡೋ -ಅಮೆರಿಕನ್ ಸೈನ್ಸ್-ಫಿಕ್ಷನ್ ಚಿತ್ರವೊಂದು ಸಟ್ಟೇರಲು ರೆಡಿಯಾಗಿತ್ತು. ಅದರ ಚಿತ್ರಕಥೆಯನ್ನೂ ಸತ್ಯಜಿತ್ ಬರೆದು ಮುಗಿಸಿದ್ದರು. ಆದರೆ ಕಾರಣಾಂತರಗಳಿಂದ ಚಿತ್ರ ನಿರ್ಮಾಣ ನಿಂತರೂ ಮುಂದೆ ಬಂದ ಸ್ಟೀವನ್ ಸ್ಪಿಲ್ ಬರ್ಗ್ ರವರ ‘ಈ.ಟಿ’ (The Extra Terrestrial ) ಚಿತ್ರಕ್ಕೆ ಬಳಕೆಯಾಗಿದ್ದು ಸತ್ಯಜಿತ್ ರವರ ಅದೇ ಚಿತ್ರಕಥೆಯೇ ಎಂಬ ವಾದ ಇಂದಿಗೂ ಕೇಳಿಬರುತ್ತದೆ!

ದೇಶವನ್ನು ಅತಿ ಹೆಚ್ಚು ಬಾರಿ ಆಸ್ಕರ್ ನಲ್ಲಿ ಪ್ರತಿನಿಧಿಸಿದ ಖ್ಯಾತಿ, ಜೀವಮಾನದ ಸಾಧನೆಗೆ ಆಸ್ಕರ್ ಅನ್ನು ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ, ಫ್ರಾನ್ಸ್ ದೇಶದ ಗೌರವ ಲೀಜನ್, ಭಾರತ ರತ್ನ, ಪದ್ಮಶ್ರೀ, ಪದ್ಮಭೂಷಣ ಅಲ್ಲದೆ ಮೊನ್ನೆಯಷ್ಟೇ ನಮ್ಮ ದೊರೆ ಭಗವಾನ್ ರಿಗೆ ಕೊಡಲ್ಪಟ್ಟ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಇನ್ನೂ ಹಲವಾರು ಪ್ರಶಸ್ತಿಗಳಿಗೆ ಭಾಜನರರಾಗಿರುವ ಇವರು ಬಂಗಾಲ ಚಿತ್ರ ಪ್ರೇಮಿಗಳಿಗೆ ಅಕ್ಷರ ಸಹ ದೇವತಾಮನುಷ್ಯರಂತೆ ಭಾಸವಾಗುತ್ತಾರೆ. ನಮ್ಮ ನಿಮ್ಮ ನಡುವಿನ ಹುಡುಗನೊಬ್ಬ ಬೆಳೆದು ವಿಶ್ವದಲ್ಲೇ ಅಗ್ರಮಾನ್ಯ ನಿರ್ದೇಶಕನೆನಿಸಿಕೊಂಡರೆ ಇರಬೇಕಾದ ಸಹಜ ಅಭಿಮಾನ ಬಂಗಾಳದವರಿಗೂ ಇದೆ ಅಷ್ಟೇ. ಮಾಣಿಕ್-ದಾ ಎಂದರೆ ಬಂಗಾಳ. ಬಂಗಾಳದ ಕಲೆ, ಸಾಹಿತ್ಯ ಹಾಗು ಸೃಜನಶೀಲತೆಯನ್ನು ದೇಶಕ್ಕೆ ವಿಶ್ವಕ್ಕೆ ಪರಿಚಯಿಸಿಕೊಟ್ಟ ಮೂರ್ತ ರೂಪ. ದೇಶ ಹಸಿವು ಬರಗಾಲವೆಂಬ ಬೆಂಕಿಯಲ್ಲಿ ಬೇಯುತ್ತಿದ್ದಾಗಲೇ ಪಥೇರ್ ಪಾಂಚಾಲಿಯಂತ ಚಿತ್ರವನ್ನು ಮಾಡಿ ಚಿತ್ರನಿರ್ಮಾಣದಲ್ಲಿ ನಾವೇನು ಕಡಿಮೆ ಎಂಬೊಂದು ಧಿಟ್ಟ ಸವಾಲನ್ನು ಜಗತ್ತಿನ ಮುಂದಿಟ್ಟ ಪ್ರತಿಭೆ. ಕಡು ಬಿಳಿ ಬಣ್ಣದ ಜುಬ್ಬಾ ಹಾಗು ಧೋತಿಯನ್ನು ತೊಟ್ಟು, ಘಾಡವಾದ ಕಣ್ಣುಗಳೊಳಗೆ ಆತ್ಮಾಭಿಮಾನದ ದೃಷ್ಟಿಯನ್ನು ನೆಟ್ಟು ಬಂಗಾಳದ ಬೀದಿಗಿಳಿದರೆ ಇಡೀ ಊರಿಗೆ ಊರೇ ಅವರ ಮುಂದೆ ತಲೆಬಾಗುತಿತ್ತು. ವಿಪರ್ಯಾಸವೆಂಬಂತೆ ಈ ಅಭಿಮಾನ, ಗೌರವ ಹಾಗು ಕಾಳಜಿಗಳು ಕೇವಲ ಬೆಂಗಾಲಕ್ಕೆ ಮಾತ್ರ ಸೀಮಿತವಾದವು. ವಿಶ್ವವನ್ನೇ ತನ್ನೆಡೆಗೆ ಮುಖ ಮಾಡುವಂತೆ ಮಾಡಿದ ಇವರ ಚಿತ್ರಗಳಾಗಲಿ, ಅವುಗಳು ದೇಶಕ್ಕೆ ತಂದ ಕೀರ್ತಿಯನ್ನಾಗಲಿ ಅಥವಾ ಅಂತಹ ಚಿತ್ರಗಳಿಂದ ಪ್ರೇರಿತರಾಗಿ 'ಕ್ವಾಲಿಟಿ' ಚಿತ್ರಗಳನ್ನು ತೆಗೆಯುವ ಮನೋಭಾವವಾಗಲಿ ನಮ್ಮ ದೇಶದ ಇತರ ನಿರ್ಮಾಪಕ ನಿರ್ದೇಶಕರಲ್ಲಿ ಹೆಚ್ಚಾಗಿ ಮೂಡಲಿಲ್ಲ. 'ಅಂಡ್ರೆಡ್ ಕ್ರೋರ್ ಬಾಕ್ಸ್ ಆಫೀಸ್', 'ಐಟಂ ಸಾಂಗ್' 'ರಾಪ್ ಸಾಂಗ್ಸ್' ಎಂಬ ಕಪೋಕಲ್ಪಿತ ಪದಗಳು, ಅರ್ಥಹೀನ ಬಿರುದುಗಳು ಹಾಗು ನಾಯಕನೇ ಚಿತ್ರದ ಮೂಲಸ್ತಂಭ ಎಂದಾಗಿಸಿರುವ ಇಂದಿನ ಕಾಲದಲ್ಲಿ ಸಾಮಾಜಿಕ ಕಳಕಳಿಯೊಟ್ಟಿಗೆ ಅಪ್ಪಟ ಸಾಹಿತ್ಯ ಹಾಗು ಸಂಗೀತದಿಂದ ಮೂಡುವ ಚಿತ್ರಗಳು ಮೂಡುವ ಕಾಲ ಮುಗಿದು ದಶಕಗಳೇ ಆಗಿವೆಯೋ ಎಂಬಂತಿದೆ. ಇಂತಹ ಸ್ಥಿತ್ಯಂತರದ ಕಾಲದಲ್ಲಿ ದೇಶೀ ಸಿನಿಮಾ ಇತಿಹಾಸದ ಪುಟಗಳಲ್ಲಿ ಸತ್ಯಜಿತ್ ಎಂಬ ಹೆಸರು ಧ್ರುವತಾರೆಯಂತೆ ಕಂಗೊಳಿಸುತ್ತಿದೆ. ಇಂತಹ ಧ್ರುವತಾರೆ ಜನಿಸಿ ಕಳೆದ ಮೇ 2ಕ್ಕೆ ಬರೋಬ್ಬರಿ ತೊಂಬಾತ್ತರು ವರ್ಷ. ರಾಜಕೀಯವೆಂಬ ಬಿಸಿನೆಸ್ನ ನಾಟಕದಾರಿಗಳನ್ನು ಅಥವಾ ಮಾಡಿರುವ ಮೂರು ಮುಕ್ಕಾಲು ಚಿತ್ರಕ್ಕೇ ಆಸ್ಕರ್ ಪ್ರಶಸ್ತಿಯನ್ನು ಮುಡಿಗೇರಿಸಿ ಸಾಧನೆಗೈದ ನಟಿಯೇನೋ ಎಂಬ ರೇಂಜಿನಲ್ಲಿ ದಿನ ಪೂರ್ತಿ ನೆಡೆಯುವ ಅವರ ಆಡಂಬರದ ಮದುವೆಯ ತುಣುಕುಗಳನ್ನು ವೈಭವೀಕರಿಸಿ ತೋರಿಸುವ ನಮ್ಮ ಮಾಧ್ಯಮಗಳು, ದೇಶದ ಹೆಸರನ್ನು ವಿದೇಶಿ ನೆಲಗಳಲ್ಲಿ ಮೊಳಗಿಸಿದ ಸತ್ಯಜಿತ್ ರಂತಹ ಧೀಮಂತರ ಹೆಸರನ್ನೇ ಅರಿಯದಿರುವುದು ಇತ್ತೀಚಿನ ದಿನಗಳ ನಮ್ಮ ವಿಪರ್ಯಾಸ.

Friday, May 12, 2017

ಇವರು ನೋವುಗಳ ಹತ್ತಿಕ್ಕಿ ನಗುವನ್ನು ಹೊತ್ತಿಸುವ ಅದೃಷ್ಯವಾಣಿಗಳು..!!


ಮಹಾನಗರಿಗಳ ಟ್ರಾಫಿಕ್ ಜಾಮ್ ಗಳೆಂಬ ಕಿರಿಕಿರಿ ಯಾರಿಗೆ ತಾನೇ ಇಷ್ಟ? ಇಳಿ ವಯಸ್ಸಿನಲ್ಲೂ ತನ್ನ ಮಾಲೀಕನ ಜಿಪುಣುತನಕ್ಕೆ ಮಣಿದು ಸಾಯುವವರೆಗೂ ಗೇಯುವ ಎಂಜಿನ್ ಗಳ ಆಕ್ರಂದನದ ದಟ್ಟ ಹೊಗೆಯಾಗಲಿ, ಪಕ್ಕದಲ್ಲೆಲ್ಲೋ ಮರಳುಗಾಡಿನ ಬೆಟ್ಟವೇ ಎದ್ದು ಕೂತಿರುವಂತೆ ಕಣ್ಣು ಕಿವಿ ಮೂಗು ಬಾಯಿ ಎಲ್ಲೆಂದರಲ್ಲಿ ಹೊಕ್ಕು ಉಪದ್ರವ ಮಾಡುವ ಧೂಳಾಗಲಿ, ಹುಚ್ಚು ನಾಯಿಗಳ ಸಂತೆಯೇ ತಮ್ಮನ್ನು ಅಟ್ಟಾಡಿಸಿಕೊಂಡು ಬಂದವೇನೋ ಎಂಬಂತೆ ಹೆದರಿ ಬೊಬ್ಬಿಕ್ಕುವ ವಾಹನಗಳ ರಣಕಹಳೆ ಅಥವಾ ತಲೆಗೆದರಿ ಚಿಂದಿ ಬಟ್ಟೆಯನ್ನುಟ್ಟು ಅನುಕಂಪದ ಕಂಗಳಿಂದ ಕೈಯಲ್ಲಿರುವ ಹೂವನ್ನೋ, ದಿನಪತ್ರಿಕೆಗಳನ್ನೋ ಅಥವಾ ಮತ್ಯಾವುದೋ ಮಕ್ಕಳನ್ನು ಸೆಳೆಯುವ ಅಂದದ ಗೊಂಬೆಯನ್ನೂ ಹಿಡಿದು ಬೇಡವೆಂದರೂ ಕೊಂಡುಕೊಳ್ಳುವಂತೆ ಪೀಡಿಸುವ ಎಳೆವಯಸ್ಸಿನ ಹುಡುಗರ ಉಪಟಳ, ಇವೆಲ್ಲವನ್ನು ಘಂಟೆಗಳ ಕಾಲ ಅನುಭವಿಸಲು ಋಷಿಮುನಿಗಳ ತಾಳ್ಮೆ ಯೂ ಕೆಲವೊಮ್ಮೆ ಸಾಲದು.

ಸಾಕಪ್ಪ ಸಾಕು ಎನ್ನುತ ನೀಲಕಂಠನ ಕತ್ತಿನ ಹಾವಿನಂತಿರುವ 'ಹ್ಯಾಂಡ್ಸ್ -ಫ್ರೀ' ಗಳನ್ನು ಎಳೆದು ಕಿವಿಯೊಳಗೆ ತೂರಿಸಿಕೊಂಡು, ಮೊಬೈಲ್ ನಿಂದ FM ನ ಬಟನ್ ಅನ್ನು ಒಮ್ಮೆ ಒತ್ತಿದರೆ ಅಲ್ಲೂ ಸಹ ‘ಹಾಡ್’ ಗಳಿಗಿಂತ ಜಾಸ್ತಿ ತಲೆ ಚಿಟ್ಟಿಡಿಸುವ 'ಆಡ್’ ( Ad ) ಗಳ ಸಂತೆಯೇ! ಕೆಲವೊಮ್ಮೆ ಬೇರೆ ದಾರಿಯಿಲ್ಲದೆ ಈ Ad ಗಳ ಸಂಗೀತವನ್ನೇ ಚಿತ್ರಗೀತೆಗಳಂತೆ ಭಾವಿಸಿ ತೃಪ್ತರಾಗಬೇಕಾಗುತ್ತದೆ. ಸಾಲದಕ್ಕೆ ರೇಡಿಯೋ ಜಾಕಿಗಳು. ಮಾತಿನ ಯಂತ್ರದಂತೆ ಬಡಬಡಿಸುವ ಅವರ ಚೀರಾಟ. ಹಲವು ಬಾರಿ ಇವರುಗಳ ಬಣ್ಣಬರಿತ ಆ ಅದೃಶ್ಯ ನಟನೆಗೆ ಕೇಳುಗ ಕುಪಿತಗೊಂಡರೆ, ಕೆಲವೊಮ್ಮೆ ಈ ಚೀರಾಟಗಳೇ ತುಂಟಾಟಗಳಗಿ ಅವುಗಳಲ್ಲೇ ಮರೆತುಬಿಡುತ್ತಾನೆ. ಕೆಲವರಿಗಂತೂ ಸಂಜೆ ಸರಿಯಾಗಿ ಇದೆ ಸಮಯಕ್ಕೆ, ಇದೆ ಸಿಗ್ನಲ್ ನ ದಟ್ಟ ಸದ್ದಿನಲ್ಲಿ ತನಗರಿಯದಂತೆ ಕೈಗಳು FM ಅನ್ನು ಹೊತ್ತಿಸಿಬಿಡುತ್ತವೆ, ಇಂತಹ ಕೆಲವು RJ ಗಳ ಮಾತಿನ ಪುಳಕ ತಮ್ಮನ್ನು ಬೇರೊಂದು ಲೋಕಕ್ಕೆ ಕರೆದೊಯ್ಯಲು ತವಕಿಸುತ್ತಿರುವಂತೆ! ಆ ಮುದ್ದು ಮುದ್ದಾದ ಮಾತುಗಳು, ನೊಂದ ಮನಸ್ಸುಗಳಿಗೆ ಸಾಧ್ಯವಾದಷ್ಟೂ ಸಾಂತ್ವನ ತುಂಬುವ ಕಲೆ, ನಗಲು ಹಾಗು ನಗಿಸಲು ಪ್ರಯತ್ನಿಸುವ ಜೋಕುಗಳು ಹಾಗು ಅದಕ್ಕೆ ತಕ್ಕ ಮಟ್ಟಿನ ‘ಸೆನ್ಸ್ ಆಫ್ ಹ್ಯುಮರ್’ ಸಾಲದಕ್ಕೆ ಫೋನ್ ಹಾಯಿಸಿ ಆಕಡೆಯಿಂದ ಮನಬಂದಂತೆ ಉಗಿಸಿಕೊಂಡರೂ ಮನ ಕುಗ್ಗದ ಕ್ಯಾರೆಕ್ಟರ್ ಈ RJ ಗಳದ್ದು.

ಕೋಳಿಯೂ ತನ್ನ ಕೊನೆ ಗೊರಕೆಯನ್ನು ಹೊಡೆಯುವ ಮುನ್ನವೇ, ದೂರದಲ್ಲೆಲ್ಲೋ ಸ್ವಯಂಘೋಷಿತ ನಗರಪಾಲಕ (ಗೂರ್ಖಾ) ತನ್ನ ಸೀಟಿಯನ್ನು ಊದುತ್ತಿರುವಾಗಲೇ, ಅರ್ದನ್ಬರ್ದ ನಿದ್ರೆಯಲ್ಲೇ ಎದ್ದು, ಚುಮು ಚುಮು ಚಳಿಗೆ ಒಂದು ಲೀಟರ್ ನಷ್ಟು ದೊಡ್ಡ ಲೋಟದಲ್ಲಿ ಕಾಫಿಯನ್ನೂ, ಟೀ ಯನ್ನೂ ಹಿಡಿದು ಮೈಕ್ನ ಮುಂದೆ ಕೂತು 'ಶುಬೋಧಯ' ಎಂದು ದೀರ್ಘವಾಗಿ ಹೇಳಿದರೆ ಅದೇನೋ ಒಂದು ಬೆಳಗಿನ ಉಲ್ಲಾಸ ಪೇಪರ್ ಹಾಕುವ, ಹಾಲನ್ನು ಮಾರುವ ಹಾಗು ಹೂವನ್ನು ಪೋಣಿಸುವ ಸಾವಿರಾರು ವರ್ತಕರಿಗೆ. ಆ ಕ್ಷಣದಿಂದ ಶುರುವಾಗಿ ನಂತರದ ಮೂರೋ ನಾಲ್ಕೋ ಘಂಟೆಯೊ ಒಂದೇ ಸಮನೆ ಮುಂಗಾರಿನ ಮಳೆಯಂತೆ RJ ತನ್ನ ಮಾತುಗಳನ್ನು ಸುರಿಸಿದರೆ ಇತ್ತಕಡೆ ಅದೆಷ್ಟೋ ಲಕ್ಷ ಜನರಿಗೆ ಸೂರ್ಯ ಆಳೆತ್ತರಕ್ಕೆ ಬಂದಿರಬಹುದು ಎಂಬುದರ ಸಂದೇಶ ರವಾನೆಯಾಗುತ್ತದೆ. ಅದೇ ತುಸು ಒಳಗೆ ಹಳ್ಳಿಗಳಾದರೆ ಚಿಂತನ-ಮಂಥನ, ಕೃಷಿವಾರ್ತೆ, ಪ್ರದೇಶ ಸಮಾಚಾರ, ಹಿತವಚನ ಎಂಬ ಉದ್ದುದ್ದದ ಕಾರ್ಯಕ್ರಮಗಳು. ಎಲ್ಲದರಲ್ಲೂ ನಯವಾಗಿ, ವಿನಯದಿಂದ, ಕೇಳಿದರೆ ಮತ್ತೂ ಕೇಳಬೇಕೆನಿಸುವ ವಾಚಕರ ಮಧುರ ಧ್ವನಿ. ಸಿಟಿಯಲ್ಲಿ ಬೆಳಂಬೆಳ್ಳಗೆ ತ್ರಾಸನ್ನು ಕೊಡುವ ಪಟ್ ಪಟಾಕಿ, ಕಿರಿಕ್ ಹುಡ್ಗ, ತರ್ಲೆ ರಾಮ ಎಂಬ ಏನೇನೋ ಬಿರುದುಗಳನ್ನು ಹೆಣೆದುಕೊಂಡಿರುವ ಹುಡುಗ ಹುಡುಗಿಯರ ಸದ್ದು. ಅದೇನೇ ಆದರೂ ಬಹಳಷ್ಟು ಮಂದಿಗೆ ಒಂದು ದಿನ ಇವರುಗಳ ಸದ್ದೆನಾದರೂ ಕಿವಿಗೆ ಬೀಳದಿದ್ದರೆ ದಿನವೇ 'ಕೋಯಾ ಕೋಯಾ ಚಾಂದ್, ಖುಲಾ ಆಸಮನ್' ಎಂಬ ಹಾಡಿನಂತಾಗಿಬಿಡುತ್ತದೆ.

ಇವೆಲ್ಲವನ್ನು ಗಮನಿಸಿದರೆ, RJ ಗಳ ಮಾತನ್ನು ಕೇಳುತ್ತಿದ್ದರೆ, ಇವರಿಗೇನು ನಿಜ ಜೀವನದಲ್ಲಿ ದುಃಖ, ಸಿಟ್ಟು, ನೋವು, ಚಿಂತೆ, ಎಂಬೆಲ್ಲ ಫ್ಯಾಕ್ಟರ್ ಗಳು ಸತಾಯಿಸುವುದಿಲ್ಲವೋ ಎಂದು ಅನ್ನಿಸದೆ ಇರುವುದಿಲ್ಲ. ಒಂದು ಪಕ್ಷ ಇದ್ದರೂ ಅವರು ತೋರಿಸಿಕೊಳ್ಳುವುದಿಲ್ಲ ಎಂಬೊಂದು ಲೋಕಾರೂಢದ ಮಾತು ನಮ್ಮನ್ನು ಸುಮ್ಮನಾಗಿಸುತ್ತದೆ. ಆದರೆ ತಕ್ಷಣ ಮತ್ತೊಂದು ಪ್ರೆಶ್ನೆ ನಮ್ಮನ್ನು ಬಹುವಾಗಿ ಕಾಡದೇ ಇರುವುದಿಲ್ಲ. ಅದೇನೇ ದುಃಖವಿದ್ದರೂ, ನೋವುಗಳ ಸರಮಾಲೆಯನ್ನು ಹೊತ್ತಿದರೂ ಅವೆಲ್ಲವುಗಳಿಗೆ ಕೆಲಕಾಲ ಬ್ರೇಕ್ ಹಾಕಿ ನಗುವೆಂಬ ಕಳಸವನ್ನು ಮುಖದ ಮೇಲೆ ತೊಡುವ ಕಲೆಯನ್ನು ಇವರುಗಳು ಕಲಿತಿದ್ದಾದರೂ ಹೇಗೆ? ಈ ಕೆಲೆ ಯಾವುದೇ ಆಸ್ಕರ್ ವಿಜೇತ ನಟ ಅಥವಾ ನಟಿಗೂ ಕಡಿಮೆ ಇರುವುದಿಲ್ಲ. ಇದೊಂದು ನಟಿಸುವ ಕಲೆಯೋ ಅಥವಾ ಸಂತೋಷದ ಜೀವನವನ್ನು ನೆಡೆಸಲು ಇರುವ ಸ್ಪೂರ್ತಿಯ ಸೆಲೆಯೋ? RJ ಗಳೇ ಬಲ್ಲರು!

ಆದರೆ,

ಎದ್ದೂ ಬಿದ್ದೂ ಮನೋರಂಜನೆಯನ್ನೇ ಮನೋಕಾಮನೆಯಾಗಿಸಿಕೊಂಡಿರುವ ಇಂದಿನ RJ ಗಳಿಗೂ, ಮನೆಯ ಒಬ್ಬ ಅದೃಶ್ಯ ಸದಸ್ಯನಂತೆ ಜೊತೆಗೆ ಇರುತ್ತಿದ್ದ ಅಂದಿನ ರೇಡಿಯೋ ವಾಚಕರಿಗೂ ಅಜಗಜಾಂತರ ವ್ಯತ್ಯಾಸವಿರುವುದು ತಿಳಿದವರು ಬಲ್ಲ ವಿಷಯ. ಹೆಚ್ಚಾದ ರೇಡಿಯೋ ಕೇಂದ್ರಗಳ ಸ್ಪರ್ಧೆಯಲ್ಲಿ ನಾ ಮುಂದು ತಾ ಮುಂದು ಎನ್ನುತಾ ತಿಳಿದೋ ತಿಳಿಯದೆಯೋ ಸಿಕ್ಕ ಸಿಕ್ಕವರಿಗೆಲ್ಲ ಫೋನಾಯಿಸಿ, ಕಿಚಾಯಿಸಿ , ಸತಾಯಿಸಿ, ಕೊನೆಗೆ 'ನಾವು ಮಾಡಿದೆಲ್ಲ ತಮಾಷೆಗಾಗಿ’ ಎಂದು ನಯವಾಗಿ ಚಾಪೆಯ ಅಡಿ ತೂರಿಕೊಂಡಂತೆ ನಟಿಸಿದರೆ ಮೌಂಟ್ ಎವರೆಸ್ಟ್ ನನ್ನು ಒಂದೇ ಉಸಿರಿನಲ್ಲಿ ಹತ್ತಿದ ಸಾಧಕರಂತೆ ಅವರನ್ನು ಕಾಣಲಾಗುತ್ತದೆ. ಅಲ್ಲಿ 'ಕುರಿ' ಎನಿಸಿಕೊಂಡವನು ಪಡುವ ವೇದನೆಗಿಂತ, ಕೇಳುಗನಿಗಿಂತಲೂ ಹೆಚ್ಚಾಗಿ ನಗುವ RJ ಮಹಾರಾಜನೇ ಸರ್ವರಿಗೂ ಹಿತವಾಗುತ್ತಾನೆ. ಹಲವು ಬಾರಿ ಇಂತಹ ಎಡಬಿಡಂಗಿ ಕಾರ್ಯಕ್ರಮಗಳೇ ಅದೆಷ್ಟೋ ಜನರ ಪ್ರಾಣಕ್ಕೆ ಕುತ್ತು ತರುವುದು ಉಂಟು. ತಂದಿರುವುದೂ ಉಂಟು! ಪ್ರೀತಿಸುವ ಹುಡುಗಿಯ ಅಪ್ಪನಾಗಿ, ಏರ್ಪೋರ್ಟ್ನ ಕಸ್ಟಮ್ಸ್ ಅಧಿಕಾರಿಯಾಗಿ, ಪಕ್ಕದ ಗಲ್ಲಿಯ ಪೊರ್ಕಿ ನಾಗರಾಜನಾಗಿ ಅಥವಾ ಯಾವುದಾದರೊಂದು ಆಸ್ಪತ್ರೆಯ ಡಾಕ್ಟರ್ ನಂತೆ ಬೆಳ್ಳಂಬೆಳಗ್ಗೆ ಅಮಾಯಕರನ್ನು ಸತಾಯಿಸುವ ಜರೂರತ್ತಾದರೂ ಯಾರಿಗಿದೆ? ಜರೂರತ್ತಿರುವುದು ನಿಜವೇ ಆದರೆ ಅದು ಇವೇ ರೇಡಿಯೋ ಚಾನೆಲ್ ಗಳಿಗೆ. ನಾನೇ ನಂಬರ್ ಒನ್ ಆಗಬೇಕೆಂಬ ಅತಿಆಸೆಯ ಮನಸ್ಸುಗಳಿಗೆ. ಒಂದೊಳ್ಳೆ ಕಾರ್ಯಕ್ರಮವನ್ನು ನೀಡಿ ರಂಜಿಸಲಾಗದ ರಂಜನಾಕಾರರಿಗೆ, ಇಂತಹ ಕಳಪೆ ಕಾರ್ಯಕ್ರಮಗಳೇ ಮಹಾಧಾರ.

ಒಟ್ಟಿನಲ್ಲಿ ಮನೆಯೆಂಬ ಗುರಿಯನ್ನು ತಲುಪಲು ಎದುರಾಗುವ ಟ್ರಾಫಿಕ್ ಜಾಮ್ ಗಳೆಂಬ ಕಿರಿಕಿರಿಗಳ ಮದ್ಯೆ ಯಾವುದೊ ಲೋಕದಲ್ಲಿ ಕಳೆದು ಹೋಗುವ ಕೇಳುಗನ ಚಿತ್ತಕ್ಕೆ RJ ಗಳ ಬಗ್ಗೆ ಇಷ್ಟೆಲ್ಲಾ ವಿಶ್ಲೇಷಣೆ ಮಾಡುವ ಸಂಯಮವಿರುವುದಿಲ್ಲ. 'ಎಂಥ ಸೂಪರ್ ವಾಯ್ಸು ಮಗ' ಎನ್ನುತ್ತಾ ಕಲ್ಪಿತ ಲೋಕದಲ್ಲೊಂದು ಅಂದವಾದ ಚಹರೆಯನ್ನಿಟ್ಟುಕೊಂಡು ತನ್ನಲ್ಲೇ ತಾನು ಕಳೆದು ಹೋಗುವ ಅನೇಕರಿಗೆ ಇಹಲೋಕದ ಪ್ರಜ್ಞೆ ಬರುವುದು ಹಿಂದಿರುವ ಗಾಡಿಯ ರಣಚಂಡಿಯ ಕಹಳೆಯ ಜೊತೆಗೆ ಬೈಗುಳದ ಪದಗಳೂ ಕೇಳತೊಡಗಿದಾಗ. ಅಲ್ಲಿಂದ ಕೊಂಚ ದೂರದಲ್ಲಿ ಸಿಗುವ ಮತ್ತ್ತೊಂದು ಸಿಗ್ನಲ್ಲಲ್ಲಿ ಮತ್ತದೇ ಭಾವಲೋಕ! ಹೀಗೆ ಹ್ಯಾಂಡ್ಸ್ ಫ್ರೀ ಗಳನ್ನು ಹಾಕಿಕೊಂಡು RJ ಗಳ ಮಾತುಗಳಿಗೆ ತನ್ನಲ್ಲೇ ತಾನು ನಗುವುದ ಕಂಡು ಪಕ್ಕದ ಆಂಟಿ ಅಂಕಲ್ ಗಳು ಮುಖ ಮುರಿದುಕೊಳ್ಳುವುದೂ ಉಂಟು.
ಒಟ್ಟಿನಲ್ಲಿ ಹೆಸರಿಗೆ ತಕ್ಕಂತೆ ಆಕಾಶದಿಂದ ಬರುವ ಈ ವಾಣಿಗಳು ಕೇಳುಗರನ್ನು ನಗಿಸಿ, ನಲಿಸಿ, ಆಡಿಸಿ, ಹಾಡಿಸಿ, ಸತಾಯಿಸಿ, ಸಾಕು ಸಾಕಾಗಿಸಿ, ಬೇಕು ಬೇಡವಾಗಿಸಿ, ಚರ್ಚಿಸಿ, ಚಿಂತನೆಗೊಳಪಡಿಸಿ, ಕೊನೆಗೆ ಮಲಗುವ ಜೋಗುಳವೂ ಆಗುವುದುಂಟು. ಅಲ್ಲದೆ ಹಲವು ಬಾರಿ ಯಾರೊಟ್ಟಿಗೂ ಹೇಳಿಕೊಳ್ಳಲಾಗದ ನೋವು ನಲಿವುಗಳನ್ನು ಬಹಳಷ್ಟು ಜನರು RJಗಳೊಟ್ಟಿಗೆ ತೋಡಿಕೊಳ್ಳುವುದನ್ನು ಕೇಳಬಹುದು. ಯಾವುದೊ ಒಂದು ಅತಿಮಾನುಷ ಶಕ್ತಿಯಂತೆ ಅವರ ಮಾತುಗಳು ನೊಂದವರನ್ನು ಸಂತೈಸಿ ಕೊಂಚ ಮಟ್ಟಿನ ಜೀವನ ಪ್ರೀತಿಯನ್ನಾದರೂ ಅವರಲ್ಲಿ ಜಾಗೃತಗೊಳಿಸುತ್ತದೆ. ಹೀಗೆ ವರ್ಷವಿಡೀ ಅದೇ ಸಮಯಕ್ಕೆ ಅದೇ ಜಾಗದಲ್ಲಿ ಅದೇ ಜೀವನೋತ್ಸಾಹವನ್ನು ಬೀರುವ ಅವರ ಅವಿರತ ಮಾತುಗಳು ಕೇಳುಗನಲ್ಲಿ ತಾವೂ ಸಹ ಅಂತಹ ವ್ಯಕ್ತಿತ್ವಧಾರಿಗಳಂತಾಗಲು ಪ್ರೇರೇಪಿಸದಿರವು.

ಅದೇನೇ ಕಷ್ಟ ನೋವುಗಳಿದ್ದರೂ ಎಲ್ಲವನ್ನು ಮರೆತು ಕೆಲಕಾಲಕ್ಕಾದರೂ ಬೇರೆಯವರ ನಗುವಿಗಾಗಿ ತಮ್ಮನ್ನು ಮುಡಿಪಿಡುವ ಇವರ ಆ ಡೆಡಿಕೇಶನ್ ನೂರಕ್ಕೆ ನೂರು ಅನುಕರಣೆಗ್ಯೂಗ್ಯ. ದಿನವಿಡೀ ಮುಖವನ್ನು ಗಂಟ್ಟಿಕ್ಕಿಕೊಂಡು, ಚಿಟಿಕೆಯಷ್ಟು ಕಷ್ಟವನ್ನೇ ಬೆಟ್ಟದಷ್ಟು ಮಾಡಿ ಕೊರಗುವ ಹಲವರಿಗೆ ಇಂತಹ ಅದೃಶ್ಯ ವ್ಯಕ್ತಿತ್ವಗಳು ಸ್ಪೂರ್ತಿಯ ದೀಪಗಳಾಗಬಹುದು. 'ನಗು ನಗುತ ನಲಿ ನಲಿ ಏನೇ ಆಗಲಿ' ಎಂಬ ಹಾಡಿನಂತೆ ನಗುವೆಂಬ ಟಾನಿಕ್ ನನ್ನು ಆಗಾಗ ಸೇವಿಸುತ್ತಿದ್ದರೆ ಬದುಕಿನ ಬಂಡಿಗೆ ಅಗತ್ಯವಾದ ಕೀಲೆಣ್ಣೆಯ ಅಭಾವವನ್ನು ಇದು ಬರಿಸಬಲ್ಲದು.. ಮಗುವಿನ ನಗುವಿನ ಅಪ್ಪಟ ಒಳಪಿನಂತೆ ನಲಿಯುವ ಇವರುಗಳೂ ಸಹ ಇಂತಹ ಟಾನಿಕ್ನ ಸಣ್ಣ ಸಣ್ಣ ಫ್ಯಾಕ್ಟರಿಗಳಂತೆ! ಆದರೆ 'ತಮಾಸೆ ಹೋಗಿ ಅಮಾಸೆ ಆಗ್ಬಾರ್ದು' ಎಂಬ ಮಾತಿನಂತೆ ಕನಿಷ್ಠದ ಸಾಮಾಜಿಕ ಕಾಳಜಿಯೊದಿಂಗೆ ಜನಮಾನಸದಲ್ಲಿ ಬೆರೆಯುವ ಹಂಬಲವಿದ್ದರೆ ಇವರು ಯಾವ ದೊಡ್ಡ ಆದರ್ಶ ವ್ಯಕ್ತಿಗಳಿಗೂ ಕಡಿಮೆಯಲ್ಲ.

Friday, May 5, 2017

ವಿಂಡೀಸ್ ಕ್ರಿಕೆಟ್ : ಹಣವೆಂಬ ಸುಳಿಯಲ್ಲಿ ಪ್ರತಿಭೆಯ ಹುಡುಕಾಟ !!

ವಿಶ್ವ ಕ್ರಿಕೆಟ್ ನನ್ನೇ ದಶಕಗಳ ಕಾಲ ನಲುಗಾಡಿಸಿಬಿಟ್ಟಿದ್ದ ತಂಡವದು. ಆಡುವುದು ದೂರದ ಮಾತು, ಆ ತಂಡದ ಆಟಗಾರರನ್ನು ನೋಡಿಯೇ ಎದುರಾಳಿಯ ಮುಖದ ಬೇವಳಿಯುತಿತ್ತು. ಬ್ಯಾಟ್ ಹಿಡಿದು ಪಿಚ್ ಗೆ ಬಂದವನಿಗೆ ರನ್ ಗಳಿಸುವುದಕಿಂತ ಹೆಚ್ಚಾಗಿ ಜಿಂಕೆಯಂತೆ ಜಿಗಿಸಲ್ಪಡುತ್ತಿದ್ದ ಗುಂಡಿನ ವೇಗದ ಬೌಲ್ ಗಳಿಂದ ತಪ್ಪಿಸಿಕೊಳ್ಳುವುದೇ ಒಂದು ದೊಡ್ಡ ಸವಾಲು. ಆ ತಂಡದ ವಿರುದ್ಧ ಪಂದ್ಯ ಡ್ರಾ ಆದರೂ ಎದುರಾಳಿ ತಂಡಕ್ಕೆ ಗೆದ್ದಷ್ಟೇ ಸಂಭ್ರಮ! ಬೇರೆ ತಂಡಗಳಿಂದ ರಚಿಸಲ್ಪಟ್ಟರೆ ಮುನಿಸಿಕೊಳ್ಳುವಂತೆ ದಾಖಲೆಗಳು ಅಂದು ಈ ತಂಡದಿಂದಲೇ ಮೂಡುತಿದ್ದವು. ಎಪ್ಪತ್ತರ ನಂತರದ ಎರಡು ದಶಕಗಳಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದ ತಂಡವೆಂಬ ದಾಖಲೆಯಾಗಲಿ, ವಿಶ್ವಕಪ್ ನ ಮೊದಲ ಮೂರು ಆವೃತಿಯಲ್ಲಿ ಸತತವಾಗಿ ಫೈನಲ್ನ ವರೆಗೂ ಬಂದು ಎರಡು ಬಾರಿ ವಿಶ್ವಕಪ್ ಅನ್ನು ಗೆದ್ದ ಮೊದಲ ತಂಡವೆಂಬ ದಾಖಲೆ, 1980 ರಿಂದ 95 ನಡುವೆ ಒಂದೂ ಟೆಸ್ಟ್ ಸರಣಿಯನ್ನು ಸೋಲದ ಹೆಗ್ಗಳಿಕೆ, ಅತಿ ಹೆಚ್ಚಿನ ರನ್ ಗಳಿಕೆ, ಮಹೋತ್ತಮವಾದ ಬೌಲಿಂಗ್ ಏಕಾನಮಿ ಹಾಗು ಸರಾಸರಿಯನ್ನು ಹೊಂದಿದ್ದ ಆ ತಂಡ ಆಡುತಿದ್ದ ಭಾಗಶಃ ಪಂದ್ಯಗಳ ಫಲಿತಾಂಶ ವಿಶ್ವಕಪ್ ನಲ್ಲಿ ಭಾರತ ಹಾಗು ಪಾಕಿಸ್ತಾನದ ನಡುವಿನ ಫಲಿತಾಂಶದಂತೆ 'ಪಾರದರ್ಶಕ'ವಾಗಿರುತ್ತಿತ್ತು! ಎಪ್ಪತ್ತರ ದಶಕದ ಆ ತಂಡವನ್ನು ಒಮ್ಮೆ ನೆನೆಸಿಕೊಂಡರೆ ಯು-ಟ್ಯೂಬಿನಲ್ಲಿ ತಕ್ಷಣ ಅಂದಿನ ಒಂದೆರೆಡು ಪಂದ್ಯಗಳನ್ನು ನೋಡಬೇಕೆಂಬ ಬಯಕೆ ಮೂಡದೇ ಇರುವುದಿಲ್ಲ.

ಇಂದು ಹೇಳ ಹೊರಟಿರುವುದು ಒಂದು ಕಾಲಕ್ಕೆ ಬೆಟ್ಟದಷ್ಟು ಪ್ರಸಿದ್ದಿಯನ್ನು ಹೊಂದಿ ಇಂದು ಆಟಕುಂಟು ಲೆಕ್ಕಕಿರದಂತೆ ಮೂಲೆಗುಂಪಾಗಿರುವ ಕ್ರಿಕೆಟ್ ತಂಡದ ಬಗ್ಗೆ. ವೆಸ್ಟ್ ಇಂಡೀಸ್ ಅಥವಾ ವಿಂಡೀಸ್. ಮೊದಲು ಹೇಳಿದಂತೆ ಅಂದು ಯಶಸ್ಸಿನ ಶಿಖರದಲ್ಲಿದ್ದ ಈ ತಂಡ ಗೆದ್ದು ತೋರಿಸದ ಸರಣಿಗಳಿಲ್ಲ ಮಾಡದೆ ಇರುವ ದಾಖಲೆಗಳಿಲ್ಲ. ಸರ್ ಗಾರ್-ಫೀಲ್ಡ್ ಸೋಬರ್ಸ್, ಜಾರ್ಜ್ ಹೆಡ್ಲಿ, ಕ್ಲೆಯ್ವ್ ಲಾಯ್ಡ್, ವಿವ್ ರಿಚರ್ಡ್ಸ್, ಮೈಕಲ್ ಹೋಲ್ಡಿಂಗ್ ಹೀಗೆ ಹೇಳುತ್ತಾ ಹೋದರೆ ವಿಂಡೀಸ್ ಎಂಬ ತಂಡವನ್ನು ವಿಶ್ವಕ್ಕೆ ಪರಿಚಯಿಸಿಕೊಟ್ಟ ದಂತಕಥೆಗಳಂತೆ ಅಂದಿನ ಒಬ್ಬೊಬ್ಬ ಆಟಗಾರನೂ ಪರಿಚಯವಾಗುತ್ತಾನೆ.

ಅಂತಹ ತಂಡವೊಂದು ಇಂದು ಏನಾಗಿದೆ? ನೀರು ಕುಡಿದಷ್ಟೇ ಸರಾಗವಾಗಿ ಪಂದ್ಯಗಳನ್ನು ಗೆದ್ದು ಬೀಗುತ್ತಿದ್ದ ತಂಡವಿಂದು ನಕ್ಷತ್ರಗಳಿರದ ಆಗಸದಂತಾಗಿರುವು ಎಲ್ಲರಿಗೂ ಸ್ಪಷ್ಟ. (1976 ರಿಂದ 2000 ನೇ ಇಸವಿಯವರೆಗೂ ಆಡಿದ ಟೆಸ್ಟ್ ಪಂದ್ಯಗಳಲ್ಲಿ 71 ನ್ನು ಗೆದ್ದು 20 ಪಂದ್ಯಗಳನ್ನು ಸೋತರೆ ಅದೇ 2000 ದಿಂದ ಈಚೆ ಮುಂದಿನ ಹದಿನೈದು ವರ್ಷಗಳಲ್ಲಿ ಆಡಿದ ಪಂದ್ಯಗಳಲ್ಲಿ 78 ಅನ್ನು ಸೋತು ಗೆದ್ದಿರುವುದು ಕೇವಲ 17 ಪಂದ್ಯಗ ಳು!!) ಈ ಮಟ್ಟಿನ ಭಾರಿ ಮುಗ್ಗರಿಸುವಿಕೆಗೆ ನಿಜವಾಗ ಕಾರಣವೇನು? ಅಂದಿನ ವಿಂಡೀಸ್ ಆಟಗಾರರಿಗೂ, ಇಂದಿನ 'ಪಾರ್ಟಿ ಡ್ಯೂಡ್ಸ್' ಗಳಿಗೂ ಆಟದಲ್ಲಿ ಕೊಂಚ ಅಂತರವಿರುವು ನಿಜವಾದರೂ ಈ ರೀತಿಯ ಮೂಲೆಗುಂಪಾಗುವಿಕೆ ಮೊಘಲ್ ಸಾಮ್ರಾಜ್ಯದಂತೆ ಎಲ್ಲವನ್ನು ಗೆದ್ದು ಮದ, ಅಸೂಯೆ, ಒಳಜಗಳ ಗಳೆಂಬ ಕಾರಣಗಳಿಂದ ಹೇಳಹೆಸರಿಲ್ಲದಂತಾದ ಸಾಮ್ರಾಜ್ಯದಂತೆ ಈ ತಂಡ ಗೋಚರಿಸುತ್ತದೆ. . ಇದರ ಶ್ರೇಯ ಆಟಗಾರಿಗೆ ಕೊಡಬೇಕೋ ಅಥವಾ ವಿಂಡೀಸ್ ಕ್ರಿಕೆಟ್ ಮಂಡಳಿಯ ಮುಡಿಗೆ ಅರ್ಪಿಸಬೇಕೋ ಎರಡೂ ಗೋಜಲು.

ಈ ವಿಷಯವನ್ನು ಹೆಚ್ಚು ಹೆಚ್ಚು ಕೆದಕುತ್ತಾ ಹೋದಷ್ಟೂ ಬೆಳಕಿಗೆ ಬರುವುದು ಕ್ರಿಕೆಟ್ ಮಂಡಳಿ ಹಾಗು ಆಟಗಾರರ ನಡುವೆ ಇರುವ ಸಂಘರ್ಷ. ಇದು ವಿಶ್ವದ ಬಾಗಶಃ ದೇಶಗಳ ಕತೆಯೇ ಆದರೂ ಯಾವ ಮಂಡಳಿಗಳೂ ಸಹ ದೇಶವನ್ನು ಪ್ರತಿನಿಧಿಸುವ ತಂಡವನ್ನು/ಆಟಗಾರರನ್ನು ಇಂತಹ ಅಧೋಗತಿಗೆ ತಂದು ನಿಲ್ಲಿಸುವುದಿಲ್ಲ. ಅಲ್ಲಿ ಮೊದಲ ಬಾರಿಗೆ ವಿವಾದ ಬುಗಿಲ್ಲೆದ್ದಿದ್ದು 2005 ರಲ್ಲಿ, ಸೌತ್ ಆಫ್ರಿಕಾದ ವಿರುದ್ಧದ ಪಂದ್ಯಕ್ಕೆ ಏಳು ಜನ ಆಟಗಾರರು ಗೈರಾಗಲು ತೀರ್ಮಾನಿಸಿದಾಗ. ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ ಕೂಡ ಅವರಲ್ಲಿ ಒಬ್ಬರಾಗಿದ್ದರು. ಕ್ರಿಕೆಟ್ ನ ದಂತಕಥೆಯೇ ಅಂದು ಮಂಡಳಿಯ ವಿರುದ್ಧ ಸಿಡಿದೆದ್ದರೆ ಯಾರಿಗೆ ತಾನೇ ಸಂಶಯ ಮೂಡುವುದಿಲ್ಲ? ಅದು ಒಂತರಾ ಗ್ರೇಗ್ ಚಾಪೆಲ್ ನ ನಿಜ ಬಣ್ಣವನ್ನು ಬಯಲು ಮಾಡಲು ಅಂದು ಸಚಿನ್ ಪ್ರೆಸ್ ನ ಮುಂದೆ ಬಂದಂತಿತ್ತು. ಒಟ್ಟಿನಲ್ಲಿ ಬೆಳೆಯಬೇಕಿದ್ದ ಎರಡನೆಯ ತಲೆಮಾರಿನ ವಿಂಡೀಸ್ ಆಟಗಾರಿಗೆ ಅಂದು ತಮ್ಮ ಅಧಿಕಾರಿಗಳ ಜೊತೆಯೇ ಬಿರುಕು ಮೂಡಿತ್ತು. ಈ ಬಿರಕು ಮಾತ್ರ ಮುಂದೆಂದೂ ಮುಚ್ಚದ ರೀತಿ ಬೆಳೆಯ ತೊಡಗಿತು. ಅಂದೊಮ್ಮೆ ವಿಂಡೀಸ್ ಕ್ರಿಕೆಟ್ ನ ದಂತಕಥೆ ಕಾರ್ಟ್ಲಿ ಆಂಬ್ರೋಸ್ ನ ಮನೆ ಸೈಕ್ಲೋನ್ ನಿಂದ ನುಚ್ಚು ನೂರಾದಾಗ ಆತ ವಿದೇಶದ ಪ್ರವಾಸದಲ್ಲಿದ್ದ. ವಿಷಯ ತಿಳಿದವನೇ ತಕ್ಷಣ ವಿಂಡೀಸ್ ಕ್ರಿಕೆಟ್ ಮಂಡಳಿ ಗೆ ಫೋನಾಯಿಸಿ ತನ್ನ ಕುಟುಂಬಕ್ಕೆ ತಾತ್ಕಾಲಿಕವಾಗಾದರೂ ಏನಾದರೂ ವ್ಯವಸ್ಥೆಯನ್ನು ಮಾಡಿಕೊಡಿ ಎಂದು ಬೇಡಿಕೊಂಡ. ಮಂಡಳಿ ಮಾತ್ರ ಮಾನವೀಯತೆಯ ದೃಷ್ಟಿಯಿಂದಲೂ ಸಹ ಒಂದಿಷ್ಟೂ ಸ್ಪಂಧಿಸಲಿಲ್ಲ. ಬೇರೆ ದಾರಿ ಕಾಣದೆ ಆತ ಕ್ರಿಕೆಟ್ ಪ್ರವಾಸವನ್ನು ಅರ್ಧಕ್ಕೆ ಬಿಟ್ಟು ಅಂದು ಮನೆಯ ದುರಸ್ತಿಗೆಂದು ವಾಪಾಸ್ ಬರುತ್ತಾನೆ. ಇಂತಹ ಹಲವಾರು ಘಟನೆಗಳು ವಿಂಡೀಸ್ ಆಟಗಾರರಲ್ಲಿ ಮಂಡಳಿಯ ವಿರುದ್ಧವಾಗಿ ದಟ್ಟ ಅಲೆಗಳನ್ನು ಒಳಗೊಳಗೇ ಸೃಷ್ಟಿಸತೊಡಗಿರುತ್ತವೆ. ಹೊರಬರಲು ಅವಕಾಶನಷ್ಟೇ ಇದಿರು ನೋಡುತ್ತಿರುತ್ತವೆ. ಹೀಗೆ ಇಪ್ಪತ್ತೊಂದನೇ ಶತಮಾನದ ಆದಿಯಲ್ಲಿ ಶುರುವಾದ ವಿಂಡೀಸ್ ತಂಡದ ಬೀಳುವಿಕೆ ಇಂದು ಪಾತಾಳವನ್ನು ಮುಟ್ಟುವ ಸನಿಹದಲ್ಲಿದೆ.

ಆ ಕದಂಬ ಬಾಹುಗಳು, ಚಚ್ಚಿದರೆ ಚೆಂಡೆ ಚೂರಾಗುವುದೇನೋ ಎಂಬ ಹೊಡೆತಗಳು, ಮುಡಿಯೆತ್ತರಕ್ಕೆ ಜಿಗಿಯುವ ಬೌಲಿಂಗ್ ದಾಳಿ, ಹೀಗೆ ನೋಡುಗ ಜಿಗಿದು ಕುಣಿಯುವಂತೆ ಮಾಡುವ ವಿಶ್ವಪ್ರಸಿದ್ಧ ಆಟಗಾರರಿದ್ದರೂ ನಷ್ಟದ ನೆಪಹೂಡ್ದಿ ತಂಡವನ್ನು ಹೀಗೆ ಸತಾಯಿಸುವುದು ಎಷ್ಟರ ಮಟ್ಟಿಗೆ ಸರಿ?

ಇಂದಿಗೆ ಸರಿಯಾಗಿ ಒಂದು ದಶಕದ ಹಿಂದೆ ಶುರುವಾದ ಟಿ-ಟ್ವೆಂಟಿ ಕ್ರಿಕೆಟ್ ಉಸಿರುಗಟ್ಟಿದ ಈ ತಂಡಕ್ಕೆ ಆಕ್ಸಿಜೆನ್ ನಂತೆ ಪರಿಣಮಿಸಿತ್ತು. ನವ ಮಾದರಿಯ ಈ ಹೊಡಿ ಬಡಿ ಆಟದಲ್ಲಿ ಮೆರೆಯತೊಡಗಿದ್ದು ಹೆಚ್ಚಾಗಿ ಇಲ್ಲಿನ ದೈತ್ಯರೇ! ಡ್ಯಾರೆನ್ ಸ್ಯಾಮಿ, ಕ್ರೈಸ್ ಗೈಲ್, ಮರ್ಲೊನ್ ಸ್ಯಾಮ್ಯುಲ್ಸ್, ಡೇವೆನ್ ಸ್ಮಿಥ್, ಆಂಡ್ರೇ ರುಸ್ಸೇಲ್, ಸುನಿಲ್ ನಾರೈನ್, Dwayne ಬ್ರಾವೊ, ಕೆರಿನ್ ಪೊಲ್ಲಾರ್ಡ್ ಹೀಗೆ ಕಟ್ಟಿಕೊಂಡ ವಿಂಡೀಸ್ ಪಡೆ ಶರವೇಗದಲ್ಲಿ ವಿಶ್ವ ಕ್ರಿಕೆಟ್ ನಲ್ಲಿ ಮೇಲೇರತೊಡಗಿತ್ತು. ಕೇವಲ ಒಂದೇ ದಶಕದೊಳಗೆ ಎರಡು ಬಾರಿ ವಿಶ್ವ ಚಾಂಪಿಯನ್ ಆಗಿ ಮೆರೆಯಿತು. ಗತಿಸಿದ ವಿಂಡೀಸ್ ನ ಇತಿಹಾಸ ಇನ್ನೇನೂ ಮರುಕಳಿಸಬೇಕು ಎನ್ನುವಷ್ಟರಲ್ಲಿ ಮತ್ತದೇ ಅಸಮಾಧಾನದ ಹೊಗೆ ತಂಡವನ್ನು ಉಸಿರುಗಟ್ಟಿಸಿತು. ಒಗ್ಗಟ್ಟಾಗಿ ಸಾಗುವ ಕಾಡುಕೋಣಗಳ ಗುಂಪು ನರಭಕ್ಷಕನೊಂದನ್ನು ಕಂಡು ದಿಕ್ಕಾಪಾಲಾಗಿ ಓಡಿ ಕಣ್ಮರೆಯಾಗುವಂತೆ ಆಯಿತು. ಸದೃಢವಾಗಿ ಕಟ್ಟಲ್ಪಡುತ್ತಿದ್ದ ಗೋಡೆಯೊಂದು ಉರುಳಲು ಶುರುವಾಯಿತು.

ಇಂದು ಆಟವಾಡು, ನಾಳೆ ಪಾರ್ಟಿ ಮಾಡು, ನಾಡಿದ್ದು ನಿದ್ದೆ ಮಾಡು ನಂತರ ಮತ್ತೆ ಆಟವಾಡು ಎಂಬಂತೆ ತಂಡ ಮೋಜಿನ ಅಡ್ಡವನ್ನಾಗಿ ಟಿ-ಟ್ವೆಂಟಿ ಪಂದ್ಯಗಳನ್ನು ಪರಿಗಣಿಸಿತು.ದುಡ್ಡಿನ್ನ ಸಾಗರವೇ ಇಲ್ಲಿ ಈಜಲು ಸಿಗುವಾಗ ಊರಿನ ಹೊಲಸು ಕೆರೆಗೆ ನೆಗೆದು ಮೈಯನ್ನೇಕೆ ಕೊಳಕು ಮಾಡಿಕೊಂಡಾರು? ಪರಿಣಾಮ ವಿಶ್ವದ ಯಾವುದೇ ಮೂಲೆಯಲ್ಲಿಯಾದರು ಸರಿ, ಟಿ-ಟ್ವೆಂಟಿ ಪಂದ್ಯಗಳೆಂದರೆ ಇರುವೆಗಳಂತೆ ಈ ಆಟಗಾರರು ಮುತ್ತಿಕೊಳ್ಳುತ್ತಾರೆ. ಪಂದ್ಯಗಳನ್ನು ನೆಡೆಸುವ ಫ್ರಾಂಚೈಸಿಗಳಿಗೂ ಬೇಕಿರುವುದು ಅಬ್ಬರಿಸಿ ಬೊಬ್ಬಿಕ್ಕುವ ಇಂತಹ ಆಟಗಾರರೇ. ಹಣ ಹಾಗು ಮೋಜಿನ ರಂಗಿನಲ್ಲಿ ದೇಶ, ದೇಶದ ಕೀರ್ತಿ, ದೇಶದ ಭವಿಷ್ಯ ಎಂಬೆಲ್ಲ ಜವಾಬ್ದಾರಿಗಳನ್ನು ಕಾಲ ದೂಳಿನಂತೆ ಕೊಡವಿ ನೆಡೆಯುವ ಇಂತಹ ಆಟಗಾರರೇನು ಮುಗ್ದರೇನಲ್ಲ. ಮನೆಯಲ್ಲಿ ಕಷ್ಟವಿದ್ದ ಮಾತ್ರಕ್ಕೆ ಪೋಷಕರನ್ನೇ ಧಿಕ್ಕರಿಸಿ ಹೊರಬರುವುದು ಎಷ್ಟರ ಮಟ್ಟಿಗೆ ಸರಿ? ಅಂದೊಮ್ಮೆ ಜಮೈಕಾದ ವೇಗಿ ಮೈಕಲ್ ಹೋಲ್ಡಿಂಗ್ 'ನನ್ನ ದೇಶದ 5 ಮಿಲಿಯನ್ ಕ್ರೀಡಾಪ್ರೇಮಿಗಳಿಗೆ ನಾನು ಉತ್ತಮವಾಗಿ ಆಡುವುದು ಬಹು ಮುಖ್ಯ, ಏಕೆಂದರೆ ನಾಳೆ ಅವರು ಹೊಡೆದೆಯಲ್ಲ ತಲೆಯೆತ್ತಿ ಗರ್ವದಿಂದ ನೆಡೆಯಬೇಕು' ಎಂದಿದ್ದ. ಇಡೀ ವಿಶ್ವವನ್ನೇ ತನ್ನ ಮಾರಕ ಬೌಲಿಂಗ್ ನಿಂದ ಚೆಂಡಾಡಿಬಿಟ್ಟಿದ್ದ ಆತನ ಮಾತುಗಳು ಮುಂಬಂದ ಅದೆಷ್ಟೋ ಆಟಗಾರರಿಗೆ ಪ್ರೇರಣೆಯಾಯಿತು. ಆದರೆ ಒಬ್ಬರನ್ನೊಬ್ಬರು ದೋಷಿಸುವ ಕಿಚ್ಚಿನಲ್ಲಿ ಮಂಡಳಿ ಹಾಗು ಆಟಗಾರ ಮಾನವೆಂಬುದು ಇಂದು ಸಂತೆಯಲ್ಲಿ ಮಾರುವ ಕೊಳೆತ ತರಕಾರಿ ಯಂತಾಗಿದೆ. ಇನ್ನು ಇಂತಹ ದೇಶಪ್ರೇಮದ ಮಾತುಗಳೆಲ್ಲ ಇವರನ್ನು ಒಟ್ಟುಗೂಡಿಸಬಲ್ಲವೆಂಬ ಆಶಾವಾದ ಒಂದು ಮೂರ್ಖತನವೇ ಸರಿ.

ತೊಂಬತ್ತರ ದಶಕದ ಲೆಜೆಂಡರಿ ಆಟಗರೆಲ್ಲ ನಿವೃತ್ತಿ ಹೊಂದಿದಾಗ ಆಸ್ಟ್ರೇಲಿಯಾದ ತಂಡವೂ ಸಹ ಹೀಗೆ ಮೂಲೆ ಸರಿಯುತ್ತದೆ ಎಂದುಕೊಂಡಿದ್ದ ಕ್ರೀಡಾಸಕ್ತರ ಲೆಕ್ಕಾಚಾರವನ್ನೆಲ್ಲ 2015 ರ ವಿಶ್ವಕಪ್ ನಲ್ಲಿ ಮೈಕಲ್ ಕ್ಲಾರ್ಕ್ ಹಾಗು ಆತನ ಪಡೆ ಪಡೆ ಸುಳ್ಳಾಹಿಸಿತು. ತಂಡದ ಆಟಗಾರ ಮದ್ಯೆ, ತಂಡ ಹಾಗು ಮಂಡಳಿಯ ಮದ್ಯೆ ತಿಳಿಯಾದ ಸಂಬಧವಿದ್ದರೆ ಜಗತ್ತನ್ನು ಗೆಲ್ಲಲು ಮೀಸೆ ಚಿಗುರದ ಹುಡುಗರೂ ಸಾಕು ಎಂಬುದನ್ನು ಅದು ಸಾಧಿಸಿ ತೋರಿಸಿತು. ಈ ನಿಟ್ಟಿನಲ್ಲಿ ವಿಂಡೀಸ್ ನ ಆಟಗಾರರು ಹಾಗು ಮಂಡಳಿ ಇಬ್ಬರಿಗೂ ಆತ್ಮಾವಲೋಕನ ಮಾಡಿಕೊಳ್ಳಲು ಇದು ಸೂಕ್ತ ಸಮಯ. ಕಾಲ ಕೈ ಜಾರುವ ಮುನ್ನ ಹೆಚ್ಚೆತ್ತುಕೊಳ್ಳಲು ಇನ್ನು ಸಮಯವಿದೆ.

ಇಂದು ಕ್ರಿಕೆಟ್ ಎಂದರೆ ಹಣ, ಹಣವೆಂದರೆ ಕ್ರಿಕೆಟ್ ನಂತಾಗಿರುವ ಕಾಲದಲ್ಲಿ ದೇಶದ ಕೀರ್ತಿಯ ಜವಾಬ್ದಾರಿಯನ್ನು ಹೊತ್ತು ಆಡುವ ಆಟಗಾರರು ವಿರಳವಾಗುತ್ತಿದ್ದಾರೆ. ಈ ವಿರಳತೆ ತಂಡ, ಮಂಡಳಿ ಹಾಗು ದೇಶವನ್ನೇ ಹಿಂಬದಿಗೆ ತಳ್ಳುತ್ತಿದೆ ಎಂಬುದು ಸುಳ್ಳಲ್ಲ. ಇವರುಗಳ ಕಚ್ಚಾಟ ಹಾಗು ಕೆಸರಾಟದಲ್ಲಿ ದೇಶದ ಕ್ರೀಡಾ ಪ್ರೇಮಿ ನಷ್ಟ ಅನುಭುವಿಸುತ್ತಿರು ವುದು ಸಹ ದಿಟ. ಮಂಡಳಿ ಹಾಗು ಆಟಗಾರರ ನಡುವಿನ ಹೊಂದಾಣಿಗೆ ಸರಿಹೊಂದದಿದ್ದಾಗ ಆಗುವ ಅನಾಹುತಕ್ಕೆ ವೆಸ್ಟ್ ಇಂಡೀಸ್ ಒಂದು ಜ್ವಲಂತ ಉದಾಹರಣೆಯಷ್ಟೇ. ಕೊಂಚವೂ ದಾರಾಳವಾಗದ ಮಂಡಳಿ ಹಾಗು ಹಣವನ್ನೇ ಆಟವೆಂದು ಪರಿಗಣಿಸಿರುವ ಆಟಗಾರರು ಇವರಿಬ್ಬರನ್ನೂ ಸಮತಕ್ಕಡಿಯಲ್ಲಿ ಕೂರಿಸುವ ಕೈಗಳು ಬೇಕಾಗಿದೆ. ಮೈಕಲ್ ಹೋಲ್ಡಿಂಗ್ ನ ಮಾತುಗಳು ಮತ್ತೊಮ್ಮೆ ಆಟಗಾರರನ್ನು ಪ್ರೇರೇಪಿಸಬೇಕಿದೆ. ಗತಿಸಿಹೋದ ವಿಂಡೀಸ್ ನ ವೈಭವವನ್ನು ಮಗದೊಮ್ಮೆ ಚಿಗುರೊಡೆಸಬೇಕಿದೆ